ಬಾಸ್ವರ್ತ್ ಯುದ್ಧರಂಗ ಎನ್ನುವ ಇಂಗ್ಲೆಂಡಿನ ಪ್ರೇಕ್ಷಣೀಯ ಸ್ಥಳ -ಶ್ರೀವತ್ಸ ದೇಸಾಯಿ

ಒಂದು ರೀತಿಯಿಂದ ಇದು ಇಂಗ್ಲೆಂಡಿನ ದೊರೆ ಮೂರನೆಯ ರಿಚರ್ಡ್ ನ ಇತಿಹಾಸದ ಬಗ್ಗೆ ನಾನು ಬರೆದ ಲೇಖನದ (https://wp.me/p4jn5J-3Sw) ಹಿಂದೆ ಸರಿದ ಭಾಗ! ಅದರಲ್ಲಿ ಆತನ ಮರಣದ ನಂತರದ ಘಟನೆಗಳ ವಿಶ್ಲೇಷಣೆಯಿದ್ದರೆ ಇದರಲ್ಲಿ ಆತ ಸಾವನ್ನಪ್ಪಿದ ಜಾಗದ ಸ್ಥಳಪುರಾಣ ಇದೆ. ಅಲ್ಲಿ ನೋಡುವದೇನು ಇದೆ? ಇದೇ ಪ್ರಶ್ನೆಯನ್ನು ಸ್ಟೇನ್ಸ್ಟಪಕ್ಕದ ರನ್ನಿಮೀಡ್ ಬಗ್ಗೆಯೂ ಕೇಳಬಹುದು. ಅಲ್ಲಿ ಮ್ಯಾಗ್ನಾ ಕಾರ್ಟಾದ ಮೇಲೆ ಸಹಿ ಆಗಿತ್ತು. ಅಲ್ಲಿ ಇತಿಹಾಸವಿದೆ. ಇಂಥ ಐತಿಹಾಸಿಕ ಸ್ಥಳಗಳಲ್ಲೆಲ್ಲ ಅದರ ಹಿಂದಿನ ಐತಿಹಾಸಿಕ ಸಂಗತಿಗಳೇ ರೋಚಕ. ಇತಿಹಾಸ ಎದ್ದು ಬರುತ್ತದೆ; ವ್ಯಕ್ತಿಗಳು, ರಾಜರು ಜೀವ ತಳೆದು ಮಾತಾಡುತ್ತಾರೆ! ಒಂದು ವಿಷಯ: ನಾವು ಲ್ಯಾಂಕಾಸ್ಟರಿನ ಕೆಂಪು ಮತ್ತು ಯಾರ್ಕ್ ಶೈರಿನ ಬಿಳಿ ಗುಲಾಬಿ ಲಾಂಛನಗಳ ಬಗ್ಗೆ ಓದುತ್ತೇವೆ. ಆದರೆ ಅವುಗಳು ಆಗ ಲಾಂಛನವಾಗಿರಲಿಲ್ಲ. ಸೈನಿಕರು ಹೊತ್ತ ಬಿಳಿ ಬ್ಯಾಜಿನ ದಾಖಲೆ ಮಾತ್ರ ಇದೆ. ಶೇಕ್ಸ್ಪಿಯರನ ನಾಟಕದಲ್ಲಿ ಮತ್ತು ನಂತರದ ಹತ್ತೊಂಬತ್ತನೆಯ ಶತಮಾನದ ಬರವಣಿಗೆಗಳಲ್ಲಿ ಈ ಸಂಜ್ಞೆಗಳಿಗೆ ಪ್ರಚಾರ ಬಂದಿತು. -(ತತ್ಕಾಲ ಸಂ!)
king-richard-iii-
ಮೂರನೆಯ ರಿಚರ್ಡ್                             ಮೊದಲು ಸ್ವಲ್ಪ ಇತಿಹಾಸ

ಮೇಲಿನ ಮಾತುಗಳ ಅರ್ಥವಾಗಲು ಕೆಲವು ಐತಿಹಾಸಿಕ ವಿಷಯಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಬಹಳಷ್ಟು ಜನರಿಗೆ  ಇಂಗ್ಲೆಂಡಿನ ಎರಡು ಎರಡು ಪ್ರಮುಖ ರಾಜವಂಶ ಪಂಗಡಗಳಾದ ಲ್ಯಾಂಕಾಸ್ಟರ್ ಮನೆತನ (ಲಾಂಛನ ಕೆಂಪು ಗುಲಾಬಿ) ಮತ್ತು ಯಾರ್ಕ್ ಮನೆತನಗಳ (ಬಿಳಿ ಗುಲಾಬಿ) ಮಧ್ಯೆ 30 ವರ್ಷಗಳ ಕಾಲ ನಡೆದ 15 ಯುದ್ಧಗಳ ಬಗ್ಗೆ (”ದ ಬ್ಯಾಟಲ್ ಆಫ್ ದಿ ರೋಸಸ್”) ಗೊತ್ತಿದ್ದರೂ ಅದು ಮುಕ್ತಾಯವಾದ ಬಾಸ್ವರ್ತ್ಎನ್ನುವ ಊರಿನ ಹತ್ತಿರದ ಈ ತಗ್ಗು, ದಿನ್ನೆ ಮತ್ತು ಚೌಗು ಪ್ರದೇಶದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲಿಕ್ಕಿಲ್ಲ. ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಕಾದ ದಾಯಾದಿಗಳಾದ ಕೌರವ ಪಾಂಡವರಂತೆಯೇ ಇಂಗ್ಲೆಂಡಿನ ಕಿರೀಟಕ್ಕಾಗಿ ಹೋರಾಡಿದ ಈ ಎರಡೂ ಮನೆತನಗಳೂ 14 ನೆಯ ಶತಮಾನದಲ್ಲಿ ಆಳಿದ ಮೂರನೆಯ ಎಡ್ವರ್ಡ್ ಪ್ಲಾಂಟಾಂಜನೆಟ್ ದೊರೆಯ ಸಂತತಿಗಳೇ! ಅ ಕರಾಳ ದಿನ ಬೆಳಗಿನ ಸಮಯ (22ನೆಯ ಆಗಸ್ಟ್, 1485) ಬಾಸ್ವರ್ತ್ ಯುದ್ಧದಲ್ಲಿ ಮೂರನೆಯ ರಿಚರ್ಡ್ ಇಂಗ್ಲೆಂಡಿನ ಪಟ್ಟಕ್ಕಾಗಿ ಎದುರಾಳಿಯಾದ (ಮುಂದೆಏಳನೆಯ ಹೆನ್ರಿ ಎಂದು ಕರೆಯಲ್ಪಡಲಿರುವ)  ಹೆನ್ರಿ ಟ್ಯೂಡರ್ ನ ದಂಡಿನ ಮೇಲೆ ರಾಜ ಸ್ವತಃ ಏರಿ ಹೋದಾಗ ತಲೆಗೆ ವೈರಿಯ ಹ್ಯಾಲ್ಬರ್ಡ್ (halberd) ಎನ್ನುವ ಭೀಕರ ಶಸ್ತ್ರದ ಪ್ರಹಾರದಿಂದ ಮರಣಹೊಂದಿದ. ಆತನ ಕುದುರೆಯ ಕಾಲುಗಳು ಕೆಸರಿನಲ್ಲಿ ಸಿಕ್ಕಿಕೊಂಡಿದ್ದರಿಂದ ಕೆಳಗಿಳಿಯಬೇಕಾಗಿ ಅಲ್ಲಿಂದಲೆ ಧೈರ್ಯದಿಂದ ಮುನ್ನುಗ್ಗಿದ್ದ ರಿಚರ್ಡ್ ಯುದ್ಧರಂಗದಲ್ಲಿ ಮೃತನಾದ ಇಂಗ್ಲೆಂಡಿನ ಕೊನೆಯ ಅರಸನೂ ಆಗಿದ್ದಾನೆ. ಆತ ಆಳಿದ್ದು ಬರೀ ಹದಿನಾಲ್ಕು ವರ್ಷ ಮಾತ್ರ.

