೫೦ ವರ್ಷದ ಇಲ್ಲಿಯ ಜೀವನ – ರಾಮಮೂರ್ತಿ ಬೇಸಿಂಗ್ಸ್ಟೊಕ್

ಈಗ:

1ನಮ್ಮ ೫೦ ನೆ ವರ್ಷದ wedding anniversary ಯನ್ನು ನಮ್ಮ ಇಬ್ಬರು ಮಕ್ಕಳು ಬಹಳ ಸಂಭ್ರಮದಿಂದ ಆಚರಿಸದರು. ಅಗಸ್ಟ್ ೧೫ ಭಾರತಕ್ಕೆ ಸ್ವತಂತ್ರ ಬಂದ ದಿನ ಇರಬಹುದು, ಆದರೆ ಆ ದಿನ ನನ್ನ ಸ್ವಾತಂತ್ರ ಕಳೆಯಿತು ಅಂತ ಕೆಲವರು ಪಿಸುಗುಟ್ಟಿದ್ದು ನನ್ನ ಕಿವಿಗೊ ಬಿತ್ತು ಅನ್ನಿ!!

ನಮಗೆ ಮಕ್ಕಳಿಂದ ಒಂದೇ ಒಂದು ಮೆಸೇಜ್ ಸುಮಾರು ೨ ತಿಂಗಳ ಹಿಂದೆ, ನೀವಿಬ್ಬರು ನಮ್ಮ ಜೊತೆ ೩ ದಿನ ಇರುತ್ತೀರ ಆದರೆ ಎಲ್ಲಿ ಏನು ಅಂತ ಕೇಳಬೇಡಿ ನಾವು ಎಲ್ಲ arrangements ಮಾಡುತ್ತೇವೆ. ಸರಿ, ಹಿಂದಿನ ದಿನ ನಮ್ಮ ಮಗ ಮತ್ತು ಸೊಸೆ ಇಬ್ಬರು ದುಬೈ ಇಂದ ಬಂದರು, ಮಾರನೆ ದಿನ ೧೦ ಗಂಟೆಗೆ ಟ್ಯಾಕ್ಸಿ ಬಂತು ಎಲ್ಲಿಗೆ ಹೋಗ್ತೀವಿ ಅಂತ ನಾವು ಕೇಳಲಿಲ್ಲ ಅವರು ಹೇಳಲಿಲ್ಲ. ಸ್ಟೇಷನ್ ನಲ್ಲಿ ತಿಳೀತು ಲಂಡನ್ ಅಂತ. ವಾಟರ್ಲೂನಲ್ಲಿ ನಮ್ಮ ಮಗಳು ಅಳಿಯ ಇಬ್ಬರು ನಮ್ಮನ್ನು ಸ್ವಾಗತಿಸದರು.

The Hoxton ನಲ್ಲಿ ನಮ್ಮ ೩ ದಿನದ ವಾಸ ಅಂತ ತಿಳೀತು. ನಾಬ್ಬರು ಸಸ್ಯಾಹಾರಿಗಳು, ಅದರಲ್ಲೂ ನನ್ನ ಪತ್ನಿ ಸೀತು ಸ್ವಲ್ಪ fussy ಅಂತ ಹೇಳಿದರೆ ಏನು ತಪ್ಪಿಲ್ಲ. ಸುಪ್ರಸಿದ್ದ ಲಂಡನ್ ಹೋಟೆಲ್ The Savoy ನಲ್ಲಿ ನಮ್ಮಊಟಕ್ಕೆ ( champagne lunch) ಏರ್ಪಾಡು ಆಗಿತ್ತು. ನಮ್ಮ ಮಗಳು ಹೋಟೆಲ್ ಗೆ ಫೋನ್ ಮಾಡಿದಾಗ menu ವಿಚಾರ ಬಂತು. “ನಮ್ಮ ತಂದೆ ಪರವಾಗಿಲ್ಲ ಎಲ್ಲ ತಿಂತಾರೆ ಆದರೆ ನಮ್ಮ ತಾಯಿಗೆ chips ಅಂದರೆ ಬಹಳ ಇಷ್ಟ, ಅದು ಮಾಡುತ್ತೀರ ?” ಪಾಪ Savoy ನವರಿಗೆ ಚೇತರಿಸಿಕೊಳ್ಳುವುದಕ್ಕೆ ಕೆಲವು ನಿಮಿಷಗಳು ಬೇಕಾಯಿತು ಅಂತ ಕಾಣತ್ತೆ , ಇದುವರೆಗೂ ಅವರನ್ನ ಯಾರೋ ಚಿಪ್ಸ್ ಕೇಳಿರಲ್ಲಿಲ್ಲ “let me talk to the chef ” ಅಂತ ಹೇಳಿ ಕೆಲವು ನಿಮಷದ ನಂತರ ಬಂದು “chef will be pleased to accommodate your special request” ಹೇಳಿದಳಂತೆ. ಯಾರೋ ಇಲ್ಲಿ ಚಿಪ್ಸ್ ಕೇಳಿರಲ್ಲಿಲ್ಲ ಅಂತ ಅವರೆಲ್ಲಾ ಮಾತನಾಡಿ ನಕ್ಕಿರಬೇಕು. ಆದರೆ ಒಂದು ಮಾತು ಹೇಳಬಲ್ಲೆ ಈ ಚಿಪ್ಸ್ ತಿಂದಮೇಲೆ, Savoy ನಲ್ಲಿ ಮಾಡುವ ಹಾಗೆ ಇನ್ನಾರು ಇಷ್ಟು ರುಚಿಯಾಗಿ ಮಾಡಲಾರು. ವಿಪರೀತ ಬೆಲೆ ಇರಬಹುದು ಆದರೆ ಅದರ ಮಜಾ ಇನ್ನೆಲ್ಲಿ ?

ಹೀಗೆ ಮೂರು ದಿನ ಲಂಡನ್ನಿನಲ್ಲಿ ಕಳೆದು ಎಲ್ಲ ಕಡೆ ಚೆನ್ನಾಗಿ ಸುತ್ತಿ Bend it like Beckham musical ನೋಡಿ ಆನಂದಿಸಿದೆವು. ಇಲ್ಲಿ ಬಹಳ ಹಳೇ ಕಾಲದ Pub ಗಳು ಇವೆ. ಇವುಗಳನ್ನು(ಕೆಲವು ಮಾತ್ರ!) ಭೇಟಿ ಮಾಡಿ. ಆಕ್ಸಫ಼ರ್ಡ್ ರಸ್ತೆ ಹತ್ತಿರ ಒಂದು ಸೊಗಸಾದ ರೋಟಿ ಚಾಯ್ ಅನ್ನುವ ಕೆಫೆ ಇದೆ. ಇಲ್ಲಿ ತಿಂಡಿ ಚೆನ್ನಾಗಿರುತ್ತೆ.

ಸರಿ, ಮನೇಗೆ ಬಂದಮೇಲೆ ನಮಗೆ ಒಳ್ಳೇ ಪ್ರೆಸೆಂಟ್ ಇತ್ತು. ನಮ್ಮ ಅಳಿಯ, ಟೋನಿ , ಈಗ ಸುಮಾರು ೬ ತಿಂಗಳಿಂದ pottery ಕಲಿತ ಇದ್ದಾನೆ. ಅಲ್ಲಿ ಒಂದು ಗಣೇಶನ ಮೂರ್ತಿ ಅದಕ್ಕೆ ತಾನೆ ಫ್ರೇಮ್ ಹಾಕಿದ್ದಾನೆ. ಒಟ್ಟಿನಲ್ಲಿ ಈ ಕೆಲವು ದಿನಗಳು ಬಹಳ ಚೆನ್ನಾಗಿತ್ತು

ಸರಿ, ಇದು ಈಗಿನ ಕಥೆ.

೫೦ ವರ್ಷದ ಹಿಂದೆ ಏನಾಯ್ತು ಅಂತ ಕೇಳಿ (ಇಷ್ಟ ಇದ್ದರೆ).

ಆಗ:

ನೀವು ಈಚೆಗೆ, ಅಂದರೆ ಸುಮಾರು ಹದಿನೈದು ವರ್ಷಗಳ ಹಿಂದೆ ಬಂದಿದ್ದರೆ,  ತುಂಬಾ ಪುಣ್ಯವಂತರು. ಏಕೆ ಅಂದರೆ, ನೀವು ಬರೋ ಹೊತ್ತಿಗೆ ಎಲ್ಲ ಪ್ರಾಬ್ಲಮ್ ಗಳೂ ಮುಕ್ಕಾಲು ಭಾಗ ಸಾಲ್ವ್ ಆಗಿತ್ತು.

