ವಸಂತದ  ಸುವಾಸಂತಿ

ಫೋಟೋ ಕೃಪೆ; ಗೂಗಲ್
ವಸಂತ ಋತುವಿನಲ್ಲಿ ಮತ್ತು ಬೇಸಿಗೆಯಲ್ಲಿ  ಮೂಡಿ ಬರುವ ಗುಲಾಬಿ ಮನಮೋಹಕವಾಗಿ ನವುರಾಗಿ  ಪದರುಗಳಲ್ಲಿ ಅರಳಿ ಸುವಾಸನೆಯನ್ನು ಬೀರುತ್ತಾ, ತಿಳಿಗಾಳಿಯಲ್ಲಿ ಬಳುಕುತ್ತ ವಿಜೃಂಭಿಸುವ ಪುಷ್ಪವಾಗಿದೆ. ಗುಲಾಬಿಗೆ ಸಂಪಿಗೆಯಂತೆ, ಮಲ್ಲಿಗೆಯಂತೆ ನಿರ್ದಿಷ್ಟ ಬಣ್ಣದ ಬದ್ಧತೆಗಳಿಲ್ಲ. ಹೀಗಾಗಿ ಅದು ಹೊಸ ಹೊಸ ತಳಿಗಳನ್ನು ಕಂಡಂತೆ ಹಲವಾರು ರಂಜಕ ಬಣ್ಣಗಳನ್ನು ಪಡೆಯುತ್ತಾ ವಿಕಾಸಗೊಂಡಿದೆ.  ಹಲವಾರು ಸಂಸ್ಕೃತಿಗಳಲ್ಲಿ ಅದಕ್ಕೆ ವಿಶೇಷ ಸ್ಥಾನಮಾನಗಳಿವೆ. ಇದು ಒಂದು ಪುರಾತನವಾದ ಹೂವು ಕೂಡ. ಇಂಗ್ಲಿಷ್ ಇತಿಹಾಸವನ್ನು ಗಮನಿಸಿದಾಗ ೧೫ನೇ ಶತಮಾನದ ರಾಜಮನೆತನಗಳಾದ ಹೌಸ್ ಆಫ್ ಯಾರ್ಕ್ ಬಿಳಿ ಗುಲಾಬಿಯನ್ನು ಮತ್ತು ಹೌಸ್ ಆಫ್ ಲ್ಯಾಂಕಾಸ್ಟರ್ ಕೆಂಪು ಗುಲಾಬಿಯನ್ನು ತಮ್ಮ ಲಾಂಛನಗಳಾಗಿ ಮಾಡಿಕೊಂಡಿದ್ದು ಮುಂದಕ್ಕೆ  ಈ ಎರಡು ಮನೆತನಗಳ ನಡುವೆ ಸಂಭವಿಸಿದ ಯುದ್ಧವು  'ವಾರ್ ಆಫ್ ರೋಸಸ್ ಎಂದು ಪ್ರಖ್ಯಾತಿಗೊಂಡಿತು. ಗುಲಾಬಿ ಹೂವು ಪ್ರೇಮ ಪ್ರಣಯಗಳ ಸಂಕೇತ ಕೂಡ. ಪ್ರತಿ ವರ್ಷ ವ್ಯಾಲಂಟೈನ್ಸ್ ಡೇ ಸಂದರ್ಭದಲ್ಲಿ ಪ್ರೇಮಿಗಳ ನಡುವೆ ಕೆಂಪು ಗುಲಾಬಿ ಹೂಗಳ ವಿತರಣೆ ನೆಡಯುತ್ತದೆ. 

ಗುಲಾಬಿ ಹೂವಿನ ಉಲ್ಲೇಖ  ಪ್ರಪಂಚದ ಹಲವಾರು ಸಾಹಿತ್ಯಗಳಲ್ಲಿ ಬೆಸೆದುಕೊಂಡಿದೆ. ಇಂಗ್ಲಿಷ್ ಸಾಹಿತ್ಯದ ಮೇರು ಕವಿ ರಾಬರ್ಟ್ ಬರ್ನ್ಸ್ ಅವರ 'ಎ ರೇಡ್ ರೇಡ್ ರೋಸ್' ಒಂದು ಅವಿಸ್ಮರಣೀಯ ಪ್ರೇಮಗೀತೆಯಾಗಿ ಅದರ ಕೆಲವು ಸಾಲುಗಳು ಹೀಗಿವೆ; 

