ಮೂವತ್ತೇಳು ವರ್ಷ. ೧೯೮೩ರಲ್ಲಿ ಐದೋ-ಹತ್ತೋ ಜನ ಸೇರಿ ಶುರು ಮಾಡಿದ ಕನ್ನಡ ಬಳಗ ಯುಕೆಗೆ ಈಗ ಮೂವತ್ತೇಳು ವರ್ಷ. ಸಂಸ್ಥೆಯೊಂದನ್ನ ಕಟ್ಟಿ, ಬೆಳೆಸಿ, ಇಷ್ಟು ವರ್ಷ ಉಳಿಸಿಕೊಳ್ಳುವದು ಸುಲಭದ ಕೆಲಸವಲ್ಲ. ತುಂಬಾ ಜನರ ಪ್ರೀತಿ, ಹಂಬಲ, ಸೇವೆಗಳು ಈ ಸಂಘವನ್ನ ಪೋಷಿಸಿವೆ. ಇಂದು ಅದು ೭೦೦ಕ್ಕೂ ಹೆಚ್ಚು ಸದಸ್ಯರ ಹೆಮ್ಮೆಯ ಸಂಸ್ಥೆಯಷ್ಟೇ ಅಲ್ಲದೆ , ಒಂದು ಚಾರಿಟೇಬಲ್ ಟ್ರಸ್ಟ್ ಆಗಿಯೂ ಮತ್ತು ಕನ್ನಡ ಸಾಹಿತ್ಯದ ವೇದಿಕೆಯಾಗಿಯೂ ವಿಸ್ತರಿಸಿಕೊಂಡಿದೆ. ವರ್ಷಕ್ಕೊಮ್ಮೆ ಯುಗಾದಿಯ ನೆಪದಲ್ಲಿ ಸದಸ್ಯರೆಲ್ಲರನ್ನ ಒಟ್ಟುಗೂಡಿಸುವ ಹಬ್ಬದ ಆಚರಣೆ ಈ ವರ್ಷ ಉತ್ತರ ಇಂಗ್ಲೆಂಡಿನ ಡೋಂಕಾಸ್ಟರ್ ಎಂಬಲ್ಲಿ – ಏಪ್ರಿಲ್ ೧೩ರಂದು – ನಡೆಯಿತು. ಇದರ ಉಸ್ತುವಾರಿ ಕನ್ನಡ ಬಳಗದ ಯಾರ್ಕ್-ಶೈರ್ ಸದ್ಯಸರದ್ದು. ಆ ಕಾರ್ಯಕ್ರಮದ ವರದಿ, ಮತ್ತು ಅದರ ಮುಂದುವರಿದ ಭಾಗದಂತೆ ಏಪ್ರಿಲ್ ೧೪ಕ್ಕೆ ನಡೆದ ತಾಯಿಸಾಹೇಬ ಸಿನೆಮಾ ಪ್ರದರ್ಶನದ ವರದಿ, ಈ ವಾರದ ಅನಿವಾಸಿಯಲ್ಲಿ. ಅಗ್ರ ವರದಿ ಬರೆದು ಸಮಯಕ್ಕೆ ಸರಿಯಾಗಿ ತಲುಪಿಸಿದ ಶ್ರೀನಿವಾಸ್ ಮಹೇಂದ್ರಕರ್ ಅವರಿಗೆ ಧನ್ಯವಾದ. ಹಾಗೆಯೇ, ಮನಸೂರೆಗೊಂಡ ‘ಬಾರಿಸು ಕನ್ನಡ ಡಿಂಡಿಮ’ ನೃತ್ಯ ನಾಟಕದ ತಯಾರಿಯ ಹಿನ್ನೆಲೆಯನ್ನ ಹಂಚಿಕೊಂಡ ಶಿವಪ್ರಸಾದರಿಗೂ ಮತ್ತು ತಾಯಿಸಾಹೇಬ ಸಿನೆಮಾ ಪ್ರದರ್ಶನದ ವರದಿ ಮುಟ್ಟಿಸಿದ ಶ್ರೀವತ್ಸ ದೇಸಾಯಿಯವರಿಗೂ ಧನ್ಯವಾದ. ಶಿವಪ್ರಸಾದ್ ಮತ್ತು ದೇಸಾಯಿಯವರು ಕನ್ನಡ ಬಳಗದ ಹಳೆ ತಲೆಗಳು. ಶ್ರೀನಿವಾಸ್ ಹೊಸ ಅಲೆ. ಹಳೆಯವರು ಬೆಳೆಸಿದ್ದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೊಸಬರ ಮೇಲಿದೆ.
ಇವೆರಡರ ಜೊತೆಗೆ, ಈ ವಾರದಿಂದ ಹೊಸದಾಗಿ ಆರಂಭಿಸುತ್ತಿರುವ ವಾರಕ್ಕೊಂದು ಚಿತ್ರಗಳ ವಿಭಾಗ. ಇದರ ಉದ್ದೇಶ, ಕ್ಯಾಮೆರಾ ಕಣ್ಣಲ್ಲಿ ಸೃಜನಶೀಲತೆ ವ್ಯಕ್ತಪಡಿಸುವ ಅನಿವಾಸಿಗಳಿಗೆ ಒಂದು ವೇದಿಕೆ ಕಟ್ಟಿಕೊಡುವ ಮತ್ತು ಆ ಕಾರಣದಿಂದ ಹೆಚ್ಚು ಜನರನ್ನು ತಲುಪುವದು. ಟೆಲ್ಫರ್ಡ್ ನಿವಾಸಿ, ವೈದ್ಯ ಜಯಪ್ರಕಾಶ್ ಪತ್ತಾರರ ಚೈತ್ರದ ಹೂಗಳ ಚಿತ್ರ ಈ ವಾರ. ಚಿತ್ರಗಳ ಹರಿವು ಇರುವವರೆಗೆ ಈ ಚಿತ್ರ ಪ್ರದರ್ಶನವನ್ನು ಮುಂದುವರೆಸಿಕೊಂಡು ಹೋಗುವ ಸಂಕಲ್ಪ. ನಿಲ್ಲುವುದಿಲ್ಲ ಎನ್ನುವ ಭರವಸೆ ಸದ್ಯಕ್ಕಿದೆ.
ಕೊನೆಯದಾಗಿ, ಕನ್ನಡ ಬಳಗದ ಬೆಳವಣಿಗೆಯ ಹಿನ್ನೊಟ ನೆನಪಿಸಿಕೊಳ್ಳುತ್ತಾ, ಈ ಬಳಗದ ಹಿರಿಯ ಚೇತನ ಸ್ನೇಹ ಕುಲಕರ್ಣಿಯವರು “ಎಷ್ಟೇ ಜನ ಸೇರಲಿ, ಆದರೆ ಬಳಗದವರಂತೆ ಬೇರೆಯಬೇಕು. ಅದೇ ನಮ್ಮ ಮೂಲ ಉದ್ದೇಶ” ಎಂದ ಆಶಯ-ಆಶೀರ್ವಾದವನ್ನ, ಡೋಂಕಾಸ್ಟರ್ ಯುಗಾದಿ ಕಾರ್ಯಕ್ರಮ ನಿಜವಾಗಿಸಿತ್ತು.
_________________________________________________________________________
ಅಗ್ರ ವರದಿ: ಶ್ರೀನಿವಾಸ್ ಮಹೇಂದ್ರಕರ್
ಕನ್ನಡ ಬಳಗ ಯುಕೆ ನಡೆಸುವ ಯುಗಾದಿ ಹಬ್ಬದ ಆಚರಣೆ, ಈ ವರ್ಷ ಬಳಗ ಹುಟ್ಟೂರು ಎನ್ನಬಹುದಾದ ದಕ್ಷಿಣ ಯಾರ್ಕ್ಶೈರ್ (yorkshire ) ನ ಡೋಂಕಾಸ್ಟರ್ (Doncaster) ಎಂಬ ನಗರದಲ್ಲಿ ಏಪ್ರಿಲ್ ಹದಿಮೂರು, ಶನಿವಾರದಂದು ಆಯೋಜನೆಗೊಂಡಿತ್ತು. ಕನ್ನಡದ ಅಪ್ರತಿಮ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಮತ್ತು ಪ್ರಖ್ಯಾತ ಗಾಯಕಿ ಎಂ ಡಿ ಪಲ್ಲವಿಯವರು ಅಥಿತಿಗಳಾಗಿ ಆಗಮಿಸಲಿದ್ದಾರೆ ಎಂದು ಮೊದಲೇ ಘೋಷಿಸಲಾಗಿದ್ದರಿಂದ, ಯುಕೆಯ ಅನೇಕ ಭಾಗಗಳಿಂದ ಕನ್ನಡಿಗರು ಕಾರ್ಯಕ್ರಮಕ್ಕೆ ಆಗಮಿಸುವವರಿದ್ದರು.
