ನೀಲಿಆರ್ಕಿಡ್ (ಸಣ್ಣಕಥೆ): ಡಾ ಜಿ ಎಸ್ ಪ್ರಸಾದ್

ಆತ್ಮೀಯ ಓದುಗರೇ 
ಈ ವಾರದ ಅನಿವಾಸಿ ಸಂಚಿಕೆಯಲ್ಲಿ ನನ್ನ ಚೊಚ್ಚಲ ಸಣ್ಣ ಕಥೆ 'ನೀಲಿ ಆರ್ಕಿಡ' ನಿಮ್ಮ ಮುಂದಿಡುತ್ತಿದ್ದೇನೆ. ಇಲ್ಲಿಯವರೆಗೆ ಕವನ, ಬಿಡಿಬರಹ, ಪ್ರವಾಸ ಕಥನಗಳನ್ನು ಬರೆಯುತ್ತಿದ್ದ ನನಗೆ ಎಲ್ಲಿಂದಲೋ ಸಣ್ಣ ಕಥೆಯನ್ನು ಬರೆಯಲು ಪ್ರೇರಣೆ ದೊರೆಯಿತು. ಹಾಗೆ ನೋಡಿದರೆ ಕಥೆ ಬರೆಯುವುದು ನನಗೆ ಹೊಸತೇನಲ್ಲ. 'ಪಯಣ' ಎಂಬ ಕಿರು ಕಾದಂಬರಿಯನ್ನು ಬರೆದು ಕೈತೊಳೆದು ಕೂತ್ತಿದ್ದ ನನಗೆ ಇದ್ದಕ್ಕಿಂದಂತೆ ಸಣ್ಣ ಕಥೆ ಬರೆಯುವ ಸ್ಫೂರ್ತಿ ಮೂಡಿತು. ಮೊನ್ನೆ ಊಟಕ್ಕೆ ಬಂದ ಅತಿಥಿಯೊಬ್ಬರು ಒಂದು ನೀಲಿ ಆರ್ಕಿಡ್ ಗಿಡವನ್ನು ವಿಶ್ವಾಸದಲ್ಲಿ ಕೊಟ್ಟು ಹೋದರು. ಈ ಸುಂದರವಾದ ಹೂಗಳು ನನ್ನ ಮೇಲೆ ಕಥೆ ಬರಿ ಎಂದು ಹಠ ಹಿಡಿದಿದ್ದವು. ಅವುಗಳ ಆಸೆಯನ್ನು ಪೂರೈಸಿದೆ. ನನ್ನ ಕಥೆ ಬರೆಯುವ ಆಸಕ್ತಿ ಇಲ್ಲಿಗೆ ಮುಗಿಯುವುದೋ ಅಥವಾ ಮುಂದಕ್ಕೆ ಒಂದು ಸಣ್ಣ ಕಥೆಗಳ ಸಂಕಲನ ಮೂಡಿ ಬರುವುದೋ ನನಗೆ ಗೊತ್ತಿಲ್ಲ. ನಿಮ್ಮ ಉತ್ತೇಜನ ಮತ್ತು ಸಮಯ ಇದನ್ನು ನಿರ್ಧರಿಸಬಹುದು. ಸಣ್ಣ ಕಥೆ ಎಷ್ಟು ಉದ್ದವಿರಬೇಕು ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ಕಥೆ ಹೇಳುವಷ್ಟೂ ಉದ್ದ ಇದ್ದರೆ ಸಾಕು ಎನ್ನ ಬಹುದು. ಕಾದಂಬರಿಗೆ ಹೋಲಿಸಿದರೆ ಸಣ್ಣ ಕಥೆಯಲ್ಲಿ ಸನ್ನಿವೇಶಕ್ಕೆ ಹೆಚ್ಚು ಪ್ರಾಮುಖ್ಯತೆ, ಅಲ್ಲಿ ಪಾತ್ರ ಪೋಷಣೆಗೆ ಅಷ್ಟು ಅವಕಾಶವಿಲ್ಲ ಎಂಬುದು ನನ್ನ ಅನಿಸಿಕೆ. ಕಥೆ ಎಂಬುದು ಓದಿನ ಅನುಭವದ ಜೊತೆ ಹಲವಾರು ಚಿಂತನೆಗೆ ಅನುವುಮಾಡಿಕೊಟ್ಟಲ್ಲಿ ಮತ್ತು ಸಾಮಾಜಿಕ ಅರಿವನ್ನು ಉಂಟುಮಾಡಿದ್ದಲ್ಲಿ ಅದು ಸಾರ್ಥಕ. ಈ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕಥೆಯನ್ನು ಹೆಣೆದಿದ್ದೇನೆ. ನಾನು ವೃತ್ತಿಯಲ್ಲಿ ವೈದ್ಯನಾಗಿರುವುದರಿಂದ ನನ್ನ ಕಥೆ ವೈದ್ಯಕೀಯ ವೃತ್ತಿಯ ಆಸುಪಾಸಿನಲ್ಲಿ ಸುಳಿದಿದೆ. ಮುಂದಕ್ಕೆ ನನ್ನ ಈ ವೃತ್ತಿಯ ಕವಚವನ್ನು ಹೊರತೆಗೆದಿಟ್ಟು ಪ್ರಜ್ಞಾಪೂರ್ವಕವಾಗಿ ಇತರ ಸಾಮಾಜಿಕ ಕಥಾವಸ್ತುಗಳನ್ನು ಪರಿಗಣಿಸಬೇಕೆಂಬ ಹಂಬಲವಿದೆ. ದಯವಿಟ್ಟು ಈ ಕಥೆಯನ್ನು ಓದಿ, ಕಥೆಯ ಹಂದರವನ್ನು ಬಿಟ್ಟುಕೊಡದೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

ಸಂ
ರೆಸಿಡೆನ್ಸಿ ರಸ್ತೆಯ ಮಾನ್ವಿತಾ ಕಾಂಪ್ಲೆಕ್ಸ್ ಒಳಗಿನ ಖಾಸಗಿ ಮೆಂಟಲ್ ಹೆಲ್ತ್ ಕ್ಲಿನಿಕ್ ನಲ್ಲಿ ತನ್ನ ಮೊಬೈಲ್ ಫೋನನ್ನು ತೀಡುತ್ತಾ ಚಿಂತಾಕ್ರಾಂತನಾಗಿ ಕುಳಿತ್ತಿದ್ದ ಸಚ್ಚಿನ್ ಗೆ 'ಮಿಸ್ಟರ್ ಸಚ್ಚಿನ್, ಡಾ ಮೋಹನ್ ಅವರು ನಿಮ್ಮನ್ನು ನೋಡಲು ರೆಡಿಯಿದ್ದಾರೆ, ನೀವು ಅವರ ಕೋಣೆಯೊಳಗೆ ಹೋಗಬಹುದು’ ಎಂದಳು ರೆಸೆಪ್ಷನಿಸ್ಟ್ ಜಯ. 

ಸಚಿನ್ ತನ್ನ ಮೊಬೈಲ್ ಫೋನನ್ನು ಆಫ್ ಮಾಡಿ, ಆತುರದಿಂದ ಮೋಹನ್ ಅವರ ಕೋಣೆಯೊಳಗೆ ಧಾವಿಸಿ 'ಹಲೋ ಡಾಕ್ಟರ್ ನಾನು ಸಚ್ಚಿನ್, ನೀವು ಹೆಗ್ಗಿದ್ದೀರಾ ಎಂದ.

' ನಾನು ಚೆನ್ನಾಗಿದ್ದೇನೆ ಸಚ್ಚಿನ್, ನೀವು ಹೇಗಿದ್ದೀರಾ ಹೇಳಿ’ ಎಂದರು ಮೋಹನ್.

‘ನಾಟ್ ವೆರಿ ವೆಲ್ ಡಾಕ್ಟರ್, ಕಳೆದ ಕೆಲವು ವಾರಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ, ನಿದ್ದೆ ಬರುತ್ತಿಲ್ಲ, ಮಧ್ಯ ಕೆಟ್ಟ ಕನಸುಗಳು ಬೇರೆ. ಈ ನಡುವೆ ಅಪಿಟೈಟ್ ಕಡಿಮೆ, ಒಂದು ರೀತಿ ನಿರುತ್ಸಾಹ ಅದನ್ನು ಜಿಗುಪ್ಸೆ ಎಂತಲೂ ಕರೆಯಬಹುದು. ಇತ್ತೀಚಿಗೆ ವಿನಾಕಾರಣ ಬಹಳ ಬೇಗ ಮೂಡ್ ಬದಲಾಗುತ್ತಿದೆ, ಎಮೋಷನಲ್ ಆಗುತ್ತಿದ್ದೇನೆ’.

ಹೀಗೆ ಶುರುವಾದ ಧೀರ್ಘ ಸಂವಾದದಲ್ಲಿ ಡಾಕ್ಟರ್ ಮೋಹನ್, ಸಚ್ಚಿನ್ನಿನ ವೈಯುಕ್ತಿಕ ಹಿನ್ನೆಲೆಗಳನ್ನು, ಪರಿವಾರದ ಸಂಬಂಧಗಳನ್ನು, ವೃತ್ತಿ ಜೀವನವನ್ನು ಕೆದಕಿ ಬಹಳಷ್ಟು ಹಿನ್ನೆಲೆ ಮಾಹಿತಿಗಳನ್ನು ಸಂಗ್ರಹಿಸಿದರು. ಸಚ್ಚಿನ್ ತಾನು ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಎಂದು, ಅವನು ಬೆಂಗಳೂರಿನ ಡಿಲಾಯ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ. ಹೆಂಡತಿಯೊಡನೆ ಸಚ್ಚಿನ್ ವಿಚ್ಛೇದನವಾಗಿ ಎರಡು ವರ್ಷಗಳು ಕಳೆದಿದ್ದವು. ಕೋರ್ಟು ಅವರಿಗಿದ್ದ ಹತ್ತು ವರ್ಷದ ಒಬ್ಬಳೇ ಮಗಳನ್ನು ತಾಯಿಯ ಆರೈಕೆಯಲ್ಲಿ ಇಡುವುದು ಸೂಕ್ತವೆಂದು ನಿರ್ಧರಿಸಿತ್ತು. ಸಚ್ಚಿನ್ ತಾಯಿಗೆ ಕ್ಯಾನ್ಸರ್ ಆಗಿ ತೀರಿಕೊಂಡಿದ್ದು ಸಚ್ಚಿನ್ ತಂದೆ ರಾಮಚಂದ್ರ ಶಾನಭಾಗ್ ಅವರು ವಿಲ್ಸನ್ ಗಾರ್ಡನ್ ಅಪಾರ್ಟ್ಮೆಂಟ್ ಒಂದರಲ್ಲಿ ಒಬ್ಬರೇ ವಾಸವಾಗಿದ್ದರು, ಅವರಿಗೆ ಹಲವಾರು ಅರೋಗ್ಯ ಸಮಸ್ಯೆಗಳಿದ್ದವು. ಡಾಕ್ಟರ್ ಮೋಹನ್ ಸಾಕಷ್ಟು ವಿಚಾರಗಳನ್ನು ಕೆದಕಿದ ಮೇಲೆ ನೋಡಿ ಸಚ್ಚಿನ್ ‘ನನ್ನ ಒಂದು ಅಭಿಪ್ರಾಯದಲ್ಲಿ ನಿಮಗೆ ಡಿಪ್ರೆಶನ್ ಎಂದು ಗುರುತಿಸಬಹುದಾದ ಮಾನಸಿಕ ಅಸ್ವಸ್ಥತೆ ಇರುವ ಸಾಧ್ಯತೆ ಹೆಚ್ಚು. ಇದನ್ನು ಕೆಲವು ಮೆಡಿಸಿನ್ ಮತ್ತು ಕೌನ್ಸಿಲಿಂಗ್ ಮೂಲಕ ಹತೋಟಿಯಲ್ಲಿ ಇಡಬಹುದು. ಇದು ಹಲವಾರು ವರ್ಷಗಳಿಂದ ಸುಪ್ತವಾಗಿದ್ದು ಪರಿಸರದ ಒತ್ತಡದಿಂದ ಬಹಿರಂಗಗೊಂಡಿರಬಹುದು. ನೀವು ನಮ್ಮಲ್ಲಿ ಶೀಲಾ ಎಂಬ ಕೌನ್ಸಿಲರ್ ಇದ್ದಾರೆ, ಅವರನ್ನು ಮುಂದಕ್ಕೆ ಕಾಣಬಹುದು. ಸಧ್ಯಕ್ಕೆ ಮೆಡಿಸಿನ್ಗಳನ್ನು ಉಪಯೋಗಿಸಿ ಎರಡುವಾರದ ನಂತರ ಮತ್ತೆ ಭೇಟಿಯಾಗೋಣ. ನನ್ನ ಕನ್ಸಲ್ಟೇಶನ್ ಸಮ್ಮರಿ ದಾಖಲೆಯನ್ನು ನಿಮಗೆ ಈ ಮೇಲ್ ಮಾಡಲೇ' ಎಂದಾಗ 'ಬೇಡ ಡಾಕ್ಟರ್ ನನ್ನ ವಿಳಾಸಕ್ಕೆ ಪೋಸ್ಟ್ ಮಾಡಿ'. ಮತ್ತೆ ಇನ್ನೊಂದು ವಿಚಾರ ಡಾಕ್ಟರ್ ‘ನನ್ನ ಈ ಅಸ್ವಸ್ಥತೆ ನನ್ನ ಭಾವಿ ಹೆಂಡತಿಗೆ, ಕೋರ್ಟಿಗೆ, ಅಥವಾ ಅವಳ ಕುಟುಂಬಕ್ಕೆ ತಿಳಿಯಬಾರದು’ ಎಂದ. ‘ಅಫ್ ಕೋರ್ಸ್ ನನ್ನ ರೋಗಿಗಳ ಆರೋಗ್ಯದ ಬಗ್ಗೆ ನಾನು ಗಾಸಿಪ್ ಮಾಡುವುದಿಲ್ಲ. ಅದರ ಬಗ್ಗೆ ಆಶ್ವಾಸನೆ ಇರಲಿ’ ಎಂದರು ಮೋಹನ್. ಸಚ್ಚಿನ್ ಡಾಕ್ಟರಿಗೆ ಧನ್ಯವಾದಗಳನ್ನು ತಿಳಿಸಿ ನಿರ್ಗಮಿಸಿದ.

