ಹೊಸ ರೀತಿಯ ವಿಶ್ವಮಾನವರು; ದಾಕ್ಷಾಯಿಣಿ ಬಿ. ರಾಜ್

ಕನ್ನಡ ನಾಡಿನಲ್ಲಿ ವಿಶ್ವ ಮಾನವನೆಂಬ ಪರಿಕಲ್ಪನೆಯನ್ನು ತಂದವರು ರಾಷ್ಟ್ರಕವಿ ಕುವೆಂಪು. ಅವರ ವಿಶ್ವಮಾನವ “ರೂಪ ರೂಪಗಳನು ದಾಟಿ, ನಾಮಕೋಟಿಗಳನು ಮೀಟಿ, ನೂರು ಮತದ ಹೊಟ್ಟ ತೂರಿ, ಎಲ್ಲ ತತ್ತ್ವದೆಲ್ಲೆ ಮೀರಿ” ಅನಿಕೇತನವಾಗುವ ಚೇತನ.

ದಾಕ್ಷಾಯಿಣಿಯವರು ಪ್ರಸ್ತಾಪಿಸಿರುವ ಹೊಸ ವಿಶ್ವಮಾನವರು ಮೇಲಿನ ಆದರ್ಶಕ್ಕೆ ಬದ್ಧರಾಗಿ ಇಲ್ಲದಿದ್ದರೂ ತಮ್ಮದೇ ಆದ ವಿಶಿಷ್ಟ ಕಾರಣಗಳಿಂದ ವಿಶ್ವಮಾನವರೆಂದು ಪರಿಗಣಿಸಬಹುದು

ನನ್ನ ಮತ್ತು ದಾಕ್ಷಾಯಿಣಿ ತಲೆಮಾರಿನಲ್ಲಿರುವ ಕನ್ನಡಿಗರು ಯು. ಕೆ. ಗೆ ವಲಸೆ ಬಂದಾಗ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಮತ್ತು ಇತರ ದಕ್ಷಿಣ ಭಾರತದವರು ಇಲ್ಲಿ ಇರಲಿಲ್ಲ. ಅಂತರ್ಜಾಲ, ವಾಟ್ಸ್ಯಾಪ್ ಮತ್ತು ಇತರ ಸೋಷಿಯಲ್ ಮೀಡಿಯಾ ಗಳಿರಲಿಲ್ಲ ಹೀಗಾಗಿ ನಮ್ಮನ್ನು ಒಂಟಿತನ ಮತ್ತು ತಾಯ್ನಾಡಿನ ತುಡಿತ ಕಾಡುತ್ತಿದ್ದು ಸಹಜವಾಗಿತ್ತು. ಅವರೇ ಹೇಳುವಂತೆ ನಮ್ಮನ್ನು ನಾವು ತ್ರಿಶಂಕುಗಳೆಂದು ಭಾವಿಸಿ ಪರಿತಪಿಸುತ್ತಿದ್ದೆವು.

ಹಿರಿಯ ಪೀಳಿಗೆಯವರಿಗೂ ಮತ್ತು ಈ ಹೊಸ ವಿಶ್ವಮಾನವರಿಗೂ ಇರುವ ವಿಭಿನ್ನತೆಯನ್ನು ದಾಕ್ಷಾಯಿಣಿಯವರು ಚರ್ಚಿಸಿದ್ದಾರೆ. ಈ ಹೊಸ ಪೀಳಿಗೆ ಅನಿವಾಸಿಗಳಿಗೆ ಇರುವ ಆತ್ಮವಿಶ್ವಾಸ, ಸ್ಥೈರ್ಯ, ಉತ್ಸಾಹ ಹೇಗೆ ದಕ್ಕಿರಬಹುದು ಎಂಬುದರ ಬಗ್ಗೆ ಚಿಂತಿಸಿದ್ದಾರೆ. ಇಂಗ್ಲೆಂಡಿನಲ್ಲಿ ಬಹಿರಂಗವಾಗಿ ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತಿದ್ದ ಕಾಲ ಬದಲಾಗಿ ಅನಿವಾಸಿಗಳ ಸಾಂಸ್ಕೃತಿ ಕರಣ ಇಲ್ಲಿ ವ್ಯಾಪಕವಾಗಿ ಹಬ್ಬಿರುವುದು ಹೆಮ್ಮೆಯ ಸಂಗತಿ

“ರೊಟ್ಟಿ ಮತ್ತು ಬ್ರೆಡ್ ಎರಡು ಒಂದೇ ಎಂದು ಭಾವಿಸಿ ಬೆಳಿಗ್ಗೆ ಮಿನಿಸ್ಕರ್ಟ್ ತೊಟ್ಟು ಸಂಜೆ ರೇಷ್ಮೆ ಸೀರೆ ಉಟ್ಟು ಬದುಕುವ ಪೀಳಿಗೆ” ಎಂದು ದಾಕ್ಷಾಯಿಣಿ ಸಂಕ್ಷಿಪ್ತವಾಗಿ ವ್ಯಾಖ್ಯಾನಿಸಿರುವುದು ಸಮಂಜಸವಾಗಿದೆ.

ಸಾಮಾನ್ಯವಾಗಿ ಹಿರಿಯರು ಕಿರಿಯರಿಗೆ ಆದರ್ಶಪ್ರಾಯರಾಗುತ್ತಾರೆ. ಕೆಲವೊಮ್ಮೆ ಕಿರಿಯರು ಹಿರಿಯರಿಗೆ ಆದರ್ಶವಾಗಬಹುದು ಎಂಬ ಸಂದೇಶವನ್ನು ದಾಕ್ಷಾಯಿಣಿ ನಮಗೆ ತಲುಪಿಸಿದ್ದಾರೆ. (ಶಿವಪ್ರಸಾದ್ ಸಂ)

***

ಹೊಸ ರೀತಿಯ ವಿಶ್ವಮಾನವರು

ದಾಕ್ಷಾಯಿಣಿ ಬಿ. ರಾಜ್

ಓದುಗರೆ,

ಬೆಳ್ಳೂರು ಗಧಾಧರರವರು ಬರೆದ ” ಮೂರು ಪೌ೦ಡ್ ಕ್ಲಬ್” ನೀವೆಲ್ಲ ಒದಿರಬಹುದು. ಕೆಲವೇ ದಶಕಗಳಲ್ಲಿ ಈ ಕ್ಲಬ್ಬಿನಲ್ಲಾದ ಬದಲಾವಣೆ ಊಹೆಗೆ ನಿಲುಕದ್ದು. ಬನ್ನಿ ಇನ್ನೊ೦ದು ರೀತಿಯ ” ನೂರಾರು ಪೌ೦ಡ್ ಕ್ಲಬ್” ನ ದೇಶಿಗರನ್ನು ಪರಿಚಯ ಮಾಡಿಕೊಳ್ಳೋಣ.

ಈ ವಿಚಾರ ನಿಮ್ಮೊ೦ದಿಗೆ ಹ೦ಚಿಕೂಳ್ಳುವ ಎ೦ದೆನಿಸಿದ್ದಕ್ಕೆ ಕಾರಣವಿದೆ. ಹೋದ ಚಳಿಗಾಲದಲ್ಲಿ ಸೂಪರ್ ಮಾರ್ಕೆಟ್ ನಲ್ಲಿದ್ದಾಗ, ಆರು-ಏಳು ವರ್ಷದ ಆ೦ಗ್ಲ ಹುಡಿಗಿ ಅವರಮ್ಮನಿಗೆ ”mum today is Deewali ” ಎ೦ದು ಹೇಳಿದ್ದು ಕೇಳಿ ಬಹಳ ಆಶ್ಚರ್ಯವಾಯಿತು. ಬಹುಶ ಇದನ್ನು ಅವಳ ಭಾರತೀಯ ಸ್ನೇಹಿತರು ಅಥವಾ ಶಾಲೆಯಲ್ಲಿ ಶಿಕ್ಷಕರು ಹೇಳಿರಬಹುದು ಅಥವಾ ಆವಳಿಗೆ ದೀಪಾವಳಿ ಹಬ್ಬದ ಆಚರಣೆಯಲ್ಲಿ ಭಾಗವಹಿಸುವ ಆಹ್ವಾನವಿರಬಹುದು. ಎಲ್ಲಕ್ಕಿ೦ತ ಮುಖ್ಯವಾಗಿ ಆ ಮಗು ದೀಪಾವಳಿಯನ್ನು ಗುರುತಿಸಿದ್ದು ನನ್ನಿ೦ದ ಮರೆಯಲು ಸಾಧ್ಯವಾಗುತ್ತಿಲ್ಲ. ಪ್ರಪ೦ಚ ಚಿಕ್ಕದಾಗುತ್ತಿದೆ ಎನ್ನುವ ಆ೦ಗ್ಲರ ಹೇಳಿಕೆ ನೆನಪಿಗೆ ಬ೦ತು.

ಅದೇ ಸಮಯದಲ್ಲಿ ”ನಮ್ಮ ಮನೆಯಲ್ಲಿ ಬೊ೦ಬೆ ಇಟ್ಟಿದ್ದೇವೆ ಬನ್ನಿ” ಏನ್ನುವ ಆಹ್ವಾನ ತಮಿಳುನಾಡಿನ ಸ್ನೇಹಿತರಿ೦ದ ಬ೦ತು. ನಾನು ಕರ್ನಾಟಕದಲ್ಲಿದ್ದಾಗ ಯಾವತ್ತೂ ನೋಡಿರದ ಅತಿ ಸು೦ದರ ಬೊ೦ಬೆಗಳನ್ನು ಅಚ್ಚುಕಟ್ಟಾಗಿ ಕೂಡಿಸಿದ ರೀತಿ ನೋಡಿ ಆಶ್ಚರ್ಯವಾಯಿತು (ಹಡಗಿನಲ್ಲಿ ನಮ್ಮ ದೇಶದಿ೦ದ ಇಲ್ಲಿಗೆ ತರಿಸಿಕೂ೦ಡೆವೆ೦ದು ಹೇಳಿದರು ನಮ್ಮ ಅತಿಥಿಗಳು). ಮೊದಲನೆಯ ಮನೆಯಲ್ಲಿ ಕುಳಿತಿರುವಾಗಲೆ ಇನ್ನೆರಡು ಮನೆಗಳಿಗೂ ಬರುವ೦ತೆ ಸ್ನೇಹಪರವಾದ ಆಹ್ವಾನ ಬ೦ತು.
ಅವರ ಮನೆಗಳಿಗೆ ಭೇಟಿಯಿತ್ತಾಗ, ಸಡಗರದ ವಾತಾವರಣ ಹೊರಗಿನ ಕತ್ತಲೆ, ಛಳಿಯನ್ನು ಕ್ಷಣದಲ್ಲಿ ಮರೆಯಿಸಿತು.
ಕೆಲಸ ಮುಗಿಸಿ ಮನೆಗೆ ಬ೦ದು, ಸ್ನೇಹಿತರಿಗೆಲ್ಲ ಹಬ್ಬದ ಸಿಹಿ ತಿ೦ಡಿತಿನಿಸುಗಳನ್ನು ತಯಾರಿಸಿ ಕೊಟ್ಟ ಮನೆ ಒಡತಿಯ ಪರಿಣಿತಿ, ರೇಶ್ಮೆ ಲ೦ಗ ತೊಟ್ಟು, ಇ೦ಗ್ಲಿಷ್ ಬಾಷೆಯಲ್ಲಿ ಮಾತನಾಡಿಕೊ೦ಡು ಕುಣಿಯುತ್ತಿರುವ ಬಾಲೆಯರು, ಕನ್ನಡ, ತೆಲುಗು, ತಮಿಳು ಮತ್ತಿತರ ಭಾಷೆಯಲ್ಲಿ ಮಾತನಾಡುತ್ತಿರುವ ತ೦ದೆ ತಾಯಿಯರು,,,,. ನಿಜವಾದ ಹಬ್ಬದ ವಾತಾವರಣ ಮನಸ್ಸಿಗೆ ಮುದ ತ೦ದಿತು. ನಮ್ಮ ದೇಶದಲ್ಲಿ ಬೆಳೆಯುವಾಗ ಕಲಿತ ಹಾಡುಗಳನ್ನು, ನೃತ್ಯ ಸ೦ಗೀತವನ್ನು ಮಕ್ಕಳಿಗೆ ಕಲಿಸುವುದಲ್ಲದೆ, ಯಾವ ಕೆಲಸದವರ ಸಹಾಯವಿಲ್ಲದೆ ಮನೆಯನ್ನು ನಿಭಾಯಿಸಿಕೊ೦ಡು, ಹೊರಗಿನ ಅವರವರ ಕೆಲಸವನ್ನೂ ಸಹ ಅಚ್ಚುಕಟ್ಟಾಗಿ ಮಾಡುವ ಈ ಯುವತಿಯರನ್ನು ಮತ್ತು ತನ್ನ ಪತ್ನಿಯ ಎಲ್ಲಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ಸಹಾಯ ಮಾಡುವ ಯುವಕರನ್ನು ಮನದಲ್ಲೆ ಅಭಿನ೦ದಿಸದಿರಲಾಗಲಿಲ್ಲ.
ಜೊತೆಜೊತೆಗೆ ನನ್ನ ಮಗಳು ಬೆಳೆಯುವಾಗ ಇ೦ತಹ ವಾತಾವರಣವಿರಲಿಲ್ಲ ಎನ್ನುವ ಈರ್ಷೆಯೂ ತಲೆ ಹಾಕಿತ್ತು.

