ರಾಜಕುಮಾರಿ ಸೋಫಿಯಾ ದುಲೀಪ್ ಸಿಂಗ್ (೧೮೭೬-೧೯೪೮) – ರಾಮಮೂರ್ತಿ ಎಚ್ ಎನ್.

ನಮಸ್ಕಾರ.  ನಮ್ಮ ಅನಿವಾಸಿ ಬಳಗದ ಉತ್ಸಾಹಿ ಬರಹಗಾರ, ಇತಿಹಾಸದ ಅಧ್ಯೇತೃ (ಬೇಸಿಂಗ್‍ಸ್ಟೋಕ್) ರಾಮಮೂರ್ತಿ ಅವರು ಬರೆದಿರುವ ಇನ್ನೊಂದು ಲೇಖನ. ಪಂಜಾಬಿನ ಕೊನೆಯ ರಾಜ ದುಲೀಪ್ ಸಿಂಹರ ಮಗಳು ರಾಜಕುಮಾರಿ ಸೋಫಿಯಾ ಅವರ ಜೀವನ ಚಿತ್ರಣ ಇಲ್ಲಿದೆ.  ಬರಿಯ ರಾಜಕುಮಾರಿಯಾಗಿ ಉಳಿಯದೇ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ, ಮೊದಲ ಮಹಾಯುದ್ಧದ ವೇಳೆಯಲ್ಲಿ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದ, ಆ ಕಾರಣಕ್ಕಾಗಿ ಬ್ರಿಟಿಷ್ ಸರಕಾರದಿಂದ ಗೌರವಿಸಲ್ಪಟ್ಟ ಮಹಿಳೆ.  
ಎಂದಿನಂತೆ ಓದಿ, ಪ್ರತಿಕ್ರಯಿಸಿ, ನಿಮ್ಮ ಅನಿಸಿಕೆಗಳನ್ನು ಬ್ಲಾಗಿನಲ್ಲಿ ಹಂಚಿಕೊಳ್ಳಿ. ಧನ್ಯವಾದಗಳೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ಈ ವಾರದ ಸಂಪಾದಕಿ ಅಮಿತಾ ರವಿಕಿರಣ ಅವರ ಪರವಾಗಿ).

********************

ದುಲೀಪ್ ಸಿಂಹ ಮತ್ತು ರಾಜಕುಮಾರಿ ಸೋಫಿಯಾ (ಚಿತ್ರಕೃಪೆ: ವಿವಿಧ ಅಂತರ್ಜಾಲತಾಣಗಳು)
೨೦ನೇ ಶತಮಾನದ ಆದಿಯಲ್ಲಿ ಇಂಗ್ಲೆಂಡ್ ದೇಶದ ಮಹಿಳೆಯರು ಮೂಲಭೂತ ಮತ್ತು ಮತದಾನದ ಹಕ್ಕು ಪಡೆಯಲು ನಡೆಸಿದ ಚಳುವಳಿಗಳಿಗೆ (Suffragette Movement) ಹೋರಾಡಿದ ಭಾರತ ಮೂಲದ ರಾಜಕುಮಾರಿ ಸೋಫಿಯಾ.  ಈಕೆ, ಭಾರತದ ಮತ್ತು ಇಂಗ್ಲೆಂಡಿನ ಶ್ರೀಮಂತ ಕುಟುಂಬದ ಆಶ್ರಯದಲ್ಲಿ ಬೆಳೆದರೂ ಅವಳ ಹೋರಾಟ ರಾಜಕೀಯ ಚಟುವಟಿಕೆಯಲ್ಲೇ ಇತ್ತು.

ಇವಳ ತಂದೆ ಪಂಜಾಬಿನ ಕೊನೆಯ ಮಹಾರಾಜ ದುಲೀಪ್ ಸಿಂಗ್. ಪಂಜಾಬಿನ “ಸಿಂಹ” ಮಹಾರಾಜ ರಂಜಿತ್ ಸಿಂಗ್‍ರ (೧೭೮೦-೧೮೩೯) ನಿಧನವಾದಮೇಲೆ ಆ ಪಟ್ಟಕ್ಕೇರಲು ಅನೇಕರು ಹೋರಾಡಿ, ಕೊನೆಗೆ ಐದು ವರ್ಷದ ದುಲೀಪ್ ಸಿಂಗ್‍ನನ್ನು ರಾಜನನ್ನಾಗಿ ಮಾಡಿದರು. ಆದರೆ ರಾಜ್ಯದಲ್ಲಿ ಅಸ್ಥಿರತೆ ಇರುವುದನ್ನು ಕಂಡು ೧೮೪೯ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ಎರಡನೆಯ ಆಂಗ್ಲೋ-ಸಿಖ್ ಯುದ್ಧದ ನಂತರ ಪಂಜಾಬ್ ಪ್ರಾಂತ್ಯವನ್ನು ಆಕ್ರಮಿಸಿಕೊಂಡು ಹತ್ತು ವರ್ಷದ ದುಲೀಪ್ ಸಿಂಗ್‍ನಿಂದ ಅವನ ಜಮೀನು ಮತ್ತು ಕೊಹಿನೂರ್ ವಜ್ರವನ್ನು ಕಸಿದುಕೊಂಡರು. ನಂತರ ದುಲೀಪ್ ಸಿಂಗನಿಗೆ ಪಿಂಚಿಣಿ ಕೊಟ್ಟು ಇಂಗ್ಲೆಂಡ್‍ನಲ್ಲಿ ವಾಸಮಾಡುವುದಕ್ಕೆ ಏರ್ಪಾಡು ಮಾಡಿದರು, ಇದಲ್ಲದೆ ಸಿಖ್ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ, ಬಹುಶಃ ಬಲವಂತದಿಂದ, ಮಾಡಿದರು.

ಸೋಫಿಯಾ ೮/೦೮/೧೮೭೬ ರಂದು ಲಂಡನ್ ನಗರದ ಬೆಲ್‍ಗ್ರೇವಿಯದಲ್ಲಿ ಜನಿಸಿದಳು. ತಾಯಿ, ಬಾಂಬ ಮುಲ್ಲರ್ (ಜರ್ಮನ್ ಮತ್ತು ಇಥಿಯೋಪಿಯಾ ಮೂಲದವಳು). ದುಲೀಪ್ ಸಿಂಗ್ ೧೮೬೩ರಲ್ಲಿ Suffolk ನಲ್ಲಿ ಇರುವ ೧೭,೦೦೦ ಎಕರೆ Elvedon Hall ಕೊಂಡಿದ್ದ (ಲಂಡನ್‍ನಲ್ಲಿದ್ದ India Office ನ ಸಹಾಯದಿಂದ). ಅವನ ಕುಟುಂಬ ಲಂಡನ್‍ನಿಂದ ಇಲ್ಲಿಗೆ ಬಂದು ನೆಲೆಸಿದರು. ರಾಣಿ ವಿಕ್ಟೊರಿಯಾ ದುಲೀಪ್ ಸಿಂಗನ ಮಕ್ಕಳನ್ನು, ಅದರಲ್ಲೂ ಸೋಫಿಯಾಳನ್ನು, ಸಾಕುಮಕ್ಕಳಂತೆ ಪರಿಗಣಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಳು.

೧೮೮೭ ರಲ್ಲಿ ಬಾಂಬ ಮುಲ್ಲರ್ ಜ್ವರದಿಂದ ನಿಧನಳಾದ ಮೇಲೆ, ದುಲೀಪ್ ಸಿಂಗ್ ೧೮೮೯ರಲ್ಲಿ ಪುನಃ ಮದುವೆಯಾದ. ಆದರೆ ಇವನ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ಹದಗೆಟ್ಟು ೧೮೮೦ ರಲ್ಲಿ Elvendon Hall ಬಿಡಬೇಕಾಯಿತು. ಸೋಫಿಯಾ ಹತ್ತು ವರ್ಷವಾಗಿದ್ದಾಗ, ದುಲೀಪ್ ಸಿಂಗ್ ತನ್ನ ಸಂಸಾರದ ಜೊತೆಯಲ್ಲಿ ಪಂಜಾಬಿಗೆ ಹಿಂತಿರುಗಲು ಮಾಡಿದ ಪ್ರಯತ್ನ ವಿಫಲವಾಯಿತು. ಹಡಗು ಏಡನ್ ತಲಪಿದಾಗ ಇವರ ಬಂಧನಕ್ಕೆ ಬ್ರಿಟಿಷ್ ಸರ್ಕಾರದ ವಾರಂಟ್ ಕಾದಿತ್ತು. ನಂತರ ದುಲೀಪ್ ಸಿಂಗ್ ಪ್ಯಾರಿಸ್ ನಗರದಲ್ಲಿ ಹಲವು ವರ್ಷಗಳನ್ನು ಕಳೆದು ೫೫ ನೇ ವಯಸ್ಸಿನಲ್ಲಿ ೧೮೯೩ರಲ್ಲಿ ನಿಧನನಾದ.

ರಾಣಿ ವಿಕ್ಟೋರಿಯಾ ಈ ಮಕ್ಕಳ ಯೋಗಕ್ಷೇಮವನ್ನು ಆಲಿಫಂಟ್ ಕುಟುಂಬಕ್ಕೆ ವಹಿಸಿ, ಬ್ರೈಟನ್ ನಗರದಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದಕ್ಕೆ ಮತ್ತು ವಾಸಕ್ಕೆ ರಾಜ ಮನೆತನದ ಹ್ಯಾಂಪ್ಟನ್ ಕೋರ್ಟ್ ಆವರಣದಲ್ಲಿ ಏರ್ಪಾಡು ಮಾಡಲಾಯಿತು.

