ಚಿತ್ರ ಬರೆಸಿದ ಕವಿತೆ

 ಓದುಗರಿಗೆಲ್ಲ ಆತ್ಮೀಯ ನಮಸ್ಕಾರ,
ಸಾಮಾಜಿಕ ಜಾಲತಾಣಗಳು ಮನುಷ್ಯನ ಭಾವಾಭಿವ್ಯಕ್ತಿಗೆ ಸಶಕ್ತ ಮಾಧ್ಯಮಗಾಳಾಗಿವೆ. ಬರವಣಿಗೆ, ಹಾಡು, ಅನಿಸಿಕೆ ಅಭಿಪ್ರಾಯಗಾಲ ಜೊತೆಗೇ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಹಾಕುವುದು, ಬಹಳಷ್ಟು ಜನರ ಪ್ರಮುಖವಾದ ಹವ್ಯಾಸವಾಗಿ ಬದಲಾಗಿದೆ. ಫೋಟೋ ವಿಡಿಯೋ ಹಾಕುವ ಕಾಯಕವೇ ಹಣಗಳಿಸುವ ಉತ್ತಮ ವೇದಿಕೆಯಾಗಿಯೂ ಮಾರ್ಪಟ್ಟಿದೆ. ಒಂದಿಷ್ಟು ಜನ ತಮ್ಮ ವೈಯಕ್ತಿಕ ಜೀವನವನ್ನು ಚಿತ್ರಗಳ ಮೂಲಕ ಜಗತ್ತಿನ ಮುಂದೆ ಅನಾವರಣ ಗೊಳಿಸಿದರೆ, ಮತ್ತೊಂದಷ್ಟು ಜನ ಹೂವು, ಹಣ್ಣು, ನೀರು, ಆಕಾಶ, ಕೀಟ, ಹಕ್ಕಿ ಅಂತೆಲ್ಲ ನಮ್ಮ ಸುತ್ತಲಿನ ಸುಂದರ ಜಗತ್ತನ್ನು ಇನ್ನೂ ಸುಂದರವಾಗಿ ತಮ್ಮ ಚಿತ್ರಗಳ ಮೂಲಕ ಚಿತ್ರಿಸಿ ನಮ್ಮ ಮುಂದಿಟ್ಟು ರಂಜಿಸುತ್ತಾರೆ. ಈ ಚಿತ್ರಗಳು ಪರಿಚಯವೇ ಇಲ್ಲದ ಜಗತ್ತಿನ ಅದ್ಯಾವುದೋ ಮೂಲೆಯಲ್ಲಿದ್ದುಕೊಂಡು ಮತ್ತೊಬ್ಬ ಸಮಾನಸಕ್ತನ ಭಾವಕೋಶದ ಪದರನ್ನು ಮೆತ್ತಗೆ ತಟ್ಟಿ, ಸ್ಫೂರ್ತಿ ಕೊಡುತ್ತವೆ. ಕವಿಮನಸನ್ನು ಆವರಿಸಲು ಯಶಸ್ವಿಯಾದ ಒಂದೇ ಒಂದು ಭಾವಚಿತ್ರ ಸಾವಿರ ಭಾವಗಳನ್ನು ಪದಗಳಲ್ಲಿ ಹೊಮ್ಮಿಸಲೂಬಹುದು.

ನಾನು ಆಗಾಗ್ಯೆ, ನನ್ನ ಕ್ಯಾಮೆರಾ ಮತ್ತು ಫೋನಿನಲ್ಲಿ ತೆಗೆದ ಚಿತ್ರಗಳನ್ನ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಎಂಬ ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಳ್ಳುತ್ತಾ ಇರುತ್ತೇನೆ. ಅಲ್ಲಿರುವ ಕೆಲ ಕವಿ ಹೃದಯಗಳಿಗೆ ನಾನು ಹಂಚಿಕೊಂಡ ಚಿತ್ರಗಳು ಇಷ್ಟವಾಗಿ ಅವರ ಮನ ಸೃಜಿಸಿದ ಭಾವವನ್ನು ಅಕ್ಷರರೂಪಕ್ಕಿಳಿಸಿ ನನ್ನೊಂದಿಗೆ ಹಂಚಿಕೊಳ್ಳುತ್ತಾರೆ.
ಇತ್ತೀಚಿಗೆ ಲ್ಯಾಂಡ್ ಸ್ಕೇಪ್, ಹೂ, ನದಿ, ಚಿಕ್ಕ ಚಂದ್ರರ ಫೋಟೋ ಕ್ಲಿಕ್ ಮಾಡುವಾಗಲೆಲ್ಲ, ಈ ಸ್ನೇಹಿತರು ನೆನಪಾಗಿ ಬಿಡುತ್ತಾರೆ. ಈ ಚಿತ್ರ ಇವರಿಗೆ ಇಷ್ಟ ಆಗಬಹುದು/ಆಗುತ್ತದೆ ಎಂದು ಮನಸ್ಸು ಹೇಳುತ್ತದೆ.

ನಾನು ಕ್ಲಿಕ್ಕಿಸಿದ ಭಾವಚಿತ್ರವನ್ನು ಸ್ಫೂರ್ತಿಯಾಗಿ ಕವಿತೆಯನ್ನು
ಬರೆದು ಕಳಿಸುವ ನನ್ನ ಮೆಚ್ಚಿನ ಮೇದಿನಿ, ಈಶ್ವರ ಭಟ್ ಕೆ, ಮತ್ತು ಗುರುರಾಜ ಹೇರ್ಳೆ ಅವರನ್ನು ಅನಿವಾಸಿ ಬಳಗಕ್ಕೆ ಪರಿಚಯಿಸಿ,
ಚಿತ್ರಗಳೊಂದಿಗೆ, ಅವರ ಕವಿತೆ ಹಂಚಿಕೊಳ್ಳುತ್ತಿರುವೆ .
—ಅಮಿತಾ ರವಿಕಿರಣ್ ( ವಾರದ ಸಂಪಾದಕಿ)
ಈ ನೀಲಿಯಾಚೆಗೆ....

