ವೇದಕ್ಕನ ನೆನಪಿನೊಂದಿಗೆ – ಉಮೈರಾ ಬರೆದ ಲೇಖನ

ಈ ವಾರ ಪ್ರಥಮ ಬಾರಿ 'ಅನಿವಾಸಿಗೆ' ಮೂಲತಃ ಮಂಗಳೂರಿನವರಾದ ಹೊಸ ಲೇಖಕಿ  ಉಮೈರಾವನ್ನು ಸ್ವಾಗತಿಸುತ್ತಿದ್ದೇವೆ. ಅವರು ಮೂರು ವರ್ಷಗಳಿಂದ ಗ್ಲಾಸ್ಟರಿನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಬಗ್ಗೆ ಅವರಮಾತಿನಲ್ಲೇ ಅವರ ಪರಿಚಯವನ್ನು ಕೇಳೋಣ:
"ನಾನು ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ಇಲೆಕ್ಟ್ರಾನಿಕ್ & ಕಮ್ಯುನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದು ಈಗ UKಯಲ್ಲಿ Aerospace Engineer ಆಗಿ ಕೆಲಸ ಮಾಡುತ್ತಿದ್ದೇನೆ‌. ಪತಿ ಹನೀಫ್ ಕೂಡ ಇಲ್ಲಿ Aerospace Engineer. ನನಗೆ ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿದ್ದು ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸ ಮೈಗೂಡಿಸಿಕೊಂಡಿದ್ದೇನೆ‌.
ನನ್ನ ಜೀವನದ ಅನುಭವಗಳನ್ನು, ಮನದಲ್ಲಿ ಮೂಡುವ ಭಾವನಾತ್ಮಕ ವಿಚಾರಗಳನ್ನು ಅಕ್ಷರಗಳಲ್ಲಿ ವ್ಯಕ್ತಪಡಿಸಿ ಬರೆಯುವಲ್ಲಿ ಆಸಕ್ತಳಾಗಿದ್ದೇನೆ. ಪುಸ್ತಕಗಳ ಓದುವುದು ಮತ್ತು ಬರವಣಿಗೆ ನನ್ನ ಪ್ರಮುಖ ಹವ್ಯಾಸಗಳು."

ತಮ್ಮ ನೆರೆಹೊರೆಯಲ್ಲೇ ವಾಸಿಸುವ ವೇದಕ್ಕನ ಹೃದಯಸ್ಪರ್ಶಿ ವ್ಯಕ್ತಿಚಿತ್ರವನ್ನು ಇಲ್ಲಿ ಬರೆದಿದ್ದಾರೆ. ಓದಿ ಪ್ರೋತ್ಸಾಹಿಸಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

ಸಂಪಾದನೆಗೆ ಸಹಾಯ ಮಾಡಿ, ಸ್ವಲ್ಪೇ ಸಮಯದಲ್ಲಿ ಚಿತ್ರವನ್ನು ಬರೆದು ಶೋಭೆಹೆಚ್ಚಿಸಿದ ಗುಡೂರ್ ಅವರಿಗೆ ಋಣಿ. (-ಸಂ )
******************************************
ಮುಂಜಾನೆ ಹಂಡೆಯಲ್ಲಿ ಕಾದ ಬಿಸಿನೀರ ಸ್ನಾನ ಮುಗಿಸಿ ಬಂದ ನನಗೆ, ಬಿಸಿ ಬಿಸಿಯಾದ ನೀರ್ದೋಸೆ ಮಾಡಿಟ್ಟ ಅಮ್ಮ, ‘ಬೇಗ ರೆಡಿಯಾಗಿ ಇದನ್ನು ತಿಂದು ಹೋಗು’ ಅಂದಾಗ, ‘ಅಮ್ಮಾ…… ನಾನು ಮತ್ತು ಸ್ಮಿತಾ ಒಂದೇ ಬಸ್ಸಲ್ಲಿ ಹೋಗ್ಬೇಕು’ ಅಂತ ಹೇಳಿ ‘ಒಂದೇ ಒಂದು ದೋಸೆ ಸಾಕಮ್ಮ’ ಅಂದು ಬೇಗ ಬೇಗನೆ ತಿಂದು ಬಸ್ಸಿಗೆ ಓಡಿಬಿಟ್ಟೆ.

ಅಮ್ಮ ಏನೋ ಗೊಣಗುತ್ತಿರುವುದು ಕೇಳಿಸ್ತಿತ್ತು. ‘ಇವರಿಬ್ಬರ ಮಾತು ಮುಗಿಯೋದೇ ಇಲ್ಲ ಎಂದಿರಬಹುದು’ ಅಂತ ಮನಸ್ಸಲ್ಲೇ ಮುಸಿಮುಸಿ ನಗ್ತಾ ಓಡಿ ಹೋದೆ.
ನಾನು ಮತ್ತು ಸ್ಮಿತಾ ಇಬ್ಬರೂ ಮಾತಿನಲ್ಲಿ ಒಬ್ಬರನ್ನೊಬ್ಬರು ಮೀರಿಸುವವರು. ನನ್ನ ಮಾತಿನಲ್ಲಿ ನಾನು ಕಂಡದ್ದು, ಕೇಳಿದ್ದು, ಸಂಬಂಧಿಕರು, ನೆರೆಹೊರೆಯವರೆಲ್ಲರ ವಿಷಯವೂ ಒಳಗೊಂಡಿರುತ್ತಿದ್ದರೆ ಅವಳು ನನಗಿಂತಲೂ ಇನ್ನೂ ಎರಡು ಹೆಜ್ಜೆ ಮುಂದೆ. ಅದೆಷ್ಟೋ ವಿಷಯ ತಂದು ಸಾಸಿವೆ ಹುರಿದಂತೆ ಮಾತನಾಡುತ್ತಿದ್ದಳು.

ಆ ದಿನ ಕಾಲೇಜು ಮುಗಿಸಿ ಬರುವಾಗ ನಾನು ಆ ತಿಂಗಳ ‘ತುಷಾರ’ ಎತ್ತಿಕೊಂಡೆ.

