ಇಂದಿನ ಶಿಕ್ಷಣಕ್ಷೇತ್ರ – ಶಿಕ್ಷಕಿಯ ದೃಷ್ಟಿಯಲ್ಲಿ.

ಕಳೆದ ವಾರಗಳ ಚಿಂತನ ಲೇಖನಗಳ ಹಾದಿಯಲ್ಲೇ ಈ ವಾರವೂ ಶಿಕ್ಷಣ ಕ್ಷೇತ್ರದ ಬಗ್ಗೆಯೇ ಮುಂದುವರೆದಿದೆ. ಬೆಂಗಳೂರಿನಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ಸೀತಾ ಗುಡೂರ ಅವರ ಸ್ವಂತ ಅನುಭವದ ಲೇಖನ. ಪದವಿಯವರೆಗೆ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಸೀತಾ ಗುಡೂರ್, ಮುಂದೆ ಕನ್ನಡದಲ್ಲಿ ಎಮ್ ಎ, ಎಂಫಿಲ್ ಮಾಡಿ ಕನ್ನಡದ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಳೆಗನ್ನಡ, ದಾಸಸಾಹಿತ್ಯ, ವಚನಸಾಹಿತ್ಯ ಇತ್ಯಾದಿ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಸೀತಾ ಗುಡೂರ್ ಒಬ್ಬ ಉತ್ಸಾಹಿ ಶಿಕ್ಷಕಿ. ನಗರದ ಒಳ ಮತ್ತು ಹೊರವಲಯದ ಸಂಸ್ಥೆಗಳಲ್ಲಿ ಕೆಲಸಮಾಡಿರುವ ಅವರ ಅನುಭವ ಹೀಗಿದೆ. ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ. – ಸಂಪಾದಕ.

*****

ನಾವು ಕೆಲಸ ಮಾಡುತ್ತಿರುವ ಕ್ಷೇತ್ರ ಯಾವುದೇ ಆಗಿರಲಿ, ಮೊತ್ತಮೊದಲಿಗೆ ಅದು ನಮ್ಮ ಆಸಕ್ತಿಯ ಕ್ಷೇತ್ರವಾಗಿರಬೇಕು. ಏಕೆಂದರೆ, ಮೂಲಭೂತವಾಗಿ ಆಸಕ್ತಿಯೇ ಎಲ್ಲವನ್ನು ಕಲಿತುಕೊಳ್ಳಲು, ಕಲಿಸಲು ಪ್ರೇರೇಪಿಸುತ್ತದೆ. ರಾಷ್ಟ್ರಕವಿ ಶ್ರೀ ಜಿಎಸ್ ಶಿವರುದ್ರಪ್ಪ ಅವರು ಹೇಳುವಂತೆ "ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ….. ಬರಿ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ?" ಈ ಕವನದ ಉದ್ದಕ್ಕೂ ಕಾಣುವ ’ಪ್ರೀತಿ’ ಆಸಕ್ತಿಯ ರೂಪವೇ ಆಗಿದೆ. ಕಲಿಯುವ, ಕೆಲಸ ಮಾಡುವ, ಕಲಿಸುವ ಬಗ್ಗೆ ಪ್ರೀತಿಯೇ ಇಲ್ಲದ ಮೇಲೆ ಶಿಕ್ಷಣದ ಉದ್ದೇಶವು ಸಾಧಿತವಾಗುವುದಿಲ್ಲ ಅಲ್ಲವೇ? 

ಶಿಕ್ಷಣ ರಂಗದ ಇಂದಿನ ಸಮಸ್ಯೆಗಳ ಕಡೆಗೆ ಗಮನಹರಿಸಿದಾಗ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಬ್ಬರಲ್ಲೂ ಸಮಸ್ಯೆ ಇರುವುದು ಎದ್ದು ಕಾಣುವಂಥದ್ದು. ಮೊದಲಿಗೆ ಶಿಕ್ಷಕರನ್ನೇ ನಾವು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಏಕೆಂದರೆ, ಅರಿಯದ ವಿದ್ಯಾರ್ಥಿಗಳಿಗೆ ಎಲ್ಲವನ್ನೂ ಹಂತ ಹಂತವಾಗಿ ಕಲಿಸುವ ದೊಡ್ಡ ಹೊಣೆಗಾರಿಕೆ ಶಿಕ್ಷಕರದೇ. ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣದ ಭದ್ರಬುನಾದಿ ಬೀಳಬೇಕಾದದ್ದು ಅತ್ಯಗತ್ಯ. ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರಾಥಮಿಕ ಹಂತದಲ್ಲಿ ಭಾಷಾ ವಿಷಯಗಳನ್ನು ಕಲಿಸುವಲ್ಲಿ ದಿವ್ಯನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಎಳೆಯ ವಯೋಮಾನದ ಚಂಚಲ ಮನಸ್ಥಿತಿಯ ಮಕ್ಕಳಿಗೆ ಕನ್ನಡ (ಅಥವಾ ಯಾವುದೇ) ಭಾಷೆಯನ್ನು ಹೇಳಿಕೊಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಸ್ವತಃ ಶಿಕ್ಷಕರು ಪಾಠ ಮಾಡುವಾಗ ಶುದ್ಧ ಗ್ರಾಂಥಿಕ ಭಾಷೆಯ ಬಳಕೆ, ಸ್ಪಷ್ಟ ಉಚ್ಚಾರಣೆ, ಶುದ್ಧ ಹಾಗೂ ಸ್ಪಷ್ಟ ಬರವಣಿಗೆಗಳನ್ನು ಮೈಗೂಡಿಸಿಕೊಂಡಿರಬೇಕಾಗುತ್ತದೆ. ಆದರೆ ಜೀವನೋಪಾಯಕ್ಕಾಗಿ ಯಾವುದೋ ಒಂದು ನೌಕರಿಯನ್ನು ಮಾಡಬೇಕಾಗಿ ಬಂದ ಅನಿವಾರ್ಯತೆಯಲ್ಲಿ ಎಲ್ಲಿಯೂ ಸಲ್ಲದವರು ಶಿಕ್ಷಣ ಕ್ಷೇತ್ರಕ್ಕೆ ಸಂದಾಗ, ಅವರಲ್ಲಿ ಅಧ್ಯಯನ-ಅಧ್ಯಾಪನಗಳ ಕಡೆಗೆ ಬದ್ಧತೆ ಕಡಿಮೆಯಾಗುವ ಸಾಧ್ಯತೆಯೂ ಇಲ್ಲದಿಲ್ಲ. ಇದಕ್ಕೆ ಅಪವಾದ ಎನಿಸುವವರು ಸಾಕಷ್ಟು ಜನ ಅಧ್ಯಾಪಕರು ಇದ್ದಾರೆ ಎನ್ನುವುದೇ ಸಂತೋಷದ ಸಂಗತಿ.

