ರಿಚರ್ಡ್ ಬರ್ಟನ್ನಿಗೆ ಗೌರವಾರ್ಪಣೆ – ಶಾಲಿನಿ ಜ್ಞಾನಸುಬ್ರಹ್ಮಣಿಯನ್ ಮತ್ತು ಎರಡು ಕವಿತೆಗಳು -ರಾಜಶ್ರೀ ಪಾಟೀಲ

ಭಿತ್ತಿ ಭರ್ತಿ ತುಂಬಿದ ಬೃಹದ್ ರಿಚರ್ಡ್ (ಚಿತ್ರ೧: ಲೇಖಕಿ)

ಮಿಸ್ಟರ್ ಬರ್ಟನ್ ಚಿತ್ರವು ರಿಚರ್ಡ್ ಬರ್ಟನ್ ಅವರ ಜೀವನವನ್ನು ವಿವರಿಸುತ್ತದೆ—ಪೋನ್ಟ್ರೈಡಿವೆನ್ ಹಳ್ಳಿಯಿಂದ ಇಂಗ್ಲೆಂಡ್‌ನ ರಂಗಮಂದಿರಗಳವರೆಗೆ ಯುವಕ ರಿಚರ್ಡ್ ಜೆಂಕಿನ್ಸ್ ಅವರ ಜೀವನದಲ್ಲಿ ಅವರ ಶಾಲಾ ಶಿಕ್ಷಕರು ಪ್ರೇರಣಾದಾಯಕ ಪಾತ್ರ ವಹಿಸಿದರು—ಅವರ ಪ್ರತಿಭೆಯನ್ನು ಗುರುತಿಸಿ, ಅಭಿನಯವನ್ನು ಮುಂದುವರಿಸಲು ಪ್ರೋತ್ಸಾಹಿಸಿ, “ಬರ್ಟನ್” ಎಂಬ ತಮ್ಮ ಹೆಸರನ್ನೂ ನೀಡಿದರು. ಅವರ ಆಳವಾದ, ಪ್ರತಿಧ್ವನಿಸುವ ಧ್ವನಿ ಅವರ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿತು.

ಈ ಚಿತ್ರವನ್ನು ನೋಡಿದ ನನಗೆ ರಿಚರ್ಡ್ ಬರ್ಟನ್ ಅವರ Pontrhydyfen ಪಾಂಟ್ರಿಡ್ ವೆನ್ (ವೆಲ್ಶ್ ಭಾಷೆಯಲ್ಲಿ ’f’ ಗೆ ವ ಎನ್ನುವ ಉಚ್ಚಾರ) ಜನ್ಮಸ್ಥಳವನ್ನು ಅನ್ವೇಷಿಸಲು ಪ್ರೇರಣೆ ನೀಡಿತು. ಈ ವರ್ಷ 2025 ಅವರ ಜನ್ಮ ಶತಮಾನೋತ್ಸವದ ಸಂದರ್ಭವಾಗಿದ್ದು, ಪೋರ್ಟ್ ಟಾಲ್ಬಾಟ್ ಕೌನ್ಸಿಲ್ ಅನೇಕ ಸಂಬಂಧಿತ ಸ್ಥಳಗಳನ್ನು ‘ರಿಚರ್ಡ್ ಬರ್ಟನ್ ಟ್ರೈಲ್(trail)’ ಆಗಿ ಏರ್ಪಡಿಸಿದೆ.

