ಒಂದು ಸಿನಿಮಾ ಕಥೆ

ಓಟಿಟಿಯ ಕಾಲದಲ್ಲಿ ಥ್ರಿಲ್ಲರ್, ಸಸ್ಪೆನ್ಸ್ , ಕ್ರೈಂ ಅನ್ನೋ ಜಾನ್ರದಲ್ಲಿ ಹಾಗು vfx ಗಳ ಮಾಯಾಲೋಕದಲ್ಲಿ ಮುಳುಗಿದ ನಾನು ಹಾಗೆ ಸ್ಕ್ರಾಲ್ ಮಾಡುತ್ತಿದ್ದಾಗ ಅಕಸ್ಮಾತಾಗಿ ಸಿಕ್ಕ ಸಿನಿಮಾದ ಬಗ್ಗೆ ಒಂದು ವರದಿ ಈ ವಾರ ನಿಮ್ಮೆಲ್ಲರ ಓದಿಗಾಗಿ.
ಸಿನಿಮಾದ ಟೆಕ್ನಿಕಲ್ ವಿವರಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಆದರೆ ಅಲ್ಲಿರುವ ಪಾತ್ರಗಳು ನನ್ನ ಆಲೋಚನೆಯನ್ನು ಬದಲಿಸಿದೆ.
– ಸಂ

ನಮಸ್ತೆ ಶಾರದಾ ದೇವಿ ಕಾಶ್ಮೀರ ಪುರವಾಸಿನಿ
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿಮೆ

ಈ ಶ್ಲೋಕವನ್ನು ಬಾಲ್ಯದಿಂದಲೇ ಕೇಳುತ್ತಿದ್ದೇವೆ. ಕಾಶ್ಮೀರ ವಿದ್ಯೆ ಹಾಗು ಜ್ಞಾನದ ಉತ್ತುಂಗ ಹಾಗು ವಿಶಾಲ ದೈವಿಕ ಹಿಮಾಲಯಕ್ಕೆ ಆಶ್ರಯ ಕೊಟ್ಟಂತಹ ಒಂದು ಅದ್ಭುತ ಪ್ರದೇಶ.
ಕಾಶ್ಮೀರದ ಸೌನ್ದರ್ಯದ ಬಗ್ಗೆ ಬಹಳಷ್ಟು ಕವಿಗಳು ವಿಭಿನ್ನ ಬಗೆಯಲ್ಲಿ ವರ್ಣಿಸಿದ್ದಾರೆ.
ಇತಿಹಾಸದ ಕಥೆಗಳಲ್ಲಿ ಹಿಮಾಲಯ ಬಗ್ಗೆ ಹಾಗು ಶ್ರೀಶಂಕರಾಚಾರ್ಯರು ಸ್ಥಾಪಿಸಿದ ಶಾರದಾ ಪೀಠದ ಬಗೆಗಿನ ಕಥೆಗಳು ನಮ್ಮನ್ನು ಕಾಶ್ಮೀರವನ್ನು ಪೂಜಿಸುವ ಪುಣ್ಯ ಕ್ಷೇತ್ರವನ್ನಾಗಿಸಿದರೆ ಮತ್ತೊಂದೆಡೆ ಸಿನೆಮಾಗಳು ಎಲ್ಲ ಋತುವನ್ನು ವಿಶೇಷವಾಗಿ ಹಿಮ ಪರ್ವತಗಳ ಮಡಿಲಲ್ಲಿ ಹರಡಿರುವ ಹಸಿರಿನ ಕಣಿವೆಗಳು, ಚಳಿಗಾಲದಲ್ಲಿ ಮುತ್ತಿನಂತೆ ಹೊಳೆಯುವ ಹಿಮಕಣಗಳು, ಬೇಸಿಗೆಯಲ್ಲಿ ಬಣ್ಣ ಬಣ್ಣದ ಪುಷ್ಪಗಳಿಂದ ಅರಳಿದ ತೋಟಗಳು—ಇವೆಲ್ಲವನ್ನು ಎಷ್ಟು ಅದ್ಭುತವಾಗಿ ಸೆರೆ ಹಿಡಿದು ನೋಡುವವರಿಗೆ ಒಂದು ಅಲೌಕಿಕ ಅನುಭವನ್ನು ಕೊಡುವುದಲ್ಲದೆ ಅಲ್ಲಿಗೆ ಆ ತಕ್ಷಣ ಹೋಗುವ ಹಂಬಲವನ್ನುಂಟುಮಾಡುತ್ತದೆ.
ದಾಲ್ ಸರೋವರದ ನೀರಿನ ಮೇಲೆ ತೇಲುವ ಹೌಸ್‌ಬೋಟ್‌ಗಳು ಮತ್ತು ಶಿಕಾರಾಗಳ ಸುಂದರ ನೋಟ ಹೃದಯವನ್ನು ಶಾಂತಗೊಳಿಸುತ್ತವೆ. ಚೀನಾರ್ ಮರಗಳ ಕೆಂಪು ಎಲೆಗಳು, ಮೋಡಗಳನ್ನು ಮುಟ್ಟುವ ಪರ್ವತ ಶಿಖರಗಳು ಮತ್ತು ಕಣಿವೆ ಮೇಲೆ ಹರಡುವ ಮಳೆಯ ಪರಿಮಳನನ್ನ ಕೂತಲ್ಲಿಯೇ ಅನುಭವಿಸುವ ದೃಶ್ಯಗಳು ನಮ್ಮನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ.
“गर फिरदौस बर-रूऐ ज़मीं अस्त
हमी अस्तो, हमी अस्तो, हमी अस्त”

