ಕನ್ನಡ ಬಳಗ ದೀಪಾವಳಿ/ರಾಜ್ಯೋತ್ಸವ ನವೆಂಬರ್ ೨೦೨೫: ಅನಿವಾಸಿಯಿಂದ ಭೈರಪ್ಪನವರಿಗೆ ಶ್ರದ್ಧಾಂಜಲಿ

ಕನ್ನಡ ಬಳಗ, ಮಿಲ್ಟನ್ ಕಿನ್ಸ್ ನ ಅನಿಕೇತನ ಸಂಸ್ಥೆಯ ಜೊತೆ ಕೈ ಗೂಡಿಸಿ, ನವೆಂಬರ್ ೮ ರಂದು ದೀಪಾವಳಿ ಹಾಗು ರಾಜ್ಯೋತ್ಸವಗಳನ್ನು ಆಚರಿಸಿತು. ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ‘ಅನಿವಾಸಿ’ ಯ ಸಮಾನಾಂತರ ಸಭೆ ಈಗ ಸಂಪ್ರದಾಯವೇ ಆಗಿದೆ. ಹೆಚ್ಚಾಗಿ, ಮುಖ್ಯ ಕಾರ್ಯಕ್ರಮದ ಉದ್ಘಾಟನೆ ಹಾಗೂ ಹಿತನುಡಿಗಳ ನಂತರದ ಸಮಯ ಇದಕ್ಕಾಗೇ ಮೀಸಲು. ಇತ್ತೀಚಿಗೆ ಕಾಣದ ಲೋಕಕ್ಕೆ ತೆರಳಿದ ಭೈರಪ್ಪನವರ ಅಗಲಿಕೆ ಕನ್ನಡಿಗರಿಗೆ ಅತೀವ ದುಃಖದಾಯಕ ಕಾರಣವಾಗಿದೆ. ಕನ್ನಡದ ಮಹಾನ್ ಕಾದಂಬರಿಕಾರರಲ್ಲಿ ಒಬ್ಬರಾದ ಭೈರಪ್ಪನವರಿಗೆ ಶ್ರದ್ಧಾಂಜಲಿ ಅರ್ಪಿಸುವುದೇ ಈ ಬಾರಿಯ ಅನಿವಾಸಿ ಕಾರ್ಯಕ್ರಮಕ್ಕೆ ತಕ್ಕುದಾದ ವಿಷಯವೆಂದು ಮೊದಲೇ ತೀರ್ಮಾನವಾಗಿತ್ತು. ಸದಸ್ಯರು ತಮಗೆ ಇಷ್ಟವಾದ ಕಾದಂಬರಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದು ಮೊದಲ ಭಾಗ. ಮುಖ್ಯ ಅತಿಥಿಯಾಗಿ ಬರುವ ಶ್ರೀ. ಮತ್ತೂರು ನಂದಕುಮಾರರಿಂದ ಅವರ- ಭೈರಪ್ಪನವರ ಒಡನಾಟದ ವಿಶಿಷ್ಟ ಅನುಭವಗಳ ಅವಲೋಕನೆ ಎರಡನೇ ಭಾಗದಲ್ಲಿ ಎಂದು ನಿಶ್ಚಯಿಸಿದ್ದೆವು. ಕಾರ್ಯಕ್ರಮದ ಮುಖ್ಯ ಸಂಘಟಕರಾದ ಆನಂದ್ ಕೇಶವಮೂರ್ತಿ ಹಾಗೂ ಅನ್ನಪೂರ್ಣ ಆನಂದ್, ಮುಖ್ಯ ಅತಿಥಿಯವರ ಅನುಮೋದನೆ ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಿದರು. ಈ ಸಂಚಿಕೆಯಲ್ಲಿ ಕಾದಂಬರಿಗಳ ವಿಶ್ಲೇಷಣೆ ಹಾಗೂ ಮತ್ತೂರರ ಭಾಷಣವದ ವಿವರಗಳಿವೆ. ಜೊತೆಯಲ್ಲೇ ಆತಿಥೇಯ ನಗರ ಮಿಲ್ಟನ್ ಕೀನ್ಸ್ ನವರೇ ಆದ ನಾಗರಾಜ ಬಸವರಾಜು ಅವರು ಬರೆದ ಇಡೀ ದಿನದ ಕಾರ್ಯಕ್ರಮಗಳ ವರದಿಯೂ ಇದೆ. ಕೊನೆಯಲ್ಲಿ ಡಾ . ಶ್ರೀವತ್ಸ ದೇಸಾಯಿ ಅವರು ಚಿತ್ರೀಕರಿಸಿದ ಕಾರ್ಯಕ್ರಮದ ಮುಖ್ಯಾಂಶಗಳ ಚಿಕ್ಕ ವಿಡಿಯೋವನ್ನು ನೋಡಲು ಮರೆಯದಿರಿ. -ರಾಮಶರಣ ಲಕ್ಷ್ಮೀನಾರಾಯಣ

ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮದ ಪರಿಚಯವನ್ನು ಆನಂದ್ ಮಾಡಿಕೊಟ್ಟರು. ಮುಖ್ಯ ಅತಿಥಿಗಳ ಪರಿಚಯವನ್ನು ಶ್ರೀವತ್ಸ ದೇಸಾಯಿಯವರು ನೆರವೇರಿಸಿದರು. ಕೊನೆಯಲ್ಲಿ ಜಿ.ಎಸ್.ಶಿವಪ್ರಸಾದ್ ಸಾಂಗವಾಗಿ ಆಭಾರ ಮನ್ನಿಸಿದರು. 

ಪರ್ವ: ಸಾರ್ವಕಾಲಿಕ ನೆಚ್ಚಿನ ಕಾದಂಬರಿ – ಅನ್ನಪೂರ್ಣ ಆನಂದ್ 

ಚಿತ್ರಕೃಪೆ : ಕೇಶವ ಕುಲಕರ್ಣಿ

ಹೈಸ್ಕೂಲಿನಿಂದ ಕಾದಂಬರಿ ಓದುವ ಗೀಳು ಹತ್ತಿತ್ತು. ನನಗೆ ಮೊದಲು ಸಿಕ್ಕಿದ ಭೈರಪ್ಪನವರ ಕಾದಂಬರಿ ‘ವಂಶವೃಕ್ಷ’. ಅವರ ಬರಹದ ಶೈಲಿ, ಪಾತ್ರ ಪೋಷಣೆ, ಕಥೆಯ ಹಂದರ ನನ್ನ ಮನತಟ್ಟಿದವು. ‘ಧರ್ಮಶ್ರೀ’ ಹಾಗು ‘ದೂರಸರಿದರು’ ಗಳ ನಂತರ ಕೈಗೆಟುಕಿದ್ದು ‘ಪರ್ವ’. ಭಾರತೀಯ ಮಕ್ಕಳೆಲ್ಲ ಮಹಾಭಾರತದ ಕಥೆಗಳನ್ನು ಓದಿ, ಕೇಳಿಯೇ ಬೆಳೆಯುತ್ತಾರೆ. ಮಂತ್ರ ಪ್ರಭಾವದಿಂದ ಮಕ್ಕಳಾಗುವುದು, ಗಾಂಧಾರಿ ಹೊಟ್ಟೆ ಕಿವುಚಿಕೊಂಡು ನೂರು ಮಕ್ಕಳನ್ನು ಪಡೆಯುವುದು, ಕೃಷ್ಣನ ಚಮತ್ಕಾರಗಳು, ಇವೆಲ್ಲ ಕಲ್ಪನೆಗೆ ಮೀರಿದ ವಿಚಿತ್ರ ಭಾವನೆಗಳನ್ನು ಮೂಡಿಸುತ್ತಿದ್ದವು. ‘ಪರ್ವ’ ಮಹಾಭಾರತದ ಪಾತ್ರಗಳನ್ನೆಲ್ಲ ಮಾನವ ಸದೃಶಗೊಳಿಸುತ್ತವೆ. ಇಲ್ಲಿ ಚಮತ್ಕಾರಗಳಿಲ್ಲ. ಕೃಷ್ಣ, ಚಾಣಾಕ್ಷನೂ, ಮುತ್ಸದ್ದಿಯೂ ಆದ ವ್ಯಕ್ತಿ. ಕಥೆಯೂ  ಅಂತಃ ಸಂವಾದ, ಕೆದಕಿದ ನೆನಪು, ಪ್ರತಿಕ್ರಿಯೆಯ ರೂಪದಲ್ಲಿ ಸಾಗುವುದರಿಂದ, ಪುರಾಣವಾಗದೇ ಒಂದು ಐತಿಹಾಸಿಕ ಕಥೆಯಾಗಿ ಅನಾವರಣಗೊಳ್ಳುತ್ತದೆ. ಕುರುಕ್ಷೇತ್ರ ಯುದ್ಧ ವೈಭವೀಕರಣಗೊಳ್ಳದೇ ಕೊಳೆತು ನಾರುವ ಹೆಣದ ರಾಶಿ, ಯುದ್ಧ ತರುವ ಗೋಳು, ಹೊಲಸು ಇವನ್ನೆಲ್ಲ ತೋರುತ್ತ ಜಿಗುಪ್ಸೆ ಹುಟ್ಟುವಂತೆ ಮಾಡುತ್ತದೆ. ಸ್ತ್ರೀಪಾತ್ರಗಳಿಗೆ ಇಲ್ಲಿ ಪುರುಷ ಪಾತ್ರಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಇದೆ. ದ್ರೌಪದಿಯ ಪ್ರತೀಕಾರ, ಕುಂತಿಯ ಆಂತರಿಕ ತಲ್ಲಣ, ಗಾಂಧಾರಿಯ ಮಾತೃತ್ವದ ಬಂಧನ ಮನತಟ್ಟುತ್ತವೆ. ‘ಪರ್ವ’ ವನ್ನು ನಾನು ಹಲವು ಬರಿ ಓದಿದ್ದೇನೆ; ಪ್ರತಿಸಲವೂ ಹೊಸತನ್ನು ಕಂಡಿದ್ದೇನೆ. ಭೈರಪ್ಪನವರ ಕಾದಂಬರಿಗಳಲ್ಲೆಲ್ಲ ಇದು ನನ್ನ ಸಾರ್ವಕಾಲಿಕ ನೆಚ್ಚಿನ ಕೃತಿ.   

