ಅನಿವಾಸಿಗೆ ೫ ವರ್ಷ-ಕೊಟ್ಟದ್ದೇನು? ಪಡೆದದ್ದೇನು? -ಡಾ. ರಾಮ ಶರಣ್

ಅನಿವಾಸಿ ಎಂಬ ಬಟ್ಟೆಯನ್ನು (ವಿಶೇಷವನ್ನು)  ಐದು ವರ್ಷಗಳ ಕಾಲ ಎಳೆ ಎಳೆಯಾಗಿ ನೇದು ಅದಕ್ಕೊಂದು ಸ್ವರೂಪವನ್ನು ಕೊಟ್ಟ ರೀತಿಯ ಒಂದು ಸಮಗ್ರ ವರದಿಯನ್ನು ಓದಿ ಆಗಿದೆ.

ಯಾವ ನೇಯ್ಗೆ, ಯಾವ ಗುಣ ಮಟ್ಟ ನಮಗೆ ಒಪ್ಪಿಗೆಯಾಗಬಲ್ಲದು? ಅದಕ್ಕೊಂದು ಮಾನದಂಡವಿದೆಯೇ? ಮೌಲ್ಯವಿದೆಯೇ? ಅದರಿಂದ ನಮಗೇನು ಪ್ರಯೋಜನ? ನಮಗೆ ಆ ಬಟ್ಟಯ ಜತೆಗಿನ ಬಾಂಧವ್ಯದ ಅಗತ್ಯ ಇದೆಯೇ? ನಮಗೆ ಇದು ಸರಿ ಹೊಂದುತ್ತದೆಯೇ?ಎನ್ನುವ ಪ್ರಶ್ನೆಗಳಿಗೆ ಅವರವರಿಗೆ  ದೊರೆಯುವ ಉತ್ತರದ ಮೇಲೆ ಧಾರಕರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಅನಿವಾಸಿಯ ಜೊತೆಗಿನ ಸಂಭಂದಗಳೂ ಹಾಗೆಯೇ.

ಅನಿವಾಸಿ ಎಂಬುದು ಕನ್ನಡಿಗರ ಒಂದು ಪುಟ್ಟ ಗುಂಪು. ಹಾಗಾಗಿ ಕನ್ನಡ ಸಾಹಿತ್ಯಕ್ಕೆ ಇಲ್ಲಿ ಆದ್ಯತೆ. ಸೃಜನಶೀಲತೆಯ ಮೂಲ ತವರಾದ ಸಾಹಿತ್ಯ ಇದರ ಮುಖ್ಯ ಚಟುವಟಿಕೆ.ಅನಿವಾಸಿಯ ಮೂಲ ಉದ್ದೇಶವಾದ ಸಾಹಿತ್ಯಕ ಮೌಲ್ಯಗಳಲ್ಲಿ  ಆಸಕ್ತಿಯಿದ್ದವರಿಗೆ ಅನಿವಾಸಿಯ ಮೂಲಕ ಹಲವು ದರ್ಶನಗಳಾಗಿವೆ. ಆದರೆ, ಸಾಹಿತ್ಯ ಮತ್ತು ಅದರಿಂದ ಉದಯಿಸುವ ಎಲ್ಲ ಸೃಜನಾತ್ಮಕ  ಚಟುವಟಿಕೆಗಳ ಬಗ್ಗೆ ಆಸಕ್ತಿಯಿಲ್ಲದೆ ಬರಿ ಪ್ರದರ್ಶನ, ಘೋಷಣೆ,ವಯಕ್ತಿಕ ಪ್ರಚಾರ ಮತ್ತಿತರ ಚಟುವಟಿಕೆಗಳನ್ನು ಹುಡುಕಿಕೊಂಡು ಬಂದು ದುಡುಕಿ ಈ ಗುಂಪನ್ನು ಸೇರಿದವರಿಗೆ ನಿರಾಶೆಯೂ ಆಗಿರಬಹುದು. ಅನಿವಾಸಿಯಲ್ಲಿ ಹುಳುಕಿಲ್ಲವೆಂದಲ್ಲ. ವೈಚಾರಿಕ ಭಿನ್ನಾಭಿಪ್ರಾಯಗಳಿಗೂ ಕೊರತೆಯಿಲ್ಲ. ಆದರೆ ಪರಸ್ಪರರ ವಿಚಾರಗಳ ಬಗೆಗಿನ ಗೌರವ ಬಹಳ ಮುಖ್ಯ. ಹೇಳಿ ಕೇಳಿ ಇದು ಸೃಜನಶೀಲರ ಗುಂಪು. ಹಾಗಾಗಿ ಇಲ್ಲಿ ಆತ್ಮ, ಅಹಂ ಮತ್ತು ನಾನು  (Artists’s Ego) ಎನ್ನುವ ವಿಚಾರಗಳೂ ಉದಿಸುತ್ತವೆ.ಆದರೆ ಪ್ರತಿ ಸದಸ್ಯರೂ ಈ ಬಟ್ಟೆಯ ಬೇರೆ ಬೇರೆ ಎಳೆಗಳು. ಪ್ರತಿಯೊಬ್ಬರೂ ಈ ಗುಂಪಿಗೆ ತಂದಿರುವ ಮೌಲ್ಯಗಳು ಅಮೂಲ್ಯವಾದವುಗಳೇ. ಇಲ್ಲಿ ಸರಿ ಬರುವ ಒಂದೇ ಒಂದು ಸೂತ್ರ ಎಂದರೆ  ಈ ಎಲ್ಲ ಎಳೆಗಳ ನಡುವಿನ ಹೊಂದಾಣಿಕೆ ಮತ್ತು ಪ್ರಾಮಾಣಿಕತೆ. ಪ್ರಯತ್ನವಷ್ಟೇ ಫಲವನ್ನು ನೀಡಬಲ್ಲದು.

ಕನ್ನಡ ಸಾಹಿತ್ಯದಲ್ಲಿ ಆಸಕ್ತಯಿರುವ ನಿರುಪದ್ರವಕಾರಿ ಸದಸ್ಯರು  ಒಂದೆಡೆ ಸೇರಿ ತಮ್ಮ ಸಾಹಿತ್ಯದ ಒಲವನ್ನು ಮುಂದುವರೆಸುವುದು, ಬೆಳೆಸಿಕೊಳ್ಳುವುದು,  ಜೊತೆ ಜೊತೆಯಾಗಿ ಸೃಜನಶೀಲತೆಯನ್ನು ವೃದ್ಧಿಸಿಕೊಳ್ಳುವುದು, ಒಬ್ಬರನ್ನೊಬ್ಬರು ಉತ್ತೇಜಿಸುವುದು, ಜೊತೆ ಜೊತೆಯಲ್ಲೇ ವಯಕ್ತಿಕ ಬೆಳವಣಿಗೆಗಳು, ಒಂದಷ್ಟು ಸಂತೋಷ,ವಿನೋದ ಮತ್ತು ವಿನಿಮಯ- ಇದರ ಮುಖ್ಯ ಉದ್ದೇಶಗಳು.

ಒಂದೆರೆಡು ವರ್ಷಗಳು ಅನಿವಾಸಿಯ ಜೊತೆ ಕಳೆದ ನಂತರ ಅನಿವಾಸಿಯ ಸಂಪರ್ಕದ ಸವಿಯ ಅರಿವಾಗಲು ಶುರುವಾಗುತ್ತದೆ.  ಮೇರೆ ಮೀರುವ (ಕೆಲವೊಮ್ಮೆ) ಕೆಲವರ ಉತ್ಸಾಹಗಳು, ಹಾರ್ದಿಕ ಆಶಯದ ಹಲವರ ಔದಾರ್ಯಗಳು ಬೆಳಕಿಗೆ ಬರುತ್ತವೆ, ಅರ್ಥವೇ ಆಗದ ಕೆಲವರ ನಿರುತ್ತರಗಳು ಕೂಡ ದಕ್ಕತೊಡಗುತ್ತವೆ.

