ದಶವರ್ಷಗಳ ಸಂಭ್ರಮದಲ್ಲಿ ಗಗನರಾಣಿ –ಯೋಗೀಂದ್ರ ಮರವಂತೆ

           ಹೊಸ ಪರಿಚಯ

yogi 4
ಯೋಗೀಂದ್ರ ಮರವಂತೆ

ಯೋಗೀಂದ್ರ  ಮರವಂತೆ,  ಕಳೆದ ಹನ್ನೆರಡು  ವರ್ಷಗಳಿಂದ ಇಂಗ್ಲಂಡ್ ನ ಬ್ರಿಸ್ಟಲ್ ಎನ್ನುವ ಊರಿನ ವಿಮಾನ ತಯಾರಿಕೆಯ   ಕಂಪನಿ  ಏರ್ಬಸ್ ಅಲ್ಲಿ  ವಿಮಾನ  ತಂತ್ರಜ್ಞರಾಗಿ  ಉದ್ಯೋಗಮಾಡುತ್ತಿದ್ದಾರೆ.  ಇವರ ಬರಹಗಳು ಪ್ರಜಾವಾಣಿ ,ಸುಧಾ ಮತ್ತು ಉದಯವಾಣಿ ಪತ್ರಿಕೆಗಳಲ್ಲಿ  ಪ್ರಕಟ ಆಗುತ್ತಿರುತ್ತವೆ .ಮೊದಲು ಕೆಂಡಸಂಪಿಗೆ ಎನ್ನುವ ಅಂತರ್ಜಾಲ  ಪತ್ರಿಕೆಯಲ್ಲಿ ನಿಯಮಿತವಾಗಿ ಅಂಕಣ ಬರೆಯುತ್ತಿದ್ದರು. ಬರವಣಿಗೆಯ ಜೊತೆಗೆ  ಯಕ್ಷಗಾನ ಮತ್ತೆ ಸಾಕ್ಶ್ಯ ಚಿತ್ರ ನಿರ್ಮಾಣದಲ್ಲಿ ಕೂಡ ವಿಶೇಷ  ಆಸಕ್ತಿ ಹೊಂದಿದ್ದಾರೆ. ಬ್ರಿಟನ್ ಆದ್ಯಂತ ಹಲವು ಯಕ್ಷಗಾನ ಪ್ರದರ್ಶನಗಳನ್ನು  ನೀಡಿದ್ದಾರೆ .  ಬ್ರಿಸ್ಟಲ್ ಅಲ್ಲಿ ಪತ್ನಿ ಸೀಮಾ ಅಡಿಗ ಮತ್ತೆ ಮಗಳು ಸುನಿಧಿಯರ ಜೊತೆಗೆ ನೆಲೆಸಿದ್ದಾರೆ .

ಯು.ಕೆ. ಯಲ್ಲಿರುವ ಒಬ್ಬ ಪ್ರತಿಭಾವಂತ ಬರಹಗಾರರು, ಕಲಾವಿದರು ಮತ್ತು  ಏರೋನಾಟಿಕಲ್ ಪರಿಣತರಾದ ಇವರ ಲೇಖನಗಳನ್ನು ಅನಿವಾಸಿ ಬಳಗದ ಹಲವರು ಓದಿದ್ದರೂ, ಅನಿವಾಸಿಯಲ್ಲಿ ಇವರು ಬರೆಯುತ್ತಿರುವುದು ಇದೇ ಮೊದಲು-ಸಂ

 

____________________________________________________________________________________________

yogi 1
ದಶವರ್ಷಗಳ ಸಂಭ್ರಮದಲ್ಲಿ ಗಗನರಾಣಿ

ಬ್ರಿಟನ್ ಅಲ್ಲಿ  ವಿಮಾನಹತ್ತಿ   ದುಬೈ ಅಥವಾ ಕತಾರ ಮೂಲಕ ಭಾರತವನ್ನು ತಲುಪುವವರಿಗೆಲ್ಲ ಇವಳ  ಪರಿಚಯ ಇರಬೇಕಲ್ಲ! ಇವಳನ್ನು ಇವಳು ಎನ್ನುವಷ್ಟು ಇವಳಲ್ಲಿ  ಸಲಿಗೆ ನನಗೆ . ಕಳೆದ ಹನ್ನೆರಡು  ವರ್ಷ ಇವಳನ್ನು ಹತ್ತಿರದಿಂದ ನೋಡಿದ್ದೇನೆ ಇವಳಿಗಾಗಿ ದುಡಿದಿದ್ದೇನೆ . ಇವಳ ಮಟ್ಟಿಗೆ ಇದು ಸಂಭ್ರಮದ  ಹೊತ್ತು ; ಅಂದರೆ ಗಗನಲೋಕದಲ್ಲಿ ವಿಮಾನವೊಂದರ   ದಶಮಾನೋತ್ಸವ ಆಚರಣೆ ನಡೆಯುತ್ತಿರುವ ಹೊತ್ತು . ಪ್ರತಿ ಪ್ರಯಾಣದಲ್ಲಿ 500 ಕ್ಕೂ ಹೆಚ್ಚು ಜನರನ್ನು ಸಾಗಿಸಬಲ್ಲ ಜಗತ್ತಿನ ಅತಿ ದೊಡ್ಡ ನಾಗರಿಕ   ವಿಮಾನ, ಆಕಾಶದ ರಾಣಿ ಎಂದು ಕರೆಸಿಕೊಳ್ಳುವ  A380 ವಿಮಾನ ಹತ್ತು ವರ್ಷಗಳ ಸೇವೆಯನ್ನು  ಪೂರೈಸಿದೆ.  ಈಗ ಸುಮಾರು  200 A380 ವಿಮಾನಗಳು ಸೇವೆಯಲ್ಲಿವೆ ; ಮುಂದಿನ ಐದು ವರ್ಷಗಲ್ಲಿ ಇನ್ನೂ 100 ವಿಮಾನಗಳು ಸೇವೆ ಆರಂಭಿಸಲಿವೆ . ವಿಮಾನಗಳನ್ನು  ಹೆಣ್ಣಿಗೆ ಹೋಲಿಸುವ ಪದ್ಧತಿ ಎಂದು ಆರಂಭ ಆಯಿತೋ ಗೊತ್ತಿಲ್ಲ , ಆದರೆ ಇವತ್ತಿನ ನಮ್ಮ ಕಥೆಯ  ನಾಯಕಿ  A380 ವಿಮಾನದ ಕಥೆ ಹೇಳಬೇಕೆಂದರೆ ಯುರೋಪಿಯನ್ನರ ಅಮೆರಿಕನ್ನರ ಎಂದೂ ಮುಗಿಯದ ಸರಸ-ವಿರಸಗಳ   ಪುರಾಣದಿಂದಲೇ ಆರಂಭಿಸಬೇಕು  !

