ಬುಲಂದ್ ಭಾರತ್ ಕಿ ಬುಲಂದ್ ತಸ್ವೀರ್

ಇತ್ತೀಚಿಗೆ ದೂರದರ್ಶನ ನೋಡುತ್ತಿರುವಾಗ, ನಡು ನಡುವೆ ಬರುವ ಜಾಹಿರಾತುಗಳನ್ನು ನೋಡುತ್ತಿದ್ದೆ. ಡೋಮಿನೋಸ್ ಜಾಹಿರಾತಿನಲ್ಲಿ ಸ್ನಾನ ಮಾಡುತ್ತಿರುವ ಟಬ್ನಲ್ಲಿ ಡೆಲಿವೆರಿಯವನು ಪ್ರತ್ಯಕ್ಷನಾಗಿ ಡೆಲಿವರಿ ಕೊಡುತ್ತಾನೆ, ಇನ್ನೊಂದು ಜಾಹಿರಾತಿನಲ್ಲಿ ನಮ್ಮ ಬಾಲಿವುಡ್ ನಟ ಬಚ್ಚಲು ತಿಕ್ಕಲು ಹಾರ್ಪಿಕ್ ಎಷ್ಟು ಉತ್ತಮ ಎಂದು ತೋರಿಸುತ್ತಾನೆ… ಹೀಗೇ ನೋಡುತ್ತಿದ್ದರೆ ನೀವು ಇನ್ನೂ ವಿಚಿತ್ರವಾದ ಇಂತಹ ಜಾಹಿರಾತು ನೋಡಬಹುದು.ಜಾಹೀರಾತು ಕೆಲವು ವಿಚಿತ್ರವಾದರೆ, ಇನ್ನೂ ಕೆಲವು ಮರೆಯದ ಸುಂದರ ಕಥೆ ತರಹ ಇರುತ್ತವೆ.

ಅಲಿಕ್ ಪದಂಸೀ, ಆರ್ ಬಾಲ್ಕಿ. ಪ್ರಹ್ಲಾದ್ ಕಕ್ಕರ್, ಗೌರಿ ಶಿಂಧೆ, ರಾಮ್ ಮಾಧ್ವಾನಿ ಇವರು ಜಾಹಿರಾತು ಜಗತ್ತಿನ ಕೆಲವು ಪ್ರಮುಖರು. ಸೃಜನಾತ್ಮಕ ಜಾಹಿರಾತು ಸೃಷ್ಟಿಸಿ ಮುಂದೆ ಒಳ್ಳೆಯ ಚಲನಚಿತ್ರಗಳನ್ನೂ ಕೂಡ ಮಾಡಿದ್ದಾರೆ. “ಜಾಹಿರಾತು” ಮತ್ತು “ಸಾಹಿತ್ಯ” ಇದರ ಒಂದು ಸಂಬಂಧ ಹೇಗೆ ಇರಬಹುದು.. ಇಂದಿನ ಲೇಖನ ಇದೆ ವಿಷಯದ ಬಗ್ಗೆ ಬರೆಯೋಣ ಅಂತ ವಿಚಾರ ಬಂತು…ಬರೆದಿದ್ದೇನೆ.

ಎಲ್ಲೆಲ್ಲೂ ಸಂಗೀತವೇ, ಎಲ್ಲೆಲ್ಲೂ ಸೌಂದರ್ಯವೇ
ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು
ಎಲ್ಲೆಲ್ಲೂ ಸಂಗೀತವೇ…

ಮಲಯ ಮಾರುತದ ಚಿತ್ರದ ಹಾಡು, ಇದೆ ಹಾಡಿನ ಸಾಲುಗಳನ್ನು ಸ್ವಲ್ಪ ಬದಲಿಸಿದರೆ

ಎಲ್ಲೆಲ್ಲೂ ಸಾಹಿತ್ಯವೇ, ಎಲ್ಲೆಲ್ಲೂ ಮಾಹಿತಿಯೇ,
ಓದುವ ಕಣ್ಣಿರಲು, ಅರಿಯುವ ಮನವಿರಲು,
ಎಲ್ಲೆಲ್ಲೂ ಸಾಹಿತ್ಯವೇ…

ಜೀವನದಲ್ಲಿ ಪ್ರತಿ ಶಬ್ದ ಸಂಗೀತವಾದರೆ, ಪ್ರತಿ ಸಾಲು ಸಾಹಿತ್ಯ ಆಗಬಹುದು… ಅದು ಕೇಳುಗನ, ಓದುಗನ ಆಸಕ್ತಿ, ಅಭಿರುಚಿಯ ಅನುಗುಣವಾಗಿ ಅವಲಂಬಿತವಾಗಿದೆ.
ನಾವು ಚಿಕ್ಕವರಿದ್ದಾಗ ಚಲನಚಿತ್ರದ ನೋಡಲು ಚಿತ್ರಮಂದಿರಕ್ಕೆ ಹೋದಾಗ, ನಾವು ನೋಡಿದ
ಜಾಹಿರಾತಿನ ಸಾಲುಗಳಿಂದ ಈ ವಿಚಾರ ಆರಂಭಿಸೋಣ.

