12 Years a Slave: ನೋಡಲೇ ಬೇಕಾದ ಚಿತ್ರ – ಉಮಾ ವೆಂಕಟೇಶ್

Theatrical release poster – Wiki

ಈ ವರ್ಷ ಬಿಡುಗಡೆಯಾದ ಹಾಲಿವುಡ್ಡಿನ ಉತ್ತಮ ಚಿತ್ರಗಳಲ್ಲಿ ಒಂದಾದ 12 Years a slave  ಚಿತ್ರ, ಬಿಡುಗಡೆಗೆ ಮುಂಚೆಯೇ ತನ್ನ ಕಥಾವಸ್ತು ಮತ್ತು ಉತ್ತಮ ತಾರಾಗಣದಿಂದಾಗಿ ಬಹಳ ಪ್ರಚಾರ ಪಡೆದಿತ್ತು. ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿಗಳಿಗೆ ಹಲವಾರು ವಿಭಾಗಗಳಲ್ಲಿ  ನಾಮ-ನಿರ್ದೇಶನ  ಗೊಂಡಿರುವುದು  ಈ ಚಿತ್ರದ ಗುಣಮಟ್ಟವನ್ನು ತೋರಿಸುತ್ತದೆ. ವ್ಯಕ್ತಿಯೊಬ್ಬನ ನಿಜಜೀವನದ ವೃತ್ತಾಂತವನ್ನು ಅವನ ಮಾತುಗಳಲ್ಲೇ ಹೇಳಿ ಬರೆದ ಪುಸ್ತಕದ ಮೇಲೆ ಆಧಾರಿತವಾಗಿ ತಯಾರಿಸಿದ ಈ ಚಿತ್ರವನ್ನು ಒಮ್ಮೆ ಎಲ್ಲರೂ ನೋಡಲೇ ಬೇಕು.