ಎರಡನೆಯ ಮಹಾಯುದ್ಧ ಮುಗಿದು ಸುಮಾರು ಮೂವತ್ತು ವರ್ಷಗಳ  ನಂತರ , ಹಳೆಯ ಕಹಿಯೋ ಅಲ್ಲ ಹೊಸ ಹುಳಿಯೋ ಯುರೋಪಿಯನ್ನರು  ಅಮೆರಿಕಕ್ಕೆ ಸಡ್ಡು ಹೊಡೆಯಬೇಕೆಂದುಕೊಂಡರು. ಅಮೇರಿಕಾದಲ್ಲಿ ಬೋಯಿಂಗ್ ಆಗಲೇ ಗಟ್ಟಿಯಾಗಿ ಬೆಳೆದಿತ್ತು .ವಿಮಾನ ತಂತ್ರಜ್ಞಾನ ಅಮೆರಿಕದವರಿಗೆ ಮಾತ್ರ ಮೀಸಲಲ್ಲ ಅಂದು ತೋರಿಸಲು ಯುರೋಪಿಯನ್ನರು   ಶಬ್ದದ ವೇಗಕ್ಕಿಂತ ಎರಡು ಪಾಲು ಹೆಚ್ಚಿನ ವೇಗದಲ್ಲಿ ಹಾರುವ ವಿಮಾನವನ್ನು ಹಾರಿ ಬಿಟ್ಟರು  .ಫ್ರೆಂಚ್ ರು ಮತ್ತು ಆಂಗ್ಲರು ಸೇರಿ 1970 ರಲ್ಲಿ   ಕಾಂಕರ್ಡ್ ಎನ್ನುವ ವಿಮಾನ ವಿನ್ಯಾಸಗೊಳಿಸಿದ್ದು ,ಹಾರಿಸಿದ್ದು ,ಅದು  ಮೂರು ದಶಕಗಳ  ಸೇವೆ ಸಲ್ಲಿಸಿ,2003ರಲ್ಲಿ  ತನ್ನ ಸೇವೆಯಿಂದ ನಿವೃತ್ತ ಆಗಿರುವುದು ಈಗ ಇತಿಹಾಸ. ಕಾಂಕಾರ್ಡ್ ಸೇವೆ ಆರಂಭಿಸಿದ ನಂತರ   ಆಂಗ್ಲರು ಫ್ರೆಂಚರು ಜೊತೆಗೆ ಜೆರ್ಮನರು ಹಾಗುಸ್ಪೇನ್  ನವರು ಸೇರಿ ವಿಮಾನ ತಯಾರಿಕೆಯ  ಯುರೋಪಿಯನ್ ಒಕ್ಕೂಟ ಸ್ಥಾಪಿಸಿಕೊಂಡರು ಅದರ ಹೆಸರು ಏರ್ಬಸ್ (Airbus). ಏರ್ಬಸ್ ಬೆಳೆದು ಬೆಳೆದು  ಅವರ ಉದ್ದೇಶಗಳು ಫಲಿಸುವಂತೆ ,ನಾಗರಿಕ  ವಿಮಾನ ಮಾರುಕಟ್ಟೆಯ ಅರ್ಧ ಭಾಗವನ್ನು ಅಮೇರಿಕನ್ನರಿಂದ ಕಸಿದುಕೊಂಡರು. ಮಹತ್ವಾಕಾಂಕ್ಷೆಗಳ ಸಮರವೂ ಒಂದು ನಶೆಯೇ ಇರಬೇಕು. ಈ ನಶೆಯನ್ನು ಏರಿಸಿಕೊಂಡದ್ದು ಬರಿಯ ಎರಡು ವಿಮಾನ ತಯಾರಿಸುವ  ಕಂಪೆನಿಗಳಲ್ಲ , ಅವುಗಳ ಹಿಂದಿರುವ ದೇಶಗಳ ಸರಕಾರಗಳು ಕೂಡ .

yogi 2

ವಿಶ್ವ ಸಂಸ್ಥೆಯ ಅಂತರಾಷ್ಟ್ರೀಯ ವ್ಯಾಪಾರಗಳ ನ್ಯಾಯಾಲಯದಲ್ಲಿ (W.T.O ) ಬೋಯಿಂಗ್ ಮತ್ತು ಏರ್ಬಸ್ ಗಳು, ಸರಕಾರಗಳು ಹೊಸ ವಿಮಾನಗಳ ತಯಾರಿಗೆ ಸಬ್ಸಿಡಿ ಅಥವಾ ಸಾಲ ನೀಡಬಾರದು ಅದು ಎರಡು ವಿಮಾನ ಕಂಪೆನಿಗಳ ಸ್ಪರ್ಧೆ ಆಗದೆ ದೇಶಗಳ ಸರಕಾರಗಳ ನಡುವಿನ ಸ್ಪರ್ಧೆ ಆಗುತ್ತದೆ ಎಂದೆಲ್ಲ ಉದಾತ್ತ ಮೌಲ್ಯಗಳ ಮಾತಾಡುತ್ತಾ ಒಬ್ಬರು ಇನ್ನೊಬ್ಬರ ಮೇಲೆ ಅಪಾದನೆ ಮಾಡಿ ಕೇಸು ಹಾಕಿಕೊಂಡು  ಕುಳಿತಿದ್ದಾರೆ .W.T.O ದ ಕಟಕಟೆಯಲ್ಲಿ ನಡೆಯುತ್ತಿರುವ ಸುದೀರ್ಘವಾದ ಕೇಸು ಇದು.  ಅಮೆರಿಕದ ಮತ್ತು ಯುರೋಪಿನ ದೇಶಗಳ ಸರಕಾರಗಳು ತಮ್ಮ ವಿಮಾನ ಉದ್ಯಮದ ಹಿತಾಸಕ್ತಿಗೋಸ್ಕರ ಸಾಲ ಸಬ್ಸಿಡಿ ನೀಡುವುದು ನಿಲ್ಲಿಸಿಲ್ಲ, ನಿಲ್ಲಿಸುವುದೂ ಇಲ್ಲ. ಯಾಕೆದಂರೆ ಮೇಲ್ನೋಟಕ್ಕೆಕಟ್ಟಿ ಬೀಸುತ್ತಿರುವುದು  ಏರ್ಬಸ್ ಮತ್ತು ಬೋಯಿಂಗ್ ಮಧ್ಯವಾಗಿ ಕಂಡರೂ ಹಿಂದೆ ನಿಂತು ಶಕ್ತಿ ತುಂಬುತ್ತಿರುವವರು ಆಯಾಯ ದೇಶದ ಸರಕಾರಗಳೇ .  ೨೦೦೦ನೆಯ ಇಸವಿಯ ಆಸುಪಾಸಿಗೆ ಏರ್ಬಸ್ ಕಂಪೆನಿಯಲ್ಲೊಬ್ಬರಿಗೆ  ಜಗತ್ತಿನ ಅತ್ಯಂತ ದೊಡ್ಡ ವಿಮಾನವನ್ನು  ತಾವು ಯುರೋಪಿಯನ್ನರು  ತಯಾರಿಸಬೇಕೆಂಬ ಬೆಳಗಿನ ಜಾವದ ಕನಸು ಬಿತ್ತು.ಆ ಕಾಲದಲ್ಲಿ  ಬೋಯಿಂಗ್  ಕಂಪೆನಿಯ ‘747’ ವಿಮಾನವೇ ಜಗತ್ತಿನ ಅತಿ ದೊಡ್ಡ ನಾಗರಿಕ ವಿಮಾನ ಆಗಿತ್ತು . ಯುರೋಪಿನ ಮಿತ್ರರ ಕನಸಿಗೆ ಅಮೆರಿಕನ್ನರು ನಕ್ಕು, ಈ ಯುರೋಪಿನನವರು ಬರೇ ಭಾವವೇಶದಲ್ಲೇ ಬದುಕುವವರು ಎಂದು   ನುಡಿದರು. ಜಗತ್ತಿನ ಅತಿ ದೊಡ್ಡ (ಡಬಲ್ ಡೆಕ್ಕರ) ವಿಮಾನ ಮಾಡಿದರೆ ಅದಕ್ಕೆ   ಮಾರುಕಟ್ಟೆಯಲ್ಲಿ ಯಶಸ್ಸು ಸಿಕ್ಕೀತೆ  ಇಲ್ಲವೇ, ಸುರಿದ ಬಿಲಿಯನ್ ಗಟ್ಟಲೆ ಯುರೋ ಹಣ ವಸೂಲಿ ಆದೀತೆ ಇಲ್ಲವೇ ಎಂದು ಶಾಂತ ಮನಸ್ಸಿನಿಂದ ಯೋಚಿಸದೆ ,ಬರಿಯ  ಹೃದಯದ ಬಡಿತವನ್ನು  ಆಲಿಸಿ  ಏರ್ಬಸ್  ತೆಗೆದುಕೊಂಡ ನಿರ್ಧಾರ ಅದಾಗಿತ್ತು.