“ವಜ್ರದಂತಿ, ವಜ್ರದಂತಿ, ವಿಕೋ ವಜ್ರದಂತಿ,
ವಿಕೋ ಪೌಡರ್, ವಿಕೋ ಪೇಸ್ಟ್,
ಆಯುರ್ವೇದಿಕ್ ಜಡಿಬೂಟಿಯೊಂ ಸೆ ಬನಾ ಸಂಪೂರ್ಣ್ ಸ್ವದೇಶೀ,
ವಿಕೋ ಪೌಡರ್, ವಿಕೋ ಪೇಸ್ಟ್, ವಿಕೋ ವಜ್ರದಂತಿ!!!”

“ವಾಷಿಂಗ್ ಪೌಡರ್ ನಿರ್ಮಾ, ದೂಧ್ ಸಿ ಸಫೆದಿ
ನಿರ್ಮಾ ಸೆ ಆಯಿ, ರಂಗೀನ್ ಕಪಡಾ ಭೀ ಖಿಳ್ ಖಿಳ್ ಜಾಯೆ,
ಹೇಮಾ, ರೇಖಾ, ಜಯಾ ಔರ್ ಸುಷ್ಮಾ
ಸಬ್ಕಿ ಪಸಂದ್ ನಿರ್ಮಾ, ವಾಷಿಂಗ್ ಪೌಡರ್ ನಿರ್ಮಾ”

ಈ ಸಾಲುಗಳಲ್ಲಿ ಸಾಹಿತ್ಯ ಕಾಣಬಹುದೇ?
ಈ ಪ್ರಶ್ನೆಗೆ ಉತ್ತರಿಸಲು ಸಾಹಿತ್ಯ ಅಂದರೆ ಸರಳವಾದ ಉತ್ತರ ಏನು ಎಂದು ನೋಡೋಣ.

“Literature is a body of work that transmits culture “
ಅಥವಾ “Literature is the collective term for written works valued for their artistic or intellectual merit.”

ವಿಕೋ ವಜ್ರದಂತಿ ಸಾಲುಗಳನ್ನು ನೋಡಿದಾಗ “ಸಂಸ್ಕೃತಿ” ಪದದ ಬದಲಾಗಿ “ನಡೆದು ಕೊಂಡ ಬಂದ ಪದ್ಧತಿ” ಎಂದು ಓದಿದಾಗ ನಮಗೆ ಕಾಣಿಸುವುದು ಆ ಸಮಯದ ಆಯುರ್ವೇದ, ಗಿಡ ಮೂಲಿಕೆ ಉಪಯೋಗ. ನನಗೆ ಇನ್ನೂ ನೆನಪಿರುವುದು ಬೇವಿನ ಕಡ್ಡಿ ಉಪಯೋಗಿಸಿ ಹಲ್ಲುಜ್ಜುತ್ತಿದಿದ್ದು, ಅದರ ಖುಷಿಯೇ ಬೇರೆ. ಇನ್ನು “ಸ್ವದೇಶೀ” ಪದ ನೋಡಿದಾಗ ಅಂದಿನ ಸ್ಥಳೀಯ ಉತ್ಪನ್ನ ಉಳಿಸುವ, ಬೆಳೆಸುವ ಉದ್ದೇಶ. ನಮ್ಮ ದೇಶದ ಪರಂಪರೆಯಾದ ಆಯುರ್ವೇದ ವಿಜ್ಞಾನವನ್ನು ಶ್ರೀ ಜಿ ಕೆ ಪೆಂಡಾರ್ಕರ್ (ವಿಕೋ ಸಂಸ್ಥೆಯ ಸಂಸ್ಥಾಪಕ) ಅವರು ಉತ್ಸಾಹದಿಂದ ಸ್ವದೇಶೀ ಪ್ರಚಾರ ಇದರಲ್ಲಿ ಮಾಡಿದ್ದಾರೆ. ೧೯೬೦ ರ ಸುಮಾರು, ಭಾರತೀಯ ಕಂಪನಿಗಳು ವಿದೇಶಿ ತಂತ್ರಜ್ಞಾನಕ್ಕೆ ಮಾರುಹೋಗುತ್ತಿದ್ದಾಗ, ಶ್ರೀ ಪೆಂಡಾರ್ಕರ್ ಅವರು ಆಯುರ್ವೇದವನ್ನು ನಿರಂತರವಾಗಿ ಪ್ರಚಾರ ಮಾಡಿದರು.