ಬಾಸ್ವರ್ತ್ ಯುದ್ಧರಂಗ

ನೆರಳು ಗಡಿಯಾರ (Sun dial with the crown of Richard III)

ಧರ್ಮಕ್ಷೇತ್ರೇ ಕುರುಕ್ಷೇತ್ರೇ!

ಆಗ ಪ್ರಾಟೆಸ್ಟೆಂಟ್ ಮತ ಹುಟ್ಟಿರಲಿಲ್ಲ. ರಿಚರ್ಡನ ಪೂರ್ವಜರಿಗೆ ಫ್ರಾನ್ಸ್ ದೇಶದ ಸಂಬಂಧವಿತ್ತು ಅಂತ ಆತನೂ ಕ್ಯಾಥಲಿಕ್ ಆಗಿದ್ದ. ಆತ ಮೃತನಾದ ಮೇಲೆ ಆತನ ದೇಹವನ್ನು ಹತ್ತಿರದ ಲೆಸ್ಟರಿನ ಫ್ರಾನ್ಸಿಸ್ಕನ್ ಫ್ರಯರಿ ಚರ್ಚಿನಲ್ಲಿ ಗಡಿಬಿಡಿಯಿಂದ ಮಣ್ಣು ಮಾಡಲಾಗಿತ್ತು. ಅದರ ಗುರುತುಗಳೆಲ್ಲ ಮಾಯವಾಗಿದ್ದವು. ಮುಂದೆ ಆ ಸ್ಥೂಲಕಾಯದ, ಷಟ್ಪತ್ನಿವ್ರತ (!) ಎಂಟನೆಯ ಹೆನ್ರಿ ಪೋಪನನ್ನು ಮಾನ್ಯ ಮಾಡದೆ ಪ್ರಾಟೆಸ್ಟೆಂಟ್ ಆದ. ಆತ ಫ್ರಯರಿಗಳನ್ನು (Friary) ರದ್ದುಗೊಳಿಸಿದ. ಸೋರ್ ನದಿಯಲ್ಲಿ ರಿಚರ್ಡನ ಅಸ್ಥಿಯನ್ನು ಚೆಲ್ಲಲಾಯಿತೆಂದೆಲ್ಲ ವದಂತಿ ಹಬ್ಬಿತ್ತು. ಅದಕ್ಕೆ ಅದನ್ನು ಪತ್ತೆ ಹಚ್ಚಲು ಐದು ಶತಮಾನಗಳೇ ಬೇಕಾಯಿತು. ಆತನ ನಿಷ್ಟ ಅಭಿಮಾನಿಗಳ ಪ್ರಯತ್ನದಿಂದ ಸಂಶೋಧನೆ ಪ್ರಾರಂಭವಾಗಿ ಆ ಚರ್ಚಿನ ಗುರುತು ಹಿಡಿದು ಕಾರ್ ರ್ಪಾರ್ಕಿನಡಿ ಉತ್ಖನನ ಮಾಡಿ ರಿಚರ್ಡನನ್ನು ವಿಜೃಂಭ್ಹಣೆಯಿಂದ ಲೆಸ್ಟರ್ ಕೆಥಿಡ್ರಲ್ನಲ್ಲಿ ಸಮಾಧಿ ಮಾಡಿದ್ದು ಕ್ಯಾಥಲಿಕ್ ಮತದ ಕ್ರಿಶ್ಚಿಯನ್ನರಿಗೆ ಅಸಮಾಧಾನವಾಗಿತ್ತು! 

ಕೊನೆಯುಸಿರೆಳೆದವರೆಷ್ಟು ಜನ?

ಹಾಗೆ ನೋಡಿದರೆ ಒಂದು ಸಾವಿರ ಜನ ಮೃತರಾದರೂ, ಎರಡೂ ಕಡೆ ಸೇರಿ ಪಾಲುಗೊಂಡ 22,000 ಯೋಧರ ಸಂಖ್ಯೆ ಕುರುಕ್ಷೇತ್ರದ ಹದಿನೆಂಟು ಅಕ್ಷೌಹಿಣಿ ಸೈನ್ಯಕ್ಕೆ ಹೋಲಿಸಲಾಗದು. ಅದರಲ್ಲಿ ಎರಡುಸಾವಿರ ಯೋಧರು ಫ್ರಾನ್ಸಿನಿಂದ ಬಂದ ಕೂಲಿ ಸೈನಿಕರು (mercenaries). ಈ ದೇಶದ ಅತ್ಯಂತ ಭೀಕರವಾದ ಯಾದವೀ ಕಾಳಗವೆಂದು ಪ್ರಸಿದ್ಧವಾದ ಐವತ್ತು ಸಾವಿರ ಜನ ಭಾಗವಹಿಸಿದ್ದ ಟೌಟನ್ ಯುದ್ಧಕ್ಕೆ ಸಮ ಇದು ಆಗಿರಲಿಲ್ಲ. ಆದರೂ ಇದು ಈ ದೇಶದ ಇತಿಹಾಸಕ್ಕೆ ಅತ್ಯಂತ ಮಹತ್ವದ ತಿರುವು ಕೊಟ್ಟಿತ್ತು. ರಿಚರ್ಡನ ಪತನದಿಂದ ಇಂಗ್ಲೆಂಡಿನ ದೊರೆಯಾದ ಏಳನೆಯ ಹೆನ್ರಿ ಯಾರ್ಕ್ ಮಹಿಳೆಯನ್ನು ಮದುವೆಯಾಗಿ ಎರಡೂ ಪಂಗಡಗಳನ್ನು ಒಂದುಗೂಡಿಸಿದ. ಆತನ ಲಾಂಛನವೇ ಮುಂದೆ ಬಿಳಿ-ಕೆಂಪು ಎರಡೂ ಬಣ್ಣದ ಹೂಗಳೊಂದಿಗೆ ಟ್ಯೂಡರ್ ರೋಸ್ ಆಯಿತು.