ಸೋಫಿಯಾ ಮೊದಲ ಕೆಲವು ವರ್ಷಗಳು ಅತ್ಯಂತ ಆರಾಮದ ಜೀವನವನ್ನು ಕಳೆದಳು. ಆದರೆ ೧೯೦೭ ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಟ್ಟಾಗ, ಅಲ್ಲಿನ ಜನರ ಬಡತನ ಮತ್ತು ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನೋಡಿ ಅವಳ ಮನಸ್ಸು ಪರಿವರ್ತನೆ ಆಯಿತು.
೧೯೧೦ ರವರೆಗೂ ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಯಾವ ರೀತಿಯ ಹಕ್ಕುಗಳೂ ಇರಲಿಲ್ಲ. ಇದನ್ನು ಪ್ರತಿಭಟಿಸಿ "Women's Social and Political Union" (WSPU) ಅನ್ನುವ ಸಂಸ್ಥೆ ಎಮೆಲೀನ್ ಪ್ಯಾಂಕ್‍ಹರ್ಸ್ಟ್ (Emmeline Pankhurst) ಳ ನೇತೃತ್ವದಲ್ಲಿ ಪ್ರಾರಂಭವಾಗಿತ್ತು. ಸೋಫಿಯಾ ಈ ಚಳುವಳಿಯಲ್ಲಿ ಭಾಗವಹಿಸಿವುದಕ್ಕೆ ನಿರ್ಧರಿಸಿ, ಈ ಸಂಸ್ಥೆಯ ಸದಸ್ಯೆ ಆಗಿ ಅನೇಕ ರೀತಿಯಲ್ಲಿ ಸಹಾಯ ಮಾಡಿದಳು. ಸೋಫಿಯಾ ತಾನು ವಾಸವಾಗಿದ್ದ ಹ್ಯಾಂಪ್ಟನ್ ಕೋರ್ಟ್ ಹೆಬ್ಬಾಗಿಲಿನ ಮುಂದೆ ನಿಂತು The Suffragette ಪತ್ರಿಕೆಯ ಮಾರಾಟವನ್ನು ಸಹ ಮಾಡುತಿದ್ದಳು.

೧೯೧೦ ರಲ್ಲಿ ಲಂಡನ್ ನಗರದಲ್ಲಿ ನಡೆದ Black Friday ಪ್ರತಿಭಟನೆಯಲ್ಲಿ ೩೦೦ ಮಹಿಳೆಯರ ತಂಡದೊಂದಿಗೆ ಸೋಫಿಯಾ ಭಾಗವಹಿಸಿ ಕ್ಯಾಸ್ಟನ್ ಹಾಲ್‍ನಿಂದ ಪಾರ್ಲಿಮೆಂಟಿನವರೆಗೆ ನಡೆದು, ಅಲ್ಲಿ ಪ್ರಧಾನ ಮಂತ್ರಿಗಳನ್ನು ಭೆಟ್ಟಿಯಾಗಲು ಪ್ರಯತ್ನಿಸಿದರು. ಆದರೆ ಅವರು ನಿರಾಕರಿಸಿದ್ದರಿಂದ ಈ ತಂಡ ಅಲ್ಲೇ ಕುಳಿತು ಘೋಷಣೆಗಳನ್ನು ಕೂಗುವುದಕ್ಕೆ ಪ್ರಾರಂಭಿಸಿದಾಗ ಪೊಲೀಸರು ಇವರ ಮೇಲೆ ಅತ್ಯಂತ ದೌರ್ಜನ್ಯದಿಂದ ವರ್ತಿಸಿದರು. ಈ ತಂಡದ ಅನೇಕರು ಗಾಯಗೊಂಡು ಇಬ್ಬರ ಮರಣಕ್ಕೂ ಪೋಲೀಸರ ದೌರ್ಜನ್ಯ ಕಾರಣವಾಯಿತು. ಅಂದಿನ ಗೃಹಮಂತ್ರಿ ಸರ್ ವಿನ್ಸ್ಟನ್ ಚರ್ಚಿಲ್ ಪೊಲೀಸರಿಗೆ ಉತ್ತೇಜನ ಕೊಟ್ಟರು ಅನ್ನುವ ಆರೋಪ ಸಹ ಬಂದಿತ್ತು.

೧೯೧೧ ರಲ್ಲಿ ನಡೆದ ಜನಗಣತಿಯಲ್ಲಿ (Census) ಭಾಗವಹಿಸುವುದಕ್ಕೆ ಸೋಫಿಯಾ ಮತ್ತು ಸಂಸ್ಥೆಯವರು ನಿರಾಕರಿಸಿದರು. ಸೋಫಿಯಾ ಜನಗಣತಿಯ ಚೀಟಿಯ ಮೇಲೆ ಈ ರೀತಿ ಬರೆದು ಚೀಟಿಯನ್ನು ಹಿಂತಿರಿಗಿಸಿದಳು (ಕೆಳಗೆ ಚಿತ್ರ ನೋಡಿ) - No Vote, No Census. As women do not count, they refuse to be counted; I have a conscientious objection to filling up this form.
No Vote, No Tax.

ಮತದಾನದ ಹಕ್ಕು ಇಲ್ಲದೆ ವರಮಾನ ತೆರಿಗೆ ಕೊಡುವುದಕ್ಕೂ ಸೋಫಿಯಾ ನಿರಾಕರಿಸಿದ್ದರಿಂದ ನ್ಯಾಯಾಲಯ £೧೨ ದಂಡ ಹಾಕಿತು. ಆದರೆ ಇದನ್ನು ಪ್ರತಿಭಟಿಸಿ ದಂಡವನ್ನು ಕಟ್ಟಲಿಲ್ಲವಾದ ಕಾರಣದಿಂದಿಂದ ಅವಳ ಕೆಲವು ಆಭರಣಗಳನ್ನು ವಶಪಡಿಸಿಕೊಂಡು ಹರಾಜು ಮಾಡಲಾಯಿತು. ಆದರೆ WSPUನ ಕಾರ್ಯದರ್ಶಿ ಈ ಹರಾಜಿನಲ್ಲಿ ಭಾಗವಹಿಸಿ ಆಭರಣಗಳನ್ನು ಕೊಂಡುಕೊಂಡು ಸೋಫಿಯಾಗೆ ವಾಪಸ್ಸು ಕೊಟ್ಟರು.

೧೯೧೪ ನಲ್ಲಿ ಮೊದಲನೇ ಮಹಾಯುದ್ಧ ಪ್ರಾರಂಭವಾದ್ದರಿಂದ ಮಹಿಳೆಯರು ತಮ್ಮ ಹೋರಾಟವನ್ನು ನಿಲ್ಲಿಸಿ, ದೇಶದ ಮತ್ತು ಸರಕಾರದ ಪರವಾಗಿ ನಿಂತು ಸಹಾಯ ಮಾಡುವುದಕ್ಕೆ ಸಿದ್ದರಾದರು. ಲಕ್ಷಾಂತರ ಭಾರತೀಯ ಸೈನಿಕರು ಈ ಯುದ್ಧದಲ್ಲಿ ಭಾಗವಹಿಸಿದ್ದರು, ಇವರ ಯೋಗಕ್ಷೇಮ ಕಾಯಲು ಸೋಫಿಯಾ ನೆರವಾಗಿ Red Cross ಸಂಸ್ಥೆಯ ಪರವಾಗಿ ಹಣ ಸಂಗ್ರಹಣೆ ಮಾಡಿದಳು. ಸ್ವತಃ ೧೯೧೫ರಲ್ಲಿ ಮಿಲಿಟರಿ ಆಸ್ಪತ್ರೆಯಲ್ಲಿ ಬ್ರಿಟಿಷ್ ರೆಡ್‍ಕ್ರಾಸ್ ನರ್ಸ್ ಆಗಿ ಸೇರಿ ಸೇವೆ ಮಾಡಿದಳು. ೧೯೧೮ ರಲ್ಲಿ YMCA War Emergency Committee ಯ ಕಾರ್ಯದರ್ಶಿಯಾಗಿ, ಲಂಡನ್‍ನಲ್ಲಿ “ಧ್ವಜ ದಿವಸ” (Flag Day) ನಡೆದ ನಂತರ “ಭಾರತೀಯ ದಿವಸ” (India day)ದ ಆಚರಣೆಯನ್ನು ಮಾಡಿ, ೫೦೦೦೦ ವಸತಿಗೃಹಗಳನ್ನು ಗಾಯಗೊಂಡ ಭಾರತೀಯ ಸೈನಿಕರು ವಾಸಕ್ಕೆ ಒದಗಿಸಲು ಕಾರಣಳಾದಳು.
ಯುದ್ಧ ಮುಗಿದ ಮೇಲೆ (೧೯೧೮) ಆಂಗ್ಲ ಸರ್ಕಾರ "The Representation of the People Act" ಕಾನೂನು ಜಾರಿಯಾದಾಗ ೩೦ ವರ್ಷ ಮೀರಿದ ಮಹಿಳೆಯರಿಗೂ, ೧೯೨೮ ರ “Franchise Act” ಕಾನೂನು ಹೊರಬಂದಾಗ ೨೧ ವರ್ಷ ಮೀರಿದ ಮಹಿಳೆಯರಿಗೂ ಮತದಾನದ ಹಕ್ಕು ಬಂತು.