ಇನ್ನು ನಿರ್ಮಾ, ಸಂಸ್ಥೆಯ ಸಂಸ್ಥಾಪಕನ ಮಗಳ ಕಥೆ ಎಂದು ಕೆಲವರಿಗೆ ಗೊತ್ತಿರಬಹುದು. ಕರ್ಸನ್ ಭಾಯ್ ಮಗಳು ನಿರುಪಮಾ, ಅವಳ ನೆನಪು ವರುಷ ವರುಷಗಳ ತನಕ ಇರಲೆಂದು ತಂದೆ ಮಗಳ ಪ್ರೀತಿಯ ಹೆಸರಾದ ನಿರ್ಮಾ ಸಂಸ್ಥೆ ಆರಂಭಿಸಿ, ಅದನ್ನು ಮನೆ ಮನೆಗೆ ತಲುಪಿಸಿದರು. ಇಲ್ಲಿ “ಹೇಮಾ, ರೇಖಾ, ಜಯಾ ಔರ್ ಸುಷ್ಮಾ” ಅಂದರೆ ಪ್ರತಿ ಹೆಣ್ಣು ಮೆಚ್ಚುವ, ಅವರ ಮನೆಯಲ್ಲಿ ಲಭ್ಯವಿರುವದು ನಿರ್ಮಾ ಎಂದು. ಇಲ್ಲಿಯೂ ಕೂಡ ಸುಂದರ ಮತ್ತು ಸರಳ ಪದಗಳ ಪದ್ಯ, “ನಿರ್ಮಾ” ಎಲ್ಲರ ಚಿರಪರಿಚಿತ ಹೆಸರಾಯಿತು.

ಇನ್ನು ಸರಳವಾಗಿ ಜಾಹೀರಾತು ವಿವರಿಸಿದರೆ “ಇದೊಂದು ಸಾಮಾನ್ಯವಾಗಿ ವಿಷಯ ತಿಳಿಯಪಡಿಸುವ ಒಂದು ಕ್ರಿಯೆ. ಇದು ಸಾರ್ವಜನಿಕರ ಗಮನಕ್ಕೆ ಮಾಡುವ ಒಂದು ಕರೆ, ಸಾಮೂಹಿಕ ಮನವಿ”. ಹಾಗಾದರೆ ಜಾಹಿರಾತು ಒಂದು ವಸ್ತು ಅಥವಾ ಉತ್ಪನ್ನ ಮಾರುವ ಒಂದು ಪ್ರಕ್ರಿಯೆ ಅಲ್ಲವೇ?
ಜಾಹೀರಾತುಗಳು, ಉತ್ಪನ್ನವನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಸೀಮಿತ ಅಲ್ಲ. ಅದರ ಮುಖ್ಯ ಉದ್ದೇಶ ಭಾವನೆಗಳನ್ನು ಹುಟ್ಟು ಹಾಕುವದು, ಮನವನ್ನು ಸಂತೋಷದಿಂದ ತುಂಬಿ,ನೆನಪುಗಳ ಆಗರದೆಡೆಗೆ ನಮ್ಮನ್ನು ಕರೆದುಕೊಂಡು ಹೋಗುವುದು…ಭಾವನಾತ್ಮಕ (emmotional) ಸೆಳೆತದಿಂದ ಉತ್ಪನ್ನ ಮತ್ತು ಅಪೇಕ್ಷಿತ (desire) ಭಾವನೆಯ ನಡುವೆ ಉಪಪ್ರಜ್ಞೆಯ (Subconscious) ಸಂಪರ್ಕವನ್ನು ಸೃಷ್ಟಿಸುವದು, ಅದನ್ನು ಹೆಚ್ಚು ಸ್ಮರಣೀಯ ಮತ್ತು ಅಪೇಕ್ಷಣೀಯವಾಗಿಸುವದು. ಅದು ಭಾವನೆಗಳು, ಸಾಮಾಜಿಕ ಸೂಚನೆಗಳು ಮತ್ತು ಅರಿವಿನ ಪೂರ್ವಾಗ್ರಹಗಳ ಮೇಲೆ ಕೇಂದ್ರೀಕರಿಸುತ್ತದೆ.

ಏ ಝಮೀನ್ ಏ ಆಸ್ಮಾನ್
ಹಮಾರಾ ಕಲ್ ಹಮಾರಾ ಆಜ್
ಬುಲಂದ್ ಭಾರತ್ ಕಿ ಬುಲಂದ್ ತಸ್ವೀರ್
ಹಮಾರಾ ಬಜಾಜ್

ಅಲಿಕ್ ಪದಂಸೀ ಅವರ ಬಜಾಜ್ ಜಾಹಿರಾತು ಮನೆ ಮನೆಯ ಹಾಡಾಯಿತು. ದ್ವಿಚಕ್ರ ವಾಹನ ಮಾರುಕಟ್ಟೆ ಅಂತರರಾಷ್ಟ್ರೀಯ ಮಾರಾಟಗಾರರಿಗೆ ತೆರೆದುಕೊಳ್ಳುತ್ತಿದ್ದಾಗ ಈ ಒಂದು ಜಾಹಿರಾತು ಬಜಾಜ್ ಸ್ಕೂಟರ್ ಹೊರತಂದಿತು. ಭಾರತದ ಈ ವಾಹನ ಸಾಮಾನ್ಯ ಜನರನ್ನು ಸಶಕ್ತರಾಗಿ ಮಾಡುತ್ತದೆ ಎಂದು ತೋರಿಸಲು ಅವರು ಇಲ್ಲಿ ಸಾಮಾನ್ಯ ಜನರನ್ನೇ ತೋರಿಸಿದರು…

ಫೆವಿಕಾಲ್, ಲಿಮ್ಕಾ, ಹ್ಯಾಪಿಡೆಂಟ್, ಕ್ಯಾಡ್ಬರಿ ಮುಂತಾದ ಇಂತಹ ಸುಂದರ ಜಾಹಿರಾತು ನೀವು ನೋಡಿರಬಹುದು. ಎಲ್ಲವನ್ನು ಒಂದೇ ಲೇಖನದಲ್ಲಿ ಬರೆಯಲಾಗುವುದಿಲ್ಲ… ಆದರೂ ನೋಡಿದ ಸುಂದರ, ಸಣ್ಣ ಕಥೆಯಂಥ ಒಂದೆರಡು ಹಂಚಿಕೊಳ್ಳುತ್ತಿದ್ದೇನೆ.

