ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಎನಿತು ಇನಿದು ಈ ಕನ್ನಡ ನುಡಿಯು 

ಮನವನು ತಣಿಸಿದ ಮೋಹನ ಸುಧೆಯು

 ಗಾನವ ಬೆರೆಯಿಸಿ ವೀಣೆಯ ದನಿಯೊಳು

ವಾಣಿಯ ನೇಪುರ ನುಡಿಸುತೆ ಕುಣಿಯಲು

 ಮಾಣದೆ ಮೆರೆಯುವ ಮಂಜುಲ ರವವೋ

 ಎನಿತು ಇನಿದು ಈ ಕನ್ನಡ ನುಡಿಯು

 – ಆನಂದಕಂದ 
ಇಂಥ ಮಧುರವಾದ ಭಾಷೆಯನ್ನು ಬಳುವಳಿಯಾಗಿ ಪಡೆದ ನಾವೇ ಧನ್ಯರು! ಅನಿವಾಸಿಯಲ್ಲಿ ರಾಜ್ಯೋತ್ಸವ ವಿಶೇಷ ಸಂಚಿಕೆಗೆಂದು ಲೇಖನ, ಕವನ,ನಾಡಗೀತೆ,ಅನುಭವ ಕಥನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದೇ ಎಂದು ಕೇಳಿದಾಗ ಪ್ರೀತಿ ಅಭಿಮಾನದಿಂದ ಬರೆದು,ಹಾಡಿ ಕಳಿಸಿದ ಅನಿವಾಸಿ ಓದುಗರೆಲ್ಲರಿಗೂ ವಂದನೆಗಳು. 
ಈ ಸಂಚಿಕೆಯಲ್ಲಿ ಗೌರಿ ಪ್ರಸನ್ನ ಮತ್ತು ಗಿರೀಶ್ ಪ್ರಸಾದ್ ಅವರು ರಾಜ್ಯೋತ್ಸವದ ನವಿರು ನೆನಪುಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಡಾ ರಾಮಶರಣ್ ಅವರು ಬರೆದ ”ಕಂಡಲ್ಲಿ ಕನ್ನಡ”ಎಂಬ ಸುಂದರ ಕವನವಿದೆ. ಜೊತೆಗೆ ‘ಅನಿವಾಸಿ’ಗೆ ಇದೇ  ಮೊದಲ ಬಾರಿ ಬರೆಯುತ್ತಿರುವ ಡಾ ಶ್ರೀಕಾಂತ ಕೃಷ್ಣಮೂರ್ತಿ ಅವರು ತಾಯಿ ‘ಕಾವೇರಿ’ ಯನ್ನು ತ್ರಿಪದಿಯಲ್ಲಿ ಪೋಣಿಸಿ ತಂದಿದ್ದಾರೆ. ಇದಲ್ಲದೆ ಈ ಸಂಚಿಕೆಯಲ್ಲಿ ತಮ್ಮರಾಜ್ಯೋತ್ಸವದೆನಪುಗಳನ್ನು ಬರೆಯುತ್ತಾ ಕನ್ನಡದ ಹಿರಿಯ ಕವಿಗಳಾದ ಸಾಲಿ ರಾಮಚಂದ್ರ ರಾಯರ – ಕನ್ನಡದ ನೆಲದ ಪುಲ್ಲೆನಗೆ. ಈ ಗೀತೆಯ ಹಿನ್ನೆಲೆ, ಇತಿಹಾಸವನ್ನ ಕವಿಯ ಮೊಮ್ಮಗ ಡಾ ಶ್ರೀವತ್ಸ ದೇಸಾಯಿ ಅವರು ಬರೆದಿದ್ದಾರೆ. ಮತ್ತು ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪನವರು ಅನಿವಾಸಿ ಕನ್ನಡಿಗರಿಗೆಂದೆ ಬರೆದಿರುವ – ”ಕಡಲಾಚೆಯ ಕನ್ನಡಿಗರ ಸ್ವಗತ” ಎನ್ನುವ ಎರಡು ಕನ್ನಡ ಗೀತೆಗಳಿವೆ. ಇವೆರಡನ್ನೂ ಈ ಸಂಚಿಕೆಗಾಗಿಯೇ ಹಾಡಿದ ವಿಡಿಯೋಗಳನ್ನು ಕೊಂಡಿಯನ್ನೊತ್ತಿ ’ಅನಿವಾಹಿನಿ’ಯಲ್ಲಿ ಕೇಳಿರಿ.

ಅನಿವಾಸಿ ಓದುಗರಿಗೆ ೬೬ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 

ಈ ವಿಶೇಷ ಸಂಚಿಕೆಯ ಓದಿಗೆ ನಿಮಗಿದೋ ಸ್ವಾಗತ 

-ಸಂಪಾದಕಿ 

 

ನನ್ನ ರಾಜ್ಯೋತ್ಸವದ ನೆನಪುಗಳು ಮತ್ತು ‘ನಾಡಗೀತೆ’ಯ ಪೂರ್ವೇತಿಹಾಸ – ಡಾ ಶ್ರೀವತ್ಸ ದೇಸಾಯಿ

ಇವೆಲ್ಲ ಹಳೆಯ ಮಾತುಗಳಾದರೂ ಈ ಲೇಖನದಲ್ಲಿ ಕೆಲವು ಎಲ್ಲರಿಗೂ ಗೊತ್ತಿರದ ಒಂದೆರಡು ಹೊಸ ಮಾಹಿತಿಯಿದೆ.

1956 ರಲ್ಲಿ ರಾಜ್ಯ ಏಕೀಕರಣಗೊಂಡರೂ ಕನ್ನಡ ಮಾತಾಡುವ ಈ ನಾಡನ್ನು ಅಧಿಕೃತವಾಗಿ ’ಮೈಸೂರು ಪ್ರಾಂತ ’ ಎಂದೇ ನಾವು ಶಾಲೆಯಲ್ಲಿದ್ದಾಗ ಕರೆಯುತ್ತಿದ್ದೆವು. ಆಗ ಒಂದು ಅಧಿಕೃತ ನಾಡಗೀತೆಯಿರಲಿಲ್ಲ. ’ಹಳೆಯ ಮೈಸೂರಲ್ಲಿ’ ಕುವೆಂಪು ಅವರು ಬರೆದ ’ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಗೀತೆ ಪ್ರಚಲಿತವಿದ್ದರೆ ಬೇರೆ ಕೆಲವು ಕನ್ನಡದ ದೇಶಭಕ್ತಿಯ ಗೀತೆಗಳು ಸಹ ನಾಡಗೀತೆಯೆಂದು ಕೆಲವರಿಂದ ಕರೆಯಲಾಗುತ್ತಿದ್ದವು. ಉದಾಹರಣೆಗಾಗಿ “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ” ಎಂಬ ಮೊದಲ ರಾಷ್ಟ್ರಕವಿ ಗೋವಿಂದ ಪೈ ವಿರಚಿತ ಹಾಡು ನಿರಂತರವಾಗಿ ಕನ್ನಡಿಗರ ತನುಮನ ಗಳಲ್ಲಿ ಮಾರ್ದನಿಸುತ್ತಿದ್ದ ’ನಾಡ ಭಕ್ತಿಗೀತೆ’ಯಾಗಿತ್ತು.  ಆ ಮೊದಲು ಮುಂಬಯಿ ಕರ್ನಾಟಕದಲ್ಲಿ ಸೇರ್ಪಡೆಯಾಗಿದ್ದ ನಾಲ್ಕು ಜಿಲ್ಹೆಗಳಲ್ಲಿ ಹುಯಿಲಗೋಳು ನಾರಾಯಣರಾಯರು ರಚಿಸಿದ ”ಉದಯವಾಗಲಿ ನಮ್ಮ ಕನ್ನಡ ನಾಡು” ಗೀತೆಯನ್ನೇ ಆಗ ನಾಡಗೀತೆಯೆಂದು ಕರೆಯಲಾಗುತ್ತಿತ್ತು ಮತ್ತು ನಾವೆಲ್ಲ ಶಾಲೆಯಲ್ಲಿ ಅದನ್ನು ಉತ್ಸಾಹದಿಂದ ಹಾಡುತ್ತಿದ್ದ ನೆನಪು. ಎಲ್ಲ ಸಾರ್ವಜನಿಕ ಸಮಾರಂಭಗಳಲ್ಲಿಯೂ ಅದನ್ನೇ ಹಾಡಲಾಗುತ್ತಿತ್ತು.  ’ಕರ್ನಾಟಕದ ಗತ ವೈಭವ’ವನ್ನು ಬರೆದು ಉತ್ತರ ಕರ್ನಾಟಕದಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ದುಡಿದು ಕರ್ನಾಟಕದ ಕುಲಪುರೋಹಿತರೆಂದೇ ಜನರು ಕರೆಯುತ್ತಿದ್ದ ಆಲೂರು ವೆಂಕಟರಾಯರು ಸಾಧನಕೇರಿಯಿಂದ ಬೆಳಿಗ್ಗೆ ವಾಕಿಂಗ್ಘೋಗುತ್ತಿರುವಾಗ ನಮ್ಮ ಕಣ್ಣಿಗೆ ಬೀಳುತ್ತಿದ್ದರು. ಅವರು ಯಾವಾಗಲೂ ಬಿಳಿ ಗಡ್ಡ, ಶುಭ್ರವಾದ ಬಿಳಿ ನಿಲುವಂಗಿ, ಬಿಳಿ ಧೋತರ ಉಟ್ಟು, ನೆಟ್ಟನೆ ಬೆನ್ನು, ಕೈಯಲ್ಲೊಂದು ಕೋಲು ಹಿಡಿದು ಹೊರತರೆ ಅದೇನು ಗಾಂಭೀರ್ಯ! ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದೆ. ಹುಯಿಲಗೋಳು ನಾರಾಯಣರಾಯರದೋ ತಲೆಗೆ ರುಮಾಲು, ಬಿಳಿ ಕೋಟು ಮತ್ತು ಧೋತರ ಉಟ್ಟು ಒಂದು ಸಮಾರಂಭಕ್ಕೆ ಬಂದಾಗ ನೋಡಿದ ನೆನಪು. ಅವರು ಬರೆದ ನಾಡಗೀತೆಯ ಮೊದಲ ಸಾಲು ’ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’. ಚಲುವ, ಚೆಲುವ ಎರಡೂ ಪದಗಳು ಚಾಲ್ತಿಯಲ್ಲಿದ್ದರೂ ಅವರು ಬರೆದದ್ದು ’ಚಲುವ’. ಅದನ್ನು ತಪ್ಪಾಗಿ ಚೆಲುವ ಅಂತ ಬರೆದವರೇ ಹೆಚ್ಚು. ಅದು ಮೊದಲ ಬಾರಿ ಸ್ವಾಗತಗೀತೆಯಾಗಿ  1924 ರಲ್ಲಿ ಬೆಳಗಾವಿಯಲ್ಲಿ ಜರುಗಿದ 43ನೆಯ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಅದರ ಉಗಮದ ಕಥೆ ಸ್ವಾರಸ್ಯಕರವಾಗಿದೆ. ಸ್ವಾಗತ ಕಮಿಟಿಯವರು ಒಂದು ಸ್ಪರ್ಧೆಯನ್ನಿಟ್ಟು ಹಾಡುಗಳನ್ನು ಆಹ್ವಾನಿಸಲಾಯಿತು. ಆಗ ನಾರಾಯಣರಾಯರು ಮಲೇರಿಯಾದಿಂದ ಹಾಸಿಗೆ ಹಿಡಿದಿದ್ದರು. ಅವರ ಮಿತ್ರರು ವೃತ್ತಪತ್ರಿಕೆಯನ್ನು ತೋರಿಸಿ ಅವರ ಗೆಳೆಯರು ’ನೀವು ಏಕೆ ಬರೆಯಬಾರದು’ ಎಂದು ಕೇಳಿಕೊಂಡರಂತೆ. ಅದೇ ಪ್ರೇರಣೆಯಾಗಿ ಅವರು ಬರೆದರು. ಅದು ಆಯ್ಕೆಯಾಯಿತು. ಅದನ್ನು ಅಲ್ಲಿ ಹಾಡಿದವರು ಧಾರವಾಡದ ಗವಯ್ಯಿ ಸುಬ್ಬರಾಯರು, ಸಾಮಾಜಿಕ ತಾಣಗಳಲ್ಲಿ, ವೃತ್ತ ಪತ್ರಿಕೆಗಳಲ್ಲಿ ಕಾಣ ಬರುವ ಹೆಸರು ’ಹನ್ನೊಂದು ವರ್ಷದ ಗಂಗೂ ಬಾಯಿ ಹಾನಗಲ್’ ಎನ್ನುವದು ತಪ್ಪು (ಆಧಾರ: ಡಾ ಜಿ ಡಿ ಜೋಶಿ ಬರೆದ ಪಿ ಹೆಚ್ ಡಿ ಗಾಗಿ ಬರೆದ ಪುಸ್ತಕ -ಮುಂಬಯಿ ವಿಶ್ವ ವಿದ್ಯಾಲಯ,1996). ಅದರಲ್ಲಿ ನಾರಯಣರಾಯರ ಸ್ವಹಸ್ತದಿಂದ ಬರೆದ ಆ ಗೀತೆ ಇದೆ. ಒಮ್ಮೆ ಎನ್ಕೆ ಕುಲಕರ್ಣಿಯವರು ಗಂಗೂಬಾಯಿಯವರ ಸಂದರ್ಶನದಲ್ಲಿ ಬರೆದ ಕೆಲ ಸಾಲುಗಳೆ ಆ ತಪ್ಪು ಗ್ರಹಿಕೆಗೆ ಮೂಲ ಎಂದು ನನಗೆ ತಿಳಿದು ಬಂದಿದೆ.