ಉದಾಹರಣೆಗೆ,
• Race Relations Act ಜಾರಿಗೆ ಬಂದು ಅನೇಕ ವರ್ಷಗಳಾಗಿತ್ತು, ಅದ್ದರಿಂದ ಕೆಲಸದಲ್ಲಿ ತೊಂದರೆ ಕಡಿಮೆ
• ಮನೆಗಳು ಬಾಡಿಗೆ ಅಥವಾ ಕ್ರಯಕ್ಕೆ ಸಿಗತ್ತೆ
• ನಿಮ್ಮ ಮಕ್ಕಳ ಶಾಲೆಯಲ್ಲಿ ದೀಪಾವಳಿ ಆಚರಿಸುತ್ತಾರೆ
• ನಿಮ್ಮ ಮಕ್ಕಳಿಗೆ ಸಂಗೀತ ಅಥವಾ ನೃತ್ಯ ಪಾಠಕ್ಕೆ ಏನೂ ತೊಂದರೆ ಇಲ್ಲ
• ನಿಮ್ಮ ಮನೇಗೆ ಬೇಕಾದ ಸಾಮಾನುಗಳು -ಅಕ್ಕಿ, ಬೇಳೆ ತರಕಾರಿ ಎಲ್ಲ ಕಡೇ ಧಾರಾಳವಾಗಿ ಸಿಗುತ್ತೆ
• Do you speak English? ಅಂತ ಯಾರು ಕೇಳಲ್ಲ,
• ನಾನು ಸಸ್ಯಾಹಾರಿ ಅಂದರೆ ಯಾರಿಗೋ ಶಾಕ್ ಆಗೋಲ್ಲ,
• ಬೇಕಾದಷ್ಟು ದೇವಸ್ಥಾನಗಳು ಇದೆ

ಈ ದೇಶದ ಪ್ರಧಾನ ಮಂತ್ರಿ ಆಗಿದ್ದ Sir Herald McMillan ೧೯೬೦ರಲ್ಲಿ ಇಲ್ಲಿ ಜನಗಳಿಗೆ ಹೇಳಿದಂತೆ  “You never had it so good” ಇದು ನಿಮಗೆ ಅನ್ವಯಿಸುತ್ತೆ ಈಗ.

2ಮಹಾಯುದ್ದ ಮುಗಿದು ಕೇವಲ ಇಪ್ಪತ್ತು ವರ್ಷ ಆಗಿತ್ತು ನಾನು ಬಂದಾಗ. ಲಂಡನ್ ಕೆಲವು ಭಾಗದಲ್ಲಿ ಇನ್ನು ಮನೆಗಳು ಪಾಳು ಬಿದ್ದದನ್ನು ನೋಡಿದ್ದೇನೆ. ನಮ್ಮ ಮೊದಲನೇ ಮನೆ, ಅಂದರೆ ಫ್ಲಾಟ್ ಇಲ್ಫ಼ರ್ಡ್ ನಲ್ಲಿ ಗ್ಯಾಂಟ್ಸ್ ಹಿಲ್ ಹತ್ತಿರ. ವಾರಕ್ಕೆ ೭ ಪೌಂಡ್ ಬಾಡಿಗೆ. ಅಂದ ಹಾಗೆ, Estate agent ನಿಮ್ಮ ಬಣ್ಣ ನೋಡಿ ಅಥವಾ ಐರಿಶ್ ಜನಗಳಿಗೆ ಮನೆ ಇಲ್ಲ ಅಂತ ಸುಳ್ಳು ಹೇಳಿದ್ರೆ ಏನು ಆಶ್ಚರ್ಯ ಇರಲಿಲ್ಲ, (not illegal). ಕೆಲವು ಕೆಲಸಗಳನ್ನ ಬಿಳಿ ಜನಗಳಿಗೆ ಮಾತ್ರ ಇತ್ತು. ಬ್ಯಾಂಕ್ ನಲ್ಲಿ ಮತ್ತು ಸಿಟಿಯಲ್ಲಿ, ಈಗ ನೋಡಿ, ನಮ್ಮಂಥವರು ಇಲ್ಲದೇ ಇರುವ ಜಾಗವೇ ಇಲ್ಲ.

ಏನು ಹೇಳಬಲ್ಲೆ ಅಂದರೆ, ಈಗಿನ ಇಂಗ್ಲೆಂಡ್ ೧೯೬೫ ಇಂಗ್ಲೆಂಡ್ ಬೇರೆ ಬೇರೆ ದೇಶಗಳು, ಅಷ್ಟೊಂದು ಬದಲಾವಣೆ ಆಗಿದೆ.

೧೯೬೫/೬೬ ರ ಸಂಸಾರದ ಬಗ್ಗೆ ಕೆಲವು ಮಾತನ್ನು ಹೇಳಬಹುದು. ನೋಡಿ ಅಗ ನನಗೆ ಸುಮಾರು ವರ್ಷಕ್ಕೆ £೧೪೦೦(ತಿಂಗಳಿಗಲ್ಲ!) Average National earnings ಆವಾಗ ಇದ್ದಕ್ಕಿಂತ ಕಡಿಮೆ ಇತ್ತು. ನಮ್ಮ ಸ್ನೇಹಿತರು ಇಬ್ಬರು ವೈದ್ಯರು ಆವಾಗ ತಾನೆ ಇಲ್ಲಿಗೆ ಬಂದಿದ್ದರು. ಪಾಪ ಅವರು ವಾರಕ್ಕೆ ೯೦ ಗಂಟೆ ಕೆಲಸ ಮಾಡಿ ಕೇವಲ £೧೦೦೦ ಸಂಬಳ !! ಆದರೆ ವಾರಕ್ಕೆ £೫ ನಮ್ಮ ದಿನಸಿಗೆ ಸಾಕಾಗಿತ್ತು. ಆವಾಗ decimal currency ಬಂದಿರಲ್ಲಿಲ್ಲ, ಹಳೆ ದುಡ್ಡು ೧೨ ಪೆನ್ಸ್ ಒಂದು ಶಿಲ್ಲಿಂಗ್, ೨೦ ಶಿಲ್ಲಿಂಗ್ ಒಂದು ಪೌಂಡ್. ಲಂಡನ್ ಟ್ಯೂಬ್ ನಲ್ಲಿ ೪ ಪೆನ್ನಿಗೆ ಎಲ್ಲಿ ಬೇಕಾದರು ಸುತ್ತಬಹುದಾಗಿತ್ತು

೧೯೭೦ ರ ಹಿಂದೆ ಹುಟ್ಟಿದ್ರೆ ಭಾರತದಲ್ಲಿ Afghan Snow ಅಂತ ಕ್ರೀಂ ನಿಮಗೆ ಗೊತ್ತಿರಬೇಕು. ಇದು ಹೆಂಗಸರ
( ಕೆಲವು ಗಂಡಸರು ಸಹ ) ಬ್ಯೂಟಿ ಏಡ್. ಅಂಗಡಿಲಿ ಸ್ನೋ ಅಂತಿದ್ದರು ೧೯೬೬ ಜೂನ್ ನಲ್ಲಿ ನನ್ನ ಪತ್ನಿ ಸೀತು ಇಲ್ಲಿಗೆ ಬಂದಳು. ಅವಳನ್ನು ಇಂಪ್ರೆಸ್ ಮಾಡುವುದಕ್ಕೆ ನಾನು ಎರಡು ದಿನದ ಹಿಂದೆ Timothy Whites (ಈಗ Boots) ಹೋಗಿ ಸ್ನೋ ಕೇಳಿದೆ. ಪಾಪ ಆಕೆ ಈ ಹುಡುಗನಿಗೆ (ಹುಡುಗನೆ, ನನಗೇನು ಅಷ್ಟೇನು ವಯಸ್ಸು ಆಗಿರಲ್ಲಿಲ್ಲ!) ಏನೂ ಗೊತ್ತಿಲ್ಲ ಅಂತ ತಿಳಿದು, “I am sorry, you can’t buy snow, to see snow you must wait until winter” ಅಂದಳು. ನಾನು ಬಿಡಲಿಲ್ಲ, ಇಲ್ಲ ನೋಡಿ ಇದು ಸಣ್ಣ ಬಾಟಲ್ನಲ್ಲಿ ಬರತ್ತೆ, ಹೆಂಗಸರು ಇದನ್ನು ಮುಖಕ್ಕೆ ಹಚ್ಚುತ್ತಾರೆ ಅಂದೆ. ಅನಂತರ ಅವಳಿಗೆ ಗೊತ್ತಾಯಿತು “Foundation Cream” ಬೇಕು ಅಂತ. ಇದೆ ರೀತಿ ಅನೇಕ ಪ್ರಸಂಗಗಳು ಆಗಿದೆ. ಅಂಗಡಿಲಿ Match box ಕೇಳಿದರೆ ಅವನಿಗೆ ಅರ್ಥ ಆಗಲ್ಲಿಲ್ಲ, ಇದು Box of Matches, ಬೆಂಕಿಪೊಟ್ಟಣ.