ನೀರು – ಅದರ ಮೂಲ ಅವಶ್ಯಕತೆ, ವಿವಿಧ ಜನರು ಅದನ್ನು ಉಪಯೋಗಿಸುವ ಪರಿ ತೋರಿಸಿದ ಒಂದು ಸುಂದರ ಚಿತ್ರ ಈ ಕೆಳಗಿನ ಜಾಹಿರಾತು

ಶಿಕ್ಷಕಿ ಮತ್ತು ವಿದ್ಯಾರ್ಥಿಗಳ ಸುಂದರ ಸಂಬಂಧ ಬಗ್ಗೆ ಪಾರ್ಲೆ ಜಿ ಅವರು ಸುಂದರ ಕಥೆ ಹೆಣೆದಿದ್ದಾರೆ.

ಎಲ್ಲರೂ ಒಂದೇ ಎಂದು ತೋರಿಸುವ ಈ ಕಿರುಚಿತ್ರ ಕಣ್ಣಂಚಲಿ ನೀರು ತಂದರೆ ಆಶ್ಚರ್ಯವಿಲ್ಲ

ಕೊನೆಯದಾಗಿ ನಾನು ಇಷ್ಟ ಪಟ್ಟ ಇನ್ನೊಂದು ಜಾಹಿರಾತು

ಗಿಳಿಯು ಪಂಜರದೊಳಿಲ್ಲ

ಹಿಂದಿನ ಲೇಖನದಲ್ಲಿ ಪೌರಾಣಿಕ ಕಥೆಗಳಲ್ಲಿ ಬರುವ “ಅಮರತ್ವ” ವನ್ನು ಇಂದಿನ “ಆವಿಷ್ಕಾರಗಳಿಂದ” ಪಡೆಯುವ ಪ್ರಯತ್ನದ ಬಗ್ಗೆ ಬರೆದಿದ್ದೆ. ಈ ವಿಷಯದ ಬಗ್ಗೆ ವಿಚಾರಗಳು ಇನ್ನೂ ತಲೆಯಲ್ಲಿ ಓಡುತ್ತಿತ್ತು, ತಲೆಯಲ್ಲಿ ಹರಡಿದ ವಿಚಾರಗಳನ್ನು ಹೆಣೆದು, ಒಂದು ಲೇಖನ ಮಾಡುವ ಪ್ರಯತ್ನ ಇದು.

ಶನಿ ಮಹಾತ್ಮೆ ಕಥೆಯ ಒಂದು ಭಾಗ; ಸೂರ್ಯನ ಎರಡನೆಯ ಪತ್ನಿ ಛಾಯಾದೇವಿ. ಯಮ ಮೊದಲ ಹೆಂಡತಿಯ ಮಗ, ಅವನು ತಾಯಿ ಛಾಯಾದೇವಿ ಮಾಡುವ ಬೇಧಭಾವ ಬಗ್ಗೆ ಮಾತನಾಡಿದಾಗ, ಛಾಯಾದೇವಿಯು ಯಮನಿಗೆ “ಪ್ರೇತನಾಗು” ಎಂದು ಶಾಪ ಕೊಡುತ್ತಾಳೆ. ಸೂರ್ಯದೇವ ಇದನ್ನು ವರವನ್ನಾಗಿ ಪರಿವರ್ತಿಸಿ, ಯಮನನ್ನು ಪ್ರೇತಗಳ ರಾಜ – ನರಕದ ಒಡೆಯನನ್ನಾಗಿ ಮಾಡುತ್ತಾನೆ. ಈ ಯಮಧರ್ಮ ಜಗತ್ತಿನ ಎಲ್ಲ ಜನರಿಗೆ ಕೊನೆಯ ವರದಾನ “ಸಾವನ್ನು” ಕೊಡುತ್ತಾರೆ, ಜೋಗಿ ತಮ್ಮ ಪುಸ್ತಕ “ಸಾವು” ನಲ್ಲಿ ಹೇಳುವದು “ಅವನು ಕೊನೆಗೆ ಬರುತ್ತಾನೆ. ಹೊರಡು ಅನ್ನುತ್ತಾನೆ. ನಾವೆಲ್ಲ ಎದ್ದು ಹೊರಡುತ್ತೇವೆ, ಅಲ್ಲಿಗೆ ಆಟ ಮುಗಿಯುತ್ತದೆ. ಮುಂದೇನು ಅನ್ನುವುದು ಯಾರಿಗೂ ಗೊತ್ತಿಲ್ಲ. ನಾವು ಭೇಟಿಯಾಗುವ ಕೊನೆಯ ಗಿರಾಕಿ ಸಾವು. ನಮ್ಮ ಹುಟ್ಟಿನೊಂದಿಗೆ ನಮ್ಮೊಳಗೇ ಹುಟ್ಟುವ ಆತ್ಮಬಂಧು”. ಇಲ್ಲಿ ಸಾವನ್ನು ಆತ್ಮಬಂಧು ಎಂದು ಯಾಕೆ ಕರೆದಿರಬಹುದು ಎಂಬುದು ಮುಂದೆ ಚರ್ಚಿಸೋಣ.