ಈ ನೀಲಿಯಾಚೆಗೆ ಆ ಮೋಡದೀಚಿಗೆ
ನಗುತಿರುವ ಸಗ್ಗವೊಂದಿದೆ ಅಲ್ಲಿ ಬಾ
ನೀಲಿಯೊಳು ಮೈಮರೆತು ಮೋಡದೊಳು
ಮರೆಯಾಗಿ ಜಗವನ್ನೆ ಹೊರನೂಕಿ ಮೆರೆಯೋಣ ಬಾ

ಬಾನು ಭುವಿ ಮೈಮರೆತು ಮಾತನಾಡುವುದಲ್ಲಿ
ಮರದ ಮಾತೆಲ್ಲವೂ ಮೋಡದೊಡನೆ ಧುಮ್ಮಿಕ್ಕಿ
ಹಾಲ್ನೊರೆಯ ತೇಲಿಸುವ ನದಿಯೊಂದು
ಸಂಭಾಷಿಸಿಹುದು ತೀರದೊಡನೆ

ಮಾತು ಮರೆತಿಹ ಮನಸು
ನೋಟ ಮರೆತಿಹ ಅಕ್ಷಿ
ಕಾಲ ಪ್ರವಾಹದಲಿ ಕಳೆಯೋಣ ಬಾ
ಮೌನದಾಚೆಯ ಮಾತು ಕಣ್ಣಿನಾಚೆಯ ನೋಟ
ಹೇಳುತಿದೆ ಏನನ್ನೊ ಕೇಳೋಣ ಬಾ

ಕುಂತಲ್ಲಿ ಏನಿಹುದು, ನಿಂತಲ್ಲಿ ಸೊಗಸೇನು
ಸಾಗಿ ಹೋಗೋಣ ಆ ತೀರದೆಡೆಗೆ
ನೀಲಿಯಾಚೆಯ ನಾಡು ಮೋಡದೀಚೆಯ
ಜಾಗ ಸೃಷ್ಟಿಯಾಗಿಹ ನೀಲ ಸ್ವರ್ಗದೆಡೆಗೆ

ತಬ್ಬುವುದೆಂದರೇನು ಸಖೀ?!

ತಬ್ಬುವುದೆಂದರೇನು ಸಖೀ?!
ತೋಳುಗಳ ಬಂಧನವೇ?
ಹೃದಯದ ಬೆಸುಗೆಯೇ
ಅಗಲಿರಲಾರೆನೆಂದು ಕೈ ಮೇಲೆ ಕೈಯಿಟ್ಟ ಪ್ರಮಾಣವೇ?

ತಬ್ಬುವುದೆಂದರೇನು ಸಖೀ?
ದಿನದ ಅಷ್ಟೂ ಘಳಿಗೆಯಲ್ಲೂ
ಜೊತೆಗಿದ್ದು
ಅಂಟಿಯೂ ಅಂಟದಂತೆ
ನವಿರಾಗಿ ತಾಗುತ್ತಾ
ಕಣ್ಣಲ್ಲೇ ಹೊರಡಿಸುವ ಪ್ರೇಮದ ನೋಟವೇ?

ತಬ್ಬುವುದೆಂದರೇನು ಸಖೀ?
ನೀಲಾಕಾಶವು
ನೀಲಸಮುದ್ರವ ಕರೆಯುತ್ತಾ
ನಾ ಕೆಳಗಿಳಿದೆ, ನೀ ಮೇಲೆ ಬಾ ಎನ್ನುವ
ಸಂಭ್ರಮದಿ
ತಾಗಿಯೂ, ತಾಗದಿರುವುದೇ
ತಬ್ಬುವುದೆಂದರೇನು ಸಖೀ?!

ಈಶ್ವರ ಭಟ್ ಕೆ (ಕಿರಣ),

ಮೂಲತಃ ಕಾಸರಗೋಡು ಕೇರಳದವರು. ಈಗ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸ ಬರಹ, ತಿರುಗಾಟ.
ಗಡಿನಾಡಿನ ಸೀಮೆಯವರು ಆಗಿದ್ದಕ್ಕೂ ಏನೋ, ಕಿರಣರಿಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳೂ ಮಾತಾಡಲು ಮತ್ತು ಓದಲು ಬರೆಯಲು ಬರುತ್ತದೆ ಅದೇ ಕಾರಣದಿಂದ ಆ ಭಾಷೆಯ ಕಥೆ, ಕವನ, ಭಜನೆಗಳನ್ನು ತುಂಬಾ ಸುಂದರವಾಗಿ ಕನ್ನಡಕ್ಕೆ ಅನುವಾದಿಸುತ್ತಾರೆ.
ಇವರ ಕವಿತೆಗಳು ಸರಳವಾಗಿ ಹಾಡಿಸಿಕೊಂಡು ಹೋಗುತ್ತವೆ. ರಾಗಕ್ಕೆ, ತಾಳಕ್ಕೆ ಹೊಂದುವ ಸಾಹಿತ್ಯ ಬರೆಯುವ ಇವರು, ಹಾಸ್ಯಬರಹ, ಮತ್ತೆ ಅಷ್ಟೇ ಗಂಭೀರ ವಿಷಯಗಳನ್ನೂ ಬರೆಯಬಲ್ಲರು.

ಮಲ್ಲಿಗೆಯವಳು.