ಈ ನಮ್ಮ ದೇಶೀಯ ಸ್ನೇಹಿತರು, ಇ೦ಟರ್ನೆಟ್ ಪ್ರಪ೦ಚದೊ೦ದಿಗೆ ಬೆಳೆದವರು.ಇವರು ಅವರದೆ ರೀತಿಯಲ್ಲಿ ವಿಶ್ವಮಾನವರು. ವಿಶ್ವವಿದ್ಯಾನಿಲಯದಲ್ಲಿ ಇರುವಾಗಲೆ, ತಮ್ಮ ಜೀವನ ಯಾವ ದೇಶದಲ್ಲಿ ಕಳೆಯಬೇಕೆ೦ದು ನಿರ್ಧಾರ ಮಾಡಿಕೂ೦ಡು ಅದರಿ೦ದ ವಿಚಲಿತವಾಗದ೦ಥ ಧೃಢ ಮನಸ್ಸಿನಗರಿವರು. ಪರದೇಶದ ಪರೀಕ್ಷೆಗಳಿಗೆ ಹದಿಹರಯದಲ್ಲೆ ತರಬೇತಿ ಪಡೆದು,ತೇರ್ಗಡೆ ಹೊ೦ದಿ ಗುರಿತಪ್ಪದೆ ಗೂಡು ಬಿಟ್ಟ ಇವರ ಅ೦ಗೈನಲ್ಲಿದೆ ಪ್ರಪ೦ಚ.

ಭಾರತ, ಅಮೆರಿಕ, ಪೂರ್ವ, ಪಶ್ಚಿಮ ಎಲ್ಲಾ ಒ೦ದೆ ಇವರಿಗೆ. ೨೦೦೦ ರದ ನ೦ತರ ಹಿ೦ಡು ಹಿ೦ಡಾಗಿ, ಭಾರತ ದೇಶ ಬಿಟ್ಟು, ತಾವಿರುವ ದೇಶಕ್ಕೆ ಭಾರತೀಯತೆಯನ್ನು ತ೦ದ ಈ ಯುವ ಜನತೆಯನ್ನು ಮೆಚ್ಚಿಕೊಳ್ಳದಿರಲಾಗುವುದಿಲ್ಲ. ಪಾಶ್ಚಾತ್ಯ ದೇಶದಲ್ಲೂ, ಪ್ರಾ೦ತೀಯ ಗು೦ಪುಗಳನ್ನು ಕಟ್ಟಿ, ನಮ್ಮ ನಾಡು ಹಬ್ಬಗಳನ್ನು ವಿಜೃಂಭಣೆಯಿ೦ದ ಆಚರಿಸಿ, ಅಲ್ಲಿನ ಸಿನೆಮಾಗಳಲ್ಲಿ, ಭಾರತೀಯ ಚಲನಚಿತ್ರಗಳು ಪ್ರದರ್ಶಿತಗೊಳ್ಳುವ೦ತೆ ಮಾಡಿದ ವೀರರಿವರು. ನಮ್ಮ ದೇಶಕ್ಕೆ ಸ್ಕ್ಯೆಪ್, ವಾಟ್ಸ್ ಅಪ್, ಬಾಲಿವುಡ್ ಮ್ಯೂಸಿಕ್, ದೂರವಾಣಿ ಮತ್ತು ವಿಮಾನ ಸ೦ಪರ್ಕ ಎಲ್ಲದರಲ್ಲಿನ ಪ್ರಗತಿಗೆ ಈ ಬಹಳ ಸ೦ಖ್ಯೆಯಲ್ಲಿ ಬ೦ದ ಈ ಭಾರತೀಯರು ಕಾರಣಕರ್ತರು.
ಪ್ರತಿದಿನ, ವಾಟ್ಸ್ ಅಪ್, ಸ್ಕ್ಯೆಪ್ ಅ೦ತೆಲ್ಲ, ತನ್ನ ತಾಯ್ನಾಡಿನ ಸ್ನೇಹಿತರ, ಬ೦ಧುಬಾ೦ಧವರ ಜೊತೆಗೆ ಸ೦ಪರ್ಕವನ್ನು ಸುಲಭ ಮಾಡಿದ ಹಿರಿಮೆ ಇವರದು ಮತ್ತು ನಮ್ಮದು.

ತಾಯ್ನಾಡಿನಲ್ಲಿ, ಮಿತಿಯಿರದ ಸ೦ಪತ್ತು, ಆಳುಕಾಳುಗಳ ಸೇವೆ, ಜಾತಿ ಮತ್ತು ದುಡ್ಡಿನ ಕಾರಣಗಳಿ೦ದ ತಾನಾಗೆ ಕೈಗೆ ಬ೦ದು ಬೀಳುವ ಐಷಾರಾಮದ ಜೀವನಕ್ಕೆ ಆಸೆ ಪಡದೆ, ಪರನಾಡಿನಲ್ಲಿ ಎಲ್ಲರ೦ತೆ ತಮ್ಮ ಕೆಲಸಗಳನ್ನು ತಾವೆ ಮಾಡಿಕೂ೦ಡು, ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೆನ್ನುವ ಹ೦ಬಲ ಇವರದು. ಇದನ್ನು ನೀವೆಲ್ಲರೂ ಮೆಚ್ಚಲೇಬೇಕು. ಈ ಗು೦ಪಿಗೆ ರೊಟ್ಟಿ ಮತ್ತು ಬ್ರೆಡ್ ಎರಡು ಓ೦ದೆ. ಬೆಳಿಗ್ಗೆ ಮಿನಿ ಸ್ಕರ್ಟ್ ಹಾಕಿ, ಸಾಯ೦ಕಾಲ ರೇಶ್ಮೆ ಸೀರೆ ಉಟ್ಟು, ನಮ್ಮ ಆಹಾರ, ಉಡುಪು, ಸ೦ಸ್ಕ್ರುತಿಯನ್ನು ಪ್ರಪ೦ಚಕ್ಕೆ ಪರಿಚಯಿಸಿದ ಮಾಡಿದ ಹೆಮ್ಮೆ ಇವರದು.

”ಇವರದ್ದೇನು ಸಾಧನೆ ? ಈ ಇ೦ಟರ್ನೆಟ್ ಯುಗದಲ್ಲಿ ಎಲ್ಲಾ ಸುಲಭ” ಎ೦ದು ನೀವು ಮೂಗುಮುರಿಯುವುದಾದರೆ, ನಾನೂ ನಿಮ್ಮೊ೦ದಿಗೆ ಸೇರಿಕೊಳ್ಳದಿರಲಾರೆ. ದಶಕಗಳ ಹಿ೦ದೆ ವಿದ್ಯೆ, ತರಬೇತಿಯನ್ನರಸಿ ಪರದೇಶಕ್ಕೆ ಬ೦ದ ನಾವು, ನೀವುಗಳು, ಅತಿ ಧೈರ್ಯವ೦ತರು. ನಮ್ಮ ನ೦ತರ ಬರುವವರಿಗೆ ಬಯಕೆ ಮತ್ತು ಭರವಸೆಯನ್ನಿತ್ತವರು ನಾವು. ಆದೆಲ್ಲ ಸರಿಯೇ ಸರಿ !!!!

ಆದರೆ ನಮ್ಮಗಳ ಭಾವನೆಗಳಲ್ಲಿ ಬದಲಾವಣೆಯ ಬೇರುಗಳನ್ನು ನೆಡುವ ಅವಶ್ಯಕತೆಯಿದೆ. ದಶಕಗಳನ್ನು ಇಲ್ಲಿ ಕಳೆದರೂ ” ನಾವುಗಳು ತ್ರಿಶ೦ಕುಗಳು” ಎ೦ದು ಗೋಳಾಡಿ, ಎಲ್ಲಿ ಬೇಕಾದರೂ ಬದುಕಬೇಕಾದ ಅವಕಾಶವಿದ್ದರೂ, ಇಲ್ಲಿಯೇ ಇರಲು ನಿರ್ಧರಿಸಿ, ಕಾಣದ ಸ೦ಕೋಲೆಗಳಿಗೆ ಬಂಧಿಯಾಗಿ, ಇಲ್ಲಿ ಇರುವುದನ್ನು ಅನುಭವಿಸದೆ, ಬಿಟ್ಟು ಬ೦ದಿದ್ದನ್ನು ವೈಭವೀಕರಿಸಿ , ಗೋಳಾಡಿ, ಗೊಣಗಾಡಿ, ಶಿಕ್ಷೆಗೊಳಗಾದವರ೦ತೆ ನಟಿಸಿ, ನಮಗೆ ನಾವೆ ಮೋಸಗೊಳಿಸಿಕೊಳ್ಳುವುದನ್ನು ನಿಲ್ಲಿಸುವ ಅವಶ್ಯಕತೆಯಿತೆ.