ಸಾವಿನ ವಿಷಯ ಬಂದಾಗ ನೆನಪಾಗುವುದು ನನ್ನ ಬಾಲ್ಯದ ಗೆಳೆಯ “ಚಂದ್ರು”. ನನ್ನೊಡನೆ ಶಾಲೆಯಲ್ಲಿ ಓದಿದವನು, ಜಾಣ ಹುಡುಗ. ನಾವೆಲ್ಲರೂ ಶಾಲೆ ಮುಗಿದಮೇಲೆ ಮುಂದಿನ ವಿದ್ಯಾಭ್ಯಾಸಕ್ಕೆ ಬೇರೆ, ಬೇರೆ ಸ್ಥಳಕ್ಕೆ ಹೋದೆವು. ಚಂದ್ರು ಸುರತ್ಕಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜು ಸೇರಿಕೊಂಡು ಕೆಮಿಕಲ್ ಇಂಜಿನಿಯರಿಂಗ್ ಓದುತ್ತಿದ್ದ. ಅವನು “ಲೈಫ್ ಆಫ್ಟರ್ ಡೆತ್” ಪುಸ್ತಕ ಓದಿ, ಅದರಿಂದ ಪ್ರಭಾವಿತಗೊಂಡನು. ಒಂದು ದಿನ ವಿಷಯ ತಿಳಿಯಿತು, ಅವನು ಸಾವಿನ ನಂತರ ಏನಿದೆ ಎಂದು ನೋಡಲು ಹೋಗುತ್ತಿದ್ದೇನೆ ಎಂದು ಪತ್ರ ಬರೆದು ಇಟ್ಟು, ಸಾವನ್ನು ಅಪ್ಪಿಕೊಂಡಿದ್ದನು… ಈ ವಿಷಯ ಹಂಚಿಕೊಂಡ ಕಾರಣ, ಸಾವು ಕೆಲವರಿಗೆ ಹೆದರಿಕೆ ತಂದರೆ… ಕೆಲವರಿಗೆ ಕುತೂಹಲ ಮೂಡಿಸುತ್ತದೆ.

ಹಿಂದು ಧರ್ಮದಲ್ಲಿ ಸಾವು, ಅದರ ನಂತರದ ಬದುಕಿನ ಬಗ್ಗೆ ವಿಷಯಗಳು ಗರುಡ ಪುರಾಣದಲ್ಲಿ ಬರುತ್ತದೆ. ನಾವು ನಮ್ಮ ಕರ್ಮಗಳ ಅನುಸಾರವಾಗಿ ಸಾವಿನ ನಂತರದ ಬದುಕನ್ನು ಕಾಣುತ್ತೇವೆ. ಒಂದು ರೀತಿ ಅದು ನಿಜ, ಯಾಕೆಂದರೆ ನಾವು ಬದುಕಿದಾಗ ಮಾಡಿದ ಒಳ್ಳೆಯ ಕಾರ್ಯವನ್ನು ಜನ ನೆನಪಿಸಿಕೊಂಡು, ನಮ್ಮ ಸಾವಿನ ನಂತರವೂ ನಮ್ಮ ಉಳಿವು ಇಲ್ಲಿರುವಂತೆ ಮಾಡುತ್ತಾರೆ.

“ಬರಿ ನಾಲ್ಕು ದಿನ ಇಲ್ಲಿ ನಿನ್ನ ಋಣ,
ಕೊನೆಗೆ ಉಳಿಯುವುದೇ ನಿನ್ನ ಒಳ್ಳೆತನ.
ಸ್ನೇಹ ಪ್ರೀತಿ ನ್ಯಾಯ ನೀತಿ ನಿನ್ನದಾಗಲಿ ಸದಾ”
(“ಮಾಸ್ತಿ ಗುಡಿ” ಚಿತ್ರದ ಒಂದು ಹಾಡು)

