ಬಹಳ ವರ್ಷಗಳಾದ ಮೇಲೆ ಅಥವಾ ದಶಕಗಳು ಗತಿಸಿದ ಮೇಲೆ ಬೇರ್ಪಟ್ಟ ಪ್ರೇಮಿಗಳು ಮತ್ತೆ ಭೇಟಿಯಾದರೆ ಏನಾಗಬಹುದು ಎನ್ನುವ ಪ್ರಶ್ನೆ ಕತೆ ಬರೆಯುವವರಿಗೆ ಮತ್ತು ಸಿನೆಮಾ ಮಾಡುವವರಿಗೆ ತುಂಬ ಇಷ್ಟದ ವಿಷಯ. ಕತೆಯಲ್ಲಿ ಇಬ್ಬರದೂ ಈಗಾಗಲೇ ಮದುವೆಯಾಗಿರಬಹುದು, ಆಗದೆಯೂ ಇರಬಹುದು. ಒಬ್ಬರದು ಮಾತ್ರ ಆಗಿ, ಇನ್ನೊಬ್ಬರು ಭಗ್ನಪ್ರೇಮಿಯಾಗಿರಬಹುದು. ಒಬ್ಬರ ವಿಚ್ಚೇದನವಾಗಿರಬಹುದು. ಒಬ್ಬರಿಗೆ ಕೊನೆಗಾಲದ ಕ್ಯಾನ್ಸರ್ ಆಗಿರಬಹುದು. ಅವರಿಬ್ಬರು ಅಚಾನಕ್ಕಾಗಿ ಭೇಟಿಯಾಗಲು ಒಂದು ಕಾರಣ ಅಥವಾ ಘಟನೆ ಬೇಕು ಆಷ್ಟೇ, ಕತೆ ಅಲ್ಲಿಂದ ಹಿಂದೆ ಮತ್ತು ಮುಂದೆ ಸಾಗುತ್ತ, ಓದುಗರನ್ನು/ನೋಡುಗರನ್ನು ತಮ್ಮ ಟೀನೇಜ್ ಮತ್ತು ಹದಿಕರೆಯದ ದಿನಗಳಿಗೆ ಕರೆದೊಯ್ಯುತ್ತ, ಯಾರದೋ ನೆನಪನ್ನು ತರುತ್ತ, ಮನಸ್ಸಿನಲ್ಲೊಂದು ಪ್ರೀತಿಯ ಸಂವೇದನೆಯನ್ನು ಹುಟ್ಟಿಸುತ್ತವೆ. ಇಂಥ ಬಹುತೇಕ ಸಿನೆಮಾಗಳು ವಾಸ್ತವದ ತಳಹದಿಯಲ್ಲಿ ಇದ್ದರೂ ರೋಮ್ಯಾಂಟಿಸಿಸಂನ ಭಾಷೆಯನ್ನು ಉಪಯೋಗಿಸುತ್ತವೆ.
ಇಂಥ ನೂರಾರು ಪರ್-ಮ್ಯುಟೇಶನ್ ಮತ್ತು ಕಾಂಬಿನೇಶನ್-ನಿಂದ ಇಂಗ್ಲೀಷ್ ಭಾಷೆಯಲ್ಲಿ ನೂರಾರು ಕಾದಂಬರಿಗಳು ಮತ್ತು ಸಿನೆಮಾಗಳು ಬಂದಿವೆ. ಹಿಂದಿ ಭಾಷೆಯಲ್ಲಿ ಗುಲ್ಜಾರ್ ಬರೆದು ನಿರ್ದೇಶಿಸಿದ `ಇಜಾಜತ್` ಸಿನೆಮಾ ಆಗಿನ ದಿನಗಳಲ್ಲಿ ತುಂಬ ಕಾಡಿದ ಸಿನೆಮಾ. ಆ ಚಿತ್ರದಲ್ಲಿ ವಿಚ್ಛೇದನಗೊಂಡ ದಂಪತಿಗಳು ರೈಲುನಿಲ್ದಾಣದ ವೇಟಿಂಗ್-ರೂಮಿನಲ್ಲಿ ಭೇಟಿಯಾಗುವ ಕತೆ – ಆ ಸಿನೆಮಾದ ಅಂತ್ಯ ಬಹಳ ಇಷ್ಟವಾಗಿತ್ತು. ಓ ಹೆನ್ರಿ ಕಥೆಯನ್ನು ಆಧರಿಸಿದ ಋತುಪರ್ಣ ಘೋಷ್ ನಿರ್ದೇಶನದ `ರೇನ್-ಕೋಟ್` ಸಿನೆಮಾ (ಅಜಯ್ ದೇವಗಣ್ ಮತ್ತು ಐಶ್ವರ್ಯಾ ರೈ) ಕೂಡ ಇಂಥದೇ ಕತೆ. `೯೬` ಎನ್ನುವ ತಮಿಳು ಸಿನೆಮಾ (ಕನ್ನಡದಲ್ಲಿ ಅದನ್ನೇ ೯೯ ಎಂದು ರಿಮೇಕ್ ಮಾಡಿದರು)ದಲ್ಲಿ ಪ್ರೇಮಿಗಳು ದಶಕಗಳಾದ ಮೇಲೆ ರಿ-ಯುನಿಯನ್ನಿನ ನೆಪದಲ್ಲಿ ಭೇಟಿಯಾಗುತ್ತಾರೆ. ಅವಳ ಮದುವೆಯಾಗುತ್ತದೆ, ಮಕ್ಕಳಾಗಿವೆ. ಆದರೆ ಈತ ಭಗ್ನಪ್ರೇಮಿ. ರೀ-ಯುನಿಯನ್ ಮುಗಿದ ಮೇಲೆ ಒಂದು ರಾತ್ರಿಯನ್ನು ಅವರು ಒಟ್ಟಿಗೇ ಕಳೆಯುತ್ತಾರೆ. ಕತೆ ಪದರು ಪದರಾಗಿ ತೆರೆದುಕೊಳ್ಳುತ್ತ ಆಪ್ತವಾಗುತ್ತ ಸಾಗುತ್ತದೆ.
ಆದರೆ ಪ್ರೇಮಿಗಳಲ್ಲದ ಇಬ್ಬರು ವ್ಯಕ್ತಿಗಳ ನಡುವಿನ ಕತೆಗಳು ಮತ್ತು ಸಿನೆಮಾಗಳು ವಿರಳವೆಂದೇ ಹೇಳಬಹುದು. ಅಂಥ ಕತೆಗಳನ್ನು ಬರೆಯುವುದು, ಅದರಲ್ಲೂ ಸಿನೆಮಾ ಮಾಡುವುದು ತುಂಬ ಕಷ್ಟದ ಕೆಲಸ. ಎರಡೂ ವ್ಯಕ್ತಿಗಳು ಒಂದೇ ಲಿಂಗದವರಾಗಿರಬೇಕು (ಸಹೋದರ/ಪಿತೃ ಬಾಂಧವ್ಯವಿಲ್ಲದಿದ್ದರೆ). ಅವರು ಅಪರಿಚಿತರಿರಬಹುದು. ತುಂಬ ವರ್ಷಗಳಾದ ಮೇಲೆ ಭೇಟಿಯಾದ ಗೆಳೆಯರಿರಬಹುದು. ದಶಕಗಟ್ಟಲೇ ಭೇಟಿಯಾಗದ ಅಪ್ಪ-ಮಗನಿರಬಹುದು, ದಾಯಾದಿಗಳಿರಬಹುದು, ಸಹೋದರ-ಸಹೋದರಿಯರಿರಬಹುದು. ಇಂಥ ಕತೆಗಳ ವ್ಯಾಪ್ತಿ ಮತ್ತು ಆಳ ಎರಡೂ ಆಯಾ ಕತೆಗಾರನ ಅನುಭವ, ಓದು ಮತ್ತು ಏನನ್ನು ಹೇಳಬೇಕು ಎನ್ನುವ ತುಡಿತದ ಮೇಲೆ ಅವಲಂಬಿಸಿಸಿರುತ್ತದೆ.
ಇದನ್ನೆಲ್ಲ ಬರೆಯಲು ಕಾರಣ, ಇತ್ತೀಚೆಗೆ ಅಂಥ ಎರಡು ಸಿನೆಮಾಗಳನ್ನು ನೋಡಿದೆ.
ಅಡಿಯೋಸ್ ಅಮಿಗೋ
ಸ್ಪ್ಯಾನಿಷ್ ಭಾಷೆಯಲ್ಲಿ ‘ಅಡಿಯೋಸ್ ಅಮಿಗೋ’ ಎಂದರೆ ‘ವಿದಾಯ ಗೆಳಯನೇ`’ ಎಂದು. ಆದರೆ ಇದು ಸ್ಪ್ಯಾನಿಷ್ ಚಿತ್ರವಲ್ಲ, ಕೇರಳದಲ್ಲಿ ಜರಗುವ ಶುದ್ಧ ಮಲಯಾಳಂ ಚಿತ್ರ!
ಸಂಪೂರ್ಣವಾಗಿ ವಿಭಿನ್ನ ಹಿನ್ನೆಲೆಯ ಇಬ್ಬರು ಅಪರಿಚಿತರು ಆಕಸ್ಮಿಕವಾಗಿ ಭೇಟಿಯಾದರೆ ಏನಾಗಬಹುದು?
ಒಬ್ಬ ಶ್ರೀಮಂತ ಮತ್ತು ಇನ್ನೊಬ್ಬ ಬಡವ.
ಒಬ್ಬ ತುಂಬ ತೊಂದರೆಯಲ್ಲಿದ್ದಾನೆ, ಇನ್ನೊಬ್ಬ ಬೇಕಾಬಿಟ್ಟಿ ಬದುಕುತ್ತಿದ್ದಾನೆ.
ಒಬ್ಬ ನಿರಾತಂಕದಲ್ಲಿರುವಂತೆ ತೋರುತ್ತಾನೆ, ಇನ್ನೊಬ್ಬ ಆತಂಕದಲ್ಲೇ ಕಾಯುತ್ತಿದ್ದಾನೆ.
ಒಬ್ಬ ಹಣವನ್ನು ಹೇಗೆ ಬೇಕೆಂದ ಹಾಗೆ ಖರ್ಚು ಮಾಡುತ್ತಾನೆ,,ನ್ನೊಬ್ಬ ತನ್ನ ತಾಯಿಯ ಆಸ್ಪತ್ರೆಯ ಬಿಲ್ಗಳಿಗಾಗಿ ಹತಾಶರಾಗಿದ್ದಾನೆ.
