ಸೊಗಸಿನ ಕ್ಷಣಗಳು( ಕವಿತೆ) ಮತ್ತು ಒಂದು ನಗೆ ಹನಿ (ಸ್ವಾಮಿ)

ಕನ್ನಡ ಕಾವ್ಯಲೋಕವನ್ನು ಅವಲೋಕಿಸಿದಾಗ ಅಲ್ಲಿ ಸೊಗಸು ಮತ್ತು ಸೌಂದರ್ಯಗಳ ಉಲ್ಲೇಖವನ್ನು ಯಥೇಚ್ಛವಾಗಿ ಕಾಣಬಹುದು. ಬದುಕಿನ ಸೊಗಸುಗಳನ್ನು ಇಂದ್ರಿಯಗಳ ಮೂಲಕ ಗ್ರಹಿಸಿ ಭಾವನೆಗಳ ಲೋಕದಲ್ಲಿ ಅದನ್ನು ಅನುಭವಿಸಿ ಕೊನೆಗೆ ಅದನ್ನು ಪದಗಳ ಮೂಲಕ ಕವನವಾಗಿ ಅಭಿವ್ಯಕ್ತಗೊಳಿಸುವುದು ಕವಿಯ ವಿಶೇಷ ಸಾಮರ್ಥ್ಯ. ಈ ಸೊಗಸನ್ನು ಅನುಭವಿಸಲು ಬದುಕಿನ ಬಗ್ಗೆ ಪ್ರೀತಿ ಇರಬೇಕು. ಇಲ್ಲದಿದ್ದಲ್ಲಿ ಅದು ನಮ್ಮ ದಿನನಿತ್ಯ ಬದುಕಿನ ಯಾಂತ್ರಿಕತೆಯಷ್ಟೇ ಆಗಿ ಉಳಿದುಬಿಡುತ್ತದೆ. ಕವಿತೆಯಲ್ಲಿಯ ರಸಿಕತೆ, ಬದುಕಿನ ಪ್ರೀತಿ ಎಂಬ ವಿಚಾರಗಳು ಯುರೋಪ್ ಸಾಹಿತ್ಯವಲಯಗಳಲ್ಲಿ ಸಂಭವಿಸಿದ ಸಾಹಿತ್ಯ ಕ್ರಾಂತಿಯಲ್ಲಿ ರೊಮ್ಯಾಂಟಿಕ್ ಪೊಯೆಟ್ರಿ ಎಂಬ ಹೆಸರಿನಲ್ಲಿ ಮೂಡಿಬಂದಿದೆ. ಈ ಸೊಗಸಿನ ಕ್ಷಣಗಳನ್ನು ಕುವೆಂಪು, ಬೇಂದ್ರೆ ಮತ್ತಿತರ ಕವಿಗಳ ಕವನಗಳಲ್ಲಿ ಕಾಣಬಹುದು. 'ಆನಂದಮಯ ಈ ಜಗ ಹೃದಯ' ಎಂಬ ಕುವೆಂಪು ಅವರ ಕವಿತೆ ಇದಕ್ಕೆ ಉತ್ತಮ ನಿದರ್ಶನ. ಇದೇ ಕವನದಲ್ಲಿ 'ಸೂರ್ಯೋದಯ, ಚಂದ್ರೋದಯ ದೇವರ ದಯೆಕಾಣೋ' ಎನ್ನುವ ಈ ಸಾಲಿನಲ್ಲಿ ಕವಿ ಬರಿ ನಿಸರ್ಗ ಸೌಂದರ್ಯವನ್ನಷ್ಟೇ ಅಲ್ಲ, ಅಲ್ಲಿ ಒಂದು ಆಧ್ಯಾತ್ಮಿಕ ಅನುಭಾವವನ್ನೂ ಪಡೆಯುತ್ತಾನೆ. ಕುವೆಂಪು ಹೇಳುವಂತೆ ‘ರವಿ ವದನವು ಶಿವವದನವೂ ಕೂಡ. ಶಿವನಿಲ್ಲದೆ ಸೌಂದರ್ಯವು ಇಲ್ಲ. ಶಿವ ಕಾವ್ಯದ ಕಣ್ಣೋ, ಶಿವ ಕಾಣದ (ಸೌಂದರ್ಯವನ್ನು ಕಾಣದ) ಕವಿ ಕುರುಡನೋ!’ ಈ ಒಂದು ಪರಿಕಲ್ಪನೆ "ಸತ್ಯಂ ಶಿವಂ ಸುಂದರಂ" ಎಂಬ ಸಾಲುಗಳಲ್ಲಿ ಕೂಡ ಅಭಿವ್ಯಕ್ತಗೊಂಡಿದೆ. ಕುವೆಂಪು ಅವರ ಇನ್ನೊಂದು ಕವನದಲ್ಲಿ ನಿಸರ್ಗದ ಸೊಗಸನ್ನು, ಬೆಳಕ್ಕಿಗಳು ನೀಲಾಕಾಶದಲ್ಲಿ ತೂಗುತ್ತ ಬರುವುದನ್ನು ನೋಡಿ ಭಾವ ಪರವಶರಾಗಿ 'ದೇವರು ರುಜು ಮಾಡಿದನು, ರಸವಶನಾಗುತ ಕವಿ ಅದ ನೋಡಿದನು'ಎಂದು ಬರೆಯುತ್ತಾರೆ. ಬೇಂದ್ರೆ ಅವರು 'ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದ, ಬಾಗಿಲು ತೆರೆದು ಬೆಳಕು ಹರಿದೂ ದೇವನು ಜಗವೆಲ್ಲ ತೊಯ್ದ' ಎಂದು ಸೂರ್ಯೋದಯದ ಬಗ್ಗೆ ಬರೆಯುತ್ತಾರೆ. ‘ಶ್ರಾವಣ ಬಂತು ಶ್ರಾವಣ’ ಎಂದು ಸಂತಸಪಡುತ್ತಾರೆ. ಈ ರೀತಿಯ ಅನೇಕ ಸೊಗಸಿನ ಕ್ಷಣಗಳನ್ನು ಕುವೆಂಪು ಮತ್ತು ಬೇಂದ್ರೆ ಅವರ ಪದ್ಯ-ಗದ್ಯ ಕೃತಿಗಳಲ್ಲಿ ಕಾಣಬಹುದು.