ಮೇಲಿನ ಚಿತ್ರ-ಲೇಖಕಿ ಕೃಪೆ: ಇಂದಿನ ದೃಶ್ಯ; ಕೆಳಗೆ: ರಿಚರ್ಡ್ ಮತ್ತು ತಂದೆ ತನ್ನೂರಿನ ಅದೇ ಸೇತುವೆಯ ಮೇಲೆ c1950 ದಶಕದಲ್ಲಿ.
ರಿಚರ್ಡ್ ಬರ್ಟನ್ ಟ್ರೈಲ್(trail) —ಫೋಟೋ: ಶಾಲಿನಿ ಜ್ಞಾನಸುಬ್ರಹ್ಮಣಿಯನ್
ಶ್ರೀವತ್ಸ ದೇಸಾಯಿ ತಮ್ಮ ವೇಲ್ಸ್ ನೆನಪುಗಳನ್ನು ಜೋಡಿಸುತ್ತಾರೆ. 
ನಾನು ಈ ದೇಶದ ಮಣ್ಣಿನ ಮೇಲೆ ಕಾಲಿಟ್ಟದ್ದು 1974 ರಲ್ಲಿ ಆಗಸ್ಟ್ ತಿಂಗಳ ಮೊದಲ ವಾರ. ಮಾಡ್ ಕವಿಡ್ ಆಕಾಶ ಜಿಟಿ ಜಿಟಿ ಮಳೆ. ಧಾರವಾಡದ ಶ್ರಾವಣವನ್ನು ನೆನೆಯುತಿತ್ತು ಮನ. ಎಲ್ಲೆಡೆ ಹಸಿರು ಹುಲ್ಲು. ನಾನು ಮೊದಲು ಕಂಡ ನ್ಯೂಪೋರ್ಟ್, ಕಾರ್ಡಿಫ್ ಗಳು ದಕ್ಷಿಣ ವೇಲ್ಸ್ ಪ್ರಾಂತದಲ್ಲಿವೆ. ನಾನು ಭೇಟಿಯಾದ ಎಳೆದೆಳೆದು ಇಂಗ್ಲಿಷ್ ಮಾತಾಡುವ ವೆಲ್ಶ್ ಜನರ ಮಾತಿನಲ್ಲಿlilt ಒಂದು ತರದ ಲಯ. ಅಂದು ಎಲ್ಲೆಡೆಗೆ eisteddfod (ಐಸ್ಟೆಡ್ವಡ್) ಎನ್ನುವ ವೆಲ್ಶ್ ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನದ ಪ್ರಚಾರ, ಉತ್ಸಾಹ. ಆ ಭಾಷೆಯನ್ನಾಡುವ ಸುಪ್ರಸಿದ್ಧ ಸಾಹಿತಿ, ಸಂಗೀತ, ಕಲಾಕಾರರ ಕೂಟ. ಸ್ಫರ್ಧೆಗಳು, ಕವನಗೋಷ್ಠಿ, ಇತ್ಯಾದಿ. ಹೆಮ್ಮೆಯ ಪುತ್ರ ರಿಚರ್ಡ್ ಬರ್ಟನ್ ಸಹ ಹುಡುಗರ ಸೊಪ್ರಾನೊ ಹಾಡುಗಾರಿಕೆಯಲ್ಲಿ ಗೆದ್ದಿದ್ದ. ಆತನ ದನಿ ಸುಪ್ರಸಿದ್ಧ.ಇಂದಿಗೂ ಸಹ ವೇಲ್ಸ್ನಲ್ಲಿ ಹುಟ್ಟಿದ ಶ್ರೇಷ್ಠ ಕವಿ ಡಿಲನ್ ಥಾಮಸ್ಸನ ರೇಡಿಯೋ ನಾಟಕ 'ಅಂಡರ್ ಮಿಲ್ಕ್ ವುಡ್ 'ನ ಆತನ ವಾಚನವನ್ನು Voice of Wales: mellifluous, baritone, ಎಂದು ಕರೆದು ಪದೇ ಪದೇ ಕೇಳಲಾಗುತ್ತದೆ, ಬಿತ್ತರಿಸಲಾಗುತ್ತದೆ. (ಮೇಲಿನ ಚಿತ್ರ ನೋಡಿರಿ.)
