ಕತೆಯಾಯಿತು  ಮರ

  • ಯೋಗೀಂದ್ರ ಮರವಂತೆ

ನೂರ್ಕಾಲ ಬದುಕಿದರೆ ಮಾನವರಿಗೊಂದು ವಿಶೇಷ ಸಾಧನೆ. ಕೇವಲ ಆಯಸ್ಸು ವಿಶೇಷತೆಯ ಮಾನದಂಡವಾಗದು. ಸ್ಥಳದ ನಾವಿನ್ಯತೆ, ಜನಪ್ರಿಯತೆ ಅಲ್ಲಿನ ವೈಶಿಷ್ಟ್ಯವನ್ನು ಅವಲಂಬಿಸಿರುತ್ತದೆ. ಇಂಗ್ಲೆಂಡ್, ಸ್ಕಾಟ್ಲೆಂಡಿನ ಗಡಿಯುದ್ದಕ್ಕೂ ರೋಮನ್ನರು ಕಟ್ಟಿದ ಹೆಡ್ರಿಯನ್ ಗೋಡೆ (ಪಾಗಾರ) ಐತಿಹಾಸಿಕ ಕುರುಹು. ಆ ಪಾಗಾರ ಮುರಿದು ಬಿದ್ದ, ಎರಡು ಗುಡ್ಡಗಳ ನಡುವೇ ಬಳುಕುವ ಸೊಂಟದಂದದ ಜಾಗೆಯಲ್ಲಿ ಸುಮಾರು ನೂರೈವತ್ತು ವರ್ಷಗಳಿಂದ ಸ್ವತಂತ್ರವಾಗಿ ಹರಡಿ ಸೊಂಪಾಗಿ ಬೆಳೆದಿದ್ದ ಚೆಲುವೆ ಸಿಕಮೋರ್ ಗ್ಯಾಪ್ ಮರ. ಸಿಕಮೋರ್ ಮರಗಳು ಸರಿ ಸುಮಾರು ೩ ೦ ೦ -೪ ೦ ೦ ವರ್ಷಗಳ ಕಾಲ ಬಾಳ ಬಲ್ಲವು. ಮರಗಳ ಜಗತ್ತಿನಲ್ಲಿ ೩ ಶತಮಾನಗಳ ಬಾಳ್ವೆ ಏನೇನೂ ಅಲ್ಲ. ಸಹಸ್ರಾರು ವರ್ಷಗಳ ಕಾಲ ಬದುಕಿ ಮನುಕುಲದ ಉನ್ನತಿ ಅವನತಿಯ ಹಾದಿಯನ್ನೆಲ್ಲ ಅವಲೋಕಿಸುವ ಮರಗಳು ಜಗತ್ತಿನ ತುಂಬೆಲ್ಲ ಕಾಣ ಸಿಗುತ್ತವೆ. ಇಂದಿನ ಲೇಖನ ನೀವು ಊಹಿಸಿದಂತೆ ನಾರ್ಥಂಬಲ್ಯಾನ್ಡ್ ನ ಪ್ರಸಿದ್ಧ ಸಿಕಮೋರ್ ಗ್ಯಾಪ್ ಮರದ ಕಥೆ. ಯೋಗೀಂದ್ರ ಅವರ ಬರಹದಲ್ಲಿ ಹಿಂದೆ ನಾವು ಕಂಡಂತೆ ಅಮೂರ್ತವನ್ನು ಮೂರ್ತವಾಗಿಸುವ, ನಿರ್ಜಿವವನ್ನು ಸಜೀವಗೊಳಿಸುವ ವೈಶಿಷ್ಟ್ಯತೆ ಇದೆ. ಅದೇ ಹೊಳಹಿನಲ್ಲಿ ಮರವನ್ನು ಅವರು ಮಾನವ ರೂಪದಲ್ಲಿ ನಮ್ಮ ಮುಂದೆ ಪ್ರಸ್ತುತಿಸಿದ್ದಾರೆ. ಈ ಲೇಖನವನ್ನು ಓದುವಾಗ ಕರುಣೆ, ಜಿಗುಪ್ಸೆ, ಕ್ರೌರ್ಯ, ಮತ್ಸರ, ಕುಹಕತೆ, ಇನ್ನಿತರ ಭಾವಗಳು ನಿಮ್ಮಲ್ಲಿ ಹೊಮ್ಮುವುದು ಖಚಿತ. ಕೊನೆಯಲ್ಲಿ ಮಾನವನ ಕ್ರೌರ್ಯಕ್ಕೆ ಸರಿ ಸಮನಾಗಿ ಪ್ರಕೃತಿ ಹಾಗೂ ಮಾನವನ ಧನ್ವಂತರಿ ಸ್ಪರ್ಶದ ಪರಿಣಾಮವನ್ನೂ ಕಾಣಬಹುದು.

-ಸಂಪಾದಕ

ಸಿಕಾಮೋರ್ ಗ್ಯಾಪ್ ಮರ ತನ್ನ ಉಚ್ಛ್ಛ್ರಾವಸ್ಥೆಯಲ್ಲಿ (ಚಿತ್ರ ಕೃಪೆ : ಅಂತರ್ಜಾಲ)

ಈಗಷ್ಟೇ ಕಳೆದ,  ಮೇ ತಿಂಗಳ ಒಂಬತ್ತನೆಯ ತಾರೀಕಿನಂದು  ಜಗತ್ತಿನ ಯಾವ ಯಾವ ನ್ಯಾಯಾಲಯದಲ್ಲಿ ಎಷ್ಟೆಷ್ಟು  ವಾದ ಪ್ರತಿವಾದ ನಡೆಯಿತೋ  ಗೊತ್ತಿಲ್ಲ, ಯಾರು ಕೊಲೆಗಾರ ಅಲ್ಲದಿದ್ದರೆ  ವಂಚಕ ಎಂದು ಸಾಬೀತಾಯಿತೋ ತಿಳಿದಿಲ್ಲ . ಎಷ್ಟು ಆಪಾದಿತರಿಗೆ ಶಿಕ್ಷೆಯ  ಘೋಷಣೆ , ಇನ್ನೆಷ್ಟು ನಿರಪರಾಧಿಗಳ ಖುಲಾಸೆ ಎಂದು ಹೇಳುವುದು ಅಸಾಧ್ಯ.
ಆದರೆ ಇಂಗ್ಲೆಂಡ್ ನ ಉತ್ತರ ಗಡಿಯ ನ್ಯೂ ಕಾಸಲ್ ಕ್ರೌನ್  ಕೋರ್ಟಿನ  ನ್ಯಾಯಾಧೀಶರು ಆ ದಿನದ  ಅತ್ಯಂತ ವಿಶಿಷ್ಟ ತೀರ್ಪೊಂದನ್ನು ನೀಡಿದ್ದರು. ಆ ತೀರ್ಪು , ಆ ದಿನದ ಮಾತ್ರವಲ್ಲ ,  ಇಡೀ ವರ್ಷದ, ದಶಕದ, ಶತಮಾನದ,  ಅಲ್ಲದಿದ್ದರೆ ಯಾವ ನ್ಯಾಯ ವ್ಯವಸ್ಥೆಯೂ ಎಂದೂ ಉಚ್ಛರಿಸಿರಲಾರದ  ಅಪೂರ್ವ ತೀರ್ಪೂ  ಆಗಿದ್ದಿರಬೇಕು. ಅಂದು ಕಟಕಟೆಯಲ್ಲಿ ನಿಂತಿದ್ದ ಇಂಗ್ಲೆಂಡ್ ನ ಉತ್ತರ-ಪಶ್ಚಿಮ (ವಾಯುವ್ಯ) ಪ್ರಾಂತ್ಯದ ಇಬ್ಬರು ಸಾಮಾನ್ಯ ವ್ಯಕ್ತಿಗಳ ಕಿಡಿಗೇಡಿತನ ಸಾಬೀತಾಗಿತ್ತು.  ಅವರೇ  ಅಪರಾಧಿಗಳು ಎಂದು ತೀರ್ಪು ಹೊರಬಿದ್ದಿತ್ತು ,  ಅಪರಾಧಕ್ಕೆ ತಕ್ಕುದಾದ ಶಿಕ್ಷೆ ಮುಂದಿನ ತಿಂಗಳು ಜುಲೈಯಲ್ಲಿ ನಿರ್ಧಾರವಾಗಲಿದೆ  ಎಂದೂ ತಿಳಿಸಲಾಗಿತ್ತು.

ಆರೋಪಿಗಳಿಗೆ ಶಿಕ್ಷೆ ಆಗುವುದೇನೂ ಹೊಸತಲ್ಲ ಬಿಡಿ.  ಅಂದು ಆರೋಪಿಯಿಂದ ಅಪರಾಧಿಗಳಾಗಿ ಬದಲಾದವರು ವಾಯುವ್ಯ ಇಂಗ್ಲೆಂಡ್ ನ ಕಂಬ್ರಿಯ  ಅಥವಾ ಅದೇ ಪ್ರಾಂತ್ಯದ ವಿಶ್ವವಿಖ್ಯಾತ ಹೆಸರಾದ  ಲೇಕ್ ಡಿಸ್ಟ್ರಿಕ್ಟ್ ಪ್ರದೇಶದ  ವಾಸಿಗಳು . ಅವರೊಂದು   ಕುಚೋದ್ಯವನ್ನು ಮಾಡಿದ್ದರು. ಸುಮಾರು ಎರಡು ವರ್ಷಗಳ ಹಿಂದಿನ ನಡುರಾತ್ರಿಗೆ, ತುಸು ದೂರ  ಕಾರು ಓಡಿಸಿಕೊಂಡು ಹೋಗಿ  ಆಮೇಲೆ ಇಪ್ಪತ್ತು ನಿಮಿಷ ನಡೆದು  ಗರಗಸ ಹಿಡಿದು ನಾರ್ಥಂಬರಲ್ಯಾಂಡ್ ಎನ್ನುವ ಪ್ರದೇಶಕ್ಕೆ ಬಂದಿದ್ದರು. ಜೋರು ಗಾಳಿ ಬೀಸುವ ತಣ್ಣಗಿನ ಹವೆಯ ಆ ರಾತ್ರಿ  ಅಲ್ಲಿದ್ದ ಒಂದು ಪುರಾತನ ವೃಕ್ಷವನ್ನು ವಿನಾಕಾರಣ ಕಡಿದಿದ್ದರು. ಸಕಾರಣವಾಗಿಯಾದರೂ ಒಂದು ಮರವನ್ನು ಕಡಿಯಬಹುದೇ ಎನ್ನುವುದೇ ಒಂದು ದೊಡ್ಡ ಜಿಜ್ಞಾಸೆ. ಮರಗಳಿಗೆ ವಿವೇಚನೆ ಇದ್ದರೆ , ಅದಕ್ಕೆ ತಕ್ಕುದಾಗಿ ಮಾತೂ  ಬಂದಿದ್ದರೆ ಅವುಗಳ ಅಭಿಪ್ರಾಯ  ಏನಿರುತ್ತಿತ್ತೋ? ಒಬ್ಬ ವ್ಯಕ್ತಿಯನ್ನು ಕೊಲ್ಲಬಹುದೇ  ಎನ್ನುವ ಪ್ರಶ್ನೆಗೆ ಮನುಷ್ಯರು ನೀಡಬಹುದಾದ  ಉತ್ತರಕ್ಕಿಂತ ಮರಗಳು  ನೀಡುವ ಉತ್ತರ ಬಹಳ ಭಿನ್ನ ಇರಲಿಕ್ಕಿಲ್ಲ. ಹಾಗಂತ  ಭೂಮಿ ಆಕಾಶಗಳ ಪ್ರತಿ ಅಂಗುಲಕ್ಕೂ  ಅನಭಿಷಕ್ತ ದೊರೆಯಂತೆ ವರ್ತಿಸುವ ಮನುಷ್ಯರಿಗೆ ಮರಗಳನ್ನು ಕಡಿಯಬಹುದೇ ಎನ್ನುವ ಪ್ರಶ್ನೆಯೇ  ಅಪ್ರಸ್ತುತ ವಿಲಕ್ಷಣ ವಿನೋದವಾಗಿ ಕಂಡೀತು.

