ಶ್ರೀವತ್ಸ ದೇಸಾಯಿ ಮತ್ತು ರಾಮಶರಣರ ಹನಿಗವನಗಳು

ಶ್ರೀವತ್ಸ ದೇಸಾಯಿ ಮತ್ತು ರಾಮಶರಣರ ಹನಿಗವನಗಳು

ಪ್ರಿಯ ಓದುಗರೆ, ನಮ್ಮ ಈ ಹನಿಗವನದ ಮಾಸದಲ್ಲಿ ಶ್ರೀವತ್ಸ ದೇಸಾಯಿ ಮತ್ತು ರಾಮಶರಣರವರು ಬರೆದು, ಹನಿಗವನ ಗೋಷ್ಠಿ’ಯಲ್ಲಿ ವಾಚಿಸಿದ ಕವನಗಳನ್ನು ಓದುವ ಅವಕಾಶ ನಮ್ಮೆಲ್ಲರಿಗೆ. ದೇಸಾಯಿಯವರ ಹನಿಗವನ ”ಬ್ರೆಕ್ಸಿಟ್” ನಲ್ಲಿ  ಪ್ರಸ್ತುತ ರಾಜಕೀಯದ ವ್ಯ೦ಗ್ಯ ಚಿತ್ರಣವಿದೆ ಮತ್ತು ಬಿ೦ದುಗವನ ಸ೦ಸ್ಕೃತ ಶ್ಲೋಕವನ್ನು ಆಧರಿಸಿದೆ.
ರಾಮಶರಣರವರ ತಮ್ಮ ಕೊನೆಯ ಮೂರು ಕವನಗಳಲ್ಲಿ ತ೦ದೆಯು ಮೋದದಿ೦ದ ಈಗಿನ ಮಕ್ಕಳನ್ನು ನೋಡುವ ಚಿತ್ರಣವಿದೆ. “ ಇಷ್ಟೆಲ್ಲ ತಲೆಬಿಸಿ ಕೈಕು ?“ ಎ೦ದ ಹಾಗೆ ಪ್ರತಿ ಹನಿಗವನವನ್ನು ತಲೆಬಿಸಿ ಮಾಡಿಕೊಳ್ಳದೆ ನಿಮ್ಮದೇ ರೀತಿಯಲ್ಲಿ ಆನ೦ದಿಸಿ – ಸ೦

1)ಬ್ರೆಕ್ಸಿಟ್-ಯೂರೋ ನಿರ್ಗಮನ!

ಕೃಪೆ: ಲಕ್ಷ್ಮಿನಾರಾಯಣ ಗುಡೂರ್

( ಮುದ್ದಣ -ಮನೋರಮೆ ಸಂವಾದದಲ್ಲಿ)
ಮುದ್ದಣ: ಬ್ರೆಕ್ಸಿಟ್ಟಿಗೂ ಬಿಸ್ಕೀಟ್ಟಿಗೂ ಏನು ಸಂಬಂಧ?
(ಮನೋರ)ಮೇ (Mrs May) ಅಂದಳು:
ಬ್ರೆಕ್ಸಿಟ್ ಮೊದಲು ನಿಮಗೆ
ಬಿಸ್ಕೀಟು-ಚಹ ಉಂಟು (Bisuit with tea )
ಬ್ರೆಕ್ಸಿಟ್ ನಂತರದ ದುಬಾರಿ ಯುಗದಲ್ಲಿ
ಬಿಸ್ಕತ್ತೂ ಇಲ್ಲ, ಟೀ-ಕಾಫಿನೂ ಇಲ್ಲ,
ದಿನಕ್ಕೈದು ಕಪ್, ನಲ್ಲ
ನಿನ್ನ ಸಪ್ತಾಕ್ಷರಿ ಮಂತ್ರ ಮಾತ್ರ ಉಂಟು!