ಇಂಥ ವ್ಯತಿರಿಕ್ತ ಅಪರಿಚಿತರು ಬಸ್-ಸ್ಟ್ಯಾಂಡಿನಲ್ಲಿ ಭೇಟಿಯಾಗುತ್ತಾರೆ. ಕೇರಳದಾದ್ಯಂತ ಬಸ್, ಕಾರು ಮತ್ತು ದೋಣಿಯಲ್ಲಿ ೨೪ ಗಂಟೆಗಳ ಕಾಲ ಸುಮಾರಾಗಿ ಗೊತ್ತುಗುರಿಯಿಲ್ಲದ ಅರ್ಥಹೀನ ಪ್ರವಾಸಕ್ಕೆ ಹೋಗುತ್ತಾರೆ. ಇಡೀ ಸಿನೆಮಾ ನಮ್ಮನ್ನು ಉದ್ದೇಶರಹಿತ ಪ್ರಯಾಣಕ್ಕೆ ಕರೆದೊಯ್ಯುತ್ತದೆ.
ಇಂಥ ಸಂಪೂರ್ಣ ವಿರುದ್ಧದ ಇಬ್ಬರ ಯಾತ್ರೆ, ಕಪ್ಪುಬಿಳಿಪಾಗಿ ಸಾಗುವುದಿಲ್ಲ. ಶ್ರೀಮಂತ ಮತ್ತು ಬಡವರ ನಡುವಿನ ವ್ಯತ್ಯಾಸವನ್ನು ಅನ್ವೇಷಿಸುವುದಿಲ್ಲ. ಯಾವುದೇ ಪಾತ್ರವನ್ನು ನಿರ್ಣಯಿಸುವುದಿಲ್ಲ. ಬೋಧನೆ ಇಲ್ಲ. ನೈತಿಕತೆಯ ಪಾಠಗಳಿಲ್ಲ. ನಾನ್-ಜಡ್ಜ್-ಮೆಂಟಲ್ ಆಗಿ ದೈನಂದಿನ ಜೀವನದ ಸಾಮಾನ್ಯ ದೃಶ್ಯಗಳಲ್ಲಿ ವೈಭವೀಕರಣವಿಲ್ಲದೇ ತೋರಿಸುತ್ತ ಮನುಷ್ಯನ ಒಳಪದರುಗಳನ್ನು ಬಿಡಿಸುತ್ತ ಹೋಗುತ್ತದೆ.
ಮೇಯೞಗನ್
ಮೇಯೞಗನ್, ಹೆಸರೇ ಹೇಳುವಂತೆ, ತಮಿಳು ಸಿನೆಮಾ. ಕನ್ನಡದಲ್ಲಿ ತಿಲಾಂಜಲಿ ಕೊಟ್ಟಿರುವ `ೞ` (ಳ) ಇರುವ ಅಚ್ಚ ತಮಿಳು ಹೆಸರಿನ ಸಿನೆಮಾ.
ಈ ಸಿನೆಮಾದಲ್ಲೂ ಇಬ್ಬರು ಭೇಟಿಯಾಗುತ್ತಾರೆ. ಆದರೆ ಸಂಪೂರ್ಣ ಅಪರಿಚಿತರಲ್ಲ. ಆದರೆ ಕೆಲವು ದಶಕಗಳ ಮೇಲೆ ಭೇಟಿಯಾಗುತ್ತಾರೆ.
ಒಬ್ಬ ನಗರ ನಿವಾಸಿಯ ಪ್ರತಿರೂಪ, ಇನ್ನೊಬ್ಬ ಹಳ್ಳಿಯ ಭೂಪ.
ಒಬ್ಬ ತುಂಬ ಮಿತಭಾಷಿ, ಇನ್ನೊಬ್ಬ ಅರಳು ಹುರಿದಂತೆ ಮಾತಾಡುವ.
ಒಬ್ಬ ರಿಸರ್ವ್ಡ್, ಇನ್ನೊಬ್ಬ ಓಪನ್.
ಒಬ್ಬನದು ಯಾರನ್ನೂ ಹೆಚ್ಚಾಗಿ ನಂಬದ ಬದುಕು, ಇನ್ನೊಬ್ಬನ ಬದುಕೇ ನಂಬುಗೆಯ ಮೇಲೆ ನಿಂತಿರುವುದು.
ಒಬ್ಬನದು ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದ ನಡೆ, ಇನ್ನೊಬ್ಬನದು ಎಲ್ಲರೂ ನಮ್ಮವರೇ ಎನ್ನುವ ಬಾಳು.
ಒಬ್ಬನದು ಇತರರೊಂದಿಗೆ ಸಂಪರ್ಕ ಸಾಧಿಸಲು ಹೆಣಗಾಡುವ ಸ್ವಭಾವ, ಇನ್ನೊಬ್ಬ ಪ್ರಾಣಿಗಳನ್ನೂ ಮಾತನಾಡಿಸಬಲ್ಲ.
ದಶಕಗಳಾದ ಮೇಲೆ ಈ ನಗರವಾಸಿ ತಾನು ಹುಟ್ಟಿಬೆಳೆದ ಹಳ್ಳಿಗೆ ಹೋಗಬೇಕಾಗುವ ಪ್ರಸಂಗ ಬರುತ್ತದೆ, ಒಂದು ಮದುವೆಯ ಕಾರಣಕ್ಕಾಗಿ. ಅಲ್ಲಿ ನಗರವಾಸಿಯ ಉಪಚಾರವನ್ನು ನೋಡಿಕೊಳ್ಳಲು ಈ ಹಳ್ಳಿಯ ಭೂಪ. ಹಳ್ಳಿಯ ಭೂಪನಿಗೆ ನಗರವಾಸಿಯನ್ನು ನೋಡುತ್ತಿದ್ದಂತೆ ತನ್ನ ಅತ್ಯಂತ ಆಪ್ತಬಂಧು ಬಂದಂತೆ ವ್ಯವಹರಿಸುತ್ತಾನೆ. ಆದರೆ ನಗರವಾಸಿಗೆ ಈ ಹಳ್ಳಿಯ ಭೂಪ ಯಾರೆಂದು ಏನು ಮಾಡಿದರೂ ಗೊತ್ತಾಗುತ್ತಿಲ್ಲ, ಅವನನ್ನೇ ನೀನಾರೆಂದು ಕೇಳಲು ಸಂಕೋಚ. ಮದುವೆಯ ಮಂಟಪದಲ್ಲಿ ಏನೆಲ್ಲ ಸಾಹಸ ಮಾಡಿದರೂ ಈ ಹಳ್ಳಿಯ ಭೂಪ ತನಗೆ ಹೇಗೆ ಸಂಬಂಧವಾಗಬೇಕು, ಅವನ ಹೆಸರೇನು ಎಂದು ಹರಸಾಹಸ ಮಾಡಿದರೂ ಗೊತ್ತಾಗುವುದೇ ಇಲ್ಲ!
ಈ ಸಿನೆಮಾದ ನಿರೂಪಣೆ ಮಾಸ್ತಿಯವರ ಅವರ ಸಣ್ಣ ಕಥೆಗಳಂತಿದೆ – ಸರಳ, ಅಷ್ಟೇ ಆಳ. ಈ ಚಿತ್ರವೂ `ಅಡಿಯೋಸ್ ಅಮಿಗೋ` ಚಿತ್ರದಂತೆ ಬಹುತೇಕಕ ೨೪ ಗಂಟೆಗಳಲ್ಲಿ ನಡೆಯುತ್ತದೆ. ಪದರು ಪದರಾಗಿ ಮನುಷ್ಯನ ದೊಡ್ಡತನ ಮತ್ತು ಸಣ್ಣತನಗಳನ್ನು ಎಳೆ ಎಳೆಯಾಗಿ ಬಿಡಿಸುತ್ತ ಸಾಗುತ್ತದೆ. ನಗರಪ್ರಜ್ಞೆ ಮತ್ತು ಗ್ರಾಮೀಣ ನಂಬುಗೆಗಳು ರೋಮ್ಯಾಂಟಿಕ್ ಪದರುಗಳಲ್ಲಿ ಬಿಡಿಸಿಕೊಳ್ಳುತ್ತ ಹೋಗುತ್ತದೆ (ಕೆಲವೊಮ್ಮೆ ವ್ಯಾಚ್ಯವೂ ಆಗುತ್ತದೆ).
(ಅಂದ ಹಾಗೆ `ಮೇಯೞಗನ್` ಸಿನೆಮಾದ ನಿರ್ದೇಶಕನ ಮೊದಲ ಸಿನೆಮಾ ನಾನು ಮೇಲೆ ಹೇಳಿದ ೯೬).
ಇಂಥ ಕೆಲವು ಕತೆಗಳು
ಆರ್ ಕೆ ನಾರಾಯಣರು ಬರೆದ `ಜ್ಯೋತಿಷಿಯ ದಿನ` ಕತೆಯೊಂದಿದೆ. ಅದರಲ್ಲಿ ವಿದ್ಯುಚ್ಛಕ್ತಿ ಇಲ್ಲದ ಆಗಿನ ಕಾಲದಲ್ಲಿ ಕತ್ತಲಾಗುವ ಹೊತ್ತಿನಲ್ಲಿ ಜ್ಯೋತಿಷಿಯ ಬಳಿ ವ್ಯಕ್ತಿಯೊಬ್ಬ ಬಂದು ತನ್ನನ್ನು ತುಂಬ ವರ್ಷಗಳ ಹಿಂದೆ ಹೆಚ್ಚು-ಕಡಿಮೆ ಕೊಂದೇ ಹಾಕಿದ ವ್ಯಕ್ತಿ ಎಲ್ಲಿರಬಹುದೆಂದು ಕೇಳುತ್ತಾನೆ. ಜ್ಯೋತಿಷಿಗೆ ಭವಿಷ್ಯ ಕೇಳಲು ಬಂದ ವ್ಯಕ್ತಿ ಯಾರು ಎನ್ನುವುದು ಗೊತ್ತು, ಆದರೆ ಆ ವ್ಯಕ್ತಿಗೆ ಜ್ಯೋತಿಷಿ ಯಾರೆಂದು ಗೊತ್ತಿಲ್ಲ, `ಮೇಯೞಗನ್` ಸಿನೆಮಾದಲ್ಲಿ ಆಗುವಂತೆ. ಆ ಕತೆಯ ವಸ್ತು, ಅದನ್ನು ಬರೆದ ಶೈಲಿ ಮತ್ತು ಕೊನೆಯವರೆಗೂ ಕಾದಿಡುವ ರಹಸ್ಯ ಈಗಲೂ ಕತೆ ಬರೆಯುವವರಿಗೆ ಹೇಳಿ ಮಾಡಿಸಿದ ಪಾಠದಂತಿದೆ.