ಇರಲಿ, ಅಂತೂ ಆ ಇಬ್ಬರು ಜೊತೆಯಾಗಿ ಎಲ್ಲ ಅರ್ಥ ಜಿಜ್ಞಾಸೆಗಳನ್ನು ಮೀರಿ ಮರವೊಂದನ್ನು ಕಡಿದಿದ್ದರು. ಹಾಗೆ ತಾವು ಕಡಿದು ಒರಗಿಸಿದ ಮರದ ದಿಮ್ಮಿ ,ತೊಗಟೆ, ಎಲೆ, ಟೊಂಗೆ, ಟಿಸಿಲು, ಬೇರು ನಾರು ಯಾವುದೂ ಆ ಮರಕಟುಕರಿಗೆ ಬೇಕಿರಲಿಲ್ಲ. ಕಟ್ಟಿಗೆಗಾಗಿ ಮಾರಿ ಹಣ ಮಾಡುವ ಉದ್ದೇಶವೂ  ಅವರದಾಗಿರಲಿಲ್ಲ. ಯಾರೋ ನೆಟ್ಟ, ಯಾರದೋ ಇಚ್ಛೆಯಿಂದಾಗಿ ಆ ಸ್ಥಳದಲ್ಲಿ ಬೆಳೆದ, ನಿತ್ಯ ಜೀವನ್ಮುಖಿ  ಪ್ರಕೃತಿಗೆ ಆ ಪ್ರದೇಶದಲ್ಲೊಂದು ಹೊಸ ಆಯಾಮ ನೀಡಿದ, ಭೂಮಿ ಬಾನು ,ನಾಡು ಕಾಡು, ಹುಲ್ಲು ಹಸಿರು, ಕಲ್ಲು ಮಣ್ಣುಗಳು ಒಂದಾಗಿ ನಲಿಯುವ, ಬೆಟ್ಟ ಕಣಿವೆಗಳು ಒಂದಾಗಿ ಕುಣಿಯುವ  ಜಾಗದಲ್ಲಿ  ಬಲಿತ, ಯಾರಿಗೆ ಯಾವ ತೊಂದರೆಯನ್ನೂ ಕೊಡದ, ಸಾಧ್ಯ ಆದರೆ ತಂಪು ನೆರಳು ಶುದ್ಧ ಗಾಳಿ ಮತ್ತೆ ನಯನ ಮನೋಹರ ದೃಶ್ಯವನ್ನು ಸಹಜವಾಗಿ ಬಿಡಿಸುತ್ತ  ಅಸಂಖ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತ ಪ್ರಸಿದ್ಧವಾಗಿದ್ದ ಮರವೊಂದು  ಅಚಾನಕ್ ಇಲ್ಲದಿದ್ದರೆ ಜಗತ್ತು ಹೇಗೆ ಪ್ರತಿಕ್ರಿಯಿಸಬಹುದು  ಎಂದು ಆ ಇಬ್ಬರಿಗೆ ನೋಡಬೇಕಿತ್ತು. ಅಷ್ಟೇ. ಬರೇ ಅಷ್ಟೇ. ಒಂದು ಮರವನ್ನು ಕಡಿಯಲು ಅವರಿಗಿದ್ದದ್ದು ಅದೊಂದೇ  ಕ್ಷುಲ್ಲಕ ಕಾರಣ-ಪ್ರೇರಣೆ. ಕಾಲ, ಭೂಮಿ, ಜೀವಿ, ಜೀವನ  ಸಂದರ್ಭ ಎಲ್ಲವನ್ನು  ಒಂದು ಕ್ಷಣಕ್ಕಾದರೂ ಅಪಹಾಸ್ಯ ಮಾಡಲು ಅವರು ಕಂಡುಕೊಂಡ ದಾರಿ, ಪುರಾತನ ಚಾರಿತ್ರಿಕ ಸಿಕಮೋರ್ ಮರವನ್ನು ಕಡಿಯುವುದು. ಮತ್ತೆ  ಆ ಮರದ ಬಗ್ಗೆ ಕೇಳಿದವರ, ನೋಡಿದವರ, ಫೋಟೋ ತೆಗೆದವರ, ನೆರಳಲ್ಲಿ ಒಂದು ಘಳಿಗೆ ಕುಳಿತವರ, ತಮ್ಮ ಮೃತ ಆಪ್ತರ ಬೂದಿಯನ್ನು ಮರದ ಆಸುಪಾಸಲ್ಲಿ ಚೆಲ್ಲಿ ಆರ್ದ್ರರಾದವರ ಅಸಹಾಯಕತನ ಸಂಕಟವನನ್ನು ನೆನೆದು ಖುಷಿ ಪಡುವುದಿತ್ತು.  ಒಟ್ಟಾರೆ ಆ  ಮರಕಟುಕರಿಂದ ,
ಸುಮಾರು ೧೫೦ ವರ್ಷಗಳ ಹಿಂದೆ ನೆಡಲ್ಪಟ್ಟ ಸಸಿ ಮರ ಹೆಮ್ಮರವಾಗಿ ಬೆಳೆದು ಜಗತ್ತಿನ ಮೂಲೆಮೂಲೆಯ  ಪ್ರವಾಸಿಗಳಿಗೆ ಪರಿಸರ ಪ್ರೇಮಿಗಳಿಗೆ, ಸಿನೆಮಾ ನಿರ್ದೇಶಕರಿಗೆ, ಇವರ್ಯಾರೂ ಅಲ್ಲದ ಜನಸಾಮಾನ್ಯರಿಗೆ,  ಅಷ್ಟೇ ಏಕೆ ಇಡೀ ಈಶಾನ್ಯ ಇಂಗ್ಲೆಂಡಿಗೆ
ಹೆಗ್ಗುರುತೇ  ಆಗಿದ್ದ “ಸಿಕಮೋರ ಗ್ಯಾಪ್ ಮರ ” ಅಂದು ಕಡಿಯಲ್ಪಟ್ಟು ನೆಲದ ಮೇಲೆ ಧೊಫ್ ಎಂದು ಬಿದ್ದಿತ್ತು. ಕಡಿಯಲ್ಪಟ್ಟ ನಡುರಾತ್ರಿಯಿಂದ ಬೆಳಗಿನ ತನಕವೂ ಆ ಮರವನ್ನು ತಿಳಿದವರು ಎಲ್ಲೆಲ್ಲಿ ಹೇಗೇಗೆ ಇದ್ದರೂ ಅವರಿಗೆಲ್ಲ ತಮ್ಮ ಜಗತ್ತು ಏನೂ ಬದಲಾಗದೆ ನಿನ್ನೆಯಂತೆಯೇ ಇದೆ ಎನ್ನುವ ಭ್ರಮೆಯೇ  ಮುಂದುವರಿದಿತ್ತು.  ಹಾಗಂತ ಬೆಳಗಾಗುತ್ತಲೇ, ಒಂದು ಕೆಟ್ಟ ಹಾಸ್ಯಕ್ಕಾಗಿ ಮಾಡಿದ ಕೃತ್ಯ ನೂರೈವತ್ತು  ವರ್ಷಗಳ ಇತಿಹಾಸದ ಹಾದಿ ಬದಲಿಸಿತ್ತು. ೨೦೨೩ರ ಸೆಪ್ಟೆಂಬರ್ ೨೮ ರ ಬೆಳಿಗ್ಗೆ ಆ ಮರವನ್ನು ನೋಡಿ, ಕೇಳಿ, ತಿಳಿದಿದ್ದ ಎಲ್ಲರಿಗೂ ಆಘಾತ, ದುಗುಡ, ಹತಾಶೆ ಕಾದಿತ್ತು.

ನಿತ್ಯವೂ ಜಗತ್ತಿನ ಮೂಲೆಮೂಲೆಗಳಲ್ಲಿ  ಮರಗಳು ಉರುಳುವುದು, ಗಿಡಗಳನ್ನು ಸವರುವುದು, ಕಟ್ಟಡವನ್ನು ಎಬ್ಬಿಸುವುದು, ರಸ್ತೆಯನ್ನು ಹಾಸುವುದು ಅಭಿವೃದ್ಧಿಯ ಸಂಕೇತವಾಗಿರುವಾಗ ಈಶಾನ್ಯ ಇಂಗ್ಲೆಂಡಿನ ಸಣ್ಣ ಊರಿನ ಹಳೆಯ ಮರವನ್ನು ಉರುಳಿಸಿದವರು ಯಾಕೆ
ಬಂಧನಕ್ಕೊಳಗಾದರು?  ಬಂಧಿಸಲ್ಪಟ್ಟವರನ್ನು ನ್ಯಾಯಾಲಯ ಏಕೆ  ಅಪರಾಧಿ ಎಂದು ತೀರ್ಮಾನಿಸಿತು? ಮನುಷ್ಯರಿಗೆ ಹೀಗೊಂದು ಪ್ರಶ್ನೆ ಬರುವ ಸಾಧ್ಯತೆ ಇದೆಯೋ ಇಲ್ಲವೋ ಗೊತ್ತಿಲ್ಲ ನಿತ್ಯವೂ ಕಡಿಯಲ್ಪಡುವ ಅಷ್ಟೇನೂ ಪ್ರಸಿದ್ಧವಲ್ಲದ ಅತಿ ಸಾಮಾನ್ಯ ಮರಗಳ
ಸಂತತಿಗಾದರೂ ಹೀಗೊಂದು ಸಂದೇಹ ಕಾಡೀತು.