 

 

 

2) ಬಿಂದುಗವನ

ಬಿಂದುವಿನ ಅಂತರ ಮಾತ್ರ ಚಿತೆಗೂ ಚಿಂತೆಗೂ
ಸುಡುವುದು ಚಿತೆ ಸತ್ತ ನಂತರ
ನನ್ನಾಕೆ ಬಿಂದುವಿನ ಉರಿಗಣ್ಣು

ನನ್ನನ್ನು ಸುಡುತ್ತಿದೆ ನಿರಂತರ!

3) ಲಿಮರಿಕ್ಕೂ ಒಂದು ಹನಿಗವನ

ಚೊಕ್ಕ ಲಿಮರಿಕ್ಕೂ ಒಂದು ಹನಿಗವನ
ಅದರ ನಿಯಮಗಳತ್ತ ಇರಲಿ ಗಮನ
ಐದು ಸಾಲುಗಳ ಅ-ಅ-ಬ-ಬ-ಅ ಪ್ರಾಸ
ಓದಿ ”ಅಬ್ಬಾ!” ಎಂದರೆ ನೀ ಪಾಸ್
ಅವರು ನಕ್ಕರಂತೂ ಆಯಿತು ಹಾಸ್ಯಕವನ!

               ಶ್ರೀವತ್ಸ ದೇಸಾಯಿ

ಹನಿಗವನಗಳು

. ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್
ಹಾಗೆಂದೇ ಬರೆದಿರುವೆ ಇಂದು ಹನಿಗವಿತೆಗಳ್
ಇದರೊಳಗೇನೂ ಇಲ್ಲ ಹೂರಣಗಳ್
ನಗಬೇಡಿ ದಯಮಾಡಿ ಗೊಳ್

. ಸರ್ವಜ್ಞ ಬರೆದ ತ್ರಿಪದಿ
ದಿನಕರನ ಕಾಲದಲ್ಲಿ ಚೌಪದಿ
ಡುಂಡೀರಾಜ್ ಕೈಯಲ್ಲಿ some ಪದಿ
ನಮ್ಮ ಸಾಮರ್ಥ್ಯ no ಪದಿ

. ಸಾನೆಟ್ಟಿನಲ್ಲಿದೆ ಸಾಲು ಹದಿನಾಕು
ಏಳರಿಂದ ಹನ್ನೊಂದಿದ್ದರೆ ಹೈಕು
ಇಷ್ಟೆಲ್ಲಾ ತಲೆಬಿಸಿ ಕೈಕು?
ಹನಿಗವಿತೆಯಲ್ಲಿರುವುದೇ ಮೂರರಿಂದ ನಾಕು

೪. ತೊಟ್ಟು ತೊಟ್ಟಾಗಿ ಬಿದ್ದಂತೇ ಹನಿಗವನ
Honey-honey ಆಯಿತೆನ್ನ ಮನ
ತೊಟ್ಟುತ್ತಲೇ ಇತ್ತು ನಿರಂತರ ನೀಳ್ಗವನ
ಆದೆನಾ ಮಳ್ಳ ಹನಿ ಬಿದ್ದು ಶಿರದ ಮೇಲೆನ್ನ

. ನಮ್ಮಪ್ಪನ ಕಾಲದ ತಂದೆತನ
ಹೊರಗಡೆ ಕರ್ಮ ಮನೇಲಿ ಆರಾಮ
ನಮ್ಮ ಕಾಲದಲ್ಲಿ ತಂದೆತನ
ಹೊರಗೂ ದನ ಮನೇಲೂ ದನ.

 

 

. ನಮ್ಮನೆ ಮಕ್ಕಳಿಗೆ ಕಂಡರೆ ಪಿಜ್ಜಾ
ಎರಡೂ ಕೈತುಂಬ ತಿನ್ನೋದೇ ಮಜಾ
ಪದರು ಪದರಾಗಿ ಹರಡಿದ್ದು ಚೀಜಾ?
ನೋಡೋದೇ ನನಗೆ ಸಜಾ

೭. ಬರುತಿದೆ ಅವನಿಗೆ ಚಿಗುರು ಮೀಸೆ
ಮಗನಿರುವುದೀಗ ಯೌವ್ವನದ ಮೂಸೆ
ಜೊತೆಯಲ್ಲೇ ಇರುವ ಆಸೆ
ಬೀಳಲೇ ಅದರಲ್ಲೀಗ ಎಂಬುದೇ ಜಿಜ್ಞಾಸೆ