ಅದೇನೋ ಮಾತಾಡುವಾಗ ಅವಳು ಕೇಳಿದ್ಲು “ಉಮೈರಾ, ಅದು ಹೇಗೆ ಮೊನ್ನೆ ನೀನು ಮಹಾಭಾರತದ ಕ್ವಿಜ್ ಅಲ್ಲಿ ಬಹುಮಾನ ತಗೊಂಡೆ? ನೀವು ನಮ್ಮ ಹಿಂದೂ ಗ್ರಂಥಗಳನ್ನು ಓದಲ್ಲ ಅಲ್ವಾ?’

‘ಹ್ಮ್, ಹಾಗೇನಿಲ್ಲ ಸ್ಮಿತಾ, ನಮ್ಮ ಕುರಾನಿನ ಮೊದಲ ಸೂಕ್ತವೇ “ಇಖ್ರಅ್” ಅಂದ್ರೆ “ಓದು” ಎಂದಾಗಿದೆ. ನಮ್ಮಜ್ಜಿಯ ಹತ್ರ ಪುರಾಣ ಸೇರಿದಂತೆ ಹಲವಾರು ಪುಸ್ತಕಗಳಿವೆ. ಅದರಲ್ಲಿದ್ದ “ಸಂಕ್ಷಿಪ್ತ ಮಹಾಭಾರತ“ ಅನ್ನುವ ಒಂದು ಪುಸ್ತಕ ನಾನು ಓದಿದ್ದೆ’ ಅಂದೆ.

ಹೀಗೆ ನಮ್ಮ ಮಾತಿನ ಸರಣಿಗಳು ದಿನದಿನವೂ ಇಂತಹ ವಿಭಿನ್ನ ಸಂಪ್ರದಾಯದ ಪರಸ್ಪರರ ನಡುವಿನ ಕೌತುಕದ ನಾನಾ ಸುದ್ದಿಗಳೊಂದಿಗೆ ಸಾಗುತ್ತಲೇ ಇರುತ್ತಿತ್ತು.

‘ಅಜ್ಜಿನೂ ಓದ್ತಾರೆ’ ಅಂತ ಕೇಳಿದಾಗ ಚಕಿತಗೊಂಡಿದ್ದ ಅವಳಿಗೆ ಅವರಿಗಿದ್ದ ಅತಿಯಾದ ಓದಿನ ಹವ್ಯಾಸವನ್ನು ನಾನು ಬಲು ಖುಶಿ ಮತ್ತು ಹೆಮ್ಮೆಯಿಂದ ಹೇಳಿದ ಆ ನೆನಪು ಮೊನ್ನೆ ಮೊನ್ನೆ ನಡೆದಂತಿದೆ.

ನನ್ನ ಮಾತುಗಳ ನಡುವೆ ಪದೇಪದೇ ಅಜ್ಜಿಯ ವಿಷಯ ಬರುತ್ತಿದ್ದರೆ, ಅವಳ ಮಾತುಗಳ ನಡುವೆ ಪದೇಪದೇ ಬರುತಿದ್ದ ಹೆಸರು ಅವಳ ಇಷ್ಟದ ‘ವೇದಾ’ ಎಂಬ ಹೆಂಗಸಿನದ್ದು.

ಆ ವೇದಕ್ಕನಿಗೂ ಅವಳು ನನ್ನ ಬಗ್ಗೆ ಹೇಳಿ ಹೇಳಿ, ವೇದಕ್ಕನಲ್ಲಿ ನನ್ನ ಬಗ್ಗೆ ಒಂದು ಕುತೂಹಲದ ಪ್ರಪಂಚವನ್ನೇ ಸೃಷ್ಟಿಸಿದ್ದಳು ಸ್ಮಿತಾ.

ನನಗಂತೂ ಆ ವೇದಕ್ಕನ್ನ ಅಲ್ಲೀ ತನಕ ನಾನು ನೋಡದೇ ಇದ್ರೂ, ಅವರಂದ್ರೆ ಅದೇನೋ ತೀವ್ರ ಕುತೂಹಲ ಹುಟ್ಟಿ ಬಿಟ್ಟಿತ್ತು. ವೇದಕ್ಕ ಏನೋ ಒಬ್ಬ ಮಹಾನ್ ಸಾಧಕಿ ಎಂಬ ಮನೋಭಾವ ಬೆಳೆದು ಬಿಟ್ಟಿತ್ತು.

ಒಂದು ದಿನ ಸ್ವಲ್ಪ ಲೇಟಾಗಿ ಶಾಲೆಗೆ ಬಂದ ಸ್ಮಿತ, ನಾನು ಸಿಕ್ಕಿದ ಕೂಡಲೇ ‘ಅಯ್ಯೋ, ಇವತ್ತೇನ್ ಗೊತ್ತ ವೇದಕ್ಕನ ಮಗಳು ಮೊದಲ ಬಾರಿ ಶಾಲೆಗೆ ಹೋಗ್ತಿದ್ದಾಳೆ. ಅವ್ಳು ಹೊರಟು ನಿಂತು ಅಳೋದೇನು, ವೇದಕ್ಕನೂ ಅಳೋದೇನು… ಅದನ್ನು ನೋಡ್ತಾ ಮನೆಯಲ್ಲಿ ನಾವೆಲ್ಲ ತಮಾಷೆ ಮಾಡ್ತಾ ನಿಂತುಕೊಂಡೆವು. ಹಾಗೆ ಸ್ವಲ್ಪ ಲೇಟ್ ಆಯಿತು’ ಅಂದಳು.

