ಎರಡನೇ ಮಹಾಯುದ್ಧದ ಬ್ರಿಟಿಷ್ ಗೂಢಚಾರಿಣಿ ನೂರ್ ಇನಾಯತ್ ಖಾನ್ (1914–1944) The Spy Princess -ರಾಮಮೂರ್ತಿ ಲೇಖನ.

ದೇಶಭಕ್ತಿ ಎಂದರೆ ಗಡಿಯಲ್ಲಿ ಶಸ್ತ್ರ ಹಿಡಿದು ಹೋರಾಡುವುದಕ್ಕೆ ಸೀಮಿತವಿಲ್ಲ; ಅಗತ್ಯ ಬಂದಾಗ ತನ್ನ ವೈಯಕ್ತಿಕ ಸುಖ–ಸೌಕರ್ಯ, ಭಯ, ಭವಿಷ್ಯ ಎಲ್ಲವನ್ನೂ ಬದಿಗಿಟ್ಟು ದೇಶಕ್ಕಾಗಿ ನಿಲ್ಲುವ ಧೈರ್ಯವೇ ನಿಜವಾದ ದೇಶಭಕ್ತಿ. ಇಂತಹ ಮೌನವಾದ, ಆದರೆ ಅಪಾರ ತ್ಯಾಗದಿಂದ ಕೂಡಿದ ದೇಶಭಕ್ತಿಯ ಪ್ರತೀಕವೇ ನೂರ್ ಇನಾಯತ್ ಖಾನ್.ಇತಿಹಾಸದ ಪುಟಗಳಲ್ಲಿ ಬಹಳಷ್ಟು ಬಾರಿ ಮಹಿಳೆಯರ ತ್ಯಾಗಗಳು ಅಂಚಿಗೆ ಸರಿದಿವೆ. ವಿಶೇಷವಾಗಿ ವಸಾಹತುಶಾಹಿಯ ಕಾಲಘಟ್ಟದಲ್ಲಿ ಭಾರತ ಮೂಲದ ಅನೇಕರು ನೀಡಿದ ಕೊಡುಗೆಗಳು ಸೂಕ್ತ ಗೌರವವನ್ನು ಪಡೆಯಲಿಲ್ಲ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಗೂಢಚರ್ಯಾ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದ ನೂರ್ ಇನಾಯತ್ ಖಾನ್ ಅವರ ಜೀವನವು, ದೇಶಭಕ್ತಿಯ ಅರ್ಥಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ಈ ಲೇಖನವು ನೂರ್ ಇನಾಯತ್ ಖಾನ್ ಅವರ ಜೀವನ ಕಥೆಯನ್ನು ಮಾತ್ರವಲ್ಲ, ದೇಶಭಕ್ತಿ ಎಂಬ ಮೌಲ್ಯವು ಜಾತಿ, ಧರ್ಮ, ಲಿಂಗ, ರಾಷ್ಟ್ರಗಳ ಗಡಿಗಳನ್ನು ಮೀರಿ ಮಾನವೀಯತೆಯೊಂದಿಗೆ ಬೆಸೆಯಲ್ಪಟ್ಟಿರುತ್ತದೆ ಎಂಬ ಸತ್ಯವನ್ನು ನಮ್ಮ ಮುಂದಿಡುತ್ತದೆ. ಇಂತಹ ಮರೆತುಹೋಗಿರುವ ವೀರಗಾಥೆಗಳು ಪುನಃ ಓದಿಗೆ ಬರುವುದೇ ನಮ್ಮ ಇತಿಹಾಸದ ಜವಾಬ್ದಾರಿ.ನೂರ್ ಇನಾಯತ್ ಖಾನ್ ಅವರ ಕಥೆ, ದೇಶಭಕ್ತಿ ಎಂದರೆ ಘೋಷಣೆ ಅಲ್ಲ; ಅದು ಮೌನ ತ್ಯಾಗ, ಅಚಲ ನಿಷ್ಠೆ ಮತ್ತು ಕೊನೆಯ ಉಸಿರಿನವರೆಗಿನ ಧೈರ್ಯ ಎಂಬುದನ್ನು ನಮಗೆ ನೆನಪಿಸುತ್ತದೆ.
ಇಂತಹ ಮೈಜುಮ್ಮೆನ್ನುವ ರೋಚಕ ಜೀವನ ಚರಿತ್ರೆಯನ್ನು ನಮ್ಮೊಂದಿದೆ ಹಂಚಿಕೊಂಡಿದ್ದಕ್ಕೆ ಈಗಾಗಲೇ ‘ಅನಿವಾಸಿ’ಗೆ ಅನೇಕ ಅಮೂಲ್ಯ ಇತಿಹಾಸ ಪ್ರಬಂಧಗಳನ್ನು ಕೊಟ್ಟು ಸುಪರಿಚಿತರಾದ ರಾಮಮೂರ್ತಿಯವರಿಗೆ ಧನ್ಯವಾದಗಳು.
~ ರಾಧಿಕಾ ಜೋಶಿ

1914–1918 ಮತ್ತು 1939–1945ರಲ್ಲಿ ನಡೆದ ಈ ಎರಡು ಮಹಾಯುದ್ಧಗಳಲ್ಲಿ ಭಾರತದ ಸುಮಾರು ಇಪ್ಪತ್ತು ಲಕ್ಷ ಸೈನಿಕರು ಭಾಗವಹಿಸಿದ್ದರು. ಆದರೆ ಇವರ ತ್ಯಾಗವನ್ನು ನೆನಪಿಸಿಕೊಂಡು ನವೆಂಬರ್ ತಿಂಗಳಲ್ಲಿ ನಡೆಯುವ Remembrance Day ದಿನದಂದು Poppy Wreath ಇಡುವುದು ಅಪರೂಪವಾಗಿದೆ. ಈ ಯುದ್ಧಗಳಲ್ಲಿ ಅನೇಕ ಮಹಿಳೆಯರೂ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸಿದ್ದರು. ಅವರಲ್ಲಿ ನೂರ್ ಇನಾಯತ್ ಖಾನ್ ಒಬ್ಬಳು. ಈ ಹೆಸರನ್ನು ನೀವು ಬಹುಶಃ ಕೇಳಿರಲಿಕ್ಕಿಲ್ಲ. 112 ವರ್ಷಗಳ ಹಿಂದೆ ಜನಿಸಿದ ಭಾರತ ಮೂಲದ ನೂರ್ ಇನಾಯತ್ ಖಾನ್ ಈ ದೇಶಕ್ಕೆ ನೀಡಿದ ಕೊಡುಗೆ ಅಪಾರವಾದುದು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಅಂದಿನ ಪ್ರಧಾನಮಂತ್ರಿ ಸರ್ ವಿಂಸ್ಟನ್ ಚರ್ಚಿಲ್ ಸ್ಥಾಪಿಸಿದ Special Operations Executive (SOE) ವಿಭಾಗಕ್ಕೆ ಸೇರಿ, ಫ್ರಾನ್ಸ್ ದೇಶದಲ್ಲಿದ್ದು ಶತ್ರುಗಳ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ಅತ್ಯಂತ ಗುಪ್ತವಾಗಿ ವೈರ್‌ಲೆಸ್ ಮೂಲಕ ಲಂಡನ್ ಕಚೇರಿಗೆ ಕಳುಹಿಸುವುದು ಅವಳ ಕೆಲಸವಾಗಿತ್ತು. ಆ ಸಮಯದಲ್ಲಿ ನಾಜಿ ಜರ್ಮನಿ ಫ್ರಾನ್ಸ್ ದೇಶವನ್ನು ಆಕ್ರಮಿಸಿಕೊಂಡಿತ್ತು. ಆದ್ದರಿಂದ ಬ್ರಿಟಿಷ್ ಗೂಢಚಾರಿಗಳು ಅತ್ಯಂತ ಸೂಕ್ಷ್ಮತೆ ಮತ್ತು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿತ್ತು. ಸಿಕ್ಕಿಬಿದ್ದರೆ ಸಾವೇ ಶಿಕ್ಷೆ.