ಗುಲಾಮಿ ಪದ್ಧತಿ, ಮಾನವನ ಚರಿತ್ರೆಯಲ್ಲಿ ಒಂದು ಕಪ್ಪು ಚುಕ್ಕೆಯಂತಿದ್ದು, ಮಾನವ ಜಾತಿಗೇ ಕಳಂಕ ತರುವ ಮತ್ತು ನಾಚಿಕೆಯಿಂದ ತಲೆತಗ್ಗಿಸುವಂತಿರುವ ಪ್ರಸಂಗ. ಇತ್ತೀಚಿನವರೆಗೂ, ಆಫ಼್ರಿಕಾದ ಕಪ್ಪು ವರ್ಣೀಯರನ್ನು, ದಿನ ನಿತ್ಯದ ಸಾಮಾನಿನಂತೆ ಕೊಂಡು, ಗುಲಾಮರನ್ನಾಗಿಸಿ ಅವರನ್ನು ದೇಶದಿಂದ ದೇಶಕ್ಕೆ, ಖಂಡದಿಂದ ಖಂಡಕ್ಕೆ ಸಾಗಿಸಿ ಮಾರುತ್ತಿದ್ದ ಈ ಹೇಯ ಕೃತ್ಯವನ್ನು ಎಷ್ಟು ಕಟುವಾದ ಮಾತುಗಳಲ್ಲಿ ಖಂಡಿಸಿದರೂ ಅದು ಕಡಿಮೆಯೇ. ಅವರ ಮೇಲೆ ನಡೆಸುತ್ತಿದ್ದ ಅಮಾನುಷ ಕೃತ್ಯಗಳಂತೂ ಮಾತುಗಳಲ್ಲಿ ವರ್ಣಿಸಲು ಅಸಾಧ್ಯ. ಇಂತಹುದೇ ಕೃತ್ಯದ ಹಿನ್ನೆಲೆಯಲ್ಲಿ ತಯಾರಿಸಿದ ಈ ಚಿತ್ರದ ನಾಯಕ ನ್ಯೂಯಾರ್ಕಿನಲ್ಲಿ ಸ್ವತಂತ್ರವಾಗಿ ಹುಟ್ಟಿ ಜೀವಿಸುತ್ತಿದ್ದ ಮರಗೆಲಸಗಾರ ಮತ್ತು ಪ್ರತಿಭಾವಂತ ಪಿಟೀಲುವಾದಕ ಸಾಲೋಮನ್ ನಾರ್ತಾಪ್. ತನ್ನ ಹೆಂಡತಿ, ಮಗ ಮತ್ತು ಮಗಳೊಡನೆ ಸುಖವಾಗಿ ಜೀವಿಸುತ್ತಿದ್ದ ಸಾಲೋಮನ್, ಒಮ್ಮೆ ನ್ಯೂಯಾರ್ಕಿನ ಉದ್ಯಾನವನದಲ್ಲಿ ಭೇಟಿಯಾದ ಇಬ್ಬರು ಬಿಳಿಯರ ಮಾತುಗಳಲ್ಲಿ ವಿಶ್ವಾಸವಿಟ್ಟು, ಸಂಗೀತದ ಕಾರ್ಯಕ್ರಮ ನಡೆಸುವ ಉದ್ದೇಶದೊಡನೆ ಅವರೊಂದಿಗೆ ವಾಶಿಂಗಟನ್ ನಗರಕ್ಕೆ ಹೋದಾಗ, ಅಲ್ಲಿ ಅವನ ಪಾನೀಯಕ್ಕೆ ಮತ್ತು ಬರಿಸುವ ಮಾದಕ ದ್ರವ್ಯವನ್ನು ಸೇರಿಸಿ ಅವನನ್ನು ಪ್ರಜ್ಞಾಹೀನನ್ನಾಗಿಸುತ್ತಾರೆ. ಅವನಿಗೆ ಎಚ್ಚರವಾದಾಗ, ಕಬ್ಬಿಣದ ಸರಪಳಿಗಳಿಂದ ಬಂಧಿಸಲ್ಪಟ್ಟ ಸಾಲೋಮನ್ ಒಬ್ಬ ವಿಖ್ಯಾತ ಗುಲಾಮ ವ್ಯಾಪಾರಿಯಿಂದ ಖರೀದಿಸಲ್ಪಟ್ಟಿರುತ್ತಾನೆ. ಅವನನ್ನು ಪ್ಲಾಟ್ ಎಂಬ ಹೊಸ ಹೆಸರಿನಿಂದ ಕರೆದು, ಲೂಸಿಯಾನಾ ರಾಜ್ಯದಲ್ಲಿನ ಹತ್ತಿ, ಕಬ್ಬು ಮತ್ತಿತರ ಬೆಳೆಗಳ ತೋಟಗಳಲ್ಲಿ ಕೆಲಸಕ್ಕೆ ಹಾಕಿಕೊಳ್ಳುತ್ತಾರೆ. ತನ್ನ ವ್ಯಕ್ತಿ-ಸ್ವಾತಂತ್ರ, ನಿಜವಾದ ಹೆಸರು ಮತ್ತು ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಗುಲಾಮನಾಗಿ ೧೨ ವರ್ಷಗಳ ಕಾಲ ಅನುಭವಿಸಿದ ಅವನ ಜೀವನದ ಕರಾಳ ದಿನಗಳ ಚಿತ್ರಣ ಬಹಳ ಹೃದಯಸ್ಪರ್ಶಿಯಾಗಿದೆ.

