ಜಯದೇವ ಜಯದೇವ ಶ್ರೀ ಗಣಪತಿರಾಯ

ನಮಸ್ಕಾರ. ಅನಿವಾಸಿ ಬಳಗಕ್ಕೆಲ್ಲ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಹರನರಸಿ ಸಿರಿಗೌರಿ ಸರ್ವರಿಗೂ ಸನ್ಮಂಗಲವನ್ನುಂಟು ಮಾಡಲಿ.
“ಗಜಮುಖನೇ ಗಣಪತಿಯೇ ನಿನಗೆ ವಂದನೆ. ನಂಬಿದವರ ಪಾಲಿನ ಕಲ್ಪತರು ನೀನೇ” ಹೊರಗೆ ಮೃಣ್ಮಯನಾದರೂ ಚಿನ್ಮಯನಾದ ಈ ಮಹಾಭಾರತದ ಲಿಪಿಕಾರ ನಮ್ಮೆಲ್ಲರ ಹಣೆಯ ಲಿಪಿಯನ್ನೂ ನೇರ್ಪಾಗಿಸಲಿ. ವಿಘ್ನಗಳ ತರಿದು ವಿದ್ಯೆ-ಬುದ್ಧಿ- ಸಿದ್ಧೀಯನ್ನೀಯಲಿ.

~ ಸಂಪಾದಕಿ

“ನಡೀತದೇಳ್ರಿ”

ಈ ಶ್ರಾವಣ -ಭಾದ್ರಪದ ಮಾಸಗಳು ಬಂದೂ ಅಂದ್ರ ದಿವಶಿಗೌರಿ, ಮಂಗಳಗೌರಿ, ಸಂಪತ್ ಶುಕ್ರವಾರದ ಗಡಗಿ ಗೌರಿ, ಸ್ವರ್ಣಗೌರಿ,  ಜೇಷ್ಠಾಗೌರಿಯರ ಜೋಡಿ ಸೋಳಾ ಸೋಮವಾರದ ಈಶಪ್ಪ, ಪಂಚಮಿಯ ನಾಗಪ್ಪ, ಗೋಕುಲಾಷ್ಟಮಿಯ ಕಿಟ್ಟಪ್ಪ, ಚೌತಿಯ ಗಣಪ್ಪ, ಕಡೀಕೆ ಅನಂತ ಪದ್ಮನಾಭ ( ಇಷ್ಟರ ನಡಬರಕ ನಮ್ಮ ಮಂಚಾಲಿ ರಾಯರು)  ಹೀಂಗ ಸಾಲುಸಾಲಾಗಿ ಹಿಂಡುದೈವದ ಹಾಗೂ ಹಿಂಡು ದೈವದ ಗಂಡ ಉದ್ಧಂಡನ ಪೂಜೆ- ಪುನಸ್ಕಾರ , ಅವರುಗಳ ಹೆಸರಲ್ಲಿ  ತಂಬಿಟ್ಟು, ಅಂಟಿನುಂಡೆ, ಕರದವಲಕ್ಕಿ,  ಹೋಳಿಗೆ-ಕಡಬು, ಪಾಯಸ -ಪರಮಾನ್ನ -ಚಿತ್ರಾನ್ನಗಳ ಥರಾವರಿ ಭಕ್ಷ್ಯಭೋಜನಗಳ ಸಮಾರಾಧನೆ. ಒಟ್ಟನಾಗ ನಮ್ಮಂಥ ಗೃಹಿಣಿಯರು  ಮಾಡಿ,ಉಂಡುಟ್ಟು ಉಸ್  ಎಂದು ದಣಿಯುವ ಮಾಸಗಳಿವು. 