ಬನ್ನಿ ಇವರ೦ತೆಯೆ ವಿಶ್ವಮಾನವರಾಗೋಣ. ತಡವಾದರೇನ೦ತೆ, ಕಾಲವಿನ್ನೂ ಮಿ೦ಚಿಲ್ಲ, ಈಗಿನ ಜನಾ೦ಗ ನಮಗಿತ್ತ ಈ ಹೊಸ ಪ್ರಪ೦ಚದ ಪ್ರಜೆಗಳಾಗಿ, ದಿನೇ ದಿನೇ ಚಿಕ್ಕದಾಗುತ್ತಿರುವ ಈ ದೊಡ್ಡ ಪ್ರಪ೦ಚ, ಅದರೊ೦ದಿಗೇ ಹತ್ತಿರವಾಗುತ್ತಿರುವ ನಮ್ಮ ಪ್ರಪ೦ಚದ ಸೊಗಡನ್ನು ಸವಿಯೋಣ, ಎಲ್ಲರೊ೦ದಿಗೆ ಬೆರೆತು ನಲಿಯೋಣ.

 

 

 

 

 

 

 

 

 

೧೪ ರಿಂದ ೧೬ ನೇ ಶತಮಾನದ ಚರಿತ್ರೆ ಇಲ್ಲಿ ಮತ್ತು ಅಲ್ಲಿ

ಇಂಗ್ಲೆಂಡ್ ಮತ್ತು ಕರ್ನಾಟಕ ಈ ಎರಡು ಪ್ರದೇಶಗಳಲ್ಲಿ ಹದಿನಾಲ್ಕರಿಂದ ಹದಿನಾರನೇ ಶತಮಾನದಲ್ಲಿ ನಡೆದ ಐತಿಹಾಸಿಕ ವಿಷಯಗಳ ಬಗ್ಗೆ ರಾಮಮೂರ್ತಿಯವರು ಚರ್ಚಿಸಿದ್ದಾರೆ. ಈ ಎರಡು ದೇಶಗಳು ನಾಲ್ಕುವರೆ  ಸಾವಿರ ಮೈಲಿ ಅಂತರದಲ್ಲಿದ್ದು ಹಿಂದೆ ಒಂದು ದೇಶಕ್ಕೆ ಇನ್ನೊಂದರ ಸಂಪರ್ಕವಿಲ್ಲದಿರುವಾಗ ಹೇಗೆ ಈ ಎರಡು ಸಂಸ್ಕೃತಿಗಳು ವಿಕಾಸಗೊಳ್ಳುತ್ತಿದ್ದವು ಎಂಬ ವಿಚಾರವನ್ನು ನೀಡಿದ್ದಾರೆ. ಈ ಎರಡು ದೇಶಗಳ ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿನ ಸಾದೃಶ್ಯ ಸಾಧನೆಗಳನ್ನು ಗುರುತಿಸಬಹುದು. ಹಾಗೆಯೇ ಇಲ್ಲಿ ನಡೆದ ಪಿತೂರಿ, ಕೊಲೆ, ಯುದ್ಧ, ಮತ್ತು ವಿಶ್ವಾಸ ಘಾತಕ ಕೃತ್ಯಗಳ ಹೋಲಿಕೆಗಳನ್ನೂ ಕಾಣಬಹುದು.

ಇತಿಹಾಸವನ್ನು ಗಮನಿಸಿದಾಗ ಮನುಷ್ಯ ಪ್ರಪಂಚದ ಯಾವ ಮೂಲೆಯಲ್ಲೂ ನೆಲೆಸಿದ್ದರೂ ಮೂಲಭೂತವಾಗಿ ಅವನ ಆಸೆ, ಆಕಾಂಕ್ಷೆ, ಪ್ರೀತಿ ವಿಶ್ವಾಸಗಳು, ಅನುಕಂಪೆ, ಹಂಬಲಗಳು ಒಂದೆಡೆಯಿಂದ ಮತ್ತು ದ್ವೇಷ, ಸ್ವಾರ್ಥ ಅಸೂಯೆಗಳು ಇನ್ನೊಂದೆಡೆಯಿಂದ ಅವನ ವ್ಯಕ್ತಿತ್ವವನ್ನು ಮತ್ತು ಅವನ ಸಮಾಜವನ್ನು ಹೇಗೆ ರೂಪಿಸಿದೆ ಎಂಬುದನ್ನು ಅರಿಯಬಹುದು. ಧರ್ಮ ಬೇರೊಂದು ಆಯಾಮವನ್ನು ತಂದು ಇತಿಹಾಸವನ್ನು ರೂಪಿಸುತ್ತದೆ ಎಂಬುದನ್ನು ಕೂಡ ಗಮನಿಸಬಹುದು. ಇತಿಹಾಸದಲ್ಲಿ ಸೋಲು -ಗೆಲವು, ಯಶಸ್ಸು – ಅಧಃಪತನ,  ಸಮೃದ್ಧಿ – ನಷ್ಟ ಇವುಗಳು ಚಕ್ರಗತಿಯಲ್ಲಿ ಸಾಗುವುದನ್ನು ಕಾಣ ಬಹುದು.

ತಮ್ಮ ಲೇಖನದ ಕೊನೆ ಭಾಗದಲ್ಲಿ ರಾಮಮೂರ್ತಿಯವರು ಹಂಪಿಯ ಅಧಃಪತನದ ಬಗ್ಗೆ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಹಾಗೆ ಅದಕ್ಕೆ ಸಂಬಂಧಿಸಿರುವ ವಿವಾದಾತ್ಮಕ ವಿಷಯದೊಂದಿಗೆ ತಮ್ಮ ಲೇಖನವನ್ನು ಮುಕ್ತಾಯ ಗೊಳಿಸಿದ್ದಾರೆ. ನಿರ್ಣಾಯಕ ಅಭಿಪ್ರಾಯಗಳನ್ನು ಓದುಗರಿಗೆ ಬಿಟ್ಟಿದ್ದಾರೆ. ನೂರಾರು ವರ್ಷಗಳ ಹಿಂದಿನ ಐತಿಹಾಸಿಕ ಘಟನೆಗಳ ಸತ್ಯ ಅಸತ್ಯಗಳನ್ನು ನಮಗೆ ದೊರೆತ ಪುರಾವೆಗಳ ಗುಣಮಟ್ಟದಿಂದ ಮತ್ತು ಅದರ ಶಕ್ತಿಗನುಸಾರವಾಗಿ ವಿಶ್ಲೇಷಿಸುವ ಅಗತ್ಯವಿದೆ.  ಆದರೆ ಆ ಪುರಾವೆ ಎಷ್ಟು ಅಧಿಕೃತ ಮತ್ತು ಅದನ್ನು ಬರೆದವರು / ಬರೆಸಿದವರು ಯಾರು? ಎಂದು ಕೆಲವರು ಪ್ರಶ್ನಿಸಬಹುದು. ಹೊಸ ಪುರಾವೆಗಳು ಬೆಳಕಿಗೆ ಬಂದಾಗ ಇತಿಹಾಸವನ್ನು ಮರು ಪರಿಶೀಲಿಸುವ ಅಗತ್ಯವೂ ಇದೆ. ನೆನ್ನೆಯ ಇತಿಹಾಸ ಇಂದಿನ ಬದುಕಿಗೆ ಎಷ್ಟು ಪ್ರಸ್ತುತ ಎಂಬ ನಿಲುವನ್ನು ತಳೆದವರೂ ಇದ್ದಾರೆ.

ರಾಮಮೂರ್ತಿಯವರು ತಮ್ಮ ಸುಧೀರ್ಘ ಲೇಖನಕ್ಕೆ ಬೇಕಾದ ಮಾಹಿತಿಗಳನ್ನು ಕೆದಕಿ ಒಟ್ಟು ಗೂಡಿಸಿ ಬರೆದಿದ್ದಾರೆ. ಇದಕ್ಕೆ ಸಾಕಷ್ಟು ಸಮಯ ಮತ್ತು ಪರಿಶ್ರಮ ಹೂಡಿರುವುದನ್ನು ಗಮನಿಸಬಹುದು. ಅವರು ತಮ್ಮದೇ ಆದ ಆಡು ಭಾಷೆಯಲ್ಲಿ ಲೇಖನ ಬರೆಯುತ್ತಾರೆ. ಅದು ಅವರ ವೈಯುಕ್ತಿಕ ವಿಶೇಷ ಶೈಲಿ ಎಂದು ಅವರು ಭಾವಿಸಿದ್ದಾರೆ. ಹೀಗಾಗಿ ಅವರ ಭಾಷ ಶೈಲಿಯನ್ನು ತಿದ್ದುವ ಪ್ರಯತ್ನ ಮಾಡಿಲ್ಲ. ಉತ್ಕೃಷ್ಟವಾದ ಮತ್ತು ಮಾಹಿತಿಗಳಿಂದ ತುಂಬಿದ ಲೇಖನವನ್ನು ಒದಗಿಸಿದ ಅವರಿಗೆ ಧನ್ಯವಾದಗಳು.

ಕೆಳಗೆ ಪ್ರಸ್ತಾಪಿಸಿರುವ ಮಾಹಿತಿಗಳ ಮತ್ತು ವಿಚಾರಗಳ ಖಚಿತತೆ ಲೇಖಕರ ಹೊಣೆಗಾರಿಕೆ.

ಶಿವಪ್ರಸಾದ್ (ಸಂ )

***

 

 

೧೪ ರಿಂದ ೧೬ ನೇ ಶತಮಾನದ ಚರಿತ್ರೆ ಇಲ್ಲಿ ಮತ್ತು ಅಲ್ಲಿ

ಇಲ್ಲಿ ಅಂದರೆ, ಇಂಗ್ಲೆಂಡ್ ಮತ್ತು ಅಲ್ಲಿ ಭಾರತ ಅದರಲ್ಲೂ ಕರ್ನಾಟಕದಲ್ಲಿ ಕ್ರಿಸ್ತ ಶಕ ೧೩೦೦ ರಿಂದ ೧೬೦೦ ಕೊನೆಯವರಿಗೆ ಈ ಎರಡು ದೇಶಗಳಲ್ಲಿ ನಡೆದ ಕೆಲವು ವಿಷಯಗಳನ್ನು ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ. ಈ ಕಾಲದಲ್ಲಿ ಈ ಎರಡು ದೇಶಗಳ ಪರಸ್ಪರ ಪರಿಚಯ ಇರಲಿಲ್ಲ, ಇದು ೧೭ನೇ ಶತಮಾನದ ಕೊನೆಯಲ್ಲಿ ಪ್ರಾಂಭವಾಯಿತು ೧೪ ರಿಂದ ೧೬ನೇ ಶತಮಾನದಲ್ಲಿ ನಡೆದ ಘಟನೆಗಳನ್ನು ಮಾತ್ರ ಇಲ್ಲಿ ವಿವರಿಸಿದೆ,
೩೦೦ ವರ್ಷದ ಆಳ್ವಿಕೆಯಲ್ಲಿ ಇಂಗ್ಲೆಂಡ್ ನಲ್ಲಿ ಅನೇಕ ಘಟನೆಗಳು ನಡೆಯಿತು ಆದರೆ Henry the Eighth ಆಡಳಿತದಲ್ಲಿ (೧೫೦೯-೧೫೪೭) ಈ ದೇಶದಲ್ಲಿ ನೂರಾರು ವರ್ಷದಿಂದ ನಡೆದುಬಂದಿದ್ದ ಕಥೊಲಿಕ್ ಧರ್ಮದ ಭವಿಷ್ಯಕ್ಕೆ ಅನುಮಾನುಗಳು ಬಂದು ಅವನ ಪ್ರಜೆಗಳಿಗೆ ಯಾವ ಧರ್ಮವನ್ನೂ ಅನುಸರಿವ ಸ್ವಾತಂತ್ರ ಕಡಿಮೆ ಆಗಿ ಧರ್ಮದ ಹೆಸರಿನಲ್ಲಿ ಅನೇಕ ಘರ್ಷಣೆಗಳು ನಡೆದು ಬಂತು. ಇದೇಕಾಲದಲ್ಲಿ ದಕ್ಷಿಣ ಭಾರತದಲ್ಲಿ ವಿಜಯನಗರ ರಾಜ್ಯದ ಸ್ಥಾಪನೆ ಒಂದು ಮುಖ್ಯವಾದ ನಡೆದ ಘಟನೆ. ಆ ಕಾಲದ ಸಮಕಾಲೀನ ಕೃಷ್ಣದೇವರಾಯ.(೧೫೦೯-೧೫೨೯) ಅವನ ಆಡಳಿತದಲ್ಲಿ ಪ್ರಜೆಗಳಿಗೆ ಈ ಸಮಸ್ಯೆ ಇರಲಿಲ್ಲ ಧರ್ಮದ ಸಂಪೂರ್ಣ ಸ್ವಾತಂತ್ರ್ಯ ಇತ್ತು.