ಯಕ್ಷಗಾನದಲ್ಲಿ ಮಹಿಷಾಸುರ, ರಾವಣ ಹೀಗೆ ಯಾವುದೇ ಕಠೋರಹೃದಯಿಯ ಪಾತ್ರವನ್ನು ಕೊಟ್ರೂ ಅಚ್ಚುಕಟ್ಟಾಗಿ ನಿಭಾಯಿಸುವ ವೇದಕ್ಕ ಮಾತ್ರ ನಿಜ ಜೀವನದಲ್ಲಿ ಬಲು ಭಾವ ಜೀವಿ. ಬದುಕಿನ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಅರಿತವರಂತೆ ಇರುವ ಅವರ ಆಪ್ತತೆ ಉಕ್ಕಿಸುವ ಮಾತುಗಳು, ಯಾವುದೇ ಕುಹಕ-ಕುತಂತ್ರಗಳಿಲ್ಲದ ಅವರ ನೈಜ ಸಾಧುಸ್ವಭಾವ ಯಾರ ಹೃದಯದಲ್ಲೇ ಆದರೂ ಅವರ ಬಗ್ಗೆ ಪ್ರೀತಿ ಹುಟ್ಟಿಸುವಂತಿತ್ತು. ಮನಸ್ಸಲ್ಲಿರೋದನ್ನೆಲ್ವಾ ಒಮ್ಮೆಲೇ ಸುರಿಯುವ ಮಳೆಯಂತೆ ಅವರ ಮೆಲು ಮಾತುಗಳಲ್ಲೇ ಸುರಿಸಿಬಿಡುತ್ತಿದ್ದರು.

ನನ್ನ ಮತ್ತು ವೇದಕ್ಕನ ಮೊದಲ ಭೇಟಿಯನ್ನಂತೂ ನಾನೆಂದೂ ಮರೆಯಲು ಸಾಧ್ಯವೇ ಇಲ್ಲ.

“ಅಷ್ಟಮಿ ಹಬ್ಬಕ್ಕೆ ನಾವು ಕೊಟ್ಟಿಗೆ ಮಾಡ್ತೇವೆ, ಉಮೈರಾಳನ್ನು ಇನ್ವೈಟ್ ಮಾಡಿದ್ರೆ ಏನು ಅಂದ್ಕೊಂಡೆ ಆಂದ್ರಂತೆ”
ಹಾಗೆ ನಮ್ಮ‌ ಭೇಟಿ‌‌ ಅವರ ಮನೆಯಲ್ಲಿ ಅಷ್ಟಮಿ ದಿನದಂದಾಗಿತ್ತು .

ಮೂರು ಕಲ್ಲುಗಳ ಆ ಮೂಗುತಿ, ಕಣ್ಣಿಗೆ ಕಾಡಿಗೆ, ದೊಡ್ಡ ಬಿಂದಿ, ಕರ್ಲಿ (ಗುಂಗುರು) ಕೂದಲು ಮತ್ತು ಕಲಾವಿದೆ ಎಂದು ಗುರುತಿಸಲು ಸಾಧ್ಯವಾಗುವ ಅವರ ಚೈತನ್ಯಯುತ ಲವಲವಿಕೆಯ ಮಾತುಗಳು.

ಅದೆಷ್ಟು ಲವಲವಿಕೆ, ಅತಿಯಾದ ಅತಿಥಿ ಸತ್ಕಾರ, ಪ್ರೀತಿ ವಾತ್ಸಲ್ಯ ತುಂಬಿದ ವೇದಕ್ಕನ ಆಗಾಗ ತಾರಕಕ್ಕೇರುವ ನಗು ನಮ್ಮ ಆ ದಿನವನ್ನು ಸಂಪನ್ನವಾಗಿಸಿತು.

“ನಾನೆಷ್ಟು ಮಾತಾಡ್ತೇನೆ ಅಲ್ವಾ? ನನ್ನ ಗಂಡ ಹೇಗೆ ಸಹಿಸಿಕೊಳ್ತಾರೋ ಪಾಪ” ಅಂತ ತನ್ನನ್ನೇ ತಮಾಷೆ ಮಾಡಿಕೊಂಡರು.
“ನಂಗೆ ಮಾಸ್ಟರ್ಸ್ ಮಾಡ್ಬೇಕು ಅಂತ ತುಂಬಾ ಇಷ್ಟ ಇತ್ತು “

“ಇನ್ನೂ ಮಾಡ್ಬಹುದಲ್ವಾ?” ಅಂದೆ.

“ಅಯ್ಯೋ ಈ ಮರುಭೂಮಿಗೆ ಎಷ್ಟು ನೀರು ಸುರಿದರೂ ಸರಿಯೇ ಇನ್ನು” ಅಂತ ಮತ್ತೊಮ್ಮೆ ನಗು.

“ಅಲ್ಲ ಅಕ್ಕ, ಮಕ್ಕಳು ಸ್ಕೂಲ್ಗೆ ಹೋದ್ರೆ ಇಡೀ ದಿನ ನೀವೇನ್ ಮಾಡ್ತೀರ?” ಅಂತ ಅಮ್ಮನನ್ನು ಕೇಳಿದಾಗ “ಬೆಳಗ್ಗೆ ಬಂದ ಉದಯವಾಣಿಯನ್ನು ದಿನದಲ್ಲಿ ೪ ಸಲ ಓದಿ ಮುಗಿಸುತ್ತೇನೆ” ಎಂದರು.

ಯಕ್ಷಗಾನ ಲೋಕದಲ್ಲಿ ಅವರ ಸಾಧನೆಗೆ ಸಂದ ಪ್ರಶಸ್ತಿಗಳನ್ನು ತೋರಿಸಿ ಅವರ ಪ್ರೊಫೆಷನಲ್ ವಲಯದ ಬಗ್ಗೆ ಮಾತಾಡಿಕೊಂಡರು. ಅದು ಹೇಗಪ್ಪ ಆ ತರ ಪಾತ್ರಗಳೆಲ್ಲ ಮಾಡುತ್ತಾರೋ ಈಕೆ ಅಂತ ನಾನು ಯೋಚಿಸುವಂತಾಯಿತು.

ಮಾತಲ್ಲಿ ಪ್ರೀತಿ, ವಾತ್ಸಲ್ಯ ತುಂಬಿಕೊಂಡೇ ಮಾತಾಡುವ ಅವರ ಜೊತೆ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.


