ಭೈರಪ್ಪ ನಮನ


ಅನಿವಾಸಿ ಬಂಧುಗಳಿಗೆಲ್ಲ ನಮಸ್ಕಾರ. ಜೊತೆಗೇ ನಾಡಹಬ್ಬ ದಸರೆಯ ಹಾರ್ದಿಕ ಶುಭಾಶಯಗಳು. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನವದುರ್ಗೆಯರು ತಮ್ಮೆಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.
ಈ ನಾಡ ಹಬ್ಬದ ಸರಸ್ವತಿ ಪೂಜೆಯ ಸಂದರ್ಭದಲ್ಲಿ ಸರಸ್ವತಿ ಸಮ್ಮಾನರಾದ ಸರಸ್ವತಿ ಪುತ್ರನನ್ನು ನಾಡು ಕಳೆದುಕೊಂಡ ವಿಷಾದವಿದೆಯಾದರೂ ಅಕ್ಷರಗಳಿಗೆಂದಿಗೂ ಸಾವಿಲ್ಲ, ಅಕ್ಷಯ ಆಯಸ್ಸು ಅವುಗಳಿಗೆ. ನಾಡಿನ ಹೆಮ್ಮೆಯ ಹೆಸರಾಂತ ಸಾಹಿತಿ ಭೈರಪ್ಪನವರು ಆ ಅಕ್ಷರ ರೂಪದಲ್ಲಿ ಕೀರ್ತಿ ಶರೀರದಲ್ಲಿ ಚಿರಕಾಲ ನಮ್ಮೊಡನೆ ಇರುತ್ತಾರೆ ಎಂಬುದು ಸಮಾಧಾನದ ವಿಷಯ.
ಒಂದು ರೀತಿಯಲ್ಲಿ ನನ್ನನ್ನು ಈ ಅನಿವಾಸಿ ಗುಂಪಿಗೆ ಸೇರಿಸಿದ ಶ್ರೇಯವೂ ಪರೋಕ್ಷವಾಗಿ ಭೈರಪ್ಪನವರಿಗೇ ಸೇರಬೇಕು ಎನ್ನಿ. 2019ರ ನಾಡಹಬ್ಬದ ಉದ್ಘಾಟನೆ ಮುಗಿಸಿದ ಭೈರಪ್ಪನವರು ಶತಾವಧಾನಿ ಗಣೇಶರೊಂದಿಗೆ ನೇರ ಲಂಡನ್ ಗೆ ಬಂದಿಳಿದಿದ್ದರು.ಆ ಕಾರ್ಯಕ್ರಮದಲ್ಲಿ ನಾನು ಮೊದಲ ಬಾರಿಗೆ ಅನಿವಾಸಿಯ ಘಟಾನುಘಟಿಗಳಾದ ಪ್ರೇಮಲತಾ ರಾಮ್ ಹಾಗೂ ಕೇಶವ್ ಅವರ ಸಂಪರ್ಕಕ್ಕೆ ಬಂದಿದ್ದು. ಈ ಅನಿವಾಸಿಯನ್ನು ನನ್ನದಾಗಿಸಿಕೊಂಡಿದ್ದು.
ಅವತ್ತಿನ ಆ ಕಾರ್ಯಕ್ರಮ ನನ್ನ ಜೀವಮಾನವಿಡೀ ನೆನಪಿಡುವಂತಹ ಅವಿಸ್ಮರಣೀಯ ಕಾರ್ಯಕ್ರಮ. ಶ್ರೀಯುತ ಎಸ್ ಎಲ್ ಭೈರಪ್ಪ ಮತ್ತು ಶತಾವಧಾನಿ ಗಣೇಶರಂಥ ನಡೆದಾಡುವ ವಿಶ್ವಕೋಶಗಳನ್ನು ಸ್ಟೇಜ್ ಮೇಲೆ ಏಕಕಾಲಕ್ಕೆ ನೋಡುವ ಅವರ ಮಾತು ಕೇಳುವ ಅವರ ಕೃತಿಗಳ ಬಗ್ಗೆ ತೊದಲ ನುಡಿ ಆಡುವ ಅವಕಾಶ ಸಿಕ್ಕಿತ್ತಂದು ಸಾಹಿತ್ಯದ ರಸಗಳ ಗುಣಪಡಿಸಿ ನಮ್ಮ ಆತ್ಮವನ್ನು ತೃಪ್ತಪಡಿಸುವ ಅವರಿಗೆ ಅಂದು ನಮ್ಮ ಮನೆಯಲ್ಲಿ ನಮ್ಮ ಕೈಯಾರೆ ಗುಣಪಡಿಸುವ ಭಾಗ್ಯವು ಸಿಕ್ಕಿತ್ತು ಅದೇ ನೆನೆಸಿಕೊಂಡರೆ ಈಗಲೂ ಹೃದಯ ಖುಷಿಯಿಂದ ಧನ್ಯತೆಯಿಂದ ಮೂಕವಾಗುತ್ತದೆ.
ಇಂದಿನ ಸಂಚಿಕೆಯಲ್ಲಿ ಅಂದಿನ ನನ್ನ ಮಾತುಗಳನ್ನೇ ಹಂಚಿಕೊಳ್ಳುತ್ತಿದ್ದೇನೆ.
ಅವರಿನ್ನಿಲ್ಲ ಎಂದರಿವಾದಾಗ ಮನಭಾರವಾಗುತ್ತದೆ.ಮಾತು ಮೂಕವಾಗುತ್ತದೆ. ಹೃದಯ ಒದ್ದೆಯಾಗುತ್ತದೆ. ಆದರೆ ಭೈರಪ್ಪನವರು ಹಚ್ಚಿದ ಅಕ್ಷರ ಜ್ಯೋತಿ ‘ ಮಾತು ಮನಂಗಳಿಂದ ಅತ್ತತ್ತ ಮೀರಿ, ನಿರುಪಾಧಿಕ ನಿರ್ಮಲವಾಗಿ ಬೆಳಗುತ್ತಲೇ ಇರುತ್ತದೆ.. ಬೆಳಕ ಹಬ್ಬಿಸುತ್ತಲೇ ಇರುತ್ತದೆ.

~ ಸಂಪಾದಕಿ

ಭೈರಪ್ಪನೆಂಬ ದೈತ್ಯ ಪ್ರತಿಭೆ

ಭೈರಪ್ಪನವರು ಒಂದು ಅಗಾಧಸಾಗರ. ಅದರ ಆಳ, ವಿಸ್ತಾರ, ಭೋರ್ಗರೆತ, ಅಲೆಗಳ ಕುಣಿತ ಅಂತರಾಳದಲ್ಲ ಡಗಿರುವ ಹವಳ ಮುತ್ತುಗಳು, ನೂರೆಂಟು ಬಗೆಯ ಸಸ್ಯರಾಜಿಗಳು, ಸಣ್ಣ ಮೀನಿನಿಂದ ಹಿಡಿದು ದೊಡ್ಡ ತಿಮಿಂಗಿಲಿನವರೆಗೆ ಸಾವಿರಾರು ಬಗೆಯ ಜೀವ ವೈವಿಧ್ಯಗಳು, ಅಷ್ಟೇ ಏಕೆ ಅಸ್ತಮಿಸುವ ಸೂರ್ಯ,  ಉದಯಿಸುತ್ತಿರುವ ಚಂದ್ರ ಇವರನ್ನೂ ತನ್ನಲ್ಲಿ ಒಳಗೊಂಡಿರುವಂಥದ್ದು. ಇನ್ನು ನಾನೋ ಸಮುದ್ರದ ದಡದಲ್ಲಿ ಕುಳಿತು ಅಟ್ಟಿ ಬರುವ ಅಲೆಗಳಿಂದ ಪಾದ ತೋಯಿಸಿಕೊಂಡು, ಉಸುಕಿನ ಪುಟ್ಟ ಗುಬ್ಬಿ ಮನೆ ಕಟ್ಟಿ, ದಡಕ್ಕೆ ಬಂದು ಬಿದ್ದ ಒಂದೆರಡು ಶಂಖ ಕಪ್ಪೆ ಚಿಪ್ಪುಗಳನ್ನು ಆರಿಸಿ “ಓಹೋ ಸಾಗರ ತಾನೇ?  ನಾ ಬಲ್ಲೆ” ಎಂದು ಹೇಳುವಂತಹ ದುಸ್ಸಾಹಸ.. ನಾನು ಇಲ್ಲಿ ಬಂದು ಇಂದು ಸಾಕ್ಷಾತ್ ಅವರ ಉಪಸ್ಥಿತಿಯಲ್ಲಿ ಅವರ ಕೃತಿಗಳ ಬಗ್ಗೆ ಮಾತನಾಡುವುದು ಎಂದರೆ. ಸಂಪೂರ್ಣ ವೇದ ವಾಗ್ಮಯದ ಕರ್ತೃವೇ ಆದ ಪರಮಾತ್ಮನೆದಿರು ಒಂದೆರಡು ಶಬ್ದಗಳಿಂದ ಹೆಣೆದ ಸ್ತೋತ್ರ ಒಂದನ್ನು ‘ನಾ ರಚಿಸಿದೆ’ ಎಂದು ಬೀಗುತ್ತಾ ಹಾಡುವ ಭಕ್ತನ ಪಾಡು ನನ್ನದು. ಅವರೊಂದು ಅಗಾಧ ಚೈತನ್ಯ. ಅದಕ್ಕೇ ನಾ ಮುಂಚೆಯೇ ಹೇಳುತ್ತಿರುವೆ. ಈಗ ನಾ ಮಾತಾಡುತ್ತಿರುವುದು ಭೈರಪ್ಪನವರ ಬಗ್ಗೆ ಅಲ್ಲ “ಭೈರಪ್ಪ ನನಗೆ ದಕ್ಕಿದಷ್ಟು” ಎಂಬುದರ ಬಗ್ಗೆ ‘ಬಾಲಕನ ಕಲಭಾಷೆ ಕೇಳಿ ಜನನಿ ಸುಖ ಪಡುವಂದದಿ’ ಎಂದು ದಾಸರು ಹಾಡುವಂತೆ ಅವರೂ ಕೂಡ ನನ್ನೀ ತೊದಲುಗಳನ್ನು ಸಾವಧಾನದಿಂದ ಕೇಳಿಯಾರು ಎಂಬ ವಿಶ್ವಾಸ ನನಗೆ. 