 

ಹತ್ತಿಪ್ಪತ್ತು ಸಾವಿರ  ಜನರಿಗೆ , ವಿಮಾನ ಬದುಕಿರುವವರೆಗೆ ಅಂದರೆ ಇಪ್ಪತ್ತು ಮೂವತ್ತು ವರ್ಷಗಳ ಕಾಲ ನಿರಂತರ ಉದ್ಯೋಗ ಒದಗಿಸಬಲ್ಲದು ಮತ್ತು ತಮ್ಮ ಪತಾಕೆಯನ್ನು ಇನ್ನೂ ಮೇಲೆ ಹಾರಿಸಬಲ್ಲುದು  ಎಂದು ಫ್ರಾನ್ಸ್ ,ಜರ್ಮನಿ, ಬ್ರಿಟನ್ , ಸ್ಪೇನ್ ಸರಕಾರಗಳು ಈ ನಿರ್ಧಾರಕ್ಕೆ ಹೂಂ ಗುಟ್ಟಿದ್ದೆ ತಡ, ಜಗತ್ತಿನ ಅತಿ ದೊಡ್ಡ ವಿಮಾನದ ಕೆಲಸ ಆರಂಭ ಆಯಿತು. ಏರ್ಬಸ್ ಸಂಸ್ಥೆಯ ಎಲ್ಲ ವಿಮಾನಗಳ ಹೆಸರು ‘A3xx’ ನಿಂದ ಆರಂಭ ಆಗುತ್ತದೆ. ವಿಮಾನದ ಮೂಗಿನಿದ ಬಾಲದ ವರೆಗೂ ಎಂಭತ್ತು ಮೀಟರು  ಉದ್ದ , ಎಡ ರೆಕ್ಕೆಯ ಇಚೆ ತುದಿಯಿಂದ ಬಲ ರೆಕ್ಕೆಯ ಆಚೆ ತುದಿಗೂ ಎಂಭತ್ತು ಮೀಟರು ಆಗಲ, ಹಾಗಾಗಿ ಒಳ್ಳೆ ಮುಹೂರ್ತ ನೋಡಿ ಯಾರೋ ಈ ಕೂಸಿಗೆ ‘A380′  ಎಂದು ನಾಮಕರಣ ಮಾಡಿದರು. ಅಲ್ಲಿಂದಾಚೆಗೆ ಯುರೋಪಿನ ಸುದ್ದಿ ಮಾಧ್ಯಮಗಳಲ್ಲಿ ಇವಳದೇ ಕಲರವ . ಯುದ್ಧ , ವಿಮಾನಗಳು ಎಂದರೆ ಮಾತೆ ಮುಗಿಸದ ಯುರೋಪಿನ ಜನರಿಗೆ  ಈ ವಿಮಾನದ ಬೆಳವಣಿಗೆಯೇ ರೋಚಕ ಅನುಭವ ಆಯಿತು .’A380’  ಬಾಲ್ಯ, ಯೌವ್ವನ ಕಳೆದು , ಇನ್ನೇನು ಇವಳು ಆಕಾಶದಲ್ಲಿ ಮೊದಲ ಬಾರಿ ಹಾರಬೇಕು, ಜಗತ್ತು ನಿಬ್ಬೆರಗಾಗಿ ನೋಡಬೇಕು. ಆ ಸಮಯಕ್ಕೆ ವಿಮಾನ ಜೋಡಣೆಯಲ್ಲಿ ಕೆಲವು  ಅಡಚಣೆಗಳು  ಎದುರಾಗಿ, ವಿಮಾನ ಆಕಾಶಕ್ಕೆ ಏರುವುದು ಮುಂದೂಡಲ್ಪಟ್ಟಿತು. ಇಂತಹ ಅಡಚಣೆಗಳು, ಹೊಸ ತರದ ವಿಮಾನದ ತಯಾರಿಯಲ್ಲಿ ಸಾಮಾನ್ಯ. ತೀರ ಕ್ಷುಲ್ಲಕ ಎನ್ನುವ ಕಾರಣಗಳು, ಕಣ್ಣ ತಪ್ಪುಗಳು , ವಿಮಾನದ ಸಿದ್ಧವಾಗುವುದನ್ನು  ವರುಷದಷ್ಟು ತಡ ಮಾಡಬಲ್ಲದು  , ಮುಂದೂಡ ಬಲ್ಲದು. ಅಮೆರಿಕದ ವಿಷಯ ಬಂದರೆ ಒಗ್ಗಟ್ಟಾಗಿ ತಾವು ಯುರೋಪಿಯನ್ನರೆಂದು ಎದೆ ತಟ್ಟಿ ಮಾತಾಡಿದರೂ, ಫ್ರಾನ್ಸ್ ,ಜರ್ಮನಿ, ಬ್ರಿಟನ್ , ಸ್ಪೇನ್ ಗಳನ್ನು .ಅವರ ನಡುವಿನ ತಪ್ಪು ತಿಳುವಳಿಕೆಗಳು, ಸಂಶಯ, ಮುನಿಸು, ಅಸೂಯೆ, ಅಹಂಕಾರ ಮತ್ತೆ ವಿಮಾನ ವಿನ್ಯಾಸದ ಎಂದಿನ ಸವಾಲುಗಳು  ಸಂಕೀರ್ಣತೆಗಳು  ತೊಡಕಾಗಿ ಕಾಡುತ್ತಿರುತ್ತವೆ. ಯುರೋಪಿನ ಭಿನ್ನ ಭಿನ್ನ ಸಂಸ್ಕೃತಿಯ, ಭಾಷೆಯ  ನಾಲ್ಕು ಪಾಲುದಾರ ದೇಶಗಳು ಕೆಲಸ ಹಂಚಿಕೊಂಡು , ಇನ್ನುಳಿದ ಚೂರುಪಾರು ಕೆಲಸಗಳನ್ನು ಸ್ವೀಡನ್, ಜಪಾನ್, ಮಲೇಶಿಯ , ಭಾರತ ಇನ್ನಿತರೆಡೆಗಳಿಗೆ ಹಂಚಿ , ಆಮೇಲೆ ಎಲ್ಲವನ್ನು ಜೋಡಿಸಿ ಪ್ರಯೋಗ ಪರೀಕ್ಷೆಗಳಲ್ಲಿ ಉತೀರ್ಣಗೊಂಡು , ಸರ್ಟಿಫಿಕೆಟ್ ಹಿಡಿದು ಕುಣಿಯುತ್ತ ವಿಮಾನ ಮಾರುಕಟ್ಟೆಗೆ ಬರುವ ಹೊತ್ತಿಗೆ ಬೆವರಿಳಿದಿರುತ್ತದೆ  . ಹಳೆಯ ತಪ್ಪುಗಳ ಬಗ್ಗೆ ಚರ್ಚಿಸುತ್ತ , ಹೊಸ ಪಾಠಗಳನ್ನು ಕಲಿಯುತ್ತ, ಸುರಕ್ಷತೆಯ ಜಪ ಮಾಡುತ್ತಾ ವಿಮಾನಗಳು ರೂಪ ಪಡೆಯುತ್ತವೆ. 2005 ರ ಹೊತ್ತಿಗೆ ನೂರೆಂಟು ವಿಘ್ನಗಳಿಂದ ಪಾರಾಗಿ ಪರೀಕ್ಷಾರ್ಥವಾಗಿ A380 ಮೊದಲ ಬಾರಿಗೆ ಆಕಾಶಕ್ಕೆ ಹಾರಿತು  . ನಂತರ 2007ರಲ್ಲಿ ಸಿಂಗಾಪುರ ಏರ್ಲೈನ್ಸ್ ಮುಖಾಂತರ ತನ್ನ ನಾಗರಿಕ  ಸೇವೆ ಆರಂಭಿಸಿತು.