ಮೇಲೆ ಹೇಳಿದ ಆ 1924 ರ ಬೆಳಗಾವಿಯ ಅಧಿವೇಶನಕ್ಕೆ ಗಾಂಧೀಜಿಯವರು ಪ್ರಥಮ ಬಾರಿ ಕನ್ನಡ ನಾಡಿಗೆ ಬಂದಿದ್ದರು. ಅವರು ಹಿಂದಿಯಲ್ಲಿ ಮಾಡಿದ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ ಹೆಮ್ಮೆ (ನನ್ನ ಅಜ್ಜ) ಸಾಲಿ ರಾಮಚಂದ್ರರಾಯರದಾಗಿತ್ತು (1888-1978) . ”ಅವರ ದೇಶಭಕ್ತಿ, ಗಾಂಧೀ ಪ್ರೀತಿ, ಭಾಷಾ ಪರಿಣತಿ ಮತ್ತು ಇತ್ತೀಚೆಗೆ ಸಾಧಿಸಿದ್ದ ಹಿಂದೀಭಾಷಾಜ್ಞಾನಕ್ಕಾಗಿ ಅವರನ್ನು ಆರಿಸಲಾಗಿತ್ತು”. (ಹೇಮಾ ಪಟ್ಟಣಶೆಟ್ಟಿ: ಸಾಲಿ ರಾಮಚಂದ್ರ ರಾಯ, ಸಾಹಿತ್ಯ ಅಕಾದೆಮಿ, 2012). ಅವರು 1939ರಲ್ಲಿ ವಾರ್ಧಕ ಷಟ್ಪದಿಯಲ್ಲಿ ರಚಿಸಿದ  ”ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ” ಎಂದು ಆರಂಭವಾಗುವ ಕವನವನ್ನು ಹಲವುಕಡೆ ’ನಾಡಗೀತೆ’ಯೆಂದು ಉಲ್ಲೇಖಿಸಲಾಗಿದೆ. ಅದಕ್ಕೆ ರಾಗಸಂಯೋಜನೆ ಮಾಡಿ ಅಮಿತಾ ರವಿಕಿರಣ ಅವರು ಹಾಡಿದ್ದಾರೆ. (ಕೊಂಡಿಯನ್ನು ಕೆಳಗೆ ಕೊಡಲಾಗಿದೆ -1) ಅವರ ಹಸ್ತಾಕ್ಷರದಲ್ಲಿಯೇ ಬರೆದ ಕವನವನ್ನೂ ಇಲ್ಲಿ ಕೊಟ್ಟಿದೆ.

  ಭಾಷಾವಾರು ಪ್ರಾಂತಗಳ ವಿಂಗಡನೆಯಾದ ನಂತರ ಹೊಸ ಹೆಸರಿಡುವ ಆಂದೋಲನ ಶುರುವಾಯಿತು. ವಿಧಾನ ಸಭೆಯಲ್ಲಿ ’ಕರ್ನಾಟಕ’ ಎಂದು ಹೆಸರಿಡುವ ಬಗ್ಗೆ ಚರ್ಚೆ ನಡೆದಾಗ ದಕ್ಷಿಣ ಭಾಗದ ಸದಸ್ಯರು ವಿರೋಧಿಸಿ ಮಾತಾಡಿದ್ದು ನೆನಪಿದೆ. ಒಬ್ಬರ ವಾದ ಈಗಲೂ ಹಾಸ್ಯಾಸ್ಪದವೆನಿಸುತ್ತದೆ: ’ತಮಿಳಿನಲ್ಲಿ ಕರ್ನಾಡಗಮ್ ಎಂದರೆ ಹಳ್ಳಿ ಗಮಾರ ಎಂದು ಅಭಿಪ್ರಾಯ” ಎನ್ನುವ ನೆಪ. ಕರ್ನಾಟಕ ಎನ್ನುವ ಹೆಸರು ಅಧಿಕೃತವಾಗಿ ಅಂಗೀಕಾರವಾದದ್ದು 1973 ರಲ್ಲಿ. 1971-72 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಅವರ ಗೀತೆಯನ್ನು ’ನಾಡಗೀತೆ’ ಎಂದು ಘೋಷಿಸಿಯಾಗಿತ್ತು. ಆದರೆ ಸರಕಾರ ಹಾಗೆ ಮಾಡಿದ್ದು ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ 2004 ರಲ್ಲಿ. ಆನಂತರವೂ ಆಗಿಂದಾಗ ಚರ್ಚೆ ವಿವಾದ ನಡೆದಿವೆ. ಅದು ಈ ಕಿರುಲೇಖನದ ವಸ್ತು ಅಲ್ಲವೆಂದು ಕೈಬಿಟ್ಟಿದ್ದೇನೆ.

( Govind Pai’s handwritten poem : “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ”By Mysore University Declaration certificate.pdf – Mysore University Declaration certificate.pdf, CC BY-SA 3.0, https://commons.wikimedia.org/w/index.php?curid=33265882 below

ಕವಿಗಳ ಹಸ್ತಾಕ್ಷರಗಳಲ್ಲಿ

ಕಡಲಾಚೆಯ ಕನ್ನಡ ಕುಲ ನಾವು – ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ

ಎರಡು ವರ್ಷಗಳ ಹಿಂದೆ ಕುವೈತ್ ನಿಂದ ಸ್ನೇಹಿತೆಯೊಬ್ಬರು ನನಗೆ ರಾಗ ಸಂಯೋಜನೆ ಮಾಡಿಕೊಡಲಾದೀತೇ ಎಂದು ಒಂದು ಕವಿತೆಯನ್ನು ಕಳಿಸಿದ್ದರು.ಕಡಲಾಚೆಯ ಕನ್ನಡಿಗರ ಸ್ವಗತ ಎನ್ನುವ ಈ ಕವಿತೆಯನ್ನು ಮೊದಲಬಾರಿ ಓದಿದಾಗಲೇ ತುಂಬಾ ಇಷ್ಟವಾಗಿತ್ತು. ಅನಿವಾಸಿ ಕನ್ನ್ನಡಿಗರ ಮನಸ್ಥಿತಿ, ವ್ಯಾಕುಲತೆ, ದೂರವಿದ್ದು ನಾಡಿನ ಗುಂಗಿನಲ್ಲಿರುವ ನಮ್ಮೆಲ್ಲರ ಮನದ ಮಾತಿನಂತಿದೆ ಈ ಕವಿತೆ. ನನ್ನ ಸಂಯೋಜನೆಯನ್ನ ‘ಅನಿವಾಸಿ’ಯ ಹೊಸ ಸದಸ್ಯೆ ಲೇಖಕಿ – ಗಾಯಕಿ ಶ್ರೀರಂಜನೀ ಸಿಂಹ ಅವರು ಹಾಡಿದ್ದಾರೆ. (ಕೊಂಡಿಯನ್ನು ಕೆಳಗೆ ಕೊಡಲಾಗಿದೆ -2)

 -ಅಮಿತಾ ರವಿಕಿರಣ್ 

ರಾಜ್ಯೋತ್ಸವದ ಸವಿ ನೆನಪು – ಗೌರಿ ಪ್ರಸನ್ನ

ಮತ್ತೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ. ಹೊರನಾಡಿನ ಕನ್ನಡಿಗರು, ಕನ್ನಡ ಸಂಘಗಳು ನಾಡು-ನುಡಿಯ ಪ್ರೇಮದಲ್ಲಿ ಮತ್ತೆ ಮಿಂದೇಳುವ ಶುಭ ಸಮಯ. ಎಲ್ಲರಿಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