ತನ್ನ ಈ ಗುಲಾಮ ವೃತ್ತಿಯ ಜೀವನದಲ್ಲಿ, ಸಾಲೋಮನ್ (ಪ್ಲಾಟ್) ತನ್ನೊಡನೆ ಇದ್ದ ಇತರ ಕಪ್ಪುವರ್ಣದ ಜನರ ಮೇಲೆ ನಡೆಯುತ್ತಿದ್ದ ಶೋಷಣೆಯನ್ನು ನೋಡಿ, ಒಂದೆರಡು ಬಾರಿ ದ್ವನಿಯೆತ್ತಿದಾಗ ಆದ ಪರಿಣಾಮ ಅವನನ್ನು ಪೂರ್ಣವಾಗಿ ಮೂಕನನ್ನಾಗಿಸುತ್ತದೆ. ಅವನ ಜೊತೆಯಲ್ಲಿದ್ದ ಮತ್ತೊಬ್ಬ ತರುಣಿ ಪಾಟ್ಸಿಯ ಮೇಲೆ ಅವ್ಯಾಹತವಾಗಿ ತೋಟದ ಮಾಲೀಕ ನಡೆಸುತ್ತಿದ್ದ ಅತ್ಯಾಚಾರವನ್ನು ಕಂಡು, ಅವನು ಪಡುವ ವ್ಯಥೆ ಪ್ರೇಕ್ಷಕರ ಕಣ್ಣುಗಳನ್ನು ಅನೇಕ ಬಾರಿ ತೇವಗೊಳಿಸುತ್ತದೆ. ಈ ಅತ್ಯಾಚಾರವನ್ನು ತಡೆಯಲಾಗದೆ ಒಮ್ಮೆ ಆಕೆ ಪ್ಲಾಟನನ್ನು ತನ್ನ ಆತ್ಮಹತ್ಯೆಗೆ ಸಹಾಯ ಮಾಡಬೇಕೆಂದು ಕೋರಿದಾಗ ಅವರಿಬ್ಬರ ನಡುವೆ ನಡೆಯುವ ಸಂಭಾಷಣೆ, ಆ ಚಿತ್ರದ ಅತ್ಯುತ್ತಮ ದೃಶ್ಯವೆಂದು ನನ್ನ ಅಭಿಪ್ರಾಯ. ಪ್ಲಾಂಟೇಷನ್ ಮಾಲೀಕನ ವಿಕೃತ ಕಾಮ, ಕಪ್ಪು ಜನರನ್ನು ಕಂಡರೆ ಅವನಿಗಿದ್ದ ತಾತ್ಸಾರ, ಕ್ರೂರ ಮನೋಭಾವ ಇವೆಲ್ಲವೂ ಪ್ರೇಕ್ಷಕನ ಮನಸ್ಸಿನಲ್ಲಿ ರೊಚ್ಚಿನ ಭಾವನೆಗಳನ್ನು ಎಬ್ಬಿಸುವಲ್ಲಿ ಯಶಸ್ವಿಯಾಗುತ್ತದೆ. ಈ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿರುವ ನಟ, ಮೈಕೆಲ್ ಫ಼ಾಸಬೆಂಡರ್ (Michel Fassbender) ಬಹಳ ಪ್ರತಿಭಾಶಾಲಿ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಕರಾಳ ದಿನಗಳಲ್ಲಿ, ಅಲ್ಲಲ್ಲಿ ಎದಿರಾಗುವ ಹಲವು ದಯಾಮಯ ವ್ಯಕ್ತಿಗಳು, ಪ್ಲಾಟನ ಜೀವನದ ಕತ್ತಲಲ್ಲಿ ಬೆಳ್ಳಿಯ ಕಿರಣಗಳಂತೆ ಕಾಣುತ್ತಾರೆ. ಕಡೆಗೊಮ್ಮೆ ಅವನೊಡನೆ ಕಬ್ಬಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆನೆಡಾದ ಪ್ರಜೆ ಬಾಸ್ ತನ್ನ ಜೀವದ ಮೇಲಿನ ಹಂಗು ತೊರೆದು, ಇವನನ್ನು ಅಲ್ಲಿಂದ ಹೊರಗೆಳೆಯುವಲ್ಲಿ ಸಹಾಯಮಾಡುತ್ತಾನೆ. ತನ್ನ ಸ್ವತಂತ್ರತೆ ಮತ್ತು ಹೆಸರನ್ನು ಹಿಂತಿರುಗಿ ಪಡೆದು ತನ್ನೂರಿಗೆ ಮರಳುವ ಸಾಲೋಮನ್ ಜೀವನದ ಕಥೆ ಹೃದಯ ಮಿಡಿಯುವಂತಹದು.