ಪ್ರತಿ ದಿನ ಒಂದು ಸುರಕ್ಷಿತ ಮನೆಯಿಂದ ಇನ್ನೊಂದು ಮನೆಗೆ ಗುಪ್ತವಾಗಿ ಸ್ಥಳಾಂತರಗೊಂಡು, ಅಟ್ಟದಲ್ಲೋ ಅಥವಾ ನೆಲಮಾಳಿಗೆಯಲ್ಲೋ ವೈರ್‌ಲೆಸ್ ಉಪಕರಣಗಳನ್ನು ಜೋಡಿಸಿ ಸಂದೇಶ ಕಳುಹಿಸುವುದು ಸುಲಭದ ಕೆಲಸವಾಗಿರಲಿಲ್ಲ. ಶತ್ರುಗಳಿಗೆ ಸುಳಿವು ಸಿಗದಂತೆ ಅವಳು ಅನೇಕ ಹೆಸರುಗಳನ್ನು ಬಳಸುತ್ತಿದ್ದಳು—ಮ್ಯಾಡಲೀನ್, ನೊರಾ ಇತ್ಯಾದಿ. ಆದರೆ ಕೊನೆಗೆ ಒಬ್ಬ ದ್ರೋಹಿಯ ಕಾರಣದಿಂದ ಶತ್ರುಗಳಿಗೆ ಸಿಕ್ಕಿಬಿದ್ದು, ಹಲವಾರು ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿ ಭೀಕರ ಚಿತ್ರಹಿಂಸೆಯನ್ನು ಸಹಿಸಿದರೂ, ಒಂದು ಚೂರು ರಹಸ್ಯವನ್ನೂ ಬಿಟ್ಟು ಕೊಡದ ಧೈರ್ಯಕ್ಕಾಗಿ Dachau Concentration Camp ನಲ್ಲಿ Gestapo ಗುಂಡಿನಿಂದ ಹತ್ಯೆಗೊಳಗಾದಳು.

ಬಾಲ್ಯ ಜೀವನ ಮತ್ತು ಕುಟುಂಬ ಹಿನ್ನೆಲೆ

ತಂದೆ ಹಜರತ್ ಇನಾಯತ್ ಖಾನ್ ಬರೋಡಾ ನಗರದಲ್ಲಿ ಜನಿಸಿದರು. ತಾಯಿ ಕಡೆಯಿಂದ ಅವರು ಮೈಸೂರಿನ ಟಿಪ್ಪು ಸುಲ್ತಾನನ ವಂಶಸ್ಥರು(ಮರಿಮಗ). ಟಿಪ್ಪು ಸುಲ್ತಾನ ಬ್ರಿಟಿಷರ ವಿರುದ್ಧ ಯುದ್ಧ ಮಾಡಿ 1799ರಲ್ಲಿ ಮರಣ ಹೊಂದಿದರು. ಹಜರತ್ ಇನಾಯತ್ ಖಾನ್ ಶಾಂತಿಪ್ರಿಯರಾಗಿದ್ದು, ಇಸ್ಲಾಂ ಧರ್ಮದ ಸೂಫಿ ಪರಂಪರೆಯನ್ನು ಅನುಸರಿಸಿ ಸಂಗೀತವನ್ನು ಕಲಿತವರು. ಈ ಸಂಪ್ರದಾಯವನ್ನು ವಿಶ್ವದಾದ್ಯಂತ ಹರಡುವ ಉದ್ದೇಶದಿಂದ ಅಮೆರಿಕಾ ಮತ್ತು ಯುರೋಪ್‌ನಲ್ಲಿ ಪ್ರವಾಸ ಮಾಡಿದರು.

ತಾಯಿ ಅಮೆರಿಕಾದ ಪ್ರಜೆ ಒರಾ ರೇ ಬೇಕರ್; ನಂತರ ಇಸ್ಲಾಂ ಧರ್ಮ ಸ್ವೀಕರಿಸಿ ಅಮೀನಾ ಬೇಗಂ ಎಂದು ಹೆಸರು ಪಡೆದರು. ಯುರೋಪ್‌ನಲ್ಲಿ ಸಂಚರಿಸಿ ಕೆಲ ವರ್ಷಗಳು ಮಾಸ್ಕೋ ನಗರದಲ್ಲಿ ವಾಸಿಸಿ, 1914ರಲ್ಲಿ ಮೊದಲ ಮಹಾಯುದ್ಧ ಆರಂಭವಾಗುವ ಮೊದಲು ಕುಟುಂಬದೊಂದಿಗೆ ಲಂಡನ್‌ನ ಬ್ಲೂಮ್ಸ್‌ಬರಿ (Bloomsbury)ಯಲ್ಲಿ ನೆಲೆಸಿದರು. ನೂರ್ 01-01-1914ರಂದು ಮಾಸ್ಕೋ ನಗರದಲ್ಲಿ ಜನಿಸಿದರು.

ಮಹಾಯುದ್ಧ ಮುಗಿದ ನಂತರ 1920ರಲ್ಲಿ ಲಂಡನ್‌ನಿಂದ ಪ್ಯಾರಿಸ್‌ಗೆ ಬಂದು ನೆಲೆಸಿದರು. ಇನಾಯತ್ ಖಾನ್ ಸಂಗೀತ ಮತ್ತು ಸೂಫಿ ಧರ್ಮದ ಪ್ರಚಾರ ಆರಂಭಿಸಿದರು. ಆದರೆ 1927ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಅನಾರೋಗ್ಯದಿಂದ ನಿಧನರಾದರು.

