ಬದಲಾಗುತ್ತಿರುವ ಸಮಾಜದಲ್ಲಿ ವೃದ್ಧರು: ಒಂದು ಅವಲೋಕನ – ಡಾ. ಜಿ. ಎಸ್. ಶಿವಪ್ರಸಾದ್ ಬರೆದ ಲೇಖನ

ಈ ಅಕ್ಟೋಬರ್ ಒ೦ದನೆಯ ತಾರೀಖು ”ಅ೦ತರ ರಾಷ್ಟೀಯ ವೃದ್ಧರ ದಿನಾಚರಣೆ’’ ಯೆ೦ದು ಗುರುತಿಸಲಾಗಿದೆ. ಪ್ರಪ೦ಚದಾದ್ಯ೦ತ ವಯಸ್ಸಾದವರ ಸ೦ಖ್ಯೆ ಅತಿ ವೇಗದಲ್ಲಿ ಬೆಳೆಯುತ್ತಿದೆ. ವೃದ್ಧಾಪ್ಯ ಯಾರಿಗೂ ತಪ್ಪಿದ್ದಲ್ಲ. ಜೀವನದ ಈ ಹ೦ತವನ್ನು ಎದುರಿಸುವ ರೀತಿ ಒ೦ದೇ ರೀತಿಯಾಗಿಲ್ಲ. ಇದು ವಯಸ್ಸಾದವರ ಬಗ್ಗೆ ನಮಗಿರುವ ಅಭಿಪ್ರಾಯ, ಸಮಾಜ, ಮತ್ತು ಸ೦ಸ್ಖೃತಿಯನ್ನು ಅವಲ೦ಬಿಸಿದೆ. ಹಿರಿಯರನ್ನು ದೇಶದ ಹಿರಿಮೆಯೆ೦ದು ಗುರುತಿಸಿ,ಗೌರವಿಸುವ ಮನೋಭಾವ ನಮ್ಮಲ್ಲಿ ಮೂಡಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ದೇಶ, ಸಮಾಜ ಮತ್ತು ಹಿರಿಯರೂ ಸಹ ವೈಯುಕ್ತಿಕ ಪ್ರಯತ್ನವನ್ನು ಹೇಗೆ ಮಾಡಬಹುದೆ೦ದು ಡಾ// ಶಿವಪ್ರಸಾದ್ ರವರು ಈ ಲೇಖನದಲ್ಲಿ ನಿಮ್ಮೊ೦ದಿಗೆ ಹ೦ಚಿಕೊ೦ಡಿದ್ದಾರೆ – ಸ೦

ಬದಲಾಗುತ್ತಿರುವ ಸಮಾಜದಲ್ಲಿ ವೃದ್ಧರು:  ಒಂದು ಅವಲೋಕನ

ನಮಗೆ ಕಂಡಂತೆ ಹಲವು ದಶಕಗಳಿಂದ ಸಮಾಜದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿದೆ. ಇಂದು ನಮ್ಮ ಹಿರಿಯರು ಹಿಂದಿಗಿಂತ ಹೆಚ್ಚು ಆರೋಗ್ಯವಂತರಾಗಿ ಧೀರ್ಘ ಆಯುಷ್ಯವನ್ನು ಪಡೆದವರಾಗಿದ್ದಾರೆ. ವೈದ್ಯಕೀಯ ಸೌಲಭ್ಯ ಉತ್ತಮವಾದ ಆಹಾರ, ವ್ಯಾಯಾಮದ ಕಡೆ ಗಮನ ಇವುಗಳಿಂದ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಅವಕಾಶವಿದೆ. ಹಾಗೆ ಜಾಗತೀಕರಣ, ಕಂಪ್ಯೂಟರ್ ಗಳ ಬಳಕೆ, ಅಂತರ್ಜಾಲ ನಮ್ಮ ಬದುಕನ್ನು ಸರಳಗೊಳಿಸಿವೆ. ಈ ತೀಕ್ಷ್ಣ ಹಾಗೂ ಕ್ಷಿಪ್ರ ಬದಲಾವಣೆಗಳ ಜೊತೆಗೆ ಹೊಂದಿಕೊಂಡು ಹೊಸ ತಂತ್ರ ಜ್ಞಾನವನ್ನು ಕಲಿಯುತ್ತ ತಮ್ಮ ಬದುಕನ್ನು ಅಳವಡಿಸಿಕೊಳ್ಳುತ್ತಾ ಸಾಗುವುದು ಇವತ್ತಿನ ಹಿರಿಯರಿಗೆ ಒಂದು ಕಷ್ಟವಾದ ಕೆಲಸ. ಈ ತಾಂತ್ರಿಕ ಬೆಳವಣಿಗೆ ಹಿರಿಯರ ಪಾಲಿಗೆ ಒಂದು ದೊಡ್ಡ ಸವಾಲು.

ಬದಲಾಗುತ್ತಿರುವ ಸಮಾಜದಲ್ಲಿ ವೃದ್ಧರು ಎಂಬ ವಿಚಾರದಲ್ಲಿ ನಾವು ಎರಡು ಅಂಶಗಳನ್ನು ಗಮನಿಸಬೇಕು

  1. ವೃದ್ಧರು ಎಂದರೆ ಯಾರು?
  2. ಬದಲಾಗುತ್ತಿರುವ ಸಮಾಜ ಎಂದರೇನು?

ವೃದ್ಧರು ಎಂದರೆ ಯಾರು? ಎಂಬ ಪ್ರಶ್ನೆಗೆ ಸಮಂಜಸವಾದ ಉತ್ತರ ನೀಡಲು ಕಷ್ಟ. ವೃದ್ಧರು ಎಂಬ ಅರ್ಥ ಹಿರಿಯರು, ಮುದುಕರು, ಇಳಿವಯಸ್ಸಿನವರು ಹೀಗೆ ಹಲಾವರು ಹೆಸರುಗಳನ್ನು ಹಾಗೂ ಅದರೊಡನೆ ಮನದಲ್ಲಿ ಮೂಡುವ Images ಅಥವಾ  ಚಿತ್ರಗಳನ್ನು ಸ್ಮರಿಸಬಹುದು. ವೃದ್ಧರು ಎಂದರೆ ಯಾರು? ಎಂಬ ಪ್ರಶ್ನೆಗೆ ಬಹಳ ಸರಳವಾದ ಒಂದು ಅರ್ಥವನ್ನು ಒಬ್ಬ ವ್ಯಕ್ತಿಯ ವಯಸ್ಸಿನ ಮೂಲಕ ಕಾಣಬಹುದು. ಸಾಮಾನ್ಯವಾಗಿ 60 ವರ್ಷ ಮೀರಿದವರನ್ನು ಈ ಗುಂಪಿಗೆ ಸೇರಿಸುವುದು ಸಾಮಾನ್ಯ. ಹಿಂದೆ ಒಂದು ದೇಶದಲ್ಲಿನ ಗಂಡು ಹೆಣ್ಣುಗಳ ಜೀವಮಾನ (life Expectancy) ಆಧಾರಧ ಮೇಲೆ 60 ಮೀರಿದವರನ್ನು ಹಿರಿಯರು ಎಂದು ಕರೆದು ಸರ್ಕಾರ ಒಂದು ನಿವೃತ್ತಿಯ ಗಾಡಿಯನ್ನು ಹಾಕಿರುವುದುಂಟು. ಆದರೆ ಈಗ ಅದೇ ಜೀವಮಾನ ಮೇಲೆ ತಿಳಿಸಿದ ಕಾರಣಗಳಿಂದ ಹಿಗ್ಗಿದೆ. ಪಾಶ್ಚಿಮಾತ್ಯ  ದೇಶಗಳಲ್ಲಿ  ಇಂದು ನಿವೃತ್ತಿಯ ಗಾಡಿಯನ್ನು 65-70 ಕ್ಕೆ ವಿಸ್ತರಿಸಲಾಗಿದೆ. ಹಾಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಒಬ್ಬ ವ್ಯಕ್ತಿ  65-70 ವರ್ಷದಾಟುವ ವರೆಗೆ ಅವರನ್ನು ವೃದ್ಧರು ಎಂದು ಪರಿಗಣಿಸುವ ಸಾಧ್ಯತೆ ಕಡಿಮೆ.

ವೃದ್ಧಾಪ್ಯ ವೆಂಬುದು ಒಂದು ಮನಸ್ಥಿತಿಯೇ ಅಥವಾ ದೈಹಿಕ ಸ್ಥಿತಿಯೇ ಎಂಬ ಪ್ರಶ್ನೆ ಹಲವರಿಗೆ ಮೂಡಬಹುದು. ಪಾಶ್ಚಿಮಾತ್ಯ ದೇಶದಲ್ಲಿ 60-70 ವರ್ಷಗಳನ್ನು ಮೀರಿದವರು ದೇಹವನ್ನು ಅತಿಯಾಗಿ ದಂಡಿಸಿ ಹತ್ತು ಇಪ್ಪತ್ತು ಮೈಲಿಗಳ ಮ್ಯಾರಥಾನ್ ರೇಸ್ ಗಳಲ್ಲಿ ಭಾಗವಹಿಸುವುದು ಸಾಮಾನ್ಯ. ಹಲವು ವರ್ಷಗಳ ಹಿಂದೆ ನಾನು, ನನ್ನ ಪತ್ನಿ ಪೂರ್ಣಿಮಾ ಹಾಗೂ ಹಲವು ಗೆಳೆಯರು ಕೆನಡಾ ದೇಶದ ರಾಕಿ ಪರ್ವತಗಳಲ್ಲಿ ಪ್ರವಾಸ ಮಾಡುತ್ತಿದ್ದಾಗ ಒಂದು ಕಡಿದಾದ ಹಿರಿದಾದ ಹಿಮ ಪರ್ವತವನ್ನು ನಡುಗೆಯಲ್ಲಿ ಹತ್ತಿರುವ ಬಗ್ಗೆ ನಮ್ಮನ್ನು ನಾವೇ ಪ್ರಶಂಸಿಸಿ ಕೊಳ್ಳುತ್ತಿರುವಾಗ ಆಕಸ್ಮಿಕವಾಗಿ ಪರ್ವತದ ಮೇಲೆ ಹಿರಿಯ ದಂಪತಿಗಳ ಭೇಟಿಯಾಯಿತು. ಕುಶಲ ಪ್ರಶ್ನೆಗಳನ್ನು ಮಾತಾಡಿ ಮುಗಿಸಿದ ನಂತರ ಅವರು 80 ವರ್ಷ ವಯಸ್ಸಿನವರು ಎಂದು ತಿಳಿದಾಗ ಅಚ್ಚರಿಯಾಯಿತು!

