ನಮ್ಮ ಆಹಾರ ಮತ್ತು ಆರೋಗ್ಯ – ಬಾಲ್ಯದ ನೆನಪುಗಳು ಮತ್ತು ಈಗಿನ ಜ್ಞಾನ: ರವಿರಾಜ್ ಉಪ್ಪೂರ್ ಭಟ್.

"You can’t just eat good food. You’ve got to talk about it too. And you’ve got to talk about it to somebody who understands that kind of food." - Kurt Vonnegut

"Most of us have fond memories of food from our childhood. Whether it was our mom's homemade lasagna or a memorable chocolate birthday cake, food has a way of transporting us back to the past." - Homaro Cantu.

ನಮಸ್ಕಾರ ಅನಿವಾಸಿ ಬಳಗಕ್ಕೆ.
ಮೇಲಿನ ಎರಡೂ ಹೇಳಿಕೆಗಳನ್ನು ಒಪ್ಪದೇ ಇರಲು ಸಾಧ್ಯವಿಲ್ಲ. ಊಟ ಎಲ್ಲಿಯದಾದರೇನು, ಅಮ್ಮನ ಕೈಯಡಿಗೆಯ ರುಚಿ ಬೇರೆಡೆ ಬಂದೀತೇ? ಇದನ್ನೇ ಮಿತ್ರ ರವಿರಾಜ ಉಪ್ಪೂರ್ ಭಟ್ ಅವರ ಮಾತಿನಲ್ಲಿ ಕೇಳೋಣ. ಎಂದಿನಂತೆ ಓದಿ, ನಿಮ್ಮ ಅನಿಸಿಕೆ, ಪ್ರತಿಕ್ರಿಯೆ ಹಂಚಿಕೊಳ್ಳಿ. - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).
**********************************************************
ಊಟ ಬಲ್ಲವನಿಗೆ ರೋಗವಿಲ್ಲ; ಮಾತು ಬಲ್ಲವನಿಗೆ ಜಗಳವಿಲ್ಲ ...

ಎಷ್ಟು ಚೆನ್ನಾಗಿ ಈ ಒಂದು ಗಾದೆ ಮಾತು ನಮಗೆ ಹೇಗೆ ಆರೋಗ್ಯದ ಬಗ್ಗೆ ಒಂದು ಕಿವಿಮಾತು ಹೇಳಿದೆ ನೋಡಿ. ನಮ್ಮ ಈಗಿನ ಹೊಸ ಪೀಳಿಗೆಯವರಿಗೆ ಇದರ ಬಗ್ಗೆ ಅರಿವು ತುಂಬಾ ಇದ್ದಂತಿಲ್ಲ. ಇದೇನೇ ಇದ್ದ್ರೂ ನಮ್ಮ ಪೀಳಿಗೆಯವರ ಆಹಾರ ಪದ್ಧತಿ ಹೇಗಿತ್ತೆಂದು ನೋಡೋಣ.

ನಾನು ಮೂಲತಃ ಉಡುಪಿಯವನು ಮಾರಾಯ್ರೆ. ಉಡುಪಿಯವ್ರು ಅಂದ್ರೆ ನಿಮಗೆಲ್ಲ ಮೊದ್ಲು ನೆನಪಾಗುದೇ ಹೋಟೆಲ್ ಅಂತ ನಂಗೆ ಗೊತ್ತುಂಟು ಮಾರಾಯ್ರೆ ... ಅದೇನೇ ಇದ್ದ್ರೂ ನಂಗೂ ಉಡುಪಿ ಹೋಟೆಲ್ಗೂ ಯಂತ ಕನೆಕ್ಷನ್ ಇಲ್ಲ ಮಾರಾಯ್ರೆ ....

ನಾನು ಹುಟ್ಟಿ ಬೆಳೆದಿದ್ದೆಲ್ಲಾ ಉಡುಪಿಯ ಒಂದು ಸಣ್ಣ ಹಳ್ಳಿಯಲ್ಲಿ. ನಮ್ಮ ಮನೆ ಒಂದು ಹಳೆ (ಸಾಧಾರಣ 200 ವರ್ಷ ಹಳೆಯ ಮನೆ) ಬಂಗ್ಲೊ. ಅದ್ರಲ್ಲಿ ನನ್ನ ಅಜ್ಜ, ಅಪ್ಪ, ಅಮ್ಮ, ನನ್ನ ಅಣ್ಣ, ತಮ್ಮ, ನಾನು ಹಾಗೂ ನಮ್ಮ ಚಿಕ್ಕಪ್ಪ ಮತ್ತು ಅವರ ಕುಟುಂಬ ಇದ್ದೆವು. ನಮ್ಮನೆ ಎಲ್ಲರ ಊಟ ತಿಂಡಿಯ ವ್ಯವಸ್ಥೆ ಮಾಡುವುದು ನಮ್ಮಮ್ಮನೇ.

ನಂಗೆ ಇನ್ನೂ ಹಚ್ಚ ಹಸಿರಾಗಿಯೇ ಇದೆ ಆ ಹಳೆ ನೆನಪುಗಳು ... ಮನೆ ತುಂಬಾ ಜನ ... ಮಳೆಗಾಲದಲ್ಲಿ ನಟ್ಟಿಯ ಸಮಯ ಮನೆಯ ಕೆಲಸದಾಳುಗಳು, ನಟ್ಟಿ ನಡುವೆ ಹೆಂಗಸರೂ, ಹಾಗೂ ಹೂಟೆಗೆ ಕಟ್ಟುವ ಒಂದು ಜೊತೆ ಎತ್ತು ಹಾಗು ಕೋಣ ಮತ್ತೆ 3-4 ದನ ಎಮ್ಮೆಗಳು ಕರಾವಿಗೆ ಇರುತ್ತಿದ್ದವು. ಅಮ್ಮ ಹಾಗೂ ನಿತ್ಯದ ಕೆಲಸದಾಳು ಕೂಸ ಸುಮಾರಿಗೆ ಬೆಳಿಗ್ಗೆ 5 ಗಂಟೆಗೆಲ್ಲ ಎದ್ದು ಮನೆಯವರಿಗೆಲ್ಲ ಬೆಳಿಗ್ಗಿನ ಕೊಚ್ಚಿಗೆ ಅಕ್ಕಿ ಗಂಜಿ ಹಾಗೂ ಹಟ್ಟಿಯ ಗಂಟಿಗಳಿಗೆಲ್ಲ 'ಬಾಯಿರು' (ಗಂಟಿಗಳಿಗೆ ಹಾಕುವ ಕಲಗಚ್ಚು ಮಿಶ್ರಿತ ಅನ್ನ ಹಾಗೂ ತೌಡು) ತಯಾರು ಮಾಡುವರು. ನಾವು ಶಾಲೆಗೆ ಹೋಗುವ ಮಕ್ಕಳೆಲ್ಲ 6- 6:30ರ ಸುಮಾರಿಗೆ ಎದ್ದು ಬಚ್ಚಲು ಒಲೆಯಲ್ಲಿ ಬಾಯಿರು ಬಿಸಿಮಾಡುವ ಒಲೆಯ ಎದುರು ಕೂತು ಸ್ವಲ್ಪ ಹೊತ್ತು ಚಳಿ ಕಾಸಿ ಕೂಸನೊಂದಿಗೆ (ಮನೆ ಕೆಲಸದವನು) ಹರಟೆ ಹೊಡೆಯುವುದು ದಿನನಿತ್ಯದ ಪದ್ಧತಿ. ನಮ್ಮೊಟ್ಟಿಗೆ ಮನೆಯ 'ರಾಜು' ನಾಯಿ ಕೂಡ ಪಕ್ಕದಲ್ಲೇ ಕೂತಿರುವುದು ಒಂದು ವಾಡಿಕೆ. ಹಾಗೆ ಚಳಿ ಕಾಸುವಾಗ ಒಲೆಯೊಳಗೆ ಹುಣಸೆ ಬೀಜವನ್ನೋ, ಹಲಸಿನ ಹಣ್ಣಿನ ಒಣಗಿದ ಬೀಜವನ್ನೋ ಕೆಂಪಿನ ಕೆಂಡದೊಳಗೆ ಹಾಕಿ ಹದನಾಗಿ ಸುಡುವುದು ನಾವು ಶಾಲೆ ಹುಡುಗರ ಒಂದು 'ಹೋಮ್ ವರ್ಕ್'. ಹೀಗೆ ಹದನಾಗಿಸಿದ ಹುಣಸೆ ಬೀಜ ಮತ್ತೆ ದಾಣಿ (ಹಲಸಿನ ಬೀಜಕ್ಕೆ ನಮ್ಕಡೆ ದಾಣಿ ಅಂತಲೂ ಹೇಳುವುದು ಒಂದು ವಾಡಿಕೆ ... ಬಹುಶಃ ಆಡುಭಾಷೆ ತುಳುವಿನಿಂದ ಬಂದದ್ದಿರಬೇಕು) ಎರಡೂ ಸರಿಯಾಗಿ ಪಾಲಾಗಿ ನಮ್ಮ ಕಂಪಾಸ್ ಪೆಟ್ಟಿಗೆಯೊಳಗೋ, ಇಲ್ಲ ಕಾಲಿ ಬೆಂಕಿಪೆಟ್ಟಿಗೆಯೊಳಗೋ , ಇಲ್ಲ ಶಾಲೆಯ ಚೀಲದೊಳಗೋ ಹೋಗಿ ಸೇರುತ್ತಿತ್ತು. ಇದೇ ನಮ್ಮ ಶಾಲೆಯ ವಿರಾಮದ ಸಮಯ್ದ 'tuck time ಫುಡ್'. ನೆನೆಸಿದರೆ ಈಗಲೂ ನನ್ನ ಬಾಯಲ್ಲಿ ನೀರೂರುತ್ತದೆ.