ವಿವೇಕ ಶಾನಭಾಗರು ಬರೆದ `ನಿರ್ವಾಣ` ಎನ್ನುವ ಕತೆಯೊಂದಿದೆ (ಘಾಚರ್ ಘೋಚರ್ ಸಂಕಲನ). ನಗರ ಜೀವನದ, ಕಾರ್ಪೋರೇಟ್ ಬದುಕಿನ ಪುಳ್ಳುತನವನ್ನು ಎಲ್ಲಿಯೂ ವ್ಯಾಚ್ಯವಾಗಿಸದೇ ಸಶಕ್ತವಾಗಿ ಬರೆದ ಕತೆ. ಈ ಕತೆಯಲ್ಲೂ ಇಬ್ಬರು ವ್ಯಕ್ತಿಗಳು ಭೇಟಿಯಾಗುತ್ತಾರೆ, `’ಅಡಿಯೋಸ್ ಅಮಿಗೋ’ ತರಹ. `ಮೇಯೞಗನ್` ತರಹ. ಕಾರ್ಪೋರೇಟ್ ಜಗತ್ತಿನಲ್ಲಿ ಮ್ಯಾನೇಜರ್ ಜಾಗದಲ್ಲಿ ಇರುವ ಇಬ್ಬರು ಪರದೇಶದ ಹೊಟೇಲೊಂದರಲ್ಲಿ ಭೇಟಿಯಾಗುತ್ತಾರೆ. ಇಬ್ಬರೂ ಬಹಳ ವರ್ಷಗಳಾದ ಮೇಲೆ ಸಿಕ್ಕವರು. ಕಥಾನಾಯಕನಿಗೆ ಅವನನ್ನು ಮುಂಚೆ ನೋಡಿದ ಮಾತನಾಡಿಸಿದ ನೆನಪಿದೆ, ಆದರೆ ಪೂರ್ತಿ ನೆನಪಾಗುತ್ತಿಲ್ಲ. ಇರಲಿ, ಏನಂತೆ, ಇದೆಲ್ಲ ಕಾರ್ಪೋರೇಟ್ ಜಗತ್ತಿನಲ್ಲಿ ಸಾಮಾನ್ಯವಲ್ಲವೇ? ಇಬ್ಬರೂ ಸೇರಿ ಆತನ ರೂಮಿನಲ್ಲಿ ಗುಂಡು ಹಾಕುತ್ತಾ ಪರಸ್ಪರ ಉಭಯ ಕುಶಲೋಪರಿಯನ್ನು ಮಾತನಾಡುತ್ತಾರೆ. ಮಾತನಾಡುತ್ತ ಕಥಾನಾಯಕನಿಗೆ ಆತ ತಾನು ಅಂದುಕೊಂಡ ಆತನಲ್ಲ ಎಂದು ಗೊತ್ತಾಗುತ್ತದೆ! ಮುಂದೆ ಇನ್ನೂ ಏನೇನೋ ಆಗುತ್ತೆ, ಸಸ್ಪೆನ್ಸ್ ಹಾಗೇ ಇರಲಿ.
ಇನ್ನೂ ಕೆಲವು ಕತೆಗಳಿರುತ್ತವೆ. ಆ ಕತೆಗಳಲ್ಲಿ ಒಂದೇ ವ್ಯಕ್ತಿ ಎರಡು ಹೋಳಾಗಿ ಎರಡು ವಿರುದ್ಧ ವ್ಯಕ್ತಿತ್ವದ ಮನುಷ್ಯರಾಗಿ, ಬೇರೆ ಬೇರೆಯಾಗಿ, ಮತ್ತೆ ಎದುರಾಗುತ್ತಾರೆ. ಹಾಗೆ ಎದುರಾದಾಗ ಎಂಥ ತೀವ್ರ ಸಂಘರ್ಷವಾಗುತ್ತದೆ ಅಲ್ಲವೇ! ಕಾರ್ನಾಡರ `ನಾಗಮಂಡಲ` ಮತ್ತು ಕಂಬಾರರ `ಸಿರಿಸಂಪಿಗೆ` ಇದಕ್ಕೆ ಉದಾಹರಣೆಗಳು. ಅಮೋಲ್ ಪಾಲೇಕರ್ ನಿರ್ದೇಶಿಸಿದ `ಪಹೇಲಿ` (ಶಾರೂಕ್ ಖಾನ್ ನಟನೆ)ಯದೂ ಇಂಥದೇ ಕತೆ. ಎ ಕೆ ರಾಮಾನುಜನ್ ಬರೆದ `ಮತ್ತೊಬ್ಬನ ಆತ್ಮ ಚರಿತ್ರೆ`ಯನ್ನೂ ಇಂಥ ಕತೆಗಳ ಸಾಲಿಗೆ ಸೇರಿಸಬಹುದೇನೋ.
ನಿಮಗೂ ಇಂಥ ಕಥೆಗಳು ಮತ್ತು ಸಿನೆಮಾಗಳು ಗೊತ್ತಿದ್ದರೆ, ಅವು ನಿಮ್ಮನ್ನು ಸ್ವಲ್ಪವಾದರೂ ಕಾಡಿದ್ದರೆ ನಿಮ್ಮ ಪ್ರತ್ರಿಕ್ರಿಯೆಯಲ್ಲಿ ಬರೆಯಲು ಮರೆಯಬೇಡಿ.
(ರಾಮಮೂರ್ತಿಯವರು ಅನಿವಾಸಿಯಲ್ಲಿ ಇತಿಹಾಸದ ಪುಟಗಳಿಂದ ಬಹಳಷ್ಟು ಜನರಿಗೆ ಗೊತ್ತಿಲ್ಲದ ವಿಷಯಗಳ ಬಗ್ಗೆ, ರಾಜಕೀಯ ಕಾಲಘಟ್ಟಗಳ ಬಗ್ಗೆ, ಇತಿಹಾಸದ ಪುಟಗಳಲ್ಲು ಹುದುಗಿಹೋಗಿರುವವರ ಬಗ್ಗೆ ಬರೆದು ತಮ್ಮದೇ ಒಂದು ಅಸ್ಮಿತೆಯನ್ನು ಮಾಡಿಕೊಂಡಿದ್ದಾರೆ. ಈ ಸಲ ಮತ್ತೆ ಹಾಗೇ ನಾವೆಲ್ಲ ಶಾಲೆಗಳಲ್ಲಿ ಓದಿ ಮರೆತಿದ್ದ ರಾಬರ್ಟ್ ಕ್ಲೈವ್-ನ ಬಗ್ಗೆ ವಿಸ್ತ್ರುತವಾಗಿ ಬರೆದಿದ್ದಾರೆ. ಓದಿ, ಸಮಯ ಮಾಡಿಕೊಂಡು ನಿಮ್ಮ ಅನಿಸಿಕೆಗಳನ್ನೂ ಬರೆಯಿರಿ. ಬಹಳ ಪರಿಶ್ರಮದ ಬರಹವಿದೆ – ಸಂ)
ಬ್ರಿಟಿಷರ ಆಡಳಿತದಲ್ಲಿ ಭಾರತ ದೇಶವನ್ನು “ಲೂಟಿ” ಮಾಡಿದ್ದವರು ಅನೇಕರು, ಇವರಲ್ಲಿ ರಾಬರ್ಟ್ ಕ್ಲೈವ್ (೧೭೨೫-೧೭೭೪) ಒಬ್ಬ. ಈತ, ಅಂದಿನ ಈಸ್ಟ್ ಇಂಡಿಯಾ ಕಂಪನಿಯಲ್ಲಿ ೧೭೪೪ ನಲ್ಲಿ ಗುಮಾಸ್ತನಾಗಿ ಸೇರಿ ಕೆಲವೇ ವರ್ಷಗಳ ನಂತರ ಬಂಗಾಳದ ಆಡಳಿತದ ಗವರ್ನರ್ ಆದ. ಇವನ ಜೀವನ ಚರಿತ್ರೆ ಬಹಳ ಸಾರಸ್ಯವಾಗಿದೆ, ಇಲ್ಲಿ ಕೆಲವು ಮುಖ್ಯವಾದ ವಿಷಯಗಳನ್ನು ಮಾತ್ರ ಪ್ರಸ್ತಾಪಿಸಿದ್ದೇನೆ.
ಜನನ ಶ್ರಾಪ್-ಶೈರಿನ (Shropshire) ಮಾರ್ಕೆಟ್ ಡ್ರೆಟನ್ (Market Drayton ), ಸೆಪ್ಟೆಂಬರ್ ೨೯, ೧೭೨೫ ರಲ್ಲಿ ಎಸ್ಟೇಟ್ ಸ್ಟೈಚ್ ಹಾಲಿನಲ್ಲಿ (Estate Styche Hall). ತಂದೆ ರಿಚರ್ಡ್ ಮತ್ತು ತಾಯಿ ರೆಬೆಕ್ಕಾ, ರಿಚರ್ಡ್ ಕ್ಲೈವ್ ಪಾರ್ಲಿಮೆಂಟ್ಟಿನ ಸದಸ್ಯನಾಗಿದ್ದರೂ ಆದಾಯ ಕಡಿಮೆ ಮತ್ತು ಹದಿಮೂರು ಮಕ್ಕಳ ದೊಡ್ಡ ಕುಟುಂಬ. ರಾಬರ್ಟ್ ಮಗುವಾಗಿದ್ದಾಗ ಅವನನ್ನು ಮ್ಯಾಂಚೆಸ್ಟರ್-ನಲ್ಲಿದ್ದ ರೆಬೆಕ್ಕಳ ತಂಗಿಯ ಮನೆಗೆ ಕಳಿಸಿದರು (ಈಗಿನ ಹೋಪ್ ಆಸ್ಪತ್ರೆ ). ನಂತರ ಮಾರ್ಕೆಟ್ ಡ್ರೇಟನ್-ನ ಗ್ರಾಮರ್ ಶಾಲೆ, ಲಂಡನ್ನಿನ ಮರ್ಚಂಟ್ ಟೇಯ್ಲರ್ಸ್ (Merchant Taylors) ಶಾಲೆ (೧೭೩೭-೩೯). ಬಾಲ್ಯದಲ್ಲಿ ಕೆಟ್ಟ ಸಹವಾಸ ಮತ್ತು ನಡವಳಿಕೆಯಿಂದ ಇವನ ಮನೆತನಕ್ಕೆ ಅವಮಾನವಾಗಿದೆ. ರೌಡಿಗಳ ಗುಂಪು ಕಟ್ಟಿ ವ್ಯಾಪಾರಸ್ತರ ಮೇಲೆ ದಾಳಿ ಮಾಡಿ ಹಣ ವಸೂಲಿ ರಸ್ತೆಯಲ್ಲಿ ಹೊಡೆದಾಟ ಇತ್ಯಾದಿ ಕೆಲಸಗಳ ಮುಖಂಡನಾಗಿದ್ದ. ಕೊನೆಗೆ ಹೆಮೆಲ್ ಹ್ಯಾಂಪ್-ಸ್ಟೆಡ್ (Hemel Hampstead)ನಲ್ಲಿ ಹಣಕಾಸಿನ ದಾಖಲೆಯನ್ನು (Book Keeping ) ಕಲಿತು ೧೭೪೨ ರಲ್ಲಿ, ಈಸ್ಟ್ ಇಂಡಿಯಾ ಕಂಪನಿಯಲ್ಲಿ ಗುಮಾಸ್ತನಾಗಿ ಮದ್ರಾಸಿನಲ್ಲಿ ತಂದೆಯ ಶಿಫಾರಸಿನಿಂದ ಕೆಲಸ ದೊರಕಿತು.