ಬಾಬ್ ಥೀಲ್ ಮತ್ತು ಜಾರ್ಜ ವೀಸ್ ರಚಿಸಿರುವ, ಖ್ಯಾತ ಗಾಯಕ ಲೂಯಿಸ್ ಆರ್ಮ್ ಸ್ಟ್ರಾಂಗ್ ಹಾಡಿರುವ ಈ ಗೀತೆಯ ಮೊದಲ ಪಂಕ್ತಿಯ ಸಾಲುಗಳು ಹೀಗಿವೆ;   
I see trees of green, red roses too
I see them bloom for me and you 
And think to myself 
What a wonderful world! 

ಈ ಒಂದು ಗೀತೆ ಬಹಳ ಜನಪ್ರೀಯವಾಗಿದೆ, ಇದು ಕೂಡ ಬದುಕಿನ ಪ್ರೀತಿಯ ಬಗ್ಗೆ ಬರೆದ ಕವನ ಎನ್ನಬಹುದು.  
ಡಾ. ಸತ್ಯವತಿ ಅವರು ಬದುಕಿನ ಹಲವಾರು ದೈನಂದಿಕ ಆಗು ಹೋಗುಗಳಲ್ಲಿ ಮತ್ತು ಸಾಧಾರಣ ಸರಳ ವಿಚಾರಗಳಲ್ಲಿ ಸೊಗಸಿನ ಕ್ಷಣಗಳನ್ನು ಕಂಡಿದ್ದಾರೆ ಮತ್ತು ತಮ್ಮ ಕೆಳಗಿನ (ಸೊಗಸಾದ) ಕವಿತೆಯಲ್ಲಿ ನಮಗೂ ಕಾಣಿಸಿದ್ದಾರೆ.


                                                                        *

ಬದುಕಿನ ಸೊಗಸಿನ ಕ್ಷಣದೊಂದಿಗೆ ಒಂದು ನಗುವನ್ನು ಸೇರಿಸಿ ನಕ್ಕು ಬಿಡೋಣ. ಉಮೇಶ್ ಅವರು ಬರೆದಿರುವ 'ಸ್ವಾಮಿ' ಎಂಬ ಕಿರು ಪ್ರಸಂಗ ಒಂದೇ  ಹೆಸರಿನಲ್ಲಿ ಅಡಗಿರುವ ಮತ್ತೊಂದು ಅರ್ಥ ಹೇಗೆ ಗೊಂದಲಕ್ಕೆ ಕಾರಣವಾಗಬಹುದು ಎಂಬುದಕ್ಕೆ ನಿದರ್ಶನವಾಗಿ ಒಂದು ತಿಳಿ ಹಾಸ್ಯ ಪ್ರಸಂಗವಾಗಿ ಮೂಡಿಬಂದಿದೆ.  

****

ಸೊಗಸಿನ ಕ್ಷಣಗಳು

ಮಾಗಿಯ ಚಳಿಯಲ್ಲಿ ಕುಳಿತು ಬಿಸಿ ಬಿಸಿ ಕಾಫಿಯನು
ಕೋಡುಬಳೆಯೊಂದಿಗೆ ಸವಿಯುವುದೊಂದು ಸೊಗಸು

ಬೆಳಗಾಗೆದ್ದು ಕಿಟಕಿಯಾಚೆಗೆ ಮುಖವನ್ನಿಟ್ಟು ಅಳಿದುಳಿದ 
ಕಾಳುಗಳ ಹೆಕ್ಕುತಿರುವ ಹಕ್ಕಿಗಳ ನೋಡುವುದೊಂದು ಸೊಗಸು

ಮನೆಯ ಮುಂದಿನ ಅಂಗಳದಿ ನಿಂತು ರಸ್ತೆಯಲಿ ಒಡಾಡುವ 
ಕಾರುಗಳ ಬಣ್ಣಗಳ ಗುರುತಿಸುವುದೊಂದು ಸೊಗಸು

ಮುಳುಗಿಹೋಗಿದೆ ಜಗವೆಂಬ ಗಾಬರಿಯಲಿ ಧಾವಿಸುವ
ಜನರ ಧಾವಂತಿಕೆ ನೋಡುವುದೊಂದು ಸೊಗಸು

ಲಲ್ಲೆ ಹೊಡೆಯುತ ಗೆಳೆಯರೊಡನೆ ಶಾಲೆಗೆ ನಿರ್ಯೋಚನೆಯಲಿ 
ಕುಣಿಯುತ ನಡೆವ ಮಕ್ಕಳ ನೋಡುವುದೊಂದು ಸೊಗಸು

