ಆ೦ಗ್ಲ ನರಿಗಳು – ಸಿ. ಹೆಚ್. ಸುಶೀಲೇಂದ್ರ ರಾವ್

♥ ∗ಅನಿವಾಸಿಗೆ ಐದು ವರ್ಷದ ಹರ್ಷ ∗♥

(ಭಾರತೀಯರಿಗೆ ತಮ್ಮನ್ನು ಎರಡು ಶತಮಾನ ಆಳಿದ ಬ್ರಿಟಿಷರು ಠಕ್ಕ ನರಿಗಳಂತೇ ಕಂಡಿದ್ದರೆ ಅಚ್ಚರಿಯಿಲ್ಲ. ಆದರೆ 53 ವರ್ಷಗಳ ಕಾಲ ಇಂಗ್ಲೆಂಡಿನಲ್ಲೇ ನೆಲಸಿರುವ ಸುಶೀಲೇಂದ್ರ ರಾವ್ ರ ಗಾಳಕ್ಕೆ ಬ್ರಿಟಿಷರ ಹಲವು ’ನರಿ ’ಗಳು  ಪದಗಳ ’ಮೀನಿಂ’ಗುಗಳಾಗಿ ಸಿಕ್ಕಿ ಬಿದ್ದು ಪದ್ಯರೂಪದಲ್ಲಿ ಮಿದುಳಿನಲ್ಲಿ ಮಿಂಚು ಹರಿಸುತ್ತವೆ.

ಇದೇ ಬಗೆಯ  ಒಂದು ಪ್ರಯತ್ನ ವಾಟ್ಸಾಪ್ ನಲ್ಲಿ ಹರಿದಾಡಿದ ನೆನಪಿದೆ. ಆದರೆ, ಅದರ ಜೊತೆಗೆ  ಒಂದಷ್ಟು ಕಥೆ, ಮಜಾ ಮತ್ತು ಮೋಜನ್ನು ಹರಿಸಿರುವ ಕವಿಗಳು ತಮ್ಮ ಬದುಕಿನುದ್ದಕ್ಕೂ  ಉಳಿಸಿಕೊಂಡ ಮಾತೃ ಭಾಷೆ ಮತ್ತು ಸಂಸ್ಕೃತಿಯ ಬೆಳಕಲ್ಲಿ ಇಲ್ಲಿನವರ  ಭಾಷೆಯ ಒಂದು ಸಾಮಾನ್ಯ  ಅಂತ್ಯಪ್ರತ್ಯಯವನ್ನು ಕನ್ನಡದ ಕನ್ನಡಕ ಹಾಕಿಕೊಂಡು ಅವಲೋಕಿಸಿದ್ದಾರೆ.

ಇಂಗ್ಲೀಷು ಭಾಷೆಯಲ್ಲಿ 26 ಅಕ್ಷರಗಳಿದ್ದರೆ ಅದರ ಜೊತೆಯಲ್ಲಿ 26 ಸಾಮಾನ್ಯ ಅಂತ್ಯ ಪ್ರತ್ಯಯಗಳಿವೆ. ಅದರ ಜೊತೆಯಲ್ಲಿ ಒಂದೇ ರೀತಿಯಲ್ಲಿ ಕೇಳಿಸುವ ಆದರೆ ಬೇರೆ ಬೇರೆ ಅರ್ಥಗಳಿರುವ ಶಬ್ದಗಳಿವೆ  ( HOMONYMS) ಅದರಂತೆ ಒಂದೇರೀತಿ ಕೇಳಿಸುವ ಆದರೆ ಬೇರೆ ಬೇರೆ  ಅಕ್ಷರ ಜೋಡಣೆಯ ಪದಗಳಿವೆ (HOMOPHONES).ಇವೆಲ್ಲದರ ಜೊತೆ  ಒಂದೇ ಅಕ್ಷರ ಜೋಡನೆಯಿದ್ದು ಬೇರೆ ಬೇರೆ ಅರ್ಥಕೊಡುವ ಪದಗಳೂ ಇವೆ (HOMOGRAPHS) ಇವೆಲ್ಲ ಯಾವುದೇ ಇತರೆ ಭಾಷಿಗರಿಗೆ ಕೆಲವೊಮ್ಮೆ ಅಚ್ಚರಿಯ ಜೊತೆ ತಲೆನೋವಾಗುವುದು ಕೂಡ ನಿಜ. ಈ ಗ-ಪದ್ಯ ದಲ್ಲಿ ಕವಿಗಳು  ’ನರಿ ’ಯಿಂದ ಕೊನೆಯಾಗುವ ಪದಗಳ ಬೇಟೆಯಾಡಿ ಅನಿವಾಸಿಯ ಓದುಗರಿಗೆ  ಕನ್ನಡದಲ್ಲಿ ಅರ್ಥಗಳ ಊಟ ಬಡಿಸಿದ್ದಾರ.- ಸಂ)

  ಪರಿಚಯ

ಸಿ. ಹೆಚ್. ಸುಶೀಲೇಂದ್ರ ರಾವ್ ಅನಿವಾಸಿಯ ಪರಿಚಿತ  ಬರಹಗಾರರು. ದಾವಣಗೆರೆಯಲ್ಲಿ ಇ೦ಜನೀಯರಿ೦ಗ್ ಪದವಿಯವರೆಗೆ ವಿದ್ಯಾಭ್ಯಾಸ  ಮಾಡಿದ ಇವರು  4 ವಷ೯ ಕರ್ನಾಟಕ ಪಿ.ಡಬ್ಲು.ಡಿಯಲ್ಲಿ ಕೆಲಸ ಮಾಡಿದರು. ನಮ್ಮಲ್ಲಿ ಕೆಲವರು ಹುಟ್ಟುವ ಮುನ್ನವೇ  ಅಂದರೆ 1966 ರಲ್ಲಿ  ಇಂಗ್ಲೆಂಡಿಗೆ ಪ್ರಯಾಣ  ಬೆಳೆಸಿದ ಇವರು ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿದವರು. ಮ್ಯಾಕಲ್ಸ ಫೀಲ್ಡ್   ಕೌನ್ಸಿಲ್ ಮತ್ತು ಮ್ಯಾಂಚೆಸ್ಟರ್ ಕೌನ್ಸಿಲ್ ಗಳಲ್ಲಿ ಬಹುಕಾಲ ಸೇವೆ ಸಲ್ಲಿಸಿ ನಿವೃತ್ತಿ  ಪಡೆದರು.