ಸ್ವಾಮಿ ರಾಮ ಅವರ ಪುಸ್ತಕ “ಹಿಮಾಲಯದ ಮಹಾತ್ಮರ ಸನ್ನಿದಿಯಲ್ಲಿ” ಅವರು ವಿವಿಧ ಸಾಧಕರ ಪರಿಚಯ ಮಾಡಿಕೊಡುತ್ತಾರೆ. ಅದರಲ್ಲಿ ಸ್ವಾಮಿ ರಾಮ ತಮ್ಮ ಗುರುಗಳ ಶಿಷ್ಯಂದಿರಲ್ಲಿ ಒಬ್ಬರಾದ ಸಾಧಕರ ಬಗ್ಗೆ ಬರೆಯುತ್ತಾರೆ, ಆ ಸಾಧಕರನ್ನು ಭೇಟಿಯಾಗಲು ಗಂಗೋತ್ರಿ ಹತ್ತಿರದ ಒಂದು ಗವಿಗೆ ಹೋಗುತ್ತಾರೆ. ಆ ಸ್ವಾಮಿಗಳು ಸುಂದರವಾದ ದೃಢಕಾಯದವರು, ಅವರು ದೇಹದಿಂದ ತಮ್ಮನ್ನು ಬೇರ್ಪಡಿಸಿಕೊಂಡು ಹೋಗುವ ತಯಾರಿಯಲ್ಲಿ ಇದ್ದರು. ಅವರು ಹೇಳಿದ ದಿನ, ಕ್ಷಣ ತಮ್ಮ ದೇಹವನ್ನು ತ್ಯಾಗ ಮಾಡಿ ತಮ್ಮ ಆತ್ಮವನ್ನು ಬ್ರಹ್ಮರಂಧ್ರದಿಂದ ಬೇರ್ಪಡಿಸಿದರು. ಅವರ ಪ್ರಕಾರ ಇದು ಸಾವಲ್ಲ, ಅವರ ಆತ್ಮ ಅವರ ಹತೋಟಿಯಲ್ಲಿ ಇದೆ ಮತ್ತು ಅವರು ತಮ್ಮ ಇಚ್ಛಾನುಸಾರ ಅಮರರಾಗಿಯೇ ಉಳಿಯುತ್ತಾರೆ. ಇಲ್ಲಿ ನಾವು ಮೇಲೆ ನೋಡಿದ ಆತ್ಮಬಂಧು ಪದವನ್ನು ನೋಡೋಣ… ಆತ್ಮಬಂಧು, ಆತ್ಮಾಭಿಮಾನ, ಆತ್ಮನಿರ್ಭರತೆ, ಆತ್ಮಾವಲೋಕನ ಈ ಎಲ್ಲ ಪದಗಳಲ್ಲಿ ಆತ್ಮ ಎಂದು ಉಪಸರ್ಗ ಇದೆ. ಇಲ್ಲಿ ಅಥವಾ ಇಂತಹ ಸಂಬೋಧನೆಯಲ್ಲಿ ದೇಹ ಎಂದು ಇರುವದಿಲ್ಲ, ಯಾಕೆಂದರೆ ನಮ್ಮನ್ನು ಗುರುತಿಸುವುದು ಆತ್ಮ, ನಮ್ಮ ಆತ್ಮತೃಪ್ತಿಗಾಗಿ ಮಾಡುವ ಕಾರ್ಯಗಳೇ ನಮ್ಮನ್ನು ಇಲ್ಲಿ ಉಳಿಸುವುದು; ನಮ್ಮ ದೇಹವಲ್ಲ. ಮೇಲೆ ಕಂಡಂತಹ ಸಾಧಕರ ಪ್ರಕಾರ ದೇಹ ಬಾಹ್ಯ ವ್ಯಕ್ತಿತ್ವ.

ನನ್ನಗೂ, ನನ್ನ ಅಣ್ಣನಿಗೂ ಕೆಲವು ತಿಂಗಳು ಇಂತಹ ಒಬ್ಬ ಸಾಧಕರ ಜೊತೆ ಇದ್ದು, ಅವರ ಸೇವೆ ಮಾಡುವ ಅವಕಾಶ ಸಿಕ್ಕಿತು. ಸಾಧಕರು ಇದ್ದ ಸ್ಥಳ ಸಿದ್ದಾಪುರದ ಹತ್ತಿರದ ಶಿರಳಗಿ ಎಂಬ ಸಣ್ಣ ಗ್ರಾಮದಲ್ಲಿ. ಅವರು ಶ್ರೀ ರಾಮ ದೇವರೊಡನೆ ಮಾತನಾಡುತ್ತಾರೆ, ಹನುಮಂತ ದೇವರ ದರ್ಶನ ಪಡೆದಿದ್ದಾರೆ ಎಂದು ಸುತ್ತಲಿನ ಜನ ಅವರ ಹತ್ತಿರ ತಮ್ಮ ಕಷ್ಟಗಳನ್ನು ಹಂಚಿಕೊಳ್ಳಲು ಬರುತ್ತಿದ್ದರು. ನಮಗೆ ಪ್ರತಿ ದಿನವೂ ಹೊಸ ಜನ, ಹೊಸ ವಿಷಯ ತಿಳಿಯುತ್ತಿತ್ತು, ಇನ್ನೊಂದು ಲೇಖನದಲ್ಲಿ ಅಲ್ಲಿ ಕಂಡ ವಿಷಯ, ಸಂಗತಿಗಳ ಬಗ್ಗೆ ಬರೆಯಲು ಪ್ರಯತ್ನಿಸುತ್ತೇನೆ. ಅವರ ಸರಳ ಜೀವನ, ಸದಾ ನಗು, ಯಾವುದೇ ಒಂದು ವಸ್ತು/ವಿಷಯದ ಮೇಲೆ ಅಸೆ ಇರದೇ ಜೀವಿಸುದು ನೋಡಿ ಒಂದು ದಿನ ತಡೆಯಲಾರದೆ ಕೇಳಿದೆ – “ನಿಮ್ಮ ಬಗ್ಗೆ, ನಿಮ್ಮ ವಿಚಾರ ಹೆಚ್ಚಿನ ಜನರಿಗೆ ತಲುಪಿಸಲು ನಿಮಗೆ ಇಚ್ಛೆ ಇಲ್ಲವೇ? ಆಶ್ರಮ ನೀವು ಇನ್ನೂ ಬೆಳಸಬಹುದಲ್ಲವೇ?”. ಅದಕ್ಕೆ ಅವರು ಅಂದದ್ದು, ನನಗೆ ಬಾಹ್ಯ ಜಗತ್ತು ಬೇಕಿಲ್ಲ, ನನ್ನ ಜಗತ್ತು ನನ್ನ ಅಂತರಾತ್ಮದಲ್ಲಿ ಇದೆ ಮತ್ತು ಅದರಲ್ಲಿ ನಾನು ಸಂತೋಷದಿಂದ ಇದ್ದೇನೆ. ನಿಜಕ್ಕೂ ಅವರಿಗೆ ಬಾಹ್ಯ ಕಾಣುತ್ತಿರಲಿಲ್ಲ, ಅಲ್ಲಿ ನನ್ನನ್ನು ಹೆದರಿಸುವ ಹಾವು, ಕತ್ತಲು, ನಿಶ್ಯಬ್ದ ಅವರಿಗೆ ಎಂದೂ ಕಾಣುತ್ತಿರಲಿಲ್ಲ.

