ತೆರೆಮರೆಯ ಪ್ರತಿಭೆಗಳು (Hidden Figures)

(ಅಮೇರಿಕಾದ ಉನ್ನತ ಸಂಸ್ಥೆ ನ್ಯಾಸದಲ್ಲಿ, ೬೦ನೇ ದಶಕದ ಸಮಯದಲ್ಲಿ,  ವರ್ಣಭೇದ ಮತ್ತು ಲಿಂಗಭೇದ ಪ್ರಚಲಿತವಾಗಿದ್ದು ಅದರಿಂದ ಕಪ್ಪು ಜನರ ಸಮುದಾಯದ ಮೇಲೆ ಆದ ಮಾನಸಿಕ ಆಘಾತಗಳು ಮತ್ತು ಇನ್ನಿತರ ಪರಿಣಾಮಗಳನ್ನು ಕುರಿತ Hidden Figures ಎಂಬ ಚಿತ್ರವನ್ನು ಉಮಾ ಅವರು ತೀಕ್ಷ್ಣ ವಾಗಿ ವಿಮರ್ಶಿಸಿದ್ದಾರೆ.  ಹಾಗೆ ದೇಸಾಯಿಯವರು ತಮ್ಮ ಅನಿಸಿಕೆಗಳನ್ನು ಸೇರ್ಪಡಿಸಿದ್ದಾರೆ. ಈ ಬರಹದ  ಕೊನೆಯಲ್ಲಿ ಚಿತ್ರದ ಒಂದು ತುಣುಕನ್ನು ಒದಗಿಸಲಾಗಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ವರ್ಣಭೇದವನ್ನು ತಡೆಗಟ್ಟಲು, ಸಮತಾ ಭಾವನೆಗಳನ್ನು ಪ್ರಚೋದಿಸಲು ಹಲವಾರು ಕಾನೂನು ತಿದ್ದುಪಡಿಗಳಿದ್ದರೂ ಉಮಾ ಹೇಳಿರುವಂತೆ ಜನರಲ್ಲಿರುವ ಪೂರ್ವಗ್ರಹ ಅಭಿಪ್ರಾಯಗಳು, ಭಾವನೆಗಳು ಕಳೆಯುವವರೆಗೂ ಈ ವರ್ಣಭೇದವೆಂಬ ಪಿಡುಗನ್ನು ತೊಡೆದು ಹಾಕಲು ಸಾಧ್ಯವಿಲ್ಲ. ಅಮೇರಿಕದಂತಹ ಪ್ರಬಲವಾದ ರಾಷ್ಟ್ರದಲ್ಲಿ ಒಬ್ಬ ಕರಿಯ ಅಧ್ಯಕ್ಷ ೮ ವರ್ಷಗಳನ್ನು  ನಿಭಾಯಿಸಿ ಜನಪ್ರಿಯ ನಾಯಕನಾಗಿ ನಿವೃತ್ತಿ ಗೊಂಡಿರುವುದು ಹಾಗೆ ಪ್ರತಿಷ್ಠಿತ ಗಣಿತ ತಜ್ಞೆ ಕ್ಯಾಥರಿನ್ ಗೋಬಲ್ (ಈ ಚಿತ್ರದ ಕೇಂದ್ರ ಬಿಂದು) ಅವರ ಹೆಸರಲ್ಲಿ ಒಂದು ಸಂಶೋಧನಾ ಸಂಸ್ಥೆಯನ್ನು ವರ್ಜಿನಿಯಾದಲ್ಲಿ ತೆರೆದಿರುವುದು ಆಶಾದಾಯಕವಾಗಿದೆ.  ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ವರ್ಣಭೇದವನ್ನು ಬಂಡವಾಳವಾಗಿಸಿಕೊಳ್ಳುವ ಬಲಪಂಥೀಯ ಶಕ್ತಿಗಳು ಬೇರೆ ಬೇರೆ ದೇಶಗಳಲ್ಲಿ ಮತ್ತೆ ತಲೆ ಎತ್ತುತ್ತಿರುವುದು ಆತಂಕದ ವಿಚಾರ.

ಅಮೇರಿಕ ಹಾಗು ಇತರ ದೇಶಗಳಲ್ಲಿ ಇಂದಿಗೂ ಅಮಾಯಕ ಕರಿಯರ ಮೇಲೆ ಇಲ್ಲದ ಆರೋಪ ಹೊರಿಸಿ ಅವರನ್ನು ಬಂಧಿಸುವ ಯತ್ನದಲ್ಲಿ ಅವಶ್ಯಕತೆ ಇರುವುದಕ್ಕಿಂತ ಹೆಚ್ಚಿನ ಬಲಪ್ರಯೋಗ ಮಾಡಿ ಪೋಲೀಸರು ಹಲವಾರು ಸಾವು ನೋವುಗಳನ್ನು ಉಂಟುಮಾಡಿದ್ದಾರೆ. ಇಂತಹ ಸೂಕ್ಷ್ಮವಾದ ಸನ್ನಿವೇಶಗಳಲ್ಲಿ ಸಮುದಾಯದ ಜನ ತಮ್ಮ ತಾಳ್ಮೆಗಳನ್ನು ಕಳೆದುಕೊಂಡು ಗಲಭೆಗೆ ಇಳಿದಿರುವ ವಾರ್ತೆಗಳನ್ನು ಆಗ್ಗಾಗೆ ಕೇಳಬಹುದು. ಕ್ಯಾಥರಿನ್ ಬವಣೆಗಳು ಕಳೆದು ಸುಮಾರು ೬೦ ವರ್ಷಗಳು ಸಮೀಪಿಸುತ್ತಿದ್ದರೂ ವರ್ಣಬೇಧ ಇನ್ನು ವ್ಯಾಪಕವಾಗಿದೆ. ಹಾಗೆ ಲಿಂಗ ಭೇದದಿಂದ  ಸ್ತ್ರೀಯರ ಸಮಾನತೆ ಮತ್ತು ಸ್ವಾತಂತ್ರಕ್ಕೆ ಒದಗಿರುವ ಧಕ್ಕೆಯನ್ನು ವರ್ಣಭೇದದಷ್ಟಿಲ್ಲದಿದ್ದರೂ ಸಮಾಜದಲ್ಲಿ ಸುಲಭವಾಗಿ ಗುರುತಿಸಬಹುದಾಗಿದೆ.  Hidden Figures ರೀತಿಯ ಚಿತ್ರಗಳು ನಮ್ಮ ಸಮತಾ ಭಾವನೆಗಳನ್ನು ಜಾಗೃತಗೊಳಿಸಿ ಅದರ ಬಗ್ಗೆ ಚಿಂತಿಸುವುದಕ್ಕೆ ಮತ್ತು ಚರ್ಚೆ ಮಾಡುವುದಕ್ಕೆ ಒಂದು ಅವಕಾಶ ಕಲ್ಪಿಸುವುದರಲ್ಲಿ ಸಂದೇಹವಿಲ್ಲ.

ಯು.ಕೆ. ಯಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಖಂಡಿತ ವೀಕ್ಷಿಸಿ. ಈ ಚಿತ್ರದ ಒಂದು ಸಂಕ್ಷಿಪ್ತ  ಪರಿಚಯವನ್ನು ಉಮಾ ಅವರು ಈ ಬರಹದ ಕೊನೆ ಎರಡು ಸಾಲಿನಲ್ಲಿ ಮಾಡಿದ್ದಾರೆ ಅದನ್ನು ಇಲ್ಲಿ ಪ್ರಸ್ತಾಪ ಮಾಡುವುದು ಉಚಿತ:

 “ತೊಟ್ಟಿಲು ತೂಗುವ ಕೈ, ಅಂತರಿಕ್ಷಯಾನವನ್ನೂ  ನಿರ್ವಹಿಸಬಲ್ಲುದು”!

ಬುದ್ದಿಮತ್ತೆ, ಧೈರ್ಯ, ಸಾಹಸದ ಗುಣಗಳು, ಯಾವ ಜನಾಂಗದ, ದೇಶದ, ವರ್ಣದ, ಲಿಂಗದ ಸೊತ್ತೂ ಅಲ್ಲಾ! ಈ ವಿಷಯವನ್ನು ಅರ್ಥ ಮಾಡಿಕೊಂಡರೆ ಮಾನವ ಸಮಾಜದ ಏಳಿಗೆಗೆ ಸಹಕಾರಿ!

