ಆತ್ಮೀಯ ಓದುಗರೇ ,
ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಈ ಕಳ್ಳರು, ಮತ್ತವರು ಎಸಗುವ ಕಳ್ಳತನ, ದರೋಡೆ ಕುರಿತಾದ ಸುದ್ದಿ ಕೇಳುತ್ತೇವೆ, ನಿಯತಕಾಲಿಕೆಗಳಲ್ಲಿ ಓದೇ ಇರುತ್ತೇವೆ, ಆ ಕ್ರೌರ್ಯ ತುಂಬಿದ ಕೃತ್ಯ ಎಸಗುವವರ ಕುರಿತು ಒಂದು ರೀತಿಯ ತಿರಸ್ಕಾರ ಮತ್ತು ಭಯವು ಬೇಡವೆಂದರೂ ಮನದಲ್ಲಿ ಮೂಡಿಬಿಡುತ್ತದೆ. ಜೊತೆಗೆ ಕಳ್ಳತನವಾದ ವಸ್ತು ಮರಳಿ ಸಿಗುವುದು ಅದೃಷ್ಟವೇ ಸರಿ! ಆ ಭಯ ಮತ್ತು ಅದೃಷ್ಟದ ಸುತ್ತಲೇ ಇರುವ ಎರಡು ರಂಜನೀಯ ಘಟನೆಗಳನ್ನು ಈ ವಾರ ಅನಿವಾಸಿ ಬಳಗದ ಇಬ್ಬರು ಹಿರಿಯ ಸದಸ್ಯರು ತಮ್ಮ ನೆನಪಿನ ಸಂಚಿಯಿಂದ ತೆಗೆದು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ವತ್ಸಲಾ ರಾಮಮೂರ್ತಿ ಅವರು ಬರೆದ ”ಕಳ್ಳ ಬಂದ” ಮತ್ತು ಶ್ರೀವತ್ಸ ದೇಸಾಯಿ ಅವರ ”ಕಳ್ಳಬಂದ-ಕ್ಯಾಮರಾ ಹೋತು-ವಾಪಸ್ ಬಂತು”ಎಂಬೆರೆಡು ಲಘು ಹಾಸ್ಯ ಬರಹಗಳು ಈ ವಾರ ನಿಮ್ಮ ಓದಿಗಾಗಿ. ಈ ಬರಹಗಳು ನಿಮಗೂ, ನಿಮ್ಮ ಜೀವನದಲ್ಲಾದ ಇಂಥಹುದೇ ಅನುಭವಗಳನ್ನ ನೆನಪಿಸಿದರೆ ಅದಕ್ಕೆ ಅಕ್ಷರ ರೂಪ ಕೊಟ್ಟು ನಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಮರೆಯದಿರಿ. ಸರ್ವರಿಗೂ ಶರನ್ನವರಾತ್ರಿಯ ಶುಭಾಶಯಗಳು.
– ಸಂಪಾದಕಿ
ಕಳ್ಳ ಬಂದ – ವತ್ಸಲಾ ರಾಮಮೂರ್ತಿ ಬರೆದ ಹಾಸ್ಯ ಬರಹ
ಆ ದಿನ ನಾನು, ನನ್ನ ಗಂಡ, ನನ್ನ ಸ್ನೇಹಿತೆ ಸುಮಾ (ಸುಮತಿ) ಮತ್ತು ಅವಳ ಗಂಡ ಅರವಿಂದ ನಾವೆಲ್ಲರೂ, ವಾಣಿವಿಲಾಸ ಹಾಸ್ಪಿಟಲ್ ಕೆಲಸ ಮುಗಿಸಿ
ಮನೆಗೆ ಹೊರೆಟೆವು. ಅರವಿಂದ “ನನಗೆ ಸುಸ್ತಾಗಿದೆ ಕಾಫಿ ಕುಡಿದು ಹೋಗೋಣ ಬನ್ನಿ “ ಎಂದು ಹೇಳಿದಾಗ ನನ್ನ ಪತಿರಾಯ
“ನಾನು ಬರಲ್ಲಪ್ಪ“ ಎಂದು ಹೊರಡಲು ಅನುವಾದರು. ನಾನು ಅವರ ಹಿಂದೆ ಬಾಯಿ ಮುಚ್ಚಿಕೊಂಡು ನಡೆದೆ. I was too tired to argue with him.
ಗೆಳತಿ ಸುಮಾ ”ನಾನೂ ಬರುವುದಿಲ್ಲಪ್ಪ ಬೇಕಾದರೆ ನೀನು ಹೋಗು ಆದರೆ ವಾಪಸ ಬಂದಾಗ ಮನೆ ಬಾಗಿಲು ತೆಗೆಯುವುದಿಲ್ಲ ನೋಡು ”
ಅಂದು ಸಿಡುಕಿದಳು. ಅರವಿಂದ ತುಂಬಾ ಹಠವಾದಿ “ಸರಿ ನೀನು ಹೋಗು ನಾನು ಮಸಾಲೆದೋಸೆ ತಿಂದು ಕಾಫಿ ಕುಡಿದು
ಬರುತ್ತೇನೆ “ಅಂತ ಹೇಳಿ ದಾಪುಗಾಲು ಹಾಕುತ್ತ ಹೋರಟೇ ಬಿಟ್ಟ .
ನಾನು ಸುಮಾಳನ್ನು ಕುರಿತು “ಬಾರೆ ಅತಿ ಜಂಬ ಹೋಡಿತಾನೆ ನಾವು ಹೋಗೋಣ.“ ಎಂದು ನಮ್ಮ ಮನೆದಾರಿ ಹಿಡಿದೆವು. ನಮ್ಮೆಲ್ಲರಿಗೂ ಗಳ್ಳಸ್ಯ, ಕಂಠಸ್ಯ. ನಾವು ನಮ್ಮ ಪ್ರೌಢಶಾಲಾ ದಿನಗಳಿಂದಲೂ ಸಹಪಾಠಿಗಳು ,ಸ್ನೇಹಿತರು.
ನಮ್ಮ ಮನೆ ಮತ್ತು ಸುಮಾಳ ಮನೆ ಒಂದೇ ರಸ್ತೆಯಲ್ಲೇ ಇತ್ತು. ದಾರಿಯುದ್ದಕ್ಕೂ ಧುಮುಗುಡುತ್ತ ಸುಮಾ ಮನೆ ಸೇರಿ ಬಾಗಿಲು ಜಡಿದಳು .
ನಾವಿಬ್ಬರು ನಮ್ ಮನೆಗೆ ಬಂದು ಬಿಸಿ ಬಿಸಿ ಕಾಫಿ, ಕೋಡುಬಳೆ ತಿನ್ನುತ್ತಾ ಟಿವಿ ನೋಡುತ್ತಾ ಇದ್ದೆವು .