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ , ಇಂತಹದ್ದೆಂದು ದಾಖಲಾಗದ ದಿನದಂದು ವಕೀಲ, ಅನ್ವೇಷಕ ಮತ್ತೆ ಸದ್ರಿ ಸ್ಥಳದ ಅಂದಿನ ಮಾಲೀಕ ಜಾನ್ ಕ್ಲೇಟನ್ ಅಲ್ಲಿನ ಸುಂದರ ಪರಿಸರಕ್ಕೆ ಪೂರಕವಾಗಲಿ ಎಂದು  ಈ ಆ ಸಿಕಮೊರ್ ಸಸಿಯನ್ನು  ನೆಟ್ಟಿದ್ದ, ಇತಿಹಾಸ
ಪ್ರಸಿದ್ಧ ಹ್ಯಾಡ್ರಿಯನ್ ಗೋಡೆಯ ಪಕ್ಕದಲ್ಲಿ.   ರೋಮನ್ನರು ಇಂಗ್ಲೆಂಡಗೆ ಕಾಲಿಟ್ಟ ಆರಂಭಿಕ ಕಾಲವಾದ  ಒಂದನೆಯ ಶತಮಾನದಷ್ಟು ಹಿಂದೆಯೇ ೧೩೫ ಕಿಲೋಮೀಟರು ಉದ್ದದ ಆ ಗೋಡೆ  ಕಟ್ಟಲ್ಪಟ್ಟಿತ್ತು. ಆಧುನಿಕ ಕಾಲದಲ್ಲಿ  ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡಗಳ
ಗಡಿಯಂತೆಯೂ ಕಾಣುವ ಹ್ಯಾಡ್ರಿಯನ್ ಗೋಡೆಯ ಉತ್ಖತನದಲ್ಲಿ  ಜಾನ್ ಕ್ಲೇಟನ್ ಐವತ್ತು ವರ್ಷ ತೊಡಗಿಸಿಕೊಂಡವನು. ಅನಾದಿ ಕಾಲದ ಗೋಡೆಯ ಸುದೀರ್ಘ ಭವಿಷ್ಯದ ಬಗ್ಗೆ ಕಾಳಜಿ ಇದ್ದವನು. ಆ ಗೋಡೆಯ ಕಲ್ಲುಗಳನ್ನು ಅವರಿವರು ಒಂದೊಂದೇ ಜಾರಿಸಿ ಕೊಂಡುಹೋಗಿ
ಮುಂದೊಂದೊಂದು ದಿನ ಗೋಡೆಯೇ ನಶಿಸಿ ಹೋಗುವ ಬಗ್ಗೆ ಅವನಿಗೆ ಆತಂಕ ಇತ್ತು. ಶ್ರೀಮಂತ ಹಿನ್ನೆಲೆಯ ಆತ  ಕೆಲವು ಕೋಟೆಗಳ ಜೊತೆಗೆ ಹ್ಯಾಡ್ರಿಯನ್  ಗೋಡೆಯ ಇಪ್ಪತ್ತು ಮೈಲಿ ಉದ್ದದ ಭಾಗದ ವಾರೀಸುದಾರನೂ ಆಗಿದ್ದ. ಸಹಜವಾಗಿ ಗುಡ್ಡ ಕಣಿವೆಗಳು ಹತ್ತಿಳಿಯುವ ಆ  ಗೋಡೆಯ ಒಂದು ನೈಸರ್ಗಿಕ ತಗ್ಗಿನಲ್ಲಿ ಸಿಕಮೊರ್  ಸಸಿಯನ್ನು ನೆಟ್ಟಿದ್ದ.  ಸಸಿ ಬೆಳೆದದ್ದು, ಬಲವಾದದ್ದು, ಜಗತ್ತಿನ ದಿಕ್ಕುದೆಸೆಯ ಪ್ರವಾಸಿಗಳಿಗೆ ಆಗಂತುಕರಿಗೆ, ಅಭ್ಯಾಗತರಿಗೆ ನಿರ್ಮಲ ಘಳಿಗೆಯನ್ನು ಹಂಚಿದ್ದು,  ಮತ್ತೆ ಎರಡು ವರ್ಷಗಳ ಹಿಂದೆ ಇಬ್ಬರ ಗರಗಸಕ್ಕೆ ಬಲಿಯಾಗಿ ಹ್ಯಾಡ್ರಿಯನ್ ಗೋಡೆಯ ಮೇಲೆಯೇ  ಉರುಳಿ ಬಿದ್ದದ್ದು  ಎಲ್ಲವೂ ಮರವೊಂದರ ದೀರ್ಘ ಇತಿಹಾಸದ ಅನಿರೀಕ್ಷಿತ ಇತ್ತೀಚಿನ ಮುಂದುವರಿಕೆ.

ಉರುಳಿ ಬಿದ್ದ ಮರದ ಭವಿಷ್ಯವನ್ನು ಸಜ್ಜುಗೊಳಿಸುವ ಕಾರ್ಯ

೨೦೨೩ರ ೨೮ ಸೆಪ್ಟೆಂಬರ್ ಬೆಳಿಗ್ಗೆ, ಬಿದ್ದಿದ್ದ ಮರವನ್ನು ನೋಡಿದ ಸ್ಥಳೀಯರು ಆರಕ್ಷಕರಿಗೆ  ದೂರು ಕೊಟ್ಟಿದ್ದರು. ಸಣ್ಣ ಸಣ್ಣ ಇತಿಹಾಸ ಕತೆ ದಂತಕಥೆಗಳನ್ನೂ ಗೌರವಯುತವಾಗಿ ಸ್ಮರಿಸುವ, ಆರೈಕೆ ಮಾಡಿ ಕಾಯ್ದಿಟ್ಟು ಮತ್ತೆ ಪ್ರವಾಸಿಗರಿಗೂ ಆಸ್ಥೆಯಿಂದ ತೋರಿಸಿ ಹೆಮ್ಮೆ ಪಡುವ  ಸಂಸ್ಕೃತಿಯ ಇಂಗ್ಲೆಂಡನಲ್ಲಿ ಜಗತ್ಪ್ರಸಿದ್ಧ ಮರ ಉರುಳಿದ್ದು “ಹೈ ಪ್ರೊಫೈಲ್ ಕೇಸ್” ಆಗಿತ್ತು; ಮತ್ತೆ ಅಪರೂಪದ್ದೂ.  ತನಿಖೆಯಲ್ಲಿ
ಭಾಗವಹಿಸಿದ ವಿಧಿವಿಜ್ಞಾನ ತಂಡದ ಅಧಿಕಾರಿ ಹೇಳುವಂತೆ “ನನ್ನ ಮೂವತ್ತೊಂದು ವರ್ಷದ ಸೇವೆಯಲ್ಲಿ ಅಪರಾಧದ ಕುರುಹಿಗಾಗಿ ಮರವೊಂದರ ಪರೀಕ್ಷೆಯನ್ನು ಹಿಂದೆಂದೂ ಮಾಡಿದ್ದಿಲ್ಲ”. ತನಿಖೆ ಮುಂದುವರಿದು , ಸುಳಿವು ಸಿಕ್ಕಿ ೨೦೨೪ರ ಏಪ್ರಿಲ್ ಅಲ್ಲಿ
ಡೇನಿಯಲ್ ಮತ್ತು ಆಡಮ್ ಎನ್ನುವ ಕಂಬ್ರಿಯದ  ವಾಸಿಗಳನ್ನು   ಐತಿಹಾಸಿಕ ಮರವನ್ನು ಕಡಿದ, ಮರವನ್ನು ಬೀಳಿಸಿ ಚಾರಿತ್ರಿಕ  ಹ್ಯಾಡ್ರಿಯನ್  ಕಲ್ಲುಗೋಡೆಗೆ ಹಾನಿ ಮಾಡಿದ ಕ್ರಿಮಿನಲ್ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಕೋರ್ಟಿನಲ್ಲಿ  ವಾದ-ಪ್ರತಿವಾದಗಳು ಜರುಗಿ ಅವರ ಅಪರಾಧ ಸಾಬೀತಾದದ್ದು ಮೊನ್ನೆಮೊನ್ನೆಯ ಅಂದರೆ ಇದೇ ವರ್ಷದ ಮೇ ತಿಂಗಳಿನಲ್ಲಿ. ವಿಚಾರಣೆಯ ಉದ್ದಕ್ಕೂ ಅಪರಾಧವನ್ನು ಅಲ್ಲಗಳೆಯುತ್ತಿದ್ದ, ಒಬ್ಬರು ಇನ್ನೊಬ್ಬರನ್ನು ದೂಷಿಸುತ್ತಿದ್ದ , ೩೯ ಹಾಗು ೩೨ ವರ್ಷದ ಅಪರಾಧಿ ಜೋಡಿ, ಮರ ಬೀಳುವ  ಸಂದರ್ಭವನ್ನು ತಮ್ಮ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಬಿದ್ದ
ಮರದ ಗೆಲ್ಲೊಂದನ್ನು ಪದಕದಂತೆ ತಮ್ಮೊಡನೆ ಒಯ್ದಿದ್ದರು. ೧೯೯೧ರಲ್ಲಿ ನಿರ್ಮಾಣಗೊಂಡ ರಾಬಿನ್ ಹುಡ್ ಸಿನೆಮಾದ ಒಂದು ಮುಖ್ಯ ಸನ್ನಿವೇಶದಲ್ಲಿ ಹಿನ್ನೆಲೆಯಲ್ಲಿದ್ದ ಮರ, ೨೦೨೩ರ ಸೆಪ್ಟೆಂಬರ್ ೨೭ರ ಜೋರು ಗಾಳಿಯ ನಡುಇರುಳಿನಲ್ಲಿ ಕಿಡಿಗೇಡಿಗಳ ಬ್ಯಾಟರಿ ಚಾಲಿತ ಗರಗಸಕ್ಕೆ ತುತ್ತಾಗಿ ಮುನ್ನಲೆಯಲ್ಲಿ ಅಂತಿಮ ಉಸಿರಳೆದದ್ದು ಎಂತಹ ವಿಪರ್ಯಾಸ! ನಿಮಿಷಗಳಲ್ಲಿ ಆರಂಭವಾಗಿ ಮುಗಿಯುವ ಮರ ಕಡಿಯುವ ಸಂದರ್ಭವನ್ನು ನೋಡಿದವರಲ್ಲಿ ವಿಭಿನ್ನ  ಭಾವನೆಗಳು ಹುಟ್ಟಬಹುದಾದರೂ, ಇನ್ನೇನು ಬೀಳಲಿರುವ ಮರಕ್ಕೆ, ಒಂದು ಕ್ಷಣಕ್ಕೆ ತನ್ನನು ಬದುಕಿಸಲು ಆ ರಾಬಿನ್ ಹುಡ್ ಆದರೂ ಬರಬಾರದಿತ್ತೇ ಎಂದೂ ಅನಿಸಿರಬಹುದು, ತನ್ನನ್ನು ನೆಟ್ಟು ಬೆಳೆಸಿದ  ಜಾನ್ ಕ್ಲೇಟನ್ ಕಣ್ಣೆದುರು ಬಂದಿರಬಹುದು. ತನ್ನ ನೆರಳಲ್ಲಿ ತಂಗಿ ಮುಂದುವರಿದ ಕಾಲ್ನಡಿಗೆಯವರು, ತನ್ನ ಆಸುಪಾಸಿನ ಕ್ಷಣಭಂಗುರದಲ್ಲಿ ಲೀನರಾಗಿ ಮೈಮರೆತ ಲಕ್ಷ ಲಕ್ಷ ಅನಾಮಿಕ ಅಜ್ಞಾತ ಪ್ರವಾಸಿಗರು ಸ್ಮರಣೆಗೆ ಬಂದಿರಬಹುದು. ಬಿಡಿ,  ಫೋನು ತಪಾಸಣೆಯಲ್ಲಿ  ದೊರೆತ ಆ ವಿಡಿಯೋ ತುಣುಕು, ಜನರಲ್ಲಿ
ಎಬ್ಬಿಸುವ ಭಾವಲಹರಿ ಏನೇ ಇದ್ದರೂ ಕಾನೂನು ತನಿಖೆಯ ಮಟ್ಟಿಗೆ ಅತಿ ಅಗತ್ಯವಾದ ಪುರಾವೆಯನ್ನು  ಒದಗಿಸಿತ್ತು. ಮತ್ತೆ ನ್ಯೂ ಕಾಸಲ್ ಕ್ರೌನ್  ಕೋರ್ಟ್ ಆ ಇಬ್ಬರನ್ನು ಅಪರಾಧಿ ಎಂದು ಘೋಷಿಸಲು ಪ್ರಮುಖ ಆಧಾರವಾಗಿ ಒದಗಿತ್ತು.