ಸಂ)

***

ತೆರೆಮರೆಯ ಪ್ರತಿಭೆಗಳು (Hidden Figures) – ಉಮಾ ವೆಂಕಟೇಶ್ ಅವರ ಚಿತ್ರ ವಿಮರ್ಶೆ

hf1-poster

ಅಮೇರಿಕಯಂತಹ ಶ್ರೀಮಂತ ದೇಶದ ಚರಿತ್ರೆಯ ಪುಸ್ತಕದಲ್ಲಿ ಅನೇಕ ಕರಾಳ ಪುಟಗಳಿವೆ. ಗುಲಾಮಿ ಪದ್ಧತಿಯ ಆಚರಣೆಯನ್ನು ಮಾನವ ಇತಿಹಾಸದಲ್ಲೇ ಅತ್ಯಂತ ಅಮಾನುಷವಾದ ಘಟನೆಯೆಂದರೆ ತಪ್ಪೇನಿಲ್ಲ! ಇಂದು ನಾ ನೋಡಿದ Hidden figures ಎನ್ನುವ ಹಾಲಿವುಡ್ ಚಲನಚಿತ್ರದಲ್ಲಿ, ಆಫ಼್ರಿಕನ್ ಮೂಲದ ಅಮೆರಿಕನ್ ಜನಾಂಗದವರು, ೬೦ರ ದಶಕದಲ್ಲೂ ಎದುರಿಸುತ್ತಿದ್ದ ಜನಾಂಗ-ಬೇಧ ನೀತಿಯನ್ನು ಅತ್ಯಂತ ಸೂಕ್ಷ್ಮ ಹಾಗೂ ಪರಿಣಾಮಕಾರಿಯಾಗಿ ಚಿತ್ರೀಕರಿಸಲಾಗಿದೆ. ಈ ಚಲನಚಿತ್ರದ ಕಥೆಯು 1961ರಲ್ಲಿ ನಡೆದ ನಿಜವಾದ ಘಟನೆಗಳನ್ನು ಆಧರಿಸಿದೆ. 1961ರಲ್ಲಿ ಮಾನವ ಬಾಹ್ಯಾಕಾಶವನ್ನು ಪ್ರವೇಶಿಸಿ ತನ್ನ ಬುದ್ದಿಮತ್ತೆಯನ್ನು ಮೆರೆದ ದಶಕ. ಪ್ರಪಂಚದಲ್ಲಿ ವಿಜ್ಞಾನವು ತನ್ನ ಹೆಜ್ಜೆಯನ್ನು ಭದ್ರವಾಗಿ ತಳವೂರಿ, ಮಾನವನ ಜೀವನ ಶೈಲಿ ಮತ್ತು ಗುಣಮಟ್ಟವನ್ನು ಉತ್ತಮಪಡಿಸಲು ಪ್ರಾರಂಭವಾಗಿದ್ದ ದಿನಗಳು.

ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, NASA, ತನ್ನ ಪ್ರತಿಸ್ಪರ್ದಿ ರಶ್ಯಾ ದೇಶವು ತನಗಿಂತ ಮೊದಲೇ ಯೂರಿ ಗಗಾರಿನ್ ಎನ್ನುವ ಬಾಹ್ಯಾಕಾಶಯಾತ್ರಿಯನ್ನು ಯಶಸ್ವಿಯಾಗಿ ಉಪಗ್ರಹದಲ್ಲಿ ಉಡಾಯಿಸಿದ್ದರಿಂದ ಚಿಂತೆಗೀಡಾಗಿತ್ತು. ಅಂದಿನ ಅಮೆರಿಕೆಯ ಅಧ್ಯಕ್ಷನಾಗಿದ್ದ ಜಾನ್. ಎಫ಼್. ಕೆನಡಿಗೆ, ತನ್ನ ದೇಶದ ಬಾಹ್ಯಾಕಾಶ ವಿಜ್ಞಾನಿಗಳು ಅಂತಹುದೇ ಸಾಧನೆಯನ್ನು ಬೇಗನೆ ನಡೆಸಬೇಕು ಎನ್ನುವ ಹಂಬಲ ಮತ್ತು ಆಕಾಂಕ್ಷೆಗಳಿದ್ದವು. ಅದರ ಜೊತೆಗೆ, ಅಮೆರಿಕೆಯಲ್ಲಿ ವರ್ಣೀಯರು ತಮ್ಮ ನಾಗರೀಕ ಹಕ್ಕುಗಳಿಗೆ, ಜನಾಂಗಬೇಧ ನೀತಿಯ ವಿರುದ್ಧ ಸಮಾನತೆಗೆ ಹೊಡೆದಾಡುತ್ತಿದ್ದರಿಂದ, ರಾಜಕೀಯವಾಗಿಯೂ ಅತ್ಯಂತ ಕಷ್ಟಕರವಾದ ಕಾಲವಾಗಿತ್ತು!

ಈ ಚಲನಚಿತ್ರದ ಪ್ರಾರಂಭದಲ್ಲಿ, ಮೂವರು ವರ್ಣೀಯ ಮಹಿಳೆಯರು ಒಟ್ಟಿಗೆ ಕಾರಿನಲ್ಲಿ ವರ್ಜೀನಿಯಾ ರಾಜ್ಯದ ರಸ್ತೆಯೊಂದರಲ್ಲಿ ಹೋಗುವಾಗ, ಅವರ ಕಾರು ಕೆಟ್ಟು ನಿಂತಿರುತ್ತಾರೆ. ಆಗ ಅಲ್ಲೇ ಹೋಗುತ್ತಿದ್ದ ಪೋಲೀಸ್ ವಾಹನವೊಂದು ಅವರ ಬಳಿ ಬಂದು ನಿಂತಾಗ, ತಮ್ಮ ಸಮಸ್ಯೆ ಉಲ್ಬಣಿಸುತ್ತದೆ ಎಂದು ಅವರು ಯೋಚಿಸುತ್ತಿರುವಾಗಲೇ, ಅವರ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡ ಪೋಲೀಸ್ ಅಧಿಕಾರಿ, ಅವರು NASA ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ ಗಣಿತಶಾಸ್ತ್ರಜ್ಞರೆಂದು ತಿಳಿದಕೂಡಲೆ, ಗೌರವದಿಂದ ಅವರನ್ನು ತಾನೇ ಮುಂದಾಗಿ ನಾಸಾ ಸಂಸ್ಥೆಯವರೆಗೂ ಕರೆದೊಯ್ಯುತ್ತಾನೆ. ಈ ಮೂವರು ಮಹಿಳೆಯರಲ್ಲಿ, ಕ್ಯಾಥರೀನ್ ಗೋಬಲ್ ಒಬ್ಬ ಗಣಿತಜ್ಞೆ, ಮೇರಿ ಜಾಕ್ಸನ್ ಒಬ್ಬ ಮಹತ್ವಾಕಾಂಕ್ಷಿ ಇಂಜಿನೀಯರ್ ಹಾಗೂ ಡಾರತಿ ವಾನಳು ಕಂಪ್ಯೂಟರ್ ರೀತಿಯಲ್ಲಿ ಲೆಕ್ಕಾಚಾರ ಮಾಡುತ್ತಿದ್ದ ಆಫ಼್ರಿಕನ್-ಅಮೆರಿಕನ್ ಮಹಿಳೆಯರ ತಂಡದ ಒಬ್ಬಳು ಮೇಲ್ವಿಚಾರಕಿಯಾಗಿ ಕೆಲಸ ನಿಭಾಯಿಸುತ್ತಿರುತ್ತಾರೆ. ಇವರ ಸುತ್ತಮುತ್ತ ಹೆಣೆದ ಈ ಕಥೆ, ಅಂದಿನ ಅಮೆರಿಕನ್ ಸಮಾಜದಲ್ಲಿ, ಅಫ಼್ರಿಕನ್ ಅಮೆರಿಕನ್ ಜನಾಂಗದವರು ಅನುಭವಿಸುತ್ತಿದ್ದ ಜನಾಂಗಬೇಧ ನೀತಿಯ ಅನ್ಯಾಯಗಳನ್ನು ಪ್ರತಿಬಿಂಬಿಸುತ್ತದೆ.

ಸೋವಿಯಟ್ ಒಕ್ಕೂಟವು ತನ್ನ ಬಾಹ್ಯಾಕಾಶ ಉಪಗ್ರಹ Sputnik 1ನ್ನು ಯಶಸ್ವಿಯಾಗಿ ಉಡಾಯಿಸಿದ ಹಿನ್ನೆಲೆಯಲ್ಲಿ, ನಾಸಾ ಸಂಸ್ಥೆಯ Space Task Force ವಿಭಾಗದ ಮುಖ್ಯಸ್ಥನಾಗಿದ್ದ ಆಲ್ ಹ್ಯಾರಿಸನಿಗೆ, ಅಮೆರಿಕೆಯ ಸರ್ಕಾರವು ಆದಷ್ಟು ಬೇಗ ತನ್ನ ಗಗನಯಾತ್ರಿಯೊಬ್ಬನನ್ನು ಬಾಹ್ಯಾಕಾಶಕ್ಕೆ ಹಾರಿಸಬೇಕೆಂದು ಆದೇಶ ನೀಡಿರುತ್ತದೆ. ಈ ಯೋಜನೆಯಲ್ಲಿ ಅಗತ್ಯವಾಗಿದ್ದ ಗಣಿತೀಯ ಗುಣಾಕಾರಗಳನ್ನು ಕಂಪ್ಯೂಟರ್ ಮಾದರಿಯಲ್ಲಿ ನಡೆಸುವ, ಬಿಳಿ ಪುರುಷ-ಪ್ರಧಾನ ಇಂಜಿನೀಯರುಗಳ ತಂಡದಲ್ಲಿ ಕಾರ್ಯನಿರ್ವಹಿಸಲು ಕ್ಯಾಥರೀನ್ ಗೋಬಲಳನ್ನು ಆಯ್ಕೆಮಾಡುತ್ತಾರೆ. ಕೇವಲ ತನ್ನ ಪ್ರತಿಭೆಯಿಂದ ಆ ಸ್ಥಳವನ್ನು ತಲುಪಿದ್ದ ಕ್ಯಾಥರೀನ್, ಅಲ್ಲಿದ್ದ ವರ್ಣಿಯಬೇಧವನ್ನು ಅನುಭವಿಸುವ ಹಲವಾರು ದೃಶ್ಯಗಳು, ನೋಡುಗರ ಕಣ್ಣುಗಳನ್ನು ತೇವಗೊಳಿಸುತ್ತವೆ. ಕೇವಲ ಬಿಳಿಯರಿದ್ದ ಆ ಕಚೇರಿಯಲ್ಲಿ, ಆಕೆಗೆ ಶೌಚಾಲಯದ ವ್ಯವಸ್ಥೆಯಿರುವುದಿಲ್ಲ. ವರ್ಣೀಯರಿಗೆಂದೇ ಇದ್ದ ಶೌಚಾಲಯವನ್ನು ಉಪಯೋಗಿಸಲು ಆಕೆ ಸುಮಾರು ಅರ್ಧ ಮೈಲಿ ದೂರ ಓಡುವ ದೃಶ್ಯಗಳು ಮನಸ್ಸಿಗೆ ವಿಪರೀತ ನೋವನ್ನುಂಟುಮಾಡುತ್ತವೆ. ಒಮ್ಮೆಯಂತೂ ಸುರಿಯುವ ಮಳೆಯಲ್ಲಿ, ಕೈಯಲ್ಲಿ ತಾನು ಮಾಡುತ್ತಿದ್ದ ಲೆಕ್ಕಗಳ ಪುಸ್ತಕವನ್ನು ಹಿಡಿದು, ಶೌಚಾಲಯಕ್ಕೆ ಓಡುವಾಗ ಆಕೆ ನೆಂದು ತೊಪ್ಪೆಯಾಗುತ್ತಾಳೆ. ವಾಪಸ್ ಬಂದಾಗ, ಆಕೆಯ ಮೇಲಧಿಕಾರಿ ಆಲ್ ಹ್ಯಾರಿಸನಿಗೆ ಅಲ್ಲಿಯವರೆಗೂ ವರ್ಣಿಯರಿಗೆ ಆ ಕಟ್ಟಡದಲ್ಲಿ ಶೌಚಾಲಯವಿರಲಿಲ್ಲ ಎನ್ನುವುದು ತಿಳಿಯದೆ, ಆಕೆಯ ಮೇಲೆ ಕೂಗಾಡಿದಾಗ, ಅಸಹಾಯಕ ಕ್ಯಾಥರೀನ್ ತನ್ನ ಪರಿಸ್ಥಿತಿಯನ್ನು ಅಳುತ್ತಾ ವಿವರಿಸುವ ದೃಶ್ಯ ಮನಕಲಕುತ್ತದೆ. ಜೊತೆಗೆ ಅಲ್ಲಿನ ಸಹೋದ್ಯೋಗಿಗಳ ಜೊತೆಗೆ ಆಕೆಗೆ ಕಾಫ಼ಿ-ಚಹಾ ಕುಡಿಯುವ ವ್ಯವಸ್ಥೆಯಿಲ್ಲದೇ, ವರ್ಣಿಯರಿಗೆ ಎಂದು ಚೀಟಿ ಅಂಟಿಸಿರುವ ಚಹಾ ಕೆಟಲಿನಿಂದ ಆಕೆ ಚಹಾ ತಯಾರಿಸಿ ಕುಡಿಯುವ ದೃಶ್ಯವನ್ನು ಬಹಳ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಈ ಪಾತ್ರವನ್ನು ಅಭಿನಯಿಸಿರುವ ನಟಿ, ತಾರಾಜಿ. ಪಿ. ಹೆನ್ಸನ್ ತನ್ನ ಅಭಿನಯದಲ್ಲಿ ಮಿಂಚಿದ್ದಾಳೆ.