13 ವರ್ಷದ ನೂರ್ ಮೇಲೆ ಕುಟುಂಬದ ಹೊಣೆಗಾರಿಕೆ ಬಿದ್ದರೂ, ಅವಳ ವಿದ್ಯಾಭ್ಯಾಸವನ್ನು ಮುಂದುವರೆಸಿ ಪ್ರಸಿದ್ಧ Sorbonne ವಿಶ್ವವಿದ್ಯಾಲಯದಲ್ಲಿ ಮಕ್ಕಳ ಮನೋವಿಜ್ಞಾನ (Child Psychology) ಪದವಿ ಪಡೆದಳು. ಸಂಗೀತದಲ್ಲೂ ಅವಳು ಪ್ರವೀಣಳಾಗಿದ್ದಳು. ನಂತರ ಮಕ್ಕಳ ಪುಸ್ತಕಗಳ ಲೇಖಕಿಯಾಗಿ, 1939ರಲ್ಲಿ ಬೌದ್ಧ ಧರ್ಮದಿಂದ ಪ್ರೇರಿತವಾದ “ಇಪ್ಪತ್ತು ಜಾತಕ ಕಥೆಗಳು” ಸೇರಿದಂತೆ ಹಲವು ಬರಹಗಳು ಫ್ರೆಂಚ್ ಭಾಷೆಯಲ್ಲಿ ಪ್ರಕಟವಾದವು.

ಎರಡನೇ ಮಹಾಯುದ್ಧದಲ್ಲಿ ವೈರ್‌ಲೆಸ್ ಆಪರೇಟರ್

1939ರಲ್ಲಿ ನಾಜಿ ಜರ್ಮನಿ ಯುರೋಪ್ ಖಂಡವನ್ನು ಕಬಳಿಸುವ ಪ್ರಯತ್ನದಿಂದ ಯುದ್ಧ ಆರಂಭವಾಯಿತು. 1940ರಲ್ಲಿ ಫ್ರಾನ್ಸ್ ಜರ್ಮನಿಯ ವಶವಾಯಿತು. ಅಹಿಂಸಾವಾದಿಗಳಾದ ಈ ಕುಟುಂಬ Bordeaux ನಿಂದ ಸರಕು ಸಾಗಿಸುವ ಹಡಗಿನಲ್ಲಿ ಲಂಡನ್‌ಗೆ ಮರಳಿದರು.
ನೂರ್ ಮತ್ತು ಅವಳ ಸಹೋದರ ವಿಲಾಯತ್ ಅವರ ತಂದೆಯಂತೆ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ವಿಮುಕ್ತವಾಗಬೇಕೆಂದು ಕನಸು ಕಂಡಿದ್ದರು. ಆದರೆ ಈಗ ಜರ್ಮನಿ ಯುರೋಪ್ ಖಂಡವನ್ನೇ ಆಕ್ರಮಿಸುವ ಅಪಾಯ ಎದುರಾದ್ದರಿಂದ, ಇದನ್ನು ತಡೆಯಲು ತಮ್ಮ ಕೈಲಾದ ಸೇವೆ ಸಲ್ಲಿಸಲು ನಿರ್ಧರಿಸಿದರು.

ನೂರ್ ಆಗತಾನೆ ಆರಂಭವಾಗಿದ್ದ WAAF (Women’s Auxiliary Air Force) ಗೆ ಸೇರಿ Signals ಮತ್ತು Wireless ವಿಭಾಗದಲ್ಲಿ ತರಬೇತಿ ಪಡೆದು, ಜೂನ್ 1943ರಲ್ಲಿ ಫ್ರಾನ್ಸ್‌ನಲ್ಲಿ ಕೆಲಸ ಆರಂಭಿಸಿದಳು. Gestapo ಪ್ಯಾರಿಸ್‌ನಲ್ಲಿ ಅನೇಕ ಬ್ರಿಟಿಷ್ ಗೂಢಚಾರಿಗಳನ್ನು ಹಿಡಿದು ಕ್ರೂರ ಶಿಕ್ಷೆ ವಿಧಿಸುತ್ತಿತ್ತು. ಇಂತಹ ಅಪಾಯಕರ ಪರಿಸ್ಥಿತಿಯಲ್ಲೂ ನೂರ್ ವೇಷ ಬದಲಿಸಿ ಸುರಕ್ಷಿತ ಮನೆಗಳಿಂದ ಮನೆಗಳಿಗೆ ಸ್ಥಳಾಂತರಗೊಳ್ಳುತ್ತಾ ತನ್ನ ಕೆಲಸ ಮುಂದುವರೆಸಿದಳು.

ಅವಳ ಫ್ರೆಂಚ್ ಭಾಷೆಯ ಉಚ್ಚಾರಣೆ ಸ್ಥಳೀಯರಂತೆಯೇ ಇದ್ದುದರಿಂದ ಅವಳ ಮೇಲೆ ಸಂಶಯ ಬಹಳ ಕಡಿಮೆ ಇತ್ತು. ಅವಳು ಅತ್ಯಂತ ಶಿಸ್ತಿನಿಂದ ನಿರ್ವಹಿಸುತ್ತಿದ್ದ ಕೆಲಸ ಲಂಡನ್‌ನಲ್ಲೂ ಮೆಚ್ಚುಗೆ ಪಡೆದಿತ್ತು. ಆದರೂ ಅವಳ ಸುರಕ್ಷತೆ ಬಗ್ಗೆ ಆತಂಕವಿತ್ತು; ಹಲವು ಬಾರಿ ಅವಳನ್ನು ವಾಪಸ್ಸು ಬರಲು ಕರೆ ಮಾಡಲಾಯಿತು. ಆದರೆ ನೂರ್ ಅದನ್ನು ನಿರಾಕರಿಸಿ ಫ್ರಾನ್ಸ್‌ನಲ್ಲೇ ಕೆಲಸ ಮುಂದುವರೆಸಿದಳು.
ದುರದೃಷ್ಟವಶಾತ್, ಫ್ರಾನ್ಸ್‌ನ ಒಬ್ಬ Double Agent ದ್ರೋಹ ಮಾಡಿದ್ದರಿಂದ Gestapo ನೂರ್ ಅನ್ನು ಸೆರೆಹಿಡಿಯಲು ಸಾಧ್ಯವಾಯಿತು.

ಕೊನೆಯ ದಿನಗಳು

Gestapo ಕಾರಾಗೃಹದಲ್ಲಿ ಇಟ್ಟ ಮೊದಲ ದಿನವೇ ಕಿಟಕಿಯ ಮೂಲಕ ತಪ್ಪಿಸಿಕೊಳ್ಳಲು ಅವಳು ಪ್ರಯತ್ನಿಸಿದಳು. Gestapo ಎಷ್ಟೇ ಹಿಂಸೆ ನೀಡಿದರೂ ನೂರ್ ತನ್ನ Code Word ಸೇರಿದಂತೆ ಯಾವುದೇ ರಹಸ್ಯವನ್ನೂ ಬಿಟ್ಟು ಕೊಡಲಿಲ್ಲ. ಇತರ ಬಂಧಿಗಳೊಂದಿಗೆ ಸೆರೆಯ ಕಂಬಿಗಳನ್ನು ಮುರಿದು ತಪ್ಪಿಸಿಕೊಳ್ಳುವ ಪ್ರಯತ್ನ ವಿಫಲವಾಯಿತು.