ಸಾಮಾನ್ಯರಲ್ಲಿ ಅದೂ ಭಾರತದಲ್ಲಿ ವೃದ್ಧರು ಎಂದ ಕೂಡಲೇ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರ ವೆಂದರೆ ನೆರತು ಉದುರುವ ಕೂದಲು, ನಡುಗುವ ಕೈಗಳು, ಮಬ್ಬಾದ ಕಣ್ಣುಗಳು, ಅಸಹಾಯಕತೆ ಮತ್ತು ಇತರರ ಮೇಲೆ ಅವಲಂಬನೆ. ಇದು ನಮ್ಮ ಕಲ್ಪನೆ! ಇದನ್ನು ಗಮನಿಸಿದಾಗೆ ಇದರಲ್ಲಿ ಒಂದು Negative Image ಹೆಚ್ಚಾಗಿ ಮೂಡಿ ಬರುತ್ತದ್ದೆ. ಇಂಗ್ಲೆಂಡಿನಲ್ಲಿ ನಮ್ಮ ಆಸ್ಪತ್ರೆಗೆ ಬರುವ ಅಥವಾ ಬಹಿರಂಗ ಸ್ಥಳಗಳಲ್ಲಿ ಕಾಣುವ ವೃದ್ಧರು ಒಳ್ಳೆ ಸೂಟು, ಬೂಟು ಟೈ ಗಳನ್ನು  ಧರಿಸಿ, ಬಹಳ ಸ್ವತಂತ್ರರಾಗಿ ತಲೆಯೆತ್ತಿ ನಡೆಯುತ್ತಾ ಎಲ್ಲರನ್ನು ವಿಚಾರಿಸಿಕೊಳ್ಳುತ್ತ ಒಂದು ಘನತೆಯ ಚಿತ್ರವನ್ನು ನೆನಪಿಗೆ ತರುತ್ತಾರೆ.  ಮುಂದುವರಿದ ದೇಶಗಳಲ್ಲಿ ಹಿರಿಯರು ಒಂದು ದೇಶದ Intellectual ಸಂಪತ್ತು ಎಂದು ಪರಿಗಣಿಸಿದರೆ ಇನ್ನು ಕೆಲವು ದೇಶಗಳಲ್ಲಿ ವೃದ್ಧರು ಸಮಾಜಕ್ಕೆ ಹೊರೆ ಎಂಬ ಮನೋಭಾವ ಇರಬಹುದು. ಭಾರತದಲ್ಲಿ ಹಿರಿಯರ ಬಗ್ಗೆ ಒಂದು ಮಾತಿದೆ: ‘ಕಾಡು ಬಾ ಅನ್ನುತ್ತೆ, ನಾಡು ಹೋಗು ಅನ್ನುತ್ತೆ.’ ಬಹುಶಃ ಇದು ಪುರಾತನ ಕಾಲದಲ್ಲಿ ವಯಸ್ಸಾದವರು ನಾಡನ್ನು ತೊರೆದು ವನಗಳಲ್ಲಿ ನೆಲಸುತ್ತಿದ್ದ  ಒಂದು ಹಿನ್ನೆಲೆಯಲ್ಲಿ ಮೂಡಿ ಬಂದಿರಬಹುದು. ವಯಸ್ಸಿಗೆ ಅನುಗುಣವಾಗಿ ನಡೆದುಕೊಳ್ಳುವುದರಲ್ಲಿ ಅರ್ಥವಿದೆ ಆದರೆ ಬದುಕನ್ನು ಪ್ರೀತಿಸಲು ಯಾವ ವಯಸ್ಸಿನ ಮಿತಿ ಇಲ್ಲ!

ಯುನೈಟೆಡ್ ನೇಷನ್ಸ್ ಹಿರಿಯ ವಯಸ್ಕರ ಗಣತಿಯ ಪ್ರಕಾರ 2015 ರಿಂದ ಹಿಡಿದು 2030 ವರೆಗೆ 60 ಮೀರಿದವರ ಸಂಖ್ಯೆ ಶೇಕಡಾ 56% ಹೆಚ್ಚಾಗುವ ಸಂಭವವಿದೆ. 2050 ಹೊತ್ತಿಗೆ ಸಂಖ್ಯೆ 2.1 ಬಿಲಿಯನ್ ಆಗುವ ಸಾಧ್ಯತೆ ಇದೆ. ಈ ಹಿಂದೆ ಹೆಂಗಸರ ಜೀವಮಾನ ಗಂಡಸಿಗಿಂತ 4.5 ವರ್ಷ ಹೆಚ್ಚಿನದಾಗಿದ್ದು ಮುಂದಕ್ಕೆ ಗಂಡಸರೂ ಕೂಡ ಧೀರ್ಘ ವಾದ ಜೀವಮಾನವನ್ನು ಪಡೆದು ಈಗಿರುವ ವ್ಯತ್ಯಾಸ ಸಮನಾಗುವು ಸಂಭವವಿದೆ. ಹಾಗೆಯೇ 80 ಮೀರಿದವರ ಸಂಖ್ಯೆ 2015 ನಿಂದ 2030 ಹೊತ್ತಿಗೆ 20% ಹೆಚ್ಚಾಗುವ ಸಾಧ್ಯತೆ ಇದೆ. ಹಿರಿಯರ ಈ ಜೀವಮಾನ ಹೆಚ್ಚಳ ಹಳ್ಳಿಗಳಿಗಿಂತ ನಗರಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಪಂಚದಲ್ಲಿ 80 ಮೀರಿ ದಾಟಿರುವ ಹಿರಿಯರ ಸಂಖ್ಯೆ ಈಗ 125 ಮಿಲಿಯನ್ ಇದ್ದರೆ 2050 ನಲ್ಲಿ  ಇನ್ನು ಮೂರು ಪಟ್ಟು ಹೆಚ್ಚಾಗಿ 434 ಮಿಲಿಯನ್ ಗೆ ಏರುವ ಸಂಭವಿದೆ.  ಒಟ್ಟಿನಲ್ಲಿ ಈ ಶತಮಾನದ ಅರ್ಧದಲ್ಲಿ, ಪ್ರಪಂಚದಲ್ಲಿ ಇರುವ ಜನಸಂಖ್ಯೆಯಲ್ಲಿ, ಐದು ಜನರಲ್ಲಿ ಒಬ್ಬ ವ್ಯಕ್ತಿ 60 ವರ್ಷ ಮೀರಿರುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ವೃದ್ಧರ ಜನಸಂಖ್ಯೆ ಸಮಾಜದ ಆರ್ಥಿಕ ಪರಿಸ್ಥಿತಿ, ವಸತಿ, ಸಾರಿಗೆ ಆರೋಗ್ಯ ಹಾಗೂ ಸಾಮಾಜಿಕ ಒತ್ತಡಗಳನ್ನು ತರಬಹುದು. Birth rate ಹೆಚ್ಚಿರುವ ಹಾಗೂ ಅಭಿವೃದ್ಧಿ ಗೊಳ್ಳು ತ್ತಿರುವ ಭಾರತ, ಬ್ರೆಜಿಲ್ ಆಫ್ರಿಕಾ ದೇಶಗಳಲ್ಲಿ ಹಿರಿಯರಸಂಖ್ಯೆ ಮಹತ್ತರವಾಗಿ ಹಿಗ್ಗ ಬಹುದೆಂದು ಅಂದಾಜು ಮಾಡಲಾಗಿದೆ.

ನಮ್ಮ ಮುಂದಿನ ಪ್ರಶ್ನೆ ಬದಲಾಗುತ್ತಿರುವ ಸಮಾಜ ಎಂದರೇನು? ಎಂಬುದರ ಬಗ್ಗೆ ವಿಚಾರ ಮಾಡೋಣ. ಹಲವು ದಶಕಗಳ ಹಿಂದೆ ನಮ್ಮ ಜಾಯಿಂಟ್ ಫ್ಯಾಮಿಲಿ ಕುಟುಂಬ ವ್ಯವಸ್ಥೆ ಯಿಂದಾಗಿ ವೃದ್ಧರು ತಮ್ಮ ಮಕ್ಕಳು ಮೊಮ್ಮಕ್ಕಳೊಡನೆ ನೆಮ್ಮದಿಯಾಗಿ ಅವರ ಆಶ್ರಯದಲ್ಲಿ ಬದುಕಬಹುದಿತ್ತು. ಹಲವಾರು ಅಣ್ಣ, ತಮ್ಮ, ಅಕ್ಕ ತೆಂಗಿಯರು ತಂದೆತಾಯಿಗಳನ್ನು ಸರದಿಯಲ್ಲಿ ನೋಡಿಕೊಳ್ಳುವ ಒಂದು ವ್ಯವ್ಯಸ್ಥೆ ಇದ್ದು ಎಲ್ಲ ಹೊಂದಿಕೊಂಡು ನಡೆಯುತ್ತಿದ್ದ ಪರಿಸ್ಥಿತಿ ಇತ್ತು. ಈಗ ಸಣ್ಣ ಕುಟುಂಬ ಅಥವಾ Nuclear Family ವ್ಯವಸ್ಥೆ ಬಹಳ ಮಟ್ಟಿಗೆ ರೀತಿಯಲ್ಲಿದೆ. ಮೇಲಾಗಿ ಗಂಡ ಹೆಂಡತಿಯರು ವೃತ್ತಿಯಲ್ಲಿ ತೊಡಗಿ  ವೃದ್ಧರಿಗೆ ಬೆಂಬಲ ಸಹಾಯ ಮಾಡುವ ಅವಕಾಶ ಕುಗ್ಗಿದೆ. ಅದಲ್ಲದೆ ವೃದ್ಧ ತಂದೆ ತಾಯಿಗಳಿಗೆ ಮೂಮ್ಮಕ್ಕಳನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಹೊರಲಾಗಿದೆ. ಒಂದು ಕುಟುಂಬದ ಆರ್ಥಿಕ ಪರಿಸ್ಥಿತಿಯ ಒತ್ತಡ ಹಾಗೂ ಹಲವಾರು ತೊಂದರೆಗಳಲ್ಲಿ ವೃದ್ಧ ತಂದೆ ತಾಯಿಯಾರು ಅನಿವಾರ್ಯವಾಗಿ ಸಿಕ್ಕಿಕೊಂಡು ಹೊರಬರುವುದು ಕಷ್ಟವಾಗಿದೆ. ಇನ್ನು ಕೆಲವು ಕುಟುಂಬಗಳಲ್ಲಿ ಮಕ್ಕಳು ವೃತ್ತಿಯ ಬದ್ದತೆ ಗಳಿಂದಾಗಿ ಹೊರನಾಡಿಗೆ ಅಥವಾ ಹೊರದೇಶಕ್ಕೆ ವಲಸೆ ಹೋಗಲು ನಿರ್ಧರಿಸಿದಾಗ ಇನ್ನು ಹೆಚ್ಚಿನ ಬಿಕ್ಕಟ್ಟುಗಳನ್ನು ಒಡ್ಡುತ್ತದೆ. ಇದರ ಜೊತೆಗೆ ಹಿರಿಯ ದಂಪತಿಗಳಲ್ಲಿ ಒಬ್ಬರ ಅನಾರೋಗ್ಯ ಅಥವಾ ಅಕಾಲ ಮರಣ ಇನ್ನು ಹೆಚ್ಚಿನ ಸಮಸ್ಯೆಗಳನ್ನು ತೆರದಿಡುತ್ತದೆ. ಇದರ ಒಟ್ಟಾರೆ ಪರಿಣಾಮ ಒಂಟಿತನ ಹಾಗೂ ಇಳಿವಯಸ್ಸಿನಲ್ಲಿ ಬದುಕನ್ನು ಒಬ್ಬರೇ ಎದುರಿಸುವ ಪರಿಸ್ಥಿತಿ ಉಂಟಾಗುತ್ತದೆ.