     ‘ಅ ಆ ಇ ಈ ಕನ್ನಡದ ಅಕ್ಷರಮಾಲೆ -ಅಮ್ಮಾ ಎನುವುದೇ ಕಂದನ ಕರುಳಿನ ಕರೆಯೋಲೆ’ ಎನ್ನುವ ಗೀತೆ ಕೇಳುತ್ತಲೇ ಬಾಲ್ಯ ಕಳೆದದ್ದು. ಸ್ವಲ್ಪ ಬುದ್ಧಿ ಬರುವ ಹೊತ್ತಿಗೆ‘ ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ’ ಹಾಡಿಗೆ ಮಾರುಹೋಗಿ ಏನೇ ಆದರೂ ಕನ್ನಡ ನಾಡಿನಿಂದ ಹೊರಗೆ ಹೋಗೆನೆಂಬ ಧೃಢಸಂಕಲ್ಪವನ್ನು ಮಾಡಿದ್ದೆಷ್ಟು ಬಾರಿಯೋ? ‘ಕೃಷ್ಣ  ಶರಾವತಿ ತುಂಗಾ ಕಾವೇರಿಯ ವರರಂಗಾ’ ಎಂದು ಮಧ್ಯಾಹ್ನ 11:00 ಗಂಟೆಗೆ ಶಾಲೆಯ ಪ್ರಾರ್ಥನೆಯಲ್ಲಿ  ನಾಡಗೀತೆಯನ್ನು ಹಾಡುತ್ತಿರುವಾಗ ಬಿಜಾಪೂರದ ಬಿರುಬಿಸಿಲಿನಲ್ಲೂ ಎದೆಯಲ್ಲಿ ತಣ್ಣನೆಯ ನದಿಯ ಪ್ರವಾಹವೊಂದು ಹರಿಯುತ್ತಿದ್ದುದು ಸುಳ್ಳಲ್ಲ. ನಿತ್ಯೋತ್ಸವದ ಕ್ಯಾಸೆಟ್ ‘ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ’ ಎಂದು ಹಾಡುತ್ತಿದ್ದರೆ ಮೈಯೆಲ್ಲ ಮುಳ್ಳೆದ್ದು ಹೃದಯದ ತುಂಬ ಹೆಮ್ಮೆಯ ಸಂಚಾರ.

  ಜೀವನದ ಮೊದಲ ಮೂರು ದಶಕಗಳಲ್ಲಿ ನಾಡು-ನುಡಿಗಳಿಂದ ದೂರವಾಗಬಹುದಾದ ಕಿಂಚಿತ್ ಕಲ್ಪನೆಯೂ ಇರಲಿಲ್ಲ. ಆದರೆ ನೆಲ-ನೀರು-ಅನ್ನದ ಋಣಗಳು ನಮ್ಮನ್ನು ಒಂದೆಡೆ ಇರಗೊಡುವುದಿಲ್ಲವೇನೋ? ನಾಡಿನಿಂದ ದೂರ ಬಹುದೂರವಿದ್ದರೂ ನುಡಿ ಮಾತ್ರ ಈಗಲೂ ಜೀವನಾಡಿ ಎಂಬುದೇ ಸಧ್ಯಕ್ಕಿರುವ ಸಮಾಧಾನ. ಕನ್ನಡದ ಹೊರತೆನಗೆ ಮತಿಯಿಲ್ಲ-ಗತಿಯಿಲ್ಲ.ನನ್ನ ಮಟ್ಟಿಗೆ ನನ್ನ ಇರವು,ಅರಿವು, ಖೂನು ಗುರುತು, ಮೂಲ ಬೇರು ಎಲ್ಲವೂ ಕನ್ನಡವೇ. ಕನ್ನಡದಿಂದ ಪ್ರತ್ಯೇಕಿಸಿಕೊಳ್ಳುವುದು ಸಾಧ್ಯವೇ ಇಲ್ಲವೇನೋ?

  ಕನ್ನಡವನ್ನು ನಾವು ಉಳಿಸಬೇಕು, ಬೆಳೆಸಬೇಕು ಅನ್ನುವುದು ಬಾಲಿಶವೆನಿಸುತ್ತದೆ ಒಮ್ಮೊಮ್ಮೆ. ನಮ್ಮನ್ನು ಉಳಿಸಿದ್ದು,ಬೆಳೆಸಿದ್ದು, ಬಾಳಿಸಿದ್ದೇ ಕನ್ನಡವೆನ್ನವುದು ಸೂಕ್ತವೆನ್ನಬಹುದೇನೋ?

 ಸಧ್ಯಕ್ಕೆ ನನ್ನಾಶೆ..’ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..ಬದುಕಿದರೆ ಕನ್ನಡ ನೆಲದಲ್ಲೇ ಬದುಕಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. ಮತ್ತದೇ ಮಣ್ಣಲ್ಲಿ ಮಣ್ಣಾಗಬೇಕು.’

“ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ.”

*******************************************************************

ನನ್ನೂರಿನ ರಾಜ್ಯೋತ್ಸವದ ನೆನಪು ಗಳು – ಗಿರೀಶ ಪ್ರಸಾದ್

ನವೆಂಬರ್ ತಿಂಗಳಿಗೂ ನನಗೂ ಬಹಳ ವಿಶೇಷವಾದ ನಂಟು. ನಾನೊಬ್ಬ ಕನ್ನಡಿಗ ಎಂಬುದು ಒಂದು ಮುಖ್ಯ ಕಾರಣವಾದರೆ, ಆ ತಿಂಗಳಲ್ಲಿ ನನ್ನ ಹುಟ್ಟಿದ ದಿನ ಎಂಬುದು ಮತ್ತೊಂದು ಕಾರಣವಿರಬಹುದು. ರಾಜ್ಯೋತ್ಸವವೆಂದರೆ ನನಗೆ ಹುಟ್ಟಿದ ದಿನವಿದ್ದಂತೆ. ಹೇಗೆ ನಾವು ಕೇವಲ ಒಂದು ದಿನ ನಮ್ಮ ಹುಟ್ಟಿದ ದಿನ ಆಚರಿಸಿದರೂ ಪ್ರತಿ ನಿತ್ಯ ಜೀವನವನ್ನು ಸಂಭ್ರಮಿಸುತ್ತೇವೆಯೋ ಹಾಗೇ ರಾಜ್ಯೋತ್ಸವ ಕೂಡ. ಭಾಷೆಯನ್ನು ಸಂಭ್ರಮಿಸುವ, ಪ್ರೀತಿಸುವ , ಆಚರಿಸುವ ದಿನ. ನಾನು ಕಂಡಿರುವ ಸಂಭ್ರಮಿಸಿರುವ ರಾಜ್ಯೋತ್ಸವವೇ ಬೇರೆ ರೀತಿಯದು. “ನಾನು ನವೆಂಬರ್ ಕನ್ನಡಿಗನಲ್ಲ ” ಎಂದು ಹೇಳುವ ಪ್ರಮೇಯವೇ ಬರದಂಥ ಸ್ಥಳದಲ್ಲಿ ಹುಟ್ಟಿದವನು ನಾನು. ಅನೇಕ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು, ಒಂದೇ ಒಂದು ಆಂಗ್ಲ ಮಾಧ್ಯಮ ಶಾಲೆ ಇದ್ದ ಊರು ನನ್ನದು. ಸ್ವಾಭಾವಿಕವಾಗಿ ಕನ್ನಡವೇ ಪ್ರಧಾನ ವ್ಯವಹಾರ ಭಾಷೆ. ಯಾರಿಗೂ ಬೇರೆ ಭಾಷೆ ಕಲಿಯುವ ಧಾವಂತ ಇದ್ದಂತೆ ಕಾಣದ ಕಾಲವದು. ಇಂಥ ಒಂದು ಊರಲ್ಲಿ ಕನ್ನಡ ರಾಜ್ಯೋತ್ಸವ ಕೇವಲ ರಾಜ್ಯ ರಚನೆ ಆದ ದಿನ ಆಗದೆ, ನಮ್ಮತನವನ್ನ ಆಚರಿಸುವ ಹಬ್ಬದಂತಿರುತಿದ್ದುದು ವಿಶೇಷ. ಇಡೀ ಊರಿಗೇ ಊರೇ ಸೇರಿ ಆಚರಣೆಯಲ್ಲಿ ಭಾಗವಹಿಸುತ್ತಿದ್ದುದ್ದು , ಎಲ್ಲಾ ಬಸ್ ಮಾಲೀಕರು, ಆಟೋ ಚಾಲಕರು ತಮ್ಮ ವಾಹನಗಳನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಊರಲೆಲ್ಲಾ ಓಡಾಡುತ್ತಿದ್ದುದ್ದು ನನ್ನ ಮನಸಲ್ಲಿ ಅಚ್ಚಳಿಯದೆ ಉಳಿದಿದೆ.

ಒಂದು ತಿಂಗಳಿಂದಲೇ ಎಲ್ಲಾ ೧೫ ಶಾಲೆಗಳಲ್ಲೂ ಕವಾಯಿತು , ವಿಶೇಷ ವೇಷ ಭೂಷಗಳ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಿದ್ದತೆಗಳು ಜೋರಾಗಿರುತ್ತಿದ್ದವು. ಹಬ್ಬದ ದಿನ ಬೆಳಿಗ್ಗೆ ೭ ಗಂಟೆಗೆ ಎಲ್ಲಾ ಶಾಲೆಗಲ್ಲಿ ಧ್ವಜಾರೋಹಣದ ನಂತರ ಸಾಲಾಗಿ ಊರಿನ ಕೋಟೆ ಮೈದಾನದಲ್ಲಿ ಒಟ್ಟಿಗೆ ಸೇರಿ ಮತ್ತೊಮ್ಮೆ ಅಲ್ಲಿ ಧ್ವಜಾರೋಹಣದ ನಂತರ ಊರಿನ ಎಲ್ಲಾ ರಾಜಬೀದಿಗಳಲ್ಲಿ ಕವಾಯಿತು ನಡೆಸುವ ಸಂಭ್ರಮ ನೋಡಿಯೇ ತಿಳಿಯಬೇಕು. ಶಾಲಾ ಮಕ್ಕಳ ಕವಾಯಿತಿನ ಜೊತೆಗೆ ಅನೇಕ ಜಾನಪದ ಕಲೆ ಪ್ರಕಾರಗಳು ಅನಾವರಣ ಗೊಳ್ಳುತ್ತಿದ್ದ ರೀತಿ ಬಹಳ ವಿಸ್ಮಯಕಾರಿಯಾಗಿರುತಿತ್ತು .
ಒಂದು ವರ್ಷದ ವೇಷಭೂಷಣ ಸ್ಪರ್ಧೆಯಲ್ಲಿ ನನ್ನ ಕೃಷ್ಣ ದೇವರಾಯ ವೇಷಕ್ಕೆ ಬಹುಮಾನ ವಿಜೇತನಾಗಿದ್ದಲ್ಲದೆ ನನ್ನ ವೇಷದ ವೈಖರಿಗೆ ಮನಸೋತ ಆಯೋಜಕರು ನಮ್ಮ ಇಡೀ ಊರಿನಲ್ಲಿ ಆನೆಯ ಮೇಲೆ ನನ್ನ ಮೆರವಣಿಗೆ ನಡೆಸಿದ್ದು ಮನಸ್ಸಲ್ಲಿ ಅಚ್ಚ ಹಸಿರಾಗಿ ಉಳಿದಿರುವ ರಾಜ್ಯೋತ್ಸವ ನೆನಪುಗಳಲ್ಲೊಂದು .
ಬಹುಷಃ ಕಳೆದ 20 ವರ್ಷಗಳಲ್ಲಿ ನನ್ನೂರು ಬದಲಾಗಿರಬಹುದು .ಅಲ್ಲಿನ ಆಚರಣೆಗಳು ಬದಲಾಗಿರಬಹುದು, ಆದರೆ ಊರಿನ ಜನರ ಮನದಲ್ಲಿ ಈಗಲೂ ಭಾಷೆಯ ಬಗ್ಗೆ ಇರುವ ಒಲವು ಕಡಿಮೆ ಆಗಿಲ್ಲ.

