‘ಸೆಲೆ’- Dr.ರಾಮ್ ಶರಣ್ ಅವರ ಪ್ರಣಯ ಕವನ

ಪ್ರಕೃತಿಯಲ್ಲಿ ಇರುವ ಜೀವಿಗಳು, ಹೂ, ಮರ, ಗಿಡ, ಬಳ್ಳಿ, ಎಲ್ಲವೂ ಅವಿರತ ಸೃಷ್ಟಿಯ ಕಾರ್ಯದ ಪ್ರತೀಕ.ಎಲ್ಲಕೂ ಒಂದು ಸೆಲೆ ಇರಲೇಬೇಕು, ಸೆಲೆ ಇಲ್ಲದ ಸೃಷ್ಟಿ ನಿರರ್ಥಕವಾದುದು. ಹಾಗೆಯೇ ಪ್ರೀತಿ ಇಲ್ಲದ ಪ್ರಣಯ ಕೂಡ ನಿರರ್ಥಕವೇ ಸರಿ. ಅಂತಹುದೊಂದು ಭಾವವನ್ನು ಮೆರೆಸಿದ ಬರಹ ಇದಾಗಿದೆ. ರಾಮ್ ಅವರ ಪದ ಮೋಡಿಯೂ ಇಲ್ಲಿ ಪ್ರಣಯವಾಡಿದಂತೆ ತೋರುವುದು ಈ ಕವನದ ಮತ್ತೊಂದು ವಿಶೇಷ. ಇಲ್ಲಿ ಅವರು ‘ಸರಪಳಿ ಕಾವ್ಯ’ (chain rhyme) ವನ್ನು ಬಳಸಿ ಕವನವನ್ನು ಭಾವಗೀತೆಯಾಗಿಸಿ, ಕೇಳಿ ಆನಂದಿಸುವವರಿಗೆ ಮತ್ತೆ ಮತ್ತೆ ಕೇಳಬೇಕೆನಿಸುವ ಮಾದಕವನ್ನು ತುಂಬಿದ್ದಾರೆ.

ಕಳೆದ ತಿಂಗಳಷ್ಟೇ  KBUK ಯುಗಾದಿ ಸಂಭ್ರಮಾಚರಣೆಯಂದು ( KSSVV) ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ (UK)ಯ  ಕವಿಗಳು ಹೊರತಂದ ಧ್ವನಿಸುರುಳಿಯಲ್ಲಿ  ಈ ಕವನವೂ ಕೂಡ ಹಾಡಾಗಿ ಜನರ ಮನ ಮುಟ್ಟಿದೆ.

 ಸೆಲೆ

ಕಣ್ಣುಗಳು ಕಲೆತಾಗ ಝುಮ್ಮೆನದೇ ಹೃದಯ

ಹೃದಯ ಕುಣಿ-ಕುಣಿದಾಗ ಮೈಮರೆಯದೇ ದೇಹ

ದೇಹ ತೇಲಿ ನಲಿದಾಗ ಸ್ತಬ್ಧವಾಗದೇ ಸಮಯ

ಸಮಯ  ನಿಂತು ತೂಲಿದಾಗ  ಬಂದೆ ನೀ ಸನಿಹ

 

ಗೆಳೆಯ ನಿನ್ನ ನೆನೆದಾಗ ಮಾಯವಾಗದೇ  ಜಗ

ಜಗದರಿವು ಮರೆತಾಗ ಕಣ್ಮುoದೇ ನಿನ ಮೊಗ

ಮೊಗವೆತ್ತಿ ಹಿಡಿದಾಗ ಕಾಣದೇ ನನ ಬಿಂಬ

ಬಿಂಬದ ಪ್ರತಿಫಲನದಾಗ ಕಂಡೆ ಪ್ರತಿಬಿಂಬ

 

ಪ್ರೀತಿಯ ಸುಳಿಗೆ ಸಿಕ್ಕಾಗ ಕಂಪಿಸದೇ ಜೀವ

ಜೀವ ನದಿಯ ಕಂಡಾಗ ಹಿಗ್ಗದೇ ಪ್ರಣಯ

ಪ್ರಣಯದ ಕರೆ ಬಂದಾಗ ಮಳೆಯಾದೆ ಇನಿಯ

ಇನಿಯ ಸೆಲೆಯಾದೆ, ನಿನ್ನ ಪ್ರೀತಿಯ ಸೆಲೆಯಾದೆ  

 

-ರಾಮ್  

ನೂರು ನಮನ (✍ವಿಜಯನರಸಿಂಹ ಅವರ ಪ್ರೇಮ ಕವನ )

(ಮಲ್ಲಿಗೆ ಹೂ ಅಂದರೆ ಹೆಣ್ಣುಮಕ್ಕಳಿಗೆ ಪಂಚಪ್ರಾಣ, ಉದ್ದ ಜಡೆ ಇರುವವರು ಬೀಗು-ಜಂಭದಿಂದ ಮುಡಿಯುತ್ತಾರೆ.ಮೋಟ ಜಡೆಯವರು ಅದಕ್ಕೆ ತಕ್ಕಷ್ಟು ಸಣ್ಣದಾದ ಒಂದು ಮೊಳದಷ್ಡೋ ಅಥವಾ ಸ್ವಲ್ಪ ಜಾಸ್ತಿಯೋ ಮುಡಿದು ನಾವೇನೂ ಕಮ್ಮಿ ಇಲ್ಲ ಎಂದು ತೋರ್ಪಡಿಸುತ್ತಾರೆ. ಇದೆಲ್ಲವೂ ಹಬ್ಬದ ದಿನಗಳಂದೋ ಇಲ್ಲವೇ ಮದುವೆ ಸಮಾರಂಭದಂದೋ ನೋಡುವ ಸಾಮಾನ್ಯ ದೃಶ್ಯ.

