‘ಅನಿವಾಸಿ’ಗಳು ಇತ್ತೀಚೆಗೆ ಓದಿದ ಪುಸ್ತಕಗಳು: (ಭಾಗ-೧)

(ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ -ಕಸಾಸಾಂವಿವೇ-ವತಿಯಿಂದ ಲೇಖಕರಿಗೆ ತಾವು ಇತ್ತೀಚೆಗೆ ಓದಿದ ಯಾವುದೇ ಭಾಷೆಯ, ಯಾವುದೇ ಪುಸ್ತಕದ ಬಗ್ಗೆ ಒಂದಿಷ್ಟು ಬರೆಯಲು ಬಿನ್ನವಿಸಲಾಗಿತ್ತು.  ಅದಕ್ಕೆ ಉತ್ತರವಾಗಿ ಆರು ಜನ ಬರೆದು ಕಳಿಸಿದ್ದಾರೆ. ಮೂರನ್ನು ಈ ವಾರ ಇನ್ನುಳಿದ ಮೂರನ್ನು ಮುಂದಿನವಾರ ಓದಲಿದ್ದೀರಿ. ಎಷ್ಟೊಂದು ವೈವಿಧ್ಯತೆ ಅವುಗಳ ವಸ್ತುವಿನಲ್ಲಿ, ಅವರ ಆಯ್ಕೆಯಲ್ಲಿಯೂ, ಬರವಣಿಗೆಯಲ್ಲಿಯೂ ಇದೆ! ಪ್ರಾಚೀನ ಕಾಲದಿಂದ ಹಿಡಿದು ಇತ್ತೀಚಿನ ರಚನೆಯ ವರೆಗೆ ಅವುಗಳ ಹರಹು. ಓದಿ ನೀವೂ ಚಪ್ಪಾಳೆ ತಟ್ಟಿದರೆ, ಭೇಷ್ ಅನಿಸಲಿ, ಅನಿಸದಿದ್ದರೂ ಸಹ ಅವಶ್ಯ ನಿಮ್ಮ ಪ್ರತಿಕ್ರಿಯೆಯನ್ನು ಕೆಳಗೆ ಕಮೆಂಟ್ ಬರೆದು ತಿಳಿಸುವಿರಾ? -ಸಂ)

 

1) ನಾನು ಇತ್ತೀಚೆಗೆ (ಮತ್ತೊಮ್ಮೆ) ಓದಿದ ಪದ್ಯ ಸಂಕಲನ  – ವಿನತೆ ಶರ್ಮ

ತಟ್ಟು ಚಪ್ಪಾಳೆ ಪುಟ್ಟಮಗು – ಮಕ್ಕಳು ಆಯ್ದ ನೂರಾರು ಪದ್ಯಗಳು

ಸಂಗ್ರಹಣೆ ಮತ್ತು ಸಂಪಾದನೆ – ಬೊಳುವಾರು ಮಹಮದ್ ಕುಂಞಿ

ದಿವ್ಯಾ ಪ್ರಕಾಶನ, ಬೆಂಗಳೂರು; ಪ್ರಕಟಿತ ವರ್ಷ ೧೯೯೧; ೩೧೪ ಪುಟಗಳು.

ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ಪದ್ಯಗಳ ಈ ಸಂಕಲನದ ಭಾಗಗಳನ್ನು ೧೯೯೧-ರಾಚೆ ಆಯ್ದುಕೊಂಡು ನಾನು ಹಲವಾರು ಬಾರಿ, ವಿಭಿನ್ನ ಕಾರಣಗಳಿಗಾಗೇ, ಓದಿದ್ದೀನಿ. ಕೆಲ ಪದ್ಯಗಳು ಬಹು ಮುಂಚೆಯೇ ಶಾಲೆಯ ಪಠ್ಯದಲ್ಲಿ ಇದ್ದವು. ಅವನ್ನು ಕಲಿತು, ರಾಗವಾಗಿ ಹಾಡುವುದನ್ನು ಶಾಲಾ ಶಿಕ್ಷಕರು ಹೇಳಿಕೊಟ್ಟಿದ್ದರು. ಮುಂದೆ ನಾನು ಅಕ್ಕನ ಮಗಳು ಪುಟ್ಟ ಕೂಸಾಗಿದ್ದಾಗ ಆಟವಾಡುತ್ತಾ ಕೆಲವನ್ನು ಅವಳಿಗೆಂದು ಹಾಡುತ್ತಿದ್ದೆ. ನಂತರ ಇದೇ ಪ್ರಕಟಿತ ಸಂಕಲನವನ್ನು ನನ್ನೊಡನೆ ಆಸ್ಟ್ರೇಲಿಯಾಗೆ ಕೊಂಡೊಯ್ದು ಅಲ್ಲಿಯೇ ಹುಟ್ಟಿದ ನನ್ನ ಮಕ್ಕಳಿಗೆಂದೇ ಕೆಲ ಪದ್ಯಗಳನ್ನು ಹಾಡಿದ್ದೆ. ಇದೀಗ ಈ ಸಂಕಲನದ ಬಗ್ಗೆ ಬರೆಯುತ್ತಿರುವುದು ಎಂತಹ ಸೌಭಾಗ್ಯ!!

