ಬದಲಾಗುತ್ತಿರುವ ಸಮಾಜ ಮತ್ತು ಶಿಕ್ಷಣ

ಡಾ ಜಿ ಎಸ್ ಶಿವಪ್ರಸಾದ್

ಯುಕೆ ಕನ್ನಡ ಬಳಗದ ೪೦ನೇ ವಾರ್ಷಿಕೋತ್ಸವ ಸಮಾರಂಭದ ಅನಿವಾಸಿ ಆಶ್ರಯದಲ್ಲಿ ಶಿಕ್ಷಣ ವಿಷಯದ ಬಗ್ಗೆ  ನಡೆದ ಚರ್ಚಾಗೋಷ್ಠಿಯಲ್ಲಿ ಮಂಡಿಸಿದ  ನನ್ನ ಕೆಲವು ಅನಿಸಿಕೆಗಳನ್ನು ಆಧರಿಸಿ ಮುಂದಕ್ಕೆ ವಿಸ್ತರಿಸಿ ಬರೆದಿರುವ ಲೇಖನ. 'ಬದಲಾಗುತ್ತಿರುವ ಸಮಾಜದಲ್ಲಿ ಶಿಕ್ಷಣ' ಕುರಿತಾದ ವಿಷಯಗಳು ಸಾಕಷ್ಟಿವೆ. ಅದರ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದೇನೋ. ಹೀಗಾಗಿ ನನ್ನ ಅನಿಸಿಕೆಗಳನ್ನು  ತುಸು ದೀರ್ಘವಾಗಿಯೇ ದಾಖಲಿಸಿದ್ದೇನೆ. ಪುರುಸೊತ್ತಿನಲ್ಲಿ ಓದಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ. ನನಗೆ ಈ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಅನಿವಾಸಿ ವೇದಿಕೆಗೆ, ಕಾರ್ಯಕ್ರಮವನ್ನು ನಿರ್ವಹಿಸಿದ ಡಾ. ಪ್ರೇಮಲತಾ ಅವರಿಗೆ  ಕೃತಜ್ಞತೆಗಳು

     -ಸಂಪಾದಕ

'ಪರಿವರ್ತನೆ ಜಗದ ನಿಯಮ'. ನಮ್ಮ ಬದುಕು, ನಮ್ಮ ಸಮಾಜ, ನಮ್ಮ ಪರಿಸರ ಬದಲಾಗುತ್ತಿದೆ. ಜಾಗತೀಕರಣದಿಂದಾಗಿ ತೀವ್ರ ಬದಲಾವಣೆಗಳಾಗಿವೆ. ಕೈಗಾರಿಕಾ ಮತ್ತು ವೈಜ್ಞಾನಿಕ ಕ್ರಾಂತಿಯ ಮಧ್ಯದಲ್ಲಿ ನಾವು ಬದುಕುತ್ತಿದ್ದೇವೆ. ಕಳೆದ ಕೆಲವು ವರ್ಷಗಳ ಹಿಂದೆ ಆವರಿಸಿದ್ದ ಕರೋನ ಪಿಡುಗು ನಮ್ಮ ಬದುಕಿನ ರೀತಿ ನೀತಿಗಳನ್ನು ಬದಲಾಯಿಸಿದೆ. ಈ ಹಲವಾರು ಬದಲಾವಣೆಯಿಂದಾಗಿ ನಾವು ಸಾಕಷ್ಟು ಸಾಮಾಜಿಕ ಮತ್ತು ತಾಂತ್ರಿಕ ಹೊಂದಾಣಿಕೆಗಳನ್ನು ಮಾಡಿಕೊಂಡು ಹೊಸ ಕಲಿಕೆಗಳನ್ನು ಪಡೆದಿದ್ದೇವೆ. ಈ ಹೊಸ ಅನುಭವಗಳನ್ನು ನಾವು  ಇಲ್ಲಿಯವರೆಗೆ ಗಳಿಸಿಕೊಂಡ ಹಳೆ ಅನುಭಗಳ ಜೊತೆ ತಳುಕು ಹಾಕಿಕೊಂಡು ಬದುಕಲು ಕಲಿಯಬೇಕಾಗಿದೆ. ಈ ಕಲಿಕೆಯೇ ಶಿಕ್ಷಣದ ಮೂಲ ಉದ್ದೇಶ. ಇಂದು ಕಲಿತ ಅನುಭವಗಳು, ಸಂಪಾದಿಸಿದ  ಜ್ಞಾನ ಕಾಲ ತರುವ ತೀವ್ರ ಬದಲಾವಣೆಗಳ ಹಿನ್ನೆಲೆಯಲ್ಲಿ ಕೆಲವೊಮ್ಮೆ ಅಪ್ರಸ್ತುತವಾಗಬಹುದು. ಕಾಲೇಜು ಶಿಕ್ಷಣದ ಕೊನೆಯಲ್ಲಿ ಪಡೆದ ಪದವಿ ಪತ್ರ ಕಲಿಕೆಯ ಮುಕ್ತಾಯವಲ್ಲ! ಬಹುಶಃ ಅದು ಬದುಕಿನುದ್ದಕ್ಕೂ ಕಲಿಯುವ ಅವಕಾಶಗಳಿಗೆ ಒಂದು ಬುನಾದಿ. ಶಿಕ್ಷಣದ ಗುರಿ ಎಂದರೆ ಒಂದು ಡಿಗ್ರಿ ಎಂಬ ದಾಖಲೆಯನ್ನು ವಿಶ್ವವಿದ್ಯಾಲಯದಲ್ಲಿ ಗಳಿಸಿ ಒಬ್ಬ ಉದ್ಯೋಗಿಯಾಗಿ ಹಣಗಳಿಸಿ ಜೀವನ ಮಾರ್ಗವನ್ನು ಕಂಡುಕೊಳ್ಳುವುದು ಎಂಬುದು ಸಾರ್ವತ್ರಿಕವಾದ  ಅಭಿಪ್ರಾಯ. ಇದು ಒಂದು ವೈಯುಕ್ತಿಕ ನೆಲೆಯಲ್ಲಿ ಅಗತ್ಯ. ಆದರೆ ಶಿಕ್ಷಣದ ಗುರಿ ಒಬ್ಬ ಉದ್ಯೋಗಿಯನ್ನಷ್ಟೇ ತಯಾರು ಮಾಡುವುದಲ್ಲ. ಆ ಉದ್ಯೋಗಿ ಸಮಜದಲ್ಲಿನ ಒಂದು ಘಟಕ. ಅವನು ಅಥವಾ ಅವಳು ಸಮಾಜಕ್ಕೆ ಸಲ್ಲುವಂಥವರಾಗಬೇಕು. ಹೀಗೆ ಸಾಮೂಹಿಕ ನೆಲೆಯಲ್ಲೂ ಒಂದು ಆರೋಗ್ಯಕರ ಸಮಾಜವನ್ನು ಕಟ್ಟಲು ಶಿಕ್ಷಣ ಅಗತ್ಯ. ಈ ಕಾರಣಗಳಿಂದ ನಮ್ಮ ಶಿಕ್ಷಣ, ಶಿಕ್ಷಣ ನೀತಿ ಸಮಾಜಕ್ಕೆ ಹೊಂದುವಂತಿರಬೇಕು.


ಸಮಾಜ ಕ್ಷಿಪ್ರವಾದ ಬದಲಾವಣೆಗಳನ್ನು ಕಾಣುತ್ತಿದ್ದರೂ ಮನುಷ್ಯನ ಮೂಲಭೂತವಾದ ಕೆಲವು ಮಾನವೀಯ ಮೌಲ್ಯಗಳು ನಮಗೆ ಅಗತ್ಯ. ಅವು ನಮ್ಮ ಅಸ್ತಿತ್ವದೊಂದಿಗೆ ಬೆರೆತುಕೊಂಡಿದೆ. ಸಮಾಜ ಬದಲಾಗುತ್ತಿದ್ದರೂ ಈ ಮೌಲ್ಯಗಳನ್ನು ಉಳಿಸಿಕೊಳ್ಳುವ ಶಿಕ್ಷಣ ಬೇಕಾಗಿದೆ. ಅದು ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬೇಕು. ಶಿಕ್ಷಣ, ವ್ಯಕ್ತಿತ್ವ ವಿಕಾಸನಕ್ಕೆ ಕಾರಣವಾಗಬೇಕು. ವ್ಯಕ್ತಿ ವಿಕಾಸನವಾದಲ್ಲಿ ಸಮಾಜವು ವಿಕಾಸಗೊಳ್ಳುತ್ತದೆ. ಇದನ್ನೇ ಮೌಲ್ಯಾಧಾರಿತ ಶಿಕ್ಷಣ (Value based education) ಎಂದು ಕರೆಯ ಬಹುದು.  ಇದನ್ನು ಒಂದು ಸಣ್ಣ ಉದಾಹರಣೆಯೊಂದಿಗೆ ವಿವರಿಸುವುದು ಸೂಕ್ತ. ನಾನೊಬ್ಬ ವೈದ್ಯ. ನಮ್ಮ ವೈದ್ಯಕೀಯ ಕಾಲೇಜುಗಳು ಒಬ್ಬ ನುರಿತ, ನಿಪುಣ ವೈದ್ಯನನ್ನು ತಯಾರು ಮಾಡ ಬಹುದು. ಆದರೆ ಆ ವೈದ್ಯನಿಗೆ ಸೇವಾ ಮನೋಭಾವವಿಲ್ಲದೆ, ಅನುಕಂಪೆಯಿಲ್ಲದೆ, ಹಣಗಳಿಸುವ ನೆಪದಲ್ಲಿ ರೋಗಿಗಳನ್ನು ಶೋಷಿಸಲು ಮೊದಲಾದರೆ ಆ ಶಿಕ್ಷಣದಿಂದ ಸಮಾಜಕ್ಕೆ ಏನು ಪ್ರಯೋಜನ? ಆ ಶಿಕ್ಷಣ ಒಬ್ಬ ವ್ಯಕ್ತಿಗೆ ಲಾಭವನ್ನು ನೀಡುವುದೇ ಹೊರತು ಸಮಾಜಕ್ಕಲ್ಲ! ಒಬ್ಬ ನುರಿತ ಇಂಜಿನೀಯರ್ ಲಂಚಕೋರನಾಗಿ ಅವನು ಕಟ್ಟಿದ ಸೇತುವೆಗಳು, ಮನೆಗಳು ಕುಸಿದು ಬಿದ್ದಾಗ ಅವನು ಪಡೆದ ವೃತ್ತಿ ಶಿಕ್ಷಣ ಎಷ್ಟರ ಮಟ್ಟಿಗೆ ಮೌಲ್ಯಾಧಾರಿತವಾಗಿತ್ತು ಎನ್ನುವ ಪ್ರಶ್ನೆ ಮೂಡುತ್ತದೆ.

ಈ ಮೌಲ್ಯಾಧಾರಿತ ಶಿಕ್ಷಣ ವ್ಯಕ್ತಿಗಳ ನಡುವೆ ಸ್ನೇಹ, ಪ್ರೀತಿ, ವಿಶ್ವಾಸ, ಪರಸ್ಪರ ನಂಬಿಕೆ, ಗೌರವ ಇವುಗಳನ್ನು ಉಂಟುಮಾಡುತ್ತದೆ. ನಾಗರೀಕ ಸಮಾಜ ಮತ್ತು ಸಂಸ್ಕೃತಿಯನ್ನು ಕಟ್ಟಲು ನೆರವಾಗುತ್ತದೆ. ಕೆಲವು ಉದ್ಯೋಗಗಳಲ್ಲಿ ಒಬ್ಬ ವ್ಯಕ್ತಿ ಒಂದು ತಂಡದ ಭಾಗವಾಗಿ ಕೆಲಸ ಮಾಡಬೇಕಾಗುತ್ತದೆ. ಅಲ್ಲಿ ಸಹೋದ್ಯೋಗಿಗಳ ಜೊತೆ ಕೆಲವು ನಿಯಮಗಳಿಗೆ ಬದ್ಧವಾಗಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಸಹಕಾರ, ವಿನಯ, ಇತರರೊಡನೆ ಹೊಂದಾಣಿಕೆ ಇವುಗಳು ಮುಖ್ಯವಾಗುತ್ತವೆ.  ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ವೈದ್ಯಕೀಯ ಶಿಕ್ಷಣದಲ್ಲಿ ಒಬ್ಬ ವೈದ್ಯಕೀಯ ವಿದ್ಯಾರ್ಥಿಯ ಜ್ಞಾನದ ಅರಿವನ್ನು ಪರೀಕ್ಷಿಸುವುದರ ಜೊತೆ ಜೊತೆಗೆ ಅವನ ಸಮಯ ಪ್ರಜ್ಞೆ, ಸ್ನೇಹ, ವಿನಯಶೀಲತೆ, ಶ್ರದ್ಧೆ, ತಂಡದಲ್ಲಿ ಅವನ ಸಹಕಾರ ಇವುಗಳ ಬಗ್ಗೆ ಸಹಪಾಠಿಗಳು, ನರ್ಸ್ಗಳು, ಹಿರಿಯ ವೈದ್ಯರು ತಮ್ಮ ಅನಿಸಿಕೆಗಳನ್ನು ನೀಡಬೇಕು. ಈ ವರದಿ ಸಮಾಧಾನಕಾರವಾಗಿದ್ದಲ್ಲಿ ಮಾತ್ರ ಆ ವಿದ್ಯಾರ್ಥಿ ಮುಂದಿನ ಹಂತವನ್ನು ತಲುಪಲು ಸಾಧ್ಯ. ಈ ಮಾದರಿಯನ್ನು ಭಾರತೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಿಕೊಳ್ಳ ಬೇಕಾಗಿದೆ. ಈ ಮೌಲ್ಯಾಧಾರಿತ ಶಿಕ್ಷಣ ಪ್ರಾಥಮಿಕ ಶಿಕ್ಷಣದಿಂದಲೇ ಶುರುವಾಗಿ ಎಲ್ಲಾ ಹಂತದಲ್ಲೂ ದೊರೆಯುವಂತಾಗಬೇಕು.  

