ಕಥೆ ಹಾಗೂ ಪುಸ್ತಕ ಪಯಣ

ನಲ್ಮೆಯ ಓದುಗ ಬಳಗಕ್ಕೆ ನಮಸ್ಕಾರ.

“ಅಮಾವಾಸ್ಯೆಯ ಮಧ್ಯರಾತ್ರಿ..ಗವ್ ಎನ್ನುವ ಕಾರಿರುಳು..ನಿರ್ಜನ ರಸ್ತೆಗಳು..ಆಗೊಮ್ಮೆ,ಈಗೊಮ್ಮೆ ಊಳಿಡುವ ನಾಯಿಗಳನ್ನು ಬಿಟ್ಟರೆ ಉಳಿದಂತೆ ಹೆಪ್ಪುಗಟ್ಟಿದ ಸ್ಮಶಾನ ಮೌನ.. ಇದ್ದಕ್ಕಿದ್ದಂತೆಯೇ ‘ಘಲ್ ಘಲ್’ ಗೆಜ್ಜೆಯ ದನಿ..’ ಇಂಥ ವರ್ಣನೆ ಓದುತ್ತಿದ್ದಂತೆಯೇ ಎಂಥ ಗಟ್ಟಿಗರ ಎದೆಯೂ ‘ಝಲ್'ಎನದೇ ಇರದು. ದೆವ್ವ-ಭೂತಗಳ ಬಗ್ಗೆ ನಂಬುಗೆ ಇರಲಿ, ಬಿಡಲಿ ಅದು ಬೇರೆ ಮಾತು. ಆದರೆ ಅದರ ಭಯದ ಸುಳಿಯಲ್ಲಿ ಒಮ್ಮೆಯಾದರೂ ಸಿಲುಕದ,ಬೆಚ್ಚಿಬೀಳದ ನರಮನುಷ್ಯನಾರೂ ಇರಲಾರ. ಚಿಕ್ಕಂದಿನಲ್ಲಿ ಅಮ್ಮ-ಅಜ್ಜಿಯರ ಮಡಿಲಲ್ಲೋ, ಸೆರಗ ಒತ್ತಾಸೆಯಲ್ಲೋ ಕುಳಿತು ಕೇಳಿದ ಏಳುಮಕ್ಕಳ ತಾಯಿ, ‘ನಾಳೆ ಬಾ’ ಓದಿ ಮರಳಿ ಹೋಗುವ ಮೋಹಿನಿ, ಮರದ ಮೇಲಿನ ಬ್ರಹ್ಮ ಪಿಶಾಚಿ, ವೇಷ ಬದಲಿಸಿ ಯಾಮಾರಿಸುವ ಚಾಣಾಕ್ಷ ದೆವ್ವಗಳು..ಇಂಥ ಥರಾವರಿ ಭೂತ-ದೆವ್ವಗಳ ಪ್ರಪಂಚಕ್ಕೆ ನಮ್ಮ ಬಾಲಿವುಡ್ ನ ಕೊಡುಗೆಯೂ ಉಲ್ಲೇಖನಾರ್ಹ.

ಅಂಥದೇ ಸಸ್ಪೆನ್ಸ್ ತುಂಬಿದ ನೀಳ ಕಥೆಯೊಂದನ್ನು ನಿಮ್ಮೆಲ್ಲರ ಓದಿಗಾಗಿ ತಂದಿದ್ದಾರೆ ಶಿವ ಮೇಟಿಯವರು. ರಾತ್ರಿ ಮನೆಯವರೆಲ್ಲ ಮಲಗಿದ ಮೇಲೆ ಟೇಬಲ್ ಲ್ಯಾಂಪಿನ ಮಂದ ಬೆಳಕಿನಲ್ಲಿ ಈ ಕಥೆಯನ್ನೋದಿ. ನಿಮ್ಮ ಹಿಂದೆ ಯಾರೋ ಬಂದು ನಿಂತಂತಾಗಿ ನೀವು ಬೆಚ್ಚಿಬಿದ್ದರೆ ‘ಸಂಪಾದಕರು’ ಹೊಣೆಗಾರರಲ್ಲ.

‘ಪುಸ್ತಕಕ್ಕೊಂದು ಕತೆ’ ಸರಣಿಯಲ್ಲಿ ಪ್ರಮೋದ್ ಲಕ್ಕುಂಡಿಯವರು ಚಂದಾಮಾಮ,ಕಾಮಿಕ್ಸ್ ನಿಂದ ಸೋವಿಯತ್ ರಷ್ಯಾದವರೆಗೆ ಪುಸ್ತಕಗಳ ಮಾಯಾಲೋಕದಲ್ಲಿ ನಮ್ಮನ್ನು ಸುತ್ತಾಡಿಸಿಕೊಂಡು ಬಂದಿದ್ದಾರೆ.ಬಾಲ್ಯದಿಂದ ಇಂದಿನವರೆಗೂ ಬೆನ್ನಟ್ಟಿಕೊಂಡು ಬಂದ ಪುಸ್ತಕ ನೆಂಟಿನ ಬಗ್ಗೆ ಆಪ್ತವಾಗಿ ಬರೆದುಕೊಂಡಿದ್ದಾರೆ.

ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಮರೆಯದಿರಿ.

~~ಸಂಪಾದಕಿ

ಯಾರಿವಳು?? ( ವೊ ಕೌನ್ ಥಿ ? )

