ಜೋಗಿಯ ಮಾಯೆ

ನಲುಮೆಯ ಓದುಗರೇ ನಮಸ್ಕಾರ. ಈ ‘ಜೋಗಿ-ಜಂಗಮ’ ಪದದಲ್ಲೇ ಅದೇನೋ ಮೋಡಿ, ಸೆಳೆತ ಕಾಣುತ್ತದೆ ನನಗೆ. ಈ ಜೋಗಪ್ಪನ ಅರಮನೆ, ತಳಮನೆಗಳು ಅಷ್ಟು ಸುಲಭಕ್ಕೆ ದಕ್ಕುವಂಥವಲ್ಲ. ಜಾನಪದದಿಂದ ತೀರ ಇತ್ತೀಚಿನ ಸಾಹಿತ್ಯದಲ್ಲೂ ಇವನ ಸಾಮ್ರಾಜ್ಯವಿದೆ. ಮರುಳ ಮಾಡಾಕ ಹೋದ ಮರುಳಸಿದ್ಧನ ನಾರಿಯೂ ಇವನ ಕೈಯಾಗಿನ ಕಿನ್ನರಿಯಾಗಿ ಮೈಯಾಗ ಬಂದ್ಹಂಗ ನುಡಿಯುತ್ತಾಳೆ; ಎಳ್ಳಿನ ಹೊಲ, ಒಳ್ಳೆಯ ಗಂಡನನ್ನು ಬಿಟ್ಟು ಇವನ ಹಿಂದೆ ನಡೆಯುತ್ತಾಳೆ. ಈ ಜೋಗಿ ಹಾಡುತ್ತಾನೆ;ಕಾಡುತ್ತಾನೆ. ಇಂಥ ಕಿಂದರಿ ಜೋಗಿಯನ್ನು ಇಂದು ಅನಿವಾಸಿಯಂಗಳಕ್ಕೆ ಕರೆತಂದಿದ್ದಾರೆ ಅನುರಾಧ ಜಗಳೂರ ಅವರು   ‘ಪುಸ್ತಕಕ್ಕೊಂದು ಕಥೆ’ ಸರಣಿಯಲ್ಲಿ.

ಬೆಳಗಿನ ತಿಂಡಿ,ಕಾಫಿ ಪೂರೈಸಿ ಮೇಲೆ ಉಪ್ಪರಿಗೆಗೆ ಹೋಗಿ ಬರೆಯತೊಡಗಿ ಮಧ್ಯಾಹ್ನದ ಊಟದ ಹೊತ್ತಿಗಾಗಲೇ ಅಂದರೆ ಸುಮಾರು 4-5 ಗಂಟೆಗಳಲ್ಲಿಯೇ ಕುವೆಂಪು ಇದನ್ನು ಬರೆದು ಮುಗಿಸಿದ್ದರಂತೆ!! (ನೆನಪಿನ ದೋಣಿಯಲ್ಲಿ.ಪುಟ ಸಂಖ್ಯೆ 724)

ತನ್ನ ರೆಕ್ಕೆಗಳಲ್ಲಿ ರಹಸ್ಯಮಯ ಕುತೂಹಲಕಾರಿ ಕಥೆಯೊಂದನ್ನು ಹೊತ್ತ  ರೆಕ್ಕೆಹುಳಗಳ ಕಥೆಯೊಂದನ್ನು ಎಂದಿನ ತಮ್ಮ ಅನನ್ಯ ಶೈಲಿಯಲ್ಲಿ ನಿಮಗಾಗಿ ತಂದಿದ್ದಾರೆ  ರಾಮಮೂರ್ತಿಯವರು. 

ಬನ್ನಿ; ಓದಿ; ಒಂದೆರಡು ಪದಗಳಲ್ಲಾದರೂ ಸರಿಯೇ..ಅನಿಸಿಕೆ ಹಂಚಿಕೊಳ್ಳಿ.ಲೇಖಕರನ್ನು ಪ್ರೋತ್ಸಾಹಿಸಿ..ಸಂಪಾದಕರನ್ನು ಪೋಷಿಸಿ.

~ ಸಂಪಾದಕಿ

ನನ್ನ ನೆಚ್ಚಿನ ಪುಸ್ತಕ(ಗಳು)

ಅನುರಾಧ ಜಗಳೂರು ಮೂಲತಃ ಮೈಸೂರಿನವರು. ಈಗ ರೆಡಿಂಗ್ನಲ್ಲಿ  ನೆಲೆಸಿದ್ದಾರೆ. ಗಣಿತ ಶಾಸ್ತ್ರದ ಅಧ್ಯಾಪಕಿ. ರೆಡಿಂಗ್ ಕನ್ನಡ ಮಿತ್ರರು (ರೆಕಮಿ) ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು. ಓದು, ಬರಹ, ಸಂಗೀತ, ಬೆಟ್ಟಗುಡ್ಡಗಳಲ್ಲಿ ನಡಿಗೆ, ತೋಟಗಾರಿಕೆ, ಮುಂತಾದವು ಪ್ರಿಯವಾದ ಹವ್ಯಾಸಗಳು.
ನನ್ನಂತಹ ಪುಸ್ತಕ ಪ್ರಿಯರಿಗೆ ‘ನಿನಗೆ ವಿಶೇಷ ಮಹತ್ವವಿರುವ, ನೆಚ್ಚಿನ ಪುಸ್ತಕ ಯಾವುದು’ ಎಂದು ಎಲ್ಲಾದರೂ ಕೇಳುವುದುಂಟೆ? ಕೇಳಿದವರು ಪ್ರಶ್ನೆಯನ್ನು ಮುಗಿಸಿ ಉಸಿರು ತೆಗೆದುಕೊಳ್ಳುವಷ್ಟರಲ್ಲಿ ನಾನು ಮುಂದು, ತಾನು ಮುಂದು ಎಂದು ನನ್ನ ಕಣ್ಣಿನ ಮುಂದೆ ೧೦-೨೦ ಪುಸ್ತಕಗಳ ನೂಕು ನುಗ್ಗಲು. ನನ್ನಂಥವರಿಗೆ ಅಂತಹ ಪ್ರಶ್ನೆಯನ್ನು ಕೇಳುವುದು ಶಾಂಪೇನ್ ಬಾಟಲಿನ ಕಾರ್ಕ್ಸ್ ತೆಗೆದ ಹಾಗೆ. ಪಾಪ, ಕೇಳಿ ತಪ್ಪು ಮಾಡಿದವರು, ಚಿಮ್ಮಿ ಹರಿಯುವ, ತಡೆದು ನಿಲ್ಲಿಸಲಾಗದ ನನ್ನ ಉತ್ತರವನ್ನು ಕೇಳಿಸಿಕೊಳ್ಳಬೇಕಾಗುವುದು. 


ನೆಚ್ಚಿನ ಪುಸ್ತಕ ಪಟ್ಟಕ್ಕೆ ಸ್ಪರ್ಧಿಸುವ ೧೦-೨೦ ಪುಸ್ತಕಗಳಲ್ಲಿ ವಿಶೇಷವಾದ ಒಂದನ್ನು ಆರಿಸುವುದಾದರೂ ಹೇಗೆ? ಗಟ್ಟಿ ಮನಸ್ಸು ಮಾಡಿ ಅವುಗಳಲ್ಲಿ  ೧೦-೧೨ನ್ನು ಹಿಂದಕ್ಕೆ ತಳ್ಳಿ, ಮಿಕ್ಕವನ್ನು ತುಲನೆ ಮಾಡಿದೆ ಎಂದುಕೊಳ್ಳಿ. ಆಗಲೂ ಸಂಕಷ್ಟವೇ. ಚಿಕ್ಕ ಹುಡುಗಿಯಾಗಿದ್ದಾಗ ಪದೇ ಪದೇ ಓದಿ ಸಂತೋಷಪಡುತ್ತಿದ್ದ ಎ.ಆರ್.ಕೃಷ್ಣಶಾಸ್ತ್ರಿಗಳ  ‘ಮಕ್ಕಳ ಮಹಾಭಾರತ’ ಅಥವಾ ‘ನಿರ್ಮಲ ಭಾರತಿ’ಯ ಬಗ್ಗೆ ಹೇಳಲೇ? ಅಥವಾ “ಈಗ ದೊಡ್ಡವಳಾಗಿದ್ದೀಯೆ, ಮಕ್ಕಳ ಮಹಾಭಾರತ ಸಾಕು, ಇದನ್ನು ಓದು” ಎಂದು ಅಮ್ಮ ಕೈಯಲ್ಲಿತ್ತ, ನಾನು ಓದಿದ ಮೊಟ್ಟ ಮೊದಲ ವಯಸ್ಕರ ಪುಸ್ತಕ - ಕೃಷ್ಣಶಾಸ್ತ್ರಿಗಳದ್ದೇ ಆದ ‘ವಚನ ಭಾರತ’ದ ಬಗ್ಗೆ  ಹೇಳಲೇ? ಪ್ರತಿ ಬೇಸಿಗೆ ರಜದಲ್ಲೂ ಒಮ್ಮೆ ಅದನ್ನು ಪುನಃಪಠಿಸುತ್ತಿದ್ದೆನಲ್ಲಾ! ಕಾಲೇಜಿನಲ್ಲಿ ಪಠ್ಯಪುಸ್ತಕವಾಗಿದ್ದ(ರೂ) ಬಹಳ ಪ್ರಿಯವಾಗಿದ್ದ ಕೆ ವಿ ಅಯ್ಯರ್ ಅವರ ರೂಪದರ್ಶಿ? ಅದರಲ್ಲಿ ರೂಪಿಸಿರುವ ಕೆಲವು ಸನ್ನಿವೇಶಗಳು ಇಷ್ಟು ವರ್ಷಗಳ ನಂತರವೂ ಸ್ಪಷ್ಟವಾಗಿ ನೆನಪಿನಲ್ಲಿದ್ದು ನನ್ನ ಮನಸ್ಸನ್ನು ಈಗಲೂ ಹಿಂಡುತ್ತದಲ್ಲಾ!.  

ಮೇಲೆ ಹೇಳಿದ ನೂಕುನುಗ್ಗಲಿನಲ್ಲಿದ್ದ ಇಂಗ್ಲಿಷ್ ಪುಸ್ತಕಗಳನ್ನು ನಿರ್ಲಕ್ಷಿಸುವಂತಿಲ್ಲ. ಯಥೇಚ್ಛವಾಗಿ ಲಭ್ಯವಾಗಿರುವುದೆಂಬ ಕಾರಣ - ಅದರಲ್ಲೂ ನಾನ್-ಫಿಕ್ಷನ್  ಪುಸ್ತಕಗಳು ಕನ್ನಡಕ್ಕಿಂತ ಇಂಗ್ಲಿಷ್ನಲ್ಲಿ ಹೇರಳವಾಗಿ ಲಭ್ಯವಾಗಿರುವುದೆಂಬ ಒಂದೇ ಕಾರಣದಿಂದಾದರೂ ನಾನು ಇಂಗ್ಲಿಷ್ ಪುಸ್ತಕಗಳನ್ನು ಓದಿರುವುದೇ ಹೆಚ್ಚು. ಪೋಲೆಂಡಿನ ಭೌತವಿಜ್ಞಾನಿ ಲಿಯೊಪಾಲ್ಡ್ ಇನ್ಫೆಲ್ಡ್ ಅವರ ಆತ್ಮ ಕಥೆ ‘ಕ್ವೆಸ್ಟ್’ ನನ್ನ ಅತ್ಯಂತ ಮೆಚ್ಚಿನ ಪುಸ್ತಕ ಎಂದು ಹಲವಾರು ವರ್ಷ ಹೇಳುತ್ತಿದ್ದೆ. ಈಗಲೂ ಮೆಚ್ಚಿನ ಪುಸ್ತಕವೇ. ಆದರೆ ಇತರ ಪುಸ್ತಕಗಳು ಬಹು ಬೇಗ ಅದರ ಜೊತೆ ಪೈಪೋಟಿಗೆ ಬಂದವು. ಆಲಿಸ್ ವಾಕರ್ ಅವರ ‘ದಿ ಕಲರ್ ಪರ್ಪಲ್’- ಇದು ನನ್ನ ಕೈಗೆ ಬಂದಾಗ ಹೇಗೆ ಛಿದ್ರ ಚೂರಾಗಿತ್ತೆಂದರೆ, ಬ್ಯಾಗ್ ಒಂದರಲ್ಲಿ ತೆರೆದಿಟ್ಟುಕೊಂಡಿದ್ದು ಒಂದೊಂದೇ ಹಾಳೆ ಹೊರತೆಗೆದು ಓದಿದ್ದೆ.  ಹಾರ್ಪರ್ ಲೀ ಅವರ ’ಟು ಕಿಲ್ ಎ ಮಾಕ್ಕಿಂಗ್ ಬರ್ಡ್’- ಮುಂದೆ ನನ್ನ ಪತಿಯಾದವ ನನಗಾಗಿ ತಂದು ಕೊಟ್ಟ ಮೊದಲ ಪುಸ್ತಕ. ಓದಿ (ಪುಸ್ತಕದಿಂದಲೂ) ಮೋಹಿತಳಾಗಿದ್ದೆ. ಜೇಮ್ಸ್ ಮಿಚೆನೆರ್ ಅವರ ‘ಸೋರ್ಸ್’ ಮರೆಯಲು ಸಾಧ್ಯವೇ? ಸುಮಾರು ೯೦೦-೧೦೦೦ ಪುಟಗಳ ಆ ಪುಸ್ತಕವನ್ನು ಮನೆಯವರೆಲ್ಲ ಓದಿ ಚರ್ಚೆ ಮಾಡಿ ಸಂತೋಷ ಪಟ್ಟಿದ್ದೆವು. ಆ ಪುಸ್ತಕ ನನ್ನ ಕೈ ತಪ್ಪಿ ಹೋಯಿತೆಂದು ಬೇಜಾರಿಸಿಕೊಂಡದ್ದನ್ನು ಕೇಳಿ ನನ್ನ ಮಾವನವರು ಕೆಲಸದ ಮೇಲೆ ಮುಂಬೈಗೆ ಹೋದವರು ಆ ಪುಸ್ತಕಕ್ಕಾಗಿ ಹುಡುಕಾಡಿ, ರಸ್ತೆಯ ಬದಿಯ ಕಲ್ಲುಹಾಸಿನ ಮೇಲಿನ ಪುಸ್ತಕದಂಗಡಿಯಲ್ಲಿ ಕೊಂಡು ತಂದುಕೊಟ್ಟಿದ್ದರು. ನಿಜ, ಕೆಲವೊಮ್ಮೆ ಪುಸ್ತಕದೊಳಗೂ ಸುಂದರ ಕಥೆ, ನಮ್ಮ ಕೈಸೇರಿದ ಆ ಪುಸ್ತಕದ ಪ್ರತಿಗೂ ಒಂದು ಸುಂದರ ಕಥೆ ಇರುತ್ತದೆ.


ಶೆಲ್ಫ್ ನಲ್ಲಿ ಕುಳಿತು ಪೈಪೋಟಿ ಮಾಡುತ್ತಿರುವ ಪುಸ್ತಕಗಳನ್ನು ಅಲ್ಲಿಯೇ ಕೈಬಿಟ್ಟು ನಾನು ಬೇರೆಯೇ ಒಂದು ಪುಸ್ತಕವನ್ನು ಹೊರತೆಗೆದಿದ್ದೇನೆ. ಇದು ನನ್ನ ಬಟ್ಟೆಯ ಬೀರುವಿನಲ್ಲಿ, ಒಂದು ಜಿಪ್ ಲಾಕ್  ಬ್ಯಾಗಿನಲ್ಲಿ ಜೋಪಾನವಾಗಿರುವ, ಕೇವಲ ೨೬ ಪುಟದ ಕಿರುಪುಸ್ತಕ. ಚಿಕ್ಕವರಿದ್ದಾಗ ನಮ್ಮ ತಂದೆಯವರು (ಇದೇ ಪ್ರತಿಯಲ್ಲನ್ನಲ್ಲದಿದ್ದರೂ) ಓದಿ ಆನಂದ ಪಟ್ಟ ಪುಸ್ತಕ. ನಾನು ಚಿಕ್ಕವಳಿದ್ದಾಗ ನನ್ನ ಕೈಯಲ್ಲಿ ಓದಿಸಿ ನನ್ನ ಜೊತೆ ನಕ್ಕು ಅವರೂ ಸಂತೋಷ ಪಟ್ಟ ಪುಸ್ತಕ. ನನ್ನ ಮಗ ಪುಟ್ಟವನಾಗಿದ್ದಾಗ ನಾನು ಅವನಿಗೆ ಓದಿ ಹೇಳಿದ ಪುಸ್ತಕ : ಕುವೆಂಪು ಅವರ ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’!
 
ಇದು ರಾಬರ್ಟ್ ಬ್ರೌನಿಂಗ್ ಅವರ ‘ಪೈಡ್ ಪೈಪರ್ ಆಫ್ ಹ್ಯಾಮ್ಲಿನ್’ ಪದ್ಯದಿಂದ ಪ್ರೇರಿತರಾಗಿ ಬರೆದ ಅತ್ಯಂತ ಸೊಗಸಾದ ಕಥನಕಾವ್ಯ. 

“ತುಂಗಾತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿನ ಜನಗಳಿಗತಿಗೋಳಾಟ”

ಎಂಬ ಸಾಲುಗಳಿಂದ ಪ್ರಾರಂಭವಾಗುವ ಈ ಪದ್ಯದ ೪೨೦ ಸಾಲುಗಳಲ್ಲೂ ಎದ್ದು ಕಾಣುವ ತಿಳಿ ಹಾಸ್ಯ, ವಿಶೇಷ ಕಲ್ಪನಾ ಶಕ್ತಿ ಯಾರ ಮನಸ್ಸನ್ನೇ ಆಗಲಿ ಸೂರೆಗೊಳಿಸುತ್ತದೆ. 