‘ಕಡಲತೀರದ ಭಾರ್ಗವ’ ಶಿವರಾಮ ಕಾರಂತರು ಸಂಕಲನಕ್ಕೆ ಬರೆದಿರುವ ಮುನ್ನುಡಿಯ ನಾಲ್ಕನೇ ವಾಕ್ಯಪರಿಚ್ಛೇದದಲ್ಲೇ ಹೇಳಿದ್ದಾರೆ – “ಈ ಸಂಕಲನದಲ್ಲಿ ಸೇರಿಕೊಳ್ಳಬೇಕಾದ ಸಾಹಿತ್ಯವಸ್ತು ಗೀತರೂಪದ್ದಿದೆ. ಅದು ಅವಶ್ಯವಾದುದು ಮತ್ತು ಆ ಕ್ಷೇತ್ರದಲ್ಲಿ ಕನ್ನಡಿಗರು ಸಾಧಿಸಿದ ಯಶಸ್ಸನ್ನು ಅಳೆಯಬಹುದಾದದ್ದು – ಮಕ್ಕಳ ಸಲುವಾಗಿ.” ಅವರ ಮಾತು ಎಷ್ಟು ಅರ್ಥಪೂರ್ಣ! ಅವರ ಒಳನೋಟ ಇಡೀ ಸಂಕಲನದ ತಿರುಳನ್ನು ಬಿಚ್ಚಿ ನಮ್ಮ ಮುಂದಿಡುತ್ತದೆ. ಸಂಕಲನದ ಪದ್ಯಗಳು ತೋರುವುದು ಕನ್ನಡ ಸಾಹಿತ್ಯ ಎಷ್ಟು ಶ್ರೀಮಂತವಾದದ್ದು, ಕನ್ನಡಿಗರು ಸಾಹಿತ್ಯ ಪ್ರಕಾರಗಳನ್ನು ಎಷ್ಟು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ ಮತ್ತು ಮಕ್ಕಳಿಗೆಂದೇ ರಚಿತವಾದ ಸಾಹಿತ್ಯ ಜಾನಪದ, ಕತೆಗಳು, ಗಾದೆಗಳು, ಆಡುಮಾತು, ಸಂಸ್ಕೃತಿಗಳ ವಿಭಿನ್ನತೆ, ಮತ್ತು ಜನಜೀವನವನ್ನು ಹೇಗೆ ಬಿಂಬಿಸುತ್ತವೆ.  

ಸಂಕಲನದಲ್ಲಿ ನೂರಕ್ಕೂ ಮಿಗಿಲಾದ ಸಂಖ್ಯೆಯ ಪದ್ಯಗಳಿವೆ. ೫ರಿಂದ ೭ ವರ್ಷಗಳ ಮಕ್ಕಳಿಗೆ, ೮ರಿಂದ ೧೦ ವರ್ಷಗಳ ಮಕ್ಕಳಿಗೆ, ೧೧ರಿಂದ ಮೇಲಿನ ಮಕ್ಕಳಿಗೆ ಎಂಬ ಮೂರು ಭಾಗಗಳಿವೆ. ಭಾಗಗಳನ್ನು ಮಾಡಿದವರು, ಪದ್ಯಗಳನ್ನು ಆಯ್ದವರು, ಪದ್ಯಗಳ ಬಗ್ಗೆ ತಮ್ಮ ಇಷ್ಟ, ನಕಾರಗಳನ್ನು ಸೂಚಿಸಿದವರು ಮಕ್ಕಳು ಎಂಬ ವಿಷಯವೇ ಎಷ್ಟು ಅಪ್ಯಾಯಮಾನ, ಅಪರೂಪ ಮತ್ತು ಅನನ್ಯ! ಸಂಕಲನದ ಹಿನ್ನೆಲೆ, ಅದರ ಗರ್ಭಾವಸ್ಥೆ ಮತ್ತು ಜನ್ಮದ ವಿವರಣೆಗಳನ್ನು ಕುಂಞಿ ರವರೆ ಓದುಗರಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳ ಸಾಹಿತ್ಯದ ಬಗ್ಗೆ ಅವರದೇ ವಿಶಿಷ್ಟ ವ್ಯಾಖ್ಯಾನವೂ ಇದೆ.

ಎಲ್ಲರಿಗೂ ಪರಿಚಯವಿರುವ ಜಿ.ಪಿ.ರಾಜರತ್ನಂ, ಕುವೆಂಪು, ದಿನಾಂಕ ದೇಸಾಯಿ, ಶಿವರಾಮ ಕಾರಂತ, ದ. ರಾ. ಬೇಂದ್ರೆ, ಕೆ.ಎಸ್.ನ. ಅವರುಗಳಿಂದ ಹಿಡಿದು ಮಧುರ ಚೆನ್ನ, ಮುಪ್ಪಿನ ಷಡಕ್ಷರಿ, ಚೆನ್ನವೀರ ಕಣವಿ, ‘ಸಿಸು’ ಸಂಗಮೇಶ, ಪಂಜೆ ಮಂಗೇಶ ರಾವ್ ಮತ್ತಿತರ ಅನರ್ಘ್ಯ ರತ್ನಗಳು ಇಲ್ಲಿವೆ. ಅವರ ಪದ್ಯಗಳಿಗೆ ಅತ್ಯಂತ ಸೂಕ್ತವಾಗಿ ಚಿತ್ರಗಳನ್ನು ರಚಿಸಿಕೊಟ್ಟವರು ಬಹು ಹೆಸರಾಂತ ಕಲಾವಿದರು – ಉದಾ, ಗುಜ್ಜಾರಪ್ಪ, ನಾಡಿಗ್, ಮೋನಪ್ಪ, ಸೂರಿ, ಆಚಾರ್ಯ, ಹುಬ್ಳಿಕರ್, ಸತ್ಯ …   

ಕಾರಂತರು ಹೇಳಿರುವ ಹಾಗೆ ಮಕ್ಕಳಿಗೆ ಸಂತೋಷ ಕೊಡುವ ವಿಚಿತ್ರ, ಅಸಂಬದ್ಧ, ಅದ್ಭುತ ಏನೇ ಆದರೂ ಅವು ಪ್ರಾಸಬದ್ಧ ಗೀತೆಗಳಾಗಿ ಅವರಿಗೆ ಇಷ್ಟವಾಗುತ್ತವೆ. ಉದಾ, ಎ.ಕೆ. ರಾಮೇಶ್ವರ ಅವರ ಪದ್ಯ ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವೆ ಯಾರನ್ನು?; ಹೊಯಿಸಳ ಅವರ ಪದ್ಯ ಕಲ್ಯಾಣ ಸೇವೆ ಜೇಬಿನ ಬುಡದಲಿ, ಪುಟ್ಟಾಣಿಯ ಪುರಿ ಮೇಲೊಂದಿಷ್ಟು … ; ಈಶ್ವರ ಕಮ್ಮಾರ ಅವರ ಪದ್ಯ ಕೊಕ್ಕಾ ಬತ್ತಿ ಕ್ವಾಡಾ ಬತ್ತಿ, ಊರಿಗೆಲ್ಲಾ ಒಂದೇ ಬತ್ತಿ, ಓಡಲೇ ಬತ್ತಿ …;  ಇಂತಹ ಪದ್ಯಗಳು  ಪ್ರಾಸಬದ್ಧ, ಮತ್ತು ಮಕ್ಕಳ ಪ್ರಪಂಚವನ್ನು ಒಳಗೊಂಡಿವೆ.