ಕೊರೆಯುವ ಛಳಿಯಲ್ಲಿ ಮುಸುಕಿದ ಮಂಜು. ಸ್ಕಾಟ್ಲೆಂಡಿನ ಅಪ್ಪಟ  ಮುಂಜಾವು. ಅಕ್ಟೋಬರ ತಿಂಗಳಿನ ಕೊನೆಯ ವಾರವಾಗಿರಬಹುದು --- 
ಮಗಳನ್ನು ಶಾಲೆಗೆ ಬಿಟ್ಟು, ಆಸ್ಪತ್ರೆಯತ್ತ ಕಾರನ್ನು ಓಡಿಸುತ್ತಿದ್ದೆ
ಬಲ ತಿರುವಿನಲ್ಲಿ ಕಾರನ್ನು ಹೊರಳಿಸಿ ಇನ್ನೇನು ಮುಖ್ಯ ರಸ್ತೆಯನ್ನು ಸೇರಬೇಕು, ಅಷ್ಟರಲ್ಲಿಯೇ ಧಕ್ಕನೆ ಯಾರೋ ಕಾರಿನ ಮುಂದೆ ಬಂದರು. ಪ್ರಾಣ ಭೀತಿ ಇಲ್ಲದವರೆಂದು ಬೈದುಕೊಂಡು ಕಾರನ್ನು ನಿಲ್ಲಿಸಿದೆ. ಅವಳೊಬ್ಬಳು ಅಂದಾಜು ಮೂವತ್ತರ ಪ್ರಾಯದ ಹೆಣ್ಣುಮಗಳು . ಏನನ್ನು ಹೇಳಲಿಲ್ಲ ಆದರೆ ಮುಖದ ಮೇಲೆ ಒಂದು ಮುಗುಳ್ನಗೆ ಚೆಲ್ಲಿ ಹಾಗೆಯೇ ಹೋಗಿ ಬಿಟ್ಟಳು.ಮುಸುಕಿದ ಮಂಜಿನಲ್ಲಿ ಮುಖ ಸರಿಯಾಗಿ ಕಾಣಿಸದಿದ್ದರೂ , ವೇಷ ಭೂಷಣದಲ್ಲಿ ಮಾತ್ರ ಭಾರತೀಯಳಂತೆ ಕಂಡಳು . ಯಾರೋ ಹೊಸದಾಗಿ ಬಂದಿರಬಹುದೆಂದು ಎಂದುಕೊಂಡು ಮುಂದೆ ಸಾಗಿದೆ .
ಅದೊಂದು ಶನಿವಾರದ ಮುಂಜಾನೆ . ಆಕಾಶವೆಲ್ಲ ಬಯಲಾಗಿತ್ತು ಸೂರ್ಯನು ನಿಖರವಾಗಿ ಹೊಳೆಯುತ್ತಿದ್ದರೂ, ಬಿಸಿಲು ಮಾತ್ರ ಮೈಗೆ ತಟ್ಟುತ್ತಿರಲಿಲ್ಲ . ವರ್ಷದ ಕೊನೆಯ ಗಾರ್ಡನಿಂಗ್ ಮಾಡಿಬಿಡೋಣವೆಂದುಕೊಂಡೆ . ಸೋಮಾರಿಯಾಗಿದ್ದ ಮಕ್ಕಳನ್ನು ಕರೆದುಕೊಂಡು ಮನೆಯ ಮುಂದಿನ ಗುಲಾಬಿ ತೋಟಕ್ಕೆ ಬಂದೆ.
ಮುಂದಿನ ದ್ವಾರದ (gate) ಮುಂದೆ ಯಾರೋ ನಿಂತಿದ್ದರು . ದಿಟ್ಟಿಸಿ ನೋಡಿದಾಗ ಕಂಡಿದ್ದು ಅದೇ ಹೆಣ್ಣು ಮಗಳು , ಹಿಂದಿನ ದಿನ ಕಾರಿನ ಮುಂದೆ ಬಂದವಳು . ನನ್ನತ್ತ ಕೈ ಬೀಸಿ ಹಾಗೆ ನಿಂತಿದ್ದಳು . ಇತ್ತೀಚಿನ ದಿನಗಳಲ್ಲಿ ತುಂಬಾ ಭಾರತೀಯರು ನಾವಿದ್ದ ಊರಿಗೆ ವಲಸೆ ಬಂದು ನೆಲೆಸಿದ್ದಾರೆ. ಈ ವರ್ಷ ನನ್ನ ಮಗಳ ಶಾಲೆಯಲ್ಲಿ ಭಾರತೀಯ
ಮೂಲದ ಮಕ್ಕಳ ಸಂಖ್ಯೆ ಜಾಸ್ತಿಯಾಗಿದೆ . ಇವಳು ಯಾರೋ ಮಗಳ ಸ್ನೇಹಿತೆಯ ತಾಯಿಯಾಗಿರಬಹುದೆಂದು ಅಂದುಕೊಂಡೆ . ಮಗಳನ್ನು ಕೇಳಿದೆ ಅವಳು ಗೊತ್ತೇನೆಂದು?. ಮಗಳು ಅಂದಳು - “ಯಾರು ? ಎಲ್ಲಿ ಇದ್ದಾರೆ? ನನಗೆ ಯಾರೂ ಕಾಣಿಸುತ್ತಿಲ್ಲ . ದ್ವಾರದ ಮುಂದೆ ಯಾರೂ ಇಲ್ಲಾ” . ಹೌದು ತಿರುಗಿ ನೋಡಿದಾಗ ಯಾರೂ ಇಲ್ಲಾ. ನನಗೆ ವಿಚಿತ್ರವೆನಿಸಿತು , ಒಂದು ಕ್ಷಣದಲ್ಲಿ ಅವಳು ಎಲ್ಲಿ ಮಾಯವಾದಳೆಂದು . ತಕ್ಷಣವೇ ದ್ವಾರದತ್ತ ಹೋದೆ , ಆಚೆ ಈಚೆ ನೋಡಿದರೂ ಅವಳ ಸುಳಿವು ಸಿಗಲಿಲ್ಲ . ದ್ವಾರದ ಹತ್ತಿರ ಗುಲಾಬಿಯ ಕಂಟಿಯನ್ನು ಕತ್ತರಿಸುತ್ತಿದ್ದ ಇನ್ನೊಬ್ಬ ಮಗಳನ್ನೂ ಸಹ ಕೇಳಿದೆ . ಅವಳೂ ಸಹ ಯಾರನ್ನೂ ನೋಡಲಿಲ್ಲವೆಂದಳು . ನನ್ನನ್ನು ಅಣುಕಿಸುವಂತೆ - " ಅಪ್ಪಾ ಇತ್ತೀಚಿಗೆ ನೀನು ಬಹಳೇ ಸಸ್ಪೆನ್ಸ್ ಸಿನೆಮಾ ನೋಡುತ್ತಿರುವೆ ಅದಕ್ಕೆ ನಿನಗೆ ಹೀಗಾಗಿರಬಹುದು " ಎಂದು ನಕ್ಕಳು.
ಅವಳ ಮಾತಿಗೆ ಮುಗುಳ್ನಕ್ಕು ಸುಮ್ಮನಾದೆ. ತಲೆಯಲ್ಲಿ ಮಾತ್ರ ಯಕ್ಷಪ್ರಶ್ನೆ ಕಾಡತೊಡಗಿತು . ಒಂದು ಕ್ಸಣದಲ್ಲಿ ಅವಳು ಕಣ್ಮರೆಯಾಗಲು ಹೇಗೆ ಸಾಧ್ಯವೆಂದು . ಒಳಗಿನ ಮನಸು ಹೇಳಿತು - 'ಇದು ಪರಿಚಯದ ಮುಖವೆಂದು '. ಅವಳ ವಿಚಾರದಲ್ಲಿಯೇ ಇಡೀ ದಿನ ಕಳೆದು ಹೋಯಿತು ಆದರೆ ಉತ್ತರ ಮಾತ್ರ ಸಿಗಲೇ ಇಲ್ಲ .
ಮಾರನೆಯ ದಿನ ಭಾನುವಾರ . ಹೆಂಡತಿ ಮತ್ತು ಮಕ್ಕಳಿಗೆ ಹತ್ತಿರದ ' ಸಿಲ್ವರ್ ಬರ್ನ್ ' ಶಾಪಿಂಗ್ ಸೆಂಟರ್ ಗೆ ಹೋಗುವ ಬಯಕೆ . ಎಲ್ಲರೂ ಸೇರಿ ಸಿಲ್ವರ್ ಬರ್ನ್ ಗೆ ಬಂದದ್ದಾಯಿತು . ಹೆಂಡತಿಗೆ ವಿಂಡೋ ಶಾಪಿಂಗ್ ಬಹಳೇ ಇಷ್ಟ . ದಿನವೆಲ್ಲಾ ಶಾಪಿಂಗನಲ್ಲಿ ಕಳೆದು ಕೊನೆಗೆ ಏನನ್ನೂ ಕೊಳ್ಳದೇ ಬರಿಗೈಯ್ಯಲ್ಲಿ ಮರಳುತ್ತಾಳೆ . ಮೊದ ಮೊದಲು ಸಿಟ್ಟು ಬರುತಿತ್ತು , ಈಗ ಅಭ್ಯಾಸ ಆಗಿ ಹೋಗಿದೆ . ಅವಳನ್ನು ಅಂಗಡಿಯ ಒಳಗೆ ಬಿಟ್ಟು ನಾನು ಹೊರಗೆ ನಿಲ್ಲುವದು ಸಹಜವಾಗಿದೆ. ಇನ್ನೇನು ಅವಳನ್ನು ಮಕ್ಕಳ ಜೊತೆ ಅಂಗಡಿಯ ಒಳಗೆ ಬಿಡಬೇಕು ಎನ್ನುವಷ್ಟರಲ್ಲಿಯೇ , ನಿನ್ನೆ ಕಂಡವಳು ಮತ್ತೆ ಕಾಣಿಸಿಕೊಂಡಳು . ಸ್ವಲ್ಪ ದೂರದಲ್ಲಿಯೇ ನಿಂತಿದ್ದ ಅವಳು ಮುಗುಳ್ನಗೆ ಬೀರಿ ಮತ್ತೆ ಕೈ ಬೀಸಿದಳು . ಈ ಸಲ ಮಾತ್ರ ಅವಳನ್ನು ಮಾತನಾಡಿಸದೆ ಬಿಡಲೇಬಾರದೆಂದುಕೊಂಡು ಅವಳತ್ತ ನಡೆದೆ .
ಹತ್ತಿರ ಹೋಗಿ - ಹಲೋ ಎಂದೆ . ಮುಗುಳ್ನಗುತ್ತಾ ಅವಳು ಎಂದಳು - "ಏನು ಶಂಕ್ರಣ್ಣ ಹೇಗೆ ಇದ್ದಿಯಾ ? ಗುರುತು ಸಿಗಲಿಲ್ಲವೆ?". ನಾನು ಮಾತ್ರ ತಬ್ಬಿಬ್ಬಾದೆ , ಏನು ಹೇಳಬೇಕೆಂದು ತೋರಲಿಲ್ಲ . ಅಷ್ಟರಲ್ಲಿಯೇ ಅವಳೆಂದಳು - "ನಾನು ಮಂಜು , ನಿಮ್ಮೂರವಳು ". ಈಗ ಖಾತ್ರಿಯಾಯಿತು , ಇವಳು ನಿಜವಾಗಿಯೂ ಪರಿಚಯದವಳೆಂದು . ಒಂದು ಕ್ಷಣ ತಲೆ ಪರಚಿಕೊಂಡ ಮೇಲೆ ಗೊತ್ತಾಯಿತು ಇವಳು ನಮ್ಮೂರ ಆಚಾರ್ಯರ ಮಗಳು ಮಂಜು ಎಂದು . "ಹೇಗೆ ಇದ್ದಿಯಾ ? ಎಲ್ಲಿ ಇದ್ದಿಯಾ ? ಯಾವಾಗ ಈ ದೇಶಕ್ಕೆ ಬಂದೆ ? " ಎಂದು ಒಂದೇ ಉಸುರಿನಲ್ಲಿ ಕೇಳಿದ್ದಾಯಿತು . " ಬಂದು ಸ್ವಲ್ಪ ದಿನವಾಯಿತು , ಇಲ್ಲಿಯೇ ಹತ್ತಿರದಲ್ಲಿ ಇದ್ದೇನೆ " ಎಂದಳು . "ಎಲ್ಲಿ ಅಡ್ರೆಸ್ ಕೊಡಮ್ಮಾ , ಭೇಟಿಯಾಗೋಣವೆಂದೆ "
"೨೪೮ ಮೇಯರ್ನ್ ರೋಡ್ , ಗಿಫ್ನಾಕ್" ಎಂದಳು .
"ನಮ್ಮ ಮನೆಗೆ ಬಹಳ ಹತ್ತಿರದಲ್ಲಿ ಇದ್ದೀಯ ಎರಡು ಮೈಲ್ ದೂರ, ಇರು ನನ್ನ ಹೆಂಡತಿ ಮತ್ತು ಮಕ್ಕಳನ್ನು ಪರಿಚಯಿಸುವೆ " ಎಂದೆ . ಹೆಂಡತಿಯ ಹತ್ತಿರ ಬಂದೆ . ಹೆಂಡತಿ ಅಂದಳು - "ಏನ್ರಿ ಅಷ್ಟು ದೂರ ಹೋಗಿ ನಿಮ್ಮಷ್ಟಕ್ಕೆ ನೀವೇ ಏನು ಮಾತ್ನಾಡ್ತಾ ಇದ್ರಿ " ಎಂದಳು .
“ಆಲ್ಲ ಕಣೆ ಅವಳು ನಮ್ಮೂರ ಆಚಾರ್ಯರ ಮಗಳು ಮಂಜು . ಅವಳ ಜೊತೆಗೆ ಮಾತನಾಡ್ತಾ ಇದ್ದೆ. ಬಾ ಪರಿಚಯ ಮಾಡಿಸ್ತೀನಿ " ಎಂದೆ . "ಅಲ್ಲಿ ಯಾರಾದರು ಇದ್ದರೆ ತಾನೆ ನೀವು ಪರಿಚಯ ಮಾಡಿಸೋದು , ನಿಮ್ಮ ಭ್ರಮೆ " ಎಂದಳು . ತಾವೂ ಯಾರನ್ನು ನೋಡಲಿಲ್ಲವೆಂದು ಮಕ್ಕಳೂ ಸಹ ತಾಯಿಯ ಜೊತೆ ಕಟ್ಟಿದರು . ತಿರುಗಿ ನೋಡಿದರೆ ಅಲ್ಲಿ ಯಾರೂ ಆಲ್ಲ . ಅರೆ ಇವಳ , ಸ್ವಲ್ಪವೂ ತಡೆಯದೆ ಎಲ್ಲಿ ಇವಳು ಮಾಯವಾದಳು ಎಂದುಕೊಂಡೆ . ಹೆಂಡತಿ ಏನೊ ಗೊಣಗುಟ್ಟುತ್ತಾ ಅಂಗಡಿಯ ಒಳಗೆ ಹೋದಳು . "ಇಲ್ಲೇ ಇರಿ , ಮತ್ತೆ ಇಲ್ಲದವಳನ್ನು ಹುಡುಕುತ್ತಾ ಬೇರೆ ಕಡೆ ಎಲ್ಲೂ ಹೋಗಬೇಡಿ . ಕಳೆದ ಸಲ ಊರಿಗೆ ಹೋದಾಗ ಸೋಮೇಶ್ವರ್ ದೇವರ ಗುಡಿಗೆಹೋಗಲಿಲ್ಲ ( ಸೊಗಲ್ ಸೋಮೇಶ್ವರ ನಮ್ಮ ಮನೆ ದೇವರು ) ಅದಕ್ಕೆ ಏನೇನೋ ಆಗ್ತಾ ಆದೆ " ಎಂದು ಅನ್ನುತ್ತಾ ಮಕ್ಕಳೊಡನೆ ಅಂಗಡಿಯ ಒಳಗೆ ಹೋದಳು . ನಾನು ಮಾತ್ರ ದಂಗಾಗಿದ್ದೆ . ಅವಳು ಸತ್ಯವಾಗಿಯೂ ನಮ್ಮೂರ ಮಂಜು ಹಾಗಾದರೆ ಅವಳು ಬೇರೆಯವರಿಗೆ ಏಕೆ ಕಾಣಿಸ್ತಿಲ್ಲ ?. ಏಕೆ ತಟ್ಟನೆ ಮಾಯವಾಗುತ್ತಿದ್ದಾಳೆ ? ಆ ಶಕ್ತಿ ಅವಳಿಗೆ ಹೇಗಿದೆ ? ಇದರಲ್ಲಿ ಏನೋ ರಹಸ್ಯ ಇದೆ , ಇದನ್ನು ಕಂಡು ಹಿಡಿಯಲೇ ಬೇಕೆಂದುಕೊಂಡೆ .

( ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ.)

~~ಶಿವ ಮೇಟಿ

ಪುಸ್ತಕಲೋಕ ಪರ್ಯಟನ

ಚಿತ್ರಕೃಪೆ-ಅಂತರ್ಜಾಲ
ಪುಸ್ತಕದ ಬಗ್ಗೆ ಬರೆಯಲು ಅನಿವಾಸಿಯಲ್ಲಿ ಬಂದ ಸಂದೇಶ ಓದಿದೆ, ನಮ್ಮ ಸಂಪಾದಕರು ಸುಂದರವಾಗಿ ಹೇಳುತ್ತಾರೆ "ಪ್ರತಿ  ಪುಸ್ತಕದಲ್ಲೂ ಒಂದು ಕಥೆಯಿದ್ದಂತೆ ನಮ್ಮ ನೆಚ್ಚಿನ ಅಥವಾ ನೆನಪಿನ ಪುಸ್ತಕಕ್ಕೂ ಒಂದು ಕಥೆಯಿದೆ". ನಾನು ಇದನ್ನು ಓದಿದಾಗ ಅನಿಸಿದ್ದು, "ಪ್ರತಿ ನೆನಪಿನ ಪುಸ್ತಕಕ್ಕೂ ಒಂದು ಕಥೆಯಿದ್ದಂತೆ, ನಮ್ಮ ಜೀವನದ ಪ್ರತಿ ಹಂತದಲ್ಲೂ ಪುಸ್ತಕದ (ಪುಸ್ತಕಗಳ) ನೆನಪಿದೆ. ಅದೂ ಒಂದು ಕಥೆ ಆಗಬಹುದು". ನಾನು ಒಂದು ಪುಸ್ತಕ, ಅಂದರೆ ನೆನಪಿನ ಪುಸ್ತಕದ ಬಗ್ಗೆ ಮಾತನಾಡಿಲ್ಲ ಆದರೆ ನನ್ನ ನೆನಪಿನಲ್ಲಿರುವ ಅಥವಾ ನನ್ನೊಡನೆ ಇಂದಿಗೂ ನಂಟು ಬಿಡದ ಪುಸ್ತಕಗಳ ಬಗ್ಗೆ ಬರೆಯುತ್ತಿದ್ದೇನೆ. 

ಬಾಲ್ಯದಲ್ಲಿ ತಂದೆ, ತಾಯಿ ನಮಗೆ ಓದಿದ/ ಓದಿಸಿದ ಚಂದಮಾಮ, ಬೊಂಬೆಮನೆ, ಬಾಲಮಿತ್ರ ನಮಗೆ ಸಣ್ಣ ಕಥೆ ಹೇಳುತ್ತಾ ನಮಗೆ ಪುಸ್ತಕ ಲೋಕವನ್ನು ತೆರೆದು ಇಟ್ಟಿತು. ಇವುಗಳ ಜೊತೆ ಸೇರಿದ್ದು ಮತ್ತು ಇಷ್ಟವಾದದ್ದು "ಭಾರತ ಭಾರತಿ" ಪುಸ್ತಕಗಳು. ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆದರೆ ಅದು ಅವರ ಕ್ರಿಯಾಶೀಲ ಚಿಂತನೆಗೆ ಹಾದಿ ಮಾಡಿಕೊಡುತ್ತದೆ. ಈ ಪುಸ್ತಕಗಳ ಮೂಲಕ ವ್ಯಕ್ತಿ ಚಿತ್ರಣಗಳ ಜೊತೆ, ರಾಜ, ರಾಣಿಯರ ಕಥೆ, ಮಾಂತ್ರಿಕರ ಕಥೆ, ವಿಕ್ರಮ್ ಬೇತಾಳ ಕಥೆ ಹೀಗೆ ನಮ್ಮ ವಿಚಾರ ಶಕ್ತಿಗೆ ಒಂದು ಒಳ್ಳೆಯ ವ್ಯಾಯಾಮ ಆಯಿತು.

ಮುಂದೆ ಸಾಗಿದಂತೆ ಅಮರ ಚಿತ್ರ ಕಥಾ, ಇಂದ್ರಜಾಲ ಕಾಮಿಕ್ಸ್ ನಮ್ಮನ್ನು ಸೆಳೆಯ ತೊಡಗಿದವು. ನಮ್ಮ ಜನಪ್ರಿಯ ಮಾಂತ್ರಿಕ ಮಾಂಡ್ರೇಕ್, ಬಲಶಾಲಿ ಲೋಥರ್, ಬಹಾದೂರ್, ಝೋರೋ, ನಡೆದಾಡುವ ಭೂತಪ್ಪ ಫ್ಯಾಂಟಮ್, ಸಾಯರ್, ಗಾರ್ಥ್, ಫ್ಲಾಶ್ ಗೋರ್ಡಾನ್ ಇವರೆಲ್ಲರನ್ನು ಮರೆಯಲು ಸಾಧ್ಯವೇ ಇಲ್ಲ. ಈಗಿನ ಮಾರ್ವೆಲ್ ನಾಯಕರು, ಹ್ಯಾರಿ ಪಾಟರ್ ಆಗಿನ ಸಮಯದಲ್ಲಿ ಇಂದ್ರಜಾಲ ಕಾಮಿಕ್ಸ್ ತಂದ ಮೋಡಿಗೆ ಸಮ ಆಗಲಿಕ್ಕಿಲ್ಲ. ಮಾಂತ್ರಿಕ ಮಾಂಡ್ರೇಕ್ ಮುಂದುವರೆದಿದ್ದರೆ ಲೀ ಫಾಕ್ ಅವರನ್ನು ಜನರು ಸರಳವಾಗಿ ಮರೆಯುತ್ತಿರಲಿಲ್ಲ. ಜೀವನದಲ್ಲಿ ಏನಾದರೂ ಮಹತ್ತರವಾದದ್ದನ್ನು ಕಳೆದುಕೊಂಡಿದ್ದೆಂದರೆ ೩೦೦-೪೦೦ ಇಂದ್ರಜಾಲ ಕಾಮಿಕ್ಸ್ ನನ್ನ ಅಣ್ಣ ಮತ್ತು ನಾನು ಕೂಡಿ ಇಟ್ಟಿದ್ದು, ಸ್ಥಳ ಬದಲಾವಣೆಯಲ್ಲಿ ಕಳೆದದ್ದು ಸಿಗಲಿಲ್ಲ.

ಇದರಂತೆ ನೀವೆಲ್ಲ ಅಂಕಲ್ ಅನಂತ್ ಪೈ ಅವರ ಟಿಂಕಲ್ ಓದಿರಬಹುದು, ಓದಿದ್ದರೆ ನಿಮ್ಮ ಕಣ್ಣ ಮುಂದೆ ಬರುವುದು ಕಾಲಿಯಾ ಕಾಗೆ, ಸುಪಂದಿ, ತಂತ್ರಿ ಮಂತ್ರಿ, ಶಿಕಾರಿ ಶಂಬು ಮುಂತಾದವರು. ಪುಸ್ತಕದಲ್ಲಿ ಕಥೆಗಳ ಜೊತೆ ಸಾಮಾನ್ಯ ಜ್ಞಾನ ಪರೀಕ್ಷಿಸುವ ಒಗಟುಗಳು, ವಿಜ್ಞಾನದ ವಿವರಗಳು ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಓದಲು ಪ್ರೇರಣೆ ಕೊಡುತ್ತಿತ್ತು. ಆ ಸಮಯದ ಪುಸ್ತಕಗಳ ಬಗ್ಗೆ ಹೇಳುತ್ತಾ ಹೋದರೆ ಬರೆಯುವುದು ಮುಗಿಯುವುದೇ ಇಲ್ಲ, ಆರ್ಚೀ ಕಾಮಿಕ್ಸ್, ರೀಡರ್ಸ್ ಡೈಜೆಸ್ಟ್, ವಿಸ್ಡಮ್ ಹಾಗೆ ಬರೆಯುತ್ತ ಇರಬೇಕು ಅನಿಸುತ್ತದೆ. (ಟಿಂಕಲ್ ನಿಮಗೆ ಈಗ ಆನ್ಲೈನ್ ಸಿಗುತ್ತದೆ, ಸುಪಂದಿ ಚಿತ್ರಣ (ವೀಡಿಯೋಸ್) ನೋಡುವುದು ತಪ್ಪಿಸಬೇಡಿ. ಮನ ಬಿಚ್ಚಿ ನಕ್ಕು ಬಿಡಿ).

ಆ ಸಮಯದಲ್ಲಿ ವಿಜ್ಞಾನದ ವಿಷಯ ಓದಲು ನನ್ನನ್ನು ಕೈ ಮಾಡಿ ಕರೆದದ್ದು "ಬಾಲ ವಿಜ್ಞಾನ", ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪ್ರಕಟಿಸಿದ ಮಾಸ ಪತ್ರಿಕೆ ಇದು. ಒಂದು ರುಪಾಯಿಗೆ ಸಿಗುತ್ತಿದ್ದ ಈ ಪುಸ್ತಕ ವಿಜ್ಞಾನದ ಕೌತುಕವನ್ನುನಮ್ಮೆದುರಿಗೆ ತೆರೆದು ಇಡುತ್ತಿತ್ತು. ಒಂದು ಸಂತೋಷದ ಸಂಗತಿ ಎಂದರೆ ಇದು ಈಗ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಅವರ ಅಂತರ್ಜಾಲದ ತಾಣದಲ್ಲಿ ಉಚಿತವಾಗಿ ಪಿ ಡಿ ಎಫ್ ಮಾದರಿಯಲ್ಲಿ ಲಭ್ಯವಿದೆ ( https://krvp.in/bala-vijnana-magazine.php ).