yogi 3

ತನ್ನ ಪ್ರಸಿದ್ಧಿ, ಗಾತ್ರ , ತೂಕ , ಗಂಬೀರ ಚಲನೆಯಿಂದ ಆಕಾಶಕ್ಕೆ ತಾನೇ ಯಜಮಾನತಿಯಂತೆ ಓಡಾಡುತ್ತಾ ಗಗನಯಾನದ  ಹತ್ತು ವರ್ಷ ಮುಗಿಸಿತು. ಆಕಾಶದಲ್ಲಿ ಹಾರುತ್ತಿರಲಿ ಅಥವಾ ನಿಲ್ದಾಣದಲ್ಲಿ ಇಳಿದಿರಲಿ ,ಇನ್ಯಾವ ವಿಮಾನ ಇವಳ  ಪಕ್ಕಕ್ಕೆ ನಿಂತಿರಲಿ A380 ವಿಮಾನಕ್ಕೆ  ಎಲ್ಲರ ನೋಟವನ್ನು  ಸುಲಭವಾಗಿ ತನ್ನತ್ತ ಆಕರ್ಷಿಸುವ ಶಕ್ತಿ ಇದೆ  .ಈ ಆಕರ್ಷಣೆಗೆ ಕಾರಣ ಇವಳ  ರೂಪವೋ,ಗಾತ್ರವೋ ,ಬಣ್ಣವೋ, ಅಂದವೋ  ಅಥವಾ ಇವಳ ಇತಿಹಾಸವೋ ನೋಡಿದವರು  ಹೇಳಬೇಕು .  ಇವಳ ಜೊತೆ ಒಮ್ಮೆ ಪ್ರಯಾಣ ಮಾಡಿದವರು ಮತ್ತೆ ಇವಳ ಜೊತೆ ಯಾನ ಮಾಡಬೇಕು ಎಂದು ಬಯಸುತ್ತಾರೆ ಎಂದು ಏರ್ಲೈನ್ಸ್ ಅವರು ಹೇಳುತ್ತಾರೆ . ನೆಲ ಬಿಡುವಾಗಲೂ ನೆಲಮುಟ್ಟುವಾಗಲೂ  ಅಲುಗಾಡದೆ ಹೆಚ್ಚು ಸದ್ದು  ಮಾಡದೆ ತನ್ನೊಳಗೆ ಕೂತವರನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾಳೆ ಎನ್ನುವ ಹೆಗ್ಗಳಿಕೆಯೂ ಇವಳದ್ದು. ಪ್ರಯಾಣಿಕರಿಂದ ಹೊಗಳಿಸಿಕೊಳ್ಳುತ್ತ  , ಇವಳ ಮಾಲಕ  ಏರ್ಲೈನ್ಸ್ ಗಳಿಂದ ಮುದ್ದಿಸಿಕೊಳ್ಳುತ್ತ  ಮತ್ತೆ ಈಕೆಯ ಹುಟ್ಟಿಗೆ ಕಾರಣರಾದ   ಯುರೋಪಿಯನ್ ರಿಂದ ಭೇಷ್ ಅನ್ನಿಸಿಕೊಳ್ಳುತ್ತ 10 ವರ್ಷಗಳ ಗಗನಯಾನ ಕಳೆದಿದೆ . ವಿಮಾನಗಳ ವ್ಯವಹಾರ ಎಂದರೆ ಬರಿಯ  ಹೆಗ್ಗಳಿಕೆ ಹೊಗಳಿಕೆಗಳಿದ್ದರೆ ಸಾಲದು. ವಿಮಾನವೊಂದನ್ನು ಹೆಚ್ಚು ಏರ್ಲೈನ್ ಗಳು ಕೊಳ್ಳಬೇಕು ಸೇವೆಗೆ ಬಳಸಬೇಕು .  ಆಗ ಮಾತ್ರ ವಿಮನವೊಂದು ದೀರ್ಘ ಕಾಲ ಸೇವೆಯಲ್ಲಿರುತ್ತದೆ . ಕಳೆದ ಕೆಲವು ವರ್ಷಗಳಿಂದ ಹೊಸ ಗ್ರಾಹಕ ಏರ್ಲೈನ್ ಗಳನ್ನು ಪಡೆಯದ A380 ಯ ಭವಿಷ್ಯ ಸದ್ಯಕ್ಕೆ ತೂಗುಯ್ಯಾಲೆಯಲ್ಲಿದೆ . ಕಳೆದ ವಾರ ನಡೆದ ಪ್ಯಾರಿಸ್ ಏರಶೋ ದಲ್ಲಿ ಎ ೮೦ ವಿಮಾನ ಸಣ್ಣ ಬದಲಾವಣೆ ಗಳೊಂದಿಗೆ ಹೊಸ ರೂಪ ಪಡೆಯಲಿದೆ ಎನ್ನುವ ಘೋಷಣೆ ಆಗಿದೆ . ದಶಕದ ಸಂಭ್ರಮ ಮತ್ತೆ ತನ್ನ ವಿನ್ಯಾಸಕ್ಕೆ ಹೊಸ ಸೇರ್ಪಡೆಗಳೊಂದಿಗೆ A380 ಇನ್ನೂ ಹಲವು ವರ್ಷ ಹಾರುತ್ತಿರಲಿ ; ಗಗನರಾಣಿಯಾಗಿ ಮೆರೆಯುತ್ತಿರಲಿ .

ಚಿತ್ರ ಲೇಖನ   — ಯೋಗೀಂದ್ರ ಮರವಂತೆ

 

ನೆನಪಿನಂಗಳದ ಆಲೆಮನೆ ಮತ್ತು ಕುಂದಾದ್ರಿ- ಅರ್ಪಿತ ಹರ್ಷ

ಹೊಸ ಪರಿಚಯ

arpita harsha
ಅರ್ಪಿತ ಹರ್ಷ

ಶ್ರೀಮತಿ ಅರ್ಪಿತ ಹರ್ಷ ಹುಟ್ಟಿ ಬೆಳೆದಿದ್ದು ಸೊರಬ ತಾಲೂಕಿನ ಬರಿಗೆ ಎಂಬ ಪುಟ್ಟ ಹಳ್ಳಿಯಲ್ಲಿ. ಮೊದಲಿನಿಂದ ಹಸಿರು ತುಂಬಿದ ಕಾಡು , ಧೋ ಎಂದು ಸುರಿಯುವ ಮಳೆ ನೋಡಿ ಅದೇನೋ ಕವನ ಗೀಚುವ , ಕಥೆ ಬರೆಯುವ ಹುಮ್ಮಸ್ಸು ಇದಕ್ಕೆ ಸಾಥ್ ನೀಡಿದ್ದು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿದ್ದು ಪತ್ರಕರ್ತರಾದ  ಇವರ ಅಪ್ಪ . ಕನಸನ್ನು ನನಸಾಗಿಸಿದ್ದು ಉಜಿರೆಯ ಪತ್ರಿಕೋದ್ಯಮ ವಿಭಾಗ. ಸಂಯುಕ್ತ ಕರ್ನಾಟಕದಲ್ಲಿ ಇಂಟರ್ನ್ಶಿಪ್ , ದೂರದರ್ಶನದಲ್ಲಿ ಸ್ವಲ್ಪ ದಿನಗಳ ವೃತ್ತಿ.

ಮದುವೆಯಾಗಿ ಬಂದಿದ್ದು ಲಂಡನ್ , ಕಳೆದ ೬ ವರ್ಷಗಳಿಂದ ಲಂಡನ್ ವಾಸ.  ವಿಜಯ ನೆಕ್ಸ್ಟ್ , ವಿಜಯಕರ್ನಾಟಕ , ಸಖಿ ಪಾಕ್ಷಿಕ ಉದಯವಾಣಿ, ಹೊಸದಿಗಂತ ಮುಂತಾದ ಪತ್ರಿಕೆಗಳಲ್ಲಿ ಸಾಕಷ್ಟು ಆರ್ಟಿಕಲ್ ಗಳು ಪ್ರಕಟಗೊಂಡಿವೆ. ಬೇಸರ ಕಳೆಯಲು ಗೀಚುವ ಕೆಲವೊಮ್ಮೆ ಪ್ರಕಟಗೊಂಡ ಲೇಖನಗಳನ್ನು ಬ್ಲಾಗ್ http://ibbani-ibbani.blogspot.co.uk/ ಇಲ್ಲಿ ಓದಬಹುದು .  ಜಾನಪದ ಗೀತೆಗಳನ್ನು ಹಾಡುವುದು , ಹೊಸ ರುಚಿ ಮಾಡುವುದು ಹವ್ಯಾಸ . ಪ್ರಸ್ತುತ ರಿಟೇಲ್ ವಿಭಾಗದಲ್ಲಿ ಉದ್ಯಮದಲ್ಲಿರುವ ಅರ್ಪಿತ ಅನಿವಾಸಿಯ ಪರಿಚಯವಾದ ಬಗ್ಗೆ ಸಂತಸ ಪಟ್ಟಿದ್ದಾರೆ.ಈಗಾಗಲೇ ಪ್ರಕಟಗೊಂಡಿರುವ ಅವರ ಒಂದೆರಡು ಲೇಖನಗಳನ್ನು ಇಲ್ಲಿ ಪ್ರಸ್ತುತ ಪಡಿಸಿ ಅವರನ್ನು ಅನಿವಾಸಿಗೆ ಸ್ವಾಗತಿಸುತ್ತಿದ್ದೇನೆ- ಸಂ.