ಶಿಕ್ಷಣದ ಗುರಿ ಎಂದರೆ ಅದು ಒಬ್ಬ ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ಮಾಡಬೇಕು, ಒಬ್ಬ ಅನಾಗರಿಕನನ್ನು ನಾಗರೀಕನನ್ನಾಗಿಸಬೇಕು. ಸಮಾಜದಲ್ಲಿ ನಾವು ಧರ್ಮ, ಜಾತಿ, ಆರ್ಥಿಕ ವರ್ಗ, ಎಡಪಂಥ, ಬಲಪಂಥ, ವರ್ಣ ಬೇಧ (ರೇಸಿಸಂ) ಎಂಬ ಗೋಡೆಗಳನ್ನು ಕಟ್ಟಿಕೊಂಡು ಅಲ್ಪಮಾನವರಾಗಿ ಬಿಡುತ್ತೇವೆ.  ಇಂದಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಯಲ್ಲಿ ನಮ್ಮ ಆಲೋಚನಾ ಕ್ರಮದಿಂದಾಗಿ ದೇಶ ವಿಭಜನೆಯಾಗಿದೆ. ರಾಜಕೀಯ, ಧಾರ್ಮಿಕ ಪೂರ್ವೋದ್ದೇಶಗಳಿಂದ ನಮ್ಮ ಪಠ್ಯ ಪುಸ್ತಕದಲ್ಲಿನ ಮಾಹಿತಿಗಳನ್ನು ತಿದ್ದುವ ಪ್ರಯತ್ನ ನಡೆದಿದೆ. ಇತಿಹಾಸವನ್ನು ಮರುವ್ಯಾಖ್ಯಾನ ಮಾಡಿ ಮಕ್ಕಳ ಅರಿವನ್ನು ನಿಯಂತ್ರಿಸಲಾಗುತ್ತಿದೆ. ದ್ವೇಷವೆಂಬ ವಿಷದ ಬೀಜವನ್ನು ಬಿತ್ತುವ ಪ್ರಯತ್ನ ನಡೆಯುತ್ತಿದೆ. ಬದುಕಿನ ಪ್ರತಿಯೊಂದು ಮಜಲಿನಲ್ಲೂ ಶ್ರೇಷ್ಠ ನಿಕೃಷ್ಟ, 'ನಾವು ಮತ್ತು ಅವರು' ಎಂಬ ಭಾವನೆಗಳನ್ನು ಉಂಟುಮಾಡುವ ಶಿಕ್ಷಣದ ಕಡೆಗೆ ವಾಲುತ್ತಿದ್ದೇವೆ. ಬದುಕಿನಲ್ಲಿ ಸಹಭಾಗಿತ್ವ ಎಂಬ ಪರಿಕಲ್ಪನೆ ಸರಿದು ಎಲ್ಲ ಮಜಲುಗಳಲ್ಲಿ ಸ್ಪರ್ಧೆಯೇ ಮುಖ್ಯವಾಗಿದೆ. ಭಾರತದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಪರಿಷತ್ತುಗಳು ಹುಟ್ಟಿಕೊಂಡು ಅವುಗಳನ್ನು ರಾಜಕಾರಣಿಗಳು ನಿಯಂತ್ರಿಸುತ್ತಿದ್ದಾರೆ. ಪ್ರಭಾವಕ್ಕೆ ಒಳಗಾಗುವ ಯುವಕ ಯುವತಿಯರು ಒಂದು ರಾಜಕೀಯ ಪಕ್ಷದ ಕಾಲಾಳುಗಳಾಗಿ ನಿಲ್ಲಲು ತಯಾರಾಗಿದ್ದಾರೆ. ಬರಿ ಬಲಪಂಥ ಎಡಪಂಥ ಸಮಸ್ಯೆಗಳಲ್ಲದೆ ಇಲ್ಲಿ ಧರ್ಮವನ್ನು ಬೆಸೆಯಲಾಗಿದೆ. ಇಲ್ಲಿ ಸಾಕಷ್ಟು ಹಿಂಸೆ ಮತ್ತು ಸಂಘರ್ಷಣೆಗಳು ಸಂಭವಿಸುತ್ತವೆ. ಇದು ಅಪಾಯಕಾರಿ ಬೆಳವಣಿಗೆ ಎನ್ನ ಬಹುದು. ಈ ಕಾರಣಗಳಿಂದಾಗಿ ನಮ್ಮ ಶಿಕ್ಷಣ, ಧರ್ಮ ಮತ್ತು ರಾಜಕೀಯ ಇವುಗಳ ಪ್ರಭಾವದಿಂದ ದೂರವಾಗಬೇಕು. ಒಬ್ಬ ವಿಶ್ವಮಾನವನನ್ನು ತಯಾರು ಮಾಡುವ ಶಿಕ್ಷಣದಿಂದಾಗಿ ಆ ವ್ಯಕ್ತಿ ಪ್ರಪಂಚದ ಎಲ್ಲ ಕಡೆ ಸಲ್ಲುವವನಾಗುತ್ತಾನೆ. ಜಾತಿ ಧರ್ಮವೆಂಬ ಸಂಕುಚಿತ ಕಟ್ಟಳೆಗಳನ್ನು ಮೀರಿ ನಿಲ್ಲಲ್ಲು ಸಮರ್ಥನಾಗುತ್ತಾನೆ.  

ನಾವು ನಮ್ಮ ಧರ್ಮ, ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವುದು ತಪ್ಪಲ್ಲ, 
ಅದು ಅತ್ಯಗತ್ಯ. ನಮ್ಮ ಭಾರತೀಯ ಸಾಹಿತ್ಯ, ಕಲೆ, ಸಂಸ್ಕೃತಿ ಸಮೃದ್ಧವಾಗಿದ್ದು ಅದನ್ನು ಉಳಿಸಿಕೊಳ್ಳಬೇಕು. ಒಂದು ಶಿಕ್ಷಣ ಸಮಾಜಕ್ಕೆ ಹೊಂದುವಂತಾಗ ಬೇಕಿದ್ದಲ್ಲಿ ಅದು ನಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಗಟ್ಟಿಗೊಳಿಸಬೇಕು. ಅದು ಒಬ್ಬ ವ್ಯಕ್ತಿಯ ಪರಿಪೂರ್ಣತೆಗೆ ಬಹಳ ಮುಖ್ಯ. "ತನ್ನ ಬೇರುಗಳ ಶಾಶ್ವತ ನೆಲೆದ ನಂಟು ಒಂದು ಗಿಡಕ್ಕೆ ಅಥವಾ ಮರಕ್ಕೆ ಅತ್ಯಗತ್ಯ. ತಮ್ಮ ಸಾಂಸ್ಕೃತಿಕ ಅರಿವಿಲ್ಲದವರು, ತಮ್ಮ ಮೂಲ ಭಾಷೆ ನೆಲೆಗಳನ್ನು, ಅಸ್ಮಿತೆಗಳನ್ನು ಮರೆತವರು ನಿರ್ದಿಷ್ಟ ನೆಲೆಯಿಲ್ಲದೆ, ಸ್ಥಳಾಂತರಗೊಳ್ಳುವ ಕುಂಡಗಳಲ್ಲಿನ ಗಿಡ ಮರಗಳಂತೆ" ಎಂದು ಜಿ.ಎಸ್.ಎಸ್ ಒಮ್ಮೆ ಪ್ರಸ್ತಾಪಮಾಡಿದ್ದನು ಇಲ್ಲಿ ನೆನೆಯುವುದು ಸೂಕ್ತ. ಅವೈಚಾರಿಕತೆ ಮತ್ತು ಮೂಢನಂಬಿಕೆಗಳನ್ನು ಮೂಡಿಸುವ ಪಠ್ಯ ಕ್ರಮವನ್ನು ಕೈಬಿಡಬೇಕು. 

ಶಿಕ್ಷಣವನ್ನು ಸ್ಥಳೀಯ ಸಮುದಾಯಕ್ಕೆ ಹೊಂದುವ ಪರಿಸರ ಭಾಷೆಯಲ್ಲೇ ನೀಡಬೇಕು. ಕರ್ನಾಟಕದಲ್ಲಿ ಅದರಲ್ಲೂ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕು. ಕಿರಿಯ ಮಕ್ಕಳು ತಮ್ಮ ಪರಿಸರವನ್ನು ಅರಿತುಕೊಳ್ಳುವುದು ಪರಿಸರ ಭಾಷೆಯಲ್ಲೇ. ಅವರ ಮಿದುಳಿನ ನರಮಂಡದಲ್ಲಿ ಉಂಟಾಗುವ ಕೆಲವು ಕಲ್ಪನೆಗಳು, ಮನಸ್ಸಿನಲ್ಲಿ ಅಚ್ಚಾಗುವ ಚಿತ್ತಾರಗಳು ಮನೆಯ ಮತ್ತು ಸುತ್ತಣ ಸಮಾಜ ತೊಡಗುವ ಭಾಷೆಯಲ್ಲೇ. ಹೀಗಿರುವಾಗ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಇಂಗ್ಲಿಷ್ ಮೀಡಿಯಂ ಸೇರಿಕೊಂಡು ಕಲಿಕೆಯನ್ನು ಪರಿಸರ ಭಾಷೆಯಲ್ಲದ ಇಂಗ್ಲೀಷಿನಲ್ಲಿ ಕಲಿಯುವ ಮಕ್ಕಳಿಗೆ ಸಾಕಷ್ಟು ಗೊಂದಲ ಉಂಟಾಗುವ ಬಗ್ಗೆ ಶಿಕ್ಷಣ ಮತ್ತು ಮಾನಸಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅದು ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆ ಬರುವುದಾಗಿ ಅಭಿಪ್ರಾಯ ನೀಡಿದ್ದಾರೆ. ಚಿಕ್ಕ ಮಕ್ಕಳಿಗೆ ಬೇರೆ ಬೇರೆ ಭಾಷೆ ಕಲಿಯುವುದು ಸರಾಗವಿರಬಹುದಾದರೂ ಅದು ಗೊಂದಲವನ್ನು ಉಂಟುಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಮಹಾತ್ಮ ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ಬರೆಯುತ್ತಾರೆ; “ತಮ್ಮ ಮಕ್ಕಳಿಗೆ ಆಲೋಚಿಸಲು ಮತ್ತು ವ್ಯವಹರಿಸಲು ಇಂಗ್ಲೀಷನ್ನೇ ಬಳಸಬೇಕೆನ್ನುವ ಭಾರತೀಯ ತಂದೆ ತಾಯಿಯರು ತಮ್ಮ ತಾಯ್ನಾಡಿಗೆ ದ್ರೋಹವನ್ನು ಬಗೆಯುತ್ತಿದ್ದಾರೆ. ಅವರು ತಮ್ಮ ಮಕ್ಕಳನ್ನು ಭಾರತೀಯ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪರಂಪರೆಯಿಂದ ವಂಚಿತರಾಗುವಂತೆ ಮಾಡುತ್ತಿದ್ದಾರೆ" ಬ್ರಿಟಿಷರು ನಮ್ಮನ್ನು ನೂರಾರು ವರ್ಷಗಳು ಆಳಿ ಅವರ ಭಾಷೆ ಮತ್ತು ಸಂಸ್ಕೃತಿಯನ್ನು ನಮ್ಮ ಮೇಲೆ ಹೇರಿರುವ ಪರಿಣಾಮವಿದು. ನಮ್ಮ ಶಿಕ್ಷಣ ನೀತಿಗಳು    ವಸಾಹತು ಬ್ರಿಟಿಷ್ ಮನಸ್ಥಿತಿಯಿಂದ ಮುಕ್ತವಾಗಬೇಕಾಗಿದೆ. ಇಲ್ಲಿ ಒಂದು ಸಣ್ಣ ಉದಾಹರಣೆ ನೀಡುವುದು ಸೂಕ್ತ. ಕರ್ನಾಟಕದ ಒಳನಾಡಿನ ಯಾವೊದೋ ಒಂದು ಸಣ್ಣ ಹಳ್ಳಿಯಲ್ಲಿ “London Bridge is falling down, falling down” ಎಂಬ ಶಿಶು ಗೀತೆಯನ್ನು ಹೇಳಿಕೊಟ್ಟಲ್ಲಿ, ಆ ಮಕ್ಕಳಿಗೆ ಲಂಡನ್ ಬ್ರಿಡ್ಜ್ ನಿಂತಿದರೆಷ್ಟು? ಬಿದ್ದರೆಷ್ಟು? ಅದರ ಬದಲಿಗೆ ‘ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ’ ಎಂಬ ಗೀತೆಯನ್ನು ಹೇಳಿ ಕೊಡ ಬಹುದಲ್ಲವೇ?  ಉನ್ನತ ಶಿಕ್ಷಣದಲ್ಲಿ ವಿಜ್ಞಾನ ವಿಷಯಗಳನ್ನು ಕಲಿಯಲು ಇಂಗ್ಲಿಷ್ ಬೇಕೇ ಬೇಕು ಎಂದು ವಾದಿಸುವವರು ಒಮ್ಮೆ ಇಂಗ್ಲೆಂಡಿನ ಪಕ್ಕದ ದೇಶಗಳಾದ ಫ್ರಾನ್ಸ್ ಜರ್ಮನಿ, ಪೂರ್ವ ಯೂರೋಪ್ ದೇಶಗಳ ಶಿಕ್ಷಣ ಕ್ರಮಗಳನ್ನು ಗಮಸಿಸಬೇಕಾಗಿದೆ. 

