( ಕವಿ ಎನ್ನಿಸಿಕೊಳ್ಳಲು ಎಲ್ಲರಿಗೂ ಆಸೆಯೇ. ಯಾವಾಗಲ್ಲದಿದ್ದರೂ ವಯಸ್ಸಿನಲ್ಲಿ ಇದ್ದಾಗಲಂತೂ ಎಲ್ಲರೂ ಕವಿಗಳೆ ಅಂತೆ!! ಕವಿ ಎನ್ನಿಸಿಕೊಳ್ಳಲು ಕ್ರಮಿಸಬೇಕಿರುವ ಹಾದಿಯ ಕಷ್ಟ ಸುಖಗಳು ಹಲವು. ಅವುಗಳ ಬಗ್ಗೆಯೇ ಒಂದು ಕವಿತೆ ಬರೆದರೆ ಹೇಗೆ? ಲಘು ಹಾಸ್ಯ, ವಿಡಂಬನೆ, ವರ್ಣನೆ ಮತ್ತು ವಾಸ್ತವಗಳನ್ನು ತಿಳಿಯಾದ ರಸದಲ್ಲಿ ಹಿಡಿದಿಟ್ಟುರುವ ಈ ಕವಿತೆ, ಕವಿಯ ಕಾರ್ಯಾಗಾರದ ಎಲ್ಲ ಮುಖಗಳನ್ನು ತೆರೆದಿಟ್ಟಿದೆ-ಸಂ)
ಕವಿ ಆಗಬೇಕೆ ?
ಕವಿ ಆಗಬೇಕೆ ?
ಕಲಿ ಕೂಡಿಸಲು ಪ್ರಾಸ
ಅದೇನು ಬಲು ತ್ರಾಸ
ಆಗುವುದು ಒಮ್ಮೊಮ್ಮೆ ಜಿಜ್ಞಾಸ
ಮಾಡಬೇಕಿಲ್ಲ ಅದಕೆ ಉಪವಾಸ
ಓದಬೇಕು ಸಾಕಷ್ಟು ಇತಿಹಾಸ
ಸವಿ ಅವೆಲ್ಲದರ ಧೃಡ ರಸ
ಮಾಡಬೇಕು ಬರೆಯುವ ಅಭ್ಯಾಸ
ಎಡವಿದರೆ ಆಗುವುದು ಅಭಾಸ
ಅಂತೆ ಆಗುವುದು ಸರಸ ವಿರಸ
ಹಾಗೆಂದು ನಿಲ್ಲುಸುವೆಯ ಹವ್ಯಾಸ?
ಕಾಣಬೇಕು ಆಗಾಗ್ಯೆ ಕವಿ ಕವಿತೆಯ ಕನಸ
ಬೀರು ಕವಿತೆಯಲ್ಲಿ ನಿನ್ನ ಮನದ ವಿಕಾಸ
ತೋರು ನಿನ್ನಯ ಸಂತಸ ಕವಿತೆಯ ಸಾಹಸ
ಆಗ ಸವಿ ನಿನ್ನಯ ಕವಿತೆಯ ಕನಸ
ಕವಿತೆಗಳು ಕವಿಗಳು ಸಹಸ್ರ ಕೋಟಿ
ಆ ಸಮುದ್ರದಲ್ಲಿ ನಿನ್ನದೊಂದು ಚಿಟುಕು ಉಪ್ಪು
ಆದರೇನಂತೆ ನೀ ಬರೆದೆ ಒಂದೇರಡು ಕವನ
ಹಾಡಿ ನಲಿವರು ನಗುವರು ಅದಕೆಂತು ಸಾಟಿ
ಅಂತ್ಯದಲ್ಲಿ ನಾಮಾಂಕಿತ ಆಧುನಿಕ ಶ್ರೀನಿವಾಸ
ಮತ್ತೆ ಕೆಲವರು ಕೂಡಿಸುವರು ಪ್ರಾಸ
ಅಂತೆ ಸಾಗುವುದು ಕವಿಗಳ ಪ್ರವಾಸ
