’ಮಹಾಪ್ರಸ್ಥಾನ’ದ ಮೂರು ಕವನಗಳು- ಸರೋಜಿನಿ ಪಡಸಲಗಿಯವರಿಂದ

 1) ನಕ್ಕಳವಳು ...

ನಕ್ಕಳವಳು ತನ್ನನೇ ತಾ ನೋಡಿ...
ತನಗೇ ಗೊತ್ತಿಲ್ಲದ ತನ್ನ ಹತ್ತು ಹಲವು
ಚಿತ್ರಗಳ ನೂರು ಗುಣಗಳ ಹೆಸರುಗಳ
ಎಳೆ ಎಳೆಯಾಗಿ ಹೆಣೆದು ಬಂಧಿಸಿದ
ಆ ನವಿರು ಬಲೆಯತ್ತ ಮತ್ತೆ ನೋಡುತ
ಮಿಸುಕಲಾಗದೆ ಅತ್ತಿತ್ತ ನಿಟ್ಟಿಸುತ್ತ

ನಕ್ಕಳವಳು ಮತ್ತೆ...
ತನ್ನನೇ ಅಬಲೆ ಎಂದ ನಿರ್ಬಲರ ನೋಡಿ
ತಾ ಹೊತ್ತು ಇಳುಹುವ ಭಾರದ ಅಂದಾಜು
ತೂಗುವ ಬಲ ಇಲ್ಲದ ಗುಂಪಿನ ಮಬ್ಬು ಬೊಬ್ಬೆ
ಕಿವುಡಾಗಿಸಿ, ಕುರುಡಾಗಿಸಿದ ತನ್ನನೇ ನೋಡಿ
ಅಖಂಡ ಸ್ವಾರ್ಥ ತುಂಬಿದ ತನ್ನವರನೇ ನೋಡಿ

ನಕ್ಕಳವಳು ಮತ್ತೆ...
ಕೋಮಲೆ ನೀಎಂದ ಗಟ್ಟಿಗರ ಗಟ್ಟಿತನ ನೋಡಿ
ತನ್ನ ಧ್ವನಿಯಲ್ಲಿನ ಕಸುವನ್ನೆ ನುಂಗಿ ಹಾಕಿ
ಅಬ್ಬರದಿ ನಗುವ ಉಬ್ಬುಬ್ಬಿ ಹಾರುವ ಗಾವಿಲರ
ಗಾವುದ ದೂರವಿರಿಸಿ ನಿರುಕಿಸಿ ಅವರಾಳ
ತನ್ನಾಳದ ಸುಳಿವೇ ಕೊಡದೆ ಗೂಢತೆ ತುಂಬಿ

ನಕ್ಕಳವಳು ಮತ್ತೆ...
ತನಗೆ ಕಟ್ಟಿದ ಪಟ್ಟಗಳ ಇಷ್ಟುದ್ದ ಪಟ್ಟಿ ನೋಡಿ
ಆ ಪಟ್ಟದ ಗಟ್ಟಿ ಬುಡವ ಅಲ್ಲಾಡಿಸಿ ಪೊಳ್ಳಾಗಿಸಿ
ಗಟ್ಟಿ ಮುಟ್ಟಾದ ಕೋಟೆಯೊಳಗಿಟ್ಟು ಮೆರೆಯಿಸಿ
ಅರ್ಥವಿಲ್ಲದ ಆ ಭಂಡತನಕೆ ನೂರು ಹೆಸರಿಟ್ಟು
ಅಗಡಾದಿಗಡಿ ಮೆರೆವ ನೆರವಿ ನೋಡಿ ನೋಡಿ

ನಕ್ಕಳವಳು ಮತ್ತೆ...
ಹೌದು ತೆರಪಿಲ್ಲದ ನಗುವಲ್ಲಿ ತೇಲಿ ಮುಳುಗಿ
ಯಾರಿಗ್ಯಾವ ಹೆಸರು ಕೊಡದೆ ಚಿತ್ರ ಬರೆಯದೆ
ಎಲ್ಲವನೂ ತನ್ನೊಡಲಲಿ ಹುದುಗಿಸಿ ಮೌನದಿ
ನಿಶ್ಯಬ್ದದಲೆ ಶಬ್ದ ತುಂಬಿಸಿ ಯಾರಳವಿಗೂ ನಿಲುಕದ
ತನ್ನನೇ ತಾ ನೋಡಿ ಬಲು ಹೆಮ್ಮೆಯಿಂದ

2)  ಸಾವು ಅಂದ್ರೆ ಸಾವು ಅಷ್ಟೇ!

