ಒಂದು ಬಸ್ಸಿನ ಕಥೆ

ನಮಸ್ಕಾರ  ಅನಿವಾಸಿ ಬಳಗಕ್ಕೆ. ಎಲ್ಲರಿಗೂ ಹೊಸ ಸಂವತ್ಸರದ , ಚೈತ್ರಮಾಸದ ಹಾರ್ದಿಕ ಶುಭಾಶಯಗಳು. 
“ ದಿನಾ ಸಮಯಕ್ಕೆ ಬರುವ ಬಸ್ಸು ಹತ್ತು ನಿಮಿಷ ತಡ ಮಾಡಿದರೆ ಅಲ್ಲೊಂದು ಕಥೆ ಹುಟ್ಟುತ್ತದೆ” ಎನ್ನುತ್ತಾರೆ ನಮ್ಮ ನೆಚ್ಚಿನ ಕಥೆಗಾರ ಕಾಯ್ಕಿಣಿಯವರು. ಹೌದಲ್ಲವೇ ಕಥೆಯೊಂದು ಹುಟ್ಟಲು ಅದೆಷ್ಟು ಕಾರಣಗಳು?! ಅಂತೆಯೇ ನೀವೆಲ್ಲೋ ನೋಡಿದ, ಒಡನಾಡಿದ ಜೀವಗಳೂ ಅಚಾನಕ್ ಆಗಿ ಪಾತ್ರಗಳಾಗಿ ನಿಮ್ಮ ಕಥೆಯಲ್ಲಿ ನುಸುಳಿ ಸೋಜಿಗವನ್ನುಂಟು ಮಾಡುತ್ತವೆ ಎನ್ನುತ್ತಾರವರು.
ಅಂಥದೇ ಒಂದು ಹಳೆಯ ಕಥೆ ನಿಮ್ಮ ಓದಿಗಾಗಿ. ಓದಿ..ಹೇಗನ್ನಿಸಿತು ಹೇಳಿ.

~ ಸಂಪಾದಕಿ.

ಹಿರೇಕೆರೂರ ಬಸ್ಸು

ನಕಾಶೆಯಲ್ಲಿ ಹಗಲು ಹೊತ್ತಿನಲ್ಲಿ ದೀಪ ಹಚ್ಚಿಕೊಂಡು ಹುಡುಕಿದರೂ ಸಿಗದ ಒಂದು ಪುಟ್ಟ ಗ್ರಾಮ ಬಲಕುಂದಿ. ನಕಾಶೆಯಲ್ಲಿ ಅದರ ಅಸ್ತಿತ್ವ ಇರದಿದ್ದರೇನಂತೆ? ನಾರಣಪ್ಪ, ಹನುಮಪ್ಪ , ಈರಭದ್ರ, ದ್ಯಾಮವ್ವ-ದುರ್ಗವ್ವ ಇತ್ಯಾದಿ ದೇವ -ದೇವತೆಗಳ ಸಮೇತ ಬ್ರಾಂಬರು , ಶೆಟ್ಟರು, ಗೌಡರು, ಅಗಸರು , ಬ್ಯಾಗಾರು, ಮ್ಯಾಲಿನ ಓಣಿ, ಕೆಳಗಿನ ಓಣಿ , ಸಿನೀರ ಭಾವಿ, ಸಾದಾ ಭಾವಿ ,ಹಳ್ಳ , ದನಕರು, ಕೋಳಿ-ನಾಯಿ, ಜಗಳ-ಬಡಿದಾಟ, ಪ್ರೀತಿ-ಪ್ರೇಮ, ಹಾದರ…ಮಾನವ ಲೋಕದ ಸಕಲ ಸಲ್ಲಕ್ಷಣಗಳಿಂದ ಜೀವಂತವಿದ್ದ ಹಳ್ಳಿಯದು. 

ಅವತ್ತೊಂದು ದಿನ ರವಿವಾರ. ಎಂದಿನಂತೆ ಬಸ್ ಸ್ಟ್ಯಾಂಡಿನ ತನ್ನ ಗೂಡಂಗಡಿಯ  ಬಾಗಿಲು ತೆರದು, ಈಚಲು ಬಾರಿಗೆ ತಗೊಂಡು ಅಂಗಡಿ ಮುಂದ ಪರ ಪರ ಕಸ ಬಳಿದು, ನಾಲಕ್ಕು ತಂಬಿಗೆ ನೀರು ಹೊಡೆದು ಅಂಗಡಿ ಮೂಲ್ಯಾಗಿನ ಗ್ವಾಡಿಗೆ ಅಂಟಿಸಿದ್ದ ಬುತ್ತಿ ಬಸಪ್ಪನ ಫೋಟೊಕ್ಕೊಂದಿಷ್ಟು ಈಬತ್ತಿ ಬಳದು ‘ಸಿವ ಸಿವ’ ಅಂತ ಗುಬ್ಬವ್ವ ಕೈ ಮುಗಿತಿದ್ದಾಗ “ಹಿರೇಕೆರೂರ ಬಸ್ ಹೋತೇನ ಬೇ ಯತ್ತಿ” ಅಂತ ದನಿ ಕೇಳಿ ಈ ಕಡೆ ಹೊಳ್ಳಿ ನೋಡಿದಳು. ಆ ಪ್ರಶ್ನೆಗೆಉತ್ತರ  ಕೊಡೂದು ತನ್ನ  ಕೆಲಸವೇ ಅಲ್ಲ  ಅನ್ನೂಹಂಗ ‘ಅಯ್ಯ ಮುತ್ತಪ್ಪಾ ನೀನಾ? ಇವತ್ತ್ಯಾಕಲೇ ಮುಂಜಮುಂಜಾನೆ ಬ್ಯಾಗ್ ಹಾಕ್ಕೊಂಡ ತಯಾರಾಗಿಬಂದಿ? ಆಯಿತವಾರ ಸಾಲಿ-ಕಾಲೇಜು ಸೂಟಿ ಅಂತ ಮರತ ಹೋದ್ಯಾ ಏನು?’  ಅಂತ  ಕೇಳಿದಳು.  ‘ಏಯ್ ಅದ್ಹೆಂಗ ಮರೀತೈತಿ ಬೇ ,  ನೀ ಒಂದ s  ಇವತ್ತ ಬ್ಯಾಂಕಿನ exam ಐತೆ. ಅದಕ್ಕs ಹೊಂಟೀನಿ. 10:30 ಗೆ ಚಾಲೂ ಆಕ್ಕೈತಿ’ ಅಂದ.  ‘ಹೀಂಗs, ಹಂಗಾರ ಆಫೀಸರ್ ಆಗಾವಾ ಬಿಡಪಾ. ಒಂದೀಟುನಮಗೂ ಏನರೇ ಕಡಿಮಿ ಬಡ್ಡಿಗೆ ಸಾಲಾ-ಗೀಲಾ ಕೊಡಸೋ ಯಪ್ಪಾ. ದರಾ ಮಳಿಗಾಲದಾಗ ಮನಿ ಸೋರಿ ಮನ್ಯಾಗ ಇಟ್ಟ ಮಾಲು, ಕಾಳು-ಕಡಿ ಹಾಳಆಗಾಕ್ಹತ್ತಾವ. ನೀ ಏನರೇ ಹಂಗ ಸಾಲಾ ಕೊಡಿಸಿದೆಂದ್ರ ಸಿಮಿಟ್ ಗಾರೀನೇ ಹಾಕಸತೀನೋ ಯಪ್ಪಾ ನಿನ್ನ ಹೆಸರಲೇ’…. ಬಸ್ಸು ಹೋತೋ ಇಲ್ಲೋಹೇಳೂದ ಬಿಟ್ಟು ತನ್ನದೇ ಸಮಸ್ಯೆಗಳ ಸಾಗರದಾಗ ಮುಳುಗಿ ಹೋಗಿದ್ಲು ಅಕಿ. ‘ಬಸ್ ಹೋಗಿದ್ರ ನಡಕೊಂಡ ಹೊಂಟ ಬಿಡತೀನೀ ಬೇ ..ಇಲ್ಲಕಂದ್ರಒಳಗ ಬಿಡಂಗಿಲ್ಲ ಪೇಪರ್ ಬರಿಯಾಕ’  ಅಂದ ಮುತ್ತಪ್ಪನ ಮಾತಿಗೆ ‘ಅಯ್ಯ ಸಿವನ, ಈ ಹಿರೇಕೆರೂರ ಬಸ್ಸು ಎಂದರs  ಟೈಂ ಗೆ ಬಂದೈತೇನೋ ಯಪ್ಪಾ? 8 ರ  ಬಸ್ಸು ಹೆಸರಿಗಷ್ಟೇ. ಹತ್ತು  ವರಸ ಆತು,  ನಿಮ್ಮಾಂವ ಹೋದಾಗಿನಿಂದ ಈ ಅಂಗಡ್ಯಾಗ ಕುಂಡ್ರಾಕಂತು ..ಒಂದಿನಾ ಅರೇ 9 ಕ್ಕಿಂತ ಮದಲಹೋಗಿಲ್ಲ ತಗಿ ತಮ್ಮಾ’ ಅಂದು ತನ್ನ ಅಂಗಡಿಯ ಗುಟ್ಕಾ ಪ್ಯಾಕೆಟ್ ಗಳ ಸರವನ್ನು ತೂಗು ಹಾಕೂದರಾಗ, ಪಚ್ಚ ಬಾಳೆಹಣ್ಣುಗಳನ್ನು ಜೋಡಿಸಿಡೂದರಾಗಮಗ್ನ ಆದ್ಲು. ಇರುವ ಎರಡು ಗೇಣಿನ ಅವಳ ಅಂಗಡ್ಯಾಗ ಏನೇನಿಲ್ಲ? ಸುಂಠಿ ಪೆಪ್ಪರ್ ಮಿಂಟು, ಲಿಂಬಿಹುಳಿ, ಅಲೇಪಾಕು, ಸಿಹಿ ಬಿಸ್ಕೀಟು, ಖಾರಾಬಿಸ್ಕೀಟು, ಸಣ್ಣಸಣ್ಣ  ಸಿಹಿ ಬಡೇಸೋಪಿನ ಪ್ಯಾಕೆಟ್ ಗಳು, ಚಕ್ಕಲಿ,ಪಾಪಡಿ, ನಿಂಬು ಸೋಡಾ, ವೀಳ್ಯದೆಲಿ, ಅಡಿಕಿ, ಸುಣ್ಣ ಅಂತ ಪಾನಪಟ್ಟಿಗೆ ಬೇಕಾಗೂಸಾಮಾನುಗಳು, ತಂಬಾಕು, ಗಣೇಶ ಬೀಡಿ, ವ್ಹಿಲ್ಸ್ ಫ್ಲೇಕ್ ನಂಥ ಸಿಗರೇಟ್ ಪ್ಯಾಕ್ ಗಳು, ಕಡ್ಡಿಪೆಟ್ಟಿಗೆಗಳು,  ಹಿಂದಿನ ದಿನದ ವರ್ತಮಾನ ಪತ್ರಿಕೆ, ಒಂದೆರಡು ಹಳೆಯ ರಾಗಸಂಗಮಗಳು,  ಒಂದ್ನಾಕು ಥರದ ಸೀಟಿ-ಪೀಪೀಯಂಥ ಮಕ್ಕಳ ಆಟಿಕೆಗಳು, ಊದುಬತ್ತಿ, ಕಲ್ಲುಸಕ್ಕರೆ,  ಟೆಂಗಿನಕಾಯಿಗಳು..

ಅಲ್ಲಿರುವ ಮಸೀದಿಗೆ, ಹೊಸೂರಿನ ಹಣಮಪ್ಪಗ ಗುರುವಾರ, ಶನಿವಾರ ಸುತ್ತಮುತ್ತಲ  ಊರುಗಳಿಂದ ಬರುವ ಜನಕ್ಕೆಲ್ಲ ಈಕಿನೇ ಊದುಬತ್ತಿ-ಸಕ್ಕರೆ-ಕಾಯಿ ಸರಬರಾಜು ಮಾಡಾಕಿ.ಮೋಟರ್ ಸೈಕಲ್ ಮೇಲೆ ಫುರ್ ಅಂತ ಓಡಾಡೋ ಪಡ್ಡೆ ಹುಡುಗರಿಗೆ, ಕಾರು-ಜೀಪಿನಾಗ ಓಡಾಡೂ ದೊಡ್ಡಸಾಹೇಬರುಗಳಿಗೆ ಇವಳಂಗಡಿಯ ಪಾನಪಟ್ಟಿ, ಬೀಡಿ  ಸಿಗರೇಟ್ ಗಾಗಿ ಒಂದು ಬ್ರೇಕ್ ತಗೋನೇಬೇಕು.