ಸಿನಿಮಾ ಮೂಲಕವೇ ಈ ಪ್ರದೇಶವನ್ನು ಬಹಳಷ್ಟು ಜನ ನೋಡಿದ್ದೇವೆ.
ನನ್ನ ಮೊದಲ ಕಾಶ್ಮೀರದ ದೃಶ್ಯ ಶಮ್ಮಿ ಕಪೂರ್ ‘ಯಾಹೂ’ ಎಂದು ಜೋರಾಗಿ ಹಿಮಪಾತದಲ್ಲಿ ಬಿದ್ದು ಹಾಡೋದು ನಂತರ ಕಾಶ್ಮೀರ ಕಿ ಕಲಿ ಚಿತ್ರದಲ್ಲಿ ಶರ್ಮಿಳಾ ಟ್ಯಾಗೋರ್ ನ ಸುಂದರ ಫೇರನ್ ಹಾಗು ಶಿಕಾರದಲ್ಲಿ ಹೂವುಗಳ ಮಧ್ಯೆ ಹಾಡೋದೆ ಕಣ್ಣು ಮುಂದೆ ಬರುತ್ತದೆ.
ಕಾಶ್ಮೀರವನ್ನು ಒಂದು ಕನಸುಗಳ ಲೋಕದ ರೂಪದಲ್ಲಿ ನೋಡುತ್ತಿದ್ದೆ. ಅಲ್ಲಿ ಹೋಗುವ ಆ ಸೌಂದರ್ಯವನ್ನು ಅನುಭವಿಸುವ ನನ್ನ ಕನಸು ಇನ್ನು ಕನಸಾಗಿಯೇ ಉಳಿದಿದೆ.
ಒಂದೆಡೆ ಕಾಶ್ಮೀರ ಒಂದು ಮಾಯಾಲೋಕವಾದರೆ ಮತ್ತೊಂದೆಡೆ ಅದೊಂದು ನಿಗೂಢ ನಗರಿ ಕೂಡ.
ಭಾರತದ ಸ್ವಾತಂತ್ರದ ಸಮಯದಿಂದ ಇಂದಿನ ತನಕ ರಾಜಕೀಯ ಗೊಂದಲ ಮತ್ತು ದ್ವಂದ್ವಗಳು ಮಧ್ಯೆ ಒಂದು ಸ್ಥಿರ ಪರಿಸ್ಥಿತಿ ಈ ಪ್ರದೇಶದಕ್ಕೆ ದೊರಕಿಸಿಕೊಡುವ ಹೋರಾಟ ದಶಕಗಳಿಂದ ನಡೆಯುತ್ತಲೇಯಿದೆ. ಭಗೀರಥನ ಪ್ರಯತ್ನದಿಂದ ಆಕಾಶದ ಆ ಗಂಗೆಯು ಧರೆಗೆ ಬಂದು ಇಲ್ಲಿ ನೆಲಸಿ ಜನರನ್ನು ಹರಿಸಿದ್ದಾಳೆ, ಆದರೆ ಭಗೀರಥನಂತಹ ವ್ಯಕ್ತಿಯೊಬ್ಬ ಬಂದು ಶಾಂತಿಯೆಂಬ ಗಂಗೆಯನ್ನು ಈ ಭೂಮಿಯಲ್ಲಿ ಯಾವಾಗ ಹರಿಸುತ್ತಾರೋ ಎಂಬ ಹಂಬಲ ನನಗೂ ಇದೆ..
ಅದನ್ನು ಮಡಿಯ ಪ್ರದೇಶವನ್ನಾಗಿ ಮಾಡಿದ್ದೇವೆ. ಈ ಸ್ವರ್ಗಲೋಕವನ್ನು ಭಯೋತ್ಪಾದನೆ ಹಾಗು ಆತಂಕದ ತಾಣ ಎನ್ನುವ ದೃಶ್ಯಗಳು ನಂತರ ಬಂದಂತಹ ಜನಪ್ರಿಯ ರೋಜಾ, ದಿಲ್ ಸೆ, ಕಾಶ್ಮೀರ ಫೈಲ್ಸ್ ಚಲನ ಚಿತ್ರಗಳು ಮೂಲಕ ಕಾಶ್ಮೀರವನ್ನು ಮತ್ತಷ್ಟು ಮೂಲೆಗೆ ಒತ್ತುವಂತೆ ಮಾಡಿತು.
ಕೆಲ ವರ್ಷಗಳ ಹಿಂದೆ ಬಂದ ವಿಶೇಷ ಸಿನಿಮಾ ‘ರಾಜಿ’ ಕಾಶ್ಮೀರಿ ಹೆಣ್ಣಿನಲ್ಲಿರುವ ದೇಶಪ್ರೇಮ ಧೃಢತೆ ಹಾಗು ಶೌರ್ಯದ ಪರಿಚಯ ಮಾಡಿಸಿತು.
ಭಾರತ ಸರ್ಕಾರದ ಹಾಗು ಗಡಿಯಾಚೆಗಿನ ದೇಶಗಳ ಮಧ್ಯೆಯಿರುವ ಮತ ಭೇಧಗಳ ಫಲ ಸ್ವರೂಪ ಅಲ್ಲಿಯ ಮೂಲದವರಿಗೆ ನೆಲೆಯಿಲ್ಲದಂತಾಗಿದೆ. ಎಂಬತ್ತರ ದಶಕದ ಹಿಮಾಲಯ್ ದರ್ಶನ ಧಾರವಾಹಿ ಒಂದು ಒಳ್ಳೆಯ ಉದ್ದೇಶದಿಂದ ಮಾಡಿದಂತಹ ಪ್ರಯತ್ನ. ಅಲ್ಲಿಯವರ ಜೀವನ ದಿನನಿತ್ಯದ ವ್ಯವಸಾಯ ಅಷ್ಟೇ ಅಲ್ಲ ಅಲ್ಲಿಯ ಕಲೆ ಹಾಗು ಪ್ರತಿಭೆಯ ಬಗ್ಗೆ ಭಾರತದ ಬೇರೆ ರಾಜ್ಯದ ಜನರ ಪರಿಚಯವಿರುವಂತೆ ಕಾಶ್ಮೀರಿ ನಾಗರೀಕರ ಪರಿಚಯ ಮಾಡುವ ಇತ್ತೀಚಿಗೆ ಬಿಡುಗಡೆಯಾದ ‘ ಸಾಂಗ್ಸ್ ಆಫ್ ಪ್ಯಾರಡೈಸ್’ ಒಂದು ಸರಳ ಸ್ವಚ್ಛ ಸುಂದರ ಜೀವನ ಚರಿತ್ರೆ ಆಧಾರಿತ ಚಲನ ಚಿತ್ರ. ನಾನು ಸಿನಿಮಾ ವಿಮರ್ಶಕಳಲ್ಲ. ಸಿನಿಮಾದ ತಾಂತ್ರಿಕ ಸೂಕ್ಷ್ಮತೆಗಳ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಒಂದು ಸಿನಿಮಾ ನೋಡಿದರೆ ಅದು ಬಹುಕಾಲ ನಿಮ್ಮ ಮನಸಿನ್ನಲ್ಲಿ ಉಳಿದರೆ ಆ ಸಿನಿಮಾದಲ್ಲಿ ಏನೋ ವಿಶೇಷತೆ ಇರಬೇಕು ಎಂಬ ಭಾವನೆ ನನ್ನದು. ಒಂದು ಸಿನಿಮಾ ನೋಡಲು ಯೋಗ್ಯ ಅನ್ನಿಸಿಕೊಳ್ಳಲು ಮುಖ್ಯ ಅಂಶವೇನೆಂದರೆ ಕಥೆ ಹಾಗು ಸಂಭಾಷಣೆ. ಇವೆರಡರ ಹಿಡಿತವಿರಬೇಕು. ಮಾತಿಗಳು ಮನಸ್ಸು ಮುಟ್ಟುವಂತಿರವಬೇಕು.ಈ ಸಿನಿಮಾದಲ್ಲಿ ಕೆಲ ಸಂಭಾಷಣೆ ನನಗೆ ಹಾಗೆನಿಸಿದವು.