ಪ್ರಸಿದ್ಧ ಮರದ ಅಕಾಲಿಕ ಸಾವಿನ  ಸುದ್ದಿ ಇಂಗ್ಲೆಂಡಿನ ಒಳಗಿನಿಂದ, ಹೊರಗಿನಿಂದ ತೀವ್ರ ಪ್ರತಿಕ್ರಿಯೆ ಪಡೆದಿತ್ತು. ಸಿಟ್ಟು, ಆಘಾತ, ಆಶ್ಚರ್ಯಗಳು ಸಾಮಾಜಿಕ ಜಾಲತಾಣವನ್ನು ತುಂಬಿದವು. ಸುದ್ದಿ ಪತ್ರಿಕೆಯ ಮುಖಪುಟದಲ್ಲಿ, ವೆಬ್ ಪೇಜ್ ಗಳಲ್ಲಿ ವಸಂತ ವೈಶಾಖದ ಹಸಿರಿನಲ್ಲಿ,  ಶರತ್ ಶಿಶಿರಗಳ  ಹಿಮಹೊದಿಕೆಯಲ್ಲಿ ವಿಭಿನ್ನ ರೂಪದ ಮರದ  ಚಿತ್ರಗಳು ಕಾಣಿಸಿಕೊಂಡವು. ಕೆಲವರು ಭಾವುಕರಾಗಿ ಕವಿತೆಗಳನ್ನು ಕಟ್ಟಿ ಹಾಡಿದ್ದರು. ಕವಿತೆಯ ಸಾಲುಗಳನ್ನು  ಕೇಳಿದ ಕೆಲವರು ಕಣ್ಣೀರು ಹಾಕಿದರು. ಪ್ರಕೃತಿ ಸೃಜಿತ ಗಾಳಿಯ ನಿನಾದ, ಮನುಷ್ಯ ನಿರ್ಮಿತ  ಗರಗಸದ ಕರ್ಕಶ ಸದ್ದುಗಳು ಜೊತೆಯಾದ ಹಿನ್ನೆಲೆ ಸಂಗೀತದಲ್ಲಿ ಶವವಾಗುವ ಮರದ ಚಿತ್ರತುಣುಕು , ಸಾಮಾಜಿಕ ಮಾಧ್ಯಮದಲ್ಲಿ ಅನಾಥ ಅಸಹಾಯಕ ಸಾಕ್ಷಿಗಳಂತೆ ಓಡಾಡಿದವು.

೨೦೨೩ರ ಅಕ್ಟೋಬರನಲ್ಲಿ , ಕಡಿದುಬಿದ್ದ ಮರವನ್ನು ಖಂಡ ತುಂಡು ಮಾಡಿ ಕ್ರೇನ್ ಮೂಲಕ ಸಾಗಿಸಲಾಯಿತು. ಅಕಾಲಿಕ ಸಾವಿನ ಪುರಾತನ ಮರದ ಕತೆಯ ಮುಂದುವರಿದ ಪುಟವಾಗಿ, ಇಲ್ಲಿನ ಹಲವು ನೈಸರ್ಗಿಕ ತಾಣಗಳ ಉಸ್ತುವಾರಿ ವಹಿಸಿಕೊಂಡಿರುವ ನ್ಯಾಷನಲ್ ಟ್ರಸ್ಟ್ ಸಂಸ್ಥೆ ಆ
ಮರದಿಂದ ನಲವತ್ತೊಂಬತ್ತು ಸಸಿಗಳನ್ನು ಬೆಳೆಸಿ ದೇಶದ ಬೇರೆ ಬೇರೆ ಚ್ಯಾರಿಟಿ ಮತ್ತಿತರ ಸಂಸ್ಥೆಗಳಿಗೆ ನೀಡಿತು. ತನ್ನ ಕೊನೆಯ ಕಾಲದಲ್ಲಿ ನಲವತ್ತೊಂಬತ್ತು ಅಡಿ ಉದ್ದ ಇದ್ದ ಮರದ ನೆನಪಿಗಾಗಿ ಬೆಳೆಸಿದ  ೪೯ ಸಸಿಗಳನ್ನು ಚ್ಯಾರಿಟಿ   ಸಂಸ್ಥೆಗಳಿಂದ ಪಡೆಯಲು ಜನರಿಂದ  ಅರ್ಜಿಗಳನ್ನು ಆಹ್ವಾನಿಸಲಾಯಿತು. ೪೯ ಗಿಡಗಳನ್ನು ಪಡೆಯಲು ಯುನೈಟೆಡ್ ಕಿಂಗ್ಡಮ್ ನ ಬೇರೆಬೇರೆ ಭಾಗಗಳಿಂದ  ೫೦೦ ಅರ್ಜಿಗಳು ಬಂದಿದ್ದವು. ಪ್ರತಿಯೋರ್ವ ಅರ್ಜಿದಾರರೂ ತಮಗ್ಯಾಕೆ ಒಂದು ಸಸಿ ಬೇಕು ಎಂದು ಬರೆದಿದ್ದರು. ಸಸಿ ಹಂಚುವ ಅಭಿಯಾನವನ್ನು “ನಾಳಿನ ಭರವಸೆಗಾಗಿ ಮರಗಳು” ಎಂದೂ ಕರೆಯಲಾಗಿತ್ತು. ನಲವತ್ತೊಂಬತ್ತರಲ್ಲಿ ಒಂದು ಸಸಿ, ಹ್ಯಾಡ್ರಿಯನ್ ಗೋಡೆಯಿಂದ ಬಹಳವೇನೂ ದೂರದಲ್ಲಿರದ ಹೆಕ್ಸ್ಹಮ್ ಪ್ರಾಂತ್ಯದಲ್ಲಿ ಮುಂದಿನ ಚಳಿಗಾಲಕ್ಕೆ ನೆಲ ನೆಲೆ ಕಾಣಲಿದೆ.  ಹೋಲಿ ನ್ಯೂಟನ್ ಎನ್ನುವಾಕೆಯ ಸಮಾಧಿಯ ಬಳಿ. ಹದಿನೈದು ವರ್ಷದವಳಿದ್ದಾಗ ಸಂಬಂಧ ಕೊನೆಗೊಂಡದ್ದನ್ನು ಒಪ್ಪಲಾಗದ ಮಾಜಿ ಪ್ರಿಯಕರ ಆಕೆಯನ್ನು ಕೊಲೆ ಮಾಡಿದ್ದ. ಕೊಲೆಯಾದ
ಮಗಳ ನೆನಪಿನಲ್ಲಿ ಬದುಕುತ್ತಿರುವ ಆಕೆಯ ಹೆತ್ತವರು ತಾವು ಪಡೆಯಲಿರುವ ಸಿಕಮೋರ್ ಸಸಿ ಅಳಿದ  ಮಗಳನ್ನು ಸ್ಮರಿಸುವ ಹೊಸ ದಾರಿಯಾಗಿದೆ ಎಂದು ಖುಷಿ ಪಡುತ್ತಿದ್ದಾರೆ. ಇನ್ನುಳಿದ ನಲವತ್ತೆಂಟು ಸಸಿಗಳೂ ಯು.ಕೆಯ ಬೇರೆ ಬೇರೆ ಭಾಗಗಳನ್ನು ಸೇರಿ ಅಲ್ಲೆಲ್ಲ,
ನಾಶವಾದ ಮರದ ಕತೆಯನ್ನು ಹೇಳಲಿವೆ  ನೆನಪನ್ನು ಹಸಿರಾಗಿಡಲಿವೆ .

ಒಂದು ಸಣ್ಣ ಸಹಜ ಸುಂದರ ಖುಷಿಯನ್ನು  ನಿರಂತರವಾಗಿ  ನೂರೈವತ್ತು ವರ್ಷಗಳ ಕಾಲ ಹಂಚಿದ,  ಪ್ರಾಕೃತಿಕ ದ್ರಶ್ಯಕಾವ್ಯದಲ್ಲಿ ಭೂಮಿ ಆಕಾಶದಷ್ಟೇ ಚಿರಂತನ ಎನಿಸಿದ ಮರ, ಕ್ಷುಲ್ಲಕ ಕಿಡಿಗೇಡಿತನದ ಪರಿಣಾಮವಾಗಿ  ಇಲ್ಲದಾದಾಗ, ನಿತ್ಯವೂ ನಮ್ಮನ್ನು ಕಾಯುವ
ಬದುಕಿನ ಭರವಸೆಯೇ ಕರಗಿ ಹೋಗುವ ಸಾಧ್ಯತೆ ಇದೆ. ಆದರೆ ಅಂತಹ ವಿಷಣ್ಣ ಸಾಧ್ಯತೆಯನ್ನು ಎದುರಿಸುವ ,ಮತ್ತೆ ಚೇತೋಹಾರಿ ಉತ್ಸಾಹವನ್ನು ನಮ್ಮ ಒಳಹೊರಗೆ ತುಂಬಿಸುವ  ಹೋರಾಟವನ್ನು ನಲವತ್ತೊಂಬತ್ತು ಸಸಿಗಳು ಆಗಲೇ ಆರಂಭಿಸಿವೆ. ಇನ್ನು ಈಶಾನ್ಯ ಇಂಗ್ಲೆಂಡಿನ ಹ್ಯಾಡ್ರಿಯನ್ ಗೋಡೆಯ ಪಕ್ಕದ  ಕಡಿದ ಬುಡದಲ್ಲೂ  ಚಿಗುರೆಲೆಗಳು  ಮೊಳೆತು “ಹೊಸತು ಜನ್ಮ”ದ  ಸೂಚನೆ ಕಾಣುತ್ತಿದೆ. ಒಂದು ವೇಳೆ ಆ ಮೊಳಕೆಗಳು ಚಿಗುರೆಲೆಗಳು ಬೆಳೆಯುತ್ತಲೇ ಹೋದರೆ ಮುಂದಿನ ಇನ್ನೂರು ವರ್ಷಗಳಲ್ಲಿ, ಎರಡು ವರ್ಷದ ಹಿಂದೆ ಬೀಳುವ ಮೊದಲಿನ  ಮರದಷ್ಟೇ ದೊಡ್ಡ ಮರವೊಂದು ಆಕಾರ ತಳೆಯಬಹುದು ಎಂದು ವೃಕ್ಷ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬರಡು ಬುಡವನ್ನೋ ಎಳೆಯ ಚಿಗುರನ್ನೋ ಅಥವಾ ಮುಂದೆಂದೋ ಅಲ್ಲೊಂದು ಮರ ಎದ್ದು ನಿಲ್ಲುವುದನ್ನೋ ಕನವರಿಸುತ್ತ  ಬರುತ್ತಿರುವವರಿಗೆ  “ಗೌರವದಿಂದ ನಡೆದುಕೊಳ್ಳಿ”ಎನ್ನುವ ಎಚ್ಚರಿಕೆಯ ಫಲಕ ಅಲ್ಲೇ  ತೂಗುಹಾಕಲ್ಪಟ್ಟಿದೆ. ಬಂದು ಮರಳುವವರಿಗೂ ,ಮರಳಿ ಬರುವವರಿಗೂ ,  ನಾಳಿನ  ಭರವಸೆ ಜೀವಂತವಾಗಿದೆ.