ಶಿಕ್ಷಣ ಎಲ್ಲರನ್ನು ಒಳಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಒಂದು ವಾಣಿಜ್ಯ ವಹಿವಾಟಾಗಿದೆ. ಖಾಸಗಿ ಶಾಲಾ ಕಾಲೇಜುಗಳು ಹೆಚ್ಚಾಗಿ ಶಿಕ್ಷಣ ಎಂಬುದು ಉಳ್ಳವರ ಸೊತ್ತಾಗಿದೆ.  ಗುಣಮಟ್ಟದಲ್ಲಿ ಸರ್ಕಾರೀ ಮತ್ತು ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಅಂತರವಿರಬಾದು. ಸಮಾಜದಲ್ಲಿ ಕೆಳಗಿನ ಸ್ಥರಗಳಲ್ಲಿರುವವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಉಳಿದು ಅವರಿಗೂ ಅವಕಾಶವಿರಬೇಕು. ಎಲ್ಲಿಯವರೆಗೆ ಎನ್ನುವುದು ಇನ್ನೊಂದು ಪ್ರಶ್ನೆ. ಸಮಾಜದ ಹಿತದೃಷ್ಟಿಯಿಂದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಆದ್ಯತೆಯಾಗಬೇಕು. ಅಭಿವೃದ್ಧಿ ಗೊಳ್ಳುತ್ತಿರುವ ದೇಶಗಳಲ್ಲಿ ಅದರ ಪರಿಣಾಮಗಳು ಹಲವಾರು. ನಮ್ಮ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಪ್ಪಿಕೊಳ್ಳಲು ಹವಣಿಸುತ್ತಿದ್ದಾರೆ.  ವಿದೇಶಗಳಲ್ಲಿರುವ  ಲೈಂಗಿಕ ಸ್ವಾತಂತ್ರ್ಯ ಮತ್ತು ಸ್ವೇಚ್ಛೆಗಾಗಿ ನಮ್ಮ ಯುವಕ ಯುವತಿಯರು ಹಾತೊರೆಯುತ್ತಿದ್ದಾರೆ. ತಮ್ಮ ಲೈಂಗಿಕ ಪ್ರವೃತ್ತಿಯನ್ನು, ತಾವು ಸಲಿಂಗ ಕಾಮಿಗಳು ಎಂಬ ವಿಚಾರವನ್ನು ಯುವಕರು ಮುಕ್ತವಾದ ಮನಸ್ಸಿನಿಂದ ಬಹಿರಂಗ ಪಡಿಸುತ್ತಿದ್ದಾರೆ. ಓಟಿಟಿ ಮತ್ತು ಇತರ ದೃಶ್ಯ ಮಾಧ್ಯಮಗಳಲ್ಲಿ ಲೈಂಗಿಕತೆ ಮತ್ತು ಲೈಂಗಿಕ ಉಲ್ಲೇಖವಿರುವ ಸಿನಿಮಾಗಳು ಧಾರಾವಾಹಿಗಳು ಈಗ ಯಥೇಚ್ಛವಾಗಿವೆ. ಲೈಂಗಿಕ ಗುಹ್ಯ ರೋಗಗಳು ಮತ್ತು ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧಾರಣೆ ಇವುಗಳ ಬಗ್ಗೆ ಯುವಜನತೆಗೆ ಅರಿವು ಮೂಡಿಸಬೇಕಾಗಿದೆ. ಈ ಒಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ. ಇದನ್ನು ಶಿಕ್ಷಣದ ಯಾವ ಹಂತದಲ್ಲಿ? ಮತ್ತು ಹೇಗೆ ನೀಡಬೇಕು? ಎಂಬುದರ ಬಗ್ಗೆ ಸ್ಪಷ್ಟತೆ ಬೇಕಾಗಿದೆ.

ಕರೋನ ಪಿಡುಗು ಬಂದು ನಮ್ಮ ಬದುಕಿನಲ್ಲಿ ಸಾಮಾಜಿಕ ಮತ್ತು ತಾಂತ್ರಿಕ ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದೇವೆ. ತಂತ್ರಜ್ಞವನ್ನು ಬಳಸಿ ಮನೆಯಿಂದಲೇ ದುಡಿಯುವ ಮತ್ತು ಕಲಿಯುವ ಅವಕಾಶಗಳನ್ನು ಕಲ್ಪಿಸಿಕೊಂಡಿದ್ದೇವೆ. ಜೋಮ (Zoom) ವೇದಿಕೆ ಅನೇಕ ಶಿಕ್ಷಣ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಹಿಂದೆ ನಮ್ಮ ಅನಿವಾಸಿ ಕನ್ನಡಿಗರು ಮಕ್ಕಳನ್ನು ಒಂದೆಡೆ ಕಲೆಹಾಕಿ 'ಕನ್ನಡ ಕಲಿ' ತರಗತಿಗಳನ್ನು ನಡೆಸಲು ಹೆಣಗುತ್ತಿದ್ದೆವು. ಈಗ ಜೋಮ ವೇದಿಕೆಯಿಂದಾಗಿ ಮಕ್ಕಳು ಮನೆಯಲ್ಲೇ ಕುಳಿತು ಕನ್ನಡವನ್ನು ಕಲಿಯುವ ಅವಕಾಶ ಒದಗಿ ಬಂದಿದೆ. ಅಂದ ಹಾಗೆ ಅದು ಸಫಲತೆಯನ್ನೂ ಕಂಡುಕೊಂಡಿದೆ. ಉನ್ನತ ಶಿಕ್ಷಣದಲ್ಲಿ ಹಲವಾರು ಕಲಿಕೆಗಳು ಆನ್ ಲೈನ್ ವೇದಿಕೆಗಳಲ್ಲಿ ಲಭ್ಯವಾಗಿವೆ, ಇವೆಲ್ಲಾ ತಂತ್ರಜ್ಞಾನದ ಸದುಪಯೋಗ ಎನ್ನಬಹುದು.

ಪರಿಸರ ವಿನಾಶದ ಮತ್ತು ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಬಗ್ಗೆ ಎಲ್ಲ ದೇಶಗಳಲ್ಲಿ ಎಚ್ಚರಿಕೆಯ ಕರೆಗಂಟೆ ಕೇಳಿ ಬರುತ್ತಿದೆ. ಪರಿಸರದ ಅಳಿವು ಉಳಿವಿನ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ. ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆ, ನಿಸರ್ಗ ಸಂಪನ್ಮೂಲಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸುವುದರ ಪರಿಣಾಮ ಈ ವಿಚಾರಗಳ ಬಗ್ಗೆ ತ್ವರಿತವಾಗಿ ನಮ್ಮ ಮಕ್ಕಳಿಗೆ ಕಲಿಸಬೇಕಾಗಿದೆ. ಈ ವಿಷಯಗಳನ್ನು ಮಕ್ಕಳ ಗ್ರಹಿಕೆಗೆ ನಿಲುಕುವಂತೆ ಶಿಕ್ಷಣದ ಪ್ರತಿಯೊಂದು ಹಂತದಲ್ಲೂ ಕಡ್ಡಾಯವಾಗಿ ಕಲಿಸಬೇಕು. ಇವುಗಳನ್ನು ತರಗತಿಯಲ್ಲಿ ಬೋಧಿಸಿದರಷ್ಟೇ ಸಾಲದು. ಮಕ್ಕಳನ್ನು ಅರಣ್ಯ ಪ್ರದೇಶಗಳಿಗೆ, ಹಾನಿಗೊಳಗಾದ ನಿಸರ್ಗ ತಾಣಗಳಿಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿ ಮಕ್ಕಳಿಗೆ ಪ್ರತ್ಯಕ್ಷ ಅನುಭವವನ್ನು ಒದಗಿಸಿದಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಬಲ್ಲುದು. ಮಕ್ಕಳು ವಾಸಮಾಡುವ ಪರಿಸರದಲ್ಲಿ ಮರಗಳನ್ನು ನೆಡುವ, ಪೋಷಿಸುವ ಶೈಕ್ಷಣಿಕೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಶಾಲಾ ಕಾಲೇಜುಗಳ ಮಕ್ಕಳಿಂದ ಪರಿಸರ ವಿನಾಶದ ಕುರಿತಾಗಿ ಬೀದಿ ನಾಟಕಗಳನ್ನು ಆಡಿಸಿದರೆ ಅದು ಶೈಕ್ಷಣಿಕ ಕಾರ್ಯಕ್ರಮವಲ್ಲದೆ ಮನೋರಂಜನೆಯಾಗಿಯೂ ಕಿರಿಯರ-ಹಿರಿಯರ ಗಮನವನ್ನು ಸೆಳೆಯುತ್ತದೆ.  