ಆ ಸಮಯದಲ್ಲಿ ರಾಜಕೀಯ ಪರಿಸ್ಥಿತಿ ನಮಗೆ ಅಷ್ಟೇನು ಸರಿ ಇರಲಿಲ್ಲ, ಕೆಲವು racist ಪಂಗಡಗಳು ಇದ್ದವು (National Front), ಲಂಡನ್ ನಗರದ ಕೆಲವು ಕಡೆ ಬಹಳ ಹಾವಳಿ ಇತ್ತು. ಈಗ East ಲಂಡನ್ ಬಹಳ “upmarket” ಆಗ ಆ ಕಡೆ ಹೋಗುವುದಕ್ಕೆ ಹೆದರಿಕೆ ಆಗ್ತಾ ಇದ್ದ ಕಾಲ.

೧೯೬೮ ನಲ್ಲಿ Enoch Powell ಅನ್ನುವ ಬಹಳ ಪ್ರಸಿದ್ಧ Conservative MP “Rivers of Blood” ಅನ್ನುವ ಭಾಷಣ ಬಹಳ ಜನಕ್ಕೆ, ರಾಜಕಾರಣಿಗಳಿಗೂ ತುಂಬಾ ತಲೆನೋವು ತಂದಿತ್ತು. ಆತನ ಪ್ರಕಾರ, ಸರ್ಕಾರ immigration ನಿಲ್ಲಿಸದೆ ಹೋದರೆ ಈ ದೇಶದಲ್ಲಿ ಬೇರೆ ಪಂಗಡದಲ್ಲಿ ಹೋರಾಟ ಆಗುತ್ತೆ ಮತ್ತು ರಕ್ತಪಾತವಾಗುತ್ತೆ . ಈತ ಬಹಳ ದೊಡ್ಡ ವಿದ್ವಾಂಸ, ೨೬ ನೆಯ ವಯಸ್ಸಿಗೆ ಗ್ರೀಕ್ ಮತ್ತು ಲ್ಯಾಟಿನ್ ಪ್ರೊಫೆಸರ್, ಯುದ್ದದ ಸಮಯದಲ್ಲಿ ೨೯ ನೆ ವರ್ಷಕ್ಕೆ ಬ್ರಿಗೇಡಿಯರ್, ಇಂತಹ ಪ್ರಚಂಡ ಬುದ್ದಿವಂತ. ಆದರೆ ಇವರ ಭಾಷಣ ಪ್ರಧಾನ ಮಂತ್ರಿ ಟೆಡ್ ಹೀತ್ ಅವರಿಗೆ ಹಿಡಸಲಿಲ್ಲ. Enoch Powell ಅವರನ್ನು ಮಂತ್ರಿ ಕೆಲಸದಿಂದ ತೆಗೆದು ಹಾಕಿದ್ದರು. ಸುಧಾರಣೆಗಳು ಇಲ್ಲಿಂದ ಶುರು ಆಯಿತು ಅಂದರೆ ತಪ್ಪಿಲ್ಲ. ಕೆಲವು ವರ್ಷದಲ್ಲಿ Race Relations Act ಜಾರಿಗೆ ಬಂತು ಬಹಳ ರಿಫ಼ಾರ್ಮ್ಸ್ ಆಯಿತು.

೧೯೭೦ ರಿಂದ ಇನ್ನೂ ನಮ್ಮ ಕನ್ನಡದವರು ಬರುವುದಕ್ಕೆ ಶುರು ಆಯಿತು. ೯೦% ವೈದ್ಯರು. ೧೯೮೩ ರಲ್ಲಿ ಕನ್ನಡ ಬಳಗ ಶುರು ಆಯಿತು, ಅವಾಗ ಕೆಲವರ ಪರಿಚಯ. ಆದರೆ ೧೯೮೮ ರಲ್ಲಿ ಡಾ. ಭಾನುಮತಿ ಅವರ ನೇತೃತ್ವದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸಮಯದಲ್ಲಿ ಇಲ್ಲಿನ ಕನ್ನಡಿಗರು ಒಂದು ಮನೆತನದವರಾದರು ಎಂದರೆ ತಪ್ಪಲಾಗದು ಈ ೪೦/೫೦ ವರ್ಷದಲ್ಲಿ ಇಲ್ಲಿಯ ಜನಗಳ “perception” ತುಂಬಾ ಬದಲಾಯಿಸಿದೆ. ೧೦೦ ವರ್ಷದ ಹಿಂದೆ ಈ ದೇಶ ಪ್ರಪಂಚದ ಮುಕ್ಕಾಲು ಭಾಗವನ್ನು ಆಳಿದ್ದರೂ ಶೇಕಡಾ ೯೦ ಜನರಿಗೆ ಇದರಿಂದ ಏನು ಸುಖ ಇರಲ್ಲಿಲ್ಲ. ಇಲ್ಲಿ working class ಜನಗಳು ಬಹಳ ಕಷ್ಟ ಪಟ್ಟಿದ್ದಾರೆ. ಈಗ Equality and Dignity of labour ಈ ದೇಶದಲ್ಲಿ ಇರುವ ಹಾಗೆ ಅನೇಕ ಕಡೆ ಇಲ್ಲ. ಒಂದು ಹೆಮ್ಮೆಯ ವಿಚಾರ, ಭಾರತದಿಂದ ಬಂದು ಇಲ್ಲಿ ನೆಲಸಿದವರು ಬಹಳ ಒಳ್ಳೆ ಹೆಸರು ತಂದಿದ್ದಾರೆ. ನೋಡಿ, ನಮ್ಮ ಮಕ್ಕಳು ಶಾಲೆಯಲ್ಲಿ ಎಷ್ಟು ಮುಂದೆ ಇದ್ದಾರೆ, ನಮ್ಮವರು ಬಹಳ ಜನ ಉನ್ನತ  ಸ್ಥಾನದಲ್ಲಿ ಕೆಲಸ ಮಾಡಿ ಹೆಸರು ಗಳಿಸಿದ್ದಾರೆ.

ಸಹಿಷ್ಣುತೆ ಮತ್ತು ಸೆಕ್ಯುಲರಿಸಂ – ಸುದರ್ಶನ ಗುರುರಾಜರಾವ್ ಲೇಖನ

Indian-Muslim

ಅದೊಂದು ಅನಿವಾಸಿ ಭಾರತೀಯರ ಚಿಕ್ಕದೊಂದು ಸಂಘ. ಹತ್ತಾರು ವರ್ಷಗಳಿಂದ, ಎಲ್ಲ ಸಂಘಗಳು ಕಾಣುವ ಏಳು ಬೀಳುಗಳನ್ನು, ಒಳಿತು ಕೆಡಿಕುಗಳನ್ನು, ಸಂಘಟನೆ-ವಿಘಟನೆಗಳನ್ನು ಕಾಲ ಕಾಲಕ್ಕೆ ಅನುಭವಿಸಿಯೂ ಕ್ರಿಯಾತ್ಮಕವಾಗಿದ್ದ ಒಂದು ಚಿಕ್ಕ ಊರಿನ ಚಿಕ್ಕ ಸಂಘಟನೆ. ನೆಲ-ಜಾಲಗಳನ್ನು ಬಿಟ್ಟು ಬಂದಿಳಿದ ಭಾರತೀಯರನ್ನು ಒಂದು ಚಾವಣಿಯಡಿ ತಂದು, ವರುಷಕ್ಕಿಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿ ತನ್ನ ಕೈಲಾದಷ್ಟು ಚಾರಿಟಿಗಳನ್ನು ಮಾಡುತ್ತಿದ್ದ ಒಂದು ಸಂಸ್ಥೆ. ದೀಪಾವಳಿ, ಹೋಳಿ ಹಬ್ಬ, ಆಹಾರ ಮೇಳ, ಹೊಸವರ್ಷಾಚರಣೆಗಳು ಅದರ ಪ್ರಮುಖ ಕಾರ್ಯಕ್ರಮಗಳಾಗಿದ್ದವು.

ಭಾರತೀಯರೆಂದ ಮೇಲೆ ವೈವಿಧ್ಯತೆ ಸ್ವಾಭಾವಿಕವಷ್ಟೇ. ಹಲವು ಭಾಷೆ, ವೇಷ, ಆಚಾರ, ವಿಚಾರ, ಧರ್ಮ, ಪಂಗಡಗಳ ಗೂಡು ಎಂಬುದನ್ನು ಹೇಳಬೇಕಿಲ್ಲ. ಬಹುತೇಕರು ಹಿಂದೂ ಧರ್ಮದವರಾಗಿದ್ದು ಮೊದಲಿಗೆ ಎರಡು ಮುಸ್ಲಿಂ ಹಾಗೂ ಎರೆಡು ಕ್ರಿಸ್ಚಿಯನ್ ಪಂಗಡಗಳು ಇದರಲ್ಲಿದ್ದವು. ಕ್ರಿಶ್ಚಿಯನ್ ಪಂಗಡಗಳವರು ಕ್ಯಾತೋಲಿಕ್ ಅನುಯಾಯಿಗಳಗಿದ್ದು ಹೊಸವರ್ಷಾಚರಣೆ ಹೊರತುಪಡಿಸಿ ಉಳಿದ ಹಬ್ಬಾಚರಣೆಯಲ್ಲಿ ಪಾಲ್ಗೊಂಡಿದ್ದು ನಾನು ನೋಡಿರಲಿಲ್ಲ. ಮುಸ್ಲಿಂ ಕುಟುಂಬಗಳಲ್ಲಿ ಒಂದು, ಅವರೇ ಹೇಳಿಕೊಂಡಂತೆ ‘ಅಹ್ಮದೀಯ’ ಎಂಬ ಶಾಖೆಗೆ ಸೇರಿದ ಜನ. ಇನ್ನೊಂದು, ನನಗೆ ತಿಳಿಯದು, ನಾನೂ ಕೇಳಿಲ್ಲ, ಅವರೂ ಹೇಳಿಲ್ಲ.

