ಅನಿವಾಸಿ ಭಾರತೀಯ ವೈದ್ಯ ಕವಿಗೋಷ್ಠಿ – ಭಾಗ 1; ಆಯ್ದ ಕವನಗಳು

ಪ್ರಿಯರೇ, ನಮಸ್ಕಾರ. ಹೊಸವರ್ಷದ ಶುಭಾಶಯಗಳು (ನನ್ನಿಂದ). ಹೋದ ವಾರ ಭಾರತೀಯ ವೈದ್ಯ ಸಂಘದ ಕರ್ನಾಟಕ ಶಾಖೆಯ ವತಿಯಿಂದ ಆಯೋಜಿತವಾದ ಅನಿವಾಸಿ ಭಾರತೀಯ ಕವಿಗೋಷ್ಠಿ ನಡೆಯಿತು. ಇದರಲ್ಲಿ ಹಲವಾರು ಭಾರತೀಯ ಮೂಲದ ಕವಿ-ಕವಯತ್ರಿಯರು ತಮ್ಮ ಕವನಗಳನ್ನು ಓದಿದರು.  ಅಮೇರಿಕಾ, ಇಂಗ್ಲಂಡ್ ಮತ್ತು ಕತಾರ್ ದೇಶವಾಸಿಗಳಾಗಿರುವ ಕವಿಗಳ ಕವನಗಳು ವಿವಿಧ ವಿಷಯಗಳ ಮೇಲಿದ್ದು,  ಅವುಗಳ ಕನ್ಸ್ಟ್ರಕ್ಷನ್, ಭಾಷೆ, ಪದಲಾಲಿತ್ಯ ಆಕರ್ಷಕವಾಗಿದ್ದವು. ಇಂಗ್ಲಂಡಿನ ಕವಿಗಳ ಪರಿಚಯ ಅನಿವಾಸಿ ಗುಂಪಿನ ಮೂಲಕ ನನಗೆ ಇದೆ, ಡಾ. ಜಯಕೀರ್ತಿ ರಂಗಯ್ಯ ಅವರನ್ನು ಹೊರತುಪಡಿಸಿ.  ಕೊನೆಯಲ್ಲಿ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಅಮೆರಿಕದ ಡಾ. ತ್ರಿವೇಣಿ ಶ್ರೀನಿವಾಸರಾವ್ ಅವರು, ಪ್ರತಿ ಕವನದ ವಿಮರ್ಶೆ ಮಾಡಿದರು. ಡಾ. ಗಡ್ಡಿ ದಿವಾಕರ್ ಅವರು ಕಾರ್ಯಕ್ರಮವನ್ನು ಸಮಯ ತಪ್ಪದಂತೆ, ಇನ್ನೊಬ್ಬ ವೈದ್ಯಕವಯಿತ್ರಿ ಡಾ. ವೀಣಾ ಎನ್ ಸುಳ್ಯ ಅವರ ಸಹಯೋಗದಲ್ಲಿ ನಡೆಸಿಕೊಟ್ಟರು.   ಅದರಲ್ಲಿನ ಆಯ್ದ ಕವನಗಳನ್ನು ಇಂದಿನ ಬ್ಲಾಗಿನಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ, ಆಯಾ ಕವಿಗಳ ಪರಿಚಯದೊಂದಿಗೆ. ಈ ಕಾರ್ಯಕ್ರಮದ ಹಿನ್ನೆಲೆಯನ್ನು ಬರೆದು ಕೊಟ್ಟ ಮಿತ್ರ ರಾಮಶರಣರಿಗೆ ವಂದನೆಗಳು. 
ಕವನಗಳನ್ನು ಎರಡು ಆವೃತ್ತಿಗಳಲ್ಲಿ ಭಾಗ ಮಾಡಿ ಹಾಕುತ್ತಿದ್ದೇನೆ. ಎಂದಿನಂತೆ ಓದಿ ನಿಮ್ಮ ಅನಿಸಿಕೆ ಬರೆಯುವುದು.
ಧನ್ಯವಾದಗಳೊಂದಿಗೆ – ಲಕ್ಷ್ಮಿನಾರಾಯಣ ಗುಡೂರ, ವಾರದ ಸಂಪಾದಕ.

**************************************************************

ಹಿನ್ನೆಲೆ: (ಕೃಪೆ: ಡಾ. ರಾಮಶರಣ ಲಕ್ಷ್ಮೀನಾರಾಯಣ) 
ಭಾರತೀಯ ವೈದ್ಯ ಸಂಘದ ಕರ್ನಾಟಕ ಘಟಕ ವೈದ್ಯ ಬರಹಗಾರರ ಸಮಿತಿಯನ್ನು ಸುಮಾರು ೫ ವರ್ಷಗಳ ಹಿಂದೆ ಪ್ರಾರಂಭಿಸಿತು. ಈ ಸಮಿತಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ಕೋವಿಡ್ ಸಮಯದಲ್ಲಿ ವೈದ್ಯ ಕವಿ ಸಮ್ಮೇಳನವನ್ನೂ ನಡೆಸಿತ್ತು. ಎರಡು ವರ್ಷಗಳ ಹಿಂದೆ ವೈದ್ಯ ಸಂಪದ ಎಂಬ ದ್ವೈ ಮಾಸಿಕ ಪತ್ರಿಕೆಯನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತಿದೆ. ಅನಿವಾಸಿಯಾ ಸದಸ್ಯರಾದ ಡಾ. ಕೇಶವ ಕುಲಕರ್ಣಿ ಈ ಸಂಚಿಕೆಯ ಮೊತ್ತ ಮೊದಲ ಅನಿವಾಸಿ ಭಾರತೀಯ ವಿಭಾಗದ ಸಂಪಾದಕರಾಗಿ ೨೦೨೨ರಲ್ಲಿ ಕಾರ್ಯನಿರ್ವಹಿಸಿದರು. ಆಗ ಅವರು ಈ ಪತ್ರಿಕೆಯ ಸಂಚಿಕೆಗಳನ್ನು ವಾಟ್ಸ್ಯಾಪ್ ಮೂಲಕ ನಮ್ಮೊಡನೆ ಹಂಚಿಕೊಂಡಿದ್ದು ನೆನಪಿರಬಹುದು. ಕನ್ನಡ ವೈದ್ಯ ಬರಹಗಾರರ ಸಮಿತಿಯ ಅಧ್ಯಕ್ಷೆ ಡಾ. ವೀಣಾ ಸುಳ್ಯ ಅನಿವಾಸಿ ವೈದ್ಯರನ್ನು ಒಟ್ಟುಗೂಡಿಸಿ ಕವಿ ಸಮ್ಮೇಳನವನ್ನು ಜಾಲ ತಾಣದಲ್ಲಿ ನಡೆಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಅವರೇ, ಡಾ. ಗಡ್ಡಿ ದಿವಾಕರ್ ಅವರನ್ನು ನಿರ್ವಾಹಕರನ್ನಾಗಿ ನಿಯೋಜಿಸಿದರು. ಈಗಿನ ವೈದ್ಯ ಸಂಪದದ ಅನಿವಾಸಿ ವಿಭಾಗದ ಸಂಪಾದಕರ ಹಾಗೂ ತಮ್ಮ ಸಂಪರ್ಕ ಜಾಲದ ಮೂಲಕ ವೈದ್ಯ ಬರಹಗಾರರನ್ನು ಕಲೆ ಹಾಕಿದರು. ಒಪ್ಪಿಕೊಂಡ ಕವಿಗಳಿಂದ ಕವನಗಳನ್ನು ಪಡೆದುಕೊಂಡು, ಅಧ್ಯಕ್ಷರಾದ ಅಮೆರಿಕೆಯಲ್ಲಿ ನೆಲೆಸಿರುವ ತ್ರಿವೇಣಿ ರಾವ್ ಅವರಿಗೆ ಅವನ್ನು ತಲುಪಿಸಲಾಗಿತ್ತು. ಮೊದಲೇ ನಿಗದಿ ಪಡಿಸಿದ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ರವಿವಾರ ಮಧ್ಯಾಹ್ನ ೨:೩೦ಕ್ಕೆ ಪ್ರಾರಂಭವಾಯಿತು.