ಮೇಲೆ ಪ್ರಸ್ತಾಪಿಸಿರುವ ವಿಷಯಗಳಾದ ಜಗಾತಿಕರಣ  ಹಾಗೂ ಕಂಪ್ಯೂಟರ್ ಶಿಕ್ಷಣ (Computer Literacy) ಇತ್ತಿಚಿನದಿನಗಳಲ್ಲಿ ಬಹಳ ಮುಖ್ಯವಾದ ವಿಚಾರ. ಮನೆಗೆ ಸಂಬಂಧಪಟ್ಟ ಹಾಗೂ ಬ್ಯಾಂಕ್ ಗಳಲ್ಲಿನ ವ್ಯವಹಾರ, ಸಂಪರ್ಕ ಇವುಗಳನ್ನು ಸಮರ್ಪಕವಾಗಿ ನೆರವೇರಿಸಲು ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯ. ವಾಣಿಜ್ಯ ಹಾಗು ಸರ್ಕಾರದ ಪೇಪರ್ ರಹಿತ ವಹಿವಾಟುಗಳು ಅಡಚಣೆ ತರಬಹುದು. ಇತ್ತೀಚಿನ ದಿನಗಳಲ್ಲಿ ಹೊರದೇಶದಲ್ಲಿ ನೆಲಸಿರುವ ಮಕ್ಕಳು ಮೊಮ್ಮಕ್ಕಳು ಇವರೊಡನೆ ಸಂಪರ್ಕಿಸಲು ಕಂಪ್ಯೂಟರ್ ಶಿಕ್ಷಣ ಹಾಗೂ ಸೋಶಿಯಲ್ ಮೀಡಿಯಾಗಳ ಬಳಕೆಯನ್ನು ವೃದ್ಧರು ರೂಡಿಸಿಕೊಳ್ಳಬೇಕು.

60 ವರ್ಷಗಳು ಮೀರಿದಂತೆ ದೇಹಶಕ್ತಿ ಕುಗ್ಗುತ್ತಿರುವಾಗ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಕ್ಯಾನ್ಸರ್, ಸ್ಟ್ರೋಕ್, ಕಣ್ಣಿನಲ್ಲಿ ಪೊರೆ , ಗಂಡಸರಲ್ಲಿ ಪ್ರಾಸ್ಟೇಟ್ ತೊಂದರೆ, ಮೂಳೆಗಳು ಸವಿದು ಮಂಡಿ ಮತ್ತು ಸೊಂಟಗಳಲ್ಲಿ ನೋವು, ಸಕ್ಕರೆ ಖಾಯಿಲೆ, ರಕ್ತ ಒತ್ತಡ ಹಾಗು ಮುಖ್ಯವಾಗಿ ಮಾನಸಿಕ ತೊಂದರೆಗಳು ಹಿರಿಯರನ್ನು ಬಾಧಿಸುತ್ತವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಆಲ್ಜಿಮೆರ್ಸ ಖಾಯಿಲೆ (Alzheimer’s Disease) ಒಂದು ಭಯಂಕರ ಸಮಸ್ಯೆಯಾಗಿದೆ. ಹಿಂದೊಮ್ಮೆ ಅರವತ್ತರ ಅರುಳು ಮರುಳು ಎಂದು ಪರಿಗಣಿಸಲ್ಪಟ್ಟ ಈ ಖಾಯಿಲೆ ಅಷ್ಟು ಸರಳವಲ್ಲ.

ವೃದ್ಧಾಪ್ಯದಲ್ಲಿ ಎಲ್ಲರನ್ನು ಹೆಚ್ಚು ಭಾದಿಸುವ ಸಮಸ್ಯೆ ಎಂದರೆ ಒಂಟಿತನ ಮತ್ತು ಬೇಸರ. ಹಲವು ತಿಂಗಳ ಹಿಂದೆ  ಬಿ ಬಿ ಸಿ ವಾರ್ತೆಯಲ್ಲಿ ಇಲ್ಲಿ ಸ್ಥಳೀಯ ಹಿರಿಯ ವ್ಯಕ್ತಿ, ಸುಮಾರು 89 ವರ್ಷದ ಜೋ ಬಾರ್ಟ್ಲಿ, ಮನೆಯಲ್ಲಿ ಒಬ್ಬಂಟಿಗನಾಗಿ ಕುಳಿತು ಬೇಸರವಾಗಿ ಕೆಲಸಕ್ಕೆ ಅರ್ಜಿ ಹಾಕಿದ್ದು ಒಂದು ದೊಡ್ಡ ಸುದ್ದಿಯಾಗಿ ಎಲ್ಲ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರಗೊಂಡಿತು. ಕೊನೆಗೆ ಆತನಿಗೆ ಒಂದು ಸಣ್ಣ ಹೋಟೆಲಿನಲ್ಲಿ ಕೆಲಸ ದೊರಕಿತು. ಜೋ ಈಗ ಕೆಲಸಕ್ಕೆ ಮರಳಿದ್ದಾನೆ!  ಅವನಿಗೆ ಎಲ್ಲಿಲ್ಲದ ಹುರುಪು ಉತ್ಸಾಹ !  ಆದರೆ ನಾನು ಆಲೋಚಿಸುವುದು ಜೋ ತರಹದ ವ್ಯಕ್ತಿಗಳಿಗೆ ಬದುಕಿನಲ್ಲಿ ಯಾವ ಹವ್ಯಾಸ ಇರಲಿಲ್ಲವೇ?

ನಾವು ಬದುಕಿನಲ್ಲಿ ಸಂಗೀತ, ಸಾಹಿತ್ಯ, ಕಲೆ, ವ್ಯಾಯಾಮ ಮುಂತಾದ ಹವ್ಯಾಸಗಳನ್ನು ಬೆಳಸಿಕೊಂಡು ಅದನ್ನು ಪೋಷಿಸುತ್ತ ಬದುಕುವುದನ್ನು ಕಲಿತರೆ ಇಳಿವಯಸ್ಸಿನಲ್ಲಿ ಒಂಟಿತನ ಮತ್ತು ಬೇಸರಗಳನ್ನು ಕಡಿಮೆ ಮಾಡಿಕೊಳ್ಳ ಬಹುದು. ಸೋಶಿಯಲ್ ಕ್ಲಬ್ ಗಳ ಸದಸ್ಯರಾಗಿ ಸ್ನೇಹಿತರನ್ನು ಗಳಿಸಿದವರಿಗೆ ಹೃದ್ರೋಗ ಕಡಿಮೆಯಾಗಿರುವುದರ ಬಗ್ಗೆ ವೈದ್ಯಕೀಯ ಸಂಶೋಧನೆ ಮಾಹಿತಿಗಳಿವೆ. ನನಗೆ ತಿಳಿದ ಕೆಲವು ಸಾಹಿತ್ಯ ಹಾಗೂ ಕವಿ ಮಿತ್ರರು ನಿವೃತಿಯ ಬಳಿಕ ಇನ್ನು ಹೆಚ್ಚಿನ ಬರವಣಿಗೆಯಲ್ಲಿ ತೊಡಗಿ ಸಮಯ ಅಭಾವದ ಬಗ್ಗೆ ಗೊಣಗಿರುವುದು ಉಂಟು! ಹವ್ಯಾಸಗಳಿಂದ ಬುದ್ಧಿ  ಶಕ್ತಿಯನ್ನು ತೀಕ್ಷ್ಣ ವಾಗಿ ಉಳಿಸಿಕೊಂಡವರಿಗೆ ಡಿಮೆನ್ ಶಿಯ (Dementia) ರೀತಿಯ ಮಾನಸಿಕ ತೊಂದರೆಗಳು ಕಡಿಮೆ

ಇನ್ನು ಇಳಿವಯಸ್ಸಿನಲ್ಲಿ ಆರ್ಥಿಕ ಸುಭದ್ರತೆ ಬಹಳ ಮುಖ್ಯ. ಇಂಗ್ಲಿಷ್ ಸಂಸ್ಕೃತಿಯಲ್ಲಿ ಒಂದು ನಾಣ್ನುಡಿ ಇದೆ; ‘Save for a rainy day’ ದುಡಿಯುವ ಶಕ್ತಿ ಇರುವಾಗ ಮುಂಬರುವ ಕಷ್ಟಗಳ ದಿನಕ್ಕಾಗಿ ಕೂಡಿಡುವ ಆಲೋಚನೆಯನ್ನು ಕಿರಿಯರು ಪರಿಗಣಿಸಬೇಕು. ಇಂಗ್ಲೆಂಡಿನ ಹಿರಿಯರು ನರ್ಸಿಂಗ್ ಹೋಂಗಳಲ್ಲಿ  ಸೇರಬೇಕಾದರೆ ಬಹಳಷ್ಟು ಹಣ ಬೇಕಾಗುತ್ತದೆ. ಪೆಂಶನ್ (Pension)  ಹಣ ಸಾಕಾಗದೆ ಹಲವಾರು ಹಿರಿಯರು ತಮ್ಮ ಮನೆಗಳನ್ನು ಅಡವಿಟ್ಟು ಅಥವಾ ಮಾರಿ ನರ್ಸಿಂಗ್ ಹೋಂ ಸೇರಿಕೊಂಡಿರುವ ಬಗ್ಗೆ ಕೇಳುತ್ತೇವೆ.