ಸಂಕಲನದ ಕಟ್ಟಕಡೆಯಲ್ಲಿ ಮುಪ್ಪಿನ ಷಡಕ್ಷರಿ ಅವರ ‘ತಿರುಕನ ಕನಸು’ ಮತ್ತು ಜಾನಪದದ ‘ಗೋವಿನ ಹಾಡು’ ಇವೆ. ಪ್ರತಿಯೊಬ್ಬ ಕನ್ನಡ ಕುಟುಂಬವೂ ಮತ್ತು ಪ್ರತಿಯೊಂದು ಶಾಲೆಯೂ ಈ ಸಂಕಲನವನ್ನು ಕೊಂಡು ಕಾಪಿಟ್ಟರೆ ಅದುವೇ ನಮ್ಮ ಕನ್ನಡತನ.  

(ಪರಿಷ್ಕೃತ ಆವೃತ್ತಿ)

2) `ಘಾಚರ್ ಘೋಚರ್` ಎಂಬ ನೀಳ್ಗತೆ – ಕೇಶವ ಕುಲಕರ್ಣಿ 

ವಿವೇಕ ಶಾನಭಾಗ

ಅಕ್ಷರ ಪ್ರಕಾಶನ (First Impression: 2013)

 ವಿವೇಕ ಶಾನಭಾಗ ಬರೆದಿರುವ `ಘಾಚರ್ ಘೋಚರ್` ಎನ್ನ್ನುವ ಕಥಾಸಂಕಲದ ಬಗ್ಗೆ ಈಗ ಎರಡು ವರ್ಷಗಳ ಹಿಂದೆಯೇ ಓದಿದ್ದೆ. ಕಳೆದ ವರ್ಷ ಈ ಕಥಾಸಂಕಲನದಲ್ಲಿರುವ ಅದೇ ಹೆಸರಿನ ನೀಳ್ಗತೆ ಅದೇ ಹೆಸರಿನಲ್ಲಿ ಇಂಗ್ಲೀಷ್ ಭಾಷೆಗೆ ಕಿರು-ಕಾದಂಬರಿಯಾಗಿ ಭಾಷಾಂತರಗೊಂಡು ಇಂಗ್ಲೀಷ್ ಭಾಷೆಯ ಪ್ರಸಿದ್ಧ ಸಾಹಿತ್ಯ ಸಂಬಂಧಿ ಮಾಸಿಕಗಳಲ್ಲಿ ಅಲ್ಲದೇ  ನ್ಯೂಯಾರ್ಕ್ ಟೈಮ್ಸ್, ಗಾರ್ಡಿಯನ್ ನಂಥಹ ಪತ್ರಿಕೆಗಳಲ್ಲೂ ಈ ಕಾದಂಬರಿಯ `ರಿವ್ಯೂ` Ghachar Gochar Englishಬಂದಾಗ ಇದನ್ನು ಓದುವ ಕುತೂಹಲ ಇನ್ನೂ ಜಾಸ್ತಿಯಾಯಿತು. ಇಂಗ್ಲೀಷ್ ವಿಮರ್ಶಕರು ವಿವೇಕರನ್ನು ಭಾರತದ ಅಂಟೋನಿ ಚಿಕೋಫ್ ಎಂದು ಕೂಡ ಬಣ್ಣಿಸಿದ್ದಾರೆ.  

`ಘಾಚರ್ ಘೋಚರ್` ಎನ್ನುವ ಅಸಂಬದ್ಧ ಹೆಸರನ್ನು ಹೊತ್ತಿರುವ ಈ ನೀಳ್ಗತೆ, ಅದರ ಹೆಸರಿನಿಂದ ಎಷ್ಟು ಕುತೂಹಲ ಕೆರಳಿಸಿ ಅ ಶಬ್ದಗಳು ಕನ್ನಡದ್ದೋ ಇಲ್ಲ ಇನ್ನಾವುದೋ ಗೊತ್ತಿಲ್ಲದ ಭಾಷೆಯದೋ ಎಂದುಕೊಂಡು ಓದಲು ಶುರು ಮಾಡಿದರೆ, ಕತೆ ಇನ್ನಷ್ಟು ಕುತೂಹಲ ಹುಟ್ಟಿಸುತ್ತದೆ. ಕತೆ ಓದುತ್ತ ಓದುತ್ತ `ಘಾಚರ್ ಘೋಚರ್` ಎಂದರೆ ಏನು ಎನ್ನುವುದು ಗೊತ್ತಾಗುತ್ತದೆ ಮತ್ತು ಅದು ಕತೆಯ ಶೀರ್ಷಿಕೆ ಕೂಡ ಏಕೆ ಆಯಿತು ಎಂದು ಕೂಡ‌. ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವ ಈ ಕತೆ ಅಂತ್ಯವಲ್ಲದ ಅಂತ್ಯದಲ್ಲಿ ಅಂತ್ಯವಾದ ಮೇಲೆ `ಘಾಚರ್ ಘೋಚರ್` ಎಂದು ನಮ್ಮೊಳಗೇ ನಿಟ್ಟುಸಿರೊಂದು ಬರುತ್ತದೆ.

