ಅನಿವಾಸಿ ಬಂಧುಗಳಿಗೆ ನಮಸ್ಕಾರ. ಎರಡು ವಾರದಿಂದ ಭಾರತ ಪ್ರವಾಸದಲ್ಲಿದ್ದೇನೆ. ಗೃಹಪ್ರವೇಶ, ಮದುವೆ ಸಮಾರಂಭಗಳನ್ನು ಅಟೆಂಡ್ ಮಾಡುತ್ತ, ಬಂಧು ಬಳಗ, ಸ್ನೇಹಿತರನ್ನು ಭೇಟಿಯಾಗುತ್ತ ದೆಹಲಿ, ಮುಂಬಯಿ, ಪುಣೆ, ಧಾರವಾಡ ಎಂದೆಲ್ಲ ಸುತ್ತಾಡುತ್ತ , ದೆಹಲಿಯ ಚಳಿಗಾಲ ಕಳೆದು ಈಗಷ್ಟೇ ಆರಂಭವಾಗುತ್ತಿರುವ ಎಳೆಯ ಬಿಸಿಲನ್ನೂ, ಮುಂಬಯಿಯ ಆ humid ಶೆಕೆಯನ್ನೂ, ಪುಣೆಯ ಸಂಜೆ ಮುಂಜಾನೆಗಳ ಆಹ್ಲಾದಕರ ತಂಪು ಹವೆಯನ್ನೂ , ಧಾರವಾಡದ ಬಿಸಿಲು ಮಳೆಗಳ ಸಮ್ಮಿಶ್ರ ಹವಾಮಾನವನ್ನೂ, ಲಿಠ್ಠಿ ಛೌಕಾ, ದಾಲ್ ಮುರಾದಾಬಾದಿ, ಮಿಸಳ್ ಪಾವ್, ಭಾಕರ್ ವಡಿ, ಶ್ರೀಖಂಡ, ಗಿರಮಿಟ್, ಫೇಡೆಗಳನ್ನೂ ಸಮಸಮವಾಗಿ ಆಸ್ವಾದಿಸುತ್ತ ಜೊತೆಗೇ ಒಂದಷ್ಟು ನೆಗಡಿ, ಕೆಮ್ಮು ಎಂದು ಆರೋಗ್ಯ ಕೆಡಿಸಿಕೊಂಡು ಔಷಧಿ, ಗಳಿಗೆಯನ್ನೂ ಸೇವಿಸುತ್ತ ರಜಾದ ಮಜಾ ಸವಿಯುತ್ತಿದ್ದೇವೆ. ಹೀಗಾಗಿ ಈ ಸಲ ಅನಿವಾಸಿಯ ಓದಿಗೆ ಚಿಕ್ಕದಾದೊಂದು ವಸ್ತುವಿನ ಬಗ್ಗೆ ಒಂದು ಚಿಕ್ಕ ಲೇಖನ. ಒಪ್ಪಿಸಿಕೊಳ್ಳಿ.
~ ಸಂಪಾದಕಿ
ಸೇಫ್ಟಿ ಪಿನ್
ಕೆಲ ದಿನಗಳ ಹಿಂದೆ ಜಯಂತ ಕಾಯ್ಕಿಣಿಯವರ ‘ಅನಾರ್ಕಲಿಯ ಸೇಫ್ಟಿ ಪಿನ್’ ಓದುತ್ತಿರುವಾಗ ಈ ಸೇಫ್ಟಿ ಪಿನ್ ಗೂ, ಆ ಅನಾರ್ಕಲಿಗೂ ಅದೇನು ಸಂಬಂಧವಿರಬಹುದು ಎಂಬ ಗೊಂದಲದ ಭಾವ ನನ್ನನ್ನು ಕಾಡಿತ್ತು. ಆಮೇಲೆ ಹೊಳೆದ ಸತ್ಯವೇನೆಂದರೆ ಅನಾರ್ಕಲಿಯೋ, ಚಂಪಾಕಲಿಯೋ, ಚಮೇಲಿಯೋ ಯಾರೇ ಇರಲಿ ಸೇಫ್ಟಿ ಪಿನ್ ಮಾತ್ರ ಎಲ್ಲರಿಗೂ ಬೇಕೇ ಬೇಕು ಎಂಬುದು. ಈ ಸೇಫ್ಟಿ ಪಿನ್ ಗಳಿಗೂ ಹೆಂಗಳೆಯರಿಗೂ ಬಿಡಿಸಲಾಗದ ನೆಂಟು. ಹೆಂಗಳೆಯರ ಸೀರೆ ಬ್ಲೌಜ್ ಗಳಿಗೂ ಈ ಪಿನ್ನು ಗಳಿಗಂತೂ ಅವಿನಾಭಾವ ಸಂಬಂಧ. ‘ವಾಗರ್ಥ ವಿವ ಸಂಪ್ರೃಕ್ತೌ ವಾಗರ್ಥ ಪ್ರತಿಪತ್ತಯೇ’ ಎಂದು ಕಾಳಿದಾಸ ಹೇಳಿದಂತೆ.
ಸೀರೆಯ ಚಂದದ ಸೆರಗನ್ನು ನೀಟಾಗಿ ಹಿಡಿದಿಡಲು, ಸಡಿಲವಾದ ಬ್ಲೌಸ್ ಅನ್ನು ಫಿಟ್ ಮಾಡಲು, ಬಿಗಿಯಾದ ಬ್ಲೌಸಿನ ಒಳಮೈ ಯ್ಯ ಹೊಲಿಗೆ ಬಿಚ್ಚಲು ಸೀರೆಯ ನೆರಿಗೆಗಳನ್ನು ಒಪ್ಪವಾಗಿಸಲು ಈ ಪಿನ್ನು ಬೇಕೇ ಬೇಕು. ಬ್ಲೌಸುಗಳಂತೂ ಈ ಪಿನ್ನುಗಳ ಭರವಸೆಯ ಮೇಲೆಯೇ ಬದುಕುವುದು. ಏಕೆಂದರೆ ನೀವು ಎಷ್ಟರೇ ರೊಕ್ಕ ಸುರದು ಬೇಕಾದಂತಹ ಡಿಸೈನರ್ ಬೋಟಿಕ್ ನಾಗ ಹೊಲಿಸಿದ್ರೂ ಅವು ನಿಮ್ಮ ಮೈ ಏರುವಾಗ ಲೂಸೋ, ಬಿಗಿಯೋ, ತೋಳು ಇಳಿಯುವುದೋ ಏನೋ ಒಂದು ಆಗಲೇಬೇಕು. ನನಗಂತೂ ಒಮ್ಮೊಮ್ಮೆ ಡೌಟು..ಚಂದದ ಕಿಮ್ಮತ್ತಿನ ಸೀರೆಗಳನ್ನು ದೌಲತ್ತಿನಿಂದ ಉಟ್ಟು ದಿಮಾಕಿನಿಂದ ನಡೆವ ಲಲನಾಮಣಿಯರನ್ನು ಕಂಡು ಹೊಟ್ಟೆ ಉರಿದವರ್ಯಾರದೋ ಕೆಟ್ಟ ದೃಷ್ಟಿತಾಗಿಯೋ,ಶಾಪ ತಟ್ಟಿಯೋ ಈ ಬ್ಲೌಸ್ ಗಳು ಹಾಳಾಗಬಹುದೆಂದು. ಅಂಥ ಸಮಯದಲ್ಲಿ ಶಾಪ ವಿಮೋಚಕನಾಗಿ ನಮಗೆ ನೆರವಾಗುವುದು ಇದೇ ಸೇಫ್ಟಿ ಪಿನ್ನು.
ಈ ಪಿನ್ನಿನ ಋಣ ಭಾರವಿಲ್ಲದ ಹೆಂಗಳೆಯರೇ ಇಲ್ಲ. ಸಾಲ ಸೋಲ ಎಂದರಾಗದ ನಿಯತ್ತಿನ ಜೀವಗಳನ್ನೂ ಇವು ಕಾಡದೇ ಬಿಡುವುದಿಲ್ಲ. ಎಷ್ಟರೇ ಡಜನ್ಗಟ್ಟಲೆ ಪಿನ್ನು ಖರೀದಿ ಮಾಡಿಟ್ಟಿರಿ ಬೇಕಾದ ಸಮಯಕ್ಕೆ ಸಿಗದೇ ಪಕ್ಕದಲ್ಲಿದ್ದ ಅಕ್ಕನೋ, ಅತ್ತಿಗೆಯೋ, ಅಮ್ಮನೋ, ಗೆಳತಿಯೋ ಯಾರ ಬಳಿಯಲ್ಲಾದರೂ ‘ಒಂದು ಪಿನ್ ಇದ್ರೆ ಕೊಡ’ ಎಂದು ನೀವು ಒಮ್ಮಿಲ್ಲ ಒಮ್ಮೆ ಕೇಳೇ ಕೇಳಿರುತ್ತೀರಿ. ಆ ಪಿನ್ನಿನ ಋಣದಲ್ಲಿ ಬಿದ್ದೇ ಇರುತ್ತೀರಿ. ನಿಮಗೆ ಅತಿ ಅವಶ್ಯಕತೆ ಇದ್ದಾಗ, ಬೇಕೆಂದಾಗ ಆ ಪಿನ್ನುಗಳು ನಿಮಗೆ ಸಿಕ್ಕದಿರಲಿ ಎಂದು ಅದ್ಯಾವ ಪರಶುರಾಮ ಶಾಪ ಕೊಟ್ಟನೋ ಕಾಣೆ ಬೇಕೆಂದಾಗ ಡ್ರಾತೆಗೆದು, ಡಬ್ಬಿ ತೆಗೆದು, ಪರ್ಸ್ ತಡಕಾಡಿ ಡ್ರೆಸ್ಸಿಂಗ್ ಟೇಬಲ್ ಜಾಲಾಡಿದರೂ ಅವು ಕಾಣದಂತೆ ಅದೃಶ್ಯವಾಗಿ ಬಿಟ್ಟಿರುತ್ತವೆ. ಎಲ್ಲಿಟ್ಟಿರುವೆವೆಂಬ ನೆನಪು ಬಾರದೆ ನಾವೂ ಸಹ ಆ ಮಹಾಭಾರತದ ಕರ್ಣನಂತೆ ಒದ್ದಾಡುತ್ತಿರುತ್ತೇವೆ.
