ಕಿವಿನೋವು ಮತ್ತು ಕೆಲವು ಕವನಗಳು

ಈ ವಾರದ ಅನಿವಾಸಿಯಲ್ಲಿ ಹೊಸ ಬರಹಗಾರರು, ವಿಜಯ್ ಖುರ್ಸಾಪೂರರ ಕವಂಗಳಿವೆ, ಓದಿ ಹರಸಿ. ಉಮೇಶ ನಾಗಲೋಟಿಮಠ ಈ ಮೊದಲು ಒಂದು ಸಲ ಅನಿವಾಸಿಗೆ ಬರೆದಿದ್ದಾರೆ, ಅವರಿಗೆ ಮತ್ತೊಮ್ಮೆ ಸ್ವಾಗತ. ಇಬ್ಬಾರೂ ಇನ್ನಷ್ಟು ಕನ್ನಡದಲ್ಲಿ ಬರೆಯಲಿ ಎಂದು ಆಶಿಸುತ್ತೇನೆ. – ಸಂ.

ಕಿವಿನೋವು: ಡಾ ಉಮೇಶ ನಾಗಲೋಟಿಮಠ ಬರೆದ ಲೇಖನ

ಲೇಖಕರ ಪರಿಚಯ: ಕಿವಿ ಮೂಗು ಗಂಟಲು ವೈದ್ಯರು, ಹುಬ್ಬಳ್ಳಿಯಲ್ಲಿ ಜನನ, ಬೆಳಗಾವಿಯಲ್ಲಿ ವಿದ್ಯಾಭ್ಯಾಸ . ಭಾರತದಲ್ಲಿ ಸುಮಾರು ೧೭ ವರ್ಷ ಸೇವೆ, ಕಳೆದ ಸುಮಾರು ೯ ವರ್ಷಗಳಿಂದ ಇಂಗ್ಲೆಂಡಿನ ವಿವಿಧ ಆಸ್ಪತ್ರೆಗಳಲ್ಲಿ ಸೇವೆ. MBBS ಮಾಡುವಾಗಿನಿಂದ ಕನ್ನಡ ಬರೆಯುವ ಚಟ. ಹಲವಾರು ಲೇಖನಗಳು/ಪದ್ಯಗಳು ಪತ್ರಿಕೆಯಲ್ಲಿ, ಪುಸ್ತಕಗಳಲ್ಲಿ ಪ್ರಕಟವಾಗಿವೆ , ಆಕಾಶವಾಣಿಯಲ್ಲಿ ಹಲವು ಭಾಷಣ /ಸಂದರ್ಶನ. ವೃತ್ತಿಯಲ್ಲಿ ಇಂಗ್ಲೆಂಡಿನ ರೊವಿನಾ ರೇಯನ್ ಪ್ರಶಸ್ತಿ

ನಾನು ಇಂಗ್ಲೆಂಡಿನ ಚೆಸ್ಟರ್ ಎಂಬ ಊರಿನಲ್ಲಿ ಕಿವಿ, ಮೂಗು ಮತ್ತು ಗಂಟಲು ತಜ್ಞನಾಗಿ ಒಂದು ರವಿವಾರ ಕರ್ತವ್ಯದ ಮೇಲಿದ್ದೆ. ಸಂಜೆ ಸುಮಾರು ೧೦ ವರ್ಷದ ಹುಡುಗ ಕಿವಿನೋವು ಮತ್ತು ಜ್ವರದಿಂದ ದಾಖಲಾಗಿದ್ದ. ಆತನಿಗೆ ಬೇಕಾದ ರೋಗನಿರೋಧಕ ಔಷಧಿ (ಆಂಟಿಬಯೋಟಿಕ್) ಕೊಡುತ್ತಿದ್ದೆವು. ಸಿ.ಟಿ ಸ್ಕ್ಯಾನ್ ಮಾಡಿಸಿದಾಗ ಕಿವಿಯಲ್ಲಿ ಕೀವು ತುಂಬಿಕೊಂಡದ್ದು ಗೊತ್ತಾಗಿ ಆತನಿಗೆ ಶಸ್ತ್ರಕ್ರಿಯೆ (ಆಪೆರೇಷನ್) ಮಾಡುವುದೋ ಅಥವಾ ಇನ್ನೊಂದಿಷ್ಟು ಔಷಧಿ ಕೊಟ್ಟು ಸ್ವಲ್ಪ ಕಾಯ್ದು ನೋಡೋವುದೋ ಎಂಬ ವಿಚಾರದಲ್ಲಿದ್ದೆವು . ರಾತ್ರಿ ಆದರೂ ಆ ಹುಡುಗನ ಕಿವಿನೋವು ಹೆಚ್ಚಾಯಿತೇ ವಿನಹ ಕಡಿಮೆಯಾಗಲಿಲ್ಲ . ಆಗ ನನ್ನ ಬಾಸ್ ನನಗೆ ಆಪೆರೇಷನ್ ಮಾಡಲು ಹೇಳಿದರು. ನಾನು ರಾತ್ರಿ ಸುಮಾರು ೩ ಗಂಟೆಗೆ ಆಪೆರೇಷನ್ ಕೊಠಡಿಗೆ ಹೋಗಿ ಬಾಲಕನಿಗೆ ಅರಿವಳಿಕೆ (anesthesia) ನೀಡಿ ಕಿವಿಯ ಪರದೆಯಲ್ಲಿ ಸಣ್ಣ ಛೇದವನ್ನು ಮಾಡಿದಾಗ ಬಹಳ ಕೀವು ಹೊರಗಡೆ ಬಂದಿತು. ಅಲ್ಲಿಯವರೆಗೆ ಹಾಸಿಗೆ ಹಿಡಿದು ಮಲಗಿದ ಆ ಬಾಲಕ ಮರುದಿನ ಮುಂಜಾನೆ ವಾರ್ಡಿನಲ್ಲಿ ಓಡಾಡತೊಡಗಿದ್ದ. ಆತನ ತಂದೆ ತಾಯಿ ನನಗೆ “ಒಹೋ, ಏನು ಮ್ಯಾಜಿಕ್ ಮಾಡಿದಿರಿ ಡಾಕ್ಟ್ರೇ ?” ಎಂದು ತುಂಬಾ ಖುಷಿಯಿಂದ ಕೇಳಿದರು.