ಹೂವಬುಟ್ಟಿಯ ಹೊತ್ತು ಮಲ್ಲಿಗೇ ಮಲ್ಲಿಗೇ
ಎಂದೆನುತ ಬಂದಳೋ ಬಿಂಕದವಳು
ಮೊಳಕೆ ಎಷ್ಟೆಂದರೆ ಕಣ್ಣಲ್ಲೆ ಗದರಿಸುತ
ಹಣದ ಲೆಕ್ಕಾಚಾರ ಯಾಕೆಂಬಳು!

ಮೊಳಕೆ ಮೂವತ್ತಾಯ್ತೆ? ಮೊನ್ನೆ ಇಷ್ಟಿರಲಿಲ್ಲ
ಪಿಸುಮಾತಿಗಳಿಗಿಷ್ಟು ಕೋಪಗೊಂಡು;
ಮಲ್ಲಿಗೆಯ ಗಿಡಕೆಲ್ಲ ರೋಗ ಬಂದಿದೆ ಒಡೆಯ
ಮೊನ್ನೆಯಷ್ಟಿಲ್ಲ ಹೂ ಎಂದೆಂಬಳು.

ಒಂದು ಮೊಳ ಸಾಕೆನಗೆ, ತೆಗೆದುಕೋ ನಲುವತ್ತು
ಎಂದಾಡಿದರೆ ಮತ್ತೆ ಜನ್ಮ ಹೊರಗೆ;
ಮಾಲೆ ಕಟ್ಟುವ ಸಮಯ ಪರಿಮಳವ ಕುಡಿದೆಹೆನು
ನಾ ಹೇಳುವಷ್ಟನೇ ಕೊಡು ಎಂದಳು.

ಮೊಳ ಕತ್ತರಿಸುವಾಗ ಒಂದಿಷ್ಟು ಹೆಚ್ಚಿಸುತ
ಜೊತೆಗಷ್ಟು ಗುಲಾಬಿ ತೆಗೆದಿಡುತಲಿ;
ಹೂವನ್ನು ಹೆಚ್ಚಿಸುವ ಖುಷಿ ತುಂಬುಮೊಗದಲ್ಲಿ
ನಾಳಿನಾ ಭರವಸೆಯ ನಗು ನಕ್ಕಳು.
ಸೂರ್ಯಾಸ್ತ!

ಅಲ್ಲಿ ಕೆರೆಯಂಚಿನಲಿ, ಮುಳುಗುತಿಹ ನೇಸರಗೆ
ಮರದ ಹಸಿರನು ಕಪ್ಪು ಮಾಡುವಾಸೆ
ಇಲ್ಲಿಯೋ ತಂಗಾಳಿ ಬಿಸಿಯೇರೆ ಹಣಕಿಸುತ
ಹತ್ತಿರಕೆ ಕಳಿಸುವುದು, ಒಲವಿನಾಸೆ!

ಎಷ್ಟು ಮಾತುಗಳಾಡಿ, ಜಗಳದಲಿ ಒಂದಾಗಿ
ಮತ್ತೆ ಮಾತಿನ ದೋಣಿ ತೇಲಿಹೋಗಿ
ಸುತ್ತ ಕತ್ತಲೆ ಹಬ್ಬಿ ಮಾತು ಮೌನಕೆ ದಣಿದು
ಅವಳ ಸಾಮೀಪ್ಯವನೆ ಅಲೆವ ರೋಗಿ

ಹಾರುವುದು ಎದೆಗನಸು ನೂರು ಮೈಲಿಗಳಾಚೆ
ಅಲ್ಲಿಯೂ ನೇಸರನು ಮುಳುಗುತಿಹನು
ಅವಳಿಗೂ ಇದೆ ನೆಪವು, ಇಂತಹದೆ ಬೇಸರವು
ಏನನೋ ಕಾಯುವುದು, ಹೆಳವ ನಾನು.

ಒಂದು ದಿನವಾದರೂ ಸಂಜೆಯಾಗದೆ ಇರಲಿ
ದೂರವಿಹ ವಿರಹಿಗಳ ಎದೆಯ ಸುಡದೆ ಮಂದಮಾರುತ ಹೋಗಿ ಸುಖಿಪವರ ಜೊತೆಗಿರಲಿ
ನನ್ನ ಕಾಡಲುಬೇಡ, ಅವಳು ಸಿಗದೆ




ಗುರುರಾಜ ಹೇರ್ಳೆ

 ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮ ಎಂಬ ಊರಿನವರು. ಪ್ರಸ್ತುತ  ಬಹರೈನ್ ಎಂಬ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಉದ್ಯೋಗಿ  ವಾಸ. ಪ್ರಾರಂಭಿಕ ಓದು, ಬೆಳವಣಿಗೆ ಎಲ್ಲ ಉಡುಪಿಯಲ್ಲೇ ಆದರೂ, ಉನ್ನತ ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿಯೂ ಒಂದಷ್ಟು ಕಾಲ ವಾಸಮಾಡಿದ್ದಾರೆ. 
ಇವರು ಒಳ್ಳೆಯ ಹಾಡುಗಾರರು. ಭಾವಗೀತೆಗಳ ಮೇಲೆ ಒಲವು ಜಾಸ್ತಿ. ಮಕ್ಕಳ ಹಾಡುಗಳು, ಪ್ರೇಮಗೀತೆಗಳನ್ನು ಬರೆಯುತ್ತಾರೆ. ಬರೆದ ಪದ್ಯಕ್ಕೆ ರಾಗ ಹಾಕಿ ಹಾಡುತ್ತಾರೆ ಕೂಡ