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಅಭಿರುಚಿಯಿರುವ ಇವರ ಹೃದಯ ಮಾತ್ರ ಮಾತೃಭಾಷೆ ಮತ್ತು ಸ್ವದೇಶೀ ಸ್ಪರ್ಷ ಭಾವನೆಗೆಗಳಿಗೆ ಯಾವತ್ತೂ ಆತುಕೊಂಡಿದೆ. ಆಗಾಗ ಮನಸ್ಸಿಗೆ ತೋರಿದ್ದನ್ನು ಬರೆಯುವ ಹವ್ಯಾಸವಿರುವ ಇವರು ನಿವೃತ್ತಿಯ ನಂತರ ಶಾಸ್ತ್ರೀಯ ಸಂಗೀತಾಭ್ಯಾಸಗಳಿಗೂ ತೆರೆದುಕೊಂಡವರು.

ಯು.ಕೆ. ಯ ಹಿರಿಯ ಕನ್ನಡ ಸಂಸ್ಥೆ ಕನ್ನಡ ಬಳಗದ ಮೊಟ್ಟ ಮೊದಲ ಕಾರ್ಯಕಾರೀ ಸಮಿತಿಯ ಸದಸ್ಯರೂ ಮತ್ತು  ಸಂಸ್ಥಾಪಕ ಸದಸ್ಯರೂ ಆಗಿ ಕನ್ನಡ ಸೇವೆಗೆ ನಿಂತ ಇವರು 1986 ರಲ್ಲಿ ಕನ್ನಡ ಬಳಗದ ಸಂವಿಧಾನ ರಚನೆಗೆ ಸಹಕರಿಸಿದರು. ನಂತರ ಕನ್ನಡ ಬಳಗದ ಅಧ್ಯಕ್ಷರಾಗಿ ಎರಡು ವರ್ಷ ಸೇವೆ ಸಲ್ಲಿಸಿದರು. ಅನಿವಾಸಿ ಜಾಲ ಜಗುಲಿಯಲ್ಲಿ ಇವರ ಹಲವು ಕವನಗಳು ಪ್ರಕಟವಾಗಿವೆ.  ‘ರಾಜಕೀಯ ‘,  ‘ಕವಿ ಆಗಬೇಕೆ? ‘  ‘ಗ್ರೆನ್ಫಲ್ ಟವರ್ ದುರಂತ’  ಮತ್ತು ‘ದೊಂಬರಾಟವಯ್ಯ ‘ ಇವರ ಪ್ರಕಟಿತ ಕವನಗಳು-ಸಂ )

ಆ೦ಗ್ಲ ನರಿಗಳು 

ಕನ್ನಡದ ಜೊತೆಗೆ ಇ೦ಗ್ಲೀಷ ಓದಿದೆವು
ಆ೦ಗ್ಲ ನಾಡಿಗೆ ಬ೦ದು ನೆಲೆಸಿದೆವು ಅ೦ದು

ಆ೦ಗ್ಲನಾಡು ಆ೦ಗ್ಲ ಭಾಷೆ, ನಡೆ ನುಡಿಗಳ
ಹೇಗೋ ಹೊ೦ದಿಕೊ೦ಡು ಬಾಳಿದೆವು

ಕಳೆದೆವು  ವಷ೯ಗಳು ಬೆಳೆದವು ಮಕ್ಕಳು
ಬಹು ಬೇಗ ಸಾಗಿತು ಅರ್ಧ ಶತಮಾನ

ಇ೦ಗ್ಲೀಷರು ಆಳಿದರುನಮ್ಮನು ೨ ಶತಮಾನ
ಇದ್ದಿರಬೇಕು ಬುದ್ದಿಯಲಿ ನರಿಗಳ೦ತೆ ಅವರು

ಅವರು ಬುದ್ದಿವ೦ತರೋ ,ಗುಳ್ಳೆನರಿಗಳೋ
ಕುತೂಹಲ ಅವರ ಭಾಷೆ ಇಣಿಕುವ ಆಸೆ

ಹಾಗಾದರೆ ನೋಡೋಣ ಬನ್ನಿ ಇ೦ಗ್ಲೀಷ ಭಾಷೆಯಲಿ
ಎಷ್ಟು ನರಿಗಳನ್ನು ನಾವು ಹುಡುಕಬಹುದೆ೦ದು

ಇದು ಹುಚ್ಚತನ ಅನಿಸ ಬಹುದು ಅವರ ಭಾಷೆಯಲಿ
೨ಬಗೆಯ ನರಿಗಳಿವೆ ೧ nary  ೨ nery.

ಈಗ ನಾವು ಸಾಧಾರಣ ನರಿಯಿ೦ದ
ಪ್ರಾರ೦ಬಿಸಿದರೆ ಸಿಗುವುದು ordinary
ನಿಶ್ಚಲ/ಲೇಖನ ಸಾಮಗ್ರಿ ನರಿ ಬೇಕಿದ್ದರೆ
ಆಗ ನಮಗೆ ಕಾಣುವುದುStationary

ಅತ್ಯ೦ತ ಸುಧಾರಿತ/ವಿಶೇಷ ನರಿ
ನೋಡಬೇಕೆ೦ದರೆ Extraordinary
ಮತ್ತೆಕೆಲವರು ಇನ್ನೂ ತರಬೇತಿಯಲ್ಲಿರುವ
ನರಿ ನೋಡ ಬಯಸಿದರೆ Probationary

ಸುಮ್ಮನೆ ಸದ್ಯಮಟ್ಟಿಗೆ ಒ೦ದು ನರಿ
ನೋಡೋಣ ಎ೦ದರೆ Provisionary
ಒಮ್ಮೆ ಎರಡು ನರಿಗಳು ಇರುವುದನ್ನು
ಹುಡುಕ ಬೇಕಿದ್ದರೆ Bianary