ಭೂಮಿಯಲಿ ನಡೆವ ವ್ಯಾಪಾರವನು ಮೌನದಲಿ 
ನೋಡುವಾ ಆಗಸವ ನಿರುಕಿಸುವುದೊಂದು ಸೊಗಸು

ತನ್ನೆಲ್ಲ ಆಟದೀ ಗೊಂಬೆಗಳ ಆಟವನು ನೋಡುತ್ತ ತನ್ನಷ್ಟಕ್ಕೆ
ನಗುತಿರಬಹುದಾದ ಸೃಷ್ಟಿಕರ್ತನನು ನೆನೆಯುವುದೊಂದು ಸೊಗಸು

ಮತ್ತೆ ಬಾರದ ಜೀವನದ ಸೊಗಸಿನೀ ಕ್ಷಣಗಳನು 
ಮೆಲುಕು ಹಾಕುತ ಬದುಕುವ ಸಂಭ್ರಮದ ಸೊಗಸು

ಡಾ.ಸತ್ಯವತಿ ಮೂರ್ತಿ

****
ನನ್ನ ಸ್ವಾಮಿ 

ಈ ಕಥೆಯನ್ನು ನಾನು ಮ್ಯಾಂಚೆಸ್ಟರ ಹತ್ತಿರ ಕೆಲಸ ಮಾಡುವಾಗ ಭೆಟ್ಟಿಯಾದ ಕನ್ನಡಿಗ ಗೆಳೆಯರು ಹೇಳಿದರು. 

ಒಂದು ಸಮ್ಮೇಳನದಲ್ಲಿ ಇಬ್ಬರು ಭಾರತೀಯ ಮೂಲದ ಮಹಿಳಾ ತಜ್ಞ ವೈದ್ಯೆಯರು ಭೆಟ್ಟಿಯಾದರು. ಮಧ್ಯಾಹ್ನ ಊಟದ ವೇಳೆ ಮಾತನಾಡುವಾಗ ಪರಸ್ಪರ ಇಬ್ಬರೂ ಕನ್ನಡಿಗರೆಂದು ಗೊತ್ತಾಗಿ ಸಂತೋಷವಾಗಿ ಮುಂದಿನ ಸಂಭಾಷಣೆ ಕನ್ನಡದಲ್ಲೇ ಮುಂದುವರೆಯಿತು. ಸಂಜೆ ಊಟಕ್ಕೆ ಕುಳಿತಾಗ ಒಬ್ಬ ಕನ್ನಡತಿ “ನನ್ನ ಸ್ವಾಮಿಗೆ ಈ ಪಲ್ಯ ಬಹಳ ಇಷ್ಟ, ನನ್ನ ಸ್ವಾಮಿ ಇವತ್ತು ಮಕ್ಕಳನ್ನು ಶಾಲೆಗೆ ಬಿಡಲು ಸ್ವಲ್ಪ ತಡವಾಯಿತು“ಎಂದೆಲ್ಲ ಹೇಳತೊಡಗಿದಳು. 
ಆ ತಾಯಿ ಪ್ರತಿ ಸಲ ತನ್ನ ಗಂಡನಿಗೆ “ಸ್ವಾಮಿ“ಎಂದೇ ಸಂಭೋಧಿಸುತ್ತಿದ್ದಳು. ಇಬ್ಬರೂ ಒಂದೇ ಹೋಟೆಲಿನಲ್ಲಿ ಉಳಿದುಕೊಂಡಿದ್ದರಿಂದ ಇಬ್ಬರೂ ಒಂದೇ ಟ್ಯಾಕ್ಸಿಯಲ್ಲಿ ಹೊರಟರು. ಮಾರ್ಗದ ಮಧ್ಯೆಆ ತಾಯಿ ಗಂಡನಿಗೆ ಫೋನ್ ಮಾಡಿ “ಸ್ವಾಮಿ ಊಟ ಮಾಡಿದಿರಾ? “ಎಂದೆಲ್ಲಾ ವಿಚಾರಿಸಿದಳು. ಇನ್ನೊಬ್ಬ ಮಹಿಳೆ ಇದನ್ನೆಲ್ಲಾ ಗಮನಿಸುತ್ತಾ ಮನದಲ್ಲೇ “ಏನಪ್ಪಾ ಇವಳು ಬಹುಶಃ ಪಕ್ಕಾ ಪತಿ ಭಕ್ತೆ ಇದ್ದಾಳೆ, ಇಂಗ್ಲೆಂಡಿಗೆ ಬಂದರೂ ಏನೂ ಬದಲಾಗಿಲ್ಲ“ಎಂದುಕೊಂಡು ಸುಮ್ಮನಿದ್ದಳು .

ಇಬ್ಬರು ಮತ್ತೆ ಸುಮಾರು ಆರು ತಿಂಗಳ ನಂತರ ಇನ್ನೊಂದು ಸಮ್ಮೇಳನದಲ್ಲಿ ಭೆಟ್ಟಿಯಾದರು . 
ಆಗ ಮತ್ತೆ ಆ ತಾಯಿ “ನನ್ನ ಸ್ವಾಮಿಗೆ ಪ್ರಮೋಷನ್(ಬಡ್ತಿ )ಆಯಿತು, ನನ್ನ ಸ್ವಾಮಿ ಹೊಸ ಟೆಸ್ಲಾ ಕಾರು ತೆಗೆದುಕೊಂಡ “ಎಂದೆಲ್ಲಾ ಹೇಳಿದಳು. ಈಗ ಈ ಮಹಿಳೆಗೆ ತಡೆಯಲಾಗಲಿಲ್ಲ. ಅವಳು ಕೇಳಿಯೇ ಬಿಟ್ಟಳು “ಅಲ್ಲಾ, ಇಂದಿನ ದಿನಗಳಲ್ಲಿ ಭಾರತದಲ್ಲಿಯೇ ಪತಿ ಭಕ್ತೆ ಸಿಗೋದಿಲ್ಲ, ಅಂತದರಲ್ಲಿ ಇಷ್ಟೊಂದು ಕಲಿತ ವೈದ್ಯೆಯಾದ ನೀವು ಇಂಗ್ಲೆಂಡಿನಲ್ಲಿ ಇದ್ದುಕೊಂಡು ಗಂಡನಿಗೆ ಎಷ್ಟೊಂದು ಮಾನ ಮರ್ಯಾದೆ ಕೊಡುತ್ತೀರಲ್ಲಾ”. 