ಯಾಕೋ ಸಮಯದ ಜೊತೆ ಈಗ ಬಲು ಸ್ನೇಹ
ಕೆಲಸ ಇಲ್ಲ ಬೊಗಸೆ ಇಲ್ಲ ಖಾಲಿ ಖಾಲಿ ಎಲ್ಲ
ಖಾಲಿ ನೋಟ ಸಮಯದಂತೆ ಹೂಬೇಹೂಬ
ಕುರುಡು ಕಣ್ಣು ಕಿವುಡು ಕಿವಿ ಮೌನ ಮಾತಲ್ಲೂ
ನಡೆವುದು ಸಮಯದ ಕೈಗೆ ಕೈ ಜೋಡಿಸಿ ಅಷ್ಟೇ!

ಸಮಯದ ಮನವೂ ತುಂಬಿ ಭಾರ ಬಹುಶಃ
ಸುರಿಯದ ಕಾರ್ಮುಗಿಲು! ಉಸಿರದ ಮನಸು !
ನರಳಿ ನಲುಗಿ ಏನೋ ಘನ ಕಾರ್ಯದಡಿ ಸಿಲುಕಿ
ಹೆಜ್ಜೆ ಸರಿಸಿದಾಗ ತೋರಿ ಹುಸಿ ಗಾಂಭೀರ್ಯ
ಬಲು ಆಪ್ತವೀ ಸಮಯ ಸಂದೇಹವಿಲ್ಲ ಚೂರೂ

ಮತ್ತೆ ಸಾಧ್ಯವೆ ಇನ್ನಾರಿಗೆ ಹೇಳು ಆ ಕೆಲಸ
ಅಲೆಯಂತೆ ತೇಲಿ ನೆಲೆಯಿಲ್ಲದ ತಾವಲ್ಲಿ ನೆಲೆ
ಸಿಕ್ಕಿದಂತೆ ಭ್ರಮೆ ಹುಟ್ಟಿಸಿ ಜೀವಕೆ ಅಂಟಿಸಿ ಬಿಟ್ಟ
ಬಲು ಅಮೂಲ್ಯ ಬದುಕು ಎಂಬ ನಂಬಿಕೆಯ!
ಆ ಗಡಸುಗಾರ ಸಮಯ ಬಲು ಮೆಚ್ಚು ನನಗೆ!

ಇಷ್ಟಾಗಿಯೂ ಆ ಬದುಕಾದರೂ ಏನು ಮಹಾ
ಆಕಸ್ಮಿಕ ಅಚ್ಚರಿ ದಿಗ್ಘ್ಮೂಢತೆಗಳ ಒಟ್ಟು ಮೊತ್ತ
ಹಸಿ ಸುಳ್ಳು ನೋವು ನಲಿವು ಸುಖ ದು:ಖ ಎಲ್ಲ
ಬರಡು ಬಯಲು ಅಲ್ಲುಂಟು ಹಸಿರೆಂಬ ಭ್ರಾಂತಿ
ಜಾದೂಗಾರ ಸಮಯದ ಮೋಡಿಗೆ ಮರುಳು ನಾ!