ಇಲಿಗಳ ಕಾಟ ಎಷ್ಟಿತ್ತೆಂದರೆ, 

“ಭೃಂಗಾಮಲಕದ ತೈಲವ ಹಚ್ಚಿದ ಶೇಷಕ್ಕನ ನುಣ್ಣನೆ ಫಣಿವೇಣಿ
ಬೆಳಗಾಗೇಳುತ ಕನ್ನಡಿ ನೋಡೆ ಇಲಿಗಳಿಗಾಗಿತ್ತೂಟದ ಫೇಣಿ”

ಇಂತಹ  ಲಯಬದ್ಧ ಸಾಲುಗಳಂತೂ ಮತ್ತೆ ಮತ್ತೆ ಮೆಲಕು ಹಾಕಿಕೊಳ್ಳುವಂತಹವು.

ಇಲಿಗಳು, ಮನುಷ್ಯರು ಮಲಗಿದ್ದಾಗ ಮಾತ್ರ ಚೇಷ್ಟೆ ಮಾಡುತ್ತಿರಲಿಲ್ಲ! 

ಸಿದ್ದೋಜೈಗಳು ಶಾಲೆಗೆ ಹೋಗಿ 
ಪಾಠವ ಬೋಧಿಸುತ್ತಿದ್ದಾಗ 
ಅಂಗಿಯ ಜೇಬಿಂ ಹೆಳವಿಲಿಯೊಂದು 
ಚೆಂಗನೆ ನೆಗೆಯಿತು ತೂತನು ಮಾಡಿ 
ಲೇವಡಿ ಎಬ್ಬಿಸೆ ಬಾಲಕರೆಲ್ಲ 
ಗುರುಗಳಿಗಾಯಿತು ಬಲು ಗೇಲಿ 

ಇಲಿಗಳ ಕಾಟ ತಡೆಯಲಾಗದ ಜನರೆಲ್ಲರೂ ಊರಿನ ಗೌಡನನ್ನು ಒತ್ತಾಯಿಸಿದಾಗ ಆತ, ಇಲಿಗಳನ್ನು ನಿರ್ನಾಮ ಮಾಡಿದವರಿಗೆ ಆರು ಸಾವಿರ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಕೊಡುವುದಾಗಿ ಘೋಷಿಸಿದ. 

ಆಗ ಕಿಂದರಿ ನುಡಿಸುತ್ತಾ, 

“ಕೆದರಿದ ಕೂದಲ ಗಡ್ಡದ ಜೋಗಿ 
ನಾನಾ ಬಣ್ಣದ ಬಟ್ಟೆಯ ಜೋಗಿ” ಬಂದವನೇ ಕಿಂದರಿ ಜೋಗಿ! !
 
ಇಲಿಗಳನ್ನು ಓಡಿಸುವ ಅವನ ಅನುಭವದ ಬಗ್ಗೆ ವಿಚಾರಿಸಿದಾಗ, ಆತ ತನ್ನ ಪರಾಕ್ರಮವನ್ನು ಹೇಳಿಕೊಂಡ. ದೇವಲೋಕದಲ್ಲಿ ಇಲಿಗಳ ಕಾಟ ಹೆಚ್ಚಾದಾಗ,
 
“ಕಾಮನ ದಹಿಸಿದ ಹಣೆಗಣ್ಣು 
ಮೂಷಿಕರೋಮವ ಸುಡಲಿಲ್ಲ” ವಂತೆ!

“ಕಡೆಗಾ ವಿಷ್ಣುವೆ ಚಕ್ರವ ಹಿಡಿದು
ಮೂಷಿಕಕುಲವನೆ ಕೊಲ್ಲುವೆನೆಂದು 
ಕದನವನಾಡಲು ಇಲಿಗಳ ಕೂಡೆ
ಮೂರ್ಛೆಗೆ ಸಂದನು ಬಲುಬಳಲಿ“ 

ಆದರೆ, ನಮ್ಮ ಕಿಂದರಿ ಜೋಗಿ ಎಂತಹ ಪ್ರವೀಣನೆಂದರೆ, ಶಿವ, ವಿಷ್ಣುಗಳು ಸೋತ ಯುದ್ಧದಲ್ಲಿ ಆತ ಜಯಗಳಿಸಿದ! ಕುವೆಂಪು ಅವರದು ಅದೆಂತಹ ಕಲ್ಪನಾಶಕ್ತಿ!

ಕಿಂದರಿ ಜೋಗಿ ತನ್ನ ಕಿಂದರಿ ನುಡಿಸಿದಾಗ ಏನಾಯಿತೆಂಬುದನ್ನು ತಿಳಿಸುವ ಈ ಕೆಳಗಿನ ಸಾಲುಗಳು ಮಕ್ಕಳಿಗಾಗಲಿ ದೊಡ್ಡವರಿಗಾಗಲಿ ಶುದ್ಧ, ಸರಳ, ಖುಷಿಯನ್ನುಂಟುಮಾಡುವಂತಹವು. 

“ಹಾರುತ ಬಂದವು ಓಡುತ ಬಂದವು
ನೆಗೆಯುತ ಬಂದವು ಕುಣಿಯುತ ಬಂದವು
ಜೋಗಿಯು ಬಾರಿಸೆ ಕಿಂದರಿಯ


ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ
ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ, ಮಾವಿಲಿ, ಭಾವಿಲಿ, ಅಕ್ಕಿಲಿ, ತಂಗಿಲಿ,
ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ ಎಲ್ಲಾ ಬಂದವು ಓಡೋಡಿ
ಜೋಗಿಯು ಬಾರಿಸೆ ಕಿಂದರಿಯ”

ನನ್ನ ಪುಟ್ಟ ಮಗನಿಗೆ ಪದ್ಯದ ಇತರ ಎಷ್ಟೋ ಸಾಲುಗಳನ್ನು ವಿವರಿಸಿ ಹೇಳಬೇಕಾಯಿತಾದರೂ, ಈ ಮೇಲಿನ ಸಾಲುಗಳನ್ನು ಲಯಬದ್ಧವಾಗಿ ಓದಿದಾಗ ಮಾತ್ರ ಅವನಿಗೆ ತಡೆಯಲಾರಷ್ಟು ನಗು! ಕುಣಿಯುತ್ತ ಕುಪ್ಪಳಿಸುತ್ತ ಆನಂದಪಟ್ಟ. 

ನಾನು ನನ್ನ ಚಿಕ್ಕ ವಯಸ್ಸಿನಲ್ಲಿ ಪುಸ್ತಕದ ಸಾಲುಗಳನ್ನು ಜೋರಾಗಿ ಓದಿದಾಗ ಅಮ್ಮ, ಅಣ್ಣ ಇಬ್ಬರ ಆನಂದದ ನಗು, ಹಾಗೂ ಕಣ್ಣಲ್ಲಿನ ಹೊಳಪನ್ನು ಎಂದೆಂದಿಗೂ ಮರೆಯಲಾರೆ. ಇಂತಹ ಆಹ್ಲಾದಕರ ನೆನಪುಗಳನ್ನು ತರುವ ಪುಸ್ತಕ ಪುಟ್ಟದಾದರೂ ವಿಶೇಷವಾದುದಲ್ಲವೇ? 

ಈಚೆಗೆ ಈ ಪುಸ್ತಕ ಮರು ಮುದ್ರಣವಾಗಿ ಅಂಗಡಿಗಳಲ್ಲಿ ಸಿಗುತ್ತಿರುವಂತಿದೆ, ಆದರೆ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಮಗ ನಾಲ್ಕೈದು ವರ್ಷದವನಿದ್ದಾಗ ನನಗೆ ಅಂಗಡಿಯಲ್ಲಿ ಸಿಕ್ಕಿರಲಿಲ್ಲ. ಅಣ್ಣನ ಗ್ರಂಥಾಲಯದಲ್ಲಿದ್ದ ಪುಸ್ತಕವನ್ನು ನಾನು ತೆಗೆದುಕೊಂಡು ಹೋಗಲೇ ಎಂದು ಕೇಳಿದೆ. ಅಣ್ಣ ತೆಗೆದುಕೊಂಡು ಹೋಗು, ಹುಷಾರಾಗಿ ಇಟ್ಟುಕೋ ಎಂದು ಹೇಳಿದರು. ತೆಳುವಾದ, ಸವೆದು ಹೋಗಿರುವ ಪುಸ್ತಕ. ಇತರ ಧಡೂತಿಗಳ ಮಧ್ಯೆ ಕಳೆದುಹೋಗದಿರಲೆಂದು ಪ್ರೀತಿಯಿಂದ ಭದ್ರವಾಗಿ ಬಟ್ಟೆ ಬೀರುವಿನಲ್ಲಿ ಇಟ್ಟುಕೊಂಡಿದ್ದೇನೆ.  

~ ಅನುರಾಧ ಜಗಳೂರು

ಮೂಲ :  ಸರ್ ಅರ್ಥರ್ ಕಾನಾನ್ ಡೊಯಲ್ ಬರೆದ  The Strand magazine  ನಲ್ಲಿ ಪ್ರಕಟವಾಗಿದ್ದ ಕಥೆ :  The Story of the Beetle Hunter (೧೮೯೬)

ನಾನು ಆಗತಾನೆ ವೈದ್ಯಕೀಯ ಪದವಿಯನ್ನು ಪಡೆದು ಲಂಡನ್ ಗೋವರ್ ಸ್ಟ್ರೀಟ್ ನಲ್ಲಿ  ಬಾಡಿಗೆ ಮನೆಯಲ್ಲಿ ವಾಸಕ್ಕೆ ಬಂದೆ, ಹೆಚ್ಚಾಗಿ ಹಣ ಇರಲಿಲ್ಲ , ಕೆಲಸ ಇನ್ನು ಸಿಕ್ಕಿರಲಿಲ್ಲ.  ನನ್ನ ಆಸಕ್ತಿ ವೈದಕೀಯಗಿಂತ ಪ್ರಾಣಿ ಶಾಸ್ತ್ರ (   Zoology ) ಮತ್ತು ವಿಜ್ಞಾನ (Science} ಮೇಲಿತ್ತು. ಆದರೆ ಹಣಕಾಸಿನ ಒತ್ತಡದಿಂದ ಯಾವ ಕೆಲಸ ವನ್ನು ಮಾಡುವುದಕ್ಕೂ ತಯಾರಿದ್ದೆ. ಒಂದು ದಿನ ಲಂಡನ್ ದಿನಪತ್ರಿಕೆ The Standard ಈ ಜಾಹೀರಾತು ನೋಡಿದೆ.

" wanted for one or more days services of a medical man. it is essential that he should be man of strong physique, of steady nerves and of a resolute nature, knowledge of entomology preferred. Apply 77 Brooke Street/ Applications must be made before 12'o clock today. 