ಬೆಳಿಗ್ಗಿನ ನಿತ್ಯಕರ್ಮಗಳನ್ನೆಲ್ಲಾ ಕ್ಲಪ್ತವಾಗಿ ಮುಗಿಸಿ ಕುಚ್ಚಲಕ್ಕಿ ಗಂಜಿ ಊಟ ಮಾಡಬೇಕಿತ್ತು. ಗಂಜಿಯೊಂದಿಗೆ ತುಪ್ಪ, ಚಿಟಿಕೆ ಉಪ್ಪು ಹಾಗೂ ನೆಂಜಿಕೊಳ್ಳಲು ಉಪ್ಪಿನಕಾಯಿಯೋ, ಕೊತ್ತಂಬರಿಸೊಪ್ಪಿನ ಚಟ್ನಿಯೋ, ಮಾವಿನಕಾಯಿಯ ತೊಕ್ಕು ಇಲ್ಲ ಮಜ್ಜಿಗೆ ಮೆಣಸು ಅಥವಾ ಹಿಂದಿನ ದಿನದ ಹುಳಿ (ನಮ್ ಕಡೆ ತೆಂಗಿನಕಾಯಿ ರುಬ್ಬಿ ಮಸಾಲೆ ಹಾಕಿ ಮಾಡಿದ 'ಸಾಂಬಾರು'). ನನ್ನ ಅಣ್ಣ ಹಾಗೂ ಅಪ್ಪನಿಗೆ ಗಂಜಿ ಊಟ ಅಂದ್ರೆ ಪಂಚ ಪ್ರಾಣ. ನನಗೆ ಹಾಗು ನನ್ನ ತಮ್ಮನಿಗೆ ಗಂಜಿ ಊಟ ಅಂದ್ರೆ ಅಷ್ಟಕ್ಕಷ್ಟೇ. ನಾನು ಅರ್ಧ ಗಂಜಿ ತಿಂದು ಉಳಿದರ್ಧ ನನ್ನ ಪ್ರೀತಿಯ ರಾಜು ನಾಯಿಯ ಕೊರಿಕೆಗೆ (ನಾಯಿಗೆ ತಿನ್ನಲು ಹಾಕುವ ಕಲ್ಲಿನ ದಪ್ಪ 'ತಟ್ಟೆ') ಹಾಕುತ್ತಿದ್ದೆ. ಅದಕ್ಕೆ ದಿನಾ ಅಮ್ಮನಿಂದ ಬೈಸಿಕೊಳ್ಳಬೇಕಿತ್ತು. ಅಜ್ಜನಂತೂ ನನ್ನ ಗಂಜಿ ಊಟದ ಸ್ಪೀಡ್ ನೋಡಿ ಯಾವಾಗಲೂ ಹೇಳುವವರು “ಇಷ್ಟು ಮೆಲ್ಲ ತಿಂದ್ರೆ ಹ್ಯಾಂಗೆ ತಿಂದಿದ್ದು ಮೈಗೆ ಹಿಡಿತ್ ... ಆಡು ಮೆಂದ ಹಾಗೆ ತಿನ್ನಬೇಕಂತೆ ... ಆನೆ ಮಿಂದಹಾಗೆ ಮೀಯಬೇಕಂತೆ (ಸ್ನಾನ ಮಾಡಬೇಕಂತೆ)” ಅಂತ.

ಆ ಗಂಜಿ ಊಟಕ್ಕೆ ಮುಕ್ತಿ ಸಿಕ್ಕಿದ್ದು ನಾ ಮೆಡಿಕಲ್ ಮಾಡಲು ಬಳ್ಳಾರಿಗೆ ಹೋದಮೇಲೆಯೇ. ಈಗಿನ ನನ್ನ ಮಕ್ಕಳಿಗಂತೂ ಗಂಜಿ ಊಟದ ಮಜವೇ ಗೊತ್ತಿಲ್ಲ..... ಹಾಗೆಯೇ ಸುಟ್ಟ ಹುಣಸೇ ಬೀಜ, ಹದವಾಗಿ ಸುಟ್ಟ ದಾಣಿ, ಉಪ್ಪು ಕಾರಪುಡಿ ಹಾಕಿದ ಹುಳಿ ಹಪ್ಪಟೆ ಮಾವಿನ ಕಾಯಿ - ಇದ್ಯಾವುದೂ ಗೊತ್ತೇ ಇಲ್ಲ! ಅದ್ರ ಮಜವೇ ಬೇರೆ. ನಾವು ಮಕ್ಕಳಿಗೆಲ್ಲ ಬೆಳಿಗ್ಗೆ ಗಂಜಿ ಕಡ್ಡಾಯ, ಆದ್ರೆ ಅಜ್ಜನಿಗೆ ಬೆಳಿಗ್ಗೆ ತಿಂಡಿ ಆಗಬೇಕಿತ್ತು. ಅಜ್ಜನಿಗೆ ಗೋಧಿಯಿಂದ ಮಾಡಿದ ಏನಾದ್ರೂ ತಿಂಡಿ ಅಂದ್ರೆ ಶ್ರೇಷ್ಠ ..... ಗೋಧಿ ಹಿಟ್ಟಿನ ತೆಳ್ಳಗಿನ ನೀರು ದೋಸೆ ಅಥವಾ ರವೆ ಉಪ್ಪಿಟ್ಟು ಹೀಗೆ ಏನಾದ್ರೂ ತಿಂಡಿ ಆಗಲೇ ಬೇಕು. ಹೀಗೆ ಅಜ್ಜನಿಗೆ ಮಾಡಿದ ತಿಂಡಿ ಸ್ವಲ್ಪ ಏನಾದ್ರೂ ಉಳಿದ್ರೆ ನಂಗೆ ಗಂಜಿಯೊಟ್ಟಿಗೆ ಅಮ್ಮ ಸ್ವಲ್ಪ ಕೊಡ್ತಿದ್ದ್ರು... ಅದೂ ಅಜ್ಜ ಆಚೆ ಕಡೆ ಹೋದ ಮೇಲೆ. ಅಜ್ಜ ಏನಾದ್ರೂ ನೋಡಿದ್ರೆ ನನ್ನ ಅಮ್ಮನ್ನ ಬೈಯ್ಯುವರು .... ಮಕ್ಕಳು ಬೆಳಿಗ್ಗೆ ತಿಂಡಿ ತಿಂದ್ರೆ ಹೊಟ್ಟೆ ಹಾಳಾಗ್ತದೆ ಅಂತ!