ಬಾಲ್ಯದಲ್ಲಿ ನನಗೆ ಅಚ್ಚರಿ ಮೂಡಿಸುತ್ತಿದ್ದ ವ್ಯಕ್ತಿ ಎಂದರೆ ನನ್ನ ಅಣ್ಣ (ಪ್ರಸನ್ನ), ನಾನು ೬ ನೆಯ ತರಗತಿಯಲ್ಲಿ ಇದ್ದೆ (ಅಣ್ಣ ೮ ನೆಯ ತರಗತಿ), ನಾವು ನ್ಯೂಸ್ ಮೇಲೆ ನಿಬಂಧ ಬರೆಯಬೇಕಿತ್ತು, ಬರೆದೆವು. ನನ್ನ ಅಣ್ಣನ ಪ್ರಬಂಧ ಉತ್ತಮವಾಗಿತ್ತು, ಅವನ ಪ್ರಬಂಧ ಆರಂಭ ಆಗಿದ್ದು NEWS ಎಂದರೆ ನಾರ್ತ್, ಈಸ್ಟ್, ವೆಸ್ಟ್ ಮತ್ತು ಸೌತ್ ನಿಂದ ಮತ್ತು ಉಳಿದ ವಿಷಯ ಅತ್ಯುತ್ತಮ ನ್ಯೂಸ್ ಮತ್ತು ವಿಷಯಗಳ ಬಗ್ಗೆ ಇತ್ತು. ಇಂಟರ್ನೆಟ್, ಟಿ ವಿ ಇರದ ಕಾಲ ಆದರೂ ಒಳ್ಳೆಯ ಲೇಖನ ಹುಟ್ಟಲು ಕಾರಣ ಗೆಳೆಯರಾದ ಪುಸ್ತಕಗಳು.

ಇನ್ನು ನಾವು ಇಡೀ ವರ್ಷದಲ್ಲಿ ಕಾಯುತ್ತ ಕೂಡುವುದು ಬೇಸಿಗೆಯ ರಜೆಗಾಗಿ, ಆ ಎರಡು ತಿಂಗಳು ನಮಗೆ ಹಬ್ಬ. ಯಾಕೆಂದರೆ ಎಲ್ಲ ಮೊಮ್ಮಕ್ಕಳು ಅಜ್ಜನ ಮನೆಯಲ್ಲಿ ಸೇರುವ ಸಮಯ. ಎಲ್ಲರೂ ಸೇರಿ ಹತ್ತು ಹಲವಾರು ನೆಚ್ಚಿನ ಕೆಲಸ ಮಾಡುತ್ತಿದ್ದೆವು. ಅದರಲ್ಲಿ ಒಂದು ಪ್ರತಿ ದಿನ ಸಾಯಂಕಾಲ ವಿದ್ಯಾರ್ಥಿ ವಾಚನಾಲಯಕ್ಕೆ ಭೇಟಿ ಕೊಡುವುದು, ಅಲ್ಲಿ ಪ್ರತಿ ಗೋಡೆ ಮೇಲೆ ಎಲ್ಲ ಪುಸ್ತಕಗಳ ಮುಖಪುಟ ಅಂಟಿಸುತ್ತಿದ್ದರು. ಆಗಿನ ನಮ್ಮ ಅಚ್ಚುಮೆಚ್ಚಿನ ಬರಹಗಾರರು ಜಿಂದೆ ನಂಜುಂಡಸ್ವಾಮಿ, ಟಿ ಕೆ ರಾಮರಾವ್, ಸುದರ್ಶನ ದೇಸಾಯಿ, ಕನ್ನಡದ ಪ್ರಖ್ಯಾತ ಪತ್ತೇದಾರಿ ಬರಹಗಾರರು. ಇವುಗಳ ನಡುವೆ ಸಾಮಾಜಿಕ ಮತ್ತು ಇತರೆ ಕಾದಂಬರಿಗಳನ್ನು ಓದುವ ಸಂತೋಷ ಕೂಡ ನಮಗೆ ಸಿಗುತ್ತಿತ್ತು. ನಮಗೆ ಜೇಮ್ಸ್ ಹಾಡ್ಲಿ ಚೇಸ್ ಪುಸ್ತಕ ಸಿಕ್ಕಿದ್ದು ಅದೇ ಸಮಯದಲ್ಲಿ (ಹೈಸ್ಕೂಲ್ ಪ್ರಾರಂಭದ ಸಮಯ), ಎಲ್ಲರ ಮುಂದೆ ಓದಿದರೆ ಎಲ್ಲಿ ಹಿರಿಯರು ಮಂಗಳಾರತಿ ಮಾಡುತ್ತಾರೋ ಎಂದು ಮಂಚದ ಕೆಳಗೆ ಮಲಗಿ, ಇಲ್ಲವೇ ಮೂಲೆಯಲ್ಲಿ ಕುಳಿತು ಓದುತ್ತಿದ್ದೆ. ಪತ್ತೇದಾರಿ ಪುಸ್ತಕ ಓದಿ ನಮ್ಮ ಮಕ್ಕಳ ಗುಂಪಿನಲ್ಲೇ ಕಥಾ ಸ್ಪರ್ಧೆ ನಾವೇ ನಡೆಸುತ್ತಿದ್ದೆವು. ಆ ಸಮಯ ಮರೆಲಾಗದು;ಮತ್ತೆ ಮರಳಿ ಬಾರದು. ಪತ್ತೇದಾರಿ ಕಾದಂಬರಿ ನಮ್ಮ ಮೇಲೆ ಎಂತಹ ಪರಿಣಾಮ ಬೀರಿತ್ತೆಂದರೆ, ನಮ್ಮ ಅಜ್ಜನ ಮನೆಯ ಪಕ್ಕದಲ್ಲಿ ಒಂದು ಬಿದ್ದ ಮನೆ ಇತ್ತು ಮತ್ತು ಮುಂದಿನ ಸಾಲಿನಲ್ಲಿ ಸರ್ಕಾರೀ ಹೆರಿಗೆ ಆಸ್ಪತ್ರೆ, ನಾವು ಬಿದ್ದ ಮನೆಯಲ್ಲಿ ಏನೋ ವಿಶೇಷ ಸಂಗತಿ ಇರಬಹುದು ಎಂದು ರಾತ್ರಿ ಕದ್ದು ನೋಡುತ್ತಿದ್ದೆವು. ಅದರ ಜೊತೆ ನಮಗೆ ಅನಿಸಿದ್ದು ಹೆರಿಗೆ ಸಮಯದಲ್ಲಿ ಜೀವ ಕಳೆದು ಕೊಂಡ ತಾಯಂದಿರು, ಮಕ್ಕಳು ದೆವ್ವ ಆಗಿ ಆಸ್ಪತ್ರೆಯ ಬೇವಿನ ಮರದಲ್ಲೋ, ಇಲ್ಲ ಹಿಂದಿನ ಖಾಲಿ ಜಾಗದಲ್ಲೋ ಇರುತ್ತಾರೆಂದು. ಅದನ್ನು ಗುಟ್ಟಾಗಿ ಪತ್ತೆ ಹಚ್ಚಲು ನಾವು ರಾತ್ರಿ ಕಿಡಕಿಯಲ್ಲಿ ಕಾಯುತ್ತಿದ್ದೆವು.

ಬಹಳ ಕೊರೆಯದೇ ಒಂದು ವಿಶೇಷ ಪುಸ್ತಕದ ಬಗ್ಗೆ ಬರೆಯಲು ಇಚ್ಚಿಸುತ್ತೇನೆ. ಸೋವಿಯೆತ್ ಪುಸ್ತಕಗಳ ಬಗ್ಗೆ ನೀವೆಲ್ಲ ಕೇಳಿರಬಹುದು, ಅವರ ಪುಸ್ತಕ ಮೇಳ ಬಂತೆಂದರೆ ಅದು ಜಾತ್ರೆ ನಮಗೆ, ಹೋಗಿ ಎಲ್ಲ ಪುಸ್ತಕ ಮುಟ್ಟಿ ನೋಡಿ, ಬಣ್ಣ ಬಣ್ಣದ ಚಿತ್ರಗಳನ್ನು ನೋಡಿ ಸಂತೋಷಿಸುತ್ತಿದ್ದೆವು. ಅದರಲ್ಲಿ ಮಿರ್ ಪಬ್ಲಿಷರ್ಸ್ ಅವರ ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನದ ಪುಸ್ತಕ ವಿಭಿನ್ನವಾಗಿರುತ್ತಿತ್ತು, ಅವರ ಕೆಲವು ಪುಸ್ತಕ ಇನ್ನೂ ನನ್ನಲ್ಲಿ ಇವೆ.ಮ ಯಾವುದೇ ವಿಷಯವನ್ನು ಸರಳವಾಗಿ, ಸಾಮಾನ್ಯರಿಗೆ ತಿಳಿಯುವಂತೆ ಇರುವ ಅವರ ಬರಹ ಓದುವದೇ ಒಂದು ಸುಗ್ಗಿ. ಅವರ ಪುಸ್ತಕಗಳನ್ನು ನೀವೂ ಓದಿ ಖುಷಿ ಪಡಿ ಎಂದು ಆರ್ಕೈವ್ ಕೊಂಡಿ ಕಳಿಸುತ್ತಿದ್ದೇನೆ - https://archive.org/details/mir-titles

ಇನ್ನು ಸುಧಾ, ತರಂಗ, ಪ್ರಜಾಮತ, ಮಲ್ಲಿಗೆ, ತುಷಾರ, ಮಯೂರ, ರಾಗಸಂಗಮ ಎಲ್ಲರೂ ಓದಿಯೇ ಇರುತ್ತೀರಾ, ಅವನ್ನೂ ಮರೆಯಬಾರದು ಎಂದು ಅವುಗಳ ಹೆಸರನ್ನೂ ಬರೆದೆ.

ಪುಸ್ತಕದ ನಂಟು ಇನ್ನೂ ನನ್ನೊಂದಿಗೆ ಇದೆ, ಈಗ ವಿವಿಡ್ಲಿಪಿಯ ಉದ್ದೇಶಗಳೊಂದಿಗೆ. ನಿಮ್ಮೆಲ್ಲರ ಪುಸ್ತಕಗಳ ನೆನಪು ನನ್ನ ನೆನಪಿನ ಕಂತೆ ಅಂತೆಯೇ ಇರಬಹುದು. ನೆನಪುಗಳು ಮಧುರ, ಮಧುರ... ನೆನೆದಷ್ಟೂ ಅತಿ ಮಧುರ. ಪುಸ್ತಕಾರ್ಪಣಮಸ್ತು

~~ಪ್ರಮೋದ್ ಲಕ್ಕುಂಡಿ

ವೈಚಾರಿಕ ಲೇಖನ ಮತ್ತು ಹೊಸ ಬರಹಗಳ ಸರಣಿ ‘ಬದುಕು ಬದಲಿಸಿದ ಪುಸ್ತಕ’.