ಅದನ್ನು ಕೇಳಿ ಆ ತಾಯಿ ಬಿದ್ದು ಬಿದ್ದು ನಗುತ್ತ “ಅಯ್ಯೋ ನನ್ನ ಗಂಡನಿಗೇನೂ ನಾನು ಸ್ಪೇಶಿಯಲ್ ಮರ್ಯಾದೆ ಕೊಡ್ತಾ ಇಲ್ಲ, ಅವನ ಹೆಸರೇ ಸ್ವಾಮಿ!” ಎಂದಳು . 
ಇದನ್ನು ಕೇಳಿದ ಇನ್ನೊಬ್ಬ ಕನ್ನಡತಿಗೆ ತಲೆ ಜಜ್ಜಿಕೊಳ್ಳುವುದೊಂದು ಬಾಕಿ ಇತ್ತು. 😀😀

ಡಾ. ಉಮೇಶ್ ನಾಗಲೋತಿಮಠ್

ಗಿರೀಶ್ ಕಾರ್ನಾಡರ ಜನ್ಮ ದಿನೋತ್ಸವ;  ಯಯಾತಿ, ಹಯವದನ ಒಂದು ನೆನಪು

ಚಿತ್ರ ಕೃಪೆ: ಗೂಗಲ್
ಮೇ ೧೯ ಗಿರೀಶ್ ಕಾರ್ನಾಡ್ ಅವರ ೮೪ ನೇ ಜನ್ಮ ದಿನೋತ್ಸವ. ಕಾರ್ನಾಡರು ಭಾರತದ ಒಬ್ಬ ಶ್ರೇಷ್ಠ ನಾಟಕಕಾರ, ಲೇಖಕ, ನಟ, ಚಿತ್ರ ನಿರ್ದೇಶಕ ಮತ್ತು ಸಮಾಜವಾದಿ. ೧೯೯೮ ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು. ಪದ್ಮಶ್ರೀ, ಪದ್ಮಭೂಷಣ, ಕಾಳಿದಾಸ ಸಮ್ಮಾನ ಮತ್ತು ಇನ್ನೂ ಅನೇಕ ಪ್ರಶಸ್ತಿಯನ್ನು ಪುರಸ್ಕಾರಗಳನ್ನು ಪಡೆದವರು. ಇಂಗ್ಲೆಂಡಿನ ಕೆಲವು ಅನಿವಾಸಿ ಕನ್ನಡಿಗರಿಗೆ ಕಾರ್ನಾಡರು ಲಂಡನ್ನಿನ ನೆಹರು ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿದ್ದಾಗ ಅವರ ಪರಿಚಯವಿರಬಹುದು. ಯಯಾತಿ, ತುಘಲಕ, ಹಯವದನ, ನಾಗಮಂಡಲ, ತಲೆದಂಡ ಹೀಗೆ ಇನ್ನು ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅವರ ನಾಟಕಗಳು ಭಾರತದ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿವೆ. ಕಾರ್ನಾಡರಿಗೆ ತಮ್ಮ ಕಾಲೇಜ್ ದಿನಗಳಲ್ಲಿ ಒಬ್ಬ ಕವಿಯಾಗ ಬೇಕೆಂಬ ತೀವ್ರ ಹಂಬಲ ಇತ್ತು. ಅದೇ ವಿಚಾರವಾಗಿ ಅವರ ಆಡಾಡತ ಆಯುಷ್ಯ ಎಂಬ ಆತ್ಮಕಥೆಯಲ್ಲಿ ಹೀಗೆ ಬರೆದಿದ್ದಾರೆ; "ನನಗೆ ನೆನಪಿದ್ದಾಗಿನಿಂದಲೂ ನಾನು ಬಯಸಿದ್ದು ಕವಿಯಾಗಬೇಕು ಎಂದು. ಕಾಲೇಜಿನಲ್ಲಿ ಕವಿತೆಗಳನ್ನು ಬರೆದೆ, ಓದಿದೆ, ಅನುಕರಿಸಿದೆ, ಕವಿಗಳನ್ನು ಕಂಡು ಅಸೂಯೆ ಪಟ್ಟೆ. ಆದರೆ ಈಗ ಹಿಂದಿರುಗಿ ನೋಡಿದಾಗ ನನ್ನ ವ್ಯಕ್ತಿತ್ವದ ವಿಕಾಸವಾದದ್ದೆಲ್ಲ ನಾಟಕಗಳಿಂದಾಗಿಯೇ ಎಂಬುದು ಅರಿವಾಗುತ್ತದೆ." ಬಹಳ ಎಳೆ ವಯಸ್ಸಿನಿಂದ ನಾಟಕ ಯಕ್ಷಗಾನ ನೋಡಿಕೊಂಡು ಬೆಳೆದ ಕಾರ್ನಾಡರಿಗೆ ತಾವು ನಾಟಕ ಬರೆಯುವವರೆಗೆ ಅವರ ಸಾಮರ್ಥ್ಯದ ಅರಿವು ಬಹುಶ ಇರಲಿಲ್ಲ.  ಅವರ ಮೊದಲ ನಾಟಕ ಯಯಾತಿ ಬರೆದಾಗ ಅವರಿಗೆ ಕೇವಲ ೨೨ವರ್ಷ ವಯಸ್ಸಾಗಿತ್ತು. ಆ ನಾಟಕ ಬರೆಯುವ ಹೊತ್ತಿಗೆ ಗಿರೀಶ್ ಕಾರ್ನಾಡರು ಇಂಗ್ಲೆಂಡಿಗೆ ಹೊರಟು ನಿಂತಿದ್ದರು. ಅವರ ತಂದೆ ತಾಯಿ ಅವರಿಗೆ ಇಂಗ್ಲೆಂಡಿನಲ್ಲಿ ನೆಲೆಸಬಾರದು, ಅಲ್ಲಿ ಬಿಳಿ ಹೆಂಗಸೊಂದಿಗೆ ಮದುವೆ ಮಾಡಿಕೊಳ್ಳಬಾರದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದು ಈ ನಾಟಕ ಬರೆಯಲು ಪ್ರೇರಣೆ ನೀಡಿತು ಎಂಬುದಾಗಿ ತಿಳಿಸಿದ್ದಾರೆ.  ಯಯಾತಿ ನಾಟಕದಲ್ಲಿ ತಂದೆಗಾಗಿ ಯೌವನ್ನವನ್ನು ತ್ಯಜಿಸುವ ಮಗ, ಮತ್ತು ತಂದೆ ತಾಯಿಯ ನಿರೀಕ್ಷೆ ನಿರ್ಬಂಧಗಳ ನಡುವೆ ತ್ಯಾಗ ಮನೋಭಾವದಿಂದ ಇಂಗ್ಲೆಂಡಿಗೆ ಹೋರಾಟ ಯುವಕ ಕಾರ್ನಾಡ್ ಈ ಎರಡು ಸನ್ನಿವೇಶದಲ್ಲಿ ಅವರು ಸಾದೃಶ್ಯವನ್ನು ಕಂಡುಕೊಳ್ಳುತ್ತಾರೆ. 'ಈ ನಾಟಕ ಬರೆಯುವ ವೇಳೆಗೆ ಯಾವುದೋ ಅಗೋಚರ ಶಕ್ತಿ ಮೈಮೇಲೆ ಬಂದು ಆವರಿಸಿಕೊಂಡಿತ್ತು. ಕಣ್ಣೆದುರೇ ಯಯಾತಿ, ಪುರು ಈ ಪಾತ್ರಗಳೆಲ್ಲ ಮಾತನಾಡಲು ಶುರು ಮಾಡಿತ್ತು. ನಾನು ಒಬ್ಬ ಗುಮಾಸ್ತನಂತೆ ಈ ಸಂಭಾಷಣೆಗಳನ್ನು ಬರೆಯುತ್ತಿದೆ' ಎಂದು ಹೇಳಿದ್ದಾರೆ.