ಅಂದು ಮುಂಜಾನೆ ಸುಮಾರು ಹತ್ತು ಗಂಟೆಗೆ ನಾನು ನಗರದ "ಡೊಮ್ " ಬಳಿ ಬಂದು ಸೇರಿದಾಗ ಎದುರಾದ ತಿಳಿಬಿಸಿಲಿನ ನಸುನಡುಕ , ಸೂರ್ಯನು ಚಳಿಗಾಲದ ನಿದ್ದೆಯ ಜೋಂಪಿನಿಂದ ಹೊರಬಂದು ತನ್ನ ಪ್ರಖರತೆಯನ್ನು ಮತ್ತೆ ಕಂಡುಕೊಳ್ಳುವಲ್ಲಿ ಪರದಾಡುತ್ತಿರುವನೇನೋ ಎಂದೆನಿಸುವಂತೆ ಮಾಡಿತ್ತು. ಕೆಲ ಘಂಟೆಗಳ ಪ್ರಯಾಣದ ದಣಿವಿನೊಂದಿಗೆ ಜೊತೆಯಾದ ಮೆದು ಚಳಿಯು, ಹೊಟ್ಟೆಯು ಹಸಿವಿನಿಂದ ಚಟಪಟಿಸುವಂತೆ ಮಾಡಿತ್ತು. ಕಾರ್ ಪಾರ್ಕಿನಿಂದ ಡೋಮ್ ಒಳಗೆ ನಡೆಯುತ್ತಿದ್ದಂತಯೇ ಮೂಗಿಗೆ ಬಡಿದ ಚೌ-ಚೌ ಭಾತ್ ಪರಿಮಳ, ಹಸಿವಿನ ತೀವ್ರತೆಯನ್ನು ಹೆಚ್ಚಿಸಿ ಒಡನೆ ಊಟದಮನೆಯ ಕಡೆ ನಾವು ಧಾವಿಸನುವಂತಾಯಿತು . ರುಚಿಕರವಾದವಾದ ತಿಂಡಿ ಮತ್ತು ಬಿಸಿಬಿಸಿ ಯಾದ ಕಾಫಿಯ ನಂತರ ನಾವು ಮುಖ್ಯ ಸಭಾಂಗಣದ ಕುರ್ಚಿಗಳಲ್ಲಿ ಆಸೀನರಾದೆವು.
ಔಪಚಾರಿಕ ಉದ್ಘಾಟನೆ, ಸ್ವಾಗತ ಮತ್ತು ಅಧ್ಯಕ್ಷರ ಭಾಷಣದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಗಿರೀಶ್ ಕಾಸರವಳ್ಳಿಯವರು ಈಗಿನ ಕನ್ನಡ ಸಿನೆಮಾಗಳಲ್ಲಿ ಗುಣಮಟ್ಟದ ಕೊರತೆಗೆ ಕಾರಣಗಳೇನು ಎಂಬುದರಬಗ್ಗೆ ತಮ್ಮ ಅನಿಸಿಕೆಗಳನ್ನು ತಮ್ಮ ಮುಖ್ಯ ಭಾಷಣದಲ್ಲಿ ಮಂಡಿಸಿದರು. ಐತಿಹಾಸಿಕವಾಗಿ ಕನ್ನಡ ಚಿತ್ರರಂಗ ಹುಟ್ಟಿದ್ದು , ಗರಿಗೆದರಿದ್ದು ಮದರಾಸಿನಲ್ಲಿ. ಸಿನೆಮಾಗಳು ಬೆಂಗಳೂರಿಗೆ ಬರುವಹೊತ್ತಿಗಾಗಲೇ ಕೀಳರಿಮೆ ಮನೆಮಾಡಿಯಾಗಿತ್ತು. ಬೆಂಗಳೂರಿಗೆ ಮರಳಿದ ನಂತರ ಗಟ್ಟಿಯಾಗ ತೊಡಗಿದ ಚಿತ್ರರಂಗಕ್ಕೆ ಅನ್ಯ ಭಾಷಿಕರ ಒಡತನದಲ್ಲಿದ್ದ ವಿತರಣಾ ಸಂಸ್ಥೆಗಳು ಮತ್ತೆ ಕಾಲೆಳೆಯತೊಡಗಿದವು. ಹೀಗಾಗಿ ಚಿತ್ರಮಂದಿರಗಳು ಕನ್ನಡ ಸಿನೆಮಾಗಳಿಗೆ ದೊರಕುವುದು ಅಂದಿಗೂ ಇಂದಿಗೂ ಕಷ್ಟಕರವಾಗಿದೆ ಎಂದು ವಿಷಾದ ಪಟ್ಟರು. ಕನ್ನಡ ಚಿತ್ರರಂಗ, ಕನ್ನಡ ಸಂಸ್ಕೃತಿ, ಸುಗಮಸಂಗೀತ ಮತ್ತು ಜಾನಪ ಕಲೆಗಳ ಜೀವ ನಾಡಿಯಾಗದೆ ಕೇವಲ ಬೇರೆ ಭಾಷೆಯ ಚಿತ್ರಗಳ ಅನುಕರಣೆಗೆ ಅನುವಾಗಿರುವುದು ಮತ್ತೊಂದು ದುರಂತ. ಹೀಗಾಗಿ ಕಲಾತ್ಮಕ ಚಿತ್ರಗಳಿಗೆ ಪ್ರಾಮುಖ್ಯತೆ ಸಿಗುತ್ತಿಲ್ಲ ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ವಾರದಲ್ಲಿ ಏಳರಿಂದ ಎಂಟು ಕನ್ನಡ ಚಲನಚಿತ್ರಗಳು ತೆರೆ ಕಾಣುತಿದ್ದು, ಯುವ ನಿರ್ಮಾಪಕರು , ನಿರ್ದೇಶಕರು ಹೊಸ ಪ್ರಯೋಗಳನ್ನು ಮಾಡಲಿ, ಕನ್ನಡ ಚಿತ್ರರಂಗ ನಮ್ಮೆಲ್ಲರ ಸಂಸ್ಕೃತಿಯ ಭಾಗ ಬಹುಬೇಗ ಆಗಲಿ, ಈ ಯುಗಾದಿ ಹೊಸತನವನ್ನು ತರಲಿ ಎಂಬುದು ಅವರ ಒಟ್ಟು ಭಾಷಣದ ಸಾರವಾಗಿತ್ತು.

ಭಾಷಣಾದಿಗಳ ಕೋನೆಯನ್ನೇ ಎಣಿಸುತಿದ್ದ, ಬಣ್ಣ ಬಣ್ಣದ , ಮಿಣುಕುವ ಬಟ್ಟೆಗಳನ್ನು ತೊಟ್ಟು ಸುಂದರವಾಗಿ ಕಂಗೊಳಿಸುತ್ತಿದ್ದ ಮಕ್ಕಳು ತಮ್ಮ ಪ್ರದರ್ಶನದ ಘಳಿಗೆಗಾಗಿ ತುದಿಗಾಲಲ್ಲಿ ಕಾಯುತಿದ್ದರು. ಸುಮಧುರವಾದ ಹಾಡುಗಳು, ಭರತನಾಟ್ಯ, ಕವನಗಳು, ಯೋಗ ಮತ್ತು ಫ್ಯೂಶನ್ ನೃತ್ಯಗಳ ಮಿಶ್ರಣದೊಂದಿಗೆ ಮುಂದಿನ ಎರೆಡು ಘಂಟೆಗಳ ಕಾಲ ನಮ್ಮೆಲ್ಲರನ್ನೂ ರಂಜಿಸಿದರು. ಸಭಿಕರಿಂದ ಚಪ್ಪಾಳೆಗಳು, ಸಿಳ್ಳೆಗಳು ಪರಿಶ್ರಮದಿಂದ ಪ್ರದರ್ಶನಕ್ಕೆ ತಯಾರಿಯಾಗಿದ್ದ ಚಿಣ್ಣರನ್ನು ಉತ್ತೇಜಿಸಿದ್ದಲ್ಲದೆ, ನೆರೆದ ಪೋಷಕರ ಕಣ್ಣುಗಳು ಹೆಮ್ಮೆಯಿಂದ ಬೀಗುವಂತೆ ಮಾಡಿದ್ದವು.
