ನಾನೂ ಕಿಲಿಮಾಂಜಾರೋ ಹತ್ತಿದೆ  – ಕೇಶವ ಕುಲಕರ್ಣಿ

ನಾನು `ಕಿಲಿಮಾಂಜಾರೋ` ಎನ್ನುವ ಹೆಸರನ್ನು ಮೊಟ್ಟಮೊದಲು ಕೇಳಿದ್ದು, ಆರನೇ ಇಯತ್ತೆಯಲ್ಲಿ ನಾನು ಭಾಗವಹಿಸಿದ ಅಂತರಶಾಲಾ ರಸಪ್ರಶ್ನೆಯ ಸ್ಪರ್ಧೆಯಲ್ಲಿ: `ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತ ಯಾವುದು?` ಎನ್ನುವುದು ಪ್ರಶ್ನೆ. ಮೌಂಟ್ ಎವರೆಸ್ಟ್ ಎನ್ನುವುದು ಪ್ರಪಂಚದ ಅತ್ಯಂತ ಎತ್ತರದ ಪರ್ವತ ಅನ್ನುವುದನ್ನು ಬಿಟ್ಟರೆ ಬೇರೆ ಪರ್ವತಗಳ ಬಗ್ಗೆ ಏನೂ ಗೊತ್ತಿರಲಿಲ್ಲ. ಕಿಲಿಮಾಂಜಾರೋ ಎನ್ನುವುದು ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತ ಎನ್ನುವುದು ಗೊತ್ತಾದದ್ದೇ ಅವತ್ತು. ಸದ್ಯ, ಆ ಪ್ರಶ್ನೆ ಬೇರೆ ತಂಡಕ್ಕೆ ಬಂದಿತ್ತು ಮತ್ತು ಆ ತಂಡಕ್ಕೂ ಸರಿಯಾದ ಉತ್ತರ ಗೊತ್ತಿರಲಿಲ್ಲ ಎನ್ನುವುದು ಬಹಳ ಖುಷಿಕೊಟ್ಟಿತ್ತು, ಆದರೆ ನನಗೆ ಉತ್ತರ ಗೊತ್ತಿರಲಿಲ್ಲ ಎನ್ನುವ ಬಗ್ಗೆ ಖೇದವೂ ಆಗಿತ್ತು. ಅವತ್ತು ಸಂಜೆ ಮನೋರಮಾ ಇಯರ್ ಪುಸ್ತಕದಲ್ಲಿ ಕಿಲಿಮಾಂಜಾರೋ ಬಗ್ಗೆ ಓದಿದ್ದು.  

ನಾನಾಗ ಪಿಯುಸಿಯಲ್ಲಿದ್ದೆ. ಹೆಮಿಂಗ್ವೆಯ `ಓಲ್ಡ್ ಮ್ಯಾನ್ ಆಂಡ್ ಸೀ` ಎನ್ನುವ ನೀಳ್ಗತೆಯ ಬಗ್ಗೆ ಲಂಕೇಶ್ ತಮ್ಮ `ಮರೆಯುವ ಮುನ್ನ`ದಲ್ಲಿ ಬರೆದಿದ್ದರು. ಗ್ರಂಥಾಲಯದಲ್ಲಿ ಹುಡುಕಿದಾಗ ಹೆಮಿಂಗ್ವೇಯ ಆ ಪುಸ್ತಕದ ಜೊತೆ ಅವನ ಇನ್ನೊಂದು ಕಥಾಸಂಕಲನವೂ ಸಿಕ್ಕಿ, ಅದರಲ್ಲಿ `ದ ಸ್ನೋಸ್ ಆಫ್ ಕಿಲಿಮಾಂಜಾರೋ` ಎನ್ನುವ ಕತೆಯ ತಲೆಬರಹವನ್ನು ನೋಡಿವವರೆಗೂ ಮತ್ತೆ ಕಿಲಿಮಾಂಜಾರೋದ ನೆನಪೇ ಇರಲಿಲ್ಲ.  

ಇಂಗ್ಲೆಂಡಿಗೆ ಬಂದ ಮೇಲೆ ಕಿಲಿಮಾಂಜಾರೋ ಎನ್ನುವ ಹೆಸರು ಮತೆ ಮತ್ತೆ ಕೇಳಲಾರಂಭಿಸಿತು. ಎ ಶ್ರೇಣಿಯಲ್ಲಿ ಓದುವ ಮಕ್ಕಳನ್ನು ಕರೆದುಕೊಂಡು ಕೆಲವು ಖಾಸಗಿ ಶಾಲೆಯವರು ಕಿಲಿಮಾಂಜಾರೋಗೆ ಹೋಗುವಾಗ, ಹೋಗಿ ಬಂದ ಮೇಲೆ ಆ ಫೋಟೋಗಳನ್ನು ನೋಡಿದಾಗ, ಕಿಲಿಮಾಂಜಾರೋ ಎನ್ನುವುದು ಹದಿಹರೆಯದವರು ಮಾತ್ರ ಹತ್ತಬಲ್ಲ ಪರ್ವತ ಎಂದುಕೊಂಡಿದ್ದೆ.  

`ಕಿಲಿಮಾಂಜಾರೋ`ವನ್ನು ಕೆಲವು ವರ್ಷಗಳ ಹಿಂದೆ ವಸುಧೇಂದ್ರ ಬರೆದ `ಮೋಹನಸ್ವಾಮಿ` ಕಥಾಸಂಕಲನದಲ್ಲಿ ಓದಿದೆ. ಆ ಕಥೆ ನನ್ನನ್ನು ತುಂಬ ಕಾಡಿತ್ತು. ಪರ್ವತದ ಚಾರಣ ಮನುಷ್ಯನಿಗೆ ತನ್ನನ್ನು ತಾನು ಕಂಡುಕೊಳ್ಳಲು ಅಥವಾ ತೆರೆದುಕೊಳ್ಳಲು ಸಾಧ್ಯವಾಗುವ ಸಾಧ್ಯತೆಯ ಬಗ್ಗೆ ಪ್ರಶ್ನೆ ಎತ್ತುವ ಕಥೆ. ಆ ಕಥೆಯಲ್ಲಿ ಕಿಲಿಮಾಂಜಾರೋ ಪರ್ವತದ ಬಗ್ಗೆ ಮತ್ತು ಚಾರಣದ ಬಗ್ಗೆ ಕೆಲವು ವಿವರಗಳು ಬರುತ್ತವೆ. ಓಹೋ, ಇದು ಬರೀ ಚಿಕ್ಕ ವಯಸ್ಸಿನವರಿಗೆ ಮಾತ್ರವಲ್ಲ, ನಾನೂ ಮಾಡಬಹುದು ಎನಿಸಿದ್ದು ಆಗಲೇ! 

ನನ್ನ ಮಿತ್ರರೊಬ್ಬರಲ್ಲಿ ಮಾತನಾಡುವಾಗ ಆಗಾಗ ನಾವೆಲ್ಲ ಸೇರಿ ಕಿಲಿಮಾಂಜಾರೋಗೆ ಹೋಗಬೇಕು, ಎವರೆಸ್ಟ್ ಅಡಿಗೆ ಹೋಗಬೇಕು ಎಂದೆಲ್ಲ ಮಾತಾಡಿಕೊಳ್ಳುತ್ತಿದ್ದೆವು. ಇಂಗ್ಲೆಂಡಿನ ಪೀಕ್ ಡಿಸ್ಟ್ರಿಕ್ಟ್ ಮತ್ತು ವೇಲ್ಸಿನ ಸ್ನೋಡೋನ್ ಹತ್ತಿ ಇಳಿದಿದ್ದನ್ನು ಬಿಟ್ಟರೆ ಯಾವ ಚಾರಣವನ್ನೂ ಮಾಡಿದವನಲ್ಲ. ನಾನು ಉತ್ತರ ಕರ್ನಾಟಕದ ಬಯಲುಸೀಮೆಯ ಬರಭೂಮಿಯವನು; ಗುಡ್ಡಗಾಡುಗಳಲ್ಲಿ ಹುಟ್ಟಿದವನೂ ಅಲ್ಲ, ಬೆಳೆದವನೂ ಅಲ್ಲ; ಪರ್ವತಗಳು, ಕಾಡುಗಳು ನನ್ನನ್ನು ಕಾಡುವುದೂ ಇಲ್ಲ. ಆದರೂ ನನ್ನ `ಬಕೆಟ್ ಲಿಸ್ಟ್`ನಲ್ಲಿ, ಕಿಲಿಮಾಂಜಾರೋವನ್ನು ಬರೆದುಕೊಂಡಿದ್ದೆ. ಆದರೆ ನಾನೂ ಕಿಲಿಮಾಂಜಾರೋ ಪರ್ವತವನ್ನು ಹತ್ತಿ ಸುರಕ್ಷಿತವಾಗಿ ಇಳಿದು ಬರುವೆನೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ.  

ಆದರೆ ಈಗ ಆರೆಂಟು ತಿಂಗಳ ಹಿಂದೆ, ನನ್ನ ಮಿತ್ರನೊಬ್ಬ  ‘(No) Country for Old Men’ ಎನ್ನುವ ವಾಟ್ಸ್ಯಾಪ್ ಗ್ರುಪ್-ಅನ್ನು  ನಲವತ್ತು ದಾಟಿದ ತನ್ನಂಥ ಮಧ್ಯವಯಸ್ಕರಿಗಾಗಿ ಶುರುಮಾಡಿ, ಅದರಲ್ಲಿ ನನ್ನನ್ನೂ ಸೇರಿಸಿದ. ಎರಡು ತಿಂಗಳಿಗೊಮ್ಮೆ ಬರೀ ಗಂಡಸರೇ ಸೇರಿ ಎಲ್ಲಾದರೂ ಯುನೈಟೆಡ್ ಕಿಂಗ್ಡಮ್ಮಿನಲ್ಲಿ ಟ್ರೆಕಿಂಗ್ ಹೋಗುವುದು, ಆ ನೆಪದಲ್ಲಿ ಪಬ್ಬಿಗೆ ಹೋಗಿ ಕುಡಿದು ತಿಂದು ಬರುವುದು, ಇದರ ಮುಖ್ಯ ಉದ್ದೇಶ. ಈ ಗುಂಪಿನಲ್ಲಿ ಕಿಲಿಮಾಂಜಾರೋದ ಕನಸುಗಳೆದ್ದು ನನ್ನನ್ನೂ ತಟ್ಟಿದವು. ಅಷ್ಟು ಜನರ ಗುಂಪಿನಲ್ಲಿ ಗೋವಿಂದನಾದೆ. 

ಕಿಲಿಮಾಂಜಾರೋದ ಕಿರುಪರಿಚಯ: 

ಕಿಲಿಮಾಂಜಾರೋ ಆಫ್ರಿಕಾ ಖಂಡದ ತಾಂಜಾನಿಯಾ ದೇಶದಲ್ಲಿರುವ ಪರ್ವತ. ಇದೊಂದು ಜ್ವಾಲಾಮುಖಿ ಪರ್ವತ. ಆಫ್ರಿಕಾ ಖಂಡದ ಅತ್ಯಂತ ಎತ್ತರ ಪರ್ವತ, ಜಗತ್ತಿನ ಅತ್ಯಂತ ಎತ್ತರದ ಒಂಟಿ ಪರ್ವತ. ಜಗತ್ತಿನ ನಾಲ್ಕನೇ ಎತ್ತರದ ಪರ್ವತ.  

ಈ ಪರ್ವತಕ್ಕೆ ಮೂರು ಶಿಖರಗಳಿವೆ: ಕಿಬೋ, ಮಾವೆಂಝಿ ಮತ್ತು ಶಿರಾ. ಇದರಲ್ಲಿ ಕಿಬೋ ಎಲ್ಲಕ್ಕಿಂತ ಎತ್ತರದಲ್ಲಿರುವ ಶಿಖರ ಮತ್ತು ಎಲ್ಲರೂ ಹತ್ತುವುದೂ ಇದನ್ನೇ. ಜಗತ್ತಿನ ಅತ್ಯಂತ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟಿಗೆ ಹೋಲಿಸಿದರೆ ಕಿಲಿಮಾಂಜಾರೋ ಅದಕ್ಕಿಂತ ೨೯೫೫ ಮೀಟರ್ ಚಿಕ್ಕದು. ಕಿಲಿಮಾಂಜಾರೋ ಸಮುದ್ರದ ಮಟ್ಟದಿಂದ ೫೮೯೫ ಮೀಟರ್ (ಹತ್ತಿರ ಆರು ಕಿಲೋಮೀಟರ್) ಎತ್ತರದಲ್ಲಿದೆ, ಅಡಿಗಳಲ್ಲಿ ಲೆಕ್ಕ ಹಾಕಿದರೆ ಸುಮಾರು ೨೦ ಸಾವಿರ ಅಡಿಗಳು.  ಮೆಟ್ಟಿಲುಗಳ ಲೆಕ್ಕದಲ್ಲಿ ಹೇಳಿದರೆ ಸುಮಾರು ೨೫ ರಿಂದ ೨೮ ಸಾವಿರ ಮೆಟ್ಟಿಲುಗಳು. ಇಂಗ್ಲೆಂಡಿನ ದೊಡ್ಡ ಕಟ್ಟಡಗಳನ್ನು ತೆಗೆದುಕೊಂಡರೆ, ಒಂದು ಅಂತಸ್ತಿನಿಂದ ಇನ್ನೊಂದು ಅಂತಸ್ತಿಗೆ ಹೋಗಲು ಸುಮಾರು ೨೫ ಮೆಟ್ಟಿಲುಗಳಿರುತ್ತವೆ. ಅಂದರೆ ಈ ಪರ್ವತವನ್ನು ಹತ್ತುವುದು ಎಂದರೆ ಒಂದು ಸಾವಿರ ಮಹಡಿಯ ಕಟ್ಟಡವನ್ನು ಹತ್ತಿದಂತೆ! ಬರೀ ಮೇಲೆ ಹತ್ತುವುದಲ್ಲ, ಮುಂದೆ ಕೂಡ ನಡೆಯಬೇಕಲ್ಲ! ಬೆಟ್ಟದ  ತಪ್ಪಲಿನಿಂದ ತುದಿಯನ್ನು ಮುಟ್ಟಲು ಒಟ್ಟು 40 ಕಿಲೋಮೀಟರ್  (೨೫ ಮೈಲುಗಳು, ಹತ್ತಿರ ಫುಲ್ ಮ್ಯಾರಥಾನ್), ಮತ್ತು ಅಷ್ತೇ ಇಳಿಯಬೇಕು, ಒಟ್ಟು ೮೦ ಕಿಲೋಮೀಟರಿನ ದಾರಿ. ಇದನ್ನು ನಾಲ್ಕರಿಂದ ಏಳುದಿನದವರೆಗೆ ಕ್ರಮಿಸಲಾಗುತ್ತದೆ.   

ಕಿಲಿಮಾಂಜಾರೋ ಪರ್ವತವನ್ನು ಮೊಟ್ಟಮೊದಲು ಹತ್ತಿದ ಲಿಖಿತ ದಾಖಲೆ ಮಾಡಿರುವುದು ೧೮೮೯ರಲ್ಲಿ ಜರ್ಮನಿಯ ಜೊಹಾನ್ನೆಸ್ ರೆಬ್ಮನ್. ಅಂದಿನಿಂದ ಇಂದಿನವರೆಗೆ ಲಕ್ಷಾಂತರ ಜನರು ಈ ಪರ್ವತದ ಶೃಂಗವನ್ನು ಮುಟ್ಟಿ ಬಂದಿದ್ದಾರೆ. ಭೂಮಧ್ಯರೇಖೆಯ ಹತ್ತಿರದಲ್ಲಿದ್ದರೂ  ಪರ್ವತದ ತುದಿಯಲ್ಲಿ ಹಿಮಗಡ್ಡೆಗಳಿವೆ. ಮೊದಲಿನ ಐತಿಹಾಸಿಕ ದಾಖಲೆಯಿಂದ ಇಂದಿನವರೆಗೆ ಹಿಮದ ಗುಡ್ಡೆಗಳು ಕಡಿಮೆಯಾಗುತ್ತ ಬಂದಿವೆ ಮತ್ತು ೨೦೩೫ರ ಹೊತ್ತಿಗೆ ಸಂಪೂರ್ಣವಾಗಿ ಮಾಯವಾಗಬಹುದು ಎನ್ನುವುದು ವಿಜ್ಞಾನಿಗಳ ಲೆಕ್ಕಾಚಾರ.    

ಮೋಶಿ ಎನ್ನುವ ಊರು ಕಿಲಿಮಾಂಜಾರೋ ಪರ್ವತದ ತಪ್ಪಲಿನಲ್ಲಿದೆ. ಕೇವಲ ೪೦ ಕಿಲೋಮೇಟರ್ ದೂರದಲ್ಲಿ `ಕಿಲಿಮಾಂಜಾರೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ`ವಿದೆ.   

ದಾರಿ ಯಾವುದಯ್ಯ, ಕಿಲಿಮಾಂಜಾರೋವಿಗೆ?

ಈ ಮಹಾನ್ ಪರ್ವತದ ತುದಿಯನ್ನು ಮುಟ್ಟಲು ಬಹಳಷ್ಟು ದಾರಿಗಳಿವೆ.  ನಾಲ್ಕರಿಂದ ಏಳು ದಿನಗಳವರೆಗೆ ಈ ದಾರಿಗಳು ಶಿಖರದ ತುದಿಗೆ ಕರೆದುಕೊಂಡು ಹೋಗಿ ಇಳಿಸಿಕೊಂಡು ಬರುತ್ತವೆ. ಕೊಕೋಕೋಲಾ ಮಾರ್ಗ, ಮರಂಗು ಮಾರ್ಗ, ಲೆಮೊಶೋ ಮಾರ್ಗ ಇತ್ಯಾದಿ ಮಾರ್ಗಗಳಿವೆ.  ನಮ್ಮ ಪ್ರವಾಸದ ಉಸ್ತುವಾರಿ ಹೊತ್ತ ಸಂಸ್ಠೆಯು ಏಳು ದಿನಗಳ ಚಾರಣವನ್ನು ನಿಗದಿಪಡಿಸಿತು. ಹೆಚ್ಚು ದಿನ ತೆಗೆದುಕೊಂಡಷ್ಟೂ ಕಡಿಮಯಾಗುವ ಆಮ್ಲಜನಕಕ್ಕೆ ಹೊಂದಿಕೊಳ್ಳಲು ಅನುಕೂಲವಾಗುತ್ತದೆ ಮತ್ತು ಪರ್ವತದ ತುದಿಯನ್ನು ತಲುಪುವ ಸಾಧ್ಯತೆಗಳು ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ನಮಗೆ ಏಳು ದಿನಗಳ ಚಾರಣವನ್ನು ಸೂಚಿಸಿದರು. ಈ ದಾರಿಗೆ `ಮಚಾಮೆ ಮಾರ್ಗ` ಎಂದು ಕರೆಯುತ್ತಾರೆ.   