ಮಧ್ಯ ವಯಸ್ಕರು ಅದರಲ್ಲೂ ಸಕ್ಕರೆ ಹಾಗೂ ರಕ್ತ ಒತ್ತಡ ಖಾಯಿಲೆ ಇರುವವರು ಆಹಾರ ಮತ್ತು ವ್ಯಾಯಾಮಗಳ ಕಡೆ ಗಮನ ಕೊಡದಿದ್ದಲ್ಲಿ ಇಳಿವಯಸ್ಸಿನಲ್ಲಿ  ಈ ಖಾಯಿಲೆಗಳ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.  ಒಬ್ಬ ವ್ಯಕ್ತಿ 50 ರ ಕೊನೆಯಲ್ಲಿ ಅಥವಾ ಅರವತ್ತರಲ್ಲಿ  ಇರುವಾಗ  ಗಂಡ ಅಥವಾ ಹೆಂಡತಿಯ ಅಕಾಲ ಮರಣದಿಂದ ಉದ್ಭವಿಸುವ ಒಂಟಿತನವನ್ನು ಎದುರಿಸುವುದು ಬಹಳ ಕಷ್ಟ. ಮಾನಸಿಕವಾಗಿ ಈ ಅಘಾತದಿಂದ ಚೇತರಿಸಿಕೊಳ್ಳುವುದು ಕಠಿಣ. ಹಿರಿಯ ವಯಸ್ಸಿನಲ್ಲಿ ಕಾಮಾದಿ ಬಯಕೆಗಳನ್ನು ಮೀರಿ ಸಾಂಗತ್ಯಕ್ಕೆಂದು ಮರು ಮದುವೆಯಾಗುವುದು ಅಥವಾ ಮದುವೆಯಾಗದೆ ಗಂಡು ಹೆಣ್ಣುಗಳು ಒಟ್ಟಿಗೆ ಇರುವುದು ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾನ್ಯ. ಈ ವಿಚಾರದ ಬಗ್ಗೆ ನಮ್ಮ ಭಾರತದ ಸಂಸ್ಕೃತಿಯಲ್ಲಿ  ಒಂದು ಸಾಂಪ್ರದಾಯಕ ನಿಲುವು ಹಾಗೂ ಮಡಿವಂತಿಕೆ ಇರುವುದನ್ನು ಗಮನಿಸಬಹುದು. ಈ ವಿಚಾರದ ಬಗ್ಗೆ ಮುಂದಿನ ಪೀಳಿಗೆ ಹಿರಿಯರು ಆಲೋಚನೆ ಮಾಡಬಹುದು

ವೃದ್ಧರ ಏಳಿಗೆ, ಅನುಕೂಲ, ಆರೋಗ್ಯ ಮತ್ತು ಕಲ್ಯಾಣ ಇವುಗಳ ಬಗ್ಗೆ ಸಮಾಜ, ಸರ್ಕಾರ ಹಾಗೂ ಚಾರಿಟಿ ಸಂಘಗಳು ಗಮನ ಹರಿಸಬೇಕು. ಯೋಜನೆಗಳನ್ನು ಹಾಕಿಕೊಳ್ಳಬೇಕು. ವೃದ್ಧರು ಸಮಾಜದ ಆಸ್ತಿ , ಅವರು  ಸಮಾಜಕ್ಕೆ  ಹೊರೆ ಅಲ್ಲ ಎಂಬ ಆರೋಗ್ಯಕರವಾದ ಚಿಂತನೆಯನ್ನು  ಕಿರಿಯರು ಬೆಳಸಿಕೊಳ್ಳಬೇಕು. ವೃದ್ಧರಿಗೆ ಹಲವು ರೀತಿ ಆರ್ಥಿಕ ರಿಯಾಯಿತಿ ಹಾಗೂ ಆರೋಗ್ಯ ವಿಮೆ ದೊರಕುವಂತಾಗಬೇಕು. ಇನ್ನು ಹೆಚ್ಚಿನ ಹಾಗೂ ವಿವಿಧ ಹಂತಗಳ ವೃದ್ಧಾಶ್ರಮ ಹಾಗೂ ಸಾಮೂಹಿಕ ವಸತಿಗಳ ಸೌಕರ್ಯಗಳನ್ನೂ ಕಲ್ಪಿಸಬೇಕಾಗಿದೆ.

ವೃದ್ಧಾಪ್ಯದ ಸಮಸ್ಯೆಗಳು ನಾವು ಎದುರಿಸಬೇಕಾದ ಬಹಳ ದೊಡ್ಡ ಸವಾಲು. ಇದು ಗಡಿ, ದೇಶ ಹಾಗೂ ಸಂಸ್ಕೃತಿಗಳನ್ನು ಮೀರಿದ್ದು ಮಾನವ ಕುಲದ ಒಂದು ಸಮಸ್ಯೆ. ಒಂದಲ್ಲ ಒಂದು ದಿನ ಎಲ್ಲರು ಎದುರಿಸಬೇಕಾದ ಪರಿಸ್ಥಿತಿ. ಈ ಅನಿವಾರ್ಯತೆಯನ್ನು ಒಪ್ಪಿಕೊಂಡು ಇಳಿವಯಸ್ಸಿನಲ್ಲಿ ಧೈರ್ಯ ಹಾಗೂ ಆತ್ಮ ವಿಶ್ವಾಸಗಳೊಂದಿಗೆ ನೆಮ್ಮದಿಯಾಗಿ ಬದುಕಿನ ಸಂಜೆಯನ್ನು ಕಡಲಂಚಿನಲ್ಲಿ ಕಾಣುವ ಸೂರ್ಯಾಸ್ತದ ಪ್ರಶಾಂತತೆಯಷ್ಟೇ ಹಿತಕರವಾಗಿ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.

ಜಿ.ಎಸ್. ಶಿವಪ್ರಸಾದ್                                                                                                                                                          

ಲಿಚ್‍ಫೀಲ್ಡ್ ಸಿಟಿ, ನಿಘಂಟು ಮತ್ತು ಡಾ. ಸಾಮ್ಯುಯೆಲ್ ಜಾನ್ಸನ್ – ಶ್ರೀವತ್ಸ ದೇಸಾಯಿ ಬರೆದ ಲೇಖನ

 

(ಆ೦ಗ್ಲ ಭಾಷೆಯ ಮೊದಲ ನಿಘ೦ಟುಕಾರ ಶ್ರೀಯುತ ಸಾಮ್ಯುಯಲ್ ಜಾನ್ಸನ್ ರವರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಇವರ ಜನ್ಮದಿನ ಕೆಲವೇ ದಿನಗಳ ಹಿ೦ದೆ ಆಚರಿಸಲಾಯಿತು. ಡಾ|| ಶ್ರೀವತ್ಸ ದೇಸಾಯಿಯವರು ಈ ಪ್ರತಿಭಾವ೦ತ ಬರಹಗಾರ, ಬೆಳೆದು ಬ೦ದ ರೀತಿ ಮತ್ತು ಅವರ ಜನ್ಮಸ್ಥಳ ಲಿಚ್ ಫೀಲ್ಡ್ ಬಗ್ಗೆ ಈ ಲೇಖನದಲ್ಲಿ ನಮಗೆ ತಿಳಿಸಿಕೊಟ್ಟಿದ್ದಾರೆ.

ಕನ್ನಡದ ನಿಘ೦ಟುಕಾರ ನಾಡೋಜಿ ಜಿ ವೆ೦ಕಟಯ್ಯ ಮತ್ತು ಕನ್ನಡ-ಆ೦ಗ್ಲಭಾಷೆಯ ಶಬ್ದಕೋಶವನ್ನು ಬರೆದ ಫ಼ರ್ಡಿನ೦ಡ್ ಕಿಟಲ್ ರವರ ಪರಿಚಯವನ್ನು ತಾವೆ ಕ್ಲಿಕ್ಕಿಸಿದ ಕೆಲ ಚಿತ್ರಗಳ ಜೊತೆಗೆ ನಮಗೆ ವಿವರವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.

ನಿ೦ಘಟುಗಳ ಬರೆಯುವ ಈ ಲೇಖಕರ ಪರಿಶ್ರಮ, ತೆಗೆದುಕೊಳ್ಳುವ ಸಮಯ ನಮ್ಮ ಊಹೆಗೂ ನಿಲಕದ್ದು. ಇದನ್ನೆಲ್ಲ ನಮ್ಮ ಅರಿವಿಗೆ ತ೦ದ ಶ್ರೀಯುತ ದೇಸಾಯಿಯವರಿಗೆ ಧನ್ಯವಾದಗಳು.