ನಾನು ಮಾಡಿದ ಆ ಚಿಕ್ಕ ಶಸ್ತ್ರಕ್ರಿಯೆಗೆ ಮೈರಿಂಗೋಟೋಮಿ (Myringotomy) ಎನ್ನುತ್ತಾರೆ. ಕಿವಿಯಲ್ಲಿ ಕೀವು ತುಂಬಿ ಒತ್ತಡಲ್ಲಿದ್ದಾಗ ರೋಗಿ ಅತೀವ ಕಿವಿನೋವಿನಿಂದ ಬಳಲುತ್ತಾನೆ. ಔಷಧಿಗಳಿಂದ ಆ ಕೀವು ಕಡಿಮೆಯಾಗದಿದ್ದರೆ ಈ ಆಪೆರೇಷನ್ ಮಾಡಬೇಕಾಗುತ್ತದೆ. ಇಲ್ಲಿ ಸೂಕ್ಷ್ಮದರ್ಶಕ ಯಂತ್ರದಲ್ಲಿ ನೋಡುತ್ತ ಕಿವಿಯ ಪರದೆಯಲ್ಲಿ ಒಂದು ಸಣ್ಣ ಛೇದವನ್ನು ಮಾಡುತ್ತಾರೆ, ಇದರಿಂದ ಆ ಕೀವು ಹೊರಗಡೆ ಬಂದು ನೋವು, ಜ್ವರ ಕಡಿಮೆಯಾಗುತ್ತದೆ. ಈ ಆಪೆರೇಷನ್ ಮಾಡದಿದ್ದರೆ ಹಲವು ಬಾರಿ ಕಿವಿ ಪರದೆ ಕೊಳೆತು ಅದರಲ್ಲಿ ದೊಡ್ಡ ತೂತಾಗುತ್ತದೆ. ನಂತರದಲ್ಲಿ ಈ ತೂತಿನಿಂದ ಕಿವುಡುತನ, ಮೇಲಿಂದ ಮೇಲೆ ಕಿವಿಯ ಸೋಂಕು ಇತ್ಯಾದಿ ತೊಂದರೆಗಳು ಬರುತ್ತವೆ. ಇದರ ಒಟ್ಟು ಸಾರಾಂಶ ಎಂದರೆ ಕಿವಿಯಲ್ಲಿ ಸೋಂಕಾಗಿ ಕೀವು ತುಂಬಿ ಅದು ಔಷಧಿಗೆ ಕಡಿಮೆಯಾಗದಿದ್ದರೆ ಕಿವಿಪರದೆಯಲ್ಲಿ ಛೇದ ಮಾಡಿ ಆ ಕೀವನ್ನು ಹೊರತೆಗೆಯಬೇಕು. ಇದನ್ನು ಯಾಕೆ ಹೇಳುತ್ತಿರುವೆ ಎಂದು ನಿಮಗೆ ಮುಂದೆ ಗೊತ್ತಾಗುತ್ತದೆ.

ನಾನು ಈಗ ಹಲವು ವರ್ಷಗಳ ಹಿಂದೆ ಹೋಗುವೆ. ನಾನು ಬೆಳಗಾವಿಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಇದ್ದಾಗಿನಿಂದ ಹಿಡಿದು ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕನಾಗಿರುವವರೆಗೆ ನಾನು ನೋಡಿದ್ದೇನೆಂದರೆ ಹಲವಾರು ರೋಗಿಗಳು ಕಿವಿ ನೋವಾದಾಗ ಕಿವಿಯಲ್ಲಿ ಬಿಸಿ ಎಣ್ಣೆ, ಬಿಸಿ ಎಣ್ಣೆಯಲ್ಲಿ ಬಳ್ಳೊಳ್ಳಿ, ಇಲ್ಲವೇ ಬಳ್ಳೊಳ್ಳಿ ಜಜ್ಜಿ ಅದರ ರಸ ಕಿವಿಯಲ್ಲಿ ಹಾಕುವುದು, ಎಣ್ಣೆಗೆ ಜೊತೆಗೆ ಸ್ವಲ್ಪ ಅರಿಶಿಣ – ಹೀಗೆ ಹಲವು ಮನೆ ಮದ್ದು ಮಾಡುತ್ತಿದ್ದರು. ನಮಗೋ ಇದು ಬಲು ವಿಚಿತ್ರವಾಗಿತ್ತು. ಯಾಕೆಂದು ಅವರಿಗೆ ಕೇಳಿದಾಗ ಅವರು ನಮ್ಮ ಅಜ್ಜ, ಅಜ್ಜಿ, ತಾಯಿ ಹೀಗೆ ಮಾಡಿರೆಂದು ಹೇಳಿದಕ್ಕೆ ನಾವು ಮಾಡಿದೆವು ಎನ್ನುತ್ತಿದ್ದರು. ಅವರಾರಿಗೂ ಯಾಕೆ ಎಂದು ಗೊತ್ತಿರಲಿಲ್ಲ, ಆದರೆ ಹಿರಿಯರು ಹೇಳಿದಂತೆ ಮಾಡುತ್ತಿದ್ದರು. ಆ ಹಿರಿಯರನ್ನು ಕೇಳಿದಾಗ ಅವರಿಗೂ ಇದು ಯಾಕೆ ಎಂದು ಗೊತ್ತಿರಲಿಲ್ಲ ಆದರೆ ಇದನ್ನು ಮುಂದುವರೆಸುತ್ತಿದ್ದರು.

ಇದರ ಬಗ್ಗೆ ನಾವು ಸ್ವಲ್ಪ ಅಧ್ಯಯನ/ ಹುಡುಕಾಟ ನಡೆಸಿದೆವು. ನಮಗೆ ಸಿಕ್ಕ ಮಾಹಿತಿ ಬಹಳಷ್ಟು ಕುತೂಹಲಕಾರಿಯಾಗಿತ್ತು. ಆಯುರ್ವೇದದಲ್ಲಿ ಕಿವಿ ನೋವಿನ ಮೂಲವನ್ನು ಹೇಗೆ ಕಂಡು ಹಿಡಿಯುವುದು ಎಂಬ ಬಗ್ಗೆ ಸವಿಸ್ತಾರವಾದ ವಿವರಣೆ ಇದೆ. ಕಿವಿ ನೋವು ಹಲವಾರು ಕಾರಣಗಳಿಂದ ಬರಬಹುದು. ಕೆಲವು ರೋಗಗಳಲ್ಲಿ ಜ್ವರ ಇದ್ದರೆ, ಇನ್ನು ಕೆಲವು ಕಡೆ ನಾಡಿಮಿಡಿತ ಹೆಚ್ಚಾಗಿರುತ್ತದೆ. ಇನ್ನು ಹಲವೆಡೆ ಕಿವಿ ಸ್ವಲ್ಪ ಮಂದವಾಗಿರುತ್ತದೆ. ಇನ್ನು ಹಲವು ಕಡೆ ಕಿವಿ ಹೊರಗೆ ಬಾವು ಕಾಣಿಸುತ್ತದೆ. ಇವುಗಳ ಮೇಲೆ ನಾವು ರೋಗಿಗೆ ಏನಾಗಿದೆ ಎಂದು ಸುಮಾರು ೯೦% ವರೆಗೂ ಸರಿಯಾಗಿ ನಿದಾನಿಸಬಹುದು (ಈ ಕೋವಿಡ್ ಮಹಾಮಾರಿ ನಂತರ ಇಡೀ ಜಗತ್ತಿನಲ್ಲೆಲ್ಲ ವೈದ್ಯರು ಫೋನ್ ಅಥವಾ ಇಂಟರನೆಟ್ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಈ ತರಹದ ವ್ಯವಸ್ಥೆಯಲ್ಲಿ ಅವರು ಬಹಳಷ್ಟು ಬಾರಿ ಪ್ರಶ್ನೋತ್ತರಗಳ ಮೇಲೆಯೇ ರೋಗವನ್ನು ಗುರುತಿಸುತ್ತಾರೆ.)

