ಬೇಂದ್ರೆ – ೧೨೫

ಚಿತ್ರಕಲೆ: ಲಕ್ಷ್ಮೀನಾರಾಯಣ ಗುಡೂರ್

ಸಾಧನಕೇರಿಯ ಸಾಧಕ, ವರಕವಿ, ಕನ್ನಡದ ಟಾಗೋರ್, ರಸಋಷಿ … ಷೇಕ್ಸ್ ಪಿಯರ್ ಹೇಳಿದಂತೆ “What’s in a name? That which we call a rose by any other name would smell as sweet” (Romeo and Juliet) – ಯಾವ ಹೆಸರಿನಿಂದ ಕರೆದರೂ ನಮ್ಮ ಕಣ್ಣ ಮುಂದೆ ಬರುವುದು, ೮೦ರ ಹರೆಯದ ಉತ್ಸಾಹಿ ಮುಖದ, ಬೇಂದ್ರೆ ಅಜ್ಜನ ಮುಖವೇ; ನೆನಪಾಗುವುದು ಅವರ ಧಾರವಾಡದ ಭಾಷೆಯ ಸೊಗಡಿನ ಕವನಗಳೇ! “ಬಾರೋ ಸಾಧನಕೇರಿಗೆ” ಅಂದು ಕರೆ ಕೊಟ್ಟವರ ಹಿಂದೆ ನಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತಿದ್ದಾರೆ – ಗೌರಿ ಪ್ರಸನ್ನ, ಕೇಶವ ಕುಲಕರ್ಣಿ ಮತ್ತು ಅಮಿತಾ ರವಿಕಿರಣ ಅವರು, ನಮಗೆಲ್ಲ ಒಂದು ಮಹಾಚೇತನದ ಮರುನೆನಪು ಮಾಡಿಕೊಡಲು. ಅದೂ, ಬೇಂದ್ರೆಯವರ ೧೨೫ನೆಯ ಜಯಂತಿಯ ದಿನ. ಒಂದು ಜೀವನ, ಒಂದು ಕವನ, ಒಂದು ಕವಿಹೃದಯ, ಮತ್ತೊಂದಷ್ಟು ಗಾಯನದ ಝಲಕುಗಳೊಂದಿಗೆ ದ. ರಾ. ಬೇಂದ್ರೆಯವರ ನೆನಪು ಮಾಡಿಕೊಳ್ಳೋಣ. ಅಕ್ಷರಗಳ ಮಣ್ಣು ಹೊತ್ತು, ಶಬ್ದಗಳ ಇಟ್ಟಿಗೆಗಳನೊಟ್ಟಿ, ಭಾವಗಳ ಗಾರೆಯೆರೆದು ಕನ್ನಡಮ್ಮನಿಗೆ ನವೋದಯದ ಮಹಾಲಯವನ್ನು ಕಟ್ಟಿದ ಮಹಾನುಭಾವರಲ್ಲಿ ಒಬ್ಬರಾದ ವರಕವಿಗೆ ನಮನ ಹೇಳೋಣ, ಬನ್ನಿ. – ಎಲ್ಲೆನ್ ಗುಡೂರ್ (ಸಂ.)

****************************************************

ನಂ ನಮಸ್ಕಾರ ನಿಮಗ … (ಬೇಂದ್ರೆ ನುಡಿನಮನ)ಗೌರಿ ಪ್ರಸನ್ನ

‘ಬೇಂದ್ರೆ ಒಂದು ಬೆಂಕಿ. ಅದು ಶಾಖ ಕೊಡುತ್ತದೆ; ಬೆಳಕು ಕೊಡುತ್ತದೆ; ಪಾಕ ಮಾಡುತ್ತದೆ; ಪರಿಶುದ್ಧ ಪಾವನಗೊಳಿಸುತ್ತದೆ; ಉರಿದೆದ್ದರೆ ಸುಟ್ಟು ಭಸ್ಮವೂ ಮಾಡುತ್ತದೆ.’—ಹಿಂದೊಮ್ಮೆ ಕವಿಗೋಷ್ಠಿಯೊಂದರಲ್ಲಿ ಅಧ್ಯಕ್ಷರಾದ ಬೇಂದ್ರೆಯವರ ಪರಿಚಯ ಮಾಡಿಕೊಡುತ್ತ ಕನ್ನಡದ ಮತ್ತೊಬ್ಬ ಹಿರಿಯ ಕವಿ ವೀ.ಸಿ. ಅವರು ಹೇಳಿದ ಮಾತಿದು. ನಿಜ.. ಬೇಂದ್ರೆ ಒಬ್ಬ ವ್ಯಕ್ತಿಯಲ್ಲ; ಅದೊಂದು ಮಹಾನ್ ಶಕ್ತಿ.

 ‘’ಮಕ್ಕಳೊಳಾಡಿದಿ, ಹಕ್ಕ್ಯಾಗಿ ಹಾಡಿದಿ
 ಚಿಕ್ಕ್ಯಾಗಿ ನೋಡಿದಿ ಗುರುದೇವ।
 ಹಾಡಿ ಹಣ್ಣಾದಿ ನೀ ಜಗದ ಕಣ್ಣಾದಿ ನೀ
 ನಿನ್ಹಂಗ ಆಡಾಕ ನಿನ್ಹಂಗ ಹಾಡಾಕ 
 ಪಡೆದು ಬಂದವ ಬೇಕ ಗುರುದೇವಾ’’ 

ಅಂಬಿಕಾತನಯದತ್ತರು ಗುರುದೇವ ರವೀಂದ್ರನಾಥ ಠಾಕೂರರ ಕುರಿತಾಗಿ ತೆಗೆದ ಉದ್ಗಾರವಿದು.  ಅದೇ ಉದ್ಗಾರವನ್ನು ನಾವಿಂದು ಬೇಂದ್ರೆಯವರ ಬಗೆಗೂ ಮಾಡಿದರೇನೂ ಅತಿಶಯೋಕ್ತಿಯಿಲ್ಲ.  ಅವರ  ಹಾಡುಗಳನ್ನು ಕೇಳಲೂ ಪಡೆದುಬಂದಿರಬೇಕೆಂಬುದೇ ನನ್ನ ಅನಿಸಿಕೆ.  ‘ನುಡಿದು ಬೇಸತ್ತಾಗ, ದುಡಿ ದುಡಿದು ಸತ್ತಾಗ ಜನಕ ಹಿಗ್ಗಿನ ಹಾಡು ನೀಡಾಂವ..’ ಅಕ್ಷರಶ: ಸತ್ಯ.

‘’ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ. ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ” ಎನ್ನುತ್ತಾರೆ ಅಂಬಿಕಾತನಯದತ್ತರು.  ಪ್ರಕೃತಿಯ ಹಾಗೂ ಬದುಕಿನ ಸೌಂದರ್ಯವನ್ನು ಇಂಚಿಂಚಾಗಿ ತಾವೂ ಆಸ್ವಾದಿಸಿ, ಸಹೃದಯರಿಗೂ ಉಣ್ಣಿಸಿದವರು.  ಅವರ ಹಾಡುಗಳನ್ನು ಕೇಳುತ್ತಿದ್ದರೆ ನಾದದ ನದಿಯೊಂದು ನಡೆದ್ಹಂಗ.. ಹಾದಿ ತಪ್ಪಿಸಿಕೊಂಡ ಗುಂಗೀಯ ಹುಳದ ‘ಗುಯ್’ಗಾನದ್ಹಂಗ..

ಜೀವದ ರಸ ಹಿಂಡಿ ತುಂತುರು ಮಳೆಯಾಗಿ ತಂತೀಯ ತುಂಬೆಲ್ಲ ಸಿಡಿದ್ಹಂಗ.. ಗಲ್ಲ ಗಲ್ಲಕ ಹಚ್ಚಿ ನಲ್ಲನಲ್ಲೆಯರಿರುಳು ಗುಜುಗುಜು ಗುಲುಗುಲು ನುಡಿದ್ಹಂಗ… ಮನಸ್ಸು ಸೂಜಿ ಹಿಂದ ದಾರದ್ಹಾಂಗ, ಕೊಳ್ಳದೊಳಗ ಜಾರಿದ್ಹಂಗ ಅವರ ಹಿಂದಽ ಹೊರಟುಬಿಡುತ್ತದೆ.. ಹಿಂದಽ ನೋಡದಽ..ಯಾರಿಗೂ ಹೇಳದೇ ಹಾರಗುದರಿ ಬೆನ್ನ ಏರಿ ಸ್ವಾರರಾಗಿ ಕೂತು ಹಂಗ ದೂರ ದೂರ ಹೊರಟುಬಿಡುತ್ತೇವೆ ಅವರೊಡನೆ.. ಅವರ ಕಾವ್ಯದೊಡನೆ.   

ಇದೇ ಜನೆವರಿ ೩೧ ಕ್ಕೆ ವರಕವಿಯ ೧೨೫ನೆಯ ಜನುಮದಿನೋತ್ಸವ.. ನಾಡಿನಾದ್ಯಂತ ‘ಕವಿದಿನ’ದ ಸಂಭ್ರಮ.  ಬೇಂದ್ರೆಯವರ ಪೂಣ೯ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ – ದ. ರಾ. ಬೇಂದ್ರೆ.  ೧೮೮೬ ರ ಜನೆವರಿ ೩೧ ರಂದು ಧಾರವಾಡದಲ್ಲಿ ಜನಿಸಿದ ಇವರು ೧೯೧೩ರಲ್ಲಿ ತಮ್ಮ ಮೆಟ್ರಿಕ್ಯುಲೇಷನ್ ಮುಗಿಸಿ ಪುಣೆಯ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಮಾಡಿದರು.  ಕೆಲಕಾಲ ಅಧ್ಯಾಪಕ ವೃತ್ತಿ ಮಾಡಿ ನಂತರ ಎಂ.ಎ.ಪದವಿಯನ್ನು ಪೂರೈಸಿ ಸೊಲ್ಲಾಪುರದ ಕಾಲೇಜೊಂದರಲ್ಲಿ ೧೦-೧೨ ವರುಷಗಳ ಕಾಲ ಪ್ರಾಧ್ಯಪಕರಾಗಿದ್ದರು.  ಸಾಹಿತ್ಯ ರಚನೆ ಅವರ ಮೊದಲ ಒಲವು.  ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಸೂಯ೯ಪಾನ, ನಾದಲೀಲೆ, ನಾಕುತಂತಿ, ಕೃಷ್ಣಾಕುಮಾರಿ, ಸಖೀಗೀತ, ಗಂಗಾವತರಣ, ಹೃದಯಸಮುದ್ರ, ಅರಳು ಮರಳು, ಬಾ ಹತ್ತರ.. ಇತ್ಯಾದಿ ಹತ್ತು ಹಲವಾರು ಕವನಸಂಕಲನಗಳನ್ನು ರಚಿಸಿದ್ದು ಅವೀಗ ‘ಅಂಬಿಕಾತನಯದತ್ತರ ಸಮಗ್ರ ಕಾವ್ಯ’ ೬ ಸಂಪುಟಗಳಲ್ಲಿ ಲಭ್ಯವಿವೆ.  ಕಾಳಿದಾಸನ ಪ್ರಸಿದ್ಧ ಖಂಡಕಾವ್ಯ ‘ಮೇಘದೂತ’ವನ್ನೂ ಕನ್ನಡದ ಅವತರಣಿಕೆಗೆ ಒಳಪಡಿಸಿದ್ದು ಇವರ ಹೆಗ್ಗಳಿಕೆ. ‘ಅರಳು-ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಕಾಶೀವಿದ್ಯಾಪೀಠ ವಾರಣಾಸಿ, ಮೈಸೂರು ಹಾಗೂ ಕನಾ೯ಟಕ ವಿಶ್ವವಿದ್ಯಾಲಯಗಳ ಡಾಕ್ಟರೇಟ್; ‘ನಾಕು ತಂತಿ’ಗೆ ಸಾಹಿತ್ಯದ ಅತ್ಯೋನ್ನತ ಪ್ರಶಸ್ತಿ ‘ಜ್ಞಾನಪೀಠ’ ಇವರನ್ನರಸಿ ಬಂದ ಪ್ರಶಸ್ತಿಗಳು, ಗೌರವಾದರಗಳು.  ಅರವಿಂದರ ಅಧ್ಯಾತ್ಮ, ರವೀಂದ್ರರ ಸಾಹಿತ್ಯ, ಗಾಂಧೀಜಿಯವರ ಸತ್ಯ-ಅಹಿಂಸೆಗಳಂಥ ರಾಜಕೀಯ ತತ್ವಗಳಿಂದ ಬೇಂದ್ರೆ ಸಹಜವಾಗಿಯೇ ಪ್ರಭಾವಿತರಾಗಿದ್ದರು.  ಅವರು ಕಾವ್ಯವನ್ನೇ ಬದುಕಾಗಿಸಿಕೊಂಡರೋ ಅಥವಾ ಬದುಕನ್ನೇ ಕಾವ್ಯವಾಗಿಸಿದರೋ ಹೇಳುವುದು ಕಷ್ಟ.  ಬೇಂದ್ರೆ ಬದುಕು-ಬರಹಗಳಲ್ಲಿ ವ್ಯತ್ಯಾಸವಿರಲಿಲ್ಲ.  ‘ಬೆಂದ್ರ ಬೇಂದ್ರೆಯಾಗತಾನ’ ಅನ್ನುವ ಅವರ ಪ್ರಸಿದ್ಧ ಮಾತೊಂದಿದೆ.  ಆದರೆ ಖಂಡಿತ ಬೆಂದವರೆಲ್ಲ ಬೇಂದ್ರೆಯಾಗಲಾರರು.  ಆದರೆ ಬೇಂದ್ರೆ ಕಾವ್ಯ ನಮ್ಮನ್ನು ಬೇಯಿಸಿ ಹದ ಮಾಡುತ್ತದೆನ್ನುವುದರಲ್ಲಿ ಯಾವ ಸಂಶಯವಿಲ್ಲ.  ಈ ಕವಿಯ ಪದಗಳ ಗುಂಗು ಹತ್ತಿಬಿಟ್ಟರೆ ‘ತಾಳ್ಯಾಕ-ತಂತ್ಯಾಕ, ರಾಗದ ಹಂಗ್ಯಾಕ, ಕುಣಿಯೋಣು ಬಾರಾ ಕುಣಿಯೋಣು ಬಾ’ ಎಂದು ಮನ ಸಂತಸದಿಂದ ಹುಚ್ಚೆದ್ದು ಕುಣಿಯತೊಡಗುತ್ತದೆ.  ಇವರು ‘ಶಬ್ದ ಗಾರುಡಿಗ’ರು.  ಒಂದೇ ಶಬ್ದ ಹೊರಡಿಸಬಹುದಾದ ಹತ್ತು ಹಲವು ಅಥ೯ಗಳನ್ನು ಸಮಥ೯ವಾಗಿ, ನಾದಮಯವಾಗಿ ಬಳಸುವ ಇವರ ಚಮತ್ಕಾರ ಮೋಡಿ ಮಾಡುತ್ತದೆ.  ‘ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯವಾ’ ಹಾಡಿನ ಸಾಲುಗಳನ್ನು ನೋಡಿ..

“ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾವಾ.. ಖರೇ ಅಂತ ಕೈ ಮಾಡಿದರ ಹಿಡಿದ ಬಿಡವಾ”.. ಒಂದು ‘ಹಿಡಿ’ ಪದವನ್ನು ಎಷ್ಟೆಲ್ಲ ಅಥ೯ಗಳಲ್ಲಿ ಎಷ್ಟು ಸಹಜವಾಗಿ ಬಳಸಿಕೊಂಡಿದ್ದಾರೆಂದು ಅಚ್ಚರಿಯಾಗುತ್ತದೆ.

 ಇದು ಉಪ್ಪುನೀರ ಕಡಲಲ್ಲೋ ನಮ್ಮ ಒಡಲಲ್ಲೇ ಇದರ ನೆಲೆಯು।
 ಕಂಡವರಿಗಲ್ಲೋ ಕಂಡವರಿಗಷ್ಟೇ ತಿಳಿತಾದ ಇದರ ಬೆಲೆಯು।
 ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವುದು ಇದರ ಸೆಲೆಯು! 
 ಕಣ್ ಅರಳಿದಾಗ,ಕಣ್ ಹೊರಳಿದಾಗ ಹೊಳೆಯುವುದು ಇದರ ಕೆಳೆಯು॥ 

ಕಡಲಿರುವುದು ಬರೀ ಹೊರಗಲ್ಲ;  ನಮ್ಮೊಳಗೂ ಅನಂತ ಕಡಲಿದೆ.. ಭಾವಗಳ ಕಡಲದು. ಭಕ್ತಿಯ-ಶಕ್ತಿಯ, ಪಾರಮಾಥಿ೯ಕ ಕಡಲದು.  ಅದು ಕಂಡಕಂಡವರಿಗೆಲ್ಲ ಬೇಕಾಬಿಟ್ಟಿ ದೊರೆತುಬಿಡುವಂಥದ್ದಲ್ಲ;  ಅದರ ಬೆಲೆ ಏನೆಂಬುದು ಅದನ್ನು ಕಂಡವರಿಗಷ್ಟೇ ಗೊತ್ತು.  ಹಾಗೆಯೇ ಬೇಕುಬೇಕಾದಲ್ಲಿ ಸಿಕ್ಕಸಿಕ್ಕಲ್ಲೆಲ್ಲಾ ಅದರ ಸೆಲೆ ಒಡೆಯದು.  ಅಂತ:ಕರಣ ಒದ್ದೆಯಾಗಿ ಹೊರಚಿಮ್ಮುವ ಸೆಲೆ ಅದು. ಬೇಂದ್ರೆ ಕಾವ್ಯವೂ ಅಂತೆಯೇ.