ಶಿಕ್ಷಣ ಕ್ರಮದಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕಾಗಿದೆ. ಶಾಲೆಯ ನಾಲ್ಕು ಗೋಡೆಗಳ ಒಳಗೆ ಮಾತ್ರ ಕಲಿಕೆ ಸಾಧ್ಯ ಎಂಬ ಈ ಮನಸ್ಥಿತಿಯಿಂದ ಹೊರಬರಬೇಕಾಗಿದೆ. ಇದು ಮಕ್ಕಳಲ್ಲಿ ಒಂದು ಸಂಕುಚಿತ ಮನೋಭಾವವನ್ನು ಉಂಟುಮಾಡಬಹುದು. ಅನುಕೂಲಕರ ಉತ್ತಮ ಹವಾಮಾನವಿರುವ ದೇಶಗಳಲ್ಲಿ ಮುಕ್ತವಾದ ನಿಸರ್ಗದ ಮಧ್ಯೆ ಕಲಿಕೆಯ ಸಾಧ್ಯತೆಗಳನ್ನು ಕಂಡುಕೊಳ್ಳಬೇಕು. ಮಕ್ಕಳ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆ ನಡೆಯಬೇಕಾಗಿದೆ. ಎಲ್ಲರಿಗೂ ಒಂದೇ ಅಳತೆಗೋಲು ಹಿಡಿದು ಕಲಿಸುವ ಕ್ರಮವನ್ನು ಪರಿಶೀಲಿಸಿಬೇಕಾಗಿದೆ. ಕೆಲವೊಮ್ಮೆ ಪುಸ್ತಕಗಳನ್ನು ಪಕಕ್ಕೆ ಇಟ್ಟು ವಿಜ್ಞಾನದ ಪ್ರಯೋಗಗಳನ್ನು ಕೈಯಾರೆ ಮಾಡಿ ನಿತ್ಯ ಸತ್ಯಗಳನ್ನು ಮಕ್ಕಳೇ ಅನ್ವೇಷಣೆ ಮಾಡಿ ತಿಳಿದುಕೊಳ್ಳಬೇಕು. ಈ ರೀತಿಯ ಕಲಿಕೆ ಮಾನವ ಸಹಜ ಕುತೂಹಲವನ್ನು ಕೆರಳಿಸುವುದರ ಜೊತೆಗೆ ಅದು ಒಂದು ಉಲ್ಲಾಸಕರ ಚಟುವಟಿಕೆಯಾಗಬೇಕು. ಮಕ್ಕಳ ಮನಸ್ಸಿನಲ್ಲಿ ಏಕೆ? ಹೇಗೆ? ಎಂಬ ಪ್ರಶ್ನೆಗಳನ್ನು ಮತ್ತು ವೈಜ್ಞಾನಿಕ ಮನೋಭಾವವನ್ನು ಪ್ರಚೋದಿಸುವ ಶಿಕ್ಷಣ ಕ್ರಮವನ್ನು ಅಳವಡಿಸಬೇಕಾಗಿದೆ. ಭಾರತ ಭೌಗೋಳಿಕ ಸಾಂಸ್ಕೃತಿಕ ನೈಸರ್ಗಿಕ ದೃಷ್ಠಿಯಿಂದ ವೈವಿಧ್ಯತೆಯುಳ್ಳ ದೊಡ್ಡ ದೇಶ. ಹೀಗಾಗಿ ಈ ವೈವಿಧ್ಯತೆಯನ್ನು ವಿಜೃಂಭಿಸುವ ಸಲುವಾಗಿ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕತೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ನಗರ ಪ್ರದೇಶಗಳಲ್ಲಿ ಸಿಬಿಎಸ್ ಕೇಂದ್ರ ಪಠ್ಯಕ್ರಮವನ್ನು ಬೋಧಿಸುವ ರಾಷ್ಟೀಯ ಅಂತಾರಾಷ್ಟ್ರೀಯ ಶಾಲೆಗಳು ಈ ಪ್ರಾದೇಶಿಕತೆಯನ್ನು ಒದಗಿಸುವುದರ ಬಗ್ಗೆ ಸಂದೇಹವಿದೆ. ಹೆಚ್ಚಿನ ಅಂಕಗಳನ್ನು ನೀಡುವ ಹಿಂದಿ, ಸಂಸ್ಕೃತ ಭಾಷೆಗಳನ್ನು ಮಕ್ಕಳು ಆಯ್ಕೆಮಾಡುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಪೂರಕವಾಗುವ ಇಂಗ್ಲಿಷ್ ಪ್ರಧಾನವಾದ ಈ ಶಾಲೆಗಳಲ್ಲಿ ಅವರಿಗೆ ಸ್ಥಳೀಯ ಸಂಸ್ಕೃತಿಯ ಪರಿಚಯವಾಗುವುದಾದರೂ ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ. ಬಿಳಿಗಿರಿ ರಂಗನ ಬೆಟ್ಟದ ಆದಿವಾಸಿ ಮಕ್ಕಳಿಗೆ ಅವರಿಗೆ ಪ್ರಸ್ತುತವಾಗದ ನಗರದ ವಿಷಯದ ಬದಲು ಅವರ ಪರಿಸರವಾಗಿರುವ ಅರಣ್ಯದ ಬಗ್ಗೆ ಪಠ್ಯಕ್ರಮ ಒತ್ತುನೀಡಬೇಕು. ಕಲಿಕೆ ಎಂಬುದು ಬದುಕಿಗೆ ಬೇಕಾದ ಸಾರ್ವತ್ರಿಕ ಅರಿವಿನ ಜೊತೆಗೆ ಹೆಚ್ಚು ವ್ಯಾಪಕವಾಗದೆ ಒಂದು ವಿಶೇಷ ಜ್ಞಾನವನ್ನು ಆಳವಾಗಿ ದೀರ್ಘವಾಗಿ ಅರಿಯಲು ಸಹಾಯಕವಾಗಬೇಕು. ವಿದ್ಯಾಥಿಗಳ ಕಲಿಕೆ ಅವರ ಬದುಕಿಗೆ ಎಷ್ಟು ಪ್ರಸ್ತುತವಾಗಿರಬೇಕು ಎಂಬುದು ಬಹಳ ಸಂಕೀರ್ಣವಾದದ್ದು. ಆರ್ಥಿಕ ಕಾರಣಗಳಿಂದ ವಲಸೆ ಹೋಗುತ್ತಿರುವಾಗ ಮತ್ತು ಜಾಗತೀಕರಣದ ಹಿನ್ನೆಲೆಯಲ್ಲಿ ಎಲ್ಲವೂ ಪ್ರಸ್ತುತವೆಂಬಂತೆ ತೋರುತ್ತದೆ. ಈ ಪ್ರಶ್ನೆಗೆ ಉತ್ತರ ದೊರಕುವುದು ಸುಲಭವಲ್ಲ. 

ಅಭಿವೃದ್ದಿಗೊಂಡಿರುವ ಇಂಗ್ಲೆಂಡಿನಂತಹ ದೇಶದಲ್ಲಿ ಕೆಲವು ಬಡ ಮಕ್ಕಳು ಮುಂಜಾನೆ ಶಾಲೆಗೆ ಹಸಿದ ಹೊಟ್ಟೆಯಲ್ಲಿ ಬರುತ್ತಿದ್ದಾರೆ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಬೆಳಗಿನ ಉಪಹಾರವನ್ನು ಶಾಲೆಯಲ್ಲಿ ಒದಗಿಸುತ್ತಿದೆ. ಹೀಗಿರುವಾಗ ಬಡತನ ಹಸಿವು ವ್ಯಾಪಕವಾಗಿರುವ ಭಾರತದಲ್ಲಿ ಅದೆಷ್ಟೋ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಮಕ್ಕಳಿಗೆ ಶಾಲೆಯಲ್ಲಿ ಬೆಳಗ್ಗೆ ಉಪಹಾರ ಮತ್ತು ಮಧ್ಯಾನ್ಹ ಭೋಜನ ಒದಗಿಸುವುದು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಬೇಕು. ಹಸಿದ ಹೊಟ್ಟೆಯಲ್ಲಿ ಮಕ್ಕಳ ಏಕಾಗ್ರತೆ ಕುಗ್ಗಿ ಹೋಗುವುದನ್ನು ನಾನು ಒಬ್ಬ ವೈದ್ಯನಾಗಿ ಗಮನಿಸಿದ್ದೇನೆ. ಶಾಲೆಯಲ್ಲಿ ಸಿಗುವ ಆಹಾರದಲ್ಲಿ ಪೌಷ್ಠಿಕ ಅಂಶಗಳೂ ಇರಬೇಕು. ಈ ವ್ಯವಸ್ಥೆ ಹಸಿದ ಹೊಟ್ಟೆಗೆ ಅನ್ನವನ್ನು ನೀಡುವುದರ ಜೊತೆಗೆ ಮಕ್ಕಳ ತಂದೆ ತಾಯಿಗಳ ಮೇಲೆ ಇರುವ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ಶಾಲೆಯಲ್ಲಿ ಹಾಜರಾಗಲು ಕಾರಣವೂ ಆಗುತ್ತದೆ.

ವಿದ್ಯಾರ್ಜನೆಯಲ್ಲಿ ಶಿಕ್ಷಕರ ಪಾತ್ರವು ಮಹತ್ವವಾದದ್ದು. ಶಿಕ್ಷಕರಿಗೆ ಉನ್ನತ ಶಿಕ್ಷಣದ ಅವಶ್ಯಕತೆ ಇರುವುದನ್ನು ಮರೆಯುವುದು ಸುಲಭ. ಅವರಿಗೂ ಶಿಕ್ಷಣ ವ್ಯವಸ್ಥೆಯಿಂದ ಬೆಂಬಲ ಬೇಕಾಗಿದೆ. ಶಿಕ್ಷಣವನ್ನು ಯಾವ ರೀತಿ ವಿದ್ಯಾರ್ಥಿಗಳಿಗೆ ತಲುಪಿಸಬೇಕು, ಯಾವ ರೀತಿ ಒದಗಿಸಿದರೆ ಅದು ಪರಿಣಾಮಕಾರಿ ಎಂಬುದನ್ನು ಶಿಕ್ಷಣ ತಜ್ಞರು ಶಿಕ್ಷಕರಿಗೆ ತಿಳಿಸಬೇಕು. ನನಗೆ ತಿಳಿದಂತೆ ಕರ್ನಾಟಕದಲ್ಲಿ ಸರ್ಕಾರದ ಉನ್ನತ ಶಿಕ್ಷಣ ಅಕಾಡೆಮಿ ಈ ಕೆಲಸವನ್ನು ಮಾಡಿಕೊಂಡು ಬಂದಿದೆ. ಶಿಕ್ಷಕರಲ್ಲಿ ಒಂದು ಸೃಜನ ಶೀಲತೆ (creativity) ಇರಬೇಕು, ಸಂಬಳಕ್ಕಷ್ಟೇ ಕೆಲಸಮಾಡುತ್ತಾ ಹೇಳಿದ್ದನ್ನೇ ಹೇಳೊ ಕಿಸ ಬೈ ದಾಸ ಮೇಸ್ಟ್ರು ಗಳು ನಮ್ಮಲ್ಲಿ ಯಥೇಚ್ಛವಾಗಿದ್ದಾರೆ. ಅವರಲ್ಲಿ ಕ್ರಿಯಾಶೀಲತೆಯನ್ನು (Dynamisim) ಮತ್ತು  ಸೃಜನಶೀಲತೆ (creativity) ಉಂಟುಮಾಡಬೇಕಾಗಿದೆ.  ಹಿಂದೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಬಗ್ಗೆ ಒಂದು ರೀತಿ ಭಯವಿತ್ತು. ಶಿಕ್ಷಣ ಕ್ರಮ ಕಠೋರವಾಗಿ ಮತ್ತು ಹಿಂಸಾತ್ಮಕವಾಗಿತ್ತು. (Learning by humiliation) ದಂಡನೆಯಿಲ್ಲದ ಶಿಕ್ಷಣವಿರಲಿಲ್ಲ. ಈಗ ಸಾಕಷ್ಟು ಸುಧಾರಣೆಗಳಾಗಿವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಬೇಕು. ವಿದ್ಯಾರ್ಥಿಗಳು ಅವರಿಂದ ಸ್ಫೂರ್ತಿಯನ್ನು ಪಡೆಯಬೇಕು. ಅವರಿಬ್ಬರ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ಗೌರವಗಳು ಮೂಡಿ ಬರಬೇಕು.

ಇತ್ತೀಚಿಗೆ ಪಾಶ್ಚಿಮಾತ್ಯ ದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಲ್ಲಿ ನ್ಯೂರೋ ಡೈವರ್ಸಿಟಿ ಇರುವುದನ್ನು ಗುರುತಿಸಲಾಗುತ್ತಿದೆ. ಅದು ಮಕ್ಕಳ ಮಾನಸಿಕ ಬೆಳವಣಿಗೆಯ ನ್ಯೂನತೆ ಎಂದು ಹೇಳಬಹುದು. ಎಲ್ಲರ ಗ್ರಹಿಕೆ ಒಂದೇ ರೀತಿ ಇರುವುದಿಲ್ಲ. ಈ ನ್ಯೂನತೆ ಇರುವ ಮಕ್ಕಳ ಗ್ರಹಿಕೆಯಲ್ಲಿ ಕೆಲವು ಕುಂದು ಕೊರತೆಗಳಿರುತ್ತವೆ. ಕೆಲವು ವಿಷಯಗಳನ್ನು ಸಫಲವಾಗಿ ಗ್ರಹಿಸಿದರೂ ಇನ್ನು ಕೆಲವು ಗ್ರಹಿಕೆಯಲ್ಲಿ ತೊಂದರೆ ಇರುತ್ತದೆ. ಹೆತ್ತವರಿಗೆ ಮನೆಯಲ್ಲಿ ಕಾಣದ ಕೆಲವು ಮಾನಸಿಕ ತೊಂದರೆಗಳು ಶಾಲೆಯ ಒತ್ತಡ ವಾತಾವರಣದಲ್ಲಿ ಅಭಿವ್ಯಕ್ತಗೊಳ್ಳುತ್ತವೆ.  ಈ ಒಂದು ಸನ್ನಿವೇಶದಲ್ಲಿ ಒಬ್ಬ ವಿದ್ಯಾರ್ಥಿ ಧಡ್ಡನೆಂದು ಅದು ಅವನ ಹಣೆಬರಹವೆಂದು ಕೈಬಿಡುವುದು ಸರಿಯಲ್ಲ. ಈ ರೀತಿ ತೊಂದರೆ ಇರುವ ಮಕ್ಕಳಿಗೆ ಮನಶಾಸ್ತ್ರ ತಜ್ಞರ ಸಹಾಯ ಸಲಹೆ ಬೇಕಾಗುತ್ತದೆ. ಈ ವಿದ್ಯಾರ್ಥಿಗಳಿಗೆ ಶಿಕ್ಷಕರ ಮತ್ತು ಸಹಪಾಠಿಗಳ ಅನುಕಂಪೆ, ಸಹಕಾರ ಬಹಳ ಮುಖ್ಯ. ಈ ರೀತಿಯ ಮಕ್ಕಳಿಗೆ ವಿಶೇಷ ಪಠ್ಯ ಕ್ರಮ ಮತ್ತು ಪರೀಕ್ಷಾಕ್ರಮ ಬೇಕಾಗುತ್ತದೆ. ಇವರಿಗೆ ಕಲಿಸಲು ಹೆಚ್ಚಿನ ಸೌಲಭ್ಯ ಮತ್ತು ಸಂಪನ್ಮೂಲಗಳು ಬೇಕಾಗುತ್ತದೆ. 

