ವಿನ್ನೀ-ದ-ಫೂ (Winnie the Pooh) ಅನ್ನೋ ಕನಸುಗಾರ ವೇದಾಂತಿ: ಡಾ. ವಿನತೆ ಶರ್ಮ ಬರೆದ ಲೇಖನ

ಸಾಹಿತ್ಯ ಒಂದು ಭಾಷೆಯ ಚೌಕಟ್ಟನ್ನು ಮೀರಿ ಬೇರೆ ನೆಲೆಗಳಿಗೆ ಹರಿದು ಸಹೃದಯರ ಕೈ ಜಗ್ಗುವುದು ಬಲ್ಲ ವಿಷಯ. ‘ಪಂಚತಂತ್ರ’ ಕತೆಗಳು ಭಾರತದಲ್ಲಿ ಹುಟ್ಟಿ, ಬೆಳೆದು, ಮಧ್ಯಪ್ರಾಚ್ಯ ದೇಶಗಳಿಗೆ ಹೋಗಿ, ಅಮೇರಿಕ ಮತ್ತು ಯೂರೋಪ್ ದೇಶಗಳಲ್ಲಿ ಕೂಡ ನೆಲೆಸಿವೆ. ನೈಜೀರಿಯಾ ದೇಶದ ಚಿನುವ ಅಚೆಬೆ ಬರೆದ ‘ಥಿಂಗ್ಸ್ ಫಾಲ್ ಅಪಾರ್ಟ್’ ಕೃತಿ ಆಫ್ರಿಕಾ ಖಂಡವನ್ನು ದಾಟಿ, ಆಂಗ್ಲ ಭಾಷೆ ಮಾತನಾಡುವ ಎಲ್ಲ ದೇಶಗಳನ್ನು ಮೀಟಿ ಅಲ್ಲಾಡಿಸಿ, ಪ್ರಪಂಚದ ಅನೇಕ ಭಾಷಿಗರನ್ನು ಹಿಡಿದಿಟ್ಟಿದೆ. ಒಂದು ಭಾಷೆಯ ಸಾಹಿತ್ಯ ಬೇರೆ ಭಾಷಿಗರನ್ನು ಮುಟ್ಟಬಹುದಾದ ಬಗೆಗಳು ಯಾವುವು? ಹಾಗೆಯೇ, ದೊಡ್ಡವರನ್ನು ಮಕ್ಕಳ ಸಾಹಿತ್ಯ ಆಕರ್ಷಿಸುತ್ತದೆಯೇ? ಓದುಗರಾಗಿ ಅವರನ್ನು ಆ ಸಾಹಿತ್ಯ ಪ್ರಕಾರ ಹೇಗೆ ಸಮರ್ಥವಾಗಿ ದುಡಿಸಿಕೊಳ್ಳಬಹುದು? ಚಿಂತನೆಗಳ ಸಂತೆ ಶುಕ್ರವಾರದ ಈ ಲೇಖನ!

 ವಿನ್ನೀ-ದ-ಫೂ  (Winnie the Pooh) ಅನ್ನೋ ಕನಸುಗಾರ ವೇದಾಂತಿ

ಡಾ. ವಿನತೆ ಶರ್ಮ

 ಅದು ೨೦೦೨, ಫೆಬ್ರವರಿ ತಿಂಗಳು. ಸ್ಥಳ ಆಸ್ಟ್ರೇಲಿಯ ದೇಶ. ಹಿಂದಿನ ವರ್ಷವಷ್ಟೇ ಮತ್ತೆ ಯೂನಿವರ್ಸಿಟಿ ಓದಿಗೆ ಮರಳಿ, ಮಹಿಳೆ ಮತ್ತು ಶಿಕ್ಷಣ ವಿಷಯದಲ್ಲಿ ಒಂದು ಚಿಕ್ಕ ಥೀಸಿಸ್ ಬರೆದು ಮುಗಿಸಿದ್ದೆ. ೯ ತಿಂಗಳ ಕಾಲ ಅದೆಷ್ಟು ಪುಸ್ತಕಗಳನ್ನ ಓದಿದ್ದು, ಅದೆಷ್ಟು ಅಕಡೆಮಿಕ್ ಲೇಖನಗಳನ್ನ ಜಾಲಾಡಿದ್ದು. ಮಧ್ಯೆ ಮಧ್ಯೆ ಒಂದಷ್ಟು ಕವನಗಳು, ‘ಡೈಲಾಗ್’ ಗಳು ಹುಟ್ಟಿದ್ದವು. ನಾಟಕದ ಅರ್ಧ ಭಾಗ ಕೂಡ ಕಾಗದದ ಮೇಲೆ ಮೂಡಿತ್ತು. ಪೌಲೊ ಫ್ರೇರಿ, ಮಹಾಶ್ವೇತ ದೇವಿ ಸದಾ ನನ್ನ ಜೊತೆಯಲ್ಲಿದ್ದರು. ಅಂಟೋನಿಯೋ ಗ್ರಾಮ್ಶಿ, ಗಾಯತ್ರಿ ಸ್ಪಿವಾಕ್ ಮತ್ತು ‘ಸಬ್ ಆಲ್ಟರ್ನ್’ ಎಂಬ ಹೊಸ ಗರಿಗಳು ಹಾರಿ ಬಂದಿದ್ದವು.

 ಎಲ್ಲವನ್ನು ಎರಡೂ ಬಗಲಿನಲ್ಲಿಟ್ಟುಕೊಂಡು ಪಿಎಚ್.ಡಿ ಓದನ್ನು ಆರಂಭಿಸಿದ್ದೆ. ಆ ಫೆಬ್ರವರಿ ತಿಂಗಳಲ್ಲಿ ಅವರು ವಿನ್ನೀ-ದ-ಪೂ ನನ್ನ ಕೈಗಿತ್ತರು. ಅವರು ಮಗುವಾಗಿದ್ದಾಗ ಅವರ ತಾಯಿ ಆ ಪುಸ್ತಕವನ್ನ ಅವರಿಗೆಂದು ಕೊಂಡು, ತಮ್ಮ ಪುಟಾಣಿಗೆ ಓದುತ್ತಿದ್ದರಂತೆ. ಆ ಮಧುರ ನೆನಪಿನ ಪುಸ್ತಕವನ್ನು ನನಗೆ ಕೊಟ್ಟು ಅವರು ಹೇಳಿದ್ದು, ‘ರೀಡ್ ದಿಸ್ ಫಾರ್ ಎ ಚೇಂಜ್”.the-original

ಓದಿದೆ. ವಿನ್ನೀ-ದ-ಫೂ ಎನ್ನುವ ಕನಸುಗಾರ, ಮತ್ತವನ ಸ್ನೇಹಿತರ ಪ್ರಪಂಚ ನನ್ನದರೊಳಗೆ ಸೇರಿಕೊಂಡುಬಿಟ್ಟಿತು. ಅಥವಾ, ನಾನವರ ಲೋಕಕ್ಕೆ ಹಾರಿ ಲೇಡಿಬರ್ಡ್ ಆಗಿ ಮರದ ಕೊಂಬೆಯ ಮೇಲೆ ಶಾಶ್ವತವಾಗಿ ಕೂತು ಬಿಟ್ಟೆ ಎನ್ನಲೇ!

 ಎ.ಎ. ಮಿಲ್ನ್ (A.A.Milne) ಎಂಬ ಆಂಗ್ಲ ಲೇಖಕ ತನ್ನ ಮಗ ಕ್ರಿಸ್ಟೊಫರ್ ರಾಬಿನ್, ಮತ್ತವನ ಆಟಿಕೆಯಾದ ಮುದ್ದು ಕರಡಿಯ ಸುತ್ತ ಹೆಣೆದಿರುವ ಈ ಕತೆಗಳು ಜೀವ ತಾಳಿದ್ದು ಇಂಗ್ಲೆಂಡಿನ ಸಸೆಕ್ಸ್ ಪ್ರಾಂತ್ಯದಲ್ಲಿರುವ ಆಶ್ದೌನ್ ಅರಣ್ಯದಲ್ಲಿ. ಫೂ  ಬೇರ್ ಮತ್ತವನ ಸಂಗಾತಿಗಳು (ಕತ್ತೆ, ಮೊಲ, ಹಂದಿಮರಿ, ಕಾಂಗರೂ, ಗೂಬೆ, ಹುಲಿಮರಿ) ನಡೆಸುವ ಏನೆಲ್ಲಾ ಸಾಹಸಗಳು, ರಂಪಾಟಗಳು, ರೋಚಕ ತಲೆನೋವುಗಳು, ಏಳುಬೀಳುಗಳು, ಜೊತೆಗೆ ಅವರುಗಳು ಕೊಡುವ ಒಳನೋಟಗಳು, ಜೀವನದೃಷ್ಟಿಗಳು… ಎಲ್ಲವೂ ಆ ಅರಣ್ಯ ಪ್ರದೇಶದ ‘ಹಂಡ್ರೆಡ್ ಏಕರ್ ವುಡ್’ ನಲ್ಲಿಯೇ ನಡೆಯುವುದು. ಆಹಾ, ಎಂಥ ಅದ್ಭುತ ಲೋಕವದು!

 ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ
ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ

 ಫೂ ಬೇರ್ (Pooh Bear) ಹುಟ್ಟಿನ ಬಗ್ಗೆ ಕೂಡ ಒಂದು ಸ್ವಾರಸ್ಯವಾದ ಹಿನ್ನಲೆಯಿದೆ. ಪುಟ್ಟ ಕ್ರಿಸ್ಟೊಫರ್ ರಾಬಿನ್ ಲಂಡನ್ ಝೂಗೆ ತಪ್ಪದೆ ಭೇಟಿ ಕೊಡುತ್ತಿದ್ದನಂತೆ. ಅಲ್ಲಿದ್ದ ಕೆನಾಡಾದ ಕಪ್ಪು ಕರಡಿ ‘ವಿನ್ನಿ’ಯ ಹೆಸರು (ಆ ಕರಡಿ ಕೆನಾಡಾದ ವಿನ್ನಿಪೆಗ್ ಪ್ರಾಂತ್ಯದ್ದು) ಮತ್ತು ಅವನ ಕುಟುಂಬದವರು ಒಮ್ಮೆ ರಜಾದಿನಗಳಲ್ಲಿ ಭೇಟಿಯಾಗಿದ್ದ ‘ಫೂ ” ಎಂಬ ಹಂಸಪಕ್ಷಿಯ ಹೆಸರನ್ನು ಸೇರಿಸಿ ತನ್ನ ಮುದ್ದು ಟೆಡ್ಡಿಯನ್ನು ವಿನ್ನೀ-ದ-ಫೂ ಎಂದು ಕರೆದನಂತೆ.ಇದಕ್ಕೂ ಮುಂಚೆ ಅವನ ಮುದ್ದು ಟೆಡ್ಡಿಯ ಹೆಸರು ಎಡ್ವರ್ಡ್ ಆಗಿತ್ತು. ಹುಡುಗ ಕ್ರಿಸ್ಟೊಫರ್ ನ ಬಳಿ ಇದ್ದ ಇತರ ಆಟಿಕೆ ಪ್ರಾಣಿಗಳಾದ ಪಿಗ್ಲೆಟ್, ಇಯೋರ್, ಟಿಗ್ಗರ್, ಕಾಂಗ ಮತ್ತು ರೂ (ಅಮ್ಮ-ಮಗನ ಜೋಡಿ) ಫೂ ಬೇರ್ ನ ಕತೆಗಳಲ್ಲಿ ಬರುತ್ತಾರೆ. ಲೇಖಕ ಮಿಲ್ನ್ ಕಾಲ ಕ್ರಮೇಣ ಮತ್ತೆರಡು ಪಾತ್ರಗಳನ್ನ – ರಾಬಿಟ್ ಮತ್ತು ಔಲ್ – ಸೇರಿಸಿದರಂತೆ. ನಡು ನಡುವೆ ಮತ್ತಷ್ಟು ಪಾತ್ರಗಳು – ಉದಾಹರಣೆಗೆ, ಹೆಫಲಮ್ಪ್ ಎಂಬ ಆನೆಮರಿ – ಬರುತ್ತವೆ. ಕ್ರಿಸ್ಟೊಫರ್ ನ ಆ ಮುದ್ದು ಆಟಿಕೆ ಕರಡಿ ವಿನ್ನೀ-ದ-ಫೂ  ನ್ಯೂ ಯಾರ್ಕ್ ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಪ್ರದರ್ಶನದಲ್ಲಿದೆ.winnie-the-pooh-with-friends

 ವಿನ್ನೀ-ದ-ಫೂ  ಕತೆಗಳ ಗುಚ್ಛ ಜನ್ಮ ತಾಳಿದ್ದು ೧೯೨೬ರಲ್ಲಿ. ಈ.ಎಚ್.ಶೆಪರ್ಡ್ ರ ಪೆನ್ಸಿಲ್ ನಿಂದ ಹೊರ ಹೊಮ್ಮಿದ ಚಿತ್ರ ನಿದರ್ಶನಗಳು ಅಜರಾಮರ. ಆ ಕಥಾ ಗುಚ್ಛದ ನಂತರ ಮಿಲ್ನ್ ಇನ್ನೂ ಹಲವಾರು ಪುಸ್ತಕಗಳನ್ನು ಬರೆದರು – ರಿಟರ್ನ್ ಟು ದ ಒನ್ ಹಂಡ್ರೆಡ್ ಏಕರ್ ವುಡ್, ವೆನ್ ವಿ ವರ್ ವೆರಿ ಯಂಗ್, ನೌ ವಿ ಆರ್ ಸಿಕ್ಸ್ ಪುಸ್ತಕಗಳು ಮಿಲ್ನ್ ರ ಕವಿ ಹೃದಯವನ್ನು ಬಿಚ್ಚಿಡುತ್ತವೆ. ೧೯೩೦ ರಿಂದಾಚೆಗೆ ಈ ಕತೆಗಳನ್ನು ಅಮೆರಿಕ, ಬ್ರಿಟನ್ ದೇಶಗಳ ಟೆಲಿವಿಷನ್ ಗೆ ತಂದದ್ದು ಸ್ಟೀವನ್ ಸ್ಲೆಸಿಂಜರ್ (೧೯೩೦) ಮತ್ತು  ವಾಲ್ಟ್ ಡಿಸ್ನಿ ಸಂಸ್ಥೆ (೧೯೬೧). ಡಿಸ್ನಿ ಸಂಸ್ಥೆ ಹೊಸ ಚಿತ್ರಗಳನ್ನು, ಬಣ್ಣಗಳನ್ನು ಅಳವಡಿಸಿ ಹೊಸ ವಿನ್ಯಾಸದಲ್ಲಿ ಅದೇ ಕತೆಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದೂ ಅಲ್ಲದೆ, ವಿಡಿಯೋ ಮತ್ತು ಡಿ ವಿ ಡಿ ಗಳನ್ನೂ ತಂದು ಲಕ್ಷಾಂತರ ಮಕ್ಕಳು ಫೂ ಬೇರ್ ಕತೆಗಳನ್ನು ಪರದೆಯ ಮೇಲೆ ನೋಡುವಂತೆ ಮಾಡಿದೆ (https://www.youtube.com/watch?v=xHYvpXe75b8 ). ಹಾಡುಗಳು, ಆಡಿಯೋ, ರೇಡಿಯೋ, ರಂಗರೂಪಾಂತರ ಮುಂತಾದ ವಿಧ ವಿಧವಾದ ಅಳವಡಿಕೆಗಳಲ್ಲೂ ಅವು ಮೂಡಿ ಬಂದಿವೆ. ಅವನ ಹೆಸರಿನಲ್ಲಿ ಸಂಘ ಸಂಸ್ಥೆಗಳೂ ಇವೆ. (http://www.letssingit.com/?a=www_player&special_id=zv9p2sq )

 ಫೂ ಬೇರ್ ಒಬ್ಬ ನಿಷ್ಕಪಟ, ಸರಳ, ಕೆಲವೊಮ್ಮೆ ಸ್ವಲ್ಪ ಮೊದ್ದು ಸ್ವಭಾವದವ. ಅವನು ಮಕ್ಕಳನ್ನು, ದೊಡ್ಡವರನ್ನು ಗೆದ್ದಿದ್ದು ಅದೇ ಬೆಪ್ಪುತನದಿಂದ, ಅದೇ ನೈಜ ಮುಗ್ಧತೆಯಿಂದ. ಅವನ ನಿಧಾನಿಕೆಯಲ್ಲಿ ಅದೆಷ್ಟು ಅರಿವಿದೆ, ಹರಿವಿದೆ, ಜಾಣ್ಮೆಯಿದೆ, ಸ್ನೇಹವಿದೆ, ವಿವೇಚನೆಯಿದೆ! ಒಮ್ಮೊಮ್ಮೆ ಅವನ ಸ್ನೇಹಿತರಿಗೆ ಅವನು ಕೋಪ ತರಿಸಿ ಅವರು ಹಾರಾಡುವಂತೆ ಮಾಡಿದರೂ ಕಡೆಗೆ ಅವರು ಅವನ ಒಳ ಪ್ರಜ್ಞೆಯನ್ನು, ವಿವೇಕವನ್ನು ಮನಸಾರೆ ಒಪ್ಪಿಕೊಳ್ಳುತ್ತಾರೆ. ಪಿಗ್ಲೆಟ್ ಗಂತೂ ಫೂ  ಬೇರ್ ಇಲ್ಲದೆ ಜೀವನವಿಲ್ಲ. ಟಿಗ್ಗರ್ ಹೆಸರಿಗೆ ತಕ್ಕಂತೆ ಹುಲಿಮರಿಯಾಗಿ ಎಷ್ಟೆಷ್ಟೆ ಕುಣಿದಾಡಿದರೂ ಅವನ ಒಳ ಮನಸ್ಸಿಗೆ ಗೊತ್ತು – ಆಗೋ ಅಲ್ಲಿದ್ದಾನೆ ಫೂ  ಬೇರ್, ನನ್ನನ್ನು ವಾಸ್ತವಕ್ಕೆ ಮರಳಿ ತರುವ ನಿಧಾನಸ್ಥ, ಎಂದು. ಜಾಣ ರಾಬಿಟ್ ಮತ್ತು ಬುದ್ಧಿ ಹೇಳುವ ಔಲ್ ಗಳು ಎಷ್ಟೇ ಫೂ ಬೇರ್ ನ ಎಮ್ಮೆತನವನ್ನು ದೂರ ಸರಿಸಿದರೂ ಅವನ ಆ ‘ಈ ಕ್ಷಣದಲ್ಲಿ ಅಡಗಿರುವ ನಾನೆಂಬ ಅರಿವು’ ಎನ್ನುವ ಕೋಮಲ ಸ್ವಭಾವ ಅವರನ್ನು ಅವನ ಹತ್ತಿರಕ್ಕೆ ಎಳೆದು ತರುತ್ತದೆ.

 ಆ ನಿಧಾನಸ್ಥ ಅತ್ಯುತ್ತಮ ಕನಸುಗಾರ ಕೂಡ. ಅವನು ಹೇಳುವ ಮಾತುಗಳು, ಕಟ್ಟುವ ಪದ್ಯಗಳು, ಆಗಾಗ ಅನುರಣಿಸುವ ‘ಹಮ್’ ಗಳು ಓದುಗರ ಮುಖದಲ್ಲಿ ಮಂದಹಾಸವನ್ನು ಮೂಡಿಸುತ್ತವೆ. ಕತೆಗಳನ್ನು ಕೇಳುತ್ತಿರುವ ಚಿಕ್ಕ ಮಕ್ಕಳು ಕೇಕೆ ಹಾಕಿ ನಗುತ್ತಾರೆ, ಆ ಪದ್ಯಗಳನ್ನು ಮತ್ತೆ ಓದಿ ಎಂದು ದೊಡ್ಡವರನ್ನು ಪೀಡಿಸುತ್ತಾರೆ.

 ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ
ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ

 ಫೂ ನ ‘ಏನೂ ಮಾಡದ – ಡುಯಿಂಗ್ ನಥಿಂಗ್’ ಎಂಬ ಮನಸ್ಥಿತಿ ಮಕ್ಕಳಲ್ಲಿ ಕಿಲಿಕಿಲಿ ನಗು ಹುಟ್ಟಿಸಿದರೆ, ದೊಡ್ಡವರಲ್ಲಿ ಅಚ್ಚರಿ, ಹೊಟ್ಟೆಕಿಚ್ಚು ಕೂಡ ಉಂಟಾಗುತ್ತದೆ! ಅವನು ಮತ್ತು ಪಿಗ್ಲೆಟ್  ಜೊತೆಗೂಡಿ ಹೋಗುವ ನಡಿಗೆಗಳು, ತಮಗೆ ತಿಳಿಯದೆ ತೊಡಗಿಸಿಕೊಳ್ಳುವ ಪ್ರಕ್ರಿಯೆಗಳು – ವಾಹ್, ಅದೆಷ್ಟು ಮೃದುವಾಗಿ ಮಿಲ್ನ್  ಜೀವನದ ಬಗ್ಗೆ ವ್ಯಾಖ್ಯಾನಿಸುತ್ತಾರೆ! ಕ್ರಿಸ್ಟೊಫರ್ ರಾಬಿನ್ ನಕ್ಕು ಆಗಾಗ ಉದ್ಗರಿಸುವ ‘ಸಿಲ್ಲಿ ಓಲ್ಡ್ ಬೇರ್’ ನಾವು ಮನ ಸೋಲುವಂತೆ ಮಾಡುತ್ತಾನೆ.the-original-2

ಮನ ಸೋಲುವಂತೆ ಮಾಡಿರುವುದು ಕತೆಗಾರ ಮಿಲ್ನ್ ಎಂಬುದನ್ನು ನಾವು ದೊಡ್ಡವರು ಗುರ್ತಿಸುತ್ತೇವೆ. ಆ ‘ಸಿಲ್ಲಿ ಓಲ್ಡ್ ಬೇರ್’ ಹೇಳುವ ಮಾತುಗಳಿಗೆ ಒಮ್ಮೊಮ್ಮೆ ಮೊದಲಿಲ್ಲ, ಕೊನೆಯಿಲ್ಲ; ಇಂಗ್ಲಿಷ್ ಭಾಷೆಯಲ್ಲಿರುವ ಪದಗಳ ಅಕ್ಷರಗಳು ಕೆಲವೊಮ್ಮೆ ಹಿಂದು ಮುಂದು, ಉಲ್ಟಾ ಪಲ್ಟಾ, ಚೆಲ್ಲಾಪಿಲ್ಲಿ. ಕೆಲವೊಂದು ಪದಗಳ ಗುಚ್ಛದಲ್ಲಿ ಪ್ರತಿಯೊಂದು ಪದ ದೊಡ್ಡ ಅಕ್ಷರದಿಂದ (capital letter) ಆರಂಭವಾಗುವುದು ಮತ್ತಷ್ಟು ಆಸಕ್ತಿ ಹುಟ್ಟಿಸುತ್ತದೆ. ಈ ವಿಶೇಷತೆಯನ್ನು ಮಕ್ಕಳು ಕೂಡ ಗುರ್ತಿಸುತ್ತಾರೆ. ಯಾಕೆ ಬೇಕು ಅಷ್ಟೆಲ್ಲಾ ಫಜೀತಿ ಎಂದು ಫೂ ಬೇರ್ ಹೇಳುವುದು ‘ಓಹ್ ಬಾದರ್’. ಯಾರಾದರೂ “ಸಂಗೀತ ಮತ್ತು ಬದುಕು…” ಎಂದು ಮಾತು ಆರಂಭಿಸಿದರೆ ಪಟ್ಟನೆ ಫೂ ಹೇಳುವುದು “ಅವೆರಡೂ ಒಂದೇ”. ಇಂತಹ ಉದ್ಗಾರಗಳು,  ಅವನ ‘ಹಮ್’ ಕಾರ ತಕ್ಷಣ ಮಕ್ಕಳ ಹೃದಯಕ್ಕೆ ಹತ್ತಿರವಾಗಿ ಬಿಡುತ್ತವೆ.

 ಫೂ ಹೇಳುವಂತೆ ಕವಿತ್ವ, ಕಾವ್ಯ ಕಟ್ಟುವುದು ಮತ್ತು ಹಮ್ ಗಳು ನಾವು ಗಳಿಸುವುದಲ್ಲ; ಅವು ನಮ್ಮನ್ನು ಪಡೆಯುತ್ತವೆ. ಅವು ನಮ್ಮನ್ನು ಎಲ್ಲಿ ಹುಡುಕುತ್ತವೋ ಅಲ್ಲಿ ನಾವು ಹೋಗುವುದಷ್ಟೇ ನಾವು ಮಾಡಬೇಕಿರುವುದು. ಆದರೆ ತೀಕ್ಷ್ಣ ಬುದ್ಧಿಯ, ಸ್ವಲ್ಪ ಸಿಡುಕಿನ ರಾಬಿಟ್ ಅದರಲ್ಲಿ ಅಷ್ಟೊಂದು ಅರ್ಥವಿಲ್ಲ ಅನ್ನುತ್ತಾನೆ. ಫೂನ ಉತ್ತರ, “ಅರ್ಥವಿಲ್ಲ, ಹೌದು. ಆದರೆ ನಾನು ಆ ಮಾತನ್ನು ಶುರು ಮಾಡಿದಾಗ ಅರ್ಥವಿತ್ತೇನೋ. ಮಾತು ಹೊರಡುತ್ತಿದ್ದಾಗ ಮಧ್ಯ ದಾರಿಯಲ್ಲಿ ಅದಕ್ಕೇನೋ ಆಗಿಬಿಟ್ಟಿತು”.

ಹೌದಲ್ಲ, ನಮ್ಮ ಜೀವನದ ಎಲ್ಲಕ್ಕೂ ನಾವು ಅರ್ಥ ಕಟ್ಟಲು ಪ್ರಯತ್ನಿಸುತ್ತೀವಿ. ಒಮ್ಮೆಮ್ಮೆ ಅದರಲ್ಲೇ ಕಳೆದುಹೋಗುವ ಅಪಾಯವುಂಟು. ಅರ್ಥ ಕಳೆದು ಹೋಗುವ ಕ್ಷಣದ, ಅರ್ಥ ಅನಗತ್ಯ ಎಂಬುದನ್ನು ಗುರ್ತಿಸುವವರು ನಾವಾದರೆ?! ನಾವೇ ನಾವಾಗಿ ನಮ್ಮ ಅಂತರಾಳಕ್ಕೆ ಇಳಿದು ಅಲ್ಲಿ ತಾನೇ ತಾನಾಗಿರುವ ಅರ್ಥವನ್ನು ನೋಡಿಬಿಟ್ಟರೆ!!unabridged

 ಫೂ ಬೇರ್ ನ ಅಚ್ಚುಮೆಚ್ಚಿನ ಜೇನುತುಪ್ಪದ ಬಗ್ಗೆ ಮಾತನಾಡುತ್ತಾ ಅವ ಇಡೀ ವಿಶ್ವದ ಬಗ್ಗೆ ಚಿಂತಿಸುತ್ತಾನೆ. ಕ್ರಿಸ್ಟೊಫರ್  ರಾಬಿನ್ ಒಮ್ಮೆ ಅವನನ್ನು ಈ ಪ್ರಪಂಚದಲ್ಲಿ ನಿನಗೆ ತುಂಬಾ ಇಷ್ಟವಾದದ್ದು ಏನು ಎಂದು ಕೇಳಿದಾಗ, ವೆಲ್ ಎಂದು ಫೂ  ಸುಮ್ಮನಾಗುತ್ತಾನೆ. ‘ಜೇನುತುಪ್ಪ ತಿನ್ನುವುದು ತುಂಬಾ ಇಷ್ಟವಾದದ್ದು; ಆದರೂ, ಅದನ್ನು ತಿನ್ನುವ ಮುನ್ನ ಒಂದು ಘಳಿಗೆಯಿತ್ತಲ್ಲಾ, ಆ ಘಳಿಗೆ ತಿನ್ನುವ ಕ್ರಿಯೆಗಿಂತಲೂ ಚೆನ್ನಿತ್ತಲ್ಲಾ, ಆದರೆ ಅದು ಆ ಘಳಿಗೆ ಏನೆಂದು ಅವನಿಗೆ ತಿಳಿದಿರಲಿಲ್ಲ’ – ಇಂತಹ ದಾರ್ಶನಿಕ ತತ್ವದ ಮಾತುಗಳನ್ನು ‘ಫೂ ಬೇರ್ ನೀಡುವ ಜೀವನದ ಒಳದೃಷ್ಟಿ, ಗಾಢವಾದ ತತ್ವಜ್ಞಾನ’ ಎಂದು ಬೆಂಜಮಿನ್ ಹೊಫ್ ಹೇಳುತ್ತಾರೆ. ಅದನ್ನೇ ಆಧರಿಸಿ ಅವರೂ ಕೂಡ ಟಾಓ ಆಫ್ ಫೂ  (Taoism) ಮುಂತಾದ ಪುಸ್ತಕಗಳನ್ನು, ಜಾನ್ ವಿಲಿಯಮ್ಸ್ ಫೂ ಅಂಡ್ ದ ಫಿಲಾಫರ್ಸ್ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ. ಇಬ್ಬರೂ ಆ ಕತೆಗಳಲ್ಲಿ ಪಾಶ್ಯಾತ್ಯ ದಾರ್ಶನಿಕತೆ ಮತ್ತು ವೇದಾಂತ ಅಡಗಿದೆ ಎನ್ನುತ್ತಾರೆ. ಪ್ರಸಿದ್ಧ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಫೂ  ಬೇರ್ ಮತ್ತವನ ಸ್ನೇಹಿತರನ್ನೊಳಗೊಂಡ ಅನೇಕ ಚರ್ಚೆಗಳೂ ನಡೆಯುತ್ತವೆ. ಫೂ ಬೇರ್ ನ ಕತೆಗಳನ್ನಾಧರಿಸಿ ಕಾರ್ಪೊರೇಟ್ ವಲಯಗಳಲ್ಲಿ, ಮ್ಯಾನೇಜ್ಮೆಂಟ್ ತರಬೇತಿಗಳಲ್ಲಿ ಸೂಕ್ತ ಚಟುವಟಿಕೆಗಳನ್ನು ಕೂಡ ನಡೆಸುತ್ತಾರೆ.

 ಫೂ  ನ ಈ ಮಾತು – “ನೀ ದೂರ, ಬಲು ದೂರ ಹೇಗೆ ಹೋಗತ್ತೀ? ನೀ ಯಾರೆಂದು ನಿನಗೆ ಅರಿವಿಲ್ಲವೆಂದರೆ?”,  ಕತೆಗಳಲ್ಲಿ ಬರುವ ಹಾಡುಗಳು, ದಾರ್ಶನಿಕ ಮಾತುಗಳು, ಚಿಂತನೆ, ವಿಮರ್ಶೆ, ವ್ಯಾಖ್ಯಾನಗಳು ವಿನ್ನೀ-ದ-ಫೂ ಮತ್ತವನ ಸ್ನೇಹಿತರ ಪಾತ್ರಗಳು ನಮ್ಮ ಜೀವನವನ್ನು ಒರೆ ಹಚ್ಚಿ ನೋಡುವಂತೆ ಪ್ರೇರೇಪಿಸುತ್ತವೆ. ಅಷ್ಟರ ಮಟ್ಟಿಗೆ ಅವರೆಲ್ಲರೂ ತತ್ವ ಜ್ಞಾನಿಗಳೇ!!