ಡಾ. ರಾಮ್ ಶರಣ್ ಲಕ್ಷ್ಮೀನಾರಾಯಣ

”ನಾನು ನೀಡಿದ್ದು ಕಡಿಮೆ’ ಎನ್ನುತ್ತಲೇ ಕಳೆದ ಐದು ವರ್ಷಗಳಿಂದಲೂ ಅನಿವಾಸಿಯ ಬಹುತೇಕ ಎಲ್ಲ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗಿಯಾಗಿರುವ ರಾಮಶರಣ್  ತಮ್ಮ ಕೆಳಗಿನ ಬರಹದ ಮೂಲಕ  ಅನಿವಾಸಿಯ ಜೊತೆಗಿನ ತಮ್ಮ  ವಯಕ್ತಿಕ ಒಡನಾಟವನ್ನು ಇವೇ ಹಿನ್ನೆಲೆಗಳ ಆಧಾರದ ಮೇಲೆ ಈ ಲೇಖನದ ಮೂಲಕ ವಸ್ತುನಿಷ್ಠವಾಗಿ ತೂಕಹಾಕಿದ್ದಾರೆ. ಅನಿವಾಸಿಯ ಒಡನಾಟದಲ್ಲಿ ಕಳೆದ ಮೆಚ್ಚಿನ ಕ್ಷಣಗಳನ್ನು, ಅನಿವಾಸಿಯ ಒಡನಾಟದಲ್ಲಿ ಭೇಟಿಮಾಡಿದ ದಿಗ್ಗಜರನ್ನು ನೆನೆಯುತ್ತ ವ್ಯಾವಹಾರಿಕ ( pragmatic) ಧೋರಣೆಗಳ ಪರಿಧಿಗಳಿಂದ ಹೊರಬಂದು ಭಾವುಕರಾಗಿದ್ದಾರೆ. ಅನಿವಾಸಿಗೆ ಕಾಲ ಕಾಲಕ್ಕೆ ಹೊಸ ನೀರು ಸೇರುತ್ತ ಈ ಅನಿವಾಸಿಯೆಂಬ ನದಿ ನಿರಂತರವಾಗಿ ಹರಿಯಲಿ ಎಂದು ಆಶಿಸುತ್ತಾರೆ.

ರಾಂ ರ ಈ ಲೇಖನದಲ್ಲಿ ಮುಖ್ಯವಾದ ಎರಡು ಪ್ರಶ್ನೆಗಳಿವೆ. ಕೊಟ್ಟದ್ದೇನು? ಪಡೆದದ್ದೇನು?ಇದು ಅತ್ಯಂತ ಮುಖ್ಯವಾದ, ಮೌಲ್ಯಯುತವಾದ ವಿಚಾರ. ಇದನ್ನು ಪ್ರತಿ ಸದಸ್ಯರು  ಕೇಳಿ ಕೊಳ್ಳಬೇಕು ಕೂಡ.ಆಗಷ್ಟೆ  ವಾಮನ ರೂಪಿ ಅನಿವಾಸಿಯ  ವೇದಿಕೆ ನಮ್ಮೆಲ್ಲರಿಗೆ ದೊರಕಿಸಿದ ಅವಕಾಶಗಳ  ವಿರಾಟ್ ದರ್ಶನವಾಗುತ್ತದೆ.

ಈ ಸರಣಿಗೆ ಒಂದು ಬರಹವನ್ನು ಬರೆಯಲು ಕೇಳಿದಾಗ ಉತ್ಸಾಹದಿಂದ ಮೊದಲು ಲೇಖನವನ್ನು ಬರೆದು ಕಳಿಸಿದವರು ರಾಂ ಅವರೇ. ಆದರೆ, ಬೇರೆಲ್ಲರ ಲೇಖನಗಳಿಗಾಗಿ ಕಾಯುತ್ತಿದ್ದ ಕಾರಣ ಇಷ್ಟು ನಿಧಾನವಾದದ್ದಕ್ಕೆ ಕ್ಷ್ಮಮೆಯಿರಲಿ ಎಂದು ಕೋರುತ್ತೇನೆ. ಪುಟ್ಟ ಲೇಖನವಾಗಿರುವ ಕಾರಣ ಉದ್ದನ್ನ ಪ್ರಸ್ತಾವನೆ  ಅಷ್ಟೆ –ಡಾ. ಪ್ರೇಮಲತ ಬಿ.

ಅನಿವಾಸಿಗೆ ೫ ವರ್ಷ-ಕೊಟ್ಟದ್ದೇನು? ಪಡೆದದ್ದೇನು?

ಅನಿವಾಸಿಗೆ 5 ವರ್ಷ ತುಂಬಿದೆ ಅಂದ್ರೆ ನಂಬೋಕಾಗ್ತಾ ಇಲ್ಲ. ಪ್ರೇಮಲತಾ  2 ತಿಂಗಳ ಕೆಳಗೆ ವಾಟ್ಸಾಪ್ ಸಂದೇಶ ಕಳಿಸಿದಾಗಲೇ ಗೊತ್ತಾಗಿದ್ದು.

ಈ 5 ವರ್ಷಗಳು ಹೇಗೆ ಹೋದವು ಅಂತಲೇ ಗೊತಾಗ್ಲಿಲ್ಲ. ಹಿಮದ ಉಂಡೆಯಂತೆ ಚಿಕ್ಕ ಕಣದಿಂದ ಮಹಾ ಗಾತ್ರದ ಬಂಡೆ ಆಗದಿದ್ದರೂ ಸಾಕಷ್ಟು ಗಾತ್ರದ ಕಲ್ಲಾಗಿ ನಿಂತಿರುವುದು ಹೆಮ್ಮೆಯ ವಿಷಯ. ಈ ಗತಿಸಿದ ದಿನಗಳಲ್ಲಿ, ಬಹಳಷ್ಟು ಜನ ಸೇರ್ಪಡೆಯಾಗಿದ್ದಾರೆ, ಕೆಲವರು ತೊರೆದು; ತೆರೆ ಮರೆಗೆ ಸರಿದಿದ್ದಾರೆ. ಆದರೆ ನಿಲ್ಲದ ನದಿಯಂತೆ ಅನಿವಾಸಿ ಸದಾ ಹರಿಯುತ್ತ ಬೆಳೆಯುತಿರುವುದನ್ನು ನೋಡುವುದೇ ಸೊಗಸು.

                      SMART ಥೆರಪಿ ’ ನಾಟಕದಲ್ಲಿ ಪಾತ್ರದಾರಿಯಾಗಿ

ನಾನು ನೀಡಿದ್ದಕ್ಕಿಂತ ಅನಿವಾಸಿಯಿಂದ ಪಡೆದದ್ದೇ ಜಾಸ್ತಿ. ಹಿರಿಯರ ಸಹವಾಸ, ಸಮವಯಸ್ಕರೊಂದಿಗೆ ಸಮಾನ ವಿಷಯಗಳ ಚರ್ಚೆ ರಸಗವಳ ಮೆದ್ದಂತೆ. ವಾರಕ್ಕೊಮ್ಮೆ ಬರುವ ಲೇಖನಗಳು ಮನಸ್ಸಿಗೆ ಮುದ ನೀಡುವುದಲ್ಲದೇ, ಹಲವಾರು ಚರ್ಚೆಗಳಿಗೆ ಪೀಠಿಕೆ, ಸರಕಾಗಿದೆ. ಸತತವಾಗಿ ಇದನ್ನು ನಡೆಸಿಕೊಂಡು ಬಂದಿರುವ ಭಗೀರಥ ಪ್ರಯತ್ನಕ್ಕೆ ಈಗಿನ ಕಾಲದ ಪುರಾವೆಯೇ ಸರಿ. ದೇಶದ ಹಲವು ಊರುಗಳಲ್ಲಿ ಹರಿದು ಹಂಚಿ ಹೋಗಿರುವ ಸದಸ್ಯರು ಅಂತರ್ಜಾಲದ ಹಂದರದಲ್ಲೇ ಬೆಳಸಿರುವ ಸಾಪ್ತಾಹಿಕವನ್ನಿಂದು ಜಗತಿನ ಹಲವು ದೇಶಗಳ ಓದುಗರು ಪ್ರೋತ್ಸಾಹಿಸುತ್ತಿರುವುದು ನಮಗೆ ಸದಾ ಚೈತನ್ಯ ಕೊಡುವ ಲಹರಿ.

                  ಕವಿ ಡುಂಡಿರಾಜರ ಹನಿಗವನ ಗೋಷ್ಠಿಯಲ್ಲಿ

ವರ್ಷಕ್ಕೆರಡು ಬಾರಿ ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ನಡೆಯುವ ಅನಿವಾಸಿ ನಡೆಸಿ ಕೊಡುವ ಸಾಹಿತ್ಯಿಕ ಸಭೆಗಳು ನನ್ನ ಅಚ್ಚುಮೆಚ್ಚಿನ ಕ್ಷಣಗಳು. ಕನಸು – ಮನಸಿನಲ್ಲೂ ಎಣಿಸದ ಕನ್ನಡ ಸಾಂಸ್ಕೃತಿಕ ಲೋಕದ ದಿಗ್ಗಜಗಳನ್ನು ಭೇಟಿಯಾಗುವ, ಅವರೆದುರು ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ವೇದಿಕೆ ಇದು.