ಒಂದು ಘಂಟೆ ಕಳೆದಿರಬಹುದು .ಫೋನ್ ಬಡಿದುಕೊಂಡಿತು. ಅಯ್ಯೋ! ಇದೊಂದು ಫೋನ್ ಕಾಟ, ಎಂದು ಗೊಣಗಾಡಿಕೊಂಡು “ಹಲೋ ಯಾರು ಮಾತನಾಡುವುದು ?” ಎಂದು ಖಾರವಾಗಿ ಕೇಳಿದೆ, ಅಸಮಾಧಾನ, ತುಸು ಕೋಪದ ಧ್ವನಿಯಲ್ಲಿ . ಆ ಕಡೆಯಿಂದ ನಡುಗುವ ಧ್ವನಿಯಲ್ಲಿ. ”ಲೇ ಲೇ ಪಾಪು “ ಎಂದು ನನ್ನ ಮನೆಯಲ್ಲಿ ಪ್ರೀತಿಯಿಂದ ಕರೆಯುವ ಹೆಸರಿನಿಂದ ಕರೆದಾಗ, ನಾನು ಇನ್ನೂ ಖಾರವಾಗಿ “ಯಾರ್ ನೀನು?“ ಎಂದೆ .
ಅಳು ಧ್ವನಿಯಲ್ಲಿ ”ನಾನು ಸುಮಾ ಕಣೇ, ನಮ್ಮ ಮನೆಗೆ ಕಳ್ಳ ಬಂದಿದಾನೆ. ಮೇಲೆ ನಡೆದಾಡುವ ಸದ್ದು ಕೇಳಿಸುತ್ತಾ ಇದೆ. ನನ್ನ ಎದೆ ನಡುಗುತ್ತಿದೆ ಹೆದರಿಕೆಯಿಂದ. ಬೇಗ ಬಾರೆ“ ಅಂತ ಮುಸು ಮುಸು ಅಳಲು ಶುರು ಮಾಡಿದಳು. ಅವಳಿಗೆ ಕಳ್ಳ ಅನ್ನೋ ಆ ಪದ ಕೇಳಿದರೆ ಮೈ ಬೆವರುತ್ತದೆ.
ಅವಳು ಮಗುವಾಗಿದ್ದಾಗ ಗಲಾಟೆ, ತುಂಟತನ ಮಾಡಿದಾಗೆಲ್ಲಾ ಕಳ್ಳ ಬಂದು ಎತ್ತಿ ಕೊಂಡು ಹೋಗುತ್ತಾನೆ ನೋಡು ಅಂತ ಹೆದರಿಸಿ ಹೆದರಿಸಿ, ಅದೇ ಅವಳ ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ.
ಆ ವಿಚಾರದಲ್ಲಿ ಅವಳಿಗೆ ಇಷ್ಟು ತಿಳಿ ಹೇಳಿದರೂ ತಾರ್ಕಿಕವಾಗಿ ಯೋಚಿಸಲು ಸಾಧ್ಯವೇ ಆಗಿಲ್ಲ, ಎಷ್ಟು ತಮಾಷೆ,ಬುದ್ದಿವಾದ ಹೇಳಿದರೂ ಅವಳ ಭಯ ಹೋಗಿಲ್ಲ. ಅವಳ ಮನೋಭಯದ ಅರಿವಿರುವ ನಾನು, ನನ್ನ ಪತಿರಾಯನನ್ನ ಎಳೆದುಕೊಂಡು ಆಕೆ ಮನೆಕಡೆ ಹೊರಟೆ
ಮನೆಬಾಗಿಲು ತಟ್ಟಿ “ನಾನು ಪಾಪು” ಅಂದಮೇಲೆಯೇ ಆಕೆ ನಡುಗುತ್ತ ಬಾಗಿಲು ತೆಗದದ್ದು.
ಮೆತ್ತಗೆ ಒಳಗೆ ಹೋದೆವು. ಮೇಲೆ ಬಾತ್ರೂಮ್ನಲ್ಲಿ ನೀರು ಬಿಟ್ಟಿರುವ ಸದ್ದು, ಸಣ್ಣ ಧ್ವನಿಯಲ್ಲಿ ಹಾಡುವ ಸದ್ದು ಕೇಳಿಸಿತು.
“ನೋಡಿದೆಯಾ ಈ ಕಳ್ಳ ಭಡವ! ಎಷ್ಟು ಕೊಬ್ಬು! ನಮ್ಮ ಬಾತ್ರೂಮ್ನಲ್ಲಿ ‘ಇಳಿದು ಬಾ ತಾಯೆ ಹರನ ಜಡೆಯಿಂದ‘ ಅಂತ ಹಾಡುತ್ತಿದ್ದಾನೆ,“ ಎಂದು ಮತ್ತೆ ರೋಷಗೊಂಡಳು. ಆಕೆಗೆ ಸ್ವಲ್ಪ ಸಮಾಧಾನ ಮಾಡಿ ಮೊದಲು ನಾಯಿಯನ್ನು ಬಿಟ್ಟೆವು. ಅದು ಬೌ ಅಂತ ಮೇಲೆ ಹೋಗಿ, ೫ ನಿಮಿಷಕ್ಕೇ ಸಂತೋಷವಾಗಿ ವಾಪ್ಪಸ್ಸು ಬಂತು. ”ಕಳ್ಳ,ನಾಯಿಗೆ ಮ್ಯಾಜಿಕ್ ಮಾಡಿದ್ದಾನೆ” ಎಂದು ಹೇಳಿದ ಸುಮಾ ಸ್ವಲ್ಪ ಹೊತ್ತು ಮೌನವಾದಳು. ಮತ್ತೆ “ನನ್ನ ಅಮ್ಮ ಕೊಟ್ಟ ನೆಕ್ಲೆಸ್ನ ಹಾಸಿಗೆ ಒಳಗೆ ಬಚ್ಚಿ ಇಟ್ಟಿದ್ದೆ. ಸೇಫ್ ಡೆಪಾಸಿಟ್ ನಲ್ಲಿ ಇಡಬೇಕು ಅಂತ, ಕಳ್ಳ ಎಲ್ಲ ಒಡವೆಗಳು, ದುಡ್ಡು, ಮದುವೆ ಸೀರೆಗಳು ಎಲ್ಲ ಜಮಾಯಿಸುತಿದ್ದಾನೆ.“ ಎಂದು ಮತ್ತೆ ಜೋರಾಗಿ ಕಿರಿಚಾಡಿದಳು. ನಾನು ನನ್ನ ಗಂಡನಿಗೆ, ನೀವೊಮ್ಮೆ ಹೋಗಿ ನೋಡಿಯಲ್ಲ, ಧೈರ್ಯವಿದ್ದರೆ ಅಂತ ಬೇಕಂತ ಕೆಣಕಿದೆ. ಆ ಮಾತಿನಿಂದ ಅವರಿಗೆ ಕೊಂಚ ಅಸಮಾಧಾನ ಆಯಿತಾದರೂ ಮರುಕ್ಷಣವೇ ದಬದಬ ಮೆಟ್ಟಿಲೇರಿ ಮಹಡಿಗೆ ಹೋದರು. ಒಂದಷ್ಟು ಹೊತ್ತು ಸದ್ದೇ ಇಲ್ಲ. ಈಗ ನಮ್ಮಿಬ್ಬರಿಗೂ ನಿಜವಾಗಲೂ ಆತಂಕವಾಯಿತು. ಧೈರ್ಯ ಮಾಡಿ ನಾವಿಬ್ಬರೂ ಮಹಡಿ ಮೇಲೆ ಹೋದೆವು. ಅಲ್ಲಿ ನೋಡಿದರೆ ನನ್ನ ಪತಿರಾಯ ಮತ್ತು ಅರವಿಂದ ಏನು ಆಗಿಲ್ಲ ಅನ್ನೋ ಹಾಗೆ ನಗುತ್ತ ಹರಟೆ ಹೊಡೆಯುತ್ತ ನಿಂತಿರುವುದನ್ನು ಕಂಡ ಸುಮತಿ ಕೆಂಡಾಮಂಡಲ ಸಿಟ್ಟು ತಾಳಿದಳು. ಸ್ವಲ್ಪ ಹೊತ್ತಿಗೆ ಎಲ್ಲವು ಸರಿಯಾಗಿ ಆಕೆಯೂ ಸಮಾಧಾನ ಗೊಂಡಳು.