ಈ ಲೇಖನ ಒದಿದ ನ೦ತರ ಲಿಚ್ ಫೀಲ್ಡ್ ಪಟ್ಟಣಕ್ಕೆ ನೀವು ಬೇಟಿ ಕೊಡುವಿರೆ೦ಬ ನ೦ಬಿಕೆ ನನಗಿದೆ -ಸ೦)

 

ಡಾ ಸಾಮ್ಯುಯೆಲ್ ಜಾನ್ಸನ್ CC
Map CC

ಈ ವರ್ಷದ ಸೆಪ್ಟೆಂಬರ್ 18ರಂದು ಅಂದರೆ ಇದೇ ವಾರ ಡಾ ಜಾನ್ಸನ್ ಎಂದು ಪ್ರಸಿದ್ಧರಾದ ಸಾಮ್ಯುಯೆಲ್ ಜಾನ್ಸನ್ ಅವರ 308 ನೆಯ ಹುಟ್ಟು ದಿನ. ಅದನ್ನು ತನ್ನ ಗೀಚು ಚಿತ್ರ(doodle) ದಿಂದ ಗೂಗಲ್ ಗುರುತಿಸಿದೆ. ಆತ ಹುಟ್ಟಿದ್ದು (18-09-1709). ಇಂಗ್ಲಂಡಿನ ಸ್ಟಾಫರ್ಡ್ ಶೈರಿನ ಲಿಚ್ ಫೀಲ್ಡ್ ನಲ್ಲಿ ಅವರ ತಂದೆಯ ಪುಸ್ತಕದಂಗಡಿಯ ಮಹಡಿಯಲ್ಲಿರುವ ಒಂದು ಕೋಣೆಯಲ್ಲಿ ಸಾಮ್ಯುಯೆಲ್ ಹುಟ್ಟಿದ್ದು. ಇದು  ಕಾಕತಾಳೀಯವಲ್ಲವೇ? ಅವೇ ಪುಸ್ತಕಗಳಲ್ಲಿ ಬಳಸುವ ಶಬ್ದಗಳ ಅರ್ಥ, ವ್ಯಾಖ್ಯೆ, ಉಚ್ಚಾರಣೆಗಳ ಬಗ್ಗೆಯೇ ಬರೆದು “ಇಂಗ್ಲೀಷ್ ನ ಆದಿ ನಿಘಂಟುಕಾರ”ರೆಂದು ಹೆಸರುವಾಸಿಯಾದರು ಅವರು.

ಈಗ ಆ ಮನೆ ಮ್ಯೂಜಿಯಮ್ ಆಗಿದೆ. ಅದಕ್ಕೆ ನೀವೂ ಭೇಟಿ ಕೊಡಬಹುದು. ಜಾನ್ಸನ್ ನಿಘಂಟುಕಾರನೆಂದು ಜಗದಾದ್ಯಂತ ಪ್ರಸಿದ್ಧನಾದರೂ ಆಂಗ್ಲ ಸಾಹಿತ್ಯಕ್ಕೆ ಆತನ ಕೊಡುಗೆ ಕವಿತೆ, ವಿಮರ್ಶೆ, ಪ್ರಬಂಧಗಳಲ್ಲದೆ ಕವಿ-ನಾಟಕಕಾರರ ವಿಮರ್ಶಾತ್ಮಕ ಜೀವನ ಚರಿತ್ರೆ ಈ ಎಲ್ಲ ಕ್ಷೇತ್ರಗಳಲ್ಲೂ ಅಪಾರವಾಗಿದೆ. ಆತನ ಕೃತಿಗಳ ಅಭ್ಯಾಸ ಮಾಡದ ನನ್ನಂಥ ಸಾಮಾನ್ಯನಿಗೂ ಈ ಪಟ್ಟಣದಲ್ಲಿ ಇನ್ನೂ ಎಷ್ಟೋ ಆಕರ್ಷಣೆಗಳಿವೆ!

ಈ ಊರಿನ ಆತನ ಜನ್ಮಸ್ಥಳದ ಮನೆಗೆ ಪ್ರವೇಶ ಶುಲ್ಕವಿಲ್ಲ. ಆದರೆ ಆತ A Dictionary of the English Language ನಿಘಂಟನ್ನು ಯಾವ ಮನೆಯಲ್ಲಿ ಕೂತು ಬರೆದು ಮುಗಿಸಿದನೋ ಆ ಲಂಡನ್ ಮನೆಗೆ ಫೀ ಇದೆ.

ಕೆಲವೇ ತಿಂಗಳ ಹಿಂದೆ ನನ್ನ ಶಾಲೆಯ ಸಹಪಾಠಿಯೊಂದಿಗೆ ಲಿಚ್ ಫೀಲ್ಡ್ ಗೆ ಹೋದೆ. ಆ ಮನೆಗೆ ಕೊಟ್ಟ ಭೇಟಿ ಅವಿಸ್ಮರಣೀಯ. ಸಾಧಾರಣ ಪ್ರಮಾಣದ ಪಟ್ಟಣ ಲಿಚ್ ಫೀಲ್ಡ್. ಅದಕ್ಕೆ ’ಸಿಟಿ’ ಉಪಾಧಿ ಬಂದುದು ಅದರ ವೈಭವಯುತ ಕೆಥಿಡ್ರಲ್ ದಿಂದ. ಊರ ಮಧ್ಯದ ಮಾರ್ಕೆಟ್ ಸ್ಕ್ವೇರ್ದಲ್ಲಿ ಎತ್ತರದ ಪೀಠದ ಮೇಲೆ ವಿಚಾರಮಗ್ನನಾಗಿ ವಿರಾಜಮಾನಾದ ಬಿಳಿ ಶಿಲೆಯ ಆತನ ಮೂರ್ತಿಯನ್ನು ತಲೆಯೆತ್ತಿ ನೋಡಬೇಕು. ಅದು ಆತನ ಮನೆಯ ಎದುರಿಗೇ ಇರುವದರಿಂದ ಮನೆಗೆ ಬಂದು ಹೋಗುವವರ ಮೇಲೆ ಆತ ಕಣ್ಣಿಟ್ಟಂತಿದೆ! ಆತನ ಎಡಬದಿಯಲ್ಲಿ ಸೇಂಟ್ ಮೇರಿ ಚರ್ಚಿನ ಹೊರ ಗೋಡೆಯಮೇಲೆ ಮೂರು ಫಲಕಗಳು ಹಿಂದಿನ ಕಾಲದಲ್ಲಿ

ಹುತಾತ್ಮರ ಸ್ಮಾರಕ ಫಲಕ

ಅಗ್ನಿಗಾಹುತಿಯಾದ ಹುತಾತ್ಮರ ಹೆಸರುಗಳನ್ನು ಸಾರುತ್ತವೆ. ಹದಿನೇಳು ಮತ್ತು ಹದಿನೆಂಟನೆಯ ಶತಮಾನಗಳಲ್ಲಿ ಪ್ರಜೆಗಳು ಅನುಭವಿಸಿದ ಭೀಕರ ಶಿಕ್ಷೆಗಳ ವರ್ಣನೆ ಮಾನವನ ಹೇಯ ಕೃತಿಗಳಿಗೆ ಸಾಕ್ಷಿಯಾಗಿವೆ.

ಪುಸ್ತಕಗಳನ್ನು ಮಾರುವದಲ್ಲದೆ ಜಾನ್ಸನ್ನನ ತಂದೆ ಪುಸ್ತಕಗಳ ಮುದ್ರಣ ಮತ್ತು ಪ್ರಕಾಶನ ವೃತ್ತಿಯಲ್ಲೂ ತೊಡಗಿದ್ದನಾದರೂ ಮನೆಯ ಆರ್ಥಿಕ ಸ್ಠಿತಿ ಅಷ್ಟು ಚೆನ್ನಾಗಿರಲಿಲ್ಲ. ಅತ್ಯಂತ ಪ್ರತಿಭಾವಂತನಾಗಿದ್ದ ಆ ಹುಡುಗ ಅಂದರೆ ಸಾಮ್ಯುಯೆಲ್ ಗೆ ಅವನ ಮೂರನೆಯ ವಯಸ್ಸಿನಲ್ಲೇ ಓದಲು ಕಲಿಸಿದ್ದ. ಆಯುಷ್ಯವಿಡೀ ಅನಾರೋಗ್ಯದಿಂದ ಬಳಲಿದ ಸಾಮ್ಯುಯೆಲ್ ನ ಆಕ್ಸ್ಫರ್ಡ್ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲ ಬೇಕಾಯಿತಂತೆ. ಚಿಕ್ಕಂದಿನಲ್ಲೇ ಸ್ಕ್ರೋಫುಲಾ (ಗಂಡುಮಾಲೆ)ಅಂಟಿತು. ಆತನ

ಮುಖದ ಮೇಲೆ, ಗಂಟಲು ಅಲ್ಲದೆ ಕಣ್ಣಿನಲ್ಲೂ ಕಲೆಗಳಾಗಿ ಆತನ ಒಂದು ಕಣ್ಣಿನ ದೃಷ್ಟಿ ಅಷ್ಟಕ್ಕಷ್ಟೇ ಇತ್ತು. ಅದಲ್ಲದೆ ಮುಖದಲ್ಲಿ ತನಗರಿವಿಲ್ಲದೆ ಪದೇ ಪದೇ ಬರುವ ಅಸಹ್ಯ ಅನೈಚ್ಛಿಕ ಸೆಳೆತಗಳು(tics). ಆತನ ಮರಣಾನಂತರ ಆ ಲಕ್ಷಣಗಳನ್ನು ಗುರುತಿಸಿದ ತಜ್ಞರು ಅದು ಟೂರೆಟ್ ಸಿಂಡ್ರೋಮ್ ದ (Tourette syndrome) ಲಕ್ಷಣಗಳು ಎಂದು ವಾದಿಸಿದ್ದಾರೆ. ಈ ’ಮುಖದ ಮೇಲಿನ ’ಅಂಗ ಚೇಷ್ಟೆ’ಯಿಂದಾಗಿ ಆತನಿಗೆ ಕೆಲಸ ದೊರಕಿಸಲು ಕಠಿಣವಾಯಿತು. ಆದರೂ ಆತನ ಹರಿತವಾದ ಬುದ್ಧಿ, ಜ್ಞಾಪಕಶಕ್ತಿ ಮತ್ತು ಓದಿನ ಹರಹು ಆತನ ಬಗ್ಗೆ ಜನರಿಗೆ ಆಶ್ಚರ್ಯ ಮತ್ತು ಗೌರವ ಹುಟ್ಟಿಸುತ್ತಿತ್ತು. ಇಪ್ಪತ್ತೈದನೆಯ ವಯಸ್ಸಿಗೆಲ್ಲ ಇನ್ನೇನೂ ಓದುವದು ಉಳಿದಿರಲಿಲ್ಲವೇನೋ ಅನ್ನುವಂತೆ ಲಭ್ಯವಿದ್ದ ಪುಸ್ತಕಗಳೆಲ್ಲವನ್ನೋದಿ ಅರಗಿಸಿಕೊಡಿದ್ದ. ಆತನ ಬರಹಗಳು ಮಹತ್ತರವಾದವು. ಆದರೆ ಜನರಲ್ಲಿ ಅವನ ಖ್ಯಾತಿ ಬೆಳೆದುದು ಮೇಲೆ ಹೇಳಿದ ಆ ಡಿಕ್ಷನರಿಯಿಂದಲೇ.