ಅದೇ ಮರುಳಿನ ನೆರಳಲಿ ಓಡಿಸಿ ಆಡಿಸಿ ಜಾರಿಸಿ
ಜಾಲಗಾರನ ಮೀರಿ ಪಟ್ಟಾಗಿ ಸಿಗಿಸಿ ಜಾಲದಲ್ಲಿ
ಕೊನೆಗೆ ಸಹನೆ ತಪ್ಪಿಸಿ,ವಿರಾಮಕೆ ಹಾತೊರೆಯೆ ಜೀವ
ದೊಡ್ಡದಾಗಿ ಕೈ ಚಾಚಿ ಬಾ ಒಯ್ವೆ ಅಲ್ಲಿದೆ ಶಾಂತಿ ತಿರುಗಿ ಬಾರದಲ್ಲಿ
ಬರಿ ದೊಡ್ಡ ಮಾತು ಸಮಯದ್ದು!ಸಾವು ಅಂದ್ರೆ ಸಾವು ಅಷ್ಟೇ ಇನ್ನೇನಿದೆ !
ಆ ಉಪಾಯಗಾರ ಸಮಯ ನನಗೆ ಬಲು ಇಷ್ಟ!
 3) ಹಕ್ಕಿಲ್ಲ ಪೇದೆಗಳಿಗೆ 

ನೋಡ್ತಾನೆ ಇದೀನಿ ಗಮನವಿಟ್ಟು
ಇಂಚಿಂಚು ಬಿಡದೆ ಹೊಂಚು ಹಾಕಿ
ಮನ ಈಗೀಗ ಅಂತರ್ಮುಖಿ ಯಾಕೊ
ಅದೆನೋ ಗೂಢ ಗಾಢ ಯೋಚನೆ
ನೋಟ ದೂರ ಅಗಮ್ಯ ದಿಗಂತದತ್ತ

ಹೂಂ ಈಗಲೂ ಅದೇ ಸಮಾಧಿ ಸ್ಥಿತಿ
ಸೊರ ಸೊರ ಮೂಗು ತುಸು ಏದುಸಿರು
ಕಣ್ಣಾಲಿ ತುಂಬ ನೋವಿನ ಗೀಚಾಟ
ಏನೋ ನೋಡ್ತದೆ ಅದೇನೋ ಲೆಕ್ಕಾಚಾರ
ಬುದ್ಧಿ ಏನಾದ್ರೂ ತನ್ನ ಚಾರ್ಜ್ ಕೊಟ್ತಾ

ಬುದ್ಧಿಯತ್ತ ಕಡೆಗಣ್ಣ ನೋಟ ಬೀರಿದ್ರೆ
ಎದೆ ಝಲ್ಲೆಂದು ಬಡಿತ ತಮಟೆ ಹಾಗೆ
ಮತ್ತೇನು ಮುಖ ಸಪ್ಪೆ ಕಣ್ಣು ಕೊಳ
ಹಣೆ ತುಂಬ ನೂರೆಂಟು ಗಂಟು ಗೀರು
ಅದಕೂ ಚಿಂತೆ ತನ್ನದೆ ಒಡಹುಟ್ಟಿದ್ದಲ್ವಾ

ಎಳೆದೆ ಮೆಲ್ಲಗೆ ಮನದತ್ತ ಬುದ್ಧಿಯನು
ಕಣ್ಸನ್ನೆ ಮಾಡಿ ತುಟಿಯ ಮೇಲೆ ಬೊಟ್ಟಿಟ್ಟು
ಕೆರೆದು ಧ್ಯನಿ ಸದ್ದು ಮಾಡಿದ್ರೂ ಊಂ ಹೂಂ
ಥೇಟ್ ವಿಗ್ರಹದೇ ಪೋಸು ಮಿಸುಕಲಿಲ್ಲ
ಘಬರಾಸಿ ಅಲ್ಲಾಡಿಸಿದ್ರೆ ನಿರ್ಜೀವ ನೋಟ

ಏನಾಗಿದೆ ಇದೇನು ಹುಡುಗಾಟ ನಿಂದು
ಕಿರುಚಿತು ಬುದ್ಧಿ ಕೈ ತಿರುಚಿ ತನ್ನನೆ ಪರಚಿ
ದೊಡ್ಡ ಉಸಿರು ಬಿಟ್ಟು ಮನ ತಿರುಗಿತಿತ್ತ
ಕಾಲನ ಕಾಲಿಗೆ ಬೇಡಿ ಸರಪಳಿ ಬಿಗಿಬೇಕು
ಅತ್ತಿತ್ತ ಹೊರಳಾಡದಂತೆ ನೆಟ್ಟಗೆ ನಿಲ್ಲಿಸಿ

ಈಗ ಬುದ್ಧಿಯ ಜಾಣ ನೋಟವೂ ತಪ್ತು ದಿಕ್ಕು
ಅತ್ತಿತ್ತ ತಿರುಗಿ ಮತ್ತೆ ನೆಲೆಯೂರಿ ಮನದತ್ತ
ತಲೆ ಸರೀನಾ ತಿಂದಿದ್ದು ಬರೋಬ್ಬರಿ ಅಲ್ವಾ
ಎಲ್ಲೋಗಿದ್ದೆ ಏನ ನೋಡಿದೆ ಗಾಳಿ ಸೋಂಕಾ
ಇಟ್ತು ನೂರು ಪ್ರಶ್ನೆ ನನ್ನದೂ ಬಿಡದೆ ಸೇರಿಸಿ

ಮನ ಕಕ್ಕಿತು ಈಶನ ಕಂಠದ ಕಹಿ ಎಲ್ಲ ತುಂಬಿ
ಯೋಚಿಸು ಆತ ಮಾಡೋದೆಂಥ ಘನಕಾರ್ಯ
ನಿನ್ನೆದನ್ನ ಎಗ್ಗಿಲ್ಲದೆ ಸರಿಸಿ ಮೆಟ್ಟಿ ನಿಂತು ಅವನ್ನ
ತ್ರಿವಿಕ್ರಮನಾಗ್ತನಲಾ ಇಂದು ನಾಳೆ ಅಂತ
ನೆನಪುಗಳಂತ ದೊಡ್ಡ ಲೇಬಲ್ ಹಚ್ಚಿದ್ರಾಯ್ತಾ

ಒಂದು ಗಳಿಗೆ ಬುದ್ಧಿಗೂ ಬಾಯಿ ಬಂದಾಯ್ತು
ನಿಜ ಇದಿಷ್ಟೇ ಅಲ್ವೆ ಕಾಲನ ಕೆಲಸ ಅರ್ಥವಿಲ್ಲದ್ದು
ಏನು ಸಾಧನೆ ಅನಂತ ನೋವು ಜೀವಗಳಿಗೆ
ಉಸರಿರುವ ವರೆಗೂ ಕೊರಗು ತಹತಹ ಅಷ್ಟೇ
ಇದೆ ಮನಕೂ ತಲೆ ಅನ್ಕೊಂಡ್ರೂ ಎಲ್ಲೊ ತಪ್ತು

ಮರುಚಣ ಫಕ್ಕಂತ ಹೊಳೀತು ಮಿಂಚು ನಕ್ಕಿತು ಬರೋಬ್ಬರದೆ
ತಾಳಮೇಳಿಲ್ಲದ ವಿಚಾರವ್ಯಾಕೆ
ನಿನ್ನೆಯ ಮೆಟ್ಟದಿದ್ರೆ ಹೊಸದು ಏಳೋದು ಹೇಗೆ
ಬಿಸಿಲು ಸರಿದು ಮಳೆ, ಚಿಗುರು ಹಣ್ಣು ಬೀಜ ನಿನ್ನ
ಅಸಲು ಮಂಕು ತಾಕಿತೊಂದು ಚಣ ನಂಗೆ

ಮೊಗ ಬಾಗಿ ನೆಲಕ್ಕೊರಗಿ ಬಿಡಬೇಕೆ ಮನಸು
ನಾ ಹೇಗೆ ಸಹಿಸಲಿ ಬಾಚಿ ತಬ್ಬಿ ಎರಡನ್ನೂ
ಹೇಳ್ದೆ ಕಂಬನಿಯ ಬಿಂದುಗಳಲಿ ಮೀಯಿಸುತ
ಏನಿಲ್ಲ ಬಂದಂತೆ ಹೋಗೋದಷ್ಟೆ ನಮ್ಮದು
ಹಕ್ಕಿಲ್ಲ ಬದಲಿಸಲು ಈ ಚದುರಂಗದಾಟದ ಪೇದೆಗಳಿಗೆ!!
ಬಾಯಿ ಕಟ್ತು ನಂಗೂ!

