ವಿಶ್ವಭಾರತಿಗೆ ಕನ್ನಡದಾರತಿ..ಚನ್ನವೀರ ಕಣವಿಯವರಿಗೆ ಅನಿವಾಸಿಯ ಭಾವಾಂಜಲಿ

ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ
‘ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯಸಂಸ್ಕಾರಿ’... ಎಲ್ಲಾ ಶಾಲಾ-ಕಾಲೇಜುಗಳ ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ಹಾಡು ಸ್ವಾಗತ ಗೀತೆಯಾಗಿಯೋ, ಪ್ರಾರ್ಥನಾ ಗೀತೆಯಾಗಿಯೋ ಅನುರಣಿಸಲೇಬೇಕಿತ್ತು ಆಗ. ಅಂತೆಯೇ ‘ನನ್ನ ದೇಶ ನನ್ನ ಜನ ನನ್ನ ಮಾನಪ್ರಾಣಧನ ತೀರಿಸುವನೇ ಅದರ ಋಣ ಈ ಒಂದೇ ಜನ್ಮದಿ’ ಎನ್ನುವ ಆಕಾಶವಾಣಿಯ ವಂದನಾದ ಕೊನೆಯ ದೇಶಭಕ್ತಿ ಗೀತೆಯೊಂದಿಗೇ ನಮ್ಮ ಹೆಚ್ಚಿನ ಬೆಳಗುಗಳು ಆರಂಭವಾಗುತ್ತಿದ್ದವು. ಕವಿಯ ಬಗ್ಗೆ ಏನೇನೂ ಗೊತ್ತಿಲ್ಲದಾಗಲೂ ಅವರ ಕವನಗಳು ಹೀಗೆ ಹಾಡಾಗಿ ಹರಿದು ಸಾಮಾನ್ಯರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿ ಬಿಡುವುದೇ ಆ ಕಾವ್ಯದ ಗೆಲುವು. 

ಸಾರ್ಥಕ ತುಂಬು ಜೀವನ ನಡೆಸಿದ  ಚೆಂಬೆಳಕಿನ ಕವಿಚೇತನ ಮಹಾಬೆಳಗಿನಲಿ ವಿಲೀನವಾಗಿದೆ. ಆದರೆ ಅರವತ್ತೆಂಟು  ವರುಷ ಜೊತೆಯಾಗಿ ದಾಂಪತ್ಯ ರಥವನ್ನೆಳೆದ ತಮ್ಮ ಪತ್ನೀವಿಯೋಗದ ಸಂದರ್ಭ ದಲ್ಲಿ ಅವರೇ ಹೇಳಿದ ಮಾತಿನಂತೆ ಹೇಳುವುದಾದರೆ –‘ಇಲ್ಲಿದ್ರು..ಇಲ್ಲೇ ಇದ್ರು..ಈಗ – ಎಲ್ಲಾ ಕಡೆ ಅದಾರ. ಇದ್ದಾಗ ಇರುವು ಇಲ್ಲಷ್ಟೇ ಇತ್ತು. ಈಗ ಸರ್ವವ್ಯಾಪಿ ಆದ್ರು. ಥೇಟ್ ಚೆಂಬೆಳಕಿನ್ಹಂಗ..’

ಸಮನ್ವಯ ಕವಿಯೆಂದೇ ಖ್ಯಾತರಾದ ಕಣವಿಯವರು ಕನ್ನಡದಲ್ಲಿ ಸಮೃದ್ಧವಾದ ಕಾವ್ಯಪರಂಪರೆಯನ್ನು ನಿರ್ಮಿಸಿದವರು.ಮೃದು ಮಾತಿನ ಆದರೆ ಖಚಿತ ನಿಲುವಿನ ಸಜ್ಜನಿಕೆಯ ಕವಿಯವರು. ಧಾರವಾಡದ ಅನೇಕ ಸಾಹಿತ್ಯಿಕ  ಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲಿನ ಅವರ ಉಪಸ್ಥಿತಿ ನನಗೆ ಶಾಂತವಾಗಿ,ಸದ್ದಿಲ್ಲದೇ ಬೆಳಗುವ ನಂದಾದೀಪದಂತೆ ಕಂಡದ್ದಿದೆ.
ಕಣವಿಯವರ ಕಾವ್ಯ ಮುಂಗಾರಿನ ಮಳೆಯ ಆರ್ಭಟದಂತೆಯೋ, ಶ್ರಾವಣದ ಮುಸಲಧಾರೆಯಂತೆಯೋ ಅಬ್ಬರದ್ದಲ್ಲ;ಇದ್ದೂ ಇಲ್ಲದಂತೆ ಶೃತಿ ಹಿಡಿದು ಸುರಿದು ನೆಲವ ಹದಗೊಳಿಸಿ, ಮನವ ಮುದಗೊಳಿಸುವ ಮುಂಜಾವಿನ ಸೋನೆಮಳೆ.. ‘ಬಾನ ಸಾಣಿಗೆ ಹಿಟ್ಟು ಸಣಿಸಿದಂತೆ’ ಜಿನುಗಿದ ಸೋನೆ. 

ಕವಿವರ್ಯರ ಪ್ರಸಿದ್ಧ ಗೀತೆ ‘ಹೂವು ಹೊರಳುವವು ಸೂರ್ಯನ ಕಡೆಗೆ’ ಇದರ ಬಗ್ಗೆ ಅರ್ಥಪೂರ್ಣ ಲೇಖನವನ್ನು ನಮ್ಮ ಆಹ್ವಾನದ ಮೇರೆಗೆ ಅತಿ ಕಡಿಮೆ ವೇಳೆಯಲ್ಲಿ ಸರೋಜಿನಿ ಪಡಸಲಗಿಯವರು ಬರೆದು ಕಳಿಸಿದ್ದು ಅವರ ಕವಿ-ಕಾವ್ಯ ಪ್ರೇಮವನ್ನೂ, ಅನಿವಾಸಿಯ ಬಗೆಗಿನ ಅಭಿಮಾನವನ್ನೂ ಎತ್ತಿ ತೋರಿಸುತ್ತದೆ.

ತಮ್ಮ ಶೃತಿಬದ್ಧವಾದ ಇನಿದನಿಯಲ್ಲಿ ‘ಒಂದು ಮುಂಜಾವಿನಲಿ’ ಹಾಡುವುದರ ಮೂಲಕ ಕವಿಗೆ ಗೀತನಮನ ಸಲ್ಲಿಸಿದ್ದಾರೆ ಸುಮನಾ ಧ್ರುವ್ ಅವರು.

ತಮ್ಮ ವಿದ್ಯಾರ್ಥಿದೆಸೆಯಲ್ಲಾದ ಕವಿವರ್ಯರ ಮುಖಾಮುಖಿ ಭೇಟಿಯ ಕುರಿತಾದ ಮಧುರ ನೆನಪುಗಳನ್ನು ಹೆಮ್ಮೆಯಿಂದ ಸ್ಮರಿಸಿಕೊಂಡಿದ್ದಾರೆ ಶಿವ್ ಮೇಟಿ ಹಾಗೂ ಅಮಿತಾ ರವಿಕಿರಣ್ ಅವರು.

ಕವಿಯ ಯಶೋಕಾಯಕ್ಕೆ  ಕಾಲದ-ಹಂಗಿಲ್ಲ.ಅನಂತದವರೆಗೂ ವಿಶ್ವಭಾರತಿಗೆ ಕನ್ನಡದಾರತಿ ಬೆಳಗುತ್ತಲೇ ಇರುತ್ತದೆ; ಮಂಗಳ ಜಯಭೇರಿ ಮೊಳಗುತ್ತಲೇ ಇರುತ್ತದೆ. ಮುಟ್ಟಿದರೆ ಮಾಸುತಿಹ ಮಂಜಹನಿ ಮುತ್ತಿನಲಿ ಸೃಷ್ಟಿ ಸಂಪೂರ್ಣತೆಯು ಬಿಂಬಿಸುತ್ತಲೇ ಇರುತ್ತದೆ. ಸೋನೆಮಳೆ ಸುರಿಸುರಿದು ನೆಲದೆದೆ ಹದಗೊಳ್ಳುತ್ತಲೇ ಇರುತ್ತದೆ.
ಬನ್ನಿ ಓದುಗರೇ, ಇವತ್ತಿನ ಸಂಚಿಕೆಯನ್ನೋದಿ ಕವಿಗೊಂದು ಭಾವನಮನ ಸಲ್ಲಿಸಿ.

~ ಸಂಪಾದಕಿ

ಪರಿಚಯ 

ಧಾರವಾಡದವಳಾದ ನಾನೀಗ ಸಧ್ಯ ಬೆಂಗಳೂರು ವಾಸಿ. ಸಾಮಾನ್ಯ ಗೃಹಿಣಿ. ಚಿಕ್ಕಂದಿನಿಂದಲೂ ಹಾಡಿನ ಹುಚ್ಚು; ಸಂಯೋಜಿಸುವ, ಹಾಡುವ ಗುಂಗು.ಇದೇ ಕವಿತೆಗಳನ್ನು ಬರೆಯುವತ್ತ ಕೊಂಡೊಯ್ತು. ಓದುವ ಹವ್ಯಾಸವೂ ಹಾಗೇ.

ಈಗ ಎರಡು ಕವನಸಂಕಲನ ಹೊರ ಬಂದಿವೆ. ವೈದ್ಯ ಪತ್ನಿಯ ಅನುಭವ ಕಥನ; ಸ್ವರಚಿತ ಸಂಪ್ರದಾಯದ ಹಾಡುಗಳು ತಾಯಿ-ಮಗು ಇವೆರಡೂ ಅಚ್ಚಿನಲ್ಲಿವೆ. ನಾನು ಅನಿವಾಸಿ ಅಲ್ಲದಿದ್ದರೂ ಅನಿವಾಸಿ ಮಗನ ತಾಯಿ ನಾನು. ಅದಕ್ಕೇ ಏನೋ ಈ ಅನಿವಾಸಿ ಬಳಗ ನನ್ನದೇ ಎಂಬ ಆತ್ಮೀಯ, ಆಪ್ತ ಭಾವ.

ಚೆಂಬೆಳಕಿನ ಕವಿ - ಚೆಂಬೆಳಕಿನ ಕವಿತೆ- ನಾಲ್ಕು ಮಾತು
     "ನಾಡೋಜ, ಚೆಂಬೆಳಕಿನ ಕವಿ  ಚೆನ್ನವೀರ ಕಣವಿಯವರು ಇನ್ನಿಲ್ಲ" . ಟಿವಿ ಯಲ್ಲಿ  ಬಿತ್ತರವಾಗುತ್ತಿದ್ದ  ಸುದ್ದಿ  ಕೇಳುತ್ತಿದ್ದಂತೆಯೇ ನನಗೇ ಗೊತ್ತಿಲ್ಲದಂತೆ  ಒಂದು ಗಳಿಗೆ  ಹಾಗೇ ಸ್ತಬ್ಧವಾಗಿ  ಬಿಟ್ಟೆ. ಈ ೯೩ ರ, ಜೀವನದ  ಸಂಧ್ಯಾ ಕಾಲದಲ್ಲಿ  ಕೋರೋನಾದ  ಕರಾಳ  ಬಂಧನದಲ್ಲಿ ಸಿಲುಕಿ ,  ನಲುಗುತ್ತಿರುವ  ಆ ಜೀವ  ಸೋತು ಹೋಗಿದ್ದರೂ , ಮತ್ತೆ ಚಿಗುರೀತೇನೋ ಮಾಗಿದ ಚೇತನ  ಎಂಬ  ಅರ್ಥವಿಲ್ಲದ  ಆಸೆ  ದೂರದಲ್ಲಿತ್ತು. ಈಗ ' ದೀಪ  ಹೊತ್ತಿಸಿದ  ದೀಪವೇ  ನಂದಿ  ಹೋಯ್ತಲ್ಲ' ಎಂಬ  ದಿಗ್ಭ್ರಮೆ !
ಈಗಿದ್ದು  ಮುಂದಿನ  ಗಳಿಗೆಗೇ ಇಲ್ಲದಂತಾಗುವುದು  ಜೀವವೊಂದೇ ಏನೋ ಎಂಬ ಹತಾಶೆ ಭರಿತ  ವಿಷಾದದಲೆ  ಸುಳಿದು ಹೋಗಿ , ಕಣ್ತುಂಬಿ ತುಳುಕಿ ಅದರಲ್ಲೇ  ಆ ಮಗುವಿನ ಮನದ, ಮುಗ್ಧ ನಗೆಯ ಮೃದು ವ್ಯಕ್ತಿತ್ವ ಅದೇ ಶುಭ್ರ ನಗೆಯೊಡನೆ ತೇಲಿದ ಭಾಸ.
ಒಣ ಕಠೋರತೆ, ಅಣುಕು ಮಾತುಗಳಿಂದ ಬಲು ದೂರ  ಇದ್ದ ಆ ಭಾವಜೀವಿಯ ಎದೆ ತುಂಬಿದ ಕನಸುಗಳು ಅರಳಿ ಕವಿತೆಯಾಗಿ  ಹರಿದ  ಆ ಕೋಮಲ ಧಾರೆಯಲಿ ಮುಳುಗಿ ಹೋದೆ ನಾ, ಅವರ  ಭೇಟಿಯಾದ ಗಳಿಗೆಯ ನೆನಪಿನೊಡನೆ!
        ಧಾರವಾಡದ  ಕಲ್ಯಾಣ ನಗರದ  ಅವರ ಮನೆಯ ಹೊಸ್ತಿಲನ್ನು  ಅಳುಕುತ್ತಲೇ ತುಳಿದಾಗ ಅವರ  ಆ ತುಟಿತುಂಬ  ಹರಡಿದ  ಮೃದು ಹಾಸ, ನೀಡಿದ  ಮನದುಂಬಿದ ಸ್ವಾಗತ ," ಬಾ ಯವ್ವಾ ಬಾ  ತಂಗಿ  ಬಾ  ಒಳಗ" ಅಂದ  ಆ ಮೆತ್ತಗಿನ  ಧ್ವನಿ  ಇನ್ನೂ ಕಿವಿಯಲ್ಲಿ  ಗುಂಜಿಸುತ್ತಿದೆ. ಆ ಒಂದು  ಗಂಟೆಯಲ್ಲಿ  ಎಷ್ಟೊಂದು ಮಾತಾಡಿದೆವು! ಆದರೆ  ಅದರಲ್ಲಿ ನನ್ನ ತಲೆಗೆ ಎಷ್ಟು ಹೋಯ್ತೋ ಗೊತ್ತಿಲ್ಲ. ಅವರ  ಕವಿತೆಯಂತೆ ಇರುವ  ಆ  ವ್ಯಕ್ತಿತ್ವದಲ್ಲಿ  ಕರಗಿ  ಹೋಗಿದ್ದೆ  ನಾ! ಅಂತಹ  ಧೀಮಂತ  ಚೇತನ  ಇನ್ನು ನಮ್ಮೊಡನಿಲ್ಲ. ಆದರೆ ಅವರ  ಒಂದೊಂದು ಕವಿತೆ ಒಂದೊಂದು ಮಾತು ಹೇಳುತ್ತ ಚಿರಸ್ಥಾಯಿಯಾಗಿ ಉಳಿಯುವಂಥವೇ. ಆ ಕಾವ್ಯ- ಕವನಗಳೊಂದಿಗೆ ಅವರೂ ನಮ್ಮೊಡನೆಯೇ  ಇದ್ದಾರೆ ಎಂಬ ಹುಚ್ಚು ಸಮಾಧಾನ." ಹೂವು ಹೊರಳುವವು ಸೂರ್ಯನ ಕಡೆಗೆ....." ಎಂದು  ಅವರು  ಹಾಡಿದಂತೆ ಆ ಸ್ವಚ್ಛ ಮನದ  ಕವಿ ಆ ಶುಭ್ರತೆಯಲ್ಲೇ, ಆ ಬೆಳಕಿನಲ್ಲೇ ಒಂದಾಗಿ  ಹೋಗಿದ್ದಾರೆ. ಅವರ ಈ  ಕವಿತೆ ನನಗೆ ಅತ್ಯಂತ ಪ್ರಿಯವಾದ  ಕವಿತೆ. ಅವರಿನ್ನಿಲ್ಲದ  ಸುದ್ದಿ  ಕೇಳಿದಾಗಿನಿಂದ  ಎಷ್ಟು ಸಲ  ಆ ಹಾಡು ರತ್ನಮಾಲಾ ಪ್ರಕಾಶ ಅವರ  ಧ್ವನಿಯಲ್ಲಿ ಕೇಳಿದೀನೋ  ನನಗೇ ಗೊತ್ತಿಲ್ಲ!  ಮತ್ತೊಮ್ಮೆ ಹುಟ್ಟಿ ಬಾ ಅನ್ನುವುದು ಅದೆಷ್ಟು ವಾಸ್ತವಿಕ ಗೊತ್ತಿಲ್ಲ. ಈಗ ನಮ್ಮ ಕೈಲಿರುವುದು ಅವರ ನೆನಪಲ್ಲಿ ನಾಲ್ಕು ಹನಿ ಕಣ್ಣೀರು ಸುರಿಸುವ ಅಸಹಾಯಕತೆ ಒಂದೇ.  ನಾನೀಗ ಅವರ ಈ ಕವಿತೆಯ ಕುರಿತು ನನಗೆ ತಿಳಿದ  ಹಾಗೆ ಬರೆದ ನಾಲ್ಕು ಮಾತುಗಳೇ   ಚೆಂಬೆಳಕಿನ ಕವಿಗೆ  ನನ್ನ ಶ್ರದ್ಧಾಂಜಲಿ !  

ಹೂವು ಹೊರಳುವವು ಸೂರ್ಯನ ಕಡೆಗೆ..

ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನ ವರೆಗೆ
ಇರುಳಿನ ಒಡಲಿಗೆ  ದೂರದ ಕಡಲಿಗೆ
ಮುಳುಗಿದಂತೆ, ದಿನ  ಬೆಳಗಿದಂತೆ
ಹೊರ ಬರುವನು  ಕೂಸಿನ ಹಾಗೆ

ಜಗದ  ಮೂಸೆಯಲಿ  ಕರಗಿಸಿ  ಬಿಡುವನು
ಎಲ್ಲ  ಬಗೆಯ  ಸರಕು
ಅದಕೆ  ಅದರ ಗುಣ ದೋಷಗಳಂಟಿಸಿ
ಬಿಡಿಸಿ  ಬಿಟ್ಟ ತೊಡಕು

ಗಿಡದಿಂದುರುವ  ಎಲೆಗಳಿಗೂ ಮುದ 
ಚಿಗುರುವಾಗಲೂ  ಒಂದೆ ಹದ
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ  ಕುಳಿತಿಹನೋ ಕಲಾವಿದ

ಬಿಸಿಲ ಧಗೆಯ  ಬಸಿರಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ
ಸಹಿಸಿಕೊಂಡ  ಸಂಕಟವನು ಸೋಸಲು
ಬಂದೇ ಬರುವುದು ಗಳಿಗೆ

ಸಹಜ ನಡೆದರೂ  ಭೂಮಿಯ ಲಯದಲಿ
ಪದಗಳನಿರಿಸಿದ  ಹಾಗೆ
ವಿಶ್ವದ  ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ

ನಾಲ್ಕು ಮಾತುಗಳು ಕವಿತೆ ನನಗನಿಸಿದಂತೆ -

       ನಾಡೋಜ ಕವಿ ಚೆನ್ನವೀರ ಕಣವಿಯವರ ಈ ಕವಿತೆ " ಹೂವು ಹೊರಳುವವು ಸೂರ್ಯನ ಕಡೆಗೆ....."  ಹಾಗೇ ಓದಿ, ಆಲಿಸಿದ್ರೆ ಒಂದು ಸರಳ , ಸುಂದರ ಭಾವಗೀತೆ  ಅನ್ನಿಸಿದ್ರೂ ಬಗೆದಷ್ಟು  ಗೂಢಾರ್ಥ  ಅದರೊಡಲಲ್ಲಿ ಅಂತ ನನಗನ್ನಿಸ್ತು.
 ಹೂವು  ಇಲ್ಲಿ ಸುಂದರ, ಸರಳ, ಸ್ವಚ್ಛ ಮನದ ಪ್ರತೀಕ. ಅಂತೆಯೇ  ಸಹಜವಾಗಿಯೇ ಅವು  ಸೂರ್ಯನ  ಅಂದರೆ ತಮದ ಲವಲೇಶವೂ ಇಲ್ಲದ, ಶುಭ್ರ, ಸ್ವಚ್ಛ ಪ್ರಕಾಶದ, ಅರಿವಿನ ದ್ಯೋತಕ; ಅತ್ತ ಹೊರಳಬಲ್ಲವು , ಆ ಬೆಳಕು ಪ್ರಖರವಾಗಿದ್ದರೂ. ಆದರೆ ನಾವು ಮನುಷ್ಯರು ; ಮಾನವ ಸಹಜ  ದುರ್ಬಲತೆ  ನಮ್ಮಲ್ಲಿ. ಮಾಯಾ, ಮೋಹ, ಅಹಂ ದ ಗಾಢ ಕತ್ತಲು, ತುಮುಲದಲ್ಲಿ  ಮುಳುಗಿರುವ ನಾವು ಅದನ್ನು ಜೀರ್ಣಿಸಿಕೊಳ್ಳುವ ತಾಕತ್ತೂ ಇಲ್ಲದವರು. ನಮ್ಮ ದಾರಿ ಬರಿ ಚಂದ್ರನ ವರೆಗಷ್ಟೇ; ಸೂರ್ಯನ ಪ್ರತಿಫಲಿತ ಬೆಳಕಿನ ಚಂದ್ರನ ವರೆಗಷ್ಟೇ . ಆ ಜ್ವಾಜ್ವಲ್ಯಮಾನ  ಬೆಳಕಿನೆಡೆ  ಕಣ್ಣೆತ್ತಿ ನೋಡಲೂ ಆಗದಷ್ಟು ಆಳವಾಗಿ  ಹುದುಲಿನಲ್ಲಿ  ಸಿಲುಕಿದವರು. ಆ ಇರುಳಿನ ಒಡಲಿಂದ ಸಾಗಿ  ಬೆಳಕಿನೆಡೆ ಸಾಗಲು ಸೇತುವೆಯಂತಿರುವ  ಈ ಜೀವನದ  ಕಡಲಿನಲ್ಲೇ ಮುಳುಗಿ ಅಲ್ಲೇ ಎಲ್ಲಾ ದುರ್ಬಲತೆ, ಜಂಜಾಟಗಳನ್ನೆಲ್ಲ ಕಳಚಿ ಎದ್ದು ನಿಷ್ಕಲ್ಮಶ ಮನಸಿನ ಕೂಸಿನಂತೆ  ಹೊರಬಂದರೆ ಸೂರ್ಯನತ್ತ ಹೊರಳುವ ಯೋಗ್ಯತೆ ಬಂದೀತೋ ಏನೋ ಅಂತ. ಸೂರ್ಯನು ದಿನವೂ ಇರುಳಿನೊಡಲಲ್ಲಿ ಮುಳುಗಿ, ಕಡಲಿನಿಂದ  ಬೆಳಗುತ್ತ ಕೂಸಿನ ಹಾಗೆ ಶುಭ್ರವಾಗಿ ಹೊರಬಂದು ಇದನ್ನೇ ಹೇಳ್ತಾ ಇದಾನೆ ಅಂತ ಕವಿ ಸೂಚ್ಯವಾಗಿ ಹೇಳಿದ್ದಾರೆ ಇಲ್ಲಿ. ನಿಜಕ್ಕೂ ಇದೊಂದು ಅನುಪಮ ಪ್ರತಿಮೆ.ಮಾನವನೂ ಸೂರ್ಯ ದಿನ ಬೆಳಗಿದ ಹಾಗೆ ಬೆಳಗುತ್ತ ಅಂದರೆ ತುಸು ತುಸುವಾಗಿ ತಿಳಿವು ವಿಕಸಿಸಿ, ಸ್ವಚ್ಛ ಮನದ ಬೆಳಕಲಿ ಹೊಳೆಯುತ್ತ  ಕೂಸಿನ ಹಾಗೆ ಶುಭ್ರವಾಗಿ ಹೊರಬರಲಿ ಕಡಲ ಮಡಿಲಿಂದ  ಥೇಟ್  ಆ ನೇಸರ  ಬಂದ ಹಾಗೆ  ಎಂಬುದು ಕವಿಯ ಆಶಯ. 
         ಎರಡನೇ ಚರಣದಲ್ಲಿ  ಇದನ್ನೇ ಮುಂದುವರಿಸುತ್ತ  ಕವಿ ಹೇಳ್ತಾರೆ - ಯಾರು ಹೇಗೇ ಬಂದರೂ, ಅವರ ಯಾವ ಗುಣಾವ ಗುಣಗಳನ್ನು ಗಣನೆಗೆ ತಾರದೇ ಅವರವರ ಯೋಗ್ಯತೆಗೆ ತಕ್ಕಂತೆ ಈ ಜಗದ ದಿನ ನಿತ್ಯದ ಬದುಕಿನಲ್ಲಿ ಮುಳುಗಿಸಿ ಬಿಡ್ತಾನೆ ಆತ. ಹಾಗೇ ಆ ಒಂದೇ ಮೂಸೆಯಲ್ಲಿಯೇ ಅಕ್ಕಸಾಲಿಗನಂತೆ ಕರಗಿಸಿ ಮಸೆಸಿ ಬಿಟ್ಟು, ಒರೆಗ್ಹಚ್ಚಿ ಶುದ್ಧೀಕರಿಸುವದೊಂದೇ ಆತನ ಕೆಲಸ. ಆದರೆ ಒಂದೇ ಬಾರಿಗೆ ಆಗುವುದಲ್ಲ ಅದು. ಅವರವರ ಒಳಿತು ಕೆಡುಕುಗಳ ಕರ್ಮದ ಗಂಟು ಅವರ ಬೆನ್ನಿಗೇ. ಅಲ್ಲಿ ಯಾವ ಏಚು ಪೇಚಿಲ್ಲ; ತೊಡಕು ತೊಡರಿಲ್ಲ. ಬಲು ಸ್ಪಷ್ಟ ಆ ಲೆಕ್ಕ.
        ಇನ್ನು ಈ  ಕರಗಿಸಿ ಶುದ್ಧೀಕರಿಸಿದ್ದು ಎಷ್ಟರ ಮಟ್ಟಿಗೆ ಫಲ ಕೊಟ್ಟಿದೆ  ಎಂಬುದನ್ನು ಮೂರನೇ ಚರಣದಲ್ಲಿ ಹೇಳ್ತಾರೆ ಕವಿ. ಗಿಡದಿಂದ ಉದುರುವ ಎಲೆಗೂ ಒಂದು ಮುದ ಇದೆ ಅಂತ. ನಿಜ; ಮಾಗಿದ  ಮನದ  ಪ್ರತೀಕ ಅದು. ಮನ  ಮಾಗಿ ಪಕ್ವವಾಗಿ  ತೊಟ್ಟು ಕಳಚಿ ಗಿಡದಿಂದ ಉದುರುವ ಎಲೆಯಂತಾಗಿದ್ರೂ ಆ ಹಣ್ಣಾದ ಮನದಲ್ಲಿ  ಏನೋ ಒಂದು ನಿರಾಳ, ನಿವಾಂತ ಭಾವ. ಯಾವ
ಗೊಂದಲದ  ಗೋಜಿಲ್ಲದೇ, ತಿಳಿವು ಅರಿವಿನ  ಹುಡುಕಾಟದಿ ನಲುಗದ ಸ್ಥಿತಿ ಅದು; ಸ್ಥಿತಪ್ರಜ್ಞನ ಹಾಗೆ. ತಾ ಏನು, ತನ್ನ ದಾರಿ ಎತ್ತ ಎಂಬುದರ  ಕಲ್ಪನೆ  ನಿಚ್ಚಳವಾಗಿದೆ ಈಗ ಆ‌ ಜೀವಕೆ. ಅದಕ್ಕೇ ಹೊಸ ಚಿಗುರಿನ ಹದದಂತೆಯೇ ಆ ಮನವೀಗ. ಷೇಕ್ಸ್ ಪಿಯರ್ ನ  ಕವಿತೆಯ  ನೆನಪು ಬಾರದಿರದೀಗ; ಶಿಶುವಾಗಿ ಆಗಮಿಸಿ ಶಿಶುವಿನಂತೆ ನಿರ್ಗಮನ. ನಿರ್ಗಮನ ಆದ ಹಣ್ಣೆಲೆ ಭೂಮಿ ಒಡಲು ಸೇರಿ ಮತ್ತೆ ಚಿಗುರೊಡೆಯುವುದೂ ಅಲ್ಲಿಂದಲೇ. ಆ ಹಂತದಲ್ಲಿ ಅಲ್ಲಿ ಏನು ನಡೀತದೋ ಗೊತ್ತಿಲ್ಲ, ಆಗುವುದೂ ಇಲ್ಲ. ಇದು ಜನನ- ಮರಣ - ಜನನ ಈ ಚಕ್ರದ ಸೂಚಕ. ಆ ಕಲಾವಿದ ಮತ್ತೆ ಅವುಗಳ ಗುಣದೋಷಗಳನು  ಅಂಟಿಸಿ ಕಳಿಸಬೇಕಲ್ಲ ರೂಪಿಸಿ! ಒಂದು ಹದದ ಲೆಕ್ಕ, ಅಳತೆಗೋಲು ಇಟ್ಟುಕೊಂಡೇ ಇರ್ತಾನೆ ಆ ಕಲಾವಿದ- ಅದೇ ಸೃಷ್ಟಿಕರ್ತ, ಯಾರ ಅಳಿವಿಗೂ ನಿಲುಕದವನಾತ ಎಂದು ಹೇಳ್ತಿದ್ದಾರೆ ಕವಿ.
         ಈಗ  ನಾಲ್ಕನೇ ಚರಣದಲ್ಲಿ ಕವಿ ಸಂತೈಸ್ತಿದಾರೆ ಆ ಜೀವಗಳನ, ಗುಣದೋಷಗಳ ಮೂಟೆ ಹೊತ್ತು ತಿರುಗುವ ಜೀವಗಳನ. ಈ ಹೆಣಗಾಟದ ಮಧ್ಯೆಯೂ  ಒಂದು ಸುಂದರ ಗಳಿಗೆ ಬಂದೇ ಬರತದೆ.ಸಾಗಿ ಬಂದ ದಾರಿಯ ಹಿಂದಿರುಗಿ ನೋಡಿ , ತನ್ನನ್ನೇ ತಾ ಮಥಿಸಿ ಸೋಸಿ ನೋಡಿದಾಗ  ವಿಷಯ ನಿಚ್ಚಳವಾಗಿ ಗೋಚರಿಸಿ ಒಂದು ನಿರಾಳತೆ  ಮನದಲ್ಲಿ. ಇದೇ ಆ ಹೆಣಗಾಟದ  ಗರ್ಭದಲ್ಲಿಯೇ ಇರುವ ತಂಪೆರೆವ ಹಾಯಿಯ ನೆರಳಿನೆಳೆ. ಇದನ್ನು ಗುರುತಿಸುವ ಗಳಿಗೆ ಬಂದೇ ಬರುತ್ತದೆ ಎಂಬುದು ಕವಿಯ ಧೃಡ ನಂಬಿಕೆ. ಇಲ್ಲಿ ಬಿಸಿಲಿನ ಧಗೆ ಜೀವನ ಪರ್ಯಂತದ
 ಜಂಜಾಟ, ಗುದ್ದಾಟವೇ;  ಮಾಗುವಿಕೆ ಬರೋ ತನಕ. ನಂತರ ಬರುವುದು ಮೆಲು ತಂಗಾಳಿಯ ಅಲೆ. ನಿಧಾನವಾಗಿ ಬರೋದದು. ಆ ಹಣ್ಣೆಲೆಗೆ ಮುದ ನೀಡುವುದೂ ಇದೇ.
ಇದನ್ನೆಲ್ಲ  ನೋಡಿ  ಕವಿಗೆ  ಎಲ್ಲ  ಅಂಶಗಳ ನಡೆ, ಚಲನೆಯಲ್ಲೂ ಒಂದು ಲಯಬದ್ಧತೆ, ಕ್ರಮ ಬದ್ಧತೆ ಎದ್ದು ಕಾಣುತ್ತದೆ. ಸೃಷ್ಟಿಯ ಪ್ರತಿ ಅಣು , ಪ್ರತಿ ಕಣವನ್ನೂ ವ್ಯವಸ್ಥಿತವಾಗಿ, ಸರಿಯುತ್ತಿರುವ ಸಮಯದ ಚಲನೆಯಲ್ಲೂ, ಭೂಮಿಯು ಸಾಗುವ ಗತಿಯಲ್ಲೂ ಆಚೀಚೆ ಅಲುಗಾಡದಂತೆ , ಅದರದರದೇ ಸ್ಥಳದಲ್ಲೇ ಜೋಡಿಸಿರುವುದರಲ್ಲೂ ಒಂದು ಸೌಂದರ್ಯ ಕಾಣ್ತಿದೆ , ಕವಿತೆಯ  ಲಯಬದ್ಧ ಪದ ಜೋಡಣೆಯಲ್ಲಿರುವ ಹಾಗೆ. ಅದಕ್ಕೇ ಕವಿಗೆ  ಈ ಜೀವನವೇ ಒಂದು ಕವಿತೆ ಅನಿಸಿ ಬಿಟ್ಟು, ಅದು ಈ ಜಗದ ಮೊಳಹಿನಲ್ಲಿಯೇ ಅಂದರೆ ಜೀವನದ ಉಗಮದಲ್ಲಿಯೇ ರೂಪ ತಾಳಿ ಬಿಟ್ತು ಅಂತ ಹೇಳ್ತಾರೆ. ಹೀಗೆ ಜೀವನದ ಸಾರವನ್ನು ಪೂರ್ತಿಯಾಗಿ ಹೇಳಿ ಅದನ್ನು ಕವಿತೆ ಎನ್ನುವುದು ಅನುಪಮ  ಹೇಳಿಕೆ.ಜೀವನವೇ ಕವಿತೆ ಎನ್ನುವುದು ನಿಜಕ್ಕೂ ಅಪ್ರತಿಮ ಪ್ರತಿಮೆ.

ಒಟ್ಟಿನಲ್ಲಿ ಈ ಛಂದದ ಕವಿತೆ ಮನದ ತುಂಬಾ ಯೋಚನಾ ಭಾವ ತರಂಗಗಳನೆಬ್ಬಿಸುವದಂತೂ ನಿರಂತರ ಸತ್ಯ! ಈಗ ಅವರನ್ನು ಕಳೆದುಕೊಂಡು ಮಂಕು ಕವಿದು, ಮಬ್ಬುಗತ್ತಲೆ ಆವರಿಸಿದ್ದರೂ, ಇಂತಹ ಅಪರೂಪದ ಕವಿತೆಗಳಿಂದ ಚೆಂಬೆಳಕನ್ನು ಹರಡುತ್ತಾ, ಆ ಮಬ್ಬುಗತ್ತಲೆಯ ಮಂಕನ್ನು ಸರಿಸುತ್ತಾ  ನಮ್ಮ ಜೊತೆಯಲ್ಲೇ ಇರುತ್ತಾರೆಂಬುದೂ ಅಷ್ಟೇ ಸತ್ಯ!

~ ಸರೋಜಿನಿ ಪಡಸಲಗಿ
ಬೆಂಗಳೂರು

ಒಂದು ಮುಂಜಾವಿನಲಿ..ಸುಮನಾ ಧ್ರುವ್

ವಿಶ್ವ ವಿನೂತನ ವಿದ್ಯಾ ಚೇತನ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ	
ಈ ಹಾಡನ್ನು ಅದೆಷ್ಟು ಬಾರಿ ಆ ಮೊದಲು ಹಾಡಿದ್ದೆ ಆದರೆ , ಆ ದಿನ ಒಂಥರಾ ಭಯಮಿಶ್ರಿತ ಖುಷಿ ಯಾಕೆಂದರೆ ಕವಿಯ ಎದುರೆ ಅವರ ಹಾಡು ಹಾಡುವ ಸೌಭಾಗ್ಯ ಎಲ್ಲ ಗಾಯಕರಿಗೂ ಸಿಗುವಂತದ್ದಲ್ಲ, ಆ ಒಂದು ವಿಷಯದಲ್ಲಿ ನಾನು ನಿಜಕ್ಕೂ ನಶೀಬವಾನ,ಈ ಅವಕಾಶ ನನಗೆ ಹಲವುಬಾರಿ ಸಿಕ್ಕಿದೆ. 