(ಅಂಡಜವಾಹನ ಅನಂತ ಮಹಿಮ
ಪುಂಡರಿಕಾಕ್ಷ ಶ್ರೀ ಪರಮ ಪಾವನ್ನ
ಹಿಂಡು ದೈವದ ಗಂಡ ಉದ್ಧಂಡ
ಪಾಂಡುರಂಗ ಶ್ರೀ ಪುರಂದರ ವಿಠ್ಠಲ)

‘ ಅದೆಲ್ಲ ಬರೋಬ್ಬರಿ..ಇದೇನೋ ‘ನಡೀತದೇಳ್ರಿ’ ನಡೀಯೂದೂ, ಏಳೂದು ಅಂದ್ರ ಏನು ಅಂತ ಹುಬ್ಬೇರಿಸಲಿಕ್ಹತ್ತೀರೇನು? ಹಾಂ ಅಂದಹಂಗ ಹತ್ತಿರೇನು ಅಂದಕೂಡಲೇ ನೆನಪಾತು, ನನ್ನ ಗೆಳತಿ ಒಬ್ಬಾಕಿ “ ಇದೇನವಾ ನಿಮ್ಮ ಉತ್ತರ ಕರ್ನಾಟಕದ ಭಾಷೆ ಇಳೀಲಿಕ್ಕೂ ಹತ್ತತಾರ, ಕೂಡಲಿಕ್ಕೂ ಹತ್ತತಾರ ,ಉಣಲಿಕ್ಕೆ, ಕುಡೀಲಿಕ್ಕೆ, ಓದಲಿಕ್ಕೆ, ಬರೀಲಿಕ್ಕೆ, ಮಲಗಲಿಕ್ಕೆ ಎಲ್ಲಕ್ಕೂ ಹತ್ತೂದೇ, ಏನರೇs ಹತ್ತತೀರಿ..ಎಷ್ಟರೇs ಹತ್ತತೀರಿ?” ಅಂತ ಕಾಲೆಳಿತಿರತಾಳ. ಈಗ ಇದೊಂದೇನೋ ಹೊಸಾದು ‘ನಡೀತದೇಳ್ರಿ’ ತಗೊಂಡು ಬಂದೀರಿ ಅಂತಿರೇನು ನೀವೂ? ತಡೀರಿ..ಅದನ್ನೇ ಹೇಳಲಿಕ್ಕೆ ಬರಲಿಕ್ಹತ್ತೀನಿ.

ಕಳೆದ ವಾರ ‘ ಬಪ್ಪಾ’ ನನ್ನು ಮನೆಗೆ ಕರೆತರಲು Wembley ಗೆ ಹೋಗಿದ್ವಿ. ಅಲ್ಲಿ ಅದೆಷ್ಟು ಥರಾವರಿ ಗಣಪತಿಗಳು, ಅದೇನು ಹೂ-ಹಣ್ಣು, ಪೂಜಾಸಾಮಗ್ರಿಗಳು, ಡೆಕಾರೇಶನ್ ಸಾಮಾನು, ಮಂಟಪ, ಲೈಟು..ಪ್ರತಿ ಅಂಗಡಿ ಕಿಕ್ಕಿರಿದು ತುಂಬಿತ್ತು. ಆಗ ನನ್ನ ತಲೆಯಲ್ಲಿ ಸುಳಿದಾಡಿದ ಭಾವಲಹರಿ ಏನೆಂದರೆ –‘ದೇವರೇ ಇಲ್ಲ’ ಅನ್ನೋ ವಾದದಸರಣಿಯಂತೆ ದೇವರು ಸುಳ್ಳಿರಬಹುದು ಆದರದನ್ನು ಆತುಕೊಂಡು ಬೆಳೆದು, ಹಬ್ಬಿದ ವೇದೋಪನಿಷತ್ತು, ರಾಮಾಯಣ-ಮಹಾಭಾರತ, ದಾಸ-ವಚನ ಸಾಹಿತ್ಯಗಳು, ಮಂತ್ರ-ತಂತ್ರ, ನಾಟ್ಯ-ಸಂಗೀತ- ಶಿಲ್ಪಕಲೆ, ಹಬ್ಬ-ಹರಿದಿನಗಳ ಆಚರಣೆ- ಸಡಗರ- ಸಂಭ್ರಮ ಇವೆಲ್ಲವುಗಳಂತೂ ಸತ್ಯಸ್ಯ ಸತ್ಯ. ಎಷ್ಟೆಲ್ಲ ಜನರಿಗೆ ಎಷ್ಟೆಲ್ಲ ರೀತಿಯ ಜೀವನೋಪಾಯಗಳು?! ‘ ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯಾನೆ?’
(ಇಲ್ಲಿ ದೇವರು ನಮ್ಮನ್ನು ಹುಟ್ಟಿಸಿದನೇ? ಅಥವಾ ನಾವು ಅವನನ್ನು ಹುಟ್ಟಿಸಿದೆವೇ ಎಂಬ ಮತ್ತೊಂದು ತರ್ಕಕ್ಕೂ ವಿಫುಲ ಅವಕಾಶವಿದೆಯಾದರೂ ಈಗದು ಬೇಡ.)