ಸಾಯಂಕಾಲ ಶಾಲೆ ಮುಗಿಸಿ ಬರುವಾಗ ದಾರಿಯಲ್ಲಿ ಮಾವಿನಕಾಯಿಗೆ ಗುರಿ ಇಟ್ಟು ಕಲ್ಲು ಹೊಡೆದುರುಳಿಸಿ ಅದರ ಸೊನೆ ಅಲ್ಲೇ ಕೆಳಗೆ ಹುಲ್ಲಿನಲ್ಲಿ ಒರೆಸಿ ತಿಂದರೆ ಅದ್ರ ಹುಳಿ ಹಪ್ಪಟೆ ರುಚಿಗೆ ಒಂದು ಸರ್ತಿ ಮೈಯೆಲ್ಲಾ ಜುಂ ಅನ್ನುವ ಮಜಾನೇ ಬೇರೆ. ಈಗೆಲ್ಲಿದೆ ಅದರ ಸುಖ ??...

ಮಾವಿನ ಕಾಯಿಯ ಸೀಸನ್ ಅಲ್ಲದೆ ಇದ್ರೆ ಬೇಲಿಯಲ್ಲಿರುವ ಕರಂಡೆ ಕಾಯಿ ಇಲ್ಲ ಹಣ್ಣು, ಕಿಸ್ಕಾರ್ ಹಣ್ಣು, ನೇರಳೆ ಹಣ್ಣು, ಜಂಗಮನ ಹಣ್ಣು, ಪೇರಳೆ ಹಣ್ಣು, ರೆಂಜೆ ಹಣ್ಣು ...ಹೀಗೆ ಏನಾದ್ರೂ ಒಂದು ಸಿಕ್ಕೇ ಸಿಗುತ್ತದೆ.

ಇನ್ನೂ ಶನಿವಾರ ಮಧ್ಯಾಹ್ನದ ಮೇಲೆ ರಜೆ.
ಹಾಗೆ ಭಾನುವಾರ ನಮ್ಮ ಮನೆಯಲ್ಲಿ ಗಂಜಿಗೂ ರಜೆ. ಸಾದಾರಣವಾಗಿ ಆವತ್ತು ಇಡ್ಲಿ ಅಥವಾ ದೋಸೆ. ಹಾಗಾಗಿ ನಂಗಂತೂ ಭಾನುವಾರ ಅಂದ್ರೆ ಇಷ್ಟ. ತಿಂಡಿ ತಿಂದು ಟಿವಿಯಲ್ಲಿ ಹೀಮ್ಯಾನ್, Tom & Jerry ನೋಡಿ ಮುಗಿಯುವಷ್ಟರಲ್ಲಿ ರಾಮಾಯಣ ಇಲ್ಲ ಮಹಾಭಾರತ ಸೀರಿಯಲ್ ಶುರುವಾಗುವುದು.

ಹೀಗೆ ಮುಂದುವರಿದು ಮೆಡಿಕಲ್ ಕಾಲೇಜ್ ಸೇರಿದಮೇಲೆ ಈ ದಿನಚರಿಗೆ ಒಂದು ಮುಕ್ತಾಯ ಹಾಡಿದೆವು. ಆಮೇಲೆ ಬಳ್ಳಾರಿಯಲ್ಲಿ ಹಾಸ್ಟೆಲ್ ದಿನಚರಿ ಆರಂಭ. ಹಾಸ್ಟೆಲ್ ಅಂದಮೇಲೆ ನಿಮಗೆಲ್ಲಾ ಗೊತ್ತೇ ಇದೆಯಲ್ಲ .... ಬೆಳಿಗ್ಗಿನ ತಿಂಡಿಗೆ ಚೌ ಚೌ ಬಾತ್, ಕಾಂಕ್ರೀಟ್ (ಉಪ್ಪಿಟ್ಟಿಗೆ ಹಾಸ್ಟೆಲ್ ನಲ್ಲಿ ನಾವಿಟ್ಟಿದ್ದ ಹೆಸರು), ಇಡ್ಲಿ, ದೋಸೆ, ಬ್ರೆಡ್, ಚಿತ್ರಾನ್ನ, ವಾಂಗೀಬಾತ್ .... ಹೀಗೆ ನಾನಾ ವಿಧದ ಟಿಫನ್ ಗಳು. ಅದರಲ್ಲೂ ಬಳ್ಳಾರಿಯ ಸ್ಪೆಷಲ್ ತಿಂಡಿ ... ಮೆಣಸಿನ ಕಾಯಿ ಬಜ್ಜಿ (ಪುಗ್ಗಿ) ಹಾಗೂ ಮಂಡಕ್ಕಿ (ಮಂಡಾಳು) ಒಗ್ಗರಣೆಯನ್ನು ಹೇಳದಿದ್ದರೆ ಹೇಗೆ? ಇವತ್ತು ಬೆಳಿಗ್ಗೆ ಏನಾದ್ರೂ ಇದನ್ನು ತಿಂದ್ರೆ .... ಅದ್ರ ಪರಿಣಾಮ ಮಾರನೆಯ ದಿನ ಬೆಳಿಗ್ಗೆ ಬಹಿರ್ದೆಸೆಗೆ ಹೋದಾಗಲೇ ಗೊತ್ತಾಗುವುದು!