ಈ ದೇಶದಲ್ಲಿ ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಇರುವ ಹಕ್ಕು ಮತ್ತು ಸ್ವಾತಂತ್ರಕ್ಕೆ ಕಾರಣ ಸೋಫಿಯಾ ಮತ್ತು ಅವಳ ಸಂಗಡಿಗರ ಹೋರಾಟವೇ ಕಾರಣ ಅನ್ನುವುದರಲ್ಲಿ ಸಂದೇಹವೇ ಇಲ್ಲ.
೨೨/೦೮/೧೯೪೮ ರಲ್ಲಿ ಸೋಫಿಯಾ ಬಕಿಂಗ್‍ಹ್ಯಾಮ್‍ಶೈರ್ನಲ್ಲಿರುವ ಪೆನ್ನ್ ಊರಿನಲ್ಲಿ ಅವಳ ತಂಗಿಯ ಮನೆಯಲ್ಲಿ ತನ್ನ ೭೨ನೇ ವಯಸ್ಸಿನಲ್ಲಿ ನಿಧನಾದಳು.  ರಾಜಕುಮಾರಿ ಸೋಫಿಯಾಳ ಅಂತ್ಯಕ್ರಿಯೆ Golders Green crematorium ನಲ್ಲಿ ೨೬/೦೮/೧೯೪೮ ರಂದು ನಡೆಯಿತು. ಅವಳ ಕೊನೆ ಇಚ್ಛೆ ತನ್ನ ಅಂತಕ್ರಿಯೆಯು ಸಿಖ್ ಪದ್ಧತಿಯಲ್ಲಿ ನಡೆಯಬೇಕೆಂದು ಇತ್ತು. 

ಸೋಫಿಯಾಗೆ ದೊರೆತ ಮರಣೋತ್ತರ ಮಾನ್ಯತೆಗಳು ಅನೇಕ; ರಾಯಲ್ ಮೇಲ್‍ನವರ "Votes for Women" ದಿನಾಚರಣೆಯಲ್ಲಿ ೧೫/೦೨/೨೦೧೮ ಸೋಫಿಯಾ The Suffragette ಪತ್ರಿಕೆಯನ್ನು ಮಾರುತ್ತಿರುವ ಚಿತ್ರವುಳ್ಳ ಅಂಚೆಚೀಟಿ (postage stamp) ಬಿಡುಗಡೆ ಆಯಿತು.

ಏಪ್ರಿಲ್ ೨೦೧೮ ರಲ್ಲಿ ಪಾರ್ಲಿಮೆಂಟ್ ಮುಂದಿರುವ ಕಂಬದ ಮೇಲೆ ಸೋಫಿಯಾಳ ಚಿತ್ರ ಮತ್ತು ಹೆಸರನ್ನು ಕೆತ್ತಲಾಗಿದೆ.
A Princess' Guide to Burning Issue ಅನ್ನುವ ಮಕ್ಕಳಿಗಾಗಿ ಮಾಡಿದ ನಾಟಕ ಅನೇಕ ಶಾಲೆಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ.
English Heritage ನವರು ಹ್ಯಾಂಪ್ಟನ್ ಕೋರ್ಟ್‍ನ ಹತ್ತಿರದ ಮನೆಯ ಮೇಲೆ ನೀಲಿ ಫಲಕದ (Blue Plaque) ಅನಾವರಣೆಯನ್ನು ೨೦೨೩ರಲ್ಲಿ ಮಾಡಿದರು.

ಸೋಫಿಯಾ ಜೀವನ ಚರಿತ್ರೆಯ ಬಗ್ಗೆ ಅನೇಕ ಲೇಖನಗಳು ಮತ್ತು ಪುಸ್ತಕಗಳು ಪ್ರಕಟವಾಗಿವೆ. ಉದಾಹರಣೆಗೆ, ಅನಿತಾ ಆನಂದ್ ಅವರ Suffragette Revolutionary (೨೦೧೫, ISBN ೯೭೮೧೪೦೮೮೩೫೪೫೬).

ಕೊನೆಯ ಮಾತು: ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು ೧೯೨೮ರಲ್ಲಿ, ಅದೂ ೨೧ ವರ್ಷಕ್ಕೆ ಮೀರಿದವರಿಗೆ ಮಾತ್ರ ದೊರೆತಿತ್ತು; ದಕ್ಷಿಣ ಭಾರತದಲ್ಲಿ, ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರು ೧೯೨೩ ರಲ್ಲಿಯೇ ಮಹಿಳೆಯರಿಗೆ ಈ ಹಕ್ಕನ್ನು ಕೊಟ್ಟಿದ್ದರ ಮಹತ್ವವನ್ನು ಇಲ್ಲಿ ಮರೆಯಬಾರದು.

- ರಾಮಮೂರ್ತಿ ಎಚ್ ಎನ್.
ಕಾಂಗಲ್‍ಟನ್, ಚೆಶೈರ್.

********************

ರಾಜಕುಮಾರ ರಣಜಿತ್ ಸಿಂಹಜಿ – ಬೇಸಿಂಗ್‍ಸ್ಟೋಕ್ ರಾಮಮೂರ್ತಿ

ಪ್ರಿಯರೇ, ಬಹಳಷ್ಟು ಭಾರತೀಯರ ರಕ್ತದಲ್ಲಿ ಕ್ರಿಕೆಟ್ಟಿನ ಪ್ರೀತಿ ಕಬ್ಬಿಣದ ಅಂಶಕ್ಕಿಂತ ಹೆಚ್ಚಿರಬೇಕು ಅಂದರೆ ತಪ್ಪಾಗಲಿಕ್ಕಿಲ್ಲ. ಅಂತರರಾಷ್ಟ್ರೀಯ ಪಂದ್ಯಗಳಂತೂ ಸರಿಯೇ, ದೇಶದೊಳಗಿನ ಐಪಿಎಲ್ ಸಹ ನಮ್ಮ ಕ್ರಿಕೆಟ್ ಹುಚ್ಚಿಗೆ ಸಾಲುವುದಿಲ್ಲ. ಈಗ ಟೀವಿ, ಇಂಟರ್ನೆಟ್ಟು, ಸ್ಟ್ರೀಮಿಂಗು ಇತ್ಯಾದಿಗಳಿಂದಾಗಿ ಪಂದ್ಯಾವಳಿಗಳು ಬಂದವೆಂದರೆ ಸಾಕು, ಎಲ್ಲರ ಮುಖವೂ ಮನವೂ ಅದರಲ್ಲೇ! ಈ ಆಟದ ಮತ್ತು ಈಚೆಗಿನದೇನೂ ಅಲ್ಲವಲ್ಲ, ಇದಕ್ಕೂ ಮೊದಲೇ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಇತ್ಯಾದಿಗಳು ಇದ್ದವಲ್ಲ. ಆದರೆ ಈಗಿನಷ್ಟು ಅಕ್ಸೆಸಿಬಿಲಿಟಿ ಇರಲಿಲ್ಲವೆನ್ನಬಹುದು. ಈಗಿನಂತೆ ಆಗೂ ಸುಪರ್ ಸ್ಟಾರುಗಳು ಇದ್ದರು – ಡಬ್ಲೂ ಜಿ ಗ್ರೇಸ್, ಡಾನ್ ಬ್ರಾಡ್ಮನ್ ಇತ್ಯಾದಿ ಘಟಾನುಘಟಿಗಳು ಆಗಿಹೋಗಿದ್ದಾರೆ. ಅಂಥವರಲ್ಲಿ ಎದ್ದು ಕಾಣುವ ಒಬ್ಬ ಆಟಗಾರ, ಇಂಗ್ಲಿಷ್ ಕೌಂಟಿ ಮತ್ತು ಇಂಗ್ಲಂಡ್ ದೇಶದ ತಂಡದ ಪರವಾಗಿ ಆಡಿದ ’ರಾಜಕುಮಾರ’ ರಣಜಿತ್ ಸಿಂಹಜಿ, ಮೊತ್ತಮೊದಲ ಭಾರತೀಯ ಸಂಜಾತ ಆಟಗಾರ. ರಣಜಿ ಕಪ್ಪಿನಿಂದಾಗಿ ಭಾರತದಲ್ಲಿ ಅಮರನಾಗಿರುವ ಈ ಆಟಗಾರನ ಜೀವ ಇಂಗ್ಲಂಡಿನ ಕ್ರಿಕೆಟ್ಟಿನಲ್ಲಿ ಇತ್ತಂತೆ – ಈ ಬಗ್ಗೆ ಬರೆದಿರುವ ನಮ್ಮ ಅನಿವಾಸಿ ಗುಂಪಿನ ಬೇಸಿಂಗ್‍ಸ್ಟೋಕ್ ರಾಮಮೂರ್ತಿ ಅವರ ಲೇಖನ ಇಲ್ಲಿದೆ. ಈಗ ಅವರು ಬೇಸಿಂಗ್‍ಸ್ಟೋಕ್ ಬಿಟ್ಟು ಬೇರೆಡೆ ಬಂದಿದ್ದರೂ, (ಪುಟ್ಟಪ್ಪನವರ ಕುಪ್ಪಳಿಯಂತೆ) ಬೇಸಿಂಗ್‍ಸ್ಟೋಕ್ ಅವರನ್ನು ಬಿಡಲಿಕ್ಕಿಲ್ಲ. ಎಂದಿನಂತೆ ಓದಿ, ಪ್ರತಿಕ್ರಯಿಸಿ. ಧನ್ಯವಾದಗಳು – ಲಕ್ಷ್ಮೀನಾರಾಯಣ ಗುಡೂರ (ವಾರದ ’non-ಲೇಖಕ’ ಸಂಪಾದಕ).

