“ಅವನ ನಿಯಮ ಮೀರಿ ಇಲ್ಲೀ ಏನು ಸಾಗದು… ನಾವು ನೆನೆಸಿದ೦ತೆ ಬಾಳಲೇನು ನಡೆಯದು….”

“ಬಾನಿಗೊ೦ದು ಎಲ್ಲೆ ಎಲ್ಲಿದೇ? ನಿನ್ನಾಸೆಗೆಲ್ಲಿ ಕೊನೆಯಿದೇ?
ಏಕೆ ಕನಸು ಕಾಣುವೇ? ನಿಧಾನಿಸು.. ನಿಧಾನಿಸು..”

ಪ್ರೇಮದ ಕಾಣಿಕೆ ಚಿತ್ರದ ಹಾಡು ಎಲ್ಲರಿಗೂ ನೆನಪಿರಬಹುದು, ಚಿ. ಉದಯಶಂಕರ್ ಅವರ ಅದ್ಭುತ ರಚನೆಗೆ ಡಾ. ರಾಜಕುಮಾರ್ ಅವರು ಸುಂದರವಾಗಿ ಹಾಡಿದ್ದಾರೆ. ಪ್ರಸ್ತುತದಲ್ಲಿಯೂ ಈ ಹಾಡು ನಿಜಕ್ಕೂ ಅರ್ಥಪೂರ್ಣವಾಗಿದೆ, ಇಂದಿನ ಮನುಷ್ಯನ ಆಸೆ, ಆವಿಷ್ಕಾರಗಳಿಗೆ ಕೊನೆ ಎಲ್ಲಿದೆ ಎಂದು ಕೇಳುವ ಪರಿಸ್ಥಿತಿ ಬಂದಿದೆ. ಹೊಸ ಆವಿಷ್ಕಾರಗಳು ತಪ್ಪಲ್ಲ, ವೈಜ್ಞಾನಿಕ ಆವಿಷ್ಕಾರಗಳು ಜೀವನ ಮತ್ತು ಪ್ರಗತಿಯನ್ನು ನಡೆಸುತ್ತವೆ. ಆದಾಗಿಯೂ, ಅದರಲ್ಲಿ ಕೆಲವು ದುಷ್ಪರಿಣಾಮಗಳು ಇವೆ.

ವೈಜ್ಞಾನಿಕ ಆವಿಷ್ಕಾರಗಳ ಮತ್ತು ದುಷ್ಪರಿಣಾಮಗಳ ಬಗ್ಗೆ ವಿಚಾರ ಬಂದಾಗ, ಐನ್ಸ್ಟೀನ್ ಅವರ ದ್ರವ್ಯ – ಶಕ್ತಿ ಸಮೀಕರಣ (E =mc2) ಉದಾಹರಣೆ ನೋಡಣ. ಐನ್ಸ್ಟೀನ್ ಅವರು ಈ ಸಮೀಕರಣ ಜಗತ್ತಿಗೆ ತಂದಾಗ ಅವರು ಪರಮಾಣು ಶಕ್ತಿ ಮತ್ತು ಔಷಧ ಕ್ಷೇತ್ರದಲ್ಲಿ ತರಬಹುದಾದ ಪ್ರಗತಿಗಳ ಬಗ್ಗೆ ಒತ್ತು ಕೊಟ್ಟರು. ಇದರ ದುಷ್ಪರಿಣಾಮ ಜಗತ್ತು ಜಪಾನಿನ ಹಿರೋಷಿಮಾ ಮತ್ತು ನಾಗಾಸಾಕಿಯಲ್ಲಿ ಕಂಡಿತು. ಇನ್ನೊಂದು ಉದಾಹರಣೆ ಈಗ ನಮ್ಮ ಮುಂದಿದೆ, ಸಾಮಾಜಿಕ ಮಾಧ್ಯಮ (ಸೋಶಿಯಲ್ ಮೀಡಿಯಾ) ಪ್ರಭಲತೆ ಜಗತ್ತಿಗೆ ಬಹು ಉಪಯುಕ್ತ ವ್ಯವಸ್ಥೆ ಕಲ್ಪಿಸಿತು. ದೇಶ ವಿದೇಶದ ವಿಷಯಗಳು ನಿಮ್ಮ ಬೆರಳು ತುದಿಯಲ್ಲಿ ಲಭ್ಯ. ಹತ್ತಿರದ ಆಸ್ಪತ್ರೆ, ಶಾಲೆ, ಮತ್ತಿತರ ಸೇವೆಗಳು ಮತ್ತು ಜನರ ಅಭಿಪ್ರಾಯ ಸರಳವಾಗಿ ಲಭ್ಯವಾಯಿತು. ಆದರೆ ಇದೆ ಸಾಮಾಜಿಕ ಮಾಧ್ಯಮ ಇರದ, ಕಂಡಿರದ ಮಾನಸಿಕ ರೋಗಗಳನ್ನು ಪರಿಚಯಿಸಿತು. ಪ್ರತಿ ಕ್ಷಣಕ್ಕೂ ಕಣ್ಣ ಮುಂದೆ ಬರುವ ಸುದ್ದಿ ಸತ್ಯವೋ, ಅಸತ್ಯವೋ ತಿಳಿಯದೆ ಜನರು ಅತಂತ್ರ ಪರಿಸ್ಥಿತಿ ಮುಟ್ಟುತ್ತಾರೆ, ರಾಷ್ಟ್ರದ ರಾಜಕೀಯ ಸಾಮಾಜಿಕ ತಾಣದಿಂದ ನಡೆಯುತ್ತೆ. ನೆಟ್ಫ್ಲಿಸ್ (Netflix) ನಲ್ಲಿ ಸಾಕ್ಷ್ಯಚಿತ್ರ “The Social Dilemma” ಸಾಮಾಜಿಕ ಮಾಧ್ಯಮದಿಂದ ಆಗುವ ದುಷ್ಪರಿಣಾಮಗಳು ಮನಮುಟ್ಟುವಂತೆ ಚಿತ್ರೀಕರಿಣಿಸಿದ್ದಾರೆ.