ಧರ್ಮಶ್ರೀ: ೬೦ರ ಭಾರತದ ಚಿತ್ರಣ – ಆನಂದ್ ಕೇಶವಮೂರ್ತಿ 

ನಾನು ‘ಧರ್ಮಶ್ರೀ’ಯನ್ನು ಮೊದಲ ಬಾರಿಗೆ ಓದಿದ್ದು ೩೫-೪೦ ವರ್ಷಗಳ ಹಿಂದೆ. ಕಳೆದ ವಾರ ಮತ್ತೊಮ್ಮೆ ಓದಿದಾಗ ಕಂಡದ್ದು ಹಲವು ಹೊಸ ವಿಷಯಗಳು. ೧೯೬೧ ರಲ್ಲಿ ಈ ಕೃತಿ ಬೆಳಕು ಕಂಡಿತು. ಹಾಗಾಗಿ ಇದನ್ನು ಭೈರಪ್ಪನವರು ೧೯೫೯ ಅಥವಾ ೧೯೬೦ರಲ್ಲಿ ಬರೆದಿರಬಹುದು. ಆಗ ಅವರಿಗೆ ೩೦ರ ಹರೆಯ. ಅಷ್ಟು ಚಿಕ್ಕ ವಯಸ್ಸಿನಲ್ಲೇ ಅವರು ಎಷ್ಟೊಂದು ಓದಿದ್ದರು, ಪ್ರೌಢಿಮೆ ಹೊಂದಿದ್ದರು ಎಂಬ ವಿಷಯ ಈ ಕಾದಂಬರಿಯನ್ನು ಓದಿದಾಗ ಅನಿಸುತ್ತದೆ. ೬೦ರ ದಶಕದ ಸಾಮಾಜಿಕ ಬದುಕು, ಕಿತ್ತು ತಿನ್ನುವ ಬಡತನ, ಹಿಂದೂ ಧರ್ಮದಲ್ಲಿ ತಂಡವವಾಡುತ್ತಿದ್ದ ಜಾತೀಯತೆ ಇವನ್ನೆಲ್ಲ ಧರ್ಮಶ್ರೀ ಪ್ರತಿಫಲಿಸುತ್ತದೆ. ಕಾದಂಬರಿಯ ಮೊದಲ ಪುಟಗಳು ಭೈರಪ್ಪನವರ ಮೈಸೂರಿಗೆ ವಿದ್ಯಾಭ್ಯಾಸಕ್ಕೆ ಬರುವವರೆಗಿನ ಆತ್ಮ ಕಥೆಯೇ ಎಂದು ತಮ್ಮ ‘ಭಿತ್ತಿ’ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ. ಹಿಂದೂ ಕಥಾನಾಯಕ ಕ್ರಿಸ್ತ ಧರ್ಮಕ್ಕೆ ಮತಾಂತರ ಹೊಂದಿದ ಮೇಲೆ ಅವನಿಗಾಗುವ ತಳಮಳ, ಅದರ ಪರಿಣಾಮಗಳು ಇದರಲ್ಲಿ ಮನಮುಟ್ಟುವಂತೆ ಚಿತ್ರಿತವಾಗಿವೆ. ರಾಷ್ಟೀಯ ಸ್ವಯಂ ಸೇವಕ ಸಂಘದ ಧ್ಯೇಯೋದ್ದೇಶ, ಸಂಘವನ್ನು ಹತ್ತಿಕ್ಕಲು ಅಂದಿನ ಸರಕಾರ ಮಾಡಿದ ಪ್ರಯತ್ನಗಳು ಇದರಲ್ಲಿವೆ. ಕ್ರಿಶ್ಚಿಯನ್ ಮಿಷನರಿಗಳು ಶೋಷಿತರನ್ನು ಗುರಿಯಾಗಿಸಿಕೊಂಡು, ಆಮಿಷಗಳನ್ನೊಡ್ಡಿ ಮತಾಂತರಗೊಳಿಸುತ್ತಿದ್ದ ಬಗೆ; ಸಮಾನ ಅಂತಸ್ತಿನ ಭರವಸೆ ನೀಡಿದರೂ ಶೋಷಿತರನ್ನು ಶೋಷಿಸುತ್ತಲೇ ಇದ್ದ ಸಂಗತಿಗಳನ್ನು ವಿವರಿಸುತ್ತಾರೆ. ದಿಸ್ತೀನ್ ಗೌಡನ ಪಾತ್ರದ ಮೂಲಕ ಧಾರ್ಮಿಕ ವ್ಯವಸ್ಥೆಯ ಕೊರತೆಗಳನ್ನು ಎತ್ತಿ ತೋರಿಸುತ್ತಾರೆ. ಈ ಕಾದಂಬರಿ ೬೦ರ ದಶಕದ ಸಮಾಜ ವ್ಯವಸ್ಥೆಯ ಅಧ್ಯಯನ, ಧಾರ್ಮಿಕ ಶೋಷಣೆಗೆ ಹಿಡಿಯುವ ಕೈಗನ್ನಡಿ ಎಂದು ಹೇಳಬಹುದು. 

ಮತದಾನ ಹಾಗೂ ಇತರ ಕಾದಂಬರಿಗಳು: ಹಾಜರಿ ಕಡಿಮೆಯಾಗಲು ಕಾರಣೀಭೂತ – ವಿನಯ್ ರಾಯಚೂರ್ 

ಭೈರಪ್ಪನವರ ಕಾದಂಬರಿಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೆಂದರೆ, ನಾನು ಕ್ಲಾಸಿಗೆ ಹೋಗದೇ ಪಟ್ಟಾಗಿ ಕುಳಿತು ಮುಗಿಸುತ್ತಿದ್ದೆ. ನನ್ನ ಹಾಜರಿ ಕಡಿಮೆಯಾಗಲು ಇವೇ ಮೂಲ ಕಾರಣ. ಅವರ ಎಲ್ಲ ಕಾದಂಬರಿಗಳನ್ನು ಓದಿದ್ದೇನೆ. ‘ಮತದಾನ’ ಇಷ್ಟವಾಗುವುದಕ್ಕೆ ಮೂರೂ ಕಾರಣಗಳಿವೆ: ಚಿಕ್ಕದಾದರೂ ಚೊಕ್ಕದು ಈ ಕೃತಿ; ಆದರ್ಶಕ್ಕೆ ಜೋತು ಬಿದ್ದರೆ ಬದುಕು ಸಾಗದು; ರಾಜಕೀಯ ಎಂದಿಗೂ ಹೊಲಸೇ ಎನ್ನುವುದನ್ನು ಸಾಬೀತು ಮಾಡುತ್ತದೆ. ‘ಗೃಹಭಂಗ’ ದಲ್ಲಿ ಸಂಘರ್ಷದ ಬದುಕಿನ ಚಿತ್ರಣದ ಜೊತೆಗೆ, ಅಂತಹ ಅನುಭವಕ್ಕೆ ಒಳಗಾದವರಿಗೆ ಸಾಂತ್ವನ ಹೇಳುವ ಧ್ವನಿಯಿದೆ. ಭೈರಪ್ಪನವರ ಕಾದಂಬರಿಗಳಲ್ಲಿ ತತ್ವಶಾಸ್ತ್ರದ ಹೊಳವು ಸರ್ವೇ ಸಾಮಾನ್ಯ. ‘ಸಾಕ್ಷಿ’ ಹಾಗೂ ‘ನಾಯಿ ನೆರಳು’ ಇವೆರಡರಲ್ಲಿ ಆಧ್ಯಾತ್ಮಿಕತೆ, ತತ್ವಶಾಸ್ತ್ರಗಳ ಪ್ರಭಾವವನ್ನು ದಟ್ಟವಾಗಿ ಕಾಣಬಹುದು. ಪುನರ್ಜನ್ಮದ ಜಿಜ್ಞಾಸೆ ಕೂಡ ನಾಯಿನೆರಳಿನಲ್ಲಿ ತೀವ್ರವಾಗಿದೆ. ಅವರ ಯಾವುದೇ ಕಾದಂಬರಿಗಳಲ್ಲಿ ಅಂತಿಮ ನಿಷ್ಕರ್ಷ ಕಾಣ ಬರುವುದಿಲ್ಲ. ಓದುಗರ ಊಹೆಗೆ, ಚರ್ಚೆಗೆ ಅವು ತೆರೆದುಕೊಳ್ಳುತ್ತವೆ. ಅವರ ಕಾದಂಬರಿಗಳಿಂದ ಪ್ರೇರಿತನಾಗಿ, ನಾನು ತತ್ವಶಾಸ್ತ್ರ, ವೈಚಾರಿಕತೆ ಇವನ್ನೆಲ್ಲ ಇನ್ನು ಹೆಚ್ಚಾಗಿ ಅರಿಯುವ ಪ್ರಯತ್ನ ಮಾಡಿದ್ದೇನೆ. 