ಕಣವಿ ಅವರನ್ನ ಅದೇ ಮೊದಲ ಬಾರಿ ನೋಡಿದ್ದು , ಧಾರವಾಡದ ವಿದ್ಯಾವರ್ಧಕ ಸಂಘದ ಯಾವುದೋ ಕಾರ್ಯಕ್ರಮಕ್ಕೆ ವಿಶ್ವ ವಿನೂತನ ಹಾಡಲಿಕ್ಕೆಂದು ನಾವು ಕೆಲವು ಸಂಗೀತ ವಿದ್ಯಾರ್ಥಿಗಳು ಹೋಗಿದ್ದೆವು. ವಿಶ್ವವಿನೂತನ ಹಾಡಿನ ಹೊಸದೊಂದು ಸಂಯೋಜನೆಯನ್ನು ನಮ್ಮ ಉಪನ್ಯಾಸಕರಾದ ಡಾ ನಂದಾ ಪಾಟೀಲ್ ಅವರು ನಮಗೆ ಕಲಿಸಿದ್ದರು. ಹಾಡಿನ ನಂತರ "ಚಲೋ ಹಾಡಿದ್ರು ಹುಡುಗೂರು". ಅಂದು ಮುಗುಳುನಕ್ಕರು ಅವರ ಕವಿತೆಗಳಂತೆ ಅವರ ನಗುವೂ ಚಂದ ಚಂದ, ಪುಟ್ಟ ಮಗುವಿನ ನಗುವಿನಂತೆ.

ಧಾರವಾಡದಲ್ಲಿ ಇದ್ದಷ್ಟು ದಿನ ಆಗೊಮ್ಮೆ ಈಗೊಮ್ಮೆ ಸಾಹಿತ್ಯ ಸಂಗೀತ ಕಾರ್ಯಕ್ರಮದಲ್ಲಿ ಅವರ ಭೇಟಿ ಆಗುತ್ತಲೇ ಇರುತ್ತಿತ್ತು. ಈಗಿನಂತೆ selfi ಕಾಲವಾಗಿದ್ದ್ರೆ ಅದೆಷ್ಟು ಫೋಟೋಗಳ ಸಂಗ್ರಹವಾಗುತ್ತಿತ್ತೋ. ಮನಸ್ಸಲ್ಲಿ ಅಚ್ಚಾದ ಆ ನೆನಪಿನ ಚಿತ್ರಗಳನ್ನು ಅಕ್ಷರದಲ್ಲಿ ಬಿಂಬಿಸಲು ಸೋಲುತ್ತಿದ್ದೇನೆ.

ಕನ್ನಡ ಭಾವಗೀತೆಗಳ ಗುಂಗಿಗೆ ಬಿದ್ದವರು, ತಮ್ಮ ಜೀವನದ ಎಲ್ಲ ಸಂದರ್ಭಕ್ಕೂ ಒಂದು ಹಾಡನ್ನು ತಮ್ಮ ಅರಿವಿಲ್ಲದಂತೆ ಗುನುಗಿಕೊಂಡು ಬಿಡುತ್ತೇವೆ. ಹಾಗೆ ಎಂದೋ ಕೇಳಿದ ಮುಂಜಾವಾದಲಿ ಹಸಿರುಹುಲ್ಲ ಮಖಮಲ್ಲಿನಲಿ ಪಾರಿಜಾತವೂ ಹೂವು ಸುರಿಸಿದಂತೆ ಹಾಡು ಪಾರಿಜಾತ ಸಿಗದ ನಾಡಿಗೆ ಬಂದರೂ ಇಬ್ಬನಿ ತುಂಬಿದ ಹಸಿರು ಹೊದ್ದ ನೆಲವನ್ನು ಕಂಡರೆ ಪಕ್ಕನೆ ಗುನುಗಿಬಿಡುತ್ತೇನೆ. ಏಳುತ್ತಲೇ ಮಳೆ ನಾದ ಕೇಳಿದರೆ ತುಂತುರಿನ ಸೋನೆಮಳೆ ಎಂದು ಮನಸು ಹಾಡತೊಡಗುತ್ತದೆ. ಎಲ್ಲಕ್ಕಿಂತ ಹೆಚ್ಚು ಆಪ್ಯಾಯಮಾನ ಹಾಡು ಎಂದರೆ ಹೂವು ಹೊರಳುವವು ಸೂರ್ಯನ ಕಡೆಗೆ ಎನ್ನುವ ಗೀತೆ, ಈಗಲೂ ಸೂರ್ಯನತ್ತ ಮುಖಮಾಡಿದ ಹೂಗಳನ್ನು ನೋಡಿದಾಗ, ಆ ಸಾಲು ನೆನಪಾಗುತ್ತದೆ. 

~ ಅಮಿತಾ ರವಿಕಿರಣ್
ಕಣವಿಯವರ ಜೊತೆಗೆ ನನ್ನದೊಂದು ಭೇಟಿ 
ನಾವಿದ್ದ ಸಮಯದಲ್ಲಿ ಕೆಎಂಸಿಯ ಕನ್ನಡ ಸಂಘ ತುಂಬಾ ಚುರುಕಾಗಿತ್ತು . ಪ್ರತಿ ವರ್ಷ ' ಬೇಂದ್ರೆಯವರ ' ದಿನಾಚರಣೆಯನ್ನು ಆಚರಿಸುವುದು ವಾಡಿಕೆಯಾಗಿತ್ತು . ಯಾರಾದರೂ ಸಾಹಿತಿಗಳನ್ನು ಮುಖ್ಯ ಅತಿಥಿಗಳನ್ನಾಗಿ ಕರೆತರುವದು ವರ್ಷಗಳಿಂದ ನಡೆದುಬಂದ ರೂಢಿಯಾಗಿತ್ತು .
ಅದು ೧೯೯೦ ರ ಬೇಂದ್ರೆ ದಿನಾಚರಣೆ  . ನಮ್ಮ ಸಂಘದ  ಮುಖ್ಯಸ್ಥರಾಗಿದ್ದ ಡಾ . ಪಾರ್ಶ್ವನಾಥ ಸಾರರ ಮೇರೆಗೆ ಆ  ಸಲ ನಾಡೋಜ ಕವಿ ಚೆನ್ನವೀರ ಕಣವಿಯವರನ್ನು ಮುಖ್ಯ ಅತಿಥಿಯಾಗಿ ಕರೆಯಬೇಕೆಂದು ನಿರ್ಧಾರವಾಗಿತ್ತು .
ನನ್ನ ಸೌಭಾಗ್ಯವೋ ಏನೊ ನನಗೆ ಆ ಜವಾಬ್ಧಾರಿಯನ್ನು ಒಪ್ಪಿಸಲಾಗಿತ್ತು . ನಾನು ಅವರನ್ನು ಪ್ರತ್ಯಕ್ಷವಾಗಿ ನೋಡಿರಲಿಲ್ಲ . ಅವರ ಪದ್ಯಗಳನ್ನು ಪಠ್ಯ ಪುಸ್ತಕದಲ್ಲಿ ಓದಿದ್ದೆ. ಧಾರವಾಡದಲ್ಲಿ  ಇದ್ದಾಗ ಬೇಂದ್ರೆಯವರ ಮನೆಗೆ ಹೋಗುವ ಅವಕಾಶ ಸಿಕ್ಕಿತ್ತಾದರೂ ಕಣವಿಯವರನ್ನು ಕಾಣುವ ಸಂದರ್ಭ ಒದಗಿ ಬಂದಿರಲಿಲ್ಲ.
ಒಂದು ಸಂಜೆ ನಾನು ಮತ್ತು ನನ್ನ ಗೆಳೆಯ ಸೇರಿ ಧಾರವಾಡಕ್ಕೆ ಪಯಣ ಬೆಳೆಸಿದೆವು. ಆಗಿನ ಸಮಯದಲ್ಲಿ ಈಗಿನಂತೆ ಮೊಬೈಲ್ ಫೋನಗಳು ಮತ್ತು ಅಂತರ್ಜಾಲದ ಅನುಕೂಲತೆಯೂ ಇರಲಿಲ್ಲ . ಅವರು ಧಾರವಾಡ ವಿಶ್ವ ವಿದ್ಯಾಲಯದ ನೌಕರರ ಕ್ವಾರ್ಟರ್ಸ್ ನಲ್ಲಿ ಇರುತ್ತಾರೆಂದು ಗೊತ್ತಿತ್ತು . ಮನೆಯ ನಂಬರನ್ನು ನಮ್ಮ ಸಾರರಿಂದ ಪಡೆದುಕೊಂಡಿದ್ದೆವು . ಸಂಜೆ ೭ ಘಂಟೆಯ ಸುಮಾರಿಗೆ ಸಿಟಿ ಬಸ್ಸ ಹಿಡಿದು ವಿಶ್ವವಿದ್ಯಾಲಯವನ್ನು ತಲುಪಿದ್ದೆವು . ಬಸ್ಸಿನಿಂದ ಕೆಳಗಿಳಿದ ಮೇಲೆ ಎಲ್ಲಿಹೋಗಬೇಕೆಂದು ಗೊತ್ತಾಗದೆ ಯಾರನ್ನಾದರೂ ಕೇಳಿದರಾಯಿತು ಎಂದು ಕಾಯುತ್ತಿದ್ದೆವು. ಅಷ್ಟರಲ್ಲಿಯೇ ನಮ್ಮ  ಹಿಂದೆಯೇ ಇನ್ನೊಬ್ಬರು ಬಸ್ಸಿನಿಂದ  ಇಳಿದರು  . ನೆಹರು ಶರ್ಟ್ ಮತ್ತು ಪಾಯಜಾಮ್ ಹಾಕಿದ್ದರು ತಲೆಯ ಮೇಲೆ ಒಂದು ಟೋಪಿ ಇತ್ತು ಮತ್ತು ಕೈಯಲ್ಲಿ  ಒಂದು ಕಾಯಿಪಲ್ಲೆ ತುಂಬಿದ ಚೀಲವಿತ್ತು . ನಾವು ಹೋಗಿ ಅವರನ್ನು ಕೇಳಿದೆವು - 'ಕಣವಿ ಸರ್ರರ್ ಮನೆಗೆ ಹೋಗಬೇಕು , ದಾರಿಯನ್ನು ಹುಡುಕುತ್ತಿದ್ದೇವೆ ನಿಮಗೇನಾದರೂ ಗೊತ್ತೇನು' ಎಂದು . ನಮ್ಮನ್ನೊಮ್ಮೆ ನೋಡಿ ಅವರೆಂದರು   ' ನಾನು ಅಲ್ಲಿಯೇ ಹೊರಟಿದ್ದೇನೆ ನೀವೂ ನನ್ನ ಜೊತೆಗೆ ಬರಬಹುದು ಎಂದು. ಅವರನ್ನೇ ಹಿಂಬಾಲಿಸಿದೆವು 
ಅವರ ಮನೆಯನ್ನು ಮುಟ್ಟಿದ್ದಾಗ ನಮಗೆ  ಗೊತ್ತಾಯಿತು ಅವರೇ ಕಣವಿಯವರೆಂದು . ನಾವೇನೋ ತಪ್ಪು ಮಾಡಿದೆವು ಎಂದು ಅನಿಸಿತ್ತು. 'ನಿಮ್ಮನ್ನು ಗೊತ್ತು ಹಿಡಿಯಲು  ಆಗಲಿಲ್ಲವೆಂದು ' ಕ್ಷಮೆಯಾಚಿಸಿದ್ದೆವು .ನಾವು ಬೆಪ್ಪಾಗಿರುವದನ್ನು ಕಂಡು ಅವರೇ ಮಾತನಾಡಿದರು . 'ಪರವಾಗಿಲ್ಲ ಬಿಡ್ರಪ್ಪಾ ! ಎಲ್ಲರೂ ಗೊತ್ತು ಹಿಡಿಯುವದಕ್ಕೆ ನಾನೇನು ಫಿಲ್ಮ್ ನಟನೇನೂ ' ಅಂತ ಎಂದಿದ್ದರು . ಬಂದ ವಿಷಯವನ್ನು ಹೇಳಿದೆವು . ಅವರು ತುಂಬು ಹೃದಯದಿಂದ ಒಪ್ಪಿಕೊಂಡಿದ್ದರು. ಅಷ್ಟರಲ್ಲಿಯೇ ಅವರ ಪತ್ನಿಯವರು ಗರಂ ಚಹಾ ತಂದು ಇಟ್ಟಿದ್ದರು. ಚಹಾ  ಕುಡಿದು ಮನೆಯನ್ನು ಬಿಟ್ಟಿದ್ದೆವು . ಅವರ ಸರಳ ಜೀವನದ ಶೈಲಿಯನ್ನು ಕಂಡು ನಾನು ದಂಗಾಗಿದ್ದೆ.
೧೫ ದಿನಗಳ ನಂತರ ಅವರನ್ನು ಕಾರ್ಯಕ್ರಮಕ್ಕೆ ಕರೆ ತರಲು ಕಾರು ತೆಗೆದುಕೊಂಡು ಹೋಗಿದ್ದೆವು. ಕಾರನ್ನು  ಕಂಡು ಅವರೆಂದಿದ್ದರು ' ಇದಕ್ಕ್ಯಾಕ ಇಷ್ಟು ಖರ್ಚು  ಮಾಡಿದ್ರಿ , ಅರ್ಧ ಘಂಟೆಗೊಂದ  ಸಿಟಿ ಬಸ್ಸ ಅದಾವ ಬಸ್ಸಿನಾಗ ಹೋಗಬಹುದಿತ್ತಲ್ಲ?' ಎಂದು . ಆ ಮಾತುಗಳು ಅವರ ಸರಳ ಜೀವನಕ್ಕೆ ಇನ್ನೊಂದು ಸಾಕ್ಷಿಯಾಗಿದ್ದವು . ಅರ್ಧ ಘಂಟೆಯ ಕಾರು ಪಯಣದಲ್ಲಿ ನಮ್ಮ ಜೊತೆಗೆ ಎಷ್ಟೊಂದು ಸಲೀಸಾಗಿ  ಮಾತನಾಡಿದ್ದರು . ಅವರಿಗೆ  ತಾವೊಬ್ಬ ದೊಡ್ಡ ಕವಿ ಎಂಬ ಅಹಂಕಾರ ಸ್ವಲ್ಪವೂ ಇರಲಿಲ್ಲ . 
ಕೆಎಂಸಿ ಯ ಕನ್ನಡ ಸಂಘದ ಬಗ್ಗೆ ಮತ್ತು ಬೇಂದ್ರೆಯವರ ದಿನಾಚರಣೆ ಬಗ್ಗೆ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದರು. ಬೇಂದ್ರೆಯವರ ಬಗ್ಗೆ ಅವರಿಗೆ ತುಂಬಾ ಗೌರವವಿತ್ತು . ಅವರ  ಬಗ್ಗೆ  ಮನಸು ಬಿಚ್ಚಿ ಮಾತನಾಡಿದ್ದರು ಕಾರ್ಯಕ್ರಮದಲ್ಲಿ . 
ಅಂಥ ಸರಳ ಮತ್ತು ಶಿಸ್ತಿನ ಕವಿ ಜೀವಿಯ ಜೊತೆಗಿನ ನನ್ನ ಸಣ್ಣ ಭೇಟಿ ಮತ್ತು ಅರ್ಧಘಂಟೆಯ ಕಾರು ಪಯಣ ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯೊಲ್ಲೊಂದು . ಇಲ್ಲಿ ಅದನ್ನು ನೆನಪಿಸಿಕೊಳ್ಳಲು ಹೆಮ್ಮೆ ಎನಿಸುತ್ತಿದೆ.

~ ಶಿವ ಮೇಟಿ

ಹಾಡು ಹಳೆಯದಾದರೇನು?.. ಜಿ.ಎಸ್.ಎಸ್.ಭಾವನಮನ

ಕಬ್ಬಿಗರ ಓದಿನಲ್ಲಿ, ಆಸಕ್ತರ ಅಧ್ಯಯನದಲ್ಲಿ, ಸಹೃದಯರ ರಸಾಸ್ವಾದದಲ್ಲಿ, ಅಭಿಮಾನಿಗಳ ಎದೆಯ ಗುಡಿಯಲ್ಲಿ ಕವಿ ಬೆಳಗುತ್ತಲೇ ಇರುತ್ತಾನೆ;ಬೆಳಕು ಚೆಲ್ಲುತ್ತಲೇ ಇರುತ್ತಾನೆ. 

ಬರುವ ಫೆಬ್ರುವರಿಯ ಏಳರಂದು,  ತಮ್ಮ ಕಾವ್ಯದಿಂದ ನವನವೀನ ಭಾವಗಳನ್ನು ಉಣಬಡಿಸಿದ  ನಮ್ಮೆಲ್ಲರ ನೆಚ್ಚಿನ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಜನುಮದಿನ. ನಿಷ್ಕಾರಣದೊಲುಮೆ ಇವರ ಕಾವ್ಯ ಹಾಗೂ ಬದುಕು ಎರಡರ ಜೀವಾಳ. ‘ನಿನ್ನೊಲವಿನಂಬುಧಿಗೆ ನನ್ನೆದೆಯ ಕರೆಯ ತೊರೆ ಸಂತತವೂ ಹೊನಲಾಗಿ ಹರಿಯುತಿರಲಿ’.