ಇನ್ನು ಉಪನ್ಯಾಸಕರು ಕನ್ನಡ ಭಾಷಾ ಐಚ್ಛಿಕ ವಿಷಯವನ್ನು ಪಾಠ ಮಾಡಬೇಕೆಂದರೆ ಅವರ ಸಾಹಿತ್ಯದ ಅಧ್ಯಯನದ ವ್ಯಾಪ್ತಿ ದೊಡ್ಡದಿರಬೇಕಾಗುತ್ತದೆ. ಬರಿಯ ಕನ್ನಡವೊಂದೇ ಅಲ್ಲದೇ, ಅದರಲ್ಲಿ ಹಾಸುಹೊಕ್ಕಾಗಿರುವ ಇತರ ಭಾಷೆಗಳ ಕೊಡುಗೆಗಳ ಬಗ್ಗೆ ಸ್ವಲ್ಪವಾದರೂ ಅರಿವಿರಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಂಸ್ಕೃತ ಭಾಷೆಯ ಸ್ವಲ್ಪಮಟ್ಟಿಗಿನ ಅರಿವು ಮತ್ತು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕನ್ನಡ-ಸಂಸ್ಕೃತ ಭಾಷೆಗಳ ಅವಿನಾಭಾವ ಸಂಬಂಧದ ತಿಳಿವು ಇವು ಉಪನ್ಯಾಸಕರಲ್ಲಿ ಕಡಿಮೆಯಾಗುತ್ತಿರುವುದು ಖೇದಕರ. ಸಂಸ್ಕೃತವನ್ನು ದೂಷಿಸುವವರು ಕನ್ನಡದ ಆದಿಕವಿ ಪಂಪನಿಂದ ಹಿಡಿದು ಕುವೆಂಪು ಅವರ ತನಕ ಕಾವ್ಯವನ್ನು ಹೇಗೆ ತಾನೇ ಪಾಠ ಮಾಡಬಲ್ಲರು? ಕನ್ನಡ-ಸಂಸ್ಕೃತ ಭಾಷಾಸಮನ್ವಯದ ಕಾರಣದಿಂದ ಹುಟ್ಟಿ ಬಂದ ಈ ಅಮೂಲ್ಯ ಕೃತಿರತ್ನಗಳನ್ನು ನಿರಾಕರಿಸಲು ಸಾಧ್ಯವೇ? ಪಾಠ ಮಾಡುವ ನಾವು ಮೊದಲು ಸರಿಯಾಗಿ ಅಧ್ಯಯನ ಮಾಡಿದರೆ ಮಾತ್ರ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗದಂತೆ ಹೇಳಬಹುದು ಅನ್ನುವುದರಲ್ಲಿ ಎರಡು ಮಾತಿಲ್ಲ.

ಭಾಷೆಯನ್ನು ಕಲಿಯುವಾಗ ಮಕ್ಕಳು ಮಾಡುವ ತಪ್ಪುಗಳನ್ನು ಆರಂಭದಲ್ಲೇ ತಿದ್ದದೇ ಹೋದಾಗ ಅವರು ಪ್ರೌಢ ಶಿಕ್ಷಣ ಮುಗಿಯುವವರೆಗೂ ಹಾಗೆ ಉಳಿದುಬಿಡುತ್ತಾರೆ. ಪ್ರಥಮ ಪಿಯುಸಿಗೆ ಸೇರುವಾಗ ಬಹಳಷ್ಟು ವಿದ್ಯಾರ್ಥಿಗಳಿಗೆ ತಮ್ಮ ಹೆಸರನ್ನು ಬರೆಯಲೂ ಬರುವುದಿಲ್ಲ ಎಂದು ನಾನು ಹೇಳಿದರೆ ನೀವು ನಂಬಲಿಕ್ಕಿಲ್ಲ. ಹೆಚ್ಚುಪಾಲು ಮಕ್ಕಳು ಹ್ರಸ್ವ-ದೀರ್ಘ, ಸ್ವರ-ವ್ಯಂಜನ, ಅಲ್ಪಪ್ರಾಣ-ಮಹಾಪ್ರಾಣ, ಅ – ಹಕಾರಗಳ ಬಳಕೆ ಇತ್ಯಾದಿಗಳ ವ್ಯತ್ಯಾಸವೇ ತಿಳಿಯದೇ, ಉಚ್ಚಾರಣೆ ಮತ್ತು ಬರವಣಿಗೆ ಎರಡರಲ್ಲೂ ಬಹಳ ಹಿಂದುಳಿದವರು ಆಗಿರುತ್ತಾರೆ. ಈ ಹಂತದಲ್ಲಿ ನಾವು ಏನನ್ನು ಮಾಡಲು ಸಾಧ್ಯ? ಕಾಲೇಜು ತರಗತಿಗಳು ಆರಂಭವಾದ ಮೊದಲ ಎರಡು ವಾರಗಳಲ್ಲಿ ವರ್ಣಮಾಲೆಯನ್ನು ಬರೆಸುವ, ಧ್ವನ್ಯಂಗಗಳ ಬಗ್ಗೆ ವಿವರಿಸಿ, ಉಚ್ಚಾರಣೆಯ ಬಗ್ಗೆ ಪರಿಚಯ ಮಾಡಿಕೊಡುವ ಕೆಲಸವೇ ಆಗುತ್ತದೆ. ಆದಾಗಿಯೂ ಈ ಮಕ್ಕಳಿಗೆ ಆಸಕ್ತಿಯಿಂದ ಕೇಳುವಷ್ಟು ತಾಳ್ಮೆ ಇರುವುದೇ ಇಲ್ಲ. ಕಾಲೇಜು ಜೀವನದಲ್ಲಿ ಕಲಿಯುವುದಕ್ಕಿಂತ ಹೆಚ್ಚು ಎಂಜಾಯ್ ಮಾಡಬೇಕು ಎಂಬ ಮನಸ್ಥಿತಿಯವರೇ ಈನಡುವೆ ಬಹಳ. ತರಗತಿಯ 90 ವಿದ್ಯಾರ್ಥಿಗಳಲ್ಲಿ 15-20 ವಿದ್ಯಾರ್ಥಿಗಳು ಉತ್ತಮ ಗ್ರಹಿಕೆಯ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಉಳಿದವರಲ್ಲಿ ಸುಮಾರು 40 ವಿದ್ಯಾರ್ಥಿಗಳಿಗೆ ಪದೇಪದೇ ಹೇಳಿ ಬರೆಸಿದಾಗ ಸ್ವಲ್ಪ ಸುಧಾರಿಸುತ್ತಾರೆ. ಮಿಕ್ಕವರು ನಾವೆಷ್ಟೇ ಪ್ರಯತ್ನಪಟ್ಟರೂ ಯಾವುದೇ ಪ್ರತಿಕ್ರಿಯೆ ತೋರದೆಯೇ ಇರುತ್ತಾರೆ.