ನನ್ನ ಇಷ್ಟದ ತಿಂಡಿ ವಾಂಗೀಬಾತ್ ಆಗಿತ್ತು. ವಾಂಗಿಬಾತ್ ಮಾಡಿದ ದಿನ ನನ್ನ ತಟ್ಟೆಯ್ಲಲಿ ಒಂದು ಸಣ್ಣ ಗುಡ್ಡೆಯಾಕಾರದಲ್ಲಿ ವಾಂಗೀಬಾತ್ ಇರುತ್ತಿತ್ತು. ಇದರಿಂದಾಗಿ ನನ್ನ ಫ್ರೆಂಡ್ಸ್ ಎಲ್ಲ ನನ್ನನ್ನು ವಾಂಗಿಪ್ರಿಯ ಅಂತಲೇ ಕರೆಯಲು ಶುರು ಮಾಡಿದ್ರು.
ಹೀಗೆ ಮುಂದುವರಿದು ಒಂದು ತಿಂಗಳಿಗೆ ನಾನೂ ಕೂಡ ಮೆಸ್ಸ್ prefect ಆದೆ. ಆ ತಿಂಗಳು ನನಗೆ ಇಷ್ಟವಾದ ತಿಂಡಿಗಳನ್ನು ಹೇಳಿ ಮಾಡಿಸಿಕೊಂಡು ತಿಂದಿದ್ದೇ ತಿಂದಿದ್ದು. ಒಮ್ಮೆ ಭಾನುವಾರ, ನನ್ನ ಇಬ್ಬರು ಗೆಳೆಯರ ಜೊತೆ ದೋಸೆ ತಿನ್ನುವ ಸ್ಪರ್ಧೆ ನಡೆಯಿತು. ಆವತ್ತು ಮಸಾಲೆ ದೋಸೆ ಟಿಫನ್. ನನ್ನ ಇಬ್ಬರು ಆಪ್ತ ಗೆಳೆಯರು ಒಬ್ಬೊಬ್ಬರೂ ಹತ್ತೋ ಹನ್ನೆರಡೋ ಮಸಾಲೆ ದೋಸೆ ಭುಂಜಿಸಿದರು ... ಕೊನೆಗೆ ನನ್ನ ಸರಣಿ .... ಲೆಕ್ಕ ಮಾಡಿ ನಾನು ಅಂದು 16 ಮಸಾಲೆ ದೋಸೆ ಗುಳುಂಮಾಯಿಸಿದೆ.
ಹಾಗೇ ಇನ್ನೊಂದು ಸಲ ಯಾವುದೋ ಒಂದು ಹಾಸ್ಟೆಲ್ ಡೇ celeberation ದಿನದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ 2 ನಿಮಿಷದಲ್ಲಿ 21 ಇಡ್ಲಿ ತಿಂದು 2ನೇ ಸ್ಥಾನ ಗಿಟ್ಟಿಸಿಕೊಂಡವ ನಾನು.
ಈಗ ನೋಡಿದ್ರೆ ಅದೆಲ್ಲ ಗತ ವೈಭವ ಅನ್ನಿಸುತ್ತೆ 😁
ಎಡಗಡೆ ಮೇಲಿನಿಂದ, ಗಡಿಯಾರದ ಚಲನೆಯಂತೆ: ೧. ಕುಚ್ಚಲು ಅಕ್ಕಿ ಗಂಜಿ ಉಪ್ಪಿನ ಕಾಯಿ, ಮಜ್ಜಿಗೆ ಮೆಣಸು, ಚಟ್ನಿ, ಹಲಸಿನ ಹಪ್ಪಳ; ೨. ಹುಳಿ ಹಪ್ಪಟೆ ಮಾವಿನ ಕಾಯಿ ಉಪ್ಪು ಖಾರ; ೩. ಮಂಡಕ್ಕಿ ಒಗ್ಗರಣೆ ಹಾಗೂ ಮೆಣಸಿನ ಕಾಯಿ ಬಜ್ಜಿ – ಬಳ್ಳಾರಿ ಮೆಸ್ಸ್ ಸ್ಪೆಷಲ್; ೪. ಉಪ್ಪಿಟ್ಟು – ಶಿರಾದ ಚೌ ಚೌ ಭಾತ್.
(ಎಲ್ಲಾ ಚಿತ್ರಗಳು ಲೇಖಕರು ಗೂಗಲ್ ನಿಂದ ಪಡೆದದ್ದು.)
ಫಾಸ್ಟ್ ಫಾರ್ವರ್ಡ್ .... ಕೋವಿಡ್ ನಂತರದ ದಿನಗಳು ...ಈಗಿನ ಆಹಾರ ಪದ್ದತಿಯ ಬಗ್ಗೆ ಒಂದು ಇಣುಕು ನೋಟ ಹಾಕೋಣ -
ಇತ್ತೀಚಿನ ದಿನಗಳಲ್ಲಿ ನಮ್ಮ ಊಟ ತಿಂಡಿಗಳಲ್ಲೆಲ್ಲಾ ಪ್ರೋಸೆಸ್ಸ್ಡ್ ಫುಡ್ ಹಾಗೂ ಫಾಸ್ಟ್ ಫುಡ್ ಗಳದ್ದೇ ಕಾರುಬಾರು .....
ಬರಬರುತ್ತಾ ನಮ್ಮ ದೇಹಶ್ರಮ ಕೂಡ ಕಡಿಮೆ ಆಗುತ್ತಾ ಬರುತ್ತಿದೆ! ತಿಂದ ಆಹಾರದ ಪಚನಕ್ರಿಯೆ ಹಾಗು ಮೈಗೆ ಹತ್ತಲು ಸಮತೂಕದ ಆಹಾರ ಹಾಗೂ ಸಾಧಾರಣ ಮಟ್ಟದ ದೇಹಶ್ರಮ ಕೂಡಾ ಅಗತ್ಯ
ನಮ್ಮ ಆದುನಿಕ ಸರ್ವಜ್ಞ ಡಿವಿಜಿ ಅವರು ಹೇಳಿದಂತೆ -
ಎಷ್ಟು ನೀನುಂಡರೇಂ ಪುಷ್ಟಿ ಮೈಗಾಗುವುದು ।
ಹೊಟ್ಟೆ ಜೀರ್ಣಿಸುವಷ್ಟೆ ಮಿಕ್ಕುದೆಲ್ಲ ಕಸ ।।
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು ।
ಮುಷ್ಠಿ ಪಿಷ್ಟವು ತಾನೆ ಮಂಕುತಿಮ್ಮ ।।

ನೀನು ಎಷ್ಟು ಆಹಾರವನ್ನು ತಿಂದರೂ, ಅದರಿಂದ ದೇಹಕ್ಕೆ ಪುಷ್ಟಿಸಿಗುವುದು, ನಿನ್ನ ದೇಹ ಜೀರ್ಣಿಸಿಕೊಳ್ಳುವಷ್ಟು ಮಾತ್ರ. ಅಧಿಕವಾಗಿ ತಿಂದದ್ದೆಲ್ಲ ಜೀರ್ಣವಾಗದೆ, ಮಲರೂಪದಲ್ಲಿ ಕಸವಾಗಿ ಹೊರಬರುತ್ತದೆ. ಎಷ್ಟು ಸಂಪತ್ತನ್ನು ಗಳಿಸಿದರೂ ಹಸಿವಾದಾಗ ನೀನು ಸೇವಿಸಲಾಗುವುದು ಕೇವಲ ಒಂದು ಮುಷ್ಠಿ ಅನ್ನ ತಾನೆ? ಎಂದು ಕೇಳುತ್ತಾ ನಮ್ಮ ಮಿತಿಗಳನ್ನು ಅರ್ಥ ಮಾಡಿಕೊಳ್ಳುವಂತೆ ನಮಗೆ ಸೂಚನೆಯನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದ ಮಾತಿನಲ್ಲಿ.