ಅಧ್ಯಯನ ಬೇಂದ್ರೆಯವರ ಅವಿಭಾಜ್ಯ ಅಂಗ.  ಸಂಸ್ಕೃತ,ಕನ್ನಡ,ಇಂಗ್ಲೀಷ್‌ ಹಾಗೂ ಮರಾಠಿ ಸಾಹಿತ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದವರು.  ಇವರ ಮಾತೃಭಾಷೆ-ಮನೆಮಾತು ಮರಾಠಿ ಆದರೂ ಕನ್ನಡ ಭಾಷೆಯನ್ನು ಅವರು ಬಳಸಿಕೊಂಡ, ದುಡಿಸಿಕೊಂಡ ರೀತಿ ವಿಸ್ಮಯಕಾರಿಯಾದುದು.  ಅಚ್ಚಗನ್ನಡ, ಸಂಸ್ಕೃತ ಭೂಯಿಷ್ಟ ಕನ್ನಡ, ಹಳ್ಳಿಯ ಆಡುನುಡಿ, ಮಿಶ್ರಕನ್ನಡ.. ಎಲ್ಲವನ್ನೂ ತಮ್ಮ ಕವನಗಳಲ್ಲಿ ಬಳಸಿದ್ದೊಂದು ಅವರ ವೈಶಿಷ್ಟ್ಯ.  ಅಂತೆಯೇ ಅವರು ಬಳಸುವ ಛಂದಸ್ಸುಗಳು-ಅಲಂಕಾರಗಳೂ ಸಹ ಅಷ್ಟೇ ವೈವಿಧ್ಯಮಯ.  ಕವನದ ಭಾವಕ್ಕೆ ತಕ್ಕಂತೆ ಭಾಷೆ-ಛಂದಸ್ಸು-ಅಲಂಕಾರಗಳನ್ನು ಎರಕ ಹೊಯ್ಯುವುದು ಅವರಿಗೆ ಕರತಲಾಮಲಕವಾಗಿತ್ತು.  ಅವರಿಗೆ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಅದಮ್ಯ ಆಸಕ್ತಿ.ಮನೆಯಂಗಳದ ಮೊಗ್ಗಿನಿಂದ ಹಿಡಿದು ಬಾನಂಗಳದ ಚುಕ್ಕಿಯವರೆಗೆ ಎಲ್ಲವನ್ನೂ ಸೋಜಿಗದಿಂದ ಕಂಡು ಅರಿತು ಸಂತಸ ಪಡುವುದು ಅವರ ರೀತಿ.  ಸಾಂಖ್ಯಶಾಸ್ತ್ರ ಅವರ ನೆಚ್ಚಿನ ವಿಷಯ.  ಬಾಳೆಯ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ಹಾಲ್ದೆನೆಗಳಲ್ಲಿ, ನಿಮ್ಮ ಕಿರುಬೆರಳ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ.. ಎಲ್ಲೆಲ್ಲೂ ಲೆಕ್ಕಾಚಾರವಿದೆಯೆಂಬುದು ಅವರ ಅಭಿಪ್ರಾಯ.  ಸಂಖ್ಯೆಗಳೊಡನೆ ಆಟವೂ ಅವರಿಗೆ ಬಲು ಇಷ್ಟವಾಗಿತ್ತು.  (‘ಹತ್ತಂದರ ಹತ್ತು.. ಏಳಂದರ ಏಳು’.. ‘ಬಾಹತ್ತರ’) ಇತ್ಯಾದಿಗಳನ್ನು ಕಾವ್ಯಾಸಕ್ತರು ಗಮನಿಸಬಹುದು.  ಬೇಂದ್ರೆಯವರು ಕವನಗಳನ್ನು ಕಟ್ಟುವುದಿಲ್ಲ; ಅವರ ಕವನಗಳು ಹುಟ್ಟುತ್ತವೆ.ಬೇರೆಯದೇ ಲೋಕವನ್ನು ನಮ್ಮೆದಿರು ಅನಾವರಣಗೊಳಿಸುತ್ತವೆ.  ಗೊತ್ತೇ ಇರದ್ದನ್ನು ಫಕ್ಕನೇ ಹೊಳೆಯಿಸಿಬಿಡುತ್ತವೆ.  ಧನ್ಯತೆಯಲ್ಲಿ ಮೀಯಿಸಿಬಿಡುತ್ತವೆ.  ಅವರೇ ಹೇಳುವಂತೆ ‘ಕವಿತೆ ಎಲ್ಲರ ಮನೆಯಲ್ಲೂ ಬೆಳೆಯುವ ಹೀರೆ ಹೂವಲ್ಲ.  ಕೆಲವು ಜನರ ಮನಸ್ಸಿನ ಉದ್ಯಾನದಲ್ಲಿ ಅರಳುವ ಮಂದಾರ ಕುಸುಮ’.  ಅವರ ಕಾವ್ಯ ಘಮಘಮ ಘಮ್ಮಾಡಿಸುವ ಮಲ್ಲಿಗೆಯ ಹೂವು..  ತಾಯಿ ಅಂಬಿಕೆಯ ಉದರದ ಹೂವು.. ಕುಲುಕುಲು ನಗುವ ಬಸಿರ ಹೂವು.

ಬೇಂದ್ರೆಯವರದು ಉದ್ಭವ ಕಾವ್ಯ; ಅನುಭಾವ ಕಾವ್ಯ.  ಒಲವು ಅವರ ಕಾವ್ಯದ ಜೀವಾಳ.  ಸರಸ ಜನನ-ವಿರಸ ಮರಣ -ಸಮರಸವೇ ಜೀವನವೆಂದು ಸಹಬಾಳ್ವೆಯನ್ನು ಸಾರಿದ ಕಾವ್ಯ.  ಒಲವೇ ನಮ್ಮ ಬದುಕು ಎಂದು ನಂಬಿ ಅದಕೂ ಇದಕೂ ಎದಕೂ ಅದನ್ನೇ ಬಳಸಿಕೊಂಡವರು ಈ ವರಕವಿ.  ಪತಿ-ಪತ್ನಿಯ ಸಂಬಂಧದಲ್ಲಿ ಮೇಲುಕೀಳಿನ ತಾರತಮ್ಯವಿರದೇ ಸ್ನೇಹದ ಸೆಲೆಯಲ್ಲಿ, ಗೆಳೆತನದ ಸಲಿಗೆಯಲಿ ಸಖೀ-ಸಖಭಾವ ಇರಬೇಕೆಂಬುದೇ ಇವರ ‘ಸಖೀಗೀತ’ದ ಆಶಯ; ಅವರು ಕಂಡ ದಾಂಪತ್ಯದಶ೯ನ.  ಇದನ್ನೇ ನಾನು-ನೀನು-ಆನು-ತಾನು..(ನಾನು-ನೀನುವಿನ ದಾಂಪತ್ಯ, ಅದರಫಲವಾದ ಆನು, ಅವೆಲ್ಲವನ್ನೂ ಒಳಗೊಂಡ ತಾನು) ಇದರ ತತ್ವವನ್ನು ‘ನಾಕುತಂತಿ’ಯಲ್ಲಿ ವಿವರಿಸುತ್ತಾರೆ.  ‘ನಾಕುತಂತಿ’ ಕನ್ನಡಮ್ಮನ ಕಿರೀಟಕ್ಕೆ ಜ್ಞಾನಪೀಠದ ಮರಕತ ಮಣಿ ಕೂರಿಸಿದ ಕೃತಿ.  ನಾಕುತಂತಿಯಂಥ ಕೃತಿಯನ್ನು ಅಥೈ೯ಸಿಕೊಳ್ಳಲು ಕೇವಲ ಭಾಷಾಜ್ಞಾನ, ಶ್ಲೇಷೆಗಳು ಗೊತ್ತಿದ್ದರೆ ಸಾಲದು.  ಅಧ್ಯಾತ್ಮದ, ಭಾರತೀಯ ತತ್ವಶಾಸ್ತ್ರದ ಅಲ್ಪಸ್ವಲ್ಪ ಪರಿಚಯವಾದರೂ ಓದುಗನಿಗಿರಬೇಕು ಎಂಬುದು ನನ್ನ ಅನಿಸಿಕೆ.  ಆದರೆ ಇಂಥ ಗಾಢ ಚಿಂತನೆಯ ಕವಿಯ ಎಷ್ಟೋ ಹಾಡುಗಳು ಪುಟ್ಟ ಮಕ್ಕಳ ಬಾಯಲ್ಲಿ ಬಣ್ಣಬಣ್ಣದ ಪಾತರಗಿತ್ತಿಗಳಾಗಿ ಪಕ್ಕ ಬಿಚ್ಚಿಕೊಂಡು ಹಾರಾಡಿ ನಲಿಯುತ್ತವೆ;  ಅಕ್ಷರ ಜ್ಞಾನವಿಲ್ಲದ ಎಮ್ಮೆಕಾಯುವ ಹುಡುಗನ ಬಾಯಲ್ಲಿ ‘ಛಾದ ಜೋಡಿ ಚೂಡಾ’ಆಗುತ್ತವೆ.  ಬಲು ಸೋಜಿಗವೆನಿಸುತ್ತದೆಯಲ್ಲವೇ?

ಬೇಂದ್ರೆ ಕಾವ್ಯಕ್ಕೆ ಯಾವ ಋತುಮಾನಕ್ಕೂ ಚಿಗುರುವ ಚೈತನ್ಯವಿದೆ.  ಅದಕ್ಕೆಂದೇ ಬೆಳಗಿನಲ್ಲಿ ‘ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು’ಹೊರಡುತ್ತದೆ.  ಸಂಜೆ ‘ತಂಬುಲದ ತುಟಿಯ ತೋರಿ, ಮಲ್ಲಿಗೆಯ  ಮುಡಿದುಕೊಂಡು ಮೆಲ್ಲಗಾಗಿ’ ಬರುತ್ತದೆ.  ರಾಗರತಿಯಲ್ಲಿ ‘ಬಿದಿಗಿ ಚಂದ್ರನ ಚೊಗಚಿ ನಗೀಹೂ’ ಮೆಲ್ಲಗೆ ಮೂಡುತ್ತದೆ.  ರಾತ್ರಿ ‘ಅಕ್ಷಿನಿಮೀಲನ ಮಾಡದ ನಕ್ಷತ್ರದ ಗಣ ಗಗನದೆ’ ಹಾರುತ್ತದೆ.  ಪ್ರತಿಸಾರಿ ‘ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ ಕೋಟಿ ಕೋಟಿ ಸಲ’ ಹೊಸಯಿಸುತ್ತದೆ.  ಒಲವಲ್ಲಿ ‘ನಾನು ಹಣ್ಣು..ನೀನು ಗಿಣಿಯು’ ಆಗಿ ಹುದುಕುತ್ತದೆ.  ಸಂತಸದಲ್ಲಿ  ‘ತಾಳ್ಯಾಕ ತಂತ್ಯಾಕ ರಾಗದ ಹಂಗ್ಯಾಕ’ ಅಂತ ಕುಣಿಯುತ್ತದೆ. ಅಂತರಂಗದ ಮೃದಂಗ ನುಡಿಸುತ್ತದೆ.  ದು:ಖದಲ್ಲಿ ರುದ್ರವೀಣೆ ಮಿಡಿಯುತ್ತದೆ; ಅತ್ತಾರ ಅತ್ತುಬಿಡು..ಹೊನಲು ಬರಲಿ. ನಕ್ಕ್ಯಾಕ ಮರಸತಿ ದು:ಖ’ ಅಂತ ಹಲುಬುತ್ತದೆ.  ‘ಕೊಳಲಾಗಬಹುದಿತ್ತು.. ಕಳಲೆಯನೇ ಕಡಿದ ಕಾಳ’ ಎಂದು ನಿಡುಸುಯ್ಯುತ್ತದೆ.  ‘ಬದುಕು ಮಾಯೆಯ ಮಾಟ’ ಎಂದು ಸಾಂತ್ವನ ಹೇಳುತ್ತದೆ.  ‘ಬಂಗಾರ ನೀರ ಕಡಲಾಚೆ’ಗಿರುವ ನಮ್ಮ ತೀರ ತೋರಿಸುತ್ತದೆ.  ಕರಡಿಯಾಗಿ ಕುಣಿಯುತ್ತದೆ.. ಕರಿಮರಿಯಾಗಿ ಕುಯ್ಗುಡತ್ತದೆ.. ಕುರುಡು ಕಾಂಚಾಣವಾಗಿ ತುಳಿಯುತ್ತದೆ.. ಬಲಿ ಕೇಳಿ ಗಾಬರಿಬೀಳಿಸುತ್ತದೆ…  ಕೊನೆಗೆ ‘ಮಮತೆ ಮಿಂದಂತೆ ಹರಕೆ ಸಂದಂತೆ ಕಂದನ್ನ ಹುಡುಕಿ’ ಪಾಪ ತೊಳೆವ ಗಂಗೆಯಾಗಿ ಹರಿದು ಬರುತ್ತದೆ.

‘ವಿನಾ ದೈನ್ಯೇನ ಜೀವನಂ – ಅನಾಯಾಸೇನ ಮರಣಂ’ ಇದು ಬೇಂದ್ರೆಯವರ ಆಶೆಯಾಗಿತ್ತಂತೆ.  ಅಂತೆಯೇ ಬಾಳಿ ಬದುಕಿ ತೆರಳಿದವರು ಅವರು.  ೨೬ ನೆಯ ನವ್ಹೆಂಬರ್ ೧೯೮೧ ರಲ್ಲಿ ದೀಪಾವಳಿಯ ನರಕಚತುದ೯ಶಿಯಂದು ಬೆಳಕಿನ ಲೋಕಕ್ಕೆ ತೆರಳಿತು ಕವಿಜೀವ.  ಆದರೆ ಅವರ ಯಶ:ಕಾಯಕ್ಕೆ ಸಾವಿಲ್ಲ;  ಅದು ಅಜರಾಮರ.  ಬೇಂದ್ರೆ ತಮ್ಮ ಕಾವ್ಯಶಕ್ತಿಯಿಂದ ವಿಶ್ವಚೈತನ್ಯವಾಗಿ ಎಲ್ಲೆಡೆ ಹಬ್ಬಿದ್ದಾರೆ.  ಆ ಚೈತನ್ಯಕ್ಕೆ ಸಾವಿರದ ಶರಣು.

–  ಗೌರಿ ಪ್ರಸನ್ನ.

********************************************************************

ಬೇಂದ್ರೆಯವರ ‘ನಾನು ಬಡವಿ’ ಕಿರುಗವಿತೆಯಲ್ಲಿ ಒಲವಿನ ಪಯಣ: ಕೇಶವ ಕುಲಕರ್ಣಿ

ಈ ಮೊದಲು ಈ ಕವಿತೆಯನ್ನು ಓದಿಲ್ಲದಿದ್ದರೆ ಅಥವಾ ಕೇಳಿರದಿದ್ದರೆ ಮೊದಲೊಮ್ಮೆ ನೀವೇ ಓದಿಕೊಳ್ಳಿ: 
  
 ನಾನು ಬಡವಿ ಆತ ಬಡವ 
 ಒಲವೆ ನಮ್ಮ ಬದುಕು 
 ಬಳಸಿಕೊಂಡೆವದನೆ ನಾವು 
 ಅದಕು ಇದಕು ಎದಕು 
  
 ಹತ್ತಿರಿರಲಿ ದೂರವಿರಲಿ 
 ಅವನೆ ರಂಗಸಾಲೆ 
 ಕಣ್ಣುಕಟ್ಟುವಂಥ ಮೂರ್ತಿ 
 ಕಿವಿಗೆ ಮೆಚ್ಚಿನೋಲೆ 
  
 ಚಳಿಗೆ ಬಿಸಿಲಿಗೊಂದೆ ಹದನ 
 ಅವನ ಮೈಯ ಮುಟ್ಟೆ 
 ಅದೇ ಗಳಿಗೆ ಮೈಯ ತುಂಬ 
 ನನಗೆ ನವಿರುಬಟ್ಟೆ 
  
 ಆತ ಕೊಟ್ಟ ವಸ್ತು ಒಡವೆ 
 ನನಗೆ ಅವಗೆ ಗೊತ್ತು 
 ತೋಳುಗಳಿಗೆ ತೋಳಬಂದಿ 
 ಕೆನ್ನೆ ತುಂಬ ಮುತ್ತು 
  
 ಕುಂದು ಕೊರತೆ ತೋರಲಿಲ್ಲ 
 ಬೇಕು ಹೆಚ್ಚಿಗೇನು? 
 ಹೊಟ್ಟೆಗಿತ್ತ ಜೀವ ಫಲವ 
 ತುಟಿಗೆ ಹಾಲು ಜೇನು  

ದ.ರಾ.ಬೇಂದ್ರೆ (ಅಂಬಿಕಾತನಯದತ್ತ) ಕನ್ನಡದ ಶಬ್ದ ಗಾರುಡಿ; ಉತ್ತರ ಕರ್ನಾಟಕದ ಆಡುಭಾಷೆಯನ್ನು ಕನ್ನಡದ ಕಾವ್ಯ ಪರಂಪರೆಯನ್ನು ಅರಗಿಸಿಕೊಂಡು ಕನ್ನಡ ಜನತೆಗೆ ಉಣಬಡಿಸಿದ ವರಕವಿ. 

‘ನಾನು ಬಡವಿ’ ಎಂಬ ಕವಿತೆ ಅವರ ಒಂದು ಸರಳ ಸುಂದರ ಕವಿತೆ. ಮೊದಲ ಓದಿಗೇ ಅರ್ಥವಾಗುವ ಕವನ, ಆದರೆ ಓದಿದಷ್ಟೂ ಅರ್ಥ ಬಿಚ್ಚಿಕೊಳ್ಳುವ ಕವನ. ಮೈಸೂರು ಅನಂತಸ್ವಾಮಿಯವರು ರಾಗ ಸಂಯೋಜಿಸಿ ಅಮರವಾಗಿಸಿದ ಕವಿತೆ ಇದು. 

ಬೇಂದ್ರೆಯವರ ನೆನಪಿನಲ್ಲಿ ನಾನು ಬೇಂದ್ರೆಯವರ ಈ ಕವಿತೆಯನ್ನು ಆರಿಸಿಕೊಂಡಿರುವುದು, ಸರಳ ಪದಗಳಲ್ಲಿ, ಸುಲಭ ಲಯದಲ್ಲಿ, ಅದ್ಭುತವಾಗಿ, ಎಲ್ಲರಿಗೂ ಅರ್ಥವಾಗುವಂಥಹ ಕವಿತೆಗಳನ್ನೂ ಬೇಂದ್ರೆಯವರು ಬರೆಯುತ್ತಿದ್ದರು ಎಂದು ಹೇಳುವುದು ಒಂದು. 

ಒಳ್ಳೆಯ ಕವನಗಳನ್ನು ಓದುವುದು ಮತ್ತು  ಮತ್ತೆ ಮತ್ತೆ ಓದುವುದು ಒಂದು ಅನುಭೂತಿ. ಕವನಗಳನ್ನು ಹೇಗೆ ಹೀಗೆಯೇ ಬರೆಯಬೇಕು ಎಂದು ಹೇಗೆ ನಿಯಮವಿಲ್ಲವೋ ಅದೇ ರೀತಿ ಕವನಗಳನ್ನು ಹೀಗೇ ಓದಿ ಹೀಗೇ ಅರ್ಥ ಮಾಡಿಕೊಳ್ಳಬೇಕು ಎಂದು ನಿಯಮಗಳೇನೂ ಇಲ್ಲ. ಆದರೂ ಈ ಲೇಖನದಲ್ಲಿ ನಾನು ಕವನಗಳನ್ನು ನನ್ನದಾಗಿಸಿಕೊಳ್ಳುವ ನನ್ನದೊಂದು ರೀತಿಯನ್ನು ಹೇಳುತ್ತೇನೆ.  ಓದುಗನಲ್ಲಿ ಕವಿತೆಗಳ ಬಗ್ಗೆ ಬೇಂದ್ರೆಯವರ ಕವಿತೆಗಳ ಬಗ್ಗೆ ಪ್ರೀತಿಯನ್ನು ಹೆಚ್ಚಿಸುವುದು ಎರಡನೇ ಉದ್ದೇಶ.  