—————————

ಯೋಗೀಂದ್ರ ಮರವಂತೆ

ರಾತ್ರಿ ಪಾಳಿಯ ಚಾಲಕರು

ಯೋಗಿಂದ್ರ ಮರವಂತೆಯವರಿಗೆ ಪರಿಚಯ ಬೇಕಿಲ್ಲ. ಕನ್ನಡದಲ್ಲಿ ಹೆಸರು ಮಾಡಿದ, ಪುರಸ್ಕೃತರಾದ ಪ್ರಬಂಧಕಾರ. ದೈನಿಕಗಳಲ್ಲಿ , ಅಂತರ್ಜಾಲ ಪತ್ರಿಕೆಗಳಲ್ಲಿ ಅವರ ಅಂಕಣಗಳು ಪ್ರಕಟಗೊಂಡಿವೆ . ಅಂಕಣಗಳನ್ನು, ಪ್ರಬಂಧಗಳನ್ನು ಪುಸ್ತಕವಾಗಿಯೂ ಪ್ರಕಟಿಸಿದ್ದಾರೆ. ಸಾಮಾನ್ಯವಾದ ವಿಷಯಗಳಿಗೆ ಮೂರ್ತ ರೂಪ ಕೊಡುವುದು ಅವರ ವಿಶಿಷ್ಟತೆ. ಇದನ್ನು ಅವರ “ಏರೋ ಪುರಾಣ” ಪುಸ್ತಕದ ಹಲವಾರು ಬರಹಗಳಲ್ಲಿ, ಬಹುಮಾನಿತ “ಕಿಟಕಿಗಳು” ಪ್ರಬಂಧದಲ್ಲಿ ಕಾಣಬಹುದು. ಬಹಳ ಕಾಲದ ನಂತರ ಅನಿವಾಸಿಗೆ ಮತ್ತೆ ಹೊಸ ಬರಹವನ್ನು ಈ ವಾರ ಕೊಟ್ಟಿದ್ದಾರೆ. ಅವರ ಬರಹದ ಲಾಲಿತ್ಯ, ಈ ಪ್ರಬಂಧದಲ್ಲಿ ಸೊಗಸಾಗಿ ಪ್ರದರ್ಶಿತವಾಗಿದೆ. ಅಮೂರ್ತವಾದ ‘ಕನಸು’ ರಾತ್ರಿ ಪಾಳಿಯ ಚಾಲಕನಾಗುತ್ತದೆ; ರಸ್ತೆಗಳಲ್ಲಿ ತಿರುಗುವ ಬೀಡಾಡಿ ಪ್ರಾಣಿಗಳು, ಬೇಕಾ ಬಿಟ್ಟಿ ಗಾಡಿ ಓಡಿಸುವವರು, ಯಾನವನ್ನು ಧ್ವಂಸ ಮಾಡುವವರಾಗುತ್ತಾರೆ. ಕತ್ತಲೆಯ ಹಾದಿಯಲ್ಲಿ ನಿಮ್ಮನ್ನು ನಡೆಸುತ್ತ, ಓಡಿಸುತ್ತ ಲೌಕಿಕ, ತಾತ್ವಿಕ, ಆಧ್ಯಾತ್ಮಿಕ ವಿಚಾರಗಳನ್ನೆಲ್ಲ ತಡಕಿ ಅಚ್ಚುಕಟ್ಟಾಗಿ ನಿಮ್ಮ ಮುಂದೆ ರಾತ್ರಿ ಪಾಳಿಯ ಚಾಲಕರ ವಿವಿಧ ಮುಖಗಳನ್ನು ಅನಾವರಣಗೊಳಿಸಿದ್ದಾರೆ.

“ಕನಸೆಂದರೆ ನಿದ್ರೆಯಲ್ಲಿ ನೋಡುವಂತಹದ್ದಲ್ಲ ; ನಿದ್ರೆ ಮಾಡಲು ಬಿಡದ್ದು” ಎನ್ನುತ್ತ  ನಿದ್ದೆಗೆಡಿಸಿದವರು ಅಬ್ದುಲ್ ಕಲಾಂ. ಇದು ಸೊಂಪಾದ ನಿದ್ದೆಯ ನಡುವಿನ ಸುಸ್ವಪ್ನವಲ್ಲ. ಬೆವರಿ ಬೆಚ್ಚುವ ದುಸ್ವಪ್ನವೂ ಅಲ್ಲ. ಒಡಲಿನೊಳಗೆ ಸಣ್ಣದಾಗಿ ಹುಟ್ಟಿ  ನಿತ್ಯವೂ ಬೇರೆಬೇರೆ ಆಕಾರ ತಾಳಿ ದೊಡ್ಡದಾಗಿ ಜ್ವಲಿಸಿ, ಮೈಮನಗಳನ್ನು ವ್ಯಾಪಿಸಿ ಮುನ್ನಡೆಸುವ ಸ್ವಯಂಸ್ಫೂರ್ತಿ. ನೆಲೆ  ಮುಟ್ಟದ ತನಕ ನಿಲ್ಲದ ನಡಿಗೆ, ಯಾವುದೊ ಲಕ್ಷ್ಯದ ಕಡೆಗಿನ ಅವಿರತ ನಿರಂತರ ಓಟ.  ಕನಸಿನ ಒಂದು ವ್ಯಾಖ್ಯಾನ ಹೀಗಾದರೆ,  ಕಾವ್ಯ ಸಾಹಿತ್ಯಗಳು ಕನಸನ್ನು ಕೆಲವೊಮ್ಮೆ ಬರೇ ಕನಸೆಂದು ಕರೆಯಲು ಬಯಸಬಹುದು. ನಿದ್ದೆಯನ್ನು ಕನಸೆಂದೋ, ಕನಸನ್ನು ನಿದ್ದೆಯೆಂದೋ ಅಥವಾ ಬದುಕನ್ನೇ ಕನಸು ಎಂದೋ  ಕಲ್ಪಿಸಲು ಪ್ರೇರೇಪಿಸಬಹುದು. ಕನಸೇ ಬದುಕಾಗುವುದರ ಬಗ್ಗೆ ಎಚ್ಚರಿಸಬಹುದು. ಕನಸಿನ ರಮ್ಯತೆಯನ್ನು ನಿಗೂಢತೆಯನ್ನು ಅಲ್ಲದಿದ್ದರೆ  ವಿಹ್ವಲತೆಯನ್ನೂ ಶಬ್ದಚಿತ್ರವಾಗಿ ವರ್ಣಿಸಬಹುದು. ಒಳ್ಳೆಯ ಕನಸು, ಕೆಟ್ಟ ಕನಸು ಎಂದು ಕರೆಯಲು ಅಲ್ಲದಿದ್ದರೆ ಮರೆಯಲು ಹೇಳಿಕೊಟ್ಟಿರಬಹುದು. ಅದು ಕಾವ್ಯದ ದೃಷ್ಟಿ, ಕವಿ ಕಲಾವಿದರ ಕಲ್ಪನೆಯ ಸೃಷ್ಟಿ.  ಆದರೆ ಕಲಾಂರು ಹೇಳಿದ್ದು  ಕನಸಿನ ಬೆನ್ನು ಹಿಡಿದವರು ನಿದ್ರಿಸುವುದಿಲ್ಲ ಎಂದು. ಇದು ನಿದ್ದೆ ಮಾಡಗೊಡದ ಒಂದು ಬಗೆಯ ಕನಸು. ಗುರಿ  ತಲುಪುವ ತನಕ ವಿರಮಿಸಲಾಗದ ವ್ಯಸನ, ನಿದ್ರೆಯೊಳಗಿನ ಎಚ್ಚರ.

ಒಬ್ಬರ ನಿದ್ರೆಯೊಳಗಿನ ಎಚ್ಚರ ಆಸುಪಾಸಿನಲ್ಲಿರುವವರ ನಿದ್ದೆಗೆಡಿಸುವುದೂ ಇದೆ; ರಾತ್ರಿ ಮನೆಯನ್ನು ಮುರಿಯುವ ಕಳ್ಳರಿಗೂ ಒಂದು ಎಚ್ಚರ ಇರುತ್ತದೆ.  ಮಲಗಬೇಕಾದವರು ಮಲಗುವುದನ್ನೇ ಕಾದು ತಮಗೆ ಬೇಕಾದ ಕೆಲಸ ಮುಗಿಸಿಕೊಳ್ಳುವ ಎಚ್ಚರ ಅದು. ಅಪರಾಧ ಜಗತ್ತಿನಲ್ಲಿ ಇಂತಹ ಸಂಚಿನ ಎಚ್ಚರಗಳು ಸಾಮಾನ್ಯ. ಇನ್ನು ತಮ್ಮ ಮನೆಗೆ ಹಾಗಾಗಬಹುದೆನ್ನುವ ಊಹೆ ಇರುವವರಿಗೆ  ಬೀಳಬಹುದಾದ ಕನ್ನ  ಅಥವಾ ಸದ್ಯದಲ್ಲೇ ಎರಗಬಹುದಾದ ಆಪತ್ತು, ತಳಮಳವಾಗಿ ಆಂತರಿಕ ಎಚ್ಚರವನ್ನು ಹುಟ್ಟಿಸುವುದಿದೆ. ಇವಕ್ಕೆಲ್ಲ  ವ್ಯತಿರಿಕ್ತವಾಗಿ ಯಾರದೋ ನಿದ್ದೆಯೊಳಗಿನ ಎಚ್ಚರ ಇನ್ಯಾರದೋ ಸುಖನಿದ್ರೆಗೂ ಕಾರಣ ಆಗಬಹುದು. ನಿತ್ಯ ದಿನಚರಿಯಲ್ಲಿ ಬಳಕೆಯಾಗುವ ಉಪಯುಕ್ತವಾಗುವ ಎಷ್ಟೋ ವಿಷಯ ವಸ್ತುಗಳು ಗೊತ್ತಿರುವವರೋ ಗೊತ್ತಿಲ್ಲದವರೋ ನಿದ್ದೆಬಿಟ್ಟು ದುಡಿದು, ದಣಿದು ನೀಡಿದ ಕೊಡುಗೆಯಾಗಿರಬಹುದು. ತಾವು ನಿದ್ದೆ ಬಿಟ್ಟು ಸುತ್ತಮುತ್ತಲಿನವರ ಎಚ್ಚರ ಕಾಯುವವರು ಮನೆಮನೆಯಲ್ಲೂ ಇರುತ್ತಾರೆ. ಆ ಮನೆಗೆ ಬೇಕಾಗಿ ಬಹಳವಾಗಿ ದುಡಿದು ಹಿತ  ಕಾಯವವರು. ಇನ್ನು ಮನೆಯನ್ನು ಮೀರಿ ಊರು ಸಮಾಜಕ್ಕೆ ಕೊಡುಗೆ ನೀಡುವವರೂ ಇರುತ್ತಾರಲ್ಲ. ಬಹಳ ವಿಶೇಷವಾದನ್ನು ಸಾಧಿಸಿ ಪ್ರಸಿದ್ಧರಾದವರು  ಇತಿಹಾಸದಲ್ಲಿ ವರ್ತನಮಾನದಲ್ಲಿ ದಾಖಲಾಗುತ್ತಾರೆ. ಅವರು ಕಲಾಂರಂತಹ ವಿಜ್ಞಾನಿಗಳೂ ಇರಬಹುದು. ದೊಡ್ಡ ಜನಸಮುದಾಯಕ್ಕೋ   ಜಗತ್ತಿಗೋ ನೆರವಾಗುವ ಸಂಶೋಧಕರು ಅನ್ವೇಷಕರು ಇರಬಹುದು. ಸಾಹಿತಿ, ಕ್ರೀಡಾಪಟು, ಸಮಾಜಸೇವಕ, ಸೃಜನಶೀಲ ಕಲಾವಿದ ಹೀಗೆ. ಅವರು  ಕಣ್ಣಿಗೆ ಕಾಣದ ದೂರದ ಅನಾಮಿಕ ಸಾಧಕರು ಆಗಿರಬಹುದು. ಅಷ್ಟು ದೊಡ್ಡ ಲೋಕದ ಸುದ್ದಿ ಬೇಡ ಅಂತಾದರೆ ಹತ್ತಿರದಲ್ಲೇ ಸಣ್ಣ ಚಾಕರಿ ಸಣ್ಣ ಸೇವೆಯಲ್ಲಿ ತೊಡಗಿದ ಮೌನವಾಗಿರುವ ದನಿಯೇ ಇಲ್ಲದ ವಿನಮ್ರ ಸೇವಕರೂ ಇರಬಹುದು. ಅವರು ಯಾರೇ ಇದ್ದರೂ ಅವರೆಲ್ಲರಿಗೂ ಸಾಮಾನ್ಯವಾದುದು ನಿದ್ದೆಯೊಳಗಿನ ಎಚ್ಚರ.