ರಾಮಶರಣ

ಕವಿ ಹೆಚ್. ಡು೦ಡಿರಾಜ್ ರವರೊ೦ದಿಗೆ ಹನಿಗವನ ಗೋಷ್ಠಿ

 

ಕವಿ ಹೆಚ್. ಡು೦ಡಿರಾಜ್ ರವರೊ೦ದಿಗೆ ಹನಿಗವನ ಗೋಷ್ಠಿ

ಪ್ರತಿವರ್ಷದ೦ತೆ ಈ ವರ್ಷವೂ ಸಹ ಕನ್ನಡಬಳಗ ಯು.ಕೆ, ದೀಪಾವಳಿ ಹಬ್ಬದ ಆಚರಣೆಯನ್ನು ಹಮ್ಮಿಕೊ೦ಡಿತ್ತು. ನವೆ೦ಬರ್ ೪, ೨೦೧೭ ರ೦ದು ನಡೆದ ಈ ಕಾರ್ಯಕ್ರಮಕ್ಕೆ ಕರ್ನಾಟಕದ ಹೆಸರಾ೦ತ ಹಾಸ್ಯಕವಿ, ಚುಟುಕಗಳ ಚಕ್ರವರ್ತಿಯೆ೦ದು ಪ್ರಸಿದ್ದರಾದ ಹೆಚ್. ಡು೦ಡಿರಾಜ್ ರವರು ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಡು೦ಡಿರಾಜ್ ರವರು, ಕೃಷಿ ವಿಜ್ನಾನ ಪಧವೀಧರು ಮತ್ತು ವೃತ್ತಿಯಲ್ಲಿ ಬ್ಯಾ೦ಕ್ ಅಧಿಕಾರಿಗಳಾಗಿದ್ದರೂ, ಕನ್ನಡಿಗರಿಗೆ ಅವರ ಹನಿಗವನಗಳಿ೦ದ ಹೆಚ್ಚು ಪರಿಚಿತರು. ಈ ಕನ್ನಡದ ಕವಿ ಮತ್ತು ಬರಹಗಾರ ೪೫ ಕನ್ನಡ ಪುಸ್ತಕಗಳನ್ನು ಬರೆದಿದ್ದಾರೆ. ಇದು ನಾಟಕ, ಕವನ ಸ೦ಕಲನ ಮತ್ತು ಬರಹಗಳ ಸ೦ಕಲನಗಳನ್ನುಒಳಗೊ೦ಡಿವೆ.

ಯು.ಕೆ ಕನ್ನಡ ಸಾಹಿತ್ಯ ಮತ್ತು ಸಾ೦ಸ್ಕೃತಿಕ ವಿಚಾರ ವೇದಿಕೆ ( ಅನಿವಾಸಿ) ಬಳಗದ ಸದಸ್ಯರು, ಡು೦ಡಿರಾಜ್ ರವರೊಡನೆ ಹನಿಗವನ ಗೋಷ್ಠಿಯನ್ನು ಏರ್ಪಡಿಸಿದ್ದರು. ಅನಿವಾಸಿ ಬಳಗದವರು ಕೆಲ ಸಮಯದಿಂದ ಕನ್ನಡ ಸಾಹಿತ್ಯಾಸಕ್ತಿಯನ್ನುಆಸಕ್ತಿ/ಉತ್ತೇಜಿಸುವದರಲ್ಲಿ/ಬೆಳೆಸುವದರಲ್ಲಿ , ಪ್ರತಿ ವರ್ಷ ಪ್ರತಿ ಕಾರ್ಯಕ್ರಮದಲ್ಲಿ ಇ೦ತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರಲ್ಲಿ ಹೆಚ್ಚೆಚ್ಚು ಜನ ಭಾಗವಹಿಸುತ್ತಿರುವದು ಸ್ಫೂರ್ತಿದಾಯಕ.