ನಮ್ಮ ಪರೀಕ್ಷಾಕ್ರಮದಲ್ಲಿ ಬಹಳ ವರ್ಷಗಳಿಂದ ವರ್ಷಕ್ಕೆ ಒಂದೇ ಪರೀಕ್ಷೆ ನಡೆಸಿ ಆ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿ ಉತ್ತೀರ್ಣನಾಗಲು ಅರ್ಹನೇ ಎಂಬುದನ್ನು ನಿರ್ಧರಿಸಲಾಗುತ್ತಿದೆ. ವರ್ಷವಿಡೀ ಕಲಿತ ಒಂದೊಂದು ವಿಷಯವನ್ನು  ಕೇವಲ ಮೂರು ಗಂಟೆಗಳ ಪರೀಕ್ಷೆಯಲ್ಲಿ ನಿರ್ಧರಿಸುವುದು ಒಂದು ವಿಕೃತ ಪದ್ಧತಿ. ಈ ಒಂದು ವ್ಯವಸ್ಥೆಯಲ್ಲಿ ಪರೀಕ್ಷೆ ಎಂಬುದು ವಿದ್ಯಾರ್ಥಿಯ ಅರಿವಿಗಿಂತ ಅವನ
 /ಅವಳ ಜ್ಞಾಪಕ ಶಕ್ತಿಯನ್ನು ಅಳೆಯುವ ಸಾಧನವಾಗುತ್ತದೆ. ಒಂದು ಅಂತಿಮ ಪರೀಕ್ಷೆಯ ಬದಲು ವರ್ಷದುದ್ದಕ್ಕೂ ಹಲವಾರು ಘಟ್ಟಗಳಲ್ಲಿ  ಮಾಡುವುದು ಲೇಸು. ಪರೀಕ್ಷೆ ಎನ್ನುವುದು ಒಂದು ರಣರಂಗವಾಗಿ ಇಲ್ಲಿ ಸ್ಪರ್ಧೆಗೆ ಹೆಚ್ಚು ಪ್ರಾಮುಖ್ಯತೆ. ಸ್ಪರ್ಧೆ ಕೆಲವು ಮಕ್ಕಳ ಆತ್ಮ ವಿಶ್ವಾಸಕ್ಕೆ ಅಗತ್ಯ ಇರಬಹುದು, ಇರಲಿ ಆದರೆ ಅದನ್ನು ವಿಪರೀತವಾಗಿ ವಿಜೃಂಭಿಸುವುದನ್ನು ಕೈಬಿಡಬೇಕು. ಸಾಧಾರಣ ಮತ್ತು ಅಸಾಧಾರಣ ಪ್ರತಿಭೆ ಎಂದು ಶ್ರೇಣೀಕರಿಸಿದರೆ ಸಾಲದೇ? ಹೆತ್ತವರು ತಮ್ಮ ಮಕ್ಕಳನ್ನು ಇತರ ಮಕ್ಕಳಿಗೆ ಹೋಲಿಸಿ ಹಲುಬುವುದುನ್ನು ಖಂಡಿಸಬೇಕು. ಹೆತ್ತವರ, ಪೋಷಕರ ಹೆಚ್ಚಿನ ನಿರೀಕ್ಷೆ ಹಲವಾರು ವಿದ್ಯಾರ್ಥಿಗಳಿಗೆ ಮಾನಸಿಕ ತೊಂದರೆ ನೀಡಿ ಅವರು ಕಿರುಕುಳ ಮತ್ತು ಆತ್ಮಹತ್ಯಗೆ ಗುರಿಯಾಗುತ್ತಿದ್ದಾರೆ. ಈ ಒಂದು ವ್ಯವಸ್ಥೆ ಬದಲಾಗಬೇಕು.

ಒಟ್ಟಾರೆ ಶಿಕ್ಷಣ ನೀತಿ ಸಮಾಜಕ್ಕೆ ಹೊಂದುವಂತಿರಬೇಕಾದರೆ ನಮ್ಮ ಪಠ್ಯ ಕ್ರಮದಲ್ಲಿ, ಶಿಕ್ಷಣ ನೀಡುವ ಕ್ರಮದಲ್ಲಿ, ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ, ಅವರ ತಂದೆ ತಾಯಿಯರ ನಿರೀಕ್ಷೆಯಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕು. ಇಪ್ಪತ್ತೊಂದನೇ ಶತಮಾನದಲ್ಲಿ ಹಲವಾರು ವೈಜ್ಞಾನಿಕ ಸಾಧನೆಗಳಾಗಿ ಬಾಹ್ಯಾಕಾಶ ಮತ್ತು ಗ್ರಹಗಳಲ್ಲಿ ವಸಾಹತು ಮಾಡುವ ಆಲೋಚನೆ ಮನುಜಕುಲಕ್ಕೆ ಮೂಡುತ್ತಿದೆ. ಕರೋನ ರೀತಿಯ ಭಯಂಕರ ಪಿಡುಗನ್ನು ಹತೋಟಿಯಲ್ಲಿಡಲು ಲಸಿಕೆಗಳನ್ನು ಕಂಡುಹಿಡಿದ್ದೇವೆ. ಸೋಶಿಯಲ್ ಮೀಡಿಯಾ ಎಂಬ ತಾಂತ್ರಿಕ ಅದ್ಭುತವನ್ನು ಕಂಡುಕೊಂಡಿದ್ದೇವೆ. ಹಿರಿದಾದ ಆಲೋಚನೆಗಳು ನಮ್ಮ ಕಲ್ಪನೆಗೆ ದೊರೆಯುತ್ತಿವೆ. ಆದರೆ ವಾಸ್ತವವಾಗಿ ನಮ್ಮ-ನಿಮ್ಮ ನಡುವೆ ಹಸಿವು, ಬಡತನ, ಪ್ರಕೃತಿ ವಿಕೋಪ, ಧರ್ಮಯುದ್ಧ, ವಲಸೆ, ಮೂಲಭೂತವಾದ, ಭಯೋತ್ಪಾದನೆ, ಸರ್ವಾಧಿಕಾರ, ಕ್ಷೀಣವಾಗುತ್ತಿರುವ ಪ್ರಜಾಪ್ರಭುತ್ವ ಮೌಲ್ಯಗಳು, ಮತಬೇಧ, ವರ್ಣಬೇಧ ಎಂಬ ಆತಂಕಕಾರಿ ಸನ್ನಿವೇಶಗಳ ಮಧ್ಯೆ ಬದುಕ ಬೇಕಾಗಿದೆ. ಹಸಿವನ್ನು ನೀಗಿಸುವ, ಮಾನವೀಯ ಮೌಲ್ಯಗಳನ್ನು, ಸಹಿಷ್ಣುತೆಯನ್ನು ಎತ್ತಿಹಿಡಿಯಬೇಕಾದ ಶಿಕ್ಷಣವನ್ನು ಮಕ್ಕಳಿಗೆ ಮತ್ತು ಯುವ ಪೀಳಿಗೆಗೆ ತುರ್ತಾಗಿ ನೀಡಬೇಕಾಗಿದೆ. ಉತ್ತಮ ಶಿಕ್ಷಣ ನೀತಿ ಒಂದು ಸಮಾಜದ ನೈತಿಕ ಕನ್ನಡಿಯಾಗಿರಬೇಕು. ಗಾಂಧೀಜಿ ಹೇಳಿದಂತೆ ಅದು ದೇಹ, ಮನಸ್ಸು, ಹೃದಯ ಮತ್ತು ಆತ್ಮದ ವಿಕಾಸಕ್ಕೆ ಕಾರಣವಾಗಬೇಕು. ಸ್ವನಿಯಂತ್ರಣ ಮತ್ತು ಆತ್ಮಶೋಧನೆಗಳನ್ನು ಕಲಿಸಬೇಕು. ಸತ್ಯ, ಪ್ರಾಮಾಣಿಕತೆ ಮತ್ತು ಅಹಿಂಸೆಯ ಹಾದಿಯಲ್ಲಿ ವಿಶ್ವಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯನ್ನು ಹರಡಲು ಕಾರಣವಾಗಬೇಕು.


 ***




(ಕರಾಳ) ರಹಸ್ಯಗಳ ಗೂಡು ಬ್ರಾಡ್ಸ್ ವರ್ತ್ -ಭಾಗ 2 ಶ್ರೀವತ್ಸ ದೇಸಾಯಿ

 

ಕಳೆದ ವಾರ ಪ್ರಕಟಿಸಿದ ರಹಸ್ಯಗಳ ಗೂಡು ಭಾಗ ೧ ರ ನಂತರ ಈ ವಾರ ಇದೇ ವಿಷಯದ ಬಗ್ಗೆ ಅದರಲ್ಲೂ ಭವ್ಯವಾದ ಹಿರಿಯ ಮನೆಯ ಮತ್ತು ಮನೆ ಒಡೆಯರ ಕರಾಳ ಇತಿಹಾಸವನ್ನು ಶ್ರೀವತ್ಸ ದೇಸಾಯಿ ಅವರು ಭಾಗ ಎರಡರಲ್ಲಿ ದಾಖಲಿಸಿದ್ದಾರೆ. ಒಂದು ಹಿನ್ನೋಟದಲ್ಲಿ ನೋಡಿದಾಗ ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯ, ಒಂದು ರಾಷ್ಟ್ರ, ಒಂದು ಸಂಸ್ಕೃತಿ, ಒಂದು ಬಣ್ಣ, ಒಂದು ಜಾತಿ ಮತ್ತು ಒಂದು ಧರ್ಮ ಇನ್ನೊಂದನ್ನು ಶೋಷಿಸುತ್ತ ಬಂದಿದೆ. ಮೇಲು-ಕೀಳು, ಶ್ರೇಷ್ಠ- ಕನಿಷ್ಠ ಎಂಬ ಭಾವನೆಗಳನ್ನು ಹುಟ್ಟುಹಾಕಿದೆ. ಈ ಶೋಷಣೆ, ದ್ವೇಷ, ದಬ್ಬಾಳಿಕೆ, ಅನ್ಯಾಯ ಪ್ರಪಂಚದ ಹಲವಾರು ನೆಲೆಗಳಲ್ಲಿ ನಮ್ಮ-ನಿಮ್ಮ ನಡುವೆ ಇಂದಿಗೂ ನಡೆಯುತ್ತಿದೆ. ಭೇದಗ್ರಹಣ, ಗುಂಪುಗಾರಿಕೆ, ನಮ್ಮವರು-ಅನ್ಯರು ಈ ಭಾವನೆಗಳು ಜೈವಿಕವಾಗಿ ಮತ್ತು ಸಾಮಾಜಿಕವಾಗಿ ಒಂದು ಗುಂಪಿನ, ಸಮುದಾಯದ ಸಂರಕ್ಷಣೆಗೆ ಪೂರಕವಾದದ್ದು ಎಂದು ಸಮಾಜ ಶಾಸ್ತ್ರ ಪರಿಗಣಿಸಿದ್ದರೂ, ಯಾವ ವಿಶ್ಲೇಷಣೆ ವಿವರಣೆ ಕೊಟ್ಟರೂ, ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ! ಅದು ಅನೈತಿಕ ನಿಲುವು. ಈ ವಿಭಜನೆಗಳನ್ನು ದಾಟಿ ಮೇಲೇರುವುದು ಸಭ್ಯತೆಯ, ನಾಗರೀಕತೆಯ ಮತ್ತು ವಿಕಾಸದ ಲಕ್ಷಣ. ಇತಿಹಾಸದಲ್ಲಿ ನಡೆದ ಹಳೆ ಆಕ್ರಮಣ, ತಪ್ಪು ಇವುಗಳ ನೆಪದಲ್ಲಿ ಅವುಗಳನ್ನು ಕೆದಕಿ ಈ ಇಪ್ಪತ್ತೊಂದನೇ ಶತಮಾನದಲ್ಲಿ ಇತ್ಯರ್ಥ ಮಾಡುವುದು ಕೂಡ ಅನೈತಿಕ. ವಿಶ್ವಮಾನವ, ವಿಶ್ವ ಭ್ರಾತೃತ್ವ ಇವುಗಳ ಚೌಕಟ್ಟಿನಲ್ಲಿ ಈ ಮೇಲೆ ಪ್ರಸ್ತಾಪಿಸಿದ ವಿಭಜನೆಗಳನ್ನು ಸಜ್ಜನರು,ಉದಾರಿಗಳು, ಪ್ರಗತಿಪರರು ಪ್ರಶ್ನಿಸಬೇಕಾಗಿದೆ ಮತ್ತು ತಿರಸ್ಕರಿಸಬೇಕಾಗಿದೆ. ಇದು ನಾಗರೀಕ ಸಮಾಜದ ಸಾಮಾಜಿಕ ಜವಾಬ್ದಾರಿ. ಮೌನ ಸಮ್ಮತಿಯ ಸೂಚಕ ಎಂಬ ಉಕ್ತಿಯನ್ನು ಕೇಳಿದ್ದೇವೆ. ಡಾ.ದೇಸಾಯಿ ಅವರ ಬರಹ ನಮ್ಮ ಸಂವೇದನೆಗಳನ್ನು ಎಚ್ಚರ ಗೊಳಿಸುವುದಲ್ಲದೆ, ಅರಿವನ್ನು ಹೆಚ್ಚಿಸಿದೆ. ಸೂಕ್ಷ್ಮ ಮತೀಯರು ಈ ವಿಚಾರವನ್ನು ಪ್ರಪಂಚದ ಇತರ ನೆಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇಟ್ಟು, ಒರೆ ಹಚ್ಚಿ ನೋಡಿ, ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
      -ಸಂಪಾದಕ