ರಿಚರ್ಡನ ಕೊನೆಯ ಮಾತುಗಳು

ಬಾಸ್ವರ್ತ್ ರಣರಂಗದ ಸುತ್ತಲೂ ನಡೆದಾಡಲು ಅನುಕೂಲವಾಗುವ ಪಥ ಅದೆ. ಅಲ್ಲಲ್ಲಿ ಉತ್ತಮ ಮಾಹಿತಿ ಫಲಕಗಳನ್ನು ನಿರ್ಮಿಸಿದ್ದರಿಂದ 500 ವರ್ಷಗಳ ಹಿಂದಿನ ಇತಿಹಾಸ ಜೀವ ತಳೆದು ಸಮರ ಇದುರಿಗೇ ನಡೆಯುತ್ತಿದೆಯೇನೋ ಅಂತ ರೋಮಾಂಚನವಾಗುತ್ತದೆ. ಕುದುರೆಗಳ ಖುರಪುಟ, ಕತ್ತಿ ಗುರಾಣಿಗಳ ಘರ್ಷಣೆಯ ಖಟ್ – ಖಡಲ್, ಮರಣವನ್ನಪ್ಪುತ್ತಿರುವ, ಗಾಯಗೊಂಡ ಸೈನಿಕರ ಆರ್ತ ನಾದ, ಕಿವಿಯನ್ನು ಗಡಚಿಕ್ಕುತ್ತವೆ. ಇಂಥ ಕಾಳಗಗಳಲ್ಲಿ ಕುದುರೆ ಸವಾರರದೇ ಮೇಲುಗೈಯೆಂದ ಮೇಲೆ ಕುದುರೆಯನ್ನು ಕಳೆದುಕೊಂಡು ಕುದುರೆಯಿಂದ ಕೆಳಕ್ಕುರುಳಿದ ರಿಚರ್ಡ್ ದೊರೆ ’ಒಂದು ಕುದುರೆಗಾಗಿ ಏನನ್ನು (ನನ್ನ ರಾಜ್ಯವನ್ನೂ) ಕೊಡಲಾರೆ” ಅಂದನಂತೆ. ಆತನ ಕಿರೀಟ ಹಾರಿತ್ತು ಎದುರಾಳಿಗಳ ಭರ್ಚಿ-ಕೊಡಲಿ ಕೂಡಿದ ಹ್ಯಾಲ್ಬರ್ಡ್ ಶಸ್ತ್ರದಿಂದ ಭೀಕರ ಹತ್ಯೆಯಾಯಿತು..ಶೇಕ್ಸ್ಪಿಯರನ ನಾಟಕದ ಪ್ರಸಿದ್ಧ ಸಾಲುಗಳ ಪ್ರಕಾರ “A horse, a horse, My kingdom for a horse” ಅಂತ ಕನವರಿಸುತ್ತ ಮಡಿದನಂತೆ

ರಾಜನ ಕೊನೆಯ ನೀರಿನ ಗುಟುಕು?

ಬಾಸ್ವರ್ತ್ ರಣಭೂಮಿಯ ಸುತ್ತಿನ ದಾರಿಯ ಹದಿನೇಳನೆಯ ಮತ್ತು ಕೊನೆಯ ವೀಕ್ಷಣಾ ಸ್ಥಾನದಲ್ಲಿ ಹತ್ತೊಂಬತ್ತನೆ ಶತಮಾನದಲ್ಲಿ ಊರ್ಜಿತವಾದ ಒಂದು ಕಲ್ಲುಗುಡ್ಡೆ (Cairn) ಇದೆ. ಅದು ಅಲ್ಲಿ ಹರಿವ ನೀರಿನ ಸೆಲೆಯ ಮೇಲೆ ಕಟ್ಟಲಾಗಿದೆ ಅನ್ನುತ್ತದೆ ಒಂದು ಫಲಕ. ಅದರ ಪಕ್ಕದಲ್ಲೇ ರಿಚರ್ಡನ ಸೈನ್ಯಯುದ್ಧ ಪೂರ್ವ ’ಡೇರೆ’ ಹಾಕಿತ್ತು. ಅಲ್ಲಿಯೇ ಆತ ಕೊನೆಯ ಬಾರಿ ನೀರು ಕುಡಿದನೆಂದು ಪ್ರತೀತಿ. ಆ ಸ್ಥಳವನ್ನು ಇಂದಿಗೂ ನೋಡಿ ನಿಮ್ಮ ಇತಿಹಾಸ ಪಿಪಾಸೆಯನ್ನು ತಣಿಸಿಕೊಳ್ಳಬಹುದು.

ಕೊನೆಗೂ ವಿಜ್ಞಾನದ ತೀರ್ಪು

ಯುದ್ಧದ ನಾಮೋ ನಿಶಾನೆ ಎಲ್ಲ ಅಳಿಸಿ ಹೋಗಿರುವಾಗ ಈ ಜಾಗದಲ್ಲೇ ಆ ರಣರಂಗವಿತ್ತು ಅಂತ ಹೇಗೆ ಸಾಬೀತು ಮಾಡಲಾಯಿತು? ಅದಕ್ಕೆ ಸಹಾಯ ಬಂದುದು ಆಧುನಿಕ ಕಾರ್ಬನ್ ಡೇಟಿಂಗ್ ವಿಜ್ಞಾನ. ಈ ದೇಶದಲ್ಲಿ ಅತ್ಯಂತ ಹಳೆಯ ಚರ್ಚುಗಳಲ್ಲೂ ಉಳಿದಿರುವ ದಾಖಲೆಗಳು ಇತಿಹಾಸವನ್ನು ಜೋಡಿಸಲು ಬಹಳ ಸಹಾಯ ಮಾಡುತ್ತವೆ. ಹುಟ್ಟು, ಬಾಪ್ಟಿಸಮ್ (ನಾಮಕರಣ), ಮದುವೆ, ಶವಸಂಸ್ಕಾರದ ದಾಖಲೆಗಳನ್ನು ಮುತವರ್ಜಿಯಿಂದ ಕಾದಿಡಲಾಗುತ್ತದೆ. ಪಕ್ಕದ ಡಾಡ್ಲಿಂಗ್ಟನ್ ಚರ್ಚಿನ ಶವಸಂಸ್ಕಾರ ದಾಖಲೆಗಳಿಂದ ಇತಿಹಾಸದ ತುಣುಕುಗಳನ್ನು ಜೋಡಿಸಿದ ಮೇಲೆಯೂ ಉಳಿದಿರಬಹುದಾದ ಸಂಶಯಗಳನ್ನು ನಿವಾರಿಸಲು ಆಧುನಿಕ ವಿಜ್ಞಾನ ಸಹಾಯಕ್ಕೆ ಬಂದಿದೆ. ಶತಮಾನಗಳ ಹಿಂದೆ ಲೆಸ್ಟರಿನ ಮಧ್ಯೆ ನೆಲಸಮವಾಗಿ ಹೂತುಹೋದ ಫ್ರಯರಿ ಚರ್ಚಿನಲ್ಲಿ ಸಿಕ್ಕ ಎಲುಬುಗಳು ರಿಚರ್ಡ್ ದೊರೆಯದೇ ಅಂತ ಹಲ್ಲಿನ ಡಿ ಎನ್ ಏ ಸಾಬೀತು ಮಾಡಿದಂತೆ ಬಾಸ್ವರ್ತ್ ಹತ್ತಿರದ ಆಳದ ಮಣ್ಣಿನ ಪೀಟ್ (peat) ಸ್ಯಾಂಪಲ್ಲುಗಳನ್ನು ಕಾರ್ಬನ್ ಡೇಟಿಂಗ್ ಮಾಡಿ ಪರೀಕ್ಷಿಸಿದ ಅಮೇರಿಕೆಯ ಲ್ಯಾಬೋರಟರಿ ಐದು ನೂರು ವರ್ಷಗಳ ಹಿಂದೆ ಇಲ್ಲಿರುವುದೇ ಜವುಳು ಪ್ರದೇಶ (marshland) ಅಂತ ಖಚಿತಪಡಿಸಿತು. ಅದರಿಂದ ರಣರಂಗದ ಸರಿಯಾದ ಜಾಗ ಇದು ಅಂತ ನಿಶ್ಚಿತವಾಯಿತು.ಇವೆಲ್ಲ ಮಾಹಿತಿ ಪಕ್ಕದಲ್ಲಿರುವ ವಿಸಿಟರ್ ಸೆಂಟರ್ ನಲ್ಲಿರುವ ಉತ್ತಮ ಮ್ಯೂಸಿಯಮ್ ದಲ್ಲಿ ದೊರಕುತ್ತವೆ.