ಮನುಷ್ಯರಿಗೇನು ಬೇಕು ಮತ್ತೆ – ತನ್ನ (ಸುತ್ತಲೂ) ಸರೌಂಡಿಂಗ್ನಲ್ಲಿ ಪ್ರೀತಿ, ಕರುಣೆ, ವಾತ್ಸಲ್ಯ ತೋರುವವರಿದ್ದರೆ ಎಲ್ಲವನ್ನೂ ಜಯಿಸಿದಂತೆ ಖುಷಿ ಅಲ್ಲವೇ?

ಅದೆಷ್ಟೋ ಭೇಟಿಗಳು; ಆ ನಂತರದ ದಿನಗಳಲ್ಲಿ ನಮ್ಮದು ನಡೆಯುತ್ತಲೇ ಇತ್ತು. ಮನೆಯಲ್ಲಿ ಏನಾದ್ರೂ ತರಕಾರಿ ಬೆಳೆದ್ವಿ ಅಂದ್ರೆ ವೇದಕ್ಕನ ಮನೆಗೂ ಕಳುಹಿಸಿಕೊಡುವ ಪದ್ದತಿ ಇತ್ತು.

ಪಿಯುಸಿ ಮುಗಿದು ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಸೇರುವ ದಿನವೊಂದು ಬಂದಿತ್ತು. ಮನೆಯವರ ಬೀಳ್ಕೊಡುಗೆಯ ಜೊತೆಗೆ ನಮ್ಮ ಆಪ್ತರಾಗಿದ್ದ ವೇದಕ್ಕ ಕೂಡ ಬೀಳ್ಕೊಡಲು ಬಂದಿದ್ದರು. ನಮ್ಮನ್ನು ನೆನಪಿಸ್ಕೊಳ್ತಾ ಇರು, ಕಾಲ್ ಮಾಡು ನಂಗೆ, ಲ್ಯಾಂಡ್ಲೈನ್ ನಂಬರ್ ಗೊತ್ತಿದೆ ಅಲ್ವಾ ಅಂದಿದ್ದರು.


ಅದೊಂದು ದಿನ ಅಮ್ಮ ಕಾಲ್ ಮಾಡಿದವರು ’ವೇದಕ್ಕನಿಗೆ ತುಂಬಾ ಹುಷಾರಿಲ್ಲ, ಕ್ಯಾನ್ಸರ್ ಅದೇನೋ ಫೈನಲ್ ಸ್ಟೇಜಲ್ಲಿ ಇದೆ ಅಂತೆ’, ಅಂತ ಆಘಾತಕಾರಿ ಸುದ್ದಿಯನ್ನು ಹೇಳಿದ್ರು. ನನ್ನ ಮನಸ್ಸಲ್ಲೇನೋ ವೇದಕ್ಕನಿಗೇನಾಗುತ್ತೋ ಅನ್ನುವ ಭಯ. ಆ ದಿನದಿಂದ ಹಾಸ್ಟೆಲಲ್ಲಿ ಅವರದ್ದೇ ನೆನಪು, ಫ್ರೆಂಡ್ ಒಬ್ಬಳತ್ರ ನನ್ನ ದುಗುಡವನ್ನು ಹಂಚಿಕೊಂಡಿದ್ದೆ ಕೂಡ.

ದೇವ್ರೇ ಅವ್ರು ಬೇಗ ಗುಣಮುಖರಾಗಿ ಬರಲಿ ಅಂತ ಮನಸ್ಸು ಪೂರ್ತಿಯಾಗಿ ಬೇಡ್ಕೊಂಡಿದ್ದೆ.
ಕೆಲವೇ ದಿನದ ಪರಿಚಯವಾದ್ರೂ, ಮರೆಯಲಾಗದಂತಹ ಆಪ್ತತೆ ಇತ್ತು ನಮ್ಮಲ್ಲಿ.

ಮತ್ತಿನ ದಿನಗಳಲ್ಲಿ ಕಿಮೊತೆರಪಿ ಮಾಡಿಸಿಕೊಂಡ ವೇದಕ್ಕನನ್ನು ನೋಡಲು ಅಮ್ಮ ಹೋಗಿದ್ರಂತೆ.

ಆದ್ರೆ ಕೆಲವೇ ದಿನಗಳಲ್ಲಿ ವೇದಕ್ಕ ನಮ್ಮನ್ನು ಬಿಟ್ಟು ಅಗಲಿದ ಸುದ್ದಿ ಬಂದಾಗ ಅರಗಿಸಿಕೊಳ್ಳಲು ಆಗಲಿಲ್ಲ. ಕೂದಲು ಎಲ್ಲ ಹೋಯ್ತಕ್ಕ, ಟೋಪನ್ ಹಾಕಿ ಆದ್ರೂ ನಿಮ್ಮ ಮಗಳ ಮದುವೆಗೆ ಬರ್ತೇನೆ ಅಮ್ಮನಿಗೆ ಹೇಳಿದ ಅವರ ಮಾತು, ಇನ್ನೂ ನೆನಪಾಗಿಯೇ ಉಳಿದಿದೆ.

- ಉಮೈರಾ.

**************************************

ಜಾಲಿಯನ್‍ವಾಲಾ ಬಾಗ್ ನೆನಪುಗಳು, ಕೇಸರಿ-2 ಮತ್ತು ಸತ್ಯ-ಮಿಥ್ಯ -ಶಾಲಿನಿ ಜ್ಞಾನಸುಬ್ರಹ್ಮಣಿಯನ್ ಲೇಖನ

ಶಾಲಿನಿ ಜ್ಞಾನಸುಬ್ರಮಣಿಯನ್ ‘ಅನಿವಾಸಿ’ಗೆ ಹೊಸಬರು. ಅವರ ಪ್ರಥಮ ಲೇಖನವನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಅವರ ಸ್ವಪರಿಚಯ: “ನನ್ನ ಹುಟ್ಟೂರು ಬೆಂಗಳೂರು, ಓದಿದ್ದು ಬೆಳೆದಿದ್ದು ಎಲ್ಲಾ ಅಲ್ಲೇ. ಕಳೆದ ಇಪ್ಪತ್ತು ವರ್ಷಗಳಿಂದ ಯುಕೆ ನಲ್ಲಿ ಪರಿವಾರಸಹಿತವಾಗಿ ನೆಲೆಸಿರುವ ಕನ್ನಡತಿ. ಪ್ರಸ್ತುತ ನಾವು ಕಾರ್ಡಿಫ್ ನಲ್ಲಿ ನೆಲೆಸಿದ್ದೇವೆ. ವೃತ್ತಿಯಿಂದ ನಾನೊಬ್ಬ ಕಲಿಕೆ ಮತ್ತು ಅಭಿವೃದ್ಧಿ ತರಬೇತುದಾರಳು (Learning & development Trainer). ಶಾಸ್ತ್ರೀಯ ಸಂಗೀತದಲ್ಲಿ ನನಗೆ ತುಂಬಾ ಆಸಕ್ತಿ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತೇನೆ ಮತ್ತು ಹಾಡುತ್ತೇನೆ.”

