ನಾಟಿಂಗ್‌ಹ್ಯಾಮಿನ ನೆಲದಿಂದ — ಕನ್ನಡ ಕಾವ್ಯದ ಮೂರು ದನಿಗಳು

ಕನ್ನಡ ಭಾಷೆ ಕೇವಲ ಕರ್ನಾಟಕದ ಮಣ್ಣಿಗೆ ಸೀಮಿತವಾಗಿಲ್ಲ — ಅದು ಕನ್ನಡಿಗರ ಉಸಿರಿನಲ್ಲಿ ಎಲ್ಲೆಲ್ಲೂ ಹರಿಯುತ್ತದೆ ಎಂಬುದಕ್ಕೆ ಟಿ. ಆರ್. ನಾರಾಯಣ್ ಅವರ ಕವಿತೆಗಳು ಜೀವಂತ ನಿದರ್ಶನ. ಇಂಗ್ಲೆಂಡಿನ ನಾಟಿಂಗ್‌ಹ್ಯಾಮ್‌ನಿಂದ ರಚಿತವಾದ ಈ ಮೂರು ಕವಿತೆಗಳು ಭಿನ್ನ ಭಿನ್ನ ಭಾವಪ್ರಪಂಚಗಳ ಬಾಗಿಲು ತೆರೆಯುತ್ತವೆ.

“ಹಿರಿ ಹಕ್ಕಿಯುಲಿತ ಅನನ್ಯಾನುಭವ ಹಿತವಚನ” — ಬಣ್ಣಬಣ್ಣದ ಹಕ್ಕಿಗಳ ಕಲಾಕೃತಿಯಿಂದ ಸ್ಫೂರ್ತಿ ಪಡೆದ ಈ ಕವಿತೆ ಹತ್ತು ಪದ್ಯಗಳ ಮಾಲೆ. ಸಂಬಂಧಗಳ ಸ್ವರೂಪ, ಸತ್ಯಸಂಧತೆ, ಜೀವನದ ಗುರಿ, ದಯಾಶೀಲತೆ — ಇವುಗಳ ಕುರಿತು ಹಿರಿ ಅನುಭವಿ ನೀಡುವ ಹಿತವಚನಗಳಂತೆ ಪ್ರತಿ ಪದ್ಯವೂ ಮನಮುಟ್ಟುತ್ತದೆ.

“ವಸಂತಾಗಮನ” — ಶಿಶಿರದ ತಣ್ಣನೆಯ ಕೊರೆತದ ನಂತರ ಬರುವ ವಸಂತ ಋತುವನ್ನು ಕವಿ ಇಲ್ಲಿ ಕೇವಲ ಪ್ರಕೃತಿ ಬದಲಾವಣೆಯಾಗಿ ಕಾಣದೆ ಮನುಷ್ಯನ ಆಂತರಿಕ ನವಚೇತನದ ಸಂಕೇತವಾಗಿ ಕಾಣುತ್ತಾರೆ. ನಾಟಿಂಗ್‌ಹ್ಯಾಮಿನ ಮುದಯಾನ ಬಿಳಿ ಮೋಡ, ರವಿಕಿರಣ, ಬಿಸಿಲ ಕೋಲುಗಳ ಚಿತ್ರಣ ಕನ್ನಡ ಛಂದಸ್ಸಿನ ಲಯದಲ್ಲಿ ಸುಂದರವಾಗಿ ಮೂಡಿ ಬಂದಿದೆ.

“ವಿಲಯವಾದವರ ಹುಡುಕಾಟದಲ್ಲಿ” — ಈ ಕವಿತೆ ಮೂರರಲ್ಲಿ ಅತ್ಯಂತ ಆಳವಾದ ತಾತ್ವಿಕ ಕೃತಿ. ತೀರಿಕೊಂಡ ಪ್ರಿಯರನ್ನು ಹುಡುಕುವ ಮನಸ್ಸಿನ ವ್ಯಾಕುಲ, ಅವರ ಅಸ್ತಿತ್ವ ಮತ್ತು ಅನಸ್ತಿತ್ವದ ನಡುವಿನ ತೊಳಲಾಟ, ಮಂಕುತಿಮ್ಮನ ಕಗ್ಗದ ದರ್ಶನದ ಉಲ್ಲೇಖದೊಂದಿಗೆ ಜೀವನ-ಮರಣದ ಸತ್ಯವನ್ನು ಸ್ವೀಕರಿಸುವ ಹಾದಿ — ಇವೆಲ್ಲ ಓದುಗರ ಅಂತರಂಗವನ್ನು ತಟ್ಟದೇ ಇರಲಾರವು.