ಭೈರಪ್ಪನವರು ಶತಾವಧಾನಿ ಗಣೇಶರೊಂದಿಗೆ

ಭೈರಪ್ಪನವರ ಕೃತಿಗಳ ಬಗ್ಗೆ ಹೇಳ ಹೊರಟಾಗ ಮೊದಲನೆಯದಾಗಿ ತಾವೇ ತಾವಾಗಿ ಓದಿಸಿಕೊಂಡು ಹೋಗುವ ಅವುಗಳ ಗುಣದ ಬಗ್ಗೆ ಬಹಳ ಅಚ್ಚರಿಯಾಗುತ್ತದೆ. ಕಾದಂಬರಿಯ ವಿಷಯ ವಸ್ತು- ಸಿದ್ಧಾಂತಗಳು ಏನೇ ಇರಲಿ, ಅವುಗಳನ್ನು ನೀವು ಒಪ್ಪಲಿ ಬಿಡಲಿ ಅದು ಬೇರೆ ವಿಷಯ. ಆದರೆ ಪುಸ್ತಕ ಹಿಡಿದರೆ ಸಾಕು ಮುಗಿಸುವ ತನಕ ಒಂದರೆಗಳಿಗೆ ಬಿಡದಂತೆ ನಮ್ಮನ್ನು ಅವಿಶ್ರಾಂತವಾಗಿಸಿ ಒಂದೇ ಗುಕ್ಕಿಗೆ ಓದಿಸಿಕೊಳ್ಳುವಂಥ ಅದ್ಭುತ ಶಕ್ತಿ ಅವುಗಳಿಗೆ. ನಾನಂತೂ ಇದುವರೆಗೂ ಅವರ ಕಾದಂಬರಿಗಳನ್ನು ಓದುತ್ತಾ ಒಲೆಯ ಮೇಲಿಟ್ಟ ಅದೆಷ್ಟು ಪಾತ್ರೆಗಳನ್ನು ಸುಟ್ಟು ಕರಕಲು ಮಾಡಿ ಎಸೆದೇಬಿಟ್ಟಿದ್ದೇನೋ ಲೆಕ್ಕವಿಲ್ಲ. ಅಂದರೆ ನಾನಿಲ್ಲಿ ಹೇಳಬಯಸುತ್ತಿರುವುದು ಇಷ್ಟೇ , ಓದಿಗೆ ಬೇಕಾದದ್ದು ಕಣ್ಣು, ತಲೆ, ಮನಸ್ಸುಗಳು.ಅವು ಮೂರು ತಲ್ಲೀನವಾಗಿದ್ದರೆ ಸಾಕಲ್ಲವೇ? ಆದರೆ ಇವರ ಕಾದಂಬರಿಗಳನ್ನು ಓದುತ್ತಿರುವಾಗ ಎಲ್ಲ ಜ್ಞಾನೇಂದ್ರಿಯಗಳೂ ಓದಿನ ಮೋಡಿಗೆ ಸಿಲುಕಿ ಬಿಡುತ್ತವೆ. ಮನೆಯಲ್ಲಿ ಯಾರೋ ಕೂಗಿದ್ದು, ಬೆಲ್ ಆಗಿದ್ದು,ಮಗು ಅತ್ತದ್ದು ಕಿವಿಗೆ ಕೇಳದು. ಸುಟ್ಟ ವಾಸನೆ ಮೂಗಿಗೆ ಅಡರದು. ಒಂಥರಾ ಧ್ಯಾನಸ್ಥ ಸ್ಥಿತಿ. ಧ್ಯಾನದಲ್ಲಿ ಹೊರ ಜಗತ್ತಿನ ಆಗುಹೋಗುಗಳ ಅರಿವಾಗುತ್ತಿದ್ದರೂ ಅಲ್ಲಿ ನಮ್ಮದು ಕೇವಲ ಸಾಕ್ಷಿ ಭಾವ. ಯಾವ ಕ್ರಿಯೆ-  ಪ್ರತಿಕ್ರಿಯೆಗಳೂ ಇಲ್ಲದಂತಹ ಸ್ಥಿತಿಯಲ್ಲಿರುತ್ತದೆ. ಅಂಥದೇ ಒಂದು ಸ್ಥಿತಿಯನ್ನು ಅವರ ಕಾದಂಬರಿಗಳು ಒದಗಿಸಲು ಸಶಕ್ತವಾದವುಗಳು. ಎರಡನೆಯದು ಅವರು ಬಳಸುವ ಭಾಷೆ. ಟಿಪಿಕಲ್ ಆದ ‘ಭೈರಪ್ಪ ಭಾಷೆ’ ಅಂತಲೇ ಅದನ್ನು ನಾವು ಕರೆಯಬಹುದು. ಅವರ ಕಾದಂಬರಿಗಳನ್ನು ಓದುವಾಗ ಮನೆ ಕೆಲಸ ಇತ್ಯಾದಿಗಳನ್ನು ಮಾಡುತ್ತಿರುವಾಗಲೂ ಅದೇ ಭಾಷೆ ನನ್ನ ತಲೆಯಲ್ಲಿ ಓಡುತ್ತಿರುತ್ತದೆ. ಉದಾಹರಣೆಗೆ.. ಅವಸರದಲ್ಲಿ ಹಾಲನ್ನು ಜೋರು ಉರಿಯಲ್ಲಿಟ್ಟು ಉಕ್ಕಿಸಿದರೆ “ಹಾಲನ್ನು ಅವಸರಿಸದೇ ಸಣ್ಣ ಉರಿಯಲ್ಲಿಟ್ಟು ಕಾಸಿದ್ದರೆ ಹದವಾದ ಕೆನೆಯೂ ದಕ್ಕುತ್ತಿತ್ತು.. ಗ್ಯಾಸನ್ನು ಸ್ವಚ್ಛಗೊಳಿಸುವ ಪ್ರಮೇಯವೂ ತಪ್ಪುತ್ತಿತ್ತು”ಎನ್ನುವ ವಿಚಾರ ಹೊಳೆಯಿತು, ಭಾವಸ್ಪರಿಸಿತು” ಇತ್ಯಾದಿಯಾಗಿ.ಈ ತೆರನಾಗಿ ನನಗೆ ಅರಿವಿಲ್ಲದೇ ಆ ಭಾಷಾ ಪ್ರಯೋಗ ನನ್ನಲ್ಲಿ ನಡೆದಿರುತ್ತದೆ. ಹೀಗೆ ವೈಚಾರಿಕ ನೆಲೆಯಿರಲಿ, ಭಾಷಾ ಪ್ರಯೋಗವಿರಲಿ, ಕಥಾಹಂದರವಿರಲಿ, ಪಾತ್ರ ಪ್ರಪಂಚವಿರಲಿ ಅವರ ಸಮ್ಮೋಹನಕ್ಕೆ ಒಳಗಾಗಿ ಬಿಟ್ಟಿರುತ್ತೇವೆ. ‘ಬೌದ್ಧಿಕ ಸಾಹಚರ್ಯ’ ಎನ್ನುವ ಪದವನ್ನು ನಾನು ಕಾಲೇಜಿನಲ್ಲಿದ್ದಾಗ ಮೊದಲ ಸಲ ಅವರ ಕಾದಂಬರಿಯಲ್ಲೋದಿ ರೋಮಾಂಚಿತಳಾಗಿದ್ದು ಈಗಲೂ ನೆನಪಿದೆ. ಹೀಗೆ ಸಂಪೂರ್ಣ ಭಿನ್ನವಾದ ಆಯಾಮಗಳನ್ನು ಒದಗಿಸುವುದೇ ಅವರ ಕಾದಂಬರಿಗಳ ವೈಶಿಷ್ಟ್ಯ. ಇನ್ನು  ಅವರು ಸೃಷ್ಟಿಸಿದ ಪಾತ್ರ ಪ್ರಪಂಚ.. ಗೃಹ ಭಂಗದ ಪಾತ್ರ ವೈವಿಧ್ಯಗಳಂತೂ ಅನುಪಮ. ಸೌಮ್ಯತೆಯ ಸಂಕೇತವಾದ ನಂಜಮ್ಮ, ಬಾಯ್ ತೆರೆದರೆ ಸಾಕು ಬೈಗುಳಗಳನ್ನು ಉದುರಿಸುವ ಗಂಗಮ್ಮ, ಬೇಜವಾಬ್ದಾರಿಯ ಚೆನ್ನಿಗರಾಯ, ಉಡಾಫೆಯ ಅಪ್ಪಣ್ಣ, ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಅಯ್ಯನವರು.. ಹೀಗೆ ಮಾನವ ಪ್ರಪಂಚದ ಎಲ್ಲ ಮುಖಗಳು, ಎಲ್ಲ ಭಾವ ರಸಗಳು ಇಡಿ ಇಡಿಯಾಗಿ ದೊರಕುವಂತಹ ಅಪರೂಪದ ಕಾದಂಬರಿ. ಅವರು ಸೃಷ್ಟಿಸಿದ ಸ್ತ್ರೀ ಪಾತ್ರಗಳೂ ಅಷ್ಟೇ.. ಸಮಕಾಲೀನ ಸಾಮಾಜಿಕ ವ್ಯವಸ್ಥೆ ಮೌಲ್ಯಗಳ ವಿರುದ್ಧ ಸಿಡಿದೆದ್ದ ‘ದಾಟು’ವಿನ ಸತ್ಯ ಇರಲಿ, ‘ಸಾರ್ಥ’ದ ಚಂದ್ರಿಕೆ ಇರಲಿ , ಉತ್ತರ ಕಾಂಡದ ಸೀತೆ ಇರಲಿ ಅಥವಾ ಆವರಣದ ರಜಿಯಾ ಆಗಿರಲಿ ಇವರೆಲ್ಲ ವಿಭಿನ್ನವಾಗಿ ಚಿಂತಿಸಿ, ವಿಭಿನ್ನವಾಗಿ ಬಾಳಿ, ಕೊನೆಯಲ್ಲಿ ಸೋತಂತೆ ಕಂಡರೂ ಸೋಲಲ್ಲೂ ಗೆಲುವನ್ನು ಕಂಡಂತಹವರು. ಸ್ವಲ್ಪ ಕಣ್ತೆರೆದರೆ ಸಾಕು ನಮ್ಮಲ್ಲೇ ನಮ್ಮ ಸುತ್ತಮುತ್ತಲಲ್ಲೇ ಅಂಥ ಹತ್ತು ಹಲವಾರು ಪಾತ್ರಗಳ ಅನಾವರಣವಾಗುತ್ತದೆ. ನಾನು ಮನೆಯಲ್ಲಿ ಎಷ್ಟೋ ಸಲ ಯಾವುದೋ ಕೆಲಸದ ಬಗ್ಗೆ ಬೇಜವಾಬ್ದಾರಿ ತೋರುವ ನಮ್ಮ ಯಜಮಾನರಿಗೆ ‘ಚೆನ್ನಿಗರಾಯನಂಗ ಮಾಡಬ್ಯಾಡ’ ಅಂತಲೂ,  ಮಕ್ಕಳ ಬಗ್ಗೆ ಗಮನಕೊಡದಿದ್ದಾಗ ‘ನೀ ಏನು ನಿರಾಕರಣದ ನರಹರಿನಾ?’ ಅಂತಲೂ  ಮೂದಲಿಸುವಷ್ಟು ಜೀವಂತ ಆ ಪಾತ್ರಗಳು. ಯಾವುದೇ ವಿಷಯದ ಬಗ್ಗೆ ಕಾದಂಬರಿ ಬರೆಯಲಿ ಬರೆಯುವುದಕ್ಕಿಂತ ಮುಂಚಿನ ಅವರ ಅಧ್ಯಯನದ ಶಿಸ್ತು, ಅಚ್ಚುಕಟ್ಟು ತನಗಳು, ಆ ವಿಷಯದ ಬಗೆಗಿನ ನಿಷ್ಠೆ ಅವುಗಳ ರೀತಿಯೇ ಬೇರೆ. ಭೀಮ ಕಾಯದ ಕುಸ್ತಿ ಇರಲಿ, ಮಂದ್ರದ ಸಂಗೀತ ನಾಟ್ಯಗಳಿರಲಿ, ಸಾರ್ಥದ ಇತಿಹಾಸ -ಪುರಾಣ -ಮೂರ್ತಿ ಶಿಲ್ಪ- ವೇದಾಂತ- ನಾಟಕಗಳಿರಲಿ, ಯಾನದ ಸ್ಪೇಸ್ ಟೆಕ್ನಾಲಜಿ ಇರಲಿ ಎಲ್ಲವೂ ಪೂರ್ಣ.. ಪರಿಪೂರ್ಣ. ಹೀಗಾಗಿ ಅವರ ಕಾದಂಬರಿಗಳನ್ನು ಓದುವಲ್ಲಿ ಓದುಗರಾದ ನಾವೂ ಸ್ವಲ್ಪ ಮಟ್ಟಿಗಿನ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯವೇನೋ ? ಉದಾಹರಣೆಗೆ ಮಂದ್ರವನ್ನೇ ತೆಗೆದುಕೊಳ್ಳಿ. ಕೇವಲ ಸಾಹಿತ್ಯಸಕ್ತನಿಗಾಗಲಿ ಅಥವಾ ಕೇವಲ ಸಂಗೀತಗಾರನಿಗಾಗಲಿ ಸಂಪೂರ್ಣವಾಗಿ ದೊರಕದದು. ಸ್ವಲ್ಪ ಮಟ್ಟಿಗೆ ಎರಡರ ಜ್ಞಾನವಿದ್ದವನಿಗೆ ಅಷ್ಟೇ ದಕ್ಕಬಲ್ಲದು. ಇಲ್ಲದಿದ್ದರೆ ಹೆಣ್ಣಿನ ವ್ಯಾಮೋಹದ, ವಿಷಯ ಲಂಪಟ ಮೋಹನ ಲಾಲನನ್ನಲ್ಲದೇ ಬೇರೇನನ್ನೂ ನಾವು ಅದರಲ್ಲಿ ದಕ್ಕಿಸಿಕೊಳ್ಳಲಾರೆವು.