ಹಾಗಾದರೆ ಆದದ್ದೇನು? ಅರವಿಂದ ತಿಂಡಿತಿಂದು ಮನೆಗೆ ಬಂದ. ಸುಮಾಳ ಕೋಪದ ಕಾವು ಈ ಮೊದಲೂ ಅನುಭವಿಸಿದ್ದರಿಂದ ಮತ್ಯಾಕೆ ರಗಳೆ ಎಂದು ಹಿಂದಿನ ಬಾಗಿಲಿನಿಂದ ಮನೆಗೆ ನುಸುಳಿಕೊಂಡ. ಆರಾಮವಾಗಿ ಸ್ನಾನ ಮಾಡಿ ನಿದ್ರೆಮಾಡಲು ತಯಾರಿ ನಡುಸುತಿದ್ದ . ಆದರೆ ಪಾಪ! ಸುಮಾಳ ಬಾಲ್ಯದ ಕಳ್ಳನ ಕುರಿತು ಇದ್ದ ಹೆದರಿಕೆಯ ಕೆಂಡ ಕೆದಕಿದ್ದ.
ಈ ಘಟನೆಯನ್ನು ಈಗಲೂ ನೆನೆಸಿಕೊಂಡು ನಾವೆಲ್ಲಾ ನಗುತ್ತೇವೆ. ಸುಮಾ ಮಾತ್ರ ” ಇವತ್ತಿಗೂ ನನಗೆ ಕಳ್ಳರ ಬಗ್ಗೆ ವಿಪರೀತ ಭಯ!
ದಯವಿಟ್ಟು ನನ್ನ ಗಂಡನಿಗೆ ಹೇಳಬೇಡಿ.” ಎಂದಾಗ ನಾವೆಲ್ಲ ನಗೆಗಡಲಲ್ಲಿ ತೇಲುತ್ತೇವೆ.
ಕಳ್ಳ ಬಂದ – ಕ್ಯಾಮರಾ ಹೋತು – ವಾಪಸ್ ಬಂತು!
ಶ್ರೀವತ್ಸ ದೇಸಾಯಿ ಅವರ ಅನನ್ಯ ಅನುಭವ ಕಥನ.
ಆಘಾತ -1 – ಕಳುವು
ಇದು ಎರಡು ದಶಕಗಳ ಹಿಂದಿನ ಘಟನೆ. ಆಗ ನಮ್ಮ ಮನೆಗೆ ಬರ್ಗ್ಲರ್ ಅಲಾರ್ಮ್ ಇರಲಿಲ್ಲ. ನನಗೆ ವಿಡಿಯೋ ಕ್ಯಾಮರಾದ ಹವ್ಯಾಸ ಶುರುವಾಗಿತ್ತು. ಶರತ್ಕಾಲದಲ್ಲಿ ಗಿಡ ಮರಗಳ ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತಿದ್ದವು. ಆ ಮಧ್ಯಾಹ್ನ ಅದರ ಶೂಟಿಂಗ್ ಮಾಡಿ ಮನೆಯಲ್ಲಿ ಅ ವಜ್ಜೆಯ ಕ್ಯಾಮರಾ ಇಟ್ಟು ಶಾಲೆಯಿಂದ ನನ್ನ ಹನ್ನೆರಡು ವರ್ಷದ ಮಗಳನ್ನು ಕರೆದುಕೊಂಡು ಬರಲು ಸ್ಕೂಲಿಗೆ ಓಡಿದೆ. ಮನೆಗೆ ಬಂದು ನೋಡುತ್ತೇನೆ, ತುಡುಗು ಆಗಿತ್ತು. ತೋಟದ ಕಡೆ ಮುಖಮಾಡಿದ್ದ ಕಿಡಕಿಯ ಗಾಜನ್ನು ಒಡೆದು ಒಳಗೆ ಬಂದು ನನ್ನ ಬೆಡ್ರೂಮಿನಲ್ಲಿಟ್ಟಿದ್ದ ಆ ಕ್ಯಾಮರಾ, ಮತ್ತು ಕೆಲ ಸಾಮಾನುಗಳನ್ನು ನನ್ನ ಆ ಅರ್ಧ ಗಂಟೆಯ ಅನುಪಸ್ಥಿತಿಯಲ್ಲಿ ಕದ್ದು ಮಾಯವಾಗಿದ್ದ ಆ ಕಳ್ಳ. ಆಗ ಹೆರಾಯಿನ್ ಮತ್ತಿತರ ಮಾದಕ ದ್ರವ್ಯಗಳ ಅಡಿಕ್ಟ್ ಆಗಿದ್ದ ಕಳ್ಳರ ಸಂಖ್ಯೆ ಹೆಚ್ಚಾಗಿತ್ತು ಅಂತ ಓದಿದ್ದೆ. ಮನೆಗೆ ಬಂದ ಕೂಡಲೆ ಮೊದಲು ಮಗಳಿಗೆ ತಿಂಡಿ ಕೊಡಬೇಕೆಂದು ನನ್ನ ಮನದ ತಲ್ಲಣ-ಕಳವಳವನ್ನು ತೋರಗೊಡದೆ ಕಳವಾದದ್ದು ಗೊತ್ತಾಗದೆ ತನ್ನ ಕೋಣೆಗೆ ಹೋಗಿದ್ದ ಅವಳನ್ನು ಕರೆದು ಸುದ್ದಿ ಹೇಳಿದೆ.