O my luve is like a red, red rose 
That’s newly sprung in June
O my luve is like the melody
That’s sweetly played in tune 

ಇದೇ  ಕವಿತೆಯನ್ನು ಬಿ.ಆರ್.ಎಲ್ ಅವರು "ಕೆಂಪು ಕೆಂಪು, ಕೆಂಗುಲಾಬಿ ನನ್ನ ಪ್ರೇಯಸಿ, ಮಧುರವಾದ ವೇಣು ನಾದ ನನ್ನ ಪ್ರೇಯಸಿ" ಎಂದು ಅನುವಾದಿಸಿ ಸಿ. ಅಶ್ವಥ್ ಅವರ ಧ್ವನಿಯಲ್ಲಿ ಈ ಅನುವಾದಿತ ಕವಿತೆ ಸುಂದರವಾದ ಭಾವಗೀತೆಯಾಗಿದೆ. ಗುಲಾಬಿ ಹೂವನ್ನು ಸಿನಿಮಾ ದೃಶ್ಯಗಳಲ್ಲಿ ಯಥೇಚ್ಛವಾಗಿ ಬಳಸಿಕೊಂಡು ಅದು ಸಿನಿಮಾ ಸಾಹಿತ್ಯದಲ್ಲೂ ವಿಜೃಂಭಿಸಿದೆ. ಚಿ.ಉದಯ ಶಂಕರ್ ಅವರು ರಚಿಸಿರುವ " ನಗುವಾ ಗುಲಾಬಿ ಹೂವೆ, ಮುಗಿಲಾ ಮೇಲೇರಿ ನಗುವೇ, ನಿನಗೆ ನನ್ನಲ್ಲಿ ಒಲವೋ, ಅರಿಯೆ ನನ್ನಲ್ಲಿ ಛಲವೋ, ನಲಿವಾ ಗುಲಾಬಿ ಹೂವೆ ' ಎಂಬ ಚಿತ್ರಗೀತೆ ಎಸ್.ಪಿ.ಬಿ ಅವರ ಧ್ವನಿಯಲ್ಲಿ ಅಮರತ್ವವನ್ನು ಪಡೆದಿದೆ. ಅಂದ ಹಾಗೆ ಗುಲಾಬಿ ಹೂವಿನ ಕೋಮಲತೆ ಮತ್ತು ಸೌಂದರ್ಯದ ಜೊತೆ ಮುಳ್ಳುಗಳು ಬೆರೆತಿವೆ! ಜೈವಿಕವಾಗಿ ಈ ಒಂದು ಸುಂದರ ಹೂವು ತನ್ನ ರಕ್ಷಣೆಗೆಂದು ಅದನ್ನು ಪಡೆದುಕೊಂಡಿರಬಹುದು. ಗುಲಾಬಿ ಹೂವನ್ನು ಪಡೆಯಲು ಹೋಗಿ ಮುಳ್ಳು ಚುಚ್ಚಿದ್ದಾಗ ಅದನ್ನು ಭಗ್ನಪ್ರೇಮಿಗಳ ವಿಫಲ ಪ್ರಯತ್ನದ ಸಂಕೇತವಾಗಿ, ಮಾರ್ಮಿಕವಾಗಿ, ರೂಪಕವಾಗಿ ವ್ಯಾಖ್ಯಾನಿಸುವುದು ಸಾಮಾನ್ಯ. 