ನಮಗೆ ವಿವೇಚನೆ ಇರೋ ನರಿ ತೋರಿಸಿ
ಎ೦ದು ಕೇಳಿದರೆ Discretionary
ಪೂವ೯ಸಿದ್ದತೆ/ಪೀಟಿಕೆ  ನರಿ ಹುಡುಕಲು
ಸಿಗುವುದು Preliminary

ಸುಪ್ರಸಿದ್ದ, ಪ್ರತಿಭಾಶಾಲಿ/ತೇಜಶ್ವಿ ನರಿ
ಉ೦ಟು ಅದು Luminery
ಕ್ರಾ೦ತಿಕಾರ/ಧೈರ್ಯ ನರಿ ಕಾಣಲು
ವೀಕ್ಷಿಸಿ  Revolutionary

ರಕ್ತಪಾತ/ಕೊಲೆ ಭಯಾನಕ ನರಿ
ಇರುವ ಜಾಗ Sanguinary
ಯ೦ತ್ರಗಳು/ಆಡಳಿತ ವ್ಯವಸ್ತೆನರಿ
ಇರುವ ಸ್ಥಳ  Machinary

ಧಮ೯/ಮತ ಪ್ರಚಾರಕ ನರಿಗಳು
ಅಲೆಯುವ ಜಾಗ Missinory
ಕ್ರೈಸ್ತ ಸನ್ಯಾಸಿನಿಯರ ನಿವಾಸದಲ್ಲಿ
ಸುತ್ತಾಡುವ ನರಿ Nunnery

ಪಶು ವೈದ್ಯ ಕೀಯ ನರಿಗಳು
ಸುಳಿದಾಡುವುದು Veternary
ಸ್ವಾಶಕೋಶ ವಿವರಣೆಗಳ ನರಿ
ನೋಡಲು ಹುಡುಕಿ Pulmanary

ನೂರನೇ ವಷ೯ದ ಉತ್ಸವದ ನರಿ
ನಲಿದಾಡುವಿಕೆಗೆ ನೋಡಿ Centinary
ಪ೦ಚ ವಾಷಿ೯ಕ ಆಚರಿಪ ನರಿ ಮೆರೆವ
ಜಾಗ  Quincentenary

ಪ್ರಕ್ರುತಿ ದ್ರುಶ್ಯ/ರ೦ಗ ದ್ರುಶ್ಯಗಳಲ್ಲಿ
ಚಿತ್ರಿಪ ನರಿ ಇರುವುದು Scenery
ಭವಿಷ್ಯದ ಕನಸು ಕಾಣಲು ಕಾತರೆವ
ನರಿ ರಮಿಸುವ ಸ್ಥಳ Visionary

ಆಕಸ್ಮಿಕವಾಗಿ ಕೆಲವು ನರಿಗಳು
ಕಾಣದೆ ನುಸುಳಿದ್ದರೆ ಕ್ಷಮಿಸಿ
ಎ೦ದು ಹೇಳುವ ನರಿ ಹೆದರದಿರಿ
ಆದರೆಹ್ರುದಯ ಘಾತ Coronary

ದಯವಿಟ್ಟು ಕ್ಷಮಿಸಿ ಸಾಕಾಯ್ತು
ಈ ಎಲ್ಲಾ ನರಿಗಳ ಹುಡುಕುವ ಆಟ
ಅ೦ದರೆ ಚಿ೦ತಿಸದಿರಿ  ಇದೆ ಒ೦ದು
ದೊಡ್ಡ ನರಿ ನಿಗ೦ಟು Dictionary.

————————————— ಸಿ. ಹೆಚ್. ಸುಶೀಲೇಂದ್ರ ರಾವ್

                                    (ಮುಂದಿನ ವಾರ- ಸಕ್ಕರೆ ಸವಿಯ ಜಾನಕಿ ಅಮ್ಮ)