ಆಘಾತ -2 ಸ್ಥಿತಪ್ರಜ್ಞ
ಅವಳ ತಾಯಿ ಇನ್ನೂ ಕೆಲಸದಿಂದ ಬಂದಿರಲಿಲ್ಲ. ನಾನೇ ಉಪಹಾರ ಕೊಡುತ್ತ ಸ್ಥಿತಪ್ರಜ್ಞನಂತೆ ’ಬ್ರೆಕ್ಕಿನ್ ನ್ಯೂಸ್’ (breaking news) ಹೇಳಿದೆ. We are burgled ಅಂತ. ವಿನೋಬಾ ಭಾವೆಯವರು ಶಿವಣಿ ಜೈಲಿನ ರಾಷ್ಟ್ರ ಭಕ್ತ ಕೈದಿಗಳಿಗೆ ಸಂಜೆಯ ಉಪನ್ಯಾಸ ಕೊಡುತ್ತಿದ್ದರಂತೆ ಭಗವದ್ಗೀತೆಯ ಮೇಲೆ. ಅವರ ಬೇಡಿಕೆಯ ಮೇರೆಗೆ ಎಲ್ಲ ಉಪನ್ಯಾಸಗಳನ್ನು ತಮ್ಮ ‘ಸ್ಥಿತಪ್ರಜ್ಞ ದರ್ಶನ’ ಪುಸ್ತಕದಲ್ಲಿ ಬರೆದಿದ್ದರು. ಅದನ್ನು ನನ್ನ ಅಜ್ಜ ಕನ್ನಡೀಕರಿಸಿದ್ದರು. 2,700 ಸಲ ಅಜ್ಜ ಭಗವದ್ಗೀತೆಯನ್ನು ಓದಿದ್ದರಂತೆ. ನಾನು ಆಗ ತಾನೆ ಮೊದಲ ಸಲ ಸ್ಥಿತಪ್ರಜ್ಞನ ಲಕ್ಷಣಗಳನ್ನು ಓದಲಾರಂಭಿಸಿದ್ದೆ (ಅಧ್ಯಾಯ 2, ಶ್ಲೋಕಗಳು 58-72). ಮಗಳು ಏನೇನೆಲ್ಲ ಹೋಗಿದೆ ಅಂತ ಕೇಳಿದಳು. ಬಹಳ ದಿನಗಳಿಂದಲೂ ನನಗೆ ಹೊಸತೊಂದು ಕ್ಯಾಮ್ ಕಾರ್ಡರ್ ಕೊಳ್ಳುವ ಮನಸ್ಸಿದೆ ಎಂಬುದು ಅನ್ನುವದು ಅವಳಿಗೂ ಗೊತ್ತಿತ್ತು. ಆಗಾಗ ತಮಾಷೆಗೆಂದು ಅದು ಕಳೆದು ಹೋದರೆ ಇನ್ಶೂರನ್ಸ್ ನಲ್ಲಿ ನನಗೆ ಹೊಸತು ಸಿಕ್ಕೀತೆಂದು ಹೇಳಿದ್ದು ನೆನಪಿಸಿಕೊಂಡು, ’ಇದೇನು ನಾಟಕವೋ? Have you set it up for insurance?’ ಅನ್ನಬೇಕೇ? ನಾನು ಕಳಕೊಂಡಿದ್ದಕ್ಕಿಂತ ಈ ಮಾತು ಹೆಚ್ಚು ಆಘಾತಕಾರಿಯಾಗಿತ್ತು! ನನ್ನ ಮಗಳೂ ಸಹ ನಂಬಲಾರಳೆ ನನ್ನ ಪರಿಸ್ಥಿತಿಯನ್ನು? ಲೌಂಜಿಗೆ ಕರೆದುಕೊಂಡು ಹೋಗಿ ಒಡೆದು ಅರ್ಧ ತೆರೆದ ಕಿಡಕಿ ಮತ್ತು ನೆಲದಮೇಲೆ ಚೆಲ್ಲಾಪಿಲ್ಲಿಯಾಗಿ ಪಸರಿಸಿದ ಗಾಜಿನ ಚೂರುಗಳನ್ನು ತೋರಿಸಿದೆ. ಇನ್ನು ಮುಂದೆ ಅವಳ ಅಮ್ಮನನ್ನು ನಂಬಿಸುವದು ಉಳಿದಿತ್ತು! ಪೋಲೀಸಿನವರಿಗೆ ಫೋನು ಮಾಡಿ ವಿವರ ಕೊಟ್ಟೆ. ಏನೇನೆಲ್ಲ ಹೋಗಿದೆ ಅಂತ ವರದಿ ಮಾಡಿದೆ. ಅವರು ಶಾಲೆಯ ಟೈಮ್ ನಲ್ಲೇ ಇಂಥ ಕಳುವುಗಳ ಹಾವಳಿ ಇರುತ್ತದೆ. ಯಾಕಂದರೆ ಕಳ್ಳರಿಗೆ ಗೊತ್ತು, ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರುವುದಿಲ್ಲ ಅಂತ. ಹೊಂಚು ಹಾಕಿ ಕಾಯುತ್ತಿರುತ್ತಾರೆ, ಅಲಾರ್ಮ್ ಇಲ್ಲದ ಮನೆಗಳ ಬೇಟೆಯಾಡುತ್ತಿರುತ್ತಾರೆ. ಅದಕ್ಕೇ ಬರ್ಗ್ಲರ್ ಅಲಾರ್ಮ್ ಇಟ್ಟುಕೊಳ್ಳ ಬೇಕು ಇತ್ಯಾದಿ ಉಪದೇಶವನ್ನು ತಾಳ್ಮೆಯಿಂದ ಕೇಳಿಸಿಕೊಂಡೆ. ನನ್ನ ವೈಯಕ್ತಿಕ ವಿವರಗಳನ್ನು ಕೇಳಿ ಬರೆದು ಕೊಂಡು ನನ್ನ ವಿಳಾಸಕ್ಕೆ ಫಿಂಗರ್ ಪ್ರಿಂಟ್ ಎಕ್ಸ್ಪರ್ಟ್ ಮತ್ತು ಡಿಟೆಕ್ಟಿವ್ ಬರುತ್ತಾರೆ ಅಂತ ಭರವಸೆ ನೀಡಿದ ಸ್ವಿಚ್ ಬೋರ್ಡ್ನಲ್ಲಿ ಕುಳಿತಿದ್ದ ಪೋಲೀಸ್ ಆಫೀಸರ್.