ಮೊದಲ ದಿನ: 

ಮಚಾಮೆ ದ್ವಾರದಿಂದ ನಮ್ಮ ಪ್ರಯಾಣ ಆರಂಭ. ಮಚಾಮೆ ದ್ವಾರವು ಸಮುದ್ರದ ಮಟ್ಟದಿಂದ ೧೮೦೦ ಮೀಟರ್ ಎತ್ತರದಲ್ಲಿದೆ. ಅಲ್ಲಿಂದ ಸುಮಾರು ೧೮ ಕಿಲೋಮೀಟರ್ ನಡೆದು ೧೨೦೦ ಮೀಟರ್ ಮೇಲೆ ಹತ್ತಿ ೩೦೦೦ ಮೀಟರ್ ಎತ್ತರವನ್ನು ತಲುಪುವುದು ಮೊದಲ ದಿನದ ಚಾರಣ. ಮೊದಲ ದಿನದ ಚಾರಣವು ದಟ್ಟವಾದ ರೇನ್-ಫಾರೆಸ್ಟ್ ನಡುವೆ. ಸೂರ್ಯನ ಕಿರಣಗಳು ಒಳಗೆ ಬರದಷ್ಟು ದಟ್ಟ ಕಾಡು. ೨೬ ಡಿಗ್ರಿ ಸೆಲ್ಸಿಯಸ್ ಉಷ್ಣಾಂಷದಲ್ಲಿ ಒಂದು ತೆಳು ಟಿ-ಶರ್ಟ್ ಹಾಕಿಕೊಂಡು, ಬೆನ್ನ ಹಿಂದೆ ರಕ್-ಸ್ಯಾಕ್ ತಗುಲಿಸಿಕೊಂಡು ಹೊರಟೆವು.  

ಗೈಡ್ ನಮ್ಮನ್ನು ನಿಧಾನವಾಗಿ ನಡೆಯಲು ಹೇಳುತ್ತಾನೆ. ತಾಂಜಾನಿಯಾದ ಮುಖ್ಯ ಭಾಷೆ, ಸ್ವಾಹಿಲಿ. ಸ್ವಾಹಿಲಿಯಲ್ಲಿ, `ಪೋಲೆ ಪೋಲೆ` ಎಂದರೆ `ನಿಧನಿಧಾನವಾಗಿ`. ಇದು ಕಿಲಿಮಾಂಜಾರೋ ಹತ್ತುವ ಮಂತ್ರ. ಇಲ್ಲಿ ನಿಧಾನವೇ ಪ್ರಧಾನ. ಗೈಡ್ ನಮ್ಮ ನಡೆಯುವ ವೇಗವನ್ನು ನಿರ್ಧರಿಸುತ್ತಾನೆ. `ಪೋಲೆ ಪೋಲೆ,` ಎಂದು ಆಗಾಗ ಹೇಳುತ್ತ ನಿಧಾನವಾಗಿ ದಟ್ಟ ಕಾಡಿನ ಮಧ್ಯ ಹತ್ತಿಸಿಕೊಂಡು ಹೋಗುತ್ತಾನೆ.   

ಹಾದಿಯಲ್ಲಿ ಮಧ್ಯ ಮಧ್ಯ ನಿಂತು ಹಾಡು ಹೇಳಿ ಕುಣಿದು ನಲಿಸುತ್ತಾರೆ. ಕಿಲಿಮಾಂಜಾರೋ ಹತ್ತುವಷ್ಟರಲ್ಲಿ ಅವರು ಹಾಡುವ `ಹಕೂನ ಮಟಾಟ` ಹಾಡು ಬಾಯಿಪಾಠವಾಗಿ ಬಿಡುತ್ತದೆ. `ಹಕೂನ ಮಾಟಾಟ,` ಎನ್ನುವ ಫ್ರೇಸ್ `ಲಯನ್ ಕಿಂಗ್` ಸಿನೆಮಾದಿಂದಾಗಿ ಬಹಳ ಪ್ರಖ್ಯಾತವಾದ ಸಾಲು ಮತ್ತು ಹಾಡು ಕೂಡ: `ಹಕೂನ ಮಟಾಟ, ಮೀನ್ಸ್ ನೋ ವರೀಸ್` 

ನಮ್ಮದು ೨೧ ಜನ ಮಧ್ಯವಯಸ್ಕ ಗಂಡಸರ ಗುಂಪು. ನಮ್ಮನ್ನು ನೋಡಿಕೊಳ್ಳುವ ಮುಖ್ಯ ಗೈಡ್, ಬ್ರೂಸ್, ನಲವತ್ತರ ಆಸುಪಾಸಿನಲ್ಲಿರುವ ಎತ್ತರದ ಆಳು. ಜೊತೆಗೆ ನಾಕಾರು ಜನ ಜ್ಯೂನಿಯರ್ ಗೈಡುಗಳು. ಅಷ್ಟೇ ಅಲ್ಲದೇ, ಅಡುಗೆಯವನು, ಅಡುಗೆಯ ಸಹಾಯಕರು, ನಮ್ಮ ಡಫೆಲ್ ಬ್ಯಾಗ್ (ಒಬ್ಬೊಬ್ಬರ ಡಫಲ್ ಬ್ಯಾಗ್ ೧೫ ಕಿಲೋ!) ಹೊರುವವರು, ನಮ್ಮ ಟೆಂಟ್ ಹೊರುವವರು, ಊಟಕ್ಕೆ ಬೇಕಾಗುವ ತಟ್ಟೆ, ಅಡುಗೆ ಸಾಮಗ್ರಿ, ಟೇಬಲ್, ಚೇರ್ ಹೊರುವವರು, ಟೆಂಟ್ ಟಾಯ್ಲೆಟ್ ಹೊರುವವರು, ಟಾಯ್ಲೆಟ್ಟನ್ನು ಶುಚಿಯಾಗಿ ಇಡುವವರು, ಎಲ್ಲ ಸೇರಿ ಸುಮಾರು ೬೦  ಜನ ಸಹಾಯಕರು ಇರಬಹುಸು! ಗೈಡುಗಳನ್ನು ಬಿಟ್ಟರೆ ಉಳಿದವರೆಲ್ಲರೂ ತಮ್ಮ ಹೆಗಲು ಮತ್ತು ತಲೆಯ ಮೇಲೆ ೨೦ ರಿಂದ ೩೦ ಕಿಲೋ ಭಾರದ ಸಾಮಗ್ರಿಗಳನ್ನು ಇಟ್ಟುಕೊಂಡು ಭರಭರನೇ ಮುಂದೆ ಸಾಗಿ, ನಮ್ಮ ಟೆಂಟು, ಟಾಯ್ಲೆಟ್ಟು ಮತ್ತು ಅಡಿಗೆಗಳನ್ನು ತಯಾರು ಮಾಡುತ್ತಾರೆ.  

ನಾವು ಸಂಜೆಯ ಹೊತ್ತಿಗೆ ನಮ್ಮ ಮೊದಲ ದಿನದ ಟೆಂಟನ್ನು ತಲುಪಿದಾಗ, ನಮ್ಮ ಟೆಂಟುಗಳು ನಮಗಾಗಿ ಕಾಯುತ್ತಿದ್ದವು. ಬಿಸಿ ಬಿಸಿ ಊಟ ಕೂಡ ತಯಾರಾಗಿತ್ತು. ನಾವು ತಲುಪಬೇಕಾದ `ಕಿಬೋ` ಶೃಂಗ ಕಾಣುತ್ತಿತ್ತು.  ಒಂದು ಟೆಂಟಿನಲ್ಲಿ ಇಬ್ಬರು. ಇಬ್ಬರು ಕೂತುಕೊಳ್ಳಬಹುದು, ಇಬ್ಬರು ಮಲಗಿಕೊಂಡರೆ ಟೆಂಟು ತುಂಬಿಹೋಗುವಂಥ ಚಿಕ್ಕ ಟೆಂಟು.  ಊಟ ಮಾಡಿ ಮಲಗಿದೆವು. ಮೊದಲ ದಿನದ ಚಾರಣ ಆರಾಮವಾಗಿತ್ತು.  

ಎರಡನೇ ದಿನ: 

ಎರಡನೇ ದಿನ ಮಚಾಮೆ ಕ್ಯಾಂಪಿನಿಂದ ಶಿರಾ ಕ್ಯಾಂಪಿಗೆ ೧೦ ಕಿಲೋಮೀಟರ್, ೮೪೦ ಮೀಟರ್ ಮೇಲಕ್ಕೆ ಹತ್ತಿ, ೩೮೪೦ ಮೀಟರ್ ತಲುಪಿದೆವು. ಮೊದಲ ದಿನದ ದಟ್ಟಕಾಡು ಮಾಯವಾಗಿ ಎರಡನೇ ದಿನ ನಮಗೆ ಸಿಕ್ಕಿದ್ದು ಚಿಕ್ಕ ಚಿಕ್ಕ ಗಿಡಗಳು, ಕಳ್ಳೆ ಕಂಟೆಗಳು. ಶಿರಾ ಕ್ಯಾಂಪಿನಲ್ಲಿ ನಮ್ಮ ರಕ್-ಸ್ಯಾಕ್ ಇಟ್ಟು, ಕ್ಯಾಂಪಿನಿಂದ ಹತ್ತಿರದಲ್ಲಿರುವ ನೈಸರ್ಗಿಕವಾದ ಶಿರಾ ಗುಹೆಗೆ ಹೋದೆವು. ಅದರೊಳಗೆ ಹೋಗಿ, ಗುಹೆಯ ಗುಡ್ಡದ ಮೇಲೆ ಹತ್ತಿ ಫೋಟೊ ತೆಗೆದುಕೊಂಡು ಬಂದೆವು. ಸಂಜೆಯಾಗಿತ್ತು, ಮೊದಲಬಾರಿಗೆ ಸಣ್ಣಗೆ ಚಳಿಯ ಅನುಭವ  ಶುರುವಾಯಿತು. ನಡೆದದ್ದು ಕೇವಲ ೧೦ ಕಿಲೋಮೀಟರ್ ಆಗಿದ್ದರೂ ಎರಡನೇ ದಿನದ ಚಾರಣ ಮೊದಲನೇ ದಿನಕ್ಕೆ ಹೋಲಿಸಿದರೆ ಸ್ವಲ್ಪ ಕಷ್ಟಕರವಾಗಿತ್ತು.  

ಮೂರನೇ ದಿನ: 

ಮೂರನೇ ದಿನ ೭೬೦ ಮೀಟರ್ ಹತ್ತಿ, ೪೬೦೦ ಮೀಟರ್ ಎತ್ತರದಲ್ಲಿರುವ ಲಾವಾ ಟಾವರ್ ತಲುಪಿದೆವು! ಆಮ್ಲಜನಕ ಕಡಿಮಾಯಾಗುವುದು ಯಾರೂ ಹೇಳದಿದ್ದರೂ ಮೊದಲ ಸಲ ಅನುಭವಕ್ಕೆ ಬರುತ್ತದೆ. ಅಷ್ಟು ಮೇಲೆ ಹತ್ತಿದ ಮೇಲೆ ಮತ್ತೆ ೬೫೦ ಮೀಟರ್ ಕೆಳಗೆ ಇಳಿಯಬೇಕು! ಒಟ್ಟು ೧೫ ಕಿಲೋಮೀಟರ್ ನಡೆದು ಬರಾಂಕೋ ಕ್ಯಾಂಪ್ ತಲುಪಿದೆವು. ದಾರಿಯುದ್ದಕ್ಕೂ ಆಗಾಗ ನೀರು ಕುಡಿಯಲು ಗೈಡ್ ಎಲ್ಲರಿಗೂ ಜ್ಞಾಪಿಸುತ್ತಿದ್ದ. ಸ್ವಾಹಿಲಿಯಲ್ಲಿ ನೀರಿಗೆ `ಮಾಜಿ` ಎನ್ನುತ್ತಾರೆ.  ನಾವೆಲ್ಲ ಆಗ, `ಮಾಜಿ ಮಾಜಿ,` ಎಂದು ಕೂಗಿ ನೀರು ಕುಡಿಯುತ್ತಿದೆವು.  ಲಾವಾ ಟಾವರಿನಿಂದ ಕಿಲಿಮಾಂಜಾರೋದ ಶೃಂಗ ನಯನ ಮನೋಹರವಾಗಿ ಕಾಣುತ್ತಿತ್ತು, ಆದರೆ ಊಹೆಗೂ ಮೀರಿದ ಎತ್ತರದಲ್ಲಿತ್ತು. ನಿಜವಾಗಿಯೂ ನಾನು ಇದರ  ಶೃಂಗ ಮುಟ್ಟಲು ಸಾಧ್ಯವೇ ಎಂದು ಸಣ್ಣ ಅಳುಕು ಕೂಡ ಮೂಡಿತು. ದಾರಿಯುದ್ದಕ್ಕೂ ಚಿಕ್ಕ ಚಿಕ್ಕ ಪೊದೆಗಳು ಮತ್ತು ಕುರುಚಲು ಗಿಡಗಳು. ತೆಂಗಿನಗಿಡವನ್ನು ಮೇಲಿನಿಂದ ಜೋರಾಗಿ ಒತ್ತಿದಂತೆ ಕಾಣುವ ಚಿಕ್ಕ ಚಿಕ್ಕ ಸೆನಿಸಿಯೋ ಗಿಡಗಳು. ಮೂರನೇ ದಿನ ನಾವು ಒಟ್ಟು ಬರೀ ೧೧೦ ಮೀಟರ್ ಮೇಲೆ ಬಂದಿದ್ದೆವು. ಎಂಥಹ ನಷ್ಟ! 

ಆಗ ನಮ್ಮ ಚೀಫ್ ಗೈಡ್ ಹೇಳಿದ, `ಮೂರನೇ ದಿನ ಅಷ್ಟು ಮೇಲೆ ಹತ್ತಿ ಮತ್ತೆ ಇಳಿಯುವುದಿದೆಯಲ್ಲ, ಇದು ಕಡಿಮೆಯಾಗುತ್ತಿರುವ ಆಮ್ಲಜನಕ್ಕೆ ಹೊಂದಿಕೊಳ್ಳಲು ಬಹಳ ಉಪಯುಕ್ತವಾದ ಚಾರಣದ ದಿನ. ನೀವು ಅಷ್ಟು ಮೇಲೆ ಹತ್ತಿ ಅಲ್ಲಿ ಊಟ ಮಾಡಿದ್ದೀರಿ, ಆಗ ನಿಮ್ಮಲ್ಲಿ ಆಗಲೇ ಕೆಲವರಿಗೆ ತಲೆನೋವು ಕಾಣಿಸಿಕೊಂಡಿದೆ, ನಂತರ ಕೆಳಗೆ ಇಳಿದಿದ್ದೀರಿ, ಇಲ್ಲಿ ಮಲಗುತ್ತೀರಿ, ಇದು ಮುಂದಿನ ಎರಡು ದಿನಗಳಿಗೆ ಮುಖ್ಯವಾದ ಪೂರ್ವ ತಯಾರಿ,` ಎಂದ. ಇದ್ದರೂ ಇರಬಹುದು ಎಂದುಕೊಂಡೆ. ಒಟ್ಟು ಹದಿನೈದು ಕಿಲೋಮೀಟರ್ ಹತ್ತಿ ಇಳಿಯುವಷ್ಟರಲ್ಲಿ ಎಲ್ಲರೂ ಸುಸ್ತು ಹೊಡೆದು ಹೋಗಿದ್ದೆವು. ಕೆಲವರಿಗೆ ತಲೆ ನೋವು ಕಾಣಿಸಿಕೊಂಡಿತ್ತು. ಚಳಿ ಕೂಡ ಜಾಸ್ತಿಯಾಗಿತ್ತು. 

ನಾಲ್ಕನೇ ದಿನ: 

ನಾಲ್ಕನೇ ದಿನ ಬರಾಂಕೋ ಕ್ಯಾಂಪಿನಿಂದ ಕರಂಗಾ ಕ್ಯಾಂಪಿಗೆ ಹತ್ತು ಕಿಲೋಮೀಟರ್, ೩೯೫೦ ಮೀಟರಿನಿಂದ ೪೨೦೦ ಮೀಟರಿನವರೆಗೆ (೨೫೦ ಮೀಟರ್ ಎತ್ತರ) ಚಾರಣ! ಪ್ರತಿದಿನದಂತೆ ಪ್ರಾಥರ್ವಿಧಿಗಳನ್ನು ಪೂರೈಸಿಕೊಂಡು (ಸ್ನಾನದ ಹೊರತು), ಬೆಳಗಿನ ಉಪಾಹಾರ ಮಾಡಿ, ಚಳಿಗೆ ಬೇಕಾದ ಬಟ್ಟೆಗಳನ್ನು ಹಾಕಿಕೊಂಡು, ರಕ್-ಸ್ಯಾಕಿನಲ್ಲಿ ಕೆಲವು ಬಟ್ಟೆ ಸ್ನ್ಯಾಕ್-ಗಳನ್ನು ಇಟ್ಟುಕೊಂಡು, ಕ್ಯಾಮಲ್ ಬ್ಯಾಗಿನಲ್ಲಿ ನೀರು ತುಂಬಿಕೊಂಡು, ಸನ್-ಸ್ಕ್ರೀನ್ ಹಾಕಿಕೊಂಡು ಹೊರಟೆವು. ಕರಂಗಾ ಕ್ಯಾಂಪ್ ತಲುಪಿದಾಗ ಲೇಟ್- ಮಧ್ಯಾಹ್ನ. ಈಗ ನಾವು ಎಲ್ಲ ಮೋಡಗಳಿಗಿಂತ ಮೇಲೆ ಇದ್ದೆವು. ಮೋಡಗಳು ನಮ್ಮ ಕೆಳಗೆ ಸುಮುದ್ರದಂತೆ ಕಾಣುತ್ತಿದ್ದವು!  ಅವತ್ತು ನಾವು ಸ್ವಾಹಿಲಿಯ `ಕಿಲಿಮಾಂಜಾರೋ`  ಹಾಡನ್ನು ಕನ್ನಡ ಮತ್ತು ಹಿಂದಿಗೆ ಭಾಷಾಂತರ ಮಾಡಿ ಅದೇ ಧಾಟಿಯಲ್ಲಿ ಹೇಳಿ ಕುಣಿದು, ಸಾಕಷ್ಟು ಫೋಟೋ ತೆಗೆದುಕೊಂಡೆವು. ಹಿಂದಿನ ದಿನಕ್ಕೆ ಹೋಲಿಸಿದರೆ ಚಳಿ ಹೆಚ್ಚಾಗಿತ್ತು.  

ಐದನೇ ದಿನ: 

ಐದನೇ ದಿನ ಕರಂಗಾ ಕ್ಯಾಂಪಿನಿಂದ ಬರಾಫು (ಬರಾಫು ಎಂದರೆ ಹಿಮ, ಹಿಂದಿಯಲ್ಲಿ `ಬರ್ಫ್` ಶಬ್ದಕ್ಕೆ ಎಷ್ಟು ಹತ್ತಿರವಿಲ್ಲವೇ?) ಕ್ಯಾಂಪಿಗೆ ಚಾರಣ, ೪೨೦೦ರಿಂದ ೪೬೬೦ ಮೀಟರಿನವರೆಗೆ, ಹತ್ತಿರ ಅರ್ಧ ಕಿಲೋಮೀಟರ್ ಮೇಲಕ್ಕೆ. ಸಮುದ್ರ ಮಟ್ಟದಿಂದ ನಾಲ್ಕು ಸಾವಿರ ಮೀಟರ್ ಮೇಲೆ ಹೋದ ಮೇಲೆ ವಾತಾವರಣದಲ್ಲಿ ಆಮ್ಲಜನಕ ಸಾಕಷ್ಟು ಕಡಿಮೆಯಾಗಲು ಶುರುವಾಗುತ್ತದೆ. ಐದನೇ ದಿನ ನಾವು ನಡೆದದ್ದು ೮ ಕಿಲೋಮೀಟರ್, ನಡೆಯಲು ತೆಗೆದುಕೊಂಡ ಅವಧಿ ೫ ಗಂಟೆ! ಆಗಲೇ ಸ್ವಲ್ಪ ಏದುಸಿರು ಶುರುವಾಗಿತ್ತು, ಚಳಿಕೂಡ ತನ್ನ ಕೈಚಳಕವನ್ನು ತೋರಿಸುತ್ತಿತ್ತು. ಮೋಡಗಳಿಲ್ಲದ ನಗ್ನ ಕಿಬೋ ಶೃಂಗ ಕಣ್ಣಳತೆಯಲ್ಲಿ ಕರೆಯುತ್ತಿತ್ತು. ಬರಾಫು ಕ್ಯಾಂಪಿನಲ್ಲಿ ವಾತಾವರಣದ ಆಮ್ಲಜನಕ ೨೧%ನಿಂದ ೧೦%ಗೆ ಇಳಿದಿತ್ತು! 