ಈಗೀಗ ನನ್ನ ನಿರೂಪಣೆಯನ್ನು ನೋಡಿ, ಕೇಳಿ ಯಾರಾದರೂ ಬಂದು, ನಿಮ್ಮ ಕನ್ನಡ ಬಹಳ ಚೆನ್ನಾಗಿದೆ, ಭಾಷೆಯನ್ನ ಕಾಪಾಡಿಕೊಂಡಿದ್ದೀರಿ ಎಂದರೆ, ಹೆಮ್ಮೆ ಹಾಗೂ ಬೇಸರ ಎರಡೂ ಒಟ್ಟಿಗೆ ಆಗುತ್ತೆ. ಭಾಷೆಯ ಬಗ್ಗೆ ಹೆಮ್ಮೆ ಎನಿಸಿದರೆ, ಎಲ್ಲರ ಮನಸಲ್ಲಿ, ಮನೆಯಲ್ಲಿ ಮುಕ್ತವಾಗಿ, ಸುಲಲಿತವಾಗಿ ಹರಿದಾಡ ಬೇಕಿರುವ ಭಾಷೆಯನ್ನು ಕಾಪಾಡಿಕೊಳ್ಳುವ ಪ್ರಮೇಯ ಬಂದಿದೆಯಲ್ಲ ಎನ್ನುವುದು. ಅದೇನೇ ಇರಲಿ ಭಾಷೆಯ ಬಳಕೆ ನಿತ್ಯ ಮಂತ್ರವಾಗಿ ಮನ ಮನಗಳಲ್ಲಿ ಕನ್ನಡದ ಬೆಳಕು ಪಸರಿಸಲಿ .

ಜೈ ಕನ್ನಡಿಗ

ಕಂಡಲ್ಲಿ ಕನ್ನಡ – ಡಾ ರಾಮ್ ಶರಣ್

ದೂರದೂರಿನಲಿ ಮಿಡಿಯುತಿದೆ ಮನ
ಬೇಕೆಲ್ಲೆಲ್ಲೂ ಕನ್ನಡ ಪ್ರತಿದಿನ
ಕನ್ನಡಿಯಲ್ಲೇ ಕನ್ನಡ ಪ್ರತಿಫಲನ?
ಬಂದಿರುವುದೇಕೆಂಬುದೇ ನಿತ್ಯ ಮಥನ


ಮಂಜು ಹಾಕಿದ ಮುಸುಕಿನಲಿ
ಬಾಗಿ ಮರಗಳ ಸಾಲಿನಲಿ
ಚೆಲ್ಲಿ ಹರಡಿದ ಎಲೆಗಳಲಿ
ನಾಡ ಬಣ್ಣಗಳು ಕಂಡವಲ್ಲಿ


ಹಗುರು ಬಿಸಿಲಿನ ಕಾವಿನಲಿ
ರೆನ್, ರಾಬಿನ್ನುಗಳ ಇಂಚರದಿ
ವೀಕೆಂಡ್ ಕನ್ನಡ ಸಾಲೆಯಲಿ
ಚಿಣ್ಣರ ಕನ್ನಡ ಕಂಠದಲಿ


ದೂರದೂರಿನಲಿ ಮಿಡಿಯುತಿದೆ ಮನ
ದಿಟ್ಟಿಸಿದಲ್ಲಿಹುದು ಕನ್ನಡತನ
ಇರುವಲ್ಲಿ ಬಿತ್ತಿ ಬೆಳೆಯುವೆ ಅಣ್ಣ
ಕಂಡಲ್ಲಿ ಕನ್ನಡದ ಬಣ್ಣ
-ರಾಂ

( ಚಿತ್ರ ; ಡಾ ರಾಮ್ ಶರಣ್ )

*********************************************************************************

ಶ್ರೀಕಾಂತ್ ಕೃಷ್ಣಮೂರ್ತಿ ಅವರು ಬರ್ಮಿಂಗಹ್ಯಾಮ್ನಲ್ಲಿ consultant psychiatrist ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸಂಗೀತದ ವಾಗ್ಗೇಯಕಾರರಾಗಿರುವ ಶ್ರೀಕಾಂತ್ ಅವರು ಕನ್ನಡ, ತಮಿಳು, ಸಂಕೇತಿ ಭಾಷೆಗಳಲ್ಲಿ ಹಾಡುಗಳನ್ನು ಬರೆದು ಸಂಯೋಜಿಸಿದ್ದಾರೆ. ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನ ಸಂಕೇತಿ ಅನುವಾದ ಮಾಡಿದ್ದಾರೆ. ಹೈಕು ಕವಿಗಳಾಗಿರುವ ಇವರು ಎರಡುವರ್ಷಗಳ ಕಾಲ British Haiku Society ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.”ephemere” ಎಂಬ ಹೈಕು ಪತ್ರಿಕೆಯನ್ನು ಕೂಡ ಪ್ರಕಟಿಸಿದ್ದಾರೆ.-ಸಂ

ಕಾಯೇ ಕಾವೇರೀ! – ಡಾ ಶ್ರೀಕಾಂತ್ ಕೃಷ್ಣಮೂರ್ತಿ

ಕುಣಿಯುತ್ತ ಸಾಗಿದ ಫಣಿವೇಣಿ ಹೆಣ್ಣಿಗೆ
ಮಣಿದು ತಾ ಬಂದು ಮಳೆರಾಯ ಕೂಡಿದ
ಅಣಿಯಾಗಾಷಾಡ ಮಾಸದಿ

ಅಮ್ಮ ನೀನೀವಾಗ ಬಿಮ್ಮನಸೆಯು ಜೋಕೆ
ಧುಮ್ಮಿಕ್ಕುವಾಗ ದುಡುಕೇಕೆ ದಯೆಮಾಡೆ
ನಮ್ಮಯ ಬಾಳು ನಲಿಯೋಕೆ

ಜಂಬವ ಬಿಟ್ಟೀಗ ತುಂಬಿದ ಬಸುರಿ ನೀ
ಅಂಬೋಧಿ ಕಡೆಗೆ ಹಾಯಾಗಿ ಎಲ್ಲರಿ-
ಗುಂಬುದಕಿತ್ತು ಹೊರಟೆಯಾ

ತಡೆದುಕೋ ದಮ್ಮಯ್ಯ ಮಿಡುಕದಿರಮ್ಮಯ್ಯ
ಹಡೆವಾಗ ನಮ್ಮ ಭಾಗ್ಯವನಾಚೀಚೆ
ದಡಗಳನೊಡೆದು ದಾಟೀಯ

ಹಸುಗೂಸು ಹುಟ್ಟಿದೆ ಹಸುರನು ತೊಟ್ಟಿದೆ
ತುಸು ಈಗ ತಲೆಯನೆತ್ತಿದೆ ತೊಡೆಮೇಲೆ
ಸಿಸುವಿಟ್ಟು ಉಣಿಸಿ ಹರಸಮ್ಮ

ಹೆಚ್ಚಿಗೆ ಕೊಟ್ಟೀಯ ಉಚ್ಚಿಕೊಂಡಾಮೇಲೆ
ಕೊಚ್ಚಿ ಹೋದೀತು ಕೂಸೆಮ್ಮ ಭಾಗ್ಯಕೆ
ಕಿಚ್ಚಿಡ ಬೇಡ ಕಾವೇರಿ

*********************************************************************

ಕೃಪೆ: ಹುಯಿಲಗೋಳ ನಾರಾಯಣರಾಯರ ಕವಿತೆಯ ಫೋಟೋ ಮತ್ತು ಮಾಹಿತಿ: ಹರ್ಷ ಡಂಬಳ್ ಅವರಿಂದ

1. ’ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ ’ -ಅಮಿತಾ ರವಿಕಿರಣ ಅವರು ಹಾಡಿದ್ದಾರೆ

2 ‘ಕಡಲಾಚೆಯ ಕನ್ನಡಿಗರ ಸ್ವಗತ” – ಶ್ರೀರಂಜನೀ ಸಿಂಹ ಅವರು ಹಾಡಿದ್ದಾರೆ

”ನೋಡ್ರೀ ಹೀಂಗ ಧಾರವಾಡದಾವ್ರದು ಬಲೇ ತೂಕದ ಮಾತ ಹ್ಞಾಂ?” – ಶ್ರೀವತ್ಸ ದೇಸಾಯಿ ಬರೆದ ಲೇಖನ

[ಉತ್ತರ ಕರ್ನಾಟಕದ  ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರ ಬಿಂದು ಧಾರವಾಡ ನಗರದ ಹೆಮ್ಮೆಯ ಪುತ್ರ ಡಾ ಶ್ರೀವತ್ಸ ದೇಸಾಯಿ ಅವರು ತಮ್ಮ ನೆಚ್ಚಿನ ನಗರವನ್ನು ನಮಗೆ ಮರು-ಪರಿಚಯ ಮಾಡಿ ಕೊಡುವ ಪ್ರಯತ್ನವನ್ನು ಮಾಡಿದ್ದಾರೆ.