ಸಾಗರ ಸನ್ನಿಧಿ

ನೀಲ ಸಾಗರವನ್ನು ನೆಚ್ಚಿ ದೋಣಿಯೊಂದು ಸಾಗಿದೆ,
ಹಾಯಿ ಬಿಚ್ಚಿ ಗಾಳಿ ಬೀಸೋ ದಿಕ್ಕಿನತ್ತೇ ನಡೆದಿದೆ

ನಾಂತದಲ್ಲಿ ಬಾನು ಬುವಿಯು ಸೇರಿದಂತೆ ಭಾಸವು
ತೀರ ಸಿಗದ ದಾರಿಯಲ್ಲಿ ಮುಗಿಯದಿರುವ ಯಾನವು

ಒಮ್ಮೆ ಇಳಿತ ಒಮ್ಮೆ ಭರತ, ಏಳು ಬೀಳಿನಲೆಗಳು
ಒಮ್ಮೆ ನೋವು ಒಮ್ಮೆ ನಲಿವು, ಇದುವೇ ಜೀವನ ರೀತಿಯು

ಕಣ್ಣು ಹಾಯಿಸಿದಷ್ಟು ನೀರು ಕುಡಿಯಲಿನಿತು ಸಾಧ್ಯವೇ ?
ಬಾಳಿನಲ್ಲೂ ನೂರು ಜನರು, ಎಲ್ಲ ಜೊತೆಗೆ ಬರುವರೇ ?

ಅಲ್ಲಿ ಇಲ್ಲಿ ಸಿಗಲು ಬಂಡೆ ದಣಿವನಾರಿಸಬೇಕಿದೆ,
ಹಳೆಯ ತಪ್ಪನೆಲ್ಲ ಮರೆಯದೆ ದಾರಿ ಸಾಗಬೇಕಿದೆ
ಗಮ್ಯ ತಲುಪಬೇಕಿದೆ.
ಬಂದೇ ಬರುತಾವ ಕಾಲ.

ಈ ಸಮಯವೂ ಸರಿದು ಹೋಗಲೇಬೇಕು
ನಮಗೆಂದೇ ಒಂದು ಕಾಲ ಬರಲೇಬೇಕು

ಕರೆದ ಹಾಲದು ಕೆನೆಯ ಕಟ್ಟಲುಬೇಕು
ಹೆಪ್ಪುತಾಗೆ ಗಟ್ಟಿಮೊಸರು ಆಗಲೇಬೇಕು,
ಕಡೆಯಲದನು ಬೆಣ್ಣೆ ಮೇಲೆ ತೇಲಲೇಬೇಕು
ಬಿಸಿತಾಕಲು ಕರಗಿ ತುಪ್ಪವಾಗಲೇಬೇಕು

ಹರುಷ ಹೊನಲಿನ ನದಿಯು ಉಕ್ಕಲೇಬೇಕು
ಮುನಿದ ದೈವವು ಮುಗುಳು ನಗಲುಬೇಕು
ಬಾಡಿದಂತ ಲತೆಯು ಮತ್ತೆ ಚಿಗುರಲುಬೇಕು
ಮುದುಡಿದ ತಾವರೆ ಅರಳುತ ನಲಿಯಲೇಬೇಕು

ಇರುಳಲಿ ಕರಗಿದ ತಿಂಗಳು ಮೂಡಲೇಬೇಕು
ಮುಳುಗಿದ ರವಿ ಮೂಡಣದಿ ಹುಟ್ಟಲೇಬೇಕು
ಧಗೆಯೇರಲು ಮೇಘ ಕರಗಿ ಸುರಿಯಲೇಬೇಕು,
ಸುಖ ಶಾಂತಿ ನೆಮ್ಮದಿಯ ತರಲೇಬೇಕು