****************************

ಡಾ. ಮುರಳಿ ಹತ್ವಾರ ಅವರ ಮೂಲ ಕೋಟೇಶ್ವರ. ಬೆಳೆದ ಊರು ಬಳ್ಳಾರಿ. ಬೆಂಗಳೂರು, ಬಳ್ಳಾರಿಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಮುರಳಿ, ಈಗ ಲಂಡನ್ನಿನಲ್ಲಿ ಹಾರ್ಮೋನು ವೈದ್ಯರಾಗಿ ಕಾರ್ಯನಿರತರಾಗಿದ್ದಾರೆ. ಮುರಳಿ ನಮ್ಮ ಅನಿವಾಸಿ ಬ್ಲಾಗಿನ ಓದುಗರಿಗೆ, ತಮ್ಮ ಕವನ, ಹೈಕುಗಳ ಮೂಲಕ ಈಗಾಗಲೇ ಚಿರಪರಿಚಿತರಾಗಿದ್ದಾರೆ.

ಹೆಜ್ಜೆಗಳು:

ನಿನ್ನೆ ನಡೆದ ಹೆಜ್ಜೆಗಳ ಗುರುತು
ಹಿಡಿಯಲು ಮತ್ತೆ ಮರಳುವಾಸೆ
ಅಳಿಸಿದ ಅಲೆಗಳಲ್ಲಿ ಅದನ್ನು
ಹುಡುಕುವದು ಹೇಗೆ?

ಹೆಜ್ಜೆಗಳ ದಾರಿ ಎಳೆದ ಮೋಡಗಳೆಲ್ಲ
ಮಳೆಯಾಗಿ ಮರೆಯಾಗಿವೆ
ಸುಡುವ ಬಿಸಿಲಿನ ಸೂರ್ಯ
ಸರಿದಂತೆ ಹೊರಳುವ ನೆರಳಿನ ದಿಕ್ಕು,
ನಕ್ಷತ್ರಗಳ ಬೆಳಕು ಹೇಳುವ ದಾರಿ
ತಿಳಿಯುವುದು ಹೇಗೆ?

ಎಷ್ಟು ಸದ್ದಿನ ಹೆಜ್ಜೆಗಳು!
ಒಂದು ಊರುವದರಲ್ಲಿ ಮತ್ತೊಂದು
ಬೇಗ! ಬೇಗ! ಬೇಗ!
ಮುಂದೆ ಹೋದಷ್ಟೂ ಅವಸರ,
ದಾರಿಯ ಹೂಗಳ ಪರಿಮಳವೂ ತಿಳಿಯದಷ್ಟು.
ಬೇಲಿಯ ಮುಳ್ಳುಗಳ ಕಲೆ ಮೈತುಂಬಾ.

ಯಾವ ಹೆಜ್ಜೆಯ ಜಾಡು, ಯಾವ ನೆರಳಿನ ಛಾಯೆ?
ನಿನ್ನೆಯೋ? ನಾಳೆಯೋ?
ನಂಬಿಕೆಯ ದೀವಿಗೆಯೊ? ಕಲ್ಪನೆಯ ಮಾಯೆಯೋ? ಎಲ್ಲ ಬೆಳಕೀಗ ಶೂನ್ಯ; ಮನಸು ಮುಳುಗಿದ ಗುಡ್ಡೆ.
ಹೊಸ ಉಸಿರಿನ ಹುಡುಕಾಟ
ನೀರ ದಾಟಿಸುವ ಸೇತುವೆಯ ಕಟ್ಟ ಬೇಕಿನ್ನೂ

ಕಾಲಿನಡಿ ಸರಿದ ನೀರು, ತೊಯ್ದ ಮಣ್ಣಿನ ಸ್ಪರ್ಶ
ಮೈ ಸೋಕಿದ ತಂಗಾಳಿ, ಕಣ್ತೆರೆಯೆ ಆಗಸದ ಕೆಂಪು
ಸುತ್ತ ತರತರದ ಕಂಪಿನ ಹೂಗಳು
ಉಸಿರೆಳೆದು ನಿಂತ ಮನದೊಳಗೆ ಹೊಸ ರೆಕ್ಕೆಗಳು

ಕಾಲು ಮುಟ್ಟಿದ ಅಲೆ ಕರೆದು ಹೇಳಿತು:
ಈ ಹೆಜ್ಜೆಯ ಗುರುತು ನೀನೆ ಇಟ್ಟುಕೋ.