ಮಾರ್ಚ್ ೧೭೪೨ ರಂದು ಈತ ಲಂಡನ್ನಿಂದ ಹಡಗಿನಲ್ಲಿ ಮದ್ರಾಸ್ ಗೆ ಪ್ರಯಾಣ. ಕಾರಣಾಂತರಗಳಿಂದ ಬ್ರೆಜಿಲ್ ದೇಶ ಮುಟ್ಟಿ ನಂತರ ಮದ್ರಾಸ್ ತಲಪಿದ್ದು ಸುಮಾರು ಹದಿನೈದು ತಿಂಗಳ ನಂತರ !!
೧೭೪೦ನ ಈಸ್ಟ್ ಇಂಡಿಯಾ ಕಂಪನಿ ಒಂದು ವ್ಯಾಪಾರಿ ಸಂಸ್ಥೆ ಮಾತ್ರ ವಾಗಿತ್ತು , ರಾಜಕೀಯದಲ್ಲಿ ಇನ್ನೂ ಕೈ ಹಾಕಿರಲಿಲ್ಲ, ಆಮದು ಮತ್ತು ರಫ್ತು ವ್ಯಾಪಾರಕ್ಕೆ ಬಾಂಬೆ , ಕಲ್ಕತ್ತ ಮತ್ತು ಮದ್ರಾಸ್ ಪಟ್ಟಣಗಳಲ್ಲಿ ಶಾಖೆಗಳು ಇದ್ದವು. ಕಂಪನಿಯ ರಕ್ಷಣೆಗೆ ಹಲವಾರು ಶಸ್ತ್ರಸಜ್ಜಿತ ಜನರನ್ನು ನೇಮಿಸಿದ್ದರು , ಸ್ಥಳೀಯ ಪುಟ್ಟ ಪುಟ್ಟ ರಾಜ್ಯದವರು ಮತ್ತು ಯುರೋಪ್ ದೇಶದ ವ್ಯಾಪಾರಸ್ಥರಿಂದ ಆಗಾಗ್ಗೆ ಇವರಿಗೆ ತೊಂದರೆ ಇರುತಿತ್ತು. ಆದರೆ ತಮ್ಮದೇ ಸೈನ್ಯವಿರಲಿಲ್ಲ.
ಕ್ಲೈವ್ ಕೆಲಸಕ್ಕೆ ಸೇರಿದಾಗ ಅವನ ಆರ್ಥಿಕ ಪರಿಸ್ಥಿತಿ ಬಹಳ ಶೋಚನೀಯವಾಗಿತ್ತು, ಹಡಗಿನ ಪ್ರಯಾಣ ಹದಿನೈದು ತಿಂಗಳು, ಬ್ರೆಜಿಲ್ ದೇಶದಲ್ಲಿ ಕೆಲವು ವಾರ ತಂಗಿದ್ದ ಕಾರಣ ಅವನಲ್ಲಿ ಏನೂ ಹಣವಿರಲಿಲ್ಲ, ಜನರ ಪರಿಚಯಗಳಾಗುವುದು ಕಷ್ಟವಾಯಿತು, ಕೆಲವೇ ವಾರದಲ್ಲಿ ಮಾನಸಿಕ ಕಾಯಿಲೆ ಖಿನ್ನತೆ (Depression) ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಸಹ ಬಂದಿತ್ತು ಅನ್ನುವುದನ್ನು ಕ್ಲೈವ್ ಹೇಳಿಕೊಂಡಿದ್ದಾನೆ.
೧೭೪೬ರಲ್ಲಿ ಕಂಪನಿಯ ಹಣಕಾಸಿನ ಇಲಾಖೆಗೆ (Accounts) ವರ್ಗವಾಗಿ ಅಲ್ಲಿ ಕಂಪನಿಯ ವ್ಯಾಪಾರದ ಬಗ್ಗೆ ಹೆಚ್ಚು ಅನುಭವ ಪಡೆದ, ಆದರೆ ಆ ವರ್ಷ ಯುರೋಪಿನಲ್ಲಿ ನಡೆಯುತ್ತಿದ್ದ ಯುದ್ಧದಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ಎದುರಾಳಿಗಳಾಗಿದ್ದರು. ಇದರ ಪರಿಣಾಮ ದಕ್ಷಿಣ ಭಾರತಕ್ಕೂ ತಾಕಿ ಫ್ರಾನ್ಸ್ ದೇಶದ ಸೈನ್ಯಾಧಿಕಾರಿ ಡ್ಯೂಪ್ಲೆ ಮದ್ರಾಸ್ ಪ್ರದೇಶವನ್ನು ಆಕ್ರಮಿಸಿಕೊಂಡು ಸಾಕಷ್ಟು ಲೂಟಿ ಮಾಡಿದ.
ಕ್ಲೈವ್, ಕಂಪನಿಯ ರಕ್ಷಣಾ ಪಡೆಗೆ ಸೇರಿ ಫ್ರಾನ್ಸ್ ವಶದಿಂದ ಕುಡುಲೂರು (Cuddalore ) ಬಿಡುಗಡೆ ಆಗುವುದಕ್ಕೆ ಸಹಾಯ ಮಾಡಿದ್ದನ್ನು ಮೇಜರ್ ಲಾರೆನ್ಸ್ ಅನ್ನುವ ಸೈನ್ಯದ ಮುಖ್ಯಸ್ಥ ಗಮನಿಸಿ, ಆಗತಾನೆ ಇಂಗ್ಲೆಂಡಿನಿಂದ ಸಹಾಯಕ್ಕೆ ಆಗಮಿಸಿದ್ದ ಪಡೆಗೆ ಸೇರುವಂತೆ ಮಾಡಿ ಈಗಿನ ಪುದುಚೆರಿ (ಪಾಂಡಿಚೆರಿ) ಮೇಲೆ ದಾಳಿ ನಡೆಸಿದ. ಆದರೆ ಇದು ಸಫಲವಾಗದಿದ್ದರೂ ,ಇವನ ಸಾಹಸವನ್ನು ಮೇಲಧಿಕಾರಿಗಳು ಗಮನಿಸಿ ಲೆಫ್ಟಿನೆಂಟ್-ನ್ನಾಗಿ ಮಾಡಿದರು (೧೭೪೯). ತಂಜಾವೂರಿನಲ್ಲಿ ಆಳುತ್ತಿದ್ದ ಮರಾಠ ರಾಜನಿಗೆ ತನ್ನ ರಾಜ್ಯವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ಈಸ್ಟ್ ಇಂಡಿಯಾ ಕಂಪನಿ ನೆರವು ಕೇಳಿ ಸಮುದ್ರ ಬಂದರು ದೇವಕೊಟ್ಟೈಯನ್ನು ಅವರ ವಶಕ್ಕೆ ಕೊಡುವ ಒಪ್ಪಂದ ಮಾಡಿದ. ಆದರೆ ಈ ಬಂದರನ್ನು ವಶಪಡಿಸುವ ಮೊದಲ ಪ್ರಯತ್ನ ಸಫಲವಾಗಲಿಲ್ಲ .
ಎರಡನೆ ಪ್ರಯತ್ನ ಸಮುದ್ರದ ಕಡೆಯಿಂದ ಕ್ಲೈವ್ ನೇತೃತ್ವದಲ್ಲಿ ನಡೆದ ದಾಳಿ ಯಶಸ್ವಿ ಆಯಿತು, ಇವನ ಪಾತ್ರ ಎಲ್ಲರ ಗಮನಕ್ಕೆ ಬಂದಿತ್ತು. ಆಂಗ್ಲೋ ಫ್ರೆಂಚ್ ಒಪ್ಪಂದದ ಪ್ರಕಾರ ಮದ್ರಾಸ್ ಪ್ರಾಂತ್ಯ ಪುನಃ ಆಂಗ್ಲರ ವಶವಾಗಿ ಕ್ಲೈವ್ ಕಂಪನಿಯ ರಕ್ಷಣೆಗೆ ಬೇಕಾಗಿದ್ದ ಸರಕು ಮತ್ತು ಧಾನ್ಯಗಳನ್ನು ಸರಬರಾಜು ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡ. ಇದು ಅವನಿಗೆ ಬಹಳ ಲಾಭಕಾರಿಯಾಗಿ ಅವನ ವರಮಾನವೂ ಹೆಚ್ಚಾಯಿತು. ಆದರೆ ಇವನ ಆರೋಗ್ಯ ಸಹ ಹದಗೆಟ್ಟಿತ್ತು . ಕಂಪನಿ ಇವನನ್ನು ಕೆಲವು ತಿಂಗಳು ಕಲಕತ್ತದಲ್ಲಿ ವಿಶ್ರಾಂತಿ ಪಡೆಯಲು ಕಳಿಸಿತು,
ನಂತರ ಮದ್ರಾಸಿಗೆ ಹಿಂತಿರುಗಿದಾಗ, ಮತ್ತೆ ಆಂಗ್ಲೋ ಫ್ರೆಂಚ್ ಕಿತ್ತಾಟ ಹೆಚ್ಚಾಗಿ ದಕ್ಷಿಣ ಭಾರತ ಪ್ರದೇಶದ ಮೇಲೆ ರಾಜಕೀಯ ಮತ್ತು ಮಿಲಿಟರಿ ಶ್ರೇಷ್ಠತೆಯನ್ನು ಪಡೆಯುವ ಯೋಜನೆ ಸಾಗಿತ್ತು. ಆಗ ಕಂಪನಿಯ ಸೈನ್ಯ ಇತ್ತು ಮತ್ತು ಕ್ಲೈವ್ ಇದರಲ್ಲಿ ಕ್ಯಾಪ್ಟನ್ ಪದವಿ ಪಡೆದ.