ಸ್ಥಿತ್ಯಂತರ ತುಮುಲ-ತರಂಗ…. by ತಿಪ್ಪೇಸ್ವಾಮಿ ಬಿಲ್ಲಹಳ್ಳಿ

♥ ∗ ಅನಿವಾಸಿಗೆ  ಐದು ವರ್ಷದ ಹರ್ಷ ∗ ♥

(ಕನ್ನಡಿಗರಾದ ನಾವೆಲ್ಲ ತಪ್ಪದೆ ವರ್ಷಾನು ವರ್ಷ ತಾಯ್ನಾಡಿಗೆ ಭೇಟಿ ಕೊಡುತ್ತೇವೆ. ಇಂತಹ ದಿನ ಭಾರತಕ್ಕೆ ಹೋಗುತ್ತೇವೆ ಎಂದು ತಿಳಿದಕೂಡಲೇ ನಮ್ಮಲ್ಲಿ ಯಾವುದೋ ಒಂದು ವಿಶೇಷ ಅನುಭೂತಿ ಮೂಡತೊಡಗುತ್ತದೆ. ತಾವರೆಯ ಎಲೆಯ ಮೇಲಿನ ನೀರ ಹನಿಯಂತೆ ಇಲ್ಲಿ ಬದುಕಿಕೊಂಡಿರುವ ನಾವು ಭಾರತದ ನೆಲದ ಮೇಲೆ ಕಾಲಿಡುತ್ತಿದ್ದಂತೆ ತಟ್ಟಕ್ಕನೆ ಜಾರಿ ಮೂಲ ನೀರನ್ನು ಸೇರುತ್ತೇವೆ. ಆಗಷ್ಟೆ ದಶಕಗಳ ಕಾಲ ನಮ್ಮ ಬದುಕನ್ನು ಹಂಚಿಕೊಂಡ ಹೊರನಾಡು ನಮ್ಮ ಬದುಕಿನ ಮೇಲೆ ಬೀರಿರುವ ಪ್ರಭಾವದ ಅರಿವಾಗಲು ತೊಡಗುತ್ತದೆ. ಈ ಕಾಲ ಬಿಂದುವಿನೊಡನೆ ನಾವು ಪ್ರತಿ ಬಾರಿ ಸಂಧಿಸುತ್ತೇವೆ. ಇಂತಹ ಹನಿ ಮತ್ತೆ ತವರನ್ನು ಸಂದಿಸುವ ಘಳಿಗೆಯ ಸ್ಥಿತ್ಯಂತರ, ಹಲವು ತುಮುಲ ತರಂಗಗಳನ್ನು ಸೃಷ್ಟಿಸುತ್ತದೆ.ನಮ್ಮ ನಾಡಿನ ಮೇಲಿನ ಪ್ರೀತಿಯಿಂದಾಗಿ, ಬೇರೆಡೆ ಕಂಡ ಎಲ್ಲ ಒಳಿತುಗಳು ಇಲ್ಲಿಗೂ ಬರಬಾರದೇಕೆ ಎನ್ನುವ ಒಂದು ಸವಿಯಾದ ಆಶಯ ನಮ್ಮನ್ನು ಆಳವಾಗಿ ಬಾಧಿಸತೊಡಗುತ್ತದೆ.ಜೊತೆಗೆ ಲೌಕಿಕ ಜಗತ್ತಿನ ಸಮಸ್ತವೂ ಇರುವ ನಮ್ಮ ವೃತ್ತಿ ಸ್ಥಳದಲ್ಲಿ ಸಿಗದ ಬಂಧು ಬಾಂಧವರ ಓಡನಾಟ ನಮ್ಮ ಕರುಳನ್ನು ತಿರುಚುತ್ತವೆ. ಇಲ್ಲಿನವರಂತೆ ನಾಟಕದ ನುಡಿಗಳನ್ನು ಆಡಲು ಬಾರದೆ ಇದ್ದರೂ ಯಾವುದೋ ಸಬೂಬಿನಲ್ಲಿ ದೂರದಿಂದ ಬರುವ ಕರುಳ ಕುಡಿಗಳನ್ನು ಬರಿ ನೋಡಿಯೇ ಆನಂದಿಸುವ, ನೀನು ದೂರವಿದ್ದರೂ ನಮಗೇನು ಆಗಿಲ್ಲ ಎನ್ನುವ ಸೋಗಿನ ಮಸುಕಲ್ಲೇ ಪ್ರೀತಿಯ ಹೊಳೆಯನ್ನು ಹರಿಸುವ ನಮ್ಮ ಹೆತ್ತವರ ಸಂದಿಗ್ದಗಳು, ಮುಚ್ಚಿಟ್ಟುಕೊಂಡರೂ ಇಣುಕಿ ನಮ್ಮನ್ನು ಅಣಕಿಸುತ್ತವೆ.

ನಮ್ಮ ಆಶಯಕ್ಕೆ ಒದಗುವ ವೇಗದಲ್ಲೇ  ಬೇಕಾದ ಎಲ್ಲ ಬದಲಾವಣೆಗಳು  ಆಗುವುದಿಲ್ಲ.ಈ  ಕಾರಣ ಸ್ಥಿತ್ಯಂತರದ ಅನುಭವ ಬಹುಶಃ ನಿರಂತರ. “ನಾವಿಷ್ಟೇ ಬಿಡಿ ಆದರೆ ಮಿಕ್ಕವರು ಮಾತ್ರ ಅತಿ ವಿಶೇಷ “ ಎಂದು ಪೂರ್ವ ನಿರ್ಧಾರಗಳನ್ನು ಮಾಡಿ  ಮೈ-ಕೈ ಕೊಡವಿಕೊಂಡವರಿಗೆ ಈ ಬಾಧೆ ಕಾಡುವುದಿಲ್ಲ. ಮಾಡಿರದ ಹಲವರಲ್ಲಿ  “ ನಾವೂ ಅವರಂತಾಗಬೇಕು, ನಮ್ಮದನ್ನು ಉಳಿಸಿಕೊಳ್ಳಬೇಕು “ ಎನ್ನುವ ಪ್ರಬಲ  ಅನಿಸಿಕೆಗಳು  ಅವರನ್ನು ಮುನ್ನೆಡೆಯಲು ಪ್ರೇರೇಪಿಸುತ್ತದೆ.

ಭಾರತದ ಭೇಟಿ ತರುವ ತುಮುಲಗಳ ತರಂಗಗಳನ್ನು ಸ್ವಾಮಿಯವರು ಈ ವಾರದ ಅನಿವಾಸಿಯ ದಡಕ್ಕೆ ಬಹಳ ಸಹಜವಾಗಿ ಆದರೆ ಮನಮುಟ್ಟುವಂತೆ ಹರಿಸಿದ್ದಾರೆ-ಸಂ )


ಪರಿಚಯ

ತಿಪ್ಪೇಸ್ವಾಮಿ ಬಿಲ್ಲಹಳ್ಳಿಯವರು ನಮ್ಮಲ್ಲಿ ಹಲವರಿಗೆ ಪರಿಚಿತರು. ಹೆಸರಿನಲ್ಲಿರುವಂತೆಯೇ ದಾವಣಗೆರೆ ಜಿಲ್ಲೆಯ ಬಿಲ್ಲಹಳ್ಳಿ ಇವರ ಸ್ವಂತದ ಊರು. ದಾವಣಗೆರೆಯ ಚನ್ನಗಿರಿ ತಾಲ್ಲೂಕಿನ ಸಂತೆ ಬೆನ್ನೂರಿನಲ್ಲಿ ಇವರ ಜನನ. ಪ್ರಾಥಮಿಕ ಶಿಕ್ಷಣವನ್ನು ತಾವರೆಕೆರೆ ಗ್ರಾಮದಲ್ಲಿ , ಪ್ರೌಢ ಶಿಕ್ಷಣವನ್ನು ಭದ್ರಾವತಿಯಲ್ಲಿ ಮಾಡಿದ್ದಾರೆ.ಮುಂದೆ ದಾವಣಗೆರೆಯ ಬಾಪೂಜಿ ನರ್ಸಿಂಗ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಇವರು ಇಂಗ್ಲೆಂಡಿನಲ್ಲಿ ಕಳೆದ ೨೦ ವರ್ಷಗಳಿಂದ ನೆಲೆಸಿದ್ದಾರೆ. ಈಗ ಸೌಥೆಂಡ್ ಆನ್ ಸೀ, ಎಸ್ಸೆಕ್ಸ್ ನಲ್ಲಿ ಅಲರ್ಜಿ ಸರ್ವೀಸ್ ವಿಭಾಗದಲ್ಲಿ ಲೀಡ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.