 ಬಸ್ ನ ದಾರಿ ಕಾಯಕೋತ ಕೈಯಾಗಿನ ಪುಸ್ತಕ ತಗದು ಮ್ಯಾಲ ಕೆಳಗ ಏನೋ ಲೆಕ್ಕಾ ಮಾಡಕೋತ ಅಲ್ಲೇ ಇದ್ದ ಕಲ್ಲಬಂಡಿಮ್ಯಾಲ ಕೂತ ಮುತ್ತಪ್ಪ. ಬಡಿಗ್ಯಾರ ಈರಪ್ಪನ ಮಗನಾದ ಈ ಮುತ್ತ ಸಣ್ಣತನದಿಂದಲೂ ಓದಿನಾಗ ಮುಂದು. ಮನ್ಯಾಗೂ ಅಷ್ಟೇ ..ಜೋಡ ಕೊಡ ಹೊತ್ತು ನೀರು ತರುವಅವ್ವನಿಗೂ, ಬಡಿಗತನದ ಕೆಲಸದಲ್ಲಿ ಅಪ್ಪನಿಗೂ ತನ್ನಿಂದಾದಷ್ಟು ಸಹಾಯ ಕೇಳದೇ ಮಾಡುವವ. ಫಸ್ಟ್ ಕ್ಲಾಸಿನಾಗ ಮ್ಯಾಟ್ರಿಕ್ ಪರೀಕ್ಷಾ ಪಾಸ್ ಆಗಿ ವಿಜಯ ಮಹಾಂತೇಶ ಕಾಲೇಜಿನಾಗ ಕಾಮರ್ಸ್ ಗೆ ಎಡ್ಮಿಶನ್ ಮಾಡಿಸಿದ್ದ. ಹುಡುಗನ ಚುರುಕುತನ ಕಂಡ ಹೈಸ್ಕೂಲಿನ ಹಾದಿಮನಿ ಮಾಸ್ತರು ಹೆಂಗಓದಬೇಕು, ಫ್ರೀಶಿಪ್, ಸ್ಕಾಲರ್ ಶಿಪ್ ಗಳಿಗೆಲ್ಲ ಅರ್ಜಿ ಹೆಂಗ ತುಂಬಬೇಕು, B.com ಮಾಡಕೋತನs ಬ್ಯಾಂಕಿನ ಪರೀಕ್ಷಾಕ್ಕ ಹೆಂಗ ತಯಾರಿಮಾಡಕೋಬೇಕು ಇತ್ಯಾದಿಯಾಗಿ ಎಲ್ಲ ಸೂಕ್ತ ಮಾರ್ಗದರ್ಶನ, ಆಗಾಗ ಒಂದಿಷ್ಟು ರೊಕ್ಕದ ಸಹಾಯ ಎಲ್ಲ ಮಾಡುತ್ತಿದ್ದರು. ‘ಗುಣಕ್ಕೆ ಮತ್ಸರವೇ?’ ಅನ್ನೂಹಂಗ ಯೋಗ್ಯತೆಯಿದ್ದ ಎಲ್ಲ ಮಕ್ಕಳ ಬಗ್ಗೆಯೂ ಅವರಿಗೆ ಅಷ್ಟೇ ಕಾಳಜಿ. ‘ಹಿಂದಿನ ದಿನವೇ ಬೇಕಾರ ಇಲ್ಲೇ  ಬಂದು ಮನ್ಯಾಗಿರು..ಅಲ್ಲೆ ಹಳ್ಳ್ಯಾಗಲೈಟೇ ಇರಂಗಿಲ್ಲ  ಓದಾಕ’ ಅಂತ ಇಲಕಲ್ಲಿನಲ್ಲಿರುವ ತಮ್ಮ ಮನೆಗೆ ಬಂದು ಇರುವಂತೆ ಮುತ್ತಪ್ಪನನ್ನು ಕರೆದಿದ್ದರೂ ಹಾಗೆಲ್ಲ ಹೋಗಿ ಅವರಿಗೆ, ಅವರಮನೆಯವರಿಗೆ ಒಜ್ಜೆ ಆಗಬಾರದು ಅನ್ನೋದು ಮುತ್ತನ ಸಭ್ಯತೆ.

‘ಒಂದೀಟು ಕೈ ಕೊಡ ಬೇ ಇಳಸಾಕ’  ವೀಳ್ಯದೆಲೆಯ ಬುಟ್ಟಿಯನ್ನು ಹೊರಲಾರದೇ ಹೊತಗೊಂಡು ಬಂದ ಪಾತಜ್ಜಿ ಗುಬ್ಬವ್ವನ್ನ ಕರದ್ಲು.’ಅಯ್ಯ, ಒಂದ್ನಾಕುಪಿಂಡಿ ಕಮ್ಮಿ ಹೊತಗೊಂಡ ಬರಬೇಕಿಲ್ಲs,  ಈ ವಯಸ್ಸನಾಗ ನಡ ಗಿಡ ಮುರದ್ರ ಯಾರ ದಿಕ್ಕ ಅದಾರ ನಿಂಗ? ಇದ್ದೊಬ್ಬ ಮಗಳನ್ನ ದೂರ ಕೊಟ್ಟ ಕುಂತಿ’ ಅಂತ ಬಯ್ಯಕೋತನ ಕಾಳಜಿ ತೋರಸಿ ಕೈ ಹಿಡದು ಬುಟ್ಟಿ ಇಳುಹಾಕ ನೆರವಾದ್ಲು. ‘ಅಂದ ಹಂಗ ಏಟರಾಗ ಗಿರಿಜಿಗೆ ಈಗ? ಆರಾಂ ಅದಾಳ ಅಕಿ? ಗಂಡ,ಅತ್ತಿ ಭೇಷ್ ನೋಡಕೋಂತಾರ?’ಎಂದು ಕೇಳಿ ‘ ಇಷ್ಟ ಯಾಕ  ಹೊತಗೊಂಡ ಹೊಂಟಿ? ಇವತ್ತೇನ ಸಂತಿನೂ ಇಲ್ಲ’  ಎಂದು ಕೇಳಿದಳು. ಜೋಶಿಗಲ್ಲಿ ಜಾಗೀರದಾರರ  ಮನ್ಯಾಗ ಲಗ್ನ ಐತಿ. ಅವರ ಎರಡೂ ಹೆಣ್ಣಮಕ್ಕಳದೂ ಒಮ್ಮೇ ಲಗ್ನ ಇಟಗೊಂಡಾರು. ಇವತ್ತ ದೇವರ ಕಾರ್ಯ ಐತಿ ಬೇ. ಎರಡ ಸಾವಿರ ಎಲಿ ಕೇಳ್ಯಾರು. ಅದಕ್ಕs  ಹೊಂಟೀನಿ. ಆ ಜಾಗೀರದಾರರು ದೊಡ್ಡ ಮನಷಾರು. ‘ತಾಜಾ ಹಸರ ಎಲಿ ತಂದುಕೊಡು. ಛಲೋ ಕಾರ್ಯ. ನಾ ಏನ ಚೌಕಾಸಿ ಮಾಡಂಗಿಲ್ಲ. ಹಂಗs ಬಳಿ ಇಟಗೊಂಡು, ಊಟಾ ಮಾಡಿ, ಸೀರಿ ಉಟಗೊಂಡು ಹೋಗು’ ಅಂದಾಳ ಯವ್ವಾ ಆ ಪುಸ್ಪಕ್ಕ. ‘ಆತಯವ್ವಾ ತರತೀನಿ.ಒಂದು ಮಾತು ಸೀರಿ ಜರದ ಅಂಚಿಂದು, ಹಸರದು ಕೊಟ್ರ..ನನ್ನ ಮಗಳು ಇನ್ನೊಂದು ತಿಂಗಳದಾಗ ಹಡ್ಯಾಕ ಬರಾಕ್ಹತ್ತಾಳು. ಅಕಿಗೆಅದನ್ನೇ ಉಡಿಅಕ್ಕಿ ಹಾಕತೀನಿ’ ಅಂದಿದ್ದಕ್ಕ , ನಕ್ಕೋತ ‘ಆಗಲೇಳು, ಛಲೋ ಸೀರಿನೇ ಕೊಡತೀನಿ ನಿನ್ನ ಮಗಳು ಉಡೋ ಅಂಥಾದ್ದು’ ಅಂದಾಳವ್ವ. ಅಕಿನ್ನ ಹೊಟ್ಟಿ ತಣ್ಣಗಿರಲಿ. ಬಸ್ಸೇನೂ ಹೋಗಿಲ್ಲ ಹೌದಿಲ್ಲ ಬೇ..’ ಅಂತ ಕೇಳಿದ್ಲು. ‘ ನಾ ಅಂಗಡಿ ಕದಾ ತಗದು ತಾಸೊಪ್ಪತ್ತು ಆದಮ್ಯಾಗs ಬರತೈತಿಅದು.ಆ ಮುತ್ತಪ್ಪನೂ ಇಲ್ಲೇ ಅಡ್ಡಾಡಕ್ಹತ್ತಾನು..ನೋಡಲ್ಲೆ.’ ಅಂದು ಎಲೆಗಳ ತುದಿ ಕತ್ತರಿಸಿ ನೀರು ತುಂಬಿದ ಪ್ಲಾಸ್ಟಿಕ್ ಬುಟ್ಟಿಯೊಳಗ ಇಟ್ಟು , ಅಡಕೊತ್ತಿನಿಂದ ಅಡಿಕೆ ಕತ್ತರಿಸತೊಡಗಿದಳು.

 ಮದುವೆಯಾಗಿ ಹದಿನೈದು ವರುಷವಾದರೂ ಮಕ್ಕಳಾಗದ ಪಾರೋತವ್ವ, ಪಾತಜ್ಜಿ  ಸಂತಾನಕ್ಕಾಗಿ ಹರಸಿಕೊಳ್ಳದ ದೈವಗಳಿರಲಿಲ್ಲ; ಮಾಡಲಾಗದನಾಟಿವೈದ್ಯವಿರಲಿಲ್ಲ. ಅಂತೂ ದೈವ ಕಣ್ತೆರೆದು ಅಕಿ ಬಸುರಿ ಅಂತ ತಿಳಿಯೂದರಾಗ ನಾಟಕದ ಖಯಾಲಿಯಿಂದ ಪಾತ್ರಕ್ಕಂತ ಊರೂರು ಅಲೆಯುತ್ತಿದ್ದಅವಳ ಗಂಡ ನಿಂಗಪ್ಪ ಏನಾಯ್ತೋ ಗೊತ್ತಿಲ್ಲ  ಊರಿಗೆ ಮರಳಲೇ ಇಲ್ಲ.  ಯಾರೋ ಪಾತರದವಳ ಬೆನ್ನು ಹತ್ತಿ ಹಾಳಾದ ಅಂತಲೂ, ಏನೋ ಬರಬಾರದರೋಗ ಬಂದು ಸತ್ತ ಅಂತಲೂ, ಮಕ್ಕಳಿಲ್ಲದ ಗೊಡ್ಡಿ ಅಂತ ಇಕಿನ್ನ ಬಿಟ್ಟು ಬೇರೊಂದು ಸಂಸಾರ ಕಟಗೊಂಡು ದೂರದೂರಿನಾಗ ಇದ್ದಾನೆಂತಲೂ.. ಜನತಲೆಗೊಂದರಂತೆ ಆಡಿ ಅಂತೂ ಕೊನೆಗೆ ಮೌನವಾದರು. ಹೀಗಾಗಿ ಪಾರೋತಿಗೆ ಮಗಳು ಗಿರಿಜೆಯೇ ಸರ್ವಸ್ವ. ಗುಣ, ರೂಪದಲ್ಲಿ ಅಪ್ಪಟಬಂಗಾರದಂತಿರುವ ಅಕಿಯನ್ನು ಮಹಾಂತೇಶ ತಾನಾಗಿಯೇ ಕೇಳಿಕೊಂಡು ಬಂದು ಮದುವೆಯಾದ. ದೂರದ ಗೋಕಾಕ್ ನ ಸಕ್ಕರೆ ಫ್ಯಾಕ್ಟರಿಯಲ್ಲಿ ಅವನಕೆಲಸ. ತನ್ನ ಮನೆಯ ಹಿತ್ತಲು, ಅಂಗಳದಲ್ಲೇ ವೀಳ್ಯದೆಲೆಯ ಬಳ್ಳಿಗಳನ್ನು ಹಬ್ಬಿಸಿರುವ ಪಾರೋತೆವ್ವ ಹಳ್ಳಿಯ ಯಾರ ಮನೆಯಲ್ಲೇಮಂಗಳಕಾರ್ಯಗಳಾಗಲಿ, ಬಾಣಂತನವಾಗಲಿ ಹೋಗಿ ಹಸಿರಾದ ನಳನಳಿಸೋ ವೀಳ್ಯದೆಲೆಗಳನ್ನು ಒಂದು ತುಂಡು ಅಡಿಕೆಯಿಟ್ಟು ಬಾಯಿ ತುಂಬ ಹರಸಿಕೊಟ್ಟು ಬರುತ್ತಾಳೆ. ಉಳಿದಂತೆ ಗುಬ್ಬವ್ವನಂಥಾ ಸಣ್ಣ ಗೂಡಂಗಡಿಗಳಿಗೆ, ಇಲಕಲ್, ಹನುಮಸಾಗರದ ಸಂತೆಗಳಿಗೆ ಹೋಗಿ ಮಾರಾಟ ಮಾಡಿ ಬರುತ್ತಾಳೆ. ಈಗ ಮಗಳ ಚೊಚ್ಚಲ ಬಾಣಂತನದ ಸಂಭ್ರಮದಲ್ಲಿದ್ದಾಳೆ.