ಸ್ತ್ರೀಯರ ವ್ಯಾನಿಟಿ ಬ್ಯಾಗ್ ಅಂದ್ರೆ ಅದರಲ್ಲಿ ಏನೇ ಇರಲಿ ಬಿಡಲಿ ಈ ನಾಲ್ಕಾರು ಪಿನ್ನುಗಳಂತೂ ಇರಲೇಬೇಕು. ಒಮ್ಮೆ ನಾನು ದೆಹಲಿಯಿಂದ ಹುಬ್ಬಳ್ಳಿಗೆ ಹೊರಟಿದ್ದೆ. ಸೆಕ್ಯೂರಿಟಿ ಚೆಕ್ ನಲ್ಲಿ ನನ್ನ ವ್ಯಾನಿಟಿ ಬ್ಯಾಗ್ ತನ್ನ ನೇರ ರಸ್ತೆ ಬಿಟ್ಟು ಪಕ್ಕಕ್ಕೆ ಹೊರಳಿ ಅಲ್ಲಿದ್ದ ಅಧಿಕಾರಿಗಳ ಕೈಗೆ ಸಿಕ್ಕಿ ಬಿಟ್ಟಿತು. ಹತ್ತತ್ತು ಸಲ ಚೆಕ್ ಮಾಡಿದರೂ ಏನೂ ಸಿಗುತ್ತಿಲ್ಲವಾದರೂ ಸ್ಕ್ಯಾನ್ ನಲ್ಲಿ ಏನೋ ಇದೆಯೆಂದು ತೋರಿಸುತ್ತಿದೆ. ಅಲ್ಲಿನ ಅಧಿಕಾರಿಗಳು ನನ್ನನ್ನು ನೋಡುವ ರೀತಿಗೆ ‘ ಅಯ್ಯಾ, ನನ್ನ ಈ ಬ್ಯಾಗನ್ನು ನೀನೇ ಇಟ್ಟುಕೊಂಡುಬಿಡು’ ಎಂದು ಹೇಳಬೇಕೆನಿಸಿಬಿಟ್ಟಿತು.ಮುಂದೆ ಒಂದು ದಿನ ಅವತ್ತು ಅವರ ಕೈಗೆ ಸಿಗದ ಈ ಪಿನ್ನಿನ ಗೊಂಚಲು ಅಚಾನಕ್ಕಾಗಿ ನನಗೆ ಸಿಕ್ಕಿತ್ತು. ಬ್ಯಾಗಿನ ಒಳಭಾಗದ zip ನ ಬಟ್ಟೆಗೊಂದು ಸಣ್ಣ ತೂತಾಗಿ ಆ ಕಿಂಡಿಯಿಂದ ಹೈದರಾಲಿಯ ಸೈನಿಕನಂತೆ ನುಸುಳಿ ಅವಿತುಕೊಂಡಿದ್ದ ಆ ಪಿನ್ನಿನ ಗೊಂಚಲು ಅಂತೂ ಸೆಕ್ಯೂರಿಟಿಯ ಓಬವ್ವನ ಕೈಗೆ ಸಿಗದೆ ತಪ್ಪಿಸಿಕೊಂಡು ಹೊರಬಂದಿತ್ತು.
ಫ್ಲೈಟ್ ನಲ್ಲಿ ಕೊಡುವ ಈ ಸ್ನಾಕ್ಸ್ ಪ್ಯಾಕೆಟ್ ಹರಿಯಲು, ಕಿವಿ ಗುಳುಗುಳು ಎಂದರೆ ಇಯರ್ ಬಡ್ ನಂತೆ ಕೆಲಸ ಮಾಡಲು, ಹಲ್ಲು ಸಂದಿಯಲ್ಲಿ ಸಿಕ್ಕಿದ ಬೇಳೆಕಾಳು ಸೊಪ್ಪನ್ನು ತೆಗೆಯಲು ಟೂತ್ ಪಿಕ್ ನಂತೆಯೂ ಹಲವಾರು ರೀತಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಈ ಸೇಫ್ಟಿ ಪಿನ್. ಕಾಲಿಗೆ ನೆಟ್ಟ ಮುಳ್ಳು ತೆಗೆಯಲು, ಉಗುರು ಸಂದಿಯಲ್ಲಿ ಅವಿತ ಕೊಳಕು ತೆಗೆಯಲು, ಹಣಿಗೆಯ ಹಲ್ಲುಗಳನ್ನು ಸ್ವಚ್ಛಗೊಳಿಸಲು ಈ ಪಿನ್ನು ಬೇಕೇ ಬೇಕು . ನಿಮ್ಮ ಪ್ರೆಷರ್ ಕುಕ್ಕರ್ ಸೀಟಿಯಲ್ಲಿ ಸಿಕ್ಕಿಕೊಂಡ ಅನ್ನದ ಅಗುಳಿನ ತುಂಡನ್ನೋ, ಬೆಂದ ಬೇಳೆಯನ್ನೋ ತೆಗೆಯಲು ಇದು ಬೇಕೇ ಬೇಕು . ಕೆಲವೊಮ್ಮೆ ಹರಿದ ಚಪ್ಪಲಿಗೂ ಇದರ ನೆರವು ಬೇಕಾಗುತ್ತದೆ.
ಮನೆಯ ಅಂಗಳದಲ್ಲಿ ಅರಳುತ್ತಿದ್ದ ನಾಲ್ಕಾರು ದುಂಡು ಮಲ್ಲಿಗೆಯನ್ನು ಒಂದು ಪಿನ್ನಿನಲ್ಲಿ ವೃತ್ತಾಕಾರವಾಗಿ ಚುಚ್ಚಿ ಮುಡಿಗೇರಿಸಿಕೊಂಡು ಡೌಲು ಬಡಿಯುತ್ತಿದ್ದ, ಆ ಮಲ್ಲಿಗೆಯ ಘಮದಲ್ಲಿ ತೇಲಿ ಹೋಗುತ್ತಿದ್ದ ಬಾಲ್ಯದ ದಿನಗಳು ಈಗಲೂ ಮೆರವಣಿಗೆ ಹೊರಡುತ್ತವೆ. ಹೆರಳ ತೊಡಕು ಬಿಡಿಸುವಾಗ ಉದುರಿದ ಕೂದಲನ್ನು ಕೂಡಿಟ್ಟು ಆ ಕೂದಲ ಬದಲಿಗೆ ಈ ಪಿನ್ನುಗಳನ್ನು ಖರೀದಿಸುತ್ತಿದ್ದ ನನ್ನ ಬಾಲ್ಯಕಾಲದ ಹಳ್ಳಿಯ ಜೀವನ ಈಗಲೂ ಗುಂಗಾಗಿ ಕಾಡುತ್ತದೆ.
ಹಂಗಂತ ಈ ಸೇಫ್ಟಿ ಪಿನ್ ಗಳು ಬಹಳ ಸಾಚಾ ಅಂತನೂ ತಿಳ್ಕೋಬ್ಯಾಡ್ರಿ. ಇವುಗಳು ಮಾಡೋ ಅವಾಂತರ ನಮಗೆ ಅಂದರೆ ಹೆಂಗಳೆಯರಿಗೇ ಗೊತ್ತು. ಬೆಲೆ ಬಾಳುವ ಚಂದನೆಯ ರೇಷ್ಮೆ ಸೀರೆ, ಬ್ಲೌಜ್ ಗಳಿಗೆ ಕೆಲವೊಮ್ಮೆ ನಿರ್ದಯವಾಗಿ ತೂತು ಬೀಳಿಸಿ ಬಿಡುತ್ತವೆ. ದೊಡ್ಡ ಪಿನ್ನು ಮೊಂಡಹಡಿ ಇದ್ದು ಸೀರೆಗೆ ಚುಚ್ಚದೆ ಕೈ ನೋವು ಬರಿಸಿದರೆ ಗಿಡ್ಡ ಮೆಣಸಿನಕಾಯಿ ಅಂತಹ ಮರಿ ಪಿನ್ನು ಕಚಕ್ ನೇ ಚುಚ್ಚಿ ‘ಆ’ ಎನ್ನುವಂತೆ ಮಾಡುತ್ತದೆ. ಹೀಗಾಗಿ ನೀವು ಬೇರೆ ಯಾರದೋ ಸೀರೆಯನ್ನ ಏನಾದರೂ ಕಡ ತೆಗೆದುಕೊಂಡು ಉಡುತ್ತಿದ್ದರೆ ಬಹಳ ಹುಷಾರಾಗಿರಬೇಕಾಗುತ್ತದೆ.