ಭಾರತದಲ್ಲಿ ನರ್ಸಿಂಗ್ ಬೆಳವಣಿಗೆಗಾಗಿ ವಿಶೇಷ ಪ್ರಯತ್ನಗಳನ್ನು ಅವಿರತ ಮಾಡುತ್ತಿರುವ ತಿಪ್ಪೇಸ್ವಾಮಿ ಬಿಲ್ಲಹಳ್ಳಿಯವರ ಪ್ರಯತ್ನ ಅತ್ಯಂತ ಶ್ಲಾಘನೀಯ.

ಕನ್ನಡ ಬರಹ, ಪರ್ವಾತಾರೋಹಣ, ನಾಯಕತ್ವದ ಚಟುವಟಿಕೆಗಳಲ್ಲಿ ಇವರಿಗೆ ವಿಶೇಷ ಆಸಕ್ತಿಯಿದೆ.ಕನ್ನಡ ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ 2016-2019 ರವರೆಗೆ ಸೇವೆ ಸಲ್ಲಿಸಿರುವ ಇವರು ಕೇಂಬ್ರಿಡ್ಜ್ ಕನ್ನಡ ಬಳಗದ ಕಾರ್ಯಕ್ರಮದ ಆಯೋಜನೆಯ ಮುಂದಾಳತ್ವವನ್ನು ವಹಿಸಿದ್ದನ್ನು ನಾವಿಲ್ಲಿ ನೆನೆಯಬಹುದು.

ಸ್ಥಿತ್ಯಂತರ ತುಮುಲ-ತರಂಗ…

ಆಗಸ್ಟ್ 8 ರಂದು ಲಂಡನ್ ನಿಂದ ಬೆಂಗಳೂರಿಗೆ 3 ವಾರದ ರಜೆಗೆಂದು ಪ್ರಯಾಣಿಸಿದೆ.  ಸ್ವಂತ ಊರಿನ ಪ್ರಯಾಣದ ಒಂದು ಭಾಗ.

ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ, ಉಕ್ಕಿ ಹರಿಯುತ್ತಿದ್ದ ಕೆರೆ- ಕಟ್ಟೆ- ಹೊಳೆ. ವರುಣನ ಆರ್ಭಟಕ್ಕೆ ಸಿಲುಕಿ ತತ್ತರಿಸಿದ ಹೊಲ, ಮರ, ಗಿಡಗಳು, ಜಲ ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ಹೆದ್ದಾರಿಗಳು, ಮುರಿದ ಸೇತುವೆಗಳು, ಮನೆ, ವಾಹನ, ಜನ- ಜಾನುವಾರುಗಳು, ಅಳಿದುಳಿದ ಕಾಡಿನಿಂದ ಬೃಹದಾಕಾರವಾಗಿ ಬೆಳೆದು ನಿಂತಿರುವ ನಾಡಿಗೆ ವಲಸೆ ಬಂದ ಪ್ರಾಣಿಗಳು ಹಾದು ಹೋಗುತ್ತಿದ್ದವು. ಗಿಡ ಮರಗಳಿಲ್ಲದ ಬೆಟ್ಟ-ಗುಡ್ಡಗಳು  ಕೆಲ ವಾರಗಳ ಹಿಂದೆ ಬಿಸಿಲಿಗೆ ಬೆಂದು ಬೆಂಗಾವಲಾಗಿ ಈಗ ಮಳೆಯ ಆರ್ಭಟಕ್ಕೆ  ತನ್ನ ಒಡಲು ಮೀರುವಷ್ಟು ಜಲವನ್ನು ಕುಡಿದು ತನ್ನ ಒಡಲೊಡೆದು ಎಲ್ಲೆಂದರಲ್ಲಿ ಕುಸಿದು ಮಾನವ ನಿರ್ಮಿತ ದಾರಿಗೆ ಅಡ್ಡಗಾಲಾಗಿ ನಿಂತು ಮಾನವ ಕುಲದ ದುರಾಸೆಯಿಂದ ತನಗಾದ ಅನ್ಯಾಯಕ್ಕೆ ರೊಚ್ಚಿಗೆದ್ದು ಮುಷ್ಕರ ಹೂಡಿದಂತೆ ಭಾಸವಾಗುತ್ತಿತ್ತು.

ಬರಿದಾದ  ಕೆರೆ-ಕಟ್ಟೆ-ನದಿಗಳನ್ನೇ ಕಸದ ಬುತ್ತಿಯೆಂದು ಭಾವಿಸಿ ಎಸೆದ ಪ್ಲಾಸ್ಟಿಕ್ ಕಪ್, ಬ್ಯಾಗ್, ಪ್ಯಾಕೆಟ್, ಕ್ಯಾನ್, ಮೆಡಿಸಿನ್ ಪ್ಯಾಕ್,  ಹೀಗೇ ಸಾವಿರಾರು ರೀತಿಯ  ತ್ಯಾಜ್ಯ ವಸ್ತುಗಳನ್ನು  ಕೆರೆ-ಕಟ್ಟೆ- ನದಿಗಳು ಹೊರಗೆಸೆದು ನಾಡಿಗೆ ಮುತ್ತು ರತ್ನ ಹವಳಗಳ ರೀತಿಯಲ್ಲಿ ಹಿಂದಿರುಗಿಸಿ ತನ್ನ ಸೇಡು ತೀರಿಸಿಕೊಂಡಂತೆನಿಸುತಿತ್ತು.