ಡಿಸೆಂಬರ್ ಮುಗಿದು ಹೊಸ ವರ್ಷ ಬಂತೆಂದರೆ ಎಲ್ಲರೊ ಒಂದೆಡೆ ಕಲೆತು ಸಂತೋಷ ಪಡುತ್ತಾರೆ, ಹೊಸವರ್ಷದ ನಿರ್ಣಯ (Resolution) ಮಾಡುತ್ತಾರೆ. ನಮ್ಮ ಸಂಶೋಧಕರೂ ಹೊಸ ವರ್ಷದ ಜೊತೆ, ತಮ್ಮ ಸಂಶೋಧನಾ ವಿವರಗಳನ್ನು ಸಿದ್ದ ಪಡಿಸಿಕೊಳ್ಳತ್ತಿರಬಹುದು, ಇತ್ತೀಚಿನ ಪ್ರತಿ ದಶಕ, ವರ್ಷ ಹೊಸ ಹೊಸ ಸಂಶೋಧನೆಗಳ ಅಗರ ಆಗಿದೆ. ಇಂತಹುದೇ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುವ ಉದ್ದೇಶದಿಂದ ಈ ಲೇಖನ ಬರೆಯುವ ವಿಚಾರ ಮಾಡಿದೆ. ಇದನ್ನು ನಾವು ಕೇಳಿದ ಪೌರಾಣಿಕ ಸಾಹಿತ್ಯದೊಂದಿಗೆ ಹೊಂದಿಸಿ ಹಂಚಿಕೊಳ್ಳುವ ಒಂದು ಪ್ರಯತ್ನ ಮಾಡುತ್ತಿದ್ದೇನೆ. ಈ ಒಂದು ಪ್ರಯತ್ನಕ್ಕೆ ಸ್ಫೂರ್ತಿ ಸದ್ಯೋಜಾತ ಭಟ್ಟ ಅವರು ಬರೆದ “ಕಾಲಯಾನ” ಪುಸ್ತಕ.

೧: ಸತ್ಯವ್ರತ ರಾಜ ಸಶರೀರದಿಂದ ದೇವಲೋಕ ಅಂದರೆ ಸ್ವರ್ಗಕ್ಕೆ ಹೋಗುವ ತನ್ನ ಇಚ್ಛೆ ವಸಿಷ್ಠ ಋಷಿಗಳೊಂದಿಗೆ ಹಂಚಿಕೊಳ್ಳುತ್ತಾನೆ. ಅವರು ಅದು ಸಾಧ್ಯವಾಗದ ವಿಚಾರ ಎಂದು ಸಹಾಯ ಮಾಡಲು ನಿರಾಕರಿಸುತ್ತಾರೆ. ಆಗ ಸತ್ಯವ್ರತ (ಶಾಪದಿಂದ ಚಾಂಡಾಲನಾಗಿ), ಮಹಾಋಷಿ ವಿಶ್ವಾಮಿತ್ರರಲ್ಲಿ ಈ ವಿಚಾರ ತಿಳಿಸಿ ಸಹಾಯ ಯಾಚಿಸುತ್ತಾನೆ. ವಿಶ್ವಾಮಿತ್ರರು ತಮ್ಮ ತಪೋಬಲದಿಂದ ಅವನನ್ನು ಸ್ವರ್ಗಕ್ಕೆ ಕಳುಹಿಸುತ್ತಾರೆ, ಆದರೆ ಇಂದ್ರ ಅವನನ್ನು ಒಳಗೆ ಸೇರಿಸದೆ ಕೆಳಕ್ಕೆ ನೂಕುತ್ತಾನೆ. ಕೆಳಗೆ ಬೀಳುವ ಸತ್ಯವ್ರತನನ್ನು ತಡೆದು ನಿಲ್ಲಿಸಿ ಅಲ್ಲಿ ಪ್ರತಿಸ್ವರ್ಗ ನಿರ್ಮಿಸುತ್ತಾರೆ. ಇದನ್ನೇ ತ್ರಿಶಂಕು ಸ್ವರ್ಗ ಎನ್ನುತ್ತಾರೆ.

ವೈಜ್ಞಾನಿಕ ಪ್ರಯೋಗಗಳಿಂದ ಈಗಾಗಲೇ ವಿಶ್ವಾಮಿತ್ರರು ನಿರ್ಮಿಸಿದಂತಹ ತಂಗುದಾಣ ಬಾಹ್ಯಾಕಾಶದಲ್ಲಿ ಬಂದಿವೆ. ೨೦೨೪ ಡಿಸೆಂಬರ್ ೩೦ಕ್ಕೆ ಭಾರತದ ಬಾಹ್ಯಾಕಾಶ ಸಂಸ್ಥೆ (ISRO) ಸ್ಪೇಸ್ ಡಾಕಿಂಗ್ (ಬಾಹ್ಯಾಕಾಶ ಬಂದರು ಅನ್ನಬಹುದೇ?) ಸಲುವಾಗಿ ಪ್ರಯೋಗ ಮಾಡಿದರು. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ – ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ (ISS) ಪ್ರಸ್ತುತ ಅಂತರಿಕ್ಷದಲ್ಲಿ ಕಾರ್ಯ ನಿರತವಾಗಿದೆ. ಇದರಿಂದ ಬಾಹ್ಯಾಕಾಶ ಪ್ರಯೋಗಗಳಿಗೆ ಅಲ್ಲದೆ ಔಷಧಿ ತಯಾರಿಕೆ, ಸೂರ್ಯನ ಕಿರಣದ ಸಹಾಯದಿಂದ ಸುಸ್ಥಿರತೆ (ಸಸ್ಟೇನ್ಬಿಲಿಟಿ) ಪ್ರಯೋಗ ಮುಂತಾದವುಗಳು ಸಾಧ್ಯವಾಗಿವೆ. ಇದು ಇನ್ನೂ ಆರಂಭಿಕ ಹಂತದಲ್ಲಿರುವ ಕಾರಣ ಇದರ ಉಪಯೋಗ, ದುಷ್ಪರಿಣಾಮ ಪೂರ್ಣ ಪ್ರಮಾಣದಲ್ಲಿ ಕಾಣುತ್ತಿಲ್ಲ. ಸದ್ಯದ ದುಷ್ಪರಿಣಾಮ ವಿಕಿರಣ, ಬಾಹ್ಯಾಕಾಶ ಕಸ, ಮಾನಸಿಕ ರೋಗಗಳು ಇತ್ಯಾದಿ.