ತಮ್ಮ ಪ್ರತಿ ಕವಿತೆಯ ಜೊತೆ ಶಬ್ದ ವಿಭಾಗ, ಅರ್ಥ ಮತ್ತು ವ್ಯಾಕರಣ ಟಿಪ್ಪಣಿಗಳನ್ನು ನೀಡುವ ಅವರ ಕ್ರಮ ಕನ್ನಡ ಭಾಷೆಯ ಮೇಲಿನ ಆಳವಾದ ಪ್ರೀತಿ ಮತ್ತು ಪಾಂಡಿತ್ಯವನ್ನು ತೋರಿಸುತ್ತದೆ. KBUK ಕುಟುಂಬದ ಪ್ರೀತಿಯ ಕವಿ ಟಿ. ಆರ್. ನಾರಾಯಣ್ ಅವರ ಈ ಮೂರು ಕವಿತೆಗಳನ್ನು ಓದುಗರ ಮುಂದೆ ತರಲು ನಮಗೆ ಸಂತೋಷವಾಗುತ್ತಿದೆ.

ಕವಿ ಪರಿಚಯ

ಟಿ. ಆರ್. ನಾರಾಯಣ್ ಅವರು ಕರ್ನಾಟಕ ವಿದ್ಯುತ್ ಮಂಡಳಿಯಲ್ಲಿ (KEB) ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅಭಿಯಂತರರು. ತಾಂತ್ರಿಕ ವೃತ್ತಿಜೀವನದ ಹೊರತಾಗಿಯೂ ಕನ್ನಡ ಕಾವ್ಯದ ಮೇಲಿನ ಪ್ರೀತಿ ಅವರನ್ನು ಯಾವತ್ತೂ ಬಿಟ್ಟಿಲ್ಲ. ನಿವೃತ್ತಿಯ ನಂತರ ಅವರು ವರ್ಷದ ಅರ್ಧಭಾಗವನ್ನು ಇಂಗ್ಲೆಂಡಿನ ನಾಟಿಂಗ್‌ಹ್ಯಾಮ್‌ನಲ್ಲಿ ಕಳೆಯುತ್ತಾರೆ — ತಮ್ಮ ಮಗಳು, KBUK ಉಪಾಧ್ಯಕ್ಷರೂ, ಪ್ರಸಿದ್ಧ ಭರತನಾಟ್ಯ ಕಲಾವಿದರೂ ಮತ್ತು ತಜ್ಞ ವೈದ್ಯರೂ ಆದ ಡಾ. ಸುಮನಾ ನಾರಾಯಣ್ ಅವರ ಜೊತೆ. ಅರ್ಧ ಅನಿವಾಸಿ ಕನ್ನಡಿಗರಾದ ಟಿ. ಆರ್. ನಾರಾಯಣ್ ಅವರು ವಿದೇಶದ ನೆಲದಲ್ಲಿ ಕುಳಿತು ತಾಯ್ನಾಡಿನ ಭಾಷೆಯಲ್ಲಿ ಕಾವ್ಯ ರಚಿಸುವ ಮೂಲಕ ಕನ್ನಡ ಸಾಹಿತ್ಯದ ಜ್ಯೋತಿಯನ್ನು ಪರದೇಶದಲ್ಲೂ ಬೆಳಗಿಸುತ್ತಿದ್ದಾರೆ. ಅವರ ಕವಿತೆಗಳಲ್ಲಿ ಶಾಸ್ತ್ರೀಯ ಕನ್ನಡದ ಸಂಧಿ-ಸಮಾಸಗಳ ಬಳಕೆ, ತಾತ್ವಿಕ ಚಿಂತನೆ ಮತ್ತು ಜೀವನಾನುಭವದ ಸಾರ ಒಟ್ಟಾಗಿ ಮಿಳಿತವಾಗಿವೆ.