 

ಬೆಂಗಳೂರು ನಗರದ ಒಂದು ಕೆಳ-ಮಧ್ಯಮ ವರ್ಗದ ಕುಟುಂಬವೊಂದು ಕೆಳ-ಮೆಲ್ವರ್ಗಕ್ಕೆ ಏರುವ, ಅಲ್ಲಿ ಏರಿದ ಮೇಲೆ  ನಡೆಯುವ ಬದುಕೇ ಈ ಕತೆಯ ವಸ್ತು. ದಿನ ನಿತ್ಯ ನಡೆಯುವ ಮಾಮೂಲಿ ಚಿಕ್ಕ ಚಿಕ್ಕ ಘಟನೆಗಳನ್ನೇ ಬರೆಯುತ್ತ ಅವರ ಬದುಕಿನ ಹೊರ ಒಳಗನ್ನು ಬಹಳ ಸಂವೇದನಾತ್ಮಕವಾಗಿ ಬರೆಯುತ್ತಾರೆ. ಕತೆಯಲ್ಲಿ ಯಾವುದೇ `ಡ್ರಾಮಾ` ನಡೆಯುವುದಿಲ್ಲ, ಆದರೂ `ಡ್ರಾಮಾ`ಗಿಂತೆ ಹೆಚ್ಚು ತೀವ್ರವಾಗಿ ನಮ್ಮನ್ನು ಅಲುಗಾಡಿಸುತ್ತಾರೆ ವಿವೇಕ.   

 

ಆಧಿನಿಕ‌ ಜೀವನ ನಮ್ಮ ಬದುಕಿನಲ್ಲಿ ಹಾಕಿರುವ ಕಗ್ಗಂಟನ್ನು ಅದು ಇರುವ ಹಾಗೆ ಹೇಳುತ್ತಾ, ಒಂದೇ ಒಂದು ಗಂಟನ್ನೂ ಬಿಡಿಸದೇ ಆದರೆ ಪ್ರತಿ ಗಂಟನ್ನೂ ಸೂಕ್ಷ್ಮವಾಗಿ ತೋರಿಸುತ್ತ  ಭಾವುಕತೆಗೆ ಎಡೆ ಮಾಡಿಕೊಡದೇ, ಅದೇ ಕಾಲಕ್ಕೆ ನಿರ್ಭಾವುಕವೂ ಎನಿಸದಂತೆ, ಕಗ್ಗಂಟಿನ ವಿವಿಧ ಆಯಾಮಗಳನ್ನು ಪ್ರಥಮ ಪುರುಷದಲ್ಲಿ ನಮೂದಿಸುತ್ತ ಹೋಗುತ್ತಾರೆ, ವಿವೇಕ ಶಾನಭಾಗ. ಕತೆಯ (ಬದುಕಿನ) ಸೂಕ್ಷ್ಮತೆ ಮತ್ತು ಸಂಕೀರ್ಣತೆಯನ್ನು ಬಿಟ್ಟುಕೊಡದೇ,  ಅವ್ಯಕ್ತವನ್ನು ವ್ಯಕ್ತ ಮಾಡಲು ಎಷ್ಟು ಕಡಿಮೆ ಶಬ್ದಗಳು ಬೇಕೋ ಅದಕ್ಕಿಂತೆ ಕಡಿಮೆ ಶಬ್ದಗಳಲ್ಲಿ ಬರೆಯುತ್ತಾರೆ. ಕತೆಯಲ್ಲಿ ಬಿಚ್ಚಿಕೊಳ್ಳುವ  ಸತ್ಯಗಳು ನಮ್ಮವೇ ಅನಿಸುತ್ತವೆ. ಹೇಳುವುದಕ್ಕಿಂತ ಹೇಳದೇ ಉಳಿದಿರುವುದು ನಮ್ಮ ಭಾವ ಪಟಲದಲ್ಲಿ ಉಳಿಯುತ್ತದೆ. ಇತ್ತೀಚಿನ ಓದಿನಲ್ಲಿ ನಾನು ಅತಿ ಮೆಚ್ಚಿದ ಕತೆ ಇದು ಅಂದು ನಿಸ್ಸಂಶಯವಾಗಿ ಹೇಳಬಲ್ಲೆ.

 

3) ಹೆಚ್ ಎಸ್ ವಿಯವರ ”ಋಗ್ವೇದ ಸ್ಫುರಣ’’ದ ಒಂದು ಝಲಕ್ಶ್ರೀವತ್ಸ ದೇಸಾಯಿ

ಈ ಸಣ್ಣ ಬರಹದಲ್ಲಿ ಮತ್ತೇನನ್ನೂ ಅಪೇಕ್ಷಿಸ ಕೂಡದು ಏಕೆಂದರೆ ವಿಮರ್ಶೆ ಬರೆಯುವ ಯೋಗ್ಯತೆಯಾಗಲಿ ಜ್ಞಾನವಾಗಲಿ ನನ್ನಲ್ಲಿಲ್ಲ. ಇದು ಒಂದು ಅನಿಸಿಕೆಯೆನ್ನ ಬಹುದು. ಕಳೆದ ಡಿಸೆಂಬರ್ ತಿಂಗಳು ಕ್ರಿಸ್ಮಸ್ ಸಮಯದಲ್ಲಿ ಭಾರತಕ್ಕೆ ಹೋದಾಗ ಈ ಪುಸ್ತಕ ನನ್ನ ಕೈಗೆ ಸಿಕ್ಕಾಗ ಸರ್ಪ್ರೈಸ್ ಕ್ರಿಸ್ಮಸ್ ಪ್ರೆಸೆಂಟ್ ಬಿಡಿಸುವ ಹಸುಳೆಯಂತೆ ಬೆರಗಿನಿಂದ ಬಿಚ್ಚಿದೆ. ಇದನ್ನು ಹೇಗೆ ’ನಡೆಸುವದು’ ಎಂದು ಓದ ತೊಡಗಿದೆ.

