ರುಕ್ಮಾದಿಂದ ಆರಂಭವಾದ ವಿಚಾರಗಳು

ಕೆಲವು ದಿನಗಳ ಹಿಂದೆ ವೆಬ್ ಸೀರೀಸ್ “ಫ್ಯಾಮಿಲಿ ಮ್ಯಾನ್ – ೩” ನೋಡುತ್ತಿದ್ದೆ, ಅದರಲ್ಲಿ ಬರುವ ಒಂದು ಪಾತ್ರ “ರುಕ್ಮಾ”… ಅದರ ಕೊನೆಯ ಸಂಚಿಕೆ ಬಂದಾಗ ರುಕ್ಮಾ ಪೂರ್ತಿ ಹೆಸರು ರುಕುಮಾಂಗದ ಎಂದು ತಿಳಿಯಿತು. ಅವನ ಪೂರ್ಣ ಹೆಸರು ಕೇಳಿದ ಮೇಲೆ ತಲೆಯಲ್ಲಿ ಇದು ಎಲ್ಲೋ ಕೇಳಿದ ಹಾಗಿದೆ ಅನಿಸ್ತಾ ಇತ್ತು. ಕೂತಲ್ಲಿ, ನಿಂತಲ್ಲಿ ಅದೇ ವಿಚಾರ…

ನಿತ್ಯ ಜೀವನದಲ್ಲಿ ನಾವು ಹತ್ತು ಹಲವು ವಿಷಯಗಳನ್ನು ನೋಡುತ್ತೇವೆ, ಕೇಳುತ್ತೇವೆ… ನಮ್ಮ ಮೆದಳು ಅದನ್ನು ತನ್ನ ಸಂಗ್ರಹದಲ್ಲಿ ಇಟ್ಟಿಕೊಳ್ಳುತ್ತದೆ ಮತ್ತು ನಮಗೆ ಅವಶ್ಯಕತೆ ಇದ್ದಾಗ ಅದನ್ನು ಒದಗಿಸುತ್ತದೆ, ಇದು ಸಾಮಾನ್ಯ ಕ್ರಿಯೆ. ನಮ್ಮ ಮೆದಳು ಪ್ರಜ್ಞೆ ಮತ್ತು ಸುಪ್ತಾವಸ್ಥೆ ಈ ಎರಡು ಸ್ಥಿತಿಯಲ್ಲೂ ವಿಷಯ ಸಂಗ್ರಹಣೆ ಮಾಡುತ್ತದೆ, ಅದನ್ನು ಸೋಸಿ, ಹೊಂದಿಸಿ ಇಡುತ್ತದೆ.

Memories, pressed between the pages of my mind
Memories, sweetened through the ages just like wine
(ಎಲ್ವಿಸ್ ಪ್ರೆಸ್ಲೇಯ್)

ನಮ್ಮ ಸಿಹಿ ನೆನಪುಗಳು ಮೇಲಿನ ಸಾಲುಗಳಂತೆ ಆಚೊತ್ತಿ ಕೂತಿರುತ್ತವೆ, ಯಾಕೆಂದರೆ ಅದನ್ನು ಮತ್ತೆ ಮತ್ತೆ ತೆಗೆದು ನೋಡುತ್ತಿರುತ್ತೇವೆ. ಮತ್ತೆ ಕೆಲವು ವಿಷಯಗಳು ಮನಸ್ಸಿನಲ್ಲಿ ಸೇರಿಕೊಂಡು, ಬೇಕಾದಾಗ ನೆನಪಾಗುವದಿಲ್ಲ… ಬೇರೆ ಏನೂ ವಿಚಾರ ಮಾಡುವಾಗ ಚಕ್ಕಂತ ಮನದ ಪರದೆಯ ಮೇಲೆ ಮೂಡುತ್ತವೆ. ನಾನು ಹೆಚ್ಚಿನ ವ್ಯಾಸಂಗ ಓದಿದ್ದು ಬೆಲ್ಫಾಸ್ಟ್ ನಲ್ಲಿ, ಒಂದು ದಿನ ನಮ್ಮ ಉಪನ್ಯಾಸಕರು ನಾವು ಯೂನಿವರ್ಸಿಟಿಗೆ ಬರುವ ರಸ್ತೆಯಲ್ಲಿನ ಅಂಗಡಿಗಳ ಹೆಸರು ಹೇಳಿರೆಂದು ಕೇಳಿದರು. ಪ್ರತಿದಿನ ಅದೇ ರಸ್ತೆಯಲ್ಲಿ ಓಡಾಡಿದ್ದರೂ, ಅಂಗಡಿಗಳನ್ನು ನೋಡಿದ್ದರೂ ನಮಗೆ ಎಲ್ಲಾ ಅಂಗಡಿಗಳ ವಿವರ ಆ ಸಮಯಕ್ಕೆ ನೆನಪು ಬರಲಿಲ್ಲ. ನಮ್ಮ ಸಂಕೀರ್ಣ ವ್ಯವಸ್ಥೆ ನಮಗೆ ಯಾವುದು ಅವಶ್ಯ, ಯಾವುದು ಅಲ್ಲ ಎಂದು ನಿರ್ಧರಿಸಿ ಉಳಿದಿದ್ದನ್ನು ಪಕ್ಕಕ್ಕಿರಿಸುತ್ತದೆ. ರುಕುಮಾಂಗದ ಹೆಸರು ಕೂಡ ಸ್ವಲ್ಪ ಕ್ಷಣ ನನ್ನ ನೆನಪಿನಲ್ಲಿ ಇದ್ದರೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ.