ಅಲ್ಲಿಂದ ಮುಂದಕ್ಕೆ ಕಾರ್ನಾಡರ ಯಯಾತಿಗೆ ಉತ್ತಮ ಪ್ರತಿಕ್ರಿಯೆಗಳ ಪ್ರವಾಹವೇ ಹರಿದುಬಂತು. ಇಂಗ್ಲೀಷಿನಲ್ಲಿ ಬರೆಯುವ ಮತ್ತು ಇಂಗ್ಲೆಂಡಿನಲ್ಲಿ ನೆಲೆಸುವ ತೀವ್ರ ಆಸೆ ಇದ್ದ ಕಾರ್ನಾಡರಿಗೆ ಭಾರತ ಬಿಟ್ಟು ವಿದೇಶದಲ್ಲಿ ನೆಲಸಬೇಕು ಎಂಬ ಯೋಚನೆ ನಿರರ್ಥಕ ಮಾತ್ರವ್ಲಲ ತಕ್ಕ ಮಟ್ಟಿಗೆ ಆತ್ಮಘಾತಕವೆಂಬಂತೆ ಮನದಟ್ಟಾಯಿತು. ಅವರಿಗೆ ಆಕ್ಸ್ ಫೋರ್ಡ್ ಮುಗಿಸಿ ಭಾರತಕ್ಕೆ ಮರಳುವುದು ಎಂಬ ನಿರ್ಧಾರ ಮಾಡುವುದು ಸುಲಭವಾಯಿತು. (ಆಡಾಡತಾ ಆಯುಷ್ಯ ಪುಟ ೧೨೦) ಯಯಾತಿ ನಾಟಕ ಕಾರ್ನಾಡರ ಲೇಖನಿಯಿಂದ ಬಂದದ್ದು ಅವರ ಬದುಕಿನ ದಿಕ್ಕನ್ನೇ ಬದಲಿಸಿತು, ಒಬ್ಬ ಶ್ರೇಷ್ಠ ಲೇಖಕನ ಪ್ರತಿಭೆ ಅನಾವರಣ ಗೊಂಡಿತು, ಕನ್ನಡ ಸಾಹಿತ್ಯಲೋಕ ಹಾಗೂ ರಂಗಭೂಮಿ ಶ್ರೀಮಂತಗೊಂಡಿತು. ಸಾಹಿತ್ಯ, ರಂಗಭೂಮಿ, ಚಿತ್ರಕಲೆ ಈ ಕ್ಷೇತ್ರಗಳಲ್ಲಿ ಇಷ್ಟೊಂದು ಸಾಧನೆ ಮಾಡಿದ ಮಾನವತಾವಾದಿ, ಬಾಲಿವುಡ್ಡಿನ ಗ್ಲಾಮರ್ ತಾರೆಗಳ ನಡುವೆ ಹೆಸರು ಮಾಡಿದ್ದ  ಜನಪ್ರಿಯ ನಟ, ನಿರ್ದೇಶಕ, ಬಹುಮುಖ ಪ್ರತಿಭೆ ಕಾರ್ನಾಡರು ಸಾವಿನಲ್ಲಿ ಯಾವುದೇ ಆಡಂಬರ, ಅಲಂಕಾರ, ಮೆರವಣಿಗೆ, ಗಣ್ಯರ ಶ್ರದ್ಧಾಂಜಲಿ ಇವೆಲ್ಲವನ್ನು  ತಿರಸ್ಕರಿಸಿ ಸದ್ದಿಲ್ಲದೆ  ಮುಳುಗುವ ಸೂರ್ಯನಂತೆ ಜಾರಿಕೊಂಡದ್ದು ಅವರ ವಿನಯ ಶೀಲ ಬದುಕಿಗೆ ಸಾಕ್ಷಿಯಾಗಿತ್ತು.