   ರಾಜ್ಯ ಪ್ರಶಸ್ತಿ ವಿಜೇತ ಗುರುರಾಜ ಕರ್ಜಗಿಯವರ ಸಮ್ಮುಖದಲ್ಲಿ 

ಈ ಎಲ್ಲ ಕ್ಷಣಗಳಲ್ಲಿ ನನಗೆ ಅಪ್ಯಾಯಮಾನವಾಗಿರುವುದು ಶ್ರೀಯುತ ಗುರುರಾಜ ಕರಜಗಿಯವರ ಭೇಟಿ. ವಿಜ್ಞಾನಿ, ಶಿಕ್ಷಣ ತಜ್ಞ, ಸಾಹಿತಿ, ದಾರ್ಶನಿಕ ಹೀಗೆ ಬಹುಮುಖ ಪ್ರತಿಭೆ ಹೊಂದಿರುವ ಕರಜಗಿಯವರು, ಹಿರಿಯರೊಡನೆ ಹಿರಿಯರಾಗಿ; ಕಿರಿಯರೊಡನೆ, ಸಮವಯಸ್ಕನಂತೆ; ಮಕ್ಕಳೊಡನೆ ಮಕ್ಕಳಾಗಿ ಒಡನಾಡುವ ಪರಿ ಹೊಸ ಪಾಠವನ್ನೇ ಕಲಿಸಿತು. “ ವಿದ್ಯಾ ವಿನಯೇನ ಶೋಭತೆ” ಎಂಬ ಮಾತಿಗೆ ಇವರು ಜ್ವಲಂತ ಉದಾಹರಣೆ. ಅನಿವಾಸಿಯ ಸದಸ್ಯನಾಗದಿದ್ದರೆ ಇಂತಹ ಸುವರ್ಣಾವಕಾಶ ನನ್ನದಾಗುತ್ತಿರಲಿಲ್ಲ.

      ಧ್ವನಿ ಸುರುಳಿಯ ಬಿಡುಗಡೆ ಸಮಾರಂಭದಲ್ಲಿ

ಪ್ರೇಮಲತಾರ ಒತ್ತಾಸೆಗೆ, ಬತ್ತದ ಉತ್ಸಾಹಕ್ಕೆ ಮಣಿದು ಭಾಗಿಯಾದ ಧ್ವನಿ ಸುರುಳಿಯ ಯೋಜನೆ; ಗೆಳೆಯರೊಂದಿಗೆ, ಕೇಶವ ಬರೆದು ನಿರ್ದೇಶಿಸಿದ ಏಕಾಂಕದಲ್ಲಿ ನಟನೆ; ‘ಅನಿವಾಸಿ ಅಂಗಳದಿಂದ’ ಹೊತ್ತಿಗೆಯ ಬಿಡುಗಡೆ; ಒಂದೇ – ಎರಡೇ? ಈ  ಐದು ವರ್ಷಗಳಿಂದ ಸತತವಾಗಿ ಸಾಂಸ್ಕೃತಿಕ – ಸಾಹಿತ್ಯಿಕ ಪ್ರವಾಹದಲ್ಲಿ ಅನಿವಾಸಿ, ನನ್ನನ್ನು ಹಿಂದೆಂದೂ ಅನುಭವಿಸದ, ಅನ್ವೇಷಿಸದ ಜಗತ್ತಿಗೆ ತಂದೊಡ್ಡಿದೆ.

                                           ಗಿರೀಶ್ ಕಾಸರವಳ್ಳಿಯರ ಕಮ್ಮಟದಲ್ಲಿ

ಅನಿವಾಸಿ ಬೆಳೆಯುತ್ತಲೇ ಇರಲಿ, ಇಲ್ಲಿನ ಕನ್ನಡಿಗರಿಗೆ ಸಾಹಿತ್ಯಿಕ ನೆಲೆಯಾಗಲಿ ಎಂಬುದೇ ನನ್ನ ಹಾರೈಕೆ. ಈ ಹಾರೈಕೆಯಲ್ಲಿ ನನ್ನ ಸ್ವಾರ್ಥವೂ ಹಾಸು ಹೊಕ್ಕಾಗಿದೆ. ಅನಿವಾಸಿ ಬೆಳೆದರೆ ಅದರ ಆಶ್ರಯದಲ್ಲಿ ನಾನೂ ಬೆಳೆವನೆಂಬ ಆಶಯ. ನಮ್ಮಲ್ಲರ ಆಶಯವೇ ಅನಿವಾಸಿಗೆ ಬೇಕಾದ ಆಮ್ಲಜನಕ ಎಂದೇ ನನ್ನ ಅನಿಸಿಕೆ.-ರಾಂ

 ( ಮುಂದಿನ ವಾರ- ತಾಂತ್ರಿಕತೆಯ ತೋರು ಹಾದಿ)

ಸಕ್ಕರೆ ಸವಿಯ ಜಾನಕಿ ಅಮ್ಮಾಳ್ – ಡಾ. ಉಮಾ ವೆಂಕಟೇಶ್

♥ಅನಿವಾಸಿಗೀಗ ಐದು ವರ್ಷಗಳ ಹರ್ಷ♥

(ಉಮಾ ವೆಂಕಟೇಶರ ಪರಿಚಯ ನಮ್ಮಲ್ಲಿ ಹಲವರಿಗಿದೆ. ಉತ್ಸಾಹದ ಬುಗ್ಗೆಯಂತೆ ಮಾತಾಡುವ ಉಮಾರವರು ಹಲವಾರು ಮಹಿಳಾ ಸಂಶೋಧಕರ ಮತ್ತು ಸಾಧಕರ ವಿಚಾರವಾಗಿ ಬಹಳಷ್ಟು ಬರೆದಿದ್ದಾರೆ.  ಕೆಲವು ವರ್ಷಗಳ ಕಾಲ ಯು.ಕೆ. ಯಲ್ಲಿದ್ದ ಇವರು ಈಗ ಅಮೆರಿಕಾ ವಾಸಿ. ಜಗತ್ತಿನ ಹಲವೆಡೆ ಬದುಕಿ ಲೋಕಾನುಭವ ಪಡೆದವರು. ಇವರ ಮಕ್ಕಳು ಇಂದಿಗೂ ಇಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಅನಿವಾಸಿಯ ಶುರುವಾತಿನಲ್ಲಿ ಇವರ ಪಾತ್ರವೂ ಇದೆ.  ಇವರ ಪರಿಚಯವನ್ನು ಇವರ ಬರಹದ ಮೂಲಕವೇ ಓದೋಣ- ಸಂ )

ಸ್ವ- ಪರಿಚಯ

ನನಗೆ ಮೊದಲಿಂದಲೂ ಸಸ್ಯಗಳ ಮೇಲೆ ಅಸ್ಥೆ. ಬಾಲ್ಯದಲ್ಲಿ ನಮ್ಮ ಮನೆಯ ತೋಟದಲ್ಲಿ ನನ್ನ ತಾಯಿ ಬೆಳೆಸಿದ್ದ ಅನೇಕ ವಿಧದ ಹೂ, ತರಕಾರಿ ಹಣ್ಣುಗಳ ಗಿಡಗಳ ಪರಿಸರದಲ್ಲಿ, ಮೈಸೂರಿನಂತಹ ಸುಂದರ, ಶಾಂತ ವಾತಾವರಣದಲ್ಲಿ ಬೆಳೆದ ನನಗೆ, ಮುಂದೆಯೂ ಈ ಆಸಕ್ತಿ ವರ್ಧಿಸಿತೇ ಹೊರತು ಕಡಿಮೆಯಾಗಲಿಲ್ಲ. ಮುಂದೆ ನನ್ನ ಕಾಲೇಜಿನಲ್ಲಿ ಸಸ್ಯಶಾಸ್ತ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಡಿಗ್ರಿಗಳನ್ನು ಸಂಪಾದಿಸಿದ ನನಗೆ ಇಂದಿಗೂ ಸಸ್ಯಗಳ ಮೋಹ ತಪ್ಪಿಲ್ಲ. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ನನಗೆ ಸಸ್ಯಶಾಸ್ತ್ರ ಉಪನ್ಯಾಸಕರಾಗಿದ್ದ ಡಿ. ಪದ್ಮಕುಮಾರ್ ಅವರ ತರಗತಿಗಳು ನಿಜಕ್ಕೂ ನನ್ನ ಆಸೆಗೆ ಮತ್ತಷ್ಟು ಉತ್ತೇಜನ ನೀಡಿತೆನ್ನಬಹುದು. ಸಸ್ಯಗಳ ಮನಮೋಹಕ ಜೀವನ ಶೈಲಿಯ ಬಗ್ಗೆ ತಮ್ಮ ವರ್ಣನೆಯನ್ನು ಅತ್ಯಂತ ಆಸಕ್ತಿಪೂರ್ಣ ರೀತಿಯಲ್ಲಿ ನಮ್ಮ ಮನಮುಟ್ಟುವಂತೆ ತಿಳಿಸುತ್ತಿದ್ದ ಪದ್ಮಕುಮಾರ್ ಇಂದಿಗೂ ನನ್ನ ನೆನಪಿನಲ್ಲಿ ಸುಳಿಯುತ್ತಲೇ ಇರುತ್ತಾರೆ.