ಮಧ್ಯಾಹ್ನವಾಗುವಷ್ಟರಲ್ಲಿ ಬರಾಫು ಕ್ಯಾಂಪ್ ತಲುಪಿದೆವು. ಯಥಾಪ್ರಕಾರ ಬಿಸಿಬಿಸಿ ಊಟ ಮಾಡಿದೆವು. ನಂತರ ನಮಗೆಲ್ಲ ಮಲಗಲು ಹೇಳಿದರು! ಆ ಚಳಿಯಲ್ಲಿ, ಅಷ್ಟು ಕಡಿಮೆ ಆಮ್ಲಜನಕದಲ್ಲಿ ಅದೂ ಮಧ್ಯಾಹ್ನ ಎಲ್ಲಿಂದ ತಾನೆ ನಿದ್ದೆ ಬಂದೀತು? ಆದರೆ ಹೊರಗೆ ಅಸಾಧ್ಯ ಚಳಿ, ಜೊತೆಗೆ ನಾಲ್ಕು ಹೆಜ್ಜೆ ಜೋರಾಗಿ ನಡೆದರೆ ಏದುಸಿರು ಬೇರೆ, ಟೆಂಟಿಗೆ ಬಂದು ಮಾಡಿದ್ದು ಮಲಗುವ ನಾಟಕವಷ್ಟೇ!  

ಸಂಜೆ ಏಳು ಗಂಟೆಗೆ ರಾತ್ರಿಯ ಭೋಜನ. ಇದು ಕೊನೆಯ ಆರೋಹಣದ ಕೊನೆಯ ಭೋಜನ. ಊಟ ಮಾಡಿದ ಮೇಲೆ ಮತ್ತೆ ಮಲಗಲು ಹೇಳಿದರು, ಏಕೆಂದರೆ ಕೊನೆಯ ಆರೋಹಣ ಶುರುವಾಗುವುದು ಮಧ್ಯರಾತ್ರಿ ೧೨ ಗಂಟೆಗೆ! ಇಲ್ಲಿಯವರೆಗೂ ನಮ್ಮ ಚಾರಣವೆಲ್ಲ ಹಾಡುಹಗಲಿನಲ್ಲೇ ಆಗಿತ್ತು. ನಾವಿನ್ನೂ ಹತ್ತಬೇಕಾಗಿರುವುದು ೧೨೩೫ ಮೀಟರ್!  ಆಗಲೇ ಗಾಳಿಯ ಆಮ್ಲಜನಕಕ್ಕೆ ಒದ್ದಾಡುತ್ತಿದ್ದೇವೆ. ರಾತ್ರಿಯ ಹೊತ್ತು ಚಳಿ ಕೂಡ ಜಾಸ್ತಿ. ಬರಾಫು ಕ್ಯಾಂಪಿನಲ್ಲಿ ಉಷ್ಣಾಂಶ ಆಗಲೆ ೮ ಡಿಗ್ರಿ ಸೆಲ್ಸಿಯಸ್ ತೋರಿಸುತ್ತಿತ್ತು. ಇದನ್ನೆಲ್ಲ ನೆನೆಸಿಕೊಂಡು ವೇಳೆ ಕಳೆದದ್ದು, ನಿದ್ದೆ ಮಾತ್ರ ಬಾರದು! ಎದ್ದಿದ್ದು ಬೆಳಿಗ್ಗೆ ೭ ಗಂಟೆಗೆ, ಇನ್ನು ರಾತ್ರಿ ಪೂರ್ತಿ ಏರಬೇಕು. ಇದೆಲ್ಲ ನನ್ನಿಂದ ಸಾಧ್ಯವೇ, ಅಥವಾ ಇದೆಲ್ಲ ಕನಸೇ? 

ಐದನೇ ರಾತ್ರಿ ಮತ್ತು ಆರನೇ ದಿನ: 

ಐದನೇ ರಾತ್ರಿ ಹನ್ನೊಂದು ಗಂಟೆಯಿಂದ ಕೊನೆಯ ಆರೋಹಣಕ್ಕೆ ತಯಾರಾಗಲು ಶುರುವಾದೆವು. ಅಂತಿಮಾರೋಹಣಕ್ಕೆ ಎರಡರಿಂದ ಮೂರು ಲೇಯರ್ ಕಾಲುಚೀಲಗಳು, ಮೂರರಿಂದ ನಾಲ್ಕು ಲೇಯರ್ ಉಡುಗೆಗಳು ಕಾಲು, ಕೈ ಮತ್ತು ದೇಹಕ್ಕೆ, ಕತ್ತಿಗೆ ಬಲಕ್ಲಾವಾ, ತಲೆ ಮತ್ತು ಕಿವಿ ಮುಚ್ಚಿಕೊಳ್ಳಲು ಟೋಪಿ, ಬೆರಳುಗಳನ್ನು ಮುಚ್ಚಿಕೊಳ್ಳಲು ಕೈಗವಸು, ನಡೆಯಲು ಸಹಾಯಕ್ಕಾಗಿ ಊರುಗೋಲುಗಳು, ತಲೆಗೆ ಹೆಡ್-ಲೈಟು, ರಕ್-ಸ್ಯಾಕಿನಲ್ಲಿ ಕ್ಯಾಮೆಲ್ ಬ್ಯಾಗಿನಲ್ಲಿ ನೀರು, ಸ್ನ್ಯಾಕ್, ಇನ್ನೆರೆಡು ಇರಲಿ ಎಂದು ಹೆಚ್ಚುವರಿ ದಿರಿಸುಗಳು! ಮಧ್ಯರಾತ್ರಿ ಹನ್ನೆರಡಕ್ಕೆ ನಮ್ಮ ಕೊನೆಯ ಆರೋಹಣಕ್ಕೆ ನಮ್ಮ ಗೈಡ್ ನಾಂದಿ ಹಾಡಿದ, `ಹಕೂನ ಮಟಾಟ`. 

ನಾವು ಹೊರಟ ರಾತ್ರಿ ಅಮಾವಾಸ್ಯೆ! `ಅಮಾಸಿಯ ನಡುರಾತ್ರಿ  ಎಲ್ಲೂ ಹೋಗಬ್ಯಾಡ,` ಎಂದು ಚಿಕ್ಕವನಿದ್ದಾಗ ಹಿರಿಯರಿಂದ   ಕೇಳಿಸಿಕೊಳ್ಳುವ ಮಾತು ನೆನಪಾಯಿತು. ಅವತ್ತು ಅಮಾವಾಸ್ಯೆಯ ಮಧ್ಯರಾತ್ರಿ ನಾನೆಂದೂ ಮಾಡಿರದ ಆರೋಹಣಕ್ಕೆ ಅಣಿಯಾಗಿದ್ದೆ! ನಮ್ಮಂತೆಯೇ ಹತ್ತಾರು ಗುಂಪುಗಳು ನಮಗಿಂತೆ ಮೊದಲೇ ಮುಂದೆ ಸಾಗುತ್ತಿದ್ದರು. ಗೈಡ್ ದಾರಿ ತೋರಿಸುತ್ತಿದ್ದ. ನಾವು ಒಬ್ಬರ ಹಿಂದೆ ಒಬ್ಬರು ಹೆಡ್-ಲೈಟಿನಲ್ಲಿ ಮುಂದಿನವರ ಕಾಲನ್ನು ಅನುಸರಿಸಿ ಮೇಲೆ ಹತ್ತಲು ತೊಡಗಿದೆವು. `ಪೋಲೆ ಪೋಲೆ` ಹೆಜ್ಜೆ ಹಾಕುವ ಬರೀ ಕಲ್ಲು ಮಣ್ಣುಗಳಿಂದ ತುಂಬಿದ ಕಡಿದಾದ ಆರೋಹಣ. ನಮ್ಮ ಗೈಡ್ ತುಂಬ ನಿಧಾನವಾಗಿ ಹೆಜ್ಜೆ ಹಾಕುತ್ತ ನಮ್ಮ ಹತ್ತುವ ಗತಿಯನ್ನು ನಿರ್ಧರಿಸಿದ್ದ.  

ಅವನು ಅಷ್ಟು ಮೆಲ್ಲ ಹತ್ತುತ್ತಿದ್ದರೂ, ನಮಗೆ ಅದೂ ಕಷ್ಟವೆನಿಸಲು ಶುರು ಹತ್ತಿತು. ಕೈಗವಸು ಹಾಕಿಕೊಂಡಿದ್ದರೂ ಹತ್ತು ನಿಮಿಷದಲ್ಲಿ ಕೈ ಮರಗಟ್ಟಲು ಶುರುವಾಯಿತು. ಇನ್ನೊಂದು ಕೈಗವಸನ್ನು ಅದರ ಮೇಲೆ ಹಾಕಿಕೊಂಡೆ. ಕೈಯ ಚಳಿ ಸ್ವಲ್ಪ ಕಡಿಮೆಯಾಯಿತು, ಆದರೆ ಊರುಗೋಲು ಹಿಡಿಯುವುದು ಕಷ್ಟವೆನಿಸಲು ಶುರುವಾಯಿತು. ಇನ್ನೂ ಹತ್ತು ನಿಮಿಷವಾಗುವಷ್ಟರಲ್ಲಿ ಎದೆ ಮತ್ತು ಬೆನ್ನನ್ನು ಯಾರೋ ಕಟ್ಟಿ ಅಮುಕುತ್ತಿರುವ ಭಾವನೆ. ಸದ್ಯ ಮೂರು ಕಾಲುಚೀಲ ಹಾಕಿಕೊಂಡಿದ್ದು ಒಳ್ಳೆಯದಾಯಿತು, ಕಾಲ್ಬೆರಳುಗಳು ಸುರಕ್ಷಿತವಾಗಿದ್ದವು. 

ಸುಮಾರು ಒಂದು ಗಂಟೆ ಹತ್ತಿದ ಮೇಲೆ ಒಂದು ಸಣ್ಣ ಬ್ರೇಕ್! ಆಗ ಒಬ್ಬ ಗೈಡ್ ನನ್ನ ಕಷ್ಟವನ್ನು ನೋಡಿ, ನನ್ನ ಬಳಿ ಬಂದು, ಕೈಗವಸನ್ನು ಸರಿಯಾಗಿ ಹಾಕಿದ. ನಾನು ಹಾಕಿಕೊಂಡ ಲೇಯರ್-ಗಳಲ್ಲಿ ಒಂದು ಲೇಯರ್ ಅನ್ನು ಕಡಿಮೆ ಮಾಡಲು ಹೇಳಿದ. ನಾನು ಇಲ್ಲಿಯವರೆಗೂ ಊರುಗೋಲನ್ನು ಉಪಯೋಗಿಸಿಯೇ ಇರಲಿಲ್ಲ, ಆದರೆ ಊರುಗೋಲಿಲ್ಲದೇ ಅಂತಿಮ ಆರೋಹಣ ಮಾಡಬೇಡಿ ಎಂದು ನಮ್ಮ ಚೀಫ್ ಗೈಡ್ ಹೇಳಿದ್ದ. ನನ್ನ ಜೊತೆಗಾರರೆಲ್ಲ್ರೂ ಊರುಗೋಲನ್ನು ಹಿಡಿದು ನಡೆಯುತ್ತಿದ್ದರು. ನನಗೆ ಮಾತ್ರ ಇಂಥ ರಾತ್ರಿಯಲ್ಲಿ ಕೈಗವಸಿನಲ್ಲಿ ಊರುಗೋಲನ್ನು  ಊರಿ ನಡೆಯುವುದು ತುಂಬ ಕಷ್ಟವಾಗುತ್ತಿತ್ತು. ಗೈಡ್ ನನ್ನ ಊರುಗೋಲುಗಳನ್ನು ಮಡಚಿ ನನ್ನ ರಕ್-ಸ್ಯಾಕಿಗೆ ಹಾಕಿದ. ತನ್ನಂತೆ ಊರುಗೋಲಿಲ್ಲದೇ ಹತ್ತಬಹುದು ಎಂದು ಭರವಸೆ ಕೊಟ್ಟ.  ಕುಡಿಯಲು ನೀರುಕೊಟ್ಟ, ತಿನ್ನಲು ನನ್ನ ಬ್ಯಾಗಿನಿಂದ ಬಿಸ್ಕೀಟು ಕೊಟ್ಟ. ಹೋದ ಜೀವ ಬಂದಂತಾಯಿತು.  

ಮತ್ತೆ ಚಾರಣ ಮುಂದುವರೆಯಿತು. ನಾವೀಗ ಎಲ್ಲ ಮೋಡಗಳಿಗಿಂತ ಆಗಲೇ ಮೇಲಕ್ಕೆ ಬಂದ್ದಿದ್ದೆವಲ್ಲ, ಅಮವಾಸ್ಯೆಯ ರಾತ್ರಿ ಬೇರೆ, ಆಕಾಶದಲ್ಲಿ ಪ್ರತಿ ನಕ್ಷತ್ರಗಳೂ ಕಾಣಿಸುತ್ತಿದ್ದವು. ಅಷ್ಟು ಶುಭ್ರವಾದ ಅಷ್ಟೊಂದು ಚುಕ್ಕೆಗಳಿರುವ ಆಕಾಶವನ್ನು ನಾನು ಅವತ್ತೇ ನೋಡಿದ್ದು. ಆದರೆ ತಲೆ ಮೇಲೆತ್ತಿ ನಡೆಯುವಂತಿಲ್ಲ, ಮುಂದಿನವರ ಕಾಲನ್ನು ನೋಡಿ ಹತ್ತಬೇಕು. ನಾವು ಹೀಗೆ ಹತ್ತಬೇಕಾದರೆ ಬೇರೆ ಗುಂಪಿನಿಂದ ಕೆಲವರನ್ನು ಇಳಿಸಿಕೊಂಡು ಹೋಗುತ್ತಿದ್ದರು, ಅವರಿಗೆಲ್ಲ `ತೀವ್ರ ಪರ್ವತ ಕಾಯಿಲೆ` (acute mountain syndrome) ಆಗಿತ್ತು. ಬಾಯಿಯವರೆಗೂ ಬಂದು ಗಂಟಲಿಗೆ ಇಳಿಯಲಿಲ್ಲ ಎನ್ನುವಂತೆ, ಇಷ್ಟು ಎತ್ತರ ಬಂದು ಪರ್ವತದ ಶೃಂಗ ತಲುಪದವರನ್ನು ನೋಡುತ್ತ ನಿಧನಿಧಾನವಾಗಿ ಮೇಲೆ ಹತ್ತುತ್ತಿದ್ದೆವು. ನಮಗೂ ಅದೇ ಪಾಡು ಬರದಿರಲಿ ಎಂದು ಮನಸ್ಸಿನಲ್ಲೇ ಪ್ರಾರ್ಥಿಸುತ್ತ. ಚಳಿಯ ಹೊಡೆತಕ್ಕೆ ಕ್ಯಾಮೆಲ್ ಬ್ಯಾಗಿನಲ್ಲಿ ನೀರು ಪೂರ್ತಿ ಮಂಜುಗಡ್ಡೆಯಾಗಿಬಿಟ್ಟಿದೆ.  ಉಷ್ಣಾಂಶ -೧೦, ಅನುಭವಿಸುವ ಉಷ್ಣಾಂಶ -೧೫ ಡಿಗ್ರೈ ಸೆಂಟಿಗ್ರೇಡ್!

ಕಿಬೋ ಶಿಖರದ ಮೊದಲ ಶೃಂಗದ ಹೆಸರು, ಸ್ಟೆಲ್ಲಾ ಪಾಯಿಂಟ್. ನಾವು ಅದನ್ನು ತಲುಪಲು ಸುಮಾರು ೭೫% ಹತ್ತಿರಬಹುದು, ಸೂರ್ಯೋದಯದ ಮೊದಲ ಕುರುಹುಗಳು ಶುರುವಾದವು. ನಾವು ಹತ್ತುವ ಪರ್ವತವನ್ನು ಬಿಟ್ಟರೆ, ಸುತ್ತಲಿನ ೨೭೦ ಡಿಗ್ರ ಒಂದು ಸರಳರೇಖೆಯನ್ನು ಎಳೆದಂತೆ, ನಸುಗೆಂಪು ಬಣ್ಣದ ಬೆಳಕು! ಅಲ್ಲಿ ಕಾಣುವ ದೃಶ್ಯವನ್ನು ಮತ್ತು ಅನುಭವವನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ, ಫೋಟೋಗಳಲ್ಲಿ ವಿಡಿಯೋಗಳಲ್ಲಿ ಹಿಡಿದಿಡುವುದು ಸಾಧ್ಯವೇ ಇಲ್ಲ. ಮುಂದಿನ ಹದಿನೈದು ನಿಮಿಷ ಸೂರ್ಯ ಹುಟ್ಟುವ ಅದ್ಭುತ ಕ್ರಿಯೆ ನಾವು ಮೇಲೆ ಹತ್ತುವ ಕಾರ್ಯಕ್ಕೆ ಹುಮ್ಮಸ್ಸು ಕೊಡುತ್ತಿತ್ತು.  ಎರಡೂ ಬದಿಯಲ್ಲಿ ಹಿಮಾಚ್ಛಾಧಿತ ಕಲ್ಲುಗಳು ಕಣ್ಣಿಗೆ ತಂಪನ್ನುಣಿಸುತ್ತಿದ್ದವು.  