ಉತ್ತರಕಾಂಡ: ಭೈರಪ್ಪನವರ ಕೊನೆಯ ಕಾದಂಬರಿ – ಕೇಶವ ಕುಲಕರ್ಣಿ 

‘ಪರ್ವ’ದಲ್ಲಿ ಮಹಾಭಾರತವನ್ನು ಬರೆದ ಭೈರಪ್ಪನವರು, ‘ಉತ್ತರಕಾಂಡ’ದಲ್ಲಿ ರಾಮಾಯಣವನ್ನು ಬರೆದದ್ದು ೪೦ ವರ್ಷಗಳ ನಂತರ. ಭಾರತದ ಉದ್ದಗಲಕ್ಕೂ ಗದ್ಯ ಹಾಗೂ ಕಾವ್ಯದ ರೂಪದಲ್ಲಿ ನೂರಾರು ರಾಮಾಯಣಗಳ ಆವೃತ್ತಿಗಳನ್ನು ಕಾಣಬಹುದು. ಪಾಶ್ಚಾತ್ಯ ಶಿಕ್ಷಣದ ಪ್ರಭಾವ ಆಗುವವರೆಗೂ ರಾಮ ದೈವಾಂಶ ಸಂಭೂತನಾಗಿದ್ದ. ಆಧುನಿಕ ಕಾಲದಾರಂಭದಲ್ಲಿ ಪುರುಷೋತ್ತಮನಾದ. ವಿಚಾರವಾದ, ಹೊಸ ಸಿದ್ಧಾಂತಗಳ ಪ್ರಭಾವದಲ್ಲಿ ರಾಮಾಯಣವನ್ನು ವಿಭಿನ್ನ ದೃಷ್ಟಿಕೋನಗಳಿಂದ ನೋಡಲಾಗಿದೆ. ಪೌರಾಣಿಕ ನೋಟದಿಂದ ಹೊರತಾಗಿ, ಐತಿಹಾಸಿಕ ಅಥವಾ ಸಮಕಾಲೀನ ಕಥಾನಕದಂತೆ ಕಂಡವರಿದ್ದಾರೆ. ಕನ್ನಡದಲ್ಲೇ ಪೋಲಂಕಿ ರಾಮಮೂರ್ತಿಯವರು ‘ಸೀತಾಯಣ’ ಬರೆದು ಸಾಕಷ್ಟು ಚರ್ಚೆಗೊಳಗಾಗಿದ್ದರು. 

ಉತ್ತರಕಾಂಡದ ವೈಶಿಷ್ಟ್ಯತೆಯೆಂದರೆ, ಕಥೆ ಪ್ರಾರಂಭವಾಗುವುದೇ ಲವ-ಕುಶ ರ ಜನ್ಮವಾದನಂತರ. ರಾಮಾಯಣವು ಇಲ್ಲಿ ಸೀತೆಯ ಸ್ವಗತದಲ್ಲಿ rewind ಆಗುತ್ತದೆ. ‘ಪರ್ವ’ದಂತೆ ಇಲ್ಲಿನ ಪಾತ್ರಗಳೆಲ್ಲ ಮಾನವೀಕೃತಗೊಂಡಿವೆ. ಸೀತೆಯ ದೃಷ್ಟಿಕೋನದಿಂದ ಭೈರಪ್ಪ ರಾಮನನ್ನು ‘ಕಟ್ಟುತ್ತ’ ಹೋಗುತ್ತಾರೆ. ರಾಜನಾಗಿ ಗೆಲ್ಲುವ ರಾಮ, ಗಂಡನಾಗಿ ಸೋಲುತ್ತಾನೆ. ಅವರು ಈ ಕೃತಿಯಲ್ಲಿ ಸಾಕಷ್ಟು ಕಥೆಗಾರನ ಸ್ವಾತಂತ್ರ್ಯವನ್ನು ಬಳಸಿದ್ದಾರೆ. ಇದನ್ನು ಓದಿದಾಗ, ಭೈರಪ್ಪನವರು ಸಾಹಿತ್ಯ ಓದುಗರ ಕಟ್ಟುಪಾಡನ್ನು ಮೀರಿ ಒಳಗಾಗದೇ ಪಂಥ ಮೀರಿ ಬರೆದದ್ದನ್ನು ಗುರುತಿಸಬಹುದು. ಕೊನೆಯಲ್ಲಿ ವಾಲ್ಮೀಕಿ “ಈ ಕಥೆಗೆ ಸುಖಾಂತವನ್ನೊದಗಿಸಲೆಂದು ಅಯೋಧ್ಯೆಗೆ ಹೋಗಿ ಧರ್ಮಸಭೆ ಏರ್ಪಡಿಸಿದೆ. ಆದರೂ ಕಥೆಯ ದಿಕ್ಕನ್ನು ಬದಲಾಗಿಸಲಾಗಲಿಲ್ಲ” ಎಂದು ಸೋಲೊಪ್ಪಿಕೊಳ್ಳುತ್ತಾನೆ. 

ಈ ಕಾದಂಬರಿ, ಭೈರಪ್ಪನವರ ಒಳ್ಳೆಯ ಕಾದಂಬರಿ ಎಂದು ನನಗೆನ್ನಿಸುವುದಿಲ್ಲ; ಇದು ಅಷ್ಟಾಗಿ ಚರ್ಚೆಗೋ, ವಿಮರ್ಶೆಗೋ ಒಳಗೊಳ್ಳಲಿಲ್ಲ. 

ಮಂದ್ರ, ಹೆಸರೇ ಸೂಚಿಸುವಂತೆ ಸಂಗೀತದ ತಳಹದಿಯ ಮೇಲೆ ನಿಂತ ಕೃತಿ. ಮುಖ್ಯ ಪಾತ್ರದಾರಿ ಮೋಹನಲಾಲ, ಅಪ್ರತಿಮ ಪ್ರತಿಭೆಯ ಸಂಗೀತಗಾರ. ಹರಿದ್ವಾರ ಘಾಟಿಯಿಂದ ಮುಂಬಯಿಯ ಶಾಸ್ತ್ರೀಯ ಸಂಗೀತ ಲೋಕದ ಮಹಾನ್ ತಾರೆಯಾಗಿ ಬೆಳಗಿದವ. ಆತನ ಬೆಳವಣಿಗೆಯ ಮೂಲಕ ಭೈರಪ್ಪನವರು ಹಿಂದೂಸ್ತಾನಿ ಸಂಗೀತದ ಒಳ ನೋಟದ ಪರಿಚಯ ಮಾಡಿಕೊಡುತ್ತಾರೆ. ಇಲ್ಲಿ ಗುರು-ಶಿಷ್ಯ ಪರಂಪರೆಯ ಚಿತ್ರಣವಿದೆ; ಘರಾಣೆಗಳ ವಿವರವಿದೆ. ಹಲವು ರಾಗಗಳ ವಿವರ, ರಾಗಗಳ ರಸ, ಸಂಗೀತಗಾರ ಹೇಗೆ ಸ್ವರಗಳ ಹಂದರದಲ್ಲಿ ಸ್ವಯಂ ರಸಾಸ್ವಾಧನೆ ಮಾಡುತ್ತ, ಶ್ರೋತೃಗಳಿಗೂ ಉಣಬಡಿಸುತ್ತಾನೆ ಎಂದು ತೋರಿಸುತ್ತಾರೆ. ಜೊತೆಗೇ, ಕಲಾವಿದರ ನಡುವಿನ ಈರ್ಷ್ಯೆ, ಅನಾರೋಗ್ಯಕರ ಸ್ಪರ್ಧೆ ಇವನ್ನೆಲ್ಲ ಕಾಣಬಹುದು. 