- ಡಾ. ಮುರಳಿ ಹತ್ವಾರ್

**************************************

ಡಾ. ಜಯಕೀರ್ತಿ ರಂಗಯ್ಯ: ಹುಟ್ಟಿದ್ದು, ಬೆಳೆದಿದ್ದು: ಚಿಕ್ಕನಾಯಕನ ಹಳ್ಳಿ, ತುಮಕೂರು ಜಿಲ್ಲೆ. ಓದಿದ್ದು: ಎಂ.ಬಿ.ಬಿ.ಎಸ್ (ಬಿ.ಎಂ.ಸಿ) ಎಂ.ಡಿ. ಮೈಕ್ರೋಬಯಾಲಜಿ (ಜಿಪ್ಮರ್, ಪಾಂಡಿಚೆರಿ), ಎಫ್.ಆರ್.ಸಿ.ಪ್ಯಾಥ್ (ಯು.ಕೆ) ಕರ್ಮಸ್ಥಳ: ಎಪ್ಸಂ & ಸೇಂಟ್ ಹೆಲಿಯರ್ ಆಸ್ಪತ್ರೆ. ಲಂಡನ್

ವೀರಸನ್ಯಾಸಿಗೂಂದು ನುಡಿನಮನ

ಎಂಥ ಕಾಂತಿ, ಏನು ಶಾಂತಿ
ನಿಮ್ಮ ಕಣ್ಣ ನೋಟದಲಿ

ಕೋಟಿ ಸೂರ್ಯ ಸಮಪ್ರಭೆ
ಸಪ್ತ ಋಷಿಯ ಮೊಗದಲಿ

ಎಂಥ ಕೆಚ್ಚು, ಏನು ಶೌರ್ಯ
ನಿಮ್ಮ ಪ್ರತೀ ಮಾತಲಿ

ತಾಯಿ-ತಂದೆ, ಬಂಧ ಹರಿದೆ
ಸುಖದ ಬಾಳು, ಸಂಸಾರ ತೂರೆದೆ

ಗುರುವ ಪಡೆದು, ಕಾವಿ ತೂಟ್ಟೆ
ಜನರ ಪೂರೆವ, ಶಪಥವಿಟ್ಟೆ

ದೇಶ ಪೂರ ನಿಮ್ಮ ಹೆಜ್ಜೆ
ದೇಶದೊರಗೂ ಅದರ ಸದ್ದು

ಲೋಲುಪತೆಯ ಪರದೇಶದಲ್ಲೂ
ನಾಡ ಜನರ ಚಿಂತೆ ನಿಮಗೆ

ಅನ್ನ-ನೀರು,ನಿದ್ರೆ-ಭೋಗ ಎಲ್ಲ ತೃಣ
ಜೀವಾತ್ಮನ ಸೇವೆಯಲಿ

ಪತಂಜಲಿಯ ಮರೆತ ಮಣ್ಣಿನಲ್ಲಿ
ಯೋಗಸೂತ್ರದೊಸಬೆಳೆ

ಭಕ್ತಿ-ಕರ್ಮ, ಜ್ಞಾನಯೋಗ
ಶಕ್ತಿಯಿರೆ, ರಾಜಯೋಗ

ತಾಳ್ಮೆ, ತುಡಿತ, ಅಖಂಡ ಪ್ರೀತಿ
ನೀವು ಕೊಟ್ಟ ಮಹಾಮಂತ್ರ

ಕೀರ್ತಿ, ಕನಕ ಮೋಹ-ದಾಹ
ಜಯಿಸೊ ವಿವೇಕ ನೀಡು ತಂದೆ,
ಯುಗಪುರುಷನ ಕಂದನೇ!

- ಡಾ। ಜಯಕೀರ್ತಿ ರಂಗಯ್ಯ , ಯು.ಕೆ.

*************************************

ಡಾ. ಸವಿತಾ ಕಲ್ಯಾ: ಹುಟ್ಟಿದ್ದು, ಬೆಳೆದಿದ್ದು ಮೈಸೂರಿನಲ್ಲಿ. ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ / ಜೆಎಸ್ಎಸ್ ವೈದ್ಯಕೀಯ ಕಾಲೇಜಿನಲ್ಲಿ ಪದವಿ. ರೈಟ್ ರಾಜ್ಯ ವಿಶ್ವವಿದ್ಯಾಲಯ, ಡೇಟನ್, ಒಹಾಯೊದಲ್ಲಿ  ಆಂತರಿಕ ವೈದ್ಯಕೀಯದಲ್ಲಿ ರೆಸಿಡೆನ್ಸಿ: ಸಂಧಿವಾತಶಾಸ್ತ್ರದಲ್ಲಿ ಫೆಲೋಶಿಪ್: ವಿಸ್ಕಾನ್ಸಿನ್ ವೈದ್ಯಕೀಯ ಕಾಲೇಜು, ಮಿಲ್ವಾಕೀ . ಅರಿಜೋನಾದ ಫೀನಿಕ್ಸ್‌ನಲ್ಲಿರುವ ಕ್ರೈಟನ್ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿರುವ ವ್ಯಾಲಿ ವೈಸ್ ಹೆಲ್ತ್‌ಕೇರ್ ಸೆಂಟರ್‌ನಲ್ಲಿ ಸಿಬ್ಬಂದಿ ಸಂಧಿವಾತಶಾಸ್ತ್ರಜ್ಞರಾಗಿದ್ದಾರೆ. ಹವ್ಯಾಸಗಳಲ್ಲಿ ಪ್ರದರ್ಶನ, ವಿಶೇಷವಾಗಿ ಕನ್ನಡದಲ್ಲಿ ಬರೆಯುವುದು ಸೇರಿವೆ. ಯೂಟ್ಯೂಬ್‌ನಲ್ಲಿ ಇವರು ಬರೆದು,ನಟಿಸಿದ  ” NRI, non respected Indian ” ಹಾಗು ಅಕ್ಕ ನಾಟಕ ಹೆಚ್ಚು ಗುರುತಿಸಲ್ಪಟ್ಟಿವೆ.