ಧಾರವಾಡದ ಭಾಷೆ, ಕವಿಗಳು, ಕಲಾವಿದರು, ಅಲ್ಲಿನ ಸಂಸ್ಕೃತಿ ಇವುಗಳ ಬಗ್ಗೆ ಬಹಳ ಪ್ರೀತಿಯಿಂದ, ಕಾಳಜಿಯಿಂದ, ಹೆಮ್ಮೆಯಿಂದ ಎಳೆ ಎಳೆಯಾಗಿ ಚಿತ್ತಾರಗಳನ್ನು ನಮ್ಮ ಮುಂದೆ ತೆರೆದು ಇಟ್ಟಿದ್ದಾರೆ. ಲೇಖನಕ್ಕೆ ಸಂಬಂಧ ಪಟ್ಟ ವಿಡಿಯೋಗಳಿಗೆ ಸಂಪರ್ಕ ಕಲ್ಪಿಸಿ ಬರಹಕ್ಕೆ ಇನ್ನೊಂದು ಆಯಾಮವನ್ನು ಕೊಟ್ಟಿದ್ದಾರೆ. ಕಳೆದ ಕೆಲವು ದಶಕಗಳನ್ನು ಇಂಗ್ಲೆಂಡಿನಲ್ಲಿ ಕಳೆದಿದ್ದರೂ ಅವರ ಈ ಬರವಣಿಗೆಯಲ್ಲಿ ‘ಧಾರವಾಡದ ಕನ್ನಡ’ ಶೈಲಿ’ ಹಾಗೂ ಅ ಸೊಗಡನ್ನು ಗುರುತಿಸಬಹುದು. ದೇಸಾಯಿ ಅವರು ಕೆಳಗೆ ಹೇಳಿರುವಂತೆ   “ನಮ್ಮ ಆಡುಮಾತು, ನಮ್ಮ ಡಿಎನ್ಎ (DNA) ದಲ್ಲಿದೆಯಲ್ಲವೆ? ನಾವು ನಮ್ಮ ಹುಟ್ಟೂರಿಂದ ಸಾವಿರಾರು ಮೈಲು ದೂರ ಬಂದು ನೆಲಸಿದ್ದರೇನಂತೆ. ನಮ್ಮ ಅಕ್ಸೆಂಟ್ ಪೂರ್ತಿ ಬಿಟ್ಟು ಹೋಗಿರುವುದಿಲ್ಲ. ಆ ದ್ವಂದ್ವ ಹೆಲಿಕ್ಸ್ (double helix DNA) ದಲ್ಲಿ ಒಂದು ಸರಪಳಿ ಮೂಲ ಅಕ್ಸೆಂಟಿನ ಛಾಪು ಇಟ್ಟುಕೊಂಡಿರುತ್ತದೆ! Very true indeed! ಧಾರವಾಡದ  ಸಾಂಸ್ಕೃತಿಕ ಸಿರಿವಂತಿಕೆಯ ಬಗ್ಗೆ ಆಲೋಚಿಸುತ್ತ ಆ ವಿಶಿಷ್ಟತೆಗೆ ಕಾರಣವೆನಿರಬಹುದು ಎಂಬ ಪ್ರಶ್ನೆ ಯನ್ನು ಹುಟ್ಟುಹಾಕಿದ್ದಾರೆ.  ಅದಕ್ಕೆ ಸಮಂಜಸ ಉತ್ತರ ಸಿಗಲಾರದು. ಅದು ಏನೇ ಇರಲಿ ದೇಸಾಯಿಯವರ ಧಾರವಾಡವನ್ನು ನೋಡೋಣ ಬನ್ನಿ… (ಸಂ) ]

ಈಗ ತಾನೆ ನನ್ನ ಊರಾದ ಧಾರವಾಡಕ್ಕೆ ಭೆಟ್ಟಿಕೊಟ್ಟು ಮರಳಿ ಮನೆಗೆ, ಯು ಕೆ (ಯುನೈಟೆಡ್ ಕಿಂಗಡಂ) ಗೆ ಬಂದಿರುವೆ. ಊರಿಗೆ ಹೋದಾಗಲೆಲ್ಲ ಸವಿಯುವದು ಊರಿನ ಪಕ್ವಾನ್ನ ತಿಂಡಿಗಳಷ್ಟೇ ಅಲ್ಲ, ಅಲ್ಲಿಯ ಮಾತಿನ ಸೊಗಡನ್ನೂ ಸಹ. ಇಲ್ಲಿ ದಿನನಿತ್ಯ ಅದರ ಬಳಕೆಯಿಲ್ಲದ್ದರಿಂದ ಅದರ ಧ್ವನಿಯೂ ಮರೆಯಲಿಕ್ಕೆ ಆರಂಭವಾಗಿರುತ್ತದೆ. ನಮ್ಮ ಮಾತಿನ ಶೈಲಿಯೂ ಬದಲಾಗಿರುತ್ತದೆ. ಅದಕ್ಕೇ ಹೋದಕೂಡಲೆ ಅಲ್ಲಿಯವರು ನಮ್ಮನ್ನು ಒಮ್ಮೆಲೆ NRIಗಳು ಎಂದು ಗುರುತಿಸುವದು!

gbs
ಜಾರ್ಜ್ ಬರ್ನಡ್ ಶಾ (’ನೆಟ್ ಚಿತ್ರ)

ನಮ್ಮ ಆಡುಭಾಷೆ ನಮ್ಮನ್ನು ಪ್ರತಿನಿಧಿಸುತ್ತದೆ; ಅದು ನಮ್ಮ ಗುರುತೂ ಆಗಿರುತ್ತದೆ. ಐರ್ಲ್ಯಾಂಡಿನಲ್ಲಿ  ಹುಟ್ಟಿದ ಇಂಗ್ಲಿಷ್ ನಾಟಕಕಾರ ಜಾರ್ಜ್ ಬರ್ನಡ್ ಶಾ ಬರೆದ ’ಪಿಗ್ಮೇಲಿಯನ್’ ದಲ್ಲಿ ಪ್ರೊಫೆಸರ್ ಹಿಗ್ಗಿನ್ಸ್ ಜಂಬ ಕೊಚ್ಚಿಕೊಳ್ಳುವದು ಹೀಗೆ:You can spot an Irishman or a Yorkshireman by his brogue. I can place any man within six miles. I can place him within two miles in London. Sometimes within two streets.’ (ಐರಿಷ್ ಅಥವಾ ಯಾರ್ಕ್ ಶೈರ್ ವಾಸಿಯನ್ನು ಆತ ಮಾತಾಡುವ ಶೈಲಿಯಿಂದಲೇ ನೀವು ಗುರುತಿಸಬಲ್ಲಿರಿ. ನಾನು ಯಾವ ಮನುಷ್ಯನ ಹುಟ್ಟೂರನ್ನು ಆತನ ಮಾತಿನಮೇಲೆಯೇ ಆರು ಮೈಲೊಳಗೆ ಗುರುತಿಸುವೆ. ಲಂಡನ್ ವಾಸಿಯಾದರೆ ಎರಡು ಮೈಲು ಅಂತರದಲ್ಲಿ, ಯಾಕೆ, ಒಮ್ಮೊಮ್ಮೆಯಂತೂ ಅವನು ವಾಸಮಾಡುತ್ತಿರ ಬಹುದಾದ ಎರಡರಲ್ಲೊಂದು ಓಣಿಯನ್ನೂ ಊಹಿಸಬಲ್ಲೆ!) ಇದು ಉತ್ಪ್ರೇಕ್ಷೆಯೇನೋ ಸರಿ. ಬರ್ನಾಡ್ ಶಾ ಆಗ ಬದುಕಿದ್ದ ಭಾಷಾಧ್ವನಿ ಪ್ರವೀಣ (phonetician) ಹೆನ್ರಿ ಸ್ವೀಟನ ಪ್ರಭಾವಕ್ಕೊಳಗಾಗಿರಬಹುದು. ಆದರೆ ನಮ್ಮ ಆಡುಭಾಷೆಯನ್ನು ಅಷ್ಟು ಸುಲಭವಾಗಿ ಮರೆಮಾಚಲಾರೆವು. ಜೊತೆಗೆ ಆ ಪ್ರದೇಶದ ಸಂಸ್ಕಾರವೂ ನಮ್ಮ ನರ-ನಾಡಿಗಳಲ್ಲಿ ಬೆರೆತಿರುತ್ತದೆಯಲ್ಲವೆ?

ನಮ್ಮ ಕರ್ನಾಟಕದಲ್ಲಿಯೂ ಜಿಲ್ಲೆ ಜಿಲ್ಲೆಗೂ ಬದಲಾಗುವ ಸೊಲ್ಲು. ಇದೇ ”ಅನಿವಾಸಿ” ಯಲ್ಲಿ ಹಿಂದೆರಡು ವಾರಗಳ ಕೆಳಗೆ ಜಿ ಎಸ್ ಪ್ರಸಾದರ ಕಿರುನಾಟಕದಲ್ಲಿ (http://wp.me/p4jn5J-1lx) ಮಂಡ್ಯದ ಕನ್ನಡದ ಛಾಯೆ ಕಂಡಿರಿ. ಹಾಗೆಯೇ ಧಾರವಾಡದ್ದು ಇನ್ನೂ ಸ್ಪೆಷಲ್. ”ಸಾಮಾನ್ಯವಾಗಿ ಅದನ್ನು ಯು ಕೆ (ಉತ್ತರ ಕರ್ನಾಟಕ) ಭಾಷೆ ಅಂತ ಒಮ್ಮೊಮ್ಮೆ ಕರೆದರೂ, ಧಾರವಾಡ, ವಿಜಾಪುರದ ಕನ್ನಡದಲ್ಲಿ ಒಂದಿಷ್ಟು ಸಾಮ್ಯವಿದ್ದರೂ ಧಾರವಾಡ ಕನ್ನಡಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ,” ಎನ್ನುತ್ತಾರೆ ಅದೇ ಊರಲ್ಲಿ ಹುಟ್ಟಿ ಸತತವಾಗಿ ಅದೇ ಊರಲ್ಲಿ ಅರವತ್ತೆಂಟು ವರ್ಷಗಳನ್ನು ಕಳೆದ ಸುರೇಶ್ ಕುಲಕರ್ಣಿಯವರು. ನಾಲ್ಕು ಐದು ಮಾಧ್ಯಮಗಳಲ್ಲಿ ಧಾರವಾಡದ ಬಗ್ಗೆ ಬರೆದು, ಸಿನಿಮಾ ಮಾಡಿ, ರೇಡಿಯೋ ಬ್ರಾಡ್ ಕಾಸ್ಟ್ ಮಾಡಿ ಧಾರವಾಡದ ಬಗ್ಗೆ ಅಧಿಕಾರವಾಣಿಯಿಂದ ಮಾತಾಡಬಲ್ಲವರಲ್ಲಿ ಸುರೇಶ್ ಒಬ್ಬರು. ಈಗ ಕೆಲವೇ ದಿನಗಳ ಹಿಂದೆ ಬಿ.ಬಿ. ಸಿ ಯವರೊಡನೆ ಒಂದು ಸಾಕ್ಷ್ಯ ಚಿತ್ರಕ್ಕೆ ಸಹಕರಿಸಿದವರು. ”ಧಾರವಾಡದ ಕನ್ನಡ ಮಾತಿನಲ್ಲಿ ಬಹಳಷ್ಟು ಭಾಷೆಗಳ ಶಬ್ದಗಳು ಕೂಡಿಕೊಂಡಿವೆ. ಕರ್ನಾಟಕದ ಈ ಭಾಗವು ವಿಜಾಪುರದ ಆದಿಲ್ ಶಾಹಿಯವರ ವಶದಲ್ಲಿದ್ದುದರಿಂದ ಉರ್ದು, ನಂತರ ಬಂದ ಪೇಶ್ವೆಯವರ ಆಳ್ವಿಕೆಯಿಂದಾಗಿ ಮರಾಠಿ, ಇದಲ್ಲದೆ ತನ್ನದೇ ಆದ ದೇಸಿ ಆಡುಮಾತು ಇವೆಲ್ಲವುಗಳ ಮಿಶ್ರಣ ಧಾರವಾಡದ ಕನ್ನಡಕ್ಕೆ ಒಂದು ಸೊಗಡನ್ನು ಕೊಟ್ಟಿದೆ. ಅದನ್ನು ಕೇಳಿಯೇ ಅನುಭವಿಸಬೇಕೆಂದು” ಉತ್ಸಾಹದಿಂದ ಅವರು ಹೇಳುತ್ತಾರೆ. ಅವರ ಕಣ್ಣಲ್ಲಿ ಆ ಮಿಂಚು; ದನಿಯಲ್ಲಿ ಕೆಚ್ಚು! ಈಗಿನ ದಿನಗಳಲ್ಲಿ ಎಲ್ಲ ಊರುಗಳಂತೆ ಬದಲಾಗುತ್ತಿರುವ ಧಾರವಾಡ ತನ್ನ ಹಳೆತನ್ನು, ಒರಿಜಿನಾಲಿಟಿಯನ್ನು ಕಳೆದುಕೊಳ್ಳುವದನ್ನು ಕಂಡು ಮರುಗುತ್ತಾರೆ. ಹಳೆಯ ರಸ್ತೆ, ಮಕಾನು ಮಾಯವಾಗುತ್ತಿವೆ. ಹಿಂದೆ ಎಲ್ಲೆಲ್ಲೂ ಕಾಣುತ್ತಿದ್ದ ಧಾರವಾಡದ ’ಚಾಳಿ’ನಲ್ಲಿಯ (ಒಂದೇ ಬಗೆಯ ಮನೆಗಳ ಸಾಲು) ಅವಿಭಕ್ತ ಕುಟುಂಬದಂತಿದ್ದ ಜೀವನದ ದಾಖಲೆ ಪುಸ್ತಕ-ಬರವಣಿಗೆಯಲ್ಲಿ ಆಗುವ ಮೊದಲೇ ಕಣ್ಮರೆಯಾಗುತ್ತಿದೆ ಎಂದು ಅವರಿಗೆ ಅಸಮಾಧಾನ. ಧಾರವಾಡಕ್ಕೆ ಒಬ್ಬಮಹಾರಾಷ್ಟ್ರದ ಪು. ಲ. ದೇಶಪಾಂಡೆ ಸಿಕ್ಕಿದ್ದರೆ ಮರಾಠಿಯ ’ಬಟಾಟ್ಯಾಚೀ ಚಾಳ್” ನಂತೆ ಅವು ಪ್ರಸಿದ್ಧವಾಗುತ್ತಿದ್ದವು ಎಂದು ಅವರ ಅಭಿಪ್ರಾಯ!