ಸರೋಜಿನಿ ಪಡಸಲಗಿ
ಬೆಂಗಳೂರು


Publisher:
ಅಣಕು ರಾಮನಾಥ !
ತೇಜು ಪ್ರಕಾಶನ ಬೆಂಗಳೂರು
+91 9448050463

ರಿಚರ್ಡ್ ಬರ್ಟನ್ನಿಗೆ ಗೌರವಾರ್ಪಣೆ – ಶಾಲಿನಿ ಜ್ಞಾನಸುಬ್ರಹ್ಮಣಿಯನ್ ಮತ್ತು ಎರಡು ಕವಿತೆಗಳು -ರಾಜಶ್ರೀ ಪಾಟೀಲ

ಭಿತ್ತಿ ಭರ್ತಿ ತುಂಬಿದ ಬೃಹದ್ ರಿಚರ್ಡ್ (ಚಿತ್ರ೧: ಲೇಖಕಿ)

ಮಿಸ್ಟರ್ ಬರ್ಟನ್ ಚಿತ್ರವು ರಿಚರ್ಡ್ ಬರ್ಟನ್ ಅವರ ಜೀವನವನ್ನು ವಿವರಿಸುತ್ತದೆ—ಪೋನ್ಟ್ರೈಡಿವೆನ್ ಹಳ್ಳಿಯಿಂದ ಇಂಗ್ಲೆಂಡ್‌ನ ರಂಗಮಂದಿರಗಳವರೆಗೆ ಯುವಕ ರಿಚರ್ಡ್ ಜೆಂಕಿನ್ಸ್ ಅವರ ಜೀವನದಲ್ಲಿ ಅವರ ಶಾಲಾ ಶಿಕ್ಷಕರು ಪ್ರೇರಣಾದಾಯಕ ಪಾತ್ರ ವಹಿಸಿದರು—ಅವರ ಪ್ರತಿಭೆಯನ್ನು ಗುರುತಿಸಿ, ಅಭಿನಯವನ್ನು ಮುಂದುವರಿಸಲು ಪ್ರೋತ್ಸಾಹಿಸಿ, “ಬರ್ಟನ್” ಎಂಬ ತಮ್ಮ ಹೆಸರನ್ನೂ ನೀಡಿದರು. ಅವರ ಆಳವಾದ, ಪ್ರತಿಧ್ವನಿಸುವ ಧ್ವನಿ ಅವರ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿತು.

ಈ ಚಿತ್ರವನ್ನು ನೋಡಿದ ನನಗೆ ರಿಚರ್ಡ್ ಬರ್ಟನ್ ಅವರ Pontrhydyfen ಪಾಂಟ್ರಿಡ್ ವೆನ್ (ವೆಲ್ಶ್ ಭಾಷೆಯಲ್ಲಿ ’f’ ಗೆ ವ ಎನ್ನುವ ಉಚ್ಚಾರ) ಜನ್ಮಸ್ಥಳವನ್ನು ಅನ್ವೇಷಿಸಲು ಪ್ರೇರಣೆ ನೀಡಿತು. ಈ ವರ್ಷ 2025 ಅವರ ಜನ್ಮ ಶತಮಾನೋತ್ಸವದ ಸಂದರ್ಭವಾಗಿದ್ದು, ಪೋರ್ಟ್ ಟಾಲ್ಬಾಟ್ ಕೌನ್ಸಿಲ್ ಅನೇಕ ಸಂಬಂಧಿತ ಸ್ಥಳಗಳನ್ನು ‘ರಿಚರ್ಡ್ ಬರ್ಟನ್ ಟ್ರೈಲ್(trail)’ ಆಗಿ ಏರ್ಪಡಿಸಿದೆ.