ಬೆಳ್ಳೊಳ್ಳಿ ರಸ ಒಂದು ಕೆರೆಟೊಲೈಟಿಕ್ (kerolytic), ಅಂದರೆ ಅದು ಚರ್ಮದ ಹೊರಪದರನ್ನು ಕರಗಿಸುವ ಶಕ್ತಿ ಹೊಂದಿದೆ. ಅರಿಶಿಣ ಒಂದು ಆಂಟಿಸೆಪ್ಟಿಕ್ (antiseptic ), ಅಂದರೆ ರೋಗಾಣುಗಳನ್ನು ನಾಶ ಮಾಡುವ ಶಕ್ತಿ ಹೊಂದಿದೆ. ಈಗ ಆಯುರ್ವೇದದಲ್ಲಿ ಈ ರೀತಿಯ ಕಿವಿಯ ಸೋಂಕಿಗೆ (acute otitis media , not responding to antibiotics ) ಯಾವ ಚಿಕಿತ್ಸೆ ಹೇಳಿದ್ದಾರೆ ಎಂದು ನೋಡೋಣ. ಒಂದು ಪಾತ್ರೆಯಲ್ಲಿ ಎಣ್ಣೆ , ಬಳ್ಳೊಳ್ಳಿ ರಸ/ಬಳ್ಳೊಳ್ಳಿ ,ಅರಿಶಿನ ಹಾಕಿ ಕಾಯಿಸಿ ಆ ಕಾಯ್ದ ಒಂದು ಹನಿ ಎಣ್ಣೆಯನ್ನು ಕಿವಿಯ ಪರದೆಯ ಮೇಲೆ ಹಾಕಬೇಕು. ಇಲ್ಲಿ ರೋಗಿ ಹೇಗೆ ಮಲಗಬೇಕು, ಕಿವಿಯಲ್ಲಿ ಎಣ್ಣೆ ಯಾವ ರೀತಿ ಹಾಕಬೇಕು , ಯಾವ ಸಲಕರಣೆ ಹೇಗೆ ಉಪಯೋಗಿಸಬೇಕೆಂದು ಎಂದು ಸವಿಸ್ತಾರವಾಗಿ ತಿಳಿಸಿದ್ದಾರೆ. ಆ ಕಾಯ್ದ ಎಣ್ಣೆ ಹನಿ ಕಿವಿ ಪರದೆಯ ಮೇಲೆ ಬಿದ್ದ ತಕ್ಷಣ ಹೊರಗಿನ ಪದರು (ಕಿವಿ ಪರದೆಗೆ ೩ ಪದರುಗಳು ಇರುತ್ತವೆ ) ಬೆಳ್ಳೊಳ್ಳಿ ರಸದಿಂದ ಕರಗಿ ಹೋಗಿ ಉಳಿದ ಪದರುಗಳು ಬಿಸಿ ಎಣ್ಣೆಯಿಂದ ಕರಗಿ ಕಿವಿ ಪರದೆಯಲ್ಲಿ ಅತಿ ಸಣ್ಣ ಛೇದವಾಗಿ ಕಿವಿಯ ಒಳಗಿನ ಕೀವು ಹೊರಗೆ ಬರುತ್ತದೆ ಹಾಗು ರೋಗಿಗೆ ನೋವು ತಕ್ಷಣ ಶಮನವಾಗುತ್ತದೆ. ಅದರಲ್ಲಿನ ಅರಿಶಿನ ಕಿವಿಯಲ್ಲಿ ಸೋಂಕು ಮಾಡಿದ ರೋಗಾಣುಗಳ ವಿರುದ್ಧ ಹೋರಾಡುತ್ತದೆ ಹಾಗು ಈ ಎಲ್ಲ ಚಟುವಟಿಕೆ ಹೊರಗಿನ ಸೋಂಕುರಹಿತವಾಗಿ (in sterile condition) ನಡೆಯಲು ಸಹಾಯ ಮಾಡುತ್ತದೆ. ಈಗ ಇದನ್ನು ಮೈರಿಂಗೋಟೋಮಿ (myringotomy ) ಶಸ್ತ್ರ ಕ್ರಿಯೆಗೆ ಹೋಲಿಸಿದಾಗ ಎಲ್ಲವು ಒಂದೇ ಆಗಿದೆ ಅನ್ನಿಸುವುದು. ನಾವು ಇಂದು ಮೈಕ್ರೋಸ್ಕೋಪ್, ಅನಾಸ್ಥೆಸಿಯಾ , ಸ್ಟೆರಿಲೈಸಷನ್ , ಆಂಟಿಸೆಪ್ಟಿಕ್ ಇತ್ಯಾದಿ ಪಾಶ್ಚಿಮಾತ್ಯ ಪದಗಳನ್ನು ಮತ್ತು ವಿಧಾನಗಳನ್ನು ಬಳಸಿ ಆಪೆರೇಶನ್ ಮಾಡುತ್ತೇವೆ. ಆದರೆ ಎರೆಡೂ ಚಿಕಿತ್ಸಾ ಪದ್ಧತಿಗಳಲ್ಲಿ ಇದನ್ನು ಮಾಡುವ ವಿಧಾನ ಬೇರೆ ಇದ್ದರೂ ಚಿಕಿತ್ಸಾ ತತ್ವ ಒಂದೇ ಇದೆ.

ಈ ಚಿಕಿತ್ಸಾ ಪದ್ಧತಿ ಅಪಭ್ರಮಶವಾಗಿ ಜನರು ತಮಗೆ ತೋಚಿದ್ದನ್ನು ಮಾಡುತ್ತಾ ಆಯುರ್ವೇದವನ್ನು ಮೂರಾಬಟ್ಟೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಯುರ್ವೇದ ಆಧುನಿಕ ಚಿಕಿತ್ಸಾ ಪದ್ದತಿಯ ಅಂಶಗಳನ್ನು ತನ್ನೊಳಗೆ ಕೂಡಿಸಿಕೊಳ್ಳದೆ ಹಳೆಯ ಮುದುಕನಂತೆ ಆಗಿದೆ. ಇನ್ನು ಭಾರತದಲ್ಲಿ ಅಲೋಪಥಿ ಮತ್ತು ಆಯುರ್ವೇದ ವೈದ್ಯರು ಹೊಡೆದಾಡುತ್ತ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಆಯುರ್ವೇದಕ್ಕೆ ಸರಕಾರದ ಪ್ರೋತ್ಸಾಹ, ಸಂಶೋಧನೆಗೆ ಧನ ಸಹಾಯ, ಜನರ ಪ್ರೋತ್ಸಾಹ ಇದಾವುದೂ ಸಿಗದೇ ಅದು ಮುರುಕುಲು ಮನೆಯಲ್ಲಿನ, ಹರಕಲು ಉಟ್ಟ ಮುದಿ ಜಾಣನಂತೆ ಆಗಿದೆ.