1775ರಲ್ಲಿ ಹೊರಬಿದ್ದ ಎರಡು ಸಂಪುಟಗಳ ಆ ಶಬ್ದಕೋಶದಲ್ಲಿ 40,000 ಪದಗಳ ವ್ಯಾಖ್ಯಾನವಲ್ಲದೆ 114,000 ಉಲ್ಲೇಖನಗಳಿವೆ. ಆತನ ಲಿಚ್^ಫೀಲ್ಡ್ ಮನೆಯಲ್ಲಿ ಅದರ ಎರಡು ಪ್ರತಿಗಳಿವೆ. ನಾನು ಶಾಲೆಯಲ್ಲಿದ್ದಾಗ ಅದರ ಬಗ್ಗೆ ಕೇಳಿದ ನನಗೆ ಈ ಅವೃತ್ತಿಯ 12″ಉದ್ದದ ಪುಟಗಳನ್ನು ತಿರುವಿ ಹಾಕಿದಾಗ ಮೈ ನವಿರೆದ್ದಿತು. ಮೂರು ವರ್ಷಗಳಲ್ಲಿ ಪೂರ್ತಿ ಮಾಡುತ್ತೇನೆಂದು ಆರಂಭಿಸಿದ ನಿಘಂಟಿನ ಯೋಜನೆ ಮುಗಿಸಲು ಆತನಿಗೆ ಒಂಬತ್ತು ವರ್ಷಗಳು ಹಿಡಿದವು. ಸಂಭಾವನೆ: 1500ಗಿನಿಗಳು. ನಿಘಂಟುಕಾರನ (ಆರು ಜನರ ಸಹಾಯ ಇದ್ದರೂ ಸಹ) ಏಕಾಂಗಿತನವನ್ನು ’ಡಲ್” (dull) ಶಬ್ದದ ಅರ್ಥವನ್ನು ಕೊಡುವಾಗ ಆತ ವರ್ಣಿಸುತ್ತಾನೆ: ಸಪ್ಪೆ, ಬೇಸರ ತರಿಸುವ; ಉದಾ: ನಿಘಂಟು ಬರೆಯುವದು ನೀರಸ ಕೆಲಸ. ನಿಘಂಟುಕಾರ ಅಂದರೆ? Lexicographer: a writer of dictionaries; a harmless drudge (ಕತ್ತೆ ದುಡಿತದವ).

ನಾಡೋಜ ಜಿ. ವೆಂಕಟಸುಬ್ಬಯ್ಯ (ಜಿ ವಿ) -(ಅಂತರ್ಜಾಲದಿಂದ)

ಆತನ ನಿಘಂಟಿನ ಬಗ್ಗೆ ಬರೆಯುವಾಗ ಕನ್ನಡದ ಇಬ್ಬರು ಪ್ರಸಿದ್ಧ ನಿಘಂಟುಗಾರರ ನೆನಪು ಬರುತ್ತದೆ. ಒಬ್ಬರು ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿಯಿಂದ ಗೌರವಿತರಾದ ಶತಾಯುಷಿ ನಾಡೊಜ ಜಿ ವೆಂಕಟಸುಬ್ಬಯ್ಯನವರು. ಈ ನಿಘಂಟುಬ್ರಹ್ಮನ ಹತ್ತು ಸಾವಿರ ಪುಟಗಳ ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟಿನ ಬಗ್ಗೆ ಅವರೆ ಹೇಳಿದಂತೆ ಅದರ ಕೆಲಸವನ್ನು 50ವರ್ಷಗಳ ಹಿಂದೆಯೇ ಪ್ರಾರಂಭಮಾಡಿದ್ದರೂ ನಂತರ ಸತತವಾಗಿ 25 ವರ್ಷಕ್ಕೂ ಹೆಚ್ಚು ಕಾಲಾವಧಿಯ ದುಡಿತದ ಫಲ. ಅದು ಎಂಟು ಸಂಪುಟಗಳ ಅದ್ವಿತೀಯ ನಿಘಂಟು. ಬೇರಾವ ಭಾರತೀಯ ಭಾಷೆಯಲ್ಲೂ ಇಂಥ ಕೆಲಸ ಆಗಿಲ್ಲವೆಂದು ಈ ”ಶಬ್ದ ಬ್ರಹ್ಮ”ಎಂದೇ ಕರೆಯಲ್ಪಡುವ ”ಜಿ ವಿ’ ಹೆಮ್ಮೆಯಿಂದ ಹೇಳುತ್ತಾರೆ. ಅವರಿಗೆ ಸಹಾಯಕರಾಗಿ 80 ರಿಂದ 90 ಜನ ಶಬ್ದಗಳನ್ನು ಕಲೆಹಾಕಿದರಂತೆ. ಅಕಾರಾದಿಯಾಗಿ ಶಬ್ದಗಳನ್ನು ಹೊಂದಿಸಲೇ 10 ವರ್ಷ ಬೇಕಾಯಿತಂತೆ! ಮೂರು ಶತಮಾನಗಳ ಹಿಂದಿನ ಲಿಚ್ ಫೀಲ್ಡ್ ಗೂ ಇಂದಿನ ಬೆಂಗಳೂರಿಗೂ ಎಷ್ಟೊಂದು ಅಂತರ!

ಧಾರವಾಡದ ಕಿಟಲ್ ಕಾಲೇಜಿನ ಪ್ರಾಂಗಣದಲ್ಲಿ Rev F Kittel ಅವರ ಪ್ರತಿಮೆ

ಇನ್ನೊಬ್ಬ ನಿಘಂಟುಕಾರ ಎಂದರೆ ಭಾರತಕ್ಕೆ ಮಿಶನರಿಯಾಗಿ ಬಂದ ಫರ್ಡಿನಂಡ್ ಕಿಟಲ್. ಈತ ಸಹ ಕನ್ನಡ-ಇಂಗ್ಲಿಷ್ ಶಬ್ದಕೋಶವನ್ನು ಒಂಟಿಯಾಗಿಯೇ ಬರೆದುದ್ದು. 1894 ರಲ್ಲಿ ಪ್ರಕಟವಾದ 1750ಪುಟಗಳ ಆ ಕನ್ನಡ ಕೋಶದಲ್ಲಿ 70,000 ಶಬ್ದಗಳ ಅರ್ಥವಿದೆ. ಜೊತೆಗೆ ಪ್ರತಿಯೊಂದು ಶಬ್ದದದ ಉಚ್ಚಾರ, ಪಂಪ, ನಾಗವರ್ಮ, ಹರಿಹರನಿಂದ ಹಿಡಿದು ಲಕ್ಷ್ಮೀಶ, ಸರ್ವಜ್ಞ, ವರೆಗೆ, ಮತ್ತು ಸಮಕಾಲೀನ ಗ್ರಂಥಗಳಿಂದ ಆಯ್ದ ಉದಾಹರಣೆಗಳಿವೆ. ನಾನು ಚಿಕ್ಕಂದಿನಲ್ಲಿ ಕಂದು ಬಣ್ಣದ ರಿಬೈಂಡ್ ಮಾಡಿದ ಅಪರೂಪದ ಕಾಪಿಯನ್ನು ನನ್ನ ಅಜ್ಜ ಮತ್ತು ತಂದೆ ಯಾವಾಗಲು ರೆಫೆರ್ ಮಾಡುತ್ತಿದ್ದುದನ್ನು ನೋಡಿದ್ದೆ. ಇತ್ತೀಚಿನ ವರೆಗೆ ನನಗೆ ಅದರ ಪ್ರತಿ ಸಿಕ್ಕಿರಲಿಲ್ಲ. ಏಶಿಯಾಟಿಕ್ ಪ್ರೆಸ್ ಅವರ 2001ರಲ್ಲಿ ಅಚ್ಚಾದ ಹತ್ತನೆಯ ಪುನರ್ಮುದ್ರಣದ ಹಸಿರುಬೈಂಡಿನ ಕಾಪಿ ಈಗ ಈ ಲೇಖನ ಬರೆಯುವಾಗ ಸಾಥ್ ಕೊಡುತ್ತಿದೆ! ಧಾರವಾಡದಲ್ಲಿ ಬೆಳೆದ ನನಗೆ ಆ ಊರಿನ ಬಾಸೆಲ್ ಮಿಷನ್ ಸಂಸ್ಥೆಗಳಲ್ಲಿ (ಈಗ ಆತನ ಹೆಸರಿನ ಕಿಟಲ್ ಕಾಲೇಜು ಇದೆ) ಕೆಲಸ ಮಾಡುತ್ತ ಬರೆದ ಆ ನಿಘಂಟಿನ ಮೇಲೆ ಬಹಳಷ್ಟು ಮಮತೆ. ಆತ ಧಾರವಾಡದಲ್ಲಿ ಪ್ರತಿ ಮಂಗಳವಾರದ ಸಂತೆಗೆ ಹೋಗಿ ಹಳ್ಳಿಯವರು ಆಡುತ್ತಿದ್ದ ಮಾತನ್ನು ಕೇಳಿ ಶಬ್ದಗಳು, ಗಾದೆಗಳನ್ನು ಸಂಗ್ರಹಿಸುತ್ತಿದ್ದ ಎಂದು ಆ ಶಾಲೆಯಲ್ಲಿ ಶಿಕ್ಷಕರಾಗಿದ್ದ ವರದರಾಜ ಹುಯಿಲಗೋಳ ಮಾಸ್ತರರು ದಾಖಲಿಸಿದ್ದಾರೆ. ಹೇಗೆ ಜಾನ್ಸನ್ನನದು ಇಂಗ್ಲಿಷ್ ಭಾಷೆಯ ಪ್ರಥಮ ಡಿಕ್ಷನರಿ ಅಲ್ಲವೋ ಹಾಗೆಯೇ ಕಿಟ್ಟಲ್ ನ ”Kannada English Dictionary” ಕನ್ನಡದ ಮೊದಲ ಶಬ್ದ ಕೋಶವಲ್ಲ. 10ನೆಯ ಶತಮಾನದ ರನ್ನನ ರನ್ನಕಾಂಡ ಮೊದಲನೆಯದು ಎಂದು ಹೇಳಲಾಗಿದೆ. ಆದರೆ ಇದರಲ್ಲಿಯಷ್ಟು ಪಂಪನ ಆದಿ ಪುರಾಣದಿಂದ ಹಿಡಿದು, ಶಬ್ದಮಣಿದರ್ಪಣ,ಶಬ್ದಮಣಿದರ್ಪಣ,ಕುಮಾರ ವ್ಯಾಸ ’ಭಾರತ’ ಇತ್ಯಾದಿಗಳಿಂದ ಉಲ್ಲೇಖಿಸಿದಷ್ಟು ಶಬ್ದಗಳು, ಸಂಸ್ಕೃತ ಶಬ್ದಗಳ ತತ್ಸಮ-ತದ್ಭವಗಳು ಮತ್ತು ಗಾದೆಗಳ ಸಂಗ್ರಹವನ್ನುಒಂದು