ಆತ್ಮೀಯ ಓದುಗರೇ, 
ಕಳೆದ ವಾರ ಪ್ರಕಟಗೊಂಡ 'ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ' ಲೇಖನದ ಮೊದಲ ಭಾಗವನ್ನು ತಾವೆಲ್ಲರೂ ಓದಿ ಮೆಚ್ಚಿಕೊಂಡು ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿದ್ದೀರಿ. ನೀವೆಲ್ಲರೂ ಕಾಯುತ್ತಿರುವ ಈ ಲೇಖನದ ಎರಡನೇ ಭಾಗ ಈ ವಾರ ಪ್ರಕಟವಾಗುತ್ತಿದೆ. ಜೊತೆಗೆ ಕೆಲ ವಾರಗಳ ಹಿಂದೆ ಓದುಗರಿಗೆ ಅವರ ಮೆಚ್ಚಿನ, ಬದುಕಿನ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಹಾಯ ಮಾಡಿದ  ಆ ಬದುಕು ಬದಲಿಸಿದ ಪುಸ್ತಕದ ಬಗ್ಗೆ ಕಿರು ಲೇಖನವನ್ನು ಬರೆಯುವಂತೆ ವಿನಂತಿಯನ್ನು ಮನ್ನಿಸಿ ಹಲವಾರು ತಮ್ಮ ಆ ಸರಣಿಯ ಮೊದಲ ಬರಹ ಈ ವಾರ ಪ್ರಕಟವಾಗುತ್ತಿದೆ. ಶ್ರೀರಂಜನಿ ಸಿಂಹ ಅವರು ತಮ್ಮ ಮನಸಿಗೆ ಸಾಂತ್ವನ ನೀಡಿ ಆಶಾಭಾವ ಹೊಮ್ಮಿಸಿದ ಪುಸ್ತಕಗಳ ಬಗ್ಗೆ ಬರೆದಿದ್ದಾರೆ. 
ಈ ಸರಣಿಗೆ ತಾವೆಲ್ಲರೂ ಬರೆಯಿರಿ. ಈ ರೀತಿಯಲ್ಲಿ ಹೊಸ ಪುಸ್ತಕಗಳ ಬಗ್ಗೆ ನಾವೆಲ್ಲರೂ ತಿಳಿಯುವಂತಾಗಲಿ ಎಂಬ ಆಶಯದೊಂದಿಗೆ 
ಈ ವಾರದ ಓದಿಗೆ ತಮಗಿದೋ ಸ್ವಾಗತ. 
-ಸಂಪಾದಕಿ   

ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ-ಭಾಗ ೨

ಲೇಖಕರು-ಡಾ ಜಿ ಎಸ್ ಶಿವಪ್ರಸಾದ್,ಶೇಫೀಲ್ಡ್ ಯು.ಕೆ

ಉದಾರತೆ, ವೈಚಾರಿಕತೆ, ಮತ್ತು ಸಾಮಾಜಿಕ ಜವಾಬ್ದಾರಿ ಈ ಮೂರು ಏಕ ಕಾಲಕ್ಕೆ ಮೇಳವಿಸಿದ್ದು ೧೨ನೇ ಶತಮಾನದ ಬಸವಕೇಂದ್ರಿತ ಶರಣ ಚಳುವಳಿಯಲ್ಲಿ, ಇವು ಶರಣ ತತ್ವದ ಮೂರು ಮುಖಗಳು ಎಂದು ಜಿ. ಎಸ್. ಎಸ್. ಕರೆದಿದ್ದಾರೆ. ಅವರು ಇದನ್ನು ಮುಂದಕ್ಕೆ ವಿಸ್ತರಿಸಿ ಸಮಾಜದ ಎಲ್ಲ ಸ್ತರಗಳನ್ನು ಸಮಾನವೆಂದು ಪರಿಗಣಿಸಲು ಉದಾರತೆ ಬೇಕು, ವ್ಯವಸ್ಥೆಯೊಳಗಿನ ತಾರತಮ್ಯಗಳನ್ನು ಪ್ರಶ್ನಿಸುವುದಕ್ಕೆ ವೈಚಾರಿಕತೆ ಬೇಕು, ಇದಕ್ಕೆ ಅನುಗುಣವಾಗಿ ಹೊಸ ಸಮಾಜವೊಂದನ್ನು ನಿರ್ಮಿಸಲು ಸಾಮಾಜಿಕ ಜವಾಬ್ದಾರಿ ಬೇಕು ಎನ್ನುತ್ತಾರೆ. ಜಿ.ಎಸ್.ಎಸ್ ಚಿಂತನೆಗಳ ಸಂಗ್ರಹವಾದ 'ಶರಣ ಪಥ' ಎಂಬ ಸಂಕಲನದಲ್ಲಿ ಈ ವಿಚಾರಗಳು ಪ್ರಸ್ತಾಪಗೊಂಡಿವೆ. 

ಈ ವೈಜ್ಞಾನಿಕ ಯುಗದಲ್ಲಿ ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವುದು ಬಹಳ ಅವಶ್ಯವಾಗಿದೆ. ಅಮೇರಿಕದ  'ನ್ಯಾಸ' ಕೇಂದ್ರದವರು ಉಡಾಯಿಸಿದ ಅಪೋಲೊ ೧೩ ರಾಕೆಟ್ ವಿಫಲಗೊಂಡ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ  ದೇಶಗಳಲ್ಲಿ ೧೩ ಎಂಬ ಸಂಖ್ಯೆಯ ಬಗ್ಗೆ ಮೂಢನಂಬಿಕೆಗಳು ಹುಟ್ಟಿಕೊಂಡಿವೆ. ಇಲ್ಲಿಯ ವಸತಿಗಳಲ್ಲಿ, ಬಹು ಅಂತಸ್ತಿನ ಕಟ್ಟಡಗಳಲ್ಲಿ, ಹೋಟೆಲ್ ಕೊಠಡಿಗಳಲ್ಲಿ ೧೩ ಸಂಖ್ಯೆ ಕಾಣೆಯಾಗಿದೆ. ೧೩ ಎಂಬ ಸಂಖ್ಯೆ ದುರದೃಷ್ಟದ ಕುರುಹಾಗಿ ಅದು ಅಮಂಗಳವೆಂದು ಪರಿಗಣಿಸಲಾಗಿದೆ. ಹೀಗೆ ವೈಜ್ಞಾನಿಕವಾಗಿ ಮುನ್ನಡೆದ ಸುಶೀಕ್ಷಿತ ಪಾಶ್ಚಿಮಾತ್ಯ   ದೇಶಗಳಲ್ಲಿ ಮೂಢನಂಬಿಕೆ ಸ್ವಲ್ಪ ಮಟ್ಟಿಗೆ ಪ್ರಚಲಿತವಾಗಿರುವಾಗ ಅಭಿವೃದ್ಧಿ ಗೊಳ್ಳುತ್ತಿರುವ ಮತ್ತು ಧಾರ್ಮಿಕ ನಂಬಿಕೆಗಳಿಂದ  ತುಂಬಿರುವ  ಭಾರತದಲ್ಲಿ ಮೂಢನಂಬಿಕೆಗಳು ಸಾವಿರಾರು ವರ್ಷಗಳಿಂದ ಮನೆಮಾಡಿಕೊಂಡಿವೆ. ೮೦೦ ವರ್ಷಗಳ ಹಿಂದೆಯೇ ಈ ಮೂಢನಂಬಿಕೆಗಳನ್ನು ಪ್ರಶ್ನಿಸುವ ವೈಚಾರಿಕ ಮನೋಭಾವವನ್ನು ಜನರಲ್ಲಿ ಬೆಳೆಸುವ ಪ್ರಯತ್ನವನ್ನು ಬಸವಾದಿ ಶರಣರು ಮಾಡಿದ್ದಾರೆ. 
'ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತೆ ಉಂಟೆ'? ಎಂದು ಪ್ರಶ್ನಿಸಿ ಮುಂದಕ್ಕೆ ‘ಸತ್ಯ ನುಡಿವುದೇ ದೇವಲೋಕ, ಮಿಥ್ಯ ನುಡಿವುದೇ ಮರ್ತ್ಯ ಲೋಕ, ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎನ್ನುತ್ತಾ ಇಹ-ಪರ ಲೋಕಗಳ ಪರಿಕಲ್ಪನೆಗಳನ್ನು ಶರಣರು ತಿರಸ್ಕರಿಸಿದ್ದಾರೆ. ಇಂದಿನ ದಿನಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಚಾಲನೆಯಲ್ಲಿರುವ ಎಷ್ಟೋ ಸಂಗತಿಗಳನ್ನು ನಾವು ನಂಬುವುದೇ ಕಷ್ಟೆ.  ಕೆಲವರು  ತಮ್ಮ ಆಲೋಚನಾ ಕ್ರಮಕ್ಕೆ, ತಮ್ಮ ಸಿದ್ಧಾಂತಕ್ಕೆ, ರಾಜಕೀಯ ನಿಲುವಿಗೆ  ಸರಿದೂಗುವಂತೆ  ನಿಜವಾದ ಸಂಗತಿಗಳನ್ನು ತಿರುಚಿ ವ್ಯವಸ್ಥಿತವಾಗಿ ಅದನ್ನು ವಾಟ್ಸ್ ಆಪ್ ಗುಂಪುಗಳಲ್ಲಿ ಹಂಚಿ ಪ್ರಚಾರಕ್ಕಾಗಿ ಬಳೆಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 'ಮಿಥ್ಯ ನುಡಿವುದೇ ಮರ್ತ್ಯಲೋಕ' ಎಂಬ ಬಸವ ತತ್ವದ ಬಗ್ಗೆ ನಾವೆಲ್ಲಾ ಧೀರ್ಘವಾಗಿ ಚಿಂತಿಸಬೇಕಾಗಿದೆ.