‘ ಯಕ್ಕಾ, ಈ ಸೂಟಕೇಸ್ ನೋಡತಿರಬೇ..ಇನ್ನೂ ಎರಡು ಬ್ಯಾಗ್ ಅದಾವು ಗೌರಕ್ಕಂದು. ತಗೊಂಡ ಬರತೀನಿ’ ಅಂತ ಹೇಳಿದ ಮಾದಪ್ಪನ ಕಡೆ ನೋಡಿದಗುಬ್ಬವ್ವ ‘ಹೌದಾ? ಊರಿಗೆ ಹೊಂಟಾಳೇನ ಇವತ್ತ? ಭಾಳ ಸಾಮಾನು ಮಾಡಕೊಂಡಾಳಲ್ಲಾ? ಕೂಸಿನ ಕಟಗೊಂಡು ಹೆಂಗ ಒಯ್ತಾಳೋ?’ ಅಂತಸ್ವಗತದಲ್ಲೇ ಗೊಣಗುತ್ತ ಕಾಲಾಗಿನ ಸೂಟಕೇಸ್ ಸರಿಸಿ ಬಾಜೂಕಿಡೂದರಾಗ ಒಂದೂವರೆ ವರುಷದ ಮಗನ ಜೋಡಿ ಗೋಣಿಚೀಲದಂಥ ವ್ಯಾನಿಟಿಬ್ಯಾಗ್ ಹೊತಗೊಂಡು ಗೌರಿ ಅಲ್ಲಿಗೆ ಬಂದ್ಲು. ಜೋಡಿಗೆ ತಂಗ್ಯಂದ್ರು, ಅವ್ವ-ಅಪ್ಪನೂ ಇದ್ರು.  ‘ಅಯ್ಯ, ಇಷ್ಟ ಜಲ್ದಿ ಹೊಂಟ್ಯಾ? ಇನ್ನೊಂದ ನಾಕದಿನಾಇರಬೇಕ ಬ್ಯಾಡ’ ಅಂದ ಗುಬ್ಬವ್ವನಿಗೆ – ‘ಅಯ್ಯ, ಅಕಿನ್ನ ಗಂಡ ಇಷ್ಟ ದಿನಾ ಬಿಟ್ಟದ್ದs ಹೆಚ್ಚು. ದಿನಾ ಬೆಳಗಾದ್ರ ಫೋನ್ ಬರೂದು ಗೌಡ್ರ ಮನೀಗೆ’  ಉತ್ತರ ಕೊಟ್ಟ ದೇವಕ್ಕನ ದನಿಯಲ್ಲಿ ಮಗಳನ್ನು ಪ್ರೀತಿಸುವ ಅಳಿಯನ ಬಗ್ಗೆ ಅಭಿಮಾನ ಎದ್ದು ಕಾಣುತ್ತಿತ್ತು. ‘ಅಲ್ಲ ಯವ್ವಾ, ಇವತ್ತ ಆಯಿತವಾರ. ಇವತ್ತ್ಯಾಕ ಕಳಸಾಕತ್ತೀ ಗೌರಕ್ಕನ್ನ? ಆಯಿತವಾರ ತಾಯಿ-ಮಗಳು ಅಗಲಬಾರದು’ ಅಂದ್ಲು ಗುಬ್ಬವ್ವ.  ‘ಹೌದವಾ, ಆದ್ರ ಈಗಿನ ಕಾಲದ ಹುಡುಗೂರುಅದನ್ನೆಲ್ಲ ಎಲ್ಲಿ ನಂಬತಾರ? ಅಲ್ಲದ s   ನೌಕರದಾರ ಮಂದಿ ನೋಡು. ನಾಳೆ ಸ್ವಾಮವಾರದಿಂದ ಈಕಿನೂ ಕಾಲೇಜಿಗೆ ಹೋಗಬೇಕು ಕೆಲಸಕ್ಕ. ಇನ್ನಅಕಿನ್ನ ಗಂಡಗೂ ಆಯಿತವಾರ ಅಂದ್ರ ಆಫೀಸ್ ಇರಂಗಿಲ್ಲ. ಬಸ್ ಸ್ಟ್ಯಾಂಡಿಗೆ ಬಂದು ಕರಕೊಂಡು ಹೋಗಲಿಕ್ಕೆ ಅನುಕೂಲ ಆಗತದ ನೋಡು. ಅದಕ್ಕs  ಮೊನ್ನೆನೇ ಪ್ರಯಾಣಕ್ಕ ಛಲೋ ದಿವಸ ಅಂತ ಪ್ರಸ್ಥಾನಗಂಟು ತಗದು ತುಳಸಿಕಟ್ಟ್ಯಾಗ ಇಟ್ಟಿದ್ದೆ ನೋಡು.’ ಅಂದ ದೇವಕ್ಕ ಮಗಳೆಡೆ ತಿರುಗಿ, ಅಂದಹಂಗಆ ಪ್ರಸ್ಥಾನಗಂಟು ಇಟಗೊಂಡಿ ಇಲ್ಲೊ?  ಆ ಕೂಸಿನ half-sweater ಅಲ್ಲೇ ಶೇಂಗಾ ಚೀಲದ ಮ್ಯಾಲಿತ್ತು.ತಗೊಂಡ್ಯೋ ಇಲ್ಲೋ’ ಅಂತ ಕಾಳಜಿ ಶುರುಮಾಡಿದ್ಲು. ‘ ಸಣ್ಣ ಡಬ್ಬ್ಯಾಗ ಇಡ್ಲಿಗೆ ತುಪ್ಪ ಹಚ್ಚಿಟ್ಟೀನಿ ಆ ಕೂಸಿನ ಸಲುವಾಗಿ. ಪಾರ್ಲೆ ಜಿ ಬಿಸ್ಕೀಟೂ ಅವ. ನಿಂಗ ಅವಲಕ್ಕಿ, ಖೊಬ್ರಿವಡಿ ಹಾಕೀನಿ.ಬಸ್ನಾಗ ಮಂದಿ ಇರತಾರ ಹೆಂಗ ತಿನ್ನೂದಂತ  ಉಪವಾಸ ಕೂಡಬ್ಯಾಡ. ಹಸಿವಾದ್ರ ತಿನ್ನು..ಅದಕ್ಕೂ ತಿನಸು. ಅಮ್ಮ-ಅಪ್ಪ-ತಂಗ್ಯಂದಿರ ಅಂತ:ಕರಣಕ್ಕೆಮೂಕವಾಗಿದ್ದ ಗೌರಿಗೆ ತೌರ ಬಿಟ್ಟು ಹೊರಡುವ ದು:ಖ. ಕಣ್ಣಂಚಲ್ಲಿ ಇಳಿಯಲು ತಯಾರಾಗಿ ನಿಂತಿದ್ದ ಗಂಗಾ-ಭಾಗೀರಥಿ. “ಯವ್ವಾ ದೇವಕ್ಕಾ,  ಏಟಇದ್ರೂ ಹೆಣಮಕ್ಕಳು ಬ್ಯಾರೆಯವರ ಸ್ವತ್ತs  ನೋಡು. ಆ ಸಿವಾ ಒಂದು ಗಣಮಗಾ ಕೊಡಲಿಲ್ಲ ನೋಡು ನಿನಗ’ ಅಂದ ಗುಬ್ಬವ್ವ ಮತ್ತೆ ತನಗೆ ತಾನೇ ‘ ಇರಲಿ ತಗಿ, ಎದಿ ಸೀಳಿದ್ರ ಎರಡಕ್ಷರ ಇರಲಾರದ ಅಡ್ನಾಡಿ ಗಂಡಮಕ್ಕಳಿಗಿಂತ ಇದ್ಯಾ,ಬುದ್ಧಿ, ನಯಾ-ನಾಜೂಕು ಎಲ್ಲಾ ಇದ್ದ ಇಂಥಾ ಹೆಣಮಕ್ಕಳ ಎಷ್ಷೋಬೇಸಿ ಬೇ ಯವ್ವಾ’ ಅಂದು ‘ಅಂದ್ಹಂಗ ಈಕಿ ಸಾಲಿ ಕಲಸಾಕ ಹೋದ್ರ ಕೂಸಿನ್ನ ಯಾರು ನೋಡಕೊಂತಾರು?’ ಅಂತ ತೆಹಕೀಕಾತ್ ಶುರು ಮಾಡಿದ್ಲು. ‘ಅಕಿನ ಅತ್ತಿ ಅದಾರವ್ವಾ. ಮೊಮ್ಮಗ ಅಂದ್ರ ಜೀವಾ. ಅವರ ಮನ್ಯಾಗೂ ಮದಲನೇ ಕೂಸು ನೋಡು. ಅಂಗೈಯಾಗ ಇಟಗೊಂಡಾರ. ಈಕಿ ಸಾಲಿಗೆಹೋಗಿ ಬರೂತನಾ ಏನು ಬಂದ ಮ್ಯಾಲೂ ಅದರ ದೇಖರೇಕಿ ಎಲ್ಲಾ ಅವರ ಅಜ್ಜೀದೇ..’ಮಗಳು ಒಳ್ಳೆಯ ಮನೆಗೆ ಸೇರಿ ಒಳ್ಳೆಯ ಜನರ ನಡುವೆ ಇರುವಸಮಾಧಾನ ಆ ತಾಯಿಗೆ. 

ಅಷ್ಟರಲ್ಲೇ ಎದುರಿಗಿನ ‘ ಸಂಗಮೇಶ್ವರ ಟೀ ಕ್ಲಬ್’ ನಿಂದ ಹೊರಬಂದ ನಾಲ್ಕು ಜನರ ಗುಂಪು ಕಂಡು ‘ ನೀವೆಲ್ಲ ಅತ್ತಾಗ ಸರೀರಿ ಬೇ. ಗೌರಕ್ಕ ಬೇಕಾರಕುಂದರಲಿ ಕೂಸಿನ್ನ ತಗೊಂಡು. ಗಿರಾಕಿ ಬರತಾವು’ ಅಂತ ಅಷ್ಟೊತ್ತು ಆಪ್ತವಾಗಿ ಮಾತಾಡುತ್ತಿದ್ದವಳು ಈಗ ಯಾವ ಮುಲಾಜಿಲ್ಲದೆಯೂ ಎಲ್ಲರನ್ನೂತನ್ನಂಗಡಿಯ ಕಟ್ಟೆಯ ಮೇಲಿಂದ ಎಬ್ಬಿಸಿದಳು.