ದೇವನಹಳ್ಳಿಯಿಂದ ಬೆಂಗಳೂರು ರೈಲ್ವೆ  ನಿಲ್ದಾಣಕ್ಕೆ ಮುಂಜಾನೆ 4 ರ ಸಮಯದಲ್ಲಿ ಪ್ರಯಾಣಿಸುವಾಗ ನಗರದ ಕಳೆದ 20 ವರ್ಷದ ಬೆಳವಣಿಗಗಳು ಉದ್ಯಾನ ನಗರಿಯ ಖ್ಯಾತಿಯನ್ನು ಹುಸಿರು ಹಿಚುಕಿ ಕೊಂದು ಹಸಿರಿನ್ನೇ ಬೇರು ಸಮೇತ ಕಿತ್ತು ಒಗೆದು ಕಾಂಕ್ರೀಟ್ ಕಟ್ಟಡಗಳನ್ನು ಎಬ್ಬಿಸಿ ನಿಲ್ಲಿಸಿದಂತಿತ್ತು. ಈಗಿನ ಬೆಂಗಳೂರು ಗಾರ್ಡನ್ ಸಿಟಿಯಲ್ಲ ಅದು ಗೋ(ಡೌನ್) ಸಿಟಿಯಾಗಿ ಬದಲಾಗಿ ಬಿಟ್ಟಿದೆ. ಭೌಗೋಳಿಕ ವಿಸ್ತೀರ್ಣದ ಪ್ರಕಾರ ಬೆಂಗಳೂರು ನಗರ ಲಂಡನ್ಗಿಂತಲೂ ತುಂಬಾ ಚಿಕ್ಕದಾದರೂ ಜನಸಂಖ್ಯೆಯಲ್ಲಿ ಈಗ ಅದು ಲಂಡನ್ ಮಾದರಿಯಲ್ಲಿಯೇ ವಲಸಿಗರ ತಾಣವಾಗಿ ಪರಿವರ್ತಿತವಾಗಿದೆ. ವಿಪರ್ಯಾಸವೆಂದರೆ ಲಂಡನ್ನಲ್ಲಿ  ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ಬೆಂಗಳೂರಲ್ಲಿ ಕಾಲು ಚಾಚಿದಲ್ಲಿ ಹಾಸಿಗೆ ಹಾಸಿದಂತಿದೆ😰

ಶತಾಬ್ದಿ ರೈಲಿನಲ್ಲಿ ದಾವಣಗೆರೆಗೆ ಪಯಣ ಮುಂದುವರೆಸಿದೆ. ಯಥಾ ಪ್ರಕಾರ ರೈಲಿನಲ್ಲಿ ಟೀ, ಕಾಫಿ, ತುಮಕೂರ್ ತಟ್ಟೆ ಇಡ್ಲಿ, ದೋಸೆ, ಉದ್ದಿನ ವಡೆ, ಮಸಾಲ ದೋಸೆ ಇವೆಲ್ಲವನ್ನೂ ರೈಲ್ವೆ ಕ್ಯಾಂಟೀನ್ ಸಿಬ್ಬಂದಿ ಎಂಬ ಹೆಸರಿನಲ್ಲಿ ಮಾರಾಟ ಮಾಡುವವರು ಕನಿಷ್ಠ 5 ನಿಮಿಷಕ್ಕೆ ಒಬ್ಬೊಬ್ಬರೆಂಬಂತೆ ಬಂದೇ ಬರುತ್ತಿದ್ದರು. ಸವಿಯುವ ಆಸೆ ಮನದಲ್ಲಿದ್ದರೂ ಅದನ್ನು ಮಾರಾಟ ಮಾಡುವವರ ನಡವಳಿಕೆ, ಸ್ವಚ್ಛೆತೆಯ ಬಗೆಗಿನ ಕಾಳಜಿ, ಅವೈಜ್ಞಾನಿಕ ಶೈಲಿಯ ( ಶೌಚಾಲಯದ ಪಕ್ಕದಲ್ಲಿಯೇ ಉಗ್ರಾಣ) ಬಹಿರ್ದೆಸೆಗೆ ಹೋಗಿ ಸೋಪಿಲ್ಲದೆ ಕೈ ತೊಳೆದ ಮಾರಾಟಗಾರರನ್ನು ಕಂಡು ನನ್ನ ಹಸಿವನ್ನು ನೀರಿನಿಂದಲೇ ಹಿಂಗಿಸಿ ಕೊಂಡು ಕಿಟಕಿಯ ಕಡೆ ಗಮನ ಹರಿಸಿದೆ. ಕಳೆದ 20 ವರ್ಷಗಳಲ್ಲಿ ಬೆಂಗಳೂರೇ ಏಕೆ ಇಡೀ ರಾಜ್ಯವೇ ಸಾಕಷ್ಟು ಬದಲಾವಣೆಯಾದರೂ ರೈಲ್ವೆ ಬೋಗಿಯಲ್ಲಿ ಕಸದ ಡಬ್ಬವನ್ನು ಇಡಬೇಕೆಂಬ ಐಡಿಯಾ ಇದುವರೆಗೂ ಯಾರಿಗೂ ಅನ್ನಿಸಿಲ್ಲವೇ?? ಇಂದಿಗೂ ಕೂಡ ರೈಲಿನಲ್ಲಿ ತ್ಯಾಜ್ಯ ವಸ್ತುಗಳನ್ನು ಕಿಟಕಿಯ ಮೂಲಕ ಟ್ರ್ಯಾಕ್ ಮೇಲೆ ಎಸೆಯುವ ಹವ್ಯಾಸ ಬದಲಾಗಲಿಲ್ಲ. ಒಂದೆರಡು ಜೋಂಪು ನಿದ್ರಿಸುವಷ್ಟರಲ್ಲಿ ದಾವಣಗೆರೆ ತಲುಪಿದೆ. ಸ್ಟೇಷನ್ಗೆ ಅಪ್ಪಾಜಿ ಬಂದಿದ್ದರು. ಮಗನನ್ನು ಕಾಣುವ ತವಕವಿದ್ದರೂ ಅದನ್ನು ಅಮ್ಮನಿಗೆ ತೋರದೆ “ ಅವನಿಗೆ ಆಟೋದವರ ವ್ಯವಹಾರ ತಿಳಿಯುವುದಿಲ್ಲ, 60 ರೂಪಾಯಿ ಕೇಳಿದರೆ ಸುಮ್ಮನೆ ಕೊಟ್ಟು ಬರುತ್ತಾನೆ” ಎಂದು ಹೇಳಿ ತಾವೇ 50 ರುಪಾಯಿಗೆ ಒಪ್ಪಿಸಿ ಒಬ್ಬ ಆಟೋ ಚಾಲಕನೊಂದಿಗೆ ಬಂದಿದ್ದರು. ಆತ ನಮ್ಮ ಎದುರು ಮನೆಯವನಾದ್ದರಿಂದ ಅಪ್ಪಾಜಿಗೆ 10 ರೂಪಾಯಿ ಡಿಸ್ಕೌಂಟ್ ದೊರಕಿತ್ತು. ಮಗನ ಕಂಡ ಖುಷಿ ಅವರಿಗೆ ಇದ್ದರೂ ಅದನ್ನು ತೋರ್ಪಡಿಸದೆ ಬ್ಯಾಗನ್ನು ನನ್ನಿಂದ ಸ್ವೀಕರಿಸಿ ಬರಬರನೇ ಆಟೋ ಕಡೆ ನಡೆದರು.