ಸುಮಾರು 157 ಪುಟಗಳ ಕಿರುಹೊತ್ತಿಗೆಯಲ್ಲಿ ಅತ್ಯಂತ ಪ್ರಾಚೀನವಾದ ವೇದದ ಎಲ್ಲ ಸಾರಾಂಶವನ್ನು ಎರಕ ಹೊಯ್ದಿರಲು ಸಾಧ್ಯವಿಲ್ಲ ಅಲ್ಲವೆ? ಋಗ್ವೇದದ ಹತ್ತು ಮಂಡಲಗಳ 1028ರ ಸೂಕ್ತಕಗಳಲ್ಲಿಯ ಸುಮಾರು 10,600 ಮೂಲ ಸಂಸ್ಕೃತದ ಋಕ್ಕುಗಳು (ಪದಗಳು) ಇರುವಾಗ ಎಲ್ಲವುಗಳ ಅನುವಾದವನ್ನು ಕೊಡುವದು ಅಸಾಧ್ಯವೆಂತಲೇ ಅದರ ’ಆಯ್ದ ಋಕ್ಕುಗಳ ತಿಳಿಗನ್ನಡ ಅವತರಣ’ ಎಂದು ಕರೆದಿದ್ದಾರೆ ಹೆಚ್ ಎಸ್ ವೆಂಕಟೇಶ್ವರಮೂರ್ತಿಯವರು ಈ ”ಸ್ಫುರಣಕ್ಕೆ.” ಋಗ್ವೇದ ಒಂದು ಅಪೌರುಷೇಯ ಕೃತಿ (ಮನುಷ್ಯರು ಬರೆದದ್ದಲ್ಲ.) ಮೂಲ ಋಗ್ವೇದದಲ್ಲಿ ಎರಡುನೂರಕ್ಕೂ ಮೇಲ್ಪಟ್ಟು ಋಷಿಗಳ, ಅದರಲ್ಲಿ 25ಕ್ಕೂ ಮೇಲ್ಪಟ್ಟು ಸ್ತ್ರೀ ಋಷಿಗಳು ತಮ್ಮ ದರ್ಶನದಿಂದ ”ಪಡೆದ” ಋಕ್ಕುಗಳಿವೆ. (ಮುನ್ನುಡಿಯಿಂದ)

ಇದರಲ್ಲಿ ಎರಡು ಭಾಗಗಳಿವೆ. ಮೊದಲನೆಯದರಲ್ಲಿ ಇಂದ್ರ, ಸೋಮ, ಅಗ್ನಿ, ವರುಣ, ಅಶ್ವಿನಿ ದೇವತೆಗಳು ಮತ್ತು ದ್ಯಾವಾ-ಪೃತಿವೀಗಳನ್ನು ಸ್ತುತಿಸುವ 24 ಸೂಕ್ತಕಗಳ ಅನುವಾದವನ್ನು ಸರಳಗನ್ನಡದ ಪದ್ಯರೂಪದಲ್ಲಿ ಕೊಟ್ಟು ಅದರಡಿಯಲ್ಲಿ ಅದನ್ನೇ ಗದ್ಯದಲ್ಲಿ ಕೊಟ್ಟಿದೆ. (ಮೇಲೆಯೇ ಅಷ್ಟು ಸರಳವಾಗಿರುವಾಗ ಇದರ ಅವಶ್ಯಕತೆ ಇರಲಿಲ್ಲವೇನೋ!) ಎರಡನೆಯ ಭಾಗದಲ್ಲಿ 35 ಬಿಡಿ ಪದ್ಯಗಳಿವೆ. ಸಂಸ್ಕೃತ ಶ್ಲೋಕಗಳು ಒಂದೋ ಎರಡೋ ’ಲೇಖಕರ ಮಾತುಗಳೆಂಬ’ ಮುನ್ನುಡಿಯಲ್ಲಷ್ಟೇ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆ ವಜ್ಜೆ ಇಲ್ಲ. ಮುಕ್ತಕಂಠದ ಅಗ್ನಿಯ ಪ್ರಶಂಸೆ, ವಜ್ರಪಾಣಿ ಇಂದ್ರನ ಪೌರುಷ, (ಆತನ ಸಾಹಸಗಳು, ಒಂದೇ ಎರಡೆ ವರ್ಣಿಸಲು’ – ”ಮುಗಿಲ ಸೀಳಿದ; ಮಳೆಯ ಹಿಂಡಿದ, ನದಿಗೆ ತಕ್ಕ ಪಾತ್ರವ ಕೊರೆದ”) ಆತನಿಂದ ಅಸುರರ ಹತ್ಯೆ, ಆತನ ಸೋಮಪಾನದ ವರ್ಣನೆ, ಇವೆಲ್ಲ ಮೊದಲಭಾಗದಲ್ಲಿ ವಿಸ್ತಾರವಾಗಿ ಬಂದಿದೆ.

ಬಿಡಿಪದ್ಯಗಳಲ್ಲಿ ಶ್ರದ್ಧಾ ದೇವಿ, ಅದಿತಿ, ರೋಮಶಾ, ಶಶ್ವತಿ, ಸವತಿ ಸಂಬಂಧ ಇತ್ಯಾದಿ ಪದ್ಯಗಳಿವೆ. ಈ ಕೊನೆಯ ಎರಡರಲ್ಲಿ ನವಿರಾದ ಶೃಂಗಾರ ರಸವಿದೆ. ಪತಿಯನ್ನು ಕಳೆದುಕೊಂಡ ಪತ್ನಿಗೆ ಆ ಪ್ರಾಚೀನಕಾಲದಲ್ಲೂ ಸತಿಹೋಗದೆ ಮನೆಗೆ ಹಿಂದಿರುಗಲು ಹೇಳುವ ಸಲಹೆಯಲ್ಲಿ ಆಶಾವಾದವಿದೆ. ಇನ್ನು ”’ಮಳೆಗಾಲದ ಕಪ್ಪೆಗಳು’’ ಎನ್ನುವ ಕವಿತೆಯಂತೂ ನನಗೂ ಬಹಳ ಹಿಡಿಸಿತು. ಅದರ ರಚನೆ ಮತ್ತು ಅದರಲ್ಲಿ ಬರುವ ಉಪಮೆಗಳಲ್ಲಿಯ ನವ್ಯತೆಗೆ ಬೆರದೆ! (ಒಂದು ಮಂಡೂಕ ಹಸುವಿನ ಹಾಗೆ ಕೂಗುವುದು/ಇನ್ನೊಂದು ಕೂಗುವುದು ಆಡಿನಂತೆ). ಯುದ್ಧಭೂಮಿಯಲ್ಲಿ ಯೋಧನ ಚಿತ್ರ ಅತಿ ಸುಂದರವಾಗಿದೆ.(ಕದನದಲ್ಲಿ ಕಿವಿಯವರೆಗೆ ಹೆದೆಯ ಜಗ್ಗುತಿರಲು/ಕಿವಿಯ ಬಳಿಗೆ ಮೆಲ್ಲಗೆ ಬಿಲ್ತುದಿಯು ಬರುತ್ತಿರಲು/ಪ್ರಿಯನ ಬಾಚಿ ತಬ್ಬಿದವಳು ಕಿವಿಗೆ ತುಟಿಯ ತಂದು/ಮೆಲ್ಲಗೇನೋ ಹೇಳುತಿರುವ ಹಾಗೆ ಕಂಡಿತಂದು.)