ನೆನೆವರು ಆಗ ಕಾಳಿದಾಸ ಕುಮಾರವ್ಯಾಸ
ಗಣಪತಿ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡೆಕೊಡಿ ಗ್ರಾಮದವರು. ಸದ್ಯ ಕಳೆದ ಹತ್ತು ವರ್ಷಗಳಿಂದ ಇಂಗ್ಲೆಂಡಲ್ಲಿ IT Consultant ಆಗಿ ಪತಿಷ್ಠಿತ ಬ್ರಿಟಿಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಉದ್ದಿಮೆಯ ಹೊರತು ಕನ್ನಡಿಗರು ಯು. ಕೆ. ಎಂಬ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರೂ, ಅಧ್ಯಕ್ಷರೂ ಆಗಿದ್ದು, ಅನೇಕ ಕನ್ನಡ ಚಟುವಟಿಕೆಗಳಲ್ಲಿ ಸಕ್ರಿಯಯವಾಗಿ ಪಾಲ್ಗೊಳ್ಳುತ್ತಿದ್ದಾರೆ. “ಯು. ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆ” ಎನ್ನುವ ಇದೇ ಶೀರ್ಷಿಕೆಯಡಿ ಯು.ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆಯ ಬಗ್ಗೆ ವಿಶ್ವವಾಣಿ ದಿನಪತ್ರಿಕೆಯಲ್ಲಿ ಲೇಖನವನ್ನು ಬರೆದಿದ್ದಾರೆ. ಐದಾರು ವರ್ಷಗಳಿಂದ ಕೆ.ಯು.ಕೆ. ಟಾಕೀಸ್ ಎಂಬ ಸಂಸ್ಥೆಯ ಸ್ವಯಂ ಸೇವಕನಾಗಿ ಕನ್ನಡ ಚಲನಚಿತ್ರಗಳ ವಿತರಣೆಯಲ್ಲಿ ಅನುಭವ ಗಳಿಸಿದ್ದಾರೆ. ಕೆ.ಯು.ಕೆ ಟಾಕೀಸ್, ಕನ್ನಡಿಗರು ಯು. ಕೆ. ಸಮುದಾಯದ ಒಂದು ಅಂಗ. ಇಂಗ್ಲೆಂಡನಲ್ಲಿ ಕೆ.ಯು.ಕೆ. ಟಾಕೀಸ್ ಹೊರತುಪಡಿಸಿ ಇನ್ನು ಅನೇಕ ಕನ್ನಡ ಸಿನಿಮಾ ವಿತರಕರು ಹಲವಾರು ಕನ್ನಡ ಚಲನ ಚಿತ್ರಗಳನ್ನು ನಿರಂತರವಾಗಿ ಬಿಡುಗಡೆ ಮಾಡುತ್ತಿದ್ದಾರೆ.
