ಡಾ.ಉಮಾ ವೆಂಕಟೇಶ್ ಬರೆದ ಲೇಖನ, “ಐತಿಹಾಸಿಕ ವೈಭವ ನಗರಗಳು: ವಿಜಯನಗರ ರಾಜಧಾನಿ ಹಂಪೆ ಭಾಗ ೧ – ದರೋಜಿ ಕರಡಿಧಾಮ”

ಹಂಪೆ ಎಂದರೆ ಹಲವರಿಗೆ ಹಲವು ಭಾವ. ಇತಿಹಾಸವೋ, ಕೃಷ್ಣದೇವರಾಯನೋ, ನೆತ್ತಿ ಸುಡುವ ಬಳ್ಳಾರಿಯ ಬಿಸಿಲೋ, ಹಂಪೆ ಕನ್ನಡ ವಿಶ್ವವಿದ್ಯಾನಿಲಯವೋ, ಹೀಗೇ ಏನೆಲ್ಲಾ ಹೊಳೆಯುತ್ತದೆ. ಅಲ್ಲಿನ ಮಂಟಪಗಳು ಹೇಳುವ ಕಥೆಗಳು, ಶಿಲ್ಪ ಕಲೆ ಉಸುರುವ ಪಿಸುಮಾತುಗಳು, ಕಲ್ಲುಗಳು ಹಾಡುವ ಆಲಾಪನೆ, ಕೀರ್ತನೆಗಳು… ಅಲ್ಲಿರುವ ವಾನರಗಳು, ಕರಡಿಗಳು, ಇತರೆ ಮೃಗ ಪಕ್ಷಿಗಳು, ಪ್ರಕೃತಿ ಸೌಂದರ್ಯ ಕೂಡ ಅಷ್ಟೇ ಇಷ್ಟವಾಗುತ್ತವೆ. ಇತ್ತೀಚೆಗೆ ಅವನ್ನೆಲ್ಲಾ ನೋಡಿ, ಆನಂದಿಸಿ ಬಂದ ಡಾ. ಉಮಾ ವೆಂಕಟೇಶ್ ತಮ್ಮ ಅನುಭವ, ಪ್ರವಾಸೀ ಕಥನವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಕಥನದ ಮೊದಲ ಭಾಗ ಇಗೋ ನಿಮ್ಮ ಮುಂದೆ! -ಸಂ.

ಐತಿಹಾಸಿಕ ವೈಭವ ನಗರಗಳು: ವಿಜಯನಗರ ರಾಜಧಾನಿ ಹಂಪೆ

ಭಾಗ ದರೋಜಿ ಕರಡಿಧಾಮ

ಡಾ. ಉಮಾ ವೆಂಕಟೇಶ್

dsc_0180
ಕರಡಿಧಾಮ

“ವಿಜಯನಗರವನ್ನು ಕೃಷ್ಣದೇವರಾಯನು ಆಳುತ್ತಿದ್ದ ಕಾಲದಲ್ಲಿ, ಅಲ್ಲಿಯ ವೈಭವ ಎಷ್ಟಿತ್ತೆಂದರೆ, ಅಲ್ಲಿನ ರಸ್ತೆಯ ಬದಿಯಲ್ಲಿ ಮುತ್ತು, ರತ್ನ, ಹವಳ ಮತ್ತು ವಜ್ರ-ವೈಢೂರ್ಯಗಳನ್ನು ಬಳ್ಳದಲ್ಲಿ ಅಳೆದು ಮಾರುತ್ತಿದ್ದರು” ಎನ್ನುವ ಸಾಲುಗಳನ್ನು ನನ್ನ ಮಾಧ್ಯಮಿಕ ಶಾಲೆಯ ಚರಿತ್ರೆ ಮತ್ತು ಕನ್ನಡ ಪಠ್ಯಪುಸ್ತಕಗಳಲ್ಲಿ ಜೋರಾಗಿ ಓದಿ ಮನದಟ್ಟು ಮಾಡುಕೊಳ್ಳುತ್ತಿದ್ದ ದಿನಗಳು ಇನ್ನೂ ನನ್ನ ಮನದಲ್ಲಿ ಅಚ್ಚೊತ್ತಿದಂತಿದೆ. ೧೯೬೯ನೆಯ ಇಸವಿಯಲ್ಲಿ, ನನ್ನ ತಂದೆ ಬಳ್ಳಾರಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಭೂಗರ್ಭಶಾಸ್ತ್ರಜ್ಞರಾಗಿ ಅಲ್ಲಿನ ಮ್ಯಾಂಗನೀಸ್ ಗಣಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಿನಗಳವು. ನನ್ನ ಚಿಕ್ಕಪ್ಪ ಮತ್ತು ಅವರ ಗೆಳೆಯ ನಮ್ಮ ಮನೆಗೆ ಬಳ್ಳಾರಿಗೆ ಬಂದಿದ್ದಾಗ, ನಾವೆಲ್ಲಾ ಹಂಪೆ ಮತ್ತು ಹೊಸಪೇಟೆಯ ತುಂಗಭದ್ರಾ ಅಣೆಕಟ್ಟನ್ನು ನೋಡಿ ಬಂದಿದ್ದೆವು. ಆಗ ನಾನಿನ್ನೂ ೭ ವರ್ಷದವಳು. ಅಲ್ಲಿಗೆ ಹೋಗಿದ್ದ ನೆನಪು ಮಸುಕುಮಸುಕಾಗಿದ್ದರೂ, ಹಂಪೆಯ ವಿರೂಪಾಕ್ಷ ದೇವಾಲಯ, ಸಾಸಿವೆ ಮತ್ತು ಕಡಲೆ ಕಾಳು ಗಣಪತಿ, ಉಗ್ರನರಸಿಂಹ, ಕಲ್ಲಿನ ರಥದ ಚಿತ್ರಗಳು ಹಸಿರಾಗಿದ್ದವೆನ್ನಬಹುದು. ಜೊತೆಗೆ ೭೦ರ ದಶಕದಲ್ಲಿ ನೋಡಿದ್ದ ಪ್ರಸಿದ್ಧ ಕನ್ನಡ ಚಲನಚಿತ್ರ “ಕೃಷ್ಣದೇವರಾಯ”ದ ಹಲವಾರು ದೃಶ್ಯಗಳು ಮತ್ತು ಹಾಡುಗಳನ್ನು ಇನ್ನೂ ಮರೆತಿಲ್ಲ. ಹಾಗಾಗಿ ನಮ್ಮ ಮಕ್ಕಳೂ ಕೂಡಾ ಕರ್ನಾಟಕದ ಗತವೈಭವಗಳನ್ನು ಹೊತ್ತ, ನಮ್ಮ ಚರಿತ್ರೆಯನ್ನು ಹೇಳುವ ಹಂಪೆಯನ್ನು ಒಮ್ಮೆ ನೋಡಲೆಂದು ಬಹಳ ಆಸೆ ಇತ್ತು. ಈ ಬಾರಿ ಬೆಂಗಳೂರಿಗೆ ಹೋದಾಗ, ಹೊರಗೆ ಕರೆದುಕೊಂಡು ಹೋಗದಿದ್ದರೆ ನಾವು ಬರುವುದಿಲ್ಲ ಎಂದು ಮಕ್ಕಳು ಪಟ್ಟು ಹಿಡಿದದ್ದು ಒಳ್ಳೆಯದೇ ಆಯಿತು. ಸರಿ ನಾನು ಕಾರ್ಡಿಫ಼್ ನಗರದಲ್ಲಿ ನಮ್ಮ ಮನೆಯಲ್ಲೇ ಕುಳಿತು, ಗೂಗಲ್ ಕೃಪೆ ಮತ್ತು ನೆರವಿನಿಂದ ಅಲ್ಲಿನ ಎಲ್ಲಾ ವಿಷಯಗಳನ್ನು ಸಂಗ್ರಹಿಸಿ ಹೋಟೆಲ್ ಮತ್ತು ಪ್ರಯಾಣಗಳನ್ನು ೬ ತಿಂಗಳು ಮುಂಚಿತವಾಗಿ ಬುಕ್ ಮಾಡಿಬಿಟ್ಟೆ.