ಪ್ರಾರಂಭದ ಹತ್ತು ಪುಟಗಳ ಮುನ್ನುಡಿಯಲ್ಲಿ ಋಗ್ವೇದದ ಬಗ್ಗೆ  ಮೌಲಿಕ ವಿಶ್ಲೇಷಣೆಯಿದೆ. ಮುಂದೆ ಬರುವ ಋಕ್ಕುಗಳನ್ನು ತಿಳಿದುಕೊಳ್ಲಲು ಸಹಾಯವಾಗುತ್ತದೆ. ಕೊನೆಯಲ್ಲಿಯ 3 ಅನುಬಂಧಗಳಲ್ಲಿ ಸಂದರ್ಭ ಸೂಚಿಸುವ ಐತಿಹ್ಯಗಳು, ಪಾತ್ರ ಪರಿಚಯ ಅರ್ಥಮಾಡಿಕೊಳ್ಳಲು ಸಹಾಯವಾಗುವಂಥ ವಿವರಣೆಗಳಿವೆ. ನಮ್ಮ ನೆಚ್ಚಿನ ಹೆಚ್ಚೆಸ್ವಿಯವರ ಈ ಪುಸ್ತಕ ಋಗ್ವೇದಕ್ಕೆ ನನಗೆ ಒಳ್ಳೆಯ ’ಪ್ರವೇಶ”ವೇ  ಸೈ!

ಪುಸ್ತಕ: ಋಗ್ವೇದ ಸ್ಫುರಣ

ಲೇಖಕರು: ಹೆಚ್ ಎಸ್ ವೆಂಕಟೇಶಮೂರ್ತಿ

ಪ್ರಕಾಶನ: ಅಭಿನವ, ಬೆಂಗಳೂರು; August 2017

ಪುಟಗಳು: 157 ಬೆಲೆ: ರೂ 200

(ಮುಂದಿನ ವಾರ ಇನ್ನು ಬೇರೆ ಮೂರು ಪುಸ್ತಕಗಳ ಬಗ್ಗೆ)

 

 

ಯು. ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆ!-ಗಣಪತಿ ಭಟ್

           ಹೊಸ ಪರಿಚಯ

gana
ಗಣಪತಿ ಭಟ್ ತಮ್ಮ ಮಗುವಿನೊಂದಿಗೆ

ಗಣಪತಿ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡೆಕೊಡಿ ಗ್ರಾಮದವರು. ಸದ್ಯ ಕಳೆದ ಹತ್ತು ವರ್ಷಗಳಿಂದ ಇಂಗ್ಲೆಂಡಲ್ಲಿ IT Consultant ಆಗಿ ಪತಿಷ್ಠಿತ ಬ್ರಿಟಿಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಉದ್ದಿಮೆಯ ಹೊರತು ಕನ್ನಡಿಗರು ಯು. ಕೆ. ಎಂಬ ಸಂಸ್ಥೆಯ ಕಾರ್ಯಕಾರಿ ಸಮಿತಿಯ  ಸದಸ್ಯರೂ, ಅಧ್ಯಕ್ಷರೂ ಆಗಿದ್ದು, ಅನೇಕ ಕನ್ನಡ ಚಟುವಟಿಕೆಗಳಲ್ಲಿ ಸಕ್ರಿಯಯವಾಗಿ ಪಾಲ್ಗೊಳ್ಳುತ್ತಿದ್ದಾರೆ. “ಯು. ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆ”  ಎನ್ನುವ ಇದೇ ಶೀರ್ಷಿಕೆಯಡಿ  ಯು.ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆಯ ಬಗ್ಗೆ  ವಿಶ್ವವಾಣಿ  ದಿನಪತ್ರಿಕೆಯಲ್ಲಿ ಲೇಖನವನ್ನು ಬರೆದಿದ್ದಾರೆ.  ಐದಾರು ವರ್ಷಗಳಿಂದ ಕೆ.ಯು.ಕೆ. ಟಾಕೀಸ್ ಎಂಬ ಸಂಸ್ಥೆಯ ಸ್ವಯಂ ಸೇವಕನಾಗಿ ಕನ್ನಡ ಚಲನಚಿತ್ರಗಳ ವಿತರಣೆಯಲ್ಲಿ ಅನುಭವ ಗಳಿಸಿದ್ದಾರೆ. ಕೆ.ಯು.ಕೆ ಟಾಕೀಸ್, ಕನ್ನಡಿಗರು ಯು. ಕೆ. ಸಮುದಾಯದ ಒಂದು ಅಂಗ. ಇಂಗ್ಲೆಂಡನಲ್ಲಿ ಕೆ.ಯು.ಕೆ. ಟಾಕೀಸ್ ಹೊರತುಪಡಿಸಿ ಇನ್ನು ಅನೇಕ ಕನ್ನಡ ಸಿನಿಮಾ ವಿತರಕರು ಹಲವಾರು ಕನ್ನಡ ಚಲನ ಚಿತ್ರಗಳನ್ನು ನಿರಂತರವಾಗಿ ಬಿಡುಗಡೆ ಮಾಡುತ್ತಿದ್ದಾರೆ.