ಅರ್ಹತೆಗೆ ಪಟ್ಟ

ಜೀವನ ಚದುರಂಗದಾಟ
ರಾಜನಿಗೆ ಒಂದೇ ಚೌಕದೋಟ
ರಕ್ಷಿಸುವಳು ರಾಣಿ ಆಡಿ ಪರದಾಟ
ಆದರೂ ಕಟ್ಟುವೆವು ರಾಜನಿಗೆ ಪಟ್ಟ

ಪುಟ್ಟಿ ಹುಟ್ಟಿದರೆ ಬೇಡುವೆವು ಪುಟ್ಟ
ಪುಟ್ಟಿಗೆ ಮನೆ ತವರೆಂದು ಮಾಡುವೆವು ಮನದಟ್ಟ
ಹೊರುವಳು ಆಮನೆ ಈಮನೆ ಭಾರದ ಬೆಟ್ಟ
ಆದರೂ ಕುಲೋದ್ಧಾರಕನೆಂಬ ಬಿರುದ ಪುಟ್ಟನೇತೊಟ್ಟ

ಪುಟ್ಟಿ ಮಾತನಾಡಿದರೆ ವಾಯಾಡಿ, ನಲಿದರೆ ವಯ್ಯಾರಿ
ಕೋಪ ತೋರಿದರೆ ಬಜಾರಿ , ಬಾಯಿ ಮುಚ್ಚೆ ರಾಜಕುಮಾರಿ
ಕೆಂಡ ಕಾರಿದರೆ ಕಾಳಿ, ಅನ್ಯಾಯ ವಿರೋಧಿಸಿದರೆ ಮನೆಹಾಳಿ
ಸಹಸ್ರನಾಮದ ನಡುವೆ ಮನಬಿಚ್ಚಿ ಹೇಗೆ ಬಾಳಿಯಾಳು ಹೇಳಿ

ಪುಟ್ಟ ಹುಟ್ಟಿದ್ದಕ್ಕೆ ಜಾಣ, ಅಪ್ಪ ಅಮ್ಮಗೆ ಆಭರಣ
ಮನೆತನದ ಹೆಸರು ಮುಂದುವರೆಸುವ ರಾಮಬಾಣ
ಮಗನ ಹೆರದಿದ್ದರೆ ಕೊರಗುವರು ಇಡೀ ಕುಲವೇ ಭಣಭಣ
ಕಾಲಾನುಕಾಲದಿಂದ ಭೇದಬಗೆಯುತಿದೆ ಸಮಾಜದ ಕಣಕಣ

ಪುಟ್ಟನಂತೆಯೇ ಪುಟ್ಟಿಯೂ ದೇವರ ವರ
ಎತ್ತಾಡಿಸಿ ಪ್ರೋತ್ಸಾಹಿಸಿ ಒಂದೇ ತರ
ಇಡೀ ಕುಲಕೆ ಪುಟ್ಟಿ ನೆರಳನೀಡುವ ಮರ
ಹೊಸ ಜೀವವ ಪೋಣಿಸುವ ಮುತ್ತಿನ ಸರ

ಕಣ್ಣು ತೆರೆದು ತೀರಿಸೋಣ ಪುಟ್ಟಿಯರಿಗೆ ಮಾಡಿದ ನಷ್ಟ
ಭೇದ ತಿಳಿಯದೇ ಮಾಡಿದರು ಸಹಿಸುವುದು ಕಷ್ಟ
ಆರತಿಯೋ ಕೀರುತಿಯೋ ಅವರವರ ಇಷ್ಟ
ಇದ ಮುಂದಿನ ಪೀಳಿಗೆಗೆ ಮಾಡೋಣ ಸ್ಪಷ್ಟ

ಸಮಾನರು ಪುಟ್ಟಿ ಪುಟ್ಟ
ಕಟ್ಟೋಣ ಅರ್ಹತೆಗೆ ಪಟ್ಟ

- ಡಾ। ಸವಿತಾ ಕಲ್ಯಾ, ಯು.ಎಸ್.ಎ

***********************************

ಡಾ. ಮೀನಾ ಸುಬ್ಬರಾವ್: ಮೂಲತಃ ಕಡೂರಿನವರು. ಹುಟ್ಟಿ, ಬೆಳೆದುದೆಲ್ಲಾ  ಕಡೂರು, ನಂತರ ನ್ಯಾಶನಲ್ ಕಾಲೇಜ್ ಬೆಂಗಳೂರು ಮತ್ತು ಮೈಸೂರು ವೈದ್ಯಕೀಯ ವಿದ್ಯಾಲಯಗಳಲಿ ವ್ಯಾಸಂಗ. ಅಮೇರಿಕಾದ ಲಾಸ್ ಆಂಜಲೀಸ್ನಲ್ಲಿ ಮಕ್ಕಳ ಆರೋಗ್ಯ ಶಾಸ್ತ್ರದಲ್ಲಿ ( ಪೀಡಿಯಾಟ್ರಿಕ್ಸ್) ರೆಸಿಡೆನ್ಸಿ ಮುಗಿಸಿ ಸುಂದರವಾದ ಕ್ಯಾಲಿಫೋರ್ನಿಯಾದ ಮಧ್ಯ ಕರಾವಳಿ/ ಸ್ಟೈನ್ಬೆಕ್ ದೇಶ ಎಂದೇ ಹೆಸರಾಗಿರುವ ಮಾಂಟೆರೆ ಪ್ರದೇಶದಲ್ಲಿ ವಾಸ ಮತ್ತು ಮಕ್ಕಳ ತಜ್ಞೆಯಾಗಿ ಸೇವೆ ಸಲ್ಲಿಸುತಿದ್ದಾರೆ. ಕನ್ನಡದಲಿ ಕಥೆ, ಕವನ, ಪ್ರಬಂಧ, ಹಾಸ್ಯ ಮುಂತಾದ ರೂಪಕಗಳ ಬರೆದು ಸಂಪದ, ದಟ್ಸಕನ್ನಡ, ತನುಮನ ಬ್ಲಾಗ್ ಮುಂತಾದ ಜಾಲತಾಣಗಳಲಿ ಪ್ರಕಟಿಸಿದ್ದಾರೆ. ಸುಮಾರು ಭಕ್ತಿಗೀತೆಗಳ ರಚನೆ ಮಾಡಿ ಮೊದಲ 9 – ಹಾಡುಗಳ ಒಂದು ಆಲ್ಬಮ್ ಪುತ್ತೂರು ನರಸಿಂಹ ನಾಯಕರ ಸಂಗೀತ ಸಂಯೋಜನೆ, ಗಾಯನದಲ್ಲಿ ಧ್ವನಿ ಮುಗ್ರಿತವಾಗಿ ಪ್ರಕಟವಾಗಿದೆ. ಕನ್ನಡ ಕೂಟದ ಸಂಚಿಕೆಗಳು, ಕನ್ನಡ ಸಾಹಿತ್ಯ ರಂಗದ ( ಅಮೇರಿಕಾ) ಪುಸ್ತಕಗಳಲ್ಲೂ ಲೇಖನ, ಕಥೆಗಳು ಮತ್ತು ಇತರೆ ಬರಹಗಳು ಪ್ರಕಟವಾಗಿವೆ.