ಚಿಣ್ಣರ ಕಾರ್ಯಕ್ರಮಗಳು ಮುಗಿಯುವ ಹೊತ್ತಿಗಾಗಲೇ ಹಲವರು ಊಟದ ಮನೆಯಲ್ಲಿ ತಟ್ಟೆಗಳನ್ನು ಕೈಯಲ್ಲಿ ಹಿಡಿದು ಸರದಿಯಲ್ಲಿ ನಿಂತಿದ್ದರು. ಹಬ್ಬದೂಟವಿರದೇ ಯುಗಾದಿ ಹೇಗೆ ಪೂರ್ಣವಾದೀತು. ಬಿಸಿಬೇಳೆ ಬಾತು ಮತ್ತು ಗುಲಾಬ್ ಜಾಮೂನಿನ ನಾಯಕತ್ವದಲ್ಲಿ ಯುಗಾದಿ ಹಬ್ಬದೂಟ ಜೋರಾಗಿತ್ತು. ವಿಶಾಲವಾದ ಊಟದ ಮನೆಯಲ್ಲಿ ಕೂರಲು , ತಟ್ಟೆ ಹಿಡಿದು ನಡೆದಾಡಲು, ಪರಿಚಿತರನ್ನು ಕಂಡು ಕುಶಲೋಪರಿ ವಿಚಾರಿಸಲು, ಹೊಸ ಪರಿಚಯವನ್ನು ಬೆಳೆಸಿಕೊಳ್ಳಲು ಒಂದು ದೊಡ್ಡ ವೇದಿಕೆಯಾಗಿತ್ತು. ಹೀಗಾಗಿ ಮಾತುಮಾತಿನಲ್ಲೇ , ೬೦-೭೦ ನಿಮಿಷಗಳು ಉರುಳಿ, ಮತ್ತೆ ಸಭಾಗಣದತ್ತ ನಡೆಯುವ ಸಮಯ ಎದುರಾಯಿತು.
ಅತಿ ಸರಳ ಮತ್ತು ಅಪ್ಪಟ ಕನ್ನಡದಲ್ಲಿ ಹಾಸ್ಯ ಚಟಾಕಿಗಳನ್ನು ಸುರಿಸುತ್ತಾ ಯಾವುದೇ ಹಾಳೆಗಳನ್ನು ಓದದೇ ನೈಜ ಶೈಲಿಯಲ್ಲಿ ಮಾತನಾಡುತ್ತ ವೇದಿಕೆಯ ಮೇಲೆ ಆಗಮಿಸಿದ ನಿರೂಪಣೆ ತಂಡದವರು ಮತ್ತೊಮ್ಮೆ ಎಲ್ಲರನ್ನೂ ಸ್ವಾಗತಿಸಿದರು. ಹಬ್ಬದೂಟದ ಮತ್ತಿನಲ್ಲಿ ತೂಕಡಿಸುವುದೊಂದು ಬಾಕಿಯಿದ್ದಂತಿದ್ದ ನನಗೆ ಒಮ್ಮೆಲ್ಲೇ ಎಚ್ಚರಿಸಿದ್ದು ಕಾರ್ತ್ಯವೀರಾರ್ಜುನ ಪ್ರಸಂಗ ಯಕ್ಷಗಾನ ಪ್ರದರ್ಶನ. ಕಾರ್ತ್ಯವೀರ ಮತ್ತು ರಾವಣನ ನಡುವೆ ನಡೆಯುವ ಸಂವಾದವನ್ನು ಯೋಗಿಂದ್ರ ಮರವಂತೆ ಮತ್ತು ಗುರುಪ್ರಸಾದ್ ಪಟ್ವಾಲರು ಮನಮುಟ್ಟುವಂತೆ ನಟಿಸಿದರು. ಅವರ ವೇಷ ಭೂಷಣ , ಮುಖದ ಭಾವ, ನೃತ್ಯ ಮತ್ತು ಭಂಗಿಗಳು, ಯಕ್ಷಗಾನ ಇವರ ಪ್ರವೃತ್ತೀಯೋ ಅಥವಾ ವೃತ್ತಿಯೋ ಎಂಬ ಅನುಮಾನವೊಂದನ್ನು ಎಲ್ಲರಲ್ಲೂ ಮೂಡಿಸಿದ್ದವು.

ಮತ್ತೆ ಜಾನಪದ ನೃತ್ಯಗಳು, ವಯೊಲಿನ್ ವಾದನಗಳಿಗೆ ತಲೆದೂಗುತ್ತಾ , ಮನಸಿನ ರಸಿಕ ಕೇಂದ್ರಗಳಿಗೆ ರಸದೌತಣ ನಡೆದೇ ಸಾಗಿರುವಾಗ ಎಲ್ಲವನ್ನೂ ಮೀರಿಸುವಂಥಹ ಪ್ರದರ್ಶನವೊಂದು ಎದುರಾಗಿತ್ತು. ಇದು ಯಾರ್ಕಶೈರ್ ಕನ್ನಡ ಬಳಗದ ಸದಸ್ಯರ, ಸುಮಾರು ನಲವತ್ತು ನಿಮಿಷಗಳು ನಡೆದ “ಬಾರಿಸು ಕನ್ನಡ ದಿಂಡಿಮವ” ಎಂಬ ನಾಟ್ಯ ರೂಪಕದ ಪ್ರದರ್ಶನ. ಶ್ರೀಕೃಷ್ಣ ದೇವರಾಯನ ಕಾಲದಲ್ಲಿ ಮೈದಳೆದ ಶಿಲಾಬಾಲಕಿಯರು ಜೀವಂತವಾಗಿ ಇಡೀ ಕರ್ನಾಟಕವನ್ನು ಸುತ್ತಿ ಕನ್ನಡ ಸಂಸ್ಕೃತಿಯನ್ನು ಮತ್ತು ವಿವಿಧತೆಯನ್ನು ಆಸ್ವಾದಿಸುತ್ತ , ಅದನ್ನು ಎಲ್ಲರಿಗೂ ಪರಿಚಯಿಸುವ ಈ ನೃತ್ಯರೂಪಕ ಅಮೋಘವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ವಿವಿಧ ವಯೋಮಾನಕ್ಕೆ ಸೇರಿದ ಸುಮಾರು ನಲವತ್ತು yorkshire ಕನ್ನಡಿಗರು ನೆರೆದವರ ಮನಸೂರೆಗೊಂಡರು. ಪ್ರದರ್ಶನ ಮುಗಿದ ನಂತರ, ಸಭಿಕರೆಲ್ಲರೂ ಎದ್ದುನಿಂತು ಚಪ್ಪ್ಪಾಳೆಗಳನ್ನು ತಟ್ಟುವುದರ ಮೂಲಕ ಪ್ರಶಂಸೆಯನ್ನು ಮತ್ತು ಧನ್ಯತೆಯನ್ನು ವ್ಯಕ್ತಪಡಿಸಿದರು. ನಾನು ಲಂಡನ್ನಿಂದ ಐದು ಘಂಟೆ ಪ್ರಯಾಣ ಮಾಡಿದ್ದು ಒಮ್ಮೆಲೇ ಸಾರ್ಥಕವೆನಿಸತೊಡಗಿತ್ತು.

ಆಗ, “ಅಭಿ ಪಿಕ್ಚರ್ ಬಾಕಿ ಹಾಯ್” ಎಂಬಂತೆ ಎದುರಾದದ್ದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ(KSSVV) ಯಿಂದ ಆಯೋಜನೆ ಗೊಂಡಿದ್ದ “ಕಾಫಿ ವಿಥ್ ಕಾಸರವಳ್ಳಿ” ವಿಚಾರ ಘೋಷ್ಠಿ. ಡಾ. ಶಿವಪ್ರಸಾದ್ ರವರ ನೇತೃತ್ವದಲ್ಲಿ ನಡೆದ ಗಿರೀಶ್ ಕಾಸರವಳ್ಳಿ ಯವರ ಜೊತೆಗಿನ ಅವರ ಸಿನೆಮಾಗಳ ಬಗೆಗಿನ ಸಂವಾದ, ಇಡೀ ಕಾರ್ಯಕ್ರಮಕ್ಕೆ ಕಳಶಪ್ರಾಯವಾಗಿತ್ತು. ಒಬ್ಬೊಬ್ಬರಾಗಿ KSSVVಯ ಸದಸ್ಯರು, ತಮ್ಮ ಮನಸ್ಸಿಗೆ ಹತ್ತಿರವಾದ ಕಾಸರವಳ್ಳಿ ಯವರ ಸಿನೆಮಾದ ಒಂದು ತುಣುಕನ್ನು ಪರದೆಯ ಮೇಲೆ ಪ್ರದರ್ಶಿಸಿ ನಂತರ ಆ ಸಿನೆಮಾಕ್ಕೆ ಸಂಭಂದಿಸಿದ ಪ್ರಶ್ನೆಗಳನ್ನು ಕೇಳುತ್ತಿರುವಾಗ ಯಾವುದೋ ಚಿತ್ರೋತ್ಸವದಲ್ಲಿ ಭಾಗಿಯಾಗಿರುವೆನೇನೋ ಎಂಬಂತೆ ಭಾಸವಾಗುತಿತ್ತು. ಈ ಸಂವಾದ ಮತ್ತು ಪ್ರಶ್ನೆಗಳು KSSVV ಸದಸ್ಯರ ತಿಳುವಳಿಕೆ ಮತ್ತು ವೈಚಾರಿಕ ಆಳಕ್ಕೆ ಕನ್ನಡಿ ಹಿಡಿದರೆ, ಕಾಸರವಳ್ಳಿ ಯವರ ಉತ್ತರಗಳು ಅವರಿಗೆ ಸಿನೆಮಾದ ಮೇಲಿನ ಒಲವು, ಉತ್ಸಾಹ ಮತ್ತು ಪ್ರೌಢತೆಯನ್ನ ತೋರುತ್ತಿದ್ದವು. ಒಟ್ಟಾರೆ ಸಭಿಕರೆಲ್ಲರೂ ಮೂಕ ವಿಸ್ಮಯರಾಗಿ ವಿಚಾರವಿನಿಮಯದ ಸವಿಯನ್ನು ಸವಿಯುತ್ತಲೇ ಇದ್ದೆವು. ಸಮಯ ನಮ್ಮ ವೈರಿ ಎಂಬಂತೆ ಈ ಆಹ್ಲಾದಕರ ಚರ್ಚೆಗೆ ತೆರೆ ಎಳೆಯಲು ಮುಂದಾಯಿತು.