ಡಾ ಮೋಹನ್ ಅವರು ಖ್ಯಾತ ಮನೋ ವೈದ್ಯರು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಹಲವಾರು ವರುಷ ತಜ್ಞರಾಗಿ, ಪ್ರಾಧ್ಯಾಪಕರಾಗಿ ಐವತ್ತರ ಅಂಚಿನಲ್ಲಿ ಸ್ವಯಿಚ್ಛೆಯಿಂದ ನಿವೃತ್ತಿಯನ್ನು ಪಡೆದು ಖಾಸಗಿ ಪ್ರಾಕ್ಟೀಸಿನಲ್ಲಿ ತೊಡಗಿಕೊಂಡಿದ್ದರು. ಅವರ ಪತ್ನಿ ಡಾ ಶೀಲಾರವರು ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿದ್ದು ಮೋಹನ್ ಅವರ ಕ್ಲಿನಿಕ್ಕಿನಲ್ಲಿ ಮನೋರೋಗಿಗಳಿಗೆ ಕೌನ್ಸೆಲಿಂಗ್ ಥೆರಪಿ ನೀಡುತ್ತಿದ್ದರು. ಮೋಹನ್ ಮತ್ತು ಶೀಲಾ ದಂಪತಿಗಳಿಗೆ ಇದ್ದ ಒಬ್ಬನೇ ಪುತ್ರ ಡಾ ಶ್ರೇಯಸ್. ಅವನು ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಅವನ ಕೆಲವು ಹತ್ತಿರದ ಗೆಳೆಯರು ಇಂಗ್ಲೆಂಡಿನ ರಾಷ್ಟ್ರೀಯ ಅರೋಗ್ಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಶ್ರೇಯಸ್ಸಿಗೆ ಇಂಗ್ಲೆಂಡಿಗೆ ಬರುವಂತೆ ಒತ್ತಾಯಿಸಿ ಅವನಿಗೆ ಎಲ್ಲ ರೀತಿಯ ನೆರವು ಮಾರ್ಗದರ್ಶನ ನೀಡುವ ಆಶ್ವಾಸನೆಯನ್ನು ಕೊಟ್ಟಿದ್ದರು. ಶ್ರೇಯಸ್, ಅಪ್ಪ ಅಮ್ಮನೊಂದಿಗೆ ಸಮಾಲೋಚಿಸಿ ಇಂಗ್ಲೆಂಡಿನ "ಪ್ಲ್ಯಾಬ್" ಪ್ರವೇಶ ಪರೀಕ್ಷೆಯನ್ನು ಲಂಡನ್ನಿನಲ್ಲಿ ತೆಗೆದುಕೊಳ್ಳಲು ನಿರ್ಧರಿಸಿದ. ಶ್ರೇಯಸ್, ಇಂಗ್ಲೆಂಡಿನಲ್ಲಿ ವೈದ್ಯಕೀಯ ಉನ್ನತ ಶಿಕ್ಷಣವನ್ನು ಮುಗಿಸಿ ತಾನು ನ್ಯೂರೋ ಸರ್ಜನ್ ಆಗಬೇಕೆಂಬ ಕನಸನ್ನು ಕಾಣುತ್ತಿದ್ದ. ಪರೀಕ್ಷೆ ತಯಾರಿಗೆ ಬೇಕಾದ ಪರಿಶ್ರಮವನ್ನು ಕೈಗೊಂಡ. ಕೊನೆಗೂ ಪ್ಲ್ಯಾಬ್ ಬರೆಯುವ ಅವಕಾಶ ಒದಗಿ ಬಂದಿತು. ಶ್ರೇಯಸ್ ಇಂಗ್ಲೆಂಡಿನ ವೀಸಾ ಪಡೆದುಕೊಂಡ. ಅವನು ಹೊರಡಲು ಇನ್ನು ಕೆಲವೇ ದಿನಗಳು ಉಳಿದಿದ್ದವು ಅಷ್ಟರೊಳಗೆ ಮೋಹನ್ ಅವರ ಹುಟ್ಟು ಹಬ್ಬ ಬಂದಿತ್ತು.

‘ಶ್ರೇಯಸ್ ನೀನು ಇಂಗ್ಲೆಂಡಿಗೆ ಹೋಗಿ ಬರಲು ಎಷ್ಟೊಂದು ದಿನಗಳಾಗುತ್ತದೆ, ಹೇಗೂ ನಿಮ್ಮ ಅಪ್ಪನ ಬರ್ತ್ ಡೇ ಬಂದಿದೆ ವೈ ಡೋಂಟ್ ವೀ ಪಾರ್ಟಿ’ ಎಂದರು ಶೀಲಾ. ‘ಒಳ್ಳೆ ಅವಕಾಶ ಅಮ್ಮ ಸೆಲೆಬ್ರೆಟ್ ಮಾಡೋಣ, ಅಪ್ಪನ ಹತ್ತಿರದ ಸ್ನೇಹಿತರನ್ನೂ ಕರೆಯೋಣ’ ಎಂದ. ಮನೆಯಲ್ಲೇ ಮೋಹನ್ ಅವರ ಬರ್ತ್ ಡೇ ಪಾರ್ಟಿ ಅದ್ದೂರಿಯಿಂದ ನಡೆಯಿತು. ಬಂದವರೆಲ್ಲ ಶ್ರೇಯಸ್ ಇಂಗ್ಲೆಂಡಿಗೆ ಹೊರಡುತ್ತಿರುವ ಬಗ್ಗೆ ವಿಚಾರಿಸಿ ತಮ್ಮ ಶುಭ ಕಾಮನೆಗಳನ್ನು ತಿಳಿಸಿದರು. ಶ್ರೇಯಸ್ ಅಂದು ಬೊಟೀಕ್ ಶಾಪಿನಿಂದ ಸುಂದರವಾದ ಹೂಗಳನ್ನು ಬಿಟ್ಟಿದ್ದ ನೀಲಿ ಆರ್ಕಿಡ್ ಗಿಡವನ್ನು ಪ್ಲಾಸ್ಟಿಕ್ ಮತ್ತು ಬಣ್ಣದ ರಿಬ್ಬನ್ ಸುತ್ತಿ ಅಲಂಕರಿಸಿದ್ದು ಅದನ್ನು ಮೋಹನ್ ಅವರ ಕೈಗಿತ್ತು ‘ಹ್ಯಾಪಿ ಬರ್ತ್ ಡೇ ಅಪ್ಪ, ಈ ಆರ್ಕಿಡ್ಡನ್ನು ನಾನು ಇಂಗ್ಲೆಂಡಿನಿಂದ ಬರುವವರೆಗೂ ಸರಿಯಾಗಿ ಆರೈಕೆ ಮಾಡಿ ನೋಡಿಕೊ’ ಎಂದನು. ಇದನ್ನು ಗಮನಿಸಿದ ಶೀಲಾ ‘ಮೋಹನ್ ನೋಡಿ, ಶ್ರೇಯಸ್ ನಿಮಗೆ ನೀಲಿ ಬಣ್ಣದ ಆರ್ಕಿಡ್ ಹುಡುಕಿ ತಂದಿದ್ದಾನೆ. ಸೈಕಿಯಾಟ್ರಿಸ್ಟ್ ಗಳಿಗೆ ನೀಲಿ ಬಣ್ಣದ ಆರ್ಕಿಡ್ ಇಸ್ ಎ ಪರ್ಫೆಕ್ಟ್ ಗಿಫ್ಟ್’ ಎಂದು ಅದನ್ನು ಮುಂದಕ್ಕೆ ವಿಸ್ತರಿಸಿ ‘ಸೈಕಾಲಜಿಯಲ್ಲಿ ನೀಲಿ ಮಹತ್ವದ್ದು, ಅದು ಪ್ರಶಾಂತತೆ, ನೀರವತೆ, ಸಮಾಧಾನ ಚಿತ್ತ ಮತ್ತು ಅನಂತತೆಯನ್ನು ಪ್ರತಿನಿಧಿಸುವ ಬಣ್ಣ, ಅದಕ್ಕೆ ಮನೋರೋಗಿಗಳಿಗೆ ಸಾಂತ್ವನ ನೀಡುವ ಶಕ್ತಿಯಿದೆ’ ಎಂದರು. ಶ್ರೇಯಸ್ ಕೂಡಲೇ ‘ಅಮ್ಮ ನೀನು ಸೈಕಾಲಜಿ ಲೆಕ್ಚರ್ ಕೊಡಬೇಡ, ನೀಲಿ ಬಣ್ಣ ಹುಡುಗರಿಗೆ, ಪಿಂಕ್ ಬಣ್ಣ ಹುಡುಗಿಯರಿಗೆ, ಸಿಂಪಲ್’ ಎಂದು ನಕ್ಕ. ಶ್ರೇಯಸ್ ಹೊರಡುವ ಸಮಯ ಹತ್ತಿರವಾಗುತ್ತಿತ್ತು. ಶ್ರೇಯಸ್ಸಿನ ಜೊತೆ ಮುಕ್ತವಾಗಿ ಕಾಲ ಕಳೆಯುವ ಉದ್ದೇಶದಿಂದ ಡಾ ಮೋಹನ್ ಒಂದೆರಡು ದಿನಗಳ ಮಟ್ಟಿಗೆ ತಮ್ಮ ಕ್ಲಿನಿಕ್ ಅಪಾಯಿಂಟ್ಮೆಂಟುಗಳನ್ನು ರದ್ದು ಮಾಡಲು ರಿಸೆಪ್ಷನಿಸ್ಟ್ ಜಯಾಳಿಗೆ ಆದೇಶ ನೀಡಿದರು. ಮೋಹನ್ ಅವರು ಶ್ರೇಯಸ್ಸಿನ ಜೊತೆ ಸೆಂಟ್ರಲ್ ಮಾಲಿನಲ್ಲಿದ್ದಾಗ, ಜಯಾ, ಮೋಹನ್ ಅವರಿಗೆ ಫೋನ್ ಮಾಡಿ ‘ಸರ್ ನಿಮ್ಮ ಪೇಶಂಟ್ ಸಚ್ಚಿನ್ ಅವರು ನಿಮ್ಮನ್ನು ತುರ್ತಾಗಿ ಕಾಣಬೇಕಂತೆ ಮೆಡಿಸಿನ್ ಕೆಲಸ ಮಾಡುತ್ತಿಲ್ಲವಂತೆ ಎಂದಳು. ನೋಡು ಜಯ ನಾನು ಈಗ ನನ್ನ ಮಗನ ಜೊತೆ ಕಾಲ ಕಳೆಯುವುದು ಮುಖ್ಯ, ಸಚ್ಚಿನ್ನಿಗೆ ಡಾಕ್ಟರ್ ಮೈಸೂರಿಗೆ ಹೋಗಿದ್ದಾರೆ, ಸೋಮವಾರ ಬೆಳಗ್ಗೆಯೇ ಸಿಗುವುದು ಎಂದು ಹೇಳಿಬಿಡು ಎಂದರು.