ಒಂದು ಕ್ಷಣ, ಈ ಹೆಸರು ಕೇಳಿದ್ದರೂ ನೆನಪಾಗುತ್ತಿಲ್ಲ ಎಂದು ಸಂಧ್ಯಾ ಜೊತೆ (ಏನಾದರೂ ಸಿಗದಿದ್ದರೆ ಅಥವಾ ಹೊಳೆಯದಿದ್ದರೆ ವಿಚಾರಿಸುವದು ಪತ್ನಿಯೊಂದಿಗೆ) ಮಾತನಾಡುತ್ತಿದಾಗ ಯುರೇಕಾ ಕ್ಷಣ ಅಥವಾ ಆಹಾ!! ಕ್ಷಣ ಬಂತು….

ಕರುಣಿಸೋ ರಂಗ ಕರುಣಿಸೋ ಕೃಷ್ಣ
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ
ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ….

ರುಕುಮಾಂಗದನಂತೆ ವ್ರತವ ನಾನರಿಯೆ
ಶುಕಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೇ
ದೇವಕಿಯಂತೆ ಮುದ್ದಿಸಲೂ ಅರಿಯೆನೋ ಕೃಷ್ಣ

ರುಕುಮಾಂಗದನಂತೆ ವ್ರತವ ನಾನರಿಯೆ … ಈ ಒಂದು ಸಾಲು ನೆನಪಿನ ಆಳದಿಂದ ಹೊರಬಂದು, ಮನಸ್ಸನ್ನು ನಿರಾಳಗೊಳಿಸಿತು.

ರುಕುಮಾಂಗದ ಯಾರು? ನಾರದ ಪುರಾಣದ ಒಂದು ಉಲ್ಲೇಖದಲ್ಲಿ ಬರುವ ರಾಜ ರುಕುಮಾಂಗದ ಸೂರ್ಯವಂಶಿಯ ರಾಜ, ಏಕಾದಶಿಯ ದಿನದ ಉಪವಾಸ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದವನು. ಅವನ ವ್ರತ ಭಂಗ ಮಾಡಿಸಲು ಅಪ್ಸರೆ ಮೋಹಿನಿ ಬಂದು ಪ್ರಯತ್ನಿಸಿ ಸೋತಾಗ, ಕೊನೆಗೆ ಅವನ ವ್ರತ ನಿಷ್ಠೆಗೆ ವಿಷ್ಣು ಪ್ರತ್ಯಕ್ಷನಾಗಿ ವೈಕುಂಠಕ್ಕೆ ಕರೆದುಕೊಂಡು ಹೋಗುತ್ತಾನೆ.

ವ್ರತ ಅಥವಾ ಉಪವಾಸ ಮಾಡುವುದು ಎಲ್ಲ ಸಂಸ್ಕೃತಿಯಲ್ಲೂ ಒಂದಲ್ಲ ಒಂದು ರೀತಿ ಸಾಮಾನ್ಯವಾಗಿ ನಡೆದುಕೊಂಡ ಬಂದ ರೂಢಿ. ಒಬ್ಬ ವ್ಯಕ್ತಿ ೧೬-೧೮ ಗಂಟೆ ಉಪವಾಸವಿದ್ದಾಗ ಅವನ ದೇಹದ ಕೋಶಗಳು ತಮ್ಮೊಳಗಿನ ಹಳೆಯದು, ಹಾನಿಗೊಂಡ ಭಾಗಗಳನ್ನು ತಾವೇ ಜೀರ್ಣಿಸಿಕೊಂಡು ಪುನರ್‌ಬಳಕೆ ಮಾಡಿಕೊಳ್ಳುತ್ತವೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಆಟೋಫ್ಯಾಜಿ (Autophagy) ಎನ್ನುತ್ತಾರೆ. ಅಂದರೆ ಕಟ್ಟುನಿಟ್ಟಾಗಿ ವ್ರತ (ಉಪವಾಸ) ಮಾಡುವದರಿಂದ ನಮ್ಮ ದೇಹದ ಕೋಶ ಶುದ್ಧೀಕರಣಕ್ಕೆ ದಾರಿ ಮಾಡಿದಂತಾಗುತ್ತದೆ, ಒಳ್ಳೆಯ ಆರೋಗ್ಯದ ಬುನಾದಿ ಆಗುತ್ತದೆ. ನಾರದ ಪುರಾಣದ ಉಲ್ಲೇಖವನ್ನು ಸದ್ಯದ ಪರಿಸ್ಥಿತಿಯಲ್ಲಿ ನೋಡಿದಾಗ, ನಮ್ಮ ಜೀವನದಲ್ಲಿ ವ್ರತ (ಉಪವಾಸ) ಕಟ್ಟುನಿಟ್ಟಾಗಿ ಪಾಲಿಸಲು ಪ್ರಯತ್ನಿಸಿದಾಗ ಬರುವ ಅದೇ ತಡೆಗಳನ್ನು ಅಪ್ಸರೆ “ಮೋಹಿನಿ” ಅಂದುಕೊಂಡು, ಅದನ್ನು ಲೆಕ್ಕಿಸದೆ (ಅಥವಾ ಮಾರು ಹೋಗದೆ) ವ್ರತ ಮಾಡಿದಾಗ ಒಳ್ಳೆಯ ಆರೋಗ್ಯದಿಂದ ಜೀವಿಸಿ, ಕೊನೆಗೆ ಸುಖಕರ ಸಾವನ್ನು (ಅನಾರೋಗ್ಯ ಇರದ) ಪಡೆದುಕೊಳ್ಳುವದೇ ವೈಕುಂಠ ಸೇರಿಕೊಂಡ ಹಾಗೆ ಇರಬೇಕು.