ನಂತರ ನಾವು ಬಜ್ಜಿ ವಿಥ್ ಕಾಫಿಯನ್ನು ಸವಿದು ಮತ್ತೆ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ನಡೆದೇ ಸಾಗಿರುವಾಗ
ರಶ್ಮಿ ಮಂಜುನಾಥ್ ಮತ್ತು ತಂಡದಿಂದ ಪ್ರದರ್ಶಿಸಲ್ಪಟ್ಟ ದಶಾವತಾರ ಎಂಬ ರೂಪಕ, ಇಡೀ ದೇವಲೋಕವನ್ನು ವೇದಿಕೆಗೆ ಕರೆತಂದಿತ್ತು. ವಿಷ್ಣುವಿನ ವಿವಿಧ ಅವತಾರಗಳ ಫಾಶನ್ ಶೋ ಎಂದೇ ಹೇಳಬಹುದಾಗಿದ್ದ ಈ ರೂಪಕ, ಅಭಿನಯಿಸಿದವರ ವೇಷ ಭೂಷಣ, ತಯಾರಿ ಎಲ್ಲವನ್ನೂ ನೆನೆದು ಬೆರಗಾಗುವಂತೆ ಮಾಡಿತ್ತು. ಒಟ್ಟಾರೆಯಾಗಿ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳೂ ಅದ್ಭುತವಾಗಿ ಮೂಡಿಬಂದು ಆಯೋಜಕರ ಕಾರ್ಯಕ್ಷಮತೆಗೆ ಮತ್ತು ವೃತ್ತಿಪರತೆಗೆ ಕನ್ನಡಿ ಹಿಡಿದಂತಿದ್ದವು.
ಸಂಜೆ ಆರು ಆಗಿತ್ತು, ನಾವು ಎದುರು ನೋಡುತಿದ್ದ ಮತ್ತೊಬ್ಬ ಅಥಿತಿ ಎಂ. ಡಿ. ಪಲ್ಲವಿಯವರು ತಮ್ಮ ವಾದ್ಯಘೋಷ್ಠಿಯೊಡನೆ ವೇದಿಕೆಯನ್ನು ಅಲಂಕರಿಸಿ, ಇಡೀ ಸಭಾಂಗಣವನ್ನು ತಮ್ಮ ಗಾಯನದ ಮೂಲಕ ಮಂತ್ರ ಮುಗ್ದರನ್ನಾಗಿಸಿದರು. ಮತ್ತೆ ಮತ್ತೆ ಕೇಳಬೇಕೆನ್ನಿಸುವ ಅನೇಕ ಶಾಸ್ತ್ರೀಯ ಮತ್ತು ಸುಗಮಸಂಗೀತ ಗೀತೆಗಳನ್ನು ಹಾಡುವುದರ ಮೂಲಕ ನಮ್ಮನ್ನು ಗಾಂಧರ್ವ ಲೋಕಕ್ಕೆ ಕರೆದೊಯ್ದರು ಎಂದು ಹೇಳಿದರೆ ತಪ್ಪಾಗಲಾರದು.
ಸ್ಥಳೀಯ ಪ್ರತಿಭೆಗಳ ಪ್ರದರ್ಶನ ದೊಂದಿಗೆ ನನ್ನ ಸಮಯದ ಹೂಡಿಕೆ ವಾಪಾಸ್ ಆಗಿತ್ತು. ಕಾಸರವಳ್ಳಿ ಯವರ ಮಾತು ಮತ್ತು “ಕಾಫಿ ವಿಥ್ ಕಾಸರವಳ್ಳಿ” ಲಾಭ ದ್ವಿಗುಣಗೊಳಿಸಿತು. ಎಂ ಡಿ ಪಲ್ಲವಿ ರವರ ಗಾಯನ ದಿಂದ ಲಾಭ ತ್ರಿಗುಣವಾಯಿತು. ಒಟ್ಟಾರೆ ಕನ್ನಡ ಬಳಗ ಆಯೋಜಿಸಿದ್ದ ಯುಗಾದಿ ೨೦೧೯ ತುಂಬಾ ಯಶಸ್ವಿ ಆಯಿತು. ಕೇವಲ ಸಂಖ್ಯೆಯ ಲೆಕ್ಕದಿಂದಷ್ಟೇ ಅಳೆಯದೆ, ಮೌಲ್ಯದ ಆಧಾರದ ಮೇಲೆ ಅಳೆಯುವುದಾದರೆ, ಈ ಕಾರ್ಯಕ್ರಮ ನಾನು ಇದುವರೆಗೂ ಭಾಗಿಯಾಗಿರುವ ಕನ್ನಡ ಕಾರ್ಯಕ್ರಮಗಳಲ್ಲಿ ಆಗ್ರ ಶ್ರೇಣಿಯದ್ದು ಎಂದು ಯಾವುದೇ ಹಿಂಜರಿಕೆ ಇಲ್ಲದೇ ಹೇಳಬಲ್ಲೆ.
___________________________________________________________________________
ತೆರೆಯ ಹಿಂದೆ: “ಬಾರಿಸು ಕನ್ನಡ ಡಿಂಡಿಮ” ನೃತ್ಯ ನಾಟಕದ ಹಿನ್ನೆಲೆ
– ಡಾ. ಶಿವಪ್ರಸಾದ್
ಯು. ಕೆ. ಕನ್ನಡ ಬಳಗದ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಜನಪ್ರಿಯ ಚಿತ್ರಗೀತೆಗಳನ್ನು ಅಳವಡಿಸಿಕೊಂಡು ಹಿಂದೆ ಹಲವು ಪ್ರಸಂಗಗಳನ್ನು ಪರಿಹಾಸಗಳನ್ನು ಯಾರ್ಕ್ ಶೈರ್ ಶಾಖೆಯ ತಂಡದವರು ನಿರೂಪಿಸಿದ್ದರು. ಡಾ. ಸುಮನಾ ನಾರಾಯಣ್ ಅವರು ಕನ್ನಡ ಕವಿಗಳ ಕೆಲವು ಕವನಕ್ಕೆ ನೃತ್ಯವನ್ನು ಅಳವಡಿಸಿ ಸಿನಿಮಾ ಹೊರತಾದ ಒಂದು ಸಂಸ್ಕೃತಿಯನ್ನು ತಂದಿದ್ದರು. ಸಾಮಾನ್ಯವಾಗಿ ನಮ್ಮಲ್ಲಿ ಒಂದು ಜನಪ್ರಿಯ ಮನೋರಂಜನೆ ಎಂದರೆ ಅದು ಸಿನಿಮಾ ಸಂಸ್ಕೃತಿಯನ್ನು ಆಧರಿಸಿ ಮಾಡುವ ಪ್ರಯತ್ನ. ಈ ದಿಕ್ಕಿನಲ್ಲಿ ಕನ್ನಡ ಸಂಸ್ಕೃತಿಯೆಂದರೆ ಸಿನಿಮಾ ಸಂಸ್ಕೃತಿ ಎಂದು ಜನಸಾಮಾನ್ಯರು ನಂಬಿರುವುದನ್ನು ನಾವು ಗಮನಿಸಬಹುದು.