ಪದ್ಮಶ್ರೀ ರಾಜ್ ಬೇಗಮ್ ಹೆಸರು ನಾನು ಅದಕ್ಕೆ ಮುಂಚೆ ಕೇಳಿರಲಿಲ್ಲ. ‘ಗಾನ ಕೋಗಿಲೆ ‘, ‘ಮಾಧುರ್ಯದ ಅರಸಿ’ ಹೀಗೆ ಹತ್ತು ಹಲವು ಬಿರುದಗಳು ಅಷ್ಟೇ ಅಲ್ಲ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತೆ ಕೂಡ . ರಾಜ್ ಬೇಗಮ್ ನ ಜೀವನ ಕಥೆ ಒಂದು ಆದರ್ಶ. ಪರಕೀಯರ ದಾಳಿ ಸದಾ ಭಯೋತ್ಪಾದನೆಯಲ್ಲಿ ಮುಳುಗಿದ ವಾತಾವರಣದಲ್ಲಿ ವ್ಯಕ್ತಿ, ವ್ಯಕ್ತಿತ್ವ, ಕಲೆ, ಪ್ರತಿಭೆ ಇವೆಲ್ಲವನ್ನು ಸಾಧಿಸುವುದು ಬಿಡಿ, ಊಹಿಸಿಕೊಳ್ಳುವುದು ಕೂಡ ಒಂದು ಕನಸೇ !
ಅಲ್ಲಿ ಪುರುಷರ ಸಾಮ್ರಾಜ್ಯ ! ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಸುಡು ಬೆಂಕಿಯಲ್ಲಿ ಒಂದು ಸುಂದರ ಬಳ್ಳಿಯಾಗಿ ನಾಜೂಕಾದ ಕುಸುಮಗಳ ಹೂವಿನ ರೀತಿಯಲ್ಲಿ ಹಬ್ಬಿ ಸಂಗೀತದಂತಹ ತಾಂತ್ರಿಕ ಕಲೆಯ ಸೂಕ್ಷ್ಮಗಳನ್ನು ತಿಳಿದು ಅದನ್ನು ಕಲಿತು ರಸ ರಾಗಲಹರಿಯ ಸುಗಂಧವನ್ನು ಪಸರಿಸುತ್ತಾ ಅದನ್ನೇ ವೃತ್ತಿ ಮಾಡುವುದಲ್ಲದೆ, ತಾನಿರುವ ದೇಶದ ಪರಿಸ್ಥಿಯಲ್ಲಿ ಹೋರಾಡುವುದಕ್ಕೆ ಮತ್ತೊಂದು ಮಟ್ಟದ ಧೈರ್ಯ ಹಾಗು ಮನಸ್ಥಿತಿ ಹೊಂದಿದ ದಿಟ್ಟ ಮಹಿಳೆ.