ಬರೀ ಪಾಣಿಪತ್ ಕದನ ರಕ್ಕಸತಂಗಡಗಿ ಕದನಗಳ ಇಸ್ವಿಗಳಿಗಷ್ಟೇ ಸೀಮಿತವಾಗಿದ್ದ ನಮ್ಮ ಇತಿಹಾಸದ ಜ್ಞಾನಕ್ಕೆ ಐತಿಹಾಸಿಕ ಪ್ರಜ್ಞೆಗಳನ್ನು ಅನಾವರಣಗೊಳಿಸಿದ್ದು,ಅವುಗಳಿಗೆ ಒಂದು ಹೊಸದಾದ ಆಯಾಮ ದೊರಕಿಸಿದ್ದೇ ಸಾರ್ಥ, ಆವರಣದಂತಹ ಐತಿಹಾಸಿಕ ನೆಲೆಯಲ್ಲಿರುವ ಅವರ ಕಾದಂಬರಿಗಳು. ಮೊದಲ ಸಲ ಸಾರ್ಥ ಓದಿದಾಗ ದಂಗಾಗಿ ಬಿಟ್ಟಿದ್ದೆ. ‘ಸಾರ್ಥ’ ಎಂದರೆ ಅಲ್ಲಿಂದಿಲ್ಲಿಗೆ ಸಂಚರಿಸುವ ವ್ಯಾಪಾರಿಗಳ ಗುಂಪು ಎಂದಷ್ಟೇ ಗೊತ್ತಿದ್ದ ನನಗೆ ಸಾರ್ಥದಲ್ಲಿ ಏನೆಲ್ಲಾ ಉಂಟು? ಬಡಗಿ,ಅಡುಗೆ ಮಾಡುವವನು, ಡೇರೆ ಹಾಕುವವನು, ವೈದ್ಯ, ಪಶುವೈದ್ಯ, ಕಮ್ಮಾರರು, ಜನ ಹಾಗೂ ಪದಾರ್ಥಗಳನ್ನು ಹೊರಲು ಆನೆ, ಕುದುರೆ, ಕತ್ತೆ ಗಳು, ಕುದುರೆ ಗಾಡಿಗಳು, ವಿದ್ಯಾರ್ಥಿಗಳು, ಪ್ರವಾಸಿಗಳು, ಸನ್ಯಾಸಿಗಳು, ಧರ್ಮ ಪ್ರಚಾರಕರು.. ಇಡಿಯ ಪ್ರಪಂಚದ ಒಂದು ಸಣ್ಣ ತುಂಡು - ಮಿನಿ ಪ್ರಪಂಚವೇ ಸಾರ್ಥದಲ್ಲಿರುತ್ತದೆ ಎಂದು ಓದಿದಾಗ ಅರೆ ಹೌದಲ್ಲ ಎನ್ನಿಸಿದ್ದುಂಟು. ಸಾರ್ಥ ನನ್ನ ಮೆಚ್ಚಿನ ಕಾದಂಬರಿ. ಅದರಲ್ಲೂ ಶಂಕರ, ಮಂಡನ ಮಿಶ್ರ, ಭಾರತಿ, ಕುಮಾರಿಲ ಭಟ್ಟ ಇತ್ಯಾದಿ ವೃತ್ತಾಂತಗಳು ಬಹಳವೇ ಇಷ್ಟ. 98 ರಲ್ಲಿ ಆ ಕಾದಂಬರಿ ಬಂದಾಗ ಕಸ್ತೂರಿಯಲ್ಲಿ ಕುಮಾರಿಲ ಭಟ್ಟರು ಪ್ರಾಯಶ್ಚಿತ್ತ ರೂಪವಾಗಿ ಹೊಟ್ಟಿನ ಬೆಂಕಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗದ ವಿವರಣೆ ಇತ್ತು ಪುಸ್ತಕ ಪರಿಚಯ ಕಾಲಮ್‌ನಲ್ಲಿ. ಸುಮಾರು ದಿನಗಳವರೆಗೆ ಸಂಕಟಪಟ್ಟಿದ್ದೆ ನಾನೇ ಆ ಹೊಟ್ಟಿನ ಶಾಖದಲ್ಲಿ ಬೆಂದಂತೆ. ನಾನಾಗ ಅಮ್ಮನ ಮನೆಯೆಂದು ಇಲ್ಕಲ್ ಬಳಿ ಹಳ್ಳಿಗೆ ಹೋಗಿದ್ದೆ. ಅಲ್ಲಿ ಇಲಕಲ್ಲಿನಲ್ಲಿ ಇದ್ದದ್ದೇ ಒಂದು ಬುಕ್ ಸ್ಟಾಲ್. ಬಸವರಾಜ್ ಬುಕ್ ಡಿಪೋ ಅಂತ. ಅವನ ಅಂಗಡಿಗೆ ಹೋಗಿ ಸಾರ್ಥ ಕೇಳಿದೆ . “ಅಕ್ಕೋರ, ಇಲ್ಲಿ ಯಾರು ಓದ್ತಾರ್ರಿ ಅವನ್ನೆಲ್ಲ? ಮತ್ತ ಭಾಳ ಬಿರಿ ಪುಸ್ತಕರೀ..ಮಾರಾಟ ಆಗಂಗಿಲ್ರಿ. ಅದಕ್ಕೇ ತರಸಂಗಿಲ್ರೀ” ಅಂದುಬಿಟ್ಟ. ಬಿಜಾಪುರಕ್ಕೆ ವಾಪಸ್ ಹೋಗಲು ಇನ್ನೂ ವಾರವಿತ್ತು. ವಾರಗಟ್ಟಲೆ ಅದನ್ನು ಓದದೇ ಇರುವುದು ಹೇಗೆ? ಅಂಗಡಿಯವನಿಗೆ ದುಂಬಾಲು ಬಿದ್ದು ಸ್ಪೀಡ್ ಪೋಸ್ಟ್ ನ ಎಕ್ಸ್ಟ್ರಾ ದುಡ್ಡು ಕೊಟ್ಟು ಆ ಪುಸ್ತಕವನ್ನು ತರಿಸಿಯಾಯಿತು. ಅಂಥ ಹಳ್ಳಿಯಲ್ಲಿ ರಾತ್ರಿಯೆಲ್ಲ ಕರೆಂಟ್ ಇರುತ್ತಿರಲಿಲ್ಲ. ಚಿಮಣಿ, ಕಂದೀಲುಗಳ ಬೆಳಕಲ್ಲಿ ಎರಡು ರಾತ್ರಿ ಹಗಲುಗಳಲ್ಲಿ ಅದನ್ನ ಗಬಾ ಗಬ ಓದಿಯಾಯಿತು. ಹೀಗೆ ಬೆಂಬಿಡದೆ ಕಾಡಿ ಓದಿಸಿಕೊಳ್ಳುವ ತಾಕತ್ತು ಬರೀ ಭೈರಪ್ಪನವರ ಪುಸ್ತಕಗಳಿಗೆ ಮಾತ್ರ. ಸಾರ್ಥ ಹಿಂದು - ಬೌದ್ಧ ಧರ್ಮಗಳ ಸಂಘರ್ಷದ ಕಾಲಘಟ್ಟದ ಕಥೆ ಹೇಳಿದರೆ ಆವರಣ ಹಿಂದೂ - ಮುಸ್ಲಿಂ ಕಾಲಘಟ್ಟದ ಕಥೆ ಹೇಳುತ್ತದೆ ಹಂಪಿಯ , ಕಾಶಿಯ ವಿಶ್ವನಾಥನನ್ನು ಜೊತೆ ಜೊತೆಯಾಗಿ ಕಣ್ಣೆದುರಿಗೆ ತಂದುಬಿಡುತ್ತಾರೆ ಭೈರಪ್ಪ ಇದರಲ್ಲಿ. ಭೀಭತ್ಸರಸವನ್ನು ಓದಿಯೂ ಅನುಭವಿಸಬಹುದು ಎನ್ನುವುದು ಅರ್ಥವಾದದ್ದೇ ಆವರಣದ ಕೆಲವೊಂದು ವಿವರಗಳನ್ನು ಓದುವಾಗ. ಅದರ ಮುನ್ನುಡಿಯಲ್ಲಿ ಅವರು “ಸತ್ಯಶೋಧನೆಯಲ್ಲಿ ಓದುಗನು ಲೇಖಕನಷ್ಟೇ ಪಾಲುದಾರ ಪಾತ್ರಗಳನ್ನಾಗಲಿ ಸನ್ನಿವೇಶಗಳನ್ನಾಗಲಿ ಸತ್ಯದ, ಕಲಾ ಸತ್ಯದ ವಸ್ತು ನಿಷ್ಠೆಯಿಂದ ಗ್ರಹಿಸಿ ಅವುಗಳ ಭಾವವನ್ನು ಆಸ್ವಾದಿಸಬೇಕೇ ಹೊರತು ವೈಯಕ್ತಿಕ ರಾಗ ದ್ವೇಷಗಳಿಂದ ಉದ್ರೇಕಗೊಳ್ಳಬಾರದು ಎಂದು ಹೇಳಿರುವುದು ಅಕ್ಷರ ಸತ್ಯ. ಅದರಲ್ಲಿ ಶಕ್ತಿಯೇ ಧರ್ಮ,ಶಕ್ತ ವಲ್ಲದ್ದು ಧರ್ಮ ಹೇಗಾದೀತು ಎಂಬ ತರ್ಕ ಸ್ಫುಟವಾಯಿತು ಅನ್ನುವ ಮಾತೊಂದು ಬರುತ್ತದೆ ಯಾವಾಗಲೂ ಇದುವೇ ಐತಿಹಾಸಿಕ ಸತ್ಯವೇನೋ ಅನಿಸುತ್ತದೆ ಶಕ್ತವಾದದ್ದು ದುರ್ಬಲವಾದದನ್ನು ತನ್ನೊಳಗೆ ಎಳೆದುಕೊಂಡು ಬಿಟ್ಟಿದೆ ಅಂತ. ಡಾರ್ವಿನ್ ನ ವಿಕಾಸವಾದ ನೆನಪಾಗುತ್ತದೆ.
“ ಒಳಗಿನದನ್ನೆಲ್ಲ ಸುರಿದುಕೊಂಡರೂ ನಮ್ಮನ್ನು ತಕ್ಕಡಿಗೆ ಹಾಕುವುದಿಲ್ಲವೆಂಬಂಥ ಒಬ್ಬ ಆತ್ಮೀಯ ಸ್ನೇಹಿತನಿದ್ದರೆ….ಎಲ್ಲ ಜೀವಿಗಳ ಹಂಬಲದ ಪ್ರತೀಕವೆನಿಸುತ್ತದೆ ಈ ಮಾತು. ನಾವೆಷ್ಟೇ ಹೋರಾಡಿದರೂ ನಾವು ನಮ್ಮ ಸಂಸ್ಕಾರದ ಅಡಿಯಾಳುಗಳು, ವ್ಯವಸ್ಥೆ ಯ ಒಂದು ಅಂಗಗಳಷ್ಟೇ ಎಂಬುದು ಲಕ್ಷ್ಮಿ ಮತ್ತು ಪ್ರೊಫೆಸರ್ ಪಾತ್ರಗಳು ಮಾಡುತ್ತವೆ. ಒಟ್ಟಿನಲ್ಲಿ ಭೈರಪ್ಪನವರ ಕೃತಿಗಳ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆ. ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗೆ ಹೋಲಿಕೆಯೇ ಇಲ್ಲ ನಿಜವಾದ ಲೇಖಕನಿಗೆ ಪ್ರಶಸ್ತಿ ಸನ್ಮಾನಗಳೆಲ್ಲ ಬರೀ ನಿಮಿತ್ತ. ಅವನ ಶ್ರಮ ಸಾರ್ಥಕವಾಗುವುದು ಅವನ ಕೃತಿಗಳನ್ನು ಓದುವ, ಅರ್ಥೈಸಿಕೊಳ್ಳುವ ಓದುಗರು ದೊರೆತಾಗ ಮಾತ್ರ. ಅಂತಹ ಅಗಣಿತ ಓದುಗರು ಭೈರಪ್ಪನವರಿಗಿದ್ದಾರೆಂಬುದು ನಿರ್ವಿವಾದ. ಕನ್ನಡ ಸಾಹಿತ್ಯ ಲೋಕದಲ್ಲಿ ಅವರು ಪಡೆದ ವಿಶಿಷ್ಟವಾದ ಸ್ಥಾನಮಾನಕ್ಕೆ ಪರ್ಯಾಯ ಎನ್ನುವುದಿಲ್ಲ.