ತಿರುಚಿನಾಪಳ್ಳಿ ಮತ್ತು ಆರ್ಕಾಟ್ ಪ್ರದೇಶದಲ್ಲಿ ಕಂಪನಿ ಪರವಾಗಿ ಹೋರಾಟ ನಡಸಿ ಸಾಕಷ್ಷ್ಟು ಹೆಸರು ಮಾಡಿದ ಮತ್ತು ಹಣವನ್ನೂ ಸಂಪಾದಿಸಿದ. ಆದರೆ ಅವನ ದೇಹಸ್ಥಿತಿ ಪುನಃ ಹದಗೆಟ್ಟಿದ ಕಾರಣದಿಂದ ಇಂಗ್ಲೆಂಡಿಗೆ ಮರಳಿ ಬರುವ ಆಲೋಚನೆ ಬಂತು. ಇದಕ್ಕೆ ಮುಂಚೆ ಮಾರ್ಗರೆಟ್ ಎನ್ನುವವಳ ಸ್ನೇಹ ಬೆಳದು ೧೮/೨/೧೭೫೩ರಂದು ಮದ್ರಾಸಿನಲ್ಲಿ ಈಕೆಯನ್ನು ಮದುವೆಯಾಗಿ ಮಾರ್ಚ್ ೨೩ರಂದು ಮದ್ರಾಸಿನಿಂದ ಇಬ್ಬರು ಇಂಗ್ಲೆಂಡಿಗೆ ಹೊರಟರು. ಹೊರಡುವುದಕ್ಕೆ ಮುಂಚೆ, ಸ್ಥಳೀಯ ದಾಖಲೆಗಳ ಪ್ರಕಾರ, ಸಂಪಾದಿಸಿದ ಅಪಾರ ಸಂಪತ್ತನ್ನು ವಜ್ರಗಳಲ್ಲಿ ಹೂಡಿಕೆ ಮಾಡಿದ.
೧೭೫೩-೧೭೫೫ ಇಂಗ್ಲೆಂಡ್ ವಾಸ
ಇಂಗ್ಲೆಂಡಿನಲ್ಲಿ ಇವನಿಗೆ ಈಸ್ಟ್ ಇಂಡಿಯಾ ಕಂಪನಿ ಮತ್ತು ಹಲವಾರು ಶ್ರೀಮಂತರಿಂದ ಸಾಕಷ್ಟು ಬಹುಮಾನಗಳು ಬಂದವು. ಆಗಿನ ಕಾಲಕ್ಕೆ ಈ ಮೊತ್ತ ಸುಮಾರು £೪೦೦೦೦. ತನ್ನ ಮನೆತನೆದ ಸಾಲಗಳನ್ನು, (£೮೦೦೦ ಸ್ಟೈಚ್ ಹಾಲ್-ನ ಮೇಲಿದ್ದ ಸಾಲ) ತೀರಿಸಿ ಕೆಲವು ಸಂಬಂಧೀರಿಗೆ ಪಿಂಚಣಿ ಬರುವಂತೆ ಏರ್ಪಾಡು ಮಾಡಿದ.*
ರಾಜಕೀಯಕ್ಕೆ ಇಳಿಯುವ ಯೋಚನೆ ಸಹ ಬಂದು ಏಪ್ರಿಲ್ ೧೭೫೪ ನಡೆದ ಪಾರ್ಲಿಮೆಂಟ್ ಚುನಾವಣೆಗೆ ಕಾರ್ನ್ವ ವಾಲ್ ಪ್ರದೇಶದಿಂದ ಸ್ಪರ್ದಿಸಿ ಕೇವಲ ೫೦ ಓಟಿನ ಅಂತರದಲ್ಲಿ ಚುನಾಯಿತನಾದರೂ ಇತರ ಅಭ್ಯರ್ಥಿಗಳಿಂದ ಅನೇಕ ಆಕ್ಷೇಪಣೆಗಳು ಬಂದು, ಅನೇಕ ತಿಂಗಳ ನಂತರ , ೨೪/೩/೧೭೫೫ ರಂದು ಪಾರ್ಲಿಮೆಂಟಿನಲ್ಲಿ ಕ್ಲೈವ್ ಚುನಾವಣೆ ಅಕ್ರಮ ಎಂದು ಘೋಷಿಸಲಾಯಿತು. ಈ ಚುನಾವಣೆಗೆ ಸಾಕಷ್ಟು ದುಡ್ಡು ಖರ್ಚು ಮಾಡಿದ್ದರಿಂದ ಅವನ ಮಾಡಿದ್ದ ಉಳಿತಾಯ ಕ್ಷೀಣಿಸಿತು. ಈ ಸಮಯದಲ್ಲಿ ಫ್ರೆಂಚರ ಬೆಂಬಲ ಪಡೆದಿದ್ದ ಹೈದರಾಬಾದಿನ ನಿಜಾಮ್ ಮೇಲೆ ದಾಳಿ ಮಾಡುವ ಸಂಚು ನಡೆಯುತಿತ್ತು. ಕಂಪನಿಯವರು ಕ್ಲೈವ್ ಇಂಡಿಯಾಗೆ ವಾಪಸ್ಸು ಹೋಗುವ ಸಲಹೆ ಕೊಟ್ಟು ತಮ್ಮ ಸೈನ್ಯದ ಎರಡನೇ ಮುಖ್ಯಸ್ಥ ಮತ್ತು ಫೋರ್ಟ್ ಸೈನ್ಟ್ ಡೇವಿಡ್ ಪ್ರದೇಶದ ರಾಜ್ಯಪಾಲನನ್ನಾಗಿ ನೇಮಕ ಮಾಡಿದರು. ಕೇವಲ ಮೂವತ್ತು ವರ್ಷದವನಿಗೆ ಮತ್ತು ಕೆಲವು ವರ್ಷ ಗಳ ಹಿಂದೆ ಗುಮಾಸ್ತೆಯಾಗಿದ್ದವನಿಗೆ ಈ ಪದವಿ ಮತ್ತು ಅವಕಾಶ ಹೀಗೆ ಬರುವುದು ಆಶ್ಚರ್ಯದ ಸಂಗತಿ. ಕ್ಲೈವ್ ಈ ಹೊಸ ಅಧಿಕಾರಕ್ಕೆ ಒಪ್ಪಿಗೆ ನೀಡಿ ಆಕ್ಟೊಬರ್ ೧೭೫೫ರಲ್ಲಿ ಕ್ಲೈವ್ ಮತ್ತು ಮಾರ್ಗರೆಟ್ ಬಾಂಬೆ ತಲುಪಿದರು.
೧೭೫೫- ೧೭೬೦ ಇಂಡಿಯಾದಲ್ಲಿ ಕಂಪನಿಯ ಹೋರಾಟಗಳು
ಆದರೆ ಅಲ್ಲಿನ ಪರಿಸ್ಥಿತಿ ಬದಲಾಗಿತ್ತು , ಹೈದರಾಬಾದ್ ನಿಜಾಮನ ಮೇಲೆ ನಡೆಯಬೇಕಾಗಿದ್ದ ದಾಳಿಯ ಬದಲು, ಮಲಬಾರ್ ತೀರದ ಘರಿಯ ಬಂದರಿನ ಮೇಲೆ ನಡೆಯಿತು. ಇಲ್ಲಿ ಒಬ್ಬ ಮರಾಠನ ನೌಕಾಪಡೆ ಯುರೋಪ್ ದೇಶದಿಂದ ಬರುತ್ತಿದ್ದ ಹಡಗುಗಳ ಮೇಲೆ ದಾಳಿ ಮಾಡಿ ಕೊಳ್ಳೆ ಮಾಡುತ್ತಿತ್ತು. ಅಡ್ಮಿರಲ್ ವಾಟ್ಸನ್-ನ ನೇತೃತ್ವದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ನೌಕಾಪಡೆ ಘರಿಯ ಮೇಲೆ ಐದು ಘಂಟೆ ನಿರಂತವಾಗಿ ಹಡಗಿನಿಂದ ಗುಂಡು ಹಾರಿಸಿ ಬಂದರನ್ನು ನಾಶಮಾಡಿತು. ಇದರಲ್ಲಿ ಕ್ಲೈವ್ ಸಹ ಭಾಗಿಯಾಗಿದ್ದ. ಇದಾದ ಮೇಲೆ ಮದ್ರಾಸ್ ಪ್ರದೇಶಕ್ಕೆ ಈ ನೌಕಾದಳ ಪ್ರಯಾಣ ಮಾಡಿತು. ೨/೦೬/೧೭೫೬ರಲ್ಲಿ ಕ್ಲೈವ್ ಫೋರ್ಟ್ ಡೇವಿಡ್ ರಾಜ್ಯಪಾಲನಾದ. ಆದರೆ ದೂರದ ಬಂಗಾಳ ದೇಶದಲ್ಲಿ ತರುಣ ನವಾಬ ಸಿರಾಜ್- ಉದ್-ದೌಲ್ ಕಲ್ಕತ್ತ ಪಟ್ಟಣವನ್ನು ಆಕ್ರಮಿಸಿಕೊಂಡ, ಕಂಪನಿಯ ಮುಖ್ಯ ಕಚೇರಿ ಹತ್ತಿರದ ಫೋರ್ಟ್-ವಿಲಿಯಂನಲ್ಲಿ ಇತ್ತು . ಈ ಆಕ್ರಮಣ ಕಂಪನಿ ಅವರಿಗೆ ತೊಂದರೆ ಆಗುವ ಸಂಭವ ಇತ್ತು. ಈ ಸಮಯದಲ್ಲೇ ಸುಮಾರು ೪೦ ಯುರೋಪ್ ಪಂಗಡದವರು ಮಡಿದ ಅಪ್ರಸಿದ್ದ ಪ್ರಕರಣ ” Black Hole of Calcutta “.