ತನ್ನ ಪ್ರತಿಭೆಯಿಂದ ಹ್ಯಾರೀಸನ ಮೆಚ್ಚುಗೆ ಗಳಿಸುವ ಕ್ಯಾಥರೀನ್ ಬಹುಬೇಗನೆ ಒಂದು ಸಂಕೀರ್ಣವಾದ ಗಣಿತೀಯ ಸಮಸ್ಯೆಯನ್ನು ಯಶಸ್ವಿಯಾಗಿ ಬಿಡಿಸಿ, ಸಹೋದ್ಯೋಗಿಗಳ ಮತ್ತು ಮೇಲಧಿಕಾರಿಗಳ ವಿಶ್ವಾಸ ಗಳಿಸುತ್ತಾಳೆ. ಬಾಹ್ಯಾಕಾಶ ನೌಕೆ, ಭೂಮಿಯ ವಾತಾವರಣವನ್ನು ಛೇಧಿಸಿ ಮರಳಲು ಆಸ್ಪದವೀಯುವ ಒಂದು ಅತಿಮುಖ್ಯವಾದ ಹಾಗೂ ಕ್ಲಿಷ್ಟವಾದ ಸಮೀಕರಣವನ್ನು ನಿರೂಪಿಸಿ ಕ್ಯಾಥರೀನ್, ಅಮೆರಿಕೆಯ ಪ್ರಪ್ರಥಮ ಗಗನಯಾತ್ರಿ ಜಾನ್ ಗ್ಲೆನ್ನನ ಮೆಚ್ಚುಗೆ ಮತ್ತು ಗೌರವಗಳನ್ನು ಸಂಪಾದಿಸುತ್ತಾಳೆ.

ಅವಳ ಗೆಳತಿ ಡಾರತಿಯ ಅಧಿಕೃತ ಬಡ್ತಿಯನ್ನು, ಅವಳ ಬಿಳಿಯ ಮೇಲಧಿಕಾರಿ ವಿವಿಯನ್ನಳು ತಡೆಹಿಡಿದಿರುತ್ತಾಳೆ. ಆದರೆ ದೃತಿಗೆಡದ ಡಾರತಿಗೆ, ತನ್ನ ಮತ್ತು ತನ್ನ ಸಹೋದ್ಯೋಗಿಗಳ ಸ್ಥಾನವನ್ನು ತುಂಬಲು IBM ಕಂಪನಿಯ ಕಂಪ್ಯೂಟರ್ IBM 7090 ಯಂತ್ರಗಳು ಸಿದ್ಧವಾಗುತ್ತಿವೆ ಎಂದು ತಿಳಿದು ಬರುತ್ತದೆ. ಜಾಣ್ಮೆಯಿಂದ ಡಾರತಿ, ಆ ಕಂಪ್ಯೂಟರ್ ಯಂತ್ರದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾಗಿದ್ದ FORTRAN ಎಂಬ ತಂತ್ರಾಂಶದ ಪ್ರೋಗ್ರಾಮ್ ಭಾಷೆಯನ್ನು ತಾನೆ ಸ್ವತಃ ಕಲಿಯುವುದಲ್ಲದೇ, ಅದನ್ನು ತನ್ನ ಸಹೋದ್ಯೋಗಿ ಮಹಿಳೆಯರಿಗೂ ಕಲಿಸಿ ಸಿದ್ಧವಾಗುತ್ತಾಳೆ. ಅವಳ ಈ ಕೌಶಲ್ಯವನ್ನು ಕಡೆಗಣಿಸಲು ಸಾಧ್ಯವಾಗದೆ, ನಾಸಾ ಅವಳನ್ನು, ಅವಳ ತಂಡದ ಸದಸ್ಯರೊಡನೆ ಮುಂದಿನ ಯೋಜನೆಯ ಕಾರ್ಯನಿರ್ವಹಣೆಗೆ ನೇಮಿಸುತ್ತಾರೆ.

ವರ್ಜೀನಿಯಾ ರಾಜ್ಯದಲ್ಲಿ ವರ್ಣೀಯ ಮಹಿಳೆಯರಿಗೆ ಇತರ ಶ್ವೇತ ವರ್ಣದ ಸದಸ್ಯರೊಂದಿಗೆ ಶಾಲೆ ಮತ್ತು ಕಾಲೇಜುಗಳಲ್ಲಿ ಬೆರೆತು ಅಧ್ಯಯನ ಮಾಡುವ ಸೌಲಭ್ಯವಿರಲಿಲ್ಲ. ಅವರಲ್ಲಿ ಮೂರನೆಯ ಮಹಿಳೆ ಮೇರಿ ಜ್ಯಾಕ್ಸನ್, ಅಲ್ಲಿನ ಕೋರ್ಟ್ ಒಂದರಲ್ಲಿ, ಜಡ್ಜ್ ಕೂಡ ಯಶಸ್ವಿಯಾಗಿ ವಾದಿಸಿ, ಅಲ್ಲಿನ ವಿಶ್ವವಿದ್ಯಾಲಯದ ಇಂಜಿನೀಯರಿಂಗ್ ಶಾಲೆಯಲ್ಲಿ ಸಂಜೆಯ ತರಗತಿಗೆ ಪ್ರವೇಶ ಗಿಟ್ಟಿಸುವುದಲ್ಲದೇ, ಅಲ್ಲಿ ಡಿಗ್ರಿ ಪಡೆಯುವುದರಲ್ಲೂ ಯಶಸ್ವಿಯಾಗುತ್ತಾಳೆ.

Friendship 7 ಅಂತರಿಕ್ಷನೌಕೆ ಯಾತ್ರೆಯ ಕಕ್ಷದ ನಿರ್ದೇಶಾಂಕಗಳ ಲೆಕ್ಕಾಚಾರಗಳಲ್ಲಿ ಅಸಮಂಜತೆಗಳು ಎದುರಾದಾಗ, ಆ ನೌಕೆಯ ಅಂತರಿಕ್ಷಯಾತ್ರಿ, ಜಾನ್ ಗ್ಲೆನ್, ತಾನು ಕೇವಲ ಕ್ಯಾಥರೀನಳ ಗಣಿತೀಯ ಲೆಕ್ಕಾಚಾರಗಳಲ್ಲಿ ವಿಶ್ವಾಸವಿಡುತ್ತೇನೆ. ಹಾಗಾಗಿ ಅವಳನ್ನು ಈ ಕಾರ್ಯಕ್ಕೆ ನೇಮಿಸಿ ಎಂದು ತಿಳಿಸುತ್ತಾನೆ. ಕೇವಲ ಬಿಳಿಯ ವರ್ಣದ ಪುರುಷರೇ ಪ್ರಧಾನರಾಗಿದ್ದ ಕಂಟ್ರೋಲ್ ಕೋಣೆಗೆ ಹ್ಯಾರಿಸನ್, ಕ್ಯಾಥರೀನಳನ್ನು ಕರೆತರುತ್ತಾನೆ. ಕ್ಯಾಥರೀನ್ ಕಂಟ್ರೋಲ್ ಕೋಣೆಯನ್ನು ಪ್ರವೇಶಿಸಿದೊಡನೆ, ಅಲ್ಲಿನ ಶ್ವೇತವರ್ಣೀಯ ಪುರುಷರು ಆಕೆಯನ್ನು ಪ್ರಾಣಿಸಂಗ್ರಹಾಲಯದ ಮೃಗವನ್ನು ನೋಡುವಂತೆ, ಆಶ್ಚರ್ಯದಿಂದ ನೋಡುವ ಆ ದೃಶ್ಯವನ್ನು ನಿಜಕ್ಕೂ ಪರಿಣಾಮಕಾರಿಯಾಗಿ ಚಿತ್ರೀಕರಿಸಲಾಗಿದೆ. ಅವಳ ನಿಖರವಾದ ಲೆಕ್ಕಾಚಾರಗಳ ಸಹಾಯದಿಂದ, Friendship 7 ಅಂತರಿಕ್ಷನೌಕೆಯ ಕಕ್ಷವು ಯಶಸ್ವಿಯಾಗಿ ಭೂಮಿಗೆ ಮರಳುತ್ತದೆ.