ಕತ್ತಲಲ್ಲಿ ಕಂಡ ಕನಸು ಬೆಳಕು ನೀಡಿದ ಸಣ್ಣ ಮಟ್ಟದ, ದೊಡ್ಡ ಪ್ರಮಾಣದ ಉದಾಹರಣೆಗಳು ಎಷ್ಟಿಲ್ಲ?  ಇವರೆನ್ನೆಲ್ಲ ನಾನು ಕರೆಯುವುದು ರಾತ್ರಿ ಪಾಳಿಯ ಚಾಲಕರೆಂದು; ತಾವು ಎಚ್ಚರವಿದ್ದು ಪ್ರಯಾಣಿಕರಿಗೆ ನಿದ್ರೆಯ ಜೊಂಪು ಹತ್ತಿಸಿ, ಅವರು ಕಣ್ಣು ಬಿಡುವಾಗ ಇನ್ನೊಂದು ಊರಿಗೆ ತಲುಪಿಸುವವರೆಂದು. ಯಾತ್ರಿಕರನ್ನು ಗುರಿ ತಲುಪಿಸುವುದರಲ್ಲೇ ತೃಪ್ತಿ ಕಂಡುಕೊಳ್ಳುವವವರು. ನಾವೆಲ್ಲರೂ ಇಂತಹ ರಾತ್ರಿ ಪಾಳಿಯ ಚಾಲಕರ ಸಹವಾಸ ಅನುಭವ ಪಡೆದವರೇ.

ಭಾವಾರ್ಥದಲ್ಲೂ, ಶಬ್ದಾರ್ಥದಲ್ಲೂ ರಾತ್ರಿ ಪ್ರಯಾಣದ ಚಾಲಕನೇ ಆದವನೊಡನಿನ  ನನ್ನ ಒಂದು ಅನುಭವ  ಇಂಜಿನೀಯರಿಂಗ್ ಓದಿನ  ದಿನಗಳದ್ದು. ಪದವಿಯ  ಕೊನೆಯ ವರ್ಷದಲ್ಲಿದ್ದಾಗ, ಉಷ್ಣ ವಿದ್ಯುತ್ ಸ್ಥಾವರದ ಶೈಕ್ಷಣಿಕ ಭೇಟಿಗೆ ನಾವು ಹೊರಟಿದ್ದೆವು. ನಾವೆಂದರೇನು ,ಆ ಕಾಲದ ಕರ್ನಾಟಕದ ಯಂತ್ರಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಪದವಿ ಪೂರ್ಣಗೊಳ್ಳುವುದೇ ರಾಯಚೂರಿನ ಬಿಸಿಲಿನ ಝಳದಲ್ಲಿ ಒಂದೆರಡು ದಿನಗಳ ಕಾಲ ಬೆಂದು ಬೆವರಿ ನೀರಾದ ಮೇಲೆ. ನಮ್ಮ ಮಟ್ಟಿಗೆ ಆಗ ರಾಯಚೂರಿಗೆ ಪ್ರವೇಶವೇ ಉಷ್ಣ ಸ್ಥಾವರವನ್ನು ಹೊಕ್ಕಂತೆ ಇತ್ತು. ಬೆಂಗಳೂರಿನಿಂದ ರಾಯಚೂರಿನವರೆಗಿನದು ಇಡೀರಾತ್ರಿಯ ಪ್ರಯಾಣ.  ಮೂರು ಖಾಸಗಿ ಬಸ್ಸುಗಳು ಕೇಕೆ ಹಾಕುವ ವಿದ್ಯಾರ್ಥಿಗಳ ಜೊತೆಗೆ ಪ್ರಾಧ್ಯಾಪಕರುನ್ನು  ತುಂಬಿಸಿಕೊಂಡು ಹೊರಟಿದ್ದವು. ಒಂದರ ಹಿಂದೆ ಒಂದು. ಒಂದು ಇನ್ನೊಂದನ್ನು ಹಿಂದೆ ಹಾಕುವುದು , ಮುಂದೆ ಸಾಗುವ ಬಸ್ಸಿನಿಂದ ಹರ್ಷೋದ್ಗಾರ ಚಪ್ಪಾಳೆ ಶಿಳ್ಳೆಗಳು ರಸ್ತೆಯನ್ನು ತುಂಬುವುದು, ಕತ್ತಲೆಯನ್ನು ಅನಾಗರಿಕವಾಗಿ ಬಡಿದು ಎಬ್ಬಿಸುವುದು ನಡೆಯುತ್ತಲೇ ಇತ್ತು. ಈ ನಡುವೆ ನಮ್ಮ ಬಸ್ಸಿನ ಚಾಲಕನಿಗೆ ತೀರ ನಿದ್ದೆ ಬರುತ್ತಿತ್ತು. ಬಸ್ಸು ಪ್ರಯಾಣದಲ್ಲಿ ನನ್ನ ಸೀಟು ಎಲ್ಲೇ ಇದ್ದರೂ ರಾತ್ರಿ ಚಾಲಕನ ಕ್ಯಾಬಿನ್ ಒಳಗೆ ಹೋಗಿ ಹತ್ತಿರ ಕುಳಿತು ಮಾತನಾಡುವುದು ನನಗೆ ಇಷ್ಟ. ಇಂಜಿನ್ನಿನ ಕರ್ಕಶ ಸದ್ದು, ಮುಖಕ್ಕೆ ಬಡಿಯುವ ತಂಪು ಗಾಳಿ, ಗಿಯರ್ ಲಿವರ್ ನ ಅಲುಗಾಟ, ಎದುರಿನಿಂದ ಬರುವ ನಾಲ್ಕಾರು ಪ್ರಖರ ಕಣ್ಣುಗಳ ವಾಹನಗಳು, ನಡುವೆ ಹಿಂದೆಂದೂ ಭೇಟಿಯಾಗಿರದ ಮುಂದೆಯೂ ಆಗದ ನನ್ನ ಚಾಲಕನ ನಡುವಿನ ಸುಪ್ರೇಮ ಸಲ್ಲಾಪ. ಈ ಕೆಲಸ ಯಾವಾಗಿನಿಂದ ಎಂದು ಆರಂಭವಾಗುವ ಮಾತುಕತೆ, ಇವತ್ತಿನ  ರೂಟ್, ಇದೆ ಹಾದಿಯಲ್ಲಿ ಹಿಂದಿನ ಅನುಭವ, ಸ್ವಲ್ಪದರಲ್ಲಿ ತಪ್ಪಿದ ಅಪಘಾತ, ಸಾವಿನ ದವಡೆಯಿಂದ ಪಾರಾದ ಬಸ್ಸು, ಅವನನ್ನು ಗೋಳುಹೊಯ್ದ ವಿಚಿತ್ರ ಪ್ರಯಾಣಿಕರು ಹೀಗೆ ಮುಂದೆ ಸಾಗಿ, ಹೆಂಡತಿ-ಮಕ್ಕಳು ಸಂಸಾರ ಶಾಲೆಗಳನ್ನು ಸುತ್ತಿ ಬಳಸಿ ಸಾಗುತ್ತಿದ್ದವು, ಬಸ್ಸಿನ ಜೊತೆಜೊತೆಗೆ.  ಅಂದೂ ಚಾಲಕನ ಜೊತೆ ಉತ್ಸಾಹದಲ್ಲಿ ಮಾತುಕತೆ ಶುರು ಆಗಿದ್ದರೂ ನಮ್ಮ ಚಾಲಕನಿಗೆ  ವಿಪರೀತ ನಿದ್ದೆ ಬರುತ್ತಿತ್ತು.  ಆತ ಮಧ್ಯಮಧ್ಯ ಸೀಟಿನಿಂದ ಎದ್ದು ನಿಂತು ಬಸ್ಸು ಓಡಿಸುತ್ತಿದ್ದ.  ಹಿಂದಿನ ಆರೇಳು ದಿವಸಗಳಿಂದ ಹಗಲು ರಾತ್ರಿ ಸ್ವಲ್ಪವೂ ನಿದ್ರಿಸದೆ ಕೆಲಸ ಮಾಡಿದ್ದನಂತೆ. ನಮ್ಮ ತಿರುಗಾಟಕ್ಕೆ ಚಾಲಕನಾಗಿ ಬಂದಾಗ , ವಾಹನ ಚಲಾಯಿಸುತ್ತಿರುವಾಗ ತನ್ನ ಸೀಟಿನಲ್ಲಿ ಕುಳಿತರೆ ಸಾಕು, ನಿದ್ರಿಸುವ ಸ್ಥಿತಿಯಲ್ಲಿದ್ದ. ಬಿಡುವು ಇಲ್ಲದೆ ಕೆಲಸಕ್ಕೆ ಮಾಡಲು ಮಾಲಿಕರ ಒತ್ತಡ ಕಾರಣ ಇರಬಹುದು, ಬೇರೆ ಡ್ರೈವರ್ ಇಲ್ಲದಿರಬಹುದು, ಅಥವಾ ರಜೆ ಮಾಡಿ ಸಂಬಳ ಕಳೆದುಕೊಳ್ಳುವ ಸ್ಥಿತಿಯೂ ಆತನದಲ್ಲದಿರಬಹುದು.  ಇಷ್ಟು ತಿಳಿದ ಮೇಲೆ ನಾವು ಕೆಲವರು ಆತನ ಪಕ್ಕದಲ್ಲೇ ಬಂದು ಕೂತು ಮಾತನಾಡುತ್ತಿದ್ದೆವು. ಅವನದು ನಿದ್ದೆ ತಪ್ಪಿಸಿಕೊಂಡು ವಾಹನ ಓಡಿಸುವ ಪಾಳಿಯಾದರೆ, ನಮ್ಮದು ಅಂದಿನ ಮಟ್ಟಿಗೆ ಅವನನ್ನು ಎಚ್ಚರವಿಡುವ ಸರದಿ. ಇದೂ ಸಾಕಾಗುವುದಿಲ್ಲ ಎನಿಸಿದಾಗ ಮಧ್ಯಮಧ್ಯ ಬಸ್ಸು ನಿಲ್ಲಿಸಲು ಹೇಳಿ, ಅಲ್ಪ ಸ್ವಲ್ಪ ನಿದ್ರಿಸುವ ಅವಕಾಶ ನೀಡುತ್ತಾ ಪ್ರಯಾಣ ಬೆಳೆಸಿದವು. ಆದರೂ ನಿಂತುಕೊಂಡು ಬಸ್ಸು ಚಲಾಯಿಸುವ ಆತನ ಮುಖ ವ್ಯಗ್ರವಾಗುತ್ತಿತ್ತು, ಊದಿಕೊಂಡ ಕಣ್ಣು ಕೆಂಪಾಗಿ, ಕ್ಷಣಕ್ಕಾದರೂ ರೆಪ್ಪೆ ಮುಚ್ಚುತ್ತಿತ್ತು. ಪ್ರತಿ ಬಾರಿ ಚಾಲಕನ ಕಣ್ಣಿಗೆ ಅರೆಕ್ಷಣದ ಜೊಂಪು  ಹತ್ತಿದಾಗಲೂ ಕೈಯಲ್ಲಿ ಹಿಡಿದ ಸ್ಟೀಯರಿಂಗ್ ಚಕ್ರ ಗರಕ್ಕನೆ ಒಂದು ದಿಕ್ಕಿಗೆ ತಿರುಗುತ್ತಿತ್ತು, ಹಠಾತ್ ಬಸ್ಸು ಲಯ ತಪ್ಪಿದಂತೆ ಅನಿಸುತ್ತಿತ್ತು. ದಾರಿಯುದ್ದಕ್ಕೂ ಚಾಲಕ ಕಣ್ಣು ರೆಪ್ಪೆಗಳನ್ನು ತೆರೆದಿಡಲು ಹೋರಾಡುತ್ತ , ಎಚ್ಚರದಲ್ಲೇ ನಿದ್ರಿಸುತ್ತ ನಮ್ಮನ್ನು ರಾಯಚೂರು ತಲುಪಿಸಿದ್ದ. ಆ ಚಾಲಕನ ಬದುಕಿನ ಅತ್ಯಂತ ದೀರ್ಘ ರಾತ್ರಿ ಅದಾಗಿದ್ದಿರಬೇಕು. ಮತ್ತೆ ಅಂದು ಆ ಬಸ್ಸಿನಲ್ಲಿ ಪ್ರಯಾಣ ಮಾಡಿದವರ ಮಟ್ಟಿಗೆ ಜೀವನಪೂರ್ತಿ ನೆನಪಿಡುವ ಅತ್ಯಂತ ಕತ್ತಲೆ ನಿಶೆಯ ಪ್ರಯಾಣ.