**********************************************************************************************

’ಸತ್ಯಂ ಬ್ರೂಯಾತ್, ಪ್ರಿಯಮ್ ಬ್ರೂಯಾತ್’. ಒಂದನೆಯ ಭಾಗದಲ್ಲಿ  ಬ್ರಾಡ್ಸ್ ವರ್ತ್ ಮನೆ, ತೋಟದ ಬಗ್ಗೆ ಥಳುಕಿನ ಸತ್ಯಗಾಥೆ ಓದಿದ ನಂತರ ಮೇಲೆ ಉದ್ಧರಿಸಿದ ಮನುಸಮೃತಿಯ ಎರಡನೆಯ ಪಾದಕ್ಕೆ ಬರಬೇಕಲ್ಲವೆ? ’ನ ಬ್ರೂಯಾತ್ ಸತ್ಯಮಪ್ರಿಯಂ!’ ಅಪ್ರಿಯವಾದದ್ದನ್ನೂ ಹೇಳಿದರೇನೇ ಬ್ಯಾಲನ್ಸ್ ಆಗುತ್ತದೆ. ಹೋದಸಲದ ಲೇಖನವನ್ನು ಓದಿದ ಕೆಲವರಿಗೆ ಬಿ ಬಿ ಸಿ ಯಲ್ಲಿ ಬಂದ ’ಆಂಟಿಕ್ ರೋಡ್ ಶೋ’ದಲ್ಲಿ ನೋಡಿದ ವಿವಿಧ grand country homes ಗಳು ನೆನಪಾದವಂತೆ. ನಿಜ, ಹಿಂದೊಮ್ಮೆ ಈ ದೇಶದಲ್ಲಿ 5,000 ಕ್ಕಿಂತ ಹೆಚ್ಚು ಇಂಥ ಭವ್ಯ ಮನೆಗಳಿದ್ದು ಕಾರಣಾಂತರಗಳಿಂದ ಈಗ ಅವುಗಳ ಸಂಖ್ಯೆ 3,000 ಕ್ಕೆ ಇಳಿದು ನಿಂತಿದೆ. ಇವುಗಳನ್ನು ನೋಡಿ ಆನಂದಿಸಿದ ಜನಸಾಮಾನ್ಯರಿಗೆ ಈ

ಬ್ರಾಡ್ಸ್ ವರ್ತ್ ಹಾಲ್

’ಮಾಂಡಲೀಕರು, ಪಾಳೇಗಾರರು (ಅವರಲ್ಲಿ ಕೆಲವರು ನೈಟ್(Kt), ಬಾರೊನೆಟ್(Bt), ಡ್ಯೂಕ್,  ಮಾರ್ಕಿಸ್ಸ್ ಅಂತೆಲ್ಲ ಟೈಟಲ್ ಹೊಂದಿದ ಮಾಲಕರು), ಹೇಗೆ ಸಿರಿವಂತರಾದರು ಅನ್ನುವ ಕುತೂಹಲವಿದ್ದರೂ ಅದನ್ನು ಇತ್ತೀಚೆಗೆ ಕೆದಕುವ ವರೆಗೆ ಗೌಪ್ಯವಾಗಿಯೇ ಇಡಲಾಗುತ್ತಿತ್ತು. ಈಗ ಆ ಕರಾಳ ಇತಿಹಾಸದ ಮೇಲೆ ಬೆಳಕು ಚೆಲ್ಲುವಾ. ಅದಕ್ಕೂ ಮೊದಲು ಅದರ ಹಿನ್ನೆಲೆಯನ್ನು ಅರಿತುಕೊಳ್ಳೋಣ.

 ಒಂದು ಕಾಲಕ್ಕೆ ಸೂರ್ಯಾಸ್ತ ಕಾಣದ ಸಾಮ್ರಾಜ್ಯಶಾಹಿಯಾಗಿದ್ದ ಬ್ರಿಟನ್ ದೇಶದವರು ಬೇರೆ ಕೆಲವು ವಸಹಾತುಶಾಹಿ ಯೂರೋಪಿಯನ್  ದೇಶದ ಪ್ರಜೆಗಳಂತೆ ಹೆಚ್ಚು ಕಡಿಮೆ ಹದಿನಾರನೆಯ ಶತಮಾನದಿಂದಲೂ ಆಫ್ರಿಕನ್ನರನ್ನು ’ಬೇಟೆಯಾಡಿ’ ಗುಲಾಮರನ್ನಾಗಿ ಹಿಡಿದೊಯ್ದು ’ನ್ಯೂ ವರ್ಲ್ಡ್’ ಅಮೇರಿಕೆ, ಮತ್ತು ವೆಸ್ಟ್ ಇಂಡೀಸ್ ದ್ವೀಪಗಳಿಗೆ ಕೊಂಡೊಯ್ದು ಮಾರುವ ವ್ಯಾಪಾರದಲ್ಲಿ ಆಳವಾಗಿ ತೊಡಗಿದ್ದರು. ದಾಖಲೆಗಳ ಪ್ರಕಾರ ಆ ಎರಡೂವರೆ ಶತಮಾನದ ಅವಧಿಯಲ್ಲಿ ಹೆಚ್ಚು ಕಡಿಮೆ 3,000,000 ಗುಲಾಮರನ್ನು ’ಕಪ್ಪು ಖಂಡ’ದಿಂದ ಅಮೇರಿಕೆಗಳಿಗೆ ಸಾಗಿಸಲಾಯಿತು. ಅದರಿಂದ ಉದ್ಭವಿಸಿದ ದುಡ್ಡು-ದೌಲತ್ತು, ವರ್ಚಸ್ಸು ಮತ್ತು ರಾಜಕಾರಣದಲ್ಲಿ  ಯಶಸ್ಸನ್ನು ಗಳಿಸಿದವರು ಅಗಣ್ಯರು. ಈ ದೇಶದ ಉದ್ದಗಲದ ಮಹಾನಗರಗಳಲ್ಲಿ ಅದರ ಕುರುಹುಗಳಿವೆ; ಇಮಾರತಿಗಳಿವೆ, ವಿದ್ಯಾ ಸಂಸ್ಥೆಗಳಿವೆ, ದತ್ತಿ ಪಾರಿತೋಷಕಗಳಿವೆ; ’ಮಹಾ ದಾನಿಗಳ’ ಪುತ್ಥಳಿಗಳಿವೆ. ಅಥವಾ ಇದ್ದವು. ಕೆಲವು ಇತ್ತೀಚಿನ ಕಾಲದಲ್ಲಿ ನೀರುಪಾಲಾದದ್ದು ಸರ್ವ ವಿದಿತ. ದಾಸ್ಯದ ವಿರುದ್ಧ ಪ್ರತಿಭಟನೆಗಳು ಬೆಳೆಯಲಾರಂಭಿಸಿ ತಡವಾಗಿಯಾದರೂ 1833 ರಲ್ಲಿ ಗುಲಾಮಗಿರಿ ನಿಷೇಧಿಸುವ ಕಾನೂನು (Slavery Abolition Act 1833) ಜಾರಿಗೆ ಬಂದಿತು.

ಪೀಟರ್ ಥೆಲ್ಲುಸನ್ ಮತ್ತು ಗುಲಾಮರ ಸಾಗಾಣಿಕೆ

ಗುಲಾಮಗಿರಿ ನಿರ್ಮೂಲನ ಆಂದೋಲನದ ದ್ವಿಶತಮಾನದ ವರ್ಧಂತಿಯ ಕಾಲದಲ್ಲಿ ಈ ವಿಷಯದಲ್ಲಿ ಆಸ್ಥೆ ಬೆಳೆಯಿತು. (ನಂತರದ Black Lives Matter ಆಂದೋಲನ ಇಲ್ಲಿ ಪ್ರಸ್ತುತ ಅಲ್ಲ). ಅದಕ್ಕೂ ಮೊದಲು ಜನರಲ್ಲಿ ಈ ವಿಷಯದಲ್ಲಿ ಹೆಚ್ಚಿನ ತಿಳಿವಳಿಕೆಯನ್ನು ಬಿಂಬಿಸಲು ಈ ನಾಡಿನ ಎರಡು ಪ್ರಮುಖ ದತ್ತಿ ಸಂಸ್ಥೆಗಳದ ಇಂಗ್ಲಿಷ್ ಹೆರಿಟೇಜ್(EH)  ಮತ್ತು ನ್ಯಾಷನಲ್ ಟ್ರಸ್ಟ್(NT)) ತಮ್ಮ ಆಡಳಿತದಲ್ಲಿರುವ ಆದರೆ ಹಿಂದೆ ಖಾಸಗಿ ಸ್ವಾಮಿತ್ವದಲ್ಲಿದ್ದ ಈ ’ಅರಮನೆ’ಗಳ ಹಿಂದಿನ ಇತಿಹಾಸದ ಬಗ್ಗೆ ಆಳವಾದ ಅಭ್ಯಾಸ ಮಾಡಲು ನಿರ್ಧರಿಸಿದವು. ಇತಿಹಾಸಕರರನ್ನು ಸಂಪರ್ಕಿಸಿದರು; ಸಂಶೋಧಕರನ್ನು ಆಹ್ವಾನಿಸಿದರು. ಅದರ ಫಲಶ್ರುತಿ 2009 ರಲ್ಲಿ ನಡೆದ ಮಹತ್ವಪೂರ್ಣ The Slavery and the British Country House’ Conference. (ಆ ವರದಿಯ ಕೊಂಡಿ ಲೇಖನದ ಕೆಳಗೆ ಇದೆ). ಆನಂತರ ಅವೆರಡೂ ಸಂಸ್ಥೆಗಳು ಆ ಸಂಕೀರಣದಲ್ಲಿ ಮಂಡಿಸಿದ ಅಧ್ಯಯನಗಳನ್ನು ಪ್ರಕಟಿಸಿವೆ (ಈ ಲೇಖನದ ಕೊನೆಯಲ್ಲಿಯ ಕೊಂಡಿ ನೋಡಿ). ಆಗ ಬಹಿರಂಗವಾದ ಸತ್ಯ ಜನರಿಗೆ ಅಚ್ಚರಿಯುಂಟು ಮಾಡಿದರೂ ಅವುಗಳು ಅತ್ಯಂತ ಅನಿರೀಕ್ಷಿತವೇನೂ ಆಗಿರಲಿಲ್ಲ. ಆ ವರದಿಯಲ್ಲಿ ಬ್ರಾಡ್ಸ್ ವರ್ತ್ ಮನೆಯ ಹೆಸರು ಕಂಡಿರಬೇಕು ಎಂದು ನೀವು ಈಗಾಗಲೇ ಊಹಿಸಿರಬಹುದು. ನಿಜ. ಇದೊಂದೇ ಅಲ್ಲ ಇಂಗ್ಲಿಷ್ ಹೆರಿಟೇಜ್ ನ ನಿರ್ವಹಣೆಯಲ್ಲಿರುವ 33 ರಲ್ಲಿ 26 ’ಮನೆ’ಗಳಲ್ಲಿ, ಮತ್ತು ನ್ಯಾಷನಲ್ ಟ್ರಸ್ಟ್(NT) ದ ಕೆಳಗಿನ ಮೂರರಲ್ಲೊಂದು ಮನೆಗಳು (93/300) ಈ ’ಕಳಂಕ’ದಿಂದ ಲೇಪಿತವಾಗಿದ್ದವು ಅಥವಾ ಪರೋಕ್ಷ ಸಂಬಂಧ ಹೊಂದಿದ್ದವು! ಈ ಸಂಬಂಧ ಕೆಲವು ಕಡೆಗಷ್ಟೇ ಢಾಲಾಗಿ ಕಂಡರೆ ಇನ್ನು ಕೆಲವು ಮನೆತನಗಳು ತಮ್ಮ ’ಹೇಯ’ ದೌಲತ್ತನ್ನು ಮರೆಮಾಚಿಸಿ ಚಾಣಾಕ್ಷತೆಯಿಂದ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಸಿ, ಅನೇಕ ರೀತಿಯ ಚರಾಚರ ಆಸ್ತಿಗಳನ್ನು ಗಳಿಸಿದ್ದರು. ಆ ವೈಭವವನ್ನೇ ಇಂದೂ ನೋಡ ಬಹುದು.ಕೆಲವರು ರಾಜಕಾಣದಲ್ಲಿ ಧುಮುಕಿ ಮ್ರಧಾನ ಮಂತ್ರಿಗಳಾದರು. (ಉದಾ:ಇಲ್ಲಿಂದ ಅನತಿದೂರದ ಬಾಲ್ಸೋವರ್ ಕಾಸಲ್ಲಿನ (Balsover Castle) ಡ್ಯೂಕ್ ಆಫ್ ಪೋರ್ಟ್ ಲಂಡ್).  ಬ್ರಾಡ್ಸ್ ವರ್ತ್ ಕೊಂಡ ಪೀಟರ್ ಥೆಲ್ಲಿಸನ್ ಬ್ಯಾಂಕ್ ಆಫ್ ಇಂಗ್ಲಂಡಿನ ಡೈರೆಕ್ಟರ್ ಆಗಿದ್ದರೂ ವಲಸಿಗನಾಗಿದ್ದರಿಂದ ಸ್ವತಃ ತನಗೆ ಪಾರ್ಲಿಮೆಂಟಿನಲ್ಲಿ ಕೂಡುವ ಹಕ್ಕಿರದಿದ್ದರೂ ಆತನ ಮಗನಿಗೆ (ಪೀಟರ್ ಐಸಾಕ್ ಥೆಲ್ಲಿಸನ್) ಹಣ ಮತ್ತು ವರ್ಚಸ್ಸಿನಿಂದ ಬ್ಯಾರನ್ ರೆಂಡಲ್ ಶಮ್ ಅನ್ನುವ ಆನುವಂಶಿಕ ಪಿಯರೇಜ್ ದೊರಕಿತು. ಈ ತರದ ಪರಿವರ್ತನೆ (gentrification)     ತಲೆತಲಾಂತರದಿಂದ ನಡೆಯುತ್ತಲೇ ಬಂದಿದೆ. ವಿಪರ್ಯಾಸವೆಂದರೆ ಬ್ರಾಡ್ಸ್ ವರ್ತ್ ಮನೆತನದ ಕೋಟ್ ಆಫ್ ಆರ್ಮ್ಸ್ ಕೆಳಗಿನ ಧ್ಯೇಯ ವಾಕ್ಯ: Lebore et Honore: ಪರಿಶ್ರಮದಿಂದ ಗೌರವ!  