ಯಾವ ಭೇದಭಾವವೂ ಇಲ್ಲದೆ ಎಲ್ಲರೂ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆವು. ಬಾಲಿವುಡ್ ಹಾಡುಗಳು, ಕಿರು ಪೌರಾಣಿಕ ಪ್ರಸಂಗಗಳು, ಶಾಸ್ತ್ರೀಯ ಸಂಗೀತ ಹಾಗೂ ನೃತ್ಯರೂಪಕಗಳು ಕಾರ್ಯಕ್ರಮದ ಭಾಗಗಳಾಗಿದ್ದವು. ನಮ್ಮ ಭರತನಾಟ್ಯದ ಶಿಕ್ಷಕಿಗೆ ಅವಕಾಶ ಸಿಕ್ಕಾಗ, ಕೆಲವು ಸೂಫಿ ಸಂತರ ಹಾಡುಗಳಿಗೂ ಮಕ್ಕಳಿಂದ ಹೆಜ್ಜೆ ಹಾಕಿಸುತ್ತಿದ್ದರು. ಸದಸ್ಯರ ಕುಟುಂಬಗಳು ಉತ್ಸಾಹದಿಂದಲೇ ಭಾಗವಹಿಸುತ್ತಿದ್ದವು.

ಬದಲಾವಣೆ ಯುಗದ ಧರ್ಮ. ಕಾಲಕ್ರಮದಲ್ಲಿ ಮಂಗಳೂರು, ಹೈದರಾಬಾದು, ಉತ್ತರ ಪ್ರದೇಶ ಹಾಗೂ ಬಿಹಾರಗಳ ಮುಸ್ಲಿಮ್ ಕುಟುಂಬಗಳು ಊರಿಗೆ ಸೇರ್ಪಡೆಯಾದವು. ನಾವು ಸಹ ಸಂಘದ ಸದಸ್ಯತ್ವಕ್ಕೆ ಅವರನ್ನು ಆಹ್ವಾನಿಸಿ ಸೇರಿಸಿಕೊಂಡೆವು. ಮೊದಲ ವರ್ಷ ಏನೂ ತೊಂದರೆಯಿರಲಿಲ್ಲ. ಎರಡನೇ ವರ್ಷದ ದೀಪಾವಳಿ ಸಮಯಕ್ಕೆ ಈದ್ ಹಬ್ಬವೂ ಬರುವ ಕಾರಣ ದೀಪಾವಳಿ-ಈದ್ ಎಂಬ ಯುಗಳ ಹಬ್ಬವಾಗಿ ಕಾರ್ಯಕ್ರಮ ನಡೆಸಬೇಕೆಂಬ ಕೋರಿಕೆ ಬಂತು. ಸಮಿತಿ ಸರ್ವಾನುಮತದಿಂದ ಅಂಗಿಕರಿಸಿ, ಅದಕ್ಕೆಂದೇ ಹೊಸ ಭಿತ್ತಿ ಪಟವನ್ನು ಬರೆಸಲಾಯಿತು. ಏಕತೆ- ಸಮಗ್ರತೆಯ ನಡೆಯೆಂದು ಎಲ್ಲರೂ ಸಂತೋಷಿಸಿದರು!

ಆದರ ನಂತರ ಹೋಳಿ ಹಬ್ಬ ಅತಿ ಧಾರ್ಮಿಕ ಆಚರಣೆಯೆಂದೂ, ಸಮುದಾಯದ ಎಲ್ಲರ ಆಶಯಕ್ಕೆ ಅನುಗುಣವಾಗಿಲ್ಲವೆಂದೂ, ಅದನ್ನು ಸೆಕ್ಯುಲರ್ ಅದ ಅಚರಣೆಯಾಗಿ ಬದಲಾಯಿಸಬೇಕೆಂಬ ಕೋರಿಕೆ ಬಂತು. ಹೋಳಿ ಹಬ್ಬ ಎಂಬುದನ್ನು ವಸಂತೋತ್ಸವ ಎಂಬ ಹೆಸರಿನಿಂದ ಕರೆಯಲಾಯಿತು. ಬಣ್ಣದ ಬದಲಿಗೆ ಹೂವಿನ ಪಕಳೆಗಳನ್ನು ಚಿಮ್ಮಲಾಯಿತು. ಕೆಲವರು ಗೊಣಗುಟ್ಟಿದರೂ ಬದಲಾವಣೆಯನ್ನು ಒಪ್ಪಿಕೊಂಡರು. ಆದರೆ ಬಣ್ಣದ ಎರಚಾಟವಿಲ್ಲದೆ ಮಕ್ಕಳು ನಿರಾಶರಾಗಿದ್ದು ಸುಳ್ಳಲ್ಲ.

ಮತ್ತೊಂದು ವರುಷ ಕಳೆದು ಆ ವರುಷದ ದೀಪಾವಳಿ ಕಾರ್ಯಕ್ರಮದ ಮುಸ್ಲಿಂ ಸಮುದಾಯದ ಮಕ್ಕಳು ವಿಷ್ಣುವಿನ ದಶಾವತಾರದ ನೃತ್ಯರೂಪಕವೊಂದರಲ್ಲಿ ಪಾಲ್ಗೊಳ್ಳಲಿಲ್ಲ! ನಮ್ಮ ನೃತ್ಯ ಶಿಕ್ಷಕಿ ಅವರಿಗಾಗಿ ಮತ್ತೊಂದು ಹಾಡೊಂದಕ್ಕೆ ತರಬೇತಿ ಕೊಡಬೇಕಾಗಿ ಬಂತು. ಕೆಲಸದೊತ್ತಡದಲ್ಲಿ ಅವರು ನಲುಗಿದ್ದಂತೂ ನಿಜ. ಆದರೆ ಮೊದಲು ಹೇಳಿದ ಅಹ್ಮದೀಯ ಕುಟುಂಬ ಇದಕ್ಕೆ ಹೊರತು. ಎಲ್ಲ ಕಾರ್ಯಕ್ರಮಗಳಲ್ಲಿ ಅವರು ಭಾಗಿಗಳಾಗಿದ್ದರು.