 ಎಚ್ಚೆಸ್ವಿ ಎಂಬ ಜೀವಪರತೆ..ಭಾವದೊರತೆ

ಎಚ್ಚೆಸ್ವಿ ಕೆಲವು ಆತ್ಮೀಯ ನೆನಪುಗಳು

ಎಚ್ಚೆಸ್ವಿ ಅವರು ನನ್ನ ತಂದೆ ಜಿ ಎಸ್ ಎಸ್ ಅವರ ಪ್ರತಿಭಾವಂತ ಮತ್ತು ಆಪ್ತ ಶಿಷ್ಯರು. ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ   ಕನ್ನಡ ಎಂ.ಎ ವಿದ್ಯಾರ್ಥಿಯಾದ ಮೇಲೆ (1971-1973) ನಮ್ಮ ಕುಟುಂಬಕ್ಕೆ ಪರಿಚಿತರಾದರು. ಕುವೆಂಪು ಅವರಿಗೆ ವೆಂಕಣಯ್ಯ ನವರು ಹೇಗೋ, ಜಿ ಎಸ್ ಎಸ್ ಅವರಿಗೆ ಕುವೆಂಪು ಹೇಗೋ , ಹಾಗೆ ಎಚ್ಚೆಸ್ವಿ ಅವರಿಗೆ ಜಿ ಎಸ್ ಎಸ್ ಪೂಜ್ಯ ಗುರುಗಳು. ಅದು ಅನನ್ಯವಾದ ಗುರು ಶಿಷ್ಯ ಸಂಬಂಧ. ಅಲ್ಲಿ ಪರಸ್ಪರ ಪ್ರೀತಿ, ಗೌರವ, ಸಲಿಗೆ, ಗೆಳೆತನ ಒಂದು ಹದದಲ್ಲಿ  ಇರುವಂತಹ ಒಡನಾಟ. ಕುವೆಂಪು ಅವರ ಮಾತುಗಳನ್ನು ಉಲ್ಲೇಖಿಸುವುದಾದರೆ "ಅಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ. ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಹತ್ತಿರವಾದದ್ದು ಬರಿಯ ವಿದ್ಯಾರ್ಥಿ ದೆಸೆಯಿಂದಲ್ಲ, ಅದಕ್ಕೆ ಮುಖ್ಯಕಾರಣ ಎಚ್ಚೆಸ್ವಿ ಒಬ್ಬ ಸೃಜನಶೀಲ ಕವಿ, ಅವರು ಸ್ನೇಹಪರರು ಮತ್ತು ಮೃದು ಸ್ವಭಾವದವರು. ಗುರು ಶಿಷ್ಯರು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿಸಮ್ಮೇಳನಗಳಲ್ಲಿ ಒಟ್ಟಿಗೆ ಭಾಗವಹಿಸಿದವರು. ಒಬ್ಬರ ಕವಿತೆಯನ್ನು ಇನ್ನೊಬ್ಬರು ಮೆಚ್ಚಿಕೊಂಡವರು. ಕಾಲಕ್ರಮೇಣ ಎಚ್ಚೆಸ್ವಿ ಅವರು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅಧ್ಯಪಕರಾಗಿದ್ದಾಗ ನಾವು ವಾಸವಾಗಿದ್ದ ಬನಶಂಕರಿ ಎರಡನೆಹಂತದ ೧೮ನೇ ಮುಖ್ಯ ರಸ್ತೆಯಲ್ಲಿ, ಪಕ್ಕದಲ್ಲೇ ಅವರೂ, ಮಡದಿ ರಾಜಲಕ್ಷ್ಮಿ ಮತ್ತು ಮಕ್ಕಳ ಜೊತೆ ಒಂದು ಬಾಡಿಗೆ ಮನೆಯಲ್ಲಿ ಹಲವಾರು ವರ್ಷಗಳ ಅವಧಿಯಲ್ಲಿ ವಾಸವಾಗಿದ್ದರು. ಗುರು ಶಿಷ್ಯರು ಸಾಹಿತ್ಯ ಸಮ್ಮೇಳನಗಳ ನಡುವೆ ಹಲವಾರು ಪ್ರವಾಸವನ್ನು ಕೈಗೊಳ್ಳುತ್ತಿದ್ದರು, ಕೆಲವೊಮ್ಮೆ ಮಾರ್ನಿಂಗ್ ವಾಕ್ ಮಾಡುತ್ತಿದ್ದರು. ಸೂರ್ಯದಯವನ್ನು ಒಟ್ಟಿಗೆ ನಿಂತು ವೀಕ್ಷಿಸುತ್ತಿದ್ದರು. ಆ ವೇಳೆ ಎಚ್ಚೆಸ್ವಿ ಏನಾದರೂ ಹರಟೆಗೆ ತೊಡಗಿದರೆ, ಜಿ ಎಸ್ ಎಸ್ ಅವರು 'ಶುಶ್ ಸುಮ್ಮನಿರಿ ಸೂರ್ಯೋದಯವನ್ನು ನಿಶಬ್ದದಲ್ಲಿ ನೋಡೋಣ' ಎನ್ನುತ್ತಿದ್ದರಂತೆ! (ಇದರ ಬಗ್ಗೆ ಎಚ್ಚೆಸ್ವಿ ಅವರು ಒಂದು ಕಡೆ ಬರೆದಿದ್ದಾರೆ) ವಾಕಿಂಗ್ ಬಳಿಕ ಗುರು ಶಿಷ್ಯರು ಗಾಂಧಿಬಜಾರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ಅಲ್ಲಿ ಮಸಾಲೆ ದೋಸೆ ಕಾಫಿ ಸವಿದು ಬರುತ್ತಿದ್ದರು. ಜಿ ಎಸ್ ಎಸ್ ಅವರೇ ವಿದ್ಯಾರ್ಥಿಭವನದ ಬಿಲ್ಲು ಕಟ್ಟುತ್ತಿದ್ದರೆಂದು ಎಚ್ಚೆಸ್ವಿ "ಬಿಲ್ಲೋಜ ಜಿ ಎಸ್ ಎಸ್ " ಎಂಬ ಬರಹದಲ್ಲಿ ಪ್ರಸ್ತಾಪಿಸಿದ್ದಾರೆ. ಸ್ವಾರಸ್ಯಕರವಾದ ಸಂಗತಿ ಎಂದರೆ ಗುರು ಶಿಷ್ಯರಿಬ್ಬರೂ ತಮ್ಮ ಪತ್ನಿಯರಿಗೆ ವಿದ್ಯಾರ್ಥಿ ಭವನಕ್ಕೆ ಹೋಗುತ್ತಿದ್ದೇವೆ ಎಂಬ ಸುಳಿವು ಕೊಡುತ್ತಿರಲಿಲ್ಲವಂತೆ. (ಹೋಟೆಲ್ಗೆ ಹೋಗಿ ಯಾಕೆ ತಿನ್ನ ಬೇಕು ಕೇಳಿದ್ದರೆ ಮನೆಯಲ್ಲೇ ಮಾಡಿಕೊಡುತ್ತಿದ್ದೆವಲ್ಲ ಎಂಬ ಮಡದಿಯ ಆಕ್ಷೇಪಣೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ) ನಮ್ಮ ಮನೆಯಲ್ಲಿ ಪ್ರತಿ ವರ್ಷ ಮೇ ತಿಂಗಳ ಕೊನೆಗೆ ಮಾವಿನ ಹಣ್ಣಿನ ಸೀಸನ್ ಮಧ್ಯದಲ್ಲಿ ಅಪ್ಪ, ಅವರ ಆತ್ಮೀಯ ಸಾಹಿತಿ ಮಿತ್ರರನ್ನು ಹೋಳಿಗೆ ಸೀಕರಣೆ ಊಟಕ್ಕೆ ಆಹ್ವಾನಿಸುತ್ತಿದ್ದರು, ಅದರಲ್ಲಿ ಎಚ್ಚೆಸ್ವಿ ಅವರು ಇದ್ದೇ ಇರುತ್ತಿದ್ದರು. ಅಪ್ಪ ಶುರುವಿನಲ್ಲಿ ಎಚ್ಚೆಸ್ವಿ ಅವರಿಗೆ ಹೇಗೆ ಹೋಳಿಗೆಗೆ ತುಪ್ಪಕಲೆಸಿ ನಂತರ ಸೀಕರಣೆಯನ್ನು ಕಿವುಚಿ ಒಂದು ಹದದಲ್ಲಿ ಮಿಕ್ಸ್ ಮಾಡಿ ತಿನ್ನಬೇಕು ಎಂಬುದನ್ನು ತಿಳಿಸಿಕೊಟ್ಟದ್ದನ್ನು ಎಚ್ಚೆಸ್ವಿ ತಮ್ಮ ಒಂದು ಬರಹದಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಗುರು ಶಿಷ್ಯರಿಬ್ಬರು ತಮ್ಮ ಕೃತಿಗಳನ್ನು ಪರಸ್ಪರ ವಿಮರ್ಶೆ ಮಾಡಿದ್ದಾರೆ. ಎಚ್ಚೆಸ್ವಿ ಅವರು 'ಜಿ ಎಸ್ ಎಸ್ ಬದುಕು ಬರಹ' ಎಂಬ ವಿಮರ್ಶೆ ಕೃತಿಯನ್ನು ೨೦೧೨ರಲ್ಲಿ ಪ್ರಕಟಿಸಿದ್ದಾರೆ. 'ಎಚ್ಚೆಸ್ವಿ ಸಮಗ್ರ ಕವಿತೆಗಳು' ಎಂಬ ಬೃಹತ್ ಕೃತಿಯನ್ನು ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಅರ್ಪಣೆಮಾಡಿರುವುದು ಆ ಗುರು ಶಿಷ್ಯರ ಅನ್ಯೋನ್ಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ಜಿ ಎಸ್ ಎಸ್ ಅವರೂ ಎಚ್ಚೆಸ್ವಿ ಅವರ ಕೃತಿಗಳನ್ನು ಕುರಿತು ಅನೇಕ ಬರಹಗಳನ್ನು ಬರೆದಿದ್ದಾರೆ.