ಜುಲೈ ತಿಂಗಳ ೨೪ರ ರಾತ್ರಿ ೧೦ ಗಂಟೆಗೆ ಬೆಂಗಳೂರಿನ ಕಂಟೋನ್ಮೆಂಟ್ ಅಥವಾ ದಂಡು ನಿಲ್ದಾಣದಿಂದ ಹೊರಟ ಹಂಪೆ ಎಕ್ಸಪ್ರೆಸ್ ರೈಲಿನಲ್ಲಿ ಸಂಸಾರ ಸಮೇತ ಹೊಸಪೇಟೆಯತ್ತ ಪ್ರಯಾಣ ಬೆಳೆಸಿದೆವು. ರಾತ್ರಿ ಕಳೆದು ಬೆಳಗಿನ ೮ ಗಂಟೆಯ ಸಮಯಕ್ಕೆ ಹೊಸಪೇಟೆ ತಲುಪಿದ ನಾವು ಈ ಮೊದಲೆ ನಾನು ಬುಕ್ ಮಾಡಿದ್ದ ಅಲ್ಲಿನ ಉತ್ತಮ ದರ್ಜೆಯ ಹೋಟೆಲ್ ಎನಿಸಿದ “ಮಲ್ಲಿಗೆ”ಯತ್ತ ಆಟೋಗಳಲ್ಲಿ ನಡೆದೆವು. ೬೯ರ ಇಸವಿಯಲ್ಲಿ ಹೊಸಪೇಟೆ ಇದ್ದ ರೀತಿ ಮತ್ತು ಸ್ಥಿತಿ ನನಗೆ ಅಷ್ಟಾಗಿ ನೆನಪಿಲ್ಲ. ಹಾಗಾಗಿ ಈ ಬಾರಿ ನೋಡಿದ್ದೆ ಗೊತ್ತು. ನಗರದ ಪರಿಸ್ಥಿತಿ, ಶುಚಿತ್ವವೇನೂ ಅಷ್ಟು ಸರಿಯಿಲ್ಲ. ಕರ್ನಾಟಕದಲ್ಲಿ ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದ ನನಗೆ, ನನ್ನ ಪತಿಗೆ ಇದೇನೂ ಹೊಸದಲ್ಲ. ನಮ್ಮ ಮಕ್ಕಳಿಗೆ ಸ್ವಲ್ಪ ಗಾಬರಿಯಾಯಿತು. ಆದರೆ ಒಮ್ಮೆ ಮಲ್ಲಿಗೆ ಹೋಟೆಲ್ ಬಳಿ ತಲುಪಿದಾಗ ಸ್ವಲ್ಪ ಆಶ್ಚರ್ಯವೇ ಆಯಿತು. ಹೋಟೆಲ್ ಆಸು-ಪಾಸು ಮತ್ತು ಆವರಣಗಳು ಬಹಳ ಚೆನ್ನಾಗಿದೆ. ಹೋಟೆಲಿನ ಹಲವಾರು ಭಾಗಗಳನ್ನು ಹೊಸದಾಗಿ ಕಟ್ಟಿ ಬಹಳ ಓರಣವಾಗಿ ಇಟ್ಟಿದ್ದಾರೆ. ನೋಡಿ ನಮಗೆಲ್ಲಾ ಸಮಾಧಾನವಾಯಿತು. ನಮ್ಮ ಕೋಣೆಗಳೂ ಕೂಡಾ ಅಚ್ಚುಕಟ್ಟಾಗಿದ್ದು, ಪಾಶ್ಚಿಮಾತ್ಯ ಹೋಟೆಲಿನಲ್ಲಿರುವಂತೆ ಎಲ್ಲಾ ಸೌಲಭ್ಯಗಳೂ ಇವೆ. ಹೋಟೆಲಿನ ರೆಸ್ಟೋರೆಂಟಿನಲ್ಲಿ ಉತ್ತಮ ಗುಣಮಟ್ಟದ ಊಟ-ತಿಂಡಿಗಳೂ ಲಭ್ಯವಿದ್ದು, ನಮ್ಮ ಮಕ್ಕಳು ಬಹಳ ಖುಷಿಯಾಗಿ ಎಲ್ಲವನ್ನೂ ತಿಂದು ತೃಪ್ತಿಪಟ್ಟರು ಎನ್ನಬಹುದು. ರಾತ್ರಿಯ ಪ್ರಯಾಣದ ಆಯಾಸವನ್ನು ಒಂದು ಸಣ್ಣ ನಿದ್ದೆ ತೆಗೆದು ಪರಿಹರಿಸಿಕೊಂಡನಂತರ, ಪುಷ್ಕಳವಾದ ಮದ್ಯಾನ್ಹದ ಭೋಜನವನ್ನು ಪೂರೈಸಿದ ನಾವು, ಹೋಟೆಲಿನ ಸ್ವಾಗತ ಡೆಸ್ಕಿನಲ್ಲಿದ್ದ ಅವರದೇ ಪ್ರವಾಸ ವಿಭಾಗದಲ್ಲಿ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ವ್ಯವಸ್ಥೆಯ ಬಗ್ಗೆ ವಿಚಾರಿಸಿದೆವು.

ಅದೃಷ್ಟವಶಾತ್ ಮಲ್ಲಿಗೆ ಹೋಟೆಲಿನೊಂದಿಗೆ ಸಹಭಾಗಿತ್ವದಲ್ಲಿ ಆ ಏರ್ಪಾಡೂ ಇದೆ ಎಂದು ತಿಳಿದ ನಾವು, ಆ ಮಧ್ಯಾನ್ಹ ಅಲ್ಲಿಯೇ ಹತ್ತಿರದಲ್ಲಿರುವ ದರೋಜಿ ಕರಡಿ ಧಾಮ ಮತ್ತು ತುಂಗಭಧ್ರಾ ಅಣೆಕಟ್ಟುಗಳನ್ನು ನೋಡಲು ನಿರ್ಧರಿಸಿದೆವು. ಉತ್ತಮ ಮಟ್ಟದ ಟೊಯೋಟಾ ಕ್ವಾಲಿಸ್ ಕಾರಿನಲ್ಲಿ ಕುಳಿತು ಹಂಪೆಯ ಪ್ರವಾಸವನ್ನು ಆರಂಭಿಸಿದ ನಮಗೆ, ಹೊಸಪೇಟೆಯಿಂದ ಹೊರಬಿದ್ದ ತಕ್ಷಣವೇ, ಸುತ್ತಲೂ ಹಸಿರಿನ ದರ್ಶನವಾಗಿ ನೆಮ್ಮದಿಯೆನಿಸಿತು.

dsc_0159
ತೆಂಗು, ಸೂರ್ಯಕಾಂತಿ ಬೆಳೆ

ತೆಂಗು, ಕಬ್ಬು, ಬಾಳೆ ಮತ್ತು ಸೂರ್ಯಕಾಂತಿ ಬೆಳೆಗಳಿಂದ ಮೈದುಂಬಿದ ಹೊಲ-ತೋಟಗಳು, ಬಣ್ಣಬಣ್ಣದ ಹಕ್ಕಿಗಳ ಚಿಲಿಪಿಲಿಗುಟ್ಟುವಿಕೆಯಿಂದ ತುಂಬಿದ ಹಸಿರಿನ ರಾಶಿ, ನೀಲಿ ಆಗಸಗಳು ನಮ್ಮ ಕ್ಯಾಮೆರಾದಲ್ಲಿ ಸೆರೆಯಾಗತೊಡಗಿದವು.