ಸುರೇಶ ಕುಲಕರ್ಣಿಯವರು ಸಹ ನಾನು ಕಲಿತ ಮಾಳಮಡ್ಡಿಯ ಕೆ ಇ ಬೋರ್ಡ್ ಶಾಲೆಯ ವಿದ್ಯಾರ್ಥಿ. ಅವರಂತೆಯೇ ಧಾರವಾಡದಲ್ಲಿಯೇ ಹುಟ್ಟಿ ಬೆಳೆದ ಶ್ರೀಮತಿ ಕಮಲಾ ಸಿಡೇನೂರರು ಸಹ. ಅವರು ಒಬ್ಬ ಸಂಗೀತಾಸಕ್ತರು. ತಡವಾಗಿಯಾದರೂ (ಮದುವೆಯ ನಂತರ!)  ಶಾಸ್ತ್ರೀಯ ಸಂಗೀತದ ತಾಲೀಮು ಉಂಟು. ಧಾರವಾಡ ಆಕಾಶವಾಣಿಯಲ್ಲಿ ಮೇಲಿಂದ ಮೇಲೆ ತಮ್ಮ ಹಾಡುಗಾರಿಕೆಯನ್ನು ಬಿತ್ತರಿಸಿದ್ದಷ್ಟೇ ಅಲ್ಲ, ಇತ್ತೀಚೆಗೆ ಲೇಖನಗಳನ್ನು ಬರೆದಿದ್ದಾರೆ.  ಒಗಟುಗಳ ಮೇಲೆ ತಾವೇ ಬರೆದ  ಧ್ವನಿಸುರುಳಿಯನ್ನು ಇಲ್ಲಿ (OGATU audio) ಕೇಳ ಬಹುದು.

keb-schoo-edited-and-reducedl
ಅಂದು ಬಿಡುಗಡೆ ಮಾಡಿದ DVDಯ ಹೊದಿಕೆ

ನಾವೆಲ್ಲ ಬಹಳಷ್ಟು ನಮ್ಮಶಾಲೆಯ ’ಹಳೇ ವಿದ್ಯಾರ್ಥಿಗಳು” (KEBOSA), ಕಳೆದ ತಿಂಗಳು (ಡಿಸೆಂಬರ್ 18 ರಂದು) ನಮ್ಮ 80 ವರ್ಷ ಹಳೆಯ “ಮಾಳಮಡ್ಡಿಯ ಮಹಾಸಾಲಿ” (ಶಾಲೆ)’ ಯ ‘ಗುರುವಂದನ’ ಆಚರಣೆಯಲ್ಲಿ ಪಾಲ್ಗೊಂಡಿದ್ದೆವು. ಸರಿಯಾದ ಹೆಸರು: K E Board’s High School. ಅತ್ಯಂತ ವಿಜೃಂಭಣೆಯಿಂದ ನಡೆದ ಆ ಸಮಾರಂಭದಲ್ಲಿ ಅಚ್ಚ ಧಾರವಾಡ ಕನ್ನಡ ಅಕ್ಸೆಂಟ್ (accent) ನನ್ನ ಕಿವಿ-ಎದೆಯನ್ನು ಭರ್ ಪೂರ್ ತುಂಬಿತು. ಧಾರವಾಡದ ಆಡು ಭಾಷೆಯ  ಅಚ್ಚ ಕನ್ನಡದ  ನ ಸೊಗಡು, ಬೆಡಗು ಅದರ ಜನಪದದ  ನಡೆ ನುಡಿ ಒಳಗೆ ಹಾಗೇ ಹಾಸು ಹೊಕ್ಕಾಗಿದೆ ಎಂದು ನನ್ನ ಎಣಿಕೆ. ನಾನು ಚಿಕ್ಕವನಿದ್ದಾಗಿನ ಒಂದುಸಂಗತಿ ನೆನಪಾಗುತ್ತದೆ. ಆಗ ನಮ್ಮನೆಗೆ ಬೆಣ್ಣೆ ಕೊಡಲು ಒಬ್ಬ ಹೆಣ್ಮಗಳು ಹಳ್ಳಿಯಿಂದ ಬರುತ್ತಿದ್ದಳು. ಆ ದಿನ ಶ್ರಾವಣ ಶುಕ್ರವಾರ, ಅಮ್ಮ ಆಕೆಗೆ ಕುಂಕುಮ ಕೊಟ್ಟಾಗ, ಅಲ್ಲಿನ ರೂಢಿಯಂತೆ ಆಕೆ ಗಂಡನ ಹೆಸರನ್ನ ಒಗಟು ಹಾಕಿ ಹೇಳಿದ್ದನ್ನು ಕೇಳಿ ದಂಗಾದೆ. ಅವಳು ಅನಕ್ಷರಸ್ಥೆ, ಶಿಕ್ಷಿತಳಲ್ಲ. ಆದರೆ ಅವಳ ತಾನೇ ಕಟ್ಟಿದ ಒಗಟಿನಲ್ಲಿ ಅದೆಷ್ಟು ಕಾವ್ಯಮಯ ಸಾಹಿತ್ಯ ಸಿರಿ ಅಡಗಿತ್ತು! ಕೇಳಿ– “ವನವಾಗಿ ಬಂದೆ ವನದಾಗಿನ ಹಕ್ಕಿ ಆಗಿ ಬಂದೆ, ಬೀಸೋ ತಂಗಾಳ್ಯಾಗಿ ಬಂದೆ, ಗಾಳ್ಯಾಗಿನ ಗಂಧಾಗಿ ಬಂದೆ, ಹರಿಯೋ ನೀರಾಗಿ ಬಂದೆ, ಮರದಾಗ ಮಲ್ಲಿಗೆಯಾಗಿ ಬಂದೆ,  ಮುಗುಳಾಗಿ ಬಂದೆ, ಚೈತ್ರದ ಚಿಗುರಾಗಿ, ನನ್ನರಸನ ಹೆಂಡತಿಯಾಗಿ ಅವನ ಮನಿ ಮನಾ ಬೆಳಗಾಕ ಬಂದೆ!” ನಾನು ಅದನ್ನು ಕೇಳಿ ಮಂತ್ರಮುಗ್ಧನಾದೆ.