ಆಟೋಫ್ಯಾಜಿಯ ಕಾರ್ಯವಿಧಾನಗಳ ಆವಿಷ್ಕಾರಗಳಿಗಾಗಿ ಜಪಾನಿನ ಜೀವಕೋಶ ಜೀವಶಾಸ್ತ್ರಜ್ಞ ಯೋಶಿನೋರಿ ಒಹ್ಸುಮಿ ಅವರಿಗೆ 2016 ರ ಶರೀರಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಏಕಾದಶಿ ಅಥವಾ ಈ ತರಹದ ಉಪವಾಸದ ರೂಢಿ ಬಹಳ ಹಳೆಯ ಆಚರಣೆ, ಅದನ್ನು ಕಡೆಗಣಿಸಿದ ನಾವು ಮತ್ತೆ ಅದನ್ನೇ ಅವಿಷ್ಕಾರವೆಂದು ಪರಿಗಣಿಸಿ ಆಚರಣೆಗೆ ತರಲು ಪ್ರಯತ್ನಿಸುತ್ತಿದ್ದೇವೆ… ಇದನ್ನೇ “ರಿಇನ್ವೆಂಟಿಂಗ್ ದಿ ವೀಲ್” ಅನ್ನುವದು.

ನಮ್ಮ ಅತೀ ಜಾಣತನದಿಂದ ಎಷ್ಟೋ ಈ ತರಹದ ಹಳೆಯ (ಹಿರಿಯರ) ಆಚರಣೆಗಳನ್ನು ಕಡೆಗಣಿಸಿ, ಮತ್ತಾರೂ ಅದನ್ನು ಸರಿ ಎಂದಾಗ ಅನುಸರಿಸಲು ಆರಂಭಿಸುತ್ತೇವೆ. ನನ್ನ ಮನಸಿನ್ನಲ್ಲಿ ಓಡಿದ ಕೆಲವು ಇದೆ ತರಹದ ವಿಷಗಳನ್ನು ಹಂಚಿಕೊಳ್ಳಣ ಅನಿಸಿತು. ಇತ್ತೀಚಿಗೆ ಬಂದ ಕರ್ನಾಟಕ ಸರ್ಕಾರದ ಒಂದು ಕಾರ್ಯ ನೀತಿ… ಪ್ರತಿ ತಿಂಗಳು ಒಂದು ದಿನ ಮುಟ್ಟಿನ ರಜೆ ಘೋಷಿಸಿದ್ದು, ಹಿಂದಿನ ಜನರು ಇದೇ ರಜೆ ಮನೆಯ ಹೆಣ್ಣು ಮಕ್ಕಳಿಗೆ ಕೊಡಲು ಮಡಿಯಲ್ಲಿ ಕೂಡಿಸಿದಾಗ ಅದನ್ನು ಪ್ರಶ್ನೆ ಮಾಡಿದವರೇನು ಕಡಿಮೆಯಿಲ್ಲ. ಅರೋಗ್ಯ ಈಗಿನ ಜನರ ಆದ್ಯತೆ ಆಗಿದೆ, ಇಡ್ಲಿ ಅಂತಹ ತಿಂಡಿ ಮಹತ್ವ ಜನರಿಗೆ ಈಗ ಆಗಿ ಪ್ರೋಬೈಯೋಟಿಕ್ ಎಂದು ಸೇವಿಸುವ ಅಭಿಮಾನಿಗಳು ಬೆಳೆಯುತ್ತಿದ್ದಾರೆ.