ಚಿಕ್ಕಂದಿನಲ್ಲೇ ಜಾಲಿಯನ್ವಾಲಾ ಬಾಗ್ ಹತ್ಯಾಕಾಂಡದ ವಿವರಗಳು ಒಬ್ಬ ಪ್ರತ್ಯಕ್ಷದರ್ಶಿಯಿಂದ ಕೇಳಿ ಪ್ರಭಾವಿತರಾಗಿ ಕೆಲ ವರ್ಷಗಳ ಹಿಂದೆ ಸ್ವತಃ ತಮ್ಮ ಪರಿವಾರದೊಡನೆ ಹೋಗಿ ನೋಡಿಬಂದಿದ್ದಾರೆ. ಇತ್ತೀಚೆಗೆ ಯು ಕೆ ದಲ್ಲಿ ರಿಲೀಸಾದ ಚಿತ್ರ ”ಕೇಸರಿ – 2” ನೋಡಿದ ನಂತರ ಈ ಲೇಖನವನ್ನು ಬರೆದು ಕಳಿಸಿದ್ದಾರೆ. ಆ ಸಿನಿಮಾದ ಹಿನ್ನೆಲೆಯನ್ನರಿತವರಿಗೆ ಅಲ್ಲಿಯ ವಾಸ್ತವತೆ ಮತ್ತು ಅದರಲ್ಲಿಯ ಕಾಲ್ಪನಿಕ ಘಟನೆಗಳ ಬಗ್ಗೆ ಓದಿ ತಿಳಿದಿರ ಬಹುದು. ಇಲ್ಲಿ ಇನ್ನೊಂದು ಸ್ಪಷ್ಟೀಕರಣವೆಂದರೆ: ಬಹಳ ಜನರು ಜಾಲಿಯನ್ವಾಲಾ ಬಾಗ್ ನಲ್ಲಿ ಗೋಲೀಬಾರಿಗೆ ಆಜ್ಞೆ ಕೊಟ್ಟ ಕರ್ನಲ್ ( ಆಗ ತಾತ್ಕಾಲಿಕ ಬ್ರಿಗೇಡಿಯರ್ ಜನರಲ್ ಆಗಿದ್ದ) ರೆಜಿನಾಲ್ಡ್ ಡೈಯರ್ (Dyer) ಮತ್ತು ಆಗಿನ ಪಂಜಾಬ್ ಪ್ರಾಂತದ ಗವರ್ನರಾಗಿದ್ದವ ಮತ್ತು ರೆಜಿನಾಲ್ಡನ ಕುಕೃತ್ಯವನ್ನು ಸಮರ್ಥಿಸಿದ ಮೈಕೇಲ್ ಓ’ಡ್ವೈಯರ್ (O’Dwyer) ಹೆಸರುಗಳನ್ನು ಕನ್ಫ್ಯೂಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.-ಸಂ)

ಜಾಲಿಯನ್‍ವಾಲಾ ಬಾಗ್ ನೆನಪುಗಳು -ಶಾಲಿನಿ ಅವರ ಲೇಖನ

ಕೆಲವೊಂದು ಚಲನ ಚಿತ್ರಗಳು ಹೀಗೂ ಇರುತ್ತವೆ. ಅದನ್ನು ನೋಡಿದಾಗ ನಮ್ಮೊಳಗಿನ ಭಾವನೆಗಳು ಹೊಮ್ಮುಕ್ಕುವುದಲ್ಲದೆ ನಮ್ಮನ್ನು ಸತ್ಯದೆಡೆಗೆ ಕರೆದೊಯ್ದು, ದೇಶಾಭಿಮಾನವನ್ನು ಕೆರಳಿಸಿ, ಪ್ರಜ್ವಲಿಸಿ ಭಾರತದ ಬಗ್ಗೆ ಹೆಮ್ಮೆಯಿಂದ ಎದೆಯುಬ್ಬಿಸುತ್ತದೆ. ನಿಮಗೂ ಒಮ್ಮೆಯಾದರೂ ಅಂಥ ಅಭಿಮಾನವುಂಟಾಗಿರಲು ಸಾಕು.
”Kesari 2: The untold story of Jallianwala Bagh” ಇಂತಹ ಒಂದು ಚಲನ ಚಿತ್ರ. ಅದನ್ನು ನೋಡುವಾಗ 1919 ರಲ್ಲಿ ಜಾಲಿಯನ್ವಾಲಾ ಬಾಗ್ದಲ್ಲಿ ನಡೆದ ಆ ಕರಾಳ ಘಟನೆಯನ್ನು ಹತ್ತಿರದಿಂದ ’ನೋಡಿ’ ಪ್ರಮಾಣಿಸಿ, ಪ್ರಶ್ನಿಸುವ, ಮತ್ತೊಮ್ಮೆ ಉದ್ವೇಗಿತರಾಗುವ ಅನುಭವ ನಮ್ಮದಾಗುತ್ತದೆ.
ಜಾಲಿಯನ್‍ವಾಲಾ ಬಾಗ್! ಈ ಶೀರ್ಷಿಕೆಯೇ ಸಾಕು, ಭಾರತದ ಸ್ವಾತಂತ್ರ್ಯ ಚಳುವಳಿಯ ಅತ್ಯಂತ ದುಃಖದ ಅಧ್ಯಾಯದ ಸ್ಮರಣೆಯನ್ನು ತಂದು ನಮಗೆಲ್ಲ ಭಾರತೀಯರಿಗೆ ವಿವಿಧ ಭಾವನೆಗಳನ್ನೆಬ್ಬಿಸುತ್ತದೆ. ನನಗೆ ಇದರೊಡನೆ ವೈಯಕ್ತಿಕ ಸಂಬಂಧವಿದೆ ಎಂದರೆ ಉತ್ಪ್ರೇಕ್ಷೆ ಅಲ್ಲ ಎಂದು ಭಾವಿಸುತ್ತೇನೆ. ಶಾಲೆಯಲ್ಲಿದ್ದಾಗ ಇತಿಹಾಸದ ಪುಟಗಳಲ್ಲಿ ಓದಿದ್ದು ಪ್ರಾಯಶಃ ದಾಖಲೆಯಾಗಿರಬಹುದೇನೋ, ಆದರೆ ಅದಕ್ಕಿಂತ ಹೆಚ್ಚಾಗಿ ಆ ಹತ್ಯಾಕಾಂಡವನ್ನು ಸ್ವತಃ ವೀಕ್ಷಿಸಿದವರ ವರ್ಣನೆಯನ್ನು ಅವರ ಬಾಯಿಂದಲೇ ಕೇಳಿದ್ದೆನಲ್ಲ ಅದರಿಂದಲೇ ಏನೋ! ಅದು ಹೇಗೆ, ಅಂತೀರೋ? ಮುಂದೆ ಓದಿ!