ಒಲವು!! (ದಿವ್ಯ ಅನುರಾಗ)

ಒಲಿದೆ ನೀನು ಒಂದು ಕ್ಷಣಕೆ ನನ್ನ ಬಾಳ ಪಥದಲಿ
ನಡೆದೆ ನಾನು ಅದರ ಮೇಲೆ ನನ್ನ ಬಾಳ ರಥದಲಿ!

ಸವಿನೆನಪು ಸಾಕೊಂದು ಬಾಳಿನಾ ಅರ್ಥಕೆ
ಸವಿಯುತಿರೆ ಸಾಗಿಹುದು ಬದುಕಿನಾ ಪತಾಕೆ!

ಆ ಮಧುರ ಅನುಭವವು ಅಮರವಾಗಿದೆ ಮನಕೆ
ಆ ಅಧರ ಅದರುವಿಕೆ ಅರಸುತಿದೆ ಜೀವಕೆ!

ಬರದಿರಳು ನಿದಿರೆಯು ನಿನ್ನಂದ ನೆನೆಯದೆ
ಹಗಲಿರುಳು ಸಾಗದು ಮಕರಂದ ಸವಿಯದೆ!

ಎಲ್ಲಿ ನೋಡಿದರಲ್ಲಿ ನೀ ನನ್ನ ನೋಟವಾಗಿರುವೆ
ಏನು ಮಾಡಿದರೂ ನೀ ನನ್ನ ಆಟವಾಗಿರುವೆ!

ನೀ ನಡೆಸುತಿರುವೆ ಬದುಕನು ಬರಡಾಗಿಸದೆ
ನೀ ಬಡಿಸುತಿರುವೆ ಅರಿವನು ಬರಿದಾಗಿಸದೆ!

ಮತ್ತೊಮ್ಮೆ ಬಾ ನೀನು ಭವ್ಯ ಭಾವಗಳ ಹೊತ್ತು
ಇನ್ನೊಮ್ಮೆ ಕೊಡು ನೀನು ದಿವ್ಯ ಅನುರಾಗದ ತುತ್ತು!

ನಗುತಿರು ಎಂದೆಂದೂ, ಬರಲಿ ಏನೊಂದು
ಸಾಗುತಿರು ಬಾಳಿನಲಿ ಬರಲಿ ನೂರೊಂದು

ನುಡಿದೆ ಈ ದಿವ್ಯ ವಾಣಿಯ ನೀನಂದು ಬಿಡಿಸಿ ಮನದಾಳದ ಚಂಚಲತೆಯ ಚೆಂಡು

- ಡಾ. ಮೀನಾ ಸುಬ್ಬರಾವ್.

***********************************************

ಇಂದಿನ ಶಿಕ್ಷಣಕ್ಷೇತ್ರ – ಶಿಕ್ಷಕಿಯ ದೃಷ್ಟಿಯಲ್ಲಿ.

ಕಳೆದ ವಾರಗಳ ಚಿಂತನ ಲೇಖನಗಳ ಹಾದಿಯಲ್ಲೇ ಈ ವಾರವೂ ಶಿಕ್ಷಣ ಕ್ಷೇತ್ರದ ಬಗ್ಗೆಯೇ ಮುಂದುವರೆದಿದೆ. ಬೆಂಗಳೂರಿನಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ಸೀತಾ ಗುಡೂರ ಅವರ ಸ್ವಂತ ಅನುಭವದ ಲೇಖನ. ಪದವಿಯವರೆಗೆ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಸೀತಾ ಗುಡೂರ್, ಮುಂದೆ ಕನ್ನಡದಲ್ಲಿ ಎಮ್ ಎ, ಎಂಫಿಲ್ ಮಾಡಿ ಕನ್ನಡದ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಳೆಗನ್ನಡ, ದಾಸಸಾಹಿತ್ಯ, ವಚನಸಾಹಿತ್ಯ ಇತ್ಯಾದಿ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಸೀತಾ ಗುಡೂರ್ ಒಬ್ಬ ಉತ್ಸಾಹಿ ಶಿಕ್ಷಕಿ. ನಗರದ ಒಳ ಮತ್ತು ಹೊರವಲಯದ ಸಂಸ್ಥೆಗಳಲ್ಲಿ ಕೆಲಸಮಾಡಿರುವ ಅವರ ಅನುಭವ ಹೀಗಿದೆ. ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ. – ಸಂಪಾದಕ.

*****

ನಾವು ಕೆಲಸ ಮಾಡುತ್ತಿರುವ ಕ್ಷೇತ್ರ ಯಾವುದೇ ಆಗಿರಲಿ, ಮೊತ್ತಮೊದಲಿಗೆ ಅದು ನಮ್ಮ ಆಸಕ್ತಿಯ ಕ್ಷೇತ್ರವಾಗಿರಬೇಕು. ಏಕೆಂದರೆ, ಮೂಲಭೂತವಾಗಿ ಆಸಕ್ತಿಯೇ ಎಲ್ಲವನ್ನು ಕಲಿತುಕೊಳ್ಳಲು, ಕಲಿಸಲು ಪ್ರೇರೇಪಿಸುತ್ತದೆ. ರಾಷ್ಟ್ರಕವಿ ಶ್ರೀ ಜಿಎಸ್ ಶಿವರುದ್ರಪ್ಪ ಅವರು ಹೇಳುವಂತೆ "ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ….. ಬರಿ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ?" ಈ ಕವನದ ಉದ್ದಕ್ಕೂ ಕಾಣುವ ’ಪ್ರೀತಿ’ ಆಸಕ್ತಿಯ ರೂಪವೇ ಆಗಿದೆ. ಕಲಿಯುವ, ಕೆಲಸ ಮಾಡುವ, ಕಲಿಸುವ ಬಗ್ಗೆ ಪ್ರೀತಿಯೇ ಇಲ್ಲದ ಮೇಲೆ ಶಿಕ್ಷಣದ ಉದ್ದೇಶವು ಸಾಧಿತವಾಗುವುದಿಲ್ಲ ಅಲ್ಲವೇ? 