ಎಲ್ಲ ಆಚರಣೆ ಕಣ್ಣು ಮುಚ್ಚಿ ಪಾಲಿಸಬೇಕಿಲ್ಲ, ಅಂತಹ ಒಂದು ಸಣ್ಣ ಕಥೆ ನೋಡೋಣ. ಒಂದು ಆಶ್ರಮ, ಹಿರಿಯ ಸನ್ಯಾಸಿ ತೀರಿದ ನಂತರ ಯುವ ಸನ್ಯಾಸಿಗೆ ದೀಕ್ಷೆ ಕೊಟ್ಟರು. ಹಿರಿಯ ಸನ್ಯಾಸಿ ಪ್ರತಿದಿನ ಪ್ರವಚನದಲ್ಲಿ ಇಲಿಗಳನ್ನು ಹೆದರಿಸಲು ಬೆಕ್ಕು ತರುತ್ತಿದ್ದರು, ಕೆಲವು ಕಾಲದ ನಂತರ ಬೆಕ್ಕು ತಾನಾಗಿ ಬರಲು ಆರಂಭಿಸಿತು. ಹಿರಿಯ ಸನ್ಯಾಸಿ ತೀರಿದ ನಂತರ ಬೆಕ್ಕು ಪ್ರವಚನಕ್ಕೆ ಬರಲಿಲ್ಲ. ಯುವ ಸನ್ಯಾಸಿಯ ಬೆಕ್ಕು ಬಾರದ ಕಾರಣ ಪ್ರವಚನ ಆರಂಭಿಸಲು ತಯಾರಾಗಲಿಲ್ಲ, ಬೆಕ್ಕು ಬರುವುದು ಒಂದು ಆಚರಣೆಯ ಭಾಗ ಎಂದು ಕುಳಿತರು. ಆಚರಣೆ ವಿವೇಚಿಸಿ, ಅರಿತುಕೊಂಡು, ಪರಸ್ಥಿತಿಗೆ ಅನುಗುಣವಾಗಿ ಮಾಡಬೇಕು… ಅದು ಅಂಧಶ್ರದ್ಧೆ ಆಗಬಾರದು.

ನನ್ನ ಈ ವಿಚಾರಧಾರೆ ಒಂದು ಹೆಸರಿನೊಂದಿಗೆ ಆರಂಭವಾಯಿತು, ಅದರ ಹರಿವಿಗೆ ಸಿಕ್ಕ ಎಲ್ಲ ವಿಷಯಗಳನ್ನು ಬರೆಯುತ್ತ ಹೋದೆ… ಅದನ್ನೇ ಇಲ್ಲಿ ಲೇಖನ ಮಾದರಿಯಲ್ಲಿ ಬರೆಯಲು ಪ್ರಯತ್ನಿಸಿದೆ, ಇಷ್ಟ ಆಗಬಹುದು ಎಂದು ಭಾವಿಸುವೆ.

ಒಂದು ಸುಂದರ ಪ್ರವಾಸ

ಸೂರಜ್ ಏಕ್, ಚಂದಾ ಏಕ್, ತಾರೆ ಅನೇಕ್,
ಏಕ್ ಗಿಲಹರಿ, ಅನೇಕ್ ಗಿಲಹರಿಯಾ,
ಏಕ್ ತಿತ್ಲಿ, ಅನೇಕ್ ತೀತಲಿಯಾ ,
ಏಕ್ ಚಿಡಿಯಾ, ಅನೇಕ್ ಚಿಡಿಯಾ…

ಈ ಮೇಲಿನ ಹಾಡನ್ನು ಎಲ್ಲರೂ ಕೇಳಿರಬಹುದು, ಈ ಹಾಡು ೧೯೭೪ ರಲ್ಲಿ ಜನರಲ್ಲಿ ಐಕ್ಯತೆ ಮೂಡಿಸಲು ಹೊರತಂದ ಸುಂದರ ಹಾಡು. ಇದರಲ್ಲಿ ಬರುವ ಕೆಲವು ಸಾಲು ಇಂತಿದೆ

ಹೊ ಗಯೇ ಏಕ್ … ಬನ್ ಗಯೀ ತಾಕತ್.. ಬನ್ ಗಯೀ ಹಿಮ್ಮತ್…
ಹಿಂದ್ ದೇಶ್ ಕೆ ನಿವಾಸಿ ಸಭಿ ಜನ ಏಕ್ ಹೈ,
ರಂಗ್-ರೂಪ್ ವೇಷ-ಭಾಷ ಛಾಹೀ ಅನೇಕ್ ಹೈ