ಕಂಪನಿಯ ಪತಿಕ್ರಿಯೆ, ಅಡ್ಮಿರಲ್ ವಾಟ್ಸನ್ ಮತ್ತು ಕ್ಲೈವ್ ಸಹಾಯದಿಂದ ನವಾಬನಿಂದ ಕಲ್ಕತ್ತನಗರವನ್ನು ವಶಪಡಿಸಿಕೊಳ್ಳುವುದು, ಅಕ್ಟೊಬರ್ ೧೬, ೧೭೫೬ರಂದು ಇವರ ನೌಕಾಪಡೆ ಮದ್ರಾಸಿನಿಂದ ನೌಕಾಯಾನ ಮಾಡಿತು. ಈ ಪ್ರಯಾಣದಲ್ಲಿ ಕ್ಲೈವ್ ಮತ್ತು ನೌಕಾದಳದವರಿಗೆ ಈ ದಾಳಿ ನಡೆಸುವ ತಂತ್ರದ ಮೇಲೆ ಚರ್ಚೆ ನಡೆದು ಅನೇಕ ಭಿನ್ನಾಭಿಪ್ರಾಯಗಳು ಬಂದು ಒಂದು ನಿರ್ಧಾರಕ್ಕೆ ಬರುವುದು ಕಷ್ಟವಾಯಿತು. ಆದರೂ ೨/೦೧/೧೭೫೭ ರ ದಿನ ಬುಡ್ಜ್ ಬುಡ್ಜ್-ನಲ್ಲಿದ್ದ ನವಾಬನ ಸಣ್ಣ ಸೈನ್ಯವನ್ನು ಸೋಲಿಸಿ ಕಲ್ಕತ್ತ ನಗರವನ್ನು ವಶಪಡಿಸಿಕೊಂಡರು. ಆದರೆ ಕೆಲವೇ ದಿನಗಳಲ್ಲಿ ನವಾಬ ತನ್ನ ದೊಡ್ಡ ಸೈನ್ಯದೊಂದಿಗೆ ರಾತ್ರಿ ಮುತ್ತಿಗೆ ಹಾಕಿದ. ಕ್ಲೈವ್-ನ ಸೈನ್ಯದ ಹೋರಾಟದಿಂದ ನವಾಬನಿಗೆ ಗೆಲವು ಖಚಿತವೆಂದು ಅನ್ನಿಸಲಿಲ್ಲ. ಇದೆ ರೀತಿ ಕ್ಲೈವ್-ಗೂ ಸಹ ನವಾಬನೊಂದಿಗಿಗೆ ಒಂದು ಒಪ್ಪಂದಕ್ಕೆ ಬರುವ ಯೋಚನೆ ಬಂತು. ಇದೇ ೯/೦೨/೧೭೫೭ರಂದು ಮಾಡಿದ ಕಲ್ಕತ್ತ ಒಪ್ಪಂದ. ಕಂಪನಿಗೆ ಬೇಕಾದ ನೆರವು ಸಿಕ್ಕಿ ನವಾಬನೊಂದಿಗೆ ಪುನಃ ಯುದ್ಧ ಮಾಡುವ ಸಾಧ್ಯತೆ ಇರಲಿಲ್ಲ. ಆದರೆ ನವಾಬ ಫ್ರೆಂಚರ ಸ್ನೇಹ ಬೆಳಸಿ ತಿರುಗಿ ಬೀಳುವ ಸಂಶಯ ಇದ್ದಿದ್ದರಿಂದ ಕ್ಲೈವ್ ಕಲ್ಕತ್ತದಲ್ಲೇ ಇರಬೇಕಾಯಿತು
ನವಾಬನ ಆಡಳಿತದಲ್ಲಿ ಅನೇಕ ಪಿತೂರಿಗಳು ಹುಟ್ಟಿ ಅವನ ನವಾಬನಾಗಿ ಉಳಿಯುವುದು ಅನುಮಾನಾಸ್ಪದವಾಗಿತ್ತು. ಕಂಪೆನಿಯವರಿಗೆ ನವಾಬನ ಅಥವಾ ಅಂಥವನ ನೆರವು ಬೇಕಾಗಿತ್ತು. ಕ್ಲೈವ್ ಈ ಉದ್ದೇಶದಿಂದ ಕಲ್ಕತ್ತದ ವ್ಯಾಪಾರಸ್ಥ ಅಮಿರ್-ಚಂದ್ ಮೂಲಕ ನವಾಬನ ಸೇನಾಧಿಪತಿ ಮಿರ್ ಜಾಫರ್-ನನ್ನು ಸಂಪರ್ಕಸಿ, ನವಾಬ ಅವನ ಸ್ಥಾನ ಕಳೆದ ಕೊಂಡರೆ ಮೀರ್-ಜಾಫರ್ ಆ ಜಾಗಕ್ಕೆ ಬರಲು ಕಂಪನಿ ನೆರವು ನೀಡುತ್ತದೆ ಎನ್ನುವ ಆಸೆ ತೋರಿಸಿದ. ಅಮಿರ್ ಚಂದ್, ಇದು ಈಡೇರಿದರೆ, ತನಗೆ ದೊಡ್ಡ ಪ್ರತಿಫಲ ಬೇಕೆಂದು ಆಗ್ರಹಿದ. ಮೀರ್ ಜಾಫರ್ ಸಹ ಕ್ಲೈವ್-ನಿಂದ ಒಪ್ಪಂದ ಪತ್ರವನ್ನು ನಿರೀಕ್ಷಿಸಿದ್ದ. ಇಲ್ಲೇ ನೋಡಿ ಕ್ಲೈವ್ ಮಾಡಿದ “double game “. ಎರಡು ಒಪ್ಪಂದ ಪತ್ರಗಳನ್ನು ತಯಾರಿಸಿದ: ಒಂದು, ಮಿರ್ ಜಾಫರ್ ನವಾಬ ಆದರೆ ಅಮರ್ ಚಂದ್ ದೊಡ್ಡ ಮೊತ್ತ ಕೊಡುವುದಾಗಿ ಮತ್ತು ಮಿರ್ ಜಾಫರ್ ಒಪ್ಪಂದದ ಪತ್ರದಲ್ಲಿ ಅಮಿರ್ ಚಂದ್-ನ ವಿಚಾರ ಪ್ರಸ್ತಾಪ ಮಾಡಿರಲೇ ಇಲ್ಲ!
ಹೀಗೆ ನಡೆದ ನೈತಿಕ ಸನ್ನಿವೇಶಗಳು ಇರಲಿ, ನವಾಬನನ್ನು ಓಡಿಸಿ, ಮಿರ್ ಜಾಫರ್-ನನ್ನು ನವಾಬನಾಗಿ ಮಾಡಿ ಕಂಪನಿಗೆ ಇನ್ನು ಹಣ ಮತ್ತು ಪ್ರಭಾವ ತರುವ ಪ್ರಯತ್ನ ಇದು. ಈ ಕಾರಣದಿಂದ ಜೂನ್ ೧೭೫೭ರಲ್ಲಿ ನಡೆದ ಪ್ಲಾಸ್ಸಿ ಯುದ್ಧದಲ್ಲಿ ನವಾಬನ ಕಡೆಯವರಿಂದ ಪಿತೂರಿ ಮಾಡಿ ಅವನನ್ನು ಸೋಲಿಸಿ ಮಿರ್ ಜಾಫರ್-ನನ್ನು ಆ ಜಾಗಕ್ಕೆ ತಂದರು.
ದಾಖಲೆಗಳ ಪ್ರಕಾರ £೧.೨ ಮಿಲಿಯನ್ ( ಗ £೧೫೦ ಮಿಲಿಯನ್ !!!) ಅಷ್ಟು ಉಡುಗೊರೆ ಮತ್ತು ಪ್ರತಿಫಲಗಳನ್ನು ಅವನಿಂದ ವಸೂಲಿ ಮಾಡಲಾಯಿತು. ಕ್ಲೈವ್-ನ ವೈಯಕ್ತಿಕ ಆದಾಯ ಇದರಿಂದ £೨೩೪,೦೦೦, ಅಂದರೆ ಈಗಿನ ಮೌಲ್ಯ £೩೫ ಮಿಲಿಯನ್ !!**
ಇಷ್ಟೇ ಅಲ್ಲ, ಎರಡು ವರ್ಷದ ನಂತರ ದೆಹಲಿಯ ಮೊಗಲ್ ಚಕ್ರವರ್ತಿಯ ಮಗ ಮಿರ್ ಜಾಫರ್ ಮೇಲೆ ಯುದ್ಧ ಮಾಡಿದಾಗ ಕ್ಲೈವ್ ನೆರವಿನಿಂದ ಬಂಗಾಳವನ್ನು ರಕ್ಷಣೆ ಮಾಡಿದ್ದರಿಂದ, ನವಾಬ ಅವನಿಗೆ ವರ್ಷಕ್ಕೆ £೨೭೦೦೦ ಆದಾಯ ಬರುವಂತಹ ಜಮೀನನ್ನು “ಜಾಗೀರ್ ” ಕೊಟ್ಟ ದಾಖಲೆ ಇದೆ.
ಫ್ರೆಂಚ್ ಮತ್ತು ಡಚ್ ಪಡೆಗಳು ಬಂಗಾಲದ ಮೇಲೆ ಧಾಳಿ ನಡೆಸುವ ವದಂತಿ ಮತ್ತು ಬೆದರಿಕೆ ಸದಾ ಇದ್ದಿದ್ದರಿಂದ ಕ್ಲೈವ್ ಮದ್ರಾಸಿಗೆ ವಾಪಸ್ಸು ಹೋಗುವ ಅವಕಾಶ ಬರಲಿಲ್ಲ. ಅದೂ ಅಲ್ಲದೆ ಬಂಗಾಳದ ರಾಜ್ಯಪಾಲನಾಗಿ ನೇಮಕವಾದ ಮೇಲೆ ಇಲ್ಲಿ ಮಾಡಬೇಕಾದ ಕೆಲಸಗಳು ಅನೇಕವಿದ್ದವು.