ನಾನು ಕಾಲೇಜಿನಲ್ಲಿದ್ದಾಗ ರಿಚರ್ಡ್ ಬರ್ಟನ್ ಮತ್ತು ಎಲಿಝಬೆತ್ ಟೇಲರ್ ಯಾವಾಗಲೂ ಸುದ್ದಿಮಾಡುತ್ತಿದ್ದರು; ಅವರ ಸಿನಿಮಾಗಳು ಅಥವಾ ವೈಯಕ್ತಿಕ ವಿಷಯಗಳು ಯಾವಾಗಲೂ ಹಾಲಿವುಡ್ ಮಸಾಲೆಯನ್ನು ಹಂಡೆ ಗಟ್ಟಲೆ ನೀಡುತ್ತಿದ್ದವು. ಆಕೆಯ 7 ಗಂಡಂದಿರು, ಈತನಿಗೆ ಮೂವರು ಹೆಂಡತಿಯರು ಇತ್ಯಾದಿ. ಮೊದಲ ಸಲ ಇವರಿಬ್ಬರು ಮದುವೆಯಾದಾಗ ಆಕೆಯ ಐದನೆಯವನು, ಈತನ ಎರಡನೆಯವಳು ಇತ್ಯಾದಿ. ಡಿವೋರ್ಸ್ ಮಾಡಿದ ಒಂದು ವರ್ಷದಲ್ಲಿ ಮರುಮದುವೆ, ಇತ್ಯಾದಿ. ಕ್ಲಿಯೋಪಾತ್ರಾ ಸಿನಿಮಾ ಅಲ್ಲಿಯವರೆಗಿನ ಅತ್ಯಂತ ಅಧಿಕ ವೆಚ್ಚದ ಯೋಜನೆಯಾಗಿತ್ತು. ರಿಚರ್ಡ್ಗೆ ಅದರಲ್ಲಿ ಮಾರ್ಕ್ ಆಂಥನಿ ಪಾತ್ರ. ಸತ್ಯವೋ ಮಿಥ್ಯವೋ ರಾಣಿ ಕ್ಲಿಯೋಗೆ ಕತ್ತೆಯ ಹಾಲಿನಲ್ಲಿ ಸ್ನಾನ ಮಾಡುವ ರೂಢಿ ಇತ್ತಂತೆ. ಅದು ಚರ್ಮಕ್ಕೆ ಪೋಷಕ ಎಂದು ಆಕೆಯ ನಂಬಿಕೆ. ಆ ದೃಶ್ಯದ ಚಿತ್ರಣಕ್ಕೆ ಸ್ನಾನದ ಟಬ್ ತುಂಬಲು ನೂರಾರು ಹಾಲು ಕೊಡುವ ಗಾರ್ಧಭಗಳನ್ನು ರೋಮ್ ನಗರದಲ್ಲಿ ಎಲ್ಲಿಂದ ಹಿಡಿದು ತರುವುದು? ಕೊನೆಗೆ ಕೃತಕ ಹಾಲನ್ನು ಉಪಯೋಗಿಸಲಾಯಿತು. ಕೆಲವಷ್ಟೇ ಸಿನಿಮಾ ಸಿಬ್ಬಂದಿಗಷ್ಟೇ ಶೂಟಿಂಗ್ ಸಮಯದಲ್ಲಿ ಪ್ರವೇಶ, ಒಬ್ಬ ಕುರುಡ ಕವಿ ಪಾತ್ರಧಾರಿಯನ್ನು ಹೊರತಾಗಿ. ಆಮೇಲೆ ಗೊತ್ತಾದುದು ಆತನ ಪಾತ್ರವಷ್ಟೇ ಕುರುಡು, ನಿಜವಾಗಿಯೂ ಅಲ್ಲ ಅಂತ!
ನಾನು ನಾಲ್ಕು ವರ್ಷಗಳನ್ನು ದಕ್ಷಿಣ ವೇಲ್ಸ್ ನಲ್ಲಿ ಕಳೆದಿದ್ದೇನೆ. ಅವರಿಗೆ ತಮ್ಮ ಭಾಷೆಯಲ್ಲದೆ ಮೂರು ವಿಷಯಗಳು ಅತಿಪ್ರಿಯವಾದವು - ರಗ್ಬಿ ಆಟ, ದಿನದ ದುಡಿತವಾದ ಮೇಲೆ ಪಬ್ ನಲ್ಲಿ ಭೇಟಿಯಾಗುವದು. ಅದಕ್ಕೆ ಅವರಲ್ಲಿ ಒಂದು ನಾಣ್ನುಡಿ ಇದೆ: ವಲಸೆ ಹೋದರೂನು ಮೂವರು ವೆಲ್ಷ್ ಜನ ಕೂಡಿದರೆ ಸಾಕು ಅಲ್ಲೇ ಮೂರನ್ನು ಸ್ಥಾಪಿಸಿಬಿಡುತ್ತಾರಂತೆ: ರಗ್ಬಿ ಕ್ಲಬ್ಬು, ಪಬ್ಬು ಮತ್ತು ಒಂದು ಐಸ್ಟೆಡ್ವಡ್! ಇವೆಲ್ಲವೂ ಚಿರಾಯುವಾಗಿರಲಿ!

