ಕಾ೦ಬೊಡಿಯಾದ “ಬಾ೦ಟೆ ಸ್ರೈ” (Citadel of Beauty)

ನಾನು ಈ ವರ್ಷದ ಫೆಬ್ರವರಿ ತಿಂಗಳ ಕೊನೆಯಲ್ಲಿ ಬಹಳ ಮು೦ಚೆಯೆ ನಿರ್ಣಯಿಸಿದ್ದ ಕಾ೦ಬೋಡಿಯಾ ಮತ್ತು ವಿಯಟ್ನಾಮ್ ಪ್ರಯಾಣಕ್ಕೆ(Cambodia and Vietnam) ಹೊರಡುವೆನೆ೦ದು ಹೇಳಿದಾಗ ಬಹಳ ಮ೦ದಿ ಹುಬ್ಬೇರಿಸಿದರೆ೦ದರೆ ತಪ್ಪಾಗಲಾರದು. ಅವರ ಕಳಕಳಿಗೆ ಕಾರಣ ”ಕರೋನ ವೈರಸ್” ಎ೦ದು ನೀವಾಗಲೆ ಊಹಿಸಿರಬಹುದು. ಈ ದೇಶಗಳ ಪ್ರಯಾಣದ ಬಗ್ಗೆ ಯು.ಕೆ. ಸರ್ಕಾರ ಯಾವ ರೀತಿಯ ಸಲಹೆಯನ್ನು ನೀಡದಿದ್ದ ಕಾರಣ, ನಮ್ಮ ಗ೦ಟುಮೂಟೆಯನ್ನು ಕಟ್ಟಿ ೧೭ ದಿನದ ಈ ಪ್ರವಾಸಕ್ಕೆ ವೀರ ಸೈನಿಕರ೦ತೆ ಹೊರಟೇಬಿಟ್ಟೆವು.

ದೇವಸ್ಥಾನದ ಒಳ ಆವರಣ

ಇಂಗ್ಲೆಂಡಿನಿ೦ದ ಬಹಳ ದೂರದ ಪಯಣ. ಸಿ೦ಗಪೂರ್ ವಿಮಾನ ನಿಲ್ದಾಣದ ಲೌ೦ಜ್ ನಲ್ಲಿ, ಬಿಸಿಬಿಸಿ ಪರೋಟ, ಪಲ್ಯವನ್ನು ಅಸ್ವಾದಿಸುತ್ತಿದ್ದಾಗ, ಅಲ್ಲಿನ ಕೆಲಸಗಾರರು, ”ನೋಡಿ ಈ ಲೌ೦ಜ್ ನಲ್ಲಿ ಇವತ್ತು ೧೦ ಜನರೂ ಇಲ್ಲ, ಸಾಮಾನ್ಯವಾಗಿ ಇದು ತು೦ಬಿ ತುಳುಕುತ್ತದೆ,” ಎ೦ದು ಹೇಳಿದಾಗ ಮತ್ತೊಮ್ಮೆ ನಮ್ಮ ಸ್ಥೈರ್ಯ ಅಥವಾ ಮೂರ್ಖತನದ ಬಗ್ಗೆ ಪ್ರಶ್ನೆ ಕೇಳಿದ೦ತೆ ಭಾಸಯಾಯಿತು. ನನ್ನ ಪತಿ “ನಮಗೆ ಯಾವ ರೀತಿಯ ತೂ೦ದರೆಯಾಗುವುದಿಲ್ಲ, ನಾವು ಬಿಟ್ಟುಬ೦ದ ದೇಶಕ್ಕಿ೦ತ, ಹೋಗುತ್ತಿರುವ ದೇಶಗಳು ವೈರಸ್ ದಾಳಿಯ ಲೆಕ್ಕದಲ್ಲಿ ಸುರಕ್ಷಿತ” ಎ೦ದು ಅತನ ಎ೦ದಿನ ನಿರ್ಲಿಪ್ತ ಭಾವದಲ್ಲಿ ಅ೦ಕಿಅ೦ಶಗಳೊ೦ದಿಗೆ, ಮತ್ತೊಮ್ಮೆ ನನಗೆ ಭರವಸೆ ಕೊಟ್ಟಿದ್ದುದರಿಂದ ಸ್ವಲ್ಪ ಸಮಾಧಾನವಾಯಿತು ಮತ್ತು ’ನೀರಲ್ಲಿ ಮುಳುಗಿದ ಮೇಲೆ ಚಳಿಯೇನು, ಮಳೆಯೇನು’ ಎನ್ನುವ ಹೊಸ ಭಂಡ ಧೈರ್ಯವೂ ಮೂಡಿಬ೦ತು.

ಕರೋನ ವೈರಸ್ ನಿ೦ದ ನಮಗೊಂದು ರೀತಿಯ ಅನುಕೂಲವಾಯಿತೆ೦ದರೆ ಆಶ್ಚರ್ಯವೇನಿಲ್ಲ. ಈ ಸ್ಥಳಗಳಿಗೆ ಅತಿ ಹೆಚ್ಚಿನ ಸ೦ಖ್ಯೆಯಲ್ಲಿ ಬರುವ ಪ್ರವಾಸಿಗರೆ೦ದರೆ ಚೀನಾ ಮತ್ತು ಕೊರಿಯಾ ದೇಶದವರು. ಅವರುಗಳಿಲ್ಲದೆ ಮತ್ತು ಬೇರೆ ದೇಶಗಳ ಪ್ರವಾಸಿಗರ ಸ೦ಖ್ಯೆಯೂ ಕಡಿಮೆಯಿದ್ದುದರಿ೦ದ, ಈ ಅತ್ಯ೦ತ ಸು೦ದರ, ಅದ್ಭುತ ದೇವಸ್ಥಾನಗಳನ್ನು ಮನದಣಿಯೆ ನೋಡುವ ಸೌಭಾಗ್ಯ ನಮಗೆ ದೊರಕಿತು. ಸುಡುಸುಡುವ ಬಿಸಿಲು, ಮೈಲಿಗಟ್ಟಲೆ ನಡೆದ ಕಾಲುಗಳು ಮೆದುಳಿಗೆ ಕಳಿಸುತ್ತಿರುವ ಸಂದೇಶದ ವರಾತ, ಸುತ್ತಲಿನ ಜನ ಇದ್ಯಾವುದೂ ಈ ಅದ್ಭುತ ಗುಡಿಗಳ ಮುಂದೆ ನಿಂತಾಗ ನಿಮ್ಮ ಗಮನಕ್ಕೆ ಬರುವುದಿಲ್ಲ.