ಸಸ್ಯಶಾಸ್ತ್ರದಲ್ಲಿ ಉತ್ತಮ ಅಂಕ ಗಳಿಸಿ ಮುಂದೆ ಮಾನಸ ಗಂಗೋತ್ರಿಯಲ್ಲಿ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಿದಾಗ, ಪದ್ಮಕುಮಾರ್ ಹೇಳಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಮೊರೆಯುತ್ತಲೇ ಇವೆ. “ರೀ ನೀವೆಲ್ಲಾ ಬಾಟನಿ ಕಲಿಯಕ್ಕೆ ತುಂಬಾ ಆಸೆ ಇಟ್ಟುಕೊಂಡು ಗಂಗೋತ್ರಿ ಮೆಟ್ಟಿಲು ಹತ್ತುತ್ತೀರಿ; ಆದರೆ ಅಲ್ಲಿನ ಹೊಲಸು ಜಾತಿಯ ರಾಜಕಿಯಕ್ಕೆ ಬಲಿಯಾದಾಗ ನಿಜಕ್ಕೂ ಭ್ರಮನಿರಸನವಾಗತ್ತೆ.” ಇದು ನೂರಕ್ಕೆ ನೂರು ಸತ್ಯವಾಗಿದ್ದ ಮಾತುಗಳಾಗಿತ್ತು. ಅಲ್ಲಿನ ಎಲ್ಲಾ ರಾಜಕೀಯವನ್ನೂ ಮೆಟ್ಟಿ, ಹಾಗೂಹೀಗೂ ಪದವಿ ಮುಗಿಸಿ, ಮುಂದೆ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿಯನ್ನೂ ಬಹಳ ಕಷ್ಟಪಡುತ್ತಲೇ ಮುಗಿಸಿದೆ. ಎನಾದರೂ ಸರಿ, ಇಂದು ಅಮೆರಿಕೆಯಲ್ಲಿ ಪೆನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಮತ್ತೊಮ್ಮೆ ಇದೇ ಸಸ್ಯಶಾಸ್ತ್ರದಲ್ಲಿ ನನ್ನ ಸಂಶೋಧನೆಯನ್ನು ಮುಂದುವರೆಸುತ್ತಲೇ ಇರುವೆ. ನಾನೂ ಭಂಡಳೇ ಸರಿ. ಸಸ್ಯಗಳ ಬಗ್ಗೆ ನನಗಿರುವ ಮೋಹವೇ ಇದಕ್ಕೆ ಕಾರಣವೇನೋ! ಮೊನ್ನೆ ಯಾರೋ ಫ಼ೇಸ್-ಬುಕ್ಕಿನಲ್ಲಿ ಪ್ರಸಿದ್ಧ ಭಾರತೀಯ ಸಸ್ಯಶಾಸ್ತ್ರಜ್ಞೆ ಡಾ ಜಾನಕಿ ಅಮ್ಮಾಳ್ ಅವರ ಬಗ್ಗೆ ಲೇಖನವೊಂದನ್ನು ಹಂಚಿಕೊಂಡಿದ್ದರು. ಅದನ್ನು ಓದುತ್ತಲೇ ನನ್ನ ಮನ ರೋಮಾಂಚನಗೊಂಡಿತು. ಈಗ ಸುಮಾರು ೬೦ ವರ್ಷಗಳ ಹಿಂದೆ, ಭಾರತದಲ್ಲಿದ್ದ ಎಲ್ಲಾ ವ್ಯತರಿಕ್ತ ಪರಿಸ್ಥಿತಿಗಳಲ್ಲೂ ಛಲ ಬಿಡದೆ ತಮ್ಮ ಸಂಶೋಧನೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿಹಿಡಿದಿದ್ದ ಮಹಾನ್ ಮಹಿಳೆಯ ಬಗ್ಗೆ ನಮಗೆ ಸರಿಯಾಗಿ ಏನೂ ತಿಳಿದಿಲ್ಲವಲ್ಲಾ ಎನ್ನುವುದನ್ನು ನೆನೆಸಿಕೊಂಡು ನಾಚಿಕೆಯಾಯಿತು. ಇದರಲ್ಲಿ ನಮ್ಮ ತಪ್ಪೇನೂ ಇಲ್ಲಾ. ಸಸ್ಯಶಾಸ್ತ್ರವನ್ನು ಅಭ್ಯಸಿಸುವಾಗ, ಯಾವ ಮಟ್ಟದಲ್ಲೂ ಈಕೆಯ ಸಾಧನೆಗಳ ಬಗ್ಗೆ ನಮ್ಮ ಯಾವ ಶಿಕ್ಷಕರೂ ತಿಳಿಸಿರಲಿಲ್ಲ. ಇದು ನಿಜಕ್ಕೂ ಅನ್ಯಾಯವಾದ ಸಂಗತಿಯಲ್ಲವೇ? ಕೇವಲ ಪುರುಷರ ಸಾಧನೆಗಳನ್ನೇ ಎತ್ತಿಹಿಡಿಯುತ್ತಾ, ಮಹಿಳೆಯರನ್ನು ಕಡೆಗಣಿಸುತ್ತಿದ್ದ ಕಾಲವದು. ಹಾಗಾಗಿ ನಮಗೆ ಬಿ.ಜಿ.ಎಲ್. ಸ್ವಾಮಿ, ಪಂಚಾನನ್ ಮಾಹೇಶ್ವರಿ ಹಾಗೂ ಬೀರಬಲ್ ಸಹಾನಿ ಅವರ ಬಗ್ಗೆ ತಿಳಿದಿತ್ತೇ ಹೊರತು, ಜಾನಕಿ ಅಮ್ಮಾಳ್ ಹೆಸರನ್ನು ಕೇಳಿಯೇ ಇರಲಿಲ್ಲ.

೩೦ರ ದಶಕದಲ್ಲೇ, ತನ್ನ ಮಹತ್ವದ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದ ಆಕೆಯ ಬಗ್ಗೆ ಲೇಖನ ಓದಿದೊಡನೆ ಅದನ್ನು ಕೂಡಲೇ ಕನ್ನಡಕ್ಕಿಳಿಸುವ ಮನಸ್ಸಾಯಿತು. ಅದರ ಫಲವೇ ಈ ಲೇಖನ!

 

ಸಕ್ಕರೆಯ ಸವಿಯನ್ನು ಇನ್ನಷ್ಟು ಸಿಹಿಗೊಳಿಸಿದ ಜಾನಕಿ ಅಮ್ಮಾಳ್

ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲ ಭಾರತೀಯ ಮಹಿಳೆ!

 

೧೯೭೭ರಲ್ಲಿ ಪದ್ಮಶ್ರಿ ಪ್ರಶಸ್ತಿ ಗಳಿಸಿದ ಮೊದಲ ಮಹಿಳಾ ವಿಜ್ಞಾನಿ, ಎಡವಳೆತ್ ಕಕ್ಕಟ್ ಜಾನಕಿ ಅಮ್ಮಾಳ್ ಬಹಳ ಅಪರೂಪದ ಮಹಿಳೆ. ಆಕೆಯ ಸಮಕಾಲೀನ ಮಹಿಳೆಯರಲ್ಲಿ ಇಂತಹ ಸಾಧನೆಗೈದ ಹಲವರಲ್ಲಿ ಈಕೆಯೂ ಒಬ್ಬಳು. ಆ ಸಮಯದಲ್ಲಿ ಭಾರತೀಯ ಸ್ತ್ರೀಯರು ಹೈಸ್ಕೂಲಿನ ಮೆಟ್ಟಲನ್ನು ಹತ್ತುವುದೂ ದುಸ್ತರವೆನಿಸಿತ್ತು. ಅಂತಹ ಕಾಲದಲ್ಲಿ ಅಮೆರಿಕೆಯ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದ ಪಿ.ಎಚ್.ಡಿ ಪದವಿ ಪಡೆಯುವುದೊಂದೇ ಅಲ್ಲಾ, ಮುಂದೆ ಸಸ್ಯಶಾಸ್ತ್ರ ಸಂಶೋಧನೆಯ ಕ್ಷೇತ್ರಕ್ಕೆ ಅತ್ಯಂತ ಪ್ರಭಾವಶಾಲಿ ಹಾಗೂ ಮಹತ್ವದ ಕೊಡುಗೆಯನ್ನಿತ್ತ ಅಸಾಮಾನ್ಯ ಮಹಿಳೆ ಈಕೆ. ಇಂದಿಗೂ ಮಿಚಿಗನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ DSc. honoris causa ಪಡೆದ ಕೆಲವೇ ಏಶಿಯನ್ ಮಹಿಳೆಯರಲ್ಲಿ ಈಕೆಯೂ ಒಬ್ಬರು. ಈ ಅಪರೂಪದ ಸಾಧನೆಯನ್ನು ಆಕೆ ಗಳಿಸಿದ್ದು ೧೯೩೧ರಲ್ಲಿ!