ವಾರಾಂತ್ಯ ಹತ್ತುಗಂಟೆಯ ನಂತರ ಎಚ್ಚೆಸ್ವಿ ನಮ್ಮ ಮನೆ ಬಾಗಿಲು ಬಡಿದಾಗ ನಾನು ಅಥವಾ ಅಮ್ಮ ಬಾಗಿಲು ತೆರದ ಕೂಡಲೇ 'ಮೇಷ್ಟ್ರು ಇದಾರ' ಎಂದು ಮುಗುಳ್ನಗುತ್ತಿದ್ದರು, 'ಬನ್ನಿ ಒಳಗೆ' ಎಂದಾಗ ಅವರು ನೇರವಾಗಿ ಅಪ್ಪನ ಲೈಬ್ರರಿ/ಸ್ಟಡಿ ಕೋಣೆಯೊಳಗೆ ಕೂತು ಅಪ್ಪನನ್ನು ಭೇಟೆಯಾಗುತ್ತಿದ್ದರು. ಈ ಗುರು ಶಿಷ್ಯರು ಗಂಟೆಗಟ್ಟಲೆ ಸಾಹಿತ್ಯ ಸಂವಾದದಲ್ಲಿ ತೊಡಗುತ್ತಿದ್ದರು. ಕೆಲವೊಮ್ಮೆ ಇವರ ಜೊತೆ ಸಿ ಅಶ್ವಥ್, ಸುಮತೀನ್ದ್ರ ನಾಡಿಗ, ಎಚ್ ಎಸ್ ರಾಘವೇಂದ್ರ ರಾವ್ ಮತ್ತಿತರು ಬಂದು ಸೇರಿಕೊಳ್ಳುತ್ತಿದ್ದರು. ಸಂವಾದ ಮುಗಿದನಂತರ ನಾನು ವೆರಾಂಡದಲ್ಲಿ ಅಥವಾ ಅಂಗಳದ ಗೇಟು ಹಾಕಲು ಬಂದಾಗ ಡಾಕ್ಟ್ರೇ ಹೇಗಿದ್ದೀರಾ, ಕ್ಲಿನಿಕ್ ಹೇಗೆ ನಡೀತಾಯಿದೆ ಇತ್ಯಾದಿ ಸಾಹಿತ್ಯದ ಆಚೆಯ ಮಾತುಗಳನ್ನು ಆಡುತ್ತಿದ್ದರು. ಯೌವ್ವನದಲ್ಲಿ ನನ್ನ ವೈದ್ಯಕೀಯ ವೃತ್ತಿ ನನ್ನನ್ನು ಆವರಿಸಿಕೊಂಡಿದ್ದು ನನಗೆ ಸಾಹಿತ್ಯದ ಬಗ್ಗೆ ಗಮನ ಕೊಡಲು ಸಮಯದ ಅವಕಾಶವೇ ಇರಲಿಲ್ಲ, ಸಾಹಿತ್ಯಾಸಕ್ತಿ ಹಿಂದೆಯೇ ಉಳಿದಿದ್ದ ಕಾಲವದು. ನಾನು ಮತ್ತು ಎಚ್ಚೆಸ್ವಿ ಸಾಹಿತ್ಯ ಸಂವಾದಕ್ಕೆ ತೊಡಗಿದ್ದು ನಾನು ಇಂಗ್ಲೆಂಡಿಗೆ ಬಂದಮೇಲೆ ಎನ್ನ ಬಹುದು. ಆ ಕಾಲಕ್ಕೆ ನನಗೆ ಸಾಹಿತ್ಯದಲ್ಲಿ ಆಸಕ್ತಿ ಉಂಟಾಗಿತ್ತು, ಓದಲು ಬರೆಯಲು ಸಮಯ ಮತ್ತು ಅವಕಾಶ ಎರಡು ದಕ್ಕಿದ್ದವು.

ಅಂದಹಾಗೆ ನನಗೆ ಎಚ್ಚೆಸ್ವಿ ಅವರ ಸಾಹಿತ್ಯ ಪರಿಚಯವಾದದ್ದು ಸುಗಮ ಸಂಗೀತದ ಮೂಲಕವೇ. ನನಗೆ ಅವರು ಹೆಚ್ಚು ಹತ್ತಿರವಾದದ್ದು ನಾನು ಕನ್ನಡದಲ್ಲಿ ಕವನಗಳನ್ನು ಪ್ರಬಂಧಗಳನ್ನು ರಚಿಸಲು ಶುರುವಾದಾಗ. ಈ ವೇಳೆಗೆ ಅಪ್ಪ ತೀರಿಕೊಂಡಿದ್ದರು. ಎಚ್ಚೆಸ್ವಿ ಅವರು ಇಂಗ್ಲೆಂಡಿಗೆ ಕನ್ನಡ ಬಳಗದ ಆಹ್ವಾನದ ಮೇರೆಗೆ ಇಲ್ಲಿ ಬಂದಾಗ ನಮ್ಮ ಬಾಂಧವ್ಯ ಹೆಚ್ಚಾಯಿತು. ನಾನು ಬೆಂಗಳೂರಿಗೆ ಹೋದಾಗ ಎಚ್ಚೆಸ್ವಿ, ಬಿ ಆರ್ ಲಕ್ಷ್ಮಣ ರಾವ್, ಡುಂಡಿರಾಜ್, ಜೋಗಿ ಇವರೊಡನೆ ಅನೇಕ ಕ್ಲಬ್ ಮತ್ತು ಹೋಟೆಲಿನಲ್ಲಿ ಭೋಜನ ಕೂಟಗಳಲ್ಲಿ ಒಡನಾಡುವ ಅವಕಾಶ ಒದಗಿ ಬಂತು. ವಿಸ್ಕಿ ಸೇವೆನಯಲ್ಲೂ ಎಚ್ಚೆಸ್ವಿ ಮಿತವಾಗಿ ಒಂದು ಪೆಗ್ ಸೇವಿಸಿ ನಂತರ ಎರಡನೇ ಪೆಗ್ಗಿಗೆ ಒತ್ತಾಯಿಸಿದಾಗ ಬೇಡವೆಂದು ‘ನನ್ನದು ಅದ್ವೈತ ಫಿಲಾಸಫಿ’ ಎಂದು ಹಾಸ್ಯ ಚಟಾಕಿಯನ್ನು ಹಾರಿಸುತ್ತಿದ್ದರು. ಎಚ್ಚೆಸ್ವಿ ಉತ್ತಮ ವಾಗ್ಮಿಗಳು, ಸಾಮಾನ್ಯವಾಗಿ ಅವರು ಸಭೆಗಳಲ್ಲಿ ಸುಮಾರು 15-20 ನಿಮಿಷಕ್ಕಿಂತ ಹೆಚ್ಚು ಮಾತನಾಡಿದ್ದನ್ನು ನಾನು ಕೇಳಿಲ್ಲ. ಆ ಮಿತವಾದ ಭಾಷಣದಲ್ಲಿ ಸರಳತೆ, ಸ್ಪಷ್ಟತೆ, ಪದಗಳ ಬಳಕೆ ಮತ್ತು ವಿಚಾರಗಳು ಸೊಗಸಾಗಿರುತ್ತಿತ್ತು. 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬ ವಚನದ ಸಾಲುಗಳು ನೆನಪಿಗೆ ಬರುತ್ತಿತ್ತು.

ನಾನು ಬರೆಯಲು ಶುರುಮಾಡಿದಾಗ ನನ್ನ ಕೋರಿಕೆಯ ಮೇಲೆ ಎಚ್ಚೆಸ್ವಿ ನನ್ನ ಎಲ್ಲ ಬರಹಗಳನ್ನು ಓದಿ, ಸೂಕ್ತ ಸಲಹೆಗಳನ್ನು ನೀಡಿ, ಪ್ರಕಟಿಸಲು ಉತ್ತೇಜನ ನೀಡುತ್ತಿದ್ದರು. ನನ್ನ ಚೊಚ್ಚಲ ಕವನ ಸಂಕಲನ 'ಇಂಗ್ಲೆಂಡಿನಲ್ಲಿ ಕನ್ನಡಿಗ' ಕೃತಿಗೆ ಮುನ್ನುಡಿಯನ್ನು ಬರೆದು, ನನ್ನ ‘ಪಯಣ’ ಕಾದಂಬರಿಗೆ ಬೆನ್ನುಡಿಯನ್ನು ಕೂಡ ಬರೆದುಕೊಟ್ಟರು. ನಾನು ಒಂದು ರೀತಿ ಅವರ ಶಿಷ್ಯನೂ ಹೌದು. ಅವರಿಗೆ ಕಾಣಿಕೆಯಾಗಿ ನನ್ನ ಇತ್ತೀಚಿನ 'ಮೊನಾಲೀಸಾ' ಎಂಬ ಕವನ ಸಂಕಲನವನ್ನು ಅವರಿಗೆ ಅರ್ಪಿಸಿದ್ದೇನೆ. ಎಚ್ಚೆಸ್ವಿ ಅವರು ಶೆಫೀಲ್ಡ್ ನಗರಕ್ಕೆ ಆಗಮಿಸಿ ಯುಕೆ ಕನ್ನಡ ಬಳಗದ ಆಶ್ರಯದಲ್ಲಿ ನಡೆದ 2013 ದೀಪಾವಳಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅನಿವಾಸಿ ಸಾಹಿತ್ಯ ಅಂಗದ ಉದ್ಘಾಟನೆ ಮಾಡಿದ್ದನ್ನು ನಾನು ಸ್ಮರಿಸುತ್ತೇನೆ. ಈ ಸಾಹಿತ್ಯ ಅಂಗ ಈಗ ಎತ್ತರಕ್ಕೆ ಬೆಳದಿದೆ. ಆ ಸಂದರ್ಭದಲ್ಲಿ ಎಚ್ಚೆಸ್ವಿ ಅವರು ‘ಬೆಂಗಳೂರಿಗಿಂತ ಇಲ್ಲಿ ಹೆಚ್ಚು ಕನ್ನಡ ಕೇಳಿ ಬರುತ್ತಿದೆ’ ಎಂದು ಮಾತನಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ. ಆ ವಿಚಾರ ನಮ್ಮ ಯುಕೆ ಅನಿವಾಸಿ ಕನ್ನಡಿಗರಿಗೆ ಹೆಮ್ಮೆಯ ವಿಷಯ. ನನ್ನ ಮತ್ತು ಎಚ್ಚೆಸ್ವಿ ನಡುವಿನ ವಾಟ್ಸ್ ಆಪ್ ಸಂದೇಶಗಳನ್ನು ನೆನೆದು ಕೆಳಗೆ ಹಂಚಿಕೊಳ್ಳುತ್ತಿದ್ದೇನೆ. ಸಂದರ್ಭ; ನನ್ನ ‘ಪಯಣ’ ಎಂಬ ಕಾದಂಬರಿ ತಯಾರಾಗುತ್ತಿದ್ದ ಸಮಯ.