ಕೊನೆಯ ಮಾತು

ಇತಿಹಾಸದಿಂದ ಏನು ಉಪಯೋಗ ಎಂದು ಅನೇಕರ ಅಭಿಪ್ರಾಯವಾದರೂ ಜಾರ್ಜ್ ಸಾಂಟಾಯನ ಹೇಳಿದಂತೆ ಇತಿಹಾಸವನ್ನರಿಯದವರು ಮತ್ತೆ ಮತ್ತೆ ಅವೇ ತಪ್ಪುಗಳನ್ನು ಮಾಡುವ ಶಾಪಗ್ರಸ್ತರಾಗುತ್ತಾರೆ! ಇತಿಹಾಸವನ್ನು ತುಳಿದರೆ ಅದು ನಿನ್ನನ್ನು ನೆಲಸಮಮಾಡುತ್ತದೆ! ಆದರೆ ಮಾನವ ಇತಿಹಾಸದ ತುಂಬೆಲ್ಲ ಈರ್ಷೆ, ದ್ವೇಷಗಳಿಂದ ಯುದ್ಧಗಳಾಗುತ್ತಿರುವಾಗ ಅತ್ಯಂತ ಪುರಾತನ ಉಪನಿಷತ್ತಿನ ವಾಕ್ಯ ’ಮಾ ವಿದ್ವಿಷಾವಹೈ’ (ವೈಮನಸ್ಸು, ದ್ವೇಷ ಬೇಡ) ಯನ್ನು ಯಾರೂ ಕೇಳಿಸಿಕೊಂಡಿಲ್ಲವೇ? ಎಂದೆನಿಸುತ್ತದೆ

ಶ್ರೀವತ್ಸ ದೇಸಾಯಿ.

(ಈ ವಾರದ ಕನ್ನಡಪ್ರಭದಲ್ಲಿಯ ನನ್ನ ಲೇಖನದ ವಿಸ್ತೃತ ಆವೃತ್ತಿ)

ಫೋಟೋಗಳು: ಲೇಖಕರವು; Photo of Peat: CC BY-SA 3.0, https://commons.wikimedia.org/w/index.php?curid=244694

Links: My article: https://wp.me/p4jn5J-3Sw

https://www.bosworthbattlefield.org.uk/

ನಿರ್ಜನ ದ್ವೀಪಕ್ಕೆ ಎಂಟು ಮುದ್ರಿಕೆಗಳು (discs) – ರೇಡಿಯೋ ಕಾರ್ಯಕ್ರಮ

ನಾನು ಹೇಳುತ್ತಿರುವದು ಕಳೆದ ತಿಂಗಳಿನಲ್ಲಿ 81 ವರ್ಷ ಪೂರೈಸಿದ Desert island Discs ಎನ್ನುವ ಅತ್ಯಂತ ಜನಪ್ರಿಯ ಬಿಬಿಸಿ ರೇಡಿಯೋ ಕಾರ್ಯಕ್ರಮದ ಬಗ್ಗೆ. ಕಳೆದ ತಿಂಗಳಲ್ಲಿ ಎರಡು ಮಹತ್ವದ ರೇಡಿಯೋ ಕಾರ್ಯಕ್ರಮಗಳನ್ನು ನೆನೆಸಿಕೊಂಡಿದ್ದೇವೆ. ಒಂದನೆಯದು ಇದೇ ಫೆ. 13ನೆಯ ತಾರೀಕು ಜಾಗತಿಕ ರೇಡಿಯೋ ದಿವಸ (World Radio Day) ಇತ್ತು. ಎರಡನೆಯದು ಎಂಬತ್ತೊಂದು ವರ್ಷಗಳ ಹಿಂದೆ ಜನೇವರಿ 29 ರಂದು ಬ್ರಿಟಿಶ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಷನ್ (ಬಿಬಿಸಿ)ಯ ’ಡೆಸರ್ಟ್ ಐಲಂಡ್ ಡಿಸ್ಕ್’ ಕಾರ್ಯಕ್ರಮವನ್ನು ಮೊದಲ ಬಾರಿ ಬಿತ್ತರಿಸಿದ ದಿನ. ಅದು ಇಲ್ಲಿಯವರೆಗೆ ತಪ್ಪದೆ ಪ್ರತಿ ವಾರ ಪ್ರಸರವಾಗುತ್ತಲೇ ಬಂದ ಜಗತ್ತಿನ ಎರಡನೆಯ ದೀರ್ಘಾಯುಷಿ ಪ್ರಸಾವಾಗಿದೆ. ಚಿಕ್ಕಂದಿನಲ್ಲಿ ಟಿ ವಿ, ಮೋಬೈಲ್ ಇಲ್ಲದೆ ರೇಡಿಯೋ ಜೊತೆಗೆನೇ ಬೆಳೆದೆ ಅಂತ ರೇಡಿಯೋಗೂ ನನಗೂ ದೀರ್ಘ ಕಾಲದ ನಂಟು ಉಂಟು! ಈಗಲೂ ಪ್ರತಿದಿನ BBC Radio-4 ್ದ ಯಾವುದಾದರೂ ಒಂದು ಕಾರ್ಯಕ್ರಮ ಕೇಳದೇ ಇರುವುದಿಲ್ಲ. ಅದರಲ್ಲಿ ಹಲವಾರು ನನ್ನ ಮೆಚ್ಚಿನವು. ಅಂಥದರಲ್ಲಿ ಒಂದರ ಬಗ್ಗೆ ಕೆಳಗೆ ಬರೆಯಲಿಚ್ಛಿಸುತ್ತೇನೆ. ಅದರ ಪರಿಚಯವಿರದಿದ್ದಲ್ಲಿ ಈಗ ಶುರು ಮಾಡ ಬಹುದು. ನಿಮ್ಮಲ್ಲಿ ಯಾರಾದರೂ ಈಗಾಗಲೇ ಅದನ್ನು ಕೇಳಿ ಅದರ ಭಕ್ತರಾಗಿದ್ದರೆ ಇನ್ನೂ ಖುಶಿ!