ಇಷ್ಟೊಂದು ವಿಷಯ ಸಾವಿನ ಬಗ್ಗೆ ಬರೆದ ಕಾರಣ ಜನಕ್ಕೆ ಸಾವಿಲ್ಲದೆ ಬದುಕುವ, ಸಾವನ್ನು ಗೆಲ್ಲುವ ಹುಚ್ಚು… ಅವರ ಬಾಹ್ಯ ದೇಹ, ಹೆಸರು ಇಲ್ಲಿ ಶಾಶ್ವತವಾಗಿ ಉಳಿಸಲು ನಡೆಸುವ ಪ್ರಯತ್ನವೇ ಅಮರತ್ವ ಸಾಧನೆ ಅನಿಸುತ್ತದೆ. ನಾಲ್ಕು ಯುಗಗಳ ಬದುಕಿನ ಕೊನೆಯ ಯುಗ “ಕಲಿ” ಯುಗದಲ್ಲಿ ಎಲ್ಲವೂ ನಾಶವಾಗುವದರ ಬಗ್ಗೆ ಭವಿಷ್ಯದ ಹೇಳಿಕೆಗಳ ನಡುವೆ ಚಿರಂಜೀವಿ ಆಗಿರಲು ಸಾಧ್ಯವೇ? ನಮ್ಮ ಜೀವನದ ಶಿಲ್ಪಿ ನಾವೇ. ಸಾವು ಮತ್ತು ಜನನವು ಜೀವನದ ಎರಡು ಘಟನೆಗಳು ಮಾತ್ರ. ಭಕ್ತ ಕಂಬಾರ ಚಿತ್ರದ ಒಂದು ಗೀತೆಯಲ್ಲಿ ಹೇಳಿದಂತೆ

“ಉಸಿರಾಡುವ ತನಕ, ನಾನು ನನ್ನದೆಂಬ ಮಮಕಾರ,
ನಿಂತ ಮರುಘಳಿಗೆ, ಮಸಣವೇ ಸಂಸ್ಕಾರ,
ಮಣ್ಣಲಿ ಬೆರೆತು, ಮೆಲ್ಲಗೆ ಕೊಳೆತು,
ಮುಗಿಯುವ ದೇಹಕೆ ವ್ಯಾಮೋಹವೇಕೆ…”