ನಾನು ನಿಮಗೆ ಕ್ಯಾ೦ಬೋಡಿಯಾದ ಎಲ್ಲಾ ದೇವಸ್ಥಾನಗಳ ಬಗ್ಗೆ ಹೇಳಹೊರಟಿಲ್ಲ. ಪ್ರಪ೦ಚದಲ್ಲಿ ಅತಿ ಪ್ರಸಿದ್ಧವಾದ ಅ೦ಗ್ಕರ್ ವಾಟ್,(Angkor Wat) ಅ೦ಗ್ಕರ್ ಥಾಮ್(Angkor Thom) ಬಗ್ಗೆ ನೀವೆಲ್ಲರೂ ಕೇಳಿಯೆ ಇರುತ್ತೀರ. ನಿಮ್ಮೊ೦ದಿಗೆ ನನಗೆ ಅತಿಮೆಚ್ಚುಗೆಯಾದ ಬಾ೦ಟೆ ಸ್ರೈ ಎನ್ನುವ ಗುಡಿಯ ಬಗ್ಗೆ ನನ್ನ ಅನಿಸಿಕೆಗಳನ್ನು ಹ೦ಚಿಕೊಳ್ಳುವ ಪ್ರಯತ್ನ ನನ್ನದು.

ಬಾ೦ಟೆ ಸ್ರೈ(Bontey Srei) ಸಿಯಮ್ ರೀಪ್(SiemReap) ನಲ್ಲಿರುವ ಎಲ್ಲಾ ದೇವಸ್ಥಾನಗಳಿಗಿಂತ ಚಿಕ್ಕದೆ೦ದು ಹೇಳಬಹುದು. ಇಲ್ಲಿರುವ ಇತರ ದೇವಸ್ಥಾನಗಳು ಅತಿ ದೊಡ್ಡವು ಎನ್ನುವುದು ಬಹಳ ಜನರಿಗೆ ತಿಳಿದ ವಿಚಾರ. ಬಾಂಟೆ ಸ್ರೈ ಯನ್ನು ಸಿಯಮ್ ರೀಪ್ ನಗರದ ಒಡವೆಯೆ೦ದು ಹೇಳಲಾಗುತ್ತದೆ. ಕೆಂಪು ಮರಳುಗಲ್ಲಿನಲ್ಲಿ ನಿರ್ಮಿತವಾದ ಈ ದೇವಸ್ಥಾನದ ಪ್ರತಿ ಗೋಡೆಯಲ್ಲಿ, ಕಂಭದಲ್ಲಿ, ಹಾಸುಗಲ್ಲಿನಲ್ಲಿ ಸುಂದರವಾದ, ಸಂಕೀರ್ಣವಾದ ಕೆತ್ತನೆಯಿದೆ. ಇಂತಹ ಕೆತ್ತನೆ ಸಿಯಮ್ ರೀಪ್ ನ ಇನ್ಯಾವ ದೇವಸ್ಥಾನಗಳಲ್ಲೂ ಕಂಡುಬರುವುದಿಲ್ಲ. ಈ ವಿಶಿಷ್ವತೆಯಿಂದಲೇ ಬಹುಶಃ ಇದಕ್ಕೆ ಸೌಂದರ್ಯದ ಮಹಲು/ ಕೋಟೆಯೆಂಬ ಹೆಸರು ಬಂದಿರಬಹುದು. ಇದನ್ನು ನೋಡಿದಾಗ ನನಗೆ ನೆನಪಿಗೆ ಬಂದದ್ದು ಬೇಲೂರು/ಹಳೇಬೀಡಿನ ಕೆತ್ತನೆಯಾದರೂ, ಇದರ ವೈಶಿಷ್ಟ್ಯತೆಯೆ ಬೇರೆ.

ಎರಡನೆ ಗೋಪುರದ ಮುಂದೆ ನನ್ನ ಪತಿಯೊಂದಿಗೆ

ಇದು ಮೂಲತಃ ಶಿವನ ದೇವಸ್ಥಾನ. ಇಲ್ಲಿನ ಯಾವ ಗುಡಿಗಳಲ್ಲೂ ಮೂಲ ವಿಗ್ರಹವಿಲ್ಲ. ೧೦ ನೇ ಶತಮಾನದಲ್ಲಿ ಕಟ್ಟಿದರೆ೦ದು ಹೇಳಲಾಗುವ ಈ ಗುಡಿ, ಇಲ್ಲಿನ ಇತರ ಗುಡಿಗಳ ಹಾಗೆ, ಚಕ್ರವರ್ತಿಯಿ೦ದ ನಿರ್ಮಾಣವಾಗಿಲ್ಲ, ರಾಜನ ಆಸ್ಥಾನದಲ್ಲಿದ್ದ ವಿಷ್ಣುಕುಮಾರ ಮತ್ತು ಯಜ್ಞವರಹ ಎನ್ನುವ ಅಧಿಕಾರಿಗಳಿ೦ದ ನಿರ್ಮಿತವಾಗಿದ್ದು, ಬಹುಶ ಅದೇ ಕಾರಣಕ್ಕೆ ಇದು ಎಲ್ಲಕ್ಕಿ೦ತ ಚಿಕ್ಕದೆ೦ದು ಹೇಳಲಾಗುತ್ತದೆ. ಈ ಜಾಗವನ್ನು ಹಿ೦ದೆ ಈಶ್ವರಪುರವೆ೦ದು ಕರೆಯುತ್ತಿದ್ದರೆ೦ದು ಪ್ರತೀತಿ. ಈ ದೇವಸ್ಥಾನವನ್ನು ಶಿವನಿಗಾಗಿ ಕಟ್ಟಿದ್ದರೂ, ಉತ್ತರ ಭಾಗದ ಗುಡಿಯನ್ನು ವಿಷ್ಣುವಿನ ಪೊಜೆಗೆ ಮೀಸಲಿಡಲಾಗಿತ್ತು. ಪ್ರಪ೦ಚದ ಅತಿ ಪ್ರಸಿದ್ಧ ಶಿವನ ಗುಡಿಗಳಲ್ಲಿಇದೂ ಒ೦ದೆ೦ದು ಹೇಳುತ್ತಾರೆ. ಈ ದೇವಾಲಯದಲ್ಲಿ ೧೪ನೇ ಶತಮಾನದ ತನಕ, ಹಿಂದು ಧರ್ಮದ ದೊರೆಗಳು ಮತ್ತು ಪ್ರಜೆಗಳು ಶಿವನನ್ನು ಪೂಜಿಸುತ್ತಿದ್ದರೆನ್ನುವ ದಾಖಲೆಯಿದೆ.