ಸ್ಟೆಲ್ಲಾ ಪಾಯಿಂಟ್ ೫೭೫೬ ಮೀಟರ್ ಎತ್ತರದಲ್ಲಿದೆ. ನಾವು ಅಲ್ಲಿ ತಲುಪುವಷ್ಟರಲ್ಲಿ ಆಗಲೇ ಕೆಲವರು ಕೆಳಗೆ ಇಳಿಯುತ್ತಿದ್ದರು! ಅಲ್ಲಿ ಫೋಟೋ ತೆಗೆದುಕೊಂಡು ಸ್ವಲ್ಪ ಹೊತ್ತು ವಿರಮಿಸಿ, ನಮ್ಮ ಕೊನೆಯ ಆರೋಹಣವನ್ನು ಆರಂಭಿಸಿದೆವು, `ಉಹುರು` ಎನ್ನುವ ತುದಿಯನ್ನು ಮುಟ್ಟಲು. ಅಸಾಧ್ಯ ಚಳಿ. ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ಏದುಸಿರು.  ಆದರೆ `ಊರಿಗೆ ಬಂದವಳು ನೀರಿಗೆ ಬಾರದಿರುವಳೇ?` ಎನ್ನುವ ಗಾದೆಯಂತೆ, `ಸ್ಟೆಲ್ಲಾ ಪಾಯಿಂಟ್ ತಲುಪಿದ ಮೇಲೆ ಉಹುರು ತಲುಪದಿರಲು ಸಾಧ್ಯವೇ?`  

ಸ್ಟೆಲ್ಲಾ ಪಾಯಿಂಟ್-ನಿಂದ `ಉಹುರು` ಸುಮಾರು ಒಂದು ಕಿಲೋಮೀಟರ್, ಸ್ಟೆಲ್ಲಾ ಪಾಯಿಂಟಿಗಿಂತ ಕೇವಲ ೧೪೦ ಮೀಟರ್ ಎತ್ತರ. ನಡೆಯುವ ಎರಡೂ ಬದಿ ದೂರದಲ್ಲಿ ಹಿಮದ ಬಂಡೆಗಳು, ದೂರದಲ್ಲಿ ಕೆಳಗೆ ಮೋಡಗಳು. ನನಗೆ `ನಾರದ ವಿಜಯ್` ಸಿನೆಮಾದಲ್ಲಿ  ಆಕಾದಲ್ಲಿ ನಡೆಯುವ ನಾರದನ ನೆನಪಾಯಿತು. ಹೆಜ್ಜೆಯ ಮೇಲೊಂದು ಹೆಜ್ಜೆಯ ನಿಕ್ಕುತ  ಒಂದೂವರೆ ಗಂಟೆಯಲ್ಲಿ ಉಹುರು ತಲುಪಿದೆವು.  ಅಸಾಧ್ಯ ಎಂದುಕೊಂಡ ಕಿಲಿಮಾಂಜಾರೋ ಪರ್ವತದ ತುಟ್ಟತುದಿ `ಉಹುರು`ದ ಮೇಲೆ ನಾನು ನಿಂತಿದ್ದೆ.  

ಉಹುರು ಎಂದು ಬರೆದಿರುವ ಫಲಕದ ಮುಂದೆ ನಿಂತಾಗ, ನನಗೆ ಕಿಲಿಮಾಂಜಾರೋ ಗೆದ್ದ ಭಾವನೆ ಬರಲಿಲ್ಲ. ನನ್ನನ್ನು ಗೆದ್ದ ಭಾವನೆಯೂ ಬರಲಿಲ್ಲ. ನನಗಿಂತ ಮೊದಲು ಲಕ್ಷಾಂತರ ಜನ ಕಿಲಿಮಾಂಜಾರೋ ಹತ್ತಿದ್ದಾರೆ, ನಾನಾದ ಮೇಲೆ ಕೂಡ ಮಿಲಿಯನ್-ಗಟ್ಟಲೇ ಜನರು ಹತ್ತುತ್ತಾರೆ.  ಗೈಡುಗಳು ಪೋರ್ಟರುಗಳಿಲ್ಲದೇ ಇದ್ದಿದ್ದರೆ ಇದೆಲ್ಲ ಸಾಧ್ಯವಾಗುವ ಮಾತೇ? `ಉಹುರು` ಎಂದರೆ `ಬಿಡುಗಡೆ` ಎಂದು ಅರ್ಥ; ಎಂಥಹ ಅನ್ವರ್ಥನಾಮ! `ಉಹುರು` ಆ ಕ್ಷ ನನ್ನನ್ನು ಎಲ್ಲದರಿಂದ ಬಿಡುಗಡೆ ಮಾಡಿ ವಿನೀತನನ್ನಾಗಿಸಿತು. ಪ್ರಕೃತಿಯ ಅಗಾಧತೆಯ ಮುಂದೆ ನಾನು ಅಕ್ಷರಷಃ ಇರುವಯಾಗಿಬಿಟ್ಟೆ. ನಮ್ಮನ್ನು ಇಲ್ಲಿಯವರೆಗೆ ಹರೆತಂದ ಗೈಡುಗಳು, ಪೋರ್ಟರುಗಳು, ಅಡುಗೆಯವರು ಮಾಡುವ ಕೆಲಸವನ್ನು ಹಣದಲ್ಲಿ ಅಳೆಯಲು ಸಾಧ್ಯವೇ ಇಲ್ಲ ಎಂದು `ಉಹುರು` ಹೇಳಿದಂತಾಗುತ್ತದೆ, ನಾನು ವಿನಮ್ರನಾಗಿ `ಉಹುರು` ಎಂದು ಬರೆದ ಫಲಕದ ಬಳಿ ಕೂತುಕೊಂಡೆ. .  

ಮಿತ್ರರೆಲ್ಲ ಸೇರಿದೆವು. ಎಲ್ಲ ೨೧ ಜನರೂ ಉಹುರು ಮುಟ್ಟಿದೆವು ಎನ್ನುವುದು ದೊಡ್ಡ ಸಮಾಧಾನ. ನೂರಾರು ಫೋಟೋಗಳನ್ನು ತೆಗೆದುಕೊಂಡು, ಉಹುರುದವರೆಗೂ ತಂದ ಥೇಪ್ಲಾ ತಿಂದು, ಹಾಡಿ, ಕುಣಿದೆವು. ನಂತರ ನಾನೊಬ್ಬನೇ ಇನ್ನೂ ಸ್ವಲ್ಪ ಮುಂದೆ ನಡೆದು ಹೋದೆ. ಚಳಿ ಸ್ವಲ್ಪ ಕಡಿಮೆಯಾಗಿತ್ತು ಅಥವಾ ಕಡಿಮೆ ಅನಿಸುತ್ತಿತ್ತು. ಹತ್ತು ನಿಮಿಷ ಏಕಾಂತದಲ್ಲಿ ಕುಳಿತುಕೊಂಡು ಸುತ್ತಲಿನ ದೃಶ್ಯ ವೈಭವನ್ನು ನೋಡುತ್ತ ಕುಳಿತುಕೊಂಡು ಬಿಟ್ಟೆ. ಇದು ನಿಜವಾ, ಕನಸಾ, ಭ್ರಮೆಯಾ, ವಾಸ್ತವವಾ, ಕತೆಯಾ ಎನಿಸುತ್ತಿತ್ತು. ಆಗುತ್ತಿರುವುದು ಸಂತೋಷವಾ, ಆನಂದವಾ, ಶಾಂತಿಯಾ, ಶೂನ್ಯವಾ, ಖಾಲಿತನವಾ, ರಾಹಿತ್ಯವಾ? ಏನೆಂದು ಕರೆಯಲಿ  ಆ ಭಾವಕ್ಕೆ? ಕಿಲಿಮಾಂಜಾರೋದ ತುಟ್ಟತುದಿಯಲ್ಲಿ `ಉಹುರು`ವಿನ ಅನುಭವವಾಯಿತು ಎನ್ನುವುದೇ ಸರಿಯೇನೋ! 

ಎಷ್ಟು ಹೊತ್ತು ಅಂತ ಅಲ್ಲೇ ಇರಲು ಸಾಧ್ಯ? ಒಲ್ಲದ ಮನಸ್ಸಿನಿಂದ ಒಬ್ಬೊಬ್ಬರಾಗಿ ಹೊರಟೆವು. ಕೆಳಗಿಳಿಯಲು ಮಾತ್ರ ಊರುಗೋಲು ಬೇಕೇ ಬೇಕು. ಹೊಸ ಹುಮ್ಮಸ್ಸಿನಲ್ಲಿ ಊರುಗೋಲುಗಳನ್ನು ಊರುತ್ತ ಕೆಳಗೆ ಇಳಿಯಲು ಶುರುಮಾಡಿದೆವು. ಹಿಂದಿನ ದಿನ ಬೆಳಗಿನ ಆರುವರೆಯಿಂದ ನಿದ್ದೆ ಮಾಡಿಲ್ಲದಿದ್ದರೂ ಒಂಚೂರೂ ನಿದ್ದೆ ಬರುತ್ತಿಲ್ಲ, ಆಗಿರುವ ಸುಸ್ತು ಕೂಡ ಮರೆತು ಹೋಗಿತ್ತು. ಮತ್ತೆ ಬರಾಫು ಕ್ಯಾಂಪು ಸೇರಿದಾಗ ಮಧ್ಯಾಹ್ನವಾಗಿತ್ತು. ಅಲ್ಲಿ ಊಟಮಾಡಿ ಸ್ವಲ್ಪ ಹೊತ್ತು ವಿರಾಮ. ದೇಹಕ್ಕೆ ಹೊಸ ಉತ್ಸಾಹ ಬಂದಿತ್ತು. ಅಲ್ಲಿಂದ ನಾವು ಮಲಗುವ `ಹೈ ಕ್ಯಾಂಪಿ`ಗೆ ಮತ್ತೆ ಎರಡೂವರೆ ಗಂಟೆ ಇಳಿತ. ಹೈ ಕ್ಯಾಂಪ್ ಸೇರಿದಾಗ ಸೂರ್ಯ ಮುಳುಗಲು ಕಾಯುತ್ತಿದ್ದ. ಹೈ ಕ್ಯಾಂಪ್ ೩೯೫೦ ಮೀಟರ್ ಎತ್ತರದಲ್ಲಿದೆ. 

ಒಟ್ಟಿನಲ್ಲಿ ಮಧ್ಯರಾತ್ರಿಯಿಂದ ೧೨೪೦ ಮೀಟರ್ ಹತ್ತಿ ಉಹುರು ಮುಟ್ಟಿ, ಮತ್ತೆ ೧೯೪೫ ಮೀಟರ್ ಕೆಳಗೆ ಇಳಿದು ಬಂದಿದ್ದೆವು! ಅಲ್ಲಿ ಊಟಮಾಡಿ ಟೆಂಟ್ ಒಳಗೆ ಸೇರಿದೆವು. ಕಳೆದ ೩೮ ಗಂಟೆಯಿಂದ ನಿದ್ದೆ ಮಾಡಿರಲಿಲ್ಲ. ತಲೆ ಇಟ್ಟ ತಕ್ಷಣ ನಿದ್ದೆ ಬಾರದಿರುತ್ತದೆಯೇ?  

ಏಳನೇ ದಿನ:  

ಮಾರನೇಯ ದಿನ ಎದ್ದು, ತಿಂಡಿ ತಿಂದು, ಮತ್ತೆ ರೇನ್-ಫಾರೆಸ್ಟ್-ನಲ್ಲಿ ೧೪ ಕಿಲೋಮೀಟರ್ ಇಳಿಯುತ್ತ ಮ್ವೇಕಾ ಬಾಗಿಲನ್ನು ತಲುಪಿ, ಕಿಲಿಮಾಂಜಾರೋಗೆ ವಿದಾಯ ಹೇಳಿದೆವು.  ಮ್ವೇಕಾ ದ್ವಾರದಿಂದ ಹೊರಬಂದು, ನಮಗಾಗಿ ಕಾಯುತ್ತಿದ್ದ ಬಸ್ಸಿನಲ್ಲಿ ಕೂತು ಮತ್ತೆ ನಮ್ಮ ಹೊಟೇಲು ಸೇರಿದೆವು. 

ನನ್ನ ಕತೆ – ಕೇಶವ ಕುಲಕರ್ಣಿ

ಈ ವಾರದ ಪ್ರಕಟಣೆ ವಿಳಂಬವಾಗಿರುವುದಕ್ಕೆ ಕ್ಷಮೆ ಕೋರುತ್ತೇನೆ. ಈ ವಾರದ ಪ್ರಕಟನೆ ನಾನು ೨೦ ವರ್ಷಗಳ ಹಿಂದೆ ಬರೆದ ಕತೆ, `ತರಂಗ`ದಲ್ಲಿ `ತಿಂಗಳ ಬಹುಮಾನಿತ ಕಥೆ`ಯಾಗಿ ಪ್ರಕಟವಾಗಿತ್ತು. ಎರಡು ದಶಕಗಳ ನಂತರದ ಈ ಆಧುನಿಕ ಕಾಲದಲ್ಲಿ ಈ ಕಥೆ ಅಪ್ರಸ್ತುತ ಎನಿಸಬಹುದು. ಈ ಹಿಂದೆ ಪ್ರಕಟವಾದ ಕಥೆಯನ್ನೇ ಇಲ್ಲಿ ನಿಮ್ಮ ಮುಂದಿಡುತ್ತಿರುವುದಕ್ಕೂ ಕ್ಷಮೆ ಕೋರುತ್ತೇನೆ. – ಕೇಶವ

ಇದೆನ್ನೆಲ್ಲ ನಿಮ್ಮ ಮುಂದೆ ಕಕ್ಕಿಬಿಡಬೇಕು ಎಂದು ನಾನು ನಿಮ್ಮ ಎದುರಿಗೆ ಇದೀಗ ಕುಳಿತಿದ್ದೇನೆ. ಏಕೆಂದರೆ ಕಕ್ಕುವುದು ನನಗೀಗ ಅನಿವಾರ್ಯವಾಗಿದೆ. ಅದರ ಸಲುವಾಗಿಯೇ ಈಗ ಎಲ್ಲವನ್ನೂ ಒಂದೂ ಬಿಡದೇ ಸಾವಕಾಶವಾಗಿ ಹೇಳುತ್ತೇನೆ. ಇಷ್ಟಾದರೂ ಈಗ ಎಲ್ಲಿಂದ ಶುರು ಮಾಡಲಿ ಎಂದು ತಿಳಿಯಲಾರದೇ ಒದ್ದಾಡುತ್ತಿದ್ದೇನೆ. ಎಲ್ಲಿಂದ ಶುರುಮಾಡಿದರೆ ನಿಮ್ಮಗೆ ಪೂರ ಅರ್ಥವಾದೀತು ಎಂದು ನನಗೆ ಅರ್ಥವಾಗುತ್ತಿಲ್ಲ.

ಅವತ್ತೂ ಹೀಗೆಯೇ ಆಯಿತು. ರೂಪಾ ಕುಲಕರ್ಣಿಯ ಬರ್ತ್‌ಡೇ ಪಾರ್ಟಿ ಮುಗಿಸಿಕೊಂಡು ರಾತ್ರಿ ಹನ್ನೊಂದ್ದಕ್ಕೆ ಖೋಲಿಗೆ ಬಂದಾಗ ಹೀಗೆಯೇ, ಎಲ್ಲವನ್ನೂ ಕಕ್ಕಿ ಬಿಡಬೇಕು ಅನಿಸಿತು. ಖೋಲಿಯಲ್ಲಿ ಉಳಿದವರಿಬ್ಬರೂ ಸಿನಿಮಾಕ್ಕೆ ಹೋಗಿದ್ದರು. ಕೈಗೆ ಸಿಕ್ಕ ವಹಿ ತೆಗೆದುಕೊಂಡು ಹೀಗೆಯೇ ಶುರು ಮಾಡಿ, ಬರ್ತ್‌ಡೇ ಪಾರ್ಟಿಯಲ್ಲಿ ನಡೆದುದನ್ನು, ಅದು ನನ್ನ ಮೇಲೆ ಮಾಡಿದ ಪರಿಣಾಮವನ್ನು, ನಾನು ಬೆಳೆದ ವಾತಾವರಣವು ಅಲ್ಲಿ ತಂದ ಸಂದಿಗ್ಢತೆಯನ್ನು ಬರೆಯುತ್ತ ಹೋದೆ. ಬರ್ತ್‌ಡೇ ಪಾರ್ಟಿ ತೆಲೆಯನ್ನು ಪೂರ ಕೆಡೆಸಿತ್ತು. ಸುಮಾರು ಇಪ್ಪತ್ತು ಪಾನು ಗೀಚಿದೆ. ಏಕೆಂದರೆ ಆಗಲೂ ಹಾಗೆಯೇ, ಕಕ್ಕುವುದು ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ನಾನು ನನ್ನ ಮನಸ್ಸಿನ ತಳಮಳದಿಂದ ಹೊರಬರಲು ಸಾಧ್ಯಗಲಾರದೇ ಒದ್ದಾಡುತ್ತಿದ್ದೆ. 

ಹೀಗೆಲ್ಲ ಹೇಳಿದರೆ ನಿಮ್ಮಗೆ ತಿಳಿಯುವದಿಲ್ಲವೆಂದು ಗೊತ್ತು. ಹಾಗೆಂದು ಆವತ್ತು ಬರೆದ ಇಪ್ಪತ್ತು ಪಾನುಗಳನ್ನು ಇಲ್ಲಿ ಹೇಳುವುದಿಲ್ಲ; ಅವುಗಳನ್ನು ಹೇಳುವ ಮನಸ್ಸೂ ಇಲ್ಲ. ನನಗೆ ಆದಕ್ಕಿಂತ ಮುಂದಿನದನ್ನು ಹೇಳಬೇಕಾಗಿದೆ. ಆದರೆ ಹಿಂದಿನದು ಗೊತ್ತಿರದೇ  ಮುಂದಿನದು ತಿಳಿಯಲಿಕ್ಕಿಲ್ಲವೆಂದು ಹಿಂದಿನದನ್ನು ಹೇಳಿ ಮುಂದೆ ಸಾಗುತ್ತೇನೆ.