ಬೇಸಿಗೆಯ ರಜೆ ಮುಂಚೆ ಮಕ್ಕಳಿಗೆ ನಮ್ಮ ವಿಸ್ತೃತ ಕುಟುಂಬ ಪರಿಚಯ ಮತ್ತು ಅವರೊಡನೆ ಹೆಚ್ಚು ಬೆರೆಯಲು ಏನು ಮಾಡಬಹುದೆಂದು ವಿಚಾರ ಮಾಡುತ್ತಿದ್ದೆವು, ಆಗ ಎಲ್ಲರನ್ನು ಒಂದು ಸ್ಥಳದಲ್ಲಿ ಸೇರಿಸುವ ವಿಚಾರ ಬಂದಿತು. ಈ ವಿಚಾರವನ್ನು ಬೇಸಿಗೆಯ ರಜೆಯಲ್ಲಿ ಯಶಸ್ವಿಯಾಗಿ ಮುಗಿಸಿದೆವು, ಅದರ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ನಮ್ಮ ಉದ್ದೇಶ ಇಂತಿದೆ… ನಾವೆಲ್ಲೇ ಇರಲಿ, ನಾವೆಲ್ಲರೂ ಒಂದೇ…
“ಹಮಾರೆ ಕುಟುಂಬ ಕೆ ಸದಸ್ಯ ಸಭಿ ಜನ ಏಕ್ ಹೈ,
ದೇಶ್-ಭಾಷ ಛಾಹೀ ಅನೇಕ್ ಹೈ”

ನಮ್ಮ ಅಜ್ಜಿಯ ಮನೆ ಬಾಗಲಕೋಟೆಯಲ್ಲಿ ಇತ್ತು (ಮುಳುಗಡೆ ಆದ ಕಾರಣ ಈಗ ಇಲ್ಲ), ಎಲ್ಲರನ್ನು ಬಾಗಲಕೋಟೆ ಇಲ್ಲದಿದ್ದರೆ ಅದರ ಹತ್ತಿರ ಸೇರಿಸುವ ಪ್ರಯತ್ನ, ಕೊನೆಗೆ ನಾವೆಲ್ಲರೂ ಸೇರಿದ್ದು ಬಾದಾಮಿಯಲ್ಲಿ. “ದೇಶ್-ಭಾಷ ಛಾಹೀ ಅನೇಕ್ ಹೈ” ಸಾಲಿನಂತೆ ಬಂದವರು ಮುಂಬೈ, ದೆಹಲಿ, ಕರ್ನಾಟಕ, ಯು ಕೆ ತರಹ ಸ್ಥಳದಿಂದ, ಕೆಲವರಿಗೆ ಕನ್ನಡ ಭಾಷೆ ಕೂಡ ಅಪರೂಪ. ತೊಂಬತ್ತು ವರುಷದವರಿಂದ ೨ ವರುಷದ ವಯಸ್ಸಿನ್ನ ಒಟ್ಟು ೫೦ಕ್ಕೋ ಹೆಚ್ಚು ಸದಸ್ಯರು ಸೇರಿದ್ದರು. ಜೊತೆಯಾಗಿ ನೆನಪಿನ ದೋಣಿಯಲಿ ಸಾಗಲು ನಮ್ಮ ತಂಡ ಸಿದ್ದವಾಗಿತ್ತು

ನಮ್ಮ ತಂಗುದಾಣ (ರೆಸಾರ್ಟ್) ಹೊಲಗಳ ನಡುವೆ ಇತ್ತು, ಸುಂದರವಾದ ಸ್ಥಳ. ಪ್ರತಿದಿನದ ವೇಗದ ಜೀವನದಿಂದ ಹೊರಬಂದು ಇಂತಹ ಒಂದು ಸ್ಥಳದಲ್ಲಿ ನಿಂತಾಗ ನಮ್ಮ ಸುತ್ತಲಿನ ಜಗತ್ತಿನ ಕಲ್ಪನೆಯೇ ಬದಲಾಗುತ್ತದೆ. ಆ ಮಣ್ಣಿನ ವಾಸನೆ, ಸುತ್ತಲಿನ ಸದ್ದಿನ ಸಂಗೀತ, ಆಕಾಶದಲ್ಲಿ ಸೂರ್ಯನ ಬಣ್ಣ ಬಣ್ಣದ ಚಿತ್ತಾರ ಎಲ್ಲವನ್ನು ಮರೆಸುತ್ತದೆ. ನಸುಕಿನಲ್ಲಿ ಹೊರಗೆ ಬಂದು ನಿಂತಾಗ ಮನ ಗುನುಗುನುಸಿದ್ದು,

ಮೂಡಲ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದ, ನುಣ್ಣನೆ ಎರಕವ ಹೊಯ್ದ
ಬಾಗಿಲು ತೆರೆದು ಬೆಳೆಕು ಹರಿದು
ಜಗವೆಲ್ಲ ತೊಯ್ದ, ದೇವನು ಜಗವೆಲ್ಲ ತೊಯ್ದ

