ಬಿ.ಆರ್.ಛಾಯ ಮತ್ತು ಪದ್ಮಪಾಣಿ ‘ಜೋಡಿ’ಯ ಸ್ಪೆಷಲ್

ಕನ್ನಡ ಬಳಗ ಯು.ಕೆ. ಈ ವರ್ಷ ಕೂಡ ಯಶಸ್ವಿಯಾಗಿ ‘ದೀಪಾವಳಿ ೨೦೧೬’  ಕಾರ್ಯಕ್ರಮವನ್ನು ನಡೆಸಿತು. ಅದರ ವಿಶೇಷ ವರದಿ, ವಿವರಗಳು, ಅನಿಸಿಕೆಗಳು ಸದ್ಯದಲ್ಲೇ ನಿಮ್ಮನ್ನು ತಲುಪಲಿವೆ. ಈ ವಾರ ನಿಮ್ಮ ಮುಂದಿರುವುದು ‘ಬಿ.ಆರ್.ಛಾಯ ಮತ್ತು ಪದ್ಮಪಾಣಿ ಜೋಡಿಯ ಸ್ಪೆಷಲ್’. ‘ಅನಿವಾಸಿ’ ಬಳಗದ ಹಲವಾರು ಸದಸ್ಯರುಗಳು ಒಟ್ಟುಗೂಡಿ ಇದನ್ನು ಸಿದ್ಧಪಡಿಸಿದ್ದಾರೆ.  ಏನಿದೆ ಈ ಸ್ಪೆಷಲ್ ನಲ್ಲಿ?? ಓದಿ ನೀವೇ ಹೇಳಿ!!

14657402_1284578304932105_1475829304451788245_n
ಫೇಸ್ ಬುಕ್ ಚಿತ್ರ

ಪದ್ಮಪಾಣಿ ಜೋಡಿದಾರ್ ಮತ್ತು ಬಿ.ಆರ್.ಛಾಯ ದಂಪತಿ

ಕನ್ನಡ ಬಳಗ ಯು.ಕೆ.ಯ 2016 ದೀಪಾವಳಿ ಕಾರ್ಯಕ್ರಮಕ್ಕೆ ಆಗಮಿಸಿದ ಬಿ. ಆರ್. ಛಾಯಾ ಅವರ ಸಂದರ್ಶನ

                                                – ಶ್ರೀವತ್ಸ ದೇಸಾಯಿ

’ಕರ್ನಾಟಕದ ನೈಟಿಂಗೇಲ್’ ಎಂದೇ ಸಂಗೀತಪ್ರಿಯರಿಗೆಲ್ಲ ಚಿರಪರಿಚಿತರಾದ ಬೆಂಗಳೂರು ರಾಮಮೂರ್ತಿ ಛಾಯಾ ಅವರು ಇದೇ ವರ್ಷ ನವೆಂಬರ್ 5 ರಂದು ಯು ಕೆ ಕನ್ನಡಬಳಗಕ್ಕೆ ಬಂದು ತಮ್ಮ ಸಂಗೀತದ ರಸದೂಟದಿಂದ ಕನ್ನಡಿಗರ ಹೃದಯವನ್ನು ಗೆದ್ದರು. ಕಳೆದ ನಾಲ್ಕು ದಶಕಗಳಲ್ಲಿ ತಮ್ಮ ಕನ್ನಡ ಭಾವಗೀತೆ, ಮಕ್ಕಳ ಗೀತೆ, ವಿವಿಧ ಭಾಷೆಗಳ ಚಲನ ಚಿತ್ರಗೀತೆಗಳು, ಹಿನ್ನೆಲೆ ಗಾಯನದಿಂದ ದೇಶ-ವಿದೇಶಗಳಲ್ಲಿ ಮನೆಮಾತಾಗಿದ್ದಾರೆ. ಚಿಕ್ಕಂದಿನಿಂದಲೂ ಸಂಗೀತ-ಹಾಡು ಇವೇ ತಮ್ಮ ಜೀವನವೆಂದುಕೊಂಡು ಈಗಲೂ ಪ್ರತಿ ಹಾಡಿನಲ್ಲಿಯೂ ಹೊಸ ಅನುಭವವನ್ನು ತಾವೂ ಪಡೆದು ಕೇಳುಗರಿಗೂ ಉಣಿಸಿ ತೃಪ್ತಿಪಡಿಸುವ ಅಸಾಧಾರಣ ವ್ಯಕ್ತಿತ್ವ ಅವರದು. ಈ ಬಾರಿ ಅವರು ಇಂಗ್ಲೆಂಡಿನಲ್ಲಿ ಕೊಟ್ಟ ಎರಡು ಸಂಗೀತ ಕಾರ್ಯಕ್ರಮಗಳ ನಂತರ ಮೂರು ವಾರಗಳ ಅಮೇರಿಕೆಯ ಪ್ರವಾಸಕ್ಕೆ ಹೊರಡುವ ಯೋಜನೆಯಿತ್ತು. ಇಂಗ್ಲೆಂಡಿನಿಂದ ಹೊರಡುವ ಮುನ್ನಾದಿನ ನನಗೆ ಅವರ ಸಂದರ್ಶನ ಪಡೆಯುವ ಸದವಕಾಶ ಸಿಕ್ಕಿತು. ಅವರ ಮತ್ತು ಸಂಗೀತದ ಜೋಡಿ ಒಂದು ತರವಾದರೆ, ಛಾಯಾ ಮತ್ತು ಜೋಡಿದಾರರ (ಅವರ ಪತಿ ಪದ್ಮಪಾಣಿ) ಆತ್ಮೀಯ ಜೋಡಿ ಇನ್ನೊಂದು ತರ.

ನೇರವಾಗಿ ನಾನು ಅವರ ಸಂಗೀತ ಯಾತ್ರೆಯ ಆದಿಯಿಂದಲೇ ಸಂದರ್ಶನ ಪ್ರಾರಂಭ ಮಾಡಿದೆ.

ಶ್ರೀವತ್ಸ: ನೀವು ಶಾಲೆಯಲ್ಲಿದ್ದಾಗಿನಿಂದಲೇ ನಿಮಗೆ ಹಾಡುಗಾರಿಕೆ-ಸಂಗೀತದಲ್ಲಿದ್ದ ಪ್ರತಿಭೆಯನ್ನು ಪ್ರತ್ಯಕ್ಷ ಕಂಡದ್ದನ್ನು ನಮ್ಮ ಕನ್ನಡ ಬಳಗದ ವಿಶ್ವನಾಥ್ ಮತ್ತು ವಿನತೆ ನೆನಪಿಸಿಕೊಂಡಿದ್ದಾರೆ. (ಅವರ ಬರಹಗಳು ಈ ಸಂದರ್ಶನದ ನಂತರ ಇವೆ). ಅದು ಹೇಗೆ ಶುರುವಾಯಿತು?

ಛಾಯಾ: ಬಹುಶಃ ನನ್ನ ಅಜ್ಜಿಯಿಂದಿರಬೇಕು. ಅವರ ಹೆಸರು ಭಾಗೀರತಮ್ಮ. ಅವರಲ್ಲಿ ನಿಂತ ನಿಂತಲ್ಲೆ ಹಾಡುಕಟ್ಟಿ ಸುಶ್ರಾವ್ಯವಾಗಿ ಹಾಡುವ ಕಲೆಯಿತ್ತು. ಬಹಳ ಚೆನ್ನಾಗಿ ಹಾಡುತ್ತಿದ್ದರು. ನನ್ನ ತಾತ ಕೃಷ್ಣರಾವ್ ಗುಬ್ಬಿ ಕಂಪನಿಯಲ್ಲಿ ಹಾರ್ಮೋನಿಯಂ ನುಡಿಸುತ್ತಿದ್ದರು. ಅವರಿಬ್ಬರ ಪ್ರಭಾವವಿರಬೇಕು. ಅದಲ್ಲದೆ ನನ್ನ ತಂದೆ ತಾಯಿ ಸಹ ಸಂಗೀತಪ್ರಿಯರಾಗಿದ್ದರು. ತಂದೆಯವರು ನನ್ನನ್ನು ಎಲ್ಲ ಕಡೆ ಸಂಗೀತಕ್ಕೆ ಕರೆದೊಯ್ಯುತ್ತಿದ್ದರು. ಹೀಗೆಯೇ ಹಾಡಿನ ಹುಚ್ಚು ಶುರುವಾದದ್ದು.

thumbnail_chaya-singing
ನವೆಂಬರ್ ೫ರಂದು ಯು.ಕೆ. ಕನ್ನಡ ಬಳಗದಲ್ಲಿ ಹಾಡುತ್ತಿರುವ ಛಾಯಾ; ವಿಶ್ವನಾಥ್ ಮಂದಗೆರೆ ತೆಗೆದ ಚಿತ್ರ

ನಂತರ ಶಾಸ್ತ್ರೀಯ ಸಂಗೀತ ಕಲಿತು (ಅವರ ಗುರುಗಳು ಶ್ರೀಮತಿ ಜಗನ್ಮಾತಾ ಮತ್ತು ವಿಜಯವಾಣಿ) ಹತ್ತು ವರ್ಷಕ್ಕೂ ಮೊದಲೇ ಸೀನಿಯರ್ ಪರೀಕ್ಷೆ ಪಾಸು ಮಾಡಿದ್ದೆ. ಆ ನಂತರ ನಾಲ್ಕು ವರ್ಷ ಅಭ್ಯಾಸ ನಿಂತು ಹೋಗಿತ್ತು. ಮಕ್ಕಳ ಸಂಗೀತ ಸ್ಫರ್ಧೆಗಳಲ್ಲೆಲ್ಲ ನಾನೇ ಫರ್ಸ್ಟ್. ನನ್ನ ಶಾಲೆಗೇ ಬಹುಮಾನ ಬರುತ್ತಿತ್ತು (ವಿಶ್ವನಾಥರ, ವಿನತೆಯ ನೆನಪುಗಳನ್ನು ಓದಿ). ಒಮ್ಮೆ ಚೆನ್ನೈಗೆ ನನ್ನ ತಂದೆಯವರೊಡನೆ ಮ್ಯೂಸಿಕ್ ರೆಕಾರ್ಡಿಂಗ್ ನೋಡಲು ಸ್ಟೂಡಿಯೋಗೆ ಹೋಗಿದ್ದೆ. ಆಗ ತಂದೆಯವರು ಇಳೆಯರಾಜಾ ಅವರ ಎದುರಿಗೆ ’ಇವಳಿಗೂ ಹಾಡುವದರಲ್ಲಿ ಬಹಳ ಆಸ್ಥೆ’ ಅಂದರು. ಅಂದ ಕೂಡಲೇ ಅವರು ನನ್ನಿಂದ ಹಾಡಿಸಿದರು. ಆಗಲೇ ತಮ್ಮ ತಮಿಳು ’ಜೋತಿ’ ಚಿತ್ರಕ್ಕಾಗಿ ನನ್ನ ಮೂರು ಹಾಡುಗಳ ಧ್ವನಿಮುದ್ರಣ ಮಾಡಿಕೊಂಡರು (1982 ರಲ್ಲಿ). ಆನಂತರ ನಾಲ್ಕು ವರ್ಷದ ಗ್ಯಾಪ್. ಹದಿನಾರು ವರ್ಷದವಳಿದ್ದಾಗ ಮತ್ತೆ ಚೆನ್ನೈಗೆ ಒಂದು ಹಾಡುಗಾರಿಕೆಯ ಸ್ಫರ್ಧೆಗೆ ಹೋಗಿದ್ದೆ. ಅದಕ್ಕೆ ನಿರ್ಣಾಯಕರಾಗಿ ಪಿ.ಬಿ. ಶ್ರೀನಿವಾಸ್, ವಿಜಯಭಾಸ್ಕರ ರಾವ್ ಮುಂತಾದವರಿದ್ದರು. ನನಗೇ ಫರ್ಸ್ಟ್ ಪ್ರೈಸ್! ಅವರು ನನಗೆ ಸಿನಿಮಾದಲ್ಲಿ ಹಾಡುವ ಇಚ್ಚೆಯಿದೆಯೇ ಎಂದು ಕೇಳಿದಾಗ ಯಾರು ಒಲ್ಲೆ ಅಂದಾರು? ಪುಟ್ಟಣ್ಣ ಕಣಗಾಲರ ’ಅಮೃತ ಘಳಿಗೆ’ ಚಿತ್ರದಲ್ಲಿ ಮೂರು ಹಾಡುಗಳನ್ನು ನನ್ನಿಂದ ಹಾಡಿಸಿದವರು ಮ್ಯೂಸಿಕ್ ಡೈರೆಕ್ಟರ್ ’’ಸ್ವರ ಸಮ್ರಾಟ್” ವಿಜಯಭಾಸ್ಕರ್ ಅವರು. ನಾನು ಅವರನ್ನು ಅತ್ಯಂತ ಗೌರವದಿಂದ ಕಾಣುತ್ತೇನೆ.