ಶ್ರೇಯಸ್ ಹೊರಡುವ ದಿನ ಬಂದೇಬಿಟ್ಟಿತು. ಶ್ರೇಯಸ್ಸನ್ನು ಮೋಹನ್ ಮತ್ತು ಶೀಲಾ ಬೆಂಗಳೂರಿನ ಏರ್ಪೋರ್ಟಿಗೆ
ತಲುಪಿಸಿ ಬಿಳ್ಕೊಟ್ಟರು. ಶ್ರೇಯಸ್ ಹೊಸದಾಗಿ ಕಂಡು ಕೊಂಡಿದ್ದ ಸ್ವಾತಂತ್ರದ ರುಚಿ ಅನುಭವಿಸಲು ಶುರುಮಾಡಿದ. ಏರ್ಪೋರ್ಟ್ ಡ್ಯೂಟಿ ಫ್ರೀ ಶಾಪಿನಲ್ಲಿ ತಿರುಗಿ ಅಲ್ಲಿ ಕೊಡುವ ಫ್ರೀ ಪೆರ್ಫ್ಯೂಮ್ ಗಳನ್ನು ಪರೀಕ್ಷಿಸಿ, ಕೆಲವು ಸ್ಯಾಂಪಲ್ ಗಿಟ್ಟಿದ್ದ ಬಾಟಲ್ಗಳಿಂದ ಧಾರಾಳವಾಗಿ ಮೈಗೆ ಸ್ಪ್ರೇ ಮಾಡಿಕೊಂಡ. ಕೆಲವು ರೆಬಾನ್ ಕಪ್ಪು ಕನ್ನಡಕವನ್ನು ಪ್ರಯತ್ನಿಸಿ ಕನ್ನಡಿಯಲ್ಲಿ ತನ್ನನ್ನು ತಾನೇ ಮೆಚ್ಚಿಕೊಂಡ. ಕಿರಿಯ ಸೇಲ್ಸ್ ಹುಡುಗಿಯರತ್ತ ನೋಡಿ ಕಿರು ನಗೆ ಬೀರಿದ. ಕೊನೆಗೆ ತನ್ನ ಗಡಿಯಾರ ನೋಡಿಕೊಂಡು ಲಂಡನ್ ಗೆ ಹೊರಟಿದ್ದ ಏರ ಇಂಡಿಯಾದ ವಿಮಾನದ ಗೇಟ್ ನಂಬರ್ 10 ರ ಕಡೆಗೆ ಬಿರಿಸುನ ಹೆಜ್ಜೆಯನ್ನು ಹಾಕಿ, ಚೆಕಿನ್ ಮುಗಿಸಿ ವಿಮಾನದ ಒಳಗೆ ಆಸೀನನಾದ. ತನ್ನ ಅಪ್ಪನಿಗೆ ಮೆಸೇಜ್ ಮಾಡಿ ಸರಾಗವಾಗಿ ಚೆಕಿನ್ ಆಗಿದೆಯೆಂದು ಅಮ್ಮನಿಗೂ ತಿಳಿಸುವಂತೆ ಹೇಳಿದ. ವಿಮಾನದಲ್ಲಿನ ಒಂದು ಹೆಣ್ಣು ಮಧುರ ಧ್ವನಿ ಲಂಡನ್ನಿಗೆ ಹೊರಟಿರುವ ಏರ ಇಂಡಿಯಾ 133 ವಿಮಾನಕ್ಕೆ ಎಲ್ಲರನ್ನು ಸ್ವಾಗತಿಸಿದ ನಂತರ ರಕ್ಷಣಾ ನಿಯಮಗಳನ್ನು ಬಿತ್ತರಿಸಲಾಯಿತು. ಸ್ವಲ್ಪ ದೂರ ಚಲಿಸಿದ ವಿಮಾನ ರನ್ವೇ ಬಳಿ ಆದೇಶಕ್ಕೆ ಕಾಯುತ್ತಿತ್ತು. ಒಂದು ಗಡುಸಾದ ಧ್ವನಿ ‘ಕ್ಯಾಬಿನ್ ಕ್ರೂ ರೆಡಿ ಫಾರ್ ಟೇಕ್ ಆಫ್’ ಎಂದಿತು. ಕಗ್ಗತ್ತಲಿನಲ್ಲಿ, ಗುಡುಗಿನ ಶಬ್ದದಲ್ಲಿ, ಶರವೇಗದಲ್ಲಿ ವಿಮಾನ ಕವಿದಿದ್ದ ಮೋಡಗಳನ್ನು ಭೇಧಿಸಿಕೊಂಡು ಮೇಲಕ್ಕೇರಿತು!

ಅಂದು ವಾರಾಂತ್ಯವಾದುದರಿಂದ ಮೋಹನ್ ಇನ್ನು ಹಾಸಿಗೆಯಲ್ಲೇ ಹೊರಳಾಡುತ್ತಾ ನಿಧಾನದಲ್ಲಿ ಎದ್ದರಾಯಿತು ಎನ್ನುವ ಅನಿಸಿಕೆಯಲ್ಲಿ ನಿದ್ದೆ ಎಚ್ಚರಗಳ ನಡುವಿನಲ್ಲಿದ್ದರು. ಅವರಿಗೆ ಒಂದು ಕರೆ ಬಂತು. ಏರ ಇಂಡಿಯಾ ಫ್ಲೈಟ್ 133 ವಿಮಾನವು ಬೆಂಗಳೂರನ್ನು ಬಿಟ್ಟ ಅರ್ಧಗಂಟೆಯೊಳಗೆ ತನ್ನ ಸಾಮರ್ಥ್ಯವನ್ನು ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿ ಬೆಂಕಿ ಹತ್ತಿಕೊಂಡಿರುವ ವಿಷಯವನ್ನು ತಿಳಿಸಿ, ಶ್ರೇಯಸ್ಸಿನ ಎಮರ್ಜೆನ್ಸಿ ಕಾಂಟ್ಯಾಕ್ಟ್ ವಿವರದಲ್ಲಿ ಡಾ ಮೋಹನ್ ಅವರ ಸಂಪರ್ಕದ ಮಾಹಿತಿ ಇದ್ದು ಅದನ್ನು ಬಳಿಸಿಕೊಂಡು ಫೋನ್ ಮಾಡಿರುವುದಾಗಿ ತಿಳಿಸಲಾಯಿತು. ಇನ್ನು ಹೆಚ್ಚಿನ ಮಾಹಿತಿ ಮತ್ತು ವಿವರಗಳೊಂದಿಗೆ ಮತ್ತೆ ಫೋನ್ ಮಾಡುವುದಾಗಿ ತಿಳಿಸಲಾಯಿತು. ಶ್ರೇಯಸ್ ಬದುಕ್ಕಿದ್ದಾನೋ ಇಲ್ಲವೋ ಎಂಬ ಸ್ಪಷ್ಟವಾದ ಉತ್ತರದ ನಿರೀಕ್ಷೆಯಲ್ಲಿ ನಿಮಿಷಗಳು ಗಂಟೆಗಳಾದವು. ಕೊನೆಗೂ ಅವರು ನಿರೀಕ್ಷಿಸಿದಂತೆ ಈ ಅನಾಹುತದಲ್ಲಿ ಪೈಲೆಟ್ಟನ್ನು ಒಳಗೊಂಡು ಎಲ್ಲರೂ ಮೃತರಾಗಿರುವರೆಂದು ತಿಳಿದು ಬಂತು. ಮೋಹನ್ ಮತ್ತು ಶೀಲಾ ದಂಪತಿಗಳಿಗೆ ತೀವ್ರ ಮಾನಸಿಕ ಆಘಾತ ಉಂಟಾಯಿತು. ಮನಶಾಸ್ತ್ರವನ್ನು ಆಳವಾಗಿ ಅರಿತುಕೊಂಡಿದ್ದ ದಂಪತಿಗಳು ತಮ್ಮ ಮನಸ್ಥಿತಿಯನ್ನು ಹತೋಟಿಯಲ್ಲಿಡಲು ಹೆಣಗಿ ಕಂಗಾಲಾದರು. ಮಳೆ ಸುರಿಸಿದ ಕಾರ್ಮೋಡಗಳು ಕರಗಬಹುದಾದರೂ ಮೋಹನ್ ದಂಪತಿಗಳ ಮನಸ್ಸಿನಲ್ಲಿ ಕವಿದಿದ್ದ ಕಾರ್ಮೋಡಗಳು ಅದೆಷ್ಟು ಕಣ್ಣೀರು ಸುರಿಸಿದರೂ ಕರಗಲಿಲ್ಲ. ಮತ್ತೆ ಮತ್ತೆ ಆವರಿಸುವ ಖಿನ್ನತೆಯನ್ನು ನಿಭಾಯಿಸುವುದು ಕಷ್ಟಕರವಾಯಿತು. ಬೇರೆಯವರಿಗೆ ಸರಾಗವಾಗಿ ಕೌನ್ಸಿಲ್ ಮಾಡುತ್ತಿದ್ದ ಅವರಿಗೆ ತಮ್ಮನ್ನು ತಾವೇ ಸಂತೈಸಿಕೊಳ್ಳುವುದು ಅಸಾಧ್ಯವೆನಿಸಿತು. ಮೋಹನ್ ಅವರ ಸ್ಟಡಿ ಕೋಣೆಯಲ್ಲಿದ್ದ ನೀಲಿ ಆರ್ಕಿಡ್ ತನ್ನ ದಳಗಳನ್ನು ಉದುರಿಸುತ್ತಾ ಮುರುಟಿಕೊಂಡಿತ್ತು. ಕಾವೇರಿಯ ಸಿಹಿ ನೀರಿನ ಜೊತೆ ತಮ್ಮ ಕಣ್ಣೀರನ್ನೂ ಕೂಡಿಸಿ ಎಷ್ಟು ಧಾರೆ ಎರೆದರೂ ಆರ್ಕಿಡ್ ಮತ್ತೆ ಚಿಗುರಲಿಲ್ಲ!

ಏರ ಇಂಡಿಯಾ ವಿಮಾನ ಅನಾಹುತದ ಬಗ್ಗೆ ಸಿವಿಲ್ ಏವಿಯೇಷನ್ ವಿಭಾಗದಿಂದ ಅಧಿಕೃತ ವರದಿ ಹೊರಗೆ ಬಂದು ಎಲ್ಲ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿತು. ಈ ವಿಚಾರವನ್ನು ಅರಿತ ಡಾ ಮೋಹನ್ ದಂಪತಿಗಳ ಪರಿವಾರದವರು, ಗೆಳೆಯರು ಮನೆಗೆ ಬಂದು ಅವರನ್ನು ಸಂತೈಸಲು ಪ್ರಯತ್ನಿಸಿದರು. ಹೀಗೆ ಶೋಕದಲ್ಲಿ ದಿನಗಳು ಕಳೆದವು. ಸಿವಿಲ್ ಏವಿಯೇಷನ್ ವಿಭಾಗದಿಂದ ಮೊದಲ ಹಂತದ ತನಿಖಾ ರಿಪೋರ್ಟ್ ಪ್ರಕಟಗೊಂಡಿತು. ಏರ್ ಇಂಡಿಯಾ 133 ವಿಮಾನದ ಎರಡು ಎಂಜಿನ್ಗಳ ವೈಫಲ್ಯದಿಂದ ಈ ಅಪಘಾತ ಉಂಟಾಯಿತು, ಆದರೆ ಈ ವೈಫಲ್ಯದ ಮೂಲ ಕಾರಣವನ್ನು ಬ್ಲ್ಯಾಕ್ ಬಾಕ್ಸ್ ರೆಕಾರ್ಡರ್ ಪರೀಕ್ಷೆಯ ನಂತರೆವೇ ಬಹಿರಂಗಪಡಿಸಲಾಗುವುದು ಎಂದು ನಿರ್ಧರಿಸಲಾಯಿತು. ಈ ವರದಿಯು ಸೋಷಿಯಲ್ ಮೀಡಿಯಾಗಳನ್ನು ತಲುಪಿ ಜನರು ತಮಗೆ ತಿಳಿದಂತೆ ಕಾರಣಗಳನ್ನು ವ್ಯಾಖ್ಯಾನಿಸ ತೊಡಗಿದರು. ಮೋಹನ್ ಅವರನ್ನು ಕಾಣಲು ಬಂದಿದ್ದ ವೆಂಕಟೇಶ್ ‘ಮೋಹನ್ ಈ ಅನಾಹುತಕ್ಕೆ ಮುಸ್ಲಿಂಮರೆ ಕಾರಣ. ಪಹಲ್ಗಾಮ್ ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಸರಿಯಾಗಿ ಪೆಟ್ಟು ತಿಂದ ಪಾಕಿಸ್ತಾನಿಗಳು ಮತ್ತು ಇಂಡಿಯಾದಲ್ಲಿರುವ ಅವರ ಕುಲ ಬಾಂಧವರು ಏನೋ ಒಳಸಂಚು ನಡೆಸಿ ವಿಮಾನದಲ್ಲಿ ಕುತಂತ್ರ ನಡೆಸಿದ್ದಾರೆ. ಎರಡು ಇಂಜನ್ ಫೇಲ್ ಆಗುವುದು ಅಂದರೇನು, ಇದು ಲಂಡನ್ನಿಗೆ ಹೋರಾಟ ಅಂತರಾಷ್ಟ್ರಿಯ ಡ್ರೀಮ್ ಲೈನರ್, ಇಲ್ಲಿ ಅದೆಷ್ಟೋ ತಾಂತ್ರಿಕ ಚೆಕಿಂಗ್ ಮತ್ತು ಕ್ಲಿಯರೆನ್ಸ್ ಇರುತ್ತೆ. ಇಲ್ಲಿ ಖಂಡಿತ ಸಾಬರ ಕೈವಾಡವಿದೆ. ಇದು ಸಾಬೀತಾಗಿದ್ದಲ್ಲಿ ಈ ಬಡ್ಡಿಮಕ್ಕಳಿಗೆ ಹಿಂದೂಗಳು ಸರಿಯಾದ ಬುದ್ಧಿ ಕಲಿಸಬೇಕು’ ಎಂದು ಬಹಳ ಆವೇಶದಿಂದ ವೆಂಕಟೇಶ್ ನುಡಿದರು. ಅದಕ್ಕೆ ಮೋಹನ್ ‘ಅಲ್ಲಾ ವೆಂಕಿ ನೀ ಸ್ವಲ್ಪ ಸುಮ್ಮನಿರು, ಈ ಅನಾಹುತಕ್ಕೆ ಕಾರಣ ಇನ್ನು ಸ್ಪಷ್ಟವಾಗಿಲ್ಲ, ಇಂತಹ ಸನ್ನಿವೇಶದಲ್ಲಿ ನೀನು ನಿನ್ನ ಊಹೆಗಳ ಮೇಲೆ ಅವರಿವರನ್ನು ಅನುಮಾನಿಸುವುದು ತಪ್ಪು. ಫೈನಲ್ ರಿಪೋರ್ಟ್ ಬರುವವರೆಗೂ ಇದರ ಬಗ್ಗೆ ಚರ್ಚೆ ಮಾಡುವುದು ತಪ್ಪು, ಇದು ನನ್ನ ಪರ್ಸನಲ್ ಟ್ರ್ಯಾಜಿಡಿ, ದಯವಿಟ್ಟು ಇದನ್ನು ಹಿಂದೂ ಮುಸ್ಲಿಂ ಸಮಸ್ಯೆಯಾಗಿ ಮಾಡಿ ರಾಜಕೀಯ ತರಬೇಡ. ಸ್ವಲ್ಪ ಸಂಯಮದಿಂದ ವರ್ತಿಸುವುದು ಒಳ್ಳೇದು’ ಎಂದರು.