ಆಘಾತ -3
ಅಷ್ಟರಲ್ಲಿ ಕೆಲಸದಿಂದ ನನ್ನ ಹೆಂಡತಿ ಬಂದಳು. ಗಾಜಿನ ಚೂರುಗಳನ್ನು ನೋಡಿ ಹೌಹಾರಿದಳು. ನಗುತ್ತ ಬಂದವಳ ಮುಖಚರ್ಯೆಯೇ ಬದಲಾಯಿತು. ಏನಾಯಿತು ಅಂತ ಕೇಳಿದಳು. ಎಲ್ಲ ಹೇಳಿದೆ. ಏನು ಕಳಕೊಂಡೆ, ಅಂದಳು. ಯಾದಿ ಒಪ್ಪಿಸಿದೆ. ಮತ್ತೇನು ಅಂದಳು. ಈಗಾಗಲೇ ಬುದ್ಧಿ ಸ್ವಲ್ಪ ಸ್ತಿಮಿತ್ತಕ್ಕೆ ಬಂದು ಮತ್ತೆರಡು ಸಲ ಕಪಾಟು, ಡ್ರಾ ಎಳೆದು ಎಲ್ಲ ಹುಡುಕಾಡಿದ್ದೆ. ಸ್ವಲ್ಪ ಕ್ಯಾಶ್ ಹೋಗಿದೆ, ಅಂದೆ. ’’ಎಲ್ಲ ಅಲ್ಲಲ್ಲೇ ಒಗೆದಿರುತ್ತೀ. ನಿನಗೆ ನೂರು ಸಲ ಹೇಳಿದ್ದೆ, ಬರ್ಗ್ಲರ್ ಅಲಾರ್ಮ್ ಹಾಕಿಸು ಅಂತ, ಕೇಳಿದೆಯಾ?” ಪೂಜೆ ಶುರು. ”ಮತ್ತೆ ಎಲ್ಲ ಸರಿಯಾಗಿ ನೋಡಿದೆಯಾ?” ಗೋಣು ಅಲ್ಲಾಡಿಸುತ್ತ ಹೇಳಿದೆ: ”ನಮ್ಮ ಆಸ್ಪತ್ರೆಯ ಶತಮಾನೋತ್ಸವದ ಕಂಚಿನ ಮೆಡಲ್ ಕಾಣವಲ್ಲದು …’’ ಅಂತ ಮೆಲ್ಲಗೆ ಎಳೆಯಲಾರಂಭಿಸಿದೆ. ”ಎಲ್ಲಿ ಒಗೆದಿದ್ದೀಯೊ. ನಿನ್ನ ಅಶಿಸ್ತು ನನಗೆ ಗೊತ್ತಿಲ್ಲವೆ?’’ ಆಪಾದನೆ ನಂಬರ್ ನೂರಾ ಒಂದು. ”ಸರಿ ಏನಾದರೂ ತಿಂದು, ಕುಡಿ. ಆ ಇನ್ಸ್ಪೆಕ್ಟರ್ ಯಾವಾಗ ಬರುತ್ತಾನೋ, ಶನಿ.” ಈಗ ಪೂಜೆ ಆ ನಿಷ್ಪಾಪಿಯತ್ತ ಡೈವರ್ಟ್ ಆಗುತ್ತಿದೆ ಅನಿಸಿತು. ಕತ್ತಲಾಗುತ್ತಿದ್ದಂತೆ ಸ್ವಲ್ಪೇ ಹೊತ್ತಿನಲ್ಲಿ ಆತ ಬಂದ. ಒಳಗೆ ಕಾಲಿಡುತ್ತಿದ್ದಂತೆಯೇ. ’’ನೀವು ಸುದೈವಿಗಳಲ್ಲವೇ” ಅಂದ. ನನಗೋ ಮೊದಲೇ ರೇಗಿ ಹೋಗಿತ್ತು. ಇದನ್ನು ಕೇಳಿ ಇದೆಂಥ ನಿರ್ದಯಿ ಈತನ ಮಾತು ಅಂತ ನೆತ್ತಿಗೇರಿತು.”ಇದೇನು ಇಂದು ಕನ್ನ ಹಾಕಿದ ಮನೆಗೆ ಬಂದು ಹೀಗೆ ಹೇಳುವದೇ?’’ ಅಂತ ಖಾರವಾಗಿಯೇ ಕೇಳಿದೆ. ಆಮೇಲೆ ಅರ್ಥವಾಯಿತು ಅವನಂದುದರ ತಾತ್ಪರ್ಯ. ಅತ್ತ ಬೆರಳ ಗುರುತುಗಳ ಪ್ರತಿ ತೊಗೊಳ್ಳಲು ಕಿಡಕಿಗಳಿಗೆ ಎಲ್ಲ ಗ್ಲಾಸು, ಬಾಗಿಲು, ಗೋಡೆ ತುಂಬ ಬಿಳಿ ಪುಡಿಗಳನ್ನು ಪಸರಿಸಿ, ಇನ್ನೂ ಕತ್ತಲೆ ಮಾಡುವುದರಲ್ಲಿ ನಿರತಳಾಗಿದ್ದ ಸಹೋದ್ಯೋಗಿಯತ್ತ ನೋಡುತ್ತ ಎಲ್ಲ ಸರಿಯಾಗಿ ಮಾಡು ಅಂತ ಹೇಳುತ್ತ ನಮ್ಮ ಮನೆಯನ್ನು ದೋಚಿದ ಕಳ್ಳ ಈಗಾಗಲೆ ಅರೆಸ್ಟ್ ಆಗಿ ಲಾಕಪ್ಪಿನಲ್ಲಿದ್ದಾನೆ ಅನ್ನುವ ಸುದ್ದಿ ಹೇಳಿದ. ನನಗೆ ನಂಬಲೇ ಆಗಲಿಲ್ಲ. ಅದು ಹೇಗೆ ಇಷ್ಟು ಬೇಗನೆ ಅಂದೆ. ನನಗೆ ಆ ವಿಭಾಗದವರು ಹೇಳಿದ್ದೇನೆಂದರೆ ನಿಮ್ಮ ಮನೆಯಲ್ಲಿ ಕದ್ದು ಇಲ್ಲಿಂದ ಹೊರಟವ ಊರ ಮಧ್ಯದಲ್ಲಿ ಸಿಕ್ಕಿ ಬಿದ್ದ. ಆತನ ಕಾರಿನಲ್ಲಿ ಸಿಕ್ಕ ಸಾಮಾನುಗಳಲ್ಲಿ ನಿಮ್ಮ ಕ್ಯಾಮ್ ಕಾರ್ಡರಿನ ಮೇಲೆ ನೀವು ಢಾಳಾಗಿ ಇನ್ವಿಸಿಬಲ್ ಇಂಕ್ ಪೆನ್ನಿನಲ್ಲಿ ಬರೆದ ಪೋಸ್ಟ್ ಕೋಡ್ ಕಂಡು ನಿಮ್ಮದೆಂದು ಗುರುತಿಸಿದ್ದೇವೆ, ಅಂದ. ಆತ ಶಹಭಾಶ್ ಗಿರಿಗೆ ಕಾಯುತ್ತಿದ್ದ. ಅದೆಂಥ ನಿರಾಶೆ ನನಗೆ! ಹೊಸ ಕ್ಯಾಮರಾದ ಆಸೆಗೆ ಅಲ್ಲೇ ತಿಲಾಂಜಲಿ. ಆದರೂ ಸ್ಥಿತಪ್ರಜ್ಞನಂತೆ ಮುಖದಲ್ಲಿ ಅದನ್ನು ತೋರಗೊಡದೆ ’’ವಂಡರ್ ಫುಲ್! ನಿಮ್ಮ ಪತ್ತೇದಾರಿಗೆ ಅಭಿನಂದನೆಗಳು,’’ ಅಂತ ಕೈಕುಲುಕಿದೆ. (ಆಗ ಅದಕ್ಕೆ ಪರವಾನಗಿ ಇತ್ತು!). ಪೋಲೀಸ್ ಸ್ಟೇಶನ್ನಿಗೆ ನಾಳೆ ಬಂದು ರಿಪೋರ್ಟಿಗೆ ಸಹಿ ಮಾಡಿ, ರೆಡಿ ಮಾಡಿದ್ದರೆ ನಿಮ್ಮ ವಸ್ತುಗಳನ್ನು ಪಡೆದು ರಿಸೀಟ್ ಕೊಟ್ಟು ಹೋಗ ಬಹುದು ಅಂದಾಗ ತಾಯಿ ಮಗಳು ಕಣ್ಣು ಮಿಟುಕಿಸುತ್ತ ನನ್ನತ್ತ ನೋಡಿ ನಕ್ಕಿದ್ದು ಮರೆಯುವಂತಿಲ್ಲ.