 

ಶತಮಾನದ ವರೆಗೆ ಬೇರಾವುದೂ ನಿಘಂಟು ಕಿಟಲ್ ಡಿಕ್ಶನರಿಯನ್ನು ಮೀರಿಸಿಲ್ಲ ಎನ್ನಬಹುದು. ಅದರಲ್ಲಿ 1740ಪುಟಗಳ ಈ ಪುಸ್ತಕವನ್ನು ಹೇಗೆ ಬರೆದೆ ಮತ್ತು ಹೇಗೆ ಉಪಯೋಗಿಸಬೇಕೆಂದು ಸೂಚಿಸುವ ಮುನ್ನುಡಿಯೇ 45 ಪುಟಗಳಷ್ಟು ಉದ್ದ! ಕನ್ನಡ ನಾಡಿನಲ್ಲಿ ಸಿಗುವ ಹೂ-ಹಣ್ಣು ಹಂಪಲು, ಮತ್ತು ಗಿಡಗಳ ಸಸ್ಯಶಾಸ್ತ್ರದ ಪ್ರಭೇದದ ಹೆಸರುಗಳನ್ನು ( Linnaeus classification – botanical names) ಸಹ ಕೊಟ್ಟಿದೆ ಅದರಲ್ಲಿ ಅಂದ ಮೇಲೆ ಆತನ ಶ್ರದ್ದೆ, ಅಭ್ಯಾಸ ಮತ್ತು ಪರಿಶ್ರಮಕ್ಕೆ ಎಣೆಯೇ ಇಲ್ಲ. ಮುನ್ನುಡಿಯ ಕೊನೆಗೆ ತನ್ನ ಪ್ರಯತ್ನದಲ್ಲಿ ಕುಂದು ಕೊರತೆಗಳ ಅರಿವು ತನಗಿದೆ ಎಂದು ಹೇಳುವಷ್ಟು ನಮ್ರತೆಯಿತ್ತು ಆತನಲ್ಲಿ!

ಈಗ ಮತ್ತೆ ಬರುವಾ ಲಿಚ್ ಫೀಲ್ಡಿಗೆ. ಜಾನ್ಸನ್ನನ lexicon (ನಿಘಂಟು) ಆತನನ್ನು ಶ್ರೀಮಂತನಾಗಿಯೇನೂ ಮಾಡಲಿಲ್ಲ. ಅಲ್ಲಿಯವರೆಗಿನ ಸಾಹಿತಿಗಳಾದ ಶೇಕ್ಸ್ ಪಿಯರ್, ಮಿಲ್ಟನ್, ಡ್ರೈಡನ್ ಅಂಥ ಮಹಾನ್ ಬರಹಗಾರರ ಕೃತಿಗಳಿಂದ ಉದಾಹರಣೆಗಳನ್ನು ವಿಪುಲವಾಗಿ ಬಳಸಿದ ಈ ಗ್ರಂಥ ಮುಂದಿನ ನಿಘಂಟುಕಾರರಿಗೆ ಮಾದರಿಯಾಗಿತು. ಈ ಕಾರ್ಯವನ್ನು ನಿಯೋಜಿಸಿದ ಪುಸ್ತಕ ವ್ಯಾಪಾರಿಗಳಿಗೆ ಇದು ಪ್ರಕಟವಾದ ಮೇಲೆ ಆಗಿನ ಆಂಗ್ಲ ಭಾಷೆಯನ್ನು ಸ್ಥಾಯಿ(fix)ಯಾಗಿಸುವ, ಅಂದರೆ ವ್ಯವಸ್ಥಿತವಾಗಿ ವರೆದಿಡುವ ಉದ್ದೇಶವಿತ್ತು. ಜಾನ್ಸನ್ ಅದರ ಮುನ್ನುಡಿಯಲ್ಲಿ ಬರೆದಂತೆ ಭಾಷೆ ಚಲನಶೀಲವಲ್ಲವೆ?. ಜಿ ವಿ ಅವರೂ ಇತ್ತೀಚೆಗೆ ಅದನ್ನೇ ಹೇಳಲಿಲ್ಲವೆ? ಭಾಷೆ ಒಂದು ಸಾಗರ; ಹೊಸ ಹೊಸ ಪದಗಳು ಸೇರ್ಪಡೆಯಾಗುತ್ತಿರುವಾಗ ಅದನ್ನು ಕಟ್ಟಿ ಹಾಕಲು ಸಾಧ್ಯವೆ? ನಿಘಂಟು ಪ್ರಕಟವಾದ ಕೂಡಲೆ ಅದನ್ನು ಜರೆದ ಪಂಡಿತರಿದ್ದರು. ಯಾಕಂದರೆ ಆತನ ಡೆಫೆನಿಷನ್ ನಲ್ಲಿ ಸರಳತೆ ಇರದೆ ಒಮ್ಮೊಮ್ಮೆ ಸೊಕ್ಕು, ಕೊಂಕು ಮತ್ತು ವ್ಯಂಗ ಇದ್ದಂತೆ ಕಾಣುತ್ತಿತ್ತು. (ಉದಾ: Oats: a grain which in England is generally given to a horse, but in Scotland it supports the people). ಆದರೂ ಸಾಮಾನ್ಯ ಜನ ಅದನ್ನು ಉತ್ಸಾಹದಿಂದ ಸ್ವೀಕರಿಸಿದರು. ಆಂಗ್ಲ ಸಾಮ್ರಾಜ್ಯದ ಸಾಹಿತ್ಯ ಲೋಕದಲ್ಲಿ ಜನಮಾನಸದ ಮೇಲೆ ತನ್ನ ಗಾಢ ಅಚ್ಚೊತ್ತಿತು; ವಿಶೇಷ ಪ್ರಭಾವ ಬೀರಿತು. ಅದು ಪ್ರಕಟವಾದ ಕೆಲ ಸಮಯದ ನಂತರ ಸ್ಕಾಟ್ಲಂಡಿನ ಜೇಮ್ಸ್ ಬಾಸ್ವೆಲ್ ಆತನನ್ನು ಹುಡುಕಿಕೊಂಡು ಲಂಡನ್ನಿಗೆ ಬಂದು ಆತನ ಸಖ್ಯ ಬೆಳೆಸಿದ. ಆತ ಮಾತಾಡಿದ್ದು, ಆತನ ಬಾಯಿಂದ ಬಂದ ಒಂದೊಂದು ನುಡಿಮುತ್ತು, ಜಾಣ್ನುಡಿ, ವ್ಯಂಗೋಕ್ತಿ ಎಲ್ಲವನ್ನು ಬರೆದಿಟ್ಟುಕೊಂಡು “Life of Samuel Jonson” ಎಂಬ ಆತನ ಜೀವನ ಚರಿತ್ರೆಯನ್ನು ಬರೆದು ಜಾನ್ಸನ್ನನ ಕೀರ್ತಿಯನ್ನು ಇನ್ನೂ ಹರಡಿದ. ಅದರಲ್ಲಿ ಆತ ದಾಖಲಿಸಿದ ಅವರ ಮೊದಲ ಭೇಟಿಯಲ್ಲಿ ನಡೆದ ಸಂಭಾಷಣೆಯನ್ನು ಯಾವ ಇಂಗ್ಲಿಷ್ ಓದುಗನೂ ಮರೆತಿರಲಿಕ್ಕಿಲ್ಲ:

ಬಾಸ್ವೆಲ್: “Mr. Johnson, I do indeed come from Scotland, but I cannot help it.

” ಜಾನ್ಸನ್: “That, Sir, I find, is what a very great many of your countrymen cannot help.”

ಜಾನ್ಸನ್ ನಿಘಂಟಿನ ಒಂದು ಪುಟ

ಆದರೂ ಅವರಿಬ್ಬರ ಗೆಳೆತನ ಕೊನೆಯ ವರೆಗೂ ಗಾಢವಾಗಿತ್ತು. ವಿಪರ್ಯಾಸವೆಂದರೆ ಆ ನಿಘಂಟಿನ ಕೆಲಸಕ್ಕೆ ಸಹಾಯ ಮಾಡಿದ ಐದಾರು ಜನರಲ್ಲಿ ಸ್ಕಾಟ್ಲಂಡಿನವರೆ ಹೆಚ್ಚಾಗಿದ್ದರು! ಆತನ ವ್ಯಂಗ ಸ್ಕಾಟ್ ಜನಕ್ಕಷ್ಟೇ ಸೀಮಿತವಾಗಿರಲಿಲ್ಲ. ಫ್ರೆಂಚರೂ ಆತನ ಚಾಟೆಯೇಟಿನಿಂದ ಬಚಾವಾಗಿರಲಿಲ್ಲ. ಆ ನಿಘಂಟಿನಲ್ಲಿಯ ಒಂದು ಉದಾಹರಣೆಗಳನ್ನು ನೋಡುವಾ.

“Monsieur: a term of reproach for a Frenchman.” ಇನ್ನೊಂದು ಹೀಗೆ: Trolmydames: of this word I know not the meaning.

ಫ್ರೆಂಚ್ ಮೂಲದ ಈ ಪದದಿಂದ ಅವರಿಗೆ ಕೀಟಲೆ ಕೊಟ್ಟನೋ, ಅಥವಾ ಅದೊಂದು ಆತನ ಕೊಂಕು ನುಡಿಯೋ?