ಸಿನಿಮಾ ವಿತರಣೆಯ ತಮ್ಮ ಅನುಭವವನ್ನು ಕನ್ನಡಿಗರ ಜೊತೆ ಹಂಚಿಕೊಳ್ಳಲು ಅನುಕೂಲ ಮಾಡಿಕೊಡುತ್ತಿರುವ ಅನಿವಾಸಿ ಕನ್ನಡ ತಂಡಕ್ಕೆ ವಂದನೆಗಳೊಂದಿಗೆ ಈ ಲೇಖನವನ್ನು ಕಳಿಸಿಕೊಟ್ಟಿದ್ದಾರೆ- ಸಂ

 


( ಪರದೇಶೀ ಸಿನಿಮಾ ಮಾರುಕಟ್ಟೆಯ ಬಗ್ಗೆ ಭಾರತದಲ್ಲಿ ಭಾರೀ ಹುಮ್ಮಸ್ಸಿನ ಭಾವವಿದೆ. ಕನ್ನಡ ಸಿನಿಮಾಗಳು ಕೂಡ ವಿದೇಶೀ ಮಾರುಕಟ್ಟೆಯ  ಭಾಗವನ್ನು ಇತ್ತೀಚೆಗೆ ಪರಿಗಣನೆಯಲ್ಲಿಟ್ಟುಕೊಂಡು, ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯಾದ ದಿನವೇ ವಿದೇಶಗಳಲ್ಲಿ ಕೂಡ  ಚಲನಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡ ಚಿತ್ರಗಳ ವಿತರಣೆಗೆ ಕನ್ನಡ ಕೂಟಗಳು, ಸಂಘಗಳಿಗಿಂತ ಉತ್ತಮ ಮಧ್ಯಸ್ಥಿಕೆಯಿಲ್ಲ. ಕನ್ನಡ ಸಂಘ ಮತ್ತು ವಿತರಣೆ ಎರಡರಲ್ಲೂ ಅನುಭವವಿರುವ ಗಣಪತಿ ಭಟ್ ಈ ಬಗ್ಗೆ ಯು. ಕೆ. ಕನ್ನಡಿಗರಿಗೆ ಬರೆದಿರುವ  ಈ ಲೇಖನ ಯಾವುದೇ ಉತ್ಪ್ರೇಕ್ಷೆಯಿಲ್ಲದ, ವಸ್ತು ನಿಷ್ಟ ಬರಹ-ಸಂ)

edit cinema
ಯು. ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆ!

ಇತ್ತೀಚಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡ ಚಲನ ಚಿತ್ರಗಳ ಭರ್ಜರಿ ಪ್ರದರ್ಶನ ಕಾಣಬರುತ್ತಿದೆ! ಹತ್ತು ವರ್ಷಗಳ ಹಿಂದೆ ಕನ್ನಡ ಚಿತ್ರ ಕೇವಲ ಲಂಡನ್ ಹಾಗು ಸುತ್ತ ಮುತ್ತ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ರೇಡಿಂಗ್ ನಲ್ಲಿ ಹಾಗೂ ಬರ್ಮಿಂಗ್ಹ್ಯಾಮ್ ನಲ್ಲಿ ಆಗಾಗ ಕನ್ನಡ ಚಿತ್ರ ಪ್ರದರ್ಶನ ಆಗ್ತಾ ಇತ್ತು. ಬ್ರಿಟಿಷ್ ಬೋರ್ಡ್ ಆಫ್ ಫಿಲಂ ಕ್ಲಾಸಿಫಿಕೇಶನ್ ವೆಬ್ ಸೈಟ್ ಪ್ರಕಾರ ಕಳೆದ ೧೦೦ ವರ್ಷಗಲ್ಲಿ ಕೇವಲ ಬೆರೆಳೆಣಿಸುವಷ್ಟು ಕನ್ನಡ ಚಿತ್ರಗಳು ಮಾತ್ರ BBFC ಸರ್ಟಿಫಿಕೇಟ್ ಪಡೆದುಕೊಂಡಿವೆ. ಆದರೆ ಇತ್ತೀಚಿಗೆ ಹಲವಾರು ಕನ್ನಡ ಚಲನ ಚಿತ್ರಗಳು BBFC ಸರ್ಟಿಫಿಕೇಟ್ ಪಡೆದುಕೊಂಡಿವೆ.

devara-nadalli

“ಮುಂಗಾರು ಮಳೆ ೨” ಬಿಡುಗಡೆ ಆಗುವ ಮುನ್ನ ಕಳೆದ ೧೦ ವರ್ಷಗಲ್ಲಿ ಯಾವುದೇ ಕನ್ನಡ ಚಲನ ಚಿತ್ರಗಳು ದೊಡ್ಡ ಪ್ರಮಾಣದಲ್ಲಿ ಏಕೈಕ ಕಾಲದಲ್ಲಿ ಸಿನಿ ವರ್ಲ್ಡ್ ಹಾಗು ಒಡಿಯೋನ್ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿರಲಿಲ್ಲ. ಇಂಗ್ಲೆಂಡ್ನಲ್ಲಿ ಸೂಪರ್ ಹಿಟ್ ಚಿತ್ರ ರಂಗಿತರಂಗ  ಕೂಡ ಕೇವಲ ಖಾಸಗಿ ಪ್ರದರ್ಶನಕ್ಕೆ ಸೀಮಿತವಾಗಿತ್ತು. ಆದರೆ ರಂಗಿತರಂಗ ಚಿತ್ರ ಅನೇಕ ಯು.ಕೆ. ಕನ್ನಡಿಗರನ್ನು ಚಿತ್ರ ಮಂದಿರಕ್ಕೆ ಸೆಳೆದಿದ್ದು ಒಂದು ವಿಶೇಷ ಸಾಧನೆ.

ಪುನೀತ್ ರಾಜಕುಮಾರ ನಟಿಸಿರುವ ಚಕ್ರವ್ಯೂಹ ಚಿತ್ರ ಕೆ. ಯು. ಕೆ. ಟಾಲ್ಕಿಸ್ ಮುಖಾಂತರ ಪ್ರಥಮ ಬಾರಿಗೆ ಎಂಟು ಯು. ಕೆ. ಕೇಂದ್ರಗಳಲ್ಲಿ ಮತ್ತು ಏಕೈಕ ದಿನ ನಾಲ್ಕು ಕಡೆ ಖಾಸಗಿ ಪ್ರದರ್ಶನವಾಗಿತ್ತು. ಅದಾದ ಮೇಲೆ ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಸುಮಾರು ಹದಿನಾಲ್ಕು ಪ್ರದೇಶಗಳಲ್ಲಿ ಖಾಸಗಿ ಪ್ರದರ್ಶನಗೊಂಡಿತ್ತು.