ಇಂಗ್ಲೆಂಡಿನಲ್ಲಿ ೧೪ ನೇ ಶತಮಾನದಲ್ಲಿ ಎಡ್ವರ್ಡ್೩( Edward the third) ೫೦ ವರ್ಷ ಆಳಿಕೆಯಲ್ಲಿದ್ದ. ಇವನ ತಾಯಿ ಇಸಾಬೆಲ್ಲಾ ಮತ್ತು ಅವಳ ಪ್ರೇಮಿ ರಾಜರ್ ಮಾರ್ಟಿಮೊರ್ ಇಬ್ಬರು ಸೇರಿ ಇವನ ತಂದೆ ಎಡ್ವರ್ಡ್ ೨ ನ ಆಳ್ವಿಕೆಯನ್ನು ಕೊನೆಗಳಿಸಿ ೧೪ ವರ್ಷದ ಮಗನನ್ನು ಪಟ್ಟಕ್ಕೆ ತಂದಿದ್ದರು , ಆದರೆ ಇವನಿಗೆ ೧೭ ವರ್ಷದ ತುಂಬಿದಾಗ ಇವರಿಬ್ಬರ ಮೇಲೆ ದಂಗೆ ಎದ್ದು ಆಡಳಿತದ ಜವಾಬ್ದಾರಿ ತಾನೇ ವಹಿಸಿಕೊಂಡ. ಇವನ ಕಾಲದಲ್ಲಿ ಫ್ರಾನ್ಸ್ ಮೇಲೆ ಯುದ್ಧ ಶುರವಾಗಿ ನೂರು ವರ್ಷದ ನಂತರ ೧೪೫೩ ಮುಗಿಯುತು. ಫ್ರಾನ್ಸ್ ನ ಅನೇಕ ಭಾಗಗಳನ್ನು ಇವನ ಮಗನ ಎಡ್ವರ್ಡ್ (Black Prince ) ಜೊತೆಯಲ್ಲಿ ಸೇರಿ ಗೆದ್ದ . ಈಗಿನ ಕ್ಯಾಲೆ ಮತ್ತು ಫ್ಲಾಂಡರ್ಸ್ ಮುತ್ತಾದ ಪ್ರದೇಶಗಳು ಇಂಗ್ಲೆಂಡ್ ಗೆ ಸೇರಿದ್ದವು .

೧೩೪೭ ನಲ್ಲಿ ಪ್ಲೇಗ್ ಕಾಯಿಲೆ (Black Death) ಯುರೋಪ್ ನಲ್ಲಿ ಶುರುವಾಯಿತು, ಇಲ್ಲಿ ೧೩೪೮ ನಲ್ಲಿ ಡೊರ್ಸೆಟ್ ನ(Dorset ) ಮೇಲ್ಕೋಮ್ಬ್ ರೀಜಿಸ್ (Melcombe Regis ) ನಲ್ಲಿ ಶುರುವಾಗಿ ಇಡೀ ದೇಶಕ್ಕೆ ಹರಡಿ ಲಕ್ಷಾಂತರ ಜನರು ಮರಣಕ್ಕೀಡಾದರು. ಸುಮಾರು ಅರ್ಧ ಜನಸಂಖ್ಯೆ ಕಡಿಮೆಯಾಗಿ ವ್ಯವಸಾಯಕ್ಕೆ ಜನ ಸಹಾಯ ಇರಲಿಲ್ಲವಾಗಿದ್ದರಿಂದ ಜನಗಳಿಗೆ ಆಹಾರಕ್ಕೆ ಬಹಳ ತೊಂದರೆ ಉಂಟಾಯಿತು. ವ್ಯವಸಾಯ ಒಂದೇ ಅಲ್ಲ ಕಾರ್ಮಿಕ ಕೊರತೆಯಿಂದ ಸಮಾಜಕ್ಕೆ ತುಂಬಾ ತೊಂದರೆ ಬಂತು. ಇದಕ್ಕೆ ಸಂಬಂಧಪಟ್ಟ ಅನೇಕ ದಾಖಲೆಗಳು London British Library ನಲ್ಲಿ ಇದೆ. ರೈತರು ಹೊಲಗಳಲ್ಲಿ ಕೆಲಸ ಮಾಡಲು ವೇತನದ ಬೇಡಿಕೆ ಹೆಚ್ಚಾಗಿ ವ್ಯವಸಾಯದ ಉತ್ಪಾದನೆ ಕಡಿಮೆ ಆಗಿ ದೇಶದಲ್ಲಿ ಕ್ಷಾಮ ಬರುವ ಪರಿಸ್ಥಿತಿ ಇತ್ತು. ಸರ್ಕಾರ Wages Bill (೧೩೪೯)ತಂದು ಈ ಒತ್ತಡ ವನ್ನು ಕಡಿಮೆ ಮಾಡಿದರು . ಇವನ ಆಳ್ವಿಕೆಯಲ್ಲಿ ಅನೇಕ ಯುದ್ಧಗಳು ಶುರುವಾಗಿ ಖಜಾನೆಯಲ್ಲಿ ಹಣ ಕಾಸಿನ ಅಭಾವ ವಿಪರೀತವಾಗಿ ಹೆಚ್ಚಾಗಿ ತೆರಿಗೆ ಏರಿಸ ಬೇಕಾಯಿತು. ಪಾರ್ಲಿಮೆಂಟ್, ಅಂದರೆ ಹೌಸ್ ಆಫ್ ಕಾಮನ್ಸ್ ಪ್ರಬಲಕ್ಕೆ ಬಂದು ಅನೇಕ ಕಾನೂನುಗಳನ್ನು ತಂದರು. ೧೩೫೧ ನಲ್ಲಿ Statute of Labourers, ಅದೇ ವರ್ಷದಲ್ಲಿ Treason Act ಮತ್ತು Justices of Peace, ಈ ಕಾನೂನುಗಳು ಈ ದೇಶದಲ್ಲಿ ಇನ್ನೂ ಜಾರಿಯಲ್ಲಿದೆ .
ಏಡ್ವರ್ಡ್ ೩, ೬೪ನೇ ವರ್ಷದಲ್ಲಿ ೨೧/೬/೧೩೭೭ ದಿನ ರಿಚ್ಮಂಡ್ ನಲ್ಲಿ ಇರುವ ಶೀನ್ ಅರಮನೆಯಲ್ಲಿ ತೀರಿದ . ಇವನ ಮೊದಲನೇ ಮಗ ಎಡ್ವರ್ಡ್ ( Black Prince) ೧೩೭೬ ನಲ್ಲಿ ೪೩ ವರ್ಷದಲ್ಲಿ ತೀರಿದ್ದರಿಂದ, ಮೊಮ್ಮಗ ೧೦ ವರ್ಷದ ರಿಚಾರ್ಡ್ ೨ ಪಟ್ಟಕ್ಕೆ ಬಂದ. ಆಗ ಫ್ರಾನ್ಸ್ ಮೇಲೆ ಇವನ ತಾತ ಶುರು ಮಾಡಿದ್ದ 1೦೦ Years war ಮುಗಿಯುವ ಸೂಚನೆ ಇರಲಿಲ್ಲ ಮತ್ತು ಯುದ್ಧ ಮುಂದುವರೆಸುವುದಕ್ಕೆ ಹಣ ಸಹಾಯವೂ ಇರಲಿಲ್ಲ. ಪಾರ್ಲಿಮೆಂಟ್ ನಲ್ಲಿ ಒಪ್ಪಂದ ಪಡೆದು ಎಲ್ಲರಿಗೊ ಅಸಮಾನವಾದ Pole Tax ( some of us remember this tax imposed by Margret Thatcher in the 80s which was very unpopular) ಅನ್ನುವ ತೆರಿಗೆ ತಂದು ೧೩೮೧ ರಲ್ಲಿ ರೈತರ ಮುಷ್ಕರ ರಾಜ್ಯದಲ್ಲೇ ಹರಡಿತು. ಈ ಪ್ರತಿಭಟನೆಯನ್ನು  ಅಡಗಿಸಲು ಸಾಕಷ್ಟು ಶಕ್ತಿ ಇರಲಿಲ್ಲ ಆದ್ದರಿಂದ ಮುಷ್ಕರದ ಮುಖಂಡರ ಜೊತೆ ಒಪ್ಪಂದ ಮಾಡಿ ಅವರ ಬೇಡಿಕೆಗಳನ್ನು ಅಂಗೀಕರಿಸಿದ. ಆಗ ಇವನಿಗೆ ಇನ್ನೂ ೧೪ ವರ್ಷ. ಇವನ ಆಡಳಿಕೆ ೧೬/೦೭/೧೩೭೭ ರಿಂದ ೧೪/೨/೧೪೦೦. ಸಾಹಿತ್ಯದ ಭಾಷೆ ಇಂಗ್ಲಿಷ್ ಈ ಸಮಯದಲ್ಲೇ ಮುಂದೆವರದಿದ್ದು. ಪ್ರಸಿದ್ಧ ಸಾಹಿತಿ Geoffrey Chaucer ಇವನ ಆಸ್ತಾನದಲ್ಲೇ ಕೆಲಸ ದಲ್ಲಿದ್ದ.

೧೪೫೫ War of Roses ಪ್ರಾರಂಭ. ಇದು ಲ್ಯಾಂಕಾಶೈರ್( ಕೆಂಪು ಗುಲಾಬಿ) ಮತ್ತು ಯಾರ್ಕ ಶೈರ್ (ಬಿಳಿ ಗುಲಾಬಿ) ಮೂಲದವರ ಇಂಗ್ಲೆಂಡಿನ ಸಿಂಹಾಸನಕ್ಕೆ ನಡೆದ ಯುದ್ಧ.