ಹಂಗ ನೋಡಿದ್ರ ಬಸ್ಸು ನಿಲ್ಲತಾವು ಅಂತ ಬಸ್ ಸ್ಟ್ಯಾಂಡ್ ಅನ್ನಬೇಕೇ ಹೊರತು ಅಲ್ಲಿ ಮಾಮೂಲು ಬಸ್ ಸ್ಟ್ಯಾಂಡಿನ ಯಾವ ಕುರುಹುಗಳೂ ಇರಲಿಲ್ಲ. ಊದ್ದಕ್ಕೂ ಹಾಸಿದ ಡಾಂಬರ್ ರಸ್ತೆ, ರಸ್ತೆ ಆಚೆ ಬದಿ ‘ ಸಂಗಮೇಶ್ವರ ಟೀ ಕ್ಲಬ್ಬು’.. ‘ಏರಿ ಮೇಲೆ ಏರಿ ಮೇಲೆಕೆಳಗೆ ಹಾರಿ ಹಕ್ಕಿ ಬಂದು ಕುಂತೈತಲ್ಲೋ ಓಮಾವಾ’ ಅಂತ ಯಾವಾಗಲೂ ನಡೆಯುತ್ತಿದ್ದ ಜೋರಾದ  ಹಾಡಿನ ರೆಕಾರ್ಡು. ಅನತಿ ದೂರದಲ್ಲೇ ಸದಾ ನೆರಳು ಕೊಡುವ ಒಂದು ದೊಡ್ಡಅರಳೀಮರ.ಅದರ ಕೆಳಗಿನ ಕಟ್ಟೆಯಲ್ಲಿ ಹೆಗಲ ಮೇಲೆ  ಟವೆಲ್ಲು ಹಾಕಿಕೊಂಡು ಪ್ಯಾಟಿ ಧಾರಣಿ ಮಾತಾಡುತ್ತಲೋ, ಇಸ್ಪೀಟು ಆಡುತ್ತಲೋ ಕುಳಿತ,ಹಲಕೆಲವು ಜನರು..ರಸ್ತೆಯ,ಈ ಕಡೆ ಗುಬ್ಬವ್ವನ ಅಂಗಡಿ. ರಾಷ್ಟ್ರೀಯ ಹೆದ್ದಾರಿ ಆದ್ದರಿಂದ ಓಡಾಡೋ ಬಸ್ಸುಗಳಿಗೆ ಬರವೇನಿರಲಿಲ್ಲ. ಆದರೆ ಎಲ್ಲಾ nonstop express ಬಸ್ಸುಗಳೇ. ಇಲ್ಲಿ, ಈ ಹಳ್ಳಿಯಲ್ಲಿ ನಿಲ್ಲಬೇಕಾದ ಕಿಂಚಿತ್ ಪ್ರಮೇಯವೂ ಅವುಗಳಿಗಿರಲಿಲ್ಲ. ಎಲ್ಲೋ ಹಿರೇಕೆರೂರು, ಅಕ್ಕಿಆಲೂರನಂಥಒಂದೆರಡು ಬಸ್ಸುಗಳು ಮಾತ್ರ ನಿಲ್ಲುತ್ತಿದ್ದವು. ಇಷ್ಟಕ್ಕೂ ಅವೂ ಕೂಡ ಬಸ್ಸಿನೊಳಗೆ ಜಾಗ ಇದ್ರ, ಕಂಡಕ್ಟರ್ ಗ ಸೀಟಿ ಊದಿ ಬಸ್ಸು ನಿಲ್ಲಿಸೋ ಮೂಡ್ಇದ್ರ, ಕೈ ಮಾಡುತ್ತಿದ್ದ ಯಾವುದೋ ಪ್ರಯಾಣಿಕರ ಆಸೆಕಂಗಳು ಡ್ರೈವರ್ ನಿಗೆ ಕರುಣೆ ಉಕ್ಕಿಸಿದ್ರ ನಿಲ್ಲತಿದ್ವು ಅನ್ನಿ. ಇಳಿವ ಒಬ್ಬಿಬ್ರು ಪ್ಯಾಸೆಂಜರಗಳನ್ನುಅರ್ಧ ಕಿಲೋ ಮೀಟರ್ ಹಿಂದೆ ಅಥವಾ ಮುಂದೆ ಇಳಿಸಿ ಪಿ.ಟಿ. ಉಷಾನಗತೆ ಓಡಿಹೋದ ಒಬ್ಬಿಬ್ಬರನ್ನು ಮಾತ್ರ ಹತ್ತಿಸಿಕೊಂಡು ಬುರ್ ಅಂತಧೂಳೆಬ್ಬಿಸಿಕೊಂಡು ಹೋಗಿಬಿಡೂದು ಅಂದ್ರ ಆ KSRTC ಬಸ್ ಗಳಿಗೆ ಆಟವಾಗಿತ್ತೇನೋ?! ಆದ್ರೂ ಕೆಲವು ಮಂದಿಗೆ ಅವುಗಳನ್ನು ನೆಚ್ಚದೇ ಬ್ಯಾರೆಹಾದಿಯಿದ್ದಿಲ್ಲ. ಹಂಗಂತ ಯಾರೂ ಅವುಗಳ ಬಗ್ಗೆ ಕಂಟ್ರೋಲರ್ ಮುಂದಾಗಲೀ, KSRTC ಗಾಗಲೀ ಕಂಪ್ಲೇಂಟ್ ಕೊಡಲೂಹೋಗುತ್ತಿರಲಿಲ್ಲ.ಯಾಕಂದ್ರ ಭಾಳಷ್ಟು ಊರಾಗಿನ ಮಂದಿಗೆ ಬಸ್ಸಿನ ದರಕಾರನೇ ಇದ್ದಿಲ್ಲ  ಗೌಡ್ರು, ಶೆಟ್ಟರಂಥ ದೊಡ್ಡ ಕುಳಗಳು ಹೊಂಡಾ, ರಾಜದೂತ್ನಂಥ ಮೋಟಾರುಬೈಕ್ ಗಳನ್ನೋ, ಒಂದಿಬ್ಬರು ಮಾರುತಿ 800 ನ್ನೋ ಇಟ್ಟುಕೊಂಡಿದ್ದರು. ಗ್ರೈನೆಟ್ ವ್ಯವಹಾರದ Gem ಕಂಪನಿ ಲಾರಿಗಳಂತೂತಾಸಿಗೊಮ್ಮೆ ಓಡಾಡೂವು. ಎಷ್ಟೋ ಜನ ಅವುಗಳನ್ನೇರಿ ಹೊರಟುಬಿಡುವರು. ಕೆಲವು ಶ್ರಮಜೀವಿಗಳು, ಬಿಸಿರಕ್ತದ ಉತ್ಸಾಹಿಗಳು ‘ಈ ಬಸ್ಸಿನ ಹೆಣಾಯಾರು ಕಾಯತಾರು? ದೊಡ್ಡದೊಡ್ಡ ಹೆಜ್ಜಿ ಇಟ್ರ ಬಾಯಾಗಿನ ಅಡಿಕಿ ಮುಗಿಯೂದ್ರಾಗ ಇಲಕಲ್ ಮುಟ್ಟತೀವಿ’ ಅಂತ ಒಳಹಾದಿ ಹಿಡಿದುನಡೆದುಬಿಡುವವರು.ಇನ್ನು ಟೆಂಪೊಗಳಂತೂ ಗಜೇಂದ್ರಗಡ, ಹನುಮಸಾಗರದಿಂದ ಇಲಕಲ್ ಗೆ ಸಾಕಷ್ಟು ಓಡಾಡತಿದ್ವು. ಆದ್ರ 15 ಸೀಟಿನ ಅದರೊಳಗಕ್ಲೀನರ್ರು ಕನಿಷ್ಠ 35 ಮಂದಿಯನ್ನಾದರೂ ತುರುಕುತ್ತಿದ್ದ. ಒಮ್ಮೊಮ್ಮೆ ಕೋಳಿ, ಕುರಿಗಳೂ ಇರತಿದ್ವು.

  ಹೊತ್ತು ಸರಿಯುತ್ತಿದ್ದಂತೆ ತಮ್ಮ ತಮ್ಮ ಗಮ್ಯಗಳತ್ತ ಹೊರಡಲು ತಯಾರಾಗಿ ನಿಂತಿದ್ದ ಮೂರೂ ಜನ ಪ್ರಯಾಣಿಕರಿಗೂ ಸ್ವಲ್ಪ ಸ್ವಲ್ಪವೇ ಆತಂಕ. ಮುತ್ತಪ್ಪನಿಗೆ ಪರೀಕ್ಷೆಯ ಸಮಯ ಮೀರಿದರೆ ಅಂತ ಚಡಪಡಿಕೆಯಾದರೆ, ‘ 10 ಗಂಟೆ ಒಳಗೆ ಎಲಿ ತಂದುಬಿಡು. ಬಳೆಗಾರ ಸಾಬನೂ ಅಪ್ಟೊತ್ತಿಗೆಬರತಾನು.ಹಂದರ ಪೂಜಾ,ಗಣಪತಿ ಪೂಜಾ, ಮುತ್ತೈದೆಯರಿಗೆ ಅರಿಶಿನ-ಕುಂಕುಮ ಕೊಡಲಿಕ್ಕೆ ..ಎಲ್ಲಾಕ್ಕೂ ಎಲಿ ಬೇಕಾಗತಾವ – ಅಂತ ಜಾಗೀರದಾರಅವ್ವ ಮದಲೇ ಹೇಳ್ಯಾಳು..ಹೊತ್ತಿಗೆ ಹೋಗದಿದ್ರ ಅವರೇನು ರೊಕ್ಕಸ್ತರು..ಒಂದಕ್ಕ ಎರಡು ಕೊಟ್ಟ ಯಾಕಾಗವಲ್ತು ಬ್ಯಾರೆ ಎಲ್ಲಿಂದರ ಪ್ಯಾಟಾಗಿಂದ ಎಲಿತರಸಗೊಂಡು ನಂಗ ‘ಬ್ಯಾಡ  ಯವ್ವಾ, ನೀ ಭಾಳ ತಡಮಾಡಿದಿ’ ಅಂತ ವಾಪಸ್ ಕಳಿಸಿಬಿಟ್ರ ಅನ್ನೂ ಆತಂಕ ಪಾತಜ್ಜಿಗೆ. ಹತ್ತು ಸಲ ಎದ್ದು ನಿಂತು ಕಣ್ಣಿಗೆಕೈ ಅಡ್ಡ ಹಿಡಿದು ದೂರದತನಕಾ ದಿಟ್ಟಿಸಿದರೂ ಬಸ್ಸಿನ ಸುಳಿವೇ ಇಲ್ಲ. ‘ತಡ ಆದಷ್ಟು ಬಸ್ಸು ಭಾಳ ರಶ್ ಆಗಿಬಿಡತದ ಸುಡ್ಲಿ. ನೀವು ಡೈರೆಕ್ಟ್ ಬಿಜಾಪೂರಸೀಟ್ ಅದ ಅಂತ ಆ ಕಂಡಕ್ಟರ್ ಗ ಹೇಳ್ರಿ’ ಅಂತ ತನ್ನ ಪತಿಯತ್ತ ಹೊರಳಿ ನಿರ್ದೇಶನ ಕೊಡಲಿಕ್ಹತ್ತಿದ್ಲು ದೇವಕ್ಕ. 

8:30 ಹೋಗಿ 9 ಆಗಿ 9:30 ಹೊಡಿಲಿಕ್ಕೆ ಬಂದ್ರೂ ಬಸ್ ಬರಲಿಲ್ಲ. ಆದ್ರ ಬಸ್ ಸ್ಟ್ಯಾಂಡ್ ಮಾತ್ರ ಗಿಜಿಗಿಜಿ ಅನತಿತ್ತು. ಹಂಗಂತ ಬಸ್ಸ್ಟ್ಯಾಂಡಿನಲ್ಲಿದ್ದವರೆಲ್ಲ ಬಸ್ ಹತ್ತಲಿಕ್ಕೇನೂ ಬಂದಿರಲಿಲ್ಲ. ಸಂಗಮೇಶ್ವರ ಟೀ ಕ್ಲ ಬ್ಬಿನ ಚಾ-ಮಿರ್ಚಿ, ಖಾರಾ-ಚುನಮುರಿಗಳ ಸಲುವಾಗಿ ಬಂದವರೆಷ್ಟೋ? ಗುಬ್ಬವ್ವ ನಂಗಡಿ ಗುಟಕಾದ ಸಲುವಾಗಿ ಬಂದವರೆಷ್ಟೋ? ಹಂಗs ಮುಂಜಾನೆದ್ದು ಒಂಚೂರು ಗಾಳಿ ಕುಡದು ಗಾಸಿಪ್ ಮಾಡಿ ತಾಜಾ ಆಗಲುಬಂದವರೆಷ್ಟೋ? ಬಯಲುಕಡೆ ಹೋಗಿ ಹಂಗs ಒಂದಿಷ್ಟು ಪಟ್ಟಾಂಗ ಹೊಡೀತಾ ನಿಂತವರೆಷ್ಟೋ? ಹೊತ್ತಾರೆ ಎದ್ದು ಬಿಸಿಲು ಮ್ಯಾಲೆ ಬರೂದರಾಗಕಟ್ಟಿಗೆ ಮಾಡಿಕೊಂಡು ದೊಡ್ಡ ಹೊರೆ ತಲೆಯಮೇಲಿಟ್ಟುಕೊಂಡು , ಸುಂದರ,  ಕಸೂತಿ-ಕನ್ನಡಿಗಳ ಬಣ್ಣ ಬಣ್ಣದ ಲಂಗಗಳನ್ನು ಧರಿಸಿ, ಸೊಗಸಾದಲಂಬಾಣಿ ಭಾಷೆಯಲ್ಲಿ ಹಾಡುತ್ತ ಕ್ಯಾಟ್ ವಾಕ್ ಮಾಠುತ್ತ ನಡೆವ  ಲಂಬಾಣಿ ಯುವತಿಯರನ್ನು ನೋಡಲೆಂದೇ ಬರುವರೆಷ್ಟು ಮಂದಿನೋ? ಅಂತೂಬಸ್ ಸ್ಟ್ಯಾಂಡ್ ಅಂತೂ ಗಿಜಿಗುಡುತ್ತಿತ್ತು.ಇನ್ನು ಇಷ್ಟು ಜನರನ್ನು ನೋಡಿ ಡ್ರೈವರ್ ಬಸ್ ನಿಲ್ಲಿಸಿಯಾನೇ ಎಂಬ ಚಿಂತೆ ಮೂವರನ್ನೂ ಕಾಡುತ್ತಿತ್ತು.