ಪಂಡಿತ್ ಸುಧಾಕರ ಚತುರ್ವೇದಿ (1897 - 2020)

ನನ್ನ ಹದಿಹರೆಯದ ವರ್ಷಗಳಲ್ಲಿ ನಮ್ಮ ತಾಯಿ ನಮ್ಮನ್ನು(ನನ್ನ ತಮ್ಮ ಮತ್ತು ನಾನು) ಹುರಿದುಂಬಿಸಿ ಪಂಡಿತ್ ಸುಧಾಕರ ಚತುರ್ವೇದಿ (20th April 1897-27th February 2020) ಯವರ ಸತ್ಸಂಗಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅದು ನಮ್ಮ ಜೀವನದಲ್ಲಿ ಬಲವಾದ ಮೌಲ್ಯಗಳ ಅಡಿಪಾಯವನ್ನೇ ಹಾಕಿತ್ತು. ಕನ್ನಡಿಗರಾದ ಪಂಡಿತ್ ಜಿ ಅವರು ವೇದಪಾರಂಗತರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಂಧಿತರಾಗಿ ಎರವಾಡ ಜೈಲಿನಲ್ಲಿದ್ದಾಗ 'ಜ್ಯೋತಿ ಸ್ವರೂಪ ಭಗವಾನ್, ಆ ದಿವ್ಯ ಜ್ಯೋತಿ ನೀಡು' ಎಂಬ ಕೃತಿಯನ್ನು ರಚಿಸಿದವರು. ಗಾಂಧೀಜಿಯವರ ಪತ್ರಗಳನ್ನು ರಹಸ್ಯವಾಗಿ ಒಂದೆಡೆಯಿಂದ ಇನ್ನೊಂದೆಡೆ ತಲುಪಿಸುತ್ತಿದ್ದರಿಂದ ಅವರನ್ನು ’ಗಾಂಧೀಜಿಯವರ Postman’ ಎಂದು ಕರೆಯುತ್ತಿದ್ದರು! ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಗಾಂಧೀಜಿ ಅವರ ಮನವಿಯಂತೆ ಲಾಹೋರಿಗೆ ಭೇಟಿನೀಡಿದಾಗ, ಪಾಕಿಸ್ತಾನದಲ್ಲಿ ಅವರ ಮೇಲೆ ದಾಳಿಯಾಗಿ ಅವರನ್ನು ಕತ್ತಿನವರೆಗೆ ಮಣ್ಣಿನಲ್ಲಿ ಜೀವಂತ ಸಮಾಧಿ ಮಾಡಲಾಯಿತು. ಆದರೆ ಹೇಗೋ ಅಲ್ಲಿಗೆ ಬಂದ ಭಾರತೀಯ ಸೈನ್ಯ ಪಡೆಯವರು ಅವರನ್ನು ಪಾರುಮಾಡಿ ರಕ್ಷಿಸಿ ಮುಂದಿನ ರೈಲು ಗಾಡಿಯಲ್ಲಿ ವಾಪಸ್ ಕಳಿಸಿದರು! (ಇದನ್ನು ಶ್ರೀ ಶ್ರೀ ರವಿಶಂಕರವರ ವಿಡಿಯೋದಲ್ಲಿ ಕೇಳಬಹುದು). ಪ್ರತಿ ಶನಿವಾರದಂದು, ಬೆಂಗಳೂರಿನ ಅವರ ಮನೆಯಲ್ಲಿ ನಡೆಯುತ್ತಿದ್ದ ಸತ್ಸಂಗದಲ್ಲಿ, ವೇದಮಂತ್ರಗಳ ಉಪನ್ಯಾಸದ ಜೊತೆಗೆ ಪಂಡಿತ್ ಜಿ ಅವರು ತಮ್ಮ ಜೀವನದ ವಿವಿಧ ರೋಚಕ ಅನುಭವಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು.
13-4-1919 ರಂದು, ಅಂದರೆ ಇಂದಿಗೆ 106 ವರ್ಷಗಳ ಹಿಂದೆ ಜನರಲ್ ಡೈಯೆರ್ ನಡೆಸಿದ ಜಾಲಿಯಾನ್ ವಾಲಾ ಬಾಗ್ ಸಾಮೂಹಿಕ ಹತ್ಯೆಯನ್ನು ಪ್ರತ್ಯಕ್ಷವಾಗಿ ನೋಡಿ, ದೈಹಿಕ ಮತ್ತು ಮಾನಸಿಕ ನೋವುಂಡವರು ಆಗಿನ ತರುಣ ಪಂಡಿತ್ ಜಿ ಅವರು. ಆ ದಿನ ಸುತ್ತಲೂ ಬಂದೂಕಿನ ಸುರಿಮಳೆಯಾಗುತ್ತಿದ್ದಂತೆ ಒಂದು ಚರಂಡಿಯಲ್ಲಿ ಬಚ್ಚಿಟ್ಟುಕೊಂಡು ಪಾರಾದರು. ಈ ಹತ್ಯಾಕಾಂಡದ ನಂತರ ಅನೇಕರಿಗೆ ಅಂತ್ಯಕ್ರಿಯೆ ವಿಧಿಯನ್ನು ಸಹ ನಿರ್ವಹಿಸಿದ ಸ್ವಯಂಸೇವಕರು ಅವರು!
ಹಲವು ಬಾರಿ ಈ ಘಟನೆಗಳನ್ನು ಅವರ ಬಾಯಿಂದ ಕೇಳಿದ ನನಗೆ ಮನದಾಳದಲ್ಲೆದ್ದ ಭಾವನೆ: ಎಂದೂ ನಮ್ಮ ಇತಿಹಾಸವನ್ನು, ನಮ್ಮ ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರನ್ನು ಮರೆಯಬಾರದೆಂದು.
ಜಾಲಿಯನ್ವಾಲಾ ಬಾಗ್ ನಲ್ಲಿಗೋಡೇಗಳ ಮೇಲೆ ಬುಲೆಟ್ಟುಗಳ ಗುರುತು