 

ನೆನಪಿನಂಗಳದ   ಆಲೆಮನೆ   ಮತ್ತು ಕುಂದಾದ್ರಿ

ಅಮ್ಮನಿಗೊಂದು ಫೋನ್ ಮಾಡಿದ್ದೆ. ಫೋನ್ ಮಾಡುವುದು ಮಾಮೂಲಿ ದೂರದಲ್ಲಿದ್ದರೆ ಇರುವುದು ಅದೊಂದೇ ದಾರಿ ,ಫೋನ್ ನಲ್ಲೆ ನಗು, ಅಳು, ಸಿಟ್ಟು ಎಲ್ಲವನ್ನು ತೋರಿಸಿ ನಾನಿನ್ನು ನಿನ್ನ ಮಗಳಮ್ಮ  ಎಂದು ತೋರಿಸಿಕೊಡುವುದು .ಈ ಭಾರಿ ಫೋನ್ ಮಾಡಿ ದಾಗ ಅಮ್ಮ ಅಂದರು ನೀನಿಲ್ಲಿರಬೇಕಿತ್ತು ಕಣೆ ಅದಾಗದಿದ್ದರೂ  ಈ ಟೈಮ್ ನಲ್ಲೆ ನೀನು ಒಮ್ಮೆ ಭಾರತಕ್ಕೆ ಬರುವ ಪ್ಲಾನ್ ಹಾಕಬೇಕಿತ್ತು ಎಂದು . ನಾನು ಮನಸ್ಸಿನಲ್ಲೇ ಅಂದುಕೊಂಡೆ ಬೇಕು ಅಂದಾಗ ಬರುವಹಾಗಿದ್ದಿದ್ದರೆ ಚೆನ್ನಾಗಿರುತ್ತಿತ್ತು ಈ ಹಾಳಾದ್ದು ವಿದೇಶ ಅನ್ನೋದು ಒಮ್ಮೆ ಅಂಟಿಕೊಂಡು ಬಿಟ್ಟರೆ ಮತ್ತೆ ತಿರುಗಿ ಹೋಗುವುದು ಬಹಳ ಕಷ್ಟ . ಆದರೂ  ಹತ್ತಿರದವರ ಮದುವೆ , ಮುಂಜಿ  ಹೀಗೆ ಎಲ್ಲ ಬಿಟ್ಟು ಇಲ್ಲಿದ್ದಾಗ ಅನಿಸುತ್ತದೆ ಛೆ ಮಿಸ್ ಮಾಡಿಕೊಂಡೆ ಎಂದು . ಅದರಲ್ಲೂ ಈ ಲಂಡನ್ ನಲ್ಲಿ ಬರುವ ಕಿಟಿಕಿಟಿ  ಮಳೆ ನೋಡಿದಾಗಂತೂ ನಮ್ಮ ಮಲೆನಾಡ ಆ ಬೋರ್ಗರೆಯುವ ಮಳೆ ನೆನಪಾಗಿ ಮೈಯೆಲ್ಲಾ ಪರಚಿಕೊಳ್ಳುವಷ್ಟು ಸಿಟ್ಟು ಬರುತ್ತದೆ .  ನನ್ನನ್ನು ಲಹರಿಯಿಂದ ಎಚ್ಚರಿಸಿದ ಅಮ್ಮ ಫೆಬ್ರವರಿ ಬಂತು ಅಂದ್ರೆ ಸಾಕು ನಮ್ಮೂರಲ್ಲಿ ಆಲೆಮನೆ ಪ್ರಾರಂಭ ಆಗೋಗುತ್ತೆ ನೀ ಇದ್ದಿದ್ದರೆ ದಿನ ಒಂದೊಂದು ಆಲೆ ಮನೆಗೆ ಹೋಗಿ ಬಿಸಿಬೆಲ್ಲ , ಮತ್ತು ಬೇಕಾದಷ್ಟು ಕಬ್ಬಿನಹಾಲು ಕುಡಿದು ಬರಬಹುದಿತ್ತು ಅಂದಳು . ಅಷ್ಟೇ ನಾನು ಕಳೆದುಹೋದೆ .

ನಮ್ಮೂರು ಮಲೆನಾಡಿನ ಒಂದು ಹಳ್ಳಿ . ಪುಟ್ಟ ಹಳ್ಳಿಯೇನಲ್ಲ  ಊರಿನಲ್ಲಿ ಸುಮಾರು 100 ಮನೆಗಳಿವೆ ಅದರಲ್ಲಿ 80 ಮನೆಗಳು ಬೇಸಾಯ ಮಾಡುವವರು ಅಂದರೆ ಭತ್ತ  ಮುಖ್ಯ ಬೆಳೆ  ಜೊತೆಗೆ ಶುಂಟಿ , ಹತ್ತಿ, ಶೇಂಗ, ಜೋಳ ,ಕಬ್ಬು ಇವುದಗೆಲ್ಲ ಉಪಬೆಳೆಗಳು  ಹಾಗೆ ಇವುಗಳನ್ನೆಲ್ಲ ಬೆಳೆದಾಗ ಕೆಲವರು ಮನೆಗೆ ತಂದು ಕೊಡುವುದೂ  ಉಂಟು .  ಈ ಫೆಬ್ರವರಿ ತಿಂಗಳಿನಲ್ಲಿ ಆಲೆಮನೆಯ ಭರಾಟೆ ಬಹಳ ಜೋರು . ಎಲ್ಲೆಲ್ಲಿಂದಲೋ ಬಂದು ಕಬ್ಬಿನ  ಹಾಲು ಕುಡಿದು ಹೋಗುವವರು ಬಹಳ .  ನನಗೆ ತುಂಬಾ ಚಿಕ್ಕವಳು ಇದ್ದಾಗಿ ನಿಂದಲೂ  ಅಪ್ಪ ಆಲೆ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಅಲ್ಲಿ ಬೇಕಾದಷ್ಟು ಹಾಲು ಕುಡಿದು ಬಿಸಿ ಬೆಲ್ಲ ತಿಂದು ಮನೆಗೆ ಬರುವಾಗ ಒಂದು ಕ್ಯಾನ್ ನಲ್ಲಿ ಫ್ರೆಶ್ ಕಬ್ಬಿನ ಹಾಲು ತುಂಬಿಸಿಕೊಂಡು ಬರುತ್ತಿದ್ದೆವು .

ಸಂಜೆ ನಮ್ಮದು ಕಂಬಳ ಪ್ರಾರಂಭ . ಊರಿನ ಅಕ್ಕಪಕ್ಕದ ಮನೆಯ ಅಣ್ಣಂದಿರು , ಚಿಕ್ಕಪ್ಪ ದೊಡ್ದಪ್ಪಂದಿರು ಜೊತೆಗೆ ನನ್ನ ವಾರಿಗೆಯವರು 4-5 ಮಕ್ಕಳು ಹೀಗೆ ಸೇರಿ ಕುಳಿತು ಹರಟೆ ಹೊಡೆದು ಕಬ್ಬಿನ  ಹಾಲು ಕುಡಿಯುವುದು . ಅಲ್ಲಿ ಹೆಂಗಸರಿಗೆ ಪ್ರವೆಶವಿರುತ್ತಿರಲಿಲ್ಲ ಕೇವಲ ಮಕ್ಕಳು ಮತ್ತು ಉಳಿದ ಗಂಡಸರು . ಹಾಗಾಗಿ ಕಬ್ಬಿನ ಹಾಲಿನ ಜೊತೆ ತಿನ್ನಲು ಏನಾದರೂ  ಬೇಕಾದರೆ ಗಂಡಸರೇ ಮಾಡಿಕೊಳ್ಳಬೇಕಿತ್ತು . ನನ್ನ ಅಪ್ಪನಿಗೆ ನಮ್ಮಕಡೆ ಕುಟ್ಟವಲಕ್ಕಿ ಎಂದು ಮಾಡುತ್ತಾರೆ ಅದೆಂದರೆ ಬಹಳ ಇಷ್ಟ ಅದು ಕಬ್ಬಿನಹಾಲಿನ ಜೊತೆ ಒಳ್ಳೆ ಕಾಮ್ಬಿನೆಶನ್  ಕೂಡ ಹೌದು ಜೊತೆಗೆ ಉಪ್ಪುಕಾರ ಚೆನ್ನಾಗಿ ಇರುವ ಮಾವಿನಮಿಡಿ ಉಪ್ಪಿನಕಾಯಿ . ಹಾಗಾಗಿ ಕುಟ್ಟವಲಕ್ಕಿಯನ್ನು  ಅಪ್ಪ ಬಹಳ ಇಷ್ಟಪಟ್ಟು ಬಹಳ ಸೊಗಸಾಗಿ ಮಾಡುತ್ತಿದ್ದರು . ಅಬ್ಬ ಅದರ ಖಾರವೆಂದರೆ ಖಾರ . ಅದು ಕಬ್ಬಿನ ಹಾಲಿನೊಂದಿಗೆ ಬಹಳ ಚಂದ ಮ್ಯಾಚ್ ಆಗುತ್ತಿತ್ತು .  ಅದರ ಜೊತೆಗೆ ಒಂದಿಷ್ಟು ಜೋಕ್ಸ್  , ಹರಟೆ ಹೀಗೆ ಗಂಟೆಗಳು ಸರಿದಿದ್ದೇ ಗೊತ್ತಾಗುತ್ತಿರಲಿಲ್ಲ . ನಮ್ಮ ಕಂಬಳ ಪ್ರಾರಂಭ ಆಗುತ್ತಿದುದೆ ರಾತ್ರಿ ಹತ್ತರ ನಂತರ  ಮುಗಿಯುತ್ತಿದುದು 1 ಗಂಟೆಯ ನಂತರ . ಅವರ ಜೋಕ್ಸ್ ಗಳು ಆ ಮಾತುಗಳು ಅರ್ಥವಾಗದಿದ್ದರೂ ಏನೋ ಒಂದು ಖುಷಿ ಇರುತ್ತಿತ್ತು ಆ ಕಂಬಳದಲ್ಲಿ.ಮತ್ತು ಆಲೆಮನೆ ಎಷ್ಟೇ ದೂರವಾದರೂ  ಪಾಪ ಅಪ್ಪ ನನಗೋಸ್ಕರ ಹೋಗಿ ತಂದುಕೊಡುತ್ತಿದ್ದರು . ಒಮ್ಮೊಮ್ಮೆ ನನ್ನ ಎತ್ತಿಕೊಂಡು ಹೋಗುತ್ತಿದ್ದುದು ನನಗೆ ನೆನಪಿದೆ ..!!