  ‘ಫಟ್ ಫಟ್ ಫಟ್’ ಸಪ್ಪಳ ಮಾಡುತ್ತ ತನ್ನ ಫಟಫಟಿಯನ್ನು ಒಂಟಿಗಾಲಿಯ ಮೇಲೆ ತಂದು ಸೀದಾ ಗೂಡಂಗಡಿಯ ಬಾಗಿಲಿಗೇ ಹಚ್ಚಿ ‘ಹೆಂಗದಿ ಬೇಯತ್ತಿ’ ಅಂದ ಲಮಾಣ್ಯಾರ ಪರಶ್ಯಾಗೆ ‘ಲೇ ಕುರಸ್ಯಾಲಾ, ಮೈಮ್ಯಾಗ ಖಬರ್ ಐತೆ ಇಲ್ಲೋ? ಹೀಂಗಾ ಗಾಡಿ ಹೊಡ್ಯೂದು..ಅದರ ಸಂಗಾಟs ನೀನೂಕುಣ್ಯಾಗ ಹೋಕ್ಕಿಯಲೇ ಒಂದಿನಾ’ ಎಂದು ಬಯ್ದಳು. ‘ಸಿನೆಮಾದಾಗ ಹೀಂಗs ಹೊಡಿತಾರಬೇ ಹಿರೋಗಳು..’  ಅಂದ ಅವನಿಗೆ, ‘ಅವರಿಗೇನಲೇಆಸ್ತಿ,ರೊಕ್ಕ ಅಳತಿರತೈತಿ ಹಿಂದ..ಆ ಯಮಧರ್ಮಗೂ ತಿನಿಸಿ ಬಚಾವ್ ಆಕ್ಕಾರು. ನಿಂದs ನೋಡಕೋಲೆ’  ಅಂದ ಅವಳ ಮಾತಲ್ಲಿ ಕಟುಸತ್ಯ ಅಡಗಿತ್ತು. ‘ಎನಗಿಂತ ಮಿಗಿಲಾದ ಯಮಧರ್ಮನವನಾರಿಹನು? ಹೇಳೈಎಲೆ ಬಾಲೆ’ ಎಂದು ಬಯಲಾಟದ ದಾಟಿಯಲ್ಲಿ ಹಾಡಿದ ಪರಶ್ಯಾಗೆ ‘ದೀಡ್ ಶ್ಯಾಣ್ಯಾ ಅದಿಬಿಡು. ರ ಅಂದ್ರ ಠ ಅನ್ನಾಕ ಬರದಿದ್ರೂ ಇಂಥದ್ದಕ್ಕೇನೂ  ಕಮ್ಮಿ ಇಲ್ಲ. ತಗೋ..ನಡಿ ಅತ್ತಾಗ..ಗಿರಾಕಿಗೆ ಜಾಗಾ ಬಿಡು.’ ಅಂತ ಹುಸಿಮುನಿಸಿನಿಂದಬಯ್ಯುತ್ತ ಗುಟಕಾ ಪ್ಯಾಕೆಟ್ ಗಳನ್ನು ಕೊಟ್ಟಳು. ಊರಿನ ಪಡ್ಡೆ ಹುಡುಗರಿಗೆಲ್ಲ ಈ ಗುಬ್ಬವ್ವ ಯತ್ತಿನೇ; ಯಾರಿಗೂ ಚಿಗವ್ವ,ದೊಡ್ಡವ್ವ ಅಲ್ಲ.  ಚೆಲುವೆಯರಾದ ಹದಿಹರೆಯಕ್ಕೆ ಕಾಲು ಇಡುತ್ತಿರುವ ಹೆಣ್ಣುಮಕ್ಕಳಿಬ್ಬರ ತಾಯಿ ಅಕಿ ಅಂತ ಬೇರೆ ಹೇಳಬೇಕಾಗಿಲ್ಲ.

‘ ಈ ಬಸ್ ಏನ ಇವತ್ತ ಬರಾಂಗ ಕಾಣಂಗಿಲ್ಲ. ನೀ ಇಲಕಲ್ ಗ ಹೊಂಟಿದ್ರ ನಾನೂ ನಿನ್ನ ಜತೀಲೇ ಬರತೀನಲೇ’ ಅಂದ ಮುತ್ತಪ್ಪನಿಗೆ ಪರಶ್ಯಾ ‘ಕುಂಡ್ರಹಂಗಾರ’ ಅಂತ ತನ್ನ ಹಿಂದಿನ ಸೀಟಿನಲ್ಲಿ ಕೂಡಿಸಿಕೊಂಡು ಭರ್ರನೇ ಗಾಡಿ ಚಾಲೂ ಮಾಡಿದ. ‘ಆ ಹುಡುಗಂದು ಪರೀಕ್ಸಾ ಐತಿ ಅಂತಲೇ. ಜ್ವಾಕ್ಯಾಗಿಕರಕೊಂಡ ಹೋಗಲೇ ಪರಶ್ಯಾ’ ಅಂತ ಅವನನ್ನು ಎಚ್ಚರಿಸಲು ಮರೆಯಲಿಲ್ಲ ಗುಬ್ಬವ್ವ.

 ಹತ್ತೂವರೆಯಾದರೂ ಬಸ್ಸು ಬರದಿದ್ದಾಗ ‘ಯವ್ವಾ, ಇವತ್ತೇನ ಆತs ಈ ಬಸ್ಸಿಗೆ’ ಅಂತ ಬಸ್ಸಿಗೂ, ತನ್ನ ಹಣೆಬರಹಕ್ಕೂ ಹಿಡಿಶಾಪ ಹಾಕುತ್ತ  ಒಮ್ಮೆ ಎದ್ದು, ಒಮ್ಮೆ ಕೂತು, ಮಗದೊಮ್ಮೆ ನಾಕ್ಹಜ್ಜೆ ಹಿಂದೆ ಮುಂದೆ ಓಡಾಡಿ ತನ್ನ ಆತಂಕವನ್ನು ಮರೆಸುತ್ತಿದ್ದಳು ಪಾತಜ್ಜಿ. ಬೆಳಗ್ಗೆ ಕುಡಿದ ಹಾಲು ಅರಗಿ ಪುಟ್ಟ ಪ್ರಣವ್ನೂ ಹಸಿವು-ನಿದ್ದೆಗಾಗಿ  ಕಿರಿಕಿರಿ-ಚಿರಿಪಿರಿ ಶುರು ಮಾಡಿದ.  ಬಿಸಿಲಿನ  ಝಳವೂ  ಏರಿದಂತೆ  ಹಂಗೇ ಒಟ್ಟಿಬಂದ ಕೆಲಸವನ್ನೆಲ್ಲ ನೆನೆದು ದೇವಕ್ಕನೂಚಡಪಡಿಸತೊಡಗಿದಳು. ಅಷ್ಟರಲ್ಲಾಗಲೇ 2-3 ಟೆಂಪೊಗಳು ತುಂಬಿ ತುಳುಕುತ್ತ ಬಂದು ನಿಂತವಾದರೂ ಅವು ಪಾತಜ್ಜಿಯನ್ನು ಹತ್ತಿಸಿಕೊಳ್ಳುವ ಸಾಹಸಮಾಡಲಿಲ್ಲ- ಅವಳ ದೊಡ್ಡ ಎಲೆಬುಟ್ಟಿಯನ್ನು ನೋಡಿ.’ತಮ್ಮಾ, ಒಂದೆರಡು ರೂಪಾಯಿ ಹೆಚ್ಚಿಗಿ ತಗೋಳೋ ಬುಟ್ಟೀದೂ’ ಅಂತ ಅಕಿಅಲವತ್ತುಕೊಂಡರೂ .. ‘ಏಯ್ ರೊಕ್ಕದ್ದಲ್ಲ ಬೇ, ಬುಟ್ಟಿ ಇಡಾಕ ಜಾಗಾ ಎಲ್ಲೈತಿ? ನೋಡಿದ್ಯೋ ಇಲ್ಲೋ ಟೆಂಪೋ ಮ್ಯಾಗನೂ ಹೆಂಗ ಕುಂತಾರ ಮಂದಿ’ ಅಂತ ಉತ್ತರ ಕೊಟ್ಟು ‘ರೈಟ್ ರೈಟ್’ ಅಂತ ಕೂಗಿ ಗಾಡಿ ಹೊರಡಿಸಿಯೇಬಿಟ್ಟರು ಆ ಕಿನ್ನರುಗಳು. ಗೌರಿಗಂತೂ ಡೈರೆಕ್ಟ್ ಬಿಜಾಪೂರಕ್ಕೇಹೋಗಬೇಕಾದ್ದರಿಂದ ಟೆಂಪೊ ಹತ್ತಿ ಇಲಕಲ್ಲದಲ್ಲಿಳಿವ ಮಾತೇ ಇರಲಿಲ್ಲ.ಹೀಗಾಗಿ ಪಾತಜ್ಜಿ- ಗೌರಿಯರಿಬ್ಬರಿಗೂ ಹಿರೇಕೆರೂರ ಬಸ್ಸನ್ನು ಧ್ಯಾನಿಸುತ್ತಕುಳಿತಿರಬೇಕಾಯಿತು. ಮಧ್ಯಾಹ್ನದ ಊಟಕ್ಕೆಂದು ಗುಬ್ಬವ್ವನೂ ಅಂಗಡಿ ಬಂದ್ ಮಾಡುವ ಗಡಿಬಿಡಿಯಲ್ಲಿ ‘ ಇವತ್ತೇನ ಬಸ್ ಬರಂಗಿಲ್ಲ ಬಿಡ ಯವ್ವಾ, ಮನಿಗಿ ಹೋಗಿ ಉಂಡ ಮಕ್ಕೊ. ನಾಳಿಗಿ ಹೋಗಾಕಂತಿ.’ಅಂದಳು ಗೌರಿಗೆ. ಗೌರಿ ಸಮ್ಮಿಶ್ರ  ಭಾವದಲ್ಲಿದ್ದಳು. ಒಂದೆಡೆ ಒಂದಿನ ಹೆಚ್ಚಿಗೆ ತೌರಲ್ಲಿ ಉಳಿವಸಂಭ್ರಮ ಮತ್ತೊಂದೆಡೆ ದಾರಿ ಕಾಯ್ದು ನಿರಾಶನಾಗುವ ಮನದನ್ನನ ಸಲುವಾಗಿ ಬೇಸರ. ಅಂತೂ ಬಂದ ದಾರಿಗೆ ಸುಂಕವಿಲ್ಲ ಎಂದು 12 ಗಂಟೆಯಹೊತ್ತಿಗೆ ಬಸ್ ಸ್ಟ್ಯಾಂಡ ಖಾಲಿ ಮಾಡಿದರು. ಬಿಸಿಲು ರಣರಣ ಅನತಿತ್ತು. ಪಾತಜ್ಜಿ ಮರುದಿನದ ಹನುಮಸಾಗರದ ಸಂತೀಗರೆ ಹೋಗಿ ಎಲೆ ಮಾರುವವಿಚಾರ ಮಾಡುತ್ತ ಸೋತ ಕಾಲುಗಳೊಂದಿಗೆ ವಾಪಸ್ ಹೊರಟಳು.

ಇಡೀ ದಿನ ರಣರಣ ಬಿಸಿಲು ಕಾಯ್ದು ಸಂಜೆ ಆಗುತ್ತಿದ್ದಂತೆಯೇ ಅಚಾನಕ್ ಆಕಾಶವೆಲ್ಲ ಕಪ್ಪು ಆವರಿಸಿ, ಮಂದಿಗೆ ಬೆಳಕಿಂಡಿ ಹಾಕಲಿಕ್ಕೂ ಪುರುಸೊತ್ತುಕೊಡದೇ ಧಪಾಧಪಾ ಅಂತ ಒಮ್ಮಿಂದೊಮ್ಮೆಲೇ  ಶುರುವಾದ ಮಳಿ ಎರಡು ದಿನ ಒಂದು ನಿಮಿಷನೂ ನಿಲ್ಲದs ಸುರದೇ ಸುರೀತು.  ಊರ ಮುಂದಿನಬೆಣ್ಣಿ ಹಳ್ಳ ಕಟ್ಟಿ ಬಸ್ಸು, ಟೆಂಪೊ ಎಲ್ಲಾ ಬಂದ್ ಆಗಿ, ಸೂರ್ಯನೂ ಇಲ್ಲದs, ಕರೆಂಟೂ ಇಲ್ಲದs ಇಡೀ ಹಳ್ಳಿ ಎರಡು ದಿನ ಪೂರಾ ‘ಗವ್’ ಅಂತ ಕತ್ತಲಾಗಇರೂ ಹಂಗ ಆಗಿ ಅಂತೂ ಬುಧವಾರದ ಹೊತ್ತಿಗೆ ಮಳಿಯ ಆರ್ಭಟ ಕಡಿಮೆಯಾಗಿ ಗುರುವಾರ ಮತ್ತ ಯಥಾಪ್ರಕಾರ ಸೂರ್ಯ ಹೊಳಕೋತ ಬಂದುಹಳ್ಳ ಇಳಿದು ಬಸ್ಸು ಗಿಸ್ಸು ಎಲ್ಲಾ ಚಾಲೂ ಆದ್ವು.