ಮೇಲಿನ ಚಿತ್ರ-ಲೇಖಕಿ ಕೃಪೆ: ಇಂದಿನ ದೃಶ್ಯ; ಕೆಳಗೆ: ರಿಚರ್ಡ್ ಮತ್ತು ತಂದೆ ತನ್ನೂರಿನ ಅದೇ ಸೇತುವೆಯ ಮೇಲೆ c1950 ದಶಕದಲ್ಲಿ.
ರಿಚರ್ಡ್ ಬರ್ಟನ್ ಟ್ರೈಲ್(trail) —ಫೋಟೋ: ಶಾಲಿನಿ ಜ್ಞಾನಸುಬ್ರಹ್ಮಣಿಯನ್
ಶ್ರೀವತ್ಸ ದೇಸಾಯಿ ತಮ್ಮ ವೇಲ್ಸ್ ನೆನಪುಗಳನ್ನು ಜೋಡಿಸುತ್ತಾರೆ. 
ನಾನು ಈ ದೇಶದ ಮಣ್ಣಿನ ಮೇಲೆ ಕಾಲಿಟ್ಟದ್ದು 1974 ರಲ್ಲಿ ಆಗಸ್ಟ್ ತಿಂಗಳ ಮೊದಲ ವಾರ. ಮಾಡ್ ಕವಿಡ್ ಆಕಾಶ ಜಿಟಿ ಜಿಟಿ ಮಳೆ. ಧಾರವಾಡದ ಶ್ರಾವಣವನ್ನು ನೆನೆಯುತಿತ್ತು ಮನ. ಎಲ್ಲೆಡೆ ಹಸಿರು ಹುಲ್ಲು. ನಾನು ಮೊದಲು ಕಂಡ ನ್ಯೂಪೋರ್ಟ್, ಕಾರ್ಡಿಫ್ ಗಳು ದಕ್ಷಿಣ ವೇಲ್ಸ್ ಪ್ರಾಂತದಲ್ಲಿವೆ. ನಾನು ಭೇಟಿಯಾದ ಎಳೆದೆಳೆದು ಇಂಗ್ಲಿಷ್ ಮಾತಾಡುವ ವೆಲ್ಶ್ ಜನರ ಮಾತಿನಲ್ಲಿlilt ಒಂದು ತರದ ಲಯ. ಅಂದು ಎಲ್ಲೆಡೆಗೆ eisteddfod (ಐಸ್ಟೆಡ್ವಡ್) ಎನ್ನುವ ವೆಲ್ಶ್ ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನದ ಪ್ರಚಾರ, ಉತ್ಸಾಹ. ಆ ಭಾಷೆಯನ್ನಾಡುವ ಸುಪ್ರಸಿದ್ಧ ಸಾಹಿತಿ, ಸಂಗೀತ, ಕಲಾಕಾರರ ಕೂಟ. ಸ್ಫರ್ಧೆಗಳು, ಕವನಗೋಷ್ಠಿ, ಇತ್ಯಾದಿ. ಹೆಮ್ಮೆಯ ಪುತ್ರ ರಿಚರ್ಡ್ ಬರ್ಟನ್ ಸಹ ಹುಡುಗರ ಸೊಪ್ರಾನೊ ಹಾಡುಗಾರಿಕೆಯಲ್ಲಿ ಗೆದ್ದಿದ್ದ. ಆತನ ದನಿ ಸುಪ್ರಸಿದ್ಧ.ಇಂದಿಗೂ ಸಹ ವೇಲ್ಸ್ನಲ್ಲಿ ಹುಟ್ಟಿದ ಶ್ರೇಷ್ಠ ಕವಿ ಡಿಲನ್ ಥಾಮಸ್ಸನ ರೇಡಿಯೋ ನಾಟಕ 'ಅಂಡರ್ ಮಿಲ್ಕ್ ವುಡ್ 'ನ ಆತನ ವಾಚನವನ್ನು Voice of Wales: mellifluous, baritone, ಎಂದು ಕರೆದು ಪದೇ ಪದೇ ಕೇಳಲಾಗುತ್ತದೆ, ಬಿತ್ತರಿಸಲಾಗುತ್ತದೆ. (ಮೇಲಿನ ಚಿತ್ರ ನೋಡಿರಿ.)