ನಾನು ಅಂದು ನನ್ನ ಬಾಸ್ ಅವರಿಗೆ ಈ ಸುಮಾರು ೩-೪ ಸಾವಿರ ವರ್ಷ ಹಳೆಯದಾದ ಆಯುರ್ವೇದ ಚಿಕಿತ್ಸಾ ಪದ್ಧತಿ ಬಗ್ಗೆ ಹೇಳಿ ಕಿವಿಯ ಸೋಂಕಿಗೆ ಯಾವ ರೀತಿ ಚಿಕಿತ್ಸಾ ಪದ್ಧತಿ ಹೇಳಿದ್ದಾರೆ ಎಂದು ವಿವರಿಸಿದೆ. ಆಗ ಅವರು ನನ್ನನ್ನು ಕುರಿತು , “ಹೌದಾ? ‘ಎಂದು ಸಂಶಯದಲ್ಲಿ ಹೇಳಿದರು. ಆಗ ನನಗೆ ಯಾವ ದುಃಖವಾಗಲಿಲ್ಲ. ಏಕೆಂದರೆ ಇದನ್ನು ಮೊದಲು ಅನೇಕ ಭಾರತೀಯರೇ ನಂಬುತ್ತಿಲ್ಲ, ಇನ್ನು ಬಹಳಷ್ಟು ವಿದೇಶಿಜನರ ಬಗ್ಗೆ ಏನು ಹೇಳಬೇಕು? ಇದು ಅವರ ತಪ್ಪು ಅಲ್ಲ. ಏಕೆಂದರೆ ಇದರ ಬಗ್ಗೆ ಬಹಳ ಜನ ತಿಳಿದುಕೊಂಡಿಲ್ಲ. ಭಾರತದಲ್ಲಿ ನಕಲಿ ಆಯುರ್ವೇದ ಪಂಡಿತರು ಬಹಳವಾಗಿದ್ದು ಜನರಿಗೆ ಬಾರಿ ಮೋಸ ಮಾಡುತ್ತಾರೆ. ಇದರಿಂದ ಜನ ಆಯುರ್ವೇದದಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ. ಇದನ್ನು ಸುಧಾರಿಸುವುದೆಂದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಕೆಲಸ.

ಇನ್ನು ಅನೇಕರಿಗೆ ಪ್ಲಾಸ್ಟಿಕ್ ಸರ್ಜರಿ ಜಗತ್ತಿಗೆ ಯಾವ ದೇಶದಿಂದ ಬಂತು ಎಂದು ಕೇಳಿದರೆ ಗೊತ್ತಿಲ್ಲ ಎಂಬ ಉತ್ತರವೇ ಬರುತ್ತದೆ. ಇನ್ನು ಹಲವು ಭೂಪರು ಇಂಗ್ಲೆಂಡ್, ಅಮೇರಿಕಾ, ಯುರೋಪ್ ದೇಶಗಳು ಎಂದೆಲ್ಲ ಹೇಳಬಹುದು. ಇದು ಭಾರತದಿಂದ ಜಗತ್ತಿಗೆ ಕಲಿಸಲ್ಪಟ್ಟಿತು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮೂಗಿನ ಪ್ಲಾಸ್ಟಿಕ್ ಸರ್ಜರಿ (rhinoplasty ) ಭಾರತದ ಕರ್ನಾಟಕದಿಂದ (ಮೊದಲಿನ ಮೈಸೂರು) ಇಂಗ್ಲೆಂಡಿಗೆ ಹೋಯಿತು. ಈ ಶಸ್ತ್ರಕ್ರಿಯೆಯನ್ನು ಭಾರತದ ಅನೇಕ ಪ್ರದೇಶಗಳಲ್ಲಿ ಮಾಡುತ್ತಿದ್ದರು. ಇದಲ್ಲದೆ ಇನ್ನು ಅನೇಕ ಶಸ್ತ್ರಕ್ರಿಯೆ ನಡೆಯುತ್ತಿದ್ದವು. ೧೭೯೪ರಲ್ಲಿ ಲಂಡನ್ನಿನ ಜಂಟಲ್ಮನಾಸ್ ಮ್ಯಾಗಜಿನ್ ದಲ್ಲಿ ಪ್ರಕಾಶನವಾದ ಒಂದು ಲೇಖನದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಒಬ್ಬ ನೌಕರನ ಕತ್ತರಿಸಲ್ಪಟ್ಟ ಮೂಗನ್ನು ಕರ್ನಾಟಕದಲ್ಲಿ ಈ ಪ್ಲಾಸ್ಟಿಕ್ ಸರ್ಜರಿ ಮೂಲಕ ಪೂರ್ತಿ ಸರಿ ಮಾಡಲಾದ ಬಗ್ಗೆ ವಿವರಿಸಿದ್ದಾರೆ . ಈ ಶಸ್ತ್ರ ಚಿಕಿತ್ಸೆ ನೋಡಿದ ಬ್ರಿಟಿಷ್ ಸ್ವಾಸ್ಥ್ಯ ಅಧಿಕಾರಿಗಳು ತಮ್ಮ ಸರಕಾರಕ್ಕೆ ಇದನ್ನು ತಿಳಿಸಿದಾಗ ಆಗಿನ ಬ್ರಿಟಿಷ್ ಸರಕಾರ ಒಂದು ವೈದ್ಯರ ತಂಡವನ್ನು ಭಾರತಕ್ಕೆ ಕಳುಹಿಸಿ ಈ ಶಸ್ತ್ರಕ್ರಿಯೆ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿ ಬರಲು ಹೇಳಿದರು. ತದನಂತರ ಪ್ಲಾಸ್ಟಿಕ್ ಸರ್ಜರಿ ಯೂರೋಪಿನಲ್ಲಿ ಬೆಳೆಯಿತು ಹಾಗು ದುರದೃಷ್ಟದಿಂದ ಭಾರತದಲ್ಲಿ ಅಳಿಯಿತು. ಇದರ ಬಗ್ಗೆ ನಾನು ಕೇಳಿದ್ದೆ, ಅದರ ಬಗ್ಗೆ ನೋಡುವ ಭಾಗ್ಯ ನನಗೆ ಲಂಡನ್ನಿನ ವೆಲ್ ಕಮ್ ವಸ್ತುಸಂಗ್ರಹಾಲಯದಲ್ಲಿ ಲಭಿಸಿತು. ನಾನು ಆ ಮ್ಯೂಸಿಯಂಗೆ ಭೆಟ್ಟಿ ಕೊಟ್ಟಾಗ ಅಲ್ಲಿ ಆಯುರ್ವೇದದ ಬಗ್ಗೆ ಪ್ರದರ್ಶನವೊಂದು ನಡೆಯುತ್ತಿದ್ದದ್ದು ಕಾಕತಾಳೀಯ. ಅಲ್ಲಿ ಈ ಪ್ಲಾಸ್ಟಿಕ್ ಸರ್ಜರಿ ಹೇಗೆ ಇಂಗ್ಲೆಂಡಿಗೆ ಬಂದಿತು ಎಂದು ವಿವರಿಸಿದ್ದಾರೆ. ಅಲ್ಲಿ ಹಾಕಿರುವ ಭಾರತೀಯ ಆಯುರ್ವೇದ ಬಗ್ಗೆ ಮಾಹಿತಿ ಮತ್ತು ಫೋಟೋಗಳನ್ನೂ ನೋಡಿದಾಗ ನನ್ನ ಮನಸ್ಸು ಹೊಯ್ದಾಡಿತು. ಒಂದಡೆ ಖುಷಿ, ಒಂದೆಡೆ ದುಃಖ ಆಗುತ್ತಿತ್ತು. ಜಗತ್ತಿಗೆ ಜ್ಞಾನ ದೀಪ ಹಚ್ಚಿ ತನ್ನ ಮನೆಯನ್ನೇ ಕತ್ತಲಾಗಿಸಿಕೊಂಡಿತು ನನ್ನ ಭಾರತ. ಅದಕ್ಕೆ ಅನೇಕ ಕಾರಣಗಳಿವೆ, ಅವುಗಳನ್ನು ಇಲ್ಲಿ ಚರ್ಚಿಸುವುದು ಈ ಲೇಖನದ ಚೌಕಟ್ಟನ್ನು ದಾಟುತ್ತದೆ.