ಅನಾಹುತದನಂತರ ಹಲವಾರು ವಾರಗಳೇ ಕಳೆದವು. ಶೋಕ ತಪ್ತರಾಗಿದ್ದ ಮೋಹನ್ ದಂಪತಿಗಳು ಸಾವಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು. ಮೋಹನ್ ತಮ್ಮ ಕೆಲಸಕ್ಕೆ ಮರಳಿದ್ದರು. ಒಂದು ದಿನ ಮೋಹನ್ ಕೆಲಸದಲ್ಲಿ ನಿರತರಾದಾಗ ಒಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂತು. ಮೋಹನ್ ಕಾಲ್ ಸ್ವೀಕರಿಸಿದರು.

‘ಗುಡ್ ಮಾರ್ನಿಂಗ್ ಡಾಕ್ಟರ್ ಮೋಹನ್, ನಾನು ಅಜಯ್ ತಿವಾರಿ ಏರ್ ಕ್ರ್ಯಾಷ್ ತನಿಖೆ ವಿಭಾಗದಿಂದ ಮಾತನಾಡುತ್ತಿದ್ದೇನೆ, ನಿಮ್ಮ ಜೊತೆ ಕಾನ್ಫಿಡೆಂಶಿಯಲ್ ವಿಚಾರ ಚರ್ಚೆ ಮಾಡಬೇಕು’ ಎಂದರು

‘ಪ್ಲೀಸ್ ಗೋ ಅಹೆಡ್’ ಎಂದರು ಮೋಹನ್

'ಮೊದಲಿಗೆ ನಿಮಗೂ ಮತ್ತು ನಿಮ್ಮ ಪತ್ನಿ ಶೀಲಾ ಅವರಿಗೂ ನನ್ನ ಸಂತಾಪವನ್ನು ಸೂಚಿಸಲು ಇಚ್ಛಿಸುತ್ತೇನೆ, ಸಾರೀ ಟು ಹಿಯರ್ ಎಬೌಟ್ ಯುವರ್ ಸನ್ ಶ್ರೇಯಸ್’

ಧೀರ್ಘ ನಿಟ್ಟುಸಿರು ಬಿಟ್ಟ ಮೋಹನ್ ‘ಧನ್ಯವಾದಗಳು, ಹೇಳಿ ಅಜಯ್’ ಎಂದರು

‘ಡಾಕ್ಟರ್, ಲಂಡನ್ನಿಗೆ ಹೊರಟಿದ್ದ ಏರ ಇಂಡಿಯಾ 133 ವಿಮಾನದ ಆಕ್ಸಿಡೆಂಟ್ ಬಗ್ಗೆ ಇದುವರೆಗಿನ ತನಿಖೆಯ ಪ್ರಕಾರ ವಿಮಾನದ ಎರಡು ಎಂಜಿನ್ಗಳ ವೈಫಲ್ಯ ಕಾರಣವಾಗಿದೆ. ಎರಡು ಎಂಜಿನ್ಗಳಿಗೆ ಇಂಧನ ಸರಬರಾಜಾಗಲು ಕಾಕ್ ಪಿಟ್ಟಿನ ಪ್ಯಾನೆಲ್ ಒಳಗಿನ ಇಂಧನ ನಿಯಂತ್ರಣದ ಸ್ವಿಚ್ ಆನ್ ಆಗಿರಬೇಕು. ಆದರೆ ಈ ಸನ್ನಿವೇಶದಲ್ಲಿ ಅದು ಆಫ್ ಆಗಿತ್ತು. ಅದು ಏಕೆ ಇದ್ದಕ್ಕಿದಂತೆ ಅಂತರಿಕ್ಷದಲ್ಲಿ ಆಫ್ ಆಯಿತು ಎನ್ನುವುದಕ್ಕೆ ವಿವರಣೆ ಇರಲಿಲ್ಲ. ಇತ್ತೀಚಿಗೆ ಕಾಕ್ ಪಿಟ್ ಬ್ಲಾಕ್ ಬಾಕ್ಸ್ ಪರೀಕ್ಷಿಸಿದಾಗ ಇಬ್ಬರ ಪೈಲೆಟ್ಗಳ ನಡುವಿನ ಸಂಭಾಷಣೆಯನ್ನು ಆಧರಿಸಿ ಆ ಇಂಧನ ಸ್ವಿಚ್ಚನ್ನು ಒಬ್ಬ ಪೈಲೆಟ್ ಉದ್ದೇಶ ಪೂರ್ವಕವಾಗಿ ಸ್ವಿಚ್ ಆಫ್ ಮಾಡಿರುವುದಾಗಿ ತಿಳಿದುಬಂದಿದೆ. ಇದಕ್ಕೆ ತಾಂತ್ರಿಕ ತೊಂದರೆಗಳು ಕಾರಣವಲ್ಲ ಎಂಬುದು ತಜ್ಞರ ಅಭಿಪ್ರಾಯ. ಒಬ್ಬ ನುರಿತ ಪೈಲೆಟ್ ಹೀಗೇಕೆ ತನ್ನ ವಿಮಾನವನ್ನು ತಾನೇ ನೆಲಕ್ಕೆ ಉರುಳಿಸಿದ, ಇದು ಆತ್ಮ ಹತ್ಯೆಯೇ, ಅವನಿಗೆ ಮಾನಸಿಕ ತೊಂದರೆಗಳಿತ್ತೆ ಎಂಬ ಸಹಜ ಪ್ರಶ್ನೆಗಳು ಉದ್ಭವಿಸಿವೆ. ಈ ಸೀನಿಯರ್ ಅನುಭವಿ ಕ್ಯಾಪ್ಟನ್ ಹೆಸರು ಸಚ್ಚಿನ್, ಸಚ್ಚಿನ್ ಶಾನಭಾಗ್. ಕ್ಯಾಪ್ಟನ್ ಸಚ್ಚಿನ್ನಿಗೆ ಮಾನಸಿಕ ಅಸ್ವಸ್ಥತೆ ಇತ್ತು ಎಂಬ ವಿಚಾರ ಹಿಂದೆ ಗೌಪ್ಯವಾಗಿದ್ದು ಈಗ ಅದರ ಬಗ್ಗೆ ಅನುಮಾನವಿದೆ. ನಮ್ಮ ಮೆಡಿಕಲ್ ರೆಕಾರ್ಡಿನಲ್ಲಿ ಅವನಿಗೆ ಮಾನಸಿಕ ತೊಂದರೆ ಇತ್ತು ಎಂಬುದು ದಾಖಲಾಗಿಲ್ಲ. ಹಿಂದಿನ ವೈದ್ಯಕೀಯ ಪರೀಕ್ಷೆಯಲ್ಲಿ ನಮ್ಮ ವೈದ್ಯರು ಅವನಿಗೆ ಮೆಂಟಲ್ ಹೆಲ್ತ್ ಕ್ಲಿಯರೆನ್ಸ್ ಕೊಟ್ಟಿದ್ದಾರೆ’

‘ಹೌ ಡಿಡ್ ಹೀ ಸ್ಲಿಪ್ ಥ್ರೂ ದಿ ನೆಟ್!’ ಎಂದು ಅಚ್ಚರಿಗೊಂಡರು ಮೋಹನ್

‘ಡಾಕ್ಟರ್, ಅನಾಹುತವಾದ ಮೇಲೆ ನಾವು ಸಚ್ಚಿನ್ ಮನೆಗೆ ತೆರಳಿ ಅವನ ಲ್ಯಾಪ್ ಟಾಪ್ ಮತ್ತು ಇತರ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡು ನೋಡಿದಾಗ ನಿಮ್ಮ ಮೆಡಿಕಲ್ ಸಮ್ಮರಿ ಮತ್ತು ಪ್ರಿಸ್ಕ್ರಿಪ್ಷನ್ ಗಳು ದೊರಕಿದವು. ಅವನ ವೃದ್ಧ ತಂದೆಯವರು ಬಹಳಷ್ಟು ಸಹಕರಿಸಿದರು. ನೀವು ಸಚ್ಚಿನ್ನಿನ ಖಾಸಗಿ ಸೈಕ್ಯಾಟರಿಸ್ಟ್ ಎಂದು ತಿಳಿದು ಬಂತು. ದಯವಿಟ್ಟು ನೀವು ಹೇಳಿಕೆ ಕೊಟ್ಟು ಖಾತ್ರಿಪಡಿಸಬೇಕು’

‘ಖಂಡಿತ ಅಜಯ್, ಇದು ನನಗೆ ಆಶ್ಚರ್ಯದ ಸಂಗತಿ. ಸಚಿನ್ ನನ್ನ ಪೇಶಂಟ್ ಎಂಬುದು ಸರಿ, ಆದರೆ ಅವನು ನನ್ನ ಬಳಿ ತಾನು ಸಾಫ್ಟ್ ವೆರ್ ಎಂಜಿನಿಯರ್ ಎಂದು ಸುಳ್ಳು ಹೇಳಿದ್ದಾನೆ, ನನಗೆ ಅವನು ಪೈಲೆಟ್ ಎಂಬ ವಿಚಾರ ಒಂದು ವೇಳೆ ಗೊತ್ತಾಗಿದ್ದರೂ ನಾನು ಅದನ್ನು ಪೇಶಂಟ್ ಕಾನ್ಫಿಡೆಂಶಿಯಾಲಿಟಿ ಬದ್ಧತೆಯಲ್ಲಿ ಬಹಿರಂಗ ಪಡಿಸುವುದು ಕಷ್ಟಕರವಾಗುತ್ತಿತ್ತು’

‘ಹೌದು ಡಾಕ್ಟರ್ ನಮ್ಮ ಎಷ್ಟೋ ಪೈಲೆಟ್ಗಳು ತಮಗೆ ಮಾನಸಿಕ ತೊಂದರೆ ಇದೆ ಎನ್ನುವುದನ್ನು ಬಹಿರಂಗ ಪಡಿಸುವುದಿಲ್ಲ. ನಮ್ಮ ಪೈಲೆಟ್ಗಳಲ್ಲಿ ಅದು ಇನ್ನೂ ಬಾಹಿರವಾದ ಸಂಗತಿ. ಆರ್ಥಿಕವಾಗಿ ಕಷ್ಟದಲ್ಲಿರುವ ಪೈಲೆಟ್ಗಳಿಗೆ ತಮ್ಮ ಕೆಲಸ ಕಳೆದುಕೊಳ್ಳುವ ಭಯ’

‘ಅದು ಹಾಗಿರಬೇಕಿಲ್ಲ ಇಟ್ ಇಸ್ ಸ್ಯಾಡ್’ ಎಂದರು ಮೋಹನ್

‘ಒಹ್ ಇನ್ನೊಂದು ವಿಚಾರ ಈಗ ಥಟ್ ಅಂತ ಹೊಳೆಯಿತು ಅಜಯ್. ಶ್ರೇಯಸ್ ಹೊರಡವು ಒಂದೆರಡು ದಿನಗಳ ಮುಂಚೆ ಕ್ಲಿನಿಕ್ಕಿಗೆ ಸಚ್ಚಿನ್ ಫೋನ್ ಮಾಡಿ ನನ್ನನ್ನು ಅರ್ಜೆಂಟ್ ಆಗಿ ನೋಡಬೇಕು, ಆಂಟಿ ಡೆಪ್ರೆಸ್ಸೆಂಟ್ ಮೆಡಿಸಿನ್ ಕೆಲಸ ಮಾಡುತ್ತಿಲ್ಲ ಎಂದು ಮೆಸೇಜ್ ಬಿಟ್ಟಿದ್ದ. ನಾನು ಆಗ ಶ್ರೇಯಸ್ ಜೊತೆ ಸಮಯ ಕಳೆಯಲು ರಜೆಯಲ್ಲಿದ್ದೆ. ಆ ಹಂತದಲ್ಲಿ ಬಹುಶ ಸಚ್ಚಿನ್ ಕ್ರೈಸಿಸ್ ಪಾಯಿಂಟ್ ತಲುಪಿ ಅವನಿಗೆ ಸೂಯಿಸೈಡ್ ಆಲೋಚನೆಗಳು ಉಂಟಾಗಿರಬಹುದು. ಓಹ್ ಮೈ ಗಾಡ್!! ನೋಡಿ ಅಜಯ್ ನಾನು ಎಂಥ ತಪ್ಪು ಕೆಲಸ ಮಾಡಿದೆ. ನಾನು ಅಂದು ಸಚ್ಚಿನನ್ನು ತುರ್ತಾಗಿ ನೋಡಿದ್ದರೆ, ಅವನಿಗೆ ಕೌನ್ಸಿಲ್ ಮಾಡಬಹುದಿತ್ತು, ಮೆಡಿಸಿನ್ ಬದಲಾಯಿಸಬಹುದಿತ್ತು ಬಹುಶಃ ಈ ಏರ್ ಆಕ್ಸಿಡೆಂಟನ್ನು ತಪ್ಪಿಸಬಹುದಾಗಿತ್ತು. ಇಟ್ ವಾಸ್ ಎ ಮಿಸ್ಡ್ ಆಪರ್ಚುನಿಟಿ, ಶ್ರೇಯಸ್ ಅಷ್ಟೇ ಅಲ್ಲ ನೂರಾರು ಪ್ರಯಾಣಿಕರು ಸಾಯಬೇಕಿರಲಿಲ್ಲ’ ಎಂದು ಮೋಹನ್ ಗದ್ಗದಿಸುವ ದನಿಯಲ್ಲಿ ಹೇಳುವಾಗ ಅವರ ಕಣ್ಣುಗಳು ಒದ್ದೆಯಾದವು.