ಎಲ್ಲಕ್ಕೂ ಒಂದು ಚೌಕಟ್ಟು, ಭೂಮಿಕೆಯನ್ನು ಒಡ್ಡಿಕೊಳ್ಳುವ ಪ್ರಮೇಯವನ್ನೇ, ಕಾರಣವನ್ನೇ ಬಿಟ್ಟು ಬದುಕುವ ಫೂ ಬೇರ್ ನಿಜಕ್ಕೂ ಒಬ್ಬ ವೇದಾಂತಿಯೇ ಹೌದು ಎನಿಸಿಬಿಡುತ್ತದೆ. ನನ್ನೊಳಗೆ ಅಡಗಿರುವ ಫೂ ಬೇರ್ ಎಲ್ಲಿ ಎನ್ನುವ ಹುಡುಕಾಟ ಆರಂಭವಾಗುತ್ತದೆ.

 ಡಾ. ವಿನತೆ ಶರ್ಮ

ಡಾ. ನಾಗತಿಹಳ್ಳಿ ಚಂದ್ರಶೇಖರ ರೊಡನೆ ಸಂದರ್ಶನ-ಡಾ. ಪ್ರೇಮಲತ ಬಿ.

ನಾಗತಿಹಳ್ಳಿ ಚಂದ್ರಶೇಖರ್ ಅಂದರೆ ತಕ್ಷಣವೇ ಅವರ ಚಲನಚಿತ್ರಗಳು ಕನ್ನಡಿಗರ ಕಣ್ಣ ಮುಂದೆ ಬರುತ್ತವೆ. ಕನ್ನಡ ಲೋಕಕ್ಕೆ ಸದಭಿರುಚಿಯ ಚಲನಚಿತ್ರಗಳನ್ನಷ್ಟೇ ಅಲ್ಲ ಅವರು ಕೊಡುತ್ತಿರುವುದು. ಅವರ ರೆಕ್ಕೆಗಳು ಸಾಹಿತ್ಯದ ಹಲವಾರು ವೈವಿಧ್ಯತೆಗಳನ್ನು, ಅವರ ಬೇರುಗಳು ಗಾಢವಾದ ಸಾಮಾಜಿಕ ಕಳಕಳಿಯನ್ನು ಅಪ್ಪಿಕೊಂಡಿವೆ. ಡಾ. ಚಂದ್ರಶೇಖರ್ ಅನಿವಾಸಿಬಳಗದ ಮುಂದೆ ಬಂದದ್ದು ಸೆಪ್ಟೆಂಬರ್ ೨೫ರ ಭಾನುವಾರದಂದು. ಆ ವಿಶೇಷ ಸಂದರ್ಭದ ಬಗ್ಗೆ ಅನಿವಾಸಿಸದಸ್ಯರಾದ ಡಾ. ಪ್ರೇಮಲತ ಬರೆಯುತ್ತಾ, ಅವರು ಡಾ. ಚಂದ್ರಶೇಖರ್ ರ ಜೊತೆ ನಡೆಸಿದ ಸಂವಾದವನ್ನೂ ಕೂಡ ಓದುಗರೊಡನೆ ಹಂಚಿಕೊಂಡಿದ್ದಾರೆ. ಬನ್ನಿ, ಈ ಶುಕ್ರವಾರದ ಲೇಖನವನ್ನು ಓದುತ್ತಾ ನಾಗತಿಹಳ್ಳಿ ಚಂದ್ರಶೇಖರ್ ರ ಲೋಕದಲ್ಲಿ ಇಣುಕೋಣ. – ಸಂ.

ಡಾ. ನಾಗತಿಹಳ್ಳಿ ಚಂದ್ರಶೇಖರ ರೊಡನೆ ಸಂದರ್ಶನ-ಡಾ. ಪ್ರೇಮಲತ ಬಿ.

ಕನ್ನಡ ಚಿತ್ರರಂಗದಲ್ಲಿ ಈಗ ಉಳಿದಿರುವ ಕೆಲವೇ ಮಂದಿ ಪ್ರತಿಭಾವಂತ, ಸ್ರುಜನಶೀಲ ನಿರ್ದೇಶಕರಲ್ಲಿ ದೊಡ್ಡದಾದ ಹೆಸರು ಡಾ. ನಾಗತಿಹಳ್ಳಿ ಚಂದ್ರಶೇಖರದು.ಇವರು ಬರೇ ನಿರ್ದೇಶಕರಲ್ಲ. ಎಂ.ಎ. ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವ ವಿದ್ಯಾಲಯದಿಂದ ಚಿನ್ನದ ಪದಕಗಳೊಂದಿಗೆ ಪಡೆದವರು. ಕನ್ನಡ ಪ್ರಾಧ್ಯಾಪಕರಾಗಿ ದಶಕಕ್ಕೂ ಹೆಚ್ಚು ಕಾಲ ಕೆಲಸಮಾಡಿದವರು. ಹಾಗಂತಲೇ ಇವರನ್ನು ‘ಮೇಷ್ಟ್ರು’ ಅಂತ ಈಗಲೂ ಕರೆಯುವವರಿದ್ದಾರೆ.ಜೊತೆಗೆ ಬರಹಗಾರರು.  ಸರಳವಾಗಿ, ನೇರವಾಗಿ ಮಾತಾಡುವವರು.ಅಂಕಣಗಾರರು.

ಇಷ್ಟೆಲ್ಲ ಕಿಚ್ಚಿರುವ ಇವರು ಚಲನಚಿತ್ರ ರಂಗಕ್ಕೆ ಬಂದದ್ದು, ಇತ್ತೀಚೆಗೆ ನಿಧನರಾದ ಅಶೋಕ್ ಪೈ ಅವರ 1986 ರ  ‘ಕಾಡಿನಬೆಂಕಿ’ ಚಲನಚಿತ್ರದ ಮೂಲಕ. ಈ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ಇವರು ಬರೆದಿದ್ದಾರೆ. ಇದಕ್ಕೆ best regional feature film ಅನ್ನೋ ರಾಷ್ಟ್ರ ಮನ್ನಣೆಯ  ಜೊತೆಗೆ ರಾಜ್ಯ ಪ್ರಶಸ್ತಿ ಬಂತು. ಇವರದೇ ಚೊಚ್ಚಲ ನಿರ್ದೇಶನದ ’ಉಂಡೂ ಹೋದ-ಕೊಂಡೂ ಹೋದ” ಚಿತ್ರವನ್ನು ಮಾಡಿದರು. ಇದರ ಚಿತ್ರಕಥೆ-ಸಂಭಾಷಣೆಗೆ ರಾಜ್ಯ ಪ್ರಶಸ್ತಿ ಬಂತು.ಇಲ್ಲಿಂದ ಮುಂದೆ ಇವರು ಮೇಲಿನ ಎಲ್ಲ ಮಾಧ್ಯಮಗಳೊಂದಗೆ ತಮ್ಮನ್ನು ಹಂಚಿಕೊಂಡಂತವರು. ಸಿನಿಮಾ, ದೂರ ದರ್ಶನ, ಪತ್ರಿಕೆಗಳು, ಪುಸ್ತಕಗಳು,ಮತ್ತು ಸಾಮಾಜಿಕವಾಗಿ ಮತ್ತ್ತಷ್ಟು ಬೆಳೆದವರು.’ನಾಗತಿಹಳ್ಳಿ ಟೆಂಟ್ ಸಿನಿಮಾ’ ಅನ್ನೋ ಹೆಸರಲ್ಲಿ ನಟನೆ ಮತ್ತು ಸಿನಿಮಾದ ಬರಹಗಳಿಗೆ ತರಭೇತಿ ಶಾಲೆಯನ್ನು ತೆರೆದು ಮತ್ತೆ”ಮೇಷ್ಟ್ರು’  ಆದವರು! ತನ್ನ ಬದುಕಿನ ಎಲ್ಲ ಆಸಕ್ತಿಗಳನ್ನು ಬಗಲಲ್ಲಿ ಇರಿಸಿಕೊಂಡೇ ಮುಂದುವರೆದಿರುವ ಇವರ ಬದುಕಿನಲ್ಲಿ ಈಗ ಅದೆಷ್ಟು ಸಣ್ಣ ಕಥೆಗಳಿಗಾಗುವಷ್ಟು ಸರಕಿದೆಯೋ  ಗೊತ್ತಿಲ್ಲ!!

ಯಾರಾದರೂ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯಲ್ಲಿ ಹುಟ್ಟಿ, ಯಾವ ವಶೀಲಿಯೂ ಇಲ್ಲದೆ, ಗಾಡ್ ಫಾದರ್ ಗಳ ಅಭಯವಿಲ್ಲದೆ   ಬೆಂಗಳೂರಿನಲ್ಲಿ ಹೆಸರುಮಾಡಬೇಂಕೆಂದರೆ ಅಪ್ಪಟ ಪ್ರತಿಭೆಯಿರಬೇಕು. ತಮ್ಮ ಸ್ಥಾನವನ್ನು ಗಳಿಸಲು ಅವಿರತ ಕೆಲಸ ಮಾಡಿರಬೇಕು.ಜೀವನದಲ್ಲಿ ಶಿಸ್ತಿರಬೇಕು. ಒಂದಷ್ಟು ವಿಶಷ್ಟ ಆದರ್ಶಗಳನ್ನು ಮೈ ಗೂಡಿಸಿಕೊಂಡಿರಬೇಕು. ಅಪಾಯಕರ ಸಾಹಸಗಳನ್ನು ಉಸಿರಿಡಿದು ಮಾಡಲು ತಯಾರಿರಬೇಕು.ನೂರು ಜನರ ನಡುವೆ ಕೆಲಸಮಾಡುವ ಹೊಂದಾಣಿಕೆಯ ಸ್ವಭಾವವನ್ನು ಹೊಂದಿರಬೇಕು.ಕಾರ್ಯನೈಪುಣ್ಯತೆಯನ್ನು ಉಳಿಸಿಕೊಳ್ಳಲು ಸಮಯದ ಜೊತೆ ಗುದ್ದಾಡುವ ಛಲವಿರಬೇಕು.ಫಲಿತಾಂಶವಾಗಿ ಸಿಗುವ ಅಮ್ರುತವನ್ನೂ, ಹಾಲಾಹಲವನ್ನೂ ನುಂಗಿ ತಡೆದುಕೊಳ್ಳುವ ತಾಕತ್ತಿರಬೇಕು. ಕಾಲಿಗೆ ಚಕ್ರ, ಕಣ್ಣಿಗೆ ಎಣ್ಣೆ,ಮಿದುಳಿನ ಅವಿರತ ಕೆಲಸ, ಹತ್ತು ಕೆಲಸಗಳ ಮಧ್ಯೆ ಅಪಾರ  ತಾಳ್ಮೆ  58 ರ ಹರೆಯದಲ್ಲೂ  ಇವರಲ್ಲಿ ಬೇಕಾದಷ್ಟಿದೆ!