ಸ್ವತ: ಉತ್ತಮ ಕವಿ, ಬರಹಗಾರ, ಕಾದಂಬರಿಕಾರರಾದ ಕವಿಯ ಪುತ್ರರೂ ಆದ ಡಾ.ಶಿವ ಪ್ರಸಾದ್ ಅವರು ತಮ್ಮ ತಂದೆಯನ್ನೂ, ತಂದೆಯೊಳಗಿನ ಕವಿಯನ್ನೂ, ಕವಿಯೊಳಗಿನ ಅಪ್ಪಟ ಮಾನವತಾವಾದಿಯನ್ನೂ ನೆನೆಸಿಕೊಂಡು ತಮ್ಮ ಭಾವಗಂಗೆಯನ್ನು ಹರಿಯಬಿಟ್ಟಿದ್ದಾರೆ. ಅವರು ಈ ಹಿಂದೆಯೂ ಅನಿವಾಸಿಯಲ್ಲಿ ಬಾಲ್ಯದ ನೆನಪುಗಳು ಸರಣಿಯಲ್ಲಿ ತಮ್ಮ ತಂದೆಯವರ  ನೆನಪುಗಳನ್ನು ಆತ್ಮೀಯವಾಗಿ ಹಂಚಿಕೊಂಡಿದ್ದರು. ಅವೆಲ್ಲ ಒಟ್ಟುಗೂಡಿ ಪುಸ್ತಕ ರೂಪದಲ್ಲಿ ಹೊರಬರಲೆಂಬುದು  ಅನಿವಾಸಿಗಳ ಆಶಯ ಹಾಗೂ ಆಗ್ರಹ.

ಒಳ್ಳೆಯ ನೃತ್ಯಪಟುವಾದ ಡಾ.ಸುಮನಾ.ನಾರಾಯಣ ಅವರು ಚಿಕ್ಕಂದಿನಿಂದಲೂ ತಾವು ಅದ್ಹೇಗೆ ಜಿ.ಎಸ್.ಎಸ್.ಹಾಡಿನ ಮೋಡಿಗೆ  ಸಿಕ್ಕಿದ್ದರೆಂಬುದನ್ನುಮತ್ತು ತಮ್ಮ ನೃತ್ಯಗಳಿಗೆ ಕವಿಯ ಹಾಡುಗಳು ಹೇಗೆ ಹಿನ್ನೆಲೆಯಾಗಿ ಒದಗಿಬಂದವೆನ್ನುವುದನ್ನು ತುಂಬು ಅಭಿಮಾನದಿಂದ ಆಪ್ತವಾಗಿ ಹಂಚಿಕೊಂಡಿದ್ದಾರೆ.

ಉತ್ತಮ ಸಂಗೀತಗಾರರಾದ ಶ್ರೀಯುತ ಅರುಣ್ ಕುಕ್ಕೆಯವರು ಜಿ.ಎಸ್.ಎಸ್. ಅವರ ‘ಎಲ್ಲಿದೆ ಬೃಂದಾವನ’ ಎಂಬ ಅಪರೂಪದ ಭಾವಗೀತೆಯೊಂದನ್ನು ಭಾವದುಂಬಿ ಹಾಡಿದ್ದಾರೆ. ನೀವೆಲ್ಲ ಕುತೂಹಲದಿಂದ ಕಾಯುತ್ತಿದ್ದ  ಶಿವ್ ಮೇಟಿಯವರ ‘ಯಾರಿವಳು?’..ಕಥಾನಾಯಕಿಯ ರಹಸ್ಯಇವತ್ತಿನ   ಕೊನೆಯ ಕಂತಿನಲ್ಲಿ ಬಯಲಾಗುತ್ತದೆಯೇ? ಓದಿನೋಡಿ.

ಇಂದಿನ ಸಂಚಿಕೆಯನ್ನೂ ಅಂದಿನಂತೆಯೇ ಕುಳಿತು ಓದುವಿರೆಂಬ ವಿಶ್ವಾಸದಿಂದ , ನಿಮ್ಮ ಅನಿಸಿಕೆಗಳನ್ನು ಎದಿರು ನೋಡುತ್ತಿರುವೆ.

~ ಸಂಪಾದಕಿ

ಜಿ. ಎಸ್. ಎಸ್. ಅವರ ಬದುಕಿನ ವಿಶೇಷ ಮೌಲ್ಯಗಳು

ಒಬ್ಬ ಪ್ರಮುಖ ಲೇಖಕನ ಬದುಕಿನ ಧ್ಯೇಯವನ್ನು, ಮೌಲ್ಯಗಳನ್ನು, ಸಂದೇಶಗಳನ್ನು ಅರ್ಥಮಾಡಿಕೊಳ್ಳಲು ಅವರ ಆತ್ಮಕಥೆಯನ್ನು ಓದುವುದು ಅಗತ್ಯ. ಕನ್ನಡದ ಅನೇಕ ಸಾಹಿತಿಗಳು, ಗಣ್ಯರು ತಮ್ಮ ಆತ್ಮ ಕಥೆಯನ್ನು ಬರೆದುಕೊಂಡಿದ್ದಾರೆ. ಜಿ. ಎಸ್. ಎಸ್ ತಮ್ಮ ಆತ್ಮ ಕಥೆಯನ್ನು ಚತುರಂಗ ಎಂಬ ಶೀರ್ಷಿಕೆಯಲ್ಲಿ ನೂರು ಪುಟದ ಒಳಗೇ ಸಂಕ್ಷಿಪ್ತವಾಗಿ ಬರೆದು ಅದನ್ನು ಅಸಮಗ್ರ ಆತ್ಮಕಥೆ ಎಂದು ಕರೆದಿದ್ದಾರೆ. ಅದರಲ್ಲಿ ಬಾಲ್ಯದ, ತಾರುಣ್ಯದ, ವೃತ್ತಿ ಜೀವನದ ಮತ್ತು ಇನ್ನು ಅನೇಕ ಸ್ವಾರಸ್ಯಕರವಾದ ಬಿಡಿ ನೆನಪುಗಳಿವೆ. ಅವರು ಏಕೆ ತಮ್ಮ ಈ ಬರಹವನ್ನು ಅಸಮಗ್ರಕಥೆ ಎಂದು ಕರೆದಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಹೊತ್ತಿಗೆಯ ಮುನ್ನುಡಿಯಲ್ಲಿ ಜಿ.ಎಸ್.ಎಸ್ ಹೇಳಿರುವ ಹಾಗೆ " ಒಬ್ಬ ಸೃಜನ ಶೀಲ ಲೇಖಕ ವಾಸ್ತವವಾಗಿ ತನ್ನ ಬರಹಗಳಲ್ಲೇ ತನ್ನ ನಿಜವಾದ ಆತ್ಮಕಥೆಯನ್ನು ಬರೆದುಕೊಂಡಿರುತ್ತಾನೆ" ಹೀಗಿರುವಾಗ ಮತ್ತೊಂದು ಆತ್ಮಕಥೆಯನ್ನು ಸುದೀರ್ಘವಾಗಿ ಬರೆಯುವ ಅಗತ್ಯ ಅವರಿಗೆ ಕಂಡುಬಂದಿಲ್ಲ. ಜಿ.ಎಸ್.ಎಸ್ ಅವರ ಬದುಕಿನ ಮೌಲ್ಯಗಳನ್ನು ಗ್ರಹಿಸಬೇಕಾದರೆ ಅವರ ಕವನಗಳತ್ತ ಗಮನ ಹರಿಸಬೇಕು. ನಾನು ಅವರ ಮಗನಾಗಿ ಅವರ ಹತ್ತಿರದ ಒಡನಾಟದಿಂದ ಅವರ ಬದುಕಿನ ಮೌಲ್ಯಗಳನ್ನು ಗುರುತಿಸುತ್ತಾ ಬಂದಿದ್ದೇನೆ ಮತ್ತು ಅವುಗಳನ್ನು ನನ್ನದಾಗಿಸಿಕೊಂಡಿದ್ದೇನೆ. ಹಲವು ದಶಕಗಳಿಂದ ಅವರ ಕವನಗಳನ್ನು ಓದುತ್ತ ಕೇಳುತ್ತ ಅದರಲ್ಲಿ ಅಡಗಿರುವ ಸಂದೇಶವನ್ನು ಮತ್ತೆ ಮತ್ತೆ ಅವಲೋಕಿಸಿದ್ದೇನೆ. ಅವರು ಈ ಮೌಲ್ಯಗಳನ್ನು ಬರಿ ಕವಿತೆಗೆ ಅಷ್ಟೇ ಸೀಮಿತಗೊಳಿಸದೆ ಅದನ್ನು ತಮ್ಮ ನಿಜಜೀವನದಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ ಎಂಬ ವಿಚಾರದಲ್ಲಿ ನನಗೆ ಸಂದೇಹವಿಲ್ಲ. ಒಬ್ಬ ಲೇಖಕನ ಬರಹ ಅವನ ಬದುಕಿನ ವಿಸ್ತರಣೆಯಷ್ಟೇ. ಲೇಖಕರ ಬರಹವನ್ನು ಮತ್ತು ಬದುಕನ್ನು ಬೇರ್ಪಡಿಸಿದೆ ಅದನ್ನು ಒಟ್ಟಾರೆಯಾಗಿ ಗ್ರಹಿಸಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯ. ನನಗೆ ತಿಳಿದ ಮಟ್ಟಿಗೆ ನನ್ನ  ತಂದೆ ಜಿ.ಎಸ್.ಎಸ್ ಅವರ ಬದುಕಿನ ಕೆಲವು ಘಟನೆಗಳನ್ನು ಉದಾಹರಿಸಿ ಅವರ ಮೌಲ್ಯಗಳನ್ನು ಕೃತಿಗಳಲ್ಲಿ ಕಾಣಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.

ಅನುಕಂಪೆ ಅಪ್ಪನ ವ್ಯಕ್ತಿತ್ವದ ವಿಶೇಷ ಲಕ್ಷಣ. ಬಡವರ ಬಗ್ಗೆ, ಶೋಷಿತರ ಬಗ್ಗೆ ಅವರಿಗೆ ತೀವ್ರ ಕಾಳಜಿ ಇದೆ. ಅವರು ತಮ್ಮ ಬಾಲ್ಯದಲ್ಲಿ, ವಿದ್ಯಾರ್ಥಿದೆಸೆಯಲ್ಲಿ ಬಡತನವನ್ನು ಅನುಭವಿಸಿದವರು. ಹಿಂದೊಮ್ಮೆ ಬಡತನದ ಬವಣೆಯಲ್ಲಿದ್ದು ಶಾಲೆಯಲ್ಲಿ ಓದುತ್ತಿದ್ದ ಒಬ್ಬ ಹುಡುಗಿ ತನ್ನ ಓದನ್ನು ಬಿಟ್ಟು ನಮ್ಮ ಮನೆಗೆಲಸಕ್ಕೆ ಬರುವ ಪರಿಸ್ಥಿತಿ ಅನಿವಾರ್ಯವಾಗಿತ್ತು. ಅವಳ ತಾಯಿ ತೀರಿಕೊಂಡಿದ್ದು, ಹಲವಾರು ಮಕ್ಕಳಿರುವ ಸಂಸಾರವನ್ನು ನಿಭಾಯಿಸಲು ಹೆಣಗುತ್ತಿದ್ದ ಅವಳ ತಂದೆ ಈ ಬಾಲಕಿಯನ್ನು ಶಾಲೆಯಿಂದ ಬಿಡಿಸಿ ಕೆಲಸಕ್ಕೆ ಇರಿಸಿರುವ ತೀರ್ಮಾನಕ್ಕೆ ಬಂದಿದ್ದ. ಸ್ವಲ್ಪ ವರ್ಷದ ನಂತರ ಈ ಹುಡುಗಿ ಹಾಗು ಹೀಗೂ ಪಿಯುಸಿ ಓದಿಕೊಂಡ ನಂತರ ತನಗೆ ಎಲ್ಲಾದರೂ ಕೆಲಸ ಕೊಡಿಸಬೇಕೆಂದು ಜಿ.ಎಸ್.ಎಸ್ ಅವರನ್ನು ಬೇಡಿಕೊಂಡಳು. ಅವಳ ಹಿನ್ನೆಲೆಯನ್ನು ತಿಳಿದಿದ್ದ ಅಪ್ಪ, ತಾವೇ ಮೈಸೂರಿಗೆ ಖುದ್ದಾಗಿ ಹೋಗಿ ಜೆ.ಎಸ್.ಎಸ್ ಮಠದ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಕಂಡು ಈ ಬಡ ಹುಡುಗಿಗೆ ಜೆ.ಎಸ್.ಎಸ್ ಸಂಸ್ಥೆಯಲ್ಲಿ ಕೆಲಸ ಕೊಡಿಸಲು ವಿನಂತಿಸಿಕೊಂಡರು. ಸ್ವಾಮಿಜಿಯವರು ಈ ಹುಡುಗಿಯನ್ನು ಕೆಲಸಕ್ಕೆ ತೆಗೆದುಕೊಳ್ಳುವ ಬದಲು ವೃತ್ತಿಪರ ಶಿಕ್ಷಣದ ಕಾಲೇಜಿನಲ್ಲಿ ಒಂದು ಕೋರ್ಸಿಗೆ ಸೀಟು ಕೊಡುವುದಾಗಿ ಆಶ್ವಾಸನೆ ನೀಡಿದರು. ಇವಳ ಶಿಕ್ಷಣದ ವೆಚ್ಚವನ್ನು ಅಪ್ಪ ಭರಿಸುವುದಾಗಿ ಒಪ್ಪಿಕೊಂಡರು, ಸ್ವಾಮೀಜಿ ಈ ಬಡಹುಡುಗಿಯ ಮೇಲೆ  ಕರುಣೆಯಿಟ್ಟು ಅವಳಿಗೆ ಹಾಸ್ಟೆಲಿನಲ್ಲಿ ಉಚಿತ ವ್ಯವಸ್ಥೆಗೆ ಅನುವುಮಾಡಿಕೊಟ್ಟರು. ಮುಂದಕ್ಕೆ ಈ ಹುಡುಗಿಗೆ ಒಳ್ಳೆ ಕೆಲಸ ಸಿಕ್ಕಿತ್ತು, ಅವಳ ಮದುವೆಯೂ ಆಯಿತು. ಇದಾದ ಹತ್ತಾರು ವರುಷಗಳ ನಂತರ ಅಪ್ಪ ಮತ್ತು ಜೆ.ಎಸ್.ಎಸ್ ದೇಶಿಕೇಂದ್ರ ಸ್ವಾಮಿಗಳು ಯಾವುದೋ ಒಂದು ಸಮಾರಂಭದಲ್ಲಿ ಅತಿಥಿಗಳಾಗಿ ವೇದಿಕೆಯಲ್ಲಿ ಭೇಟಿಯಾದಾಗ ಈ ಹುಡುಗಿಯ ಕ್ಷೇಮವನ್ನು ಸ್ವಾಮೀಜಿಯವರು ವಿಚಾರಿಸಿಕೊಂಡರಂತೆ.  ಅಪ್ಪ, ಸ್ವಾಮೀಜಿಯವರಿಗೆ "ನೀವು ಅಸಂಖ್ಯಾತ ಕಾರುಬಾರುಗಳ ನಡುವೆ ಇಷ್ಟು ಸಣ್ಣ ವಿಚಾರವನ್ನು  ನೆನಪಿಟ್ಟುಕೊಂಡಿದ್ದೀರಲ್ಲ" ಎಂದಾಗ ಸ್ವಾಮಿಜಿ ನಕ್ಕು ಹೇಳಿದರಂತೆ; "ಯಾವುದೂ ಸಣ್ಣದಲ್ಲ"! ನಂತರದಲ್ಲಿ ಅಪ್ಪ ಈ ಪ್ರಸಂಗವನ್ನು ಕುರಿತಾದ ಲೇಖನವನ್ನು ಒಳಗೊಂಡಂತೆ "ಯಾವುದೂ ಸಣ್ಣದಲ್ಲ" ಎಂಬ ಪ್ರಬಂಧ ಸಂಕಲವನ್ನು ಹೊರತಂದರು. ನಮ್ಮ ಮನೆಯಲ್ಲಿ ಕಾರು ತೊಳೆಯಲು ಬರುತ್ತಿದ್ದ ಒಬ್ಬ ಬಡ ಮುಸ್ಲಿಂ ಯುವಕನಿಗೆ ಅಪ್ಪನ ಸಹಾಯದಿಂದ ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಕೆಲಸ ದೊರೆಯಿತು. ಅಂದಹಾಗೆ ಬಡತನದ ಕಷ್ಟದಲ್ಲಿದ್ದವರಿಗಷ್ಟೇ ಅಪ್ಪ ಶಿಫಾರಸ್ ಮಾಡುತ್ತಿದ್ದರು.  ಅನೂಕೂಲವಾಗಿರುವ ಎಷ್ಟೋ ಹತ್ತಿರದ ಮತ್ತು ದೂರದ ಬಳಗದವರು ಶಿಫಾರಸ್ ಕೇಳಿಕೊಂಡು ಬಂದರೆ ಅಪ್ಪ ಅದನ್ನು ಸಮ್ಮತಿಸುತ್ತಿರಲಿಲ್ಲ. ಮಕ್ಕಳಾದ ನಮಗೂ ಯಾವ ರೀತಿಯಲ್ಲೂ ಅಪ್ಪ ಶಿಫಾರಸ್ ಮಾಡಲಿಲ್ಲ. ಪ್ರತಿಭೆ ಮತ್ತು ಅರ್ಹತೆ ಅವರಿಗೆ ಬಹಳ ಮುಖ್ಯವಾಗಿತ್ತು ಆದರೆ ಹಿಂದುಳಿದವರಿಗೆ ಮೀಸಲಾತಿಯನ್ನು ಕೊಡುವುದು ಸಾಮಾಜಿಕ ನ್ಯಾಯ ಎಂದು ಭಾವಿಸಿದ್ದರು. ಮೀಸಲಾತಿಯನ್ನು ದುರುಪಯೋಗ ಪಡಿಸಿಕೊಂಡವರ ವಿಚಾರ ಇಲ್ಲಿ ಉಲ್ಲೇಖಿಸುತ್ತಿಲ್ಲ.