ಶಿಕ್ಷಣ ರಂಗದ ಇಂದಿನ ಸಮಸ್ಯೆಗಳ ಕಡೆಗೆ ಗಮನಹರಿಸಿದಾಗ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಬ್ಬರಲ್ಲೂ ಸಮಸ್ಯೆ ಇರುವುದು ಎದ್ದು ಕಾಣುವಂಥದ್ದು. ಮೊದಲಿಗೆ ಶಿಕ್ಷಕರನ್ನೇ ನಾವು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಏಕೆಂದರೆ, ಅರಿಯದ ವಿದ್ಯಾರ್ಥಿಗಳಿಗೆ ಎಲ್ಲವನ್ನೂ ಹಂತ ಹಂತವಾಗಿ ಕಲಿಸುವ ದೊಡ್ಡ ಹೊಣೆಗಾರಿಕೆ ಶಿಕ್ಷಕರದೇ. ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣದ ಭದ್ರಬುನಾದಿ ಬೀಳಬೇಕಾದದ್ದು ಅತ್ಯಗತ್ಯ. ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರಾಥಮಿಕ ಹಂತದಲ್ಲಿ ಭಾಷಾ ವಿಷಯಗಳನ್ನು ಕಲಿಸುವಲ್ಲಿ ದಿವ್ಯನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಎಳೆಯ ವಯೋಮಾನದ ಚಂಚಲ ಮನಸ್ಥಿತಿಯ ಮಕ್ಕಳಿಗೆ ಕನ್ನಡ (ಅಥವಾ ಯಾವುದೇ) ಭಾಷೆಯನ್ನು ಹೇಳಿಕೊಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಸ್ವತಃ ಶಿಕ್ಷಕರು ಪಾಠ ಮಾಡುವಾಗ ಶುದ್ಧ ಗ್ರಾಂಥಿಕ ಭಾಷೆಯ ಬಳಕೆ, ಸ್ಪಷ್ಟ ಉಚ್ಚಾರಣೆ, ಶುದ್ಧ ಹಾಗೂ ಸ್ಪಷ್ಟ ಬರವಣಿಗೆಗಳನ್ನು ಮೈಗೂಡಿಸಿಕೊಂಡಿರಬೇಕಾಗುತ್ತದೆ. ಆದರೆ ಜೀವನೋಪಾಯಕ್ಕಾಗಿ ಯಾವುದೋ ಒಂದು ನೌಕರಿಯನ್ನು ಮಾಡಬೇಕಾಗಿ ಬಂದ ಅನಿವಾರ್ಯತೆಯಲ್ಲಿ ಎಲ್ಲಿಯೂ ಸಲ್ಲದವರು ಶಿಕ್ಷಣ ಕ್ಷೇತ್ರಕ್ಕೆ ಸಂದಾಗ, ಅವರಲ್ಲಿ ಅಧ್ಯಯನ-ಅಧ್ಯಾಪನಗಳ ಕಡೆಗೆ ಬದ್ಧತೆ ಕಡಿಮೆಯಾಗುವ ಸಾಧ್ಯತೆಯೂ ಇಲ್ಲದಿಲ್ಲ. ಇದಕ್ಕೆ ಅಪವಾದ ಎನಿಸುವವರು ಸಾಕಷ್ಟು ಜನ ಅಧ್ಯಾಪಕರು ಇದ್ದಾರೆ ಎನ್ನುವುದೇ ಸಂತೋಷದ ಸಂಗತಿ.

ಇನ್ನು ಉಪನ್ಯಾಸಕರು ಕನ್ನಡ ಭಾಷಾ ಐಚ್ಛಿಕ ವಿಷಯವನ್ನು ಪಾಠ ಮಾಡಬೇಕೆಂದರೆ ಅವರ ಸಾಹಿತ್ಯದ ಅಧ್ಯಯನದ ವ್ಯಾಪ್ತಿ ದೊಡ್ಡದಿರಬೇಕಾಗುತ್ತದೆ. ಬರಿಯ ಕನ್ನಡವೊಂದೇ ಅಲ್ಲದೇ, ಅದರಲ್ಲಿ ಹಾಸುಹೊಕ್ಕಾಗಿರುವ ಇತರ ಭಾಷೆಗಳ ಕೊಡುಗೆಗಳ ಬಗ್ಗೆ ಸ್ವಲ್ಪವಾದರೂ ಅರಿವಿರಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಂಸ್ಕೃತ ಭಾಷೆಯ ಸ್ವಲ್ಪಮಟ್ಟಿಗಿನ ಅರಿವು ಮತ್ತು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕನ್ನಡ-ಸಂಸ್ಕೃತ ಭಾಷೆಗಳ ಅವಿನಾಭಾವ ಸಂಬಂಧದ ತಿಳಿವು ಇವು ಉಪನ್ಯಾಸಕರಲ್ಲಿ ಕಡಿಮೆಯಾಗುತ್ತಿರುವುದು ಖೇದಕರ. ಸಂಸ್ಕೃತವನ್ನು ದೂಷಿಸುವವರು ಕನ್ನಡದ ಆದಿಕವಿ ಪಂಪನಿಂದ ಹಿಡಿದು ಕುವೆಂಪು ಅವರ ತನಕ ಕಾವ್ಯವನ್ನು ಹೇಗೆ ತಾನೇ ಪಾಠ ಮಾಡಬಲ್ಲರು? ಕನ್ನಡ-ಸಂಸ್ಕೃತ ಭಾಷಾಸಮನ್ವಯದ ಕಾರಣದಿಂದ ಹುಟ್ಟಿ ಬಂದ ಈ ಅಮೂಲ್ಯ ಕೃತಿರತ್ನಗಳನ್ನು ನಿರಾಕರಿಸಲು ಸಾಧ್ಯವೇ? ಪಾಠ ಮಾಡುವ ನಾವು ಮೊದಲು ಸರಿಯಾಗಿ ಅಧ್ಯಯನ ಮಾಡಿದರೆ ಮಾತ್ರ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗದಂತೆ ಹೇಳಬಹುದು ಅನ್ನುವುದರಲ್ಲಿ ಎರಡು ಮಾತಿಲ್ಲ.