ಸರಿ, ಈಗ ಹಕೀಕತ್ತಿಗೆ ಬರತೀನಿ. ಅಲ್ಲಿದ್ದ ನೂರಾರು ಗಣಪತಿಗಳಲ್ಲಿ ಯಾವುದು ತರುವುದು ಎಂಬ ಸಮಸ್ಯೆ. Options ಹೆಚ್ಚಾದಷ್ಟೂ ಆಯ್ಕೆ ಕಷ್ಟ.’ಇದು ಬ್ಯಾಡ. ಮಡಿ-ಶಲ್ಯ ಮ್ಯಾಚಿಂಗ್ ಆಗವಲ್ತು’ ನನ್ನ ಅವಳಿಯ ರಾಗ. ‘ ಇದರಾಗ ಗಣಪ್ಪನ ಸೊಂಡಿ, ಇಲಿ ಅಪ್ಪಚ್ಚಿಯಾದ್ಹಂಗದ’ ಜವಳಿಯ ತಗಾದೆ. ‘ಇವಂಗ ಜನಿವಾರನೇ ಇಲ್ಲಲs’ ಅತ್ತೆಯವರ ಉವಾಚ. ‘ ಇವಾ ಬರಿಗೈಯಾಗಿದ್ದಾನ. ಕೈಯಾಗ ಆಯುಧ, ಮೋದಕ ಯಾವುದೂ ಇಲ್ಲ’ ಮಾವನವರ ಉದ್ಗಾರ , ‘ ಹೊಟ್ಟಿಗೆ ಹಾವೇ ಇಲ್ಲಲಾ, ಈಬತ್ತಿ ಬ್ಯಾರೆ ಹಚಗೊಂಡಾನ’ , ಒಬ್ಬ ಗಣಪ್ಪ ಮುಂದ ಬಾಗ್ಯಾನ, ಇನ್ನೊಬ್ಬ ಭಾಳ ಹಿಂದ ಒರಗ್ಯಾನ..ನೂರು ತಕರಾರು.ಅಂತೂ ಪೌಂಡ್ ಗಟ್ಟಲೇ ದುಡ್ಡು ಸುರಿದರೂ ಬೇಕಾದ ಗಣಪ್ಪ ಸಿಗವಲ್ಲ. ಇವರೆಲ್ಲರ ನಡುವ “ ಏಯ್ ಮ್ಯಾಚಿಂಗ್ ಇರದಿದ್ರೇನಾತು? ಚಂದೇ ಕಾಣಸತದ ನಡೀತದೇಳು, ಜನಿವಾರ ಇರದಿದ್ರೇನಾತು? ಹೆಂಗೂ ಪೂಜಾ ಟೈಮಿಗೆ ಹಾಕತೀವಲಾ ನಡೀತದೇಳ್ರಿ, clay ಲೇ ಒಂದ ಸಣ್ಣ ಮೋದಕಾ ಮಾಡಿ ಕೈಯಾಗಿಟ್ರಾತು, ನಡೀತದೇಳ್ರಿ , ಕಡಬು, ಮೋದಕಾ ತಿಂದು ಸ್ವಲ್ಪ ಹಿಂದ ಒರಗ್ಯಾನ ನಡೀತದೇಳ್ರಿ” ಅಂತ ನಾನು.