ಇವರ ಇದುವರೆಗಿನ ಸಾಧನೆಗಳ ಅವಲೋಕನಕ್ಕೆ, ಸಂದಿರುವ ಪ್ರಶಸ್ತಿಗಳ ಪಟ್ಟಿಗೆ ಇವರದೇ ಹೆಸರಿನ ವೆಬ್ ಸೈಟಿಗೆ ಭೇಟಿ ನೀಡುವದೇ ಉಚಿತ. http://www.nagathihalli.com/

’ಇಷ್ಟಕಾಮ್ಯ’ ಚಿತ್ರದ ಜೊತೆ ಇವರನ್ನು ಇಂಗ್ಲೆಂಡಿಗೆ ಬರಮಾಡಿಕೊಂಡವರು, ಕನ್ನಡಿಗರು, ಯು.ಕೆ.  ಅಧ್ಯಕ್ಷರಾದ ಗಣಪತಿ ಭಟ್. ಜೂನ್ ತಿಂಗಳಲ್ಲಿ ನಾಗತಿಹಳ್ಳಿಯವರನ್ನು ಬರಮಾಡಿಕೊಂಡು, London, Bristol, Cardiff, Dorset ಗಳಲ್ಲಿ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಟ್ಟವರು.

ಈ ಕನ್ನಡ ಸಂಘ 2008 ರಲ್ಲೇ ನಾಗತಿಯವರ ’ಮಾತಾಡ್, ಮಾತಾಡ್ ಮಲ್ಲಿಗ” ಸಿನಿಮಾವನ್ನು Reading ನಲ್ಲಿ 200 ಜನರೆದುರು ಪ್ರದರ್ಶನ ಮಾಡಿತ್ತು. ಇದಕ್ಕು ಮೊದಲು ಇತರೆ 25 ಕ್ಕೂ ಹೆಚ್ಚು ಸಿನಿಮಾಗಳನ್ನು ತರಿಸಿ ಕನ್ನಡ ಸಮುದಾಯಕ್ಕೆ ಮನರಂಜನೆ ಒದಗಿಸಿದೆ.ಈಗ ಒಂದು ವರ್ಷ ದಿಂದ KUK Talkies ನ  ಬ್ಯಾನರಿನಡಿ  ಕನ್ನಡದ ಸಿನಿಮಾಗಳಿಗೆ ಮಾರುಕಟ್ಟೆ ಗಳಿಸುವಲ್ಲಿ ನಿರತರಾಗಿದ್ದಾರೆ.

ಮತ್ತೆ ಈ ಬಾರಿ ನಾಗತಿಯವರನ್ನು ಬರಮಾಡಿಕೊಂಡು, ಅವರ ಜೊತೆ  Cambridge, Doncaster ಮತ್ತು Newcastle ಗಳಿಗೆ ಓಡಾಡಿಸಿದವರು ಗಣಪತಿ ಭಟ್.’ಕನ್ನಡಿಗರು, ಯು.ಕೆ.’ ಯ  ಸಂಪರ್ಕಕ್ಕೆ ಬಂದವರು ಸುಮನ-ಗಿರೀಶ್ ದಂಪತಿಗಳು. ಸಾಂಸ್ಕ್ರಿತಿಕ ಕಾರ್ಯಕ್ರಮಗಳ ಬಗ್ಗೆ ಅಪಾರ ಆಸಕ್ತಿಯಿರುವ, ರಂಗಭೂಮಿಯ ಅನುಭವವಿರುವ ಸುಮನಾರಿಗೆ ಇಷ್ಟಕಾಮ್ಯ ಪ್ರದರ್ಶನವನ್ನು ನಡೆಸಲು ನಿರ್ಧಾರ ತೆಗೆದುಕೊಳ್ಳಲು ಅರ್ಧ ಗಂಟೆಯ ಸಮಯವಿತ್ತು! ಯಾವ ಬಳಗ-ಕೂಟಗಳ ಒತ್ತಾಸೆಯಿಲ್ಲದೆ ವಯಕ್ತಿಕವಾದ ನಿರ್ಧಾರವನ್ನು ತಗೊಂಡವರು ಸುಮನಾ. ಒತ್ತಾಸೆಯಾಗಿ ನಿಂತವರು ಪತಿ ಡಾ. ಗಿರೀಶ್ ವಸಿಷ್ಟ. Doncaster ರಿನ ಇವರ ಮನೆಗೆ ನಾಗತಿಯವರನ್ನು ಕರೆತಂದವರು ಗಣಪತಿ ಭಟ್. ರಾತ್ರಿ ಸುಮನಾರ ಆತಿಥ್ಯಕ್ಕೆ ರುಚಿ ಸೇರಿಸಿದವರು ರಂಗಭೂಮಿಯ ಅನುಭವವಿರುವ ಸುಮನಾರ ತಾಯಿ ಲೀಲ-ತಂದೆ ರಾಮಸ್ವಾಮಿ.

ರಾಮಸ್ವಾಮಿ, ಅಭಿಷೇಕ್, ನಾಗತಿಹಳ್ಳಿ ಚಂದ್ರಶೇಖರ್, ಕಾಜಲ್, ಡಾ, ಗಿರೀಶ್ ವಸಿಷ್ಟ, ಡಾನ್ಕ್ಯಸ್ಟೆರಿನ ಪ್ರದರ್ಶನಕ್ಕೆ ಕಾರಣರಾದ ಸುಮನ ಗಿರೀಶ್ ಮತ್ತು ಅವರ ತಾಯಿ ಶ್ರೀಮತಿ ಲೀಲ ರಾಮಸ್ವಾಮಿ. (ಚಿತ್ರ-ಸಂದರ್ಶಕಿಯದು)

ಬೆಳಗಿನ ತಿಂಡಿಯ ನಂತರ ಒಂದು ಸಣ್ಣ ಸಂದರ್ಶನಕ್ಕೆ ಅವಕಾಶ ಕೇಳಲಾಗಿತ್ತು. ಅದೇ ಊರಿನ ಹಿರಿಯ ವೈದ್ಯರಾದ ಡಾ, ಶ್ರೀವತ್ಸ ದೇಸಾಯಿಯವರು ಈ ಸಂದರ್ಶನದ ರೆಕಾರ್ಡಿಂಗ್ ಗೆ ಸಜ್ಜಾಗಿ ಬಂದರು. ಈ ರೆಕಾರ್ಡಿಂಗ್ ನ ಸಣ್ಣ ತುಣುಕನ್ನು ಯು-ಟ್ಯೂಬಿನಲ್ಲಿ ನೋಡಬಹುದು.

ಮೊದಲಿಗೆ ದಾ.ದೇಸಾಯಿಯವರು ತಮ್ಮ ಹಸ್ತಾಕ್ಷರ ವನ್ನು ಸೇರಿಸಿ  ’ಅನಿವಾಸಿಗಳ ಅಂಗಳದಿಂದ’ ಪುಸ್ತಕವನ್ನು ನಾಗತಿಯವರಿಗೆನೀಡಿದರು. ನಂತರವೇ ಸಂದರ್ಶನ ಶುರುವಾದದ್ದು!

ಸಂದರ್ಶಕಿ ಡಾ. ಪ್ರೇಮಲತ ಮತ್ತು ಅನಿವಾಸಿಗಳ ಚೊಚ್ಚಲ ಪುಸ್ತಕದ ಅವಲೋಕನದಲ್ಲಿರುವ ನಾಗತಿಹಳ್ಳಿಯವರು ಚಿತ್ರಕ್ರುಪೆ-ಗಣಪತಿ ಭಟ್

೧) ಸ್ರುಜನಾತ್ಮಕವಾದ ಚಲನಚಿತ್ರಗಳ ಮೂಲಕ ನೀವಿವತ್ತು ಮನೆ ಮನೆ ಮಾತಾಗಿದ್ದೀರ. ನಿಮಗೆ ಸಂತ್ರುಪ್ತಿಯನ್ನು ತಂದೊಕೊಟ್ಟಿರುವ ಚಿತ್ರ/ಚಿತ್ರಗಳು ಯಾವುವು?

ನನ್ನ ಚಿತ್ರ ಗಳ ಪಟ್ಟಿಯನ್ನು ಅವಲೋಕಿಸಿದಾಗ ಯವುದೂ ಇಲ್ಲ. ಯಾಕಂದ್ರೆ, ಪ್ರತಿ ಸಿನಿಮಾನ ಮತ್ತೆ ಮತ್ತೆ ನೋಡಿದಾಗ ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಅಂತ ಹಲವಾರು ಸಂದರ್ಭದಲ್ಲಿ ಅನ್ನಿಸಿದೆ. ಜನ ’ಅಮೆರಿಕಾ ಅಮೆರಿಕಾ’ ವನ್ನು, ’ಅಮ್ರುತಧಾರೆ”ಯನ್ನು ಉಲ್ಲೇಖಿಸ್ತಾರೆ.ಆದ್ರೆ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅನ್ನೋ ಹೊಳಹುಗಳು ಬರ್ತಾ  ಇರುತ್ತವೆ, ಅತ್ರುಪ್ತಿ, ಸ್ರುಜನಶೀಲ ಮನಸ್ಸಿನ ಒಂದು ಭಾಗ.

೨) ನೀವು ಮೂಲತಃ ಬರಹಗಾರರು. ಕಥೆಗಳಲ್ಲಿನ ಪಾತ್ರ ಗಳಿಗೆ ಜೀವ ಕೊಟ್ಟು ನಡೆಸುವಾಗ ಇರೋ ತ್ರುಪ್ತಿ,ಚಲನಚಿತ್ರಗಳ ಪಾತ್ರಗಳನ್ನು ನಿರ್ದೇಶಿಸುವಾಗ ಸಿಗುತ್ತಾ?