dsc_0138
ಬಾಳೆ ಮೈದುಂಬಿದ ಹೊಲ-ತೋಟಗಳು

ಕಿಂಗ್-ಫ಼ಿಷರ್ (ಮೀಂಚುಳ್ಳಿ), ಬಾನಾಡಿಗಳು, ಬಿಳಿಕೊಕ್ಕರೆ, ನೀಲಿ ಮತ್ತು ಕಂದು ಹೆರಾನ್, ಪಚ್ಚೆವರ್ಣದ ಗಿಳಿಸಂಕುಲ ಹೀಗೆ ಹಲವು ಹತ್ತು ಬಗೆಯ ಪಕ್ಷಿಗಳು ನಮ್ಮ  ಮನವನ್ನು ತಣಿಸಿದೆವು. ತುಂಗಭದ್ರ ನಾಲೆಯ ಅಕ್ಕಪಕ್ಕದಲ್ಲಿ ಹಳ್ಳಿಯ ಜನ ಪಾತ್ರೆ-ಬಟ್ಟೆಗಳನ್ನು ಸ್ವಚ್ಛಗೊಳಿಸುತ್ತಿದ್ದನ್ನು ಕಂಡ ನನ್ನ ಮಕ್ಕಳಿಗೆ ತಾವೊಂದು ಬೇರೆಯ ಯುಗದಲ್ಲಿರುವಂತೆ ಭಾಸವಾಯಿತು. ಚಿಕ್ಕಂದಿನಿಂದ ಈ ಚಟುವಟಿಕೆಗಳನ್ನು ನೋಡಿ, ಮಾಡುತ್ತಾ ಬೆಳೆದ ನಮಗೆ ಇದು ಸಾಮಾನ್ಯ ದೃಶ್ಯ! ನಮ್ಮ ಕಾರಿನ ಡ್ರೈವರ್ ನಮ್ಮೊಡನೆ ಕನ್ನಡದಲ್ಲಿ ನಿರಾಳವಾಗಿ ಹರಟುತ್ತಾ ನಮಗೆ ಅಲ್ಲಿನ ಆಗುಹೋಗುಗಳ ಸಂಪೂರ್ಣ ಮಾಹಿತಿಯನ್ನು ಎಡೆಬಿಡದೆ ನೀಡುತ್ತಿದ್ದ. ಸುಮಾರು ೪೦ ನಿಮಿಷಗಳ ಪ್ರಯಾಣದ ನಂತರ, ಒಮ್ಮೆಗೆ ಕಲ್ಲು, ಬೆಟ್ಟಗುಡ್ಡಗಳಿಂದ ಆವೃತವಾದ, ನಿರ್ಜನವಾದ ಕರಡಿಧಾಮದೊಳಕ್ಕೆ ಆಗಮಿಸಿದೆವು. ರಾಜ್ಯ ಅರಣ್ಯ ಇಲಾಖೆಯ ಪ್ರವೇಶದ್ವಾರದಲ್ಲಿ ಸಹಿ ಮಾಡಿ, ಪ್ರವೇಶ-ದರದ ಹಣವನ್ನು ಪಾವತಿ ಮಾಡಿದ ನಂತರ ನಮ್ಮನ್ನು ಒಳಬಿಟ್ಟರು. ಇಲ್ಲಿ ಕಾಲುನಡಿಗೆಯಲ್ಲಿ ಹೋಗಲು ಅನುಮತಿಯಿಲ್ಲ. ಕಾಡುಪ್ರಾಣಿಗಳಿಗೆ ಮಾತ್ರಾ ಮೀಸಲಾದ ಪ್ರದೇಶ. ಹಾಗಾಗಿ ವಾಹನಗಳಲ್ಲಿ ಅಲ್ಲಿಯ ಉನ್ನತ ಪ್ರದೇಶವೊಂದರಲ್ಲಿ ಕಟ್ಟಿದ ವೀಕ್ಷಣ-ಗೋಪುರದವರೆಗೂ ಹೋಗಿ, ಅಲ್ಲಿ ನಿಂತು ಕರಡಿಗಳನ್ನು ದೂರದಿಂದ ನೋಡುವ ವ್ಯವಸ್ಥೆ ಮಾಡಿದ್ದಾರೆ.

ಪ್ರತಿದಿನ ಮದ್ಯಾನ್ಹ ೩-೫ ಗಂಟೆಗಳ ಸಮಯದಲ್ಲಿ, ಇಲ್ಲಿ ಅರಣ್ಯ ಇಲಾಖೆಯವರು ಇಡುವ ಬಾಳೆ, ಬೆಲ್ಲ, ಮೆಕ್ಕೆಜೋಳದ ಊಟವನ್ನು ಸವಿಯಲು ಬರುತ್ತವೆ. ಈ ಪ್ರಾಣಿಗಳು ಅದೃಷ್ಟವಿದ್ದರೆ ಕಾಣಸಿಗುತ್ತವೆ ಎಂದೂ ನಮ್ಮ ಡ್ರೈವರ್ ನಮ್ಮನ್ನು ಎಚ್ಚರಿಸಿದ್ದ. ಸರಿ ವಾಚ್-ಟವರಿನ ಮೇಲ್ಭಾಗದಲ್ಲಿ ನಿಂತು, ನಮ್ಮ ಕ್ಯಾಮೆರಾ ಮತ್ತು ದುರ್ಬೀನನ್ನು ಹಿಡಿದು ಕರಡಿ ದರ್ಶನಕ್ಕೆ ಕಾದು ನಿಂತೆವು. ಈ ಮಧ್ಯದಲ್ಲಿ ನಮ್ಮ ಸುತ್ತಲೂ ನವಿಲಿನ ಕೇಕೆಯ ಶಬ್ದ ನಮ್ಮ ಕಿವಿಗಳನ್ನು ತುಂಬಿಬಿಟ್ಟಿತ್ತು. ಆದರೆ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಮಕ್ಕಳು ನವಿಲುಗಳ ಒಂದೇ ಒಂದು ದರ್ಶನಕ್ಕೆ ತವಕಿಸುತ್ತಿದ್ದರು. ಒಮ್ಮೆಲೆ ಒಂದು ದೊಡ್ಡ ಗುಂಪು ತಮ್ಮ ಗಂಭೀರವಾದ ನಡಿಗೆಯಲ್ಲಿ ಓಲಾಡುತ್ತಾ, ತಮ್ಮ ಬಣ್ಣಬಣ್ಣದ ಗರಿಗಳನ್ನು ಬೀಸುತ್ತಾ ಅಲ್ಲಿದ್ದ ಬಂಡೆಗಳ ಮೇಲೆ ಪ್ರತ್ಯಕ್ಷವಾದಾಗ, ನಮ್ಮ ಮನಸ್ಸೂ ಕೂಡಾ ಆ ಗರಿಗಳಂತೆ ಕೆದರಿ, ಕುಣಿದು, ನಮ್ಮ ಕೈಯಲ್ಲಿದ್ದ ಕ್ಯಾಮೆರಾಗಳು ಸದ್ದಿಲ್ಲದೇ ನಿರಂತರವಾಗಿ ಕ್ಲಿಕ್ಕಿಸಿದವು. ಅಷ್ಟರಲ್ಲೇ ನನ್ನ ಮಗಳು ದುರ್ಬೀನಿಂದ ನಮಗಷ್ಟೇ ಕೇಳುವಂತೆ “ಅಮ್ಮ, ಎದುರಿನ ಬಂಡೆಯ ಕಡೆಗೆ ನೋಡಿ, ಮೂರು ಕರಡಿಗಳಿವೆ” ಎಂದು ಆದೇಶಿಸಿದಳು. ನಮ್ಮ ಉತ್ಸಾಹಕ್ಕೆ ಪಾರವೇ ಇಲ್ಲ. ಕೇವಲ ಮೃಗಾಲಯಗಳಲ್ಲಿ ಕರಡಿಗಳನ್ನು ನೋಡಿದ್ದ ನಮಗೆ ಅವನ್ನು ಈ ಸ್ವಾಭಾವಿಕ ಪರಿಸರದಲ್ಲಿ ಕಂಡಾಗ ಬಹಳ ಸಂತೋಷವೆನಿಸಿತು.