ಆಮೇಲೆ ತಿಳಿದ ವಿಚಾರವೆಂದರೆ ಈ ಡ್ರಗ್ ವ್ಯಸನಿಗಳನ್ನು ಕಾಯದೇ ಪ್ರಕಾರ ಲಾಕಪ್ ಮಾಡುವದು ಸುಲಭವಲ್ಲವಂತೆ. ಅದಕ್ಕೇ ಅವರಿಗೆ ಗೊತ್ತಾಗಲಾರದಂತೆ ಅವರ ಮೇಲೆ ಕಣ್ಣು ಇಟ್ಟು ಅವರ ಬೆನ್ನು ಹತ್ತಿ ಕೈಗೆ ಸಿಕ್ಕಾಗ ವಿಚಾರಸುತ್ತಾ ಕಾರಿನಲ್ಲಿ ಕದ್ದ ಮಾಲುಗಳು ಸಿಕ್ಕಾಗ ಕಳುವಿನ ಅಪರಾಧಕ್ಕಾಗಿ ಅವರನ್ನು ಜೇಲಿಗೆ ಕಳಿಸಿ ಕೆಲವು ವಾರ, ಅಥವಾ ತಿಂಗಳಾದರೂ ಸಮಾಜದಿಂದ ದೂರ ಇಡುವ ಗತ್ತು ಇದು, ಅಂತ. ನನ್ನ ದುರದೃಷ್ಟ ನಮ್ಮ ಮನೆಯ ಕಳ್ಳನನ್ನು ಹಿಂಬಾಲಿಸಿರಬಹುದಾದ ಪೋಲೀಸರಿಗೆ ಕಳುವಿನ ಮಾಲು ಆ ದಿನವೇ ಸಿಗಬೇಕೇ? ಅದನ್ನೇ ಆ ಡಿಟೆಕ್ಟಿವ್ ಹೇಳಿದ್ದು.
ಹಿನ್ನುಡಿ:
ನಮ್ಮ ವಿಡಿಯೋ ಕ್ಲಬ್ಬಿನ ’’EDIT” ಎನ್ನುವ ನಿಯತಕಾಲಿಕ ಪತ್ರಿಕೆಗೆ ಲೇಖನವೊಂದನ್ನು ಬರೆದೆ: ‘When a copper (ಪೋಲೀಸ) didn’t deserve a Gold (ಮೆಡಲ್)!’ ಬೆರಳ ಗುರುತುಗಳ ಬಿಳಿ ಹುಡಿಯನ್ನು ಮೆತ್ತಿದ ಆ ಕ್ಯಾಮ್ ಕಾರ್ಡರ್ ನನಗೇ ವಾಪಸ್ ಬಂದು ಇನ್ನೆಷ್ಟೋ ದಿನಗಳ ವರೆಗೆ ನನ್ನ ಹತ್ತಿರ ಇತ್ತು. ಮೋಬೈಲ್ ಫೋನ್ ಕ್ಯಾಮರಾ ಬರುವ ವರೆಗೆ ಎರಡು ಮೂರು ಬೇರೆ ಬೇರೆ ವಿಡಿಯೋ ಕ್ಯಾಮರಾ ಬದಲಾಯಿಸಿದ್ದೆ.
ಈಗ ಮನೆಗೆ ಬರ್ಗ್ಲರ್ ಅಲಾರ್ಮ್ ಇದೆ. ನನ್ನ ಕಳೆದು ಹೋಗಿದ್ದ ಆ ಅಸ್ಪತ್ರೆಯ ಸ್ಮರಣಾರ್ಥಕ ಮೆಡಲ್ ಮನೆಯಲ್ಲೇ ಸಿಕ್ಕಿದೆ! ಮೂರನೆಯ ಸುತ್ತಿನ ಗೀತಾ ಅಧ್ಯಯನದಲ್ಲಿ ನಾನು ಇನ್ನೂ ಎರಡನೆಯ (ಸ್ಥಿತಪ್ರಜ್ಞನ) ಅಧ್ಯಾಯದ ಅಧ್ಯಯನದಲ್ಲೇ ಇದ್ದೇನೆ. ಇನ್ನು ಬರೀ ಎರಡು ಸಾವಿರ ಚಿಲ್ಲರೆ ಸಲ ಅಷ್ಟೇ ಉಳಿದಿದೆ!
ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್
ಈ ವಾರದ ಕಳ್ಳತನದ ಹಾಸ್ಯ ಲೇಪಿತ ಘಟನೆಗಳು ಸೊಗಸಾಗಿದೆ. ಲೇಖನಗಳನ್ನು ಓದುತ್ತಾ ನಕ್ಕು ಮನ ಹಗುರಾಯಿತು. ಪಾಪ ವತ್ಸಲಾ ಅವರ ಗೆಳತಿಗೆ ಒಳ್ಳೆ ಪಜೀತಿ! ದೇಸಾಯಿ ಸರ್ ಸ್ಥಿತಪ್ರಜ್ಞರಾಗಿ ಪರಿಸ್ಥಿತಿಯನ್ನು ಸುಧಾರಿಸಲು, ಅಸ್ತವ್ಯಸ್ತ ವಾದ ಕೊಠಡಿಯಲ್ಲಿ ಕಳೆದುಕೊಂಡ ವಸ್ತುಗಳ ಪಟ್ಟಿ ಮಾಡುತ್ತಿರುವಾಗ, ಶ್ರೀಮತಿಯ ಆಪಾದನೆಗಳಿಗೆ ಸುಸ್ತಾಗಲು, ಗಸ್ತು ಹೊಡೆಯುತ್ತಿದ್ದ ಪೋಲೀಸು(ಶನಿ!😅) ಮನೆಗೆ ಬಂದು ಕೈಗೆ ಕ್ಯಾಮರವಿಟ್ಟು ಅಸ್ತು ಎಂದ ಕಥೆ ಮಸ್ತಾಗಿದೆ! ಅದರ ಮೇಲೆ postcode ಬರೆದ ನಿಮ್ಮ ಮುಂದಾಲೋಚನೆ ಮೆಚ್ಚುವಂತದ್ದು. ಒಟ್ಟಿನಲ್ಲಿ ಒಳಗಿದ್ದ ಆಸೆಗೆ ಮಾತ್ರ ಪೂಜಾರಿ ತಥಾಸ್ತು ಅನ್ನಲಿಲ್ಲ! 😂
LikeLike
ಧನ್ಯವಾದಗಳು, ರಮ್ಯ ಅವರೆ. ಆಗ ನಮ್ಮ ಹತ್ತಿರ ಇದ್ದ ಜಂಗಮ ‘ಆಸ್ತಿ’ಯೇ ಬಹಳ ಕಡಿಮೆ. ಕಳವು ಹೆಚ್ಚಾದಾಗ ಪೋಲಿಸರು ಅಲ್ಲಲ್ಲಿ ಮೀಟಿಂಗ ಮಾಡಿ ಎಚ್ಚರಿಸಿ ಪೋಸ್ಟಕೋಡ ಬರೆಯಲು ಆ ಪೆನ್ನುಗಳನ್ನುಹಂಚುತ್ತಿದ್ದರು. ಅದರಿಂದ ಸಿಕ್ಕ ವಸ್ತುಗಳಮೇಲೆಲ್ಲ ಗುರುತು ಮಾಡಿ ಇಡುತ್ತಿದ್ದೆವು. ಕ್ಯಾಮರಾ ಕೊಂಡ ಹೊಸತರಲ್ಲಿ ಇನ್ಶೂರನ್ಸ್ ಕ್ಲೇಮ್ ವಿಷಯ ಬಂದಿರಲಿಲ್ಲವಲ್ಲ!
LikeLike
ವತ್ಸಲಾ ಅವರ ‘ಕಳ್ಳ ಬಂದ’ ಲೇಖನ ಬಹಳೇ ಸ್ವಾರಸ್ಯಕರವಾಗಿದೆ. ಅದಕ್ಕೆ ಪೂರಕವಾದ ಶೈಲಿ ಸಹ( ಕಳ್ಳ ಭಢವ, ಎಷ್ಟು ಕೊಬ್ಬು)! ಹಾಡುತ್ತ ಮೇಲೆ ಸ್ನಾನವಾಡುವ ಕೂಲ್ ಕಳ್ಳರಿಗೆ ನಮ್ಮ ಮನೆಯಲ್ಲಿ ಯಾವಾಗಲೂ ಸ್ವಾಗತ! ಮನುಷ್ಯನಿಗೆ style&state ಇದೆ ಅಂತ! ನೀವು ಇನ್ನಷ್ಟು ಬರೆಯ ಬೇಕು ಅನಿವಾಸಿಗೆ. ಗೊತ್ತಾಗದಂತೆ ನುಸುಳಿಕೊಂಡರೂ ಪರವಾಗಿಲ್ಲ! ಶ್ರೀವತ್ಸ
LikeLike
ಅನಿವಾಸಿಯಲ್ಲಿ ಕಳ್ಳರ ಕಾರುಭಾರಿನ ಕಥೆ ಓದಿ ಮಜಾ ಬಂತು.
ಪುಣ್ಯಕ್ಕೆ ವತ್ಸಲಾ ಅವರ ಗೆಳತಿ (ಕಹಳೆ ಊದಿ ಇವರನ್ನು ಕರೆದರೂ) ಸ್ವತಃ ಒನಕೆ ಓಬವ್ವನ ರೂಪ ಧರಿಸದಿದ್ದುದೂ, ಹ್ಯಾಂಡಿಯಾಗಿ ಒಂದು ಒನಕೆ ಇಲ್ಲದಿದ್ದುದೂ ಒಳ್ಳೆಯದಾಯಿತು. ಇಲ್ಲದಿದ್ದರೆ ’ಕಳ್ಳೆಜಮಾನ’ರು ಅಷ್ಟೊಂದು ಆರಾಮವಾಗಿ ಇರಲಿಕ್ಕೆ ಸಾಧ್ಯವಿದ್ದಿಲ್ಲ!
ದೇಸಾಯರು ಕಳ್ಳ ಕ್ಯಾಮರಾ ಒಯ್ದರೂ ಏನೂ ಆಗದವರಂತೆ ಮಗಳಿಗೆ ತಿಂಡಿ ಕೊಡುತ್ತಾ ಸ್ಥಿತಪ್ರಜ್ಞರಾಗಿದ್ದುದು ಹೇಗೆ? ಅಳಿಸಲಾಗದ ಮಸಿಯಿಂದ ಪೋಸ್ಟ್ ಕೋಡ್ ಬರೆದದ್ದರಿಂದ, ಕ್ಯಾಮರಾ ಸಿಕ್ಕೇ ಸಿಗುತ್ತದೆ ಅನ್ನುವ ಧೈರ್ಯವೋ ಏನೋ. ಆದರೂ, ಕೊನೆಯಲ್ಲಿ ಕಳ್ಳನ ಜೀವ ಹುಳ್ಳುಳ್ಳಗೋ, ಕಳಕೊಂಡವರ ಮನಸ್ಸು ಹುಳ್ಳುಳ್ಳಗೋ ಅನಿಸಿದ್ದು ಖರೆ!
– ಲಕ್ಷ್ಮೀನಾರಾಯಣ ಗುಡೂರ್
LikeLiked by 1 person
ನೀವು ಓದಿ ಎಂಜಾಯ್ ಮಾಡಿ ಪ್ರತಿಕ್ರಿಯೆಸಿದ್ದಕ್ಕೆ ಧನ್ಯವಾದಗಳು. ಆತ ಸಿಗದಿದ್ದರೇನೇ ನಾನು ಖುಷಿಪಡುವವನಿದ್ದೆ-
ಈ ಮಳ್ಳ ಬಯಸಿದ್ದೂ ಅದೇ, ಕಳ್ಳ ಮಾಡಿದ್ದೂ ಅದೇ ಅಂತ. ಆದರೆ ದೇವರು ಕರುಣಿಸಿದ್ದರೂ ಪೂಜಾರಿ (ಪೊಲೀಸ್ ಪತ್ತೇದಾರ) ಕರುಣಿಸಿರಲಿಲ್ಲ. ಹೋಗಲಿ ಬಿಡಿ. ನಾನು ಬರೆದದ್ದು ನೀವೆಲ್ಲ ಓದಿ ಖುಷಿ ಪಟ್ಟದ್ದು ಮುಖ್ಯವಲ್ಲವೇ?
LikeLiked by 1 person
ವಾವ್ ವಾವ್! ಭರ್ಜರಿ ಲೇಖನ ಗಳೇ ಸಿಕ್ಕು ನಾ ಭಾಳ ದಿನದ ಮ್ಯಾಲೆ ಬರೀಲಿಕ್ಕೆ ನೋಡಿದಾಗ.