ಇನ್ನು ನನ್ನ ಹುಟ್ಟೂರಿನ ಆಪ್ತ ಸ್ನೇಹಿತ, ಪ್ರಾಥಮಿಕ ಶಾಲೆಯ ಸಹಪಾಠಿಯೂ ಆಗಿದ್ದವನು ಈಗಲೂ ರಾತ್ರಿ ಪಾಳಿಯ ಬಸ್ ಚಾಲಕ. ವಿದ್ಯಾಭ್ಯಾಸ ಬೇಗ ನಿಲ್ಲಿಸಿ ಅವನ ಕನಸಿನ ಉದ್ಯೋಗವಾದ ಡ್ರೈವಿಂಗ್ ಅರಸಿ ಇನ್ನೊಂದು ಊರಿಗೆ ಹೋದವನು ಸ್ಥಳೀಯ ವ್ಯಾನ್ ಗಳಲ್ಲಿ ಕ್ಲೀನರ್ ಆಗಿ ನೌಕರಿ ಶುರು ಮಾಡಿ, ನೈಟ್ ಬಸ್ ಗಳ ಚಾಲಕನಾಗಿ ಬೆಳೆದು ತನ್ನ ಕನಸನ್ನು ಪೂರೈಸಿಕೊಂಡಿದ್ದ.  ನಾವಿಬ್ಬರು ಭೇಟಿಯಾದಾಗಲೆಲ್ಲ ರಾತ್ರಿ ಪ್ರಯಾಣದ ಲೋಕದ ಬಗ್ಗೆ ಚರ್ಚೆ ಆಗುತ್ತದೆ. ಎಲ್ಲವೂ ಸ್ಪಷ್ಟ ಎನಿಸುವ ಹಗಲಿನ  ಪ್ರಯಾಣವೇ ಸುಖ ಇರಬೇಕಲ್ಲ  ಎಂದು ನಾನು ಹೇಳಿದರೆ, ರಾತ್ರಿ ಪಾಳಿಯ ಚಾಲನೆಯಷ್ಟು ಸಲೀಸು ಇನ್ನೊಂದಿಲ್ಲ ಎಂದು ಆತ ವಾದಿಸುತ್ತಾನೆ. ಹಗಲಿನಲ್ಲಾದರೆ ಎಂತಹ  ಹೆದ್ದಾರಿ ರಸ್ತೆಯನ್ನೂ ವಾಚಾಮಗೋಚರವಾಗಿ  ಬಳಸಿ ಹಾಳುಗೆಡಹುವವರು, ಉದ್ದ ಸಾಗಬೇಕಾದಲ್ಲಿ ಅಡ್ಡ ಬರುವವರು, ಅಶಿಸ್ತಿನ ಮನುಷ್ಯರು  ಅನಧಿಕೃತ ಪ್ರವೇಶ ಮಾಡುವ ಪ್ರಾಣಿಗಳು ಎಲ್ಲವೂ ಸೇರಿದ ಗೋಜಲು ಗೊಂದಲವಾಗುತ್ತದೆ. ನಡುರಾತ್ರಿಯ ಕಗ್ಗತ್ತಲೆಯ ಹೊತ್ತಾದರೆ ಹಗಲಿನಲ್ಲಿ ರಸ್ತೆ ಯಾನವನ್ನು ಧ್ವಂಸ ಮಾಡಿಹೋದ ಆ ಎಲ್ಲರೂ ಮನೆ ಸೇರಿ ಸ್ವಚ್ಛಂದ ಮಲಗಿರುತ್ತಾರೆ.  ರಸ್ತೆಯನ್ನು ಬೆಳಗಿ ಹೊಳೆಯಿಸುವ  ಚಂದ್ರ, ಮಿಂಚಿ ಮಿನುಗುವ ನಕ್ಷತ್ರಗಳು ಅಲ್ಲದಿದ್ದರೆ ಇನ್ನಷ್ಟು ಮತ್ತಷ್ಟು ರಾತ್ರಿ ಪಾಳಿಯ ಬಸ್ಸು-ಲಾರಿ, ಮತ್ತೆ ಅವುಗಳ ಚಾಲಕರಿಗೆ ಬಿಟ್ಟುಕೊಟ್ಟಿರುತ್ತಾರೆ. ಅವನ ಪ್ರಕಾರ ರಾತ್ರಿಯ ಎಚ್ಚರವೂ ಒಂದು ಕಲೆ ಮತ್ತು ಸಿದ್ಧಿ. ನಿತ್ಯ ರಾತ್ರಿ ನಿದ್ದೆ ಬಿಡಬೇಕಾದರೆ ಹಗಲಿನಲ್ಲಿ ನಿದ್ದೆ ಹಿಡಿಯಬೇಕು. ಪ್ರಕೃತಿಗೆ ವಿರುದ್ಧವಾಗಿ ಹಗಲನ್ನು ರಾತ್ರಿ ಮಾಡಬೇಕು, ರಾತ್ರಿಯನ್ನು ಹಗಲಾಗಿಸಬೇಕು. ಸೂರ್ಯ ಮೂಡುವಾಗ ಕಣ್ಮುಚ್ಚಿ ಮುಸುಕು ಎಳೆಯಬೇಕು, ಚಂದ್ರ ಮೂಡುವ ಹೊತ್ತಿಗೆ ಹಲ್ಲುಜ್ಜಿ ಊಟ ಮಾಡಿ ಸ್ಟೀಯರಿಂಗ್ ಹಿಡಿದು ಏಕಾಗ್ರತೆಯಲ್ಲಿ ಕೂರಬೇಕು. ನಡುವೆ ಒಂದೆರಡು ಕಡೆ ಖಡಕ್ ಚಹಾ ಕುಡಿಯಬೇಕು. ಎದುರಿನಿಂದ ಕೋರೈಸುವ ಬಣ್ಣಬಣ್ಣದ ಬೆಳಕು ಬೀರುತ್ತಾ ವಾಹನ ಚಲಾಯಿಸುವವರನ್ನು ಸುಧಾರಿಸಿಕೊಂಡು ಮುಂದೆ ಸಾಗಬೇಕು. ರಾತ್ರಿಯ ಖಾಲಿ ರಸ್ತೆಯಲ್ಲೂ ಅನಾವಶ್ಯಕ ಹಾರ್ನ್ ಒತ್ತುವವರನ್ನು ನಿರ್ಲಕ್ಷಿಸಬೇಕು, ಮಿತಿಮೀರಿದ ವೇಗದಲ್ಲಿ ನುಗ್ಗುವ ಸಣ್ಣ ವಾಹನಗಳನ್ನು ಆಧರಿಸಿ ಪೊರೆಯಬೇಕು. ರಸ್ತೆ ಹಂಪುಗಳನ್ನು ನಿಧಾನಕ್ಕೆ ನಾಲಿಗೆ ಕಚ್ಚಿಕೊಂಡು ಹತ್ತಿ ಇಳಿಸಬೇಕು. ನಿದ್ದೆಯ ನಶೆಯಲ್ಲಿ  ತೇಲುತ್ತಿರುವ ಎಲ್ಲ ಪ್ರಯಾಣಿಕರ ತೊಟ್ಟಿಲು ತೂಗುತ್ತ, ತಲುಪುವಲ್ಲಿಗೆ ತಲುಪಿಸಿ, ಗಾಡಿ ನಿಲ್ಲಿಸಿ ಪ್ರಯಾಣಿಕರು ಒಬ್ಬೊಬ್ಬರಾಗಿ ಸರಂಜಾಮು ಸಮೇತ ಧನ್ಯವಾದವನ್ನೂ ಹೇಳದೇ ಕೆಲವೊಮ್ಮೆ ಕಾರಣಾಂತರದಿಂದ ತಡವಾಗಿದ್ದಕ್ಕೆ ಅಸಮಾಧಾನದಿಂದ ಇಳಿದು ಹೋದ ಮೇಲೆ, ಚಾವಿ ತೆಗೆದು  ಬಲಬದಿಯ ಅರ್ಧ ಬಾಗಿಲನ್ನು ದೂಡಿ ಮಣ್ಣು ನೆಲದ ಮೇಲೆ ಧೊಪ್ ಎಂದು ಹಾರಬೇಕು. ಹಣೆಯ ಮೇಲಿನ ಬೆವರು ಒರೆಸಬೇಕು. ಆದಷ್ಟು ಬೇಗ ತಿಂಡಿ ತಿಂದು, ಸರಿಯಾದ ಜಾಗ ಸಿಗದಿದ್ದರೆ, ಬಸ್ಸಿನ ಸೀಟು, ಯಾವುದೊ ಪೆಟ್ರೋಲ್ ಪಂಪಿನ ಚಾವಡಿ ನೋಡಿ ಧೂಳು ಹೊಡೆದು ನಿದ್ದೆ ಮಾಡಬೇಕು. ಮತ್ತೆ ಸಂಜೆಯ ಪಾಳಿಗೆ ತಯಾರಾಗಬೇಕು. ಇಂತಹ ಹಲವು ವರ್ಷಗಳ  ರಾತ್ರಿಚರಿಯನ್ನು, ತನ್ನ ಮಕ್ಕಳು ಶಿಕ್ಷಣ ಮುಗಿಸಿ ದುಡಿಯಲು ಶುರು ಮಾಡಿದ ಮೇಲೆ, ಮನೆ ಸಾಲ ತೀರಿದ ನಂತರ ಒಂದು ದಿನ ಪೂರ್ಣ ನಿಲ್ಲಿಸಿ ತಾನೂ ಚಾಲಕ ವೃತ್ತಿ ಬಿಟ್ಟು ನೆಮ್ಮದಿಯ ನಿದ್ದೆ ಮಾಡಬೇಕು.