           (Please Click on the triangle in the middle to play the video above and the one below)

ಶ್ರೀವತ್ಸ: ”ಹಿಂದುಸ್ಥಾನವು ಎಂದೂ ಮರೆಯದ” ಹಾಡಿನಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದಿರಿ. ಮೊನ್ನೆ ನಮ್ಮ ಕನ್ನಡ ಬಳಗದಲ್ಲೂ ಅದನ್ನೇ ಮೊದಲನೆಯದಾಗಿ ಹಾಡಿ ನಮ್ಮಲ್ಲರ ಮನ ತಣಿಸಿದಿರಿ. ಕನ್ನಡ ಚಿತ್ರರಂಗದಲ್ಲೇನೋ ಸಾವಿರಾರು ಹಾಡುಗಳನ್ನು ಹಾಡಿ ಕನ್ನಡಿರ ಮನ ಸೂರೆಗೊಂಡಿದ್ದೀರಿ. ಹಿಂದಿ, ತುಳು,ತೆಲುಗು, ತಮಿಳು ಕೂಡಿ ಮುನ್ನೂರಕ್ಕು ಮೇಲಿನ ’ಎಂದೂ ಮರೆಯದ’ ಸಿನಿಮಾ ಗೀತಗಳನ್ನು ಹಾಡಿದ್ದೀರಿ. ನಿಮಗೆ ತೃಪ್ತಿ ಕೊಟ್ಟ ಹಾಡುಗಳು ಯಾವವು? ವಿಜಯ ಭಾಸ್ಕರ ರಾವ್ ಅವರು ನಿಮ್ಮನ್ನು ಬೆಳಕಿಗೆ ತಂದವರಲ್ಲವೆ? ಯಾರು ನಿಮ್ಮ ಅಚ್ಚುಮೆಚ್ಚಿನ ಸಂಗೀತದ ಡೈರೆಕ್ಟರ್? ಇವನ್ನು ಕೇಳಲೇ ಬೇಕಲ್ಲವೆ?

ಛಾಯಾ: ತಾಯಿಗೆ ಯಾವ ಮಗು ಹೆಚ್ಚು ಪ್ರೀತಿ ಅಂದ ಹಾಗಾಯಿತಲ್ಲ. (ಈ ಉತ್ತರ ಈ ಮೊದಲೇ ಅನಿರೀಕ್ಷಿಸಿತವಲ್ಲ ಎಂದುಕೊಂಡಿದ್ದೆ!). ನಾನು ಹೆಚ್ಚು ಕಡಿಮೆ ಎಲ್ಲ ಡೈರೆಕ್ಟರರೊಡನೆ, ಎಲ್ಲ ಕಲಾವಿದರ ಜೊತೆಗೆ ಹಾಡಿದ್ದೇನೆ. ಒಬ್ಬರು ಅಂತ ಹೆಸರು ಎತ್ತಿ ಹಿಡಿದು ಹೇಳಲಾರೆ. ನಾನು ಮುನ್ನೂರಕ್ಕೂ ಮೇಲೆ ಸಿನಿಮಾದಲ್ಲಿ, ಕನ್ನಡ ಭಾವಗೀತಗಳು, ಜನಪದ ಗೀತಗಳು, ಮಕ್ಕಳ ಹಾಡುಗಳಲ್ಲದೆ, ಸಿನಿಮಾ ಹಾಡುಗಳ ರೆಕಾರ್ಡಿಂಗ್ ಮಧ್ಯಂತರದಲ್ಲಿ ಕರ್ನಾಟಕದ ಮೂಲೆ ಮೂಲೆಗೆ ಅವರ ಆಮಂತ್ರಣದ ಮೇಲೆ ಹೋಗಿ ಕರ್ನಾಟಕದ ನೂರಾರು ಮಠ, ಮಂದಿರ ಇವುಗಳಿಗಾಗಿ ಪ್ರೈವೇಟ್ ರೆಕಾರ್ಡಿಂಗ್ ಮಾಡಿದ್ದುಂಟು, ಅವುಗಳ ಸಂಖ್ಯೆ 10 – 12,000 ವರೆಗೆ ಹೋಗಿರಬಹುದು. ಅವುಗಳು ಕೆಸೆಟ್ಟುಗಳಲ್ಲಿ, ಇಂಟರ್ನೆಟ್ಟಿನಲ್ಲಿ, ರೇಡಿಯೋದಲ್ಲಿ ಹುಡುಕಿದರೆ ಸಿಗಬಹುದು. ಕೆಲವೊಂದು ನನಗೇ ಲೆಕ್ಕಕ್ಕೆ ಸಿಗವಲ್ಲದಾಗಿವೆ!  (ಈ non-filmy songs  ಹನ್ನೆರಡು ಸಾವಿರದ ವರೆಗೆ ಮುಟ್ಟ ಬಹುದು. ಅದೊಂದು ಗಿನ್ನಿಸ್ ದಾಖಲೆಯಾಗಬಹು ಎಂದು ಅವರ ಪತಿ ಪದ್ಮಪಾಣಿಯವರ ಅಭಿಪ್ರಾಯ). ನನಗೇನೆಂದರೆ ಈ ದೇವರ ನಾಮಗಳು, ಭಗವಂತನ ಮೇಲಿನ ಭಕ್ತಿಯ ಹಾಡುಗಳನ್ನು ಹಾಡಲು ಒದಗಿದ ಸೌಭಾಗ್ಯ ನನಗೆ ಅತ್ಯಂತ ಸಮಾಧಾನ ಮತ್ತು ಸಂತೋಷ ತಂದಿದೆ. ನಾನು ಕೊಂಕಣಿ, ಕೊಡವ, ದಕ್ಖನಿ ಭಾಷೆಗಳಲ್ಲಲ್ಲದೆ ಒಂದು ಸಾವಿರದಷ್ಟು ತುಳು ಹಾಡುಗಳನ್ನು ಹಾಡಿದ್ದೇನೆ. ಆದರೆ ಒಂದು ಮಾತು ಹೇಳುತ್ತೇನೆ. ಯಾವುದೇ ಹಾಡಾದರೂ ನನಗೆನಿಸಿದ ಮಟ್ಟಿಗೆ ಡೈರೆಕ್ಟರರನ್ನು ಶೇಕಡಾ 40 ರಷ್ಟು ಮಾತ್ರ ತೃಪ್ತಿ ಪಡಿಸಲು ಸಾಧ್ಯವಾಗುತ್ತದೆ. ಏಕೆಂದರೆ ಅವರ ಮನಸ್ಸಿನಲ್ಲಿದ್ದುದನ್ನು ತಿಳಿದುಕೊಳ್ಳುವದು ಹಾಡುವವರಿಗೆ ಕಷ್ಟ. ಒಮ್ಮೊಮ್ಮೆ ರೆಕಾರ್ಡಿಂಗ್ ದಿನ ಆರೋಗ್ಯ ಸರಿಯಿರಲಿಕ್ಕಿಲ್ಲ, ಅಥವಾ ಆ ದಿನ ಇನ್ನೇನೋ ಅಡಚಣೆಗಳು ಆಗಬಹುದು. ಚಿತ್ರ ರಿಲೀಸ್ ಆದಮೇಲೆ ನೋಡಿದಾಗ, ಅಯ್ಯೋ ಅಲ್ಲಿ ಇನ್ನೂ ಚೆನ್ನಾಗಿ ಹಾಡಬಹುದಿತ್ತೇನೋ ಎಂದೆನಿಸುವುದು.

                                                                                    (Video ↑)

ಶ್ರೀವತ್ಸ: ಅದು ನಿಮ್ಮ ಪರಿಪೂರ್ಣತಾನ್ವೇಷಕ ಗುಣ! ಇಷ್ಟೆಲ್ಲ ಭಾಷೆಗಳ ಉಚ್ಛಾರದಲ್ಲಿ ತೊಂದರೆಯಿರುವುದಿಲ್ಲವೆ?

ಛಾಯಾ: ಇಲ್ಲ. ಏನೇನೂ ಇಲ್ಲ. ಸಂಗೀತಗಾರರಿಗೆ ಸಾಮಾನ್ಯವಾಗಿ ಆ ತೊಂದರೆ ಇರುವದಿಲ್ಲ. ನಾನು ಮೊನ್ನೆ ನಿಮ್ಮ ಕಾರ್ಯಕ್ರಮದಲ್ಲಿ ”ಟೈಟಾನಿಕ್” ಚಿತ್ರದ ಇಂಗ್ಲಿಷ್ ಹಾಡು ಹಾಡಿದ ನೆನಪು ಆಯಿತಾ? ಹಾಗೆಯೇ.

ಶ್ರೀವತ್ಸ: ನೀವು ಕನ್ನಡ ಹಾಡುಗಳಲ್ಲಿ, ಅದರಲ್ಲೂ ಜಾನಪದ ಗೀತಗಳಲ್ಲಿ ತುಂಬುವ ಆ ಅನೂಹ್ಯ ಭಾವ, ಹಾಡುವಾಗಿನ ಆ ತನ್ಮಯತೆ – ಇದರ ಗುಟ್ಟೇನು?

ಛಾಯಾ: ಓಹೋ, ನಿಮಗೆ ಹಾಗೆ ಅನಿಸಿತಾ? ನೋಡಿ ನನಗೆ ಹಾಡುವದೆಂದರೆ ಒಂದು ತರಹದ ಮೆಡಿಟೇಶನ್ ಅನ್ನಬಹುದು. ನಾನು ಅದರಲ್ಲೇ ಪೂರ್ತಿಯಾಗಿ ಮುಳುಗಿ ಹೋಗಿರುತ್ತೇನೆ. ನನಗೆ ಹಾಡುವಾಗ ಬಹಳಷ್ಟು ಏಕಾಗ್ರತೆ ಬೇಕು. ಯಾರಾದರೂ ಕಾನ್ಸೆಂಟ್ರೇಶನ್ ಗೆ ಭಂಗ ಮಾಡಿದರೆ ಸರಿ ಹೋಗುವದಿಲ್ಲ. ಬೇರೆಯವರು ಹಾಡುವಾಗಲೂ ಅಷ್ಟೇ ಇಷ್ಟ. ಸರಿಯಾಗಿ ಕೂತು ಕೇಳಿ ಸಂತೋಷ ಪಡುವೆ. ನನಗೆ ಮ್ಯೂಸಿಕ್ಕೇ ಜೀವ, ಅದೇ, ಬದುಕು. ಸಣ್ಣವರು, ದೊಡ್ಡವರು, ಯಾರೇ ಚೆನ್ನಾಗಿ ಹಾಡಿದರೂ ಕೇಳಿ ಖುಶಿ ಪಡುವೆ.

ಶ್ರೀವತ್ಸ: ಈಗಿನ ಹೊಸ ಯುಗದ ಕನ್ನಡ ಚಿತ್ರಗಳ ಮ್ಯೂಸಿಕ್, (ಸಂಗೀತ ಅನ್ನಬಹುದೋ) ಬಗ್ಗೆ ನಿಮ್ಮ ಅಭಿಪ್ರಾಯ ಏನು? ಅದಕ್ಕೆ ಭವಿಷ್ಯ ಇದೆಯೇ?

ಛಾಯಾ: ನನ್ನ ದೃಷ್ಟಿಯಲ್ಲಿ ಪರಿವರ್ತನೆಯೇ ಜಗದ ನಿಯಮ. ನಾವದನ್ನು ಒಪ್ಪಿಕೊಳ್ಳಲೇಬೇಕು. ಕಾಲ ಬದಲಾದಂತೆ ಶ್ರೋತೃಗಳ ರುಚಿ ಬದಲಾಗುತ್ತಿರುತ್ತದೆ. ಈಗಿನವರಿಗೆ ಅದೇ ಇಷ್ಟ. ಕೆಲವರು, ನಮ್ಮ ಹಿಂದಿನ ತಲೆಮಾರಿನವರು, ಹಳೆಯದೇ ಚಂದ ಎಂದು ಈಗಿನದನ್ನು ಟೀಕಿಸಬಹುದು. ಈಗಿನವರು, ಹಿಂದಿನದು ಅಯ್ಯೋ ಅದು ಎಷ್ಟು ಅಳುಬುರುಕು, ಅಂತ ಅನ್ನುತ್ತಾರೆ. ನನ್ನ ಮತ ಬೇರೆ. ಆದರೆ ಅಶ್ಲೀಲ ಶಬ್ದ, ಅರ್ಥ ಇದ್ದಂಥ ಹಾಡುಗಳನ್ನು ಹಾಡಲು ಮುಜುಗರ. ಆಗ ನಾನು ಒಲ್ಲೇ ಅನ್ನುತ್ತೇನೆ. ಅದಕ್ಕೆ ನನ್ನ ನಕಾರ.

ಶ್ರೀವತ್ಸ: ಅಂದರೆ ನೀವು ಮಡಿವಂತರಲ್ಲ, ಅಂದ ಹಾಗಾಯಿತು. ನಿಮ್ಮ ಪತಿ, ಮತ್ತು ಮಗಳು? ಅವರಿಗೂ ಸಂಗೀತದ ಸಂಪ್ರದಾಯವಿದೆಯೇ? ನಿಮ್ಮದು ಅತ್ಯಂತ ಅಪರೂಪದ ದಾಂಪತ್ಯ ಎಂದು ನಿಮ್ಮ ಹತ್ತಿರದವರಿಂದ ಕೇಳಿದ್ದೆ.