ಕವಿತೆಯ ವಿನ್ಯಾಸ:

ನಾಕು ಸಾಲಿಗೊಂದು ನುಡಿಯಂತೆ ಒಟ್ಟು ಐದು ನುಡಿಗಳು. ಮೊದಲ ಮತ್ತು ಮೂರನೇ ಸಾಲುಗಳು 12 ಮಾತ್ರೆಗಳು, ಎರಡನೇ ಮತ್ತು ನಾಕನೇ ಸಾಲು 9 ಮಾತ್ರೆಗಳ ಛಂದಸ್ಸು. ಎರಡನೇ ಮತ್ತು ನಾಕನೇ ಸಾಲಿನ ಕೊನೆಯಲ್ಲಿ ಪ್ರಾಸಗಳು (ಬದುಕು-ಎದಕು, ರಂಗಸಾಲೆ-ಮೆಚ್ಚಿನೋಲೆ, ಮುಟ್ಟೆ-ಬಟ್ಟೆ, ಗೊತ್ತು-ಮುತ್ತು, ಹೆಚ್ಚಿಗೇನು-ಹಾಲುಜೇನು). 

ಇಡೀ ಕವಿತೆಯನ್ನು ಅರವತ್ತು-ಎಪ್ಪತ್ತರ  ದಶಕದ ಒಂದು ಹಳ್ಳಿಯಲ್ಲಿ ಅದೇ ತಾನೇ ಮೊದಲ ಮಗುವಾದ ಹರೆಯದ ಬಡ ಹೆಂಗಸು ತನ್ನನ್ನು ನೋಡಲು ಬಂದ ತನಗಿಂತ ಚಿಕ್ಕವಳಾದ ಆದರೆ ಬಡವಳಲ್ಲದ ಆತ್ಮೀಯ ಗೆಳತಿಗೆ ಹೇಳುತ್ತಿರುವಂತೆ ಕಲ್ಪಿಸಿಕೊಂಡರೆ (ಗಂಡ ಮನೆಯಲ್ಲಿ ಇಲ್ಲ) ಕವಿತೆಗೆ ಒಂದು ಸುಂದರ ವಾತಾವರಣ ನಿರ್ಮಾಣವಾಗುತ್ತದೆ. ಅಂಥದೊಂದು ಕಲ್ಪನೆಯಲ್ಲಿ ಕವಿತೆಯನ್ನು ಮತ್ತೊಮ್ಮೆ ಓದಿ ಈ ಕೆಳಗಿನ ಲೇಖನವನ್ನು ಓದೋಣ. 

ಮೊದಲನೇ ನುಡಿ:

ನಾನು ಬಡವಿ ಆತ ಬಡವ 
ಒಲವೆ ನಮ್ಮ ಬದುಕು 
ಬಳಸಿಕೊಂಡೆವದನೆ ನಾವು 
ಅದಕು ಇದಕು ಎದಕು 

ಕವಿತೆಯನ್ನು ಬರೆದವರು ಗಂಡಸು ಬೇಂದ್ರೆ. ಆದರೆ ಈ ಕವಿತೆಯನ್ನು ಓದಲು ಶುರುಮಾಡುತ್ತಿದ್ದಂತೆಯೆ, ಈ ಕವಿತೆಯನ್ನು ಹೇಳುತ್ತಿರುವುದು ಗಂಡಲ್ಲ ಹೆಣ್ಣು ಎಂದು ಕವನದ ಎರಡನೇ ಶಬ್ದದಲ್ಲೇ (ನಾನು ಬಡವಿ) ಗೊತ್ತಾಗಿಬಿಡುತ್ತದೆ. ಅಂದರೆ ಇಲ್ಲಿ ಬೇಂದ್ರೆ ಹೆಣ್ಣಾಗಿ ಪರಕಾಯ ಪ್ರವೇಶ ಮಾಡುತ್ತಾರೆ. ತಾವೇ ಹೆಣ್ಣಾಗಿಬಿಡುತ್ತಾರೆ. 

ಮೊದಲ ನಾಕು ಸಾಲುಗಳು ಇಡೀ ಕವನದ ಪೀಠಿಕೆಯಾಗಿದೆ. ಇಲ್ಲಿ ಹೆಣ್ಣು ತನ್ನ ಬಗ್ಗೆ ಹೇಳಿಕೊಂಡು (ನಾನು ಬಡವಿ)  ನಂತರ ‘ಅವನ‘ ಬಗ್ಗೆ ಹೇಳುತ್ತಾಳೆ (ಆತ ಬಡವ). ಒಂದು ಕ್ಷಣ ಯೋಚಿಸಿ, ಕವಿತೆಯನ್ನು ‘ಅವನು ಬಡವ ನಾನು ಬಡವಿ‘ ಎಂದು ಬರೆದಿದ್ದರೂ ಕವನದ ಛಂದಸ್ಸಿಗೆ ತೊಂದರೆಯಾಗುತ್ತಿರಲಿಲ್ಲ, ಆದರೆ ಕವನ ಅರ್ಥವೇ ಬೇರೆಯಾಗುತ್ತಿತ್ತು. 

ಬೇಂದ್ರೆ ಇಲ್ಲಿ ಕನ್ನಡವನ್ನು ದುಡಿಸಿಕೊಳ್ಳುವ ರೀತಿಯನ್ನು ನೋಡಿ. ‘ಬಡವ‘ ಪುಲ್ಲಿಂಗ ‘ಬಡವಿ‘ ಸ್ತ್ರೀಲಿಂಗ; ಇಂಥಹ ಶಬ್ದಗಳು ಕನ್ನಡ ಭಾಷೆಯ ವೈಶಿಷ್ಟ್ಯ. ಉದಾಹರಣೆಗೆ, ಇಂಗ್ಲೀಷಿನಲ್ಲಿ ಇದನ್ನು ಹೇಳಲು ಎರಡು ಪದಗಳು ಬೇಕು, ‘poor man, poor woman’.  ಹಾಗೆ ಹೇಳಿದ ತಕ್ಷಣ ಕವಿತೆ ಗದ್ಯವಾಗಿಬಿಡುತ್ತದೆ. ಬೇಂದ್ರೆ ಎಂಬ ಗಾರುಡಿಗನ ಕೈಯಲ್ಲಿ ಕನ್ನಡ ಭಾಷೆ ಪದಪದಗಳಲ್ಲಿ ಕವಿತೆಯಾಗುತ್ತಾಳೆ ಅನ್ನುವುದನ್ನು ಗಮನಿಸಿ. 

ಬಡವರಲ್ಲದವರಾದರೆ ಅವರಿಗೆ ಬದುಕೆಂದರೆ ಕೆಲಸ, ದುಡ್ಡು ಸಂಪಾದಿಸಿ ಕೂಡಿಡುವುದು, ಕೆಲಸದವರನ್ನು ನೋಡಿಕೊಳ್ಳುವುದು ಇತ್ಯಾದಿ ಏನೆಲ್ಲ ಇರುತ್ತದೆ; ಆದರೆ ಬಡವರಿಗೆ ಬದುಕೆಂದರೆ ಏನು? ದಿನಾ ಕೂಳಿಗಾಗಿ ಕಷ್ಟಪಡುವ ಕಾಯಕ, ಸರಿಯಾದ ಸೂರಿಲ್ಲದ ನರಕ. ಆದರೆ ನಮ್ಮ ನಾಯಕಿಗೆ ಮತ್ತು ನಾಯಕನಿಗೆ ಈ ಕಷ್ಟಗಳ ಪರಿವೆ ಇಲ್ಲ, ಏಕೆಂದರೆ ಅವರಿಗೆ ಒಲವೆಂದರೆ ಬದುಕು, ಬದುಕೆಂದರೆ ಒಲವು. ಒಲವಿಗೆ ಬಡತನ ಬೇಗೆಯನ್ನು ಮೀರಿಸುವ ಶಕ್ತಿ ಇದೆ; ಅದು ಹೇಗೆ ಎನ್ನುವುದನ್ನು ಮುಂದಿನ ನಾಕು ನುಡಿಗಳಲ್ಲಿ ಕವನವನ್ನು ಕಟ್ಟುತ್ತಾರೆ.   

‘ಪ್ರೀತಿ ನಮ್ಮ ಬದುಕು‘ ಅಥವಾ ‘ಪ್ರೇಮ ನಮ್ಮ ಬದುಕು‘ ಎಂದು ಬರೆಸಿದ್ದರೂ ಛಂದಸ್ಸಿಗೆ ತೊಂದರೆಯಾಗುತ್ತಿರಲಿಲ್ಲ ಎನ್ನುವುದನ್ನು ಗಮನಿಸಿ. ಆದರೆ ಬೇಂದ್ರೆ ಹೆಚ್ಚಾಗಿ ಉಪಯೋಗದಲ್ಲಿ ಇರದ ‘ಒಲವ‘ನ್ನು ಉಪಯೋಗಿಸುತ್ತಾರೆ (ಕನ್ನಡ ಸಿನೆಮಾ ಹಾಡು ‘ಒಲವೇ ಜೀವನ ಸಾಕ್ಷಾತ್ಕಾರ‘, ‘ಒಲವಿನ ಉಡುಗೊರೆ ಕೊಡಲೇನು?’ ಗಮನಿಸಿ). ಪ್ರೀತಿ, ಪ್ರೇಮ ಮತ್ತು ಒಲವು ಎಲ್ಲ ಸಮಾನಾರ್ಥಕ ಪದಗಳಾದರೂ, ಅವುಗಳ ಒಳಾರ್ಥದಲ್ಲಿ ಇರುವ ಸೂಕ್ಷ್ಮವ್ಯತ್ಯಾಸವನ್ನು ಗಮನಿಸಿ, ಬೇಂದ್ರೆ ‘ಒಲವ‘ನ್ನು ಆರಿಸಿಕೊಳ್ಳುತ್ತಾರೆ. ‘ಒಲವು‘ ಏಕೆ ಎನ್ನುವುದನ್ನು ಮುಂದೆ ನೋಡೋಣ.  

ನಾಯಕ ನಾಯಕಿಯರಿಬ್ಬರಿಗೂ ಒಲವನ್ನು ಬಿಟ್ಟರೆ ಬೇರೆ ಜೀವನವೇ ಇಲ್ಲ, ಮತ್ತೆ ಅವರಿಗೆ ಬೇರೆ ಆಯ್ಕೆಯೂ ಇಲ್ಲ, ಏಕೆಂದರೆ ಅವರ ಬಳಿ ಒಲವಿನ ಹೊರತಾಗಿ ಇನ್ನೇನೂ ಇಲ್ಲ. 

ಎರಡನೇ ಸಾಲಿನ ಕೊನೆಯ ‘ಬದುಕು‘ಗೆ ನಾಕನೇ ಸಾಲಿನ ಕೊನೆಗೆ ಪ್ರಾಸ ಬೇಕು. ದಿನ ರಾತ್ರಿ ಕೂತು ಕನ್ನಡದ ಎಲ್ಲ ಶಬ್ದಕೋಶಗಳನ್ನು ಜಾಲಾಡಿಸಿದರೂ,  ಬೇಂದ್ರೆ ‘ಬದುಕು‘ ಶಬ್ದಕ್ಕೆ ಬರೆಯುವ ಪ್ರಾಸವನ್ನು ಯಾರಿಂದಲಾದರೂ ಬರೆಯಲು ಸಾಧ್ಯವಾದೀತೆ? ‘ಬದುಕು’ ಗೆ ಅವರು ಹಾಕುವ ಪ್ರಾಸ ‘ಎದಕು’! ಉತ್ತರ ಕರ್ನಾಟಕದ ಆಡುಮಾತಿನ ‘ಎದಕು’ (ಎಲ್ಲದಕು), ಎಷ್ಟು ಸುಂದರವಾಗಿ ಸಹಜ ಪ್ರಾಸವಾಗುತ್ತದೆ ಎನ್ನುವುದನ್ನು ಗಮನಿಸಿದರೆ ಬೇಂದ್ರೆ ಏಕೆ ಕನ್ನಡ ಕಂಡ ಅದ್ವಿತೀಯ ಕವಿ ಎನ್ನುವುದು ಅರ್ಥವಾಗುತ್ತದೆ. 

ಬೇಂದ್ರೆ ಹೆಣೆಯುವ ಶಬ್ದಗಳ ಮಾಲೆಯನ್ನು ಅವಲೋಕಿಸಿ, ನಾಯಕ ಮತ್ತು ನಾಯಕಿ ‘ಒಲವನ್ನು‘ ಅವರು ಉಪಯೋಗಿಸಿಕೊಳ್ಳುವುದು ‘ಅದಕು-ಇದಕು-ಎದಕು’! ಅಂತರಿಕ ಪ್ರಾಸಗಳು! ಇಂಥ ಅಪ್ರತಿಮ ಸಾಲುಗಳನ್ನು ಬೇಂದ್ರೆಯಲ್ಲದೇ ಇನ್ನಾವ ಕವಿ ತಾನೆ ಬರೆಯಬಲ್ಲ? ಅವರು ಒಲವನ್ನು ಅದಕ್ಕೆ, ಇದಕ್ಕೆ ಮತ್ತು ಎಲ್ಲದಕೆ ಉಪಯೋಗಿಸಿಕೊಳ್ಳದಿದ್ದರೆ ಅವರಿಗೆ ಬದುಕು ದುರ್ಭರವಾಗುತ್ತಿತ್ತು. ಒಲವನ್ನು ಉಪಯೋಗಿಸಿಕೊಂಡು ಅವರು ಬದುಕನ್ನು ಕಂಡುಕೊಳ್ಳುತ್ತಿದ್ದಾರೆ. 

 ಎರಡನೇ ನುಡಿ:
 ಹತ್ತಿರಿರಲಿ ದೂರವಿರಲಿ 
 ಅವನೆ ರಂಗಸಾಲೆ 
 ಕಣ್ಣುಕಟ್ಟುವಂಥ ಮೂರ್ತಿ 
 ಕಿವಿಗೆ ಮೆಚ್ಚಿನೋಲೆ  

ಮೊದಲ ನಾಕು ಸಾಲಿನ ಪೀಠಿಕೆ ಆದ ಮೇಲೆ, ನಾಯಕಿ ತನ್ನ ಒಲವಿನ ಪಯಣವನ್ನು ಮೊದಲಿನಿಂದ ಹೇಳುತ್ತಿದ್ದಾಳೆ.  

ನಾಯಕಿಗೆ ನಾಯಕನ ಮೇಲೆ ಒಲವು ಶುರುವಾಗಿದೆ. ನಾಯಕಿಗೆ ಸದಾ ನಾಯಕನ ಚಿಂತೆ, ಆಸೆ, ಕನಸು;  ಆತ ನಾಯಕಿಯ ರಂಗಸಾಲೆ. ‘ರಂಗಸಾಲೆ‘, ಇತ್ತೀಚೆ ಅಷ್ಟಾಗಿ ಉಪಯೋಗದಲ್ಲಿ ಇರದ ಶಬ್ದ. ರಂಗಸಾಲೆ ಎಂದರೆ ಥೇಟರ್, ಇತ್ತೀಚೆ ರಂಗಮಂದಿರ ಹೆಚ್ಚಾಗಿ ಉಪಯೋಗದಲ್ಲಿರುವ ಶಬ್ದ. ನಾಯಕಿಗೆ ಅವನೊಂದು ರಂಗಸಾಲೆ ಇದ್ದಂತೆ ಎಂದು ಬೇಂದ್ರೆ ರೂಪಕ ಕೊಡುತ್ತಾರೆ. ನನಗೆ ತಿಳಿದಿರುವಂತೆ ಇದು ಕನ್ನಡದಲ್ಲಿ ಅಚ್ಚಹೊಸ ರೂಪಕ. ಗಂಡಸನ್ನು ಸೂರ್ಯನಿಗೆ (ತಾನು ಮರ), ಮರಕ್ಕೆ (ತಾನು ಬಳ್ಳಿ) ಹೋಲಿಸಿ ಬರೆಯುವುದು ಅನಾದಿ ಕಾಲದಿಂದ ನಡೆದೇ ಇದೆ. ಬೇಂದ್ರೆ ‘ರಂಗಸಾಲೆ‘ ಎನ್ನುವ ಹೊಸ ರೂಪಕವನ್ನು ತರುತ್ತಾರೆ. ರಂಗಸಾಲೆಯಲ್ಲಿ ತಾನೆ ನಾಟಕ ನಡೆಯುವುದು, ನಗು, ಅಳು, ಎಲ್ಲ ಭಾವೋದ್ವೇಗಳೂ ಜರಗುವುದು. ನಾಯಕಿಗೆ ಅದೆಲ್ಲ ನಾಯಕನಿಂದ ಸಿಗುತ್ತಿದೆ, ಅವನು ಹತ್ತಿರವಿರದಿದ್ದಾಗಲೂ (ಏಕೆಂದರೆ ಕುಂತ್ರೆ ನಿಂತ್ರೆ ಅವ್‍ನ್ದೇ ಧ್ಯಾನ)! ಗಂಡು ಹೆಣ್ಣಿನ ಪ್ರೀತಿ ಹುಟ್ಟುವ ಮತ್ತು ಬೆಳೆಯುವ ಘಟನೆಗಳು ಕೂಡ ನಾಟಕವೇ ಅಲ್ಲವೇ? ಅದಕ್ಕೇ ‘ಅವನೇ ರಂಗಸಾಲೆ‘. ಆಷ್ಟೇ ಅಲ್ಲ  ‘ರಂಗಸಾಲೆ‘ಯನ್ನು ‘ರಂಗ ಸಾಲೆ‘ ಎಂದು ಓದಿದರೂ ಅದಕ್ಕೊಂದು ಹೊಸ ಅರ್ಥ ಬರುತ್ತದೆ. ನಾಯಕ ರಂಗು ರಂಗಿನ ಶಾಲೆ ಇದ್ದಂತೆ, ಪ್ರೀತಿ ಪ್ರೇಮಗಳನ್ನು ಹೇಳಿಕೊಡುವ ಗುರು. ಅಥವಾ ‘ರಂಗ‘ ಎಂದರೆ ಕೃಷ್ಣ, ಕೃಷ್ಣ ಭಾರತದ ಕಾವ್ಯ ಪರಂಪರೆಯಲ್ಲಿ ರಸಿಕರ ರಾಜ. ಅದಕ್ಕೇ ‘ಅವನು ರಂಗ ಸಾಲೆ;. ಎಂದೂ ಅರ್ಥೈಸಬಹುದು.  