ಮನೆಗೆ ಬಂದಾಕ್ಷಣ ಎಂದಿನಂತೆ ಅಮ್ಮ ಸ್ವಾಗತಿಸಿದರು. ಸಮಯ 11 ಘಂಟೆಯಾಗಿತ್ತು. ತಿಂಡಿಗೆ ದೋಸೆಯ ಜೊತೆಗೆ ಹೋಳಿಗೆ ತಿನ್ನಿಸುವ ಅಮ್ಮನ ಆಸೆಗೆ ತಣ್ಣೀರೆರಚಿ ರಾಗಿ ಮುದ್ದೆ, ಹುಣಸೆ ಹುಳಿ ಸಾರು, ಅನ್ನ ಊಟ ಬೇಕೆಂದು ಹೇಳಿದೆ. ಸ್ನಾನ ಮುಗಿಸುವಲ್ಲಿ ಎಲ್ಲಾ ರೆಡಿ ಆಯಿತು. ಬೃಂಚ್ (ಬ್ರೇಕ್ಫಾಸ್ಟ್ + ಲಂಚ್) ಮುಗಿಸಿ ಅಮ್ಮ ಅಪ್ಪಂದಿರೊಂದಿಗೆ ಹಾಗೂ ಅಲ್ಲಿಯೇ ನೆಲೆಸಿರುವ ನನ್ನ ತಂಗಿಯೊಂದಿಗೆ ಬಹು ದಿನಗಳ ಹರಟೆ ಮುಂದುವರೆಸಿ ಹಾಗೆಯೇ ದಿವಾನ್ ಮೇಲೆ ನಿದ್ದೆಹೋದೆ.

2 ದಿನಗಳ ಬಳಿಕ ನನಗೂ ಮುನ್ನವೇ ಇಂಡಿಯಾ ತಲುಪಿದ್ದ ಹೆಂಡತಿ ಹಾಗೂ ಮಗಳು ಧಾರವಾಡದ ಮಾವನ ಮನೆಯಿಂದ ದಾವಣಗೆರೆ ತಲುಪಿದರು. ನನ್ನ ತಮ್ಮ ಅವನ ಕುಟುಂಬ ಸಮೇತ ತರೀಕೆರೆಯಿಂದ ದಾವಣಗೆರೆ ತಲುಪಿದರು. ತಂಗಿ ಭಾವ ಹಾಗೂ ಅವರಿಬ್ಬರ ಮಕ್ಕಳು ಸೇರಿದರು. ಎಲ್ಲರೂ ಕೂಡಿದಾಗ ಹಬ್ಬದ ವಾತಾವರಣ ಮನೆಯಲ್ಲಿ…..

ತಮ್ಮನ ಮಗ ನಕ್ಷನ ತುಂಟಾಟ ಎಲ್ಲರಿಗೂ ನಗೆಯ ಹಬ್ಬವಾಗಿತ್ತು. ಇತ್ತೀಚೆಗಷ್ಟೇ ಅವನ ನರ್ಸರಿ ಎಂಟ್ರಿ ಆದ್ದರಿಂದ ಅವನ ಎ, ಬಿ, ಸಿ, ಡಿ ಹಾಗೂ 1,2,3 ಹೇಳುವ ತೊದಲಿನ ಶೈಲಿ ಮತ್ತೆ ಮತ್ತೆ ಕೇಳಬೇಕೆಂಬ ಬಯಕೆಯಾಗಿ ಅದನ್ನು ವಿಡಿಯೋ ಮಾಡಿಕೊಂಡೆ.

ನಂತರದ ದಿನಗಳಲ್ಲಿ ಕುಟುಂಬ ಸಮೇತ ಆದಷ್ಟು ಸಂಬಂಧಿಗಳ ಮನೆಗಳಿಗೆ ಭೇಟಿ ನೀಡಿ ಹಿಂದಿರುಗೆದೆವು. ಇರುವ ಸಮಯದಲ್ಲಿ ಎಲ್ಲರನ್ನೂ ಭೇಟಿಯಾಗುವುದು ಅಸಾಧ್ಯವಾದರೂ ಆದಷ್ಟು ಸಮಯವನ್ನು ಸಂಬಂಧಿಗಳೊಂದಿಗೆ ಕಳೆಯುವುದೇ ಒಂದು ಸಂತೋಷ ಹಾಗೂ ಮರೆಲಾಗದ ನೆನಪುಗಳು.

ನಂತರ ಅತ್ತೆ ಮಾವಂದಿರ ಭೇಟಿಗೆ ಧಾರವಾಡ ತಲುಪಿ ಒಂದು ದಿನದ ಪ್ರವಾಸವೆಂದು ನವಿಲು ತೀರ್ಥಕ್ಕೆ ಹೋಗಿ ಬಂದೆವು. ದಾವಣಗೆರೆಗೆ ಹಿಂದಿರುಗುವ ಸಮಯದಲ್ಲಿ ರಾಣೇಬೆನ್ನೂರಿನಲ್ಲಿ ನೆಲೆಸಿರುವ ದೇವಕುಮಾರ್ ಮಾಮನ ಯುನಿಸೆಮ್ ಕಂಪನಿಗೆ ಭೇಟಿ ನೀಡಿ ಅವರ ಕಳೆದ 15 ವರ್ಷಗಳಲ್ಲಿ ಬೆಳೆಸಿರುವ ಸೀಡ್ಸ್ ಕಂಪನಿಯ ವಹಿವಾಟಿಕೆಯ ಬಗ್ಗೆ ಅರಿತೆ. ಅವರ ಸರಳ ಸ್ವಭಾವ, ಸ್ವಂತ ಹಾಗೂ ಕಂಪನಿಯ ಸಾಧನೆಗಳ ಬಗ್ಗೆ ತಿಳಿದು ತುಂಬಾ ಸಂತೋಷದ ಜೊತೆಗೆ ಅವರ ಬಗ್ಗೆ ಅಪಾರ ಗೌರವ ಇನ್ನೂ ಹೆಚ್ಚಿತು. ಅವರಿಂದ  ಸ್ಪೂರ್ತಿಗೊಂಡು ಮುಂದೆ ಅವಕಾಶಗಳು ಸಿಕ್ಕಿದಲ್ಲಿ ನಾವು ಆ ರೀತಿಯ ಸಾಧನೆಗಳನ್ನು ಮಾಡಬೇಕೆಂಬ ಆಸೆಯಿಂದನ್ನು ಕಂಡು ದಾವಣಗೆರೆಗೆ ಹಿಂದಿರುಗಿದೆ.