ಅಂತಹ ಸ್ತ್ರೀ-ಜಟ  ಸೌಂದರ್ಯವರ್ಧಕ  ಮೇರುಸುಮವಾದ ಮಲ್ಲಿಗೆ  ದಂಪತಿಗಳ ಬಾಳಿನಲ್ಲಿ  ನವಿರು ಪ್ರೇಮ ಪರಿಮಳವನ್ನು ಸೂಸುವ ಸುರಸುಮವೂ ಹೌದು. ಇದಕ್ಕೆ ಸಾಕ್ಷಿ ನಮ್ಮೆಲ್ಲರ ಮೆಚ್ಚಿನ ಒಲವಿನ ಕವಿ ಎಂದೇ ಖ್ಯಾತರಾದ ಕೆ.ಎಸ್.ನರಸಿಂಹಸ್ವಾಮಿಯವರ ‘ಮೈಸುರು ಮಲ್ಲಿಗೆ’ ಕೃತಿ.

ಅಂತಹ ದಿವ್ಯ ಮಲ್ಲಿಗೆ ನಮ್ಮೆಲ್ಲರ ಬಾಳಲ್ಲೂ ಆನಂದವನ್ನು ತಂದಿರುತ್ತಾಳೆ. ಅಂತಹದೊಂದು ಪ್ರೇಮಾಂಕುರ ಸಂದರ್ಭದ ಕವಿತೆಯಿದು ‘ನೂರು ನಮನ’. ಇಲ್ಲಿ ಮಲ್ಲಿಗೆಯನ್ನು ಕಟ್ಟಿ ಮಾರವವಳಿಗೆ ನಮನ ಸಲ್ಲಿಸಲೇಬೇಕೆಂದು ಅನಿಸಿತು.)

Mallige_3

ನೂರು ನಮನ

ಮಾಗಿ ಚಳಿಯ ಸಂಜೆಗೊಂದು

ಸಣ್ಣಗೆ ಸುರಿದ ಸೋನೆಯೊಂದು

ರಮ್ಯ ಭಾವಗಳೇಳುತ ಮನದಿ

ಗಮ್ಯ ಗಾಲಿಗಳು ಪಾದ ತಳದಿ

ನಲ್ಲೆಯ ನೋಡುವ ಕಾತರದ ಕಾಟ

ಮಲ್ಲೆಯ ಮಾರುವವಳತ್ತ ಓಟ

 

ಎಲೆಯಡಿಕೆ ಜಿಗಿವ ಕೆಂಪು ಬಾಯಿ

ಸರಸರನೆ ಆಡುವ ಅಳತೆಯ ಕೈ

ಚಿನ್ನದ ಮಲ್ಲೆಯ ಚೆಂದದ ಮಾಲೆ

ತಣ್ಣನೆ ಬಟ್ಟೆಯ ಹೊದಿಸಿ ಮೇಲೆ

ಬರುವವರು ನಿನ್ನ ಮಾಲೀಕರದಾರೊ

ಕೊಂಡು ನಿನ್ನ ಮುಡಿವರು ಯಾರೊ

ನೀನು ನನ್ನ ಬಾಳ ದೊಡ್ಡ ಮಲ್ಲಿಗೆ

ಬೆಳಗು ಅಲ್ಲೂ ಕರೆದೊಯ್ಯುವಲ್ಲಿಗೆ

 

ಪೋಣಿಸುವ ಕೈಗಳಿಗೆ ಜೀವನ

ಮುಡಿದ ಮುಡಿಯಲ್ಲಿ ಚೇತನ

ಸುಮವಯಸ್ಸು ನಿನಗೆರಡೇದಿನ

ಸಮಮನಸ್ಸು ನಿನ್ನದು ಅನುದಿನ

ಕೊಂಡವರೆದೆಗೆ ನೀನು ಸೇತುವೆ

ಪ್ರೀತಿ ಪರಿಮಳವೆರಡನೂ ಸೂಸುವೆ

ನನ್ನ ಮುದ್ದು ಮಲ್ಲಿಗೆ ಎಂದುದು

ಅವಳೆದೆಯ ಭಾವವಂತಹುದು

 

‘ಚೌಕಾಸಿಯೇನಮ್ಮ  ನಿನ್ನಲ್ಲಿ

ನನಗೆರಡು ಮೊಳ ತಾ ಇಲ್ಲಿ’

ಎನುತ ಒಯ್ದೆ ಮನೆಗೆ ಹರುಷದಿ

ಘಮವದೆಂತು ಓಡಿತು ಕ್ಷಣದಿ?

‘ಮಲ್ಲಿಗೆ ತಂದರೇನು ರಾಯರಿಂದು?’

ಎಂದವಳ ಮಾತೇ ಮತ್ತು ತಂದು

ಮಲ್ಲಿಗೆ ಕೊಟ್ಟವಳ ನೆನದು ಮನ

ಸಲ್ಲಿಸಿತು ಇಲ್ಲಿಂದಲೇ ನೂರು ನಮನ

 

✍ವಿಜಯನರಸಿಂಹ

 

(Picture credits to Google &  Dr.Srivatsa Desai)