ಬಹು ಉಪಯೋಗಿ ಈ ಪಿನ್ನುಗಳು ನಿಮಗೆ ಜನರನ್ನು ಯಾವ ಪ್ರಾಂತ್ಯದವರೆಂದು ಗುರುತಿಸಲು ಸಹ ನೆರವು ನೀಡುತ್ತವೆ. ಅದ್ಹೆಂಗ ಅಂತ ಹುಬ್ಬೇರಿಸಬ್ಯಾಡ್ರಿ. ಉದಾಹರಣೆ ಸಮೇತ ಹೇಳತೀನಿ ನೋಡ್ರಿ . ಒಮ್ಮೆ ದೆಹಲಿಯಲ್ಲಿ ಅಕ್ಷರಧಾಮಕ್ಕೆ ಹೋಗಿದ್ವಿ ಅಲ್ಲಿ ಪಾಳಿಯೊಳಗೆ ಇಬ್ಬರು ಮಧ್ಯವಯಸ್ಕ ಗಂಡ ಹೆಂಡತಿ ನಿಂತಿದ್ದರು. ನಾನು ನನ್ನ ಮಗನಿಗೆ ಅವರನ್ನು ಮಾತನಾಡಿಸಿ ಬರುವೆ, ಅವರು ಪಕ್ಕಾ ನಮ್ಮ ಕಡೆಯವರೇ ( ಉತ್ತರ ಕರ್ನಾಟಕ) ಇರುತ್ತಾರೆ ಅಂದೆ. ಅವನು ‘ಅದ್ಹೆಂಗ ಹೇಳತಿ’ಎಂದು ಸವಾಲೆಸೆದ. ಹೋಗಿ ಮಾತನಾಡಿಸಿದರೆ ಅವರು ಗುಲ್ಬರ್ಗದವರಿದ್ದರು. ಆ ಹೆಣ್ಣು ಮಗಳ ಕೈಯ ಕಾಜಿನ ಬಳೆ, ಪಾಟಲಿ, ಬಿಲವಾರದಲ್ಲಿ ಜೋತಾಡುತ್ತಿದ್ದ ಒಂದು ಹಳದಿ ಮರಿ ಪಿನ್ನು, ಒಂದು ಸ್ಟೀಲಿನ ದೊಡ್ಡ ಪಿನ್ನು ನೋಡಿಯೇ ನಾನು ಗುರುತು ಹಿಡಿದಿದ್ದು. ಈಗಲೂ ನಮ್ಮಮ್ಮ, ಅತ್ತೆಯರು ಪಿನ್ ಕೇಳಿದರೆ ತಕ್ಷಣ ಬಳೆ, ಮಂಗಳ ಸೂತ್ರದಿಂದ ತೆಗೆದುಕೊಡುತ್ತಾರೆ. ಮಂಗಳಸೂತ್ರ ಬಳೆ ಇರುವುದೇ ಈ ಪಿನ್ನುಗಳನ್ನು ಕಾಪಿಟ್ಟುಕೊಳ್ಳಲೇನು ಎಂಬ ಸಂಶಯ ನನ್ನನ್ನು ಕಾಡುತ್ತದೆ. ಒಮ್ಮೊಮ್ಮೆ ಈ ಶಿರಸಿ, ಮೈಸೂರು, ಬೆಂಗಳೂರು, ಮಂಗಳೂರಿನ ಹೆಂಗಳೆಯರ ಬಗ್ಗೆ ನನಗೆ ಗೊತ್ತಿಲ್ಲ ಆದರೆ ನಮ್ಮ ಕಡೆ ಹೆಣ್ಣು ಮಕ್ಕಳ ಕೈಯಲ್ಲಿ ಕೊರಳಲ್ಲಿ ಇವು ಇರಲೇಬೇಕು.. ಇರತಾವ ಕಾಸಿನ ಕಿಮ್ಮತ್ತಿನ ಈ ಪಿನ್ ಮಹಾಶಯ ಬಂಗಾರದ ಬಳೆ, ಸರಗಳಲ್ಲಿ ಮೆರೆಯುತ್ತಿರುತ್ತಾನೆ. ‘ ನಸೀಬ್ ಅಪನಾ ಅಪನಾ’ ಅನ್ನೋದು ಸುಳ್ಳಲ್ಲ ನೋಡ್ರಿ.
ಪಿಂಡಾಂಡದಲ್ಲಿ ಬ್ರಹ್ಮಾಂಡ ಎನ್ನುವ ತತ್ವ ಇವುಗಳನ್ನು ನೋಡಿಯೇ ಬಂದಿರಬೇಕು. ಆತ್ಮ ಸಂಗಾತಿಗಳು ಇವು. ಮಾನ ಕಾಯುವ, ಕಾಪಿಡುವ ಭಗವಂತನಿದ್ದಂತೆ ಗೀತೆಯ ವಿಭೂತಿ ಯೋಗದಲ್ಲಿ ಶ್ರೀ ಕೃಷ್ಣ ಹೇಳುತ್ತಾನಲ್ಲವೇ? “ನಾನು ನದಿಗಳಲ್ಲಿ ಗಂಗೆ, ಪರ್ವತಗಳಲ್ಲಿ ಮೇರು, ಯೋಧರಲ್ಲಿ ರಾಮ, ಸರ್ಪಗಳಲ್ಲಿ ಅನಂತ” ಅಂತೆಲ್ಲ.. ಈ ಪಿನ್ನುಗಳನ್ನು ಕಂಡಿದ್ದರೆ ಪಿನ್ನುಗಳಲ್ಲಿ ನಾನು ಸೇಫ್ಟಿ ಪಿನ್ನು ಎಂದು ಖಂಡಿತ ಹೇಳಿರುತ್ತಿದ್ದ.( ಸೂಜಿ, ಗುಂಡು ಸೂಜಿ, ಗುಂಡು ಪಿನ್ನು, ಪೇಪರ್ ಪಿನ್ನು, ಹೇರ್ ಪಿನ್ನು, ಸಾಡಿ ಪಿನ್ನು ಇತ್ಯಾದಿಗಳಲ್ಲಿ ). ಹೀಗೆ ಆಪತ್ಕಾಲೀನ ಸಮಯದಲ್ಲಿ ಆಪದ್ಬಾಂಧವನಂತೆ ಕಣ್ಣಿಗೆ ಕಾಣದೆ ಒಳಗೆ ಸೇರಿಕೊಂಡು ಅದೃಶ್ಯವಾಗಿ ಈ ಸೇಫ್ಟಿ ಪಿನ್ನುಗಳು ಮಾನ ಕಾಯ್ದರೆ ಇದೇ ಕುಲದ ಸಾಡಿ ಪಿನ್ನುಗಳು ಎಲ್ಲರಿಗೂ ಕಂಡು ಸೀರೆಯ, ಸೀರೆಯುಟ್ಟ ನೀರೆಯ ಸೊಬಗು ಹೆಚ್ಚಿಸುತ್ತವೆ. ನವಿಲಿನಂಥ, ಹೂವಿನಂಥ, ಎಲೆ ಬಳ್ಳಿಯಂಥ, ಮುತ್ತಿನ ನತ್ತಿನಂತ ತರಾವರಿ ಸಾಡಿಪಿನ್ನುಗಳು ಮಾರ್ಕೆಟ್ನಲ್ಲಿ ಲಭ್ಯ.
1849ರಲ್ಲಿ ಅಮೆರಿಕನ್ ಮೆಕ್ಯಾನಿಕ್ ವಾಟರ್ ಹಂಟ್ ತನ್ನ ಹೆಂಡತಿಯ ಉಡುಪಿನ ಗುಂಡಿ ಕಿತ್ತು ಹೋದಾಗ ತಕ್ಷಣಕ್ಕೆ ಉಪಯೋಗವಾಗಲಿ ಎಂದು ಇದನ್ನು ಕಂಡುಹಿಡಿದನಂತೆ. ‘ಅವನ ಹೆಂಡತಿ ಸಂತತಿ ಸಾವಿರವಾಗಲಿ’. ಅವಳ ಗುಂಡಿ ಅಂದು ಕಿತ್ತಿರದಿದ್ದರೆ ಈ ಪಿನ್ನು ಸಿಕ್ಕುತ್ತಲೇ ಇರಲಿಲ್ಲ. ಹೆಗ್ಗಳಿಕೆ ಎಂದರೆ ಅಂದಿನಿಂದ ಇಂದಿನವರೆಗೂ ಅದರ ಗಾತ್ರ ವಿನ್ಯಾಸಗಳಲ್ಲಿ ಬಹುಶ: ದರದಲ್ಲಿಯೂ ಅಂಥದೇನೂ ವಿಶೇಷ ಬದಲಾವಣೆ ಆಗಿಲ್ಲ. ಒಂಥರ ದೇಶಕಾಲಾದಿಗಳಿಗೆ ಸಿಕ್ಕಿಯೂ ಬದಲಾಗದಂತಹ ಸಂತ ಮಹಾಂತರ ಗುಣವಿದಕ್ಕೆ. ಇದರ ಮೂರ್ತಿ ಚಿಕ್ಕದಾದರೂ ಕೀರ್ತಿ ಬಲು ದೊಡ್ಡದು. ಅಂತಹ ಸೇಫ್ಟಿ ಪಿನ್ ಗೆ ಹೃದಯಾಳದ ನನ್ನಿಗಳು.
ನಮಸ್ಕಾರ ಅನಿವಾಸಿ ಬಳಗಕ್ಕೆ. ಇನ್ನೇನು ಬಂದೇ ಬಿಡಲಿರುವ ಕ್ರಿಸ್ಮಸ್ ಹಬ್ಬದ ಹಾಗೂ ಹೊಸವರುಷದ ಹಾರ್ದಿಕ ಶುಭಾಶಯಗಳು.
ದೇಶ- ಕಾಲ ಯಾವುದಿದ್ದರೇನು? ಮಾನವ ಜೀವ - ಭಾವ ಜಗತ್ತು ಮಾತ್ರ ಸದಾ ಅದೇ ಅಲ್ಲವೇ? ಅದಕ್ಕೆಂದೇ ತ್ರೇತೆಯ ಸೀತೆ, ದ್ವಾಪರದ ರಾಧೆ ಈಗಲೂ ನಮ್ಮನ್ನು ಕಾಡುತ್ತಾರೆ. ನನ್ನ ಹಳ್ಳಿಯ ನನ್ನ ಪರಿಧಿಗೆ ಬಂದ ಎಲ್ಲ ಹೆಂಗಳೆಯರದೂ ಒಂದೊಂದು ಕಥೆ.. ವ್ಯಥೆ. ಅದನ್ನೇ ಇಲ್ಲಿನ ಕವನ ಹೇಳಲು ಪ್ರಯತ್ನಿಸುತ್ತಿದೆ. ಹಾಗೆಯೇ ಒಂದು ಲಘು ಹರಟೆಯೂ ಉಂಟು. ಒಪ್ಪಿಸಿಕೊಳ್ಳಿ.