ದೇವರ ಆಟ ಬಲ್ಲವರಾರೂ, ಎಂಬಂತೆ ಸಾವಿನ ಆಟವೂ ವಿಚಿತ್ರ… ಅಭಿಮನ್ಯು ಮತ್ತು ಉತ್ತರೆಯ ಮಗ ಪರೀಕ್ಷಿತ ರಾಜನ ಕಥೆ ಎಲ್ಲರಿಗೂ ಗೊತ್ತಿರಬಹುದು. ಮಹಾಭಾರತದ ಯುದ್ಧದ ಕೊನೆಯಲ್ಲಿ ಅಶ್ವಥಾಮ ಬ್ರಹ್ಮಾಸ್ತ್ರ ಬಿಟ್ಟು ಉತ್ತರೆಯ ಗರ್ಭ ಭೇದಿಸಿ, ಪಾಂಡವರ ವಂಶ ನಾಶ ಮಾಡಲು ಪ್ರಯತ್ನಿಸುತ್ತಾನೆ. ಬ್ರಹ್ಮಾಸ್ತ್ರ ತಡೆದು ಗರ್ಭದಲ್ಲಿ ಬೆಳೆಯುತ್ತಿರುವ ಮಗುವನ್ನು ಶ್ರೀ ಕೃಷ್ಣ ಉಳಿಸುತ್ತಾನೆ… ಇಲ್ಲಿ ಪರೀಕ್ಷಿತ ಸಾವನ್ನು ಗೆಲ್ಲುತ್ತಾನೆ. ಮುಂದೆ ಋಷಿ ಶಮಿಕಾ ಅವರನ್ನು ಅವಮಾನಿಸಿ ಶಾಪಗ್ರಸ್ಥನಾಗುತ್ತಾನೆ, ಶಾಪದಿಂದ ತಪ್ಪಿಸಿಕೊಳ್ಳಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲ ಆಗುತ್ತದೆ, ಹಣ್ಣಿನ ನಡುವೆ ನುಸುಳಿ ಕುಳಿತ ತಕ್ಷಕ ಸರ್ಪ ಪರೀಕ್ಷಿತ ರಾಜನನ್ನು ಕಚ್ಚಿ ಅವನ ಸಾವಿಗೆ ಕಾರಣ ಆಗುತ್ತಾನೆ. ಹುಟ್ಟುವ ಮೊದಲು ಸಾವನ್ನು ಗೆದ್ದ ಪರೀಕ್ಷಿತ, ಮುಂದೆ ಪ್ರಯತ್ನ ಪಟ್ಟರೂ ಸಾವನ್ನು ಗೆಲ್ಲಲು ಸಾಧ್ಯ ಆಗುವದಿಲ್ಲ.

ಸಾವು ಜೀವನದ ಕೊನೆಯ ಆದೇಶ ಆದರೆ, ಚಿರಂಜೀವಿ ಪದಕ್ಕೆ ಅರ್ಥ ಇಲ್ಲವೇ?
ನಮ್ಮ ಪೌರಾಣಿಕ ವ್ಯಕ್ತಿಗಳಾದ ಅಶ್ವತ್ಥಾಮ, ಬಲಿ ಚಕ್ರವರ್ತಿ, ವೇದವ್ಯಾಸರು, ಹನುಮಾನ್, ವಿಭೀಷಣ, ಕೃಪಾಚಾರ್ಯರು, ಮಾರ್ಕಂಡೇಯ ಮತ್ತು ಪರಶುರಾಮ ಇವರನ್ನು ಅಷ್ಟ ಚಿರಂಜೀವಿಗಳು ಎಂದು ಕರೆಯುತ್ತಾರೆ. “Land of thousand names ” ಎಂದೇ ಪ್ರಸಿದ್ಧಿ ಪಡೆದ ಸ್ಥಳ ಶಂಬಾಲ , ಇದು ಹಿಮಾಲಯದಲ್ಲಿ ಇದೆ ಎಂದು ಹಿಂದು ಮತ್ತು ಬೌದ್ಧ ಧರ್ಮದ ನಂಬಿಕೆ. ಇದನ್ನು ಹುಡುಕಲು ವಿವಿಧ ದೇಶದ ಶೋಧಕರು ಪ್ರಯತ್ನ ಪಟ್ಟಿದ್ದಾರೆ. ನಮ್ಮ ಅಷ್ಟ ಚಿರಂಜೀವಿಗಳು ಶಂಬಾಲದಲ್ಲಿ ಇದ್ದಾರೆ ಮತ್ತು ವಿಷ್ಣುವಿನ ಹತ್ತನೇ ಅವತಾರ ಕಲ್ಕಿಯ ಆಗಮನಕ್ಕೆ ಕಾಯುತ್ತಿದ್ದಾರೆ ಎಂದು ಪ್ರತೀತಿ.

ಶಂಬಾಲ ಅಥವಾ ಸಹಸ್ರಾರ ಚಕ್ರ ಸಿದ್ದಿ ಸಾಧಕರು ಅನುಭವಿಸಬಲ್ಲರೇನೋ, ಅಂತಹ ಸಾಧಕರು ಚಿರಂಜೀವಿ ಆಗಬಹುದೇನೋ?
ಚಿರಂಜೀವಿ ಆಗಲು ಸಾಧ್ಯವಾಗದಿದ್ದರೆ; ಛಿ! ರಮ್ ಜೀವಿ ಆಗಬಹುದು…

ನನ್ನಂತಹ ಸಾಮಾನ್ಯರಿಗೆ ಸಾವನ್ನು ಸರಳವಾಗಿ ಹೇಳುವದಾದರೆ – “kicked the bucket “…ಪುರಂದರ ದಾಸರ ಕೀರ್ತನೆಯ ಸಾಲುಗಳೇ ಕೊನೆಯ ಅನುಭವ,

“ಒಂಬತ್ತು ಬಾಗಿಲ ಮನೆಯಲ್ಲಿ, ತುಂಬಿದ ಸಂದಣಿ ಇರಲು
ಕಂಬ ಮುರಿದು ಡಿಂಬ ಬಿದ್ದು, ಅಂಬರಕ್ಕೆ ಹಾರಿತಯ್ಯೋ
ರಾಮ, ರಾಮ
ಗಿಳಿಯು ಪಂಜರದೊಳಿಲ್ಲ”