ಈ ಒಂದು ನಂಬಿಕೆಗೆ ವ್ಯತಿರಿಕ್ತವಾಗಿ ಸಿನಿಮಾ ಸಾಹಿತ್ಯ ಮತ್ತು ಸಂಗೀತದ ಹೊರಗೆ ಒಂದು ಕಥೆಯನ್ನು ನಿರೂಪಿಸುವ ಆಲೋಚನೆ ಮಾಡಿದ್ದು ಶ್ರೀಮತಿ ವ್ರತ ಚಿಗಟೇರಿ. ಆದರೂ ಅದರಲ್ಲಿ ಒಂದೆರಡು ಸಿನಿಮಾ ಹಾಡುಗಳು ಸೇರಿದ್ದು ಅನಿವಾರ್ಯವಾದರೂ ಅದಕ್ಕೆ ಒಂದು ಶಾಸ್ತ್ರೀಯ ಸಂಗೀತದ ಎಳೆ ಇತ್ತು ಎನ್ನಬಹುದು. ಹಿಂದೆ ಮಹಾಭಾರತ ಮತ್ತು ರಾಮಾಯಣವನ್ನು ಆಧರಿಸಿ ನೃತ್ಯ ನಾಟಕವನ್ನು ರಚಿಸಿದ ಪ್ರತಿಭಾವಂತೆ ವ್ರತ ನಮ್ಮೊಡನೆ ಕೈ ಮಿಲಾಯಿಸಿದ್ದು ನಮ್ಮ ಅದೃಷ್ಟ!
ವ್ರತ ಅವರು ಕೂಚುಪುಡಿ ನೃತ್ಯವನ್ನು ಶಾಸ್ತ್ರೋಕ್ತವಾಗಿ ಕಲಿತವರು. ಕನ್ನಡ ಬಳಗದಲ್ಲಿ ಈಗಾಗಲೇ ಹೆಸರುವಾಸಿಯಾಗಿದ್ದ ಸುಮನಾ ನಾರಾಯಣ್ ಮೇಲೆ ಪ್ರಸ್ತಾಪಿಸಿದಂತೆ ನಮ್ಮಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೊಟ್ಟಿದ್ದು ಅವರೂ ಕೂಡ ಈ ಹೊಸ ಯೋಜನೆಯಲ್ಲಿ ಸೇರಿಕೊಂಡರು. ಈ ಕಾರ್ಯಕ್ರಮದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದಾಗ ಅದು ನನ್ನ ಗಮನವನ್ನು ಸೆಳೆಯಿತು. ಯಾರ್ಕ್ ಶೈರ್ ತಂಡದಿಂದ ಇದಕ್ಕೆ ಬೇಕಾದ ಒಟ್ಟಾರೆ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳಲು ಸಿದ್ಧನಾದೆ. ಸುಮನಾ ನಾರಾಯಣ್ ಮತ್ತು ವ್ರತ ಈ ಪರಿಕಲ್ಪನೆಯನ್ನು ಆಲೋಚಿಸಿ ಪರಿಶೀಲಿಸಿ ಹಾಡು ಸಂಗೀತ ನೃತ್ಯ ಇವುಗಳನ್ನು ಆಯ್ಕೆಮಾಡಿ ಕಥೆಗೆ ರಕ್ಕೆ ಪುಕ್ಕ ಗಳನ್ನು ಕೊಟ್ಟರು. ವ್ರತ ಹುಟ್ಟುಹಾಕಿದ ಮೂಲ ಕಥೆ ಇಂಗ್ಲಿಷ್ ಭಾಷೆಯಲ್ಲಿದ್ದು ಅದನ್ನು ನಾನು ಕನ್ನಡಕ್ಕೆ ಭಾವಾನುವಾದಗೊಳಿಸಿ, ಕಾವ್ಯಮಯವಾಗಿಸಿ ಅವರ ಕೋರಿಕೆಯ ಮೇಲೆ ಧ್ವನಿ ಕೊಟ್ಟು ನಿರೂಪಿಸಿದೆ. ದಿನಗಳು ಕಳೆದಂತೆ ಕಥೆ, ಸಂಗೀತ, ನೃತ್ಯ ಪರಿಪಕ್ವವಾಗುತ್ತಾ ಸಾಗಿತ್ತು.
ಇಲ್ಲಿ ಹತ್ತು ಮಕ್ಕಳನ್ನು ಸೇರಿ ಒಟ್ಟು ನಲವತ್ತು ಸದಸ್ಯರನ್ನು ಕ್ಯಾಸ್ಟ್ ಮಾಡಲಾಯಿತು. ಸ್ವಾರಸ್ಯಕರ ವಿಚಾರವೆಂದರೆ ಹೆಚ್ಚಿನ ಜನರಿಗೆ ನೃತ್ಯದ ಅಭ್ಯಾಸವೇ ಇಲ್ಲ! ಇದರಲ್ಲಿ ಬಹುಪಾಲು ವೈದ್ಯರು ಕೆಲವು ಸಾಫ್ಟ್ ವೇರ್ ಇಂಜಿನಿಯರುಗಳೂ ಭಾಗವಹಿಸಿದ್ದರು. ಹಲವಾರು ವೃತ್ತಿಪರ ವೈದ್ಯರನ್ನು ಅವರ ನೈಟ್ ಡ್ಯೂಟಿ, on call ಮಧ್ಯದಲ್ಲಿ ತರಬೇತಿ ನೀಡುವುದು ಒಂದು ಸಾಹಸವೇ ಆಯಿತು. ನಮ್ಮ ಅನಿವಾಸಿ ಸದಸ್ಯೆ ಅನ್ನಪೂರ್ಣ ಆನಂದ್ ಹಲವಾರು ಬಾರಿ ತಮ್ಮ ದೂರದ ಚೆಲ್ತ್ನಮ್ ಊರಿನಿಂದ ಶೇಫಿಲ್ಡ್ ಗೆ ಪ್ರಯಾಣ ಮಾಡಿ ಬಂದು ಈ ನೃತ್ಯ ನಾಟಕದಲ್ಲಿ ಭಾಗವಹಿಸಿದ್ದು ಶ್ಲಾಘನೀಯ. ಇಂತಹ ಸನ್ನಿವೇಶದಲ್ಲಿ ವಾಟ್ಸಪ್ ಬಹಳ ಉಪಯೋಗಕ್ಕೆ ಬಂದಿತು. ನೃತ್ಯ ನಾಟಕದ ವಿವಿಧ ದೃಶ್ಯಗಳ (Act) ಒಂದೊಂದು ಗುಂಪು ಮಾಡಿ ಸದಸ್ಯರು ತಮ್ಮ ಮನೆಗಳಲ್ಲಿ ತಮ್ಮ ದೃಶ್ಯಗಳನ್ನು ಅಭ್ಯಾಸ ಮಾಡಿ ಅಲ್ಲಿ ಪರಿಪೂರ್ಣತೆಯನ್ನು ಕಂಡುಕೊಂಡ ಮೇಲೆ ಕೆ.ಬಿ.ಯು.ಕೆ. ಯುಗಾದಿ ಇನ್ನೂ ಕೇವಲ ಎರಡು ವಾರ ಇರುವಾಗ ವಾರಾಂತ್ಯ ಎಲ್ಲರೂ ಸೇರಿ ಕಥೆಯ ನಿರೂಪಣೆ ಮತ್ತು ಸಂಗೀತಕ್ಕೆ ಲೈವ್ ಅಭ್ಯಾಸ ಕೈಗೊಂಡರು.
ಇಷ್ಟು ಜನರನ್ನು ಒಂದುಗೂಡಿಸಿ ಅಭ್ಯಾಸಕ್ಕೆ ಬೇಕಾದ ಸಭಾಂಗಣವನ್ನು ಬಾಡಿಗೆಗೆ ಪಡೆದುಕೊಂಡು, ಊಟ, ತಿಂಡಿ, ಕಾಫಿ ಇದರ ವ್ಯವಸ್ಥೆ ನಡೆಸಿ, ಮಕ್ಕಳನ್ನು ನಿಭಾಯಿಸಿ, ಬೆಂಗಳೂರಿನಿಂದ ಬಣ್ಣ ಬಣ್ಣದ ಬಟ್ಟೆಗಳನ್ನು, ಪೇಟಾ, ಜುಬ್ಬಾ, ಸರ, ಬಳೆ ಇತ್ಯಾದಿಗಳನ್ನು ಹೊಂಚಿಸಿ ಅದನ್ನು ಅಲ್ಲಿಂದ ಇಲ್ಲಿಗೆ ಹೊತ್ತು ತರುವ ವ್ಯವಸ್ಥೆಯನ್ನು ಮಾಡಲಾಯಿತು. ನಾನು ನನ್ನ ಮೊಬೈಲ್ ಫೋನಿನಲ್ಲಿ voice recording software ಪಡೆದುಕೊಂಡು ಮನೆಯಲ್ಲೇ ಧ್ವನಿ ಕೊಟ್ಟು ಅದನ್ನು ವಾಟ್ಸ್ಆಪ್ ಮೂಲಕ ಬೆಂಗಳೂರಿಗೆ ರವಾನಿಸಿ ಅಲ್ಲಿನ ಸ್ಟುಡಿಯೋದಲ್ಲಿ ಸಂಗೀತವನ್ನು ಅಳವಡಿಸಲಾಯಿತು.