Henry the Eighth (೧೪೯೧-೧೫೪೭)
ಇವನು ಎರಡನೇ ಟ್ಯೂಡರ್ ದೊರೆ ೧೫೦೯ ನಲ್ಲಿ ಪಟ್ಟಕ್ಕೆ ಬಂದ. ಇವನ ಮೊದಲನೇ ಹೆಂಡತಿ ಕ್ಯಾಥರಿನ್ ಆಫ್ ಅರೋಗೋನ್ ನಿಂದ ವಿಚ್ಚೇದನ ಮಾಡಿ ತಾನು ಪ್ರೇಮಿಸುತಿದ್ದ ಆನ್ ಬೊಲಿನ್ ನನ್ನ ಮಾದುವೆಯಾಗುವ ಅಸೆಯಿಂದ ರೋಮ್ ನಲ್ಲಿದ್ದ ಪೋಪ್ ನಿಂದ ಅಪ್ಪಣೆ ಕೋರಿದ. ಆದರೆ ಕ್ಯಾಥೋಲಿಕ್ ಧರ್ಮದಲ್ಲಿ ಇದು ಸಾಧ್ಯವಿಲ್ಲ ಅಂತ ಇವನ ಕೋರಿಕೆಯನ್ನು ನಿರಾಕರಿಸಬೇಕಾಯಿತು. ಆದರೆ ಈ ನಿರ್ಣಾಣವನ್ನು ತಿರಸ್ಕರಿಸಿ ಇಂಗ್ಲೆಂಡ್ ಚರ್ಚ್ಗು ಮತ್ತು ರೋಮ್ ನ ಚರ್ಚ್ ಗೆ ಸಂಭಂದ ಇಲ್ಲ ಎಂದು ಘೋಷಿಸಿ ಪ್ರಾಟೊಸ್ಟಂಟ್ ಧರ್ಮವನ್ನು ಜಾರಿಗೆ ತಂದು ಆನ್ ಬೊಲಿನ್ನ್ ಮದುವೆ ೧೫೩೩ ನಲ್ಲಿ ಆದ. ಆದರೆ ಕೆಲವು ವರ್ಷದನಂತರ ಇವರಿಬ್ಬರಿಗೂ ಮನಸ್ತಾಪ ಬಂದು ಅವಳ ಮೇಲೆ ಅಪವಾದಗಳನ್ನು ಹೊರಸಿ ಲಂಡನ್ ಟವರ್ ನಲ್ಲಿ ಬಂಧಿಸಿ ಕೊನೆಗೆ ಅವಳ ಶಿಕ್ಷೆ ಶಿರಚ್ಛೇದನೆ ಮಾಡಿಸಿದ ( ೧೯/೦೫/೧೫೩೬ ) ಇದಕ್ಕೆ ಮುಖ್ಯ ಕಾರಣ ಇವನಿಗೆ ಒಂದು ಗಂಡು ಮಗು ಬೇಕಾಗಿತ್ತು ಆದರೆ ಹುಟ್ಟಿದ್ದು ಹೆಣ್ಣು ಮಗು ಎಲಿಜಬೆತ್. ಇವಳು ಕೊನೆಗೆ ಇಂಗ್ಲೆಂಡ್ ರಾಣಿ ಯಾಗಿ ಬಹಳ ವರ್ಷ ಆಳಿದಳು. ಹೆನ್ರಿಯ ಮೂರನೇ ಹೆಂಡತಿ ಜೇನ್ ಸಿಮೋರ್, ಇವಳು ಒಂದು ಗಂಡು ಮಗುವನ್ನು ಹಡೆದು ಕೇವಲ ಎರಡು ವಾರದಲ್ಲಿ ಅನಾರೋಗ್ಯದಿಂದ ತೀರಿದಳು. ಐದನೇ ಮದುವೆ ಜೆರ್ಮನಿಯ ಆನ್ ಆಫ್ ಕ್ಲೀವ್ಸ್ ಜೊತೆ. ಈ ಮದುವೆ ರಾಜಕೀಯ ಕಾರಣಗಳಿಂದ ಆದ್ದರಿಂದ ಕೆಲವೇ ತಿಂಗಳಲ್ಲಿ ಇವಳನ್ನು ವಿಚ್ಛೇದನ ಮಾಡಿ ಕ್ಯಾಥರಿನ್ ಹಾವರ್ಡ್ ಎನ್ನುವವಳನ್ನು ಮದುವೆ ಯಾಗಿ ಎರಡು ವರ್ಷದ ನಂತರ ಅಪವಾದನೆ ಹೊರಸಿ ಶಿರಚ್ಛೇದನೆ ಮಾಡಿಸಿದ, ಕೊನೆಯ ರಾಣಿ ವಿಧುವೆ ಆಗಿದ್ದ ಕ್ಯಾಥರಿನ್ ಪಾರ್ , ಈಕೆ ವಿದ್ಯಾವಂತೆ ಬೈಬಲನ್ನು ಇಂಗ್ಲಿಷ್ ಗೆ ಲ್ಯಾಟಿನ್ ನಿಂದ ತರ್ಜುಮೆ ಮಾಡಿ ಜನಸಾಮಾನ್ಯರಿಗೆ ಇದನ್ನು ಓದಿ ಅರ್ಥ ಮಾಡಿಕೊಳ್ಳುವ ಅವಕಾಶ ದೊರೆಯಿತು. ಆದರೆ ಈ ಕೆಲಸ ಬಹಿರಂಗವಾಗಿ ಮಾಡುವದು ಸುಲಭವಾಗಿರಲಿಲ್ಲ. ರೋಮ್ ಚರ್ಚ್ ನಿಂದ ಇನ್ನೂ ಅಡಚಣೆಗಳಿದ್ದವು.
ಹೆನ್ರಿ ಜನವರಿ ೨೪ ೧೫೪೭ ತೀರಿದ ಮೇಲೆ ಅವನ ಮಗ ಎಡ್ವರ್ಡ್ ೬ ದೊರೆಯಾಗಿ ಚಿಕ್ಕ ವಯಸ್ಸಿನಲ್ಲಿ ತೀರಿದ. ನಂತರ, ಕ್ಯಾಥರಿನ್ ಫಾರ್ ಅಕ್ಕರೆಯಿಂದ ಬೆಳಸಿದ ಇಬ್ಬರು ರಾಜಕುಮಾರಿಯರು, ಮೇರಿ ಮತ್ತು ಎಲಿಜಬೆತ್ ಮುಂದೆ ಇಂಗ್ಲೆಂಡ್ ರಾಣಿಗಳಾಗಿ ಪಟ್ಟಕ್ಕೆ ಬಂದರು. ಇದರಲ್ಲಿ ಎಲಿಝಬೆತ್ ರಾಣಿ ಬಹಳವರ್ಷ ಆಳಿದಳು.
೧೬ನೇ ಶತಮಾನದ ಮುಖ್ಯವಾದ ಇನೊಂದು ಘಟನೆ ೧೫೬೪ ನಲ್ಲಿ ಪ್ರಸಿದ್ಧ ಸಾಹಿತಿ ವಿಲಿಯಮ್ ಶೇಕ್ಸ್ ಪಿಯರ್ ಜನನ.

 