ಅಂತ್ಯದಲ್ಲಿ ನಾಸಾ ಸಂಸ್ಥೆಯು ತನ್ನೆಲ್ಲ ಕಾರ್ಯಗಳಿಗೂ ಕಂಪ್ಯೂಟರ್ ಯಂತ್ರಗಳನ್ನು ಬದಲಾಯಿಸಿದರೂ ಕೂಡಾ, ಡಾರತಿಗೆ ಅದೇ ವಿಭಾಗದಲ್ಲಿ ಉತ್ತಮವಾದ ಸ್ಥಾನ ದೊರಕುತ್ತದೆ. ಮೇರಿಗೆ ಅವಳಿಗೆ ದೊರೆತ ಇಂಜಿನಿಯರಿಂಗ್ ಪದವಿಯ ಫಲವಾಗಿ, ನಾಸಾ ಸಂಸ್ಥೆಯಲ್ಲೇ ಕೆಲಸ ಖಾಯಂ ಆಗುತ್ತದೆ. ಕ್ಯಾಥರೀನ್ ಅಲ್ಲೇ ತನ್ನ ಕೆಲಸವನ್ನು ಮುಂದುವರೆಸುತ್ತಾಳಲ್ಲದೇ, ನಾಸಾ ಸಂಸ್ಥೆಯ ಅಪೊಲೋ ೧೧ ಮತ್ತು ಅಪೊಲೊ ೧೩ ಚಂದ್ರಾಯಣದ ಯೋಜನೆಗಳಲ್ಲಿ, ಅತಿ ಮುಖ್ಯವಾದ ಕಾರ್ಯಗಳನ್ನು ನಿರ್ವಹಿಸುತ್ತಾಳೆ. ಅವಳ ಈ ಕಾರ್ಯವನ್ನು ಮೆಚ್ಚಿ , ೨೦೧೫ರಲ್ಲಿ ಅವಳಿಗೆ ಅಮೆರಿಕ ಸರ್ಕಾರವು, ಅಧ್ಯಕ್ಷೀಯ ಸ್ವಾತಂತ್ರ್ಯ ಪದಕವನ್ನು ನೀಡುತ್ತಾರೆ ಎನ್ನುವಲ್ಲಿಗೆ ಈ ಚಲನಚಿತ್ರವನ್ನು ಮುಕ್ತಾಯಗೊಳಿಸಿದ್ದಾರೆ. ಈಗ ಕ್ಯಾಥರೀನ್ ೯೭ ವರ್ಷಗಳ ವೃದ್ಧೆ. ಈ ಮೂವರು ಮಹಿಳೆಯರ ನಿಜವಾದ ಚಿತ್ರಗಳನ್ನು ಚಲನಚಿತ್ರದ ಕೊನೆಯಲ್ಲಿ ತೋರಿಸಿದ್ದಾರೆ.

ಈ ಕಥೆಯ ಅಂತ್ಯವು ಸುಖಕರವಾಗಿದ್ದರೂ ಕೂಡಾ, ಈ ಮಹಿಳೆಯರು ಆರಂಭದಲ್ಲಿ ಎದುರಿಸುವ ಜನಾಂಗಬೇಧ ನೀತಿಯನ್ನು ಪರಿಣಾಮಕಾರಿಯಾಗಿ ಈ ಚಲನಚಿತ್ರದಲ್ಲಿ ನಿಭಾಯಿಸಿದ್ದಾರೆ. ಇಂದು ಅಮೇರಿಕಾ ದೇಶ ವರ್ಣೀಯ ಅಧ್ಯಕ್ಷರನ್ನು ಕಂಡಿದೆ. ಅಫ಼್ರಿಕನ್ ಅಮೆರಿಕನ್ ಜನಾಂಗದವರು ಉತ್ತುಂಗದ ಸ್ಥಾನಗಳನ್ನೂ ಅಲಂಕರಿಸಿದ್ದಾರೆ. ಆದರೂ ದಕ್ಷಿಣದ ರಾಜ್ಯಗಳಲ್ಲಿ ಅವರ ಮೇಲಿನ ವರ್ಣ-ದ್ವೇಷ, ದಬ್ಬಾಳಿಕೆ ನಡೆಯುತ್ತಲೇ ಇದೆ. ಹಲವು ಹತ್ತು ಸಮಸ್ಯೆಗಳು ಈ ಜನಾಂಗದ ಸದಸ್ಯರನ್ನು ಇನ್ನೂ ಕಾಡುತ್ತಲೇ ಇವೆ. ಮಾನವರ ಮನಗಳಲ್ಲಿ ಆಳವಾಗಿ ಬೇರೂರಿರುವ ಪೂರ್ವಾಗ್ರಹಗಳು ಸಂಪೂರ್ಣವಾಗಿ ಅಳಿಸದ ಹೊರತು, ಈ ಸಮಸ್ಯೆಗಳಿಗೆ ಪರಿಹಾರವಿಲ್ಲ.

ಪ್ರೇಕ್ಷಕರು ಮತ್ತು ವಿಮರ್ಶಕರಿಬ್ಬರಿಂದಲೂ ಶಭಾಸಗಿರಿ ಪಡೆದ ಈ ಚಲನಚಿತ್ರವನ್ನು ನೋಡಿದಾಗ, ಪ್ರೇಕ್ಷಕನ ಮನಸ್ಸಿನಲ್ಲಿ ದುಃಖ, ನೋವು, ನಾಚಿಕೆ, ಹೆಮ್ಮೆ ಹೀಗೆ ಹಲವು ಹತ್ತು ಭಾವನೆಗಳು ಉಕ್ಕಿ, ಅನೇಕಬಾರಿ ಕಣ್ಣೀರು ಒಸರುವುದಂತೂ ಖಂಡಿತಾ. ಬ್ರಿಟಿಷರ ಆಳ್ವಿಕೆಯಲ್ಲಿ ೨೦೦ ವರ್ಷಗಳನ್ನು ನೋಡಿರುವ ಭಾರತೀಯರು, ಈ ಸಮಸ್ಯೆಗೆ ಸ್ಪಂದಿಸಲು ಸಾಧ್ಯ.

ಪ್ರಮುಖ ಪಾತ್ರಗಳಲ್ಲಿರುವ ಆಕ್ಟೇವಿಯಾ ಸ್ಪೆನ್ಸರ್, ತಾರಾಜಿ ಹೆನ್ಸನ್ ಮತ್ತು ಜಾನೆಲ್ ಮೊನೆ ತಮ್ಮ ಪಾತ್ರಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ನಾಸಾ ಸಂಸ್ಥೆಯ ಮೇಲಧಿಕಾರಿ ಆಲ್ ಹ್ಯಾರಿಸನ್ ಪಾತ್ರದಲ್ಲಿ ಅಭಿನಯಿಸಿರುವ ಪ್ರಸಿದ್ಧ ನಟ ಕೆವಿನ್ ಕಾಸ್ಟ್ನರ್, ಮತ್ತು ಇತ್ತೀಚೆಗೆ ಟಿವಿ ಜನಪ್ರಿಯ ಸರಣಿ Big-Bang Theory ಯಲ್ಲಿ ನಟಿಸಿರುವ, ಶೆಲ್ಡನ್ ಪಾತ್ರದ ನಟ ಜಿಮ್ ಪಾರ್ಸನ್ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತಮ ನಟವರ್ಗ, ನಿರ್ದೇಶನ, ಸಂಭಾಷಣೆ ಮತ್ತು ಹಿನ್ನೆಲೆ ಸಂಗೀತವಿರುವ ಈ ಚಲನಚಿತ್ರ ಇತ್ತೀಚೆಗೆ ನಾನು ನೋಡಿದ ಉತ್ತಮ ಚಿತ್ರಗಳಲ್ಲಿ ಒಂದು.

ನಿಜ-ಜೀವನದ ಕಥೆಯನ್ನಾಧರಿಸಿ ನಿರ್ಮಿಸಿರುವ ಈ ಚಲನಚಿತ್ರದಲ್ಲಿ, “Get the girl to check the numbers,” ಎಂದು ನುಡಿಯುವ ಅಂತರಿಕ್ಷಯಾತ್ರಿ ಜಾನ್ ಗ್ಲೆನ್ನನ ಸಂಭಾಷಣೆ, ಮಹಿಳೆಯರ ಮನಗಳಲ್ಲಿ ಹೆಮ್ಮೆಯ ಭಾವನೆ ಮೂಡಿಸುವುದರಲ್ಲಿ ಸಂದೇಹವೇ ಇಲ್ಲ!

katherine_johnson_in_2008ಕ್ಯಾಥರೀನ್ ಗೋಬಲ್ ಜಾನ್ಸನ್

“ತೊಟ್ಟಿಲು ತೂಗುವ ಕೈ, ಅಂತರಿಕ್ಷಯಾನವನ್ನೂ  ನಿರ್ವಹಿಸಬಲ್ಲುದು”!