ಅವರ ಈ ೮೪ ಹುಟ್ಟು ಹಬ್ಬದ ಸಂಧರ್ಭದಲ್ಲಿ ಯಯಾತಿ ನಾಟಕದ ಬಗ್ಗೆ ಕೇಶವ್ ಕುಲಕರ್ಣಿ ತಮ್ಮ ಒಂದೆರಡು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಸ್ಮರಣೀಯ ಸಾಲುಗಳನ್ನು ಉಲ್ಲೇಖಿಸಿದ್ದಾರೆ.
*

ಕಾರ್ನಾಡರ ಹಯವದನ ನಾಟಕದ ಗೀತೆ 'ಬಂದಾನೋ ಬಂದ ಸವಾರ' ಮತ್ತು 'ಗಜವದನ ಹೇ ರಂಭಾ' ಈ ರಂಗಗೀತೆಗಳನ್ನು ನಾಟಕದಲ್ಲಿ ಅಥವಾ ಬರಿ ಗೀತೆಯಾಗಿ ನೀವೆಲ್ಲಾ ಕೇಳಿರಬಹುದು. ಬಿವಿ ಕಾರಂತರ ಸಂಗೀತ ನಿರ್ದೇಶನದಲ್ಲಿ ಈ ಗೀತೆಗಳು ಅತ್ಯಂತ ಜನಪ್ರಿಯವಾಗಿವೆ. ಇಲ್ಲಿ ಅಳವಡಿಸಿರುವ ಜಾನಪದ ಶೈಲಿ ಮತ್ತು ಕೋರಸ್ ಬಹಳ ಪರಿಣಾಮಕಾರಿಯಾಗಿದೆ. ಖ್ಯಾತ ರಂಗ ನಟಿ, ಗಾಯಕಿ ಶ್ರೀಮತಿ ಬಿ ಜಯಶ್ರೀ ಅವರು 'ಗಜವದನ ಹೇ ರಂಭಾ' ಎಂಬ ಗೀತೆಯನ್ನು  ಕನ್ನಡ ಬಳಗದ ಯುಗಾದಿ ಕಾರ್ಯಕ್ರಮವೊಂದರಲ್ಲಿ ಹಾಡಿದ್ದು ಹಲವರ ನೆನಪಿನಲ್ಲಿ ಉಳಿದಿರಬಹುದು. ಅಮಿತ ಅವರು ಇಂದಿನ ಕಾರ್ನಾಡರ ಜನ್ಮ ದಿನೋತ್ಸವ ಸಂಚಿಕೆಯಲ್ಲಿ 'ಬಂದಾನೋ ಬಂದ ಸವಾರ' ಗೀತೆಯನ್ನು ಪ್ರಸ್ತುತ ಪಡಿಸಿದ್ದಾರೆ.  
    - ಸಂಪಾದಕ 

**************************************************************************************

ಕಾರ್ನಾಡರ ಯಯಾತಿ - ಡಾ. ಕೇಶವ್ ಕುಲಕರ್ಣಿ 

ಪುರಾಣ, ಜನಪದ ಮತ್ತು ಇತಿಹಾಸದ ಪುಟಗಳಿಂದ ತಮಗೆಷ್ಟು ಬೇಕೋ ಅಷ್ಟನ್ನು ತೆಗೆದುಕೊಂಡು, ತಾವು ನಂಬಿಕೊಂಡಿರುವ ವಾದಗಳನ್ನು ಎತ್ತಿಕೊಂಡು, ಅವುಗಳನ್ನು ಆಧುನಿಕ ರಾಜಕೀಯ, ಸಾಮಾಜಿಕ ಮತ್ತು ಮಾನಸಿಕ ಕಾಲಕ್ಕೆ ಪ್ರಚಲಿತವನಿಸುವಂತೆ ಬರೆದು ಭಾರತದ, ಅದರಲ್ಲೂ ಕನ್ನಡದ, ಓದುಗರನ್ನು, ನಾಟಕದ ಪೇಕ್ಷಕರನ್ನು ಮತ್ತು ಒಂದು ಜನಾಂಗದ ರಂಗಕಲಾವಿದರನ್ನು ಬಡಿದೆಬ್ಬಿಸಿದರು ಕಾರ್ನಾಡರು.