ಒಮ್ಮೆ ನಾನು ಕಬ್ಬಿನ  ಹಾಲು ಬೇಕು ಎಂದು ಅಪ್ಪನ ಹತ್ತಿರ ಕೇಳಿದ್ದೆ ಸಂಜೆ ಕರೆದುಕೊಂಡು  ಹೋಗುವುದಾಗಿ ಮಾತು ಕೊಟ್ಟಿದ್ದರು . ಅಷ್ಟರಲ್ಲಿ ನಮ್ಮ ಮನೆ ಹಸು ಕರು ಹಾಕಲು ಒದ್ದಾಡುತ್ತಿತ್ತು ಡಾಕ್ಟರ ಬಂದು ಕರು ಹೊರಬರುವಷ್ಟರಲ್ಲಿ ರಾತ್ರಿ 10 ಗಂಟೆಯಾಗಿತ್ತು ಆದರೂ ಅಪ್ಪ ನನಗೋಸ್ಕರ 2 ಕಿಲೋಮೀಟರ್ ನಡೆದುಕೊಂಡು ಹೋಗಿ ಕ್ಯಾನ್ ತುಂಬಾ ಕಬ್ಬಿನ ಹಾಲು ತುಂಬಿಸಿಕೊಂಡು ಕೊಟ್ಟಿದ್ದರು . ಆ ದಿನ ನನಗಾದ ಖುಷಿ ಅಪ್ಪನ ಮುಖದಲ್ಲಿ ರಿಫ್ಲೆಕ್ಟ್ ಆಗಿತ್ತು . ಹೀಗೆ ಆಲೆಮನೆ ಎಂದರೆ ಇದೆಲ್ಲ ನೆನಪಿನಂಗಳದಿಂದ ಜಾರುತ್ತದೆ .

ಕ್ರಮೇಣ ಕಾಲ ಬದಲಾಯಿತು ಜನ ಕೂಡ ಚೇಂಜ್ ಕೇಳ್ತಾರಲ್ವಾ  ನಡೆದುಕೊಂಡು ಆ ಗದ್ದೆಯಲ್ಲಿ ಯಾರು ಹೋಗ್ತಾರೆ ಬೈಕ್ ನಲ್ಲಿ ಹೋಗಿ ತಂದು ಬಿಡ್ತೀವಿ ನೀವೆಲ್ಲ ಮನೇಲೆ ಇರಿ ಎನ್ನುವ ಕಾಲ ಬಂತು . ಆದರು ಆ ಕಂಬಳ ಮಾತ್ರ ನಡೆಯುತ್ತಲೇ ಇತ್ತು . ಸ್ವಲ್ಪ ವರ್ಷ ಕಳೆದ ನಂತರ ಮನೆಗೆ ಬಂದು “ಭಟ್ರೇ ಇವತ್ತು ನಮ್ಮನೆ ಆಲೇಮನೆ ಬರ್ರಿ “ಅನ್ನುತ್ತಿದ್ದವರು ಕಡಿಮೆಯಾದರು  . ಆದರು ನಾನು ನಮ್ಮನೆಗೆ ಯಾವಾಗಲು ಬರುವವರ ಮನೆಯ ಆಲೆಮನೆ ಯಾವಾಗ ಎಂದು ಮೊದಲೇ ಕೆಳುತ್ತಿದ್ದುದರಿಂದ ಕರೆಯುತ್ತಿದ್ದರು . ಈಗಲೂ ಮನೆಗೆ ಬಂದು ಕರೆಯುವವರಿದ್ದಾರೆ. ಜೊತೆಗೆ ಫೋನ್ ಮಾಡಿ ಬನ್ನಿ ಎಂದು ಕರೆಯುವವರು ಇದ್ದಾರೆ . ಅಪ್ಪ ಹೋಗಿ ಕ್ಯಾನ್ ತುಂಬಿಸಿಕೊಂಡು ಬರುವುದು ನಡೆಯುತ್ತಿದೆ . ಆದರೆ ನಾನು ಮಾತ್ರ ಮಿಸ್ಸಿಂಗ್ .

ಈ ಲಂಡನ್ ನಲ್ಲಿ ಎಲ್ಲಿ ಹುಡುಕಿದರೂ  ಕಬ್ಬಿನ  ಹಾಲು ಸಿಗುವುದಿಲ್ಲ ಬೇರೆಲ್ಲ ಬಾಟಲ್ ಗಳು ಬೇಕಾದಷ್ಟು ಸಿಗುತ್ತದೆ . ಇಂತ ಸಮಯದಲ್ಲೇ ನಮ್ಮ ದೇಶ ನಮ್ಮ ಹಳ್ಳಿ ನಮ್ಮ ಮನೆ ಎಲ್ಲ ಬಹಳ ಕಾಡೋದು. ಬಹಳ ಮಿಸ್ ಮಾಡಿಕೊಳ್ಳೋದು  :(…:) ಅದಕ್ಕಾಗಿ ನಾನು ಈಗಲೇ ತೀರ್ಮಾನಿಸಿ ಬಿಟ್ಟಿದ್ದೇನೆ ಮುಂದಿನ ವರ್ಷದ ಆಲೆಮನೆಗೆ ಎಷ್ಟೇ ಕಷ್ಟ ಆದರೂ ನಮ್ಮೂರಲ್ಲಿರಬೇಕು ಎಂದು.