 ಇತ್ತ,ಪಾತಜ್ಜಿಯ ಎಲೆಗಳೆಲ್ಲ ಪಾಪ ಅಕಿನ ಕನಸಿನ ಹಂಗೆನೇ ಬುಟ್ಟ್ಯಾಗೇ ಅರ್ಧ ಕೊಳೆತು, ಅರ್ಧ ಹಳದಿಯಾಗಿ ಕೂತಿದ್ವು. ಒಮ್ಮಿಂದೊಮ್ಮೆ ಅಡ್ಡಮಳಿಶುರು ಆದಾಗ, ಮಗಳ ಬಾಣಂತನಕ್ಕ ಅಗ್ಗಿಷ್ಟಿಗಿಗೆ ಬೇಕಂತ ಆಯ್ದು ತಂದ ಕಾಕುಳ್ಳು,ಇದ್ಲಿಚೀಲ ಎಲ್ಲ ಒಳಗ ತರಬೇಕಂತ ಗಡಿಬಿಡಿನಾಗ ಮಳ್ಯಾಗಹಿತ್ತಲದಾಗ ಹೋಗಿ ಅವನ್ನ ಹೊತಗೊಂಡು ಅವಸರಲೇ ಒಳಗ  ಬರೂಮುಂದ ಕಾಲು ಜರದು ಬಿದ್ದು, ಕಾಲು ಉಳಕಿಸಿಕೊಂಡು ತಿಂಗಳುಗಟ್ಟಲೇಸರಿಯಾಗಿ ಅಡ್ಡಾಡಲಾಗದೇ ಪೂರಾ ಲುಕ್ಸಾನದಾಗ ಮುಳುಗಿಹೋದ್ಲು ಪಾತಜ್ಜಿ. ಮಗಳ ಕುಬಸದ ಕಾರ್ಯ,ಅಳ್ಯಾಗೊಂದು ಬಂಗಾರದ ಉಂಗುರ, ಮಗಳ ಸಿಜೇರಿಯನ್ ಹೆರಿಗೆ, ಕೂಸಿನ ತೊಟ್ಟಲಾ-ಬಟ್ಟಲಾ , ಕೂಸಿಗೊಂದು ಜರದಂಗಿ ಕುಂಚಗಿ, ಮುತ್ತಿನ ಜಬಲಾ, ಆಲದೆಲಿ ದುಬಟಿ,ಬೆಳ್ಳಿ ಗಿಲಕಿ, ಹಾಲ್ಗಡಗ.. ಅಂತೆಲ್ಲ ಸಿಕ್ಕಾಪಟ್ಟೆ ಖರ್ಚು ಬಂದು ಊರ ಸಾವಕಾರ ಈಶಪ್ಪನ ಹತ್ರ ಸಾಲ ಮಾಡಬೇಕಾತು. ಅದಕ್ಕಂತ ಇದ್ದೊಂದು ಮನೀದೂ ಪತ್ರ ಅಡಇಡಬೇಕಾತು.

  ಆ ಕಡೆ ಪರಶ್ಯಾನ ಗಾಡಿ ಮ್ಯಾಲೆ ಹೊಂಟಿದ್ದ ಮುತ್ತ, ‘ಲೇ ಸಾವಕಾಶಲೇ ಪರಶ್ಯಾ’ ಅಂತ ಹೇಳತಿದ್ರೂ ವೇಗ ತಗ್ಗಿಸದೇ ಇಲಕಲ್ ಕ್ರಾಸ್ ನ ಮಹಾಂತೇಶಟಾಕೀಜ್ ಹತ್ರ ತಿರುವು ತಗೋ ಮುಂದ ಒಮ್ಮಿಂದೊಮ್ಮೆಲೇ ಎದುರಾದ ಟ್ರ್ಯಾಕ್ಟರಿಗೆ ಢಿಕ್ಕಿ ಹೊಡದು ಗಾಡಿ ಉರುಳಿಬಿದ್ದು ಪಕ್ಕದಲ್ಲಿದ್ದ

ದೊಡ್ಡ ಕಲ್ಲುಬಂಡೆಗೆ ಮುತ್ತನ ಬಲಗೈ ಬಡಿದು ‘ಯವ್ವಾ’ ಅಂದವನೇ ಅಸಾಧ್ಯ ನೋವಿನಿಂದ ಒದ್ದಾಡಿದ. ಸಣ್ಣಪುಟ್ಟ ತರಚು ಗಾಯಗಳಾಗಿದ್ದ ಪರಶ್ಯಾಟಾಕೀಜಿನ ಕಾವಲುಗಾರನ ಸಹಾಯದಿಂದ ಗಾಡಿ ಎತ್ತಿ ನಿಲ್ಲಿಸಿ ಮುತ್ತನ್ನ ಮೆತ್ತಗ ನಡೆಸಿಕೊಂಡು ಗಾಡಿ ಮೇಲೆ ಕೂಡಿಸಿಕೊಂಡು ಅಲ್ಲೇ ಹತ್ರ ಇದ್ದಕಾಖಂಡಕಿ ಡಾಕ್ಟರ್ ಹತ್ರ ಕರಕೊಂಡು ಹೋದ. ಕೈಯ ಬಾವು,ನೋವು ಗಮನಿಸಿದ ಅವರು ‘ಕೈಗೆ ಫ್ರಾಕ್ಚರ್ ಆದ್ಹಂಗ ಕಾಣಸತದ. ದೊಡ್ಡಾಸ್ಪತ್ರೆಗೆಕರಕೊಂಡು ಹೋಗು.’ಅಂತ್ಹೇಳಿ ಮುತ್ತನಿಗೆ ನೀರು ಕುಡಿಸಿ, ಪ್ರಥಮೋಪಚಾರ ಮಾಡಿ ಕಳಿಸಿದ್ರು. ಪಾಪ! ಬ್ಯಾಂಕಿನ ಪರೀಕ್ಷೆ ಬರೀಬೇಕಾಗಿದ್ದ ಮುತ್ತ ಕೈಗೆಬ್ಯಾಂಡೇಜ್ ಸುತಕೊಂಡು ಸರಕಾರಿ ದವಾಖಾನಿ ಕಾಟ್ ಮ್ಯಾಲ ಮಕ್ಕೊಳ್ಳೂ ಹಂಗ ಆತು.

  ಇತ್ತ ಗೌರಿ ಅಳುಕಿನಿಂದ ಗಂಡನ ಫೋನ್ ಕಾಯ್ದದ್ದೇ ಬಂತು.ಅವನು ಸಿಟ್ಟಿಗೆದ್ದು ಮಾಡಲಿಲ್ಲವೋ, ಮಳಿ ಸಲುವಾಗಿ ಲೈನ್ ಕಟ್ ಆಗಿ ಫೋನ್ಬರವಲ್ತೋ ತಿಳೀಲಾರದೇ ಚಡಪಡಿಸಿದಳು. ಎರಡು ದಿನ ಹೆಚ್ಚಿಗೆ ತೌರಿನಲ್ಲಿರುವ ಸುಖ ವರುಣರಾಯ ಕರುಣಿಸಿದ್ದರೂ ಅದನ್ನು ಅನುಭವಿಸಲಾಗದೇಒಳಗೊಳಗೇ ತಳಮಳಿಸುತ್ತಿದ್ದಳು. ಅಂತೂ ಗುರುವಾರ ಹಿರೇಕೆರೂರು ಬಸ್ಸು 9 ಕ್ಕೆಲ್ಲ ಬಂದು, ಸೀಟೂ ಸಿಕ್ಕು 12 ಅನ್ನೂದರಾಗ ಬಿಜಾಪೂರದ ಬಸ್ಸ್ಟ್ಯಾಂಡ್ ಮಟ್ಟಿಯೂ  ಆತು. ತಾನೇ ಬ್ಯಾಗು, ಕೂಸು ಎಲ್ಲ ಹೆಂಗೋ ಸಾವರಿಸಿಕೊಂಡು ಆಟೋ ಹತ್ತಿ ಮನೆಗೆ ಬಂದಿಳಿದಾಗ ಮನೆಯಲ್ಲಿಅತ್ತಿಯವರನ್ನು ಬಿಟ್ಟು ಯಾರೂ ಇರಲಿಲ್ಲ. ಅವರ ಗಂಟಿಕ್ಕಿದ ಮುಖದಿಂದಲೇ ಅವರ ಮನಸ್ಥಿತಿ ಅರಿಯಬಹುದಿತ್ತು. ‘ಬಂದ್ಯಾ ಕೂಸುಮರೀ, ಒಂದುಯುಗ ಆಗಿಹೋಗಿತ್ತಲ್ಲಾ ನಿನ್ನ ನೋಡದs?’ಅಂತ ಮೊಮ್ಮಗನನ್ನು ಎತ್ತಿ ಮಾತಾಡಿಸಿದ  ಅವರು ಸೊಸೆಯತ್ತ ತಿರುಗಿ ‘ಹೇಳಿದ ಸಮಯಕ್ಕ ಬರಬೇಕು. ಆಗದಿದ್ರ ಮದಲs  ಹೇಳಿಬಿಡಬೇಕು ಬರಂಗಿಲ್ಲ ಅಂತ..ಪ್ರಸನ್ನ ಎಷ್ಟ ಕಿರಿಕಿರಿ ಮಾಡಿಕೊಂಡಾನ ನಾಕ ದಿನದಿಂದ ಅನ್ನೂ ಅಂದಾಜರೇ ಅದನ ನಿನಗ?’ ಅಂತ ತುಸು ಬಿರುಸಾಗೇ ಅಂದು ಅವಳ ಉತ್ತರವನ್ನೂ ಕೇಳಲಿಷ್ಟವಿಲ್ಲದವರಂತೆ ಮಗುವನ್ನೆತ್ತಿಕೊಂಡು ತಮ್ಮ  ರೂಮಿಗೆ ನಡೆದರು. ಗೌರಿಗೆ ಯಾಕೋಎಲ್ಲಾ ಖಾಲಿಖಾಲಿ ಎನಿಸಿ ಅಳು ಬರುವಂತಾಯ್ತು. ಸಂಜೆ ಮನೆಗೆ ಬಂದ ಯಜಮಾನರು ‘ಅಂತೂ ಬರಬೇಕನ್ನಿಸಿತಾ ತೌರುಮನೆ ಬಿಟ್ಟು ..ನೆನಪಾತಾನಮ್ಮದು. ಥ್ಯಾಂಕ್ಸ್ ವಾ ಬಂದಿದ್ದಕ್ಕ’ ಎಂದು ಕಹಿಯಾಗೇ ನುಡಿದಾಗ ಗೌರಿಗೆ ನೋವಿನೊಡನೆ ಸಿಟ್ಟೂ ಬಂತು. ಬಸ್ಸೇ ಬರದಿದ್ದುದು, ಎರಡು ದಿನ ಮಳಿಹಚ್ಚಿಹೊಡದು ಹಳ್ಳ ಕಟ್ಟಿದ್ದು ತನ್ನ ತಪ್ಪೇ ಅಂತ ಚೀರಿ  ಹೇಳಬೇಕೆನ್ನಿಸಿತಾದರೂ ಮನೆತುಂಬ ಜನರಿರುವಾಗ ಹಾಗೆ ದನಿಯೇರಿಸಿ ಮಾತಾಡುವುದುಉಚಿತವಲ್ಲವೆನಿಸಿ ಏಕಾಂತದ ಗಳಿಗೆಗಾಗಿ ಕಾಯುತ್ತಿದ್ದಳು. ರಾತ್ರಿ ರೂಮಲ್ಲಿ, ತಾನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಸ್ಸಿಗಾಗಿ ಕಾಯ್ದ  ಬವಣೆಯನ್ನುಕಥಿ ಮಾಡಿ ಹೇಳುತ್ತಿದ್ದಾಗ – ‘ಇರಬೇಕು ಅನ್ನಿಸಿದ್ರ ಇದ್ದು ಬಾ ಗೌರಾ. ಆದ್ರ ಬಸ್ ಬಂದಿಲ್ಲ ಅಂತ ಸುಳ್ಳು ಹೇಳೂದು, ಅದೂ ನನ್ನ ಮುಂದ..ನಿನ್ನಕಡೆಯಿಂದ ಇದನ್ನ ನಿರೀಕ್ಷಿಸಿರಲಿಲ್ಲ.ಅವತ್ತ 11:30 ಅಂದ್ರ ಬಸ್ ಬಂದಿತ್ತು. ಕೊನೆಯ ವ್ಯಕ್ತಿ ಇಳದು ಕಂಡಕ್ಟರ್ ಬಾಗಿಲಾ ಬಂದ್ ಮಾಡೂತನಾ ಮೈಯೆಲ್ಲಕಣ್ಣಾಗಿ ಕಾಯತಿದ್ದೆ ನಿನ್ನ, ಪ್ರಣೂನ ಸಲೂವಾಗಿ.ಈಗ ನೋಡಿದ್ರ ನೀ ಹೀಂಗ ಹೇಳಲಿಕ್ಹತ್ತೀ.ನಮ್ಮ ನಡುವನೂ ಇಂಥ ಸುಳ್ಳುಗಳು ಬೇಕಾ? ಇಷ್ಟ ಏನನಮ್ಮ ಪ್ರೀತಿ ಅರ್ಥ?’ ಅಂತಂದು ಪ್ರಸನ್ನ ಹೊಳ್ಳಿ ಮುಸುಕು ಹಾಕಿಕೊಂಡಾಗ ಗೌರಿಗೆ ಎಲ್ಲ ಅಯೋಮಯ!! 4-6 ದಿನ ಇಬ್ಬರ ನಡುವೆಮಾತಿಲ್ಲ-ಕತೆಯಿಲ್ಲ. ನಡೆದದ್ದು ಬರೀ ಹಾಡು. ಅದೂ ಟೇಪ್ ರಿಕಾರ್ಡರಿನಲ್ಲಿ.. ‘ಏಕೆ ಹೀಗೆ ನಮ್ಮ ನಡುವೆ ಮಾತು ಬೆಳೆದಿದೆ..ಕುರುಡು ಹಮ್ಮುಬೇಟೆಯಾಡಿ ಪ್ರೀತಿ ನರಳಿದೆ’ ಅಂತ ಅಶ್ವತ್ಥ ಹಗಲೂ ರಾತ್ರಿ ಹಾಡಿದ್ದೇ ಹಾಡಿದ್ದು.