೨: ಕಕುದ್ಮಿಗೆ ಮಹರಾಜನಿಗೆ ರೇವತಿ ಎಂಬ ಸುಂದರ ಮಗಳಿದ್ದಳು. ಅವಳಿಗೆ ಸರಿಯಾದ ವರನನ್ನು ಹುಡುಕಲು ಸ್ವಯಂವರ ಏರ್ಪಡಿಸಿದ, ಯಾವ ವರನು ಸರಿಯಾದ ಜೋಡಿ ಎನಿಸಲಿಲ್ಲ. ಕೊನೆಗೆ ಕಕುದ್ಮಿ ಮಗಳೊಂದಿಗೆ ಬ್ರಹ್ಮನನ್ನು ಕಾಣಲು ಬ್ರಹ್ಮಲೋಕಕ್ಕೆ ಪಯಣಿಸಿದನು. ಅಲ್ಲಿ ಬ್ರಹ್ಮ ದೇವರ ಸಭೆಯಲ್ಲಿ ಸಂಗೀತ ಕಾರ್ಯಕ್ರಮ ನಡೆದಿತ್ತು. ಸ್ವಲ್ಪ ಹೊತ್ತಿನನಂತರ ಬ್ರಹ್ಮ ದೇವರು ಕಕುದ್ಮಿ ಬಂದ ಕಾರಣ ಕೇಳಿದರು. ಆಗ ಕಕುದ್ಮಿ ತನ್ನ ಕಷ್ಟ ತಿಳಿಸಿ, ಮಗಳಿಗೆ ಸರಿಯಾದ ವರನನ್ನು ಆಯ್ಕೆ ಮಾಡಿಕೊಡಲು ಸಹಾಯ ಕೇಳುತ್ತಾನೆ. ಆಗ ಬ್ರಹ್ಮ ನಗುತ್ತ ಹೇಳುತ್ತಾನೆ, “ನೀನು ಇಲ್ಲಿಗೆ ಬಂದು ಕಳೆದ ಕ್ಷಣಗಳಲ್ಲಿ ಭೂಲೋಕದಲ್ಲಿ ೨-೩ ಯುಗಗಳು ಮುಗಿದು ಹೋಗಿವೆ, ಈಗ ನಿನ್ನ ಸಮಯದ ಯಾವ ರಾಜಕುಮಾರ ಬದುಕಿಲ್ಲ, ಅವರ ನಂತರದ ಸಂತತಿ ಅಲ್ಲಿ ಇರುವುದು…ಅವರ ಮರಿ ಮಕ್ಕಳು ಹುಟ್ಟಿದ್ದಾರೆ.”

ಸಮಯ ವಿಸ್ತರಣೆ, ಇದು ಐನ್ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತ ಇಂದ ಬಂದ ಪರಿಣಾಮ.
ಸಮಯ ವಿಸ್ತರಣೆ ಬಗ್ಗೆ ನಾನು ಕೆಲವು ಲೇಖನಗಳನ್ನು ಓದುತ್ತಿದ್ದೆ, ಆಗ ದೊರಕಿದ ಒಂದು ಲೇಖನ “ಡುಂಡಿರಾಮ್ಸ್ ಲಿಮರಿಕ್ಸ್” (ಕವಿಗಳಾದ ಡುಂಡಿರಾಜ್ ಮತ್ತು ಅಣಕವಾಡುಗಳ ಸರದಾರ ಎನ್. ರಾಮನಾಥ್ ಜಂಟಿಯಾಗಿ ರಚಿಸಿದ ಚುಟುಕುಗಳ ಸಂಕಲನ) ಪುಸ್ತಕ ಪರಿಚಯ, ಡಾ. ಬಿ ಜನಾರ್ಧನ್ ಭಟ್ ಅವರಿಂದ. ಈ ಲೇಖನದ ಒಂದು ಭಾಗ ನನ್ನ ಲೇಖನಕ್ಕೆ ಉಪಯುಕ್ತ, ಆದುದರಿಂದ ಅದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
(vishvadhwani.com/2021/10/03/dumi-rams-limericks/)

“ಸಾಪೇಕ್ಷತಾ ಸಿದ್ಧಾಂತದ ಒಂದು ಪ್ರಮೇಯ, ಬೆಳಕಿನ ವೇಗಕ್ಕಿಂತ ವೇಗವಾಗಿ ಹೋದರೆ ಕಾಲವೂ ಸಾಪೇಕ್ಷವಾಗಿರುತ್ತದೆ ಎನ್ನುವುದು. ಉದಾಹರಣೆಗೆ ಯಾರಾದರೂ ಬೆಳಕಿನ ವೇಗಕ್ಕಿಂತ ವೇಗವಾಗಿ ಹೋಗುವ ರಾಕೆಟಿನಲ್ಲಿ ಬಾಹ್ಯಾಕಾಶಕ್ಕೆ ಹೋಗಿ ಹಲವು ವರ್ಷಗಳ ನಂತರ ಭೂಮಿಗೆ ಹಿಂದಿರುಗಿದರೆ ಅವರ ವಯಸ್ಸು ಹೆಚ್ಚೇನೂ ಬದಲಾಗಿರುವುದಿಲ್ಲ; ಆದರೆ ಇಲ್ಲಿನ ಅವರ ಓರಗೆಯವರು ಮುದುಕರಾಗಿರುತ್ತಾರೆ! ಇಂತಹ ಸಿದ್ಧಾಂತ ಬಂದಾಗ ಹುಟ್ಟಿಕೊಂಡ ಲಿಮರಿಕ್ ಒಂದು ಇನ್ನೂ ಜಗತ್ತಿನಾದ್ಯಂತ ಪ್ರಸಿದ್ಧವಾಗಿ ಚಲಾವಣೆಯಲ್ಲಿದೆ!

1923 ರಲ್ಲಿ ಲಂಡನಿನ ಪ್ರಸಿದ್ಧ ಹಾಸ್ಯ ಪತ್ರಿಕೆ – ವ್ಯಂಗ್ಯ ಚಿತ್ರಗಳಿಗೂ ಅದು ಪ್ರಸಿದ್ಧ – ‘ಪಂಚ್’ನಲ್ಲಿ ಅದು ಮೊದಲು ಅನಾಮಧೇಯ ಕವಿಯ ಹೆಸರಿನಲ್ಲಿ ಪ್ರಕಟವಾಯಿತು. ಅದು ಹೀಗಿದೆ:

There was a young lady named Bright
Whose speed was much faster than light.
She set out one day
In a relative way
And returned (on) the previous night.

ಸುಮಾರಾಗಿ ಇದರ ಭಾವಾರ್ಥ ಹೀಗೆ (ಅನುವಾದ ಡಾ. ಬಿ ಜನಾರ್ಧನ್ ಭಟ್ ):

ಬ್ರೈಟ್ ಎಂಬ ಹೆಸರಿನವಳು ಇದ್ದಳೊಬ್ಬಳು
ಬೆಳಕಿಗಿಂತ ವೇಗವಾಗಿ ಚಲಿಸುವವಳು
ಒಂದುದಿನ ಹಗಲು ಸಾ-
ಪೇಕ್ಷ ರೀತಿಯಲ್ಲಿ ಹೊರಟು
ಹಿಂದಿನ ದಿನ ರಾತ್ರಿಯೇ ಹಿಂದಿರುಗಿದಳು.

ಸಮಯ ವಿಸ್ತರಣೆ ಸಿದ್ದಾಂತದ ಆಧಾರದ ಮೇಲೆ ಅಮರತ್ವ ಅಥವಾ ಸಾವನ್ನು ಮುಂದೂಡುವ ಪ್ರಯತ್ನ ನಡೆಯುತ್ತಿದೆ. ಇದರ ಬಗ್ಗೆ ವಿಚಾರ ಮಾಡುವ ಮುನ್ನ ನಚಿಕೇತನ ಬಗ್ಗೆ ತಿಳಿಯೋಣ.