ನಂತರದ ವರ್ಷದಲ್ಲಿ ಹಬ್ಬಾಚರಣೆಗಳು ಎಲ್ಲರ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿರದ ಕಾರಣ ದೀಪಾವಳಿ ಅಡಿಯಲ್ಲಿ ಲಕ್ಷ್ಮಿಪೂಜೆ ಕೂಡದೆಂದೂ, ದೀಪವನ್ನು ಬೆಳಗಿ ಕಾರ್ಯಕ್ರಮ ಉದ್ಘಾಟಿಸುವುದು ‘’ಸೆಕ್ಯುಲರ್’’ ಅಲ್ಲವೆಂದು ಆಕ್ಷೇಪಣೆ ಬಂತು. ಸಮಿತಿಯ ಸಭೆಯಲ್ಲಿ ಕೆಲವರು ಸಮಾನತೆಯ ಮನೋಭಾವದ ಗುಂಗಿನಲ್ಲಿ ಅನುಮೋದಿಸಿದರು, ಕೆಲವರು ಸುಮ್ಮನಿದ್ದರು ಮತ್ತೆ ಕೆಲವರು ಮುಖ ಮುಖ ನೋಡಿಕೊಂಡರು – ತಮ್ಮ ಅಸಮ್ಮತಿಯನ್ನು ಹೊರಹಾಕಲು ಹಿಂಜರಿದರು. ನಾನು ಶಾಂತವಾಗಿ ಪ್ರತಿಭಟಿಸಿದೆ. ನಮ್ಮದು ಭಾರತೀಯ ಪರಂಪರೆಯನ್ನು ಬಿಂಬಿಸುವ ಸಂಘಟನೆಯಾಗಿದ್ದಲ್ಲಿ, ಭಾರತೀಯ ಸಂಸ್ಕೃತಿಯನ್ನು ಅಭಿವ್ಯಕ್ತಗೊಳಿಸುವ ಆಚರಣೆಗಳನ್ನು ಅನುಸರಿಸಲು ಹಿಂದೆ ಮುಂದೆ ನೋಡಬೇಕಾದ ಪ್ರಮೇಯವಿಲ್ಲ. ಭಾರತವೆಂದರೆ ಬಾಲಿವುಡ್ ಅಲ್ಲ, ಅದನ್ನು ಮೀರಿದ ಒಂದು ವಿಶಿಷ್ಟ ವ್ಯವಸ್ಥೆ, ಅದನ್ನು ಬಿಟ್ಟು ಕಾರ್ಯಕ್ರಮ ರೂಪಿಸುವುದಾದರೆ ಅದಕ್ಕಿಂತ ದೊಡ್ಡ ಅಭಾಸ ಅಸಂಬದ್ಧತೆ ಇರಲಾರದು. ಭಾರತೀಯ ಪರಂಪರೆಯ ವೈಶಿಷ್ಟ್ಯವೆಂದರೆ ಮನುಷ್ಯನ ಜೀವನದೆಲ್ಲ ಕೋನಗಳಲ್ಲಿ ತಾತ್ತ್ವಿಕ ಧಾರ್ಮಿಕ, ಲೌಕಿಕ, ಪಾರಮಾರ್ಥಿಕ ಸಮಗ್ರತೆಯ ಆಯಾಮಗಳು ಹಾಸುಹೊಕ್ಕಾಗಿವೆ. ಇದು ಕಲಾ ಪ್ರಾಕಾರಗಳಲ್ಲಿ ವ್ಯಕ್ತಗೊಂಡಿದೆ. ಅದು ಸಂಗೀತ, ಸಾಹಿತ್ಯ, ನೃತ್ಯ, ಶಿಲ್ಪ, ಚಿತ್ರಕಲೆಗಳಿರಬಹುದು – ಅದು ಆಧ್ಯಾತ್ಮ ಪುರಾಣಗಳ ಜತೆಗೆ ಹಾಸುಹೊಕ್ಕಾಗಿ ಹೊಸೆದುಕೊಂದಿರುವ ಒಂದು ಅಪರೂಪದ ಜೀವನ ದರ್ಶನ. ಅದರ ಹಿಂದಿನ ಆಶಯಗಳನ್ನು ಗುರಿತಿಸಿ ಗೌರವಿಸಬೇಕೇ ವಿನಃ ಬೇಧ ಎಣಿಸಬಾರದೆಂದು ವಾದಿಸಿದೆ. ಈ ತತ್ವಗಳನ್ನು ಮುಂದಿನಪೀಳಿಗೆಗೆ ದಾಟಿಸುವ ಹೊಣೆ ನಮ್ಮ ಮೇಲಿದ್ದಲ್ಲಿ, ಈ ಸಂಘಟನೆಗೂ ಒಂದು ಅರ್ಥವಿದೆ, ಹಬ್ಬಾಚರಣೆಗೂ ಒಂದು ಅರ್ಥವಿದೆ. ಇಲ್ಲವಾದಲ್ಲಿ ದೀಪಾವಳಿ ಹೆಸರಿನಲ್ಲಿ ನವೆಂಬರ್ ತಿಂಗಳ ಈ ಕಾರ್ಯಕ್ರಮಕ್ಕೆ ಯಾವುದೇ ಅರ್ಥವಿಲ್ಲ, ನಾನು ಒಪ್ಪಲಾರೆ ಎಂದೆ.

ನನ್ನ ವಾದ ತೀವ್ರವಾದವೆಂದೂ, ಅದು ಸೆಕ್ಯುಲರ್ ಅಲ್ಲವೆಂದೂ, ನಮ್ಮ ನಂಬಿಕೆಯನ್ನು ಇತರರ ಮೇಲೆ ಹೇರುವ ಹುನ್ನಾರವೆಂದು ಆಕ್ಷೇಪಣೆ ಬಂತು. ನೀವು ಒಪ್ಪದ ಆಚರಣೆಗಳನ್ನು ಕೈಬಿಡಲು ಒತ್ತಡ ಹಾಕುತ್ತಿರುವಿರಾದರೆ ನಿಮ್ಮದು ಸೆಕ್ಯುಲರ್ ಹೇಗಾಯಿತು? ಸಹಿಷ್ಣುತೆ ನಿಮ್ಮ ನಡೆಯಲ್ಲಿ ಎಲ್ಲಿದೆ ಎಂಬ ಪ್ರಶ್ನೆಗೆ, ನಾವು ನಮ್ಮ ಆಚರಣೆಗಳನ್ನು ವೇದಿಕೆಯ ಮೇಲೆ ತರುವುದಿಲ್ಲ ಹಾಗಾಗಿ ನೀವೂ ಸಹ ತರಬಾರದೆಂಬ ವಾದ ಬಂತು!!

ಅಲ್ಲಿಗೆ, ನಾನು ಸೆಕ್ಯುಲರ್ ಎಂಬುದರ ಅರ್ಥವನ್ನು ಅಲ್ಲಿರುವ ಸದಸ್ಯರು ಹೇಗೆ ಅರ್ಥೈಸಿಕೊಂಡಿದಾರೆಂಬ ಪ್ರಶ್ನೆ ಮಾಡಿದಾಗ ಯಾರಲ್ಲೂ ಸ್ಪಷ್ಟ ಉತ್ತರವಿರಲಿಲ್ಲ. ಧಾರ್ಮಿಕ ಆಚರಣೆಗಳನ್ನು ಇನ್ನೊಬ್ಬರು ಒಪ್ಪದಿದ್ದಾಗ ಕೈಬಿಡುವುದೇ ಸೆಕ್ಯುಲರ್ ಎಂಬ, ಇತರರ ಆಚರಣೆ ನಂಬಿಕೆಗಳನ್ನು ಸಹಿಸಿಕೊಳ್ಳುವ ಮನೋಭಾವವೆಂದೂ ಗೊಂದಲಮಯ ವ್ಯಾಖ್ಯೆ ಕೊಟ್ಟರು.

ನನ್ನ ಪ್ರಕಾರ ಸೆಕ್ಯುಲರ್ ಎಂಬುದು ಆಂತರ್ಯದಲ್ಲಿ ಗೌರವ ಎಂಬ ಹೂರಣವನ್ನು ಇಟ್ಟುಕೊಂಡ ಮನಸ್ಥಿತಿ ಎಂದೂ, ಅದು ಕೇವಲ ಸಹಿಸಿಕೊಳ್ಳುವ ಸ್ಥಿತಿ ಅಲ್ಲ. ಸಹಿಸಿಕೊಳ್ಳುವವ ಅಸಹಿಷ್ಣು ಆಗಬಹುದು, ಆದರೆ ಗೌರವ ಭಾವ ಒಂದು ನಿರುಪಾಧಿಕ (absolute) ಸ್ಥಿತಿ. ಪರಸ್ಪರರ ಆಚರಣೆಗಳಿಗೆ ಗೌರವ ಕೊಟ್ಟು ಬೆಳೆಸುವ ಸ್ಥಿತಿಯೇ ಸೆಕ್ಯುಲರ್-ಸಹಿಷ್ಣುತೆ ಎಂಬ ಪ್ರತಿವಾದ ಹೂಡಿದೆ. ನಿಮ್ಮಲ್ಲಿ ಸಾಂಸ್ಕೃತಿಕವಾದ ಸರಕಿದ್ದರೆ ಅದನ್ನು ವೇದಿಕೆಗೆ ತನ್ನಿ. ಸಂತೋಷವಾಗಿ ಅಚರಿಸೋಣ. ಇಲ್ಲದಿದ್ದಲ್ಲಿ ಉಳಿದವರದ್ದು ನೋಡಿ ಸಂತೋಷಿಸಿ. ನಾವೂ ಮಾಡೆವು ನಿಮಗೂ ಬಿಡೆವು ಎಂಬ ಧೋರಣೆ ಆರೊಗ್ಯಕರವಲ್ಲ. ನಿರ್ಧಿಷ್ಟ ಗುರಿಗಳಿಲ್ಲದಿದ್ದರೆ ನಮ್ಮದು ಅರ್ಥಹೀನ ಸಂಘಟನೆಯಾಗುತ್ತದೆ ಎಂಬ ವಾದವನ್ನು ಮುಂದಿಟ್ಟೆ. ಕೆಲವರು ಆಗ ನನ್ನನ್ನು ಬೆಂಬಲಿಸಿದರು. ಕಾರ್ಯಕ್ರಮಗಳು ಯಥಾಪ್ರಕಾರ ನಡೆದವು. ಧರ್ಮಬಾಹಿರವಾದ ಅಂಶಗಳಿದ್ದ ಕಾರಣ ದೇಶಬಾಂಧವರು ಊಟದ ಹೊತ್ತಿಗೆ ಆಗಮಿಸಿ ತಿಂದುಂಡು ನಡೆದರು. ನಂತರದ ವರ್ಷಗಳಲ್ಲಿ ಮೊದಲಿದ್ದ ಎರೆಡು ಕುಟುಂಬಗಳನ್ನು ಹೊರತು ಪಡಿಸಿ ಉಳಿದ ಮುಸ್ಲಿಂ ಕುಟುಂಬಗಳು ಕಾರ್ಯಕ್ರಮಕ್ಕೆ ಬರುವುದನ್ನ್ನು ನಿಲ್ಲಿಸಿಯೇ ಬಿಟ್ಟರು.