ತಪ್ಪು ಇಲ್ಲಿ ಯಾರದ್ದೂ ಅಲ್ಲ. ನಡೆದದ್ದು ಇಷ್ಟೇ..ಒಂದಿನವೂ ಸರಿಯಾದ ಸಮಯಕ್ಕೆ ಬಾರದೇ ಇದ್ದ ಹಿರೇಕೆರೂರ  ಬಸ್ಸು ಅಂದು ಅದ್ಯಾವ ಹೊಸಕಂಡಕ್ಟರ್,ಡ್ರೈವರ್ ಇದ್ದರೋ ಗೊತ್ತಿಲ್ಲ  8 ಗಂಟೆಗೆ, ಸರಿಯಾದ ಸಮಯಕ್ಕೇ ಬಂದು ಎರಡು ನಿಮಿಷ ಬಸ್ ಸ್ಟ್ಯಾಂಡಿನಾಗ ನಿಂತು ಇಳಿವವರು, ಹತ್ತುವವರು ಯಾರೂ ಇಲ್ಲದೇ  ಬುರ್ ಅಂತ ಹೊರಟು ಹೋಗಿದೆ. ಪಾಪ! ಗುಬ್ಬವ್ವಗಾದರೂ ಹೆಂಗ ತಿಳದೀತು ಅದು! ದಿನಾ ತಡಾಮಾಡೂ ಆಹಿರೇಕೆರೂರ ಬಸ್ಸು ಒಂದಿನಾ ಸರಿಯಾದ ಸಮಯಕ್ಕೆ ಬಂದು ಮೂರೂ ಜನರ ಜೀವನದಾಗ ಏನೇನೋ ಆವಾಂತರ ಮಾಡಿ ಹೋತು ಅನ್ರಿ.

ಈಗ ಗುಬ್ಬವ್ವನ ಗೂಡಂಗಡಿ ಜಾಗದಲ್ಲಿ ಸಿಮೆಂಟಿನ ಕಟ್ಟಡ ಎದ್ದಿದೆ. ‘ಕಾಮಧೇನು ಹಾಲಿನ ಡೈರಿ’ಯಲ್ಲಿ ಗುಬ್ಬವ್ವನ ಅಳಿಯಂದಿರು ಹಾಲು-ಮೊಸರು, ಬ್ರೆಡ್ಡು-ಬನ್ನು, ಜಾಮ್-ಸಾಸ್ ಗಳ ಭರ್ಜರಿ ಮಾರಾಟ ನಡೆಸಿದ್ದಾರೆ. ಪಾತಜ್ಜಿಯ ಮೊಮ್ಮಗ  ಸುನೀಲ ಈಗ ಚಿಗುರು ಮೀಸೆಯ ಯುವಕ. ಧಾರವಾಡದಕೃಷಿವಿಶ್ವವಿದ್ಯಾಲಯದಲ್ಲಿ Bsc Agri ಮಾಡಿದ ಅವನು ತನ್ನ ಅಪ್ಪನ ನೆರವಿನಿಂದ ಗೌಡ ಈಶಪ್ಪನಿಂದ ಅಜ್ಜಿಯ ಮನೆ-ಎಲೆಯ ಪುಟ್ಟ ತೋಟಬಿಡಿಸಿಕೊಂಡದ್ದಲ್ಲದೇ ಅದನ್ನು ಎಕರೆಗಟ್ಟಲೆ ಬೆಳೆಸುವ ಹವಣಿಕೆಯಲ್ಲಿದ್ದಾನೆ. ಮರುವರುಷ ಬ್ಯಾಂಕ್ ಪರೀಕ್ಷೆ ಬರೆದು ಪಾಸಾದ ಮುತ್ತಪ್ಪ ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರಿನ ಬನಶಂಕರಿ ಶಾಖೆಯಲ್ಲಿ ಆಫೀಸರ್ ಆಗಿದ್ದಾನೆ. ಪುಟ್ಟ ಪ್ರಣವ್ ಈಗ ಸ್ನಾತಕೋತ್ತರ ಪದವೀಧರ. ಕಾಲೇಜುಓದುವ ಅಕ್ಕರೆಯ ಅವಳಿ-ಜವಳಿ ತಂಗ್ಯಂದಿರಿದ್ದಾರೆ. ಅವರ ಮನೆಯಲ್ಲೀಗ CD ಪ್ಲೇಯರ್ ‘ಒಲವೇ ಜೀವನ ಸಾಕ್ಷಾತ್ಕಾರ’ ಹಾಡುತ್ತಿದೆ.

  ಹೀಗೆ ಎಲ್ಲ ಬದಲಾಗಿದೆ ಈಗ. ಆದರೆ ಈಗಲೂ ಬದಲಾಗದೇ ಇದ್ದದ್ದು ಒಂದೇ ಒಂದು—ಸಮಯಕ್ಕೆ ಸರಿಯಾಗಿ ಬರದ ಆ ಬಸ್ಸು;ಅದೇ ಹಿರೇಕೆರೂರಬಸ್ಸು.

~ ಗೌರಿ ಪ್ರಸನ್ನ

ಶ್ರದ್ಧಾಂಜಲಿ

ಕೇವಲ ಸಪ್ತಸ್ವರಗಳಿಂದ ಅದೆಂಥ ಅಲೌಕಿಕ  ಲೋಕವನ್ನು ಕಟ್ಟಿಕೊಡುತ್ತದೆ ಸಂಗೀತ!!  ಮಾನವ ಭಾವನೆಗಳಿಗೆಲ್ಲ ಬಣ್ಣತುಂಬುತ್ತದೆ. ನಿಮಿಷಾರ್ಧದಲ್ಲಿ ನವರಸಗಳ ಪ್ರಪಂಚ ಮೈತಳೆಯುತ್ತದೆ. ನಿಮಗಿದು ಅರ್ಥವಾಗಬೇಕೆಂದರೆ ಒಮ್ಮೆ ಟಿ.ವಿ. ವ್ಯಾಲ್ಯೂಮ್ ಪೂರ್ತಿ ಬಂದ್ ಮಾಡಿ ಬರೀ ದೃಶ್ಯವನ್ನು ನೋಡಿ. ಅಲ್ಲಿ ದೆವ್ವದ ಸೀನ್ ಇದ್ದರೂ ನಿಮಗೆ ಹೆದರಿಕೆ ಎನಿಸುವುದಿಲ್ಲ.  ನಾಯಕ -ನಾಯಕಿ ಅಪ್ಪಿ ಮುತ್ತಿಟ್ಟರೂ ನಿಮ್ಮ ಹೃದಯದಲ್ಲಿ ಶೃಂಗಾರ ರಸ ಜಿನುಗುವುದಿಲ್ಲ.  ನಾಯಕ ಫೈಟಿಂಗ್ ಮಾಡುತ್ತ ಏಕಕಾಲಕ್ಕೆ ನೂರು ಜನರನ್ನು ಕೆಡವಿದರೂ  ನೀವು ರೋಮಾಂಚಿತರಾಗುವುದಿಲ್ಲ. ಅಂತೂ  ಸಂಗೀತವಿಲ್ಲದೇ ರಸವಿಲ್ಲ..ಬಣ್ಣವಿಲ್ಲ. ಅಂಥ ಸಂಗೀತ ಲೋಕದ ಮಾಂತ್ರಿಕ ತಬಲಾಪಟು , ಹಲವಾರು ಪ್ರಶಸ್ತಿಗಳ ಗೌರವ ಹೆಚ್ಚಿಸಿದ ಉಸ್ತಾದ್ ಝಾಕೀರ್ ಹುಸೇನ್ ಅವರ ಶೃದ್ಧಾಂಜಲಿಗೆ ಮುಡಿಪು ಇಂದಿನ ಅನಿವಾಸಿ ಸಂಚಿಕೆ.  ಸಂಪಾದಕರು ಗತಕಾಲದ ಕಲಾವಿದರೊದಿಗಿನ ಸಾಕ್ಷಾತ್ ಪ್ರಸಂಗವನ್ನು ನೆನೆಸಿಕೊಂಡಿದ್ದಾರೆ. ರಾಧಿಕಾ ಜೋಶಿಯವರು ತಮ್ಮದೇ ಆದ ಅನನ್ಯ ಶೈಲಿಯ ಇಂಗ್ಲೀಷ್ ಕವನವೊಂದರ ಮೂಲಕ ಭಾವಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ. ಬನ್ನಿ.. ನೀವೂ ಓದಿ ನಿಮ್ಮ ಪಾಲಿನ ಅಂಜಲಿಯನ್ನು ಸಲ್ಲಿಸಿ.                           

~ ಸಂಪಾದಕಿ

ವಾಹ್! ಉಸ್ತಾದ್ ವಾಹ್!!

ಕೆಲವು ಚೇತನಗಳೇ ಹಾಗೆ. ಸುಮ್ಮನೇ ಅವರ ಹೆಸರು ಕೇಳಿದರೇನೇ  ಮನಕ್ಕೆಂಥದೋ ಹಾಯೆನ್ನಿಸುವ ಭಾವ, ಅದೇನೋ ನಿರಾಳ. ಎಲ್ಲಿಂದಲೂ, ಏನೂ ನೇರ ಸಂಬಂಧವಿರದೆಯೂ ಅದೇನೋ ಆತ್ಮೀಯ – ಆಪ್ತ ಅನುಭೂತಿ.  ಉಸ್ತಾದ್ ಝಾಕೀರ ಹುಸೇನ್ ಅಂಥದೇಒಂದು ಚೆಂದದ ಚೇತನ. ‘ ಚೆಲುವಯ್ಯಾ ಚೆಲುವೋ ತಾನಿತಂದಾನಾ’ ಅಂದಂತೆ ಅದೆಷ್ಟು ಚೆಲ್ವಿಕೆಗಳ  ಸಂಗಮ?! ಸುಂದರ ಶರೀರ- ಶಾರೀರ– ಅಂತ:ಕರಣಗಳು, ತಬಲಾವನ್ನು ನಾದದ ನದಿಯಾಗಿಸುವ ಅವರ ಶೈಲಿ, ನೆರೆದವರ ಮನ ತಿಳಿಯಾಗಿಸುವ ಲಘು ಹಾಸ್ಯದ  ಎಲ್ಲೆ ಮೀರದ ತೂಕದ ಮಾತುಗಳು. ಒಂದೊಂದೂ ನ ಭೂತೋ ನ ಭವಿಷ್ಯತಿ.

   ಎಲ್ಲಿಂದ, ಯಾವಾಗಿಂದ ಶುರುವಾದದ್ದು ಅವರ ನಂಟು ಎಂದು ಯೋಚಿಸಿ ನೋಡಿದರೆ – ‘ ವಾಹ್ !,ತಾಜ್ ಬೋಲಿಯೆ’ ದಿನಗಳಿಂದ ಅನ್ನಬಹುದು  ಸದಾ ಹಸನ್ಮುಖದ ಈ ಚೆಲುವ ಚೆನ್ನಿಗರಾಯನ ತಬಲಾದ ಮೇಲಿನ ಬೆರಳುಗಳ  ಆ ಸುರಳೀತ, ಸುಲಲಿತ ನಾಧಿನ್ ಧಿನ್ನಾ ನರ್ತನ, ಅಲೆಅಲೆಗುಂಗುರುಗೂದಲಿನ ತೋಂತನನ ನೋಡುತ್ತಿದ್ದರೆ ನಮ್ಮ ಹೃದಯವೂ ‘ ಧಕ್ ಧಕ್ ಕರನೇ ಲಗಾ’  ಆಗಿ ಅಮೃತವಾಹಿನಿಯೊಂದು ಹರಿಯುತ್ತಿದ್ದುದು ಸುಳ್ಳಲ್ಲ. ಸಂಗೀತದ ಬಗ್ಗೆ ಒಂದು ಕೈ ಒಲವು ಹೆಚ್ಚಾದದ್ದೇ ಇವರಿಂದ ಎನ್ನಬಹುದು. ನಮ್ಮ ಅಡುಗೆಮನೆಯಲ್ಲಿ red label   ಹೋಗಿ Taj ಚಹಾ ಬರಲೂ ಇವರೇ ಕಾರಣ.