ಅಂತೂ ಇಂತೂ “ಬಾರಿಸು ಕನ್ನಡ ಡಿಂಡಿಮವ” ಅಂತಿಮ ರಿಹರ್ಸಲ್ ಮಾಡಿ ಯಾರು ಯಾವ ಕಡೆಯಿಂದ ವೇದಿಕೆಯ ಮೇಲೆ ಬರಬೇಕು ಹೇಗೆ ನಿರ್ಗಮಿಸಬೇಕು, ಜಾತ್ರೆ, ತಮಟೆ, ಸಿಂಹಾಸನ, ಛತ್ರಿ ಈ ರೀತಿಯ ಪ್ರಾಪ್ಸ್ ಗಳನ್ನು ಯಾರು ಜವಾಬ್ದಾರಿ ತೆಗೆದುಕೊಳ್ಳಬೇಕು? ಎಂಬ ವಿಚಾರಗಳನ್ನು ತಿಳಿಪಡಿಸಿ ಎಚ್ಚರಿಕೆ ನೀಡಿ ತಯಾರಾದೆವು. ಕಡೆಗೂ ಏಪ್ರಿಲ್ ಹದಿಮೂರನೇ ತಾರೀಕು ಕನ್ನಡ ಬಳಗದ ಯುಗಾದಿ ಕಾರ್ಯಕ್ರಮದಲ್ಲಿ ನಮ್ಮ ನೃತ್ಯ ನಾಟಕ ಪ್ರದರ್ಶಿತವಾಯಿತು. ಕೈಯಲ್ಲಿದ್ದ ಕಳಶದಿಂದ ಒಂದು ತೆಂಗಿನಕಾಯಿ ಅನಿರೀಕ್ಷಿತವಾಗಿ ಬಿದ್ದುದನ್ನು ಬಿಟ್ಟರೆ ಇನ್ಯಾವ ತೊಂದರೆಗಳೂ ಕಾಣಿಸಿಕೊಳ್ಳಲಿಲ್ಲ!
ನಮ್ಮೆಲ್ಲರ ನಿರೀಕ್ಷೆಯನ್ನು ಮೀರಿ ಬಹಳ ಉತ್ತಮವಾದ ಸಾಂಸ್ಕೃತಿಕ ಕಾರ್ಯಕ್ರಮ ರೂಪುಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇಷ್ಟು ಉತ್ಕೃಷ್ಟವಾದ ಪ್ರೊಡಕ್ಷನ್ ಹಿಂದೆ ಕನ್ನಡ ಬಳಗದಲ್ಲಿ ಕಂಡಿಲ್ಲವೆಂಬುದು ಕೆಲವರ ಅಭಿಪ್ರಾಯವಾಗಿತ್ತು. ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಶ್ರೀಮತಿ ವ್ರತಾ ಮತ್ತು ಸುಮನಾ ನಾರಾಯಣ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. “Journey is more important than the destination” … ಎಂಬ ಇಂಗ್ಲಿಷ್ ಉಕ್ತಿ ನನ್ನ ನೆನಪಿಗೆ ನಿಲುಕಿತು. ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಕೈ ಹಾಕಿ ಅದನ್ನು ಯಶಸ್ವಿಗೊಳಿಸುವುದರಲ್ಲಿ ಹಲವಾರು ಕಲಿಯುವ ಅಂಶಗಳು ಗೋಚರಿಸಿತು. ಕಾರ್ಯಕ್ರಮಕ್ಕೆ ಬೇಕಾದ ಸಮಯ, ಶ್ರದ್ಧೆ, ನಿಷ್ಠೆ, team work, team spirit ಎಲ್ಲರಲ್ಲೂ ಕಂಡು ಬಂದಿತ್ತು. ಹೊಸ ಗೆಳೆತನ, ಅನ್ಯೋನ್ಯತೆ, ನೃತ್ಯ, ಹಾಡು, ಸಂಗೀತ, ಮಾತುಕತೆ ಒಂದು ಹಿತವಾದ ಮತ್ತು ಉಲ್ಲಾಸಕರ ಅನುಭವವಾಗಿ ಪರಿಣಮಿಸಿತು. ಮೇಲೆ ಪ್ರಸ್ತಾಪಿಸಿದ ಇಂಗ್ಲಿಷ್ ಉಕ್ತಿಯು ಎಷ್ಟು ನಿಜ ಎಂಬ ಅರಿವು ಮೂಡಿತು.
____________________________________________________________________________
ಮುಂದುವರಿದ ಸಂವಾದ: ಡೋಂಕಾಸ್ಟರಿನಲ್ಲಿ ಇಳಿದು ಬಂದ ”ತಾಯಿ ಸಾಹೇಬ”
– ಡಾ. ಶ್ರೀವತ್ಸ ದೇಸಾಯಿ
ಕನ್ನಡ ಬಳಗ ಯು ಕೆ ದ 2014ರ ದೀಪಾವಳಿ ಕಾರ್ಯಕ್ರಮದ ನಂತರ ಮೊದಲ ಬಾರಿ ಈ ವರ್ಷದ ಯುಗಾದಿ ಕಾರ್ಯಕ್ರಮ ಎರಡನೆಯ ದಿನಕ್ಕೂ ಚಾಚಿತ್ತು. ಗಿರೀಶ ಕಾಸರವಳ್ಳಿಯಂಥ ಸುಪ್ರಸಿದ್ಧ ಸಿನಿಮಾ ನಿರ್ದೇಶಕರು ಮುಖ್ಯ ಅತಿಥಿಯಾಗಿ ಬಂದಿರುವಾಗ, ಅವರ ಸಿನಿಮಾಗಳ ಬಗ್ಗೆ ದೃಶ್ಯ-ವಿಚಾರ ಸಂಕೀರ್ಣವನ್ನು ಹಿಂದಿನ ದಿನ ಏರ್ಪಡಿಸಿದಮೇಲೆ ಅವರ ಒಂದಾದರು ಚಿತ್ರಪ್ರದರ್ಶನ ಆಗಲೇ ಬೇಕಲ್ಲ ಎಂದು ರವಿವಾರ 2019ರ ಎಪ್ರಿಲ್ 14ನೆಯ ತಾರೀಖು ಡೋಂಕಾಸ್ಟರಿನ ಹಾಲ್ ಕ್ರಾಸ್ ಎಂಬ ಶಾಲೆಯ ಸಭಾಂಗಣದಲ್ಲಿ ಅವರ ”ತಾಯಿ ಸಾಹೇಬ” ಚಿತ್ರ ತೆರೆ ಕಂಡಿತು.
ಸಾಕಷ್ಟು ಪ್ರಚಾರವಾಗಿತ್ತು. ಆದರೆ ನಮಗೆ ಅಂದು ದಕ್ಕಿದ ಒಂದು ಶಾಲಾ ಸಭಾಂಗಣವೇನೂ plush surroundings ಅಲ್ಲ. ನಾಡಿನ ದೂರ ದೂರದ ಊರುಗಳಿಂದ ಬಂದುಳಿದುಕೊಂಡ 90ಕ್ಕೂ ಮೇಲಿನ ಕಲಾತ್ಮಕ ಚಿತ್ರಗಳ ಪ್ರೇಮಿಗಳು ಉತ್ಸುಕರಾಗಿ ಕಾಯುತ್ತಿದ್ದರು ತಾಯಿ ಸಾಹೇಬರ ಅವತರಣಕ್ಕೆ! ನಿರ್ದೇಶಕರು ತಮ್ಮೊಡನೆ ತಂದಿದ್ದ ಸಿನಿಮಾದ ಸಾಫ್ಟ್ ಕಾಪಿ ಹೊತ್ತ ’ಪೆನ್ ಡ್ರೈವ” ಲ್ಯಾಪ್ ಟಾಪಿಗೆ ಜೋಡಿಸಿಯಾಗಿತ್ತು. ಏನಿದು ಸ್ಕ್ರೀನ್ ಮೇಲೆ ಚಿತ್ರವಿಲ್ಲ; ಸ್ಪೀಕರ್ ಮೇಲೆ ಧ್ವನಿಯಿಲ್ಲ್! ’ಟೆಕ್ನಿಕಲ್ ಗ್ಲಿಚ್’ ಯುಗ ಇದು. ನೆರೆದವರಲ್ಲಿ ಡಾಕ್ಟರುಗಳೇ ಹೆಚ್ಚು. ಚಿಕಿತ್ಸೆ ಶುರು ಆಯಿತು. ಕಾಯುತ್ತಿದ್ದವರ ತಾಳ್ಮೆಗೆ ಚ್ಯುತಿ ಬರದಿರಲೆಂದು ಡಾ ರಶ್ಮಿ ಮಂಜುನಾಥರಿಗೆ ಹಾಡಲು ಕೇಳಿಕೊಂಡರೆ ಅವರು ಇದನ್ನು ಮೊದಲೇ ಊಹಿಸಿದಂತೆ ಹಾಡಿದ್ದು ’ಇಳಿದು ಬಾ ತಾಯೆ!’ ಅದನ್ನು ಸಾಧ್ಯವಾದಷ್ಟು ವಿಸ್ತರಿಸಿ ಅಲ್ಲಿಂದ ಇಲ್ಲಿಂದ ಇಳಿದು ಬಾ, ಇಳಿದು ಬಾ ಅಂತಹಾಡುತ್ತಿರಲು, ತಾಯಿ ಸಾಹೇಬ ’ಇಳಿದುಬರಲು’ ಸನ್ನದ್ಧರಾಗಿದ್ದುದು ಎಲ್ಲರಿಗೆ ಸಂತೋಷ ಕೊಟ್ಟಿತ್ತು.
