ತಾಳೆಗರಿಗಳಲ್ಲಿ ಹುದುಗಿದ ಇತಿಹಾಸ– ಶಾಲಿನಿ ಜ್ಞಾನಸುಬ್ರಹ್ಮಣಿಯನ್ ಲೇಖನ


ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ- ಕಾಳಿದಾಸ ರಘುವಂಶದಲ್ಲಿ.
(ಜಗತ್ತಿನ ತಂದೆ ತಾಯಿಯರಾದ ಪಾರ್ವತಿ ಪರಮೇಶ್ವರರ ಕೃಪೆ ನಮ್ಮೆಲ್ಲರ ಮೇಲಿರಲಿ.)
ಸಂಸ್ಕೃತ ಅಂದ ಕೂಡಲೇ ಕೆಲವರು ಅದು ಇನ್ನೂ ಪ್ರಸ್ತುತವೆ?ಸಂಸ್ಕೃತವನ್ನು ಯಾಕೆ ಕಲಿಯಬೇಕು ಎನ್ನುವ ಚರ್ಚೆಗೆ ಶುರು ಮಾಡಿಬಿಡುತ್ತಾರೆ. ಆದರೆ ಶಾಲಿನಿಯವರ ಈ ಲೇಖನದಲ್ಲಿ ತಾವು ಕಂಡ ಸಂಸ್ಕೃತ ವಿಶ್ವವಿದ್ಯಾಲಯದ ಹಸ್ತಪ್ರತಿ ಎನ್ನಿಸಿಕೊಳ್ಳುವ ತಾಳೆಗರಿ ಸಂಗ್ರಹವನ್ನು ಕಂಡು ಪುಳಕಿತರಾದ ಆ ಅನುಭವವನ್ನು ವರ್ಣಿಸುತ್ತಿದ್ದಾರೆ.
ಅಲ್ಲಿಂದ ಮರಳಿ ಬಂದ ಕೂಡಲೇ ಒಂದು ಲೇಖನವನ್ನು ಬರೆದು ಕೊಡಲೇ ಎಂದು ಕೇಳಿದರು. ಅವರಿಗೆ ಮೊದಲಿನಿಂದಲೂ ಸಂಸ್ಕೃತದ ಬಗ್ಗೆ ಒಂದು ತರಹ ಪ್ರೀತಿ ಮತ್ತು ಗೌರವ. ಇತ್ತೀಚಿಗೆ ಸಂಸ್ಕೃತ ಭಾರತಿ ಎನ್ನುವ ಸಂಘಟನೆ ಸಂಸ್ಕೃತ ಸಂಭಾಷಣೆಯ ಆನ್ ಲೈನ್ ವರ್ಗಗಳನ್ನು ಅನೇಕ ದೇಶಗಳಲ್ಲಿ ಪ್ರಾರಂಭ ಮಾಡಿದೆ. ಅದನ್ನು ಹುಟ್ಟು ಹಾಕಿದವರು ಕರ್ನಾಟಕದವರೇ ಆದ ಪದ್ಮಶ್ರೀ ಜನಾರ್ಧನ ಹೆಗಡೆ ಮತ್ತು ಚ. ಮು. ಕೃಷ್ಣ ಶಾಸ್ತ್ರಿಗಳು. ಅದರ ಹೆಡ್ ಕ್ವಾರ್ಟರ್ಸ್ ದೆಹಲಿಯಲ್ಲಿದೆ. ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಯು ಕೆ ದ ಸಂಸ್ಕೃತ ಭಾರತಿ ಅಂಗ ಸಂಭಾಷಣೆ ವರ್ಗವಲ್ಲದೆ ವರ್ಷಕ್ಕೆರಡು ಸಲ ನಾಲ್ಕು ಸಂಸ್ಕೃತ ತರಗತಿಗಳಿಗೆ ಪರೀಕ್ಷೆ ಸಹ ನಡೆಸುತ್ತಿದ್ದಾರೆ. ಉತ್ಸುಕರು ಅವರ ವೆಬ್ ಸೈಟ್ ಸಂಪರ್ಕಿಸ ಬಹುದು. ಸಂಸ್ಕೃತ ಸಂಭಾಷಣೆಗೆ ಒತ್ತು ಕೊಟ್ಟು ಸಂಸ್ಕೃತ ಶಿಬಿರವೊಂದನ್ನು ಪ್ರತಿವರ್ಷ ಏಪ್ರಿಲ್ ತಿಂಗಳಿನ ಆಸು ಪಾಸಿನ ಈಸ್ಟರ್ ರಜೆಯಲ್ಲಿ ಏರ್ಪಡಿಸುತ್ತಾರೆ. (ಈ ವರ್ಷ ಮೇ ತಿಂಗಳಲ್ಲಿ.) ಎರಡು ವರ್ಷಗಳ ಕೆಳಗೆ ಅಲ್ಲಿಯೇ ನನಗೆ ಭೇಟಿ ಮಾಡಿದ್ದರು. ಕಾರ್ಡಿಫ್ನಲ್ಲಿ ತಮ್ಮ ಪತಿ ಮತ್ತು ಒಬ್ಬಳೇ ಮಗಳೊಡನೆ ವಾಸ ಮಾಡುತ್ತಿದ್ದಾರೆ.
ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಸಂಸ್ಕೃತ ಕಲಿಯಲು ಉತ್ಸುಕರಾಗಿದ್ದರೆ ಲೇಖನದ ಕೊನೆಗೆ ಕೊಟ್ಟ ಲಿಂಕ್ ಒತ್ತಿ ಯು ಕೆ ಸಂಸ್ಕೃತ ಭಾರತಿಗೆ ಸಂಪರ್ಕಿಸ ಬಹುದು. ಪರೀಕ್ಷೆಗಳಿಗೆ ಅಭ್ಯಾಸ ಮಾಡಲು ಪುಸ್ತಕಗಳನ್ನು ಸಹ ಕೊಳ್ಳ ಬಹುದು.(-ಸಂ)
ಬೆಂಗಳೂರಿನ ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯ ಒಂದು ಕಡೆ ಕನ್ನಡ ಸಾಹಿತ್ಯ ಪರಿಷತ್ತು, ಅದರ ಎದುರು ಇರುವ ವಿಶಾಲವಾದ ಆವರಣ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ್ದು. ಎಂದಾದರೂ ಹೋಗೋಣವೆಂಬ ಕುತೂಹಲಕ್ಕೆ ಬೆಂಬಲ ನೀಡಿದಂತೆ ಇತ್ತೀಚಿಗೆ ಪ್ರಚಲಿತವಾದ ಹ್ಯಾಂಡ್ಸ ಆನ್ ಫೌಂಡೇಷನ್ರವರ ಸೋಶಿಯಲ್ ಮೀಡಿಯಾದಲ್ಲಾದ ವೈರಲ್ ವಿಡಿಯೋ. ಸರಿ, ನೋಡಲೇ ಬೇಕೆಂದು ನಿಶ್ಚಯಿಸಿ ಹೊರಟೆ ಹಸ್ತಪ್ರತಿ ಸಂಗ್ರಹಾಲಯದತ್ತ. ನನಗೆ ಸಂಸ್ಕೃತ ಕಲಿಯುವ ಆಸಕ್ತಿ ಮತ್ತು ಪ್ರೀತಿ ಶಾಲಾ ದಿನಗಳ ನಂತರ ಸ್ವಲ್ಪ ತಡವಾಗಿ ಆರಂಭವಾಯಿತು. ಶಾಲೆಯಲ್ಲಿ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳದಿದ್ದುದರ ಪಶ್ಚಾತ್ತಾಪವನ್ನು ನಾನು ಇಂದಿಗೂ ಹೊಂದಿರುವೆ. ತದನಂತರ ಪಂಡಿತ ಸುಧಾಕರ ಚತುರ್ವೇದಿ ಮತ್ತು ಪಂಡಿತ ಸುಧಾಕರ ಶರ್ಮ ಅವರ ವೇದ ಪ್ರವಚನಗಳನ್ನು ಕೆಲ ವರ್ಷಗಳ ಹಿಂದೆ ಕೇಳುವ ಅವಕಾಶ ನನಗೆ ದೊರಕಿತ್ತು. ಸಂಸ್ಕೃತ ವ್ಯಾಕರಣ, ಧಾತುಗಳ ಕುರಿತು ಸಹ ಪಾರ್ಶ್ವವಾಗಿ ಚರ್ಚೆ ನಡೆಯುತ್ತಿತ್ತು. ಆದರೂ ಅನೇಕ  ವರ್ಷಗಳ ನಂತರವೂ, ನಾನು ಅದೇ ವಲಯದಲ್ಲಿ ಸುತ್ತುತ್ತಿರುವೆ ಅಂದುಕೊಳ್ಳುತ್ತೀನಿ.
ಇತ್ತೀಚೆಗೆ ನಾನು ಬೆಂಗಳೂರಿಗೆ ಹೋದಾಗ ಒಂದು ಸಂಜೆ ನಾನು ಅಲ್ಲಿ ತಲುಪುವಷ್ಟರಲ್ಲಿ ತಡವಾದರೂ ಸಹ ಕಾರ್ಯಾಲಯದಲ್ಲಿದ್ದ ಉನ್ನತ ಅಧಿಕಾರಿಯವರು ಮಂದಸ್ಮಿತರಾಗಿದ್ದರು. "ಮ್ಯೂಸಿಯಂ ಈಗ ತಾನೇ ಮುಚ್ಚಿದೆವು. ಪರವಾಗಿಲ್ಲಾ, ದೂರದಿಂದ ಬಂದಿದ್ದೀರಿ, ತೆರೆಯುತ್ತೇವೆ, ಹೋಗಿ ನೋಡಿಕೊಂಡು ಬನ್ನಿ" ಎಂದು ಸೌಹಾರ್ದತೆಯಿಂದ ಬರಮಾಡಿಕೊಂಡರು. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದವರು ಇವರೇ ಎಂಬ ಅರಿವು ನನಗೆ ಒಂದೇ ಕ್ಷಣದಲ್ಲಿ ಉದಯಿಸಿತು- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ರಾಮಕೃಷ್ಣ ಭಟ್ ಅವರು. ಸರಳವಾದ ವ್ಯಕ್ತಿತ್ವ, ಬಿಳಿ ಶರ್ಟ್ ಮತ್ತು ಧೋತಿ ಧರಿಸಿದ್ದ ಅವರನ್ನು ನೋಡುತ್ತಿದ್ದಂತೆ, ವಿದ್ಯೆಯನ್ನು ಧಾರೆ ಇರಿಸಲು ಸಿಧ್ಧರಾದ ಗುರುಗಳನ್ನು ಕಂಡಂತಾಯಿತು.




ಪ್ರಥಮ ಫೋಟೋ: ಬ್ರಾಹ್ಮಿ ಲಿಪಿಯ ರೂಪಾಂತರ 
ಕೊನೆಯ ಸಾಲಿನಲ್ಲಿ: ಪ್ರತಿ ಅಕ್ಷರಕ್ಕೊಬ್ಬ ದೇವತೆ

		

’ಮಹಾಪ್ರಸ್ಥಾನ’ದ ಮೂರು ಕವನಗಳು- ಸರೋಜಿನಿ ಪಡಸಲಗಿಯವರಿಂದ

 1) ನಕ್ಕಳವಳು ...

ನಕ್ಕಳವಳು ತನ್ನನೇ ತಾ ನೋಡಿ...
ತನಗೇ ಗೊತ್ತಿಲ್ಲದ ತನ್ನ ಹತ್ತು ಹಲವು
ಚಿತ್ರಗಳ ನೂರು ಗುಣಗಳ ಹೆಸರುಗಳ
ಎಳೆ ಎಳೆಯಾಗಿ ಹೆಣೆದು ಬಂಧಿಸಿದ
ಆ ನವಿರು ಬಲೆಯತ್ತ ಮತ್ತೆ ನೋಡುತ
ಮಿಸುಕಲಾಗದೆ ಅತ್ತಿತ್ತ ನಿಟ್ಟಿಸುತ್ತ

ನಕ್ಕಳವಳು ಮತ್ತೆ...
ತನ್ನನೇ ಅಬಲೆ ಎಂದ ನಿರ್ಬಲರ ನೋಡಿ
ತಾ ಹೊತ್ತು ಇಳುಹುವ ಭಾರದ ಅಂದಾಜು
ತೂಗುವ ಬಲ ಇಲ್ಲದ ಗುಂಪಿನ ಮಬ್ಬು ಬೊಬ್ಬೆ
ಕಿವುಡಾಗಿಸಿ, ಕುರುಡಾಗಿಸಿದ ತನ್ನನೇ ನೋಡಿ
ಅಖಂಡ ಸ್ವಾರ್ಥ ತುಂಬಿದ ತನ್ನವರನೇ ನೋಡಿ

ನಕ್ಕಳವಳು ಮತ್ತೆ...
ಕೋಮಲೆ ನೀಎಂದ ಗಟ್ಟಿಗರ ಗಟ್ಟಿತನ ನೋಡಿ
ತನ್ನ ಧ್ವನಿಯಲ್ಲಿನ ಕಸುವನ್ನೆ ನುಂಗಿ ಹಾಕಿ
ಅಬ್ಬರದಿ ನಗುವ ಉಬ್ಬುಬ್ಬಿ ಹಾರುವ ಗಾವಿಲರ
ಗಾವುದ ದೂರವಿರಿಸಿ ನಿರುಕಿಸಿ ಅವರಾಳ
ತನ್ನಾಳದ ಸುಳಿವೇ ಕೊಡದೆ ಗೂಢತೆ ತುಂಬಿ

ನಕ್ಕಳವಳು ಮತ್ತೆ...
ತನಗೆ ಕಟ್ಟಿದ ಪಟ್ಟಗಳ ಇಷ್ಟುದ್ದ ಪಟ್ಟಿ ನೋಡಿ
ಆ ಪಟ್ಟದ ಗಟ್ಟಿ ಬುಡವ ಅಲ್ಲಾಡಿಸಿ ಪೊಳ್ಳಾಗಿಸಿ
ಗಟ್ಟಿ ಮುಟ್ಟಾದ ಕೋಟೆಯೊಳಗಿಟ್ಟು ಮೆರೆಯಿಸಿ
ಅರ್ಥವಿಲ್ಲದ ಆ ಭಂಡತನಕೆ ನೂರು ಹೆಸರಿಟ್ಟು
ಅಗಡಾದಿಗಡಿ ಮೆರೆವ ನೆರವಿ ನೋಡಿ ನೋಡಿ

ನಕ್ಕಳವಳು ಮತ್ತೆ...
ಹೌದು ತೆರಪಿಲ್ಲದ ನಗುವಲ್ಲಿ ತೇಲಿ ಮುಳುಗಿ
ಯಾರಿಗ್ಯಾವ ಹೆಸರು ಕೊಡದೆ ಚಿತ್ರ ಬರೆಯದೆ
ಎಲ್ಲವನೂ ತನ್ನೊಡಲಲಿ ಹುದುಗಿಸಿ ಮೌನದಿ
ನಿಶ್ಯಬ್ದದಲೆ ಶಬ್ದ ತುಂಬಿಸಿ ಯಾರಳವಿಗೂ ನಿಲುಕದ
ತನ್ನನೇ ತಾ ನೋಡಿ ಬಲು ಹೆಮ್ಮೆಯಿಂದ

2)  ಸಾವು ಅಂದ್ರೆ ಸಾವು ಅಷ್ಟೇ!