ಆ ಸಮಯದಲ್ಲಿ ಗುಲಾಮರಿಗೆ ತಲೆ ಎತ್ತಿ ನೋಡಿ ಮಾತನಾಡುವ ಸ್ವತಂತ್ರತೆ ಇರಲಿಲ್ಲ. ಎಲ್ಲೆಲ್ಲಿ ನೋಡಿದರೂ ನಿಶ್ಯಬ್ದತೆ. ಈ ನಿಶ್ಯಬ್ದ ವಾತಾವರಣ ನೋಡುಗನ ಮೇಲೆ ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ, ಸಿನಿಮಾ ಮಂದಿರದಲ್ಲಿ ಪೂರ್ಣವಾದ ಮೌನ. ತಪ್ಪಿತಸ್ಥ ಕರಿಯ ಕೆಲಸಗಾರರನ್ನು ನೇಣು ಹಾಕುವ ದೃಶ್ಯವಂತೂ, ನಮ್ಮ ಮನಗಳಲ್ಲಿ ಭೀತಿಯನ್ನು ಉಂಟು ಮಾಡಿತು. ಚಿತ್ರದಲ್ಲಿ ಸಾಲೋಮನ್ ಉರುಫ಼್ ಪ್ಲಾಟನ ಪಾತ್ರವನ್ನು ನಿರ್ವಹಿಸಿರುವ ಬ್ರಿಟಿಷ್ ಕಲಾವಿದ ಚಿವೆಟೆಲ್ ಎಜಿಯೋಫ಼ೋರ್ (Chewetel Ejiofor) ಅಭಿನಯ ಈ ಚಿತ್ರದ ಜೀವಾಳ. ಬ್ರಿಟನ್ನಿನ ರಂಗ ಭೂಮಿಯಲ್ಲಿ ಹೆಸರು ಮಾಡಿರುವ ಈ ನಟ, ಈ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾನೆ. ತನ್ನವರನ್ನು ಕಾಣಲಾಗದ ನಿರಾಸೆಯಲ್ಲಿ, ಬರೆದಿದ್ದ ಕಾಗದವನ್ನು ಸುಟ್ಟುಹಾಕುವ ದೃಶ್ಯ, ತನ್ನ ಪ್ರೀತಿಯ ಪಿಟೀಲನ್ನು ಒಡೆಯುವ ದೃಶ್ಯ ಹಾಗೂ ತರುಣಿ ಪಾಟ್ಸಿಯ ಮೇಲಿನ ಅತ್ಯಾಚಾರವನ್ನು ತಡೆಯಲಾಗದ ಅಸಹಾಯಕತೆಯ ದೃಶ್ಯದಲ್ಲಿ, ಈ ಕಲಾವಿದನ ಅಭಿನಯ ಬಹಳ ಮನೋಜ್ಞವಾಗಿದೆ. ಈ ಕಲಾವಿದನಿಗೆ ೨೦೧೪ರ ಆಸ್ಕರ್ ಪ್ರಶಸ್ತಿ ಸಲ್ಲಲೇಬೇಕು. ಈ ಚಿತ್ರವನ್ನು ಚಿತ್ರಿಸಿರುವ ಹೊರಾಂಗಣ ಸ್ಥಳಗಳು ಸುಂದರವಾಗಿದ್ದು, ಈ ಕಥೆಯ ಹಿನ್ನೆಲೆಗೆ ಪೂರಕವಾಗಿದೆ. ಆದರೆ, ಕಥೆಯಲ್ಲಿನ ಭಯಾನಕ ಘಟನೆಗಳನ್ನು ನೋಡುವ ಸಂಧರ್ಭದಲ್ಲಿ, ಈ ಸುಂದರತೆಯನ್ನು ಅನುಭವಿಸಲು ಮನಸ್ಸಾಗದು.