೨೦೧೬ ಸೆಪ್ಟೆಂಬರ್ ನಲ್ಲಿ “ಮುಂಗಾರು ಮಳೆ ೨” ಚಿತ್ರ ಯುನೈಟೆಡ್ ಕಿಂಗ್ಡಮ್ ಕನ್ನಡ ಚಲನ ಚಿತ್ರ ಮಾರುಕಟ್ಟೆಯ ದಿಕ್ಕು ದಿಶೆಯನ್ನೇ ಬದಲಾಯಿಸಿತು. ಮೊದಲು ಕೇವಲ ಬೆರಳು ಲೆಕ್ಕ ಪ್ರದೇಶಕ್ಕೆ ಸೀಮಿತವಾದ ಕನ್ನಡ ಚಿತ್ರ, “ಮುಂಗಾರು ಮಳೆ ೨” ಮೂಲಕ ೧೭ ವಿವಿಧ ಪ್ರಾಂತ್ಯಗಳಲ್ಲಿ ೨೫ಕ್ಕೂ ಹೆಚ್ಚು ಪ್ರದರ್ಶನವನ್ನು ಕಾಣಿತು. ಸಿನಿ ವರ್ಲ್ಡ್, VUE  ಸಿನಿಮಾ ಹಾಗು ಖಾಸಗಿ ಪ್ರದರ್ಶನದ ಮೂಲಕ ಹಲವಾರು ಇಂಗ್ಲೆಂಡ್, ಸ್ಕಾಟ್ಲೆಂಡ್ ಪಟ್ಟಣಗಳಲ್ಲಿ ಕನ್ನಡಿಗರಿಗೆ ತಮ್ಮ ಮನೆಯ ಪಕ್ಕದ ಸಿನೆಮಾಗಳಲ್ಲಿ ಕುಟುಂಬ ಸಮೇತ ಕನ್ನಡ ಚಿತ್ರವನ್ನು ವೀಕ್ಷಿಸುವ ಒಂದು ಅವಕಾಶವನ್ನು ತಂದು ಕೊಟ್ಟಿತು.

 

MM2-Locations-Cover-Page

ಕಳೆದ ದಶಕಗಳಲ್ಲಿ ಕನ್ನಡ ಚಲನ ಚಿತ್ರಗಳು ಯುನೈಟೆಡ್ ಕಿಂಗ್ಡಮ್ ನಲ್ಲಿ ವಿವಿಧ ರೀತಿಯ ಪ್ರದರ್ಶನಗಳನ್ನು ಕಂಡು ಸಧ್ಯದ ಪರಿಸ್ಥಿತಿಯಲ್ಲಿ ಒಂದು ವಿದೇಶಿ ಕಮರ್ಷಿಯಲ್ ಮಾರುಕಟ್ಟೆಯತ್ತ ಪಯಣ ನಡೆಸಿರುವದಂತೂ ನಿಜ. ಇದಕ್ಕೆ ಉದಾಹರಣೆ ಇತ್ತೀಚಿಗೆ ಕಿರಿಕ್ ಪಾರ್ಟಿ, ಅಲ್ಲಮ್ಮ, ಬ್ಯುಟಿಫುಲ್ ಮನಸುಗಳು, ಉರ್ವಿ, ಹೆಬ್ಬುಲಿ ಹಾಗು ರಾಜಕುಮಾರ ಚಲನ ಚಿತ್ರಗಳು ಒಂದರ ಹಿಂದೆ ಇನ್ನೊಂದು ಬಿಡುಗಡೆ ಆಗಿದ್ದು, ಯು. ಕೆ. ಕನ್ನಡಿಗರನ್ನು ದಿಗಿಲುಗೊಳಿಸಿದೆ.

Hebbuli2

ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕನ್ನಡ ಚಲನ ಚಿತ್ರಗಳು ಯು.ಕೆ. ಮಾರುಕಟ್ಟೆಯತ್ತ ತಮ್ಮ ಒಲವನ್ನು ತೋರಿಸುವದಂತೂ ನಿಜ ಆದರೆ ಗಮನಿಸಬೇಕಾದಂತಹ ವಿಷಯವೇನೆಂದರೆ ಈಗಾಗಲೇ ಖಾಸಗಿ ಪ್ರದರ್ಶನ ಸಾಕಷ್ಟು ಕಮ್ಮಿಯಾಗಿದ್ದು, ಮುಂದೆ ಬರುವ ಎಲ್ಲಾ ಚಿತ್ರಗಳನ್ನ ಸಿನಿ ವರ್ಲ್ಡ್ ಹಾಗು ಒಡಿಯೋನ್ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಬೇಕೆಂಬುದೇ ಇಲ್ಲಿಯ ಪ್ರೇಕ್ಷಕರ ಕೋರಿಕೆ.

ಇದಕ್ಕೆಲ್ಲ ಕಾರಣ ಹಲವಾರು ಉತ್ಸಾಹಿ ಯು. ಕೆ. ಕನ್ನಡಿಗರು, ಉತ್ತಮ ಪ್ರಮಾಣದ ಕನ್ನಡ ಚಲನ ಚಿತ್ರಗಳು ಹಾಗು ಸಹಾಯಕಾರಿ ಕನ್ನಡ ಚಲನ ಚಿತ್ರ ನಿರ್ಮಾಪಕರು. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಉತ್ತಮ ಕನ್ನಡ ಚಲನ ಚಿತ್ರಗಳು ಯು.ಕೆ. ಮಾರುಕಟ್ಟೆಯತ್ತ ತಮ್ಮ ಒಲವನ್ನು ತೋರಿಸುವದಂತೂ ನಿಜ ಆದರೆ ನಾವು ಕನ್ನಡಿಗರು ಸ್ವತಃ ಪ್ರಯತ್ನದಿಂದ ಮದ್ಯಂತಿಕೆಯನ್ನು ದೂರ ಮಾಡಿ ಸಿನಿಮಾ ನೆಟ್ವರ್ಕ್ ಮೂಲಕ ಯು. ಕೆ. ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದರೆ ಇದಕ್ಕಿಂತ ಹೆಚ್ಚು ಸಾಧನೆ ಬೇಕೇ?

– ಗಣಪತಿ ಭಟ್

ಚಿತ್ರಗಳು- ಗೂಗಲ್ ಕೃಪೆ