ಮರಗಳು ಸಂಗೀತವ ಹಾಡುತಿವೆ! (Songs of Mahogany)

ಹಿಂದಿನ ಲೇಖನದಲ್ಲಿ ಬ್ರಾಡ್ಸ್ ವರ್ತ್ ಮನೆಯನ್ನು ಅಲಂಕರಿಸಿದ ಮಹೋಗನಿ ಮರದ ಆಕರ್ಷಕ ಬಾಗಿಲು, ಹಿಡಿಕೆ, ಸ್ಟೇರ್ಕೇಸ್, balustrade  ಬಗ್ಗೆ ಬರೆದಿದ್ದನ್ನು ಓದಿರ ಬಹುದು ಮತ್ತು ನೋಡಿರಬಹುದು. ಮಹೋಗನಿ ನಮಗೆಲ್ಲ ಚಿರಪರಿಚಿತವಾದ ತೇಗನ್ನು ಹೋಲುತ್ತದೆ. ಅದು ಗಟ್ಟಿ, ಮರಗೆಲಸಕ್ಕೆ ಅನುಕೂಲ ಮತ್ತು ಬೆಲೆಬಾಳುವಂಥದು. ಪಶ್ಚಿಮ ಆಫ್ರಿಕಾ ಮತ್ತು ಸೆಂಟ್ರಲ್ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ದ  ಜಮೈಕಾಗಳಲ್ಲಿ  ಬೆಳೆಯುವ ಈ ಮರ ಮೇಲಿನ ಎರಡು ಬ್ರಿಟಿಶರ ಆಧಿಪತ್ಯದಲ್ಲಿದ್ದ ಭಾಗಗಳಲ್ಲಿ ವಿಪುಲವಾಗಿ ದೊರಕುತ್ತಿದ್ದರಿಂದ ಮತ್ತು ಅದನ್ನು ಕಡಿದು ಸಾಗಿಸಲು ಗುಲಾಮರ ’ತೋಳುಬಲ’ ಇದ್ದುದರಿಂದ ಅದರ ಆಮದು ಬ್ರಿಟಿಶ್ ವಸಹಾತುಗಳಲ್ಲೆಲ್ಲ ಬೆಳೆದದ್ದರಲ್ಲಿ ಆಶ್ಚರ್ಯವಿಲ್ಲ.

ಇಂದು ನೀವು ಬ್ರಾಡ್ಸ್ ವರ್ತಿಗೆ ಭೇಟಿ ಕೊಟ್ಟರೆ ಅಲ್ಲಲ್ಲಿ ಮಲಿಕಾ ಬುಕರ್ (ಚಿತ್ರ) ಎನ್ನುವ ಗಯಾನಾ-ಗ್ರೆನೇಡಾ ಮೂಲದ ಇಂಗ್ಲಿಷ್ ಕವಯಿತ್ರಿಯ ಕವನಗಳ ಪ್ರದರ್ಶನವನ್ನು ನೋಡಬಹುದು (ಈ ಪ್ರದರ್ಶನ ನವೆಂಬರ್ ವರೆಗೆ ಅಷ್ಟೇ). ಆಕೆ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಕ್ರಿಯೇಟಿವ್ ರೈಟಿಂಗ್ ವಿಭಾಗದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿ.  ವಿಶಾಲವಾದ ಡೈನಿಂಗ್ ಟೇಬಲ್ ಹೊದಿಕೆಯ ಮೇಲೆ ಆಕೆಯ ಕವನದ (ಶೀರ್ಷಿಕೆ ಮೇಲೆ ಇದೆ) ಮುದ್ರಿತ ಸಾಲುಗಳು ಇವು:

  ”Speak of Mahogany. Speak

of the original people of the land!

And think of  bodies/ bodies/ blood

black …blessed …bones..back broad   broken branches/

broken bough/  brown/   bleed/ balsam/  balm/  breathless

Here is a space of interruption,
where hands slap wooden surfaces
for luck and palms lick wood for praise.”

ತೆರೆಯದ ಬಾಗಿಲು!

 ಬ್ರಾಡ್ಸ್ ವರ್ತ್ಆಸ್ತಿಯನ್ನು ಕೊಳ್ಳುವ ಮೊದಲು ಬ್ಯಾಂಕರ್ ಪೀಟರ್ ಥೆಲ್ಲುಸನ್ ಮತ್ತು ಅವನ ಸಹಯೋಗಿಗಳು ಗುಲಾಮರು ಮತ್ತು ಅದಕ್ಕೆ ಸಂಬಧ ಪಟ್ಟ ಸರಕುಗಳ ಸಾಗಾಣಿಕೆಯ ವ್ಯಾಪಾರಕ್ಕೆಂದು ಎರಡು ಹಡಗುಗಳನ್ನು ಕೊಂಡಿದ್ದರು. ಒಂದರ ಹೆಸರು ”ಲಾಟರಿ” ಮತ್ತು ಇನ್ನೊಂದು ”ಲಿಬರ್ಟಿ”(ಎಂಥ ವಿಪರ್ಯಾಸ!). ಇತರ ವ್ಯಾಪರಿಗಳು ಇವರಿಂದ ಸಾಲ ತೆಗೆದುಕೊಂಡಿರುತ್ತಿದ್ದರು. ಗ್ರನಾಡಾ ಮತ್ತು ಬೇರೆ ದ್ವೀಪಗಳ ಪ್ಲಾಂಟೇಶನ್ ವ್ಯವಹಾರದಲ್ಲಿ ತೊಂದರೆಯಾಗಿ ಸಾಲ ತೀರಿಸಲು ತಪ್ಪಿದರೆ, ಇನ್ಶೂರನ್ಸ್ ಹಣದಿಂದ ಶ್ರೀಮಂತರಾಗುತ್ತಿದ್ದರು. ಅದಲ್ಲದೆ ಥೆಲುಸ್ಸನ್ ಬೀಡ್ಸ್ (ಆಫ್ರಿಕನ್ ಮಣಿಗಳು), ಗುಲಾಮರು ತಯಾರಿಸಿದ ರಮ್ (ಮದ್ಯ), ತನ್ನದೇ ಸಕ್ಕರೆ ರಿಫೈನರಿ ಮುಂತಾದ ಎಲ್ಲವ್ಯಾಪಾರಗಳು ಅಪಾರ ಸಂಪತ್ತನ್ನು ತಂದದ್ದರಲ್ಲಿ ಆಶ್ಚರ್ಯವಿಲ್ಲ. ಆತ ಸ್ವತಃ ಗ್ರೆನಾಡಾದಲ್ಲಿ ಕಾಲಿಟ್ಟಿರಲಿಕ್ಕಿಲ್ಲ. ಅನೇಕರಂತೆ ಅನುಪಸ್ಥಿತ ಲ್ಯಾಂಡ್ ಲಾರ್ಡ್ಗಳಲ್ಲಿ ಪೀಟರ್ ಸಹ ಒಬ್ಬನು! ಬ್ರಾಡ್ಸ್ ವರ್ತ್ ಮನೆಯ ದಿವಾನಖಾನೆಯಲ್ಲಿ ಅಲಂಕಾರಕ್ಕೆ ಇಟ್ಟಂಥ ಕಂಪು -ಕಂದು ಬಣ್ಣದ ಮಹೋಗನಿಯ ತೆರೆಯದ ಬಾಗಿಲು ಇದ್ದಂತೆ! 1833 ರಲ್ಲಿ ಗುಲಾಮಗಿರಿಗೆ ಅಂತಿಮ ಕಹಳೆ ಊದಿಯಾದ ಮೇಲೆ ಇಂಥ ಭವ್ಯ ಎಸ್ಟೇಟಿನ ಮಾಲಕರ  ಮನೆತನದ ಜೀತದಾಳಾಗಿ ಅನೇಕರು ಅವರನ್ನು ಅವಲಂಬಿಸಿದ್ದುದು ಸತ್ಯ. ಸರಕಾರ ಗುಲಾಮಗಿರಿ ನಿಂತ ಮೇಲೆ ’ನಷ್ಟ ಪರಿಹಾರಕ್ಕೆ’ 20 ಮಿಲಿಯನ್ ಪೌಂಡುಗಳನ್ನು ಬದಿಗಿಟ್ಟಿತು. ಅದು ಈಗಿನ ಲೆಕ್ಕದಲ್ಲಿ 16.5 ಬಿಲಿಯನ್! 100 ಮನೆಮಾಲಕರು ಅರ್ಜಿ ಸಲ್ಲಿಸಿದ 100 ಜನರ ಯಾದಿಯಲ್ಲಿ ಥೆಲುಸನ್ ಹೆಸರು ಮಾತ್ರ ಇಲ್ಲ!

ಇತ್ತೀಚಿನ ವರೆಗೆ ಮೇಲು ನೋಟಕ್ಕೆ ಆತ ಗುಲಾಮಗಿರಿಯಿಂದ ಲಾಭಪಡೆದನೆಂಬ ವಿಷಯ ಎಷ್ಟೋ ತಲೆಮಾರುಗಳ ವರೆಗೆ ರಹಸ್ಯವಾಗಿಯೇ ಉಳಿದಿತ್ತು!  ಮುಖವಾಡದ ಹಿಂದೆ ಏನಿದೆಯೋ!

ಎಲ್ಲಿಂದ ಬಂತು ಮಹೋಗನಿ?

ಮೆಕ್ಸಿಕೋದ ದಕ್ಷಿಣದ ಆಗಿನ ಬ್ರಿಟಿಶ್ ಹೊಂಡುರಾಸ್  (ಈಗಿನ ಬೆಲೀಜ್ ದೇಶದ)”ಮಸ್ಕಿಟೋ ಬೇ’ ಪ್ರದೇಶದಲ್ಲಿ ಬೆಳೆದ ಉತ್ತುಂಗ ಮಹೋಗನಿ ಮರಗಳನ್ನು ಪಶ್ಚಿಮ ಆಫ್ರಿಕದ ಇಬೋ ಮತ್ತು ಯರುಬಾ ಎನ್ನುವ ಬುಡಕಟ್ಟು ಜನಾಂಗದವರು ಕಡಿಯುತ್ತಿದ್ದರು. ತಮ್ಮ ಊರಲ್ಲಿಯೂ ಇದೇ ತರದ ಖಯಾ ಮರಗಳಿಗೆ ’ಮೊಗಾನ್ವೋ’ (‘m’oganwo’) ಅಂತ ಕರೆಯುತ್ತಿದ್ದರಂತೆ. ಅದೇ ಮಹೋಗನಿ ಆಯಿತು ಅಂತ ಒಂದು ವಾದ. ಗುಲಾಮರು ಮರಗಳನ್ನು ಕೊಡಲಿಯನ್ನು ಪಯೋಗಿಸಿ ಕೈಯಿಂದಲೆ ಕಡಿಯುತ್ತಿದ್ದರು. ಮರದ ಬೊಡ್ಡೆಯನ್ನು ತಟ್ಟಿ, ಗುಡ್ ಲಕ್ಕಿಗೆಂದು ಉಗುಳು ಹಚ್ಚಿದ ಅಂಗೈಯಿಂದ ಅದನ್ನು ಸವರಿ, ಮರವನ್ನು ಕಡಿದು ಕೆಡವಿ, ಉರಿಳಿಸುತ್ತ  ನದಿಯಲ್ಲಿ ತೇಲಿಬಿಡುತ್ತಿದ್ದರು. ಆಚೆಯ ತುದಿಯಲ್ಲಿದ್ದ ಸಾ’ ಮಿಲ್ಲಿನಲ್ಲಿ  ಇನ್ನೊಬ್ಬ ಗುಲಾಮ -ಆತನ ಎದೆಯ ಮೇಲೆ ಬರೆಕೊಟ್ಟು ಉಬ್ಬಿದ ದಪ್ಪ ಕಲೆ ಬಿದ್ದ ಒಡೆಯನ ಅಂಕಿತ -ತಲೆಬಗ್ಗಿಸಿ ಪ್ರಾರ್ಥನೆ ಮಾಡಿ ಕ್ಷಮೆ ಕೇಳಿ ಕೊಯ್ಯು ಮರದ ಹಲಗೆಗಳನ್ನು ಮಾಡುತ್ತಾನೆ. ಕೊನೆಯ ಹಂತದಲ್ಲಿ ಕನ್ನಡಿಯಂತೆ ಮಿಂಚಿ ಎಲ್ಲರ ಕಣ್ಣ ಸೂರೆಗೊಳ್ಳುವ ಕೆಂಪು-ಕಪ್ಪು ಪಾಲಿಶ್ ತಿಕ್ಕಿ ಉಜ್ಜಿದರೆ ತನ್ನ ಮುಖವೇ ಕಾಣಬೇಕು. ಅದನ್ನೇ ಚಾರ್ಲ್ ಡಿಕಿನ್ಸ್ ತನ್ನ ಶಬ್ದಗಳಲ್ಲಿ ಹೇಳಿದ್ದು: ”the varnished wood reflected in the depth of its grain, through all its polish, the hue of the wretched slaves.”  