ವಿದ್ಯಾರ್ಥಿಗಳ ಈ ವರ್ತನೆಗೆ ಕೇವಲ ಅವರ ಉಡಾಫೆಯ ಮನೋಭಾವವನ್ನಷ್ಟೇ ದೂಷಿಸಲಾಗದು, ಅವರವರ ಮನೆಯ ಹಾಗೂ ಬೆಳೆದು ಬಂದ ಪರಿಸರವೂ ಮುಖ್ಯ ಕಾರಣವೆಂಬುದು ವೇದ್ಯ. ನಗರಗಳಲ್ಲಿ ತಾಯಿ-ತಂದೆಯರು ವಿದ್ಯಾವಂತರಾದರೂ, ಇಬ್ಬರೂ ಕೆಲಸ ಮಾಡುತ್ತಿರುವ ಕಾರಣಕ್ಕಾಗಿ ಸಮಯದ ಅಭಾವದಿಂದ ಅವರಿಗೆ ಮಕ್ಕಳ ಕಡೆಗೆ ಗಮನ ಹರಿಸಲಾಗಿರುವುದಿಲ್ಲ. ಇನ್ನು ಗ್ರಾಮಾಂತರ ಮಕ್ಕಳ ತಂದೆತಾಯಿಯರೋ ಅನಕ್ಷರಸ್ಥರು, ಕೂಲಿ-ನಾಲಿಗಳಿಗೆ ಹೋಗುವವರು ಇರುತ್ತಾರೆ; ಎಷ್ಟೋ ಕುಟುಂಬಗಳಲ್ಲಿ ಕುಡಿತದ ವ್ಯಸನ, ಕೌಟುಂಬಿಕ ಕಲಹ, ಅನಾಥ ಮಕ್ಕಳು ಯಾರದೋ ಆಶ್ರಯದಲ್ಲಿದ್ದು ಓದುತ್ತಿರುವವರು, ಕೆಲಸದ ಮಧ್ಯೆ ಓದಲು ಸಮಯವೇ ಸಿಗದಿರುವುದು ಮುಂತಾದ ಕಾರಣಗಳೆಲ್ಲ ಗಮನಕ್ಕೆ ಬರುತ್ತಿರುತ್ತವೆ. ಈ ಎಲ್ಲಾ ಗಂಭೀರ ಸಮಸ್ಯೆಗಳ ಮಧ್ಯೆಯೂ ಜೀವನದಲ್ಲಿ ಸಾಧಿಸುವ ಗುರಿಯಿಟ್ಟುಕೊಂಡು ಓದುವ ಮಕ್ಕಳೇ ನಮಗೆ ನಿರಂತರ ಸ್ಫೂರ್ತಿ. ನಿಜ ಹೇಳಬೇಕೆಂದರೆ, ಒಂದು ತರಗತಿಯಲ್ಲಿ ಇಂಥವರು ಒಂದಿಬ್ಬರು ಇದ್ದರೂ ಪಾಠ ಮಾಡಲು ಉತ್ಸಾಹವಿರುತ್ತದೆ.