ಮಗಳು ಮೇಘಾಳ ಜೊತೆ ಅಪ್ಪ, ಅಮ್ಮ - ಲಕ್ಷ್ಮಿ ನಾಗರಾಜ್ ತೆಗೆದ ಚಿತ್ರ
ಮಗಳು ಮೇಘಾಳ ಜೊತೆ ಅಪ್ಪ, ಅಮ್ಮ – ಲಕ್ಷ್ಮಿ ನಾಗರಾಜ್ ತೆಗೆದ ಚಿತ್ರ

ಛಾಯಾ: ಅವಳು ಎಂ ಬಿ ಏ ಮಾಡಿ ಮನೆಯಿಂದಲೇ ಕೆಲಸ ಮಾಡುತ್ತಾಳೆ. ನನ್ನ ಮಗಳಿಗೆ ವೆಸ್ಟರ್ನ್ ಮ್ಯೂಸಿಕ್ ಇಷ್ಟ. ನನ್ನ ಅಭ್ಯಂತರವಿಲ್ಲ.

ಅವಳಿಗೆ ನನ್ನ ಜೋಡಿದಾರರಂತೆ ನನ್ನ ಮೇಲೆ ಬಹಳ ಅಕ್ಕರೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ನನ್ನ ಮದುವೆ ನಮ್ಮೊಬ್ಬ ಪರಸ್ಪರ ಪರಿಚಯದ ಮಿತ್ರರ ಮುಖಾಂತರ ಭೆಟ್ಟಿಯಾದ ಮೇಲೆ ಆದದ್ದು. ’ಪಾಣಿ’ಯವರು ಸಂಗೀತಗಾರರಲ್ಲವಾದರೂ ಆ ಲೋಕದಲ್ಲಿಯ ಮಣಗಟ್ಟಲೆ ವಿಷಯಗಳನ್ನು  ಅರಿತವರು. ಅವರು ಯಾವುದೇ ವಿಷಯ ತೆದುಕೊಂಡರೂ ಆಳವಾಗಿ ಅಭ್ಯಸಿಸುತ್ತಾರೆ. ಮದುವೆಯಾದಾಗಿನಿಂದ ನನ್ನನ್ನು ಅಡಿಗೆ ಮನೆಯ ಜವಾಬ್ದಾರಿಯಿಂದ ದೂರವಿಟ್ಟು ನನ್ನ ಸಂಗೀತಕ್ಕೆ, ನನ್ನ ಕರಿಯರ್ ಗೆ ಪ್ರೋತ್ಸಾಹ ಕೊಟ್ಟು ಬೆನ್ನೆಲುಬಾಗಿ ನಿಂತಿದ್ದಾರೆ. ನನ್ನ ಮಗಳು ಮೇಘಾ ಸಹ ನನಗೆ ಯಾವಾಗಲೂ ಸಪೋರ್ಟ್ ಮಾಡುತ್ತಾಳೆ.

ಶ್ರೀವತ್ಸ: ನನಗಾಗಿ (ನಮಗಾಗಿ) ನಿಮ್ಮ ಸಮಯವನ್ನು ಮೀಸಲಿಟ್ಟು ನನ್ನ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದ ನಿಮಗೆ ಕನ್ನಡ ಬಳಗದ ಪರವಾಗಿ ನನ್ನ ಧನ್ಯವಾದಗಳು. ಅನಿವಾಸಿ ಬಳಗದಿಂದ ಪ್ರಕಟಿಸಿದ ಈ ಪುಸ್ತಕವನ್ನು (”ಅನಿವಾಸಿಗಳ ಅಂಗಳದಿಂದ”) ಈ ಭೇಟಿಯ ನೆನಪಿಗಾಗಿ ನಿಮಗೆ ಕೊಡುವೆ.

ಛಾಯಾ: ಧನ್ಯವಾದವೇಕೆ? ನನ್ನಲ್ಲಿ ಏನೋ ಕಲೆಯಿದೆಯೆಂದಲೇ ನನ್ನ ಹತ್ತಿರ ಬರುತ್ತೀರಿ. ರಸಿಕರೇ ನಮ್ಮ ಸಂಪತ್ತು ಅಲ್ಲವೆ?

ಶ್ರೀವತ್ಸ: ನಿಮ್ಮ ಯು ಕೆ ಪ್ರವಾಸದ ಹೈಲೈಟು?

ಛಾಯಾ ಮತ್ತು ಪದ್ಮಪಾಣಿ: ಯು ಕೆ ಕನ್ನಡಿಗರ ಕನ್ನಡತನ! ನಾವು ಕಂಡ ಭೇಟಿಯಾದ ಕನ್ನಡಿಗರೆಲ್ಲ ತೋರಿದ  ಆದರ, ಸೌಹಾರ್ದತೆ, ಪ್ರೀತಿ ನಮ್ಮ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದೆ!

ಶ್ರೀವತ್ಸ: ಅದು ನಿಮ್ಮ ದೊಡ್ಡ ಗುಣ. ವಂದನೆಗಳು.

– ಶ್ರೀವತ್ಸ ದೇಸಾಯಿ

 

ದೀಪಾವಳಿ ಸಮಾರಂಭದ ಮರುದಿನ ಛಾಯಾ ಮತ್ತು ಪದ್ಮಪಾಣಿ ಜೋಡಿ ನೊಟಿಂಗ್ಹ್ಯಾಮ್ ನಲ್ಲಿ ಮತ್ತೊಂದು ಸಂಗೀತ ಸಂಜೆ ‘ಮೇಘ ಮಲ್ಹಾರ್’ ಕೊಟ್ಟು, ಹಿಂದಿ ಭಾಷೆಯ ಹಾಡುಗಳನ್ನು ಹಾಡಿದರು.fb_img_1479383122774

ದೀಪಾವಳಿ ಸಮಾರಂಭದ ಮರುದಿನ ಛಾಯಾ ಮತ್ತು ಪದ್ಮಪಾಣಿ ಜೋಡಿ ನೊಟಿಂಗ್ಹ್ಯಾಮ್ ನಲ್ಲಿ ಮತ್ತೊಂದು ಸಂಗೀತ ಸಂಜೆಯನ್ನು ಕೊಟ್ಟರು. ಸವಿತಾ ಸುರೇಶ ತೆಗೆದ ಚಿತ್ರ ಕಾರ್ಯಕ್ರಮ ಬಹಳಾ ಸುಮಧುರವಾಗಿತ್ತು ಎಂದರು ಕನ್ನಡ ಬಳಗ ಸದಸ್ಯರು. ಎರಡೂ ಚಿತ್ರಗಳನ್ನ ತೆಗೆದವರು ಸವಿತಾ ಸುರೇಶ

Chaya visit ನೆನಪುಗಳು

-ವಿಶ್ವನಾಥ್ ಮಂದಗೆರೆ

B.R. Chaya… It was serendipitous that last year I happened to meet this singer super star. In late 2015, at the time of my visit to Bengaluru, I attended a wedding. As it happens in India, I did not know the bride or the groom or their parents but happened to know the bride’s uncle! He was my medical college friend and I had not seen him for 30 odd years. I thought it would be an opportunity to see him. It was a wise decision indeed! I was star struck at this wedding seeing many artists from the musical world because the father of the bride happened to be none other than Puttur Narasimha Nayak, the famous singer. As I was savouring the Konkani spread at the buffet, my friend pointed to the petite young lady with long black hair: ‘Look that is BR Chaya’.

B.R. Chaya….the famous singer!!! What excited me was not just her fame but the opportunity this rendezvous had brought in. Chaya happened to be my school friend, one year senior, and we had lived in the same neighbourhood for all our childhood in Doorvani Nagar or ITI colony in Bangalore. I had not seen her after I had left school but knew she had become a famous singer star. We spoke for some time that afternoon and I explored the possibility of her coming for a KBUK function in future.

B.R. Chaya… as it happens in southern India, we get identified not just by our names but by our initials as well. Chaya, in our school days was a popular singer winning many prizes for the school. To my knowledge, she was less trained in classical music but had would excel in film and bhavageete. Chaya was also a daring figure- one of the few girls who could ride a scooter! It was a shock to all of us in school on hearing the death of her mother while she was in the 9th standard and close to the exams. I don’t know how she managed to take the exams and pass them.

She had another classmate, Susheela, well trained in classical music, who would fiercely compete with her for the top prize and win it. We had a great drawing master, an arts teacher in other words, Radha Krishna Sir, who nurtured the musical talents of these two girls. Susheela, apparently has become the music professor at Bengaluru University. Chaya, as we all know, went on to become an extremely popular singer singing different genres of music, in languages and in the process breaking many records. She is, I believe, on the way to set a new Guinness Book of Records shortly. In her short stay with us, we talked about our school days and she reminded me the song, ‘ತೊಂಡೆಕಾಯಿ, ಬೆಂಡೆಕಾಯಿ ತೋಟದಲ್ಲಿದೆ, ಉಂಡೆ ಉಂಡೆ ಬೆಲ್ಲ… That song had brought our school a shield in those days. I was thrilled to hear this whole song she sung on stage at the KBUK function.

Padmapani Jodidar, an undiscovered gem of comedy world… I did not know about Padmapani till I met him after landing in Manchester. He is well read, knowledgeable and very unassuming. He is sharp and witty and has the great quality of being able to laugh at himself. As he entered our house he said ‘ಓಹ್, ನನ್ನ ಫೋಟೋ ಹಾಕ್ ಬಿಟ್ಟಿದ್ದೀರಾ.’ Looking at our perplexed face he continued ‘ಇದು ವಜ್ರಪಾಣಿ, ಮತ್ತಿದು ಪದ್ಮಪಾಣಿ’, pointing to paintings from Ajanta caves we had hung in our lounge and then to himself.

thumbnail_chaya-and-padmapani-with-swarna-and-vishwanath
ಸ್ವರ್ಣ, ಛಾಯ, ಪದ್ಮಪಾಣಿ, ವಿಶ್ವನಾಥ್

He tells a joke just to the point where you will understand, the rest unsaid. One of the audiences asked him why he does not tell the full joke. His reply, ‘ನೀವೆಲ್ಲಾ ಬುದ್ಧಿವಂತರು. ಬರೀ ದಡ್ಡರಿಗೆ ಮಾತ್ರ ನಾನು ವಿವರಿಸೋದು’. His ‘kannadisation’ of certain items were so funny. He would say ‘ನಂಗೊಂದು ಶಂಖ ಮತ್ತು ಎರಡು ಹೋಳಿಗೆ ಕೊಟ್ಬಿಡಿ’, meaning a croissant and crêpes with milk for breakfast!

The evening before the Kannada Balaga event, we had invited a few Manchester friends to meet them. He entertained us for a full two hours regaling stories of how people came for what he considered his crap advice but that would still make other people rich and successful.

Chaya and Padmapani- what a loving and talented couple! The conversation between them almost sounds like a dialogue in a play with a wit and sharpness you see in Jeeves and Wooster episodes.  We were talking about someone who had got divorced but remarried. The conversation wents like this –

‘ಛಾಯ ಅವ್ರೆ’

‘ಏನ್ರೀ ಪಾಣಿ?’

‘ಹಾಗಾದ್ರೆ ನಂಗೂ ಚಾನ್ಸ್ ಇದೇ…’,

‘ಹೋಗಪ್ಪ, ನಿನ್ನ ಯಾರು ಕಟ್ಟಿ ಹಾಕಿರೋದು’!

– ವಿಶ್ವನಾಥ್ ಮಂದಗೆರೆ

ಶ್ರೀವತ್ಸ ದೇಸಾಯಿ ತೆಗೆದ ಚಿತ್ರ
ಶ್ರೀವತ್ಸ ದೇಸಾಯಿ ತೆಗೆದ ಚಿತ್ರ

ನಮ್ಮ ವಿದ್ಯಾ ಮಂದಿರ ಶಾಲೆಯ ಹಾಡು ಹುಡುಗಿ ಬಿ.ಆರ್.ಛಾಯ

-ವಿನತೆ ಶರ್ಮ

ಕನ್ನಡ ಬಳಗ ಯು.ಕೆ. ನಡೆಸಲಿದ್ದ ‘ದೀಪಾವಳಿ ೨೦೧೬’ ಕಾರ್ಯಕ್ರಮದಲ್ಲಿ ಬಿ.ಆರ್. ಛಾಯ ಮತ್ತು ಅವರ ಪತಿ ಪದ್ಮಪಾಣಿ ಭಾಗವಹಿಸಲಿದ್ದಾರೆ ಎಂದು ಕೇಳಿದಾಗ ಮನಸ್ಸಿಗೆ ಡಬಲ್ ಖುಷಿ. ಒಂದು, ಛಾಯಾರವರ ಗಾನ, ಪದ್ಮಪಾಣಿಯವರ ಮಾತು, ಹಾಸ್ಯ ಕನ್ನಡ ಬಳಗಕ್ಕೆ ಸಿಕ್ಕತ್ತೆ; ಇನ್ನೊಂದು, ‘ನಮ್ಮ ಛಾಯ’ ಬರುತ್ತಿದ್ದಾರೆ ಎನ್ನುವುದು. ‘ನಮ್ಮ ಛಾಯ’  ಅಂದ್ರೆ ಏನು, ಏನ್ಕತೆ ಅಂತ ಸ್ವಲ್ಪ ಇಲ್ಲಿ ಹೇಳೇ ಹೇಳ್ಬೇಕು. ಯಾಕಂದ್ರೆ ಅವ್ರು ನಮ್ಮ “ಹಾಡು ಹುಡುಗಿ” ಆಲ್ವಾ!