~ ಸಂಪಾದಕಿ
ನಮ್ಮೂರ ರಾಧೆಯರು..
ನಮ್ಮೂರಲ್ಲಿ ಜುಳು ಜುಳು ಹರಿವ ತಂಪಾದ ನದಿಯಿಲ್ಲ. ಹಿಂಡಿದರೆ ದಂಡಿ ಹಾಲು ಕರೆವ ದನದ ಮಂದೆಗಳಿಲ್ಲ. ಒಣಬಿದಿರ ಕೊಳಲ ಮಾಡಿ ನುಡಿಸಿ ಕುಣಿಸುವ ಕೃಷ್ಣನೂ ಇಲ್ಲ. ನಮ್ಮೂರ ಹೆಸರಂತೂ ಗೋಕುಲ- ಬೃಂದಾವನ ಮೊದಲೇ ಅಲ್ಲ.
ಯಮುನೆ ಇರದಿದ್ದರೇನಂತೆ ಇಲ್ಲಿ ಕಾಳಿಂಗರಿಗೇನೂ ಕೊರತೆ ಇಲ್ಲ. ರಾಸ ರಚಿಸಲೆಂದೇ ರಸಿಕರು ಸುತ್ತಮುತ್ತ ಕಾಯ್ದುಕೊಂಡಿಹರಲ್ಲ?! ಪ್ರತಿಷ್ಠೆ, ಮರ್ಯಾದೆ, ರಕ್ಷಣೆಯ ಹೆಸರಲ್ಲಿ ಚೈತನ್ಯ ಹೋಮ ನಡೆವುದಲ್ಲ.. ದ್ವಾಪರವಲ್ಲವಾದ್ದರಿಂದ ನರಕಾಸುರ ಬಂಧನದಿಂದ ಈ ಗೋಪಿಕೆಯರಿಗೆ ಮುಕ್ತಿಯೇ ಇಲ್ಲ..
~ ಗೌರಿಪ್ರಸನ್ನ
ಕ್ಯಾಲೆಂಡರ್ ಪುರಾಣ
2025 ಅರಿವಿಲ್ಲದೇ ಉರುಳಿ ಇನ್ನೇನು ಹೊಸ ವರುಷದ ಹೊಸಿಲಲ್ಲಿದ್ದೇವೆ. ಇಷ್ಟಕ್ಕೂ ಈ ಹೊಸ ವರ್ಷ ಅನ್ನೋದು ಏನು? ಅದೇ ಹಗಲು ರಾತ್ರಿಗಳು, ಅದೇ ಸೂರ್ಯ ಚಂದ್ರರು, ಅವೇ ಗಿಡಮರ-ಉಪವನಗಳು, ಅವೇ ಮಾನವ ಮನದ ರಾಗ ದ್ವೇಷ ಭಾವವೇಗಗಳು, ಅದೇ ಹೊಡೆದಾಟ ಬಡೆದಾಟಗಳು,ಅವೇ ಚರ್ವಿತ ಚರ್ವಣ ರಾಜಕೀಯ ಸಾಮಾಜಿಕ ಸುದ್ದಿ ಸಮಾಚಾರಗಳು, ಅವೇ ಹೊಸ ವರ್ಷದ ಹಳೆಯ ರೆಸುಲ್ಯೂಷನ್ ಗಳು.. ಬರೀ ಬದಲಾಗುವ ಕ್ಯಾಲೆಂಡರ್ ಹೊರತುಪಡಿಸಿ ಉಳಿದಿದ್ದೆಲ್ಲಾ ಅದೇ ಹಿಂದಿನದೇ.
ಆದರೆ ಜಡ್ಡು ಕಟ್ಟಿದ ಮನಸ್ಸಿಗೆ ಯಾಂತ್ರಿಕವಾದ ಬದುಕಿಗೆ ಒಂದೆರಡು ಖುಷಿಯ ಕ್ಷಣಗಳು ಬೇಕು ಹಗುರಾಗಲು ಒಂದು ನೆಪಬೇಕು ಆ ನೆಪದಲ್ಲಿ ಆಪ್ತರೊಡನೆ, ಸ್ನೇಹಿತರೊಡನೆ ಬಂಧು ಬಾಂಧವರೊಡನೆ ಒಂದಷ್ಟು ಮಾತು, ಹರಟೆ, ನಗು, ಹಾಡು, ಕುಣಿತ, ತಿನ್ನುವುದು, ಕುಡಿಯುವುದು.. ಅವುಗಳ ಮೂಲಕ ಒಂದು ನಿರಾಳತೆಯನ್ನೂ, ಬಿಡುಗಡೆಯನ್ನೂ, ಸಾರ್ಥಕತೆಯ ಕ್ಷಣಗಳನ್ನೂ, ಹೊಸ ಭರವಸೆಯನ್ನೂ ಪಡೆಯಲು ಬಯಸುವುದಷ್ಟೇ ಅವುಗಳ ಆಚರಣೆಯ ಹಿಂದಿರುವ ಅರ್ಥ. ಬರೀ ಹೊಸ ವರ್ಷದ ಆಚರಣೆ ಅಲ್ಲ ಎಲ್ಲ ಹಬ್ಬ, ದಿನಗಳು, ಜಾತ್ರೆ, ಉತ್ಸವಗಳ ಉದ್ದೇಶವೂ ಅದುವೇ ಅಂಬೋದು ನನ್ನ ಅನಿಸಿಕೆ. ಇಷ್ಟಕ್ಕೂ ಅಖಂಡವಾದ ಅನಂತವಾದ ಕಾಲವನ್ನು ನಮ್ಮ ಅನುಕೂಲಕ್ಕಂತನೇ ತಾನೇ ನಾವು ವಿಭಾಗಿಸಿ ವರುಷ, ತಿಂಗಳು, ಮಾಸ, ತಿಥಿ, ವಾರ ಎಂದೆಲ್ಲ ಮಾಡಿಕೊಂಡಿದ್ದು.ನಿನ್ನೆಯಷ್ಟೇ ಎಲ್ಲಿಯೋ ಓದುತ್ತಿದ್ದೆ.. ಇಥಿಯೋಪಿಯಾ ದೇಶದ ಕ್ಯಾಲೆಂಡರ್, ಅಲ್ಲಿಯ ಹೊಸ ವರುಷ ಎಲ್ಲ ಬೇರೆಯೇ ಅಂತೆ. ಅಲ್ಲೀಗ 2018 ನಡೆದಿದೆಯಂತೆ. ಅದಕ್ಕೇ ಅಲ್ಲವೇ ‘ದೇಶ ಕಾಲ ವಿಭಾಗ ಮನದ ರಾಜ್ಯದೊಳಿರದು’ ಅಂತ ನಮ್ಮ ಗುಂಡಪ್ಪನವರು ಎಂದೋ ಹೇಳಿದ್ದು?!
ಹೊಸ ವರುಷ ಅಂದ ಮ್ಯಾಲೆ ಎಲ್ಲರ ಮನೆಯಾಗೂ ಹೊಸ ಕ್ಯಾಲೆಂಡರ್ ಹಾರಾಡಲಿಕ್ಕೇ ಬೇಕು . ಈ ಕ್ಯಾಲೆಂಡರ್ ನ ಇತಿಹಾಸ ಅಥವಾ ಕೆಲವು ಜನರ ಈ ಜನವರಿ ಫೆಬ್ರವರಿ ಅಥವಾ ಹಿಂದೂ ಪಂಚಾಂಗ ಚೈತ್ರ- ವೈಶಾಖಗಳ ದ್ವಂದ್ವ ಯುದ್ಧ ಇತ್ಯಾದಿಗಳ ಬಗ್ಗೆ ನಾ ಇಲ್ಲೇ ಮಾತನಾಡಲಿಕ್ಕೆ ಹೋಗೋದಿಲ್ಲ ಖರೇ ಹೇಳಬೇಕೆಂದರೆ ನಾವು ಸಣ್ಣವರಿದ್ದಾಗ ಅಂಕಲಪಿ ಹಿಂದೆ ಇದ್ದ ಚೈತ್ರ- ವೈಶಾಖ- ವಸಂತ ಋತು ಹಾಗೂ ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ಅಂತ ಎರಡನ್ನೂ. ಅಷ್ಟೇ ಶ್ರದ್ಧೆಯಿಂದ ಕಣ್ಮುಚ್ಚಿ ಕೈ ಕಟ್ಟಿ ನಿಂತು ಉರು ಹೊಡೆದಿದ್ದೆವು.. ಕೆಲವೊಮ್ಮೆ ಹಿಂದೆ ಮುಂದೆ ವಾಲಾಡುತ್ತಾ. ಜೋಡಿಗೆ ಆ ಜನವರಿ, ಫೆಬ್ರವರಿಗಳ ಸ್ಪೆಲಿಂಗ್ ಕಲಿಯಲಿಕ್ಕೂ ಪರಿಪಾಟಲು ಪಟ್ಟಿದ್ದು ಸುಳ್ಳಲ್ಲ. ಯಾಕೆಂದರೆ ಇಂಗ್ಲೀಷ್ ನಮ್ಮ ಕನ್ನಡದ್ಹಂಗ ಅಲ್ರಿ ಬಾಯಲ್ಲಿ ಅನ್ನೋದೇ ಬೇರೆ, ಅಲ್ಲಿ ಸ್ಪೆಲಿಂಗ್ ಬರೆಯುವುದೇ ಬೇರೆ. ಈಗ ಉದಾಹರಣೆಗೆ ನೋಡ್ರಿ ಜನವರಿಯನ್ನು ಬರೆಯುವುದು JANUARY ಅಂತ ಇಲ್ಲೇ U ಎಲ್ಲಿಂದ ಬಂತು ಅಂತ ತಲಿ ಕೆಡತಿತ್ತರೀ.. ಈಗಲೂ ಅಷ್ಟೇ ಎಷ್ಟೋ ಶಬ್ದಗಳನ್ನು ಉಚ್ಚಾರ ಮಾಡೂದ್ಹೆಂಗ ಅಂತ ಚಿಂತೀರಿ. ಏನs ಇರಲೀರಿ ನಮಗ ದಿನದ ಉಪಯೋಗಕ್ಕೆ ಸರಳ ಅನ್ನಸೂವು ಈ ಜನವರಿ ಫೆಬ್ರವರಿನೇ. ಚೈತ್ರ ವೈಶಾಖಗಳು ಸ್ವಲ್ಪ ಕಠಿಣ ಅನ್ನಿಸಿ ಬಿಡತಾವ್ರೀ. ವೈಶಾಖ ಶುದ್ಧ ದಶಮಿ, ಭಾದ್ರಪದ ಶುಕ್ಲ ಚೌತಿ, ಶ್ರಾವಣ ಬಹಳ ಅಷ್ಟಮಿ ಹಿಂಗೆಲ್ಲಾ. ಆ ಕೃಷ್ಣ ಪಕ್ಷ ಶುಕ್ಲ ಪಕ್ಷಗಳು, ಶುದ್ಧ ಬಹುಳಗಳು ಸ್ವಲ್ಪ ಕನ್ಫ್ಯೂಸ್ ಆಗಿಬಿಡತಾವ್ರಿ. ಅವು ಸುಮ್ಮ ಮದುವೆ ಮುಂಜವಿಗಳಿಗೆ, ಪೂಜಾ ಪುನಸ್ಕಾರಗಳಿಗೆ, ಲಗ್ನ ಮುಹೂರ್ತಕ್ಕಷ್ಟೇ ಸೀಮಿತವಾಗಿ ಬಿಟ್ಟಾವ. ಹಂಗ ನೋಡಿದ್ರ ಈ ಜನವರಿ ಫೆಬ್ರವರಿಗಳು ದಿನ ಊಟಕ್ಕೆ ಬಳಸುವ ಸ್ಟೀಲ್ ತಟ್ಟೆ ಲೋಟಗಳಾದ್ರ ಈ ಸಂವತ್ಸರೇ, ಅಯನೇ, ಮಾಸೌ, ಪಕ್ಷೇ, ತಿಥೇ, ವಾಸರೌ.. ಎಲ್ಲಾ ಯಾರರೆ ಅತಿಥಿ ಅಭ್ಯಾಗತರು ಬೀಗರು ಬಿಜ್ಜರು ಬಂದಾಗ ಮಾತ್ರ ಹೊರ ತೆಗೆದು ಅವರು ಹೋದ ನಂತರ ಮತ್ತೆ ಕಾಳಜಿಲೆ ಪ್ಯಾಕ್ ಮಾಡಿ ಸ್ವಸ್ಥಾನಕ್ಕೆ ಸೇರಿಸಿಬಿಡುವ ತುಟ್ಟಿ ಡಿನ್ನರ್ ಸೆಟ್ ಗಳ ಗತೆ ಅಂದ್ರ ತಪ್ಪಾಗಲಿಕ್ಕಿಲ್ಲ.
ಆದ್ರೆ ಕೆಲವು ಈ ನಮ್ಮ ಕ್ಯಾಲೆಂಡರ್ ಗಳು ಇರ್ತಾವಲ್ರೀ ‘ ಹೊಂಬಾಳಿ ಬಂಧುಗಳು’, ‘ ಮಹಾಲಕ್ಷ್ಮಿ ದಿನದರ್ಶಿಕೆ’, ‘ಕಾಲ ನಿರ್ಣಯ’ ಇತ್ಯಾದಿ.. ಇವುಗಳು ಮಾಡುವ ಕೆಲಸ ಅನನ್ಯ ನೋಡ್ರಿ ಇವುಗಳೊಳಗ ಜನವರಿ ಫೆಬ್ರವರಿ 1 ರಿಂದ 28,30,31 ದಿನಾಂಕಗಳ ಜೊತೆಗೆ ತಿಥಿ, ನಕ್ಷತ್ರ, ರಾಹುಕಾಲ, ಗುಳಿಕಕಾಲ ಎಲ್ಲಾನೂ ಕೊಟ್ಟಿರ್ತಾರ. ಏನು ಮಾಹಿತಿ ಬೇಕಂದ್ರೂ ತಟ್ಟಂತ ಸಿಕ್ಕಿಬಿಡುತ್ತದ. ಅಡುಗೆಮನೆ ಗ್ವಾಡಿಗೆ ಇಂಥದೊಂದು ಕ್ಯಾಲೆಂಡರ್ ಬೇಕೇ ಬೇಕು ನೋಡ್ರಿ. ರಥ, ಜಾತ್ರಿ, ತೇರು ಏಕಾದಶಿ- ದ್ವಾದಶಿಗಳು, ಹುಣ್ಣಿಮೆ- ಅಮಾವಾಸ್ಯೆಗಳು, ಹಬ್ಬ- ಹರಿದಿನಗಳು, ಆರಾಧನೆ- ವರ್ಧಂತಿಗಳು, ಸಂಕಷ್ಟಿ, ಚಂದ್ರೋದಯ- ಸೂರ್ಯೋದಯಗಳು ಇವುಗಳ ಮಾಹಿತಿ ಗೃಹಿಣಿ ಆದಾಕಿಗೆ ಅವಶ್ಯ ಇರಬೇಕಲ್ರಿ.ಅದಕ್ಕ ಅಡುಗೆಮನ್ಯಾಗೊಂದು ಕ್ಯಾಲೆಂಡರ್ ಇದ್ರ ಅದರ ಮೇಲೆ ಕಣ್ಣು ಹಾಯಕೋತ ಇರ್ತದ. ಇರಲಿಕ್ಕಂದ್ರ ಏಕಾದಶಿ ಮುಂಜಾನೆ ಘಂ ಅಂತ ಉಳ್ಳಾಗಡ್ಡಿ ಉಪ್ಪಿಟ್ಟು ತಯಾರಾಗಿ ಬಿಡುತದ. ಮರುದಿನದ ಹುಣ್ಣಿಮೆಗೆ ಕಾಯಿ ತರೋದು ಮರೆತು ಹೋಗ್ತದ. ಕುಲ ದೇವರ ತೇರು, ಮನೆಯ ಹೆಣ್ಣು ದೇವತೆಯ ಕಾರ್ತಿಕೋತ್ಸವ, ತೆಪ್ಪೋತ್ಸವ ಇವುಗಳೆಲ್ಲ ನೆನಪೇ ಉಳಿಯುವುದಿಲ್ಲ.
ಈ ಕ್ಯಾಲೆಂಡರ್ಗಳ ಬಹುಪಯೋಗ ನಿಮಗೂ ಗೊತ್ತೇ ಇರುತದ್ರಿ. ಅವಸರಕ್ಕ ಬೇಕಂದಾಗ ದಾರದ ಸಮೇತ ಸೂಜಿ, ಟಾಚನಿಗಳು ಸಿಗುವುದು ಇದೇ ಕ್ಯಾಲೆಂಡರಿನಾಗೇರಿ. ತಿಂಗಳ ವರವಿ ಹಾಲು -ಮೊಸರಿನ ಲೆಕ್ಕ, ಇಸ್ತ್ರಿ ಅವನಿಗೆ ಕೊಟ್ಟ ಬಟ್ಟೆಗಳು, ಅವನು ವಾಪಸ್ ಕೊಡಬೇಕಾದ ಚಿಲ್ಲರೆಯ ಲೆಕ್ಕ, ಯಾವುದೋ ಬ್ಲಡ್ ಟೆಸ್ಟ್, ದಂತ ವೈದ್ಯರ ಅಪಾಯಿಂಟ್ಮೆಂಟ್ ದಿನಾಂಕ, ಮಕ್ಕಳ ಶಾಲೆಯ ಪೇರೆಂಟ್ -ಮೀಟಿಂಗ್, ಪಿಕ್ನಿಕ್- ಗ್ಯಾದರಿಂಗು ಇವುಗಳ ದಿನಾಂಕಗಳು, ಯಾರದೋ ಮನೆಯ ಮದುವೆಯ ರಿಸೆಪ್ಶನ್, ಬಂಧುಗಳೊಬ್ಬರ ಸೊಸೆಯ ಶ್ರೀಮಂತದೂಟಕ್ಕೆ ಹೋಗಬೇಕಾಗಿರುವ ದಿನಾಂಕಗಳು, ಕಿರಾಣಿ ಖರೀದಿಸಿದ ದಿನ ಮತ್ತು ಅದರ ಟೋಟಲ್ ರೊಕ್ಕ ( ಯಾಕಂದ್ರೆ ಯಜಮಾನರು ಯಾವಾಗ ಕಿರಾಣಿ ತರಲು ಕರೆದರೂ “ಮನ್ನೀನ ತಂದಿದ್ದೆಲ್ಲಾ 20,000 ಕಿರಾಣಿ ಅಂತಿರ್ತಾರ. ಅವರಿಗೆ ಸಾಕ್ಷಿ ಸಮೇತ ಆ ಹಿಂದಿನ ಡೇಟ್, ದುಡ್ಡು ತೋರಿಸಬೇಕಲ್ರೀ ಅದಕ್ಕ) ಇನ್ನ ಕೆಲಸದ ಗದ್ದಲದಾಗ ಮರೆತು ಬಿಡಬಾರದಂತ ಮನೆಯವರ ಆಫೀಸಿನ ಟೂರಿನ ದಿನಾಂಕ, ತಿಂಗಳ ಮೊದಲೇ ತಮ್ಮ ಆಗಮನದ ಡೇಟ್ ತಿಳಿಸಿದ ಅತಿಥಿಗಳ ಆಗಮನದ ದಿನಾಂಕ, ಅವರ ಟ್ರೈನು, ಬೋಗಿ ನಂಬರ್, ಫ್ಲೈಟು, arrival time, ಟರ್ಮಿನಲ್ ಇತ್ಯಾದಿಗಳ ದಾಖಲಾತಿ ಎಲ್ಲಾ ಇಲ್ಲೇ ಈ ತೂಗಾಡೋ ಕ್ಯಾಲೆಂಡರಿನಲ್ಲೇ. ನಾದಿನಿಯ ಗಂಡ, ತಮ್ಮನ ಹೆಂಡತಿ, ಅಕ್ಕನ ಗಂಡ ಹೀಗೆ ಬಹಳ ಪ್ರಮುಖರಾದವರ ಹುಟ್ಟುಹಬ್ಬ, ಆನಿವರ್ಸರಿ ಮರೆತು ಬಿಡಬಹುದಾದ ಸಾಧ್ಯತೆಗಳೇ ಹೆಚ್ಚು. ಆ ಪ್ರಮಾದಗಳು ಆಗದಂಗ ತಪ್ಪಿಸಲಿಕ್ಕೆ ಈ ಕ್ಯಾಲೆಂಡರ್ ನಾಗ ಮಾರ್ಕ್ ಮಾಡಿ ಇಟ್ಟುಬಿಟ್ಟರ ಆಯ್ತ್ರಿ . ಇನ್ನ ಮನೆ ಕೆಲಸದಕಿ ತಗೊಂಡ ರಜಾ ದಿನಗಳು, ಅಕಿ ಅಡ್ವಾನ್ಸ್ ಆಗಿ ಇಸ್ಕೊಳ್ಳೋ ನೂರು ಇನ್ನೂರು ರೂಪಾಯಿಗಳ ಲೆಕ್ಕಕ್ಕೂ ಈ ಕ್ಯಾಲೆಂಡರ್ ಬೇಕ್ರಿ. ಇಲ್ಲ ಅಂದ್ರ ತಿಂಗಳದಾಗ ನಾಲ್ಕು ದಿನ ರಜಾ ಮಾಡಿ ಅಂತ ನಾನು, ಇಲ್ಲ ಎರಡೇ ದಿನ ಅಂತ ಅಕಿ ಹಾಕ್ಯಾಡೋದು ನಡೀತಿತ್ರೀ. ಆದ್ರ ಯಾವಾಗ ಈ ಕ್ಯಾಲೆಂಡರ್ನಾಗ ಅವೆಲ್ಲ ದಾಖಲಾಗಲಿಕ್ಕೆ ಶುರು ಆಯ್ತೋ ಆಗ ಇಂಥ ಪ್ರಸಂಗಗಳು ಕಡಿಮೆ ಆದ್ವು ಅನ್ರಿ. ಅಷ್ಟೇ ಅಲ್ರಿ ನಾನಂತೂ ಕೆಲವೊಂದು ಅರ್ಜೆಂಟ್, ಎಮರ್ಜೆನ್ಸಿ ಫೋನ್ ನಂಬರ್ ಗಳನ್ನು ಅದರ ಮೇಲೇ ಗೀಚಿರತೀನ್ರಿ. ಫೆಸಿಲಿಟಿ ಆಫೀಸ್, ಗ್ಯಾಸ್ ಸಿಲಿಂಡರ್ ಏಜೆನ್ಸಿ, ಮಿಕ್ಸಿ ರಿಪೇರಿಯವ, ರದ್ದಿ ಪೇಪರಿನವ, ಹೋಂ ಡೆಲಿವರಿ ಮಾಡುವ ಹತ್ತಿರದ ಕಿರಾಣಿ ಅಂಗಡಿಯವ, ಅರ್ಜಂಟಿಗೊದಗುವ ಆಟೋ ಚಾಲಕ, ಡ್ರೈಕ್ಲೀನಿನವ, ಟೇಲರ್, ಬ್ಯೂಟಿ ಪಾರ್ಲರ್ ದಕಿ.. ಹೀಂಗs ನೂರಾ ಎಂಟು ನಂಬರ್.. ಯಾಕ ನಗಲಿಕ್ಹತ್ತೀರೇನು? ಏಯ್ ನಿಮಗೇನ ಗೊತ್ತರೀ ಯಾವ ಟೈ ಮಿನಾಗ ಯಾರಾರ ನಂಬರ್ ಹರಕತ್ ಆಗಿಬಿಡತಾವ ಅಂತ. ಮೊಬೈಲ್ ನಾಗ ಸೇವ್ ಮಾಡಕೋಬಹುದಲಾ ಅಂತೀರೇನು ಅದರ ಕಥಿನೂ ಹೇಳತೀನಿ ತಡೀರಿ. ಮೊಬೈಲ್ ನಾಗ ನಮಗ ಬೇಕಂದಾಗ ಕೆಂಪು ಗೆರಿನೇ.. ಚಾರ್ಜೇ ಇರಂಗಿಲ್ಲ. ನೂರೆಂಟು ಗೇಮ್ಸ್ ಡೌನ್ಲೋಡ್ ಮಾಡಿಕೊಂಡು ಆಡಿ, U tube, google ಜನ್ಮವನ್ನೆಲ್ಲ ಜಾಲಾಡಿ ಬ್ಯಾಟರಿ ಲೋ ಅಂತ ತೋರಿಸಿದ ಕೂಡಲೇ ಎಲ್ಲಿ ಕೂತಿರತಾರೋ ಅಲ್ಲೇ ಅದನ್ನಿಟ್ಟು ಎದ್ದು ಮತ್ತೊಂದು ಅಪ್ಪನದೋ, ಅಜ್ಜನದೋ ಮೊಬೈಲ್ ಅನ್ವೇಷಣೆಗೆ ಹೊರಡೂದು ನಮ್ಮ ಮಕ್ಕಳ ಹುಟ್ಟು ಗುಣಾರೀ. ಎಷ್ಟರ ಬಯ್ಯರಿ, ತಿಳಿಸಿ ಹೇಳ್ರಿ ಏನು ಉಪಯೋಗ ಇಲ್ಲ ರೀ. ಹಿಂಗಾಗಿ ಮೊದಲು ಮೊಬೈಲ್ ಹುಡುಕುವ ಕೆಲಸ ಶುರು ಮಾಡಬೇಕ್ರಿ. ಸೋಫಾ ಸಂದ್ಯಾಗ, ಡೈನಿಂಗ್ ಟೇಬಲ್ ಚೇರ್ ಮ್ಯಾಲೋ, ಮಡಚಿಡಬೇಕು ಎಂದು ಗುಡ್ಡೆ ಹಾಕಿದ ಒಗೆದ ಬಟ್ಟೆಗಳ ರಾಶಿಯಲ್ಲೋ, ರಜಾಯಿಯ ಸುರುಳಿ, ತಲೆದಿಂಬಿನ ಕವರ್ ನಲ್ಲೋ, ಬಚ್ಚಲು ಮನೆಯ ಸಿಂಕಿನ ಬಳಿಯೋ ಎಲ್ಲಿ ಬೇಕಾದರೂ ಪರದೇಶಿಗತೆ ಅದು ಬಿದ್ದಿರಬಹುದಾದ ಸಾಧ್ಯತೆಗಳು ಹೆಚ್ಚರೀ. ಯಾರನ್ನೇ ಕೇಳ್ರಿ ‘ನಾ ನೋಡಿಲ್ಲ.. ಚಿನ್ನು ತಗೊಂಡಿದ್ಲು’, ‘ನಂಗೊತ್ತಿಲ್ಲ.. ಅಣ್ಣಾ ಪಬ್ಜಿ ಆಡಲಿ ಕ್ಹತ್ತಿದ್ದ’, ‘ಇಲ್ಲೇ ಚಾರ್ಜಿಗಿತ್ತು.. ಆಗಳೇ ನೋಡಿದ್ದೆ.’. ಇಂಥವೇ ಉತ್ತರಗಳು. ರಿಂಗ್ ಮಾಡಿದ್ರೆ ಪಾಪ ಗುಟುಕು ಜೀವ ಹಿಡಿದ ಅದಕ್ಕ ರಿಂಗ್ ಆಗುವ ತಾಕತ್ತೂ ಇರುವುದಿಲ್ಲ. ಕೆಲವೊಮ್ಮೆ ಅಂತೂ ನಾನು ಗೇಮ್ ಆಡಿದ್ರ ಬೈತೀನಿ ಅಂತ ಸೈಲೆಂಟ್ ಬೇರೆ ಮಾಡಿರತಾರ. ಹಿಂಗಂತ ಪಾಸ್ವರ್ಡ್ ಹಾಕಿಟ್ರೆ ಆ ನಂಬರು ಪ್ಯಾಟರ್ನ್ ಏನಿತ್ತು ಅಂತ ನಂಗs ನೆನಪಿರುವುದಿಲ್ಲರೀ. ಇನ್ನ ಯಾವುದರ ಡೈರಿನಾಗ ಬರೆದಿಟ್ಟುಕೊಂಡಿದ್ದರೂ ಆ ಡೈರಿ ಹುಡುಕಲಿಕ್ಕೆ ತಾಸು ಬೇಕು. ಯಾಕಂದ್ರ ಮಗಳು ಒಮ್ಮೆ ಅದನ್ನ ತನ್ನ rough note book ಮಾಡಿಕೊಂಡಿರತಾಳ. ಇನ್ನೊಮ್ಮೆ ಮಗ ರಾಯ ಯಾವುದೋ ಹಾಳಿನಾಗ ಯಾರಿಗೋ ಅಡ್ರೆಸ್ ಬರೀಲಿಕ್ಕೆ ಅಂತ ಅದನ್ನ ಪೇಪರ್ ಪ್ಯಾಡ್ ಗತೆ use ಮಾಡಿ ಎಲ್ಲೋ ಸೇರಿ ಸಿಟ್ಟು ಹೋಗಿರುತ್ತಾನೆ. ವೀಕೆಂಡ್ಗೆ ಮನೆಗೆ ಬಂದಿದ್ದ ನಾದಿನಿ ಮಗಳು ಅದನ್ನು ಡ್ರಾಯಿಂಗ್ ಬುಕ್ ಮಾಡಿಕೊಂಡು ಚಿತ್ರ ಗೀಚಿರತಾಳ. ಟೀಪಾಯ್ ಮೇಲಿದ್ರ ಯಾರೋ ಅದನ್ನು ಬಿಸಿ ಚಹಾ ಕಪ್ ಇಡಲಿಕ್ಕೆ ಕೋಸ್ಟರ್ ಗತೆ ಸಹ ಬಳಸಿರತಾರ. ಹೀಂಗಾಗಿ ಇವ್ಯಾವುದರ ಉಸಾಬರಿನೇ ಬ್ಯಾಡ ಅಂತ ‘ಅನ್ಯಥಾ ಶರಣಂ ನಾಸ್ತಿ.. ತ್ವಮೇವ ಶರಣಂ ಮಮ’ ಅಂತ ಈ ಕ್ಯಾಲೆಂಡರಿನ ಮೊರೆ ಹೋಗುವುದೊಂದೇ ದಾರಿ. ನಂಬಿದವರ ಕೈಬಿಡಲಾರದ ದೊಡ್ಡ ಗುಣ ಈ ನಮ್ಮ ಅಡಗಿಮನಿ ಕ್ಯಾಲೆಂಡರಿಗೆ ಅದರೀ.