ಬುದ್ದಿಮತ್ತೆ, ಧೈರ್ಯ, ಸಾಹಸದ ಗುಣಗಳು, ಯಾವ ಜನಾಂಗದ, ದೇಶದ, ವರ್ಣದ, ಲಿಂಗದ ಸೊತ್ತೂ ಅಲ್ಲಾ! ಈ ವಿಷಯವನ್ನು ಅರ್ಥ ಮಾಡಿಕೊಂಡರೆ ಮಾನವ ಸಮಾಜದ ಏಳಿಗೆಗೆ ಸಹಕಾರಿ!

ಉಮಾ ವೆಂಕಟೇಶ್

***

ಸಿನಿಮಾ ನೋಡಿ ಶ್ರೀವತ್ಸ ದೇಸಾಯಿ ಬರೆದದ್ದು:

ಈ ಚಿತ್ರ ಯು ಕೆ ದಲ್ಲಿ ತಡವಾಗಿ ಫೆಬ್ರುವರಿ 17ರಂದು ಬಿಡುಗಡೆಯಾಯಿತು. ನಾನು ಇಂದೇ ನೋಡಿ ಬಂದೆ. ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವೆ.

ಬಾಹ್ಯಾಕಾಶವನ್ನು ಮೊದಲು ಗೆಲ್ಲಲು ರಷ್ಯ-ಅಮೆರಿಕಗಳ ಪೈಪೋಟಿಯನ್ನು ಆರಂಭದಿಂದಲೂ ನೋಡುವ ಅವಕಾಶ ಸಿಕ್ಕ ತಲೆಮಾರಿನವನು ನಾನು! ಮೊದಲ ಸಲ ರೇಡಿಯೋದಲ್ಲಿ ಸ್ಪುಟ್ನಿಕ್ಕಿನ”ಬೀಪ್ ಬೀಪ್’ ಕೇಳಿದಾಗ ನಾನು ಶಾಲೆಯಲ್ಲಿದ್ದೆ. ಮಾನವ ಚಂದ್ರನ ಮೇಲೆ ಮೊದಲ ಹೆಜ್ಜೆಗಳನ್ನಿಟ್ಟ ರೋಮಾಂಚಕ ಸುದ್ದಿಯನ್ನು ಆಗ ತಾನೆ ಕಾಲೇಜು ಮುಗಿಸಿ ಮುಂಬಯಿಯಲ್ಲಿದ್ದಾಗ ಆ ಮುಂಜಾನೆ ರೇಡಿಯೋದಲ್ಲಿ ಕೇಳಿದ್ದು, ಇತ್ಯಾದಿ ಎಲ್ಲ ನೆನಪಿಗೆ ತಂದಿತು ಈ ಚಿತ್ರ. ಇದು ಸತ್ಯ ಘಟನೆಗಳನ್ನಾಧರಿಸಿದ ಚಿತ್ರವೆಂದು ಪ್ರಚಾರಮಾಡಿದ್ದಾರೆ. ಅಮೆರಿಕೆಯಲ್ಲಿಯ 1961 ರಲ್ಲಷ್ಟೆ ಅಲ್ಲ, ಇಂದಿಗೂ ಎಲ್ಲೆಡೆ ಇರುವ ವರ್ಣ ಭೇದ, ಸರ್ವತ್ರ ಕಾಣುವ ಲಿಂಗ ಭೇದ ಇವೆಲ್ಲ ವಿಷಯಗಳು ಸಿನಿಮಾಕ್ಕೆ ಹೊಸತಲ್ಲವಾದರೂ ಅವುಗಳ ಚಿತ್ರೀಕರಿಸಿದ ರೀತಿ ಮನ ಕಲುಕುತ್ತದೆ. ಮೂವರು ಕರಿಯ (ಆಫ್ರಿಕನ್-ಅಮೆರಿಕನ್) ಹೆಣ್ಣುಮಕ್ಕಳ ಜೀವನದ ಸುತ್ತಿ ಹೆಣೆದ ಕಥೆ ಇದು. ನಾಸಾ ದಲ್ಲಿ ಕೆಲಸ ಮಾಡುವ ಹಣಿತ ಪ್ರವೀಣೆ ವಿಸರ್ಜನೆಗೆಂದು ಅರ್ಧಮೈಲಿ ದೂರದ ಟಾಯ್ಲೆಟ್ಟಿಗೆ ಓಡಿ ಹೋಗುವ ಕ್ಯಾಥರಿನ್ನಳ ಪರದಾಟ, ರಾತ್ರಿಯಾಗುವವರೆಗೆ ಕೆಲಸ ಮಾಡಿ ತಮ್ಮ ಕುಟುಂಬಕ್ಕೆ ಮರಳುವ ಮಹಿಳೆಯರು ಇವೆಲ್ಲ ಕ್ಲೀಷೆ ಆಗದಂತೆ ಚಿತ್ರೀಕರಿಸಲಾಗಿದೆ. ಈ ಮೂವರು ಗೆಳತಿಯರಲ್ಲದೆ ಕೆವಿನ್ ಕಾಸ್ಟ್ನರ್ ಅಭಿನಯಿಸಿದ ಆಲ್ ಹಾರಿಸನ್ ಪಾತ್ರ ಇಲ್ಲಿ ಮುಖ್ಯ. ಮಹಿಳೆಯರಿಗಷ್ಟೇ ಸೀಮಿತವಾದ coloured only ಫಲಕವನ್ನು ಒಡೆದು ”’ನಾಸಾ’ದಲ್ಲಿ ಎಲ್ಲರ ವಿಸರ್ಜನೆಯ ಬಣ್ಣ ಒಂದೇ” ಎಂದು ಅನ್ನುವದು, ಇಂಥ ’ಕಣ್ಣೀರಿನ ಕ್ಷಣ”ಗಳಿದ್ದರೂ ಒಟ್ಟಿನಲ್ಲಿ ಈ ಚಿತ್ರದಲ್ಲಿ feel good factors ಸಾಕಷ್ಟಿವೆ.ಉದಾ: ಚಿತ್ರದ ಆರಂಭದ ದೃಶ್ಯದಲ್ಲೇ ಕಾರು ಕೆಟ್ಟುಬಿದ್ದ ಈ ’ನಾಸ”ದ ಕರ್ಮಚಾರಿಗಳನ್ನು ಎಸ್ಕೋರ್ಟ್ ಮಾಡುವ ಪೋಲೀಸ್ ಅಧಿಕಾರಿಯ ಕಾರಿನ ಹಿಂದೆ ಕೀಟಲೆ ಮಾಡುತ್ತ ಹೋಗುವದು, ಇದಲ್ಲದೆ ಕೊನೆಯಲ್ಲಿ ಕ್ಲೈಮ್ಯಾಕ್ಸ್ ಘಟ್ಟವೆಂದರೆ ಜಾನ್ ಗ್ಲೆನ್ನನ Friendship 7 capsule ನಾಯಕಿ ಕ್ಯಾಥರಿನ್ ಆ ಮೊದಲೇ ಲೆಕ್ಕ ಹಾಕಿದ್ದ ವಿಕ್ಷೇಪ ಪಥ (trajectory) ವನ್ನನುಸರಿಸುವಾಗ ಕ್ಯಾಪ್ಸೂಲಿಗೆ ಹತ್ತಿದ ಬೆಂಕಿಯನ್ನು  ವೀಕ್ಷಿಸಿದಾಗ ಅವಳು ಮತ್ತುಳಿದ ನಾಸಾ ಕರ್ಮಚಾರಿಗಳಿಗೆ ಆಗುವ ಅಗ್ನಿಪರೀಕ್ಷೆಯ ದೃಶ್ಯ ನವಿರೇಳಿಸಿದರೂ ಸ್ವಲ್ಪ dramatic ಏನೊ ಅನಿಸುತ್ತದೆ. ಆದರೆ ಅದರ ಹಿಂದಿನ ಸತ್ಯ, ಅಂತರಿಕ್ಷ ಪ್ರಯಾಣದ ಸಾಫಲ್ಯಕ್ಕೆ ಬಹಳಷ್ಟು ಸವೆದ ’ಕೋಟಿಜ್ಯ, ವಿಶ್ಲೇಷಕ ಜ್ಯಾಮಿತಿ, ವರ್ಗಮೂಲಗಳಲ್ಲಿ (cosine, analytical geometry, square root) ಪರಿಣಿತರಾದ ಹೆಣ್ಣುಮಕ್ಕಳ ಪರಿಶ್ರಮ ಮತ್ತು ಕಷ್ಟ ಸಹಿಷ್ಣುತೆಯನ್ನು ಕೊಂಡಾಡುವ ಈ ಚಿತ್ರವನ್ನು ಅವಶ್ಯ ನೋಡಿ ಬನ್ನಿ. ಚಿತ್ರದ ಶೀರ್ಷಿಕೆಯಲ್ಲಿ ಹುದುಗಿದ ಇನ್ನೊಂದು ಅರ್ಥವೇನೋ ಅನ್ನುವಂತೆ ಎತ್ತಿ ತೋರಿಸುವ ಒಂದು ದೃಶ್ಯವನ್ನು ಚಂದವಾಗಿ ಚಿತ್ರಿಸಲಾಗಿದೆ. ಅದು ಹೀಗಿದೆ: ದ್ವಿವಿಧವಾದ ಭೇದಕ್ಕೆ ಬಲಿಯಾದ ಕ್ಯಾಥರಿನ್ ಗೆ classified data ನೋಡುವ ಅಧಿಕಾರವಿರುವದಿಲ್ಲ ಎಂಬ ನೆಪದಲ್ಲಿ ಅವಳ ಸಹೋದ್ಯೋಗಿ ಕರಿ ಮಸಿಯಿಂದ ಹೊಡೆದು ಹಾಕಿದ ಲೆಕ್ಕಾಚಾರ (hidden figures)ವಿದ್ದ ಕಾಗದವನ್ನುಬೆಳಕಿಗೆ ಹಿಡಿದು ಕಂಡು ಹಿಡಿದು ತನ್ನ ಲೆಕ್ಕ ಕೌಶಲ್ಯವನ್ನು ಪ್ರದರ್ಶಿಸಿದ್ದು! ಅದಕ್ಕೆ ಅವಳ ಬಾಸ್ ನ ಆಜ್ಞೆ? ಇನ್ನೂ ದಟ್ಟವಾದ ಕರಿ ಮಸಿ! ಮುಖ್ಯ ಪಾತ್ರದಲ್ಲಿ ಅಭಿನಿಯಿಸಿದ ತರಾಜಿ ಹೆನ್ಸನ್ ಮಾತಿನಿಂದ ಮುಗಿಸುವೆ. ಆಸ್ಕರ್ ಪ್ರಶಸ್ತಿಗೆ ಸೂಚಿಸಿದಲಾದ ಈ ಚಿತ್ರವನ್ನು ನೋಡಿ: Have a good day!