ನಾನು ಬೆಳೆದಿದ್ದು ದೂರವಾಣಿ ನಗರದ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ನ (ಐ ಟಿ ಐ) ಕ್ವಾರ್ಟರ್ಸ್ ನಲ್ಲಿ; ಓದಿದ್ದು ಅಲ್ಲೇ ಐ ಟಿ ಐ ವಿದ್ಯಾ ಮಂದಿರ ಶಾಲೆಯಲ್ಲಿ. ನನ್ನ ತಾಯಿ ಎಲ್. ಪದ್ಮಾವತಮ್ಮ (ಎಲ್.ಪಿ. ಟೀಚರ್) ಅದೇ ಶಾಲೆಯಲ್ಲಿ ಟೀಚರ್ ಆಗಿದ್ದರು.

ನಾವು ವಾಸವಾಗಿದ್ದ ಐ ಟಿ ಐ ಕ್ವಾರ್ಟರ್ಸ್ ನ ಈಸ್ಟ್ ೫ನೇ ಬೀದಿಯ ಮುಂದಿನ ಬೀದಿಯಲ್ಲಿ ಛಾಯಾರ ಕುಟುಂಬ ವಾಸವಾಗಿತ್ತು! ಅವರ ಮನೆಯಲ್ಲಿ ಸಾಕಿದ್ದ ಹಸುವಿನ ಹಾಲನ್ನು ನಾವು ಕೊಳ್ಳುತ್ತಿದ್ದೆವು. ಹಾಲು ತರಲು ಬೆಳಗ್ಗೆ ಚಿಕ್ಕ ಹುಡುಗಿ ನಾನು ನಿದ್ದೆ ಕಣ್ಣಿನಲ್ಲಿ ಅವರ ಮನೆಗೆ ಹೋಗುತ್ತಿದ್ದೆ. ಆಗಾಗಲೇ ತಂಬೂರಿ ಹಿಡಿದುಕೊಂಡು ಕೂತು ಸಂಗೀತಾಭ್ಯಾಸ ಮಾಡುತ್ತಿದ್ದ ದೊಡ್ಡ ಹುಡುಗಿ ಛಾಯಾರನ್ನು ನೋಡುತ್ತಾ ಶಬ್ದ ಮಾಡದೆ ನಿಂತು ಬಿಡುತ್ತಿದ್ದೆ. ಒಮ್ಮೊಮ್ಮೆ ಅವರು ಕೂಗು ಹಾಕುತ್ತಿದ್ದರು “ಎಲ್.ಪಿ ಟೀಚರ್ ಮಗಳು ಹಾಲ್ಗೋಸ್ಕರ ಕಾಯ್ತಾ ಇದ್ದಾಳೆ…”. “ಅಯ್ಯೋ ಪರವಾಗಿಲ್ಲ ಕಾಯ್ತೀನಿ” ಅಂತ ನಾನಂದರೂ ಯಾರಾದರೂ ಬಂದು ಹಾಲಿನ ಪಾತ್ರೆ ತುಂಬಿಸಿ ಕಳಿಸೇಬಿಡುತ್ತಿದ್ದರು. “ಯಾಕೇ ಲೇಟಾಯ್ತು, ಛಾಯಾ ಸಂಗೀತ ಕೇಳ್ತಾ ನಿಂತ್ ಬಿಟ್ಯಾ” ಅಂತ ಅಕ್ಕಂದಿರು ಗುರಾಯಿಸುತ್ತಿದ್ದರು. ದೊಡ್ಡಕ್ಕ, ಚಿಕ್ಕಕ್ಕನ ನಡುವಿನ ಕ್ಲಾಸ್ನಲ್ಲಿ  ಛಾಯ ಓದುತ್ತಿದ್ದದ್ದು. ನಮ್ಮಮ್ಮ ಅವರಿಗೆ ಹಿಂದಿ ಕ್ಲಾಸ್ ತೊಗೊಳ್ತಿದ್ದರಂತೆ. ಛಾಯಾನ ಅಮ್ಮ ತೀರಿಕೊಂಡಾಗ ನಮ್ಮಮ್ಮ, ನಮ್ಮ ಟೀಚರ್ ಗಳೆಲ್ಲಾ ತುಂಬಾ ಬೇಜಾರು ಮಾಡಿಕೊಂಡಿದ್ದರು.

ಆ ವರ್ಷಗಳಲ್ಲಿ ವಿದ್ಯಾ ಮಂದಿರ ಸ್ಕೂಲಿನ ಹೆಮ್ಮೆಯ “ಹಾಡು ಹುಡುಗಿ”ಯರು ಛಾಯ ಮತ್ತು ಸುಶೀಲ. ಟೀಚರ್ಸ್ ಎಲ್ಲರೂ ಇವರಿಬ್ಬರನ್ನ ತುಂಬಾ ಪ್ರೋತ್ಸಾಹ ಕೊಟ್ಟು ಬೆಳೆಸುತ್ತಿದ್ದರು. ಎಲ್ಲಿ ಹೋದರೂ ಈ ಇಬ್ಬರಿಗೆ ಮೆಡೆಲ್ ಕಟ್ಟಿಟ್ಟದ್ದು ಎಂದು ಅಮ್ಮ ಹೇಳುತ್ತಿದ್ದರು.ಆಗಾಗ ಬಹುಮಾನಗಳು, ಮೆಡೆಲ್ಗಳ ಜೊತೆ ಈ ಇಬ್ಬರನ್ನ ಕೂಡಿಸಿ ಫೋಟೋ ತೆಗೆಸುತ್ತಿದ್ದರು.

11856393_996283287094943_4540644356279741005_o
ಫೇಸ್ ಬುಕ್ ಚಿತ್ರ

ಛಾಯ ಶಾಲಾ ಓದು ಮುಗಿಸಿ, ಐ ಟಿ ಐ ಕ್ವಾರ್ಟರ್ಸ್ ಬಿಟ್ಟು ಹೋದ ನಂತರ ಕೂಡ ನಮ್ಮ ಶಾಲೆಯ ಜೊತೆಗಿನ ನಂಟನ್ನು ಬಿಡಲಿಲ್ಲ. ಆಗಾಗ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. ಹಾಡುತ್ತಿದ್ದರು. ನಾನು SSLC ಮುಗಿಸಿದ ವರ್ಷ, ಅಂಥಾ ಒಂದು ಶಾಲಾ ಸಮಾರಂಭಕ್ಕೆ ಬಂದು “ಜೋಗದ ಸಿರಿ ಬೆಳಕಿನಲ್ಲಿ…” ಹಾಡಿದ್ದರು. ಮುಂದೆ ಅವರ ಪ್ರಸಿದ್ಧ “ಹಿಂದುಸ್ಥಾನವು ಎಂದೂ ಮರೆಯದ…” ಹಾಡನ್ನು ಕೂಡ ಶಾಲೆಯಲ್ಲಿ ಹಾಡಿದ್ದರು. ವಿಜಯ ಭಾಸ್ಕರ್ ಮತ್ತು ಇಳಯ ರಾಜ ಅವರನ್ನು ಪ್ರೋತ್ಸಾಹಿಸಿ ಚಲನಚಿತ್ರ ರಂಗಕ್ಕೆ ತಂದದ್ದು, ಅವರಿಗೆ ಮದುವೆಯಾದದ್ದು ಎಲ್ಲಾ ನ್ಯೂಸ್ ನಮಗೆ ನಮ್ಮ ವಿದ್ಯಾ ಮಂದಿರದ ಟೀಚರ್ಸ್ ಬಳಗದಿಂದ ತಿಳಿಯುತ್ತಿತ್ತು. ನಮ್ಮ ಶಾಲೆಯ ನನ್ನ ಕೆಲ ಗೆಳತಿಯರು ಅವರೊಂದಿಗೆ ಸ್ನೇಹವನ್ನು ಮುಂದುವರೆಸಿದ್ದರು.

ಅವರ ಮೆಡೆಲ್ ಗಳ ಜೊತೆಗಿನ  ಒಂದು ಫೋಟೋವನ್ನ (ನಮ್ಮ ಶಾಲೆಯಲ್ಲಿ ತೆಗೆದಿದ್ದು) ನಾನು ನನ್ನ ಫೇಸ್ ಬುಕ್ನಲ್ಲಿ ಹೋದ ವರ್ಷ ನೋಡಿದೆ. ಕೂಡಲೇ ನಾನೂ ಅವರ ಫೇಸ್ ಬುಕ್ ಫ್ರೆಂಡ್ ಆದೆ. ಆಗಾಗ ಪದ್ಮಪಾಣಿಯವರ ಪೋಸ್ಟ್ ಗಳನ್ನ ಓದುತ್ತಾ ಅವರ ಹಾಸ್ಯ ಪ್ರಜ್ಞೆ, ಓದಿನ ವಿಸ್ತಾರ, ಅವರ ಸಾಹಿತ್ಯ ಪ್ರೇಮ, ನಾನಾ ವಿಷಯಗಳ ಬಗ್ಗೆ ಇರುವ ಅವರ ಆಳ ಜ್ಞಾನ, ಕಾಮನ್ ಸೆನ್ಸ್ – ಇದೆಲ್ಲದರ ಪರಿಚಯ ಕೂಡ ಸ್ವಲ್ಪ ಆಯ್ತು. ಹೆಂಡತಿ-ಗಂಡ ಇಬ್ಬರ ಪೋಸ್ಟ್ ಗಳಿಗೂ ಲೈಕ್ ಒತ್ತುತ್ತಾ ಹೋದೆ! ಪಾಣಿಯವರನ್ನ ಇದೇ ತಿಂಗಳು ೫ರಂದು ನೋಡಿ ಮಾತನಾಡಿಸಿ, ಇಬ್ಬರ ಜೊತೆಯಲ್ಲೂ ಸ್ವಲ್ಪ ಸಮಯ ಕಳೆಯುವ ಅವಕಾಶ ಸಿಕ್ಕೇ ಬಿಟ್ಟಿತು. ಒಂದು ಸಂದರ್ಭದಲ್ಲಿ ಹಿಂದೆ ನಾನಿದ್ದ ಆಸ್ಟ್ರೇಲಿಯಾ ದೇಶ, ಅದನ್ನು ಆಕ್ರಮಿಸಿಕೊಂಡ ಬ್ರಿಟಿಷರು, colonisation – ಈ ಮಾತು ಬಂತು. ತಕ್ಷಣ ಪಕ್ಕಕ್ಕೆ ತಿರುಗಿ ಛಾಯ ಕೇಳಿದರು “ಅದ್ ಹೇಗೆ ಎಲ್ಲಾ ಕಡೆ ಅವ್ರೆ ರಾಜರಾಗಿಬಿಟ್ಟರು, ಪಾಣಿ?” ‘ಜೋಡಿ’ ದಾರರ ಉತ್ತರ ಮತ್ತು Postcolonialism ಬಗ್ಗೆ ಅವರ ವಿಶ್ಲೇಷಣೆ ಎರಡಕ್ಕೂ ನಾನು ಮೂಗಿನ ಮೇಲೆ ಬೆರಳಿಟ್ಟುಕೊಂಡೆ. ಮತ್ತೊಂದು ಸಂದರ್ಭದಲ್ಲಿ ಹಿಮಾಲಯ ಪರ್ವತಗಳಲ್ಲಿ ಆಗುವ ನೆಲ ಜಾರು (land slide) ವಿಷಯ ಬಂತು. ಛಾಯ ಕೇಳಿದರು, “ಅದ್ ಹೇಗೆ ಆಗತ್ತೆ, ಸ್ವಲ್ಪ ಹೇಳಪ್ಪಾ”; ಮತ್ತೆ ಅವರ ‘ಜೋಡಿ’ಯಿಂದ ಬಂತು ಸಮರ್ಪಕ ಉತ್ತರ! ನಾವೆಲ್ಲಾ ತಲೆತೂಗಿದೆವು.