ಮೊದಲು ಹೇಳಿದಂತೆ, ಕ್ರಿಶ್ಚಿಯನ್ ಕುಟುಂಬಗಳು ಮೊದಲಿನಿಂದಲೂ ಈ ಹಬ್ಬಾಚರಣೆಯಲ್ಲಿ ಪಾಲ್ಗೊಂದೇ ಇರಲಿಲ್ಲ. ನಮ್ಮೂರಿನ ಸಕಲ (ನನ್ನನ್ನು ಹೊರತು ಪಡಿಸಿ) ಹಿಂದೂಗಳ ಮನೆಯಲ್ಲಿ ಕ್ರಿಸ್ಮಸ್ ಮರವನ್ನು, ಈಸ್ಟರ್ ಮೊಟ್ಟೆ-ಮೊಲಗಳನ್ನು ಕಂಡಿದ್ದೇನೆ ಆದರೆ ಇತರರ ಮನೆಗಳಲ್ಲಿ ನಮ್ಮ ದೀಪಾವಳಿಯನ್ನೋ, ಗಣೇಶ ಚತುರ್ಥಿಯನ್ನೋ ಆಚರಿಸುವುದು ನೋಡಿಲ್ಲ.

ಇದು, ಒಂದು ಸಂಘಟನೆಯ ಕಾರ್ಯದರ್ಶಿಯಾಗಿ ನಾನು ಕಂಡುಂಡ ಅನುಭವ. ವೈಯಕ್ತಿಕವಾಗಿ ನಾನು ಹಿಂದು (ಸನಾತನ) ಧರ್ಮದ ಅನುಯಾಯಿ-ಅಭಿಮಾನಿಯಾಗಿದ್ದರೂ ಇತರ ಧರ್ಮಾಚರಣೆಗಳನ್ನು ಅವಿರುವಂತೆಯೇ ಗೌರವಿಸಿದವನು.ಈ ಪರಸ್ಪರ ಗೌರವ ಆದರಗಳ ಗೆರೆ ಮೀರಿದ ಪರಿಸ್ಥಿತಿಯಲ್ಲಿ ನಮ್ಮ ತತ್ವಗಳನ್ನು, ಆದರ್ಶ ನಂಬಿಕೆಗಳನ್ನು ನಿರ್ಭೀತಿಯಿಂದ ಪ್ರತಿಪಾದಿಸಿದವನು. ಇದಕ್ಕಾಗಿ ವೈಯಕ್ತಿಕವಾಗಿ ಸಂಬಂಧಗಳು ಹಳಸಿದರೂ, ಅದನ್ನು ಅನುಭವಿಸಿದವನು. ನನ್ನ ಈ ನಡೆಯನ್ನು ಅಸಹಿಷ್ಣುತೆ ಎಂಬ ಹಣೆಪಟ್ಟಿಯನ್ನು ಕಟ್ಟಿದವರನ್ನೂ ಸಹ ಕಂಡಿದ್ದೇನೆ.

ಇತರ ಧರ್ಮಗಳ/ನಂಬಿಕೆಗಳನ್ನು ಅಂಗೀಕರಿಸುವ ನಮ್ಮ ಮನಸ್ಥಿತಿ ಬೇರೆಯಾದ ಅವರಿಗೇಕೆ ಬರಲಿಲ್ಲ ಎಂಬುದು ಒಂದು ಮೂಲಭೂತವಾದ ಪ್ರಶ್ನೆ. ಕಾರಣ ಇಷ್ಟೆ: ಮಧ್ಯಪ್ರಾಚ್ಯದಲ್ಲಿ ಹುಟ್ಟಿ ಬೆಳೆದ ಈ ಸೆಮೆಟಿಕ್ ರಿಲಿಜನ್-ಗಳು( ಅಬ್ರಹಾಮಿಕ್ ರಿಲಿಜನ್) ಗಳು ಏಕದೇವ, ಏಕತತ್ವ, ಏಕಮಾರ್ಗ ಪ್ರತಿಪಾದಕ ರಿಲಿಜನ್-ಗಳು. ಇವುಗಳನ್ನು ಒಂದು ಅರ್ಥದಲ್ಲಿ ಧರ್ಮ ಎನ್ನಲಾಗದು. ಅವು ಮತಗಳು. ಇರುವುದೊಂದೇ ಪುಸ್ತಕ. ಅದನ್ನು ಓದಿಕೊಂಡ ಅನುಯಾಯಿಗಳು ನಂಬುವುದು, ನಮ್ಮ ಮಾರ್ಗವೊಂದೆ ಸತ್ಯ. ಉಳಿದವು ಪಾಪಿಗಳದ್ದು. ಹಾಗಾಗಿ ಅವುಗಳನ್ನು ನಿರ್ಮೂಲನೆ ಮಾಡು ಎಂಬ ಬೋಧನೆ ನೀಡುವ ಧರ್ಮ ಗ್ರಂಥಗಳು ಇಲ್ಲವೇ ಅದರ ನಿರ್ವಚನಗಳು (interpretation). ಹಾಗಾಗಿ ಕ್ರೈಸ್ತ ಧರ್ಮದವರು ಆಮಿಷ ಒತ್ತಡಗಳ ಮೂಲಕ ಮತ ಪರಿವರ್ತನೆಗೆ ಓಲೈಸಿದರೆ, ಇಸ್ಲಾಂ ಭಯ, ಬಲಾತ್ಕಾರ, ಬಳಪ್ರಯೋಗಗಳ ಮಾರ್ಗದಲ್ಲಿ ತಮ್ಮ ಮತವನ್ನು ಹರಡಲು ಪ್ರಚೋದಿಸುತ್ತದೆ. ತಮ್ಮದು ಹೊರತಾಗಿ ಉಳಿದೆಲ್ಲವೂ ಹರಾಮ್ ಆದ ಕಾರಣ ಒಪ್ಪಿಕೊಳ್ಳುವ ಮನೋಭಾವವೇ ಅಲ್ಲಿ ಇರಲಾರದು. ಇದಾಗ್ಯೂ ಅದು ನಿಯಮದಲ್ಲಿ ವಿನಾಯತಿ (exception to the rule), ಅಷ್ಟೆ. ಇತ್ತೀಚಿನ ದಿನಗಳಲ್ಲಿ ಇದರ ಪ್ರಖರತೆ ಹೆಚ್ಚಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಒಪ್ಪಿಕೊಳ್ಳದ ಮನೋಭಾವವನ್ನು ಬಲಾಢ್ಯ ಪೋರ್ಚುಗೀಸರು ಗೋವಾ ಮತ್ತಿತರ ಜಾಗಗಳಲ್ಲಿ ನಡೆಸಿದ ವಿಧ್ವಂಸಕತೆಯಲ್ಲಿ ಕಾಣಬಹುದು, ಘೋರಿ ಮಹಮ್ಮದನಲ್ಲಿ ಕಾಣಬಹುದು, ವಿಜಯನಗರದ ಬೀದಿಗಳಲ್ಲಿ ಕಾಣಬಹುದು, ಕಾಶ್ಮೀರಿ ಪಂಡಿತರ ಮಾರಣಹೋಮದಲ್ಲಿ ಕಾಣಬಹುದು, ಇಂದಿಗೂ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಹಿಂದುಗಳ ಮೇಲೆ ಕ್ರಿಶ್ಚಿಯನ್ ಪಂಗಡಗಳು ನಡೆಸುತ್ತಿರುವ ದೌರ್ಜನ್ಯದಲ್ಲಿ ಕಾಣಬಹುದು. ಕೇರಳದಲ್ಲಿ ನಡೆಯುತ್ತಿರುವ ದೌರ್ಜನ್ಯದಲ್ಲಿ ಕಾಣಬಹುದು. ಆಂಧ್ರಪ್ರದೇಶದ ಕರಾವಳಿಯಲ್ಲಿ ನಡೆದಿರುವ ಮತ ಪರಿವರ್ತನಾ ಅಭಿಯಾನದಲ್ಲಿ ಕಾಣಬಹುದು. ಈ ಎಲ್ಲ ಹುನ್ನಾರಗಳ ಹಿಂದಿನ ವಿಸ್ತೃತ ಹಾಗೂ ಆಧುನಿಕ ರೂಪವೇ ಇಂದು ಚರ್ಚೆಗೊಳಗಾಗಿರುವ ಅಸಹಿಷ್ಣುತೆಯ ಕೂಗು.