ಮೋಹನಲಾಲನ ವಿಷಯ ಲಂಪಟತನ, ಅವಕಾಶವಾದಿ ಮನೋಭಾವ ಸಂಗೀತಕ್ಕಿಂತಲೂ ಮುಖ್ಯವಾದ ವಸ್ತುವಾಗಿ ಕಾಣಬಹುದು. ಆತ ಮಧು ಷಾ ಎಂಬ ಶಿಷ್ಯೆಯನ್ನು ತನ್ನ ಆಪ್ತ ಶಿಷ್ಯೆಯೆಂದು ಕರೆಯುತ್ತ, ಸಂಗೀತದ ಸಂಪೂರ್ಣ ಜ್ಞಾನವನ್ನು ಕೊಡುವ ನೆಪದಲ್ಲಿ ಶೋಷಿಸುವುದನ್ನು ಓದಿದಾಗ, ಇತ್ತೀಚಿಗೆ ಸುದ್ದಿಯಾದ ಸಂಗೀತ ಲೋಕದ ಲೈಂಗಿಕ ಶೋಷಣೆಯ ಕಥೆಗಳ ನೆನಪಾಗುವುದು ಸಹಜ. ಮೋಹನಲಾಲ ತನ್ನ ವೃತ್ತಿ ಜೀವನದ ಮಧ್ಯದಲ್ಲೇ ಮನೋಹರಿ ದಾಸ್ ಎಂಬ ನರ್ತಕಿಯ ಹಿಂದೆ ಓಡಿ  ಹೋಗುತ್ತಾನೆ. ಆಕೆ ತನ್ನ ವೃತ್ತಿಯಲ್ಲಿ ಮುಂದೆಬರಲು ಪಟ್ಟ ಕಷ್ಟಗಳು, ಶೋಷಣೆಗೆ ಒಳಗಾದ ಸಂಗತಿಗಳು; ತದನಂತರ ಆಕೆಯೇ ಸಹ ನರ್ತಕರನ್ನು ಶೋಷಿಸುವ ಪ್ರಸಂಗಗಳು ಕಥೆಯನ್ನು ನೈಜವಾಗಿಡಲು ಸಹಕರಿಸುತ್ತವೆ. 

ಈ ಕಾದಂಬರಿಯಲ್ಲೂ, ಭೈರಪ್ಪನವರ ಇತರ ಕಾದಂಬರಿಗಳಂತೇ ಹಿಂದಿರುವ ಸಂಶೋಧನೆಯ ಆಳ, ವಿಷಯದ ಮೇಲಿರುವ ಹಿಡಿತ, ಪಾತ್ರಗಳು ತಂದಿಡುವ ನೈತಿಕ ಸಂಧಿಗ್ತತೆ ಗಹನವಾಗಿವೆ. ಸಂಗೀತ ಪ್ರಿಯರೆಲ್ಲ ಓದಬೇಕಾದ ಕೃತಿಯೆಂದು ನನ್ನ ಅನಿಸಿಕೆ.  

ಭೈರಪ್ಪನವರೊಡನೆ ಸಹಚಾರ: ಡಾ.ಮತ್ತೂರು ನಂದಕುಮಾರ್ 

ಚಿತ್ರಕೃಪೆ : ಕೇಶವ ಕುಲಕರ್ಣಿ

ಇಂದು ಅನಿವಾಸಿಯ ಸದಸ್ಯರು ಸುಂದರವಾಗಿ ಭೈರಪ್ಪನವರ ಕಾದಂಬರಿಗಳ ಬಗ್ಗೆ ವಿಶ್ಲೇಷಣೆ, ಅನಿಸಿಕೆಗಳನ್ನು ಹಂಚಿಕೊಂಡರು. ಭೈರಪ್ಪನವರು ನನಗೆ ಆತ್ಮೀಯರು. ಅವರು ಮಿತಭಾಷಿ. ಎಂದೂ ಜನರ ಗಮನದ ಕೇಂದ್ರದಿಂದ ದೂರವುಳಿಯುತ್ತಿದ್ದರು. ಅವರ ಪ್ರಥಮ ಭೆಟ್ಟಿ, ನಾನು ಮೈಸೂರಿನಲ್ಲಿ ವ್ಯಾಸಂಗಕ್ಕೆ ಅಣ್ಣನ ಮನೆಯಲ್ಲಿದ್ದಾಗ. ಅಲ್ಲಿ ನಡೆದ ಕಾರ್ಯಕ್ರಮಕ್ಕೆ ದಿನವೂ ಬಂದು ಕುಳಿತು, ಕೇಳಿ ಸದ್ದಿಲ್ಲದೇ ಮರೆಯಾಗುತ್ತಿದ್ದರು. ಎಲ್ಲವನ್ನೂ ಗಮನವಿಟ್ಟು ಕೇಳುತ್ತಿದ್ದರು, ನೋಡುತ್ತಿದ್ದರು. ಸ್ಪಂಜಿನಂತೆ ವಿಚಾರಗಳನ್ನು ಹೀರಿಕೊಳ್ಳುತ್ತಿದ್ದರು. ಸಾಮಾನ್ಯರೊಡನೆ ಸಾಮಾನ್ಯರಾಗಿ ಬೆರೆಯುತ್ತಿದ್ದರು. ಪ್ರವಾಸಕ್ಕೆ ಹೋದಾಗ ಸ್ಥಳಿಯರೊಂದಿಗೇ ಉಳಿದು, ಅಲ್ಲಿನ ಆಚಾರ, ವಿಚಾರ, ವೈಶಿಷ್ಟ್ಯತೆಗಳನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದರೇ ಹೊರತು, ಹೊಟೇಲುಗಳಲ್ಲಿ ತಂಗಿ ನೀರ ಮೇಲಿನ ಕಮಲದ ಎಲೆಯಂತಿರುತ್ತಿರಲಿಲ್ಲ. ಮತ್ತೂರಿಗೆ ಬಂದಾಗ, ನಮ್ಮ ಮನೆಯಲ್ಲೇ ಅವರ ವಾಸ್ತವ್ಯ. ದಿನವೂ ಬೆಳಗ್ಗೆ ನನ್ನೊಡನೆ ಊರಿನ ಕೆರೆಯ ಸುತ್ತ ವಾಕಿಂಗ್ ಹೋಗಲೇ ಬೇಕಿತ್ತು. ಆಗ ಎದುರಾಗುವ ಜನರೊಡನೆ ಕಳೆಯುತ್ತಿದ್ದರು; ವಯಸ್ಸಿನ ಭೇದವಿಲ್ಲದೇ ಚರ್ಚೆ ಮಾಡುತ್ತಿದ್ದರು. ಲಂಡನ್ನಿಗೆ ಬಂದಾಗ ಕೂಡ ನಮ್ಮ ಮನೆಯಲ್ಲೇ ತಂಗುತ್ತಿದ್ದರು. ಆಗ ಅವರು ನನ್ನೊಡನೆ ನೀರನ್ನು ಯಾಕೆ ಪೋಲು ಮಾಡಬಾರದು ಎಂಬ ವಿಷಯವನ್ನು ವರ್ಣಿಸಿದ ನೆನಪು ಮನದಲ್ಲಿ ತೇವವಾಗಿಯೇ ಇದೆ. ದಿನವೂ ವಾಕಿಂಗ್ ಹೋದಾಗ ಹಲವಾರು ವಿಷಯಗಳ ಚರ್ಚೆ ಆಗುತ್ತಿತ್ತು. ಅವರು ಮಂದ್ರ ಬರೆಯುವ ಮೊದಲು ಬೇಕಿದ್ದ ಸಾಮಗ್ರಿಯನ್ನು ಕಲೆ ಹಾಕಲು ನಾನು ಸ್ವಲ್ಪ ಸಹಾಯ ಮಾಡಿದ್ದನ್ನು ಅವರು ಮುನ್ನುಡಿಯಲ್ಲಿ ಉಲ್ಲೇಖಿಸಿದ್ದು  ನನಗೆ ಹೆಮ್ಮೆಯ ಸಂಗತಿ – ಹೂವಿನೊಡನೆ ನಾರೂ ದೇವರ ಮುಡಿಗೇರಿದಂತೆ. ಅವರು ನಂಗೆ ತುಂಬಾ ಆತ್ಮೀಯರು. ಆತ್ಮೀಯರ ಬಗ್ಗೆ ಮಾತನಾಡುವಾಗ ಕಾಲ ಕಳೆದ ಅರಿವೇ ಇರುವುದಿಲ್ಲ.  ಇವತ್ತಿನ ಭೈರಪ್ಪನವರ ಸ್ಮರಣೆ ಅರ್ಥಪೂರ್ಣವಾಗಿದೆ. ಅವರನ್ನು ಓದಬೇಕು, ಓದಿ ಅವರ ನೆನಪನ್ನು ಹಸಿರಾಗಿಡಬೇಕು. 