ಬಹಳ ಹಿಂದೆ ನಾವು ರಾಜು ಎಂಬ ನಾಯಿಯನ್ನು ಸಾಕಿಕೊಂಡಿದ್ದೇವು. ಅದರ ಬಗ್ಗೆ ಅಪ್ಪನಿಗೆ ವಿಶೇಷ ಕಾಳಜಿ. ನಾಯಿಗೆ ಊಟ ಹಾಕಿದ್ದೀಯಾ? ಎಂದು ಅಮ್ಮನನ್ನು ಪದೇ ಪದೇ ಕೇಳುತ್ತಿದ್ದರು. ಅವರ ಕಾಳಜಿ ನಾಯಿಗೂ ತಿಳಿದಿತ್ತು! ಊಟದ ಕೋಣೆಗೆ ಬಂದರೆ ಅದನ್ನು ಆಚೆಗೆ ಅಟ್ಟುತ್ತಿದ್ದ ನಮನ್ನು ಬಿಟ್ಟು ಅಪ್ಪನ ಕಾಲ ಬಳಿ ಬಂದು ರಾಜು ಕುಂಯ್ ಗುಟ್ಟುತ್ತಿದ್ದ. ಪ್ರತಿಯಾಗಿ ಅಪ್ಪನ ತಟ್ಟೆಯಿಂದ ಅವನಿಗೆ ರೊಟ್ಟಿ ಚಪಾತಿಯ ತುಣುಕುಗಳು ದೊರೆಯುತ್ತಿದ್ದವು. ಇದೊಂದು ತಿಂಡಿ ಪೋತ ಎಂದು ನಾವೆಲ್ಲಾ ದೂರುತ್ತಿದ್ದೆವು.  ನಮ್ಮ ಮನೆಯ ಪ್ರಾಣಿಯೂ ಅಪ್ಪನ ಅನುಕಂಪೆಗೆ ಪಾತ್ರವಾಗಿತ್ತು. ಮನೆ ಕೆಲಸದವರನ್ನು ಪ್ರೀತಿ ವಿಶ್ವಾಸ ಮತ್ತು ಗೌರವದಿಂದ ಅಪ್ಪ ಕಾಣುತ್ತಿದ್ದರು. ನನ್ನ ಅಣ್ಣ ಜಯದೇವ ಅಪ್ಪನ ಈ ಅನುಕಂಪೆಯ ಮೌಲ್ಯಗಳನ್ನು ಹೀರಿಕೊಂಡು ಮುಂದಕ್ಕೆ ಗಿರಿಜನರ, ಅನಾಥರ ದೀನಬಂಧುವಾದ. 

ಅಪ್ಪನ ಅನುಕಂಪೆಯನ್ನು ಅವರ ಕವನಗಳಲ್ಲಿ ಯಥೇಚ್ಛವಾಗಿ ಕಾಣಬಹುದು. ಕೆಳಗಿನ ಸಾಲುಗಳು ಅದಕ್ಕೆ ಸಾಕ್ಷಿಯಾಗಿದೆ;

"ದೀಪವಿರದ ದಾರಿಯಲ್ಲಿ ತಡವರಿಸುವ ನುಡಿಗಳೇ 
ಕಂಬನಿಗಳ ತಲಾತಲದಿ ನಂದುತಿರುವ ಕಿಡಿಗಳೇ 
ಉಸಿರ ನಿಡುವೆ ಹೆಸರ ಕೊಡುವೆ, ಬನ್ನಿ ನನ್ನ ಹೃದಯಕೆ"

ಈ ಕವನದಲ್ಲಿ  ತಲಾಂತರದಿಂದ ಶೋಷಣೆಗೊಂಡು ಕತ್ತಲಲ್ಲಿ ತಡವರಿಸುವ ,ಬಾಯಿಲ್ಲದೆ ಮೌನದಲ್ಲಿರುವ, ಜಲವಿಲ್ಲದೆ ಕಮರುತಿರುವ, ಬಿರು ಬಿಸಿಲಿನ ತುಳಿತದಲ್ಲಿ ಸೊರಗಿರುವ, ಹೆಸರಿಲ್ಲದ ಜನರಿಗೆ ಅಸ್ತಿತ್ವವನ್ನು ನೀಡಿ ಉಸಿರನ್ನು ಕೊಡುವ ಕವಿಯ ಅನುಕಂಪೆ ಬಹಳ ಸುಂದರವಾಗಿ ಮೂಡಿದೆ. 

 ಅಪ್ಪ ಬರೆದ ಇನ್ನೊಂದು ಕವನ ‘ಯಾವಹಾಡ ಹಾಡಲಿ’ ಬಹಳ ಜನಪ್ರಿಯ ಭಾವ ಗೀತಯೂ ಆಗಿದೆ. ಅದರ ಕೆಲ ಸಾಲುಗಳು ಹೀಗಿವೆ;

“ಯಾವ ಹಾಡ ಹಾಡಲಿ 
ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲಿ 
ಸುತ್ತ ಮುತ್ತ ಮನೆಮಠಗಳು ಹೊತ್ತಿಕೊಂಡು ಉರಿಯುವಲ್ಲಿ   
ಸೋತು ಮೂಕವಾದ ಬದುಕು ನಿಟ್ಟುಸಿರೊಳು ತೇಲುವಲ್ಲಿ 
ಯಾವ ಹಾಡ ಹಾಡಲಿ 

ಬರಿ ಮಾತಿನ ಜಾಲದಲ್ಲಿ, ವಂಚನೆಗಳ ಸಂಚಿನಲ್ಲಿ, ಶೋಷಣೆಗಳ ಶೂಲದಲ್ಲಿ, ಹಸಿದ ಹೊಟ್ಟೆ ನರಳುವಲ್ಲಿ, ಇರುವ ಕನಸು ಸೀಯುವಲ್ಲಿ, ಕುರುಡು ಪಯಣ ಸಾಗುವಲ್ಲಿ ಯಾವ ಹಾಡ ಹಾಡಲಿ? ಅಂತ ಕವಿ ಮರುಗುತ್ತಾರೆ. ಈ ಹಾಡನ್ನು ನಮ್ಮ ಮನೆಗೆ ಬಂದು ಹಲವಾರು ಸಾರಿ ಹಾಡಿದ ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಮ್ಮ ಕಣ್ಣುಗಳಲ್ಲಿ ನೀರು ಬರುವಂತೆ ಹಾಡಿ ಕೊನೆಗೆ ಅವರೇ ಭಾವುಕರಾಗಿ ಎಷ್ಟೋ ಸಾರಿ ಅತ್ತುಬಿಡುತ್ತಿದ್ದರು. ಒಬ್ಬ ಕವಿ ತನ್ನ ಕವಿತೆಯಲ್ಲಿ ಬರಿ ಪ್ರೀತಿ, ಪ್ರೇಮ, ನಿಸರ್ಗ ಇದನ್ನಷ್ಟೇ ವರ್ಣಿಸಿದರೆ ಸಾಲದು ಅವನಿಗೆ ಸಾಮಾಜಿಕ ವಿಚಾರಗಳ ಬಗ್ಗೆ ಕಾಳಜಿ ಇರಬೇಕು ಎಂದು ನನ್ನ ಹತ್ತಿರ ಅವರು ಹೇಳಿದ್ದುಂಟು.  

ಮಾಡುವ ಕೆಲಸದಲ್ಲಿ ಅಪ್ಪನಿಗೆ ಬಹಳ ಶ್ರದ್ಧೆ. ತಮ್ಮ ಒಂದು ಕಾರು ತೊಳೆಯುವ ಸಣ್ಣ ಕೆಲಸದಿಂದ ಹಿಡಿದು ತಮ್ಮ ಪ್ರೊಫೆಸ್ಸರ್ ಹುದ್ದೆಯವರೆಗೆ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಅವರು ಎಂಎ ವಿದ್ಯಾರ್ಥಿಗಳಿಗೆ ಪಾಠಮಾಡುವ ಮುನ್ನ ಸಾಕಷ್ಟು ತಯಾರಿಯನ್ನು ಮಾಡಿಕೊಂಡು ಅದಕ್ಕೆ ಬೇಕಾದ ಟಿಪ್ಪಣಿಗಳನ್ನು ಸಾರಾಂಶವನ್ನು ಸಣ್ಣ ಕಾಗದದಲ್ಲಿ ಪಟ್ಟಿಮಾಡಿಕೊಂಡು ಉಲ್ಲೇಖಿಸುತ್ತಾ ಪಾಠ ಹೇಳುತ್ತಿದ್ದರು. ಕೊಂಚ ತಡವಾಗಿ ಬಂದು, ಯಾವ ಸೃಜನಶೀಲತೆ ಇಲ್ಲದೆ, ಹೇಳಿದ್ದನ್ನೇ ಹೇಳುವ ಪ್ರೊಫೆಸ್ಸರ್ ಅವರಾಗಿರಲಿಲ್ಲ ಎಂದು ಅವರ ವಿದ್ಯಾರ್ಥಿಗಳು ಹೇಳುವುದನ್ನು ಕೇಳಿದ್ದೇನೆ. ಅವರು ಬರೆಯುತ್ತಿದ್ದ ಲೇಖನದ ಮೂಲ ಹಸ್ತಪ್ರತಿಯನ್ನು ನಾನು ಖುದ್ದಾಗಿ ಕಂಡಿದ್ದೇನೆ. ಅವರ ಮುದ್ದಾದ ಅಕ್ಷರಗಳು ಮಣಿ ಪೋಣಿಸಿದಂತೆ ಕಾಣುತ್ತಿದ್ದವು. ಅಲ್ಲಿ ತಿದ್ದುಪಡಿಗಳು ಕಾಟು ಹಾಕಿದ ಸಾಲುಗಳು ಇರುತ್ತಿರಲಿಲ್ಲ. ಅಲ್ಲಿ ಎಲ್ಲವೂ ಸ್ಪುಟವಾಗಿದ್ದು ಅವರ ಶ್ರದ್ಧೆಗೆ ಸಾಕ್ಷಿಯಾಗಿದ್ದವು. ಯಾವ ಕೆಲಸವನ್ನು ಕೈಗೆತ್ತಿಕೊಂಡರೂ
ಅದನ್ನು ಸಂಪೂರ್ಣವಾಗಿ ಮಾಡಿ ಮುಗಿಸುವವರೆಗೆ ಅವರಿಗೆ ಸಮಾಧಾನವಿರುತ್ತಿರಲಿಲ್ಲ. ಅಪ್ಪ ಸ್ಪರ್ಧೆಗಿಂತ ಶ್ರದ್ಧೆಗೆ ಹೆಚ್ಚು ಬೆಲೆನೀಡುತ್ತಿದರು. ಅವರಿಗೆ ತೋರ್ಪಡಿಕೆ, ಆಡಂಬರ ಮುಜುಗರದ ವಿಚಾರ. ಶ್ರದ್ಧೆ ಅವರ ಬದುಕನ್ನು ಪ್ರಚೋದಿಸಿದ ರೂಪಿಸಿದ ಶಕ್ತಿ ಎಂದು ಹೇಳಬಹುದು. ಒಂದು ಕಡೆ ಅವರೇ ಹೇಳಿದಂತೆ; “ಶ್ರದ್ಧೆಗೆ ನಿರಾಡಂಬರವೇ  ಇಷ್ಟವಾದರೆ ಸ್ಪರ್ಧೆಗೆ ಆಡಂಬರ ಅಟ್ಟ ಹಾಸಗಳೇ ಇಷ್ಟ, ಶ್ರದ್ಧೆ ಮುಗ್ಧವಾದರೆ ಸ್ಪರ್ಧೆ ಕುಟಿಲವಾದದ್ದು. ಸ್ಪರ್ಧೆಯ ಪಾಲಿಗೆ ಜಗತ್ತೆಲ್ಲ ರಣರಂಗ. ಪ್ರತಿಯೊಂದೂ, ಪ್ರತಿಯೊಬ್ಬರೂ ತನಗೆ ಪ್ರತಿಸ್ಪರ್ಧಿಯಾಗಿದ್ದರೆಂಬ ಭ್ರಮೆಯೇ ಅದಕ್ಕೆ ಪ್ರಚೋದಕ. ಎಲ್ಲರನ್ನೂ ಹಿಂದೆ ಹಾಕುವುದು ತಾನು ಮಾತ್ರ ಮುಂದುವರಿಯುವುದು ಹೇಗೆ ಎನ್ನುವುದೇ ಅದರ ಧ್ಯಾಸ
ಶ್ರದ್ಧೆಗೆ ಎಲ್ಲರೊಂದಿಗೆ ಸಹಯಾತ್ರಿಯಾಗುವುದಲ್ಲೇ ಆಸಕ್ತಿ ಮತ್ತು ಜಗತ್ತೆಲ್ಲಾ ಸ್ನೇಹರಂಗವೆಂಬ ವಿಶ್ವಾಸವಿದೆ. ಸ್ಪರ್ಧೆಗೆ ಸ್ವಾರ್ಥ ಮೂಲವಾದರೆ ಶ್ರದ್ಧೆಗೆ ಪರಾರ್ಥ ಪ್ರಿಯವಾದದ್ದು”. 

ಜಿ. ಎಸ್. ಎಸ್ ಅವರ ಯಶಸ್ವಿಯಾಗಿರುವ ಶಿಷ್ಯ ವರ್ಗವನ್ನು ಗಮನಿಸಿದಾಗ ಜಿ.ಎಸ್.ಎಸ್ ಹೇಗೆ ತಾವು ಬೆಳೆಯುವುದರ ಜೊತೆಗೆ ಎಲ್ಲರನ್ನು ಬೆಳೆಸಿದರು ಎಂಬ ವಿಚಾರ ತಿಳಿದು ಬರುತ್ತದೆ. ಅವರ ಹಲವಾರು ಶಿಷ್ಯರು ಅಪ್ಪನ ಎತ್ತರಕ್ಕೆ ಬೆಳೆದದ್ದು ಅವರಿಗೆ ಹೆಮ್ಮೆಯಾದ ವಿಷಯ ಎನ್ನುವುದನ್ನು ಮೇಲಿನ ಶ್ರದ್ಧೆ -ಸ್ಪರ್ಧೆಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಹಲವು ದಶಕಗಳ ಹಿಂದೆ ಕಿರಿಯ ಉದಯೋನ್ಮುಖ ಕವಿಗಳಾಗಿದ್ದ (ಇಂದು ಹನಿಗವನ ಖ್ಯಾತಿಯ) ಡುಂಡಿರಾಜ್ ಒಮ್ಮೆ ತಮ್ಮ ಪದ್ಯವನ್ನು ಒಂದು ಪತ್ರಿಕೆಯಲ್ಲಿ ಪ್ರಕಟಿಸಿದ್ದು ಅದನ್ನು ಓದಿದ ಜಿ.ಎಸ್.ಎಸ್ ಕೂಡಲೇ ಅವರಿಗೆ ಒಂದು ಪೋಸ್ಟ್ ಕಾರ್ಡಿನಲ್ಲಿ ಅವರನ್ನು ಪ್ರಶಂಸಿಸಿ ಮುಂದಕ್ಕೆ ಇನ್ನು ಹೆಚ್ಚಿನ ಕವನವನ್ನು ಬರೆಯುವಂತೆ ಪ್ರೋತ್ಸಾಹಿಸಿದ್ದರೆಂದು ಡುಂಡಿ ರಾಜರು ನನಗೆ ತಿಳಿಸಿದರು. ಹಲವಾರು ಯುವ ಲೇಖಕ ಲೇಖಕಿಯರಿಗೆ ಅಪ್ಪ ಮೆಚ್ಚುಗೆಯನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಅಪ್ಪ ನಡೆಸುತ್ತಿದ್ದ ಸೆಂಟ್ರಲ್ ಕಾಲೇಜಿನ ಅನೇಕ ವಿಚಾರ ಸಂಕಿರಣಗಳ ವೇದಿಕೆಯಲ್ಲಿ ತಮ್ಮ ಶಿಷ್ಯರಿಗೆ ಮತ್ತು ಇತರ ಯುವ ಪ್ರತಿಭೆಗಳಿಗೆ ಅವಕಾಶ ನೀಡಿ ಅವರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿದ್ದಾರೆ ಎಂದು ನಾನು ಕೇಳಿದ್ದೇನೆ. ಅವರು ಕಿರಿಯ ಸಾಹಿತ್ಯ ಮಿತ್ರರೊಂದಿಗೆ ಅನ್ಯೋನ್ಯವಾಗಿ ಸಾಹಿತ್ಯ ಸಂವಾದಕ್ಕೆ, ಚರ್ಚೆಗೆ ತೊಡಗಿಸಿಕೊಳ್ಳುತ್ತಿದ್ದರು ಎಂಬ ವಿಚಾರವನ್ನು ಖ್ಯಾತ ವಿಮರ್ಶಕರಾದ ಟಿ.ಪಿ ಅಶೋಕ್ ಅವರಿಂದ ತಿಳಿದೆ.  

ಸ್ಪರ್ಧೆಗೆ ಬದುಕೇ ರಣರಂಗವಾದರೆ, ಶ್ರದ್ಧೆಗೆ ಬದುಕು ಸ್ನೇಹರಂಗ, ಈ ಮೇಲಿನ ಜಿ.ಎಸ್.ಎಸ್ ಸಂದೇಶವನ್ನು ಇಂದಿನ ಬದುಕಿನ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ. ನಾನು, ನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ಧರ್ಮ ಶ್ರೇಷ್ಠವೆಂಬ ಸ್ಪರ್ಧೆಗೆ ಇಳಿದರೆ ಅದು ರಣರಂಗವಾಗಿ ಸಂಭವಿಸುವುದರಲ್ಲಿ ಸಂದೇಹವಿಲ್ಲ.  ಬದಲಿಗೆ ಎಲ್ಲರು ತಮ್ಮ ತಮ್ಮ ಕಾರ್ಯಗಳನ್ನು ಶ್ರದ್ಧೆ ,ಪ್ರೀತಿ, ವಿಶ್ವಾಸಗಳಿಂದ  ಮಾಡಿದರೆ ಬದುಕು ಒಂದು ಸ್ನೇಹ ರಂಗವಾಗಿ ಶಾಂತಿ ನಿಮ್ಮದಿಗಳು ಸಿಗುತ್ತದೆ. ಎಲ್ಲರು ಜತೆ ಜೊತೆಯಾಗಿ ಬೆಳೆಯಬಹುದು. 