ನಾಯಕನ ರೂಪ ಕಣ್ಣುಕಟ್ಟುವಂಥ ‘ಮೂರ್ತಿ’. ‘ಮೂರ್ತಿ‘ ಎಂದರೆ ಬೆಲೆಬಾಳುವಂಥಹದು. ನಾಯಕ ಬಡವನಾದರೂ ಬೆಲೆಕಟ್ಟಲಾಗದಂಥವನು ಎನ್ನುವುದನ್ನು ‘ಮೂರ್ತಿ‘ ಎನ್ನುವ ರೂಪಕದಲ್ಲಿ ಬೇಂದ್ರೆ ರೂಪಿಸುತ್ತಾರೆ.  

ಅವರಿಬ್ಬರೂ ಬಡವರಿರಬಹುದು, ಆದರೆ ಬಡವನಾದ ನಾಯಕ ಬಡವಿಯಾದ ನಾಯಕಿಗೆ ಕೊಡುವ ಉಡುಗೊರೆ ಯಾವ ಶ್ರೀಮಂತನಿಗೆ ಕಡಿಮೆ? ಆತ ನಾಯಕಿಯ ಕಿವಿಯಲ್ಲಿ ಉಲಿಯುವುದು ಅವಳ ರೂಪವನ್ನು, ಅವಳ ಮೇಲಿನ ಪ್ರೀತಿಯನ್ನು; ನಾಯಕಿಗೆ ‘ಕಿವಿಯೋಲೆ’ ಸಿಕ್ಕಿದ್ದು ಹಾಗೆ! ಅದೂ ಅಂತಿಂಥ ಕಿವಿಯೋಲೆಯಲ್ಲ, ಮೆಚ್ಚುಗೆಯ ಕಿವಿಯೋಲೆ! ನಾಯಕಿಗೆ ಅದು ವಜ್ರದ ಓಲೆಗಿಂತೆ ಹೆಚ್ಚು ಬೆಲೆಬಾಳುವಂಥಹದು.  

ಮೇಲಿನ ಈ ನಾಕು ಸಾಲುಗಳು ಗಂಡು ಹೆಣ್ಣಿನ ಪ್ರೇಮಾಂಕುರದ ಘಟ್ಟವನ್ನು ಹೇಳುತ್ತವೆ: ಒಬ್ಬರಿಗೊಬ್ಬರು ನೋಡುತ್ತ ಕೂಡುವುದು, ಮೆಚ್ಚಿಸುತ್ತ ಮಾತಾಡುತ್ತಲೇ ಇರುವುದು.

ಮೂರನೇಯ ನುಡಿ:

 ಚಳಿಗೆ ಬಿಸಿಲಿಗೊಂದೆ ಹದನ 
 ಅವನ ಮೈಯ ಮುಟ್ಟೆ 
 ಅದೇ ಗಳಿಗೆ ಮೈಯ ತುಂಬ 
 ನನಗೆ ನವಿರುಬಟ್ಟೆ

ಎಲ್ಲಿದ್ದರೂ ಅವನದೇ ಧ್ಯಾನವಿರುವಾಗ, ಕಣ್ಣಲ್ಲಿ ಅವನೇ ತುಂಬಿಕೊಂಡಿರುವಾಗ, ಅವನೂ ಹೂಂ ಅಂದು ಕಿವಿಯ ಹತ್ತಿರವೇ ಮೆಚ್ಚುಗೆಯ ಮಾತುಗಳನ್ನು ಆಡುತ್ತಿರುವಾಗ, ಪ್ರೇಮ ಪ್ರಣಯದ ನಿಟ್ಟಿನಲ್ಲಿ ಸಾಗುವುದು ಸಹಜವೇ ಅಲ್ಲವೇ?  ಮೆಚ್ಚುಗೆಯ ‘ಓಲೆ’ ಧರಿಸಿದ ನಾಯಕಿ, ತನ್ನಿಷ್ಟದ ‘ಮೂರ್ತಿ’ಯನ್ನು ಈಗ ಮುಟ್ಟುತ್ತಾಳೆ. 

ಪ್ರೇಮ ಈಗ ಮಾತು-ನೋಟದಿಂದ ಮುಂದೆ ಸಾಕಿ ಕೈ ಕೈ ತಾಗಿಸುವ ತಬ್ಬಿಕೊಳ್ಳುವ ಹಂತಕ್ಕೆ ಬಂದಿದೆ. ನಾಯಕನ ಮೈಯನ್ನು ಚಳಿಯಲ್ಲಿ ಮುಟ್ಟಿದರೆ ನಾಯಕಿಯ ಮೈಯೆಲ್ಲ ಬಿಸಿಯಾಗುತ್ತದೆ, ಬಿಸಿಲಲ್ಲಿ ಆತನ ಮೈ ತಂಪು ಆಶ್ರಯವನ್ನು ಕೊಡುತ್ತದೆ. ಇಲ್ಲಿ ಬೇಂದ್ರೆ ಹೇಗೆ ವೈರುಧ್ಯಗಳನ್ನು ಎರಡೇ ಶಬ್ದಗಳಲ್ಲಿ ಹೇಳುತ್ತಾರೆ ಎಂದು ಅವರ ಕಾವ್ಯಪ್ರತಿಭೆಯ ಬಗ್ಗೆ ತಲೆತೂಗಬೇಕಾಗುತ್ತದೆ. 

ಇಲ್ಲಿ ಬೇಂದ್ರೆ ಬಳಸಿರುವ ಶಬ್ದ, ‘ಹದನ’. ಅಷ್ಟಾಗಿ ಉಪಯೋಗದಲ್ಲಿಲ್ಲದ ಶಬ್ದ. ಉತ್ತರ ಕರ್ನಾಟಕದಲ್ಲಿ ‘ಹದ’ವನ್ನು ನಾನಾರ್ಥಗಳಿಗೆ ಉಪಯೋಗಿಸುತ್ತಾರೆ. ಉದಾಹರಣೆಗೆ: ಗಾಯನ ಅಭ್ಯಾಸ ಮಾಡುವ ವಿದ್ಯಾರ್ಥಿಗೆ ಗುರು ಹೇಳುತ್ತಾನೆ, ‘ಈಗ ನಿನ್ನ ಧನಿ ಒಂದು ಹದಕ್ಕ ಬಂತಪಾ’. ಇನ್ನೊಂದು ಅರ್ಥ, ‘ಹದಕ್ಕ ಬಂದಾನ ಹುಡುಗ’ ಎಂದರೆ ಇನ್ನೊಂದು ಅರ್ಥ. ‘ಪುಂಡ ಹುಡುಗನಿಗೆ ಕ್ರೀಡಾ ಶಿಕ್ಷಕರು ಸರಿಯಾಗಿ ಹದ ಮಾಡಿದರು’ ಎಂದರೆ ಮುಗದೊಂದು ಅರ್ಥ. ಈ ಮೂರೂ ಅರ್ಥಗಳು ಇಲ್ಲಿ ಒಟ್ಟಿಗೆ ಕೆಲಸ ಮಾಡುತ್ತವೆ. ಆದರೆ ‘ಹದ‘ಕ್ಕೆ ‘ನ‘ ಸೇರಿಸಿ ‘ಹದನ‘ ಮಾಡುವ ಅವಶ್ಯಕತೆ ಏನಿತ್ತು? ಬರೀ ಛಂದಸ್ಸನ್ನು ಪೂರ್ತಿ ಮಾಡಲು ಬೇಂದ್ರೆ ಮಾಡಿದ ಹೊಸ ಶಬ್ದೋತ್ಪತ್ತಿಯೇ? ಆದರೆ ‘ಹದನ‘ ಶಬ್ದ ಅವರ ಉತ್ಪತ್ತಿಯಲ್ಲ. ಗದುಗಿನ ಕುಮಾರವ್ಯಾಸ ಭಾರತದಲ್ಲಿ ಬರುತ್ತದೆ. (ಹದನ ನೀನೇ ಬಲ್ಲೆ ಸಾಕಿ|ನ್ನಿದು ನಿಧಾನವು ಬಗೆಯಲೆಮ್ಮ|ಭ್ಯುದಯ ನಿಮ್ಮಾಧೀನವೆಂದನು ಧರ್ಮನಂದನನು (ಉದ್ಯೋಗ ಪರ್ವ, ೭ ಸಂಧಿ, ೩ ಪದ್ಯ) ಮತ್ತು ನೀವು ಬಿಜಯಂಗೈದು ಚಿತ್ತದೊ|ವ ಹದನಾ ಹದನನಾ ರಾ|ಜೀವನಾಭಾದಿಗಳಿಗರುಹುವುದೆಂದರಾ ಚರರು (ಉದ್ಯೋಗ ಪರ್ವ, ೬ ಸಂಧಿ, ೧೫ ಪದ್ಯ)). 

ನಾಯಕ ನಾಯಕಿಗೆ ಹೊಸ ಸೀರೆ ತರದಿದ್ದರೇನಂತೆ? ಆತನ ಮೈ ಮುಟ್ಟಿದರೆ ಸಾಕು, ಆ ರೋಮಾಂಚನದಲ್ಲೇ, ಮೈಯ ತುಂಬ ನಾಯಕಿಗೆ ‘ನವಿರು ಬಟ್ಟೆ’! ಪ್ರೀತಿಯ ಮುಂದಿನ ಘಟ್ಟವಿದು. ಮಾತು-ನೋಟಗಳ ನಂತರ – ಮುಟ್ಟುವುದು – ಮುಟ್ಟುವುದರಲ್ಲಿ ಆಗುವ ರೋಮಾಂಚನ- ಈ ನಾಕು ಸಾಲುಗಳಲ್ಲಿವೆ. 

ನಾಕನೇ ನುಡಿ:

 ಆತ ಕೊಟ್ಟ ವಸ್ತು ಒಡವೆ 
 ನನಗೆ ಅವಗೆ ಗೊತ್ತು 
 ತೋಳುಗಳಿಗೆ ತೋಳಬಂದಿ 
 ಕೆನ್ನೆ ತುಂಬ ಮುತ್ತು

ಪ್ರೇಮಾಂಕುರ ಅನುರಾಗವಾಗಿ ಪ್ರಣಯವಾಗಿ ಕಾಮನ ಕಾವೇರುತ್ತಿದೆ. ನೋಟ-ಮಾತು-ಮುಟ್ಟುವಿಕೆ ಮುಗಿದು, ಈಗ ಪ್ರೇಮಿಗಳಿಬ್ಬರಿಗೂ ಪ್ರಣಯೋನ್ಮಾದ. ನಾಯಕನ ಅಪ್ಪುಗೆ, ನಾಯಕಿಗೆ ‘ತೋಳಬಂದಿ’. ಆಕೆಯ ಹತ್ತಿರ ಕೊರಳಲ್ಲಿ ಮುತ್ತಿನ ಮಣಿಯಿಲ್ಲದಿದ್ದರೇನಂತೆ? ಆಕೆಯ ಕೆನ್ನೆ ತುಂಬ ಲೆಖ್ಖವಿರದಷ್ಟು ‘ಮುತ್ತು’ಗಳನ್ನು ನಾಯಕ ಕೊಟ್ಟಿದ್ದಾನೆ. ಅಷ್ಟೆ ಅಲ್ಲ, ನಾಯಕ ಇನ್ನೂ ಬಹಳಷ್ಟು ಒಡವೆಗಳನ್ನು ಕೊಟ್ಟಿದ್ದಾನೆ, ಅದು ಅವರಿಬ್ಬರಿಗೆ ಮಾತ್ರ ಗೊತ್ತು, ಅವು ಏನು ಎಂದು ಹೇಳಿದರೆ ಅದರ ಸ್ವಾರಸ್ಯ ಹೋಗುತ್ತದೆ, ಆದ್ದರಿಂದಲೇ ಕವಿ ಹೇಳುತ್ತಾರೆ ‘ನನಗೆ ಅವಗೆ ಗೊತ್ತು’. ಈ ನಾಕು ಸಾಲುಗಳು ಪ್ರೇಮಿಗಳ ಪ್ರಣಯವನ್ನು ಹೇಳುತ್ತವೆ. 

ಈ ನಾಕು ಸಾಲಿನಲ್ಲಿ ಬೇಂದ್ರೆ ಬರೆಯುವ ಶೃಂಗಾರ ರಸ ಅದೆಷ್ಟು ಹೊಸದು! ‘ತೋಳಬಂದಿ‘ ಮತ್ತು ‘ಮುತ್ತು‘ ಶಬ್ದಗಳಿಗೆ ಇರುವ ಎರಡು ಅರ್ಥಗಳನ್ನು ಇಲ್ಲಿ ಎಷ್ಟು ಸುಂದರವಾಗಿ ಕಟ್ಟಿಹಾಕಿದ್ದಾರೆ!  

ಐದನೇ ನುಡಿ:

 ಕುಂದು ಕೊರತೆ ತೋರಲಿಲ್ಲ 
 ಬೇಕು ಹೆಚ್ಚಿಗೇನು? 
 ಹೊಟ್ಟೆಗಿತ್ತ ಜೀವ ಫಲವ 
 ತುಟಿಗೆ ಹಾಲು ಜೇನು 

ಪ್ರಣಯದ ದಾರಿಯಲ್ಲಿ ಈಗ ನಾಯಕ ನಾಯಕಿಯರಿಬ್ಬರಿಗೂ ಮದುವೆಯಾಗಿದೆ. ನೋಟ-ಮಾತು-ಮುಟ್ಟು-ಪ್ರಣಯ-ಕಾಮನಾಟಗಳೆಲ್ಲ ಮಾಗಿವೆ. 

ನಾಯಕ ಬಡವನಾದರೇನು, ನಾಯಕಿಗೆ ಯಾವತ್ತೂ ಕುಂದುಕೊರತೆ ತೋರಿಲ್ಲ (ಆ ಕಾಲದಲ್ಲಿ ಗಂಡ ದುಡಿದು ತರಬೇಕಿತ್ತು). ಅಷ್ಟೇ ಅಲ್ಲ, ಆತ ಕೊಟ್ಟ ‘ಫಲ’, ಬಾಯಿಗಲ್ಲ; ಹೊಟ್ಟೆಗೆ ಮಗು. ಮಗುವಿನ ಫಲಕೊಟ್ಟ ಚಲುವ, ತಿನ್ನಲು ಉಣ್ಣಲು ಕಡಿಮೆ ಮಾಡಿಲ್ಲ ಮತ್ತು ಇನ್ನೂ ಪ್ರೀತಿ ಮೊದಲಿನ ಹಾಗೆಯೇ ಇದೆ ಎನ್ನುವುದನ್ನು  ‘ಹಾಲು-ಜೇನು’ ಎಂದು ಬರೆಯುತ್ತಾರೆ! ‘ಮಗು‘ವಿಗಿಂತ ದೊಡ್ಡ ಆಸ್ತಿ ಇನ್ನಾವುದಿದೆ ಎಂದು ನಾಯಕಿ ಸವಾಲು ಹಾಕುತ್ತಾಳೆ, ಕವಿ ಎಲ್ಲರಿಗೆ ಸವಾಲು ಹಾಕುತ್ತಾರೆ!

ಕೊನೆಯ ನಾಕು ಸಾಲುಗಳು ಮಗುವಾಗುವ, ಸಂಸಾರ ಸಾಗಿಸುವ ಪ್ರೀತಿಯನ್ನು ಹೇಳುತ್ತವೆ. 

ಕೊನೆಯ ಮಾತುಗಳು:

ಸರಳವಾಗಿ ಅರ್ಥವಾಗುವಂಥಹ ಕವನವಾದರೂ ಇದು ಪ್ರೀತಿಯ ಗಾಥೆ. ಪ್ರೇಮಾಂಕುರದಿಂದ ಮಗುವಾಗುವ ಪ್ರೀತಿಯ ಪಯಣದ ಕಥೆ. 

ಒಲವಿನ ಶ್ರೀಮಂತಿಕೆಯ ಮುಂದೆ ಲೌಕಿಕ ಶ್ರೀಮಂತಿಕೆ ಏನೂ ಅಲ್ಲ ಎಂಬುದನ್ನು ತೋರಲು ನಾಯಕಿಯನ್ನು ಬಡವಿ- ನಾಯಕನನ್ನು ಬಡವನನ್ನಾಗಿಸಿದ್ದಾರೆ ಕವಿ. ಒಲವು ಶ್ರೀಮಂತಿಗೆಗಿಂತ ಹೆಚ್ಚು ಶ್ರೀಮಂತ, ಮತ್ತದು ಯಾವಾಗಲೂ ಹೆಚ್ಚಾಗುತ್ತಲೇ ಇರುವ ಶ್ರೀಮಂತಿಕೆ ಎನ್ನುವುದನ್ನು ಕವಿತೆ ಸಾರುತ್ತದೆ. ನೋಟದಲ್ಲಿ ಆರಂಭವಾಗುವ ‘ಪ್ರೇಮ‘ವು ಮಾತಿನಲ್ಲಿ, ಪರಸ್ಪರರನ್ನು ಮೆಚ್ಚಿಸುವ ‘ಅನುರಾಗ‘ದಲ್ಲಿ ಮುಂದುವರಿದು, ಯೌವನದ ಬಿಸಿಯಲ್ಲಿ ದೇಹಗಳು ತಾಗಿ ‘ಪ್ರಣಯ‘ವಾಗುತ್ತದೆ, ಪ್ರಣಯ ‘ಕಾಮ‘ವಾಗುತ್ತದೆ; ಕಾಮದಿಂದ ‘ಮಮತೆ‘ಯ ಮಗು ಹುಟ್ಟುತ್ತದೆ. ಅವನ್ನೆಲ್ಲ ಸೇರಿಸಿದರೆ ‘ಒಲವು‘ ಆಗುವುದು. ‘ಒಲವು‘ ಬೆಳೆಯುವ ನೈಸರ್ಗಿಕ ರೀತಿಯಿದು. ಮೊದಲಿನ ನಾಕು ಸಾಲುಗಳ ಅರ್ಥವಾಗುವುದು, ಉಳಿದ ಹದಿನಾರು ಸಾಲು ಓದಿದ ಮೇಲೆ. ‘ಪ್ರೀತಿ ನಮ್ಮ ಬದುಕು’ ಎನ್ನದೇ ‘ಒಲವೆ ನಮ್ಮ ಬದುಕು’ ಎಂದು ಏಕೆ ಬರೆದಿದ್ದಾರೆ ಎನ್ನುವುದರ ಅರ್ಥವಾದುವುದು. 

ಕನ್ನಡಕ್ಕೆ ಇಂಥಹ ಕವಿ ದೊರಕಿದ್ದು ಕನ್ನಡಿಗರ ಪುಣ್ಯ. ಮೊಗೆದಷ್ಟೂ ಇನ್ನೂ ಅರ್ಥಗಳನ್ನು ಕೊಡುವ ಕವಿ, ಬೇಂದ್ರೆ, ಅಂಬಿಕಾತನಯದತ್ತ. 

– ಕೇಶವ ಕುಲಕರ್ಣಿ. 