ಸರ್ ಕೆ. ಎಸ್. ರಣಜಿತ್ ಸಿಂಹಜಿ (ರಣಜಿ)

ಭಾರತದಲ್ಲಿ ಈಗಿನ IPL ಮುಂಚೆ ರಣಜಿ ಟ್ರೋಫಿ ಅತ್ಯಂತ ಪ್ರಮುಖವಾದ ಕ್ರಿಕೆಟ್ ಪಂದ್ಯವಾಗಿತ್ತು. ೧೯ನೇ ಶತಮಾನದಲ್ಲಿ ಈಗಿನ ಮುಂಬೈ ನಗರದಲ್ಲಿ ಪಾರ್ಸಿ ಪಂಗಡದವರು ಮಾತ್ರ ಕ್ರಿಕೆಟ್ ಆಡುತ್ತಿದ್ದರು.  ನಂತರ ಇತರ ಪ್ರಾಂತ್ಯಗಳಲ್ಲೂ ಪ್ರಾರಂಭವಾಗಿ ೧೯೩೪ರಲ್ಲಿ ಅಂದಿನ ಕ್ರಿಕೆಟ್ ಸಂಸ್ಥೆಯ ಮುಖಂಡರಾಗಿದ್ದ ಅಂಥೋನಿ ಡಿ ಮೆಲ್ಲೋ ಅಂತರರಾಜ್ಯ ಸ್ಪರ್ಧೆ  ನಡೆಸುವುದಕ್ಕೆ ಸಲಹೆ ಕೊಟ್ಟರು.  ಅದು Cricket Championship of India ಹೆಸರಿನಿಂದ ಶುರುವಾಗಿ  ಪಟಿಯಾಲಾ ಮಹಾರಾಜರು  ಟ್ರೋಫಿಯನ್ನು ಕಾಣಿಕೆಯಾಗಿ ಕೊಟ್ಟ  ನಂತರ  ಈ ಪಂದ್ಯ “ರಣಜಿ ಟ್ರೋಫಿ” ಪಂದ್ಯ ಎಂದಾಯಿತು.  ಮೊದಲ ಸ್ಪರ್ಧೆ, ೪/೧೧/೧೯೩೪, ಮೈಸೂರ್ ಮತ್ತು ಮದ್ರಾಸ್ ರಾಜ್ಯದ ತಂಡದವರ ಮಧ್ಯೆ ನಡೆಯಿತು; ಅದರಲ್ಲಿ ಮದ್ರಾಸ್ ಗೆ ಜಯ ದೊರೆತಿತ್ತು. 

ಅನೇಕ ವರ್ಷ ಕೇಂಬ್ರಿಡ್ಜ್, ಸಸೆಕ್ಸ್ ಮತ್ತು ಇಂಗ್ಲೆಂಡ್ ದೇಶಕ್ಕೆ ಆಡಿದ ರಣಜಿತ್ ಸಿಂಹ ಭಾರತಕ್ಕೆ ಅಕ್ಟೊಬರ್ ೧೯೦೪ರಲ್ಲಿ ಹಿಂತಿರುಗಿದಾಗ ಕ್ರಿಕೆಟನ್ನು ಜನಪ್ರಿಯಗೊಳಿಸುವ ಪ್ರಯತ್ನ ಮಾಡಲಿಲ್ಲ, ಮತ್ತು ಅವರಿಗೆ ಈ ವಿಷಯದಲ್ಲಿ ಯಾವ ಆಸಕ್ತಿ ಸಹ ಇರಲಿಲ್ಲ. ಕೆಲವರು ಇದರ ವಿಚಾರವನ್ನು ಪ್ರಸ್ತಾಪಿಸಿದಾಗ "ನಾನು ಇಂಗ್ಲೆಂಡ್ ದೇಶಕ್ಕೆ ಆಡಿದವನು ಮಾತ್ರ" ಎಂಬ ಉದಾಸೀನದ ಉತ್ತರ ಕೊಟ್ಟನಂತೆ. ಈ ಕಾರಣದಿಂದ ಅನೇಕರು, ರಣಜಿಯನ್ನು "Father of Indian Cricket " ಅನ್ನುವುದು ಸರಿಯಲ್ಲ ಅನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದ ಕ್ರಿಕೆಟ್‍ನಲ್ಲಿ ಬಹಳ ದೊಡ್ಡ ಹೆಸರು ಗಳಿಸಿದ್ದ. ಇಂಗ್ಲೆಂಡ್ ನಲ್ಲಿ ರಣಜಿಯ ಹೆಸರು ಮನೆಮಾತಾಗಿತ್ತು ಮತ್ತು ಅವನು ಆಡುತ್ತಿದ್ದರೆ ಜನರು ಕಿಕ್ಕಿರಿದು ಸೇರುತ್ತಿದ್ದರು. ಇಂಗ್ಲಂಡ್ ದೇಶದ ತಂಡದಲ್ಲಿ ರಣಜಿ ಮೊಟ್ಟಮೊದಲ ಭಾರತೀಯ ಮೂಲದ ಆಟಗಾರನಾಗಿದ್ದ.

೧೮೮೮ರಲ್ಲಿ ಹದಿನಾರು ವಯಸ್ಸಿನ ಹುಡುಗ, ರಾಜಕೋಟನ ಶಾಲೆಯಲ್ಲಿ ಕ್ರಿಕೆಟ್ ಆಡಿದ ಅನುಭವ ಮಾತ್ರ ಇದ್ದು, ಓದುವುದಕ್ಕೆ ಕೇಂಬ್ರಿಡ್ಜ್ ವಿಶ್ಯವಿದ್ಯಾಲಯಕ್ಕೆ ಬಂದು ಕ್ರಿಕೆಟ್ ನಲ್ಲಿ ದೊಡ್ಡ ಹೆಸರು ಗಳಿಸಿದ್ದು ಆಶ್ಚರ್ಯದ ವಿಚಾರವೇ ಸರಿ. ಇಲ್ಲಿ ಅವನ ವರ್ಣರಂಜಿತ ಜೀವನ ಚರಿತ್ರೆಯ ಸಂಕ್ಷಿಪ್ತ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ.

ಇಂಗ್ಲೆಂಡ್ ನಲ್ಲಿ ರಣಜಿ, ರಾಜಕುಮಾರ (Prince) ಎಂದು ಹೇಳಿಕೊಂಡಿದ್ದರೂ, ಈತ ರಾಜಕುಮಾರನಾಗಿರಲಿಲ್ಲ, ಅಥವಾ ಯಾವ ಅರಮನೆಯಲ್ಲೊ ಬೆಳೆಯಲಿಲ್ಲ. ಹುಟ್ಟಿದ್ದು ೧೦/೦೯/೧೮೭೨ರಲ್ಲಿ ಪಶ್ಚಿಮ ಭಾರತದ ನವಾನಗರ ಪ್ರಾಂತ್ಯದ ಸದೋದಾರ್ ಎಂಬ ಸಣ್ಣ ಊರಿನಲ್ಲಿ. ತಂದೆ ಜೀವನ್ ಸಿಂಹಜಿ, ಅಲ್ಲಿನ ರಾಜ ವಿಭಾಜಿಗೆ ದೂರದ ಸಂಬಂಧ. ರಾಜನ ಮಗ ಕಲೋಭ ಈ ರಾಜ್ಯಕ್ಕೆ ಉತ್ತರಾಧಿಕಾರಿಯಾಗಬೇಕಾಗಿತ್ತು ಆದರೆ ಅವನ ನಡವಳಿಕೆ ಮತ್ತು ದುಷ್ಟತನದಿಂದ ಅವನನ್ನು ದೂರ ಮಾಡಿ, ಹತ್ತಿರ ಸಂಬಂಧವರ ಮನೆಯಿಂದ ಒಂದು ಗಂಡು ಮಗುವನ್ನು ಆಯ್ಕೆ ಮಾಡಿದರು. ಆದರೆ, ಅಂದಿನ ವದಂತಿಗಳ ಪ್ರಕಾರ, ಈ ಮಗು ಜ್ವರದಿಂದಲೋ ಅಥವಾ ವಿಷಪ್ರಯೋಗದಿಂದಲೋ ಕೆಲವೇ ತಿಂಗಳಲ್ಲಿ ತೀರಿಹೋಯಿತು. ಎರಡನೇ ಆಯ್ಕೆ ಜೀವನ್ ಸಿಂಹಜಿಯ ಎರಡನೇ ಮಗ ರಂಜಿತ್ ಸಿಂಹಜಿ. ಬ್ರಿಟಿಷ್ ಅಧಿಕಾರಿಗಳ ಒಪ್ಪಿಗೆ ಪಡೆದು ರಾಜಕೋಟೆಯಲ್ಲಿ ಇರುವ ರಾಜಕುಮಾರ್ ಕಾಲೇಜ್ ನಲ್ಲಿ ಇವನ ವಿದ್ಯಾಭ್ಯಾಸ ಮುಂದೆವರೆಯಿತು ಆದರೆ ಜೀವನ್ ಸಿಂಹಜಿ ಮನೆಯವರ ನಡವಳಿಕೆ ಮತ್ತು ದುರಾಸೆಗಳಿಂದ ರಣಜಿಯನ್ನು ಅಧಿಕೃತವಾಗಿ ದತ್ತು ಪುತ್ರನಾಗಿ ಮಾಡಲಿಲ್ಲ. ಆದರೂ ರಾಜನಿಂದ ಆರ್ಥಿಕ ಸಹಾಯ ಮತ್ತು ನೆರವು ಇತ್ತು. ಕೆಲವು ವರ್ಷಗಳ ನಂತರ ರಾಜನ ಪರಿವಾರದಲ್ಲಿದ್ದ ಒಬ್ಬಳಿಗೆ ಒಂದು ಗಂಡು ಮಗು ಹುಟ್ಟಿ ಅವನನ್ನು ಉತ್ತರಾಧಿಕಾರಿ ಎಂದು ಘೋಷಿಸಿದರು. ಈ ವಿಚಾರ ಬಹಳ ವಿವಾದಾತ್ಮಕವಾಗಿತ್ತು, ಕಾರಣ ಈ ಮಗುವಿನ ತಾಯಿ ರಾಜನ ರಾಣಿಯಾಗಿರಲಿಲ್ಲ; ಆಕೆ ವೇಶ್ಯೆ ಮತ್ತು ಮುಸಲ್ಮಾನ ಪಂಗಡಕ್ಕೆ ಸೇರಿದವಳು ಅನ್ನುವ ವದಂತಿಗಳು ಅನೇಕವಾಗಿತ್ತು.