ಒಬ್ಬ ಆದ್ಯ-ಪ್ರವರ್ತಕ ಸಸ್ಯಶಾಸ್ತ್ರಜ್ಞೆ ಹಾಗೂ ಕೋಶ-ತಳಿವಿಜ್ಞಾನಶಾಸ್ತ್ರಜ್ಞೆಯೆನಿಸಿದ್ದ ಜಾನಕಿ ಅಮ್ಮಾಳ್ ಅವರಿಗೆ, ಭಾರತದ ಕಬ್ಬಿನ ತಳಿಗಳಲ್ಲಿ ಸಿಹಿ ಅಂಶವನ್ನು ಹೆಚ್ಚಿಸಿದ ಕೀರ್ತಿ ಸಲ್ಲುತ್ತದೆ. ಇದರ ಜೊತೆಗೆ ಕೇರಳ ರಾಜ್ಯದಲ್ಲಿರುವ ಸೈಲೆಂಟ್ ವ್ಯಾಲಿಯಲ್ಲಿ ತಲೆಯೆತ್ತಿದ್ದ ಹೈಡ್ರೋ-ಎಲೆಕ್ಟ್ರಿಕ್ ಯೋಜನೆಯ ವಿರುದ್ಧವಾಗಿ ಧ್ವನಿ ಎತ್ತಿದ್ದಲ್ಲದೇ, ಹೂಬಿಡುವ ಸಸ್ಯಗಳ ಸಾವಿರಾರು ಪ್ರಭೇಧಗಳಲ್ಲಿ ಕ್ರೋಮೋಸೋಮುಗಳ ಬಗ್ಗೆ ನಡೆಸಿದ ಮಹತ್ವ ಸಂಶೋಧನೆಯೂ ಆಕೆಯ ಸಾಧನೆಗಳ ಪಟ್ಟಿಯಲ್ಲಿದೆ. ಆಕೆಯ ಈ ಅದ್ಭುತ ಕಾರ್ಯಕ್ಕೆ ಮನ್ನಣೆ ನೀಡುತ್ತಾ, ಸಂಪಿಗೆ ಜಾತಿಯ ಗಿಡದ ಒಂದು ಕೋಮಲ ಶ್ವೇತವರ್ಣದ ಪುಷ್ಪ ತಳಿಗೆ Magnolia Kobus Janaki Ammal ಎಂದು ನಾಮಕರಣ ಮಾಡಿದ್ದಾರೆ. ಆದರೂ, ಹೆಣ್ಣು ಮಗುವಿನ ಶಿಕ್ಷಣದ ಮೇಲೆ ಈಗ ಗಮನ ಹರಿಸುತ್ತಿರುವ ಭಾರತ ದೇಶದಲ್ಲಿ, ಇಂದಿಗೂ ಜಾನಕಿ ಅಮ್ಮಾಳ್  ನಡೆಸಿರುವ ಸಸ್ಯಶಾಸ್ತ್ರ ಸಂಶೋಧನೆ ಕಾರ್ಯಗಳ ಬಗ್ಗೆ ಸಾಮಾನ್ಯ ಜನರಿಗೆ ಅರಿವಿಲ್ಲದಿರುವುದು ದೌರ್ಭಾಗ್ಯವೇ ಸರಿ. ತನ್ನ ಕಾಲದಲ್ಲಿ ಪುರುಷ ಪ್ರಾಧಾನ್ಯ, ಅತಿ-ಸಂಪ್ರದಾಯವಾದಿ ಸಮಾಜದಲ್ಲಿ ಧೈರ್ಯದಿಂದ ಮುನ್ನುಗ್ಗಿ ತನ್ನ ಶೈಕ್ಷಣಿಕ ಕನಸುಗಳನ್ನು ನನಸಾಗಿಸಿದ ಈಕೆಯ ಜೀವನ ಕಥೆ ನಿಜಕ್ಕೂ ಅಸಾಮಾನ್ಯವಾದದ್ದು!

೧೮೯೭ರ ನವೆಂಬರ್ ೪ನೆಯ ತಾರೀಖು, ಕೇರಳ ರಾಜ್ಯದ ಟೆಲಿಚರಿಯಲ್ಲಿ ಜನಿಸಿದ ಜಾನಕಿಯ ತಂದೆ, ದಿವಾನ್ ಬಹಾದೂರ್ ಏಕ್ ಕೃಷ್ಣನ್, ಅಲ್ಲಿನ ಕೋರ್ಟಿನಲ್ಲಿ ಸಬ್-ಜಡ್ಜ್ ಆಗಿದ್ದು, ಜೀವಶಾಸ್ತ್ರದಲ್ಲಿ ಅತೀವ ಆಸಕ್ತಿಯುಳ್ಳವರಾಗಿದ್ದರು. ತನ್ನ ಮನೆಯಲ್ಲಿದ್ದ ಸಸ್ಯತೋಟದ ಬಗ್ಗೆ ವಿವರವಾದ ಟಿಪ್ಪಣಿ ಮಾಡಿದ್ದ ಆತ, ತನ್ನ ಕಾಲದ ಸಸ್ಯಶಾಸ್ತ್ರದ ವಿದ್ವಾಂಸರೊಂದಿಗೆ ನಿಯಮಿತವಾಗಿ ವ್ಯವಹರಿಸುತ್ತಿದ್ದರು. ತಮ್ಮ ೧೯ ಮಕ್ಕಳಲ್ಲಿ ಒಬ್ಬರಿಗೆ, ನಿಸರ್ಗದ ಬಗ್ಗೆ ತಮಗಿದ್ದ ಈ ಕುತೂಹಲ ಮತ್ತು ಕಲಿಕೆಯ ಪ್ರೇಮವನ್ನು ಕೊಡುಗೆಯಾಗಿ ನೀಡಿದ್ದರು. ಅವರ ೧೦ನೆಯ ಮಗುವಾದ ಜಾನಕಿ ಅಮ್ಮಾಳ್ ತಂದೆಯ ಈ ಅಪೂರ್ವ ಗುಣವನ್ನು ಅನುವಂಶೀಯವಾಗಿ ಪಡೆದರು.

ತಲಚೆರಿಯ ಕ್ವೀನ್ ಮೇರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಜಾನಕಿ, ಮುಂದೆ ೧೯೨೧ರಲ್ಲಿ ಮದ್ರಾಸಿನ  ಪೆಸಿಡೆನ್ಸಿ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಆನರ್ಸ್ ಪದವಿ ಗಳಿಸಿದರು. ಅಲ್ಲಿಯೇ ಕ್ರಿಸ್ಟಿಯನ್ ಕಾಲೇಜಿನಲ್ಲಿ ಸ್ವಲ್ಪ ಕಾಲ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಆಕೆಗೆ, ಮುಂದೆ ಅಮೆರಿಕೆಯ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತವಾಗಿದ್ದ ಬಾರ್ಬೌರ್ ವಿದ್ವತ್ವೇತನ ದೊರಕಿತು. ತಮ್ಮ ಹತ್ತಿರದ ಸಂಬಂಧಿಯೊಂದಿಗೆ ನಿಷ್ಕರ್ಷೆಯಾಗಿದ್ದ ಮದುವೆಯನ್ನು ನಿರಾಕರಿಸಿ, ಶೈಕ್ಷಣಿಕ ಜೀವನಕ್ಕೆ ಪ್ರಾಮುಖ್ಯತೆ ನೀಡಿದ ಜಾನಕಿಯ ಧೈರ್ಯವನ್ನು ಭೇಷ್ ಎನ್ನಲೇಬೇಕು. ೧೯೨೫ರಲ್ಲಿ ಮಿಚಿಗನ್ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಪದವಿ ಪಡೆದು ಭಾರತಕ್ಕೆ ಮರಳಿದ ಜಾನಕಿ ಮತ್ತೊಮ್ಮೆ ಕ್ರಿಸ್ಟಿಯನ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಮುಂದುವರೆಸಿದ್ದರು. ನಂತರ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿಯ ಅಧ್ಯಯನವನ್ನು ಮುಂದುವರೆಸಿದರು. ೧೯೩೨-೩೪ರ ನಡುವೆ, ಭಾರತಕ್ಕೆ ಮರಳಿದ ಆಕೆ, ಟ್ರಿವೆಂಡ್ರಮ್ ನಗರದ ಮಹಾರಾಜ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕಿಯಾದರು.