ನೀವು ನನ್ನ ಹಾಗೆ ನಲವತ್ತು ವರ್ಷಗಳಿಂದ ಕೇಳುತ್ತ ಬಂದ ಈ ಕಾರ್ಯಕ್ರಮ ’ಫ್ಯಾನ್’ದ (ಅಭಿಮಾನಿ) ಆಗಿರದಿದ್ದರೂ ಅದರ ಬಗ್ಗೆಯಾದರೂ ಕೇಳಿರಬಹುದು. 1941 ರಲ್ಲಿ ಒಂದು ನವೆಂಬರ್ ತಿಂಗಳದ ರಾತ್ರಿ ತಾನು ವಾಸಿಸುತ್ತಿದ್ದ ಗುಡಿಸಲಿನಲ್ಲಿ ಹಠಾತ್ತನೆ ಪವರ್ ಕಟ್ಟಾಗಿ ಚಳಿಯಲ್ಲಿ ಪಾಯಜಾಮ ಹಾಕಿಕೊಂಡು ಇನ್ನೇನು ಮಲಗುತ್ತೇನೆ ಅಂತ ಹೊರಟ ರಾಯ್ ಪ್ಲಮ್ಲಿಯ (Roy Plomley) (ಚಿತ್ರ: ಎಡಗಡೆ) ತಲೆಯಲ್ಲಿ ಒಂದು ರೇಡಿಯೋ ಕಾರ್ಯಕ್ರಮದ ಐಡಿಯಾ ಫ್ಲಾಶ್ ಆಯಿತಂತೆ. ಈಗಾಗಲೇ ಆತನಿಗೆ ರೇಡಿಯೋ ರಂಗದಲ್ಲಿ ಸಾಕಷ್ಟು ಅನುಭವವಿತ್ತು. ಆ ರಾತ್ರಿ ತಕ್ಷಣ ಎದ್ದು ಕುಳಿತು ಅದರ ರೂಪರೇಷೆಗಳನ್ನು ಬರೆದು ಕಳಿಸಿದಾಗ ಬಿ ಬಿ ಸಿ ಗೆ ಅದು ಇಷ್ಟವಾಗಿ ನಂತರದ ಎರಡೇ ತಿಂಗಳಲ್ಲಿ ಅದರ ಮೊದಲ ರೆಕಾರ್ಡಿಂಗ್ ಮತ್ತು ಪ್ರಸಾರ ಶುರುವಾಯಿತು. ಆ ಸರಣಿಯಲ್ಲಿ ಇಲ್ಲಿಯ ವರೆಗೆ ತಪ್ಪದೇ ಪ್ರತಿವಾರವಾರಕ್ಕೆರಡು ಸಾರಿ ಅದರ ಕಾರ್ಯಕ್ರಮ ರೇಡಿಯೋ ತರಂಗಗಳಲ್ಲಿ ಬಿತ್ತರಣೆಯಾಗುತ್ತ ಬಂದಿದೆ. ಇಂದು ಬೆಳಿಗ್ಗೆ ಒಂಬತ್ತು ಗಂಟೆಗೆ ಈ ವಾರದ ವ್ಯಕ್ತಿಯ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ಅವರು ನಿರ್ಜನ ದ್ವೀಪಕ್ಕೆ ಒಯ್ಯುವ ಎಂಟು ಹಾಡುಗಳು ಯಾವವು ಅಂತ ಅಂತ ತಿಳಿಯಲು ಅದರ ಎರಡೂವರೆ ಲಕ್ಷ ರೆಗುಲರ್ ಕೇಳುಗರಂತೆ ರೇಡಿಯೋ ಮುಂದೆ ನಾನೂ ಹಾಜರಾಗುವವನಿದ್ದೇನೆ! ಆ ಕಾರ್ಯಕ್ರಮ A great British Institution ಅನ್ನುವ ಖ್ಯಾತಿ ಗಳಿಸಿದೆಯಲ್ಲವೆ?

ಇದರ ಸ್ವರೂಪ (format) ಏನು?

ವಾರದ ವ್ಯಕ್ತಿಯನ್ನು ಎಲ್ಲೋ ದೂರದ ತಿರುಗಿ ಬರಲಾಗದ ಕಾಲ್ಪನಿಕ ನಿರ್ಜನ ನಡುಗಡ್ಡೆಗೆ ಶಾಶ್ವತವಾಗಿ ಗಡಿಪಾರು ಮಾಡಲಾಗುತ್ತಿದೆ. ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಯಾವುದೇ ಸಾಧನೆಗಳಿಲ್ಲ. ಬದುಕಲು ತನ್ನೆಲ್ಲ ಸರ್ವೈವಲ್ ನೈಪುಣ್ಯವನ್ನುಪಯೋಗಿಸಿ ಸ್ವಾವಲಂಬನದ ದಾರಿ ಹುಡುಕಿ ಬದುಕಿಕೊಳ್ಳಬೇಕು. ಆತನಿಗೆ ಅಥವಾ ಅವಳಿಗೆ ಒಯ್ಯಲು ಕೊಡುವುದು ತನ್ನ ಅಯ್ಕೆಯ ಎಂಟು ಹಾಡು ಅಥವಾ ಧ್ವನಿ ಮುದ್ರಿಕೆಗಳು, ಒಂದು ಬೈಬಲ್ ಮತ್ತು ಶೇಕ್ಸ್ಪಿಯರ್ ಬರೆದ ಸಮಗ್ರ ಸಾಹಿತ್ಯದ ಕಾಪಿ. ಸಾಮಾನ್ಯವಾಗಿ ಆ ವ್ಯಕ್ತಿ ಸೆಲೆಬ್ರಿಟಿಯಾಗಿರುತ್ತಾನೆ,ಅಥವಾ ಪ್ರಸಿದ್ಧ ವ್ಯಕ್ತಿ, ನಟ, ಆಟಗಾರ, ಸಂಗೀತ ಪಟು,ಉದ್ಯಮಿ, ರಾಜಕಾರಣಿ, ಪ್ರಧಾನ ಮಂತ್ರಿ (ಈಗಾಗಲೇ ಒಂಬತ್ತು ಪ್ರಧಾನಿಗಳು ಇದಕ್ಕೆ ’ಬಲಿ’ಯಾಗಿದ್ದಾರೆ! ) ಹೀಗೆ ಸಮಾಜದ ಯಾವದೇ ಸ್ತರದಿಂದಲೂ ಬಂದಿರಬಹುದು.ಅದಕ್ಕೇ ಈ ಕಾರ್ಯಕ್ರಮ ಒಂದು ನಾಡಿನ ಅಥವಾ ಆ ಪ್ರಕಾರದ Who’s Who ಇದ್ದಂತೆ. ಮೀನು ಹಿಡಿದೋ, ಸಿಕ್ಕಿದ್ದನ್ನು ಬೆಳೆದೋ ಹಣ್ಣು ಹಂಪಲಿನ ಗಿಡಗಳು ಕಂಡರೆ ಕಿತ್ತಿ ತಿನ್ನುತ್ತ, ತಮ್ಮ ಇಷ್ಟದ ಅವೇ ಎಂಟು ಹಾಡುಗಳನ್ನು ಕೇಳುತ್ತ (ಆ ಯಂತ್ರ ಎಲ್ಲಿಂದ ಬಂತು ಅದಕ್ಕೆ ಯಾವ ಪವರ್ ಅದೆಲ್ಲ ಕೇಳ ಬೇಡಿರಿ) ರಾಬಿನ್ಸನ್ ಕ್ರೂಸೋನಂತೆ ಬಾಳ್ವೆ ಮಾಡ ಬೇಕು! ಈ ನಿಯಮಗಳನ್ನು ಕೇಳಿದ ಒಂದಿಬ್ಬರು ಆತ್ಮಹತ್ಯೆಗೆ ಸಯಾನಾಯ್ಡ್ ಪಿಲ್ಸ್ ಬೇಡಿದ್ದೂ ಉಂಟು!   