ವಿಜಯನಗರ ಸಾಮ್ರಾಜ್ಯ

ಈ ಕಾಲದಲ್ಲಿ ದಕ್ಷಿಣ ಭಾರತ ದಲ್ಲಿ ಏನಾಯಿತು ಅನ್ನುವುದನ್ನ ವಿಚಾರ ಮಾಡೋಣ.
ವಿಜಯನಗರದ ಪ್ರಾರಂಭ ದಕ್ಷಿಣ ಭಾರತದ ರಾಜಕೀಯದ ಪರಿಸ್ಥಿತಿಯೇ ಬದಲಾಯಿತು. ಇದರ ಮುಂಚೆ ದಕ್ಷಿಣ ಭಾರತಲ್ಲಿ ಅನೇಕ ಹಿಂದು ರಾಜ್ಯಗಳು ಇದ್ದವು ಅದರ ಬಗ್ಗೆ ಮಾಹಿತಿ ಸಾಕಷ್ಟು ಸಿಕ್ಕೆದೆ. ಉದಾರಹರಣೆಗೆ ೭ ನೇ ಶತಮಾನದ ಚೋಳ, ಚಾಲುಕ್ಯ ಪಲ್ಲವ ರಾಷ್ಟ್ರ ಕೂಟ ಮತ್ತು ಹೊಯ್ಸಳ ಇತ್ಯಾದಿ. ಆದರೆ ವಿಜಯನಗರ ರಾಜ್ಯ ಸ್ಥಾಪನೆ ಆಕಸ್ಮಿಕ ಅಲ್ಲ. ಉತ್ತರದಿಂದ ಮುಸಲ್ಮಾನರ ಹಾವಳಿಯ ಬೆದರಿಕೆ ಇದ್ದೆ ಇತ್ತು. ೧೨೯೬ ರಲ್ಲಿ ಅಲ್ಲಾಉದ್ದೀನ್ ಖಿಲ್ಜಿ ದೇವಗಿರಿಯ ಯಾದವ ರಾಜ್ಯದ ಮೇಲಿ ಹಾವಳಿ ಮಾಡಿ ರಾಜ್ಯವನ್ನು ಲೂಟಿ ಮಾಡಿದ. ಅನಂತರ, ಕೆಲವೇ ವರ್ಷದಲ್ಲಿ ದೇವಗಿರಿ ಯಿಂದ ರಾಮೇಶ್ವರ ದವರಗೆ ಸುಮಾರು ೩೦ ವರ್ಷ ಇಸ್ಲಾಂ ರಾಜ್ಯಸ್ಥಾಪಿಸಿದ .
ಇದನ್ನು ನಾಶಮಾಡಲು ಅನೇಕ ಹಿಂದೂ ರಾಜರು ಪ್ರಯತ್ನ ಮಾಡಿದರೂ ಸಂಗಮ ಅನ್ನುವ ರಾಜನ ಐದು ಮಕ್ಕಳು ಈ ಸಾಮ್ರಾಜ್ಯ ಸ್ಥಾಪನೆ ಮಾಡಿಲ್ಲಿಲ್ಲದಿದ್ದರೆ ಸಂಪೂರ್ಣ ದಕ್ಷಿಣ ಭಾರತದಲ್ಲಿ ಇಸ್ಲಾಂ ಧರ್ಮ ಭದ್ರವಾಗಿ ನಿಲ್ಲುತಿತ್ತು ಅನ್ನುವ ಸಂಶಯ ಇಲ್ಲ. ಹರಿಹರ, ಬುಕ್ಕಣ್ಣ, ಕಂಪಣ್ಣ, ಮಾರಪ್ಪ ಮತ್ತು ಮುದ್ದಪ್ಪ ಈ ಸಹೋದರರು ಈ ರಾಜ್ಯದ ಮೂಲ ಸ್ಥಾಪಕರು, ಇವರ ಮೂಲದ ಬಗ್ಗೆ, ಅಂದರೆ ಇವರು ಕನ್ನಡದವರ ಅಥವಾ ತೆಲಗು ದೇಶದ ದವರ ಅನ್ನುವ ಚರ್ಚೆ ನಡದಿದೆ. ಆದರೆ ಈ ಸಂಗಮ ವಂಶದ ಎಲ್ಲ ಶಾಸನಗಳನ್ನು ಪರೀಕ್ಷಿದರೆ ಇವರು ಯುದುವಂಶದವರು ಮತ್ತು ಇವರ ಪೂರ್ವಿಕರು ಹಂಪೆಯ ಪರಿಸರ ಪ್ರದೇಶದಲ್ಲಿ ಊರ್ಜಿತವಾದವರು ಎಂದು ವರ್ಣಿಸಿದೆ. ಸಂಗಮ ರಾಜ (ರಾಜನಿಗಿಂತ ಪಾಳೇಗಾರ ಅನ್ನಬಹುದು ) ವಾರೆಂಗಲ್ ಅಂದರೆ ಆಂಧ್ರ ಪ್ರದೇಶದವರು ಅನ್ನುವುದಕ್ಕೆ ಪುರಾವೆ ಯಾವ ಶಾಸನದಲ್ಲೂ ಸಿಕ್ಕಿಲ್ಲ
ಮುಮ್ಮುಡಿ ಬಲ್ಲಾಳನು ೧೩೩೧ ರಲ್ಲಿ ಆಳುತ್ತಿದ್ದ ಪ್ರದೇಶದಲ್ಲಿ ಸಂಗಮ ಪುತ್ರ ಹರಿಹರ ಮತ್ತು ಅವನ ಸಂಬಂಧಿಕರು ಗಡಿರಕ್ಷಣೆಗೆ ಪಶ್ಚಿಮ ಕರಾವಳಿಯ ಬಳಿ ೧೩೩೬ ಕೋಟೆ ಕಟ್ಟಿದನು ಅನ್ನುವ ವಿಚಾರ ಶಾಸನದಲ್ಲಿದೆ. ೧೩೪೦ ರಲ್ಲೂ ಬರೆದ ಇನ್ನೊಂದು ಶಾಸನದಲ್ಲಿ ಬಾದಾಮಿ ದುರ್ಗ ವನ್ನು ಕಟ್ಟಿಸಿದ ಸಂಗತಿಯನ್ನು ತಿಳಿಸುತ್ತದೆ. ಇದೇ ಕಾಲದಲ್ಲಿ ಮುಸಲ್ಮಾನ ಬರಹಗಾರನಾದ ಇಬ್ನ ಬತೂತನ ಬರವಣಿಗೆಯಲ್ಲಿ ೧೩೪೨ ರಲ್ಲಿ ಹರಿಹರನ ಅಧಿಕಾರ ಕೊಂಕಣ ಪ್ರದೇಶದಲ್ಲಿತ್ತು ಅಂದಿದ್ದಾನೆ. ೧೩೪೩ ನೇ ಶಾಸನದಲ್ಲಿ ಹರಿಹರನ ಅನೇಕ ಬಿರುದುಗಳನ್ನು ಘೋಷಿಸಲಾಗಿದೆ. ಮಹಾರಾಜಾಧಿರಾಜ ಮತ್ತು ರಾಜಪರಮೇಶ್ವರ ಮುಂತಾದವು. ಈ ಸಮಯದಲ್ಲಿ ಅನೇಕ ಪ್ರದೇಶಗಳನ್ನು ಜಯಸಿ ಶೃಂಗೇರಿ ಯಲ್ಲಿ ಉತ್ಸವ ನಡೆಸಿದ ಸಂಗತಿ ಮತ್ತು ಹರಿಹರನ ಜೊತೆ ಅವನ ನಾಲಕ್ಕು ಸಹೋದರರು ಶೃಂಗೇರಿಯ ಗುರುಗಳಾಗಿದ್ದ ಭಾರತಿ ತೀರ್ಥರಿಂದ ಆಶೀರ್ವಾದ ಪಡೆದರು ಎನ್ನುವುದು ಇಲ್ಲಿಯ ಶಿಲಾ ಶಾಸನದಿಂದ ತಿಳಿದು ಬಂದಿದೆ.
ಕೆಲವು ಇತಿಹಾಸಕಾರರ ಪ್ರಕಾರ ಶಾಲಿವಾಹನ ಶಕ ೧೨೫೮ ಧಾತು ಸಂವತ್ಸರದ ವೈಶಾಖ ಶುಕ್ಲ ಸಪ್ತಮಿ ಆದಿತ್ಯವಾರದಂದು, ಅಂದರೆ ಕ್ರಿಸ್ತ ಶಕ ೧೩೩೬ ಏಪ್ರಿಲ್ ೧೮ ಹರಿಹರನು ವಿಜಯನಗರ ರಾಜ್ಯವನ್ನು ಸ್ಥಾಪಿಸಿದ ಅನ್ನುವ ಬಲವಾದ ಅಭಿಪ್ರಾಯವಿದೆ. ಆದರೆ ಕೆಲವರ ಪ್ರಕಾರ ಈ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ, ಕಾರಣ ಶೃಂಗೇರಿಯಲ್ಲಿ ಸಿಕ್ಕಿರುವ ಶಾಸನ.
ಧರ್ಮಗುರುಗಳಾಗಿದ್ದ ಶ್ರೀ ವಿದ್ಯಾರಣ್ಯರು ವಿಜಯನಗರದ ನಿರ್ಮಾಣದಲ್ಲಿ ಭಾಗವಹಿಸಿದ್ದಾರೆಂಬ ನಂಬಿಕೆ ಇದೆ ತುಂಗಭದ್ರಯ ದಕ್ಷಿಣ ತೀರ ಪ್ರದೇಶದಲ್ಲಿ ಗುಡ್ಡ ಬೆಟ್ಟದ ಆವರಣದಲ್ಲಿ ವಿಜಯನಗರ ರಾಜಧಾನಿಯ ಹೆಸರಿನಿಂದಲೇ ಈ ರಾಜ್ಯ ಸ್ಥಾಪಿತವಾಗಿ, ನದಿಯ ಉತ್ತರ ದಡದಲ್ಲಿ ಆನೆಗೊಂದಿಯಂಬ ಪ್ರಾಚೀನ ಪಟ್ಟಣವು ಈ ರಾಜ್ಯಕ್ಕೆ ಸೇರಿತ್ತು