ದೀಪಾವಳಿ ಸಮಾರಂಭ ಮುಗಿದು, ೬ರಂದು ನಾನು ಫೇಸ್ ಬುಕ್ ನಲ್ಲಿ ನಾನು, ಛಾಯ ಜೊತೆ ಇದ್ದ ಒಂದು ಫೋಟೋವನ್ನ ಹಾಕಿದೆ, ಎಷ್ಟೊಂದು ಲೈಕ್ ಗಳು!! ನಮ್ಮ ಶಾಲೆಯ ಗೆಳೆಯರ ಬಳಗ ಕಮೆಂಟ್ ಗಳನ್ನ ಕಳಿಸಿದ್ದೂ ಕಳಿಸಿದ್ದೇ! ಅದಕ್ಕೂ ಮಿಗಿಲಾಗಿ, ಉಳಿದಿರುವ ನಮ್ಮ ಕೆಲವೇ ಕೆಲವು ಟೀಚರ್ ಗಳ ಪೈಕಿ ಒಬ್ಬರಾದ ಶರ್ಲಿ ಟೀಚರ್ ಆ ಫೋಟೋವನ್ನ ನೋಡಿ “God bless you both, I am very proud of you two,” ಎಂದು ಆಶೀರ್ವಾದ ಕಳಿಸಿದರು!

  • ವಿನತೆ ಶರ್ಮ

 

ಡಾ. ನಾಗತಿಹಳ್ಳಿ ಚಂದ್ರಶೇಖರ ರೊಡನೆ ಸಂದರ್ಶನ-ಡಾ. ಪ್ರೇಮಲತ ಬಿ.

ನಾಗತಿಹಳ್ಳಿ ಚಂದ್ರಶೇಖರ್ ಅಂದರೆ ತಕ್ಷಣವೇ ಅವರ ಚಲನಚಿತ್ರಗಳು ಕನ್ನಡಿಗರ ಕಣ್ಣ ಮುಂದೆ ಬರುತ್ತವೆ. ಕನ್ನಡ ಲೋಕಕ್ಕೆ ಸದಭಿರುಚಿಯ ಚಲನಚಿತ್ರಗಳನ್ನಷ್ಟೇ ಅಲ್ಲ ಅವರು ಕೊಡುತ್ತಿರುವುದು. ಅವರ ರೆಕ್ಕೆಗಳು ಸಾಹಿತ್ಯದ ಹಲವಾರು ವೈವಿಧ್ಯತೆಗಳನ್ನು, ಅವರ ಬೇರುಗಳು ಗಾಢವಾದ ಸಾಮಾಜಿಕ ಕಳಕಳಿಯನ್ನು ಅಪ್ಪಿಕೊಂಡಿವೆ. ಡಾ. ಚಂದ್ರಶೇಖರ್ ಅನಿವಾಸಿಬಳಗದ ಮುಂದೆ ಬಂದದ್ದು ಸೆಪ್ಟೆಂಬರ್ ೨೫ರ ಭಾನುವಾರದಂದು. ಆ ವಿಶೇಷ ಸಂದರ್ಭದ ಬಗ್ಗೆ ಅನಿವಾಸಿಸದಸ್ಯರಾದ ಡಾ. ಪ್ರೇಮಲತ ಬರೆಯುತ್ತಾ, ಅವರು ಡಾ. ಚಂದ್ರಶೇಖರ್ ರ ಜೊತೆ ನಡೆಸಿದ ಸಂವಾದವನ್ನೂ ಕೂಡ ಓದುಗರೊಡನೆ ಹಂಚಿಕೊಂಡಿದ್ದಾರೆ. ಬನ್ನಿ, ಈ ಶುಕ್ರವಾರದ ಲೇಖನವನ್ನು ಓದುತ್ತಾ ನಾಗತಿಹಳ್ಳಿ ಚಂದ್ರಶೇಖರ್ ರ ಲೋಕದಲ್ಲಿ ಇಣುಕೋಣ. – ಸಂ.

ಡಾ. ನಾಗತಿಹಳ್ಳಿ ಚಂದ್ರಶೇಖರ ರೊಡನೆ ಸಂದರ್ಶನ-ಡಾ. ಪ್ರೇಮಲತ ಬಿ.

ಕನ್ನಡ ಚಿತ್ರರಂಗದಲ್ಲಿ ಈಗ ಉಳಿದಿರುವ ಕೆಲವೇ ಮಂದಿ ಪ್ರತಿಭಾವಂತ, ಸ್ರುಜನಶೀಲ ನಿರ್ದೇಶಕರಲ್ಲಿ ದೊಡ್ಡದಾದ ಹೆಸರು ಡಾ. ನಾಗತಿಹಳ್ಳಿ ಚಂದ್ರಶೇಖರದು.ಇವರು ಬರೇ ನಿರ್ದೇಶಕರಲ್ಲ. ಎಂ.ಎ. ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವ ವಿದ್ಯಾಲಯದಿಂದ ಚಿನ್ನದ ಪದಕಗಳೊಂದಿಗೆ ಪಡೆದವರು. ಕನ್ನಡ ಪ್ರಾಧ್ಯಾಪಕರಾಗಿ ದಶಕಕ್ಕೂ ಹೆಚ್ಚು ಕಾಲ ಕೆಲಸಮಾಡಿದವರು. ಹಾಗಂತಲೇ ಇವರನ್ನು ‘ಮೇಷ್ಟ್ರು’ ಅಂತ ಈಗಲೂ ಕರೆಯುವವರಿದ್ದಾರೆ.ಜೊತೆಗೆ ಬರಹಗಾರರು.  ಸರಳವಾಗಿ, ನೇರವಾಗಿ ಮಾತಾಡುವವರು.ಅಂಕಣಗಾರರು.

ಇಷ್ಟೆಲ್ಲ ಕಿಚ್ಚಿರುವ ಇವರು ಚಲನಚಿತ್ರ ರಂಗಕ್ಕೆ ಬಂದದ್ದು, ಇತ್ತೀಚೆಗೆ ನಿಧನರಾದ ಅಶೋಕ್ ಪೈ ಅವರ 1986 ರ  ‘ಕಾಡಿನಬೆಂಕಿ’ ಚಲನಚಿತ್ರದ ಮೂಲಕ. ಈ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ಇವರು ಬರೆದಿದ್ದಾರೆ. ಇದಕ್ಕೆ best regional feature film ಅನ್ನೋ ರಾಷ್ಟ್ರ ಮನ್ನಣೆಯ  ಜೊತೆಗೆ ರಾಜ್ಯ ಪ್ರಶಸ್ತಿ ಬಂತು. ಇವರದೇ ಚೊಚ್ಚಲ ನಿರ್ದೇಶನದ ’ಉಂಡೂ ಹೋದ-ಕೊಂಡೂ ಹೋದ” ಚಿತ್ರವನ್ನು ಮಾಡಿದರು. ಇದರ ಚಿತ್ರಕಥೆ-ಸಂಭಾಷಣೆಗೆ ರಾಜ್ಯ ಪ್ರಶಸ್ತಿ ಬಂತು.ಇಲ್ಲಿಂದ ಮುಂದೆ ಇವರು ಮೇಲಿನ ಎಲ್ಲ ಮಾಧ್ಯಮಗಳೊಂದಗೆ ತಮ್ಮನ್ನು ಹಂಚಿಕೊಂಡಂತವರು. ಸಿನಿಮಾ, ದೂರ ದರ್ಶನ, ಪತ್ರಿಕೆಗಳು, ಪುಸ್ತಕಗಳು,ಮತ್ತು ಸಾಮಾಜಿಕವಾಗಿ ಮತ್ತ್ತಷ್ಟು ಬೆಳೆದವರು.’ನಾಗತಿಹಳ್ಳಿ ಟೆಂಟ್ ಸಿನಿಮಾ’ ಅನ್ನೋ ಹೆಸರಲ್ಲಿ ನಟನೆ ಮತ್ತು ಸಿನಿಮಾದ ಬರಹಗಳಿಗೆ ತರಭೇತಿ ಶಾಲೆಯನ್ನು ತೆರೆದು ಮತ್ತೆ”ಮೇಷ್ಟ್ರು’  ಆದವರು! ತನ್ನ ಬದುಕಿನ ಎಲ್ಲ ಆಸಕ್ತಿಗಳನ್ನು ಬಗಲಲ್ಲಿ ಇರಿಸಿಕೊಂಡೇ ಮುಂದುವರೆದಿರುವ ಇವರ ಬದುಕಿನಲ್ಲಿ ಈಗ ಅದೆಷ್ಟು ಸಣ್ಣ ಕಥೆಗಳಿಗಾಗುವಷ್ಟು ಸರಕಿದೆಯೋ  ಗೊತ್ತಿಲ್ಲ!!

ಯಾರಾದರೂ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯಲ್ಲಿ ಹುಟ್ಟಿ, ಯಾವ ವಶೀಲಿಯೂ ಇಲ್ಲದೆ, ಗಾಡ್ ಫಾದರ್ ಗಳ ಅಭಯವಿಲ್ಲದೆ   ಬೆಂಗಳೂರಿನಲ್ಲಿ ಹೆಸರುಮಾಡಬೇಂಕೆಂದರೆ ಅಪ್ಪಟ ಪ್ರತಿಭೆಯಿರಬೇಕು. ತಮ್ಮ ಸ್ಥಾನವನ್ನು ಗಳಿಸಲು ಅವಿರತ ಕೆಲಸ ಮಾಡಿರಬೇಕು.ಜೀವನದಲ್ಲಿ ಶಿಸ್ತಿರಬೇಕು. ಒಂದಷ್ಟು ವಿಶಷ್ಟ ಆದರ್ಶಗಳನ್ನು ಮೈ ಗೂಡಿಸಿಕೊಂಡಿರಬೇಕು. ಅಪಾಯಕರ ಸಾಹಸಗಳನ್ನು ಉಸಿರಿಡಿದು ಮಾಡಲು ತಯಾರಿರಬೇಕು.ನೂರು ಜನರ ನಡುವೆ ಕೆಲಸಮಾಡುವ ಹೊಂದಾಣಿಕೆಯ ಸ್ವಭಾವವನ್ನು ಹೊಂದಿರಬೇಕು.ಕಾರ್ಯನೈಪುಣ್ಯತೆಯನ್ನು ಉಳಿಸಿಕೊಳ್ಳಲು ಸಮಯದ ಜೊತೆ ಗುದ್ದಾಡುವ ಛಲವಿರಬೇಕು.ಫಲಿತಾಂಶವಾಗಿ ಸಿಗುವ ಅಮ್ರುತವನ್ನೂ, ಹಾಲಾಹಲವನ್ನೂ ನುಂಗಿ ತಡೆದುಕೊಳ್ಳುವ ತಾಕತ್ತಿರಬೇಕು. ಕಾಲಿಗೆ ಚಕ್ರ, ಕಣ್ಣಿಗೆ ಎಣ್ಣೆ,ಮಿದುಳಿನ ಅವಿರತ ಕೆಲಸ, ಹತ್ತು ಕೆಲಸಗಳ ಮಧ್ಯೆ ಅಪಾರ  ತಾಳ್ಮೆ  58 ರ ಹರೆಯದಲ್ಲೂ  ಇವರಲ್ಲಿ ಬೇಕಾದಷ್ಟಿದೆ!

ಇವರ ಇದುವರೆಗಿನ ಸಾಧನೆಗಳ ಅವಲೋಕನಕ್ಕೆ, ಸಂದಿರುವ ಪ್ರಶಸ್ತಿಗಳ ಪಟ್ಟಿಗೆ ಇವರದೇ ಹೆಸರಿನ ವೆಬ್ ಸೈಟಿಗೆ ಭೇಟಿ ನೀಡುವದೇ ಉಚಿತ. http://www.nagathihalli.com/

’ಇಷ್ಟಕಾಮ್ಯ’ ಚಿತ್ರದ ಜೊತೆ ಇವರನ್ನು ಇಂಗ್ಲೆಂಡಿಗೆ ಬರಮಾಡಿಕೊಂಡವರು, ಕನ್ನಡಿಗರು, ಯು.ಕೆ.  ಅಧ್ಯಕ್ಷರಾದ ಗಣಪತಿ ಭಟ್. ಜೂನ್ ತಿಂಗಳಲ್ಲಿ ನಾಗತಿಹಳ್ಳಿಯವರನ್ನು ಬರಮಾಡಿಕೊಂಡು, London, Bristol, Cardiff, Dorset ಗಳಲ್ಲಿ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಟ್ಟವರು.

ಈ ಕನ್ನಡ ಸಂಘ 2008 ರಲ್ಲೇ ನಾಗತಿಯವರ ’ಮಾತಾಡ್, ಮಾತಾಡ್ ಮಲ್ಲಿಗ” ಸಿನಿಮಾವನ್ನು Reading ನಲ್ಲಿ 200 ಜನರೆದುರು ಪ್ರದರ್ಶನ ಮಾಡಿತ್ತು. ಇದಕ್ಕು ಮೊದಲು ಇತರೆ 25 ಕ್ಕೂ ಹೆಚ್ಚು ಸಿನಿಮಾಗಳನ್ನು ತರಿಸಿ ಕನ್ನಡ ಸಮುದಾಯಕ್ಕೆ ಮನರಂಜನೆ ಒದಗಿಸಿದೆ.ಈಗ ಒಂದು ವರ್ಷ ದಿಂದ KUK Talkies ನ  ಬ್ಯಾನರಿನಡಿ  ಕನ್ನಡದ ಸಿನಿಮಾಗಳಿಗೆ ಮಾರುಕಟ್ಟೆ ಗಳಿಸುವಲ್ಲಿ ನಿರತರಾಗಿದ್ದಾರೆ.