ಸಿನಿಮಾ ವಿತರಣೆಯ ತಮ್ಮ ಅನುಭವವನ್ನು ಕನ್ನಡಿಗರ ಜೊತೆ ಹಂಚಿಕೊಳ್ಳಲು ಅನುಕೂಲ ಮಾಡಿಕೊಡುತ್ತಿರುವ ಅನಿವಾಸಿ ಕನ್ನಡ ತಂಡಕ್ಕೆ ವಂದನೆಗಳೊಂದಿಗೆ ಈ ಲೇಖನವನ್ನು ಕಳಿಸಿಕೊಟ್ಟಿದ್ದಾರೆ- ಸಂ
( ಪರದೇಶೀ ಸಿನಿಮಾ ಮಾರುಕಟ್ಟೆಯ ಬಗ್ಗೆ ಭಾರತದಲ್ಲಿ ಭಾರೀ ಹುಮ್ಮಸ್ಸಿನ ಭಾವವಿದೆ. ಕನ್ನಡ ಸಿನಿಮಾಗಳು ಕೂಡ ವಿದೇಶೀ ಮಾರುಕಟ್ಟೆಯ ಭಾಗವನ್ನು ಇತ್ತೀಚೆಗೆ ಪರಿಗಣನೆಯಲ್ಲಿಟ್ಟುಕೊಂಡು, ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯಾದ ದಿನವೇ ವಿದೇಶಗಳಲ್ಲಿ ಕೂಡ ಚಲನಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡ ಚಿತ್ರಗಳ ವಿತರಣೆಗೆ ಕನ್ನಡ ಕೂಟಗಳು, ಸಂಘಗಳಿಗಿಂತ ಉತ್ತಮ ಮಧ್ಯಸ್ಥಿಕೆಯಿಲ್ಲ. ಕನ್ನಡ ಸಂಘ ಮತ್ತು ವಿತರಣೆ ಎರಡರಲ್ಲೂ ಅನುಭವವಿರುವ ಗಣಪತಿ ಭಟ್ ಈ ಬಗ್ಗೆ ಯು. ಕೆ. ಕನ್ನಡಿಗರಿಗೆ ಬರೆದಿರುವ ಈ ಲೇಖನ ಯಾವುದೇ ಉತ್ಪ್ರೇಕ್ಷೆಯಿಲ್ಲದ, ವಸ್ತು ನಿಷ್ಟ ಬರಹ-ಸಂ)
ಯು. ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆ!
ಇತ್ತೀಚಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡ ಚಲನ ಚಿತ್ರಗಳ ಭರ್ಜರಿ ಪ್ರದರ್ಶನ ಕಾಣಬರುತ್ತಿದೆ! ಹತ್ತು ವರ್ಷಗಳ ಹಿಂದೆ ಕನ್ನಡ ಚಿತ್ರ ಕೇವಲ ಲಂಡನ್ ಹಾಗು ಸುತ್ತ ಮುತ್ತ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ರೇಡಿಂಗ್ ನಲ್ಲಿ ಹಾಗೂ ಬರ್ಮಿಂಗ್ಹ್ಯಾಮ್ ನಲ್ಲಿ ಆಗಾಗ ಕನ್ನಡ ಚಿತ್ರ ಪ್ರದರ್ಶನ ಆಗ್ತಾ ಇತ್ತು. ಬ್ರಿಟಿಷ್ ಬೋರ್ಡ್ ಆಫ್ ಫಿಲಂ ಕ್ಲಾಸಿಫಿಕೇಶನ್ ವೆಬ್ ಸೈಟ್ ಪ್ರಕಾರ ಕಳೆದ ೧೦೦ ವರ್ಷಗಲ್ಲಿ ಕೇವಲ ಬೆರೆಳೆಣಿಸುವಷ್ಟು ಕನ್ನಡ ಚಿತ್ರಗಳು ಮಾತ್ರ BBFC ಸರ್ಟಿಫಿಕೇಟ್ ಪಡೆದುಕೊಂಡಿವೆ. ಆದರೆ ಇತ್ತೀಚಿಗೆ ಹಲವಾರು ಕನ್ನಡ ಚಲನ ಚಿತ್ರಗಳು BBFC ಸರ್ಟಿಫಿಕೇಟ್ ಪಡೆದುಕೊಂಡಿವೆ.