 

ಕ್ಯಾಥರಿನ್ ಜಾನ್ಸನ್:” So yes, they let women do some things at NASA, Mr. Johnson. And it’s not because we wear skirts. It’s because we wear glasses. Have a good day.”

ಶ್ರೀವತ್ಸ ದೇಸಾಯಿ

 

ಮಲೆನಾಡಿನ ಪ್ರವಾಸ ಮತ್ತು ಕಿರು ಪರಿಚಯ

(ಮಲೆನಾಡೆಂದರೆ ಕೂಡಲೇ ನೆನಪಿಗೆ ಬರುವುದು ಹಸುರಿನ ದಟ್ಟ ಕಾಡುಗಳು,  ಪರ್ವತ ಶ್ರೇಣಿಗಳು, ನಿರ್ಮಲವಾದ ನದಿಗಳು, ಜಲಪಾತಗಳು, ಅಲ್ಲಿಯ ಹೆಸರಾಂತ ಕವಿಗಳು, ಲೇಖಕರು, ಊಟ, ಉಪಚಾರಗಳು ಮತ್ತು ಸಂಪ್ರದಾಯಗಳು.

ಮಲೆನಾಡಿನ ರಮ್ಯ ದೃಶ್ಯಗಳು ಮತ್ತು ಅಲ್ಲಿನ ಜನ, ಜೀವನವನ್ನು  ಕುವೆಂಪು ಅವರ ಕವನಗಳಲ್ಲಿ, ಅವರ ಮಲೆನಾಡಿನ ಚಿತ್ರಗಳು ಹಾಗೂ ಕಾನೂರು ಸುಬ್ಬಮ್ಮ ಹೆಗ್ಗಡತಿ ಮುಂತಾದ ಕೃತಿಗಳಲ್ಲಿ ಕಾಣಬಹುದು. ಹಾಗೆ ಅವರ ಸುಪುತ್ರ ತೇಜಸ್ವಿ ಅವರ ಬಹುತೇಕ ಕಥೆಗಳು ಮಲೆನಾಡಿನ ಹಿನ್ನೆಲೆಯಲ್ಲಿ ಹೇಳಲ್ಪಟ್ಟಿವೆ. ಇಂತಹ ಸುಂದರ ತಾಣಕ್ಕೆ ತಮ್ಮ ಒಲವಿನ ಗೂಡಿಗೆ ಕುವೆಂಪು ಅವರು ತಮ್ಮ ಪರಮ ಗುರುಗಳಾದ ರಾಮಕೃಷ್ಣ ಪರಮಹಂಸರನ್ನು ಆವಾಹನೆ ಮಾಡುತ್ತಾರೆ ಅದು ಹೀಗಿದೆ:

ಬಾ ಶ್ರೀ ಗುರುದೇವನೆ  ಬಾ

ಶ್ಯಾಮಲಾ ಕಾನನ ಶೃಂಗತರಂಗಿತ

ಸಹ್ಯಾದ್ರಿಯ ಸುಂದರ ಮಂದಿರಕೆ

ಚಿನ್ಮಯಮಮ ಹೃನ್ ಮಂದಿರಕೆ

ಕುವೆಂಪು ಅವರಿಗೆ ಮಲೆನಾಡು ಬರಿ ಒಂದು ಪ್ರದೇಶವಾಗದೆ ಅದು ಪವಿತ್ರ ಮಂದಿರವಾಗುತ್ತದೆ ಮತ್ತೆ ಅವರ ಹೃದಯ ಮಂದಿರವೂ ಕೂಡ!

ಪಶ್ಚಿಮ ಕರ್ನಾಟಕದ ಉತ್ತರದಿಂದ  ದಕ್ಷಿಣದವರೆಗೆ ಹಬ್ಬಿ ಕೊಡವ, ಕನ್ನಡ, ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯನ್ನು ಒಳಗೊಂಡು ವೈವಿಧ್ಯಮಯವಾದ ಮಲೆನಾಡನ್ನು ಪರಿಚಯಿಸುವುದು ಕಷ್ಟದ ಕೆಲಸ. ರಾಮಮೂರ್ತಿಯವರು ಈ ಲೇಖನವನ್ನು  ಕಿರು ಪರಿಚಯ ಎಂದು ಹೆಸರಿಸಿರುವುದು ಸೂಕ್ತವಾಗಿದೆ. ರಾಮಮೂರ್ತಿಯವರು ಮಲೆನಾಡನ್ನು ವೀಕ್ಷಿಸಿ ಅಲ್ಲಿಯ ಕೆಲವು ಗಮನಾರ್ಹ ವ್ಯಕ್ತಿಗಳನ್ನು ಹಾಗು ಸಂಸ್ಥೆ ಗಳನ್ನು ಪರಿಚಯಿಸಿದ್ದಾರೆ. ಹಾಗೆ ಅಲ್ಲಿಯ ಸಂಕೇತಿ ವರ್ಗದ ಸಮುದಾಯ ಮತ್ತು ಅವರ ಸಂಪ್ರದಾಯವನ್ನು ಉಳಿಸಿಕೊಂಡಿರುವುದರ ಬಗ್ಗೆ ವಿವರಿಸಿದ್ದಾರೆ. ರಾಮಮೂರ್ತಿ ಹೇಳಿರುವಂತೆ ಮುಂದಿನ ಬೆಂಗಳೂರು ಭೇಟಿಯಲ್ಲಿ ಧೂಳು ಕುಡಿಯುವುದರ ಜೊತೆಗೆ  (ಕೆಲವರಿಗೆ ಅನಿವಾರ್ಯ ಕರ್ಮ !!)  ಮಲೆನಾಡಿನ ಪ್ರವಾಸವನ್ನು ನಾವೆಲ್ಲ ಮಾಡೋಣ -ಸಂ)

***

 

ಮಲೆನಾಡಿನ ಪ್ರವಾಸ ಮತ್ತು ಕಿರು ಪರಿಚಯ

ಬೆ೦ಗಳೂರಿನಿಂದ ಶಿವಮೊಗ್ಗ ಎಕ್ಸ್ ಪ್ರೆಸ್ಸ್ ಸರಿಯಾದ ಸಮಯಕ್ಕೆ ( ೩.೩೦ ಕ್ಕೆ) ಹೊರಟರೂ ಶಿವಮೊಗ್ಗ ೮.೩೦ ಸೇರಬೇಕಾಗಿದ್ದು ಸುಮಾರು ೯.೩೦ಕ್ಕೆ ತಲುಪಿತು. ನಾವು ಹೋಟೆಲ್ ಸೇರುವ ವೇಳೆಗೆ ೧೦ ಗಂಟೆಯಾಗಿ ಊಟದ ಸಮಯ ಕಳೆದಿತ್ತು ಆದರೂ ಹೋಟೆಲಿನ ವ್ಯವಸ್ಥಾಪಕರು ಪರವಾಗಿಲ್ಲ ಊಟ ಮಾಡಿ ಅ೦ತ ಕಳಿಸಿದರು.