dsc_0190
ಸ್ಲಾತ್ ಕರಡಿ ದರ್ಶನ

ನಮ್ಮ ರಾಜ್ಯದಲ್ಲಿ ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ವಾಸಿಸುವ ಈ ಸ್ಲಾತ್ ಕರಡಿಗಳು ರಾತ್ರಿಯಲ್ಲಿ ಚಟುವಟಿಕೆಯಾಗಿರುವ ಕೀಟಭಕ್ಷಕಗಳಾಗಿವೆ. ರಾಮಾಯಣದಲ್ಲಿ ರಾಮ ಸೀತೆಯನ್ನು ಹುಡುಕುತ್ತಾ ಬಂಡಾಗ, ಇಲ್ಲಿಯೇ ಆನೆಗೊಂದಿಯಲ್ಲಿ ವಾನರ ಸೈನ್ಯದ ಜೊತೆಗೆ, ಕರಡಿವೀರ ಜಾಂಬವಂತನನ್ನೂ ಭೇಟಿಯಾದನೆಂದು ಹೇಳುತ್ತಾರೆ. ಹಾಗಾಗಿ ಇಲ್ಲಿ ಕರಡಿಗಳನ್ನು ಬಹಳ ಭಯಭಕ್ತಿಗಳಿಂದ ನೋಡುವ ಸಂಪ್ರದಾಯವಿದೆ. ಇಲ್ಲಿಯ ಗಣಿಗಳಲ್ಲಿ ನಡೆಯುವ ಆಕ್ರಮ ಗಣಿಗಾರಿಕೆಯ ಫಲವಾಗಿ, ಕರಡಿಗಳ ಸಂಖ್ಯೆಗೆ ಧಕ್ಕೆಯಾಗಿ ಈ ಕರಡಿಧಾಮವನ್ನು ೧೯೯೪ರಲ್ಲಿ ಪ್ರಾರಂಭಿಸಲಾಗಿದೆ. ಈ ಅರಣ್ಯಧಾಮದಲ್ಲಿ ಕರಡಿಗಳ ಜೊತೆಗೆ ಹುಲಿ, ಚಿರತೆ, ಚುಕ್ಕೆ-ಜಿಂಕೆ, ಮಾನಿಟರ್ ಹಲ್ಲಿ, ನಕ್ಷತ್ರ ಆಮೆ, ಮುಂಗುಸಿಗಳೂ ಕಾಣಸಿಗಬಹುದು. ಅಲ್ಲಲ್ಲೇ ಹಲವಾರು ಬಣ್ಣದ ಹಲ್ಲಿಗಳು, ಚಿಟ್ಟೆಗಳು ನಮ್ಮ ಕಣ್ಣಿಗೆ ಬಿದ್ದವು.

dsc_0197
ಬಣ್ಣಬಣ್ಣದ ಗರಿಗಳ ನವಿಲುಗಳ ಗುಂಪು
dsc_0235
ಬಣ್ಣದ ಹಲ್ಲಿ

ನಮ್ಮ ಮನಸ್ಸಿಗೆ ತೃಪ್ತಿಯಾದಷ್ಟು ನೋಡಿದ ನಂತರ, ಅಲ್ಲೇ ಕುಳಿತಿದ್ದ ಡ್ರೈವರ್ ಸಾರ್ ನೀವು ತುಂಗಭದ್ರ ಅಣೆಕಟ್ಟಿಗೆ ಹೋಗಬೇಕೆಂದರೆ ಈಗಲೇ ಹೊರಡಬೇಕು ಎಂದು ಎಚ್ಚರಿಸಿದಾಗ, ನಾವು ಅರೆಮನಸ್ಸಿನಿಂದಲೇ, ಕರಡಿಗಳ ದಿಕ್ಕಿನಿಂದ ನಮ್ಮ ದೃಷ್ಟಿಯನ್ನು ತೆಗೆದು ಕಾರಿನೆಡೆ ನಡೆದೆವು.

dsc_0177
ಬಣ್ಣದ ಚಿಟ್ಟೆಗಳು

ಮಾಧ್ಯಮಿಕ ಶಾಲೆಯಲ್ಲಿ ಕನ್ನಡದ ವರ-ಕವಿ ದ.ರಾ. ಬೇಂದ್ರೆ ಅವರ “ಕರಡಿ-ಕುಣಿತ” ಎಂಬ ಪದ್ಯವನ್ನು ಬಾಯಿಪಾಠ ಮಾಡಿ ಗುನುಗುತ್ತಿದ್ದ ನನ್ನ ಮನ ಆ ದಿನಗಳತ್ತ ಓಡಿತು.

ಮನಬಲ್ಲ ಮಾನವ ಕುಣಿದಾನ, ಕುಣಿಸ್ಯಾನ

ಪ್ರಾಣದ ಈ ಪ್ರಾಣಿ ಹಿಂದಾs

ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ

ಪರಮಾರ್ಥ ಎಂಬಂತೆ ಬಂದಾನ

“ಪ್ರಾಣಿ ಶಕ್ತಿಯನ್ನು, ತನ್ನ ಬುದ್ದಿಶಕ್ತಿಯಿಂದ ಪಳಗಿಸಿ ತನ್ನ ಹೊಟ್ಟೆಪಾಡಿಗೆ ಪರಮಾರ್ಥದ ವೇಶವನ್ನು ತೊಡಿಸಿದ್ದಾನೆ”.

ಕೇವಲ ಮಾನವ ತನ್ನ ಹೊಟ್ಟೆಪಾಡಿಗಾಗಿ ಈ ಪ್ರಾಣಿಯನ್ನು ಹಿಡಿದು ಪಳಗಿಸಿ, ಅದಕ್ಕೆ ಮೂಗುದಾರ ಹಾಕಿ, ಕುಣಿಸಿ ಜೀವನ ಸವೆಸುವ ರೀತಿ ನನಗೆ ಹೀನಾಯವೆನಿಸಿತು. ಸ್ವಚ್ಚಂದವಾಗಿ ಅರಣ್ಯದಲ್ಲಿ ಓಡಾಡಿಕೊಡಿರುವ ಈ ವನ್ಯಮೃಗ, ಸರಳುಗಳ ಹಿಂದೆ ಮೃಗಾಲಯದಲ್ಲಿ ಶತಪಥ ತಿರುಗುವ ರೀತಿಯೂ ಸರಿಯಲ್ಲ. ತಮ್ಮದೇ ಪರಿಸರದಲ್ಲಿ ಜೀವಿಸುವ ಈ ಮೃಗದ ಜನ್ಮಸಿದ್ಧ ಹಕ್ಕನ್ನು ಈ ದರೋಜಿ-ಕರಡಿಧಾಮದಲ್ಲಿ ಕಂಡು ಹಿಗ್ಗಿದ ನನ್ನ ಮನ, ರಾಜ್ಯ ಅರಣ್ಯ ಇಲಾಖೆಗೆ ಭೇಷ್ ಎಂದು ಬೆನ್ನುತಟ್ಟಿತು.