ಶುರುವಾತಿಗೆ ಅದರ ಪರಿಚಯಮಾಡಿಕೊಡುತ್ತಾ ಗಿರೀಶ ಕಾಸರವಳ್ಳಿಯವರು ಸಿನಿಮಾದ ’ಸ್ಲೋ ಪೇಸ್’ ಬಗ್ಗೆ ಎಚ್ಚರಕೊಟ್ಟರು. ಆದರೆ ಎರಡು ತಾಸು ಮಂತ್ರಮುಗ್ಧರಾಗಿ ವೀಕ್ಷಿಸಿದ ಜನರಿಗೆ ಅದು ಹಾಗೆ ”ಮಂದಗಮನೆ’ ಅನಿಸಲಿಲ್ಲ ಎಂದು ಪ್ರದರ್ಶನ ಮುಗಿದ ಮೇಲೆ ನಿರ್ದೇಶಕರೊಂದಿಗಾದ ಸಂವಾದದಲ್ಲಿ ಸ್ಪಷ್ಟವಾಗಿತ್ತು. Gripping, riveting, wonderful — ಇಂಥ ಪ್ರಶಂಸೆಯ ಸುರಿಮಳೆಗಳೇ ಕೇಳಿಬಂದವು. ಕಥೆ ಭಾರತದ ಸ್ವಾತಂತ್ರ್ಯದ ನಂತರದ ಮತ್ತು ನೆಹರು ಅವರ ಅವಸಾನದ ಮಧ್ಯದ ಕಾಲದ್ದು. ಕಟ್ಟಾ ದೇಶಪ್ರೇಮಿಯಾದ ಉತ್ತರ ಕರ್ನಾಟಕದ ಜಮೀನುದಾರ ಅಪ್ಪಾಸಾಹೇಬನ ಒಬ್ಬ ದತ್ತು ಪುತ್ರ ತಂದೆ ’ಇಟ್ಟುಕೊಂಡ’ವಳ ಮಗಳನ್ನು ಪ್ರೀತಿಸಿ ಮದುವೆಯಾಗುವ ಹಟ ಹಿಡಿದಾಗ ಉಂಟಾಗುವ ಕಾಯಿದೆಯಿಂದಾಗುವ ಸಮಸ್ಯೆಗಳು, ದೇಶಭಕ್ತನ ಪುರೋಗಾಮಿ ವಿಚಾರಗಳಿಂದಾಗುವ ತೊಡಕುಗಳು, ಇವೆಲ್ಲಕ್ಕೆ ಪರಿಹಾರ ಹುಡುಕುತ್ತ ಭವ್ಯವಾದ ದೇಸಗತ್ತಿ ವಾಡೆಯಿಂದ ಈ ಮೊದಲೇ ’ಹೊರಬಂದು’ ಧುರೀಣತ್ವ ವಹಿಸಿದ ”ತಾಯಿ ಸಾಹೇಬ” ಪೋಲೀಸರನ್ನು ಎದುರಿಸಲು ನಿಂತಲ್ಲಿಗೆ ಸಿನಿಮಾ ಮುಕ್ತಾಯವಾಗುತ್ತದೆ. ಎಂದಿನಂತೆ ಮೂಲ ಕಥೆಗಿಂತ ಭಿನ್ನ ಎಂಡಿಂಗ್. ಸಿ ಎನ್ ರಾಮಚಂದ್ರನ್ ಹೇಳುವಂತೆ ಗಿರೀಶ ಅವರದು ”ಚಿತ್ರ ಮೂಲದ ದೃಶ್ಯಾನುವಾದವಲ್ಲ, ದೃಶ್ಯ ಮಾಧ್ಯಮದಲ್ಲಿ ಆಗಿರುವ ಅನುಸೃಷ್ಟಿ.” “I don’t make perfect pictures” ಎನ್ನುತ್ತಾರೆ ಅವರು ಒಂದು ಸಂದರ್ಶನದಲ್ಲಿ. ”ಸಾಹಿತ್ಯ ಕಥೆ-ಕಥಾನಕವನ್ನು ಅವಶ್ಯಕತೆಗೆ ತಕ್ಕಂತೆ ಅಳವಡಿಸಿಕೊಳ್ಳುವದು” ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಗಿರೀಶರ (hall mark) ಛಾಪು. “ಕಥೆಯೆಂದರೆ ಒಬ್ಬ ವ್ಯಕ್ತಿಯ ಕಥೆ, ಆ ವ್ಯಕ್ತಿ ಒಂದು ರೂಪಕವಾಗಿ, ಆ ವ್ಯಕ್ತಿಯ ಮೂಲಕ ಆ ಕಾಲದ ಕಥೆಯನ್ನು ಕಾಣಲು ಸ್ಸಧ್ಯವಾದರೆ ಅದು ಕಥಾನಕ.” (ಶರತ್ ಕಲ್ಕೋಡ್ ಅವರ ಪುಸ್ತಕ; ಕನ್ನಡ ಸಂಘ ಕಾಂತಾವರ, ಪು.30) ಅನ್ನುತ್ತಾರೆ ರೂಪಕಗಳಲ್ಲಿಯೇ ಸಿನಿಮಾಗಳನ್ನು ಹೆಣೆಯುವ ಗಿರೀಶ ಅವರು. ಅದು ’ತಾಯಿ ಸಾಹೇಬ’ಕ್ಕೂ ಅನ್ವಯಿಸುತ್ತದೆ. ತಾನು ಹೇಗೆ ಅಪ್ಪಾಸಾಹೇಬನ ವ್ಯಕ್ತಿತ್ವವನ್ನು ಹಲವು ಬಾರಿ ಜೇಲು ಕಂಡ ದೇಶಭಕ್ತ, ಮತ್ತು ಸ್ವಾತಂತ್ರ್ಯ ಚಳುವಳಿಗಾರ, ಪತ್ರಕರ್ತ ಮೊಹರೆ ಹಣುಮಂತರಾಯರನ್ನು ಆಧರಿಸಿ ಕಟ್ಟಿದೆ ಎಂದು ಸಂವಾದದಲ್ಲಿ ಅವರು ಹೇಳಿದ ನೆನಪು. ’ಅಗೋಸ್ತ 15, 1947ದಿನ (ಈ ಶಬ್ದ ಪ್ರಯೋಗದಲ್ಲಿ ಮರಾಠಿಯ ಪ್ರಭಾವ ಕಾಣುತ್ತದೆ) ಅಪ್ಪಾಸಾಹೇಬ ’ತಿರಂಗಾ ಪ್ಯಾರಾ ಝೇಂಡ” ಏರಿಸಿ ಸಿಹಿ ಹಂಚುವ ದೃಶ್ಯ ಮಾತ್ರ ಗಾಂಧಿವಾದಿಯಾಗಿದ್ದ ಅವರ ತಂದೆ ಗಣೇಶರಾಯರನ್ನು ನೆನಪಿಸಿ ಗಿರೀಶರು ಮಾಡಿದ್ದೆಂದು ದಾಖಲೆ. ಸಿನಿಮಾದ ಒಂದೊಂದು ದೃಶ್ಯವೂ ಚಿತ್ರಕಲಾಕೃತಿ ಅನ್ನುವಂತೆ ಕಣ್ಣಿಗೆ ಕಟ್ಟುವಂತೆ ತೋರಿಸುವದು ಗಿರೀಶರ ಜಾಣ್ಮೆ ಎಂದು ವಿಡಿಯೋ ಹವ್ಯಾಸಿಯಾದ ನನ್ನ ಅಭಿಪ್ರಾಯ. ಯು ಆರ್. ಅನಂತಮೂರ್ತಿಯವರು ಅವರನ್ನು ”ದೃಶ್ಯ-ರೂಪಕಗಳ ಮಾಂತ್ರಿಕ” ಅಂತ ವರ್ಣಿಸುದ್ದು ಸುಳ್ಳಲ್ಲ. 1997 ರಲ್ಲಿ ಇವರಿಗೆ ಈ ಚಿತ್ರದ ನಿರ್ದೇಶನಕ್ಕೆ ಸ್ವರ್ಣ ಕಮಲ ರಾಷ್ಟ್ರೀಯ ಪ್ರಶಸ್ತಿಯ ಜೊತೆಗೆ ತಾಯಿ ಸಾಹೇಬ ಚಿತ್ರಕ್ಕೆ ಇನ್ನು ಮೂರು ಪ್ರಶಸಿಗಳು ದೊರೆಕಿವೆ: ಶ್ರೇಷ್ಠ ನಟಿ (ಜಯಮಾಲ), ಶ್ರೇಷ್ಠ ಕಲಾ ನಿರ್ದೇಶಕ (ರಮೇಶ ದೇಸಾಯಿ) ಮತ್ತು ಶ್ರೇಷ್ಠ ವಸ್ತ್ರಾಭರಣ ವಿನ್ಯಾಸ (ವೈಶಾಲಿ ಕಾಸರವಳ್ಳಿ).