ನಂತರ ಅವಳನ್ನು ಏಕಾಂತ ಬಂಧನದಲ್ಲಿ ಇಟ್ಟರೂ ಯಾವುದೂ ಹೊರಬರಲಿಲ್ಲ. ಕೊನೆಗೆ ಅವಳನ್ನು ಸರಪಳಿಗಳಿಂದ ಕಟ್ಟಿ ಜರ್ಮನಿಯ ಕಠಿಣ Pforzheim ಕಾರಾಗೃಹಕ್ಕೆ ಕರೆದೊಯ್ದು ಅಮಾನವೀಯವಾಗಿ ಹಿಂಸೆ ನೀಡಿದರು. ಇದು ನವೆಂಬರ್ 1943. ಹತ್ತು ತಿಂಗಳುಗಳ ಕಾಲ ನಡೆದ ಹಿಂಸೆಯಲ್ಲಿಯೂ ಅವಳಿಂದ ಯಾವುದೇ ರಹಸ್ಯ ಬಯಲಾಗಲಿಲ್ಲ.
ಕೊನೆಗೆ ನೂರ್ ಮತ್ತು ಇನ್ನೂ ನಾಲ್ಕು ಬಂಧಿಗಳನ್ನು Dachau Concentration Camp ಗೆ ಕಳುಹಿಸಿ 13 ಸೆಪ್ಟೆಂಬರ್ 1944ರಂದು ಗುಂಡಿಟ್ಟು ಹತ್ಯೆಗೊಳಗಾದರು (ಇಲ್ಲಿ ಲಕ್ಷಾಂತರ ಯಹೂದಿಗಳನ್ನು ಗ್ಯಾಸ್ಚೇಂಬರ್‌ಗಳಲ್ಲಿ ಹತ್ಯೆ ಮಾಡಲಾಗಿತ್ತು).

ನೂರ್‌ನ ಕೊನೆಯ ಮಾತು ಅವಳ ತುಟಿಗಳಿಂದ ಹೊರಬಂದದ್ದು—“LIBERTÉ”, ಅಂದರೆ ಸ್ವಾತಂತ್ರ್ಯ. ಕೇವಲ 30 ವರ್ಷದ ಈ ಧೈರ್ಯಶಾಲಿ ಮಹಿಳೆ ತನ್ನ ಪ್ರಾಣವನ್ನು ಈ ದೇಶಕ್ಕೆ ಅರ್ಪಿಸಿದಳು.
ಮಹಾಯುದ್ಧ ಮುಗಿದ ನಂತರ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಹೊರಡುವ ಯೋಚನೆ ಅವಳಿಗಿತ್ತು. WAAF ಸೇರಿದ್ದಾಗ ನೂರ್ ಇದನ್ನು ಕೆಲವರ ಮುಂದೆ ಹೇಳಿದ್ದಾಳೆ ಎಂಬುದು ತಿಳಿದುಬರುತ್ತದೆ.

Dachau ನಲ್ಲಿ ಕೊಲೆಯಾದವರ ಅಂತ್ಯಕ್ರಿಯೆ ಯಥೋಚಿತ ಗೌರವದಿಂದ ನಡೆಯುತ್ತಿರಲಿಲ್ಲ; ಇದು Gestapo ಯ ಅಮಾನವೀಯ ವರ್ತನೆಯ ಮತ್ತೊಂದು ಉದಾಹರಣೆ. ಹೀಗೆ ಮೃತರಾದವರ ಸಂಖ್ಯೆ ಅನೇಕ. ಬಹಳ ವರ್ಷಗಳ ನಂತರ ನೂರ್‌ನ ಕೊನೆಯ ದಿನಗಳ ವಿವರಗಳು National Archives ನಲ್ಲಿರುವ ಐತಿಹಾಸಿಕ ದಾಖಲೆಗಳಿಂದ ಬೆಳಕಿಗೆ ಬಂದವು.

ಭಾರತದ ಪತ್ರಕರ್ತೆಯಾದ ಶ್ರೀಮತಿ ಶ್ರಭಾನಿ ಬಸು ಅವರ ಸಂಶೋಧನೆಯಿಂದ ನೂರ್ ಕುರಿತ ಹೆಚ್ಚಿನ ವಿಷಯಗಳು ಬಹಿರಂಗವಾದವು. ನಂತರ “Spy Princess: The Life of Noor Khan” ಎಂಬ ಪುಸ್ತಕ ಪ್ರಕಟವಾಯಿತು.

ಮರಣೋತ್ತರ ಗೌರವಗಳು

ಯುದ್ಧದಲ್ಲಿ ಮೃತರಾದವರ ಸ್ಮಾರಕ Runnymede ನಲ್ಲಿ ಇದೆ; ಅಲ್ಲಿ ನೂರ್ ಹೆಸರನ್ನು ಕಾಣಬಹುದು. ಲಂಡನ್‌ನ ಅನೇಕ ಸ್ಥಳಗಳಲ್ಲಿ ನೂರ್ ಸ್ಮಾರಕಗಳಿವೆ ಮತ್ತು ಅವಳಿಗೆ ಹಲವಾರು ಮರಣೋತ್ತರ ಪ್ರಶಸ್ತಿಗಳು ದೊರೆತಿವೆ. ಮುಖ್ಯವಾದವುಗಳು George Cross ಹಾಗೂ ಫ್ರಾನ್ಸ್ ದೇಶದ Croix de Guerre.
08-11-2012ರಂದು ಅವಳ ಕಂಚಿನ ಪ್ರತಿಮೆಯನ್ನು Bloomsbury ಯ Gordon Square ನಲ್ಲಿ ಅನಾವರಣ ಮಾಡಲಾಯಿತು. ನೂರ್ ವಾಸವಾಗಿದ್ದ Taviton Street ಮನೆಯ ಮುಂದೆ 2020ರಲ್ಲಿ
English Heritage ಸಂಸ್ಥೆ Blue Plaque ಅನ್ನು ಅನಾವರಣ ಮಾಡಿತು. 25-03-2014ರಂದು ನೂರ್ ಭಾವಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಯಿತು.

2019ರ ಚಲನಚಿತ್ರ A Call to Spy ಯಲ್ಲಿ ರಾಧಿಕಾ ಆಪ್ಟೆ ನೂರ್ ಪಾತ್ರದಲ್ಲಿ ನಟಿಸಿದ್ದಾರೆ.
The Independent ಪತ್ರಿಕೆಯಲ್ಲಿ ನೂರ್ ಬಗ್ಗೆ ಹೀಗೆ ಬರೆಯಲಾಗಿದೆ:
She died with “freedom” on her lips. It was hers. And it was ours as well.