ಅಜಯ್ ಕೂಡಲೇ ‘ಡಾಕ್ಟರ್ ನಿಮ್ಮನ್ನು ನೀವು ಬ್ಲೆಮ್ ಮಾಡಿಕೊಳ್ಳಬೇಡಿ. ಇದು ವ್ಯವಸ್ಥೆಯ ವೈಫಲ್ಯ. ಇದರ ಬಗ್ಗೆ ಧೀರ್ಘವಾಗಿ ಆಲೋಚಿಸ ಬೇಕಾಗಿದೆ. ಈ ವಿಚಾರವನ್ನು ದಯವಿಟ್ಟು ಬಹಿರಂಗಪಡಿಸಬೇಡಿ. ತನಿಖೆಯ ರಿಪೋರ್ಟ್ ಇನ್ನು ಕೆಲವೇ ದಿನಗಳಲ್ಲಿ ಪ್ರಕಟವಾಗುತ್ತಿದೆ. ನಾನು ಹೊರಡಬೇಕು, ಮತ್ತೆ ಕರೆ ಮಾಡುತ್ತೇನೆ, ಥ್ಯಾಂಕ್ಯೂ ಎನ್ನುತ್ತಾ ಕರೆಯನ್ನು ಮುಗಿಸಿದರು.


ಕೆಲವು ವರುಷಗಳ ತರುವಾಯ;
ಭಾರತ ಸರ್ಕಾರದ ಸಿವಿಲ್ ಏವಿಯೇಷನ್ ವಿಭಾಗದ ವೈದ್ಯಕೀಯ ಬೋರ್ಡಿನಲ್ಲಿ ಮೋಹನ್ ಅವರನ್ನು ತಜ್ಞರಾಗಿ ಆಯ್ಕೆಮಾಡಲಾಯಿತು. ಅವರ ಮಾರ್ಗದರ್ಶನದಲ್ಲಿ ಪೈಲೇಟ್ಗಳ ದೈಹಿಕ ಮತ್ತು ಮಾನಸಿಕ ಅರೋಗ್ಯ ತಪಾಸಣೆ, ಏನು, ಹೇಗೆ ಎಂಬ ವಿಷಯಗಳನ್ನು ಕುರಿತು ಹಲವಾರು ಸಲಹೆ ಸೂಚನೆಗಳನ್ನು ಒಳಗೊಂಡ ನೂತನ ದಾಖಲೆಯನ್ನು ಹೊರತರಲಾಯಿತು. ಪೈಲೆಟ್ಗಳು ತಮಗೆ ಮಾನಸಿಕ ಅಸ್ವಸ್ಥತೆ ಇದ್ದಲ್ಲಿ ಅದನ್ನು ಯಾವುದೇ ಮಾನಭಂಗ ಅಥವಾ ಒತ್ತಡಗಳಿಲ್ಲದೆ ಬಹಿರಂಗಗೊಳಿಸಲು ಉತ್ತೇಜನ ನೀಡಲಾಯಿತು, ಹಾಗೆ ಸಹಾನುಭೂತಿಯಿಂದ ಎಲ್ಲ ರೀತಿಯ ಸಹಕಾರ, ಕೌನ್ಸಿಲಿಂಗ್ ಮತ್ತು ನೆರವು ನೀಡುವುದರ ಬಗ್ಗೆ ಆಶ್ವಾಸನೆ ನೀಡಲಾಯಿತು. ಇದರ ಜೊತೆ ಜೊತೆಗೆ ವೈದ್ಯರಿಗೂ ಕೆಲವು ವಿಶೇಷ ಸನ್ನಿವೇಶಗಳಲ್ಲಿ ಕಾನ್ಫಿಡೆಂಶಿಯಾಲಿಟಿ ಬದ್ಧತೆಯನ್ನು ಏಕೆ, ಯಾವಾಗ ಮುರಿಯಬಹುದು ಎಂಬ ವಿಚಾರದಲ್ಲಿ ಮಾರ್ಗದರ್ಶನ ನೀಡಲಾಯಿತು. ಇಂಡಿಯನ್ ಪೈಲೆಟ್ ಅಸೋಸಿಯೇಷನ್ ಡಾ ಮೋಹನ್ ಅವರ ವರದಿಯನ್ನು ಸಂತೋಷದಿಂದ ಸ್ವಾಗತಿಸಿತು. ಮೋಹನ್ ದಂಪತಿಗಳು ಭಾರತೀಯ ಪೈಲೆಟ್ಗಳ ಮಾನಸಿಕ ತೊಂದರೆಗಳಿಗೆ ನೆರವು ನೀಡುವ ಸಲುವಾಗಿ 'ಬ್ಲೂ ಆರ್ಕಿಡ್' ಎಂಬ ಹೆಸರಲ್ಲಿ ಚಾರಿಟಿ ಸಂಸ್ಥೆಯನ್ನು ಹುಟ್ಟುಹಾಕಿದರು.
***

ಈ ಕಥೆಯ ಬಹುಭಾಗಗಳು ಲೇಖಕರ ಕಲ್ಪನೆಯಾಗಿದ್ದು ಇದರಲ್ಲಿನ ಕೆಲವು ಸನ್ನಿವೇಶಗಳು ನೈಜ ಘಟನೆಯನ್ನು ಆಧರಿಸಿವೆ



ಕನ್ನಡ ಸಾಹಿತ್ಯಕ್ಕೆ ಶರಣರ ದಾಸರ ಮತ್ತು ಸಂತರ ಕೊಡುಗೆ ಭಾಗ 1

ಡಾ ಜಿ ಎಸ್ ಶಿವಪ್ರಸಾದ್ (ಫೋಟೋ ಕೃಪೆ ಗೂಗಲ್)

ಕೆಲವು ದಿನಗಳ ಹಿಂದೆ ಯು.ಕೆ ಕನ್ನಡ ಬಳಗದ  ಯುಗಾದಿ ಹಬ್ಬದ ಸಂಭ್ರಮದಲ್ಲಿ ಅನಿವಾಸಿ ಸಾಹಿತ್ಯಗೋಷ್ಠಿಯನ್ನು    ಏರ್ಪಡಿಸಲಾಗಿತ್ತು. ಈ ಸಾಹಿತ್ಯ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಶರಣರ, ದಾಸರ ಮತ್ತು ಸಂತರ ಕೊಡುಗೆ’ಯನ್ನು ಕುರಿತು ಅನಿವಾಸಿ ಸದಸ್ಯರು ತಮ್ಮ ಚರ್ಚೆಯನ್ನು ಮಂಡಿಸಿದರು. ಈ ಗೋಷ್ಠಿಯಲ್ಲಿ ಶರಣರ  
ಕೊಡುಗೆಯ ಬಗ್ಗೆ ನಾನು ಮಾತನಾಡಿದೆ, ಶರಣೆಯರ ಬಗ್ಗೆ ದಾಕ್ಷಾಯಿಣಿ ಗೌಡ, ದಾಸ ಸಾಹಿತ್ಯದ ಬಗ್ಗೆ ಲಕ್ಷ್ಮೀ ನಾರಾಯಣ ಗುಡೂರ್, ಕೊನೆಯದಾಗಿ ಸಂತ ಶಿಶುನಾಳ ಶರೀಫರ ಬಗ್ಗೆ ಶ್ರೀವತ್ಸ ದೇಸಾಯಿ ಅವರು ಮಾತನಾಡಿದರು. ಚರ್ಚೆಗಳ ಮಧ್ಯೆ ದಾಸರ ಮತ್ತು ಶರಣರ ಗೀತೆಗಳನ್ನು ಗಾಯಕಿಯರಾದ ರಶ್ಮಿ ಮಂಜುನಾಥ್ ಮತ್ತು ಅನ್ನಪೂರ್ಣ ಆನಂದ್ ಪ್ರಸ್ತುತಪಡಿಸಿದರು. ಸದಸ್ಯರು ಮಂಡಿಸಿದ ಈ ಚರ್ಚೆಗಳನ್ನು ಅನಿವಾಸಿ ತಾಣದಲ್ಲಿ ನಾಲ್ಕು ಹಂತಗಳಲ್ಲಿ ಪ್ರಕಟಿಸುವುದೆಂದು ಗೋಷ್ಠಿಯಲ್ಲಿ ಸಮ್ಮತಿಸಲಾಯಿತು. ಈ ನಾಲ್ಕು ವಿಷಯಗಳಿಗೆ ಪೂರಕವಾದ ಹಿನ್ನೆಲೆಯನ್ನು ಒದಗಿಸಿ ನಾನು ಮಂಡಿಸಿರುವ "ಶರಣ ಸಾಹಿತ್ಯದ ಒಟ್ಟಾರೆ ಆಶಯಗಳು, ಸಾಮಾಜಿಕ ನಿಲುವುಗಳು ಮತ್ತು ಮೌಲ್ಯಗಳು" ಎಂಬ ಬರಹವನ್ನು ಈ ವಾರದ ಅನಿವಾಸಿ ಸಂಚಿಕೆಯಲ್ಲಿ ನಿಮಗೆ ತಲುಪಿಸುತ್ತಿದ್ದೇನೆ.

ಕನ್ನಡ ಸಾಹಿತ್ಯಕ್ಕೆ ಶರಣರ ದಾಸರ ಮತ್ತು ಸಂತರ ಕೊಡುಗೆ - ಕೆಲವು ಹಿನ್ನೆಲೆ ವಿಚಾರಗಳು;
ಕನ್ನಡ ಸಾಹಿತ್ಯಕ್ಕೆ 1500 ವರ್ಷಗಳ ಇತಿಹಾಸವಿದೆ. ಇಲ್ಲಿ ಹಳೆಗನ್ನಡ (400 – 1100CE), ನಡುಗನ್ನಡ (1100 -1700 CE) ಮತ್ತು ಹೊಸಗನ್ನಡ (1700 - ಇಲ್ಲಿಯವರೆಗೆ) ಎಂಬ ಮೂರು ಕಾಲಘಟ್ಟಗಳನ್ನು ಗುರುತಿಸಬಹುದು. ಹಳೆಗನ್ನಡ ಕಾಲಘಟ್ಟದಲ್ಲಿ ಜೈನರು ಪ್ರಧಾನವಾಗಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದರು. ಇವರಲ್ಲಿ ಪಂಪ, ರನ್ನ ಮತ್ತು ಪೊನ್ನ ಮುಖ್ಯವಾದ ಕವಿಗಳು. ಅವರು ಜೈನ ತೀರ್ಥಂಕರರನ್ನು ಕುರಿತಾಗಿ ಅಷ್ಟೇ ಅಲ್ಲದೆ ಮಹಾಭಾರತದ ವಿಷಯವನ್ನು ಆಯ್ಕೆಮಾಡಿ ಮಹಾ ಕಾವ್ಯವನ್ನು ರಚಿಸದರು. ಇನ್ನು 12ನೇ ಶತಮಾನದಲ್ಲಿ ಶರಣರು ಅಂದರೆ ಬಸವಣ್ಣನವರ ಅನುಯಾಯಿಗಳಾದ ವೀರಶೈವ ಮತ್ತು ಹೊಸದಾಗಿ ಹುಟ್ಟಿಕೊಂಡ ಲಿಂಗಾಯಿತ ಎಂಬ ಮತದವರು ವಚನಗಳನ್ನು ರಚಿಸಿದರು. ಈ ವಚನಗಳು ಸಾಮಾಜಿಕ ಕ್ರಾಂತಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಸಾಹಿತ್ಯ ಎನ್ನಬಹುದು. ಇನ್ನು 15ನೇ ಶತಮಾನದಲ್ಲಿ ವೈಷ್ಣವರು (ಹರಿದಾಸರು ಎಂದು ಕೂಡ ಗುರುತಿಸ ಬಲ್ಲವರು) ಪ್ರಧಾನವಾಗಿ ಭಕ್ತಿರಸವನ್ನು ಮತ್ತು ಕೆಲವು ಸಾಮಾಜಿಕ ಹಿತೋಪದೇಶಗಳನ್ನು ಒಳಗೊಂಡ ಕೀರ್ತನೆಗಳನ್ನು ರಚಿಸಿದರು. ಇವು ಮುಖ್ಯವಾಗಿ ಮಧ್ವಾಚಾರ್ಯರ ದ್ವೈತ ಅಧ್ಯಾತ್ಮ ಪರಿಕಲ್ಪನೆಯನ್ನು ಆಧರಿಸಿರುವ ಕೀರ್ತನೆಗಳು ಎಂದು ಗುರುತಿಸಬಹುದು. ಇದು ಹುಟ್ಟಿಕೊಂಡದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್ನ ಬಹುದು. ಶರಣ ಮತ್ತು ದಾಸ ಸಾಹಿತ್ಯಕ್ಕೆ ಪರ್ಯಾಯವಾಗಿ, ಸಮಾಜದ ಅನಕ್ಷರಸ್ತ ರೈತಾಪಿ ಮತ್ತು ಜನ ಸಾಮಾನ್ಯರು ನಡುವೆ ಕರ್ನಾಟಕ ಪ್ರಾದೇಶಿಕ ನೆಲೆಗಳಲ್ಲಿ ಹುಟ್ಟಿಕೊಂಡ ಮತ್ತು ಜಾನಪದ ಸಂಪ್ರದಾಯವನ್ನು ಹೋಲುವ ಸಾಹಿತ್ಯವನ್ನು ತತ್ವ ಪದಗಳು ಎಂದು ಗುರುತಿಸಬಹುದು. ಇದರಲ್ಲಿ ಭಕ್ತಿ ಮತ್ತು ಸಾಮಾಜಿಕ ವಿಷಯಗಳನ್ನು ಆಧರಿಸಿದ ಕೃತಿಗಳಿವೆ. ಶಿಶುನಾಳ ಶರೀಫರ ತತ್ವ ಪದಗಳನ್ನು ಈ ಗುಂಪಿಗೆ ಸೇರಿಸಬಹುದು. ಶಿಶುನಾಳ ಶರೀಫರು 19ನೇ ಶತಮಾನದಲ್ಲಿ ಬಾಳಿದವರು. ಶರಣ ದಾಸರ ಸಂತರ ಕೊಡುಗೆ ಅಪಾರವಾದದ್ದು, ಅವರು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಎದ್ದು ನಿಲ್ಲುವ ಬರಹಗಾರರು. ದೇವರು, ಧರ್ಮ ಎಂಬ ವಿಷಯಗಳಲ್ಲದೆ ಸಾಮಾಜಿಕ ಬದುಕಿಗೆ ಬೇಕಾದ ಮಾನವೀಯ ಮೌಲ್ಯಗಳನ್ನು ಸದ್ಭಾವನೆಗಳನ್ನು ಎತ್ತಿಹಿಡಿದಿದ್ದಾರೆ. ಅವರ ಬರಹಗಳಲ್ಲಿ ಸಾಹಿತ್ಯಿಕ ಮೌಲ್ಯಗಳು ಇವೆ. ಆದುದರಿಂದಲೇ ಅವು ಕಾಲಾತೀತವಾದ ಉತ್ತಮ ಸಾಹಿತ್ಯಗಳಾಗಿವೆ.