ಈ ಪ್ರಯಾಣದ ಉದ್ದೇಶ, ನಮ್ಮ ಸ್ನೇಹಿತರು ಮತ್ತು ಕನ್ನಡ ಬಳಗದ ಆಜೀವ ಸದಸ್ಯರಾಗಿದ್ದ ದಿ:ಸತ್ಯನಾರಾಯಣ ಶಾಸ್ತ್ರಿ ಗಳ ಮೊದಲನೆ ಶ್ರಾದ್ಧ. ಅವರ ಊರು ಹೊಸಹಳ್ಳಿ (ಶಿವಮೊಗ್ಗ ದಿ೦ದ ೧೦ ಕಿಲೊ.ಮಿ. ದೂರ). ತು೦ಗಾ ನದಿಯದಡದ ಈ ಸಣ್ಣ ಹಳ್ಳಿಯಲ್ಲಿ ಸುಮಾರು ೮೫ ಮನೆಗಳಿದ್ದು ತಲತಲಾ೦ತರದಿಂದ ಹಲವಾರು ಕುಟು೦ಬಗಳು ಇಲ್ಲಿ ನೆಲಸಿವೆ. ಇವರೆಲ್ಲಾ ಸ೦ಕೇತಿ ಜನಾಂಗ ದವರು. ಸುಮಾರು ೮೦೦ ವರ್ಷದ ಹಿ೦ದೆ ಈಗಿನ ಕೇರಳ ಪ್ರದೇಶದಿ೦ದ ಕರ್ನಾಟಕದ ಕಡೆ ವಲಸೆ ಬ೦ದವರು. ಇವರು ಸಂಸ್ಕೃತದ ವಿದ್ವಾ೦ಸರು. ಇವತ್ತಿಗೂ ತಮ್ಮ ವಿಶೇಷವಾದ ಸ೦ಪ್ರದಾಯವನ್ನು ಉಳಿಸಿಕೊಂಡು, ನಡೆಸಿಕೊ೦ಡು ಬ೦ದಿದ್ದಾರೆ. ತು೦ಗಾ ನದಿಯ ಆಚೆಯ ದಡದಲ್ಲಿ ಇನ್ನೊ೦ದು ಹಳ್ಳಿ ಮತ್ತೂರು. ಇದು ಸಹ ಸ೦ಕೇತಿಗಳ ಊರು ಆದರೆ ಇದು ಸ್ವಲ್ಪ ದೊಡ್ಡ ಸ್ಥಳ, ಸುಮಾರು ೨೫೦ ಮನೆಗಳಿದ್ದು, ಸಂಸ್ಕೃತ ಮತ್ತು ವೇದ ಶಾಲೆಗಳಿವೆ.

malnad-1 ವೇದಘೋಷ ಆಶೀರ್ವಾದ

ಈ ಶ್ರಾದ್ಧಕ್ಕೆ ಎರಡು ಹಳ್ಳಿಗಳಿ೦ದ ಸುಮಾರು ೩೦೦ ಜನ ಸೇರಿದ್ದರು. ಅವರ ಮನೆ ಇವರ ಮನೆ ಅ೦ತ ಬೇಧ ಭಾವ ಇರಲಿಲ್ಲ ಎಲ್ಲಾ ಮನೆಯವರು ಬ೦ದು ಅಡಿಗೆ ಮಾಡಿ ೪-೫ ಪ೦ಕ್ತಿ ಯಲ್ಲಿ ಅಷ್ಟು ಜನಕ್ಕೂ ಊಟವನ್ನು ಬಡಿಸಿದರು. ಎಲ್ಲಾ ವಿಧಿ ಗಳನ್ನು ಬಹಳ ಶಾಸ್ತ್ರೋಕ್ತವಾಗಿ ಮಾಡಿ ಮಾರನೆಯ ದಿನ ಅವರ ಮಗ ಕೇಶವನಿಗೆ ಊರಿನ ಹಿರಿಯರು ಆಶೀರ್ವಾದ ಮಾಡಿದ ದೃಶ್ಯ ಯಾವತ್ತಿಗೂ ಮರೆಯುವ ಹಾಗಿಲ್ಲ. ೪೦ ಜನರಿ೦ದ ವೇದ ಘೋಷ ಮಾಡಿದ್ದು ಅಮೋಘಾಗಿತ್ತು. ಈ ಜನರ ಲೈಫ಼್ ಸ್ಟೈಲ್ ಬಹಳ ವರ್ಷಗಳಿ೦ದ ಬದಲಾಯಿಸಿಲ್ಲ  ಅ೦ತ ಹೇಳಿದರೆ ಏನೂ ತಪ್ಪಿಲ್ಲ. ನದಿದಡದಲ್ಲಿ  ಬೆಳಗ್ಗೆ ಮತ್ತು ಸಾಯ೦ಕಾಲ ಅನೇಕರು ಸಂಧ್ಯಾ ವ೦ದನೆ ಮಾಡುವುದು ನೀವು ಇನ್ನೆಲ್ಲೂ ನೋಡಿರಿವುದಿಲ್ಲ, ಚಿಕ್ಕವರ ಮತ್ತು ದೊಡ್ಡವರ ಪ೦ಚೆ ಮತ್ತು ಶಲ್ಯ ಬಿಟ್ಟರೆ ವೆಸ್ಟೆರ್ನ್ ಉಡುಪಗಳು ಬಹಳ ಅಪರೂಪ. ಸಾಯ೦ಕಾಲ ಹುಡುಗರು ಕ್ರಿಕೆಟ್ ಆಡುವುದು ಪ೦ಚೆ ಮೇಲಿ ಕಟ್ಟಿ!! ಇಲ್ಲಿಯ ಜನರು ವ್ಯವಸಾಯ, ಅಡಿಕೆ ಮತ್ತು ಬತ್ತ ಬೆಳೆಯುವುದರಲ್ಲಿ ತೊಡಗಿರುತ್ತಾರೆ

ಸಾಗರ ಶಿವಮೊಗ್ಗ ದಿ೦ದ ೭೫ ಕಿ.ಮೀ ದೂರದಲ್ಲಿದ್ದು ರಸ್ತೆ ಬಹಳ ಚೆನ್ನಾಗಿದೆ. ಹಾಗೆ ನೋಡಿದರೆ ಈ ಜಿಲ್ಲೆ ಯಲ್ಲಿ ಎಲ್ಲಾ ಕಡೆ ರಸ್ತೆ ಚೆನ್ನಾಗಿ ಮಾಡಿದ್ದಾರೆ. ದಾರಿ ಉದ್ದಕ್ಕೂ ಮರ, ಹೊಲಗಳು ಮತ್ತು ತೋಟಗಳಿಂದ ಕೂಡಿದ ಮಲೆನಾಡು ಬಹಳ ಚೆಲುವಿನ ನಾಡು. ನಮ್ಮ ಲೇಕ್ ಡಿಸ್ಟ್ರಿಕ್ಟ್ ಮಾದರಿ ಎಲ್ಲಾ ಕಡೆ ತಂಪಾದ ಹಸುರಿದೆ. ಸಾಗರದಲ್ಲಿ ನಮ್ಮ ಸ್ನೇಹಿತರಾದ ಟಿ.ಪಿ. ಅಶೋಕ್ ಅಲ್ಲಿನ ಕಾಲೇಜ್ ನಲ್ಲಿ ಇಂಗ್ಲೀಷ್ ಪ್ರೊಫ಼ೆಸರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕನ್ನಡ ಸಾಹಿತ್ಯದಲ್ಲಿ ಬಹಳ ಹೆಸರು ಪಡೆದವರು. ೩೦ ಪುಸ್ತಕಗಳನ್ನು ಬರೆದ್ದಿದ್ದಾರೆ. ಇವರು ಪ್ರಸಿದ್ಧ ವಿಮರ್ಶಕರು. ಮಾಸ್ತಿ ಮತ್ತು ಅನ೦ತಮೂರ್ತಿ ಮು೦ತಾದವರ  ಬರವಣಿಗೆ ಮೇಲೆ ಇವರು ವಿಮರ್ಶಿಸಿದ್ದಾರೆ. ಅಶೋಕ್ ನಮಗೆ ಸಾಗರದ ಸುತ್ತಮುತ್ತ ಇರುವ ಜಾಗಗಳನ್ನು ತೋರಿಸಿದರು. ಸಾಗರದ ಹತ್ತಿರವಿರುವ ಇಕ್ಕೀರಿ ಹಿ೦ದೆ ಬಹಳ ಪ್ರಸಿದ್ಧವಾಗಿದ್ದ ಊರು. ೧೫೬೦ ರಿ೦ದ ೧೬೪೦ವರೆಗೆ ಇದು ಕೆಳದಿ ನಾಯಕರ ರಾಜಧಾನಿಯಾಗಿತ್ತು . ಇಲ್ಲಿಯ ಅಘೊರೇಶ್ವರ ದೇವಸ್ಥಾನ ಸಣ್ಣದಾದರು ಬಹಳ ಚೆನ್ನಾಗಿದೆ.

malnad-2ದೇವಸ್ಥಾನದ ಬಸವ

ಸಾಗರದ ಹತ್ತಿರ ಹೆಗ್ಗೋಡಿನಲ್ಲಿ ನೀನಾಸಮ್ ಎ೦ಬ ರ೦ಗಶಿಕ್ಷಣ ಕೇ೦ದ್ರವನ್ನು ಶ್ರೀ ಸುಬ್ಬಣ್ಣ ನವರು ಸ್ಥಾಪಿಸಿದ್ದು ಈಗ ದೊಡ್ಡ ಸಂಸ್ಥೆಯಾಗಿ ಬೆಳದಿದೆ. ಇವರಿಗೆ೧೯೯೧ ನಲ್ಲಿ ರೊಮನ್ ಮ್ಯಾಗ್ ಸೆಸೆ (Roman Magsaysay) ಪ್ರಶಸ್ತಿ ಹಾಗೂ ೨೦೦೪ ನಲ್ಲಿ ಪದ್ಮಶ್ರೀ ಸಹ ದೊರಕಿದೆ. ಇಲ್ಲಿ ಕನ್ನಡ  ಉತ್ಸಾಹೀ ಯುವಕರಿಗೆ ರ೦ಗಕಲೆಗಳಲ್ಲಿ ಶಾಸ್ತ್ರೀಯವಾದ ತರಬೇತಿ ನೀಡಲಾಗುತ್ತದೆ.  ಕಳೆದ ೩೬ ವರ್ಷ ಗಳಲ್ಲಿ ೫೭೫ ಜನರನ್ನು ಈ ಕೇ೦ದ್ರ ತರಬೇತುಗೊಳಿಸಿದೆ. ಇದರಲ್ಲಿ ೧೫೭ ಹುಡುಗಿಯರು ಸೇರಿದ್ದಾರೆ. ಈ ಯುವಕರ ಸರಾಸರಿ ವಯಸ್ಸು ೨೩. ಇಲ್ಲಿಯ ಶಿವರಾಮ ಕಾರ೦ತ ರ೦ಗಮ೦ದಿರ ೪೫೦ ವೀಕ್ಷಕರನ್ನು ಹಿಡಿಸುವ ಸೊಗಸಾದ ಮ೦ದಿರ. ಈ ತ೦ಡದವರು ಕರ್ನಾಟಕದ ಅನೇಕ ಕಡೆ ಕನ್ನಡ ನಾಟಕ ಗಳನ್ನು ಪ್ರದರ್ಶನ ಮಾಡುತ್ತಾರೆ. ಇಲ್ಲಿ ತರಬೇತಿ ಪಡದವರು ಆಕಾಶವಾಣಿ, ಸಿನೆಮಾ ಮತ್ತು ರ೦ಗಭೂಮಿ ಕ್ಷೇತ್ರ ದಲ್ಲಿ ಕೆಲಸವನ್ನು ಪಡೆಯುತ್ತಾರೆ.