***************************************************************

ಅರೇ, ಜನೆವರಿ ೩೧ ರೀ…?!” – ಅಮಿತಾ ರವಿಕಿರಣ್

ಯಾವ ವರ್ಷವೋ ನೆನಪಿಲ್ಲ, ಆದರೆ ಆ ಸಂಧರ್ಭ ಮಾತ್ರ ಸ್ಪಷ್ಟ್ವವಾಗಿ ನೆನೆಪಿದೆ.  ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ನನಗೆ ಕನ್ನಡ ಪಠ್ಯದಲ್ಲಿ ಬೇಂದ್ರೆಯವರ ”ಮೂಡಲ ಮನೆಯ ಮುತ್ತಿನ ನೀರಿನ” ಎಂಬ ಪದ್ಯವಿತ್ತು.  ಅದರ ಎರಡು ನುಡಿಗಳನ್ನ ಬಾಯಿಪಾಠ ಮಾಡಬೇಕಿತ್ತು; ಅದೆಲ್ಲಕ್ಕಿಂತ ಹೆಚ್ಚು ಕವಿ ಕಾವ್ಯ ಪರಿಚಯ ಅದನ್ನು ಮರೆಯದೇ  ಕಲಿತುಕೊಳ್ಳಲೇಬೇಕು! 

ಕನ್ನಡ ಕಲಿಸುವ ನಮ್ಮ ಅಕ್ಕವರು, ಕವಿ ಪರಿಚಯ ಓದುತ್ತ  “ಬೇಂದ್ರೆ ಅವರು ಹುಟ್ಟಿದ್ದು ೧೮೯೬ ಜನೇವರಿ ೩೧ ರಂದು…”, ಹಾಗೆ ಹೇಳುತ್ತಲೇ ನಾನು “ಅಯ್ಯೋ ಜನೆವರಿ ಮೂವತ್ತೊಂದು ರೀ? ಅರ್ರೆ ೩೧!” ಹಾಗಂತ ಖುಷಿಯಲ್ಲಿ ಕೂಗಿದೆ.  ಅಕ್ಕವರಿಗಾಗಲಿ ಉಳಿದ ಮಕ್ಕಳಿಗಾಗಲಿ ನನಗೇನಾಯಿತು, ನಾನ್ಯಾಕೆ ಅಷ್ಟು ಉದ್ವೇಗ ಖುಷಿಯಲ್ಲಿ ಕೂಗುತ್ತಿದ್ದೇನೆ ಅಂತ ಗೊತ್ತಾಗಲಿಲ್ಲ.  ನಿಂಗೇನ್ ಆತs? ಅನ್ನುವ ಪ್ರಶ್ನಾರ್ಥಕ ದೃಷ್ಟಿಯಲ್ಲಿ ಅಕ್ಕವರು ತಮ್ಮ ಮೂಗಿನ ತುದಿಗೆ ಇಳಿದಿದ್ದ ಕನ್ನಡಕದಿಂದ ಮತ್ತೊಂದಿಷ್ಟು ಬಗ್ಗಿ ನೋಡಿದಾಗಲೇ ನನ್ನ ಉತ್ಸಾಹ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದ್ದು. ”ಏನಿಲ್ಲ ರೀ, ನಾನೂ ಬೇಂದ್ರೆಯವರು ಹುಟ್ಟಿದ ದಿನ ನ ಹುಟ್ಟೇನಿ ರೀ, ಇಸ್ವಿ ಮಾತ್ರ ಬ್ಯಾರೆ” ಲಜ್ಜೆ ಮಿಶ್ರಿತ ಖುಷಿಯಲ್ಲಿ ಹೇಳಿದೆ.  ಮುಖಭಾವ so what? ಅನ್ನೋ ಹಾಗೆ ಇತ್ತಾದರೂ ”ಒಹ್ ಹೌದೇನು ಛಲೋ ಆತಲ” ಅಂದು ಅವರು ಪಾಠ ಮುಂದುವರಿಸಿದರು.  ಆ ದಿನದಿಂದ ನನಗೆ ”ಅಂಬಿಕಾತನಯದತ್ತ”, ”ಬೇಂದ್ರೆ”, ”ವರಕವಿ” ಹೀಗೆ ಅದೆಲ್ಲಿ ಕೇಳಿದರು ಅದೊಂದು ರೀತಿಯ ಪ್ರೀತಿ ಆರಾಧನೆ ಖುಷಿ ಹೆಮ್ಮೆ ಮಿಳಿತವಾದ ಭಾವ ಹೊಮ್ಮುತ್ತಿತ್ತು. 

ಗಾಂಧೀ ಅಜ್ಜನ ನಂತರ ಅತಿ ಹೆಚ್ಚು ಅಜ್ಜ ಅಂತ ಪ್ರೀತಿಯಿಂದ ಕರೆಸಿಕೊಂಡಿದ್ದು ಈ ಬೇಂದ್ರೆ ಅಜ್ಜನೊಬ್ಬನೇ ಅನಿಸುತ್ತೆ.  ಅಂಥ ಮೇರು ವ್ಯಕ್ತಿತ್ವ ಹುಟ್ಟಿದ ದಿದ ನಾನು ಹುಟ್ಟಿದ್ದು ಎಂಬ ಆಲೋಚನೆ ಬರುತ್ತಲೇ ನಾನು ಅದ್ಯಾವುದೋ ಗುಂಗು, ಲಹರಿಯಲ್ಲಿ ವಿಹರಿಸುತ್ತಿದ್ದೆ. ಆಗ ನಮ್ಮ ಮನೆಯಲ್ಲಿ ಒಂದು ಪುಟ್ಟ ಟೇಪ್ ರೆಕಾರ್ಡರ್-ರೇಡಿಯೋ ಇತ್ತು  ಧಾರವಾಡ್ ಆಕಾಶವಾಣಿಯಿಂದ ದಿನಕ್ಕೆ ೩ ಬಾರಿ ಭಾವಗೀತೆಗಳು ಪ್ರಸಾರ ವಾಗುತ್ತಿದ್ದವು , ಯಶವಂತ ಹಳಬಂಡಿ ಮತ್ತು ಸಂಗೀತಾ ಕಟ್ಟಿಯವರ ಕಾರ್ಯಕ್ರಮ ಇದ್ದರೆ ಅವರು ಖಂಡಿತ ಒಂದಾದರು ಬೇಂದ್ರೆಯವರ ಹಾಡು ಹೇಳೇ ಹೇಳಿರುತ್ತಿದ್ದರು. 

 ಮಳಿ ಬರುವ ಕಾಲಕ್ಕ ಒಳಗ್ಯಾಕ ಕುಂತೇವು,
 ಇಳಿಯೊಡನೆ ಝಳಕ ಮಾಡೋಣು
 ನಾವುನೂ ಮೋಡಗಳ ಆಟ ನೋಡೋಣ 
  
 ಪಾತರಗಿತ್ತಿ ಪಕ್ಕ 
 ನೋಡಿದೆನಾ ಅಕ್ಕ, 
  
 ಯಾರಿಗೂ ಹೇಳೋಣು ಬ್ಯಾಡ 
 ಹಾರಗುದುರಿ ಬೆನ್ನ ಏರಿ 
 ಸ್ವಾರರಾಗಿ ಕೂತು ಹಂಗ 
 ದೂರ ದೂರ ಹೋಗುನಂತಾ  

ಹೀಗೆ ಅವಕಾಶ ಸಿಕ್ಕಾಗಲೆಲ್ಲ ಬೇಂದ್ರೆಯವರ ಕೆಲವು ಹಾಡುಗಳನ್ನ ನಾನು ಕಲಿತೆ.  ಆದರೆ ಹಾಡು ಕೇಳುತ್ತ  ಬರೆದುಕೊಂಡ ಸಾಹಿತ್ಯವಾದ್ದರಿಂದ ಅವುಗಳಲ್ಲಿ ತುಂಬಾ ತಪ್ಪುಗಳಿರುತ್ತಿದ್ದವು, ತಪ್ಪು ಎಂದು ತಿಳಿದಿದ್ದು ಮೊದಲ ಬಾರಿ ಆಕಾಶವಾಣಿಯಲ್ಲಿ ಹಾಡಲು ಹೋದಾಗ.  ಆಗ ಜಿ ಕೆ ರವೀಂದ್ರಕುಮಾರ ಅವ್ರು ಕಾರವಾರ ಆಕಾಶವಾಣಿಯ ನಿರ್ದೇಶಕರಾಗಿದ್ದರು.  ನಾನು ಹತ್ತನೇ ತರಗತಿಯಲ್ಲಿದ್ದೆ ”ಪುಟ್ಟಾ ಎಷ್ಟ್ ಚಂದ ಹಾಡ್ತೀಯಾ, ಆದರೆ ಸಾಹಿತ್ಯ ಸರಿ ಇಲ್ಲದಿದ್ದರೆ ಅದು ಕೇಳುಗರಿಗೆ ಕಿರಿಕಿರಿ.  ನೀನು ಇನ್ನು ಕವನ ಸಂಕಲನಗಳನ್ನ ಓದಿ ಅಲ್ಲಿಂದಲೇ ಸಾಹಿತ್ಯ ಬರೆದುಕೋ.  ಮತ್ತೆ ಹಾಡುವುದಕ್ಕಿಂತ ಮೊದಲು ಹತ್ತು ಸರ್ತಿ ಆದರೂ ಓದು” ಅಂದರು.  ಈ ಘಟನೆಯನಂತರ ನನಗೆ ನನ್ನ ಪಪ್ಪಾ ತಂದುಕೊಟ್ಟ ಮೊದಲ ಕವನ ಸಂಕಲನ ”ಸಖೀಗೀತ” ಜೊತೆಗೆ ಕನ್ನಡದ ಹಲವು ಪ್ರಸಿದ್ಧ ಕವಿಗಳ ಕವನ ಸಂಕಲನಗಳು ನನ್ನ ಮನೆಗೆ ಬಂದವು.  ನನ್ನ  ಹಳೆಮನೆಯ ರೆಡ್ಆಕ್ಸಾಯ್ಡ್ ನೆಲದಮೇಲೆ ಕುಳಿತು..

  ಬಾ ಭೃಂಗವೇ ಬಾ, ವಿರಾಗಿಯಂದದಿ 
 ಭ್ರಮಿಸುವಿ ನೀನೇಕೆ ?
 ಕಂಪಿನ ಕರೆಯಿದು  ಸರಾಗವಾಗಿರೆ ,
 ಬೇರೆಯ ಕರೆ ಬೇಕೇ ?
  
 ಬರಲಿಹ ಕಾಯಿಯ ಪಾಡಿನ ರುಚಿಯು 
 ಇದರೊಳು ಮಡಗಿಹುದು 
 ನಾಳಿನ ಹಣ್ಣಿನ ರಸವಿಲ್ಲಿಯ ಮಕ-
 ರಂದದೊಳಡಗಿಹುದು  

ಮನದಲ್ಲಿ ಓದುತ್ತಿದ್ದಾಗ ಸಂಜೆಗೆ ಹಚ್ಚಿದ ಊದುಬತ್ತಿಯ ಘಮ, ಅಬ್ಬಲಿಹೂವಿನ ಮಾಲೆ ಕಟ್ಟುತ್ತ ಕುಳಿತಿದ್ದ ನನ್ನ ಅಮ್ಮನ ಚಿತ್ರ ಮನಸಲ್ಲಿ, ಮಾಸದೆ ಉಳಿದಿದೆ.

ನೀವು ಹುಬ್ಬಳ್ಳಿ ಮೂಲಕ ಧಾರವಾಡಕ್ಕ ಹೋಗುತ್ತಿರುವಾಗ ಸತ್ತೂರ ಡೆಂಟಲ್ ಕಾಲೇಜ್ ದಾಟಿದ ತಕ್ಷಣ ಒಂದು ಮುಸುಕು ಮುಸುಕಾದ , ಕೆಂಪುಮಣ್ಣಿನ ಧೂಳಿಯಲ್ಲಿ ಮಿಂದೆದ್ದ ಒಂದು ದೊಡ್ಡ ಫಲಕ ಕಾಣುತ್ತಿತ್ತು.  ‘ಸ್ವಾಗತ ನಿಮಗೆ ಧಾರಾನಗರಿಗೆ’ ಎಂದು ಶುರುವಾಗುವ ಆ ಬೋರ್ಡಿನಲ್ಲಿ … ‘ಬೇಂದ್ರೆ ನಡೆದಾಡಿದ ಊರಿಗೆ’ ಅಂತೇನೋ ಸಾಲು ಬರುತ್ತದೆ.  ಮೊದಲ ಬಾರಿ ಧಾರವಾಡದ ಕೋರ್ಟ್ ಸ್ಟಾಪ್ನಲ್ಲಿ ಇಳಿದಾಗ ನನಗೆ ನಾನು ಬೇಂದ್ರೆಯವರ ಊರಿಗೆ ಬಂದೆನೆಂಬ ಖುಶಿಯ ಹೊರತಾಗಿ ಮತ್ತಾವ ಭಾವವೂ ಇರಲಿಲ್ಲ. 

೨೦೦೪ ಪದವಿಯ ಕೊನೆ ವರ್ಷ, ನನ್ನ ಬೇಂದ್ರೆ ಪ್ರೀತಿ ನೋಡಿ ನೋಡಿ ಅವರಿಗೂ ಸಾಕಾಗಿತ್ತೋ ಏನೋ ನನ್ನ ಆತ್ಮೀಯ ಸ್ನೇಹಿತರಾದ್ ಶಿಲ್ಪಾ, ತ್ರಿಲೋಚನ್ ಇಬ್ಬರೂ ಸೇರಿ ನನ್ನನ್ನು ಸಾಧನಕೇರಿಯಲ್ಲಿರುವ ಬೇಂದ್ರೆ ಅಜ್ಜ ನ ಮನೆಗೆ ಕರೆದೊಯ್ದರು. 

ಅಲ್ಲಿ ಹೋಗುವ ತನಕ ಸರಿಯಿದ್ದ ನನಗೆ ಅದ್ಯಾಕೋ ಕಣ್ಣು ತುಂಬಿಕೊಂಡು ಅಳು ಶುರು ಆಯ್ತು.  ಅಲ್ಲೇ ಅವರ ಮನೆಯ ಇರುವ ಮರದ ತಂಪಿಗೆ ಕುಳಿತುಕೊಂಡು ಮಾತು ಆಡದೆ ಕುಳಿತಿದ್ದೆ.  ಆಗ ತ್ರಿಲೋಚನ್ ಒಂದು ಹೂ ಗುಚ್ಛ ಕೊಟ್ಟು ಅದರೊಂದಿಗೆ ಖಾಕಿ ಬಣ್ಣದ ಕವರ್ ಒಂದನ್ನ ಕೊಟ್ಟು ನೋಡು ಅಂದ , ತೆರೆದು ನೋಡಿದರೆ ಅದು ತ್ರಿಲೋಚನ್ ಕಂಪ್ಲಿ ಅವರ ತಂದೆ, ಕನ್ನಡ ನಾಡಿನ ಹೆಸರಾಂತ ಚಿತ್ರಕಾರ – ಛಾಯಾಚಿತ್ರಗ್ರಾಹಕ ಕೆ ಜಿ ಸೋಮಶೇಖರ್ ಅವರು ಸೆರೆಹಿಡಿದ, ಅವರ ಸಹಿಯುಳ್ಳ ಬೇಂದ್ರೆಯವರ ಕಪ್ಪು ಬಿಳುಪಿನ ಚಿತ್ರ.  ನಗುಮುಖದ ನನ್ನ ಬೇಂದ್ರೆ ಅಜ್ಜ ನನ್ನ ಕೈಯ್ಯಲ್ಲಿ.  ಅದಕ್ಕಿಂತ ಒಳ್ಳೆಯ ಉಡುಗೊರೆ ಏನಿದ್ದಿತು?

 ಭಾಷೆಗೆ ನಿಲುಕದ ಮಾತುಂಟು 
 ಮಾತಿಗೆ ನಿಲುಕದ ಭಾವವುಂಟು 
 ಭಾವಕ್ಕೂ ನಿಲುಕದ ಇನ್ನೇನೋ ಈ ಜಗದಲ್ಲುಂಟು 

”ಇನ್ನೇನೋ ” ಅನ್ನುವ ಆ ಅನುಭೂತಿಯ ಅನುಭವ ನನಗೆ!  ವಿವರಿಸುವ ವ್ಯರ್ಥ ಪ್ರಯತ್ನ ಮಾಡಲಾರೆ.  ಬೇಂದ್ರೆ ಅಜ್ಜನ ಭಾವ ಚಿತ್ರ ಮತ್ತು ನನಗೆ ಮೊತ್ತ ಮೊದಲ ಬಾರಿಗೆ ಸಿಕ್ಕ ಆ ಹೂ ಗುಚ್ಛ, ಎರಡೂ ನನ್ನ ಹಾರ್ಮೋನಿಯಂ ಪೆಟ್ಟಿಗೆಯಲ್ಲಿ ಬೆಚ್ಚಗಿವೆ. 

– ಅಮಿತಾ ರವಿಕಿರಣ್

***************************************************************

ಬೇಂದ್ರೆ ಅಜ್ಜನಿಗೊಂದು ಗಾನ-ನಮನ – ಅಮಿತಾ ರವಿಕಿರಣ್ ಮತ್ತು ಸುಮನಾ ಧ್ರುವ

ಪ್ರಿಯ ಓದುಗರೇ, ಮೇಲಿನ ಮೂರೂ ಬರಹಗಳನ್ನು ಓದಿ ಕಣ್ಣು-ಮನಸಿಗಾದ ಆನಂದವನ್ನು ಸಂಪೂರ್ಣವಾಗಿಸಲು ಕಿವಿಗೊಂದಷ್ಟು ಬೇಂದ್ರೆ ಗಾನಾಮೃತ ಬೇಕೇ? “ಅದಿಲ್ಲಂದ್ರ ಹ್ಯಾಂಗರೀ?” ಅಂತೀರಾ? ಬರ್ರಿ, ಹಂಗಾದರ ನಮ್ಮ ಅನಿವಾಸಿ ಸಂಗೀತಗಾರ್ತಿಯರಾದ ಅಮಿತಾ ರವಿಕಿರಣ್ ಮತ್ತು ಸುಮನಾ ಧ್ರುವ ಅವರ ಮಧುರ ಧ್ವನಿಗಳಲ್ಲಿ “ಬೇಂದ್ರೆ ಸಂಗೀತ” ಲೋಕದ ಓಪನ್ ಟಾಪ್ ಬಸ್ ಟೂರ್ ಮಾಡೋಣ; ಬೇಂದ್ರೆಯವರ ಕವಿತಾ ಭಂಡಾರದ ಒಂದಷ್ಟು ಶಾಂಪಲ್ಲು ನೊಡೋಣ! – ಸಂಪಾದಕ.