ವಿಜಯ್ ಖುರ್ಸಾಪೂರ ಬರೆದ ಕೆಲವು ಕವಿತೆಗಳು

ಕವಿಯ ಪರಿಚಯ: ವೃತ್ತಿಯಿಂದ ಏರೋಸ್ಪೇಸ್ ಇಂಜಿನಿಯರ್, ಕಳೆದ ೧೦ ವರ್ಷಗಳಿಂದ ಇಂಗ್ಲೆಂಡ್ ನೆಲೆ, ಹುಟ್ಟಿದ ಊರು ಶಿಗ್ಗಾವಿ (ಹಾವೇರಿ ಜಿಲ್ಲೆ), ಓದಿದ್ದು ಧಾರವಾಡ, ಗದಗ, ಇಲ್ಲಿವವರೆಗೆ ಬೆಂಗಳೂರು, ಹೈದರಾಬಾದ ಮತ್ತು ಕೆನಡಾದಲ್ಲಿ ನೆಲೆಸಿ, ೪ -೫ ಏರೋಸ್ಪೇಸ್ ಕಂಪನಿಗಳಲ್ಲಿ ಕೆಲಸ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯನ್ನ ಓದುವದರಲ್ಲಿ ಆಸಕ್ತಿ ಮತ್ತು ಕೆಲವು ಚಿಕ್ಕ ಕವನಗಳನ್ನ ಬೆರೆಯುವ ಪ್ರಯತ್ನ.

ಹೊಸ ಗಾಳಿ

ಬಿಸಿಗಾಳಿಯ ಉಸಿರ ಈ ಜೀವಕೆ
ತಂಗಾಳಿಯಾಗಿ ನೀ ಬಾ
ಹೊಸ ಬಯಕೆಯ ಹೊಸ ಕನಸನ ನೀ ಹೊತ್ತು ತಾ

ಕಾಮೋ೯ಡ ಕವಿದ ಈ ಮನಕೆ
ಬೆಳಕಾಗಿ ನೀ ಬಾ
ಹೊಸ ಗುರಿಯ ಹೊಸ ಹುರುಪನ ನೀ ಹೊತ್ತು ತಾ

ಭಾರವಾದ ಹೃದಯದ ಈ ಗೂಡಿಗೆ
ಹರುಷವಾಗಿ ನೀ ಬಾ
ಹೊಸ ದಾರಿಯ ಹೊಸ ತಿರುವನ ನೀ ಹೊತ್ತು ತಾ

ಜಡವಾದ ಈ ದೇಹಕೆ
ಚೆೃತನ್ಯ ವಾಗಿ ನೀ ಬಾ
ಹೊಸ ಶೋಧನೆಯ ಹೊಸ ವಿವೇಚನೆಯನ ನೀ ಹೊತ್ತು ತಾ

ಸದಾ ಅರಸುತಿದೆ ಈ ಮನ ಹೊಸ ತನಕ್ಕಾಗಿ ಹೊಸ ಗಾಳಿಗಾಗಿ

ಹೊದಿಕೆ

ಆಳುವವನಿಗೊಂದು ಹೊದಿಕೆ
ಅಳುವವನಿಗೊಂದು ಹೊದಿಕೆ
ಬದುಕಿಗೆ ಏನೆಲ್ಲ ಹೊದಿಕೆ

ಕಾಯುವನಿಗೊಂದು ಹೊದಿಕೆ
ಕದೀಮನಿಗೊಂದು ಹೊದಿಕೆ
ಈ ಬದುಕಿಗೆ ಏನೆಲ್ಲ ಹೊದಿಕೆ

ಮನಸ್ಸಿಗೊಂದು ಹೊದಿಕೆ
ಮಾನಕೊಂದು ಹೊದಿಕೆ
ಬದುಕಿಗೆ ಏನೆಲ್ಲ ಹೊದಿಕೆ

ಧನಿಕನಿಗೊಂದು ಹೊದಿಕೆ
ದಾನಿಗೊಂದು ಹೊದಿಕೆ
ಈ ಬದುಕಿಗೆ ಏನೆನಿಲ್ಲ ಹೊದಿಕೆ

ಹೊದಿಕೆ ಇಂದ ಹೊರಬಂದಾಗ
ಸಿಗುವುದೇ ಆ ಹೊದಿಕೆಗಿದ್ದ
ಆಲಿಕೆ?

ಹೊದಿಕೆಯ ಮೇಲೆದ್ದ ಹೊದಿಕೆಗಳ
ಬಿಚ್ಚಲೊಲ್ಲೆಯಾ ನಿಜವಾಗಿ ನಿನ್ನ
ತಿಳಿಯೋದಕೆ

ಮಜಾ

ಮೊದಲ ಮಳೆ ಸುರಿಯುವಾಗ
ಬೆಚ್ಚಗೆ ಮನೆಯಲ್ಲಿ ಕೂರುವದಕ್ಕಿಂತ
ಹೊರಗಡೆ ಮಳೆಯಲಿ ನೆನೆಯುವುದೇ ಮಜಾ
ಆ ಮಣ್ಣಿನ ಸುವಾಸನೆಯಲಿ ಮನವು
ವಿಲೀನವಾಗುವಾಗ

ಬೆಳಿಗ್ಗೆ ಮೊಬೈಲ್ನಲ್ಲಿ ಅಲರಾಮು ಆಗುವಾಗ
ತಟ್ಟನೇ ಎದ್ದೇಳುವುದಕ್ಕಿಂತ
ಸ್ನೂಜ್ ಮಾಡಿ ಮತ್ತೆ ಮತ್ತೆ ನಿದ್ದೆಗೆ ಜಾರುವುದೇ ಮಜಾ
ಕನಸಿನಲ್ಲಿ ಹೊಸ ಕನಸೊಂದು ಶುರುವಾಗುವಾಗ

ಸಿನೆಮಾ ನೋಡೋಕೆ ಹೋದಾಗ
ಸಬ್ಯರ ಜೊತೆ ಬಾಲ್ಕನಿಯಲ್ಲಿ ಕೂರೋದಕ್ಕಿಂತ
ಗಾಂಧಿ ಕ್ಲಾಸ್ ನಲ್ಲಿ ಕೂರೋದೇ ಮಜಾ
ಹರುಷದ ಶಿಳ್ಳೆಗಳಲ್ಲಿ ಮನಸ್ಸು ಯವ್ವನಕ್ಕೆ ಜಾರುವಾಗ

ಭರವಸೆ

ಬಿಸಿಲಿಗೆ ಬಸವಳಿದ ತಾವರೆ
ಮುದುಡುತಿದೆ, ಜಲವನರಿಸಿ,
ಕೈ ಚಲ್ಲಿದೆ ಮೆಲ್ಲಗೆ
ಸುರಿಯಬಾರದೇ, ಮಲ್ಲಿಗೆಯ ಮಳೆ
ಅರಳಬಾರದೇ ಮೆಲ್ಲಗೆ, ಭರವಸೆಯ ಕಳೆ