ಧಾರವಾಡದ ಇನ್ನೊಂದು ಸಾಂಸ್ಕೃತಿಕ  ವೈಶಿಷ್ಟ್ಯವೆಂದರೆ ಕ್ವಾಟಿಯ ಆಟ”. ’ಕ್ವಾಟಿ” ಅಂದರೆ ಕೋಟೆ. ದಸರೆ ಮುಗಿದು ದೀಪಾವಳಿಯ ಆದಿಯಲ್ಲಿ ಹೆಣ್ಣುಮಕ್ಕಳು ಸಂಭ್ರಮದಿಂದ ಭಾಗವಹಿಸುವ ಧಾರವಾಡ ಜಿಲ್ಲೆಯ ಪ್ರಸಿದ್ಧ ಆಟ ಅದು. ಬೇಸಾಯದ ಕೆಲಸ ಜೋರು ಆಗ. ದಣಿದ ಬಸವನ ಕೃತಜ್ಞಾರ್ಥ ಅನ್ನಿ , ಜೊತೆಗೆ ಮನಕ್ಕೆ ಮುದವೀಯುವ ಆಟ, ಹಾಡು, ಹಸೆ,ನೃತ್ಯ. ಗೋವತ್ಸ ದ್ವಾದಶಿಯಂದು ಮಣ್ಣಿನ ಏಳು ಸುತ್ತಿನ ಕೋಟೆಯನ್ನು ಕಟ್ಟಿ ಅದರ ಮಧ್ಯ ಮಣ್ಣಿನ ಬಸವಣ್ಣನನ್ನು ಒಬ್ಬರು ತಟ್ಟೆಯಲ್ಲಿಟ್ಟುಕೊಂಡು ಕೂಡಿಸಿ ಆ ಗಲ್ಲಿಯಲ್ಲಿಯ ಎಲ್ಲ ಹೆಣ್ಣುಮಕ್ಕಳು ದಿನಾಲೂ ಅಂದರೆ ನೀರು ತುಂಬುವ ಹಬ್ಬದಿಂದ ಕಡೆ ಪಂಚಮಿ ವರೆಗೂ, ಬೆಳಿಗ್ಗೆ, ಸಂಜೆ ಕ್ವಾಟಿ ಆಡಲು ಹೋಗುವರು. ಒಂದೆರಡು ಮಕ್ಕಳಿಗೆ, ರಾಧಾ, ಕೃಷ್ಣ, ರಾಮ ಸೀತೆ ಈ ಥರ ವೇಷ ಹಾಕಿ ಮೆರವಣಿಗೆಯಲ್ಲಿ ಸಾಲಾಗಿ ಕೋಲು ಹಾಕುತ್ತ ಹಾಡು ಹೇಳುತ್ತ ನೀರು ಕುಡಿಸಲು ಬಸವನನ್ನು ದಿನಾಲೂ ಒಬ್ಬೊಬ್ಬರ ಮನೆಗೆ ನೀರು ಕುಡಿಸಲು ಒಯ್ಯುವುದು, ಅಲ್ಲಿ ಆ ಮಕ್ಕಳಿಗೆ ಏನಾದರೂ ತಿಂಡಿ ಆ ಮನೆಯವರು ಕೊಡುವ ಪದ್ಧತಿ. ಮಧ್ಯಾಹ್ನ ಎಲ್ಲರೂ ತಮ್ಮ ತಮ್ಮ ಮನೆಯಿಂದ ಏನಾದರೂ ಊಟ ತಂದು, ತಿನ್ನುವುದು. ಕೊನೆಯದಿನ ಅಂದರೆ ಕಡೆಪಂಚಮಿ ದಿನ ಏನಾದರೂ ವಿಶೇಷ ಅಡುಗೆ ಮಾಡಿ ಕೋಟೆ ಹಾಕಿದ ಮನೆಯಲ್ಲಿ ಬಸವನಿಗೆ ನೈವೇದ್ಯ ಮಾಡಿ ಹಂಚಿಕೊಂಡು ತಿನ್ನುವರು. ವೆಂಕಟೇಶ್ ಪಾರಿಜಾತ, ಕೃಷ್ಣನ ಕೋಲಿನಾಟದ ಹಾಡುಗಳನ್ನು ಹಾಡುವರು. ಅದರ ಬಗ್ಗೆ ಕಮಲಾ ಅವರು ತಯಾರಿಸಿದ ವಿಡಿಯೋವನ್ನು ಇಲ್ಲಿ ನೋಡಿ.


ಇದರಂತೆಯೇ ಪ್ರತಿ ಉತ್ಸವ, ಕಾರ್ಯಕ್ರಮಕ್ಕೂ ತನ್ನದೇ ವಿಶಿಷ್ಟತೆ. ಮದುವೆಲೀ ಹೇಳೋ ಒಗಟುಗಳು, ಉರುಟಣೆ ಹಾಡು, ಬೀಗತಿ ಹಾಡು ಒಂದೇ ಎರಡೇ ಹೆಜ್ಜೆ ಹೆಜ್ಜೆಗೂ ಹಾಡು ಹಸೆ. ಮುಗಿಯದ ಸಂಭ್ರಮ ನನ್ನೂರಿನದು ಮತ್ತು ನಾನ್ನೂರವರದು.

ಮನೆ, ಮಾತು, ಶಾಲೆ.

dharwad-pedhaನಾನು ಹುಟ್ಟಿದ ಧಾರವಾಡದ ನಮ್ಮ ಮನೆ ಈಗ ಇಲ್ಲ. ಆದರೆ ಶಾಲೆ ಇದೆ. ಕಾರ್ಯ್ಕ್ರಮದಂದು ಶಾಲೆಗೆ ಹೋದೊಡನೆ ಅದೆಷ್ಟು ನೆನಪುಗಳು! ಆಟವಾಡಿದ್ದು; ಪಾಠ ಕಲಿತದ್ದು; ಎಡವಿ ಬಿದ್ದದ್ದು; ಗುರುಗಳಿಗೆ ಹೆದರಿ ಕೂತದ್ದು! ಧಾರವಾಡ ಪೇಢೆ. ಇವೆಲ್ಲ ಮಿತ್ರರೊಂದಿಗೆ ಹಂಚಿಕೊಂಡದ್ದಾಯಿತು. ಧಾರವಾಡ ಭಾಷೆಗೆ ದ ರಾ ಬೇಂದ್ರೆಗಿಂತ ಉತ್ತಮ ರಾಯಭಾರಿ ಬೇರಿಲ್ಲ. ಅವರ ಭಾಷಣಗಳನ್ನು ಹೊರಗಡೆ ಮತ್ತು ನಮ್ಮ ಶಾಲೆಯಲ್ಲಿಯೂ ಕೇಳಿದ್ದೆ. ಒಮ್ಮೆ ತಮ್ಮದೇ ಶೈಲಿಯಲ್ಲಿ ’ಅನ್ನ ಬಕಾಸುರ ರಾಜ್ಯದಲ್ಲಿ’ ಕವಿತೆ ಓದಿದ್ದು ಮರೆಯುವಂತಿಲ್ಲ. ಎಲ್ಲರಿಗೂ ಗೊತ್ತಿರುವುದರಿಂದ ಅವರ ಮಾತಿನ ಬಗ್ಗೆ ಇನ್ನು ಹೆಚ್ಚು ಹೇಳುವುದಿಲ್ಲ. ಉತ್ತರ ಕರ್ನಾಟಕದ ಕನ್ನಡ ಹಾಡುಗಳನ್ನು ಅನೇಕ ಜನ ಹಾಡಿದ್ದರೂ ನನ್ನ ಅಭಿಪ್ರಾಯದಲ್ಲಿ ಅವುಗಳನ್ನು ನಮ್ಮದೇ ಶಾಲೆಯ ವಿದ್ಯಾರ್ಥಿನಿಯಾದ ವಿದುಷಿ ಸಂಗೀತಾ ಕಟ್ಟಿಯವರಂತೆ ಹಾಡುವುದನ್ನು ನಾನು ಕೇಳಿಲ್ಲ. ಮಾಸಲೆಗೆ (ಸ್ಯಾಂಪಲ್) ಇಲ್ಲಿ ಕೇಳಿ:

ಧಾರವಾಡದ ಮಣ್ಣಿನ ವೈಶಿಷ್ಟ್ಯವೋ, ಮಲೆನಾಡ ಸೆರಗಿನ ಆ ಸೃಷ್ಟಿಯ ಸಿರಿಯೋ, ಹಸಿರೋ ಏನು ಕಾರಣವೋ ಗೊತ್ತಿಲ್ಲ ಎಲ್ಲ ಮಾತುಗಳೂ ಸಾಹಿತ್ಯಿಕವಾಗಿಯೇ, ಕಾವ್ಯಮಯವಾಗಿಯೇ ಕೇಳ್ತವೆ ನನ್ನ ಕಿವಿಗೆ! ಧಾರವಾಡದ ಮಣ್ಣಿನ ವಾಸನೆಯ ಸಾಹಿತ್ಯವನ್ನು ಅಲ್ಲಿನ ಆಡುಭಾಷೆಯಲ್ಲಿಯೇ ನೀಡಿದ ಬರಹಗಾರ್ತಿ ಸುನಂದಾ ಬೆಳಗಾಂವಕರರನ್ನು ನೆನೆಯದಿರಲಾಗದು. ಅಲ್ಲಿಯೇ ಹುಟ್ಟಿ ಬೆಳೆದ ಸಾಹಿತಿಗಳು ಅಗಣಿತ. ಅಂತೆಯೇ ವಲಸೆ ಬಂದವರೂ ಧಾರವಾಡದ ಗಾಳಿಯಲ್ಲಿ ಕೃಷಿ ಮಾಡಿ ಸಾಹಿತ್ಯಿಕ ಸಿರಿವಂತಿಕೆ ಹೆಚ್ಚಿಸಿದವರೂ ಅಗಣಿತ. ಬೇಂದ್ರೆಯವರ ಸಮಕಾಲೀನರಾದ ಕವಿಗಳಲ್ಲಿ ಬೆಟಗೇರಿ ಕೃಷ್ಣಶರ್ಮ (ಕಾವ್ಯನಾಮ ’ಆನಂದಕಂದ’) ಒಬ್ಬರು. ಅವರ ನಂತರದ ಕವಿಗಳಲ್ಲಿ ಕಂಡು ಬರುವ ಆಂಗ್ಲ ಪ್ರಭಾವ ಅವರ ಕವನಗಳಲ್ಲಿ ಇಲ್ಲ. ಕನ್ನಡಕ್ಕೆ ಅವರ ಸಾಹಿತ್ಯದ ಕೊಡುಗೆ ಸಣ್ಣದಲ್ಲ. ಆದರೆ ಅವರಿಗೆ ಸಲ್ಲ ಬೇಕಾದ ಮನ್ನಣೆ ಸಿಗಲಿಲ್ಲ ಎನ್ನಬಹುದು. ಧಾರವಾಡದ ಕನ್ನಡದಲ್ಲಿ ಅವರು ಬರೆದ ಸುಂದರ ’ನಲ್ವಾಡು’ಗಳಲ್ಲಿಯ ಕೆಲ ಭಾವಗೀತೆಗಳನ್ನು ಕೇಳಲು ಬಾಳಪ್ಪ ಹುಕ್ಕೇರಿಯ ನಾಲಗೆ ಹೇಳಿ ಮಾಡಿಸಿದ್ದಂತಿತ್ತು!

ಬಾಳಪ್ಪ ಹುಕ್ಕೇರಿ (1911-1992)

ಬಾಳಪ್ಪ ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಮುರಗೋಡ. ಮೊದಲಿನಿಂದಲೂ ಸಂಗೀತದಲ್ಲಿ ಆಸಕ್ತಿ. ಮಹಾರಾಷ್ಟ್ರದಲ್ಲಿ ಅಭಂಗಗಳು, ಕಾಶಿಯಲ್ಲಿ ದೋಹಾಗಳು, ಉತ್ತರ ಭಾರತದಲ್ಲಿ ಠುಮ್ರಿಗಳನ್ನು ಹಾಡಿ ಜನಪ್ರಿಯರಾದವರು. ಆದರೂ ಇಲ್ಲಿಯ ಜಾನಪದ ಶೈಲಿಯ ಹಾಡುಗಳನ್ನು ಹಾಡಿ ಕನ್ನಡಿಗರ ಮನದಲ್ಲಿ ಮನೆಮಾಡಿದರು. ಜಾನಪದ ಕ್ಷೇತ್ರದ ಸೋಬಾನ, ಕುಟ್ಟುವ, ಬೀಸುವ ಹಾಡುಗಳು, ಲಾವಣಿಗಳು ಇವರ ಕಂಠಶ್ರೀಯಿಂದ ಹೊಮ್ಮಿದವು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಜೇಲು ಕಂಡರು. ಕನ್ನಡವೇ ಉಸಿರು ಎಂದು ಕನ್ನಡಕ್ಕೇ ಜೋತು ಬಿದ್ದು ಎಂದೆಂದಿಗೂ ಕನ್ನಡವಾಗಿದ್ದು-‘ಮೊದಲು ಮಾನವನಾಗ“ ಎಂದು ಸಾರಿದವರು ಬಾಳಪ್ಪನವರು. ಅವರು ಹಾಡಿದ ಆನಂದಕಂದ ಅವರ ರಚನೆ ’ನಾನು ಸಂತೀಗಿ ಹೋಗಿನ್ನಿ’ ಯನ್ನು ಕೇಳಿರಿ.