ಯಾಕೋ ಸಮಯದ ಜೊತೆ ಈಗ ಬಲು ಸ್ನೇಹ
ಕೆಲಸ ಇಲ್ಲ ಬೊಗಸೆ ಇಲ್ಲ ಖಾಲಿ ಖಾಲಿ ಎಲ್ಲ
ಖಾಲಿ ನೋಟ ಸಮಯದಂತೆ ಹೂಬೇಹೂಬ
ಕುರುಡು ಕಣ್ಣು ಕಿವುಡು ಕಿವಿ ಮೌನ ಮಾತಲ್ಲೂ
ನಡೆವುದು ಸಮಯದ ಕೈಗೆ ಕೈ ಜೋಡಿಸಿ ಅಷ್ಟೇ!

ಸಮಯದ ಮನವೂ ತುಂಬಿ ಭಾರ ಬಹುಶಃ
ಸುರಿಯದ ಕಾರ್ಮುಗಿಲು! ಉಸಿರದ ಮನಸು !
ನರಳಿ ನಲುಗಿ ಏನೋ ಘನ ಕಾರ್ಯದಡಿ ಸಿಲುಕಿ
ಹೆಜ್ಜೆ ಸರಿಸಿದಾಗ ತೋರಿ ಹುಸಿ ಗಾಂಭೀರ್ಯ
ಬಲು ಆಪ್ತವೀ ಸಮಯ ಸಂದೇಹವಿಲ್ಲ ಚೂರೂ

ಮತ್ತೆ ಸಾಧ್ಯವೆ ಇನ್ನಾರಿಗೆ ಹೇಳು ಆ ಕೆಲಸ
ಅಲೆಯಂತೆ ತೇಲಿ ನೆಲೆಯಿಲ್ಲದ ತಾವಲ್ಲಿ ನೆಲೆ
ಸಿಕ್ಕಿದಂತೆ ಭ್ರಮೆ ಹುಟ್ಟಿಸಿ ಜೀವಕೆ ಅಂಟಿಸಿ ಬಿಟ್ಟ
ಬಲು ಅಮೂಲ್ಯ ಬದುಕು ಎಂಬ ನಂಬಿಕೆಯ!
ಆ ಗಡಸುಗಾರ ಸಮಯ ಬಲು ಮೆಚ್ಚು ನನಗೆ!

ಇಷ್ಟಾಗಿಯೂ ಆ ಬದುಕಾದರೂ ಏನು ಮಹಾ
ಆಕಸ್ಮಿಕ ಅಚ್ಚರಿ ದಿಗ್ಘ್ಮೂಢತೆಗಳ ಒಟ್ಟು ಮೊತ್ತ
ಹಸಿ ಸುಳ್ಳು ನೋವು ನಲಿವು ಸುಖ ದು:ಖ ಎಲ್ಲ
ಬರಡು ಬಯಲು ಅಲ್ಲುಂಟು ಹಸಿರೆಂಬ ಭ್ರಾಂತಿ
ಜಾದೂಗಾರ ಸಮಯದ ಮೋಡಿಗೆ ಮರುಳು ನಾ!

ಅದೇ ಮರುಳಿನ ನೆರಳಲಿ ಓಡಿಸಿ ಆಡಿಸಿ ಜಾರಿಸಿ
ಜಾಲಗಾರನ ಮೀರಿ ಪಟ್ಟಾಗಿ ಸಿಗಿಸಿ ಜಾಲದಲ್ಲಿ
ಕೊನೆಗೆ ಸಹನೆ ತಪ್ಪಿಸಿ,ವಿರಾಮಕೆ ಹಾತೊರೆಯೆ ಜೀವ
ದೊಡ್ಡದಾಗಿ ಕೈ ಚಾಚಿ ಬಾ ಒಯ್ವೆ ಅಲ್ಲಿದೆ ಶಾಂತಿ ತಿರುಗಿ ಬಾರದಲ್ಲಿ
ಬರಿ ದೊಡ್ಡ ಮಾತು ಸಮಯದ್ದು!ಸಾವು ಅಂದ್ರೆ ಸಾವು ಅಷ್ಟೇ ಇನ್ನೇನಿದೆ !
ಆ ಉಪಾಯಗಾರ ಸಮಯ ನನಗೆ ಬಲು ಇಷ್ಟ!
 3) ಹಕ್ಕಿಲ್ಲ ಪೇದೆಗಳಿಗೆ 