ಹೆಗ್ಗೋಡಿನಿಂದ ಮು೦ದೆ ಹೋದರೆ ಭೀಮನಕೋಣೆ ಹಳ್ಳಿಯಲ್ಲಿ ಚರಕ ಎನ್ನುವ ಸಂಸ್ಥೆ ಇದೆ.  ಗ್ರಾಮೀಣಾಭಿವೃದ್ಧಿಯ  ಒ೦ದು ಹೊಸ ಸಾಧ್ಯತೆಯ ಹಾಗೂ ಕಲ್ಪನೆಯ ಮೇಲೆ ಬೆಳದಿದೆ. ಚರಕ ಪರಿಸರ ಸ್ನೇಹಿ ಗ್ರಾಮೀಣ ಉದ್ಯಮೆ ೧೯೯೬ ನಲ್ಲಿ ಆರಂಭವಾಯಿತು. ಇದರ ಪ್ರಯೋಜಕರು ಪ್ರಸ್ಸನ್ನ. ಇವರ ಉದ್ದೇಶ ಸ್ಥಳೀಯ ಹೆ೦ಗಸರಿಗೆ ಒ೦ದು ಉದ್ಯಮೆ ಕೊಡುವುದು, ಹೀಗಾಗಿ ಸಿದ್ದ ಉಡುಪು ತಯಾರಿಸುವ ಯೋಜನೆ ಯಶಸ್ವಿಯಾಗಿದೆ. ಕೇವಲ ನೇಯ್ಗೆ ಮಾತ್ರವಲ್ಲ, ನೂಲಿಗೆ ಬಣ್ಣ ಹಾಕುವುದು, ಬ್ಲಾಕ್ ಪ್ರಿ೦ಟಿ೦ಗ್, ಸ್ಕ್ರೀನ್ ಪ್ರಿ೦ಟಿ೦ಗ್, ಹೊಲಿಗೆ, ಕಸೂತಿ, ಮಗ್ಗ ತಯಾರಿಕೆ ಹೀಗೆ ಅನೇಕ ಕೆಲಸಗಳಿಗೆ ತರಬೇತಿ ನೀಡಲಾಗುತ್ತಿದೆ. ಪರಿಸರವಾದ ಹಾಗೂ ಬಣ್ಣ ಹಾಕುವುದು ಇವರ ಸ್ಪೆಷಾಲಿಟಿ. ಅಡಿಕೆ ಚಿಗರು, ದಾಳಿ೦ಬೆ ಸಿಪ್ಪೆ, ಇ೦ಡಿಗೊ,ರ೦ಗಮಾಲೆ ಬೀಜ ಇತ್ಯಾದಿ ಸಾಮಗ್ರಿಗಳಿ೦ದ ಬಣ್ಣ ಹಾಕುತ್ತಾರೆ. ಇಲ್ಲಿ ವಿದ್ಯುತ್ ಚಾಲಿಕ ಯ೦ತ್ರಗಳು ಬಳಕೆಯಿಲ್ಲ. ಮಣ್ಣಿನ ಗೋಡೆ ಮತ್ತು ಹೆ೦ಚಿನಿ೦ದ ಕಟ್ಟಿದ ಕೊಠಡಿ ಗಳಲ್ಲಿ ಕೆಲಸ. ಬೋರ್ ವೆಲ್ ಬದಲು ತೆರದ ಭಾವಿ ಮತ್ತು ಮಳೆ ನೀರನ್ನು ಸ೦ಗ್ರಹಿಸಿ ನೀರಿನ ಕೊರತೆ ಇಲ್ಲದ ಹಾಗೆ ಮಾಡಿದ್ದಾರೆ.

೩೦೦ ಜನ ಮಹಿಳೆಯರಿ೦ದ ತಯಾರಾದ ರೆಡಿ ಮೇಡ್ ಉಡುಪುಗಳು ದೇಸಿ ಅನ್ನುವ ಅ೦ಗಡಿಗಳ (Desi Shops) ಮೂಲಕ ರಾಜ್ಯದ ಎಲ್ಲಾ ಕಡೆ ಮಾರಾಟವಾಗತ್ತಿದೆ. ಚರಕ ಕರ್ನಾಟಕದಲ್ಲಿ ಒ೦ದು ಧ್ರುವ ತಾರೆ. ಪರಿಸರ ಒ೦ದೇ ಅಲ್ಲ ನೂರಾರು ಕುಟು೦ಬಗಳಿಗೆ ಈ ಸಂಸ್ಥೆ ನೆರವಾಗಿರುವುದು ಪ್ರಸ್ಸನ್ನ ಅವರ ಶ್ರಮದಿ೦ದ.

ಶಿವಮೊಗ್ಗ ದಿ೦ದ ೭೦ ಕಿ.ಮಿ. ದೂರದಲ್ಲಿರುವ ತೀರ್ಥಹಳ್ಳಿ ನಮ್ಮ ಮೆಚ್ಚಿನ ಕವಿಗಳಾದ ಕುವೆ೦ಪು ಅವರು ಬೆಳದ ಊರು. ಇದರ ಸಮೀಪದಲ್ಲಿನ ಕುಪ್ಪಹಳ್ಳಿ, ಕುವೆ೦ಪು ಹುಟ್ಟಿದ ಊರು. ಕರ್ನಾಟಕ ಸರ್ಕಾರ ಅವರ ಹುಟ್ಟಿದ ಮನೆಯನ್ನು ಈಗ ಸೊಗಸಾದ ಮ್ಯೂಸಿಯಮ್ ಮಾಡಿದ್ದಾರೆ. ಅವರ ಸನ್ನಿಧಿ ಹತ್ತಿರದಲ್ಲಿ ಇದೆ.  ಮಗ ಪೂರ್ಣ ಚ೦ದ್ರ ತೇಜಸ್ವಿ ಅವರ ಸಮಾಧಿ ಕೂಡ ಇದೆ.  ನಾವು ಅಲ್ಲಿ ಇದ್ದಾಗ ಕೇವಲ ಮೂರು ಜನ ಮಾತ್ರ ವೀಕ್ಷಿಸಲು ಬಂದಿದ್ದು ನಮ್ಮ ಕನ್ನಡ ಪ್ರೇಮಿಗಳೆಲ್ಲಾ ಎಲ್ಲಿ? ಎನ್ನುವ ಭಾವನೆ ಉಂಟಾಯಿತು. ಹೋದ ವರ್ಷ ಇಲ್ಲಿ ಕಳ್ಳತನವಾಗಿದ್ದು ಅತ್ಯಂತ ಶೋಚನೀಯವಾದ ವಿಷಯ.

malnad-3ಕುವೆಂಪು ಅವರ ಮನೆ

ಸಕ್ಕರೆ ಬಯಲು ಎ೦ಬ ಹಳ್ಳಿ ಯಲ್ಲಿ  ಕಾಡಾನೆ ಗಳನ್ನು ಹಿಡಿದು ಪಳಗಿಸುತ್ತಾರೆ. ಸುಮಾರು ೫೦-೬೦ ಆನೆ ಗಳಿವೆ. ಇಲ್ಲಿ ಅನೋರಾಗ್ಯವಾದ ಆನೆಗಳಿಗೆ ಚಿಕಿತ್ಸೆ ಕೊಡುವ ಸೌಲಭ್ಯ ಸಹ ಇದೆ. ಒ೦ದು ಸ್ವಾರಸ್ಯಕರವಾದ ವಿಚಾರವೆಂದರೆ, ಈ ಆನೆಗಳ ತರಬೇತು ಅಲ್ಲಿನ ಮುಸಲ್ಮಾನ್ ಪ೦ಗಡದವರು ಹಲವಾರು ತಲತಲಾ೦ತರದಿ೦ದ ಮಾಡಿಕೊ೦ಡು ಬ೦ದಿದ್ದಾರೆ.

malnad-4ಸಕ್ಕರೆ ಬಯಲು

ಮಲೆನಾಡು ನಾವೆಲ್ಲ ಹೆಮ್ಮೆ ಪಡಬಹುದಾದ ಪ್ರದೇಶ, ನೀವು ನಿಮ್ಮ ಮು೦ದಿನ ಭೇಟಿಯಲ್ಲಿ ಈ ಜಾಗಗಳಿಗೆ ಹೋಗಿ ಆನ೦ದಿಸಿ,

ಸುಮ್ಮನೆ ಬೆ೦ಗಳೂರಿನಲ್ಲಿ ಧೂಳು ಕುಡ್ಕೊ೦ಡು ಕೂತಿರ ಬೇಡಿ, !!