‘ಛಾ ಪುಡಿ ಇಲ್ಲ, ಕಾಫಿ ಮಾಡ್ಲಿ?’ ‘ನಡೀತದೇಳ್ರಿ’

‘ಸಾರು ಸ್ವಲ್ಪ ನೀರಾಗೇದ’ ‘ ನಡೀತದೇಳ್ರಿ’

‘ಪಲ್ಯ ಚೂರು ಉಪ್ಪಾಗೇದ.’ ‘ಸಪ್ಪಗಿನ ಅನ್ನ – ಚಪಾತಿ ಜೋಡಿ ನಡೀತದೇಳ್ರಿ.’

‘ ಹುಡುಗ ಚೂರು ಸಾದಗಪ್ಪ ಇದ್ದಾನ’ ‘ ಬಣ್ಣ ಏನಮಾಡತೀರಿ? ಸಂಸ್ಕಾರಿ ಇದ್ದಾನಲಾ ನಡೀತದೇಳ್ರಿ’

‘ ಹುಡಗಿಗೆ ಅಡಗಿ ಬರಂಗಿಲ್ಲ’ ‘ ಇವತ್ತ ನಾಳೆ ಅದೇನ ಮಹಾ? ಬೇಕಂದ್ರ ಯೂಟ್ಯೂಬ್ ನೋಡಿ ಕಲಿತಾಳ. ನಡೀತದೇಳ್ರಿ’

‘ ಬ್ಲೌಜ್ ಮೈಯಾಗ ಲೂಸ್ ಆಗೇದ’ ‘ ಸಧ್ಯಕ್ಕ ಒಂದ safety pin ಹಚಗೊಂಡ್ರಾತು. ನಡೀತದೇಳು’

‘ ಸೀರಿಗೆ ಕಲೆ ಹತ್ತೇದ’ ‘ ನಿರಿಗ್ಯಾಗ ಮುಚ್ಚಿಹೋಗತದ. ನಡೀತದೇಳು.’

‘ ಅಲ್ಲೆ ಮೂಲ್ಯಾಗೊಂಚೂರು ಕಸಾ ಅದ.’ ‘ ಮುಂಜಾನೆ ಬಳಿಯೂಣಂತ. ನಡೀತದೇಳ್ರಿ’

‘ ಮಳಿ ಬರೂ ಹಂಗ ಅದ’ ‘ ಛತ್ರಿ ತಗೊಂಡ ಹೋದ್ರಾತು. ನಡೀತದೇಳ್ರಿ’

‘ ಬಸ್ ಮಿಸ್ ಆತು.’ ‘ನಡೀತದೇಳ್ರಿ. ಶೇರಿಂಗ್ ಆಟೊ ಹತ್ತಿದ್ರಾತು.’

‘ ಮಗಗ ಮಾರ್ಕ್ಸ್ ಕಮ್ಮಿ ಬಂದಾವ.’ ‘ ನಡೀತದೇಳ್ರಿ ಮುಂದಿನ ಸಲಾ ಮೆಹನತ್ ಮಾಡತಾನ.’