ನಮ್ಮ ಅಳತೆಯನ್ನು ತಿಳಿಸುತ್ತಿರುವ ಲಾಕ್ ಡೌನ್ ಮತ್ತು Lock down ಕರಾಮತ್ತು

ಈ ವಾರದ ಸಂಚಿಕೆಯಲ್ಲಿ ಲಾಕ್ ಡೌನ್ ಬಗ್ಗೆ ಎರಡು ರೀತಿಯ ವಿಶಿಷ್ಟ ಬರಹಗಳಿವೆ. ಮೊದಲ ಬಾರಿಗೆ ಅನಿವಾಸಿ ಈ-ಜಗುಲಿಯ (ಮೇ ತಿಂಗಳ ೩೦ನೇ ತಾರೀಖು) ಹರಟೆ, ಸಮಾಜಿಕ ಮಾಧ್ಯಮದಲ್ಲಿ ಶುರುವಾಯಿತು. ಇದರಲ್ಲಿ ಲಾಕ್ ಡೌನ್ ಬಗೆಗೆ ನಡೆದ ಹರಟೆಯಲ್ಲಿ ಹಂಚಿಕೊಂಡ ಚಿಂತನೆ ಮತ್ತು ಇದರಿಂದ ಪ್ರೇರೇಪಿತವಾಗಿ ಬರೆದ ಕವಿತೆಯನ್ನು ನಿಮ್ಮ ಮುಂದಿಡಲಾಗಿದೆ.
ಮೊದಲನೆಯದಾಗಿ, ಯೋಗೀಂದ್ರ ಮರವಂತೆಯವರ ಚಿಂತನೆಯ ಲಹರಿ, ನಾವು ಜೀವನದ ಎಲ್ಲಾ ಘಟ್ಟಗಳಲ್ಲೂ ಅತಿ ಎಚ್ಚರಿಕೆಯಿಂದ, ನಮ್ಮ ಸ್ವಾರ್ಥದ ದೃಷ್ಟಿಯಿಂದ ಅಳೆದು, ಸುರಿದು, ನಮ್ಮ ಮುಂದಿರುವ ಪರಿಸ್ಥಿತಿಗಳನ್ನು ನಿಭಾಯಿಸುವುದರಲ್ಲಿ ನಿಸ್ಸೀಮರಾಗಿದ್ದರೂ, ನಾವೆಂದು ಊಹಿಸದಿದ್ದ, ಪ್ರಪ೦ಚವನ್ನೆ ತಲ್ಲಣಗೊಳಿಸಿದ, ನಮ್ಮ ಅಳತೆಗೆ ಸಿಗಲಾರದ ಸ್ಥಿತಿ ಎದುರಾದಾಗ ನಮ್ಮ ನಿಜವಾದ ಬಣ್ಣ ಬಯಲಾಗುತ್ತದೆಯೆ ಅಥವಾ ನಮಗೇ ಅರಿವಿಲ್ಲದೆ ನಮ್ಮಗಳಲ್ಲಿ ಹುದುಗಿರಬಹುದಾದ ಹೊಸ ಸ್ಥೈರ್ಯ, ಅನುಕಂಪ, ಮಾನವೀಯತೆಯ ಪರಿಚಯವಾಗುತ್ತದೆಯೆ ಎನ್ನುವ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ.
ಎರಡನೆಯದಾಗಿ, ರಮ್ಯಾ ಭಾದ್ರಿಯವರ ಕವಿತೆ, ಈ ಅಭೂತಪೂರ್ವ ಲೋಕದಲ್ಲಿ, ನಾವು ಕಾಲದ ಅನುಕೂಲಕ್ಕಾಗಿ ರಚಿಸಿಕೊಂಡ, ಸಾಮಾಜಿಕ ಮಾಧ್ಯಮದ ಹೊಸ ಸಮಾಜ ತ೦ದುಕೊಟ್ಟ ಸ೦ವಹನೆ, ಸಾಂತ್ವನ, ಸಂತೋಷಗಳ ಪರಿಚಯವನ್ನು ಹಾಸ್ಯದ ಸಿಹಿ ಲೇಪಿಸಿ, ಪ್ರಾಸಬದ್ಧವಾಗಿ ನಮ್ಮನ್ನು ರಂಜಿಸುತ್ತದೆ. ಈ ಕವಿತೆಯಲ್ಲಿ ಮುಂದೆ ಎದುರಿಸಬೇಕಾದ ಭವಿಷ್ಯದ ಬಗೆಗಿನ ಕಳಕಳಿ ಮತ್ತು ನಮ್ಮ ಪರಿಚಿತ, ವಾಸ್ತವ ಪ್ರಪ೦ಚಕ್ಕೆ ತೆರಳುವ ಕಾತುರ, ಇದನ್ನು ನಾವೆಲ್ಲರು ಒಟ್ಟಾಗಿ ಎದುರಿಸಿ, ಗುರಿಸೇರಬಲ್ಲೆವೆನ್ನುವ ಆಶಾವಾದವೂ ಸೇರಿದೆ – ಸಂ

ನಮ್ಮ ಅಳತೆಯನ್ನು ತಿಳಿಸುತ್ತಿರುವ ಲಾಕ್ ಡೌನ್

(ಈ-ಜಗುಲಿ, ಅನಿವಾಸಿ ಯು ಕೆ ಕೂಟದ ಮೊದಲ ಹರಟೆಯಲ್ಲಿ ಯೋಗೀಂದ್ರ ಮರವಂತೆ ಹಂಚಿಕೊಂಡ ಕಿರುಲಹರಿ)

This image has an empty alt attribute; its file name is e-jaguli-1.jpg
ಚಿತ್ರ‌ . ಲಕ್ಷ್ಮೀನಾರಾಯಣ ಗುಡೂರ

ಯಾವ ಕಾಲಕ್ಕೆ ಯಾರನ್ನು ಎದುರು ಹಾಕಿಕೊಳ್ಳಬಾರದು, ಅಂತ ಯೋಚಿಸುತ್ತಲೇ ಘಟನೆಗಳನ್ನು, ಮನುಷ್ಯರನ್ನು ಎದುರಿಸುವವರು ನಾವು. ಪರೀಕ್ಷೆಯೋ “ವೈವಾ”ವೋ ಇದ್ದರೆ ಸಂಬಂಧಪಟ್ಟ ಅಧ್ಯಾಪಕರನ್ನು ಎದುರು ಹಾಕಿಕೊಂಡರೆ ಉತ್ತೀರ್ಣರಾಗುತ್ತೇವೋ ಇಲ್ಲವೋ ಎನ್ನುವ ಭಯ ಇರುತ್ತದಲ್ಲ ಹಾಗೆ ಈ ಕೋವಿಡ್ ಲಾಕ್ ಡೌನ್ ಕಾಲದಲ್ಲಿ ವೈದ್ಯರನ್ನು ಎದುರು ಹಾಕಿಕೊಂಡರೆ ಕಷ್ಟ. ಹಲವು ವೈದ್ಯಮಿತ್ರರೇ ಕೂಡಿ ಸಂಘಟಿಸಿರುವ ಅನಿವಾಸಿ ಬಳಗದ “ಈ -ಜಗುಲಿ” ಕಾರ್ಯಕ್ರಮಕ್ಕೆ ಹಾಗಾಗಿ ಬರುವುದಿಲ್ಲ ಅಂತ ಹೇಳುವ ಹಾಗಿರಲಿಲ್ಲ.