ಇದೇ ಗುಲಾಬಿ ಹೂವಿನ ವಿಶೇಷತೆಯನ್ನು ಅನಿವಾಸಿ ಕವಿಯಿತ್ರಿ ಶ್ರೀಮತಿ ರಾಧಿಕಾ ಜೋಶಿ ಅವರು ತಮ್ಮ ಒಂದು ಕವಿತೆಯಲ್ಲಿ ಬಣ್ಣಿಸಿದ್ದಾರೆ. ಗುಲಾಬಿ ಹೂವು ನಮ್ಮೆಲ್ಲರ ಮನೆಯಂಗಳದಲ್ಲಿ ಅರಳಿರುವ ಈ ಸಂದರ್ಭದಲ್ಲಿ ಅವರ  ಕವನ ಸಮಯೋಚಿತವಾಗಿದೆ. ರಾಧಿಕಾ ಅವರು ತಮ್ಮ ಕವನದ ಕೊನೆಗೆ ಗುಲಾಬಿ ಹೂವನ್ನು ಆರೈಕೆ ಮಾಡಿ ಬೆಳೆಸಿದ ಮಾಲಿಗೆ; ಗುಲ್ಮಾಲಿಗೆ ( ಗುಲ್ (ಬಿ) + ಮಾಲಿ = ಗುಲ್ಮಾಲಿ ) ಧನ್ಯತೆಯನ್ನು ಸೂಚಿಸಿದ್ದಾರೆ. ರಾಧಿಕಾ 'ಗುಲ್ಮಾಲಿ' ಎಂಬ ಹೊಸ ಪದವನ್ನು ಸೃಷ್ಟಿಸಿರುವ ಸಾಧ್ಯತೆಗಳಿವೆ. ಈ ಪದ ಕನ್ನಡ ನಿಘಂಟಿನಲ್ಲಿ ಇಲ್ಲ ಎಂದು ತರ್ಕಿಸುವ ಬದಲು "ಎದೆಯ ಭಾವ ಹೊಮ್ಮುವುದಕೆ ಭಾಷೆ ಒಂದು ಸಾಧನ” ಎಂಬ ಕವಿ ವಾಣಿಯನ್ನು ಒಪ್ಪಿಕೊಳ್ಳುವುದು ಒಳಿತು. 
 -ಸಂಪಾದಕ


 ವಸಂತದ  ಸುವಾಸಂತಿ 



ಮಲ್ಲಿಗೆಯೆಂದೇ ಭ್ರಾಂತಿ 
ಮುಗಿಲೆತ್ತರಕ್ಕೆ ಹಂದರ 
ಮನೆಯಂಗಳಕ್ಕೆ ಚಪ್ಪರ 

ನಾಜೂಕು ಗೋಂಚುಲು ಬಾಗಿ 
ನೂರಾರು ಬಗೆಯ ಗುಲಾಬಿ
ಸುವಾಸನೆಯಲ್ಲಿ ಸೌಗಂಧಿಕಾ 
ಈ ಆಂಗ್ಲನಾಡಿನ  ಮಣಿಮುಕ್ತಾ

ಮುಗ್ಧ ಗುಲಾಬಿ ಬಿಳಿ ತಿಳಿ ಹಳದಿ ನಸು ಪಾಟಲ  
ಸೂಕ್ಷ್ಮ ಪಕಳೆಯ ಮನಮೋಹಕ  ಗೊಂಚಲ  
ಹೂವಿನ ತಳಿಗಳ ನಾಮಕರಣ ಗೌರವಾರ್ಥ   
ಐತಿಹಾಸಿಕ ಘಟನೆಗಳ ಹೆಮ್ಮೆಯ ಸ್ಮರಣಾರ್ಥ

ಯಾವ ಬೀದಿ ತಿರುಗಿದರೂ ಗುಲಾಬಿಯ ಸರಮಾಲೆ 
ನಾನಿಂತು ಆನಂದಿಸಿದರೆ ಗುಲ್ಮಾಲಿಗೆ  ಚಪ್ಪಾಳೆ 
ಈ ವಸಂತದ  ಸುವಾಸಂತಿ 
ಮಲ್ಲಿಗೆಯೆಂದೇ ಭ್ರಾಂತಿ


ರಾಧಿಕಾ ಜೋಶಿ

ಸೊಗಸಿನ ಕ್ಷಣಗಳು( ಕವಿತೆ) ಮತ್ತು ಒಂದು ನಗೆ ಹನಿ (ಸ್ವಾಮಿ)