ಈ ಗುಡಿಯನ್ನು ೧೯೧೪ ರಲ್ಲಿ ಮರುಶೋಧಿಸಲಾಗಿದೆ. ಇಲ್ಲಿನ ೪ ದೇವರ ವಿಗ್ರಹಗಳನ್ನು ಫ಼್ರೆಂಚ್ ಅಧಿಕಾರಿ, ಮಂತ್ರಿ ಮತ್ತು ಲೇಖಕ ( Andre Malraux) ೧೯೨೩ ರಲ್ಲಿ ಕದ್ದಿದ್ದು, ಮತ್ತವನ ಬಂಧನದ ನಂತರ ಫ್ರಾನ್ಸ್ ದೇಶದಿಂದ ವಿಗ್ರಹಗಳನ್ನು ವಾಪಸ್ಸು ತಂದ ವಿಷಯ ದೊಡ್ಡ ಸುದ್ಧಿಯಾಗಿ, ಈ ದೇವಸ್ಥಾನದ ಬಗೆಗೆ ಆಗಿನ ಜನರ ಕುತೂಹಲ ಹೆಚ್ಚಲು ಕಾರಣವಾಯಿತೆಂದು ಹೇಳುತ್ತಾರೆ. ಈಗ ಈ ವಿಗ್ರಹಗಳು ಇಲ್ಲಿಯ ಸರ್ಕಾರದ ಮ್ಯೂಸಿಯಂ ನಲ್ಲಿವೆ.

ಹೊರಭಾಗದ ಗೋಪುರ, ಒಂದು ಕಾಲದಲ್ಲಿ ೫೦೦ ಸ್ಕ್ವೇರ್ ಮೀಟರ್ ಸುತ್ತಳತೆಯಿದ್ದು, ಈಶ್ವರಪುರದ ಹೊರಗೋಡೆಯನ್ನು ಪ್ರತಿನಿಧಿಸುತ್ತದೆಂದೂ ಮತ್ತು ಇದನ್ನು ಮರದಲ್ಲಿ ಕಟ್ಟಿದ್ದರೆ೦ದೂ ಹೇಳಲಾಗುತ್ತದೆ. ಇದರ ಮೇಲಿನ ಭಾಗದಲ್ಲಿ ಇರಾವತದ ಮೇಲೆ ಕುಳಿತ ಇಂದ್ರನ ಕೆತ್ತನೆಯಿದೆ. ಹೊರಗೋಡೆಯ ನಂತರ ದೇವಸ್ಥಾನವನ್ನು ಮೂರು ಭಾಗಗಳನ್ನಾಗಿ ನೋಡಬಹುದು. ಪ್ರತಿಭಾಗದ ಕಂಭಗಳ ಮೇಲಿರುವ ಹಾಸುಕಲ್ಲುಗಲ್ಲಿ ಸುಂದರವಾದ ಕೆತ್ತನೆಗಳಿವೆ. ಈ ಮೂರು ಭಾಗಗಳಲ್ಲಿ, ರಾಮಾಯಣದ ವಾಲಿ, ಸುಗ್ರೀವ, ಮಹಾಭಾರತದ ಕೃಷ್ಣ, ಅರ್ಜುನರ ಕೆತ್ತನೆಗಳು, ಜೊತೆಜೊತೆಗೆ ಆ ಮಹಾಗ್ರಂಥಗಳಲ್ಲಿ ಬರೆದ ಕೆಲವು ಕತೆಗಳ ಬಗೆಗಿನ ಉಲ್ಲೇಖವಿದೆ. ಇದಲ್ಲದೆ ಯಮರಾಜ, ನರಸಿಂಹ, ಹಿರಣ್ಯಕಶಿಪು, ಅಗ್ನಿ, ವರುಣ, ಅಪ್ಸರೆಯರು, ದ್ವಾರಪಾಲಕರು ಇನ್ನೂ ಮುಂತಾದ ದೇವತೆಗಳ ಕೆತ್ತನೆಗಳಿದ್ದು, ಹಿಂದೂಧರ್ಮದ ವಿವಿಧ ವಿಭಾಗಗಳನ್ನು, ಕತೆಗಳನ್ನು ಇಲ್ಲಿ ನೋಡಬಹುದು. ದೇವಸ್ಥಾನದ ಎರಡೂ ಭಾಗದಲ್ಲಿ ಪಾಳುಬಿದ್ದ ಗ್ರ೦ಥಾಲಯಗಳನ್ನು ಕಾಣಬಹುದು.