ರಣಜಿ, ರಾಜಕುಮಾರ್ ಕಾಲೇಜ್ ನಲ್ಲಿ ಕ್ರಿಕೆಟ್ ಕಲಿತು ೧೮೮೪ರಲ್ಲಿ ಕಾಲೇಜ್ ನಾಯಕ ಆಗಿಯೂ ಆಯ್ಕೆ ಆದ. ಆ ಶಾಲೆಯ ಹೆಡ್ ಮಾಸ್ಟರ್ ಮಿ. ಮೆಕ್ನಾಟನ್ (Mr Macnaghten) ರಣಜಿ ಮತ್ತು ಇನ್ನಿಬ್ಬರನ್ನು ೧೮೮೮ರಲ್ಲಿ ಇಂಗ್ಲೆಂಡಿಗೆ ಕರೆದುಕೊಂಡು ಹೋಗಿ, ಕೇಂಬ್ರಿಡ್ಜ್ ನಲ್ಲಿ ಓದುವ ಉದ್ದೇಶದಿಂದ ಟ್ರಿನಿಟಿ ಕಾಲೇಜಿನ Chaplin ಅಥವಾ ಪಾದ್ರಿ ಆಗಿದ್ದ ರೆವ್. ಲೂಯಿ ಬೊರಿಸೊ (Rev Louis Borrisow) ಅನ್ನುವವರ ಮನೆಯಲ್ಲಿ ವಾಸವಾಗಿ ಇರುವುದಕ್ಕೆ ಏರ್ಪಾಡು ಮಾಡಿ ರಾಜೆಕೋಟೆಗೆ ಹಿಂತಿರಿಗಿದರು. ಇಂಗ್ಲೆಂಡ್‍ನ ವಾತಾವರಣ ರಣಜಿಗೆ ಹಿಡಿಸಲಿಲ್ಲ. ಆದರೂ ಕ್ರಿಕೆಟ್ ಆಡುವ ಮತ್ತು ಕೇಂಬ್ರಿಡ್ಜ್ ನಲ್ಲಿ ಓದುವ ಆಸೆ ಇತ್ತು. ಆದರೆ, ಕಾಲೇಜ್ ಪ್ರವೇಶಕ್ಕೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕಾಗಿತ್ತು. ಇದು ಸಾಧ್ಯವಾಗಲಿಲ್ಲ, ಆದರೂ ಇವನನ್ನು "ಸ್ಥಾನದ ಯುವಕ" ಅಂದರೆ, Youth of Position, ಎಂದು ಪರಿಗಣಿಸಿದ್ದರಿಂದ ಕಾಲೇಜಿಗೆ ಸೇರಲು ಸಾಧ್ಯವಾಯಿತು. ರಣಜಿ ಶಿಕ್ಷಣ ಬಗ್ಗೆ ಸಾಕಷ್ಟು ಗಮನ ಕೊಡಲಿಲ್ಲ, ಕ್ರಿಕೆಟ್ ಆಡುವುದರಲ್ಲಿ ಮಾತ್ರ ತೊಡಗಿಸಿಕೊಂಡ. ೧೮೯೨ರಲ್ಲಿ ಪ್ರತ್ಯೇಕ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು, ಮನೋರಂಜನೆಗೆ ಅದ್ದೂರಿಯಾಗಿ ಖರ್ಚು ಮಾಡಿ ತಾನು ರಾಜಮನೆತದವನು ಅನ್ನುವ ಭಾವನೆ ಕಲ್ಪಿಸಿದ. ಆದರೆ ಹಣ ಮಾತ್ರ ಸಾಲದಿಂದ!

ಇಂಗ್ಲೆಂಡ್ ಬಾರ್ ಪರೀಕ್ಷೆಗೆ ಇನ್ನಷ್ಟು ಹಣಸಹಾಯ ಬೇಕೆಂದು ವಿಭಾಜಿ ರಾಜನಿಗೆ ಮನವಿ ಮಾಡಿದಾಗ, ರಾಜ ಹಣ ಕಳಿಸಲು ಬಾರ್ ಪರೀಕ್ಷೆ ಮುಗಿದಂತೆ ಭಾರತಕ್ಕೆ ಹಿಂತಿರಿಗಬೇಕು ಅನ್ನುವ ಷರತ್ತು ಹಾಕಿದ. ಆದರೆ ರಣಜಿ ಈ ಪರೀಕ್ಷೆಯಲ್ಲಿ ಭಾಗವಹಿಸಲಿಲ್ಲ ಮತ್ತು ಹಣಕಾಸಿನ ಸಮಸ್ಯೆ ಬಗೆಹರಿಯಲಿಲ್ಲ.
೧೮೯೨/೩ ರಲ್ಲಿ ಕೇಂಬ್ರಿಡ್ಜ್ ತಂಡಕ್ಕೆ ಆಯ್ಕೆ ಆಗಿ ಹೆಸರುಮಾಡಿಕೊಂಡ.  ನಂತರ ಕೇಂಬ್ರಿಡ್ಜ್ Blue ಪ್ರಶಸ್ತಿ ಸಹ ದೊರಕಿತು.  ಭಾರತಕ್ಕೆ ಹಿಂತಿರುಗಲಿಲ್ಲವಾದ ಕಾರಣದಿಂದ ವಿಭಾಜಿ ಹಣ ಸಹಾಯವನ್ನು ನಿಲ್ಲಿಸಬೇಕಾಯಿತು.  ರಣಜಿ, ಹಲವಾರು ಬ್ರಿಟಿಷ್ ಅಧಿಕಾರಿಗಳ ಶಿಫಾರಸಿನಿಂದ ಇನ್ನಷ್ಟು ಹಣವನ್ನು ಸಾಲದ ರೂಪದಲ್ಲಿ ವಿಭಾಜಿ ಕೊಟ್ಟದ್ದು ಸ್ವಲ್ಪ ಸಮಾಧಾನವಾಯಿತು. 
    
ಕೇಂಬ್ರಿಡ್ಜ್  ತಂಡಕ್ಕೆ (೧೮೯೦-೧೮೯೩) ಆಡಿದ ನಂತರ ರಣಜಿ ಸಸೆಕ್ಸ್ (Sussex) ಕೌಂಟಿಗೆ ೧೮೯೫-೧೯೧೨ ವರೆಗೆ ಆಡಿ, ೧೮೯೯-೧೯೦೩ರಲ್ಲಿ ಕಾಪ್ಟನ್ ಸಹ ಆಗಿದ್ದ.  ಒಟ್ಟು ೩೦೦೦ ರನ್ನುಗಳನ್ನು ೧೮೯೯ ಮತ್ತು ೧೯೦೦ರ ಅವಧಿಯಲ್ಲಿ ಹೊಡದಿದ್ದ. 