ಮತ್ತೆ ಈ ಬಾರಿ ನಾಗತಿಯವರನ್ನು ಬರಮಾಡಿಕೊಂಡು, ಅವರ ಜೊತೆ  Cambridge, Doncaster ಮತ್ತು Newcastle ಗಳಿಗೆ ಓಡಾಡಿಸಿದವರು ಗಣಪತಿ ಭಟ್.’ಕನ್ನಡಿಗರು, ಯು.ಕೆ.’ ಯ  ಸಂಪರ್ಕಕ್ಕೆ ಬಂದವರು ಸುಮನ-ಗಿರೀಶ್ ದಂಪತಿಗಳು. ಸಾಂಸ್ಕ್ರಿತಿಕ ಕಾರ್ಯಕ್ರಮಗಳ ಬಗ್ಗೆ ಅಪಾರ ಆಸಕ್ತಿಯಿರುವ, ರಂಗಭೂಮಿಯ ಅನುಭವವಿರುವ ಸುಮನಾರಿಗೆ ಇಷ್ಟಕಾಮ್ಯ ಪ್ರದರ್ಶನವನ್ನು ನಡೆಸಲು ನಿರ್ಧಾರ ತೆಗೆದುಕೊಳ್ಳಲು ಅರ್ಧ ಗಂಟೆಯ ಸಮಯವಿತ್ತು! ಯಾವ ಬಳಗ-ಕೂಟಗಳ ಒತ್ತಾಸೆಯಿಲ್ಲದೆ ವಯಕ್ತಿಕವಾದ ನಿರ್ಧಾರವನ್ನು ತಗೊಂಡವರು ಸುಮನಾ. ಒತ್ತಾಸೆಯಾಗಿ ನಿಂತವರು ಪತಿ ಡಾ. ಗಿರೀಶ್ ವಸಿಷ್ಟ. Doncaster ರಿನ ಇವರ ಮನೆಗೆ ನಾಗತಿಯವರನ್ನು ಕರೆತಂದವರು ಗಣಪತಿ ಭಟ್. ರಾತ್ರಿ ಸುಮನಾರ ಆತಿಥ್ಯಕ್ಕೆ ರುಚಿ ಸೇರಿಸಿದವರು ರಂಗಭೂಮಿಯ ಅನುಭವವಿರುವ ಸುಮನಾರ ತಾಯಿ ಲೀಲ-ತಂದೆ ರಾಮಸ್ವಾಮಿ.

ರಾಮಸ್ವಾಮಿ, ಅಭಿಷೇಕ್, ನಾಗತಿಹಳ್ಳಿ ಚಂದ್ರಶೇಖರ್, ಕಾಜಲ್, ಡಾ, ಗಿರೀಶ್ ವಸಿಷ್ಟ, ಡಾನ್ಕ್ಯಸ್ಟೆರಿನ ಪ್ರದರ್ಶನಕ್ಕೆ ಕಾರಣರಾದ ಸುಮನ ಗಿರೀಶ್ ಮತ್ತು ಅವರ ತಾಯಿ ಶ್ರೀಮತಿ ಲೀಲ ರಾಮಸ್ವಾಮಿ. (ಚಿತ್ರ-ಸಂದರ್ಶಕಿಯದು)

ಬೆಳಗಿನ ತಿಂಡಿಯ ನಂತರ ಒಂದು ಸಣ್ಣ ಸಂದರ್ಶನಕ್ಕೆ ಅವಕಾಶ ಕೇಳಲಾಗಿತ್ತು. ಅದೇ ಊರಿನ ಹಿರಿಯ ವೈದ್ಯರಾದ ಡಾ, ಶ್ರೀವತ್ಸ ದೇಸಾಯಿಯವರು ಈ ಸಂದರ್ಶನದ ರೆಕಾರ್ಡಿಂಗ್ ಗೆ ಸಜ್ಜಾಗಿ ಬಂದರು. ಈ ರೆಕಾರ್ಡಿಂಗ್ ನ ಸಣ್ಣ ತುಣುಕನ್ನು ಯು-ಟ್ಯೂಬಿನಲ್ಲಿ ನೋಡಬಹುದು.

ಮೊದಲಿಗೆ ದಾ.ದೇಸಾಯಿಯವರು ತಮ್ಮ ಹಸ್ತಾಕ್ಷರ ವನ್ನು ಸೇರಿಸಿ  ’ಅನಿವಾಸಿಗಳ ಅಂಗಳದಿಂದ’ ಪುಸ್ತಕವನ್ನು ನಾಗತಿಯವರಿಗೆನೀಡಿದರು. ನಂತರವೇ ಸಂದರ್ಶನ ಶುರುವಾದದ್ದು!

ಸಂದರ್ಶಕಿ ಡಾ. ಪ್ರೇಮಲತ ಮತ್ತು ಅನಿವಾಸಿಗಳ ಚೊಚ್ಚಲ ಪುಸ್ತಕದ ಅವಲೋಕನದಲ್ಲಿರುವ ನಾಗತಿಹಳ್ಳಿಯವರು ಚಿತ್ರಕ್ರುಪೆ-ಗಣಪತಿ ಭಟ್

೧) ಸ್ರುಜನಾತ್ಮಕವಾದ ಚಲನಚಿತ್ರಗಳ ಮೂಲಕ ನೀವಿವತ್ತು ಮನೆ ಮನೆ ಮಾತಾಗಿದ್ದೀರ. ನಿಮಗೆ ಸಂತ್ರುಪ್ತಿಯನ್ನು ತಂದೊಕೊಟ್ಟಿರುವ ಚಿತ್ರ/ಚಿತ್ರಗಳು ಯಾವುವು?

ನನ್ನ ಚಿತ್ರ ಗಳ ಪಟ್ಟಿಯನ್ನು ಅವಲೋಕಿಸಿದಾಗ ಯವುದೂ ಇಲ್ಲ. ಯಾಕಂದ್ರೆ, ಪ್ರತಿ ಸಿನಿಮಾನ ಮತ್ತೆ ಮತ್ತೆ ನೋಡಿದಾಗ ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಅಂತ ಹಲವಾರು ಸಂದರ್ಭದಲ್ಲಿ ಅನ್ನಿಸಿದೆ. ಜನ ’ಅಮೆರಿಕಾ ಅಮೆರಿಕಾ’ ವನ್ನು, ’ಅಮ್ರುತಧಾರೆ”ಯನ್ನು ಉಲ್ಲೇಖಿಸ್ತಾರೆ.ಆದ್ರೆ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅನ್ನೋ ಹೊಳಹುಗಳು ಬರ್ತಾ  ಇರುತ್ತವೆ, ಅತ್ರುಪ್ತಿ, ಸ್ರುಜನಶೀಲ ಮನಸ್ಸಿನ ಒಂದು ಭಾಗ.

೨) ನೀವು ಮೂಲತಃ ಬರಹಗಾರರು. ಕಥೆಗಳಲ್ಲಿನ ಪಾತ್ರ ಗಳಿಗೆ ಜೀವ ಕೊಟ್ಟು ನಡೆಸುವಾಗ ಇರೋ ತ್ರುಪ್ತಿ,ಚಲನಚಿತ್ರಗಳ ಪಾತ್ರಗಳನ್ನು ನಿರ್ದೇಶಿಸುವಾಗ ಸಿಗುತ್ತಾ?

ಇದು ಮೂಲಭೂತವಾಗಿ ಕಾವ್ಯ ಮೀಮಾಂಸೆಗೆ ಸಂಬಂಧ ಪಟ್ಟ ಪ್ರಶ್ನೆ. ನಾನು ಎಲ್ಲ ಅರ್ಥಗಳಲ್ಲಿ ಅಲೆಮಾರಿ. ಜಾಗದಿಂದ ಜಾಗಕ್ಕೆ ,ಮಾಧ್ಯಮದಿಂದ ಮಾಧ್ಯಮಕ್ಕೆ ಸುತ್ತುತಾ ಇರ್ತೀನಿ. ಆಯಾ ಮಾಧ್ಯಮಕ್ಕೆ ಹೋದಾಗ ಅಲ್ಲಿನ ವ್ಯಾಕರಣವನ್ನು ಗ್ರಹಿಸಿ ನಿರ್ವಹಿಸಬೇಕಾಗುತ್ತೆ. ಎಲ್ಲಿ ಹೋದಾಗ ನಾನೇನು ಮಾಡಬಲ್ಲೆ ಅನ್ನೋ ಪ್ರಶ್ನೆ ಮಾತ್ರ ಉಳಿಯುತ್ತೆ. ವ್ಯಾವಹಾರಿಕವಾಗಿ ಚಿತ್ರರಂಗ ಹೆಚ್ಚು, ಸಾಹಿತ್ಯ ಕಡಿಮೆ ಅನ್ನೂ ಅರ್ಥ ನನ್ನ ವ್ಯಾಪ್ತಿಯಲ್ಲಿ ಬರೋಲ್ಲ. ಎರಡೂ ಕಡೆ ಪಾತ್ರಗಳನ್ನು ನಡೆಸೋ ಚಾಲೆಂಜ್, ಅದರ ಗುದ್ದಾಟ ನನ್ನಗೆ ಇಷ್ಟ.

೩) ಬರಹ-ಚಲನ ಚಿತ್ರ ನಿರ್ದೇಶನ ಎರಡನ್ನೂ ನಿಮ್ಮ ಮುಂದಿಟ್ಟು ಒಂದನ್ನು ಮಾತ್ರ ಆರಿಸಿಕೊಳ್ಳಿ ಅಂದ್ರೆ ನಿಮ್ಮ ವಯಕ್ತಿಕ ಆಯ್ಕೆ ಯಾವುದು? ಯಾಕೆ?

ನಿಸ್ಸಂಶಯವಾಗಿ ಸಾಹಿತ್ಯ.

ಕಾರಣ, ಸಾಹಿತ್ಯದಲ್ಲಿನ ಸ್ವಯಂಭು. ಇಲ್ಲಿ ನಾನು ಮತ್ತು ಓದುಗ ಅಷ್ಟೇ. ಸಿನಿಮಾದಲ್ಲಿ, ಹಲವು ಪರಿಣತರ ಪ್ರತಿಭೆಯನ್ನು ಹೊರ ಬರಿಸಿ ಅದರಿಂದ ಒಂದು ಪಾಕ ಸಿದ್ದಪಡಿಸಿ ಕ್ರುತಿಯನ್ನು ಸ್ರುಷ್ಟಿಸಬೇಕಾಗುತ್ತೆ. ಇದರಲ್ಲಿ ಸಂಮೋಹನ ಇದೆ.  ಸಂಕೀರ್ಣವಾದ ಮ್ಯಾನೇಜ್ ಮೆಂಟ್ ವಿಚಾರಗಳು, ಸೈಕಾಲೊಜಿ, ಈಗೋಸ್ ಎಲ್ಲ ಇರುತ್ತೆ. ಜೊತೆಗೆ ಕೋಟ್ಯಂತರ ರೂಪಾಯಿ ಬಂಡವಾಳ ಹೆಗಲ ಮೇಲಿರೋದರಿಂದ ನನ್ನಂತ ಸೂಕ್ಶ್ಮ ಮನಸ್ಸಿನ ವ್ಯಕ್ತಿಗೆ ಯಾರ ಬಂಡವಾಳಕ್ಕೆ ಎಲ್ಲಿ ದಕ್ಕೆ ಆಗುತ್ತೋ ಅನ್ನೋ ಆತಂಕ ಸಹಜವಾಗಿರುತ್ತೆ.

ಇದು ಸಾಹಿತ್ಯದಲ್ಲಿಲ್ಲ. ಅಲ್ಲದೇ ನಾನು ಹೊರಟು ಬಂದ ಬಿಂದು, ತವರುಮನೆ ಸಾಹಿತ್ಯವೇ ಆದ್ದರಿಂದ ಸಾಹಿತ್ಯಕ್ಕೇ ನನ್ನ ಮೊದಲ ಆದ್ಯತೆ. ಸಿನಿಮಾದಲ್ಲೂ ನನ್ನಗೆ ಅಪಾರ ಅನುಭವ, ಪ್ರತಿಫಲಗಳು ದೊರೆತಿವೆ. ಅದರ ಬಗ್ಗೆ ನನ್ನಲ್ಲಿ ಕ್ರುತಘ್ನತೆ  ಖಂಡಿತಾ ಇದೆ.