ಇತ್ತೀಚೆಗೆ ನಾವು ಕಂಡ ಚಲನ ಚಿತ್ರ- ಕೇಸರಿ -2

ಎಪ್ರಿಲ್ ತಿಂಗಳಿನಲ್ಲಿ ವರ್ಷಾಬ್ದಿಯಂದು ರಿಲೀಸ್ ಆದ ಈ ಚಲನ ಚಿತ್ರದ ಅಧಿಕೃತ ಹೆಸರು Kesari Chapter 2: The Untold Story of Jallianwala Bagh. ನನ್ನ ಪತಿ ಸೇಕರ್ ಮತ್ತು ಮಗಳೊಂದಿಗೆ ಕಾರ್ಡಿಫ್ ನ ಚಿತ್ರಮಂದಿರದಲ್ಲಿ ನೋಡಿದೆವು. ಚಿತ್ರದ ಆರಂಭದಲ್ಲಿ 13-4-1919ರ ಆ ಕರಾಳ ದಿನದ ಘಟನೆಗಳನ್ನು ತೋರಿಸಿದ್ದಾರೆ. ಹೇಗೆ ಮರೆಯಲಾದೀತು ಈ ದೃಶ್ಯಗಳನ್ನು? ಸಿನಿಮಾ ಮುಗಿದ ನಂತರವೂ ಕಣ್ಣ ಮುಂದೆ ಅನವರತ ರೀಲುಗಳಂತೆ ಅದೇ ದೃಶ್ಯ!
ಸಿನಿಮಾದ ಕಥಾ ವಸ್ತು ಮೇಲಿನ ಘಟನೆಗಳ ಹಂದರದಲ್ಲಿ ಹೆಣೆದ ರೋಚಕ ಚಲನಚಿತ್ರ (docudrama). ಸಿನಿಮಾದ ’ನಾಯಕ’ ಶಂಕರನ್ ನಾಯರ್(ಅಕ್ಷಯ್ ಕುಮಾರ್). ಆತ ವೃತ್ತಿಯಿಂದ ವಕೀಲ. ಬ್ರಿಟಿಷರಿಂದ ನಿಯುಕ್ತನಾದ ವೈಸರಾಯ್ ಕೌನ್ಸಿಲ್ ನ ಹಿರಿಯ ಸದಸ್ಯ ಹಾಗು ತನ್ನ ’ಸೇವೆಗೆ’ ಬ್ರಿಟಿಶ್ ಸರಕಾರದಿಂದ ನೈಟ್( knighthood) ಪದವಿನ್ನು ಪಡೆದಿದ್ದ ಸಹ. ಜಾಲಿಯಾನ್ವಾಲಾ ಬಾಗ್ ನ ಕ್ರೂರ ಹತ್ಯಾಕಾಂಡದ ನಂತರ ಸತ್ಯಾನ್ವೇಷಣೆಯ ವಿಚಾರಣೆ ನಡೆಸಿ (ತಮ್ಮ ಪರವಾಗಿ)ವರದಿಮಾಡಲು ಸರಕಾರದಿಂದ ನೇಮಿತವಾದವನು ಬರಬರುತ್ತ ಘಟನೆಗಳ ಹಿಂದಿನ ಸತ್ಯ ತೆರೆದುಕೊಂಡಂತೆ ಭಾರತೀಯರ ಪರವಾಗಿ ಹೋರಾಡುತ್ತಾನೆ. ಅಂಥ ಭಾರತಮಾತೆಯ ಧೀರ ಪುತ್ರನ ಕಥೆ ಅದು. ಜಾಲಿಯನ್ವಾಲಾ ಬಾಗ್ನಲ್ಲಿ ಕೂಡಿದ್ದ ಸಿಖ್ ಜನರು ಶಸ್ತ್ರಧಾರಿಗಳಾಗಿದ್ದರೆಂದು ನಂಬುವಂತೆ ಸರಕಾರದಿಂದ ಪ್ರಚಾರ ಮಾಡಲಾಗಿತ್ತು. ನಿಜ ಸಂಗತಿಯಲ್ಲಿ ಬೈಸಾಕಿ ದಿನದಲ್ಲಿ, ಅವರೆಲ್ಲ ರೌಲಟ್ಟ್ ಆಕ್ಟ್ ನ ಕುರಿತು ಶಾಂತಿಯುತ ಪ್ರತಿಭಟನೆಗಾಗಿ ಕೂಡಿದ್ದರು, ಮತ್ತು ಬ್ರಿಟಿಷ್ ಸರ್ಕಾರದ ಜನರಲ್ ಡೈಯರ್ ನೀಡಿದ ಆದೇಶ ಜನಾಂಗೀಯ ಘೋರ ನರಮೇಧಕ್ಕೆ ಕಾರಣವಾಯಿತೆನ್ನುವ ಸತ್ಯವನ್ನು ಮುಚ್ಚಿಡುವ ಪ್ರಯತ್ನಗಳು ಎನ್ನುವದನ್ನು ಸಿನಿಮಾ ಸ್ಪಷ್ಟಪಡಿಸುತ್ತದೆ. ಇದೊಂದು ಮನಸೆಳೆಯುವ ಕೋರ್ಟ್ ರೂಂ ನಾಟಕ. ಬ್ರಿಟಿಷರ ಪರ ವಕೀಲರಾಗಿ ನೆವಿಲ್ ಮೆಕಿನ್ಲಿ (ಮಾಧವನ್) ಮತ್ತು ಬಾರತೀಯರ ಪರವಾಗಿ ಶಂಕರನ್ ನಾಯರ್ (ಅಕ್ಷಯ್ ಕುಮಾರ್) ಅವರ ಮಧ್ಯೆ ನಡೆಯುವ ಘರ್ಷಣೆ ವೀಕ್ಷಿಸಲು ಯೋಗ್ಯವಾಗಿದೆ.