ಗುಲಾಮಿ ಪದ್ಧತಿಯನ್ನು ಮುಖ್ಯ ವಿಷಯವಾಗಿಟ್ಟುಕೊಂಡು ಮಾಡುವ ಇಂತಹ ಚಿತ್ರಗಳು, ಮಾನವನಿಗೆ ಭೂತದಲ್ಲಿ ನಡೆದ ಇಂತಹ ಅನ್ಯಾಯ ಅತ್ಯಾಚಾರಗಳು ಭವಿಷ್ಯದಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸಾರಿ ಹೇಳುವಲ್ಲಿ ಪರಿಣಾಮಕಾರಿಯಾದ ಪಾತ್ರವನ್ನು ವಹಿಸುತ್ತವೆ.  ಆಧುನಿಕ ಮಾನವನ ಪೂರ್ವಿಕರಾದ ಈ ಕಪ್ಪುವರ್ಣೀಯರ ಮೇಲೆ ನಡೆಸಿದ ಅತ್ಯಾಚಾರ ಅಕ್ಷಮ್ಯ ಅಪರಾಧ. ಈ ಚರಿತ್ರೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ! ಈ ಚಿತ್ರದ ನಿರ್ದೇಶಕ ಸ್ಟೀವ್ ಮೆಕ್ವೀನ್ ಅದ್ಭುತವಾದ ಚಿತ್ರವನ್ನು ನಿರ್ಮಿಸಿದ್ದಾನೆ. ಹಿನ್ನೆಲೆಯ ಸಂಗೀತವೂ ಬಹಳ ಪರಿಣಾಮಕಾರಿಯಾಗಿದೆ. ಇಂತಹ ಕಥಾ ವಸ್ತುವುಳ್ಳ ಚಿತ್ರಗಳು ಆಗಾಗ ಬಂದರೆ, ಮಾನವನನ್ನು ಈ ಹಾದಿಯಲ್ಲಿ ಮತ್ತೊಮ್ಮೆ ನಡೆಯದಂತೆ ತಡೆಯುವಲ್ಲಿ ಸಹಕಾರಿಯಾಗಬಲ್ಲದು.

ಬೆಳಕಿನರಮನೆಯಿಂದ ಎದೆ ತುಂಬಿ ಹಾಡಿ ಕಾಣದ ಕಡಲಿಗೆ ತೆರಳಿದ ರಾಷ್ಟ್ರಕವಿಗೆ ನಮನ – ಗಿರಿಧರ ಎಸ್ ಹಂಪಾಪುರ

CC- Wiki

ದಾರಿ ನೂರಾರಿವೆ ಬೆಳಕಿನರಮನೆಗೆ’! ‘ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ’! ‘ಒಂದೊಂದು ಹಂತ,ನೂರಾರು ಭಾವದ ಭಾವಿ ಎತ್ತಿಕೋ!ನಿನಗೆ ಬೇಕಾದಷ್ಟು ಸಿಹಿನೀರ,ಪಾತ್ರೆಯಾಕಾರಗಳ ಕುರಿತ ಏತಕೆ ಜಗಳ?ನಮಗೆ ಬೇಕಾದದ್ದು ದಾಹ ಪರಿಹಾರ’ ಆಹಾ! ಎಂಥ ಮಾತುಗಳು. ಇದನ್ನು ಬರೆದವರಾರು ಎಂದು ಚಿಂತಿಸುದ್ದೀರಾ ? ಇವರೇ ರಾಷ್ಟ್ರಕವಿ ಡಾ ಜಿ.ಎಸ್.ಶಿವರುದ್ರಪ್ಪ.ಕವಿ, ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಶಿಕ್ಷಕ ಹಾಗೂ ಒಳ್ಳೆಯ ಆಡಳಿತಗಾರ.