ಆಸ್ಟ್ರೇಲಿಯಾ  ತಂಡ ೧೮೯೬ ನಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿತು (Ashes Series).  ಅನೇಕರು, ಲಾರ್ಡ್ಸ ಮೈದಾನದಲ್ಲಿ ನಡೆದ ಮೊದಲನೆಯ ಟೆಸ್ಟ್ ತಂಡದಲ್ಲಿ ರಣಜಿ ಅಡುತ್ತಾನೆ ಎಂದು ಊಹಿಸಿದ್ದರು.  ಆದರೆ MCC ಯ ಅಧ್ಯಕ್ಷ ಲಾರ್ಡ್ ಹ್ಯಾರಿಸ್ ಇದಕ್ಕೆ ಒಪ್ಪಲಿಲ್ಲ; ಕಾರಣ, ಜನಾಂಗೀಯ ತಾರತಮ್ಯ (Racial discrimination).  ಆದರೆ ಓಲ್ಡ್ ಟ್ರಾಫರ್ಡ್ (Old Trafford) ನಲ್ಲಿ ನಡೆದ ಎರಡನೆಯ ಟೆಸ್ಟ್ ನಲ್ಲಿ  ರಣಜಿ ತಂಡದಲ್ಲಿ ಸೇರಿದ್ದ.  ಇದಕ್ಕೆ ಮುಂಚೆ ರಣಜಿ ಆಡುವುದಕ್ಕೆ ಆಸ್ಟ್ರೇಲಿಯದ ಕ್ಯಾಪ್ಟನ್ ತನ್ನ ಅಭ್ಯಂತರ ಇಲ್ಲ ಎಂದ ಮೇಲೆ ರಣಜಿಯ ಆಯ್ಕೆ ಆಯಿತಂತೆ!  ಮೊಟ್ಟಮೊದಲನೆಯ ಬಾರಿಗೆ ಒಬ್ಬ ಭಾರತೀಯ ಪ್ರಜೆ ೧೬/೦೭/೧೮೯೬ ರಂದು ಇಂಗ್ಲೆಂಡ್ ದೇಶದ ತಂಡದಲ್ಲಿ ಭಾಗವಹಿಸಿದ್ದು.
 
ರಣಜಿ, ಮೊದಲನೆಯ ಇನ್ನಿಂಗ್ಸ್ ನಲ್ಲಿ ೬೨ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ೧೫೪ ಅಜೇಯ (not  out) ರನ್ನುಗಳನ್ನು ಮಾಡಿ ಇಂಗ್ಲೆಂಡ್ ತಂಡಕ್ಕೆ ಶಾಶ್ವತ ಆಟಗಾರನಾಗಿ ಸೇರಿದ.
  
೧೮೯೬ರಲ್ಲಿ ರಣಜಿ ಆರೋಗ್ಯ ಸ್ವಲ್ಪ ಹದಗೆಟ್ಟಿತ್ತು. ಈ ಸಮಯದಲ್ಲಿ, ಕ್ರಿಕೆಟ್ ಆಟದ ತನ್ನ ಅನುಭವ ಮತ್ತು ಆಡುವ ರೀತಿ ಬಗ್ಗೆ ಬರೆಯುವ ಯೋಚನೆ ಬಂತು.  ಅವನ ಸ್ನೇಹಿತರಾಗಿದ್ದ ಚಾರ್ಲ್ಸ್ ಫ್ರೈ ಮತ್ತು ಡಾಕ್ಟರ್ ಬಟ್ಲರ್ ನೆರವಿನಿಂದ ತನ್ನ Jubilee Book of Cricket ಪುಸ್ತಕ ಪ್ರಕಟಿಸಿದ.  ಇದೇ ವರ್ಷ ವಿಕ್ಟೋರಿಯಾ ರಾಣಿಯ ರಾಜ್ಯಭಾರದ ೨೫ನೇ ವರ್ಷದ (ರಜತ ಮಹೋತ್ಸವ, silver jubilee) ಮಹೋತ್ಸವ ಆದ್ದರಿಂದ ರಣಜಿಯ ಪುಸ್ತಕಕ್ಕೆ Jubilee ಹೆಸರು ಬಂದಿದ್ದು.
   
೧೮೯೭-೯೮ ನಲ್ಲಿ  ಆಸ್ಟ್ರೇಲಿಯ ಪ್ರವಾಸಕ್ಕೆ ಹೋದ ಇಂಗ್ಲೆಂಡ್ ಪಂಗಡದಲ್ಲಿ ರಣಜಿ ಸಹ ಸೇರಿದ್ದ.  ಮೊದಲನೆಯ ಟೆಸ್ಟ್ ನಲ್ಲಿ ಮಾಡಿದ ೧೭೫ ರನ್ನುಗಳು ಸೇರಿ ಒಟ್ಟು ೧೧೫೭ ರನ್ನುಗಳನ್ನು ಹೊಡೆದು ಆ ದೇಶದಲೂ ಜನಪ್ರಿಯನಾದ.  ರಣಜಿಯ ನೆಚ್ಚಿನ "leg glance" ವಿಧಾನ (technique) ಎಲ್ಲರ  ಮೆಚ್ಚಿಗೆಯನ್ನು ಪಡೆಯಿತು.
 
ಆಸ್ಟ್ರೇಲಿಯಾ ಪ್ರವಾಸ ಮುಗಿದಮೇಲೆ, ಇಂಗ್ಲೆಂಡ್ ತಂಡ ಕೊಲಂಬೊ ಮೂಲಕ ಬಂದಾಗ ರಣಜಿ ಅಲ್ಲೇ ಇಳಿದು ಭಾರತಕ್ಕೆ ಬಂದ.  ೧೮೯೬ ರಲ್ಲಿ ರಾಜ ವಿಭಾಜಿಯ ನಿಧನವಾದ ಮೇಲೆ ಉತ್ತರಾಧಿಕಾರಿಯಾಗಿದ್ದ ಹನ್ನೆರಡು ವರ್ಷದ ಜಸವಂತ್ ಸಿಂಹಜಿ ನವಾನಗರದ ಪಟ್ಟಕ್ಕೆ ಬಂದ.  ರಣಜಿಗೆ ತಾನು ರಾಜ್ಯವನ್ನು ಆಳುವ ಅವಕಾಶ ಕಳೆಯಿತು ಎನ್ನಿಸಿ ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ನಲ್ಲಿಯೇ ಇನ್ನೂ  ಹೆಸರು ಮಾಡುವ ನಿರ್ಧಾರಕ್ಕೆ ಬಂದಿದ್ದರೂ, ಜಸವಂತ್  ಸಿಂಹಜಿಯ ಉತ್ತರಾಧಿಕಾರದ ಮೇಲೆ ಸವಾಲನ್ನು ಹಾಕಿದ.  ಆದರೆ ಇದು ಯಶಸ್ವಿಯಾಗಲಿಲ್ಲ. ಅಷ್ಟೇ ಅಲ್ಲದೆ ವಿಭಾಜಿ ಇದ್ದಾಗ ಹಣ ಸಹಾಯವಿತ್ತು, ಈಗ ಅದೂ ನಿಲ್ಲುವಂತಿತ್ತು. 

ಅಧೃಷ್ಟಕ್ಕೆ ಪಾಟಿಯಾಲಾದ ಮಹಾರಾಜ ಮತ್ತು ಕ್ರಿಕೆಟ್ ಪ್ರೇಮಿ ರಾಜಿಂದರ್ ಸಿಂಗ್ ಅವರು ರಣಜಿಯ ನೆರವಿಗೆ ನಿಂತು ಹಣ ಸಹಾಯ ಮಾಡಿದ ನಂತರ ರಣಜಿ ಇಂಗ್ಲೆಂಡ್ ಗೆ ಹಿಂತಿರುಗಿ ಸಸೆಕ್ಸ್‌ನ ಕ್ಯಾಪ್ಟನ್ ಆದ ಮತ್ತು ಇಂಗ್ಲೆಂಡ್ ತಂಡಕ್ಕೂ ಸೇರಿದ.   ಆದರೆ ೧೯೦೦ ರಲ್ಲಿ ರಾಜಿಂದರ್ ಸಿಂಗರ ನಿಧನವಾದನಂತರ ರಣಜಿಯ ಆದಾಯ ಕುಸಿದು ದಿವಾಳಿತನವನ್ನು ಎದುರಿಸಬೇಕಾಯಿತು (bankruptcy).  ಇದನ್ನು ಪರಿಹರಿಸಲು ೧೯೦೧ ಡಿಸೆಂಬರ್ ನಲ್ಲಿ ಭಾರತಕ್ಕೆ ಹಿಂತಿರುಗಿ ಅನೇಕರನ್ನು ಭೇಟಿಮಾಡಿದ ಮೇಲೆ ಸ್ವಲ್ಪ ಮಟ್ಟಿಗೆ ರಣಜಿಯ ಆರ್ಥಿಕ ಸ್ಥಿತಿ ಕುದುರಿತು.  ೧೯೦೨ರಲ್ಲಿ ಇಂಗ್ಲೆಂಡ್ ನಲ್ಲಿ ಪುನಃ ಸಸೆಕ್ಸ್ ತಂಡದ ಕ್ಯಾಪ್ಟನ್ ಆದರೂ ಇವನ ಆಡುವ ರೀತಿ ಬದಲಾಗಿ  ಆಟದ ಶೈಲಿಯಿಂದ ಅನೇಕರಿಗೆ ನಿರಾಶೆಯಾಯಿತು.  ರಣಜಿಯ ಜೀವನಚರಿತ್ರಗಾರ (biographer) ಸೈಮನ್ ವೈಲ್ಡನ ಊಹೆಯ ಪ್ರಕಾರ ಇದಕ್ಕೆ ಮುಖ್ಯ ಕಾರಣ ರಣಜಿತ್ ಸಿಂಹನ ಕಠಿಣ ಆರ್ಥಿಕ ಪರಿಸ್ಥಿತಿ. 