ಈ ಕೂಗಿನ ಹಿಂದಿನ ರಾಜಕೀಯ ಷಡ್ಯಂತ್ರಗಳು, ಸಮಾಜ ವಿರೋಧಿ ಹುನ್ನಾರಗಳು, ಓಲೈಕೆ ರಾಜಕಾರಣ, ಮತಬ್ಯಾಂಕಿನ ಹಪಾಹಪಿ, ಇದರ ಹಿಂದಿರುವ ಬುದ್ಧಿಜೀವಿಗಳು, ರಾಜಕಾರಿಣಿಗಳು, ಸಾಹಿತಿಗಳು ಇವರುಗಳ ಬದ್ಧತೆ, ಬಂಡವಾಳಗಲನ್ನು ಗಮನಕ್ಕೆ ತೆಗೆದುಕೊಂಡರೆ ಇವರ ಈ ಅಬ್ಬರ ಮತ್ತು ಕೂಗಾಟದ (hue and cry) ಹಿಂದಿರುವ ಪ್ರಾಮಾಣಿಕತೆ ಬಯಲಾಗುತ್ತದೆ. ಇಷ್ಟು ದಿನ ಕೇಳಿಬರದ ಈ ವಿದ್ಯಮಾನ ಇದ್ದಕ್ಕಿದ್ದಂತೆ ಮಾರ್ಮೊಳಗುತ್ತಿರುವುದರ ರಹಸ್ಯ ಎಲ್ಲರಿಗೂ ಉತ್ತರ ಗೊತ್ತಿರುವ ಪ್ರಶ್ನೆಯೇ.

ಸರಕಾರ, ಮಾಧ್ಯಮಗಳು ಸಂಘ ಸಂಸ್ಥೆಗಳು ಎಲ್ಲವೂ ತಮ್ಮ ಹಿಡಿತದಲ್ಲಿದ್ದಾಗ ತಮಗೆ ಅನುಕೂಲವಾಗುವ ವಾತಾವರಣ ಇದ್ದಾಗ ಕೇಳಿಬರದ ಈ ಕೂಗು ಇಂದು ಕೇಳುತ್ತಿರುವ ಕಾರಣ, ಪಟ್ಟಭದ್ರರ ಅಡಿ ಅಲುಗುತ್ತಿರುವುದಷ್ತೆ. ತಿರುಚಿದ ಇತಿಹಾಸವನ್ನು ಪ್ರಶ್ನಿಸಿದಾಗ ರೋಮಿಲಾ ಥಾಪರ್ ಅಸಹಿಷ್ಣುತೆಯ ಕೂಗು ಹಾಕುತ್ತಾಳೆ, ಯಾಕೂಬ್ ಮೆಮನ್-ನನ್ನು ಗಲ್ಲಿಗೇರಿಸಿದಾಗ ದೇಶದೆಲ್ಲ ಬುದ್ಧಿಜೀವಿಗಳು ಒಕ್ಕೊರಲಿನಿಂದ ಪ್ರತಿಭಟಿಸುತ್ತಾರೆ, ನಕ್ಸಲರನ್ನು ಮಟ್ಟಹಾಕಿದರೆ ಮಾನವ ಹಕ್ಕುಗಳ ಪ್ರಶ್ನೆ ಏಳುತ್ತದೆ, ಯಾವುದೊ ಒಂದು ಮುಸ್ಲಿಮನ ಕೊಲೆಯಾದರೆ ದೇಶಾದ್ಯಂತ ಅಲ್ಲೋಲ ಕಲ್ಲೋಲವಾಗುತ್ತದೆ, ವಿವೇಕಾನಂದ ಜನ್ಮದಿನಾಚರಣೆ ಕೋಮುವಾದಿಯಾಗುತ್ತದೆ, ದಲಿತನಲ್ಲದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಬ್ರಾಹ್ಮಣ ಪುರೋಹಿತಶಾಹಿಯನ್ನು ಎಳೆದು ತರಲಾಗುತ್ತದೆ. ಅಕ್ಬರ್ -ಬಾಬರ್ ಇತ್ಯಾದಿಗಳಿಗೆ ಒಂದೊಂದು ಪಾಠ ಮುಡಿಪಾಗಿಟ್ಟು ಇಡಿ ವಿಜಯನಗರ ಇತಿಹಾಸವನ್ನು ಒಂದು ಪುಟಕ್ಕೆ ಸೀಮಿತವಾಗಿದ್ದನ್ನು ಪ್ರಶ್ನಿಸಿದರೆ ಕೋಮುವಾದ ಭುಗಿಲೇಳುತ್ತಿದೆ ಎಂಬುದಾಗಿ ಕೂಗಲಾಗುತ್ತದೆ.  ಇಂದಿಗೆ ಅಸತ್ಯವೆಂದು ಸಾಬೀತಾಗಿರುವ ಆರ್ಯ ದ್ರಾವಿಡ ಇತಿಹಾಸವನ್ನೇ ಇನ್ನೂ ಬಂಡವಾಳ ಮಾಡಿಕೊಂಡು ದೇಶ ವಿಭಜನೆಗೆ ಪ್ರಯತ್ನಿಸಲಾಗುತ್ತದೆ, ಅದನ್ನು ವಿರೋಧಿಸಿದರೆ ಅಸಹಿಷ್ಣುತೆಯ ಪಟ್ಟ ಕಟ್ಟಲಾಗುತ್ತದೆ. ರಾಮಾಯಣದ ರಾಮ ವ್ಯಭಿಚಾರಿಯೆಂದೂ, ಅವನು ಕಬ್ಬಿಣ ತರಲು ಕಾಡಿಗೆ, ಶ್ರೀಲಂಕಾಕ್ಕೆ ಹೋದನೆಂದೂ ಹೇಳಿದವನಿಗೆ ಪ್ರೊಫೆಸ್ಸರ್-ಗಿರಿ ನೀಡಲಾಗುತ್ತದೆ. ಭಗವದ್ಗೀತೆ ಹಿಂಸಾ ಪ್ರಚೋದಕೆವೆಂದು ಬಡಬಡಿಸುವ ಭಗವಾನನಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಾವಿರಾರು ರೈತರು ಸತ್ತಾಗ ಇರಲಾಗದ ಹಣ, ಕಕ್ಕುಲತೆ, ಟಿಪ್ಪೂ ಸುಲ್ತಾನನ ಜನ್ಮದಿನ ಆಚರಣೆಗೆ ಬಿಡುಗಡೆಯಾಗುತ್ತದೆ. ಅದರ ಔಚಿತ್ಯವನ್ನು ಪ್ರಶ್ನಿಸಿ ವಿರೋಧಿಸಿದಾಗ ಅಸಹಿಷ್ಣುತೆಯ ಹೊಗೆ ದೇಶದ ತುಂಬ ವ್ಯಾಪಿಸುತ್ತದೆ. ಕಂಬಳದ ಕೋಣ ಓಟದ ಸ್ಪರ್ಧೆ, ಜಲ್ಲಿಕಟ್ಟು ಆಚರಣೆಗಳು ಪ್ರಾಣಿಹಿಂಸೆಯ ಪ್ರತೀಕವಾದರೆ, ಬಕೄದಿನ ಕುರಿ, ಒಂಟೆಗಳ ಮಾರಣಹೋಮ ಪ್ರಾಣಿದಯಾ ಸಂಘದ, ಬುದ್ಧಿಜೀವಿಗಳ ಕಣ್ಣಿಗೆ ಕಾಣದೆ ಹೋಗುತ್ತದೆ.