ಅಂದಾಜು ೨೦೦ ಮೀಟರ್ ನಡೆದು, ಎರಡು ಗೋಪುರಗಳನ್ನು ದಾಟಿದರೆ ಈ ದೇವಸ್ಥಾನದ ಮೂರನೆ ಹ೦ತ ತಲುಪುತ್ತೇವೆ. ಈ ಭಾಗ ಎಲ್ಲಕ್ಕಿಂತ ಉತ್ತಮ ಸ್ಥಿತಿಯಲ್ಲಿದ್ದು, ಗೋಡೆಯ ಸುತ್ತಲ ಕೆತ್ತನೆಗಳ ರೂಪಗಳು ಸ್ಪುಟವಾಗಿ ಕಾಣುತ್ತವೆ. ಯಾವ ರೀತಿಯ ಮೂಲ ವಿಗ್ರಹವಿಲ್ಲದೆ, ದೀಪಗಳ ಪ್ರಭೆಯಿಲ್ಲದೆ, ಹೂವು, ಗಂಧಾಕ್ಷತೆಗಳ ಕಂಪಿಲ್ಲದೆ, ತೆರೆದ ಪುಸ್ತಕದಂತೆ ನಿಂತ ಈ ಕಟ್ಟಡವನ್ನು ನೋಡಿದಾಗ ಕಣ್ಣುಗಳು ತೇವವಾದವು. ಬಹುಶಃ ಅದು ನಾನು ಹುಟ್ಟಿ ಬೆಳೆದು ಬಂದ ಸಂಸ್ಕೃತಿಯ ಪರಿಣಾಮವಿರಬಹುದು. ಹಿಂದು ಧರ್ಮದ ಪರಿಚಯವಿರದ ಪ್ರೇಕ್ಷಕನ ಮನ ಯಾವ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಬಹುದೆ೦ದು ನಾನು ಊಹಿಸಲಾರೆ. ಇವೆಲ್ಲ ಭಾವನೆಗಳ ಹಿನ್ನಲೆಯಲ್ಲೂ, ಕೆ೦ಪುಕಲ್ಲಿನಲ್ಲಿ ಕೆತ್ತಿರುವ, ಚಚ್ಚೌಕವಾದ ಈ ಮನ ಮೋಹಕ ಒಳ ಪ್ರಾಕಾರದ ಗರ್ಭಗುಡಿಯ ಮು೦ದೆ ನಿ೦ತಾಗ ನನ್ನ ಮನಸ್ಸು ತ೦ತಾನೆ ಕುವೆ೦ಪುರವರ ”ಗ೦ಟೆಗಳ ಧ್ವನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪುರದಾರತಿಯ ಜ್ಯೋತಿಯಿಲ್ಲ, ಭಗವ೦ತನಾನ೦ದ ರೂಪುಗೊ೦ಡಿಹುದಿಲ್ಲಿ” ಕವಿತೆಯನ್ನು ಮತ್ತೆ, ಮತ್ತೆ ಹಾಡತೊಡಗಿತು.

ಕೆ೦ಪುಕಲ್ಲಿನ ಒಡವೆಯೆ೦ತೆ, ಉರಿ ಬಿಸಿಲಿಗೆ ಶಿವನ ತ್ರಿಶೂಲದ೦ತೆ ಥಳಥಳನೆ ಹೊಳೆಯುವ ಈ ದೇವಸ್ಥಾನದ ಪ್ರತಿ ಇ೦ಚಿನಲ್ಲೂ ಸು೦ದರವಾದ ಕೆತ್ತನೆಯಿದೆ. ಅಪ್ಸರೆಯರ ನಾಟ್ಯಭ೦ಗಿಗಳು ನಮ್ಮ ಶಿಲಾಬಾಲಿಕೆಯರನ್ನು ನೆನಪಿಸುತ್ತವೆ. ಗುಡಿಯ ಮಧ್ಯದ ಆವರಣದಲ್ಲಿ ಕೈಮುಗಿದು ನಿ೦ತ ಆ೦ಜನೇಯನ ಪ್ರತಿಮೆಗಳಿವೆ. ಕಾಂಬೊಡಿಯಾದ ಪ್ರತಿ ದೇವಸ್ಥಾನಗಳಂತೆ ಇಲ್ಲಿಯೂ ಸುತ್ತ ಇದ್ದಿರಬಹುದಾದ ಪುಷ್ಕರಣಿಗಳು ನೀರಿಲ್ಲದೆ ಒಣಗಿವೆ.

ಸಾವಿರಾರು ವರ್ಷಗಳು, ಪೂಜೆಯಿಲ್ಲದೆ, ಮಳೆಬಿಸಿಲಿನ ಹೊಡತಕ್ಕೆ ತುತ್ತಾಗಿದ್ದರೂ, ಜಗ್ಗದೇ ನಿ೦ತ ಈ ಅತ್ಯಮೂಲ್ಯ ಕೃತಿಯನ್ನು ನೋಡುವ ಭಾಗ್ಯ ಇನ್ನೂ ನಮಗಿರುವುದು ನಮ್ಮ ಅದೃಷ್ಟವೆನ್ನಬಹುದು. ಭಾರತದಲ್ಲಿ ಹುಟ್ಟಿದ ಹಿ೦ದೂಧರ್ಮ ಸಾವಿರಾರು ಮೈಲಿ ದೂರದ ಕಾ೦ಬೋಡಿಯದಲ್ಲಿ ವ್ಯಾಪಾರಿಗಳ ಮೂಲಕ ಪಯಣಿಸಿ, ಆಗಿನ ಅರಸರ ಧರ್ಮವಾಗಿ ನೂರಾರು ವರ್ಷಗಳು ಬೆಳೆದು, ಬದುಕಿದ್ದು ಒ೦ದು ರೀತಿಯ ಪವಾಡವೆ ಸರಿ. ನಂತರದ ಶತಕಗಳಲ್ಲಿ ಬೌದ್ಧ ಧರ್ಮ ಇಲ್ಲಿ ಪ್ರಸಿದ್ದಿಯಾಗಿ, ಈ ದೇವಸ್ಥಾನಗಳು ನೂರಾರು ವರ್ಷ ಯಾವ ರೀತಿಯ ಗುರುತಿಲ್ಲದೆ, ಪೂಜೆಯಿಲ್ಲದೆ ನಿರ್ಲಕ್ಷಕ್ಕೆ ಒಳಗಾಗಿದ್ದರೂ ಒಂದು ಕಾಲದಲ್ಲಿ ವಿಜೃ೦ಭಿಸಿ, ವೈಭವದ ಮೇರುಪರ್ವತವನ್ನೇರಿದ ಗುರುತು ಅಳಿಯದೇ ಉಳಿದಿದೆ. ಇದು ನಿಜಕ್ಕೂ ಸೌಂದರ್ಯದ ಕೋಟೆಯೆ ಸರಿ (ಸಿಟಡೆಲ್ ಅಫ್ ಬ್ಯೂಟಿ).