ನವಾನಗರವನ್ನು ಆಳುವ ಇನ್ನೂ ಆಸೆ ಇಟ್ಟಿಕೊಂಡು ೧೯೦೪ರಲ್ಲಿ ಸ್ನೇಹಿತ ಆರ್ಚಿ ಮೆಕ್‍ಲಾರೆನ್ ಜೊತೆ ಭಾರತಕ್ಕೆ ಬಂದು, ಬ್ರಿಟಿಷ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರೂ ರಣಜಿಗೆ ಹೆಚ್ಚು ಬೆಂಬಲ ಸಿಗಲಿಲ್ಲ.  ಅದೂ ಅಲ್ಲದೆ ಮನ್ಸೂರ್ ಕುಚರ್ ಅನ್ನುವವನು ಕೊಟ್ಟ ಸಾಲ ಹಿಂತಿರುಗಿ ಪಡೆಯಲು ಬಾಂಬೆ ಹೈಕೋರ್ಟ್ ನಲ್ಲಿ ಮೊಕದ್ದಮೆ ಸಹ ಹಾಕಿದ್ದರಿಂದ ೧೯೦೬ರ ವರೆಗೆ ಇಂಗ್ಲೆಂಡ್ ಗೆ ಹಿಂತಿರುಗುವುದು ಸಾಧ್ಯವಾಗಲಿಲ್ಲ.
 
೧೪/೦೮/೧೯೦೬ ರಂದು ನವಾನಗರದ ರಾಜನಾಗಿದ್ದ ಜಸವಂತ್  ಸಿಂಹಜಿ ಜ್ವರ ಬಂದ ಕಾರಣದಿಂದ ನಿಧನನಾದ ಸುದ್ದಿ ಬಂತು.  ಜಸವಂತ್ ಸಿಂಹಜಿಯ ಆರೋಗ್ಯಕ್ಕೆ ಯಾವ ಸಮಸ್ಯೆ ಇರಲಿಲ್ಲ; ಅಂದಿನ ವದಂತಿಗಳ ಪ್ರಕಾರ ಈ ಸಾವು ವಿಷಪ್ರಯೋಗದಿಂದ ಉಂಟಾಯಿತು ಅನ್ನುವುದು ಅನೇಕರ ನಂಬಿಕೆ.  ಅದಾಗಿ ಆರು ತಿಂಗಳವರೆಗೆ ಬ್ರಿಟಿಷ್ ಅಧಿಕಾರಿಗಳು ಈ ರಾಜ್ಯದ ಹೊಸ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಿಲ್ಲ.  ನಾಲ್ಕು ಪ್ರಾತಿನಿಧ್ಯರು - ರಣಜಿ, ವಿಭಾಜಿಯ ಮೊಮ್ಮಗ ಲಕೋಭ ಮತ್ತು ಜಸವಂತ್ ಸಿಂಹಜಿಯ ತಾಯಿ, ಸರ್ಕಾರಕ್ಕೆ ಮನವಿ ಮಾಡಿದರು.  ಕೊನೆಗೆ ಬ್ರಿಟಿಷ್ ಅಧಿಕಾರಿಗಳು, ರಣಜಿಯ ಹಿನ್ನಲೆ  ನೋಡಿ ಅವನನ್ನು ಆಯ್ಕೆ ಮಾಡಿದರು.  ಹಲವಾರು ತಿಂಗಳ ನಂತರ, ೧೧/೦೩/೧೯೦೭ ರಂದು ರಣಜಿ Colonel His Highness Sir Ranjitsinhaji Vibhaji, Jam Sahib of Nawanagar ಆಗಿ  ಪಟ್ಟಕ್ಕೆ ಬಂದ. ಈ ಸ್ಥಾನಕ್ಕೆ ಬಂದಮೇಲೆ ಬಾಂಬೆ ಹೈ ಕೋರ್ಟ ನಲ್ಲಿದ್ದ ಮೊಕದ್ದಮೆಯನ್ನು ವಾಪಸ್ಸು ಪಡೆಯುವುದು ಸಾಧ್ಯವಾಯಿತು.
 
ಇವನ ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲದಿಂದ ಜನರ ಪರಿಸ್ಥಿತಿ ಗಂಭೀರವಾಗಿತ್ತು, ಪರಿಹಾರ ಕೊಡುವುದಕ್ಕೆ ರಾಜ್ಯದ ಒಡವೆಗಳನ್ನು ಮಾರಬೇಕಾಯಿತು.  ಮತ್ತು ಇತರ ರಾಜ್ಯಗಳಿಂದ ಸಹಾಯ ಪಡೆದು ರಾಜ್ಯಕ್ಕೆ ಸೇರಿದ ಸಲಾಯ ಎಂಬ ಸಮುದ್ರ ತೀರದಲ್ಲಿ ಬಂದರು ಕಟ್ಟಿ ವ್ಯಾಪಾರಕ್ಕೆ ಅನುಕೂಲವಾಗುವಂತೆ ಮಾಡುವುದು ಮತ್ತು ಇತರ ಕಾಮಗಾರಿಕೆ ಕೆಲಸಗಳು ಪ್ರಾರಂಭ ವಾಯಿತು.  ಆದರೆ ರಣಜಿಗೆ ಆಡಳಿತದ ಅನುಭವ ಇರಲಿಲ್ಲವಾದ್ದರಿಂದ ಈ ಸುಧಾರಣೆಗಳನ್ನು ಜಾರಿಗೆ ತರುವುದು ಕಷ್ಟ ವಾಯಿತು.  ಇವನ ಆರೋಗ್ಯ ಬೇರೆ ಹದಗೆಟ್ಟಿತು ಮತ್ತು ಟೈಫಾಯಿಡ್  ಜ್ವರದಿಂದ ಕೆಲವು ತಿಂಗಳು ಹಾಸಿಗೆ ಹಿಡಿದಿದ್ದ.  ವೈದ್ಯರ ಸಲಹೆ ಮೇಲೆ ವಿಶ್ರಾಂತಿಗೆ ಇಂಗ್ಲೆಂಡ್ ನಲ್ಲಿ  ಕೆಲವು ತಿಂಗಳು ಕಳೆಯಲು ಹಿಂತಿರಿಗಿ  ಗ್ರಾಮಾಂತರದಲ್ಲಿ ದೊಡ್ಡ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು  ಹಲವಾರು ತಿಂಗಳು ಕಳೆದ.  ಆದರೆ ಸಾಲಗಾಲರ  ಕಾಟ ಮಾತ್ರ ತಪ್ಪಲಿಲ್ಲ, ಅನೇಕ ತಿಂಗಳು ಈ ಮನೆ ಬಾಡಿಗೆ ಕೊಡದೆ ಇದ್ದರಿಂದ, ಮಾಲೀಕ ಇಂಡಿಯಾ ಕಚೇರಿಗೆ ದೂರು ಸಹ ಕೊಟ್ಟ.  ತನ್ನ ರಾಜ್ಯದಿಂದ ದುಡ್ಡು ಬರುವ ಸಾದ್ಯೆತೆ ಇರಲಿಲ್ಲ, ಅಲ್ಲಿಯ ಬೊಕ್ಕಸ ಖಾಲಿಯಾಗಿತ್ತಲ್ಲ!  ೧೯೦೮ರಲ್ಲಿ ಪುನಃ ಕ್ರಿಕೆಟ್ ಆಡುವುದಕ್ಕೆ ಪ್ರಾರಂಭಿಸಿದ. ಸಮಯ ಸಿಕ್ಕಾಗ ರೆವ್. ಬೊರಿಸೊ ಅವರ ಮನೆಯಲ್ಲಿ ಇದ್ದು ಅವರ ಮಗಳು ಈಡಿತ್ ಅನ್ನು ಮದುವೆಯಾಗುವ ಪ್ರಯತ್ನ ಪಟ್ಟ.  ಆದರೆ ಅಂದಿನ ಸಮಾಜದ ನಿರ್ಬಂಧನೆಗಳಿಂದ ಇದು ಸಾಧ್ಯವಾಗಲಿಲ್ಲ ಮತ್ತು ಅವಳ ತಂದೆ ಈ ಸಂಬಂಧವನ್ನು ನಿರಾಕರಿಸಿದರಂತೆ.  ಕೊನೆಗೆ ೧೯೦೮ರಲ್ಲಿ ಭಾರತಕ್ಕೆ ಹಿಂತಿರುಗಿ ತನ್ನ ರಾಜ್ಯವನ್ನು ಆಳುವ ಪ್ರಯತ್ನ ಮಾಡಿದ.  ರಾಜ್ಯದ ಪರಿಸ್ಥಿತಿ ಇನ್ನೂ ಸುಧಾರಿಸಿರಲಿಲ್ಲ, ಬರಗಾಲ ಮತ್ತು ಕ್ಷಾಮ ಜನರನ್ನು ಕಾಡುತಿತ್ತು.  ತನ್ನ ಆದಾಯವನ್ನು ಹೆಚ್ಚುಮಾಡುವ ಸಮಯ ಅಲ್ಲದಿದ್ದರೂ, ಹೊಸ ತೆರಿಗೆಯನ್ನು ವಿಧಿಸಲು ಪ್ರಯತ್ನ ಪಟ್ಟ.  ಆದರೆ ಅಂದಿನ ಬ್ರಿಟಿಷ್ ಅಧಿಕಾರಿಗಳು ಇದನ್ನು ತಡೆದು ರಣಜಿ ಜೊತೆ ಚರ್ಚೆ ನಡಿಸಿ, ೩-೪ ವರ್ಷ ನವಾನಗರದಲ್ಲೇ ಇದ್ದು ರಾಜ್ಯವನ್ನು ಆಳುವುದಕ್ಕೆ ಸಲಹೆ ಕೊಟ್ಟರು, ಆದರೆ  ೧೯೧೨ರಲ್ಲಿ ರಣಜಿ ಪುನಃ ಇಂಗ್ಲೆಂಡ್ ಗೆ  ಹಿಂತಿರುಗಿ ಸಸೆಕ್ಸ್ ಕ್ರಿಕೆಟ್ ತಂಡಕ್ಕೆ  ಸೇರಿದ.  ಅನೇಕರಲ್ಲಿ ಮಾಡಿದ ಸಾಲದಿಂದ ತಪ್ಪಿಸಿಕೊಳ್ಳುವುದಕ್ಕೆ ಕಷ್ಟವಾಯಿತು.  ಕೆಲವರು ಇವನ ಮೇಲೆ ಮೊಕದ್ದಮೆ ಹಾಕಿದ್ದರೂ, ರಣಜಿ ಭಾರತದ ಒಬ್ಬ ರಾಜಮನೆತನದವನು ಆದ್ದರಿಂದ ಇಂಗ್ಲೆಂಡ್ ನ್ಯಾಯಾಲಯಕ್ಕೆ ಇವನ ಮೇಲೆ ಯಾವ ಹಿಡಿತ ಇಲ್ಲ ಎಂದು ಅವನ ವಕೀಲರು ವಾದ ಮಂಡಿಸಿದರು!  ಕೊನೆಗೆ ಹಾಗೂ ಹೀಗೂ ಮಾಡಿ ಕೆಲವರಿಗೆ ಸಾಲವನ್ನು ಹಿಂತಿರುಗಿಸಿ ೧೯೧೩ರಲ್ಲಿ ನವಾನಗರಕ್ಕೆ ಬಂದು ಆಳುವ ಪ್ರಯತ್ನ ಮಾಡಿದ.  ರಣಜಿ ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಆಡುವುದರಲ್ಲಿ ಕಾಲ ಕಳೆಯುತ್ತಿದ್ದಾಗ ನವಾನಗರದ ಅಭಿವೃದ್ಧಿಯನ್ನು ಬ್ರಿಟಿಷ್ ಅಧಿಕಾರಿಗಳು ಕೈಗೆತ್ತಿಕೊಂಡು ರಾಜ್ಯದಲ್ಲಿ  ಬೇಕಾಗಿದ್ದ ಮೂಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರು. 