ಬೆಳಕಿನೆಡೆಗೆ

ಮರುಕಳಿಸಿದ ಬೆಳಕಿನ ಬಾನ,
ಹರಡಿದೆ ಕಲರವಗಳ ಗಾನ.
ಮೌನದಲಿ ಅರಿಯುವ ಧ್ಯಾನ,
ಸವಿದಂತೆ ಹಾಲು ಜೇನ.
ಹರಿಯುವ ತಿಳಿನೀರಿನ ಸ್ನಾನ,
ಈ ಜಗದ ಮಧುರ ದಾನ.
ಇತಿ ಮಿತಿಯ ಬದುಕುವ ತನ
ಇರಿಸುವದೇ ಕೇಳಲು? ಇನ್ನೇನ

ವಸುಧೇಂದ್ರ: ಕತೆಗಳಿಂದ ಕಾದಂಬರಿಗೆ

ಕತೆ

ನಾನು ಹತ್ತನೇ ಕ್ಲಾಸ್ ತನಕ ಕನ್ನಡ ಮಾಧ್ಯಮದಲ್ಲಿ ಓದಿದೆ. ನಮ್ಮೂರಲ್ಲಿ ಇಂಗ್ಲಿಷ್ ಮೀಡಿಯಂ ಕಾನ್ವೆಂಟ್ ಇತ್ತು, ಆದರೆ ಅಲ್ಲಿ ತಿಂಗಳಿಗೆ ಎಂಟು ರೂಪಾಯಿ ಫೀಸ್ ಇತ್ತು, ಅಷ್ಟು ಕೊಡಕ್ಕೆ ಆಗಲ್ಲ ಸರಕಾರಿ ಶಾಲೆಗೆ ಹೋಗು ಅಂತ ಕಳಿಸಿಬಿಟ್ರು. ಮಗು ಮುಂದೆ ಏನಾಗಬೇಕು ಏನು ಮಾಡಬೇಕು ಆ ಯೋಚನೆಗಳೇ ಇಲ್ಲ, ಸುಮ್ಮನೇ ಓದಬೇಕು, ಅಷ್ಟೇ.

ಮನೆಯಲ್ಲಿ ಸಾಹಿತ್ಯವನ್ನು ಓದುವಂತಹ ವಾತಾವರಣ, ನಮ್ಮ ತಾಯಿ ತುಂಬಾ ಓದೋರು, ಅವರು ಓದ್ತಾ ಇದ್ರೆ ನನಗೆ ಓದೋಕ್ಕೆ ಬಂತು. ನಮ್ಮ ಮನೆಯಲ್ಲಿ ದಿನಪತ್ರಿಕೆ ಕೂಡ ಸಾಧ್ಯವಿರಲಿಲ್ಲ, ಒಂಥರ ಬಡತನ. ಗ್ರಂಥಾಲಯದಿಂದ ತಂದು ಓದೋದು ಅಷ್ಟೇ.

ನಾನು ಲೇಖಕನಾಗುತ್ತೇನೆ ಎಂದು ಅಂದುಕೊಂಡಿರಲೇ ಇಲ್ಲ, ಸಾಫ್ಟ್ವೇರ್ನಲ್ಲಿ ಸೇರಿಕೊಂಡು ಮೂರು ವರ್ಷ ಆಗಿತ್ತು, ಏನು ಮಾಡ್ತಿಲ್ಲ, ಬರೀ ರೊಟೀನ್ ಮಾಡ್ತಾ ಇದ್ದೇನೆ ಅಂತ ಕಾಡೋಕೆ ಶುರುವಾಯಿತು. ಇದೇನು, ಬೆಳಿಗ್ಗೆ ಹೋಗೋದು, ರಾತ್ರಿ ಬರೋದು, ಹಿಂಗೆ ಆಗ್ತಿದೆಯಲ್ಲ, ನಂದೊಂದು ಐಡೆಂಟಿಟಿ ಬೇಕಲ್ಲ ಅಂತ ಹುಡುಕಾಟ ಶುರುವಾಯಿತು. ಐಡೆಂಟಿಟಿ ಕ್ರೈಸಿಸ್ ಅದು. ನನಗೆ ಏನ್ ಮಾಡಬಹುದು ನಾನು ಅಂದುಕೊಂಡಾಗ, ಬರೆಯಲು ಶುರು ಮಾಡಬೇಕು ಅನಿಸಿತು,

ಚಿಕ್ಕಂದಿನಲ್ಲಿ ಎಂಟೋ ಒಂಬತ್ತನೇ ಕ್ಲಾಸಲ್ಲಿ ಅಸೈನ್ಮೆಂಟ್-ಗೆ ಒಂದು ಕಥೆ ಬರೆದಿದ್ದೆ. ತುಂಬ ಚೆನ್ನಾಗಿದೆ ಎಂದು ಗುರುಗಳು ಹೇಳಿದ್ರು. ಅವಾಗ ಅದು ತರಂಗದಲ್ಲಿ ಪ್ರಕಟವಾಗಿತ್ತು. ಅದು ನನಗೆ ತಲೆಯಲ್ಲಿ ಇತ್ತು. ಕಥೆ ಬರೆಯೋಕೆ ಬರುತ್ತೆ, ಟ್ರೈ ಮಾಡೋಣ ಅಂತ ಮತ್ತೆ ಬರೆಯಲು ಶುರುಮಾಡಿದೆ.

ನನಗೆ ಯಾವ ಸಾಹಿತಿಗಳೂ ಗೊತ್ತಿರಲಿಲ್ಲ, ತರಂಗದಲ್ಲಿ ಅವಾಗ ಲೇಖಕರ ಅಡ್ರೆಸ್ ಹಾಕ್ತಾ ಇದ್ರು. ನನಗೆ ಯಾರು ಇಷ್ಟ ಆಗ್ತಾರೋ ಅವರಿಗೆ ಒಂದು ಲೆಟರ್ ಹಾಕಿ ನಾನು ಹಿಂಗೆ ಕಥೆ ಬರೆದಿದ್ದೀನಿ, ನೀವು ಓದ್ತೀರಾ, ಅಂದ್ರೆ, ಕಳಿಸಿಕೊಡಿ ಅಂದ್ರು, ಕಳಿಸಿಕೊಟ್ಟ ಮೇಲೆ, ಚೆನ್ನಾಗಿ ಬರೀತೀಯಾ, ಮುಂದುವರೆಸು ಅಂದರು. ಆ ಒಂದು ಭರವಸೆ ಸಿಕ್ಕ ತಕ್ಷಣ ನಾನು ಸಿಕ್ಕಾಪಟ್ಟೆ ಬರೆಯುತ್ತ ಹೋದೆ.