-ಸಂ

ಗಮ್ಯ ತಲುಪದ ಕವಿತೆಗಳು!

ಅನಿವಾಸಿ ಓದುಗರಿಗೆಲ್ಲ ನಮಸ್ಕಾರ,
ನಾಳೆ ಪ್ರೇಮಿಗಳ ದಿನಾಚರಣೆ. ಹಳೆಯ ಡೈರಿಯಲ್ಲಿ ಎಂದೋ ಬರೆದಿಟ್ಟ, ಮತ್ತು ಅಲ್ಲೇ ಉಳಿದು ಹೋದ ಒಂದಷ್ಟು ಬಾಲಿಶ ಕವಿತೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಬಿಡುವಾದಾಗ ಓದಿ, ಎಂದಿನಂತೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸುವುದ ಮರೆಯಬೇಡಿ
ವಂದನೆಗಳು
ಅಮಿತಾ ರವಿಕಿರಣ್


ವರವಾಗಿ ದಕ್ಕಿದ ಮನಸೇ

ಇದೀಗ ಮತ್ತೆ ನಿನ್ನ ಕನಸೊಂದು ಬಿತ್ತು
ಮಳೆ ಬಿದ್ದು ಮಿದುವಾದ ಕೆಮ್ಮಣ್ಣ
ನೆಲೆದಮೇಲೆ, ಪಾರಿಜಾತವೊಂದು ಬಿದ್ದು
ಮೈ ನೋಯಿಸಿಕೊಂಡಂತೆ

ನೀ ಕದ್ದು ಲೂಟಿ ಮಾಡಿ
ಕೂಡಿಟ್ಟ ನನ್ನ ನಿದ್ದೆಯ ರಾಶಿಯಲ್ಲಿ
ಒಮ್ಮೆಯಾದರೂ ಇಣುಕಿದ್ದೀಯ ?
ಎಂತೆಂಥ ಅದ್ಬುತ ಕನಸುಗಳಿವೆ ಗೊತ್ತೇ ಅಲ್ಲಿ?
ಎಲ್ಲವೂ ನಿನ್ನವೇ,
ಆದರೆ
ನನಗೆ ಲೆಕ್ಕ ಬರದು,
ನಿನಗೆ ಎಣಿಸಲು ಸಮಯವಿರದು

ನಿನ್ನ ನೋಡಬೇಕು ಎನಿಸುವುದೇ
ಈ ಹಾಳು ರಾತ್ರಿಗಳಲ್ಲಿ
ಆಗೆಲ್ಲ ಬಾನ ಸುತ್ತಗಲ ಅಳೆಯುತ್ತೇನೆ
ಕಣ್ಣಿನಳತೆಗೆ ಸಿಗುವ ಚಿಕ್ಕಿ ತಾರೆಗಳನ್ನೆಲ್ಲ
ನಿಟ್ಟಿಸುತ್ತೇನೆ
ನಿನ್ನ ಕೋಣೆಯ ಆ ಕೊನೆಯ
ಕಿಟಕಿಯಿಂದ ಇವೇ
ನಕ್ಷತ್ರ ಕಾಣುತ್ತವೆ, ನೀನೂ
ನೋಡುತ್ತಿರಬಹುದೇನೋ
ಅಂದುಕೊಂಡು
ನನ್ನ ಹುಚ್ಚಿಗೆ ನಾನೇ ನಗುತ್ತೇನೆ