ಭಾಷೆಯನ್ನು ಕಲಿಯುವಾಗ ಮಕ್ಕಳು ಮಾಡುವ ತಪ್ಪುಗಳನ್ನು ಆರಂಭದಲ್ಲೇ ತಿದ್ದದೇ ಹೋದಾಗ ಅವರು ಪ್ರೌಢ ಶಿಕ್ಷಣ ಮುಗಿಯುವವರೆಗೂ ಹಾಗೆ ಉಳಿದುಬಿಡುತ್ತಾರೆ. ಪ್ರಥಮ ಪಿಯುಸಿಗೆ ಸೇರುವಾಗ ಬಹಳಷ್ಟು ವಿದ್ಯಾರ್ಥಿಗಳಿಗೆ ತಮ್ಮ ಹೆಸರನ್ನು ಬರೆಯಲೂ ಬರುವುದಿಲ್ಲ ಎಂದು ನಾನು ಹೇಳಿದರೆ ನೀವು ನಂಬಲಿಕ್ಕಿಲ್ಲ. ಹೆಚ್ಚುಪಾಲು ಮಕ್ಕಳು ಹ್ರಸ್ವ-ದೀರ್ಘ, ಸ್ವರ-ವ್ಯಂಜನ, ಅಲ್ಪಪ್ರಾಣ-ಮಹಾಪ್ರಾಣ, ಅ – ಹಕಾರಗಳ ಬಳಕೆ ಇತ್ಯಾದಿಗಳ ವ್ಯತ್ಯಾಸವೇ ತಿಳಿಯದೇ, ಉಚ್ಚಾರಣೆ ಮತ್ತು ಬರವಣಿಗೆ ಎರಡರಲ್ಲೂ ಬಹಳ ಹಿಂದುಳಿದವರು ಆಗಿರುತ್ತಾರೆ. ಈ ಹಂತದಲ್ಲಿ ನಾವು ಏನನ್ನು ಮಾಡಲು ಸಾಧ್ಯ? ಕಾಲೇಜು ತರಗತಿಗಳು ಆರಂಭವಾದ ಮೊದಲ ಎರಡು ವಾರಗಳಲ್ಲಿ ವರ್ಣಮಾಲೆಯನ್ನು ಬರೆಸುವ, ಧ್ವನ್ಯಂಗಗಳ ಬಗ್ಗೆ ವಿವರಿಸಿ, ಉಚ್ಚಾರಣೆಯ ಬಗ್ಗೆ ಪರಿಚಯ ಮಾಡಿಕೊಡುವ ಕೆಲಸವೇ ಆಗುತ್ತದೆ. ಆದಾಗಿಯೂ ಈ ಮಕ್ಕಳಿಗೆ ಆಸಕ್ತಿಯಿಂದ ಕೇಳುವಷ್ಟು ತಾಳ್ಮೆ ಇರುವುದೇ ಇಲ್ಲ. ಕಾಲೇಜು ಜೀವನದಲ್ಲಿ ಕಲಿಯುವುದಕ್ಕಿಂತ ಹೆಚ್ಚು ಎಂಜಾಯ್ ಮಾಡಬೇಕು ಎಂಬ ಮನಸ್ಥಿತಿಯವರೇ ಈನಡುವೆ ಬಹಳ. ತರಗತಿಯ 90 ವಿದ್ಯಾರ್ಥಿಗಳಲ್ಲಿ 15-20 ವಿದ್ಯಾರ್ಥಿಗಳು ಉತ್ತಮ ಗ್ರಹಿಕೆಯ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಉಳಿದವರಲ್ಲಿ ಸುಮಾರು 40 ವಿದ್ಯಾರ್ಥಿಗಳಿಗೆ ಪದೇಪದೇ ಹೇಳಿ ಬರೆಸಿದಾಗ ಸ್ವಲ್ಪ ಸುಧಾರಿಸುತ್ತಾರೆ. ಮಿಕ್ಕವರು ನಾವೆಷ್ಟೇ ಪ್ರಯತ್ನಪಟ್ಟರೂ ಯಾವುದೇ ಪ್ರತಿಕ್ರಿಯೆ ತೋರದೆಯೇ ಇರುತ್ತಾರೆ.

ವಿದ್ಯಾರ್ಥಿಗಳ ಈ ವರ್ತನೆಗೆ ಕೇವಲ ಅವರ ಉಡಾಫೆಯ ಮನೋಭಾವವನ್ನಷ್ಟೇ ದೂಷಿಸಲಾಗದು, ಅವರವರ ಮನೆಯ ಹಾಗೂ ಬೆಳೆದು ಬಂದ ಪರಿಸರವೂ ಮುಖ್ಯ ಕಾರಣವೆಂಬುದು ವೇದ್ಯ. ನಗರಗಳಲ್ಲಿ ತಾಯಿ-ತಂದೆಯರು ವಿದ್ಯಾವಂತರಾದರೂ, ಇಬ್ಬರೂ ಕೆಲಸ ಮಾಡುತ್ತಿರುವ ಕಾರಣಕ್ಕಾಗಿ ಸಮಯದ ಅಭಾವದಿಂದ ಅವರಿಗೆ ಮಕ್ಕಳ ಕಡೆಗೆ ಗಮನ ಹರಿಸಲಾಗಿರುವುದಿಲ್ಲ. ಇನ್ನು ಗ್ರಾಮಾಂತರ ಮಕ್ಕಳ ತಂದೆತಾಯಿಯರೋ ಅನಕ್ಷರಸ್ಥರು, ಕೂಲಿ-ನಾಲಿಗಳಿಗೆ ಹೋಗುವವರು ಇರುತ್ತಾರೆ; ಎಷ್ಟೋ ಕುಟುಂಬಗಳಲ್ಲಿ ಕುಡಿತದ ವ್ಯಸನ, ಕೌಟುಂಬಿಕ ಕಲಹ, ಅನಾಥ ಮಕ್ಕಳು ಯಾರದೋ ಆಶ್ರಯದಲ್ಲಿದ್ದು ಓದುತ್ತಿರುವವರು, ಕೆಲಸದ ಮಧ್ಯೆ ಓದಲು ಸಮಯವೇ ಸಿಗದಿರುವುದು ಮುಂತಾದ ಕಾರಣಗಳೆಲ್ಲ ಗಮನಕ್ಕೆ ಬರುತ್ತಿರುತ್ತವೆ. ಈ ಎಲ್ಲಾ ಗಂಭೀರ ಸಮಸ್ಯೆಗಳ ಮಧ್ಯೆಯೂ ಜೀವನದಲ್ಲಿ ಸಾಧಿಸುವ ಗುರಿಯಿಟ್ಟುಕೊಂಡು ಓದುವ ಮಕ್ಕಳೇ ನಮಗೆ ನಿರಂತರ ಸ್ಫೂರ್ತಿ. ನಿಜ ಹೇಳಬೇಕೆಂದರೆ, ಒಂದು ತರಗತಿಯಲ್ಲಿ ಇಂಥವರು ಒಂದಿಬ್ಬರು ಇದ್ದರೂ ಪಾಠ ಮಾಡಲು ಉತ್ಸಾಹವಿರುತ್ತದೆ.