ನೋಡ್ತಾನೆ ಇದೀನಿ ಗಮನವಿಟ್ಟು
ಇಂಚಿಂಚು ಬಿಡದೆ ಹೊಂಚು ಹಾಕಿ
ಮನ ಈಗೀಗ ಅಂತರ್ಮುಖಿ ಯಾಕೊ
ಅದೆನೋ ಗೂಢ ಗಾಢ ಯೋಚನೆ
ನೋಟ ದೂರ ಅಗಮ್ಯ ದಿಗಂತದತ್ತ

ಹೂಂ ಈಗಲೂ ಅದೇ ಸಮಾಧಿ ಸ್ಥಿತಿ
ಸೊರ ಸೊರ ಮೂಗು ತುಸು ಏದುಸಿರು
ಕಣ್ಣಾಲಿ ತುಂಬ ನೋವಿನ ಗೀಚಾಟ
ಏನೋ ನೋಡ್ತದೆ ಅದೇನೋ ಲೆಕ್ಕಾಚಾರ
ಬುದ್ಧಿ ಏನಾದ್ರೂ ತನ್ನ ಚಾರ್ಜ್ ಕೊಟ್ತಾ

ಬುದ್ಧಿಯತ್ತ ಕಡೆಗಣ್ಣ ನೋಟ ಬೀರಿದ್ರೆ
ಎದೆ ಝಲ್ಲೆಂದು ಬಡಿತ ತಮಟೆ ಹಾಗೆ
ಮತ್ತೇನು ಮುಖ ಸಪ್ಪೆ ಕಣ್ಣು ಕೊಳ
ಹಣೆ ತುಂಬ ನೂರೆಂಟು ಗಂಟು ಗೀರು
ಅದಕೂ ಚಿಂತೆ ತನ್ನದೆ ಒಡಹುಟ್ಟಿದ್ದಲ್ವಾ

ಎಳೆದೆ ಮೆಲ್ಲಗೆ ಮನದತ್ತ ಬುದ್ಧಿಯನು
ಕಣ್ಸನ್ನೆ ಮಾಡಿ ತುಟಿಯ ಮೇಲೆ ಬೊಟ್ಟಿಟ್ಟು
ಕೆರೆದು ಧ್ಯನಿ ಸದ್ದು ಮಾಡಿದ್ರೂ ಊಂ ಹೂಂ
ಥೇಟ್ ವಿಗ್ರಹದೇ ಪೋಸು ಮಿಸುಕಲಿಲ್ಲ
ಘಬರಾಸಿ ಅಲ್ಲಾಡಿಸಿದ್ರೆ ನಿರ್ಜೀವ ನೋಟ

ಏನಾಗಿದೆ ಇದೇನು ಹುಡುಗಾಟ ನಿಂದು
ಕಿರುಚಿತು ಬುದ್ಧಿ ಕೈ ತಿರುಚಿ ತನ್ನನೆ ಪರಚಿ
ದೊಡ್ಡ ಉಸಿರು ಬಿಟ್ಟು ಮನ ತಿರುಗಿತಿತ್ತ
ಕಾಲನ ಕಾಲಿಗೆ ಬೇಡಿ ಸರಪಳಿ ಬಿಗಿಬೇಕು
ಅತ್ತಿತ್ತ ಹೊರಳಾಡದಂತೆ ನೆಟ್ಟಗೆ ನಿಲ್ಲಿಸಿ