೩. ಉದ್ಧಾಲಕ ಗೌತಮ ಗೋತ್ರದ ಋಷಿ, ಅವನು ಲೋಕದ ಕಲ್ಯಾಣಕ್ಕೆ “ವಿಶ್ವಜಿತ್” ಎನ್ನುವ ಯಾಗ ಮಾಡುತ್ತಾನೆ. ಈ ಯಾಗಕ್ಕೆ ದಾನ ಪ್ರಧಾನ ಆದುದರಿಂದ ಅವನು ತನ್ನೆಲ್ಲ ಸಂಪತ್ತನ್ನು ದಾನ ಮಾಡುತ್ತಾನೆ. ಅವನ ಮಗ ನಚಿಕೇತ, ಸಣ್ಣ ಹುಡುಗ ಅವನು. ಉದ್ಧಾಲಕ ದಾನ ಮಾಡುತ್ತ ಕೊನೆಗೆ ತನ್ನಲ್ಲಿ ಇರುವ ಗೋವುಗಳನ್ನು ದಾನ ಮಾಡುತ್ತಾನೆ. ಗೋವುಗಳು ಬಡಕಲು ಇದ್ದು ದಾನಕ್ಕೆ ಯೋಗ್ಯ ಅಲ್ಲ ಎಂದು ಅವನ ಮಗ ನಚಿಕೇತ ಅಪ್ಪನಿಗೆ ತಿಳಿಸುತ್ತಾನೆ. ಆಗ ಅಪ್ಪ ಹೇಳುತ್ತಾನೆ, “ನನ್ನಲ್ಲಿ ಇರುವದು ಇದೆ ಗೋವುಗಳು, ಇದನ್ನು ಬಿಟ್ಟರೆ ನೀನು ಉಳಿದಿದ್ದೀಯ”… ಆಗ ನಚಿಕೇತ ತನ್ನನ್ನು ದಾನ ಮಾಡಲು ಕೇಳುತ್ತಾನೆ, ಅದನ್ನು ಕೇಳಿ ಅಪ್ಪ ಕೋಪದಲ್ಲಿ ನಿನ್ನನ್ನು ಯಮನಿಗೆ ದಾನ ಮಾಡುತ್ತೇನೆ ಎನ್ನುತ್ತಾನೆ.
ನಚಿಕೇತನಿಗೆ ಒಂದು ಅಶರೀರವಾಣಿ ಕೇಳಿಸುತ್ತದೆ, ಅದು ಅವನಿಗೆ ಯಮ ಲೋಕಕ್ಕೆ ಹೋಗಲು ತಿಳಿಸುತ್ತದೆ. ನಚಿಕೇತ ಅಲ್ಲಿಗೆ ಹೋದಾಗ ಯಮನು ಇರುವದಿಲ್ಲ, ಆದುದರಿಂದ ಅವನು ಅಲ್ಲಿಯೇ ಯಮನಿಗಾಗಿ ಕಾಯುತ್ತ ಕುಳಿತುಕೊಳ್ಳುತ್ತಾನೆ. ಮೂರು ದಿನದ ನಂತರ ಯಮ ಬಂದು ಅಲ್ಲಿ ಕಾಯುತ್ತ ಕುಳಿತ ಬಾಲಕನನ್ನು ನೋಡಿ ಅವನಿಗೆ ಮೂರು ವರಗಳನ್ನು ಕೊಡುತ್ತಾನೆ. ನಚಿಕೇತ ತನ್ನ ಮೂರನೇ ವರದಲ್ಲಿ “ಮನುಷ್ಯ ಮೃತ್ಯುವನ್ನು ಜಯಿಸುವ ಉಪಾಯ ತಿಳಿಸಿಕೊಡು” ಎನುತ್ತಾನೆ. ಎರಡು ವರಗಳಿಗೆ ಅಸ್ತು ಅಂದಿದ್ದ ಯಮ, ಮೂರನೇ ವರ ನೀನು ಕೇಳಿದಂತೆ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸುತ್ತಾನೆ.

ಯಮನು ನಿರಾಕರಿಸಿದ ವರ “ಸಾವನ್ನು ಗೆಲ್ಲುವುದು” ಈಗ ಮನುಷ್ಯನ ಮಹತ್ತರ ಗುರಿ ಆಗಿದೆ. ವೈಜ್ಞಾನಿಕವಾಗಿ ದೀರ್ಘಾಯುಷ್ಯ ಪಡೆಯುವುದು, ಚಿರಂಜೀವಿ ಆಗುವ ಕನಸನ್ನು ಕಾಣುತ್ತಿದ್ದಾನೆ.

ಖ್ಯಾತ ಗಾಯಕ, ನೃತ್ಯಪಟು ಮೈಕಲ್ ಜ್ಯಾಕ್ಸನ್ ಹೇಳಿದ್ದು, “”I don’t want to die. I want to live forever”, ಅದಕ್ಕಾಗಿ ಅವನು ಬಹಳ ಪ್ರಯತ್ನಪಟ್ಟನು.

“ಹುಟ್ಟು ಸಾವು ಬದುಕಿನಲ್ಲಿ ಎರಡು ಕೊನೆಗಳು… ಬಯಸಿದಾಗ ಕಾಣದಿರುವ ಎರಡು ಮುಖಗಳು…”
ಹುಟ್ಟಿದ್ದು ಸಾಯಬೇಕು, there is nothing forever ಎಂಬುದು ಜಗದ ನಿಯಮ, ಇದನ್ನು ಅಳಿಸಲು ನೋಡಿದರೆ ನಿಸರ್ಗದ ತತ್ವ ಬದಲಿಸಿದಂತೆ. ಬಂದ ಕೆಲಸ ಮುಗಿದ ಮೇಲೆ ಸಂತೋಷದಿಂದ ಹೋಗಬೇಕು, ರಾಮ… ಕೃಷ್ಣರೇ ಇದಕ್ಕೆ ಹೊರತಲ್ಲ, ಭೀಷ್ಮ ಪೀತಾಮಹ ಇಚ್ಚಾ ಮರಣ ಇದಾಗ್ಯೂ ಅವರು ಸಿಕ್ಕ ವರದಿಂದ ಚಿರಂಜೀವಿ ಆಗಲು ಬಯಸದೆ ಸಂತೋಷದಿಂದ ಈ ಬದುಕಿನಿಂದ ನಿರ್ಗಮಿಸಿದರು. ಅಶ್ವಥಾಮ ಶಾಪದಿಂದ ಚಿರಂಜೀವಿ ಆಗಿರಬಹುದು ಆದರೆ ಪರಿಣಾಮ ಅತಿ ಭೀಕರ.