ಅವರ ಮೊದಲ ನಾಟಕ, `ಯಯಾತಿ`; ಬರೆದದ್ದು ೧೯೬೧ ರಲ್ಲಿ, ಅದೂ ಇಂಗ್ಲೆಂಡಿನ ಆಕ್ಸ್-ಫರ್ಡ್-ನಲ್ಲಿ ವ್ಯಾಸಾಂಗ ಮಾಡುತ್ತಿರುವಾಗ. ವಿ.ಸ. ಖಾಂಡೇಕರ್ ಅವರು `ಯಯಾತಿ` ಕಾದಂಬರಿಯನ್ನು ಬರೆದದ್ದು ೧೯೫೯ರಲ್ಲಿ, ಕಾರ್ನಾಡ್ ಅವರಿಗೆ ಮರಾಠಿಯೂ ಬರುತ್ತಿತ್ತು. `ಯಯಾತಿ` ನಾಟಕವನ್ನು ಬರೆಯುವ ಮೊದಲು `ಯಯಾತಿ` ಕಾದಂಬರಿಯನ್ನು ಅವರು ಓದಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ. ಕಾರ್ನಾಡರ `ಯಯಾತಿ`ಗೂ ಖಾಂಡೇಕರರ ‘ಯಯಾತಿ`ಗೂ ಸಾಕಷ್ಟು ಸಾಮ್ಯತೆಗಳಿವೆ. ಹಾಗೆಯೇ ಬೇಧಗಳೂ ಇವೆ. ಇದರ ಬಗ್ಗೆ ಯಾರಾದರೂ ಕನ್ನಡ ಅಥವಾ ಭಾರತದ ವಿಮರ್ಶಕರು ಬರೆದಿದ್ದಾರೆ ಎಂದುಕೊಂಡಿದ್ದೇನೆ. `ಯಯಾತಿ`ಯನ್ನು ಪ್ರಕಟಿಸಿದ್ದು ಧಾರವಾಡದ ಪ್ರಸಿದ್ಧ `ಮನೋಹರ ಗ್ರಂಥಮಾಲೆ` (ಅಲ್ಲಿಯೇ ನಾನು ಕಾರ್ನಾಡರನ್ನೂ ಭೀಟಿಯಾಗಿದ್ದೆ ಎನ್ನುವುದೂ ನನಗೆ ಮರೆಯಲಾಗದ ಅನುಭವ).

ನಾನು `ಯಯಾತಿ’ ನಾಟಕವನ್ನು ನೋಡುವ ಮೊದಲು ಓದಿರಲಿಲ್ಲ. ಆಗ ನನಗಿನ್ನೂ ಹದಿನಾರೋ ಹದಿನೇಳೋ  ವಯಸ್ಸು. ವಿಚಿತ್ರವೆಂದರೆ ಅದೇ ಸಮಯದಲ್ಲಿ ಕನ್ನಡ ವಾರಪತ್ರಿಕೆಯಲ್ಲಿ (ತರಂಗ ಇರಬೇಕು)  ಖಾಂಡೇಕರರ `ಯಯಾತಿ` ಧಾರಾವಾಹಿಯಾಗಿ ಬರುತ್ತಿತ್ತು ಅಥವಾ ಬಂದಿತ್ತು. ಈ ಎರಡೂ ಕೃತಿಗಳು ಬರೆದ ಸುಮಾರು ೨೫ ವರ್ಷಗಳಾದ ಮೇಲೆ ನಾನು ಅವುಗಳನ್ನು ನೋಡಿದ್ದು ಮತ್ತು ಓದಿದ್ದು. ಅದೇ ಹರೆಯಕ್ಕೆ ಕಾಲಿಡುತಿದ್ದ ನನ್ನ ಮೇಲೆ ಈ `ಯಯಾತಿಗಳು` ಮಾಡಿದ ಪ್ರಭಾವ ಅಪಾರ, ಅಲ್ಲೋಲಕಲ್ಲೋಲ ಅಗಾಧ.

ಕಾರ್ನಾಡರ `ಯಯಾತಿ` ನಾಲ್ಕು ಅಂಕಗಳ ನಾಟಕ. ಯಯಾತಿಯ ಕತೆಯು ಎಲ್ಲರಿಗೂ ಗೊತ್ತಿರುವದರಿಂದ ಅದನ್ನು ಬರೆದು ಬೋರು ಹೊಡೆಸುವುದಲ್ಲ. ಆದರೆ ಈ ನಾಟಕದಲ್ಲಿ ಬರುವ ಕೆಲವು ಸಂಭಾಷಣೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ:

ಸೂತ್ರಧಾರ ಆರಂಭದಲ್ಲೇ, `ನಾವು ಕಟ್ಟಿದ ಅಜ್ಜಿಯ ಕತೆಯನ್ನು ನಾವೇ ಬಾಳಬೇಕು.` ಎಂದು ಸ್ವವಿಮರ್ಶೆಯೊಂದಿಗೇ ನಾಟಕವನ್ನು ಆರಂಭಿಸುತ್ತಾನೆ. 