ಪಠ್ಯಕ್ಕೆ ಸಂಬಂಧಿಸಿದಂತೆ ಕಲಿಯುವ ಕುತೂಹಲ ಆಸಕ್ತಿ ಪ್ರಯತ್ನದಲ್ಲಿ ಇದ್ದಾಗ ನಮಗೂ ಸ್ವತಹ ಕಲಿಯುವ, ಆ ಮೂಲಕ ಕಲಿಸುವ ಲವಲವಿಕೆ ಇರುತ್ತದೆ ಇತ್ತೀಚಿನ ಕೆಲವು ವರ್ಷಗಳಲ್ಲಿ ನಮ್ಮ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ, ಕನ್ನಡದ ಪ್ರಾಚೀನ ಕವಿಗಳು, ಅವರ ಕಾವ್ಯಗಳು ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ, ಉಪನ್ಯಾಸಕರಿಗೂ ಆಸಕ್ತಿ ತಿಳುವಳಿಕೆ ಇಲ್ಲದಿರುವುದು ನಿಜಕ್ಕೂ ಖೇದದ ಸಂಗತಿ. ಬಹುತೇಕ ವಿದ್ಯಾರ್ಥಿಗಳು ಮನೆಯಲ್ಲಿ ರಾಮಾಯಣ ಮಹಾಭಾರತ ಕಥೆಗಳನ್ನು ಕೇಳಿರುವುದಿಲ್ಲ; ಶಾಲೆಗೆ ಸೇರಿದಾಗ ಕಲಿತದ್ದಷ್ಟೋ ಅಷ್ಟೇ. ವಿಭಿನ್ನ ಯುಗದ ಪಾತ್ರಗಳನ್ನು ಘಟನೆಗಳನ್ನು ಸೇರಿಸಿ ಉತ್ತರ ಬರೆಯುವುದನ್ನು ನೋಡಿದಾಗ, ಆ ಕ್ಷಣಕ್ಕೆ ಅದು ನಗುತರಿಸಿದರೂ ಮನಸ್ಸಿಗೆ ದುಃಖವಾಗುತ್ತದೆ. ಪಾಠ ಮಾಡುವಾಗ ಕೇಳಿಸಿಕೊಳ್ಳದ, ಸ್ವಂತ ಅಧ್ಯಯನ ಮಾಡದ, ಉಚ್ಚಾರ-ಬರವಣಿಗೆಯ ತಪ್ಪನ್ನು ತಿದ್ದಿಕೊಳ್ಳದ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯವೇ?

ನನ್ನ ಇಷ್ಟು ವರ್ಷಗಳ ವೃತ್ತಿ ಜೀವನದ ಅನುಭವದ ಪ್ರಕಾರ ಪ್ರಾಥಮಿಕ ಶಿಕ್ಷಣವು ಬಹಳ ಮುಖ್ಯ. ಅಲ್ಲಿ ಹಾಕಿದ ಬುನಾದಿ ಸರಿಯಾದರೆ, ಮುಂದೆ ಪ್ರೌಢಶಾಲೆಯ ಹಾಗೂ ಪದವೀಪೂರ್ವ ಹಂತದಲ್ಲಿ ಅವರನ್ನು ಸಾಧನೆ ಹಾದಿಯಲ್ಲಿ ಕರೆದೊಯ್ಯುವುದು ಸುಲಭ. ಇಲ್ಲವಾದರೆ ಎರಡು ವರ್ಷಗಳ ಪದವಿಪೂರ್ವ ಹಂತದ ಕಲಿಕೆ ಅವರ ಕಾಗುಣಿತವನ್ನು ತಿದ್ದಿ, ಉಚ್ಚಾರಣೆಯನ್ನು ಸ್ಪಷ್ಟಗೊಳಿಸಿ, ಸರಿಯಾದ ವಾಕ್ಯರಚನೆ ಮಾಡುವ ಸಾಮರ್ಥ್ಯವನ್ನು ಬೆಳೆಸುವ ಕೆಲಸಕ್ಕೆ ಮಾತ್ರ ಸೀಮಿತವಾದರೆ, ನಾವು ನಮ್ಮ ಪಠ್ಯದೊಳಗಿನ ಕಾವ್ಯದ ಸೌಂದರ್ಯವನ್ನು, ಗದ್ಯಪಾಠಗಳ ಮಹತ್ವವನ್ನು ಮನಸ್ಸಿಗೆ ತೃಪ್ತಿಯಾಗುವಂತೆ ಬೋಧಿಸುವುದು ಹೇಗೆ?

ನಾವು ಉಪನ್ಯಾಸಕರಾಗಿ ಎಷ್ಟೇ ಪ್ರಯತ್ನಪಟ್ಟರೂ, ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ಉತ್ಸಾಹ ಆಸಕ್ತಿ ಬೆಳೆಸುವಲ್ಲಿ ಶ್ರಮವಹಿಸಿದರೂ, ಕೊನೆಗೆ ಸರಿಯಾಗಿ ಓದಬೇಕಾದ ಕರ್ತವ್ಯ ವಿದ್ಯಾರ್ಥಿಯದೇ ಆಗುತ್ತದೆ. ಕುದುರೆಯನ್ನು ನೀರಿನವರೆಗೆ ಕರೆದುಕೊಂಡು ಹೋಗಬಹುದು, ನೀರಿನ ಹತ್ತಿರ ಬಗ್ಗಿಸಬಹುದು, ಆದರೆ ನೀರು ಕುಡಿಯಬೇಕಾದದ್ದು ಕುದುರೆಯೇ ಅಲ್ಲವೇ?

ಒಟ್ಟಾರೆ ಹೇಳಬೇಕೆಂದರೆ, ಶಿಕ್ಷಣಕ್ಷೇತ್ರದ ಯಶಸ್ಸು ವಿದ್ಯಾರ್ಥಿ-ಶಿಕ್ಷಕ-ಪೋಷಕ ಈ ಮೂರು ಕಾಲುಗಳ ಮೇಲೆ ನಿಂತಿದೆ, ಮೂವರೂ ಮುಖ್ಯ. ಇವರೆಲ್ಲರ ಪ್ರಯತ್ನವು ಸೇರಿದಾಗಲೇ ಸಫಲತೆ ದಕ್ಕುವುದು.

- ಸೀತಾ ಗುಡೂರ್, ಬೆಂಗಳೂರು.