ಸಾಹಿತ್ಯಕ್ಕೂ-ಸಿನಿಮಾಕ್ಕೂ ಇರೋ ಕಲಾತ್ಮಕತೆ ಮತ್ತು ಗಲ್ಲಾಪೆತ್ಟ್ಟಿಗೆಯ ಸೇತುವೆಯನ್ನು ಹಾದವರು ಇದ್ದಾರೆ. ಆದರೆ ಉಳಿದಿರುವ ಏಕಾಂಗಿ ನಾನು. ಆದ್ಯತೆಯ ಪ್ರಶ್ನೆ ಬಂದಾಗ ಸಾಹಿತ್ಯಕ್ಕೆ ಸದಾ ಮೊದಲ ಸ್ಥಾನ.

೪) ಇತ್ತೀಚೆಗೆ ಕನ್ನಡ ಚಲನ ಚಿತ್ರಗಳ ಗುಣ ಮಟ್ಟ ಕುಸಿತಾ ಇದೆ.ಇದಕ್ಕೆ ಕಾರಣ ಒಳ್ಳೆ ಚಿತ್ರಕ್ಕೆ ಇವತ್ತು ಮಾರುಕಟ್ಟೆ ಇಲ್ಲ ಇಲ್ದೇ ಇರೋದು.ಇದು  ಎಲ್ರಿಗೂ ಗೊತ್ತು.ಹಿಂದೆ ಇದ್ದಂತ ಮಾರುಕಟ್ಟೆ ಈಗ ತಟ್ಟಂತ ಕಣ್ಮರೆ ಆಗೋಕೆ ಏನು ಕಾರಣ?

ವೇಗದ ಮನೋಧರ್ಮ.ಕಾಲಕ್ಕೆ ಬಂದಿರೋ ವೇಗ. ಕಲೆಗೆ ತಗುಲಿರೋ ಶಾಪ!

ತಕ್ಷಣ ರೋಮಾಂಚನ ಬೇಕು ಅನ್ನೋ ಧಾವಂತ ಪ್ರೇಕ್ಷಕನಿಗೆ, ಅಹೋ ರಾತ್ರಿ ಕೋಟಿಗಟ್ಟಲೆ ಹಣ ಮಾಡಬೇಕು ಅನ್ನೋದು ಉದ್ಯಮದವರಿಗೆ . ಹಿಂದೆ ಚಲನಚಿತ್ರಗಳು   ವರ್ಷಗಟ್ಟಲೆ ಓಡ್ತಾ ಇದ್ದವು. ನೆನಪಿನಲ್ಲಿ ಉಳೀತಿದ್ದವು. ಈಗಿನ ಚಿತ್ರಗಳು ವಾರ  ಮಾತ್ರ ಓಡಿ, ತಟ್ಟಂತ  ಕಣ್ಮರೆಯಾಗಿ ಬಿಡ್ತಾವೆ. ಉಳಿಸಿ ಹೋಗೋದು ಏನೂ ಇಲ್ಲ. ಜೊತೆಗೆ ಸಿದ್ದ ಕತೆಗಳನ್ನು, ರೀಮೇಕ್ ಗಳನ್ನು ತಂದು ಸಿನಿಮಾ ಮಾಡ್ತಾರೆ. ವರ್ಶಕ್ಕೆ 200 ಸಿನಿಮಾ, ವಾರಕ್ಕೆ 6 ಸಿನಿಮ ಬಿಡುಗಡೆ ಆಗ್ತಿವೆ. ಇದರ ಬಗ್ಗೆ  ಯಾವ ನಿಯಂತ್ರಣವೂ ಇಲ್ಲ. ಕನ್ನಡದ ಅಸಲೀ ಚಿತ್ರ, ಅಸಲೀ ಪ್ರತಿಭೆಗಳ ಚಿತ್ರ ಮಾಡೋ ನಮ್ಮಂತವರು ಏಕಾಂಗಿಗಳು. ಆದರೆ ’ಆ ’ ಕಡೆಯವರಿಗೆ ಹೇಳುವಷ್ಟು ದೊಡ್ಡವನಲ್ಲ ನಾನು.

 ’ಇಷ್ಟಕಾಮ್ಯ  ಚಿತ್ರವನ್ನು ನೋಡಿ.ಪ್ರತಿಯೊಂದು ಸಂಭಾಷಣೆಯಲ್ಲಿ, ದ್ರುಶ್ಯಗಳಲ್ಲಿ ಆಳವಾದ ಚಿಂತನೆಗಳಿವೆ. ವರ್ಷಗಟ್ಟಲೆ ಚರ್ಚೆ ಮಾಡಿದ ವಿಚಾರಗಳಿವೆ. ಅದನ್ನು ನೋಡಿ ಅರ್ಥ ಮಾಡಿಕೊಳ್ಳೋಕೆ ವ್ಯವಧಾನ ಇರಬೇಕಷ್ಟೆ.

೫)ನೀವು ಒಬ್ಬ ಸಾಹಿತಿ. ಬರಹಗಾರರು. ಕನ್ನಡ ಭಾಷೆ ಮತ್ತು ಕನ್ನಡ ಚಿತ್ರೋದ್ಯಮವನ್ನು ಅರಿತಿರೋವ್ರು. ಅದಕ್ಕೇ ಈ ಪ್ರಶ್ನೆ.ಇತ್ತೀಚೆಗಿನ ಸಿನಿಮದಲ್ಲಿ ಉಪಯೋಗ್ಸೋ ಭಾಷೆ ಕೇಳೋಕೆ ಬೇಜಾರಾಗುತ್ತೆ.ಸಾಹಿತ್ಯಕ ಕನ್ನಡವಲ್ದಿದ್ದ್ರೂ ಸಾಧಾರಣ ಆಡು ಭಾಷೆಯನ್ನು ಉಪಯೋಗಿಸಿದ್ರೆ ಸಿನಿಮಾ ಮಾಧ್ಯಮ ಜನರಿಗೆ ತಲುಪಲ್ವಾ?

’ಇಷ್ಟಕಾಮ್ಯ’ ದ ಉದಾಹರಣೆ ಮತ್ತೆ ಕೊಡ್ತಿದ್ದೀನಿ ಅಂತ ಮುಖಸ್ತುತಿ ಅಂದುಕೋ ಬೇಡಿ.ಅದರಲ್ಲಿನ ಸಂಭಾಷಣೆಯನ್ನು ಗಮನಿಸಿ.

ಸರಳ ಕನ್ನಡವನ್ನು ಬಯಸೋ ಜನ ಖಂಡಿತಾ ಇದ್ದಾರೆ.ಆದರೆ ಅವರ ಅಭಿರುಚಿಯನ್ನು ಸಂಪೂರ್ಣ ನಾಶಮಾಡಲಾಗಿದೆ. ಅದಕ್ಕೆ ಕಾರಣ ಚಿತ್ರರಂಗ ’ಅಕ್ಷರ ದ್ವೇಷಿ” ಗಳಾಗ್ತಿರೋದು. ಹಾಗಾಗಿ ಅಕ್ಷರ ದಾರಿದ್ರ್ಯ, ಸಾಂಸ್ಕ್ರುತಿಕ ದಾರಿದ್ರ್ಯ ಎದ್ದು ಕಾಣಿಸುತ್ತೆ. ಉದಾಹರಣೆಗೆ, ಒಂದು ಇಡೀ ತಲೆಮಾರಿನ  Icon, ರಾಜ್ ಕುಮಾರರನ್ನು ತಗೊಳ್ಳಿ. ಇವರಿಗೆ ರಂಗ ಭೂಮಿ ಅನುಭವ ಇತ್ತು. ಹಾಡು, ಉಚ್ಚಾರಣೆಗಳ ತರಭೇತಿ ಇತ್ತು. ಒಬ್ಬ ರಾಜಕುಮಾರನ ಹಿಂದೆ ಒಬ್ಬ ಚಿ. ಉದಯಶಂಕರ ಇದ್ರು. ಉತ್ತಮ ವಚನ, ಕೀರ್ತನೆ ಭಾವಗೀತೆಗಳನ್ನು ಉಣ ಬಡಿಸ್ತಿದ್ರು. ಈ ಹಿನ್ನೆಲೆ ಇವತ್ತು ತಪ್ಪಿ ಹೋಗಿದೆ.

ಇವತ್ತಿನ ನಟರು ಒಳ್ಳೆಯವರು, ಕನ್ನಡದ ಬಗ್ಗೆ ದೊಡ್ಡ ಮಾತಾಡ್ತಾರೆ. ಇವರಿಗೆ ಒಳ್ಳೇ ಸಿನಿಮ ಬೇಕು. ಜನರ ಪ್ರೀತಿ ಬೇಕು. ವಿವಾದ ಬಂದ್ರೆ ಕನ್ನಡಕ್ಕಾಗಿ ಬೀದಿಗಿಳೀತಾರೆ. ಆದರೆ ಅವರಿಗೆ ಸಾಂಸ್ಕ್ರುತಿಕ ಸ್ಪರ್ಶವೇ ಇಲ್ಲ. ಹೀಗೆ ಹೇಳಿದ್ರೆ Typical ಕನ್ನಡ ಮೇಷ್ಟ್ರು ಹೀಗೆ ಮಾತಾಡ್ತಾರೆ’ ಅಂತಾರೆ.ಅದಕ್ಕೂ- ಇದಕ್ಕು ಯಾವ ಸಂಭಂಧವೂ ಇಲ್ಲ. ಜನಜೀವನದಲ್ಲಿರೋ, ಸರಳ,ಸಾಧಾರಣ ನುಡಿಗಟ್ಟುಗಳನ್ನು ಸಮಯೊಚಿತವಾಗಿ ಬಳಸೋದು ಸಂಭಾಷಣೆ. ಸಿನಿಮಾ ಪ್ರಬಲ ಮಾಧ್ಯಮ. ಕನ್ನಡವನ್ನು ಸರಿಯಾಗಿ ಬಳಸದೇ ಇದ್ರೆ ಮುಂದೆ ಈಗಿನ ಕನ್ನಡವೇ ನಿಜವೇನೋ ಅನ್ನೋ ಅಪಾಯ ಖಂಡಿತ.

೬) ಚಲನಚಿತ್ರಗಳು ಭಾಷೆ ಜೊತೆ, ಸಂಸ್ಕ್ಕ್ರುತಿಯನ್ನು ಕೂಡ  ಪ್ರತಿಪಾದಿಸುತ್ತವೆ. ಇವತ್ತಿನ ಚಿತ್ರಗಳಲ್ಲಿ ನಾಯಕನೇ ಹಿಂಬಾಲಕರ ಕೆನ್ನೆಗೆ ಕಾರಣ ಇಲ್ಲದೇ ಹೊಡೆಯೋದು, ಪದೇ ಪದೇ ಪುನರಾವರ್ತಿಸಿ ಹೊಡೆಯೋದನ್ನು  ಹಾಸ್ಯದ ಹೆಸರಲ್ಲಿ ತೋರಿಸ್ತಿದ್ದಾರೆ. ಇದು ಇವತ್ತಿನ ಪೀಳಿಗೆಗೆ ನೀಡೋ ಸಂದೇಶವನ್ನು ಏನಂತ ಹೇಳ್ತೀರಿ?

ಇದು ಅಭಿರುಚಿಯ ಪ್ರಶ್ನೆ.ಅಭಿರುಚಿಯನ್ನು ಮಾಧ್ಯಮಗಳು ಯಾವಾಗ ಕಡೆಗಣಿಸ್ತಾವೋ ಆಗ ಅದು ಅತ್ಯಂತ ಅಪಾಯದ ಸ್ಥಿತಿಯನ್ನು ತಲುಪುತ್ತವೆ.ಪ್ರಬಲ ಮಾದ್ಯಮ ಸಿನಿಮಾಕ್ಕೆ ಒಳ್ಳೆಯ ಅಭಿರುಚಿಯನ್ನು ಉಳಿಸೋ ಗುರುತರ ಹೊಣೆ ಇದೆ. ಜಗತ್ತಿನಲ್ಲಿ ಇಲ್ದೇ ಇರೋ ಹಿಂಸೆ,  ಕೆಟ್ಟ ಸಂಭಾಷಣೆಯನ್ನು ಇವತ್ತು ಸಿನಿಮಾದಲ್ಲಿ ನೋಡ್ತೀವಿ.

ಕಲೆ ಅಂದಾಗ ಒಂದಿಷ್ಟು ವೈಭವೀಕರಣ,  ಉತ್ಪ್ರೇಕ್ಷೆ ಸಹಜ . ಆದರೆ ಅದನ್ನು ಕಲಾತ್ಮಕವಾಗಿ ಮುಂದಿಡಬೇಕು. ಆತಂಕದ ವಿಚಾರ ಅಂದ್ರೆ ಕೆಟ್ಟ ಸಿನಿಮಾ ಬಂದಾಗ ಜನ ಅದನ್ನು ತಿರಸ್ಕರಿಸ್ತಾ ಇಲ್ಲ. “ಅವರು ನೋಡ್ತಾರ್ರಿ ಅದಕ್ಕೆ ಮಾಡ್ತೀವಿ ಅಂತ ಇವರು, ಇವರು ಕೊಡ್ತಾರ್ರೀ ಅದಕ್ಕೆ ನೋಡ್ತೀವಿ” ಅಂತ ಅವರು ಹೇಳ್ತಾರೆ.