ಇದು ಮೂಲಭೂತವಾಗಿ ಕಾವ್ಯ ಮೀಮಾಂಸೆಗೆ ಸಂಬಂಧ ಪಟ್ಟ ಪ್ರಶ್ನೆ. ನಾನು ಎಲ್ಲ ಅರ್ಥಗಳಲ್ಲಿ ಅಲೆಮಾರಿ. ಜಾಗದಿಂದ ಜಾಗಕ್ಕೆ ,ಮಾಧ್ಯಮದಿಂದ ಮಾಧ್ಯಮಕ್ಕೆ ಸುತ್ತುತಾ ಇರ್ತೀನಿ. ಆಯಾ ಮಾಧ್ಯಮಕ್ಕೆ ಹೋದಾಗ ಅಲ್ಲಿನ ವ್ಯಾಕರಣವನ್ನು ಗ್ರಹಿಸಿ ನಿರ್ವಹಿಸಬೇಕಾಗುತ್ತೆ. ಎಲ್ಲಿ ಹೋದಾಗ ನಾನೇನು ಮಾಡಬಲ್ಲೆ ಅನ್ನೋ ಪ್ರಶ್ನೆ ಮಾತ್ರ ಉಳಿಯುತ್ತೆ. ವ್ಯಾವಹಾರಿಕವಾಗಿ ಚಿತ್ರರಂಗ ಹೆಚ್ಚು, ಸಾಹಿತ್ಯ ಕಡಿಮೆ ಅನ್ನೂ ಅರ್ಥ ನನ್ನ ವ್ಯಾಪ್ತಿಯಲ್ಲಿ ಬರೋಲ್ಲ. ಎರಡೂ ಕಡೆ ಪಾತ್ರಗಳನ್ನು ನಡೆಸೋ ಚಾಲೆಂಜ್, ಅದರ ಗುದ್ದಾಟ ನನ್ನಗೆ ಇಷ್ಟ.

೩) ಬರಹ-ಚಲನ ಚಿತ್ರ ನಿರ್ದೇಶನ ಎರಡನ್ನೂ ನಿಮ್ಮ ಮುಂದಿಟ್ಟು ಒಂದನ್ನು ಮಾತ್ರ ಆರಿಸಿಕೊಳ್ಳಿ ಅಂದ್ರೆ ನಿಮ್ಮ ವಯಕ್ತಿಕ ಆಯ್ಕೆ ಯಾವುದು? ಯಾಕೆ?

ನಿಸ್ಸಂಶಯವಾಗಿ ಸಾಹಿತ್ಯ.

ಕಾರಣ, ಸಾಹಿತ್ಯದಲ್ಲಿನ ಸ್ವಯಂಭು. ಇಲ್ಲಿ ನಾನು ಮತ್ತು ಓದುಗ ಅಷ್ಟೇ. ಸಿನಿಮಾದಲ್ಲಿ, ಹಲವು ಪರಿಣತರ ಪ್ರತಿಭೆಯನ್ನು ಹೊರ ಬರಿಸಿ ಅದರಿಂದ ಒಂದು ಪಾಕ ಸಿದ್ದಪಡಿಸಿ ಕ್ರುತಿಯನ್ನು ಸ್ರುಷ್ಟಿಸಬೇಕಾಗುತ್ತೆ. ಇದರಲ್ಲಿ ಸಂಮೋಹನ ಇದೆ.  ಸಂಕೀರ್ಣವಾದ ಮ್ಯಾನೇಜ್ ಮೆಂಟ್ ವಿಚಾರಗಳು, ಸೈಕಾಲೊಜಿ, ಈಗೋಸ್ ಎಲ್ಲ ಇರುತ್ತೆ. ಜೊತೆಗೆ ಕೋಟ್ಯಂತರ ರೂಪಾಯಿ ಬಂಡವಾಳ ಹೆಗಲ ಮೇಲಿರೋದರಿಂದ ನನ್ನಂತ ಸೂಕ್ಶ್ಮ ಮನಸ್ಸಿನ ವ್ಯಕ್ತಿಗೆ ಯಾರ ಬಂಡವಾಳಕ್ಕೆ ಎಲ್ಲಿ ದಕ್ಕೆ ಆಗುತ್ತೋ ಅನ್ನೋ ಆತಂಕ ಸಹಜವಾಗಿರುತ್ತೆ.

ಇದು ಸಾಹಿತ್ಯದಲ್ಲಿಲ್ಲ. ಅಲ್ಲದೇ ನಾನು ಹೊರಟು ಬಂದ ಬಿಂದು, ತವರುಮನೆ ಸಾಹಿತ್ಯವೇ ಆದ್ದರಿಂದ ಸಾಹಿತ್ಯಕ್ಕೇ ನನ್ನ ಮೊದಲ ಆದ್ಯತೆ. ಸಿನಿಮಾದಲ್ಲೂ ನನ್ನಗೆ ಅಪಾರ ಅನುಭವ, ಪ್ರತಿಫಲಗಳು ದೊರೆತಿವೆ. ಅದರ ಬಗ್ಗೆ ನನ್ನಲ್ಲಿ ಕ್ರುತಘ್ನತೆ  ಖಂಡಿತಾ ಇದೆ.

ಸಾಹಿತ್ಯಕ್ಕೂ-ಸಿನಿಮಾಕ್ಕೂ ಇರೋ ಕಲಾತ್ಮಕತೆ ಮತ್ತು ಗಲ್ಲಾಪೆತ್ಟ್ಟಿಗೆಯ ಸೇತುವೆಯನ್ನು ಹಾದವರು ಇದ್ದಾರೆ. ಆದರೆ ಉಳಿದಿರುವ ಏಕಾಂಗಿ ನಾನು. ಆದ್ಯತೆಯ ಪ್ರಶ್ನೆ ಬಂದಾಗ ಸಾಹಿತ್ಯಕ್ಕೆ ಸದಾ ಮೊದಲ ಸ್ಥಾನ.

೪) ಇತ್ತೀಚೆಗೆ ಕನ್ನಡ ಚಲನ ಚಿತ್ರಗಳ ಗುಣ ಮಟ್ಟ ಕುಸಿತಾ ಇದೆ.ಇದಕ್ಕೆ ಕಾರಣ ಒಳ್ಳೆ ಚಿತ್ರಕ್ಕೆ ಇವತ್ತು ಮಾರುಕಟ್ಟೆ ಇಲ್ಲ ಇಲ್ದೇ ಇರೋದು.ಇದು  ಎಲ್ರಿಗೂ ಗೊತ್ತು.ಹಿಂದೆ ಇದ್ದಂತ ಮಾರುಕಟ್ಟೆ ಈಗ ತಟ್ಟಂತ ಕಣ್ಮರೆ ಆಗೋಕೆ ಏನು ಕಾರಣ?

ವೇಗದ ಮನೋಧರ್ಮ.ಕಾಲಕ್ಕೆ ಬಂದಿರೋ ವೇಗ. ಕಲೆಗೆ ತಗುಲಿರೋ ಶಾಪ!

ತಕ್ಷಣ ರೋಮಾಂಚನ ಬೇಕು ಅನ್ನೋ ಧಾವಂತ ಪ್ರೇಕ್ಷಕನಿಗೆ, ಅಹೋ ರಾತ್ರಿ ಕೋಟಿಗಟ್ಟಲೆ ಹಣ ಮಾಡಬೇಕು ಅನ್ನೋದು ಉದ್ಯಮದವರಿಗೆ . ಹಿಂದೆ ಚಲನಚಿತ್ರಗಳು   ವರ್ಷಗಟ್ಟಲೆ ಓಡ್ತಾ ಇದ್ದವು. ನೆನಪಿನಲ್ಲಿ ಉಳೀತಿದ್ದವು. ಈಗಿನ ಚಿತ್ರಗಳು ವಾರ  ಮಾತ್ರ ಓಡಿ, ತಟ್ಟಂತ  ಕಣ್ಮರೆಯಾಗಿ ಬಿಡ್ತಾವೆ. ಉಳಿಸಿ ಹೋಗೋದು ಏನೂ ಇಲ್ಲ. ಜೊತೆಗೆ ಸಿದ್ದ ಕತೆಗಳನ್ನು, ರೀಮೇಕ್ ಗಳನ್ನು ತಂದು ಸಿನಿಮಾ ಮಾಡ್ತಾರೆ. ವರ್ಶಕ್ಕೆ 200 ಸಿನಿಮಾ, ವಾರಕ್ಕೆ 6 ಸಿನಿಮ ಬಿಡುಗಡೆ ಆಗ್ತಿವೆ. ಇದರ ಬಗ್ಗೆ  ಯಾವ ನಿಯಂತ್ರಣವೂ ಇಲ್ಲ. ಕನ್ನಡದ ಅಸಲೀ ಚಿತ್ರ, ಅಸಲೀ ಪ್ರತಿಭೆಗಳ ಚಿತ್ರ ಮಾಡೋ ನಮ್ಮಂತವರು ಏಕಾಂಗಿಗಳು. ಆದರೆ ’ಆ ’ ಕಡೆಯವರಿಗೆ ಹೇಳುವಷ್ಟು ದೊಡ್ಡವನಲ್ಲ ನಾನು.

 ’ಇಷ್ಟಕಾಮ್ಯ  ಚಿತ್ರವನ್ನು ನೋಡಿ.ಪ್ರತಿಯೊಂದು ಸಂಭಾಷಣೆಯಲ್ಲಿ, ದ್ರುಶ್ಯಗಳಲ್ಲಿ ಆಳವಾದ ಚಿಂತನೆಗಳಿವೆ. ವರ್ಷಗಟ್ಟಲೆ ಚರ್ಚೆ ಮಾಡಿದ ವಿಚಾರಗಳಿವೆ. ಅದನ್ನು ನೋಡಿ ಅರ್ಥ ಮಾಡಿಕೊಳ್ಳೋಕೆ ವ್ಯವಧಾನ ಇರಬೇಕಷ್ಟೆ.