ಚೀನಾ ದಲ್ಲಿ ೨೧% ಕ್ಕೋ ಹೆಚ್ಚಿನ ಜನ ೬೦ ವರುಷ ಮೇಲ್ಪಟ್ಟವರು. ಇನ್ನು ಜಪಾನ್ ದೇಶದ ೩೦% ಕ್ಕೋ ಹೆಚ್ಚು ಜನ ವಯಸ್ಸಾದವರು. ಸಾವು ಗೆಲ್ಲುವ ಔಷದಿ ಸಿಕ್ಕರೆ (ಅಮೃತ) ಎಲ್ಲೆಲ್ಲಿಯೂ ಜನರೇ… ಅವರ ಅರೋಗ್ಯ, ಜೀವನ ಮುಂತಾದ ನೆರವು ಸರಕಾರದ ಜವಾಬ್ದಾರಿ… ಈ ಪರಿಸ್ಥಿತಿ ಬಂದರೆ ಸರಕಾರ ಇರಬಹುದೇ? ಅವರಿಗೆ ಜೀವಿಸಲು ನೈಸರ್ಗಿಕ ಸಂಪನ್ಮೂಲಗಳು ಉಳಿಯುವದೇ? ಭೂಮಿ ಬಿಟ್ಟು, ಮಂಗಳ… ನಂತರ ಚಂದ್ರ… ನಂತರ ಇನ್ನೊಂದು ಗ್ರಹ ಹುಡುಕುತ್ತ ಮನೆ ಖರೀದಿಸುವ ಪ್ರಮೇಯ ಬರಬಹುದು. ಈಗ ಸಾಮಾನ್ಯವಾಗಿ ಕೇಳಿಬರುವದು “ಸತ್ತ ಮೇಲೆ ಹಣ ತೆಗೆದುಕೊಂಡು ಹೋಗುತ್ತಾರೇನು?”… ಇನ್ನು ಅಮರತ್ವ ಸಿಕ್ಕರೆ ನಮಗೆ ಕೇಳಿ ಬರಬಹುದಾದ ವಾಕ್ಯ “ಹಣ ಇದ್ದರೆ ಸಾಕು, ಸಾವನ್ನು ದಾಟಿಕೊಂಡು ಹೋಗುತ್ತಾರೆ”.

“Don’t Die: The Man Who Wants to Live Forever” ಇತ್ತೀಚಿಗೆ ನೆಟ್ಫ್ಲಿಸ್ ನಲ್ಲಿ ಬಂದ ಸಾಕ್ಷ್ಯಚಿತ್ರ. ಕಟ್ಟುನಿಟ್ಟಾದ ಆಹಾರ, ಜೀವನಶೈಲಿ ಮತ್ತು ವೈದ್ಯಕೀಯ ಪ್ರಯೋಗಗಳ ಸಹಾಯದಿಂದ ಬ್ರಯಾನ್ ಜಾನ್ಸನ್ ತನ್ನ ವಯಸ್ಸನ್ನು ಕಡಿಮೆ ಮಾಡಿಕೊಂಡು, ಹೆಚ್ಚು ವರ್ಷ… ಅಥವಾ ಸಾವಿಲ್ಲದ ಸರದಾರ ಆಗುವ ಪ್ರಯತ್ನದಲ್ಲಿ ಇದ್ದಾನೆ.

“ನಮ್ಮ ಸಂಸಾರ, ಆನಂದ ಸಾಗರ… ಪ್ರೀತಿ ಎಂಬ ದೈವವೇ ನಮಗಾಧಾರ” ಎನ್ನುವ ಹಾಡು, “ನಮ್ಮ ಸಂಸಾರ, ಬೃಹತ್ ಸಾಗರ… ಸಾವಿಲ್ಲದ ಔಷಧಿಯೇ ನಮಗಾಧಾರ” ಎಂದು ಬದಲಾಗುತ್ತದೆ.

“ಜಗವೇ ಒಂದು ರಣರಂಗ, ಧೈರ್ಯ ಇರಲಿ ನಿನ್ನ ಸಂಗ” ಹಾಡು, “”ಜಗವೇ ಒಂದು ರಣರಂಗ, ಸಾವೇ ಇರಲಿ ನಿನ್ನ ಸಂಗ” ಎನ್ನಬೇಕಾಗಬಹುದು…ಸಾವಿಲ್ಲದೆ ಜನ ಸಣ್ಣ ಸಣ್ಣ ಅವಶ್ಯಕತೆಗೂ ಹೋರಾಡಿ, ನೋವಿಗಿಂತ ಸಾವೇ ಖುಷಿ ಎನ್ನುವ ಪರಿಸ್ಥಿತಿ ತಲುಪುತ್ತಾರೆ.

ಆವಿಷ್ಕಾರದ ಅವಶ್ಯಕತೆ ಇದೆ, ಆದರೆ ಫಲಿತಾಂಶ/ ಪರಿಣಾಮ ವಿಚಾರ ಇರದೇ ಮಾಡಿದ ಆವಿಷ್ಕಾರ ತಿರುಗುಬಾಣ ಆಗಬಹುದು.

“ವೀರ ವನಿತೆ” ಮತ್ತು “ಅಜ್ಜನ” ಕವಿತೆ

ಶೀರ್ಷಿಕೆ ನೋಡಿ ಇದು ಕತೆಯೋ ಅಥವಾ ಕವಿತೆಯೂ ಎಂದು ಗೊಂದಲಪಡಬೇಡಿ, ಇದು ಕವಿತೆಯಲ್ಲಿ ಕತೆಯೂ ಹೇಳುತ್ತದೆ ಮತ್ತು ಕವಿತೆಯ ಕಥೆಯನ್ನು ತಿಳಿಸುವ ಪ್ರಯತ್ನ ಮಾಡುತ್ತದೆ. ವೀರ ವನಿತೆ ಎಂದ ಕೂಡಲೇ ನಿಮಗೆ ಇದು ಯಾರ ವಿಷಯ ಎಂದು ತಿಳಿದಿರುತ್ತದೆ… ಹೌದು, ವೀರ ವನಿತೆ ಕಿತ್ತೂರು ಚೆನ್ನಮ್ಮನ ವಿಷಯ. ಇನ್ನೂ ಅಜ್ಜ ಎಂದಾಗ ಕೂಡ ನಿಮಗೆ ಹೊಳೆದಿರಬಹುದು… ಹೌದು, ಅವರೇ ಬೇಂದ್ರೆ ಅಜ್ಜ.