ನಾನು ಕಾಲೇಜಿನಲ್ಲಿದ್ದಾಗ ರಿಚರ್ಡ್ ಬರ್ಟನ್ ಮತ್ತು ಎಲಿಝಬೆತ್ ಟೇಲರ್ ಯಾವಾಗಲೂ ಸುದ್ದಿಮಾಡುತ್ತಿದ್ದರು; ಅವರ ಸಿನಿಮಾಗಳು ಅಥವಾ ವೈಯಕ್ತಿಕ ವಿಷಯಗಳು ಯಾವಾಗಲೂ ಹಾಲಿವುಡ್ ಮಸಾಲೆಯನ್ನು ಹಂಡೆ ಗಟ್ಟಲೆ ನೀಡುತ್ತಿದ್ದವು. ಆಕೆಯ 7 ಗಂಡಂದಿರು, ಈತನಿಗೆ ಮೂವರು ಹೆಂಡತಿಯರು ಇತ್ಯಾದಿ. ಮೊದಲ ಸಲ ಇವರಿಬ್ಬರು ಮದುವೆಯಾದಾಗ ಆಕೆಯ ಐದನೆಯವನು, ಈತನ ಎರಡನೆಯವಳು ಇತ್ಯಾದಿ. ಡಿವೋರ್ಸ್ ಮಾಡಿದ ಒಂದು ವರ್ಷದಲ್ಲಿ ಮರುಮದುವೆ, ಇತ್ಯಾದಿ. ಕ್ಲಿಯೋಪಾತ್ರಾ ಸಿನಿಮಾ ಅಲ್ಲಿಯವರೆಗಿನ ಅತ್ಯಂತ ಅಧಿಕ ವೆಚ್ಚದ ಯೋಜನೆಯಾಗಿತ್ತು. ರಿಚರ್ಡ್ಗೆ ಅದರಲ್ಲಿ ಮಾರ್ಕ್ ಆಂಥನಿ ಪಾತ್ರ. ಸತ್ಯವೋ ಮಿಥ್ಯವೋ ರಾಣಿ ಕ್ಲಿಯೋಗೆ ಕತ್ತೆಯ ಹಾಲಿನಲ್ಲಿ ಸ್ನಾನ ಮಾಡುವ ರೂಢಿ ಇತ್ತಂತೆ. ಅದು ಚರ್ಮಕ್ಕೆ ಪೋಷಕ ಎಂದು ಆಕೆಯ ನಂಬಿಕೆ. ಆ ದೃಶ್ಯದ ಚಿತ್ರಣಕ್ಕೆ ಸ್ನಾನದ ಟಬ್ ತುಂಬಲು ನೂರಾರು ಹಾಲು ಕೊಡುವ ಗಾರ್ಧಭಗಳನ್ನು ರೋಮ್ ನಗರದಲ್ಲಿ ಎಲ್ಲಿಂದ ಹಿಡಿದು ತರುವುದು? ಕೊನೆಗೆ ಕೃತಕ ಹಾಲನ್ನು ಉಪಯೋಗಿಸಲಾಯಿತು. ಕೆಲವಷ್ಟೇ ಸಿನಿಮಾ ಸಿಬ್ಬಂದಿಗಷ್ಟೇ ಶೂಟಿಂಗ್ ಸಮಯದಲ್ಲಿ ಪ್ರವೇಶ, ಒಬ್ಬ ಕುರುಡ ಕವಿ ಪಾತ್ರಧಾರಿಯನ್ನು ಹೊರತಾಗಿ. ಆಮೇಲೆ ಗೊತ್ತಾದುದು ಆತನ ಪಾತ್ರವಷ್ಟೇ ಕುರುಡು, ನಿಜವಾಗಿಯೂ ಅಲ್ಲ ಅಂತ!
ನಾನು ನಾಲ್ಕು ವರ್ಷಗಳನ್ನು ದಕ್ಷಿಣ ವೇಲ್ಸ್ ನಲ್ಲಿ ಕಳೆದಿದ್ದೇನೆ. ಅವರಿಗೆ ತಮ್ಮ ಭಾಷೆಯಲ್ಲದೆ ಮೂರು ವಿಷಯಗಳು ಅತಿಪ್ರಿಯವಾದವು - ರಗ್ಬಿ ಆಟ, ದಿನದ ದುಡಿತವಾದ ಮೇಲೆ ಪಬ್ ನಲ್ಲಿ ಭೇಟಿಯಾಗುವದು. ಅದಕ್ಕೆ ಅವರಲ್ಲಿ ಒಂದು ನಾಣ್ನುಡಿ ಇದೆ: ವಲಸೆ ಹೋದರೂನು ಮೂವರು ವೆಲ್ಷ್ ಜನ ಕೂಡಿದರೆ ಸಾಕು ಅಲ್ಲೇ ಮೂರನ್ನು ಸ್ಥಾಪಿಸಿಬಿಡುತ್ತಾರಂತೆ: ರಗ್ಬಿ ಕ್ಲಬ್ಬು, ಪಬ್ಬು ಮತ್ತು ಒಂದು ಐಸ್ಟೆಡ್ವಡ್! ಇವೆಲ್ಲವೂ ಚಿರಾಯುವಾಗಿರಲಿ!