ಆಂಗ್ಲನಾಡಿನಲ್ಲಿ ಕರುನಾಡ ಸೊಗಡು: ದೀಪಾವಳಿ ಹಾಗೂ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ – ನಾಗರಾಜ ಬಸವರಾಜು

 ದೀಪಗಳ ಹಬ್ಬ ದೀಪಾವಳಿ ಮತ್ತು ನಮ್ಮೆಲ್ಲರ ಹೆಮ್ಮೆಯ ನಾಡಹಬ್ಬ ಕರ್ನಾಟಕ ರಾಜ್ಯೋತ್ಸವ — ಈ ಎರಡೂ ಹಬ್ಬಗಳು ಅನಿವಾಸಿ ಕನ್ನಡಿಗರಿಂದ ನವೆಂಬರ್ ೦೮, ೨೦೨೫ರಂದು ಮಿಲ್ಟನ್ ಕೀನ್ಸ್‌ನಲ್ಲಿ ಅದ್ಧೂರಿಯಾಗಿ ಆಚರಿಸಲ್ಪಟ್ಟವು. ದೂರದ ಬ್ರಿಟನ್ ನೆಲದಲ್ಲಿ, ಅನಿಕೇತನ ಮಿಲ್ಟನ್ ಕೀನ್ಸ್ (ಸ್ಥಳೀಯ ಸಮುದಾಯ ಸಂಸ್ಥೆ) ಮತ್ತು ೪೦ ವರ್ಷಗಳ ಸುದೀರ್ಘ ಇತಿಹಾಸವಿರುವ ಪ್ರತಿಷ್ಠಿತ ಕನ್ನಡ ಬಳಗ ಯು.ಕೆಯ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮವು ಕನ್ನಡಿಗರ, ಕರುನಾಡ ಕುಡಿಗಳ ಹೃದಯಗಳನ್ನು ಬೆಸೆದ ಬೃಹತ್ ಸಾಂಸ್ಕೃತಿಕ ಸೇತುವೆಯಾಗಿತ್ತು.

 ಆದಿಪೂಜಿತ ವಿನಾಯಕನ ಆರಾಧನೆಯೊಂದಿಗೆ, ಉಪಸ್ಥಿತರಿದ್ದ ಗೌರವಾನ್ವಿತ ಅತಿಥಿಗಳಾದ ಡಾ. ಎಂ. ಎನ್. ನಂದಕುಮಾರ್ ಹಾಗೂ ಗಾಯಕ ಶ್ರೀ ಸಂತೋಷ್ ವೆಂಕಿಯವರು ಎರಡೂ ಸಂಘ ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ವಿದೇಶ ನೆಲದಲ್ಲಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ರೀತಿಯ ಆಚರಣೆಗಳು ಮೈಲಿಗಲ್ಲು. ಯುವ ಪೀಳಿಗೆಗೆ ನಮ್ಮ ನಾಡು-ನುಡಿಯ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಲಾದ ಈ ಉತ್ಸವಕ್ಕೆ ಅಪಾರ ಸಂಖ್ಯೆಯ ಸ್ಥಳೀಯ ಕನ್ನಡಿಗರು ಹಾಗು ದೂರದೂರಿನ ಕನ್ನಡ ಬಳಗದ ಸದಸ್ಯರು ಕುಟುಂಬ ಸಮೇತ ಆಗಮಿಸಿ ಕರುನಾಡ ಸೊಗಡನ್ನು ಮೆರೆಸಿದರು. ಕಾರ್ಯಕ್ರಮದ ಗೌರವ ಅತಿಥಿ, ಡಾ. ಎಂ. ಎನ್. ನಂದಕುಮಾರ್ (ಕಾರ್ಯನಿರ್ವಾಹಕ ನಿರ್ದೇಶಕರು, ಭಾರತೀಯ ವಿಧ್ಯಾ ಭವನ, ಲಂಡನ್) ನೆರೆದವರನ್ನು ಉದ್ದೇಶಿಸುತ್ತ, ಈ ರೀತಿಯ ಕಾರ್ಯಕ್ರಮಗಳು ಮತ್ತು ಕನ್ನಡ/ಕರ್ನಾಟಕ ಕುರಿತಾದ ಕಾರ್ಯಕ್ರಮಗಳು ನಾಡಿನಿಂದ ದೂರದ ದೇಶದದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಸೇತುವೆಯಾಗಿ, ಕರ್ನಾಟಕ ಭಾಷೆಗಳ, ಕಲಾ ಸಂಸ್ಕೃತಿ ಪರಂಪರೆಗಳ ಪರಿಚಯವಾಗಿ, ಈ ಅಭಿರುಚಿಗಳ ಬೆಳವಣಿಗೆಗೆ ಪೂರಕವಾಗಿರಲಿ ಎಂದು ಆಶಿಸಿದರು.

 ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಹಲವಾರು ಕಲಾವಿದರ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು. ಮಕ್ಕಳು, ಯುವಕರು ಮತ್ತು ಹಿರಿಯರು ಜಾನಪದ, ಶಾಸ್ತ್ರೀಯ ಸಂಗೀತ, ನೃತ್ಯ ಮತ್ತು ನಾಟಕಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಛದ್ಮವೇಶ, ಜನಪದ ಹಾಗು ಸಿನಿಮಾ ನೃತ್ಯಗಳು, ವಯಸ್ಕರ ಗಾಯನ, ದಂಪತಿಗಳ ಜೋಡಿ ನೃತ್ಯ, ನವರಸ ರೂಪಕ, ರಾಮಾಯಣ ಸಂಗೀತ ನೃತ್ಯ ಹಾಗು ಕರುನಾಡ ವೈಭವ ಕುರಿತಾದ ಫಿನಾಲೆ ನೃತ್ಯ ಸಭಿಕರ ಮನ ಸೂರೆಗೊಂಡವು. ಪ್ರತಿಯೊಂದು ಪ್ರದರ್ಶನವೂ ಕನ್ನಡಿಗರ ಕಲಾಭಿರುಚಿ ಮತ್ತು ನಾಡಿನ ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾದವು. ದೀಪಾವಳಿಯ ಬೆಳಕು ಮತ್ತು ರಾಜ್ಯೋತ್ಸವದ ಕೆಂಪು-ಹಳದಿ ವರ್ಣಗಳು, ಎಲ್ಲರ ಸಾಂಪ್ರಾದಾಯಿಕ ಉಡುಗೆ ತೊಡುಗೆಗಳು ಹಾಗೂ ಅದಕ್ಕನುಗುಣವಾಗಿ ಒಳಾಂಗಣ ಅಲಂಕಾರಗಳು ಸಮಾರಂಭದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದವು.

ಸ್ಮರಣಾಂಜಲಿ: ಕನ್ನಡದ ದಿಗ್ಗಜರಿಗೆ ನಮನ

ಈ ವರ್ಷ ನಮ್ಮಿಂದ ದೂರವಾದ, ಈ ಹಿಂದೆ ಕನ್ನಡ ಬಳಗ ಯು ಕೆ ಗೆ ಆಹ್ವಾನಿತ ಅತಿಥಿಯಾಗಿ ಬಂದಿದ್ದ ನಾಡೋಜ ಡಾ. ಎಸ್. ಎಲ್. ಭೈರಪ್ಪ ಮತ್ತು ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಲ್ಲದೆ, ಕನ್ನಡ ಬಳಗ ಯು.ಕೆಯ ಬೆಳವಣಿಗೆಗೆ ಶ್ರಮಿಸಿ, ಇತ್ತೀಚೆಗೆ ಅಗಲಿದ ಹಿರಿಯ ಸದಸ್ಯರ ಆತ್ಮಗಳಿಗೆ ಒಂದು ನಿಮಿಷದ ಮೌನ ಮತ್ತು ನುಡಿನಮನದ ಮೂಲಕ ಗೌರವ ಸಲ್ಲಿಸಲಾಯಿತು. ತಮ್ಮ ನೆಚ್ಚಿನ ಹಿರಿಯರನ್ನು ನೆನೆದು ಅನೇಕರು ಭಾವುಕರಾದರು.

ಬಹುಭಾಷಾ ಗಾಯಕ ಶ್ರೀಯುತ ಸಂತೋಷ್ ವೆಂಕಿ ಅವರ ಸಂಗೀತ ರಸಸಂಜೆ ಮೂಲಕ ನೆರೆದಿದ್ದ ಚಿಣ್ಣರು, ಯುವಕರು ಹಾಗೂ ಹಿರಿಯರೆಲ್ಲ ಕುಣಿದು ಕುಪ್ಪಳಿಸುವಂತೆ ಮಾಡಿದರು. ಈ ಕಾರ್ಯಕ್ರಮ ಕೇವಲ ಹಬ್ಬದ ಆಚರಣೆಯಾಗಿರದೆ, ಹೊರನಾಡ ಕನ್ನಡಿಗರು ತಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಂಡು, ಹೊಸ ಪೀಳಿಗೆಗೆ ಕರುನಾಡ ವೈಭವಯುತ ಸಂಸ್ಕೃತಿಯ, ಪರಂಪರೆಯ ಮಹತ್ವವನ್ನು ತಿಳಿಸುವ ಶ್ಲಾಘನೀಯ ಪ್ರಯತ್ನವಾಯಿತು.