ಕೋಶ-ತಳಿವಿಜ್ಞಾನದಲ್ಲಿ, ಅದರಲ್ಲೂ ವರ್ಣತಂತುಗಳ ಬಗ್ಗೆ ಮತ್ತು ಅನುವಂಶೀಯತೆಯಲ್ಲಿ ಪರಿಣಿತಿ ಪಡೆದಿದ್ದ ಜಾನಕಿ, ಮುಂದೆ ಕೊಯಮತ್ತೂರಿನಲ್ಲಿದ್ದ ಕಬ್ಬಿನ ತಳಿ ಕೇಂದ್ರಕ್ಕೆ ಸೇರಿ, ಅಲ್ಲಿ ಕಬ್ಬಿನ ಜೀವಶಾಸ್ತ್ರದ ಬಗ್ಗೆ ತಮ್ಮ ಸಂಶೋಧನೆ ಪ್ರಾರಂಭಿಸಿದರು. ಆ ಸಮಯದಲ್ಲಿ ಪ್ರಪಂಚದಲ್ಲೇ ಅತ್ಯಂತ ಸಿಹಿ ಕಬ್ಬಿನ ತಳಿಯೆನಿಸಿದ್ದ Saccharum officinarum ಪ್ರಬೇಧವು ಪಪುವಾ ನ್ಯೂ ಗಿನಿ ದ್ವೀಪಕ್ಕೆ ಸೇರಿದ್ದು, ಅದನ್ನು ಭಾರತ ಅಲ್ಲಿಂದ ಆಮದು ಮಾಡಿಕೊಳ್ಳುತ್ತಿತ್ತು. ಭಾರತದ ಸ್ಥಳೀಯ ಕಬ್ಬಿನ ತಳಿಯ ಪ್ರಬೇಧಗಳನ್ನು ಸುಧಾರಿಸುವ ಒಂದು ಯೋಜನೆಯ ಸಲುವಾಗಿ, ೧೯೨೦ರ ಆದಿ ಭಾಗದಲ್ಲಿ, ಕೊಯಮತ್ತೂರಿನಲ್ಲಿ ಕಬ್ಬಿನ ತಳಿ ಸುಧಾರಿಕೆಯ ಕೇಂದ್ರವನ್ನು ಪ್ರಾರಂಭಿಸಲಾಗಿತ್ತು. ಕಬ್ಬಿನ ಹೈಬ್ರಿಡ್ ತಳಿಗಳಲ್ಲಿರುವ ಪಾಲಿಪ್ಲಾಯಿಡ್ ಕೋಶಗಳನ್ನು ಕುಶಲತೆಯಿಂದ ನಿಭಾಯಿಸುತ್ತಾ, ಅವನ್ನು ಮಿಶ್ರ ತಳಿ ಅಭಿವೃದ್ಧಿಯ ಮೂಲಕ ಸುಧಾರಿಸಿ, ಒಂದು ಅತ್ಯಧಿಕ ಇಳುವರಿ ನೀಡುವ ಕಬ್ಬಿನ ತಳಿಯನ್ನು ಸೃಷ್ಟಿಸಿದ ಜಾನಕಿ ಈ ಬೆಳೆಯನ್ನು ಭಾರತದ ಪರಿಸ್ಥಿತಿಗಳಿಗೆ ಅನುಗೊಳಿಸಿದ್ದರು. ಈ ರೀತಿ ಅಭಿವೃದ್ಧಿಪಡಿಸಿದ ಸುಧಾರಿತ ಕಬ್ಬಿನ ತಳಿಯನ್ನು Saccharum spontaneum ಎಂಬ ಹೆಸರಿನಿಂದ ಊರ್ಜಿತಗೊಳಿಸಿದರು.  ಜಾನಕಿ ಅವರ ಈ ಸಂಶೋಧನೆ, ಭಾರತದಲ್ಲಿ ಕಬ್ಬಿನ ಭೌಗೋಳಿಕ ವಿತರಣೆಯನ್ನು ವಿಶ್ಲೇಷಿಸಲು ಸಹಕಾರಿಯಾಯಿತಲ್ಲದೇ, ಈ ನೂತನ ಸ್ಥಳೀಯ ಭಾರತದ ತಳಿಯನ್ನು ಪ್ರತಿಷ್ಠಿಸಲು ಸಾಧ್ಯವಾಯಿತು.

೧೯೩೫ರಲ್ಲಿ ಪ್ರಸಿದ್ಧ ಭೌತಶಾಸ್ತ್ರಜ್ಞ, ನೋಬೆಲ್ ಪಾರಿತೋಷಕ ಪುರಸ್ಕೃತ ಸರ್ ಸಿ.ವಿ. ರಾಮನ್ ಭಾರತೀಯ ವಿಜ್ಞಾನ ಅಕಾಡೆಮಿಯನ್ನು ಪ್ರಾಂಭಿಸಿದಾಗ, ಅದರ ಪ್ರಥಮ ವರ್ಷದ ಫ಼ೆಲೋ ಆಗಿ, ಜಾನಕಿ ಅಮ್ಮಾಳ್ ಅವರನ್ನು ಆಯ್ಕೆಮಾಡಿದರು. ಆದಾಗ್ಯೂ, ಹಿಂದುಳಿದ ಜಾತಿಯವರಾಗಿದ್ದ ಜಾನಕಿಗೆ, ಆಕೆಯ ಅವಿವಾಹಿತ ದರ್ಜೆಯಿಂದಾಗಿ, ಕೊಯಮತ್ತೂರಿನಲ್ಲಿ ಆಕೆಯ ಪುರುಷ ಸಹೋದ್ಯೋಗಿಗಳಿಂದ ಕಿರುಕುಳ ಪ್ರಾರಂಭವಾಯಿತು.  ಜಾತಿ ಮತ್ತು ಲಿಂಗಬೇಧ ತಾರತಮ್ಯಗಳಿಂದ ನೊಂದ ಜಾನಕಿ, ಕೊಯಮತ್ತೂರಿನ ಕೆಲಸಕ್ಕೆ ರಾಜಿನಾಮೆ ನೀಡಿ, ಲಂಡನ್ನಿನಲ್ಲಿ ಪ್ರಸಿದ್ಧ ಜಾನ್ ಇನ್ಸ್ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕಿ ಕೋಶವಿಜ್ಞಾನಿಯಾಗಿ ಕೆಲಸ ಪ್ರಾರಂಭಿಸಿದರು. ೧೯೪೦-೧೯೪೫ರವರೆಗೆ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ, ಎರಡನೆ ಮಹಾಯುದ್ಧದ ಸಮಯದಲ್ಲಿ, ಜರ್ಮನ್ ಯುದ್ಧ ವಿಮಾನಗಳು ಲಂಡನ್ ನಗರದ ಮೇಲೆ ಬಾಂಬ್ ದಾಳಿ ನಡೆಸಿದ್ದರು. ಮುಂದೆ ತಮ್ಮ ಲಂಡನ್ ಅನುಭವಗಳನ್ನು ತಮ್ಮ ಸ್ನೇಹಿತರೊಡನೆ ಹಂಚಿಕೊಳ್ಳುವಾಗ, ಆ ಧೈರ್ಯವಂತ ಮಹಿಳೆ, ತಾವು ಆ ರಾತ್ರಿ ಬಾಂಬ್ ದಾಳಿಯ ಸಮಯದಲ್ಲಿ ಹೇಗೆ ಹಾಸಿಗೆಯಿಂದ ಕೆಳಕ್ಕೆ ಹಾರಿ ಅಡಗಿ ಕುಳಿತುಕೊಳ್ಳುತ್ತಿದ್ದರು ಎನ್ನುವುದನ್ನು ವಿವರಿಸಿದ್ದರು. ಜೊತೆಗೆ ಬಾಂಬ್ ದಾಳಿಯ ಮಾರನೆಯ ದಿನ ಚೂರಾಗಿ ಬಿದ್ದಿರುತ್ತಿದ್ದ ಗಾಜಿನ ಪದಾರ್ಥಗಳನ್ನು ಸ್ವಚ್ಛಗೊಳಿಸುತ್ತಾ, ತಮ್ಮ ಸಂಶೋಧನೆಯನ್ನು ಮುಂದುವರೆಸುತ್ತಿದ್ದರು ಎನ್ನುವುದನ್ನು ವರ್ಣಿಸುತ್ತಿದ್ದರಂತೆ.

