‘ಕಂಪ್ಯೂಟರಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ ಮತ್ತು ಫೋನಿನಲ್ಲಿ ಕನ್ನಡದಲ್ಲಿ ಹೇಗೆ ಬರೆಯುವುದು?’ – ಕೇಶವ ಕುಲಕರ್ಣಿ

ಲ್ಯಾಟಿನ್/ ರೋಮನ್ ಲಿಪಿಯಲ್ಲಿ (ಇಂಗ್ಲೀಷ್ ಭಾಷೆಯನ್ನು ಬರೆಯುವ ಲಿಪಿ) ಕನ್ನಡವನ್ನು ಬರೆದರೆ ಅದನ್ನು ಓದಲು ಪಡುವ ಕಷ್ಟ ಹೇಳುವುದೂ ಕಷ್ಟ (Latin/ Roman lipyalli kannadavannu baredare adannu odalu paduva kashta heluvudu kashta).  ಕನ್ನಡವನ್ನು ಕನ್ನಡದಲ್ಲಿ ಬರೆದರೇ ಚೆಂದ, ಓದುವವರಿಗೂ ಅನುಕೂಲ. ಕನ್ನಡ ಲಿಪಿ ತುಂಬ ಸುಂದರ ಕೂಡ. ಕನ್ನಡವನ್ನು ಉಳಿಸುವ ಕೆಲಸ ಆಗಬೇಕು ಅಂತಿದ್ದರೆ ಕನ್ನಡದಲ್ಲಿ ಬರೆಯುವ ಕೆಲಸ ನಿರಂತರವಾಗಿ ನಡೆಯಬೇಕು. ಆದ್ದರಿಂದ ಕನ್ನಡವನ್ನು ಅದಷ್ಟು ಹೆಚ್ಚಾಗಿ ಬಳಸ ಬೇಕು.

cc-wiki

‘ಕಂಪ್ಯೂಟರಿನಲ್ಲಿ ಫೋನಿನಲ್ಲಿ ಕನ್ನಡದಲ್ಲಿ ಹೇಗೆ ಬರೆಯುವುದು?’, ಇದು ಬಹಳ ಜನ ಕನ್ನಡಿಗರು ಕೇಳುವ ಪ್ರಶ್ನೆ, ‘ಕಂಪ್ಯೂಟರಿನಲ್ಲಿ ಕನ್ನಡದಲ್ಲಿ ಬರೆಯಲು ಬರುತ್ತಾ?’ ಎಂದು ಹುಬ್ಬೇರಿಸುವವರನ್ನೂ ನೋಡಿದ್ದೇನೆ. ‘ಕನ್ನಡದಲ್ಲಿ ಯಾಕ್ರಿ ಬರೀಬೇಕು?’ ಎಂದು ಶುದ್ಧ ಕನ್ನಡದಲ್ಲೇ ಕೊಂಕು ನುಡಿದವರನ್ನೂ ಕೇಳಿದ್ದೇನೆ.

ಅದೆಲ್ಲ ಇರಲಿ… ಕಾಲವೊಂದಿತ್ತು. ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಗಳು ಕಣ್ಣಿಗೆ ಬಿದ್ದರೆ ಆನಂದವಾಗುತ್ತಿತ್ತು. ಬರಬರುತ್ತ ತಂತ್ರಾಂಶ (software)ದಲ್ಲಿ ಬದಲಾವಣೆಗಳಾದವು, ಕನ್ನಡ ಭಾಷೆ ಜಾಲದಲ್ಲಿ ಕಾಣಿಸಿಕೊಳ್ಳಲು ಆರಂಭವಾಯಿತು. ಕನ್ನಡ ಭಾಷೆಯನ್ನು ಕಂಪ್ಯೂಟರಿನ ಕೀಲಿಮಣೆಯಲ್ಲಿ ಕುಟ್ಟಲು ಸುಮಾರು ತಂತ್ರಾಂಶಗಳು ಬಂದರೂ, ಕನ್ನಡ ಕೀಲಿಮಣೆಯನ್ನು ಕನ್ನಡಿಗರ ಮನೆ ಮನೆಗೆ ತಲುಪಿಸಿದ್ದು, ಬರಹ (www.baraha.com). ಸುಮಾರು ಒಂದೂವರೆ ದಶಕದ ನಂತರ ಕನ್ನಡಕ್ಕೀಗ ಯುನಿಕೋಡ್ ಸಿಕ್ಕಿದೆ. ಕನ್ನಡ ಲಿಪಿಯನ್ನು ಕಂಪ್ಯೂಟರಿಗೆ ತರಲು ಮಾಡಿದ ಸಾಹಸಗಳು, ಜಗಳಗಳು, ವಾದಗಳು, ಯುನಿಕೋಡ್ ಮಾಡುವವರೆಗಿನ ಪ್ರಯತ್ನಗಳು – ಅವೆಲ್ಲ ಇರಲಿ, ಅವುಗಳ ಬಗ್ಗೆ ಬರೆಯದೇ ಕನ್ನಡವನ್ನು ಕಂಪ್ಯೂಟರಿನಲ್ಲಿ, ಫೋನಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ ಹೇಗೆ ಕುಟ್ಟುವುದು ಎನ್ನುವುದನ್ನು ನೋಡೋಣ:

ಈ ಎಲ್ಲ ತಂತ್ರಾಂಶಗಳೂ ಮಾಡುವ ಸುಲಭದ ಕೆಲಸವೆಂದರೆ, ಕನ್ನಡ ಪದವನ್ನು ಇಂಗ್ಲೀಷಿನಲ್ಲಿ ಬರೆಯುತ್ತ ಹೋದರೆ ಸಾಕು, ಕನ್ನಡ ತಾನೇ ತಾನಾಗಿ ಮೂಡುತ್ತೆ!