ರಜೆಯ ಕೊನೆಯ ವಾರವನ್ನು  ದಾವಣಗೆರೆ, ತರೀಕೆರೆಯಲ್ಲಿ ಕಳೆದೆ. ಒಂದು ದಿನ ಅಮ್ಮ, ಅಪ್ಪ ಹಾಗೂ ತಮ್ಮನ ಕುಟುಂಬ ಸಮೇತ ಕೆಮ್ಮಣ್ಣುಗುಂಡಿ ಮತ್ತು ಕಲ್ಲತ್ತಿಗಿರಿಗೆ ಪ್ರವಾಸ ಕೈಗೊಂಡೆವು. ಆ ಐತಿಹಾಸಿಕ ಸ್ಥಳಗಳು ನನ್ನ ಕಾಲೇಜು ದಿನಗಳಲ್ಲಿ ಗೆಳೆಯರ ಕೂಡ ಕಳೆದ ಸಮಯಗಳನ್ನು ನೆನಪಿಸಿದವು.

ನಂತರ ದಾವಣಗೆರೆಯಿಂದ ತಮ್ಮನ ಕುಟುಂಬದೊಂದಿಗೆ ಬೆಂಗಳೂರು ತಲುಪಿದೆವು. ಅಲ್ಲಿ ನನ್ನ ಹೆಂಡತಿ, ಮಗಳ ಜೊತೆಗೆ ಅತ್ತೆ, ಮಾವ, ಕೋಗಲೂರಿನ ಅಳಿಯ (ಮದುವೆ ಗಂಡು) ಹಾಗೂ ಪರಮೇಶ್ ಎಲ್ಲರೂ ಸೇರಿ ಮಂಜುವಿನ 39ನೆ ಹುಟ್ಟು ಹಬ್ಬ ಆಚರಿಸಿ ಮಾರನೇ ದಿನ ಬೆಳಿಗಿನ ಜಾವ ಲಂಡನ್ ಫ್ಲೈಟ್ ಹತ್ತಿದೆವು. ವಿಮಾನದಲ್ಲಿ ಕುಳಿತಾಗ ರಜೆಯ ನೆನಪುಗಳನ್ನು ಒಂಟೆಯ ರೀತಿಯಲ್ಲಿ ಮೆಲುಕು ಹಾಕುತ್ತ ಯೋಚಿಸುತ್ತ ನಿದ್ರೆಗೆ ಹೋದೆ.

ವಿದೇಶದಲ್ಲಿ ನೆಲೆಸಿರುವ ಪ್ರತಿ ಭಾರತೀಯನಂತೆ ನನಗೂ ಹಾಗೂ ಕುಟುಂಬಕ್ಕೂ ಭಾರತದ ಬಗ್ಗೆ ಎಲ್ಲಿಲ್ಲದ ಅಭಿಮಾನ, ಪ್ರೀತಿ ಹಾಗೂ ಗೌರವ. ತಾಯ್ನಾಡ ಮೇಲಿನ ಪ್ರೀತಿಯ ಜೊತೆಗೆ ಅಲ್ಲಿನ ರಾಜಕೀಯ ಅವ್ಯವಸ್ಥೆ, ಭ್ರಷ್ಟಾಚಾರ, ಪರಿಸರ ಮಾಲಿನ್ಯತೆ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಅಸಮಾನತೆ ಮತ್ತು ಒತ್ತಡಗಳ ಬಗ್ಗೆ ಯೋಚಿಸುತ್ತಿದ್ದೆ.

   ಇವುಗಳು ತೀವ್ರ ದುಃಖಕರ ಸಂಗತಿಯಾದರೂ ಮುಂದೊಮ್ಮೆ ನಮ್ಮ ಪ್ರಾಮಾಣಿಕ ಪ್ರಯತ್ನಗಳಿಂದ ಬದಲಾವಣೆಗಳನ್ನು ತರುವ ಯತ್ನವನ್ನು ಮುಂದುವರೆಸುವಂತೆ ನಿರ್ಧರಿಸಿ ಸೌಥೆನ್ಡ್ ಮನೆಗೆ ಹಿಂದಿರುಗಿದೆ.

“ಅಲ್ಲಿದೆ ನಮ್ಮ ಮನೆ ಇಲ್ಲಿರುವೆ ಸುಮ್ಮನೆ” ಎನ್ನುವ ಮಾತು ನಿಜವಾದರೂ ನಾನೆಂದೂ ಇಲ್ಲಿ ಸುಮ್ಮನೆ ಇಲ್ಲ ಏಕೆಂದರೆ ನನಗೆ ನನ್ನ ಮನೆಯನ್ನು ಮರೆಯುವ ಸಂದರ್ಭವೇ ಇದುವರೆಗೂ ಬಂದಿಲ್ಲ ಎನ್ನುವ ನೆಮ್ಮದಿ ನನಗಿದೆ🙏🏼

                                                                                                 ——–ತಿಪ್ಪೇಸ್ವಾಮಿ ಬಿಲ್ಲಹಳ್ಳಿ

 

                                         (ಮುಂದಿನ ವಾರ -ನರಿಗಳ ಮೀನಿಂಗುಗಳು)