ನಾವೆಲ್ಲರೂ ಈ ” ಲಾಕ್ ಡೌನ್” ಬಂಧನದಲ್ಲಿ ಇರುವವರು. ಈಗಾಗಲೇ ಬಂಧನದಲ್ಲಿ ಇರುವವರನ್ನು “ಈ-ಜಗುಲಿ “ಯಲ್ಲಿ ತಂದು ಮತ್ತೆ ಬಂಧಿಸಿದ್ದು, ಕೈದಿಗಳ ಸಮ್ಮೇಳನದ ತರಹ ಕಾಣಿಸುತ್ತಿದೆ . ಮತ್ತೆ ಜಗುಲಿಯಲ್ಲಿ ಯಾರೊಡನೆ ಕೂತು ಮಾತಾಡಿದರೂ ಅದು ವಿಶಿಷ್ಟ ಅನುಭವವೇ. ಜಗುಲಿಗೆ ಕಿಟಕಿ ,ಬಾಗಿಲು,ಕಂಬಿ, ಬೀಗ, ಅಗುಳಿ ಯಾವುವೂ ಇರುವುದಿಲ್ಲ. ಖುಲ್ಲಂ ಖುಲ್ಲಾ ಮಾತಾಡುವುದಕ್ಕೆ ಬಹಳ ಸೂಕ್ತ ಜಾಗ. ಮನಸಿನ ಆಳದ್ದು, ತೀರ ಒಳಗಿನದು ಜಗುಲಿಯಲ್ಲಿ ಕೂತು ಮಾತಾನಾಡುವಾಗ ಅನಾಯಾಸವಾಗಿ ಹೊರಗೆ ಬಂದು ಬಿಡುತ್ತದೆ. ಅಥವಾ ಒಬ್ಬರೇ ಕೂತು ಯೋಚಿಸಲಿಕ್ಕೂ ಆತ್ಮ ವಿಮರ್ಶೆ ಮಾಡಿಕೊಳ್ಳಲಿಕ್ಕೂ ಈ ಜಗುಲಿ, ಆ ಜಗುಲಿ ಎಲ್ಲ ಜಗುಲಿಗಳೂ ಪ್ರಶಸ್ತ . ಎಲ್ಲರ ಬದುಕಿನಲ್ಲಿ ಏನೋ ಒಂದು ತೀವ್ರವಾದದ್ದು ನಡೀತಾ ಇರುವಾಗ ಹೀಗೆ ಜಗುಲಿ ಮೇಲೆ ನಾವೆಲ್ಲ ಕೂತು ಮಾತಾಡುತ್ತಿರುವುದು ಹಿತ ಅನ್ನಿಸುತ್ತಾ ಇದೆ.

ದಿನ ಬೆಳಗಾದರೆ ಅಳತೆಕೋಲು ಅಥವಾ ಸ್ಕೇಲ್ ಹಿಡಿದುಕೊಂಡು ಓಡಾಡುವವರು ನಾವು. ನಮ್ಮ ಅಳತೆ ಪಕ್ಕದವರದ್ದು ಹೇಗೆ ,ಎದುರು ಸಿಕ್ಕವರದ್ದು ಹೇಗೆ ,ಮತ್ತೊಬ್ಬರದು ಏನು, ಹೇಗೆ ಎಂದು ಅಳೆಯುತ್ತಿರುತ್ತದೆ. ನಮ್ಮ ಅವರ ಇವರ ಹುದ್ದೆ, ಕೌಶಲ ಪ್ರತಿಭೆ, ಜೀವನ ಶೈಲಿ, ಸಂಸಾರ, ಸುಖ ದುಃಖ, ಕಲೆ, ಸಾಹಿತ್ಯ, ಆರೋಗ್ಯ ಎಲ್ಲವೂ ನಿರಂತರವಾಗಿ ನಮ್ಮ ನಮ್ಮ ಕೈಯ ಅಳತೆಕೋಲಿನ ಅಳತೆಯ ವಸ್ತುಗಳು . ಬೆಳಗಿಂದ ರಾತ್ರಿಯ ತನಕ, ಹುಟ್ಟಿನಿಂದ ಸಾವಿನ ತನಕ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಳತೆ ಪ್ರಕ್ರಿಯೆಯಲ್ಲಿ ತಲ್ಲೀನರು ನಾವು. ಈಗಿನ ಲಾಕ್ ಡೌನ್, ಕೊರೊನ ದಾಳಿ ಸ್ವಲ್ಪ ಮಟ್ಟಿಗೆ ನಮ್ಮ ನಿಜವಾದ ಅಳತೆಯನ್ನು ನಾವಿದ್ದಲ್ಲಿಗೆ ತಂದು ಒಪ್ಪಿಸುವ ಕೆಲಸ ಮಾಡಿದೆ. ಈ ಕಾಲಕ್ಕೆ ಆಗಬಾರದ ಅನಾಹುತಗಳು, ಅನಾವಶ್ಯಕ ಸಾವುಗಳು, ಸಂಕಟಗಳು ಸುಮಾರು ಆಗಿದ್ದರೂ ಅವುಗಳ ಎಡೆಯಲ್ಲಿ ನಮ್ಮನ್ನು, ನಮ್ಮ ಸುತ್ತಮುತ್ತಲನ್ನು ಅರಿಯುವ, ತಿಳಿಯುವ ಅವಕಾಶ ಲಾಕ್ ಡೌನ್ ಮಾಡಿಕೊಟ್ಟಿದೆ.