ಸಿನೆಮಾಗಳಲ್ಲಿಯೇ ಪುನಃ ಪುನಃ ಉಪಯೋಗಿಸುವ “when you want something, all the universe conspires in helping you to achieve it.”
ಈ ನುಡಿಯು ಈ ಕಥೆಯಲ್ಲಿ ನೈಜ ರೂಪ ತಾಳಿದೆ.
ಒಂದು ಬಡ ಕುಟುಂಬದಿಂದ ಬಂದ ಸಾಧಾರಣ ಮಹಿಳೆ ಒಬ್ಬ ಸಂಗೀತಗಾರನ ಮನೆಕೆಲಸದವಳಾಗಿ ದುಡಿಯುತ್ತಿದ್ದಾಗ , ಆ ಸಂಗೀತಕಾರನು ಅವರ ಪ್ರತಿಭೆಯನ್ನು ಅಕಸ್ಮಾತಾಗಿ ಗುರುತಿಸಿ ಅವಳಿಗೆ ತನ್ನ ಜ್ಞಾನವನ್ನು ಧಾರೆಯೆರೆಯುವುದಲ್ಲದೆ ಅವಳಿಗೆ ಅವಕಾಶಗಳನ್ನು ಒದಗಿಸಿ ಕೊಟ್ಟು ಒಂದು ಅದ್ಭುತ ಕಲಾಕಾರಳನ್ನಾಗಿ ಮಾಡುವುದರಲ್ಲಿ ಬಹಳ ಶ್ರಮಿಸುತ್ತಾನೆ.
ಇದಕ್ಕೆ ಪೂರಕವಾಗಿ ಸುತ್ತಲಿನ ಜನಗಳಿಂದ ಅವಳಿಗೆ ಸಿಕ್ಕ ಪ್ರೋತ್ಸಾಹ, ಅವಳ ತಂದೆಯ ಸಹಕಾರ ಈ ದಿಕ್ಕಿನಲ್ಲಿ ಅವಳಿಗೆ ಮೊದಲ ಹೆಜ್ಜೆ ಇಡಲು ಧೈರ್ಯ ತಂದಿತು. ನಂತರ ಬಂದ ಪುರುಷರು ಅಭಿಮಾನಿ ಹಾಗು ಪ್ರೇಮಿ ನಂತರ ಪತಿ ಹಾಗೆ ಅವಳು ಕಾಶ್ಮೀರ ರೇಡಿಯೋಗೆ ಕೆಲಸ ಮಾಡುವ ಅಲ್ಲಿನ ಸಹೋದ್ಯೋಗಿಗಳು ತುಂಬಿದ ಉತ್ಸಾಹ, ಹುಮ್ಮಸ್ಸು ಅವಳಿಗೆ ಆಕಾಶದೆತ್ತರ ಬೆಳೆಯಲು ಸಹಕಾರಿಯಾಯಿತು.
ಅಷ್ಟೇ ಅಲ್ಲ ತನಗೆ ಅಥವಾ ಅವಳ ಸುತ್ತಮುತ್ತಲಿನ ಜನರಿಗೆ ಆಗುವ ಅನ್ಯಾಯವನ್ನು ವಿರೋಧಿಸಿ ನ್ಯಾಯ ದೊರಕಿಸುವಲ್ಲಿ ಅವರ ಸ್ವಚ್ಛಂದ ಭಾವನೆ ಶ್ಲಾಘನೀಯ.
ಅವಳ ತಾಯಿಯು ಸಾಮಾಜಿಕ ಕಟ್ಟುಪಾಡಿನ ದಿಗ್ಬಂಧನದಲ್ಲಿ ಸಿಲುಕಿ ಮಗಳ ಪ್ರತಿಭೆ ಕಂಡರೂ ಕಾಣದಂತೆ ಅವಳನ್ನು ಕುಗ್ಗಿಸುವ ನಡುವಳಿಕೆ ಹಾಗು ಕಿರಿದಾದ ಚಿಂತನೆ ರಾಜ್ ಬೇಗಮ್ ಪ್ರತಿಭೆಯನ್ನು ತಡೆಯಲಾಗಲಿಲ್ಲ.
ಅಕ್ಕಪಕ್ಕದ ಮನೆಯವರ ಅವಹೇಳನೆ ಹಾಗು ಒಂದು ಹೆಣ್ಣು ಪ್ರಗತಿಶೀಲಳಾಗುವುದನ್ನು ನೋಡಲು ಸಹಿಸದ ಜನ ಇವಲ್ಲೆವನ್ನು ಮೆಟ್ಟಿ ನಿಂತ ಒಂದು ಸುಂದರ ಜೀವಿಯ ಕಥೆಯೇ ‘ಸಾಂಗ್ಸ್ ಒಫ್ ಪ್ಯಾರಡೈಸ್ ‘
ಅಗಾಧ ಪ್ರತಿಭೆಯುಳ್ಳ ಪ್ರದೇಶವಾಗಿರುವ ಕಾಶ್ಮೀರ, ಕಲಾವಿದರಿಗೆ ಪ್ರೋತ್ಸಾಹ ಹಾಗು ಅವಕಾಶಗಳನ್ನು ಕೊಡುವುದರಲ್ಲಿ ಎಷ್ಟು ಸಾಮರ್ಥ್ಯ ಹೊಂದಿದೆ ಅನ್ನುವುದು ಈ ಸಿನಿಮಾದ ಮೂಲಕ ತಿಳೀತು.