೧೯೧೪ರಲ್ಲಿ ಮೊದಲನೆಯ ಮಹಾ ಯುದ್ಧ ಪ್ರಾರಂಭವಾದಾಗ ರಣಜಿ ತನ್ನ ರಾಜ್ಯದ ಸಂಪೂರ್ಣ ಬೆಂಬಲ ನೀಡಿ, ಇಂಗ್ಲೆಂಡಿನ ತನ್ನ ಮನೆಯನ್ನು ಆಸ್ಪತ್ರೆಯಾಗಿ ಉಪಯೋಗಿಸುವುದಕ್ಕೆ ಅನುಮತಿ ನೀಡಿದ.  ಇದಲ್ಲದೆ ೧೯೧೪ರಲ್ಲಿ ಬ್ರಿಟಿಷ್ ಸೈನ್ಯಕ್ಕೆ ಸೇರಿ ಗೌರವಾನ್ವಿತ ಮೇಜರ್ ಹುದ್ದೆಗೆ ಅರ್ಹನಾದ.  ಆದರೆ ಭಾರತೀಯ ರಾಜಮನೆತವರು  ಯುದ್ಧದಲ್ಲಿ ಭಾಗವಹಿವುದಕ್ಕೆ ಅನುಮತಿ ಇರಲಿಲ್ಲ.  ಅಲ್ಲದೇ  ಫ್ರಾನ್ಸ್ ದೇಶದ ಚಳಿ ತಡೆಯಲಾರದೆ ಇಂಗ್ಲೆಂಡ್ ನಲ್ಲಿ ಹಲವಾರು ತಿಂಗಳು ಕಳೆದು ೧೯೧೫ರಲ್ಲಿ ಭಾರತಕ್ಕೆ ಹಿಂತಿರುಗಿದ.  

ರಣಜಿ ೧೯೨೦ರಲ್ಲಿ ಕ್ರಿಕೆಟ್‍ನಿಂದ ನಿವೃತ್ತನಾದ.  ಸ್ನೇಹಿತರ ಜೊತೆಯಲ್ಲಿ ಬೇಟೆಗೆ ಹೋದಾಗ ಆದ ಅಪಘಾತದಿಂದ ಒಂದು ಕಣ್ಣು ಕಳೆದುಕೊಡಿದ್ದೂ ಒಂದು ಕಾರಣ.  ರಣಜಿ  ಕ್ರಿಕೆಟ್ ಆಡಿದ ಅವಧಿಯಲ್ಲಿ  ಒಟ್ಟು ೨೪೬೯೨ ರನ್ನುಗಳನ್ನು ಗಳಿಸಿದ, ಸರಾವರಿ ಮೊತ್ತ (batting  average) ೫೬.೩೭ರೊಂದಿಗೆ.  ಬಹಳ ವರ್ಷದ ನಂತರ ಸರ್ ಜೆಫ್ರಿ ಬಾಯ್ಕಾಟ್ ಈ ದಾಖಲೆಯನ್ನು ಮುರಿದರು (ಸರಾಸರಿ ೫೬.೮೩!)
 
ರಣಜಿಗೆ ತನ್ನಂತೆ ಇರುವ ಇತರ ರಾಜಮನೆತನದವರ ಹಿತಾಸಕ್ತಿಗಳನ್ನು ಬೆಂಬಲಿವುದು ಮಾತ್ರ ಗುರಿಯಾಗಿತ್ತು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಏನೂ ಆಸಕ್ತಿ ಇರಲಿಲ್ಲ.  ದೇಶದಲ್ಲಿ ಕ್ರಿಕೆಟ್ ಆಡುವುದಕ್ಕೆ ಇವನಿಂದ ಯಾರಿಗೂ ಉತ್ತೇಜನ ಸಿಗಲಿಲ್ಲ.  ಇವನ ಜೀವನ ಚರಿತ್ರೆ ಬರೆದ ಸೈಮನ್ ವಾಲ್ಡ್ ಅಭಿಪ್ರಾಯದಲ್ಲಿ ರಣಜಿಯ ಮನಸ್ಸು ನವಾನಗರದ  ಬದಲು ಇಂಗ್ಲೆಂಡ್ ಮೇಲಿತ್ತು,  (.. "he was more at home in England with his friends").  ಮಾಹೀರ್ ಬೋಸ್  ಬರೆದಿರುವ History of Indian cricket ಪುಸ್ತಕದಲ್ಲಿ, ರಣಜಿ ಭಾರತದ ಕ್ರಿಕೆಟ್ ಪಿತಾಮಹ ಅನ್ನುವುದು ಮೂರ್ಖತನ ಎಂದು ಟೀಕಿಸಿದ್ದಾರೆ. 

ರಣಜಿ ಜೀವನದಲ್ಲಿ ಬಹು ಭಾಗ,  ಕ್ರಿಕೆಟ್ ಆಡುವುದು ಮತ್ತು ಸಾಲಗಾರರಿಂದ ತಪ್ಪಿಸಿಕೊಳ್ಳುವುದು ಇದರಲ್ಲೇ ಕಳೆಯಿತು ಅಂದರೆ ತಪ್ಪಲಾಗರದು.  ಕೊನೆ ಕೊನೆಗೆ ಇವನಿಗೂ ಮತ್ತು ಬ್ರಿಟಿಷ್ ಅಧಿಕಾರಿಗಳಿಗೂ ಅನೇಕ ಭಿನ್ನಾಭಿಪ್ರಾಯಗಳಿದ್ದವು. 
ಇವನಿಗೆ ಮದುವೆ ಆದ ಯಾವ ದಾಖಲೆಗಳಿಲ್ಲ; ಆದರೆ ಇವನ ಹತ್ತಿರ ಸಂಬಂಧದವರ ಮಕ್ಕಳು ಇವನ ಆಶ್ರಯದಲ್ಲೇ ಬೆಳದರು.  ಅವರಲ್ಲೊಬ್ಬ ದುಲೀಪ್ ಸಿಂಹಜಿ ರಣಜಿಯ ಹಾಗೆ ಇಂಗ್ಲೆಂಡ್ ದೇಶದ ತಂಡದೊಂದಿಗೆ ಕ್ರಿಕೆಟ್ ಆಡಿದ.
 
0೨/೦೪/೧೯೩೩ ರಂದು ರಣಜಿ ಹೃದಯಾಘಾತದಿಂದ ನಿಧನನಾದ.  ರಣಜಿ ಟ್ರೋಫಿಯಿಂದ ಇವನ ಹೆಸರು ಇನ್ನೂ ಉಳಿದಿದೆಯಾದರೂ, ರಣಜಿತ್ ಸಿಂಹನಿಂದ ಆ ಕಾಲದಲ್ಲಿ ಭಾರತದಲ್ಲಿ ಕ್ರಿಕೆಟ್ ಅಭಿವೃದ್ಧಿಯೇನೂ ಆಗಲಿಲ್ಲ. 

- ರಾಮಮೂರ್ತಿ 
ಕಾಂಗಲ್ಟನ್, ಚೆಶೈರ್ 

Further reading:
•	Simon Wilde: Ranji, The strange Genius 
•	Mohir Bose: History of Indian cricket 
•	Wisden Cricketer's Almanack 

Photos: Wikimedia Commons

***********************************************************************************