“ಮುಂಗಾರು ಮಳೆ ೨” ಬಿಡುಗಡೆ ಆಗುವ ಮುನ್ನ ಕಳೆದ ೧೦ ವರ್ಷಗಲ್ಲಿ ಯಾವುದೇ ಕನ್ನಡ ಚಲನ ಚಿತ್ರಗಳು ದೊಡ್ಡ ಪ್ರಮಾಣದಲ್ಲಿ ಏಕೈಕ ಕಾಲದಲ್ಲಿ ಸಿನಿ ವರ್ಲ್ಡ್ ಹಾಗು ಒಡಿಯೋನ್ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿರಲಿಲ್ಲ. ಇಂಗ್ಲೆಂಡ್ನಲ್ಲಿ ಸೂಪರ್ ಹಿಟ್ ಚಿತ್ರ ರಂಗಿತರಂಗ ಕೂಡ ಕೇವಲ ಖಾಸಗಿ ಪ್ರದರ್ಶನಕ್ಕೆ ಸೀಮಿತವಾಗಿತ್ತು. ಆದರೆ ರಂಗಿತರಂಗ ಚಿತ್ರ ಅನೇಕ ಯು.ಕೆ. ಕನ್ನಡಿಗರನ್ನು ಚಿತ್ರ ಮಂದಿರಕ್ಕೆ ಸೆಳೆದಿದ್ದು ಒಂದು ವಿಶೇಷ ಸಾಧನೆ.
ಪುನೀತ್ ರಾಜಕುಮಾರ ನಟಿಸಿರುವ ಚಕ್ರವ್ಯೂಹ ಚಿತ್ರ ಕೆ. ಯು. ಕೆ. ಟಾಲ್ಕಿಸ್ ಮುಖಾಂತರ ಪ್ರಥಮ ಬಾರಿಗೆ ಎಂಟು ಯು. ಕೆ. ಕೇಂದ್ರಗಳಲ್ಲಿ ಮತ್ತು ಏಕೈಕ ದಿನ ನಾಲ್ಕು ಕಡೆ ಖಾಸಗಿ ಪ್ರದರ್ಶನವಾಗಿತ್ತು. ಅದಾದ ಮೇಲೆ ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಸುಮಾರು ಹದಿನಾಲ್ಕು ಪ್ರದೇಶಗಳಲ್ಲಿ ಖಾಸಗಿ ಪ್ರದರ್ಶನಗೊಂಡಿತ್ತು.
೨೦೧೬ ಸೆಪ್ಟೆಂಬರ್ ನಲ್ಲಿ “ಮುಂಗಾರು ಮಳೆ ೨” ಚಿತ್ರ ಯುನೈಟೆಡ್ ಕಿಂಗ್ಡಮ್ ಕನ್ನಡ ಚಲನ ಚಿತ್ರ ಮಾರುಕಟ್ಟೆಯ ದಿಕ್ಕು ದಿಶೆಯನ್ನೇ ಬದಲಾಯಿಸಿತು. ಮೊದಲು ಕೇವಲ ಬೆರಳು ಲೆಕ್ಕ ಪ್ರದೇಶಕ್ಕೆ ಸೀಮಿತವಾದ ಕನ್ನಡ ಚಿತ್ರ, “ಮುಂಗಾರು ಮಳೆ ೨” ಮೂಲಕ ೧೭ ವಿವಿಧ ಪ್ರಾಂತ್ಯಗಳಲ್ಲಿ ೨೫ಕ್ಕೂ ಹೆಚ್ಚು ಪ್ರದರ್ಶನವನ್ನು ಕಾಣಿತು. ಸಿನಿ ವರ್ಲ್ಡ್, VUE ಸಿನಿಮಾ ಹಾಗು ಖಾಸಗಿ ಪ್ರದರ್ಶನದ ಮೂಲಕ ಹಲವಾರು ಇಂಗ್ಲೆಂಡ್, ಸ್ಕಾಟ್ಲೆಂಡ್ ಪಟ್ಟಣಗಳಲ್ಲಿ ಕನ್ನಡಿಗರಿಗೆ ತಮ್ಮ ಮನೆಯ ಪಕ್ಕದ ಸಿನೆಮಾಗಳಲ್ಲಿ ಕುಟುಂಬ ಸಮೇತ ಕನ್ನಡ ಚಿತ್ರವನ್ನು ವೀಕ್ಷಿಸುವ ಒಂದು ಅವಕಾಶವನ್ನು ತಂದು ಕೊಟ್ಟಿತು.