ಇಂತಹ ಸುಂದರ ಪರಿಸರದಲ್ಲಿ ನಾವೆಲ್ಲರೂ ಸೇರಿದ್ದವು, ನಾವೆಲ್ಲರೂ ಎನ್ನುವ ವಿಚಾರಕ್ಕೆ ಬರೋಣ. ಹಿಂದಿನ ಒಂದು ಲೇಖನದಲ್ಲಿ ಸಾಮಾಜಿಕ ಮಾಧ್ಯಮ ಇಂದ ಈಗಿರುವ ಸಮಸ್ಯೆಗಳ ಬಗ್ಗೆ ಬರೆದಿದ್ದೆ, ಈಗಿನ ಮಕ್ಕಳು ಸಾಮಾಜಿಕ ಮಾಧ್ಯಮದ ಸ್ನೇಹಿತರನ್ನೇ ತಮ್ಮ ಹತ್ತಿರದ ಬಳಗವೆಂದು ತಿಳಿದಿದ್ದಾರೆ, ಪ್ರತಿಯೊಬ್ಬರೂ ೮೦೦ – ೧೦೦೦ ಸಾಮಾಜಿಕ ಮಾಧ್ಯಮದ ಸ್ನೇಹಿತರನ್ನು ನೋಡುತ್ತಾ ಬೆಳೆಯುತ್ತಿದ್ದಾರೆ. ಒಂದು ಸಂಶೋಧನೆ ಪ್ರಕಾರ, ಮನುಷ್ಯ ಸಂಕೀರ್ಣ ಸಮಾಜದಲ್ಲಿ ಬೆಳೆದರೂ, ಒಬ್ಬ ಮನುಷ್ಯ ೧೫೦ಕ್ಕೋ ಹೆಚ್ಚಿನ ಜನರೊಡನೆ ಸಮತೋಲಿತ ಸಾಮಾಜಿಕ ಸಂಬಂಧ ಇಟ್ಟುಕೊಳ್ಳಲು ಆಗುವದಿಲ್ಲ. ಆದುದರಿಂದ ಅವರ ಸಾಮಾಜಿಕ ಸಂಬಂಧ ಸಣ್ಣ ಪ್ರಮಾಣದಲ್ಲಿ ಮತ್ತು ಪರಿಚಿತ ಸಂಪರ್ಕದಲ್ಲಿ ಇದ್ದರೆ ಅದು ಆರೋಗ್ಯಕರ ಎಂದು ಪರಿಗಣಿಸಲಾಗಿದೆ.

ನಮ್ಮ ಮಕ್ಕಳಿಗೂ ಅವರ ದೂರದಲ್ಲಿ ನೆಲೆಸಿರುವ, ಪರಿಚಿತ ಸಂಬಂಧ ಬೆಳೆಸಲು ಅವಕಾಶ ಕೊಡುವ ಪ್ರಯತ್ನ ಮಾಡಿದೆವು. ನಮ್ಮ ಪರಿಚಯದ ವ್ಯಕ್ತಿಯೊಬ್ಬರು ಹೇಳಿದ ಮಾತು, ಭಾರತಕ್ಕೆ ಹೋದಾಗ ನಾವು ಸಂಬಂಧಿಕರನ್ನು ಭೇಟಿ ಮಾಡುತ್ತೇವೆ, ಆದರೆ ಅವರ ಮಕ್ಕಳ ಹೆಸರು ಮರೆತುಹೋಗಿರುತ್ತದೆ… ಅವಾಗ ಚಿಕ್ಕವರನ್ನು ಪುಟ್ಟ ಬಾ, ಪುಟ್ಟಿ ಬಾ ಎನ್ನಬೇಕಾಗುತ್ತದೆ. ಇಂತಹ ಒಂದು ಸಂದಿಗ್ದ ಪರಿಸ್ಥಿತಿ ಬರುವುದು ಅವರ ಸಂಪರ್ಕ ಕಳೆದುಕೊಂಡಾಗ. ವರ್ಷಕೊಮ್ಮೆ ನಮ್ಮವರೂ ಎನಿಸುವರನ್ನು ಭೇಟಿ ಮಾಡುತ್ತಿದ್ದರೆ, ಒಂದು ಆರೋಗ್ಯಕರ ಮತ್ತು ಸುಂದರ ಪರಿಸರದಲ್ಲಿ ಹೊಸ ಪೀಳಿಗೆ ಬೆಳೆಯಬಹುದು. ನಮ್ಮವರು ಎಂದರೆ ಇಲ್ಲಿ ಬಂಧುಗಳು ಆಗಬಹುದು ಅಥವಾ ಯಾರಾದರೂ ಆಪ್ತರು ಆಗಬಹದು.
ಈಗಿನ ಚಿಕ್ಕ ಸಂಸಾರ ಇರುವ ರೀತಿಯಲ್ಲಿ ನಾನು, ನನ್ನ ಹೆಂಡತಿ ಮತ್ತು ಮಕ್ಕಳು ಎಂದು ನಮ್ಮನ್ನು ಒಂದು ಸೀಮಿತದಲ್ಲಿ ಇಟ್ಟುಕೊಂಡರೆ ಅದು ಕಷ್ಟ ಆಗಬಹುದು. ನಮ್ಮಲ್ಲಿ ಬೆಳೆಯುವ ಒಂಟಿತನ; ಹೇಳದಿದ್ದರೂ, ಆಡದಿದ್ದರೂ ಕೆಳಗಿನ ಸಾಲುಗಳು ನಮ್ಮಲ್ಲಿ ಹುಟ್ಟುವ ಭಾವನೆ ಪ್ರತಿಬಿಂಬಿಸುತ್ತದೆ

ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ……..
ನಿನ್ನ ಜೊತೆಯಿಲ್ಲ,ದೆ ಮಾತಿಲ್ಲದೆ ಮನ ವಿಭ್ರಾಂತ.