‘ ಇವತ್ತ ಕೆಲಸದಕಿ ಬರಂಗಿಲ್ಲಂತ’ ‘ ನಡೀತದೇಳು.ಎಷ್ಟ ಬೇಕ ಅಷ್ಟ ಭಾಂಡಿ ತೊಳಕೊಂಡ್ರಾತು’

ಒಟ್ಟಿನಾಗ ಸಾರಾಂಶ ಏನಂದ್ರ ಈ ‘ನಡೀತದೇಳ್ರಿ’ ಬದುಕನ್ನು
ಸರಳವಾಗಿಸುವ, ಸಹ್ಯವಾಗಿಸುವ ದಿವ್ಯ ಮಂತ್ರ.
ಎತ್ತಿನಾಗೂ ಸೈ..ಕತ್ಯಾಗೂ (ಕತ್ತೆ) ಸೈ ಅಂತಾರಲಾ . ನಾ ಅಂಥಾ ಜಾತಿಯಕಿ ಅನಕೋರಿ. ಹೀಂಗೇ ಆಗಬೇಕು, ಹಂಗೇ ಆಗಬೇಕು ಅನ್ನದs ‘ ನಡೀತದೇಳ್ರಿ’ ಅಂತ ಕೆಲಸ ಸಾಗಿಸುವ ಗುಣ ಅಷ್ಟೇನೂ ಸರಳಲ್ಲ. ಅದಕ್ಕೂ ‘ ಸಾಧನಾ’ (ಸಿನೆಮಾ ತಾರೆ ಅಲ್ಲ ಮತ್ತ) ಬೇಕಾಗತದ ಅಂಬೂದು ನನ್ನ ಅಂಬೋಣ.
ಇನ್ನ ನೀವು ಇದನ್ನೋದಿ ಕಾಮೆಂಟ್ ಮಾಡದಿದ್ರೂ ‘ ನಡೀತದೇಳ್ರಿ’ ಅಂತ ಅನಕೊಂಡ ಬಿಡಬ್ಯಾಡ್ರಿ. ಯಾಕಂದ್ರ ನೀವು ಓದೂದು, ಬರಿಯೂದು , ಅನಿವಾಸಿಯನ್ನ ಬೆಳಸೂದು, ಬೆಳಗಸೂದು ಭಾಳ ಮಹತ್ವದ್ದ ಅದ. ಏನಂತೀರಿ?


ಮಾವು..ನಾವು.

ಸ್ವರ್ಗದೊಳಗೀ ಮಾವು ದೊರೆವುದೇನು?
ಎಲ್ಲ ಪರಿ ಸವಿಸೊಬಗ ರಸದ ಜೇನು॥
ಇಲ್ಲದಿರೆ ಎನಗಿಲ್ಲೆ ನೂರು ಜನುಮಗಳಿರಲಿ
ಎಲ್ಲ ಪರಿಯ ಮಾವು ಸವಿಯ ಸಿಗಲಿ ॥
( ಮೂಲ ಕವಿಯ ಕ್ಷ ಮೆ ಯಾಚಿಸುತ್ತ)

ಜಗದೊಡೆಯನ ಅತ್ಯದ್ಭುತ ಸೃಷ್ಟಿ ಯಾವುದೆಂದು ಯಾರಾದರೂ ಕೇಳಿದರೆ ನಾನಿನಿತೂ ಹಿಂದೆ ಮುಂದೆ ನೋಡದೇ ಥಟ್ಟನೇ ಕಣ್ಮುಚ್ಚಿಕೊಂಡು ಕೊಡುವ ಉತ್ತರ ಎಂದರೆ. ‘ಮಾವು..ಮಾವು..ಮಾವು’.