ನಾನು ಮೇಲೆ ಹೇಳಿದಂತೆ. ಪ್ರಾಣಿಶಾಸ್ತ್ರ ಅದರಲ್ಲೂ ,  ಕೀಟಶಾಸ್ತ್ರ ನನಗೆ ಪ್ರಿಯವಾದ ವಿಷಯವಾಗಿತ್ತು, ಚಿಕ್ಕಂದಿನಿಂದ ಅನೇಕ ಮಾದರಿಯ ರೆಕ್ಕೆ ಹುಳ ( Beetles) ಗಳನ್ನು ಸಂಗ್ರಹಿಸಿದ್ದೆ. ಈ ಕೆಲಸದ ಜಾಹೀರಾತು ಸ್ವಲ್ಪ ವಿಚಿತ್ರವಾಗೇ ತೋರಿತು.  ಗಟ್ಟಿ ಮುಟ್ಟಾದ ವೈದ್ಯ ಮತ್ತು ಕೀಟಶಾಸ್ತ್ರದ ತಿಳಿವು,  ಅದೂ  ಅಲ್ಲದೆ ಈ ಕೆಲಸ ಕೇವಲ ತಾತ್ಕಾಲಿಕ ಅಷ್ಟೇ,  ಆದರೆ ಹಣದ ಅವಶ್ಯಕತೆ ಇತ್ತು . ತಕ್ಷಣ ಕೊಟ್ಟಿದ್ದ ವಿಳಾಸಕ್ಕೆಹೊರಟು  ಹನ್ನೆರಡು ಗಂಟೆ ಮುಂಚೆ ತಲಪಿದಾಗ ಒಬ್ಬ ನನ್ನ ವಯಸ್ಸಿನ ತರುಣ ಸಪ್ಪೆ ಮುಖ ದಲ್ಲಿ ಹೊರಗೆ ಬಂದ, ಅಂದರೆ ಇವನಿಗೆ ಕೆಲಸ ಸಿಕ್ಕಿರಲಿಲ್ಲ ಅನ್ನುವ ಸಂದೇಹ ಬಂತು. ಬಾಗಿಲು ತಟ್ಟಿದೆ , ಒಬ್ಬ ಸಮವಸ್ತ್ರದ ಸೇವಕ ಬಾಗಿಲು ತೆಗದು ಏನು ಬೇಕಾಗಿತ್ತೆಂದು  ಕೇಳಿದ.  ಕೆಲಸದ ಬಗ್ಗೆ ಅಂತ ಹೇಳಿದಾಗ " ಸರಿ ನಿಮ್ಮನ್ನು ಲಾರ್ಡ್ ಲಿಂಚ್ಮಿಯರ್ ನೋಡುತ್ತಾರೆ , ಗ್ರಂಥಾಲಯದಲಿದ್ದಾರೆ ಬನ್ನಿ " ಅಂತ ಹೇಳಿ ಒಂದು ದೊಡ್ಡ ಕೋಣೆಗೆ ಕರೆದೊಯ್ದ.   ಇವರ ಹೆಸರು ಎಲ್ಲೊ ಕೇಳಿದ ಹಾಗಿದೆ ಆದರೆ ಜ್ಞಾಪಕ ಬರಲಿಲ್ಲ.
ಲಾರ್ಡ್ ಲಿಂಚ್ಮಿಯರ್, ಸುಮಾರು ಐವತ್ತು  ವಯಸ್ಸಿರಬಹುದು, ಸಣ್ಣ ಮೈಕಟ್ಟು ದೊಡ್ಡ ಮೇಜಿನ ಮುಂದೆ ಕೂತು ಸೇವಕ ಕೊಟ್ಟಿದ್ದ ನನ್ನ ವಿಸಿಟಿಂಗ್ ಕಾರ್ಡ್ ಮೇಲೆ ಎತ್ತಿ ತೋರಿಸಿ 
" ನೀವು ನಮ್ಮ ಜಾಹೀರಾತನ್ನು ನೋಡಿ ಬಂದಿದ್ದೀರಾ ಡಾ.  ಹ್ಯಾಮಿಲ್ಟನ್ ?" ಅಂದರು 
"ಹೌದು ಸರ್ "
" ಜಾಹೀರಾತನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಈ ಕೆಲಸಕ್ಕೆ ಅರ್ಹತೆ ಇದೆಯಂದು ಭಾವಿಸಿದ್ದೀರಾ ?"
" ನನ್ನ ಪ್ರಕಾರ ಹೌದು  ಸರ್ "
"ನಿಮ್ಮಮೈಕಟ್ಟು  ನೋಡಿದರೆ ನೀವು ಬಲಶಾಲಿ"
"ನನ್ನ ಭಾವನೆ ಅದೇ ಸರ್ "
" ನಿಮ್ಮ ಜೀವನದಲ್ಲಿ ಎಂದಾದರೂ ಅಪಾಯ ತರುವ ಸಂಧರ್ಬವನ್ನು ಎದಿರಿಸಿದ್ದೀರಾ ?"
"ಅಂತಹ ಸಂದರ್ಭ ಹಿಂದೆ ಬಂದಿಲ್ಲ"
" ಸರಿ, ಅಂತಹ ಸಮಯ ಮುಂದೆ  ಬಂದರೆ "
" ಅದನ್ನು ಎದಿರಿಸುವ ಧೈರ್ಯ ನನಗಿದೆ ಅನ್ನುವುದರಲ್ಲಿ  ಸಂದೇಹ ಇಲ್ಲ ಸರ್ "
" ನಿಮ್ಮನ್ನು ನೋಡಿದರೆ ನನಗೂ ಅದೇ ಭಾವನೆ ಬಂತು , ಈಗ ಎರಡನೇ ವಿಷಯಕ್ಕೆ  ಹೋಗೋಣ ಡಾ. ಹ್ಯಾಮಿಲ್ಟನ್ "
"ಕೇಳಿ ನನಗೆ ಗೊತ್ತಿದ್ದರೆ ಉತ್ತರಿಸುತ್ತೇನೆ "
" ಕ್ರಿಮಿ ಕೀಟಗಳ , ಅದರಲ್ಲೂ ರೆಕ್ಕೆ ಹುಳ ( Beetles) ಬಗ್ಗೆ ನಿಮಗೆ ಏನು ಗೊತ್ತಿದೆ ?"
ನನಗೆ ಈ ಪ್ರಶ್ನೆ  ಬಹಳ ವಿಚಿತ್ರವಾಗಿತ್ತು, ನನ್ನ  ಗೇಲಿ ಮಾಡುತ್ತಿದ್ದಾರ ಎನ್ನುವ ಸಂಶಯವೂ  ಮನಸ್ಸಿಗೆ ಬಂತು, ಆದರೆ ಲಾರ್ಡ್ ಲಿಂಚ್ಮಿಯರ್  ಒಬ್ಬ ಗಂಭೀರ ಮತ್ತು ವಿದ್ಯಾವಂತ ಮನುಷ್ಯ ಅನ್ನುವುದರಲ್ಲಿ  ಏನೂ   ಸಂದೇಹ ಇರಲಿಲ್ಲ ಆದರೂ ಈ ಪ್ರೆಶ್ನೆ ಅರ್ಥವಾಗಲಿಲ್ಲ. ನಾನು ಮೇಲೆ ಹೇಳಿದಹಾಗೆ ವೈದ್ಯಕೀಯಗಿಂತ ಹೆಚ್ಚು ಆಸಕ್ತಿ ಪ್ರಾಣಿ ಶಾಸ್ತ್ರದಲ್ಲಿ ಮತ್ತು Entomology ಬಗ್ಗೆ  ಸಹ ಸ್ವಲ್ಪ ತಿಳಿದಿದ್ದೆ, ತಕ್ಷಣ ನನಗೆ ಉತ್ತರ ಹೇಳುವುದಕ್ಕೆ ತೋಚಲಿಲ್ಲ. 
" ಓ ಹೊ ನಿಮಗೆ ಕ್ರಿಮಿ ಕೀಟಗಳ ಬಗ್ಗೆ ಗೊತ್ತಿಲ್ಲ ಅಲ್ಲವೇ ?"
ಧೈರ್ಯ ತಂದುಕೊಂಡು " ಹಾಗಲ್ಲ ಸರ್ , ಈ ವಿಷಯದಲ್ಲಿ ನನಗೆ ಆಸಕ್ತಿ ಇದೆ ಮತ್ತು coleopterology  ಅಧ್ಯಯನ ಮಾಡಿದ್ದೇನೆ"
" ಹಾಗಾದರೆ ತುಂಬಾ ಸಂತೋಷ , ನಿಮಗೆ ಗೊತ್ತಿರುವದ್ದನ್ನ  ವಿವರಿಸಿ "
ಸುಮಾರು ಐದು  ನಿಮಿಷ ರೆಕ್ಕೆ ಹುಳದ ಬಗ್ಗೆ ಮಾತನಾಡಿದೆ , ನಾನು ಹೇಳಿದ್ದರಲ್ಲಿ ಹೊಸ ವಿಷಯ ಏನೂ ಇರಲಿಲ್ಲ ಆದರೆ ಹಿಂದೆ Journal of Entomological Science ನಲ್ಲಿ ಒಂದು ಸಣ್ಣ ಬರಹ ಪ್ರಕಟವಾಗಿದ್ದು ಮತ್ತು ನನ್ನ ಬಳಿ ಅನೇಕ ರೀತಿಯ ರೆಕ್ಕೆ ಹುಳಗಳ  ಸಂಗ್ರಹ ಇದ್ದ ವಿಚಾರ ಕೇಳಿ ಲಾರ್ಡ್ ಲಿಂಚ್ಮಿಯರ್ ಬಹಳ ಸಂತೋಷ ಪಟ್ಟರು 
"ಡಾ. ಹ್ಯಾಮಿಲ್ಟನ್ , ನೀವು ನಮಗೆ ಬೇಕಾದವರು ಎನ್ನುವುದರಲ್ಲಿ ಸಂದೇಹವೇ ಇಲ್ಲ, ನೋಡಿ,  ಲಂಡನ್ ನ ೫ ಮಿಲಿಯನ್ ಜನಸಂಖ್ಯೆ ಯಲ್ಲಿ ನಿಮ್ಮಂತವರು ಸಿಕ್ಕಿರುವುದು ನನ್ನ ಅದೃಷ್ಟ" ಅಂತ ಹೇಳಿ ಮೇಜಿನ ಮೇಲೆ ಇದ್ದ ಗಂಟೆ ಬಾರಿಸಿ ಹೊರಗೆ ನಿಂತಿದ್ದ ಸೇವಕನನ್ನು ಕರೆದು  "ಲೇಡಿ ರೊಸ್ಸಿಟರ್  ಅವರನ್ನು ಇಲ್ಲಿಗೆ ಬರ ಹೇಳು " ಎಂದರು . ಕೆಲವು ನಿಮಿಷದಲ್ಲಿ ಈಕೆ ಬಂದರು . ನೋಡಿದರೆ 
ಲಾರ್ಡ್ ಲಿಂಚ್ಮಿಯರ್ ರ ಹೋಲಿಕೆ ಇತ್ತು , ಇವರಿಗೂ ಸುಮಾರು ಐವತ್ತು ವಯಸ್ಸು , ಮಖದಲ್ಲಿ ಏನೋ ಕಳವಳ ಮತ್ತು ಹೆದರಕೆ ಇರುವಂತಿತ್ತು, ಪರಿಚಯ ಆದನಂತರ ನನ್ನ ಕಡೆ ನೋಡಿ ತಿರಿಗಿದಾಗ ಆಕೆಯ ಬಲ ಕಣ್ಣಿನ ಕೆಳಗೆ ಎರಡು ಮೂರು ಇಂಚುಗಳ , ಬಹುಷಃ ಇತ್ತೀಚಿಗೆ ಆಗಿದ್ದ,  ಗಾಯದ  ಗುರುತು ಕಾಣಿಸಿತು. 
" ನೋಡು ಈವೆಲಿನ್ ,   ಇವರು ಡಾ . ಹ್ಯಾಮಿಲ್ಟನ್ ನಮ್ಮ  ಕೆಲಸಕ್ಕೆ ಸರಿಯಾಗಿ  ಹೊಂದುವರು ಅಂದರೆ ಇವರೇ,  ಇವರಿಗೆ ರೆಕ್ಕೆ ಹುಳಗಳ ವಿಷಯ ಗೊತ್ತಿದೆ ಮತ್ತು ಇವರ ಹವ್ಯಾಸ ಸಹ ಅದರ ಸಂಗ್ರಹ ಮತ್ತು ಈ ವಿಷಯದ ಮೇಲೆ ಲೇಖನವನ್ನು ಬರೆದಿದ್ದಾರೆ  "
" ಸಂತೋಷ, ಹಾಗಾದರೆ ನೀವು  ನನ್ನ ಪತಿ ಸರ್ ಥಾಮಸ್ ರೊಸ್ಸಿಟರ್  ಹೆಸರು ಕೇಳಿರಬೇಕು , ಇವರು  ರೆಕ್ಕೆಹುಳಗಳ  ಬಗ್ಗೆ ಸಂಶೋಧನೆ ಮಾಡಿದ್ದಾರೆ"
ಆ ಕ್ಷಣ ನನಗೆ ಈ ಕುಟುಂಬಕ್ಕೆ  ರೆಕ್ಕೆ ಹುಳದ  ಸಂಬಂಧ  ಹೊಳೆಯಿತು, ಸರ್ ಥಾಮಸ್, coleopterology ಅಧ್ಯಯನದಲ್ಲಿ ಗಣ್ಯರು ಅನ್ನುವುದನ್ನ ಕೇಳಿದ್ದೆ 
"  ನೀವು ಅವರನ್ನು ಭೇಟಿಯಾಗಿದ್ದೀರಾ "
"ಇಲ್ಲ,  ಲೇಡಿ ರೊಸ್ಸಿಟರ್  , ಮಾಡಿಲ್ಲ "
ಲಾರ್ಡ್ ಲಿಂಚ್ಮಿಯರ್ " ನಿಮಗೆ ಅವರ ಭೇಟಿ ಮಾಡಿಸುತ್ತೇನೆ "
ಲೇಡಿ ರೊಸ್ಸಿಟರ್ , " ಚಾರ್ಲ್ಸ್ , ನೀನು ಇದನ್ನು ನಿಜವಾಗಲೂ ಮಾಡುತ್ತೀಯಾ, ಆದರೆ ನನಗೆ ಭಯ" ಎಂದು ಹೇಳಿ ಪಕ್ಕದಲ್ಲೇ ನಿಂತಿದ್ದ  ಲಾರ್ಡ್ ಲಿಂಚ್ಮಿಯರ್ ಭುಜದ  ಮೇಲೆ ಕೈ ಇಟ್ಟು ಆತಂಕದಿಂದ  ಹೇಳಿದಳು, ನನಗೆ ಇವರಿಬ್ಬರು ಅಣ್ಣ ತಂಗಿ ಅಂತ ಅರಿವಾಯಿತು,
" ನೀನೇನು ಆತಂಕ ಪಡಬೇಡ ಈವಲಿನ್ ನಮಗೆ ಬೇರೆ ದಾರಿ ಇಲ್ಲ "
" ಇನ್ನೊಂದು ದಾರಿ ಇದೆ ಚಾರ್ಲ್ಸ್ "
" ನಮಗೆ ಇದನ್ನು ಬಿಡು ಈವಲಿನ್ , ನಿನ್ನನ್ನು ನಾನು ಪರಿತ್ಯಜಿಸುವುದಿಲ್ಲ "
ನಾನು ಇರುವುದನ್ನ   ಮರೆತು ಈ ಸಂಭಾಷಣೆ ನಡೆದಹಾಗೆ ಕಾಣಿಸಿತು,    ಲಾರ್ಡ್ ಲಿಂಚ್ಮಿಯರ್ ನನ್ನ ಕಡೆ ತಿರಿಗಿ , "ನೋಡಿ ಡಾ. ಹ್ಯಾಮಿಲ್ಟನ್, ಈ ಕೆಲಸಕ್ಕೆ ನಾನು  ನಿಮನ್ನು ಕೇಳುವುದಿಷ್ಟೇ , ನೀವು ನನ್ನ ಜೊತೆಯಲ್ಲಿ ಯಾವಾಗಲು ಇರತಕ್ಕದ್ದು ಮತ್ತು ನಾನು ಹೇಳಿದಾಗೆ ಮಾಡಬೇಕು, ಇದು ನಿಮಗೆ ಸರಿ ಅಲ್ಲ ಅನ್ನಿಸದೇ ಇರಬಹುದು ಆದರೂ ನೀವು ನನ್ನ ಅಪ್ಪಣೆಯನ್ನು ಮೀರಬಾರದು.  
" ಇದು ಸ್ವಲ್ಪ ಮಿತಿ ಮೀರಿದ್ದು ಅಲ್ಲವೇ ಸರ್ "
"ಇರಬಹುದು, ಆದರೆ ಈಗಿನ ಪರಿಸ್ಥಿತಿಯಲ್ಲಿ ಯಾವ ರೀತಿ ಮುಂದೆವರೆಯುತ್ತೆ ಅನ್ನುವುದು ನನಗೂ ಗೊತ್ತಿಲ್ಲ. ಕೊನೆಗೆ ಇದು ಸಫಲವಾದರೆ, ನೀವು ಹೆಮ್ಮೆ ಪಡುಬಹುದಾದ ವಿಚಾರ "
ಲೇಡಿ ರೊಸ್ಸಿಟರ್  " ಇದು ಸಂತೋಷದಿಂದ ಕೊನೆಗೊಂಡರೆ "
" ಹೌದು , ಇದು ಸಂತೋಷದಿಂದ ಕೊನೆಗೊಂಡರೆ " ಲಾರ್ಡ್ ಲಿಂಚ್ಮಿಯರ್ ಪುನರಾವರ್ತಿಸಿದರು 
" ಇದಕ್ಕೆ ನನ್ನ ಸಂಭಾವನೆ ಏನು ಅಂತ ಕೇಳಬಹುದಾ  ಸರ್ "
" ದಿನಕ್ಕೆ ಇಪ್ಪತ್ತು ಪೌಂಡ್ ಗಳು "
ನಾನು  ಇಷ್ಟು ದೊಡ್ಡ ಮೊತ್ತವನ್ನು ನಿರೀಕ್ಷಿಸಿರಲಿಲ್ಲ , ನನ್ನ ಮಖದ ಮೇಲೆ ಕಂಡ ಆಶ್ಚರ್ಯ ನೋಡಿ " ಈ ಕೆಲಸವು ಪ್ರಯಾಸಕರ ಅಥವಾ ಅಪಾಯಕಾರಿಯಾಗಿರಬಹುದು ಆದ್ದರಿಂದ ವೇತನ ಹೆಚ್ಚು, ಇದು ಒಂದು ಅಥವಾ ಎರಡು ದಿನಗಳಲ್ಲಿ ಕೊನೆಗೊಳ್ಳುವ ಸಾಧ್ಯತೆ ಇದೆ ಅನ್ನುವುದು ನನ್ನ ಭಾವನೆ, ನಿಮ್ಮ ಸಹಾಯ ನಿರೀಕ್ಷಿಸಬಹುದಾ, ಡಾ. ಹ್ಯಾಮಿಲ್ಟನ್?"
" ಖಂಡಿತವಾಗಿಯೂ  ಸರ್ , ಹೇಳಿ ನನ್ನಿಂದ ಏನಾಗಬೇಕು "
" ನೀವು ತಕ್ಷಣ ನಿಮ್ಮ ಕೋಣೆಗೆ ಹಿಂತಿರುಗಿ , ಕಿರು ಭೇಟಿಗೆ ಬೇಕಾದ್ದ ಬಟ್ಟೆಗಳನ್ನು ತೆಗೆದುಕೊಂಡು ೩ :೩೦ ಘಂಟೆಗೆ  ಪ್ಯಾಡಿಂಗ್ಟನ್ (Paddington) ರೈಲು ನಿಲ್ದಾಣಕ್ಕೆ ಬನ್ನಿ , ನಾನು ನಿಮ್ಮ ಟಿಕೆಟ್ ನ್ನು ಖರೀದಿ ಮಾಡಿರುತ್ತೇನೆ , ೪ ಘಂಟೆಗೆ   ಬಾರ್ಕ್ ಶೈರ್ (Berkshire) ನಲ್ಲಿರುವ ಪೆಂಗ್ ಬೌರನ್ (Pangbourne) ಗೆ ನಮ್ಮ ಪ್ರಯಾಣ, ಅಂದಹಾಗೆ ಎರಡು ವಿಷಯ ಬಹಳ ಮುಖ್ಯವಾದುದ್ದು . ನೀವು ಸಂಗ್ರಹಿಸಿದ  ರಕ್ಕೆ ಹುಳಗಳು ಮತ್ತು ಒಂದು ದೊಡ್ಡ ಕೋಲು ಮರಯೆದೆ ತನ್ನಿ "  
ನನ್ನ ಮನಸಿನ ಕಳವಳ ಹೆಚ್ಚಾಗಿ ಅನೇಕ ಪ್ರಶ್ನೆಗಳು ನನ್ನ ತಲೆ ತುಂಬಿತು ಆದರೆ ಈ ಸಮಸ್ಯೆಗಳಿಗೆ ಉತ್ತರ ಇಲ್ಲ ಎಂಬುದು ಖಚಿತ,  ಅದೂ  ಅಲ್ಲದೆ ಲಾರ್ಡ್ ಲಿಂಚ್ಮಿಯರ್ ಹೇಳಿದ ಮಾತುಗಳು ನೆನಪಿಗೆ ಬಂದು ಅವರು  ಹೇಳಿದಹಾಗೆ ಮಾಡಲೇಬೇಕಾಗಿದೆ. 

೩:೩೦ ಸರಿಯಾಗಿ ರೈಲ್ ನಿಲ್ದಾಣ ಕ್ಕೆ ಸೇರಿದಾಗ ಲಾರ್ಡ್ ಲಿಂಚ್ಮಿಯರ್ ನನಗೆ ಕಾಯುತ್ತಿದ್ದರು, ಕೈಯಲ್ಲಿ ಒಂದು ದಪ್ಪದ  ಕರಿ ದೊಣ್ಣೆ ಕಂಡು ನನ್ನ ಕುತೊಹಲ ಮತ್ತಷ್ಟು ಕೆರಳಿತು. 
" ಡಾ. ಹ್ಯಾಮಿಲ್ಟನ್ , ಎರಡು ವಿಚಾರ ಸರಿಯಾಗಿ ಗಮನಿಸಿ , ಒಂದು,  ನೀವು ನನ್ನ ರಕ್ಷಣೆಗೆ ಇರಬೇಕು ಮತ್ತು ಎರಡನೆಯದು ನನ್ನ ಬಿಟ್ಟು ಒಂದು ಕ್ಷಣವೂ ಇರಬಾರದು"    ಈ ಮಾತುಗಳನ್ನು ಪ್ರಯಾಣ ಮಾಡುವಾಗ ಎರಡು ಮೂರು ಸರಿ ಪುನಃ ಪುನಃ ಹೇಳಿದರು. 
ಪ್ರಯಾಣ ಮುಗಿದು ಕುದರೆ ಗಾಡಿಯಲ್ಲಿ ಕುಳಿತಾಗ, " ನೋಡಿ ಡಾ,  ಹ್ಯಾಮಿಲ್ಟನ್ , ನನಗೆ  ಸ್ವಲ್ಪ ನರಗಳ ದುರ್ಬಲತೆ ಇದೆ ಮತ್ತು ಪುಕ್ಕಲ ಎಂದೂ ಹೇಳಬಹುದು ಆದರೆ ನನ್ನಲ್ಲಿ ಆತ್ಮ ವಿಶ್ವಾಸ ಇದೆ ಎಂಥಹ  ಕಷ್ಟ ಬಂದರೂ ,  ನರಗಳ ದುರ್ಬಲತೆ ಇದ್ದರೂ ಇದನ್ನ ಎದಿರುಸುವ ಧೈರ್ಯ ನನ್ನಲ್ಲಿ ಇದೆ. ಈಗ ನಾನು ಕೈಕೊಳ್ಳುವ ಕೆಲಸ  ಕರ್ತ್ಯವ್ಯ ಪ್ರಜ್ಞೆಯಿಂದ  ಮಾತ್ರ, ಅಕಸ್ಮಾತ್ ಇದು ಕೈಮೀರಿ ವೈಫಲ್ಯ ವಾದರೆ ನಾನು  ಹುತಾತ್ಮನಾಗಬಹುದು"

ಈ ಒಗಟುಗಳ ಮಾತನ್ನು  ಕೇಳಿ ನನಗೆ ವಿಪರೀತ ಗೊಂದಲವಾಯಿತು " ಸರ್ ನೀವು ನನ್ನಲ್ಲಿ ನಂಬಿಕೆ ಇಡಿ , ಆದರೆ ನಮ್ಮ ಉದ್ದೇಶ್ಯ ಏನು, ನಾವೆಲ್ಲಿಗೆ ಈಗ ಹೋಗುತ್ತಿದ್ದೇವೆ ಇಂತಹ ಪ್ರಶ್ನೆಗಳು ನನ್ನ  ಕಾಡುತ್ತಿದೆ"

" ಎಲ್ಲಿಗೆ ಹೋಗುತ್ತಿದ್ದೇವೆ ಅನ್ನುವುದರಲ್ಲಿ ಸಂದೇಹ ಇಲ್ಲ, ಇಲ್ಲಿಂದ ಸ್ವಲ್ಪ ದೂರದಲ್ಲಿ ಡೆಲಾಮಿರ್ ಕೋರ್ಟ್(Delamere Court) , ಸರ್ ಥಾಮಸ್ ರೊಸ್ಸಿಟರ್  ಅವರ ನಿವಾಸ, ಇವರ ಸಂಶೋಧನೆ ನಿಮಗೆ ಪರಿಚಯ ಇದೆ ಎಂದು ಹೇಳಿದ್ದೀರಿ ,   ಅಲ್ಲಿ ಏನು ಮಾಡುತ್ತೀವಿ ಅನ್ನುವುದನ್ನ ಈಗ ಹೇಳಿ ಪ್ರಯೋಜನ ಇಲ್ಲ ಅಂತ ನನ್ನ ನಂಬಿಕೆ.  ನಮ್ಮ , ಅಂದರೆ,  ನನ್ನ ಮತ್ತು ಲೇಡಿ ರೊಸ್ಸಿಟರ್  ಉದ್ದೇಶ್ಯ ಒಂದೇ , ನಮ್ಮ ಕುಟುಂಬದಲ್ಲಿ ಆಗಬಹುದಾದ  ಹಗರಣವನ್ನು ತಪ್ಪಿಸುವುದು,  ನಿಮಗೆ ವಿವರವಾದ ವಿವರಣೆಯನ್ನು ಈಗ ಹೇಳಿ ಅಗತ್ಯವಿಲ್ಲ ಡಾ .  ಹ್ಯಾಮಿಲ್ಟನ್ , ನಿಮ್ಮ ಸಲಹೆ ನಾನು ಕೇಳುತ್ತಿಲ್ಲ, ನಿಮ್ಮಿಂದ ಬೇಕಾಗಿರುವುದು   ಸಹಕಾರ ಮತ್ತು ಸಹಾಯ ,  ಎಲ್ಲಿ,  ಹೇಗೆ ಅನ್ನುವುದನ್ನ ಸಮಯ ಬಂದಾಗ ಕೇಳುತ್ತೇನೆ"

ಇನ್ನೇನು ಪ್ರಶ್ನೆಗಳನ್ನು  ಕೇಳುವ  ಸ್ಥಿತಿಯಲ್ಲಿ ನಾನಿರಲಿಲ್ಲ, ದಿನಕ್ಕೆ ಇಪ್ಪತ್ತು ಪೌಂಡ್ ಗಳ ವೇತನ ಮುಖ್ಯ , ಹಾಗಾಗಿ ಸುಮ್ಮನಾದೆ 

ಡೆಲಾಮಿರ್ ಕೋರ್ಟ್ ರೈಲು ನಿಲ್ದಾಣದಿಂದ ಐದು ಮೈಲಿ , ಲಾರ್ಡ್ ಲಿಂಚ್ಮಿಯರ್ ದಾರಿಯಲ್ಲಿ ಇನ್ನೇನು ಹೇಳಲಿಲ್ಲ, ನಾನು ಸುಮ್ಮನಿದ್ದೆ, ಗಾಡಿಯಿಂದ ಇಳಿಯುವಕ್ಕೆ ಮುಂಚೆ 
"ನೋಡಿ ಡಾ . ಹ್ಯಾಮಿಲ್ಟನ್ ನಾನು ನಿಮ್ಮಹಾಗೆ ಒಬ್ಬ ವೈದ್ಯ"
" ಓ ಹೌದಾ ಸರ್ ನನಗೆ ಗೊತ್ತಿರಲಿಲ್ಲ "
" ಹೌದು ಬಹಳ ವರ್ಷಗಳ  ಹಿಂದೆ ನಾನು ಪದವಿ ಪಡೆದೆ ಆದರೆ ಕಾರಣಾಂತರಗಳಿಂದ   ವೈದ್ಯ ವೃತ್ತಿ ಪ್ರಾರಂಭಿಸುವುದಕ್ಕೆ ಸಾಧ್ಯವಾಗಲಿಲ್ಲ, ಆದರೂ ನಾನು ಕಲಿತದ್ದನ್ನು ಮರೆತಿಲ್ಲ , ಇಲ್ಲಿ ನೋಡಿ 
ಡೆಲಾಮಿರ್ ಕೋರ್ಟ್ ಗೇಟ್  ಬಂತು".

 ಗೇಟಿನಿಂದ ಒಳಗೆ ಸುಮಾರು ದೂರದಲ್ಲಿ ಒಂದು ದೊಡ್ಡ ಕಟ್ಟಡ ಇಂಗ್ಲೆಂಡ್ ದೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇರುವ ಮ್ಯಾನರ್ ಹೌಸ್. ನಮ್ನನ್ನು  ಎದಿರಗೊಳ್ಳಲು ನಿಂತಿದ್ದ ವ್ಯಕ್ತಿ, ಸುಮಾರು ಆರು ಅಡಿ ಮೇಲೆ ಇರುವ ಎತ್ತರ  , ತಲೆಯಮೇಲೆ ಕಪ್ಪು ಹ್ಯಾಟ್ , ಟ್ರಿಮ್ ಮಾಡಿಲ್ಲದ ಬಿಳಿ ಗಡ್ಡ ,  ತೋಟದಲ್ಲಿ ಕೆಲಸ ಮಾಡುವಾಗ ಕೈಗೆ ಹಾಕುವ ಗ್ಲೋವ್ಸ್. ಲಾರ್ಡ್ ಲಿಂಚ್ಮಿಯರ್, ಗಾಡಿಯಿಂದ ಇಳಿಯುದಕ್ಕೆ  ಮುಂಚೆ " ಇವರೇ ಸರ್ ಥಾಮಸ್ ರೊಸ್ಸಿಟರ್   "

ಇಳಿದು  ಆತ್ಮೀಯತೆಯಿಂದ " ಮೈ ಡಿಯರ್ ಥಾಮಸ್ ಹೇಗಿದ್ದೀರ?"
ಆದರೆ ಉತ್ತರ ತಕ್ಷಣ ಬರಲಿಲ್ಲ , ಮಖದಲ್ಲಿ ಏನೂ ವಾತ್ಸಲ್ಯ ಇರಲಿಲ್ಲ , ನಾನು ಲಾರ್ಡ್ ಲಿಂಚ್ಮಿಯರ್ ಹಿಂದೆ ನಿಂತಿದ್ದೆ , ನನ್ನ ಕಡೆ ನೋಡಿ ಸರ್ ಥಾಮಸ್ ಮೆಲ್ಲಗೆ ಗೊಣಗಿದ್ದು ಸ್ವಲ್ಪ  ಕೇಳಿಸಿತು  " ..... ಅಪರಿಚಿತರು ...ಇಲ್ಲಿಗೆ.. ಏನು ಕಾರಣ .. ಇಷ್ಟ ಇಲ್ಲ ... ."

ತಕ್ಷಣ ಲಾರ್ಡ್ ಲಿಂಚ್ಮಿಯರ್  ನನ್ನ ಕಡೆ ತಿರಗಿ " ಡಾ. ಹ್ಯಾಮಿಲ್ಟನ್,  ನಿಮ್ಮನ್ನು ಸರ್ ಥಾಮಸ್ ಅವರಿಗೆ ಪರಿಚಯ ಮಾಡುತ್ತೇನೆ"  ಸರ್ ಥಾಮಸ್ ನಗಲಿಲ್ಲ, ಕೈಕುಲಕಲಿಲ್ಲ, ನೇರವಾಗಿ ನೋಡಿ " ಲಾರ್ಡ್ ಲಿಂಚ್ಮಿಯರ್ ಹೇಳಿದ್ದ ಪ್ರಕಾರ ನಿಮಗೆ ರೆಕ್ಕೆ ಹುಳಗಳ ಬಗ್ಗೆ ಆಸಕ್ತಿ ಇದೆಯಂತೆ  ?"
" ಹೌದು ಸರ್ ನಿಮ್ಮ ಸಂಶೋಧನೆಯಿಂದ ಕೆಲವು ವಿಚಾರಗಳನನ್ನು ತಿಳಿದಿದ್ದೇನೆ"
" ಹಾಗಾದರೇ ಒಂದೆರಡು ಹೆಸರುಗಳನ್ನು  ಹೇಳಿ ಅದರ ಬಗ್ಗೆ ವಿವರಣೆ ಕೊಡಿ",  ನಾನು  ಈ ರೀತಿಯ ಪರೀಕ್ಷೆ ನಿರೀಕ್ಷಿಸಿರಲಿಲ್ಲ, ವಿಚಿತ್ರ  ಮನುಷ್ಯ,   ಮನೆ ಹೊರಗೆ ನಿಲ್ಲಿಸಿ ರೆಕ್ಕೆ ಹುಳಗಳ ಮೇಲೆ ಮಾತನಾಡು ಅಂದರೆ ಇವರಿಗೆ ಬುದ್ದಿ ನೆಟ್ಟಗಿಲ್ಲ ಅನ್ನುವ ಭಾವನೆ ಬಂತು , ನನಗೆ ತಿಳಿದ ವಿಚಾರಗಳನ್ನು ಹತ್ತು ನಿಮಿಷ ಹೇಳಿದೆ, ಮತ್ತು  ಸರ್ ಥಾಮಸ್ ನಡೆಸಿದ ಸಂಶೋಧನೆ ಸಹ ವಿವರಿಸಿದೆ 

" ಡಾ . ಹ್ಯಾಮಿಲ್ಟನ್ ನೀವು ನನ್ನ ಪುಸ್ತಕವನ್ನು ಓದಿ ತಿಳಿಕೊಂಡಿದ್ದೀರ, ಬಹಳ ಸಂತೋಷ, ನೋಡಿ ಜನರಿಗೆ ಕ್ರೀಡೆಗಳು ಮನೋರಂಜನೆ ಇತ್ಯಾದಿ ಗಳಮೇಲೆ ಗಮನ ಹೆಚ್ಚು ಆದರೆ ಈ ಅಜ್ಞಾನಿ ಜನಕ್ಕೆ  ರೆಕ್ಕೆಹುಳ  ಬಗ್ಗೆ ಸ್ವಲ್ಪಾನೂ  ಆಸಕ್ತಿ ತೋರಿಸುವುದಿಲ್ಲ,   ನಿಮ್ಮನ್ನು ಭೇಟಿಯಾಗಿದ್ದು ಒಳ್ಳೇದೇ ಆಯಿತು,  ಬನ್ನಿ ನನ್ನ ರೆಕ್ಕೆ ಹುಳಗಳ ಸಂಗ್ರಹ ತೋರಿಸುತ್ತೇನೆ "  

ಅವರನ್ನು ಹತ್ತಿರದಿಂದ ಮನೆ ಒಳಗೆ ನೋಡಿದಾಗ ತಲೆಮೇಲೆ ಹ್ಯಾಟ್ ಇರಲಿಲ್ಲ , ಹಣೆ ಮೇಲೆ, ನರಗಳ ದುರ್ಬಲದಿಂದ ಇರಬೇಕು , ಸ್ನಾಯುಗಳು ಅಲ್ಲಾಡಿತ್ತಿರುವುದು ಗಮನಿಸಿದೆ , ನಮ್ಮ ಕಡೆ ತಿರಿಗಿ ಮಾತನಾಡಿದಾಗ ಈ ಲಕ್ಷಣಗಳು ಹೆಚ್ಚಾದಂತೆ ತೋರಿತು. 

" ನಿಮ್ಮನ್ನ ಸ್ವಾಗತಿಸೊಕ್ಕೆ  ಲೇಡಿ ರೊಸ್ಸಿಟರ್  ಇಲ್ಲಿಲ್ಲ, ಅಂದಹಾಗೆ ಚಾರ್ಲ್ಸ್, ಈವಲಿನ್ ಇಲ್ಲಿಗೆ ಬರುವ ವಿಚಾರ ನಿನಗೆ ತಿಳಿಸಿದ್ದಳಾ ?"
" ನಿಮಗೆ ಗೊತ್ತಿದೆ ಥಾಮಸ್ , ಅವಳ  ಸ್ನೇಹಿತರು ಬಹಳ ಮಂದಿ ಇದ್ದಾರೆ ಆದ್ದರಿಂದ ಇನ್ನೂ ಕೆಲವು ದಿನ ಲಂಡನ್ ನಲ್ಲಿ ಇರುವ ನಿರ್ಧಾರ ಅವಳದ್ದು"
" ಸರಿ ಅವಳ ಇಷ್ಟ , ಆದರೆ ಆಕೆ ಇಲ್ಲಿ ಇಲ್ಲದೆ ಇರೋದು ನನಗೆ ಬಹಳ ಬೇಜಾರು "
" ನನಗೆ ಇದು ಗೊತ್ತಿದೆ ಚಾರ್ಲ್ಸ್ , ಆದ್ದರಿಂದ ನಾನೇ  ಬಂದೆ ಮತ್ತು  ಡಾ .  ಹ್ಯಾಮಿಲ್ಟನ್  ನಿಮ್ಮನ್ನು ಭೇಟಿಯಾಗಲಿ ಅಂತ ಕರೆತಂದೆ, ನಿಮ್ಮ ಸಂಶೋಧನೆ ಬಗ್ಗೆ ಈತನಿಗೆ ಬಹಳ ಕುತೂಹಲ ಇದೆ "
  " ನಾನು ಈಗ ನಿವೃತ್ತಿ ಜೀವನ ನಡೆಸುತ್ತಿದ್ದೇನೆ ಡಾ . ಹ್ಯಾಮಿಲ್ಟನ್, ಪ್ರಪಂಚದ ನಾನಾ ಭಾಗಗಳಿಗೆ ಹೋಗಿ ಅನೇಕ ವಿಧವಾದ ರೆಕ್ಕೆ ಹುಳಗಳನ್ನು ಹುಡುಕಿ ತಂದಿದ್ದೀನಿ.  ನನ್ನಲ್ಲಿ ಇರುವ ಈ ಅತ್ಯುತ್ತಮ ಸಂಗ್ರಹ ಇನ್ನೆಲ್ಲೂ ಇಲ್ಲ ಎಂದು ಹೇಳಬಲ್ಲೆ, ನಿಮಗೂ ಈ ವಿಚಾರದಲ್ಲಿ ಆಸಕ್ತಿ ಇರುವದರಿಂದ ಬನ್ನಿ ನೋಡುವಿರಂತೆ " . 

ನಿಜವಾಗಲೂ , ಈ ಸಂಗ್ರಹವನ್ನು ಮೆಚ್ಚಲೇಬೇಕು, ಹಲವಾರು ಮರದ ಬೀರುಗಳಲ್ಲಿ ಪ್ರಪಂಚದ ನಾನಾ ಭಾಗದಿಂದ ತಂದ ಈ ಕ್ರಿಮಿಗಳನ್ನು ಜೋಡಿಸಿ ಅದರ ವಿವರಣೆಯನ್ನು ಬರೆದಿತ್ತು . ಕೆಂಪು ಕಪ್ಪು ಹಸಿರು ಬಣ್ಣದ ಕ್ರಿಮಿಗಳು ಸಾವಿರಾರು.  ತನ್ನ ಇಡೀ ಜಾಯಮಾನವನ್ನೇ ಈ ಸಂಗ್ರಹಕ್ಕೆ ಕಳೆದಿದ್ದಾರೆ  ಅನ್ನಬಹುದು.  ಸುಮಾರು ಎರಡು ಗಂಟೆ ತಮ್ಮ ಸಂಶೋಧನೆ ಮೇಲೆ ಮಾತಾಡಿರಬಹುದು ಬಹುಶ: ನಾನೇ ಇವರ ಮೊದಲನೆಯ  ಸಹಾನುಭೂತಿಯ ಕೇಳುಗ. 