ಸಿನಿಮಾದ ತಾಂತ್ರಿಕತೆಯ ಬಗ್ಗೆ ಹೇಳಹೊರಟರೆ ಎಲ್ಲರ ಅಭಿನಯ ಅದ್ಭುತವಾಗಿದೆ. ಹಿರಿಯ ರಾಜ್ ಬೇಗಮ್ ಪಾತ್ರದಲ್ಲಿ ನುರಿತ ಅಭಿನೇತ್ರಿ ಸೋನಿ ರಾಜ್ದಾನ್ ಬಹಳ ಸುಂದರವಾಗಿ ಅಭಿನಯಿಸಿದ್ದಾರೆ. ಇಳಿವಯಸ್ಸಿನ ರಾಜ್ ಬೇಗಮ್ ಆಗಿ ಸಬಾ ಆಜಾದ್ ತಮ್ಮ ಪಾತ್ರವನ್ನು ಇನ್ನು ಸ್ವಲ್ಪ ಬಿಗಿಯಾಗಿ ನಿಭಾಯಿಸಬಹುದಾಗಿತ್ತು. ಕೆಲೆವೆಡೆ ಅವಳ ಭಾವನೆಯನ್ನು ವ್ಯಕ್ಪಡಿಸುವ ರೀತಿ ಇನ್ನೂ ಪ್ರಭಾವಕಾರಿಯಾಗಬಹುದಿತ್ತು. ರಾಜ್ ಬೇಗಮ್ ಸಾಧನೆಯ ಎತ್ತರಕ್ಕೆ ಬೆಳದ ಮೇಲು ತನ್ನ ಗುರುವಿನ ಮನೆಯ ಕೆಲಸ ಮಾಡುತ್ತಿದ್ದಾಗ, ಆ ಗುರುವು ನೀನು ಇನ್ನೂ ಹೀಗೆಲ್ಲ ಕೆಲಸ ಮಾಡಬಾರದು. ಒಬ್ಬ ಗೌರವಾನ್ವಿತ ವ್ಯಕ್ತಿಯಾಗಿದ್ದೀಯ ಅಂದಾಗ ಅವಳು ಯಾವುದೇ ಕೆಲಸ ದೊಡ್ಡದು ಚಿಕ್ಕದು ಇರುವುದಿಲ್ಲ ನಾನು ಖುಷಿಯಿಂದ ಈ ಕೆಲಸ ಮಾಡುತ್ತೇನೆ ಎಂದಾಗ ಆ ಗುರುವಿನ ಕಣ್ಣಲ್ಲಿ ಹೆಮ್ಮಯ ಆ ಹೊಳಪು ತಾನು ತರಬೇತಿ ನೀಡಿದ ಶಿಷ್ಯೆ ಎಂಬ ಖುಷಿ ನೋಡುವವರಿಗೆ ಅಂತಹ ಘೋರ ಭೀತಿಯ ಪ್ರದೇಶದ ಸೂಕ್ಷ್ಮ ಭಾವನೆಯ ಮನುಷ್ಯರನ್ನು ಪರಿಚಯಿಸುತ್ತದೆ.
ಅವರ ತಾಯಿ, ತಂದೆ, ಗುರು, ಪತಿ ಇವರೆಲ್ಲರು ಕೂಡ ಅನುಭವಿ ನಟರಾದ ಕಾರಣ ಎಲ್ಲವು ನೈಜವಾಗಿ ಮೂಡಿಬಂದಿದೆ. ಕಾಶ್ಮೀರಿನಂತೆಯೇ ಅಲ್ಲಿಯ ಸಂಗೀತ ವಿಭಿನ್ನ ಹಾಗು ವಿಶಾಲ. ಮಾಧುರ್ಯ ಹಾಗು ಸೌಂದರ್ಯದಿಂದ ಅಲಂಕೃತವಾದ ಒಂದು ಸರಳ ಸ್ವಚ್ಛ ಯಾವುದೇ ಕಲ್ಮಶವಿಲ್ಲದ ಪವಿತ್ರ ದೇವನಾದ ಅನಿಸುತ್ತದೆ.
ಕಾಶ್ಮೀರಿ ಭಾಷೆಯ ಸೊಗಡೇ ಬೇರೆ! ಹಿಂದಿ ಉರ್ದು ಕಿಂತಬೇರೆಯಾಗಿದ್ದು ಈ ಚಲಚಿತ್ರದಲ್ಲಿ ಸಲೀಲದಂತೆ ಹರಿದಿದೆ.
ಯಾವುದೇ ದೃಶ್ಯವು ಅತೀಯನಸದೆ ಯಾವುದೊಂದು ಭಾವನೆಯನ್ನು ಅತಿರೇಕಕ್ಕೆ ಕರೆದೊಯ್ಯದೆ ಅವಾಚ್ಯ ಅಶ್ಲೀಲತೆಯ ಸುಳಿವಿಲ್ಲದ ಒಂದು ಸರಳ ಸಿನಿಮಾ. ಕಾಶ್ಮೀರವನ್ನು ವಿಭಿನ್ನ ದೃಷ್ಟಿಯಲ್ಲಿ ತೋರಿಸಿದ ಕೆಲವೇ ಸಿನೆಮಾಗಳಲ್ಲಿ ಇದು ಒಂದು.
ಒಮ್ಮೆ ನೋಡಬಹುದು.

Pic courtesy: Internet

ಹಾಡಿದ್ದೇ ಹಾಡೋ ಕಿಸುಬಾಯಿ ದಾಸ

ಆತ್ಮೀಯ ಓದುಗರೇ,

ಬೇಸಿಗೆ ರಜೆಯ ಶುಭಾಶಯಗಳು. ಇದೇನು ಹಬ್ಬದ ರೀತಿ ಶುಭಹಾರೈಕೆ ಕೋರುತ್ತಿದ್ದೇನೆ ಅಂತ ಕೆಲವರಿಗೆ ಅನಿಸಿರಬಹುದು. ಆದರೆ ಮಕ್ಕಳಿರುವ ಮನೆಯಲ್ಲಿ ಈ ೬ ವಾರಗಳ ಬೇಸಿಗೆಯ ರಜೆ ಒಂದು ಹಬ್ಬವೇ ಸರಿ.
ಅನಿವಾಸಿಯ ಕೆಲ ಸದಸ್ಯರು ಭಾರತ ಅಥವಾ ಬೇರೆ ಬೇರೆ ಸ್ಥಳಗಳ ಯಾತ್ರೆಯಲ್ಲಿ ಇರಬಹುದು.
ಮಕ್ಕಳು ತಿಂಗಳು ಗಟ್ಟಲೆ ಮನೆಯಲ್ಲಿ ಇದ್ದಾಗ ಆಗುವ ದಿನನಿತ್ಯದ ವ್ಯವಹಾರದ ವಿಷಯ ಬದಲಾಗಿದೆ ಹೊರತು ಸಂಭಾಷಣೆಯಲ್ಲ. ಒಂದು ಪುಟ್ಟ ಲೇಖನ ನಿಮ್ಮೆಲ್ಲರ ಓದಿಗೆ ಸಿದ್ದ.