ಅಪ್ಪ ಬಹಳ ಸ್ವಾಭಾಮಾನಿ. ಅವರಿಗೆ ಇತರರನ್ನು ಅವಲಂಬಿಸುವುದು ಸಲ್ಲದ ವಿಷಯ. ನಾನು ಇಂಗ್ಲೆಂಡಿನಲ್ಲಿ ನೆಲೆಸಿದ ಮೇಲೆ ಹಲವು ಬಾರಿ ಅವರನ್ನು ಆಹ್ವಾನಿಸಿ ಅವರ ಪ್ರಯಾಣದ ಏರ್ ಟಿಕೆಟ್ ಕೊಳ್ಳಲು ಮುಂದಾದಾಗ ಅದನ್ನು ಸ್ವೀಕರಿಸದೆ ತಾವೇ ಖರ್ಚುಹಾಕಿಕೊಂಡು ಬರುತ್ತೇನೆ ಎಂದು ಹಠ ಹಿಡಿಯುತ್ತಿದ್ದರು. ಒಂದೇ ಒಂದು ಬಾರಿ ಅವರಿಗೆ ಎಂಬತ್ತು ತುಂಬಿದಾಗ ನಾನು ಅವರಿಗೆ ಉಡುಗೊರೆಯಾಗಿ ಪ್ಯಾರಿಸ್ ಮತ್ತು ವಿಯನ್ನ ನಗರದ ಪ್ರವಾಸವನ್ನು ಸೂಚಿಸದಾಗ ಅವರು ನನ್ನ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಅನುಮತಿಸಿದರು. ಅಪ್ಪನಿಗೆ ಕೊನೆಯಲ್ಲಿ
ನರರೋಗ ಉಂಟಾಗಿ ನಡೆಯಲು ತೊಂದರೆಯಾದಾಗ ಅವರು ಇತರರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂತು. ಆ ಅವಲಂಬನೆ ಅವರಿಗೆ ಹಿತವಾಗಿರಲಿಲ್ಲ, ಬೇರೆ ದಾರಿಯೂ ಇರಲಿಲ್ಲ. ಅಪ್ಪನಿಗೆ ಪ್ರಾಮಾಣಿಕತೆ ಬಹಳ ಮೌಲಿಕವಾದದ್ದು. ಖಾಸಗಿ ವಿಷಯ ಮತ್ತು ಆಫೀಸ್ ವಿಷಯ ಎರಡೂ ಬೇರೆ ಬೇರೆ. ಕೆಲವೊಮ್ಮೆ ಇರುವ ಸವಲತ್ತುಗಳನ್ನು ಬಳಸಿಕೊಳ್ಳುವ ಆಸಕ್ತಿ ಇರಲಿಲ್ಲ. ಯಾವುದೇ ಕುರ್ಚಿ, ಅವಾರ್ಡ್ ಇತ್ಯಾದಿಗಳ ಹಿಂದೆ ಅವರು ಲಾಬಿ ಮಾಡಲಿಲ್ಲ. "ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ" ಎಂಬ ಒಂದು ನಿರ್ಲಿಪ್ತ ಮನೋಭಾವವಿದ್ದು ರಾಷ್ತ್ರ ಕವಿ, ಪಂಪ ಪ್ರಶಸ್ತಿ, ಮತ್ತು ಇನ್ನು ಅನೇಕ ಪ್ರಶಸ್ತಿಗಳೇ ಅವರನ್ನು ಹುಡುಕಿಕೊಂಡು ಬಂದವು ಎನ್ನಬಹುದು. "ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ” ಎಂಬ ಸಾಲುಗಳಲ್ಲಿ  ಅವರ ಶ್ರದ್ಧೆ ಪ್ರಾಮಾಣಿಕತೆಗಳನ್ನು ಗುರುತಿಸಬಹುದು.

ಅಪ್ಪನ ಬದುಕಿನಲ್ಲಿ ಸಮಯ ಪ್ರಜ್ಞೆ, ಶಿಸ್ತು, ಕ್ರಮ ಅವರಿಗೆ ಅತಿ ಮುಖ್ಯ. ಅವರು ನನಗೆ ಕೆಲವೊಮ್ಮೆ ಮಿಲಿಟರಿ ಕರ್ನಲ್ ಅಂತೆ ಕಾಣುತ್ತಿದ್ದರು. ಹೊತ್ತು ಹೊತ್ತಿಗೆ ಊಟ, ನಿದ್ರೆ, ಓದು ಅವರ ಆದ್ಯತೆಯಾಗಿತ್ತು. ಅವರನ್ನು ಭಾಷಣಕ್ಕೆಂದು ಅಥವಾ ಮುಖ್ಯ ಅತಿಥಿಯಾಗಿ ಆಹ್ವಾನಿಸಿದಾಗ ಕಾರ್ಯಕ್ರಮವನ್ನು ತಡಮಾಡದೆ ನಿಗದಿಯಾದ ವೇಳೆಗೆ ಶುರುಮಾಡಬೇಕೆಂದು ಸಂಘಟಿಕರಿಗೆ ಸೂಚಿಸುತ್ತಿದ್ದರು. ಈ ವಿಚಾರದಲ್ಲಿ ಲೋಪಗಳಾದರೆ ಅವರು ಸಹಿಸುತ್ತಿರಲಿಲ್ಲ. ಕೆಲವು ಕಾರ್ಯಕ್ರಮದ ವ್ಯವಸ್ಥಾಪಕರು ನಿರೀಕ್ಷೆಗಿಂತ ತೀರಾ ತಡವಾಗಿ ಕಾರು ಕಳುಹಿಸಿದಾಗ ಅಪ್ಪ ಇಷ್ಟು ತಡವಾದದ್ದರಿಂದ ತಾವು ಬರುವುದಿಲ್ಲವೆಂದು ಗಾಂಧೀಜಿಯ ರೀತಿಯಲ್ಲಿ ಹಠ ಹಿಡಿದು ಕೂರುತ್ತಿದ್ದರು. ಸಂಘಟಿಕರು ಇಂತಹ ಪರಿಸ್ಥಿತಿಯಲ್ಲಿ ಅಮ್ಮನನ್ನು "ನೀವು ಸ್ವಲ್ಪ  ಹೇಳಿ ಮೇಡಂ" ಎಂದು ಗೋಗರೆಯುತ್ತಿದ್ದರು. ಅಪ್ಪನಿಗೆ ಗರ್ವ ಇರಲಿಲ್ಲ ಬದಲಾಗಿ ಜನರ ಸಮಯ ಪ್ರಜ್ಞೆಯ ಬಗ್ಗೆ ಅಸಮಾಧಾನವಿತ್ತು ಎಂದು ಹೇಳಬಹುದು. ಅಪ್ಪನ ಪುಸ್ತಕಗಳನ್ನು ಪ್ರಕಾಶಕರು, ಪ್ರಿಂಟಿಂಗ್ ಪ್ರೆಸ್ ಕೆಲಸದವರು ಅಪ್ಪನ ನಿರೀಕ್ಷೆಗೆ ಸರಿಯಾಗಿ ಸಿದ್ಧ ಪಡಿಸದಿದ್ದರೆ ಅವರು ಚಡಪಡಿಸುತ್ತಿದ್ದರು, ಕೆಲವೊಮ್ಮೆ ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅಪ್ಪನ ಸಿಟ್ಟಿನಲ್ಲಿ ತಿರಸ್ಕಾರ ದುರುದ್ದೇಶಗಳು ಇರಲಿಲ್ಲ, ಅದು ಒಂದು ರೀತಿ ಜನರನ್ನು ತಿದ್ದುವ ಸದುದ್ದೇಶದ ಕೋಪ ಎನ್ನಬಹುದು. ಅವರು ಎಷ್ಟೇ ಸಿಟ್ಟಿಗೆದ್ದರು ಅಷ್ಟೇ ಬೇಗ ತಣ್ಣಗಾಗುತ್ತಿದ್ದರು, ತಮ್ಮ ಸಿಟ್ಟನ್ನು ಹೊಗೆಯಾಡಲು ಬಿಡುತ್ತಿರಲಿಲ್ಲ.  ಅಪ್ಪನ ಸಮಯ ಪ್ರಜ್ಞೆ ಕೆಲವು ನಿಧಾನಸ್ಥರಿಗೆ ಮತ್ತು ನಿರಾಸಕ್ತರಿಗೆ ಕಿರಿಕಿರಿ ಉಂಟು ಮಾಡಿರಬಹುದು.

ವೈಚಾರಿಕತೆ ಅಪ್ಪನ ಚಿಂತನೆಗಳಲ್ಲಿ, ಕಾವ್ಯದಲ್ಲಿ, ಬರಹದಲ್ಲಿ, ಅವರ ಬದುಕಿನಲ್ಲಿ ಎದ್ದು ತೋರುತ್ತದೆ.  ಅಪ್ಪ ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ಇದ್ದರೂ ಅಂಧ ಶ್ರದ್ಧೆ, ಮೂಢ ನಂಬಿಕೆಗೆ ಶರಣಾಗಲಿಲ್ಲ. ಜನ ಸಾಮಾನ್ಯರು ತಮ್ಮ ಸ್ವಾರ್ಥಕ್ಕಾಗಿ ದೇವರಿಗೆ ಮೊರೆ ಹೋಗುವುದು ಸಾಧಾರಣ. ಆದರೆ "ಶಕ್ತಿಯ ಕೊಡು ಶಕ್ತಿಯ ಕೊಡು ಹೇ ಪ್ರಭು,   ಸತ್ಯಕಾಗಿ  ನಿಲುವ ಛಲವ ದೀಪ್ತಿ ಗೊಳಿಸು ಎನ್ನೊಳು" ಎನ್ನುತ್ತಾ ದೇವರನ್ನು ಅವರು ಬೇಡುವುದು ಸತ್ಯಕಾಗಿ ನಿಲುವ ಸಹನಾ ಶಕ್ತಿಯನ್ನು! ಈ ಕವನ ಒಂದು ನಿರ್ಮಲ ಪ್ರಾರ್ಥನೆ.  

ಆಚಾರ, ಪೂಜೆ, ಸಂಪ್ರದಾಯ ಇವುಗಳಲ್ಲಿ ಅವರಿಗೆ ನಂಬಿಕೆಯಿರಲಿಲ್ಲ. ಈ ಒಂದು ಹಿನ್ನೆಲೆಯಲ್ಲಿ ಅವರು "ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಎಂದು ಬರೆಯುತ್ತಾರೆ. ಅದು ನಾಸ್ತಿಕ ವಾದವಲ್ಲ. ದೇವಸ್ಥಾನದ ನಿರಾಕರಣೆಯೇ ಹೊರತು ದೇವರ ನಿರಾಕರಣೆಯಲ್ಲ. ದೇವರ ಹೆಸರಲ್ಲಿ ನಡೆಯುವ ವ್ಯಾಪಾರ ಶೋಷಣೆ ಇವುಗಳನ್ನು ಕಂಡು "ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೇ" ಎಂದು ಹೇಳುತ್ತಾರೆ.  ಅವರು ಶರಣರ ವಚನಗಳಲ್ಲಿಯ ಸಾಮಾಜಿಕ ವಿಚಾರಗಳ ಬಗ್ಗೆ ಅದರಲ್ಲೂ ವೈಚಾರಿಕತೆಯನ್ನು ಪ್ರತಿಪಾದಿಸುವ ವಚನಗಳನ್ನು ಹಲವಾರು ವೇದಿಕೆಗಳಲ್ಲಿ ವ್ಯಾಖ್ಯಾನಿಸಿದ್ದಾರೆ. 

“ಪ್ರೀತಿ ಕರುಣೆ ಸ್ನೇಹ ಮರುಕ ಇವೇ ನಮ್ಮ ದೇವರು 
ಕಂಬನಿಯೇ ಇಲ್ಲಿ ತೀರ್ಥ ನಿಟ್ಟುಸಿರೇ ಧೂಪವು 
ಬೇಡ ಬೇರೆ ದೇಗುಲ ಇಲ್ಲಿ ಎಲ್ಲ ನಿರ್ಮಲ” 

ಎಂಬ ಅವರ ಕವನದ ಸಾಲುಗಳಲ್ಲಿ ಅವರ ದೇವರ ಪರಿಕಲ್ಪನೆಯನ್ನು ತಿಳಿಸಿದ್ದಾರೆ. ಅವರ ಅನೇಕ ಚಿಂತನೆಗಳನ್ನು ಒಳಗೊಂಡ ‘ಗಂಗೆಯ ಶಿಖರಗಳಲ್ಲಿ’ ಎಂಬ ಪ್ರವಾಸ ಕಥನದಲ್ಲಿ ಗಂಗೆಯ ಬಗ್ಗೆ ಜನಕ್ಕಿರುವ ಗಾಢವಾದ ನಂಬಿಕೆಯ ಬಗ್ಗೆ ಬರೆಯುತ್ತ "ಈ ಎಲ್ಲ ನಂಬಿಕೆಗಳನ್ನು ಒಂದು ಹಂತದಲ್ಲಿ ಮೆಚ್ಚಿಕೊಳ್ಳ ಬಹುದಾದರೂ ಅವುಗಳಿಂದ ಆಗುವ ಅಪಾಯವನ್ನು ಕಡೆಗಣಿಸುವುದು ಒಳ್ಳೆಯದಲ್ಲ. ಗಂಗೆಯಲ್ಲಿ ಸ್ನಾನ ಮಾಡಿದರೆ ಸಮಸ್ತ ಪಾಪಗಳು ಪರಿಹಾರವಾಗುತ್ತವೆ ಎಂಬ ಪುರಾಣದ ಮಾತನ್ನು ನಂಬಿಕೊಂಡು ಬದುಕಿನುದ್ದಕ್ಕೂ ಮಾಡಬಾರದ್ದನ್ನು ಸಲೀಸಾಗಿ ಮಾಡಿದರೆ ಆಶ್ಚರ್ಯವೇನಿಲ್ಲ" ಎಂದು ಹೇಳುತ್ತಾರೆ.  ಇದನ್ನು ಮುಂದಕ್ಕೆ ವಿಸ್ತರಿಸಿ "ವಿಚಾರ ಮಾಡುವ ತಲೆಗಳಿಗಿಂತ ಭಜನೆ ಮಾಡುವ ಬಾಯಿಗಳೇ ಹೆಚ್ಚಾಗಿರುವ ಈ ದೇಶದಲ್ಲಿ ಏನು ಮಾಡಿದರೂ ಹಳೆಯ ನಂಬಿಕೆಗಳದ್ದೇ ಮೇಲುಗೈ" ಎನ್ನುತ್ತಾರೆ. ಜಿ.ಎಸ್. ಎಸ್ ಈ ಮಾತುಗಳನ್ನು ಹೇಳಿ ಮೂರು ದಶಕಗಳಾಗಿವೆ. ನಾನು ಕಂಡಂತೆ ವೈಜ್ಞಾನಿಕವಾಗಿ ಭಾರತ ಮುನ್ನಡೆದಿದ್ದರೂ ಜನರು ಅವೈಚಾರಿಕ ಮನೋಭಾವಗಳನ್ನು ಪೋಷಿಸಿಕೊಂಡು ಬಂದಿದ್ದಾರೆ. ಧರ್ಮ ಪ್ರಚೋದಕರನ್ನು ಪ್ರಶ್ನಿಸಲು ಮುಂದಾದರೆ “ಜನರ ನಂಬಿಕೆ” ಎನ್ನುವ ಭಾವೋದ್ವೇಗ ಸಮರ್ಥನೆ ವೈಚಾರಿಕತೆಯನ್ನು ಮೂಲದಲ್ಲೇ ಧ್ವಂಸ ಮಾಡಿಬಿಡುತ್ತದೆ. ಶತಮಾನಗಳಿಂದಲೂ ಹೀಗೆ ಭಾರತದಲ್ಲಿ ನಂಬಿಕೆಗಳದ್ದೇ ಮೇಲುಗೈ! ನನಗೆ ತಿಳಿದಂತೆ ಅಪ್ಪ ಜಾತಿ ವಿರೋಧಿ. ಜಾತಿ ರಾಜಕೀಯದಿಂದ ಅವರು ದೂರ ಉಳಿದಿದ್ದರು. ಅಪ್ಪನ ಅಂತಿಮ ಸಂಸ್ಕಾರದಲ್ಲಿ ಜಮಾಯಿಸಿದ್ದ ಅಭಿಮಾನಿಗಳು "ಜಿ.ಎಸ್.ಎಸ್ ಮತ್ತೆ ಹುಟ್ಟಿ ಬನ್ನಿ, ಜಾತೀಯತೆ ತೊಲಗಲಿ ಮಾನವೀಯತೆ ಉಳಿಯಲಿ" ಎಂಬ ಹಾರೈಕೆಯ ವಿದಾಯವನ್ನು ಕೂಗಿ ಹೇಳಿದ್ದು ಹೃದಯ ಸ್ಪರ್ಶಿಯಾಗಿತ್ತು. 