ಕನ್ನಡ ಕಾವ್ಯಲೋಕವನ್ನು ಅವಲೋಕಿಸಿದಾಗ ಅಲ್ಲಿ ಸೊಗಸು ಮತ್ತು ಸೌಂದರ್ಯಗಳ ಉಲ್ಲೇಖವನ್ನು ಯಥೇಚ್ಛವಾಗಿ ಕಾಣಬಹುದು. ಬದುಕಿನ ಸೊಗಸುಗಳನ್ನು ಇಂದ್ರಿಯಗಳ ಮೂಲಕ ಗ್ರಹಿಸಿ ಭಾವನೆಗಳ ಲೋಕದಲ್ಲಿ ಅದನ್ನು ಅನುಭವಿಸಿ ಕೊನೆಗೆ ಅದನ್ನು ಪದಗಳ ಮೂಲಕ ಕವನವಾಗಿ ಅಭಿವ್ಯಕ್ತಗೊಳಿಸುವುದು ಕವಿಯ ವಿಶೇಷ ಸಾಮರ್ಥ್ಯ. ಈ ಸೊಗಸನ್ನು ಅನುಭವಿಸಲು ಬದುಕಿನ ಬಗ್ಗೆ ಪ್ರೀತಿ ಇರಬೇಕು. ಇಲ್ಲದಿದ್ದಲ್ಲಿ ಅದು ನಮ್ಮ ದಿನನಿತ್ಯ ಬದುಕಿನ ಯಾಂತ್ರಿಕತೆಯಷ್ಟೇ ಆಗಿ ಉಳಿದುಬಿಡುತ್ತದೆ. ಕವಿತೆಯಲ್ಲಿಯ ರಸಿಕತೆ, ಬದುಕಿನ ಪ್ರೀತಿ ಎಂಬ ವಿಚಾರಗಳು ಯುರೋಪ್ ಸಾಹಿತ್ಯವಲಯಗಳಲ್ಲಿ ಸಂಭವಿಸಿದ ಸಾಹಿತ್ಯ ಕ್ರಾಂತಿಯಲ್ಲಿ ರೊಮ್ಯಾಂಟಿಕ್ ಪೊಯೆಟ್ರಿ ಎಂಬ ಹೆಸರಿನಲ್ಲಿ ಮೂಡಿಬಂದಿದೆ. ಈ ಸೊಗಸಿನ ಕ್ಷಣಗಳನ್ನು ಕುವೆಂಪು, ಬೇಂದ್ರೆ ಮತ್ತಿತರ ಕವಿಗಳ ಕವನಗಳಲ್ಲಿ ಕಾಣಬಹುದು. 'ಆನಂದಮಯ ಈ ಜಗ ಹೃದಯ' ಎಂಬ ಕುವೆಂಪು ಅವರ ಕವಿತೆ ಇದಕ್ಕೆ ಉತ್ತಮ ನಿದರ್ಶನ. ಇದೇ ಕವನದಲ್ಲಿ 'ಸೂರ್ಯೋದಯ, ಚಂದ್ರೋದಯ ದೇವರ ದಯೆಕಾಣೋ' ಎನ್ನುವ ಈ ಸಾಲಿನಲ್ಲಿ ಕವಿ ಬರಿ ನಿಸರ್ಗ ಸೌಂದರ್ಯವನ್ನಷ್ಟೇ ಅಲ್ಲ, ಅಲ್ಲಿ ಒಂದು ಆಧ್ಯಾತ್ಮಿಕ ಅನುಭಾವವನ್ನೂ ಪಡೆಯುತ್ತಾನೆ. ಕುವೆಂಪು ಹೇಳುವಂತೆ ‘ರವಿ ವದನವು ಶಿವವದನವೂ ಕೂಡ. ಶಿವನಿಲ್ಲದೆ ಸೌಂದರ್ಯವು ಇಲ್ಲ. ಶಿವ ಕಾವ್ಯದ ಕಣ್ಣೋ, ಶಿವ ಕಾಣದ (ಸೌಂದರ್ಯವನ್ನು ಕಾಣದ) ಕವಿ ಕುರುಡನೋ!’ ಈ ಒಂದು ಪರಿಕಲ್ಪನೆ "ಸತ್ಯಂ ಶಿವಂ ಸುಂದರಂ" ಎಂಬ ಸಾಲುಗಳಲ್ಲಿ ಕೂಡ ಅಭಿವ್ಯಕ್ತಗೊಂಡಿದೆ. ಕುವೆಂಪು ಅವರ ಇನ್ನೊಂದು ಕವನದಲ್ಲಿ ನಿಸರ್ಗದ ಸೊಗಸನ್ನು, ಬೆಳಕ್ಕಿಗಳು ನೀಲಾಕಾಶದಲ್ಲಿ ತೂಗುತ್ತ ಬರುವುದನ್ನು ನೋಡಿ ಭಾವ ಪರವಶರಾಗಿ 'ದೇವರು ರುಜು ಮಾಡಿದನು, ರಸವಶನಾಗುತ ಕವಿ ಅದ ನೋಡಿದನು'ಎಂದು ಬರೆಯುತ್ತಾರೆ. ಬೇಂದ್ರೆ ಅವರು 'ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದ, ಬಾಗಿಲು ತೆರೆದು ಬೆಳಕು ಹರಿದೂ ದೇವನು ಜಗವೆಲ್ಲ ತೊಯ್ದ' ಎಂದು ಸೂರ್ಯೋದಯದ ಬಗ್ಗೆ ಬರೆಯುತ್ತಾರೆ. ‘ಶ್ರಾವಣ ಬಂತು ಶ್ರಾವಣ’ ಎಂದು ಸಂತಸಪಡುತ್ತಾರೆ. ಈ ರೀತಿಯ ಅನೇಕ ಸೊಗಸಿನ ಕ್ಷಣಗಳನ್ನು ಕುವೆಂಪು ಮತ್ತು ಬೇಂದ್ರೆ ಅವರ ಪದ್ಯ-ಗದ್ಯ ಕೃತಿಗಳಲ್ಲಿ ಕಾಣಬಹುದು.