ಡಿಸೆಂಬರ್ ತಿಂಗಳು ಬಂತಂದ್ರ ಈ ಕ್ಯಾಲೆಂಡರುಗಳ ವ್ಯಾಪಾರದ ಭರಾಟೆ ನೋಡಬೇಕ್ರಿ. ಎಲ್ಲಾ ಸ್ಟೇಷನರಿ ಹಾಗೂ ಪುಸ್ತಕ ಅಂಗಡಿಗಳೊಳಗ ನಾನಾ ನಮೂನಿ ಹೊಚ್ಚ ಹೊಸ ಕ್ಯಾಲೆಂಡರುಗಳು ಮನೆಮನೆಯ ಗೋಡೆಯನ್ನಲಂಕರಿಸಲು ಸಜ್ಜಾಗಿ ಕೂತಿರತಾವ. ವೆಂಕಪ್ಪ, ಹನುಮಪ್ಪ, ಶಿವ, ನರಸಿಂಹ, ಲಕ್ಷ್ಮಿ ಇತ್ಯಾದಿ ದೇವತೆಗಳ ಚಂದದ ಕ್ಯಾಲೆಂಡರ್ ಗಳು. ನಮ್ಮ ಬಾಲ್ಯಕಾಲದ ಎಲ್ಲಾ ಮನೆಯ ಪಡಸಾಲೆಗಳಲ್ಲಿ ಎಲ್ಲಾ ಪ್ರಮುಖ ದೇವತೆ ದೇವತೆಗಳು ಹಿಂಗ ಕ್ಯಾಲೆಂಡರಿನಾಗ ಜೋಕಾಲಿ ಆಡುತ್ತಿದ್ದರು. ನಾವು ಹೊರಹೋಗಲು ಚಪ್ಪಲಿ ಮೆಟ್ಟುವುದಕ್ಕಿಂತ ಮೊದಲು ತಪ್ಪದೇ ಈ ಜೀಕುವ ದೇವರಿಗೆ ಕೈಮುಗಿದೇ ಹೋಗುತ್ತಿದ್ವಿ. ಕೈ ಮುಗಿದೀದ್ದರೂ ಕಡೀಕೆ ಕಣ್ರೆಪ್ಪೆ ಮುಚ್ಚಿ ತೆಗೆದಾದರೂ ಸಾಂಕೇತಿಕ ನಮಸ್ಕಾರ ಸಲ್ಲಿಸಿಯೇ ಹೊರಗಡಿ ಇಡುತ್ತಿದ್ದು. ಎಲ್ಲ ದೇವಾನುದೇವತೆಗಳ ರೂಪ, ಮೈಬಣ್ಣ, ಅವರ ಆರು-ಮೂರು- ನಾಲ್ಕು ತಲೆಗಳು, ಚತುರ್ ಷಡ್ ಭುಜಗಳು,ಶಂಖ- ಚಕ್ರ- ಗದಾ- ತ್ರಿಶೂಲಾದಿ ಆಯುಧಗಳು, ಗರುಡ -ನಂದಿ- ನವಿಲು -ಇಲಿ ಇತ್ಯಾದಿ ಅವರ ಸ್ಪೆಸಿಫಿಕ್ ಆದ ವಾಹನಗಳು, ಅವರು ನುಡಿಸುವ ಕೊಳಲು, ವೀಣೆ ಇತ್ಯಾದಿ ವಾದ್ಯಗಳು,ಆಭರಣಗಳು, ಉಡುಗೆತೊಡುಗೆಗಳು ನಮ್ಮ ಅರಿವಿನ ವಲಯಕ್ಕೆ ತಲುಪಿದ್ದೇ ಈ ಕ್ಯಾಲೆಂಡರುಗಳಿಂದ. ಒಂದರ್ಥದಲ್ಲಿ ದೇವ ದರುಶನ ಮಾಡಿಸಿದ ಗುರು ಸ್ಥಾನ ಸಲ್ಲಬೇಕಿವಕ್ಕೆ. ಎಷ್ಟೋ ಚೆಂದದ ಕ್ಯಾಲೆಂಡರ್ ಗಳು ಕಟ್ ಹಾಕಿಸಿಕೊಂಡು ದೇವರ ಫೋಟೋ ಆಗಿ ಸೀದಾ ದೇವರ ಮನೆಗೆ ಬಡ್ತಿ ಪಡೆಯುತ್ತಿದ್ದವು. ಈಗಲೂ ನನ್ನ ಅಡುಗೆ ಮನೆಯಲ್ಲಿ ವಿರಾಜಮಾನವಾಗಿರುವ 2014ನೇ ಇಸ್ವಿಯ, ಬರ್ಮೀಂಗ್ ಹ್ಯಾಮಿನ ದೇವಸ್ಥಾನದ ಕ್ಯಾಲೆಂಡರಿನ ವೆಂಕಪ್ಪನ ಪಾದಸ್ಪರ್ಶದಿಂದಲೇ ನಮ್ಮ ದಿನಚರಿ ಆರಂಭ ಆಗುತ್ತದೆ. ಯಾಕಂದ್ರ ನಮ್ಮ ಕುಲದೈವರೀ ವೆಂಕಪ್ಪ. ನಾವೂ ಅವನ ಒಕ್ಕಲದವರೇ.. ಅಷ್ಟೇ ಅಲ್ಲ ಬಹಳಷ್ಟು ಸಾಮ್ಯ ಅವರೀ ನಮಗೂ ಅವಗೂ. ನಾವು ಎಲ್ಲರs ಹೊರಗೆ ಹೊಂಟ್ರ ಅವನ ಹಂಗ ಸಿರಿ -ಗರುಡ- ಶೇಷ- ವಾಯು- ಬ್ರಹ್ಮಾದಿಗಳ ಸುರವರ ಪರಿವಾರ ಸಮೇತ ಹೊಂಡಿತೀವ್ರಿ. ಕನಿಷ್ಠ ಪಕ್ಷ ಎಂಟು 10 ಮಂದಿ ಅಂತೂ ಇರಬೇಕು. ಹಿಂಗಾಗಿ ಖರೆ ಹೇಳ್ತಿನ್ರಿ ಮಂದಿ ನಮ್ಮನ್ನು ತಮ್ಮ ಮನೆಗೆ ಛಾಕ್ಕ ಸಹಿತ ಕರೀಲಿಕ್ಕೆ ಅಂಜತಾರ್ರೀ. ಮತ್ತ ಹತ್ತಾರು ಮೂಲಗಳಿಂದ ಸಾಕಷ್ಟು ಬೇಕಾದಷ್ಟು ಆದಾಯ ಇದ್ದರೂ ವೆಂಕಪ್ಪ ಸದಾ ಸಾಲಗಾರನೇ. ನಾವೂ ಹಂಗs ಆದಾಯದ ಸ್ರೋತ್ರಗಳೆಷ್ಟೇ ಇರಲಿ ನಮ್ಮ ಕ್ರೆಡಿಟ್ ಮುಗಿಯೋದೇ ಇಲ್ರೀ , ಹೋಂ ಲೋನ್, ಕಾರ್ ಲೋನ್, ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಲೋನ್ ಎಷ್ಟೆಷ್ಟು ಪ್ರಕಾರದ ಲೋನ್ ಗಳು ಅವನೋ ಅಷ್ಟೆಲ್ಲಾ ತರ ಲೋನ್ಗಾರರು ನಾವು. ಇರಲಿ ಬಿಡ್ರಿ ವಿಷಯ ಎಲ್ಲಿಂದೆಲ್ಲೋ ಹೊಂಟತು ಕ್ಯಾಲೆಂಡರ್ ಬಿಟ್ಟು.