*********************************************

ಉಫಿಜಿ ಎಂಬ ಕಲೆಯ ಉಗ್ರಾಣ – ಲಕ್ಷ್ಮೀನಾರಾಯಣ ಗುಡೂರ

ನನಗೆ ಇಟಲಿ ಹಲವಾರು ಕಾರಣಗಳಿಗೆ ಇಷ್ಟ. ಆ ದೇಶಕ್ಕೂ, ಭಾರತಕ್ಕೂ ಇರುವ ಸಾಮ್ಯತೆಗಳು ಒಂದು ಮುಖ್ಯ ಕಾರಣ. ಉಳಿದೆಲ್ಲ ಅಲ್ಲಿಂದ ಮುಂದೆ – ಉಪಕಾರಣಗಳು ಅನ್ನಬಹುದು. ಅಲ್ಲಿನ ಪುರಾಣಕಥೆಗಳು, ಕಲೆ, ಕಟ್ಟಡಗಳು, ಇತಿಹಾಸ, ದೇವರ ಜಾಗಗಳು, ಜನರ ಸಾಮಾಜಿಕ ಜೀವನ, ಊಟ-ತಿಂಡಿಗಳ ಬಗೆಗಿನ ಉತ್ಸಾಹ … ಹೀಗೆ ಪಟ್ಟಿ ಮುಂದುವರಿಯುತ್ತದೆ.   

ಹೀಗೆಯೇ ಪ್ರಯಾಣದಲ್ಲಿ ಒಮ್ಮೆ ಸಿಕ್ಕ ಕರ್ನಾಟಕ ಮೂಲದ ಇಟಲಿಯ ನಿವಾಸಿಯೊಬ್ಬರು ನನಗೆ ಹೇಳಿದಂತೆ, ಅಲ್ಲೂ ಭಾರತೀಯರಂತೆಯೇ 6ಕ್ಕೆ ಬರುವೆನೆಂದು ಹೇಳಿ 8ಕ್ಕೆ ಹೋಗಬಹುದು, ಹೇಳದೆಯೆ ನಿಮ್ಮ ಮಿತ್ರನನ್ನು ಅವರ ಮನೆಗೆ ಔತಣಕ್ಕೆ ಕರೆದೊಯ್ಯಬಹುದು! ಬ್ರಿಟಿಶರ ಜೀವನಕ್ರಮಕ್ಕೆ ಹೊಂದಿಕೊಂಡಿರುವ ನಾನು ಹಾಗೇನೂ ಮಾಡಿಲ್ಲವೆನ್ನಿ.  

ಚಿತ್ರಕಲೆ ಹಾಗೂ ಛಾಯಾಗ್ರಹಣದಲ್ಲಿ ಆಸಕ್ತಿಯಿರುವ ನನಗೆ ಎಷ್ಟು ಬಾರಿ ಬೇಕಾದರೂ ಹೋಗಿ ಅಲ್ಲಿನ ಸ್ಥಳಗಳನ್ನು, ಅದರಲ್ಲೂ ಗ್ಯಾಲರಿಯಾಗಳನ್ನು (museum) ನೋಡಲು ಬೇಜಾರಾಗದು.

ಅಲ್ಲಿ ಯಾವ ಊರಿಗೆ ಹೋದರೂ, ಮೇಲೆ ಹೇಳಿದ ಪಟ್ಟಿಯ ಹೆಚ್ಚು ಕಡಿಮೆ ಎಲ್ಲಾ ಅಂಶಗಳೂ ನೋಡಲು ಸಿಗುತ್ತವೆ.  ಈ ಬಾರಿ (ಎರಡನೇ ಬಾರಿ, ಮೊದಲೊಮ್ಮೆ ಯಾವುದೋ ಕೋರ್ಸಿಗೆ ಹೋಗಿದ್ದೆ – ಲೇ.) ಕುಟುಂಬಸಹಿತನಾಗಿ ಫ್ಲಾರೆನ್ಸ್ ನೋಡಲು ಹೋಗಿದ್ದೆ. ಮೊದಲ ಸಲ ಹೋದಾಗ ಮೈಕೆಲೇಂಜಲೋ ಕೆತ್ತಿರುವ ವಿಶ್ವವಿಖ್ಯಾತ ಡೇವಿಡ್ ಮೂರ್ತಿಯಿರುವ ಅಕಾದೆಮಿಯಾ ಗ್ಯಾಲರಿಗೆ ಹೋಗಿ ಆಗಿತ್ತು. ಹೀಗಾಗಿ, ಈ ಬಾರಿ ಹೋದಾಗ ಮನೆಯವರನ್ನೆಲ್ಲ ಅಲ್ಲಿಗೆ ಕಳಿಸಿ, ಇನ್ನೊಂದು ದೊಡ್ಡ ಗ್ಯಾಲರಿಯಾ ಆದ ಉಫಿಜಿ (Uffizi Galleria) ವಸ್ತುಸಂಗ್ರಹಾಲಯಕ್ಕೆ ನಾನೊಬ್ಬನೇ – ನನ್ನ ಕ್ಯಾಮರಾದೊಂದಿಗೆ – ಹೋದೆ. ಈ ಲೇಖನ ಅದರ ಬಗ್ಗೆ ಮಾತ್ರ.