ಕಳೆದ ದಶಕಗಳಲ್ಲಿ ಕನ್ನಡ ಚಲನ ಚಿತ್ರಗಳು ಯುನೈಟೆಡ್ ಕಿಂಗ್ಡಮ್ ನಲ್ಲಿ ವಿವಿಧ ರೀತಿಯ ಪ್ರದರ್ಶನಗಳನ್ನು ಕಂಡು ಸಧ್ಯದ ಪರಿಸ್ಥಿತಿಯಲ್ಲಿ ಒಂದು ವಿದೇಶಿ ಕಮರ್ಷಿಯಲ್ ಮಾರುಕಟ್ಟೆಯತ್ತ ಪಯಣ ನಡೆಸಿರುವದಂತೂ ನಿಜ. ಇದಕ್ಕೆ ಉದಾಹರಣೆ ಇತ್ತೀಚಿಗೆ ಕಿರಿಕ್ ಪಾರ್ಟಿ, ಅಲ್ಲಮ್ಮ, ಬ್ಯುಟಿಫುಲ್ ಮನಸುಗಳು, ಉರ್ವಿ, ಹೆಬ್ಬುಲಿ ಹಾಗು ರಾಜಕುಮಾರ ಚಲನ ಚಿತ್ರಗಳು ಒಂದರ ಹಿಂದೆ ಇನ್ನೊಂದು ಬಿಡುಗಡೆ ಆಗಿದ್ದು, ಯು. ಕೆ. ಕನ್ನಡಿಗರನ್ನು ದಿಗಿಲುಗೊಳಿಸಿದೆ.
ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕನ್ನಡ ಚಲನ ಚಿತ್ರಗಳು ಯು.ಕೆ. ಮಾರುಕಟ್ಟೆಯತ್ತ ತಮ್ಮ ಒಲವನ್ನು ತೋರಿಸುವದಂತೂ ನಿಜ ಆದರೆ ಗಮನಿಸಬೇಕಾದಂತಹ ವಿಷಯವೇನೆಂದರೆ ಈಗಾಗಲೇ ಖಾಸಗಿ ಪ್ರದರ್ಶನ ಸಾಕಷ್ಟು ಕಮ್ಮಿಯಾಗಿದ್ದು, ಮುಂದೆ ಬರುವ ಎಲ್ಲಾ ಚಿತ್ರಗಳನ್ನ ಸಿನಿ ವರ್ಲ್ಡ್ ಹಾಗು ಒಡಿಯೋನ್ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಬೇಕೆಂಬುದೇ ಇಲ್ಲಿಯ ಪ್ರೇಕ್ಷಕರ ಕೋರಿಕೆ.
ಇದಕ್ಕೆಲ್ಲ ಕಾರಣ ಹಲವಾರು ಉತ್ಸಾಹಿ ಯು. ಕೆ. ಕನ್ನಡಿಗರು, ಉತ್ತಮ ಪ್ರಮಾಣದ ಕನ್ನಡ ಚಲನ ಚಿತ್ರಗಳು ಹಾಗು ಸಹಾಯಕಾರಿ ಕನ್ನಡ ಚಲನ ಚಿತ್ರ ನಿರ್ಮಾಪಕರು. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಉತ್ತಮ ಕನ್ನಡ ಚಲನ ಚಿತ್ರಗಳು ಯು.ಕೆ. ಮಾರುಕಟ್ಟೆಯತ್ತ ತಮ್ಮ ಒಲವನ್ನು ತೋರಿಸುವದಂತೂ ನಿಜ ಆದರೆ ನಾವು ಕನ್ನಡಿಗರು ಸ್ವತಃ ಪ್ರಯತ್ನದಿಂದ ಮದ್ಯಂತಿಕೆಯನ್ನು ದೂರ ಮಾಡಿ ಸಿನಿಮಾ ನೆಟ್ವರ್ಕ್ ಮೂಲಕ ಯು. ಕೆ. ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದರೆ ಇದಕ್ಕಿಂತ ಹೆಚ್ಚು ಸಾಧನೆ ಬೇಕೇ?