ವತ್ಸಲಾ ಅವರ ಗೆಳತಿ ಛಂದ ಮೋಸ ಹೋಗ್ಯಾರ.ಕಳ್ಳಗ ಹಾಡು ಹಾಡೋ ಪುರುಸೊತ್ತು ಎಲ್ಲಿರತದ.ಇದ್ದಬಿದ್ದಿದ್ದನ್ನ ಬಳಕೊಂಡ ಹೋಗೋ ಗಡಿಬಿಡಿ ಅಂವಗ.ಪಾಪ ಭಾಳ ಗಾಬರಿ ಆಗ್ಯಾರ ಅವರು.ನಾನೂ ಅವರ ಜೋಡಿಯಾಕೀನ ಮತ್ತ.ಒಂದ ಕೈ ಮ್ಯಾಲನ! ಭಾರೀ ಮಸ್ತ್ ಬರಹ ವತ್ಸಲಾ ಅವರದು.
ಶ್ರೀವತ್ಸ ದೇಸಾಯಿಯವರ ತುಡಗನ ಕಥಿ ಜೋರ ಅದ ಹಾಂ! ಅದಹೆಂಗ ಅಷ್ಟಲಗೂ ಸಿಕ್ಕನೋ ಅಂತೀನಿ.ಪಳಗಿದಾಂವ ಇರಲಿಕ್ಕಿಲ್ಲ.ಖರೇ ಶ್ರೀವತ್ಸ ದೇಸಾಯಿಯವರ ನಿರಾಸೆ ಅವರನ್ನು ಸ್ಥಿತಪ್ರಜ್ಞ ರನ್ನಾಗಿ ಮಾಡೋ ಅಷ್ಟ ಜೋರಿತ್ತ ಲಾ ಅಂತ ಕೆಟ್ಟ ಅನಿಸ್ತು. ನೀವೇ ಅದನ್ನು ತುಡುಗಲೇ ಅಡಗಿಡಿಸಿದ್ರ ಕೆಲಸ ಚೊಕ್ಕ ಆಗಿರೋದು.
ಭಾರೀ ಮಸ್ತ್ ಮಜಾ ಬಂತ ಓದಿ.
ವತ್ಸಲಾ ಹಾಗೂ ಶ್ರೀವತ್ಸ ದೇಸಾಯಿಯವರಿಗೆ ಅಭಿನಂದನೆಗಳು ಭರ್ಜರಿ ಬರಹ ನೀಡಿದ್ದಕ್ಕೆ.
ಸರೋಜಿನಿ ಪಡಸಲಗಿ
LikeLiked by 1 person
ಸರೋಜಿನಿ ಅವರು ಓದಿ ಅನುಭವಿಸಿ ಪ್ರತಿಕ್ರಿಯೆಸಿದ್ದಕ್ಕೆ ಧನ್ಯವಾದಗಳು! ಸ್ಥಿತಪ್ರಜ್ಞ ಮೊದಲೇ ಆಗಿದ್ದೆ. ನಿರಾಶೆ ಸಿಕ್ಕಮೇಲೆ. ನಂತರ ಗಟ್ಟಿಯಾಯಿತು ಅನ್ನಲಾರೆ. ಎಲ್ಲರೂ ಅದೃಷ್ಟ ಅಂತಾರೆ . ಈ ಘಟನೆ ಬರೆಯುವಂತೆ ಆಯಿತು. ಅದೇ ಅದೃಷ್ಟ.
ಅನಿವಾಸಿ ಓದುತ್ತಾ ಇರಿ!
LikeLike
ಡಾಕ್ಟರ್ಸ್ ದೇಸಾಯಿಅವರ ಮತ್ತು ವತ್ಸಲಾ ರಾಮಮೂರ್ತಿ ಅವರ ಕಳ್ಳರ ಕಥೆ ಕೇಳಿ ಕುತೂಹಲ ಕಾತುರ ಮಿಲನ . ಏನಾಗುತ್ತೆ ಅಂತ್ಯದಲ್ಲಿ ಅಂತ ಆತಂಕ. ಇಬ್ಬರೂ ಚೆನ್ನಾಗಿ ಬಣ್ಣ ಕಟ್ಟಿ ಬರೆದಿದ್ದಾರೆ. well done.
LikeLike
ನಿಮ್ಮ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು ಶ್ರೀರಾಮುಲು ಅವರಿಗೆ..
LikeLike
ಮುರಳಿ ಹತ್ವಾರ್ ಮತ್ತು ಕೇಶವ ಕುಲಕರ್ಣಿಯವರಿಗೆ ಧನ್ಯವಾದಗಳು.
LikeLike
ಹೊಸ ಸಂಪಾದಕರಾದ ಅಮಿತಾ ಅವರಿಗೆ ಸ್ವಾಗತ.
ಮೊದಲ ಬಾಲಿನಲ್ಲೇ ಸಿಕ್ಸರ್ ಹೊಡೆದಂತೆ ಶುಭಾರಂಭ.
ವತ್ಸಲಾ ಮತ್ತು ದೇಸಾಯಿಯವರ ಅನುಭವ ಕಥನಗಳು ಹಾಸ್ಯಮಯವಾಗಿವೆ. ಆ ಘಟನೆಗಳು ನಡೆದಾಗ ಎದೆ ಝಲ್ ಎಂದಿರಲು ಸಾಕು. ಆದರೆ ನೆನೆಸಿಕೊಂಡಾಗ ನಗು ತರಿಸುವ ಇಂಥ ಘಟನೆಗಳನ್ಮು ಬರೆದು ನಮಗೂ ನಗುವಿನಾ ತಿಂಡಿ ತಿನಿಸಿದ್ದೀರಿ.
‘ತುಡುಗು’ ಶಬ್ದ ಕೇಳಿ/ಓದಿ ಭಾಳ ವರ್ಷ ಆಗಿದ್ವು!
ಕಳ್ಳರ ಕತೆಗಳು ಹೀಗೇ ಮುಂದುವರಿಯಲಿ.
– ಕೇಶವ
LikeLike
ಅರವಿಂದನ ಅವಾಂತರ
Coppeರ ಹಿಡಿದ ಕ್ಯಾಮರ
ಹಿರಿಯರಕ್ಷತೆಯ ಅಕ್ಷರಗಳಲಿ
ಶುಭಾರಂಭ, ದಸರೆಯಲಿ
ಅಮಿತ ದರ್ಬಾರ!
ಮುರಳಿ
LikeLike
ಅರವಿಂದನ ಅವಾಂತರ
Coppeರ ಹಿಡಿದ ಕ್ಯಾಮರ
ಹಿರಿಯರಕ್ಷತೆಯ ಅಕ್ಷರಗಳಲಿ
ಶುಭಾರಂಭ, ದಸರೆಯಲಿ
ಅಮಿತ ದರ್ಬಾರ!
LikeLike
A well written account of both writers. One of them is my close friend.
LikeLike
Thank you for your comment, Jayakumar
LikeLike