ಆರ್ನೊ ನದಿಯ ದಂಡೆಯ ಮೇಲಿರುವ ಮಹಾನ್ ಕಟ್ಟಡಗಳ ಸಂಕುಲವೇ ಈಗಿನ ಉಫಿಜಿ ಸಂಗ್ರಹಾಲಯ.  ಇದು 16ನೆಯ ಶತಮಾನದ ಇಟಲಿಯ ವಾಸ್ತುಶಿಲ್ಪ ನೈಪುಣ್ಯದ ಉತ್ತಮ ಉದಾಹರಣೆ ಅನ್ನಬಹುದು.  
ಉಫಿಜಿಯ ಇತಿಹಾಸ:  
1550ರ ಇಸವಿಯಲ್ಲಿ ಫ್ಲಾರೆನ್ಸ್ ನಗರದ ಡ್ಯೂಕ್ ಆಗಿದ್ದ ಕಾಸಿಮೊ I ಡಿ’ಮೆಡಿಚಿ, ಹಂಚಿ ಹೋಗಿದ್ದ ನಗರದ ನ್ಯಾಯಾಲಯಗಳನ್ನೆಲ್ಲ ಒಂದೇ ಕಚೇರಿಯ ಆವರಣಕ್ಕೆ ತರಲೆಂದು, ಆಗಿನ ವಾಸ್ತುಶಿಲ್ಪಿ ಜಿಯಾರ್ಜಿಯೋ ವಸಾರಿಯ ಉಸ್ತುವಾರಿಯಲ್ಲಿ ಕಟ್ಟಿಸಿದ Office ಅಥವಾ Uffici / Uffizi ಕಟ್ಟಡಗಳೇ ಇವು. ದೊಡ್ಡ ದೊಡ್ಡ ಕಿಟಕಿಗಳ ನೈಸರ್ಗಿಕ ಗಾಳಿ-ಬೆಳಕಿನ ಅಗಲವಾದ ಆವಾರಗಳು ಇಲ್ಲಿಯ ವೈಶಿಷ್ಟ್ಯ. ಇದರ ನಿರ್ಮಾಣ modular ಆಗಿದ್ದು, ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಕೊಠಡಿಗಳನ್ನು ನಿರ್ಮಿಸಬಹುದಾದ future-proofing ಇಲ್ಲಿದೆ.  ಈ ಕಟ್ಟಡ ಇಂಗ್ಲಿಷಿನ U ಆಕಾರದಲ್ಲಿದ್ದು, ಪೂರ್ವ ಮತ್ತು ಪಶ್ಚಿಮ ಭಾಗಗಳು ಮಾತ್ರ ನೆಲದ ಮೇಲಿವೆ. ನದಿಯಂಚಿನಲ್ಲಿ ಇರುವ ಇವೆರಡನ್ನೂ ಜೋಡಿಸುವ, U ಅಕ್ಷರದ ಬುಡದ ಭಾಗ ಮೇಲಿನ ಅಂತಸ್ತುಗಳಿಗೆ ಮಾತ್ರವೇ ಸೀಮಿತವಾಗಿದೆ, ಅಲ್ಲದೇ ಎತ್ತರದ ಭಾರೀ ಕಂಬಗಳ ಮೇಲೆ ಕಟ್ಟಲಾಗಿದೆ. ಮಧ್ಯದ ತೆರೆದ ಅಂಕಣವು ಒಂದೆಡೆ ನದಿಯ ಮೇಲಿರುವ ಪುರಾತನ ಕಲ್ಲಿನ ಸೇತುವೆಯ (ಪಾಂಟೆ ವೆಕ್ಕಿಯೋ) ಮೂಲಕ ಹಸಿರು ಹೊದಿಸಿರುವ ಬೆಟ್ಟಗಳ, ತೋಟಗಳ ಕಡೆಗೆ ಹೋದರೆ, ಇನ್ನೊಂದು ತುದಿ ಫ್ಲಾರೆನ್ಸಿನ ಮುಖ್ಯ ಮಂದಿರ ಸಾಂತಾ ಮರಿಯಾ ದೆಲ್ ಫಿಯೊರೆಯ ಕಡೆಗೆ ಕರೆದೊಯ್ಯುತ್ತದೆ. ಕಟ್ಟಡದೊಳಗಿನ ಒಳಛಾವಣಿಯನ್ನು ಅಸಂಖ್ಯಾತ ಚಿತ್ರಗಳಿಂದ ಅಲಂಕರಿಸುವ ಕಾರ್ಯ 1581ರಲ್ಲಿ ಶುರುವಾಯಿತು. ಕಾಸಿಮೊ I ಡಿ’ಮೆಡಿಚಿಯ ಮರಣಾನಂತರ ಅವನ ಮಗ ಡ್ಯೂಕ್ ಫ್ರಾನ್ಸೆಸ್ಕೋ I ಮತ್ತವನ ತಮ್ಮಂದಿರು ಈ ಕಟ್ಟಡದ ಕಾರ್ಯವನ್ನು ಇನ್ನೊಬ್ಬ ವಾಸ್ತುಶಿಲ್ಪಿ ಬರ್ನಾರ್ಡೋ ಬುಆಂಟಾಲೆಂಟಿಯ ನೇತೃತ್ವದಲ್ಲಿ ಮುಗಿಸಿ, ಅದನ್ನು ಗ್ಯಾಲರಿಯಾ ಆಗಿ ಬದಲಾಯಿಸುತ್ತಾರೆ.
ತಿರುಗಿ ವರ್ತಮಾನಕ್ಕೆ:
ನಾನೊಬ್ಬನೇ ಹೋಗುವ ವಿಚಾರವಿದ್ದುದರಿಂದ, ಮುಂಚೆಯೇ ಟಿಕೆಟ್ ತೆಗೆಸಿಕೊಂಡಿದ್ದೆ, ಅಷ್ಟೇ ಅಲ್ಲ ಬೆಳಗ್ಗೆ ಬಾಗಿಲು ತೆರೆಯುತ್ತಲೆ ಒಳಕಾಲಿಡುವ ಪ್ರಯತ್ನವನ್ನೂ ಮಾಡುವವನಿದ್ದೆ.  ಅಲ್ಲಿಗೆ ಹೋದಾಗ, ಆ ರೀತಿ ವಿಚಾರ ಮಾಡಿದವ ನಾನೊಬ್ಬನೇ ಇರಲಿಕ್ಕಿಲ್ಲ ಅನ್ನುವ ಅನುಮಾನ ಗಟ್ಟಿಯಾಗಿ ಸಾಬೀತಾಯಿತು. ಆದರೂ, ಅಲ್ಲಿನ ಕಾರ್ಯಕರ್ತರ ಚಾಕಚಕ್ಯತೆಯಿಂದಾಗಿ ಐದಾರು ನಿಮಿಷದಲ್ಲಿಯೇ ಒಳಗಿದ್ದೆ. ಬೆಳಗ್ಗೆ ಬೇಗ ಎದ್ದು ಓಡಿದ್ದು ನಿಜಕ್ಕೂ ಒಳ್ಳೆಯದೇ ಆಯಿತೆನ್ನಿ, ಪ್ರಾಕಾರಗಳೆಲ್ಲ ಜನರಿಲ್ಲದೆ, ಪ್ರತಿಯೊಂದು ಮೂರ್ತಿ, ಚಿತ್ರವನ್ನು ಮನಸೋಇಚ್ಛೆ ನೋಡುವುದು ಸಾಧ್ಯವಾಯಿತು.  