ಹಾಗಾಗಿ ಮಿತಿಯರಿಯಬೇಕು. ಮಿತಿಯಿಂದಿದ್ದರೆ ಬಾಳು ಹಿತ. ಇದು ಕೇವಲ ಆಹಾರಕ್ಕಷ್ಟೇ ಸೀಮಿತವಲ್ಲ. ಬದುಕಿನ ನಮ್ಮ ಎಲ್ಲ ಆಯಾಮಗಳಿಗೂ ಇದನ್ನು ಅನ್ವಯಿಸಿಕೊಳ್ಳಬೇಕು. ನಮ್ಮ ಕ್ಷಮತೆ ಮತ್ತು ಯೋಗ್ಯತೆಗನುಗುಣವಾಗಿ ಒಂದು ‘ಗೆರೆ’ ಎಳೆದುಕೊಳ್ಳಬೇಕು. ಆ ಮಿತಿಯ ವೃತ್ತದ ಪರಿಧಿಯಲ್ಲೇ ನಮ್ಮ ಕಾರ್ಯಕ್ಷೇತ್ರವಿರಬೇಕು. ನಮ್ಮ ಕ್ಷಮತೆಯನ್ನು ಹೆಚ್ಚಿಸಿಕೊಂಡ ಹಾಗೆ ಆ ವೃತ್ತದ ಪರಿಧಿಯೂ ಹೆಚ್ಚುತ್ತಾ ಹೋಗುತ್ತದೆ. ದೇಹವು ಆಹಾರದಲ್ಲಿನ ಸತ್ವವನ್ನು ಮಾತ್ರ ಸ್ವೀಕರಿಸಿ ಮಿಕ್ಕದ್ದನ್ನು ತ್ಯಜಿಸುವಹಾಗೆ, ನಾವು ಈ ಜಗತ್ತಿನಲ್ಲಿ ಸತ್ವವನ್ನು ಮಾತ್ರ ಹೀರಿಕೊಳ್ಳಬೇಕು.
ಮಿತವಾಗಿ ಉಂಡರೆ ಅಮಿತ ಸುಖದಲಿ ಹಿತವಾಗಿ ಬದುಕುವೆ.
ನಾವೆಲ್ಲ ನೆನಪಿನಲ್ಲಿ ಇಡಬೇಕಾದ್ದು:
* ಮಿತವಾಗಿ ತಿನ್ನುವುದು,
* ಸಮತೂಕದ ಆಹಾರವಿರಲಿ: 40-50% ಶರ್ಕರ ಪಿಷ್ಟ (carbohydrates), 20-30% - ಕೊಬ್ಬಿನ ಅಂಶ (fats), 10-30% ಪ್ರೊಟೀನ್, 10-20% - ನಾರಿನ ಅಂಶ (fibre).
* ಸಾಧ್ಯವಾದಷ್ಟೂ ಕಡಿಮೆ ಸಂಸ್ಕರಿಸಿದ ಆಹಾರದ (processed food) ಉಪಯೋಗ.
* ಸಂಸ್ಕರಿಸಿದ ಸಕ್ಕರೆಯನ್ನು ಸಾಧ್ಯವಾದಷ್ಟೂ ಕಡಿಮೆ ಉಪಯೋಗಿಸುವುದು.
* ಊಟಗಳ ಮದ್ಯೆ ಕುರುಕಲು ತಿಂಡಿಗಳನ್ನು (snacks) ತಿನ್ನುವುದನ್ನು ಸಾಧ್ಯವಾದಷ್ಟೂ ಕಡಿತಗೊಳಿಸುವುದು.
* ಊಟವಾದ ಮೇಲೆ 15-20 ನಿಮಿಷ ಮೆಲ್ಲಗೆ ನಡೆದಾಟ / ಅಡ್ಡಾಡುವುದನ್ನು ರೂಢಿಗೊಳಿಸಿಕೊಳ್ಳುವುದು, ಇಲ್ಲವೇ ಸಣ್ಣ ಪುಟ್ಟ ಮನೆ ಕೆಲಸ ಮಾಡುವುದು.
* ಕರಿದ ತಿಂಡಿಯನ್ನು ತಿನ್ನುವುದನ್ನು ಸಾಧ್ಯವಾದಷ್ಟೂ ಮಿತಗೊಳಿಸುವುದು.
* ಸಿಹಿ ತಿನ್ನಬೇಕೆನಿಸಿದರೆ ಕಾಲಿ ಹೊಟ್ಟೆಯಲ್ಲಿ ತಿನ್ನುವುದಕ್ಕಿಂತ ಊಟ ಆದ ಮೇಲೆ ತಿನ್ನುವುದು ಒಳ್ಳೆಯದು. ಸಿಹಿಯ ಜೊತೆ ಬಾದಾಮಿ ಇಲ್ಲ ಪಿಸ್ತಾ (ಯಾವುದೇ dry fruits / nuts ) ಬೆರಸಿ ತಿನ್ನುವುದು. ಇಲ್ಲ ಹೋಳಿಗೆ ತಿನ್ನುವುದಾದರೆ ಅದರ ಜೊತೆ ಸ್ವಲ್ಪ(ವೇ!) ತುಪ್ಪ ಸೇರಿಸಿ ತಿನ್ನುವುದು.

ಕೊನೆಯ ಕೊಸರು:
- ನಮ್ಮ ದೇಹದ ಆರೋಗ್ಯ (ಅಕ್ಷರಶಃ) ನಮ್ಮ ಕೈಯಲ್ಲಿ (ಅಥವಾ ಚಮಚೆಯಲ್ಲಿ) ಇದೆ ಹಾಗೂ ಬಹುತೇಕ ನಾವು ತಿನ್ನುವ ಆಹಾರವನ್ನು ಅವಲಂಬಿಸಿದೆ.
- ನೆನಪಿನಲ್ಲಿರಲಿ - ಊಟ ಬಲ್ಲವನಿಗೆ ರೋಗವಿಲ್ಲ.... ಮಾತು ಬಲ್ಲವನಿಗೆ ಜಗಳವಿಲ್ಲ!

ಡಾ. ರವಿರಾಜ್ ಉಪ್ಪೂರ್ ಭಟ್.
ಲ್ಯಾಂಕಾಸ್ಟರ್.

**********************************************************

ನೆನಪುಗಳ ಶ್ರಾವಣ 

ಎಲ್ಲರಿಗೂ ಆತ್ಮೀಯ ನಮಸ್ಕಾರ,
ಈ ವಾರದ ಅನಿವಾಸಿ ಸಂಚಿಕೆಯಲ್ಲಿ ಎರಡು ಪುಟ್ಟ ಬರಹಗಳಿವೆ. ಒಂದು ಶ್ರಾವಣ ಮಾಸದಲ್ಲಿ ಸಾರಸ್ವತ ಸಮುದಾಯದಲ್ಲಿ ಆಚರಿಸಲಾಗುವ ಚೂಡಿ ಪೂಜೆಯ ಕಿರು ಪರಿಚಯ ಮತ್ತು ಅನಿವಾಸಿ ಬ್ಲಾಗ್ ನಲ್ಲಿ ಇದೇ ಮೊದಲ ಸಲ ಬರೆಯುತ್ತಿರುವ ಶ್ರೀಮತಿ ರೇಖಾ ಪಾಟೀಲ್ ಅವರು, ನಮ್ಮನ್ನು ತಮ್ಮ ಅಜ್ಜನ ಮನೆಯ ನೆನಪುಗಳ ಜಾತ್ರೆಗೆ ಪದಗಳ ತೇರಿನಲ್ಲಿ ಕರೆದೊಯ್ಯಲಿದ್ದಾರೆ.
ಓದಿ ತಮ್ಮ ಅನಿಸಿಕೆಯನ್ನು ತಿಳಿಸುವುದನ್ನು ಮರೆಯಬೇಡಿ
ಪ್ರೀತಿಯಿಂದ
ಅಮಿತಾ ರವಿಕಿರಣ್ .
 ಚೂಡಿ-ಶ್ರಾವಣದ ವಿಶಿಷ್ಟ ಆಚರಣೆ.   
ಮೊನ್ನೆ ಮೊನ್ನೆಯಷ್ಟೇ ಯುಗಾದಿ ಆದಂತಿದೆ, ಅದೋ ಆಗಲೇ ಶ್ರಾವಣ ಬಂದು ಸಾಲು ಸಾಲು ಹಬ್ಬಗಳನ್ನು ತನ್ನೊಟ್ಟಿಗೆ ಕರೆದು ತಂದಿದೆ. ಭಾರತದಲ್ಲಿ ಮಳೆಗಾಲವೆಂಬ ಈ ಚೈತನ್ಯಪೂರ್ಣ ಕಾಲದಲ್ಲಿ ಹೊಲದಲ್ಲಿ ಗದ್ದೆ ತೋಟದಲ್ಲಿ ಮನೆಗಳಲ್ಲಿ ಮನಗಳಲ್ಲಿ ಎಲ್ಲೆಡೆ ಒಂದು ಬಗೆಯ ಸಂಭ್ರಮ. ಜಿರಾಪತಿ ಮಳೆಯಲ್ಲೂ ತಮ್ಮ ಜರಿಸೀರೆಯನ್ನುಟ್ಟು ಮನೆ ಮನೆಗೆ ಅರಿಶಿನ ಕುಂಕುಮಕ್ಕೆ ಹೋಗುವ ಆ ನೋಟವೇ ಚಂದ. ಜೊತೆಗೆ ನಾಗರ ಪಂಚಮಿ,ರಾಖಿ,ನೂಲು ಹುಣ್ಣಿಮೆ, ಕೃಷ್ಣಾಷ್ಟಮಿ, ವರಮಹಾಲಕ್ಷ್ಮಿ ಸಾಲು ಸಾಲು ಸಂಭ್ರಮಗಳ ಮಾಸ ಈ ಶ್ರಾವಣ. ಈ ಶ್ರಾವಣಮಾಸದಲ್ಲಿ ಬರುವ ಇನ್ನೊಂದು ವಿಶಿಷ್ಟ ಹಬ್ಬ, ಕೇವಲ ಸಾರಸ್ವತ ಸಮುದಾಯದವರು ಪಾಲಿಸಿಕೊಂಡು ಬಂದಿರುವ ಆಚರಣೆಯೇ ಚೂಡಿ ಪೂಜೆ.