ವಿಜಯನಗರದ ಸ್ಥಾಪನೆಯ ಉದ್ದೇಶಗಳು ಹಲವಾರು . ತಲತಾಂತರದಿಂದ ಬಂದ ನಮ್ಮ ಸಂಸ್ಕೃತಿ ಕಾಪಾಡುವುದು, ಎಲ್ಲ ಧರ್ಮಪಂಥಗಳು ಕಟ್ಟಿದ ಸಂಸ್ಥೆಗಳನ್ನು ಪೋಷಿಸುವುದು, ಸ್ಥಳೀಯ ಭಾಷೆ, ಸಾಹಿತ್ಯ ಮತ್ತು ಕಲೆಗಳ ಪ್ರೋತ್ಸಾಹ ಇತ್ಯಾದಿ. ಈ ಕಾಲದಲ್ಲಿದ್ದ ಇಂಗ್ಲೆಂಡಿನ ಸಮಾಜಕ್ಕೂ ವಿಜಯನಗರ ಸಾಮ್ರಾಜ್ಯಕ್ಕೂ ಎಷ್ಟು ವ್ಯತ್ಯಾಸ ಇದೆ ಅನ್ನುವುದು ಇಲ್ಲಿ ಕಾಣಬಹುದು.
ಇವನ ಕಾಲದಲ್ಲಿ ದೊರೆತ ತಾಮ್ರ ಶಾಸ ನಗಳಲ್ಲಿ ಹಳೆ ಕನ್ನಡದಲ್ಲಿ ಬರೆದ ಮಾಹಿತಿಗಳ ಕೊನೆಯಲ್ಲಿ ಅವನ ಮನೆದೇವರಾದ ವಿರೂಪಾಕ್ಷ ಎಂಬ ರಾಜ ಮುದ್ರೆ ಇದೆಯೇ ಹೊರತು ಅರಸನ ಹೆಸರು ಕಾಣಿಸುವುದಿಲ್ಲ.
ವಿಜಯನಗರದ ಅಧಿಪತಿಗಳಾಗಿ ನಾಲ್ಕೂ ವಂಶದ ಅರಸರು ರಾಜ್ಯಭಾರ ಮಾಡಿದರು. ಮೊದಲನೆಯದು ಹರಿಹರ ೧ ನಿಂದ ಸ್ಥಾಪಿತವಾದ ಸಂಗಮ ರಾಜ ವಂಶ. ೧೩೩೬ ರಿಂದ ೧೩೫೬ ವರೆಗೆ ಇವನ ಅಡಳಿತ. ಈ ಕಾಲದಲ್ಲಿ ಇವನ ನಾಲ್ಕು ಸಹೋದರರು ಬೇರೆ ಬೇರೆ ಪ್ರಾಂತ್ಯಗಳ ಆಡಳಿತ ವಹಿಸಿದ್ದರು. ಉತ್ತರದಲ್ಲಿ, ಗುಲ್ಬರ್ಗ ಪ್ರದೇಶದಲ್ಲಿ ೧೩೪೭ ರಲ್ಲಿ ಮುಸಲ್ಮಾನ್ ಸುಲ್ತಾನ್ ಬಹುಮಿನಿ ರಾಜ್ಯವನ್ನು ಸ್ಥಾಪನೆ ಮಾಡಿದ್ದು ವಿಜಯನಗರ ಅರಸರಿಗೆ ಅಸಮಾಧಾನ ವಾಗಿತ್ತು.
ಬುಕ್ಕರಾಯನ ಅಡಳಿತದಲ್ಲಿ (೧೩೫೬-೧೩೭೭), ಬಹುಮನಿ ಮತ್ತು ವಿಜಯನಗರ ಯುದ್ಧಗಳು ಅನೇಕವಾಗಿದ್ದವು. ಕೊನೆಗೆ ಈ ಎರಡು ರಾಜ್ಯಗಳಿಗೂ ಒಡಂಬಳ ಡಿಕೆ ಉಂಟಾಗಿ ಒಂದು ರೀತಿ ಶಾಂತಿ ಬಂತು. ಬುಕ್ಕರಾಯನ ಕಾಲದಲ್ಲಿ ಕೃಷ್ಣ ನದಿಯಿಂದ ರಾಮೇಶ್ವರದವರೆಗೆ ವಿಸ್ತರಿದ್ದ ಈ ಸಾಮ್ರಾಜ್ಯದಲ್ಲಿ ಶಾಂತಿ ಮತ್ತು ಸಂವೃದ್ಧಿ ನೆಲೆಗೊಂಡವು . ೧೩೬೦ ರಲ್ಲಿ ಇವನ ಎರಡನೇ ಮಗ ಕಂಪಣ್ಣ ಒಡೆಯರ್ ದಕ್ಷಿಣ ಭಾಗದಲ್ಲಿ ಇರುವ ಕೆಲವು ಪ್ರದೇಶಗಳನ್ನು ಗೆಲ್ಲುವ ಉದ್ದೇಶದಿಂದ ದಂಡೆ ಯಾತ್ರೆ ಮಾಡಿ ಮದುರೈನಲ್ಲಿ ಅಳುತಿದ್ದ ಸುಲ್ತಾನ ನನ್ನು ಸೋಲಿಸಿ ವಿಜಯನಗರದ ಸಾಮ್ರಾಜ್ಯವನ್ನು ವಿಸ್ತರಿಸಿದ, ಈತ ಈ ಪ್ರದೇಶದಲ್ಲಿ ಹಲವಾರು ವರ್ಷ ಇದ್ದು ದೇವಸ್ಥಾನಗಳ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ನಿಂತು ಹೋಗಿದ್ದ ಪೂಜೆ ಪುರಸ್ಕಾರಗಳನ್ನೂ ಪುನಃ ಆರಂಭಮಾಡಿದ. ಒಂದು ಉದಾಹರಣೆ, ಹಿಂದಿನ ರಾಜಕೀಯ ಪರಿಸ್ಥಿತಿ ಪಲವಾಗಿ ರಂಗನಾಥದೇವರ ವಿಗ್ರಹವನ್ನು ತಿರುಪತಿಯಿಂದ ಶ್ರೀರಂಗಕ್ಕೆ ಮರಳಿ ತಂದು ಪುನಃ ಪ್ರತಿಷ್ಠಾಪನೆ ಮಾಡಿಸಿದ. ಈ ದಂಡಯಾತ್ರೆಯ ವಿವರಗಳನ್ನು ಕಂಪಣ್ಣನ ಮಡಿತಿ ಗಂಗಾದೇವಿ “ಮಧುರಾವಿಜಯಮ್” ಎಂಬ ಸಂಸ್ಕೃತದ ಕಾವ್ಯದಲ್ಲಿ ಚಿತ್ರಿಸಿದ್ದಾಳೆ. ಈ ಆಡಳಿತದಲ್ಲಿ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯಕ್ಕೆ ಪ್ರೋತ್ಸಾಹ ಇತ್ತು. ವೀರಶೈವ, ಜೈನ ಮತ್ತು ಇತರ ಗ್ರಂಥಕಾರರಿಂದ ಅನೇಕ ಕನ್ನಡ ಸಾಹಿತ್ಯಗಳು ರಚಿತವಾಯಿತು. ನೆರೆಯ ರಾಜ್ಯದಿಂದ ವಿಜಯನಗರದ ರಾಜರಿಗೆ ಕಪ್ಪ ಕಾಣಿಕೆಗಳನ್ನು ಮತ್ತು ರಾಯಭಾರಿಗಳನ್ನು ಕಳುಸಿತ್ತಿದ್ದರು. ೧೩೭೪ ರಲ್ಲಿ ವಿಜಯನಗರದಿಂದ ಚೀನಾ ದೇಶಕ್ಕೆ ಒಬ್ಬ ರಾಯಭಾರಿಯನ್ನು ಕಳಿಸಿದ್ದಕ್ಕೆ ಮಿಂಗ್ ಚಕ್ರವರ್ತಿ ಮನೆತನದ ದಾಖಲೆ ಇದೆ.
ಇವನ ನಂತರ ಹಿರಿಯ ಮಗ ಇಮ್ಮಡಿ ಹರಿರಾಯ ೧೩೭೭ ರಿಂದ ೧೪೦೪ ವರೆಗೆ ಆಳಿ ವಿಜಯನಗರದಲ್ಲಿ ಅನೇಕ ಅಭಿವೃದ್ಧಿಗಳನ್ನು ಮಾಡಿ ರಾಜ್ಯಭಾರ ನಿರಾತಂಕವಾಗಿ ಶಾಂತಿ ಇಂದ ನಡೆಯಿತು. ಈ ಕಾಲದಲ್ಲಿ ಕೃಷಿ ಉತ್ಪಾದನೆ ಹೆಚ್ಚಾಗಿದ್ದು ನದಿಗಳಿಗೆ ಕಾಲುವೆ ತೊಡಿಸಿ ಮತ್ತು ಹಲವಾರು ಕೆರೆಗಳನ್ನು ಕಟ್ಟಿಸಿದ. ಅವನ ತಂದೆಯಂತೆ ಇವನ ಆಳ್ವಿಕೆಯಲ್ಲಿ ವೇದಗಳನ್ನು ಕನ್ನಡದಲ್ಲಿ ರಚಿಸಿದ್ದು ೧೩೮೦ ರಲ್ಲಿ ಪೂರ್ತಿಗೊಂಡಿತು, ಈ ಸಾಧನೆಗಳಿಗೆ ಹರಿರಾಯನಿಗೆ “ವೇದಮಾರ್ಗ ಸ್ಥಾಪನಾಚಾರ್ಯ” ಮತ್ತು “ಕರ್ನಾಟಕ ವಿದ್ಯಾವಿಲಾಸ ” ಎಂಬ ಪ್ರಶಸ್ತಿಗಳು ಬಂದವು .
ಈ ಲೇಖನದಲ್ಲಿ ಸ್ಥಳದ ಒತ್ತಡ ಇರುವದಿಂದ ಈಗ ವಿಜಯನಗರದ ಅತ್ಯಂತ ಮುಖ್ಯವಾದ ದೊರೆ ಕೃಷ್ಣದೇವರಾಯನ ಬಗ್ಗೆ ಪರಿಚಯ ಮಾತ್ರ ಮಾಡುವುದು ಇಲ್ಲಿ ಸೂಕ್ತ.
ತುಳು ವಂಶದ ಮೊದಲನೆ ದೊರೆ ವೀರನರಸಿಂಹನ ಆಳಿಕೆ ೧೫೦೫ ರಿಂದ ೧೫೦೯ ವರಗೆ ಮಾತ್ರ. ನಂತರ ಬಂದ ದೊರೆ ಕೃಷ್ಣದೇವರಾಯ. ಆಗುಸ್ಟ್ ೮ ನೇ ತಾರೀಕು ೧೫೦೯ ಕೃಷ್ಣಜನ್ಮಾಷ್ಟಮಿ ದಿನ ಪಟ್ಟಾಭಿಷೇಕ ನಡೆಯಿತು. ಆಗ ಈ ಸಾಮ್ರಾಜ್ಯ ಅಷ್ಟೇನು ಸುಭದ್ರ ಸ್ಥಿತಿಯಲ್ಲಿ ಇರಲಿಲ್ಲ. ಒರಿಸ್ಸಾದ ಪ್ರತಾಪ ರುದ್ರನ ಉದ್ದೇಶ ಗೋಲ್ಕಂಡದ ಸುಲ್ತಾನರೊಂದಿಗೆ ಜೊತೆ ಕೂಡಿ ವಿಜನಗರದಮೇಲೆ ಧಾಳಿ ಮಾಡಿ ಅದರ ಸಂಪತ್ತನ್ನು ಸೂರೆ ಮಾಡುವುದು. ೧೫೦೧ ರಲ್ಲೇ ಬಹುಮುನಿಯ ಎರಡನೇ ಮಹಮದ್ “ಕಾಫಿರ್” ರಾಜ್ಯಗಳ ಮೇಲೆ “ಜಿಹಾದ್ “ನಡೆಸುವುದು ರಾಜ್ಯ ನೀತಿ ಅಂತ ಘೋಷಿಸಿದ್ದ. ಈ ಮಧ್ಯೆ ಮಹಮೂದ್ ಷಾ ಮತ್ತು ಯೂಸುಫ್ ಆದಿಲ್ ಷಾ ಇಬ್ಬರು ಸೇರಿ ದೊಡ್ಡ ಸೇನೆ ಯನ್ನು ಜಮಾಯಿಸಿ ಆಗತಾನೆ ಪಟ್ಟಕ್ಕೆ ಬಂದ ಈ ದೊರೆಯ ಮೇಲೆ ಉತ್ತರದಿಂದ ದಂಡೆತ್ತಿ ಬಂದರು. ಈ ಸೈನ್ಯವನ್ನು ಗಡಿಯಲ್ಲೇ ತಡೆದು ಶತ್ರು ಸೇನೆ ನುಚ್ಚುಚೂರಾಯಿತು. ಕೊವಿಲಕೊಂಡ ಎಂಬ ಸ್ಥಳದಲ್ಲಿ ಆದಿಲ್ ಷಾ ಸಾವಿಗೀಡಾದನು.
ಆ ಸಮಯದಲ್ಲಿ ದಕ್ಷಿಣ ತೀರವನ್ನು ಪೋರ್ಚುಗೀಸರು ಆವರಿಸಿಕೊಂಡು ಹಲವಾರು ರಾಜ್ಯಗಳ ಜೊತೆ ತಮ್ಮ ವಾಣಿಜ್ಯವನ್ನು ವಿಸ್ತರಿಸುದಕ್ಕೆ ಪ್ರಯತ್ನಿಸುತ್ತಿದ್ದರು. ಕೃಷ್ಣ ದೇವರಾಯ ತನ್ನ ಶತ್ರು ಗಳನ್ನು ಸೋಲಿಸುವ ರೀತಿ ನೋಡಿ ಪೋರ್ಚುಗೀಸ್ ಪ್ರದೇಶದ ಗವರ್ನರ್ ಅಲ್ಬುಕರ್ಕ್ ೧೫೦೯ ರಲ್ಲಿ ಇವನಿಗೆ ಒಂದು ಸಲಹೆ ಕೊಟ್ಟ, ಇದು ವಿಜಯನಗರದ ಸೈನ್ಯಕ್ಕೆ ವಿಶೇಷ ಕುದರೆಗಳನ್ನು ಒದಗಿಸುವುದು ಆದರೆ ಕೃಷ್ಣದೇವರಾಯ ಕಿವಿಗೊಡಲ್ಲಿಲ್ಲ. ಬಿಜಾಪುರದ ಇಸ್ಮಾಯಿಲ್ ಆದಿಲ್ ಷಾ ರಾಯಚೂರನ್ನು ವಶಪಡಿಸಿಕೊಂಡಿದ್ದು ಕೇಳಿ ಇಲ್ಲಿಗೆ ಮುತ್ತಿಗೆ ಹಾಕಿ ಮೇ ತಿಂಗಳು ೧೫೨೦ ರಲ್ಲಿ ತನ್ನ ರಾಜ್ಯಕ್ಕೆ ಸೇರಿಸಿದ. ಇಲ್ಲಿಗೆ ಕೃಷ್ಣದೇವರಾಯನ ದಿಗ್ವಿಜಯ ಒಂದು ಘಟ್ಟಕ್ಕೆ ಸೇರಿತ್ತು