ಬಾಬ್ ಥೀಲ್ ಮತ್ತು ಜಾರ್ಜ ವೀಸ್ ರಚಿಸಿರುವ, ಖ್ಯಾತ ಗಾಯಕ ಲೂಯಿಸ್ ಆರ್ಮ್ ಸ್ಟ್ರಾಂಗ್ ಹಾಡಿರುವ ಈ ಗೀತೆಯ ಮೊದಲ ಪಂಕ್ತಿಯ ಸಾಲುಗಳು ಹೀಗಿವೆ;   
I see trees of green, red roses too
I see them bloom for me and you 
And think to myself 
What a wonderful world! 

ಈ ಒಂದು ಗೀತೆ ಬಹಳ ಜನಪ್ರೀಯವಾಗಿದೆ, ಇದು ಕೂಡ ಬದುಕಿನ ಪ್ರೀತಿಯ ಬಗ್ಗೆ ಬರೆದ ಕವನ ಎನ್ನಬಹುದು.  
ಡಾ. ಸತ್ಯವತಿ ಅವರು ಬದುಕಿನ ಹಲವಾರು ದೈನಂದಿಕ ಆಗು ಹೋಗುಗಳಲ್ಲಿ ಮತ್ತು ಸಾಧಾರಣ ಸರಳ ವಿಚಾರಗಳಲ್ಲಿ ಸೊಗಸಿನ ಕ್ಷಣಗಳನ್ನು ಕಂಡಿದ್ದಾರೆ ಮತ್ತು ತಮ್ಮ ಕೆಳಗಿನ (ಸೊಗಸಾದ) ಕವಿತೆಯಲ್ಲಿ ನಮಗೂ ಕಾಣಿಸಿದ್ದಾರೆ.


                                                                        *

ಬದುಕಿನ ಸೊಗಸಿನ ಕ್ಷಣದೊಂದಿಗೆ ಒಂದು ನಗುವನ್ನು ಸೇರಿಸಿ ನಕ್ಕು ಬಿಡೋಣ. ಉಮೇಶ್ ಅವರು ಬರೆದಿರುವ 'ಸ್ವಾಮಿ' ಎಂಬ ಕಿರು ಪ್ರಸಂಗ ಒಂದೇ  ಹೆಸರಿನಲ್ಲಿ ಅಡಗಿರುವ ಮತ್ತೊಂದು ಅರ್ಥ ಹೇಗೆ ಗೊಂದಲಕ್ಕೆ ಕಾರಣವಾಗಬಹುದು ಎಂಬುದಕ್ಕೆ ನಿದರ್ಶನವಾಗಿ ಒಂದು ತಿಳಿ ಹಾಸ್ಯ ಪ್ರಸಂಗವಾಗಿ ಮೂಡಿಬಂದಿದೆ.  