ಧಾರವಾದ ಮತ್ತು ಸಂಗೀತ

sidenur-book-resizedಧಾರವಾಡದ ಮಣ್ಣಿನಲ್ಲಿ ಏನೋ ವೈಶಿಷ್ಟ್ಯ. ಅದು ಸಾಹಿತಿಗಳನ್ನು ಹುಟ್ಟಿಸಿ, ಪೋಷಿಸಿದ್ದಲ್ಲದೆ ಸಂಗೀತಗಾರರನ್ನೂ ಆಕರ್ಷಿಸಿತು. ಹಿಂದುಸ್ತಾನಿ ಸಂಗೀತದ ನಾಲ್ಕೈದು ’ಘರಾಣೆ’ಯ ಪಂಡಿತರು ಇಲ್ಲಿ ಹೆಸರುವಾಸಿಯಾದರು. ಕೆಲ ಹಸ್ತಿಗಳು ಇತ್ತೀಚಿನ ವರ್ಷಗಳಲ್ಲಿ ಗತಿಸಿ ಹೋದರೂ ಈ ಕಲೆ ಇಲ್ಲಿ ಇನ್ನೂ ಸಮೃದ್ಧವಾಗಿದೆ. ನನ್ನಂತೆ ಅನಿವಾಸಿಯಾದವರು ಇಲ್ಲಿಯ ಮೂಲದವರಾದ ಸಂಗೀತಾ ಕಟ್ಟಿ, ನಚಿಕೇತ ಯಕ್ಕುಂಡಿ, ಪ್ರವೀಣ ಗೋಡಖಿಂಡಿ ಇವರ ಸಂಗಿತ ಕಚೇರಿಗಳು ಅಮೆರಿಕಾ, ಯು ಕೆಯಂಥ ಹೊರ ದೇಶಗಳಲ್ಲಿ ಆದಾಗ ಮನ:ಪೂರ್ತಿ ಕೇಳಿ, ಎದೆಯಲ್ಲಿ ತುಂಬಿಸಿಕೊಂಡು ಸಂತೋಷಪಡುತ್ತೇವೆ. ಈ ಸಂಗೀತ ಪರಂಪರೆಯ ಹುಟ್ಟು, ಬೆಳವಣಿಗೆಯ ಇತಿಹಾಸವನ್ನು ಸಂಕ್ಷಿಪ್ತವಾಗಿ ತಿಳಿಸುವ ಒಂದು ಪುಸ್ತಕ (ಧಾರವಾಡದ ರಾಮಚಂದ್ರ ಸಿಡೆನೂರ ಬರೆದುದು) ದೊರಕಿತು. ಅದರಲ್ಲಿ ಕೆಲ ಅಪರೂಪದ ಮೊದಲು ಜನವಿದಿತವಾಗದ ಸ್ವಾರಸ್ಯಕರ ಸಂಗತಿಗಳನ್ನು ಓದಿ ರುಚಿಸಿದೆ. (ಉದಾ: ಬಡೇ ಗುಲಾಂ ಅವರನ್ನು ಮೀರಿಸಿದ ಧಾರವಾಡದ ಯುವ ಕಲಾವಿದೆ (ಮನ್ಸೂರ, ಪುಟ 21)). ಇಲ್ಲಿಯ ಸಂಗೀತದ ಬಗ್ಗೆ ಈ ಚಿಕ್ಕ ಲೇಖನದಲ್ಲಿ ಇನ್ನೂ ಹೆಚ್ಚಿಗೆ ಬರೆಯಲು ಆಸ್ಪದವಿಲ್ಲ.

ಧಾರವಾಡ ಮತ್ತು ‘ಯು.ಕೆ.’

dna
DNA

“You can take an Indian out of India, but you can never take India out of an Indian”. ಇದು ಯಾವ ಭಾರತೀಯನಿಗೂ ಅಷ್ಟೇ ಅಲ್ಲ, ಕನ್ನಡಿಗನಿಗೂ, ಅನ್ವಯಿಸುತ್ತದೆ. ನಾವು ಆಡುವ ಮಾತು, ನಮ್ಮ ಆಡುಮಾತು, ನಮ್ಮ ಡಿಎನ್ಎ (DNA) ದಲ್ಲಿದೆಯಲ್ಲವೆ? ನಾವು ನಮ್ಮ ಹುಟ್ಟೂರಿಂದ ಸಾವಿರಾರು ಮೈಲು ದೂರ ಬಂದು ನೆಲಸಿದ್ದರೇನಂತೆ. ನಮ್ಮ ಅಕ್ಸೆಂಟ್ ಪೂರ್ತಿ ಬಿಟ್ಟು ಹೋಗಿರುವುದಿಲ್ಲ. ಆ ದ್ವಂದ್ವ ಹೆಲಿಕ್ಸ್ (double helix DNA) ದಲ್ಲಿ ಒಂದು ಸರಪಳಿ ಮೂಲ ಅಕ್ಸೆಂಟಿನ ಛಾಪು ಇಟ್ಟುಕೊಂಡಿರುತ್ತದೆ. ಎರಡನೆಯದು ನಮ್ಮ ಪರಿಸರದ ಪ್ರಭಾವದಿಂದ ಬದಲಾಗಿರುತ್ತದೆ. ಅದಕ್ಕೇ ಅನಿವಾಸಿ ಹೆಣ್ಣು ಮಕ್ಕಳು ಊರಿಗೆ ಹೋದಾಗ ತಾವು ಸ್ಥಳಿಯರಂತೆ ವರ್ತಿಸಿದರೂ ಸೀರೆಯ ಅಂಗಡಿಯವನ ಕಣ್ಣಿನ ಮೇಲೆ ಉಣ್ಣೆ ಸವರಲಾಗುವದಿಲ್ಲ! (ಆಂಗ್ಲ ಮಾತನ್ನು ಕನ್ನಡೀಕರಿಸಿದರೆ ಹೀಗಿರುತ್ತದೆ). ಇಲ್ಲಿ ವಿದೇಶದಲ್ಲಿ ನೆಲಸಿದ ಮೇಲೆ, ಇಲ್ಲಿಯ ಸಂಸ್ಕಾರ, ಮಾತು ವಿಚಾರಗಳನ್ನೂ ಬರಮಾಡಿಕೊಳ್ಳಲೇ ಬೇಕಲ್ಲವೆ? ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ. ನಮ್ಮ ಆಡುಮಾತು ಹೇಗೇ ಇರಲಿ, ನಾಲ್ಕು ಜನರ ಮುಂದೆ ನಾವು ಮಾತನಾಡ ಬೇಕಾದರೆ ನಮ್ಮ ಮಾತು ಹೇಗಿರಬೇಕು? ಕೆಳಗೆ ನೋಡಿ.

ನುಡಿದರೆ …

ನನ್ನ ಹೋದ ವಾರದ ಪ್ರವಾಸ ಧಾರವಾಡದಿಂದ ಅದರ ಉತ್ತರಕ್ಕೆ ವಿಜಯಪುರಕ್ಕೆ (ಹಿಂದಿನ ಹೆಸರು ವಿಜಾಪುರ) ಕೊಂಡೊಯ್ದಿತು. ಅನುಭಾವಿ ಕವಿ ಮಧುರಚೆನ್ನ (ಇಟ್ಟ ಹೆಸರು ಚೆನ್ನಮಲ್ಲಪ್ಪ ಹಲಸಂಗಿ) ಅವರ ಸಮಾಧಿ ಇಟಗಿ ತಾಲುಕಿನ ಹಲಸಂಗಿಯಲ್ಲಿದೆ. ಅಲ್ಲಿಯೂ ಒಂದು ಗೆಳೆಯರ ಗುಂಪು ಇತ್ತು. ಸಿಂಪಿ ಲಿಂಗಣ್ಣ, ಧೂಳಾ ಸಾಹೇಬ, ರೇವಪ್ಪ ಕಾಪಸೆಯಲ್ಲದೆ ಮೇಲಿಂದ ಮೇಲೆ ಬರುತ್ತಿದ್ದ ಬೇಂದ್ರೆಯವರೂ ಅದರಲ್ಲಿ ಎಣಿಕೆಯಾಗುತ್ತಿದ್ದರು. ಇವರೆಲ್ಲರೂ ಶ್ರೀ ಅರಬಿಂದೋ ಅವರ ಪ್ರಭಾವಕ್ಕೊಳಗಾದವರು. ನಾನು ಅಲ್ಲಿಯೂ ಉತ್ತರ ಕರ್ನಾಟಕದ (ಯು ಕೆ) ಕನ್ನಡ ಮಾತಿನ ಸವಿಯುಂಡೆ. ಮಾತು ಹೇಗಿರ ಬೇಕು? ಮಧುರಚೆನ್ನರ ಮೊಮ್ಮಗ ಜಗದೇವ (ಜಗದೀಶ) ಅವರ ಬಾಯಿಂದಲೇ ಕೇಳಿ!


”ನೋಡ್ರೀ ಹೀಂಗ ಧಾರವಾಡದಾವ್ರದು ಬಲೇ ತೂಕದ ಮಾತ  ಹ್ಞಾಂ?

 

   ಫೋಟೋಗಳು,ಲೇಖನ: ಶ್ರೀವತ್ಸ ದೇಸಾಯಿ

ಕೃಪೆ:

ಈ ಚಿಕ್ಕ ಲೇಖನಕ್ಕೆ ಸಲಹೆ, ಸಹಾಯ ಕೊಟ್ಟವರಾದ:

ಶ್ರೀಮತಿ ಮತ್ತು ಶ್ರೀ ಸಿಡೆನೂರ, ಧಾರವಾಡ

ಶ್ರೀ ಸುರೇಶ ಕುಲಕರ್ಣಿ, ಧಾರವಾಡ

ಶ್ರೀಮತಿ ಸರೋಜಿನಿ ಪಡಸಲಗಿ, ಬೆಂಗಳೂರು

ಡಾ ವಿನತೆ ಶರ್ಮಾ, ಯಾರ್ಕ್, ಯು ಕೆ