— ರಾಮಮೂರ್ತಿ
ಕಾಂಗಲ್ ಟನ್, ಚೆಶೈರ್

Acknowledgements

Images from Google

The Princess who became a Spy: Independent Fed 2016  National Archives National Archives

ಒಂದು ಸಿನಿಮಾ ಕಥೆ

ಓಟಿಟಿಯ ಕಾಲದಲ್ಲಿ ಥ್ರಿಲ್ಲರ್, ಸಸ್ಪೆನ್ಸ್ , ಕ್ರೈಂ ಅನ್ನೋ ಜಾನ್ರದಲ್ಲಿ ಹಾಗು vfx ಗಳ ಮಾಯಾಲೋಕದಲ್ಲಿ ಮುಳುಗಿದ ನಾನು ಹಾಗೆ ಸ್ಕ್ರಾಲ್ ಮಾಡುತ್ತಿದ್ದಾಗ ಅಕಸ್ಮಾತಾಗಿ ಸಿಕ್ಕ ಸಿನಿಮಾದ ಬಗ್ಗೆ ಒಂದು ವರದಿ ಈ ವಾರ ನಿಮ್ಮೆಲ್ಲರ ಓದಿಗಾಗಿ.
ಸಿನಿಮಾದ ಟೆಕ್ನಿಕಲ್ ವಿವರಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಆದರೆ ಅಲ್ಲಿರುವ ಪಾತ್ರಗಳು ನನ್ನ ಆಲೋಚನೆಯನ್ನು ಬದಲಿಸಿದೆ.
– ಸಂ

ನಮಸ್ತೆ ಶಾರದಾ ದೇವಿ ಕಾಶ್ಮೀರ ಪುರವಾಸಿನಿ
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿಮೆ

ಈ ಶ್ಲೋಕವನ್ನು ಬಾಲ್ಯದಿಂದಲೇ ಕೇಳುತ್ತಿದ್ದೇವೆ. ಕಾಶ್ಮೀರ ವಿದ್ಯೆ ಹಾಗು ಜ್ಞಾನದ ಉತ್ತುಂಗ ಹಾಗು ವಿಶಾಲ ದೈವಿಕ ಹಿಮಾಲಯಕ್ಕೆ ಆಶ್ರಯ ಕೊಟ್ಟಂತಹ ಒಂದು ಅದ್ಭುತ ಪ್ರದೇಶ.
ಕಾಶ್ಮೀರದ ಸೌನ್ದರ್ಯದ ಬಗ್ಗೆ ಬಹಳಷ್ಟು ಕವಿಗಳು ವಿಭಿನ್ನ ಬಗೆಯಲ್ಲಿ ವರ್ಣಿಸಿದ್ದಾರೆ.
ಇತಿಹಾಸದ ಕಥೆಗಳಲ್ಲಿ ಹಿಮಾಲಯ ಬಗ್ಗೆ ಹಾಗು ಶ್ರೀಶಂಕರಾಚಾರ್ಯರು ಸ್ಥಾಪಿಸಿದ ಶಾರದಾ ಪೀಠದ ಬಗೆಗಿನ ಕಥೆಗಳು ನಮ್ಮನ್ನು ಕಾಶ್ಮೀರವನ್ನು ಪೂಜಿಸುವ ಪುಣ್ಯ ಕ್ಷೇತ್ರವನ್ನಾಗಿಸಿದರೆ ಮತ್ತೊಂದೆಡೆ ಸಿನೆಮಾಗಳು ಎಲ್ಲ ಋತುವನ್ನು ವಿಶೇಷವಾಗಿ ಹಿಮ ಪರ್ವತಗಳ ಮಡಿಲಲ್ಲಿ ಹರಡಿರುವ ಹಸಿರಿನ ಕಣಿವೆಗಳು, ಚಳಿಗಾಲದಲ್ಲಿ ಮುತ್ತಿನಂತೆ ಹೊಳೆಯುವ ಹಿಮಕಣಗಳು, ಬೇಸಿಗೆಯಲ್ಲಿ ಬಣ್ಣ ಬಣ್ಣದ ಪುಷ್ಪಗಳಿಂದ ಅರಳಿದ ತೋಟಗಳು—ಇವೆಲ್ಲವನ್ನು ಎಷ್ಟು ಅದ್ಭುತವಾಗಿ ಸೆರೆ ಹಿಡಿದು ನೋಡುವವರಿಗೆ ಒಂದು ಅಲೌಕಿಕ ಅನುಭವನ್ನು ಕೊಡುವುದಲ್ಲದೆ ಅಲ್ಲಿಗೆ ಆ ತಕ್ಷಣ ಹೋಗುವ ಹಂಬಲವನ್ನುಂಟುಮಾಡುತ್ತದೆ.
ದಾಲ್ ಸರೋವರದ ನೀರಿನ ಮೇಲೆ ತೇಲುವ ಹೌಸ್‌ಬೋಟ್‌ಗಳು ಮತ್ತು ಶಿಕಾರಾಗಳ ಸುಂದರ ನೋಟ ಹೃದಯವನ್ನು ಶಾಂತಗೊಳಿಸುತ್ತವೆ. ಚೀನಾರ್ ಮರಗಳ ಕೆಂಪು ಎಲೆಗಳು, ಮೋಡಗಳನ್ನು ಮುಟ್ಟುವ ಪರ್ವತ ಶಿಖರಗಳು ಮತ್ತು ಕಣಿವೆ ಮೇಲೆ ಹರಡುವ ಮಳೆಯ ಪರಿಮಳನನ್ನ ಕೂತಲ್ಲಿಯೇ ಅನುಭವಿಸುವ ದೃಶ್ಯಗಳು ನಮ್ಮನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ.
“गर फिरदौस बर-रूऐ ज़मीं अस्त
हमी अस्तो, हमी अस्तो, हमी अस्त”