೫)ನೀವು ಒಬ್ಬ ಸಾಹಿತಿ. ಬರಹಗಾರರು. ಕನ್ನಡ ಭಾಷೆ ಮತ್ತು ಕನ್ನಡ ಚಿತ್ರೋದ್ಯಮವನ್ನು ಅರಿತಿರೋವ್ರು. ಅದಕ್ಕೇ ಈ ಪ್ರಶ್ನೆ.ಇತ್ತೀಚೆಗಿನ ಸಿನಿಮದಲ್ಲಿ ಉಪಯೋಗ್ಸೋ ಭಾಷೆ ಕೇಳೋಕೆ ಬೇಜಾರಾಗುತ್ತೆ.ಸಾಹಿತ್ಯಕ ಕನ್ನಡವಲ್ದಿದ್ದ್ರೂ ಸಾಧಾರಣ ಆಡು ಭಾಷೆಯನ್ನು ಉಪಯೋಗಿಸಿದ್ರೆ ಸಿನಿಮಾ ಮಾಧ್ಯಮ ಜನರಿಗೆ ತಲುಪಲ್ವಾ?

’ಇಷ್ಟಕಾಮ್ಯ’ ದ ಉದಾಹರಣೆ ಮತ್ತೆ ಕೊಡ್ತಿದ್ದೀನಿ ಅಂತ ಮುಖಸ್ತುತಿ ಅಂದುಕೋ ಬೇಡಿ.ಅದರಲ್ಲಿನ ಸಂಭಾಷಣೆಯನ್ನು ಗಮನಿಸಿ.

ಸರಳ ಕನ್ನಡವನ್ನು ಬಯಸೋ ಜನ ಖಂಡಿತಾ ಇದ್ದಾರೆ.ಆದರೆ ಅವರ ಅಭಿರುಚಿಯನ್ನು ಸಂಪೂರ್ಣ ನಾಶಮಾಡಲಾಗಿದೆ. ಅದಕ್ಕೆ ಕಾರಣ ಚಿತ್ರರಂಗ ’ಅಕ್ಷರ ದ್ವೇಷಿ” ಗಳಾಗ್ತಿರೋದು. ಹಾಗಾಗಿ ಅಕ್ಷರ ದಾರಿದ್ರ್ಯ, ಸಾಂಸ್ಕ್ರುತಿಕ ದಾರಿದ್ರ್ಯ ಎದ್ದು ಕಾಣಿಸುತ್ತೆ. ಉದಾಹರಣೆಗೆ, ಒಂದು ಇಡೀ ತಲೆಮಾರಿನ  Icon, ರಾಜ್ ಕುಮಾರರನ್ನು ತಗೊಳ್ಳಿ. ಇವರಿಗೆ ರಂಗ ಭೂಮಿ ಅನುಭವ ಇತ್ತು. ಹಾಡು, ಉಚ್ಚಾರಣೆಗಳ ತರಭೇತಿ ಇತ್ತು. ಒಬ್ಬ ರಾಜಕುಮಾರನ ಹಿಂದೆ ಒಬ್ಬ ಚಿ. ಉದಯಶಂಕರ ಇದ್ರು. ಉತ್ತಮ ವಚನ, ಕೀರ್ತನೆ ಭಾವಗೀತೆಗಳನ್ನು ಉಣ ಬಡಿಸ್ತಿದ್ರು. ಈ ಹಿನ್ನೆಲೆ ಇವತ್ತು ತಪ್ಪಿ ಹೋಗಿದೆ.

ಇವತ್ತಿನ ನಟರು ಒಳ್ಳೆಯವರು, ಕನ್ನಡದ ಬಗ್ಗೆ ದೊಡ್ಡ ಮಾತಾಡ್ತಾರೆ. ಇವರಿಗೆ ಒಳ್ಳೇ ಸಿನಿಮ ಬೇಕು. ಜನರ ಪ್ರೀತಿ ಬೇಕು. ವಿವಾದ ಬಂದ್ರೆ ಕನ್ನಡಕ್ಕಾಗಿ ಬೀದಿಗಿಳೀತಾರೆ. ಆದರೆ ಅವರಿಗೆ ಸಾಂಸ್ಕ್ರುತಿಕ ಸ್ಪರ್ಶವೇ ಇಲ್ಲ. ಹೀಗೆ ಹೇಳಿದ್ರೆ Typical ಕನ್ನಡ ಮೇಷ್ಟ್ರು ಹೀಗೆ ಮಾತಾಡ್ತಾರೆ’ ಅಂತಾರೆ.ಅದಕ್ಕೂ- ಇದಕ್ಕು ಯಾವ ಸಂಭಂಧವೂ ಇಲ್ಲ. ಜನಜೀವನದಲ್ಲಿರೋ, ಸರಳ,ಸಾಧಾರಣ ನುಡಿಗಟ್ಟುಗಳನ್ನು ಸಮಯೊಚಿತವಾಗಿ ಬಳಸೋದು ಸಂಭಾಷಣೆ. ಸಿನಿಮಾ ಪ್ರಬಲ ಮಾಧ್ಯಮ. ಕನ್ನಡವನ್ನು ಸರಿಯಾಗಿ ಬಳಸದೇ ಇದ್ರೆ ಮುಂದೆ ಈಗಿನ ಕನ್ನಡವೇ ನಿಜವೇನೋ ಅನ್ನೋ ಅಪಾಯ ಖಂಡಿತ.

೬) ಚಲನಚಿತ್ರಗಳು ಭಾಷೆ ಜೊತೆ, ಸಂಸ್ಕ್ಕ್ರುತಿಯನ್ನು ಕೂಡ  ಪ್ರತಿಪಾದಿಸುತ್ತವೆ. ಇವತ್ತಿನ ಚಿತ್ರಗಳಲ್ಲಿ ನಾಯಕನೇ ಹಿಂಬಾಲಕರ ಕೆನ್ನೆಗೆ ಕಾರಣ ಇಲ್ಲದೇ ಹೊಡೆಯೋದು, ಪದೇ ಪದೇ ಪುನರಾವರ್ತಿಸಿ ಹೊಡೆಯೋದನ್ನು  ಹಾಸ್ಯದ ಹೆಸರಲ್ಲಿ ತೋರಿಸ್ತಿದ್ದಾರೆ. ಇದು ಇವತ್ತಿನ ಪೀಳಿಗೆಗೆ ನೀಡೋ ಸಂದೇಶವನ್ನು ಏನಂತ ಹೇಳ್ತೀರಿ?

ಇದು ಅಭಿರುಚಿಯ ಪ್ರಶ್ನೆ.ಅಭಿರುಚಿಯನ್ನು ಮಾಧ್ಯಮಗಳು ಯಾವಾಗ ಕಡೆಗಣಿಸ್ತಾವೋ ಆಗ ಅದು ಅತ್ಯಂತ ಅಪಾಯದ ಸ್ಥಿತಿಯನ್ನು ತಲುಪುತ್ತವೆ.ಪ್ರಬಲ ಮಾದ್ಯಮ ಸಿನಿಮಾಕ್ಕೆ ಒಳ್ಳೆಯ ಅಭಿರುಚಿಯನ್ನು ಉಳಿಸೋ ಗುರುತರ ಹೊಣೆ ಇದೆ. ಜಗತ್ತಿನಲ್ಲಿ ಇಲ್ದೇ ಇರೋ ಹಿಂಸೆ,  ಕೆಟ್ಟ ಸಂಭಾಷಣೆಯನ್ನು ಇವತ್ತು ಸಿನಿಮಾದಲ್ಲಿ ನೋಡ್ತೀವಿ.

ಕಲೆ ಅಂದಾಗ ಒಂದಿಷ್ಟು ವೈಭವೀಕರಣ,  ಉತ್ಪ್ರೇಕ್ಷೆ ಸಹಜ . ಆದರೆ ಅದನ್ನು ಕಲಾತ್ಮಕವಾಗಿ ಮುಂದಿಡಬೇಕು. ಆತಂಕದ ವಿಚಾರ ಅಂದ್ರೆ ಕೆಟ್ಟ ಸಿನಿಮಾ ಬಂದಾಗ ಜನ ಅದನ್ನು ತಿರಸ್ಕರಿಸ್ತಾ ಇಲ್ಲ. “ಅವರು ನೋಡ್ತಾರ್ರಿ ಅದಕ್ಕೆ ಮಾಡ್ತೀವಿ ಅಂತ ಇವರು, ಇವರು ಕೊಡ್ತಾರ್ರೀ ಅದಕ್ಕೆ ನೋಡ್ತೀವಿ” ಅಂತ ಅವರು ಹೇಳ್ತಾರೆ.

ಕೊನೆಗೆ ಇದು ಸಮಾಜದಲ್ಲಿನ ಜನರ ಹೊಣೆಗಾರಿಕೆಯ ಪ್ರಶ್ನೆ. ರಾಜಕಾರಣಿಗಳು, ಸಾಂಸ್ಕ್ರುತಿಕ ನಾಯಕರ ಸಾಕ್ಷಿ ಪ್ರಶ್ನೆ ವಿಚಾರ.

೭) ಭಾಷೆ ಸತ್ರೆ, ಅದಕ್ಕೆ ಸಂಭಂಧಿಸಿದ ಸಾಹಿತ್ಯ, ಚಿತ್ರೋದ್ಯಮ ಮತ್ತೆ ಇವೆರಡಕ್ಕೂ ಪೂರಕವಾಗಿರೋ ಉದ್ಯಮಗಳ ಅವನತಿ ಕಟ್ಟಿಟ್ಟ ಬುತ್ತಿ. ಹಾಗಾಗಿ ಕನ್ನಡ ಉಳಿಸೋಕೆ ಈ ಉದ್ಯಮಗಳು ಮಾಡ್ತಿರೋ ಕೆಲಸಗಳೇನು? ಮಾಡ ಬಹುದಾದ ಕೆಲಸಗಳೇನು?

ಕನ್ನದ ಕಟ್ಟೊ ವಿಚಾರ ಬಹಳ ಇದೆ. ಓದು, ಬರಹ, ನಾಟಕ, ಸಿನಿಮ , ಸಂಘ , ಸಂಸ್ಥೆಗಳು ಇವೆಲ್ಲ ಭಾಷೆ ಜೊತೆ ತಳುಕು ಹಾಕಿಕೊಂಡ ವಿಚಾರಗಳು. ಇವನ್ನೆಲ್ಲ ಮಾಡೋ ಅಂತ ಜನರಿದ್ದಾರೆ ಆದ್ರೆ ಅವರನ್ನು ಅನುಸರಿಸೋ ರಣ ಪಡೆಯಿಲ್ಲ.