'ಭಕ್ತನಿರ್ದ ತಾಣವೇ ದೇವಲೋಕ, ಭಕ್ತನಂಗಳವೇ ವಾರಣಾಸಿ, ದೇಹವೇ ದೇಗುಲ' ಎಂದು ಹೇಳುತ್ತಾ ದೇವಸ್ಥಾನಗಳನ್ನು ಶರಣರು ನಿರಾಕರಿಸಿದ್ದಾರೆ. ದೇವಸ್ಥಾನದ ಒಂದು ಚೌಕಟ್ಟಿನಲ್ಲಿ ಮೂರ್ತವಾದ ದೇವರನ್ನು ಧಿಕ್ಕರಿಸಿ, ಬಯಲೆಂಬ ಮುಕ್ತ ಪರಿಸರದಲ್ಲಿ, ನಿರಾಕಾರದಲ್ಲಿ, ಇಷ್ಟಲಿಂಗದಲ್ಲಿ  ದೇವರನ್ನು ಕಾಣುವ ಪರಿಕಲ್ಪನೆಯನ್ನು ಒದಗಿಸಿದ್ದಾರೆ. ನಾವು ಆಚರಿಸುವ ಕೆಲವು ಪೂಜೆ ಪುನಸ್ಕಾರಗಳ, ಧಾರ್ಮಿಕ ವಿಧಿಗಳ ಬಗ್ಗೆ ಆಲೋಚಿಸಿ; 
 

ಕಲ್ಲ ನಾಗರ  ಕಂಡರೆ  ಹಾಲನೆರೆಯಂಬರು 
ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ 
ಉಂಬ ಜಂಗಮ ಬಂದರೆ ನಡೆಯಂಬರು 
ಉಣ್ಣದ ಲಿಂಗಕೆ ಬೋನವ ಹಿಡಿ ಎಂಬರಯ್ಯ 

ಎನ್ನುತ್ತಾ  ನಮ್ಮ ಆಚರಣೆಗಳನ್ನು ವಿಮರ್ಶಿಸಿದ್ದಾರೆ. ಇನ್ನು ಕೆಲ ಶರಣರು ವೇದ ಶಾಸ್ತ್ರ ಪುರಾಣಗಳನ್ನು, ಆಗಮಗಳನ್ನು , ಪಾಪ -ಪುಣ್ಯ ಕರ್ಮವೆಂಬ ಕಲ್ಪನೆಗಳನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ನಮ್ಮ ಸಮಾಜದಲ್ಲಿ ಅರ್ಥಹೀನವಾದ ಅವೈಜ್ಞಾನಿಕ ನಂಬಿಕೆಗಳು ಅನುಷ್ಠಾನ ದಲ್ಲಿದ್ದು ಈ ವೈಜ್ಞಾನಿಕ ಯುಗದಲ್ಲಿ,  ಬದಲಾಗುತ್ತಿರುವ ಸಮಾಜದಲ್ಲಿ ವೈಚಾರಿಕತೆಯನ್ನು ಬೆಳಸಿಕೊಳ್ಳಬೇಕಾಗಿದೆ. ಧರ್ಮದ ನೆಪದಲ್ಲಿ ಮೂಡುವ ಭಾವೋದ್ವೇಗವನ್ನು ಪಕ್ಕಕ್ಕಿಟ್ಟು ಚಿಂತಿಸಬೇಕಾಗಿದೆ.

'ಎನಗಿಂತ ಕಿರಿಯರಿಲ್ಲಯ್ಯ ಮತ್ತು ತನ್ನ ಬಣ್ಣಿಸಬೇಡ'ಎಂಬ ವಚನದ ಸಾಲುಗಳು ತನ್ನ ಪ್ರಸ್ತುತತೆಯನ್ನು ಇಂಗ್ಲೆಂಡಿನಲ್ಲಿ ವಿಶೇಷವಾಗಿ ಕಂಡುಕೊಂಡಿದೆ. ಈ ಭಾವನೆಗಳನ್ನು ನಾವು ಅನಿವಾಸಿಗಳು ಇಲ್ಲಿ ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇವೆ. ವೃತ್ತಿಯ ಪರಿಸರದಲ್ಲಿ ಕಿರಿಯರು ಹಿರಿಯರಿಗೆ 'ಸರ್' ಎನ್ನುತ್ತಾ ತಲೆಬಾಗಿಸುವುದಿಲ್ಲ, ಅತಿಯಾದ ವಿನಮ್ರತೆ ಮತ್ತು ವಿಧೇಯತೆಗಳನ್ನು ತೋರುವುದು ಇಲ್ಲಿ ಕಂಡುಬರುವುದಿಲ್ಲ. ಹಿರಿಯರು ಅದನ್ನು ನಿರೀಕ್ಷಿಸುವುದೂ ಇಲ್ಲ. ಒಂದು ಕಛೇರಿಯಲ್ಲಿ ಮೇಲಧಿಕಾರಿಯೂ ಸಾಮಾನ್ಯ ಉದ್ಯೋಗಿಯೂ ಬಿಡುವಿನ ವೇಳೆಯಲ್ಲಿ ಒಟ್ಟಿಗೆ ಕುಳಿತು ಕಾಫಿ ಹೀರುವುದು, ಹರಟುವುದು ಮತ್ತು ಎಲ್ಲರು ಒಂದು ತಂಡದಂತೆ ಕೆಲಸ ಮಾಡುವುದನ್ನು ಕಾಣಬಹುದು. ಇವರ ವ್ಯಕ್ತಿತ್ವದಲ್ಲಿ ದರ್ಪವಾಗಲಿ ಅಥವಾ ಆಡಂಬರವಾಗಲಿ ಇರುವುದಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ ಮತ್ತು ನೋಬಲ್ ಪ್ರಶಸ್ತಿ ಪಡೆದ ಪ್ರಖ್ಯಾತ ನಾಯಕರು, ಸಾಹಿತಿಗಳು, ವಿಜ್ಞಾನಿಗಳು ಬಾಳಿ ಬದುಕಿದ್ದಾರೆ. ಇವರು ಯಾವುದೇ ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಹೆಗ್ಗಳಿಕೆಯ ಬಗ್ಗೆ ಮಾತನಾಡುವುದಿಲ್ಲ. ಹೊಗಳಿಕೆ ಇವರಿಗೆ ಸಂಕೋಚದ ವಿಚಾರವಾಗಿರುತ್ತದೆ. ಈ ವಿನಯಶೀಲರು 'ಎನಗಿಂತ ಕಿರಿಯರಿಲ್ಲಯ್ಯ' ಎಂಬ ಭಾವನೆಯಲ್ಲಿ ಬದುಕುತ್ತಿದ್ದಾರೆ.  'ತನ್ನ ಬಣ್ಣಿಸಬೇಡ' ಎಂಬ ಸಾಲುಗಳ ಬಗ್ಗೆ ಚಿಂತಿಸುವಾಗ ಪ್ರಪಂಚದ ನಾನಾ ದೇಶಗಳಲ್ಲಿ ನೂರಾರು ವರ್ಷಗಳಿಂದ ರಾಜ ಮಹಾರಾಜರಿಗೆ ಹೊಗಳು ಭಟ್ಟರು ಇದುದ್ದನ್ನು  ನಾವು ಇತಿಹಾಸದಲ್ಲಿ ಗಮನಿಸಬಹುದು. ಈಗಿನ ಕಾಲಕ್ಕೆ ಆ ಹೊಗಳುಭಟ್ಟರ ಹೊಗಳಿಕೆಗಳ ಹಳೆಯ ಸಂಪ್ರದಾಯವನ್ನು ರಾಜಕಾರಣಿಗಳ ಅನುಯಾಯಿಗಳು ಉಳಿಸಿಕೊಂಡಿದ್ದಾರೆ. ಇದನ್ನು ನಾವು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಬಹುದು

'ಎನ್ನವರೊಲಿದು ಹೊನ್ನ ಶೂಲದಲಿ ಇಕ್ಕಿದರೆನ್ನ 
ನಿಮ್ಮ ಮನ್ನಣೆಯೇ ಅಲುಗಾಗಿ ತಾಕಿತ್ತಲ್ಲಾ 
ಅಯ್ಯ ನೊಂದೆನು ಸೈರಿಸಲಾರೆನು 
ನೀ ನನಗೆ ಒಳ್ಳಿದನಾದರೆ 
ಎನ್ನ ಹೊಗಳತೆಗೆ ಅಡ್ಡ ಬಾರ'

ಎನ್ನುವ ಈ ಬಸವಣ್ಣನವರ ಸರಳ ವಚನ ಜನ ಸಾಮಾನ್ಯರಿಂದ ಹಿಡಿದು ಅಧಿಕಾರದಲ್ಲಿ ಮತ್ತು ಉನ್ನತ ಸ್ಥಾನದಲ್ಲಿರುವ ಎಲ್ಲರಿಗೂ ಪ್ರಸ್ತುತವಾದ ಸಂದೇಶ ಎನ್ನಬಹುದು. ಒಮ್ಮೆ ‘ಸೂರ್ಯ ಮುಳುಗದ ಸಾಮ್ರಾಜ್ಯ’ವೆಂದು ತಮ್ಮನು ತಾವು ಹೊಗಳಿಕೊಂಡು, ತಮ್ಮ ದೇಶವನ್ನು ಗ್ರೇಟ್ ಬ್ರಿಟನ್ ಎಂಬ ಹೆಸರಿನಲ್ಲಿ ಕರೆದು ಕೊಳ್ಳುತ್ತಿದ್ದ ಇಂಗ್ಲೆಂಡ್ ಈಗ ಕಾಲ ಬದಲಾದಂತೆ ತನ್ನ ಹಿಂದಿನ ತಪ್ಪುಗಳನ್ನು, ಸ್ವಾಭಿಮಾನವನ್ನು ಸಂಕೋಚದಿಂದ ಪಕ್ಕಕ್ಕೆ ತಳ್ಳಿ ಈಗ ವಿನಮ್ರವಾಗಿದೆ.  'ಕಾಯಕವೇ ಕೈಲಾಸ' ಎಂಬ ಬಸವ ತತ್ವ ಪಾಶ್ಚಿಮಾತ್ಯ ದೇಶಗಳಲ್ಲಿ ಅನುಷ್ಠಾನದಲ್ಲಿದೆ. ಇಲ್ಲಿ ಎಲ್ಲ ವೃತಿಯೂ ಸಮಾನವೆಂದು ಪರಿಗಣಿಸಲ್ಪಡುತ್ತದೆ. ಇಲ್ಲಿ ವೃತ್ತಿಗಿಂತ ಅದರ ಹಿಂದೆ ಇರುವ ವ್ಯಕ್ತಿ, ಅವನ ಶ್ರದ್ಧೆ ಮುಖ್ಯವಾಗುತ್ತದೆ. ಇಲ್ಲಿಯ ಜನ ಸಂಭಾಷಣೆಯಲ್ಲಿ ತೊಡಗಿದಾಗ; 'ನೀನು ಯಾವ ವೃತ್ತಿಯಲ್ಲಿದ್ದೀಯಾ? ನಿನಗೆ ಸಂಬಳವೆಷ್ಟು? ಎಂಬ ಪ್ರಶ್ನೆಯನ್ನು ಯಾರು ಯಾರಿಗೂ ಕೇಳುವುದಿಲ್ಲ. ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಹಂಬಲ ಮತ್ತು ಛಲ ಇವು ಇಲ್ಲಿಯ ಬದುಕಿನ ರೀತಿ ನೀತಿಗಳಾಗಿವೆ.  