ಉದಾಹರಣೆಗಳು:

‘ಗಮನ’ ಎಂದು ಬರೆಯಲು gamana ಎಂದು ಬರೆದರಾಯಿತು.kannada transliteration

ಘಮ = Gama ಅಥವಾ ghama

ಪರಿಮಳ = parimaLa

ಆಗಂತುಕ = aagaMtuka

ದೃಷ್ಟದ್ಯುಮ್ನ = dRShTadyumna

ಯಾವಾಗ ದೊಡ್ಡಕ್ಷರ (capital letter), ಯಾವಾಗ ಚಿಕ್ಕಕ್ಷರ (small letters) ದಲ್ಲಿ ಬರೆಯಬೇಕು ಎನ್ನುವುದನ್ನು ಸ್ವಲ್ಪೇ ಸ್ವಲ್ಪ ಪ್ರಯತ್ನ ಮಾಡಿ ಕಲಿಯಬಹುದು.

Read More »

ಮತ್ತೇಕೆ ಯುಗಾದಿ ಬರುತಿದೆ? – ಕೇಶವ ಕುಲಕರ್ಣಿ ಬರೆದ ಕವನ

ಯುಗ ಯುಗಾದಿ ಕಳೆದರೂ
ಮತ್ತೇಕೆ ಯುಗಾದಿ ಬರುತಿದೆ?

Photo by the author

ಹೊಸ ವರುಷ ನಮಗೆ ಜನೆವರಿ ಒಂದಾಗಿ
ಆಗಲೇ ಇದು ಎರಡನೇ ತಲೆಮಾರು.
ವಸಂತ ಮಾಸ ಯಾಕೆ ಯಾವಾಗಲೂ
ಮಾರ್ಚ್ ಯಾ ಎಪ್ರಿಲ್ ಒಂದನೇ ತಾರೀಖು
ಶುರುವಾಗಬಾರದು? ಎನ್ನುವ ಜನಾಂಗ ನಾವು.
ನಿಮ್ಮ ಈ ‘ಸಂವತ್ಸರ’
ಪ್ರನೌನ್ಸ್ ಮಾಡೋದೂ ಕಷ್ಟ ನೋಡಿ.

ಹೊಂಗೆ ಹೇಗಿರುತ್ತೇಂತ ನೋಡಿಲ್ಲ
ಭೃಂಗದಿಂದ ಕಚ್ಚಿಸಿಕೊಂಡಿದ್ದು ಮಾತ್ರ ಗೊತ್ತು.
ಬೇವಿನ ಮರ ಬಿಡಿ, ಜಾಲಿ ಮರಕ್ಕೂ
ಈ ನಗರಗಳಲ್ಲಿ ಜಾಗವಿಲ್ಲ.
ಅಷ್ಟಕ್ಕೂ ಬೇವಿನ ಮರ ಹೂ ಬಿಟ್ಟಿದೆ ಅಂದುಟ್ಟುಕೊಳ್ಳಿ!
ಅದಕ್ಕೇನು ವೆನಿಲಾದ ತರ ಬೇರೆ ದೇಶದಲ್ಲಿ ಬೆಲೆ ಇದೆಯೇ?

ಮಾವಿನ ಹಣ್ಣಿಗೆ ಈಗ ವಸಂತ ಬರಲು
ಕಾಯಬೇಕಾಗಿಲ್ಲ
ವರ್ಷದ ಹನ್ನೆರಡೂ ತಿಂಗಳೂ
ಫ್ರೂಟಿ ಲಭ್ಯ

ಹಾಗೆಂದು ನಮಗೆ ವಸಂತ, ಚೈತ್ರ
ಅಂದು ಕನ್ಫೂಸ್ ಮಾಡಬೇಡಿ
ಅವು ಹುಡುಗಿ ಹೆಸರು ಅಂದುಕೋತೀವಿ
ನಿಯತ್ತಾಗಿ ’ಸ್ಪ್ರಿಂಗ್’ ಎನ್ನಲು ಆಗೋದಿಲ್ಲವೇ ನಿಮಗೆ?

ಈ ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ
ಅದೆಲ್ಲ ಬೇಂದ್ರೆಯಲ್ಲೇ ಕಾಲವಾಯಿತು
ಈಗ ನಮಗೋ
ಯಾವಾಗ ಬೇಕೋ ಆವಾಗ ಹೊಸ ಜನ್ಮ
ಹೊಸ ಮುಖ ಹೊಸ ತಿಕ

ಅರವತ್ತರ ಮಡೋನಾ ಕೂಡ
ಕಾಸ್ಮೆಟಿಕ್ ಸರ್ಜರಿಯಲ್ಲಿ
ಮೂವತ್ತರ ಬೆಡಗಿ
ಮುದಿ ಯಯಾತಿಯ ಜೇಬಿನಲ್ಲಿ ವಯಾಗ್ರ
ಸಾವಿನ ಕಟೆಕಟೆಯಲ್ಲಿ ಕೂಡ
ನಮಗೆ ಸನತ್ಕುಮಾರ
ನೆನಪಾಗುವುದಿಲ್ಲ ಬಿಡಿ

ಇಷ್ಟೆಲ್ಲ ಆದ್ರೂ
ಮತ್ತೇಕೆ ಯುಗಾದಿ ಬರುತಿದೆ?