ಒಮ್ಮುಖ ಪ್ರೀತಿಯ
ಚಲುವೆ ಇದು,
ಕಲ್ಪನೆಯ ಕಟ್ಟಡಕ್ಕೆ
ಪಾಯ ಗೋಡೆಯೂ
ಬೇಡ,

ಇಷ್ಟಕ್ಕೂ ನಾನು ಪ್ರೀತಿಸುತ್ತಿರುವುದು
ನಿನ್ನನ್ನೋ,
ನಿನ್ನ ಕುರಿತು
ನಾನೇ ರೂಪಿಸಿಕೊಂಡ
ನನ್ನ ಕಲ್ಪನೆಯನ್ನೋ
ಇನ್ನೂ ನಿಚ್ಚಳವಾಗಿಲ್ಲ!
ಈ ಸಲ ನಿದ್ದೆ ಮಾಡಲು ಬಿಟ್ಟರೆ
ಖಂಡಿತ ಉತ್ತರ ಹುಡುಕಿಕೊಂಡು
ಬರುವೆ
- ಸಖಿ
(picture; Nandini MB/ Amita Ravikirana

ರಂಗೋಲಿಯಂಥ ಹುಡುಗ...

ಇಂದು ನಿನ್ನ ಆ ಮಾತಿನ ಚುಕ್ಕಿಯಿಂದ
ಈ ಮಾತಿನ ಚುಕ್ಕಿಗೆ ಎಳೆಯುತ್ತಿದ್ದ
ಸರಳ ವಕ್ರ ರೇಖೆಗಳನ್ನು
ಮಿಸ್ ಮಾಡಿಕೊಳ್ಳುತ್ತಿದ್ದೇನೆ.

ಯಾಕೆ ಹೀಗೆ?
ನಿನಗೀಗ ಬೆಳಗಿನ ಜಾವದ ಸಿಹಿ ನಿದ್ದೆ
ಕನಸಿನಲ್ಲಿ ನಗ್ತಿದ್ದೀಯಾ ?
ಏನೋ ಕನವರಿಸುತ್ತಾ ಇರಬಹುದು ನೀನೀಗ,
ನನಗೊಂದು ದಿವ್ಯಶಕ್ತಿ ಇದ್ದಿದ್ದರೆ
ನಾನೀಗ ಒಮ್ಮೆ ನಿನ್ನ ಕೋಣೆಯನೊಮ್ಮೆ ಹೊಕ್ಕು
ನಿನ್ನ ಹಣೆ ನೇವರಿಸಿ ಬರುತ್ತಿದ್ದೆ.
ಹ್ಮ್ ಅಷ್ಟೇ!ಅದಕ್ಕಿಂತ ಹೆಚ್ಚು ಕಡಿಮೆ
ಏನೂ ಇಲ್ಲ...

ನೀ ಕಾಡುವುದಿಲ್ಲ ಪ್ರೇಮಿಯಂತೆ,
ನೀ ಬೇಡುವುದಿಲ್ಲ ಯಾಚಕನಂತೆ
ನೀ ನಿರ್ಲಿಪ್ತ, ನಿತ್ಯತೃಪ್ತ
ಗದರಬೇಕು ಅನ್ನಿಸುತ್ತದೆ
ನೀ ಎಲ್ಲರಂತೆ ಯಾಕಿಲ್ಲ ಎಂದು,
ನೀ ನನ್ನ ಕಾಡಿದಷ್ಟು ನೆನಪಾದಷ್ಟು
ನಿನಗೆ ನನ್ನ ನೆನಪಾಗುವುದಿಲ್ಲ ಗೊತ್ತು
ಅದು ನಿನ್ನ ಸಮಸ್ಯೆ ಅಲ್ಲ ಬಿಡು!
ನೀನು ಇರುವುದಕ್ಕೇ ನಾನು ಮಾತ್ರ ಶ್ರಾವಣದ ನವಿಲು
ಚೈತ್ರದ ಚಿಗುರು, ಒಗರು ಒಗರು
ಈ ಪ್ರೀತಿಯಲ್ಲಿ ನನ್ನದೊಂದು ಅವಸ್ಥೆ
ಯಾಕೆಂದರೆ ನಾನು ಸದಾ ಕಾಲ ನಿನ್ನ ಧ್ಯಾನಸ್ಥೆ

- ಸಖಿ

ಹೇ ಕೇಳಿಲ್ಲಿ,

ಬಾನ ಮಲ್ಲಿಗೆಯ ಹೂಗಳನ್ನು ಹೆಕ್ಕಿ
ಒಂದು ಚಂದದ ದಂಡೆ ಕಟ್ಟಿ
ಮುಡಿಯಬೇಕು ಎನಿಸಿದೆ
ನೀನೂ ಬರ್ತೀಯ ಜೊತೆ?
ಹೂ ಹೆಕ್ಕೋಣ!