- ಸಂ


*

“ಶರಣ ಸಾಹಿತ್ಯದ ಒಟ್ಟಾರೆ ಆಶಯಗಳುಸಾಮಾಜಿಕ ನಿಲುವುಗಳು ಮತ್ತು ಮೌಲ್ಯಗಳು

ಡಾ ಜಿ ಎಸ್ ಶಿವಪ್ರಸಾದ್

ಶರಣ ಸಾಹಿತ್ಯದ ಮುಖ್ಯಾಂಶಗಳು ಎಂದರೆ: ಎಲ್ಲರನ್ನು ಒಳಗೊಳ್ಳುವಿಕೆ, ವೈಚಾರಿಕ ಪ್ರಜ್ಞೆ, ಸಂಪ್ರದಾಯವನ್ನು ಪ್ರಶ್ನಿಸುವ, ಧಿಕ್ಕರಿಸುವ ದಿಟ್ಟ ನಿಲುವು, ಧರ್ಮದ ನಿರಪೇಕ್ಷೆ, ದೇವಸ್ಥಾನದ ನಿರಾಕರಣೆ, ಜಾತಿ ವ್ಯವಸ್ಥೆಯ ನಿರಾಕರಣೆ, ಮೂಢ ನಂಬಿಕೆಗಳ ನಿರಾಕರಣೆ, ಸಮಾಜ ಮತ್ತು ಸಂಸಾರ ಮುಖಿಯಾಗಿರುವ ಚಿಂತನೆಗಳು, ಸ್ತ್ರೀ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಪ್ರಜಾ ಪ್ರಭುತ್ವದ ಪರಿಕಲ್ಪನೆ, ಮಾನವೀಯ ಮೌಲ್ಯಗಳಾದ ದಯೆ, ಅನುಕಂಪೆ, ವಚನ ನಿಷ್ಠೆ, ದಾಸೋಹ, ಕಾಯಕವೇ ಕೈಲಾಸ ಎಂಬ ಧ್ಯೇಯಗಳ ಬೋಧನೆ ಮತ್ತು ಆಚರಣೆ. ಇವೆಲ್ಲವನ್ನೂ ಒಟ್ಟಾರೆ ನೋಡಿದಾಗ ಬಹಳ ಉದಾರವಾದ ನೀತಿ ಎಂದು ಗುರುತಿಸಬಹುದು. 20ನೇ ಶತಮಾನದ ಯುರೋಪಿನಲ್ಲಿ ಹಲವಾರು ಪ್ರೌಢ ಚಿಂತಕರು ಧೀರ್ಘ ಕಾಲ ಚರ್ಚೆ ಮಾಡಿ ಹುಟ್ಟುಹಾಕಿದ ಉದಾರನೀತಿಗೆ (Liberalism) ಹತ್ತಿರವಾದದ್ದು ಎನ್ನಬಹುದು. ಇವರಿಗಿಂತ ೮೦೦ ವರ್ಷಗಳ ಹಿಂದೆಯೇ ಶರಣರು ಪ್ರಗತಿ ಪರರಾಗಿದ್ದರು ಮತ್ತು ಉದಾರನೀತಿಯ ಬಗ್ಗೆ ಆಗಿನ ಶರಣರು ಆಲೋಚಿಸಿದ್ದರು ಅನ್ನುವ ವಿಚಾರ ಅಚ್ಚರಿಯನ್ನು ಉಂಟುಮಾಡುತ್ತದೆ.

12ನೇ ಶತಮಾನದಲ್ಲಿ ಶರಣರು ಜಡ್ಡು ಹಿಡಿದಿದ್ದ ಸಮಾಜಕ್ಕೆ ಒಂದು ಹೊಸ ಬದಲಾವಣೆಯನ್ನು ತಂದುಕೊಟ್ಟು ಸಾಮಾಜಿಕ ಕ್ರಾಂತಿಯನ್ನು ಉಂಟುಮಾಡಿದರು. ಮುಂದಕ್ಕೆ ಹಿಂದೂ ಧರ್ಮದಲ್ಲಿ /ಸಮಾಜದಲ್ಲಿ/ಸಂಸ್ಕೃತಿಯಲ್ಲಿ ಆಚರಣೆಯೊಳಗಿದ್ದ ಸತಿ ಪದ್ಧತಿ, ಬಾಲ್ಯ ವಿವಾಹ, ವಿಧವೆ ಮರು ವಿವಾಹ, ಜಾತೀಯತೆ ಮತ್ತು ಅಸ್ಪೃಶ್ಯತೆಯ ನಿವಾರಣೆ, ಸ್ತ್ರೀ ಶಿಕ್ಷಣ ಮುಂತಾದ ಸಾಮಾಜಿಕ ಪರಿವರ್ತನೆಗಳನ್ನು ರಾಜಾರಾಂ ಮೋಹನ್ ರಾಯ್, ದಯಾನಂದ ಸರಸ್ವತಿ, ಫುಲೆ, ರಾಮಕೃಷ್ಣ ಪರಮಹಂಸರು, ಗಾಂಧಿ, ಅಂಬೇಡ್ಕರ್ ಮುಂತಾದ ಮಹನೀಯರು ತಂದುಕೊಟ್ಟರು. ಯಾವುದೇ ಒಂದು ಧರ್ಮ ಮತ್ತು ಅದನ್ನು ಆಧರಿಸಿದ ಸಂಸ್ಕೃತಿ ಕಾಲ ಕಾಲಕ್ಕೆ ಪರಿಷ್ಕರಣೆಗೆ ಒಳಗಾಗುವುದು ಆರೋಗ್ಯಕರ. ನಮ್ಮ ಸಾಮಾಜಿಕ ಮೌಲ್ಯಗಳು ತೀವ್ರಗತಿಯಲ್ಲಿ ಬದಲಾಗುತ್ತಿದೆ, ಆದುದರಿಂದ ಅದಕ್ಕೆ ತಕ್ಕಂತೆ ಧರ್ಮಗಳಲ್ಲೂ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಧರ್ಮ ಸೂತ್ರಗಳನ್ನು ದೈವ ಸ್ವರೂಪರು ಬರೆದದ್ದು, ಅದನ್ನು ಬದಲಿಸಲು ಸಾಧ್ಯವೇ ಇಲ್ಲ ಎಂದು ಕೆಲವರು ವಾದ ಮಾಡಬಹುದು, ಕಾಲಕ್ಕೆ ಹೊಂದಿಕೊಳ್ಳದ ಧರ್ಮ ಸಂಘರ್ಷಣೆಗಳಿಗೆ ಕಾರಣವಾಗುತ್ತದೆ.


ಇತಿಹಾಸವನ್ನು ಗಮನಿಸಿದಾಗ ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳು ಉದಾರ ಮತ್ತು ಸಂಕುಚಿತ ಸಾಂಪ್ರದಾಯಿಕ ನಿಲುವುಗಳ ನಡುವೆ ಗಡಿಯಾರದ ಪೆಂಡ್ಯುಲಮ್ ರೀತಿಯಲ್ಲಿ ತುಯ್ದಾಡುತ್ತಿತು, ಈಗಲೂ ತುಯ್ದಾಡುತ್ತಿದೆ. ಇದನ್ನು ಹಿಂದೂ ಧರ್ಮವಲ್ಲದೆ ಕ್ರೈಸ್ತ ಮತ್ತು ಇಸ್ಲಾಂ ಧರ್ಮದಲ್ಲೂ ಕಾಣಬಹುದು. ಧರ್ಮ, ಸಂಕಟಕ್ಕೆ ಒಳಗಾದಾಗ (ಅಥವಾ ಒಳಗಾಗಿದೆ ಎಂದು ಭಾವಿಸಿದಾಗ) ಧರ್ಮ ರಕ್ಷಕರು ಮುಂದಾಗಿ ತೀವ್ರವಾದ ಧರ್ಮ ಪ್ರಚೋದನೆಯಲ್ಲಿ ತೊಡಗಿರುವುದನ್ನು ಪ್ರಪಂಚದ ಎಲ್ಲ ಸಂಸ್ಕೃತಿಯಲ್ಲಿ ಕಾಣಬಹುದು. ಸೋಷಿಯಲ್ ಮೀಡಿಯಾ ಬಳಸುವ ಈ ಸಮಯದಲ್ಲಿ ತೀವ್ರವಾದ ಧರ್ಮ ಪ್ರಚೋದನೆಯನ್ನು ವಾಟ್ಸ್ ಆಪ್ ಸಂದೇಶಗಳಲ್ಲಿ ಪ್ರತ್ಯಕ್ಷವಾಗಿ ನಾವು ಭಾರತೀಯರು ಅನುಭವಿಸುತ್ತಿದ್ದೇವೆ. ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದ ಹಿನ್ನೆಲೆ ಉದ್ದೇಶವೆಂದರೆ ಬಹುಶಃ ಹಿಂದೆ ಧರ್ಮದ ಅತಿಯಾದ ಬಳಕೆಯಾಗಿ ಸಂಪ್ರದಾಯಸ್ಥರ ದಬ್ಬಾಳಿಕೆ ಶೋಷಣೆ ಹೆಚ್ಚಾಗಿದ್ದ ಸಮಯದಲ್ಲಿ ಶರಣರು ಬೇಸತ್ತು ಈ ಒಂದು ಕ್ರಾಂತಿಯನ್ನು ಕೈಗೊಂಡಿರಬಹುದು. 11ನೇ ಶತಮಾನದಲ್ಲಿ ಚಾತುರ್ವಣ ಪದ್ಧತಿ ಜಾರಿಯಲ್ಲಿದ್ದಾಗ, ಜ್ಯಾತಿ ವ್ಯವಸ್ಥೆ ತೀವ್ರವಾಗಿದ್ದಾಗ ಶರಣರು ಅದನ್ನು ಪ್ರತಿಭಟಿಸಿ, ಜಾತಿ ವ್ಯವಸ್ಥೆಯ ತರತಮಗಳನ್ನು ಪ್ರಶ್ನಿಸುತ್ತ ಸಮಾನತೆಯನ್ನು ಎತ್ತಿಹಿಡಿದರು. ಶರಣರ ಆ ಪ್ರತಿಭಟನೆಯ ಭಾವನೆಗಳನ್ನು, ಅಸಮಾಧಾನಗಳನ್ನು ವಚನಗಳಲ್ಲಿ ಕಾಣಬಹುದು. ಈ ಸಾಮಾಜಿಕ ಕ್ರಾಂತಿಯ ಫಲವಾಗಿ ಅನುಭವ ಮಂಟಪ ಮತ್ತು ಮಹಾಮನೆಯ ಸ್ಥಾಪನೆಯಾಯಿತು. ಹಲವಾರು ವಚನಗಳಲ್ಲಿ ಈ ಮಹಾಮನೆಯ ಉಲ್ಲೇಖವಿದೆ. ಈ ಅನುಭವ ಮಂಟಪ ಸಮಾಜದ ಕೆಳವರ್ಗದವರ ಮತ್ತು ಸಾಮಾನ್ಯರ ಸಮ್ಮುಖದಲ್ಲಿ ನಡೆಯಿತು ಎಂಬುದಕ್ಕೆ ವಚನಕಾರರ ವೈಯುಕ್ತಿಕ ಹಿನ್ನೆಲೆಗಳು ಸಾಕ್ಷಿಯಾಗಿವೆ. ಈ ವಿಚಾರಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಡೆದ ಸಂಶೋಧನೆಯಿಂದ ಮತ್ತು ಪ್ರಾಜ್ಞರಿಂದ ಅನುಮೋದಿತವಾಗಿದೆ. ಹೀಗೆ 11ನೇ ಶತಮಾನದ ಕರ್ನಾಟಕದಲ್ಲಿ, ಪ್ರಜಾ ಪ್ರಭುತ್ವದ ಪರಿಕಲ್ಪನೆ ಉಂಟಾಯಿತು. ಈ ಎಲ್ಲ ಮೇಲಿನ ಹಿನ್ನೆಲೆಯಲ್ಲಿ ಶರಣರು ವಚನ ಸಾಹಿತ್ಯದಲ್ಲಿ ತೊಡಗಿ ಕೊಂಡರು.

ಈಗ ಶರಣರ ಸಾಮಾಜಿಕ ನಿಲುವುಗಳನ್ನು ಗಮನಿಸೋಣ. ಶರಣರು ದೇವಸ್ಥಾನಗಳನ್ನು ಧಿಕ್ಕರಿಸುವ ದಿಟ್ಟತನವನ್ನು ತೋರಿದರು. ಶರಣರು ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಮುಖ್ಯವಾಹಿನಿಯ ಒಳಗೇ ಇದ್ದರೂ ಏಕೆ ದೇವಸ್ಥಾನವನ್ನು ನಿರಾಕರಿಸಿದರು? ಎಂಬ ಪ್ರಶ್ನೆ ಮೂಡುವುದು ಸಹಜ. ಆಗಿನ ಕಾಲಕ್ಕೆ ದೇವಸ್ಥಾನಗಳಿಗೆ ಮೇಲ್ಜಾತಿ ಜನಕಷ್ಟೇ ಪ್ರವೇಶವಿತ್ತು. ದೇವರ ಮತ್ತು ಭಕ್ತರ ನಡುವೆ ಮಧ್ಯವರ್ತಿಗಳು ಹುಟ್ಟಿಕೊಂಡು ಅವರು ದೇವಸ್ಥಾನಗಳನ್ನು ನಿಯಂತ್ರಿಸುತ್ತಿದ್ದರು. ದೇವರ ಹೆಸರಿನಲ್ಲಿ ಮುಗ್ಧರ ಶೋಷಣೆ ನಡೆದಿತ್ತು.