ಎಂಥ ಸೊಗಸು ಘಮ್ಮನೇ ಹೂತ ಆ ಚೂತ ಮರ,ಚಿಗುರು,ತಳಿರು,ದೋರಗಾಯಿ,ಕಾಯಿ, ಹಣ್ಣುಗಳು!! ಮಾಮರದ ಹೂಗಳನ್ನೇ ಮಾರ ತನ್ನ ಬಿಲ್ಲಿನ ಹೂಬಾಣಕ್ಕೆ ಬಳಸುವುದಂತೆ. ಕೋಗಿಲೆಯ ಪಂಚಮನೂಂಚರದ ತವರೂ ಇದೇ ಮಾಮರ. ಕವಿಗಳಿಗೂ ಇದುವೇ ಸ್ಫೂರ್ತಿಯ ಸೆಲೆ. ವಸಂತನಾಗಮನದ ತುತ್ತೂರಿ ಈ ಮಾವೇ.
ಈ ಮಾವಿನಕಾಯಿ – ಹಣ್ಣುಗಳಿರದಿದ್ದರೆ ಜೀವನ ಅದೆಷ್ಟು ನೀರಸವಾಗಿರುತ್ತಿತ್ತು ಊಹಿಸಿ. ಮಾವು ಬಳಸಿದ ಅಡುಗೆಯ ಸ್ವಾದದ ಮಾತೇ ಬೇರೆ. ಚಟ್ನಿ, ಕೋಸಂಬರಿ, ಗೊಜ್ಜು, ತೊಕ್ಕು- ಉಪ್ಪಿನಕಾಯಿಗಳು, ಪಳುವು, ಮೊರಬ್ಬ-ಗುಳಂಬಗಳು, ಚಿತ್ರಾನ್ನ-ಕಲಸನ್ನಗಳು, ಸೀಕರಣೆ-ಆಮ್ರಖಂಡಗಳು, ಅಪ್ಪೆಹುಳಿ,ತೊವ್ವೆಗಳು..ಒಂದೇ ?! ಎರಡೇ?! ನನಗಂತೂ ಆ ವಿಧಾತ ಕನಿಷ್ಟ ಈ ಮಾವಿನ ಸೀಜನ್ ನಲ್ಲಾದರೂ ಎರಡು ಹೊಟ್ಟೆ ಕೊಡಬಾರದೇ ಎಂಬ ಚಡಪಡಿಕೆ.
ನನಗಂತೂ ಈ ಮಾವಿನ ಖಾದ್ಯಗಳು ಬರೀ ಬಾಯ್ ರುಚಿಯ,ಹೊಟ್ಟೆ ತುಂಬಿಸುವ ತಿನಿಸುಗಳಲ್ಲ. ಅವುಗಳಲ್ಲಿ ನನ್ನ ಬಾಲ್ಯದ ಕಂಪಿದೆ. ನೂರಾರು ಮಧುರನೆನಪುಗಳು ಭಾವಕೋಶದೊಂದಿಗೆ ಬೆಸೆದಿವೆ.