ಅನಿವಾಸಿಗಳಾದ ನಮಗೆ ಕನ್ನಡ ಮಾತೃಭಾಷೆಯಾದರೆ ಇಂಗ್ಲಿಷ್ ಪರಿಸರದ ಭಾಷೆ. ಹಾಗೆ ನಮ್ಮ ಧರ್ಮ ಹಿಂದೂ ಧರ್ಮವಾದರೆ ಪರಿಸರದ ಧರ್ಮ ಕ್ರೈಸ್ತ ಧರ್ಮವಾಗಿದೆ. ಕ್ರೈಸ್ತ ಧರ್ಮಧ ಕೆಲವು ಬೋಧನೆಗಳನ್ನು ಗಮನಿಸಿದಾಗ ಅಲ್ಲಿ ನಮಗೆ ಬಸವಣ್ಣನವರ ತತ್ವ ಕಾಣಿಸಿಕೊಳ್ಳುತ್ತದೆ. "ದಯವೇ ಧರ್ಮದ ಮೂಲವಯ್ಯ' ಎಂದು ಬಸವಣ್ಣ ಹೇಳಿದ್ದರೆ, ಕ್ರೈಸ್ತ ಧರ್ಮವು, ‘ದೇವರಿಗೆ ಧನ್ಯತೆಯನ್ನು ಸೂಚಿಸು, ಅವನ ದಯೆ ಎಂದೆಂದಿಗೂ ಇರುತ್ತದೆ, ದಯೆ, ನ್ಯಾಯ ತೀರ್ಪುಗಳನ್ನು ಮೀರಿದ್ದು’ ಎಂಬುದಾಗಿ ಸಾರುತ್ತದೆ. ‘ಕ್ರೈಸ್ತ ಧರ್ಮದಲ್ಲಿ ನಿನ್ನ ದೇಹವು ನಿನ್ನ ಪವಿತ್ರ ಚೇತನದ ಮಂದಿರ, ಆ ಚೇತನವನ್ನು ವಿಜೃಂಭಿಸಿ ಆರಾಧಿಸು’ ಎಂದು ಹೇಳಿದರೆ, ಬಸವಣ್ಣನವರು 'ದೇಹವೇ ದೇಗುಲ' ಎಂಬ ಕಲ್ಪನೆಯನ್ನು ಒದಗಿಸಿದ್ದಾರೆ. "ಯಾರಾದರೂ ನಿನ್ನ ಬಲ ಕೆನ್ನೆಗೆ ಹೊಡೆದರೆ ಅವರಿಗೆ ನಿನ್ನ ಎಡಕೆನ್ನೆಯನ್ನು ತೋರಿಸು ಎಂಬ ಸಹನೆಯ ಮಾತನ್ನು ಜೀಸಸ್ ಹೇಳಿದ್ದಾರೆ ಇದೇ ಮಾತನ್ನು;

" ತನಗೆ ಮುನಿದವರಿಗೆ ತಾ ಮುನಿಯಲೇಕೆಯ್ಯಾ  
ತನುವಿನಕೋಪ ತನ್ನ ಹಿರಿಯತನದ ಕೇಡು 
ಮನೆಯೊಳಗಿನ ಕಿಚ್ಚು ಮನೆಯ ಸುಟ್ಟಲ್ಲದೆ 
ನೆರೆಮನೆಯ ಸುಡದು, ಕೂಡಲ ಸಂಗಮದೇವ" 

ಎಂದು ಬಸವಣ್ಣ ಹೇಳುತ್ತಾರೆ. ಎರಡು ಸಾವಿರ ವರುಷಗಳ ಹಿಂದೆ ದೂರದ ಬೆಥ್ಲೆಹೆಮ್ ನಗರದಲ್ಲಿ  ಹುಟ್ಟಿದ ಮಹಾನ್ ಪುರುಷ ಜೀಸಸ್ ಮತ್ತು ಅಲ್ಲಿಂದ ಒಂದುಸಾವಿರ ವರುಷಗಳ ನಂತರ ಕರ್ನಾಟಕದಲ್ಲಿ ಹುಟ್ಟಿದ ಮಹಾನುಭಾವಿ  ಬಸವಣ್ಣನವರ ತತ್ವಗಳು ಎಷ್ಟು ಸಾದೃಶ್ಯವಾಗಿವೆ ಎನ್ನುವ ವಿಚಾರ ಆಶ್ಚರ್ಯಕರವಾಗಿದೆ. 'ದೇವನೊಬ್ಬ ನಾಮ ಹಲವು' ಎಂದು ಬಸವಣ್ಣ ಹೇಳಿದ್ದರೇ 'ಎಷ್ಟು ಮತಗಳೋ ಅಷ್ಟು ಪಥಗಳು ಎಂದು ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ. "ಅವರವರ ದರುಶನಕೆ, ಅವರವರ ದೇಶದಲಿ, ಅವರವರಿಗೆಲ್ಲ ಗುರು ನೀನೊಬ್ಬನೇ" ಎಂದು ಮುಪ್ಪಿನ ಷಡಕ್ಷರಿ ಹೇಳಿದ್ದಾರೆ.  ಹೀಗೆ ಪ್ರಪಂಚದ ಸಾಧು ಸಂತರ, ಮಹಾಪುರುಷರ ಅನುಭಾವದಲ್ಲಿರುವ ಸಾಮ್ಯ ಗಮನಾರ್ಹವಾದದ್ದು ಮತ್ತು ಎಲ್ಲ ಮತಗಳನ್ನು ಗೌರವದಿಂದ ಸಮಾನವಾಗಿ ಕಾಣುವ ಸಂದೇಶ ಇಂದಿನ ಸಾಮಾಜಿಕ ಪರಿಸ್ಥಿತಿಗೆ ಪ್ರಸ್ತುತವಾಗಿದೆ. 

ಇಂಗ್ಲೆಂಡಿನಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೂಡಿದ 'ಸಫ಼್ರಜೆಟ್ ಚಳುವಳಿ' ಚಾರಿತ್ರಿಕವಾಗಿ ಮಹತ್ವವಾದದ್ದು. ೧೯೧೮ ರಲ್ಲಿ ತೀವ್ರವಾದ ಈ ಚಳುವಳಿಯಿಂದ ಸ್ತ್ರೀಯರ ಸ್ಥಾನಮಾನಗಳಿಗೆ ವಿಶೇಷ ಅರ್ಥದೊರಕಿತು. ಸ್ತ್ರೀಯರು ಚುನಾವಣೆಯಲ್ಲಿ ಮತಚಲಿಸುವುದಕ್ಕೆ ಅನುವುಮಾಡಿಕೊಟ್ಟಿತು. ಇತಿಹಾಸದ ಎಲ್ಲ ಹಂತಗಳಲ್ಲಿ ಸ್ತ್ರೀಯರು ಸಮಾಜದಲ್ಲಿ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಯಿತು. ಈ ಆಧುನಿಕ ಯುಗದಲ್ಲೂ ಮೂಲಭೂತವಾದಿ ಧಾರ್ಮಿಕ ಆಲೋಚನೆಯುಳ್ಳ ಕೆಲವು ದೇಶಗಳಲ್ಲಿ ಸ್ತ್ರೀಯರು ತಮ್ಮ ಅಸ್ತಿತ್ವವನ್ನು ಮತ್ತು ಮೂಲಭೂತ ಹಕ್ಕುಗಳನ್ನು     ಉಳಿಸಿಕೊಳ್ಳುವುದರ ಬಗ್ಗೆ ಆತಂಕವಿದೆ. ಈ ಹೋರಾಟ ಇನ್ನೂ ನಡೆಯುತ್ತಿದೆ. ಆದರೆ ೮೦೦ ವರ್ಷಗಳ ಹಿಂದೆಯೇ ಬಸವಣ್ಣನವರು ಸ್ತ್ರೀಯರಿಗೆ ಸಮಾಜದಲ್ಲಿ ಪುರುಷ ಸಮಾನ ಹಕ್ಕುಗಳನ್ನು ಒದಗಿಸಿ ಕೊಟ್ಟರು. ಪೂಜೆ ಮಾಡಲು ಸ್ತ್ರೀ ಅರ್ಹಳಲ್ಲ ಎಂಬ ಪರಿಸ್ಥಿತಿಯಲ್ಲಿ "ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಎನ್ನುತ್ತಾ 'ಶರಣ
ಸತಿ-ಲಿಂಗ ಪತಿ' ಎಂಬ ಪರಿಕಲ್ಪನೆಯನ್ನು ಕೊಟ್ಟು ಗಂಡು ಹೆಣ್ಣಿನ ಮಧ್ಯ ಇರುವ ಭೇದಗಳನ್ನು ತೊಡೆದು ಹಾಕಿದರು. 

ಪ್ರಜಾಪ್ರಭುತ್ವದ ತವರೂರಾದ ಇಂಗ್ಲೆಂಡಿನಲ್ಲಿ ಕುಳಿತು ಪ್ರಜಾಪ್ರಭುತ್ವದ ಬಗ್ಗೆ ಯೋಚಿಸುವಾಗ ೮೦೦ ವರ್ಷಗಳ ಹಿಂದೆ ಬಸವಣ್ಣನವರು ಜ್ಯಾತ್ಯಾತೀತವಾದ, ಲಿಂಗ ಬೇಧವಿಲ್ಲದ ವಿಚಾರವಂತರ, ವೇದಿಕೆಯನ್ನು ಕಲ್ಪಿಸಿದ್ದರು, ಅಲ್ಲಿ ಜನಪರ ಸಾಮಾಜಿಕ ಹಾಗು ಆಧ್ಯಾತ್ಮಿಕ ವಿಚಾರಗಳನ್ನು ಅನುಭವ ಮಂಟಪದಲ್ಲಿ ವಿನಿಮಯ ಮಾಡಿಕೊಂಡು ಚರ್ಚಿಸುತ್ತಿದ್ದರು ಎಂಬ ವಿಚಾರ ಅತ್ಯಂತ ಶ್ಲಾಘನೀಯವಾದದ್ದು. ಸಮಾನತೆ ಮತ್ತು ಮಾನವೀಯ ಮೌಲ್ಯಗಳು ಅಲ್ಲಿ ಪ್ರಧಾನವಾಗಿದ್ದು ಅದು ಪ್ರಜಾಪ್ರಭುತ್ವದ ಒಂದು ಮಾದರಿಯಾಗಿತ್ತು. ಈ ವಿಚಾರಗಳು ಇಡೀ ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ.