ಆಕೆಯ ಸಂಶೋಧನೆಯಿಂದ ಬಹಳ ಪ್ರಭಾವಿತರಾಗಿ ಸಂತುಷ್ಟರಾದ ರಾಯಲ್ ಹಾರ್ಟಿಕಲ್ಚರಲ್ ಸಂಸ್ಥೆ, ಜಾನಕಿಯನ್ನು ಪ್ರಸಿದ್ಧ ಕ್ಯೂ ಸಸ್ಯ ಉದ್ಯಾನವನದ ಬಳಿಯಲ್ಲಿದ್ದ, ಅವರ ಮತ್ತೊಂದು ಕ್ಯಾಂಪಸ್ಸಿನಲ್ಲಿದ್ದ ಸಸ್ಯ ಸಂಗ್ರಹಣೆಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಆಹ್ವಾನಿಸಿತು. ಅಲ್ಲಿ, ಜಾನಕಿ ಪ್ರಪಂಚದ ಹಲವು ಅತ್ಯಂತ ಪ್ರತಿಭಾನ್ವಿತ ಕೋಶ-ವಿಜ್ಞಾನಿಗಳು, ತಳಿ-ಸಂಶೋಧಕರು ಹಾಗೂ ಸಸ್ಯಶಾಸ್ತ್ರಜ್ಞರನ್ನು ಭೇಟಿ ಮಾಡಿದರು. ೧೯೪೫ರಲ್ಲಿ, ತಮ್ಮ ಅತ್ಯಂತ ನಿಕಟ ಸ್ನೇಹಿತ ಹಾಗೂ ಮಾರ್ಗದರ್ಶಿಯಾಗಿದ್ದ ಪ್ರಸಿದ್ಧ ಜೀವವಿಜ್ಞಾನಿ ಸಿ. ಡಿ. ಡಾರ್ಲಿಂಗ್ಟನ್ ಜೊತೆಯಲ್ಲಿ ಸಹ-ಲೇಖಕಿಯಾಗಿ, The Chromosome Atlas of Cultivated Plants ಎನ್ನುವ ಪುಸ್ತಕವನ್ನು ಹೊರತಂದರು. ಈ ಸಂಸ್ಥೆಯಲ್ಲಿ ಆಕೆ ಸಂಶೋಧನೆ ನಡೆಸುತ್ತಿದ್ದ ಹಲವಾರು ಸಸ್ಯಗಳಲ್ಲಿ ಮ್ಯಾಗ್ನೋಲಿಯಾ ಗಿಡವೂ ಒಂದಾಗಿತ್ತು. ಇಂದಿಗೂ ಆ ಕ್ಯಾಂಪಸ್ಸಿನಲ್ಲಿ, ಜಾನಕಿ ಅವರು ನೆಟ್ಟಿದ್ದ ಮ್ಯಾಗ್ನೋಲಿಯಾ ಗಿಡಗಳು ಇನ್ನೂ ನಳನಳಿಸುತ್ತಿವೆ. ಅವುಗಳಲ್ಲಿ ಒಂದು ಪ್ರಬೇಧವು ಸಣ್ಣ ಬಿಳಿಯ ಹೂಗಳನ್ನು ಬಿಡುತ್ತದೆ. ಆ ಗಿಡಕ್ಕೆ ಜಾನಕಿಯ ಗೌರವಾರ್ಥವಾಗಿ Magnolia Kobus janaki Ammal ಎಂದು ಹೆಸರಿಟ್ಟಿದ್ದಾರೆ. ಚೈನ ಮತ್ತು ಜಪಾನ್ ದೇಶಗಳಲ್ಲಿ ಸಂಭ್ರಮಿಸಲ್ಪಡುವ ಈ ಹೂಗಳು ನಿಜಕ್ಕೂ ಸುಂದರ. ಇಂದು, ಈ ಗಿಡಗಳನ್ನು ಯೂರೋಪಿನ ಹಲವೇ ಸಸಿತೋಟಗಳಲ್ಲಿ ಬೆಳಸಲಾಗುತ್ತಿದೆ.

೧೯೫೧ರಲ್ಲಿ, ಅಂದು ಭಾರತದ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರೂ ಅವರು, ಜಾನಕಿ ಅವರನ್ನು ತಾವೇ ಸ್ವತಃ ಭಾರತಕ್ಕೆ ಮರಳಿ ಬರಲು ಕೇಳಿಕೊಂಡು, ಬೊಟಾನಿಕಲ್ ಸರ್ವೆ ಆಫ಼್ ಇಂಡಿಯಾ ಸಂಸ್ಥೆಯನ್ನು ಪುನರ್ರಚಿಸಲು ಆಹ್ವಾನಿಸಿದರು. ಆ ಆಹ್ವಾನವನ್ನು ಸ್ವೀಕರಿಸಿ ಭಾರತಕ್ಕೆ ಮರಳಿದ ಜಾನಕಿ, ೧೯೫೪ರಲ್ಲಿ ಕಲಕತ್ತೆಯಲ್ಲಿದ್ದ Botanical Survey of India ಕಚೇರಿಯನ್ನು ಪುನರ್ರಚಿಸಿದರು. ಆ ಸಮಯದಲ್ಲಿ ಆಕೆಯ ಜೊತೆಯಿದ್ದ ಸಹೋದ್ಯೋಗಿಗಳು, ಹೇಗೆ ಜಾನಕಿ ತಾವೇ ಸ್ವತಃ ಕೈಯ್ಯಲ್ಲಿ ಪರಕೆ ಹಿಡಿದು, ಪ್ರಸಿದ್ಧ ಚೌರಂಗಿ ಓಣಿಯಲ್ಲಿದ್ದ, ಬೊಟಾನಿಕಲ್ ಸರ್ವೆ ಆಫ಼್ ಇಂಡಿಯಾ ಆಫ಼ೀಸಿನ ಹೊರಭಾಗದ ರಸ್ತೆಯನ್ನು ಗುಡಿಸಿಬಿಡುತ್ತಿದ್ದರು ಎನ್ನುವುದನ್ನು ಜ್ಞಾಪಿಸಿಕೊಳ್ಳುತ್ತಾರೆ.

ಜಾನಕಿ ಭಾರತದ ಮೂಲೆಮೂಲೆಗೂ ಪ್ರಯಾಣಿಸಿ, ಅಲ್ಲಿನ ಸ್ಥಳೀಯ ಪ್ರಬೇಧದ ಸಸ್ಯಗಳನ್ನು ಸಂಗ್ರಹಿಸಿ ಶೇಖರಿಸುತ್ತಿದ್ದರಂತೆ. ಕೇರಳದ ವೈನಾಡ್ ಪ್ರದೇಶದಲ್ಲಿರುವ ಅಪೂರ್ವ ಗಿಡಮೂಲಿಕೆ ಸಸ್ಯಗಳನ್ನು ಹುಡುಕುವುದು ಆಕೆಯ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು. ಜೊತೆಗೆ ಅತ್ಯುನ್ನತ ಪ್ರದೇಶಗಳಾದ ಲಡಾಕಿನಲ್ಲಿ  ಸಮರ್ಥನೀಯ ಕೃಷಿ ನಡೆಸಬಹುದಾದ ವಿಧಾನಗಳ ಬಗ್ಗೆಯೂ ತಮ್ಮ ಗಮನ ಹರಿಸಿದ್ದರು. ಪರಿಸರ ವಿಜ್ಞಾನ ಮತ್ತು ಜೀವರಾಶಿ ವೈವಿಧ್ಯತೆಯ ಬಗ್ಗೆ ಅಧ್ಯಯನ ನಡೆಸಿದ್ದ ಜಾನಕಿ, ಒಬ್ಬ ಸಕ್ರಿಯ ಪರಿಸರವಾದಿಯಾಗಿದ್ದರು. ಕೇರಳದ ಸೈಲೆಂಟ್ ವ್ಯಾಲಿಯಲ್ಲಿ ಕುನ್ತಿಪುನ್ತ್ಜ಼ ನದಿಗೆ ಕಟ್ಟಬೇಕೆಂದಿದ್ದ ಹೈಡ್ರೊ-ಎಲೆಕ್ಟ್ರಿಕ್ ಅಣೆಕಟ್ಟಿನ ವಿರುದ್ಧವಾಗಿ ನಡೆದ ಚಳುವಳಿಗಳಲ್ಲಿ, ಜಾನಕಿ ಮುಂದಾಳುತ್ವ ವಹಿಸಿದ್ದರು. ೧೯೫೫ರಲ್ಲಿ, ಅಮೆರಿಕೆಯ ಪ್ರಸಿದ್ಧ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ನಡೆದ, ಪರಿಸರ ವಿಜ್ಞಾನದ ಚರಿತ್ರೆಯ ಸಮ್ಮೇಳನದಲ್ಲಿ ಆಹ್ವಾನಿತೆಯಾದ ಏಕೈಕ ಮಹಿಳೆ ಎನ್ನುವ ಗೌರವಕ್ಕೂ ಆಕೆ ಪಾತ್ರರಾದರು. ಸರಳ ಜೀವನವನ್ನು ಬೆಂಬಲಿಸುತ್ತಿದ್ದ ಜಾನಕಿ ಒಬ್ಬ ಕಟ್ಟಾ ಗಾಂಧಿವಾದಿಯಾಗಿದ್ದರು. ಆಕೆಯ ಜೀವನ ಶೈಲಿಯ ಬಗ್ಗೆ ಮುಂದೆ ತನ್ನ ಪುಸ್ತಕವೊಂದರಲ್ಲಿ ಆಕೆಯ ಸೋದರಸೊಸೆ ಗೀತಾ ಡಾಕ್ಟರ್ ಜಾನಕಿಯ ವೇಷಭೂಷಣದ ಬಗ್ಗೆ ಹೀಗೆ ಬರೆದಿದ್ದಾರೆ: “ಜಾನಕಿ ಎತ್ತರವಾದ ಮಹಿಳೆ, ತಮ್ಮ ತಾರುಣ್ಯದಲ್ಲಿ ಎಲ್ಲರ ದೃಷ್ಟಿ ಸೆಳೆಯುವಂತಿದ್ದರು. ತಮ್ಮ ನೀಳವಾದ, ಸಮೃದ್ಧ ಕೇಶವನ್ನು ಸಡಿಲವಾದ ತುರುಬಿನಲ್ಲಿ ಸೇರಿಸಿ ಅದನ್ನು ತಮ್ಮ ಕತ್ತಿನ ಹಿಂಭಾಗದಲ್ಲಿ ಇಳಿಬಿಡುತ್ತಿದ್ದರು. ತಮ್ಮ ನಂತರದ ದಿನಗಳಲ್ಲಿ, ಉಜ್ವಲವಾದ ಹಳದಿ ವರ್ಣದ ರೇಶ್ಮೆ ಸೀರೆ ಉಟ್ಟು, ಅದೇ ಬಣ್ಣದ ಸಡಿಲವಾದ ಕುಪ್ಪುಸ ಅಥವಾ ಜಾಕೆಟ್ ಧರಿಸುತ್ತಿದ್ದರು. ಅವರ ಸುತ್ತಲಿನ ಜನಕ್ಕೆ ಆಕೆ ಒಬ್ಬ ಭೌದ್ಧ ಸನ್ಯಾಸಿನಿಯಂತೆ ಕಂಡುಬರುತ್ತಿದ್ದರು.  ತನ್ನ ಜೀವನದ ಅವಶ್ಯಕತೆಗಳನ್ನು ಕನಿಷ್ಠಮಟ್ಟಕ್ಕೆ ಸೀಮಿತಗೊಳಿಸಿ, ಸಂಯಮ ಮತ್ತು ಕಟ್ಟುನಿಟ್ಟುಗಳನ್ನು ಪಾಲಿಸುತ್ತಾ, ಮೌನವನ್ನು ಅಂಗೀಕರಿಸಿದ್ದರು.”