   ಸರ್ ಥಾಮಸ್ ಪಕ್ಕದಲ್ಲೇ   ಲಾರ್ಡ್ ಲಿಂಚ್ಮಿಯರ್   ನಿಂತಿದ್ದರೂ ಒಂದು ಮಾತೂ ಅಡರಿಲಿಲ್ಲ ಆದರೆ ಅವರ ಮಖದಲ್ಲಿ  ಆತಂಕ ಅಥವಾ ಕಳವಳ, ಮತ್ತು  ಮುಂದೆ ಏನಾಗಬಹುದು ಅನ್ನುವ ಚಿಂತೆ ಅವರನ್ನು ಕಾಡಿಸುತ್ತಾ ಇರುವಹಾಗಿತ್ತು 

ಅವರ ಸೇವಕ ಬಂದು ಊಟ ತಯಾರಾಗಿದೆ ಎಂದು ಹೇಳಿದಾಗ , ಎಲ್ಲರೂ ತಮ್ಮ ಕೊಠಡಿಗೆ ಹೋಗಿ ಸರಿಯಾದ ಉಡುಪುಗಳನ್ನು ಧರಿಸಿ ಊಟದ  ಮನೆಯಲ್ಲಿ ಸೇರಿದೆವು.
ಊಟದ ಸಮಯದಲ್ಲಿ ಸರ್ ಥಾಮಸ್ ,  ಲೇಡಿ ರೊಸ್ಸಿಟರ್  ಮತ್ತು ಮಗ ಮನೆಯಲ್ಲಿ ಇಲ್ಲದಿರುವುದು ಬಹಳ ಬೇಜಾರು, ದಿನಗಳನ್ನು ಕಳೆಯುವುದು ಕಷ್ಟ ಅನ್ನುವುದೇ  ನನ್ನ ಚಿಂತೆ ಎಂದು ಪಶ್ಚಾತ್ತಾಪ ಪಟ್ಟರು . 
ಊಟದನಂತರ ಬಿಲಿಯರ್ಡ್ಸ್ ಆಡುವ ಕೋಣೆ ಯಲ್ಲಿ ಸ್ವಲ್ಪ ಕಾಲ ಧೂಮಪಾನ ಮಾಡುತ್ತಾ ಕುಳಿತು ನಂತರ ಅವರವರ  ಕೋಣೆಗೆ ಹೋಗಿ ಮಲಗುವುದಕ್ಕೆ ಹಿಂತಿರಿಗಿದೆವು.  ನನ್ನ ಹಿಂದೆ  
ಲಾರ್ಡ್ ಲಿಂಚ್ಮಿಯರ್ ಬಂದು " ಡಾ ಹ್ಯಾಮಿಲ್ಟನ್ , ನೀವು ಇಲ್ಲಿ ಮಲಗ ಬೇಡಿ ನನ್ನ ಕೋಣೆ ಗೆ ಬನ್ನಿ"  ಅಂತ ಹೇಳಿದಾಗ, ಈತನಿಗೆ ಬುದ್ದಿ ಕೆಟ್ಟಿರ ಬೇಕು ಅನ್ನುವ ಸಂದೇಹ ಬಂತು.    ಇದರ ಉದ್ದೇಶ ಏನು ಅಂತ ಕೇಳಿದಾಗ " ಇದನ್ನು ನಾನು ನಿಮಗೆ ವಿವರಿಸಬೇಕಾಗಿಲ್ಲ, ಬೆಳಗ್ಗೆ ಸೇವಕ ಬಂದು ಎಬ್ಬಿಸುವಕ್ಕೆ ಮುಂಚೆ ನೀನು ನಿಮ್ಮ ಕೋಣೆ ಗೆ ಹೋಗಿ " 
"ಆದರೆ ಏಕೆ ಹೇಳಿ"
" ನನ್ನ ನರಗಳ ದುರ್ಬಲತೆಯಿಂದ ಒಬ್ಬನೇ ಮಲಗುವುದಕ್ಕೆ ಆಗುವುದಿಲ್ಲ , ಈಗ ನಾನು ಹೇಳಿದ್ದನ್ನು ಕೇಳಿ "
 ಇಪ್ಪತ್ತು ಪೌಂಡ್ ಗಳು ಕಣ್ಣಿನಮುಂದೆ ಬಂತು, ವಿಧಿ ಇಲ್ಲದೆ ಅವರನ್ನು ಅವರ ಕೋಣೆಗೆ  ಹಿಂಬಾಲಿಸಿದೆ   
"ಆದರೆ ಸರ್, ಈ ಹಾಸಿಗೆ ಒಬ್ಬರಿಗೆ ಮಾತ್ರ  "
"ಹೌದು  ಒಬ್ಬರಿಗೆ ಜಾಗ, ಇನ್ನೊಬ್ಬರು ಕಾವಲಿರಬೇಕು "
" ಕಾರಣ , ಯಾರಾದರೂ ಹಲ್ಲೆ ಮಾಡುವ ಸಾಧ್ಯತೆ ಇದೆಯೇ ?"
"ಆ ಅನುಮಾನ ನನಗಿದೆ "
" ಹಾಗಾದರೆ ಬಾಗಿಲಗೆ ಚಿಲಕ ಹಾಕಿ ಮಲಗಬಹುದಲ್ಲ "
"ಇಲ್ಲ, ನನ್ನ ಮೇಲೆ ಹಲ್ಲೆ ನಡೆಯಲಿ ಅನ್ನುವುದೇ  ಅಸೆ  "
ಈತನಿಗೆ  ಬುದ್ಧಿವಿಕಲ್ಪ ಆಗಿದೆ ಎಂಬುದು ನನಗೆ ಖಚಿವಾಯಿತು " ಹಾಗಾದರೆ ನೀವು ಮಲಗಿ  ನಾನು ಈ ಕುರ್ಚಿಮೇಲೆ ಕುಳಿತು ಕಾವಲಿರುತ್ತೇನೆ "
" ಇಬ್ಬರೂ ಮಾಡೋಣ , ನೀವು ಎರಡು ಗಂಟೆಯವರೆಗೆ ಎದ್ದಿರಿ  ನಂತರ ನನ್ನ ಸರದಿ,  ನನ್ನನ್ನು ಆ ಸಮಯಕ್ಕೆ ಎಬ್ಬಿಸಿ "
"ಸರಿ "
" ಎಚ್ಚ್ಚರದಿಂದಿರಿ ,ಕೂತಲ್ಲೇ ನಿದ್ದೆ ಮಾಡಬೇಡಿ ,  ಏನಾದರೂ ಶಬ್ದ ಕೇಳಿಸಿದರೆ ನನ್ನನ್ನು ಎಬ್ಬಿಸಿ"

ನನಗೆ ತೂಕಡಿಕೆ ಬಂದರೂ ಕಷ್ಟದಿಂದ ಎದ್ದಿದ್ದೆ , ಕೊಣೆಯ ಎದುರಿನ ಓಣಿಯಲ್ಲಿ ಗಡಿಯಾರ ಹದಿನೈದು ನಿಮಿಷಕ್ಕೆ ಸದ್ದುಮಾಡುತಿತ್ತು, ಕೊನೆಗೆ ಎರಡು ಗಂಟೆ ಹೊಡೆದ ಶಬ್ದ ಕೇಳಿಸಿತು, ತಕ್ಷಣ 
ನಿಶ್ಚಿಂತೆಯಿಂದ ಮಲಗಿದ್ದ ಲಾರ್ಡ್ ಲಿಂಚ್ಮಿಯರ್ ಭುಜವನ್ನು ಮುಟ್ಟಿ ಎಬ್ಬಿಸಿದೆ, ಅವರು ಗಾಬರಿಯಿಂದ ಎದ್ದು " ಏನಾಯಿತು ಶಬ್ದ ಏನಾದರೂ ಕೇಳಿಸಿತೇ ?"
"ಇಲ್ಲ ಸರ್, ಎರಡು ಗಂಟೆ ಅದಕ್ಕೆ ಎಬ್ಬಿಸಿದೆ "
" ಸರಿ, ನೀವು ಮಲಗಿ ನಾನು ಎದ್ದಿರುತ್ತೇನೆ "
ಎಷ್ಟು ಹೊತ್ತು ನಿದ್ದೆ ಮಾಡಿದ್ದೆನೋ ಅರಿವಿಲ್ಲ , ಆದರೆ ನನ್ನ ತೋಳನ್ನು ಯಾರೋ ಬಲವಾಗಿ ಎಳೆದಾಗ ಎಚ್ಚರಿಕೆ ಆಯಿತು .  " ಬೇಗ, ಬೇಗ ಏಳಿ ,  ಬನ್ನಿ ಶಬ್ದ ಮಾಡದೆ ಕೇಳಿ " ಲಾರ್ಡ್ ಲಿಂಚ್ಮಿಯರ್ ನನ್ನನ್ನು ಎಳೆಯುತ್ತಾ ಒಂದು ಮೂಲೆಯಲ್ಲಿ ನಿಲ್ಲಿಸಿದರು. 
ಸಂದೇಹವೇ ಇರಲಿಲ್ಲ, ಯಾರೋ ಬರುತ್ತಿರುವ ಶಬ್ದ, ಬಹಳ ಎಚ್ಚರದಿಂದ ಬರುತ್ತಿರುವ ಹಾಗಿದೆ, ಹೆಜ್ಜೆಯ ಶಬ್ದ ಒಂದು ಕ್ಷಣ ನಿಲ್ಲುವುದು ನಂತರ ಕೇಳುವುದು, ನನ್ನ ಕೈಯನ್ನು ಹಿಡದಿದ್ದು  ಲಾರ್ಡ್ ಲಿಂಚ್ಮಿಯರ್  ಬಿಟ್ಟರಲಿಲ್ಲ , ಆದರೆ ಉದ್ರೇಕದಿಂದ ನಡಗುತ್ತಿದ್ದರು, 
" ಯಾರು ಇರಬಹುದು ಸರ್ ?
" ಅವರೇ .....   ಅವರೇ .."
"ಸರ್ ಥಾಮಸ್, ಏನು ಬೇಕು ಅವರಿಗೆ  ?"
"ಹೌದು ಹೌದು  ನಾನು ಹೇಳುವರಗೆ ಏನೂ ಮಾಡಬೇಡಿ
 ಮುಂದಾಗಿದ್ದ ಬಾಗಿಲು ನಿಧಾನವಾಗಿ ತೆರೆದಿದ್ದು ಕೇಳಿಸಿತು  ಓಣಿಯಲ್ಲಿ ಹಚ್ಚಿದ್ದ  ದೀಪ ದಿಂದ ಸ್ವಲ್ಪ ಬೆಳಕಿತ್ತು , ಒಂದು  ಬಗ್ಗಿದ ವ್ಯಕ್ತಿ ಒಳಗೆ ಧಾವಿಸಿ, ತಕ್ಷಣ   ಹಾಸಿಗೆಮೇಲೆ  ಮೇಲೆ ಧಭ ಧಭ ಅಂತ ಬಾರಿಸಿದ್ದು ಕಂಡು ನನ್ನ ಜೀವವೇ ಹೋದಂತಾಯಿತು.   ಕೆಲವೇ ಕ್ಷಣಗಳಲ್ಲಿ ಲಾರ್ಡ್ ಲಿಂಚ್ಮಿಯರ್ ನನ್ನ ಕೈ ಬಿಟ್ಟು  ಸರ್ ಥಾಮಸ್ ಹಿಂದೆ ನಿಂತು ಅವರ ಎರಡು ಕೈಯನ್ನು ಅವರ ಕತ್ತಿನ ಮೇಲೆ ಹಾಕಿ ನನ್ನನ್ನು   ಕೂಗಿದರು , ಎತ್ತರದ ವ್ಯಕ್ತಿ ಬಿಡಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾಗ ನಾನು ತಕ್ಷಣ ಅವರ ನೆರವಿಗೆ ಹೋಗಿ ಇಬ್ಬರೂ  ಆತನನ್ನು  ಹತೋಟಿಗೆ ತಂದು ಅವರು  ತೊಟ್ಟಿದ್ದ ಡ್ರೆಸ್ಸಿಂಗ್ ಗೌನ್ ನಲ್ಲಿದ್ದ ಹಗ್ಗವನ್ನು ತೆಗೆದು ಅವರ ಎರಡು ಕೈಗಳನ್ನು ಕಟ್ಟಿದವು,  ಈ ಕಿರುಚಾಟ ಕೇಳಿದ ಮೂರು ಸೇವಕರು ಓಡಿ  ಬಂದರು. ಇವರ ಸಹಾಯದಿಂದ ಸರ್ ಥಾಮಸ್ ಸಂಪೂರ್ಣವಾಗಿ ನಮ್ಮ ಸೆರೆಯಾದರು , ಕೆಳಗೆ ಕೂತು ಸಿಟ್ಟಿನಿಂದ ನೊರೆಯಾಡುತ್ತಿದ್ದರು. ಅವರ ಮುಖವನ್ನು  ಸರಿಯಾಗಿ ನೋಡಿದಾಗ ಈತ ಒಬ್ಬ ಅಪಾಯಕಾರಿ ಹುಚ್ಚ ಅನ್ನುವುದು ಸ್ಪಷ್ಟವಾಯಿತು , ಅದೂ ಅಲ್ಲದೆ ಹಾಸಿಗೆ ಪಕ್ಕದಲ್ಲಿ ಬಿದ್ದಿದ್ದ ಸುತ್ತಿಗೆಯಿಂದ   ಸರ್ ಥಾಮಸ್ ರವರ ಉದ್ದೇಶ್ಯ ಲಾರ್ಡ್ ಲಿಂಚ್ಮಿಯರ್ ರನ್ನು ಕೊಲ್ಲುವುದಾಗಿತ್ತು ಅನ್ನುವುದರದಲ್ಲಿ ಸಂಶಯ ಏನೂ ಇರಲಿಲ್ಲ. 
ಅವರನ್ನು ಎತ್ತಿ ನಿಲ್ಲಿಸಿದಾಗ , ಲಾರ್ಡ್ ಲಿಂಚ್ಮಿಯರ್ " ಅವರನ್ನು ಹಿಂಸೆ ಮಾಡಬೇಡಿ,  ಉದ್ರೇಕದ ನಂತರ ಈ  ಮೂರ್ಖತನ ಕೆಲವು ನಿಮಿಷಗಳು ಮಾತ್ರ ಇರುತ್ತದೆ." ಹೀಗೆ ಹೇಳುತ್ತಿರುವಾಗಲೇ 
ಸರ್ ಥಾಮಸ್ ಅವರ ತಲೆ ತಗ್ಗಿಸಿ ನಿಂತಲ್ಲೇ ನಿದ್ದೆ ಮಾಡುವಹಾಗಿತ್ತು, ಎಲ್ಲರೂ ಸೇರಿ ಅವರನ್ನು ನಿಧಾವಾಗಿ ನಡೆಸಿಕೊಂಡು ಅವರ ಕೋಣೆ ಯಲ್ಲಿ ಹಾಸಿಗೆಮೇಲೆ ಮಲಗಿಸಿದೆವು.  ಪ್ರಜ್ಞೆ ಇದ್ದಹಾಗೆ ಕಾಣಿಸಲಿಲ್ಲ  ಮೇಲೆ  ಮೇಲೆ ಉಸಿರು ಬಿಡುತ್ತಿದ್ದರು . 
" ನೀವೆಲ್ಲರು  ಇವರ ಮೇಲೆ ನಿಗಾ ಇಟ್ಟಿರಿ , ಡಾ.  ಹ್ಯಾಮಿಲ್ಟನ್ , ನೀವು ನನ್ನ ಜೊತೆಯಲ್ಲಿ ಬನ್ನಿ ನನ್ನ ಕೊಣೆಯಲ್ಲಿ ನಿಮಗೆ ಇದರ ಬಗ್ಗೆ ವಿವರಣೆ ಕೊಡುತ್ತೇನೆ"

ಅವರ ಕೋಣೆ  ಸೇರಿದಾಗ " ನೋಡಿ ನನ್ನ ಮೈದುನ,  ಸರ್ ಥಾಮಸ್ ಬಹಳ ಒಳ್ಳೆ ಮನುಷ್ಯ, ಅವರಿಗೆ ತನ್ನ ಪತ್ನಿ ಮತ್ತು ಮಗನ ಮೇಲೆ ಅಪಾರ ಪ್ರೀತಿ, ಆದರೆ ಅವರ ಮನೆತನದಲ್ಲಿ   ಹಲವಾರು ತಲೆ ಮಾರುಗಳಿಂದ ಬಂದಿರುವುದು ಕಳಂಕಿನ ಹುಚ್ಚುತನ. ಆಗಾಗ್ಗೆ ಕೊಲೆಗಾರನಿಗೆ ಬರುವ ಪ್ರವೃತ್ತಿ, ಇವರಿಗೂ ಬಂದಿದೆ, ಒಂದು ವಿಚಿತ್ರ ಅಂದರೆ,  ಯಾರು ತುಂಬಾ ಹತ್ತಿರವಾದವರ ಮೇಲೆ ದಾಳಿ ನಡೆಸುವುದು. ಆದ್ದರಿಂದ ಅವರ ಮಗ  ಬೋರ್ಡಿಂಗ್ ಶಾಲೆಯಲ್ಲಿದ್ದಾನೆ ಮತ್ತು ಲೇಡಿ ರೊಸ್ಸಿಟರ್ ಆದಷ್ಟು ಮನೆಯಿಂದ ಹೊರಗೆ ಇರುತ್ತಾರೆ. ನೀವು ನನ್ನ ತಂಗಿ ಮಖದ ಮೇಲೆ ಆಗಿದ್ದ ಗಾಯವನ್ನು ಗಮನಿರಸಬಹುದು. ಈತನಿಗೆ  ಇದರ ಅರಿವು ಚೂರು ಇಲ್ಲ ಮತ್ತು ತಾನು ಇಂತ ಘಟನೆಗಳಿಗೆ ಕಾರಣ ಅನ್ನುವುದು ನಗೆಗೇಡಿತನ ಅನ್ನುವ ಭಾವನೆ. ಇವರ ಹವ್ಯಾಸ ರೆಕ್ಕೆ ಹುಳಗಳ ಸಂಗ್ರಹಣ ಮತ್ತು ಏಕಾಂತ ಜೀವನ, ಬೇರೆ ಯಾರ ಹತ್ತಿರನೂ ಸಂಪರ್ಕ ಬೆಳಸಿಲ್ಲ ಮತ್ತು ಬೇಕಾಗೂ ಇಲ್ಲ, ಇಂಥವರಿಗೆ ವೈದ್ಯರಿಂದ ಚಿಕಿತ್ಸೆ  ಕೊಡಿಸುವುದು ದೊಡ್ಡ ಸಮಸ್ಯೆ ಇತ್ತು, ಅದೂ ಅಲ್ಲದೆ ವೈದ್ಯನಿಗೂ ಇವರಿಗೆ ಈ ಮಾನಸಿಕ ರೋಗ ಇದೆ ಎಂದು ಅರಿವು ಮಾಡಿಸುವುದೂ  ಹೇಗೆ ಅನ್ನುವುದು ನಮ್ಮನ್ನು  ಕಾಡುತಿತ್ತು. ಆದರೆ , ಸುದೈವದಿಂದ ಇವರಿಗೆ ಈ ಮನಸ್ಥಿತಿ ಬರುವ ಮೊದಲು ಕೆಲವು ಸೂಚನೆಗಳು ಕಾಣಿಸುತ್ತವೆ. ನಿಮ್ಮ ಹತ್ತಿರ ಮಾತನಾಡುವಾಗ ಅವರ ಹಣೆಯಮೇಲೆ ಸ್ನಾಯುಗಳ ಅಲ್ಲಾಡಿಕೆ ನೀವು ಗಮನಿಸಿದಿರಾ ? ಇದು ಮೂರು ಎರಡು ಮೂರು ದಿನಗಳ ಹಿಂದೆ ಶುರು ವಾಗುವುದು.  ಅಂತಹ ಸಮಯದಲ್ಲಿ ಲೇಡಿ  ರೊಸ್ಸಿಟರ್ ಏನೋ ನೆಪ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ನಮ್ಮ ಮನೆಗೆ ಬರುತ್ತಿದ್ದರು, ನನ್ನ ಗುರಿ ಇದ್ದಿದ್ದು ಹೇಗಾದರೂ ಮಾಡಿ ಒಬ್ಬ ವೈದ್ಯನ ಮುಂದೆ ಸರ್ ಥಾಮಸ್ ಅವರಿಗೆ ಈ ಮಾನಸಿಕ ರೋಗ ಇದೆ ಅನ್ನುವುದನ್ನ ತೋರಿಸಿವುದು. ಅವರ ಮನೆಗೆ ಅಪರಿಚಿತರು ಹೋಗುವುದಕ್ಕೆ ಒಂದು ಒಳ್ಳೆ ಕಾರಣ ಹುಡಕಬೇಕಾಗಿತ್ತು. ರೆಕ್ಕೆ  ಹುಳದ  ಬಗ್ಗೆ ಆಸಕ್ತಿ ಇರುವರು ಸಿಕ್ಕಿದರೆ ಸರ್  ಥಾಮಸ್ ಅವರನ್ನು ನೋಡುವ ಸಾಧ್ಯತೆ ಇದೆ ಎಂದು ಆ ರೀತಿ  ಜಾಹೀರಾತನ್ನು ಪತ್ರಿಕೆಯಲ್ಲಿ ಹಾಕಿದ್ದು. ನೀನು ಅದನ್ನ ನೋಡಿ ಬಂದದ್ದು ನಮ್ಮ ಅದೃಷ್ಟ, ನನಗೆ ಯಾವ ಘಳಿಗೆಯಲ್ಲಿ ಈ ಅನಾಹುತ ನಡೆಯುತ್ತೆ ಅನ್ನುವುದು ಊಹಿಸುವುದು ಕಷ್ಟ, ಆದರೆ ಇದು ನನ್ನ ಮೇಲೆ ನಡೆಯುತ್ತೆ ಅನ್ನುವುದು ಖಚಿತ. ಕಾರಣ ಈತನಿಗೆ ನನ್ನ  ಮೇಲೆ ಅಕ್ಕರೆ ಮತ್ತು ಗೌರವ ಇದೆ. ನಿಮ್ಮ ಸಹಾಯದಿಂದ ಈಗ ಇವರಿಗೆ ಸರಿಯಾದ ಚಿಕಿತ್ಸೆ  ದೊರೆಯುವ ಸಂದರ್ಭ ಬಂದಿದೆ   " 

"ಡಾ. ಹ್ಯಾಮಿಲ್ಟನ್, ನೀವು ಸರ್ ಥಾಮಸ್ ಅವರ ಮಾನಸಿಕ ಕಾಯಿಲೆಯ ಪ್ರಮಾಣ ಪತ್ರಕ್ಕೆ ಸಹಿ ಹಾಕುತ್ತೀರಾ?"
"ಖಂಡಿತ ಸರ್ , ಆದರೆ ಕಾನೂನಿನ ಪ್ರಕಾರ ಎರಡು ಸಹಿ ಬೇಕಲ್ಲ "
" ನಾನು ಒಬ್ಬ ಪರಿಣಿತಿ ಹೊಂದಿರುವ ವೈದ್ಯ ಅನ್ನುವುದು ಮರೆಯಬೇಡಿ, ಬೇಕಾದ್ದ ಪತ್ರಗಳು ಇಲ್ಲೇ ಇದೆ ನಮ್ಮಿಬ್ಬರ ಸಹಿ ಆದನಂತರ ರೋಗಿಯನ್ನು ಇಲ್ಲಿಂದ ಸಾಗಿಸಬಹುದು "

ಪ್ರಸಿದ್ಧ "ಬೀಟಲ್ ಹಂಟರ್ " ಸರ್  ಥಾಮಸ್ ರೊಸ್ಸಿಟರ್ ಅವರ ಭೇಟಿಯಾಗಿದ್ದು, ಲಾರ್ಡ್ ಲಿಂಚ್ಮಿಯರ್ ಮತ್ತು ಲೇಡಿ ರೊಸ್ಸಿಟರ್ ಪರಿಚಯ ನನ್ನ ವೈಯಕ್ತಿಕ ಜೀವನದಲ್ಲಿ ಯಶಸ್ವಿಯಾಗಿ ಮುಂದುವರೆಯುವದಕ್ಕೆ  ಸಹಾಯವಾಯಿತು.

ಸರ್ ಥಾಮಸ್ ಚಿಕಿತ್ಸೆನಂತರ ಗುಣವಾಗಿ  ಮಾನಸಿಕ ಆಸ್ಪತ್ರೆಯಿಂದ ಹೊರಗೆ ಬಂದಿದ್ದಾರೆ, ಆದರೆ, ನಾನು ಪುನಃ ಡೆಲಾಮಿರ್  ಕೋರ್ಟ್ ನಲ್ಲಿ  ಉಳಿದರೆ ಬಾಗಿಲಗೆ  ಚಿಲಕ ಹಾಕಿ ಮಲಗುವುದು ಉತ್ತಮ ಅಲ್ಲವೇ?   
 
~ ರಾಮಮೂರ್ತಿ , ಬೇಸಿಂಗ್ ಸ್ಟೋಕ್ 

ನಿನಗೆ ಬೇರೆ ಹೆಸರು ಬೇಕೇ? ‘ಸ್ತ್ರೀ’ ಎಂದರೆ  ಅಷ್ಟೇ ಸಾಕೇ??..

ನಲುಮೆಯ ಓದುಗರೇ ನಮಸ್ಕಾರ. ಸರ್ವರಿಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. 
‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’,  ‘ಮಹಿಳೆಯರಿಗೆ ವೇದಾಧಿಕಾರವಿಲ್ಲ’, ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ,  ಶಿಕ್ಷಣ ಸೌಲಭ್ಯವಿಲ್ಲ, ವೇತನ ಸಮಾನತೆಯಿಲ್ಲ, ಆಸ್ತಿಯಲ್ಲಿ ಹಕ್ಕಿಲ್ಲ, ಮತದಾನದ ಹಕ್ಕಿಲ್ಲ..ಇಂಥವೇ ಹತ್ತು ಹಲವಾರು ಶೋಷಣೆಗಳಿಗೆ ಶತಶತಮಾನಗಳಿಂದಲೂ ಒಳಗಾಗುತ್ತಿದ್ದರೂ ‘ಎತ್ತರದಲ್ಲಿಟ್ಟು ಪೂಜಿಸಬೇಡಿ; ನೆಲದಲ್ಲಿಟ್ಟು ತುಳಿಯಬೇಡಿ. ನಿಮ್ಮ ಹೆಗಲಿಗೆ ಹೆಗಲಾಗಿ ನಡೆಯಲನುವು ಮಾಡಿಕೊಡಿ’ ಎಂದು ತನ್ನತನವನ್ನು ಉಳಿಸಿಕೊಳ್ಳಲು ಇನ್ನಿಲ್ಲದಂತೆ ಹೆಣಗಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿರುವ ‘ಸ್ತ್ರೀ’ ಯ ಯಶೋಗಾಥೆ ಅನನ್ಯ;ಅದ್ಭುತ.
ನಮ್ಮ ವರಕವಿಗೆ ಬ್ರಹ್ಮಾಂಡದ ಶಕ್ತಿಗಳೆಲ್ಲವೂ, ಸೃಷ್ಟಿಯೆಲ್ಲವೂ ಹೆಣ್ಣು..
ಚಳಿಯಾಕೆ,ಬಿಸಿಲಾಕೆ, ಮಳೆಯಾಕೆ,ಕೈ ಹಿಡಿದಾಕೆ, ಕೈ ಬಿಡದಾಕೆ, ಮಾಹೂರಗಡದಾಕೆ,ಗುಂಗು ಹಿಡಿಸಿದಾಕೆ, ಹುಚ್ಚು ಬಿಡಿಸಿದಾಕೆ,ಓಹೋ ಮುಗಿಲಿಗೆ ಜಿಗಿದಾಕೆ, ಸೂರ್ಯನ ಬೆಳಕಿಗೂ ಸಿಗದಾಕೆ..ಈಕೆ. ಇಂದು ಶ್ರೀವತ್ಸ ದೇಸಾಯಿಯವರು ಅದ್ಯಾರೋ ‘ಆಕೆ’ಯನ್ನು ನೆನೆಯುತ್ತಿದ್ದಾರೆ. ಬನ್ನಿ, ನೋಡೋಣ ಯಾರವಳು? ‘ಮಾನಸ ಸರಸಿನ ನೆನಪಿನ ನೆರಳಾಕೆ..ಎಳೆತಂತಿಯ ಮಿಡಿದಾಕೆ ಯಾರೀಕೆ?..ನನ್ನೊಳಗೇ ನನ್ನೆಳೆದಾಕೆ ಯಾರಾಕೆ??’ ಆ ‘ಆಕೆ’ಗೊಂದು ತಮ್ಮ ಮಾಂತ್ರಿಕ ಕುಂಚದಿಂದ ಚಂದದ ರೂಪ ಕೊಟ್ಟಿದ್ದಾರೆ ಲಕ್ಷ್ಮೀನಾರಾಯಣ ಗುಡೂರ ಅವರು.
 ಅನುದಿನ ಬೆಳಗಿನಲ್ಲಿ ಪೂರ್ವದಲ್ಲಿ ಸೂರ್ಯ ಹುಟ್ಟಿ, ಬೆಳೆದು, ಏರಿ,ಇಳಿದು ಮುಸ್ಸಂಜೆ ಪಡುವಣಗಡಲಲ್ಲಿ ಮುಳುಗಿದರೂ ..ಅವನ ಸುತ್ತಲೇ ಸುತ್ತುವ ವಸುಂಧರೆಯ ಕಾಯಕ ಮುಗಿಯುವುದೇ ಇಲ್ಲ. ಸುಂದರ-ಸತ್ವಯುತ ಪ್ರತಿಮೆಗಳೊಂದಿಗೆ  ‘ಅಪೂರ್ವ’ ಕವನವನ್ನು ಕಟ್ಟಿಕೊಟ್ಟಿದ್ದಾರೆ. ಹೆಸರಾಂತ ಕವಯತ್ರಿ ಶ್ರೀಮತಿ ಹೇಮಾ ಪಟ್ಟಣಶೆಟ್ಟಿ. ಅದನ್ನು ನಿಮ್ಮೆದಿರು ಪ್ರಸ್ತುತಪಡಿಸುತ್ತಿದ್ದಾಳೆ ಕುಮಾರಿ.ಅಕ್ಷತಾ ಲಕ್ಕುಂಡಿ. 
ಸಾಧನೆಗಳು,ಸಾಧಕಿಯರು ಅಂದೊಡನೆ ಹಲಕೆಲವರ ಹೆಸರುಗಳನ್ನಷ್ಟೇ ಮತ್ತೆ ಮತ್ತೆ ಉಚ್ಚರಿಸುತ್ತೇವೆ. ನಮ್ಮ ಸುತ್ತಮುತ್ತಲೇ ಇರುವ  ನಮ್ಮಂಥದೇ ಸಾಮಾನ್ಯರ ಸಾಧನೆಗಳು ನಮ್ಮರಿವಿಗೆ ಬರುವುದೇ ಇಲ್ಲ. ನಮ್ಮದಲ್ಲದ ದೇಶದಲ್ಲಿದ್ದುಕೊಂಡು, ತೀರ ಭಿನ್ನ ಸಂಸ್ಕೃತಿಯ ಮಧ್ಯದಲ್ಲಿದ್ದೂ ಅವೆರಡನ್ನೂ ಮೇಳೈಸಿಕೊಂಡು ನಮ್ಮ ಸಾಹಿತ್ಯಸಂಗೀತಗಳ ಸತ್ವವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಅಮಿತಾ.ರವಿಕಿರಣ್ ಅವರ ಗಾಯನದ ಗುಂಗು ಅನಿವಾಸಿಗೆ ಹೊಸದೇನಲ್ಲ. ಇತ್ತೀಚೆಗೆ ಕನ್ನಡದ ಹೆಸರಾಂತ ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮದ ಕುರಿತು ಅಭಿಮಾನದಿಂದ ಬರೆದಿದ್ದಾರೆ  ಶ್ರೀರಂಜಿನಿಯವರು.
ಬನ್ನಿ..ಓದಿ..ಅನಿಸಿಕೆ ಹಂಚಿಕೊಳ್ಳಿ.
~ ಸಂಪಾದಕಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ನನ್ನ ‘ಆಕೆ’!