****

ಸೊಗಸಿನ ಕ್ಷಣಗಳು

ಮಾಗಿಯ ಚಳಿಯಲ್ಲಿ ಕುಳಿತು ಬಿಸಿ ಬಿಸಿ ಕಾಫಿಯನು
ಕೋಡುಬಳೆಯೊಂದಿಗೆ ಸವಿಯುವುದೊಂದು ಸೊಗಸು

ಬೆಳಗಾಗೆದ್ದು ಕಿಟಕಿಯಾಚೆಗೆ ಮುಖವನ್ನಿಟ್ಟು ಅಳಿದುಳಿದ 
ಕಾಳುಗಳ ಹೆಕ್ಕುತಿರುವ ಹಕ್ಕಿಗಳ ನೋಡುವುದೊಂದು ಸೊಗಸು

ಮನೆಯ ಮುಂದಿನ ಅಂಗಳದಿ ನಿಂತು ರಸ್ತೆಯಲಿ ಒಡಾಡುವ 
ಕಾರುಗಳ ಬಣ್ಣಗಳ ಗುರುತಿಸುವುದೊಂದು ಸೊಗಸು

ಮುಳುಗಿಹೋಗಿದೆ ಜಗವೆಂಬ ಗಾಬರಿಯಲಿ ಧಾವಿಸುವ
ಜನರ ಧಾವಂತಿಕೆ ನೋಡುವುದೊಂದು ಸೊಗಸು

ಲಲ್ಲೆ ಹೊಡೆಯುತ ಗೆಳೆಯರೊಡನೆ ಶಾಲೆಗೆ ನಿರ್ಯೋಚನೆಯಲಿ 
ಕುಣಿಯುತ ನಡೆವ ಮಕ್ಕಳ ನೋಡುವುದೊಂದು ಸೊಗಸು

ಭೂಮಿಯಲಿ ನಡೆವ ವ್ಯಾಪಾರವನು ಮೌನದಲಿ 
ನೋಡುವಾ ಆಗಸವ ನಿರುಕಿಸುವುದೊಂದು ಸೊಗಸು

ತನ್ನೆಲ್ಲ ಆಟದೀ ಗೊಂಬೆಗಳ ಆಟವನು ನೋಡುತ್ತ ತನ್ನಷ್ಟಕ್ಕೆ
ನಗುತಿರಬಹುದಾದ ಸೃಷ್ಟಿಕರ್ತನನು ನೆನೆಯುವುದೊಂದು ಸೊಗಸು

ಮತ್ತೆ ಬಾರದ ಜೀವನದ ಸೊಗಸಿನೀ ಕ್ಷಣಗಳನು 
ಮೆಲುಕು ಹಾಕುತ ಬದುಕುವ ಸಂಭ್ರಮದ ಸೊಗಸು

ಡಾ.ಸತ್ಯವತಿ ಮೂರ್ತಿ

****
ನನ್ನ ಸ್ವಾಮಿ 

ಈ ಕಥೆಯನ್ನು ನಾನು ಮ್ಯಾಂಚೆಸ್ಟರ ಹತ್ತಿರ ಕೆಲಸ ಮಾಡುವಾಗ ಭೆಟ್ಟಿಯಾದ ಕನ್ನಡಿಗ ಗೆಳೆಯರು ಹೇಳಿದರು. 