ಆಹ್ವಾನಿತ ಅತಿಥಿಗಳು ಮತ್ತು ಸಂದರ್ಶಕರು

ವಾರದ ಅತಿಥಿ ಯಾವ ದೇಶದವರೂ ಆಗಿರಬಹುದು, ಆದರೆ ಇಲ್ಲಿಯವರೆಗೆ ಅದರಲ್ಲಿ ಭಾಗವಹಿಸಲು ಆಮಂತ್ರಿಸಿದವರೆಲ್ಲ (ಅಥವಾ ಅದಕ್ಕೆ ಕಾಯುತ್ತಿರುವವರು!) ಜನಸಾಮಾನ್ಯರಿಗೆ ಚಿರಪರಿಚಿತರಾಗಿರಬೇಕು ಎನ್ನುವದು ಅಲಿಖಿತ ನಿಯಮ. ಅವರು ಯಾರೂ ಇರಬಹುದು, ಗಂಡಸು, ಹೆಂಗಸು, ಹಿರಿಯರು, ಚಿಕ್ಕವರು, ಹೀಗೆ. ಒಬ್ಬರೇ ಅಥವಾ ಒಮ್ಮೊಮ್ಮೆ ಇಬ್ಬರು ಇರಬಹುದು. (ಉದಾ: ಮೋರ್ಕೋಮ್ಬ್ ಮತ್ತು ವೈಸ್, ಆಂಟನ್ ಮತ್ತು ಡೆಕ್). ಅವರೆಲ್ಲ ಬಿಬಿಸಿ ಸ್ಟುಡಿಯೋದ ಸಂದರ್ಶನದ ಕೋಣೆಯಲ್ಲಿ ಸಂದರ್ಶಕರೊಡನೆ ತಮ್ಮ ಸಾರ್ಥಕ ಜೀವನದ ಏರಿಳಿತ, ವೃತ್ತಿ ಸಾಫಲ್ಯ, ಸುಖ-ದುಃಖಗಳನ್ನು ಬಿಚ್ಚಿಟ್ಟು ಸಂವಾದದಲ್ಲಿ ಪಾಲುಗೊಳ್ಳಲು ತಯಾರಾಗಿರುತ್ತಾರೆ. ಕೇಳುಗರನ್ನು ಮನರಂಜಿಸುತ್ತಾರೆ, ನಗಿಸುತ್ತಾರೆ ಒಮ್ಮೊಮ್ಮೆ ತಾವೂ ಭಾವುಕರಾಗಿ ಅಳುತ್ತಾರೆ. ಅದಕ್ಕೆ ಹಾಲಿವುಡ್ ಸಿನಿಮಾ ನಟ ಟಾಮ್ ಹ್ಯಾಂಕ್ಸ್ ಒಂದು ಉದಾಹರಣೆ ! 1942 ರಲ್ಲಿ ಪ್ರಾರಂಭವಾದಾಗಿಂದಲೂ 1985 ರಲ್ಲಿ ತಾವು ಮರಣ ಹೊಂದುವ ತನಕ ರಾಯ್ ಪ್ಲಮ್ಲಿಯವರೇ ಆ ಸಂದರ್ಶನಗಳನ್ನು ನಡೆಸಿಕೊಟ್ಟರು. ಅವರ ನಂತರ ಮೈಕೆಲ್ ಪಾರ್ಕಿನ್ಸನ್, ಸೂ ಲಾಲಿ(18 ವರ್ಷ) ಕರ್ಸ್ಟಿ ಯಂಗ್ (12 ವರ್ಷಗಳ ವರೆಗೆ) ಇವರ ನಂತರ ಈಗ ನಾಲ್ಕನೆಯವಳಾಗಿ ಲಾರೆನ್ ಲೆವರ್ನ್ ಸಂದರ್ಶಕರಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದ ಕೆಲವು ಸಂದರ್ಶಕರು ರಾಜಕಾರಣಿಗಳ ನೀರಿಳಿಸುತ್ತ ಭೀಮ ಭಯಂಕರ ಎದುರಾಳಿಯಂತೆ ವರ್ತಿಸಿವುದು ಅಪರೂಪ. ಆದರೆ ರಾಯ್ ಪ್ಲಮ್ಲಿ ಮಹಾಶಯ ಅತ್ಯಂತ ಸೌಜನ್ಯದಿಂದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈಗಿನ ಕಾಲದ ಶೈಲಿಯಲ್ಲಿ ಸ್ವಲ್ಪವೇ ಬದಲಾವಣೆಯಾಗಿದೆಯಾದರೂ ಸಂದರ್ಶಕರೆಲ್ಲ ತಮ್ಮದೆ ಛಾಪು ಒತ್ತಲು ಪ್ರಯತ್ನಿಸುತ್ತಿರುವದು ಇಂದಿನ ಯುಗದಲ್ಲಿ ಅಚ್ಚರಿಯ ವಿಷಯವಲ್ಲ. ಕಾರ್ಯಕ್ರಮದ ಪ್ರಾರಂಭದಲ್ಲಿ ರೇಡಿಯೋ ಅಲೆಗಳಲ್ಲಿ ತೇಲಿ ಬರುವ ಸಿಗ್ನೇಚರ್ ಟ್ಯೂನ್ ನಿರ್ಜನ ದ್ವೀಪದ ಬೀಚನ್ನು ನೆನಪಿಸುತ್ತದೆ. ಅದು 1942 ರಿಂದಲೂ ಹಾಗೆಯೇ ಇದೆ – ಇತ್ತೀಚಿನ ವರ್ಷಗಳಲ್ಲಿ ಕಡಲು ಹಕ್ಕಿಯ ಕೂಗನ್ನೂ ಅದರಲ್ಲಿ ಬೆರಸಿ ಕಡಲು, ಅಲೆಗಳು ಇವನ್ನು ಕೂಡಿಸಿ ಒಂದು ರೋಮ್ಯಾಂಟಿಕ್ ಕಲ್ಪನಾವಿಲಾಸವನ್ನು ಸೃಷ್ಟಿಸಲಾಗುತ್ತದೆ.1951ರಲ್ಲಿ ಎರಡು ಮಾರ್ಪಾಡುಗಳಾದವು. ನಿಯಮಗಳನ್ನು ಸಡಿಲಿಸಿ ಇನ್ನೆರಡು ವಸ್ತುಗಳನ್ನು ಕೊಂಡೊಯ್ಯಲು ಅನುಮತಿ ಕೊಟ್ಟರು. ಒಂದನೆಯದಾಗಿ ನಡುಗಡ್ಡೆಯಲ್ಲಿ ಏಕಾಕಿಯಾಗಿ ಉಳಿಯುವವರ ಸಂಗಾತಿಯಾಗಿ ಅವರ ಐಚ್ಛಿಕ ಪುಸ್ತಕ. ಇನ್ನೊಂದು ಅವರ ನೆಚ್ಚಿನ ವಿಲಾಸದ ವಸ್ತು (Luxury item). ’ನಿಮ್ಮ ಐಚ್ಛಿಕ ಲಗ್ಶರಿ ಏನು’ ಎನ್ನುವ ಪ್ರಶ್ನೆಗೆ 1982ರಲ್ಲಿ  ’ಸೆಕ್ಸ್ ಕಿಟನ್’ ಅಂತ ಬಿರುದು ಗಳಿಸಿದ್ದ ಬ್ರಿಜಿಟ್ ಬಾರ್ಡೋ ಅಂದು ಒಂದು ಅವಾಚ್ಯ ಶಬ್ದವನ್ನು ಉಚ್ಚರಿಸಿದಾಗ ಜಂಟಲ್ಮನ್ ಪ್ಲಮ್ಲಿ ಬೆಚ್ಚಿ ಬಿದ್ದಿದ್ದರು! ಪಲಾಯನವಾದಿಗಳು ಇಬ್ಬರು ವಿಮುಕ್ತಿಗೆ ಸಾಯನಾಡ್ ಬೇಡಿದ್ದರು!