ನಾನೊಬ್ಬ ವಿಚಿತ್ರ ವ್ಯಕ್ತಿತ್ವದ ಮನುಷ್ಯ. ನನ್ನ ಸ್ವಭಾವ ಪರಿಚಯ ಮಾಡಿ ಕೊಡಲು ಇದೆಲ್ಲ ಹೇಳಿದರೆ ಸಾಕು ಅನಿಸುತ್ತದೆ. ಈಗಿನ ಕಾಲ: ೧೯೯೨. ಹೆಸರು (ಏನಾದರೂ ನಡೆದೀತು), ವಯಸ್ಸು: ಇಪ್ಪತ್ತು, ಓದುತ್ತಿರುವುದು: ಬಿ. ಇ (ಮೆಕ್ಯಾನಿಕಲ್) ಜಾತಿ: ಬ್ರಾಹ್ಮಣ; ಹವ್ಯಾಸ: ಕಥೆ-ಕವನ ಓದುವುದು, ಬರೆಯುವುದು. ನಮ್ಮ ಮನೆಯಲ್ಲಿ ಒಟ್ಟೂ ನಾಕೇ ಮಂದಿ – ಸಣ್ಣ ಪಗಾರದ ಧಾರ್ಮಿಕ ನಡೆವಳಿಕೆಯ ಬಾಳುತ್ತಿರುವ ಅಪ್ಪ, ಅಪ್ಪನ ಮಾತು ಕೇಳಿಕೊಂಡು ಬದುಕುತ್ತಿರುವ ಕ್ಯಾನ್ಸರಿನಿಂದ ನವೆಯುತ್ತಿರುವ ಅಮ್ಮ, ಮೂರೂವರೆ ವರ್ಷದಿಂದ ಮೂಲೆಯಲ್ಲಿ ಪಾರ್ಸಿ ಹೊಡೆದು ಮಲಗಿದ ಅಜ್ಜಿ ಮತ್ತು ನಾನು. ಮನೆಯಲ್ಲಿ ಪೂರ ಧಾರ್ಮಿಕ ವಾತಾವರಣ. ನಮ್ಮಜ್ಜ ನಮ್ಮಪ್ಪ ಮಗುವಾಗಿರುವಾಗಲೇ ಸತ್ತನಂತೆ; ಅಂದಿನಿಂದ ನಮ್ಮಜ್ಜಿ ಮಾಡಿಯಾಗಿದ್ದಾಳೆ ( ಈ ಕಥೆ ಮುಗಿಯುವುದರೊಳಗಾಗಿ ಸಾಯುತ್ತಾಳೆ). ದಿನಾಲು ಮಡಿ ಊಟವೇ ಆಗಬೇಕು. ತನೆಗೇ ಏಡಿರೋಗ ಬಡಿದಿದ್ದರೂ ಅವ್ವ ದೇವರು-ದಿಂಡಿರೆಂದು ಕಷ್ಟಪಟ್ಟು ಮಡಿ ಅಡಿಗೆ ಮಾಡುತ್ತಾಳೆ. ದಿನಾಲೂ ದೇವರ ಪೂಜೆ, ವೈಶ್ವದೇವ, ರಾಯರ ಹಸ್ತೋದಕ ಆಗಲೇಬೇಕು. ಪ್ರತಿ ಗುರುವಾರ ತಾರತಮ್ಯ ಭಜನೆ, ಕಡ್ಡಾಯವಾಗಿ ಎರಡು ಹೊತ್ತು ಸಂಧ್ಯಾವಂದನೆ ಇವನ್ನೆಲ್ಲ ಅಪ್ಪ ಶ್ರದ್ದೆಯಿಂದ ಮಾಡುತ್ತಾನೆ. ಔಷಧಿಗಾಗಿ ಪೈಸೆ ಪೈಸೆ ಕೊಡಿಸಿ ಅಮ್ಮ, ಅಜ್ಜಿಯರನ್ನು ಡಾಕ್ಟರಿಗೆ ತೋರಿಸುತ್ತಾನೆ. ಅಂತಹುದರಲ್ಲಿ ಮುಂಚಿನಿಂದಲ್ಲು ಚಲೋ ಓದಿದ್ದರಿಂದಲೋ ಏನೋ, ಚಲೋ ಮಾರ್ಕ್ಸ್ ಬಂದು ನಾನು ಹದಿನೆಂಟನೆಯ ವಯಸ್ಸಿಗೆ ಬಾಗಲಕೋಟೆಯಿಂದ ಹುಬ್ಬಳ್ಳಿಗೆ (ಬಿವಿಬಿ ಕಾಲೇಜು) ಬರಬೇಕಾಗಿ ಬಂತು. ಅಪ್ಪ ಹಾಗೂ ಹೀಗೊ ತಿಂಗಳಿಗೆ ನಾನೂರೋ ಐನೂರೋ ಕಳಿಸುತ್ತಾನೆ.

ಇಲ್ಲಿ ಹುಬ್ಬಳ್ಳಿಗೆ ಬಂದ ಮೇಲೆ ನನ್ನಲ್ಲಿ ಒಂದೊಂದೇ ಬದಲಾವಣೆಗಳು ಕಾಣಿಸಿಕೊಳ್ಳಲು ಶುರುವಾದವು. ನಾನು ಹೈಸ್ಕೂಲಿನಲ್ಲಿದ್ದಾಗ ಮಾಡುತ್ತಿದ್ದ ಗಾಂಧಿ-ಟಾಲ್ಸ್ಟಾಯ್ ಭಜನೆಗಳು ಸಾವಕಾಶವಾಗಿ ಕಡಿಮೆಯಾಗಲು ಹತ್ತಿದವು. ಹಾಸ್ಟೆಲಿನಲ್ಲಿ ಬೇರೆ ಬೇರೆ ತರಹದ ಗೆಳೆಯರು ಸುತ್ತುವರಿದಿದ್ದಾರೆ. ಹುಡುಗಿಯರ ಬಗೆಗೆ ಹೇಸಿಗೆಯಿಲ್ಲದೇ ಹೊಲಸು ಮಾತಾಡುತ್ತಾರೆ. ಮುಂಚಿ ಇಂತಹುದನ್ನೆಲ್ಲ ಎಂದೂ ಕೇಳಿದವನಲ್ಲ. ಮನಸ್ಸಿನಲ್ಲೇ ಖುಷಿಯಾದರೂ ಮಾತನಾಡಲು, ನಗಲು ನನ್ನ ಸಂಸ್ಕಾರದ ಅಡ್ಡಿ.

ದಾರಿಯಲ್ಲಿ ಹೊರಟ ಹುಡುಗಿಯರನ್ನು ನೋಡಲು ಕಡಿವಾಣ ಹಾಕಿಕೊಂಡಿದ್ದರೂ ಒಬ್ಬನೇ ಇದ್ದಾಗ ದಾರಿಯಲ್ಲಿನ ಹುಡುಗಿಯರನ್ನು ಕಣ್ತುಂಬ ತುಂಬಿಕೊಳ್ಳಲು ಶುರು ಮಾಡಿದೆ; ಮನಸ್ಸಿನಲ್ಲೇ ಮಂಡಿಗೆ ತಿನ್ನಹತ್ತಿದೆ. ಇಂಥ ಹೊತ್ತಿನಲ್ಲೇ ಹುಬ್ಬಳ್ಳಿಯ ಸಿನಿಮಾ ಚಾಳಿ ಬೇರೆ ಅಂಟಿಕೊಳ್ಳಹತ್ತಿತ್ತು. ಆಗಲೇ ಸಾಹಿತ್ಯದ ಕೆಲವು ಪ್ರಮುಖ ಕೃತಿಗಳನ್ನು ಓದುವ ಅವಕಾಶ ಪಡೆದುಕೊಂಡೆ. ಎಲ್ಲದಕ್ಕೂ ಭಗವಂತೆನೇ ಕಾರಣ, ಬದುಕಿನಲ್ಲಿ ಆದರ್ಶ- ಗುರಿಗಳೇ ಮುಖ್ಯ, ಅವುಗಳಿಗಾಗಿ ಮಾಡುವ ಸತತ ಪ್ರಯತ್ನ ಇವುಗಳನ್ನು ನಂಬಿದ್ದ ನಾನು ಇವುಗಳನ್ನೇ ಸಂಶೆಯದಿಂದ ನೋಡಲಿಕ್ಕೆ ಹತ್ತಿದೆ. ಆದರೆ ಹಿಂದಿನದನ್ನು ಬಿಡಲಾಗದೇ ಹೊಸಹಾದಿ ತಿಳಿಯದೇ ಒದ್ದಾಡಿ ಕಥೆ-ಕವನ ಗೀಚಲು ಶುರುಮಾಡಿದೆ. ಸಾಹಿತ್ಯಿಕ ಸ್ಪರ್ಧಗಳಲ್ಲಿ ಬಹುಮಾನ ಬಂದದ್ದರಿಂದ, ಹುಡುಗಿಯರ ಬಗೆಗೆ ಜೋಕು ಮಾಡದ್ದರಿಂದ, ಮೊದಲನೆಯ ವರ್ಷ ಚಲೋ ಮಾರ್ಕ್ಸ್ ಬಂದದ್ದಿರಿಂದ , `ಗಾಂಧಿ`;`ಕವಿ`, `ಪುಸ್ತಕದಾಗಿನ ಹುಳ` ಆದೆ. ಇಷ್ಟರೊಳಗಾಗಿ ಒಳಗಿನ ನಾನು, ಹೊರಗಿನ ನಾನು ಬೇರೆ ಬೇರೆಯಾಗಿದ್ದು ನನ್ನ ಗಮನಕ್ಕೆ ಬಂತು.

ಇಷ್ಟಲ್ಲದೇ ಅಪ್ಪ ಈಗೀಗ ರೊಕ್ಕ ವೇಳೆಗೆ ಸರಿಯಾಗಿ ಕಳಿಸುತ್ತಿಲ್ಲ (ಅಜ್ಜಿಯ ರೋಗ ಜಾಸ್ತಿಯಾಗಿದೆಯಂತೆ). ನನಗೆ ಇದಲ್ಲದರಿಂದ ಬೇಡುಗಡೆ ಬೇಕಾಗಿತ್ತು. ಆದರೆ ಆಧ್ಯಾತ್ಮದ ಜೀವಾತ್ಮ – ಪರಮಾತ್ಮ, ಸಾಹಿತ್ಯದ ಕಾಮ-ಸಾವು-ಅಹಂಗಳು ಒಂದಕ್ಕೊಂದು ಹೊಂದಲಾರದೇ ನಾನು ಅಂತರ್ಮುಖಿಯಾಗಹತ್ತಿದೆ. ಅಷ್ಟಲ್ಲದೇ ಅಮೆರಿಕದ ವಿದ್ಯಾರ್ಥಿಗಳಂತೆ ನಾನೇಕೆ ದುಡಿಯುತ್ತ ಕಲಿಯಬಾರದು? ಅಪ್ಪನಿಗೇಕೆ ಕಷ್ಟ ಕೊಡಬೇಕು ಎನಿಸಲು ಹತ್ತಿತು. ಹೀಗೆ ಇನ್ನೆಷ್ಟನ್ನೋ ತಲೆಯಲ್ಲಿ ತುಂಬಿಕೊಂಡು ನಾನು ನನ್ನನ್ನೇ ನೋಡಲು ಶುರುಮಾಡಿದಾಗ ರೂಪಾಕುಲಕರ್ಣಿ ಬರ್ತ್‌ಡೇ ಪಾರ್ಟಿಗೆ ಬಾ ಎಂದು ಆಹ್ಹಾನಿಸಿದ್ದಳು.

ಅದು ಆಗಸ್ಟ್ ತಿಂಗಳ ಕೊನೆ. ನನ್ನ ಕಿಸೆ ಪೂರ ಜಾಲಾಡಿಸಿದರೂ ಆರೇಳು ರೂಪಾಯಿ ಸಿಗಬಹುದಿತ್ತು. ರಾತ್ರಿ ಬಹಳ ಹೊತ್ತು ಓದುತ್ತ ಕುಳಿತಿದ್ದರಿಂದ ಮುಂಜಾನೆ ಎದ್ದಕೂಡಲೇ ತಲೆ ಚಿಟಿಚಿಟಿ ಎನಿಸಿ ಒಂದು ರೂಪಾಯಿ ಖರ್ಚು ಮಾಡಿ ಚಹಾ ಕುಡಿದೆ. ಕಾಲೇಜಿನಲ್ಲಿದ್ದಾಗ ರೂಪಕುಲಕರ್ಣಿ ಬರ್ತ್‌ಡೇ ಪಾರ್ಟಿಗೆ ಬರಲು ಆಹ್ವಾನವಿತ್ತಳು. ನಾನು ಸಬೂಬು ಹೇಳಿ ತಪ್ಪಿಸಿಕೊಳ್ಳಹೋದೆ. ಆದರೆ ಬಾಜು ನಿಂತ ಅರುಣ ನನ್ನ ಸತ್ತ್ವವನ್ನೇ ಕೆಣಕಿ ಜೋಕು ಹೊಡೆದು ಒಪ್ಪಿಸಿಬಿಟ್ಟ. ರೂಪಕುಲಕರ್ಣಿಗೆ ಪ್ರೆಸೆಂಟೇಶನ್ ತರಲು ಪ್ರತಿಯೊಬ್ಬ ಇಪ್ಪತ್ತು ರೂಪಾಯಿ ಹಾಕಬೇಕೆಂದು ಹೇಳಿದ. ನಾನು ಇಲ್ಲಿಯ ತನಕ ಯಾವುದೇ ಪಾರ್ಟಿಗೊ ಹೋದವನಲ್ಲ. ಅಲ್ಲದೆ ಇಪ್ಪತ್ತು ರೂಪಾಯಿ ಬೇರೆ ಕೊಡಬೇಕು. ತಲೆಕೆಟ್ಟು, ಖೋಲಿಗೆ ಬಂದೆ. ಮನಸ್ಸು ವಿಚಿತ್ರ ರೀತಿಯಲ್ಲಿ ತಳಮಳಿಸುತ್ತಿತ್ತು. ಆ ಭಾವಗಳನ್ನು ಶಬ್ದಮಾಡುವ ವ್ಯರ್ಥಪ್ರತಿಮೆಗಳನ್ನು ಹುಡುಕುತ್ತ ಕಾಗದದ ಮೇಲೆ ಗೀಚಿತ್ತ ಕೂತಿದ್ದೆ. ಆವಾಗಲೇ ಬಾಗಲಕೋಟೆಯಿಂದ ಮಗ್ಗಲ ಮನೆ ಬಿಂದಪ್ಪ ಬಂದ. ಅಪ್ಪ-ಅಮ್ಮ-ಅಜ್ಜಿ ಅರಾಮವೆಂದು ಕೇಳಿ ಅಪ್ಪನ ಚೀಟಿ ಕೊಟ್ಟಿದ್ದ. ಅಪ್ಪ ಆಶೀರ್ವಾದ ತಿಳಿಸಿ ಬರೆದಿದ್ದ, `ಮುಂದಿನ ತಿಂಗಳು ದುಡ್ಡು ಕಳಿಸಲು ಆಗುವುದಿಲ್ಲ. ಬಾಳು ಮಾಮಾಗೆ ಪತ್ರ ಹಾಕಿ ತರಿಸಿಕೊ,` ಅಂತ. ಬಿಂದಪ್ಪ ಉಂಡಿ-ಅವಲಕ್ಕಿ ಚೀಲ ಕೊಟ್ಟುಹೋದ. ನಾನು ಪೂರ ಕುಸಿದೆ. ನನಗೆ ಖೋಲಿಯಲ್ಲಿ ಕುಳಿತುಕೊಳ್ಳುವುದು ಸಾಧ್ಯವಾಗಲಿಲ್ಲ. ಅಂಗಿ-ಪ್ಯಾಂಟು ಹಾಕಿಕೊಂಡು ಬರ್ತ್‌ಡೇಗೆ ಹೋಗಲು ತಯಾರಿ ನಡೆಸಿದೆ.

ಪಾರ್ಟಿಯಲ್ಲಿ ಏನೇನು ನಡೆಯಿತು ಎಂದು ವಿವರವಾಗಿ ಹೇಳುವುದಿಲ್ಲ, ಏಕೆಂದರೆ ಅದನ್ನೆಲ್ಲ ಪಾರ್ಟಿಯಿಂದ ಬಂದಕೊಡಲೇ ಬರ್ತ್‌ಡೇ ಸಲುವಾಗಿ ಮನೆಯನ್ನು ಅಲಂಕರಿಸಿದ ರೀತಿ, ವಿದ್ಯುತ್ ಪ್ರಕಾಶ ಕುರಿತು ಬರೆದೆ. ಕೇಕೊಂದಕ್ಕೇ ಎರಡು ನೂರ ಐವತ್ತು ಎಂದು ರೂಪಾಕುಲಕರ್ಣಿ ಜಂಭ ಕೊಚ್ಚಿ ಕೊಂಡಿದ್ದನ್ನೊ ಬರೆದೆ. ಗೆಳೆಯರು ಗೆಳತಿಯರಿಗೆ ಇಂಪ್ರೆಶನ್ ಹೊಡೆಯಲು, ಗೆಳತಿಯರು ಗೆಳೆಯರು ಎದುರು ಡೌಲು ಬಡೆಯಲು ವ್ಯವಹರಿಸುತ್ತಿದ್ದ ಕ್ಷುದ್ರರೀತಿಯನ್ನು ಬರೆದೆ. ಪಾರ್ಟಿಗೆ 

ಬರದವರ ಬಗ್ಗೆ ಹೇಗೆ ಅಶ್ಲೀಲವಾಗಿ ಮಾತನಾಡಿ ಗೇಲಿ ಮಾಡುತ್ತಿದ್ದರು; ನಗು ಬರದಿದ್ದರೂ ಮನಃಪೂರ್ವಕವಾಗಿ ನಕ್ಕಂತೆ ಹೇಗೆ ಗೊಳ್ ಎಂದು ನಗುವಿನ ಸೋಗು ಹಾಕುತ್ತಿದ್ದರು; ಪೋಲಿ ಜೋಕುಗಳನ್ನು ಎಗ್ಗಿಲ್ಲದೇ ಹೇಳಿ ಹೇಗೆ ಸ್ಯಾಡಿಸ್ಟ್ ಖುಷಿ ತೆಗೆದುಕೊಂಡರು – ಎಂಬುದನ್ನೆಲ್ಲ ಗೀಚಿದೆ. ನಾನು ಬೆಳೆದ ರೀತಿ, ನನ್ನ ಮನೆಯ ಪರಿಸರ, ನನ್ನ ಮನಸ್ಸಿನ ರೀತಿ, ನನ್ನ ಹಣದ ಕೊರತೆ ಎಲ್ಲವನ್ನೂ ಬರೆದು, ಅಂಥ ಮನಃಸ್ಥಿತಿಯಲ್ಲಿದ್ದ ನನ್ನ ಮೇಲೆ ಪಾರ್ಟಿ ಮಾಡಿದ ಪರಿಣಾಮವನ್ನು ಬರೆದೆ. ಪಾರ್ಟಿ ಮಾಮೂಲಾಗೇ ಸಾಗಿದ್ದರೂ ಎಲ್ಲ ನನಗೆ ವಿಚಿತ್ರವಾಗಿ ಕಾಣಿಸುತ್ತಿರುವುದನ್ನು, ಹಾಗೆ ಕಾಣಿಸಲು ಕಾರಣವಾದ ನನ್ನ ಸಂಸ್ಕೃತಿಯನ್ನು, ಮನೆಯ ಧಾರ್ಮಿಕ ವಾಟವನದಲ್ಲಿ ಜಿಡ್ಡುಹಿಡಿದ ರೋಗದ ನಂಟನ್ನು, ಮಗನಿಗೆ ಕಳಿಸಲು ರೊಕ್ಕವಿರದಿದ್ದರೂ ಸಾಲ ಮಾಡಿಯಾದರೂ ಬ್ರಾಹ್ಮಣರನ್ನು ಕರೆದು ಊಟಹಾಕಿಸಿ ದಕ್ಷಿಣೆಕೊಡುವ ಅಪ್ಪನನ್ನು, ಕೈಯಿಂದ ಕುಂಡೆ ತೊಳೆದುಕೊಳ್ಳಲು ಬರದಿದ್ದರೂ, ಅಮ್ಮನ ಮೇಲೆ ದರ್ಪ ತೋರುವ ಅಜ್ಜಿಯನ್ನು, ಇದೆಲ್ಲವನ್ನು ಸಹಿಸಿಕೊಂಡು ತನ್ನ ರೋಗವನ್ನು ತುಟಿಕಚ್ಚಿ ಮುಚ್ಚಿಕೊಂಡು ಮಡಿಯೆಂದು ಬಡಿದುಕೊಳ್ಳುವ ಅವ್ವನನ್ನು ಕುರಿತು ಬರೆದೆ. ಹಾಗೆಯೇ ಪಾರ್ಟಿಯಲ್ಲಿ ರೂಪಾಳ ಅಪ್ಪ ದರ್ಪದಿಂದ ಹಲ್ಲು ಕಿರಿಯುತ್ತ ಓಡಾಡಿದ ರೀತಿಯನ್ನು ಬರೆದೆ. ಹಾಗೆಯೇ ನನ್ನನ್ನು ಪೂರ ಹುಚ್ಚ ನನ್ನಾಗಿಸುವ ಸನ್ನಾಹದಲ್ಲಿದ್ದ ‘ಪಿಕ್ ಆ್ಯಂಡ ಆ್ಯಕ್ಟಿ’ ನ ಎಲ್ಲ ಘಟನೆಗಳನ್ನು ಸವಿವರವಾಗಿ ಬರೆದೆ.