  ಚಿತ್ರಗಳು: ಡಾ. ಉಮಾ ವೆಂಕಟೇಶ್

ವಿನ್ನೀ-ದ-ಫೂ (Winnie the Pooh) ಅನ್ನೋ ಕನಸುಗಾರ ವೇದಾಂತಿ: ಡಾ. ವಿನತೆ ಶರ್ಮ ಬರೆದ ಲೇಖನ

ಸಾಹಿತ್ಯ ಒಂದು ಭಾಷೆಯ ಚೌಕಟ್ಟನ್ನು ಮೀರಿ ಬೇರೆ ನೆಲೆಗಳಿಗೆ ಹರಿದು ಸಹೃದಯರ ಕೈ ಜಗ್ಗುವುದು ಬಲ್ಲ ವಿಷಯ. ‘ಪಂಚತಂತ್ರ’ ಕತೆಗಳು ಭಾರತದಲ್ಲಿ ಹುಟ್ಟಿ, ಬೆಳೆದು, ಮಧ್ಯಪ್ರಾಚ್ಯ ದೇಶಗಳಿಗೆ ಹೋಗಿ, ಅಮೇರಿಕ ಮತ್ತು ಯೂರೋಪ್ ದೇಶಗಳಲ್ಲಿ ಕೂಡ ನೆಲೆಸಿವೆ. ನೈಜೀರಿಯಾ ದೇಶದ ಚಿನುವ ಅಚೆಬೆ ಬರೆದ ‘ಥಿಂಗ್ಸ್ ಫಾಲ್ ಅಪಾರ್ಟ್’ ಕೃತಿ ಆಫ್ರಿಕಾ ಖಂಡವನ್ನು ದಾಟಿ, ಆಂಗ್ಲ ಭಾಷೆ ಮಾತನಾಡುವ ಎಲ್ಲ ದೇಶಗಳನ್ನು ಮೀಟಿ ಅಲ್ಲಾಡಿಸಿ, ಪ್ರಪಂಚದ ಅನೇಕ ಭಾಷಿಗರನ್ನು ಹಿಡಿದಿಟ್ಟಿದೆ. ಒಂದು ಭಾಷೆಯ ಸಾಹಿತ್ಯ ಬೇರೆ ಭಾಷಿಗರನ್ನು ಮುಟ್ಟಬಹುದಾದ ಬಗೆಗಳು ಯಾವುವು? ಹಾಗೆಯೇ, ದೊಡ್ಡವರನ್ನು ಮಕ್ಕಳ ಸಾಹಿತ್ಯ ಆಕರ್ಷಿಸುತ್ತದೆಯೇ? ಓದುಗರಾಗಿ ಅವರನ್ನು ಆ ಸಾಹಿತ್ಯ ಪ್ರಕಾರ ಹೇಗೆ ಸಮರ್ಥವಾಗಿ ದುಡಿಸಿಕೊಳ್ಳಬಹುದು? ಚಿಂತನೆಗಳ ಸಂತೆ ಶುಕ್ರವಾರದ ಈ ಲೇಖನ!

 ವಿನ್ನೀ-ದ-ಫೂ  (Winnie the Pooh) ಅನ್ನೋ ಕನಸುಗಾರ ವೇದಾಂತಿ

ಡಾ. ವಿನತೆ ಶರ್ಮ

 ಅದು ೨೦೦೨, ಫೆಬ್ರವರಿ ತಿಂಗಳು. ಸ್ಥಳ ಆಸ್ಟ್ರೇಲಿಯ ದೇಶ. ಹಿಂದಿನ ವರ್ಷವಷ್ಟೇ ಮತ್ತೆ ಯೂನಿವರ್ಸಿಟಿ ಓದಿಗೆ ಮರಳಿ, ಮಹಿಳೆ ಮತ್ತು ಶಿಕ್ಷಣ ವಿಷಯದಲ್ಲಿ ಒಂದು ಚಿಕ್ಕ ಥೀಸಿಸ್ ಬರೆದು ಮುಗಿಸಿದ್ದೆ. ೯ ತಿಂಗಳ ಕಾಲ ಅದೆಷ್ಟು ಪುಸ್ತಕಗಳನ್ನ ಓದಿದ್ದು, ಅದೆಷ್ಟು ಅಕಡೆಮಿಕ್ ಲೇಖನಗಳನ್ನ ಜಾಲಾಡಿದ್ದು. ಮಧ್ಯೆ ಮಧ್ಯೆ ಒಂದಷ್ಟು ಕವನಗಳು, ‘ಡೈಲಾಗ್’ ಗಳು ಹುಟ್ಟಿದ್ದವು. ನಾಟಕದ ಅರ್ಧ ಭಾಗ ಕೂಡ ಕಾಗದದ ಮೇಲೆ ಮೂಡಿತ್ತು. ಪೌಲೊ ಫ್ರೇರಿ, ಮಹಾಶ್ವೇತ ದೇವಿ ಸದಾ ನನ್ನ ಜೊತೆಯಲ್ಲಿದ್ದರು. ಅಂಟೋನಿಯೋ ಗ್ರಾಮ್ಶಿ, ಗಾಯತ್ರಿ ಸ್ಪಿವಾಕ್ ಮತ್ತು ‘ಸಬ್ ಆಲ್ಟರ್ನ್’ ಎಂಬ ಹೊಸ ಗರಿಗಳು ಹಾರಿ ಬಂದಿದ್ದವು.

 ಎಲ್ಲವನ್ನು ಎರಡೂ ಬಗಲಿನಲ್ಲಿಟ್ಟುಕೊಂಡು ಪಿಎಚ್.ಡಿ ಓದನ್ನು ಆರಂಭಿಸಿದ್ದೆ. ಆ ಫೆಬ್ರವರಿ ತಿಂಗಳಲ್ಲಿ ಅವರು ವಿನ್ನೀ-ದ-ಪೂ ನನ್ನ ಕೈಗಿತ್ತರು. ಅವರು ಮಗುವಾಗಿದ್ದಾಗ ಅವರ ತಾಯಿ ಆ ಪುಸ್ತಕವನ್ನ ಅವರಿಗೆಂದು ಕೊಂಡು, ತಮ್ಮ ಪುಟಾಣಿಗೆ ಓದುತ್ತಿದ್ದರಂತೆ. ಆ ಮಧುರ ನೆನಪಿನ ಪುಸ್ತಕವನ್ನು ನನಗೆ ಕೊಟ್ಟು ಅವರು ಹೇಳಿದ್ದು, ‘ರೀಡ್ ದಿಸ್ ಫಾರ್ ಎ ಚೇಂಜ್”.the-original

ಓದಿದೆ. ವಿನ್ನೀ-ದ-ಫೂ ಎನ್ನುವ ಕನಸುಗಾರ, ಮತ್ತವನ ಸ್ನೇಹಿತರ ಪ್ರಪಂಚ ನನ್ನದರೊಳಗೆ ಸೇರಿಕೊಂಡುಬಿಟ್ಟಿತು. ಅಥವಾ, ನಾನವರ ಲೋಕಕ್ಕೆ ಹಾರಿ ಲೇಡಿಬರ್ಡ್ ಆಗಿ ಮರದ ಕೊಂಬೆಯ ಮೇಲೆ ಶಾಶ್ವತವಾಗಿ ಕೂತು ಬಿಟ್ಟೆ ಎನ್ನಲೇ!

 ಎ.ಎ. ಮಿಲ್ನ್ (A.A.Milne) ಎಂಬ ಆಂಗ್ಲ ಲೇಖಕ ತನ್ನ ಮಗ ಕ್ರಿಸ್ಟೊಫರ್ ರಾಬಿನ್, ಮತ್ತವನ ಆಟಿಕೆಯಾದ ಮುದ್ದು ಕರಡಿಯ ಸುತ್ತ ಹೆಣೆದಿರುವ ಈ ಕತೆಗಳು ಜೀವ ತಾಳಿದ್ದು ಇಂಗ್ಲೆಂಡಿನ ಸಸೆಕ್ಸ್ ಪ್ರಾಂತ್ಯದಲ್ಲಿರುವ ಆಶ್ದೌನ್ ಅರಣ್ಯದಲ್ಲಿ. ಫೂ  ಬೇರ್ ಮತ್ತವನ ಸಂಗಾತಿಗಳು (ಕತ್ತೆ, ಮೊಲ, ಹಂದಿಮರಿ, ಕಾಂಗರೂ, ಗೂಬೆ, ಹುಲಿಮರಿ) ನಡೆಸುವ ಏನೆಲ್ಲಾ ಸಾಹಸಗಳು, ರಂಪಾಟಗಳು, ರೋಚಕ ತಲೆನೋವುಗಳು, ಏಳುಬೀಳುಗಳು, ಜೊತೆಗೆ ಅವರುಗಳು ಕೊಡುವ ಒಳನೋಟಗಳು, ಜೀವನದೃಷ್ಟಿಗಳು… ಎಲ್ಲವೂ ಆ ಅರಣ್ಯ ಪ್ರದೇಶದ ‘ಹಂಡ್ರೆಡ್ ಏಕರ್ ವುಡ್’ ನಲ್ಲಿಯೇ ನಡೆಯುವುದು. ಆಹಾ, ಎಂಥ ಅದ್ಭುತ ಲೋಕವದು!

 ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ
ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ

 ಫೂ ಬೇರ್ (Pooh Bear) ಹುಟ್ಟಿನ ಬಗ್ಗೆ ಕೂಡ ಒಂದು ಸ್ವಾರಸ್ಯವಾದ ಹಿನ್ನಲೆಯಿದೆ. ಪುಟ್ಟ ಕ್ರಿಸ್ಟೊಫರ್ ರಾಬಿನ್ ಲಂಡನ್ ಝೂಗೆ ತಪ್ಪದೆ ಭೇಟಿ ಕೊಡುತ್ತಿದ್ದನಂತೆ. ಅಲ್ಲಿದ್ದ ಕೆನಾಡಾದ ಕಪ್ಪು ಕರಡಿ ‘ವಿನ್ನಿ’ಯ ಹೆಸರು (ಆ ಕರಡಿ ಕೆನಾಡಾದ ವಿನ್ನಿಪೆಗ್ ಪ್ರಾಂತ್ಯದ್ದು) ಮತ್ತು ಅವನ ಕುಟುಂಬದವರು ಒಮ್ಮೆ ರಜಾದಿನಗಳಲ್ಲಿ ಭೇಟಿಯಾಗಿದ್ದ ‘ಫೂ ” ಎಂಬ ಹಂಸಪಕ್ಷಿಯ ಹೆಸರನ್ನು ಸೇರಿಸಿ ತನ್ನ ಮುದ್ದು ಟೆಡ್ಡಿಯನ್ನು ವಿನ್ನೀ-ದ-ಫೂ ಎಂದು ಕರೆದನಂತೆ.ಇದಕ್ಕೂ ಮುಂಚೆ ಅವನ ಮುದ್ದು ಟೆಡ್ಡಿಯ ಹೆಸರು ಎಡ್ವರ್ಡ್ ಆಗಿತ್ತು. ಹುಡುಗ ಕ್ರಿಸ್ಟೊಫರ್ ನ ಬಳಿ ಇದ್ದ ಇತರ ಆಟಿಕೆ ಪ್ರಾಣಿಗಳಾದ ಪಿಗ್ಲೆಟ್, ಇಯೋರ್, ಟಿಗ್ಗರ್, ಕಾಂಗ ಮತ್ತು ರೂ (ಅಮ್ಮ-ಮಗನ ಜೋಡಿ) ಫೂ ಬೇರ್ ನ ಕತೆಗಳಲ್ಲಿ ಬರುತ್ತಾರೆ. ಲೇಖಕ ಮಿಲ್ನ್ ಕಾಲ ಕ್ರಮೇಣ ಮತ್ತೆರಡು ಪಾತ್ರಗಳನ್ನ – ರಾಬಿಟ್ ಮತ್ತು ಔಲ್ – ಸೇರಿಸಿದರಂತೆ. ನಡು ನಡುವೆ ಮತ್ತಷ್ಟು ಪಾತ್ರಗಳು – ಉದಾಹರಣೆಗೆ, ಹೆಫಲಮ್ಪ್ ಎಂಬ ಆನೆಮರಿ – ಬರುತ್ತವೆ. ಕ್ರಿಸ್ಟೊಫರ್ ನ ಆ ಮುದ್ದು ಆಟಿಕೆ ಕರಡಿ ವಿನ್ನೀ-ದ-ಫೂ  ನ್ಯೂ ಯಾರ್ಕ್ ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಪ್ರದರ್ಶನದಲ್ಲಿದೆ.winnie-the-pooh-with-friends

 ವಿನ್ನೀ-ದ-ಫೂ  ಕತೆಗಳ ಗುಚ್ಛ ಜನ್ಮ ತಾಳಿದ್ದು ೧೯೨೬ರಲ್ಲಿ. ಈ.ಎಚ್.ಶೆಪರ್ಡ್ ರ ಪೆನ್ಸಿಲ್ ನಿಂದ ಹೊರ ಹೊಮ್ಮಿದ ಚಿತ್ರ ನಿದರ್ಶನಗಳು ಅಜರಾಮರ. ಆ ಕಥಾ ಗುಚ್ಛದ ನಂತರ ಮಿಲ್ನ್ ಇನ್ನೂ ಹಲವಾರು ಪುಸ್ತಕಗಳನ್ನು ಬರೆದರು – ರಿಟರ್ನ್ ಟು ದ ಒನ್ ಹಂಡ್ರೆಡ್ ಏಕರ್ ವುಡ್, ವೆನ್ ವಿ ವರ್ ವೆರಿ ಯಂಗ್, ನೌ ವಿ ಆರ್ ಸಿಕ್ಸ್ ಪುಸ್ತಕಗಳು ಮಿಲ್ನ್ ರ ಕವಿ ಹೃದಯವನ್ನು ಬಿಚ್ಚಿಡುತ್ತವೆ. ೧೯೩೦ ರಿಂದಾಚೆಗೆ ಈ ಕತೆಗಳನ್ನು ಅಮೆರಿಕ, ಬ್ರಿಟನ್ ದೇಶಗಳ ಟೆಲಿವಿಷನ್ ಗೆ ತಂದದ್ದು ಸ್ಟೀವನ್ ಸ್ಲೆಸಿಂಜರ್ (೧೯೩೦) ಮತ್ತು  ವಾಲ್ಟ್ ಡಿಸ್ನಿ ಸಂಸ್ಥೆ (೧೯೬೧). ಡಿಸ್ನಿ ಸಂಸ್ಥೆ ಹೊಸ ಚಿತ್ರಗಳನ್ನು, ಬಣ್ಣಗಳನ್ನು ಅಳವಡಿಸಿ ಹೊಸ ವಿನ್ಯಾಸದಲ್ಲಿ ಅದೇ ಕತೆಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದೂ ಅಲ್ಲದೆ, ವಿಡಿಯೋ ಮತ್ತು ಡಿ ವಿ ಡಿ ಗಳನ್ನೂ ತಂದು ಲಕ್ಷಾಂತರ ಮಕ್ಕಳು ಫೂ ಬೇರ್ ಕತೆಗಳನ್ನು ಪರದೆಯ ಮೇಲೆ ನೋಡುವಂತೆ ಮಾಡಿದೆ (https://www.youtube.com/watch?v=xHYvpXe75b8 ). ಹಾಡುಗಳು, ಆಡಿಯೋ, ರೇಡಿಯೋ, ರಂಗರೂಪಾಂತರ ಮುಂತಾದ ವಿಧ ವಿಧವಾದ ಅಳವಡಿಕೆಗಳಲ್ಲೂ ಅವು ಮೂಡಿ ಬಂದಿವೆ. ಅವನ ಹೆಸರಿನಲ್ಲಿ ಸಂಘ ಸಂಸ್ಥೆಗಳೂ ಇವೆ. (http://www.letssingit.com/?a=www_player&special_id=zv9p2sq )