ಬೇಂದ್ರೆ ನಮನ – ಗಾಯನ. ಸುಮನಾ ಧ್ರುವ ಮತ್ತು ಅಮಿತಾ ರವಿಕಿರಣ್ (https://youtu.be/9SB9qGGqrb4)

*********************************************************************************************************

‘Black Lives Matter’ – ಅನಿವಾಸಿಗಳ ಅನುಭವಗಳು

‘Black lives matter’ (ಕರಿಯರ ಜೀವಗಳಿಗೂ ಬೆಲೆಯಿದೆ) ಈ ಪದಪುಂಜ ಕಣ್ಣ ಮುಂದೆ ತರುವುದು, ಆಗಾಗ ಸುದ್ದಿವಾಹಿನಿಗಳಲ್ಲಿ ಬರುವ ಅಮೆರಿಕಾದ ಕರಿಯರ ಮೇಲಿನ ಪೋಲೀಸರ ಅತ್ಯಾಚಾರಗಳಷ್ಟೇ ಇರಲಿಕ್ಕಿಲ್ಲ. ಅವರವರ ಜೀವನದಲ್ಲಿ ನಡೆದ, ಕೇಳಿದ, ನೋಡಿದ ಘಟನೆಗಳೂ ಇರಬಹುದು. ಈ ರೀತಿಯ ಘಟನೆಗಳು ಆಯಾ ದೇಶದ ರಾಜಕೀಯ-ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಆಗಾಗ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ಆಗಬಹುದು. ೯/೧೧ ಆದಾಗಿನಿಂದ ಹೆಚ್ಚಾಗಿದೆಯೇನೋ ಅನ್ನಿಸಿದರೂ, ಈ ರೀತಿಯ ನಡುವಳಿಕೆ ಮುಂಚಿನಿಂದಲೂ ಇದ್ದೇ ಇದೆಯಲ್ಲವೆ? ಅನಿವಾಸಿ ಬಳಗದ ಇಬ್ಬರು ಸದಸ್ಯರು, ಶ್ರೀವತ್ಸ ದೇಸಾಯಿ ಮತ್ತು ಉಮಾ ವೆಂಕಟೇಶ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. – ಎಲ್ಲೆನ್ ಗುಡೂರ್ (ಸಂ.)

Black Lives Matter – ಉಮಾ ವೆಂಕಟೇಶ್

೯ ಸೆಪ್ಟೆಂಬರ್ ೨೦೦೧, ಅಮೆರಿಕೆಯ ಇತಿಹಾಸದ ಪುಟಗಳಲ್ಲಿ ಕರಾಳವಾದ ದಿನ. ನನ್ನ ಗಂಡ ಸತ್ಯಪ್ರಕಾಶ್ ಬರ್ಲಿನ್ನಿನಲ್ಲಿ ತಮ್ಮ ಒಂದು ವರ್ಷದ ಸಬಾಟಿಕಲ್ ಸಮಯವನ್ನು ಅಲ್ಲಿನ ಮ್ಯಾಕ್ಸ್ ಪ್ಲಾಂಕ್ ಸಂಶೋಧನಾ ಸಂಸ್ಥೆಯಲ್ಲಿ ಕಳೆಯಲು ನಿರ್ಧರಿಸಿದ್ದರು. ಹಾಗಾಗಿ ನಾವು ಬರ್ಲಿನ್ನಿಗೆ ಹೋಗಿ ಅಲ್ಲಿ ನಮ್ಮ ವಾಸ್ತವ್ಯಕ್ಕೆ ಬೇಕಾದ ಸಿದ್ಧತೆಯಲ್ಲಿದ್ದೆವು. ಬರ್ಲಿನ್ ನಗರದ ಪೂರ್ವಭಾಗದಲ್ಲಿರುವ, ಪಾಟ್ಸಡ್ಯಾಮ್ ಟೌನಿನಲ್ಲಿರುವ, ಡಾಯ್ಚ್ ಬ್ಯಾಂಕಿನಲ್ಲಿ ನಮ್ಮ ಅಕೌಂಟ್ ತೆರೆಯಲು ಸರತಿಯಲ್ಲಿ ಕಾಯುತ್ತಿದ್ದೆವು. ಅಲ್ಲೇ ಇದ್ದ ಟಿವಿಯಲ್ಲಿ ಬರುತ್ತಿದ್ದ CNN world ಸಮಾಚಾರದ ಕಡೆಗೆ ಆಗಾಗ ನಮ್ಮ ದೃಷ್ಟಿಯನ್ನೂ ಹರಿಸಿದ್ದೆವು. ಇದ್ದಕ್ಕಿದ್ದಂತೆ, ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಕಟ್ಟಡದ ಉತ್ತರದ ಗೋಪುರಕ್ಕೆ ವಿಮಾನವೊಂದು ಬಂದಪ್ಪಳಿಸಿ, ಆ ಗೋಪುರ ಕುಸಿಯುವ ದೃಶ್ಯವನ್ನು ತೋರಿಸಿದರು. ನಾವೆಲ್ಲಾ, ಇದ್ಯಾವುದೋ ಬಿಡುಗಡೆಯಾಗಲಿದ್ದ ಹೊಸ ಹಾಲಿವುಡ್ ಚಿತ್ರದ ಟ್ರೈಲರ್ ಇರಬಹುದೆಂದು ತಿಳಿದು ಸುಮ್ಮನಿದ್ದೆವು. ಆದರೆ ಸ್ವಲ್ಪ ಕ್ಷಣದಲ್ಲೇ ಮತ್ತೊಂದು ವಿಮಾನ ಟ್ರೇಡ್ ಸೆಂಟರ್ ಕಟ್ಟಡದ ದಕ್ಷಿಣ  ಗೋಪುರಕ್ಕೆ ಬಡಿದು ಅದೂ ಕುಸಿಯಲಾರಂಭಿಸಿತು. ನಾನು ನನ್ನ ಗಂಡ ಇದೇನಾಗುತ್ತಿದೆ ಎಂದು ಯೋಚಿಸುತ್ತಿರುವಾಗಲೇ, ಬ್ಯಾಂಕಿನ ಕ್ಲರ್ಕ್ ನಮ್ಮನ್ನು ಒಳಗೆ ಕರೆದಳು. ನಾವು ಕುತೂಹಲದಿಂದ ಟಿವಿ ಕಡೆಗೆ ಕೈ ತೋರಿಸಿದಾಗ, ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದ ಆಕೆ, ನ್ಯೂಯಾರ್ಕಿನಲ್ಲಿ ಘಟಿಸುತ್ತಿದ್ದ ಆಂತಂಕವಾದಿ ಆಕ್ರಮಣದ ಬಗ್ಗೆ ನಮಗೆ ತಿಳಿಸಿದಾಗ ದಿಗ್ಬ್ರಮೆಯಾಯಿತು. ಮುಂದಿನ ಹಲವಾರು ವಾರಗಳ ಕಾಲ ಕೇವಲ ಆ ಕರಾಳ ಘಟನೆಯಿಂದ ಪ್ರಪಂಚದಾದ್ಯಂತ ನಡೆದ ಘಟನೆಗಳು ಈಗ ಇತಿಹಾಸದ ಪುಟಗಳಲ್ಲಿ ಸೇರಿಹೋಗಿವೆ. ಆದರೆ ೨೦೦೧ರ ಆ ಆತಂಕವಾದದ ಘಟನೆಯ ನಂತರ ಪ್ರಪಂಚ ಮೊದಲಿನಂತಿಲ್ಲ. ಎಲ್ಲವೂ ಬದಲಾಯಿಸಿತು. ಒಂದು ದೇಶದ ಜನ, ಮತ್ತೊಂದು ದೇಶದ ವರ್ಣದವರನ್ನು ನೋಡುವ ದೃಷ್ಟಿಯೇ ಬದಲಾಯಿಸಿತು. ಈ ಘಟನೆಯ ನಂತರ ಮುಸ್ಲಿಮ್ ಜನಾಂಗ ಅನುಭವಿಸಿದ ಕಷ್ಟ, ದ್ವೇಷದ ನಡವಳಿಕೆಗಳನ್ನು ಇನ್ನೂ ನೋಡುತ್ತಲೇ ಇದ್ದೀವಿ. ಅಮೆರಿಕೆಯಲ್ಲಿ, ಸ್ಥಳೀಯ ಸಂಕುಚಿತ ಮನೋಭಾವದ ಬಿಳಿಯರು, ಆ ಘಟನೆಯ ತರುವಾಯ ಕಂದುಬಣ್ಣದ ಏಶಿಯನ್ ಜನಾಂಗದವರೊಡನೆ ಬಹಳ ಕೆಟ್ಟದಾಗಿ ವರ್ತಿಸಿದ್ದರು ಎಂದು ಕೇಳಿದ್ದೆವು.

ಇದಾಗಿ ನಾಲ್ಕು ವರ್ಷಗಳ ನಂತರ, ೨೦೦೫ರಲ್ಲಿ ನನ್ನ ಗಂಡ ಕಾರ್ಡಿಫ಼್ ವಿಶ್ವವಿದ್ಯಾಲಯದ ತಮ್ಮ ಪಿ.ಎಚ್.ಡಿ ವಿದ್ಯಾರ್ಥಿಗಳು ಮತ್ತು ಪೋಸ್ಟ್ ಡಾಕ್ಟರಲ್ ಸಂಶೋಧಕರೊಂದಿಗೆ, ಲೂಸಿಯಾನ ರಾಜ್ಯದಲ್ಲಿರುವ, ನ್ಯೂ ಓರ್ಲಿಯನ್ಸ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದ ಕಾನ್ಫ಼ರೆನ್ಸ್ ಒಂದಕ್ಕೆ ಹೋಗಿದ್ದರು. ಏರ್ ಪೋರ್ಟಿನಿಂದ ಬಾಡಿಗೆ ಕಾರಿನಲ್ಲಿ ತಮ್ಮ ವಿದ್ಯಾರ್ಥಿಗಳ ಜೊತೆ ತಾವೇ ಕಾರು ಚಲಾಯಿಸುತ್ತಾ ಹೈವೇನಲ್ಲಿ ಹೋಗುತ್ತಿದ್ದಾಗ ನಡೆದ ಒಂದು ಘಟನೆ ನೇರವಾಗಿ ವರ್ಣೀಯ ದ್ವೇಷಕ್ಕೆ ಸಂಬಂಧಿಸಿದ್ದು. ಅಮೆರಿಕೆಯ ಹಲವಾರು ದಕ್ಷಿಣದಲ್ಲಿರುವ ರಾಜ್ಯಗಳಲ್ಲಿ, ಪೋಲೀಸ್ ಆಫೀಸರುಗಳು ಬಹಳ ನಿರ್ದಯರು ಎನ್ನುವುದನ್ನು ನಮ್ಮ ಗೆಳೆಯರ ಬಾಯಿಂದ ಕೇಳಿದ್ದೆವು.  ಕೈಯಲ್ಲಿರುವ ಗನ್ ಅಥವಾ ಪಿಸ್ತೂಲನ್ನು ಚಲಾಯಿಸಲು ಅವರು ಹಿಂದೆಮುಂದೆ ನೋಡುವುದಿಲ್ಲ ಎನ್ನುವ ವಿಷಯವೂ ನಮಗೆ ತಿಳಿದಿತ್ತು. ಹಾಗಾಗಿ ನನ್ನ ಗಂಡ ಸತ್ಯಪ್ರಕಾಶ್, ವೇಗದ ಮಿತಿಯನ್ನು ಸ್ವಲ್ಪವೂ ಮೀರದಂತೆ, ಬಹಳ ಎಚ್ಚರಿಕೆಯಿಂದ ಕಾರನ್ನು ಚಲಾಯಿಸುತ್ತಿದ್ದರಂತೆ. ಸುಮಾರು ಒಂದೂವರೆ ಗಂಟೆ ದೂರದ ಅವರ ಪ್ರಯಾಣದಲ್ಲಿ, ಮೊದಲು ಅರ್ಧ ಗಂಟೆ ಯಾವ ತೊಂದರೆಯೂ ಆಗಲಿಲ್ಲ. ನಂತರ ಇದ್ದಕಿದ್ದಂತೆ ಅವರ ಮುಂದೆ ಒಂದು ಪೋಲೀಸ್ ಕಾರ್ ವೇಗವಾಗಿ ದಾಟಿ ಹೋಯಿತು. ಅದನ್ನು ನೋಡಿ ಸತ್ಯ, ಯಾವುದೋ ಆಕ್ಸಿಡೆಂಟ್ ಆಗಿರಬೇಕು, ಸರಿ ಇನ್ನು ತಮ್ಮ ಪ್ರಯಾಣಕ್ಕೆ ಅಡಚಣೆ ಇದೆ ಎಂದು ತಮ್ಮ ಜೊತೆಯಲ್ಲಿದ್ದ ವಿದ್ಯಾರ್ಥಿಗಳನ್ನು ಎಚ್ಚರಿಸಿದರಂತೆ. ಸುಮಾರು ೧೦ ಗಂಟೆಯ ವಿಮಾನ ಪ್ರಯಾಣದಲ್ಲಿ ನಿದ್ದೆಗೆಟ್ಟಿದ್ದ ಅವರೆಲ್ಲಾ ತೂಕಡಿಸುತ್ತಿದ್ದಾಗಲೇ, ಮತ್ತೊಂದು ಪೋಲೀಸ್ ಕಾರ್ ಇವರ ಬೆನ್ನಟ್ಟಿ ಬಂದು, ಕಾರನ್ನು ಪಕ್ಕದ ಹಾರ್ಡ್ ಶೋಲ್ಡರಿನಲ್ಲಿ ನಿಲ್ಲಿಸಬೇಕೆಂದು ಆಣತಿ ಇತ್ತಾಗ, ಸತ್ಯ ಅವರಿಗೆ ಸ್ವಲ್ಪ ಆಶ್ಚರ್ಯವಾಯಿತು. ವೇಗದ ಮಿತಿಯಲ್ಲೇ ಹೋಗುತ್ತಿದ್ದೇನೆ, ಆದರೂ ಇದೇಕೆ ತನ್ನನ್ನು ತಡೆಹಾಕುತ್ತಿದ್ದಾರೆ ಎಂದು ಸ್ವಲ್ಪ ಗಾಬರಿಯೂ ಆಯಿತು. ಸರಿ ವಾಹನದಿಂದ ಕೆಲಗಿಳಿದು ಬಂದ ಪೋಲೀಸ್ ಅಧಿಕಾರಿ, ಸತ್ಯ ಅವರನ್ನು ಕಾರಿನಿಂದ ಹೊರಗೆ ಬರಬೇಕೇಂದು ಆಣತಿ ಇತ್ತಾಗ ಅವರ ವಿದ್ಯಾರ್ಥಿಗಳೂ ಗಾಬರಿಗೊಂಡರು. ಸತ್ಯ ಕೆಳಗಿಳಿದು ತಮ್ಮ ಲೈಸೆನ್ಸ್, ಪಾಸ್ಪೋರ್ಟ್ ಎರಡನ್ನೂ ತೋರಿಸಿದಾಗ, ಅದನ್ನು ಸರಿಯಾಗಿ ನೋಡದೆ, ನೀನು ಎಲ್ಲಿಗೆ ಹೋಗುತ್ತಿರುವೆ? ನಿನ್ನ ಜೊತೆಯಲ್ಲಿರುವವರು ಯಾರು? ನಿನ್ನ ವೃತ್ತಿಯೇನು? ನಿನ್ನ ಧರ್ಮ ಯಾವುದು? ನೀನು ಮುಸ್ಲಿಮ್ ಜನಾಂಗಕ್ಕೆ ಸೇರಿದವನೇ? ನಿನ್ನ ಕಾರಿನಲ್ಲಿ ಬಾಂಬ್ ಇದೆಯೇ? ನೀನೊಬ್ಬ ಉಗ್ರವಾದಿಯೇ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದನಂತೆ. ಅಮೆರಿಕೆಯ ದಕ್ಷಿಣ ರಾಜ್ಯಗಳಲ್ಲಿ ಪೋಲೀಸ್ ಅಧಿಕಾರಿಗಳು ಭ್ರಷ್ಟರು, ಒಂದು ರೀತಿಯಲ್ಲಿ ಲೈಸೆನ್ಸ್ ಗೂಂಡಾಗಳಿದ್ದಂತೆ ಎಂದು ಕೇಳಿದ್ದರಿಂದ ಎಲ್ಲಾ ಪ್ರಶ್ನೆಗೂ ಸಮರ್ಪಕವಾಗಿಯೇ ಉತ್ತರಿಸಿದ ಸತ್ಯಪ್ರಕಾಶ್, ಧರ್ಮದ ಪ್ರಶ್ನೆಗೆ ತಾವು ಒಬ್ಬ ನಾಸ್ತಿಕ ಎಂದು ಉತ್ತರಿಸಿದಾಗ, ಪೋಲೀಸ್ ಅಧಿಕಾರಿಗೆ ಇಷ್ಟವಾಗಲಿಲ್ಲ. ನೀನು ಹೇಳುತ್ತಿರುವುದು ಸುಳ್ಳು, ಎಲ್ಲಾ ವ್ಯಕ್ತಿಗಳಿಗೂ ಒಂದು ಧರ್ಮವಿದ್ದೇ ಇರುತ್ತದೆ ಎಂದು ದಬಾಯಿಸಿದಾಗ, ಸತ್ಯಪ್ರಕಾಶ್, ಇರಬಹುದು, ಆದರೆ ನಾನೊಬ್ಬ ಭೌತಶಾಸ್ತ್ರ ವಿಜ್ಞಾನಿ, ನನಗೆ ಯಾವ ದೇವರೂ ಮತ್ತು ಧರ್ಮದಲ್ಲಿ ನಂಬಿಕೆಯಿಲ್ಲ ಎಂದಾಗ, ಅದು ಸರಿಯಲ್ಲ. ನೀನು ಧರ್ಮನ್ನು ಪಾಲಿಸಬೇಕು. ಅದೇ ಸರಿಯಾದ ದಾರಿ. ಇಲ್ಲದಿದ್ದರೆ ಹೀಗೆ ತೊಂದರೆಗೆ ಸಿಕ್ಕಿಬೀಳುತ್ತೀಯಾ ಎಂದು ಗದರಿದನಂತೆ. ಕಡೆಗೊಮ್ಮೆ ಸತ್ಯನನ್ನು ಬಿಟ್ಟ ನಂತರ, ಅವರ ಜೊತೆಯಲ್ಲಿದ್ದ ಫ಼್ರಾನ್ಸ್ ದೇಶದ ವಿದ್ಯಾರ್ಥಿಯನ್ನು ಕಾರಿನಿಂದ ಹೊರಕ್ಕೆ ಇಳಿಸಿ, ಅವನನ್ನೂಇದೇ ರೀತಿ ಅಸಬಂದ್ಧವಾಗಿ ಪ್ರಶ್ನಿಸಿ, ಕಡೆಗೊಮ್ಮೆ ಅವರನ್ನು ಬೆದರಿಸಿ ಹೊರಟುಹೋದನಂತೆ. ಇದು ಸುಮಾರು ಒಂದು ಗಂಟೆಯ ಕಾಲ ನಡೆದ ಘಟನೆ. ಕಾರಿನಲ್ಲಿದ್ದ ಅವರ ಇತರ ವಿದ್ಯಾರ್ಥಿಗಳು ಹೆದರಿ ನಡುಗಿದ್ದರಂತೆ. ಅವರೆಲ್ಲರ ಕಣ್ಗಳೂ, ಪೋಲೀಸ್ ಅಧಿಕಾರಿಯ ಪಿಸ್ತೂಲ್ ಕಡೆಗೇ ಇತ್ತಂತೆ. ಎಲ್ಲಾದರೂ ಅವನು ತಲೆಕೆಟ್ಟು ಗುಂಡು ಹಾರಿಸಿದರೇನು ಗತಿ ಎಂದು ಹೆದರಿ ಹಣ್ಣಾಗಿದ್ದ ಅವರು ಕಡೆಗೆ ಕಾನ್ಫ಼ರೆನ್ಸ್ ಸ್ಥಳಕ್ಕೆ ತಡವಾಗಿ ತಲುಪಿದಾಗ ಅವರ ಮನಸ್ಸು ತಲ್ಲಣವಾಗಿತ್ತು. ಅಲ್ಲಿನ ವಿಶ್ವವಿದ್ಯಾಲಯದ ಅವರ ಸಹೋದ್ಯೋಗಿಗಳು, ವಿಷಯ ತಿಳಿದು ನಾಚಿಕೆ ಮತ್ತು ಅವಮಾನದಿಂದ ತಲೆತಗ್ಗಿಸಿ ಕ್ಷಮೆ ಕೋರಿದ್ದರೆಂದು ಸತ್ಯ ತಿಳಿಸಿದ್ದು ನೆನಪಿದೆ. ಇದೊಂದೇ ಬಾರಿ ಅಲ್ಲ. ಸತ್ಯ ಅವರ ವೃತ್ತಿ ಜೀವನದಲ್ಲಿ ಇಂತಹ ಘಟನೆಗಳು ಅನೇಕ ಬಾರಿ ಜರುಗಿವೆ. ಏರ್ಪೋರ್ಟಿನಲ್ಲಂತೂ ಅವರನ್ನು ಪ್ರತೀ ಬಾರಿ ವಿಶೇಷವಾದ ತಪಾಸಣೆಗೊಳಪಡಿಸುತ್ತಾರೆ. ಇದು ವರ್ಣದ್ವೇಷವಲ್ಲದೇ ಮತ್ತೇನು? ಕೇವಲ ಮನುಷ್ಯನ ಬಣ್ಣ ಮತ್ತು ಅವನ ಸಂತತಿಯನ್ನು ನೋಡಿ ಅವನನ್ನು ಅವಮಾನಪಡಿಸುವುದು ಯಾವ ನ್ಯಾಯ? ಇಂದಂತೂ ಅಮೆರಿಕೆಯಲ್ಲಿ ಆಫ಼್ರಿಕನ್ ಮೂಲದ ಅಮೆರಿಕನ್ನರನ್ನು ಇನ್ನೂ ಅನ್ಯಾಯವಾಗಿ ಹಿಂಸೆಗೊಳಪಡಿಸಿ ಅವರನ್ನು ಕೊಲ್ಲುವ ಅಮಾನುಷ ಕೃತ್ಯ ಮುಂದುವರೆದಿದೆ. ಮಾನವ ಎಷ್ಟು ತಂತ್ರಜ್ಞಾನ ಮತ್ತು ವಿಜ್ಞಾನದಲ್ಲಿ ಮುಂದುವರೆದರೇನು? ಮಾನವಿಕ ಮೌಲ್ಯಗಳನ್ನು ಕಳೆದುಕೊಂಡು ಪಶುವಿನ ರೀತಿಯಲ್ಲಿ ವರ್ತಿಸುತ್ತಲೇ ಇದ್ದಾನೆ. ಇದು ನಮ್ಮ ಮಾನವ ಕುಲಕ್ಕೇ ಅವಮಾನ.