[ಒಂದೆರಡು ಸ್ಯಾಂಪಲ್ ಕೊಡುತ್ತೇನೆ;

೧. ಮಿಲಿಂದ ಚೀಟಿ ಎತ್ತುತ್ತಿದ್ದಾಗ ಒಂದರೆ ನಿಮಿಷದ ಮೌನ. ಚೀಟಿ ಒಡೆದವನೇ `ಹುರ್ರಾ,`; ಎಂದು ಕೆಟ್ಟದಾಗಿ ಅರಚಿ ಕುಣಿದಾಡಿದ. ಗಟ್ಟಿಯಾಗಿ ಓದಿದ: `Take Sulochana on double ride on your imaginary bicycle,.` ಎಂದು. ಸುಲೋಚನಾಳತ್ತ ತಿರುಗಿ ಇಂಗ್ಲಿಷಿನಲ್ಲೇ ಕೂಗಿಡಾ, `ಗಾಡ್ಸ್ ಮಸ್ಟ್ ಬಿ ಕ್ರೇಜಿ ಪಾರ್ಟ್ ಟು`ನಲ್ಲಿ ಇರುವಂತೆ ನಿನ್ನನ್ನು ಕೂಡಿಸಿ ಕೊಂಡು ರೈಡ್ ಮಾಡುತ್ತೇನೆ` ಎಂದು. ಸುಲೋಚನಾ ಸಿಟ್ಟಿನಿಂದ, ನಾಚಿಕೆಯಿಂದ ಕೆಂಪಾಗಿ, `ನೊ! ನೆವರ್!!`; ಎಂದು ಅರಚಿದಳು. ಎಲ್ಲರೂ ಆಕೆಯನ್ನು ಸುತ್ತುಗಟ್ಟಿ ಅರಚತೊಡಗಿದಾಗ ಆಕೆ ಮಣಿದು ಮಿಲಿಂದನ ಮುಂದೆ ಕುಳಿತಂತೆ ನಟನೆ ಮಾಡಿದಳು. ಆತ ಪೆಡಲ್ ತಿರಿಗಿಸುತ್ತಿರುವಂತೆ ಕಾಲು ತಿರುಗಿಸುತ್ತ ಆಕೆಯ ಹಿಂಭಾಗವನ್ನು ಕಾಲಿನಿಂದ ಒತ್ತುತ್ತಿದ್ದ, ಪ್ರತಿಸಾರಿ ಹಾಗೆ ಮಾಡಿದಾಗಲೂ ಎಲ್ಲರೂ ಹೋ ಎಂದು ಕೂಗಿ ಚಪ್ಪಾಳೆ ತಟ್ಟುತ್ತಿದ್ದರು. ಎಲ್ಲರನ್ನೂ ಝಾಡಿಸಿ ಒದೆಯಲೇ ಎನಿಸಿ ನಾನು ಥರಥರ ನಡುಗಿದೆ ಒಳಗೊಳಗೆ.

೨. “Select your partner and ask him/her for marriage”.ಗಂಡುಬೀರಿ ಮಾಲತಿ ಸರದಿಯದು ಟೀಶರ್ಟ್ ಮತ್ತು ಗಿಡ್ಡ ಸ್ಕರ್ಟ್ ಹಾಕಿಕೊಂಡಿದ್ದಳು. ಕೆದರಿದ ಕೂದಲನ್ನು ಆಲುಗಾಡಿಸುತ್ತ ನನ್ನ ಹೆಸರನ್ನೇ ಕೂಗಬೇಕೇ? ಸೋಫಾದಲ್ಲಿ ನೋಯುತ್ತಿದ್ದ ತಲೆ ಹಿಡಿದು ಕೊಂಡು ಕೂತ ನಾನು ತಣ್ಣಗಾದೆ ತುಟಿ ಮೇಲೆ ನಗೆ ಆಡಿಸಿಕೊಂಡು, `ಹೆ, ಹೆ! ಹೇ!!`, ಎಂದು ವಿಚಿತ್ರವಾಗಿ ಹಲ್ಲು ಬೀರಿದೆ. ಆಕೆ ಸ್ಟೈಲಾಗಿ ಬಳುಕುತ್ತ ಬಂದು ನಾಟಕೀಯವಾಗಿ, `ಪ್ರಿಯಾ, ನಾವಿಬ್ಬರೂ ಜನ್ಮ ಜನ್ಮಾಂತರದ ಪ್ರೇಮಿಗಳಲ್ಲವೆ?` ಎಂದು ವೈಯಾರ ಮಾಡಿ ನನ್ನ ಮುಂದೆ ಬಗ್ಗಿದಳು. ನಾನೊಮ್ಮೆ ಉಗುಳುನುಂಗಲು ಪ್ರಯತ್ನಿಸುತ್ತಿದ್ದಂತೆ ಆಕೆಯ ಮುಂದೆ ಜಾರಿದ ಟೀಶಾರ್ಟಿನೊಳಗಿಂದ ಎದೆಯ ಸೀಳು ಕಾಣಿಸಿ ಬೆವರಿಹೋದೆ. ಕಾಲು ನೆಲದಲ್ಲೇ ಸಿಕ್ಕಿಹೋದಂತೆ ಅನಿಸಿತು. ಆಕೆ, `ಪ್ರಾಣಕಾಂತಾ, ಈ ಜನ್ಮದಲ್ಲಿ ನಮ್ಮಮದುವೆ ಯಾವಾಗ?` ಎಂದು ಕಿಲಿಕಿಲಿ ನಕ್ಕಳು. ಎಲ್ಲರೂ ಚಪ್ಪಾಳೆ ತಟ್ಟಿ ಜೋರಾಗಿ ನಕ್ಕರು. ನಾನೂ ಹೇಗೊ ಸಾವರಿಸಿಕೊಂಡು ಜೋರಾಗಿ ಚಪ್ಪಾಳೆ ತಟ್ಟಿದೆ.]

ಹಾಗೆಯೇ ಪಾರ್ಟಿ ಮುಗಿಸಿಕೊಂಡು ಕೊಪ್ಪಿಕರ್ ರಸ್ತೆಯಲ್ಲಿ ರಾತ್ರಿ ಒಂಬತ್ತಕ್ಕೆ ಹೇಗೆ ಕಾಲಳೆಯುತ್ತ ದಿಕ್ಕು ತಪ್ಪಿದವನಂತೆ ಅಲೆದೆ ಎಂಬುದನ್ನು, ಅಂಗಡಿಯೊಂದನ್ನು ಹೊಕ್ಕು ಕೆಲಸ ಖಾಲಿ ಇದೆಯೇ ಎಂದು ಕೇಳಿ ಛೀಮಾರಿ ಹಾಕಿಸಿಕೊಂಡಿದ್ದನ್ನು ಬರೆದೆ. ಪಾರ್ಟಿಯ ವೈಭವ, ನನ್ನ ಖಾಲಿ ಕಿಸೆ (ಇನ್ನೂ ಆರು ರೂ. ಇತ್ತು) ಎಲ್ಲ ಒಟ್ಟಿಗೆ ಒಕ್ಕರಿಸಿ ಕೆಲಸ ಕೇಳುವಂತೆ ಮಾಡಿದ್ದವು. ಆಮೇಲೆ ಮುಂದೆ ಮೋಹನ ಟಾಕೀಜಿಗೆ ಬಂದಾಗ, ಕಿಸೆಯಲ್ಲಿ ಆರು ರೂಪಾಯಿ ನೆನಪಾಗಿ ಟಾಕೀಜಿನೊಳಗಡೆ ಹೋದುದನ್ನು ಯಾವುದೋ ಹೊಲಸು ಇಂಗ್ಲೀಶ್ ಚಿತ್ರ ಶುರುವಾಗಿ ಚುಂಬನಗಳು, ಅರೆಬೆತ್ತಲೆ, ಬೆತ್ತಲೆ ದೇಹಗಳು, ನರಳಾಟಗಳು ನನ್ನ ತಲೆ ಕೆಡಿಸಿದ್ದನ್ನು ಬರೆದೆ. ಅರ್ಧಸಿನಿಮಾಕ್ಕೇ ಎದ್ದು ತಲೆಕೆಟ್ಟಂತಾಗಿ ಹುಚ್ಚು ಹಿಡಿದವಂತೆ ಓದುತ್ತ ಹೋಸ್ಟೆಲಿಗೆ ಬಂದುದನ್ನು ಬರೆಯಲು ಕುಳಿತುದನ್ನು ಬರೆದು ಪೆನ್ನು ಮುಚ್ಚಿದೆ. 

ಬರೆದು ಮುಗಿಸಿದಾಗ ರಾತ್ರಿ ಹನ್ನೆರಡೂವರೆ, ಅಷ್ಟರಲ್ಲಿ ರೂಮ್ಮೇಟುಗಳಿಬ್ಬರೂ ಸಿನಿಮಾ ಮುಗಿಸಿಕೊಂಡು ಬಂದರು. ಸಟ್ಟನೆ ಬರೆದದ್ದನ್ನೆಲ್ಲ ಮುಚ್ಚಿಟ್ಟು ಮಲಗಿದಂತೆ ನಟನೆ ಮಾಡಿದೆ. ಮುಂಜಾನೆ ಎದ್ದ ಮೇಲೆ ಅವರಿಗೆ ಓದಲು ಕೊಡಬೇಕು ಎಂದುಕೊಂಡಿದ್ದವನಿಗೆ ಹಾಗೆ ಮಾಡಲು ಧ್ಯರ್ಯ ಸಾಲಲಿಲ್ಲ. ಸುಮಾರು ವಾರಗಳು ಕಳೆದರೂ ಅದನ್ನು ಯಾರಿಗೂ ತೋರಿಸಲಾಗದೇ ಒದ್ದಾಡುತ್ತಿದ್ದಾಗ ಪತ್ರಿಕೆಯೊಂದಕ್ಕೆ ಕಳಿಸಿದರೆ ಹೇಗೆ ಎನಿಸಿತು. ಹೆಸರುಗಳನ್ನು ಬದಲಾಯಿಸಿ ಬರೆದುದನ್ನೆಲ್ಲ ಕಾಪಿ ಮಾಡಿ ಕಳಿಸಿದೆ. ಡಿಸೆಂಬರಿನಲ್ಲಿ ಪ್ರಕಟವೂ ಆಯಿತು.

ಅಂದು ಸಂಜೆ ಪತ್ರಿಕೆಯನ್ನು ಹಿಡಿದಿಕೊಂಡು, ಖುಷಿಯಲ್ಲಿ ಓದುತ್ತಲೇ ಖೋಲಿಗೆ ಬಂದೆ. ನನಗೆ ವಿಪರೀತ ಸಂತೋಷವಾಗಿತ್ತು. ಮೊತ್ತ ಮೊದಲ ಕಥೆ ಮೊದಲ ಬಾರಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಖೋಲಿಗೆ ಬಂದೊಡನೇ `ಕೇಹುಹೊss,; ಎಂದು ಕೂಗಿ, ರೂಮ್ಮೇಟ್ ಮಾಧವ ಏನಾಯಿತೆಂದು ಆಶ್ಚರ್ಯದಿಂದ ನೋಡುತ್ತಿರುವಂತೆಯೇ, ನನ್ನ ಕಥೆ ಛಾಪಿಸಿದ ವಿಷಯ ತಿಳಿಸಿ, ಪತ್ರಿಕೆ ಅವನ ಕೈಗೆ ಕೊಟ್ಟೆ. ಆತ ಅಭಿನಂದನೆ ಸಲ್ಲಿಸಿ, `ಪಾರ್ಟಿ ಯಾವಾಗ?` ಎಂದ. `ಕೊಡೊನಲ್ಲ, ಅದಕ್ಕೇನು?`; ಎಂದೆ. ಅಷ್ಟರಲ್ಲಿ ನನ್ನ ಆವಾಜ ಕೇಳಿ ಬಾಜು ಖೋಲಿ ಶಿವರಾಮ (ಆತ ಸಾಹಿತ್ಯದ ಬಗ್ಗೆ ಮುರನಾಲ್ಕು ತಾಸು ಕೊರೆಯುತ್ತಾನೆ) ಬಂದು ನನ್ನನ್ನು ಬಿಗಿದಪ್ಪಿಕೊಂಡ. ಆತ ಖುಷಿಯಲ್ಲಿದ್ದುದನ್ನು ಆತನ ಕಣ್ಣುಗಳೇ ಹೇಳುತ್ತಿದ್ದವು. ಆತ ನನ್ನ ಕೈಹಿಡಿದು ಕುಳಿತುಕೊಂಡ. ಆತ ಆ ಕಥೆಯಿಂದ ನನಗೇ ಗೊತ್ತಿರದ ಎಷ್ಟೆಷ್ಟೋ ವಿಷಯಗಳನ್ನು ಹೆಕ್ಕಿ ವಿವರಿಸತೊಡಗಿದ. ಆಧುನಿಕತೆಯ ಅಟ್ಟಹಾಸದಲ್ಲಿ ಸಂಪ್ರದಾಯಸ್ಥ ಧಾಮಿ೯ಕ ನಂಬಿಕೆಗಳು ಅರ್ಥಕಳೆದುಕೊಳ್ಳುತ್ತಿರಿವುದನ್ನು. ವ್ಯಕ್ತಿ ಅಂಥ ತ್ರಿಶಂಕು ಸ್ಥಿತಿಯಲ್ಲಿದ್ದಾಗಿನ ಭಾವನೆಗಳನ್ನು ರಿಯಲಿಸ್ಟಿಕ್ ಅಗಿ ಬರೆದು ಕಥೆಗೆ ಧಾಮಿ೯ಕ ತಳಹದಿ ಬಂದಿದೆ ಎಂದ. ರೂಪಾ ಕುಲಕಣಿ೯ಯ ಅಪ್ಪ ರೋಟರಿಕ್ಲಬ್ಬಿನ ಮುಖ್ಯ ಸದಸ್ಯನಾಗಿರುವುದರಿಂದ ಮತ್ತು ಕಾಂಗ್ರೆಸ್ಸಿನಲ್ಲಿ ಬಹಳ ಓಡಾಡುವುದರಿಂದ ಅತ ಪಾರ್ಟಿಯಲ್ಲಿ ಆಡಿದ ಮಾತುಗಳು ಕಥೆಗೆ ರಾಜಕೀಯ ಬಣ್ಡ ತಂದಿದೆ ಎಂದ. ಆರ್ಥಿಕಸ್ಥಿತಿ ಮನುಷ್ಯನ ಭಾವನೆಗಳಲ್ಲಿ ಹೇಗೆ ಬದಲಾವಣೆ ತರುತ್ತದೆ; ಭಾರತ ಪಾಶ್ಚಾತ್ಯೀಕರಣದತ್ತ ವಾಲಿರುವಾಗ ಹೇಗೆ ತುಮುಲವೆಳುತ್ತದೆ; ಹದಿನೆಂಟು ವರ್ಷಗಳಿಂದ ಬ್ರಾಹ್ಮಣ್ಯದಲ್ಲಿ ಬಂಧಿತನಾದ ವ್ಯಕ್ತಿ ಬಿಡುಗಡೆ ಹೊಂದಿದಾಗ ಹೇಗೆ ಕಾಮಜಾಗೃತಿ ಉಂಟಾಗುತ್ತದೆ ಎಂಬುದು ಕಥೆಯಲ್ಲಿ ಬಂದಿರುವುದನ್ನು ವಿವರಿಸಿದ. ಮುಂದಿನ ಬರವಣಿಗೆಯನ್ನು ಹೇಗೆ ತಿದ್ದಿಕೊಳ್ಳಬೇಕು, ಪ್ರತಿಮೆಗಳನ್ನು 

ಸಹಜವೆನ್ನುವಂತೆ ಪ್ರಯತ್ನಪೂವ೯ಕವಾಗಿ ತುರುಕಿ ಕಥೆಯ ಹರಹನ್ನು ಹೇಗೆ ಹಿಗ್ಗಿಸಬೇಕು (ಉದಾ: ರೂಪಾ ಕುಲಕರ್ಣಿಯ ಬರ್ತ್‌ಡೇ ದಿನವೇ ಕಥಾನಾಯಕನ ಬತ್೯ಡೇ ಇರುವುದು) ಎಂಬುದನ್ನು ಹೇಳಿದ. ನನ್ನಲ್ಲಿ ನಾನು ಉಬ್ಬಿಹೋದೆ. ಕಂಡವರಿಗೆಲ್ಲ ಸುದ್ದಿಹೇಳುತ್ತ ಸಾಗಿದೆ. ರಾತ್ರಿ ಚಾದರ ಹೊದ್ದು ಮಲಗಿಕೊರಿಡೇ ಕಥೆ ಓದಿದೆ. ಅವೇ ಪಾತ್ರಗಳು. ಹೆಸರುಗಳು ಮಾತ್ರ ಬೇರೆ . ಅವೇ ಘಟನೆಗಳು. ಸಮಾಧಾನವೆನಿಸಿ ಚಾದರ ಎಳೆದು ಮುಸುಕು ಹಾಕಿಕೊಂಡು ಕನಸು ಕಾಣತೊಡಗಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಹೆಸರು. ಚಿತ್ತಾರದ ನಂತರ ಕನ್ನಡದಲ್ಲಿ ಕಾಣಿಸಿಕೊಂಡ ಹೊಸ ಪ್ರತಿಭೆ ಎಂದೆಲ್ಲ. 