ಇಂತಿ,
ಸಂಪಾದಕಿ

********************************************************************************************************

ಈ ಬಾರಿ ಯಾವ ವಿಷಯದ ಮೇಲೆ ಲೇಖನ ಬರೆಯುವುದು ಎಂದು ನಾನು ಕಡೆಯ ಘಳಿಗೆ ತನಕ ಯೋಚನೆ ಮಾಡುತ್ತಲೇ ಇದ್ದೆ. ಅನಿವಾಸಿಯ ಸದಸ್ಯರೊಬ್ಬರು ಕಾರಣಾಂತರದಿಂದ ಲೇಖನವನನ್ನು ಪೂರ್ಣಗೊಳಿಸಲಾಗಲಿಲ್ಲ. ಇಕ್ಕಟ್ಟಿನಲ್ಲಿ ಸಿಲುಕಿ ನನ್ನ ಹತಾಶೆಯನ್ನು ಐಪ್ಯಾಡ್ ನಲ್ಲಿ ಮುಳುಗಿದ ನನ್ನ ಮಕ್ಕಳ ಮೇಲೆ ತೋರಿಸಿದಾಗ ನಮ್ಮ ಪುರಾಣದ ಕಥೆಗಳು ಮತ್ತೆ ಬಂದವು. ಈಗ ಬ್ರಿಟನಿನ್ನ ಬೇಸಿಗೆ ಸಮಯ. ಶಾಲೆಗಳಿಗೆಲ್ಲ ರಜೆ. ನಮಗೆ ಸಜೆ. ಮಕ್ಕಳನ್ನು ಹೇಗೆ ಬ್ಯುಸಿ ಇಡೋದು ಅನ್ನೋದೇ ಸಮಸ್ಯೆ. ಮೂರು ಹೊತ್ತು ಐಪ್ಯಾಡ್ ಕಂಪ್ಯೂಟರ್ ಅಥವಾ ಗೇಮ್ ಸ್ಟೇಷನ್ ನಲ್ಲಿ ತಮ್ಮ ತಲೆ ತೂರಿಸಿಕೊಂಡು ಕೂತಿರ್ತಾರೆ. ನಮಗೆ ವರ್ಕ್ ಫ್ರಮ್ ಹೋಂ ನ ಅನುಕೂಲವಿರುವದರಿಂದ ಸ್ವಲ್ಪ ಮಟ್ಟಿಗೆ ಅವರೊಡನೆ ಏನಾದರು ಗಮನ ಕೊಡಬಹುದಾ ಅನ್ನೋ ಸಮಾಧಾನ. ಈ ಕಾಲದಲ್ಲಿ ಮಕ್ಕಳಿಗೆ ಬೈಯೋ ಹಾಗಿಲ್ಲ ಬುದ್ದಿವಾದ ಹೇಳೋ ಹಾಗಿಲ್ಲ .ಎಲ್ಲದಕ್ಕೂ ತರ್ಕಬದ್ಧವಾಗಿ ಪ್ರತಿಉತ್ತರ ತಯ್ಯಾರು. ಬಯಸದೆ ಉದ್ಧೇಶಪೂರ್ವಕವಲ್ಲದೆ ನಮ್ಮ ಬಾಲ್ಯ ನಮ್ಮ ಬೇಸಿಗೆ ರಜೆ ಬಗ್ಗೆ ಮಾತನಾಡುವು ಸಹಜವಾಗಿಯೇ ಬರುತ್ತದೆ.