ಸರಸ್ವತಿ ನದಿತೀರದಿಂದ ವಲಸೆ ಬಂದು ಮಹಾರಾಷ್ಟ್ರದ ರತ್ನಾಗಿರಿಯಿಂದ ಕೇರಳದ ತುದಿಯವರೆಗಿನ ಕೊಂಕಣ ಪಟ್ಟಿಯಗುಂಟ ಹೆಚ್ಹಾಗಿ ನೆಲೆಸಿರುವ ಸಾರಸ್ವತರು ಎದುರು ನೋಡುವುದು ಶ್ರಾವಣದ ಚೂಡಿ ಪೂಜೆಯನ್ನ. ಶ್ರಾವಣದ ಪ್ರತಿ ಶುಕ್ರವಾರ ಮತ್ತು ವಿಶೇಷವಾಗಿ ಭಾನುವಾರಗಳಂದು ಈ ಪೂಜೆ ತುಳಸಿಯ ಮುಂದೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ.

ಬರಿಯ ಪೂಜೆ ಅಂದ್ರೆ ಅದರಲ್ಲೇನು ವಿಶೇಷ ಅಂದ್ರಾ? ಆ ಪೂಜೆಯಲ್ಲಿ ಬಳಸುವ ವಸ್ತುಗಳು ಈ ಆಚರಣೆಯನ್ನು ವಿಶೇಷವಾಗಿಸುತ್ತವೆ. ಮಳೆಗಾಲದಲ್ಲಿ ಭೂಮಾತೆ ಹಸಿರುಟ್ಟು ನಗುವಾಗ ಅವಳಲ್ಲಿ ದೊರೆಯುವ ಅಪರೂಪದ ಹದಿನಾರು ಬಗೆಯ ಎಲೆಗಳು, ಜೊತೆಗೆ ಸೇವಂತಿಗೆ, ಗರಿಕೆ ,ಹೊಲದ ಬದುವಿನಲ್ಲಿ ಸಿಗುವ ನೆಲನೆಲ್ಲಿ,ಲಾಯಾ ಮಡ್ಡಿ,ರತ್ನಗಂಧಿ,ವಿಷ್ಣುಕಾಂತಿ ,ಸುಗಂಧಿ,ಕಾಗಿ ಕಾಲು ಗುಬ್ಬಿ ಕಾಲು ,ಹುಲಿ ಉಗುರು.ಬೆಕ್ಕಿನ ಕಾಲು,ಮಿಟಾಯಿ ಹೂ ,ಗೌರಿ ಮುತ್ತು,ಗೌರಿ ಹೂವು,ರಥದ ಹೂ ಎಂಬ ವಿಚಿತ್ರ ಜನಪದ ಹೆಸರಿನ ಸಸ್ಯಗಳನ್ನು ತಂದು ಕೂಡಿಸಿ ಗುಚ್ಛ ಕಟ್ಟಿದರೆ ಚೂಡಿ ಸಿದ್ಧ. ಚೂಡಿ ಎಂಬುದು ಕಲಾತ್ಮಕತೆಯ ಕನ್ನಡಿಯೂ ಹೌದು. ಲಭ್ಯ ಇರುವ ಸಸ್ಯಗಳನ್ನು ಹೂ ಎಲೆಗಳನ್ನು ಬಣ್ಣದ ಹೊಂದಾಣಿಕೆ ಮತ್ತು ಆಕಾರ ಗಾತ್ರ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕಟ್ಟ ಬೇಕಾಗುತ್ತದೆ. ಚೂಡಿಯನ್ನು ಕಟ್ಟುವಾಗ ಬಾಳೇನಾರನ್ನು ನೆನೆಸಿ ಅದರಿಂದ ದಾರದ ಎಳೆಗಳನ್ನು ತೆಗೆದು ಅದರಿಂದಲೇ ಕಟ್ಟಲಾಗುತ್ತದೆ.ಇತ್ತೀಚಿಗೆ ಸಾರಸ್ವತ ಸಮಾಜ ಮಂದಿರಗಳಲ್ಲಿ ದೇವಳಗಳಲ್ಲಿ ಚೂಡಿ ಸ್ಪರ್ಧೆ ಏರ್ಪಡಿಸುವುದೂ ಉಂಟು.

ಆಚರಣೆ -ವಿಧಿ ವಿಧಾನ
ಪ್ರತ್ಯೇಕ ಚೂಡಿಯನ್ನು ವೀಳ್ಯದೆಲೆಯೊಂದಿಗೆ ತುಳಸಿ ಮುಂದೆ ಇಟ್ಟು, ದೀಪ ಹಚ್ಹಿ ಹಣ್ಣು ಕಾಯಿ ಸಮರ್ಪಿಸಿ ತುಳಸಿಗೆ ಪ್ರದಕ್ಷಿಣೆ ಹಾಕಲಾಗುತ್ತದೆ. ಜೊತೆಗೆ ಮತ್ತೊಂದು ವಿಶೇಷ ಎಂದರೆ ಇಲ್ಲಿ ಪೂಜೆಗೆ ಅರಿಶಿನ ಕುಂಕುಮ ದೊಂದಿಗೆ ''ರುವಣ'' ಎಂದು ಕರೆಯಲಾಗುವ ಸುಣ್ಣ ಮತ್ತು ಗಂಧ ಅರಿಶಿನದ ಮಿಶ್ರಣವನ್ನು ಬಳಸುವುದು. ಆಗತಾನೇ ಚಿಗುರೊಡೆದು ನಿಂತಿರುವ ಅರಿಸಿನದ ಎಲೆ ತಂದು ಅದರ ಮೇಲೆ ಅಕ್ಕಿಯನ್ನು ಹರಡಿ. ಅದರ ಮೇಲೆ ಅಡಿಕೆ ಬೆಟ್ಟವನ್ನು ಇಟ್ಟು ಅದರ ಎದುರಿಗೆ ೫,೭.೧೧.೨೧.ಹೀಗೆ ಚೂಡಿಯನ್ನಿಟ್ಟು ಪೂಜಿಸಿ ೧೬.೩೨ ರಂತೆ ಗರಿಕೆಯನ್ನು ಕಟ್ಟಿ ಸೆರಗಿನ ತುದಿಯಿಂದ ಅದನ್ನು ಹಿಡಿದು ಸೂರ್ಯನಿಗೆ ಅರ್ಘ್ಯ ನೀಡುತ್ತಾರೆ. ನಂತರ ಬಾವಿ ಕಟ್ಟೆಗೆ ಮನೆಯ ಸೂರಿಗೆ, ತೆಂಗಿನ ಮರಕ್ಕೆ, ಮನೇ ಹೊಸಿಲಿಗೆ ವಿಳ್ಯದೊಂದಿಗೆ ಇವನ್ನು ಇಟ್ಟು ಪೂಜಿಸುತ್ತಾರೆ. ಸೌಭಾಗ್ಯ ಸಮೃದ್ಧಿ ವೃದ್ಧಿಸುವಂತೆ ಹೆಂಗಳೆಯರು ಪ್ರಾರ್ಥಿಸುತ್ತಾರೆ. ಭತ್ತದ ಅರಳು ಮತ್ತು ಬೆಲ್ಲವನ್ನ ನೇವೇದ್ಯ ಮಾಡಿ ಹೊಸಿಲ ಮೇಲೆ ಚೂಡಿಯನ್ನು ಇಟ್ಟು ಆರತಿ ಮಾಡುತ್ತಾರೆ..
ಕೆಲವೊಂದು ಮನೆಯ ಸಂಪ್ರದಾಯದಲ್ಲಿ, ಪೂಜೆಯನ್ನು ದೇವರ ಮುಂದೆ ಮಾಡಿ ಸಂಜೆ ಸಮಯದಲ್ಲಿ ತುಳಸಿಯ ಮುಂದೆ ಚೂಡಿ ಯನ್ನುವಿಸರ್ಜಿಸಲಾಗುತ್ತದೆ. ಘಟ್ಟದ ಕೆಳಗೆ ಮತ್ತು ಘಟ್ಟದ ಮೇಲಿನ ಆಚರಣೆಯಲ್ಲಿ ಕೆಲವು ವ್ಯತ್ಯಾಸಗಳು ಕಾಣಸಿಗುತ್ತವೆ.