೧೭೫೯ ರಲ್ಲಿ ಬ್ರಿಟಿಷ್ ಪ್ರಧಾನಮಂತ್ರಿ ಸರ್ ವಿಲಿಯಂ ಪಿಟ್ಟ್-ನನ್ನು ಸಂಪರ್ಕಸಿ, ಈಸ್ಟ್ ಇಂಡಿಯಾ ಕಂಪನಿ ಬರೀ ವ್ಯಾಪಾರದ ಸಂಸ್ಥೆ ಆದ್ದರಿಂದ ಈ ಪ್ರದೇಶವನ್ನು ಬ್ರಿಟಿಷ್ ಸರ್ಕಾರದ ಆಡಳಿತಲ್ಲಿ ಬಂದರೆ ಒಳಿತು ಮತ್ತು ಇದರಿಂದ ದೇಶಕ್ಕೆ (ಬ್ರಿಟಿಷ್ ) ಲಾಭವಾಗುತ್ತೆ ಎಂಬುದೇ ನನ್ನ ಅಭಿಲಾಷೆ ಎಂದು ಬರೆದ.
ಕ್ಲೈವ್ ಬಂಗಾಳ ರಾಜ್ಯಪಾಲನಾದ ನಂತರ ಕಂಪನಿ ಮಾಲೀಕರು ಮತ್ತು ಅವರ ಸೈನ್ಯದ ಅಧಿಕಾರಿಗಳ ಜೊತೆ ಅನೇಕ ಭಿನ್ನಾಭಿಪ್ರಾಯಗಳು ಬಂದವು. ಅಲ್ಲದೆ ಕ್ಲೈವ್ ಮಾಡಿದ ಅಪಾರ ಆಸ್ತಿಯನ್ನು ನೋಡಿ ಸಹಿಸಲಾಗಲಿಲ್ಲ. ಇದನ್ನು ತಡೆಯಲಾರದೆ , ಕ್ಲೈವ್ ಇಂಗ್ಲೆಂಡ್ ಗೆ ಮರಳಿ ಹೋಗುವ ನಿರ್ಧಾರಕ್ಕೆ ಬಂದ. ಕೋಟ್ಯಂತರ ಸಂಪಾಸಿದ್ದರಿಂದ ಚಿಂತೆ ಇಲ್ಲದೆ ತನ್ನ ದೇಶದಲ್ಲಿ ಸುಖವಾಗಿರುವ ಕನಸು ಕಂಡ.
೧೭೬೦-೧೭೬೪ ಇಂಗ್ಲೆಂಡ್ ರಾಜಕೀಯಕ್ಕೆ ಪ್ರವೇಶ
ಕ್ಲೈವ್ ಫೆಬ್ರುವರಿ ೧೭೬೦ರಂದು ಬಂಗಾಲದಿಂದ ಪ್ರಯಾಣ ಬೆಳಿಸಿ ಜುಲೈ ೧೭೬೦ ಲಂಡನ್ ತಲುಪಿದಮೇಲೆ, ಬ್ರಿಟಿಷ್ ಸರ್ಕಾರ ಅವನಿಗೆ ಅನೇಕ ಮರ್ಯಾದೆಗಳನ್ನು ಮಾಡಿದರು, ಆದರೆ ಅವನ ಆಸೆ ಇಂಗ್ಲಿಷ್ Peerage ಅಂದರೆ Lord ಅನ್ನುವ ಪದವಿ ಪಡೆಯುವುದು, ಆದರೆ ಇದು ಸಿಗಲಿಲ್ಲ. ಇದರ ಬದಲು Irish Baron Clive of Plassey ಆದ. ಆದರೆ ಇವನ ನಡತೆ ಮತ್ತು ದುಡ್ಡು ಮಾಡಿದ ರೀತಿ ಬಗ್ಗೆ ತೀವ್ರ ಟೀಕೆಗಳೂ ಆಯಿತು. ತನ್ನ ಅಪಾರ ಆಸ್ತಿ ಮತ್ತು ಪ್ರಭಾವ ದಿಂದ ಪಾರ್ಲಿಮೆಂಟ್ ಗೆ ಶ್ರೂಷಬರಿ (Shrewsbury ) ಕ್ಷೇತ್ರ ದಿಂದ ಅವಿರೋಧವಾಗಿ ಆಯ್ಕೆ ಆದ. ಆದರೆ ಇಂಡಿಯಾದಲ್ಲಿ ಕಂಪನಿಯ ಸ್ಥಿತಿ ಹದಗೆಟ್ಟಿತು, ಕಂಪನಿಯ ಷೇರುದಾರರು ಕ್ಲೈವ್ ಪುನಃ ಬಂಗಾಳಕ್ಕೆ ಹಿಂತಿರಿಗಿ ಉಸ್ತುವಾರಿ ವಹಿಸಿಕೊಳ್ಳುವುದಕ್ಕೆ ಬಲವಂತ ಮಾಡಿದರು.
೧೭೬೫- ೧೭೬೭ ಕೊನೆಯ ಇಂಡಿಯ ದಿನಗಳು
೪/೦೬/೧೭೬೪ ಲಂಡನ್ನಿಂದ, ಮಾರ್ಗರೇಟ್ ಮತ್ತು ಮಕ್ಕಳ ಜೊತೆಯಲ್ಲಿ ಇಲ್ಲದೆ ಹೊರಟು, ಬ್ರೆಸಿಲ್-ನಲ್ಲಿ ತಡವಾಗಿ ಕೊನೆಗೆ ಮದ್ರಾಸ್ ಮೂಲಕ ಮೇ ತಿಂಗಳು ೧೭೬೫ ಬಂಗಾಳ ಸೇರಿದ. ಆಗತಾನೆ ಕಂಪನಿಯವರು ಅನೇಕ ಶತ್ರುಗಳಮೇಲೆ ಹೋರಾಟ ನಡಿಸಿ ಜಯಪಡದಿದ್ದರು. ಹೆಕ್ಟರ್ ಮನ್ರೋ ನೇತೃತ್ವದಲ್ಲಿ ಕಂಪನಿಯ ಪಡೆಗಳು ತಮ್ಮ ಪ್ರಭಾವವನ್ನು ದೆಹಲಿಯವರೆಗೆ ಹರಡುವ ಆಲೋಚನೆ ಇತ್ತು, ಇದನ್ನು ಕ್ಲೈವ್ ನಿರಾಕರಿಸಿ ಕಂಪನಿಯ ರಾಜಕೀಯ ಮತ್ತು ಆಡಳಿತವನ್ನು ಕ್ರೋಢೀಕರಿಸುವುದು ಮುಖ್ಯವಾದದ್ದು ಎಂದು ಅಲಹಾಬಾದ್ ಒಪ್ಪಂದವನ್ನು ನೆರೆಯ ರಾಜ್ಯದೊಂದಿಗೆ ಮಾಡಿ, ಕಂಪನಿಗೆ ದಿವಾನಗಿರಿನಿಂದ ಬಂಗಾಳ, ಬಿಹಾರ ಮತ್ತು ಒರಿಸ್ಸಾ ಪ್ರದೇಶದಿಂದ ತೆರಿಗೆ ವಸೂಲು ಮಾಡುವ ಹಕ್ಕು ಪಡೆಯಿತು. ಪ್ರತಿಯಾಗಿ ಕಂಪನಿಯ ಪಡೆಗಳು ಈ ರಾಜ್ಯದ ನೆರವಿಗೆ ಬೇಕಾದಾಗ ಬರುವುದು ಮತ್ತು ವರ್ಷಕ್ಕೆ ೨೬ ಲಕ್ಷ ರೂಪಾಯಿ ನವಾಬನಿಗೆ ಕೊಡುವದು. ಪರೋಕ್ಷವಾಗಿ ಕಂಪನಿಯವರು ಈ ರಾಜ್ಯಗಳ ಆಡಳಿತದ ಮೇಲೆ ತಮ್ಮ ಪ್ರಭಾವನ್ನು ಬೀರಿದ್ದರು. ಕಂಪನಿಯ ಲಾಭ ಹೆಚ್ಚಿತು ಮತ್ತು ದಿವಾನಗಿರಿ ವಿಷಯ ಲಂಡನ್ನಿಗೆ ತಲುಪಿ ಶೇರುಕಟ್ಟೆಯಲ್ಲಿ ಕಂಪನಿಯ ಮೌಲ್ಯ ಹೆಚ್ಚಾಯಿತು. ಅವನ ಸ್ನೇಹಿತರು ಮತ್ತು ಮನೆಯವರು ಕಂಪನಿಯ ಒಳ ಸಮಾಚಾರ (Inside Information ) ಕ್ಲೈವ್-ನಿಂದ ತಿಳಿದು ಸಾಕಷ್ಟು ದುಡ್ಡು ಮಾಡಿದರು. ೧೭೬೭ ರಲ್ಲಿ, ದಾಖಲೆಗಳ ಪ್ರಕಾರ, ಕ್ಲೈವ್-ನ ಷೇರುಗಳ ಮೊತ್ತ £೭೫೦೦೦. ಇಂಗ್ಲೆಂಡ್ ನಲ್ಲಿ ಇವನು ದುಡ್ಡು ಮಾಡಿರುವ ಬಗ್ಗೆ ಅನೇಕ ವದಂತಿಗಳು ಹರಡಿದ್ದವು , ಪಾರ್ಲಿಮೆಂಟಿನಲ್ಲೂ ಚರ್ಚೆ ನಡೆಯಿತು , ಆದರೆ ಇವನ ಬೆಂಬಲಿಗರು ಅನೇಕರು ಮತ್ತು ಇವರಿಗೆ ಹಣ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದ. ಆದ್ದರಿಂದ ಇವನ ಮೇಲೆ ಕ್ರಮ ತೆಗೆದುಕೊಳ್ಳುವ ಪ್ರಶ್ನೆ ಬರಲಿಲ್ಲ.
ಕಂಪನಿಯಲ್ಲಿ ಅನೇಕ ಸುಧಾರಣೆಗಳನ್ನು ತರಬೇಕಾಯಿತು , ಅನೇಕ ಕೆಲಸದವರು ಭ್ರಷ್ಟಾಚಾರ ದಲ್ಲಿ ತೊಡಗಿ ಬೆಲೆ ನಿಗದಿ (Price fixing ) ಮಾಡುವದು ಸಾಕಷ್ಟು ಸಾಮಾನ್ಯವಾಗಿತ್ತು.