"ಭಕ್ತನಿರ್ದ ತಾಣವೇ ದೇವಲೋಕ
ಭಕ್ತನಂಗಳವೇ ವಾರಣಾಸಿ
ದೇಹವೇ ದೇಗುಲ"

ಎಂದು ಹೇಳುತ್ತಾ ದೇವರ ಮತ್ತು ದೇವಸ್ಥಾನಗಳ ವೈಭವೀಕರಣ ನಡೆಯುತ್ತಿರುವಾಗ ಇಷ್ಟ ಲಿಂಗವೆಂಬ ನಿರಾಕಾರ ದೇವರ ಪರಿಕಲ್ಪನೆಯನ್ನು ಹುಟ್ಟುಹಾಕಿ, ಶರಣರು ದೇವರನ್ನೇ ಜನಸಾಮಾನ್ಯರ ಹತ್ತಿರ ತಂದು ನಿಲ್ಲಿಸಿದರು. ದೇವರು ಒಂದು ವ್ಯಾಪಾರದ, ವಾಣಿಜ್ಯ ಉತ್ಪನ್ನವಾಗಿದ್ದ ಸಮಯದಲ್ಲಿ ಮುಗ್ಧರ ಶೋಷಣೆಯನ್ನುನಿವಾರಿಸಿದರು. 'ಭಕ್ತನಿರುವ ತಾಣವೇ ವಾರಣಾಸಿ' ಎಂಬ ಸಂದೇಶವನ್ನು ಕೊಟ್ಟರು.

ಮನುಷ್ಯನಿಗೆ ನಂಬಿಕೆ ಮುಖ್ಯ; ಆದರೆ ನಂಬಿಕೆಗಳನ್ನು ಕಟ್ಟು ಕಥೆಗಳನ್ನು ಹುಟ್ಟುಹಾಕಿ ಅದರಿಂದ ಲಾಭ ಪಡೆಯುವುದಾದರೆ ಆ ನಂಬಿಕೆಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಬೇಕಾಗುತ್ತದೆ. ಕೆಲವೊಮ್ಮೆ ಆ ನಂಬಿಕೆ ವೈಯುಕ್ತಿಕ ನೆಲೆಯಿಂದ ಜಿಗಿದು ಸಾಮೂಹಿಕ ನೆಲೆಯಲ್ಲಿ ಕೆಲವರಿಗಷ್ಟೇ ಅನುಕೂಲವಾದಾಗ, ಧಾರ್ಮಿಕ ಪ್ರಚೋದನೆಗೆ ಬಳಸಿದಾಗ, ಅಥವಾ ಒಂದು ರಾಜಕೀಯ ಪಕ್ಷ ಅದನ್ನು ಬಂಡವಾಳ ಮಾಡಿಕೊಂಡಾಗ ಆ ನಂಬಿಕೆಯನ್ನು ಪ್ರಶ್ನಿಸಬೇಕಾಗುತ್ತದೆ. ನಂಬಿಕೆ ವೈಯುಕ್ತಿಕ ನೆಲೆಯಲ್ಲಿ ಸೀಮಿತವಾಗಿದ್ದರೆ ಅದನ್ನು ಒಪ್ಪಿಕೊಳ್ಳಬಹುದು, ಅದರಿಂದ ಸಮಾಜಕ್ಕೆ ಹಾನಿ ಉಂಟಾಗುವ ಸಾಧ್ಯತೆ ಕಡಿಮೆ. ನಂಬಿಕೆ ಅವೈಜ್ಞಾನಿಕವಾಗಿ, ಸರಳ ತರ್ಕಗಳಿಗೆ ಸಿಗದೇ ಕೆಲವರ ಲಾಭಕ್ಕಾಗಿ ಅದನ್ನು ಬಳಸಿಕೊಂಡಲ್ಲಿ ಅದನ್ನು ಧಿಕ್ಕರಿಸ ಬೇಕಾಗುತ್ತದೆ. ನಂಬಿಕೆಗಳಿಂದ ಮೌಢ್ಯ ಉಂಟಾಗಿ ಕೆಲವು ಯಾಂತ್ರಿಕ ಆಚರಣೆಗಳು ಹುಟ್ಟಿ ಕೊಂಡಿವೆ. ಈ ಒಂದು ಹಿನ್ನೆಲೆಯಲ್ಲಿ ಬಸವಣ್ಣನವರ ಕೆಳಗಿನ ವಚನ ನೂರಾರು ವರ್ಷಗಳ ನಂತರವೂ ಈ ವೈಜ್ಞಾನಿಕ ಯುಗದಲ್ಲೂ ಪ್ರಸ್ತುತವಾಗಿದೆ ಎನ್ನುವುದು ಶೋಚನೀಯ ಸಂಗತಿ.

"ನೀರ ಕಂಡಲ್ಲಿ ಮುಳುಗುವರಯ್ಯ, ಮರ ಕಂಡಲ್ಲಿ ಸುತ್ತುವರಯ್ಯ
ಬತ್ತುವ ಜಲವ ಒಣಗುವ ಮರವ ನೆಚ್ಚುವರು
ನಿಮ್ಮನೆತ್ತ ಬಲ್ಲರು ಕೂಡಲ ಸಂಗಮ ದೇವಾ"

ಶರಣರು ಸ್ವರ್ಗ ನರಕ, ಪಾಪ, ಪುಣ್ಯ ಸಂಪಾದನೆ ಬಗ್ಗೆ ವೈಚಾರಿಕವಾಗಿ ಆಲೋಚಿಸಿ;
"ದೇವ ಲೋಕ ಮರ್ತ್ಯಲೋಕವೆಂಬುದು ಬೇರೆ ಉಂಟೆ
ಸತ್ಯ ನುಡಿವುದೇ ದೇವಲೋಕ ಮಿತ್ಯನುಡಿವುದೆ ಮರ್ತ್ಯ ಲೋಕ
ಆಚಾರವೇ ಸ್ವರ್ಗ ಅನಾಚಾರವೇ ನರಕ "

ಎಂದು ಹೇಳುತ್ತಾ, ಮುಂದಕ್ಕೆ "ಅಯ್ಯಎಂದರೆ ಸ್ವರ್ಗ ಎಲವೋ ಎಂದರೆ ನರಕ" ಎಂಬ ಉಕ್ತಿಯನ್ನು ನೀಡಿದ್ದಾರೆ. ಶರಣ ಸಾಹಿತ್ಯದಲ್ಲಿ ಬಳಸುವ ಅಯ್ಯ, ಅಕ್ಕ, ಅಣ್ಣ ಸಮಾಜದಲ್ಲಿ ಒಂದು ಭ್ರಾತೃತ್ವವನ್ನು, ಆತ್ಮೀಯ ಭಾವನೆಯನ್ನು ಉಂಟುಮಾಡುತ್ತದೆ. ಜನರ ನಡುವೆ 'ಎಲವೋ' ಎನ್ನದೆ, ದ್ವೇಷ ಅಸೂಯೆಗಳನ್ನು ಬದಿಗಿಟ್ಟು ಎಲ್ಲರು "ಸರ್ವಜನಾಂಗದ ಈ ಶಾಂತಿಯ ತೋಟದಲ್ಲಿ'' ಸೌಹಾರ್ದತೆಯಿಂದ ಬದುಕಿದರೆ ಅದೇ ಸ್ವರ್ಗ! ಇಹ ಮತ್ತು ಪರಲೋಕವೆಂಬ ಕಾಲ್ಪನಿಕ ಲೋಕವನ್ನು ಶರಣು ನಿರಾಕರಿಸಿದರು. ಇಹಲೋಕದಲ್ಲಿ ಬದುಕುತ್ತಾ ಬರಿ ಪರಲೋಕವನ್ನೇ ಕುರಿತು ಚಿಂತಿಸುವವರನ್ನು ಕುರಿತು ಅಲ್ಲಮ ಪ್ರಭುಗಳು ಮಾರ್ಮಿಕವಾಗಿ "ಕೊಟ್ಟ ಕುದುರೆಯನು ಏರಲಾಗದವನು ಧೀರನು ಅಲ್ಲ ಶೂರನೂ ಅಲ್ಲ" ಎನ್ನುತ್ತಾರೆ. ಇಲ್ಲಿ ‘ಕೊಟ್ಟ ಕುದುರೆ’ ಎಂದರೆ ನಮಗೆ ದಕ್ಕಿರುವ ಬದುಕು, ಅದು ಕಾಡು ಕುದುರೆ ಇದ್ದಹಾಗೆ, ಅದನ್ನು ಪಳಗಿಸಿ ಅದರ ಮೇಲೆ ಕುಳಿತು ಬದುಕನ್ನು ಕ್ರಯಿಸಬೇಕು, ಅದನ್ನು ಬಿಟ್ಟು ಬೇರೊಂದು ಪರಲೋಕವೆಂಬ ಕುದುರೆಯನ್ನು ಬಯಸುವುದು ನಿರರ್ಥಕ ಎಂದು ತಿಳಿಸಿದ್ದಾರೆ.

ಶರಣರು ತೀಕ್ಷ್ಣ ವಿಮರ್ಶಕರು, ಅವರು ತಮ್ಮ ಬದುಕನ್ನು, ತಮ್ಮ ಆಚಾರ ವಿಚಾರಗಳನ್ನು ವಿಮರ್ಶೆಗೆ ಒಳಪಡಿಸಿಕೊಂಡವರು, ಆತ್ಮ ಶೋಧನೆಯಲ್ಲಿ ತೊಡಗಿಕೊಂಡವರು. ಇದಕ್ಕೆ ನಿದರ್ಶನವಾಗಿ ಕೆಳಗಿನ ವಚನವನ್ನು ಇಲ್ಲಿ ಪ್ರಸ್ತಾಪಮಾಡುವುದು ಸೂಕ್ತ;

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು
ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದೆಡೆ ನಡೆ ಎಂಬರು
ಉಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ

ನಮ್ಮ ಆಚರಣೆಗಳಲ್ಲಿ ಇರುವ ವೈರುಧ್ಯವನ್ನು ಸ್ವಾರ್ಥತೆಯನ್ನು ಮತ್ತು ಅರ್ಥಹೀನತೆಯನ್ನು ಶರಣರು ಖಂಡಿಸುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಮನುಷ್ಯನಿಗೆ ಮಾರಕವಾಗಿರುವ ಹಾವು, ಆನೆ, ಸಿಂಹ ಎಂಬ ಕಂಡ ಕಂಡ ಪ್ರಾಣಿಗಳನೆಲ್ಲಾ ಪೂಜಿಸುವ ಬಗ್ಗೆ ಶರಣರಿಗೆ ಅಸಮಾಧಾನವಿದ್ದಿರಬಹುದು.

ಶರಣರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದವರು. ಹಿಂದೆ ಈ ಜಾತಿ ವ್ಯವಸ್ಥೆ ಅವರವರ ವೃತ್ತಿಗೂ ಸಂಬಂಧಪಟ್ಟಿದ್ದು, ಇದನ್ನು ಚಾತುರ್ವರ್ಣ ಪದ್ಧತಿ ಎಂದು ಗುರುತಿಸಲಾಗಿತ್ತು. ಈ ವ್ಯವಸ್ಥೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವಿಂಗಡಣೆಗಳು ಇದ್ದವು. ಶರಣರು 'ಕಾಯಕವೇ ಕೈಲಾಸ' ಎಂಬ ಪರಿಕಲ್ಪನೆಯನ್ನು ತಂದು ತಮ್ಮ ವೃತ್ತಿಯನ್ನು ಮೇಲು-ಕೀಳು ಎಂದು ಪರಿಗಣಿಸದೆ ಅವರವರ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಆಗ ಅವರವರ ಕಾಯಕ ಅವರಿಗೆ ಶ್ರೇಷ್ಠ, ಆಗ ಎಲ್ಲರೂ ಸಮಾನರೇ ಎಂಬ ಸಂದೇಶವನ್ನು ಬಿತ್ತಿದರು. ಇಂದು ನಾವು ಅನಿವಾಸಿಗಳು ಪಾಶ್ಚ್ಯಾತ್ಯ ದೇಶಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಕೆಲಸ ಮಾಡುವವರು ವೈದ್ಯರೇ ಆಗಿರಬಹುದು, ಅಥವಾ ವಾರ್ಡ್ ಬಾಯ್ ಆಗಿರಬಹುದು ಆದರೂ ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆ ಘನತೆ ನಮಗಿದೆ. ಇದೇ ವಿಚಾರವನ್ನು 900 ವರ್ಷಗಳ ಹಿಂದೆ ಶರಣರು ಕಾಯಕದಲ್ಲಿರುವ ಘನತೆ (Dignity of labour) ಮತ್ತು ಸಮಾನತೆಯನ್ನು ತೋರಿಸಿಕೊಟ್ಟರು. ಈ ಜಾತಿ ಪದ್ದತಿಯನ್ನು ಪ್ರಶ್ನಿಸುತ್ತ ಶರಣರು;