ಚಂದ ಚಂದ ನೆಯ ನೀಲಿ ಆಗಸ, ನೀಲಿ ಕಡಲು, ಬೆಟ್ಟ,ಹಸಿರು ವನಗಳು, ಬಣ್ಣಬಣ್ಣದ ಹೂಗಳಂಥ ನಿಸರ್ಗ ಸೌಂದರ್ಯದ ಕ್ಯಾಲೆಂಡರ್ ಗಳು, ಪ್ರಾಣಿ-ಪಕ್ಷಿಗಳ ಕ್ಯಾಲೆಂಡರ್ ಗಳು, ಮುದ್ದು ಮುದ್ದಾದ ಪುಟ್ಟ ಮಕ್ಕಳ ಕ್ಯಾಲೆಂಡರ್ ಗಳು, ರವಿವರ್ಮನ ಪೇಂಟಿಂಗ್ ಗಳ ಚಿತ್ರವಿರುವ ಕ್ಯಾಲೆಂಡರ್ ಗಳು, ಮೈಸೂರ ಅರಮನೆ, ತಾಜ್ಮಹಲ್, ಗೋಲ್ ಗುಂಬಜ್, ಹಂಪಿಯ ಕಲ್ಲಿನ ರಥವಿರುವಂತಹ ಐತಿಹಾಸಿಕ ಸ್ಮಾರಕಗಳ ಕ್ಯಾಲೆಂಡರ್ ಗಳು, ಸ್ವಾತಂತ್ರ್ಯ ಯೋಧರ, ಸಾಹಿತಿಗಳ, ಕವಿಗಳ ಕ್ಯಾಲೆಂಡರ್ ಗಳು, ಸಿನಿಮಾ ನಟ- ನಟಿಯರ ಕ್ಯಾಲೆಂಡರ್ ಗಳು, ತುಂಡುಡುಗೆಯಲ್ಲಿ ದೇಹಸಿರಿ ಪ್ರದರ್ಶಿಸುವ ರೂಪದರ್ಶಿಗಳ ಮಾದಕ ಕ್ಯಾಲೆಂಡರ್ ಗಳು ಓಹ್! ಎಷ್ಟೆಲ್ಲಾ ವೈವಿಧ್ಯಮಯ.. ಎಷ್ಟೋ ನಮಗೆ ಪ್ರಿಯವಾದ ನಟ ನಟಿಯರ, ಧೀಮಂತ ವ್ಯಕ್ತಿಗಳ, ನಿಸರ್ಗ ಚಿತ್ರಗಳ ಕ್ಯಾಲೆಂಡರ್ ಅನ್ನು ಪುಸ್ತಕ- ನೋಟ್ಬುಕ್ಕುಗಳಿಗೆ ಕವರ್ ಹಾಕಲು ಉಪಯೋಗಿಸಿದ್ದಿದೆ. ಬರೀ ಗೋಡೆಗೆ ತೂಗು ಹಾಕುವ ಕ್ಯಾಲೆಂಡರ್ಗಳಷ್ಟೇ ಅಲ್ಲ ಟೇಬಲ್ ಮೇಲೆ ಇಡಬಹುದಾದ ಕ್ಯಾಲೆಂಡರ್ ಗಳು ಇರ್ತಾವ. ಎಷ್ಟೋ ಬ್ಯಾಂಕು, ಎಲ್ಐಸಿ, ಪ್ರೈವೇಟ್ ಕಂಪನಿಗಳು ತಮ್ಮದೇ ಲೇಬಲ್ ನಡಿಯಲ್ಲಿ ಕ್ಯಾಲೆಂಡರ್ ಮಾಡಿಸುವುದು ಸರ್ವೇಸಾಮಾನ್ಯ. ಇನ್ನು ಕೆಲವೊಬ್ಬ ಸ್ಥಿತಿವಂತರು ತಮ್ಮ ಮದುವೆಯ, ಮಕ್ಕಳ ಚಿತ್ರಗಳನ್ನು ಒಳಗೊಂಡ ತಮ್ಮದೇ ಆದ ಕ್ಯಾಲೆಂಡರ್ ಮಾಡಿಸಿಕೊಂಡು ತಮ್ಮ ಬಂಗಲೆ ಅಂಥ ಮನೆಯ ಲಿವಿಂಗ್ ರೂಮ್ನಲ್ಲೋ, ಬೆಡ್ರೂಮ್ ನಲ್ಲೋ ಹಾಕಿರತಾರ.
ಮಜಾ ಅಂದ್ರ ಕ್ಯಾಲೆಂಡರಿನ ಮುಂಭಾಗದಷ್ಟೇ ಹಿಂಭಾಗವೂ ಅತ್ಯಂತ ಆಸಕ್ತಿದಾಯಕ ವಿಷಯಗಳನ್ನು ಒಳಗೊಂಡಿರುತದ ಅನ್ನೋದು ನಿಮಗೂ ಗೊತ್ತೇ ಇರುತ್ತದ. ರಾಶಿ ಭವಿಷ್ಯ, ತಲೆನೋವಿನಿಂದ ಮೂಲವ್ಯಾಧಿ ತನಕ ಎಲ್ಲಾ ಜಡ್ಡುಗಳಿಗೂ ಮನೆಮದ್ದುಗಳು, ಗೋದಿ- ಜೋಳದಾಗ ನುಶಿ ಆದ್ರ, ಬ್ಯಾಳಿ- ಕಾಳಿನಾಗ ಬುರಬುರಿ, ಹಾರೋ ಹುಳ, ರವಾದಾಗ ಬಾಲ ಹುಳ ಆದರೆ ಏನು ಮಾಡಬೇಕು, ತಲ್ಯಾಗ ಹೇನು ಆದ್ರ ಏನು ಮಾಡಬೇಕು, ಮನ್ಯಾಗ ಜೊಂಡಿಗ್ಯಾ,ಹಲ್ಲಿ ಹಾವಳಿಯಾದ್ರ ಏನು ಮಾಡಬೇಕು, ಹೊಲದಾಗಿನ ಯಾವ ಬೆಳೀಗೆ ಯಾವ ಗೊಬ್ಬರ ಹಾಕಬೇಕು, ಮುಖದ ಮೇಲೆ ಮೊಡವಿಗಳಾದ್ರ.. ತಲೆ ಕೂದಲು ಉದುರಿದರ..ತ್ವಚೆ ಕಾಂತಿಹೀನವಾದ್ರಏನೇನೆಲ್ಲ ಮಾಡಬೇಕು?, ಗ್ರಹಣವಾದಾಗ ಏನು ತಿನ್ನಬೇಕು, ಯಾವಾಗ ತಿನ್ನಬೇಕು, ಏನೇನು ದಾನ ಕೊಡಬೇಕು ಎಲ್ಲದರ ವಿವರಣೆ ಇರತದ. ಹಲ್ಲಿ ಮೈಮೇಲೆ ಬಿದ್ರ, ಬೆಕ್ಕು ಅಡ್ಡ ಹೋದ್ರಾ , ನಾಯಿ ಊಳಿಟ್ಟರ, ಮನೆ ಮುಂದೆ ಆಕಳು ಸಗಣಿ ಹಾಕಿ ಹೋಗಿದ್ರ, ಬಲಗಣ್ಣು ಅದುರಿದ್ರ, ಎಡಗಾಲು ತುರಿಸಿದ್ರ.. ಹಿಂಗ ಹತ್ತು ಹಲವಾರು ಶಕುನ ಫಲಗಳು.. ಕನಸಿನಾಗ ತುಂಬಿದ ಕೊಡ ಬಂದ್ರ, ಹಾವು ಬಂದ್ರ, ದೇವರು ಬಂದ್ರ, ಸತ್ತ್ರ, ಎದ್ರ, ಬಿದ್ರ ಅಂತೆಲ್ಲ 108 ಸ್ವಪ್ನ ಫಲಗಳು.. ಮುಂಗಾರು ಹಿಂಗಾರು ಮಳೆ, ನಕ್ಷತ್ರಗಳ ವಿವರಣೆ, ಮಳೆಯ ಸಂಭವನೀಯತೆಗಳು.. ಕೃಷ್ಣಾರ್ಘ್ಯ ಮಂತ್ರ, ಕಾರ್ತಿಕ ಸ್ನಾನದ ಮಂತ್ರ, ನಷ್ಟವಸ್ತು ಸಿಗುವ ಕಾರ್ತವೀರ್ಯಾರ್ಜುನ ಮಂತ್ರ, ಲಗ್ನ ಮುಹೂರ್ತಗಳು, ಪ್ರಯಾಣಕ್ಕೆ ಶುಭ ತಿಥಿ, ಶುಭ ನಕ್ಷತ್ರಗಳ ವಿವರಣೆ , ವಾಸ್ತು ಪುರುಷ ತೇಜಿ ಮಂದಿ ಏನುಂಟು ಏನಿಲ್ಲ ನನಗಂತೂ ಹೊಸ ಕ್ಯಾಲೆಂಡರ್ ಬಂದೊಡನೆ ಅದರ ಹಿಂಪುಟಗಳನ್ನು ತಿರುಗಿಸಿ ನೋಡುವುದೇ ಅಲ್ಲಲ್ಲ ಓದುವುದೇ ಕೆಲಸ. ಈಗೀಗ ಮೊಬೈಲ್ನಾಗೂ ಆಯಾ ವರ್ಷದ ಕ್ಯಾಲೆಂಡರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಒಂದು ಬಟ್ಟೊತ್ತಿದರೆ ಸಾಕು ಎಲ್ಲ ಮಾಹಿತಿ ಪಡೆಯಬಹುದು. ಆದರೆ ಗ್ವಾಡಿಗೆ ಮಳಿ ಹೊಡೆದು ತೂಗು ಹಾಕಿದ ಆ ಕ್ಯಾಲೆಂಡರ್ ನ ಮಜಾ ಖಂಡಿತ ಅದರಾಗಿಲ್ಲ. ಯಾಕಂದ್ರ ನಾ ಈ ಹಿಂದೆ ಹೇಳಿದ ಸೂಜಿ ಚುಚ್ಚುವುದೇ ಮುಂತಾದ ಯಾವ ಬಹುಪಯೋಗಿ ಕೆಲಸಕ್ಕೂ ಅದು ಬರಂಗಿಲ್ಲ.
ಒಟ್ಟಿನಾಗ ಕ್ಯಾಲೆಂಡರ್ ನಮ್ಮ ನಿಮ್ಮೆಲ್ಲರ ಜೀವನದ ಒಂದು ಅವಿಭಾಜ್ಯ ಅಂಗ ಅನ್ನೂದರಾಗ ಎರಡು ಮಾತಿಲ್ಲ ಕಾಲ ದೇಶ ಯಾವುದರ ಇರಲಿ ಗ್ವಾಡಿ ಮೇಲೆ ಕ್ಯಾಲೆಂಡರ್ ಇರಲಿ ಅಂತ ಹೇಳುತ್ತಾ ನನ್ನ ಹರಟಿಗೆ ಮಂಗಳ ಹಾಡುತೀನಿ.