ಅತಿಥಿಗಳ ಆಯ್ಕೆ

ಸಾಮಾನ್ಯವಾಗಿ ಒಮ್ಮೆಯಷ್ಟೇ ಬರುತ್ತಾರಾದರೂ ಕೆಲವರು ಎರಡು ಬಾರಿ, ಮೂರು ಬಾರಿ ಸಹ ಬಂದಿದ್ದಾರೆ ಡೇವಿಡ್ ಅಟನ್ಬರೋ ಒಬ್ಬರನ್ನೇ ಆ ಸಿಗ್ನೇಚರ್ ಟ್ಯೂನ್ ನುಡಿಸುತ್ತಿದ್ದಂತೆ ನಾಲ್ಕು ಬಾರಿ ಬರಮಾಡಿಕೊಂಡಿದ್ದಿದೆ. ಆತನ ಲಗ್ಜರಿ ಒಂದು ಪಿಯಾನೋ. ಅನೇಕರದು ಸಹ ಅದೇ ಆಗಿದೆ. ಕೆಲವರು ತಮ್ಮ ತಲೆದಿಂಬನ್ನು ಕೇಳಿದರೆ ಇನ್ನು ಕೆಲವರು ತಮ್ಮದೇ ಹಾಸಿಗೆಯನ್ನು. ಒಂದಿಬ್ಬರು ಆತ್ಮಹತ್ತೆಗೆ ವಿಷ (ಸಾಯನೈಡ್) ಬೇಕೆಂದಿದ್ದಾರೆ. ತಾವು ಒಯ್ಯುವ ಎಂಟು ಗಾನ ಮುದ್ರಿಕೆಗಳಲ್ಲಿ ಹೆಚ್ಚು ಜನಪ್ರಿಯವಾದವು ಹೆಚ್ಚಾಗಿ ಪಾಶಿಮಾತ್ಯ ಶಾಸ್ತ್ರೀಯ ಸಂಗೀತದ ರೆಕಾರ್ಡುಗಳೇ. ಪ್ರಿಯವಾದ ಸಂಗೀತ ಅವರವರ ವ್ಯಕ್ತಿತ್ವದ ಪ್ರತೀಕವಲ್ಲವೆ? ಮತ್ತು ಅತಿಥಿಗಳಾಗಿ ಬರುವವರು ಸಮಾಜದ ಯಾವ ವರ್ಗದವರು ಎನ್ನುವದರ ಮೇಲೆ  ಅದು ಅನ್ವಯಿಸುತ್ತದೆ ಅಂದ ಮೇಲೆ ಇಲ್ಲಿಯವರೆಗೆ ಪ್ರಸಾರವಾದ ಮೂರು ಸಾವಿರಕ್ಕೂ ಹೆಚ್ಚಿನ ಸಂಚಿಕೆಗಳಲ್ಲಿ ಯೂರೋಪಿಯನ್ ಶಾಸ್ತ್ರೀಯ ಸಂಗೀತಗಾರರಾದ  ಹ್ಯಾಂಡಲ್ ಬೇಥೋವನ್,  ಮೋಝಾರ್ಟ್, ಬಾಖ್, ಸ್ಟ್ರಾಸ್, ಶೂಬರ್ಟ್ ಮುಂತಾದವರ ಕೃತಿಗಳ ಬೇಡಿಕೆಯೇ ಹೆಚ್ಚು. ಅತಿಥಿಗಳು ಪಾಪ್ (Pop songs) ಇಷ್ಟ ಪಟ್ಟಿದ್ದಲ್ಲಿ ಬೀಟಲ್ಸ್ ನಂತರ ಡೆವಿಡ್ ಬಾವಿ ಮತ್ತು ಫ್ರಾಂಕ್ ಸಿನಾಟ್ರಾ ಅವರ ಹೆಸರುಗಳು ಹೆಚ್ಚಾಗಿ ಕೇಳಿಬಂದುದರಲ್ಲಿ ಆಶ್ಚರ್ಯವಿಲ್ಲ. ಅತಿಥಿಗಳಲ್ಲಿ ಹೆಚ್ಚಿನವರು ಯು ಕೆ ದವರೆ ಆದರೂ ಅಮೆರಿಕನ್ನರು ಮತ್ತಿತರ ಇಂಗ್ಲಿಷ್ ಮಾತಾಡುವ ದೇಶದವರೆ ಹೆಚ್ಚಾಗಿ ಕಾಣಿಸಿಕೊಂಡಿದ್ದಲ್ಲೂ ಆಶ್ಚರ್ಯವಿಲ್ಲ.