ನೆಲೆ ಒಂದೇ: ಹೊಲಗೇರಿ, ಶಿವಾಲಯಕ್ಕೆ
ಜಲ ಒಂದೇ: ಶೌಚ, ಚಮನಕ್ಕೆ
ಕುಲವೊಂದೇ: ತನ್ನ ತಾನ್ ಅರಿದವಂಗೆ

ಎನ್ನುತ್ತಾ ಹೊಲಗೇರಿಗೂ, ಶಿವಾಲಯಕ್ಕೂ ನೆಲ ಒಂದೇ ಆಗಿದ್ದಲ್ಲಿ, ಶೌಚಕ್ಕೂ, ತೀರ್ಥಕ್ಕೂ, ಶುದ್ಧಿಗೂ ಜಲ ಒಂದೇ ಆಗಿದ್ದಲ್ಲಿ, ಮನುಷ್ಯ ಮನುಷ್ಯರ ನಡುವೆ ಕುಲವೊಂದೇ ಏಕೆ ಆಗಬಾರದು ಎಂದು ಪ್ರಶ್ನಿಸುತ್ತಾರೆ. ಸದರಿ ಪ್ರಪಂಚದಲ್ಲಿ, ಧರ್ಮದ ಹೆಸರಿನಲ್ಲಿ, ಪ್ರಪಂಚದ ನಾನಾ ಭಾಗಗಳಲ್ಲಿ ಧರ್ಮ ಯುದ್ಧ ನಡೆದಿದೆ. "ನಾವು-ಅವರು" ಎಂಬ ಪ್ರತ್ಯೇಕತೆ ಪ್ರಜ್ಞೆ ಹೆಚ್ಚಾಗಿದೆ. ದೇಶಗಳು, ಸಮಾಜ ಧ್ರುವೀಕರಣಗೊಂಡಿದೆ. ಇಂತಹ ಒಂದು ಸನ್ನಿವೇಶದಲ್ಲಿ ಬಸವಣ್ಣನವರ ಈ ವಚನ ಬಹಳ ಪ್ರಸ್ತುತವಾಗಿದೆ;

ಇವನಾರವ ಇವನಾರವ ಎಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ
ಕೂಡಲ ಸಂಗಮ ದೇವಾ ನಿಮ್ಮ ಮನೆಯ
ಮಗನೆನಿಸಯ್ಯ

‘ಸರ್ವೇ ಜನಃ ಸುಖಿನೋ ಭವಂತು’ ಎನ್ನುತ್ತಲೇ, ಸಮಾನತೆಯ ಸಂದೇಶವನ್ನು ಸಾರುತ್ತಲೇ "ನಾವು - ಅವರು" ಎಂಬ ಈ ಪ್ರತ್ಯೇಕತೆಯ ಪ್ರಜ್ಞೆಯನ್ನು (Tribalism) ಹುಟ್ಟುಹಾಕಿದ್ದೇವೆ. ಈ ಧ್ರುವೀಕರಣಕ್ಕೆ(Polarization) ಕಾರಣಗಳೇನು ಎಂಬುದನ್ನು ಡಾರ್ವಿನ್ ನೀಡಿರುವ ಜೈವಿಕ ತತ್ವಗಳ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ. "ಯಾವುದು ಪ್ರಬಲವಾಗಿದೆಯೋ ಅದ್ಕಕಷ್ಟೇ ಉಳಿಗಾಲ" (Survival of the fittest) ಎನ್ನುವ ಸೈಧಾಂತಿಕ ಹಿನ್ನೆಲೆಯಲ್ಲಿ ಮನುಷ್ಯ ತನ್ನ ಒಂದು ಸಂರಕ್ಷಣೆಗೆ ಅನಾದಿ ಕಾಲದಿಂದ ಬುಡಕಟ್ಟು, ವರ್ಣ, ಧರ್ಮ, ರಾಷ್ಟ್ರ, ಜಾತಿ
ಎಂಬ ಗುಂಪುಗಾರಿಕೆ ಮಾಡಿಕೊಂಡು ಬಂದಿದ್ದಾನೆ. ತನ್ನ ಒಂದು ಬದುಕಿನ ರೀತಿನೀತಿಗಳಿಗೆ ಒಗ್ಗಲಾರದವರನ್ನು ಅನ್ಯರೆಂದು ಪರಿಗಣಿಸಿ ಈ ಅನ್ಯರಿಗೆ ಅಸಹ್ಯ ಪಡುತ್ತಾ ಬಂದಿದ್ದಾನೆ. ತನನ್ನು ಬಣ್ಣಿಸಿಕೊಂಡು, ಇತರರನ್ನು ಹಳಿಯುತ್ತ, ಗಂಗಾ ನದಿಯಲ್ಲಿ ಸ್ನಾನ ಮಾಡಿ ಬಹಿರಂಗ ಶುದ್ಧಿಯನ್ನು ಪಡೆದು ಕೊಂಡನೇ ಹೊರೆತು ಅಂತರಂಗ ಶುದ್ಧಿಯನ್ನು ಪಡೆದುಕೊಳ್ಳಲಿಲ್ಲ! ಈ ಒಂದು ಹಿನ್ನೆಲೆಯಲ್ಲಿ ಬಸವಣ್ಣನವರ ವಚನವನ್ನು ಗಮನಿಸಿ;

"ಕಳ ಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಹಿ, ಇದೇ ಬಹಿರಂಗ ಶುದ್ಧಿ"

‘ಸರ್ವೇ ಜನಃ ಸುಖಿನೋ ಭವಂತು’ ಎಂದಾಗಬೇಕಾದರೆ, ನಮ್ಮ-ನಿಮ್ಮ ನಡುವಿನ ಗೋಡೆಗಳನು ಕೆಡವಬೇಕು.

ಸ್ತ್ರೀ ಸ್ವಾತಂತ್ರ್ಯವನ್ನು ಮೊಟ್ಟ ಮೊದಲಿಗೆ ಗುರುತಿಸಿ, ಗೌರವಿಸಿ, ಅನುಷ್ಠಾನಕ್ಕೆ ತಂದವರು ಶರಣರು, "ಸ್ತ್ರೀ ಬಾಲ್ಯದಲ್ಲಿ ತಂದೆಯ, ಯೌವನದಲ್ಲಿ ಗಂಡನ, ಮುಪ್ಪಿನಲ್ಲಿ ಮಗನ ಅಧೀನಳು, ಹೆಣ್ಣು ಮಾಯೆ, ಎಂದು ಹೇಳುತ್ತಿದ್ದ ಕಾಲದಲ್ಲಿ ಅಲ್ಲಮರು; "ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆ' ಎಂದು, ಹೆಣ್ಣಿಗೆ ಸಮಾಜದಲ್ಲಿ ಸಮಾನ ಸ್ಥಾನ-ಮಾನಗಳನ್ನು, ಹಕ್ಕುಗಳನ್ನು ಕಲ್ಪಿಸಿಕೊಟ್ಟರು. ಬಸವಣ್ಣನವರು ಅಕ್ಕ ಮಹಾದೇವಿ ಮತ್ತು ಇತರ ಶರಣೆಯರನ್ನು ಅನುಭವಮಂಟಪದಲ್ಲಿ ಆಹ್ವಾನಿಸಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟರು. ಶರಣೆಯರೂ ಹಲವಾರು ವಚನಗಳನ್ನು ರಚಿಸಿದರು. ಇಷ್ಟಾಗಿಯೂ ಹೆಣ್ಣು-ಗಂಡಿನ ನಡುವೆ ಏನು ವ್ಯತ್ಯಾಸ, ಅವರನ್ನೇಕೆ ಸಾಮಾಜಿಕ ಆಚರಣೆಯಿಂದ ಹೊರಗಿಡಬೇಕು? ಎಂದು ಪ್ರಶ್ನಿಸಬಹುದು. ಅದಕ್ಕೆ ಉತ್ತರವಾಗಿ ಜೇಡರ ದಾಸಿಮಯ್ಯ ಹೀಗೆ ಹೇಳುತ್ತಾನೆ; "ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಮೂಡಿಬಂದರೆ ಗಂಡೆಂಬರು, ಇವೆರಡರ ನಡುವೆ ಸುಳಿವಾತ್ಮ ಹೆಣ್ಣು ಅಲ್ಲ ಗಂಡು ಅಲ್ಲ!”

ಶರಣರ ಚಿಂತನೆಗಳು ಸಮಾಜಮುಖಿ ಅಷ್ಟೇ ಅಲ್ಲದೆ ಅದು ಸಂಸಾರ ಮುಖಿ ಕೂಡ ಎನ್ನುವುದಕ್ಕೆ ಕೆಳಗಿನ ಸಾಲುಗಳು ಸಾಕ್ಷಿಯಾಗಿವೆ;

ಮಠವೇಕೋ, ಪರ್ವತವೇಕೋ,
ಜನವೇಕೊ, ನಿರ್ಜನವೇಕೊ,
ಚಿತ್ತ ಸಮಾಧಾನ ಉಳ್ಳ ಶರಣಂಗೆ?

ಬಹಳಷ್ಟು ಶರಣರು ಕಾವಿ ತೊಡಲಿಲ್ಲ (ಇದಕ್ಕೆ ಕೆಲವು ಹೊರತುಗಳಿರಬಹುದು) ಸನ್ಯಾಸಿಗಳಾಗಿ ಕಾಡಿಗೆ, ಪರ್ವತಗಳಿಗೆ ಹೋಗಿ, ದೇಹವನ್ನು ದಂಡಿಸಿ ಘೋರ ತಪಸ್ಸನ್ನು ಮಾಡಲಿಲ್ಲ. ಬದಲಾಗಿ "ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಎನ್ನುತ್ತಾ ಸಂಸಾರದೊಳಗೇ ಇದ್ದುಕೊಂಡು ಸತ್ಯಶೋಧನೆಯನ್ನು ನಡೆಸಿ, ಅನುಭವ ಮತ್ತು ಅನುಭಾವವನ್ನು ಪಡೆದುಕೊಂಡರು. ದೇಹ ದಂಡನೆಯ ಕ್ರಮವನ್ನು ಅವರು ಅನುಮೋದಿಸಲಿಲ್ಲ. ದೇಹದಂಡನೆಯನ್ನು ಕುರಿತು ಬಸವಣ್ಣನವರು; 'ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೆ'? ಎಂದು ಪ್ರಶ್ನಿಸುತ್ತಾರೆ. ಮನದೊಳಗೆ ಹಾವೆಂಬ ವಿಷವನ್ನು ಇಟ್ಟುಕೊಂಡು, ದೇಹವೆಂಬ ಹುತ್ತವನ್ನು ಬಡಿದರೆ ಪ್ರಯೋಜನವೇನು ಎನ್ನುತ್ತಾರೆ.

ಶರಣರು ರಚಿಸಿರುವ ವಚನಗಳಲ್ಲಿ ಸಾಹಿತ್ಯ ಮೌಲ್ಯಗಳೂ ಇವೆ. 11ನೇ ಶತಮಾನದ ಶುರುವಿನಲ್ಲಿ ಸಾಹಿತ್ಯ, ಹೆಚ್ಚಾಗಿ ಹಳೆಗನ್ನಡ ಸಂಸ್ಕೃತಮಯವಾಗಿದ್ದ ಸಮಯದಲ್ಲಿ ಕನ್ನಡ ಆಡು ಭಾಷೆಯನ್ನು ವಚನಕಾರರು ಬಳಸಿಕೊಂಡರು. ಅವರ ಬರಹದಲ್ಲಿ ಸರಳತೆ ಮತ್ತು ಸ್ಪಷ್ಟತೆ ಕಾಣುತ್ತದೆ. ಎಲ್ಲರ ಗ್ರಹಿಕೆಗೆ ನಿಲುಕುವಂತೆ ನಾಲ್ಕಾರು ಸಾಲುಗಳ ವಚನಗಳನ್ನು ರಚಿಸಿದ್ದಾರೆ. ಅಲ್ಲಮ ಪ್ರಭುಗಳ ರಚನೆಯು ಹಲವಾರು ರೂಪಕಗಳನ್ನು ಒಳಗೊಂಡು ಸಂಕೀರ್ಣವಾಗಿ ಮತ್ತು ಒಗಟಿನ ರೀತಿಯಲ್ಲಿದ್ದು ಸಾಹಿತ್ಯ ಪ್ರೌಢವಾಗಿದೆ.

ಒಟ್ಟಾರೆ ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಮಹತ್ವವಾದದ್ದು. ಅವರು ರಚಿಸಿದ ವಚನ ಸಾಹಿತ್ಯದಲ್ಲಿ ಮಾನವೀಯತೆ, ಅನುಕಂಪೆ, ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆ, ಸಮಾನತೆ, ಪ್ರಜಾಪ್ರಭುತ್ವ ಪರಿಕಲ್ಪನೆಗಳನ್ನು ಒಳಗೊಂಡು, ಎಲ್ಲರೂ ಸಮಾನರೇ ಎಂಬ ಸಮಾಜ ಮುಖಿ ಚಿಂತನೆಗಳಿವೆ. ಕಾಯಕವೇ ಕೈಲಾಸ ಎಂದು ದುಡಿಯುತ್ತಾ, ದುಡಿದದ್ದನ್ನು ದಾಸೋಹ ಅನ್ನುವ ಭಾವನೆಯಲ್ಲಿ ಇತರೊಡನೆ ಹಂಚಿಕೊಳ್ಳುತ್ತಾ ಪ್ರಾಮಾಣಿಕವಾಗಿ ಬದುಕಿ, ಸಮಾಜಕ್ಕೆ ಆದರ್ಶಪ್ರಾಯರಾಗಿ ಬೆಳಕನ್ನು ನೀಡಿದವರು. ಈ ಕಾರಣಗಳಿಂದಲೇ ಅವರು ಕೊಟ್ಟಿರುವ ಸಾಹಿತ್ಯ ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಪ್ರಸ್ತುತವಾಗಿದೆ.