ಪರಿಚಯ: ಡಾ.ಗುರುಪ್ರಸಾದ್ ಅವರು ತಮ್ಮ ಪರಿಚಯವನ್ನು ನಮ್ಮೊಂದಿಗೆ ಮಾಡಿಕೊಂಡಿದ್ದಾರೆ.
ನಾನು, ಡಾ. ಗುರುಪ್ರಸಾದ್ ಪಟ್ವಾಲ್, ಮೂಲತಃ ಕರಾವಳಿಯ ಬೈಂದೂರಿನವನು. ಕಡಲ ತೀರದ ತಂಗಾಳಿ, ಮನೆಯ ತಂಪಿನ ಅಂಗಳಕೆ ಸೂರ್ಯಾಸ್ತದ ಕೆಂಪು ರಂಗೋಲಿ, ಅಡುಗೆ ಮನೆಯಿಂದ ದಿನಾಲು ಮೀನೂಟದ ಸವಿ ಗಾಳಿ. ಅದನ್ನೆಲ್ಲ ಬಿಟ್ಟು, ಈ ಇಂಗ್ಲೆಂಡ್ ಎಂಬ ಶೀತ ದ್ವೀಪಕ್ಕೆ ಏಕೆ ಬಂದ ಎಂದು ನಿಮಗೆ ಈಗ ಬಂದ ಆಲೋಚನೆ ನನಗೆ ದಿನಾಲು ಸುಪ್ರಭಾತ. ಬಂದು ಹದಿನೈದು ವರ್ಷ ಕಳೆದು, ವೈದ್ಯ ವೃತ್ತಿಯಲ್ಲಿ ತೊಡಗಿಸಿ ಕೊಂಡರೂ, ಕನ್ನಡ ಮಾಧ್ಯಮದ ಶಾಲೆಯಲ್ಲಿ ಓದಿದ ಕಾಲದಲ್ಲಿ ಮೈಗೂಡಿದ ಓದುವ ಹಾಗೂ ಬರೆಯುವ ಅಭ್ಯಾಸ, ಹವ್ಯಾಸಕ್ಕಾಗಿ ವೇಷ ಕಟ್ಟಿ ಯಕ್ಷಗಾನದಲ್ಲಿ ಕುಣಿಯುತ್ತಿದ್ದ ಆ ಬಣ್ಣದ ಗೀಳು, ಇಲ್ಲಿ ಸಿಕ್ಕ ಸ್ನೇಹಿತರ ಪ್ರೋತ್ಸಾಹದಿಂದ ಪುನಃ ಚೇತರಿಸಿ ಕೊಂಡಿದೆ. ನಿಮ್ಮ ರಚನಾತ್ಮಕ ಹಿನ್ನುಣಿಕೆಗೆ ನಾನು ಚಿರ ಋಣಿ.

1)ಅಮ್ಮ
ನಿರಾಕಾರ ದೇವರ ಆಕಾರ ನೀನು
ನಿರಾಧಾರ ಮನಸಿನ ಆಧಾರ ನೀನು
ನಿಸ್ವಾರ್ಥ ಜೀವನ ಮಾತೆಲ್ಲಾ ಜೇನು
ನೀನೇ ನನ್ನಮ್ಮ ನೀ ನನ್ನ ಹಾಲು ಜೇನು
ಮಗುವ ಮೊಗದ ಮುಗುಳು ನಗೆಯ
ಮುಗಿಲ ಮೊದಲ ಮಳೆಯ ಹನಿಯ
ಮುದವ ಕೊಡುವ ಮನದಿ ನೆಲೆವ
ಸಿಹಿಯ ಸವಿಯ ಕೊಡುವ ಮಕರಂದ
ಅಮ್ಮಾ ಅನ್ನೋ ಪದದ ಅಂದ
ಅಮ್ಮಾ ನಿನ್ನ ನಗೆಯ ಚಂದ

2)ನೀನೇನಾ
ನೀನೇನಾ ಕದ್ದು ನನ್ನ ನೋಡಿ ನಕ್ಕವಳು
ನೀನೇನಾ ಬಳುಕುತ ಬಲೆಯ ಬೀಸಿದವಳು
ನೀನೇನಾ ಅಧರದ ಮಧುರವ ಕೊಟ್ಟವಳು
ನೀನೇನಾ ಅಳಿಸದ ಚಿತ್ತಾರ ಹೃದಯದಿ ಬರೆದವಳು
ನೀನೇನಾ… ಅಂದು ಮರೆತು ತಿರುಗದೆ ನಡೆದವಳು..
3)ಏನು ಹೇಳಲಿ
ನಾ ಬರೆದೆ ನಿನ್ನ ಹೆಸರಲಿ
ನನ್ನ ಹೃದಯದ ಮಿಡಿತವ
ನಾ ಏನು ಹೇಳಲಿ ಈ ಬಡಿತಕೆ
ನೀ ಬರದಿರೂ ನಿನ್ನ ಹೆಸರಲಿ
ಮಿಡಿಯುವ ಹುಚ್ಚು ಹೃದಯಕೆ
4) ಕಳ್ಳಿ
ನಾ ಹತ್ತಿರ ಬಂದರೆ ನಾಚುತ ಓಡಿದೆ
ರಟ್ಟೆಯ ಹಿಡಿದರೆ ಹುಸಿನಗು ಬೀರಿದೆ
ಮುತ್ತನು ಕೊಡದಿದ್ದರೂ ಕೆಂದುಟಿ ಕಂಪಿದೆ
ಮುಸ್ಸಂಜೆಯ ಮುಗುಳ್ನಗೆ ಮುನ್ನೂರು ನುಡಿದಿದೆ
5) ನಿನ್ನ ಕೈಸೆರೆ
ಬಯಸದೆ ಸನಿಹದಿ ಸುಳಿದಿಹ ನೈದಿಲೆ
ಕನಸಲಿ ಸೊಗಸಲಿ ನುಡಿದಿಹ ಕೋಗಿಲೆ
ಅರಿಯದ ಮನದಲಿ ಅರಳಿದ ತಾವರೆ
ತಿಳಿಯದೆ ಮುದದಲಿ ಆದೆನಾ ಕೈಸೆರೆ
-ಡಾ. ಗುರುಪ್ರಸಾದ್ ಪಟ್ವಾಲ್
(ಚಿತ್ರಕೃಪೆ : ಲಕ್ಷ್ಮಿನಾರಾಯಣ್ ಗುಡೂರ್)