ಮೊನ್ನೆ ಮೊನ್ನೆ ಮೈಸೂರಲ್ಲಿ ನಡೆದ ಒಂದು ಘಟನೆಯ ಬಗ್ಗೆ ನೀವು ಕೇಳಿರಬಹುದು. ಅಲ್ಲಿನ ಒಂದು ಸಂಸ್ಥೆ ಕಳೆದ ಒಂದು ತಿಂಗಳಿಂದ ಈ ಕಾಲಕ್ಕೆ ಆಶ್ರಯ ಕಳಕೊಂಡವರಿಗೆ, ಹಸಿದ ಕಾರ್ಮಿಕರಿಗೆ, ಊಟ ನೀಡುವ ವ್ಯವಸ್ಥೆ ಮಾಡಿದೆ. ಇಂತಹ ಅನ್ನದಾನ ಶಿಬಿರಕ್ಕೆ ಕಮಲಮ್ಮ ಎನ್ನುವ ಎಪ್ಪತ್ತು ಪ್ರಾಯದ ಮಹಿಳೆ ನಡೆದು ಬಂದಳು. ಇವಳನ್ನು ನೋಡಿದ ಸಂಘಟಕರು ಈಕೆ ಸಹ ಊಟಕ್ಕೆ ಬಂದಿರಬೇಕು ಅಂದುಕೊಂಡರು. ಅಲ್ಲಿಗೆ ಬಂದ ಈಕೆ ಶಿಬಿರದ ಆಯೋಜಕರನ್ನು ಕಂಡು ಅವರಿಗೆ ಐದುನೂರು ರೊಪಾಯಿಗಳನ್ನು ಕೊಟ್ಟು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಸಣ್ಣ ದೇಣಿಗೆ ತೆಗೆದುಕೊಳ್ಳಿ ಎಂದಳು. ತಿಂಗಳಿಗೆ ಆರುನೂರು ರೊಪಾಯಿಯ ಪಿಂಚಣಿ ಪಡೆಯುವವಳು ಕಮಲಮ್ಮ, ಆಕೆಯ ವಯಸ್ಸಿನ ಕಾರಣದಿಂದ ಮಾಡುತ್ತಿದ್ದ ಮನೆಗೆಲಸವೂ ತಪ್ಪಿಹೋಗಿತ್ತು . ಸಂಘಟಕರೂ ಮೊದಲಿಗೆ ಬೇಡವೆಂದರೂ ಇಷ್ಟು ಉದಾತ್ತ ಯೋಚನೆಯ ಸರಳ ಜೀವಿಗೆ ಗೌರವ ಸೂಚಕವಾಗಿ ಹಣವನ್ನು ಸ್ವೀಕರಿಸಿದರು. ಕೋವಿಡ್ ಸಂಧಿಗ್ಧದ ಈ ಕಾಲದಲ್ಲಿ ಹಲವು ದಾನಿಗಳು ಜಗತ್ತಿನ ಮೂಲೆಮೂಲೆಯಲ್ಲಿ ಹಣದ ದೇಣಿಗೆ ನೀಡಿದ್ದಾರೆ. ಟಾಟಾ ,ಪ್ರೇಂಜಿ ,ಗೇಟ್ಸ್ ಇನ್ನಿತರ ಉದ್ಯಮಿಗಳು ನಮ್ಮ ಊಹೆಗೆ ಮೀರಿದ ಮೊತ್ತವನ್ನು ದಾನ ಮಾಡಿದ್ದಾರೆ . ಆದರೆ ಈ ಜಗತ್ತಿನ ಮನುಷ್ಯರನ್ನೆಲ್ಲ ಒಂದೆಡೆ ಅವರ ದುಡಿಮೆಯ ಆಧಾರದ ಮೇಲೆ ಸಾಲಾಗಿ ನಿಲ್ಲಿಸಿದರೆ ಆ ಸಾಲಿನ ಕೊನೆಯ ಕೆಲವು ಜನರ ಪೈಕಿ ಒಬ್ಬಳಾಗಿ ಕಾಣುವ ಕಮಲಮ್ಮ ಕೊಟ್ಟ ದೇಣಿಗೆ ಮುಖಬೆಲೆಯಲ್ಲಿ ಧೂಳಿನ ಕಣದಂತೆ, ದೊಡ್ಡ ಮೊತ್ತಗಳ ದೇಣಿಗೆಯ ಎದುರಿಗೆ ಕಂಡರೂ ಮಾನವೀಯ ಮೌಲ್ಯದ ನೆಲೆಯಲ್ಲಿ ಅತ್ಯಂತ ಶ್ರೇಷ್ಠವಾದುದು. ಕನಿಷ್ಠ ಜೀವನಶೈಲಿ ದುಡಿಮೆಯಲ್ಲಿರುವ ವ್ಯಕ್ತಿಯ ಗರಿಷ್ಠ ಸಹಾಯ, ಸಹಕಾರ, ದಾನ ಮತ್ತು ಹೃದಯ ವೈಶಾಲ್ಯತೆಯ ಉದಾಹರಣೆ ಇದು. ಇಂತಹ ನೂರಾರು ಸೂಕ್ಷ್ಮ ಸಂವೇದನಾಶೀಲ ಕತೆಗಳು ಈ ಕಾಲಕ್ಕೆ ಜಗತ್ತಿನ ಮೂಲೆಮೂಲೆಯಲ್ಲಿ ಕಂಡುಕೇಳಿಬರುತ್ತಿವೆ . ಮತ್ತೆ ಇವೇ ನಮ್ಮನ್ನು ಸರಿಯಾಗಿ ಅಳೆಯಲಿಕ್ಕೆ ತೂಗಲಿಕ್ಕೆ ಸಹಾಯ ಮಾಡುತ್ತಿವೆ . ತನ್ನೊಳಗೆ ಇಂತಹ ಹಲವು ಕಥೆ, ವ್ಯಥೆ, ಕತೆಯ ವ್ಯಥೆ ,ವ್ಯಥೆಯ ಕತೆಗಳನ್ನು ತುಂಬಿಕೊಂಡ ಲಾಕ್ ಡೌನ್ ಮುಂದೊಂದು ದಿನ ಪೂರ್ತಿಯಾಗಿ ಮುಗಿಯಬಹುದು. ಆದರೆ ಈ ಸಮಯ ನಮಗೆ ಕೊಟ್ಟ ಕೊಡುತ್ತಿರುವ ಸ್ಪೂರ್ತಿದಾಯಕ ಘಟನೆಗಳು ಸ್ವಅವಲೋಕನದ ಅವಕಾಶ ಮುಂದುವರಿಯುತ್ತಲೇ ಇರಬೇಕಾಗಿದೆ . ನಿತ್ಯವೂ ಮನೆಯಲ್ಲಿ ಕನ್ನಡಿಯಲ್ಲಿ ಮುಖ ನೋಡಿಕೊಳ್ಳದೆ ಹೊರಬೀಳದ ನಾವು ಹೀಗೆ ನಮಗೆ ಲಭ್ಯ ಆಗಿರುವ ಮಾನವೀಯತೆಯ ಮನುಷ್ಯತ್ವದ ಕನ್ನಡಿಗಳಲ್ಲಿ ದಿನವೂ ನಮ್ಮನ್ನು ನೋಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಲಾಕ್ ಡೌನ್ ಕಾಲ ನಮ್ಮ ಸರಿಯಾದ ನಿಜವಾದ ಅಳತೆಗಳನ್ನು ನಮಗೆ ಮುಟ್ಟಿಸುವ ಕನ್ನಡಿಯಾಗಲಿ ಎನ್ನುವ ಹಾರೈಕೆಯೊಂದಿಗೆ …. ಅವಕಾಶ ಆಲಿಸುವಿಕೆಗೆ ವಂದನೆಗಳು.