ಸಿನಿಮಾ ಮೂಲಕವೇ ಈ ಪ್ರದೇಶವನ್ನು ಬಹಳಷ್ಟು ಜನ ನೋಡಿದ್ದೇವೆ.
ನನ್ನ ಮೊದಲ ಕಾಶ್ಮೀರದ ದೃಶ್ಯ ಶಮ್ಮಿ ಕಪೂರ್ ‘ಯಾಹೂ’ ಎಂದು ಜೋರಾಗಿ ಹಿಮಪಾತದಲ್ಲಿ ಬಿದ್ದು ಹಾಡೋದು ನಂತರ ಕಾಶ್ಮೀರ ಕಿ ಕಲಿ ಚಿತ್ರದಲ್ಲಿ ಶರ್ಮಿಳಾ ಟ್ಯಾಗೋರ್ ನ ಸುಂದರ ಫೇರನ್ ಹಾಗು ಶಿಕಾರದಲ್ಲಿ ಹೂವುಗಳ ಮಧ್ಯೆ ಹಾಡೋದೆ ಕಣ್ಣು ಮುಂದೆ ಬರುತ್ತದೆ.
ಕಾಶ್ಮೀರವನ್ನು ಒಂದು ಕನಸುಗಳ ಲೋಕದ ರೂಪದಲ್ಲಿ ನೋಡುತ್ತಿದ್ದೆ. ಅಲ್ಲಿ ಹೋಗುವ ಆ ಸೌಂದರ್ಯವನ್ನು ಅನುಭವಿಸುವ ನನ್ನ ಕನಸು ಇನ್ನು ಕನಸಾಗಿಯೇ ಉಳಿದಿದೆ.
ಒಂದೆಡೆ ಕಾಶ್ಮೀರ ಒಂದು ಮಾಯಾಲೋಕವಾದರೆ ಮತ್ತೊಂದೆಡೆ ಅದೊಂದು ನಿಗೂಢ ನಗರಿ ಕೂಡ.
ಭಾರತದ ಸ್ವಾತಂತ್ರದ ಸಮಯದಿಂದ ಇಂದಿನ ತನಕ ರಾಜಕೀಯ ಗೊಂದಲ ಮತ್ತು ದ್ವಂದ್ವಗಳು ಮಧ್ಯೆ ಒಂದು ಸ್ಥಿರ ಪರಿಸ್ಥಿತಿ ಈ ಪ್ರದೇಶದಕ್ಕೆ ದೊರಕಿಸಿಕೊಡುವ ಹೋರಾಟ ದಶಕಗಳಿಂದ ನಡೆಯುತ್ತಲೇಯಿದೆ. ಭಗೀರಥನ ಪ್ರಯತ್ನದಿಂದ ಆಕಾಶದ ಆ ಗಂಗೆಯು ಧರೆಗೆ ಬಂದು ಇಲ್ಲಿ ನೆಲಸಿ ಜನರನ್ನು ಹರಿಸಿದ್ದಾಳೆ, ಆದರೆ ಭಗೀರಥನಂತಹ ವ್ಯಕ್ತಿಯೊಬ್ಬ ಬಂದು ಶಾಂತಿಯೆಂಬ ಗಂಗೆಯನ್ನು ಈ ಭೂಮಿಯಲ್ಲಿ ಯಾವಾಗ ಹರಿಸುತ್ತಾರೋ ಎಂಬ ಹಂಬಲ ನನಗೂ ಇದೆ..
ಅದನ್ನು ಮಡಿಯ ಪ್ರದೇಶವನ್ನಾಗಿ ಮಾಡಿದ್ದೇವೆ. ಈ ಸ್ವರ್ಗಲೋಕವನ್ನು ಭಯೋತ್ಪಾದನೆ ಹಾಗು ಆತಂಕದ ತಾಣ ಎನ್ನುವ ದೃಶ್ಯಗಳು ನಂತರ ಬಂದಂತಹ ಜನಪ್ರಿಯ ರೋಜಾ, ದಿಲ್ ಸೆ, ಕಾಶ್ಮೀರ ಫೈಲ್ಸ್ ಚಲನ ಚಿತ್ರಗಳು ಮೂಲಕ ಕಾಶ್ಮೀರವನ್ನು ಮತ್ತಷ್ಟು ಮೂಲೆಗೆ ಒತ್ತುವಂತೆ ಮಾಡಿತು.
ಕೆಲ ವರ್ಷಗಳ ಹಿಂದೆ ಬಂದ ವಿಶೇಷ ಸಿನಿಮಾ ‘ರಾಜಿ’ ಕಾಶ್ಮೀರಿ ಹೆಣ್ಣಿನಲ್ಲಿರುವ ದೇಶಪ್ರೇಮ ಧೃಢತೆ ಹಾಗು ಶೌರ್ಯದ ಪರಿಚಯ ಮಾಡಿಸಿತು.
ಭಾರತ ಸರ್ಕಾರದ ಹಾಗು ಗಡಿಯಾಚೆಗಿನ ದೇಶಗಳ ಮಧ್ಯೆಯಿರುವ ಮತ ಭೇಧಗಳ ಫಲ ಸ್ವರೂಪ ಅಲ್ಲಿಯ ಮೂಲದವರಿಗೆ ನೆಲೆಯಿಲ್ಲದಂತಾಗಿದೆ. ಎಂಬತ್ತರ ದಶಕದ ಹಿಮಾಲಯ್ ದರ್ಶನ ಧಾರವಾಹಿ ಒಂದು ಒಳ್ಳೆಯ ಉದ್ದೇಶದಿಂದ ಮಾಡಿದಂತಹ ಪ್ರಯತ್ನ. ಅಲ್ಲಿಯವರ ಜೀವನ ದಿನನಿತ್ಯದ ವ್ಯವಸಾಯ ಅಷ್ಟೇ ಅಲ್ಲ ಅಲ್ಲಿಯ ಕಲೆ ಹಾಗು ಪ್ರತಿಭೆಯ ಬಗ್ಗೆ ಭಾರತದ ಬೇರೆ ರಾಜ್ಯದ ಜನರ ಪರಿಚಯವಿರುವಂತೆ ಕಾಶ್ಮೀರಿ ನಾಗರೀಕರ ಪರಿಚಯ ಮಾಡುವ ಇತ್ತೀಚಿಗೆ ಬಿಡುಗಡೆಯಾದ ‘ ಸಾಂಗ್ಸ್ ಆಫ್ ಪ್ಯಾರಡೈಸ್’ ಒಂದು ಸರಳ ಸ್ವಚ್ಛ ಸುಂದರ ಜೀವನ ಚರಿತ್ರೆ ಆಧಾರಿತ ಚಲನ ಚಿತ್ರ. ನಾನು ಸಿನಿಮಾ ವಿಮರ್ಶಕಳಲ್ಲ. ಸಿನಿಮಾದ ತಾಂತ್ರಿಕ ಸೂಕ್ಷ್ಮತೆಗಳ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಒಂದು ಸಿನಿಮಾ ನೋಡಿದರೆ ಅದು ಬಹುಕಾಲ ನಿಮ್ಮ ಮನಸಿನ್ನಲ್ಲಿ ಉಳಿದರೆ ಆ ಸಿನಿಮಾದಲ್ಲಿ ಏನೋ ವಿಶೇಷತೆ ಇರಬೇಕು ಎಂಬ ಭಾವನೆ ನನ್ನದು. ಒಂದು ಸಿನಿಮಾ ನೋಡಲು ಯೋಗ್ಯ ಅನ್ನಿಸಿಕೊಳ್ಳಲು ಮುಖ್ಯ ಅಂಶವೇನೆಂದರೆ ಕಥೆ ಹಾಗು ಸಂಭಾಷಣೆ. ಇವೆರಡರ ಹಿಡಿತವಿರಬೇಕು. ಮಾತಿಗಳು ಮನಸ್ಸು ಮುಟ್ಟುವಂತಿರವಬೇಕು.ಈ ಸಿನಿಮಾದಲ್ಲಿ ಕೆಲ ಸಂಭಾಷಣೆ ನನಗೆ ಹಾಗೆನಿಸಿದವು.