ತೊವ್ವೆ

ಬಚ್ಚಲಿನ ಹಂಡೆದೊಲೆಯ ಕಟ್ಟಿಗೆಯನ್ನು ಹೊರಗೆಳೆದು ಕಪ್ಪಾದ ದೊಡ್ಡ ಝಾಲಿಸೌಟಿನಿಂದ ಒಳಗಿನ ನಿಗಿನಿಗಿಕೆಂಡವನ್ನು ಒಂದು ಹಿತ್ತಾಳಿಝಾಕಣಿಯಲ್ಲಿ ತುಂಬಿಕೊಂಡು ಬಂದು ಅದನ್ನು ಅಡುಗೆಮನೆಯ ಶೇಗಡಿಗೆ (ಇದ್ದಲಿ ಒಲಿ) ಸುರುವಿ ಅದರ ಮೇಲೆ ದಪ್ಪನೆಯ ಹಿತ್ತಾಳೆಯಗುಂಡಿಯಲ್ಲಿ ಬ್ಯಾಳಿ ಬೇಯಲಿಕ್ಕಿಡೂದು ಅಮ್ಮನ ದಿನಬೆಳಗಿನ ಕಾಯಕ. ಮಾವಿನಕಾಯಿ ತೊವ್ವೆ ಮಾಡುವ ದಿನದಂದು ಎರಡು ಮುಷ್ಟಿಬ್ಯಾಳಿ ಹೆಚ್ಚಿಗೇ ಇಡುವುದಿತ್ತು. ಆ ಇದ್ದಿಲೊಲೆಯ ಹದವಾದ ಶಾಖದಲ್ಲಿ ನಿಧಾನವಾಗಿ ಮಿದುವಾಗಿ ಬೆಂದ ತೊಗರಿಬೇಳೆ ತೊವ್ವೆಗೆ ಸ್ವಲ್ಪಹೆಚ್ಚಿಗೇ ಇಂಗು, ಜೀರಗೆ, ಮೆಂತ್ಯ, ಕರಿಬೇವು, ಸಣ್ಣಗೆ ಹೆಚ್ಚಿದ ಹಸಿಮೆಣಸು ಹಾಗೂ ಮಾವಿನಕಾಯಿ ಹೋಳುಗಳನ್ನು  ಒಗ್ಗರಣೆಯಲ್ಲಿಕೈಯಾಡಿಸಿ ಸುರಿದು,ಒಂದಿಷ್ಟು  ಉಪ್ಪು,ಬೆಲ್ಲ ಹಾಕಿ ಮತ್ತೊಂದು ಕುದಿ ಕುದಿಸಿದರೆ 'ಮಾವಿನಕಾಯಿ ತವ್ವಿ' ಸವಿಯಲು ಸಿದ್ಧವಾಗುತ್ತಿತ್ತು. ಮೆಂತ್ಯ-ಇಂಗು-ಮಾವಿನ ಘಮ, ಖಾರ-ಹುಳಿ-ಉಪ್ಪು-ಸಿಹಿಗಳ ಹಿತವಾದ ಮಿಶ್ರಣ..ಬಿಸಿ ಬಿಸಿ ಅನ್ನ-ತುಪ್ಪದೊಡನೆಯೋ, ಭಕ್ರಿ-ಚಪಾತಿಯೊಡನೆಯೋ  ಉಂಡರೆ..ಅದೂ ಎಡಗೈಯಲ್ಲಿ  ಬೆವರೊರೆಸಿಕೊಳ್ಳುತ್ತ ( ಮಾವಿನಕಾಯಿ ಸೀಜನ್ನೇ ಭರ್ತಿ ಬೇಸಗೆಯಏಪ್ರಿಲ್-ಮೇ ದಿನಗಳಲ್ಲಿ.ಲೋಡ್ ಶೆಡ್ಡಿಂಗ್ ನಿಂದಾಗಿ ಒಂದಿನವೂ ಮಧ್ಯಾಹ್ನ  ಕರೆಂಟ್ ಇರುತ್ತಿರಲಿಲ್ಲ ನಮ್ಮ ಹಳ್ಳಿಯಲ್ಲಿ.) ಮತ್ತಾವಸುಖವಿದ್ದೀತು ಅದರ ಮುಂದೆ ಎನಿಸುತ್ತಿತ್ತು.

         ಈಗ ಪ್ರೆಸ್ಟೀಜ್ ಪ್ರೆಷರ್ ಕುಕ್ಕರ್ ನಲ್ಲಿ ಗ್ಯಾಸೊಲೆಯ ಮೇಲೆ ಬೆಂದ ನನ್ನೀ ತೊವ್ವೆಗೆ ಆ ಘನತೆ ಇರದಿದ್ದರೂ ಈಗಲೂ ಮಾವಿನಕಾಯಿತವ್ವಿ ಕೊಡೋ ಆ ಸುಖಕ್ಕೇನೂ ಮೋಸವಿಲ್ಲ.