ಈಗ ಬುದ್ಧಿಯ ಜಾಣ ನೋಟವೂ ತಪ್ತು ದಿಕ್ಕು
ಅತ್ತಿತ್ತ ತಿರುಗಿ ಮತ್ತೆ ನೆಲೆಯೂರಿ ಮನದತ್ತ
ತಲೆ ಸರೀನಾ ತಿಂದಿದ್ದು ಬರೋಬ್ಬರಿ ಅಲ್ವಾ
ಎಲ್ಲೋಗಿದ್ದೆ ಏನ ನೋಡಿದೆ ಗಾಳಿ ಸೋಂಕಾ
ಇಟ್ತು ನೂರು ಪ್ರಶ್ನೆ ನನ್ನದೂ ಬಿಡದೆ ಸೇರಿಸಿ

ಮನ ಕಕ್ಕಿತು ಈಶನ ಕಂಠದ ಕಹಿ ಎಲ್ಲ ತುಂಬಿ
ಯೋಚಿಸು ಆತ ಮಾಡೋದೆಂಥ ಘನಕಾರ್ಯ
ನಿನ್ನೆದನ್ನ ಎಗ್ಗಿಲ್ಲದೆ ಸರಿಸಿ ಮೆಟ್ಟಿ ನಿಂತು ಅವನ್ನ
ತ್ರಿವಿಕ್ರಮನಾಗ್ತನಲಾ ಇಂದು ನಾಳೆ ಅಂತ
ನೆನಪುಗಳಂತ ದೊಡ್ಡ ಲೇಬಲ್ ಹಚ್ಚಿದ್ರಾಯ್ತಾ

ಒಂದು ಗಳಿಗೆ ಬುದ್ಧಿಗೂ ಬಾಯಿ ಬಂದಾಯ್ತು
ನಿಜ ಇದಿಷ್ಟೇ ಅಲ್ವೆ ಕಾಲನ ಕೆಲಸ ಅರ್ಥವಿಲ್ಲದ್ದು
ಏನು ಸಾಧನೆ ಅನಂತ ನೋವು ಜೀವಗಳಿಗೆ
ಉಸರಿರುವ ವರೆಗೂ ಕೊರಗು ತಹತಹ ಅಷ್ಟೇ
ಇದೆ ಮನಕೂ ತಲೆ ಅನ್ಕೊಂಡ್ರೂ ಎಲ್ಲೊ ತಪ್ತು

ಮರುಚಣ ಫಕ್ಕಂತ ಹೊಳೀತು ಮಿಂಚು ನಕ್ಕಿತು ಬರೋಬ್ಬರದೆ
ತಾಳಮೇಳಿಲ್ಲದ ವಿಚಾರವ್ಯಾಕೆ
ನಿನ್ನೆಯ ಮೆಟ್ಟದಿದ್ರೆ ಹೊಸದು ಏಳೋದು ಹೇಗೆ
ಬಿಸಿಲು ಸರಿದು ಮಳೆ, ಚಿಗುರು ಹಣ್ಣು ಬೀಜ ನಿನ್ನ
ಅಸಲು ಮಂಕು ತಾಕಿತೊಂದು ಚಣ ನಂಗೆ

ಮೊಗ ಬಾಗಿ ನೆಲಕ್ಕೊರಗಿ ಬಿಡಬೇಕೆ ಮನಸು
ನಾ ಹೇಗೆ ಸಹಿಸಲಿ ಬಾಚಿ ತಬ್ಬಿ ಎರಡನ್ನೂ
ಹೇಳ್ದೆ ಕಂಬನಿಯ ಬಿಂದುಗಳಲಿ ಮೀಯಿಸುತ
ಏನಿಲ್ಲ ಬಂದಂತೆ ಹೋಗೋದಷ್ಟೆ ನಮ್ಮದು
ಹಕ್ಕಿಲ್ಲ ಬದಲಿಸಲು ಈ ಚದುರಂಗದಾಟದ ಪೇದೆಗಳಿಗೆ!!
ಬಾಯಿ ಕಟ್ತು ನಂಗೂ!

ಸರೋಜಿನಿ ಪಡಸಲಗಿ
ಬೆಂಗಳೂರು


Publisher:
ಅಣಕು ರಾಮನಾಥ !
ತೇಜು ಪ್ರಕಾಶನ ಬೆಂಗಳೂರು
+91 9448050463