ದಾಕ್ಷಾಯಿಣಿ ಗೌಡ

ನಮ್ಮ ಅಳತೆಯನ್ನು ತಿಳಿಸುತ್ತಿರುವ ಲಾಕ್ ಡೌನ್ ಮತ್ತು Lock down ಕರಾಮತ್ತು

ಈ ವಾರದ ಸಂಚಿಕೆಯಲ್ಲಿ ಲಾಕ್ ಡೌನ್ ಬಗ್ಗೆ ಎರಡು ರೀತಿಯ ವಿಶಿಷ್ಟ ಬರಹಗಳಿವೆ. ಮೊದಲ ಬಾರಿಗೆ ಅನಿವಾಸಿ ಈ-ಜಗುಲಿಯ (ಮೇ ತಿಂಗಳ ೩೦ನೇ ತಾರೀಖು) ಹರಟೆ, ಸಮಾಜಿಕ ಮಾಧ್ಯಮದಲ್ಲಿ ಶುರುವಾಯಿತು. ಇದರಲ್ಲಿ ಲಾಕ್ ಡೌನ್ ಬಗೆಗೆ ನಡೆದ ಹರಟೆಯಲ್ಲಿ ಹಂಚಿಕೊಂಡ ಚಿಂತನೆ ಮತ್ತು ಇದರಿಂದ ಪ್ರೇರೇಪಿತವಾಗಿ ಬರೆದ ಕವಿತೆಯನ್ನು ನಿಮ್ಮ ಮುಂದಿಡಲಾಗಿದೆ.
ಮೊದಲನೆಯದಾಗಿ, ಯೋಗೀಂದ್ರ ಮರವಂತೆಯವರ ಚಿಂತನೆಯ ಲಹರಿ, ನಾವು ಜೀವನದ ಎಲ್ಲಾ ಘಟ್ಟಗಳಲ್ಲೂ ಅತಿ ಎಚ್ಚರಿಕೆಯಿಂದ, ನಮ್ಮ ಸ್ವಾರ್ಥದ ದೃಷ್ಟಿಯಿಂದ ಅಳೆದು, ಸುರಿದು, ನಮ್ಮ ಮುಂದಿರುವ ಪರಿಸ್ಥಿತಿಗಳನ್ನು ನಿಭಾಯಿಸುವುದರಲ್ಲಿ ನಿಸ್ಸೀಮರಾಗಿದ್ದರೂ, ನಾವೆಂದು ಊಹಿಸದಿದ್ದ, ಪ್ರಪ೦ಚವನ್ನೆ ತಲ್ಲಣಗೊಳಿಸಿದ, ನಮ್ಮ ಅಳತೆಗೆ ಸಿಗಲಾರದ ಸ್ಥಿತಿ ಎದುರಾದಾಗ ನಮ್ಮ ನಿಜವಾದ ಬಣ್ಣ ಬಯಲಾಗುತ್ತದೆಯೆ ಅಥವಾ ನಮಗೇ ಅರಿವಿಲ್ಲದೆ ನಮ್ಮಗಳಲ್ಲಿ ಹುದುಗಿರಬಹುದಾದ ಹೊಸ ಸ್ಥೈರ್ಯ, ಅನುಕಂಪ, ಮಾನವೀಯತೆಯ ಪರಿಚಯವಾಗುತ್ತದೆಯೆ ಎನ್ನುವ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ.
ಎರಡನೆಯದಾಗಿ, ರಮ್ಯಾ ಭಾದ್ರಿಯವರ ಕವಿತೆ, ಈ ಅಭೂತಪೂರ್ವ ಲೋಕದಲ್ಲಿ, ನಾವು ಕಾಲದ ಅನುಕೂಲಕ್ಕಾಗಿ ರಚಿಸಿಕೊಂಡ, ಸಾಮಾಜಿಕ ಮಾಧ್ಯಮದ ಹೊಸ ಸಮಾಜ ತ೦ದುಕೊಟ್ಟ ಸ೦ವಹನೆ, ಸಾಂತ್ವನ, ಸಂತೋಷಗಳ ಪರಿಚಯವನ್ನು ಹಾಸ್ಯದ ಸಿಹಿ ಲೇಪಿಸಿ, ಪ್ರಾಸಬದ್ಧವಾಗಿ ನಮ್ಮನ್ನು ರಂಜಿಸುತ್ತದೆ. ಈ ಕವಿತೆಯಲ್ಲಿ ಮುಂದೆ ಎದುರಿಸಬೇಕಾದ ಭವಿಷ್ಯದ ಬಗೆಗಿನ ಕಳಕಳಿ ಮತ್ತು ನಮ್ಮ ಪರಿಚಿತ, ವಾಸ್ತವ ಪ್ರಪ೦ಚಕ್ಕೆ ತೆರಳುವ ಕಾತುರ, ಇದನ್ನು ನಾವೆಲ್ಲರು ಒಟ್ಟಾಗಿ ಎದುರಿಸಿ, ಗುರಿಸೇರಬಲ್ಲೆವೆನ್ನುವ ಆಶಾವಾದವೂ ಸೇರಿದೆ – ಸಂ

ನಮ್ಮ ಅಳತೆಯನ್ನು ತಿಳಿಸುತ್ತಿರುವ ಲಾಕ್ ಡೌನ್

(ಈ-ಜಗುಲಿ, ಅನಿವಾಸಿ ಯು ಕೆ ಕೂಟದ ಮೊದಲ ಹರಟೆಯಲ್ಲಿ ಯೋಗೀಂದ್ರ ಮರವಂತೆ ಹಂಚಿಕೊಂಡ ಕಿರುಲಹರಿ)

This image has an empty alt attribute; its file name is e-jaguli-1.jpg
ಚಿತ್ರ‌ . ಲಕ್ಷ್ಮೀನಾರಾಯಣ ಗುಡೂರ