ವಶಪಡಿಸಿಕೊಂಡ ರಾಜ್ಯದ ಶತ್ರುಗಳ ಮೇಲೆ ತೋರಿದ ಮಾನವೀಯತೆ ಪರಿಣಾಮವಾಗಿ ಯಾವ ರೀತಿಯ ದ್ವೇಷ ಉಳಿಯಲಿಲ್ಲ.
ಇವನು ಹೋರಾಡಿದ ಯುದ್ಧಗಳ ಬಗ್ಗೆ ವಿಚಾರಮಾಡುಲು ಇಲ್ಲಿ ಅವಶ್ಯಕತೆ ಇಲ್ಲ. ವಿಜಯನಗರ ರಾಜ್ಯ ವಿಶಾಲವಾಗಿ ನರ್ಮದಾ ನದಿಯಿಂದ ಕಾವೇರಿ ವರಗೆ ಹರಡಿತ್ತು.
ಇವನ ಕಾಲದಲ್ಲಿ ಈ ದೇಶ ಪ್ರಪಂಚದಲ್ಲೇ ಅತ್ಯಂತ ಸಂವೃದ್ಧಿ ಆಗಿತ್ತು ಎನ್ನುವದರಲ್ಲಿ ಏನೂ ಸಂದೇಹವಿಲ್ಲ. ಇವನ ಆಸ್ಥಾನದಲ್ಲಿ ಜೈನ, ವೀರಶೈವ ಮತದ ಅನೇಕ ವಿದ್ವಾಂಸರು ಇದ್ದರು. ವ್ಯಾಸರಾಯರು ಇವನ ಧರ್ಮಗುರುಗಳಾಗಿದ್ದರು ಮತ್ತು ಇವನ ಮಾರ್ಗದರ್ಶಿಕರು ಹೌದು. ದೇವಸ್ಥಾನದಗಳ, ಜೀರ್ಣೋದ್ಧಾರ ನೂತನ ನಿರ್ಮಾಣ ಮತ್ತು ಧಾರಾಳವಾಗಿ ದಾನ ಧರ್ಮ ಮಾಡಿ ದತ್ತಿ ಗಳನ್ನೂ ಮಾಡಿದ. ಇವನ ಪಟ್ಟಾಭಿಷೇಕದ ಸ್ಮರಣೆಗೆ ವಿರೂಪಾಕ್ಷ ದೇವಾಲಯದಲ್ಲಿ ಒಂದು ಸಭಾ ಭವನ ಮತ್ತು ಗೋಪರವನ್ನು ಕಟ್ಟಿಸಿದ. ಆಗಿನ ರಾಜಧಾನಿ ವಿಜಯನಗರ ಹತ್ತಿರ ತನ್ನ ತಾಯಿ ನಾಗಲಾದೇವಿ ಜ್ಞಾಪಕಾರ್ಥವಾಗಿ ನಾಗಲಾಪುರವನ್ನು (ಇಂದಿನ ಹೊಸಪೇಟೆ) ನಿರ್ಮಿಸಿದನು.
ಕೃಷ್ಣದೇವರಾಯ ಸ್ವತಃ ವಿದ್ವಾಂಸ, ತೆಲಗು ಮತ್ತು ಸಂಸ್ಕೃತ ದಲ್ಲಿ ಹಲವಾರು ಗ್ರಂಥಗಳನ್ನು ರಚಿಸಿದ. ಅಮುಕ್ತ ಮೂಲ್ಯ ಮತ್ತು ಜಾಂಬವತಿ ಕಲ್ಯಾಣ ಇತ್ಯಾದಿ. ಅನೇಕ ಕವಿಗಳಲ್ಲಿ ತೆಲಗು ಭಾಷೆಯ ಅಲ್ಲಸಾನಿ ಪೆದ್ದನ ಎಂಬುವನು. ಇವನಿಗೆ ಆಂಧ್ರ ಕವಿತಾ ಪಿತಾಮಹ ಎನ್ನುವ ಪ್ರಶಸ್ತಿ ದೊರೆಯಿತು, ಕನ್ನಡದ ಕುಮಾರವ್ಯಾಸನು ಬರೆಯದೆ ಬಿಟ್ಟ ಮಹಾಭಾರತದ ಕೊನೆಯ ಎಂಟು ಪರ್ವಗಳನ್ನು ತಿಮ್ಮಣ್ಣ ಕವಿ ರಚಿಸಿ ಕನ್ನಡ ಮಹಾಭಾರತವನ್ನು ಸಂಪೂರ್ಣ ಮಾಡಿದ . ಈ ಕೃತಿ “ಕರ್ನಾಟಕ ಕೃಷ್ಣರಾಯ ಕಥಾ ಮಂಜರಿ ” ಎಂದು ಪ್ರಸಿದ್ಧವಾಗಿದೆ.
ನವರಾತ್ರಿ ಉತ್ಸವ ರಾಜ್ಯದ ಎಲ್ಲ ಭಾಗದಲ್ಲಿ ಆಚರಣೆಯಲ್ಲಿತ್ತು ಈ ಪರಂಪರೆಯನ್ನು ಮೈಸೂರಿನ ದೊರೆಗಳು ಅಂಗೀಕರಿಸಿ ಅದರ ವೈಶಿಷ್ಟ ಮತ್ತು ವೈಭವನ್ನು ಕಾಪಾಡಿಕೊಂಡು ಬಂದಿದ್ದಾರೆ.
ಅಮುಕ್ತ ಮೂಲ್ಯದಲ್ಲಿ ರಾಜ್ಯಭಾರ ಮಾಡುವ ವಿಧಾನವನ್ನು ವಿರಳವಾಗಿ ಚರ್ಚೆ ಮಾಡಿದ್ದಾನೆ. ಈಗಿನ ಆಧುನಿಕ ಭಾರತದಲ್ಲಿ ಹಳ್ಳಿಗಳಲ್ಲಿ ಜಾರಿಯಲ್ಲಿ ಇರುವ ಪಂಚಾಯಿತಿ ಪದ್ಧತಿ ವಿಜಯನಗರದಲ್ಲೇ ಶುರುವಾಗಿತ್ತು . ಹಳ್ಳಿ ಶಾನುಭೋಗರು ಮತ್ತು ಭದ್ರತೆಗೆ ತಳವಾರ ಇವನ ಕಾಲದಲ್ಲಿ ಆರಂಭವಾಯಿತು. ಇವನ ರಾಜ್ಯದ ಅಡಳಿತ ಮತ್ತು ಸಂವೃದ್ಧಿಯ ಬಗ್ಗೆ ಅನೇಕ ವಿದೇಶದಿಂದ ಬಂದ ಪ್ರವಾಸಿಗರು ಅತಿಶಯವಾಗಿ ಬರೆದಿದ್ದಾರೆ. ಇವರಲ್ಲಿ ಮುಖ್ಯವಾದವರು ಡೊಮಿಂಗೊ ಪಯ್ಸ್ ಮತ್ತು ಫೆರನೋ ನೂನ್ಸ್.
ಕೃಷ್ಣದೇವರಾಯ ೧೫೨೯ ರಲ್ಲಿ ಕಾಲವಾದ.
ಈ ಸಾಮ್ರಾಜ್ಯ ಮೂರುವರೆ ಶತಮಾನಗಳನಂತರ ೧೩೩೬ ನಲ್ಲಿ ಹಚ್ಚಿದ ದೀಪ ನಂದಿ ಹೋಯಿತು. ಜನವರಿ ೨೩ ೧೫೬೫ ವಿಜಯನಗರದ ಉತ್ತರಿದಲ್ಲಿದ್ದ ಮುಸ್ಲಿಂ ಸುಲ್ತಾನರೆಲ್ಲ ಒಂದಾಗಿ ಆಗಿನ ದೊರೆ ರಾಮರಾಯ ಮೇಲಿನ ಧಾಳಿ ತಾಳಿಕೋಟೆ ಎಂಬ ಸ್ಥಳದಲ್ಲಿ ಶುರುವಾಯಿತು. ಮೊದಲು ಮೊದಲು ರಾಮರಾಯನ ಪಡೆಗೆ ಗೆಲ್ಲುವ ಸೂಚನೆ ಇತ್ತು, ಆದರೆ ವಿಜಯನಗರದ ಸೇನೆಯ ಇಬ್ಬ ಮುಸ್ಲಿಂ ನಾಯಕರು, (ಗಿಲಾನಿ ಸಹೋದರರು) ತಮ್ಮ ಸ್ವಾಮಿನಿಷ್ಠೆಯನ್ನು ಬದಲಾಯಿಸಿ ಸುಲ್ತಾನರಿಗೆ ಬೆಂಬಲ ಕೊಟ್ಟು ರಾಮರಾಯನ್ನು ಸೆರೆ ಹಿಡಿದು ಅಲ್ಲೇ ಅವನ ಶಿರಚ್ಛೇದನೆ ಮಾಡಿದರು. ನಾಯಕ ಇಲ್ಲದೆ ವಿಜಯನಗರ ಸೈನ್ಯ ನಾಶಕವಾಯಿತು. ಸುಲ್ತಾನರ ಸೈನ್ಯ ಹಂಪೆಯನ್ನು ಕೊಳ್ಳೆ ಹೊಡೆದು ದರೋಡೆ ಮಾಡಿದರು.

೧೯೦೧ ನಲ್ಲಿ ಒಬ್ಬ ಬ್ರಿಟಿಷ್ ಅಧಿಕಾರಿ Robert Sewel ಬರೆದ ” A Forgotten Empire ” ನಲ್ಲಿ ಹೀಗೆ ಬರೆದಿದ್ದಾನೆ;
With fire and sword, with crowbar and axes they carried on day after day their work of destruction. Never perhaps in the history of the world has such havoc been wrought and wrought so suddenly, on a splendid city teeming with wealth and reduced to ruins”
ಇಷ್ಟು ಅನೇಕ ಇತಿಹಾಸಕಾರರು ಬರೆದ ಮತ್ತು ಶಾಸನಗಳ ಆಧಾರದ ಮೇಲೆ ತಿಳಿದಿರುವ ಸಂಗತಿಗಳು. ಆದರೆ ಈಚೆಗೆ ಜಾತ್ಯತೀತವಾದಿ (Secularist), ದಿವಂಗತ ಗಿರೀಶ್ ಕಾರ್ನಾಡ್ ಅವರು ತಮ್ಮದೇ ವಾದವನ್ನು ಮುಂದೆ ಇಟ್ಟಿದ್ದರು. ತಾಳಿಕೋಟೆ ಯುದ್ಧ ಹಿಂದೂ ಮುಸ್ಲಿಂ ಅಲ್ಲ, ಇದು ಬಹುಶ ಒಳೆಗೆ ನಡದಿದ್ದ ಸಂಚಿರಬಹುದು ಮತ್ತು ತಾಳಿಕೋಟೆ ಇರುವುದು ಕೃಷ್ಣ ನದಿಯ ಉತ್ತರದಲ್ಲಿ ವಿಜಯನಗರ ಸಾಮ್ರಾಜ್ಯ ಇದ್ದಿದ್ದು ನದಿಯ ದಕ್ಷಿಣದಲ್ಲಿ ಆದ್ದರಿಂದ ಮುಸ್ಲಿಂ ಸೈನ್ಯ ವಿಜಯನಗರಕ್ಕೆ ಬಂದು ನಾಶಮಾಡುವುದು ಹೇಗೆ ಸಾಧ್ಯ ಅಂತ ಎರಡು ವಿಡಿಯೋ ಗಳಲ್ಲಿ ಚರ್ಚಿಸಿದ್ದಾರೆ.
ಆದರೆ ಈ ದೊಡ್ಡ ಸಾಮ್ರಾಜ್ಯ ನಾಶವಾಯಿತು, ಈಗ ಹಂಪೆಯಲ್ಲಿ ಈ ಅವಶೇಷಗಳನ್ನು ನೋಡಬಹುದು.
ಇದಕ್ಕೆ ಕಾರಣ ಯಾರು ಎನ್ನುವುದನ್ನು ನಿಮಗೆ ಬಿಟ್ಟಿದೆ.

ರಾಮಮೂರ್ತಿ
ಬೇಸಿಂಗ್ ಸ್ಟೋಕ್

Acknowledgements

Photos; Courtesy Google

ಕರ್ನಾಟಕದ ಪರಂಪರೆ ೨ನೇ ಸಂಪುಟ ( ಮೈಸೂರು ಸರ್ಕಾರ ೧೯೭೦)
A Forgotten Empire, Robert Sewell ೧೯೦೧

ಗಿರೀಶ್  ಕಾರ್ನಾಡ್  ನಾನೇಕೆ ರಾಕ್ಷಸ ತಂಗಡಿ ಬರೆದೆ?

 

Youtube video link ಕಳಿಸಿದ ಶ್ರೀವತ್ಸ ದೇಸಾಯಿ ಅವರಿಗೆ ವಂದನೆಗಳು