ಮೂರು ಮಹಡಿಗಳ ಆರು ಪ್ರಾಕಾರಗಳು ಮತ್ತು ಅವಕ್ಕಂಟಿದ ಕೊಠಡಿಗಳಲ್ಲಿ ಸುಮಾರು 2300 ವರ್ಷಗಳ ಇತಿಹಾಸ ತುಂಬಿದೆ.  ಗ್ರೀಕರ ಮತ್ತು ರೋಮನ್ನರ ಸಂಗಮವರಿ ಕಲ್ಲಿನ ಮೂರ್ತಿಗಳು ಅಂದಿನ ಶಿಲ್ಪಿಗಳ ಕೌಶಲ್ಯವನ್ನು ಹಾಡಿಹೊಗಳುತ್ತವೆ.  ಹಾಲುಗಲ್ಲು ಮತ್ತು ಕಡುಗಪ್ಪು ಸಂಗಮವರಿ ಕಲ್ಲಿನ ಮೂರ್ತಿಗಳನ್ನು ನೋಡುತ್ತ ಗಂಟಗಟ್ಟಲೆ ಕೂಡುವವರಿದ್ದಾರೆ.  ಇವುಗಳ ಜೊತೆಯಲ್ಲೆ ಸುಮಾರು ಸಾವಿರ ವರ್ಷಗಳಿಂದ ಇತ್ತೀಚಿನ (!) ರೆನೈಸ್ಸಾನ್ಸ್ ಪ್ರಕಾರದವರೆಗಿನ ಕಲಾವಿದರ ತೈಲಚಿತ್ರಗಳಿವೆ. ಇವುಗಳಲ್ಲಿ ಬಹುಪಾಲು ಗ್ರೀಕರ, ರೋಮನ್ನರ ಪೌರಾಣಿಕ, ಐತಿಹಾಸಿಕ ಪಾತ್ರಗಳ / ವ್ಯಕ್ತಿಗಳ ಮೂರ್ತಿಗಳೇ ಹೆಚ್ಚು. ನಂತರದ ಚಿತ್ರಕಲೆಗಳಲ್ಲಿ ಬೈಬಲ್ಲಿನ ಕಥೆಗಳು ಕಂಡುಬರುತ್ತವೆ.  

ಪ್ರಾಕಾರಗಳ ಒಳತಾರಸಿಯನ್ನೆಲ್ಲ ಒಂದಿಂಚೂ ಬಿಡದಂತೆ ಪೌರಾಣಿಕ ಪಾತ್ರಗಳ ಪೇಂಟಿಂಗುಗಳ ಜೊತೆಗೆ, ಇದನ್ನು ಕಟ್ಟುವಾಗಿನ ಸಮಯದ ಮೆಡಿಚಿ ಕುಟುಂಬದ ಪ್ರಮುಖರ ಚಿತ್ರಗಳಿಂದ ತುಂಬಲಾಗಿದೆ. 