ಯಾವ ಕಾಲಕ್ಕೆ ಯಾರನ್ನು ಎದುರು ಹಾಕಿಕೊಳ್ಳಬಾರದು, ಅಂತ ಯೋಚಿಸುತ್ತಲೇ ಘಟನೆಗಳನ್ನು, ಮನುಷ್ಯರನ್ನು ಎದುರಿಸುವವರು ನಾವು. ಪರೀಕ್ಷೆಯೋ “ವೈವಾ”ವೋ ಇದ್ದರೆ ಸಂಬಂಧಪಟ್ಟ ಅಧ್ಯಾಪಕರನ್ನು ಎದುರು ಹಾಕಿಕೊಂಡರೆ ಉತ್ತೀರ್ಣರಾಗುತ್ತೇವೋ ಇಲ್ಲವೋ ಎನ್ನುವ ಭಯ ಇರುತ್ತದಲ್ಲ ಹಾಗೆ ಈ ಕೋವಿಡ್ ಲಾಕ್ ಡೌನ್ ಕಾಲದಲ್ಲಿ ವೈದ್ಯರನ್ನು ಎದುರು ಹಾಕಿಕೊಂಡರೆ ಕಷ್ಟ. ಹಲವು ವೈದ್ಯಮಿತ್ರರೇ ಕೂಡಿ ಸಂಘಟಿಸಿರುವ ಅನಿವಾಸಿ ಬಳಗದ “ಈ -ಜಗುಲಿ” ಕಾರ್ಯಕ್ರಮಕ್ಕೆ ಹಾಗಾಗಿ ಬರುವುದಿಲ್ಲ ಅಂತ ಹೇಳುವ ಹಾಗಿರಲಿಲ್ಲ.

ನಾವೆಲ್ಲರೂ ಈ ” ಲಾಕ್ ಡೌನ್” ಬಂಧನದಲ್ಲಿ ಇರುವವರು. ಈಗಾಗಲೇ ಬಂಧನದಲ್ಲಿ ಇರುವವರನ್ನು “ಈ-ಜಗುಲಿ “ಯಲ್ಲಿ ತಂದು ಮತ್ತೆ ಬಂಧಿಸಿದ್ದು, ಕೈದಿಗಳ ಸಮ್ಮೇಳನದ ತರಹ ಕಾಣಿಸುತ್ತಿದೆ . ಮತ್ತೆ ಜಗುಲಿಯಲ್ಲಿ ಯಾರೊಡನೆ ಕೂತು ಮಾತಾಡಿದರೂ ಅದು ವಿಶಿಷ್ಟ ಅನುಭವವೇ. ಜಗುಲಿಗೆ ಕಿಟಕಿ ,ಬಾಗಿಲು,ಕಂಬಿ, ಬೀಗ, ಅಗುಳಿ ಯಾವುವೂ ಇರುವುದಿಲ್ಲ. ಖುಲ್ಲಂ ಖುಲ್ಲಾ ಮಾತಾಡುವುದಕ್ಕೆ ಬಹಳ ಸೂಕ್ತ ಜಾಗ. ಮನಸಿನ ಆಳದ್ದು, ತೀರ ಒಳಗಿನದು ಜಗುಲಿಯಲ್ಲಿ ಕೂತು ಮಾತಾನಾಡುವಾಗ ಅನಾಯಾಸವಾಗಿ ಹೊರಗೆ ಬಂದು ಬಿಡುತ್ತದೆ. ಅಥವಾ ಒಬ್ಬರೇ ಕೂತು ಯೋಚಿಸಲಿಕ್ಕೂ ಆತ್ಮ ವಿಮರ್ಶೆ ಮಾಡಿಕೊಳ್ಳಲಿಕ್ಕೂ ಈ ಜಗುಲಿ, ಆ ಜಗುಲಿ ಎಲ್ಲ ಜಗುಲಿಗಳೂ ಪ್ರಶಸ್ತ . ಎಲ್ಲರ ಬದುಕಿನಲ್ಲಿ ಏನೋ ಒಂದು ತೀವ್ರವಾದದ್ದು ನಡೀತಾ ಇರುವಾಗ ಹೀಗೆ ಜಗುಲಿ ಮೇಲೆ ನಾವೆಲ್ಲ ಕೂತು ಮಾತಾಡುತ್ತಿರುವುದು ಹಿತ ಅನ್ನಿಸುತ್ತಾ ಇದೆ.

ದಿನ ಬೆಳಗಾದರೆ ಅಳತೆಕೋಲು ಅಥವಾ ಸ್ಕೇಲ್ ಹಿಡಿದುಕೊಂಡು ಓಡಾಡುವವರು ನಾವು. ನಮ್ಮ ಅಳತೆ ಪಕ್ಕದವರದ್ದು ಹೇಗೆ ,ಎದುರು ಸಿಕ್ಕವರದ್ದು ಹೇಗೆ ,ಮತ್ತೊಬ್ಬರದು ಏನು, ಹೇಗೆ ಎಂದು ಅಳೆಯುತ್ತಿರುತ್ತದೆ. ನಮ್ಮ ಅವರ ಇವರ ಹುದ್ದೆ, ಕೌಶಲ ಪ್ರತಿಭೆ, ಜೀವನ ಶೈಲಿ, ಸಂಸಾರ, ಸುಖ ದುಃಖ, ಕಲೆ, ಸಾಹಿತ್ಯ, ಆರೋಗ್ಯ ಎಲ್ಲವೂ ನಿರಂತರವಾಗಿ ನಮ್ಮ ನಮ್ಮ ಕೈಯ ಅಳತೆಕೋಲಿನ ಅಳತೆಯ ವಸ್ತುಗಳು . ಬೆಳಗಿಂದ ರಾತ್ರಿಯ ತನಕ, ಹುಟ್ಟಿನಿಂದ ಸಾವಿನ ತನಕ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಳತೆ ಪ್ರಕ್ರಿಯೆಯಲ್ಲಿ ತಲ್ಲೀನರು ನಾವು. ಈಗಿನ ಲಾಕ್ ಡೌನ್, ಕೊರೊನ ದಾಳಿ ಸ್ವಲ್ಪ ಮಟ್ಟಿಗೆ ನಮ್ಮ ನಿಜವಾದ ಅಳತೆಯನ್ನು ನಾವಿದ್ದಲ್ಲಿಗೆ ತಂದು ಒಪ್ಪಿಸುವ ಕೆಲಸ ಮಾಡಿದೆ. ಈ ಕಾಲಕ್ಕೆ ಆಗಬಾರದ ಅನಾಹುತಗಳು, ಅನಾವಶ್ಯಕ ಸಾವುಗಳು, ಸಂಕಟಗಳು ಸುಮಾರು ಆಗಿದ್ದರೂ ಅವುಗಳ ಎಡೆಯಲ್ಲಿ ನಮ್ಮನ್ನು, ನಮ್ಮ ಸುತ್ತಮುತ್ತಲನ್ನು ಅರಿಯುವ, ತಿಳಿಯುವ ಅವಕಾಶ ಲಾಕ್ ಡೌನ್ ಮಾಡಿಕೊಟ್ಟಿದೆ.