ಪಠ್ಯಕ್ಕೆ ಸಂಬಂಧಿಸಿದಂತೆ ಕಲಿಯುವ ಕುತೂಹಲ ಆಸಕ್ತಿ ಪ್ರಯತ್ನದಲ್ಲಿ ಇದ್ದಾಗ ನಮಗೂ ಸ್ವತಹ ಕಲಿಯುವ, ಆ ಮೂಲಕ ಕಲಿಸುವ ಲವಲವಿಕೆ ಇರುತ್ತದೆ ಇತ್ತೀಚಿನ ಕೆಲವು ವರ್ಷಗಳಲ್ಲಿ ನಮ್ಮ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ, ಕನ್ನಡದ ಪ್ರಾಚೀನ ಕವಿಗಳು, ಅವರ ಕಾವ್ಯಗಳು ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ, ಉಪನ್ಯಾಸಕರಿಗೂ ಆಸಕ್ತಿ ತಿಳುವಳಿಕೆ ಇಲ್ಲದಿರುವುದು ನಿಜಕ್ಕೂ ಖೇದದ ಸಂಗತಿ. ಬಹುತೇಕ ವಿದ್ಯಾರ್ಥಿಗಳು ಮನೆಯಲ್ಲಿ ರಾಮಾಯಣ ಮಹಾಭಾರತ ಕಥೆಗಳನ್ನು ಕೇಳಿರುವುದಿಲ್ಲ; ಶಾಲೆಗೆ ಸೇರಿದಾಗ ಕಲಿತದ್ದಷ್ಟೋ ಅಷ್ಟೇ. ವಿಭಿನ್ನ ಯುಗದ ಪಾತ್ರಗಳನ್ನು ಘಟನೆಗಳನ್ನು ಸೇರಿಸಿ ಉತ್ತರ ಬರೆಯುವುದನ್ನು ನೋಡಿದಾಗ, ಆ ಕ್ಷಣಕ್ಕೆ ಅದು ನಗುತರಿಸಿದರೂ ಮನಸ್ಸಿಗೆ ದುಃಖವಾಗುತ್ತದೆ. ಪಾಠ ಮಾಡುವಾಗ ಕೇಳಿಸಿಕೊಳ್ಳದ, ಸ್ವಂತ ಅಧ್ಯಯನ ಮಾಡದ, ಉಚ್ಚಾರ-ಬರವಣಿಗೆಯ ತಪ್ಪನ್ನು ತಿದ್ದಿಕೊಳ್ಳದ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯವೇ?

ನನ್ನ ಇಷ್ಟು ವರ್ಷಗಳ ವೃತ್ತಿ ಜೀವನದ ಅನುಭವದ ಪ್ರಕಾರ ಪ್ರಾಥಮಿಕ ಶಿಕ್ಷಣವು ಬಹಳ ಮುಖ್ಯ. ಅಲ್ಲಿ ಹಾಕಿದ ಬುನಾದಿ ಸರಿಯಾದರೆ, ಮುಂದೆ ಪ್ರೌಢಶಾಲೆಯ ಹಾಗೂ ಪದವೀಪೂರ್ವ ಹಂತದಲ್ಲಿ ಅವರನ್ನು ಸಾಧನೆ ಹಾದಿಯಲ್ಲಿ ಕರೆದೊಯ್ಯುವುದು ಸುಲಭ. ಇಲ್ಲವಾದರೆ ಎರಡು ವರ್ಷಗಳ ಪದವಿಪೂರ್ವ ಹಂತದ ಕಲಿಕೆ ಅವರ ಕಾಗುಣಿತವನ್ನು ತಿದ್ದಿ, ಉಚ್ಚಾರಣೆಯನ್ನು ಸ್ಪಷ್ಟಗೊಳಿಸಿ, ಸರಿಯಾದ ವಾಕ್ಯರಚನೆ ಮಾಡುವ ಸಾಮರ್ಥ್ಯವನ್ನು ಬೆಳೆಸುವ ಕೆಲಸಕ್ಕೆ ಮಾತ್ರ ಸೀಮಿತವಾದರೆ, ನಾವು ನಮ್ಮ ಪಠ್ಯದೊಳಗಿನ ಕಾವ್ಯದ ಸೌಂದರ್ಯವನ್ನು, ಗದ್ಯಪಾಠಗಳ ಮಹತ್ವವನ್ನು ಮನಸ್ಸಿಗೆ ತೃಪ್ತಿಯಾಗುವಂತೆ ಬೋಧಿಸುವುದು ಹೇಗೆ?

ನಾವು ಉಪನ್ಯಾಸಕರಾಗಿ ಎಷ್ಟೇ ಪ್ರಯತ್ನಪಟ್ಟರೂ, ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ಉತ್ಸಾಹ ಆಸಕ್ತಿ ಬೆಳೆಸುವಲ್ಲಿ ಶ್ರಮವಹಿಸಿದರೂ, ಕೊನೆಗೆ ಸರಿಯಾಗಿ ಓದಬೇಕಾದ ಕರ್ತವ್ಯ ವಿದ್ಯಾರ್ಥಿಯದೇ ಆಗುತ್ತದೆ. ಕುದುರೆಯನ್ನು ನೀರಿನವರೆಗೆ ಕರೆದುಕೊಂಡು ಹೋಗಬಹುದು, ನೀರಿನ ಹತ್ತಿರ ಬಗ್ಗಿಸಬಹುದು, ಆದರೆ ನೀರು ಕುಡಿಯಬೇಕಾದದ್ದು ಕುದುರೆಯೇ ಅಲ್ಲವೇ?

ಒಟ್ಟಾರೆ ಹೇಳಬೇಕೆಂದರೆ, ಶಿಕ್ಷಣಕ್ಷೇತ್ರದ ಯಶಸ್ಸು ವಿದ್ಯಾರ್ಥಿ-ಶಿಕ್ಷಕ-ಪೋಷಕ ಈ ಮೂರು ಕಾಲುಗಳ ಮೇಲೆ ನಿಂತಿದೆ, ಮೂವರೂ ಮುಖ್ಯ. ಇವರೆಲ್ಲರ ಪ್ರಯತ್ನವು ಸೇರಿದಾಗಲೇ ಸಫಲತೆ ದಕ್ಕುವುದು.

- ಸೀತಾ ಗುಡೂರ್, ಬೆಂಗಳೂರು.

*********************************************