– ಉಮಾ ವೆಂಕಟೇಶ್.

***********************************************************************

 Black Lives Matter:  ನನ್ನ ಅನುಭವ – ಶ್ರೀವತ್ಸ ದೇಸಾಯಿ

ಇದೇ ವರ್ಷ(2020) ಮೇ ತಿಂಗಳಲ್ಲಿ ಅಮೇರಿಕದ ಮಿನ್ನಿಯಾಪೋಲಿಸ್ ನಲ್ಲಿ ಜಾರ್ಜ್ ಫ್ಲಾಯ್ಡ್ ಎನ್ನುವ ಕರಿಯ ಮನುಷ್ಯನ ಹತ್ಯೆಯಾದ ಮೇಲೆ Black Lives Matter (2013 ರಲ್ಲೇ ಸ್ಥಾಪನೆಯಾಗಿತ್ತು) ಎನ್ನುವ ಘಟಕದ ಪ್ರತಿಭಟನೆ, ಆಂದೋಲನಗಳು ಜಗತ್ತಿನಲ್ಲಿ ಎಲ್ಲ ಕಡೆ ಹರಡಿತು. ಇದೇ ಜೂನ್ ತಿಂಗಳಲ್ಲಿ ”ಅನಿವಾಸಿ’ಯ ಸಂಪಾದಕರು ಓದುಗರ ಅನುಭವಗಳ ಬಗ್ಗೆ ಬರೆಯಲು ಕರೆ ಕೊಟ್ಟರು. ಆಗ ಅವಿತುಕೊಂಡಿದ್ದ ಎರಡು ಅನುಭವಗಳನ್ನು ಹೆಕ್ಕಿ ತೆಗೆದೆ.

ರೇಸಿಸಂ (racism, racialism) ಎಲ್ಲಕಡೆಗೆ, ಬಹುಕಾಲದಿಂದ ಕಂಡುಬರುತ್ತದೆ. ಆಗಾಗ ಈ ವರ್ಣಭೇದ ಅಥವಾ ಜನಾಂಗಗಳಲ್ಲಿಯ ಪಕ್ಷಪಾತ ಧೋರಣೆಯ ಬಗ್ಗೆ ಪ್ರತಿಭಟನೆಗಳು ಕಾರಣಾಂತರಗಳಿಂದ ತಲೆಯೆತ್ತಿ ಕಾಡುತ್ತಾ ಬಂದಿವೆ. ಹತ್ತೊಂಬತ್ತು ನೂರಾ ಎಪ್ಪತ್ತರ ದಶಕದಲ್ಲಿ ಯು ಕೆ ಗೆ ಬಂದ ನಾನು ಹಲವಾರು ಸಣ್ಣ ಪುಟ್ಟದಾದ ಎಂದು ಅನಿಸಿದರೂ, ಒಂದೆರಡು ಮನಸ್ಸಿಗೆ ನೋವು ಮಾಡುವಂತ ಘಟನೆಗಳನ್ನು ಅನುಭವಿಸಿದ್ದರೂ, ನೆನಪಿನ ಮೂಲೆಯಲ್ಲಿ ಒತ್ತಿ ಬದುಕುತ್ತಾ ಬಂದಿದ್ದೇನೆ. ಇತ್ತೀಚಿನ ಘಟನೆಗಳು ಮತ್ತು ಈ ಆಹ್ವಾನದಿಂದ ಆ ನೆನಪುಗಳು ಮತ್ತೆ ಮರುಕಳಿಸಿವೆ.

 1940ರ ಕಾಲದಿಂದಲೂ ದಕ್ಷಿಣ ಏಶಿಯಾದ ವಲಸಿಗ ಡಾಕ್ಟರುಗಳು (ಭಾರತ, ಪಾಕಿಸ್ತಾನ, ಸಿಂಹಳ, ಅಥವಾ ದೂರ ಪ್ರಾಚ್ಯ ದೇಶದವರು) ಈ ದೇಶದಲ್ಲಿ ನ್ಯಾಶನಲ್ ಹೆಲ್ಥ್ ಸರ್ವಿಸ್ (NHS) ದಲ್ಲಿ ಕೆಲಸಮಾಡುತ್ತ ಬಂದಿದ್ದಾರೆ. 1960-70ರ ದಶಕಗಳಲ್ಲಿ ಆ ಸಂಖ್ಯೆ ಹೆಚ್ಚಾದಾಗ ಜನರಲ್ಲಿ ಈ ಭೇದ ಭಾವನೆ ಹೆಚ್ಚಾದಂತೆ ನನ್ನ ಅನಿಸಿಕೆ. ಆಗ ಈದೇಶದ ಬಿಳಿಯರಲ್ಲಿ ಪಾಕಿಸ್ತಾನ, ಭಾರತೀಯ ಮತ್ತಿತರ ಕಂದು-ಕಪ್ಪು ಚರ್ಮದ ವೈದ್ಯರುಗಳು ಮತ್ತಿತರ ಸಿಬ್ಬಂದಿಗಳು ಎರಡನೆಯ ದರ್ಜೆಯವರು ಅನ್ನುವ ಭಾವನೆ ಇತ್ತು.

1) 1970  ಆಸು ಪಾಸು, ಆಸ್ಪತ್ರೆಯಲ್ಲಿ.

1970ರ ಮಧ್ಯದಲ್ಲಿ ಉಚ್ಚ ಶಿಕ್ಷಣಕ್ಕಾಗಿ ನಾನು ಈ ದೇಶಕ್ಕೆ ಬಂದೆ.ಭಾರತದಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದು, ನಂತರ ನನ್ನ ಸ್ಪೆಷಾಲಟಿಯಲ್ಲಿ (ಕಣ್ಣಿನ ರೋಗಗಳ ವಿಷಯಗಳಲ್ಲಿ)  ಸಾಕಷ್ಟು ಅನುಭವವಿದ್ದರೂ ನಾನು FRCS ಡಿಗ್ರಿಗೆ ಓದುವಾಗ ವೇಲ್ಸ್ ಪ್ರಾಂತದಲ್ಲಿ ಆಗ ಜೂನಿಯರ್ ಡಾಕ್ಟರ್ ಅಂತ ಕೆಲಸ ಮಾಡುತ್ತಿದ್ದಾಗ ಆದ ಮೊದಲ ಅನುಭವ. ಒಂದೆರಡು ಸಲ ಮುಂದೆಯೂ ಇಂಥ ಘಟನೆಗಳು ಆದವು. ಹಿಂದಿನ ದಿನ ಬಿಬಿಸಿ ಟೆಲಿವಿಷನ್, ಮತ್ತು ಆ ದಿನದ ಸುದ್ದಿ ಮಾಧ್ಯಮಗಳಲ್ಲಿ ಒಬ್ಬ ವರ್ಣೀಯ ಡಾಕ್ಟರು ’’ತನ್ನ ವೃತ್ತಿಯಲ್ಲಿ ಮಾಡಿದ ತಪ್ಪಿನಿಂದ ಆದ ಹಾನಿ, ಆ ’ಅಪರಾಧ’ಕ್ಕೆ ಮೆಡಿಕಲ್ ಕೌನ್ಸಿಲ್ ಗೆ ದೂರು” ಅನ್ನುವ ಸುದ್ದಿ ಬಿತ್ತರಣೆಯಾಗಿತ್ತು. ಮರುದಿನ ಬೆಳಿಗ್ಗೆ ಆಸ್ಪತ್ರೆಗೆ ಅಪಾಯಿಂಟ್ಮೆಂಟ್ ಬಂದ ರೋಗಿಗಳು ನನ್ನನ್ನು ’ಕರಿಯ’ ಡಾಕ್ಟರೆಂದು ನೋಡಲು ನಿರಾಕರಿಸಿದರು. ಮೊದಲನೇ ಇಂಥ ಅನುಭವದಿಂದ ಸ್ವಾಭಿಮಾನಕ್ಕೆ ಕೊಡಲಿಪೆಟ್ಟು ಬಿದ್ದಂತಾಯಿತಾದರೂ ಆಗ ಪ್ರತಿಭಟಿಸುವ ಸಾಧ್ಯತೆಯೇ ಇರದ್ದರಿಂದ ಬಂದ ಹೊಸತರಲ್ಲಿ ಶಾಂತಿಯಿಂದ ನುಂಗಿಕೊಳ್ಳಬೇಕಾಯಿತು. ಮೊದಲೆರಡು ಸಲ ಇದನ್ನು ಸಹಿಸುವದು ಕಷ್ಟವಾದರೂ ಉಪಾಯವಿಲ್ಲದೆ ಆ ವ್ಯಕ್ತಿಗಳನ್ನು ನನ್ನ ವರಿಷ್ಠರಾದ ’ಬಿಳಿಯ ಕನ್ಸಲ್ಟಂಟನ’ ಕಡೆಗೇ ತಪಾಸಣೆ ಯಾ ಚಿಕಿತ್ಸೆಗೆ ಕರೆದೊಯ್ಯಲು ನರ್ಸ್ ಗೆ ಹೇಳ ಬೇಕಾಗುತ್ತಿತ್ತು. ಒಂದೆರಡು ತಿಂಗಳ ನಂತರ ಇನ್ನೊಮ್ಮೆ ಇದೇ ತರಹ ಘಟನೆ ನಡೆದಾಗ, ತನಗೆ ಆಗಲೇ ಆ ದಿನದ  ರೋಗಿಗಳ ’’ಫುಲ್ ಲಿಸ್ಟ್ ಅಪ್ಪಾಯಿಂಟಮೆಂಟ್ಸ್” ಇರುವಾಗ ಪಾಪ ಆತನಾದರೂ ಏನು ಮಾಡಿಯಾನು? ಈಗಾಗಲೇ ಆ ಹಿರಿಯ ವೈದ್ಯ ಕನ್ಸಲ್ಟಂಟನಿಗೆ ನನ್ನ ಕೆಲಸದಲ್ಲಿ ಪೂರ್ತಿ ವಿಶ್ವಾಸವಿದ್ದುದರಿಂದ ರೋಗಿಗಳಿಗೆ ಆತ ಹೇಳಿದ ಮಾತು: ”ಈತ ನುರಿತ ಡಾಕ್ಟರ್. ನನಗೇ ಏನಾದರೂ ಕಾಯಿಲೆ ಆದಲ್ಲಿ ಈತನಿಂದಲೆ ನನಗೇ ಚಿಕೆತ್ಸೆಮಾಡಿಸಿಕೊಳ್ಳುವಷ್ಟು ನಂಬಿಕೆಯಿದೆ ಈತನ ಮೇಲೆ. ಇಂದು ಆತನನ್ನೇ ನೋಡಬಹುದಲ್ಲ. ಮುಂದಿನ ಸಲ ನೋಡೋಣ.” ಹಾಗೆ ಹೇಳಿ ಮತ್ತೆ ವಾಪಸ್ ನನ್ನ ಕಡೆಗೇ ಕಳಿಸಿ ಸಮಸ್ಯೆಯನ್ನು ಬಗೆಹರಿಸಿದ್ದಲ್ಲದೆ ನನಗೆ ಸರ್ಟಿಫಿಕೇಟ್ ಸಹ ಕೊಟ್ಟಂತೆ ನನಗೆ ಅನಿಸಿತು. ಅದು ಬರೀ ತೋರಿಕೆಯೇ ಅಲ್ಲ ತಾನೆ ಅಂತ ಆಗ ನನಗೆ ಅನಿಸಲೂ ಇಲ್ಲ. ಇಂಥ ಅನೇಕ ಘಟನೆಗಳನ್ನು ನಮ್ಮ ಸಹೋದ್ಯೋಗಿಗಳು ಮತ್ತು ಬೇರೆ ಊರುಗಳಲ್ಲಿಯ ಮಿತ್ರರು ಆಗಿನ ಸಮಯದಲ್ಲಿ ಅನುಭವಿಸಿದ್ದು ಈಗ ನೆನಪಾಗುತ್ತದೆ. ಈಗ ಕಾಲ ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜನಸಾಮಾನ್ಯರಿಗೆ ನಮ್ಮವರ ವೈದ್ಯಕೀಯ ಪರಿಣಿತಿಯ ಬಗ್ಗೆ ಅರಿವಾಗಿದ್ದರೂ ಒಮ್ಮೊಮ್ಮೆ ’ಅಜ್ಞಾನಿಗಳು’ ಆಗಾಗ ಇನ್ನೂ ಸವಾಲೊಡ್ಡುತ್ತಿರುತ್ತಾರೆ ಎಂದು ನನ್ನ ಗ್ರಹಿಕೆ.