"ಪ್ರಿಯ ಡಾ.ಪ್ರಸಾದ್
ನಿಮ್ಮ ಕಾದಂಬರಿಯನ್ನು ಒಂದೇ ಪಟ್ಟಿನಲ್ಲಿ ಓದಿ ಆನಂದಿಸಿದೆ. ಇನ್ನು ನೀವು ವೈದ್ಯಕೀಯದೊಂದಿಗೆ ಸಾಹಿತ್ಯ ಕೃಷಿ ಯಲ್ಲೂ ತೊಡಗಬೇಕು. ಲೀಲಾ ಜಾಲವಾಗಿ, ಎಲ್ಲೂ ಓದುಗರ ಆಸಕ್ತಿ ಕುಂದದಂತೆ ಕಥೆಯನ್ನು ನಿರೂಪಿಸಿದ್ದೀರಿ. ನಾಯಿಯು ಇಲ್ಲಿ ನಮಗೆಲ್ಲ ಆಪ್ತವಾಗುತ್ತದೆ. ಅದರ ನೋವು ನಮ್ಮ ನೋವಾಗುತ್ತದೆ. ಮಕ್ಕಳಿಗೆ ನಾಯಿ ಯಾಕೆ ಪ್ರಿಯವಾಗುತ್ತದೆ ಎಂಬುದು ನನಗೆ ಈಗ ಮನದಟ್ಟಾಯಿತು. ಮುಗ್ಧತೆ ಮತ್ತು ಸಹಜ ಪ್ರೀತಿ ಎರಡು ಜೀವಕ್ಕೂ ಸಮಾನ. ಸಿನಿಮಾಕ್ಕೆ ಲಾಯಕ್ಕಾಗಿದೆ. ಸಿನಿಮೀಯ ಎನ್ನಿಸದು. ಇದೊಂದು ಲೋಕಪ್ರೀತಿಯ ಸಹಜ ಕಲಾಕೃತಿ"

"ಧನ್ಯವಾದಗಳು ಎಚ್ಚೆಸ್ವಿ ತುಂಬಾ ಖುಷಿಯಾಯಿತು. ಈ ಕೃತಿಗೆ ‘ಸಾರ್ಥಕ ಪಯಣ’ ಎಂಬ ಹೆಸರನ್ನು ಆಯ್ಕೆ ಮಾಡಿರುವೆ"

" ಹೆಸರು ತುಂಬಾ ಗದ್ಯಮಯ. ಯಾನ…ಅಷ್ಟೇ ಸಾಕು. ಅಥವಾ ಪಯಣ ಎಂದು ಇಡಬಹುದು"

“ಪಯಣ ಬಹುಶಃ ಸೂಕ್ತವಾಗಿರಬಹುದು. ‘ಯಾನ’ ಎನ್ನುವ ಹೆಸರಲ್ಲಿ ಭೈರಪ್ಪನವರ ಕಾದಂಬರಿ ಇದೆ. ನನ್ನ ಈ ಕಥೆ ಸರಳವಾಗಿರಬಹುದು"

"ಸರಳತೆ ಗುಣವೋ ದೋಷವೋ ಎಂಬ ವಾಗ್ವಾದ ಇನ್ನೂ ಬಗೆಹರಿದಿಲ್ಲ...!"


ಎಚ್ಚೆಸ್ವಿ ಅವರ ಹಲವಾರು ಬರಹಗಳಲ್ಲಿ, ಮಾತುಗಳಲ್ಲಿ ಸರಳತೆ ಇದ್ದುದನ್ನು ನಾವೆಲ್ಲಾ ಗಮನಿಸಿದ್ದೇವೆ. ಕಥೆ, ಕವನ ಸಂಕೀರ್ಣವಾಗಿರಬೇಕು, ಆಗ ಅದಕ್ಕೆ ಹೆಚ್ಚು ಬೆಲೆ, ಸರಳತೆ ಒಂದು ದೋಷ ಎಂಬ ನನ್ನಲ್ಲಿದ್ದ ಕಲ್ಪನೆಯ ಹಿನ್ನೆಲೆಯಲ್ಲಿ ಅವರ ಮಾತುಗಳು ಅರ್ಥಪೂರ್ಣವಾಗಿ ತೋರಿದವು. ಸರಳವಾಗಿ ಬರೆಯುವುದೂ ಒಂದು ಕಲೆ ಎಂಬ ಆಲೋಚನೆ ಮೂಡಿಬಂತು. ಎಚ್ಚೆಸ್ವಿ ಅವರು ಬಹಳ ಶ್ರದ್ಧಾವಂತರು. ಅವರು ಶೇಫಿಲ್ಡ್ ನಗರದ ನಮ್ಮ ಮನೆಯಲ್ಲಿ ಒಂದು ವಾರ ತಂಗಿದ್ದಾಗ ‘ಶೆಫೀಲ್ಡ್ ಕವಿತೆಗಳು’ ಎಂಬ ನೀಳ್ಗವನದ ರಚನೆಯಲ್ಲಿ ತೊಡಗಿದ್ದರು. ಅವರು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಕುಳಿತು, ತೀಕ್ಷ್ಣ ಕವಿಸಮಯದಲ್ಲಿ ಮೂಡಿತ್ತಿದ್ದ ಸಾಲುಗಳನ್ನು ದಾಖಲಿಸುತ್ತಿದ್ದರು. ಮುಂದಕ್ಕೆ ‘ಶೆಫೀಲ್ಡ್ ಕವಿತೆಗಳು’ ಎಂಬ ಕೃತಿಯನ್ನು ಅವರು ಹೊರತಂದರು. ಆ ಕೃತಿಯನ್ನು ಕುರಿತು ‘ಎಚ್ಚೆಸ್ವಿ ಅವರ ಶೇಫಿಲ್ಡ್ ಕವಿತೆಗಳ ಬಗ್ಗೆ ಶೆಫೀಲ್ಡ್ ನಿವಾಸಿಯ ಅನಿಸಿಕೆಗಳು’ ಎಂಬ ಬರಹವನ್ನು ನಾನು ‘ಸಮಾಹಿತ’ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಎಚ್ಚೆಸ್ವಿ ಅವರು ಫೋನ್ ಮಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಆ ಕೃತಿಯನ್ನು ನನಗೆ ಮತ್ತು ನನ್ನ ಶ್ರೀಮತಿ ಪೂರ್ಣಿಮಾಗೆ ಅರ್ಪಣೆಮಾಡಿದ್ದು ಅದು ನನಗೆ ಅತ್ಯಂತ ಗೌರವದ ವಿಷಯ.
*
~ ಡಾ ಜಿ ಎಸ್ ಪ್ರಸಾದ್

ಎಚ್ಚೆಸ್ವಿಯವರ ಸಂದರ್ಶನ 

ಸಂದರ್ಶಕಿ – ಡಾ. ಪ್ರೇಮಲತಾ

‘ ಉರಿಯ ಉಯ್ಯಾಲೆ’ಯ  ಆಯ್ದ ಭಾಗಗಳು

~ ಚಿನ್ಮಯಿ

~ ಅಕ್ಷತಾ

ವಿದಾಯ ಹೇಳಬಹುದೇ ಇಷ್ಟು ಸುಲಭಕ್ಕೆ ನಿಮಗೆ? 