 ಫೂ ಬೇರ್ ಒಬ್ಬ ನಿಷ್ಕಪಟ, ಸರಳ, ಕೆಲವೊಮ್ಮೆ ಸ್ವಲ್ಪ ಮೊದ್ದು ಸ್ವಭಾವದವ. ಅವನು ಮಕ್ಕಳನ್ನು, ದೊಡ್ಡವರನ್ನು ಗೆದ್ದಿದ್ದು ಅದೇ ಬೆಪ್ಪುತನದಿಂದ, ಅದೇ ನೈಜ ಮುಗ್ಧತೆಯಿಂದ. ಅವನ ನಿಧಾನಿಕೆಯಲ್ಲಿ ಅದೆಷ್ಟು ಅರಿವಿದೆ, ಹರಿವಿದೆ, ಜಾಣ್ಮೆಯಿದೆ, ಸ್ನೇಹವಿದೆ, ವಿವೇಚನೆಯಿದೆ! ಒಮ್ಮೊಮ್ಮೆ ಅವನ ಸ್ನೇಹಿತರಿಗೆ ಅವನು ಕೋಪ ತರಿಸಿ ಅವರು ಹಾರಾಡುವಂತೆ ಮಾಡಿದರೂ ಕಡೆಗೆ ಅವರು ಅವನ ಒಳ ಪ್ರಜ್ಞೆಯನ್ನು, ವಿವೇಕವನ್ನು ಮನಸಾರೆ ಒಪ್ಪಿಕೊಳ್ಳುತ್ತಾರೆ. ಪಿಗ್ಲೆಟ್ ಗಂತೂ ಫೂ  ಬೇರ್ ಇಲ್ಲದೆ ಜೀವನವಿಲ್ಲ. ಟಿಗ್ಗರ್ ಹೆಸರಿಗೆ ತಕ್ಕಂತೆ ಹುಲಿಮರಿಯಾಗಿ ಎಷ್ಟೆಷ್ಟೆ ಕುಣಿದಾಡಿದರೂ ಅವನ ಒಳ ಮನಸ್ಸಿಗೆ ಗೊತ್ತು – ಆಗೋ ಅಲ್ಲಿದ್ದಾನೆ ಫೂ  ಬೇರ್, ನನ್ನನ್ನು ವಾಸ್ತವಕ್ಕೆ ಮರಳಿ ತರುವ ನಿಧಾನಸ್ಥ, ಎಂದು. ಜಾಣ ರಾಬಿಟ್ ಮತ್ತು ಬುದ್ಧಿ ಹೇಳುವ ಔಲ್ ಗಳು ಎಷ್ಟೇ ಫೂ ಬೇರ್ ನ ಎಮ್ಮೆತನವನ್ನು ದೂರ ಸರಿಸಿದರೂ ಅವನ ಆ ‘ಈ ಕ್ಷಣದಲ್ಲಿ ಅಡಗಿರುವ ನಾನೆಂಬ ಅರಿವು’ ಎನ್ನುವ ಕೋಮಲ ಸ್ವಭಾವ ಅವರನ್ನು ಅವನ ಹತ್ತಿರಕ್ಕೆ ಎಳೆದು ತರುತ್ತದೆ.

 ಆ ನಿಧಾನಸ್ಥ ಅತ್ಯುತ್ತಮ ಕನಸುಗಾರ ಕೂಡ. ಅವನು ಹೇಳುವ ಮಾತುಗಳು, ಕಟ್ಟುವ ಪದ್ಯಗಳು, ಆಗಾಗ ಅನುರಣಿಸುವ ‘ಹಮ್’ ಗಳು ಓದುಗರ ಮುಖದಲ್ಲಿ ಮಂದಹಾಸವನ್ನು ಮೂಡಿಸುತ್ತವೆ. ಕತೆಗಳನ್ನು ಕೇಳುತ್ತಿರುವ ಚಿಕ್ಕ ಮಕ್ಕಳು ಕೇಕೆ ಹಾಕಿ ನಗುತ್ತಾರೆ, ಆ ಪದ್ಯಗಳನ್ನು ಮತ್ತೆ ಓದಿ ಎಂದು ದೊಡ್ಡವರನ್ನು ಪೀಡಿಸುತ್ತಾರೆ.

 ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ
ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ

 ಫೂ ನ ‘ಏನೂ ಮಾಡದ – ಡುಯಿಂಗ್ ನಥಿಂಗ್’ ಎಂಬ ಮನಸ್ಥಿತಿ ಮಕ್ಕಳಲ್ಲಿ ಕಿಲಿಕಿಲಿ ನಗು ಹುಟ್ಟಿಸಿದರೆ, ದೊಡ್ಡವರಲ್ಲಿ ಅಚ್ಚರಿ, ಹೊಟ್ಟೆಕಿಚ್ಚು ಕೂಡ ಉಂಟಾಗುತ್ತದೆ! ಅವನು ಮತ್ತು ಪಿಗ್ಲೆಟ್  ಜೊತೆಗೂಡಿ ಹೋಗುವ ನಡಿಗೆಗಳು, ತಮಗೆ ತಿಳಿಯದೆ ತೊಡಗಿಸಿಕೊಳ್ಳುವ ಪ್ರಕ್ರಿಯೆಗಳು – ವಾಹ್, ಅದೆಷ್ಟು ಮೃದುವಾಗಿ ಮಿಲ್ನ್  ಜೀವನದ ಬಗ್ಗೆ ವ್ಯಾಖ್ಯಾನಿಸುತ್ತಾರೆ! ಕ್ರಿಸ್ಟೊಫರ್ ರಾಬಿನ್ ನಕ್ಕು ಆಗಾಗ ಉದ್ಗರಿಸುವ ‘ಸಿಲ್ಲಿ ಓಲ್ಡ್ ಬೇರ್’ ನಾವು ಮನ ಸೋಲುವಂತೆ ಮಾಡುತ್ತಾನೆ.the-original-2

ಮನ ಸೋಲುವಂತೆ ಮಾಡಿರುವುದು ಕತೆಗಾರ ಮಿಲ್ನ್ ಎಂಬುದನ್ನು ನಾವು ದೊಡ್ಡವರು ಗುರ್ತಿಸುತ್ತೇವೆ. ಆ ‘ಸಿಲ್ಲಿ ಓಲ್ಡ್ ಬೇರ್’ ಹೇಳುವ ಮಾತುಗಳಿಗೆ ಒಮ್ಮೊಮ್ಮೆ ಮೊದಲಿಲ್ಲ, ಕೊನೆಯಿಲ್ಲ; ಇಂಗ್ಲಿಷ್ ಭಾಷೆಯಲ್ಲಿರುವ ಪದಗಳ ಅಕ್ಷರಗಳು ಕೆಲವೊಮ್ಮೆ ಹಿಂದು ಮುಂದು, ಉಲ್ಟಾ ಪಲ್ಟಾ, ಚೆಲ್ಲಾಪಿಲ್ಲಿ. ಕೆಲವೊಂದು ಪದಗಳ ಗುಚ್ಛದಲ್ಲಿ ಪ್ರತಿಯೊಂದು ಪದ ದೊಡ್ಡ ಅಕ್ಷರದಿಂದ (capital letter) ಆರಂಭವಾಗುವುದು ಮತ್ತಷ್ಟು ಆಸಕ್ತಿ ಹುಟ್ಟಿಸುತ್ತದೆ. ಈ ವಿಶೇಷತೆಯನ್ನು ಮಕ್ಕಳು ಕೂಡ ಗುರ್ತಿಸುತ್ತಾರೆ. ಯಾಕೆ ಬೇಕು ಅಷ್ಟೆಲ್ಲಾ ಫಜೀತಿ ಎಂದು ಫೂ ಬೇರ್ ಹೇಳುವುದು ‘ಓಹ್ ಬಾದರ್’. ಯಾರಾದರೂ “ಸಂಗೀತ ಮತ್ತು ಬದುಕು…” ಎಂದು ಮಾತು ಆರಂಭಿಸಿದರೆ ಪಟ್ಟನೆ ಫೂ ಹೇಳುವುದು “ಅವೆರಡೂ ಒಂದೇ”. ಇಂತಹ ಉದ್ಗಾರಗಳು,  ಅವನ ‘ಹಮ್’ ಕಾರ ತಕ್ಷಣ ಮಕ್ಕಳ ಹೃದಯಕ್ಕೆ ಹತ್ತಿರವಾಗಿ ಬಿಡುತ್ತವೆ.