ಈ ಕಾಲದಲ್ಲೇ ನೋಡು
ಹಾಡಿಯ ಅಂಚಲ್ಲಿ
ಬೆಣಸು, ಚೂರಿ, ಮುಳ್ಳಣ್ಣು
ರಾಶಿ ರಾಶಿ ಸಿಗುತ್ತವೆ ,
ಆ ಹುಳಿ ಬೋರೆ ಹಣ್ಣುಕೂಡ ಹಳದಿಯಿಂದ
ಮೆತ್ತಗೆ ಕಂದು ಬಣ್ಣಕ್ಕೆ ತಿರುಗಿರುತ್ತದೆ
ಎಲ್ಲವನ್ನೂ ಆಯ್ದು ಆ ಪುಟ್ಟ ಕುಕ್ಕೆಯಲ್ಲಿ
ಹಾಕಿಕೊಂಡು, ಯಾರಿಗೂ ಕೊಡದೆ
ತಿನ್ನಬೇಕು ಅನ್ನಿಸಿದೆ, 
ಬರ್ತೀಯ ಜೊತೆಗೆ? 
ನೀ ಬಂದರೆ ಕವಳಿ ಹಣ್ಣೂ ಕೊಯ್ಯಬಹುದು
ಬುಟ್ಟಿ ಇನ್ನಷ್ಟು ತುಂಬುತ್ತದೆ!
ದಾರಿಯೂ ಬೇಗ ಸವೆಯುತ್ತದೆ.

ಬೇಳೆ ಹೂವಿನ ಸಾರುಮಾಡಿ
ಬಳ್ಳಿ ಸೊಪ್ಪಿನ ಪಲ್ಯಮಾಡಿ
ಕೆಂಪಕ್ಕಿಅನ್ನಕ್ಕೆ ಒಂದು ಚೂರೇ ಚೂರು
ತುಪ್ಪ ಹಾಕುವೆ, ಊಟ ಮುಗಿಸು
ಕಡೆದ ಮಜ್ಜಿಗೆ ಕುಡಿದು
ಕಣ್ಣು ಎಳೆದು ಬರುವಾಗ,
ಇನ್ನೇನು ನಿನ್ನ ಬಾಯಿಂದ ಅನ್ನದಾತೆ ಸುಖಿಯಾಗಿರು
ಎನ್ನುವ ಮಾತು ಬರುವ ಮೊದಲೇ,

ಮತ್ತೆ ಊರ ತಿರುಗಲು
ನನ್ನೂರ ಇಂಚಿಂಚು ಸುತ್ತಿಬರಲು
ನಿನ್ನ ಎಳೆದುಕೊಂಡು
ಹೋಗಬೇಕಿದೆ,
ಬರ್ತೀಯ?

ನಿನಗೆ ಪ್ರೀತಿ ಎಂದರೆ ಹೇಗೋ ಏನೋ
ನನಗೆ ಗೊತ್ತಿಲ್ಲ,
ನನಗೆ ಮಾತ್ರ
ನನ್ನಿಷ್ಟದ ಎಲ್ಲ ಗಳಿಗೆಗಳಿಗೂ
ನಿನ್ನನ್ನು ಪರಿಚಯಿಸುವುದು
ನನ್ನ ಬದುಕಿನ ಎಲ್ಲ
ಖುಷಿ, ಬೆರಗು, ನೆಮ್ಮದಿಯಲ್ಲಿ
ನನ್ನ ಜೊತೆ ನಿನ್ನ ಹೆಜ್ಜೆಯೂ
ಇರುವುದೇ
ಪ್ರೀತಿ