ಯೋಗೀಂದ್ರ ಮರವಂತೆ

Lock down ಕರಾಮತ್ತು

courtesy -ITV

ಪ್ರಪಂಚದ ಮೂಲೆಯೊಂದರಿಂದ ಕೊರೋನಾ ಸುದ್ದಿ ಕೇಳಿ ಬಂತು
ನಮಗ್ಯಾಕೆ ಅದರ ಉಸಾಬರಿಯಂದು ಮನವಂತು
ನೋಡುತ್ತಿದ್ದಂತೆಯೇ ಊರು ಕೇರಿ ಬೀದಿಯವರು ಹರಡಿತು
ಹೇಗೋಎಂತು ಕೊರೋನಾ ಬಂದೆ ಬಂತು ಜೊತೆಗೆ lockdownನು ತಂತು!

ಎಲ್ಲೆಲ್ಲೂ Lock downನದೆ ಕರಾಮತ್ತು
ಇದರರಿಂದ ಬಿತ್ತು ಎಲ್ಲರ ಸ್ವಾತಂತ್ರ್ಯಕ್ಕೂ ಕುತ್ತು
ಸೃಷ್ಟಿಯಾಯ್ತು ಅಂತರ್ಜಾಲದ ಸುತ್ತ ಸುತ್ತುವ ಮನೆಯಂಬ ಹೊಸಜಗತ್ತು
ಇಲ್ಲಿ ದಿನ ವಾರಗಳೇ ತಿಳಿಯದೆ ಕಳೆದಿದೆ ಹೊತ್ತು

ಅಮ್ಮನಿಗೆ ಅಡುಗೆಯ ಚಿಂತೆ
ನಿಲ್ಲದ ಅಪ್ಪನ ಮೀಟಿಂಗ್ಗಳ ಘಂಟೆ
ಬಗೆಹರಿಯದ ಮಕ್ಕಳ ತುಂಟಾಟದ ತಂಟೆ
ಅಜ್ಜ ಅಜ್ಜಿಯರ ಪ್ರತ್ಯೇಕತೆಗೆ ವಿಡಿಯೋ ಕಾಲ್ ಒಂದೇ ಸಂಗಾತಿಯಂತೆ

ಜೊತೆಯಲ್ಲಿದ್ದರು ಇಲ್ಲದ ಹಾಗೆ ಕಳೆದ ಸಮಯವೇ ಹೆಚ್ಚು
ಒಟ್ಟಿಗೆ ಬೆರೆಯಲು ಸಾವಕಾಶವಿದ್ದರೂ social media ಒಡನಾಟವೇಅಚ್ಚುಮೆಚ್ಚು
ಹಿಂದೆಂದೂ ಇರದ ಮುಂದೆಂದೂ ಬಾರದ ಪರಿವಾರದೊಂದಿಗಿನ ಸುಂದರ ಕ್ಷಣಗಳಿವು
ಎಂದೆಂದೂ ಚಂದದ ಸವಿ ನೆನಪುಗಳನ್ನಾಗಿಸುವವರು ನಾವು

ಹಿಂತಿರುಗಿ ನೋಡಲು ಆ ಹಳೆಯ ಬದುಕಿಗೆ ಮರಳಲು ಹಾತೊರೆದಿದೆಮನ
ಭವಿಷ್ಯದ ಅನಿಶ್ಚಿತತೆಗೆ ಕಳವಳಗೊಂಡು ದೂಡುವಂತಾಗಿದೆ ದಿನ
ಏನೇ ಆದರೂ ಪರಿವಾರದ ಒಗ್ಗಟ್ಟು ನೀಡಿಹುದು ಎದುರಿಸುವಧೈರ್ಯವನ್ನ
ಹೊಸ ಹುರುಪಿನಿಂದ ಕಾರ್ಯೋನ್ಮುಖರಾಗಿ ನಿರೀಕ್ಷಿಸುವ ಹೊಸಬದುಕನ್ನ.

ರಮ್ಯ ಭಾದ್ರಿ