ದಯೆ, ಕರುಣೆ, ಅನುಕಂಪೆ, ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆ, ಕಾಯಕದಲ್ಲಿ ಶ್ರದ್ಧೆ, ದಾಸೋಹ, ವಿನಯ ಶೀಲತೆ ಮುಂತಾದ ಉತ್ತಮ ಮೌಲ್ಯಗಳನ್ನು ಬಸವಾದಿ ಶರಣರು ಎತ್ತಿ ಹಿಡಿದಿದ್ದಾರೆ. ಈ ಮೌಲ್ಯಗಳು ಪ್ರಪಂಚದ ಯಾವ ದೇಶದಲ್ಲಾದರೂ ಒಂದು ಆರೋಗ್ಯಕರವಾದ ಸಮಾಜವನ್ನು ಕಟ್ಟಲು ಬೇಕಾಗಿರುವ ಅಡಿಗಲ್ಲುಗಳು. ಹೀಗಾಗಿ ಈ ಮೌಲ್ಯಗಳನ್ನು ಒಳಗೊಂಡ ಶರಣ ತತ್ವ ವೈಯುಕ್ತಿಕ ಮತ್ತು ಸಾಮೂಹಿಕ ನೆಲೆಯಲ್ಲಿ, ಎಲ್ಲ ದೇಶಗಳಿಗೂ ಎಲ್ಲ ಕಾಲಕ್ಕೂ ಪ್ರಸ್ತುತವಾದದ್ದು.

ಬದುಕು ಬದಲಿಸಿದ ಪುಸ್ತಕ

ಲೇಖಕಿ-ಶ್ರೀರಂಜನಿ ಸಿಂಹ

ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು,'ನಮ್ಮ ಬದುಕಿನಲ್ಲಿ ಸ್ನೇಹಿತರ ಕೊರತೆ ಯಾವತ್ತೂ ಇರಲ್ಲ ಪುಸ್ತಕ ಒಂದಿದ್ದರೆ ಸಾಕು'ಎಂದು. ಬೇಸಿಗೆ ರಜೆ ಬರಲಿ, ದಸರಾ ರಜೆ ಇರಲಿ ಆ ರಜೆಯಲ್ಲಿ ಪುಸ್ತಕ ಓದುವುದು, ಗ್ರಂಥಾಲಯಕ್ಕೆ ಹೋಗಿ ಪುಸ್ತಕ ತರುವುದು ನನ್ನ ದೈನಂದಿನ ಕೆಲಸವಾಗಿತ್ತು. ನಾನು ಸದ್ವಿದ್ಯಾ ಶಾಲೆಯಲ್ಲಿ ಓದುತ್ತಿದ್ದಾಗ ಪುಸ್ತಕ ಓದುವ ಹವ್ಯಾಸ ಇನ್ನೂ ಹೆಚ್ಚಾಯಿತು,tinkle ಪಂಚತಂತ್ರ Competitive success, Wisdom, Tell me why ನಂತಹ ಪುಸ್ತಕಗಳನ್ನು ಓದುತ್ತಿದ್ದೆ. ಇವೆಲ್ಲ ಪುಸ್ತಕಗಳಲ್ಲಿ ಯಾವುದಾದರೂ ಪದ ಅರ್ಥ ಆಗದೆ ಇದ್ದರೆ, ಆ ಪದವನ್ನು Oxford Dictionary ( ಆಂಗ್ಲ ಭಾಷೆ -ಕನ್ನಡ) ಯಲ್ಲಿ ಹುಡುಕಿ ಹೊಸ ಪದಗಳೆಂದು ಕಲಿಯುವ ವಾಡಿಕೆ. (ಇವೆಲ್ಲ tables, square root, cube root ಜೊತೆಗೆ ಓದುತ್ತಿದ್ದ ಪದಗಳು). ಕಾಲ ಕಳೆದಂತೆ ಪುಸ್ತಕ ಓದುವ ಆಸಕ್ತಿ ಹೆಚ್ಚಾಗಿ, ನನಗೆ ಇಷ್ಟವಾಗುವ ಆಂಗ್ಲ ಭಾಷೆಯ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ.

ನನಗೆ ತುಂಬಾ ಬೇಸರ ಆದಾಗ ಮೂರು ಕೆಲಸ ಮಾಡುತ್ತೇನೆ - ಗಿಡಗಳನ್ನು ಬೆಳೆಸುವುದು, ಗಿಡಗಳ ಜೊತೆ ಮಾತನಾಡುವುದು, ಅಡುಗೆ ಮಾಡುವುದು, ಪುಸ್ತಕ ಓದುವುದು. ಪುಸ್ತಕ ಎಂದರೆ ಸ್ನೇಹಿತರಿದ್ದಹಾಗೆ, ಈವಾಗಲಂತೂ ಎಲ್ಲೆಂದರಲ್ಲಿ digital ರೂಪದಲ್ಲಿ ಪುಸ್ತಕ ಓದುವ ಅನುಕೂಲವಿದೆ, ಹೀಗಾಗಿ ಪುಸ್ತಕ ಓದುವುದರಿಂದ ವಿಚಾರ ವಿನಿಮಯ, ದೇಶದ ಆಗು ಹೋಗುಗಳ ಬಗ್ಗೆ ತಿಳುವಳಿಕೆ, ಹೊಸಪದ ಪರಿಚಯ, ಸಾಂಸ್ಕೃತಿಕ ವೈವಿಧ್ಯತೆ ಎಲ್ಲದರ ಅನುಭವವಾಗುತ್ತದೆ. ಅಂತಹ ಪುಸ್ತಕಗಳಲ್ಲಿ ನನಗೆ ಬಹಳ ಹತ್ತಿರವಾದ ಪುಸ್ತಕಗಳು ಎಂದರೆ - You can Win (By Shiv Khera) , ನಾ ಕಂಡ ಕಲಾವಿದರು - ಶ್ರೀ ಮೈಸೂರು ವಾಸುದೇವಾಚಾರ್ಯರು, What Can I give? - (By Abdul Kalam Sir Personal Assistant - Srijan Pal Singh)

ನಾನು ನಮ್ಮ ತಂದೆಯನ್ನು ಕಳೆದುಕೊಂಡ ನಂತರ ಓದಿದ ಪುಸ್ತಕ ಎಂದರೆ - You can Win. ನನ್ನ ವಿಚಲಿತವಾದ ಮನಸನ್ನು, ಆ ಪುಸ್ತಕವನ್ನು ಓದಿ ನಿಧಾನವಾಗಿ ಸಮಾಧಾನ ಮಾಡಿಕೊಂಡೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ, ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋ ಮಾತುಗಳು, ಹೇಳಕ್ಕೆ ಕೇಳಕ್ಕೆ ಚಂದ ಆದರೆ ಅಂತಹ ಪರಿಸ್ಥಿತಿ ನಮಗೆ ಬಂದಾಗ ನಮ್ಮ ಮನಸ್ಸು ತುಂಬಾ ನಿಧಾನ ಗತಿಯಲ್ಲಿ ಒಪ್ಪಿಕೊಳ್ಳುತ್ತದೆ. ಈ ಪುಸ್ತಕದಿಂದ ನನಗೆ ನಿಧಾನವಾಗಿ ಈ ವಿಷಯ ಅರಿವಾಯಿತು, ಮತ್ತೊಂದು ವಿಷಯ ಎಂದರೆ " Always count on blessings" ನಾವು  ಹಿರಿಯರಲ್ಲಿ ಯಾವಾಗಲೂ ಆಶೀರ್ವಾದ ಪಡೆಯುತ್ತೇವೆ. ಯಾಕೋ ಏನೋ ನಮ್ಮ ತಂದೆಯವರನ್ನು ಕಳೆದುಕೊಂಡ ನಂತರ ನನಗೆ ಆಶೀರ್ವಾದ ಇಲ್ಲವೇನೋ ಅನ್ನಿಸುತಿತ್ತು, ಈ ವಾಕ್ಯ ಮತ್ತೆ ಮತ್ತೆ ಓದಿದ ನಂತರ ಒಂದಂತೂ ಅನ್ನಿಸಿದ್ದು ನಿಜ ಲಕ್ಷ್ಮೀನರಸಿಂಹ ಕಾಪಾಡಪ್ಪ ಎಂದು ಕೇಳಿಕೊಂಡೆ ಎಲ್ಲ ನೆರವೇರಿದೆ. 

ನಾನು ದ್ವಿತೀಯ ಪದವಿ ಪೂರ್ವ ಮುಗಿಸಿದ ನಂತರ, BE in Industrial Production ಅಧ್ಯಯನ ಮಾಡಿದ್ದು SJCE ಕಾಲೇಜ್ ನಲ್ಲಿ. ಹದಿ ಹರೆಯದ ವಯಸ್ಸಿನಲ್ಲಿ  ಬರೀ fiction ಪುಸ್ತಕಗಳೇ ಓದಿದ್ದು, ಮಧ್ಯದಲ್ಲಿ ನಾ ಓದಿದ ಒಂದು ಪುಸ್ತಕ - ''ನಾ ಕಂಡ ಕಲಾವಿದರು''ನಮ್ಮ ಊರಿನ ವಿದ್ವಾಂಸರಾದ ಶ್ರೀ ವಾಸುದೇವಾಚಾರ್ಯರು ಬರೆದ ಈ ಪುಸ್ತಕದಲ್ಲಿ ಅವರು ಕಂಡ ಹಲವಾರು ಕಲಾವಿದರ ಬಗ್ಗೆ ಬರೆದಿದ್ದಾರೆ. ಅವರು ಕಲಿಕೆಯ ಮಹತ್ವವನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಅಂಥ ವಿದ್ವಾಂಸರೇ ವಯಸ್ಸಿನ ಅಡ್ಡಿಯಿಲ್ಲದೇ ಕಲಿಯುವ ಪ್ರಯತ್ನ ಮಾಡುತ್ತಾರೆ ಅಂದರೆ ನಮ್ಮ ಕೈಯಲ್ಲೂ ಸಾಧ್ಯ ಎಂದು ಮನದಟ್ಟು ಮಾಡಿಸಿದ ಪುಸ್ತಕ ಇದು . ಈ ಪುಸ್ತಕ ನನ್ನನು ಮುಂದೆ ಕರ್ನಾಟಕ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಪ್ರೇರೇಪಿಸಿತು ಎಂದರೆ ತಪ್ಪಿಲ್ಲ.

ನನಗಿಷ್ಟವಾದ ಇನ್ನೊಂದು ಪುಸ್ತಕ  - What Can I give? by Sir Srijan Pal Singh. ಈ ಪುಸ್ತಕ ನಾನು ಮೊಟ್ಟ ಮೊದಲ ಬಾರಿಗೆ ಓದಿದ್ದು ಚುನಾವಣೆಯಲ್ಲಿ ಮತ ಚಲಾಯಿಸುವ ಮೊದಲು. ದಿವಂಗತ ರಾಷ್ಟ್ರಪತಿ A P J Abdul Kalam sir ಅವರ ಒಂದೊಂದು ಅನುಭವದ ಮಾತು, ದೇಶಕ್ಕೆ ನಾವು ಎಂತಹ ಪ್ರಜೆಗಳಾಗಿ ಇರಬೇಕೆನ್ನುವ ಕುರಿತು ನನ್ನನು ಚಿಂತನೆ ಮಾಡಲು ಹಚ್ಚಿತು. 
...................................................................................................................................................