ತಮ್ಮ ವೃತ್ತಿಯಿಂದ ನಿವೃತ್ತರಾದ ಬಳಿಕ, ಜಾನಕಿ ವಿಜ್ಞಾನದಲ್ಲಿ ಕಾರ್ಯವನ್ನು ಮುಂದುವರೆಸಿದ್ದರು. ಮುಂಬಯಿಯ ಭಾಭಾ ಅಣುಶಕ್ತಿ ಕೇಂದ್ರದಲ್ಲಿರುವ, ಸಸ್ಯಶಾಸ್ತ್ರ ವಿಭಾಗದಲ್ಲಿ, ಸಂದರ್ಶನ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಜೀವನದ ಕಡೆಯ ದಿನಗಳಲ್ಲಿ, ಜಾನಕಿಯ ಹವ್ಯಾಸ ಬೆಕ್ಕುಗಳನ್ನು ಬೆಳೆಸುವತ್ತ ತಿರುಗಿತು. ಒಬ್ಬ ಪರಿಣಿತ ತಳಿಸಂಶೋಧಕಿಯಾಗಿದ್ದ ಆಕೆ, ತಮ್ಮ ಮನೆಯಲ್ಲಿದ್ದ ಬೆಕ್ಕಿನ ಸಂಸಾರದ ಎಲ್ಲಾ ಸದಸ್ಯರ ನಡುವಿದ್ದ ಸೂಕ್ಷ್ಮ ವ್ಯತ್ಯಾಸಗಳನ್ನು ಗುರ್ತಿಸುತ್ತಿದ್ದರಂತೆ. ೧೯೮೪ರಲ್ಲಿ, ತಮ್ಮ ೮೭ನೆಯ ವಯಸ್ಸಿನಲ್ಲಿ, ಫ಼ೆಬ್ರುವರಿ ೭ರಂದು, ಪ್ರಯೋಗಾಲಯದಲ್ಲಿದ್ದಾಗಲೇ ನಿಧನರಾದ ಜಾನಕಿ ಅಮ್ಮಾಳ್, ಕಡೆಯ ಕ್ಷಣದವರೆಗೂ ತಮ್ಮ ಜೀವನವನ್ನು ವಿಜ್ಞಾನಕ್ಕೆ ಮುಡಿಪಾಗಿಟ್ಟಿದ್ದರು.

ಭಾರತೀಯ ವಿಜ್ಞಾನಕ್ಕೆ ಆಕೆ ನೀಡಿದ್ದ ಅಪೂರ್ವವಾದ ಕೊಡುಗೆಯನ್ನು ಸನ್ಮಾನಿಸಿ, ೧೯೭೭ರಲ್ಲಿ ಸರ್ಕಾರ ಆಕೆಗೆ ಪದ್ಮಶ್ರಿ ಪ್ರಶಸ್ತಿ ನೀಡಿ ಗೌರವಿಸಿತ್ತು. ೨೦೦೦ ಇಸವಿಯಲ್ಲಿ, ಪರಿಸರ ಮತ್ತು ಅರಣ್ಯ ಇಲಾಖೆ ಆಕೆಯ ಹೆಸರಿನಲ್ಲಿ, ಸಸ್ಯವರ್ಗೀಕರಣ ಶಾಸ್ತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿತು. ಜಮ್ಮು ಮತ್ತು ಕಾಶ್ಮೀರದಲ್ಲಿ, ಆಕೆಯ ಹೆಸರಿನಿಂದ ಕರೆಯಲ್ಪಡುವ ಸಸ್ಯ ಸಂಗ್ರಹಣಾಲಯವಿದೆ. ಇತ್ತೀಚೆಗೆ ಇಂಗ್ಲೆಂಡಿನ ಜಾನ್ ಇನ್ಸ್ ಸಂಶೋಧನಾ ಕೇಂದ್ರವು, ಜಾನಕಿ ಅಮ್ಮಾಳ್ ಹೆಸರಿನಲ್ಲಿ, ಅಭಿವೃದ್ಧಿಶೀಲ ದೇಶದ ವಿದ್ಯಾರ್ಥಿಗಳಿಗಾಗಿ, ಸ್ನಾತಕೋತ್ತರ ಪದವಿಯ ವಿದ್ವತ್ವೇತನ ಒಂದನ್ನು ಪ್ರತಿಷ್ಠಾಪಿಸಿದ್ದಾರೆ. ವಿಜ್ಞಾನದ ಅನ್ವೇಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಜಾನಕಿ ಒಬ್ಬ ಅಸಾಮಾನ್ಯ ಮಹಿಳೆ. ತಮ್ಮ ಸಂಶೋಧನೆಯ ಮೂಲಕ ತಮ್ಮ ಹೆಸರು ಪ್ರಪಂಚದಲ್ಲಿ ಚಿರವಾಗಿರಬೇಕು ಎನ್ನುವ ನಂಬಿಕೆ ಇಟ್ಟಿದ್ದ ಆಕೆಯ ಜೀವನ ನಿಜಕ್ಕೂ ಆದರ್ಶಪ್ರಾಯವಾದದ್ದು. ಮುಂದಿನ ಬಾರಿ ನಿಮ್ಮ ಕಾಫ಼ಿಯಲ್ಲಿ ಭಾರತದ ಕಬ್ಬಿನ ಸಕ್ಕರೆಯನ್ನು ಬೆರಸುವಾಗ, ಆ ಸಕ್ಕರೆಯ ಸವಿಗೆ ಕಾರಣ ಜಾನಕಿ ಅಮ್ಮಾಳ್ ಅವರ ಸಂಶೋಧನೆ ಎನ್ನುವುದು ನಿಮ್ಮ ನೆನಪಿನಲ್ಲಿರಲಿ!

(ಈ ಲೇಖನದ ಆಧಾರ:  Meet India’s First Woman PhD in Botany – She is the reason your sugar tastes sweeter! by Sanchari Pal The Better India November 16, 2016)

                    (ಮುಂದಿನ ವಾರ -ಅನಿವಾಸಿ ವಿಶೇಷ ಸರಣಿ ಆರಂಭ)