ಐಟಿನಲ್ಲಿ ೧೨ರಿಂದ ೧೪ ಗಂಟೆ ಕೆಲಸ ಮಾಡ್ತಿದ್ದರಿಂದ ಬರೆಯುವುದು ಕಷ್ಟ ಇತ್ತು. ನನಗೆ ಬರೆಯುವ ಸಮಯ ಸಿಕ್ಕಿದ್ದು ಇಂಗ್ಲೆಂಡ್ ನಲ್ಲಿ ಪೋಸ್ಟ್ ಮಾಡಿದಾಗ. ಇಂಗ್ಲಂಡಿನಲ್ಲಿ ಸರಿಯಾಗಿ ಐದುವರೆಗೆ ಕೆಲಸ ಮುಗಿಸಿಬಿಡ್ತಾರೆ. ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದು ಗಂಟೆ ಆದ್ರೆ ಮುಗಿದು ಹೋಗ್ಬಿಡ್ತು. ನನಗೆ ಎಷ್ಟು ಫ್ರೀ ಟೈಮ್ ಇರ್ತಿತ್ತು ಅಂತಂದ್ರೆ ನನ್ನ ಪ್ಯಾಶನ್ ಕಾಡೋಕೆ ಶುರುವಾಯಿತು. ಅವಾಗ ಅದೇ ಇಂಟರ್ನೆಟ್ ಬಂದಿತ್ತು ಇಲ್ಲಿಂದ ನಾನು ಬರೆದು ಕಳಿಸಿಕೊಡ್ತಾ ಇದ್ದೆ, ಆ ತರ ಶುರುವಾಯಿತು. ದೆನ್ ಐ ಬಿಕೇಮ್ ವೆರಿ ಸೀರಿಯಸ್. ನಾನು ಇಂಗ್ಲಂಡಿನಲ್ಲಿದ್ದ ಮೂರು ನಾಲ್ಕು ವರ್ಷ ತುಂಬಾ ಬರೆದುಬಿಟ್ಟೆ. ಸುಮಾರು ಒಂದು ಮೂರು ಪುಸ್ತಕ ಬರೆದುಬಿಟ್ಟೆ. ಭಾಷಾಂತರ ಮಾಡಿದೆ. ಕಾನ್ಫಿಡೆನ್ಸ್ ಬಂತು.

ಪ್ರಕಟ ಮಾಡಕ್ಕೆ ಯಾರು ಮುಂದೆ ಬರಲಿಲ್ವಲ್ಲ! ಇಂಗ್ಲಂಡಿಂದ ಹೋಗಿದ್ದೀನಿ, ಬೇಕಾದಷ್ಟು ಹಣ ಗಳಿಸಿದ್ದೆ, ಹಣಕ್ಕೆ ಸಮಸ್ಯೆನೇ ಇರಲಿಲ್ಲ. ನಾನೇ ಪ್ರಕಟಣೆ ಶುರು ಮಾಡ್ಕೊಂಡೆ. ಪ್ರಕಾಶನ ಗೊತ್ತಿರಲಿಲ್ಲ. ಪ್ರಕಾಶನ ಶುರು ಮಾಡ್ಕೊಂಡೆ. ಭಾರತಕ್ಕೆ ಹೋದ ಮೇಲೆ ತುಂಬಾ ಓದುಗರು ಇದ್ದಾರೆ ನನಗೆ ಅಂತ ಗೊತ್ತಾಯ್ತು. ನಾನು ಪ್ರಕಟ ಮಾಡಿದ ಪುಸ್ತಕಗಳು ಆರು ತಿಂಗಳಲ್ಲಿ ಮುಗಿದು ಹೋಗಿಬಿಡುತ್ತಿತ್ತು. ಅದು ತುಂಬಾ ಚೆನ್ನಾಗಿ ಕೆಲಸ ಮಾಡಿತು. ಆಮೇಲೆ ಬೇರೆಯವರದೆಲ್ಲ ಪ್ರಕಾಶನ ಮಾಡೋಕೆ ಶುರು ಮಾಡಿದೆ. ಪ್ರಕಾಶನದಿಂದ ಬದುಕಬಲ್ಲೆ ಅಂತ ಗೊತ್ತಾಯ್ತು. ಬುಕ್ ಅರ್ನಿಂಗ್ಸ್ ನನಗೆ ಬೇಕಾದಷ್ಟು ಆಗುತ್ತೆ.

ಈ ಕಾರ್ಪೊರೇಟ್ ಮೈಂಡ್ ಸೆಟ್ ಮತ್ತು ಈ ಕಥೆ ಬರೆಯುವ ಮೈಂಡ್ ಸೆಟ್ ಎರಡು ಬೇರೆ ವಿರುದ್ಧಗಳು. ಕಾರ್ಪೊರೇಟ್-ನಲ್ಲಿ ಹಣನೇ ಮುಖ್ಯ. ಸಾಹಿತ್ಯದಲ್ಲಿ ಹಣಕ್ಕೆ ಅಷ್ಟು ಬೆಲೆನೇ ಇರಲ್ಲ ಸಾಹಿತ್ಯದಲ್ಲಿ ನೈತಿಕತೆಯೇ ಬೇರೆ. ಎರಡೂ ಪ್ರಪಂಚಕ್ಕೆ ಕ್ಲಾಶ್ ಆಗ್ತಾ ಇದೆ ತುಂಬಾ ಅನಿಸ್ತು. ಕಳೆದ ೧೦ ವರ್ಷ ಪೂರ್ತಿ ಬರವಣಿಗೆ, ಓದು ಮತ್ತು ತಿರುಗಾಟ. ಬೇಕಾದಷ್ಟು ತಿರುಗುತ್ತೀನಿ.

ಕಾದಂಬರಿ

ಹಿಂದೊಮ್ಮೆ ಹರಿಚಿತ್ತ ಸತ್ಯ ಅಂತ ಕಾದಂಬರಿಯನ್ನು ಬರೆದಿದ್ದೆ. ಅದು ಒಂದು ೧೬೦ ಪುಟದಷ್ಟು ಚಿಕ್ಕ ಕಾದಂಬರಿ. ವಿವೇಕ್ ಶಾನುಭಾಗ ಆಗ ದೇಶಕಾಲ ಅಂತ ಮ್ಯಾಗಸಿನ್ ತರ್ತಿದ್ದರು. ಒಂದು ಸ್ಪೆಷಲ್ ಎಡಿಷನ್-ಗೆ ನೀನು ಒಂದು ಕಾದಂಬರಿ ಬರ್ಕೊಡು ಅಂದರು. ನಾನು ಅಲ್ಲಿಯತನಕ ಕಾದಂಬರಿಯನ್ನು ಬರೆದಿರಲಿಲ್ಲ. ಆಗ ನಾನು ಕ್ಲಿನಿಕಲ್ ಡಿಪ್ರೆಶನ್-ನಲ್ಲಿದ್ದೆ. ಆ ಡಿಪ್ರೆಶನ್-ನಿಂದ ಹೊರಗೆ ಬರೋದಕ್ಕೆ ನೀವು ಒಂದು ಕಾದಂಬರಿ ಬರಿ, ಡಿಪ್ರೆಶನ್-ನಿಂದ ಹೊರಬರಲು ಸಹಾಯ ಮಾಡಬಹುದು ಅಂತ ಒಂಥರ ಬಲವಂತ ಮಾಡಿದರು. ಡಿಪ್ರೆಶನ್-ನಲ್ಲಿ ಏನು ಮಾಡೋಕೂ ಇಷ್ಟ ಆಗಲ್ಲ. ನಮ್ಮ ಅಕ್ಕ ಬಿಜಾಪುರದಲ್ಲಿ (ಈಗ ವಿಜಯಪುರ) ಇದ್ರು. ಬಿಜಾಪುರಕ್ಕೆ ಹೋಗಿ ಕೂತ್ಕೊಂಡು ಬರೆದೆ. ಜನಕ್ಕೆ ಇಷ್ಟ ಆಯಿತು.