ಯಯಾತಿಗೆ ಶರ್ಮಿಷ್ಠೆ ಹೇಳುತ್ತಾಳೆ,` ನೀವು ನನ್ನ ಕತೆಯನ್ನು ನಂಬಬೇಕೆಂದು ಹಟವಿಲ್ಲ. ದೇವಯಾನಿ ತನ್ನ ಕತೆಯನ್ನು ನಿಮಗೆ ಹೇಳಿರಬಹುದು. ಅದನ್ನು ನಂಬರಿ.`

ಇನ್ನೊಂದು ಸಲ ಶರ್ಮಿಷ್ಠೆ ಹೇಳುತ್ತಾಳೆ, `ಈಗ ದಾಸ್ಯ ನನಗೆ ಚಟವಾಗಿ ಬಿಟ್ಟಿದೆ. ದಾಸ್ಯದಲ್ಲಿ ಹೊಣೆಯ ಭಾರವಿಲ್ಲ. ಈಗ ನನಗೆ ಸ್ವಾತಂತ್ರ್ಯದಲ್ಲೇ ಶೃಂಖಲೆ ಕಾಣುತ್ತಿದೆ.`

ದೇವಯಾನಿ ಇನ್ನೊಂದು ಸಲ ಶರ್ಮಿಷ್ಠೆಗೆ ಹೇಳುತ್ತಾಳೆ, `ನಿನ್ನನ್ನು ದಾಸ್ಯದಿಂದ ಬಿಡಿಸಿದ್ದೇನೆ. ಬೇಕಿದ್ದರೆ ಈ ಸ್ವಾತಂತ್ರ್ಯದಿಂದ ಉರುಲು ಹಾಕಿಕೊ.`

ಪುರುವಿನ ಪತ್ನಿ ಚಿತ್ರಲೇಖೆ ಒಂದು ಕಡೆ ಹೇಳುತ್ತಾಳೆ, `ಹೇಡಿಗಳಿಗೆ ಮತ್ತು ಸುಳ್ಳು ಹೇಳುವವರಿಗೆ ತರ್ಕ ಅನಿವಾರ್ಯವಾಗುತ್ತದೆ.`

ಕಾರ್ನಾಡರು ಯಯಾತಿ ಮತ್ತು ಪುರು ಎನ್ನುವ ಎರಡು ಗಂಡು ಪಾತ್ರಗಳು ಮತ್ತು ಶರ್ಮಿಷ್ಠೆ, ದೇವಯಾನಿ, ಚಿತ್ರಲೇಖೆ ಮತ್ತು ದಾಸಿ ಎನ್ನುವ ಹೆಣ್ಣು ಪಾತ್ರಗಳ ಮೂಲಕ ಒಂದು ಸಂಕೀರ್ಣವಾದ ತೊಳಲಾಟವನ್ನು ನಮ್ಮೊಳಗೆ ಉರಿಯಲು ಬಿಟ್ಟು ನಾಟಕವನ್ನು ಮುಗಿಸುತ್ತಾರೆ.

`ಯಯಾತಿ` ನಾಟಕವು ಮೊದಲ ಬಿಡುಗಡೆ ಆದಾಗ, ಮೊದಲ ಸಲ ರಂಗಪ್ರಯೋಗವಾದಾಗ ರಂಗಭೂಮಿಯಲ್ಲಿ ಸಂಚಲನವನ್ನೇ ಉಂಟುಮಾಡಿತ್ತು ಎಂದು ಓದಿದ್ದೇನೆ. ಬಹುಭಾಷಾ ಕೋವಿದರೂ ಆಗಿದ್ದ ಕಾರ್ನಾಡರು ತಮ್ಮ ಸಾಮಾಜಿಕ ಸಂಪರ್ಕಗಳ ಮೂಲಕ, ತಮ್ಮ ಅಕಾಡೆಮಿಕ್ ಹಿನ್ನೆಲೆಯ ಮೂಲಕ ಪ್ಯಾನ್-ಇಂಡಿಯನ್ ನಾಟಕಕಾರರಾದರು. `ಯಯಾತಿ` ಹಿಂದಿಯ ರಂಗಭೂಮಿಯಲ್ಲೂ ಅಗಾಧವಾದ ಪ್ರಭಾವವನ್ನು ಬೀರಿತು. ನಾಟಕವನ್ನು ಕನ್ನಡದಲ್ಲಿ ಬರೆದರೂ ಮೊದಲ ನಾಟಕದಲ್ಲೇ ಕಾರ್ನಾಡ್ ಇಡೀ ಭಾರತವನ್ನು ಆವರಿಸಿದರು. ಮುಂದೆ ಆದದ್ದು ಈಗ ಇತಿಹಾಸ.  ಹಿಂದಿಯ ಮೋಹನ್ ರಾಕೇಶ್, ಮರಾಠಿಯ ವಿಜಯ್ ತೆಂಡೂಲ್ಕರ್ ಅವರಿಗೆ ಸರಿಸಮಾನರಾಗಿ ಕಾರ್ನಾಡ್ ಭಾರತದ ರಂಗಭೂಮಿಯನ್ನು ಬೆಳೆಸಿ ಭಾರತದ ರಂಗಭೂಮಿಯಲ್ಲಿ ಒಂದು ಶಾಶ್ವತ ಸ್ಥಾನವನ್ನು ಪಡೆದರು. ಈಗ ಈ `ಯಯಾತಿ` ನಾಟಕ ಎಷ್ಟರ ಮಟ್ಟಿಗೆ ಪಸ್ತುತ ಎನ್ನುವುದನ್ನು ಈಗಿನ ಓದಗ ಮತ್ತು ಪ್ರೇಕ್ಷಕ ನಿರ್ಧರಿಸಬೇಕು. 

******************************************************************************

ಹಯವದನ ನಾಟಕದ ಗೀತೆ ಬಂದಾನೋ ಬಂದ ಸವಾರ - ಅಮಿತಾ ರವಿಕಿರಣ  

******************************************************************************