ದಿಲ್ರೀತ್ ಕೌರ್ ಗಿಲ್ (ಅನನ್ಯ ಪಾಂಡೆ ) ಕಿರಿಯ ವಕೀಲಳು, ಆದರೆ ನೂರು ವರ್ಷಗಳ ಹಿಂದೆ, ಸತ್ಯಕ್ಕಾಗಿ ಶಂಕರನ್ ನಾಯರ್ ಜೊತೆ ಸೇರಿ, ಅವರನ್ನು ಪ್ರೇರೇಪಿಸಿದ ವೀರ ಯೋಧೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾಳೆ. ಚಿತ್ರಕಥೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದರಿಂದ, (ಉದಾಹರಣೆಗಾಗಿ, ಮೆಕಿನ್ಲಿ ಮತ್ತು ದಿಲ್ರೀತ್ ಗಿಲ್ ಪಾತ್ರಗಳು ಕಾಲ್ಪನಿಕ) ಇದನ್ನು ಸಾಕ್ಷಿಚಿತ್ರ (documentary) ಎಂದು ಪರಿಗಣಿಸಲಾಗದು. ಆದರೂ ಅಜ್ಞಾತವಾಗಿದ್ದ ಯೋಧರ ಬಗ್ಗೆ, ಮುಚ್ಚಿಟ್ಟ ನಮ್ಮ ಭಾರತದ ಸ್ವಾತಂತ್ರದ ಹೋರಾಟದ ಪ್ರಮುಖ ಅಧ್ಯಾಯವನ್ನು ಬಹಿರಂಗ ಪಡಿಸಿರುವ ಈ ಚಲನ ಚಿತ್ರವನ್ನು ಎಲ್ಲ ಭಾರತೀಯರು ನೋಡಲೇ ಬೇಕು. 15 ವರ್ಷದ ಮೇಲಿನ ಮಕ್ಕಳಿದ್ದರೆ ಅವರನ್ನ ಕರೆದುಕೊಂಡು ಹೋಗಿರಿ. ( ಹತ್ಯಾಕಾಂಡದ ತೀವ್ರ ಗ್ರಾಫಿಕ್ ಚಿತ್ರಣದಿಂದಾಗಿ ಯುಕೆನಲ್ಲಿ ಸೆನ್ಸಾರ್ ಬೋರ್ಡ್ನಿಂದ ’15 certificate ಕೊಡಲಾಗಿದೆ). ನೀವೂ ಪರಿವಾರ ಸಮೇತವಾಗಿ ನೋಡಿ ಎಂದು ಶಿಫಾರಸ್ಸು ಮಾಡ ಬಲ್ಲೆ.
106 ವರ್ಷಗಳಾದ ನಂತರವೂ ನ್ಯಾಯಕ್ಕಾಗಿ ಭಾರತೀಯರ ಹೋರಾಟ ಮುಂದುವರಿಯುತ್ತಿದೆ. ಚಿತ್ರದ ಕೊನೆಯಲ್ಲಿ ಬ್ರಿಟಿಷ್ ಸರ್ಕಾರವು ಇನ್ನೂ ಕ್ಷಮಾಪಣೆ ಕೇಳಿಲ್ಲ ಎಂಬ ವಾಸ್ತವವನ್ನು ತಿಳಿಸಿದ್ದಾರೆ. ಇತಿಹಾಸದ ಪುಟಗಳಲ್ಲಿ ಶಂಕರ್ ನಾಯರ್ ಅವರಂತಹ ಉತ್ಕಟ ದೇಶಪ್ರೇಮಿಯ ಕೊಡುಗೆಯ ಬಗ್ಗೆ ಇಲ್ಲಿಯವರೆಗೂ ಕೇಳಿರಲಿಲ್ಲವಲ್ಲ ಎಂದು ನನಗೆ ಬೇಸರವಾಯಿತು.

- ಶಾಲಿನಿ ಜ್ಞಾನಸುಬ್ರಹ್ಮಣಿಯನ್
Learning & Development Trainer
Cardiff
Wales, U K


ಚಿತ್ರ ಕೃಪೆ:  ಎಲ್ಲ ಫೋಟೋಗಳೂ ಲೇಖಕಿಯವರವು: (ಚತುರ್ವೇದಿಯವರದನ್ನು ಬಿಟ್ಟು - CC). ಲೇಖನದ ಅಡಿಯಲ್ಲಿಯ ಚಿತ್ರಗಳು ಜಾಲಿಯನ್ ವಾಲಾ ಬಾಗ್ ದೃಶ್ಯಗಳು. ಭಿತ್ತಿ ಶಿಲ್ಪಗಳು ಮತ್ತು ಸ್ಮಾರಕಗಳು ಮತ್ತು ಒಂದು ಅಮರಜ್ಯೋತಿ