ಪ್ರತಿಯೊಬ್ಬರ ಮನೆಯಲ್ಲೂ ಬಹುಷಃ ಇದೆ ಮಾತುಗಳನ್ನು ಕೇಳಿ ನಾವೆಲ್ಲರೂ ಬೆಳೆದಿದ್ದೀವಿ. ನಮ್ಮ ತಂದೆ ತಾಯಿಯರೂ ಕೂಡ ಅದೇ ಕಥೆಗಳನ್ನು ಕೇಳಿ ದೊಡ್ಡವರಾಗಿದ್ದಾರೆ. ನಾನು ಕೇವಲ ನಮ್ಮ ಮನೆಯಲ್ಲಿ ಮಾತ್ರ ಈ ರೀತಿಯ ಮಾತು ಅಂದುಕೊಡಿದ್ದೆ. ಹೀಗೆ ಶಾಲೆಯಲ್ಲಿ ಸ್ನೇಹಿತೆಯರೊಡನೆ ಮಾತನಾಡುತ್ತ ನನ್ನ ತಂದೆ ಹೇಳಿದ್ದ ಆ ಹಿತವಚನಗಳನ್ನು ಹೇಳಿಕೊಂಡಾಗ ನನ್ನ ಆಶ್ಚರ್ಯಕ್ಕೆ ಅವರ ತಂದೆಯೂ ಅದನ್ನೇ ಹೇಳಿದರಂತೆ. ಅಷ್ಟೇ ಅಲ್ಲಾ ಅವರ ತಾತಂದಿರ ಕಥೆಯೇನಾದರೂ ಕೇಳರಿದರೆ ಮುಗಿದೇ ಹೋಯ್ತು ! ಬಹಳ ರೋಚಕ ಎಂದಳು ನನ್ನ ಗೆಳತಿ.
ಆಗ ನಾವು ಬಹುಶ ನಾವೆಲ್ಲರೂ ಕರ್ನಾಟಕದಲ್ಲಿ ಬೆಳೆದ ಕಾರಣ ನಮ್ಮೆಲ್ಲರ ಮನೆಯ ವಾತಾವರಣ ಒಂದೇ ತರಹ ಇರಬಹುದೇನೋ ಅನ್ಕೊಂಡು ನಮ್ಮ ಜೀವನ ಎಷ್ಟು ಚೆನ್ನಾಗಿದೆ ಅಂತ ಸಮಾಧಾನ ಮಾಡಿಕೊಂಡ್ವಿ.
ನಂತರ ಯಾವೋದು ಒಂದು ಹಿಂದಿ ಸಿನಿಮಾ ನೋಡುವಾಗ ಅದರಲ್ಲೂ ತಂದೆ ಮಗನಿಗೆ ಇದೇ ಹಿಚವಚನಗಳ ಮಂತ್ರ ಪುಷ್ಪ ಮಾಡುತ್ತಾರೆ. ನಾನು ಚಂಗನೆ ಜಿಗಿದು ಇದೇನು ನನ್ನ ತಂದೆ ಈ ಸಿನಿಮಾದಲ್ಲಿನ ಪಾತ್ರಕ್ಕಿಂತ ಸುಮಾರು ೩೦-೪೦ ವರ್ಷಗಳು ಚಿಕ್ಕವರಿರಬೇಕು ಅದೂ ಉತ್ತರ ಭಾರತದ ಯಾವುದೊ ಮೂಲೆಯಲ್ಲಿರುವ ಒಂದು ಹಳ್ಳಿಯಲ್ಲೂ ಅದೇ ನುಡಿಗಳು.
ಬೆಳಿತಾ ಬೆಳಿತಾ ತಿಳಿಯಿತು ಇದು ಭಾರತದ ಉದ್ದಗಲಕ್ಕೂ ಪರಂಪರಾಗತವಾಗಿ ಬಂದಂತಹ ವೇದ ಉಪನಿಷದ್ಗಳಷ್ಟೇ ಪುರಾತನವಾದ ಶುಭಾಷಿತಗಳು ಅಂತ.

ಹಾಗೆ ಪಾಶ್ಚಿಮಾತ್ಯ ಸಿನಿಮ ನೋಡಲು ಶುರು ಮಾಡಿದೆ. ಮೊದಮೊದಲು ತಿಳಿಯುತ್ತಿರಲಿಲ್ಲ ! ಭಾಷೆ ಇಂಗ್ಲಿಷ್ ಆದರೂ ಆಡುನುಡಿ ವ್ಯತಾಸದಿಂದ ಹಾಗು ಉಪಶೀರ್ಷಿಕೆಗಳು ಇಲ್ಲದ ಕಾರಣ ಕಷ್ಟ ಪಟ್ಟು ಅರ್ಥ ಮಾಡಿಕೊಳ್ಳಲ್ಲು ಪ್ರಯತ್ನ ಪಡುತ್ತಿದ್ದೆ. ಹೀಗೆ ಒಂದು ಸಿನಿಮಾದಲ್ಲಿ ತಂದೆ ತನ್ನ ಆಗರ್ಭ ಶ್ರೀಮಂತ ಮಗನಿಗೆ ಇದೇ ನುಡಿಮುತ್ತಗಳ ಸರಮಾಲೆ ಪೋಣಿಸಿ ಹಾರ ಹಾಕುತ್ತಾನೆ. ಆಗ ನಾನು, ಅಯ್ಯೋ ದೇವರೇ ! ಇದೇನು ಅಮೇರಿಕಾದಲ್ಲೂ ಅದೇ ಪರಿಸ್ಥಿತಿ. ಹಾಗಿದ್ದರೆ ಈ ಮಾತುಗಳಲ್ಲಿ ಸಾವಿರ ಆಣೆ ಸತ್ಯವಿರಬೇಕು ಅಥವಾ ನಾಕಾಣೆಯ ಸತ್ಯ ಉಳದಿದ್ದೆಲ್ಲ ಉತ್ಪ್ರೇಕ್ಷೆ ಇರಬಹುದು ಅನ್ನುವ ಒಂದು ಜಿಜ್ಞಾಸೆ.

ಎಷ್ಟೆಲ್ಲಾ ಪೀಠಿಕೆಯ ನಂತರ ನೀವೆಲ್ಲ ಈಗಾಗಲೇ ಊಹಿಸಬಹುದು ನಾನು ಯಾವ ನುಡಿಮುತ್ತಗಳ ಬಗ್ಗೆ ಹೇಳಹೊರಟಿದೀನಿ ಅಂತ. ಹೌದು ! You guessed it right!

ನಾನು ಚಿಕ್ಕಂದಿನಲ್ಲಿ ೧೦ಕಿಲೋಮೀಟರ್ ನಡೆದು ಶಾಲೆಗೆ ಹೋಗುತ್ತಿದ್ದೆ! ನನ್ನ ಹತ್ತಿರ ಬರಿ ೨ ಜೋಡಿ ಅಂಗಿ ಚಡ್ಡಿ ,ಅದರಲ್ಲೇ ನನ್ನ ಬಾಲ್ಯ ಕಳೆದಿದ್ದೇನೆ. ನನ್ನ ಹತ್ತಿರ ಪಠ್ಯ ಪುಸ್ತಕಗಳಿರುತ್ತಿರಲಿಲ್ಲ, ನಿಮಗೆಲ್ಲ ಈಗಲೇ ಟೂ ವೀಲರ್ ! ವಾಚ್, ಅಲಾರ್ಮ್ ಘಡಿಯಾರ ಎಲ್ಲಾ ಶೋಕಿ ! ಪಟ್ಟಿ ಇನ್ನು ದೊಡ್ಡದಲ್ವಾ !! ನಾನು ಇಲ್ಲಿಗೆ ನಿಲ್ಲುಸುತ್ತೇನೆ.