ಕೊನೆಗೆ ಇದು ಸಮಾಜದಲ್ಲಿನ ಜನರ ಹೊಣೆಗಾರಿಕೆಯ ಪ್ರಶ್ನೆ. ರಾಜಕಾರಣಿಗಳು, ಸಾಂಸ್ಕ್ರುತಿಕ ನಾಯಕರ ಸಾಕ್ಷಿ ಪ್ರಶ್ನೆ ವಿಚಾರ.

೭) ಭಾಷೆ ಸತ್ರೆ, ಅದಕ್ಕೆ ಸಂಭಂಧಿಸಿದ ಸಾಹಿತ್ಯ, ಚಿತ್ರೋದ್ಯಮ ಮತ್ತೆ ಇವೆರಡಕ್ಕೂ ಪೂರಕವಾಗಿರೋ ಉದ್ಯಮಗಳ ಅವನತಿ ಕಟ್ಟಿಟ್ಟ ಬುತ್ತಿ. ಹಾಗಾಗಿ ಕನ್ನಡ ಉಳಿಸೋಕೆ ಈ ಉದ್ಯಮಗಳು ಮಾಡ್ತಿರೋ ಕೆಲಸಗಳೇನು? ಮಾಡ ಬಹುದಾದ ಕೆಲಸಗಳೇನು?

ಕನ್ನದ ಕಟ್ಟೊ ವಿಚಾರ ಬಹಳ ಇದೆ. ಓದು, ಬರಹ, ನಾಟಕ, ಸಿನಿಮ , ಸಂಘ , ಸಂಸ್ಥೆಗಳು ಇವೆಲ್ಲ ಭಾಷೆ ಜೊತೆ ತಳುಕು ಹಾಕಿಕೊಂಡ ವಿಚಾರಗಳು. ಇವನ್ನೆಲ್ಲ ಮಾಡೋ ಅಂತ ಜನರಿದ್ದಾರೆ ಆದ್ರೆ ಅವರನ್ನು ಅನುಸರಿಸೋ ರಣ ಪಡೆಯಿಲ್ಲ.

ಬೇರೆ ಭಾಷೆಗಳಿಗೂ , ಕನ್ನಡಕ್ಕು ಇದೇ ವ್ಯತ್ಯಾಸ. ಕನ್ನಡಿಗ ಇವತ್ತು intellectual arrogance ಬೆಳೆಸಿಕೊಂಡು ಸಿನಿಮಾಕ್ಕೆ ಬರ್ತಾನೆ. ಆತನಲ್ಲಿ ಸಿನಿಕತೆ ಎದ್ದು ಕಾಣುತ್ತೆ. ’ಕನ್ನಡ ಸಿನಿಮಾ” ಅನ್ನೋ ಧೋರಣೆಯಿಂದ ಸಿನಿಮಾಕ್ಕೆ ಬರ್ತಾನೆ. ಬೇರೆ ಭಾಷೆಯ ಜನ ಭಾಷೆಗೆ ತಮ್ಮನ್ನು ತಾವು ಒಪ್ಪಿಸಿಕೊಂಡಿದ್ದಾರೆ. ಇದು ಇಲ್ದೇ ಇರೋದ್ರಿಂದ  ಕನ್ನಡದಲ್ಲಿ ಕೊಡುವವನ ಮತ್ತು ನೋಡುವವನ ನಡುವಿನ ಕಂದಕ ದೊಡ್ಡದಾಗಿದೆ.

೮) ಹೊರದೇಶದಲ್ಲಿರೋ ಕನ್ನಡಿಗರು ಇದಕ್ಕೆ ಯಾವ ರೀತಿ ಬೆಂಬಲ ಕೊಡಬಹುದು?

ಹೆಚ್ಚೇನೂ ನಿರೀಕ್ಷಿಸಲಾಗಲ್ಲ. ಭಾಷೆ- ಸಂಸ್ಕ್ರುತಿ ಎಲ್ಲ ಬಿಟ್ಟು ಬಂದ ಕಾರಣಕ್ಕೆ ಅನಿವಾಸಿಗಳಲ್ಲಿ ಒಂದು ಬಗೆಯ nostalgia ಇರುತ್ತೆ . ಅಲ್ಲಿಗೆ ಮರಳಿ ಹೋಗಲು ಆಗಲ್ಲ ಅನ್ನೋ ಕಾರಣಕ್ಕೆ ಕನ್ನಡ ಮಹತ್ವದ್ದು ಅನ್ನೋ ಭಾವನೆ ಇರುತ್ತೆ ಹಾಗಾಗಿ  ಒಳನಾಡಿನ ತುಡಿತಕ್ಕಿಂತ ಹೊರನಾಡಿನ ತುಡಿತ ತೀವ್ರವಾಗಿದೆ.

ನಾನು ನನ್ನ ಹಳ್ಳಿಯ, ನಾನು ಓದಿದ ಕನ್ನಡ  ಶಾಲೆಯನ್ನು ದತ್ತು ತಗೊಂಡಿದ್ದೀನೆ, ಕೈಲಾದ್ದು ಮಾಡ್ತಿದ್ದೀನಿ. ಆತಂಕದ ವಿಚಾರ ಅಂದ್ರೆ 200 ಇದ್ದ ವಿದ್ಯಾ ರ್ಥಿಗಳ ಸಂಖ್ಯೆ 30 ಕ್ಕೆ ಇಳಿದಿರೋದು!!! ಅನಿವಾಸಿಗಳಾಗಲೀ, ನಿವಾಸಿಗಳೇ ಆಗಲಿ , ಕನ್ನಡವನ್ನು ಏಕ ಪ್ರಕಾರವಾಗಿ ಪ್ರೀತಿಸ್ಬೇಕು. ಅದು ನಮ್ಮೆಲ್ಲರ ಹೊಣೆಗಾರಿಕೆ.

೯)  England  ಪ್ರವಾಸದ  high lights ಏನು?”

ಮಾತಾಡ್ ಮಾತಾಡ್ ಮಲ್ಲಿಗೆ’ ಪ್ರದರ್ಶನಕ್ಕೆ ಹಿಂದೆ ಬಂದಿದ್ದೆ.  ಆದರೆ ಈ ಬಾರಿ, ಕನ್ನಡಿಗರು, ಯು.ಕೆ.ಯ ಮಿತ್ರತ್ವದಿಂದ ಇಂಗ್ಲೆಂಡಿನ ನಾನ ಊರುಗಳಿಗೆ ಹೋಗಿ ಚಿತ್ರ ತೋರಿಸಿ, ಮಾತಾಡೋ ಸಂದರ್ಭ ಬಂದಿದೆ.ಇದು ದೊಡ್ಡ ವ್ಯವಹಾರವೇನಲ್ಲ. ಆದರೆ, ವ್ಯವಹಾರದ ಆಚೆಗಿನ ಪ್ರೀತಿ, ವಿಶ್ವಾಸದ ಅನುಭವ ಆಯ್ತು. ಬಸವಣ್ಣನ ಪ್ರತಿಮೆ ನೋಡಿದೆ.ಭಾರತೀಯ ವಿದ್ಯಾ ಭವನಕ್ಕೆ ಹೋಗಿದ್ದೆ. ನಂದ ಕುಮಾರ್ ಅವರು ಮಾಡ್ತಿರೋ ಕನ್ನಡ ಚಟುವಟಿಕೆಗಳನ್ನು  ನೋಡಿ ತುಂಬ ಸಂತೋಷವಾಗಿದೆ. ಕನ್ನಡದ  ಬಗ್ಗೆ ತುಡಿಯೋ ನೀವೆಲ್ಲ ಕನ್ನಡದ  ಆಶಾ ಕಿರಣಗಳೇ.

ಎಡ ತುದಿ-ವಿಡೀಯೋ ಮಾಡಿದ ಡಾ, ಶ್ರೀವತ್ಸ ದೇಸಾಯಿ, ಬಲತುದಿ- ಕನ್ನಡಿಗರು ಯುಕೆ ಯ ಅಧ್ಯಕ್ಷ ಶ್ರೀ ಗಣಪತಿ ಭಟ್

೧೧) ಕನ್ನಡ  ಚಿತ್ರ ರಂಗದ ಮುಂದಿನ ಭವಿಷ್ಯ ನಿಮ್ಮ ಊಹೆನಲ್ಲಿ ಏನು?

ನಾನು ಪ್ರವಾದಿ ತರ ಮಾತಾಡೊಲ್ಲ.

ಸದ್ಯಕ್ಕೆ ಸಂಖ್ಯೆ ಜಾಸ್ತಿ ಆಗಿದೆ. ಗುಣ ಮಟ್ಟ ಕಡಿಮೆ ಆಗಿದೆ. ನಿಧಾನವಾಗಿ ವಿಶ್ವ ಮಾರುಕಟ್ಟೆ ತೆರೆದು ಕೊಳ್ತಾ ಇದೆ.ಕನ್ನಡ ಮಾರಿಕಟ್ಟೆ  ಸೀಮಿತ ಮಾರುಕಟ್ಟೆ.  ವಿದೇಶಿ ಪ್ರದರ್ಶನಗಳು ಶೈಶವಾಸ್ಥೆ ಯಲ್ಲಿದೆ. ಇದಕ್ಕೊಂದು ಕ್ರಮ ಮತ್ತು ಗುಣ ಮಟ್ಟದ ಅಗತ್ಯವಿದೆ.

ಇವತ್ತಿನ ಕನ್ನಡ ಸಿನಿಮಾದಲ್ಲಿರೋ ಸಾಂಸ್ಕ್ರುತಿಕ ಶೂನ್ಯತೆ ಭಯ ತರೊ ಅಂತದ್ದು. ಆದ್ದರಿಂದ ಕಾಲ ಈ ಪ್ರಶ್ನೆಗೆ ಏನು ಉತ್ತರ ಕೊಡುತ್ತೆ ಅಂತ  ಕಾದು ನೋಡಬೇಕು.

೧೨)ಸಿನಿಮಾ, ಟಿ. ವಿ.,ನಿಮ್ಮ ತರಭೇತಿ ಶಾಲೆ, ಈ ರೀತಿಯ ಓಡಾಟದ ನಡುವೆ ನಿಮ್ಮಲ್ಲಿರೋ ಬರಹಗಾರನ ಆರೋಗ್ಯ ಹೇಗಿದೆ?

ಅದರ ಬಗ್ಗೆ ಆತಂಕ ಇದೆ. ಪ್ರಜಾವಾಣಿಗೆ ’ರೆಕ್ಕೆ ಬೇರು” ಅನ್ನೋ ಕಾಲಂ ಬರೀತಿದ್ದೆ.  ’ಇಷ್ಟಕಾಮ್ಯ’ ದ ಕಾರಣ ನಿಲ್ಲಿಸಿದೆ. ಈಗ ಈ ಕೆಲಸ ಮುಗಿದಿದೆ. ಸಿನಿಮಾ ದೈಹಿಕವಾಗಿ  ಹಿಂಡಿ ಹಿಪ್ಪೆ ಮಾಡೋ ಕಾರಣ ಬರಹಕ್ಕೆ ಬೇಕಾದ ಶಕ್ತಿ ಕಡಿಮೆಯಾಗಿದೆ. ಬರವಣಿಗೆಯನ್ನು ಮತ್ತೆ  ಶುರುಮಾಡಿ ನನ್ನ ನೆಚ್ಚಿನ ಸಣ್ಣಕಥೆ ಗಳ ಬರಹವನ್ನು ಮುಂದುವರಿಸಬೇಕು.

ನಿಮ್ಮ ಮಾಧ್ಯಮದ ಮೂಲಕ ಎಲ್ಲ ಕನ್ನಡದ ಮನಸ್ಸುಗಳಿಗೆ ಶರಣು ಶರಣಾರ್ಥಿ. ಸಾಹಿತ್ಯ, ಪ್ರಕಟನೆ, ಸಿನಿಮಾ ಈ ಯಾವುದರ ಬಗ್ಗೆ ಏನೇ ಸಹಾಯ ಬೇಕೆಂದರೂ ಕೇಳಿ. ನಿಮಗೆ ಸ್ಪಂದಿಸಲು ನಾನು ಯಾವಗಲೂ ತಯಾರಿದ್ದೇನೆ. ಕನ್ನಡ ಕಟ್ಟೋ ಕೆಲಸ ನಿರಂತರವಾಗಿ ನಡೆಯಲಿ. ಧನ್ಯವಾದ.

ಡಾ. ಪ್ರೇಮಲತ ಬಿ

ಈ ಸಂದರ್ಶನವನ್ನು ಕೆಳಗಿನ ಲಿಂಕ್ ಒತ್ತುವುದರ ಮೂಲಕ ನೋಡಬಹುದು.ಕ್ರುಪೆ-ಡಾ. ಶ್ರೀವತ್ಸ ದೇಸಾಯಿ 

https://www.youtube.com/watch?v=TSGa8sLV61A