ಅಪ್ಪ ಬದುಕನ್ನು ವಿಶೇಷವಾಗಿ ಪ್ರೀತಿಸಿದವರು, ಕನ್ನಡದ ವರ್ಡ್ಸ್ ವರ್ಥ್, ರೋಮ್ಯಾಂಟಿಕ್ ಕವಿ ಎಂದು ಗುರುತಿಸಲ್ಪಟ್ಟವರು. "ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ" ಹಣತೆ ಹಚ್ಚುತ್ತೇನೆ ಎನ್ನುವ ಕವಿಗೆ ಹಣತೆ ಉರಿಯುವವರೆಗೂ ಎಲ್ಲರೊಡನೆ ಪ್ರೀತಿ ಸ್ನೇಹ ವಿಶ್ವಾಸಗಳೊಂದಿಗೆ ಬಾಳುವ ಹಂಬಲ. ಹಣತೆ ಎಂಬ ಕವಿತೆಯ ಈ ಸಾಲು ಅವರ ಬದುಕಿನ ಪ್ರೀತಿಗೆ ಸಾಕ್ಷಿಯಾಗಿದೆ.  ಅಪ್ಪನ ಬದುಕಿನ ಮೌಲ್ಯಗಳು ಅವರ ಕಾಲಘಟ್ಟದ ಮೌಲ್ಯಗಳೂ ಆಗಿದ್ದವು. ಅವರ ಸಮಕಾಲೀನರು, ಗುರುಗಳು ಈ ಶ್ರದ್ಧೆ, ಶಿಸ್ತು, ಪ್ರಾಮಾಣಿಕತೆ, ಸಮಯ ಪ್ರಜ್ಞೆ, ಇವುಗಳಿಗೆ ಹೆಚ್ಚಿನ ಬೆಲೆ ನೀಡುತ್ತಿದ್ದರು. ಬಹುಶಃ ಇದು ದಕ್ಕಿದ್ದು ಇನ್ನೂರು ವರ್ಷಗಳ ಕಾಲದ ಬ್ರಿಟಿಷ್ ಆಳ್ವಿಕೆಯಿಂದ ಎಂದು ನನ್ನ ಊಹೆ. ಬ್ರಿಟನ್ನಿನಲ್ಲಿರುವ ಅನಿವಾಸಿ ಕನ್ನಡಿಗರ ಬದುಕಿನಲ್ಲಿ ಈ ಮೌಲ್ಯಗಳು ಹಾಸುಹೊಕ್ಕಾಗಿವೆ. ಜಿ.ಎಸ್.ಎಸ್ ಪರಿವಾರದಲ್ಲಿ ನನ್ನ ಹುಟ್ಟು ಆಕಸ್ಮಿಕ ಮತ್ತು ಅದು ನನ್ನ ಒಂದು ಸೌಭಾಗ್ಯವೆಂದು ನಾನು ಪರಿಗಣಿಸಿದ್ದೇನೆ. ಅಪ್ಪನ ಈ ಮೌಲ್ಯಗಳನ್ನು ಪ್ರಜ್ಞಾ ಪೂರ್ವಕವಾಗಿ ಮತ್ತು ಕೆಲವೊಮ್ಮೆ ಉಪಪ್ರಜ್ಞೆಯಲ್ಲಿ ಹೀರಿಕೊಂಡು ನನ್ನದಾಗಿಸಿಕೊಂಡಿದ್ದೇನೆ.   ಇವು ನನ್ನ ಬದುಕಿನ ಯಶಸ್ಸಿಗೆ ಸೂತ್ರವಾಗಿದ್ದು ನನ್ನ ವ್ಯಕ್ತಿತ್ವವನ್ನೂ ರೂಪಿಸಿವೆ. 

~ ಡಾ. ಜಿ.ಎಸ್. ಶಿವಪ್ರಸಾದ್

ಉಡುಗಣ ವೇಷ್ಟಿತ ಚಂದ್ರಸುಶೋಭಿತ

ಪರಿಚಯ ಸುಮನ ನಾರಾಯಣ್ -  ಹನುಮಂತನಗರ ಬಸವನಗುಡಿಯಲ್ಲಿ ಹುಟ್ಟಿ ಬೆಳೆದ ಪಕ್ಕಾ ಬೆಂಗಳೂರು ಸೌತ್ ಹುಡುಗಿ. ಸಧ್ಯ ನಾಟಿಂಗ್ಹ್ಯಾಮ್ ನಲ್ಲಿ  ಪತಿ ಡಾ ದಿವ್ಯತೇಜ ಮತ್ತು ಅವಳಿ ಮಕ್ಕಳೊಂದಿಗೆ  ವಾಸ. ವೃತ್ತಿಯಲ್ಲಿ ಪ್ರಸೂತಿ ತಜ್ಞೆ (Obstetrician) ಮತ್ತು ಭರತನಾಟ್ಯ ಕಲಾವಿದೆ.
ಎಂದಿನಂತೆ busy ಇದ್ದ  ಶನಿವಾರ. ರಾತ್ರಿ ಫೋನ್ ಟ್ರಿಂಣಿಸಿತು. ಗೌರಿ ಅವರಿಂದ ಮೆಸೇಜ್ ಹೀಗಿತ್ತು- "  ಫೆಬ್ರವರಿ ೭ ಕ್ಕೆ  ಡಾ. ಜಿ. ಎಸ್. ಎಸ್ ರವರ ಜನ್ಮದಿನ . ಇದಕ್ಕೆ  ನೀವು ಒಂದು ಲೇಖನ  ಬರೆದು ಕೊಡಬಹುದೇ?" ಇದನ್ನು ನೋಡಿ ಆಶ್ಚರ್ಯ ಮತ್ತು ಗಾಬರಿ ಒಟ್ಟಿಗೆ ಆಯಿತು....ಅಯ್ಯೋ ನಾನೇ!!! ಇವರೇನಾದ್ರೂ ತಪ್ಪು ನಂಬರಿಗೆ ಮೆಸೇಜ್ ಕಳುಹಿಸಿದ್ದಾರ ಅಂತ. ಆದರೆ ಅವರ gentle but  persistent ಪ್ರೋತ್ಸಾಹದ ಮಾತುಗಳಿಗೆ ಕಟ್ಟುಬಿದ್ದು, ನನ್ನ ಇಷ್ಟವಾದ ಕವಿಯ ಕೆಲ ಕವನಗಳು ಹಾಗು ಅದನ್ನು ನಾನು ಅರ್ಥಮಾಡಿಕೊಂಡ ಬಗೆ  ಹಾಗೆ ಕೆಲವನ್ನು ನೃತ್ಯಕ್ಕೆ ಅಳವಡಿಸಿಕೊಂಡು ಅನುಭವಿಸಿದ ಬಗೆ- ಇದನ್ನು ಬರೆಯುವ ಸಾಹಸ ಮಾಡಿರುತ್ತೇನೆ.  
ಬೆಂಗಳೂರಿನ  ಬಸವನಗುಡಿಯಲ್ಲಿ ಕಲೆ ಮತ್ತು ಸಾಹಿತ್ಯ ಪ್ರಿಯರ ಮನೆಯಲ್ಲಿ ಹುಟ್ಟಿ ಬೆಳೆದ ನಾನು ಚಿಕ್ಕಂದಿನಿಂದ  ಡಾ. ಜಿ.ಎಸ್.ಎಸ್ ರವರ ಕವನಗಳನ್ನ ಹಲವಾರು ಬಾರಿ ರೇಡಿಯೋ ಮತ್ತು ಟಿ.ವಿಯಲ್ಲಿ ಕೇಳಿದ್ದು, ನೋಡಿದ್ದು ಉಂಟು. ಆದರೆ ಮನಸ್ಸಿಗೆ ಮುಟ್ಟಿದ ಅನುಭವವೆಂದರೆ  ಅವರ ಉಡುಗಣ ವೇಷ್ಟಿತ ಕವನದ ನೃತ್ಯ. ಆಗ ನನಗೆ ಸುಮಾರು ೭ ಅಥವಾ ೮ ವರ್ಷ ಇದ್ದಿರಬಹುದು. ನಮ್ಮ ನೃತ್ಯ ಶಾಲೆಯ ಸೀನಿಯರ್ students ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮವೊಂದಕ್ಕೆ ಈ ಕವನದ ನೃತ್ಯ ಮಾಡಿದ್ದರು. ಅದರ ಅಭ್ಯಾಸ ಮತ್ತು Rehearsal  ಗಳಿಗೆ free audienceಆಗಿ ಕೂತಿದ್ದ ನೆನಪು!  ಶಿವನ ಪಾತ್ರಧಾರಿ ನನ್ನ favourite ಅಕ್ಕ (ಸೀನಿಯರ್).  ಶಿವನ ವರ್ಣಿಸುವ ಈ ಕವನದ ವಿಶಿಷ್ಟ ಸಾಲುಗಳು ಮತ್ತು  ಆಕೆಯ ಮನೋಜ್ಞ ಅಭಿನಯ ಮನಸ್ಸಿನಲ್ಲಿ ಅಚ್ಚಾಯ್ತು.  ಆದರೆ ಗಹನವಾದ ಈ  ಕವನವನ್ನ ಅರ್ಥ ಮಾಡಿಕೊಳ್ಳುವುದು ದೂರ, ಪೂರ್ಣ ಕವಿತೆಯನ್ನೂ ಸರಿಯಾಗಿ ಹೇಳಲು ಬಾರದ ನಾನು "ತಣ್ಣ ನೀರಿನಲಿ ಮಣ್ಣ ಧೂಳಿನಲಿ" ಅಂತ  ಹಾಡುತ್ತಿದ್ದುದನ್ನು ನೋಡಿ ಅಲ್ಲಿದ್ದ ಹಿರಿಯರೊಬ್ಬರು  ನನ್ನ ಕರೆದು "ಅದು ತಣ್ಣೀರು ಅಲ್ಲಮ್ಮ ಕಣ್ಣೀರು" ಅಂತ ತಿದ್ದಿದ್ದು ನೆನಪಿದೆ!  ಮುಂದೆ ಹೈ ಸ್ಕೂಲ್ಗೆ ಬಂದಾಗ ಈ ಕವಿತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಆ ದೇವನ dual characterisation- ವಿರೋಧಾಭಾಸವೆನಿಸುವ ಮೂರ್ತ ಮತ್ತು ಅಮೂರ್ತ ಸ್ವರೂಪವನ್ನು ಎಷ್ಟು ಚೆಂದವಾಗಿ ಚಿತ್ರಿಸಿದ್ದನ್ನು ಕಂಡು  ಬೆರಗಾದೆ. ಮುಂದೆ ಹಲವು ಬಾರಿ ನೃತ್ಯ ಸಂಯೋಜನೆ ಮಾಡಿ ಖುಷಿ ಪಟ್ಟೆ.
ನನಗೆ ಬಹಳ ಇಷ್ಟವಾದ ಇನ್ನೊಂದು ಕವಿತೆಯೆಂದರೆ "ಎಲ್ಲೊ ಹುಡುಕಿದೆ ಇಲ್ಲದ ದೇವರ." ಇದನ್ನು ಮೊದಲ ಬಾರಿ ಕೇಳಿದ್ದು, ಕಲಿತಿದ್ದು ನನ್ನ ಸೋದರತ್ತೆಯಿಂದ. ಇದರ ಸಾಲುಗಳು  ನನ್ನ ಮೇಲೆ  ಬಹಳಷ್ಟು ಪರಿಣಾಮ ಬೀರಿತು. ಇದನ್ನು ಹಾಡುವಾಗಲ್ಲೆಲ್ಲ ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರಚೋದಿಸುತ್ತದೆ. ನಮ್ಮ ಅಹಮ್ಮಿನ ಕೋಟೆ ಒಡೆಯಬೇಕು, ಆದಷ್ಟು ಹೊಂದಿಕೊಂಡು ಹೋಗಬೇಕು ಎಂದೆನಿಸದೆ ಇರಲಾರದು.
ಹೋದ ವರ್ಷ  ಡಾ. ಜಿ.ಎಸ್.ಎಸ್ ರವರ ೯೫ನೇ ಹುಟ್ಟು ಹಬ್ಬದ  ಪ್ರಯುಕ್ತ ನೆಡೆದ ಆನ್ಲೈನ್ ಸಮಾರಂಭಕ್ಕೆ,ಕವಿವರ್ಯರ  ಯಾವುದಾದರು ಭಾವಗೀತೆಗೆ ನೃತ್ಯ ಮಾಡೆಂದು ಡಾ. ಶಿವಪ್ರಸಾದ್ ರವರು  ಒಂದೆರಡು ಭಾವಗೀತೆಗಳ ಲಿಂಕ್ ಅನ್ನು ಕಳುಹಿಸಿದ್ದರು. ಅವುಗಳಲ್ಲಿ ನನ್ನ ಮನ ಸೆಳೆದದ್ದು ಶ್ರೀಮತಿ ರತ್ನಮಾಲಾ ಪ್ರಕಾಶ್ ರವರ ಸುಮಧುರ ಧ್ವನಿಯಲಿದ್ದ "ಯಾರವರು ಯಾರವರು"  ಹಾಡು. ಹಿಂದೆಂದೂ ಕೇಳದ ಈ  ಗೀತೆಯನ್ನು ನಾನು ಮೊದಲು  ಬಾರಿಗೆ ಕೇಳಿದ್ದು  ಕೆಲಸಕ್ಕೆ  (Leicester ) ಡ್ರೈವ್ ಮಾಡ್ಕೊಂಡು ಹೋಗುವಾಗ.  ಆಗ ನನಗನಿಸಿದ್ದು ಇದೊಂದು ಪ್ರೇಮ ಕವಿತೆ- ಒಬ್ಬ  ನಾಯಕಿ/ ನಾಯಕನೋ  ತನ್ನ ಪ್ರೇಯಸಿ/ಪ್ರಿಯಕರನ ಬಗ್ಗೆ ಹೇಳಿದಂತಿದೆ. ಕೆಲಸ ಮುಗಿಸಿ ವಾಪಸ್ಸು ಬರ್ತಾ ಕೇಳಿದಾಗ - ಇಲ್ಲ ಇದು ಒಬ್ಬ ತಾಯಿ ತನ್ನ ಜೀವನದ ಪುಟಗಳನ್ನ ತಿರುವಿದಂತಿದೆ ಅನ್ನಿಸಿತ್ತು. ಹಾಗೆ ಮತ್ತೊಮ್ಮೆ ಕೇಳಿದಾಗ ಇದು ಎಲ್ಲವನ್ನು ಬಿಟ್ಟು ಆಧ್ಯಾತ್ಮದ ಬಾಗಿಲ ಬಳಿ ನಿಂತವನ ಕವಿತೆಯಂತೆ ಭಾಸವಾಯ್ತು!  ಡಾ ಶಿವಪ್ರಸಾದ್ ಹೇಳಿದಂತೆ ಇದನ್ನು ಅರ್ಥ ಮಾಡಿಕೊಳ್ಳುವುದು ಓದುಗರಿಗೆ/ಕೇಳುಗರಿಗೆ ಬಿಟ್ಟಿದ್ದು.  ಹಾಗಾಗಿ ನನ್ನೆಲ್ಲಾ ಆನಿಸಿಕೆಗಳನ್ನ ಅಳವಡಿಸಿಕೊಂಡು   ಈ ಕವಿತೆ ಯನ್ನು ಒಂದು ಹೆಣ್ಣಿನ   ಬದುಕಿನಲ್ಲಿ  ಬರುವ "ಯಾರವರು" ಗಳನ್ನ  ಚಿತ್ರಿಸಿ ನರ್ತಿಸಿದ್ದು ಅದ್ಭುತ ಅನುಭವ.  ನಮ್ಮೊಳಗಿನ  ಕುತೂಹಲ ಕೆರಳಿಸಿ, ವೈಚಾರಿಕತೆ ಬೆಳಸಿ  ಹಾಗು ವಿಮರ್ಶಾ ಶಕ್ತಿಯನ್ನೂ ವೃದ್ಧಿಸುವುದು ಶ್ರೇಷ್ಠ ಕವಿ ಧರ್ಮವಲ್ಲವೆ?

ಹೀಗೆ ಹೇಳ್ತಾ ಹೋದರೆ ಜಿ.ಎಸ್. ಎಸ್ ರವರ ಕವಿತೆಗಳಿಗೇನು ಬರವೇ? 
ಶಿಶುಗೀತೆ ಎಳೆ ಬೆಳದಿಂಗಳಿಂದ ಹಿಡಿದು, ಮುಂಗಾರಿನ ಅಭಿಷೇಕವೋ,  ಎದೆ  ತುಂಬಿ ಹಾಡಿದ ಹಾಡೋ ಅಥವಾ ಆಧ್ಯಾತ್ಮದ ಎಲ್ಲೆ ಮೀರಿಸುವ ಕಾಣದ ಕಡಲಿಗೆ ನಮ್ಮನ್ನು ಕರೆದೊಯ್ಯಬಲ್ಲ ಈ ಶ್ರೇಷ್ಠ ಕವಿಪುಂಗವರಿಗೆ ಹೀಗೊಂದು ನಮನ. 
ಇವರ ಇನ್ನಷ್ಟು ಕವನಗಳನ್ನ ನೃತ್ಯಕ್ಕೆ ಅಳವಡಿಸುವ ಆಸೆ ಹೊತ್ತ

~ ಸುಮನ

ಎಲ್ಲಿದೆ ಬೃಂದಾವನ

ಶ್ರೀಯುತ ಅರುಣ್ ಕುಕ್ಕೆ ಅವರು ಕರ್ನಾಟಕೀ ಶಾಸ್ತ್ರೀಯ ಸಂಗೀತಗಾರರು ಭದ್ರಾವತಿ ಆಕಾಶವಾಣಿಯಲ್ಲಿ ಕೆಲಸ ಮಾಡಿದವರು.ಪ್ರಸ್ತುತ O2 ನಲ್ಲಿ ರೇಡಿಯೋ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳು-ದೊಡ್ಡವರಾದಿಯಾಗಿ ಆಸಕ್ತರಿಗೆ ಸಂಗೀತ ಪಾಠ ಹೇಳಿಕೊಡುತ್ತಾರೆ. ಕನ್ನಡ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆಗಳ ಬಗ್ಗೆ ಇವರಿಗೆ ಅಪರಿಮಿತ ಆಸಕ್ತಿ.