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ (International Women's Day - IWD) ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಆ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ಭಾರತದಲ್ಲಿ ಮಾತ್ರ ಫೆಬ್ರುವರಿ 13 ರಂದು ಸರೋಜಿನಿ ನಾಯ್ಡು ಅವರ ಹುಟ್ಟುಹಬ್ಬದ ದಿನದಂದು ರಾಷ್ಟ್ರೀಯ ಮಹಿಳಾ ದಿನವೆಂದು ಆಚರಿಸಲಾಗುತ್ತದೆ. ಇದು ಎಂದು ಪ್ರಾರಂಭವಾಯಿತು? ನಾನು ಓದಿದ ಒಂದು ಇತಿಹಾಸದ ಪ್ರಕಾರ 1909 ಫೆಬ್ರುವರಿ 28 ರಂದು ಅಮೇರಿಕೆಯ ರಾಷ್ಟ್ರಿಯ ಮಹಿಳಾ ದಿನದಂದು ಯುಕ್ರೇನಿನ ಮೂಲದ ಕ್ಲಾರಾ ಲೆಮ್ಲಿಚ್ ಎನ್ನುವ ಮಹಿಳೆಯ ಧುರೀಣತ್ವದಲ್ಲಿ ಹದಿನೈದು ಸಾವಿರ ಕಾರ್ಮಿಕರು ಸಂಪು ಹೂಡಿದರು. ಮರು ವರ್ಷ ಆ ಸಂಘಟನೆ ಅಧಿಕೃತವಾಗಿ ಆ ಹೆಸರಿನಿಂದ ಅಂಗೀಕೃತವಾಗಿ ಮುಂದೆ ಜಗತ್ತಿನಾದ್ಯಂತ ಪಸರಿಸಿತು. ವಾರ್ಷಿಕ ಕೆಲೆಂಡರಿನಲ್ಲಿ ಆ ತಾರೀಕು ಶಾಶ್ವತ ಸ್ಥಾನ ಪಡೆಯಿತು. IWD ಹೆಸರಿಸುವ ಹತ್ತು ಮೌಲ್ಯಗಳಲ್ಲಿ* ಮೆಚ್ಚುಗೆ (appreciation) ಸಹ ಒಂದು. ಅದಕ್ಕೇ ಇದು ಆಕೆಗೊಂದು ಬಿನ್ನವತ್ತಳೆ (ಮಾನ ಪತ್ರ).
ಇತ್ತೀಚಿನ ಒಂದು ’ಸಖಿ ಸಮಯದಲ್ಲಿ’ ಅಮಿತಾ ಅವರು ಅಂದಂತೆ: ”ಈಗಿರೋ ನಮ್ಮನ್ನು ರೂಪಿಸಲು ಅದೆಷ್ಟೋ ಒಳ್ಳೆ ಮನಸ್ಸುಗಳು ಸಹಕರಿಸಿಲ್ಲ ಹೇಳಿ? ಆದರೆ ಆ ವ್ಯಕ್ತಿಯ ಒಳ್ಳೆತನವನ್ನ ಶ್ಲಾಘನೆ ಮಾಡಲಿಕ್ಕೆ, ಥ್ಯಾಂಕ್ಯೂ ಹೇಳಲಿಕ್ಕೆ ಜನ್ಮ ದಿನ, ಆನ್ನಿವರ್ಸಿರಿಯನ್ನೇ ಏಕೆ ಕಾಯ್ತಿರುತ್ತೇವೆ? ಸಾಧ್ಯವಾದರೆ ಆ ವ್ಯಕ್ತಿಯಬಗ್ಗೆ ಮನಸ್ಸು ಬಿಚ್ಚಿ ಮಾತಾಡಿ. ನಿಸ್ಪೃಹತೆ ನಮ್ಮೆಲ್ಲರನ್ನು ಕಾಯಲಿ!” ಅದಕ್ಕೇ ಇಲ್ಲಿ ಮನಸ್ಸು ಬಿಚ್ಚಿ ಒಂದು ವ್ಯಕ್ತಿಯ ಬಗ್ಗೆ ನಾಲ್ಕು ಮಾತಗಳನ್ನಾಡುತ್ತಿದ್ದೇನೆ. 
’ಆಕೆ” ಬಹಳ ಕಾಲದ ವರೆಗೆ ನನ್ನ ವೈಯಕ್ತಿಕ ಮತ್ತು ವೃತ್ತಿಜೀವನದ ಅವಿಭಾಜ್ಯ ಅಂಗವಾಗಿದ್ದಳು. ಅವಳಿಗೆ ನನ್ನ ಬಗ್ಗೆ  ಗೊತ್ತಿರದ ಗುಟ್ಟಿಲ್ಲ; ನನ್ನ ಶಕ್ತಿ-ದೌರ್ಬಲ್ಯಗಳನ್ನು ಅವಳಂತೆ ಯಾರೂ ಅರಿತಿಲ್ಲ. ನನ್ನ ಪ್ರತಿದಿನದ ಕಾರ್ಯಕ್ರಮವನ್ನು ರೂಪಿಸಿದವಳೇ ಆಕೆ ಇದ್ದಷ್ಟು ವರ್ಷಗಳು. ನನ್ನ ತಪ್ಪುಗಳನ್ನು ಕ್ಷಮಿಸಿ, ತಿದ್ದಿ, ಆದರೂ ನೋಡಿಯೂ ನೋಡದವರಂತೆ ವರ್ತಿಸಿ ಹೆಗ್ಗಳಿಕೆಯಿಂದ ಬೀಗದವಳು.(ಆಕೆಯ ಸ್ಪೆಲ್ಲಿಂಗನ್ನು ನಾನು, ನನ್ನ ವ್ಯಾಕರಣವನ್ನು ಆಕೆ ತಿದ್ದಿದ್ದೂ ಇದೆ, ಆ ಮಾತು ಬೇರೆ.) ನನ್ನ ಬೆನ್ನೆಲುಬಾಗಿ, ಮೆದುಳಾಗಿ, ಲಿಪಿಕಾರಳಾಗಿ, ನನ್ನ ವೃತ್ತಿಜೀವನದ ಶಿಲ್ಪಿಯಾಗಿ ಬಾಳಿದಾಕೆ, ಆಕೆಗೆ ಇದರ ಮೂಲಕ ಥ್ಯಾಂಕ್ಯೂ ಹೇಳುತ್ತೇನೆ. ಆಕೆ ಯಾರೆಂದು ತಿಳಿದಿರಿ? ಆಕೆಯೇ ನನ್ನ ಪರ್ಸನಲ್ ಮೆಡಿಕಲ್ ಸೆಕ್ರೆಟರಿ! ನಾನು ಹೆಚ್ಚು ಕಡಿಮೆ ಐದು ದಶಕಗಳ ಕಾಲ ದುಡಿದ ಯು ಕೆದ ನ್ಯಾಷನಲ್ ಹೆಲ್ಥ್ ಸರ್ವಿಸ್ ನ(National Health Service -NHS) ಅನುಭವದಲ್ಲಿ ಮೆಡಿಕಲ್ ಸೆಕ್ರೆಟರಿಗಳ ಸೇವೆಯನ್ನು ಮೆಚ್ಚಿ  ಮೇಲೆ ಅಮಿತಾ ಹೇಳಿದಂತೆ  ಅವರ ನಿಸ್ಪೃಹತೆಯನ್ನು ಶ್ಲಾಘಿಸಿ  ಒಂದೆರಡು ಮಾತುಗಳನ್ನಾದರೂ ಬರೆಯುವದು ನನ್ನ ಕರ್ತವ್ಯವಲ್ಲವೆ? ನಾನು 1982ರಲ್ಲಿ ಕನ್ಸಲ್ಟಂಟನಾಗಿ ಕೆಲಸ ವಹಿಸಿದಿಗಾಗಿನಿಂದ ನನ್ನೊಡನೆ ಪರ್ಸನಲ್ ಸೆಕ್ರೆಟರಿಯಾಗಿ ಕೆಲಸ ಮಾಡಿದ ಐದಾರು ಮಹಿಳೆಯರನ್ನು (ಸೇರಾ, ಜೂಲಿ, ಕೇ, ಶೀಲಾ) ಸಾಮೂಹಿಕವಾಗಿ ನನ್ನ ವೃತ್ತಿ ಜೀವನದ ಸಿಂಹಭಾಗವನ್ನು ಆಳಿದ ’ಜೇನ್” ಅನ್ನುವ ಒಬ್ಬಾಕೆಯ ಹೆಸರಿನಲ್ಲೇ ಹೂ ಏರಿಸುತ್ತೇನೆ. ಎಪ್ಪತ್ತರ (1970) ದಶಕಗಳಿಂದಲೂ ಆಸ್ಪತ್ರೆಗಳಲ್ಲಿ ಕೆಲಸಮಾಡಿದವರಿಗಂತೂ ಡಾಕ್ಟರ್ ಮತ್ತವರ ಪರ್ಸನಲ್ ಸೆಕ್ರೆಟರಿ ನಡುವಿನ ಈ ಅವಿನಾಭಾವದ ಸಂಬಂಧದ ಅನುಭವ ಆಗಿರಲಿಕ್ಕೆ ಸಾಕು. ಈ ಲೇಖನದಲ್ಲಿ ನಿಮಗೆ ಅದರೊಂದಿಗೆ ಆಗಿನ NHS ದ ಸ್ವಲ್ಪ ಪರಿಚಯವೂ ಆದೀತು.
ಸೆಕ್ರೆಟರಿ ದೇವರಾದರೆ, ದೇವರ ಅವತಾರಗಳು ಅನೇಕ! ಮೊದಲು ಅವತರಿಸಿದಾಕೆ ಸೇರಾ. ನಮ್ಮ ಸ್ಪೇಷಲ್ ಸರ್ಜರಿ ಡಿಪಾರ್ಟ್ ಮೆಂಟಿನಲ್ಲಿ ನಾವಿಬ್ಬರು ಜೊತೆಗೇ ಸೇರಿದ ಸಮವಯಸ್ಕ ಕನ್ಸಲ್ಟಂಟ್ಗಳು. ನಮ್ಮಿಬ್ಬರಿಗೂ ಅವಳೊಬ್ಬಳೇ ಸೆಕ್ರೆಟರಿ ಆಗ. ಇಬ್ಬರಿಗೂ ತನ್ನ 50-50% ಸಮಯ ಹಂಚಿಕೊಂಡಿದ್ದಳು. ಹೊಸ ’ಬಾಸ್”ಗೆ ಆಕೆಯದೇ ಶಿಕ್ಷಣ - ಆಸ್ಪತ್ರೆಯ ಎಲ್ಲ ವಿವರ, ಕೆಲಸದ ಆಗು ಹೋಗುಗಳಿಂದ ಹಿಡಿದು ಡಿಕ್ಟಫೋನಿನಲ್ಲಿ ಹೇಗೆ ಪೇಶಂಟ್ಸ್ ಲೆಟರ್ ದಿಕ್ಟೇಟ್ ಮಾಡ ಬೇಕು ಅಂತ ತೋರಿಸಿಕೊಟ್ಟದ್ದಲ್ಲದೆ ನಮ್ಮಿಬ್ಬರ ಜೀವನದ ’ಡಿಕ್ಟೇಟರ್’ ಸಹ ಆಗಿದ್ದಳು. ಮೋಬೈಲ್ ಐಲ್ಲದ ಆ ಕಾಲದಲ್ಲಿ ನಾನಿಲ್ಲದಾಗ ಫೋನುಗಳನ್ನು ರಿಸೀವ್ ಮಾಡಿ ನಾನಿರುವ ಜಾಗವನ್ನು ಗುಪ್ತವಾಗಿಟ್ಟು (ಒಮ್ಮೊಮ್ಮೆ ಮಡದಿಯಿಂದಲೂ!) ಮ್ಯಾಜೇಜರರ ಕಾಟದಿಂದ ರಕ್ಷಿಸಿ, ಚಹ ಕಾಫಿ ಸರಬರಾಜು ಮಾಡಿ, ವರ್ಕ್ ಡೈರಿಯನ್ನು ಶಿಸ್ತಾಗಿ ಇಟ್ಟು, ಅಸ್ತವ್ಯಸ್ತವಾಗಿದ್ದ ನನ್ನ ಕೆಲಸದ ಟೇಬಲ್ಲನ್ನು ಓರಣವಾಗಿಟ್ಟು  ಪ್ರೈವೇಟ್ ಪ್ರಾಕ್ಟಿಸ್ ದೇಶಸೇವೆಗೆ ಅಡ್ಡಿ ಬರದಂತೆ ನನ್ನ ಕರ್ತವ್ಯ ಪಾಲನೆಯಲ್ಲಿ ಸಹಕರಿಸಿ, ಕನ್ಸಲ್ಟಂಟನ ಗಾಲ್ಫಿಗೂ ಸಮಯ ಒದಗಿಸಿ(ನನಗಲ್ಲ-ನಾನೆಂದೂ Golf ಆಡಿಲ್ಲ), ಆಪರೇಶನ್ ಥಿಯೇಟರಿನ ಒತ್ತಡಕ್ಕೆ ನನ್ನ ಸುತ್ತ firewall ಆಗಿ, ಡೊಮಿಸೀಲಿಯರಿ ವಿಜಿಟ್ಟುಗಳಿಗೆ ಕರೆ ಬಂದಾಗ ನಾನು ವಾಸಿಸುವ ಊರಿನ ರಸ್ತೆಗಳನ್ನು, ಸಂದು ಗೊಂದುಗಳನ್ನು ಪರಿಚಯಿಸಿ (ರೋಗಿಗಳನ್ನು ಮನೆಯಲ್ಲೇ ನೋಡುವದೂ NHS ಕೆಲಸವೇ ಆಗಿತ್ತು ಮತ್ತು ಸ್ಯಾಟ್ ನಾವ್ ದ  ನೀಲಿ ನಕ್ಷೆ ಸಹ ಆಗಿದ್ದಿಲ್ಲ, ಆಗ) ... ಒಂದೇ ಎರಡೇ ಆಕೆಯ ಕೆಲಸ, ತನ್ನ ಪ್ರೀತಿ ಪರಿಶ್ರಮದಿಂದ ಈ ಶಿಲ್ಪವನ್ನೇ ಕಟೆದಿದ್ದಳು! 
ಆಗಿನ ನನ್ನ ಒಬ್ಬ ಬಿಳಿಯ ಸಹೋದ್ಯೋಗಿ ಹೇಳಿದ ಮಾತು: ”ಒಬ್ಬ ಒಳ್ಳೆಯ ಸೆಕ್ರೆಟರಿ ಸಿಕ್ಕರೆ ನಿಮ್ಮ ಜೀವನ ಸಾರ್ಥಕ ಆಯಿತೆಂದು ತಿಳಿಯಿರಿ! ನಿಮಗೆ ತಪ್ಪದೆ ಪ್ರತಿ ವರ್ಷ ಕಾರ್ಡು ಕೊಟ್ಟರೂ ನಿಮ್ಮ ಬರ್ತ್ ಡೇಯನ್ನು ಉಳಿದವರಿಂದ ರಹಸ್ಯವಾಗಿಟ್ಟು; ಆದರೆ ನಿಮ್ಮ ಮತ್ತು ನಿಮ್ಮ ಪಾರ್ಟ್ನರ್ ಹುಟ್ಟು ಹಬ್ಬ, ಅನ್ನಿವರ್ಸರಿಗೆ ತಪ್ಪದೆ ಹೂಗುಚ್ಛ ಕಳಿಸಿ, ನಿಮಗೆ ವೇಲಂಟೈನ್ ದಿನದ ಪ್ರೆಸೆಂಟ್ ಕೊಳ್ಳಲು ಮರೆಯ ಬೇಡೆಂದು ನೆನಪಿಸಿ ಹೆಂಡತಿಯ ಸಿಟ್ಟಿನಿಂದ ಬಚಾವ್ ಮಾಡಿ, ಕ್ರಿಸ್ಮಸ್ ಪಾರ್ಟಿ ವ್ಯವಸ್ಥೆ ಮಾಡಿ (ಆದರೆ ತಪ್ಪಿಯೂ ನಿಮಗೆ ಆಗದವರನ್ನು ಬರಲಾಗದಂಥ ವ್ಯವಸ್ಥೆ ಮಾಡಿ), ನಿಮ್ಮ ಮಕ್ಕಳ ಹೆಸರನ್ನು ನೆನಪಿಟ್ಟುಕೊಂಡು, ಅವರ ಬೆಳವಣಿಗೆಯಲ್ಲಿ ಆಸ್ಥೆಯಿಟ್ಟು ಸಂಸ್ಕೃತ ಶ್ಲೋಕ ಹೇಳುವ** ಸನ್ಮಿತ್ರಲಕ್ಷಣಗಳೆಲ್ಲವನ್ನೂ ಹೊಂದಿದವಳು ಆಕೆ!”
ಜೇನ್ ಗೆ ಚಾಣಕ್ಯನೀತಿ ಕರತಲಾಮಲಕ. ಎಲ್ಲರಿಗೂ ಆಸ್ಪತ್ರೆಯಲ್ಲಿ ವಿಪರೀತ ಕೆಲಸ ಆಗ. ನಾನು ದಿನಕ್ಕೆ ಎರಡು ಕ್ಲಿನಿಕ್ ಮಾಡಿ ರಾಶಿ ರಾಶಿ ರೋಗಿಗಳ ಬಗ್ಗೆ ಅವರಿವರಿಗೆ ಪತ್ರಗಳನ್ನು ಡಿಕ್ಟಫೋನಿನಲ್ಲಿ ಹೇಳಿ ಆ ಕೆಲಸದಲ್ಲಿ ಮುಳುಗಿ ನನ್ನನ್ನೇ ಮರೆತಿರುತ್ತಿದ್ದೆ. ರಾತ್ರಿ ಕನಸಿನಲ್ಲಿ ಯಾರ್ಯಾರ ಹೆಸರು, ಏನೇನು ಬಡಬಡಿಸುತ್ತಿದ್ದೆನೋ, ಮಡದಿಯಿಂದ ಏನೂ ಕಂಪ್ಲೇಂಟ್ ಬಂದಿರಲಿಲ್ಲ! ಮರುದಿನ ಬೆಳಿಗ್ಗೆ ಎಂದಿನಂತೆ ಮುಗುಳ್ನಗುತ್ತ, ಕೈಯಲ್ಲಿ ಎರಡು ಕಾಫಿ ಮಗ್ಗುಗಳನ್ನು ಹಿಡಿದು ತನ್ನ ಮುಖದಲ್ಲಾಗಲಿ ದನಿಯಲ್ಲಾಗಲಿ ಲವ ಲೇಶವೂ ಕುಹಕ, ದುಃಖ, ದುಗುಡ ತೋರದೆ ಕೊಂಕು ಇಲ್ಲದೆ ಸವತಿ ಮತ್ಸರ ತೋರದೆ ”ನೆನ್ನೆಯ ಡಿಕ್ಟೇಶನ್ನಿನಲ್ಲಿ ನೀವು ನನ್ನನ್ನು ಆರು ಬಾರಿ ಶೀಲಾ (ಹಿಂದಿನ ದೀರ್ಘ ಕಾಲದ ಸೆಕ್ರೆಟರಿಯ ಹೆಸರು) ಎಂದು ಕರೆದಿರಿ, ಗೊತ್ತಾ?” ಅನ್ನ ಬೇಕೆ? ತಪ್ಪು ತಿಳುವಳಿಕೆ ಏನೂ ಹಾಯದಂಥ ಅನ್ಯೋನತೆಯನ್ನು ಹುಟ್ಟಿಸುವ ಜಾದೂ ಇರುತ್ತದೆ ಆ NHS ವಾತಾವರಣದಲ್ಲಿ! 
ಸಹೋದ್ಯೋಗಿಗಳು ಕೆಲವರು ಕನ್ಸಲ್ಟಂಟರನ್ನು ಅವರು ಓಡಿಸುವ ದುಬಾರಿ ಫ್ಯಾನ್ಸಿ ಕಾರಿನಿಂದ ಗುರುತಿಸಿದರೆ ಇನ್ನುಳಿದವರು ಅವರವರ ಸೆಕ್ರೆಟರಿಯಿಂದ ಖ್ಯಾತಿ ಪಡೆದವರು. ’ಓಹೊ, ನೀವು ಆ ಸೆಕ್ರೆಟರಿಯ ಬಾಸೋ?’ ಅಂತ ಉದ್ಗಾರ ತೆಗೆದವರುಂಟು. ನಾರಿನಿಂದ ಹೂ ಸ್ವರ್ಗಕ್ಕೆ? 
ಆಕೆ ಆಕರ್ಷಕವಾಗಿದ್ದರೆ ’Oh, that ’’bird”?’ಎನ್ನುವ”ರಸಿಕರೂ’ ಇರುತ್ತಾರೆ. ನಿಜವಾಗಿಯೂ ಸೆಕ್ರೆಟರಿ ಬರ್ಡ್ ಎನ್ನುವ ಪಕ್ಷಿ ಸಹ ಆಫ್ರಿಕದಲ್ಲಿದೆ. ಕರಿಯ ಬಣ್ಣದ ಪುಕ್ಕಗಳ, ಉದ್ದನ್ನ ಕಾಲುಗಳ ಒಯ್ಯಾರಿ ಹಕ್ಕಿ; ಅದು ನಡೆಯುವಾಗ ಬಿಲ್ಲುಗಾರನನ್ನು ಹೋಲುತ್ತದೆಯೆಂದು ಅದನ್ನು Sagittarius (ಧನುರ್ಧಾರಿ) serpentarius ಅಂತಲೂ ಕರೆಯುತಾರಂತೆ. ಹೈ ಹೀಲ್ಡ್ ಪಾದರಕ್ಷೆಗಳನ್ನು ಹಾಕಿಕೊಂಡು ನಡೆದರೆ ಸೆಕ್ರೆಟರಿ ಒಮ್ಮೊಮ್ಮೆ ಹಾಗೆ ಕಂಡರೂ ಆಶ್ಚರ್ಯವಿಲ್ಲ! ಅದರ ತಲೆಯ ಸುತ್ತಿನ ಗರಿಗಳು ಹಿಂದಿನಕಾಲದ ಕಾರಕೂನರು ಕಿವಿಯ ಹಿಂದೆ ಸಿಗಿಸಿದ ಕ್ವಿಲ್ (ಗರಿಬರಿಗೆ) ಅಥವಾ ಬತ್ತಳಿಕೆಯ ಬಾಣಗಳನ್ನು ಹೋಲುತ್ತದೆ ಅಂತ ಆ ಹೆಸರಿರಬಹುದು.
I am lost without my secretary, I don't  know what I'll do if she goes ಎಂದು ಹೇಳುವ ವೈದ್ಯಪ್ರಮುಖರೇ ಹೆಚ್ಚು NHS ತುಂಬ! ಬೆಳಿಗ್ಗೆ ಬಂದ ಕೂಡಲೇ ತನ್ನ ಸಂಗ್ರಹದಲ್ಲಿಂದ ಒಂದು ಮಗ್ಗನ್ನು ಆರಿಸಿ ಚಹವನ್ನು ಅದರಲ್ಲಿ ಹಾಕಿಕೊಂಡು ತಣ್ಣಾಗಾದ ನಂತರವೆ ಕುಡಿದು ಅಥವಾ ಕುಡಿದು ಮುಗಿಸುವದರಲ್ಲಿ ತಣ್ಣಗಾಗಿರಬೇಕು! ತದನಂತರ ಆಕೆಯ ಮೆದುಳು ಚುರುಕಾಗಿ ಅವಿರತವಾಗಿ ಕೆಲಸಗಳನ್ನು ಮಾಡುವ ಆಕೆಯ ಮಲ್ಟಿ ಟಾಸ್ಕಿಂಗ್ ಕುಶಲತೆಯನ್ನು ನೋಡಿಯೇ ಮೆಚ್ಚಬೇಕು. ಚೀಟಿಯ ಮೇಲೆ ಮೆಸೇಜುಗಳನ್ನು ನಯವಾಗಿ ಬರೆದು ನನ್ನ ಕಣ್ಣ ಮುಂದೆ ಹಾಯಿಸುವುದು ಅವಳ ರೂಢಿ. ಒಮ್ಮೊಮ್ಮೆ ಅವುಗಳ ಮಧ್ಯೆ ಕೀಟಲೆಗೆಂತೆಯೇ ಕೆಲವು ಸಹ ಇರುವದುಂಟು! ಹಿಂದೊಮ್ಮೆ ನನ್ನ ಕಣ್ಣಿಗೆ ಬಿದ್ದಿತು ಹೀಗೊಂದು (ರಿಸೈಕಲ್ಡ್) ಜಂಬ: "Consultant: Leaps short buildings in a single bound, is more powerful than a speeding bullet, walks on water if the sea is calm, talks with God. 
ಆದರೆ ಸೆಕ್ರೆಟರಿ? Secretary lifts buildings and walks under them, kicks locomotives off their tracks, catches speeding bullets in teeth and eats them, freezes water in a single glance, SHE IS GOD!"
ನಿಜ ನನ್ನ ಪಾಲಿಗೆ ’ಆಕೆ’ ದೇವಿಯೇ ಆಗಿದ್ದಳು, ಸೈ. ಇಂದಷ್ಟೇ ಅಲ್ಲ, ಈ ಮೊದಲೂ ಅವಳಿಗೆ ಅದನ್ನೇ ಹೇಳಿದ್ದೇನೆ. ಆ ಹತ್ತು ಮೌಲ್ಯಗಳಲ್ಲಿ ಕೊನೆಯದು ಕ್ಷಮೆ (forgiveness) ಅಂತೆ. ಅದಸ್ನೂ ಪಾಲಿಸಿದ್ದೇನೆ!