ಅದು ನಮ್ಮ ತಂದೆ ತಾಯಿಯ ಕಥೆ. ಅವರದು ವಿಚಿತ್ರ ಕಥೆ.

ನನ್ನ ತಾಯಿ ಬಳ್ಳಾರಿಯಲ್ಲಿ ೧೦ನೇ ತರಗತಿಯವರೆಗೆ ಓದಿದ್ರು. ನಮ್ಮಪ್ಪ ಇದ್ದಿದ್ದು ಸೊಂಡೂರಲ್ಲಿ. ಸೊಂಡೂರು ಅಂದ್ರೆ ಹಳ್ಳಿ, ಬಳ್ಳಾರಿ ಪಟ್ಟಣ. ನನ್ನ ತಾಯಿಗೆ ಸೊಂಡೂರಿನಲ್ಲಿ ಜೀವನ ಮಾಡಲು ಇಷ್ಟ ಇರಲಿಲ್ಲ. ಅಷ್ಟೇ ಅಲ್ಲ, ನಮ್ಮ ತಂದೆಗೆ ಚಿಕ್ಕಂದಿನಿಂದ ತಲೆ ತುಂಬಾ ಬಿಳಿ ಕೂದಲು. ನಮ್ಮಮ್ಮ ನಮ್ಮಪ್ಪನನ್ನು ರಿಜೆಕ್ಟ್ ಮಾಡ್ಬಿಟ್ರು.

ನನ್ನ ಅಪ್ಪ ಬೇರೆ ಮದುವೆ ಮಾಡ್ಕೊಂಡ್ರು. ಅವರಿಗೆ ನಾಲ್ಕು ಮಕ್ಕಳಾದವು. ಒಂದ್ಸಲ ಇಡೀ ಕುಟುಂಬ ಇನ್ನಷ್ಟು ಕುಟುಂಬಗಳ ಜೊತೆ ಸೇರಿ ಹಂಪಿಗೆ ಹೋಗ್ತಾರೆ. ಅಲ್ಲಿ ತೆಪ್ಪದಲ್ಲಿ ಕೂತು ಹೋಗಬೇಕು. ಆಗ ಗಂಡಸರು ಏನು ಮಾಡಿದ್ರು ಅಂದ್ರೆ, ಹೆಂಗಸರು ಮಕ್ಕಳು ಮೊದಲು ಹೋಗ್ಬಿಡ್ಲಿ, ಆಮೇಲೆ ಗಂಡಸರು ಹೋಗೋಣ, ಅಂತ ಎಲ್ಲಾ ಹೆಂಗಸರು ಮಕ್ಕಳನ್ನ ಕಳಿಸಿಬಿಟ್ಟಿದ್ದಾರೆ.

ತೆಪ್ಪದಲ್ಲಿ ಹೋಗಬೇಕಾದರೆ, ತೆಪ್ಪದಲ್ಲಿದ್ದ ಎಲ್ಲ ಹೆಂಗಸರೂ ಮಕ್ಕಳೂ ಮುಳುಗಿ ಹೋಗಿದ್ದಾರೆ. ಅದರಲ್ಲಿ ಮೂರು ಮಕ್ಕಳು ಮತ್ತು ಹೆಂಡತಿ ಇದ್ದರು. ಮುಳುಗಿದವರೆಲ್ಲರೂ ಹೋಗಿಬಿಟ್ರು. ಅಲ್ಲಿದ್ದ ಅಷ್ಟೂ ಕುಟುಂಬಗಳು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಸುಮಾರು ೨೫-೩೦ ಜನ ಹೋಗ್ಬಿಟ್ರು. ಇದು ನಡೆದದ್ದು ೧೯೬೫ರಲ್ಲಿ.

ಅಪ್ಪನ ಜೊತೆ ಇದ್ದ ಒಬ್ಬಳು ಮಗಳು ಮಾತ್ರ ಉಳಿದುಕೊಂಡಿದ್ದು. ಅದೇನೋ, ಆ ತನಕ ನಮ್ಮ ತಾಯಿ ಹಂಗೆ ಉಳಿದುಕೊಂಡಿದ್ರು, ಏನೋ ಕಾರಣಕ್ಕಾಗಿ ಮದುವೆನೇ ಆಗಿರಲಿಲ್ಲ. ಇಲ್ಲದಿದ್ರೆ ನಾನು ಹುಟ್ಟುತ್ತಾನೆ ಇರಲಿಲ್ಲ. ಎರಡನೇ ಮದುವೆ ಆದ್ಮೇಲೆ ಆಮೇಲೆ ನಾವೆಲ್ಲ ಹುಟ್ಟಿದ್ದು. ಇಬ್ಬರು ೨೫ ವರ್ಷಕ್ಕಿಂತ ಹೆಚ್ಚು ತುಂಬಾ ಚೆನ್ನಾಗಿ ಸಂಸಾರ ಮಾಡಿದ್ರು.

ನನಗೆ ಅದು ಒಂತರ ವಿಚಿತ್ರ ಕಥೆ ಅನ್ಸೋದು. ಅದನ್ನೆಲ್ಲ ಸೇರಿಸಿ ಒಂದಿಷ್ಟು ಫಿಕ್ಷನೈಸ್ ಮಾಡಿ ಆ ಕಾಲಘಟ್ಟ ತಗೊಂಡು ಬಂದು ಬರೆದೆ. ನಾನು ಆ ಕಾದಂಬರಿಯನ್ನು ಬರೆದಾಗ ನಮ್ಮ ತಂದೆ ಇರಲಿಲ್ಲ. ನಮ್ಮ ಅಕ್ಕಂದರಿಗೆಲ್ಲ ಗೊತ್ತು. ನಮ್ಮ ಇಡೀ ಕುಟುಂಬಕ್ಕೆ ಗೊತ್ತು. ಆ ತೆಪ್ಪದ ಅಫಘಾಥದಲ್ಲಿ ಇನ್ನೂ ಅಷ್ಟೊಂದು ಕುಟುಂಬಗಳೂ ಇದ್ದವು. ಆ ಕಾದಂಬರಿಯನ್ನು ಓದಿ ಆ ಅಪಘಾತದಲ್ಲಿ ಸಾಕ್ಷಿಯಾಗಿದ್ದವರು, ಅದರೊಳಗೆ ನಮ್ಮಮ್ಮನೂ ತೀರ್ಕೊಂಡ್ರು, ಅಂತೆಲ್ಲ ಅವರ ಕತೆಗಳನ್ನು ಹೇಳಿದರು. ಎಷ್ಟೊಂದು ಕುಟುಂಬಗಳಿಗೆ ನಾನು ಆ ಕಾದಂಬರಿಯಿಂದಾಗಿ ಹತ್ತಿರನಾದೆ. ಅದು ಒಂದು ಅನುಭವ!