ಶ್ರೀವತ್ಸ ದೇಸಾಯಿ




1. ಮಿತಿಯ ಪರಿಮಿತಿ 

ತಿಳಿದಿತ್ತು ಹರಿವ ನದಿ, ಸಾಗರ ಸೇರುವದೇ ಗುರಿಯೆಂದು,
ಅದಕೇನು ಗೊತ್ತಿತ್ತು ಸಾಗರದಲೆ ಸೇರುವದರೊಟ್ಟಿಗೆ,
ಅದಕುಂಟು ಮೇಘ ಕಟ್ಟುವ, ಮಳೆ ಸುರಿಸುವ ಸಾಮರ್ಥ್ಯ
ಕಣ್ಮುಚ್ಚಿ ಕಾಣುವ ಕನಸುಗಳ ನನಸಾಗಿಸುವ,
ಕೈಗೆಟುವ ಕಾರ್ಯಗಳ ಪೂರೈಸುವ ಭರದಲ್ಲಿ
ಅರಿವಾರಿಗುಂಟು ಪ್ರತಿ ಜೀವದ ಸಾಮರ್ಥ್ಯದ ಮಿತಿಯೆಲ್ಲಿ ?

ರಾಜಶ್ರೀ ಪಾಟೀಲ
ಚಿತ್ರ: AI ಕೃಪೆ
2. ಅರಿವಿನ ಪರದೆ 

ಅಲಂಕಾರಕ್ಕೆ ಅಟ್ಟಣಿಗೆಯಲ್ಲಿ ಅಂದ ತೋರಿಸೋ ಹಿತ್ತಾಳೆ ಚರಿಗೆ,
ದೇವರ ಕೋಣೆಯಲ್ಲಿ ದರ್ಬಾರು ನಡೆಸೋ ತಾಮ್ರದ ಚರಿಗೆ,
ಬಯಲಿನ ಬಿಸಿಲುರಿಯ ದಾಹ ನೀಗುವ ಅಡುಗೆ ಮನೆಯ ಸ್ಟೀಲಿನ ಚರಿಗೆ ,
ಬೆಳ್ಳಂಬೆಳಗ್ಗೆ ತಪ್ಪದೆ ಹಿತ್ತಲ ಪ್ರವಾಸಕ್ಕೆ ಉಪಯೋಗಿಸೋ ಪ್ಲಾಸ್ಟಿಕ್ ಚರಿಗೆ ,
ಮರೆಯದೆ ಪ್ರತಿ ಅಮವಾಸೆ, ಹುಣ್ಣಿಮೆಗೆ ಬಯಲಿನ ಜೀವಜಂತುಗಳಿಗೆ ಅವ್ವ ಕಳಿಸುವ ಚರಗದ ಮಣ್ಣಿನ ಚರಿಗೆ ,
ಬಣ್ಣ ತರಾವರಿ, ಆಕಾರ ತರಾವರಿ, ಮೈಮಾಟ ತರಾವರಿ
ಆದರೆ ಪರಿ ಪರಿಯಾಗಿ ತುಂಬಿ ನೀಡುವದಲ್ಲವೇ ಗುರಿ ?

ರಾಜಶ್ರೀ ಪಾಟೀಲ
ಹೆಸರು ಉಲ್ಲೇಖಿಸದ ಚಿತ್ರಗಳು: ಇಂಟರ್ ನೆಟ್

ವಿಜಯ್ ಖುರ್ಸಾಪೂರ ಬರೆದ ಕವಿತೆಗಳು

ವೃತ್ತಿಯಿಂದ ಏರೋಸ್ಪೇಸ್ ಇಂಜಿನಿಯರ್ ಆಗಿರುವ ವಿಜಯ್ ಖುರ್ಸಾಪೂರ, ಹುಟ್ಟಿದ ಊರು ಶಿಗ್ಗಾವಿ (ಜಿಲ್ಲೆ ಹಾವೇರಿ ), ಓದಿದ್ದು ಧಾರವಾಡ, ಗದಗ. ಬೆಂಗಳೂರು. ಹೈದರಾಬಾದ ಮತ್ತು ಕೆನಡಾದಲ್ಲಿ ನೆಲೆಸಿ, ೪ -೫ ಏರೋಸ್ಪೇಸ್ ಕಂಪನಿಗಳಲ್ಲಿ ಕೆಲಸ ಮಾಡಿ, ಅವರು ಕಳೆದ ೧೦ ವರ್ಷಗಳಿಂದ ಇಂಗ್ಲೆಂಡ್ ನಲ್ಲಿ ನೆಲೆಸಿದ್ದಾರೆ. ಅವರ ಕೆಲವು ಕವನಗಳು ಇಲ್ಲಿವೆ, ನಿಮ್ಮ ಓದಿಗೆ. ನಿಮ್ಮ ಪ್ರೋತ್ಸಾಹ ಮತ್ತು ವಿಮರ್ಶೆ ಅವರಿಗೆ ಇನ್ನಷ್ಟು ಬರೆಯಲು ಮತ್ತು ತಿದ್ದಿಕೊಳ್ಳಲು ಅನುವುಮಾಡಿಕೊಡುತ್ತದೆ. – ಸಂ 