ಕೊನೆಗೆ 53ನೆಯ ವಯಸ್ಸಿನಲ್ಲಿ ಎರಡನೆಯ ಜಾರ್ಜ ಮಹಾರಾಜನಿಂದ ಪೆನ್ಶನ್ ಸಿಕ್ಕ ಮೇಲೆ ಆತನ ಆರ್ಥಿಕ ಪರಿಸ್ಠಿತಿ ಸ್ವಲ್ಪ ಸುಧಾರಿಸಿ ಅವನ ಜೀವನಕ್ಕೆ ನೆಮ್ಮದಿ ಬಂತು. ಅದನ್ನು ಸ್ವೀಕರಿಸುವಾಗ ತನ್ನ ನಿಘಂಟಿನಲ್ಲಿ ತಾನೆ ಬರೆದ ವ್ಯಾಖ್ಯಾನದ ನೆನಪು ಬಂತೋ ಇಲ್ಲವೋ! Pension: An allowance made to any one without an equivalent. In England it is generally understood to mean pay given to a state hireling for treason to his country.”(ಪಿಂಚಣಿ: ಇಂಗ್ಲಂಡಿನಲ್ಲಿ ದೇಶದ್ರೋಹಿಗೆ ಕೊಟ್ಟ ಸಂಬಳ!). ಆದರೆ ಆತನ ಜನಪ್ರಿಯತೆ ಏನೂ ಕಡಿಮೆಯಾಗಲಿಲ್ಲ.

ನಾವು ಆತ ಹುಟ್ಟಿದ ಮನೆಗೆ ಭೇಟಿ ಕೊಟ್ಟು ಹೊರಬರುವಾಗ ಮೊದಲ ಕೋಣೆಯಲ್ಲಿಯ ಒಂದು ಹ್ಯಾಂಡ್ ಬಿಲ್ಲು ಕಂಡಿತು. (ಚಿತ್ರ ನೋಡಿರಿ). ಅದು 1771ರಲ್ಲಿ ಮುದ್ರಿತವಾದ ಪ್ರಕಟಣೆ, ಹೀಗಿತ್ತು:

ಬರ್ಮಿಂಗಂ ಗೆಜೆಟ್ ವೃತ್ತ ಪತ್ರಿಕೆಯಲ್ಲಿ ಹರಾಜಿನ ಜಾಹಿರಾತು. ಕೃಪೆ: ಲಿಚ್ಫೀಲ್ಡ್ ಮರ್ಕ್ಯುರಿ

ಸಾರ್ವಜನಿಕ ಹರಾಜು: ಆಫ್ರಿಕದಿಂದ ಬಂದ ಒಬ್ಬ ಹತ್ತು ವರ್ಷದ ನೀಗ್ರೋ ಹುಡುಗನನ್ನು ಈ ದಿನ ಹರಾಜು ಮಾಡಲಾಗುವದು.” ಅದನ್ನೋದಿದಾಗ ಆಗ ಇನ್ನೂ ಗುಲಾಮಗಿರಿ ಮುಗಿದಿರಲಿಲ್ಲವೆಂದು ತಿಳಿದು ಮೈಜುಮ್ಮೆಂದಿತು. ಮುಂದೆ 1833 ರಲ್ಲಿ ಗುಲಾಮಗಿರಿಯನ್ನು ರದ್ದುಗೊಳಿಸುವ ಕಾಯಿದೆ ಬಂದ ನಂತರವೇ ಪಶ್ಚಿಮ ದೇಶಗಳಲ್ಲಿ ಅದರ ನಿರ್ಮೂಲನೆ ಪ್ರಾರಂಭವಾಯಿತು.

ಜೋಶುವಾ ರೆನಾಲ್ ಡ್ಸ್ ನ ತೈಲ ಚಿತ್ರ CC

1752 ರಲ್ಲಿ ಸಾಮ್ಯುಯೆಲ್ ಜಾನ್ಸನ್ ಬಳಿ ಫ್ರಾನ್ಸಿಸ್ ಬಾರ್ಬರ್ ಎನ್ನುವ ಹತ್ತು ವರ್ಷದ ಗುಲಾಮಗಿರಿಯಿಂದ ಮುಕ್ತನಾದ ಜಮೈಕನ್ ಕರಿಯ ಹುಡುಗ (ಬೇರೆಯವ) ಲಂಡನ್ನಿಗೆ ಕೆಲಸಕ್ಕೆ ಬಂದು ಸೇರಿ ಕೊಂಡ. ಅದಕ್ಕೂ ಮೊದಲು ಆ ಹುಡುಗ ಚಿಕ್ಕವನಿದ್ದಾಗ ಒಬ್ಬ ಪ್ಲಾಂಟೇಷನ್ ಮಾಲಕ ಜಮೈಕಾದಿಂದ ವಾಪಸ್ ಇಂಗ್ಲಂಡಿಗೆ ಬರುವಾಗ ಕರೆತಂದು ಬೋರ್ಡೀಂಗ್ ಶಾಲೆಯಲ್ಲಿ ಕೆಲ ವರ್ಷಶಿಕ್ಷಣ ಕೊಡಿಸಿದ್ದ. ಜಾನ್ಸನ್ ಅವನನ್ನು ಚೆನ್ನಾಗಿಯೇ ನೋಡಿಕೊಂಡ. ತಾನು ಸಹ ತನ್ನ ರೂಪ, ಅಂಗ ವಿಕಾರಗಳಿಂದ ಜನರಿಂದ ಅನುಭವಿಸಿದ ಪ್ರತಿಕ್ರಿಯೆಗಳಿಂದಾಗಿಯೋ ಏನೋ ಆತನಲ್ಲಿ ಅನುಕಂಪವಿತ್ತು. ಎಳೆಯನ ಮುಂದಿನ ಶಿಕ್ಷಣದ ವ್ಯವಸ್ಥೆ ಮಾಡಿದ. ಅಷ್ಟೇ ಅಲ್ಲ, ನಂತರ ಲಂಡನ್ನಿನಲ್ಲಿ 1784ರಲ್ಲಿ ತೀರಿಕೊಳ್ಳುವ ಮೊದಲು ಜಾನ್ಸನ್ ತನ್ನ ಉಯಿಲಿನಲ್ಲಿ ಅವನಿಗೆ 70 ಪೌಂಡುಗಳ (ಅದು ಆಗ ದೊಡ್ಡ ಮೊತ್ತ) ದೇಣಿಗೆ ಕೊಟ್ಟ. ಆತ ಮುಂದೆ ಲಂಡನ್ ಬಿಟ್ಟು ಲಿಚ್ ಫೀಲ್ಡಿಗೆ ತೆರಳಬೇಕೆಂದು ಬರೆದಿದ್ದ. ಫ್ರಾನ್ಸಿಸ್ ಹಾಗೆಯೇ ಮಾಡಿ ಆ ಊರಿನ ಪಕ್ಕದಲ್ಲಿ ಒಂದು ಶಾಲೆ ಪ್ರಾರಂಭಿಸಿದನಂತೆ. ಆತನ ವಂಶಜರು ಇನ್ನೂ ಅಲ್ಲೇ ಸುತ್ತಮುತ್ತ ಇದ್ದಾರೆಂದು ವದಂತಿ. ಜಾನ್ಸನ್ನಿನ ಮನೆಯಲ್ಲಿ ಜೋಶುವಾ ರೆನಾಲ್ಡ್ ಸ್ ಎಂಬ ಪ್ರಸಿದ್ಧ ವರ್ಣಚಿತ್ರಕಾರ ಪೇಂಟ್ ಮಾಡಿದ ಒಬ್ಬ ಕರಿಯ ಮನುಷ್ಯನ ಚಿತ್ರವಿದೆ. ಆತ ಫ್ರಾನ್ಸಿಸ್ ಬಾರ್ಬರ್ ಎಂದು ಕೆಲವರು ತಿಳಿಯುತ್ತಾರೆ.

ಎರಾಸ್ಮಸ್ ಡಾರ್ವಿನ್ನನ ಮನೆಯಿಂದ ಕೆಥಿಡ್ರಲ್ ನ ಒಂದು ನೋಟ

ಈ ಊರಲ್ಲಿ ಭವ್ಯವಾದ ಲಿಚ್ಫೀಲ್ಡ್ ಕೆಥಿಡ್ರಲ್, ’ಆದಿ ನಿಘಂಟುಕಾರ ಜಾನ್ಸನ್’ ಹುಟ್ಟಿದ ಮನೆ ಅಲ್ಲದೆ ಇನ್ನು ಕೆಲವು ಟೂರಿಸ್ಟ್ ಆಕರ್ಷಣೆಗಳಿವೆ. ನೀವು ಹೋದಾಗ ಚಾರ್ಲ್ಸ್ ಡಾರ್ವಿನ್ನನ ಅಜ್ಜ ಎರಾಸ್ಮಸ್ ಡಾರ್ವಿನ್ನನ ಮನೆ ಮತ್ತು ಅದಕ್ಕೆ ಹತ್ತಿದ ಔಷಧಿ ಮೂಲಿಕೆಗಳ ತೋಟ, ಆತನ ಅವಿಷ್ಕರಣಗಳು, ಸಂಶೋಧನೆಯ ಉಪಕರಣಗಳು ಇವನ್ನು ನೋಡಲು ಮರೆಯದಿರಿ. ಆತ ಪ್ರಸಿದ್ಧ ವೈದ್ಯನಲ್ಲದೆ, ಸಸ್ಯಶಾಸ್ತ್ರಜ್ಞ, ವಿಜ್ಞಾನಿ, ಕವಿ, ಶಿಕ್ಷಣ ತಜ್ಞ ಎಲ್ಲವೂ ಆಗಿದ್ದ. ಆತನಿಂದಲೇ ಅವನ ಸಾನ್ನಿಧ್ಯದಿಂದಲೇ ಮೊಮ್ಮಗ ಚಾರ್ಲ್ಸ್ ಡಾರ್ವಿನ್ನನಲ್ಲಿ ವಿಕಾಸವಾದದ ಬೀಜ ಬಿತ್ತಿರಬೇಕೆಂದು ಪ್ರತೀತಿ.

”ತತ್ವಜ್ಞಾನಿಗಳ ತವರೂರೆಂದು” ಕರೆಯಲ್ಪಟ್ಟ ಲಿಚ್ ಫೀಲ್ಡ್ ಸಿಟಿ ನಿಸ್ಸಂಶಯವಾಗಿಯೂ ಇಂಗ್ಲಂಡಿನ ಒಂದು ಪ್ರೇಕ್ಷಣೀಯ ಸ್ಥಳವೆನ್ನ ಬಹುದು.

(ವಿವಿಧ ಆಧಾರಗಳಿಂದ)

      

ಲೇಖನ ಮತ್ತು ಉಳಿದ ಚಿತ್ರಗಳು: ಶ್ರೀವತ್ಸ ದೇಸಾಯಿ