ಮದುವೆಯ ನಂತರ ಬರುವ ಮೊದಲ ಚೂಡಿಯನ್ನು ಮದುಮಗಳೊಂದಿಗೆ ಸಮಾಜದ ಎಲ್ಲಾ ಬಂಧು ಭಗಿನಿಯರು ಸೇರಿ ಆಚರಿಸುತ್ತಾರೆ. ಮತ್ತು ಮದುಮಗಳು ಎಲ್ಲಾ ಹಿರಿಯರಿಗೂ ಚೂಡಿ ಕೊಟ್ಟು ನಮಸ್ಕರಿಸಿದ ಮೇಲೆ ಆಕೆಗೆ ಉಡುಗೊರೆಯನ್ನು ನೀಡಲಾಗುತ್ತದೆ. ಪತಿ ಮತ್ತು ಇತರ ಹಿರಿಯರಿಗೆ ಕೇವಲ ವೀಳ್ಯದೆಲೆಯನ್ನು ನೀಡಿ ನಮಸ್ಕರಿಸಲಾಗುತ್ತದೆ. ಅನುಕೂಲಸ್ಥರು ಈ ದಿನ ಔತಣ ನೀಡುವುದೂ ಉಂಟು.ಸಂಜೆ ಮನೆ ಮನೆಗೆ ಹೋಗಿ ಹಿರಿಯ ಮುತ್ತೈದೆಯರಿಗೆ, ದೇವಸ್ಥಾನಗಳಿಗೂ ಚೂಡಿಯನ್ನು ಕೊಟ್ಟು ಬರುವ ನಿಯಮವಿದೆ. ದೂರವಿದ್ದವರು ಪೋಸ್ಟಿನ ಮೂಲಕ ಕಳಿಸುವುದೂ ಉಂಟು.ಇದು ಗೌರವ ಸೂಚಕವು ಹೌದು.

ಆಶಯ
ಮೇಲು ನೋಟದಲ್ಲಿ ಕೇವಲ ಪೂಜೆಯಾಗಿ ಕಾಣುವ ಈ ಆಚರಣೆ, ನಮ್ಮ ಜನಪದರ ಪ್ರಕೃತಿ ಪೂಜೆಯ ಮುಂದುವರಿಕೆ, ಸಮಷ್ಟಿ ಪ್ರಜ್ಞೆಯ ಮತ್ತೊಂದು ಉದಾಹರಣೆ ಎಂದರೂ ತಪ್ಪಲ್ಲ .ಎಲ್ಲೂ ಬಳಕೆ ಆಗದ ಸಸ್ಯಗಳು.ಈ ಆಚರಣೆಯಲ್ಲಿ ಬಳಸಲ್ಪಡುತ್ತವೆ. ಸಮಾಜದಲ್ಲಿ ಎಲ್ಲಾ ಸಮುದಾಯದ ಸಾಮರಸ್ಯದ ತತ್ವವನ್ನು ಇದು ಒಳಗೊಂಡಿದೆ.ಇದೊಂದು ಆಚರಣೆಯ ನಿಮಿತ್ಯ ತನ್ನ ಬಿಡುವಿಲ್ಲದ ದಿನಚರಿಯ ನಡುವೆಯೂ ಗೃಹಿಣಿ ತನ್ನ ಸರೀಕರೊಂದಿಗೆ ಬೆರೆತು ಕಷ್ಟ ಸುಖ ಮಾತಾಡುವ ಅವಕಾಶವನ್ನು ಮಾಡಿಕೊಡುವ ಉದ್ದೇಶದಿಂದಲೂ ಈ ನಿಯಮ ಮಾಡಿರಬಹುದು..
ಪದ್ಧತಿ ಸಂಪ್ರದಾಯಗಳು ಯಾವುದೊ ಒಂದು ಆಶಯ ದ ಹಿನ್ನೆಲೆಯಲ್ಲೇ ರೂಪುಗೊಂಡಿರುತ್ತವೆ.ಮತ್ತು ಮಾನವನಿಗೆ ಸಂಸ್ಕೃತಿಗೆ ಸನ್ನಿಹಿತವಾಗಿ ನಡೆಯಲು ಪ್ರೇರೇಪಿಸುತ್ತವೆ.ಅದನ್ನು ಅರಿತು ಮುನ್ನಡೆಸಿಕೊಂಡು ಹೋಗುವ ಮನಸ್ಸು ನಮಗಿರಬೇಕು ಅಷ್ಟೇ!

ನೆನಪಿನ ಅಂಗಳದಲ್ಲಿ


ರೇಖಾ ಪಾಟೀಲ. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ಊರಿನವರು. ಅವರ ಕರ್ಮಭೂಮಿಯಾದ ಬೆಂಗಳೂರು ಈಗ ಗಂಡನ ಮನೆ ಕೂಡ. ಸಾಹಿತ್ಯ, ಹಾಡು ಕೇಳುವುದು ಪ್ರವಾಸ, ಹರಟೆ,ಕನ್ನಡ ನಾಡು ನುಡಿ,ಅವರ  ಮನಸಿಗೆ ಖುಷಿ ಕೊಡುವ ವಿಚಾರಗಳು.
ಸಾಫ್ಟವೇರ್ ಕಂಪನಿಯಲ್ಲಿ ಉದ್ಯೋಗ ನಿಮಿತ್ತ ಬೆಲ್ಫಾಸ್ಟ್ನಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾರೆ .


ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಶಾಲೆಯ ಕೊನೆಯ ದಿನ ಪರೀಕ್ಷೆ ಮುಗಿಸಿ ಬಂದವರೇ ಅಜ್ಜನ ಊರಿಗೆ ಹೋಗುವುದು ವಾಡಿಕೆಯಾಗಿತ್ತು.
ನನ್ನ ಅಜ್ಜನ ಊರು ಗಾಡಗೋಳಿ ಅನ್ನುವ ಹೆಸರಿನ, ಹೊಳೆ ಆಲೂರಿನ ಹತ್ತಿರ ಒಂದು ಹಳ್ಳಿ. ಭರ್ಜರಿ ೨ ತಿಂಗಳಿನ ಬೇಸಿಗೆ ರಜೆ ಕಳೆಯುವುದು ಅಲ್ಲೇ. ಅಲ್ಲಿಗೆ ಹೋಗುವುದಕ್ಕೆ ಕಾರಣ ಅಜ್ಜ,ಅಜ್ಜಿ,ಚಿಕ್ಕಮ್ಮ, ಮಾಮ ಅವರು ತೋರಿಸುವ ಪ್ರೀತಿ ಒಂದು ಕಡೆ ಆದರೆ ಊರಲ್ಲಿ ಹಾದು ಹೋಗುವ, ಊರಿನ ಜೀವ ನದಿ ಮಲಪ್ರಭೆ ಅತಿ ಮುಖ್ಯ ಮತ್ತು ಅಸಲಿ ಕಾರಣ ಅಂತ ಅನಿಸುತ್ತದೆ

ದೈನಂದಿನ ನೀರಿನ ಎಲ್ಲ ಅವಶ್ಯಕತೆಗಳಿಗೆ ಇಡೀ ಊರೇ ನೆಚ್ಚಿಕೊಂಡಿದ್ದು ಮಲಪ್ರಭೆಯನ್ನೇ. ಅಜ್ಜನ ಮನೆಯಿಂದ ಹೊಳೆ 3 ರಿಂದ 4 ನಿಮಿಷದ ಕಾಲು ದಾರಿ. ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ದನ ಕರುಗಳಿಗೆ ನೀರು ಕುಡಿಸಲು ಹೀಗೆ ಹತ್ತು ಹಲವು ಕೆಲಸಗಳಿಗೆ ಊರಿನ ಜನ ಇಡೀ ದಿನ ಹೊಳೆಗೆ ಹೋಗಿ ಬರುವುದು ಸಾಮಾನ್ಯವಾಗಿತ್ತು. ಪ್ರತಿ ಸಲ ನಮ್ಮ ಮನೆಯಿಂದ ಯಾರಾದರೂ ಹೊಳೆಗೆ ಹೋದರೂ ನಾನು ಮತ್ತು ನನ್ನ ತಮ್ಮಂದಿರು ಅವರನ್ನು ಹಿಂಬಾಲಿಸುತ್ತಿದ್ದೆವು. ಕಾರಣ ನದಿಯಲ್ಲಿ ಈಜುವುದು.