ಪದ್ಮಶ್ರೀ ರಾಜ್ ಬೇಗಮ್ ಹೆಸರು ನಾನು ಅದಕ್ಕೆ ಮುಂಚೆ ಕೇಳಿರಲಿಲ್ಲ. ‘ಗಾನ ಕೋಗಿಲೆ ‘, ‘ಮಾಧುರ್ಯದ ಅರಸಿ’ ಹೀಗೆ ಹತ್ತು ಹಲವು ಬಿರುದಗಳು ಅಷ್ಟೇ ಅಲ್ಲ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತೆ ಕೂಡ . ರಾಜ್ ಬೇಗಮ್ ನ ಜೀವನ ಕಥೆ ಒಂದು ಆದರ್ಶ. ಪರಕೀಯರ ದಾಳಿ ಸದಾ ಭಯೋತ್ಪಾದನೆಯಲ್ಲಿ ಮುಳುಗಿದ ವಾತಾವರಣದಲ್ಲಿ ವ್ಯಕ್ತಿ, ವ್ಯಕ್ತಿತ್ವ, ಕಲೆ, ಪ್ರತಿಭೆ ಇವೆಲ್ಲವನ್ನು ಸಾಧಿಸುವುದು ಬಿಡಿ, ಊಹಿಸಿಕೊಳ್ಳುವುದು ಕೂಡ ಒಂದು ಕನಸೇ !
ಅಲ್ಲಿ ಪುರುಷರ ಸಾಮ್ರಾಜ್ಯ ! ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಸುಡು ಬೆಂಕಿಯಲ್ಲಿ ಒಂದು ಸುಂದರ ಬಳ್ಳಿಯಾಗಿ ನಾಜೂಕಾದ ಕುಸುಮಗಳ ಹೂವಿನ ರೀತಿಯಲ್ಲಿ ಹಬ್ಬಿ ಸಂಗೀತದಂತಹ ತಾಂತ್ರಿಕ ಕಲೆಯ ಸೂಕ್ಷ್ಮಗಳನ್ನು ತಿಳಿದು ಅದನ್ನು ಕಲಿತು ರಸ ರಾಗಲಹರಿಯ ಸುಗಂಧವನ್ನು ಪಸರಿಸುತ್ತಾ ಅದನ್ನೇ ವೃತ್ತಿ ಮಾಡುವುದಲ್ಲದೆ, ತಾನಿರುವ ದೇಶದ ಪರಿಸ್ಥಿಯಲ್ಲಿ ಹೋರಾಡುವುದಕ್ಕೆ ಮತ್ತೊಂದು ಮಟ್ಟದ ಧೈರ್ಯ ಹಾಗು ಮನಸ್ಥಿತಿ ಹೊಂದಿದ ದಿಟ್ಟ ಮಹಿಳೆ.

ಸಿನೆಮಾಗಳಲ್ಲಿಯೇ ಪುನಃ ಪುನಃ ಉಪಯೋಗಿಸುವ “when you want something, all the universe conspires in helping you to achieve it.”
ಈ ನುಡಿಯು ಈ ಕಥೆಯಲ್ಲಿ ನೈಜ ರೂಪ ತಾಳಿದೆ.
ಒಂದು ಬಡ ಕುಟುಂಬದಿಂದ ಬಂದ ಸಾಧಾರಣ ಮಹಿಳೆ ಒಬ್ಬ ಸಂಗೀತಗಾರನ ಮನೆಕೆಲಸದವಳಾಗಿ ದುಡಿಯುತ್ತಿದ್ದಾಗ , ಆ ಸಂಗೀತಕಾರನು ಅವರ ಪ್ರತಿಭೆಯನ್ನು ಅಕಸ್ಮಾತಾಗಿ ಗುರುತಿಸಿ ಅವಳಿಗೆ ತನ್ನ ಜ್ಞಾನವನ್ನು ಧಾರೆಯೆರೆಯುವುದಲ್ಲದೆ ಅವಳಿಗೆ ಅವಕಾಶಗಳನ್ನು ಒದಗಿಸಿ ಕೊಟ್ಟು ಒಂದು ಅದ್ಭುತ ಕಲಾಕಾರಳನ್ನಾಗಿ ಮಾಡುವುದರಲ್ಲಿ ಬಹಳ ಶ್ರಮಿಸುತ್ತಾನೆ.
ಇದಕ್ಕೆ ಪೂರಕವಾಗಿ ಸುತ್ತಲಿನ ಜನಗಳಿಂದ ಅವಳಿಗೆ ಸಿಕ್ಕ ಪ್ರೋತ್ಸಾಹ, ಅವಳ ತಂದೆಯ ಸಹಕಾರ ಈ ದಿಕ್ಕಿನಲ್ಲಿ ಅವಳಿಗೆ ಮೊದಲ ಹೆಜ್ಜೆ ಇಡಲು ಧೈರ್ಯ ತಂದಿತು. ನಂತರ ಬಂದ ಪುರುಷರು ಅಭಿಮಾನಿ ಹಾಗು ಪ್ರೇಮಿ ನಂತರ ಪತಿ ಹಾಗೆ ಅವಳು ಕಾಶ್ಮೀರ ರೇಡಿಯೋಗೆ ಕೆಲಸ ಮಾಡುವ ಅಲ್ಲಿನ ಸಹೋದ್ಯೋಗಿಗಳು ತುಂಬಿದ ಉತ್ಸಾಹ, ಹುಮ್ಮಸ್ಸು ಅವಳಿಗೆ ಆಕಾಶದೆತ್ತರ ಬೆಳೆಯಲು ಸಹಕಾರಿಯಾಯಿತು.
ಅಷ್ಟೇ ಅಲ್ಲ ತನಗೆ ಅಥವಾ ಅವಳ ಸುತ್ತಮುತ್ತಲಿನ ಜನರಿಗೆ ಆಗುವ ಅನ್ಯಾಯವನ್ನು ವಿರೋಧಿಸಿ ನ್ಯಾಯ ದೊರಕಿಸುವಲ್ಲಿ ಅವರ ಸ್ವಚ್ಛಂದ ಭಾವನೆ ಶ್ಲಾಘನೀಯ.
ಅವಳ ತಾಯಿಯು ಸಾಮಾಜಿಕ ಕಟ್ಟುಪಾಡಿನ ದಿಗ್ಬಂಧನದಲ್ಲಿ ಸಿಲುಕಿ ಮಗಳ ಪ್ರತಿಭೆ ಕಂಡರೂ ಕಾಣದಂತೆ ಅವಳನ್ನು ಕುಗ್ಗಿಸುವ ನಡುವಳಿಕೆ ಹಾಗು ಕಿರಿದಾದ ಚಿಂತನೆ ರಾಜ್ ಬೇಗಮ್ ಪ್ರತಿಭೆಯನ್ನು ತಡೆಯಲಾಗಲಿಲ್ಲ.
ಅಕ್ಕಪಕ್ಕದ ಮನೆಯವರ ಅವಹೇಳನೆ ಹಾಗು ಒಂದು ಹೆಣ್ಣು ಪ್ರಗತಿಶೀಲಳಾಗುವುದನ್ನು ನೋಡಲು ಸಹಿಸದ ಜನ ಇವಲ್ಲೆವನ್ನು ಮೆಟ್ಟಿ ನಿಂತ ಒಂದು ಸುಂದರ ಜೀವಿಯ ಕಥೆಯೇ ‘ಸಾಂಗ್ಸ್ ಒಫ್ ಪ್ಯಾರಡೈಸ್ ‘
ಅಗಾಧ ಪ್ರತಿಭೆಯುಳ್ಳ ಪ್ರದೇಶವಾಗಿರುವ ಕಾಶ್ಮೀರ, ಕಲಾವಿದರಿಗೆ ಪ್ರೋತ್ಸಾಹ ಹಾಗು ಅವಕಾಶಗಳನ್ನು ಕೊಡುವುದರಲ್ಲಿ ಎಷ್ಟು ಸಾಮರ್ಥ್ಯ ಹೊಂದಿದೆ ಅನ್ನುವುದು ಈ ಸಿನಿಮಾದ ಮೂಲಕ ತಿಳೀತು.