ಈ ಸಂಚಿಕೆಯಲ್ಲಿ ಯಾಕೆ ಈ ವಿಷಯ ಎಂಬ ಪ್ರಶ್ನೆಯೇ?
ನಾಲ್ಕೈದು ದಿನದಲ್ಲಿ ಚೆನ್ನಮ್ಮನ ಹುಟ್ಟಿದ ದಿನ, ಅದ ಕಾರಣ ಇಂದು ವಿವಿಡ್ಲಿಪಿ ಪ್ರಕಟಣೆಯ ಶ್ರೀ. ಸತ್ಯೇಶ್ ಬೆಳ್ಳೂರ್ ಅವರು ಬರೆದ “ಕನ್ನಡೋತ್ಸವ” ನೃತ್ಯ ನಾಟಕದ ಒಂದು ಲಾವಣಿ ಇಲ್ಲಿ ಹಂಚಿಕೊಂಡಿದ್ದೇನೆ. ಚೆನ್ನಮ್ಮನ ವೀರ ಕಥೆಯನು ಸತ್ಯೇಶ್ ಅವರು ಲಾವಣಿಯ ಸುಂದರ ಸಾಲುಗಳಲ್ಲಿ ವಿವರಿಸಿದ್ದಾರೆ, ಕನ್ನಡೋತ್ಸವ ಪುಸ್ತಕ ನೃತ್ಯ ನಾಟಕದ ರೂಪದಲ್ಲಿ ಬೆಂಗಳೂರಿನಲ್ಲಿ ಪ್ರದರ್ಶನ ಕೂಡ ಆಗಿದೆ.

ಎರಡನೆಯದು ಬೇಂದ್ರೆ ಅವರ ನಾಕು ತಂತಿ ಕವನ ಸಂಕಲನದ ವಿಷಯ. ಅವರ ಸಂಕಲನಕ್ಕೆ “ಜ್ಞಾನ ಪೀಠ ಪ್ರಶಸ್ತಿ” ಬಂದು ೫೦ ವರ್ಷ ಆಯಿತು, ಆದುದರಿಂದ ಈ ಸಂಚಿಕೆಯಲ್ಲಿ ಅದರ ವಿಷಯ ಹಂಚಿಕೊಳ್ಳಬಹುದು ಎನ್ನುವ ವಿಚಾರ ಮನಸ್ಸಿಗೆ ಬಂತು… ಹಂಚಿಕೊಂಡಿದ್ದೇನೆ. ನನ್ನ ಸಂಪಾದಕೀಯ ಕಳೆದ ಸಂಚಿಕೆಯಲ್ಲಿ ಬೇಂದ್ರೆ ಅವರ “ನರಬಲಿ” ಕವನದ ವಿಷಯ ಇತ್ತು, ಈ ಸಂಚಿಕೆಯಲ್ಲಿ “ನಾಕು ತಂತಿ” ವಿಚಾರ ಬಂದಿದ್ದು ಆಕಸ್ಮಿಕ, ನನ್ನ ಸಂಪಾದಕೀಯ ಬರುವ ಸಮಯಕ್ಕೆ ಇದೆ ವಿಷಯ ಸಿಕ್ಕಿದ್ದು ಕಾಕತಾಳೀಯ.

ವೀರ ವನಿತೆ ಚೆನ್ನಮ್ಮನ ಲಾವಣಿ (- ಸತ್ಯೇಶ್ ಬೆಳ್ಳೂರ್)

ಬನ್ನಿರಿ ಮಕ್ಕಳೇ ನೋಡುತ ಹಾಡುವ ಕನ್ನಡನಾಡಿನ ಕತೆಯೊಂದ
ಬೆಳಗಾವಿಯ ಅಭಿಮಾನವ ಬೆಳಗುವ ವೀರರಮಣೀಯ ಹಾಡೊಂದ|
ಪೇಶ್ವೆಯ ರಾಜ್ಯವ ನುಂಗಿದ ನಂತರ, ಆಂಗ್ಲರ ದೃಷ್ಟಿಯು ನೆಟ್ಟಿತ್ತು
ಕಿತ್ತೂರಿನ ಸಿರಿ ಧನವನು ದೋಚುವ, ದುಷ್ಟ ಯೋಜನೆಯು ಹೊಮ್ಮಿತ್ತು ||ಪ||

“ವಸ್ತ್ರಕಾಣಿಕೆಯ ಕೊಡುವೆವು ನಾವು, ನಿಮ್ಮಯ ಪಾಡಿಗೆ ಇದ್ದುಬಿಡಿ
ನಿಮ್ಮಯ ರಕ್ಷಣೆ ಆಂಗ್ಲರ ಹೊಣೆಯು, ನಿಮ್ಮಯ ಸೇನೆಯ ಕೊಟ್ಟುಬಿಡಿ”|
ಆಂಗ್ಲರ ಮಾತಿಗೆ ವಿಧಿಯೇ ಇಲ್ಲದೆ ಸಮ್ಮತಿ ಕೊಟ್ಟರು ಒಳಒಳಗೆ
ಚೆನ್ನಮ್ಮಾಜಿಯು ಕುದಿಯುತಲಿದ್ದಳು ತೋರದೆ ಏನನು ಹೊರಹೊರಗೆ ||೧||

ದೇಸಾಯಿಯ ಆರೋಗ್ಯವು ಕೆಟ್ಟರೆ ರಾಜ್ಯವನುಳಿಸುವ ಸಲುವಾಗಿ
ತಾಯಿ ಚೆನ್ನಮ್ಮ ಕಚ್ಚೆಗಟ್ಟುತ್ತ ಖಡ್ಗವ ಹಿಡಿದಳು ಬಲವಾಗಿ|
ಅರಿಗು ತಿಳಿಯದ ಹಾಗೆ ಮತ್ತೊಮ್ಮೆ ಸೈನ್ಯವನೊಂದನು ಕಟ್ಟಿದಳು
ಶಸ್ತ್ರಾಸ್ತ್ರಗಳನು ಪೇರಿಸಿ ಇಡುತಲಿ ಕೋಟೆಯ ಗಟ್ಟಿ ಮಾಡಿದಳು ||೨||

ಸುಳುಹು ಸಿಗುತಲೇ ಆಂಗ್ಲರ ಸೈನ್ಯವು ಕೋಟೆಗೆ ಮುತ್ತಿಗೆ ಹಾಕಿತ್ತು
ಮದ್ದುಗುಂಡುಗಳ ತೋಪು ತುಪಾಕಿಯ ಕೋಟೆಯ ಹೊರಗಡೆ ನಿಲಿಸಿತ್ತು|
“ಅರ್ಧ ತಾಸಿನೊಳು ಕೋಟೆಯ ಬಾಗಿಲ ತೆರೆಯದೆ ಹೋದರೆ ಮುದದಿಂದ
ಬಾಗಿಲ ಸಿಡಿಸಿ ಒಳ ನುಗ್ಗುವೆವು” ಎಂದನು ಥ್ಯಾಕರೆ ಮದದಿಂದ ||೩||

ಅರ್ಧ ತಾಸಿಗೆ ಬಾಗಿಲು ತೆರೆಯಲು ನುಗ್ಗುತ ಬಂದಿತು ವೀರಪಡೆ
ಕುದರೆಯನೇರಿದ ಚೆನ್ನಮ್ಮಾಜಿಯೇ, ಮೊದಲ ಯೋಧಳು ಅವರ ಕಡೆ|
ಒಂಟೆ ಅಬಲೆ ಇವಳೇನು ಮಾಡುವಳು, ನಕ್ಕರು ಆಂಗ್ಲರು ಮೊದಲಲ್ಲಿ
ವೀರನಾರಿಯ ಖಡ್ಗಕೆ ಮಣಿದು, ಸೋಲನು ಉಂಡರು ಕೊನೆಯಲ್ಲಿ ||೪||