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ- ಶಾಂತವೀರಪ್ಪ ಹಾಗು ವೀರಮ್ಮನವರಿಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ,ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರುಗಳಲ್ಲಿ ಮಾಧ್ಯಮಿಕ ಶಿಕ್ಷಣವನ್ನು,ದಾವಣಗೆರೆ,ತುಮಕೂರುಗಳಲ್ಲಿ ಪ್ರೌಢಶಾಲಾ,ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು.ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ.ಆನರ್ಸ್ ಪದವಿ ಪಡೆದ ನಂತರ, ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್.ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು, ನಂತರ ಎಮ್.ಎ.ಮುಗಿಸಿದರು. ೧೯೫೫ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯವೇತನದ ಸಹಾಯದಿಂದ ಕುವೆಂಪುರವರ ನೇತೃತ್ವದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿಕೊಟ್ಟ ಇವರ ಪ್ರೌಢ ಪ್ರಬಂಧದ ವಿಷಯ – ಸೌಂದರ್ಯ ಸಮೀಕ್ಷೆ.

ಡಾ. ಜಿ.ಎಸ್.ಶಿವರುದ್ರಪ್ಪನವರು ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜು, ಮೈಸೂರು ಮಹಾರಾಜಾ ಕಾಲೇಜಿನಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಸ್ತಪ್ರತಿಗಳ ಸಂಗ್ರಹಣೆ,ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು ೧೯೭೧ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ‘ಹಸ್ತಪ್ರತಿ ವಿಭಾಗ’ವನ್ನು ಪ್ರಾರಂಭಿಸಿದರು.ಕೇವಲ ೪ ವರ್ಷಗಳಲ್ಲಿ ೩೦೦೦ಕ್ಕೂ ಹೆಚ್ಚು ಓಲೆಗರಿಯ ಹಾಗೂ ೧೦೦೦ಕ್ಕೂ ಹೆಚ್ಚು ಕಾಗದದ ಹಸ್ತಪ್ರತಿಗಳ ಸಂಗ್ರಹಣೆಯಾಯಿತು.ನಿವೃತ್ತಿಯ ನಂತರವೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಗಣನೀಯ ಸೇವೆ ಸಲ್ಲಿಸಿರುತ್ತಾರೆ. ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ದೆಹಲಿಯ ರಾಷ್ಟ್ರೀಯ ಕವಿ ಸಮ್ಮೇಳನ, ತುಮಕೂರಿನ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷ, ಮದರಾಸಿನ ಕನ್ನಡ ಸಮ್ಮೇಳನದ ಅಧ್ಯಕ್ಷ ಹಾಗೂ ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿದ್ದಾರೆ.

ಕುವೆಂಪು ಶಿಷ್ಯ ಪರಂಪರೆಯನ್ನು ಉಳಿಸಿಕೊಂಡು ಬಂದವರು ಇವರು. ಯಾವಾಗಲು ಪಂಚೆ-ಶರ್ಟಿನ್ನೇ ಧರಿಸುತ್ತಿದ್ದ ಶಿವರುದ್ರಪ್ಪನವರು, ಮಾಸ್ಕೊ ನಗರಕ್ಕೆ ಹೋಗಬೇಕಾದರೆ ಮೊದಲ ಬಾರಿಗೆ ಪ್ಯಾಂಟ್ ಧರಿಸಿದೆ ಎಂದು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ‘ನೀನು ಮುಗಿಲು ನಾನು ನೆಲ’ ಎಂದು ಮರೀಚಿಕೆಯಲ್ಲಿ ಆಕಾಶ ಹಾಗು ಭೂಮಿ ಸೇರಿದಾಗ ಏನನ್ನು ಯೋಚಿಸಿಬಹುದು ಎಂಬುದನ್ನು ಅದ್ಭುತವಾಗಿ ಬರೆದಿದ್ದಾರೆ. ಸಿ.ಅಶ್ವತ್ ಜತೆ ಇವರ ಸಮ್ಮಿಲನ ಮುಗಿಲು-ನೆಲ ಸೇರಿದ ಉಲ್ಲಾಸಕ್ಕೆ ಸಂಕೇತ.