ಚಟ್ನಿ

ಮಾವಿನಕಾಯಿ ಸೀಜನ್ ಬರುವ ಮುಂಚೆಯೇ ದೊಡ್ಡ ದೊಡ್ಡ ಬೆಲ್ಲದ ಪೆಂಟೆಗಳು  ಮನೆಗೆ ಬರುತ್ತಿದ್ದವು. ಸಿಹಿ-ಖಾರದ ಯಾವುದೇಮಾವಿನ ಪದಾರ್ಥಕ್ಕೂ ಈ ಬೆಲ್ಲ ಬೇಕೇ ಬೇಕಾಗುತ್ತಿತ್ತು. ಹುಳಿಹುಳಿಯಾದ ಮಾವಿನ ಹೆರಕಲಿಗೆ ಸಮಪ್ರಮಾಣದಲ್ಲಿ ಬೆಲ್ಲ, ಖಾರಪುಡಿ, ಉಪ್ಪು ಬೆರೆಸಿ, ಘಮ್ಮೆನ್ನುವ ಹುರಿದ ಮೆಂತ್ಯ, ಗಟ್ಟಿ ಇಂಗು ಹಾಕಿ, ಒಣಖೊಬ್ರಿ ತುರಿಯೊಂದಿಗೆ ಅಮ್ಮ ಒಳಕಲ್ಲಿನಲ್ಲಿ ರುಬ್ಬುಗುಂಡಿನಿಂದರುಬ್ಬಲು ಶುರುಮಾಡಿದರೆ ನಮಗೆ ಬಾಯ್ತುಂಬ ನೀರು. ಎಷ್ಟೋ ಸಲ ನಾನು ರುಬ್ಬುತ್ತೇನೆಂದು  ಹಟಮಾಡಿ ರುಬ್ಬಿಯಾದ ಮೇಲೆ ಕೈಗೆಮೆತ್ತಿಕೊಂಡ  ಚಟ್ನಿಯನ್ನು ಗೀರದೇ ಕೈ ತೊಳೆಯಲೆಂದು ಹೋಗಿ ಬಚ್ಚಲಲ್ಲಿ ನಿಂತು ಬಟ್ಟು ನೆಕ್ಕುವ ಆ ಸುಖವೇ ಸುಖ! ದೊಡ್ಡ ಕಲಪರಟಿಯಆ ಚಟ್ನಿ  ಕಣ್ಮುಚ್ಚಿ ತೆಗೆವುದರಲ್ಲೇ ಖಾಲಿಯಾಗುತ್ತಿತ್ತು.

ಇದು ಕಾಯಿಯದಾದರೆ  ಹಣ್ಣಿನ ಸಂಭ್ರಮವೇ ಬೇರೆ. ‘ಸಕ್ರಿ ಮಾವು’, ‘ ಅಡಕಿ ಮಾವು’ ಹೆಸರಿನ ಮನೆಯ ಮಾವಿನಗಿಡಗಳ ಹಣ್ಣುಗಳು. ಒಳಕೋಣೆಯಲ್ಲಿ ಹುಲ್ಲಿನಡಿಯಲ್ಲಿ ಅಡಿಹಾಕಿದ ಕಾಯಿಗಳು..ಮನೆತುಂಬ ಹಣ್ಣಿನ ಸುವಾಸನೆ. ಏಲಕ್ಕಿ,ಜಾಜಿಕಾಯಿ ಪುಡಿ,  ಚಿಟಿಕೆ ಉಪ್ಪು ಹಾಕಿ ಹಿಂಡಿಟ್ಟ ಕೊಳಗಗಟ್ಟಲೇ ಸೀಕರಣೆ.  ಕೆಲವೊಮ್ಮ ಕೋವಳ್ಳಿಡೈರಿಯಿಂದ ತಂದ ಚಕ್ಕಾದಲ್ಲಿ ಮಾವಿನಹಣ್ಣಿನ ರಸ ಬೆರೆಸಿ ಮಾಡಿದ  ಆಮ್ರಖಂಡದ ತಣ್ಣಗಿನ ನಳ್ಪು.ಸಿಹಿಯೊಡನೆ ಮತ್ತೆ ನೆಂಚಿಕೊಳ್ಳಲು ಮಾವಿನಕಾಯಿ ಕಾರೇಸಾ, ಚಿತ್ರಾನ್ನ, ಕೋಸಂಬ್ರಿಗಳು.. ಸಂಹನನಕುಪಚಯ..ಕರಣಕಾನಂದ .

~ ಗೌರಿಪ್ರಸನ್ನ