ಸಿನಿಮಾದ ತಾಂತ್ರಿಕತೆಯ ಬಗ್ಗೆ ಹೇಳಹೊರಟರೆ ಎಲ್ಲರ ಅಭಿನಯ ಅದ್ಭುತವಾಗಿದೆ. ಹಿರಿಯ ರಾಜ್ ಬೇಗಮ್ ಪಾತ್ರದಲ್ಲಿ ನುರಿತ ಅಭಿನೇತ್ರಿ ಸೋನಿ ರಾಜ್ದಾನ್ ಬಹಳ ಸುಂದರವಾಗಿ ಅಭಿನಯಿಸಿದ್ದಾರೆ. ಇಳಿವಯಸ್ಸಿನ ರಾಜ್ ಬೇಗಮ್ ಆಗಿ ಸಬಾ ಆಜಾದ್ ತಮ್ಮ ಪಾತ್ರವನ್ನು ಇನ್ನು ಸ್ವಲ್ಪ ಬಿಗಿಯಾಗಿ ನಿಭಾಯಿಸಬಹುದಾಗಿತ್ತು. ಕೆಲೆವೆಡೆ ಅವಳ ಭಾವನೆಯನ್ನು ವ್ಯಕ್ಪಡಿಸುವ ರೀತಿ ಇನ್ನೂ ಪ್ರಭಾವಕಾರಿಯಾಗಬಹುದಿತ್ತು. ರಾಜ್ ಬೇಗಮ್ ಸಾಧನೆಯ ಎತ್ತರಕ್ಕೆ ಬೆಳದ ಮೇಲು ತನ್ನ ಗುರುವಿನ ಮನೆಯ ಕೆಲಸ ಮಾಡುತ್ತಿದ್ದಾಗ, ಆ ಗುರುವು ನೀನು ಇನ್ನೂ ಹೀಗೆಲ್ಲ ಕೆಲಸ ಮಾಡಬಾರದು. ಒಬ್ಬ ಗೌರವಾನ್ವಿತ ವ್ಯಕ್ತಿಯಾಗಿದ್ದೀಯ ಅಂದಾಗ ಅವಳು ಯಾವುದೇ ಕೆಲಸ ದೊಡ್ಡದು ಚಿಕ್ಕದು ಇರುವುದಿಲ್ಲ ನಾನು ಖುಷಿಯಿಂದ ಈ ಕೆಲಸ ಮಾಡುತ್ತೇನೆ ಎಂದಾಗ ಆ ಗುರುವಿನ ಕಣ್ಣಲ್ಲಿ ಹೆಮ್ಮಯ ಆ ಹೊಳಪು ತಾನು ತರಬೇತಿ ನೀಡಿದ ಶಿಷ್ಯೆ ಎಂಬ ಖುಷಿ ನೋಡುವವರಿಗೆ ಅಂತಹ ಘೋರ ಭೀತಿಯ ಪ್ರದೇಶದ ಸೂಕ್ಷ್ಮ ಭಾವನೆಯ ಮನುಷ್ಯರನ್ನು ಪರಿಚಯಿಸುತ್ತದೆ.
ಅವರ ತಾಯಿ, ತಂದೆ, ಗುರು, ಪತಿ ಇವರೆಲ್ಲರು ಕೂಡ ಅನುಭವಿ ನಟರಾದ ಕಾರಣ ಎಲ್ಲವು ನೈಜವಾಗಿ ಮೂಡಿಬಂದಿದೆ. ಕಾಶ್ಮೀರಿನಂತೆಯೇ ಅಲ್ಲಿಯ ಸಂಗೀತ ವಿಭಿನ್ನ ಹಾಗು ವಿಶಾಲ. ಮಾಧುರ್ಯ ಹಾಗು ಸೌಂದರ್ಯದಿಂದ ಅಲಂಕೃತವಾದ ಒಂದು ಸರಳ ಸ್ವಚ್ಛ ಯಾವುದೇ ಕಲ್ಮಶವಿಲ್ಲದ ಪವಿತ್ರ ದೇವನಾದ ಅನಿಸುತ್ತದೆ.
ಕಾಶ್ಮೀರಿ ಭಾಷೆಯ ಸೊಗಡೇ ಬೇರೆ! ಹಿಂದಿ ಉರ್ದು ಕಿಂತಬೇರೆಯಾಗಿದ್ದು ಈ ಚಲಚಿತ್ರದಲ್ಲಿ ಸಲೀಲದಂತೆ ಹರಿದಿದೆ.
ಯಾವುದೇ ದೃಶ್ಯವು ಅತೀಯನಸದೆ ಯಾವುದೊಂದು ಭಾವನೆಯನ್ನು ಅತಿರೇಕಕ್ಕೆ ಕರೆದೊಯ್ಯದೆ ಅವಾಚ್ಯ ಅಶ್ಲೀಲತೆಯ ಸುಳಿವಿಲ್ಲದ ಒಂದು ಸರಳ ಸಿನಿಮಾ. ಕಾಶ್ಮೀರವನ್ನು ವಿಭಿನ್ನ ದೃಷ್ಟಿಯಲ್ಲಿ ತೋರಿಸಿದ ಕೆಲವೇ ಸಿನೆಮಾಗಳಲ್ಲಿ ಇದು ಒಂದು.
ಒಮ್ಮೆ ನೋಡಬಹುದು.

Pic courtesy: Internet