ಕದ ತಟ್ಟಿದ ಆವಾಜಿನಿಂದ ಎಚ್ಚರವಾದಾಗ ಇನ್ನೂ ಮಧ್ಯರಾತ್ರಿ. ಕತ್ತಲಲ್ಲಿ ಬಾಗಿಲು ತೆರೆಯುತ್ತಲೇ ಓರ್ವ ವೈಕ್ತಿ. ನನ್ನನ್ನು ತಳ್ಳಿಕೊಂಡೇ ಒಳಗೆ ಬಂದು ಕದ ಹಾಕಿದ್ಧೇ ಫಟೀರ್ ಎ೦ದು ಕಪಾಳಕ್ಕೆ ಹೊಡೆಯಿತು. ನಾನು ಏನಾಗುತ್ತಿದೆ ಎಂದುಕೊಳ್ಳುವಷ್ಪರಲ್ಲಿ ಪಕಡಿಗೆ ಇನ್ನೊಂದು ಹೊಡೆತ ಬಿತ್ತು. ‘ಅವ್ವಾSS’ ಎ೦ದು ಚೀರಿ ಕೆಳಕ್ಕೆ ಬಿದ್ಧೆ. ರೂಮ್ ಮೇಟುಗಳಿಗೆ ಎಚ್ಚರವಾಗಿ ಲೈಟು ಹಚ್ಚಿದರು. ಎದುರಿಗೆ ಮಿಲಿಂದ ನಿಂತಿದ್ದ. ಕಾಲರ್ ಹಿಡಿದು ಎತ್ತಿದವನೇ, `ಬಡ್ದಿಮಗನೇ. ನನ್ನ ಬಗ್ಗೆ ಕಥೇನಲ್ಲಿ ಬರೀತೀಯಾ? ನಾನು ಬಾರ್‌ಗೆ ಹೋಗ್ತೇನೆ. ಸಿಗರೇಟು ಸೇದ್ತೇನೆ ಎಂದು ಬರೀತೀಯಾ? ಬಿಎಫ್ ನೋಡ್ತೇನೆ ಅಂತೀಯಾ?`. ಪ್ರತಿ ಪ್ರಶ್ನೆಗೂ ಒ೦ದೊ೦ದು ಹೊಡೆತ. ಒದೆತ ಕೊಡುತ್ತಿದ್ದ. ರೂಮ್ ಮೇಟುಗಳಿಬ್ಬರೂ ಕಷ್ಟದಿಂದ ಬಿಡಿಸಿ ನಡೆದದ್ಧಾದರೂ ಏನೆಂದು ಕೇಳಿದರು.& `ನನ್ನನ್ನೇನು ಕೇಳ್ತೀಯಾ ಗುರು? ಕೇಳು ಈ ಸೂಳೆಮಗನ್ನ,` ಎಂದ. ಮಿಲಿಂದ ಕಾವ್ಯಾಳನ್ನು ಲವ್ ಮಾಡುತ್ತಿರಿವುದನ್ನು ಬರೆದಿದ್ದೆ. ಅವಳನ್ನು ಮೆಚ್ಚಿಸಲು ಪಾರ್ಟಿಯಲ್ಲಿನ ಅವನ ಧರ್ತಿ ಬಗ್ಗೆ ಬರೆದಿದ್ದೆ. ಅವಳನ್ನು ಅತ ಸಂಜೆ ಮಾತನಾಡಿಸಲು ಹೋದಾಗ (ಇಬ್ಬರೂ ಒ೦ದೇ ಊರಿನವರು) ನಾನು ಬರೆದ ಕಥೆ ವಿಷಯ ಹೇಳಿ ಛೀಮಾರಿ ಹಾಕಿ ಕಳಿಸಿದಳೆಂದು ಮಿಲಿಂದ ಕಿರುಚಾಡಿದ. ನಾನು `ಸಾರಿ`, ಎಂದು ಹಲುಬಿ ಆತನನ್ನು ಸಮಾಧಾನ ಮಾಡುವಷ್ಟರಲ್ಲಿ ಸಾಕಾಯಿತು.

ಮುಂಜಾನೆ ಎದ್ದಾಗ ಇನ್ನೂ ಹೊಟ್ಟೆ ನೋಯುತ್ತಿತ್ತು ತಲೆ ತುಂಬ ಕಥೆಯ ಪಾತ್ರಗಳು ಒದೆಯುತ್ತಿದ್ದವು. ಕಾಲೇಜಿನಲ್ಲಿ ಕೆಲವರು ಕಂಗ್ರಾಟ್ಸ್ ಹೇಳಿದರು. ಕೆಲವರು ನನ್ನನ್ನು ಹೊಸ ವಿಚಿತ್ರವಾಗಿ ದಿಟ್ಟಿಸಿದರು. ನನ್ನ ಕಥೆ ಛಾಪಿಸಲ್ಪಟ್ವ ಸುದ್ದಿ ಬಹಳ ವೇಗವಾಗಿ ಹಬ್ಬಿತ್ತು. ನನಗೆ ಪಿರಿಯಡ್ನಲ್ಲಿ ಕೂಡಲಾಗದೇ ಗಂಗಾಮಾ೦ಶಿ ಮನೆಗಾದರೂ ಹೋಗೋಣವೆಂದು ಬಸ್ ಸ್ಟಾಪಿಗೆ ಬಂದೆ. ಎದುರಿನಲ್ಲಿ ಮಾಲತಿ ನಾಕಾರು ಗೆಳತಿಯ ರೊ೦ದಿಗೆ ನನ್ನ ಕಡೆಗೇ

ಬಂದಳು. ನನ್ನ ಬನಿಯನ್ನೆಲ್ಲ ಹಸಿಯಾಯಿತು. ಬಂದವಳೇ ಇರಿಗ್ಲಿಷಿನಲ್ಲಿ ನನ್ನನ್ನು ತರಾಟೆಗೆ ತೆಗೆದುಕೊರಿಡಳು. ಅವಳ ಟೀಶಟ್೯ ಒಳಗೆ ಇಣುಕಿರುವುದನ್ನು ಬರೆದಿರುವುದನ್ನು ಹೀನಾಯವಾಗಿ ಬಯ್ದು (ಇಣುಕಿದರೆ ತಪ್ಪಿಲ್ಲವಂತೆ, ಬರೆಯಬಾರದಂತೆ), ನನ್ನನ್ನು ಕಾಗದದ ಕಾಮುಕ ಎಂದರಚಿ, ಸ್ಯಾಡಿಸ್; ಎಂದು ಬಿರುದು ಕೊಟ್ಟಳು. ನಾನು ಹತ್ತು ಸರ್ತಿಯಾದರೂ ಸಾರಿ ಎಂದಿರಬಹುದು. ಅಂತಹುದರಲ್ಲಿ ಅರುಣ, ವೆಂಕಟೇಶ ರಾಜು, ಧಾರವಾಡಕರ್. ಶೆಟ್ವ. ಪ್ರಕಾಶ್ ತ್ರಿವೇದಿ ಬಂದು ಸೇರಿಕೊಂಡರು. ಒಬ್ಬೊಬ್ಬರು ಒ೦ದೊ೦ದು ರೀತಿಯಲ್ಲಿ ಬಯ್ಡರು,`ಕಾಮಣಿ ಅದವರಿಗೆ ಜಗತ್ತೆಲ್ಲಾ ಹಳದಿ`, `ಥತ್ ತೇರಿಕೇ, ನೀ ಯಾವ್ ಗಾ೦ಧಿ ಲೇ, ರಾತ್ರಿ ಚೂಡಿದ ಇಂಗ್ಲಿಷ್ ಸಿನಿಮಾ ಹೇಗಿತ್ತೋ”, “ಕಿಸೆನ್ಯಾಗ ನಾಕ ಪೈಸಾ ಇರಲಿಕ್ರೂ ಗೋಮಾಜಿಕಾಪ್ಸೆನ ಗತೆ ಹೆ೦ಗ ನಿಂತಾನ ನೋಡ್ರ್ಯೋs” ಎಲ್ಲ ಚುಚ್ಚುತ್ತಿದ್ಡವು. ನಾನು ಪೂರ ತತ್ತರಿಸಿ ಹೋದೆ. ಎಲ್ಲರೂ ತಾವು ಎಷ್ಟು ಒಳ್ಳೆಯವರು ಎಂದು ಉದಾಹರಣೆ ಸಮೇತ ಸಿದ್ಬಮಾಡಿದರು. ನಾನೊಬ್ಬನೇ ಈ ಸಮಾಜದಲ್ಲಿ ಕೊಳೆತು ನಾರುತ್ತಿರುವವ ಎಂದು ಹಂಗಿಸಿದರು. ರೂಪಾ ಕುಲಕರ್ಣಿ ಶ್ರೀಮಂತಳಾದರೂ ಆಕೆಗೆ ಸೊಕ್ಕಿಲ್ಲದಿದ್ದೂರಿಂದಲೇ 

ನನ್ನಂಥವನನ್ನೂ ಪಾರ್ಟಿಗೆ ಕರೆದಳು ಎಂದರು. ಆಕೆಗೆ ನನ್ನ ಕಥೆಯ ವಿಷಯ ತಿಳಿದು ಮನಸ್ಸಿಗೆ ಬೇಸರವಾಗಿಯೇ ಕಾಲೇಜಿಗೆ ಬಂದಿಲ್ಲವೆಂದು ಹೇಳಿ. ಪಾಪ. ಆಕೆ ಎಷ್ಟು ನೊಂದುಕೊಂಡಿರುವಳೋ ಎಂದು ಕನಿಕರ ವ್ಯಕ್ತಪಡಿಸಿದರು. ಅಷ್ಟರಲ್ಲಿ ರೂಮ್-ಮೇಟ್ ಮಾಧವ. ದೀಪಕ. ಬಾಜು ಖೋಲಿ ಶಿವರಾಮ ಬಂದಾಗಲೇ ನನಗೆ ಇವರಿಂದ ಬಿಡುಗಡೆ ಸಿಕ್ಕಿತು. ನನ್ನನ್ನು ಗಾಢ ಮೌನ ಆವರಿಸಿತ್ತು. ಮೂವರೂ ಖುಷಿಯಲ್ಲಿ ಜೋಕು ಹೂಡಯುತ್ತ ಪಾರ್ಟಿಗೆ ದು೦ಬಾಲು ಬಿದ್ದರು. ಬಸ್ಸು ಬಂದಾಗ ಹತ್ತಿ ‘ಐಸ್‍ಲ್ಯಾಂಡಿ’ಗೆ ಹೋಗಿ ಎರಡು ತಾಸು ಕೂತು ತಿಂದು. `ಹಿ೦ಗs ಮ್ಯಾಲಿಂದ ಮ್ಯಾಲೆ ಕತೀ ಬರಿ. ಪಾರ್ಟಿ ಮೇಲೆ ಪಾರ್ಟಿ’ ಎಂದು ಹೇಳಿ. ಕಂಗ್ರಾಟ್ಸ್; ಹೇಳಿದರು. ನೂರಾಹದಿನೈದು ರೂಪಾಯಿ ಬಿಲ್ಲು ತೆತ್ತು ಖಾಲಿ ಕಿಸೆ ಹೊತ್ತು ಖೋಲಿಗೆ ಬಂದಾಗ. ಜೀವನದಲ್ಲಿ ಎಲ್ಲ ಖಾಲಿ ಖಾಲಿ ಎನಿಸಿ ಹಾಸಿಗೆ ಮೇಲೆ ಬಿದ್ಧುಬಿಟ್ಟೆ. 

ಎದ್ದಾಗ ಚಲೋ ಬಿಸಿಲು ಏರಿ ಕಿಟಕಿಯಿಂದ ಸೀದಾ ನನ್ನ ಮಾರಿಗೇ ಬಡಿಯುತ್ತಿತ್ತು. ಸ೦ಡಾಸಕ್ಕೆ ಹೋಗಿ ಬರುವುದರೊಳಗಾಗಿ ಮತ್ತೊoದು ಆಕಸ್ಮಿಕ ನನ್ನನ್ನು ಕಾದಿತ್ತು. `Grandmother Serious; start immediately` ಟೆಲಿಗ್ರಾಂ. ನಾನಾಗಲೇ ಯೋಚನೆ ಮಾಡುವ ಸ್ಥಿತಿಯನ್ನು ಮೀರಿ ಬಿಟ್ಟಿದ್ದೆ, ಶೂನ್ಯ ಮನಸ್ಸಿನಿಂದ ಬಾಗಲಕೋಟೆ ಬಸ್ಸುಹಿಡಿದೆ.

ಮನೆಯೊಳಗೆ ಹೆಜ್ಜೆ ಇಡುತ್ತಿದ್ದಂತೆ ಕಿಟ್ಟಕ್ಕತ್ಯಾ ನನ್ನನ್ನು ನೋಡಿ ಅಳಲು ಆರಂಭಿಸಿದಳು. ಅಪ್ಪನ ಜೊತೆ ಹೊಲದ ವಿಷಯದಲ್ಲಿ. ಅಜ್ಜಿಯಿಂದ ಆಭರಣ ಕಿತ್ತುಕೊಂಡ ವಿಷಯದಲ್ಲಿ ಜಗಳಾಡಿದ ವೆಂಕುಕಾಕಾ ಎಂದೂ ಹಣಿಕಿ ಹಾಕದಿದ್ದವ ಮೂಲೆಹಿಡಿದು ಬಾಯಿಗೆ ಅಡ್ಡ ಪಂಜೆ ಹಿಡಿದುಕೊಂಡು. ಕಣ್ಣುತುಂಬಿಕೊಂಡು ಕೂತಿದ್ದ. ಅಪ್ಪ ಸ್ಥಿತಪ್ರಜ್ಞನಂತೆ ಮೌನದರಿಸಿದ್ದ. ಅವ್ವ ಗರಬಡಿದವಳಂತೆ ಅಧೀರಳಾಗಿ ನಿಂತಿದ್ದಳು. ಅಜ್ಜಿಗೆ ಬಿಪಿ ಸಿಕ್ಕಾಪಟ್ಟೆ ಜಾಸ್ತಿಯಾಗಿ ಮತ್ತೆ ಲಕ್ವಾ ಹೊಡೆಯಿತಂತೆ. ಅನಂತರ ಎರಡು ದಿನಗಳಲ್ಲಿ ಮಿದುಳಿನಲ್ಲಿ ರಕ್ತಸ್ರಾವವಾಯಿತಂತೆ. ಸಾಯುವುದಕ್ಕೆ ಮುಂಚೆ ಅಜ್ಜಿ ನನ್ನನ್ನು ಸನ್ನೆಮಾಡಿ ಕೇಳಿದಳಂತೆ. ಕಿಟ್ಟಕ್ಕತ್ಯಾ ಎಲ್ಲವನ್ನು ಅಳುತ್ತಲೇ ಹೇಳಿದಳು. ಅವ್ವನನ್ನು ಹಿಡಿದುಕೊಂಡಾಗ ಆಕೆ ನನ್ನ ತಲೆಬಳಸಿ ಆಳತೊಡಗಿದಳು. ಅಪ್ಪ ಒ೦ದು ಹನಿ ಕಣ್ಣೀರು ಹಾಕದೇ 

ಚಟ್ವದ ಸಿದ್ದತೆಯಲ್ಲಿ ತೊಡಗಿದ್ದ. ನಾನು ಕಥೆಯಲ್ಲಿ ನನ್ನ ಅಜ್ಜಿ ತೋರಿದ ದಪ೯ವಮ್ನ. ತನಗೆ ಲಕ್ವಾ ಹೊಡೆದಿದ್ದರೂ ಕ್ಯಾನ್ಸರಿನಿಂದ ಬಳಲುತ್ತಿರುವ ಅವ್ವನನ್ನು ಮಡಿಯ ಸಲುವಾಗಿ ದುಡಿಸಿಕೊಳ್ಳುತ್ತಿರುವ ಹೊಲಸು ಧಮಾ೯ಚರಣೆಯನ್ನು ಬರೆದದ್ದು ಈಗ ಅದು ಆಥ೯ ಕಳೆದುಕೊಂಡು ನನ್ನ ಮು೦ದೆ ನೇತಾಡತೊಡಗಿದಂತೆ ಈಗ ಅನ್ನಿಸುತ್ತಿದೆ. ಅಜ್ಜಿ ನಾನು ಬರೆದ ಕಥೆಯನ್ನು ಓದಿದ್ದರೆ ಸಾಯುವಾಗ ನನ್ನನ್ನು ನೋಡಲು ಹಾತೊರೆಯುತ್ತಿದ್ದಳೇ ಎಂಬ ಪ್ರಶ್ನೆ ಈಗ ನಿಲ್ಲುತ್ತಿದೆ. ಎದ್ದಾಗಿನಿಂದ ಹಾಸಿಗಗೆ, ಹೋಗುವವರೆಗೆ (ಒಮ್ಮೊಮ್ಮೆ ಮಲಗಿದ ಅನಂತರವೂ) ಕಾಟ ಕೊಟ್ಟ ಅತ್ತೆ ಸತ್ತಿದ್ದಕ್ಕಾಗಿ ಅಮ್ಮ ಬಿಕ್ಕಿ ಬಿಕ್ಮಿ ರೋದಿಸುತ್ತಿದ್ದಳು. ಅತ್ತೆ-ಸೊಸೆ ಸಂಬಂಧ ನಾನು ಊಹಿಸಿ ಬರೆದುದಕ್ಕಿಂತ ಭಿನ್ನವಾಗಿತ್ತೇ ಎಂದೀಗ ಭೀತನಾಗಿದ್ದೇನೆ.

ಎರಡು ದಿನ ಕಳೆಯುವಷ್ಟರಲ್ಲಿ ಎಲ್ಲರ ದುಃಖ ಎಷ್ಟೋ ಕಡಿಮೆಯಾಗಿತ್ತು. ವೆಂಕುಕಾಕಾ ಚುಟ್ಟಾ ಸೇದುತ್ತ ಪತ್ರಿಕೆ ಓದುತ್ತ ಕುಳಿತಿದ್ದ. ನನ್ನ ಕಥೆ ಅದರಲ್ಲೇ ಪ್ರಕಟವಾಗಿತ್ತು. ನನ್ನೆದೆ ಧಸಕ್ಕೆಂದಿತು. ಅದೇ ವೇಳೆಗೆ ವೆಂಕುಕಾಕಾ ಮಾರಿ ಇಷ್ಟಗಲ ಮಾಡಿ ನನ್ನನ್ನು ಕೂಗಿಯೇ ಬಿಟ್ಟ. “ಏನೋ ? ಈ ಕತೀ ನೀನ ಬರೆದದ್ದು ಹೌದಲ್ಲೋ ?”; ಎಂದು. ಹೌದೆಂದೆ. ಕಾಕು, ಕಿತ್ತಕ್ಕತ್ಯಾ, ಅಪ್ಪ, ಅವ್ವ, ಸುತ್ತಲಿದ್ದ ಎಲ್ಲರನ್ನೂ ವೆಂಕುಕಾಕಾ ಕೂಗಿ ಸುದ್ದಿ ಹೇಳಿದ. ದುಃಖದ ವಾತಾವರಣದಲ್ಲಿ ಸ್ವಲ್ಪ ಸಂತೋಷದ ಗಾಳಿ ಸೇರಿಕೊಂಡಂತೆ ಆಯಿತು. ಅವ್ವ, `ಏನೂಂತ ಬರೆದೀಯೋ?” ಎಂದಳು. `ನನ್ನೇನ ಕೇಳ್ತಿ? ಕತಿ ಓದಲಾ`, ಎಂದೆ. ನಾನು ಏನೆಂದು ಬರೆದಿದ್ದೇನೆ ಎನ್ನಬೇಕಿತ್ತು ಎಂದು ತೋಚದೇ ಹಾಗೆ ಹೇಳಿದೆ. ವೆಂಕುಕಾಕಾ ಜೋರಾಗಿಯೇ ಎಲ್ಲರೂ ಆತನನ್ನು ಸುತ್ತುವರಿದು ಕೂತಾಗ ಓದತೊಡಗಿದ, `ಕತಿ ಹೆಸರು: ರೂಪಾಕುಲಕರ್ಣಿ ಬರ್ತ್‌ಡೇ ಪಾರ್ಟಿ`. ಎಲ್ಲರೂ ಲಕ್ಷ್ಯಕೊಟ್ಟು ಕೇಳುತ್ತಿದ್ದರು. ನನಗೆ ಅಲ್ಲಿ ನಿಂತುಕೊಳ್ಳಲಾಗಲಿಲ್ಲ. ಎದ್ದು ಅಟ್ಟದ ಮೇಲೆ ಹೋದೆ. ನನ್ನೆದೆ ಡವಡವ ಹೊಡೆದುಕೊಳ್ಳುತ್ತಿತ್ತು. ದಿನಪೂರ್ತಿ ಮಡಿಯೆಂದು ಸಾಯುತ್ತ ಪಾರ್ಸಿ ಹೊಡೆದು ನಾರುತ್ತಿರುವ ಅಜ್ಜಿ, ಧರ್ಮವೆಂದು ಹಲುಬಿ ಕಣ್ಣೀರಿನಲ್ಲಿ ಅವ್ವನನ್ನು ನೆನೆಸುವ ಅಪ್ಪ, ತನೆಗೆ ಕ್ಯಾನಸರಾಗಿದ್ದರು ನಾಯಿಯಂತೆ ದುಡಿಯುವ ಅವ್ವ. ಮನೆಯ ಇಷ್ಟೆಲ್ಲ ತೊಂದರೆ ಗೊತ್ತಿದ್ದೂ ರೊಕ್ಕದ ಸಲುವಾಗಿ ಕೌರವರಂತೆ ಜಗಳಾಡಿ ದೂರವಾದ ಕಾಕಾ-ಎಲ್ಲವನ್ನೂ ಕಾಕಾ ಓದುತ್ತಿದ್ದ. ನಾನು ಮಾಲತಿಯ ಟೀಶರ್ಟ್ ಒಳಗೆ ಇಣುಕಿರುವುದನ್ನು ಎರಡೆರಡು ಸಲ ಓದಿದ. ಅವ್ವ ಅಳುತ್ತಿರುವುದು ಕೇಳಿಸಿತು. ಅಪ್ಪ ಅರಚತೊಡಗಿದ. `ಅಂವ ಬಂದರ ಬರ್ಲಿ. ಓದ್ಲಿಕ್ಕೆ ಅಂತ ಹುಬ್ಬಳ್ಳಿಗೆ ಕಳಿಸಿದ್ರ ನಮ್ಮ ಪಿಂಡಾ ಕಟ್ತಾನ ನಿನ್ನ ಮಗ`. ನಾನು ಅಟ್ಟದಲ್ಲಿ ಮಲಗಿಕೊಂಡಂತೆ ನಟಿಸುತ್ತಿದ್ದೆ. ಅಷ್ಟರಲ್ಲಿ ಪುಟ್ಟಿ (ವೆಂಕುಕಾಕಾನ ಆರು ವರ್ಷದ ಮಗಳು) ಅಟ್ಟದ ಮೇಲೆ ಬಂದು, ನನ್ನನ್ನು ನೋಡಿದವಳೇ, `ಇಂವ ಇಲ್ಲೇ ಮಲಗ್ಯಾನ, ನೋಡ ಬಾ`; ಎಂದಳು. ನನ್ನ ಸಿಟ್ಟು ನೆತ್ತಿಗೇರಿ ಎರಡು ಕೊಟ್ಟೆ, ಅವಳು ಜೋರು ದನಿ ತೆಗೆದು ಅಳತೊಡಗಿದಳು. ನಾನು ಅವಳನ್ನು ಎತ್ತಿಕೊಂಡವನೇ ಕೆಳಗಿಳಿದು ಬಂದುಬಿಟ್ಟೆ. 