ಬೇರೆ ಭಾಷೆಗಳಿಗೂ , ಕನ್ನಡಕ್ಕು ಇದೇ ವ್ಯತ್ಯಾಸ. ಕನ್ನಡಿಗ ಇವತ್ತು intellectual arrogance ಬೆಳೆಸಿಕೊಂಡು ಸಿನಿಮಾಕ್ಕೆ ಬರ್ತಾನೆ. ಆತನಲ್ಲಿ ಸಿನಿಕತೆ ಎದ್ದು ಕಾಣುತ್ತೆ. ’ಕನ್ನಡ ಸಿನಿಮಾ” ಅನ್ನೋ ಧೋರಣೆಯಿಂದ ಸಿನಿಮಾಕ್ಕೆ ಬರ್ತಾನೆ. ಬೇರೆ ಭಾಷೆಯ ಜನ ಭಾಷೆಗೆ ತಮ್ಮನ್ನು ತಾವು ಒಪ್ಪಿಸಿಕೊಂಡಿದ್ದಾರೆ. ಇದು ಇಲ್ದೇ ಇರೋದ್ರಿಂದ  ಕನ್ನಡದಲ್ಲಿ ಕೊಡುವವನ ಮತ್ತು ನೋಡುವವನ ನಡುವಿನ ಕಂದಕ ದೊಡ್ಡದಾಗಿದೆ.

೮) ಹೊರದೇಶದಲ್ಲಿರೋ ಕನ್ನಡಿಗರು ಇದಕ್ಕೆ ಯಾವ ರೀತಿ ಬೆಂಬಲ ಕೊಡಬಹುದು?

ಹೆಚ್ಚೇನೂ ನಿರೀಕ್ಷಿಸಲಾಗಲ್ಲ. ಭಾಷೆ- ಸಂಸ್ಕ್ರುತಿ ಎಲ್ಲ ಬಿಟ್ಟು ಬಂದ ಕಾರಣಕ್ಕೆ ಅನಿವಾಸಿಗಳಲ್ಲಿ ಒಂದು ಬಗೆಯ nostalgia ಇರುತ್ತೆ . ಅಲ್ಲಿಗೆ ಮರಳಿ ಹೋಗಲು ಆಗಲ್ಲ ಅನ್ನೋ ಕಾರಣಕ್ಕೆ ಕನ್ನಡ ಮಹತ್ವದ್ದು ಅನ್ನೋ ಭಾವನೆ ಇರುತ್ತೆ ಹಾಗಾಗಿ  ಒಳನಾಡಿನ ತುಡಿತಕ್ಕಿಂತ ಹೊರನಾಡಿನ ತುಡಿತ ತೀವ್ರವಾಗಿದೆ.

ನಾನು ನನ್ನ ಹಳ್ಳಿಯ, ನಾನು ಓದಿದ ಕನ್ನಡ  ಶಾಲೆಯನ್ನು ದತ್ತು ತಗೊಂಡಿದ್ದೀನೆ, ಕೈಲಾದ್ದು ಮಾಡ್ತಿದ್ದೀನಿ. ಆತಂಕದ ವಿಚಾರ ಅಂದ್ರೆ 200 ಇದ್ದ ವಿದ್ಯಾ ರ್ಥಿಗಳ ಸಂಖ್ಯೆ 30 ಕ್ಕೆ ಇಳಿದಿರೋದು!!! ಅನಿವಾಸಿಗಳಾಗಲೀ, ನಿವಾಸಿಗಳೇ ಆಗಲಿ , ಕನ್ನಡವನ್ನು ಏಕ ಪ್ರಕಾರವಾಗಿ ಪ್ರೀತಿಸ್ಬೇಕು. ಅದು ನಮ್ಮೆಲ್ಲರ ಹೊಣೆಗಾರಿಕೆ.

೯)  England  ಪ್ರವಾಸದ  high lights ಏನು?”

ಮಾತಾಡ್ ಮಾತಾಡ್ ಮಲ್ಲಿಗೆ’ ಪ್ರದರ್ಶನಕ್ಕೆ ಹಿಂದೆ ಬಂದಿದ್ದೆ.  ಆದರೆ ಈ ಬಾರಿ, ಕನ್ನಡಿಗರು, ಯು.ಕೆ.ಯ ಮಿತ್ರತ್ವದಿಂದ ಇಂಗ್ಲೆಂಡಿನ ನಾನ ಊರುಗಳಿಗೆ ಹೋಗಿ ಚಿತ್ರ ತೋರಿಸಿ, ಮಾತಾಡೋ ಸಂದರ್ಭ ಬಂದಿದೆ.ಇದು ದೊಡ್ಡ ವ್ಯವಹಾರವೇನಲ್ಲ. ಆದರೆ, ವ್ಯವಹಾರದ ಆಚೆಗಿನ ಪ್ರೀತಿ, ವಿಶ್ವಾಸದ ಅನುಭವ ಆಯ್ತು. ಬಸವಣ್ಣನ ಪ್ರತಿಮೆ ನೋಡಿದೆ.ಭಾರತೀಯ ವಿದ್ಯಾ ಭವನಕ್ಕೆ ಹೋಗಿದ್ದೆ. ನಂದ ಕುಮಾರ್ ಅವರು ಮಾಡ್ತಿರೋ ಕನ್ನಡ ಚಟುವಟಿಕೆಗಳನ್ನು  ನೋಡಿ ತುಂಬ ಸಂತೋಷವಾಗಿದೆ. ಕನ್ನಡದ  ಬಗ್ಗೆ ತುಡಿಯೋ ನೀವೆಲ್ಲ ಕನ್ನಡದ  ಆಶಾ ಕಿರಣಗಳೇ.

ಎಡ ತುದಿ-ವಿಡೀಯೋ ಮಾಡಿದ ಡಾ, ಶ್ರೀವತ್ಸ ದೇಸಾಯಿ, ಬಲತುದಿ- ಕನ್ನಡಿಗರು ಯುಕೆ ಯ ಅಧ್ಯಕ್ಷ ಶ್ರೀ ಗಣಪತಿ ಭಟ್

೧೧) ಕನ್ನಡ  ಚಿತ್ರ ರಂಗದ ಮುಂದಿನ ಭವಿಷ್ಯ ನಿಮ್ಮ ಊಹೆನಲ್ಲಿ ಏನು?

ನಾನು ಪ್ರವಾದಿ ತರ ಮಾತಾಡೊಲ್ಲ.

ಸದ್ಯಕ್ಕೆ ಸಂಖ್ಯೆ ಜಾಸ್ತಿ ಆಗಿದೆ. ಗುಣ ಮಟ್ಟ ಕಡಿಮೆ ಆಗಿದೆ. ನಿಧಾನವಾಗಿ ವಿಶ್ವ ಮಾರುಕಟ್ಟೆ ತೆರೆದು ಕೊಳ್ತಾ ಇದೆ.ಕನ್ನಡ ಮಾರಿಕಟ್ಟೆ  ಸೀಮಿತ ಮಾರುಕಟ್ಟೆ.  ವಿದೇಶಿ ಪ್ರದರ್ಶನಗಳು ಶೈಶವಾಸ್ಥೆ ಯಲ್ಲಿದೆ. ಇದಕ್ಕೊಂದು ಕ್ರಮ ಮತ್ತು ಗುಣ ಮಟ್ಟದ ಅಗತ್ಯವಿದೆ.

ಇವತ್ತಿನ ಕನ್ನಡ ಸಿನಿಮಾದಲ್ಲಿರೋ ಸಾಂಸ್ಕ್ರುತಿಕ ಶೂನ್ಯತೆ ಭಯ ತರೊ ಅಂತದ್ದು. ಆದ್ದರಿಂದ ಕಾಲ ಈ ಪ್ರಶ್ನೆಗೆ ಏನು ಉತ್ತರ ಕೊಡುತ್ತೆ ಅಂತ  ಕಾದು ನೋಡಬೇಕು.

೧೨)ಸಿನಿಮಾ, ಟಿ. ವಿ.,ನಿಮ್ಮ ತರಭೇತಿ ಶಾಲೆ, ಈ ರೀತಿಯ ಓಡಾಟದ ನಡುವೆ ನಿಮ್ಮಲ್ಲಿರೋ ಬರಹಗಾರನ ಆರೋಗ್ಯ ಹೇಗಿದೆ?

ಅದರ ಬಗ್ಗೆ ಆತಂಕ ಇದೆ. ಪ್ರಜಾವಾಣಿಗೆ ’ರೆಕ್ಕೆ ಬೇರು” ಅನ್ನೋ ಕಾಲಂ ಬರೀತಿದ್ದೆ.  ’ಇಷ್ಟಕಾಮ್ಯ’ ದ ಕಾರಣ ನಿಲ್ಲಿಸಿದೆ. ಈಗ ಈ ಕೆಲಸ ಮುಗಿದಿದೆ. ಸಿನಿಮಾ ದೈಹಿಕವಾಗಿ  ಹಿಂಡಿ ಹಿಪ್ಪೆ ಮಾಡೋ ಕಾರಣ ಬರಹಕ್ಕೆ ಬೇಕಾದ ಶಕ್ತಿ ಕಡಿಮೆಯಾಗಿದೆ. ಬರವಣಿಗೆಯನ್ನು ಮತ್ತೆ  ಶುರುಮಾಡಿ ನನ್ನ ನೆಚ್ಚಿನ ಸಣ್ಣಕಥೆ ಗಳ ಬರಹವನ್ನು ಮುಂದುವರಿಸಬೇಕು.

ನಿಮ್ಮ ಮಾಧ್ಯಮದ ಮೂಲಕ ಎಲ್ಲ ಕನ್ನಡದ ಮನಸ್ಸುಗಳಿಗೆ ಶರಣು ಶರಣಾರ್ಥಿ. ಸಾಹಿತ್ಯ, ಪ್ರಕಟನೆ, ಸಿನಿಮಾ ಈ ಯಾವುದರ ಬಗ್ಗೆ ಏನೇ ಸಹಾಯ ಬೇಕೆಂದರೂ ಕೇಳಿ. ನಿಮಗೆ ಸ್ಪಂದಿಸಲು ನಾನು ಯಾವಗಲೂ ತಯಾರಿದ್ದೇನೆ. ಕನ್ನಡ ಕಟ್ಟೋ ಕೆಲಸ ನಿರಂತರವಾಗಿ ನಡೆಯಲಿ. ಧನ್ಯವಾದ.

ಡಾ. ಪ್ರೇಮಲತ ಬಿ

ಈ ಸಂದರ್ಶನವನ್ನು ಕೆಳಗಿನ ಲಿಂಕ್ ಒತ್ತುವುದರ ಮೂಲಕ ನೋಡಬಹುದು.ಕ್ರುಪೆ-ಡಾ. ಶ್ರೀವತ್ಸ ದೇಸಾಯಿ 

https://www.youtube.com/watch?v=TSGa8sLV61A