ಮೊನ್ನೆ ಮೊನ್ನೆ ಮೈಸೂರಲ್ಲಿ ನಡೆದ ಒಂದು ಘಟನೆಯ ಬಗ್ಗೆ ನೀವು ಕೇಳಿರಬಹುದು. ಅಲ್ಲಿನ ಒಂದು ಸಂಸ್ಥೆ ಕಳೆದ ಒಂದು ತಿಂಗಳಿಂದ ಈ ಕಾಲಕ್ಕೆ ಆಶ್ರಯ ಕಳಕೊಂಡವರಿಗೆ, ಹಸಿದ ಕಾರ್ಮಿಕರಿಗೆ, ಊಟ ನೀಡುವ ವ್ಯವಸ್ಥೆ ಮಾಡಿದೆ. ಇಂತಹ ಅನ್ನದಾನ ಶಿಬಿರಕ್ಕೆ ಕಮಲಮ್ಮ ಎನ್ನುವ ಎಪ್ಪತ್ತು ಪ್ರಾಯದ ಮಹಿಳೆ ನಡೆದು ಬಂದಳು. ಇವಳನ್ನು ನೋಡಿದ ಸಂಘಟಕರು ಈಕೆ ಸಹ ಊಟಕ್ಕೆ ಬಂದಿರಬೇಕು ಅಂದುಕೊಂಡರು. ಅಲ್ಲಿಗೆ ಬಂದ ಈಕೆ ಶಿಬಿರದ ಆಯೋಜಕರನ್ನು ಕಂಡು ಅವರಿಗೆ ಐದುನೂರು ರೊಪಾಯಿಗಳನ್ನು ಕೊಟ್ಟು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಸಣ್ಣ ದೇಣಿಗೆ ತೆಗೆದುಕೊಳ್ಳಿ ಎಂದಳು. ತಿಂಗಳಿಗೆ ಆರುನೂರು ರೊಪಾಯಿಯ ಪಿಂಚಣಿ ಪಡೆಯುವವಳು ಕಮಲಮ್ಮ, ಆಕೆಯ ವಯಸ್ಸಿನ ಕಾರಣದಿಂದ ಮಾಡುತ್ತಿದ್ದ ಮನೆಗೆಲಸವೂ ತಪ್ಪಿಹೋಗಿತ್ತು . ಸಂಘಟಕರೂ ಮೊದಲಿಗೆ ಬೇಡವೆಂದರೂ ಇಷ್ಟು ಉದಾತ್ತ ಯೋಚನೆಯ ಸರಳ ಜೀವಿಗೆ ಗೌರವ ಸೂಚಕವಾಗಿ ಹಣವನ್ನು ಸ್ವೀಕರಿಸಿದರು. ಕೋವಿಡ್ ಸಂಧಿಗ್ಧದ ಈ ಕಾಲದಲ್ಲಿ ಹಲವು ದಾನಿಗಳು ಜಗತ್ತಿನ ಮೂಲೆಮೂಲೆಯಲ್ಲಿ ಹಣದ ದೇಣಿಗೆ ನೀಡಿದ್ದಾರೆ. ಟಾಟಾ ,ಪ್ರೇಂಜಿ ,ಗೇಟ್ಸ್ ಇನ್ನಿತರ ಉದ್ಯಮಿಗಳು ನಮ್ಮ ಊಹೆಗೆ ಮೀರಿದ ಮೊತ್ತವನ್ನು ದಾನ ಮಾಡಿದ್ದಾರೆ . ಆದರೆ ಈ ಜಗತ್ತಿನ ಮನುಷ್ಯರನ್ನೆಲ್ಲ ಒಂದೆಡೆ ಅವರ ದುಡಿಮೆಯ ಆಧಾರದ ಮೇಲೆ ಸಾಲಾಗಿ ನಿಲ್ಲಿಸಿದರೆ ಆ ಸಾಲಿನ ಕೊನೆಯ ಕೆಲವು ಜನರ ಪೈಕಿ ಒಬ್ಬಳಾಗಿ ಕಾಣುವ ಕಮಲಮ್ಮ ಕೊಟ್ಟ ದೇಣಿಗೆ ಮುಖಬೆಲೆಯಲ್ಲಿ ಧೂಳಿನ ಕಣದಂತೆ, ದೊಡ್ಡ ಮೊತ್ತಗಳ ದೇಣಿಗೆಯ ಎದುರಿಗೆ ಕಂಡರೂ ಮಾನವೀಯ ಮೌಲ್ಯದ ನೆಲೆಯಲ್ಲಿ ಅತ್ಯಂತ ಶ್ರೇಷ್ಠವಾದುದು. ಕನಿಷ್ಠ ಜೀವನಶೈಲಿ ದುಡಿಮೆಯಲ್ಲಿರುವ ವ್ಯಕ್ತಿಯ ಗರಿಷ್ಠ ಸಹಾಯ, ಸಹಕಾರ, ದಾನ ಮತ್ತು ಹೃದಯ ವೈಶಾಲ್ಯತೆಯ ಉದಾಹರಣೆ ಇದು. ಇಂತಹ ನೂರಾರು ಸೂಕ್ಷ್ಮ ಸಂವೇದನಾಶೀಲ ಕತೆಗಳು ಈ ಕಾಲಕ್ಕೆ ಜಗತ್ತಿನ ಮೂಲೆಮೂಲೆಯಲ್ಲಿ ಕಂಡುಕೇಳಿಬರುತ್ತಿವೆ . ಮತ್ತೆ ಇವೇ ನಮ್ಮನ್ನು ಸರಿಯಾಗಿ ಅಳೆಯಲಿಕ್ಕೆ ತೂಗಲಿಕ್ಕೆ ಸಹಾಯ ಮಾಡುತ್ತಿವೆ . ತನ್ನೊಳಗೆ ಇಂತಹ ಹಲವು ಕಥೆ, ವ್ಯಥೆ, ಕತೆಯ ವ್ಯಥೆ ,ವ್ಯಥೆಯ ಕತೆಗಳನ್ನು ತುಂಬಿಕೊಂಡ ಲಾಕ್ ಡೌನ್ ಮುಂದೊಂದು ದಿನ ಪೂರ್ತಿಯಾಗಿ ಮುಗಿಯಬಹುದು. ಆದರೆ ಈ ಸಮಯ ನಮಗೆ ಕೊಟ್ಟ ಕೊಡುತ್ತಿರುವ ಸ್ಪೂರ್ತಿದಾಯಕ ಘಟನೆಗಳು ಸ್ವಅವಲೋಕನದ ಅವಕಾಶ ಮುಂದುವರಿಯುತ್ತಲೇ ಇರಬೇಕಾಗಿದೆ . ನಿತ್ಯವೂ ಮನೆಯಲ್ಲಿ ಕನ್ನಡಿಯಲ್ಲಿ ಮುಖ ನೋಡಿಕೊಳ್ಳದೆ ಹೊರಬೀಳದ ನಾವು ಹೀಗೆ ನಮಗೆ ಲಭ್ಯ ಆಗಿರುವ ಮಾನವೀಯತೆಯ ಮನುಷ್ಯತ್ವದ ಕನ್ನಡಿಗಳಲ್ಲಿ ದಿನವೂ ನಮ್ಮನ್ನು ನೋಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಲಾಕ್ ಡೌನ್ ಕಾಲ ನಮ್ಮ ಸರಿಯಾದ ನಿಜವಾದ ಅಳತೆಗಳನ್ನು ನಮಗೆ ಮುಟ್ಟಿಸುವ ಕನ್ನಡಿಯಾಗಲಿ ಎನ್ನುವ ಹಾರೈಕೆಯೊಂದಿಗೆ …. ಅವಕಾಶ ಆಲಿಸುವಿಕೆಗೆ ವಂದನೆಗಳು.