ಅವ್ವ ಮೂಗಿಗೆ ಸೆರಗು ಮುಚ್ಚಿಕೊಂಡು ಅಳುತ್ತಿದ್ದಳು. ವೆಂಕುಕಾಕಾ ದುರುಗುಟ್ಟಿಕೊಂಡು ನನ್ನನ್ನೇ ನೋಡಿತ್ತಿದ್ದ. ಪುಟ್ಟಿ ಒಮ್ಮೆಲೇ ಅಳು ನಿಲ್ಲಿಸಿದಾಗ ಎಲ್ಲ ನಿಶಬ್ದವಾಯಿತು. ನಾನು ಗಪ್ಪು ನಿಂತಿದ್ದೆ. ಅಪ್ಪ ಪತ್ರಿಕೆಯನ್ನು ಮಾರಿಯ ಮೇಲೆ ಬೀಸಿ ಒಗೆದು, `ಬರೀಪಾ, ಇನ್ನೂ ಏನೇನ ಬರೆದು ಎಲ್ಲರ ಮಾನ ಹರಾಜು ಹಾಕಬೇಕಂತೀ ಹಾಕಿಬಿಡು,` ಎಂದ. ನಾನು ಬಗ್ಗಿ ಪತ್ರಿಕೆಯನ್ನೆತ್ತಿಕೊಂಡು ಗಟ್ಟಿಯಾಗಿ ಹಿಡಿದು ಕೊಂಡೆ. `ನಿಂಗ ರೊಕ್ಕ ಕಡಿಮೇಬಿದ್ರ ಕಾಗದ ಬರ್ದು ತಿಳ್ಸೊ. ಕತಿ ಒಳಗ ಬರ್ದು ಯಾಕ ನಮ್ಮನಿ ರಂದಿ ಎಲ್ಲಾ ಹೊರಗ ಚೆಲ್ತಿ?` ಎಂದು ಅವ್ವ ಗಳಗಳನೇ ಅಳಲು ಶುರು ಮಾಡಿದಳು. ಅಪ್ಪ ಅವ್ವನತ್ತ ಸಿಟ್ಟಿನಿಂದ ತಿರುಗಿ, `ಅಂವಗೆಲ್ಲಿ ರೊಕ್ಕ ಕಡಿಮಿ ಬೀಳ್ತಾವ? ತಿಂಗಳ ಕಡೀ ಆಖ್ಯರಿದ್ರೂ ಇಂಗ್ಲೀಷ್ ಸಿನಿಮಾ ನೋಡ್ತಾನ, ಅದೂ ಹೊಲಸ,` ಎಂದು ಬಯ್ದು, `ಎಂಥಾ ಮಗನ್ನ ಹಾಡದ್ಯ? ನಮ್ಮನಿ ಗೋಪುರಕ್ಕ ಕಳಸಾ ಇಡ್ತಾನ,` ಎಂದು, ನನ್ನತ್ತತಿರುಗಿ, `ಏ ರಂಡೆಗಂಡ, ಹೆತ್ತ ಹೊಟ್ಟಿಗಿ ಬೆಂಕಿ ಹಾಕ್ಲಿಕ್ಕ ಯಾಕ ಹುಟ್ಟಿದ್ಯೋ? ಹೋಗ, ಯಾವಕಿದರ ಅಂಗಿ ಒಳಗ ಹಣಿಕಿ ಹಾಕಹೋಗ, ಯಾವ್ದಾರ ಇಂಗ್ಲೀಷ್ ಸಿನಿಮಾ ನೋಡ ಹೋಗ,` ಎಂದು ರಭಸದಿಂದ ನನ್ನತ್ತ ಬಂದು, ಹಲ್ಲನ್ನು ಕಟಕಟನೇ ಕಡಿದು, `ಸಾಯ್, ಹಾಳಾಗು, ಎಲ್ಲೆರೆ ಸಾಯ್ ಹೋಗು,` ಎಂದು ನನ್ನನ್ನು ಕಂಡಕಂಡಲ್ಲಿ ಒದೆಯತೊಡಗಿದ. ಪುಟ್ಟಿ ದೊಡ್ಡ ದನಿ ತೆಗೆದು ಆಳಹತ್ತಿದಳು. ಅಪ್ಪನ ಆವೇಶವೆಲ್ಲ 

ಮುಗಿದ ಮೇಲೆ ನಿಂತಲ್ಲಿಯೇ ಕುಸಿದ, `ನಾ ಪಾಲಸೋ ಧರ್ಮಕ್ಕ ಅರ್ಥ ಇಲ್ಲಂತ, ನಾ ಗಂಟೇ ಬಾರ್ಸೊದು ಮಗ್ಗಲ ಮೇನಿಯವ್ರು ಕೇಳಲಿ ಅಂತ, ಏನ, ನೀ ಅತ್ತೀ ಸೇವಾ ಮಾಡಿದ್ದು ನನ್ನ ಹೆದರಿಕಿಗಂತ, ನಾ ನಿನ್ನ ಬೆಳೀಲಕ್ಕೆ ಬಿಡಲಿಲ್ಲಂತ,` ಅಪ್ಪ ಹಲುಬತೊಡಗಿದ.

ನಾನು `ಅಪ್ಪಾ` ಎನ್ನಲು ಬಾಯಿ ತೆಗೆದೆ. ಆದರೆ ಗಂಟಲಿನಿಂದ ಯಾವುದೇ ಶಬ್ದ ಹೊರಬರದೇ ಮತ್ತೆ ನಿಶ್ಚಲನಾದೆ. ಅವ್ವ ಅಳುತ್ತಲೇ, `ಛಲೋ ಬಿರುದು ಕೊಟ್ಯಲ್ಲೋ, ಪೈಸಾ ಪೈಸಾ ಗಳಿಸಲಿಕ್ಕ ಅವ್ರು ಎಷ್ಟು ಬೆವರ ಹರಸ್ತಾರಂತ ನಿಂಗೇನ ಗೊತ್ತೂ? ನಿನ್ನ ದೇವ್ರು ಎಂದೂ ಕ್ಷಮಿಸೂದಿಲ್ಲ,`ಎಂದಳು. `ಶ್ಯಾಣ್ಯಾ, ಶ್ಯಾಣ್ಯಾ ಅಂತ ಎಲ್ಲರೂ ಅಂತಿದ್ರು. ರಾಯರ ಕುದರಿ ಕತ್ತಿ ಆತು,` ಎಂದಳು ಕಾಕು. ನನಗೀಗ ಸುಮ್ಮನಿರಲಾಗಲಿಲ್ಲ. `ನೀವು ಸುಮ್ಮ ಕೂಡ್ರೀ, ಕಾಕು, ನಮ್ಮೆಪ್ಪ ಅವ್ವಾ ನಂಗ ಬೇಕಾದ್ದ ಬಯ್ತಾರ, ನೀವಡ್ಡ ಬಾಯಿ ಹಾಕಬ್ಯಾಡ್ರಿ,` ಎಂದರಚಿದೆ. ಅಪ್ಪ ಸಿಟ್ಟಿನಿಂದ,`ಯಾಕ, ದೊಡ್ಡವರಿಗೆ

ತಿರತಿರಗಿ ಮಾತಾಡ್ಲೀಕತ್ತಿ ? ಮರ್ತಬಿಟ್ಟೀನ ನಾ ಹೇಳಿದ್ದು?` ಎಂದು, ಒಂದರೆ ಕ್ಷಣ ಬಿಟ್ಟು, `ನೀ ಭಾಳ ಓದಿದವಲ್ಲಾ, ನಿನ್ನ ಮುಂದ ನಾ ಬುದ್ದಿ ಹೇಳ್ತೀನಲ್ಲಾ, ನಾ ಎಂಥಾ ಹುಚ್ಚ. ನೀ ಭಾಳ ದೊಡ್ಡವ ಆಗಿ ನೋಡು, ದೊಡ್ಡ ದೊಡ್ಡ ಪುಸ್ತಕ ಓದಿ , ಕತೀ ಬರೀತಿ. ನಿನ್ನ ಮುಂದೆ ನಾವೆಷ್ಟರವರಪ್ಪಾ, ದೊಡ್ಡಮನಷ್ಯಾ,` ಎಂದು ಹಂಗಿಸಿದ. ನನ್ನ ಕಟ್ಟಿದ ಗಂಟಲು ಕಣ್ಣೀರಾಗಿ ಹರಿಯಿತು. ನಾನು ಅಳಲಿಕ್ಕೆ ಶುರುಮಾಡಿದೆ. ಅಪ್ಪ, ಅವ್ವ, ಕಾಕಾ, ಕಾಕು ಎಲ್ಲ ಕೂಡಿ ಬಯ್ಯತೊಡಗಿದರು. ಅಜ್ಜಿ ಅವ್ವನನ್ನು ಮಗಳಂತೆ ನೋಡಿ ಕೊಳ್ಳುತ್ತಿದ್ದುದನ್ನು, ಅಪ್ಪನಿಗೆ ನನ್ನ ಮೇಲಿರುವ ಆಗಾಧ ಪ್ರೀತಿಯನ್ನು, ನನ್ನನ್ನು ಉಳಿದವರ ಮುಂದೆ ಹೊಗಳುವುದನ್ನು, ನನ್ನ ಪತ್ರ ಬಂದಾಗ ಓದೊಂದು ಅಕ್ಷರವನ್ನು ಓದಿ ಓದಿ ಆನಂದಿಸುವುದನ್ನು ಅವ್ವ ಬಿಕ್ಕಿ ಬಿಕ್ಕಿ ಆಳುತ್ತ ಹೇಳಹತ್ತಿದಳು. ಅಪ್ಪನಿಗೆ ಆವೇಶ ತಡೆಯಲಾಗಲಿಲ್ಲ. ನನ್ನನ್ನು ದರದರ ಎಳೆದವನೆ, `ಎಲ್ಲೆರೆ ಹಾಳಾಗಿ ಹೋಗು,` ಎಂದು 

ದಬ್ಬಿ, ಬಾಗಿಲನ್ನು ಹಾಕಿಕೊಂಡ, ಮನೆಯ ಅಜುಬಾಜು ಮಂದಿ ಸುತ್ತಲೂ ಮುಕುರಿದ್ದರು. ನಾನು ತೆಲೆತಗ್ಗಿಸಿ ಕೈಯಲ್ಲಿದ್ದ ಪತ್ರಿಕೆಯನ್ನು ನೋಡುತ್ತ ನಡೆಯಹತ್ತಿದೆ. ಕಿಲ್ಲಾದ ಸಂದಿಯನ್ನು ದಾಟಿ ಹೊರಟೆ. ದುಃಖಿಸಿ ಅಳುತ್ತ ಕತ್ತೆಹೊಳೆಗೆ (ಘಟಪ್ರಭಾ ನದಿ) ಬಂದು ಕೂತು ಎಲ್ಲ ದುಗುಡವನ್ನೂ ಹರಿಸಿಬಿಟ್ಟೆ. 

ಈಗಲೂ ಅಲ್ಲೇ ನದಿ ದಂಡೆ ಮೇಲೆ ಕೂತಿದ್ದೇನೆ. ಎಷ್ಟು ಅತ್ತರೂ ಸಮಾಧಾನವಾಗಲಿಲ್ಲ. ಎಲ್ಲವನ್ನೂ ಒಮ್ಮೆಲೆ ಕಕ್ಕಿಬಿಡಬೇಕು ಎನಿಸಿತು. ಅರ್ಧತಾಸು ಸುಮ್ಮನೆ ಕೂತು, ಮನಸ್ಸನ್ನು ತಹಬದಿಗೆ ತಂದುಕೊಂಡು, ಒಂದೊಂದೆ ಘಟನೆಗಳನ್ನು ಜೋಡಿಸಿಕೊಂಡು ಸಿದ್ದನಾದೆ. ನನ್ನ ಮುಂದೆ ನೀವು ಕೂತಿದ್ದೀರೆಂದು ಕಲ್ಪಿಸಿಕೊಂಡು ಎಲ್ಲವನ್ನೂ ಒಂದೂ ಬಿಡದೇ ಅದೇ ಪತ್ರಿಕೆಯ ಖಾಲಿ ಜಾಗದಲ್ಲೆಲ್ಲ ಬರೆದಿದ್ದೇನೆ. ಕಕ್ಕಬೇಕೆನಿಸಿದ್ದನ್ನೆಲ್ಲವನ್ನೂ ಕಕ್ಕಿದ್ದರೂ ಇನ್ನೂ ಸಮಾಧಾನವಾಗೆಲ್ಲ. ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ಅನುಭವದ ಜಾಡು ಹಿಡಿದು ಪ್ರಾಮಾಣಿಕವಾಗಿ ಬರೆಯಬೇಕೆನ್ನುವ ಹಟ ತೊಟ್ಟು ಕಥೆ ಬರೆದು ನಾನು ಸಾಧಿಸಿದ್ದಾದರೂ ಏನು ಎಂದು ಅನಿಸುತ್ತಿದೆ. ನನ್ನ ಕಥೆ ಮೆಚ್ಚಿ ಒಂದೆರಡು ಕಾಗದಗಳು ಬರಬಹುದು. ಸತ್ತ ಅಜ್ಜಿಯ ನಂಬಿಕೆಗಳು ನನ್ನನ್ನು ದಿನವೂ ಪೀಡಿಸುತ್ತವೆ. ಅಪ್ಪ, ಅವ್ವನ ನಂಬಿಕೆಗಳು, ಪರಿಕಲ್ಪನೆಗಳು ನನ್ನನ್ನು ಭೂತದಂತೆ ಬೆನ್ನು ಹತ್ತುತ್ತವೆ. ಇನ್ನು ಮುಂದೆ ಅಪ್ಪ, ಅವ್ವ ನನ್ನನ್ನು ಮಗನ ಹಾಗೆ ಪ್ರೀತಿಸುವುದೇ ಇಲ್ಲ, ಅಪರಿಚಿತನಂತೆ ನಿರುಕಿಸುತ್ತಾರೆ. ಮತ್ತೆ ನಾನು ಕಾಲೇಜಿಗೆ ಹೋದ ಕೂಡಲೇ ರೂಪಾ ಕುಲಕರ್ಣಿ ತರಾಟೆಗೆ ತೆಗೆದುಕೊಳ್ಳುತ್ತಾಳೆ, ಎಲ್ಲ ಗೆಳೆಯರಿಗೂ ನಾನು ಅಪರಿಚಿತನಾಗುತ್ತೇನೆ. ನನಗೆ ಒಂದು ಥರ ಹುಚ್ಚು ಹಿಡಿದರೂ ಹಿಡಿಯಬಹುದು. ಏಕಾಂಗಿಯಾಗಿ ಖೋಲಿಯಲ್ಲಿ ಗೋಡೆಯನ್ನು ನೋಡುತ್ತಾ ಗಪ್ಪು ಕೂಡುವ ಕೆಲಸ ನನ್ನ ದಿನಚರಿಯಾಗಬಹುದು. ಇದನ್ನೆಲ್ಲ ನಾನು ಕಥೆ ಬರೆದು ಪ್ರಕಟಿಸುವುದಕ್ಕೆ ಮುಂಚೆ ಯೋಚಿಸಬೇಕಾಗಿತ್ತು, ಅಲ್ಲವೇ ?

ಅಯ್ಯೋ, ಆಗಲೇ ಸೂರ್ಯ ಮುಳುಗಿಯೇ ಹೋದ. ಮನೆಯಿಂದ ಬಿಟ್ಟಾಗ ಮಧ್ಯಾಹ್ನದ ಹೊತ್ತು. ಇನ್ನೂ ಯಾರ ಊಟವೂ ಆಗಿಲ್ಲ. ಅವ್ವ ಅಳುತ್ತ , ನನ್ನ ದಾರಿ ಕಾಯುತ್ತಾ ಏನೇನೋ ಕೆಟ್ಟ ಯೋಚನೆ ಮಾಡುತ್ತ ( ನಾನು ಜೀವಕ್ಕೇ ಅಪಾಯ ತಂದುಕೊಂದನೆಂದು ಅಥವಾ ಮನೆಬಿಟ್ಟು ಓಡಿ ಹೋದೆನೆಂದು) ಕೂತಿರಬಹುದು. ಅಪ್ಪ ಕಾಲು ಸುಟ್ಟ ಬೆಕ್ಕಿನಂತೆ ಪರದಾಡುತ್ತ, ತನ್ನನ್ನು ಶಪಿಸಿ ಕೊಳ್ಳುತ್ತ ಊಟ ಮಾಡದೇ ಪರಿತಪಿಸುತ್ತಿರಬಹುದು. ಎಲ್ಲರೂ ಹುಚ್ಚು ಹಿಡಿದವರ ಹಾಗೆ ನಾನು ಹೋದ ದಾರಿ ಕಾಯುತ್ತ ಕೂತಿರುತ್ತಾರೆ, ಇನ್ನು ತಡಮಾಡುವುದಿಲ್ಲ ಹೋಗಿಬರುತ್ತೇನೆ.