ತೋಪು ತುಪಾಕಿಯ ಪಡೆಯೇ ಆದರು, ಥ್ಯಾಕರೆ ಸತ್ತನು ಕೆಳಗುರಳಿ
ಎದೆಯಲಿ ಕೆಚ್ಚಿರೆ, ಮನದಲ್ಲಿ ನೆಚ್ಚಿರೆ, ಗೆಲವೇ ಬರುವುದು ಮರಮರಳಿ|
ಕನ್ನಡ ನಾಡಿನ ಕಥೆಯನು ಯಾರೇ ಹೇಳಲಿ ಕೇಳಲಿ ಯುಗಯುಗದಿ
ಕಿತ್ತೂರಿನ ಈ ರಾಣಿಯ ನೆನೆಯದೆ ಮುಗಿಯುವದೆಂತೋ ಈ ಜಗದೀ ||೫||

ಬನ್ನಿರಿ ಮಕ್ಕಳೆ ನಲಿಯುತ ಹಾಡುವ ಕನ್ನಡನಾಡಿನ ಕಥೆಯನ್ನು
ಕಿತ್ತೂರಿನ ಹೆಸರನು ಬೆಳಗಿಸಿದ ಚೆನ್ನಮ್ಮಾಜಿಯ ಹಾಡನ್ನು…
ವೀರರಮಣೀಯ ಹಾಡನ್ನು…

ದೇಶಪ್ರೇಮದ ಕಹಳೆಯ ಊದಿದ ಒಂದು ಹೆಣ್ಣಿನ ಕಥೆಯು ಇದು…
ಸ್ವಜನರ ದ್ರೋಹದ ಸಂಚಿಗೆ ಬಿದ್ದು ಜೀವವ ತೆತ್ತ ವ್ಯಥೆಯು ಇದು…
ವೀರವನಿತೆಯ ಕಥನವಿದು… ಚೆನ್ನಮಾಜಿಯ ಗಾಥೆ ಇದು…

“ನಾಕು ತಂತಿ”

“ನಾಕು ತಂತಿ” ನಲವತ್ತು ನಾಲ್ಕು ಕವನಗಳ ಸಂಗ್ರಹ, ಅವರ ಮೆಚ್ಚಿನ ಶ್ರಾವಣದ ಕುರಿತ ಕವನ ಮೊದಲನೆಯದು ಮತ್ತು ಶಿಶುಮಾರನ ಲಾಲಿ ನಲವತ್ತು ನಾಲ್ಕನೆಯ ಕವನ, ಪ್ರಕಟಿತ ಪುಸ್ತಕದ ನಾಲ್ಕನೆಯ ಕವನ “ನಾಕು ತಂತಿ”… ಇದು ನಾಲ್ಕನೆಯದು ಆಗುವದಕ್ಕೆ ನಾಕು ಸಂಖ್ಯೆ ಸಾಂಕೇತಿಕ ಇರಬಹುದೇನೋ (ಇದನ್ನು ಯಾರೂ, ಎಲ್ಲಿಯೂ ಉಲ್ಲೇಖಿಸಿಲ್ಲ, ಇದು ನನ್ನ ಅನಿಸಿಕೆ).

ನಾಕು ತಂತಿ ಕವನ ಸಂಕಲನದ ಬಗ್ಗೆ ಮಾತನಾಡುತ್ತ ಬೇಂದ್ರೆ ಅವರು ಹೇಳುತ್ತಾರೆ ” ಕವಿತೆಗಳಲ್ಲಿ ಭಾಷಾಂತರಕ್ಕೆ ಅನುಕೂಲವಾದ ಕವಿತೆಗಳು ಇರುತ್ತವೆ, ಭಾಷಾಂತರಕ್ಕೆ ಅಸಾಧ್ಯವಾದ ಕವಿತೆಗಳು ಇರುತ್ತವೆ. ಅದು ಭಾಷೆಯ ಜಾಯಮಾನಕ್ಕೆ ಕಟ್ಟಿದ್ದು… ನನ್ನ ನಾಕು ತಂತಿ ಕವನ ಯಾವ ಭಾಷೆಗೋ ವಯಲಿಕ್ಕೆ (ಭಾಷಾಂತರಕ್ಕೆ) ಬರಲ್ಲ…”,

ಅವರ ಕವನ ಓದುವಾಗ ಅನಿಸುತ್ತದೆ… ಕವನದ ಸೂಕ್ಷ್ಮ ಅರ್ಥ ತಿಳಿದುಕೊಳ್ಳುವದೇ ಕಷ್ಟ, ಯಾಕಂದರೆ ಕವನದ ಪದಗಳು, ಅಕ್ಷರಗಳು ಕನ್ನಡದಲ್ಲಿ ಕೊಡುವ ಅರ್ಥ ಇನ್ನೊಂದು ಭಾಷೆಯಲ್ಲಿ ಕೊಡಲಿಕ್ಕಿಲ್ಲ. ಡಾ|| ಗುರುರಾಜ ಕರಜಗಿ ಅವರು ಇದನ್ನು ಬೀಜಾಕ್ಷರ ರೂಪದ ಶ್ರುತಿ ಕಾವ್ಯ ಎಂದಿದ್ದಾರೆ. ನಿಜ, ಶಬ್ದ ಗಾರುಡಿಗ ಬೇಂದ್ರೆ ಅವರ ಪ್ರತಿಯೊಂದು ಅಕ್ಷರದಲ್ಲೂ ಅರ್ಥ ಇದೆ.

“ನಾಕು ತಂತಿ” ಯನ್ನು ಬೇಂದ್ರೆ ಅವರು ಬೆಂಗಳೂರಿನ ಆಲ್ ಇಂಡಿಯಾ ರೇಡಿಯೋ ಸಂದರ್ಶನದಲ್ಲಿ ಈ ರೀತಿ ವಿವರಿಸಿದ್ದಾರೆ ” ತನ್ನ ತನಾನೇ ಒಂದು ತಂತಿ, ಆ ತಂತಿ ಒಂದು ತುದಿ ನೀವು ನೋಡ್ತಿರ್ತೀರಿ ಅದಕ್ಕ ಅದು ನಿಮಗೆ ಪ್ರತ್ಯಕ್ಷ ಅಗುದಕ್ಕೆ ಅದಕ್ಕೆ “ನೀನು” ಅಂತೀನಿ, ಇನ್ನೊಂದು ನನಗ ಅದ ಅದಕ್ಕ “ನಾನು” ಅಂತೀನಿ. ಹೊರಗಿನ ಮಂದಿ “ನೀನು” ಅನೂದಕ್ಕೆ ನಾನು “ನಾನು” ಅಂತೀನಿ. ನನ್ನಷ್ಟಕ್ಕೆ ನಾನು ಇದ್ದಂಗೆ ನಾನು ಎಂಬುದು ಇದು “ತಾನು” ಇರ್ತೀನಿ, ಈ “ತಾನು” ಬಹಳ ಎಳೆದಾಡಿದರೆ ಸುಖ ಆಗೋದಿಲ್ಲ, ಅದಕ್ಕೆ “ಆನು” ಬೇಕಾಗುತ್ತದೆ… ಇದರ ಎಲ್ಲಾದರಲ್ಲೂ “ನು” ಏನಿದೆ ಅದು ಜೀವನದ ಮಹತ್ವದ ಭಾಗ.”