 ರಾತ್ರಿ ಪ್ರಯಾಣದ ವಾಹನಗಳ ಚಾಲಕರಿಂದ ಹಿಡಿದು ನಿದ್ದೆ ಮಾಡಗೊಡದ ದೊಡ್ಡ ಕನಸಿನ ಹಿಂದೆ ಹೊರಟವರು ಕೊಟ್ಟಕೊನೆಗೆ ಅರಸುವುದು  ಒಂದು ನಿರಾಳ ನಿದ್ದೆಯನ್ನೇ ಇರಬಹುದು. ಅನಿವಾರ್ಯ ದುಡಿಮೆ, ಯಶಸ್ಸಿನ ಹಸಿವು, ಮಹತ್ವಾಕಾಂಕ್ಷೆಗಳು ಒಂದಕ್ಕಿಂತ ಒಂದು ಭಿನ್ನವಾದರೂ ಬೇರೆ ಬೇರೆ ದಿಕ್ಕಿನಿಂದ ಒಂದು ಸಂಪೂರ್ಣ ಸಂತೃಪ್ತ ನಿದ್ದೆಯ ಹುಡುಕಾಟದಲ್ಲಿರಬಹುದು. ನಿದ್ದೆಯ ಎಚ್ಚರವೂ ಒಂದು ಆತ್ಯಂತಿಕ ಪ್ರಶಾಂತ ವಿಶ್ರಾಮದ ಅನ್ವೇಷಣೆಯಲ್ಲಿರಬಹುದು. ಅಂತಹ ಒಂದು ಹುಡುಕಾಟದ ಕತೆ ಅಲೆಕ್ಸಾಂಡರ್ ಚಕ್ರವರ್ತಿಯ ಬಗೆಗೂ ಇದೆ.

ಗ್ರೀಕ್ ದೊರೆ ಅಲೆಕ್ಸಾಂಡರ್  ದಂಡಯಾತ್ರೆಯನ್ನು ಮಾಡುತ್ತ , ಸಾಮ್ರಾಜ್ಯವನ್ನು ವಿಸ್ತರಿಸುತ್ತ ಇಂದಿನ ಭಾರತದ ಅಂದಿನ  ಭೂಪ್ರದೇಶಕ್ಕೂ ಬಂದಿದ್ದನಲ್ಲ.  ಹಾಗೆ ಅಲ್ಲಿ  ಸುತ್ತುತ್ತಿರುಗುವಾಗ , ಮರದ ನೆರಳಿನಲ್ಲಿ ಸೊಂಪಾಗಿ ಮಲಗಿದ್ದ ಸಾಧುವೊಬ್ಬನನ್ನು ಕಂಡನಂತೆ . ಕುಚೆಷ್ಟೆಯೋ , ಕುತೂಹಲವೋ ಎಬ್ಬಿಸಿ ಮಾತಿಗಿಳಿದನಂತೆ .
“ಈ ಯುದ್ಧಗಳಿಂದ ಏನು ಸಾಧಿಸುವೆ ?” ಎಂದು ಸಾಧು ಕೇಳಿದನಂತೆ
“ಒಂದೊಂದೆ ರಾಜ್ಯವನ್ನು , ರಾಜರನ್ನು ಗೆದ್ದು , ಎಲ್ಲದಕ್ಕೂ ನಾನೆ ಅರಸ , ಜಗತ್ತಿಗೆ ಚಕ್ರವರ್ತಿ ಎನಿಸಿಕೊಳ್ಳುತ್ತೇನೆ ” ಎಂದನಂತೆ ಅಲೆಕ್ಸಾಂಡರ್.
“ಚಕ್ರವರ್ತಿ ಎನಿಸಿಕೊಂಡ ನಂತರ ಏನು ಮಾಡುವೆ? “
“ಎಲ್ಲರನ್ನು ಎಲ್ಲವನ್ನು ಗೆದ್ದ ನಂತರ ಸುಖವಾಗಿ ನಿದ್ರಿಸುತ್ತೇನೆ” ಎಂದನಂತೆ  ಅಲೆಕ್ಸಾಂಡರ್.
ಆಗ ಸಾಧು ನಗುತ್ತ “ನಾನದನ್ನು ಈಗಾಗಲೇ ಮಾಡುತ್ತಿದ್ದೇನೆ , ಯಾರನ್ನೂ ಕೊಲ್ಲದೆ ಗೆಲ್ಲದೆ ” ಎಂದನಂತೆ.

ಸಾಧುವೊಬ್ಬನಿಗೆ ಸರಳ ಬದುಕಿನಲ್ಲಿ ಸುಲಭವಾಗಿ ದಕ್ಕಿದೆ ಎಂದೆನಿಸುವ ನಿದ್ರೆ, ಅಲೆಕ್ಸಾಂಡರನಿಗೆ ದಶಕದ ಕಾಲ ಕತ್ತಿಯನ್ನು ಝಳಪಿಸುತ್ತ , ಸಾವಿರಾರು ಮೈಲು ದೂರ ಕುದುರೆಗಳನ್ನು ಕಾಲಾಳುಗಳನ್ನು ದಣಿಸಿ, ರಕ್ತ ಕಣ್ಣೀರುಗಳ ಕಾಲುವೆ ಹರಿಸಿ, ನೂರಾರು ರಾಜರನ್ನು ಮಣಿಸುವುದರಲ್ಲಿ ಸಿಕ್ಕಿತ್ತೋ ಇಲ್ಲವೊ? ಗೊತ್ತಿಲ್ಲ. ತಾನು ಬಯಸಿದಂತೆ ಇಡೀ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ , ಆತನ ಕನಸಿನ ನಿದ್ರೆ ಅವನಿಗೆ ದೊರಕದೇ ಹೋಗಿರಬಹುದು; ಸಾಧು ಹೇಳಿದ ಅರ್ಥದಲ್ಲಿ ನಿರಾಳವಾದ ನಿದ್ರೆಯೇ ಬದುಕಿನ ಸರ್ವಸ್ವ ಎಂದು ನಂಬಿದರೆ ಅಲೆಕ್ಸಾಂಡರನಿಗೆ ತಾನೆಷ್ಟು  ದೌರ್ಭಾಗ್ಯವಂತ ಎಂದೂ ಅನಿಸಿರಬಹುದು. ಈ ಘಟನೆ ಕತೆಯೊ ಕಲ್ಪನೆಯೊ ಅಥವಾ ಅಲೆಕ್ಸಾಂಡರನ ಸ್ವಗತವೊ ಇರಬಹುದು. ಅಥವಾ ತೀವ್ರ ಮಹತ್ವಾಕಾಂಕ್ಷೆಯನ್ನು ವಿಮರ್ಶೆ ಮಾಡುವ ಒಂದು ತಾತ್ವಿಕ ಪ್ರಜ್ಞೆಯೂ ಇರಬಹುದು.

ನಿದ್ರೆಯ ಎಚ್ಚರದ ಬಗ್ಗೆ ನುಡಿದವರು, ನೆಮ್ಮದಿ ಸಾರ್ಥಕ್ಯ ಯಶಸ್ಸುಗಳನ್ನು ವಿಶಿಷ್ಟವಾಗಿ ವ್ಯಾಖ್ಯಾನಿಸಿ ಜಿಜ್ಞಾಸೆ ಹುಟ್ಟಿಸಿದವರು ಅಲೆಕ್ಸಾಂಡರನ ಕಾಲದ ಮೊದಲೂ ಆಮೇಲೆಯೂ ಸಿಗುತ್ತಾರೆ. ತಮ್ಮೊಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ, ಹೊರಗಿನ ಉತ್ತರಗಳನ್ನು ಪ್ರಶ್ನಿಸುತ್ತ ಬದುಕಿದ ಬಾಳಿದ ಬುದ್ಧ, ಬಸವಣ್ಣ, ಗಾಂಧಿ ಮತ್ತೆ ಇನ್ನೂ ಅನೇಕರು ಹೀಗೆ ಎಚ್ಚರದಲ್ಲೇ ನಿದ್ರಿಸಿದವರ ಸಾಲಿಗೆ ಸೇರಿದವರು. ಮತ್ತೆ ನಿದ್ದೆಯೊಳಗಿನ ಜಾಗೃತಿಯಿಂದಲೇ  ಒಂದು ಸಾರ್ಥಕ ವಿರಾಮದ  ಹುಡುಕಾಟದಲ್ಲಿದ್ದವರು. ರಾತ್ರಿಯಿಡೀ ಕತ್ತಲೊಡನೆ ತರ್ಕಿಸುತ್ತಾ ನಿದ್ರೆಗೆಡುತ್ತ ಪ್ರಯಾಣಿಕರನ್ನು ಹೊಸ ನಿಲ್ದಾಣಕ್ಕೆ ತಲುಪಿಸುವ ರಾತ್ರಿ ಪಾಳಿಯ ಚಾಲಕರು.

  • ಯೋಗಿಂದ್ರ ಮರವಂತೆ