ಗೀತ ನಮನ – ಎಲ್ಲಿದೆ ಬೃಂದಾವನ
ಸಂಗೀತ ಸಂಯೋಜನೆ – ಶ್ರೀ ಪ್ರಸನ್ನ ವೆಂಕಟೇಶ

ಯಾರಿವಳು??(ವೊ ಕೌನ್ ಥಿ?) 3

ಫೋನಿನ ಮುಖಾಂತರ ಅವಳ ಬಗ್ಗೆ  ವಿಷಯವನ್ನು ಸಂಗ್ರಹಿಸಲು ಪ್ರಯತ್ನಿಸಿದೆ.ಆದರೆ ಸಾಧ್ಯವಾಗಲಿಲ್ಲ . ಏನೋ ಅರ್ಜೆಂಟ್  ಕೆಲಸ ಎಂದು ಮನೆಯಲ್ಲಿ ಸುಳ್ಳು ಹೇಳಿ ಇಂಡಿಯಾಗೆ ಹೋದೆ.
ಅವಳ ಅನ್ವೇಷಣೆಯಲ್ಲಿ  ಇನ್ನೊಮ್ಮೆ ಹಳ್ಳಿಗೆ  ಭೇಟಿಕೊಟ್ಟಿದ್ದಾಯಿತು . ಗುರ್ಜಿಯ ಮನೆಗೆ ಬೀಗ ಹಾಕಿತ್ತು.  ಆದರೆ ಊರ ಜನರಿಂದ ಅವಳ ವಿಷಯವೆಲ್ಲಾ ಗೊತ್ತಾಯಿತು .
ಅವಳು ಸ್ವಲ್ಪ ಸಮಯದ ನಂತರ ಬೆಳಗಾವಿಯಲ್ಲಿ ಖಾಸಗಿ  ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ತನ್ನ ಚಾಣಾಕ್ಷತನ ಮತ್ತು ಕರ್ತವ್ಯ ನಿಷ್ಠೆಯಿಂದ ಒಳ್ಳೆಯ ಹೆಸರನ್ನು ಗಳಿಸಿದ್ದಳು. ಹಾಗೆಯೇ ಕೆಲವು ವರ್ಷಗಳ ನಂತರ ಭಡ್ತಿ ದೊರೆತು  ಬೆಂಗಳೂರಿಗೆ ಬಂದಿದ್ದಳು. ಬೆಂಗಳೂರಿನ ಪರಿಸರ ಮತ್ತು ಉರುಳಿ ಹೋದ ಕಾಲ ಜೀವನದಲ್ಲಿ ಅವಳಿಗೆ ಒಳ್ಳೆಯ ಪಾಠವನ್ನೇ ಕಲಿಸಿದ್ದವು. ಸ್ತ್ರೀ ಸಮಾನತೆ  ಮತ್ತು ಸ್ವಾತಂತ್ರ್ಯದ ಬಗ್ಗೆ ತುಂಬಾ ಅರಿವಾಗಿತ್ತು . ಕಟ್ಟಿಕೊಂಡವನು ತನ್ನನ್ನು ಬಿಟ್ಟು ಇನ್ನೊಬ್ಬರೊಂದಿಗೆ ಹಾಯಾಗಿರುವಾಗ  ತಾನೇಕೆ ಹೀಗೆ ಬದುಕಬೇಕೆಂಬ ಪ್ರಶ್ನೆ ಹುಟ್ಟಿತ್ತು . ತನಗೂ  ಬದುಕಿದೆ, ಬಾಳುವ ಆಸೆಯಿದೆ ಎಂಬುದನ್ನು ಕಂಡುಕೊಂಡಿದ್ದಳು. ಮನೆಯಲ್ಲಿ ಯಾರಿಗೂ ಹೇಳದೆ ತಾನೇ ಕೋರ್ಟಿನ ಕಟ್ಟೆಯನ್ನು ಏರಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಳು. ಸ್ತ್ರೀ ಸಂಘಟನೆಗಳಲ್ಲಿ  ಭಾಗಿಯಾಗಿ ತನ್ನ ಧ್ವನಿಯನ್ನು ಎತ್ತಿದ್ದಳು. ಅಕ್ಕ ಪಕ್ಕದ  ಹಳ್ಳಿಗಲ್ಲಿ ತನ್ನಂತೆ ಅನ್ಯಾಯಕ್ಕೆ ಒಳಗಾದ ಸ್ತ್ರೀಯರಿಗೆ ಸಂಘಟನೆಗಳ ಮೂಲಕ ನ್ಯಾಯವನ್ನು ಕೊಡಿಸಲು ನೆರವಾಗಿದ್ದಳು . ಹಳ್ಳಿಯ ಮಣ್ಣಿನ ಬಣ್ಣವನ್ನು ಬದಲಿಸಿದ್ದಳು .
ಹಾಗೆಯೇ ಎಷ್ಟೋ ಗಂಡಸರೊಂದಿಗೆ ವೈರತ್ವವನ್ನೂ  ಬೆಳೆಸಿಕೊಂಡಿದ್ದಳು. ತಾನು ನಡೆಯುತ್ತಿರುವ ದಾರಿ ಅಪಾಯಕಾರಿಯೆಂದು , ಏನಾದರು ಪರಿವರ್ತನೆ ತರಬೇಕಾದರೆ ಇದನ್ನು ಎದುರಿಸುವುದು   ಅನಿವಾರ್ಯವೆಂಬುದರ ಅರಿವು ಅವಳಿಗಿತ್ತು .
ಟಾಟಾ ಸಂಘಟನೆಯು ಸ್ಕಾಟ್ಲೆಂಡಿನ ಸ್ಕಾಟಿಷ್ ಎನರ್ಜಿ್   ಫಾರ್ಮನೊಂದಿಗೆ ಒಪ್ಪಂದ ಮಾಡಿಕೊಂಡಿದೆ . ಸ್ಕಾಟಿಷ್ ಕೆಲಸಗಾರರು  ಭಾರತಕ್ಕೂ ಮತ್ತು ಅಲ್ಲಿಯವರೂ ಇಲ್ಲಿಗೆ ಬರುವದು  ಸಹಜವಾಗಿದೆ . ಹಾಗೆಯೇ ಅವಳಿಗೆ ಕೆಲಸದ ಸ್ಥಳದಲ್ಲಿ ಸ್ಕಾಟಿಷ್ ಹುಡುಗನೊಬ್ಬನ  ಪರಿಚಯವಾಗಿತ್ತು . ಪರಿಚಯ ಸ್ನೇಹವಾಗಿ , ಸ್ನೇಹ ಪ್ರೀತಿಯಾಗಿ ಪರಿವರ್ತನೆಗೊಂಡಿತ್ತು . ಮನೆಯಲ್ಲಿ ಯಾರಿಗೂ ಹೇಳದೆ ರೆಜಿಸ್ಟ್ರಾರ್  ಆಫೀಸಿನಲ್ಲಿ  ಅವನೊಂದಿಗೆ ಮದುವೆಯನ್ನು ಮಾಡಿಕೊಂಡಿದ್ದಳು . ಕೆಲವು ಸಮಯದ ನಂತರ ತಂದೆ ಮತ್ತು ಅಣ್ಣನಿಗೆ ಹೇಳಿದ್ದಳು . ಅಣ್ಣ ಕುಪಿತನಾಗಿ ಹೋಗಿದ್ದ ' ಕುಲ ಕೆಡಿಸಿದಳು ಮುಂಡೆ ' ಎಂದು ಬೈದುಕೊಂಡಿದ್ದ. ತಂದೆ ತುಂಬಾ ನೋವನ್ನು ಮಾಡಿಕೊಂಡು ಮಾತನಾಡುವದನ್ನೇ ನಿಲ್ಲಿಸಿ ಬಿಟ್ಟಿದ್ದರು. ಊರ   ಜನರಿಗೆಲ್ಲ ವಿಷಯ ಗೊತ್ತಾಗಿತ್ತು .
ಗುರ್ಜಿಯವರಿಗೆ ಹೊರಗೆ ಮುಖ ತೋರಿಸದಂತಾಗಿತ್ತು .
ಅಣ್ಣನೇ ಮುಂದಾಗಿ ಬೆಳಗಾವಿಯಲ್ಲಿದ್ದ  ಧಾರ್ಮಿಕ ಸಂಘಟನೆಗೆ ವಿಷಯವನ್ನು
ತಿಳಿಸಿದ್ದ , ಧರ್ಮಾಂತರ ಹೊಂದಿದ್ದಾಳೆಂದು ಪಿತೂರಿ ಮಾಡಿದ್ದ . ಅವಳಿಗೂ ವಿಷಯ ಗೊತ್ತಾಗಿತ್ತು. ಇದರ ಬಗ್ಗೆ ಅವಳು ಕಿಂಚಿತ್ತೂ ತಲೆ  ಕೆಡಿಸಿಕೊಳ್ಳಲಿಲ್ಲ . ಆದರೆ ಅಪಾಯ ಅಷ್ಟು ಬೇಗ  ಬರುತ್ತದೆ ಎಂಬುದರ ಅರಿವು ಅವಳಿಗೆ ಇರಲಿಲ್ಲ . ಅಚಾನಕಾಗಿ ಅದೊಂದು ದಿನ ಅವಳು ತನ್ನ ಗಂಡನೊಂದಿಗೆ  ಮಾಯವಾಗಿ ಬಿಟ್ಟಿದ್ದಳು, ಮತ್ತೆ  ಅವಳು  ಯಾರಿಗೂ ಕಾಣಿಸಿಕೊಳ್ಳಲೇ ಇಲ್ಲ . ಯಾರೋ ಅವರಿಬ್ಬರನ್ನು ಅಪಹರಿಸಿ ಕೊಲೆ ಮಾಡಿರುವರೆಂದು ಎಲ್ಲರ ಬಲವಾದ ನಂಬಿಕೆ ಹಾಗು ಧರ್ಮ  ಸಂಘಟನೆಯ ಕೈವಾಡ ಅದರಲ್ಲಿದೆಯೆಂದು ಎಲ್ಲರ ಊಹಾಪೋಹ. ವಿಷಯ ತಿಳಿದ ಗುರ್ಜಿ ಕುಸಿದು ಹೋಗಿದ್ದರು , ಊರನ್ನು  ಬಿಟ್ಟು ಬೆಳಗಾವಿಯಲ್ಲಿ ಮಗನೊಂದಿಗೆ ವಾಸಿಸಲು ತೊಡಗಿದ್ದರು. ರಘು ಇದ್ದ ಜಮೀನನ್ನು ಮಾರಿಬಿಟ್ಟಿದ್ದ ಆದರೆ ಮನೆಯನ್ನು ಮಾತ್ರ ಯಾರೂ ಕೊಂಡುಕೊಳ್ಳಲಿಲ್ಲ . ಮಂಜು ಭೂತವಾಗಿದ್ದಾಳೆಂದು  ಹಾಗು ಅಮಾವಾಸೆಯ ರಾತ್ರಿ ಮನೆಯ ಸುತ್ತ ತಿರಗುತ್ತಾಳೆಂದು ಹಳ್ಳಿಯ ಜನರ ಬಲವಾದ ನಂಬಿಕೆ . ವಿಷಯ ತಿಳಿದು ನನಗೆ ತುಂಬಾ ಬೇಜಾರಾಯಿತು . ಈ ಹಳ್ಳಿಗಳ ಮಣ್ಣನ್ನು ಬದಲಿಸಲು ಇನ್ನೂ ಸಾವಿರ ಮಂಜುಗಳ ಅವಶ್ಯಕತೆಯಿದೆ ಎಂದು ಅಂದುಕೊಂಡೆ . ಅವಳ ಧೈರ್ಯಕ್ಕೆ ಒಂದು ದೊಡ್ಡ ಸಲಾಮು ಹಾಕಿದೆ . ದೇಶದಲ್ಲಿ ಎಷ್ಟೊಂದು ಬದಲಾವಣೆ  ಆಗುತ್ತಿದ್ದರೂ ಹಳ್ಳಿಗಳಲ್ಲಿ ಇಂಥ ಸಮಸ್ಯೆಗಳು ಇನ್ನೂ ಬೇರು ಬಿಟ್ಟಿರುವದು ದುಃಖಕರ ಸಂಗತಿ ಎನಿಸಿತು. ನನ್ನ ಸಾಹಿತಿ ಗೆಳೆಯನೊಬ್ವನಿಗೆ ಅವಳ ಬಗ್ಗೆ ಕಥೆ ಬರೆಯಲು ಹೇಳಿದ್ದಕ್ಕೆ " ಇದೇನು ದೊಡ್ಡ ಘಟನೆಯಂತ ಕಥೆ ಬರೆಯುವದು , ಇಂಥ  ಘಟನೆಗಳು ಸರ್ವೇ ಸಾಮಾನ್ಯ , ಯಾರು ಈ ಕಥೆಗಳನ್ನು ಓದುತ್ತಾರೆ " ಎಂದು ಅಂದಿದ್ದ . ಅವನು ಹೇಳಿದ್ದು ನಿಜ  ಎನಿಸಿತು . ಇಂಥ  ಸಾವಿರಾರು ಹೆಣ್ಣುಗಳು ತಮ್ಮ ಕಥೆಯನ್ನು ತಾವೇ ಬರೆದುಕೊಂಡು ಒಂದು ದೊಡ್ಡ ಗ್ರಂಥವನ್ನೇ ಸೃಷ್ಟಿಸಿದ್ದಾರೆ , ಆ  ಪುಸ್ತಕದಲ್ಲಿ ಇವಳೂ ಒಂದು ಪುಟವಾಗಿ ಹೋಗಿರುವದು ಸತ್ಯ ಎಂದು ಅನಿಸಿತು.
ಯಾಕೋ ಗುರ್ಜಿಯನ್ನು ಭೇಟಿಯಾಗಲು  ಮನಸು ಬರಲಿಲ್ಲ . ಅವಳು ಈ ಲೋಕದಲ್ಲಿ ಇಲ್ಲದ್ದು ಮಾತ್ರ  ಖಚಿತವಾಗಿತ್ತು.
ಹಾಗಾದರೆ ನನಗೆ ಸ್ಕಾಟ್ಲೆಂಡಿನಲ್ಲಿ  ಭೇಟಿಯಾಗಿ ಮಾತನಾಡಿದ್ದು ಯಾರು ಎಂಬುದು ಮಾತ್ರ  ಯಕ್ಷಪ್ರಶ್ನೆಯೇ ಆಗಿತ್ತು . ಈ ವಿಷಯವನ್ನು ನನ್ನ ಹಳ್ಳಿಯ ಮಿತ್ರನೊಬ್ಬನಿಗೆ ಹೇಳಿದೆ . ಅವನು ಸುಸ್ತಾಗಿ ಹೋಗಿ ಅಂದ " ಏನಪ್ಪಾ ! ಅವಳ ಭೂತ ನೀನಿದ್ದ ಕಡೆಗೂ ಬಂದು ಬಿಟ್ಟಿತಾ? ಹುಷಾರಾಗಿರು,  ಹೆಣ್ಣು ಭೂತಗಳು  ತುಂಬಾ ಕೆಟ್ಟ " ಎಂದು ಭೂತಗಳಲ್ಲೂ ಲಿಂಗ ಭೇದವನ್ನು ತೋರಿಸಿದ್ದ. ಇವನ ನಂಬಿಕೆಗೆ  ಬೆಂಕಿ ಹಾಕಾ ಎಂದೆಂದುಕೊಂಡು ಸುಮ್ಮನಾದೆ.
ವಿಷಯ ನಮ್ಮಣ್ಣನಿಗೂ ಗೊತ್ತಾಗಿ ದೇವರಿಗೆ ಒಂದು ದೊಡ್ಡ ಪೂಜೆಯನ್ನೂ ಮಾಡಿಸಿದ್ದ , ಮಂತ್ರಿತ ದಾರವನ್ನು ಕೈಯ್ಯಲ್ಲಿ ಕಟ್ಟಿಕೊಳ್ಳಲು ಹೇಳಿದ್ದ . ಹೆಂಡತಿ ತುಂಬಾ ಚಿಂತಿತಳಾಗಿದ್ದಳು . ನನಗೆ ಭೂತ ಬಡಿದಿರುವದು ಖಚಿತ ಎಂದು ಅಂದುಕೊಂಡಿದ್ದಳು . ಗುಣಪಡಿಸಲು ದೇವರಿಗೆ  ಹತ್ತು ಸಾವಿರ ರೂಪಾಯಿಯನ್ನು ಹರಕೆಯ ರೂಪದದಲ್ಲಿ ಕೊಡುವದಾಗಿ ಬೇಡಿಕೊಂಡು ದೇವರಿಗೂ ಸಹ ಲಂಚವನ್ನು ಕೊಡಲು ಮುಂದಾಗಿದ್ದಳು .
ಸ್ಕಾಟ್ಲ್ಯಾಂಡಿಗೆ  ವಾಪಸ್ ಬಂದಾದ ಮೇಲೆ ಈ ವಿಷಯ ನನ್ನ ಪರಿವಾರದ ಆಪ್ತ ಗೆಳೆಯರಿಗೂ ಗೊತ್ತಾಯಿತು . ಮಾನಸಿಕ ರೋಗ ತಜ್ಞನೊಬ್ಬ ಹೇಳಿದ ' ನನಗೆ ಆಡಿಯೋ ವಿಜುವಲ್ ಹಾಲುಸಿನೇಶನ್  (ಭ್ರಮೆ )' ಇದೆ ಎಂದು ಹಾಗು ಚಿಕಿತ್ಸೆ ಬೇಕಿದೆಯೆಂದು . ಫಿಸಿಷಿಯನ್ ಒಬ್ಬ ಮೆದುಳಿನ MRI ಕೂಡ ಮಾಡಿಸು ಎಂದ . ಇನ್ನೊಬ್ಬ ನನಗೆ 'ಸಿಕ್ಸ್ತ್ ಸೆನ್ಸ್' ಇದೆ ಎಂದು  ಗೇಲಿಯನ್ನೂ ಮಾಡಿದ್ದ.
ಅವರವರು ಅವರವರ ಅನಿಸಿಕೆ ಕೊಡಲಿ ಬಿಡು ಎಂದು ಸುಮ್ಮನಾದೆ. ನನಗೆ ಗೊತ್ತಿತ್ತು  ನನಗೇನು ಆಗಿಲ್ಲವೆಂದು. ಭೂತ ಪ್ರೇತಗಳಲ್ಲಿ ನನಗೆ ಎಳ್ಳಷ್ಟೂ ನಂಬಿಕೆ  ಇಲ್ಲ .
ಹಾಗಾದರೆ ;
ಅವಳ್ಯಾರು ? ವೊ ಕೌನ್ ಥಿ ?
ನನ್ನ  ಅಂತರಂಗದಲ್ಲಿ ಸುಪ್ತವಾಗಿ  ಅಡಗಿದ್ದ  ಅವಳ  ಬಗೆಗಿನ ಭಾವನೆಗಳು ಅವಳ ರೂಪವಾಗಿ ಕಾಣಿಸಿಕೊಂಡು ನನಗೆ ಅವಳ ಕಥೆಯನ್ನು ಹೇಳಿದವು ಎಂದು ನಾನು ಭಾವಿಸಿದ್ದೇನೆ.
ನೀವೇನೆನ್ನುತ್ತೀರಿ?  
ನನಗೆ ಅವಳು ಮತ್ತೆ ಕಂಡಿಲ್ಲ, ಕಂಡರೆ ಮನಬಿಚ್ಚಿ ಇನ್ನಷ್ಟು ಮಾತನಾಡಬೇಕು  ಎಂದು ಅನಿಸುತ್ತದೆ 

ಮುಗಿಯಿತು (ಕಥೆಯಲ್ಲಿ ಮಾತ್ರ )

~ ಶಿವ ಮೇಟಿ