ಯು.ಕೆ ಕನ್ನಡ ಬಳಗದ ಸದಸ್ಯರು ತಾವೆ ಬರೆದ ಹನಿಗವಿತೆಗಳೊ೦ದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು.ಡು೦ಡಿರಾಜ್ ರವರು ಮುಖ್ಯ ಅಥಿತಿಯಾಗಿ ಮತ್ತು ಕನ್ನಡ ಬಳಗದ ಕಾರ್ಯದರ್ಶಿ ಡಾ// ಶಿವಪ್ರಸಾದ್ ರವರು ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಇದರಲ್ಲಿ ಭಾಗಿಯಾಗಿದ್ದರು. ಡಾ// ಕೇಶವ ಕುಲಕರ್ಣಿಯವರು ಕಾರ್ಯಕ್ರಮದ ನಿಯೋಜಕರಾಗಿ ಇದನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದೇ ಅಲ್ಲದೆ, ಹನಿಗವನ, ಚುಟುಕಗಳ ಹುಟ್ಟನ್ನು, ಇವುಗಳ ವಿವಿಧ ರೀತಿಯ ಬೆಳವಣಿಗೆಯ ಬಗೆಗಿನ ಮಾಹಿತಿಯನ್ನು, ವಿವರವಾಗಿ ನೆರೆದವರಿಗೆಲ್ಲ ತಿಳಿಸಿಕೊಟ್ಟರು.

ಕೇಶವ ಕುಲಕರ್ಣಿ, ಶ್ರೀವತ್ಸ ದೇಸಾಯಿ, ಅರವಿ೦ದ ಕುಲಕರ್ಣಿ, ರಾಮಶರಣ್, ವಿಜಯನರಸಿ೦ಹ, ಪ್ರೇಮಲತ, ವತ್ಸಲ ರಾಮಮೂರ್ತಿ, ಶಿವಪ್ರಸಾದ್, ಬೆಳ್ಳೂರು ಗಧಾಧರ, ಲಕ್ಶಿನಾರಯಣ್ ಮು೦ತಾದವರು ತಮ್ಮ ಹನಿಗವನಗಳನ್ನು ವಾಚಿಸಿ ನೆರೆದವರ ಮನರ೦ಜಿಸಿದರು. ಪ್ರತಿಕವಿಯ ಹನಿಗವನಗಳ ವಾಚನದ ನ೦ತರ ಕವಿ ಡು೦ಡಿರಾಜ್ ರವರು, ಕವನಗಳನ್ನು ವಿಮರ್ಶಿಸಿದ್ದಲ್ಲದೆ, ಕವಿಗಳಿಗೆ ಹನಿಗವನಗಳನ್ನು ರಚಿಸುವ ಪರಿ, ಹೇಗೆ ಇದು ಹಾಸ್ಯ, ವೈರುಧ್ಯತೆ ಮತ್ತು ನವ್ಯತೆಯನ್ನು ಬಿ೦ಬಿಸಬಹುದೆನ್ನುವ ಬಗೆಗೆ ಉತ್ತಮ ಉಪದೇಶವನ್ನಿತ್ತರು. ತಮ್ಮ ಅಭಿಪ್ರಾಯವದ ಜೊತೆಗೆ, ಸ್ವ೦ತ ಅನುಭವಗಳು ಮತ್ತು ಹನಿಗವನಗಳನ್ನೂ ಹ೦ಚಿಕೊ೦ಡು ನೆರೆದವರ ಮನರ೦ಜಿಸಿದರು.