ಇದನೆಲ್ಲಾ ಕೇಳಿ ನಾವು ತೆಪ್ಪಗೆ ಅಲ್ಲಿಂದ ಪಲಾಯನ !

ಈಗಿನ ಹಾಡು ‘ನಮ್ಮ ಕಾಲದಲ್ಲಿ ಇಂಟರ್ನೆಟ್ ಇರಲಿಲ್ಲ, ಕರೆಂಟ್ ಹೋದಾಗ ಏನು ಮಾಡೋದು ಅನ್ನೋದೇ ತಿಳಿತಿರ್ಲಿಲ್ಲ ! ಫೋನ್ ಐಪ್ಯಾಡ್ ಇತ್ಯಾದಿ ಇನ್ಫ್ಯಾಕ್ಟ್ ಟಿವಿ ಕೂಡ ! ಟಿವಿಯಲ್ಲಿ ಮಕ್ಕಳಿಗಾಗಿ ಕಾರ್ಯಕ್ರಮಗಳು ಬೆರಳೆಣಿಕೆ ಮಾತ್ರ!

ಆದರೆ ಈಗಿನ ಮಕ್ಕಳು! ಇಂತಹ ಮಾತುಗಳಿಗೆ ಸರಾಸರಿ ಉತ್ತರ ಕೊಡುತ್ತಾ ‘ಅದು ನಿಮ್ಮ ಕಾಲ , You were unlucky’ , ನೀವು ಇದ್ದ ರೀತಿ ನೀವು ಪಟ್ಟ ಕಷ್ಟ ನಿಜವಾಗಿದ್ದರೂ ಅದು ಈಗಿನ ಪೀಳಿಗೆಗೆ ಅನ್ವಯಿಸುವುದಿಲ್ಲ. ಎಂದೆಲ್ಲಾ ತರ್ಕ!

ನಮ್ಮ ತಂದೆ ತಾಯಿಯರ ಕಾಲಕ್ಕೆ ಹಾಗು ನಮ್ಮ ಬಾಲ್ಯಕ್ಕೆ ಬಹುಷಃ ಅಷ್ಟು ವ್ಯತ್ಯಾಸವಿರಲಿಲ್ಲ ೯೦ಸ್ ದಶಕದ ನಂತರ ಜಾಗತಿಕ ಮಟ್ಟದಲ್ಲಿ ಆದ ಬದಲಾವಣೆಗಳು ಹಾಗು ಈಗ ಕಳೆದ ೨ ವರ್ಷಗಳಿಂದ ನಮ್ಮನು ಅವರಿಸುತ್ತಿರಿವ ಕೃತಕ ಬುದ್ದಿಮತ್ತೆ ಎಂಬ ಕಾರ್ಮೋಡವೋ ಅಥವಾ ಒಂದು ಜಾಲವೋ ನಮ್ಮ ಮನೆಯಲ್ಲಿ, ವೃತ್ತಿಪರ ಜೀವನದಲ್ಲಿ ಸಂಭಾಷಣೆಗಳನ್ನು ಕಡಿಮೆ ಮಾಡುತ್ತಿದೆ ಅನ್ನುವ ಭಾವನೆ.
ಸರಿಯೋ ತಪ್ಪೋ ನಮ್ಮ ಕಾಲದಲ್ಲಿ ಮಾಹಿತಿಯ ಅಭಾವ. ಕೆಲ ವಿಷಯಗಲ್ಲಿ ಇದು ಒಳಿತಾದರೂ ಮತ್ತಿನ್ನು ವಿಷಯಗಳಿಗೆ ಇದು ಅಡೆಚಣೆ ಉಂಟುಮಾಡುತಿತ್ತು.

ಒಂದು ವಿಷಯದಲ್ಲಿ ಈ ‘overload of information ‘ ನ ಪ್ರತಿಕೂಲತೆ ಮಕ್ಕಳು ನಮ್ಮನ್ನು ಯಾವುದೇ ವಿಷಯದ ಬಗ್ಗೆ ಬಂದು ಕೂತು ಚರ್ಚಿಸುವುದು ಕಡಿಮೆ ಆಗಿದೆ. ಅವರಹತ್ತಿರಾ ಎಲ್ಲಾ ಮಾಹಿತಿ ಇದೆ ಅಂತ ಅಲ್ಲಾ. ಕುತೂಹಲ ಕೆರಳಿಸುವ ಮಾಹಿತಿಯೇ ಅವರಿಗೆ ಅರಿವಿಲ್ಲದಂಗಾಗಿದೆ.
ಈ ವಿಷಯದ ಬಗ್ಗೆ ನಾನು ಮಾತು ತೆಗೆದರೆ ಮತ್ತೆ ತಿರುಗಿ ಹಾಡಿದ್ದೇ ಹಾಡೋ ಕಿಸಬಾಯ್ ದಾಸನ ಕಥೆಯಾಗಿ ಕೊನೆಗೆ ನನ್ನ ತಂದೆ ನನ್ನ ಅಜ್ಜ ನನ್ನ ಬಾಲ್ಯ ನೆನಪಾಗುತ್ತದೆ.

ಲೇಖನ
ರಾಧಿಕಾ ಜೋಶಿ

Image courtesy: Internet and AI generated image