ಇನ್ನೊಂದು ಹಂಚಿಕೊಳ್ಳಬೇಕಾದ ವಿಷಯ ಎಂದರೆ ನಮ್ಮ ಮುತ್ತಜ್ಜಿಯ ಸಾಹಸ ಕಥೆ. ಸುಮಾರು ೭೦ ವರುಷಗಳ ಹಿಂದೆ ಅವರು ಬದರಿ, ಕೇದಾರ, ಕಾಶಿ ಯಾತ್ರೆಗೆ ಹೋಗಿದ್ದರು. ಆಗಿನ ಬದರಿ ಯಾತ್ರೆಯಲ್ಲಿ ಅವರು ತಮ್ಮ ಅಡುಗೆ ಪಾತ್ರೆ, ಅಕ್ಕಿ, ಬೇಳೆ ಮುಂತಾದ ಸಾಮಾನು ಒಯ್ಯುತ್ತಿದ್ದರು. ಈಗಿನಂತೆ ಬಸ್ಸು, ಕುದರೆ, ಪಲ್ಲಕ್ಕಿ… ಮುಂತಾದ ವ್ಯವಸ್ಥೆ ಇರದೇ ಅವರು ಹೆಚ್ಚಿನ ಪ್ರವಾಸ ನಡೆದುಕೊಂಡು ಹೋಗುತ್ತಿದ್ದರು. ಭಾಷೆ ಬರುವದಿಲ್ಲ, ಒಬ್ಬೊಬ್ಬರೇ ಹೋಗುವಂತಿಲ್ಲ, ಆದುದರಿಂದ ಅವರು ಗುಂಪು ಮಾಡಿಕೊಂಡು ಜೊತೆ ಜೊತೆಗೆ ಪ್ರಯಾಣ ಮಾಡುತ್ತಿದ್ದರು. ಇಂತಹ ವ್ಯವಸ್ಥೆಯಲ್ಲಿ ಅವರಿಗೆ ಒಂದು ಶಿವಲಿಂಗ ಸಿಕ್ಕಿತು, ಆಗ ಅವರ ಹಳ್ಳಿಯಲ್ಲಿ ಶಿವನ ಗುಡಿ ಇರಲಿಲ್ಲ (ಸುತಗೊಂಡರ್ ಹಳ್ಳಿ ಹೆಸರು, ಇದು ಆಲಮಟ್ಟಿ ಹತ್ತಿರ ಇದೆ). ಅವರು ಅಲ್ಲಿ ಸಿಕ್ಕ ಶಿವಲಿಂಗ ಹೊತ್ತು ಉತ್ತರ ಭಾರತದಿಂದ ಕರ್ನಾಟಕದ ಸಣ್ಣ ಹಳ್ಳಿಗೆ ತಂದಿದ್ದರು. ನಾವೆಲ್ಲ ಹಳ್ಳಿಗೆ ಭೇಟಿ ಕೊಟ್ಟಾಗ ಹಳ್ಳಿಯ ಜನ ನಮೆಲ್ಲರಿಗೂ ಶಿವನ ಗುಡಿ ತೋರಿಸಿ ನಮಗೆ ಅವರ ಸಾಹಸ ಯಾತ್ರೆ ವಿವರಿಸಿ ತಿಳಿಸಿದರು. ಇದು ನಮ್ಮ ಹಳ್ಳಿ ಭೇಟಿಯ ವಿಶೇಷ ಅನುಭವ ಆಯಿತು.

ನಮ್ಮ ಬಾದಾಮಿ ಪ್ರವಾಸದಲ್ಲಿ ನೆನಪಿಸಿಕೊಳ್ಳಬೇಕಾದ ವಿಶಿಷ್ಟ ವ್ಯಕ್ತಿ ಎಂದರೆ ಡಾ|| ಶೀಲಕಾಂತ್ ಪತ್ತಾರ್, ಇವರು ನಮ್ಮ ಅಮ್ಮ ಮತ್ತು ಅವರ ಅಣ್ಣನೊಡನೆ ಓದಿದವರು, ಅವರೊಡನೆ ಮನೆಯ ಮಗನಂತೆ ಬೆಳೆದವರು. ಬಾದಾಮಿ ಮತ್ತು ಸುತ್ತು ಮುತ್ತಲಿನ ಚರಿತ್ರೆ, ಶಿಲ್ಪಕಲೆ ಬಗ್ಗೆ ಚೆನ್ನಾಗಿ ತಿಳಿದುಕೊಡವರು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಕೆಲವು ವರುಷಗಳ ಹಿಂದೆ ಅವರು ತೀರಿಕೊಂಡರು. ಅವರು ಬರೆದ ಕೆಲವು ಪುಸ್ತಕಗಳು “The Singing Rocks of Badami “, “ಬಾದಾಮಿ ಶಿಲ್ಪಕಾಶಿ”, “ಸಪ್ತಕ” ಮುಂತಾದವುಗಳು. ಅವರು ಬರೆದ ಸಪ್ತಕ ಪುಸ್ತಕದ ಒಂದು ಭಾಗ ಹಂಚಿಕೊಳ್ಳುತ್ತಿದ್ದೇನೆ