ಇನ್ನು ಎಲ್ಲ ನಿನ್ನದೇ ಎಂದು ದೇವರಿಗೆ ಹೇಳಿದ ಕವನದಲ್ಲಿ- ‘ನಿನ್ನದೇ ನೆಲ ನಿನ್ನದೇ ಜಲ’ ವೆಂದರು. ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಇನ್ನೊಂದು ಅದ್ಭುತ ಗೀತೆ. ಇವರ ಕವನ ಸಂಕಲನಗಳಾದ ಸಾಮಗಾನ, ದೀಪದ ಹೆಜ್ಜೆ, ಪ್ರೀತಿ ಇಲ್ಲದ ಮೇಲೆ, ದೇವಶಿಲ್ಪ, ಕಾಡಿನ ಕತ್ತಲಲ್ಲಿ ಎಲ್ಲವನ್ನೂ ನೆನೆಯ ಬೇಕಾದದ್ದೆ. ಅಷ್ಟೇ ಅಲ್ಲ, ಇವರ ಪ್ರವಾಸವು ಇಂಗ್ಲೆಂಡಿನವರೆಗೂ ಕಾಲಿಟ್ಟಿದ್ದು ‘ಇಂಗ್ಲೆಂಡಿನಲ್ಲಿ ಚತುರ್ಮಾಸ’ ಎಂಬ ಪ್ರವಾಸ ಸಂಕಲನವನ್ನು ಬರೆದಿದ್ದಾರೆ. ಹಾಗೆಯೆ ಇವರ ‘ಎದೆ ತುಂಬಿ ಹಾಡುವೆನು’ ಎಲ್ಲ  ಕನ್ನಡ ಗಾಯಕರಿಗೂ ಒಂದು ಆಂಥಮ್ ತರಹ.

ಜಿ.ಎಸ್.ಶಿವರುದ್ರಪ್ಪನವರಿಗೆ ವಿಮರ್ಶೆಗಾಗಿ ೧೯೮೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು.ಇದಲ್ಲದೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೨), ರಾಜ್ಯೋತ್ಸವ ಪ್ರಶಸ್ತಿ, ಸೋವಿಯತ್ ಲ್ಯಾಂಡ ನೆಹರೂ ಪ್ರಶಸ್ತಿ (೧೯೭೩)ಸಹ ಶಿವರುದ್ರಪ್ಪನವರಿಗೆ ದೊರೆತಿವೆ. ೨೦೦೬ನೆಯ ಸಾಲಿನಲ್ಲಿ ಜರಗಿದ  ಸುವರ್ಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕ ಸರಕಾರವು ರಾಷ್ಟ್ರಕವಿ (೨೦೦೬) ಎನ್ನುವ ಗೌರವವನ್ನು ಪ್ರಧಾನಿಸಿದೆ. ಇವರು ಗೋವಿಂದ ಪೈ, ಮತ್ತು ಕುವೆಂಪು ನಂತರ ಈ  ಗೌರವಕ್ಕೆ ಪಾತ್ರರಾದ ಮೂರನೆಯ ರಾಷ್ಟ್ರಕವಿ.  ಇವರಿಗೆ ದೊರೆತ  ಇನ್ನಿತರ  ಪುರಸ್ಕಾರಗಳು: ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿ.

ಈಗ ಇವರು ಅವರ ಮನ ಹಂಬಲಿಸಿದ ಹಾಗೆ ಕಾಣದ ಕಡಲಿಗೆ ತೆರೆಳಿದ್ದಾರೆ. ಲೌಕಿಕವಾಗಿ  ನಮ್ಮೊಡನೆ ಇರದಿದ್ದರೂ, ಅವರ ಗೀತೆಗಳ ಮುಖಾಂತರ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದ್ದಾರೆ.