ಶ್ರೀವತ್ಸ ದೇಸಾಯಿ




1. ಮಿತಿಯ ಪರಿಮಿತಿ 

ತಿಳಿದಿತ್ತು ಹರಿವ ನದಿ, ಸಾಗರ ಸೇರುವದೇ ಗುರಿಯೆಂದು,
ಅದಕೇನು ಗೊತ್ತಿತ್ತು ಸಾಗರದಲೆ ಸೇರುವದರೊಟ್ಟಿಗೆ,
ಅದಕುಂಟು ಮೇಘ ಕಟ್ಟುವ, ಮಳೆ ಸುರಿಸುವ ಸಾಮರ್ಥ್ಯ
ಕಣ್ಮುಚ್ಚಿ ಕಾಣುವ ಕನಸುಗಳ ನನಸಾಗಿಸುವ,
ಕೈಗೆಟುವ ಕಾರ್ಯಗಳ ಪೂರೈಸುವ ಭರದಲ್ಲಿ
ಅರಿವಾರಿಗುಂಟು ಪ್ರತಿ ಜೀವದ ಸಾಮರ್ಥ್ಯದ ಮಿತಿಯೆಲ್ಲಿ ?

ರಾಜಶ್ರೀ ಪಾಟೀಲ
ಚಿತ್ರ: AI ಕೃಪೆ
2. ಅರಿವಿನ ಪರದೆ 

ಅಲಂಕಾರಕ್ಕೆ ಅಟ್ಟಣಿಗೆಯಲ್ಲಿ ಅಂದ ತೋರಿಸೋ ಹಿತ್ತಾಳೆ ಚರಿಗೆ,
ದೇವರ ಕೋಣೆಯಲ್ಲಿ ದರ್ಬಾರು ನಡೆಸೋ ತಾಮ್ರದ ಚರಿಗೆ,
ಬಯಲಿನ ಬಿಸಿಲುರಿಯ ದಾಹ ನೀಗುವ ಅಡುಗೆ ಮನೆಯ ಸ್ಟೀಲಿನ ಚರಿಗೆ ,
ಬೆಳ್ಳಂಬೆಳಗ್ಗೆ ತಪ್ಪದೆ ಹಿತ್ತಲ ಪ್ರವಾಸಕ್ಕೆ ಉಪಯೋಗಿಸೋ ಪ್ಲಾಸ್ಟಿಕ್ ಚರಿಗೆ ,
ಮರೆಯದೆ ಪ್ರತಿ ಅಮವಾಸೆ, ಹುಣ್ಣಿಮೆಗೆ ಬಯಲಿನ ಜೀವಜಂತುಗಳಿಗೆ ಅವ್ವ ಕಳಿಸುವ ಚರಗದ ಮಣ್ಣಿನ ಚರಿಗೆ ,
ಬಣ್ಣ ತರಾವರಿ, ಆಕಾರ ತರಾವರಿ, ಮೈಮಾಟ ತರಾವರಿ
ಆದರೆ ಪರಿ ಪರಿಯಾಗಿ ತುಂಬಿ ನೀಡುವದಲ್ಲವೇ ಗುರಿ ?

ರಾಜಶ್ರೀ ಪಾಟೀಲ
ಹೆಸರು ಉಲ್ಲೇಖಿಸದ ಚಿತ್ರಗಳು: ಇಂಟರ್ ನೆಟ್