ದಿನದ ಕನಿಷ್ಠ ಪಕ್ಷ, 4 ರಿಂದ 5 ಘಂಟೆಗಳ ಕಾಲ ಹೊಳೆಯಲ್ಲೇ ಕಳೆಯುತ್ತಿದ್ದೆವು. ಬಟ್ಟೆ ತೊಳೆಯುವುದಕ್ಕೆಂದು ಹೋದವರ ಜೊತೆ ಹೋಗಿ, ಬಟ್ಟೆ ತೊಳೆದು, ಮರಳಿನ ಮೇಲೆ ಹಾಕಿ ಬಟ್ಟೆ ಒಣಗಿಸಿ ಮಡಚಿದ ಮೇಲೆಯೇ ಮನೆಗೆ ಮರಳುವುದು. ಅಲ್ಲಿಯವರೆಗೂ ನೀರಲ್ಲೇ ಆಟ.
ಊರಿನಲ್ಲಿ ಕೆಲವೊಂದು ಮನೆಗೆ ನಲ್ಲಿಯ ವ್ಯವಸ್ಥೆ ಇತ್ತಾದರೂ ಸಾಕಾಗುವಷ್ಟು ಕುಡಿಯಲು ನೀರು ಸಿಗುತ್ತಿರಲಿಲ್ಲ. ಅದಕ್ಕೂ ಹೊಳೆ ದಾಟಿ ಮರಳನ್ನು ಬಗೆದು ವರ್ತಿ ತೋಡಿ ತಿಳಿಯಾದ ಕುಡಿಯುವ ನೀರನ್ನುತೆಗೆದುಕೊಂಡು ಹೋಗುತ್ತಿದ್ದರು.
ಆ ವರ್ತಿಯಲ್ಲಿ ಒಂದು ಚಿಕ್ಕ ಪಾತ್ರೆಯ ಸಹಾಯದಿಂದ ತಿಳಿಯಾದ ನೀರನ್ನು ಕೊಡಕ್ಕೆ ತುಂಬುವುದೇ ಒಂದು ಖುಷಿ. ಇದೆಲ್ಲ ಸಂಭ್ರಮವನ್ನು ನೋಡಲೆಂದೇ ತಾಯಿ ಮಲಪ್ರಭೆ ಊರನ್ನು ಶಾಂತವಾಗಿ ದಾಟಿ ಹೋಗುತ್ತಿದ್ದಳೇನೋ ಅನಿಸುತ್ತದೆ.

ಹೊಳೆ ಆಲೂರಿನಲ್ಲಿ ಹೊಳೆಗೆ ಅಡ್ಡವಾಗಿ ರೈಲ್ವೆ ಹಳಿ ಇದೆ. ಅದರ ಮೇಲೆ ಕೂಗಿಕೊಂಡು ಹೋಗುವ ರೈಲಿನ ಶಬ್ದ ಇಲ್ಲಿಗೂ ಕೇಳುತ್ತದೆ. ಆ ಕೂಗಿನೊಂದಿಗೆ ಜನ ಸಮಯವನ್ನು ಗುರುತಿಸುತ್ತಿದ್ದರು. 12ರ ಟಪಾಲ್ ಗಾಡಿ, 5ರ ಹಾಲಿನ ಗಾಡಿ ಹೀಗೆ. ಈಗ ನಾನಿರುವ ಮನೆಯ ಮೇಲೆ ಪ್ರತಿ 10 ರಿಂದ 15 ನಿಮಿಷಕ್ಕೊಂದು ವಿಮಾನ ಹಾರುತ್ತದೆ, ಅದರಿಂದ ನಾನು ಯಾವ ದಿನಚರಿಯನ್ನು ಗುರುತಿಸಿಕೊಂಡಿಲ್ಲವಾದರೂ ನನಗೆ ನೆನಪಾಗುವುದು ಟಪಾಲ್ ಗಾಡಿ ಮತ್ತು ಹಾಲಿನ ಗಾಡಿ.
ಒಂದಷ್ಟು ವರ್ಷಗಳ ನಂತರ ಪ್ರತಿ ಮನೆಗೆ ನಲ್ಲಿ ಸೌಕರ್ಯ ದೊರಕಿ ಹೊಳೆಗೆ ಹೋಗುವುದು ಕಡಿಮೆ ಆಯಿತು. ಅಷ್ಟೊತ್ತಿಗೆ ನಾವುಗಳು ಪ್ರೌಢ ಶಾಲೆಗೆ ಸೇರಿದ್ದರಿಂದ ರಜೆಗೆಂದು ಊರಿಗೆ ಹೋಗುವುದು ತೀರಾ ವಿರಳವಾಗಿತ್ತು. ಹೊಳೆಯಲ್ಲಿ ಮಣ್ಣೆತ್ತುವ ಕೆಲಸ ಭರದಿಂದ ಸಾಗಿ ಹೊಳೆಗೆ ಹೋಗುವುದೇ ಅಪಾಯ ಅನ್ನುವಂತಾಯಿತು. ಊರಿನ ಜನ ಹೊಳೆಯಾಚೆಗಿನ ಹೊಲಗಳನ್ನು ಮಾರಿಕೊಂಡರು.
2009ರ ಪ್ರವಾಹದಲ್ಲಿ ಮಲಪ್ರಭೆ ಇಡೀ ಊರನ್ನೇ ಆವರಿಸಿಕೊಂಡಳು. ಒಂದಿಡೀ ವಾರ ಪೂರ್ತಿ ಊರಿಗೆ ಊರೇ ನೀರಲ್ಲಿ ಮುಳುಗಿ ಹೋಯಿತು. ಊರ ಜನರೆಲ್ಲಾ ಗಂಜಿ ಕೇಂದ್ರಗಳಿಗೆ ಹೋಗಿ ಸೇರಿಕೊಂಡರು.ಈಗ ಊರನ್ನು ನದಿಯಿಂದ ದೂರ ಸ್ಥಳಾಂತರಿಸಲಾಗಿದೆ.
ಸುಮಾರಷ್ಟು ವರ್ಷಗಳಾದ ಮೇಲೆ ಮತ್ತೆ ಹೋದೆ ಅಜ್ಜನ ಮನೆ ಮತ್ತು ನಾವು ಜೀವದಂತೆ ಪ್ರೀತಿಸುತ್ತಿದ್ದ ಹೊಳೆ ನೋಡಲು. ಅಜ್ಜನಿಲ್ಲದ ಬಿದ್ದು ಹೋದ ಮನೆ ನೋಡಿ ಯಾಕೋ ಗಂಟಲಬ್ಬಿಬಂತು, ಮಾತೇ ಹೊರಡಲಿಲ್ಲ ಕಣ್ಣು ತುಂಬಿಕೊಂಡಿತ್ತು.