ಹಣತೆ

ಬೆಳಗಿದಾಗಲೆಲ್ಲ ಬೆಳಕು
ತನ್ನ ತಾ ಸುಟ್ಟರೂ ಜಗಕೆಲ್ಲ
ತೋರುತಿಹುದು ದಾರಿ,
ನಿರಂತರವಾಗಿ ಹೊಡೆದಾಡುತ
ಕತ್ತಲನು ಕಳೆಯಲು ಹೆಣಗಾಡುತಿದೆ..

ಸುತ್ತಲೂ ಕತ್ತಲು ಕವಿದ
ಬಡ ಹೃದಯಗಳಿಗೆ
ಬೆಳಕಿನ ಕಣ್ಣಂತೆ
ನಾಳೆಯ ಮುಟ್ಟುವ
ಭರವಸೆಯ ಆಸರೆಯಂತೆ
ಬೆಳಗುತಿದೆ ತನ್ನ ತಾ ಸುಡುತ

ದಾರಿ ತಪ್ಪಿಸುವುದಿಲ್ಲ
ನಂಬಿ ಹಿಂಬಾಲಿಸಿ ನೆಡೆದರೆ
ತುಂಬಿದ ಆಸೆಯ
ಕಣ್ಣುಗಳಿಗೆ ಶಾಂತಿಯ ಸಿರಿ
ತೋರುತ ಬೆಳಗಿದೆ
ತನ್ನ ತಾ ಸುಡುತ

ಮೇಲು ಕೀಳು ವರ್ಣ
ಸಂಪತ್ತಿಗೆ ಬದಲಾಗದ
ಬೆಳಕನು ಚಲ್ಲುತ ಸಾಗಿದೆ
ಕತ್ತಲೆಯ ಹಿಮ್ಮೆಟ್ಟಲು
ದುಡಿಯುತಿದೆ
ತನ್ನ ತಾ ಸುಡುತ.

ನೆಮ್ಮದಿಯ ಉಸಿರು

ಬೆಳಕ ನಾಚಿಸುವ
ನಗುವೊಂದು ಹರೆದಿದಿತ್ತು
ಕಲ್ಲೆದೆಯ ನಾಟಿ
ಹೃದಯಾನ ಮೀಟಿ
ನಡುಕಾನ ಹುಟ್ಟಿಸಿತ್ತು

ಕಾಣಲಾರದ ಚಂದಕೆ,
ಬೆರಗಾಗಿ ಕಣ್ಣು ಅರಳಿತ್ತು
ಹೊಸ ರಾಗದ ಮದ್ದಳೆ
ಮನಸಲ್ಲಿ ಮೂಡಿ ಎದೆ
ಗೂಡು ಕನಸೊಂದ ಕಟ್ಟಿತ್ತು

ಕತ್ತಲೆಯ ಮನಕೆ
ಕಿಟಕಿಯ ಮೂಲೆಯಲಿ
ನಂಬಿಕೆಯ ಆಸರೆ ಹನಿ
ಹನಿಯಾಗಿ ಸೊರಿತ್ತು
ಬೆಚ್ಚಗಿನ ಸೂರಲ್ಲಿ
ಹೊದಿಕೆಯ ಅಡಿಯಲ್ಲಿ
ನೆಮ್ಮದಿಯ ಉಸಿರು ಬಿಟ್ಟಿತ್ತು