ಅಲ್ಲದೇ ಹೊರಗಿನಿಂದ ಬರುತ್ತಿದ್ದ ಬಹುಮಾನಗಳನ್ನು ನಿಷೇಧಿಸಿದ. ಕಂಪನಿಯ ಸೈನ್ಯದ ಕಲ್ಯಾಣದ ಬೆಗ್ಗೆ ಅನೇಕ ಸುಧಾರಣೆಗಳನ್ನು ಜಾರಿಗೆ ತಂದ. ತನಗೆ ಬರುತ್ತಿದ್ದ ಜಾಗೀರ್ ವರಮಾನವನ್ನು ಕಂಪನಿಯ ಸೈನಿಕರು ಹೋರಾಡಿ ಅಂಗವಿಕಲರಾದವರಿಗೆ ಪಿಂಚಣಿ ಬರುವಂತೆ ಮಾಡಿದ.
ಆದರೆ ಈ ಸುಧಾರಣೆಗಳು ಎಲ್ಲರಿಗೂ ಹಿಡಿಸಲಿಲ್ಲ. ತನ್ನ ನಿರ್ಧಾರಗಳೇ ಸರಿ ಎನ್ನುವ ಬಿಗುಮಾನ ಮತ್ತು ಅಹಂಕಾರ ಇವನಿಲ್ಲಿತ್ತು. ೧೭೬೬ ರಲ್ಲಿ ಇವನ ಅರೋಗ್ಯ ಕ್ಷೀಣವಾಗಿ ನರಗಳ ದುರ್ಬಲತೆ ಹೆಚ್ಚಾಗಿ ಬಂಗಾಳದ ರಾಜ್ಯಪಾಲ ಮತ್ತು ಕಂಪನಿಯ ಆಡಳಿತ ಮುಂದೆವರೆಸುವುದು ಕಷ್ಟವಾಯಿತು. ಅಲ್ಲದೆ ಮಾರ್ಗರೇಟ್ ಇಲ್ಲದಿರುವ ಕೊರತೆ ಹೆಚ್ಚಾಯಿತು. ಕೊನೆಗೆ ಬಂಗಾಳ ಕೊನೆಯ ಬಾರಿಗೆ ಬಿಟ್ಟು ತನ್ನ ದೇಶಕ್ಕೆ ಹಿಂತಿರುಗುವ ನಿರ್ಧಾರ ಮಾಡಿ, ೨೦/೦೧/೧೭೬೭ ರಂದು ಕಲ್ತತ್ತದಿಂದ ಪ್ರಯಾಣ ಬೆಳಿಸಿ ಜುಲೈ ೧೭೬೭ ಲಂಡನ್ ತಲುಪಿದ.
ಇವನ ವೈಯಕ್ತಿಕ ಅಸ್ತಿ £೪೦೦೦೦೦( ಈಗಿನ ಮೌಲ್ಯ £೮೫ ಮಿಲಿಯನ್ ). ಕಂಪನಿಯ ವ್ಯವಹಾರಗಳ ತನಿಖೆ ಪಾರ್ಲಿಮೆಂಟಿನಲ್ಲಿ ಪುನಃ ಪ್ರಾರಂಭವಾಯಿತು . ಆದರೆ ಇವನಿಗೆ ಇಂತಹ ವಿಚಾರದಲ್ಲಿ ಆಸಕ್ತಿ ಇರಲಿಲ್ಲ ಅವನ ಆರೋಗ್ಯಕ್ಕೆ ಗಮನ ಕೊಟ್ಟು ಬಾತ್ ಮತ್ತು ಯುರೋಪಿನಲ್ಲಿ ವಿಶ್ರಾಂತಿ ತೆಗಿದುಕೊಂಡ. ಆದರೆ ೧೭೬೮ ನಲ್ಲಿ ನಡೆದ ಚುನಾವಣೆಯಲ್ಲಿ ತನ್ನ ಕಡೆಯವರನ್ನು ನಿಲ್ಲಿಸಿ ಗೆಲ್ಲಿಸಬೇಕಾದ ಉದ್ದೇಶದಿಂದ ಅನೇಕ ಕಡೆ ಹಣ ಖರ್ಚು ಮಾಡಿದರೂ, ಪರಿಣಾಮ ತೃಪ್ತಿಕರವಾಗಿರಲಿಲ್ಲ, ಕೊನೆಗೆ ತಾನೇ Shrewsbury ಇಂದ ಅವಿರೋಧವಾಗಿ ಆಯ್ಕೆ ಆದ.
ಕಂಪನಿ ವ್ಯವಹಾರದ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಆಗಾಗ್ಯೆ ಚರ್ಚೆ ನಡೆಯುತ್ತಲೇ ಇತ್ತು ಮತ್ತು ಆದರೆ ಕ್ಲೈವ್ ಇದರ ಬಗ್ಗೆ ಜಾಸ್ತಿ ಗಮನ ಕೊಡುತ್ತಿರಲಿಲ್ಲ. ಆದರೆ ಒಂದು ಚರ್ಚೆಯಲ್ಲಿ ಭಾಗವಹಿಸಿ ಸುಮಾರು ಎರಡು ಗಂಟೆ ಮಾತನಾಡಿ ತನ್ನ ಆಡಳಿತತ ಕ್ರಮಗಳನ್ನು ಸಮರ್ಥಿಸಿಕೊಂಡು , ಈ ಮಾತುನ್ನು ಹೇಳಿ ತನ್ನ ಭಾಷಣವನ್ನು ಮುಗಿಸಿದ, ” Mr Chairman, at this moment I stand astonished at my own moderation “, ಅಂದರೆ, ಇದರ ಅರ್ಥ, ಬೇಕಾಗಿದ್ದರೆ ಇನ್ನೂ ಹೆಚ್ಚಿಗೆ ಹಣ ಸಂಪಾದಿಸಬಹುದಾಗಿತ್ತು ಆದರೆ ಮಾಡಲಿಲ್ಲ!
ಲಂಡನ್ Berkley Square ನಲ್ಲಿ ಇದ್ದ ಭವ್ಯವಾದ ಮನೆಯಲ್ಲಿ ವಾಸವಾಗಿದ್ದಾಗ, ಒಂದು ಸಾಯಂಕಾಲ ರಂದು ೨೨/೧೧/೧೭೭೪, ಸ್ನೇಹಿತರ ಜೊತೆಯಲ್ಲಿ ಹರಟುತ್ತ ಇದ್ದ ಕ್ಲೈವ್, ಅವರ ಕ್ಷಮೆ ಕೋರಿ ಪಕ್ಕದ ಕೊಣೆ ಸೇರಿ ಹೊರಗೆ ಬಹಳ ಹೊತ್ತು ಹೊರಗೆ ಬರಲಿಲ್ಲ. ಬಹಳ ವರ್ಷದಿಂದ ನೆರಳುತಿದ್ದ ನರಗಳ ದುರ್ಬಲತೆಯಿಂದ ನೋವು ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಸಣ್ಣ ಚೂರಿಯಿಂದ ತನ್ನ ಗಂಟಲಿಗೆ ತೂರಿಸಿ ಪ್ರಾಣ ಬಿಟ್ಟ ಅನ್ನುವುದು ಅನೇಕರ ಅಭಿಪ್ರಾಯ. ಆದರೆ ನೋವಿಗೆ ಪರಿಹಾರ ಸಿಗಲೆಂದು ಓಪಿಯಂ ಹೆಚ್ಚಿಗೆ ಪ್ರಮಾಣದಲ್ಲಿ ಸೇವನೆ ಮಾಡಿ ಪ್ರಾಣ ಕಳೆದುಕೊಂಡ ಅನ್ನುವುದು ಮುಖ್ಯ ಕಾರಣ ಇರಬಹುದು. ಆಗ ಇವನಿಗೆ ಕೇವಲ ೪೯ ವರ್ಷ.
ನಂತರ ಅವನ ಮಗ ಎಡ್ವರ್ಡ್ ಕ್ಲೈವ್ (೧೭೫೪-೧೮೩೯) ಸಹ ಮದ್ರಾಸ್ ಪ್ರದೇಶಕ್ಕೆ ರಾಜ್ಯಪಾಲನಾಗಿ ಕೆಲಸಮಾಡಿದ. ೧೭೯೯ ನಡೆದ ಟಿಪ್ಪು ಸುಲ್ತಾನ್ ಮೇಲೆ ಯುದ್ಧದಲ್ಲಿ ಇವನು ಭಾಗಿಯಾಗಿದ್ದ.
ಮುಂದೆ ಸುಮಾರು ಇನ್ನೂರು ವರ್ಷಗಗಳು ಬ್ರಿಟಿಷರು ಭಾರತವನ್ನು ಆಳಿದರು, ಕ್ಲೈವ್ ಮತ್ತು ಇತರರು ವ್ಯಾಪಾರಕ್ಕೆ ಬಂದು ಕೊನೆಗೆ ಇಡೀ ದೇಶವನ್ನೇ ಕಬಳಿಸಿದರು. ದಾಖಲೆ ಪ್ರಕಾರ ಭಾರತ ದೇಶದ GDP ೧೮ನೇ ಶತಮಾನದಲ್ಲಿ ೨೫%. ಆದರೆ ಬ್ರಿಟಿಷರು ಬಿಟ್ಟ ೧೯೪೭ ರಲ್ಲಿ ಭಾರತ ಒಂದು ಬಡ ದೇಶವಾಗಿತ್ತು! ಕಾರಣ ನಮ್ಮ ದೇಶದಲ್ಲಿ ಒಗ್ಗಟ್ಟು ಮತ್ತು ರಾಜ್ಯಗಳ ಸಹಕಾರ ಇರಲಿಲ್ಲ ಅಂದರೆ ತಪ್ಪು ಆಗಲಾರದು.
ಕ್ಲೈವ್ ಪ್ರತಿಮೆ ಮಾರ್ಕೆಟ್ ಡ್ರೇಟನ್ (ಅವನ ಊರು ) ನಲ್ಲಿದೆ. ಅದನ್ನು ತೆಗೆದು ಹಾಕುವುದಕ್ಕೆ ಸಾಕಷ್ಟು ಬೇಡಿಕೆ ಇತ್ತು, ಈಗಲೂ ಇದೆ. ವೇಲ್ಸ್ ನಲ್ಲಿರುವ Powis Castleನಲ್ಲಿ ಕ್ಲೈವ್ ಮನೆತನಕ್ಕೆ ಸಂಬಂದಪಟ್ಟ ವಸ್ತುಗಳ ಸಂಗ್ರಹ ಇದೆ.