ಮೂಲತಃ ಉತ್ತರ ಕರ್ನಾಟಕದವರಾದ ವೈಶಾಲಿ ಅವರ ಆಸ್ಥೆ ಮತ್ತು ವಸ್ತ್ರಾಭರಣ ಜ್ಞಾನ ಚಿತ್ರದ ಪ್ರಾರಂಭದಲ್ಲಿ ತಾಯಿ ಸಾಹೇಬ ನರ್ಮದಾಬಾಯಿ ಜೇಲಿನಿಂದ ಬಿಡುಗಡೆಯಾದ ಅಪ್ಪಾಸಾಹೇಬರನ್ನು ಸ್ವಾಗತಿಸಲು ನತ್ತು, ತೋಡೆ, ವಂಕಿ, ಪಾಟ್ಲಿ, ಬಿಲ್ವಾರ, ಕಾಸಿನ ಸರ ನೆಕ್ಲೇಸು ಇತ್ಯಾದಿಗಳನ್ನು ಧರಿಸುವುದನ್ನು ಕಲಾತ್ಮಕವಾಗಿ ಚಿತ್ರಿಸಿದ ದೃಶ್ಯದಲ್ಲಿ ಮತ್ತು ಮಗನನ್ನು ದತ್ತು ಪಡೆಯುವಾಗಿನ ಪ್ರಸಂಗದಲ್ಲಿ ಕಾಣುತ್ತೇವೆ. ಚಿತ್ರ ಮುಗಿದ ನಂತರದ ಸಂವಾದದಲ್ಲಿ ಹೇಗೆ ಆಭರಣಗಳ ಅನ್ವೇಷಣೆಯಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಮುಂತಾದ ಊರುಗಳಿಗೆ ಹೋದ ವೈಶಾಲಿಯವರ ಬಗ್ಗೆ ಹೇಳಿದರು. ಜೋರಾಗಿ ಕೀರಲು ಶಬ್ದ ಮಾಡುತ್ತ ತೆಗೆಯುವ, ಮುಚ್ಚುವ ಭವ್ಯವಾದ ರಬಕವಿ ಪಕ್ಕದ ವಾಡೆಯ ಮರದ ದೊಡ್ಡ ಬಾಗಿಲುಗಳು ಹೇಗೆ ರೂಪಕವಾಗಿ ’ತಾಯಿ’ಯ ಮಾನಸಿಕ ಸ್ಥಿತಿಯ ಪ್ರತೀಕವಾಗುತ್ತದೆಯೆಂಬುದನ್ನು ನವಿರಾಗಿ ಬಿಡಿಸಿ ಹೇಳಿದರು. ಆಕೆ ಹೊರಬರುವವರೆಗೆ ಹೇಗೆ ಕ್ಯಾಮರಾದ ಕಣ್ಣು ವಾಡೆಯ ಒಳಗಷ್ಟೇ ಸುತ್ತುತ್ತಿರುತ್ತದೆ ಎಂದು ನೆನಪಿಸಿದರು. ನಮಗೆ ಇದರ ಅರಿವಾದದ್ದು ಹೀಗೆ ತಿಳಿಸಿ ಹೇಳಿದಾಗಲೇ!
ಹಸಿದು ಕುಳಿತಿದ್ದರೂ ಸಮಯದ ಅಭಾವದಿಂದ ನಮ್ಮ ತೃಷೆ ತಣಿಯುವ ಮೊದಲೇ ಸಂವಾದ ಮುಕ್ತಾಯವಾದರೂ ಆ ದಿನದ ಅನುಭವ ಮತ್ತು ಯೋಗಾ ಯೋಗದಿಂದ ಆದ ಎರಡು ದಿನಗಳು ಗಿರೀಶ್ ಕಾಸರವಳ್ಳಿಯವರ ಸಂಪರ್ಕದ ಸವಿ ನೆನಪು ನನ್ನ ಮನಃಪಟಲದಲ್ಲಿ ಚಿರವಾಗಿ ಉಳಿಯುತ್ತದೆ ಎನ್ನುವದರಲ್ಲಿ ಸಂದೇಹವಿಲ್ಲ. ಇಂಥ ನಿರ್ದೇಶಕನನ್ನು ಪಡೆದ ಕನ್ನಡ ಕಲಾತ್ಮಕ ಚಿತ್ರರಂಗದ ಭಾಗ್ಯವನ್ನು ಮೆಲಕು ಹಾಕುತ್ತಾ ಸುಮನಾ ಗಿರೀಶರ ಮನೆಗೆ ಮತ್ತೆ ”ಕಾಫಿ ವಿತ್ ಕಾಸರವಳ್ಳಿ’ಗೆ ಹೊರಟೆ
____________________________________________________________________________________________
ಕಣ್ಣೋಟದ ಮೊದಲ ವಾರದ ಚಿತ್ರಗಳು, ಟೆಲ್ಫರ್ಡ್ ವಾಸಿ, ಸರ್ಜನ್ ಜಯಪ್ರಕಾಶ್ ಪತ್ತಾರ, ಚೈತ್ರದ ಹೂಗಳ ಅಂದವನ್ನ ಅವರ ಕ್ಯಾಮೆರಾ ಕಣ್ಣಿಂದ ಕಂಡ ಚಿತ್ರಗಳು. ನಮ್ಮ ಕರೆಗೆ ಸ್ಪಂದಿಸಿ, ಚಿತ್ರಗಳನ್ನು ಹಂಚಿಕೊಂಡ ಪತ್ತಾರರಿಗೆ ಶರಣು. ಚಿತ್ರಗಳ ಜೊತೆಗೆ ಅವರು ಕಳಿಸಿದ್ದು:
“ಅಗೋಚರವಾದ ಭೂಮಿಯಲ್ಲಿನ ಸಾರ ಸತ್ವಗಳು ವಸಂತನ ಆಗಮನದಿಂದ ಬಗೆಬಗೆಯ ವರ್ಣ ಹಾಗು ಆಕಾರದ ಪುಷ್ಪಗಳಲ್ಲಿ ಗೋಚರಿಸಿ “ಸತ್ಯಂ ಶಿವಂ ಸುಂದರಂ” ಎಂದುಸಿರುತ್ತವೆ. ಬದಲಾಗುವ ಋತುಗಳು ಪುನರಾವರ್ತನೆಯಾಗದಂಥಹ ನಮ್ಮ ಜೀವನದ ಘಟ್ಟಗಳನ್ನು ನೆನಪಿಸಿ, ಅಣುಕಿಸಿ ಹೋದಂತೆನಿಸುತ್ತದೆ. ಈ ಋತುಮಾನಗಳನ್ನು ಚಿತ್ರಗಳಲ್ಲಿ ಸೆರೆಹಿಡಿದು ಆನಂದಿಸುವ ನನ್ನ ಹವ್ಯಾಸ ತಿಳಿದ ಮುರಳಿ ಹತ್ವಾರ್, ವಸಂತ ಋತುವಿನ ಚಿತ್ರಗಳು ಮತ್ತು ಹವ್ಯಾಸಿ ಛಾಯಾಗ್ರಾಹಕರಿಗೆ ಅವುಗಳ ಅಳವಡಿಕೆಗಳ ವಿವರ ನೀಡಲು ಕೇಳಿದಾಗ ಈ ಕೆಲ ಚಿತ್ರಗಳನ್ನಾಯ್ದುಕೊಂಡಿದ್ದೇನೆ”