ಒಂದು ಸಮ್ಮೇಳನದಲ್ಲಿ ಇಬ್ಬರು ಭಾರತೀಯ ಮೂಲದ ಮಹಿಳಾ ತಜ್ಞ ವೈದ್ಯೆಯರು ಭೆಟ್ಟಿಯಾದರು. ಮಧ್ಯಾಹ್ನ ಊಟದ ವೇಳೆ ಮಾತನಾಡುವಾಗ ಪರಸ್ಪರ ಇಬ್ಬರೂ ಕನ್ನಡಿಗರೆಂದು ಗೊತ್ತಾಗಿ ಸಂತೋಷವಾಗಿ ಮುಂದಿನ ಸಂಭಾಷಣೆ ಕನ್ನಡದಲ್ಲೇ ಮುಂದುವರೆಯಿತು. ಸಂಜೆ ಊಟಕ್ಕೆ ಕುಳಿತಾಗ ಒಬ್ಬ ಕನ್ನಡತಿ “ನನ್ನ ಸ್ವಾಮಿಗೆ ಈ ಪಲ್ಯ ಬಹಳ ಇಷ್ಟ, ನನ್ನ ಸ್ವಾಮಿ ಇವತ್ತು ಮಕ್ಕಳನ್ನು ಶಾಲೆಗೆ ಬಿಡಲು ಸ್ವಲ್ಪ ತಡವಾಯಿತು“ಎಂದೆಲ್ಲ ಹೇಳತೊಡಗಿದಳು. 
ಆ ತಾಯಿ ಪ್ರತಿ ಸಲ ತನ್ನ ಗಂಡನಿಗೆ “ಸ್ವಾಮಿ“ಎಂದೇ ಸಂಭೋಧಿಸುತ್ತಿದ್ದಳು. ಇಬ್ಬರೂ ಒಂದೇ ಹೋಟೆಲಿನಲ್ಲಿ ಉಳಿದುಕೊಂಡಿದ್ದರಿಂದ ಇಬ್ಬರೂ ಒಂದೇ ಟ್ಯಾಕ್ಸಿಯಲ್ಲಿ ಹೊರಟರು. ಮಾರ್ಗದ ಮಧ್ಯೆಆ ತಾಯಿ ಗಂಡನಿಗೆ ಫೋನ್ ಮಾಡಿ “ಸ್ವಾಮಿ ಊಟ ಮಾಡಿದಿರಾ? “ಎಂದೆಲ್ಲಾ ವಿಚಾರಿಸಿದಳು. ಇನ್ನೊಬ್ಬ ಮಹಿಳೆ ಇದನ್ನೆಲ್ಲಾ ಗಮನಿಸುತ್ತಾ ಮನದಲ್ಲೇ “ಏನಪ್ಪಾ ಇವಳು ಬಹುಶಃ ಪಕ್ಕಾ ಪತಿ ಭಕ್ತೆ ಇದ್ದಾಳೆ, ಇಂಗ್ಲೆಂಡಿಗೆ ಬಂದರೂ ಏನೂ ಬದಲಾಗಿಲ್ಲ“ಎಂದುಕೊಂಡು ಸುಮ್ಮನಿದ್ದಳು .

ಇಬ್ಬರು ಮತ್ತೆ ಸುಮಾರು ಆರು ತಿಂಗಳ ನಂತರ ಇನ್ನೊಂದು ಸಮ್ಮೇಳನದಲ್ಲಿ ಭೆಟ್ಟಿಯಾದರು . 
ಆಗ ಮತ್ತೆ ಆ ತಾಯಿ “ನನ್ನ ಸ್ವಾಮಿಗೆ ಪ್ರಮೋಷನ್(ಬಡ್ತಿ )ಆಯಿತು, ನನ್ನ ಸ್ವಾಮಿ ಹೊಸ ಟೆಸ್ಲಾ ಕಾರು ತೆಗೆದುಕೊಂಡ “ಎಂದೆಲ್ಲಾ ಹೇಳಿದಳು. ಈಗ ಈ ಮಹಿಳೆಗೆ ತಡೆಯಲಾಗಲಿಲ್ಲ. ಅವಳು ಕೇಳಿಯೇ ಬಿಟ್ಟಳು “ಅಲ್ಲಾ, ಇಂದಿನ ದಿನಗಳಲ್ಲಿ ಭಾರತದಲ್ಲಿಯೇ ಪತಿ ಭಕ್ತೆ ಸಿಗೋದಿಲ್ಲ, ಅಂತದರಲ್ಲಿ ಇಷ್ಟೊಂದು ಕಲಿತ ವೈದ್ಯೆಯಾದ ನೀವು ಇಂಗ್ಲೆಂಡಿನಲ್ಲಿ ಇದ್ದುಕೊಂಡು ಗಂಡನಿಗೆ ಎಷ್ಟೊಂದು ಮಾನ ಮರ್ಯಾದೆ ಕೊಡುತ್ತೀರಲ್ಲಾ”. 

ಅದನ್ನು ಕೇಳಿ ಆ ತಾಯಿ ಬಿದ್ದು ಬಿದ್ದು ನಗುತ್ತ “ಅಯ್ಯೋ ನನ್ನ ಗಂಡನಿಗೇನೂ ನಾನು ಸ್ಪೇಶಿಯಲ್ ಮರ್ಯಾದೆ ಕೊಡ್ತಾ ಇಲ್ಲ, ಅವನ ಹೆಸರೇ ಸ್ವಾಮಿ!” ಎಂದಳು . 
ಇದನ್ನು ಕೇಳಿದ ಇನ್ನೊಬ್ಬ ಕನ್ನಡತಿಗೆ ತಲೆ ಜಜ್ಜಿಕೊಳ್ಳುವುದೊಂದು ಬಾಕಿ ಇತ್ತು. 😀😀

ಡಾ. ಉಮೇಶ್ ನಾಗಲೋತಿಮಠ್