‘ಭೈರಪ್ಪನವರಿಗೆ ಶ್ರದ್ಧಾಂಜಲಿ’ ಕಾರ್ಯಕ್ರಮಕ್ಕೆ ನೆರೆದ ಸಭಿಕರು – ಚಿತ್ರಕೃಪೆ ಆನಂದ ಕೇಶವಮೂರ್ತಿ

ಒಂದು ಸಿನಿಮಾ ಕಥೆ

ಓಟಿಟಿಯ ಕಾಲದಲ್ಲಿ ಥ್ರಿಲ್ಲರ್, ಸಸ್ಪೆನ್ಸ್ , ಕ್ರೈಂ ಅನ್ನೋ ಜಾನ್ರದಲ್ಲಿ ಹಾಗು vfx ಗಳ ಮಾಯಾಲೋಕದಲ್ಲಿ ಮುಳುಗಿದ ನಾನು ಹಾಗೆ ಸ್ಕ್ರಾಲ್ ಮಾಡುತ್ತಿದ್ದಾಗ ಅಕಸ್ಮಾತಾಗಿ ಸಿಕ್ಕ ಸಿನಿಮಾದ ಬಗ್ಗೆ ಒಂದು ವರದಿ ಈ ವಾರ ನಿಮ್ಮೆಲ್ಲರ ಓದಿಗಾಗಿ.
ಸಿನಿಮಾದ ಟೆಕ್ನಿಕಲ್ ವಿವರಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಆದರೆ ಅಲ್ಲಿರುವ ಪಾತ್ರಗಳು ನನ್ನ ಆಲೋಚನೆಯನ್ನು ಬದಲಿಸಿದೆ.
– ಸಂ

ನಮಸ್ತೆ ಶಾರದಾ ದೇವಿ ಕಾಶ್ಮೀರ ಪುರವಾಸಿನಿ
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿಮೆ

ಈ ಶ್ಲೋಕವನ್ನು ಬಾಲ್ಯದಿಂದಲೇ ಕೇಳುತ್ತಿದ್ದೇವೆ. ಕಾಶ್ಮೀರ ವಿದ್ಯೆ ಹಾಗು ಜ್ಞಾನದ ಉತ್ತುಂಗ ಹಾಗು ವಿಶಾಲ ದೈವಿಕ ಹಿಮಾಲಯಕ್ಕೆ ಆಶ್ರಯ ಕೊಟ್ಟಂತಹ ಒಂದು ಅದ್ಭುತ ಪ್ರದೇಶ.
ಕಾಶ್ಮೀರದ ಸೌನ್ದರ್ಯದ ಬಗ್ಗೆ ಬಹಳಷ್ಟು ಕವಿಗಳು ವಿಭಿನ್ನ ಬಗೆಯಲ್ಲಿ ವರ್ಣಿಸಿದ್ದಾರೆ.
ಇತಿಹಾಸದ ಕಥೆಗಳಲ್ಲಿ ಹಿಮಾಲಯ ಬಗ್ಗೆ ಹಾಗು ಶ್ರೀಶಂಕರಾಚಾರ್ಯರು ಸ್ಥಾಪಿಸಿದ ಶಾರದಾ ಪೀಠದ ಬಗೆಗಿನ ಕಥೆಗಳು ನಮ್ಮನ್ನು ಕಾಶ್ಮೀರವನ್ನು ಪೂಜಿಸುವ ಪುಣ್ಯ ಕ್ಷೇತ್ರವನ್ನಾಗಿಸಿದರೆ ಮತ್ತೊಂದೆಡೆ ಸಿನೆಮಾಗಳು ಎಲ್ಲ ಋತುವನ್ನು ವಿಶೇಷವಾಗಿ ಹಿಮ ಪರ್ವತಗಳ ಮಡಿಲಲ್ಲಿ ಹರಡಿರುವ ಹಸಿರಿನ ಕಣಿವೆಗಳು, ಚಳಿಗಾಲದಲ್ಲಿ ಮುತ್ತಿನಂತೆ ಹೊಳೆಯುವ ಹಿಮಕಣಗಳು, ಬೇಸಿಗೆಯಲ್ಲಿ ಬಣ್ಣ ಬಣ್ಣದ ಪುಷ್ಪಗಳಿಂದ ಅರಳಿದ ತೋಟಗಳು—ಇವೆಲ್ಲವನ್ನು ಎಷ್ಟು ಅದ್ಭುತವಾಗಿ ಸೆರೆ ಹಿಡಿದು ನೋಡುವವರಿಗೆ ಒಂದು ಅಲೌಕಿಕ ಅನುಭವನ್ನು ಕೊಡುವುದಲ್ಲದೆ ಅಲ್ಲಿಗೆ ಆ ತಕ್ಷಣ ಹೋಗುವ ಹಂಬಲವನ್ನುಂಟುಮಾಡುತ್ತದೆ.
ದಾಲ್ ಸರೋವರದ ನೀರಿನ ಮೇಲೆ ತೇಲುವ ಹೌಸ್‌ಬೋಟ್‌ಗಳು ಮತ್ತು ಶಿಕಾರಾಗಳ ಸುಂದರ ನೋಟ ಹೃದಯವನ್ನು ಶಾಂತಗೊಳಿಸುತ್ತವೆ. ಚೀನಾರ್ ಮರಗಳ ಕೆಂಪು ಎಲೆಗಳು, ಮೋಡಗಳನ್ನು ಮುಟ್ಟುವ ಪರ್ವತ ಶಿಖರಗಳು ಮತ್ತು ಕಣಿವೆ ಮೇಲೆ ಹರಡುವ ಮಳೆಯ ಪರಿಮಳನನ್ನ ಕೂತಲ್ಲಿಯೇ ಅನುಭವಿಸುವ ದೃಶ್ಯಗಳು ನಮ್ಮನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ.
“गर फिरदौस बर-रूऐ ज़मीं अस्त
हमी अस्तो, हमी अस्तो, हमी अस्त”