ಮೂರು ಅಂತಸ್ತುಗಳನ್ನು ಎರಡು ಬಾರಿ ಮೇಲಿಂದ ಕೆಳಗೆ, ಈ ತುದಿಯಿಂದ ಆ ತುದಿಯವರೆಗೆ ಮನಃಪೂರ್ವಕವಾಗಿ ನೋಡಿ, ಬೇಕಾದ್ದನ್ನು ಕ್ಯಾಮರಾದಲ್ಲಿ, ಫೊನಿನಲ್ಲಿ ಸೆರೆಹಿಡಿಯುತ್ತ ಓಡಾಡಿ ಮುಗಿಸಿದೆ. ಮೂರನೆಯ ಬಾರಿಯ ಸುತ್ತುವಿಕೆಯ ಸಮಯಕ್ಕೆ ಆಗಲೇ ಸಾವಿರಾರು ಜನ-ಜಾತ್ರೆ ಸೇರಿಯಾಗಿತ್ತು. ಈ ಬಾರಿ ನನಗೆ ಫೋಟೊ ತೆಗೆದುಕೊಳ್ಳುವ ಅವಸರವಿರಲಿಲ್ಲವಾಗಿ, ಸುಮ್ಮನೆ ಜನರ ಮಧ್ಯ ಓಡಾಡಿ, ಅಲ್ಲಲ್ಲಿ ಬೆಂಚಿನಮೇಲೆ ಕೂತು ನೋಡಿ ಕೆಳಗೆ ಬಂದೆ.
ಎಲ್ಲಾ ಮ್ಯೂಸಿಯಮ್ಮುಗಳಲ್ಲಿ ಇರುವಂತೆ ಅಲ್ಲಿಯೂ ಒಂದು ನೆನಪುಕಾಣಿಕೆ ಅಂಗಡಿ ಇತ್ತಲ್ಲ, ಅಲ್ಲಿಗೆ ಹೋದೆ. ಎದುರಿಗೆ ಕಲಾವಿದ ಸಾಂಡ್ರೋ ಬಾಟಿಚೆಲ್ಲಿಯ ವಿಶ್ವಪ್ರಸಿದ್ದ ವೀನಸ್ಸಳ ಹುಟ್ಟು (The Birth of Venus by Botticelli, circa 1480s) ಪೇಂಟಿಂಗಿನ ದೊಡ್ಡ ಚಿತ್ರ ಕಾಣಿಸಬೇಕೇ? ಅದನ್ನು ಹೇಗೆ ಬಿಟ್ಟೆ ಅಂದುಕೊಳ್ಳುತ್ತಾ, ಮತ್ತೆ ತಿರುಗಿ ಎರಡನೆಯ ಮಹಡಿಗೆ ಓಡಿದೆ (ಸುಳ್ಳು – ಲಿಫ್ಟಿನಲ್ಲಿ ಹೋದೆ – ಲೇ.). ಅದುವರೆಗೂ ಮುಚ್ಚಿದ್ದ ಕೊಠಡಿಯೊಂದು ಈಗ ತೆರೆದಿದ್ದು ಅದರ ಮುಂದೆ ಒಂದರವತ್ತು ಜನರ ಸಾಲಿತ್ತು. ಸರಿ, ಮತ್ತೇನು, ನೋಡದೆಯಂತೂ ಹೋಗುವಂತಿಲ್ಲವಲ್ಲ, ನಿಂತೆ. ಒಳಗೆ ಒಂದು ನೂರರಷ್ಟು ಇದ್ದ ಗುಂಪಿನ ಮಧ್ಯ ನುಗ್ಗಿಕೊಂಡು ಹೋಗಿ ಆ ಸುಮಾರು ಮೂರು ಮೀಟರ್ ಅಗಲ, ಎರಡು ಮೀಟರ್ ಎತ್ತರದ ಚಿತ್ರದ ಮುಂದೆ ನಿಂತಾಗ ಆದ ಅನುಭವ ವರ್ಣಿಸಲಾಗದು.
ಅರ್ಧ ದಿನದ, ಮೂರು-ಮತ್ತೊಂದು ಸಲದ ಓಡಾಟ ಮುಗಿಸಿ ಹೊರಬಂದು, ಅಲ್ಲಿಯೇ ಕಟ್ಟೆಯ ಮೇಲೆ ಕುಳಿತೆ – ನನ್ನ ಆ ಬೆಳಗ್ಗಿನ overwhelming ಅನುಭವದ ಮೆಲುಕು ಹಾಕುತ್ತ.

ಮಧ್ಯದ ತೆರೆದ ಅಂಕಣದಲ್ಲಿ ದಿನವೂ ಸಂಗೀತಗಾರರು ಅಮೋಘವಾಗಿ ಹಾಡುತ್ತಲೋ, ವಾದ್ಯಗಳನ್ನು ನುಡಿಸುತ್ತಲೋ ಕೇಳುಗರ ಮನತಣಿಸುತ್ತಿರುತ್ತಾರೆ. ಒಂದರ್ಧ ಗಂಟೆ ಕೂತು ಕೇಳಿ, ಅವರ ಮುಂದಿನ ವಯೋಲಿನ್ ಡಬ್ಬಿಗೊಂದಿಷ್ಟು ಕಾಣಿಕೆ (definitely worth, by any means – ಲೇ.) ಹಾಕಿ, ಮನೆಯ ಉಳಿದ ಸದಸ್ಯರನ್ನು ಹುಡುಕುತ್ತಾ ಹೊರಟೆ. ಅವರೆಲ್ಲ ಅಕಾದೆಮಿಯಾ ಗ್ಯಾಲರಿ ಮುಗಿಸಿ ಬಂದು, ಒಂದು ಪುಟ್ಟ ಜೆಲಾಟೇರಿಯಾದಲ್ಲಿ ಝಂಡಾ ಊರಿದ್ದರು. ನಾನೂ ಒಂದು ಬಟ್ಟಲು ತೊಗೊಂಡು, ಅವರೊಡನೆ ಕೂತು, ಇಟಾಲಿಯನ್ನರಂತೆ (ಅಥವಾ ಭಾರತೀಯರಂತೆ) ಕೈಗಳನ್ನು ಬೀಸಿ, ಜೋರಾಗಿ ಆಡುತ್ತಿದ್ದ ಮಾತಿನಲ್ಲಿ ಸೇರಿಕೊಂಡೆ.
ಮತ್ತೇನಾದರೂ ಫ್ಲಾರೆನ್ಸಿಗೆ ಹೋದರೆ (ಇನ್ನೂ ಸಾಕಷ್ಟು ಊರುಗಳಿವೆ ನಿಜ – ಲೇ.), ಇನ್ನೂ ಎರಡಿವೆ ಗ್ಯಾಲರಿಯಾಗಳು ನೋಡಲು!

- ಲಕ್ಷ್ಮೀನಾರಾಯಣ ಗುಡೂರ

(ವಿಸೂ: ಮೇಲೆ ಹಾಕಿರುವ ಎಲ್ಲಾ ಚಿತ್ರಗಳೂ ನಾನೇ ಸೆರೆಹಿಡಿದವು. ಜಾಗ ಹಿಡಿಯುತ್ತದೆಂದು ಕೆಲವೇ ಚಿತ್ರಗಳನ್ನು ಹಾಕಿದ್ದು, ಪ್ರತಿಯೊಂದರ ಹೆಸರು ಹಾಕುವುದನ್ನು ಕೈಬಿಟ್ಟಿದ್ದೇನೆ. ಕ್ಷಮೆಯಿರಲಿ. ಅಲ್ಲದೇ, ನನ್ನ ಚಿತ್ರಗಳು ಎದುರಿಗೆ ನೋಡಿದಾಗ ಆಗುವ ಆನಂದದ ಅನುಭವದ ಕಾಲುಭಾಗಕ್ಕೂ ನ್ಯಾಯ ಒದಗಿಸವು. – ಲೇ.)
***************************************************