ಬಾಗ ಎರಡು;

ಅದೊಂದು ವೀಕೆಂಡ್ . ಊರಿಗೆ ಹೋದ ನಾವು ಎಲ್ಲಾದರೂ ಹತ್ತಿರದಲ್ಲಿ ಸುತ್ತಲು ಹೋಗಬೇಕು ಎಂದು ನಿರ್ಧರಿಸಿದ್ದೆವು. ನಗರಗಳ ಓಡಾಟ ಬೇಸರ ತರಿಸಿದ್ದರಿಂದ ಯಾವುದಾದರೂ ಒಂದು ಒಳ್ಳೆಯ ತಾಣಕ್ಕೆ ಹೋಗಬೇಕು ಎಂಬುದು ನಮ್ಮ ಮನೆಯವರೆಲ್ಲರ ಅಪೇಕ್ಷೆಯಾಗಿತ್ತು. ಹಾಗೆಂದೇ ನಿರ್ಧರಿಸಿ ಪರಿಚಯದವರನ್ನು ವಿಚಾರಿಸಿದಾಗ ಸಿಕ್ಕಿದ್ದು ಈ ಬೆಟ್ಟ. ಸುಮಾರು ನಾಲ್ಕರಿಂದ ಐದು ಕಿ ಮೀ  ನಷ್ಟು ದೂರ ಎತ್ತರದ ಬೆಟ್ಟದೆಡೆಗೆ ನಾವು ಹೊರಟ ಕಾರು ನಮ್ಮನ್ನು ಎಳೆಯಲಾರದೆ ಎಳೆದುಕೊಂಡು ಹೋಗುತ್ತಿದ್ದರೆ ಸುತ್ತಲೂ ದಟ್ಟ  ಕಾಡು. ಅದು ಸಂಜೆಯ ಸಮಯವಾಗಿದ್ದರಿಂದಲೋ ಏನೋ ತಣ್ಣನೆಯ ಗಾಳಿ , ಒಂದು ಕಾರು ಹೋಗುತ್ತಿದ್ದರೆ ಇನ್ನೊಂದು ಎದುರಿನಿಂದ ಬರಲಾರದಂತ ಇಕ್ಕಟ್ಟು ರಸ್ತೆಯಾದದ್ದರಿಂದಲೋ ಏನೋ ರಸ್ತೆ ಬಿಕೋ ಎನ್ನುತ್ತಿತ್ತು. ಕಾರು ಮೇಲೇರುತ್ತಿದ್ದಂತೆ ಕಿಟಕಿಯಿಂದ ಸುಮ್ಮನೆ ಗಾಳಿಗೆ ಹೊರಗೆ ಮುಖ ಒಡ್ಡಿದರೆ ಅದ್ಬುತ ಲೋಕ. ಸುಂದರವಾದ ಹಸಿರು ತುಂಬಿದ ಅರಣ್ಯಗಳ ಬೀಡು. ಅದೊಂದು ಅದ್ಬುತ ಲೋಕವೇ ಸರಿ. ಕಾರಿನಲ್ಲಿ ಹಳೇ ಹಿಂದಿ ಚಿತ್ರಗೀತೆಗಳ ಸರಮಾಲೆ ಇಳಿಸಂಜೆಯ ಸೂರ್ಯ ಮುಳುಗುವ ಹೊತ್ತಿನ ಆ ಸುಂದರ ಕ್ಷಣ ಅಕ್ಷರಗಳಲ್ಲಿ ವರ್ಣಿಸುವುದು ಕಷ್ಟ ಅದನ್ನು ನೋಡಿಯೇ ಅನುಭವಿಸಬೇಕು.

kundadri

ಕಾರು ಇಳಿದು ಮೆಟ್ಟಿಲುಗಳನ್ನು ಏರಿದರೆ ಬೆಟ್ಟದ ತುದಿ ತಲುಪಿದರೆ ಅಲ್ಲಿ ಕಾಣುವುದು ಪ್ರಕೃತಿಯ ಸುಂದರ ತಪ್ಪಲು. ಸುತ್ತಲೂ ಕಲ್ಲು ಬಂಡೆಗಳನ್ನು ಹೊಂದಿ ಮಧ್ಯದಲ್ಲಿ ದೇವಸ್ಥಾನವನ್ನು ಹೊಂದಿರುವ ಈ ಸ್ಥಳದಲ್ಲಿ ನಿಂತು ಒಮ್ಮೆ ಕೆಳ ನೋಡಿದರೆ ಅಲ್ಲಿ ಕಾಣುವುದು ಹಸಿರು , ಬರೀ ಹಸಿರು. ಬೀಸುವ ತಂಗಾಳಿಗೆ ಮೈಯೊಡ್ಡಿ ಈ ಹಸಿರನ್ನು ಕಣ್ಣು ತುಂಬಿಸಿಕೊಳ್ಳುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ?

ಹೌದು ನಾನು ಈಗ ಹೇಳ ಹೊರಟಿರುವ  ,ಇಷ್ಟೊಂದು ಸುಂದರವಾದ ಪ್ರಕೃತಿಯ ಸೊಬಗನ್ನು ನೋಡಲು ನೀವೂ ಕೂಡ  ನೋಡ ಬಯಸುತ್ತೀರಾದರೆ  ಕುಂದಾದ್ರಿ ಸರಿಯಾದ ಸ್ಥಳ. ತೀರ್ಥಹಳ್ಳಿಯಿಂದ ಸುಮಾರು ೨೩ ಕಿ ಮೀ ಅಂತರದಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಬರುವ ಈ ಕುಂದಾದ್ರಿ ಜೈನರ ಪವಿತ್ರ ಸ್ಥಳವೂ ಹೌದು. ಹದಿನೇಳನೆ ಶತಮಾನದ ಜೈನ ಮುನಿಗಳ ಕಾಲದಿಂದಲೂ ಇರುವ ಈ ಕುಂದಾದ್ರಿಯು ಸುಮಾರು ೮೦೦ ಮೀಟರ್ ಎತ್ತರದಲ್ಲಿರುವ ಬೆಟ್ಟದ ಮೇಲಿದೆ. ಜೈನ ಮೂರ್ತಿಗಳನ್ನು ಒಳಗೊಂಡಿರುವ ಈ ಜೈನ ಬಸದಿಯಲ್ಲಿ ನಿತ್ಯವೂ ಪೂಜೆಯೂ ನಡೆಯುತ್ತದೆ ಮತ್ತು ಸಾವಿರಾರು ಜೈನ ಭಕ್ತರು ಕೂಡ ಇಲ್ಲಿ ಪ್ರತಿ ವರ್ಷ ಭೇಟಿ ನೀಡುತ್ತಾರೆ.  ತೀರ್ಥಹಳ್ಳಿ ಮತ್ತು ಉಡುಪಿ ಮಾರ್ಗವಾಗಿ ಸಂಚರಿಸುವಾಗ ಸಿರುವ ಈ ಕುಂದಾದ್ರಿ ಪ್ರವಾಸಿಗರು ಭೇಟಿ ನೀಡಬಹುದಾದ ಸುಂದರ ಸ್ಥಳ . ಹಸುರಿನಿಂದ ಕೂಡಿರುವ ಈ ಸ್ಥಳ ಗಾಳಿ ಬೆಳಕಿನ ಜೊತೆಗೆ ಮನಸ್ಸನ್ನು ತಂಪು ಮಾಡುತ್ತದೆ. ಈ ಬೆಟ್ಟವು ಬಹಳ ಎತ್ತರದಲ್ಲಿ ಇರುವುದರಿಂದ ಇಲ್ಲಿ ನಿಂತು ಸುತ್ತಲಿನ ಹಸಿರ ಸಿರಿಯನ್ನು ಕಣ್ಣು ತುಂಬಿಕೊಳ್ಳಬಹುದು.ಮೇಲಿನವರೆಗೂ ಟೆಂಪೋ ಅಥವಾ ಜೀಪು ಹೋಗುವ ರಸ್ತೆಯನ್ನು ಇತ್ತೀಚಿಗೆ ಮಾಡಿರುವುದರಿಂದ ಸಾಕಷ್ಟು ಪ್ರವಾಸಿಗರ ಗಮನವನ್ನು ಸಹ ಇದು ಸೆಳೆಯುತ್ತಿದೆ. ರಸ್ತೆ ಕೂಡ ಯಾವುದೇ ತೊಡಕುಗಳಿಲ್ಲದೆ , ಗುದ್ದು ಗುಂಡಿಗಳಿಲ್ಲದೆ ಸುಲಭವಾಗಿ ಸಾಗಬಹುದಾದ ರಸ್ತೆಯಾಗಿದೆ .ಈ ಬೆಟ್ಟ  ಇತ್ತೀಚಿಗೆ ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು ಕರ್ನಾಟಕದಿಂದಷ್ಟೇ ಅಲ್ಲ ,ಗುಜರಾತ್ , ಮಹಾರಾಷ್ಟ್ರ ಹೀಗೆ ಉತ್ತರ ಭಾರತದ ಇನ್ನಿತರ ಸ್ಥಳಗಳಿಂದ ಜೈನ ಭಕ್ತರು ಇಲ್ಲಿ ಬಂದು ಒಂದು ದಿನ ನೆಲೆಸಿ ಪೂಜೆಯ ಜೊತೆಗೆ ಇಲ್ಲಿನ ಅದ್ಬುತ ಪ್ರಕೃತಿಯ ಮಡಿಲಲ್ಲಿ ಮಿಂದು ಹೋಗುತ್ತಾರೆ ಎಂಬುದು ಇಲ್ಲಿನ ಅರ್ಚಕರ ಅಂಬೋಣ. ಅಷ್ಟೇ ಅಲ್ಲ ಸಾವಿರಾರು ವರ್ಷಗಳ ಹಿಂದೆ ಕಲ್ಲಿನಿಂದ ಕಟ್ಟಲಾದ ಜೈನ ಬಸದಿಯು ಇಂದಿಗೂ ಕೂಡ ವಾಸ್ತು ಶಿಲ್ಪಗಳನ್ನು ಉಳಿಸಿ ಕೊಂಡು ಬಂದಿರುವುದು ಇದರ ವಿಶೇಷತೆಯೇ ಸರಿ. ಇತ್ತೀಚಿಗೆ  ಜೀರ್ಣೋದ್ಧಾರ ಮಾಡಿ ಕೆಲವೊಂದು ಬದಲಾವಣೆಯನ್ನು ಕೂಡ ಮಾಡಲಾಗಿದೆ ಎನ್ನುತಾರೆ ಇಲ್ಲಿನ ಅರ್ಚಕರು.