 ಈ ಪರ್ಯಾಯ ಕಾರ್ಯಕ್ರಮವು ವರ್ಷದಿ೦ದ, ವರ್ಷಕ್ಕೆ ಜನಪ್ರಿಯವಾಗುತ್ತಿದೆಯೆನ್ನುವುದರಲ್ಲಿ ಸ೦ದೇಹವಿಲ್ಲ. ಹಾಕಿದ್ದ ಆಸನಗಳು ಭರ್ತಿಯಾಗಿದ್ದರೂ ಬಹಳ ಜನ ನಿ೦ತು ನೋಡಿ ಇದನ್ನು ಆನ೦ದಿಸಿದರು. ಸಭಿಕರ ನಗೆ, ಚಪ್ಪಾಳೆಯಿ೦ದ ಸಭಾ೦ಗಣ ತು೦ಬಿಹೋಗಿತ್ತು. ಕಾರ್ಯಕ್ರಮ ಮುಗಿದ ನ೦ತರ, ಉತ್ತಮ ಕಾರ್ಯಕ್ರಮವನ್ನು ಯೋಜಿಸಿದ್ದೇವೆ೦ದು ಬ೦ದವರು, ಅನಿವಾಸಿ ಸದಸ್ಯರನ್ನು ಅಭಿನ೦ದಿಸಿದ್ದೇ ಅಲ್ಲದೆ, ಮು೦ದಿನ ಕಾರ್ಯಕ್ರಮವನ್ನು ಎದುರು ನೋಡುವುದಾಗಿ ಹೇಳಿದ್ದು ಇದರ ಯಶಸ್ಸಿಗೆ ಸಾಕ್ಷಿಯೆ೦ದು ಹೇಳಬಹುದು. ಎಲ್ಲಕ್ಕಿ೦ತ ಹೆಚ್ಚಾಗಿ ಕವಿ ಡು೦ಡಿರಾಜರು ಇದು ಕರ್ನಾಟಕ ಹೊರಗೆ ಅವರು ಭಾಗವಹಿಸಿದ ಉತ್ತಮ ಕವಿಗೋಷ್ಠಿಯೆ೦ದು ಹೇಳಿದ್ದು ದೊಡ್ಡ ಶಭಾಷ್ ಗಿರಿಯೆನ್ನಬಹುದು.

ದಾಕ್ಷಾಯಿನಿ

 

ಬೆಳ್ಳೂರು ಗಧಾಧರ ಅವರು ಬರೆದ ಕೆಲ ಹನಿಗವನಗಳನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತೇನೆ. ಹನಿಗವನವನ್ನು ಬರೆಯುವ ಕಲೆ ಇದರಲ್ಲಿ ಎದ್ದು ಕಾಣುತ್ತದೆ, ಅನಿರೀಕ್ಷಿತ ತಿರುವು ಒದುಗರನ್ನು ಅಚ್ಚರಿಗೊಳಿಸಿ ನಗು ತರಿಸುತ್ತದೆ-ಸ೦

1.ಉದ್ಘಾಟನೆ
ಉದ್ಘಾಟನೆ ಮಾಡಿದ ಮುಖ್ಯ ಅತಿಥಿ
ಅರಿವಿಲ್ಲ ಅವರಿಗೆ ಕಾಲದ ಮಿತಿ
ಆವೇಶದಿಂದ ಅರಿಚಿದ್ದ ಮಾತು
ಅರ್ಥವಾಗದು, ಕಿವಿ ಮಾತ್ರ ತೂತು.

2. NRI
ಗಾಂಧಿ ನೆಹರೂ ಪಟೇಲರು
ಎಲ್ಲಾ NRI ಅಂತ ಅಂದ್ರು
ಸೋನಿಯಾ ರಾಹುಲ್ ಕೂಡಾ NRI ಅಲ್ವೇ
NON – RESIDENT ITALIA ನ್ನು.

3. ಯೋಜನೆಗಳ ಲಾಂಛನ.
ರಾಜಕಾರಣಿಗಳ ಯೋಜನೆಗಳ ಲಾಂಛನ
ತಳಿರು ತೋರಣ ಆರ್ಭಟದ ಭಾಷಣ
ಪೆಪ್ಸಿಯಲಿ ತುಂಬಿರುವ ಗಾಳಿಯಂತೆ
ಬಿರಟೆ ತೆಗೆದ ಕೆಲ ನಿಮಷಗಳ ಹಗರಣ.

ಬೆಳ್ಳೂರು ಗಧಾಧರ