ಸಿನಿಮಾ ಮೂಲಕವೇ ಈ ಪ್ರದೇಶವನ್ನು ಬಹಳಷ್ಟು ಜನ ನೋಡಿದ್ದೇವೆ.
ನನ್ನ ಮೊದಲ ಕಾಶ್ಮೀರದ ದೃಶ್ಯ ಶಮ್ಮಿ ಕಪೂರ್ ‘ಯಾಹೂ’ ಎಂದು ಜೋರಾಗಿ ಹಿಮಪಾತದಲ್ಲಿ ಬಿದ್ದು ಹಾಡೋದು ನಂತರ ಕಾಶ್ಮೀರ ಕಿ ಕಲಿ ಚಿತ್ರದಲ್ಲಿ ಶರ್ಮಿಳಾ ಟ್ಯಾಗೋರ್ ನ ಸುಂದರ ಫೇರನ್ ಹಾಗು ಶಿಕಾರದಲ್ಲಿ ಹೂವುಗಳ ಮಧ್ಯೆ ಹಾಡೋದೆ ಕಣ್ಣು ಮುಂದೆ ಬರುತ್ತದೆ.
ಕಾಶ್ಮೀರವನ್ನು ಒಂದು ಕನಸುಗಳ ಲೋಕದ ರೂಪದಲ್ಲಿ ನೋಡುತ್ತಿದ್ದೆ. ಅಲ್ಲಿ ಹೋಗುವ ಆ ಸೌಂದರ್ಯವನ್ನು ಅನುಭವಿಸುವ ನನ್ನ ಕನಸು ಇನ್ನು ಕನಸಾಗಿಯೇ ಉಳಿದಿದೆ.
ಒಂದೆಡೆ ಕಾಶ್ಮೀರ ಒಂದು ಮಾಯಾಲೋಕವಾದರೆ ಮತ್ತೊಂದೆಡೆ ಅದೊಂದು ನಿಗೂಢ ನಗರಿ ಕೂಡ.
ಭಾರತದ ಸ್ವಾತಂತ್ರದ ಸಮಯದಿಂದ ಇಂದಿನ ತನಕ ರಾಜಕೀಯ ಗೊಂದಲ ಮತ್ತು ದ್ವಂದ್ವಗಳು ಮಧ್ಯೆ ಒಂದು ಸ್ಥಿರ ಪರಿಸ್ಥಿತಿ ಈ ಪ್ರದೇಶದಕ್ಕೆ ದೊರಕಿಸಿಕೊಡುವ ಹೋರಾಟ ದಶಕಗಳಿಂದ ನಡೆಯುತ್ತಲೇಯಿದೆ. ಭಗೀರಥನ ಪ್ರಯತ್ನದಿಂದ ಆಕಾಶದ ಆ ಗಂಗೆಯು ಧರೆಗೆ ಬಂದು ಇಲ್ಲಿ ನೆಲಸಿ ಜನರನ್ನು ಹರಿಸಿದ್ದಾಳೆ, ಆದರೆ ಭಗೀರಥನಂತಹ ವ್ಯಕ್ತಿಯೊಬ್ಬ ಬಂದು ಶಾಂತಿಯೆಂಬ ಗಂಗೆಯನ್ನು ಈ ಭೂಮಿಯಲ್ಲಿ ಯಾವಾಗ ಹರಿಸುತ್ತಾರೋ ಎಂಬ ಹಂಬಲ ನನಗೂ ಇದೆ..
ಅದನ್ನು ಮಡಿಯ ಪ್ರದೇಶವನ್ನಾಗಿ ಮಾಡಿದ್ದೇವೆ. ಈ ಸ್ವರ್ಗಲೋಕವನ್ನು ಭಯೋತ್ಪಾದನೆ ಹಾಗು ಆತಂಕದ ತಾಣ ಎನ್ನುವ ದೃಶ್ಯಗಳು ನಂತರ ಬಂದಂತಹ ಜನಪ್ರಿಯ ರೋಜಾ, ದಿಲ್ ಸೆ, ಕಾಶ್ಮೀರ ಫೈಲ್ಸ್ ಚಲನ ಚಿತ್ರಗಳು ಮೂಲಕ ಕಾಶ್ಮೀರವನ್ನು ಮತ್ತಷ್ಟು ಮೂಲೆಗೆ ಒತ್ತುವಂತೆ ಮಾಡಿತು.
ಕೆಲ ವರ್ಷಗಳ ಹಿಂದೆ ಬಂದ ವಿಶೇಷ ಸಿನಿಮಾ ‘ರಾಜಿ’ ಕಾಶ್ಮೀರಿ ಹೆಣ್ಣಿನಲ್ಲಿರುವ ದೇಶಪ್ರೇಮ ಧೃಢತೆ ಹಾಗು ಶೌರ್ಯದ ಪರಿಚಯ ಮಾಡಿಸಿತು.
ಭಾರತ ಸರ್ಕಾರದ ಹಾಗು ಗಡಿಯಾಚೆಗಿನ ದೇಶಗಳ ಮಧ್ಯೆಯಿರುವ ಮತ ಭೇಧಗಳ ಫಲ ಸ್ವರೂಪ ಅಲ್ಲಿಯ ಮೂಲದವರಿಗೆ ನೆಲೆಯಿಲ್ಲದಂತಾಗಿದೆ. ಎಂಬತ್ತರ ದಶಕದ ಹಿಮಾಲಯ್ ದರ್ಶನ ಧಾರವಾಹಿ ಒಂದು ಒಳ್ಳೆಯ ಉದ್ದೇಶದಿಂದ ಮಾಡಿದಂತಹ ಪ್ರಯತ್ನ. ಅಲ್ಲಿಯವರ ಜೀವನ ದಿನನಿತ್ಯದ ವ್ಯವಸಾಯ ಅಷ್ಟೇ ಅಲ್ಲ ಅಲ್ಲಿಯ ಕಲೆ ಹಾಗು ಪ್ರತಿಭೆಯ ಬಗ್ಗೆ ಭಾರತದ ಬೇರೆ ರಾಜ್ಯದ ಜನರ ಪರಿಚಯವಿರುವಂತೆ ಕಾಶ್ಮೀರಿ ನಾಗರೀಕರ ಪರಿಚಯ ಮಾಡುವ ಇತ್ತೀಚಿಗೆ ಬಿಡುಗಡೆಯಾದ ‘ ಸಾಂಗ್ಸ್ ಆಫ್ ಪ್ಯಾರಡೈಸ್’ ಒಂದು ಸರಳ ಸ್ವಚ್ಛ ಸುಂದರ ಜೀವನ ಚರಿತ್ರೆ ಆಧಾರಿತ ಚಲನ ಚಿತ್ರ. ನಾನು ಸಿನಿಮಾ ವಿಮರ್ಶಕಳಲ್ಲ. ಸಿನಿಮಾದ ತಾಂತ್ರಿಕ ಸೂಕ್ಷ್ಮತೆಗಳ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಒಂದು ಸಿನಿಮಾ ನೋಡಿದರೆ ಅದು ಬಹುಕಾಲ ನಿಮ್ಮ ಮನಸಿನ್ನಲ್ಲಿ ಉಳಿದರೆ ಆ ಸಿನಿಮಾದಲ್ಲಿ ಏನೋ ವಿಶೇಷತೆ ಇರಬೇಕು ಎಂಬ ಭಾವನೆ ನನ್ನದು. ಒಂದು ಸಿನಿಮಾ ನೋಡಲು ಯೋಗ್ಯ ಅನ್ನಿಸಿಕೊಳ್ಳಲು ಮುಖ್ಯ ಅಂಶವೇನೆಂದರೆ ಕಥೆ ಹಾಗು ಸಂಭಾಷಣೆ. ಇವೆರಡರ ಹಿಡಿತವಿರಬೇಕು. ಮಾತಿಗಳು ಮನಸ್ಸು ಮುಟ್ಟುವಂತಿರವಬೇಕು.ಈ ಸಿನಿಮಾದಲ್ಲಿ ಕೆಲ ಸಂಭಾಷಣೆ ನನಗೆ ಹಾಗೆನಿಸಿದವು.

ಪದ್ಮಶ್ರೀ ರಾಜ್ ಬೇಗಮ್ ಹೆಸರು ನಾನು ಅದಕ್ಕೆ ಮುಂಚೆ ಕೇಳಿರಲಿಲ್ಲ. ‘ಗಾನ ಕೋಗಿಲೆ ‘, ‘ಮಾಧುರ್ಯದ ಅರಸಿ’ ಹೀಗೆ ಹತ್ತು ಹಲವು ಬಿರುದಗಳು ಅಷ್ಟೇ ಅಲ್ಲ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತೆ ಕೂಡ . ರಾಜ್ ಬೇಗಮ್ ನ ಜೀವನ ಕಥೆ ಒಂದು ಆದರ್ಶ. ಪರಕೀಯರ ದಾಳಿ ಸದಾ ಭಯೋತ್ಪಾದನೆಯಲ್ಲಿ ಮುಳುಗಿದ ವಾತಾವರಣದಲ್ಲಿ ವ್ಯಕ್ತಿ, ವ್ಯಕ್ತಿತ್ವ, ಕಲೆ, ಪ್ರತಿಭೆ ಇವೆಲ್ಲವನ್ನು ಸಾಧಿಸುವುದು ಬಿಡಿ, ಊಹಿಸಿಕೊಳ್ಳುವುದು ಕೂಡ ಒಂದು ಕನಸೇ !
ಅಲ್ಲಿ ಪುರುಷರ ಸಾಮ್ರಾಜ್ಯ ! ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಸುಡು ಬೆಂಕಿಯಲ್ಲಿ ಒಂದು ಸುಂದರ ಬಳ್ಳಿಯಾಗಿ ನಾಜೂಕಾದ ಕುಸುಮಗಳ ಹೂವಿನ ರೀತಿಯಲ್ಲಿ ಹಬ್ಬಿ ಸಂಗೀತದಂತಹ ತಾಂತ್ರಿಕ ಕಲೆಯ ಸೂಕ್ಷ್ಮಗಳನ್ನು ತಿಳಿದು ಅದನ್ನು ಕಲಿತು ರಸ ರಾಗಲಹರಿಯ ಸುಗಂಧವನ್ನು ಪಸರಿಸುತ್ತಾ ಅದನ್ನೇ ವೃತ್ತಿ ಮಾಡುವುದಲ್ಲದೆ, ತಾನಿರುವ ದೇಶದ ಪರಿಸ್ಥಿಯಲ್ಲಿ ಹೋರಾಡುವುದಕ್ಕೆ ಮತ್ತೊಂದು ಮಟ್ಟದ ಧೈರ್ಯ ಹಾಗು ಮನಸ್ಥಿತಿ ಹೊಂದಿದ ದಿಟ್ಟ ಮಹಿಳೆ.