ಅದೇ ಭಾವವನ್ನು ಆ ಕರಿಯ ಕವಯಿತ್ರಿ (ಮಲಿಕಾ ಬುಕರ್) ತನ್ನ ಮನ ಕಲುಕುವ ಕವನದ ಸಾಲುಗಳಲ್ಲಿ ಹೇಳಿದ್ದಾಳೆ:

In Jamaica in the big house, the house girl is on her knees

polishing the wood floor with coconut oil and orange halves.

ಬೆನ್ನ ಮೇಲೆ ಚಾಟೆಯೇಟಿನ ಕಲೆಗಳುಳ್ಳ ಗುಲಾಮ

In England servants kneel with linseed and brick dust,

worshiping this majestic red, genuflecting.

In the kitchen cook prepares the tea tray for Master. It too

is fancy wood. She walks through the house to deliver

to a man hunched over a desk shaping his will. Now think of Brodsworth, …

ಆ ಕುಖ್ಯಾತ ಉಯಿಲು!

ಪೀಟರ್ ಥೆಲ್ಲುಸನ್ ಸ್ವತಃ ಡೋಂಕಾಸ್ಟರಿನ ಈ ಮನೆಯಲ್ಲಿ ವಾಸ ಮಾಡಿರಲಿಲ್ಲ. ಈ ಮನೆಯನ್ನು ಆತನ ಮೊಮ್ಮಗ (ಒಂದನೆಯ ಭಾಗದಲ್ಲಿ ಹೇಳಿದಂತೆ) 1860 ರಲ್ಲಿ ಚಾರ್ಲ್ಸ್ ಸಾಬಿನ್ ಕಟ್ಟಿಸಿದ. ಆತನ ಅಜ್ಜ ಪೀಟರ್ 1797ರಲ್ಲಿ ತೀರಿಕೊಳ್ಳುವ ಮೊದಲು ಮಾಡಿದ ವೈಶಿಷ್ಠ್ಯಪೂರ್ನ ಮೃತ್ಯುಪತ್ರ ಇತಿಹಾಸವನ್ನೇ ಮಾಡಿತು. ಆಗ ಆತನ ವಾರ್ಷಿಕ ರಿಯಲ್ ಎಸ್ಟೇಟ್ ಆಸ್ತಿ £5000 ದಷ್ಟಿತ್ತು. ಅದಲ್ಲದೆ ವೈಯಕ್ತಿಕ ಎಸ್ಟೇಟ್ ಆಗಿನ ಆರು ಲಕ್ಷ ಪೌಂಡುಗಳಿಗೆ ಟ್ರಸ್ಟೀಗಳನ್ನು ನೇಮಿಸಿ ಅವೆಲ್ಲಕ್ಕೂ ಒಂದು ವಿಚಿತ್ರ ’ಅಕ್ಯೂಮ್ಯುಲೇಷನ್ ಕ್ಲಾಸ್’ ಹಾಕಿ ಇಟ್ಟ. ಅದರ ಪ್ರಕಾರ ”ಆತನ ಆಸ್ತಿಯನ್ನು ಎಲ್ಲಿಯವರೆಗೆ ಬೆಳೆಯುವಂತೆ ತೊಡಗಿಸಬೇಕೆಂದರೆ ತನ್ನ ಮರಣದ ಸಮಯದಲ್ಲಿ ಬದುಕಿರುವ ಮೊಮ್ಮಕ್ಕಕಳ ಕೊನೆಯಗಂಡು ಸಂತತಿ ಬದುಕಿರುವವರೆಗೆ! ಆವರೆಗೆ ಅದು ಆಗಿನ ಕಾಲದ ಒಂದೂವರೆ ಕೋಟಿ ಪೌಂಡುಗಳಷ್ಟು ಆಗಿರಬಹುದಾಗಿದ್ದು ಅದನ್ನು ಅವರಿಗೆ ಹಂಚ ಬೇಕು” ಎಂದು. ಹಿಂದೆಂದೂ ಈ ತರದ ಉಯಿಲನ್ನು ಕಂಡಿರಲಿಲ್ಲ. ಅದನ್ನು ಆತನ ಹೆಂಡತಿ ಮಕ್ಕಳು ಪ್ರಶ್ನಿಸಲಾಗಿ ಟ್ರಸ್ಟುಗಳಿಗೆಂದೇ ಮೀಸಲಾಗಿದ್ದ  ಚಾನ್ಸರಿ ಕೋರ್ಟಿಗೆ ಬಗೆ ಹರಿಸಲು ತಲೆಬೇನೆಯಾಗಿ ಹೋಯಿತು. ಕೊನೆಗೆ ಮುಂದೆ ಇಂಥ ಮೃತ್ಯು ಪತ್ರಗಳು ಬರಬಾರದೆಂದು ’Thelluson Act’ ಎನ್ನುವ ಹೊಸ ಕಾನೂನೇ ಪಾಸು ಮಾಡಬೇಕಾಯಿತು! ಎಂದಿನಂತೆ ಇಂಥ ವ್ಯಾಜ್ಯಗಳು ಮುಗಿಯದೆ ವರ್ಷಾನುಗಟ್ಟಲೆ ಕೋರ್ಟ್ ಮೆಟ್ಟಲು ಹತ್ತಿಸಿದ ಬಗೆಹರಿಸಿ ಲಾಯರು, ಕೋರ್ಟಿನ ಖರ್ಚು, ಫೀಸ್ ಗಳನ್ನು ಕಳೆದ ನಂತರ ’ಗೆದ್ದ’ ಫಲಾನುಭವಿಗಳಿಗೆ (beneficiaries) ದೊರಕಿದ್ದು ತಮ್ಮ ಮೊದಲಿನ ವರ್ಷಾಸನಕ್ಕಿಂತ ಏನೂ ಹೆಚ್ಚಾಗಿರಲಿಲ್ಲ! ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ! ಈ ಕೇಸನ್ನು ಆಧರಿಸಿಯೇ ಚಾರ್ಲ್ಸ್ ಡಿಕೆನ್ಸ್ ’ಬ್ಲೀಕ್ ಹೌಸ್’ (Bleak House) ಎನ್ನುವ ಕಥೆ ಬರೆದನೆಂದು ಪ್ರತೀತಿ. ಕೆಲವರು ಇದನ್ನು ಒಪ್ಪ್ದದಿದ್ದರೂ ಕೆಂಟ್ ಪ್ರಾಂತದ ಬ್ರಾಡ್ಸ್ಟೇರ್ಸ್ ಎನ್ನುವ ಊರಲ್ಲಿಯ ಆ ಹೆಸರಿನ ಮನೆಗೂ ಆ ಕಾದಂಬರಿಗೂ ಏನೂ ಸಂಬಂಧವಿಲ್ಲ ಅನ್ನುತ್ತಾರೆ, ಅಲ್ಲಿ ಕುಳಿತು ಆ ಕಥೆಯನ್ನು ಬರೆದ ಎನ್ನುವದನ್ನು ಬಿಟ್ಟರೆ.

ನೋವು-ನಲಿವುಗಳನ್ನು ಹಾಡುವ ಕಿರುಸ್ತಂಭ 

ಥೆಲ್ಲುಸ್ಸನ್ ಮನೆಯ ಹಿಂದಿನ ಗ್ರೋಟೊದಲ್ಲಿ (ಭಾಗ -೧ ನೋಡಿರಿ) ಟಾರ್ಗೆಟ್ ಹೌಸ್ ಎದುರುಗಡೆ ತೋಟದಲ್ಲಿ ಬಟನ್ ಒತ್ತಿದರೆ  ಒಂದು ಮರದ ಕಿರುಸ್ತಂಭದಿಂದ ಎರಡು ಧ್ವನಿಮುದ್ರಿಕೆಗಳನ್ನು ಕೇಳಬಹುದು. ಒಂದರಲ್ಲಿ  ಗ್ರೆನಾಡಾದಾಮೀಪದ ದ್ವೀಪದಲ್ಲಿ ಪ್ರಚಲಿತವಿರುವ ಕರಿಯಾಕೋ ಡ್ರಮ್ ಮತ್ತು ನೃತ್ಯದ ಸಂಗೀತ ಕೇಳಬರುತ್ತದೆ. ಇನ್ನೊಂದರಲ್ಲಿ  ಪೀಟರ್ ಥೆಲ್ಲುಸನ್ ಸಾಲದ ಕಾಗದಪತ್ರದಲ್ಲಿ ನಮೂದಿಸಿದ ಗ್ರೆನೇಡಾದ ಬಕೋಲೆಯ (Bacolet Plantation, 1772) 101 ಅಫ್ರಿಕನ್ ಗುಲಾಮರ ಹೆಸರುಗಳನ್ನು ಇವೆಟ್ ಫಿಲ್ಬರ್ಟ್ ಓದುವದನ್ನು ಕೇಳಬಹುದು. ಸುಂದರ ಉದ್ಯಾನದಲ್ಲಿ ಮೈಮರೆತು ಆನಂದಿಸುವ ಪ್ರೇಕ್ಷಕರಿಗೆ ಅದರಲ್ಲಡಗಿದ ರಹಸ್ಯದ ಅರಿವೇ ಇರಲಾರದು. (ಲೇಖನದ ಕೊನೆಯಲ್ಲಿಯ ವಿಡಿಯೋವನ್ನು ನೋಡಿರಿ).

ಈಶಾವಾಸ್ಯಮಿದಂ ಸರ್ವಂ … ಮಾ ಗೃಧ ಕಸ್ಯಸ್ವಿದ್ಧನಂ

ಕೊನೆಯ ಮಾತು. ಈ ಎರಡು ಲೇಖನಗಳಲ್ಲಿ ಒಂದು ಕುಟುಂಬ ತಲೆತಲಾಂತರಗಳಿಂದ ವಾಸಮಾಡಿದ ಸುಂದರ ಮನೆ, ತೋಟಗಳನ್ನು ನೋಡಿದ್ದಾಯಿತು. ಆ ಸಂಪತ್ತಿನ ಹಿಂದಿನ ರಹಸ್ಯವನ್ನೂ ತಿಳಿದೆವು. ಇಲ್ಲಿ ಈಶಾವಾಸ್ಯ ಉಪನಿಷತ್ತಿನ ಮೊದಲ ಶ್ಲೋಕದ ಉಲ್ಲೇಖದಿಂದ ಇದನ್ನು ಮುಗಿಸುವೆ. ಅದರ ಸಂಕ್ಷಿಪ್ತ ತಾತ್ಪರ್ಯ ಹೀಗಿದೆ: ’ಈ ಜಗತ್ತೆಲ್ಲವೂ ಭಗವಂತನ ವಾಸಕ್ಕಾಗಿಯೇ ಇದೆ. ನಮಗೆ ದೊರಕಿದ್ದನ್ನು ತ್ಯಾಗಬುದ್ಧಿಯಿಂದ ಸ್ವೀಕರಿಸ ಬೇಕು ಮತ್ತು ಅನ್ಯರು ’’ಗಳಿಸಿದ” ಸಂಪತ್ತಿನ ಮೇಲೆ ದುರಾಸೆ ಪಡ ಬೇಡ.

ಶ್ರೀವತ್ಸ ದೇಸಾಯಿ

ಫೋಟೋಗಳು ಮತ್ತು ವಿಡಿಯೋ ಶ್ರೀವತ್ಸ ದೇಸಾಯಿ ಮತ್ತು ಗೂಗಲ್.

*ಆಧಾರ: ಪುಸ್ತಕ/ಲೇಖನಗಳು:

1)https://historicengland.org.uk/images-books/publications/slavery-and-british-country-house/slavery-british-country-house-web/

2)  https://www.nationaltrust.org.uk/features/addressing-the-histories-of-slavery-and-colonialism-at-the-national-trust

3) https://www.english-heritage.org.uk/siteassets/home/learn/research/the-slavery-connections-of-brodsworth-hall.pdf

4) Brodsworth Hall and Gardens: English Heritage Guidebooks; http://www.english-heritage.org.uk ; ISBN 978978-1-84802-014-6