ಆಸೆಯ ಗುರಿ

ಹಚ್ಚ ಹಸುರಿನ ತೋಟದಲ್ಲಿ, ಅತ್ತಿತ್ತ
ಹರಿದಾಡಿದ್ದ ಚಿಟ್ಟೆಯನು,
ಅರಳಿದ್ದ ಸೊಗಸೊಂದು ಒಲವಿನ
ನಗೆಯ ಬೀರಿ ಕರೆಯುತಿರಲು
ಆಗದಿರಲಿ ಕನಸಿನ ಸುಲಿಗೆ; ತೆರೆ
ಬಿಳದಿರಲಿ, ಇನ್ನೇನು ಉಲ್ಲಾಸದಿ ತೇಲುವ ಆಸೆಯ ಗುರಿಗೆ

ಸಾಧನೆಯ ಫಲಗಳೆಲ್ಲ ಕಣ್ಮುಂದೆ ಕಂಡು,
ಸಂತಸದಲಿ ಮನ, ಗರಿ ಬಿಚ್ಚಿ
ಕುಣಿಯಲು ಅಣಿಯಾಗುತಿರಲು
ಆಗದಿರಲಿ ಕನಸಿನ ಸುಲಿಗೆ; ತೆರೆ
ಬಿಳದಿರಲಿ, ಇನ್ನೇನು ಉಲ್ಲಾಸದಿ ತೇಲುವ ಆಸೆಯ ಗುರಿಗೆ

ನಿದ್ದೆ

ಗೊತ್ತು ಗುರಿ ಇಲ್ಲದೆ
ನಾ ಸುಮ್ಮನೆ ಗುಮ್ಮನಂತೆ
ಸಾಗುತ್ತಿರಲು ನಿನ್ನ
ದರುಶನದ ಭಯಕೆಯೇ
ನನಗೆ ಸ್ಫೂರ್ತಿ .

ಹೊತ್ತು ಹೋದಂತೆ
ದೇಹ ಸೋತು,
ನಿನಗಾಗಿ ಅರಸಿ ನಾ
ಸೊರಗಿರುವೆ ಪೂರ್ತಿ

ತಡವಾದರೂ ಚಿಂತೆಯಿಲ್ಲ
ಮಲಗುವ ವೇಳೆ ಮೀರಿದರೆ
ಹಿತವಲ್ಲ,
ಮರೆಯದೆ ಬಂದು
ಆವರಿಸಿ ಬೆಳಗು ಕೀರ್ತಿ

ಭಾವನೆಗೆ ಬೆಲೆ

ಸಂತಸವ ಅರಸಿ ಬಾಳನ್ನು ಸವೆಸಿ
ನೆಡೆಯುತ್ತ ಹೋದ ದಾರಿಯಲಿ
ಕಲ್ಲು ಮುಳ್ಳು ಗಳೇ ಹೆಚ್ಚು ಇಲ್ಲಿ
ದಾಹ ಮರೆತು ಹೆಜ್ಜೆ ಮುಂದಿಡುತ್ತ
ನೆಡೆದರೂ ಹನಿ ನೀರ ಎರಚುವರ
ಸಂಖ್ಯೆ ಅತೀ ಕಡಿಮೆ ಇಲ್ಲಿ
ಬಿದ್ದಾಗ ಚುಚ್ಚುತ್ತ ಗೆದ್ದಾಗ
ಕಿಚ್ಚಿನಲ್ಲಿ ಹೊರಳಾಡುವರರ
ಸಂಖ್ಯೆಗೇನು ಕಮ್ಮಿ ಇಲ್ಲಿ?
ಭಾವನೆಗೆ ಬೆಲೆ ಕೊಡುವವರು ಯಾರಿಲ್ಲಿ

ಕ್ಷಣಿಕ ಸುಖಕ್ಕೆ ಬೆಲೆ ಕೊಟ್ಟು
ನಂಬಿದವರ ಕೈ ಬಿಟ್ಟು
ಮತ್ತೆ೦ಬ ಮದವ ಕುಡಿದು
ಕಾಣದ ಆಸೆಗೆ ತುಡಿದು
ಮೋಸ ಮಾಡುವವರೇ ಹೆಚ್ಚು ಇಲ್ಲಿ
ಭಾವನೆಗೆ ಬೆಲೆ ಕೊಡುವವರು ಯಾರಿಲ್ಲಿ

ಅಳುತಿರಲು ಹೃದಯ ಮೌನದಲಿ
ಭಾವನೆಗೆ ಬೆಲೆ ಕೊಡುವವರು ಯಾರಿಲ್ಲಿ?