ಸಿನೆಮಾಗಳಲ್ಲಿಯೇ ಪುನಃ ಪುನಃ ಉಪಯೋಗಿಸುವ “when you want something, all the universe conspires in helping you to achieve it.”
ಈ ನುಡಿಯು ಈ ಕಥೆಯಲ್ಲಿ ನೈಜ ರೂಪ ತಾಳಿದೆ.
ಒಂದು ಬಡ ಕುಟುಂಬದಿಂದ ಬಂದ ಸಾಧಾರಣ ಮಹಿಳೆ ಒಬ್ಬ ಸಂಗೀತಗಾರನ ಮನೆಕೆಲಸದವಳಾಗಿ ದುಡಿಯುತ್ತಿದ್ದಾಗ , ಆ ಸಂಗೀತಕಾರನು ಅವರ ಪ್ರತಿಭೆಯನ್ನು ಅಕಸ್ಮಾತಾಗಿ ಗುರುತಿಸಿ ಅವಳಿಗೆ ತನ್ನ ಜ್ಞಾನವನ್ನು ಧಾರೆಯೆರೆಯುವುದಲ್ಲದೆ ಅವಳಿಗೆ ಅವಕಾಶಗಳನ್ನು ಒದಗಿಸಿ ಕೊಟ್ಟು ಒಂದು ಅದ್ಭುತ ಕಲಾಕಾರಳನ್ನಾಗಿ ಮಾಡುವುದರಲ್ಲಿ ಬಹಳ ಶ್ರಮಿಸುತ್ತಾನೆ.
ಇದಕ್ಕೆ ಪೂರಕವಾಗಿ ಸುತ್ತಲಿನ ಜನಗಳಿಂದ ಅವಳಿಗೆ ಸಿಕ್ಕ ಪ್ರೋತ್ಸಾಹ, ಅವಳ ತಂದೆಯ ಸಹಕಾರ ಈ ದಿಕ್ಕಿನಲ್ಲಿ ಅವಳಿಗೆ ಮೊದಲ ಹೆಜ್ಜೆ ಇಡಲು ಧೈರ್ಯ ತಂದಿತು. ನಂತರ ಬಂದ ಪುರುಷರು ಅಭಿಮಾನಿ ಹಾಗು ಪ್ರೇಮಿ ನಂತರ ಪತಿ ಹಾಗೆ ಅವಳು ಕಾಶ್ಮೀರ ರೇಡಿಯೋಗೆ ಕೆಲಸ ಮಾಡುವ ಅಲ್ಲಿನ ಸಹೋದ್ಯೋಗಿಗಳು ತುಂಬಿದ ಉತ್ಸಾಹ, ಹುಮ್ಮಸ್ಸು ಅವಳಿಗೆ ಆಕಾಶದೆತ್ತರ ಬೆಳೆಯಲು ಸಹಕಾರಿಯಾಯಿತು.
ಅಷ್ಟೇ ಅಲ್ಲ ತನಗೆ ಅಥವಾ ಅವಳ ಸುತ್ತಮುತ್ತಲಿನ ಜನರಿಗೆ ಆಗುವ ಅನ್ಯಾಯವನ್ನು ವಿರೋಧಿಸಿ ನ್ಯಾಯ ದೊರಕಿಸುವಲ್ಲಿ ಅವರ ಸ್ವಚ್ಛಂದ ಭಾವನೆ ಶ್ಲಾಘನೀಯ.
ಅವಳ ತಾಯಿಯು ಸಾಮಾಜಿಕ ಕಟ್ಟುಪಾಡಿನ ದಿಗ್ಬಂಧನದಲ್ಲಿ ಸಿಲುಕಿ ಮಗಳ ಪ್ರತಿಭೆ ಕಂಡರೂ ಕಾಣದಂತೆ ಅವಳನ್ನು ಕುಗ್ಗಿಸುವ ನಡುವಳಿಕೆ ಹಾಗು ಕಿರಿದಾದ ಚಿಂತನೆ ರಾಜ್ ಬೇಗಮ್ ಪ್ರತಿಭೆಯನ್ನು ತಡೆಯಲಾಗಲಿಲ್ಲ.
ಅಕ್ಕಪಕ್ಕದ ಮನೆಯವರ ಅವಹೇಳನೆ ಹಾಗು ಒಂದು ಹೆಣ್ಣು ಪ್ರಗತಿಶೀಲಳಾಗುವುದನ್ನು ನೋಡಲು ಸಹಿಸದ ಜನ ಇವಲ್ಲೆವನ್ನು ಮೆಟ್ಟಿ ನಿಂತ ಒಂದು ಸುಂದರ ಜೀವಿಯ ಕಥೆಯೇ ‘ಸಾಂಗ್ಸ್ ಒಫ್ ಪ್ಯಾರಡೈಸ್ ‘
ಅಗಾಧ ಪ್ರತಿಭೆಯುಳ್ಳ ಪ್ರದೇಶವಾಗಿರುವ ಕಾಶ್ಮೀರ, ಕಲಾವಿದರಿಗೆ ಪ್ರೋತ್ಸಾಹ ಹಾಗು ಅವಕಾಶಗಳನ್ನು ಕೊಡುವುದರಲ್ಲಿ ಎಷ್ಟು ಸಾಮರ್ಥ್ಯ ಹೊಂದಿದೆ ಅನ್ನುವುದು ಈ ಸಿನಿಮಾದ ಮೂಲಕ ತಿಳೀತು.

ಸಿನಿಮಾದ ತಾಂತ್ರಿಕತೆಯ ಬಗ್ಗೆ ಹೇಳಹೊರಟರೆ ಎಲ್ಲರ ಅಭಿನಯ ಅದ್ಭುತವಾಗಿದೆ. ಹಿರಿಯ ರಾಜ್ ಬೇಗಮ್ ಪಾತ್ರದಲ್ಲಿ ನುರಿತ ಅಭಿನೇತ್ರಿ ಸೋನಿ ರಾಜ್ದಾನ್ ಬಹಳ ಸುಂದರವಾಗಿ ಅಭಿನಯಿಸಿದ್ದಾರೆ. ಇಳಿವಯಸ್ಸಿನ ರಾಜ್ ಬೇಗಮ್ ಆಗಿ ಸಬಾ ಆಜಾದ್ ತಮ್ಮ ಪಾತ್ರವನ್ನು ಇನ್ನು ಸ್ವಲ್ಪ ಬಿಗಿಯಾಗಿ ನಿಭಾಯಿಸಬಹುದಾಗಿತ್ತು. ಕೆಲೆವೆಡೆ ಅವಳ ಭಾವನೆಯನ್ನು ವ್ಯಕ್ಪಡಿಸುವ ರೀತಿ ಇನ್ನೂ ಪ್ರಭಾವಕಾರಿಯಾಗಬಹುದಿತ್ತು. ರಾಜ್ ಬೇಗಮ್ ಸಾಧನೆಯ ಎತ್ತರಕ್ಕೆ ಬೆಳದ ಮೇಲು ತನ್ನ ಗುರುವಿನ ಮನೆಯ ಕೆಲಸ ಮಾಡುತ್ತಿದ್ದಾಗ, ಆ ಗುರುವು ನೀನು ಇನ್ನೂ ಹೀಗೆಲ್ಲ ಕೆಲಸ ಮಾಡಬಾರದು. ಒಬ್ಬ ಗೌರವಾನ್ವಿತ ವ್ಯಕ್ತಿಯಾಗಿದ್ದೀಯ ಅಂದಾಗ ಅವಳು ಯಾವುದೇ ಕೆಲಸ ದೊಡ್ಡದು ಚಿಕ್ಕದು ಇರುವುದಿಲ್ಲ ನಾನು ಖುಷಿಯಿಂದ ಈ ಕೆಲಸ ಮಾಡುತ್ತೇನೆ ಎಂದಾಗ ಆ ಗುರುವಿನ ಕಣ್ಣಲ್ಲಿ ಹೆಮ್ಮಯ ಆ ಹೊಳಪು ತಾನು ತರಬೇತಿ ನೀಡಿದ ಶಿಷ್ಯೆ ಎಂಬ ಖುಷಿ ನೋಡುವವರಿಗೆ ಅಂತಹ ಘೋರ ಭೀತಿಯ ಪ್ರದೇಶದ ಸೂಕ್ಷ್ಮ ಭಾವನೆಯ ಮನುಷ್ಯರನ್ನು ಪರಿಚಯಿಸುತ್ತದೆ.
ಅವರ ತಾಯಿ, ತಂದೆ, ಗುರು, ಪತಿ ಇವರೆಲ್ಲರು ಕೂಡ ಅನುಭವಿ ನಟರಾದ ಕಾರಣ ಎಲ್ಲವು ನೈಜವಾಗಿ ಮೂಡಿಬಂದಿದೆ. ಕಾಶ್ಮೀರಿನಂತೆಯೇ ಅಲ್ಲಿಯ ಸಂಗೀತ ವಿಭಿನ್ನ ಹಾಗು ವಿಶಾಲ. ಮಾಧುರ್ಯ ಹಾಗು ಸೌಂದರ್ಯದಿಂದ ಅಲಂಕೃತವಾದ ಒಂದು ಸರಳ ಸ್ವಚ್ಛ ಯಾವುದೇ ಕಲ್ಮಶವಿಲ್ಲದ ಪವಿತ್ರ ದೇವನಾದ ಅನಿಸುತ್ತದೆ.
ಕಾಶ್ಮೀರಿ ಭಾಷೆಯ ಸೊಗಡೇ ಬೇರೆ! ಹಿಂದಿ ಉರ್ದು ಕಿಂತಬೇರೆಯಾಗಿದ್ದು ಈ ಚಲಚಿತ್ರದಲ್ಲಿ ಸಲೀಲದಂತೆ ಹರಿದಿದೆ.
ಯಾವುದೇ ದೃಶ್ಯವು ಅತೀಯನಸದೆ ಯಾವುದೊಂದು ಭಾವನೆಯನ್ನು ಅತಿರೇಕಕ್ಕೆ ಕರೆದೊಯ್ಯದೆ ಅವಾಚ್ಯ ಅಶ್ಲೀಲತೆಯ ಸುಳಿವಿಲ್ಲದ ಒಂದು ಸರಳ ಸಿನಿಮಾ. ಕಾಶ್ಮೀರವನ್ನು ವಿಭಿನ್ನ ದೃಷ್ಟಿಯಲ್ಲಿ ತೋರಿಸಿದ ಕೆಲವೇ ಸಿನೆಮಾಗಳಲ್ಲಿ ಇದು ಒಂದು.
ಒಮ್ಮೆ ನೋಡಬಹುದು.

Pic courtesy: Internet