*  10 values of IWD: Justice, Dignity, Hope, Equality, Collaboration, Tenacity, Appreciation, Respect, Empathy, Forgiveness
** ”ಪಾಪಾನ್ನಿವಾರಯತಿ ಯೋಜಯತೆ ಹಿತಾಯ/ ಗುಹ್ಯಂ ನಿಗೂಹಯತಿ ಗುಣಾನ್ ಪ್ರಕಟಿಕರೋತಿ/ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ/ ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ”
(ಸನ್ಮಿತ್ರರ ಲಕ್ಷಣಗಳೆಂದರೆ: ಹಿತವನ್ನೇ ಬಯಸಿ, ಪಾಪಗಳಿಂದ ರಕ್ಷಿಸಿ,ರಹಸ್ಯಗಳನ್ನು ಗುಪ್ತವಾಗಿಟ್ಟು, ಇನ್ನೊಬ್ಬರ ಸದ್ಗುಣಗಳನ್ನೇ ಪ್ರಕಟಿಸಿ, ಕಷ್ಟದಕಾಲದಲ್ಲಿ ಕೈಬಿಡದೆ, ಅವಶ್ಯಕತೆಯಿದ್ದಲ್ಲಿ ಸಮಯ, ಸಹಾಯವನ್ನು ಕೊಡುವದು, ಎನ್ನುತ್ತಾರೆ ಸಂತರು.)

~ ಶ್ರೀವತ್ಸ ದೇಸಾಯಿ

ಅಪೂರ್ವ

ಅಕ್ಷತಾ ಲಕ್ಕುಂಡಿ GCSE ವಿದ್ಯಾರ್ಥಿನಿ.  ಭಾಷಾಶಾಸ್ತ್ರ ಅವಳಿಗೆ ಇಷ್ಟದ ವಿಷಯ. ಸಧ್ಯಕ್ಕೆ ಕನ್ನಡದಲ್ಲಿ ಸ್ವಂತ ಬರೆಯುವಷ್ಟು,  ಅವಳಮ್ಮನಿಂದ ಕೇಳಿದ 'ರೂಪದರ್ಶಿ' ಕಾದಂಬರಿಯನ್ನೋದುವಷ್ಟರ ಮಟ್ಟಿಗೆ ಕನ್ನಡ ಕಲಿಯಬೇಕೆನ್ನುವುದು ಅವಳ ಗುರಿ. ಫ್ರೆಂಚ್ ಭಾಷೆಯಲ್ಲಿ ಉನ್ನತ ಅಧ್ಯಯನ ಅವಳ ಕನಸು. ನೃತ್ಯ, ಬಾಲಿವುಡ್ ಮೆಚ್ಚಿನ ವಿಷಯಗಳು. ಇವಳು ಅನಿವಾಸಿಯ ಸದಸ್ಯೆ ಗೌರಿಪ್ರಸನ್ನ ಅವರ ಮಗಳು.

ವಿಶ್ವವಾಣಿಯಲ್ಲಿ ಮೊಳಗಿದ ಅನಿವಾಸಿ ಕನ್ನಡತಿಯ ಸ್ವರ ಸಲ್ಲಾಪ

ಎಲ್ಲರಿಗೂ ನಮಸ್ಕಾರ. ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.  ಕೆಲವೊಂದು ವರ್ಷಗಳ ಹಿಂದೆ ನೋಡಿದ ಒಂದು ಆಫೀಸಿನ ಸೆಕ್ರೆಟರಿಯ ಗೋಡೆಯ ಮೇಲಿನ ಸ್ಟಿಕರ್ ಹೀಗಿತ್ತು : You don't need to be mad to work here, but helps if you are! ಅದೇ ತರ ಇತ್ತೀಚಿಗಷ್ಟೇ ಸುಮಾರು ತಿಂಗಳುಗಳ ಹಿಂದೆ ಹೊಸದೊಂದು ಹುಚ್ಚಾಸ್ಪತ್ರೆ ಅಡ್ಮಿಶನ್ ಬೆಳೆದಂತೆ ಬೆಳೆಯುತ್ತಿರುವ ಹೊಸ application/ ಮಾಧ್ಯಮ ಅಂದರೆ clubhouse.

 ಈ applicationನ ವಿಶೇಷವೆಂದರೆ ಸಾಧಾರಣ ಧ್ವನಿಯನ್ನು ಮಾಧ್ಯಮವಾಗಿಟ್ಟುಕೊಂಡು ಪ್ರಪಂಚದ ಎಲ್ಲೆಡೆ ಮಾತನಾಡಬಹುದು. Clubhouseನ ಮತ್ತೊಂದು ವಿಶೇಷ ಅಂದರೆ ಉತ್ಕೃಷ್ಠ ಮಟ್ಟದ ಧ್ವನಿ, ಯಾವ appನಲ್ಲೂ ನಾವು ಈವರೆಗೂ ಕಂಡಿಲ್ಲ. ನಮಗೆ ಈಗ ಯಾಕೆ Clubhouse ಹುಚ್ಚರ ಸಂತೆಯಾಗಿದೆ ಎಂದು ಬಹುಷಃ ಮನವರಿಕೆ ಆಗುತ್ತದೆ. 

'Never forget human values and elements while chasing technology. Always be curious and creative,but also human' ಅನ್ನೋ ಹಾಗೆ ಕಾಲ ಕ್ರಮೇಣ technologyಯಲ್ಲಿ  ಇಂದು ಹೊಸ ಆವಿಷ್ಕಾರಗಳು ನಡೆಯುತ್ತಾ ಇವೆ. ರೇಡಿಯೋ ಕೇಳುವ ಕಿವಿಗಳು ಈಗ Clubhouse nomination ಇಂದ ಹೊಸ Club ಹುಟ್ಟುಹಾಕಿ ಅದರಲ್ಲಿ Open room/closed room ಎಂಬಂತೆ ಪ್ರತಿದಿನವೂ, ವಾರಕೊಮ್ಮೆಯೋ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ನಾನು ಅನುಸರಿಸುವ ಕೆಲವು Clubಗಳು ವಿಶ್ವವಾಣಿ, ಸಂಗೀತ ಮತ್ತು ಕಲೆ, ಗಾಂಚಲಿ ಬಿಡಿ ಕನ್ನಡ ಮಾತಾಡಿ, Half circle, ನಕ್ಷತ್ರ, ಗೈರ್ವಾಣಂ ವಯಂ(ಸಂಸೃತಮ್),ಗೀತಕಥನ ಹಾಗು ನೆರಳು ಬೆಳಕು. ಇತ್ತೀಚಿಗಷ್ಟೇ clubhouseನಲ್ಲಿ ಹೊಸದಾಗಿ ಬಂದ feature ಎಂದರೆ replays ಹಾಗು share, ಇದರಿಂದಾಗಿ ಹಲವು ಹಳೆಯ ಕಾರ್ಯಕ್ರಮಗಳನ್ನು ಆಲಿಸಬಹುದು. 

ಡಿಸೆಂಬರ್ ೨೭ ೨೦೨೧ರಂದು ವಿಶ್ವವಾಣಿ Clubನಲ್ಲಿ ನಮ್ಮ ಅನಿವಾಸಿ ಕನ್ನಡತಿ ಅಮಿತ ರವಿಕಿರಣ್ ನಡೆಸಿಕೊಟ್ಟ ಸ್ವರ ಸಲ್ಲಾಪ - ಹರಿದಾಸರ ಪದಗಳ ಕಂಪು ವಚನಗಳ ಇಂಪು ಬಗ್ಗೆ ನನ್ನ ಅನಿಸಿಕೆ ಹಂಚಿಕೊಳ್ಳುತ್ತಿದ್ದೇನೆ. ಅಂದೂ ಕೂಡ ಕೇಶವ ಕುಲ್ಕರ್ಣಿ sirನ ವಿಮರ್ಶೆ ತರಹ ಎಂದಿನಂತೆ ವಿಶ್ವವಾಣಿ Clubhouseನಲ್ಲಿ ದೇಶದ ಆಗು ಹೋಗುಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ನಂತರ ಸಣ್ಣಗೆ ಶ್ರುತಿ ಪೆಟ್ಟಿಗೆಯ ಧ್ವನಿ ಪ್ರಾರಂಭವಾಯಿತು. 

ಎಲ್ಲಾ ಗಣಗಳಿಗೂ ಅಧಿಪತಿಯಾದ ಗಣೇಶನ ಸ್ತುತಿಯಿಂದ  ಆರಂಭವಾದ ಕಾರ್ಯಕ್ರಮ ನಿಜಕ್ಕೂ ನಿರ್ವಿಘ್ನವಾಗಿ ಸಾಗಿತು. ದಾಸರಪದಗಳನ್ನು ಕೇಳಲು, ಹಾಡಲು ಯಾರು ತಾನೇ ಇಲ್ಲಾ ಎನ್ನುತ್ತಾರೆ! ಅಲ್ಲವೇ ? ಮುಂದಿನ ಗೀತೆ ಹರಪ್ಪನಹಳ್ಳಿ ಭೀಮವ್ವನವರ ಒಂದು ಪದ, ಒಂದು ಹೆಣ್ಣು ದೇವರನ್ನು ಬೀಡುವ ಪರಿ ಹೀಗೆಲ್ಲ ಇರಬಹುದು ಎಂದು ವರ್ಣನೆ ಮಾಡಿದ್ದೂ ಅಮಿತರವರ ಭಾವನೆ ಅಂಬೆ ನೇ ನನ್ನ ಪಾಲಿಸೆ ಪಾದದಲ್ಲಿ ತುಂಬಿ ಬಂದಹಾಗೆ ಆಯಿತು. ಕಾರ್ಯಕ್ರಮವು ಮುಂದಿನ ಗೀತೆ ಎಲ್ಲರ ಮನ ಮುಟ್ಟುವ ಗೀತೆ, ಈ ಗೀತೆಯನ್ನು ಸಿನಿಮಾದಲ್ಲೂ ಕೇಳಿದ್ದೇವೆ. ದಾಸರಪದಗಳು ಒಂದು ರೀತಿಯಲ್ಲಿ ಮಾನಸಿಕ ಚಿಕಿತ್ಸೆಯ ತರಹ. ಆ ಪದ ಜೋಡಣೆಗಳು ಒಂದು stress buster ಎಂದರೆ ತಪ್ಪಲ್ಲ. ಆಚಾರವಿಲ್ಲದ ನಾಲಿಗೆ ನಿನ್ನ ನೀಚಬುದ್ದಿಯ ಬಿಡು ನಾಲಿಗೆ ಎನ್ನುವ ಪದವನ್ನು ಎಷ್ಟು ಸಲ ಹಾಡಿದರೂ, ಪದಗಳಲ್ಲಿ  ಓದಿದರೂ ಬೇಸರವಾಗದ ಪದ. 

ಒಂದಷ್ಟು ದಾಸರ ಕಂಪನ್ನು ಬೀರಿದ ನಂತರ, ವಚನಗಳತ್ತ ಇಂಪನ್ನು ಬೀರುವ ಮೂಲಕ ಹಾಡಿದ ಗೀತೆ - ಲೋಕದ ಡೊಂಕ ನೀವೇಕೆ ತಿದ್ದುವಿರಿ. ಈ ಬಸವಣ್ಣನವರ ವಚನ ನನ್ನ ಮನಸಿಗೂ ಬಹಳ ಹತ್ತಿರವಾದ ಸಾಲುಗಳು. ಜೀವನ ಅಂತ ಅಂದ್ರೆ ಅದು ಕಲಿಕೆಯ ಪ್ರಯಾಣ, ನಮ್ಮನ್ನು ನಾವೇ ಅರಿತು ತಿಳಿದುಕೊಳ್ಳುವ ಪಯಣ.
Behind every successful man there will be women ಅನ್ನೋ ತರಹ ಎಲ್ಲರಂಥವನಲ್ಲ ನನ ಗಂಡ ಎಂಬ ಶಿಶುನಾಳ ಶರೀಫರ ಗೀತೆಯನ್ನು ಅರ್ಪಿಸಿದರು. ಮುಂದೆ ಪ್ರೇಕ್ಷಕರ ಮೇರೆಗೆ ನಾಗಮಂಡಲ ಚಿತ್ರದ ಗೀತೆಯನ್ನು ಹಾಡಿದರು. ಇದಕ್ಕೆ ಸರಿ ಸಮನಾಗಿ ಗಂಡಸರಿಗೆ ಹೆಣ್ಣು ಹುಡುಕುವಾಗ ಕಾಡುವ ವಿಷಯಗಳ ಕುರಿತು ಮತ್ತೊಂದು ಗೀತೆಯನ್ನು - ಮಾಣಿ ಎಂಬ  ಹವ್ಯಕ ಕನ್ನಡ ಭಾಷೆಯಲ್ಲಿ ಪ್ರಸ್ತುತ ಪಡಿಸಿದರು.  ಪ್ರತಿ ಹಾಡಿಗೂ ಅದರದೇ ಆದ ಕಂಪಿರುತ್ತದೆ ಅದರ ಜೊತೆಗೆ ಕೆಲವು ನೆನಪುಗಳು ಇರುತ್ತವೆ. ನವರಾತ್ರಿಯ ಕಾರ್ಯಕ್ರಮ ಆರತಿಯ ಸಮಯದಲ್ಲಿ ಕೇಳಿ ಕಲಿತ ಹಾಡು - ಅಖಂಡ ದೇವಿಗೆ ಆರತಿ ಮಜಲ ತಾಯಿ ದ್ಯಾಮವ್ವ. ಈ ಜಾನಪದ ಗೀತೆ ಶೀರ್ಷಿಕೆಯಿಂದ ಸ್ವಲ್ಪ ಪ್ರತ್ಯೇಕವಾಗಿದ್ದರೂ ದೇವಿಯ ಆರಾಧನೆಯನ್ನು ಯಾರು ತಾನೇ ಮಾಡಲಾರರು. 

Last but not the least  ಎನ್ನುವ ಹಾಗಿ ಬೇವಿನ ಬೀಜವ ಬಿತ್ತಿ ಬೆಲ್ಲದ ಕಟ್ಟೆಯ ಕಟ್ಟಿ ವಚನವು ಕಾರ್ಯಕ್ರಮ ಮೆರಗನ್ನು ಇನ್ನು ಹೆಚ್ಚಿಸಿತು. ಬೇವಿನ ಬೀಜ ಬಿತ್ತಿದರೆ ಬೇವನ್ನೇ ಸವಿಯಬೇಕು ಎಂಬ ಮಾತು ಅಕ್ಷರ ಸಹ ಸತ್ಯ. ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ವಿಶ್ವೇಶ್ವರ ಭಟ್, ಮೋಹನ್ ಹಾಗು ರೂಪ ಅವರಿಗೂ ಧನ್ಯವಾದಗಳು. 

ಒಟ್ಟಿನಲ್ಲಿ ಹೇಳಬೇಕೆಂದರೆ ನನ್ನ ಅನಿವಾಸಿಯ ಪಯಣ ಕೂಡ ಅಮಿತ ಅವರಿಂದ ಪ್ರಾರಂಭವಾಗಿದ್ದು ಅವರ ಸಾಧನೆಗೆ ಒಂದು ಸೈ ಹೇಳುತ್ತಾ ಅವರಿಗೂ ಹಾಗು ಅನಿವಾಸಿ ಬಳಗದ ಎಲ್ಲಾ ಕನ್ನಡತಿಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು. 

https://www.clubhouse.com/room/MwV0R16B - link if anyone wants to replay the program.

~ ಶ್ರೀರಂಜಿನಿ.