2) 1992ರ ಸುಮಾರು ನಡೆದದ್ದು: 

ಆಗ ಜನರ ವಿಚಾರ – ಆಚರಣೆಯಲ್ಲಿ ವರ್ಣಭೇದ ಭಾವನೆ ಗುಪ್ತವಾಗಿದ್ದರೂ ಇನ್ನೂ ”ಸಾಂಸ್ಥಿಕ ವರ್ಣಭೇದ ನೀತಿ” (”Institutional racism”)  ಪದದ ಬಳಕೆ ಅಷ್ಟಾಗಿ ಕೇಳಿ ಬರುತ್ತಿರಲಿಲ್ಲ, ಪತ್ರಿಕೆಗಳಲ್ಲಿ ಚಾಪಿಸುತ್ತಿದ್ದಿಲ್ಲ. ಈ ಮಧ್ಯೆ 22 ಎಪ್ರಿಲ್, 1992 ರಂದು ಸಂಜೆ ಲಂಡನ್ ದಲ್ಲಿ ಒಂದು ಕರಾಳ ದುರ್ಘಟನೆ ಸಂಭವಿಸಿತು. ಸ್ಟೀವನ್ ಲಾರೆನ್ಸ್ ಎನ್ನುವ 19 ವರ್ಷದ ಕರಿಯ ಯುವಕ ಒಂದು ಸಾಯಂಕಾಲ ಮನೆಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದಾಗ ಅವನ ಮೈಮೇಲೆರಗಿದ ಐವರು ಬಿಳಿಯ ಯುವಕರಿಂದ ಆತನ ಘೋರ ಕೊಲೆಯಾಯಿತು. ಅದು ಮುಂದೆ ಸತತವಾಗಿ ಎರಡು ವರ್ಷಗಳ ಕಾಲ ಸುದ್ದಿ ಮಾಡಿತು. ಇನ್ನೂ ಆಗಾಗ ಅದರ ತೆರೆಗಳೆದ್ದು ಅಪ್ಪಳಿಸುತ್ತವೆ. ಅಪರಾಧಿಗಳು ಸಿಕ್ಕರೂ ಅವರಿಗೆ ಶಿಕ್ಷೆಯಾಗಲಿಲ್ಲ. ದೀರ್ಘಕಾಲದ ನಂತರ ಅದರ ತನಿಖೆಯಾಗಿ ನಂತರ ಹೊರಬಿದ್ದುದೇ ಮೆಕ್ಫರ್ಸನ್ ರಿಪೋರ್ಟ್ (1999).ಅದರಲ್ಲೇ ಈ ರೇಸಿಸಮ್ ದ ವ್ಯಾಖ್ಯೆ ಇದೆ: ಒಂದು ಸಮುದಾಯದಲ್ಲಿ ಅಥವಾ ಸಂಘ, ಸಂಸ್ಥೆಯಲ್ಲಿ ಹಾಸುಹೊಕ್ಕ ’ಮಾಮೂಲು’ ಎಂದೆನಿಸಿಕೊಳ್ಳುವ ವರ್ಣಭೇದ ನೀತಿ ಅದು ಎಂದು. ಇದೆಲ್ಲ ಹೊರಬಂದುದು ನನ್ನ ಈ ಕೆಳಗಿನ ಅನುಭವದ ನಂತರ. ಈ ತರದ Institutional racism ಈಗಲೂ ಕಂಡುಬಂದರೆ ಆಶ್ಚರ್ಯವಿಲ್ಲ. ನನ್ನ ಅನುಭವದ ಸಾರ ಹೀಗಿದೆ:

ಅಂದು ನಾನು ನನ್ನ ಕುಟುಂಬದೊಂದಿಗೆ ಕಳೆದ ’ಮಾಮೂಲು’ ಶನಿವಾರವಾಗಿತ್ತು. ಆ ಸಂಜೆ ನನ್ನ ವೋಲ್ವೋ ಕಾರನ್ನು ಎಂದಿನಂತೆ ಸಾವಕಾಶವಾಗಿ ಎಚ್ಚರಿಕೆಯಿಂದ ಡ್ರೈವ್ ಮಾಡುತ್ತ ಆಗತಾನೆ ಬೇಸಿಂಗ್ ಸ್ಟೋಕಿನ ಆ ರೌಂಡಬೌಟ್ ದಾಟಿ ಲಂಡನ್ ಕಡೆಗೆ ಗಾಡಿಯನ್ನು ತಿರುಗಿಸಿದ್ದೆ. ಒಮ್ಮಿಂದೊಮ್ಮೆಲೆ ಎಲ್ಲಿಂದಲೋ ನೀಲಿ ಬೆಳಕಿನ ಫ್ಲಾಷ್ ಲೈಟ್ ಹಾಕಿಕೊಡು ನನ್ನ ಮುಂದೆ ಬಂದೆರಗಿತು ಆ ಪೋಲೀಸ್ ಕಾರು.! ಕಾರನ್ನು ನಿಲ್ಲಿಸಿ ಏನಾಗುತ್ತಿದೆ ಎಂದು ಸುಧಾರಿಸಿಕೊಳ್ಳುವಷ್ಟರಲ್ಲಿ ಕಾರಿನ ಕಿಡಕಿಯ ಗಾಜನ್ನು ಇಳಿಸಲು  ಅತಿಯಾದ ರೋಷದಿಂದ ಹೇಳಿ ಪೋಲಿಸ್ ಅಧಿಕಾರಿ ನಯನಾಜೂಕು ಬಾಹಿರ ಒರಟು ದನಿಯಲ್ಲಿ ಕೇಳಿದ: ”ಈ ತರದ ಕೆಟ್ಟ ರೀತಿಯಿಂದ ಗಾಡಿ ಓಡಿಸುವದನ್ನೆ ಎಂದೂ ನೋಡಿರಲಿಲ್ಲ, ಕುಡಿದಿದ್ದೀಯಾ?” ಎಂದು ಜಬರಿಸಿದ. ನನಗೋ ಆಶ್ಚರ್ಯ ಮತ್ತು ಸಿಟ್ಟು ಸಹ. ಅತ್ಯಂತ ಕಾಳಜಿಪೂರ್ವಕ ಗಾಡಿ ನಡೆಸುವದೇ ನನ್ನ ರೂಢಿ. ಅದಲ್ಲದೆ ನಾ ಹೊರಬಿದ್ದ ಸಭಾಗೃಹದಿಂದ ಕೇವಲ 200 ಅಡಿಗಳಷ್ಟೂ ದೂರವಿರದ ಆ ಜಂಕ್ಷನ್ನಿಗೆ ಬರುವಷ್ಟರಲ್ಲಿ  ವೇಗಮಿತಿ ಮೀರಿರುವ ಪ್ರಶ್ನೆಯೇ ಇರಲಿಲ್ಲ. ಆಗ ತಾನೆ ಆ ಸಭಾಗೃಹದಲ್ಲಿ ಕನ್ನಡಿಗರೊಬ್ಬರು ಏರ್ಪಡಿಸಿದ್ದ ”ಪುರಂದರ ಸ್ಮರಣೆ’” ಎನ್ನುವ ಗಾಯನ ಕಾರ್ಯಕ್ರಮ ಮುಗಿಸಿ ಹೊರಟಾಗ ಆರು ಗಂಟೆಯ ಶರದೃತುವಿನ ಸಂಜೆಯ ಬೆಳಕು ಇನ್ನೂ ಚೆನ್ನಾಗಿಯೇ ಇತ್ತು. ನಾನು ಕುಡಿದಿಲ್ಲ, ಸಂಗೀತ ಕಾರ್ಯಕ್ರಮ ಮುಗಿಸಿಬರುತ್ತಿದ್ದೇನೆಂಬ ಸತ್ಯವನ್ನು ಎಷ್ಟುಸಲ ಹೇಳಿದರೂ ಆತ ಮತ್ತು ಆತನ ಜೊತೆಗಿನ ಪೋಲೀಸ್ ಮಹಿಳೆ ಒಪ್ಪಲು ತಯಾರಿರಲಿಲ್ಲ. ಆ 10 ನಿಮಿಷಗಳ ಆತನ ಉದ್ಧಟ ವರ್ತನೆ ಮಂದುವರೆದು ’ಬ್ರೆಥಲಿಸರ್’ ಮಾಡುತ್ತೇನೆಂದು ಧಮಕಿ ಹಾಕಿದ. ಒಳ್ಳೆಯದೇ ಆಯಿತು, ಆಫೀಸರ್, ನಿಮಗೂ ಖಾತ್ರಿ ಆಗ ಬೇಕಲ್ಲ ಎಂದು ಒಪ್ಪಿದೆ. ಮದ್ಯದ ಲವಲೇಶವೂ ತೋರಿಸಿರಲಿಲ್ಲ ಆ ಯಂತ್ರ. ಆದರೆ ಆತನಿಗೆ ಅಸಮಾಧಾನ, ನಾನು ತಪ್ಪಿತಸ್ಥನಲ್ಲವಲ್ಲ ಎಂದು. ಆ ನಡತೆಗೆ ಏನು ಕಾರಣವಿರಬಹುದು? ಅಥವಾ ಅದುವೇ ಅವರು “ಮಾಮೂಲು” ವರ್ತನೆಯೇ? ಆ ದಿನ ತಿಂಗಳ ಕೊನೆ. ಅವರಿಗೆ `ಟಾರ್ಗೆಟ್` ಮುಟ್ಟಲು ’ಗಿರಾಕಿ’ಗಳು ಬೇಕಾಗಿತ್ತು ಕಾಣಿಸುತ್ತದೆ. ಅದಕ್ಕೇ ಈ ತರದ ಉದ್ಧಟ ನಡತೆಯಿಂದ ಬೆದರಿಸಿ ಒಪ್ಪಿಸಿ ತನ್ನ ಉದ್ದೇಶವನ್ನು ಪೂರೈಸಿಕೊಳ್ಳುತ್ತಿರಬೇಕು, ಎಂದುಕೊಂಡೆ. ಅದು ನನ್ನ ತಪ್ಪು ಗ್ರಹಿಕೆ ಇರಬಹುದು. ತನ್ನ ಬೆನ್ನು ತನಗೆ ಕಾಣದು, ನಿಜ. ನಾನು ಅಂಥದೇನೂ ನಿಯಂತ್ರಣ ಕಳೆದುಕೊಂಡು ಗಾಡಿ ಚಲಾಯಿಸುತ್ತಿರಲಿಲ್ಲವಲ್ಲ, ಮತ್ತೇನು ಕಾರಣ, ನನ್ನಗೆ ಇನ್ನೂ ತಿಳಿದಿಲ್ಲ. ನನ್ನ ಚರ್ಮದ ಬಣ್ಣ, ಜೊತೆಗೆ ನನ್ನ ವೋಲ್ವೋ ಕಾರು ಸ್ವಲ್ಪವೇ ಹಳೆಯದಾದರೂ ಅತಿ ಹಳೆಯ ’ಬ್ಯಾಂಗರ್’ ಕಾರು ಆಗಿರಲಿಲ್ಲ, ನನ್ನ ಮೇಲೆ ಗುರಿಯಿಡಲು. ಇದು ಓದುಗರಿಗೆ ಸಣ್ಣ ವಿಷಯ ಎನಿಸ ಬಹುದಾದರೂ, ನನಗೆ ಮಾತ್ರ ಆತನ ಸೊಕ್ಕು, ಉದ್ಧಟ ವರ್ತನೆ, ಮಾತಿನ ರೀತಿ ನನ್ನ ಮನಸ್ಸನ್ನು ಬಹಳೆ ಘಾಸಿಗೊಳಿಸಿತು. ಯಾಕೆ ಒಬ್ಬ ಕಾಯದೆಗೆ ವಿಧೇಯನಾದ ನಾಗರಿಕನನ್ನು ಇಂತಹ ಅಸಭ್ಯ ಮತ್ತು ಅಸಹ್ಯ ವರ್ತನೆಗೆ ಗುರಿಮಾಡಬೇಕು ಎಂದು ಯೋಚಿಸುತ್ತಲೇ ಇದ್ದೆ. ಯಾವದೂ ತಪ್ಪು ಸಿಗದೆ ನಮ್ಮನ್ನು ಮುಂದೆ ಹೊಗಲು ಬಿಡಲೇ ಬೇಕಾಯಿತಾದರೂ, ಏನಾದರೂ ಹುಳುಕು ಕಂಡುಹಿಡಿಯಲು ಇನ್ನೆರಡು ಪೋಲೀಸು ಕಾರುಗಳೂ ನನ್ನನ್ನು ಸ್ವಲ್ಪ ಸಮಯದ ವರೆಗೆ ಹಿಂಬಾಲಿಸಿದ್ದನ್ನು ಗಮನಿಸಿದೆ. ಅಲ್ಲಿಯವರೆಗೆ ಇಂಥ ಅನುಭವ ಆಗಿರಲಿಲ್ಲ. ಮುಂದೆಯೂ ಆಗಿಲ್ಲ.

ಆ ನಂತರ ಇವೆಲ್ಲ ವಿವರಗಳನ್ನು (ಸಮಯ, ಜಾಗ, ತಾರೀಕು) ಹ್ಯಾಂಪ್  ಶೈರಿನ ಚೀಫ್ ಕಾನ್ಸ್ ಟಬಲ್ ಗೆ ಲಿಖಿತ ಕಂಪ್ಲೇಂಟ್ ಕೊಟ್ಟೆ. `ಶಾಸ್ತ್ರಕ್ಕ` ತನಿಖೆ ಮಾಡಿದಂತೆ ಮಾಡಿದ ಆತನಿಂದ ನನಗೆ ಬಂದ ಉತ್ತರ: “ನಾನು ಆ ಅಧಿಕಾರಿಗಳನ್ನು ಕಂಡು ಹಿಡಿದು ವಿಚಾರಿಸಿದೆ. ಅವರು ಎಲ್ಲ ಆಪಾದನೆಯನ್ನೂ ಅಲ್ಲಗಳೆಯುತ್ತಾರೆ” ಎಂದು. ಸ್ಟಿವನ್ ಲಾರೆನ್ಸ್ ಪ್ರಕರಣ ಬಲ್ಲವರಿಗೆ ಇದರಿಂದ ಆಶ್ಚರ್ಯವಾಗಲಿಕ್ಕಿಲ್ಲ.

ಈ ದೇಶದಲ್ಲಿ ಆಸ್ಪತ್ರೆಗಳು, ಸಾರ್ವಜನಿಕ ವಲಯದ ಆಫಿಸುಗಳು, ಮತ್ತು ಸರಕಾರದ ಸೇವಾ ವಿಭಾಗಗಳಲ್ಲೆಲ್ಲ Institutional racism ಮೊದಲಿಗಿಂತಲೂ ಈಗ ಕಡಿಮೆಯಾಗುತ್ತಿದೆಯೇನೋ ಎಂದು ಅನಿಸುತ್ತದೆ. ಆದರೆ, ನಾನು ಕಂಡಂತೆ  ಈ ದೇಶದಲ್ಲಿ ಮಧ್ಯ- ಮಧ್ಯದಲ್ಲಿ ವರ್ಣಭೇದದ ಅತಿರೇಕದ ಸಂಭವಗಳು, ಪ್ರಕರಣಗಳು ತಲೆಯೆತ್ತುತ್ತಲೇ ಇರುತ್ತವೆ.

3) “ನಿಮ್ಮಂತಿರದಿದ್ದರೂ ನೀವು ನನ್ನನ್ನು ನಿಮ್ಮೊಳಗೆ ಕೂಡಿಸಿ …” (ನಿಸ್ಸಾರ್ ಅಹಮದರ ಕ್ಷಮೆ ಕೋರಿ)

ಇನ್ನು, ಇವುಗಳಿಗೆ ವಿರುದ್ಧವಾದ ಒಂದು ಸಿಹಿ ಅನುಭವ. ನನಗೆ ಮೊದಲಿನಿಂದಲೂ ಫೋಟೋಗ್ರಾಫಿಯಲ್ಲಿ ಆಸ್ಥೆ ಇತ್ತು.  ಆದರೆ ಈ ದೇಶಕ್ಕೆ ಬಂದ ಹೊಸತರದಲ್ಲಿ ವಿಡಿಯೋ ಹವ್ಯಾಸವನ್ನು ಕೈಗೆತ್ತಿಕೊಳ್ಳಲು ಆಸ್ಪದವಾಗಲಿ, ಆ ಉಪಕರಣಗಳನ್ನು ಕೊಳ್ಳುವ ಆರ್ಥಿಕ ಶಕ್ತಿಯಾಗಲಿ ಇರಲಿಲ್ಲ. 

1985ರ ಸುಮಾರು ಒಂದು ಜಾಹಿರಾತನ್ನು ನೋಡಿ ವಿಡಿಯೋ ಕಲೆಯನ್ನು ಕಲಿಯಬೇಕೆಂದು ವಾರಕ್ಕೊಂದರಂತೆ ಮೂರು ದಿನಗಳ ಕೋರ್ಸ್ ನಡೆಸಿದ ನಮ್ಮ ಊರಿನ ವಿಡಿಯೋ ಕ್ಲಬ್ಬನ್ನು ಸೇರಿದೆ, ಸದಸ್ಯರು ನನ್ನನ್ನು ಆದರದಿಂದ ಬರಮಾಡಿಕೊಂಡರು. ಆ ಸಂಘ 20 -25 ಜನರಿದ್ದ ಹೆಚ್ಚಾಗಿ ತಲೆನರೆತ ರಿಟೈರ್ಡ್ ಜನರೇ ಅದರ ಸದಸ್ಯರು. ಅವರ ಸೌಜನ್ಯತೆ, ಆದರ, ಸ್ನೇಹಮಯ ವರ್ತನೆ ನನ್ನ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು ಎಂದರೆ ಅತಿಶಯೋಕ್ತಿಯಲ್ಲ. ಅದಕ್ಕೆ ನಾನಿನ್ನೂ ಅದರ ಸದಸ್ಯನಷ್ಟೇ ಅಲ್ಲ, ಅದರ ಚೇರ್ಮನ್ ಆಗಿಯೂ ಕಳೆದ ಐದು ವರ್ಷಗಳಿಂದ ಇನ್ನೂ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ ಎನ್ನುವ ಮಾತೇ ಸಾಕ್ಷಿ. ನಾನಿರುವ ಇಂಗ್ಲೆಂಡಿನ ಈಶಾನ್ಯ ವಿಭಾಗದ ಐದಾರು ಕ್ಲಬ್ ಗಳಲ್ಲಿ ನಾನೊಬ್ಬನೇ ವರ್ಣೀಯ ಸದಸ್ಯ ಎಂದರೆ ನನಗೇ ಆಶ್ಚರ್ಯ. ಎಲ್ಲ ಕ್ಲಬ್ಬುಗಳು ಒಂದೆಡೆಗೆ  ಕೂಡಿದಾಗಲೂ ನನಗೆ ಪರಕೀಯ ಎನ್ನುವ ಭಾವನೆ (”’ನಿಮ್ಮೊಳಗಿದ್ದೂ ನಿಮ್ಮಂತಾಗದೆ”) ಒಮ್ಮೆಯೂ ಬಂದಿಲ್ಲ. ಎಲ್ಲರೂ ನನ್ನನ್ನು ಇವನೂ ಒಬ್ಬ ಹವ್ಯಾಸಿ ಫಿಲ್ಮ್ ಮೇಕರ್ ಎನ್ನುವ ದೃಷ್ಟಿಯಲೇ ಬೇರೆ ದೇಶದವನೆಂದಾಗಲಿ ವೇರೆ ವರ್ಣದವನೆಂದಾಗಲಿ ಅಲ್ಲ.

ಮಾನವನು ಮೂಲತಃ ಸ್ನೇಹಮಯಿ. ಆದರೆ ಗುಂಪಿನಲ್ಲಿ ಒಮ್ಮೊಮ್ಮೆ ಪರಕೀಯರ ದ್ವೇಷ (xenophobia) ತಲೆಯೆತ್ತುತ್ತದೆ. ಅವರ ಮನಸ್ಸನ್ನು ಕಲುಷಿತಗೊಳಿಸಿದಾಗ, ಆ ವಿಷಕ್ಕೆ ಹಾಲೆರೆಯುವವರಿರುವಾಗ, ಅದು ದೀರ್ಘಕ್ಕೆ ಹೋಗಿ ಆಗಿನ ಸ್ಟೀವನ್ ಲಾರೆನ್ಸ್ ಆಗಲಿ, ಇತ್ತೀಚಿನ ಜಾರ್ಜ್ ಫ್ಲಾಯ್ಡ್ ನಂತಹ ಪ್ರಕರಣಗಳಾಗಲಿ ನಡೆಯುತ್ತವೆ. ಆದರೆ ಸಣ್ಣ ಪುಟ್ಟ ಮೇಲೆ ಹೇಳಿದಂಥ ಘಟನೆಗಳೂ ಆಗುತ್ತಲೇ ಇರುತ್ತವೆ. ಎಷ್ಟೇ Black Lives Matter ಪ್ರತಿಭಟನೆಗಳಾದರೂ ಇದಕ್ಕೆ ಕೊನೆಯುಂಟೇ?

– ಶ್ರೀವತ್ಸ ದೇಸಾಯಿ