 ಫೂ ಹೇಳುವಂತೆ ಕವಿತ್ವ, ಕಾವ್ಯ ಕಟ್ಟುವುದು ಮತ್ತು ಹಮ್ ಗಳು ನಾವು ಗಳಿಸುವುದಲ್ಲ; ಅವು ನಮ್ಮನ್ನು ಪಡೆಯುತ್ತವೆ. ಅವು ನಮ್ಮನ್ನು ಎಲ್ಲಿ ಹುಡುಕುತ್ತವೋ ಅಲ್ಲಿ ನಾವು ಹೋಗುವುದಷ್ಟೇ ನಾವು ಮಾಡಬೇಕಿರುವುದು. ಆದರೆ ತೀಕ್ಷ್ಣ ಬುದ್ಧಿಯ, ಸ್ವಲ್ಪ ಸಿಡುಕಿನ ರಾಬಿಟ್ ಅದರಲ್ಲಿ ಅಷ್ಟೊಂದು ಅರ್ಥವಿಲ್ಲ ಅನ್ನುತ್ತಾನೆ. ಫೂನ ಉತ್ತರ, “ಅರ್ಥವಿಲ್ಲ, ಹೌದು. ಆದರೆ ನಾನು ಆ ಮಾತನ್ನು ಶುರು ಮಾಡಿದಾಗ ಅರ್ಥವಿತ್ತೇನೋ. ಮಾತು ಹೊರಡುತ್ತಿದ್ದಾಗ ಮಧ್ಯ ದಾರಿಯಲ್ಲಿ ಅದಕ್ಕೇನೋ ಆಗಿಬಿಟ್ಟಿತು”.

ಹೌದಲ್ಲ, ನಮ್ಮ ಜೀವನದ ಎಲ್ಲಕ್ಕೂ ನಾವು ಅರ್ಥ ಕಟ್ಟಲು ಪ್ರಯತ್ನಿಸುತ್ತೀವಿ. ಒಮ್ಮೆಮ್ಮೆ ಅದರಲ್ಲೇ ಕಳೆದುಹೋಗುವ ಅಪಾಯವುಂಟು. ಅರ್ಥ ಕಳೆದು ಹೋಗುವ ಕ್ಷಣದ, ಅರ್ಥ ಅನಗತ್ಯ ಎಂಬುದನ್ನು ಗುರ್ತಿಸುವವರು ನಾವಾದರೆ?! ನಾವೇ ನಾವಾಗಿ ನಮ್ಮ ಅಂತರಾಳಕ್ಕೆ ಇಳಿದು ಅಲ್ಲಿ ತಾನೇ ತಾನಾಗಿರುವ ಅರ್ಥವನ್ನು ನೋಡಿಬಿಟ್ಟರೆ!!unabridged

 ಫೂ ಬೇರ್ ನ ಅಚ್ಚುಮೆಚ್ಚಿನ ಜೇನುತುಪ್ಪದ ಬಗ್ಗೆ ಮಾತನಾಡುತ್ತಾ ಅವ ಇಡೀ ವಿಶ್ವದ ಬಗ್ಗೆ ಚಿಂತಿಸುತ್ತಾನೆ. ಕ್ರಿಸ್ಟೊಫರ್  ರಾಬಿನ್ ಒಮ್ಮೆ ಅವನನ್ನು ಈ ಪ್ರಪಂಚದಲ್ಲಿ ನಿನಗೆ ತುಂಬಾ ಇಷ್ಟವಾದದ್ದು ಏನು ಎಂದು ಕೇಳಿದಾಗ, ವೆಲ್ ಎಂದು ಫೂ  ಸುಮ್ಮನಾಗುತ್ತಾನೆ. ‘ಜೇನುತುಪ್ಪ ತಿನ್ನುವುದು ತುಂಬಾ ಇಷ್ಟವಾದದ್ದು; ಆದರೂ, ಅದನ್ನು ತಿನ್ನುವ ಮುನ್ನ ಒಂದು ಘಳಿಗೆಯಿತ್ತಲ್ಲಾ, ಆ ಘಳಿಗೆ ತಿನ್ನುವ ಕ್ರಿಯೆಗಿಂತಲೂ ಚೆನ್ನಿತ್ತಲ್ಲಾ, ಆದರೆ ಅದು ಆ ಘಳಿಗೆ ಏನೆಂದು ಅವನಿಗೆ ತಿಳಿದಿರಲಿಲ್ಲ’ – ಇಂತಹ ದಾರ್ಶನಿಕ ತತ್ವದ ಮಾತುಗಳನ್ನು ‘ಫೂ ಬೇರ್ ನೀಡುವ ಜೀವನದ ಒಳದೃಷ್ಟಿ, ಗಾಢವಾದ ತತ್ವಜ್ಞಾನ’ ಎಂದು ಬೆಂಜಮಿನ್ ಹೊಫ್ ಹೇಳುತ್ತಾರೆ. ಅದನ್ನೇ ಆಧರಿಸಿ ಅವರೂ ಕೂಡ ಟಾಓ ಆಫ್ ಫೂ  (Taoism) ಮುಂತಾದ ಪುಸ್ತಕಗಳನ್ನು, ಜಾನ್ ವಿಲಿಯಮ್ಸ್ ಫೂ ಅಂಡ್ ದ ಫಿಲಾಫರ್ಸ್ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ. ಇಬ್ಬರೂ ಆ ಕತೆಗಳಲ್ಲಿ ಪಾಶ್ಯಾತ್ಯ ದಾರ್ಶನಿಕತೆ ಮತ್ತು ವೇದಾಂತ ಅಡಗಿದೆ ಎನ್ನುತ್ತಾರೆ. ಪ್ರಸಿದ್ಧ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಫೂ  ಬೇರ್ ಮತ್ತವನ ಸ್ನೇಹಿತರನ್ನೊಳಗೊಂಡ ಅನೇಕ ಚರ್ಚೆಗಳೂ ನಡೆಯುತ್ತವೆ. ಫೂ ಬೇರ್ ನ ಕತೆಗಳನ್ನಾಧರಿಸಿ ಕಾರ್ಪೊರೇಟ್ ವಲಯಗಳಲ್ಲಿ, ಮ್ಯಾನೇಜ್ಮೆಂಟ್ ತರಬೇತಿಗಳಲ್ಲಿ ಸೂಕ್ತ ಚಟುವಟಿಕೆಗಳನ್ನು ಕೂಡ ನಡೆಸುತ್ತಾರೆ.

 ಫೂ  ನ ಈ ಮಾತು – “ನೀ ದೂರ, ಬಲು ದೂರ ಹೇಗೆ ಹೋಗತ್ತೀ? ನೀ ಯಾರೆಂದು ನಿನಗೆ ಅರಿವಿಲ್ಲವೆಂದರೆ?”,  ಕತೆಗಳಲ್ಲಿ ಬರುವ ಹಾಡುಗಳು, ದಾರ್ಶನಿಕ ಮಾತುಗಳು, ಚಿಂತನೆ, ವಿಮರ್ಶೆ, ವ್ಯಾಖ್ಯಾನಗಳು ವಿನ್ನೀ-ದ-ಫೂ ಮತ್ತವನ ಸ್ನೇಹಿತರ ಪಾತ್ರಗಳು ನಮ್ಮ ಜೀವನವನ್ನು ಒರೆ ಹಚ್ಚಿ ನೋಡುವಂತೆ ಪ್ರೇರೇಪಿಸುತ್ತವೆ. ಅಷ್ಟರ ಮಟ್ಟಿಗೆ ಅವರೆಲ್ಲರೂ ತತ್ವ ಜ್ಞಾನಿಗಳೇ!!

ಎಲ್ಲಕ್ಕೂ ಒಂದು ಚೌಕಟ್ಟು, ಭೂಮಿಕೆಯನ್ನು ಒಡ್ಡಿಕೊಳ್ಳುವ ಪ್ರಮೇಯವನ್ನೇ, ಕಾರಣವನ್ನೇ ಬಿಟ್ಟು ಬದುಕುವ ಫೂ ಬೇರ್ ನಿಜಕ್ಕೂ ಒಬ್ಬ ವೇದಾಂತಿಯೇ ಹೌದು ಎನಿಸಿಬಿಡುತ್ತದೆ. ನನ್ನೊಳಗೆ ಅಡಗಿರುವ ಫೂ ಬೇರ್ ಎಲ್ಲಿ ಎನ್ನುವ ಹುಡುಕಾಟ ಆರಂಭವಾಗುತ್ತದೆ.

 ಡಾ. ವಿನತೆ ಶರ್ಮ