“ ಕಥೆ ಮುಗಿಯುವಾಗ ಚಡಪಡಿಕೆ ಪಾತ್ರಕ್ಕಷ್ಟೇ.
ಕೃತಿ ಮುಗಿದ ತೃಪ್ತಿ ಬರೆದವಗೆ.
ಇಷ್ಟು ದಿನ ಎಡೆಬಿಡದೇ ಬರೆದ ಬೆರಳಿಗೆ ಬಿಡುವು.
ಹೊರೆ ಇಳಿದ ಗೆಲುವು ಮುಖದೊಳಗೆ.”
( ಒಂದು ಕಥೆ – ಉತ್ತರಾಯಣ ಮತ್ತು...)
HSV ಹೋದರಂತೆ.. ಎಂಬ ಸುದ್ದಿ ಕೇಳಿದಾಗಿನಿಂದ ಅದೇನೋ ನನ್ನ ಮನದ ಭಾವಗಳೆಲ್ಲ ಹೆಪ್ಪುಗಟ್ಟಿದಂಥ ಅನುಭವ. ಎರಡಕ್ಷರದ ಶ್ರದ್ಧಾಂಜಲಿಯನ್ನೂ ಬರೆಯಲಾಗದ ಭಾವ ಜಡತೆ. ಬರೆದು ಮುಗಿಸಿಬಿಟ್ಟರೆ ಅದೆಲ್ಲಿ ಕವಿಯೊಡನೆಯ ಕೊನೆಯ ಋಣವೂ ಹರಿದುಕೊಂಡು ಬಿಡುತ್ತದೋ ಎನ್ನುವ ತಳಮಳ..ಆತಂಕ. ಬರೆಯದೇ ಹೋದರೆ ಅತೀ ಮಹತ್ವದ ಕಾರ್ಯವನ್ನೇನೋ ಬೇಕೆಂದೇ ಅಲಕ್ಷ್ಯ ಮಾಡುತ್ತಿರುವ ಚಡಪಡಿಕೆ..ಅಪರಾಧೀ ಭಾವ. ಅಂತೂ ಕೊನೆಗೂ ಪ್ರೀತಿಯ ಕಣ್ಣ ಕಂಬನಿಯಷ್ಟೇ ಅವರಿಗೆ ನಾವು ನೀಡಬಹುದಾದ ಕಾಣಿಕೆ.
ಜೀವ-ಜೀವನ ಪ್ರೀತಿ, ಜಗದ ಚೆಲುವು- ಒಲವು, ಅತೀ ಸೂಕ್ಷ್ಮ ಅಷ್ಟೇ ಬಲವತ್ತರವಾದ ಮಾನವ ಭಾವಲೋಕದ ಅನಾವರಣ, ತಾಳುವಿಕೆ, ಒಗ್ಗುವಿಕೆ ತನ್ಮೂಲಕ ಮಾಗುವಿಕೆ ಈ ಕವಿಯ ಸಾಹಿತ್ಯದ ಮುಖ್ಯ ಪ್ರತಿಪಾದನೆಗಳು. ಈ ಜೀವ ಜಗತ್ತಿನ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳಿಗೂ ಇವರು ಕಿವಿಯಾಗುತ್ತಾರೆ; ಕಣ್ಣಾಗುತ್ತಾರೆ; ದನಿಯಾಗುತ್ತಾರೆ; ಹಾಡಾಗುತ್ತಾರೆ. ‘ಶ್ರೀ ಸಂಸಾರಿ’ಯ ಶ್ರೀರಾಮಚಂದ್ರನನ್ನು, ‘ ಆಪ್ತ ಗೀತೆ’ ಯ ಶ್ರೀಕೃಷ್ಣನನ್ನು, ‘ ಬುದ್ಧ ಚರಣದ’ ತಥಾಗತನನ್ನು ಎಷ್ಟು ಮಣ್ಣಿನ ಮಕ್ಕಳನ್ನಾಗಿ ಮಾಡಿ ಮರ್ತ್ಯರಾದ ನಮಗೆ ಅವರೆಲ್ಲರನ್ನು ಅತ್ಯಾಪ್ತರಾಗಿಸುತ್ತಾರೆ.ಧನುರ್ಧಾರಿ ರಾಮನ ಹೆಗಲಮೇಲಿನ ಬಿಲ್ಲು-ಬಾಣ ಕೆಳಗಿಳಿಸಿ ಅಲ್ಲೊಂದು ಪುಟ್ಟ ಅಳಿಲನ್ನು ಕೂಡಿಸುತ್ತಾರೆ. ರಾಜಸೇವೆಗಷ್ಟೇ ಮಿಗಿಲಾದ ‘ ಪುಷ್ಪಕ’ ದಲ್ಲಿ ವಾನರ – ಭಲ್ಲೂಕಾದಿಗಳಿಗೂ ಸೀಟು ಕೊಡಿಸಿಬಿಡುತ್ತಾರೆ. ಗೊಲ್ಲರ ಹುಡುಗ ‘ ಯಾದವ’, ‘ಕಾದವ’, ‘ ಸೇವಕ’ , ಶ್ರಾವಕ’ ನಾದ ಕಥೆ ಬಣ್ಣಿಸುತ್ತಾರೆ. ಲೋಕದ ಕಣ್ಣಿಗೆ ಕೇವಲ ಹೆಣ್ಣಾದ ರಾಧೆಯನ್ನು ಕೃಷ್ಣನನ್ನು ಕಾಣಿಸುತ್ತಾರೆ. ದ್ರೌಪದಿ, ಪೃಥೆ, ಮಂಥರೆ, ಊರ್ಮಿಳೆಯರ ಎದೆಯಾಳಕ್ಕಿಳಿದು ಮಂಥನ ನಡೆಸುತ್ತಾರೆ; ಹೃದಯ ಸಮುದ್ರದ ಹಾಲಾಹಲ - ಸುಧಾರಸಗಳನ್ನು ಹೊರ ಚೆಲ್ಲುತ್ತಾರೆ. “ ಕೊಂದವನದಲ್ಲ ಕಾದವನದ್ದು ಹಕ್ಕಿಯ ಹಕ್ಕು” ಎಂದು ಹೇಳಿ ಬುದ್ಧನ ಶಾಂತಿ- ಕರುಣೆಗಳಲ್ಲಿ ಮನ ತೊಯ್ಯಿಸುತ್ತಾರೆ.
“ ತಾನು ಕರಗದೇ ಮಳೆ ಸುರಿಸುವುದೇ ಶ್ರಾವಣದ ಸಿರಿ ಮುಗಿಲು?”, ‘ ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ’, ‘ ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ’, ‘ತಾನೇ ಕಡಲಾಗಲು ಹೊರಟ ಗಂಗೆಗೆ ಆಣೆಕಟ್ಟು ಕಟ್ಟುವರಾರು?’, ‘ ಎಣ್ಣೆ ಹುಯ್ಯುವುದಗ್ನಿ ಶಮನಕ್ಕೆ ದಾರಿಯೇ? ‘....ಎಂಥೆಂಥ ಅದ್ಭುತ ಸಾಲುಗಳನ್ನವರು ಕೊಟ್ಟಿದ್ದು..ಪಟ್ಟಿ ಮಾಡುತ್ತ ಹೋದರೆ ಬೆಳಗಾಗುತ್ತದೆ. ಅವರ ಜೀವನ ಹಾಗೂ ಕೃತಿಗಳ ಕಿರುಪರಿಚಯ ಇಂತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ ಗ್ರಾಮದಲ್ಲಿ 1944ರ ಜೂನ್‌ 23ರಂದು ಜನಿಸಿದರು. ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ.
ಪ್ರಾಥಮಿಕ ಶಿಕ್ಷಣ ಹೋದಿಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗದಲ್ಲಿ ಮಾಡಿದರು. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರ್‌ ಆಗಿ ಉದ್ಯೋಗ ಆರಂಭಿಸಿದರು.
ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ., ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್‌.ಡಿ ಪದವಿ ಗಳಿಸಿದರು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸುಮಾರು 30 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಎಚ್ಚೆಸ್ವಿ ರಚಿಸಿದ ಮುಖ್ಯ ಕಾವ್ಯ ಕೃತಿಗಳು: ಸಿಂದಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಗಿದ ಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಆಕಾಶ, ನದೀತೀರದಲ್ಲಿ, ಮೂವತ್ತು ಮಳೆಗಾಲ (ಸಮಗ್ರ ಕಾವ್ಯ). ಮಹಾಕಾವ್ಯ: ಬುದ್ಧ ಚರಣ
ನಾಟಕಗಳು: ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ (ಏಕಾಂಕ), ಚಿತ್ರಪಟ-ಅಗ್ನಿವರ್ಣ- ಉರಿಯ ಉಯ್ಯಾಲೆ, ಕಂಸಾಯಣ-ಊರ್ಮಿಳಾ-ಮಂಥರಾ, ಮೇಘಮಾನಸ (ಗೀತರೂಪಕ).
ಮಕ್ಕಳ ಸಾಹಿತ್ಯಕ್ಕೆ ಕೊಡುಗೆ: ಹಕ್ಕಿಸಾಲು, ಹೂವಿನಶಾಲೆ, ಸೋನಿ ಪದ್ಯಗಳು (ಕವಿತೆಗಳು) ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತು, ಹೂವಿ ಮತ್ತು ಸಂಧಾನ, ಮುದಿದೊರೆ ಮತ್ತು ಮೂವರು ಮಕ್ಕಳು (ನಾಟಕಗಳು).
ಕಾದಂಬರಿ: ತಾಪಿ, ಕಥಾಸಂಕಲನ-ಬಾನಸವಾಡಿಯ ಬೆಂಕಿ, ಪುಟ್ಟಾಚಾರಿಯ ಮತಾಂತರ ಮತ್ತು ಇತರ ಕಥೆಗಳು. ವಿಮರ್ಶಾ ಸಂಪುಟ-ಆಕಾಶದ ಹಕ್ಕು.
ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕಿರುತೆರೆ–ಚಲನಚಿತ್ರ: ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಚಲನಚಿತ್ರಗಳಿಗೆ ಗೀತಸಾಹಿತ್ಯ, ಕೆಲವಕ್ಕೆ ಸಂಭಾಷಣೆಗಳನ್ನು ಬರೆದಿದ್ದಾರೆ. ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ.‌‌ ರಂಗಭೂಮಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು.
ಪ್ರಶಸ್ತಿಗಳು: 5 ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿಗಳು ಸೇರಿ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಕವಿಯ ಭೌತಿಕ ಶರೀರಕ್ಕೆ ಮಾತ್ರ ಕೊನೆ ಯಶ: ಕಾಯಕ್ಕಲ್ಲ ಎನ್ನುವುದು ಸರ್ವವಿದಿತ . ಅಕ್ಷರಗಳ ಅಕ್ಷಯವಾದ ಅಪೂರ್ವ ನಿಧಿಯನ್ನು ನಮಗಾಗಿ ಬಿಟ್ಟು ಹೋದ ನೆಚ್ಚಿನ ಕವಿಗೆ ಅಶ್ರುಪೂರ್ಣ ಭಾವನಮನ.
“ ಮುಳುಗಿದರೆ ಮುಳುಗಬೇಕೀ ರೀತಿ
ಹತ್ತು ಜನ ನಿಂತು ನೋಡುವ ಹಾಗೆ..
ಗೌರವ ಬೆರೆತ ಬೆರಗಲ್ಲಿ.
ಸೂರ್ಯ ಮುಳುಗುವ ಮುನ್ನ,
ಓಡೋಡಿ ಬರುವ ಜನ ಕೈ ಮುಗಿವ ಹಾಗೆ
ಮುಳುಗಲ್ಲಿ ಮುಳುಗಿ”
( ಆಗುಂಬೆಯ ಸೂರ್ಯಾಸ್ತ ).
ಓಂ ಶಾಂತಿರಸ್ತು
~ ಗೌರಿಪ್ರಸನ್ನ