ಆಲೆನ್ ಟ್ಯೂರಿಂಗ್ ಸಂಸ್ಥೆ ಮತ್ತು ಹಾಡುಗಳ ಆಯ್ಕೆ

Desert Island Discs ಎಷ್ಟು ಜನಪ್ರಿಯ ಕಾರ್ಯಕ್ರಮ ಅಂದರೆ ಅದು ಬಿಬಿಸಿಯ ಟಚ್ ಸ್ಟೊನ್ (ಮಾನದಂಡ) ಅಂತ ಮನ್ನಿಸುತ್ತಾರೆ. ಅದು ಪ್ರತಿಯೊಂದು ಮೈಲಿಗಲ್ಲನ್ನು (50, 60, 70) ದಾಟಿದಂತೆ ಅದರ ಬಗ್ಗೆ ಬರೆದ ಲೇಖನಗಳಿಗೆ ಲೆಕ್ಕವಿಲ್ಲ. ರೇಡಿಯೋದ ಅತ್ಯಂತ ಉತ್ಕೃಷ್ಠ ಕಾರ್ಯಕ್ರಮ ಅಂತ ಮತ್ತೆ ಮತ್ತೆ ಜನಪ್ರಿಯತೆಯ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಳಿಸುತ್ತಿದೆ. ಈ ಮೊದಲು ಹಳೆಯ ಕಾರ್ಯಕ್ರಮಗಳು ಮತ್ತೆ ಕೇಳಲು ಸಿಗುತ್ತಿರಲಿಲ್ಲ.ಇತ್ತೀಚೆಗೆಯಷ್ಟೇ ಬಿಬಿಸಿ ಅದರ ಹಕ್ಕುದಾರರೊಂದಿಗೆ ಒಪ್ಪಂದ ಮಾಡಿಕೊಂಡಾಗಿನಿಂದಷ್ಟೇ ಎಪ್ಪತ್ತು ವರ್ಷಗಳ ಎಲ್ಲ ರೆಕಾರ್ಡಿಂಗ್ ಗಳೂ ಬಿಬಿಸಿ ಸೌಂಡ್ಸ್ ನಲ್ಲಿ ಕೇಳಲು ಲಭ್ಯವಾಗಿ ಅದರ die hard fans ಗೆ ವರದಾನವಾಗಿದೆ. ಬರೀ ಹಾಡುಗಳ ಹೆಸರಷ್ಟೇ ಅಲ್ಲ ಪೂರ್ತಿ ಹಾಡುಗಳನ್ನೂ, ಅಥವಾ ಕೆಲವರದು ಅಪರೂಪದ ಧ್ವನಿಮುದ್ರಿಕೆಗಳಷ್ಟೇ ಇರಬಹುದು, ಅವೆಲ್ಲ ಲಭ್ಯವಾಗಿವೆ. ಎಪ್ಪತ್ತು ವರ್ಷಗಳ ಯಾದಿ ಇಂಟರ್ನೆಟ್ಟಿನಲ್ಲಿ ಸುಲಭವಾಗಿ ನೋಡಬಹುದು.

ಈ ಮಾಹಿತಿ ಸಿಕ್ಕ ಮೇಲೆ ಬ್ರಿಟಿಷ್ ಲೈಬ್ರರಿಯ Alan Turing Institution ವತಿಯಿಂದ ಅತಿಥಿಗಳ ಹಾಡುಗಳ ಆಯ್ಕೆ ಏನನ್ನು ಸೂಚಿಸುತ್ತದೆ ಎನ್ನುವದರ ಬಗ್ಗೆ ಕಂಪ್ಯೂಟರ್ ಸಹಾಯದಿಂದ ದೊಡ್ಡ ಪ್ರಮಾಣದ ಸಂಶೋಧನೆ ಹೊರಬರುತ್ತಿದೆ. ಯಾವ ಹಾಡುಗಳು ಅಂತ ಅತಿಯಾಗಿ ಯೋಚನೆ ಮಾಡಿ ಅದರಲ್ಲೇ ಮುಳುಗಿದ ಟಾಂ ಹ್ಯಾಂಕ್ಸ್ ನಂತೆಯೇ ಅನೇಕರೂ ಭಾವುಕರಾಗುತ್ತಾರೆ. ಸಂದರ್ಶಕಿಯ ಪ್ರಶ್ನೆಗಳಿಗೆ ಉತ್ತರ ಕೊಡುವದಕ್ಕಿಂತ ಹಾಡುಗಳ ಬಗ್ಗೆ ಲಕ್ಷ್ಯ ಕೇಂದ್ರೀಕರಿಸಿಬಿಡುತ್ತಾರೆ. ಕಂಠ ಬಿಗಿಯುತ್ತದೆ. ಅವರು ಸಾಮಾನ್ಯವಾಗಿ ಆರಿಸುವ ಹಾಡುಗಳು ತಮ್ಮ ಜೀವನದ ಮುಖ್ಯ ಘಟ್ಟದಲ್ಲಿ ಆದ ಅನುಭವಗಳಾದಾಗ, ’ಆತ್ಮ ಸಾಕ್ಷಾತ್ಕಾ’ವಾದಾಗ, ಅಥವಾ ಆಗ ಕೊಂಡ, ಅಥವಾ ಆಲಿಸಿದ ಹಾಡುಗಳು.

ಭಾರತೀಯರು?

ನನಗೆ ಗೊತ್ತಿದ್ದಂತೆ ಮೂವರೇ ಭಾರತೀಯ ಮೂಲದವರು ಈ ಪ್ರೋಗ್ರಾಂದಲ್ಲಿ ಕಾಣಿಸಿಕೊಂಡಿದ್ದಾರೆ: ಲೇಖಕ ಸಾಲ್ಮನ್ ರಶ್ದಿ (1988), ಕೋಬ್ರಾ ಬಿಯರ್ ಉದ್ದಿಮೆಯನ್ನು ಹುಟ್ಟುಹಾಕಿದ ಬ್ಯಾರನ್ ಕರಣ್ ಬಿಲಿಮೋರಿಯಾ (2004), ಮತ್ತು ಪ್ರಪ್ರಥಮ ಭಾರತೀಯಳು ಜೈಪೂರದ ರಾಜಮಾತಾ ಗಾಯತ್ರಿ ದೇವಿ (1982). ಪಾಕಿಸ್ತಾನದ ಕ್ರಿಕೆಟ್ ಪಟು ಮತ್ತು ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸಹ ಅದರಲ್ಲಿ ಒಂದು ಬಾರಿಕಾಣಿಸಿಕೊಂಡಿದ್ದಾರೆ.

ಈ ರೇಡಿಯೋ ಕಾರ್ಯಕ್ರಮವನ್ನು ಪ್ರತಿವಾರ ನೀವೂ ಕೇಳಿ ಆನಂದಿಸುವಿರೆಂಬ ಭರವಸೆಯಿದೆ ನನಗೆ!

ಲೇಖಕರು: ಶ್ರೀವತ್ಸ ದೇಸಾಯಿ