kundadri 4

 

ಈ ಕುಂದಾದ್ರಿಯ ಜೈನ ದೇಗುಲದ  ಪಕ್ಕದಲ್ಲಿರುವ ಕೊಳವು ಅಂತರ ಗಂಗೆಯಾಗಿದ್ದು ಸುಮಾರು 118 ಅಡಿ ಆಳವಿದೆ . ಎಂದೂ ಬತ್ತದೇ ಸದಾ ನೀರನ್ನು ಹೊಂದಿರುವ ಈ ಕೊಳವನ್ನು ಒಮ್ಮೆ ಸ್ವಚ್ಛಗೊಳಿಸಲು ಒಂದು ವಾರ ಬೇಕಾಗುವುದು ಎಂದು ಅಲ್ಲಿನ ಅರ್ಚಕರು ತಿಳಿಸುತ್ತಾರೆ.ಆಗಾಗ ಇದನ್ನು ಸ್ವಚ್ಚಗೊಳಿಸುವುದು ಕೂಡ ನಡೆದು ಕೊಂಡು ಬರುತ್ತಿದೆ ಎನ್ನಲಾಗುತ್ತದೆ. ಸ್ವಚ್ಚವಾದ ನೀರನ್ನು ಹೊಂದಿರುವ ಈ ರೀತಿಯ ಸಾಕಷ್ಟು ಅಂತರಗಂಗೆಗಳನ್ನು ಇಲ್ಲಿ ಕಾಣಬಹುದು. ಈ ಸ್ಥಳ ಕಲ್ಲಿನ ಬಂಡೆಗಳಿಂದ ಸುತ್ತುವರೆದಿದ್ದು ಕೆಳಗೆ ಇಳಿದು ಕೂಡ ಸಾಕಷ್ಟು ಪ್ರಕೃತಿ ವೀಕ್ಷಣೆ ಮಾಡಬಹುದು. ಕಲ್ಲು ಬಂಡೆಗಳ  ಮಧ್ಯದಲ್ಲಿ ಅಲ್ಲಲ್ಲಿ ಅಂತರಗಂಗೆ ಎದ್ದಿರುವುದು ಕೂಡ ವಿಶೇಷವೆನ್ನಬಹುದು.  ಅತಿ ಎತ್ತರದ ಬೆಟ್ಟವಿರುವುದರಿಂದ  ಸೂರ್ಯಾಸ್ತಮಾನವೂ  ಇಲ್ಲಿ ಸುಂದರವಾಗಿ ಕಾಣಿಸುತ್ತದೆ . ಆಗುಂಬೆಗಿಂತ ಎತ್ತರದಲ್ಲಿ ಈ ಕುಂದಾದ್ರಿ ಬೆಟ್ಟ ಇರುವುದರಿಂದ ಮೋಡ ಕವಿದು ಮುಸುಕು ಇರದಿದ್ದಲ್ಲಿ ಇಲ್ಲಿಂದ ಸೂರ್ಯಾಸ್ತ ಸುಂದರವಾಗಿ ಕಾಣಿಸುತ್ತದೆ ಎನ್ನಲಾಗುತ್ತದೆ.

ಪ್ರಕೃತಿಯ ಹಚ್ಚ ಹಸುರನ್ನು ಹೊಂದಿರುವ ಈ ಸುಂದರ ಸ್ಥಳದಲ್ಲಿ ಚಲನಚಿತ್ರದ ಶೂಟಿಂಗ್ ಕೂಡ ನಡೆದಿದೆ. ಕುಂದಾದ್ರಿ ತಲುಪಲು ಸುಮಾರು ನಾಲ್ಕು ಕಿ ಮೀ ನಷ್ಟು ಎತ್ತರಕ್ಕೆ ಏರಬೇಕಾಗಿದ್ದು ಈಗ ಇಲ್ಲಿ ರಸ್ತೆ ಮಾಡಿರುವುದರಿಂದ ಜೀಪ್ , ಕಾರು ಗಳು ತುದಿಯವರೆಗೆ ಹೋಗುತ್ತವೆ. ಮೇಲೆ ಜೈನ ಬಸದಿಯನ್ನು ನೋಡಿಕೊಂಡು ಸುತ್ತಲೂ ಇರುವ ಕೊಳ ಮತ್ತು ಪ್ರಕೃತಿಯ ಸೊಬಗನ್ನು ಸವಿದು ಅಲ್ಲೇ ಕುಳಿತು ಮನಸ್ಸನ್ನು ಮುದಗೊಳಿಸಿಕೊಂಡು ಒಂದು ದಿನವನ್ನು ಸುಂದರವಾಗಿ ಕಳೆಯಲು  ಇದು ಸರಿಯಾದ ಸ್ಥಳ. ಜೊತೆಗೆ ನಮಗೆ ಬೇಕಾದ ಚುರುಮುರಿ ಇನ್ನಷ್ಟು ಕುರುಕಲು ತಿಂಡಿಗಳಿದ್ದರೆ ಅದನ್ನು ತಿನ್ನುತ್ತಾ ಕುಳಿತುಬಿಟ್ಟರೆ ಎದ್ದು ಬರಲು ಕೂಡ ಮನಸ್ಸಾಗದು.ಅದಲ್ಲದೆ  ಇತ್ತೀಚಿಗೆ ಸಾಕಷ್ಟು ಧಾರವಾಹಿಗಳಲ್ಲೂ ಕೂಡ ಈ ಸ್ಥಳವನ್ನು ಚಿತ್ರೀಕರಣಕ್ಕೆ ಬಳಸಿರುವುದನ್ನು ಕಾಣಬಹುದು.

kundadri 2

ಇಲ್ಲಿಂದ ೨೩ ಕಿ ಮೀ ಅಂತರದಲ್ಲಿ ತೀರ್ಥಹಳ್ಳಿ ಇದ್ದು ಇಲ್ಲಿ ರಾಮೇಶ್ವರ ದೇವಸ್ಥಾನ ಮತ್ತು ಅಲ್ಲಿಯ ಪಕ್ಕದ ತುಂಗಾ ನದಿಯ ತಟ ಕೂಡ ಸಂಜೆಯ ಸಮಯದಲ್ಲಿ ಸುಂದರವಾಗಿರುತ್ತದೆ.  ಪ್ರಕೃತಿಯ ಸೊಬಗನ್ನು ಸವಿಯಬಯಸುವವರು ಕುಂದಾದ್ರಿ ಯನ್ನು ವರ್ಷದ ಯಾವುದೇ ಸಮಯದಲ್ಲಿ ಕೂಡ ಭೇಟಿ ನೀಡಬಹುದಾದರೂ ಇದು ಆಗುಂಬೆಗೆ ಸಮೀಪವಿರುವುದರಿಂದ ಅಲ್ಲಿನ ಸೂರ್ಯಾಸ್ತ ನೋಡಲು ಸರಿಯಾದ ಸಮಯ ಡಿಸೆಂಬರ್ ತಿಂಗಳು.

                                                                                               ಚಿತ್ರ ಲೇಖನ- ಅರ್ಪಿತಾ  ಹರ್ಷ