ಯೋಗೀಂದ್ರ ಮರವಂತೆ

Lock down ಕರಾಮತ್ತು

courtesy -ITV

ಪ್ರಪಂಚದ ಮೂಲೆಯೊಂದರಿಂದ ಕೊರೋನಾ ಸುದ್ದಿ ಕೇಳಿ ಬಂತು
ನಮಗ್ಯಾಕೆ ಅದರ ಉಸಾಬರಿಯಂದು ಮನವಂತು
ನೋಡುತ್ತಿದ್ದಂತೆಯೇ ಊರು ಕೇರಿ ಬೀದಿಯವರು ಹರಡಿತು
ಹೇಗೋಎಂತು ಕೊರೋನಾ ಬಂದೆ ಬಂತು ಜೊತೆಗೆ lockdownನು ತಂತು!

ಎಲ್ಲೆಲ್ಲೂ Lock downನದೆ ಕರಾಮತ್ತು
ಇದರರಿಂದ ಬಿತ್ತು ಎಲ್ಲರ ಸ್ವಾತಂತ್ರ್ಯಕ್ಕೂ ಕುತ್ತು
ಸೃಷ್ಟಿಯಾಯ್ತು ಅಂತರ್ಜಾಲದ ಸುತ್ತ ಸುತ್ತುವ ಮನೆಯಂಬ ಹೊಸಜಗತ್ತು
ಇಲ್ಲಿ ದಿನ ವಾರಗಳೇ ತಿಳಿಯದೆ ಕಳೆದಿದೆ ಹೊತ್ತು

ಅಮ್ಮನಿಗೆ ಅಡುಗೆಯ ಚಿಂತೆ
ನಿಲ್ಲದ ಅಪ್ಪನ ಮೀಟಿಂಗ್ಗಳ ಘಂಟೆ
ಬಗೆಹರಿಯದ ಮಕ್ಕಳ ತುಂಟಾಟದ ತಂಟೆ
ಅಜ್ಜ ಅಜ್ಜಿಯರ ಪ್ರತ್ಯೇಕತೆಗೆ ವಿಡಿಯೋ ಕಾಲ್ ಒಂದೇ ಸಂಗಾತಿಯಂತೆ

ಜೊತೆಯಲ್ಲಿದ್ದರು ಇಲ್ಲದ ಹಾಗೆ ಕಳೆದ ಸಮಯವೇ ಹೆಚ್ಚು
ಒಟ್ಟಿಗೆ ಬೆರೆಯಲು ಸಾವಕಾಶವಿದ್ದರೂ social media ಒಡನಾಟವೇಅಚ್ಚುಮೆಚ್ಚು
ಹಿಂದೆಂದೂ ಇರದ ಮುಂದೆಂದೂ ಬಾರದ ಪರಿವಾರದೊಂದಿಗಿನ ಸುಂದರ ಕ್ಷಣಗಳಿವು
ಎಂದೆಂದೂ ಚಂದದ ಸವಿ ನೆನಪುಗಳನ್ನಾಗಿಸುವವರು ನಾವು

ಹಿಂತಿರುಗಿ ನೋಡಲು ಆ ಹಳೆಯ ಬದುಕಿಗೆ ಮರಳಲು ಹಾತೊರೆದಿದೆಮನ
ಭವಿಷ್ಯದ ಅನಿಶ್ಚಿತತೆಗೆ ಕಳವಳಗೊಂಡು ದೂಡುವಂತಾಗಿದೆ ದಿನ
ಏನೇ ಆದರೂ ಪರಿವಾರದ ಒಗ್ಗಟ್ಟು ನೀಡಿಹುದು ಎದುರಿಸುವಧೈರ್ಯವನ್ನ
ಹೊಸ ಹುರುಪಿನಿಂದ ಕಾರ್ಯೋನ್ಮುಖರಾಗಿ ನಿರೀಕ್ಷಿಸುವ ಹೊಸಬದುಕನ್ನ.

ರಮ್ಯ ಭಾದ್ರಿ