ಕಲೆಯ ಬಗೆಗಿನ ಅವರ ಪ್ರೀತಿ, ತುಂಬಿದ ಕೊಡ ತುಳುಕುವುದಿಲ್ಲ ಎನ್ನುವಂತಿರುವ ನಯವಿನಯ, ಸಾದಾತನಗಳು, ಮಾನವೀಯತೆಗೆ ಮಿಡಿವ ಅವರ ಮಾತು – ವರ್ತನೆಗಳು ಅವರನ್ನು ಬೇರೆಯದೇ ನೆಲೆಯಲ್ಲಿ ನಿಲ್ಲಿಸುತ್ತವೆ. ಅವರೇ ಹೇಳುವಂತೆ ಸಂಗೀತಕ್ಕಿರುವ ಶಕ್ತಿ ಅಪರಿಮಿತ. ಅದು ಯಾವಾಗಲೂ ಎಲ್ಲ ದೇಶ, ಕಾಲ, ಜನಾಂಗದಲ್ಲೂ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತದೆ. ಯಾವ ಧರ್ಮಕ್ಕೂ, ಪ್ರಭುತ್ವಕ್ಕೂ ಇರದ ಅಸಾಧಾರಣ ಶಕ್ತಿಯದು. 

   ಅದು ಸುಮಾರು 88 – 89 ರ ಇಸ್ವಿ. ‘ ಸುರ್ – ಸಂಗಮ್’ ಎನ್ನುವ ಕಾರ್ಯಕ್ರಮಕ್ಕೆ ಝಾಕೀರ್ ಹುಸೇನ್ ಬರುತ್ತಿದ್ದಾರೆನ್ನುವ ಸುದ್ದಿ ಗೊತ್ತಾಯಿತು. ಆದರೆ ಟಿಕೆಟ್ ದರ  500 ರೂಪಾಯಿಗಳು. ಆಗಿನ ಕಾಲಕ್ಕೆ 500 ರ ಮುಖವನ್ನೂ ನಾವು ನೋಡಿರಲಿಲ್ಲ. ಸಿನೆಮಾ  ನೋಡಲು ಹೋದರೆ  ಮೂರು ರೂಪಾಯಿ ಇಪ್ಪತ್ತು ಪೈಸೆಯ ಬಾಲ್ಕನಿ ಟಿಕೆಟ್ ತೆಗೆಸಲೂ ಹಿಂದು ಮುಂದೆ ನೋಡುವ ಕಾಲವದು. ಕಾಲೇಜಿನ ಲೆಕ್ಚರರ್ ಆಗಿದ್ದ ನಮ್ಮ ಮುದ್ದಣ್ಣ ಮಾಮಾಗೆ ಎರಡು ಪಾಸ್ ಸಿಕ್ಕಿತ್ತು. ನಮ್ಮದು 5 ಜನರ ಗ್ಯಾಂಗ್. ( ನಾನು ಹಾಗೂ  4 ಜನ ಮಾಮಾನ ಮಕ್ಕಳು) ನಾವೆಲ್ಲರೂ ನಮಗೂ ಹೋಗಲೇಬೇಕು ಎಂಬ ಒಕ್ಕೊರಲಿನ ಗಾಯನವನ್ನೂ, ಝಾಕೀರ್ ಹುಸೇನ್ ರನ್ನು ನೋಡಲೇಬೇಕೆಂದು ಧಿಮಿಧಿಮಿ ನೃತ್ಯವನ್ನೂ ಶುರುಮಾಡಿದೆವೆನ್ನಿ. “ಅಲ್ರೇ , ನಿಮಗೇನು ಮಹಾ ರಾಗತಾಳ ಜ್ಞಾನ ಅದ? 2-3 ತಾಸಿನ ಕಛೇರಿ ಅದು. ಬ್ಯಾಸರ ಆಗಿ ಬಿಡತದ ನಿಮಗ.” ಅಂದ ಮಾಮನಿಗೆ “ ನಮಗೆಲ್ಲಿ ತಬಲಾ ಕೇಳೂದದ? ಝಾಕೀರ ಹುಸೇನ್ ರನ್ನು ಹತ್ತಿರದಿಂದ ನೋಡಿ ಖುಷಿ ಪಡೂದದ” ಎನ್ನುವ ನಮ್ಮ ಉತ್ತರ ಸಿದ್ಧವಾಗಿತ್ತು  “ ದಿನಾ ಬೆಳಗಾದ್ರ ಟಿವ್ಯಾಗ ನೋಡತಿರಲಾ?” “ ಹೂಂ. ದಿನಾ ಟಿವ್ಯಾಗ ನೋಡಿ ನೋಡೇ ಅವರನ್ನ ನೋಡಲೇಬೇಕು ಅನ್ನಿನಿಸಿದ್ದು. ಇಲ್ಲೀತನಾ, ನಮ್ಮ ಬಿಜಾಪೂರಿಗೆ ಅದರಲ್ಲೂ ನಮ್ಮ ಮನೆ ಹತ್ತಿರದGovt.high school ಗೆ ಬರುತ್ತಿದ್ದಾರೆ. ನಾವು ಹೋಗಲಿಲ್ಲ ಅಂದರೆ ಅದ್ಹೇಗೆ ?” ಎನ್ನುವುದು ನಮ್ಮ ವಾದ. ಬೆಳಗ್ಗೆಯಿಂದ ಸಂಜೆಯವರೆಗೆ ಮಾಮನ ಮುಖ ಕಂಡೊಡನೆ ‘ ಝಾಕೀರ್, ತಬಲಾ. ಝಾಕೀರ, ತಬಲಾ’  ಅಂತ ಸ್ಲೋಗನ್ ಕೂಗುತ್ತ ದೊಡ್ಡ ಹರತಾಳವನ್ನೇ ಮಾಡಿ ಅಂತೂ ಯಶಸ್ವಿಯಾದೆವೆನ್ನಿ.ನಮ್ಮ ಬಡಬಡಿಸುವಿಕೆಗೆ, ಹಟಕ್ಕೆ ಸೋತ ನಮ್ಮ ಸೋದರಮಾವ 1,500 ರೂಪಾಯಿಗಳನ್ನು (ಆಗಿನ ಕಾಲಕ್ಕೆ) ಕೊಟ್ಟು ಇನ್ನೂ ಮೂರು ಟಿಕೆಟ್ ಖರೀದಿಸಿ ನಮ್ಮನ್ನು ಆ ಕಾರ್ಯಕ್ರಮಕ್ಕೆ ಕಳಿಸಿದ್ದರು. ಅವರು ಸ್ವಲ್ಪ  ಜೋರು ಮಾಡಿ ನಮ್ಮನ್ನು ಸುಮ್ಮನಾಗಿಸಬಹುದಿತ್ತು. ‘ ರೊಕ್ಕದ ಗಿಡಾ ಅದ ಎನು ಹಿಂದ?’ ಎನ್ನಬಹುದಿತ್ತು. ಆದರೆ ಹಾಗೆ ಮಾಡದೇ ನಮ್ಮ ಬಾಲಿಶ ಹುಚ್ಚುತನವನ್ನು ಅಪರೋಕ್ಷವಾಗಿ ಬೆಂಬಲಿಸಿದ ಆ ತಾಯಂಥಕರಣದ ಜೀವಕ್ಕೆ ಎಷ್ಟು ಮಣಿದರೂ ಕಡಿಮೆ ಎನಿಸುತ್ತದೀಗ.

 ಬಂಗಾರದ ಗುಂಡಿ, ಚೈನು ಪೋಣಿಸಿದ, ತಿಳಿನೀಲಿ ಬಣ್ಣದ ಉದ್ದನೆಯ ಕುರ್ತಾ, ಬಿಳಿ ಶುಭ್ರ ಪಾಯಿಜಾಮಾ ಧರಿಸಿದ ಅವರು ಸ್ಟೇಜ್ ಮೇಲೆ ಬಂದರೆ ನನಗೆ ಯಾರೋ ದೇವ ಮಾನವ ನಡೆದು ಬಂದಂಥ ಭಾವ. ತಬಲಾದ ರಠಈಕ ಅರ್ಥವಾಗದಿದ್ದರೂ ಆ ನಾದದ ಲಹರಿ ತಾನಾಗೇ ನಮ್ಭನ್ನು ತನ್ನ ಸೆಳವಿನಲ್ಲಿ ಎಳೆದೊಯ್ದು ನಮ್ಮನ್ನು ತೇಲಿಸಿ, ತೊಯ್ಯಿಸಿದ್ದು, ಆ ತಬಲಾ – ಡಗ್ಗಾಗಳ ಮೇಲೆ ಅವರು ಹರಿಸಿದ ಆ ದೈವೀಕ ನಾದದ ಹೊಳೆ, ಗುಡುಗಿನ ಆರ್ಭಟ, ಮಳೆಯ ಟಪಟಪ  ಹನಿಗಳ ಸದ್ದು, ಬೀಸುವ ರೊಯ್ ರೊಯ್ ಗಾಳಿ, ಶಿವನ ಡಮರುಗ, ಕೃಷ್ಣನ ಪಾಂಚಜನ್ಯ, ಕುದುರೆಯ ಹೇಷಾರವ, ಖುರಪುಟ.. ಕೇಳುತ್ತಿದ್ದ ಶ್ರೋತೃಗಳೆಲ್ಲ ದಂಗಾಗಿದ್ದರು; ಗುಂಗಿನಲ್ಲಿದ್ದರು.

ಆಗ ಸೆಲ್ಫಿಯ ಕಾಲವಲ್ಲ, ಆಟೋಗ್ರಾಫ್ ದ ಸ್ಪೆಲ್ಲಿಂಗೂ ಗೊತ್ತಿರಲಿಲ್ಲ. ಆದರೆ ಆ ಸುನೆಹರೆ ಕ್ಷಣಗಳು ಎದೆಯ ಗೂಡಲ್ಲಿ ನಿತ್ಯನಿರಂತರ ಹಸಿರು.ಇಷ್ಟು ಬೇಗ ಹೊರಡಬಾರದಿತ್ತು ಉಸ್ತಾದ್ ನೀವು. ಇನ್ನೂ ಇರಬೇಕಿತ್ತು.’ ಸುರ್ ಕಿ ಸಾಧನಾ ಪರಮೇಶ್ವರ್ ಕಿ’ ಎಂಬ ಆ ನಿಮ್ಮ ‘ ಸೋಚ್’ ಇನ್ನಷ್ಟು ಹರಡಬೇಕಿತ್ತು. “ ಕಲಾವಿದ ಹೋದರೇನಂತೆ? ಕಲೆ ಎಲ್ಲಿಗೂ ಹೋಗುವುದಿಲ್ಲ..ಯಾವೂದೂ ಖಾಲಿಯಾಗುವುದಿಲ್ಲ” ಎಂದು ನೀವೇ ಹಲವಾರು ಬಾರಿ ಸಂದರ್ಶನಗಳಲ್ಲಿ ಹೇಳುತ್ತಿದ್ದಿರಾದರೂ ನೀವು ತೆರವು ಮಾಡಿದ ಜಾಗ ಸದಾ ಖಾಲಿಯೇ. ಅದಕ್ಕ್ಯಾವ ಪರ್ಯಾಯವೂ ಇಲ್ಲ. ಹೋಗಿ ಬನ್ನಿ; ಭಾವಪೂರ್ಣ ಶೃದ್ಧಾಂಜಲಿಗಳು.

~ಗೌರಿ ಪ್ರಸನ್ನ

No photos, no videos to mark my tale,
Yet his magic fills my spirit’s sail.
Ustad Zakir Hussain, the tabla’s very name,
A legend whose glory ignites music’s flame.

As a child, through palace halls and Dasara nights,
I witnessed his art beneath Mysuru’s lights.
The memory is faint, yet vivid and clear,
A childlike smile—so pure, so near.

Oh, that smile! A symphony of untold lore,
A joy that sprang from his music’s core.
Each beat of the tabla, each rhythmic embrace,
Lit up his eyes, adorned his face.

Did he ever feel nerves, or pressures vast?
If so, that smile—steadfast, unsurpassed—
Taught us all, in life’s demanding race,
To wear our joy as a saving grace.

I’ve watched his videos, a hundred, no less,
Never a frown, never distress.
Eyes that sparkled, fingers that flew,
Creating celestial rhythms anew.

Even the tea ad, with his father in frame,
Hair aflutter, rhythm the same,
Added a cadence, a timeless beat,
Turning the mundane into something sweet.

My memories now soar beyond the clouds,
Among the stars, where his spirit resounds.
For Zakir Hussain, a maestro so bright,
Plays on forever, in music’s eternal light.

~ ರಾಧಿಕಾ ಜೋಶಿ