“ಚಾಲುಕ್ಯ ದೊರೆಗಳು ಕಲಾರಾಧಕರಾಗಿದ್ದರು. ಅವರ ಕಾಲಾವಧಿಯಲ್ಲಿ ಪಟ್ಟದಕಲ್ಲು ವಾಸ್ತು ಹಾಗು ಶಿಲ್ಪಗಳ ಪ್ರಧಾನ ಪ್ರಯೋಗಶಾಲೆಯಾಗಿತ್ತು. ಈ ಪ್ರಯೋಗಗಳು ಬಾದಾಮಿ ಮತ್ತು ಐಹೊಳೆಯಲ್ಲೂ ನಡೆದವು. ಉತ್ತರದಲ್ಲಿ ಗುಪ್ತರು ಮತ್ತು ದಕ್ಷಿಣದಲ್ಲಿ ಪಲ್ಲವರು ತಮ್ಮದೇ ಆದ ವಾಸ್ತುಪರಂಪರೆಯನ್ನು ಪ್ರತಿಷ್ಠಾಪಿಸಿದರು. ಗುಪ್ತರ ವಾಸ್ತು ಶೈಲಿಯನ್ನು ನಾಗರ ಶೈಲಿಯೆಂದು, ಪಲ್ಲವರ ವಾಸ್ತು ಪದ್ದತಿಯನ್ನು ದ್ರಾವಿಡ ಶೈಲಿಯೆಂದು ಕರೆಯಲಾಗುತ್ತಿತ್ತು.”

ಐಹೊಳೆ ಕೆತ್ತನೆ ಪರಿಪೂರ್ಣ ವಾಸ್ತುಶಿಲ್ಪ ಅಲ್ಲವೆಂದು ನೋಡಿದರೆ ಗೊತ್ತಾಗಿ ಬಿಡುತ್ತದೆ. ಅಲ್ಲಿ ವಿಧ ವಿಧವಾದ ವಿನ್ಯಾಸ, ಕೆತ್ತನೆ ಪ್ರಯೋಗಗಳು ನಡೆಸಿ ಶಿಲ್ಪಿಗಳು ನಂತರದ ವಾಸ್ತುಶಿಲ್ಪದ ಬೆಳವಣಿಗೆಗಳಿಗೆ ಅಡಿಪಾಯ ಹಾಕಿದರು. ಅಲ್ಲಿ ಹೊರಹೊಮ್ಮಿದ ಮಿಶ್ರ ಶೈಲಿ ಕೆತ್ತನೆಗಳು ಐಹೊಳೆಗೆ “ಭಾರತೀಯ ವಾಸ್ತುಶಿಲ್ಪದ ತೊಟ್ಟಿಲು” ಎಂಬ ಬಿರುದನ್ನು ತಂದುಕೊಟ್ಟಿತು.

ಡಾ|| ಶೀಲಕಾಂತ್ ಪತ್ತಾರ್ ಅವರನ್ನು ಇಲ್ಲಿ ಪರಿಚಯಿಸಿದ ಕಾರಣ ಅವರು ಮಾಡಿದ ಸಂಶೋಧನೆ, ಪ್ರಕಟಿಸಿದ ಕೃತಿ ಬಗ್ಗೆ ತಿಳಿಸಲು. ಚಿಕ್ಯಾಗೋ ವಿಶ್ವವಿದ್ಯಾಲಯದ ಇತಿಹಾಸದ ಪ್ರೊಫೆಸರ್ ಅವರ “The Singing Rocks of Badami” ಗ್ರಂಥದ ಕುರಿತು ಈ ರೀತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ “The reader will be greatly enlightened regarding the historical context and religious meaning of the fine art at Badami”.

ಹೀಗೇ ನಾವು ಮಧುರ ಕ್ಷಣ ಜೊತೆಗೆ ಕಳೆದು, ಸುಂದರ ಸ್ಥಳಗಳನ್ನು ವೀಕ್ಷಿಸಿ, ಸಂಬಂಧಗಳನ್ನು ಹದಗೊಳಿಸಿ… ನೆನಪುಗಳೊಂದಿಗೆ ಎಲ್ಲರೂ ಮತ್ತೆ ನಮ್ಮ ಜಗತ್ತಿಗೆ ಮರಳಿದೆವು.

ಒಂದು ಮರೆಯಲಾಗದ ಪ್ರವಾಸ ಇದಾಗಿತ್ತು. ಎಲ್ಲರೂ ಮುಂದಿನ ಆಪ್ತ ಸಮಾಗಮಕ್ಕೆ ಕಾಯುತ್ತಿದ್ದಾರೆ.