ಇಂದಿನ ಸಹಿಷ್ಣುತೆ ಅಸಹಿಷ್ಣುತೆಗಳ ಚರ್ಚೆ ಧಾರ್ಮಿಕವೆನ್ನಿಸಬಹುದಾದ ಹೊದಿಕೆ ಹೊದ್ದಿದ್ದರೂ ಸಹ ಅದರ ಮೂಲವಿರುವುದು ನಮ್ಮ ಇಡೀ ದೇಶದ ಒಂದು ಪಂಗಡದ ಇಬ್ಬಂದಿತನದ ವೈಚಾರಿಕ ಪೊಳ್ಳುತನದಲ್ಲಿ. ಪ್ರಾಮಾಣಿಕತೆಯ ದಿವಾಳಿತನದಲ್ಲಿ. ಭಿನ್ನತೆ ಜಗದ ನಿಯಮ. ಪ್ರಕೃತಿಯಲ್ಲಿ ಏಕರೂಪತೆ ಅಸಾಧ್ಯ. ಅದು ರೂಪ ಗುಣಗಳಿರಬಹುದು, ಚಿಂತನೆಯಿರಬಹುದು, ನಂಬಿಕೆ ಆಚರಣೆಗಳಿರಬಹುದು. ಆದರೆ ಪ್ರಾಮಾಣಿಕತೆ ಎಂಬುದು ಸಾಧ್ಯ. ಸಮಸ್ಯೆಯ ಮೂಲ ಇರುವುದು ಇಲ್ಲಿಯೇ. ಮೊದಲು ಹೇಳಿದ ಸೆಮೆಟಿಕ್ ರಿಲಿಜನ್-ಗಳು ’ಆನೋ ಭದ್ರಾ ಕ್ರತುವೋ ಎಂತು ವಿಶ್ವತಃ (ಉದಾತ್ತ ವಿಚಾರಗಳು ಎಲ್ಲಿಂದಾದರೂ ಬರಲಿ)’ ಎಂಬ ತೆರೆದ ಹಾದಿಯ ಮತಗಳಲ್ಲ. ನಮ್ಮದೇ ಸರಿ. ಉಳಿದವರು ವಿಧರ್ಮಿ (heathen) ಅಥವಾ ಹರಾಮ್ ಎನ್ನುವ ಮನೋಭಾವದ ಜನ, ನಮ್ಮವರೇ ಬುದ್ಧಿಜೀವಿಗಳ ಮೂಲಕ ಅಸಹಿಷ್ಣುತೆಯ ಆರೋಪವನ್ನು ಸಹಿಷ್ಣುಗಳ ಮೇಲೆ ಹೊರಿಸುತ್ತಿರುವುದು ಒಂದು ವಿಪರ್ಯಾಸಕರ ಬೆಳವಣಿಗೆ. ಈ ಸಂಘರ್ಷ ಇರಬಾರದು ಎಂದು ಆಶಿಸುವುದು ಒಂದು ಹಗಲುಗನಸು ಅಷ್ಟೇ. ವಾಸ್ತವ ಭಿನ್ನವಾದದ್ದು. ಇಸ್ಲಾಮಿನ ಸುನ್ನಿಗಳು ಶಿಯಾ, ಅಹ್ಮದೀಯ ಪಂಗಡಗಳನ್ನು ಸಹಾ ಒಪ್ಪುವ ಸ್ಥಿತಿಯಲ್ಲಿ ಇಲ್ಲದ್ದು ನಾವು ಕಾಣುತ್ತಿದ್ದೇವೆ. ಬಹುಸಂಖ್ಯಾತ ಮುಸ್ಲಿಮರು ಬಾಂಗ್ಲಾ, ಪಾಕಿಸ್ತಾನ, ಕಾಷ್ಮೀರಗಳಲ್ಲಿ ಹಿಂದೂಗಳ ಮಾರಣಹೋಮ ನಡೆಸಿರುವುದನ್ನು ಕಂಡಿದ್ದೇವೆ. ಶಾಂತಿಮಂತ್ರ ಅಲ್ಲಿ ಕೆಲಸಕ್ಕೆ ಬಂದಿಲ್ಲದ್ದನ್ನೂ ನೋಡಿದ್ದೇವೆ. ಮಾನವರನ್ನು ಮಾನವನಾಗಿ ಕಾಣು ಎಂಬುದು ಬೃಹಹದಾಶಯವೇ ಸರಿ. ಆದರೆ ಎದುರುಗಿರುವ ಮಾನ ದಾನವ ಪ್ರವೃತ್ತಿಯವನೆಂದಾದಾಗ ನಮ್ಮ ನಿಲುವು ಏನಿರಬೇಕೆಂಬುದು ನಮಗೆ ಸ್ಪಷ್ಟವಾಗಿರಬೇಕು ಅಷ್ಟೇ.

ಭಾರತ ಇಂದು ಭಾರತವಾಗಿ ಉಳಿದಿರುವುದರ ಹಿಂದೆ ದೇಶಪ್ರೇಮಿಗಳ ಧರ್ಮಾಧಕರ ಬೆವರಿದೆ. ಶಿವಾಜಿಯಂಥ ಹೋರಾಟಗಾರರ ಛಲವಿದೆ. ಧರ್ಮದ-ಸಂಸ್ಕೃತಿಯ ಮೇಲಿನ ಒಲವಿದೆ ಭಕ್ತಿಯಿದೆ, ಅಭಿಮಾನವಿದೆ. ಅವನ ತಾಯಿಯಂತಹ ಮಹಿಳೆಯರ ಆದರ್ಶವಿದೆ. ಸಾಮಾಜಿಕವಾಗಿ ಆಚರಿಸಿದ ಧಾರ್ಮಿಕ ಕಾರ್ಯಕ್ರಮಗಳ ಪರಿಣಾಮವಿದೆ. ಮನೆಮನೆಗಳಲ್ಲಿ ಇಟ್ಟು ಪೂಜಿಸಿದ ದೇವ ದೇವರ ಮೇಲಿನ ಶ್ರದ್ಧೆಯಿದೆ. ಕಟ್ಟುವ ಮನಸ್ಸುಗಳಲ್ಲಿ ಸಾಮಾನ್ಯವಾಗಿ ಕಾಣುವ ಗುಣಗಳಿವು.

ಹಿಂದಿನ ವಿಚಾರಗಳನ್ನು ಕೆದಕಬಾರದು ಎನ್ನುವವರು ತಿಳಿಯಬೇಕಾದ ಒಂದು ವಿಚಾರ ’ಅಸತ್ಯ-ಅಪ್ರಾಮಾಣಿಕತೆಯ ವೈಚಾರಿಕ ಪೊಳ್ಳುತನ ಓಲೈಕೆಯಿಂದ ಸಹಿಷ್ಣು ಸಮಾಜ ಕಟ್ಟಲು ಸಾಧ್ಯವಿಲ್ಲ/` ಜಾತಿ ವ್ಯವಸ್ಥೆಗೆ ಬ್ರಾಹ್ಮಣರನ್ನು,ಆರ್ಯರನ್ನು ದೂರುವ ಸಹಿಷ್ಣುಗಳು ಇತಿಹಾಸದಲ್ಲಿ ಚೆನ್ನಾಗಿಯೇ ದಾಖಲಾಗಿರುವ ಹಿಂದೂಗಳ ಮೇಲಿನ ಮುಸ್ಲಿಂ ದಾಳಿಕೋರರ, ರಾಜ ರಾಜರುಗಳ ದಬ್ಬಾಳಿಕೆಯನ್ನು ಪ್ರಾಮಾಣಿಕವಾಗಿ, ಮುಕ್ತವಾಗಿ ಚರ್ಚಿಸಬೇಕು. ಅದನ್ನು ಆ ಸಮುದಾಯ ಒಪ್ಪಿಕೊಳ್ಳುವಂತೆಯೂ ಉತ್ತೇಜಿಸಬೇಕು. ಕಸವನ್ನು ಚಾಪೆಯ ಕೆಳಗೆ ತಳ್ಳಿದರೆ ಅದೇನು ಇಲ್ಲವಾಗುವುದಿಲ್ಲ. ಹುಳಗಳನ್ನು ಬೆಳೆಸುವ ತಿಪ್ಪೆಯಾಗಿ ಮಾರ್ಪಡಬಹುದಷ್ಟೇ.

ಎಲ್ಲರೂ ಒಂದೇ ನಮ್ಮಲ್ಲಿ ವೈಷಮ್ಯ ಬೇಡ, ನಿರಂತರ ಸಂತೋಷ (happy ever after) ಎಂದು ಆಶಿಸುವ ಹಿಂದೂ ಮನಸ್ಸುಗಳು ಕೇಳಿಕೊಳ್ಳಬಹುದಾದ ಪ್ರಶ್ನೆಯಿದು:

ತೋಳವೊಂದು ಕುರಿಯ ಬಳಿಗೆ ಬಂದು ನಾವಿಬ್ಬರೂ ಒಂದೇ ಭೂಮಿಯ ಮಣ್ಣಿನಿಂದ ಆದವರು. ನನಗೂ ನಿನಗೂ ವ್ಯತ್ಯಾಸವಿಲ್ಲ. ನಾನೀಗ ನಿನ್ನನ್ನು ತಿಂದುಬಿಡುವೆ. ನೀನು ನನ್ನಲ್ಲಿಯೇ ಸೇರಿಹೋಗಿಬಿಡುತ್ತೀಯ. ಹಾಗಾಗಿ ನಿನ್ನದೇನು ನಷ್ಟವಾಗುವುದಿಲ್ಲ ಎಂದಾಗ ಕುರಿ ಏನು ಹೇಳಬೇಕು? ಅಥವಾ ಬುದ್ಧಿ ಜೀವಿಯಾಗಿ ಕುರಿಗೆ ನೀವೇನು ಹೇಳುತ್ತೀರಿ ಎಂಬುದು ಕೇಳಿಕೊಳ್ಳಬೇಕು.

(ಕಳೆದ ವಾರ ಇದೇ ವಿಷಯದ ಬಗ್ಗೆ ವಿವಿಧ ಬರಹಗಳ ಲೇಖನ ಪ್ರಕಟವಾಗಿತ್ತು: ಅದನ್ನು ಓದಲು ಇಲ್ಲಿ ಒತ್ತಿ.)