ಅದಕ್ಕೆ ಬೇಂದ್ರೆ ಅವರು ತಮ್ಮ ಕವನದಲ್ಲಿ ಅನುತ್ತಾರೆ
’ನಾನು’ ’ನೀನು’
’ಆನು’ ’ತಾನು’
ನಾಕೆ ನಾಕು ತಂತಿ,

ನಾಕೇ ತಂತಿ ಸಾಕು ಶ್ರುತಿ ಹಿಡಿಯಲಿಕ್ಕೆ, ಮಧುರವಾದ ಸಂಗೀತಕ್ಕೆ ಒಂದು ಚೌಕಟ್ಟು ಕೊಡಲಿಕ್ಕೆ. ಹಾಗೆ ’ನಾನು’, ’ನೀನು’, ’ಆನು’, ’ತಾನು’ – ನಾಕೇ ತಂತಿ ಸಾಕು ಜೀವನದ ಸಂಗೀತ ಮಧುರವಾಗಿಸಲಿಕ್ಕೆ.

ಮತ್ತೊಂದು ಕಡೆ ಬೇಂದ್ರೆ ಅವರು ಒಂದು ಇಂಗ್ಲಿಷ್ ಭಾಷಣದಲ್ಲಿ ನಾಕು ತಂತಿ ವಿವರಿಸಿದ್ದು ಹೀಗೆ, (ಕರಜಗಿ ಅವರ ಭಾಷಣದಲ್ಲಿ ಕೇಳಿದ್ದು)

Mans identity is four fold, it’s Naanu, Neenu, Taanu and Aanu. Nu is sensibility, Noovu is special form of sensibility turned into agony. I cannot see myself, not even my face, yet I love it. That is Naanu (I). You can see me as I am but cannot participate in my sensibility, that is Neenu (You). Taanu is the received self, Aanu is the receiving self the one that discovers self by surrender.

ಇನ್ನೂ ಕೆಲವರು ಇದನ್ನು ಅರ್ಥಿಸಿದ್ದು ಹೀಗೆ – “ನಾನು” ಪ್ರಕೃತಿ (ಹೆಣ್ಣಿಗೆ) ಹೋಲಿಸಿದ್ದಾರೆ, “ನೀನು” ಪುರುಷನಿಗೆ ಹೋಲಿಸಿದ್ದಾರೆ, ಇವರಿಬ್ಬರ ಸಮ್ಮಿಲನ “ತಾನು” ಅಂದರೆ ಒಂದು ಮಗು… “ಆನು” ಈ ಸೃಷ್ಟಿಯ ಸೃಷ್ಟಿಕರ್ತ, ಅಂದರೆ ದೇವರು,

ಈ ಕವನದ ನಾಲ್ಕು ಪದಗಳು ಪ್ರತಿ ಸಲ ಓದಿದಾಗಲೂ ಒಂದು ವಿಭಿನ್ನ ಅರ್ಥ ಕೊಡುತ್ತದೆ, ಬೇರೆ ಬೇರೆ ವಿಚಾರ ಮೂಡುತ್ತದೆ, ಹೊಸ ಅರ್ಥ ಹುಟ್ಟುತ್ತದೆ. ನಮ್ಮನ್ನು ನಾವು ಅರ್ಥ ಮಾಡಿಕೊಂಡಿದ್ದು “ನಾನು” ಅನ್ನಬಹುದು… ಬೇರೆಯವರು ನಮ್ಮನ್ನು ನೋಡಿ, ನಮ್ಮ ಬಗ್ಗೆ ತಿಳಿಸುವುದು “ನೀನು” ಅನ್ನಬಹುದು… ನಮ್ಮ ಅಹಂ ಅನ್ನು “ತಾನು” ಅನ್ನಬಹುದು… ಸಕಾರಾತ್ಮಕತೆ ವಿಚಾರಗಳನ್ನು “ಆನು” ಅನ್ನಬಹುದು… ಇವುಗಳನ್ನು ಸಮತೋಲನದಲ್ಲಿ ಇಟ್ಟರೆ ನಮ್ಮ ವ್ಯಕ್ತಿತ್ವ ಮಧುರ, ಇಲ್ಲದಿದ್ದರೆ ಕರ್ಕಶ… ಇದು ನನ್ನ ಮನಸಿನ್ನಲ್ಲಿ ಬಂದ ವಿಚಾರ.

ಅವರ ಇನ್ನೊಂದು ವಿಚಾರ ಇಲ್ಲಿ ಹಂಚಿಕೊಳ್ಳುವುದು ಸೂಕ್ತ ಅನಿಸುತ್ತದೆ, ಅವರು ಹೇಳುತ್ತಾರೆ “ಓದಿದ ಕೂಡಲೇ ಅರ್ಥ ಆಗೋದು ಕವಿತೆ ಉಚ್ಚ ಲಕ್ಷಣ ಅಲ್ಲವೇ ಅಲ್ಲ… ಪ್ರತಿಯೊಂದು ಸಲ ಓದಿದಾಗೂ ಹೊಸ ಅರ್ಥ ಆಗೋದು ಖರೆ ಕವಿತೆಯ ಲಕ್ಷಣ”.

ಇಲ್ಲಿಯವರೆಗೆ ನಾವು ನೋಡಿದ್ದು “ನಾಲ್ಕು ತಂತಿ” ಕವನದ ಮೂರು ಸಾಲು ಮಾತ್ರ, ಪೂರ್ತಿ ಕವನದಲ್ಲಿ ನಾನು ನೋಡಿದ್ದು/ ಓದಿದ್ದು ೬೮ ಸಾಲುಗಳು. ಇವನ್ನು ನನ್ನ ವಿಚಾರಧಾರೆಗೆ ಮತ್ತು ಮಿತಿಗೆ ತಕ್ಕಂತೆ ಅರ್ಥಮಾಡಿಕೊಳುತ್ತಿದ್ದೇನೆ, ಮತ್ತೊಮ್ಮೆ ಅವಕಾಶ ಸಿಕ್ಕರೆ ಉಳಿದ ಸಾಲುಗಳ ಬಗ್ಗೆ ಬರೆಯುವೆ.